Loading Events

« All Events

  • This event has passed.

ಸುಬೋಧ ರಾಮರಾಯರು

August 25, 2023

೨೫..೧೮೯೦ ೧೪..೧೯೭೦ ಕನ್ನಡ ಸಾಹಿತ್ಯದ ನವೋದಯದ ಕಾಲದಲ್ಲಿ ಕನ್ನಡಿಗರಲ್ಲಿ ಸ್ವಾತಂತ್ರ್ಯದ ಕಿಚ್ಚೆಬ್ಬಿಸುವ, ದಾಸಸಾಹಿತ್ಯದ ಬಗ್ಗೆ ಅರಿವು ಮೂಡಿಸುವ, ತರುಣರಲ್ಲಿ ನೈತಿಕ ಪ್ರಜ್ಞೆಯನ್ನೂ ಬೆಳೆಸುವ ಹಲವಾರು ಕೃತಿಗಳನ್ನೂ ಲೇಖಕ, ಸಂಪಾದಕ, ಪ್ರಕಾಶಕರಾಗಿ ದುಡಿದ ರಾಮರಾಯರು ಹುಟ್ಟಿದ್ದು ೧೮೯೦ ರ ಆಗಸ್ಟ್‌ ೨೫ ರಂದು. ಚಿಕ್ಕಮಗಳೂರಿನಲ್ಲಿ ವಿನಾಯಕ ಹಬ್ಬದ ಭಾದ್ರಪದ ಮಾಸದ ಶುದ್ಧ ಚೌತಿಯ ದಿನ. ತಂದೆ ಹನುಮಂತರಾಯರು, ತಾಯಿ ಭಾರತೀಬಾಯಿಯವರಿಗೆ ಹುಟ್ಟಿದ ಆರು ಮಕ್ಕಳಲ್ಲಿ ಐದನೆಯವರು. ಕಡುಬಡತನದ ಸಂಸಾರ, ತಾಯಿಯ ಆಕಸ್ಮಿಕ ಮರಣ, ತಂದೆಗೆ ನಿಗದಿತ ಉದ್ಯೋಗವಿಲ್ಲದೆ, ಯಾರೋ ಮಾಡಿದ ತಪ್ಪಿಗಾಗಿ ತಲೆಮರೆಸಿಕೊಂಡು ಮಕ್ಕಳೊಡನೆ ಊರೂರು ಸುತ್ತಾಟ. ಶಿವಮೊಗ್ಗ, ಚಿಕ್ಕಮಗಳೂರು, ಬಾಗಮನೆ, ಚಿತ್ರದುರ್ಗ. ಹೀಗೆ ಸುತ್ತಾಡುತ್ತಿದ್ದುದರಿಂದ ರಾಮರಾಯರಿಗೆ ಕ್ರಮವರಿತ ವಿದ್ಯಾಭ್ಯಾಸದ ಕೊರತೆ. ನಂತರ ಕುಟುಂಬ ನೆಲೆಕಂಡು ಕೊಂಡದ್ದು ಹೊನ್ನಾಳಿಯಲ್ಲಿ. ಅಷ್ಟರಲ್ಲಿ ತಂದೆಯ ಸಾವು. ಪ್ಲೇಗ್‌ ಹಾವಳಿ ಮುಂತಾದ ಆಕಸ್ಮಿಕ ಘಟನೆಗಳಿಂದ ಓದು ಸಾಗದೆ ಕಡೆಗೆ ೧೯೦೬ ರಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆ. ಇಂಗ್ಲಿಷ್‌ ಕಲಿಯುವ ಆಸೆಯಿಂದ ಬಂದದ್ದು ಬೆಂಗಳೂರಿಗೆ. ಚಿಕ್ಕಪ್ಪನ ಮನೆಯಲ್ಲಿ ವಾಸ. ಅಮೆರಿಕನ್‌ ಅಡ್ವೆಂಟ್‌ ಮಿಷನ್‌ ಸ್ಕೂಲಿನಲ್ಲಿ ಒಂದು ವರುಷದ ಕಲಿಕೆ, ೧೯೦೮ ರಲ್ಲಿ ಸೇಂಟ್‌ ಅಲೋಷಿಯಸ್‌ ಹೈಸ್ಕೂಲು. ದುಶ್ಚಟಗಳಿದ್ದ ಹುಡುಗರ ಜೊತೆ ಸೇರಿದ್ದಾನೆಂದು ಶಾಲೆಯಿಂದ ಉಚ್ಚಾಟನೆ. ಎಸ್‌.ಎಲ್‌.ಎನ್‌. ಹೈಸ್ಕೂಲು ಸೇರಿ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ತೇರ್ಗಡೆ. ಮುಂದೆ ಓದುವ ಆಸೆಯಿದ್ದರೂ ಓದಲಾಗದೆ, ಅಮಲ್ದಾರರೊಬ್ಬರ ಪ್ರಭಾವದಿಂದ ಹೊನ್ನಾಳಿಯ ತಾಲ್ಲೂಕ ಕಚೇರಿಯಲ್ಲಿ ದೊರೆತ ಗುಮಾಸ್ತರ ಕೆಲಸ. ಭಡ್ತಿ ಪಡೆದು ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಮುಖ್ಯ ಗುಮಾಸ್ತರ ಹುದ್ದೆ. ಒಮ್ಮೆ ಕೈಗೆ ಸಿಕ್ಕಿದ ಭಗವದ್ಗೀತೆಯ ಪ್ರತಿಯಿಂದ ಪ್ರಚೋದಿತರಾಗಿ ಬರವಣಿಗೆಯ ಅಭ್ಯಾಸದಲ್ಲಿ ತೊಡಗಿದರು. ಹಲವಾರು ಕಷ್ಟಗಳನ್ನು ತಾರುಣ್ಯದಲ್ಲೇ ಅನುಭವಿಸಿದ್ದ  ರಾಯರಿಗೆ ಸ್ವತಂತ್ರವಾಗಿ ಯಾವುದಾದರೊಂದು ವೃತ್ತಿಯನ್ನೂ ಕೈಗೊಳ್ಳುವ ಆಸೆಯಿಂದ ತೆರದದ್ದು ದಿನಸಿ ಅಂಗಡಿ. ಪ್ರತಿಸ್ಪರ್ಧಿಗಳ ಕೈವಾಡದಿಂದ ನಷ್ಟ ಅನುಭವಿಸಿ ಅಂಗಡಿಯನ್ನು ಅಣ್ಣನಿಗೊಪ್ಪಿಸಿ ಬಂದುದು ಬೆಂಗಳೂರಿಗೆ ಅಕ್ಕನ ಮನೆಯಲ್ಲಿ ವಾಸ್ತವ್ಯ. ಶಿಶು ವಿಹಾರದಲ್ಲಿ ದೊರೆತ ಶಿಕ್ಷಕರ ಕೆಲಸ. ಶಾಲೆಯ ಇನ್‌ಸ್ಪೆಕ್ಷನ್‌ಗೆ ಬಂದ ಅಧಿಕಾರಿ ಶ್ರೀನಿವಾಸ ಅಯ್ಯಂಗಾರ್ಯರು ರಾಮರಾಯರ ಸಾತ್ವಿಕ ಸ್ವಭಾವ, ವಿದ್ಯೆ ಕಲಿಸುವಲ್ಲಿದ್ದ ಶ್ರದ್ಧೆ, ನಿಷ್ಕಪಟತೆಗಳನ್ನೂ ಕಂಡು ಪುರಸಭಾ ಶಾಲೆಯಲ್ಲಿ ದೊರಕಿಸಿಕೊಟ್ಟ ಉಪಾಧ್ಯಾಯರ ಹುದ್ದೆ. ತರಬೇತಿಗೂ ಆಯ್ಕೆಯಾಗಿ ನಂತರ ದೊಡ್ಡಕುಂಟೆ ಪುರಸಭಾ ಶಾಲೆಯಲ್ಲಿ ದೊರೆತ ಮುಖ್ಯೋಪಧ್ಯಾಯರ ಕೆಲಸ. ಭಗವದ್ಗೀತೆಯ ಅನುವಾದದಲ್ಲಿ ತೊಡಗಿದ್ದ ರಾಯರಿಗೆ ಸಾಹಿತ್ಯದಲ್ಲಿ ಏನಾದರೊಂದು ಸಾಧಿಸಬೇಕೆನಿಸಿ ಕುಸುಮಾಂಜಲಿ ಮಾಲೆಯನ್ನೂ ಪ್ರಾರಂಭಿಸಿ ಚಂದ್ರಹಾಸ (೧೯೧೫), ಧ್ರುವ (೧೯೧೬), ಪ್ರಹ್ಲಾದ, ಸಾವಿತ್ರಿ (೧೯೧೭) ಮುಂತಾದವುಗಳನ್ನೂ ಪ್ರಕಟಿಸಿದರು. ಇವುಗಳನ್ನೂ ಮುದ್ರಿಸಲು ಬೆಂಗಳೂರಿನ ಓಡಾಟವನ್ನೂ ತಪ್ಪಿಸಲು ಆರ್.ಬಿ.ಎ.ಎನ್‌.ಎಂ . ಶಾಲೆಯಲ್ಲಿ ದೊರಕಿಸಿಕೊಂಡ ಉಪಾಧ್ಯಾಯರ ಹುದ್ದೆ. ಬರೆದ ಕೆಲವು ಮಕ್ಕಳ ಪುಸ್ತಕಗಳನ್ನೂ ಆರ್ಕಾಟ್‌ ಶ್ರೀನಿವಾಸಾಚಾರ್ಯರ ರಸ್ತೆಯಲ್ಲಿದ್ದ ಮುದ್ರಣಾಲಯದಲ್ಲಿ ಮುದ್ರಣ. ಒಮ್ಮೆ ಮಾಲೀಕರೊಡನೆ ಮಾತಿನ ಚಕಮಕಿ ನಡೆದು ತಾವೇ ಏಕೆ ಮುದ್ರಣಾಲಯವನ್ನೂ ಸ್ಥಾಪಿಸಬಾರದೆಂದು ನಿರ್ಧರಿಸಿ ಸ್ಥಾಪಿಸಿದ್ದು ಸುಬೋಧ ಮುದ್ರಣ ಮತ್ತು ಪ್ರಕಟಣಾಲಯ (೧೯೨೫). ಉಪಾಧ್ಯಾಯ ವೃತ್ತಿಗೆ ರಾಜಿನಾಮೆ ನೀಡಿ ಪ್ರಕಟಣೆಯ ಕೆಲಸವನ್ನೇ ಕೈಗೊಂಡರು. ೧೯೩೩ ರಲ್ಲಿ ನಗುವನಂದ ಎಂಬ ಹಾಸ್ಯ ಪತ್ರಿಕೆಯನ್ನು ಪ್ರಾರಂಭಿಸಿ ಹಾಸ್ಯಪ್ರಿಯರಿಗೆ ರಸದೌತಣ ನೀಡಿದರು. ಜಿ.ಎಸ್‌. ಕೃಷ್ಣರಾಯರ ಸಂಪಾದಕತ್ವದಲ್ಲಿ ೧೯೪೯ರವರೆವಿಗೂ ನಡೆಯಿತು. ೧೯೪೯-೫೦ರಲ್ಲಿ  ರಂಗನಾಥರಾಯರು ವಹಿಸಿಕೊಂಡರಾದರೂ ಆರ್ಥಿಕ ಸಂಕಷ್ಟಕ್ಕೊಳಗಾದಾಗ ಸುಬೋಧ ರಾಮರಾಯರೇ ವಹಿಸಿಕೊಂಡು ಸುಬೋಧ ಪ್ರಹ್ಲಾದರಾಯರ ಸಂಪಾದಕತ್ವದಲ್ಲಿ ನಡೆಸಿದರು. ಭಾರತೀಯ ಇತಿಹಾಸ, ಸಂಸ್ಕೃತಿ, ನಾಗರಿಕತೆಗಳನ್ನೂ ಇಂದಿನ ಯುವಕರಿಗೆ ತಿಳಿಸಿಕೊಡಬೇಕೆಂಬ ನಿಟ್ಟಿನಲ್ಲಿ ಸಾಹಿತ್ಯ ಪ್ರಚಾರದಲ್ಲಿ ತೊಡಗಿ  ಪ್ರಕಟಿಸಿದ ಹಲವಾರು ಪುಸ್ತಕಗಳ ಜೊತೆಗೆ ಸುಬೋಧ ಮಾಸ ಪತ್ರಿಕೆಯ ಮೂಲಕ ನಾಡುನುಡಿ, ಸಂಸ್ಕೃತಿ, ಆಧ್ಯಾತ್ಮಿಕ ವಿಷಯಗಳಿಗಾಗಿ ಮೀಸಲಿಟ್ಟರು. ಇದರಿಂದ ಹಲವಾರು ಗಣ್ಯರ ಪರಿಚಯವಾಗಿ ವ್ಯಾವಹಾರಿಕವಾಗಿಯೂ ಸಮಾಜದಲ್ಲಿ ಗುರುತಿಸಲ್ಪಟ್ಟರು. ನಗರದ ಶಾಲೆಗಳಲ್ಲಿ ಓದಲು ಬಂದ ಹಳ್ಳಿ ಹುಡುಗರು ಪಡುತ್ತಿದ್ದ ಬವಣೆಯನ್ನೂ ನೋಡಿ ೧೯೪೫ ರಲ್ಲಿ ಪ್ರಾರಂಭಿಸಿದ್ದು ಮಾಧ್ವ ಯುವಕ ಸಂಘ. ಕೆಲ ವರ್ಷಗಳ ನಂತರ ದಾನಿಗಳ ಸಹಾಯದಿಂದ ಸ್ವಂತ ಕಟ್ಟಡವನ್ನೂ ಹೊಂದಿತು. ಸಮಾಜದಲ್ಲಿ ಗಣ್ಯರೆನಿಸಿಕೊಂಡ ಸುಬೋಧ ರಾಮರಾಯರನ್ನೂ ಹುಡುಕಿಕೊಂಡು ಬಂದ ಗೌರವ ಹುದ್ದೆ ಬೆಂಗಳೂರು ನಗರ ಸಭೆಯ ಸದಸ್ಯತ್ವ. (ಅವಿರೋಧವಾಗಿ ಆಯ್ಕೆ) ಮೂರು ವರ್ಷಗಳ ಅವಧಿ ಮುಗಿಯುವ ವೇಳೆಗೆ ಹಲವರ ರೀತಿ-ನೀತಿಗಳು ಹಿಡಿಸದೆ ವ್ಯವಹಾರಗಳಿಂದ ದೂರವಾದರು. ತಮ್ಮ ಸ್ವಾಭಿಮಾನ, ಸ್ವಾತಂತ್ರಪ್ರೇಮ, ರಾಷ್ಟ್ರಭಕ್ತಿ ಇವುಗಳ ಪ್ರಚೋದನೆಯಿಂದ ಸ್ವತಂತ್ರ ಮುದ್ರಣಾಲಯವನ್ನೂ ಸ್ಥಾಪಿಸಿ ಹಿಂದು ಧರ್ಮ ಮತ್ತು ಸಂಸ್ಕೃತಿಯ ತಿರುಳನ್ನೂ ಅರ್ಥಮಾಡಿಕೊಂಡು ಇಂದಿನ ಯುವ ಪೀಳಿಗೆಗೆ ಸುಬೋಧ ಕುಸುಮಾಂಜಲಿಯ ಮೂಲಕ ಶ್ರೀರಾಮ, ಕೃಷ್ಣ, ಭಗವಾನ್‌ ಬುದ್ಧ, ಮಧ್ವಾಚಾರ್ಯ, ಶಂಕರಾಚಾರ್ಯ ಮೊದಲಾದ ಪುಸ್ತಕಗಳ ಜೊತೆಗೆ ಬಸವೇಶ್ವರ, ರಾಮಾನುಜ, ಮಹಮದ್‌ ಪೈಗಂಬರ್, ಏಸುಕ್ರಿಸ್ತ ಮೊದಲಾದವರನ್ನೂ ಪರಿಚಯಿಸಿದಂತೆ ಲೋಕನಾಯಕರಾದ ಏಬ್ರಹಾಂ ಲಿಂಕನ್‌, ಜೋಸೆಫ್‌ ಮ್ಯಾಝೆನಿ,  ಲಿಯೋಟಾಲ್‌ಸ್ಟಾಯ್‌, ಸಾಕ್ರೆಟಿಸ್‌ ಮುಂತಾದವರುಗಳ ಬಗ್ಗೆಯೂ ಪರಿಚಯ ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ಅಧ್ಯಾಪಕರಾಗಿದ್ದಾಗ ಬೈಬಲ್‌ ಓದಿ ಹೆಚ್ಚಿನ ಅಂಕಗಳಿಸಿದಾಗ ಪಾದ್ರಿಯೊಬ್ಬರು “ಕ್ರೈಸ್ತ ಮತಕ್ಕೆ ಸೇರಿದರೆ ನಿಮ್ಮ ಬಡತನ ಹೋಗುತ್ತದೆ” ಎಂದು ಆಮಿಷ ತೋರಿಸಿದಾಗ, ಜ್ಞಾನಾರ್ಜನೆಗಾಗಿ ಬೈಬಲ್‌ ಓದಿದನೇ ಹೊರತು ಕ್ರೈಸ್ತ ಮತಕ್ಕೆ ಸೇರಲೆಂದಲ್ಲ, “ನಿಮ್ಮ ಮತ ನಿಮಗೆ ಹೇಗೋ ಹಾಗೆ ನನಗೆ ನಮ್ಮ ಮತ ದೊಡ್ಡದು” ಎಂದು ವಾದಿಸಿದ ಧರ್ಮನಿಷ್ಠ ವ್ಯಕ್ತಿ. ಸುಬೋಧ ಮಾಸಪತ್ರಿಕೆಯಲ್ಲಿ ವೈವಿಧ್ಯಮಯ ಲೇಖನಗಳು ಪ್ರಕಟಗೊಳ್ಳತೊಡಗಿದವು. ಲಘುಕವನಗಳು, ಹರಟೆ, ನಾಟಕಗಳ ಅನುವಾದ, ಐಸಾಕ್‌ ನ್ಯೂಟನ್‌,  ಬೆಂಜಮಿನ್‌ ಫ್ರಾಂಕ್ಲಿನ್‌, ಥಾಮಸ್‌ ಆಲ್ವ ಎಡಿಸನ್‌ ಮುಂತಾದವರುಗಳ ವ್ಯಕ್ತಿ ಚಿತ್ರಣಗಳೂ ಪ್ರಕಟವಾದವು. ೧೯೧೫ ರಲ್ಲಿ ಪ್ರಾರಂಭಿಸಿದ ‘ಸುಬೋಧ ಕುಸುಮಾಂಜಲಿ’ ಮಾಲೆಯಲ್ಲಿ ಸುಮಾರು ೧೪೦ ಪುಸ್ತಕಗಳನ್ನು (೧೯೩೩ ರವರೆಗೆ) ಪ್ರಕಟಿಸಿದರು. ಈ ಮಾಲಿಕೆಯಲ್ಲಿ ಭಗವದ್ಭಕ್ತರು-೨೬, ಧರ್ಮೋದ್ಧಾರಕರು-೨೧, ಪೌರಾಣಿಕ ವ್ಯಕ್ತಿಗಳು-೩೩,  ಚಾರಿತ್ರಿಕ ವ್ಯಕ್ತಿಗಳು-೨೧, ಆಧುನಿಕ ಮಹಾಪುರುಷರು-೧೯, ವಿದೇಶಿ ಮಹಾಪುರುಷರು-೧೮, ಇವುಗಳ ಜೊತೆಗೆ ಎರಡು ಹಾಡುಹಬ್ಬಗಳೂ ಸೇರಿವೆ, ಯುವ ಜನಾಂಗಕ್ಕಾಗಿ ಬರೆದ ಕೃತಿ ‘ಜೀವನಕ್ಕೆ ಬೆಳಕು’ ಎಂಬ ಜ್ಞಾನ ಕೈಪಿಡಿ. ನೀತಿಬೋಧನೆ, ಮಾನವೀಯ ಉಪದೇಶ ನಿದರ್ಶನಗಳಿಂದ ಕೂಡಿದ ಕೃತಿ ಇದಾಗಿದೆ. ೧೯೨೫ರಿಂದ ೨೯ರ ಅವಧಿಯಲ್ಲಿ ‘ಕರ್ನಾಟಕ ಹರಿದಾಸ ಕೀರ್ತನ ತರಂಗಿಣಿ’ ಮಾಲೆಯಲ್ಲಿ ಶ್ರೀಪಾದರಾಜರು, ವ್ಯಾಸರಾಯರು, ವಾದಿರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು ಮತ್ತು ಮೋಹನದಾಸರ ಕೀರ್ತನೆಗಳನ್ನು ಸಂಗ್ರಹಿಸಿ ೯ ಸಂಪುಟಗಳಲ್ಲಿ  ಪ್ರಕಟಿಸಿದರು. ಇವರ ಇತರ ಕೃತಿಗಳೆಂದರೆ ಶ್ರೀರಾಮಾಯಣ ಕಥಾಸಾರ, ಶ್ರೀಮದ್ಭಾಗತ ಕಥಾಸಾರ, ಶ್ರೀಮನ್ಮಹಾಭಾರತ ಕಥಾಸಾರ, ಮೈಸೂರಿನ ರಾಜ್ಯಲಕ್ಷ್ಮಿಯರು, ಮಧ್ವಸಿದ್ಧಾಂತ ಬಾಲಬೋಧೆಯಲ್ಲದೆ ಹೆಲನ್‌ಕೆಲ್ಲರ್, ಹೆನ್ರಿಫೋಡ್‌ (ಇಂಗ್ಲಿಷ್‌ನಿಂದ ) ಮತ್ತು ರಾಜಾಸ್ಥಾನಿ ಕಥಾವಳಿ (ತೆಲುಗಿನಿಂದ) ಅನುವಾದಿಸಿ ಪ್ರಕಟಿಸಿದ್ದಾರೆ. ಶ್ರೀ ಜಗನ್ನಾಥದಾಸರ ಹರಿಕಥಾಮೃತ ಸಾರವನ್ನೂ ಟೀಕಾ ತಾತ್ಪರ್ಯ ಸಮೇತ ಬರೆದಿರುವುದಲ್ಲದೆ ಹರಿದಾಸರ ಸುಧಾಬಿಂದು ಎಂಬ ಶೀರ್ಷಿಕೆಯಲ್ಲಿ ಸಾವಿರದ ಏಳು ನೂರ ಹದಿನಾಲ್ಕು ಸೂಕ್ತಿಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಹೀಗೆ ತಮ್ಮ ಬಾಳಿನಲ್ಲಿ ಬೆಳಕು ಕಂಡು ಕೊಂಡಿದ್ದಲ್ಲದೆ ಇತರರ ಬಾಳಿಗೂ ಬೆಳಕಾಗುವಂತೆ ಬಾಳಿದ ಸುಬೋಧ ರಾಮರಾಯರು ಬರೆದ ಮೈಸೂರಿನ ರಾಜ್ಯಲಕ್ಷ್ಮಿಯರು ಎಂಬ ಪುಸ್ತಕವನ್ನೂ ಮೈಸೂರು ಸಂಸ್ಥಾನದ ಲೋಯರ್ ಸೆಕೆಂಡರಿ ತರಗತಿಗೆ ಪಠ್ಯವಾಗಿ ಆಯ್ಕೆಮಾಡಿ ಗೌರವ ತೋರಿಸಿದ್ದಲ್ಲದೆ ಅಖಿಲ ಭಾರತ ಮಾಧ್ವ ಮಹಾಮಂಡಲದಿಂದ ವಿಶ್ವೇಶತೀರ್ಥ ಶ್ರೀ ಪಾದಂಗಳ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ನಟನ ಕಲಾ ಸಂಘದವರು ಏರ್ಪಡಿಸಿದ್ದ ಸನ್ಮಾನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕೆಂಗಲ್‌ ಹನುಮಂತಯ್ಯನವರಿಂದ ‘ಜ್ಞಾನಶಿಲ್ಪಿ’, ಸಂಪದ್ಗಿರಿರಾಯರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕನ್ನಡ ಕೂಟದಿಂದ ಸನ್ಮಾನ-ಹೀಗೆ ಹಲವಾರು ಸಂಸ್ಥೆಗಳಿಂದ ಸನ್ಮಾನಿತರಾದ ಸುಬೋಧರಾಮರಾಯರು ಸಾಹಿತ್ಯಲೋಕದಿಂದ ನಿರ್ಗಮಿಸಿದ್ದು ೧೯೭೦ರ ಮಾರ್ಚ ೧೪ ರಂದು.

Details

Date:
August 25, 2023
Event Category: