|
ಯಾವುದೇ ದೇಶದ ಅಭಿವೃದ್ಧಿ ನಿಜವಾದ ರೀತಿಯಲ್ಲಿ ಆಗಬೇಕೆಂದರೆ ಆ ದೇಶದ ದುರ್ಬಲ ವರ್ಗದವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮೇಲೆತ್ತಬೇಕಾಗುತ್ತದೆ. ಇದೇ ರೀತಿ ಪ್ರತಿಯೊಬ್ಬ ಪ್ರಜೆಯ ಪ್ರಗತಿಯಾದರೆ, ಒಂದು ದೇಶ ಸಂಪೂರ್ಣವಾಗಿ ಮುಂದುವರಿದಂತಹ ದೇಶವೆಂದು ಪರಿಗಣನೆಗೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ಮೊದಲಿನಿಂದಲೂ ಶ್ರಮಿಸುತ್ತಾ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾಜ ಕಲ್ಯಾಣ ಯೋಜನೆಗಳ ಮೂಲಕ ರಾಷ್ಟ್ರವನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸುತ್ತಿವೆ. ಇದೇ ರೀತಿಯಲ್ಲಿ ರಾಜ್ಯದ ಜನತೆಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಾನಮಾನದಲ್ಲಿ ಸಮಾನತೆಯನ್ನು ಸ್ಥಾಪಿಸುವುದು ಕರ್ನಾಟಕ ಸರ್ಕಾರದ ಧ್ಯೇಯವಾಗಿದೆ. ದಲಿತರು, ಹಿಂದುಳಿದವರು, ಮಹಿಳೆಯರು, ಮಕ್ಕಳು, ಕಾರ್ಮಿಕರು, ವಿಕಲ ಚೇತನರೇ, ಮುಂತಾದವರ ಏಳಿಗೆಗಾಗಿ ಕೈಗೊಳ್ಳುವ ಕಾರ್ಯಕ್ರಮಗಳೆಲ್ಲವೂ ಸಮಾಜಸೇವೆಯ ವಿವಿಧ ವಿಧಾನಗಳಾಗಿವೆ. ಸರ್ಕಾರದೊಂದಿಗೆ ಖಾಸಗಿ ಸಂಸ್ಥೆಗಳು ಈ ನಿಟ್ಟಿನಲ್ಲಿ ತಮ್ಮ ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು, ಕರ್ನಾಟಕವನ್ನು ಸರ್ವ ಸಮಾನತೆಯುಳ್ಳ ಹಾಗೂ ಅಭಿವೃದ್ಧಿಶೀಲ ರಾಜ್ಯವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿವೆ. ಸರ್ಕಾರದ ವತಿಯಿಂದ ಒದಗಿಸಲ್ಪಟ್ಟಿರುವ ಹಲವಾರು ಕಲ್ಯಾಣ ಕಾರ್ಯಕ್ರಮಗಳ ಹಾಗೂ ಯಶಸ್ಸು ಗಮನಾರ್ಹ. ಅಲ್ಲದೆ, ವ್ಯಕ್ತಿಗಳು ಮತ್ತು ಇತರೆ ಸ್ವಯಂ ಸೇವಾ ಸಂಸ್ಥೆಗಳೂ ಈ ಕಾರ್ಯಕ್ರಮಗಳನ್ನು ನೆರವೇರಿಸುವುದರಲ್ಲಿ ಮುಂದಾಗಿವೆ. ಈ ದಿಸೆಯಲ್ಲಿ ಕಾರ್ಯರೂಪಕ್ಕೆ ಬಂದಿರುವ ಪ್ರಮುಖ ಕಾರ್ಯಕ್ರಮ ಮತ್ತು ಚಟುವಟಿಕೆಗಳ ವಿವರವನ್ನಿಲ್ಲಿ ಒದಗಿಸಲಾಗಿದೆ. |