Loading Events

« All Events

  • This event has passed.

ಡಾ. ಕೆ.ಸ್. ಉಮಾಪತಿ

December 28, 2023 @ 8:00 AM - 5:00 PM IST

೨೮.೧೨.೧೯೨೮   ಸಾಹಿತ್ಯ ರಚನೆ ಮಾಡುವುದರ ಜೊತೆಗೆ ಬರೆದುದನ್ನು ಪ್ರಕಟಿಸಿ, ಪ್ರಕಟಿಸಿದ್ದನ್ನು ಓದುಗರಿಗೆ ತಲುಪಿಸಲು, ತಲುಪಿದ ಗ್ರಂಥಗಳನ್ನು ಸುವ್ಯವಸ್ಥಿತವಾಗಿಟ್ಟು ಓದುಗರನ್ನು ಉತ್ತೇಜಿಸಲು ಗ್ರಂಥಾಲಯಗಳಿರಬೇಕೆಂದು ಅಪೇಕ್ಷಿಸಿ, ಗ್ರಂಥಾಲಯಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ, ಪುಸ್ತಕ ಸಂಸ್ಕೃತಿ ಪ್ರಸಾರಕ್ಕೆ ಕಟಿಬದ್ಧರಾಗಿರುವ, ಪುಸ್ತಕ ಪರಿಚಾರಿಕೆಯ ವಿಷಯದಲ್ಲಿ ತೀವ್ರ ಆಸಕ್ತಿರಾಗಿರುವ ಉಮಾಪತಿಯವರು ಹುಟ್ಟಿದ್ದು ಈಗಿನ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ. ೧೯೨೮ರ ಡಿಸೆಂಬರ್ ೨೮ ರಂದು. ಪ್ರಾರಂಭಿಕ ಶಿಕ್ಷಣ ಮಾಗಡಿಯ ಸುತ್ತಮುತ್ತ. ಮೈಸೂರು ವಿ.ವಿ. ದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. ಆನರ್ಸ್ ಪದವಿ ಮತ್ತು ಭಾರತೀಯ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೊಮ. ಬನಾರಸ್ ಹಿಂದು ವಿ.ವಿ.ದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪಡೆದ ಎಂ.ಎ. ಪದವಿ. ಪುಸ್ತಕಗಳನ್ನು ಓದುವುದರ ಜೊತೆಗೆ ಬರವಣಿಗೆಯನ್ನು ಶಾಲಾ ಕಾಲೇಜು ದಿನಗಳಿಂದಲೇ ರೂಢಿಸಿಕೊಂಡಿದ್ದ ಉಮಾಪತಿಯವರು ತಮ್ಮ ೨೦ನೆಯ ವಯಸ್ಸಿನಲ್ಲಿಯೇ ‘ಗೋಮುಖ ವ್ಯಾಘ್ರ’ ಎಂಬ ಕಥಾಸಂಕಲನವನ್ನು ಪ್ರಕಟಿಸಿದ್ದರು. ಓದಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಉಮಾಪತಿಯವರು ಪ್ರತಿಯೊಂದು ಊರಿನಲ್ಲಿಯೂ ಗ್ರಂಥಾಲಯವನ್ನು ಹೊಂದಿರಬೇಕೆಂದು ಪ್ರತಿಪಾದಿಸುತ್ತಿದ್ದರು. ಅದರ ಸ್ಥಾಪನೆಗೆ ಅವರದೇ ಆದ ವಿಚಾರಧಾರೆಯನ್ನು ಪುಸ್ತಕ ಪ್ರಿಯರ ಮುಂದಿಡುತ್ತಿದ್ದರು. ಹಳ್ಳಿ, ಊರಿನ, ಪಟ್ಟಣಗಳ ಪಂಚಾಯಿತಿ, ಗ್ರಾಮಸಭೆ, ನಗರ ಸಭೆಗಳಲ್ಲಿ ಗ್ರಂಥಾಲಯ ಸ್ಥಾಪಿಸಲು ಸ್ನೇಹಿತರು ನಾಲ್ಕಾರು ಜನ ಸೇರಿ ಒತ್ತಾಯಿಸಿ, ಇದಕ್ಕೆ ಶಿಕ್ಷಕರ, ಸರಕಾರಿ ನೌಕರರ, ಸಮಾಜ ಸೇವಕರ ಸಹಾಯ ಪಡೆಯಿರಿ. ಪಂಚಾಯಿತಿ ಅಧ್ಯಕ್ಷರಿಗೆ, ಪುರಸಭೆ ಅಧ್ಯಕ್ಷರಿಗೆ, ಶಾಸಕರಿಗೆ ಮನವಿ ಸಲ್ಲಿಸಿ ಪುಸ್ತಕ ಭಂಡಾರ ಸ್ಥಾಪಿಸಲು ಒತ್ತಾಯಿಸಿ, ಇದು ಅವರ ಸೂತ್ರವಾಗಿತ್ತು. ಇದಕ್ಕಾಗಿ ಅವರು ‘ಪುಸ್ತಕ ಭಂಡಾರಗಳು’ ಎಂಬ ಕೃತಿ ರಚಿಸಿ ಪ್ರಕಟಿಸಿದರು. ಇದೇ ರೀತಿಯ ಅವರ ಯೋಚನಾಲಹರಿಯಿಂದ ಹಲವಾರು ಹಳ್ಳಿಗಳಲ್ಲಿ ಗ್ರಂಥಾಲಯದ ಸ್ಥಾಪನೆಗೆ ಕಾರಣರಾದರು. ಇದಕ್ಕಾಗಿ ತಮ್ಮದೇ ಆದ ‘ರಾಮಕ್ಕ ಪದ್ಮಕ್ಕ ಸೇವಾನಿಧಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ತಮ್ಮ ಕೈಯಿಂದಲೇ ಹಣ ಹಾಕಿ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯಗಳಿಗೆ ಕೊಡುಗೆಯಾಗಿ ನೀಡಿದರು. ಉದ್ಯೋಗಕ್ಕಾಗಿ ಸೇರಿದ್ದು ಕರ್ನಾಟಕ ಶಿಕ್ಷಣ ಇಲಾಖೆಯಲ್ಲಿ ಕಾಲೇಜು ಅಧ್ಯಾಪಕರಾಗಿ ಸೇರಿ ಕೆಲಕಾಲ ಸೇವೆ ಸಲ್ಲಿಸಿದರು. ನಂತರ ಅಮೆರಿಕದ ವಹಾಯೋದ ಬೌಲಿಂಗ್ ಗ್ರೀನ್ ಸ್ಟೇಟ್ ವಿ.ವಿ.ದಲ್ಲಿ ಟೀಚಿಂಗ್ ಫೆಲೊಶಿಪ್ ದೊರೆತು ಅಮೆರಿಕೆಗೆ ತೆರಳಿದರು. ಅಂತಾರಾಷ್ಟ್ರೀಯ ಶಿಕ್ಷಣವನ್ನು ಉಪವಿಷಯವನ್ನಾಗಿ ಆಯ್ದುಕೊಂಡು ೧೯೭೫ ರಲ್ಲಿ ಪಿಟ್ಸ್‌ಬರ್ಗ ವಿ.ವಿ.ದಿಂದ ಗ್ರಂಥಾಲಯ ‘ಮಾಹಿತಿ ವಿಜ್ಞಾನ’ದಲ್ಲಿ ‘ಸ್ಟ್ಯಾಂಡರ್ಡ್ ಫಾರ್ ಟೀಚರ್ಸ್ ಕಾಲೇಜ್ ಲೈಬ್ರರೀಸ್ ಇನ್ ಕರ್ನಾಟಕ (ಇಂಡಿಯಾ)’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್‌.ಡಿ. ಪದವಿ ಪಡೆದರು. ಇದಲ್ಲದೆ ಕ್ಯಾಲಿಫೋರ್ನಿಯಾ ವಿ.ವಿ. ಲೂಸಿಯಾನ ಸ್ಟೇಟ್ ವಿ.ವಿ. ವಾಂಡರ್ ಬಿಲ್ಟ್ ವಿ.ವಿ.ಗಳಲ್ಲೂ ಅಧ್ಯಯನ ನಡೆಸಿ ಶಿ‌ಕ್ಷಣ ಶಾಸ್ತ್ರ, ಭಾಷಾ ಶಾಸ್ತ್ರ, ಗ್ರಂಥಾಲಯ ಮಾಹಿತಿ ವಿಜ್ಞಾನ ಮುಂತಾದ ನಾನಾ ವಿಷಯಗಳನ್ನು ಅಧ್ಯಯನ ಮಾಡಿದರು. ತಾವು ಗಳಿಸಿದ ದೀರ್ಘ ಅಧ್ಯಯನದ ಅನುಭವವನ್ನು ಕರ್ನಾಟಕದಲ್ಲಿ ಬಳಸಬೇಕೆಂದು ಅಮೆರಿಕದಿಂದ ಹಿಂದಿರುಗಿ ಬಂದು ಬೆಂಗಳೂರು ವಿವಿ.ದಲ್ಲಿ ಮೂರು ವರ್ಷ ಗ್ರಂಥಾಲಯ ವಿಜ್ಞಾನದ ಪ್ರಾಧ್ಯಾಪಕರಾಗಿ, ಗ್ರಂಥಾಲಯ ಅಧಿಕಾರಿಯಾಗಿ ದುಡಿದರು. ಆದರೆ ಪರಿಸ್ಥಿತಿಯೊಡನೆ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಸ್ವತಂತ್ರವಾಗಿ ದುಡಿಯುವುದೇ ಶ್ರೇಯಸ್ಕರವೆಂಬ ತೀರ‍್ಮಾನಕ್ಕೆ ಬಂದರು. ಇಂಗ್ಲಿಷ್ ಕನ್ನಡ ಎರಡು ಭಾಷೆಗಳಲ್ಲಿಯೂ ಉತ್ತಮ ಬರಹಗಾರರಾದ ಉಮಾಪತಿಯವರು ಇಂಗ್ಲಿಷ್‌ನಲ್ಲೂ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ‘ಗ್ರಂಥಾಲಯಗಳು’, ‘ಕಾಲೇಜು ಗ್ರಂಥಾಲಯಗಳು’, ‘ಸಾರ್ವಜನಿಕ ಗ್ರಂಥಾಲಯಗಳು’, ‘ನಾನು ಮೆಚ್ಚಿದ ಪುಸ್ತಕ’, ಮೊದಲಾದ ಗ್ರಂಥಾಲಯ ವಿಜ್ಞಾನ ಸಂಬಂಧಿ ಕೃತಿಗಳ ಜೊತೆಗೆ ನುಡಿಮುತ್ತು (ಒಳ್ನುಡಿಗಳು), ಸಾಹಿತ್ಯ ಸ್ವರೂಪ (ಸಾಹಿತ್ಯ ಚರ್ಚೆ), ಅಡುಗೆಮನೆ-ಲಲಿತ ಪ್ರಬಂಧಗಳ ಸಂಕಲನ, ಮದುವೆಯಮೊದಲ ವರ್ಷ (ಪ್ರೇಮ ಪತ್ರಗಳು) ಮೊದಲಾದವುಗಳಲ್ಲದೆ ಹಲವಾರು ಕಥೆಗಳನ್ನು ಬೇರೆ ಬೇರೆ ಭಾಷೆಯಿಂದ ಕನ್ನಡಕ್ಕೆ ತಂದಿದ್ದಾರೆ. ಇಂಗ್ಲಿಷ್ ಕೃತಿಗಳೂ ಸೇರಿ ಬಿಟ್ಟು ೧೫ ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಹೀಗೆ ಪುಸ್ತಕ ಪರಿಚರ್ಯೆಯಲ್ಲಿಯೇ ಆತ್ಮ ಸಂತೋಷವನ್ನು ಕಂಡುಕೊಂಡು, ಗ್ರಂಥಾಲಯ ಚಳವಳಿಯಿಂದ ಪುಸ್ತಕಗಳನ್ನು ಪ್ರೀತಿಸಿ-ಓದುವ ಹವ್ಯಾಸವನ್ನು ನಿರಂತರವಾಗಿ ಹರಡತೊಡಗಿದರು.

Details

Date:
December 28, 2023
Time:
8:00 AM - 5:00 PM IST
Event Category: