- This event has passed.
ಡಾ. ಲಕ್ಷ್ಮೀದೇವಿ ಎಸ್.
September 10, 2023
೧೦.೦೯.೧೯೭೨ ನಾಟಕಗಳ ನಿರ್ದೇಶನ, ಅಭಿನಯ, ಕಂಠದಾನ, ಕಿರುತೆರೆಯ ಕಲಾವಿದೆಯಾಗಿ ಪ್ರಭಾವಿತರಾಗಿರುವ ಲಕ್ಷ್ಮೀದೇವಿ ಹುಟ್ಟಿದ್ದು ಬೆಂಗಳೂರು. ತಂದೆ ಸಾಥ್ವಿ. ತಾಯಿ ಈಶ್ವರಮ್ಮ. ಚಿಕ್ಕಂದಿನಿಂದಲೂ ನಾಟಕ, ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ. ಮೊದಲ ದರ್ಜೆಯಲ್ಲಿ ಎಂ.ಎ. ಪದವಿ. ‘ಹೊಸಕೋಟೆಯ ತಾಲ್ಲೂಕಿನ ಗ್ರಾಮದೇವತೆಗಳು: ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ದೊರೆತ ಪಿಎಚ್..ಡಿ. ಪದವಿ. ಬೆಂಗಳೂರಿನ ಹಲವಾರು ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಅನುಭವ. ಇದೀಗ ಆಂಧ್ರಪ್ರದೇಶದ ದ್ರವಿಡಿಯನ್ ಯೂನಿವರ್ಸಿಟಿ ಕುಪ್ಪಂನಲ್ಲಿ ಸಹಾಯಕ ಪ್ರಾಚಾರ್ಯರ ಹುದ್ದೆ. ವಿಚಾರ ಸಂಕಿರಣ, ಕಲಾಜಾತ, ಸಾಕ್ಷರತಾ ಆಂದೋಲನ, ನಾಟಕ, ಜಾನಪದ ಸ್ಪರ್ಧೆ, ದಕ್ಷಿಣ ರಾಜ್ಯಗಳ ರಾಜ್ಯಮಟ್ಟದ ಯುವಜನೋತ್ಸವ, ಬನಾರಸ್ನಲ್ಲಿ ರಾಷ್ಟ್ರಮಟ್ಟದ ಯುವಜನೋತ್ಸವ, ಇಸ್ಕಾನ್ ಸಾಂಸ್ಕೃತಿಕ ಸ್ಪರ್ಧೆ ಮುಂತಾದವುಗಳ ಸಂಚಾಲಕಿಯಾಗಿ ಹೊತ್ತ ಜವಾಬ್ದಾರಿ. ನಾಟಕದಲ್ಲಿ ನಾಯಕಿಯಾಗಿ ರಾಜಬೇಟೆ, ಹುಚ್ಚೇರಿಯ ಹೆಸರಿನ ಪ್ರಸಂಗ, ಮೌನಿ, ಮಂಟೇಸ್ವಾಮಿ ಕಥಾ ಪ್ರಸಂಗ, ಮಿಸ್ಟರ್. ಇ, ತಿಪ್ಪೇಶಿ, ಸಂತೆಯಲ್ಲಿ ನಿಂತ ಕಬೀರ ಮುಂತಾದುವುಗಳು ತಂದುಕೊಟ್ಟ ಕೀರ್ತಿ. ಕಾಲರ, ಅರಿವು, ಕಳ್ಳುಬುಂಡೆ ನಮ್ಮವ್ವ, ಅಲ್ಲಾವುದೀನನ ಅದ್ಭುತ ದೀಪ ಮುಂತಾದ ಬೀದಿ ನಾಟಕಗಳಲ್ಲಿನ ನಟನೆಗೆ ಸಂದ ಗೌರವ. ಮನೆಯೇ ಮೊದಲ ಪಾಠಶಾಲೆ, ಶೋಧ, ಶುಭೋದಯ, ಮನೆಮನೆ ಕಥೆ, ತರ್ಲೆತಾತ, ಬಿದಿಗೆ ಚಂದ್ರಮ, ಸಂಜೆ ಮಲ್ಲಿಗೆ, ಮುಂತಾದ ಕಿರುತೆರೆಯ ಧಾರವಾಹಿಗಳಲ್ಲಿನ ಪ್ರಮುಖ ಪಾತ್ರ. ಕಂಠದಾನ ಕಲಾವಿದೆಯಾಗಿ ಹಲವಾರು ಕಿರುತೆರೆಯ ಕಲಾವಿದೆಯರಿಗೆ ನೀಡಿದ ಕಂಠದಾನ. ರಂಗಕೃತಿಗಳ ರಚನೆ-ಸಂಪಾದನೆ-ಭಾಷಾಂತರ. ಹಲವಾರು ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಂದ ದೊರೆತ ಗೌರವ ಪ್ರಶಸ್ತಿಗಳು. ಇದೇ ದಿನ ಹುಟ್ಟಿದ ಕಲಾವಿದರು ಶ್ರೀನಿವಾಸ್ ಎಸ್.ವಿ – ೧೯೨೪ ಗೌರಮ್ಮ ನಾಗರಾಜ್ – ೧೯೩೨ ನಾಗೇಶಮೂರ್ತಿ ಅ.ಶ್ರೀ. – ೧೯೬೫
* * *