|
ಕರ್ನಾಟಕ ರಾಜ್ಯದ ದಕ್ಷಿಣ ಮೈದಾನ ಪ್ರದೇಶದಲ್ಲಿರುವ ತುಮಕೂರು ಜಿಲ್ಲೆ ಒಣಭೂಮಿ ಪ್ರದೇಶವಾಗಿದ್ದು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಜಿಲ್ಲೆಯ ತಾಲೂಕುಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿದ್ದು, ಡಾ|| ಡಿ.ಎಂ.ನಂಜುಂಡಪ್ಪನವರ ವರದಿಯ ಪ್ರಕಾರ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ತಾಲೂಕುಗಳನ್ನೂ ಒಳಗೊಂಡಿದೆ. ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೆರೆ ತಾಲೂಕುಗಳಲ್ಲಿ ತೆಂಗಿನ ಬೇಸಾಯ ಹೇರಳವಾಗಿರುವುದರಿಂದ ತುಮಕೂರು ಜಿಲ್ಲೆಯನ್ನು ಕಲ್ಪತರುನಾಡು ಎಂದು ಕರೆಯುವ ವಾಡಿಕೆಯಿದೆ. ಕೆರೆಗಳಿಂದ ಆಗುವ ನೀರಾವರಿ ಪ್ರದೇಶಗಳಲ್ಲಿ ಬತ್ತ, ಅಡಿಕೆ, ತೆಂಗುಗಳನ್ನು ಬೆಳೆದರೆ ಮಳೆ ಆಧಾರಿತ ಕೃಷಿ ಭೂಮಿಯಲ್ಲಿ ರಾಗಿ, ಕಡಲೆಕಾಯಿ, ಜೋಳ, ಅವರೆ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ರಾಷ್ಟ್ರೀಯ ಹೆದ್ದಾರಿ ನಾಲ್ಕು ಮತ್ತು ರಾಷ್ಟ್ರೀಯ ಹೆದ್ದಾರಿ ಇನ್ನೂರಆರು ಹೆದ್ದಾರಿಗಳು ಜಿಲ್ಲೆಯ ಮೂಲಕ ಹಾದು ಹೋಗುವುದರಿಂದ ಮತ್ತು ಬೆಂಗಳೂರು-ತಾಳಗುಪ್ಪ, ಬೆಂಗಳೂರು-ಮುಂಬೈಹಾಗೂ ಬೆಂಗಳೂರು-ಮಂಗಳೂರು ಸಂಪರ್ಕಿಸುವ ರೈಲು ಮಾರ್ಗಗಳು ಇರುವುದರಿಂದ ತುಮಕೂರು ಜಿಲ್ಲೆಯು ರಾಜ್ಯದ ಇತರ ಪ್ರಮುಖ ಸ್ಥಳಗಳಿಗೆ ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಸಿಮೆಂಟ್ ಕಾರ್ಖಾನೆಗಳು, ಹೆಚ್.ಎಂ.ಟಿ ಗಡಿಯಾರ ತಯಾರಿಕಾ ಘಟಕ, ಹಿರೇಹಳ್ಳಿ, ಅಂತರಸನಹಳ್ಳಿ ಮತ್ತು ವಸಂತನರಸಾಪುರ ಕೈಗಾರಿಕಾ ಎಸ್ಟೇಟ್ಗಳಲ್ಲಿನ ವಿಭಿನ್ನ ಕಾರ್ಖಾನೆಗಳು, ಅನೇಕ ಗಣಿ ಉದ್ಯಮಗಳು ಜಿಲ್ಲೆಯಲ್ಲಿದ್ದು ಇತ್ತೀಚೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಹೂಡಿಕೆ ಮತ್ತು ರಫ್ತು ಪ್ರದೇಶದ ಯೋಜನೆಯೂ ಆರಂಭವಾಗಿರುವುದರಿಂದ ಬರುವ ವರ್ಷಗಳಲ್ಲಿ ತುಮಕೂರು ಕೈಗಾರಿಕಾ ಪ್ರದೇಶವಾಗುವ ಸಾಧ್ಯತೆಯು ವಿಪುಲವಾಗಿದೆ. |