- This event has passed.
ಜಿ.ಟಿ. ನಾರಾಯಣರಾವ್
September 14, 2023
೧೪-೯-೧೯೨೬ ೨೭-೬-೨೦೦೮ ಗಣಿತೋಪಾನ್ಯಾಸಕ, ವೈಜ್ಞಾನಿಕ ಕೃತಿಗಳ ಕರ್ತೃ, ಸಾಹಿತಿ, ಜಿ.ಟಿ. ನಾರಾಯಣರಾವ್ರವರು ಹುಟ್ಟಿದ್ದು ಮಡಕೇರಿಯಲ್ಲಿ. ತಂದೆ ಗುಡ್ಡೆ ಹಿತ್ಲು ತಿಮ್ಮಪ್ಪಯ್ಯ, ತಾಯಿ ವೆಂಕಟಲಕ್ಷ್ಮಿ. ಪ್ರಾರಂಭಿಕ ಶಿಕ್ಷಣ ಮಡಕೇರಿಯ ಸೆಂಟ್ರಲ್ ಹೈಸ್ಕೂಲಿನಲ್ಲಿ (ಪ್ರೈಮರಿ, ಮಿಡ್ಲ್ ಒಂದೇ ಕಡೆ). ಗುರುಗಳಾದ ಎಂ.ಎಸ್. ಅನಂತ ಪದ್ಮನಾಭರಾವ್, ಎಸ್.ರಾಮಚಂದ್ರ, ಜಿ.ಎಸ್. ಕೇಶವಾಚಾರ್ಯರಿಂದ ಬೆಳೆದ ಸಾಹಿತ್ಯಾಸಕ್ತಿ. ಇದಕ್ಕೆ ಪೂರಕವಾಗಿದ್ದ ಸಾಹಿತ್ಯ, ಸಂಗೀತಾಸಕ್ತ ಮನೆಯ ವಾತಾವರಣ. ಮದರಾಸು ವಿಶ್ವವಿದ್ಯಾಲಯದಲ್ಲಿ ಗಣಿತಾಧ್ಯಯನ, ಎಂ.ಎ. ಪದವಿ. ಉದ್ಯೋಗಕ್ಕೆ ಸೇರಿದ್ದು ಗಣಿತೋಪಾನ್ಯಾಸಕರಾಗಿ ಮದರಾಸು, ಮಂಗಳೂರು, ಮಡಕೇರಿ, ಬೆಂಗಳೂರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ೧೯೬೯ರಲ್ಲಿ ನಿವೃತ್ತಿ. ಎನ್.ಸಿ.ಸಿ. ಅಕಾರಿಯಾಗಿಯೂ ಪಡೆದ ಅನುಭವ. ಇದರ ಫಲವೇ ಉದ್ದೇಶ, ಶಿಕ್ಷಣ, ಕಾರ್ಯಕ್ರಮಗಳ ವೈವಿಧ್ಯ, ಕಲಿಯಬೇಕಾದ ಪಾಠ ಇವುಗಳನ್ನೊಳಗೊಂಡ ಸಾಹಿತ್ಯದ ವಿಶಿಷ್ಟ ಕೃತಿ “ಎನ್.ಸಿ.ಸಿ.ಯ ದಿನಗಳು.” ವಿದ್ಯಾರ್ಥಿಗಳಿಗೆ ಪರ್ವತಾರೋಹಣ ಮಾಡಿಸಿದ ಕೀರ್ತಿ. ಹುಟ್ಟಿನಿಂದಲೇ ಸಂಗೀತ-ಸಾಹಿತ್ಯದತ್ತ ಒಲವು. ಕನ್ನಡ ವಿಜ್ಞಾನ ವಾಙ್ಞಯ ಕೃಷಿ. ಇದರಿಂದ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ವಿಭಾಗದ ಸಂಪಾದಕತ್ವ. ಇವರ ವಿಜ್ಞಾನ ಬರಹಗಳಲ್ಲಿ ಸ್ಪಷ್ಟ ಪರಿಕಲ್ಪನೆ, ಶುದ್ಧಭಾಷೆ, ಆಕರ್ಷಕ ಶೈಲಿಗೆ ಪ್ರಾಮುಖ್ಯತೆ. ಸಾಹಿತ್ಯದ ಇತರ ಪ್ರಕಾರಗಳಲ್ಲಿಯೂ ಕೃತಿ ರಚನೆ. ಕಥಾಸಂಕಲನ-ಕೊಡಗಿನ ಸುಮಗಳು. ಜೀವನಚರಿತ್ರೆ-ಆಲ್ಬರ್ಟ್ ಐನ್ಸ್ಟೈನ್, ನಿಕೊಲಾಸ್ ಕೋಪರ್ನಿಕಸ್, ಸುಬ್ರಹ್ಮಣ್ಯ ಚಂದ್ರಶೇಖರ್. ಸಂಗೀತ ಸಾಹಿತ್ಯ-ಶೃತಗಾನ. ಬದುಕು-ಸವಾಲನ್ನೆದುರಿಸುವ ಛಲ. ವೈಜ್ಞಾನಿಕ ಕೃತಿಗಳು-ನಕ್ಷತ್ರಲೋಕ, ಮಾನವ ಚಂದ್ರನ ಮೇಲೆ, ಗ್ರಹಣಗಳು, ವೇಗ, ಧೂಮಕೇತು, ಸೂರ್ಯನ ಸಾಮ್ರಾಜ್ಯ, ವೈಜ್ಞಾನಿಕ ಮನೋಧರ್ಮ, ಭವಿಷ್ಯವಿಜ್ಞಾನ, ಐವರು ವಿಜ್ಞಾನಿಗಳು, ಸೂಪರ್ನೊವಾ ಹೀಗೆ ಒಟ್ಟು ಅರವತ್ತಕ್ಕೂ ಮಿಕ್ಕು ಕೃತಿ ಪ್ರಕಟಿತ. ಮಡಕೇರಿಯಲ್ಲಿದ್ದಾಗ ಕಾಲೇಜಿನಲ್ಲಿ ಸ್ಥಾಪಿಸಿದ್ದ ಸಹಕಾರ ಸಂಘ. ಅವರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿ. ಹಲವಾರು ಮಂದಿಗೆ ಸಹಾಯ ಹಸ್ತ ನೀಡಿ ಬದುಕಿಗೆ ದಾರಿ ತೋರಿದ ಸಂಘ. ಯಶಸ್ಸಿನ ದ್ಯೋತಕ. ಕನ್ನಡ ಪುಸ್ತಕ ಪ್ರಾಕಾರದ ಸದಸ್ಯರಾಗಿ ಸೇವೆ. ನಕ್ಷತ್ರ ವೀಕ್ಷಣೆಗೆ ಮತ್ತು ವೈಜ್ಞಾನಿಕ ಮನೋಧರ್ಮ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಆಲ್ಬರ್ಟ್ ಐನ್ಸ್ಟೈನ್ ಕೃತಿಗೆ ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ ಮುಂತಾದುವುಗಳು. ಇದೇ ದಿನ ಹುಟ್ಟಿದ ಸಾಹಿತಿಗಳು : ಗುಡಿಬಂಡೆ ರಾಮಾಚಾರ್ – ೧೯೧೭ ಗುರುರಾಜ ಮಾರ್ಪಳ್ಳಿ – ೧೯೫೨