Loading Events

« All Events

ಸಿ. ಹಯವದನರಾವ್

July 10

೧೦-೭-೧೮೬೫ ೧೯೪೬ ಇತಿಹಾಸ ತಜ್ಞ, ಗೆಜೆಟಿಯರ್, ಪ್ರಸಿದ್ಧ ವಿದ್ವಾಂಸರೂ ಆಗಿದ್ದ ಹಯವದನ ರಾವ್‌ರವರು ಹುಟ್ಟಿದ್ದು ತಮಿಳು ನಾಡಿನ ಕೃಷ್ಣಗಿರಿ ತಾಲ್ಲೂಕಿನ ಹೊಸೂರಿನಲ್ಲಿ. ತಂದೆ ರಾಜಾರಾವ್. ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ. ಹೈಸ್ಕೂಲಿಗೆ ಸೇರಿದ್ದು ಮದರಾಸಿನ ಹಿಂದೂ ಹೈಸ್ಕೂಲು. ಮದರಾಸಿನ ಪ್ರೆಸಿಡೆನ್ಸಿ ಮತ್ತು ಕ್ರಿಶ್ಚಿಯನ್ ಕಾಲೇಜಿನಿಂದ ಬಿ.ಎ. ಮತ್ತು ಬಿ.ಎಲ್. ಪದವಿ. ವಿದ್ಯಾರ್ಥಿ ದೆಸೆಯಲ್ಲಿಯೇ ಪತ್ರಿಕೋದ್ಯಮದಲ್ಲಿ ಆಸಕ್ತಿ. ಪದವಿ ಪಡೆದ ನಂತರ ಉದ್ಯೋಗಕ್ಕೆ ಸೇರಿದ್ದು ಮದರಾಸಿನ ವಸ್ತು ಸಂಗ್ರಹಾಲಯದಲ್ಲಿ ಕ್ಯೂರೇಟರಾಗಿ ಕೆಲಕಾಲ. ನಂತರ ‘ಮದರಾಸ್ ಟೈಮ್ಸ್’ ಪತ್ರಿಕೆಯ ಸಂಪಾದಕತ್ವ. ಅಲ್ಲಿಂದ ಅಲಹಾಬಾದಿಗೆ ತೆರಳಿ ‘ದಿ ಲೀಡರ್’ ಪತ್ರಿಕೆಯಲ್ಲಿ ಗಳಿಸಿದ ಪ್ರಸಿದ್ಧಿ. ಸರ್. ಎಂ. ವಿಶ್ವೇಶ್ವರಯ್ಯನವರು ಮೈಸೂರಿಗೆ ಆಹ್ವಾನಿಸಿ ವಹಿಸಿದ್ದು ‘ದಿ ಮೈಸೂರು ಎಕನಾಮಿಕಲ್ ಜರ್ನಲ್’ ಸಂಪಾದಕತ್ವ. ಜೀವಿತರ ಕೊನೆಯವರೆವಿಗೂ ಆ ಪತ್ರಿಕೆಯೊಡನೆ ಸಂಪರ್ಕ. ಬಹುಭಾಷಾ ವಿದ್ವಾಂಸರಾಗಿದ್ದ ಇವರಿಗೆ ಇಂಗ್ಲಿಷ್, ಲ್ಯಾಟಿನ್, ಫ್ರೆಂಚ್, ಜರ್ಮನ್, ಸಂಸ್ಕೃತ, ಕನ್ನಡ, ತೆಲುಗು, ಮರಾಠಿ, ತಮಿಳು ಭಾಷೆಗಳಲ್ಲಿ ಪಾಂಡಿತ್ಯ-ಪರಿಶ್ರಮ. ಅನೇಕ ವರ್ಷಕಾಲ ಮೈಸೂರು ವಿಶ್ವವಿದ್ಯಾಲಯದಲ್ಲಿ ತೆಲುಗುಭಾಷೆಯ ಪರೀಕ್ಷಕರ ಜವಾಬ್ದಾರಿ. ಹಲವಾರು ಸಂಘ ಸಂಸ್ಥೆಗಳ ಸದಸ್ಯತ್ವ. ಬೆಂಗಳೂರು ಪುರಸಭೆಯ ಚುನಾಯಿತ ಪ್ರತಿನಿಯಾಗಿ, ಮೈಸೂರು ನ್ಯಾಯ ವಿಧಾಯಕ ಸಭೆ ಸದಸ್ಯನಾಗಿ (೧೯೩೪-೪೦), ಮೈಸೂರು ವಿ.ವಿ.ದ ಅಕಾಡೆಮಿಕ್ ಕೌನ್ಸಿಲ್, ಸೆನೆಟ್ ಸದಸ್ಯರಾಗಿ ಸಲ್ಲಿಸಿದ ಸೇವೆ. ಇತಿಹಾಸ ತತ್ತ್ವಗಳನ್ನರಗಿಸಿಕೊಂಡು ಕರ್ನಾಟಕ ಇತಿಹಾಸ ರಚನೆಯಲ್ಲಿ ಮಹತ್ತರ ಪಾತ್ರ. ಇವರು ಸಂಪಾದಿಸಿದ ಗೆಜೆಟಿಯರ್ಸ್‌ ಪ್ರಮಾಣಪೂರ್ವಕ ಗ್ರಂಥಗಳು. ಏಳು ಸಂಪುಟಗಳಲ್ಲಿ ಮೈಸೂರು ಗೆಜೆಟಿಯರ್ಸ್‌ ಪ್ರಕಟಣೆ. ಮೈಸೂರು ರಾಜ ಒಡೆಯರ ವಂಶಕ್ಕೆ ಸೇರಿದ ೩ ಸಂಪುಟಗಳ ‘ಹಿಸ್ಟರಿ ಆಫ್ ಮೈಸೂರು’ ರಚಿಸಿ ಪ್ರಕಟಣೆ. ಹಲವಾರು ಸಂಘ ಸಂಸ್ಥೆ, ಸರಕಾರದಿಂದ ಸಂದ ಗೌರವ-೧೯೧೧ರಲ್ಲಿ ಬ್ರಿಟಿಷ್ ಸರಕಾರದಿಂದ ‘ರಾವ ಸಾಹೇಬ್’, ಲಾರ್ಡ್ ಲಿನ್‌ಲಿತ್‌ಗೋ ನೀಡಿದ ‘ರಾವ್ ಬಹದ್ದೂರ್’ ನಾಲ್ವಡಿ ಕೃಷ್ಣರಾಜ ಒಡೆಯರು ನೀಡಿದ ‘ರಾಜ ಚರಿತ ವಿಶಾರದ’ ಮುಂತಾದ ಪ್ರಶಸ್ತಿ ಗೌರವಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಶಾರದಾ ಆರ್. ರಾವ್ – ೧೯೪೦ ಲೀಲಾವತಿ. ಎಸ್. ರಾವ್ – ೧೯೪೩ ಸಕಲವಾರ ಕಾವೇರಪ್ಪ – ೧೯೬೨ ಜೆ.ವಿ.ಬಿ. ನಾಯ್ಡು – ೧೯೨೦

Details

Date:
July 10
Event Category: