- This event has passed.
ಡಿ. ಪದ್ಮನಾಭಶರ್ಮ
November 27, 2023
೨೭-೧೧-೧೯೧೫ ೨೭-೭-೧೯೯೫ ಜೈನ ಸಾಹಿತ್ಯ ಭೂಷಣ, ಸಿದ್ಧಾಂತ ಶಿರೋಮಣಿ ಪದ್ಮನಾಭಶರ್ಮರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ತಾಲ್ಲೂಕಿನ ಭುವನಹಳ್ಳಿ. ತಂದೆ ದೇವಚಂದ್ರ ಜೋಯಿಸರು, ತಾಯಿ ಚಂದ್ರಮತಮ್ಮ. ಪ್ರಾರಂಭಿಕ ಶಿಕ್ಷಣ ಚಾಮರಾಜನಗರ. ಪ್ರೌಢಶಾಲೆ ಮಂಡ್ಯದಲ್ಲಿ. ಎಸ್.ಎಸ್.ಎಲ್.ಸಿ. ನಂತರ ಬೆಟ್ಟದ ಪುರದಲ್ಲಿ ಮಾಸ್ತರಿಕೆ ಕೆಲಕಾಲ. ಮೈಸೂರಿನ ಟ್ರೈನಿಂಗ್ ಕಾಲೇಜಿನಲ್ಲಿ ಐದು ವರ್ಷ ಅಧ್ಯಯನ. ಪಂಡಿತ ಪರೀಕ್ಷೆಯ ನಂತರ ಬೆಂಗಳೂರಿನ ಕೋಟೆ ಹೈಸ್ಕೂಲಿನಲ್ಲಿ ಅಧ್ಯಾಪಕ ವೃತ್ತಿ. ವಾಣಿವಿಲಾಸ ಜ್ಯೂನಿಯರ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನಿವೃತ್ತಿ. ಎಳೆವೆಯಿಂದಲೇ ಸಾಹಿತ್ಯ ರಚನೆಗಾರಂಭ. ಸ್ವಾತಂತ್ರ್ಯ ಚಳವಳಿಗಾರರಿಗೆ ಬರೆದ ಭಾಷಣ, ಕವನ, ಲಾವಣಿ ಬರಹಗಳು. ಪ್ರಾಕೃತ, ಹಿಂದಿ, ಸಂಸ್ಕೃತ, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಗಳಿಸಿದ ಪಾಂಡಿತ್ಯ. ರಚಿಸಿದ ಕೃತಿಗಳು ವೈವಿಧ್ಯಮಯ. ಸಾಹಿತ್ಯ, ಸಿದ್ಧಾಂತ, ವ್ಯಾಕರಣ, ಕಾದಂಬರಿ, ಸ್ತೋತ್ರ ಹೀಗೆ ಎಲ್ಲ ಪ್ರಕಾರಗಳಲ್ಲೂ ಕೃತಿರಚನೆ. ಜೈನ ಸಾಹಿತ್ಯ ಕೃತಿಗಳು-ತ್ಯಾಗವೀರ ಬಾಹುಬಲಿ, ಭರತ ಬಾಹುಬಲಿ, ಅಭಿನವ ವಾಗ್ದೇವಿ ಕಂತಿ, ಸಮಂತ ಭದ್ರ ಸಂಗತಿ, ವಿಜಯ ಪಾರ್ಶ್ವನಾಥ, ಆದಿನಾಥ ಸಂಗತಿ ಮುಂತಾದುವು. ಕಾದಂಬರಿಗಳು-ನಿರಾಸೆಯ ನಿಟ್ಟುಸಿರು, ಪತಿತ ಪಾವನೆ, ನಲ್ಲೆಯಾಗಲೊಲ್ಲೆ, ದಯಾದೇವಿ, ಸತ್ಯದ ಶೋಧನೆ ಮೊದಲಾದುವು. ವ್ಯಾಕರಣ ಕೃತಿಗಳು-ಕರ್ನಾಟಕ ಶಬ್ದಾನುಸಾರಕ್ಕೆ ಬರೆದ ‘ನಲ್ನುಡಿಗನ್ನಡಿ’ ವ್ಯಾಖ್ಯಾನ, ಕನ್ನಡ ವ್ಯಾಕರಣ ದರ್ಶನ. ಕಥಾಸಾಹಿತ್ಯ-ಜೈನ ಸಾಹಿತ್ಯ ಕಥೆಗಳು ಭಾಗ-೧, ಅಷ್ಟವಿಧಾರ್ಚನ ಕಥೆಗಳು, ಜಂಬೂಸ್ವಾಮಿಯ ಕಥೆಗಳು. ಸಿದ್ಧಾಂತ ಕೃತಿಗಳು-ಸತ್ಕ್ರಿಯಾದರ್ಪಣ, ಆತ್ಮದರ್ಶನ, ಇಷ್ಟೋಪದೇಶ, ರಯಣ ಸಾರ, ನಿಯಮಸಾರ, ಅಣುವ್ರತ ಆಂದೋಲನ ಮೊದಲಾದುವು. ನಾಟಕಗಳು-ವಸಂತ ತಿಲಕೆ, ನಾಲ್ಕಿರುಳ್, ವಿದುಷಿ ಕಂತಿ ಕವಯಿತ್ರಿ, ಮಾಸ್ಟರ ಮಗಳು. ಇತರ-ಪಿಚ್ಛ ಮತ್ತು ಕಮಂಡಲು, ಅಣುವ್ರತ, ಗೊಮ್ಮಟೇನ ಥುವಿ, ನಿಮ್ಮನ್ನು ನೀವು ತಿಳಿಯಿರಿ, ಧನಂಜಯ ಶಬ್ದಕೋಶವು ಸೇರಿದಂತೆ ೧೦೦ ಕೃತಿ ಪ್ರಕಟಿತ. ಭರತ ಬಾಹುಬಲಿ, ಸಾಹಸೀ ಸುಭಾಶ್, ಅಮರ ನೆಹರು ಕರ್ನಾಟಕ ಸರ್ಕಾರದಿಂದ ಪಠ್ಯಪುಸ್ತಕವಾಗಿ ಆಯ್ಕೆ. ಸಂದ ಪ್ರಶಸ್ತಿಗಳು-ನಲ್ನುಡಿಗನ್ನಡಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ. ಜೈನ ಸಾಹಿತ್ಯ ಭೂಷಣ ಪ್ರಶಸ್ತಿ, ರಾಜ್ಯ ಸಂಸ್ಕೃತ ಅಕಾಡಮಿ ಪ್ರಶಸ್ತಿ, ಉತ್ತಮ ಅಧ್ಯಾಪಕ ಪ್ರಶಸ್ತಿ, ಸಿದ್ಧಾಂತ ಶಿರೋಮಣಿ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ದೇವೇಂದ್ರ ಕೀರ್ತಿ ಪ್ರಶಸ್ತಿ ಮುಂತಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ಕೊಂಡಜ್ಜಿ ವೆಂಕಟೇಶ್ – ೧೯೫೪ ಪ್ರೇಮಮಯಿ – ೧೯೫೮