|
ರಾಮ ಜಾಧವ ಹೆಸರು ಕೇಳಿದ ಕೂಡಲೇ ಇವರು ಅಪ್ಪಟ ಮರಾಠಿಗರೆಂದು ಯಾರು ಬೇಕಾದವರು ಊಹಿಸಬಹುದು. ಈ ನಮ್ಮ ಚರಿತ್ರನಾಯಕ ರಾಮ ಜಾಧವರ ವಿಷಯದಲ್ಲಿ ಕೂಡ ಈ ಊಹೆ ನಿಜವಾದುದೆ; ಇವರೂ ಮರಾಠಿ ಮನುಷ್ಯರೇ. ಮರಾಠಿ ಮನೆತನದ ಹಿನ್ನೆಲೆಯಿಂದಲೇ ಬಂದವರು. ಆದರೇನು ಇವರು ನೆಲೆಸಿದ್ದು ಕರ್ನಾಟಕದಲ್ಲಿ. ದುಡಿದದ್ದು ಕನ್ನಡಕ್ಕಾಗಿ, ತಮ್ಮನ್ನು ‘ಕನ್ನಡದ ಕೂಲಿ’ ಎಂದು ಕರೆದುಕೊಂಡವರು. ಇವರ ಕನ್ನಡ ಪ್ರೇಮ ಹೋಲಿಕೆಗೆ ನಿಲುಕುವಂಥದ್ದಲ್ಲ. ಕನ್ನಡ ನಾಡು ನುಡಿಯ ಬಗ್ಗೆ ಇವರಿಗೆ ಅಪಾರ ಅಭಿಮಾನವಿತ್ತು. ಕನ್ನಡ ಕೇವಲ ಅಭಿಮಾನದ ವಿಷಯವಾಗಿರಲಿಲ್ಲ, ಅದು ಪ್ರಾಣಪ್ರಿಯವಾಗಿತ್ತು. ‘ನನ್ನ ದೇಹದ ಸಂಪ್ರದಾಯ’ ಕವನದಲ್ಲಿ ಅದನ್ನು ಮನದುಂಬಿ ಹೇಳಿಕೊಂಡಿದ್ದಾರೆ. |