Loading Events

« All Events

ಕೆ. ವಿರೂಪಾಕ್ಷಗೌಡ

July 1

೦೧.೦೭.೧೯೩೫ ೧೨.೧೨.೨೦೦೭ ಬಳ್ಳಾರಿ ಎಂದಾಕ್ಷಣ ನೆನಪಿಗೆ ಬರುವುದು ಗಣಿಧೂಳೇ ಆದರೂ ಶ್ರೀಮಂತ ಸಾಹಿತ್ಯ, ಸಾಂಸ್ಕೃತಿಕ ಜಗತ್ತಿನ ಹಾಸ್ಯ ಬ್ರಹ್ಮಬೀಚಿ, ನಾಟಕಕಾರ ಬಳ್ಳಾರಿ ರಾಘವ, ಜನಪದ ಮೇರು ಎನಿಸಿದ್ದ ಜೋಳದರಾಶಿ ದೊಡ್ಡನ್ನ ಗೌಡರು, ಮುದೇನೂರು ಸಂಗಣ್ಣ ಮುಂತಾದವರುಗಳಂತೆ ಮತ್ತೊಬ್ಬ ಜಾನಪದ ವಿದ್ವಾಂಸರಾಧ ವಿರೂಪಾಕ್ಷಗೌಡರು ಸೇರ್ಪಡೆಯಾಗಿ ಸಾಂಸ್ಕೃತಿಕ ಜಗತ್ತನ್ನು ಕಣ್ಣುಮುಂದೆ ತಂದು ನಿಲ್ಲಿಸುತ್ತಾರೆ. ವಿರೂಪಾಕ್ಷಗೌಡರು ಹುಟ್ಟಿದ್ದು ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ಬಾಜಿಗೊಂಡನ ಹಳ್ಳಿಯಲ್ಲಿ. ತಂದೆ ಬಳ್ಳಾರಿ ಗಾಂಧಿ ಎಂದೇ ಖ್ಯಾತರಾಗಿದ್ದ, ಶಾಸಕರಾಗಿದ್ದ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಕೆ. ಚೆನ್ನಬಸವನಗೌಡರು, ತಾಯಿ ಕಳರಮ್ಮ. ಹುಟ್ಟಿದ ದಿನದಂದೇ ತಾಯಿಯ ಪ್ರೀತಿಯಿಂದ ವಂಚಿತರಾಗಿ ಮುಸ್ಲಿಂ ಮಹಿಳೆಯ ಎದೆ ಹಾಲಿನಿಂದ ಬೆಳೆದ ವಿರೂಪಾಕ್ಷಗೌಡರ ಆರಂಭಿಕ ಶಿಕ್ಷಣ ಬಾಚಗೊಂಡನಹಳ್ಳಿ. ತಂದೆಯೊಡನೆ ಸಾಂಸ್ಕೃತಿಕ ಕಾರ‍್ಯದಲ್ಲಿ ಭಾಗಿಯಾಗುತ್ತಾ ಬಂದಂತೆಲ್ಲ ಬೆಳೆದದ್ದು ಜಾನಪದದ ಬಗ್ಗೆ ಆಸಕ್ತಿ. ಡೊಳ್ಳು ಕುಣಿತ, ಬಯಲಾಟ, ತೊಗಲು ಬೊಂಬೆಯಾಟ, ವೀರಗಾಸೆ, ನಂದಿಕೋಲು, ಸೋಬಾನೆ ಪದ, ಜಾನಪದ ಹಾಡುಗಳು ಎಳೆಯ ಮನಸ್ಸನ್ನು ಆಕ್ರಮಿಸಿಕೊಂಡವು. ಕರ್ನಾಟಕ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿ ಪಡೆದ ವಿರೂಪಾಕ್ಷಗೌಡರು ಸ್ವ-ಉದ್ಯೋಗಿಯಾಗಿ ಪ್ರಾರಂಭಿಸಿದ್ದು ಟ್ರಾನ್ಸ್‌ಪೋರ್ಟ್ ಕಂಪನಿಯೊಂದನ್ನು. ಬಿಡುವಿನ ವೇಳೆಯೆಲ್ಲಿ ಜಾನಪದ ಸಂಗ್ರಹಣೆ, ಸಾಹಿತ್ಯದ ಬರವಣಿಗೆ ಶಿವರಾಮ ಕಾರಂತರಿಂದ ಹಿಡಿದು ಗುರುಮೂರ್ತಿ ಪೆಂಡಕೂರು, ಹಾ.ಮಾ. ನಾಯಕ, ಕು.ಶಿ. ಹರಿದಾಸ ಭಟ್ಟ, ಮುದೇನೂರು ಸಂಗಣ್ಣ, ಶಾಂತರಸ ಮುಂತಾದವರೊಡನೆ ಪತ್ರವ್ಯವಹಾರ, ಒಡನಾಟ. ವಿರೂಪಾಕ್ಷಗೌಡರು ತಾವು ಬರೆದುದಕ್ಕಿಂತಲೂ ಹೆಚ್ಚಾಗಿ ಯುವ ಬರಹಗಾರರನ್ನು ಸೃಷ್ಟಿಸಿದರು.  ರಾಜ್ಯದ ನಾನಾ ಮೂಲೆಗಳಿಂದ ಬರುತ್ತಿದ್ದ ಪುಸ್ತಕ, ಪತ್ರಿಕೆ, ಕಥೆ – ಕವನ ಸಂಕಲನಗಳನ್ನು ಕಿರಿಯರಿಗೆ ಕೊಟ್ಟು ಓದಿಸಿ ಸಾಹಿತ್ಯಾಭಿರುಚಿ ಬೆಳೆಯುವಂತೆ ಮಾಡಿದರು. ಜನಪದ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ವಹಿಸಿ ಕಥೆ – ಹಾಡುಗಳನ್ನು ಸಂಗ್ರಹಿಸಿದರು. ಸಂಗ್ರಹಿಸಿದ್ದನ್ನು ಪ್ರಕಟಿಸಲು ತಮ್ಮದೇ ಆದ ಕೊಟ್ಟೂರೇಶ್ವರ ಪ್ರಕಾಶನವನ್ನು ಪ್ರಾರಂಭಿಸಿ (೧೯೫೮) ತಮ್ಮ ಕವನ ಸಂಕಲನ ‘ಸುಗ್ಗಿಯ ಕಣ’ ಎಂಬ ಕೃತಿಯನ್ನು ಪ್ರಕಟಿಸಿದರು. ನಂತರ ಚಂದ್ರಶೇಖರ ಪಾಟೀಲರೊಡನೆ ಪ್ರಕಟಿಸಿದ ಪ್ರಬಂಧ ಸಂಕಲನ ‘ಹೊಸ ಪ್ರವಾಹ’. ಹಿ.ಮ ಪಂಚಯ್ಯನವರ ಕಾವ್ಯಾವತರಣ, ನಂತರ ತಮ್ಮದೇ ಕವನ ಸಂಕಲನ ‘ಆಕಾಶ ಮಲ್ಲಿಗೆ’ (೧೯೬೧), ‘ಹೂಗೊಂಚಲು’(೧೯೬೨), ‘ಬಿಳಿಯ ಹಾಳೆಯ ಮೇಲೆ’(೧೯೬೩), ‘ದರ್ಶನ’(೧೯೬೬), ‘ಸಾಕ್ಷಿ’(೧೯೭೦) ಹೀಗೆ ಹಲವಾರು ಕವನ ಸಂಕಲನಗಳನ್ನು ಪ್ರಕಟಿಸಿದರು.  ಜನಪದ ಸಾಹಿತ್ಯದಲ್ಲಿ ವಿಪರೀತ ಆಸಕ್ತರಾಗಿದ್ದು ಸಂಗ್ರಹಿಸಿದ ಸಾಹಿತ್ಯವನ್ನು ಕೊಟ್ಟೂರೇಶ್ವರ ಪ್ರಕಾಶನದ ಮೂಲಕ ಪ್ರಕಟಿಸತೊಡಗಿದರು. ಮುದೇನೂರು ಸಂಗಣ್ಣನವರೊಡನೆ ಸಂಪಾದಿಸಿ ಪ್ರಕಟಿಸಿದ ಕೃತಿ ‘ಹಳ್ಳಿ ಪದಗಳು’ (೧೯೬೮), ‘ಹೊಲಮನಿಯ ಪದಗಳು’ (೧೯೬೯), ಲದಾಫಿ ಹಕೀಂ ಸಾಹೇಬರೊಡನೆ ಸಂಪಾದಿಸಿದ ಪ್ರಬಂಧ ಸಂಕಲನ ‘ನೈವೇದ್ಯ’ (೧೯೫೯), ತಮ್ಮದೇ ಕವನ ಸಂಕಲನ ‘ಕಾಳು – ಕಡ್ಡಿ’, ಕಲ್ಲೇಶ ಇಟಗಿ, ಕರಿವೀರನ ಗೌಡರುಗಳು, ಇವರೊಡನೆ ಸಂಪಾದಿಸಿದ್ದು ‘ಜನಪದ ಸಾಹಿತ್ಯ’ (೧೯೭೨). ಇವರ ಸಂಗ್ರಹ, ಸಂಪಾದನ ಕಾರ‍್ಯದಲ್ಲಿ ಗುರುಮೂರ್ತಿ ಪೆಂಡಕೂರು, ಎನ್. ಹನುಮಂತಶೆಟ್ಟಿ, ಸಾಹಿತ್ಯಾನಂದ, ಕನಕಗಿರಿಯ ಜಯತೀರ್ಥ ರಾಜಪುರೋಹಿತ ಮುಂತಾದವರುಗಳ ಸಾಂಘಿಕ ಶಕ್ತಿಯಿಂದ ಜನಪದ ಸಾಹಿತ್ಯ ಸಂಗ್ರಹ ‘ಜಾನಪದ ಸಂಚಯ’,  ‘ಮುತ್ತು ಹವಳ, ಕವನ ಸಂಕಲನ ‘ಕಂಠಿ ಸರ’, ಬಳ್ಳಾರಿ ಜಿಲ್ಲಾ ಪ್ರಾತಿನಿಧಿಕ ಪ್ರಬಂಧ ಸಂಕಲನ ‘ಚೇತನ’, ಜಿಲ್ಲಾ ಪ್ರಾತಿನಿಧಿಕ ಕಥಾ ಸಂಕಲನ ‘ಪಂಪಾ ತುಂತುರ’ ಮುಂತಾದವುಗಳನ್ನು ಪ್ರಕಟಿಸಿದ್ದಾರೆ. ಇವರು ಬರೆದ ಲೇಖನಗಳು ಸುಧಾ, ಗೋಕುಲ, ಪ್ರಪಂಚ, ಪ್ರಜಾಮತ, ಜನಪದ, ಪ್ರಬುದ್ಧ ಕರ್ನಾಟಕ, ಕನ್ನಡ ನುಡಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರಚಿಸಿರುವ ಒಟ್ಟು ಕೃತಿಗಳ ಸಂಖ್ಯೆ ೨೩ ಆದರೂ ಒಂದು ಸಂಸ್ಥೆ, ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಏಕಾಂಗಿಯಾಗಿ ಸಾಧಿಸಿದ್ದಾರೆ.  ೬ ಕವನ ಸಂಕಲನಗಳು, ೮ ಜನಪದ ಸಂಗ್ರಹಗಳು, ೫ ಜಿಲ್ಲಾ ಪ್ರಾತಿನಿಧಿಕ ಪ್ರಬಂಧ ಸಂಗ್ರಹಗಳು, ೧ ಜಿಲ್ಲಾ ಪ್ರಾತಿನಿಧಿಕ ಕಥಾ ಸಂಕಲನ,  ೨ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ಮರಣ ಗ್ರಂಥಗಳು ಮತ್ತು ಒಂದು ಜರ್ಮನಿ ಪ್ರವಾಸದ ಬಗ್ಗೆ ಬರೆದ ಪರಿಚಯ ಕೃತಿ. ವಯಸ್ಸಾದಂತೆಲ್ಲಾ ಹಿರಿಯ ಮಗನೊಡನಿರಬೇಕೆಂದು ತಮ್ಮ ವಾಸ್ತವ್ಯವನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಂಗಾಪುರಕ್ಕೆ ಬದಲಿಸಿದರು. ಇಲ್ಲೂ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ತೊಡಗಿಸಿಕೊಂಡಿರುತ್ತಿದ್ದ ಗೌಡರು ಸುಮ್ಮನೆ ಕೂಡದೆ ಈಶಾನ್ಯ ಕರ್ನಾಟಕದ ಪ್ರಾತಿನಿಧಿಕ ಕವನ ಸಂಕಲನ ‘ನಕ್ಷತ್ರಗಳು’ ಎಂಬುದನ್ನು ೨೦೦೦ದಲ್ಲಿ ಪ್ರಕಟಿಸಿದರು. ಜಾನಪದ ಕ್ಷೇತ್ರದಲ್ಲಿ ದುಡಿಯುತ್ತಾ ಬಂದ ವಿರೂಪಾಕ್ಷಗೌಡರಿಗೆ ತೊಗಲು ಬೊಂಬೆಯಾಟದ ಕಲೆಯಲ್ಲೂ ವಿಶೇಷ ಆಸಕ್ತಿ ಬೆಳೆದು ಯಡ್ರಾಮನ ಹಳ್ಳಿಯ ಕಿಳ್ಳೇಕ್ಯಾತರ ದೊಡ್ಡ ಭರಮಪ್ಪ ಮತ್ತು ತಂಡದವರನ್ನು ಗುರುಮೂರ್ತಿ ಪೆಂಡಕೂರರ ಸಹಭಾಗಿತ್ವದಲ್ಲಿ. ಜರ್ಮನಿಯ ಪ್ರವಾಸ ಕೈಗೊಂಡು (೧೯೮೬) ೧೬ ದಿವಸಗಳ ಕಾಲ ಪಶ್ಚಿಮ ಜರ್ಮನಿಯ ಬೋಖಂ, ಬರ್ಲಿನ್, ಹ್ಯಾನೋವರ್, ಸ್ಟುಟ್‌ಗರ್ಟ್, ಹೈಡಲ್‌ಬರ್ಗ್ ಮುಂತಾದೆಡೆಗಳಲ್ಲಿ ಪ್ರದರ್ಶನ ನೀಡಿದರು. ಜನಪದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಷ್ಟೇ ಅಲ್ಲದೆ ವಿವಿಧ ಸಂಘ ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿ ದುಡಿದಿದ್ದಾರೆ. ಮೈಸೂರಿನ ಜಾನಪದ ಪರಿಷತ್ತಿನ ಕಾರ‍್ಯಕಾರಿ ಸಮಿತಿ ಸದಸ್ಯರಾಗಿ, ಬಳ್ಳಾರಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಹಗರಿ ಬೊಮ್ಮನ ಹಳ್ಳಿಯಲ್ಲಿ ಸ್ಥಾಪಿಸಿದ್ದ ಜಿಜ್ಞಾಸು ಕೂಟ, ಭಾವವಿನಿಮಯ, ಶಾರದಾ ಪ್ರಕಾಶನ ಮುಂತಾದವುಗಳ ಸಲಹೆಗಾರರಾಗಿದ್ದ ವಿರೂಪಾಕ್ಷ ಗೌಡರು ಜಾನಪದಲೋಕದಿಂದ ಮರೆಯಾದದ್ದು ೨೦೦೭ರ ಡಿಸೆಂಬರ್ ೧೨ರಂದು.

Details

Date:
July 1
Event Category: