Loading Events

« All Events

  • This event has passed.

ನವರತ್ನರಾಂ

December 3, 2023

೩-೧೨-೧೯೩೨ ೧೭-೧೦-೧೯೯೧ ನಟ, ನಾಟಕಕಾರ, ಕಾದಂಬರಿಕಾರರಾದ ನವರತ್ನರಾಂ ಹುಟ್ಟಿದ್ದು ಬೆಂಗಳೂರು. ತಂದೆ ನವರತ್ನರಾಮರಾವ್, ತಾಯಿ ಪುಟ್ಟಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರಿನ ಆಚಾರ‍್ಯ ಪಾಠಶಾಲೆಯಲ್ಲಿ. ಬಾಲ್ಯದಿಂದಲೇ ಓದಿನ ಜೊತೆಗೆ ಅಂಟಿ ಬಂದ ಸಂಗೀತ, ನಾಟಕ, ಸಾಹಿತ್ಯ, ಚಿತ್ರಕಲೆಗಳ ಹುಚ್ಚು. ಕಲಾಮಂದಿರದ ಅ.ನ.ಸುಬ್ಬರಾಯರು ಇವೆಲ್ಲಕ್ಕೂ ಪ್ರೇರಕರು. ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಮುಗಿಸಿದ ನಂತರ ಸೇರಿದ್ದು ಕೃಷಿ ಕಾಲೇಜು. ಕಾಲೇಜಿನಲ್ಲಿದ್ದಾಗಲೇ ರಚಿಸಿದ ಆರ್ಕೆಸ್ಟ್ರಾ ತಂಡ. ಕಲಾ ಮಂದಿರದ ಮಿತ್ರರೊಡನೆ ಕಟ್ಟಿದ್ದು ‘ಚಿತ್ರ ಕಲಾವಿದರು.’ ನಟನೆ ಜೊತೆಗೆ ನಾಟಕಗಳ ರಚನೆ. ಅಕ್ಕಪಕ್ಕ, ಕೆಂಬೂತ, ಕನಸು-ನನಸು ಮೊದಲ್ಗೊಂಡು ಸುಮಾರು ಐವತ್ತಕ್ಕೂ ಹೆಚ್ಚು ನಾಟಕಗಳ ರಚನೆ. ಬಿಎಸ್ಸಿ ಪದವಿ ಗಳಿಸಿದ ನಂತರ ಸೇರಿದ್ದು ವ್ಯವಸಾಯ ಇಲಾಖೆ. ಉನ್ನತ ವ್ಯಾಸಂಗಕ್ಕೆ ಫ್ರಾನ್ಸ್‌ಗೆ ಹೊರಡಬೇಕೆಂದಾಗ ಫ್ರೆಂಚ್ ಕಲಿತದ್ದು ಉಷಾರವರಿಂದ. ಮುಂದೆ ಗುರುವೇ ಬಾಳಸಂಗಾತಿ. ಪ್ಯಾರಿಸ್ಸಿನಲ್ಲಿ ಸ್ನಾತಕೋತ್ತರ ಅಧ್ಯಯನದಲ್ಲಿದ್ದಾಗಲೇ ಬಾಳಸಂಗಾತಿ ಉಷಾರವರಿಗೆ ಬರೆದ ಪತ್ರಗಳ ಕೃತಿಯೇ ‘ಪ್ಯಾರಿಸ್ಸಿನಿಂದ ಪ್ರೇಯಸಿಗೆ’ ಪ್ರವಾಸದ ವಿಶಿಷ್ಟ ಕೃತಿ. ವಿದೇಶದಿಂದ ಮರಳಿದ ಮೇಲೆ ವಹಿಸಿಕೊಂಡ ಹುದ್ದೆಗಳು ವಿವಿಧೆಡೆ. ಕೆಲಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಹೊಣೆಗಾರಿಕೆ. ಹಲವಾರು ಕೃತಿಗಳ ರಚನೆ. ನವರತ್ನ ರಾಮಾಯಣ, ಹೂವೊಂದು ದುಂಬಿ ನೂರೊಂದು, ೬೭ ಹ್ಯಾರಿಸ್ ರಸ್ತೆ, ಜಗವೆಲ್ಲ ಒಂದೇ ಸಿವ, ನೆರೆಹೊರೆಯವರ ಹೊರೆ, ಹಾಲು-ಹಾಲಾಹಲ, ಕಲ್ಲರಳಿ ಹೂವಾಯಿತು ಮುಂತಾದ ಕೃತಿಗಳ ಜೊತೆಗೆ ಎರಡು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ನಾಟಕ ‘ಜೀವ ಯಾವ ಕುಲ ಆತ್ಮ ಯಾವ ಕುಲ.’ ಸಾಹಿತ್ಯ ನಾಟಕರಂಗದ ಜೊತೆಗೆ ಸಿನಿಮಾ ರಂಗದ ನಂಟು. ಪುಟ್ಟಣ್ಣ ಕಣಗಾಲರ ನಿರ್ದೇಶನದ ಗೆಜ್ಜೆಪೂಜೆ, ಉಪಾಸನೆ ಚಿತ್ರಗಳಿಗೆ ಬರೆದ ಚಿತ್ರಕಥೆ ಸಂಭಾಷಣೆ, ರಾಜ್ಯಪ್ರಶಸ್ತಿ ಪಡೆದ ಚಲನಚಿತ್ರಗಳು. ವಾರಪತ್ರಿಕೆಯ ನೀವು ಕೇಳಿದಿರಿ. ವಿಭಾಗಕ್ಕೆ ‘ಚಿತ್ರ’ ಕಾವ್ಯನಾಮದಿಂದ ವಿಡಂಬನಾತ್ಮಕವಾಗಿ ಉತ್ತರಿಸುತ್ತಿದ್ದು ಇವರು ಹೆಣ್ಣೋ ಗಂಡೋ ಅರಿಯಲು “ನೀವು ಯಾವಾಗ ನಿಧನರಾಗುವಿರಿ, ಆಗಲಾದರೂ ನಿಜನಾಮಧೇಯ ಪ್ರಕಟವಾಗುವುದು, ಏನಂತೀರಿ ?” ಎಂದದ್ದೆ ‘ಕಾಲ’ ಇದರಿಂದ ಉತ್ತೇಜಿತವಾಗಿಬಿಡಬೇಕೇ ?   ಇದೇ ದಿನ ಹುಟ್ಟಿದ ಸಾಹಿತಿಗಳು : ವಿ.ಜಿ. ಭಟ್ಟ – ೧೯೨೩ ಲೀಲಾವತಿ ತೋರಣಗಟ್ಟಿ – ೧೯೩೬ ಸೋಮಶೇಖರರಾವ್. ಎಚ್.ಜಿ. – ೧೯೩೪

Details

Date:
December 3, 2023
Event Category: