- This event has passed.
ಡಾ. ಬುದ್ದಣ್ಣ ಹಿಂಗಮಿರೆ
September 4, 2023
೪-೯-೧೯೩೩ ಕವಿ, ನಾಟಕಕಾರ, ವಿಮರ್ಶಕ, ಅನುವಾದಕ ಬುದ್ದಣ್ಣ ಹಿಂಗಮಿರೆಯವರು ಹುಟ್ಟಿದ್ದು ಅಂದಿನ ಬೆಳಗಾವಿ ಜಿಲ್ಲೆಯ ರಾಜಾಪುರ. ತಂದೆ ಬಾಬು, ತಾಯಿ ದುಂಡವ್ವ. ಪ್ರಾಥಮಿಕ ಶಿಕ್ಷಣ ರಾಜಾಪುರ. ಹೈಸ್ಕೂಲು ಓದಿದ್ದು ಚಿಕ್ಕೋಡಿಯಲ್ಲಿ. ಬೆಳಗಾವಿಯ ಲಿಂಗರಾಜ ಕಾಲೇಜಿನಿಂದ ಬಿ.ಎ. ಪದವಿ. ಪುಣೆ ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ರಂ.ಶ್ರೀ. ಮುಗಳಿಯವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಶೋಕ ಕಾವ್ಯ’ ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ರಷ್ಯನ್ ಭಾಷೆಯಲ್ಲಿ ಎಂ.ಎ. ಪದವಿ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ. ಯು.ಜಿ.ಸಿ. ಕಾರ್ಯಕ್ರಮದಡಿಯಲ್ಲಿ ರಷ್ಯ ದೇಶಕ್ಕೆ ಭೇಟಿ. ರಷ್ಯಾದ ಫ್ರೆಂಡ್ಶಿಪ್ ಯೂನಿವರ್ಸಿಟಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನ, ಆಕಾಶವಾಣಿಯ ರಾಷ್ಟ್ರೀಯ ಕವಿಗೋಷ್ಠಿ, ದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಾಹಿತ್ಯ ಸಮ್ಮೇಳನ, ಧಾರವಾಡದಲ್ಲಿ ನಡೆದ ರಾಷ್ಟ್ರೀಯ ರಷ್ಯನ್ ಭಾಷಾ ಸಮ್ಮೇಳನ, ಮುಂಬಯಿಯ ಕನ್ನಡ ಸಾಹಿತ್ಯ ಸಮ್ಮೇಳನ, ತ್ರಿವೇಂಡ್ರಮ್ನಲ್ಲಿ ನಡೆದ ರಾಷ್ಟ್ರೀಯ ಭಾಷಾಂತರಕಾರರ ಸಮ್ಮೇಳನ, ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ, ಟ್ರಿಚೂರಿನಲ್ಲಿ ನಡೆದ ರಾಷ್ಟ್ರೀಯ ಭಾಷಾಂತರಕಾರರ ಸಮ್ಮೇಳನ, ದಸರೆ ಕವಿಗೋಷ್ಠಿ, ಬಾಗಲಕೋಟೆಯಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ಹೀಗೆ ಹಲವಾರು ಗೋಷ್ಠಿ, ಸಮ್ಮೇಳನಗಳಲ್ಲಿ ಭಾಗಿ. ಚಿಕ್ಕಂದಿನಿಂದಲೇ ಸಾಹಿತ್ಯದತ್ತ ಒಲವು. ಹಲವಾರು ಕೃತಿ ಪ್ರಕಟಿತ. ಕಾವ್ಯ-ಉದಯರಾಗ, ಗುಬ್ಬಿಯ ಹಾಡು, ಹುಲ್ಲು ಹೆಜ್ಜೆ, ಶಬ್ದ, ರಕ್ತ ಮತ್ತು ಮಾಂಸ, ಹದ್ದುಗಳ ಹಾಡು, ಈ ನದಿಯ ಮಡಿಲಲ್ಲಿ. ವಿಮರ್ಶೆ-ಹೊಸ ಕಾವ್ಯ ಹೊಸದಿಕ್ಕು, ಕನ್ನಡದ ನವ್ಯ ಕಾವ್ಯಭೂಮಿ. ನಾಟಕಗಳು-ನೀಲಾಂಜನೆ ಮತ್ತು ಇತರ ನಾಟಕಗಳು. ತೀರ್ಪು ಮತ್ತು ಇತರ ನಾಟಕಗಳು, ಅಹಲ್ಯೆ, ದೀನದಲಿತರ ನಾಯಕ. ಸಂಪಾದಿತ-ಹೊಸ ಜನಾಂಗದ ಕವಿತೆಗಳು, ಇಳಿದು ಬಾ ತಾಯೆ, ಕಾವ್ಯಗೌರವ ರಷ್ಯನ್ ಕಾವ್ಯದ ಅನುವಾದ, ರೂಪಾಂತರ-ರಶಿಯನ್ ಹೊಸ ಕವಿತೆಗಳು, ಪುಷ್ಕಿನ್ ಕವಿತೆಗಳು, ಬೈಲೋ ರಷ್ಯನ್ ಕವಿತೆಗಳು, ಜಿಪ್ಸಿಗಳು, ಯುದ್ಧ ಮತ್ತು ಪ್ರೇಮ (ನಾಟಕ), ಅಘನಾಶಿ ರಶಿಯನ್ (ರಶಿಯನ್ ಪ್ರವಾಸಿ), ಬುದ್ಧ ಕಾವ್ಯದರ್ಶನ, ಲೆಟರ್ ಫ್ರಂ ಮಾಸ್ಕೊ. ಪ್ರಶಸ್ತಿ ಗೌರವಗಳು-ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ. ಏಷಿಯಾ, ಅಮೆರಿಕಾ, ಕೇಂಬ್ರಿಡ್ಜ್ WHO IS WHOನಲ್ಲಿ ಹೆಸರು ಸೇರ್ಪಡೆ. ಇದೇ ದಿನ ಹುಟ್ಟಿದ ಸಾಹಿತಿ : ಮಾಲಿನಿ ಇಂದುಕುಮಾರ್ – ೧೯೬೭