- This event has passed.
ಬೆಳ್ಳಾವೆ ನರಹರಿಶಾಸ್ತ್ರಿ
September 21, 2023
೨೧-೯-೧೮೮೨ ೨೧-೬-೧೯೬೧ ನಾಟಕಗಳೇ ಇಲ್ಲದೆ ಸೊರಗಿದ್ದ ಕಾಲದಲ್ಲಿ, ವೃತ್ತಿ ರಂಗಭೂಮಿಗೆ ನಾಟಕಗಳನ್ನು ಬರೆದುಕೊಟ್ಟು, ಕನ್ನಡಿಗರಲ್ಲಿ ಹಾಸ್ಯಪ್ರಜ್ಞೆ ಮೂಡಿಸಿದ ನರಹರಿಶಾಸ್ತ್ರಿಗಳು ಹುಟ್ಟಿದ್ದು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ. ತಂದೆ ನರಸಾವಧಾನಿಗಳು, ತಾಯಿ ವೆಂಕಟಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ತಂದೆಯಿಂದಲೇ. ತುಮಕೂರಿನಲ್ಲಿ ಪ್ರೌಢಶಿಕ್ಷಣ. ಸಂಸ್ಕೃತ, ಕನ್ನಡ ಭಾಷೆ, ಕಾವ್ಯಾಲಂಕಾರದಲ್ಲಿಯೂ ಪಡೆದ ಪಾಂಡಿತ್ಯ. ಶಿಕ್ಷಣ ಇಲಾಖೆಗೆ ಸೇರಿ ವೃತ್ತಿ ಜೀವನ ಪ್ರಾರಂಭಿಸಿ ಕೋಲಾರ, ದೊಡ್ಡಬಳ್ಳಾಪುರ, ಮೇಲುಕೋಟೆ, ಬೆಂಗಳೂರುಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬೆಂಗಳೂರಿನ ಮಾಮೂಲ್ಪೇಟೆ ಮಾಧ್ಯಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ. ನಾಟಕ ರಚನೆಯಲ್ಲಿ ಮೂಡಿ ಬಂದ ಒಲವು. ೧೯೦೧ರಲ್ಲೇ ಸ್ಯಮಂತಕೋಪಾಖ್ಯಾನ ನಾಟಕ ರಚನೆ. ಗುಬ್ಬಿ ವೀರಣ್ಣನವರ ಅಪೇಕ್ಷೆಯಂತೆ ರಚಿಸಿದ ನಾಟಕ ಶ್ರೀಕೃಷ್ಣ ಲೀಲಾ. ಗುಬ್ಬಿ ಕಂಪನಿಗೂ, ನಾಟಕಕಾರರಿಗೂ ತಂದುಕೊಟ್ಟ ಹೆಸರು. ನಂತರ ರಚಿಸಿದ್ದು ಹಲವಾರು ನಾಟಕಗಳು. ಸದಾರಮೆ, ಗುಲೇಬಕಾವಲಿ, ಕಂಸವಧೆ, ಲಂಕಾದಹನ, ರುಕ್ಮಿಣೀ ಸ್ವಯಂವರ, ಮಹಾತ್ಮ ಕಬೀರದಾಸ, ಜಲಂಧರ ಈ ನಾಟಕಗಳು ಗುಬ್ಬಿ ಕಂಪನಿಯಿಂದಲೇ ಪ್ರದರ್ಶನಗೊಂಡವು. ೧೯೨೬ರಲ್ಲಿ ಗುಬ್ಬಿ ವೀರಣ್ಣನವರು ಬಾಲ ಕಲಾರ್ವನಿ ಎಂಬ ಕಿರಿಯ ನಟರ ಸಂಘಕ್ಕೂ ನರಹರಿಶಾಸ್ತ್ರಿಗಳು ಬರೆದದ್ದು ಹಲವಾರು ನಾಟಕಗಳು. ನಂತರ ರಚಿಸಿದ್ದು ಶಂಕರವಿಜಯ, ದಶಾವತಾರ, ಸತೀ ಅನಸೂಯ, ಶಾಕುಂತಲ, ಪಾರಿಜಾತ, ಹೇಮರೆಡ್ಡಿ ಮಲ್ಲಮ್ಮ, ಪ್ರಭಾವತಿ ಮುಂತಾದುವು. VICTOR HUGOನ LES MISERABLES ಕಾದಂಬರಿ ಅನುವಾದ ಪಾಪಿ ಯಾರು ? ಪ್ರಕಟಿತ. ಇವರ ನಾಟಕಗಳನ್ನಾಧರಿಸಿ ಚಲನಚಿತ್ರಗಳಾದುವುಗಳು ಹಲವಾರು. ಬೆಂಗಳೂರಿನ ಸೌತ್ ಇಂಡಿಯನ್ ಮೂವಿಟೋನ್ ಸಂಸ್ಥೆಯಿಂದ ಸತೀ ಸುಲೋಚನ, ಕೊಯಮತ್ತೂರಿನ ಶಕುಂತಳಾ ಫಿಲ್ಮ್ಸ್ರವರಿಂದ ಸದಾರಮೆ, ಸೇಲಂನ ದೇವಿ ಫಿಲಮ್ಸ್ನವರಿಂದ ಪುರಂದರದಾಸ, ಮದರಾಸಿನ ಕಲೈವಾಣಿ ಫಿಲಮ್ಸ್ನವರಿಂದ ಪ್ರಹ್ಲಾದ, ಕೃಷ್ಣಸುಧಾಮ, ಗುಬ್ಬಿ ವೀರಣ್ಣನವರಿಂದ ಹೇಮರೆಡ್ಡಿ ಮಲ್ಲಮ್ಮ, ಸುಭದ್ರಾ ಪರಿಣಯ ಚಲನಚಿತ್ರಗಳಾದುವು. ಹಿಸ್ಮಾಸ್ಟರ್ ವಾಯ್ಸ್ ಕಂಪನಿ ಕೃಷ್ಣಗಾರುಡಿ ನಾಟಕವನ್ನು ರೆಕಾರ್ಡ್ ಮಾಡಿ ಬಿಡುಗಡೆ ಮಾಡಿತು. ಹಲವಾರು ಹಾಸ್ಯ ಪ್ರಹಸನಗಳ ರೆಕಾರ್ಡಿಂಗ್-ನಸ್ಯದ ನಾಗಂಭಟ್ಟ, ರೈತನ ಫಿರ್ಯಾದು, ಭೂಪತಿರಂಗ ಸೇಡಿನ ನೋಟು ಸೆಟ್ಟಿಏಟು, ಅತಿಥಿ ಸತ್ಕಾರ, ಗೆದ್ದವರು ಯಾರು, ರೂಪಾಯಿನ ಮಳೆ ಮುಂತಾದುವು. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿದ ಕರ್ನಾಟಕದ ಜನತೆ ಕೊಟ್ಟ ಬಿರುದು ‘ಕರ್ನಾಟಕ ಕವಿ ಕೇಸರಿ.’ ಶ್ರೀ ಜಯರಾಮರಾಜ ಒಡೆಯರ್’ ರವರಿಂದ ‘ಆಸ್ಥಾನ ವಿದ್ವಾನ್’ ಪದವಿ ದೊರೆಯಿತು. ಇದೇ ದಿನ ಹುಟ್ಟಿದ ಸಾಹಿತಿ : ಸರೋಜಿನಿ ಚವಲಾರ – ೧೯೪೫