Loading Events

« All Events

  • This event has passed.

ಡಾ. ನಿರುಪಮಾ. (ಪದ್ಮಾ ಆರ್. ರಾವ್)

September 30, 2023

೩೦..೧೯೩೩ ‘ಕಲಿಕೆಗೆ ಎಲ್ಲೆಯಿಲ್ಲ, ಕಲಿಯುವ ವಿಷಯಕ್ಕೆ ಪ್ರತಿಬಂಧಕವಿಲ್ಲ’ ಎಂಬುದನ್ನು ಮತ್ತು ಸಜ್ಜನಿಕೆ, ವಿದ್ವತ್‌, ಸೃಜನಶೀಲತೆ, ಶ್ರದ್ಧೆಯಿದ್ದಲ್ಲಿ ಅಕಾಡಮಿಕ್‌ ವಿದ್ಯಾರ್ಹತೆ ಅಗತ್ಯವಿಲ್ಲ ಎಂಬುದನ್ನು ಸಾಧಿಸಿ ತೋರಿಸಿರುವ ನಿರುಪಮಾರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ೧೯೩೩ರ ಸೆಪ್ಟಂಬರ್ ೩೦ರಂದು. ತಾಯಿ ಸೀತಮ್ಮ. ತಂದೆ ಕೃಷ್ಣಾಚಾರ್ಯರು ಸೆಂಟ್ರಲ್‌ ಕಾಲೇಜಿನಿಂದ ಬಿ.ಎ. ಹಾಗೂ ಮದರಾಸಿನಿಂದ ಎಲ್‌.ಟಿ. ಪದವಿ ಪಡೆದು ಮದರಾಸು ಪ್ರಾಂತ್ಯದ ಶಾಲಾ ಇನ್‌ಸ್ಪೆಕ್ಟರಾಗಿ ನೇಮಕಗೊಂಡು ಆಂಧ್ರಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿ (ಆಗ ಆಂಧ್ರಪ್ರದೇಶವೂ ಮದರಾಸ್‌ ಪ್ರಾಂತ್ಯದ ಭಾಗ)ಕೊಂಡಿದ್ದರು. ಮೂರು ವರ್ಷಗಳಿಗೊಮ್ಮೆ ಊರೂರು ಸುತ್ತುತಿದ್ದುದರಿಂದ ಪ್ರಾರಂಭಿಕ ಶಿಕ್ಷಣವೆಲ್ಲ ತೆಲುಗಿನಲ್ಲಿ. ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾದದ್ದು ಬಳ್ಳಾರಿಯ ಪ್ರೌಢಶಾಲೆಯಿಂದ. ಮದುವೆಯ ನಂತರ ಮೂವರು ಮಕ್ಕಳು ನೆಲೆಗೊಂಡ ನಂತರ ಎರಡು ಪಿಎಚ್‌.ಡಿ. ಪದವಿ ಪಡೆದ ವಿಶಿಷ್ಟ ಪ್ರತಿಭೆಯ ಮಹಿಳೆ ಎನಿಸಿದರು. ತಂದೆಯ ತಂದೆ ಎರಡು ಹಳ್ಳಿಗಳ ಜೋಡಿದಾರರಾಗಿದ್ದರೆ, ತಾಯಿಯ ದೊಡ್ಡಪ್ಪ ಪಂಡಿತರಾಗಿದ್ದು ಮಂತ್ರಾಲಯದಲ್ಲಿ ನಡೆದ ವಾಗ್ವಾದದಲ್ಲಿ ಎದುರಾಳಿಯನ್ನೂ ಸೋಲಿಸಿ ಸನ್ಮಾನಿತರಾಗಿದ್ದವರು. ನಂತರ ಮೈಸೂರು ಅರಮನೆಯ ಧರ್ಮಾಧಿಕಾರಿಯಾಗಿ ನೇಮಕಗೊಂಡರು. ಹೀಗೆ ಎರಡು ಕಡೆಯಿಂದಲೂ ವಿದ್ವತ್‌ ಹಾಗೂ ಮಠಮಾನ್ಯಗಳ ಗೌರವಕ್ಕೆ ಪಾತ್ರರಾಗಿದ್ದ ಕುಟುಂಬದಲ್ಲಿ ಬೆಳೆದವರು. ಪ್ರತಿದಿನವೂ ಮನೆಯಲ್ಲಿ ನಡೆಯುತ್ತಿದ್ದ ರಾಮಾಯಣ, ಮಹಾಭಾರತ ಪಾರಾಯಣ, ಪ್ರವಚನ, ಮಹಾಭಾರತದ ಬಗ್ಗೆ ಆಳವಾದ ಅಧ್ಯಯನ, ಇತರ ಧಾರ್ಮಿಕ ಗ್ರಂಥಗಳ ಚರ್ಚೆ ಮುಂತಾದವುಗಳಿಂದ ಇವರ ಪಡೆದ ವಿಶೇಷ ಜ್ಞಾನ ಮತ್ತು ತಮ್ಮ ಮಗುವನ್ನು ಕನ್ನಡ ಶಾಲೆಗೆ ಸೇರಿಸಿದ್ದರಿಂದ ‘ಮಕ್ಕಳ ಸ್ಕೂಲ್‌ ಮನೇಲಲ್ವೇ’ ಎನ್ನುವಂತೆ ಮಗುವಿಗೆ ಪಾಠ ಹೇಳಿಕೊಡಲು ಪ್ರಾರಂಭಿಸಿದಾಗ ಇವರೂ ಕನ್ನಡ ಕಲಿಯ ತೊಡಗಿದರು. ಇವರ ಮಾವನವರ ಸಂಗ್ರಹದಲ್ಲಿ ಅಗಾಧ ಪುಸ್ತಕಗಳಿದ್ದು ಬಿಡುವಿನ ವೇಳೆಯಲ್ಲಿ ಓದುತ್ತಿದ್ದುದರ ಜೊತೆಗೆ ಮಗುವಿಗೆ ಕನ್ನಡ ಕಲಿಸಲು ತೆಲುಗು ಕಥೆಗಳನ್ನು ಅನುವಾದಿಸಿ ಹೇಳತೊಡಗಿದರು. ಹೀಗೆ ಅನುವಾದಿಸಿದ ಕಥೆಗಳು ಪ್ರಜಾಮತ, ಜನಪ್ರಗತಿ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿಯೂ ಪ್ರಕಟಗೊಂಡಾಗ ದೊರೆತ ಉತ್ತೇಜನದಿಂದ ಕನ್ನಡಲ್ಲಿ ಬರವಣಿಗೆಯನ್ನು ಪ್ರಾರಂಭಿಸಿದರು. ಎಂಟನೆಯ ತರಗತಿ ಓದುತ್ತಿದ್ದಾಗಲೇ ಹಲವಾರು ತೆಲುಗು ಕಥೆಗಳು, ಮಕ್ಕಳ ಪದ್ಯಗಳನ್ನು ರಚಿಸಿದ್ದರು. ೧೯೬೪ರಲ್ಲಿ ಎರಡು ಚಿಕ್ಕ ನಾಟಕಗಳನ್ನು ರಚಿಸಿ ತಾವೇ ಪ್ರಕಟಿಸಿದರು. ನಂತರ ಬರೆದದ್ದು ‘ಅಧಿಕಾರಿಗಳ ಅವಾಂತ್ರ’ ಎಂಬ ನೂರ ಇಪ್ಪತ್ತು ಪುಟದ ನಾಟಕ. ಹೀಗೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಕನ್ನಡದಲ್ಲಿ ಬರೆದ ಮೊದಲ ಕಾದಂಬರಿ ‘ಪರಿತ್ಯಕ್ತೆ’ ೧೯೬೯ ರಲ್ಲಿ ಪ್ರಕಟವಾಯಿತು.  ಈ ಸಂದರ್ಭದಲ್ಲಿ  ಸುಧಾ, ಮಯೂರ ಪತ್ರಿಕೆಗಳು ಪ್ರಾರಂಭವಾಗಿದ್ದು ಹೊಸ ಲೇಖಕರಿಗೆ ಉತ್ತೇಜನ ದೊರೆಯತೊಡಗಿತು. ನಂತರ ಬರೆದ ಕಾದಂಬರಿಗಳು ಅಮೃತ ಕಳಶ, ಭುವನ ವಿಜಯ, ದೇವರೇ ಸಾಕ್ಷಿ, ಇಂದಿರೆ, ನೃತ್ಯ ಸಾಮ್ರಾಜ್ಞಿ, ಪ್ರಣಯಿನಿ ಮುಂತಾದ ೧೪ ಕಾದಂಬರಿಗಳಲ್ಲದೆ ತುಂಗಭದ್ರೆಯ ಮಡಿಲಲ್ಲಿ, ನಾಳೆ, ಬಾವುಟ ಅತ್ತಿತು, ಆ ಹುಡುಗಿ, ಶಿಲಾರವ, ಕೆರೆ, ತಿಂಮನ ಪ್ರೇಮಾಯಣ (ಹಾಸ್ಯ) ಮುಂತಾದ ೭ ಕಥಾ ಸಂಕಲನಗಳು ಪ್ರಕಟವಾದವು. ೧೯೭೨ರಲ್ಲಿ ಭಾರತ ಪ್ರವಾಸಮಾಡಿ ಅಕಾರಾದಿಯಾಗಿ ಅಸ್ಸಾಮಿಯಿಂದ ಹಿಡಿದು ಹಿಂದಿ ಭಾಷೆಯವರೆಗೆ ೧೮ ಅಧಿಕೃತ ಭಾಷೆಗಳಲ್ಲಿ ಕೃತಿ ರಚಿಸಿರುವ ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿ, ಐದು ಸಂಪುಟಗಳಲ್ಲಿ ರಚಿಸಿದ ಕೃತಿಗಳು ‘ಭಾರತೀಯ ನಾರಿ-ನಡೆದು ಬಂದ ದಾರಿ’. ಇದು ೧೯೭೨ರಿಂದ ೭೪ರವರೆಗೆ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿಯೂ ಪ್ರಕಟಗೊಂಡಿತು. ಮಿಥಿಕ್‌ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯೆಯಾದ ನಂತರ ಇತಿಹಾಸ ವಿಷಯದಲ್ಲೂ ಆಸ್ಥೆ ಬೆಳೆದು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧ ‘ಬೌದ್ಧಧರ್ಮದಲ್ಲಿ ಸ್ತ್ರೀಯರು’ ಇತಿಹಾಸದ ಬಗ್ಗೆ ಸಂಶೋಧನೆಗೆ ತೊಡಗಿ ವಿಜಯನಗರದ ಇತಿಹಾಸದ ಬಗ್ಗೆ ಬರೆದ ಕಾದಂಬರಿ ‘ಭುವನ ವಿಜಯ’, ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಇತಿಹಾಸ ಅಕಾಡಮಿಯ ಸಂಪರ್ಕಕ್ಕೆ ಬಂದ ನಂತರ ಕೃಷ್ಣದೇವರಾಯನು ರಚಿಸಿದ ‘ಆಮುಕ್ತಮಾಲ್ಯ’ ಮತ್ತು ತೆಲುಗಿನ ಪಂಚ ಕಾವ್ಯಗಳನ್ನೂ ಕನ್ನಡಕ್ಕೆ ಅನುವಾದಿಸಿದರು. ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದ ಕರ್ನಲ್‌ ಮೆಕೆಂಜಿಯವರ ಕೈಫಿಯತ್ತುಗಳ ಕನ್ನಡ ಅನುವಾದ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಇಂಗ್ಲಿಷ್‌, ತೆಲುಗು, ತಮಿಳು, ಸಂಸ್ಕೃತ ಮತ್ತು ಹಳಗನ್ನಡದಲ್ಲಿದ್ದ ಆಕರ ಮಾಹಿತಿಯನ್ನು ‘ವಿಜಯನಗರದ ಇತಿಹಾಸದ ಆಕರಗಳು’ ಎಂದು ಕನ್ನಡಕ್ಕೆ ಅನುವಾದಿಸಿದ ಬೃಹದ್ಗಂಥ-ಇವು ಇತಿಹಾಸಕ್ಕೆ ಸಂಬಂಧಿಸಿದ ಮೌಲಿಕ ಕೃತಿಗಳು. ಪ್ರಾಚೀನ ಧರ್ಮಶಾಸ್ತ್ರ ನಿಪುಣರಾದ ಗೌತಮ, ಅಪರಾರ್ತೆ, ಅಶ್ವಲಾಯನ, ಯಾಜ್ಞವಲ್ಕ, ಮನು ಮುಂತಾದವರುಗಳಿಂದ ಹಿಡಿದು ಇಂದಿನವರೆಗೆ, ಮಹಿಳೆಯರಿಗಿರುವ ಕಾನೂನು ಸೌಲಭ್ಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ರಚಿಸಿದ ಕೃತಿ “ಕಾನೂನಿನ ಕಕ್ಷೆಯಲ್ಲಿ ರಕ್ಷೆ”. ಇದು ಮಹಿಳಾ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ. ಮಕ್ಕಳ ಸಾಹಿತ್ಯದ ಬಗ್ಗೆ ಒಲವು ಬೆಳೆದು ‘ಮಕ್ಕಳ ಸಾಹಿತ್ಯ’ ಎಂಬ ಪ್ರೌಢ ಪ್ರಬಂಧ ಬರೆದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ. ಪಿಎಚ್‌.ಡಿ. ಪದವಿ ಪಡೆದ ನಂತರ ಈ ದಿಸೆಯಲ್ಲಿ ಯಾವ ಸಂಸ್ಥೆಯೂ ಮಕ್ಕಳ ಸಾಹಿತ್ಯದ ಬಗ್ಗೆ ಕ್ರಿಯಾಶೀಲವಾಗಿಲ್ಲವೆಂದು ತಿಳಿದು ಪ್ರಾರಂಭಿಸಿದ್ದು ‘ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು’. ಸ್ಥಾಪಕ ಅಧ್ಯಕ್ಷೆಯಾಗಿ ಹಲವಾರು ವರ್ಷಗಳ ಕಾಲ ಕಾರ್ಯ ನಿರ್ವಹಣೆ. ಮಕ್ಕಳಿಗಾಗಿ ಹಲವಾರು ವಿಚಾರ ಸಂಕಿರಣ, ವಿಡಿಯೋಟೇಪ್‌, ವರ್ಣರಂಜಿತ ಪುಸ್ತಕಗಳ ಪ್ರಕಟಣೆ. ೧೯೮೯ ರಲ್ಲಿ ೫ ದಿವಸಗಳು ನಡೆಸಿದ ಅಷ್ಟಭಾಷಾ ಮಕ್ಕಳ ಸಾಹಿತ್ಯ ಸಮ್ಮೇಳನ. ದಕ್ಷಿಣದ ಆರು ರಾಜ್ಯಗಳಿಂದ ೭೨ ಜನ ಸಾಹಿತಿಗಳು ಭಾಗವಹಿಸಿ ದೇಶದಲ್ಲೇ ನಡೆದ ಮೊದಲ ಮಕ್ಕಳ ಸಮ್ಮೇಳನವೆಂಬ ಹೆಗ್ಗಳಿಕೆ. ಷಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಮೂಲಕ ಮರ್ಚೆಂಟ್‌ ನೇವಿ ಸೇರಿದ ಮಗ ಸುಧೀಂದ್ರ ರವರು ಉನ್ನತ ಪರೀಕ್ಷೆಗಾಗಿ ಕೋಲ್ಕತ್ತಾವನ್ನೂ ಕೇಂದ್ರವಾಗಿ ಆಯ್ಕೆಮಾಡಿಕೊಂಡಾಗ ಜೊತೆಗಿರಲು ಹೋದ ನಿರುಪಮಾರವರು ಒಂದು ವರ್ಷದ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಳ್ಳಲು ಶಾಂತಿನಿಕೇತನದ ಕುಲಪತಿಗಳಾಗಿದ್ದ ರಮಾ ಚೌಧರಿಯವರ ಮಾರ್ಗದರ್ಶನದಲ್ಲಿ ‘ಭಾರತೀಯ ಮಹಿಳಾ ಪರಂಪರೆ’ ಎಂಬ ವಿಷಯವನ್ನು ಆಯ್ಕೆಮಾಡಿಕೊಂಡು ಗ್ರಂಥ ಭಂಡಾರದಿಂದ ಮಾಹಿತಿ ಸಂಗ್ರಹಣೆ, ವಿದ್ವಾಂಸರೊಡನೆ ಚರ್ಚೆ ಇವುಗಳಿಂದ `INDIAN WOMEN THROUGH THE AGES’ ಮಹಾ ಪ್ರಬಂಧ ರಚಿಸಿ ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ. ಬಂಗಾಲಿ ಕಲಿತದ್ದರಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಮಹಾಶ್ವೇತಾದೇವಿಯವರ ಹಸಾರ್, ಅಗ್ನಿಗರ್ಭ್, ಶ್ರೀಶ್ರೀ ಗಣೇಶ ಮಹಿಮೆ-ಈ ಮೂರು ಕಾದಂಬರಿಗಳನ್ನು ಬಂಗಾಲಿಯಿಂದ ಅನುವಾದಿಸಿದ್ದಾರೆ. ೧೯೭೯ರಲ್ಲಿ ಜಿ. ನಾರಾಯಣರೊಡನೆ ಸೇರಿ ಸ್ಥಾಪಿಸಿದ್ದು ಕರ್ನಾಟಕ ಲೇಖಕಿಯರ ಸಂಘ. ಕೆಲಕಾಲ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ. ನಂತರ ಪ್ರಾರಂಭಿಸಿದ್ದು ‘ಹರಿದಾಸ ಸಾಹಿತ್ಯ ಪ್ರತಿಷ್ಠಾನ’. ಪ್ರತಿಷ್ಠಾನದ ಅಧ್ಯಕ್ಷೆಯಾಗಿ ನಿರ್ವಹಿಸಿದ ಕಾರ್ಯಗಳು ಹಲವಾರು. ಹರಿದಾಸ ಸಾಹಿತ್ಯದ ಬಗ್ಗೆ ೪ ಹಂತಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ರತ್ನ’, ೫ ಹಂತಗಳಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ‘ಹರಿದಾಸ ಸಾಹಿತ್ಯ ಭೂಷಣ’ ಪ್ರಶಸ್ತಿಗಳನ್ನು ಕೊಡಮಾಡತೊಡಗಿದ್ದು, ಇದಕ್ಕಾಗಿ ಪರೀಕ್ಷೆಗೆ ಬೇಕಾದ ಪಠ್ಯಪುಸ್ತಕಗಳನ್ನೂ ರಚಿಸಿ, ದಾಸರ ಕೀರ್ತನೆಗಳನ್ನು ಹಾಡುತ್ತಿದ್ದ ಕಲಾವಿದರುಗಳು ಹರಿದಾಸ ಸಾಹಿತ್ಯದ ಬಗ್ಗೆ ಒಲವು ಮೂಡುವಂತೆ ಮಾಡಿದರು. ಕರ್ನಾಟಕ ಸಾಹಿತ್ಯ ಅಕಾಡಮಿಯ ನೆರವಿನಿಂದ ೧೯೮೨ ರಲ್ಲಿ ಒರಿಸ್ಸಾರಾಜ್ಯ, ೧೯೮೭ ರಲ್ಲಿ ಆಂಧ್ರ ಪ್ರದೇಶ, ೧೯೯೪ ರಲ್ಲಿ ಮಧ್ಯಪ್ರದೇಶ, ೧೯೯೬ ರಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರ ಪ್ರದೇಶಗಳನ್ನೂ ಸುತ್ತಿ ಬಂದು ಬರೆದ ಪ್ರವಾಸ ಸಾಹಿತ್ಯ ಕೃತಿಗಳು. ಪ್ರಾರಂಭಿಕ ಶಿಕ್ಷಣ ತೆಲುಗು ಭಾಷೆಯಲ್ಲಾದ್ದರಿಂದ ತೆಲುಗು ಲೇಖಕಿಯರ ಅನೇಕ ಸಮ್ಮೇಳನಗಳಲ್ಲಿ ಭಾಗವಹಿಸಿ ಮಂಡಿಸಿದ ಪ್ರಬಂಧಗಳು. ಹಲವಾರು ಸರಕಾರಿ, ಖಾಸಗಿ ಸಂಸ್ಥೆಗಳ ಸದಸ್ಯರಾಗಿಯೂ ನಿರ್ವಹಿಸಿದ ಗುರುತರ ಕಾರ್ಯಗಳು. ದೂರದರ್ಶನ ಕೇಂದ್ರದ ಆಯ್ಕೆ ಸಮಿತಿ ಸದಸ್ಯೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆಯಾಗಿ ಪುಸ್ತಕ ಪ್ರಾಧಿಕಾರದ ಸದಸ್ಯೆಯಾಗಿ ಸಲ್ಲಿಸಿದ ಸೇವೆ. ಕನ್ನಡ, ತೆಲುಗು, ಹಿಂದಿ, ಸಂಸ್ಕೃತ, ಬಂಗಾಲಿ, ಇಂಗ್ಲಿಷ್‌ ಭಾಷೆಗಳನ್ನೂ ಕಲಿತಿರುವ ನಿರುಪಮಾರವರು ಕಲಿಯುವ ಛಲದಿಂದ ಆಯ್ಕೆ ಮಾಡಿಕೊಂಡ ವಿಷಯಗಳೂ ವೈವಿಧ್ಯವಾದವುಗಳು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರೂ ತಲಸ್ಪರ್ಶಿ ಅಧ್ಯಯನ ನಡೆಸಿ ರಚಿಸಿದ ಗ್ರಂಥಗಳು ಮಹಿಳಾ ಪ್ರಪಂಚಕ್ಕಷ್ಟೇ ಅಲ್ಲದೆ ಸಾಹಿತ್ಯ ಪ್ರಪಂಚಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ. ೧೪ ಕಾದಂಬರಿಗಳು, ೫ ಕಥಾ ಸಂಕಲನಗಳು, ೫ ಸಂಶೋಧನೆ, ೫ ವಿಮರ್ಶಾಕೃತಿಗಳು, ೧೦ ಅನುವಾದ ಕೃತಿಗಳು, ೮ ನಾಟಕಗಳು, ಜೀವನ ಚರಿತ್ರೆಗಳು ಮತ್ತು ಮಕ್ಕಳ ಪುಸ್ತಕಗಳೂ ಸೇರಿ ಪ್ರಕಟಿಸಿದ ಕೃತಿಗಳೇ ನೂರಕ್ಕೂ ಹೆಚ್ಚು, ಪ್ರಕಾಶಕರ ಮರ್ಜಿಕಾಯದೆ ಶ್ರೀಪ್ರಕಾಶನ ಮತ್ತು ಆರತಿ ಪಬ್ಲಿಕೇಷನ್‌ ಮೂಲಕ ಉದಯೋನ್ಮುಖರ ಮೊದಲ ಪುಸ್ತಕಗಳನ್ನೂ ಪ್ರಕಟಿಸಿ ಒಟ್ಟು ೨೨೦ ಶೀರ್ಷಿಕೆಗಳ ಪ್ರಕಾಶಕರಾಗಿ ದಕ್ಷಿಣ ಭಾರತದ ಅತ್ಯುತ್ತಮ ಪ್ರಕಾಶಕಿ ಎಂಬ ಪ್ರಶಸ್ತಿ ಪಡೆದಿದ್ದಾರೆ. ಹೀಗೆ ಹಲವಾರು ರಂಗಗಳಲ್ಲಿ ತಮ್ಮದೇ ಆದ ವೈಶಿಷ್ಟ್ಯ ಪೂರ್ಣ ವ್ಯಕ್ತಿತ್ವವನ್ನೂ ರೂಪಿಸಿಕೊಂಡ ನಿರುಪಮಾ ರವರಿಗೆ ಧಾರವಾಡದ ಮಕ್ಕಳ ಮನೆ ಪ್ರಶಸ್ತಿ, ಯುನಿಸೆಫ್‌ ಮಕ್ಕಳ ಸಾಹಿತ್ಯ ಪ್ರಶಸ್ತಿ, ಶಾಶ್ವತ ಸಂಸ್ಥೆಯ ‘ಸದೋದಿತಾ’ ಪ್ರಶಸ್ತಿ, ದೆಹಲಿಯಿಂದ ರಾಷ್ಟ್ರೀಯ ಪುರಸ್ಕಾರ, ‘ಹರಿದಾಸ ಸಾಹಿತ್ಯ ಶಿರೋಮಣಿ ಪುರಸ್ಕಾರ’, ಬಿ.ಎಸ್‌. ಚಂದ್ರಕಲಾರವರ ಲಿಪಿ ಪ್ರಾಜ್ಞೆ ಪ್ರಾಶಸ್ತಿ ಡಿ.ವಿ.ಜಿ. ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಿ. ಸರೋಜದೇವಿ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ೨೦೧೦ ರಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ನಿರುಪಮಾ ಲೋಕ’.

Details

Date:
September 30, 2023
Event Category: