ಗುರುವಿನೊಲಿಸುವ ಸಾಧನ
ಶ್ರೀಗುರುವಿನೊಲಿಸುವ ಸಾಧನ ಸುಮ್ಮನಲ್ಲಾ |
ಸ್ತ್ರೀಶ್ರೀಸುತ ಸಂಪದ ಸಾಕಾಗದು |
ಭವವುಳ್ಳವಗೆಂದೆಂದಿಗೆ ಇಲ್ಲಾ ||ಪಲ್ಲ||
ಸೂಳಿ ಚೋಳಿಯೆಂಜಲ ತಿಂದ |
ಬೋನಂಬಲಿ ಬಯಸುಣ್ಣಲಿ ಬಂದ |
ಕಾಳೋರಗ ಕಾರಿಕೆದೊಳು ತಂದ |
ಕೂಳಿಗೆ ಕೂಸಿನ ಕೊಯ್ಕೊಯೆಂದ ||1||
ಬಲ್ಲಿದ ಬಾಲೆಯು ಬಂದರೆ ಬೈದ |
ಒಲ್ಲೆಂಬೆನುತಲಿ ಸೊಲ್ಲಭನಾದ |
ಕೊಲ್ಲಲಳುವ ಕೊಡಲಿಯ ಕೊರಳ್ಹಾದ |
ಸಲ್ಲದ ಸತಿ ಸಮ ರಮಿಸಿದಾ ||2||
ಸಿಂಧು ಮರಾಳನ್ನ ಓಡಿಸಿ ನಿಂದ |
ಬಂಧುವಿನೊಳು ನಂಬಿಗೆ ತೊತ್ತೆಂದಾ |
ಸುಂದರಿ ಮುತ್ತಿನ ಮುಡಿ ಕೊಯ್ಯಿ ತಂದಾ
ತಂದೆ ಮಹಾಂತನ ಇಂತಾನಂದಾ ||3||
ಗುರುವಿನ ಒಲಿಸು
ಗುರುವಿನ ಒಲಿಸುವತನಕ | ಭವ
ಪರಿಹರಿಸನು ತಾ ಬೆನಕ |
ಜರ ನಾಚಿಕ್ಕಿಲ್ಲೊ ನಿನಗಿನಕ | ಬಿಡ |
ಲರಿಯದು ಕೊಳೆಗೇರಿ ಶುನಕ ||ಪಲ್ಲ||
ಮಗನಿಗೆ ಮುಂದದ ಮಾರಿ |
ಮನಿ ಹೆಂಡತಿ ಆದಳು ಜಾರಿ |
ಮಗಳೆರೆದನ್ಯಗೆ ಧಾರಿ | ನೀ |
ನಗಿದೆ ವ್ಯರ್ಥವು ಗಾರಿ |
ಸೊಗಸಿನ ಸತಿ ನಡದಾಳೊ ಮನ ಮೀರಿ |
ಜಗದೊಳಗಾದಿ ಎಲೊ ಮಾಯ ವಿಕಾರಿ ||1||
ಹಲವು ವ್ಯಾಪಾರವ ಮಾಡಿ | ಒಳ್ಳೆ
ಬಲು ಗೆಲುವಿಗೆ ಹೋರಾಡಿ |
ಬಲವೆಲ್ಲಿ ಹೋಯಿತು ಜಾಡಿ |
ನಿನ್ನ ಮೈಯೆಲವು ಒಬ್ಬಳಿಗೂಡಿ |
ಚಲೋ ಆಗದು ದೊಡ್ಡ ದೇವರ ಬೇಡಿ |
ನೆಲೆಗಾಣದ ಹೋಗುವಿ ಎಲೆ ಖೋಡಿ ||2||
ಹಿರಿತನ ಮಾಡಲಿಕ್ಕಾಗಿ ಯಮ |
ನರಕದ ಬಾಯಿಗ್ಹೋಗಿ |
ತಿರುಗಿದಿ ನೀ ತಲೆ ತಾಗಿ | ನಿನ್ನ |
ಗರವಿಕಿಲ್ಲೆಲೊ ಭವರೋಗಿ |
ಮೆರೆಯುವ ಮಹಾಂತನ ನಿಜ ಅನುಭವ | ಕೂಗಿ |
ಉರಬುರ ಹೇಳುವೆ ಪರಹಿತನಾಗಿ ||3|
ಕೆಡಬ್ಯಾಡೆಲೊ
ಮಾಡುವದ್ಯಾತಕೋ ನೀ ಅವಿಶ್ವಾಸವ | ಸೋಸಿ
ನೋಡೊ ಶ್ರೀ ಗುರು ರೂಪಾದ ಸ್ವಾರ್ಥ ಸಾವಸವ ||ಪಲ್ಲ||
ಶ್ರದ್ಧೆ ನಿಷ್ಠೆ ದಷ್ಟಾ ಅಷ್ಟಾಗದೆ ಹೋ ಅಷ್ಟಾಗದೆ ಹಾ
ಭಕ್ತ ಮಹೇಶನಹುದೆ ಅಷ್ಟಾಗದೆ
ಬುದ್ಧಿವಂತ ಸಂತ ಅಂತಾದರೆ
ಸಾವಧಾನವು ಬಾರದೆ ||1||
ಸಿದ್ಧಿಸಲದೆ ಅನುಭಾವಾನಂದವು
ಶುದ್ಧವಾಗದು ಶಿವಸುಖ ಏಕ ರಸವೊ
ಸಾರಸವೊ ಸಮರಸವೊ ಮಹಾಜಸವೊ
ಬಹು ಹಸವೊ ಬಹು ಹಸವೊ
ಬ್ಯಾಡ ಕೆಡಬ್ಯಾಡೆಲೊ ||2||
ಭುವನ ಭೋಗರ ತ್ಯಾಗ | ತ್ಯಾಗಾಗದೆ
ಹೋ ತ್ಯಾಗಾಗದೆ ಹಾ ತ್ಯಾಗಾಗದೆ
ಮೋಕ್ಷಾಪೇಕ್ಷಾಹುದೆ ಭವದ
ಸಂಗ ಭಂಗ ಹಿಂಗಿಸಿದರೆ
ಅಂಗವು ಲಿಂಗಾಗದೆ ||3||
ಅವರ ಸೊಮ್ಮು ಅವರಿಗೆ ವಿವರಿಸಿದಾಗಳೆ
ಅವರಿವರು ನಾವೂ ನೀವೂ ನೋವು
ಸಾವದೊಂದೊ ಏನ್ಕುಂದೊ | ನೀ ದುಂದೊ
ಬಹುದುಂದೊ ಮಹಾಚೆಂದೊ
ಬ್ಯಾಡ ಕೆಡಬ್ಯಾಡೆಲೊ ||4||
ಅರವು ಕುರುವು ಪರವು ಮರವಾಗದೆ |
ಹೋ ಮರವಾಗದೆ ಹಾ ಮರವಾಗದೆ |
ಜೀವನ್ಮುಕ್ತಾಹುದೆ ಶರೀರ ಧರ್ಮ
ವರ್ಮ ಕರ್ಮಿಲ್ಲಾದರಾ ನಿಜ ತಾನಾಗದೇ
ಕರ್ಮಿಲ್ಲಾದರಾ ನಿಜ ತಾನಾಗದೇ ||5||
ಮೆರೆವ ಚಿಣಮಗೇರಿ ಗುರು ಮಹಾಂತೇಶನ
ಪರಮ ಸ್ವಯಂ ಬ್ರಹ್ಮವು ಬಹು ದಯಾಳು
ಎಲೊ ಸರ್ವೋ ಎಲೋ ಚಿದ್ವಯಲೊ
ಮಹಾಬಯಲೊ ನಿರ್ಬೈಲಬ್ಯಾಡ ಕೆಡಬ್ಯಾಡಲೊ ||6||
ಒಲಿವ ಶ್ರೀಗುರು
ಒಲಿವ ಶ್ರೀಗುರುವಿನ ಒಲಿಸುವದೇನಾಗಾದ |
ಒಲಿಸುವುದು ಬಹು ಹೌರಾಳೆ |
ಕಲಕದೆ ಮನಸಿನೊಳಾದರೆ ಮನ |
ಮೊದಲಾಗಬೇಕು ನೀ ಭಾಳ ನಿರಾಳ ||ಪಲ್ಲ||
ತನ್ನನರ್ಚಿಸುವ ಅಭಿಲಾಷೆಯೊಳಿರುತಿರೆ
ಬಾಣನ ಬಾಗಿಲ ಕಾಯಿದ
ಭಿನ್ನಿಲ್ಲದೆ ನೂಲಿ ಚಂದಯ್ಯನ ಮನಿ ಹುಲ್ಹೊರಿ
ಹೊರುವವನಾದ ||1||
ಹೊನ್ನಯ್ಯನ ಹೊತ್ಹಾಕುವ ದೂರಿನ |
ನೀರಿಗೆ ತಾನಿದುರಾದ |
ಕನ್ನಯ್ಯನು ಕೆರುಗಾಲಿಲೆ ಒದಿಯಲು |
ಎಳ್ಳಷ್ಟಿಲ್ಲವೊ ಕ್ರೋಧ ||2||
ದೊರೆತನದಲಿ ತನ್ನ ಮರಿದೊಕ್ಕಲಿಗನ |
ಸ್ಥಿರವಾಗಿರಲೆಂದ್ಹೋದ |
ಕುರುಡ್ಹೆಂಡತಿ ಕುರುಡೆತ್ತಿನ ಕುರುಡಗೆ
ಗಾಣಾ ಹೊಡೆಯುವವನಾದ ||3||
ಪುರುಷಿಲ್ಲದ ಬಡವಿಯ ಮಗನನುಣಿಸಲು |
ಆಕಳ ಕರುಗಳ ಕಾಯಿದ |
ತ್ವರಿತದ ಈತಂದೊದನದೊಳುಗುಳಲು
ತರುಣಿಯೊಳಿಲ್ಲವು ಭೇದ ||4||
ಮದನ ವಿಕಾರದೊಳಾದರೆ ನೋಡುತ |
ಸೂಳಿಯ ಮನಿಗೋಡಿ ಹ್ವಾದ |
ಚದುರ ಕವೀಶ್ವರ ನಾಚಿಯ ಕಂಡರೆ
ಯೋಚಿಸಿ ಹರುಷಿತನಾದ ||5||
ಮುದದಿ ಸಿರಿಯಾಳನು ಕೋರದುಣ ನೀಡಿದ
ಭಕ್ತಿಗೆ ತಾ ಅನುವಾದ
ಸದಮಲ ಗುರುಗುಡ್ಡದ ಮಾಂತೇಶ್ವರ
ಅವರಿಗೆ ಅವರಂತಾದ ಇವರಿಗೆ ಇವರಂತಾದ ||6||
ಭವಗೆಲಿಸುವ ಗುರು
ಭವಗೆಲಿಸುವ ಗುರುವಿನ ಕೂಡೊ | ಈ
ಭುವನದ ಜನರ ಸಹವಾಸ ಬೇಡೊ | ಎಲೊ ಎಲೊ ||ಪಲ್ಲ||
ನಾಹಂ ಎಂಬುದು ಮೊದಲಳಿಯೋ | ಎಲೊ
ಕೋಹಂ ಎಂಬುದು ನೀ ತಿಳಿಯೋ | ಮತ್ತೆ
ಸೋಹಂ ಎಂಬುದು ಶಿವ ಕಳೆಯೋ | ದಾ
ಸೋಹಂ ಎಂಬುದು ಅಚ್ಚಳಿಯೋ ||1||
ಆಶಪಾಶದ ಕಟ್ಟು ಜಲ್ದ ಹರಿಯೋ | ಒಳ್ಳೆ
ತ್ರಾಸಿನ ವಾಸನೆ ತನುಗುಣ ಜರಿಯೋ | ಆ
ಈಶನಾಡುವ ಲೀಲಾ ಬಹು ಪರಿಯೋ | ಸುಖ
ಸೂಸದೆ ಸುರಿದುಂಡು ಸಲೆ ಮರಿಯೋ ||2||
ತೊಡಕುವ ತೊಡಕಿನ ತೊಡಕು ಉಡಿಯೋ |
ಬುಡ ನಡು ಕಡಿಗಳ ಕಂಡ್ಹಿಡಿಯೊ | ನಿ –
ನ್ನೊಡಲೊಳಡಗಿದ ಒಡವಿಯ ಪಡಿಯೊ | ಮತ್ತೆ
ಮೃಢ ಮಹಾಂತೇಶನ ಅಡಿ ಪಿಡಿಯೊ ||3||
ಗುರುವಿನ ಒಲುಮೆ
ಭಲೆರೆ ಭಲೆರೆ ಭಲೆ ಶ್ರೀಗುರುವೆ | ನಿನ್ನ
ಒಲುಮೆಯ ನಾನಿನ್ನೇನರಿವೆ |
ಹಲವು ಎಲ್ಲವು ನಿನ್ನಿರುವೆ ಇದು |
ಈ ನೆಲಿ ಅರುಹಿದಿ ಸುಖ ಸಾಗರವೆ ||ಪಲ್ಲ||
ಇಲ್ಲೆನಿಸಿದ ನಿರ್ವೈಲಾತ್ಮಾ | ತಾ
ನಿಲ್ಲದಿರ್ದ ಮಹಾಬಯಲಾತ್ಮಾ |
ಮೆಲ್ಲ ಮೆಲ್ಲನೆ ಸತ್ಯಾತ್ಮ | ತ
ನ್ನಲ್ಲಿ ಬೆಳದ್ದದಿದು ಚಿತ್ತಾತ್ಮ ||1||
ನೆನವಿನೊಳಗ ರೂಪಿಸಿದ ಮಾಯಾ |
ತನ್ನನುವರಿಯದೆ ತೆರದಿತು ಬಾಯ |
ನೆನವಿಗೆ ಮೊದಲರುವಿನ ಗೇಹ | ತಾ
ನನಘ ಬಂದ ಶ್ರೀಗುರುರಾಯ ||2||
ತಂದೆ – ತಾಯಿ ಸತಿ ಸುತರಾಗಿ | ಒಳ್ಳ
ಬಂಧು ವಸ್ತು ವ್ಯಸನೊಸನಾಗಿ |
ಚಂದದಿ ಹರ ಮಂದಿರವಾಗಿ | ನೋಡ
ಬಂದ ಗುರು ಮೇಲಾಗಿ ||3||
ತನು ಮನ ಧನ ವಂಚಿಸಿ ನಾನು | ಹಿಂದೆ
ಸುನಿ ಸೂಕರನಾದೆನು |
ಅನಿತೆಲ್ಲ ಕೊಡುಕೊಳ್ಳುವವ ನೀನು
ಇನಸುತನಂಜಿಕಿ ನನಗೇನು |4||
ಹಲವು ಜನ್ಮ ತಿರುಗುತ ಬಂದೆ | ನಿನ್ನ
ನೆಲೆ ಅರಿಯದೆ ನಾ ಬಹು ನೊಂದೆ |
ಹೊಲಬನರಿಸಲು ದಯದಿಂದೆ | ಎನ್ನ
ಸಲಹು ಬಂದೆ ಶ್ರೀಗುರು ತಂದೆ ||5||
ಪಾತ್ರಾಪಾತ್ರ ಎಂಬುವ ನೀತಿ |
ಸ್ತೋತ್ರ ಶ್ರೋತ್ರದಿ ಕೇಳ್ಯಾದೆನು ಕೋತಿ |
ಕ್ಷೇತ್ರ ಯಾತ್ರಿ ಯಾತರ ಪ್ರೀತಿ |
ಗಾತ್ರ ಮಾತ್ರ ನೀ ಗುರು ಪರ ಜ್ಯೋತಿ ||6||
ಏಕಮೇವಾದ್ವಿತೀಯೆಂದು | ತಾ
ನ್ಯಾಕೆ ಕೂಗುತಾದ ಶೃತಿ ನಿಂದು |
ಬೇಕು ಬ್ಯಾಡೆರಡರದೊಂದು | ನನ
ಗ್ಯಾಕೆ ಬೇಕು ಘನ ಗುರುತೊಂದು ||7||
ಆಗೊ ಈಗೊ ಯಾಗೊ ಸಂಸಾರ |
ಬ್ಯಾಗ ಬ್ಯಾಗ ನೀಗಿಸಿದಿ ಭವಭಾರ |
ಬ್ಯಾಗಿ ಆದೆ ನಿರಹಂಕಾರ | ಶಿವ
ಯೋಗಿ ನಿನಗೆ ನಾ ಸುಕುಮಾರ ||8||
ಅಸ್ತಿ ಭಾತಿ ಪ್ರಿಯ ನಿಃಶೂನ್ಯ ಅದು
ವಸ್ತು ನನಗೆ ಸುಸ್ತಿರ ಮಾನ್ಯ
ವಿಸ್ತರಿಸಿದ ಪ್ರಮಥವರೇಣ್ಯ | ಹಿಂದೆ
ಪುಸ್ತಿಯಿತ್ತು ಪೂರ್ವದ ಪುಣ್ಯ ||9||
ಅಜಹರಿ ಮನು ಮುನಿ ಸುರರೆಲ್ಲ | ಶ್ರೀ
ಗುರುವಿನ ಗುರ್ತವ ಅರಿಲಿಲ್ಲ |
ಮರೆತಿರುವುದು ಹಿರಿತನವೆಲ್ಲಾ | ಮಹಾ
ದರಿವು ಅನಾಮಿಕ ತಾ ಬಲ್ಲ ||10||
ಚಿಣಮಗೇರಿ ಮಾಂತನ ಲೀಲಾ | ಕೇಳೊ
ಘಣಿಪತಿ ಹೇಳಲು ತಾ ಸಾಲ |
ಎಣಿಕೆಗೊಂಬುವೆನೆ ನಾ ಬಾಲ | ಮನ
ದಣಿ ಉಣಕಲತೇನು ಚಿನುಮಯಪಾಲ ||11|
ನಿಲವು ತೋರಿದ ಗುರು
ಲಲನೆ ಬಾ ನಮ್ಮ ನಿಲವುದೋರಿದ ಗುರು |
ಸಲಹಲು ಬಂದಿದೊ |
ಹಲವು ಜಲ್ಮ ನಮ್ಮ ನಲವುದಿನ್ಹೋಯಿತೊ |
ಸಲಹುದಾ ನಿಜಾನಂದೊ ||ಪಲ್ಲ||
ಆಶೆಯೇ ದಾಸಿ ನಿರಾಶಿಯೇ ಈಶತ್ವವೆಂದೋಸು
ಶಾಸ್ತ್ರೋದಿದೇವೆ |
ಕಾಶಿ ರಾಮೇಶ್ವರ ವಾಸ ಹರಿಹರ ಹಂಪಿ |
ಈಸು ತಿರುಗಿದೇವೆ ||
ಆಸೆಯು ನೀಗದೆ ಈಶ ತಾನಾಗದೆ |
ಘಾಸಿಯನೈದಿದೇವೆ ||
ಭಾಸುರಾತ್ಮ ಸರ್ವೇಶ ನೀವೆಂದಿಗೆ |
ಏಸು ಪುಣ್ಯದೊದಗಿದವೆ ||1||
ಅರ್ಥ ಪ್ರಾಣಭಿಮಾನ ಕರ್ತೃ ಶ್ರೀಗುರುವಿಗೆಂ
ಬರ್ಥವ ವೋದಿದೇವೆ |
ಮರ್ತ್ಯ ಲೋಕದ ಮಹದನರ್ಥ ದೈವಂಗಳ |
ವ್ಯರ್ಥಕೆ ಭಜಿಸಿದೆವೆ ||
ಗುರ್ತವರಿಯದೆ ಸದ್ವರ್ತನೆಯವರೆಂದು |
ನಿರ್ತಕೆ ನಿಗರಿದೆವೆ |
ಕರ್ತೃ ಭೃತ್ಯ ನಿವರ್ತಿ ಸಮರ್ತಿಯ |
ಅರ್ತು ತುರ್ತೈದಿದೇವೆ ||2||
ಹಿರಿಯರೀ ನರಜನ್ಮ ಹಿರಿದೆಂದರಲ್ಲಿ ತಮ್ಮ |
ಇರವು ತಿಳಿಯಲಿಲ್ಲೆ |
ಹರಿ ಅಜ ಇಂದ್ರರಿಗರಿಯಬಾರದು | ಮಹ
ದರವು ಮರವಿಗಿಲ್ಲೆ ||
ದುರಿತ ಧರ್ಮವು ಮಾಡಿ ಸ್ವರ್ಗವು ನರ್ಕವು ತಾಗಿ |
ತಿರಗೋ ತ್ರಿತಾಪದಲ್ಲೆ |
ವರದ ಶ್ರೀಮಹಾಂತನ ಕರುಣದಿಂದೆ | ಇಹ
ಪರ ಎರಡೆಮಗಿಲ್ಲೆ ||3||
ಗುರು ಸಮರ್ಥ
ನಿರ್ವಂಚನೆ ಹಿಡಿದೊಲಸೊ ಶ್ರೀಗುರುವಿನ
ತವಕಿಸಿ ಮನಸಿಟ್ಟು ಕ್ಷಣ ಮಾತ್ರ |
ಸರ್ವವು ಸಿದ್ಧಿಯು ನಿಜಲಿಂಗೈಕ್ಯವು |
ಭವ ಭಯವುಳಿಯದು ಅಣು ಮಾತ್ರ ||ಪಲ್ಲ||
ನಾ ನೀನೆಂಬುದು ತಾನೆ ತಾನಹುದು |
ಏನು ಹೇಳಲಿ ಗುರು ಸಮರ್ಥ |
ಮಾನಾಭಿಮಾನವು ಸ್ವಾನುಭವ ಸುಖ |
ಹಾನಿಯಾಗದೇನನರ್ಥ ||1||
ಜಡ ತೋರಿಕೆ ಸ್ಥಿರಚರ ಜಗದ್ವಿಸ್ತಾರ |
ಸಡಗರ ಬಿಡದಡಸಿದ ಮಾಯಾ ||
ಅಡಗಿ ಜಳ ಜಳ ಇದ್ದಿಲ್ಲೆನಿಸಿದ |
ಕಡುಗಲಿ ಸುಲಭ ಶ್ರೀಗುರುರಾಯಾ ||2||
ಶಿವಗಣ ಅವಗುಣ ಅವಗುಣ ಶಿವಗುಣ |
ಅವಗುಣಕವಗುಣಿ ಆಭರಣಾ |
ಭವ ಅಭವಾದ ಮಹಾಮಹಾಂತೇಶ್ವರನ
ಶಿವ ಸರ್ವೋತ್ತಮ ಸಂವರಣಾ ||3||
ಸದ್ಗುರು
ಸಾಕ್ಷಾತ್ ಸದ್ಗುರು ಪ್ರತ್ಯಕ್ಷವಾಗಲು
ಸ್ಥಿತಿಗತಿಗಳು ಕೇಳುವದ್ಯಾಕೊ |
ಆ ಕ್ಷಣಕಾಗುವದು ಅನಂತ ಸೌಖ್ಯವು |
ಮೋಕ್ಷವ ಪಡಕೊಳ್ಳುವ ಕುದಿಯಾಕೊ ||ಪಲ್ಲ||
ತನ್ನ ನಿಜವು ತಾ ತಿಳಿಬೇಕಾದರೆ |
ಭಿನ್ನಭಾವದ ಭ್ರಮಿ ಬಿಡಬೇಕೊ |
ತನುಮನಧನವನು ಉನ್ನತ ಗುರುವಿಗೆ
ಮನ್ನಿಸಿ ಮೋಹದಿ ಕೊಡಬೇಕೊ ||1||
ಅಲ್ಪಕಲ್ಪ ಸಂಕಲ್ಪನಾದರೆ |
ಅಲ್ಪ ಬುದ್ಧಿಗೆ ನಿಲುಕುವದಲ್ಲ |
ಅಲ್ಪಕಲ್ಪ ಸಂಕಲ್ಪ ನೀಗಿ ಉಪಾಸ್ತಿಕನಾದರೆ
ಒಲಿಮೀಲೆ ಸೆಳೆಕೊಳ್ಳು ತಾ ಬಲ್ಲ ||2||
ಅವರಿವರಾದರೇನೊ ಇವರವರಾದರೇನೊ |
ಅವರೇನ ಕೊಂಬುವರಿವರೇನೊ |
ಅವರಿವರೆಂಬುವ ಮಹಾಂತನೊಳಾದರೆ |
ಅವರ್ದೇನಿವರ್ದೇನಾಯಿತೇನ್ಹೋಯಿತೇನೊ ||3||
ಗುರುಚರಣ ಸೇವೆ
ಗುರುಚರಣ ಕಮಲ ಸೇವೆ
ಅನುವಾಗು ಮನುಜ ನೀ ಬೇಗನೆ ||ಪ||
ಗುರುರಾಜ ಯೋಗಿಯ ತೋರೆಲೊ ಹರಪದವಾಗಿಹ
ನಿರುತಲಿದ್ದು ನೀ ನೆರೆ ನಂಬು ಮನುಜ ನೀ ಬೇಗನೆ ||1||
ಸಿದ್ಧರಾಮ ಗುರು ಪ್ರಸಿದ್ಧವಾಗಿಹ
ಯಮುನದಲ್ಲಿದ ಜನರು ಗೆದ್ದರಲ್ಲೊ ಮನುಜ ನೀ ಬೇಗನೆ ||2||
ಅರುಣಚಲದಿ ಶ್ರೀಗುರು ಮಹಾಂತೇಶನ
ಕರುಣಾಮೃತದೊಳು ಮುಳುಗ್ಯಾಡೋ ಮನುಜ ನೀ ಬೇಗನೆ ||3||
ಸತ್ಪುರುಷರ ಸೇವೆ
ಗುರುಕರುಣವಿಲ್ಲದವನ ಸ್ನೇಹ
ಸಾವುತನಕ ಬೇಡ |
ಸಾಧು-ಸತ್ಪುರುಷರ ಸೇವಾ
ಮಾಡಿರುವುದು ಬಹುಪಾಡ ||ಪಲ್ಲ||
ಮಾತಿನೊಳಗ ಮಾತಿಲ್ಲದವನ ಸ್ನೇಹ
ಜಾತಿ ಜನ್ಮಕ ಬೇಡ |
ಹೀನ ಮನುಷ್ಯನ ಸ್ನೇಹವ ಮಾಡಿ
ನೀನು ಕೆಡಲಿ ಬೇಡ ||1||
ಅಕ್ಕ-ತಂಗಿಯರೆಂದು ಬಾಯಲಿ ಕರೆದು
ಹೊಕ್ಕು ಬಳಸಲಿ ಬೇಡ |
ನಿತ್ಯ ಕಾಲದಲ್ಲಿ ಆಶನವ ಉಂಡ
ಹೊತ್ತು ಗಳಿಯಲಿ ಬೇಡ ||2||
ಹಿರಿದಿಗೆ ಕಿರಿದು ಕಿರಿದಿಗೆ ಹಿರಿದು
ಸರಿಯ ಮಾಡಲಿ ಬೇಡ |
ಗುರು ಮಹಾಂತೇಶನ ಪಾದವ ಪಿಡಿದು
ಇರುವದು ಬಹು ಪಾಡ ||3||
ಮೊರೆ ಕೇಳೊ
ಗುರುವೆ ನೀ ಬೇಗನೇ ಮೊರೆ ಕೇಳೊ ವ್ಯರ್ಥ
ಹರಿದು ಹೋಗತಿನಿ ಹಿಡಕೋರೊ | ಯಪ್ಪ ||ಪಲ್ಲ||
ಪದರಿಗಿ ಬಿದ್ದಿನಿ ಪಾಪಿಷ್ಠ |
ಗುರು ಮಹಾಂತ ನೋಡೊ ಎನ್ನದೃಷ್ಟ |
ಸೇವಕ ನಿಂತಿನಿ ಗಟಮುಟ್ಟ |
ಗುರುರಾಯ ತಪ್ಪಿಸೊ ಈ ಭವದಾಟ ||1||
ಗುರುವೇ ನೀ ಹಾಕಿದಿ ಬಲಿವೊಂದು |
ಬೇರೆ ನಾ ಹಾಕಿಕೊಂಡೆ ಮತ್ತೊಂದು |
ಬಂಧನ ಬಿಡಿಸೊ ನೀ ಬಂದು |
ನಿನ್ನ ಹೊರ್ತು ಯಾರಿಲ್ಲೊ ಭಾಯಿಬಂಧು ||2||
ಏಸೋ ಜನ್ಮ ತಿಳಿಯಲದ್ಹೋದೆ |
ಈ ಜನ್ಮದಲ್ಲಿ ನಿನ್ನ ಮಗನಾದೆ |
ಯಾರು ತೋರುವರೊ ನಿನ್ಹಾದೆ |
ನೀ ಬಂದು ಹೇಳೊ ನಿಜಗುರು ಬೋಧೆ ||3||
ಸಾಧು ಸಂತರೊಳು ಕೂಡುವದು |
ಯೋಗ ಸಾಧನ ಮಾಡುವದು |
ನಿನ್ನ ಸ್ವರೂಪ ನೋಡುವದು |
ಸುಕೃತ ಪಡೆದು ತಾ ಬಂದದ್ದು ||4||
ಸಂದು ಸಂದಿಗೆ ಸೇರ್ಯಾದೊ |
ನಿನ್ನ ಧ್ಯಾನದೊಳು ನೆಲೆಯಾಗಿ ನಿಂತಾದೊ |
ಹಗಲಿರುಳು ಬಿಡದೆ ನಿನ್ನ ನೆನೆವಾದೊ |
ಗುರು ಮಹಾಂತ ನಿನ್ನ ಪಾದಕ್ಹೊಂದ್ಯಾದೊ ||5||
ಏನಾಗದೇನಾಗದೊ
ಏನಾಗದೇನಾಗದೊ ಹರ
ನಿನ್ನೊಲಿಸುವದೇನಾಗದೊ | ಗುರು
ವಿನೊಲಿಸುವದೇನಾಗದೊ ||ಪಲ್ಲ||
ಹಮ್ಮನಳಿದು ತಾ ಸುಮ್ಮನಿದ್ದರೆ
ಬ್ರಹ್ಮನೊಲಿಸುವದೇನಾಗದೊ | ಪರ
ಬ್ರಹ್ಮನೊಲಿಸುವದೇನಾಗದೊ ||1||
ಆಶಿಯನಳಿದು ತಾ ಹೇಸಿಕೆ ತೊಳಿದರೆ
ಈಶನೊಲಿಸುವದೇನಾಗದೊ | ಜಗ
ದೀಶನೊಲಿಸುವದೇನಾಗದೊ ||2||
ಗರ್ವನಳಿದು ತಾ ಅರವಿನೊಳಾದರೆ
ಗುರುವಿನೊಲಿಸುವದೇನಾಗದೊ | ಗುರು
ಮಹಾಂತನೊಲಿಸುವದೇನಾಗದೊ ||3||
ಕಾಮಧೇನು
ಎಂಥ ಆಕಳ ಕೊಟ್ಟ ಗುರು ಕಾಮಧೇನ |
ಹಗಲು ಇರಳು ಹಾಲಗರಿವದೊಂದೇ ಸವನ |
ಉಂಡು ನೋಡಿದವನೆ ಬಲ್ಲ ಇದರ ಹೈನ |
ಬೆಲೆ ಮಾಡುವರಿಲ್ಲಪ್ಪ ಅದರ ಸವನ ||ಪಲ್ಲ||
ಭಾಳ ದಿನದ ಆಕಳಪ್ಪ ಹಳಿ ಮುದುಕಿ |
ಮಾಡುತ ಬಂದೆನಪ್ಪ ಅದಕ ಜ್ವಾಕಿ |
ಹಿಡದೇನಂದರ ಸಿಗುವದಿಲ್ಲ ಭಾಳ ಬೆರಕಿ |
ಅದಕ ನನಗ ಆಗಬೇಕು ಅಪಲಾಕಿ ||1||
ಬಾಯಿ ನೋಡಿದರ ಒಂದು ಹಲ್ಲು ಇಲ್ಲ |
ಗುಡ್ಡದಷ್ಟು ಮೇವು ಅದಕ ಸಾಲುವದಿಲ್ಲ |
ಅಷ್ಟು ತಿಂದು ಗಡಬಡಿಸತಾದೊ ಹಗಲೆಲ್ಲ |
ನೀರ ಕುಡಿವ ರಾಟಿ ಅದಕ ಮೊದಲೇ ಇಲ್ಲ ||2||
ಆಕಳಿರುವ ಸ್ಥಲ ಶಿವಪುರದಲ್ಲಿ |
ಬಲ್ಲವರಿಗಿ ತಿಳಿದಿತಪ್ಪ ಅದರ ನೆಲಿ |
ಆಕಳಿಗಿ ಇದ್ದವಪ್ಪ ಸಾವಿರ ಮಲಿ |
ನಮ್ಮ ಮಾಂತನ ಹೆಸರ ಮ್ಯಾಲ ಬಿಟ್ಟೇನ ಕಪಲಿ ||3||
ಹರಮಂತ್ರ
ಹರಹರ ಹರಹರ ಹರಮಂತ್ರ |
ಇದು ನಿಜ ನೋಡು ಗುರುಮಂತ್ರ ||
ಕಾಲಹರ ಕರ್ಮಹರ ದುರಿತಹರ |
ಪಾಪವೆಲ್ಲ ಪರಿಹಾರ ಮಾಡೊ ಭವಾಂತರ ||ಪಲ್ಲ||
ಶಿಕ್ಷಾ ಗುರುವಿಗೆ ಶರಣಾರ್ಥಿ |
ಮೋಕ್ಷ ಗುರುವಿಗೆ ದಯಪೂರ್ತಿ ||
ಗುರುವಿನ ಗುರು ಪರಮಾರಾಧ್ಯರಿಗೆ |
ಮಹಾಮಹಾಂತನಿಗೆ ಶರಣಾರ್ಥಿ ||1||
ನಿರಾಳವಾಗಿ ಕರಗಳ ಮುಗಿದು |
ಬೇಡಿಕೊಂಬುವೆ ನಾ ಗುರುಕರಣ ||
ಬೇಡಿಕೊಂಬುವೆ ನಾ ಮಹಾಪ್ರಸಾದ |
ಪೂರ್ವ ಜನ್ಮದ ಕರ್ಮ ನಿವಾರಣ ||2||
ಅಷ್ಟಾಂಗ ಮುಟ್ಟಿ ಸಾಷ್ಟಾಂಗ ಹಾಕು |
ಶ್ರೇಷ್ಠ ಗುರುವಿಗೆ ಫಣಿ ಬಾಗು ||
ಇಷ್ಟಲಿಂಗದ ಪಾದಪೂಜೆಯ ಮಾಡು |
ಬೇಗನೆ ಮಹಾಂತನ ಒಡಗೂಡು ||3||
ಗುರುವಿನ ನೆನಿ ಮನವೆ
ಗುರುವಿನ ನೆನಿ ಮನವೆ ನಿರಂತರ |
ಗುರುವಿನ ನೆನಿ ಮನವೆ |
ಗುರುವಿನ ನೆನಿ ನಿನ್ನ ನಿಜವನು ತಿಳಿದು
ಹರುಷದಿಂದ ಬಹು ಜನ್ಮವ ಕಳೆದು ||ಪಲ್ಲ||
ತಿರುದ್ವಾರ ಮುಚ್ಚಿ ಸರಸಿಜ |
ಮಧ್ಯದಿ ಸ್ಥಿರದೃಷ್ಟಿಯನಿಡು |
ಕೋಟಿ ಅರುಣರುಚಿ ಸ್ಥಿರ |
ಚಿತ್ತದಿ ನೋಡು ಇದನು ||1||
ಆರು ಮೂರು ಚಕ್ರ ಆರು ಮೂರು |
ಲಿಂಗದ ನೆಲೆಯ ಸಾರ ನಾಲ್ಕು ದಳದೊಳು |
ಒಂದು ದಳನಾದೆ ಚಾರು ತರದಿ |
ಸದ್ಗುರುವಿನ ನೆನಿ ಮನವೇ ||2||
ಜಗನ್ಮಿಥ್ಯವೆಂದು ನಿಜತರ ಬ್ರಹ್ಮಸತ್ಯವೆಂದು |
ಝಗಝಗಿಸುವ ಮಹಾ |
ಬೆಳಗಿನೊಳಾತ್ಮನ ರಾಗದಿಂದ ತಿಳಿಸಿದ |
ವರಗುರು ಮಹಾಂತನ ನೆನಿ ಮನವೆ ||3||
ಗುರುಪಾದ ಚಿತ್ತು
ಸತ್ತು ತಿಳಿಯೊ ಗೊತ್ತು ಎತ್ತ ನೋಡಿದರಿತ್ತು |
ಅತ್ತಿತ್ತ ನೋಡಿದರಿಲ್ಲ ಹೊತ್ತು |
ಕತ್ತಲಿಯೊಳಗ ಜಗ ಸುತ್ತುತಲಿತ್ತು |
ಅರ್ತು ತಿಳಿಯೊ ನೀ ಗುರುಪಾದ ಚಿತ್ತು ||ಪಲ್ಲ||
ಮಾಡೇನಂದರ ಇಲ್ಲ ನೋಡೇನಂದರಿಲ್ಲ |
ರೂಢಿಯೊಳಗ ಗುರುದೇವ ಬಲ್ಲ |
ಸಾಕೇನಂದರ ಸಲ್ಲ | ಬೇಕೇನಂದರ ಬೆಲ್ಲ |
ಕಾಡಿನೊಳಗೋಡ್ಯಾಡುವ ಏ ಹುಚ್ಚಮಲ್ಲ ||1||
ಸತ್ತವಗ ಸಾವಿಲ್ಲ ಹೊತ್ತವಗ ಜೀವಿಲ್ಲ |
ಮುಟ್ಟಿಕೊಂಡಾತಗೆ ದೇಹಾನಿಲ್ಲ |
ನೆತ್ತಿಯೊಳಗ ಇಲ್ಲ ಒತ್ತಿ ನೋಡಿದರಿಲ್ಲ |
ಮುತ್ಯಾ ಮಾಂತನೆಂದು ತಿಳಿಯಲೆ ಕಲ್ಲ ||2||
ಗುರುಧ್ಯಾನ ಬಿಡಬ್ಯಾಡ
ಗುರುಧ್ಯಾನ ಬಿಡಬ್ಯಾಡ ಪರದೇಶಿ
ಹರಧ್ಯಾನ ಮರಿಬ್ಯಾಡ ಸನ್ಯಾಸಿ ||ಪಲ್ಲ||
ಶ್ವಾನನಂತೆ ಕಂಡ ಕಂಡ ವಸ್ತು ಮೂಸಿ |
ನೀನು ಭವದೆ ಬಿದ್ದಾದಿ ಬಹು ಘಾಸಿ ||ಅ.ಪಲ್ಲ||
ಕೊಟ್ಟ ಭಾಷೆ ತಪ್ಪಬ್ಯಾಡ ಬೇವಾರ್ಸಿ |
ಎಟ್ಟಿತನವ ಬಿಟ್ಟು ನಡಿಯೊ ಹುಕಮಾಸಿ |
ಕೆಟ್ಟ ಗುಣವ ಅಟ್ಟಿ ಕೇಳೊ ಝಕಮಾಸಿ |
ಶ್ರೇಷ್ಠ ಪದವಿ ಪಡೆದು ಬಾಳೊ ನಿಜವಾಸಿ ||1||
ನಂಬಿದವರಿಗೀರಿಯಬ್ಯಾಡ ಮಹಾ ಘಾಸಿ |
ಸಾಂಬ ನಿನ್ನ ನರಕಕೊಗೆಯುವ ಜುಲಮಾಸಿ |
ಶುಂಭನಂತೆ ತಿರುಗಬ್ಯಾಡ ಎಲೆ ಹೇಸಿ |
ಕಂಬಕ್ಕೆ ನಿನ್ನ ಕಟ್ಟಿ ಬಡಿತಾರೊ ಎಲೊ ಯಾಸಿ ||2||
ಕಾಮಕೇಳಿ ಆಡಬ್ಯಾಡೊ ಭವವಾಸಿ |
ಸಾಮಗಾನ ಮರಿಯಬ್ಯಾಡೊ ಸುದರಾಸಿ |
ಸ್ವಾಮಿ ನೇಮಿಗಳಿಗೆ ದೂರಾಗದಿರು ಸೂಸಿ |
ಸುಮ್ಮನೆ ಜಗಳ ಮಾಡಬೇಡ ಮುಡ್ಡಿ ಏರಿಸಿ ||3||
ಸಂತಜನರ ಬೈಯಬ್ಯಾಡ ಪುರಮಾಸಿ |
ಕಂತೆ ಕಟ್ಟಿ ಸುಳ್ಳ ಹೇಳದಿರು ಕೈಬೀಸಿ |
ಕಂತುಹರನ ರೂಪಿ ಚಿಣಮಗೇರಿ ಗುಡ್ಡದ ವಾಸಿ |
ಮಹಾಂತೇಶನ ಪಾದಕೆರಗೊ ನೀ ಭವನಾಶಿ ||4||
ಗುರು ನಿನ್ನುಪಕಾರ
ಹ್ಯಾಗೇ ತೀರಿತು ನಿನ್ನುಪಕಾರ
ಇದು ಅಪರಂಪಾರ |
ನೀಗಿಸಿದೀ ಜನುಮದವತಾರ
ಗುರುರಾಜ ಗಂಭೀರ ||ಪಲ್ಲ||
ಭೂತ ಪಂಚಕ ದೇಹವನು ಬಿಡಿಸಿ
ನೂತನ ತನು ತೊಡಿಸಿ |
ಧಾತು ದುರ್ದೈವದ ಭೀತಿ ಕೆಡಿಸಿ
ಖಾತರ ಶಿವನೆನಿಸಿ |
ಯಾತ್ಯಾತರ ಭಯವ ಪರಿಹರಿಸಿ
ಪ್ರೀತಿಲೆ ಪರಮರಿಸಿ ||1||
ಸಕಲ ಸ್ವರೂಪವು ತಾನೆ ಆಗಿ
ನಾನೆಂಬುದು ನೀಗಿ |
ಮುಕುರದಂದದಲಿ ತೋರಿದೆ ಯೋಗಿ
ನಿಖಿಳಸಹ ನಿಜವಾಗಿ |
ಮುಕುತಿ ಮಹದಾಂಗನೆಯ ಮದುವ್ಯಾಗಿ
ಸಂತೈಸಬೇಕಾಗಿ ||2||
ಧರೆಯೊಳುನ್ನತ ಕಡಕೋಳದ ಕ್ಷೇತ್ರ
ಉಪಮಿಲ್ಲದ ಯಾತ್ರಾ |
ನಗಿಯ ಮಾಡವರಿಗೆ ನರಕವೇ ಖಾತ್ರ
ತೋರಿದಿ ಶುಭನೇತ್ರಾ |
ನೀಗಿಸಿದೀ ಭವ ಭವ ಗಾತ್ರಾ ಮಾಡಿದಿ
ಮಹಾ ಮಹಾಂತ ಪವಿತ್ರಾ ||3||
ಏರಲಾರದ ಗುಡ್ಡ
ಏರಲಾರದ ಭಾರಿ ಗುಡ್ಡ ಏರಿಸಿದನು ಗುರುವಾ |
ಆರಾರರಿಯದ ಮೀರಿದ ಗುರುತಿದು |
ಗುರುವು ತೋರಿದ ಅರವಾ ||ಪಲ್ಲ||
ಜಾಗ್ರಸ್ವಪ್ನ ಸುಷುಪ್ತಿ ತೂರ್ಯದ |
ಗುಪ್ತ ತೋರಿದ ಗುರುವಾ |
ಇಪ್ಪತ್ತೊಂದುಸಾವಿರದಾರನೂರು |
ಜಪಿಸೆಂದನೋ ಜಪವಾ ||1||
ಬೈಲಗಿ ಬೈಲಾ ಬೈಲಾಕಾರಾ |
ಹೊಯಿಲದೋರಿದ ಗುರುವಾ |
ಬೈಲಿನೊಳಗೆ ಬಯಲ ಲಯವಾಗುವ |
ಬೈಲ ತೋರಿದ ಗುರುವಾ ||2||
ಎಲ್ಲನು ಬಿಡಿಸಿದ ಬಲ್ಲಿದ ಗುರು ತಾ |
ಕುಲವನು ಕೆಡಸಿದನೈ |
ಇಲ್ಲದ ನಡಿನುಡಿ ಬಲ್ಲಿದ ಮಹಾಂತನು |
ಬೈಲೊಳು ನಿಲ್ಲಿಸಿದನೈ ||3||
ಗುರುವಿನ ನಾಮ
ನರನಾದ ಮೇಲೆ ಗುರುವಿನ ನಾಮ
ಜೀವದೊಳು ಇರಬೇಕು ||ಪ||
ಶಾಂತಿ ಸಮಾಧಾನ ಗುಣವಿರಬೇಕು
ಪಾತಕ ಗುಣ ಕಳೆದಿರಬೇಕು
ಮಾತು ಮಾತಿಗೆ ಶಿವಾ ಅನ್ನಬೇಕು ||1||
ಭೂತ ದಯಾಪೂರ ತಿಳಿದಿರಬೇಕು
ಭ್ರಾಂತಿಯ ಮಸಕವ ತೆರದಿರಬೇಕು
ಸುಚಿತ್ತರ ಸಂಗದೊಳ ಇರಬೇಕು ||2||
ತಂದೆ ಮಹಾಂತೇಶನ ದಯ ಪಡೆದಿರಬೇಕು
ಬಂದಿದ ಸುಖ ಉಂಡು ಬಿಡಬೇಕು
ಚಂದನಾಗಿ ಜಗದೊಳು ಇರಬೇಕು ||3||
ನೋಡಿ ಭಜಿಸು
ನೋಡಿ ಭಜಿಸೊ ಮಾಂತೇಶ್ವರ ಲಿಂಗ |
ಕೂಡಿಕೊಳ್ಳುವ ತಾ ನಿನ್ನಂಗ |
ಮಾಡಬೇಡೊ ಪರ ನಾರಿಯರ ಸಂಗ |
ಥೋಡೆ ದಿವಸದ ಪ್ರಾಯ ಹುಚಮಂಗ ||ಪಲ್ಲ||
ಅಷ್ಟಮದವಳಿದಷ್ಟಪಾಶ ಪರಿ |
ದಷ್ಟಭೂತ ಗುಣಗಳ ನೀಗೊ |
ಅಷ್ಟಾವರಣ ಹಿಡಿದಷ್ಟಾರ್ಚನೆಯಿಂ |
ದಷ್ಟ ದಳದಿ ನೀ ಬೆರಗಾಗೊ |
ದುಷ್ಟ ಮಾನವರ ತಂಟೆಕೆ ಹೋಗದೆ |
ನಿಷ್ಠೆವಂತರಿಗೆ ತಲೆ ಬಾಗೊ ||1||
ಆಶೆ ಬಿಡದೆ ಪರದೇಶವ ತಿರುಗುತ |
ಕಾಶಿಯಾತ್ರೆ ಮಾಡಿದರೇನೊ |
ಸಾಸಿರ ಜನ್ಮದ ದೋಷವ ಕಳೆಯದೆ |
ಏಸು ದಿವಸ ಬದುಕಿದರೇನೊ |
ಕಾಸು ವೀಸುಗಳ ದಾಸೋಹ ಮಾಡುತ |
ಈಶನ ನೆನೆದರೆ ಕಡಿಮೇನೊ ||2||
ಪೊಡವಿಯೊಳಗ ಮಿಗಿಲ ದೃಢ ಸೈದಾಪೂರ |
ದಡವಿ ಗಿಡದ ಮೊರಡಿಗೆ ಬಂದ |
ಮೃಢ ಮಹಾಂತೇಶನ ಬಡಗಲ ದಿಕ್ಕಿನೊಳು |
ಒಡಿಯ ಹಾನ ಪರಮಾನಂದ |
ಮಡಿವಾಳದೇಶಿಕ ಬಿಡದ್ಹೇಳಿದ ಪದ |
ನಡಕೊಂಬವರಿಗೆ ಬಹು ಚಂದ ||3||
ಹರ ಮುನಿದರೆ ಗುರು ಕಾಯುವ
ಹರ ಮುನಿದರೆ ಗುರು ಕಾಯುವನೆಂದು
ಸರ್ವಶಾಸ್ತ್ರ ಓದಿ ಹೇಳುತಿರಿ
ವರವ ಕೊಟ್ಟ ಗುರುವು ಮನೆಗೆ ಬಂದರೆ
ಗರುವಿನ ಮಾತೊಂದಾಡುವಿರಿ ||ಪ||
ಹಡೆದ ತಾಯಿ ತಂದೆ ಮಡದಿ ಮಕ್ಕಳು
ಸಂಪತ್ತು ಸಹಿತ ಇರುವರು
ಬಡವ ಗುರು ತನ್ನ ಮನೆಗೆ ಬಂದರೆ
ಒಡೆದಂಬಲಿ ಕಾಸಿ ನೀಡುವರು ||1||
ಸಿಟ್ಟಿನಿಂದ ಭಿಕ್ಷೆ ಬಿಟ್ಟು ಹೋದರೆ
ಥಟ್ಟೆ ಮಾಡಿ ನೀವು ನಗುವಿರಿ
ಹುಟ್ಟಿದ ಮಕ್ಕಳಿಗೆ ಕಷ್ಟ ಬಂದರೆ
ಗುರುವೆ ಕಾಯೋ ಎನ್ನುವಿರಿ ||2||
ಊಚ ಕುಲದವರೆಲ್ಲ ಉಚ್ಚಿ ಬಿದ್ದವರೆಲ್ಲ
ಹೆಚ್ಚಿನ ಕ್ರಿಯೆ ನೀವು ಮಾಡುವಿರಿ
ನಾಚ ಮಾಡುವಳ ಜೊತೆ ಚಾಪೆ ಮೇಲೆ ಕುಂತು
ಕಾಚಾ ಎಲಿ ಸುಣ್ಣ ನೀವು ತಿನ್ನುವಿರಿ ||3||
ಪೊಡವಿಗಧಿಕವಾದ ಸುಲಭ ಚಿಣಮಗೇರಿ
ಸಡಗರ ಮರಡಿಯನೇರಿ
ಮೃಢ ಮಹಾಂತೇಶಗ ಕೂಡಿಕೊಂಡು
ನೀ ಕಳೆದುಕೊಳ್ಳು ಭವ ದಾರಿ ||4||
ಮಹಾಂತ ಮಾರಾಯ
ಎಲೆಲೆ ಶ್ರೀ ಮಹಾಂತ ಮಾರಾಯ |
ಸಲ್ಲುವದೇನೊ ನಿಮಗ್ಹಿಂತ ನ್ಯಾಯ |
ಅಲಕು ಮಲಕಿಗೆ ತಳಕಿಕ್ಕಿದಾಯ ನೆಲೆಯ
ಅರಿಯದವಗಾಗದೀ ಸಾಯ ||ಪಲ್ಲ||
ಹಡಗದ್ಯಾವರ ಕೊಬ್ಬನಟ್ಟಿ |
ತುಡಗಿಗೊಬ್ಬನ ಬೆನ್ನಿಂದ ಬಿಟ್ಟಿ |
ಕಡಲ ದ್ರವ್ಯ ನೀ ಬಚ್ಚಿಟ್ಟಿ |
ಬಡಿದರೇನವ ಕೊಡುವನೆ ಶೆಟ್ಟಿ ||1||
ಕೋಟಿ ಖಾನಿಗೆ ಕಾವಲಿ ಇಟ್ಟಿ |
ಕೋಟಿ ಇಲಿಗಳಿಗೆ ಅಪ್ಪಣೆ ಕೊಟ್ಟಿ |
ನೇಟಿಸಿದರೇನವ ಕೊಡುವನೆ ತುಟ್ಟಿ |
ಚೀಟಿಯೊಳಗಿದ್ದ ಲೆಕ್ಕ ಮುಂದಿಟ್ಟಿ ||2||
ಸಲಹಿ ಎನ್ನ ಮಾಡಿದಿ ಜಟ್ಟಿ
ಭಲೆರೆ ಹುಲಿಯ ಮೇಲ ಕಾಳಗ ಬಿಟ್ಟಿ |
ಕೊಲ್ಲಲು ಸಾಯಲು ಬ್ಯಾಡೆಂಬೊದಿಟ್ಟಿ |
ಚೆಲುವ ಮಹಂತ ಏನಿದು ತಿಟ್ಟಿ ||3||
ಮಹಾಂತಯೆನ್ನಿ
ಮಹಾಂತ ಮಹಾಂತಯೆನ್ನಿ |
ಜಯ ಜಯ ಮಹಾಂತ ಮಹಾಂತಯೆನ್ನಿ |
ಆ ನಿರ್ವಯಲಾಗುವ ಬನ್ನಿ |
ಮಹಾಂತ ಮಹಾಂತಯೆನ್ನಿ ||ಪಲ್ಲ||
ದಶನಾಡಿಗಳಿರ್ಯಾ ಮೋಹದ |
ದಶ ಇಂದ್ರಿಯಗಳಿರ್ಯಾ |
ನಸಿಮಸಿಯಾಗುವ ಘಸಣಿ ಇದ್ಯಾತಕೆ |
ದಶ ವಾಯುಗಳಿರ್ಯಾ ||1||
ನವನಾದಗಳಿರ್ಯಾ ಅಲ್ಲಿ |
ನವಮೋದಗಳಿರ್ಯಾ |
ಅವ ಇವಯೆಂಬುವ ಭವ ಭ್ರಮಿಯಾತಕೆ |
ನವ ದೈವಗಳಿರ್ಯಾ ||2||
ಅಷ್ಟ ಭೂತಗಳಿರ್ಯಾ ಎಲೊ ಎಲೊ |
ಅಷ್ಟ ನಾಥಗಳಿರ್ಯಾ |
ಅಷ್ಟ ಇಷ್ಟರೊಳು ಕಷ್ಟ ಬಿಡುವದೇನು |
ಅಷ್ಟ ಮದಗಳಿರ್ಯಾ ||3||
ಸಪ್ತ ಧಾತುಗಳಿರ್ಯಾ ಪತಿವ್ರತ |
ಸಪ್ತ ಮಾತೃಗಳಿರ್ಯಾ |
ತಪ್ತವಾದ ಹುಸಿ ಸಪ್ತವಿದ್ಯಾತಕೆ |
ಸಪ್ತ ವ್ಯಸನಗಳಿರ್ಯಾ ||4||
ಆರು ವರ್ಗಗಳಿರಾ ಮೇಲಾದ |
ಆರು ಭ್ರಮೆಗಳಿರ್ಯಾ |
ತೋರಡಗುವ ತನು ಘೋರಿಸುವದ್ಯಾತಕೆ |
ಆರು ಉರ್ಮಿಗಳಿರ್ಯಾ ||5||
ಪಂಚ ಕ್ಲೇಶಗಳಿರ್ಯಾ ಶೋಕದ |
ಪಂಚಕೋಶಗಳಿರ್ಯಾ |
ಪಂಚರಿಸುವ ಇಹ ಸಂಚಲವ್ಯಾತಕೆ
ಪಂಚ ಪಾಶಗಳಿರ್ಯಾ ||6||
ನಾಲ್ಕು ಜಾತಿಗಳಿರ್ಯಾ ಮತ್ತು |
ನಾಲ್ಕು ಗಾತ್ರಗಳಿರ್ಯಾ |
ಮೇಲ್ಕಲೆ ಅರಿಯದೆ ಹಿಲ್ಕೂಲ ಯಾತಕೆ |
ನಾಲ್ಕು ಕರಣಗಳಿರ್ಯಾ ||7||
ಮೂರು ತಾಪಗಳಿರ್ಯಾ ಮರವಿಯ |
ಮೂರು ತಾಪಗಳಿರ್ಯಾ |
ಮೂರಾರೊಳಗ ಮೀರುವದ್ಯಾತಕೆ
ಮೂರು ಗುಣಗಳಿರ್ಯಾ ||8||
ಎರಡು ಕರ್ಮಗಳಿರ್ಯಾ ಸುತ್ತುವ
ಎರಡು ವರ್ಮಗಳಿರ್ಯಾ |
ಎರಡೆರಡೆಂಬುವ ಹುರುಡಿನೊಳೇನಾದೆ |
ಎರಡು ಸೊಮ್ಮುಗಳಿರ್ಯಾ ||9||
ಒಂದೇ ಜೀವಗಳಿರ್ಯಾ ಹಲವು |
ಒಂದೇ ಭಾವಗಳಿರ್ಯಾ |
ಒಂದೊಂದಾಗಲು ಅಂದಿಂದ್ಯಾತಕೆ |
ಒಂದೇ ಆತ್ಮಗಳಿರ್ಯಾ ||10||
ಸರ್ವಜ್ಞಾನಿಗಳಿರ್ಯಾ ಶಿವ ಸುಖ |
ಸರ್ವ ಮೌನಿಗಳಿರ್ಯಾ |
ಸರ್ವ ಮಹಾಂತನೇ ಇರ್ವದಿನ್ಯಾತಕೆ
ಸರ್ವ ಅರುವಿಗಳಿರ್ಯಾ ||11||
ನುಡಿಯೊ ಶಿವನಾಮ
ನುಡಿಯೊ ನುಡಿಯೊ ಶಿವನಾಮವನು | ನೀ
ನುಡಿಯೊ ಇದೇ ಜನ್ಮ ನಿನಗ ಕಡಿಯೊ ||ಪಲ್ಲ||
ಶಾಂತಿಯ ಪಾಠ ಕಲಿಯೊ |
ಸದ್ಧರ್ಮದಿಂದ ನಡಿಯೊ ||1||
ಅಡಿಗಡಿಗೆ ಸತ್ಯ ನುಡಿದು
ನುಡಿದಂತೆ ನೀನು ನಡಿಯೊ ||2||
ಸಾಧುಗಳ ಸೇವೆಗೈದು |
ಗುರು ಕರುಣೆಯನ್ನು ಪಡೆಯೊ ||3||
ಶರಣರ ಭಕ್ತಿಗಾಗಿ | ಶಿವ ತಾ
ತೀರಿಸಿದ ಸಾಲ ||4||
ಕೊಡಗೂಸಿನಾಸಿಗಾಗಿ ಬಿಸಿ
ಹಾಲ ಕುಡದಿ ಯೋಗಿ ||5||
ಬಡವ ಬಂಧು ಎಂದು |
ಪರಿಕಷ್ಟ ತನ್ನದೆಂದು ||6||
ಧನವಿರಲಾದಿನ ಮಾಡು |
ಮೃಢ ಮಹಾಂತನೊಲಿವನು ನೋಡು ||7||
ಕುಲವೇನು ಗಂಗಾಧರ
ಛಲವೇನು ಉಮಾವರ ನಿನ್ನ
ಕುಲವೇನು ಗಂಗಾಧರ ||ಪ||
ಬಂಕನ ಸಹವಾಸ ಲಂಕೆಗೆ ಅಳದಿ
ಶಂಖದೊಡೆಯ ಬಮಶಂಕೆಗೆ ಸಿಲುಕಿದಿ ||1||
ಪಿಟ್ಟೆವ್ವನ ಪಾಶವು ಹೊಟ್ಹರೆವುಂಡು
ನೀ ಬಿಟ್ಟಿಗಾಯಸದೊಳು ಕುಟ್ಟಿಸಿಕೊಳ್ಳುವುದು ಛಲವೇನು ||2||
ಚಂಗಳಿ ತನಯನ ಅಂಗವ ಅಡಗಿಸಿದಿ
ಮಂಗಲದೊಳು ಮುಡಿ ಶೃಂಗಾರ ಕೆಡಿಸಿದಿ ಕುಲವೇನು ||3||
ಮಾಡಿದಿ ಕುಂಟಣಿ ಎಮ್ಮನದೊಡೆಯನಿಗೆ
ಬೇಡನ ಪೂಜೆಯು ಪಾಡೆನು ನೀನಗೆ ಛಲವೇನು ||4||
ಬಡಿವಾರದಲಿ ಅಂಬಲಿ ಕುಡಿದೆಲ್ಲೆಲ್ಲೆ
ಮೃಢ ಮಹಾಂತೇಶ ನಿನ್ನ ಬುಡ ನಾ ಬಲ್ಲೆ ನಾ ಬಲ್ಲೆ ||5||
ಒಡಲೊಳಗೆ ಶಿವ
ಎಲಿರೊ ಎಲಿರೊ ಕೆಡಬ್ಯಾಡಿರೋ |
ನಿಮ್ಮ ಒಡಲೊಳಗೆ ಶಿವಹಾನ ನೋಡಿರೋ |
ಕುಲಚಲಕೆ ಹೊಡದಾಟ ಬೇಡಿರೋ |
ಮುಂದ ನೆಲೆ ಮಾಡಿಕೊಳ್ಳುವದು ನೋಡಿರೋ ||ಪಲ್ಲ||
ಸ್ಥಿರವಿಲ್ಲರೋ ಈ ಸಂಸಾರ | ಗಾಳಿ
ಗಿರಿಸಿದ ದೀವಿಗಿ ಪ್ರಕಾರ |
ತಿರುಗಿ ತಿರುಗಿ ಬರುವದು ಘೋರ | ಮುಂದೆ
ಮರಳಿ ದೊರಕೊಂಬುದು ಬಹು ದೂರ ||1||
ಮಕ್ಕಳ ಮೋಹಕ್ಕ ಮರಗೀರಿ | ಒಳ್ಳೆ
ಸೊಕ್ಕಿದ ಹೆಣ್ಣಿಗಿ ಸೊರಗೀರಿ |
ರೊಕ್ಕಕೆಷ್ಟು ನೀವ ತಿರುಗೀರಿ ದಿಮ್ಮ ದಿರಗೀರಿ | ನಾಳೆ
ಡೊಕ್ಕಿ ಮುರಿವ ಯಮಗ ನಲಗೀರಿ ||2||
ದಾನ ಮಾಡಂದರೆ ನೆಳ್ಳತೀರಿ | ತುಸು
ಬ್ಯಾನಿ ಬಂದರ ನೆಲಕುಳ್ಳತೀರಿ |
ಜಾನು ಮಬ್ಬಿನೊಳು ಕುಳತೀರಿ | ನಾಳೆಯ
ಮನು ಬಂದರೇನ್ಹೇಳತೀರಿ ||3||
ಮೃತ್ಯುಂಟೆಂಬುದು ಹೇಳತೀರಿ | ನಿಜ
ಗೊತ್ತು ತಿಳಿಯದಲೆ ಒಳ್ಳತೀರಿ
ಮುತ್ತು ರತ್ನವಿಟ್ಟು ಹೊಳಿತೀರಿ | ನಾಳೆ
ಸತ್ತು ಮೂರ ದಿನಕ ಕೊಳಿತೀರಿ ||4||
ಎರಡು ಮೂರು ಆರು ಅರಿಯಬೇಕರ್ಯೊ | ಆ
ಎರಡು ಮೂರು ಆರು ಜರಿಬೇಕರ್ಯೊ |
ಹೊರಗ ಒಳಗ ಒಂದೆ ತಿಳಿಬೇಕರ್ಯೊ | ಶ್ರೀ
ಗುರು ಮಾಂತೇಶನ ಬೆರಿಬೇಕರ್ಯೊ ||5||
ಥೋಡೆ ದಿನದ ಸಂತಿ
ಶಿವನಾಮವ ಸ್ಮರಿಸೊ | ಈ
ಭವ ಮಾಲೆಯ ಪರಿಹರಿಸೊ
ಜೀವ ಶಿವನ ಬೆರಿಸೊ | ಆತ್ಮನ
ಭೇದವ ಪರಿಹರಿಸೊ ||ಪಲ್ಲ||
ಥೋಡೆ ದಿನದ ಸಂತಿ | ಆತ್ಮನ
ನೋಡದೆ ನೀ ಕುಂತಿ
ಖೋಡಿ ಮರಗಿ | ಭ್ರಾಂತಿ
ನಾಡೊಳು ಕುಣಿಸ್ಯಾಳೊ ಈ ಕಾಂತಿ
ಬೇಡೊ ಪರರ ಚಿಂತಿ | ನಾಳೆ
ಯಮ ಕೇಳಿದರೇನಂತಿ ||1||
ಅರ್ಥ ಪ್ರಾಣಭಿಮಾನ ಅವರವ
ರರ್ತು ನೀಡೋ ಬೋನ |
ಕರ್ತೃ ಶ್ರೀಗುರು ಧ್ಯಾನ | ಅಮೃತ
ತುರ್ತು ಮಾಡೊ ಪಾನ
ಬೆರ್ತುಕೊಳ್ಳೊ ಮಹಾಜ್ಞಾನ | ಅದ್ರೋಳ
ಗಿರ್ತದೊಂದೆ ಖೂನ ||2||
ಕುಲ ಛಲಕ್ಹೋರಾಡಿ | ತಾ ಪ್ರ
ಜ್ವಲಿಸುವ ಮುಖ ಬಾಡಿ
ಹಲಬರ ಹಳಿದಾಡಿ | ಪುಣ್ಯದ
ಫಲ ಹೋಯಿತು ಜ್ಯಾಡಿ
ಕಲಕಿನೊಳಗೆ ಕೂಡಿ | ನಡ
ದೆಲ್ಲ ನೆಲಮನಿಗೆಲೆ ಖೋಡಿ ||3||
ಆಯುಷ್ಯ ಹತ್ತುತ್ತು | ರಾತ್ರಿಗೆ
ಹೋಯಿತು ಐವತ್ತು |
ಪ್ರಾಯಕೆ ಇಪ್ಪತ್ತು | ಕಾಯಜ
ಘಾಯಿಗೆ ಮೂವತ್ತು |
ವಾಯುಗಿಲ್ಲೊ ಹೊತ್ತು | ನೀ
ತಿಳಿಯೊ ವೇಳ್ಯಕೆ ಗೊತ್ತು ||4||
ಆಶಿಯ ಮಾಡಬೇಡ | ಭಾಳ
ನಿರಾಶಿಲೆ ಕೆಡುಬೇಡ
ದ್ವೇಷವ ತೊಡಬೇಡ | ಒಬ್ಬರ
ದೂಷಿಸಿ ನುಡಿಬೇಡ
ಫಾಸಿಲಿ ಬಡಿಬೇಡ | ಶ್ರೀಗುರು
ಮಹಾಂತೇಶನ ಮರಿಬೇಡ ||5||
ಶಿವಮಂತ್ರ
ಎಲೊ ಎಲೊ ಶಿವಮಂತ್ರವ ನುಡಿಯೋ |
ನೀನದನೊಲಿಸುವ ಸಾಧನ ಪಡಿಯೋ |
ಕುಲಛಲ ಭವ ಬಳ್ಳಿಯ ಕಡಿಯೋ |
ನಿನ್ನ ನೆಲೆ ತಿಳಿಸುವ ಗುರುವಿನ ಹಿಡಿಯೋ ||ಪಲ್ಲ||
ಈ ಲೋಕದ ಸುಖ ಸಂಸಾರ |
ತಾನಾ ಲೋಕಕ್ಕೆ ಆಯಿತು ದೂರ |
ಆ ಲೋಕದ ಸುಖದಾಚಾರ | ಅದು
ಈ ಲೋಕದೊಳಗ ಆದ ಬಹು ಘೋರ ||1||
ಒಂದರ ಸಂಘಕ್ಕೊಂದಿಲ್ಲಾ | ತನು
ಕಂದಿಸುವದು ಕಡೆ ಮೊದಲಿಲ್ಲಾ |
ಬಂಧಿಸುವದು ಭವದೊಳಗೆಲ್ಲಾ | ಅದು
ಒಂದ ಬಿಟ್ಟರೊಂದಿಲ್ಲಾ ||2||
ತ್ಯಾಗದಿಂದ ತಾ ಶಿವಯೋಗ | ಆ
ಯೋಗದಿಂದ ಇಂದ್ರನ ಭೋಗ |
ಭೋಗದೊಳಗಿಲ್ಲದ ರಾಗ | ಆ
ರಾಗದೊಳಗೆ ಈ ಭವರೋಗ ||3||
ಒಂದಿದ್ದರೆ ಒಂದಿರಲಿಲ್ಲಾ | ತ
ಹಿಂದೆ ಮಾಡಿದ್ದಾಗುವದಲ್ಲಾ |
ಮುಂದೆ ಹುಡುಕಿದರದು ಸಿಗುದಿಲ್ಲ |
ಹಿಂದ ಮುಂದರ ಸಂದುಳಿತಲ್ಲಾ ||4||
ಎರಡೊಂದಾಗುವದೇ ತತ್ಸಂಗಾ | ನೀ
ತುರ್ತ ಮಾಡಿಕೊಳ್ಳಲೆ ಮಂಗಾ |
ಎರಡೆರಡಾದುದೆ ಮಹದಂಗಾ | ಆ
ಎರಡೊಂದಾದುದೆ ನಿಜಲಿಂಗಾ ||5||
ಹತ್ತರೊಳಗೆ ಒಂದು ಹನ್ನೊಂದು | ನೀ
ಮತ್ತೆ ಹುಡುಕುವದ್ಯಾತಕೆ ಸಂದು |
ಚಿತ್ತಿನೊಳಗೆ ಚಿತ್ತನ ಹೊಂದು | ಅದು
ಸುತ್ತು ಸುತ್ತು ಸುಳಿಯುವದೊಂದು ||6||
ಬುಡನಡು ಕೊನಿ ಲಕ್ಷಪರೋಕ್ಷ | ನೀ
ಬಿಡದಿರು ನಡಿನುಡಿವುದೇ ಶೀಕ್ಷಾ |
ಅಡರಡಿಸುವ ನಿರ್ವಾಣ ದೀಕ್ಷಾ | ಆ
ಮೃಢ ಮಹಾಂತೇಶನು ಮಾಡುದ ಮೋಕ್ಷಾ ||7||
ಒಲ್ಲೆ ಭವ
ಕಾಯೋ ಶ್ರೀ ಸಾಂಬ ಶಿವ ಒಲ್ಲೆ ಭವ ||ಪಲ್ಲ||
ಅಂಡಜ ಪಿಂಡಜ ಸ್ವೇದಜ ಜಾರಜ |
ಲೆಂಡಬಂಡೊ ಈ ಭ್ರಮ ಅದೇ ಶ್ರಮ ||1||
ಚಿತ್ರನು ಸೋತ ಮಿತ್ರಜ ಭೀತ |
ಪತ್ರ ದೋಷಾಹಿಭರ ಅಹೋಹರ ||2||
ಮೃಢ ಮಹಾಂತೇಶ ಹಿಡಿಯದಿರು ಕ್ಲೇಶ
ಕೊಡು ನಿನ್ನೊಳೈಕ್ಯಪದ ನಿರ್ವಾಣವ ||3||
ಶ್ರೀ ಮಹಾದೇವ
ಶಿವ ಶಿವ ಶಿವ ಶಿವ ಶಂಭೋ |
ಶ್ರೀ ಮಹಾದೇವ ಶಿವಶಂಭೋ ||ಪಲ್ಲ||
ಹಲವು ಜನ್ಮ ತಿರುಗಿದೆ | ನಾ
ಕುಲಛಲಕೆ ಮರಗಿದೆ |
ಅಲ್ಲಿ ನೆಲೆಗಾಣದೆ ಸೊರಗಿದೆ | ನಿನ್ನ
ಹೊಲಬನರಿಯದೆ ಕೊರಗಿದೆ ಕೊರಗಿದೆ ಕೊರಗಿದೆ ||1||
ಮನ್ಮಥಗೊಡಲವ ಕೊಟ್ಟೆ ನಾ |
ಸನ್ಮತ ಮಾರ್ಗವ ಬಿಟ್ಟೆ ನಾ |
ದುರ್ಮತ ನೀತಿಯ ತೊಟ್ಟೆ ನಾ
ಉನ್ಮತ್ತ ಗುಣದಲ್ಲಿ ಕೆಟ್ಟೇ ನಾ ಕೆಟ್ಟೇ ನಾ ಕೆಟ್ಟೇ ನಾ ||2||
ಅಶನ ವ್ಯಸನಕ್ಕೆ ನಾ |
ಪಸರವ ತೋರಿದಾಟಕ್ಕೆ | ಈ
ವಿಷಯದ ಅವನಿಯ ಹೊಕ್ಕೆ | ನಾ
ಬಿಸಜಾಪ್ತಣುಗಗೆ ಸಿಕ್ಕೆ ನಾ ಸಿಕ್ಕೆ ನಾ ಸಿಕ್ಕೆ ನಾ ||3||
ಖಳಜನ ಗೆಳತನ ಮಾಡಿ | ನಾ
ಹಳದೇನು ಹಳಬರ ನೋಡಿ | ನಾ
ಬಳಲಿದೆ ಬಲಕ್ಹೋರ್ಯಾಡಿ | ನಾ
ಕಳೆಗಳೆದುಳದೇನು ಖೋಡಿ ನಾ ಖೋಡಿ ನಾ ಖೋಡಿ ನಾ ||4||
ಪೊಡವಿಯೊಳಗ ಚಿಣಮಗೇರಿ |
ಸಡಗರ ಮರಡಿಯನೇರಿ | ಆ
ಮೃಢ ಮಾಂತೇಶಗ ದೂರಿ | ನಾ
ಬಿಡಿಸಿಕೊಳ್ಳುವೆ ಭವದಾರಿ ಭವದಾರಿ ಭವದಾರಿ ||5||
ಕಾಯೋ ಹರ
ಸಾಂಬ ಸದಾಶಿವ ಕಾಯೋ ಹರಾ ||ಪಲ್ಲ||
ಹಲವು ಜನ್ಮದಿ ನಿನ್ನ ಹೊಲಬುದಪ್ಪಿದೆ ನಾ |
ಒಲಿದು ಈ ಭವ ಗೆಲಿಸಯ್ಯಾ ಹರಾ ||1||
ಕಕ್ಕುಲಾತಿಗೆ ಮನ ಸಿಕ್ಕಿ ಬಳಲಿದೆ ನಾ |
ದುಃಖ ಪಡುವದೇನಯ್ಯೊ ಹರಾ ||2||
ಮೃಢ ಮಹಾಂತೇಶ ಹಡೆದ ಕುವರ ನಾ |
ಬಿಡದಿರು ಹಿಡಿ ಬೇಗ ಕೈಯ ಹರಾ ||3||
ಸದಾ ಸ್ಮರಣೆ
ಶಿವ ಶಿವ ಶಿವ ಶಿವ ಸದಾ ಸ್ಮರಣ ಶಿವನಾಮವೋವೋ ||ಪ||
ನಡಿ ನುಡಿ ಕೆಡಗುಡದ್ಹಿಡದಾಚರಿಸುವೆ |
ದೃಢ ಸಡಗರ ವ್ಯಾವ್ಹಾರವೋವೋ ||1||
ಲಯ ಗಮನಂಗಳ ಬಯಲ ನಿರ್ವಾಣ |
ದಯಾನಿಧಿ ಗುರುಪಾದ ಸೇವವೋವೋ ||2||
ಅಷ್ಟವಿಧಾರ್ಚನೆ ತೃಷ್ಟಿ ಕರಕಮಲ |
ದೃಷ್ಟಿಸಿ ಲಿಂಗ ಶಿವದೃಷ್ಟಿವೋ ||3||
ಪಾವನ ಜಗದಘದಾವನ
ಮತ್ಸ ಜೀವನ ಜಂಗಮದೇವವೋವೋ ||4||
ಷಡು ಶಕ್ತಿಯ ಷಡುಲಿಂಗ ಷಡುಸ್ಥಲ |
ಷಡು ಸಮರಸ ಸದಾತ್ತವೋವೋ ||5||
ಹಲವಿದಕ್ಹೊಲಬಿನ ನೆಲೆ ಕಲೆ ಅರಿಯಲು |
ಸಲೆ ಬಲು ಸೀಮೆಯೆ ಶಿವಧ್ಯಾನವೋವೋ ||6||
ಭವ ವಿರಹಿತದನುಭವ ಮಹಾಂತೇಶನ |
ಅವಿರಳ ಸುಖ ಮನ ನಲಿವವೋವೋ ||7||
ಶಿವಶಿವ ಅನುವಲ್ಲಿ
ಶಿವಶಿವ ಶಿವಶಿವ ಅನುವಲ್ಲಿ | ನೀ
ಗುರುವಿನ ಪಾದ ಹಿಡಿವಲ್ಲಿ |
ಹೇಳಿದ ಮಾತೊಂದು ಕೇಳವಲ್ಲಿ | ನಿನ್ನ
ಹೀನ ಗುಣದ ಬುದ್ಧಿ ಬಿಡವಲ್ಲಿ ||ಪಲ್ಲ||
ಹಸ್ತು ಬಂದ ಜಂಗಮ ಯೋಗಿ | ನೀ |
ಕುಸ್ತಿಕಾಳಗ ಮಾಡಿದಿ ಕಾಗಿ |
ಮುಂದಿನ ಮನಿಗ್ಹೋಗಂದಿ ಸಾಗಿ | ನಿನಗ
ಮುಕ್ತಿ ಹ್ಯಾಂಗ ದೊರೆವುದು ಗೂಗಿ ||1||
ಹಿರಿಯರು ಗಳಿಸಿದ ಪುಣ್ಯದ ರೊಕ್ಕ | ಬೆಳ್ಳ
ಬೆಳತನಕ ಮಾಡಿಟ್ಟಿದಿ ಲೆಕ್ಕ |
ಕೊಳ್ಳಿ ತಗೊಂಡು ಕಳ್ಳ ಮನಿ ಹೊಕ್ಕ | ನೀ
ನೆರಳುದು ಕಂಡು ಶಿವ ತಾ ನಕ್ಕ ||2||
ಬರುವಾಗ ಏನೂ ತಂದಿಲ್ಲಾ | ನೀ
ಹೋಗಾಗೇನೂ ಒಯ್ಯೋಣಿಲ್ಲಾ |
ಕರ್ತಗುರು ಮಹಾಂತೇಶನೆ ಬಲ್ಲಾ | ಎಲ್ಲಾ
ಅವನ ಹೊರ್ತು ಮತ್ತ್ಯಾರಿಲ್ಲಾ ||3||
ಬಿಡದೆನ್ನ ಕಾಯೊ
ಶಿವನೇ ನೀ ಬಿಡದೆನ್ನ ಕಾಯೊ | ನಿಮ್ಮಡಿ ಸೇವೆ ಈಯೋ |
ಜಡದೇಹದೋಳು ತೊಡಕಿಸದಿರಯ್ಯಯ್ಯೋ ||ಪಲ್ಲ||
ಹಲವು ಜಲ್ಮದಲಿ ಮರತಿದ್ದೆ ಹೊರಳಿ |
ನಿಲಿಸು ಶ್ರೀಗುರುವೆ ಮುಂದೆ ನಿಮ್ಮ ಪಾದದಲಿ ||1||
ತಾಯ ಬಸುರಲಿ ವಾಯಿ ಹುಳ ಸೇರಲಿ |
ಗಾಯಿಗೊಂಡು ಹೊರಹೊಟ್ಟೆ ಬಾಯಿ ಬಿಟ್ಟೊದರಲಿ ||2||
ಈ ಸುಳ್ಳ ಜಲ್ಮದಿ ಮುಸುಕಿದೆ ಮಲದಿ |
ಶಿಸುವಾಗಿ ಹಸದು ನುಸಿಳಿದೆ ನೆಲದಿ |3||
ನಿನ್ನ ಪಾದದ ಭರವು ಕಾಯಜ ಸುರವು |
ಮಾಯಿ ಮುಸುಕಿದರೆ ಇನ್ನೆಲ್ಲಿ ನಿನ್ನರವು ||4||
ಮೃಢ ಮಹಾಂತೇಶ ಬಿಡಿಸಯ್ಯಾ ಈಶ |
ತಡಿಯದೆ ಹಿಡಿ ಕೈಬೇಗ ಸರ್ವೇಶಾ ||5||
ಶಿವ ನಾಮ ಮರಿಯಬೇಡ
ಶಿವ ಶಿವ ಎನ್ನಿರಿ ಶಿವನಾಮ ಸ್ಮರಣಿಯ ಮರಿಯಬೇಡವ್ವ ತಂಗಿ
ಹರನ ಮರಿಬೇಡವ್ವ ತಂಗಿ ಶಿವನ ಮರಿಯಬೇಡವ್ವ ತಂಗಿ |ಪ||
ಕಲ್ಯಾಣಪುರದೊಳು ಅಮರಗಣಂಗಳು ಬಲ್ಲಿದರೇಳವ್ವ ತಂಗಿ ಏ ತಂಗಿ ||ಉಪ||
ಆಧಾರ ಸ್ವಾದಿಷ್ಟ ಮಣಿಪುರ ಚಕ್ರವು ಏರಿ ನೋಡವ್ವ ತಂಗಿ
ನಾದ ಬಿಂದು ಕಳೆ ಮೂಲವು ತಿಳಿಯದೆ ಸುಮ್ಮನೆ ಕುಳಿತೆವ್ವ ತಂಗಿ ಏ ತಂಗಿ ||1||
ನಾಸಿಕಾಗ್ರದ ಮ್ಯಾಲೆ ಧ್ಯಾಸವು ಹಿಡಿದರೆ ಏಸು ವರ್ಣವು ತಂಗಿ
ಸಹಸ್ರ ಕಮಲದೊಳು ಈಶ್ವರ ಕುಳಿತಾನ ಧ್ಯಾಸವು ಮರಿಬ್ಯಾಡ ತಂಗಿ ಏ ತಂಗಿ ||2||
ದೇಶಕಧಿಕವಾದ ವಾಸುಳ್ಳ ಬಿದನೂರ ಈಶ ಹೇಳ್ಯಾನ ತಂಗಿ ಜಗದೀಶ ಹೇಳ್ಯಾನ ತಂಗಿ
ಈಶ ವಿರೂಪಾಕ್ಷೇಶನ ಖಾಸ ಮಗನ ಮಾತು ಸೊಸಿ ನೋಡವ್ವ ತಂಗಿ ಏ ತಂಗಿ ||3||
ಸಾಂಬ ಸದಾಶಿವ
ಭವಹರ ಶಂಕರ ಸಾಂಬ ಸದಾಶಿವ |
ಶಿವ ಶಿವನೆಂಬವ ಶಿವನಪ್ಪ |
ಭವನಿವನಿಲ್ಲದೆ ಏನೋ ತಾನಾದುದು |
ಸ್ವಯಂಭೋ ಎಂಬುವವನಪ್ಪ ||ಪಲ್ಲ||
ಷೋಡಷ ಕಳೆಭರಿತಾದ ಬ್ರಹ್ಮಾಂಡವು |
ಕೂಡಿಕೊಳ್ಳುವ ನೋಡಲಾದಪ್ಪ |
ನೋಡಿಕೋ ಅದೇ ತಾನಾದ ಪಿಂಡಾಂಡವು
ಮಾಡೋದು ನಿನ್ನಿಂದೇನಪ್ಪ ||1||
ತಾ ನಿರಾಳಾಗದೆ ಆ ನಿಜ ತಿಳಿಯದು
ನಿಜ ತಿಳಿಯದೆ ನಿರಾಳಿಲ್ಲಪ್ಪ |
ಜ್ಞಾನಾಗದೆ ಅಜ್ಞಾನ ಹೋಗದು |
ಅಜ್ಞಾನ್ಹೋಗದೆ ಸುಜ್ಞಾನಿಲ್ಲಪ್ಪ ||2||
ಭಕ್ತನಾಗದೆ ಭವಿತನ ಹೋಗದು |
ಭವಿ ಹೋಗದೆ ಭಕ್ತನಲ್ಲಪ್ಪ |
ಮುಕ್ತಿ ತಾನಾಗದೆ ಭವ ಬಂದ್ಹೋಗದು
ಭವ ಹೋಗದೇ ಮುಕ್ತಿಲ್ಲಪ್ಪ ||3||
ಮರುವದು ಹೋಗದೆ ಅರುವು ತಾನಾಗದು
ಅರುವು ಆಗದೆ ಮರವು ಹರಿಯದಪ್ಪ |
ಎರಡರ ಸಂದನೊಳಿದ್ದಿಲ್ಲೆಂಬುದು
ಪರಬ್ರಹ್ಮವನೊಳಕೊಳದಪ್ಪ ||4||
ಸ್ವಪ್ನ ನೀನಾದುದು ಸ್ವಪ್ನ ತಾನಾದುದು
ಸ್ವಪ್ನೇನೊ ಸ್ವಪ್ನ ಸ್ವಪ್ನೇ ಲಕ್ಷಪ್ಪ |
ನಿರ್ಗುಣ ಶ್ರೀಗುರು ಮಹಾಂತೇಶನಿಲ್ಲದೆ
ಸ್ವಪ್ನಕ್ಕೆ ಸ್ವಪ್ನ ನಿರ್ಲಕ್ಷಪ್ಪಾ ||5||
ಪೃಥ್ವಿಗೆ ಬೀಜ ಕೊಟ್ಟಾಂವ
ಎಲ್ಲೊ ಹಾನ ಪರಮಾತ್ಮ ಎಲ್ಲೊ ಹಾನ |
ಬಲ್ಲಿದ ಮಹಾತ್ಮರ ಬಲ್ಲೇ ಹಾನೋ ||
ಅಲ್ಲಿ ಇಲ್ಲಿ ಬಲ್ಲಿ ಎಲ್ಲಾ ಒಂದೇ ಹಾನೊ |
ಗುರು ಸರ್ವತ್ರಯಾಮಿ ತಾನೆ ಹಾನೋ ||ಪಲ್ಲ||
ಪೃಥ್ವಿಗೆ ಬೀಜ ಮೊದಲೆ ಕೊಟ್ಟಾನೋ |
ಅವಗ ಸಂರಕ್ಷಣ ಬೇರೆ ಬೇರೆಯಿಟ್ಟಾನೋ ||
ಆಕಾಶ ಬೈಲವಾಣಿ ಆಗ್ಯಾನೋ |
ಗುರು ನಿರಂತರವಾಗಿ ಇರತಾನೋ ||1||
ಯಾರಿಗೆ ಏನಂವ ತೋರ್ಯಾನೋ |
ಗುರು ತೋರಲ್ದೆ ಹ್ಯಾಂಗಿರತಾನೋ ||
ಸೊನ್ನಲಾಪುರದವಗ ತೋರ್ಯಾನೋ |
ಬಲ್ಲಂತ ತುಕಾರಾಮ ಹೋಗ್ಯಾನೋ ||2||
ಪೊಡವಿಯೊಳಗ ಚಿಣಮಗೇರವನೋ |
ಅವ ನಿರಂತರ ಗುಡ್ಡದಾಗ ಇರತಾನೋ ||
ಹಿಂದಕ ನನಗೊಮ್ಮೆ ತೋರ್ಯಾನೋ |
ಗುರು ಸಂದೇಹವಿಲ್ಲದೆ ಇರುತಾನೋ ||3||
ದೇವಿ ಮಾತಾಡಬಾರದೆ
ದೇವಿ ಮಾತಾಡಬಾರದೇ ಆಡಬಾರದೇ ಮೂಢರ ಗೂಢ
ಕರಗಳ ಜೋಡಿಸಿ ನಾ ಬೇಡಿಕೊಂಬುವೇನು ಮಾತಾಡಬಾರದೇ ||ಪ||
ಇಂದುಧರನು ಕಾಮಬಾಣದಿಂದ್ರಿಗೆ ಸಿಲುಕಿದನು
ಇಂದ್ರಿಯ ಮೀರಿ ಆನಂದದೊಳಗೆ ನಾನಿರುವೆನು ಮಾತಾಡಬಾರದೇ ||1||
ಸಣ್ಣ ತಂಗಿಯನು ಹರದು ನುಂಗಿಹಳು
ಹರನ ನುಂಗಿದ ಚದುರೆ ತಂಗಿ ನೀನು ಮಾತಾಡಬಾರದೇ ||2||
ದೇಶಕಧಿಕವಾದ ಸದರ ಚಿಣಮಗೇರಿ
ಮೃಢ ಮಹಾಂತೇಶ್ವರನ ಪಾದದಲಿ ಬಿದ್ದು ಮಾತಾಡಬಾರದೇ ||3||
ಕೇವಲ ಮೂರುತಿ ಶಂಕರಿ
ದೇವಿಯ ನೆನೆಯಿರಿ ಭಾವ ಶುದ್ಧದಲಿ |
ಕೇವಲ ಮೂರುತಿ ಶಂಕರಿಯೊ |
ಆವ ಕಾಲದಲಿ ಹರನೊಳು ಬೆರೆದ |
ಪಾವನಚರಿತ್ರೆ ಪಾರ್ವತಿಯೊ ||ಪಲ್ಲ||
ಅಷ್ಟದೈತ್ಯರನು ಕುಟ್ಟಿ ಬಿಟ್ಟಿಹಳೊ |
ಅಷ್ಟಮೂರ್ತಿಗಳಿಗಾಶ್ರಯಳೊ |
ನಿಷ್ಠವಂತರಿಗಿ ನಿಜವ ತೋರುವಳೊ |
ಶ್ರೇಷ್ಠ ಜನಕೆ ಪರಿಪಾಲಿಪಳೊ | |1||
ಶುಂಭನಿಶುಂಭರ ಮರ್ದನ ಮಾಡಿದ |
ಶಂಭು ಶಂಕರನ ರಾಣಿಯಳೊ |
ನಂಬಿದ ಭಕ್ತರಿಗಿಂಬುಗೊಡುವಳೊ |
ಬಿಂಬಾಧರ ಭ್ರಮರಾಂಬೆಯೊ ||2||
ಗಡಿಯ ಸೂರನಾಡ ಒಡೆಯ ಚಿಣಮಗೇರಿ |
ಮೃಢ ಮಹಾಂತೇಶನ ಮಡದಿಯಳೊ |
ಎಡರ ಕಳಿದು ಜಡರ ಹರಿದು ಕೊಡುವಳೊ |
ತಡ ಮಾಡದಲೆ ಮೋಕ್ಷವನೊ ||3||
ಎಲ್ಲ ಸ್ವರೂಪನಾದ ವಲ್ಲಭ
ಎಲ್ಲ ಸ್ವರೂಪ ವಲ್ಲಭವನೆಂಬುದು |
ಬಲ್ಲೆನಲ್ಲದೆನಗೆರಡಿಲ್ಲ |
ಹುಲ್ಲು ಕಲ್ಲು ಹೌದಲ್ಲಿ ಇಲ್ಲಿ |
ಹೊಲ್ಲ ಒಳ್ಳೆದೆಂಬೋದು ಸಲ್ಲ ||ಪಲ್ಲ||
ಮೂರು ಸಾವಿರ ಮತ್ತಾರುಸಾವಿರ |
ಆರಾರು ಸಾವಿರ ಶೇಷವನುಂಡೆ |
ವೀರಭಕ್ತಗಣವರ ಮುಡಿದ ಕೊರ |
ಳ್ಹಾರ ಪುಷ್ಪದ್ವಾಸನಗೊಂಡೆ ||1||
ವಸುಧಿಯಗಲದುಂ ಬೆಸೆವ ಮಹತ್ವದ |
ಪೆಸರುಗೊಳುವದೇನಗಸವಲ್ಲಾ |
ಪಶುಪತಿ ಅಣೋರೇಣು ಅಸಮತೋಮಹಿ |
ವಸೆದು ಸೂಸ್ವದು ವೇದದ ಸೊಲ್ಲಾ ||2||
ಚಂದ್ರಾದಿಯಿಂದ ಮುನೀಂದ್ರ ಗಣೀಂದ್ರ
ವೃಷೀಂದ್ರ ಯತೀಂದ್ರಗೆ ಶರಣಾರ್ಥಿ |
ಇಂದ್ರ ಉಪೇಂದ್ರ ಖಗೇಂದ್ರ ಮೃಗೇಂದ್ರ |
ನಗೇಂದ್ರ ಧಿಗೇಂದ್ರಗೆ ಶರಣಾರ್ಥಿ ||3||
ರಾಗಿಗೆ ರೋಗಿಗೆ ಭೋಗಿಗೆ ಜೋಗಿಗೆ |
ತ್ಯಾಗಿಗೆ ಯೋಗಿಗೆ ಶರಣಾರ್ಥಿ |
ಮಾಗಿಗೆ ಬೇಗಿಗೆ ಕಾಗಿಗೆ ಗೂಗಿಗೆ |
ಸೋಗಿಗೆ ಶೀಗಿಗೆ ಶರಣಾರ್ಥಿ ||4||
ಜಾರಗೆ ಚೋರಗೆ ಬೀರಗೆ ಪೀರಗೆ |
ವೀರಗೆ ಶೂರಗೆ ಶರಣಾರ್ಥಿ |
ಊರಿಗೆ ದಾರಿಗೆ ನಾರಿಗೆ ನೀರಿಗೆ |
ಮಾರಿಗೆ ವಿೂರಿಗೆ ಶರಣಾರ್ಥಿ ||5||
ಹಲವು ನಾಮರಿಗೆ ಹಲವು ರೂಪರಿಗೆ |
ಹಲವು ಕ್ರಿಯರಿಗೆ ಶರಣಾರ್ಥಿ |
ಹಲವು ಜಾಣರಿಗೆ ಹಲವು ಮುಗ್ಧರಿಗೆ
ಹಲವು ಛಲರಿಗೆ ಶರಣಾರ್ಥಿ ||6||
ಸರ್ವ ಶರಣರಿಗೆ ಸರ್ವ ಹರಣರಿಗೆ |
ಸರ್ವ ವರಣರಿಗೆ ಶರಣಾರ್ಥಿ |
ಸರ್ವ ಭರಣರಿಗೆ ಸರ್ವ ಮರಣರಿಗೆ |
ಸರ್ವ ಶರಣರಿಗೆ ಶರಣಾರ್ಥಿ ||7||
ಸರ್ವ ಜೀವರಿಗೆ ಸರ್ವ ಭಾವರಿಗೆ |
ಸರ್ವ ದೇವರಿಗೆ ಶರಣಾರ್ಥಿ |
ಸರ್ವ ಬ್ರಡ್ಮಾಂಡಕೆ ಸರ್ವ ಪಿಂಡಾಂಡಕೆ |
ಸರ್ವ ನಿರ್ವಯರಿಗೆ ಶರಣಾರ್ಥಿ ||8||
ಬಾಯಿಲಿ ಕಲಿತೋದಿದವರು |
ಗೆಲಿದು ಕಳಿವರೆ ಈ ಭವ ದುಃಖವ |
ಸುಲಭ ಚಿಣಮಗೇರಿ ಸಲೆ ಮಹಾಂತೇಶನು |
ಒಲಿದು ಕೊಡುವ ತಾ ಶಿವ ಸುಖವ ||9||
ಚಿನುಮಯ ರೂಪ
ಶಿವ ಶಿವ ಶಿವ ಶಿವ ಶ್ರೀಮಹಾದೇವ
ಸಿದ್ಧಿಸದೆನಗನುಭಾವ ||ಪಲ್ಲ||
ಮೃಢ ಮಹಾಂತೇಶ ಪರಮ ಪ್ರಕಾಶ
ಬಿಡಿಸಿದೆನ್ನ ಭವಪಾಶಾ ||1||
ಷೋಡಶಾಕಾರ ಸಕಲಾವತಾರ
ಮಾಡಿದೆನ್ನ ಉದ್ಧಾರ ||2||
ಗುರು ಮಹಾಂತಯೋಗಿ ತಾ ದಯವಾಗಿ
ಕರದೊಳು ಬಂದೆನಗಾಗಿ ||3||
ಕರುಣ ಕಟಾಕ್ಷ ಪರಮ ಪರೋಕ್ಷ
ತ್ವರಿತೆನಗಿತ್ತನು ಮೋಕ್ಷ ||4||
ಶ್ರೀಗುರುರಾಯ ತಾ ನಿರುಪಾಯ
ಈಗ ತೋರಿದ ನಿರ್ಮಾಯ ||5||
ಸವೆಯದ ನಾಮ ಅನಘ ನಿಸ್ಸೀಮಾ
ಸವಿಗಲಿಸಿದ ನಿಃಕಾಮಾ ||6||
ಪರುಷದ ಘಟ್ಟಿ ತಾ ಜಗಜಟ್ಟಿ
ಹೊರಸಿದ ನಿರ್ಭವ ಬಿಟ್ಟಿ ||7||
ಚಿನುಮಯ ರೂಪ ಸತ್ಕುಲ ದೀಪ
ನನಗೆ ಮಾಡಿದ ನಿರ್ಲೇಪ ||8||
ಅಲ್ಲಮ ನುಡಿಯ ಎಲ್ಲಕ ಮಹಾಂತ ಒಡೆಯ
ಇಲ್ಲನು ಮಡಿವಾಳ ಪಡಿಯ ||9||
ಈಶ್ವರನ ದಯೆ
ಈಶ್ವರ ದಯೇ ನಮ್ಮೇಲೆ ಇರುವತನಕ
ವಿಷ ಹಾಕುವರಿದ್ದರಿರಬೇಕು ||ಪ||
ಅಸುವಿಲ್ಲದ ಸರ್ಪ ತನಗೆ ಕಚ್ಚಿದರೆ
ಖುಷಿಲಿಂದ ಹಾಲು ತುಪ್ಪ ಎರಿಬೇಕು ||1||
ತಪ್ಪಿಲ್ಲದೆ ತಪ್ಹಚ್ಚಿ ಬಯ್ಯುವವನಿಗೆ
ಒಪ್ಪದಿಂದ ಅಪ್ಪ ಅನಬೇಕು ||2||
ಅಲ್ಲದ ಮಾತಿಗೆ ನ್ಯಾಯ ನುಡಿದವಗೆ
ಖಾಸಣ್ಣ ಹೌದಂತನಬೇಕು ||3||
ಆಸಿ ಹಚ್ಚಿ ನಿರಾಸಿ ಮಾಡಿದವಗೆ
ಆಸೆವಂತಯನಬೇಕು ||4||
ಮೋಸದಿಂದ ಕುತ್ತಿಗಿ ಕೊಯ್ಯುವವಗ
ಖಾಸ ಮಗ ಹೌದಂತನಬೇಕು ||5||
ಆಸೆಯಂಬುದು ಅಳಿಬೇಕು ನಿರಾಸಿಕನಾಗಿರಬೇಕು
ದೇಶಕಧಿಕವಾದ ಮಹಾಂತೇಶನ ಪಾದಕ ಧ್ಯಾಸಿಡಬೇಕು ||6||
ಪಾಮರತ್ವವು ಬ್ಯಾಡ
ಪಾಮರತ್ವವು ಬ್ಯಾಡಾತ್ಮಾರಾಮ ನಮೋ ನಮ |
ಕ್ಷೇಮವಂತ ನೀನಾಗು ಸಜ್ಜನ ಪ್ರೇಮ ಸದ್ಗುಣಧಾಮ ||ಪಲ್ಲ||
ಪುರಾತರ ವಚನವ ಬಲ್ಲಿ |
ಕಿರಾತ ನುಡಿ ಕಿವಿಯಲ್ಲಿ ||
ದುರಾತ್ಮ ನೀಗುವಲ್ಲಿ ನೀನು |
ಸ್ಥಿರಾತ್ಮನಾಗೋದೆಲ್ಲಿ ||1||
ಬಲ್ಲಿದತ್ವವು ಬರಲಿ |
ಗುರುಚರಣದಲ್ಲಿ ವಿಶ್ವಾಸವು ಇರಲಿ |
ಬಲ್ಲವಗೇನಿದರ ಹರಲಿ ನೋಡ್ಹುಸಿ |
ಸಲ್ಲದು ಸಂಶ್ರುತಿ ತರಲಿ ||2||
ಕಡಕೋಳ ಮೃಢ ಮಹಾಂತೇಶನೆ ತಾನೆ |
ಮಡಿವಾಳ ಜ್ಞಾನ ಪ್ರಕಾಶ |
ಹಿಡಿಯದಿರು ಮನದೊಳು ಕ್ಲೇಶ |
ನಿಜಸುಖ ಪಡಿ ತೊಡಕದು ಭವಪಾಶ ||3||
ಮಾಯಾ ಸಂಸಾರ
ಹೇಸವ್ವ ಬಾಸವ್ವ | ಮಾಯಸಂಸಾರ ತಿಳಿಸವ್ವ ಹೇಸವ್ವ ಬಾಸವ್ವ |
ನಿನ್ನ ನೀನೆ ತಿಳಿದ ನೋಡವ್ವ ಹೇಸೌವ ಬಾಸವ್ವ ||ಪ||
ಗುರುಪಾದ ಸೇವೆಯನ್ನೇ ಮಾಡವ್ವ ಹೇಸವ್ವ
ಆಶಿ ಅಹಂಕಾರ ಹಿಡಿಬೇಡವ್ವ ಹೇಸವ್ವ ಬಾಸವ್ವ
ಒಳ್ಳೆ ಸಾಧು ಸತ್ಪುಷರ ಒಡನಾಡವ್ವ ಹೇಸವ್ವ
ಪರಹಿತಾರ್ಥವು ಬಿಡಬೇಡವ್ವ ಹೇಸವ್ವ ಬಾಸವ್ವ
ಕಾಮ ಪ್ರೇಮವು ಬೇಡವ್ವ ಹೇಸವ್ವ ಬಾಸವ್ವ ||ಉಪ||
ವಿಸ್ಮಯಪುರದಿಂದೆ ಹುಟ್ಟ ಬಂಜೆಯ ಮಗ ಬಂದ |
ಭೀಷ್ಮಾಚಾರ್ಯನ ಮಗಳ ಮದವಿಯಾದ |
ಕೇಳ ಸುಳ್ಳೆನ ಖರೆ ಮಾಡಲೇನಾ
ಭೀಷ್ಮಾಚಾರ್ಯನ ಮಗಳ ಮದವಿಯಾದ ಮದುಮಗನು |
ಭಸ್ಮಾಸುರ ಕ್ಷೇತ್ರಯಾತ್ರಿಗ್ಹೋದನು |
ಕೇಳ ಸುಳ್ಳೆನ ಖರೆ ಮಾಡಲೇನಾ ||1||
ಬಿಸಲ್ತೀರ್ಥ ಮಿಯ್ಯಲಿಕೇ ಸೆಳವಿಗ್ಹೋಗಿ ಸತ್ತನು |
ಜಗವೆಲ್ಲ ಕೂಡಿ ಶ್ರವ ತೆಗೆದಾರು |
ಕೇಳ ಸುಳ್ಳೆನ ಖರೆ ಮಾಡಲೇನಾ
ಜಗವೆಲ್ಲ ಕೂಡಿ ಶ್ರವ ತೆಗೆದು ಶುದ್ಧೈಸಲು |
ಹಸನವಾಗಿ ನಾ ಹೇಳುವೆ ನೀವು ಕೇಳಿರಿ ||
ಕೇಳ ಸುಳ್ಳೆನ ಖರೆ ಮಾಡಲೇನಾ ||2||
ಸತಿ ಸಂಗವಿಲ್ಲದೆ ಶತ ಸಹಸ್ರ ಸುತರು ಹುಟ್ಟಿ |
ಪಿತ ಸತ್ತ ಸುದ್ದಿ ಕೇಳಲ್ಕೊಬ್ಬಿಲ್ಲ |
ಕೇಳ ಸುಳ್ಳೆನ ಖರೆ ಮಾಡಲೇನಾ
ಪಿತ ಸತ್ತ ಸುದ್ದಿ ಕೇಳಲ್ಕೊಬ್ಬಿಲ್ಲದಿರುತಿರಲು |
ಧೃತರಾಷ್ಟ್ರ ಕಂಡು ಹೇಳವ ಓಡಿಬಂದ |
ಕೇಳ ಸುಳ್ಳೆನ ಖರೇ ಮಾಡಲೇನಾ ||3||
ಮೂಕ ಹೇಳಲು ಕಿವುಡ ತಾ ಕೇಳಿ ಬೆರಗಾದ |
ಕಾಕತಾಳ ನ್ಯಾಯವಿದು ವಾಜಿಮಿ |
ಕೇಳ ಸುಳ್ಳೆನ ಖರೆ ಮಾಡಲೇನಾ
ಕಾಕತಾಳನ್ಯಾಯ ವಾಜಿಮಿಯಾದ ಮೇಲೆ |
ಜ್ವಾಕಿಗುಂದದೆ ಸುಮ್ಮನೆ ನಾ ಆಗುವೆ |
ಕೇಳ ಸುಳ್ಳೆನ ಖರೆ ಮಾಡಲೇನಾ ||4||
ಬೆರಗಾದ ನಿಬ್ಬೆರಗಿಗೆ ಒರಳಕ್ಕಿ ಹರವಿದೆ |
ವರ ವರಸಿ ಕೇರಿ ಹಾರಿಸಿದೆ |
ಕೇಳ ಸುಳ್ಳೆನ ಖರೆ ಮಾಡಲೇನಾ
ವರ ವರಸಿ ಕೇರಿ ಹಾರಿಸಿದೆ ತವಡವ ತಗಿದು |
ಪರಮಾನ್ನ ಅಟ್ಟು ಹುಟ್ಟು ಮುರದೇನಾ |
ಕೇಳ ಸುಳ್ಳೆನ ಖರೆ ಮಾಡಲೇನಾ ||5||
ಅಟ್ಟನ್ನ ಉಂಬದಕೇ ಹುಟ್ಟುವರು ಸಾಲರು |
ಹುಟ್ಟವರ್ಹಸವು ಹೋಗದಟ್ಟನ್ನಾಗದು |
ಕೇಳ ಸುಳ್ಳೆನ ಖರೆ ಮಾಡಲೇನಾ
ಹುಟ್ಟುವರ್ಹಸವು ಹೋಗದಟ್ಟನ್ನಾಗದು ನೋಡಿ |
ಅಟ್ಟಿಟ್ಟ ಗಡಗಿಯ ನಾ ವಡದೇನ |
ಕೇಳ್ ಸುಳ್ಳೆನ ಖರೆ ಮಾಡಲೇನಾ ||6||
ಅಡುವ ಗಡಗಿಯ ವಡಿಯಲು ಒಡಲು ತೃಪ್ತಿಯಾಯಿತೆಂದ |
ಒಡಿಯ ಕಡುಕೋಳ್ ಗುಡ್ಡದ ಯೋಗಿ |
ಕೇಳ ಸುಳ್ಳೆನ ಖರೆ ಮಾಡಲೇನಾ
ಒಡಿಯ ಕಡುಕೋಳದ ಗುಡ್ಡದ ಮಹಾಂತಪುರ ಮಹಾಂತೇಶನ |
ಬಿಡದೆ ನೀವು ಹಾಡಿ ಕುಟ್ಟಿ ಬರೇಬಾಯಿ |
ಕೇಳ ಸುಳ್ಳೆನ ಖರೆ ಮಾಡಲೇನಾ ||7||
ಮಾಯಾದ ಭುವನದೊಳಗೆ
ವಾಯಿ ಇಲ್ಲದೆ ಬಂದೇವು ಎನ್ನಲು
ಮಾಯಾದ ಭುವನದೊಳಗೆ |
ತಾಯೆಲ್ಲಿ ಕಾಣದೆ ಆವುಮಾಯನೆ |
ವಾಯಿಟ್ಟು ಹಂಸಾಗಿ ಓ ಎಂದೆ ದೆಶಿಗೆ ||ಪಲ್ಲ||
ಅವನಿಯೆಲ್ಲವು ಮಾಡಿದೆ
ಅವನಿಯೊಳು ಅವಯವಂಗಳೊಡಗೂಡಿದೆ |
ಅವಯವಂಗಳೊಡಗೂಡಿ ಅವನಿಯೆಲ್ಲವು ಮಾಡಿ |
ಅವನೆಂಬವ ನೀ ಬಲ್ಲೆ ಅವನೆಂಬೋದರಿಯೇ ||1||
ನೋಡಿದೆಲ್ಲವ ಸೂಡಿದೆ |
ನೋಡಿದರೊಳು ಗಾಡಿಗಾರಿಕಿ ಬೇಡಿದೆ |
ಗಾಡಿಗಾರಿಕಿ ಬೇಡಿ ನೋಡಿದ್ದೆಲ್ಲವು ಸೂಡಿ |
ನೋಡಿದ್ದು ನೋಡದೆ ನೋಡಿದುದರಿಯೆ ||2||
ಮೃಢ ಮಹಾಂತೇಶ್ವರನ್ಹಾಡಿದೆ | ಆ
ಮೃಢನೊಳು ಮಡಿವಾಳ ಬಿದ್ದೆ ಮಾಡಿದೆ |
ಮಡಿವಾಳ ಬಿದ್ದೆ ಮಾಡಿ ಮೃಢ ಮಹಾಂತೇಶ್ವನ್ಹಾಡಿ |
ಮೃಢನ್ಹಾಗೆ ಮೃಡನಾದೆ ಮೃಢನಾಗೋದರಿಯೆ ||3||
ಮಾಯಿ ಜಾಲ
ದಾವದೋ ಮಾಯಿ ಚಾಲ | ನಮ್ಮ
ದೇವರ ದೇವ ಮಾಂತನ ಲೀಲ ||ಪಲ್ಲ||
ಮಾಯೆಯು ಎಲ್ಲಿಂದ ಬಂತು | ಆವ
ತಾಯಿಯ ಹೊಟ್ಟೆಯಲ್ಲಿ ಹುಟ್ಟಿತೊ ನಿಂತು |
ಆಯಾಸಗೊಳಿಸುದೆ ಕುಂತು | ತನ್ನ
ತಾಯಿಯ ತಂದಿಯ ತನುಮನ ತಿಂತು ||1||
ಅಲ್ಲನ ತೋರುವ ಮುಸಲ | ಲಿಂಗ
ಕಲ್ಲೆಂದಾತನ ಬಿಡಿಸಿದ ಅಸಲ |
ಅಲ್ಲಾ ಸಿಗುವನೆ ತಾ ಕುಶಲ | ನಾ
ಳಲ್ಲಿ ಕೇಳದೆ ಬಿಡುವನೆ ಏ ಮತ ಶೀಲ ||2||
ಅಲ್ಲ ಅಲ್ಲಯೆಂದು ಕೂಗುವನೊ | ಆ
ಸೊಲ್ಲ ಕೇಳುವ ಕಿವಿಗೆ ಬೆರಳ ಇಡುವನೊ |
ಅಲ್ಲ ಹೇಳುವದು ಇನ್ನೇನೊ | ಆ
ಅಲ್ಲ ದೈವವಾದ ಮೇಲೆ ಯಾತರವ || ತಾನೊ ||3||
ಅಲ್ಲ ಹೌದಾದವ ಬಲ್ಲss | ಆ
ಅಲ್ಲ ಹೌದಾಗದೆ ಆಗೋದೇನಿಲ್ಲ |
ಅಲ್ಲ ಹೌದೆರಡಿಲ್ಲss | ಆ
ಅಲ್ಲ ಹೌದಾದರೆ ಕೇವಲ ಅಲ್ಲ ||4||
ಎಲ್ಲ ಸ್ವರೂಪ ರೂಪಲ್ಲ | ಆ
ಅಲ್ಲನಾಗದೆ ಆದನ್ಯಾತಕೆ ಮುಲ್ಲ |
ಅಲ್ಲಾಗದವ ಏನು ಬಲ್ಲ | ಮಾಂ
ತಲ್ಲಮನಾಚೀಲಿ ಹಾನೊಬ್ಬನಿಲ್ಲ ||5||
ಮಾಯೆಯ ಅರಿವು
ಮಾಯೆ ತಾ ತನ್ನರಿವು ಅರಿಯದಲ್ಲ |
ಬಾಯಿ ಬಿಡುತಲಾದೆ ಮೂಲೋಕವೆಲ್ಲ ||ಪಲ್ಲ||
ತಾನೆ ತನ್ನರಿಯದಿದ್ದರೆ ತನಗೆ ಗತಿಯಿಲ್ಲ |
ತಾನೆ ತನ್ನರಿವದಕೆ ಬಾರದಲ್ಲ |
ತಾನೆ ತನ್ನರಿವದಕೆ ಗುರುವಾಗಿ ಶಿಷ್ಯೆ ಆಗಿ |
ತಾನೆ ಬಂದರಿವು ಅರುವಿಸದೆ ಅರಿವು ಅರಿವುದಲ್ಲ ||1||
ಅರು ಅರಿತ ಗುರುವರನು ಹೇಳಿದ್ಹಾಂಗ ಕೇಳಿದರೆ |
ಅರು ಅರಿದು ಆ ಶಿಷ್ಯೆ ನಿಜಮುಕ್ತನಾಗುವನು |
ಅರುವಿಸುವ ಅರುವು ಅರಿಯದೆ ಹೋದರಾ ಮನುಷ್ಯ |
ಪರಿಪರಿಯ ಭವಬಂಧ ಮರವಿಯಲ್ಲಿಹನು ||2||
ಅವನೊಂದು ಹೇಳಿದರೆ ಇವನೊಂದು ಕೇಳಿದರೆ |
ಅವಿವೇಕಿ ಸುವಿವೇಕಿ ಆಗಲಿಲ್ಲ
ಭುವನದೊಳು ಮೆರೆವ ಕಡಕೋಳ ವಾಸ
ಮಹಾಮಹಾಂತ ಮಡಿವಾಳವನೆ ಇವ ಭ್ರಮಿ ಹೋಗಲಿಲ್ಲಾ ||3||
ನಿಪುಣನಾಗು
ಸ್ವಪ್ನ ಸುಖದ ಸ್ವಲ್ಪು ಮಾಯಿ
ಗಲ್ಪುದ್ಯಾತಕೊ ಮೂಢ |
ಸುಪಥ ಶ್ರೀಗುರು ಸೇವಾದಿ
ನಿಪುಣನಾಗಬೇಕೊ ಪಾಡ ||ಪಲ್ಲ||
ಹೆಣ್ಣು ಹೊನ್ನು ಮಣ್ಣು ಮೂರರೋ
ಳ್ಹೆಣ್ಣಿನ ಹಂಬಲ್ಹೆಚ್ಚೋ | ಎಲೊ
ಕಣ್ಣು ಕಿಸ್ತು ನೋಡೊ | ಮೇಲಿನ
ಬಣ್ಣದ ಬುರಕಿ ಉಚ್ಚೊ ||1||
ದುಂಡ ಮೊಲಿಯ ಮುಟ್ಟೊ | ಮುತ್ತಿನ
ಚಂಡೋ ಮಾಂಸದ ಪಿಂಡೊ | ಎಲೊ
ತೊಂಡಿಯ ತುಟಿಯೊ | ಅಮೃತದ
ಗುಂಡೊ ಜೊಲ್ಲಿನ ಕೊಂಡೊ ||2||
ವೋಪುಳ್ಯೋನಿ ಭೋಗದ | ಪುಣ್ಯದ
ರೂಪೊ ನರಕದ ಕೂಪೊ | ಎಲೊ
ಆ ಪರ ಮಹಾ ಮಹಾಂತಯೋಗಿ |
ಪಾಪೋ ಚಿತ್ಕಲಾಪೋ ||3||
ಮಾಯಪುರದ ಅರಸ
ಮಾಯಪುರದ ಅರಸು ತಾ |
ಮೇರೆದಪ್ಪಿ ಬರುತಾನ |
ಅವಿವೇಕಿಗೂಡ ಮಾಡೊ ಲಡಾಯಿ |
ಆಯವರಿದುಕೊಳರೆಲ್ಲರೊ ಶಿವ ಮಂದಿ |
ಬಿಚಗತ್ತಿ ಬತ್ತಲಗುದರಿ ಬಡಾಯಿ ||ಪಲ್ಲ||
ಆಶಿ ಸೈನ್ಯದಧಿಪತಿ ಕಾಮನೆ ಕಾರಭಾರಿ |
ಕೋಪ ಟೋಪಧಾರಿ ಲೋಭ ಲುಬ್ಧಕನು |
ಖಾಸಮೋಹ ಮುಖ್ಯ ನಾಯಕ |
ಮದ ಮುದ ಬಕರೊಡೆಯ |
ಹೊಯಿಲ್ಗಾರ ಹುಸೀ ಸರದಾರ ||1||
ನಿಷ್ಟಿಯು ದಳಪತಿ ವಿರತಿಯು ಕಾರಭಾರಿ |
ಅಷ್ಟಿಷ್ಟೇನೆ ಆನೆ ಹನ್ನೆರಡು ಕುದುರಿ |
ಶಾಂತ ವಜೀರವೇ ದ್ವಾರ ಗುಪ್ತಚಾರ |
ಸ್ವಪ್ರಭುಜ್ಞಾನ ಮಾನದಾತ ತೃಪ್ತ |
ಆಹಾರದಾತ ಕ್ಷಮೆಯೆಂಬ ಸುರಸತ್ಯ ಸರದಾರ ||2||
ಅಷ್ಟಾನೆ ಹತ್ತು ಕುದುರಿ ಆರು ಗಾಡಿ |
ಮೂರು ಮಂದಿ ಬಹಿರಂಗ ಚತುರ |
ಹಾಳ ಹರಟಿ ವಿರಾಟರಾಯ |
ಆನ್ಹೆನ್ನೆರಡು ಕುದುರೆ ನಾಲ್ಕು ಗಾಡಿ ಒಂಟಿ ಪ್ಯಾದೆ
ಅಂತರ ಚತುರ ವಸುಧಿಗೋಷ್ಠಿ ಮಹಾಂತ ಗುರುರಾಯ ||3||
ಮಾಯಿಯ ಕುಣಿತ
ಮಾಯಿನ ಕುಣಿಸಿದನೆ ಪ್ರಭು ತಾ |
ಬಾಯ್ನುಡಿ ಕೈ ಅಭಿನಿ ಕಾಲ ಗತಿ ||
ಮೈ ತಿರಪು ಕಡೆಗಣ್ಣು ಛಡಾಳಿ ಝಣುತ ಝಣುತ |
ಝಣಣಣ ಣಣಣ ಝಣಾಂದಣಾಂತ ತೈಯೆನುತ ತಾ ||ಪಲ್ಲ||
ಪಂಚಸಂಜ್ಞೆ ಪಂಚತತ್ತ್ವ ಪಂಚಕಲೆ |
ಪಂಚಕೃತ್ಯ ಪಂಚಾನನ ಪರತರ ||
ಪಂಚಪ್ರಾಣ ಪಂಚಾಗ್ನಿಯೋಳಿಹ ಬಹು |
ಪಂಚಯೋಗಿಗಳ ಸಂಚಲಗೊಳಿಸುವ ||1||
ಸರ್ವಜೀವ ಸೂತ್ರವನೆ ತನ್ನಯ |
ಸರ್ವದೇಹದೊಳಗನುಗೊಳಿಸ್ಯಾತ್ಮನ |
ಸರ್ವ ಇಂದ್ರಿಯ ವಿಕರಣಾದಿ ವಿಷಯ ಸುಖ |
ಸರ್ವ ರೂಪು ನಾನೇ ನಾನೆಂಬುವ ||2||
ಎಲ್ಲಿ ನೋಡಲರುವಿಲ್ಲದೆನಗೆ ಸ್ವತಂ |
ತ್ರಿಲ್ಲ ಎಂಬುದು ಸರ್ವಲ್ಲದ ಪ್ರಭು ಮಹಾಂ |
ತ್ವಲ್ಲಬ ತಾನಲ್ಲೆಂದರೆ ನಾ |
ನಿಲ್ಲೆನಲರಿಯದೆ ತಲ್ಲಣಿಸುವ ಹುಸಿ ||3||
ಮಾಯದ ಮರವು
ಎಷ್ಟು ನಿನ್ನಗ ಮಾಯದ ಮರವು ಇಷ್ಟಿಲ್ಲೇಳರವು |
ದೃಷ್ಟಾದೃಷ್ಟಾಂತ ಹೇಳುವೆ ದೃಷ್ಟಾ ಎಲೊ |
ಭೃಷ್ಟಾ ಕೇಳರಿಷ್ಟಾ ಈ ಕಷ್ಟಾ ಬಹು |
ನಷ್ಟಾ ಎಂಥಾದದರುಷ್ಟಾ ||ಪಲ್ಲ||
ಹಲವು ಸವಿಗೆ ಮನ ಸೋತಿ | ಮಾಡುಂಡು ಹೇತಿ |
ತೆಲಿಗೆ ಏರಿತು ಒಂದು ರೀತಿ | ಅದು ಸತಿಗೆ ಸೋತಿ |
ಚಲುವ ಮಗನ ಬೇಡಿ ನೊವತಿ | ಹೀಂಗಾಯ್ತು ಖ್ಯಾತಿ |
ಬಲಿದು ದೇಹಾಯಿತು | ಸಪ್ತ ಧಾತು ರೋಗಾಯ್ತು |
ಸತ್ತಿತು ಶವ ಬಾತು ಮೈಕಿತ್ತು ಹೊಲ ಹೊಲಸು ನಾತು ||1||
ವನಿತೆ ನನ್ನವಳೆಂದು ನೆಚ್ಚಿ | ಬಣ್ಣ ಬಿಳಿದು ಹೊಚ್ಚಿ |
ಒನಪು ವೈಯಾರಕ ಮೆಚ್ಚಿ | ನೀ ನಡದವಳಿಚ್ಚಿ |
ಮನದ ಗುಪ್ತಗಳೆಲ್ಲ ಬಿಚ್ಚಿ | ಅಲ್ಲಿಟ್ಯೊ ಬಚ್ಚಿ |
ನಿನಗೆ ವಂಚಿಸಿ ಜಾರನ ನೋಡಿ | ಮಾತಾಡಿ ಮುದ್ದಾಡಿ |
ಮನಿಹಾಳ ಮಾಡಿ ರತಿಗೂಡಿ ಹೋಯಿತೋಡಿ 2||
ಕೃಪಣತನದಲೊಂದು ಪಾಕಿ | ಪಾಕಿ ಕೂಡ್ಹಾಕಿ |
ನಿಪುಣತನದಿಂದುದ್ರಿ ವಾರಹಾಕಿ | ಬರಸಿಟ್ಟಿದಿ ರೋಕಿ |
ಗುಪ್ತದಿಂದಿಟ್ಟೀದ್ಯೊ ಬಂದದ್ದು ಜೋಕಿ | ಬರವಲ್ಲದು ಬಾಕಿ
ಅಪರಿಮಿತ ಮಹಾಂತನ ಲೀಲಾ | ಆ ಸೊಲ್ಲ
ಭವ ಜಾಲ ಮೈ ಲಾಲ ನೃಪ ತಸ್ಕರ ಪಾಲ ||3||
ಭಲೆರೆ ಮಾಯ
ಭಲರೆ ಮಾಯ ಬಲಿಸಿದಿ ಕಾಯಾ |
ಬಲಿಗುಡದೊ ನಿಜ ನ್ಯಾಯ | ನರರಿಗೆ
ಬಲಿಗುಡದೊ ನಿಜ ನ್ಯಾಯ ||ಪಲ್ಲ||
ಮಲಮೂತ್ರ ಕಾಯ ಮದ ಹೊತ್ತ ಪ್ರಾಯ |
ಬಲವಂತ ಬಲಿ ಕಲಿರಾಯೊ | ನರರಿಗೆ
ಬಲವಂತ ಬಲಿ ಕಲಿರಾಯೊ ||1||
ಶಿವಪಥ ಸಂಗ ಸಿಗುವದು ಲಿಂಗ |
ಭವ ಹರಿವದು ಯಮನ್ಹಂಗೊ | ನರರಿಗೆ
ಭವ ಹರಿವದು ಯಮನ್ಹಂಗೊ ||2||
ಭುವನದಿ ಸಂಗ ಬುದ್ಧಿಯ ಮಂಗ |
ಕವುಲ್ಹೊಡಿವನು ಯಮನ್ಹಿಂಗೊ | ನರರಿಗೆ
ಕವುಲ್ಹೊಡಿವನು ಯಮನ್ಹಿಂಗೊ ||3||
ಕುಲಛಲ ದೋಸ್ತಿ ಕುಹಕ ಜಾಸ್ತಿ |
ನೆಲಿ ತಿಳಿಯದಕ್ಕಿಲ್ಲೊ ಹ್ಯಾಸ್ತಿ | ನರರಿಗೆ
ನೆಲಿ ತಿಳಿಯದಕಿಲ್ಲೊ ಹ್ಯಾಸ್ತಿ ||4||
ಎಲು ತೊಗಲಾಸ್ತಿ ಎಂದಿಗಾದರ್ನಾಸ್ತಿ
ನೆಲಮನಿಗ್ಹೋಗದು ಸ್ವಾಸ್ತಿ | ನರರಿಗೆ
ನೆಲಮನಿಗ್ಹೋಗದು ಸ್ವಾಸ್ತಿ ||5||
ಕಡಿಯವತಾರ ಹುಸಿ ಬೀಳುವರ |
ಮೃಢ ಮಹಾಂತೇಶನ ಸಾರೊ | ನರರಿಗೆ
ಮೃಢ ಮಹಾಂತೇಶನ ಸಾರೊ ||6||
ಮುಕ್ತಿ ಕೊಡುವನು ಧೀರ ಕುಲ ಉದ್ಧಾರ |
ನುಡಿವನು ಶಿವಶಾಸ್ತರ | ನರರಿಗೆ
ನುಡಿವನು ಶಿವಶಾಸ್ತರ ||7||
ವಾಜಮಿ
ಮಾಯಿ ಜ್ವಾಲಿ ಅಳದವನ ಮಾತ ಕೇಳೋದ್ವಾಜಿಮಿ |
ಅನ್ಯಾಯ ನಡಿಸಿದವನಿಗಿ ಮಚ್ಚಿಲ್ಹೊಡಿಯದ್ವಾಜಿಮಿ |
ಇಚ್ಛಾ ಮಾತನಾಡಿದ ಲುಚ್ಛಾ ವಾಜಿಮಿ | ಅಂವಾ
ಸಾಚಾ ಮಾತು ಹೇಳಿದರ ಶಿವ ಮೆಚ್ಚುದ್ವಾಜಿಮಿ ||ಪಲ್ಲ||
ಹಮ್ಮ ದಮ್ಮ ಅಳದ ಮೇಲೆ ಬ್ರಹ್ಮ ವಾಜಿಮಿ | ಇಂಥ
ದಮ್ಮಿಲ್ಲಿಂದ ತಿರುಗು ಮನುಷ್ಯ ರುಮ್ಮ ವಾಜಿಮಿ |
ದಮ್ಮ ಕಾಣಸ್ತಾನ ಕಣ್ಣಿಗಿ ಹುಮ್ಮ ವಾಜಿಮಿ | ಅವ
ಎಮ್ಮಿ ಹೊಟ್ಟಿಲಿ ಕೋಣನಾಗಿ ಹುಟ್ಟೋದ್ವಾಜಿಮಿ ||1||
ತಿಳಿದ ಮೇಲ ಅಳದ ಮೇಲ ಉಳುದುದ್ವಾಜಿಮಿ |
ಮತ್ತ ಕಾಮ ಕ್ರೋಧ ಅಳದ ಮೇಲ ಕೈಲಾಸ ವಾಜಿಮಿ |
ಲಾವ ಲುಚ್ಚ ಮಾತನಾಡುವ ಲೇವಡ್ಪಾಜಿಮಿ |
ಅವಳು ಗಂಡಗ ಮಿಂಡಗ ಕೂಡೇ ಉಣ್ಸಿದೊಂದ್ವಾಜಿಮಿ ||2||
ಭಾವದಲ್ಲಿ ಭಕ್ತಿ ಇರುವದು ಇದು ಒಂದು ವಾಜಿಮಿ
ಮತ್ತೆ ಗುರುವಿನಲ್ಲಿ ಭಕ್ತಿ ಇರೊದೊಂದ್ವಾಜಿಮಿ
ಪೊಡವಿಯೊಳಗ ಚಿಣಮಗೇರಿ ವಾಜಿಮಿ
ಗುರು ಮಹಾಂತೇಶ್ವರಗ ಮುಕ್ತಿ ಬೇಡೋದ್ವಾಜಿಮಿ ||3||
ಮಾಯಿಗಿ ಸೋತಾದ
ಎಂಥ ಮಾನವ ಜನ್ಮ ಇದು ಮಾಯಿಗಿ ಸೋತಾದ ||ಪಲ್ಲ||
ಅರುವಿನ ಜನ್ಮ ತಾನೆ ಇದ್ದು ತನ್ನನು ಮರಿತಾದ |
ಅರವು ತಿಳಿಯದೆ ಮರವಿನೊಳು ತಾನೇ ಬಿದ್ದಾದ ||1||
ಜ್ಞಾನ ಎಂಬ ಠುಬಾಕ ಇದಕ ಮೂಬತ್ತಿ ಆಗ್ಯಾದ |
ಅಜ್ಞಾನ ಎಂಬ ಕೊಳ್ಳಿಯಿಂದ ತಾನೇ ಸುಟ್ಟಾದ ||2||
ವೇದಶಾಸ್ತ್ರ ಪುರಾಣ ಆಗಮ ಓದಿ ಹೇಳತಾದ |
ರಾತ್ರಿ ಕಂಡ ಬಾವಿಗಿ ಇದು ಹಗಲೆ ಬೀಳತಾದ ||3||
ಹೆಂಡಾ ಕುಡಿದು ಕಂಡುದ್ದುಂಡು ಭಂಡ ಮಾಡ್ಯಾದ |
ನಮ್ಮ ಪುಂಡ ಮಹಾಂತೇಶನ ಕಂಡು ಭಂಡ ಆಗ್ಯಾದ ||4||
ದೇಹವೆಂಬ ಮಾಯಿ
ಮಾಯಿನ ಬಿಟ್ಟೇವೆಂದು
ಬಾಯಿಲೇ ಹೇಳುವರಲ್ಲ
ಹೊತ್ತು ಬಂದ ದೇಹವಿದು
ಮಾಯಿಯಲ್ಲವೋ ಮಾನವ ||ಪ||
ಹೊನ್ನು ಹೆಣ್ಣು ಮಣ್ಣು ಕಂಡು
ನೀ ತಣ್ಣಗಾದೆನೆಂಬೆ
ಕಣ್ಣೀಲೆ ಕಂಡು ಮನದೋಳು
ಮರಗಿ ಕೊರಗಿ ಮರವಿ ಮಾಯೆಯೇ ||1||
ಬಲ್ಲೆ ಬಲ್ಲೆನೆಂದು ನೀ
ಎಲ್ಲ ಶಾಸ್ತ್ರ ನೋಡಿರುವೆನೆಂದು
ಬಲ್ಲ ಮಹಾತ್ಮರಿಗೆ ನೀ
ಖುಲ್ಲ ಮಾಯೆಯೇ ||2||
ಊರ ಮನಿಯ ಬಿಟ್ಟೆನೆಂದು
ಅಡವಿ ಗುಡ್ಡ ಸೇರಿಕೊಂಡು
ಆಹಾರಕ್ಕೆ ಅವ್ವ ಎಂದು ಬಡಿದುಕೊಂಡು
ಖೊಟ್ಟಿ ಮಾಯೆಯೇ ||3||
ದೇಶಕಧಿಕವಾದ ವಾಸುಳ್ಳ ಕಡಕೋಳ
ಈಶ ಮಹಾಂತೇಶನ ದಾಸನಾಗಿ ಇರುವ ಕೂಸು
ಏಸು ಜನುಮ ತಿರುಗಿ ತಿರುಗಿ
ಮರಗಿ ಮರವಿ ಮಾಯೆಯೇ ||4||
ಮಾಯಿ ಮುಸುಕಲಿಲ್ಲ
ಏ ಏನೋ ನಿನ್ನ ಮಾಯೆಯಂಬ ಕಷ್ಟ ಬಹಳವಾಯಿತ್ತು
ಬಾಯಿಗೆ ಇಷ್ಟಿಲದ್ಹೋಯಿತು ||ಪ||
ವಿಷಯ ಲಂಪಟದಿಂದೆ ಹುಸಿಯನಾಡಲು ಅಳದಿ
ತಾ ಪುಸಿಯಿಂದೆ ವಿಷಯಲಂಪಟ ತೀರದು
ಪುಸಿಯಾಡಿದಂಗೆಲ್ಲ ವಿಷಯ ಪಲ್ಲವಿಸಿತ್ತು
ವಿಷಯ ಪಲ್ಲವಿಸಲು ಹುಸಿ ಬಿಡದಾಗದು ||1||
ವಿಷಯಕ್ಕೋಸ್ಕರವಾಗಿ ಹುಸಿಯಾಗಿ ತ್ರೈಜಗ ಪುಸಿಯಾದರಾಗಲಿ
ವಿಷಯ ಹೋಯಿತ್ಹೋಯಿತೇ
ವಿಷಯ ಹೋಗದಿರಲು ಕಿಸುಕುಳದ ಸ್ತ್ರೀಯರ ಕಾಲದಸಿ ನುಸುಳ್ದರೆ
ವಿಷಯ ಸುಖವಾಯಿತೇ ||2||
ವಿಷಯ ಸೌಖ್ಯವು ಬೇಕಾದರೆ ಪುಸಿಯು ಅಳಿಯಲು ಬೇಕು
ಹುಸಿ ಹೋಗಲು ವಿಷಯ ತಾ ಉಳಿಲಿಲ್ಲ
ಪಶುಪತಿ ಶ್ರೀಗುರು ಮಹಾಂತ
ಸದ್ಗರುವಿಗೆ ವಿಷಯ ಹೋಗಲ್ ಮಾಯಿ ಮುಸುಕಲಿಲ್ಲ ||3||
ಭುವನದ ಮಾನವರು
ಭುವನದ ಮಾನವರ್ಹ್ಯಾಂಗಿರಲಿ ಮಹಾನ್ಭಾವರ್ಯಾ |
ನೀವರೆ ಮಾಯಸ್ಥಿತೆ ಬಲ್ಲಿರ್ಯಾ ||
ಅಭಿ ಅಭಿ ಎಂಬಭಿಪ್ರಾಯವ ತಿಳಿದಿರ್ಯಾ
ಗಾವ ಗುತ್ತಿಗೆತನಕೊಲ್ಲಿರ್ಯಾ ||ಪಲ್ಲ||
ಮೂರು ಮೂರೇನು ಮೂರು ಆರಾದದ್ದೇನು |
ಆರಾರಿನ್ನೂರ ಹದಿನಾರಾದುದೇನು |
ತೋರುವ ಜಗದ ವಿಸ್ತಾರ |
ಸುಖ ದುಃಖದ ಕಾರಣ ಕಾರಣಾಕಾರವೇನು ||1||
ಸ್ವರ್ಗ ನರ್ಕಾಗುವ ಧರ್ಮ ಕರ್ಮದುದ್ಯೋಗ |
ಭರ್ಗಭಾನುಜರಿಬ್ಬರೊಂದೆ ಕುಲ ||
ವರ್ಗಷಡ್ವಿಧ ವಿವರವರಿಯಲ್ಪ
ವರ್ಗದೊಳ್ಹೊರಗ್ಹಸು ಸಕೀಲಾ ||2||
ಹೆಣ್ಣಿಗೆ ಗಂಡೇ ಶತ್ರು ಗಂಡಿಗೆ ಹೆಣ್ಣೇ ಶತ್ರು |
ಹೆಣ್ಣಿಗೆ ಗಂಡಿಗೆ ಗಂಡು ಹೆಣ್ಣೇ ಮಿತ್ರ ||
ಬಣ್ಣದ ಮಾತಲ್ಲ ಬಾಳ್ವಸ್ತ್ರೀಗ್ಹೇಳುವೆ |
ಕಣ್ಣಿದ್ದು ಕಾಣ್ವಲ್ರು ಪುತ್ರಪಿತೃ ||3||
ಅವರೊಡವಿವರಲ್ಲಿ ಇವರೊಡವವರಲ್ಲಿ |
ಅವರದಿವರಿಗೆ ಸಾಯತಾಗೋದು ||
ಕವಿ ಗಮಕಿಗಳಿಗ್ವಾದಿಗಳಿಗ್ವಾಙ್ಮುಖಿಗಳಿಗೆ |
ಭವ ಗೆದ್ದೆನೆಂಬ ಹಿರಿಯರಿಗೆ ತೂಗದು ||4||
ಮುಡಿ ಮೊಲೆ ಕಣ್ಮುಖ ಮೂರ್ಛಾಗೊಂಡಿದರಾಗಿ |
ಬಿಡದೆ ಮೂದಲಿಸುತ ನಿಂತಿಹುದು ||
ಮುಡಿ ಕಡಿ ಹಿಡಿಸಲಿಕ್ಕಡಗದು |
ಕಂಡವರ ಕಡೆಗಾಣದಂತಿಹುದು ||5||
ಅರ್ಥಪ್ರಾಣಾಭಿಮಾನ ಕರ್ತೃಕರ್ಮಕ್ರಿಯಾ |
ಅರ್ಥನುಭವಿಸೇ ಸ್ವಪ್ನಾರ್ಥಹುದು ||
ಮರ್ತ್ಯ ಮಾನ್ವರ ಮೋಹ ವ್ಯರ್ಥವಾದುದೆ ಸಹಜ |
ಗುರ್ತಲ್ಲ ನಿಜ ಸುಖ ತುರ್ತಾಹುದೊ ||6||
ಮಾಯಾಯಂಬುದೆ ಮಾಯಾ ನಿರ್ಮಾಯ ಛಾಯ
ಮಾಯ ಸರ್ವತ್ರ ಸಕಲ ಸಂಭ್ರಮ
ಮಾಯಾ ಮಹಾಂತಪೂರ ಮಾಯ ಮಹಾಂತೇಶ್ವರ
ಮಾಯಾ ನಿರ್ಮಾಯ ತಾನೀ ಸುಳ್ಳೆ ಶ್ರಮ ||7||
ಸುಂಟರಗಾಳಿ
ಇಲ್ಲದ ಸುಂಟರಗಾಳೆದ್ದು
ಎಲ್ಲ ತಾನಾಯಿತ್ಹ್ಯಾಂಗೆ |
ಬಲ್ಲನುಭವಿಗಳು ತಿಳಿರಿ
ಎಲ್ಲ ಲೋಕಾಗುವದ್ಹ್ಯಾಂಗೆ ||ಪಲ್ಲ||
ಆಯಿತೆ ಆಗ್ತಾಗ್ತ್ಹೋಯಿತು
ಆಯಿತದೂ ಅಗತ್ಯ |
ಆಯಿತೆಂಬೊ ಮಾಯಿತೇನಾಯಿತು |
ಆಯಿತಾಗ್ತಾದ ಸೌಖ್ಯ ಸ್ವಯತಾಗಿ ಆಯ್ತಾಯ್ತು ||1||
ಆಯಿಂತೆಂಬೋದೇನೊ ಆಯಿತಾಯ್ತು |
ಆಯಿತಾಗೋದಾಯ್ತು |
ಕೈಯಿಂದೆ ಮಾಡೋದಾಯ್ತು |
ಬಾಯಿಂದೆ ಹೇಳೋದಾಯ್ತು ||2||
ಆದುದಕೆ ಆದದ್ದಾಯಿತು |
ಆದದಕದೇ ಆಯ್ತು |
ವೇದ ವೇದಾಂತ ಸಿದ್ಧಾಂತವಾಯಿತು |
ಮೋದ ಮುದ್ದ ಮಹಾಂತ ಮಹಾಂತಾಯ್ತು ||3||
ಇಲ್ಲದೇನೊ ತಾನೆ
ಇಲ್ಲೇ ಆದುದಿದೆಯೆಂದು |
ಸೊಲ್ಲಿದ ಶ್ರೀಗುರು ಬಂದು |
ನಲ್ಲೆ ನೀ ನೋಡಲೆ ಇಂದು |
ಎಲ್ಲವು ಮನಸಿಗೆ ತಂದು ||ಪಲ್ಲ||
ಏನು ಇಲ್ಲದೇನೊ ತಾನೆ |
ಏನಾದರೇನನುಮಾನೆ |
ಮಾನಿನಿ ಮಾಜುದೇನೆ
ನಾ ನಿನ್ನಗ್ಹೇಳುದೇನೆ ||1||
ಇಲ್ಲಾದದ್ದಾದದೊಂದೇ ಕೋಟಿ |
ಇಲ್ಲಾಗಿಲ್ಲಾಯಿತು ಲೂಟಿ |
ಬಲ್ಲವರಿಗೆ ಹೇಳೋ ಸೂಟಿ
ಇಲ್ಲಾಯಿತದಕೇನು ಸಾಟಿ ||2||
ಹರಹರಕಾದುದೊಂದೆ ಹಲವು |
ನೆರವಿಗೆ ಬಂದದ್ದೆ ಬಲವು
ಕುರು ಅರುಹರುವಾದದ್ದೆ ನಿಲವು |
ವರಗುರು ಮಹಾಂತೈಕ್ಯಸ್ಥಲವು | |3||
ಇಲ್ಲೆ ಅಧಿಕ ವಸ್ತು
ಇಲ್ಲೆ ಅಧಿಕ ವಸ್ತು ಇಲ್ಲೆ ಅಧಿಕನಲ್ಲ |
ಸುಳ್ಳೆ ಚಿಂತಿಲಿಂದೆ ಅಲ್ಲಲ್ಲೆ ಹುಡಕ್ಯಾಡಿದೆನ್ಯಾಕೆ ||ಪಲ್ಲ||
ಹಸರು ಹಳದಿ ಕೆಂಪು ಕರಿದು ಮಿಸುಪ ಬಿಳಿದು |
ಮಿಶ್ರವರ್ಣ ಪಸರಿಸಿರ್ಪ ಪ್ರಭೆಗಳಿಂದೆ ||
ಎಸುವ ನನ್ನ ಮೂಗುತಿ ಮುತ್ತ ||1||
ಕಾಸು ಕೊಟ್ಟರೇಸೋಯೆಂಬ ಭಾಷೆಯುಂಟು |
ಆಶೆಯು ಎಷ್ಟು ಭೂಷಣಕೆ ಮೇಲಾದಂಥ |
ಮಾಸಿ ತಾಳಿ ಕರಮಣಿ ದಾರ ||2||
ಮೆಚ್ಚಿ ಬಿದನೂರ ಮಡಿವಾಳಾಖ್ಯ |
ಮುಚ್ಚಿ ಕೊಟ್ಟ ಪಚ್ಚದುಂಗುರ |
ಎಚ್ಚರಿಲ್ಲದ ಹುಚ್ಚಿ ನಾನೆ ಬಚ್ಚಿಟ್ಟಿನಿ ಕರಡಗಿಯೊಳಗೆ ||3||
ಇಲ್ಲ್ಯಾದೊ ಮುಕುತಿ
ಅಲ್ಯಾಕೊ ಹುಡುಕುತಿ | ಇಕೋ |
ಇಲ್ಲ್ಯಾದೊ ಮುಕುತಿ |
ಬಲ್ಲೆ ಬಹು ಹರ ಕಥಿ ತಿಳಿ
ವಲ್ಲಿ ನೀನೆಲೆ ಕೋತಿ ||ಪಲ್ಲ||
ಆಶಿವುಡಿದು ನೋಡೆ | ನಿ
ರಾಶಿ ಹಿಡಿದು ಮಾಡೆ |
ಪಾಶಿ ಈ ಭವದೀಡೆ
ಉಲ್ಲಾಸಿಯಾಗೋದು ಪಾಡೆ ||1||
ನಾನು ನೀನು ನೀನೆ | ಮತ್ತೆ
ನೀನು ನಾನು ನಾನೆ |
ನಾನು ನೀನು ತಾನೆ ಅಕೋ |
ತಾನೆ ನಾನು ನೀನು ನೀನೆ ||2||
ಭಾವೆ ಎರಡು ನೋಟ | ನೀ
ಭಾವಿಸು ಒಂದೆ ಕೂಟ |
ಜೀವ ಪರಮರ ಆಟ ಮಹಾ |
ದೇವ ಮಹಾಂತನಾಟ ||3||
ಇದ್ದುದ್ದೆಲ್ಲ ಅಲ್ಲ
ಇಲ್ಲದ್ದಿಲ್ಲದ್ದಿಲ್ಲ ಇದ್ದುದ್ದೆಲ್ಲ ಅಲ್ಲ
ಇಲ್ಲ ಅಲ್ಲ ಅಲ್ಲ ಇಲ್ಲ ಇಲ್ಲಲ್ಲೊಲ್ಲಿ ಬಲ್ಲ ||ಪಲ್ಲ||
ಕಾಶಿ ರಾಮೇಶ್ವರಗ ಹೋದಿ
ಆಶಿ ಬಿಡದೆ ಘಾಸಿ ಆದಿ
ಏಸೊ ಯೋಗ ಮಾಡಿ ತತ್ವದ
ತಾ ಸಿಗದೊ ಸ್ವರಗದ್ಹಾದಿ ||1||
ವೇದಾಗಮ ಪುರಾಣಗಳೋದಿ
ಗಾದಿ ಹಾದಿಗ್ಹೋದಿ ವಾದಿ
ನಾದ ಬಿಂದು ಕಳೆಗಳಾದೇನಾದಿ
ಆದಿ ತಿಳಿಯದ್ಹಾದಿ ||2||
ಆಯತ ಸ್ವಾಯತ ಸನ್ನಿಹಿ ತಂದಿ
ತಂದಿ ತಾಯಿ ಸಂದೀಲೆ ಬಂದಿ
ಮಾಯತ ಮಾಯತ ಮಹಂತ ಮಹಂತ
ಜ್ಯಾಯತ ಜ್ಯಾಯತನೆಲ್ಲಿ ತಂದಿ ||3||
ಎಲ್ಲರೊಳಗ್ಹಾನ ತಾನೆ
ಎಲ್ಲಿ ನೋಡಿದರಲ್ಲೆ ತಾನೆ ಎಲ್ಲರೊಳಗ್ಹಾನೆ |
ಎಲ್ಲಿ ನೋಡಿದರಲ್ಲಿ ತಾನೆ |
ಫುಲ್ಲ ನಯನೆ ಹೌದೆಲ್ಲಯೆಂಬುವದೇನೆ ||ಪಲ್ಲ||
ಹತ್ತು ದಿಕ್ಕಿನೊಳಗ್ಹಾನೆ | ಅತ್ತಿತ್ತ ಹಾನೆ |
ನಿತ್ಯ ನಿತ್ಯ ತೋರುತಾನೆ ತನ್ನೊಳು ತಾನೆ |
ಚಿತ್ತ ಬಂದಂತೆ ಹಾನೆ ಸುತ್ತು ಮುತ್ತುಕೊಂಡಿಹಾನೆ ||1||
ಹದಿನಾಲ್ಕು ಲೋಕದೊಳಗ್ಹಾನೆ ಹಲವು ಆಗ್ಯಾನೆ |
ಹದಿನೆಂಟು ಚಕ್ರ ತಿರುಗತಾನೆ | ಹಗರಣದೊಳಗ್ಹಾನೆ |
ಹೆದರುಚೆದರುನೊಳಗ್ಹಾನೆ ಮದನ ಮೋಹವು ತಾನೆ ||2||
ನಿಂತುಕೊಂಡವ ನೋಡುತಾನೆ | ಅಕೊ ಕಿವಿಯೊಡ್ಡಿ ಕೇಳುತಾನೆ |
ಕುಚು ಕುಚು ಅಂತಾನೆ ಇಂತು ಅನಂತ ತಾನೆ |
ಸಂತ ನಿಶ್ಚಿಂತ ತಾನೆ | ನಿಜದ ನಿಲದೊಳಗ್ಹಾನೆ ||3||
ಮಾತುಗಳಾಡುತಾನೆ ಮೂಕನಾಗ್ಯಾನೆ |
ಮೂಢ ಮಾತುಗಳ ತಾನೆ ನಾಡ ಆಳುವ ತಾನೆ |
ಮಾಡಿ ನೀಡುವ ತಾನೆ ಬೇಡಿವುಂಬವ ತಾನೆ ||4||
ಬಳ ಬಳ ಬಳ ಸುರವುತಲ್ಹಾನೆ ಅಲಲಲಲೆಂಬೊತಲ್ಹಾನೆ |
ತಳ ತಳ ತಳ ಹೊಳೆಯುತಲ್ಹಾನೆ ಕಲ ಕಲ ಕಲ ಮಾಡುತಾನೆ |
ಅಳಳಳಳೆಂಬುದು ಅದು ತಿಳಿ ನೀನೇ ||5||
ಎಡಬಲದೋಳಿರುತಾನೆ ಮುಂದೆ ಹಿಂದ್ಹಾನೆ |
ಬುಡಕೆ ಮೇಲಕೆ ಕಾಣುತಾನೆ ನಾಡಿನೊಳಹೊರಗ್ಹಾನೆ |
ನುಡಿವ ಬೆಡಗಿನೊಳಗ್ಹಾನೆ ಮೃಢ ಮಾಂತೇಶ್ವರ ತಾನೆ ||6||
ಗಣನಿಗೆ ಬಾರದ ಘನ
ಅಲ್ಲೆಂಬೊ ಮಾತೊಂದೆಲ್ಲಿ ಇಲ್ಲದಾಯಿತೊ ||ಪಲ್ಲ||
ಕಂಗೊಳಿಸುವ ಭುವನಂಗಳೊಳಗೆ |
ಪಂಚಂಗದ್ಹೊರ್ತ ಒಂದಿಲ್ಲ |
ಈ ಸೊಲ್ಲ ಸುಳ್ಳಲ್ಲ |
ಹ್ಯಾಂಗ್ಹಿಂಗಂಬುದು ಇದು ತರವಲ್ಲ ||1||
ನವಬ್ರಹ್ಮ ಆದದ್ದು ವಿವರವ ಭೇದಿಸಿ |
ಸುವಿಧನದಲ್ಲಿ ನೀ ತಿಳಿಯೊ |
ಸುಖಿ ತಳಿಯೊ ಚಿತ್ತ ಕಳೆಯೊ |
ಅವ ಇವ ನಾ ನೀನೆಂಬೋದಳಿಯೊ ||2||
ಅಣುವಿನೊಳಡಗಿದ ಅಣು ಮಾಂತೇಶನ |
ಗಣನಿಗೆ ಬಾರದೀ ಘನವು | ಆ
ನೆನವು ಈ ಮನವು |
ಘನ ಇಲ್ಲದಾಯಿತು ಬಹು ದಿನವು ||3||
ಅಲ್ಲೆಂಬುದು ಹೌದಾದರೆ
ಅಲ್ಲೆಂಬುದು ಹೌದಾದರೆ
ಮಾರಿ ಆಗ್ಹ್ಯಾಂಗಾಗೋದಪ್ಪ |
ಹೌದೆಂಬುದು ತನ್ನಲ್ಲಿ ಕಂಡು | ಆ
ಪುರಾತನರಾದರು ಗಪ್ಪ ||ಪಲ್ಲ||
ಛಾಯದ ಶಿಶುವಿಗೆ ಭವ
ಎಂಬಂಜಿಕಿ | ತಾಯಿ ತೋರಿದಳಪ್ಪ |
ಪ್ರಾಯದ ಕಾಲಕ ತಾಯಿ ಹೇಳಿದ
ಮಾತ ತಾಯೇನಾದಿತಪ್ಪ ||1||
ಕಣ್ಣ ಮುಚ್ಚಿದ ಕಾಂತಗೆ
ಸ್ತ್ರೀ ತಾ ಅಣ್ಣಪ್ಪಂದಳಪ್ಪ |
ಕಣ್ಣು ತೆರೆದು ನೋಡಲು | ಆ
ಕಾಂತಗೆ ಅಣ್ಣಪ್ಪ ಅನಳ್ಯಾಕಪ್ಪ ||2||
ಕತ್ತಲದೊಳು ಬರುವಪ್ಪನ ಕಂಡ
ಹೆತ್ತವ್ವನ ಬೈದೆಪ್ಪ |
ಉತ್ತಮ ಗುರು ಗುಡ್ಡದ ಮಾಂತೇಶನ
ಮುತ್ಯಾನ ಮೊಮ್ಮಗನಪ್ಪ ||3||
ಯಾಕೆ ಹಲವು ಚಿತ್ತು
ಇಲ್ಲೇ ನೀ ಮಾಡಿಕೊಳ್ಳೊ ಗೊತ್ತು | ಅಲ್ಲಿಂ
ದಲ್ಲೆ ಹೋಗುತಾದೊ ಬಹಳ ಮಂದಿ ಸತ್ತು | ಛೇ ಛೇ
ಅಲ್ಲಿಂದಲ್ಲೆ ನೋಡಿದಲ್ಲೆ ಯಾಕೆ ಹಲವು ಚಿತ್ತು ||ಪಲ್ಲ||
ಕಂಡ ಕಡಿಗೆ ಹೋಗಬ್ಯಾಡ | ಅಲ್ಲಿ
ಭಂಡಾಗಿ ಮರಳಿ ಮರಳಿ ಬರುವದೇನು ಪಾಡ |
ಹೆಂಡರನುಜರಿಲ್ಲ ಜೋಡ | ಭೂ
ಮಂಡಲದೊಳಗೆಲ್ಲ ಇದೆ ಕೌಲನಾಡ ||1||
ಹಿಂದೆ ನಾನಾ ದೇಶ ತಿರುಗಿ | ಬಹಳ
ನೊಂದು ಬೆಂದು ಕಂದಿ ಕುಂದಿ ಚಂದಗೆಟ್ಟೆನು ಸೊರಗಿ
ಮಂದಿ ಮಕ್ಕಳನು ತಿಂತು ಮರಗಿ | ಇಲ್ಲಿ
ಬಂದು ಮಾಡಿಕೊಂಡೆ ಉಂಡುಟ್ಟು ಹೊನ್ನಿನ ಚರಗಿ ||2||
ಅರಮನಿ ನಿನಗಾಗಿ ಬಿಡತ | ನಮ್ಮ
ಸರಶಟ್ಟಿತನದಲ್ಲಿ ಇದ್ದೇನಂದರಿಡುತ |
ದೊರೆ ಮಹಾಂತೇಶನ ಕೈಯಲಿ ಕುಡುತ | ಮುಂದೀ
ಪುರವು ಹಾಳಾದರೆ ನಿನ್ನ ಕೂಡಿಕೊಂಡು ನಡುತ ||3||
ಮಾಗಿ ಹೊತ್ತು
ಬೇಗ ನೀ ಸೇರು ಹೋಗೊ ಗೊತ್ತು | ಅಕೊ
ಈಗ ಸೀಗಿ ಸಾಗಿ ಹೋಗುತಾದ ಮಾಗಿ ಹೊತ್ತು ||ಪಲ್ಲ||
ಸುತ್ತ ಕ್ಯೆಂಜಗ ಕಾರೀಕಳ್ಳಿ | ಅಲ್ಲಿ
ಹತ್ತೆಂಟು ಮಂದಿ ಮುತ್ತಿ ಮಾಡುತಾರ ತಳ್ಳಿ |
ಕೊತ್ತಲಿಲ್ಲದ ಕುರಪನಳ್ಳಿ | ಯಲೋ
ಕತ್ತಲಾದ ಮೇಲೆ ಬಿಡರು ಆಗ ಬಾಳ ನೆಳ್ಳಿ ||1||
ಒಬ್ಬವ ಒಳ್ಳೆವ ಈ ಊರಲ್ಲಿ ನೋಡೊ |
ಹಬ್ಯಾದೆ ಅವನ ಕೀರ್ತಿ ಮೂರು ಲೋಕದಲ್ಲಿ
ಡವಲ ನೀನು ಕೇಳ ಬಲ್ಲಿ | ಇನ್ನಿ
ಬ್ಬರು ಹಾರಬಲ್ಲವರ್ಹೋಗೊದಿಲ್ಲವರಲ್ಲಿ ||2||
ಅಡ್ಡ ಹೆಸರು ಕೇಳುತ ಹೋಗೊ | ಘನ
ಗುಡ್ಡದ ಯೋಗಿ ಮಹಾಂತೇಶನೆಂದು ಕೂಗೊ |
ಹೆಡ್ಡ ಗುಣಗಳೆಲ್ಲ ನೀಗೊ | ಆ ಮಹಾ
ದೊಡ್ಡವರ ಕಂಡು ತಲೆ ಬಾಗಿ ವಸ್ತಿಯಾಗೊ ||3||
ಇಲ್ಲೆ ಇದ್ದದ್ದು
ಇಲ್ಲೆ ಇದ್ದದ್ದು ಇದ್ದುದಿಲ್ಲೆ ಅದು |
ಸೊಲ್ಲಲಾಗದು ಸುಮ್ಮನಲ್ಲೆ ನಲ್ಲೆ ||ಪಲ್ಲ||
ಸ್ಥಾಣುವಿನಲ್ಲಿ ಕಂಡ ಚೋರ ಅದು |
ಕಾಣಲು ಮತ್ತೊಂದಾಕಾರ |
ಮಾಣದು ನಾನಾ ವಿಚಾರ | ಅಪ್ರ
ಮಾಣನೆನಿಸುವದಪಾರನಲ್ಲೆ ||1||
ನೋಡಲು ನೋಡಲಾದದ್ದು ಹೋಗಿ |
ನೋಡಲು ಮುಂದಕ್ಕೋಡುದು |
ಗಾಢ ತಿರುಗಲ್ಹಿಂದೆ ಬಾಹುದು
ಕೈಯ ನೀಡಿ ಹಿಡಿಯೊ ಬಯಲಾಗುದು ನಲ್ಲೆ ||2||
ಮೊದಲೆ ಬ್ಯಾರೆಂಬೋದೊಂದುಂಟು |
ಅದಕ್ಹೆದರುವದೆ ವಾಜಿಮಿಗಂಟು |
ನದರಿಕ್ಕುವವ ಯಾವ ತಂಟು | ನೀ
ಚದುರೆ ಹೇಳಿದಕ್ಯಾಕೇಳೆಂಟು ||3||
ಮನಿಯೊಳು ಮಲಗಿಕೊಂಡಲ್ಲಿ |
ನೀನು ಕನಸಿನೋಳೋಡ್ಯಾಡುವದೆಲ್ಲಿ |
ಘನ ಬಿನಗಿನ ದಿನಸಲ್ಲಿ ನೀ ಕಂಡ
ದನ್ನು ತಿಳಿ ಮೊದಲೇನು ಬಲ್ಲಿ ||4||
ಪೊಡವಿಯೊಳಗೆ ಕಡಕೋಳ ತನ್ನ |
ಪಡದವರ ಅವಗುಣ ಹಾಳ |
ಮೃಢ ಮಹಾಂತಪುರ ಮಡಿವಾಳ | ಸಂಸಾರ
ನಡಿಸಿದ ಅಳಳಳ್ಹುಸಿ ಹೇಳನಲೆ ||5||
ಇಲ್ಲಿ ಅಳಿಯದೆ
ಇಲ್ಲಿ ಅಳಿಯದೆ ತಿಳಿಯದೆಂದಿಗೆ ನೀ
ಬಲ್ಲಾಗು ಬಾ ನನ್ನೊಂದಿಗೆ |
ಸಲ್ಲದು ಸುಖ ದುಃಖ ಸರಿಗಾಣದವರಿಗೆ |
ಇಂದಿಗೆ ನಾಳೆಂದಿಗೆ ನಿಮ್ಮ ತಂದಿಗೆ ||ಪಲ್ಲ||
ಅಜಹರಿ ಹರರಾದಂದಿಗೆ ಆ | ನಿಜವು
ತಿಳಿಯ ಬಂದಿ ಎನ್ನೊಂದಿಗೆ |
ಕುಜನ ಕುಹಕ ಕುಮಲ ಕಳಿಯಲದವರಿಗೆ
ಇಂದಿಗೆ ನಾಳೆಂದಿಗೆ ನಿಮ್ಮ ತಂದಿಗೆ ||1||
ಸ್ಥಾಣು ಚೋರ ನ್ಯಾಯದಂದೀಗೆ |
ಕಣ್ಣ ಕಾಣಬೇಕೆಂದಿ ಎನ್ನೊಂದಿಗೆ |
ಜಾಣ ವಿವೇಕ ವಿಚಾರಿಲ್ಲದವರಿಗೆ |
ಇಂದಿಗೆ ನಾಳೆಂದಿಗೆ ನಿಮ್ಮ ತಂದಿಗೆ ||2||
ಹಗ್ಗ ಹಾವಿನ ತಾ ಬಂದಿಗೆ ನೀ
ಹಿಗ್ಗಿನಿಂದ ಬಂದಿಯೆನ್ನೊಂದಿಗೆ |
ಕಗ್ಗು ಮನದ ಮಲಿನನಳಿಯದವರಿಗೆ | ಈ
ಇಂದಿಗೆ ನಾಳೆಂದಿಗೆ ನಿಮ್ಮ ತಂದಿಗೆ ||3||
ಪಾರಿವಾಳವೆ ಕೇಳ್ಬೇಕೆಂದಿಗೆ ನೀ |
ಹಾರೈಸಿ ಬಂದಿ ಎನ್ನೊಂದಿಗೆ |
ಸಾರ ಶ್ರೀಗುರು ಶೇಷ ಸೇವಿಸದವರಿಗೆ |
ಇಂದಿಗೆ ನಾಳೆಂದಿಗೆ ನಿಮ್ಮ ತಂದಿಗೆ ||4||
ಮೃಢ ಮಹಾಂತಪುರ ಮಹಾನಂದಿಗೆ |
ಮುಕ್ತಿ ಪಡಿಯಲು ಬಂದಿ ಎನ್ನೊಂದಿಗೆ |
ಜಡಜಲ ಮೃಗ ತೃಷಿ ಅರಿಯದವರಿಗೆ |
ಇಂದಿಗೆ ನಾಳೆಂದಿಗೆ ನಿಮ್ಮ ತಂದೀಗೆ ||5||
ಕಾದ ಉದಕ
ಅಲ್ಲೆ ಅಲ್ಲೆ ಅಲ್ಲೆ ಬಹು | ಬಲ್ಲವನಾಗಿ
ನೀ ತಿಳಿ ಅಲ್ಲೆ ಇಲ್ಲೆ ||ಪಲ್ಲ||
ಮಣ್ಣು ಮಡಕಿ ಹತ್ತಿ ಹಂಜಿ ಕಾಷ್ಠ ಬೊಂಬೆ |
ಚಿನ್ನದೊಡವೆ ನೀರ್ತೆರೆ ನೊರೆ ಗುರುಳಿ ಎಲ್ಲ ||1||
ಹಗ್ಗವೆ ಹಾವೆ ಕೊರಡು ಕಳ್ಳ ಕರೆವೆ |
ಝಗ್ಗನೆ ಹೊಳೆವ ರಂಗೋಲಿ ಹಚ್ಚಿದ ಚಿಕ್ಕಿ ||2||
ಆದಿ ಎರಡು ಅನಾದಿ ಒಂದೆ ಬಿಸಿಲು |
ಕಾದೂದಕದ ಪರಿ ಕಾಣೊ ಮಹಾಂತನು ||3||
ಇಹದಾಸೆ
ಇನ್ಯಾಕೆ ಇಹದಾಸೆವ್ವ |
ತನುಮನ ದಾಸಿ ಕಡಿಯವ್ವ |
ಕರುಣುಳ್ಳ ಗುರುವಿನ ಪಿಡಿಯವ್ವ |
ನಾಳೆ ಹೋಗುವ ಹಾದಿ ಹಸನ ಮಾಡವ್ವ ||ಪಲ್ಲ||
ರಜಪೂತ್ರ ಕೇರ್ಯಾಗಿರಬೇಕ | ತಂಗಿ |
ರಾಗರಚಿನ ತಿಳಿದಿರಬೇಕ |
ಹೋಗಿ ಪರ್ವತ ಸೇರಲಿಬೇಕ |
ಗಿರಿಮಲ್ಲರೊಳಗ ನೀನಿರಬೇಕ ||1||
ಶೀಲವಂತರೋಣ್ಯಾಗಿರಬೇಕ | ತಂಗಿ
ಶಿವ ನಾಮವ ಸ್ಮರಿಸಲಿಬೇಕ |
ಹೋಗಿ ಪರ್ವತ ಸೇರಲಿಬೇಕ |
ಗಿರಿಮಲ್ಲರೊಳಗ ನೀನಿರಬೇಕ ||2||
ಹಾರರ ಕೇರ್ಯಾಗಿರಬೇಕ | ತಂಗಿ
ಹರ ನಾಮವ ಸ್ಮರಿಸಲಿಬೇಕ |
ಹೋಗಿ ಪರ್ವತ ಸೇರಲಿಬೇಕ |
ಗುರು ಮಹಾಂತನೊಳಗ ನೀನಿರಬೇಕ ||3||
ಧಾವತಿ
ಇಂದು ನಾನು ಧಾವತಿ ಮಾಡಿ ದಣದೇನವ್ವ |
ಹಾದಿ ಹಿಡಿದೇನವ್ವ ಹಿಡಿದೊಂದುಳದೇನವ್ವ |
ಗುರುವಿನ ಪಾದ ಹಿಡಿಬೇಕವ್ವ |
ಹೊಂದಿ ನಡಿಬೇಕವ್ವ ||ಪಲ್ಲ||
ಓಂ ನಮಃ ಸ್ಥಳದಲ್ಲಿ ಆದ ಮಾತು |
ಸುಳ್ಳೇನವ್ವ ಅದು ಎಲ್ಲ್ಯಾದವ್ವ |
ಬಲ್ಲಿದ ಗುರುವಿನ ಹಂತಿಲಿ ಹ್ವಾದರ |
ಕಂಡದವ್ವ ಅಲ್ಲಿ ಹಿಂಗೆದವ್ವ ||1||
ಹಿಂದಕ್ಕೆ ಪರಿಪರಿ ಸೀರಿಯನುಟ್ಟು |
ಹರದೇನವ್ವ ನಾ ಬಲು ಮೆರದೇನವ್ವ |
ತಾಯಿ ನಿನ್ನ ಮುಂದ ಆಡಿದ ಮಾತು |
ಸುಳ್ಳೇನವ್ವ ಹೇಳಿದರ ಕೇಳಿದೇನವ್ವ ||2||
ಕಷ್ಟ ಬಿಟ್ಟು ಕಡಕೋಳಕ ಹ್ವಾದರ |
ಕಡಿಮೇನವ್ವ ಅಲ್ಲಿ ತೊಡಕೇನವ್ವ |
ಗುರು ಮಹಾಂತೇಶನ ಪಾದ |
ಹಿಡಿಬೇಕವ್ವ ಅಲ್ಲಿ ದುಡಿಬೇಕವ್ವ ||3||
ನಂಬಿದೆ ನಿನ್ನ
ಇಹುದೆಲ್ಲಿ ದೇವಾ ಬನ್ನಾ |
ನೆರೆ ನಂಬಿದೆ ನಾ ನಿನ್ನಾ ||ಪಲ್ಲ||
ಸಿರಿ ಸೌಖ್ಯ ಸಕಲ ನೀಡಿ |
ಬರಿಗೈಯ ಮಾಡಿ ಕಾಡಿ |
ಪರಕಿಸುವ ನಿನ್ನ ರೂಢಿ |
ನರ ಬಾಳಬೇಕು ನೋಡಿ ||1||
ಭವ್ಯ ಬಾಳು ಭವ್ಯ ಕನಸು |
ಕೊರಗುವದು ಅರಿತು ಮನಸು |
ಕುವಿಚಾರದೊಡನೆ ಸೆಣಿಸು |
ಸುವಿಚಾರ ಶೀಲನೆನಿಸು ||2||
ನರಜನ್ಮ ಕಿರಿದೆ ದೇವಾ |
ಇರಬೇಕು ಒಂದೇ ಭಾವ |
ಗುರು ಮಹಾಂತನಡಿಯ ಸೇವಾ |
ಮರಿಯದಲೆ ಮಾಡು ಕಾಯುವಾ ||3||
ಗಟ್ಯಾಗಿ ಗಂಡನ್ನಾದೆನವ್ವಾ
ಇಷ್ಟ್ಯಾಕ ತಿಳಿಬಾರದವ್ವಾ ಗಟ್ಯಾಗಿ |
ಮುಟ್ಟಿ ಗಂಡನ್ನಾದೆನವ್ವಾ |
ಹೊಂದಿದವರನ ಪಟ್ಟಾದೆನವ್ವಾ |
ಬಟ್ಟ ಕುಂಕುಮ ದಂಡಿ ಕಟಿಕೊಂಡೆನವ್ವಾ ||ಪಲ್ಲ||
ಶಳಿಮಂಚ ಹಾಕಿದೇನವ್ವಾ | ಯಡ
ಬಲಸಮೆಗಳ್ಹಚ್ಚಿದೆನವ್ವಾ |
ಕಳಸವ ತುಂಬಿಟ್ಟೆನವ್ವಾ ||
ಮಲ್ಲಿಗಿ ಛೆಳೆ ಕೊಟ್ಟು ಚಲ್ಲಿದೆನವ್ವಾ |
ನಿಲುವಗನ್ನಡಿಯೊಳು ಚಲುವ ಮಹಾಂತೇಶನು
ಸುಳುವಿನೊಳಗ ತನ್ನ ನಿಲವ ತೋರಿದನವ್ವಾ ||1||
ಮುತ್ತೈದಿತನವ್ವಾ ಮೇಲು |
ಮುತ್ತಿನ ಮೂಗುತಿ ಇಡುವಂತಾ ಕೀಲು |
ಸತ್ಯವಂತರನ್ನು ನೀ ಕೇಳು |
ತತ್ಕಾಲ ಸದ್ಗತಿ ಹೊಂದುವರೇಳು || ಅ
ನಂತ ಜನ್ಮವ ಸ್ಥಿರವೇನು ಕೇಳು
ಎತ್ತರಕ ಹಾರೋದು ನೀ ನೋಡು ||2||
ಮೋಕ್ಷಕ ಮಹಾಂತನಾಗಿ | ಪ್ರ
ತ್ಯಕ್ಷ ತೋರಿದ ಶಿವಯೋಗಿ |
ದೀಕ್ಷವೆಂಬುವದೇನು ಹ್ಯಾಗಿ || ಸರ್ವ
ಕಾಂಕ್ಷೆ ಗುಣಗಳನ್ನೇ ನೀಗಿ |
ದೀಕ್ಷೆವುಳ್ಳ ನಮ್ಮ ಚಿಮಣಗಿರೇಶನ
ಶಿಕ್ಷದಿಂದಲೆ ಕಂಡೆ ಮೋಕ್ಷದನುಭವ ||3||
ಶಿವಭಾವ ಸಮನಿಸದೆ
ಎಲ್ಲಾ ತಾನೆಂದು ಬಲ್ಲಾಗಿ ಭಯ ನೀಗಿ | ಏನಲ್ಲೇನಲ್ಲಿ ||
ಇಲ್ಲದಿದ್ದುದು ಇದ್ದುದಿಲ್ಲಾಗೋದೇನುವಲ್ಲಿ ||ಪಲ್ಲ||
ಹೊಲ್ಲೊಳ್ಳೆ ಸಂಚಿತಕಹುದೆಂಬವಗೇನಲ್ಲೇನಲ್ಲಿ
ಎಲ್ಲ ಜಲ್ಮದಿ ತಾ ಮಾಡ್ಪಲ್ಲದಿಲ್ಲೆನದವಗೇನಲ್ಲೇನಲ್ಲಿ ||1||
ಲಕ್ಷವೇ ತನಗೆರಡಕ್ಷ ಎಂದವಗೇನಲ್ಲೇನಲ್ಲಿ |
ಪಕ್ಷಾಪಕ್ಷವ ನುಡಿದಕ್ಷಯ ಬೇಡದವಗೇನಲ್ಲೇನಲ್ಲಿ ||2||
ಶಿವಭಾವ ಸಮನಿಸದೆ ಭವಭವವೆಂಬ ಭವಗೇನಲ್ಲೇನಲ್ಲಿ |
ತವೆ ಮಹಾಂತ್ವಲ್ಲಭನವನಿವನೆಂದವಗೇನಲ್ಲೇನಲ್ಲಿ ||3||
ಇಂಥ ನಡತಿ
ಇಂಥಾ ನಡತಿ ಯಾರ ಕಲಿಸಿದರ್ಹೇಳೆ ನಮ್ಮವ್ವಾ |
ಭ್ರಾಂತಿಗೇಡಿ ಬ್ರಹ್ಮರ ಮಾತಿಗೆ ಬಹು ಸಿಂತರ ಬಿದ್ದೆವ್ವಾ ||ಪಲ್ಲ||
ಗಂಡನಾಗಿ ನೂರ ಮಿಂಡರ ಮಾಡಿದೀ | ತಿಂಡಿ ತೀರದವ್ವ |
ರಂಡಿಯಾಗಿ ನಿನ್ನ ಮಂಡದೆಲಿಗೆ | ಜೋಡುದಂಡೆ ಕಟ್ಟಿದೆವ್ವಾ ||
ಕಂಡ ಕಂಡವರ ಕರೆಯುವಿ ಅದು ನಿನ್ನೀ |
ತಿಂಡಿಯಷ್ಟಾದವ್ವ ||1||
ಎಷ್ಟೋ ಕುಲದವರು ಮುಟ್ಟಾಲರತಿ ಇನ್ನಿಷ್ಟು ಬಯಸಿದೆವ್ವ |
ಕೆಟ್ಟ ಕೆಟ್ಟವರ ಕಾಲಲಿ ಮುಂದಕ ಪುಟ್ಟಿ ಬಂದೀತವ್ವ |
ಪುಟ್ಟುವಾಗೆ ನೆಲೆಗಟ್ಟು ನೀ ಅಟ್ಟುಂಡು |
ತಟ್ಟಿ ಹಾಕಿದೆವ್ವಾ ||2||
ಕುಂಟುಕುರುಡರ ಔಷಧದಿಂದೆ ಪಿಂಡನಿಳಿಸಿ ಹಾಕಿದೆವ್ವ |
ಕಂಟಕನಾದ ಯಮಧರ್ಮನ ಭಯ ನಿನ್ನ ಶಂಟಕ್ಕಿಲ್ಲವ್ವ |
ಭಂಟನಾದ ಭಂಟನಾದ ಮಡಿವಾಳನಿಗೆ – |
ಗಂಟು ಬಿದ್ದೆವ್ವಾ ||3||
ಮಹಾಂತ್ಯೋಗಿಗೆ ರಾಗಿಲ್ಲ
ಭವ ಬಂಧವು ಬೇಕಾಗಿ ಮುಕ್ತಿ ಬಯಸುವ
ಶಿವ ಶರಣರು ಹೇಳಿರಿ
ಇದಕೇನು ಮಾಡುವ ||ಪಲ್ಲ||
ಕೊಡುವೆನಂದರೆ ಕೊಳ್ಳ ಕೊಡದಿದ್ದರೆ ಬಿಡುವಲ್ಲ |
ಬುಡನಡು ಕಡಿಗಾಣದೆ ನುಡಿಗಡಣವು ಬಹು ಬಲ್ಲ ||
ಬಿಡಹೋಗಿ ಗಂಟು ಬಿದ್ದಿತು ಮೂರ್ಬಿಡಿಸಬಲ್ಲ |
ದೃಢ ಭಕ್ತರೆಲ್ಲ ಸಂಹರಿಸಿರಿ ಸುಳ್ಳಲ್ಲ ||1||
ಸತಿಸುತ ಸೊಸಿ ಮಗಳಳಿಯಪಿತ ಮಾತೆ ಪೌತ್ರಾದಿ |
ಶತ ಸಹಸ್ರ ಐಶ್ವರ್ಯ ಆಪ್ತ ಬಂಧು ಬಂದಷ್ಟು ||
ಸತತ ಸೌಭಾಗ್ಯವಾಗಲು ಸುಮ್ಮನಿರನಿಷ್ಟು |
ಗತವಾದರದಕೆ ಸಮ್ಮಿಸನ್ಹ್ಯಾಕೆಳ್ಳಷ್ಟು ||2||
ಭೋಗವ ಬಿಟ್ಟು ಯೋಗವು ಮಾಡೆ ಬೋಳ್ಕೀರ್ತಿ |
ಭೋಗವ ಬಾರದು ಯೋಗದಿ ಮುಕ್ತೆಂದಿಗಿಲ್ಲ ||
ಭೋಗವಿರಲು ಭೋಗಿಸುವನೆ ಭೋಗೇಶ್ವರ |
ತ್ಯಾಗವಾಗಲು ಮಹಾಂತ್ಯೋಗಿಗೆ ರಾಗಿಲ್ಲ ||3||
ಗೋಪ್ಯವಾಗಿದ್ದನುಭವ
ಗೋಪ್ಯವಾಗಿದ್ದನುಭವ ಹೇಳೋದೆನ್ನ ಕಡಿಗೆ |
ಆಪ್ಯಾನವನು ಮಾಡಿಕೊಂಬುವದು ನಿಮ್ಮ ಕಡಿಗೆ ||ಪಲ್ಲ||
ಸ್ಮರನ ಕಾಮನ ದ್ರವ್ಯ ವ್ಯವಹಾರವೆಂದು ಇಸ ತಂದು
ಸರಿಪಾಲಿಗೆ ಸತಿ-ಪತಿಗಳು ಮಾಡಿದವ್ಯವ
ಹಾರವು ತರುಣಿಗೇನುಳಿತು ತನಗೇನು ಬಂತು |
ಎರವಿನವರೆರುವಾದರೆ ಮೋರೆ ಆಯಿತು ಹಳೆ ಕೆರವು ||1||
ಇಚ್ಛೆ ಇಲ್ಲದ ಮನವು ಮಚ್ಚುಗೊಳಿಸುವದೇನು |
ಹುಚ್ಚುನಾಯಿಗೆ ಕಚ್ಚು ಕಲಿಸಿದಂತೆ |
ಕಚ್ಚಿಗಡಕರಿಗೆ ನಿಜದೆಚ್ಚರ ಇನ್ನೆಲ್ಲಿಹದೊ |
ಸ್ವಚ್ಛವಾದಾತ್ಮಜ್ಞಾನೊಂದೆ ನಿಶ್ಚಿಂತೊ ||2||
ತಾಯಿ ಮದುವಿಯಾದವಗೆ ವಾಯು ನ್ಯಾಯಗಳುಂಟೆ?
ಬಾಯಿ ಮುಕಳಿಯು ಮುಚ್ಚಿಕೊಂಡಿತು
ಮೂರ್ಲೋಕೊ ಸಾಯದೆ ಸತ್ಯ ಕಡಕೋಳ್
ಗುಡ್ಡದ ಮಹಾಪಾಚ್ಛಾ ಓ ಯೆಂಬೋದಾಗಿ
“ಪಾಣಿಮೇ ಡುಬೆ ನೌ ಲಾಖ” ||3||
ಮೋಕ್ಷದ ಅಪೇಕ್ಷೆ
ಮೋಕ್ಷ ಅಪೇಕ್ಷಾದವ ಗುರುವಿನ್ಯಾಕ ಹುಡಕ |
ಸಾಕ್ಷಾತವನ ತನ್ನೊಳು ಮಾಡನ್ಯಾಕಡಕ ||ಪಲ್ಲ||
ಅಷ್ಟ ಭೋಗೈಶ್ವರ್ಯ ಕೊಟ್ಟ ಮೇಲವಗೆ |
ನಷ್ಟಾಗೊ ಭವ ಬಂಧ ಹುಟ್ಟುದೆಲ್ಲಿವಗೆ ||1||
ಅರ್ಥ ಪ್ರಾಣಾಭಿಮಾನ ಹೋದ ಮೇಲವಗೆ |
ತುರ್ತ ಜೀವನ್ಮುಕ್ತಿ ಬಾರದ್ಯಾಕಿವಗೆ ||2||
ತನ್ನಾತ್ಮ ಸುಖ ಸಂಭ್ರಮಾಗಲೆಂದವಗೆ |
ಭಿನ್ನ ಭಾವದ ಭ್ರಮಿ ಇದ್ದಿತ್ಯಾಕಿವಗೆ ||3||
ವಾಜಿಮಿ ಅನುಭವ ಮೋಜಾಯಿತವಗೆ |
ಲಾಜಿಮಿ ನಿರ್ವಾಣ ತೇಜಿಸಿತಿವಗೆ ||4||
ಕಡಕೋಳ ಗುಡ್ಡದ ಮಹಾಂತಪುರದವಗೆ |
ವಡಲಾದ ಮೇಲೆ ಠಾವಿರಲೆಲ್ಲ್ಯಾದವಗೆ ||5||
ಕೊಡು ಕೊಳ್ಳುವ ವ್ಯವಹಾರ
ಕೊಡು ಕೊಳ್ಳುವ ವ್ಯವಹಾರಕೇಕೆ ಅನುಮಾನ |
ಕೊಡದೆ ಕೊಳಬೇಕಾದರದಕೆ ಜಾವಿೂನ ||ಪಲ್ಲ||
ರಜೆಪತ್ರ ರುಜೆಪತ್ರ ಮಧ್ಯಾಸ್ಥಿ ಜಾವಿೂನ |
ಗುಜರಾಣಿ ಘನಮಾತ ಆಗುವದು ಅಜ್ಞಾನ |
ನಿಜವಾದ ಮೇಲೆ ಸರ್ವವು ತಾನೆ ತನ್ಮಯವು |
ವುಜುರುಂಟೆ ತನ್ನರ್ಥ ಪ್ರಾಣಾಭಿಮಾನ ||1||
ಶ್ರದ್ಧೆ ನಿಷ್ಠೆಯು ಸಾವಧಾನನುಭವ ಆನಂದ |
ಶುದ್ಧವಾದರೆ ನಿರಾಳಾಯ್ತು ಬಹು ಚಂದ |
ಮಿದ್ದು ಮುದ್ದಿಯು ಮಾಡುವಿನ್ನೂರ್ಹದಿನಾರಂಗ |
ಕದ್ದು ಮೆದ್ದರೆ ಬಿಡದು ಎಂದೂ ಭವಬಂಧ ||2||
ಸಮರಸದದ ನುಡಿ ಚಂದ ಸಮರಸದ ನಡಿ ಚಂದ |
ಸಮರಸದ ಗುರು-ಶಿಷ್ಯರಾಟ ಚಂದ |
ಸಮರಸವೆ ಸರ್ವ ಸೌಭಾಗ್ಯ ಸುಖ ಸಂಪನ್ನ |
ಸಮರಸವೆ ಮಹಾ ಮಹಾಂತ ಮುಕ್ತಿ ಕಂಡ ||3||
ಭಯವೇಕೊ
ಭಯವೇಕೋ ಮಗನೆ |
ನಿರ್ವಯಲಾಗುವದಕೆ ಭಯವಿತ್ತು
ಸ್ವಯಂ ಸರ್ವಮಯವಾಗೋತನಕೆ ||ಪಲ್ಲ||
ಸತಿಸುತರು ಪಿತಮಾತೆ | ಅತಿ ಮಿತ್ರ ಶತ್ರುಗಳು |
ಶತಮುಖದಷ್ಟಭೋಗಗಳು ಬಯಲೇ ||
ವ್ರತನೇಮ ಸತ್ಯ ಸತ್ಕರ್ಮ ಸದ್ಗುಣ ಬೈಲೆ |
ನುತಾವರಣಷ್ಟಾಂಗಯೋಗ ಬಯಲೇ ||1||
ತಾರಷ್ಟತಂತ್ರ ಮೇರು | ಸಾಗರ ಬಯಲೇ |
ದ್ವಾರ ವೈಕುಂಠ ಸತ್ಯವು ಸ್ವರ್ಗ ಬಯಲೇ ||
ಮಾರಾರಿ ವಿರಂಚಿಂದ್ರಾದಿ ಮುನಿಕರ |
ಮೂರು ಲೋಕವು ಮೊದಲು ಮುಂಚು ಬಯಲೇ ||2||
ತಾಸು ಮಾಸಾಬ್ದಿಯುಗ ಜಗಾಪ್ರಳಯಾ | ಮಹಾಪ್ರಳಯಾ |
ಸುಸದನಾದಿ ಪರಬೊಮ್ಮ ಬಯಲೇ ||
ಲೇಸೆನಿಪ ತತ್ತ್ವಮಸಿ ಅಸ್ತಿ ಭಾತಿ ಪ್ರೀತಿ |
ಖಾಸ ಮಹಾಂತೋಕ್ತಿ ಮುಕ್ತಿ ಬಯಲೇ ||3||
ಸಾವೇ ಸತ್ತಿತು
ಸಾವೇ ಹುಟ್ಟಿತು
ಸಾವೇ ಬೆಳದಿತು ಸಾವೇ ಸತ್ತಿತು |
ಸಾವೇ ಅತ್ತಿತು |
ಸಾವೇ ಅರ್ತಿತು ಸಾವೇ ಬೆರ್ತಿತು |
ಸಾವೇ ಮರ್ತಿತು ತನ್ನ ಮುಂದೆ ||ಪಲ್ಲ||
ಸಾವೇ ಅವಕ್ರ್ಕಾದುದೊ ಅವಕ್ರ್ಕಾದಿ |
ಸಾವೇ ಕಠೋರಾದುದೊ |
ಸಾವೇ ತಾರಕವಾದುದೊ ಚಂದ್ರಾದಿತ್ಯ |
ಸಾವೇ ಅತಿ ಮೋಹವಾದುದೊ |
ಸಾವೇ ಗಗನ ಸಮೀರ ಅಗ್ನಿಯು |
ಸಾವೇ ಜಲ ನೆಲ ಮೇರು ಅಹಿಗಜ |
ಸಾವೇ ಗಿರಿ ಕಮಠ್ಯಾದಿ ಶಕ್ತಿಯು |
ಸಾವೇ ತಾ ಬ್ರಹ್ಮಾಂಡವಾದುದೊ ||1||
ಸಾವೇ ತಾ ಬೀಜಾದುದೊ ಆ ಬೀಜದಿ |
ಸಾವೇ ತಾ ಸಸಿಯಾದುದೊ |
ಸಾವೇ ತಾ ಫಲವಾದುದೊ ಆ ಫಲರಸ |
ಸಾವೇ ತಾ ಜಮವಾದುದೊ |
ಸಾವೇ ಶ್ರೋಣಿತ ಶುಕ್ಲ ಶರೀರವು |
ಸಾವೇ ಮನ ಪವನಾದಿ ವಿಷಯವು |
ಸಾವೇ ಸುಖ-ದುಃಖ ಮೋಹ ಆಶೆಯು |
ಸಾವೇ ತಾ ಪಿಂಡಾಂಡವಾದುದೊ ||2||
ಸಾವೇ ಪರಶಿವನಾದದ್ದೊ ಪರಶಿವನೊಳು |
ಸಾವೇ ಸ್ಥಿರಚರವಾದುದೊ |
ಸಾವೇ ಕರ್ಮೆರಡಾದುದೊ ಪುಣ್ಯವು ಪಾಪವು |
ಸಾವೇ ಸರ್ವ ವ್ಯವಹಾರಾದುದೊ |
ಸಾವೇ ಇಹಪರ ನರಕ ಸ್ವರ್ಗವು |
ಸಾವೇ ಮನುಮುನಿ ಸಕಲ ಸಂಭ್ರಮ |
ಸಾವೇ ಮಂತ್ರ ಮಹಾಂತ ಮುಕ್ತಿಯು |
ಸಾವೇ ಬಯಲಿಗೆ ಬಯಲಾದುದೊ ||3||
ಸರ್ವರು ತಿಳಿಯುವ ಸಾಕ್ಷಿ
ಸರ್ವೇಶ್ವರನೆ ಸರ್ವಾದುದ್ದೆಲ್ಲ |
ಸರ್ವರು ತಿಳಿವದು ಸಾಕ್ಷಿ ತಾ ಇಲ್ಲ ||ಪಲ್ಲ||
ಸರ್ವೇಶ್ವರನ ಗುರು ಸ್ವಯಂಭುಲಿಂಗ |
ಸ್ವಯಂಭುಲಿಂಗನ ಗುರು ಆ ಮುಗ್ಧಸಂಗ |
ಆ ಮುಗ್ಧಸಂಗನ ಗುರು ವಿರಾಟನಂಗ |
ಆ ವಿರಾಟನಂಗನ ಗುರು ತಾನಿದ್ದು ಇಲ್ಲ |
ಇದ್ದು ಇಲ್ಲದವನ ಗುರು ಏನು ಅಲ್ಲ |
ಅಲ್ಲದವನ ಗುರು ಯಾವನು ಇಲ್ಲ |
ಇಲ್ಲಾದವನ ಗುರು ಇಲ್ಲೇ ಇಲ್ಲ ||1||
ಆ ಸರ್ವೇಶನಾದ ಆವರ್ಕಕಾರ |
ಆವರ್ಕದೊಳಗೆ ತಾನಾದ ಕಠೋರ |
ಆ ಕಠೋರದೊಳಗೆ ತಾ ಮಾಯಾಕಾರ |
ಮಾಯಾಕಾರದೊಳಗೆ ತಾರ ವಿಸ್ತಾರ |
ತಾರ ವಿಸ್ತಾರದಿ ಸ್ಥಿರ ಪೂರ್ಣಚಂದ್ರ |
ಚಂದ್ರನಿಂದಿತ್ತಾದ ಆದಿತ್ಯಸಾಂದ್ರ |
ಆದಿತ್ಯನಿಂದಾತ್ಮನಾದಾಕಾಶ |
ಆಕಾಶವೇ ವಾಯು ಅಗ್ನಿ ಪ್ರಕಾಶ |
ಅಗ್ನಿ ಅಪ್ಪು ಪೃಥ್ವಿ ಇವೆ ನವಖಂಡ |
ನವಖಂಡಮಯವಾದುದ್ದೇ ಈ ಬ್ರಹ್ಮಾಂಡ ||2||
ಆ ಸರ್ವೇಶ್ವರನೊಳಗಿದ್ದುದೆ ಚಿತ್ತು |
ಚಿತ್ತುವಿನೊಳಗಾಯ್ತು ಆನಂದ ಗೊತ್ತು |
ಆನಂದಯೆಂಬುದೆ ಅದೆ ನಿತ್ಯ ತೃಪ್ತಿ |
ನಿತ್ಯ ತೃಪ್ತ್ಯಾದದ್ದು ಸುದ್ದಿಯೇ ಸುದ್ದಾಪ್ತು |
ಆಪ್ತವಾದದ್ದು ಸರ್ವಕಾದಿ ಪ್ರಸಾದವಾಯಿತು |
ಆ ಪ್ರಸಾದವೆ ಎಲ್ಲ ಬಿತ್ತು ಬೀಜಾಯಿತು |
ಜೀಜದಿಂದಾಯಿತು ವನೌಷಧಿ ಗುರ್ತ
ಆ ವನೌಷಧಿಯೇ ಸಕಲ ಫಲವು ಪದಾರ್ಥ |
ಫಲ ಪದಾರ್ಥರಸ ಶುಕ್ಲ ಶ್ರೋಣಿತ |
ಶುಕ್ಲ ಶ್ರೋಣಿದೊಳಗಾದ ಸಪ್ತಧಾತು |
ಧಾತುವಿಗೆ ಬೇಕಾಯಿತು ಏಸೊಂದು ಮಾತು |
ಮಾತು ಮಂತ್ರಕೆ ಮೂಲ ಆಕೃತಿಗೊಂಡು |
ಅದೆ ನೋಡೊ ಆಯಿತು ಇದೇ ಪಿಂಡಾಂಡ ||3||
ಆ ಸರ್ವೇಶ್ವರನಾದ ತಾನೇ ಪಿಂಡಾಂಡ |
ಪಿಂಡಾಂಡದೋಳರವತ್ತಾರು ಕೋಟಿ ದಂಡ |
ದಂಡಿನೊಳಗೆ ದಶ ಇಂದ್ರಿಯ ತಂಡ |
ಇಂದ್ರಿಗಳಿಗೆ ಪಂಚಪ್ರಾಣ ಪ್ರಚಂಡ |
ಪಂಚಪ್ರಾಣಕೆ ನಾಲ್ಕು ಕರಣ |
ಕರಣ ಕರಣಕ್ಕೆ ಕರ್ತೃ ತ್ರಿವಿಧಾತ್ಮಚರಣ |
ತ್ರಿವಿಧಾತ್ಮನಿಗೆ ತಾನೇಕಾತ್ಮ ಚೈತನ್ಯ |
ಆ ಚೈತನ್ಯಕ್ಕೆ ಪಂಚಾಮೃತನ್ನ |
ಆ ಅನ್ನದಲ್ಲುಂಟು ಷಡ್ರುಚಿ ಸವಿಯು |
ಸವಿಯಲ್ಲಿ ಸುಖ ಮೋಹದಾಸಿಯ ಹವಿಯು |
ಆಶಿ ಹವಿಗೆ ಷಡ್ವರ್ಗದುಪದ್ರ |
ಷಡ್ವರ್ಗದುಪದ್ರಕೆ ಕರ್ಮ ಸಮುದ್ರ |
ಬಹಳ ಕಷ್ಟಾದರೆ ಆಗದೆ ನೋವ |
ಆ ನೋವಾದ ಮೇಲೇಕೆ ಬಾರದು ಸಾವ |
ಸಾವಾಗುವಾಗ ಸಾಧಿಸು ಸದ್ಭಾವ |
ಭಾವಿಲ್ಲದಿರೆ ಇಲ್ಲ ಗುರು ಮಹಾಂತದೇವ ||4||
ವಾಯ್ಯುಕೃತಿದೇವಿ
ಸೈ ಶಬಾಶ್ ವಾಯುಕೃತಿದೇವಿಯ ಗಂಡ |
ಅಕ್ರಾಳ ವಿಕ್ರಾಳ ರಾಯ ಪ್ರಚಂಡ |
ಐಂಶಿಚಾರಲಾಕ್ ನಿನ್ನ ಪಿಂಡಾಂಡ
ಅಕಟವಿಕಟ ಆದ ಬ್ರಹ್ಮಾಂಡ ||ಪಲ್ಲ||
ರೂಪ ನಿರೂಪಾದದ್ದರಿಯೊ |
ಆ ಸುಂಟರಗಾಳಿ ತಾನಾದ ಪರಿಯೊ |
ಭೂಪ ನಿನಗಿಲ್ಯಾವನು ಸರಿಯೊ |
ಪುಣ್ಯ ಪಾಪವಿಲ್ಲ ಬಹು ಹುಚ್ಚದೊರಿಯೊ ||1||
ಆದದ್ದಾದದ್ದಾಧಾರ ಆಗದಾಗದಿಲ್ಲ ವಿಚಾರ |
ಆದಿಕಾರ್ಯ ಕಾರಣಾಕಾರ |
ಏನೊ ಏನೊ ನಿನ್ನವತಾರ |
ಏನೊ ಏನೊ ನಿನ್ನವತಾರ ||2||
ಸರ್ವಗುಣ ಸಂಪನ್ನನು ಹೌದು |
ಅವಗುಣ ಪರಿಪೂರ್ಣವಾಗಿಹುದು |
ಸರ್ವಬೊಮ್ಮ ಆದನುಭಾವವದು |
ಮಹಂತಪುರ ಮಹಾಂತಲ್ಲೆನಲಹುದು ||3||
ನೀನೆ ದೇವ
ಭಾವ ಭವಭವ ಭಾವ |
ನಿರ್ಭಾವ ದೇವನವ ತಿಳಿ ನೀನೆ ಆ ದೇವ |
ಸಾವಸದೊಳಗಿರು ಗುರುಪಾದ ಸೇವ |
ಜೀವವೇ ಶಿವನೆಂಬುದೇನನುಭಾವ ||ಪಲ್ಲ||
ಆ ವಿರಾಟರಾಯನ್ನ ಆಚಿಲಿಲ್ಲ |
ಆ ವಿರಾಟರಾಯನೆ ಆದುದ್ದೆಲ್ಲ |
ಆ ವಿರಾಟನು ತಾನಾದವಲ್ಲ |
ಆ ವಿರಾಟಾಗದಾಗವ್ಯಾವಿಲ್ಲ ||1||
ಅರುವಿಗಾಶ್ರಯವಾದಾತ್ಮನೆ ಬಾಧ್ಯ |
ಅರವು ಮರವುಗೊಂಡ ಇದ್ಯಾವ ಸಾಧ್ಯ |
ಅರುವು ಅರಹಿಸಿ ಕೊಡುವವನೆ ಆರಾಧ್ಯ |
ಅರುವು ಮರವು ಹಾರಿಸುವದೇ ಮಹಾ ಚೋದ್ಯ ||2||
ಶಿಕ್ಷವೆ ಮೊದಲು ಶ್ರೀಗುರುವಿನಾಪೇಕ್ಷ |
ಆ ಕ್ಷಣಕಾಗುವದು ತನಗಪರೋಕ್ಷ |
ಸಾಕ್ಷಾತನಾದ ಮ್ಯಾಲ್ಯಾತಕೊ ದೀಕ್ಷ |
ಮೋಕ್ಷವೆ ಮಹಾಂತ್ಯೋಗಿ ಕರಣ ಕಟಾಕ್ಷ ||3||
ಅಮವಾಸಿ
ಆಯಿತು ಅಮವಾಸಿ ಅಕೋ ಇಕೋ
ಹೋಯಿತು ಚತುರ್ದಶಿ |
ಕಾಯಜ ದಹನ ಮಾಡಲು |
ಮೂಡಿದ ಹೋಳಿ ಹುಣ್ಣಿವಿ ಪೂರ್ಣ ಶಶಿ ||ಪಲ್ಲ||
ಹಗಲೆ ಹಗಲಾಯ್ತು ರಾತ್ರಿಯು |
ಹಗಲೆ ಮಿಗಲಾಯ್ತು |
ಬಗಿಯೊಳು ಬಗಿಯಾಯ್ತು ಈ | ತ್ರಿ –
ಜಗಕ್ಕೆ ಸಿಗದ್ಹೋಯ್ತು ||1||
ಜನನಿಯ ಯೋನ್ಹರಿತು | ಅವ ನಮ್ಮ
ಜನಕನ ಮಾಣ್ಮುರಿತು |
ಮನವು ನೆನವು ತೋರಿತು | ನಾ ಕಂಡು
ಜನಿಸುವ ಜಾಗ ಉರಿತು ||2||
ನೆಲಜಲ ಕರಗಿತು
ಅನಲನಿಲನೊಳಗಾರ್ಹೋಯ್ತು
ಸಲೆ ಬಯಲಾತ್ಮಾಯಿತು | ಮಹಾಂತ
ನಿಲವಿಗೆ ತಲವಾಯ್ತು ||3||
ಹೆಪ್ಪುಗೂಡಿತು ನಾನಾ ಜನ್ಮ
ನೆನಪಿರಲಿ ಮಾನವ ಮುಂದಾಗುವದು ನಿನ್ನದರುಷ್ಟವ |
ಹೆಪ್ಪುಗೂಡಿತು ನಾನಾ ಜನ್ಮವ |
ಬ್ರಹ್ಮ ಮಾಡಿದಾಟವ ||ಪಲ್ಲ||
ಕೊಟ್ಟದ್ದು ಕೊಳುವದು ಉಣಸಿದ್ದು ಉಣುವದು |
ಹುಟ್ಟಿಸಿದವಗ್ಯಾಕೆ ನೀ ಬೈತಿ |
ಸಿಟ್ಟಿಗೆ ಬರಲ್ಯಾಕೆ ಸುಳ್ಳಂತ ಬರಿಲ್ಯಾಕೆ |
ಬಿಟ್ಟಿಗೆ ಬಂತೆನೊ ದೌತಿ ಲೆಕ್ಕಣಿಕೆ ||1||
ಹೊತ್ತು ನುಚ್ಚುಯಿಲ್ಲ ಹುಗ್ಗಿಗೆಲ್ಲ್ಯಾದ ಬೆಲ್ಲ |
ಅತ್ತತ್ತು ಸುಳ್ಳೆ ನೀ ಯಾಕ ಬಾಡ್ತಿ |
ಸತ್ತು ಹೋದರೇನು ಸಾಯಲದಿದ್ದರೇನು |
ಬಿತ್ತಲ್ದೆ ಬೆಳಿ ನೀ ಹ್ಯಾಂಗ ಮಾಡ್ತಿ ||2||
ಕನ್ನಡಿಯೊಳು ರೂಪ ಕಡೆಗಿಟ್ಟರದು ಲೋಪ |
ಅನ್ನ ಎಂಬುವದೇನೋ ಎಲೆ ಖೋಡಿ |
ಚಿನ್ನ ಗುಡ್ಡದ ಮಹಾಂತೇಶನ ತಿಳಿದರೆ |
ನಿನ್ನಿಂದೆ ನಿನ್ನ ಭವ ಸುಡ್ತಿ ||3||
ತಿಳಿದರ್ಹೇಳಿಲ್ಲಿ
ದಾವಪಥ ದಾವನೆಲೆ ದಾವಸುಖ ಬಲ್ಲಿ |
ಮೂವರೊಂದಾದನುವು ತಿಳಿದರ್ಹೇಳಿಲ್ಲಿ ||ಪಲ್ಲ||
ಬ್ರಹ್ಮದಿಂದಲೆ ಜಗವೊ ಜಗದಿಂದವೆ ಬ್ರಹ್ಮೊ |
ಬ್ರಹ್ಮವೆ ಜಗವೊ ಈ ಜಗವೆ ಬ್ರಹ್ಮೊ
ಬ್ರಹ್ಮ ಜಗದಿಂ ನೀನೊ ನಿನ್ನಿಂದೆ ಜಗಬ್ರಹ್ಮೊ
ಬ್ರಹ್ಮಜಗವೆ ನೀನೊ ನೀನೆ ಜಗಬ್ರಹ್ಮೊ ||1||
ಜೀವದಿಂದಲೆ ಅರುವೊ ಅರುವಿನಿಂದಲೆ ಜೀವೊ |
ಜೀವೆ ತಾ ಅರವೊ ಈ ಅರುವೆ ತಾ ಜೀವೊ
ಜೀವ ಅರುವಿನಿಂ ತನುವೊ ತನುವಿಂದರು ಜೀವೊ
ಜೀವರುವೆ ತನುವೊ ಈ ತನುವೆ ಅರು ಜೀವೊ ||2||
ಬುಡದಿಂದೆ ನಡು ಕಡೆಯೊ ಕಡೆಯಿಂದ ನಡು ಬುಡವೊ |
ಬುಡವೆ ನಡು ಕಡೆಯೊ ಈ ಕಡೆಯೆ ನಡು ಬುಡುವೊ ||
ಪೊಡವಿಯೊಳು ಮೆರೆವ ಕಡಕೊಳ ವಾಸೊ |
ಮಹಾ ಮಹಾಂತನ ಮಡಿವಾಳಾಖ್ಯ ಆ ನಾಮೇ ಮಡಿವಾಳನೊ ||3||
ಕೇಳಿರನುಭಾವ ಬಲ್ಲವರು
ತಂದಿ ಷಂಡಾದರೆ ತಾಯಿ ಯಾಕೆ ಬರುವಳು |
ಅಂದವನು ಕೇಳಿರನುಭಾವ ಬಲ್ಲವರು ||ಪಲ್ಲ||
ತಾಯಿ ತಾ ಬಂಜಾಗೆ ನಾನೆಲ್ಲಿ ಪುಟ್ಟುವೆನು |
ಆಯತದೊಳೆನಗೆ ತಾನೊಬ್ಬ ಸತಿಯು |
ಆಯ ಕಳೆಗೂಂದಿ ಮಗಳ್ಹುಟ್ಟಿ ಮದುವಿಯಾದವಗೆ |
ಮಾಯದೊಳು ಬಿದ್ದ ಮೂಜಗವಾಯಿತಲ್ಲ ||1||
ಹೆತ್ತವಸಗಿಯ ಮನೆಯು ಮುತ್ತಿಕೊಂಡೊಯ್ದೊಸಗೆ |
ಸತ್ತದ್ವಸಗಿಯು ಕೇಳಿ ತಾನೆಯ್ದುವ
ಅತ್ತಿ ಮಾವಳಿಯ ಮೈದುನ ಭಾವ ಬೀಗರಿಗೆ |
ನಿತ್ಯ ದುಡದರ್ಥವದು ಭವದುತ್ತಾಯಿತ್ತಲ್ಲ ||2||
ಮಾನುಣಿಯು ಸತ್ತು ಮಗಳಿಗೆ ರಂಡೆತನಾಗಿ |
ನಾ ನನ್ನ ತಾಯಸವ ಮರೆಸಿ ಸಾಯಲು |
ತಾನು ಸೆರಗ್ಹರಿದು ತಾಯಿಯ ಬಿಟ್ಟು ಮಹಾಂತೇಶ |
ತಾನೆ ತಾನಿರಲೆಂದಿಗ್ಹಿತವಾಯಿತಲ್ಲ ||3||
ನಿಃಕಾಮದ ಭಕ್ತಿ
ಮಾಡೋ ನಿಃಕಾಮದ ಭಕ್ತಿ |
ನಿನಗಾಗುವದು ಆ ನಿಜ ಮುಕ್ತಿ |
ಬ್ಯಾಡೊ ಪರರ ಉಕ್ತಿ |
ತಿಳಿ ಬೇಗ ನೀ ನಿನ್ನ ಯುಕ್ತಿ ||ಪಲ್ಲ||
ನಿರ್ವಂಚಕನಾದ ಶಿಷ್ಯ |
ಅವ ಮರುಳ್ಯಾಕಾದ ಮನುಷ್ಯ |
ಪೂರ್ವಾರ್ಜಿತ ಭವಿಷ್ಯ |
ಈಗವತರಿಸಿ ಕಳಿವನಾಯುಷ್ಯ ||1||
ಉಂಡದ್ದು ಉಣಲಿಬ್ಯಾಡ |
ಉಣವಲ್ಲದ್ದು ಬಯಸೋದು ಕೇಡ |
ಕಂಡದ್ದು ಕಾಣಲ್ಲದು ಪಾಡ ಕಾಣಿಪ |
ದ್ಹುಡಕುದೇನಾದೆ ಗೂಢ ||2||
ಇದ್ದದ್ದು ಎತ್ತೊಲ್ಲ್ಲದು ಖಾಜಿ |
ಇದ್ದದ್ಹೋಗುದುದೆತ್ತಾದು ಫಾಜಿ |
ಇದ್ದದ್ದಿದ್ದದ್ದೆ ಪೂಜಿ ಇಲ್ಲದ್ದಿ |
ಲ್ಲದ್ದೆ ಮಹಾಂತನ ವಾಜಿ ||3||
ವಿಶ್ವ ತಾ ಪರಬ್ರಹ್ಮ
ನೋಡು ನೋಡಮ್ಮಾ ವಿಶ್ವ ತಾ ಪರಬ್ರಹ್ಮಾ |
ಮಾಡಬಾರದು ಸುಳ್ಳೆ ಮನದೊಳಗ್ಹಮ್ಮಾ ||ಪಲ್ಲ||
ಮೊದಲೇ ನಿರ್ಲಕ್ಷವೇ ನಿಲವಾಗಿತ್ತು |
ಅದರೊಳಗೆ ಅದರಂತಾದೆ ಸತ್ತು |
ಬಿದರಿಸದಿರುವದಿಲ್ಲೆನಿಸುವ ಚಿತ್ತು |
ಅದು ಕಸಕಸಿ ಸಹಸ್ರ ಪಾಲೆನಿಸಿತ್ತು ||1||
ನೆನವುದೋರಲು ತನಗಾಯಿತ್ತನ್ನಂಗ |
ನೆನವು ಇಮ್ಮಡಿಸಿ ತಾ ಕೂಡಲಸಂಗ |
ತನಗಿದರಿಲ್ಲಾದಿದ್ದ ಮಹಾಲಿಂಗ |
ಚಿನುಮಯ ಪ್ರಭೆ ಚಿದ್ರೂಪತರಂಗ ||2||
ಎಲ್ಲಾ ಸ್ವರೂಪವಾದದ್ದು ಆ ಸತ್ತೆ
ಹೊಲ್ಲೊಳ್ಳೆಂಬುದ ಅದಕಿದರಿತ್ತೆ |
ಇಲ್ಲಾಗದಿರಲದು ಭವಕೆ ತಾ ಬಿತ್ತೆ |
ನಲ್ಲೆ ಮಹಾಂತನ ಅರವು ಅತ್ತತ್ತೆ ||3||
ಅಣು ಘನವಹುದೊ
ಕಪ್ಪು ಕಡೆಗೊತ್ತಿ ಬಿಳ್ಪಪ್ಪಲರಿದೊ |
ಕಪ್ಪೇ ತಾ ಬಿಳ್ಪಾಗೆ ತಪ್ಪಲರಿದೊ ||ಪಲ್ಲ||
ಕತ್ತಲೆಯ ಮನೆಯೊಳು ಹತ್ತಿಸಿಡೆ ಜ್ಯೋತಿಯನು |
ಸುತ್ತೆ ಪ್ರಭೆ ಕಾಳು ತನ್ನೊತ್ತಿಲಿಹುದೊ |
ಹತ್ತಿ ಬರಲೆಣ್ಣಿ ಪ್ರಣತ್ಹತ್ತಿ ಬತ್ತ್ಯುರಿದರೆ |
ಎತ್ಹೋತೊ ಜ್ಯೋತಿ ತಮ ಮುತ್ತುತಿಹುದೊ ||1||
ಕತ್ತಲೆಯು ತಿಳಿದು ತಾ ಬಿತ್ತರದಿ ಬೆಳಗಾಗೆ |
ಬತ್ತಿ ಪ್ರಣುತೆಣ್ಯಗ್ನಿ ವತ್ತಲೇಕೊ |
ಗೊತ್ತು ತಿಳಿಯದೆ ತನ್ನ ಎತ್ತ ಹುಡುಕಿದರೇನು |
ಚಿತ್ತವೆ ನಿಜವೆಂಬೂ ಚಿತ್ತೆ ಸಾಕೊ ||2||
ಘನ ಉಳಿದು ಅಣುವಾಗೆ ಅಣುವುಳಿದು ಘನವಾಗೆ |
ಘನಕೆ ಅಣು ಅಣುಕೆ ಘನ ಅಣಕವಾಗಿಹುದೊ |
ಘನ ಚಿಣಮಗೇರಿ ದೊರಿ ಅಣಿ ಮಹಾಂತೇಶ್ವರನ |
ಘನವೇ ಸಾವದಣುವಾಗೆ ಅಣು ಘನವಹುದೊ ||3||
ಆವು
ಅಳಳಳಳಳಳಳಳಾವುಮಾ ಈ ಆವು
ನೋಡಿಕೊಂಡು ಹಾಲ ನಾಡಿಗೆಲ್ಲ ನೀಡಮಾ ||ಪಲ್ಲ||
ಮೂಗ ಪೀತ ಬಾಯಿ ಸ್ವೇತ |
ಕಣ್ಣ ರಕ್ತ ಬಣ್ಣ ಮೈಮ್ಯಾಗ |
ಕಪ್ಪ ಮಸುಕು ಕಾಲ ಕಿವಿ |
ಬಾಲ ಬೂದ ಆದಮಾ |
ಯೋಗಿಗೆ ಒಂಬತ್ತು ಸೋಗು|
ಕೊಂಬಿನೊಳಗೆ ತೋರುತಾದೆ |
ಕೋಗಿಲದ ಹಾಗೆ ಕೂಗಿ |
ತನ್ನ ತಾನೇ ಕರೆವುತಾದಮಾ ||1||
ಹಾಲವಿಟ್ಟು ಮೊಸರು ಮಾಡು |
ಮೊಸರುಳಿಸಿ ಬೆಣ್ಣಿ ತೆಗಿದು | ಬಾಲಿ
ಬೆಣ್ಣಿ ಕಾಸಿ ತುಪ್ಪ |
ಪೂರ ಕುಂಭ ತುಂಬಮಾ |
ತಾಲಿ ತುಂಬ ತುಪ್ಪ ಮಾರದೆ
ಚೀಲದ ತುಂಬ ರೂಪಾಯಿ ಮಾಡು |
ಚೀಲ ಮುಟ್ಟದೆ ತಾಳಿ ಮೂಗುತಿ |
ವಾಲಿ ಮಾಡಿಸಿಕೊಳ್ಳಮಾ ||2||
ಪುಚ್ಚಿಲುಚ್ಚಿ ಬಿದ್ದ ಮ್ಯಾಲ |
ಕಚ್ಚಿಗಿ ಕೈಯಿಕ್ಕು ಮೆಲ್ಲನೆ |
ಕಚ್ಚುಗೊಡದೆ ಕರುವಿಗಿ ಮೊಲೆ |
ಪಚ್ಚಿ ಕಾಲ್ದಳೆ ಹಾಕಮಾ |
ಎಚ್ಚರಿರಲಿ ಲತ್ತಿ ಒದ್ದಿತು |
ಮೆಚ್ಚಿದಾನು ಮಹಾಂತದೇವ |
ಹುಚ್ಚಿ ಇವಳೆಂದು ರಚ್ಚಿಗಿಕ್ಕಲು | ನಿನ್ನ
ಇಚ್ಛೆ ನುಡಿವರ್ಯಾರಮಾ ||3||
ವಿಜ್ಞಾಪನ
ದೇವರ ದೇವ ಲಾಲಿಸು ವಿಜ್ಞಾಪನ |
ಸತ್ತು ಹೋಹುದು ಹುಟ್ಟಿ ಬಾರದು |
ಭಾವಕರಿಗೆ ಇದು ಭಾವಿಸಬಾರದು |
ನಾವು ನೀವು ಎಂಬುದೆಲ್ಲಿಹುದು ||ಪಲ್ಲ||
ಸತ್ತು ಚಿತ್ತಾದರೆ ಚಿತ್ತು ಹತ್ತಾಯಿತು |
ಹತ್ತು ಒಂದುಗೂಡಿ ಹಲವಾಯಿತು |
ಮತ್ತೆ ಹಲವು ಹತ್ತು ಚಿತ್ತಾಗಲಿಕೆ |
ಚಿತ್ತು ಸತ್ತಿದ್ದು ಹುಟ್ಟಿಲ್ಲಾಯಿತು ||1||
ಚಿತ್ತು ಚಿತ್ತಾಗಲಿಕೆ ಚಿತ್ತು ಚಿದ್ರೂಪಾಯಿತು |
ಚಿತ್ತು ಪಟ್ಟವಾಗೆ ಚಿತ್ತೆಲ್ಲವು |
ಸತ್ತುವಿನ ನಾಮ ಚಿತ್ತುವಿಗಿಲ್ಲಾಯ್ತು |
ಹತ್ತುಕಿದ್ದ ನಾಮ ಹಲವುಗೆಲ್ಲಿಹದು ||2||
ಮುತ್ತ್ಯಾನ ನಾಮ ಮೊಮ್ಮಗನಿಗೆಂಬೊ ಸಾಕ್ಷಿ |
ಚಿತ್ತಿನಿಂದ ಹುಟ್ಟಿ ಸರ್ವವು ಸತ್ತಿತ್ತು |
ನಿತ್ತ್ಯ ನಿಜಾನಂದ ಶ್ರೀ ಮಹಾಂತ ಯೋಗಿ |
ಮತ್ತೆ ಹುಟ್ಟಿ ಹುಟ್ಟಿ ಸತ್ತೇ ಸತ್ತಿತು ||3||
ಸದ್ಭಾವಿ
ಆಯಾಸ ಅಣುಯಿಲ್ಲಾವೋ | ಸದ್ಭಾವಿಗೆ |
ಛ್ಯಾಯದ ಭ್ರಮಿಯಿಲ್ಲವೋ |
ಕಾಯ ಕುಜಕರ್ಣಾದಿ ಶಾಖೆಯು | ಉಪಾಯ ಗುಣ |
ಪರ್ಣಾಶಿ ಪಚನದಿ |
ಘಾಯವಡಿಯದೆ ಕಡಿದು | ಗಾದಿಯ ನ್ಯಾಯದಂತಿರೆ ||ಪಲ್ಲ||
ಕಾಲು ಮುಂದಾಗಿ ಹುಟ್ಟಿ | ಸಿದ್ಧರು ಕೂಡಿ |
ಮೂಲ ಮಂತ್ರ ಹಿಡಿದು ಘಟ್ಟಿ |
ಸಾಲು ದಿಕ್ಕವನೆ ಕಟ್ಟೀ | ಸಂಶಯದ |
ಆ ಸ್ಥೂಲ ಭೀತಿಯನೆ ಅಟ್ಟಿ ||
ಆಲಿಗಂಜನ ಹಚ್ಚಿ | ಸಂತಸದಲಿ |
ತನ್ನನುಪಾಲ ಪಣುಜನ ಪಣುಜಾ ಮಡಗಿದ |
ಕೀಲ ಬಗಿದು | ಈ ನೆಲನಗಿದು |
ವಿಶಾಲವಾದ ನಿಧಾನ ತಗಿದರೇ ||1||
ಮೇಲುಗಿರಿಯನ್ನೆ ನೋಡಿ | ಅಲ್ಲಿಗೆ ಹೋಗಿ |
ಮೇಲೊಂದು ಗಡಹ ಮಾಡಿ |
ಕೀಲದಾಕಾರವ ತೋಡಿ | ಧಾನ್ಯಾದಿಯ |
ಜಾಲ ಸಂಗ್ರಾಹನೆ ಕೂಡಿ ||
ಕೀಲಿ ಜಡಿದಗಸಿಗಳ ದಿಡ್ಡಿ | ಸಕೀಲದಲಿ |
ಚರಿಸುತಲಿ ವೀರರ |
ಮೇಳಿಗಳನೋಲೈಸಿ | ಈ ಭೂಪಾಲಕರಿಗೆ |
ತಾ ಪಾಶ್ಚನಾದರೆ ||2||
ತನ್ನರಮನಿಯೊಳಗೆ | ಆರರಿಯದ |
ಮುನ್ನಿರ್ದ ಹೊರವಳಗ |
ಸನ್ನಿಯಿಂದಾಗವಿಗೆ | ಹೋ ಹೇಳಲಾಯಿನ್ನು |
ಬಾರದು ಕಿವಿಗೆ ||
ತನ್ನ ಆಜ್ಞೆಯ ಮೀರಿ ಈ | ಚೆಪ್ಪನ್ನ |
ದೇಶವು ಮುನಿದು ಮುತ್ತಲು |
ಚೆನ್ನ ಗುಡ್ಡದ ಮಹಾಂತ | ಗವಿಗೆ |
ನೀ ಭಿನ್ನಿಲ್ಲದೆ ಸಿಗದೆ ಹೋದರೆ ||3||
ತವರೂರು
ನಾವು ನಡದೇವಮ್ಮ ನಮ್ಮ ತವರೂರಿಗೆ
ಹೇಳಿ ಕೇಳಿ ಎಲ್ಲರಿಗೆ |
ನೀವು ಅಂಜಿ ನಡಿಬೇಕರವ್ವ ನಿಮ್ಮ
ಹಿರಿಯರಿಗೆ ಶಿವಶರಣರಿಗೆ ||ಪಲ್ಲ||
ಒಪ್ಪದಿಂದ ಎರಡು ಮಕ್ಕಳ ಹಡದು ಬೆಳದೆ
ಅವರ್ನ ಸಂಗಕ್ಕೆಳದೆ
ಇಪ್ಪತ್ತೊಂದು ಸಾವಿರದಾರನೂರರಲ್ಲಿ ಇಳದೆ |
ಇನ್ನ ಹರಿಯ ಕಳದೆ ||1||
ಮುತ್ಯಾ ಮಾವ ಮೈದುನರಿಗೆ
ಸುಳ್ಳಿಯಾದೆ ನಾ ಅತ್ತಿಗಿ ಕಳ್ಳಿಯಾದೆ |
ಚಿತ್ತದೊಲ್ಲಭಗೆ ಹಾದರಗಿತ್ತಿಯಾದೆ
ಅತ್ತಿಗೆಗೊಳ್ಳ್ಯಾಕ್ಯಾದೆ ||2||
ಮನಿಯ ಅಳಿಯ ತಾನದವನ ನೋಡಬೇಕು
ಉಡುಕಿಯಾಗಬೇಕೋ
ಚಿಣಮಗೇರಿ ಗುಡ್ಡದಯ್ಯನ ಒಣದಾಕು
ಇನ್ಯಾಕಬೇಕು ಮುಕ್ತಿ ಪಡಿಯಬೇಕೋ ||3||
ಸಾರಿ ಹೇಳುವೆ
ಎಲ್ಲರೊಳಗ್ಹಾನ ಶಿವ ತಾನೇಕಾಗಿ |
ತಿಳಿಯೊ ನೀ ಬೇಗಿ |
ನಡಿಯೊ ಬಾಗಿ ಸಾರಿ ಹೇಳುವೆ ಕೂಗಿ ||ಪಲ್ಲ||
ಕೊಡುವವರೊಳಗೆ ಆ ಕೊಡುವದರೊಳಗೆ |
ಕೊಡುಕೊಂಬುವವರೊಳಗೆ |
ಬಡಿವವರೊಳಗೆ ಆ ಬಡಿವುದರೊಳಗೆ |
ಬಡಿಸಿಕೊಳ್ಳುವವರೊಳಗೆ ||1||
ಬೈವವರೊಳಗೆ ಆ ಬೇಗಳೊಳಗೆ |
ಬೇಸಿಕೊಳ್ಳುವವರೊಳಗೆ |
ನ್ಯಾಯದೊಳಗೆ ನ್ಯಾಯ ಹೇಳುವದರೊಳಗೆ |
ನ್ಯಾಯ ಕೇಳುವದರೊಳಗೆ ||2||
ಪೊಡವಿಯೊಳಧಿಕ ಚಿಣಮಗೇರಿಯೊಳಗೆ |
ಮೃಢಮಹಾಂತೇಶ್ವರನೊಳಗೆ |
ಮಡಿವಾಳಾಖ್ಯ ನಾಮರೂಪ ಕ್ರಿಯೆದೊಳಗೆ |
ನುಡಿವ ಬೆಡಗಿನೊಳಗೆ ||3||
ಭವ ನೀಗಲಿಲ್ಲ
ಬಲ್ಲೆನೆಂದು ಬಹಳ ಶಾಸ್ತ್ರ
ಓದಿ ಓದಿ ಕಾಣೊ ಹಾದಿ ಆದಿ |
ಬಲ್ಲವನಾದರ್ಯಾಕ್ಹೀಂಗ ಗರ್ವಿಯಾದಿ
ಹ್ಯಾಂಗ ಗರ್ವಿಯಾದಿ ||ಪಲ್ಲ||
ಇಲ್ಲದಿಲ್ಲದ್ದೆಲ್ಲಿಯಿಲ್ಲ ನೋಡೊ ತಮ್ಮ
ಸುಳ್ಳೆ ಬ್ಯಾಡೋ ಹಮ್ಮ |
ಅಲ್ಲಮನಾಚಿಲ್ಯಾದ ನಿನ್ನ ಸೊಮ್ಮ
ಕೇಳಾದಿ ಬೊಮ್ಮ ||1||
ಗುರು ಎಂಬ ಗುರ್ತ ನಿನಗೆ
ಸಿಕ್ಕೆ ಇಲ್ಲ ಸುಳ್ಳ ಸೊಕ್ಕಿದಲ್ಲ |
ಪರಮಾನಂದ ಸೌಖ್ಯದರುವ
ಹಗರಿಲ್ಲ ಭವ ನೀಗಲಿಲ್ಲ ||2||
ಒಂದೆ ಮೂರು ಆರು ಸಾವಿರಾದರೇನು
ಮೀರಿ ಹೋದರೇನು |
ತಂದಿ ಮಹಾಂತನ ಲೀಲ
ಇದ್ದರೇನು ಇಲ್ಲದಿದ್ದರೇನು ||3||
ಬಲ್ಲೆನೆಂಬುವ ಆತ್ಮ
ಬಲ್ಲೆ ಬಲ್ಲೆ ಬಲ್ಲೆನೆಂಬಿಯಲೆ
ಆತ್ಮ | ನಿನ್ನ
ಬಲ್ಲತನವು ಬಲ್ಲರ್ಹೇಳೆಲೆ ಆತ್ಮ ||ಪಲ್ಲ||
ಅವಲದಲ್ಲಿ ಅವಯ ನಿನಗೆ ಎಲೆ ಆತ್ಮ | ಅದರ |
ವಿವರವನ್ನು ವಿವರಿಸೆನಗೆ ಎಲೆ ಆತ್ಮ ||
ಅವಯವ ಆದವಗೇನಾದಿ ಎಲೆ ಆತ್ಮ |
ಆ ನಿರ್ವೈಲವಯ ನೀನೆಲ್ಲಿಂದೈದಿ ಎಲೆ ಆತ್ಮ ||1||
ಜಗದ ಜೀವನದ ನ್ಯಾಯವು ಎಲೆ ಆತ್ಮ |
ಈ ಜಗದ ಜೀವ ನಿನ್ನ ದೇವ ಎಲೆ ಆತ್ಮ ||
ಜಗವು ತಾನೆ ನೀನು ತಾನೆ ಎಲೆ ಆತ್ಮ |
ಇದರ ಹಗರಣವರಿ ಹಲವು ನೀನೆ ಎಲೆ ಆತ್ಮ ||2||
ಅಡ್ಡ ದ್ಯಾವರಾಗದಂತಿ ಎಲೆ ಆತ್ಮ | ಆ ಮಹಾ |
ದೊಡ್ಡವರ ಕೂಡುಂಡೇನಂತೆ ಎಲೆ ಆತ್ಮ ||
ಗುಡ್ಡದಷ್ಟು ಗುಣವು ಸಾರ್ತಿ ಎಲೆ ಆತ್ಮ | ಮೊಂಡ |
ಸೊಡ್ಡಿನಷ್ಟು ಸವಿಯದಿರ್ತಿ ಎಲೆ ಆತ್ಮ ||3||
ಕೊಟ್ಟುಕೊಂಡು ಕೊಂಡುಕೊಟ್ಟಿ ಎಲೆ ಆತ್ಮ | ನೀನು |
ಹೊಟ್ಟೆ ಹೊರುವದಾಯಿತು ಹುಟ್ಟಿ ಎಲೆ ಆತ್ಮ ||
ಕಟ್ಟಿದ್ದಲ್ಲ ಬಿಟ್ಟಿದ್ದಲ್ಲ ಎಲೆ ಆತ್ಮ | ಸತ್ತು |
ಹುಟ್ಟು ಆಶಿ ಹೋಗಲಿಲ್ಲ ಎಲೆ ಆತ್ಮ ||4||
ತನುವು ತೊಟ್ಟು ತನುವು ವಿರೋಧ ಎಲೆ ಆತ್ಮ | ಈ |
ಮನವು ಬಳಸಿ ಮನ ವಿಭೇದ ಎಲೆ ಆತ್ಮ ||
ತನುವು ನಿನಗೆ ನಿತ್ಯವಹುದೆ ಎಲೆ ಆತ್ಮ |
ಮನವು ಘನವು ನೆನೆಯಲನುವಾಗಿಹುದೆ ಎಲೆ ಆತ್ಮ ||5||
ಯತ್ರ ಜೀವ ತತ್ರ ಶಿವನೆಂದೆ ಎಲೆ ಆತ್ಮ |
ಶತ್ರು ಮಿತ್ರತ್ವ ಮಾಡುತಲೆ ಬಂದಿ ಎಲೆ ಆತ್ಮ ||
ಶತ್ರು ಮಿತ್ರದಾಗೋದ್ಹಾಂಗೋ ಎಲೆ ಆತ್ಮ | ಜಗಕೆ |
ಪುತ್ರ ಪಿತೃದಾಗೋದ್ಹಾಂಗೋ ಎಲೆ ಆತ್ಮ ||6||
ಸರ್ವಮಯ ಶಿವನೆಂಬೋದಂಬಿ ಎಲೆ ಆತ್ಮ |
ಸರ್ವ ಶಿವನೆಂದ್ಹೇಗೆ ನಂಬಿ ಎಲೆ ಆತ್ಮ ||
ಸರ್ವ ಸುಖವು ಬೇಡುವಲ್ಲಿ ಎಲೆ ಆತ್ಮ | ಗರ್ವ
ಸರ್ವರಲ್ಲಿ ಮಾಡುದೆಲ್ಲಿ ಎಲೆ ಆತ್ಮ ||7||
ಹಲವು ನೆನವು ಇರಲು ಹೇಗೆ ಎಲೆ ಆತ್ಮ |
ನಿನ್ನ ನೆಲೆಯು ಕಲಿಯು ತಿಳಿಯುದ್ಹೇಗೆ ಎಲೆ ಆತ್ಮ ||
ನಿಲವಿನಾಶೆ ಒಂದೆಯಾಗಿ ಎಲೆ ಆತ್ಮ |
ಬೈಲ ಸುಲಭ ನಿರಂಕಾರ ತಾಗೆ ಎಲೆ ಆತ್ಮ ||8||
ಸತ್ಯ ಸದಾಚಾರ ಖೂನ ಎಲೆ ಆತ್ಮ | ನಿನಗೆ |
ತೆತ್ತೆವಾಗೆ ಸಮ್ಯಜ್ಞಾನ ಎಲೆ ಆತ್ಮ ||
ನಿತ್ಯ ನಿತ್ಯ ಸಾವಧಾನ ಎಲೆ ಆತ್ಮ | ಜಗ |
ನ್ಮಿಥ್ಯನಾಗಿ ಇರೋ ಮನ ಎಲೆ ಆತ್ಮ ||9||
ಏಕಚಕ್ರದಿಶತನವು ಎಲೆ ಆತ್ಮ | ತನ್ನ |
ಬೇಕು ಬೇಡೆಂಬೋದ್ಯೋಚನ ಎಲೆ ಆತ್ಮ ||
ಏಕಮೇವನೆಂಬೆ ಘನವು ಎಲೆ ಆತ್ಮ | ನಿನ್ನ |
ಜೋಕೆ ಮಾಡುತಿಹುದು ಘನವು ಎಲೆ ಆತ್ಮ ||10||
ಎಲ್ಲಾನು ತಾನಾದನಲ್ಲೊ ಎಲೆ ಆತ್ಮ | ನೀನಿ |
ನ್ನೆಲ್ಲಿ ಬಿದ್ದರೇನು ಇಲ್ಲೋ ಎಲೆ ಆತ್ಮ |
ಅಲ್ಲಿ ಅಹುದು ಅಹುದೆ ಅಲ್ಲೊ ಎಲೆ ಆತ್ಮ | ಮಹಾಂ |
ತೊಲ್ಲಭ ಸ್ವಾನಂದ ಸೊಲ್ಲೊ ಎಲೆ ಆತ್ಮ ||11||
ರೂಪವು ತಿಳಿದಿಲ್ಲೆ
ರೂಪ ನಿರೂಪದೊಳಿರ್ದ ಮಾಂತನ
ರೂಪವು ತಿಳಿವದಿಲ್ಲೆ |
ಆ ಪರಬ್ರಹ್ಮವೆ ತಾನಾದಾತ್ಮಗೆ |
ತಾಪವು ಇನಿತಿಲ್ಲೆ ||ಪಲ್ಲ||
ಯೋಗವು ಮಾಡನು ಭೋಗವು ಬೇಡನು |
ಯೋಗ ಭೋಗವು ಬಿಡನು |
ಸಾಗಿಸುವನು ಸಕಲಾಗಮ ಶಾಸ್ತ್ರವ |
ಮೂಕನಾಗಿರುತಿಹನು ||1||
ಕಾಮವು ಹಿಡಿಯನು ನೇಮವು ನಡಿಯನು |
ಕಾಮವು ನೇಮವು ಬಿಡನು |
ತಾಮಸ ಗುಣದೊಳು ಪ್ರೇಮಾಗಿರುತಿಹನು |
ನಿಸ್ಸೀಮನೆನಿಸುತಿಹನು ||2||
ಕಾನನ ಕೂಡನು ಮಾನವರ ಕೂಡನು |
ಕಾನನ ಮಾನವರ ಬಿಡನು |
ಏನೇನು ಅರಿಯನು ಖೂನವ ಮರೆಯನು |
ಜಾಣನೆನಿಸುತಿಹನು ||3||
ಅಂದವ ಮಾಡನು ಚಂದವ ನೋಡನು |
ಅಂದ ಚಂದವ ಬಿಡನು |
ಬಂಧು ಬಳಗ ತಾ ಹೊಂದಿ ಹೊಂದದೆ |
ನಿಜಾನಂದದೊಳಿರುತಿಹನು ||4||
ನಾನೆಂದರಿಯನು ನೀನೆಂದರಿಯನು |
ನಾನು ನೀನೆಂಬುದು ಬಿಡನು |
ನಾನಾ ವಿನೋದದ ಮೋಹನ ಮಹಾಂತೇಶನು |
ತಾನೆ ತಾನೆನಿಸುತಿಹನು ||5||
ಇನ್ನೇನಿನ್ನೇನೊ
ತನ್ನ ತಾನು ತಿಳಿದ ಮೇಲೆ ಇನ್ನೇನಿನ್ನೇನೊ |
ತನ್ನಂತೆ ಸರ್ವರ ಜೀವ ಮನ್ನಿಸಿ ಮೂಕಾದ ಮೇಲೆ ||ಪಲ್ಲ||
ತಾನೆ ಪೃಥ್ವಿ ಅಪ್ಪು ತೇಜ ತಾನೆ ವಾಯು ಆಕಾಶಾತ್ಮ |
ತಾನೆ ಸೂರ್ಯ ಚಂದ್ರ ತಾರೆ ತಾನೆ ಬ್ರಹ್ಮಾಂಡಾದ ಮೇಲೆ ||1||
ತಾನೆ ಘ್ರಾಣ ಜಿಹ್ವೆ ನೇತ್ರ ತಾನೆ ತ್ವಕ್ಕು ಶ್ರೋತೃ ಹೃದಯ |
ತಾನೆ ಕಾಯ ಕರಣ ಹರಣ ತಾನೆ ಪಿಂಡಾಂಡಾದ ಮೇಲೆ ||2||
ತಾನೆ ಹೆತ್ತ ಸತ್ತ ಅತ್ತ ತಾನೆ ನಿತ್ಯ ನುತ್ಯ ಸತ್ಯ |
ತಾನೆ ಅರ್ತ ಬೆರ್ತ ಮರ್ತ ತಾನೆ ಸರ್ವನಾದ ಮೇಲೆ ||3||
ತಾನೆ ಲಕ್ಷ ಸಾವಿರ ನೂರು ತಾನೆ ಹತ್ತೊಂಬತ್ತೆಂಟೇಳು |
ತಾನೆ ಆರೈದು ನಾಲ್ಕು ಮೂರು ತಾನೆ ಎರಡೊಂದಾದ ಮೇಲೆ ||4||
ತಾನೆ ನೀನು ನೀನೆ ತಾನು ತಾನೆ ಅಲ್ಲ ತಾನೆ ಇಲ್ಲ |
ತಾನೆ ಮಹಾಂತ ತಾನೆ ತಾನು ಏನೊ ಏನೊಂದಾದ ಮೇಲೆ ||5||
ಸಮದೃಷ್ಟಿ
ಸರ್ವರ ಸಮದೃಷ್ಟಿಸುವದೊ | ಆ
ನಿರ್ವಾಣ ತಾ ಕೈ ಬೀಸುವದೊ |
ಗರ್ವನಳಿದು ಸ್ವಯಂಜ್ಯೋತಿ ತಾನಾದರೆ |
ನಿರ್ವೈಲವೆ ನಿಜ ನೀನೆನಿಸುವದೊ ||ಪಲ್ಲ||
ರೊಟ್ಟಿಯ ಪುಟ್ಟೆಂದು ಕರದಿ | ಅದರ
ಭೆಟ್ಟಿ ನೀ ಏನೆಂದು ಅರದಿ |
ತೊಟ್ಟಿಲೊಳಗೆ ತನು ತೊಟ್ಟಾಡು ಆತ್ಮನ |
ಹುಟ್ಟಿಸಿದವನ ಹೆಸರಿಟ್ಟು ನೀ ಮರದಿ ||1||
ಹಲವು ಜನ್ಮದೊಳ್ಹೆತ್ತ ಪ್ರಾಣಿ | ಬಂದು
ನಿಲ್ಲಲು ಕಾಲ್ಹಾರಿ ಮುಗುದಾಣಿ |
ಬಲವಗೆಡಿಸಿ ಭವಕ್ಕೀಡು ಮಾಡಿದೆನೆಂದು |
ತಿಳಿವದೆಂದಿಗೆ ನಿನ್ನ ನೆಲೆ ನೀನು ಕಾಣಿ ||2||
ಎಲ್ಲ ಸ್ವರೂಪಕೇನಾದಿ | ಅದ
ರಲ್ಲಿರುವದು ನಿನ್ನ ಹಾದಿ |
ಬಲ್ಲ ಶ್ರೀಗುರು ಮಾಂತೊಲ್ಲಭನಾದರೆ |
ನಿಲ್ಲದೊ ಜನ್ಮೆಂದಿಗೆಲ್ಲೆಮ ಬಾಧಿ ||3||
ಶಿವಲೀಲ ಸಕೀಲ
ಲಾಲ ಬಿಲಾಲದ ಬಾಲ ನಿಜದಾಲಯದೊಳಗನುಗಾಲ |
ಕಾಲ ಕರ್ಮದ ಮೂಲವ ತಿಳಿ ಭವ ಜಾಲ |
ಮೂಲವೂ ಶಿವಲೀಲ ಸಕೀಲ ||ಪಲ್ಲ||
ಅವನ ಕೈಯಾಗ ಕಾಸಿಟ್ಟು ಮತ್ತ
ಇವನಿಗೆ ಜೋಳಿಗಿ ಕೊಟ್ಟು |
ಅವ ಇವನಿಗೆ ಕೊಡ ಇವ ಅವನಿಗೆ ಬಿಡ |
ಅವ ಇವ ಇವ ಅವ ಅವ ಆದವ ಯಾವ ||1||
ಅರವತ್ತಾದವು ಬೊಂಬಿ ಅವ
ಕ್ಕರುವಿಲ್ಲಹೊಯಿತು ಡೊಂಬಿ |
ಅರುವ ಅರುವಿಸುವಿರಿ |
ಅರುವಿನೊಳಿರುತಿರಿ ಎಲ್ಲರಿದ್ದೂ ತನ್ನ ಶಿರವದೂಗುವದು ||2||
ಹತ್ತುವಿಗೊಂದೇ ಬೀಜ ಅದ
ಕ್ಹತ್ತತ್ತಾದವು ಗೋಜ |
ಹತ್ತುವಂದೆ ವಂದೇಹತ್ತು |
ಹತ್ತೊಂದಿಲ್ಲ ಗೊತ್ತು ತಿಳಿಯೊ ಮಹಾಂತುತ್ತುಮನೊಳಗೆ ||3||
ಸೋಜಿಗಾ
ಅ ಹ ಹ ಇದು ಏನು ಸೋಜಿಗಾ |
ತಾನೇ ತಾನಾದ ಮೂಜಗಾ ||ಪಲ್ಲ||
ಆ ಹರಿಬ್ರಹ್ಮರು ಬಹುಯುಗ |
ಸಾಧಿಸಿ ಕಾಣರು ಇಹುದೇ ಯೀಗ ||1||
ಯಶವ ನಾಮ ಹಲವೆಂದು ಇಂದು
ಹೆಸರುಗೊಂಡು ಕರಿಯಲಿಕ್ಕಿಲ್ಲೊಂದು ||2||
ಅಷ್ಟ ರೂಪವಾಗಿಹುದೆ ತಾನು |
ದೃಷ್ಟಿಯಿಟ್ಟರಿಟ್ಟಿಲ್ಲ ಖೂನು ||3||
ಕಾಲಕಾಲ ಮಾಡಿದ ಫಲಪ್ರವರ
ನಾಲಿಗೆ ಕಾಣುದು ಕೊನಿ ಸವಿ ಬೆವರ ||4||
ಭವವಾದವ ತಾನಲ್ಲಾಯೆಲ್ಲಾ
ಅಂವ ಆಗದೆ ಆಗವವ್ಯಾಂವಿಲ್ಲಾ ||5||
ಸರ್ವ ಶೂನ್ಯ ಮಹಾಂತೇಶ ಈಶಾ |
ಸರ್ವತಾನೆ ಆಕಾಶ ರೌಶಾ ||6||
ಭಾವರುದ್ರ
ಭಾವರುದ್ರಕ್ಕಿಗೆ ನಿರ್ಲಕ್ಷವೆ ಲಕ್ಷ |
ಇಕ್ಕೋ ಮಹಾಪೊಕ್ಕೊ | ಸಾವಿನ ಸಾವದು |
ಸಾವಧಾನದೊಳು ಹೊಕ್ಕೊ |
ದಕ್ಕೊ ಬಿಡು ಸೊಕ್ಕೊ ||ಪಲ್ಲ||
ನಿರ್ವೈಲವೆ ನಿಜ ಹುಸಿಯೇ ಸ್ವಯಂಭೋ |
ಸರ್ವ ಜಗವು ತಾನೆ ನಿನಗೆ |
ನಿರ್ವೈಸಲು ಜೀವತನು |
ಕರಣೇಂದ್ರಿಯವು ಸತ್ತೋ ಬಹು ಚಿತ್ತೋ ||1||
ರೂಪಿನ ನೆರಳು ನಿರೂಪೋ ಸ್ವರೂಪೋ |
ನೀ ಪರಕಿಸು ನಿನ್ನ ತನ್ನೊಳಗೆ |
ರೂಪು ನಿರೂಪವಾದರೆ ನೆರಳೋ ಈ |
ಹುರುಳೋ ತಿಳಿಯೋ ಈ ಸುಖ ತಳಿಯೋ ||2||
ಎಲ್ಲಾ ಬಲ್ಲಾದ ರೂಹು ಅರವು ಬಲ್ಲದ್ದೇನದು |
ಬಲ್ಲಾದರ್ಹೇಳ ಅನುಭವ ಒಂದೇ
ಸೊಲ್ಲಿಲರಿಯದು ನಿರ್ವಾಚ ಮಹಾಂತ |
ಪುರದೊಡಿಯ ಎಂದಿಗೂ ಮಡಿಯ ||3||
ಪಡುಕೊಂಬವರ ಕೈಲಾಸ
ಅಷ್ಟು ತಾ ಸುಳ್ಳಲ್ಲ ಒಂದಿಷ್ಟು ತಾ ಖರೆಯಲ್ಲ |
ಅಷ್ಟಾದಶ ಪುರಾಣ ಶೃತಿ ಸ್ಮೃತಿ
ದೃಷ್ಟ ತೋರುವದೊಂದಿಲ್ಲ ||ಪಲ್ಲ||
ಇಲ್ಲದ್ದೇನೊಂದಾಯಿತು ಅದು
ಎಲ್ಲ ತಾನೆ ಎನಿಸಿತ್ತು |
ಹೊಲ್ಲೊಳ್ಳೆಂಬೊದೆಲ್ಲಿತ್ತು ಅದು
ಇಲ್ಲದ್ದಿದ್ದಿಲೆನಿಸಿತ್ತು ||1||
ಸತ್ತಾದರೆ ತಾ ಚಿತ್ತಾಯಿತು ಈ
ಚಿತ್ತ ತಾ ಕತ್ತಲವಾಯಿತು
ಗೊತ್ತು ತಿಳಿದರಾನಂದಾಯಿತು | ನೀ
ಸತ್ಹೋದರೆ ತಾ ಸತ್ಹೋಯಿತು ||2||
ಬ್ರಹ್ಮ ತಾನೆಂಬುದಕೆ ಈ
ಹಮ್ಮಗಿಮ್ಮ ಏನದಕೆ |
ಸುಮ್ಮನೆ ಅಳಳಳಳಳಾದುದಕೆ | ನೀವು
ಉಮ್ಮಳಿಸುವದಿನ್ನೇನಿದಕೆ ||3||
ತಾನೆ ತಾನೆ ಆದಲ್ಲಿ ನಾನು
ನೀನು ಯಾವಲ್ಲಿ |
ತಾನೇನಾಯಿತೆಂದ್ರೇನಲ್ಲಿ | ನಾ
ಖೂನ ಹೇಳುವದೇನಿಲ್ಲದ್ದಿಲ್ಲ ||4||
ಕಡಕೋಳ ಗುಡ್ಡದ ಬಹು ಕಾಸ | ಅಲ್ಲಿ
ಸಡಗರ ಮಹಾಂತಪುರ ವಾಸ
ನಡಿನುಡಿವಾಸರಿಸದೇ ತ್ರಾಸ | ಅದು
ಪಡಕೊಂಬುವರಿಗೆ ಕೈಲಾಸ ||5||
ಪರಬ್ರಹ್ಮ
ಆ ಪರಬ್ರಹ್ಮವು ನೋಡೊ ನಿಜ |
ರೂಪದೊಳಗೆ ಲೋಲಾಡೊ |
ಪಾಪವು ಪುಣ್ಯವು ಜೋಡೊ | ಜಗ
ದ್ವ್ಯಾಪಾರವು ಬಹು ಕೇಡೊ ||ಪಲ್ಲ||
ಕಾಣುದು ಕಾಣುದು ಕಾಣೋ |
ಕಣ್ಣಿಗಿ ಕಾಣುದು ಕಾಣುದು ಜಾಣೊ |
ಪ್ರಾಣ ಪ್ರಪಂಚಕೆ ತ್ರಾಣೊ |
ಅಣುರೇಣು ತೃಣಕಾಷ್ಟಾಣೊ ||1||
ಕಂಡದ್ದು ಕೂಡ್ರಿಸಿಕೊಂಡು ಬಹು |
ಬಂಡು ಮಾಡುತಿ ಹೊಯಿಕೊಂಡು |
ಪಿಂಡುಳ ಕೊಳಲರಿ ಶೆಂಡು |
ನಿಂದುಂಡುದ್ದೇನೆಲೆ ಹಂಡು ||2||
ಜೀವ ಮನವು ತನು ತಾಯೋ | ನಿನ
ಗಾವುದು ಇದರೊಳು ವಾಯೋ |
ಭಾವಿಸುವ ನ್ಯಾಯಾನ್ಯಾಯೋ ಮಹಾ
ದೇವ ಮಾಂತನೇ ಕಾಯೋ ||3||
ಮಾಯದ ಹುಣ್ಣು
ಎಲೊ ಎಲೊ ಏ ಮಾನವಾ |
ತ್ರಿಜಗದೊಳ್ ನಿನಗಿನ್ಯಾವನುವಾ |
ಸಲುವದು ಸಲ್ಲದು ಹೊಲ್ಲೊಳ್ಳೆಂಬದು |
ಹಿತವಹಿತವರಿ ಇದು ನಿನ್ನನುವ ||ಪಲ್ಲ||
ಸಾಯಲು ನೀ ಬಂದಿ | ಈ
ಮಂದಿಗೆ ಸಾಯವಲ್ಲಿರ್ಯಾಕಂದಿ |
ಕಾಯಕಷ್ಟ ತುಸು ಬಾಯಿಗೆ ಬಾಳೆ ಹಸು |
ಮಾಯತವರಿಯದೆ ಯಾರದರೇ ತಿಂದಿ ||1||
ಹಡದವರ ಹರೆ ಕಳೆತಿಯಾ | ಆ
ತಂದಿಯ ನಡುತಲೆ ಮಡುವಳದಿ
ಷಡುರಸ ಸವಿಹಾಲ್ ಕುಡಿದು |
ತಿಪ್ಪಿಯ ಪಾಲು ತುಡುಗ ಮಾಡಿ ನೀನೆ ಹಳದಿ ||2||
ನೋವು ಸಾವೊಲ್ಲೆಂದಿ |
ಆಗದು ದಾವತಿ ಬಾರದಂದಿ |
ಮಾಯ ಹುಣ್ಣು ಉಗರಿಕ್ಕಿ ಜೀವರಸೊಳು ಸಿಕ್ಕಿ |
ದೇವ ನೀನೇ ಮಹಾಂತ ಎಂಥವನಂದಿ ||3||
ಸಾವದು ಸನೆ ಬಂತು
ದಾವದಾದೋ ನಿಜದಾವದಾದೊ |
ನಿನ್ನ ದಾಂವತಿ ತೀರದು |
ಸಾವದು ಸನೆ ಬಂತು ||ಪಲ್ಲ||
ಅವನಿವನೆಂಬುವಿ ಮತ್ತಿವನ್ಯಾರು ಅವನ್ಯಾರು |
ಅವನ್ಹೆರಸರೇನೋ ಮತ್ತಿವನ್ಹೆಸರೇನೋ |
ರವಿ ಕಾಣದ ಮುನ್ನ ಕವಿ ಕಂಡೆವೆಂದೆನಿಸಿ |
ದಿವರಾತ್ರಿಯೊಳು ಹೇಯ ಬಿಡರಣ್ಣಾ ||1||
ಅದು ಇದೆಂಬುದು ಬಲ್ಲೆ ಆದುದು ಅರಿವಲ್ಲೆ |
ವೇದವಿನ್ನೇನೋ ಓದುದಿನ್ನೇನೋ |
ಆದಿ ಅನಾದಿಯ ಭೇದವ ತಿಳಿಯದೆ |
ಸಾಧು ಹ್ಯಾಂಗಾದ್ಯೋ ಸದ್ಭಕ್ತ ನೀ ಹ್ಯಾಂಗಾದ್ಯೋ ||2||
ಹೌದೇನು ಅಲ್ಲೇನು ಅಲ್ಲೇನು ಹೌದೇನು |
ಹೌದು ಅಲ್ಲ ಎರಡಿಲ್ಲದಿದ್ದರೇನಾದಿ |
ಮಹಾಂತೇಶ್ವರನೊಲ್ಲಭನೊಲಿಸಲು |
ಅಲ್ಲೇ ಹೌದೊ ಹೌದೇ ಅಲ್ಲ್ಯೋ ||3||
ಭಲೆ ಬ್ರಹ್ಮಾಂಡ
ಭಲೆರೆ ಭಲೆರೆ ಭಲೆ ಬ್ರಹ್ಮಾಂಡೆ ನಿನ್ನ
ನೆಲೆ ಕಲೆ ತಿಳಿಯದೇ ನೀ ಪಿಂಡಾಂಡೆ ||ಪಲ್ಲ||
ಸಾಧು ಸಂಗವೆ ವಾಹ್ವ ಓದು
ಅನುಭಾವೆ ವಾಹ್ವ |
ಬೋಧ ಶ್ರೀಮಹಾಂತನ
ವಚನೊಂದು ವಾಹ್ವ ||1||
ಚಿಂತಿಗೆಡುವದೊಂದೊಹ್ವಾ |
ಸಂತರಾಗುವದು ವಾಹ್ವ |
ಅಂತರಂಗ ಹುಡುಕುವ
ಮಹಾಂತರು ವಾಹ್ವ ||2||
ಅರವು ಮರವುದೊಂದೊಹ್ವ
ಕಿರಿಯು ಮೆರೆವುದೊಂದೊಹ್ವಾ |
ಮರೆಯುವ ಮಹಾಂತನ |
ಮರೆವುದೊಂದೊಹ್ವಾ ||3||
ದಾವದು ಬೇಕವ್ವ
ದಾವದು ನಿನಗಿದು ಬೇಕವ್ವ | ಈ
ದಾವತಿ ನಿನಗಿದು ಸಾಕವ್ವ |
ತಾವುದು ಈವುದು ಕಾವುದು | ಕೊವುದು
ಬಾಹುದು ಹೋಹುದು ಯಾಕವ್ವ ||ಪಲ್ಲ||
ಒಂದಾದರೆ ಬಹು ಚಂದವ್ವ | ಅದು
ಒಂದರೊಳೊಂದೊಂದ್ಹೊವ್ವ |
ಮುಂದೆ ಉಣುವದು ಹಿಂದೆ ಪಿಣಿವದು
ಎಂದಿಗೆ ನೀಗುವದಲ್ಲವ್ವ ||1||
ಪುಣ್ಯಾತ್ಮೆಂದೆ ದೇಹ ದಣಿದವ್ವ | ಅವನ
ತುಣ್ಯಾರ್ಯಾರಿಗೆ ಮಣಿದಾದವ್ವ |
ಪುಣ್ಯನಾಗುವದು ಅನ್ಯ ನೀಗುವದು
ಬಣ್ಣತನ ಇನ್ನೇನವ್ವ ||2||
ಹೊಲ್ಲದ ಕೊಳ್ಳೆ ಬಣ್ಣೆವ್ವ | ಅದ
ಅದರಲ್ಲಿ ಹುರುಳಿಡು ಕಣ್ಣವ್ವ |
ಎಲ್ಲಿ ಆಗುವದು ಅಲ್ಲೆ ಹೋಗುವದು
ಎಲ್ಲ ಮಹಾಂತ ನೀ ಇಲ್ಲೆವ್ವ ||3||
ಭವದಾದ
ಆ ಪರಬ್ರಹ್ಮವೆ ತಾ ತಾನಾದ |
ನನಗ್ಯಾಕೆ ಈ ಭವದಾದ |
ರೂಪಿದು ಅಪರೂಪ ಆದ ಮೇಲೆ |
ಈ ಪರಿ ಆಡುದೇನಾಗಾಧ ||ಪಲ್ಲ||
ಇಲ್ಲದ್ದೊಂದು ಅಣು ಮಾತ್ರವಾಗಿ ತಾ |
ಇದ್ದದ್ದಾಯಿತು ವಿನೋದ |
ಇಲ್ಲೆಂಬುದ ತಾನಿದ್ದುದ್ದಾದ ಮೇಲೆ |
ಇಲ್ಲಾಗುವದೇನಾಗಾಧ ||1||
ಇಲ್ಲೆಂಬ ನಿಃಕಲ ನಿಜ ತತ್ವವು ನಾ |
ಬಲ್ಲೆಂಬುದು ವಿವಾದ |
ಎಲ್ಲೆಲ್ಲೆಂಬುದು ಒಲ್ಲೆನೆಂಬ ಭ್ರಮೆ | ತಾ
ನ್ನಲ್ಲಾಗುವದೇನಾಗಾಧ ||2||
ಚಿತ್ತು ಸತ್ತಿನಲ್ಲೆ ಹೆತ್ತ ಮಾಂತನು ತಾ |
ನನ್ನಲ್ಲೇನಾದ ವಿಭೇದ |
ಹೆತ್ತಾತ್ಮನೇ ತಾ ಚಿತ್ತೈಸಿದರೆ | ನಾ
ಸತ್ತು ಹೋಗುವದೇನಾಗಾಧ ||3||
ತಾನೇ ತಾನಾದವ
ದಾವದೊ ಪರಬ್ರಹ್ಮದಾವ ಭಾವಾದದ್ದು |
ದಾವನಿದ್ದವನ ಬಲ್ಲೆನೆಲೊ ||ಪಲ್ಲ||
ನಿರ್ವೈಲವೇ ನೆನವಿನ ಮಂತ್ರದಿಂದಾದ |
ಸರ್ವ ಜಗವು ನಾನೀನೆಂಬುವದೇನೊ |
ನಿರ್ವೈಲಿಗೆ ನೆನನಿರ್ವಹಿಸಿದವನ್ಯಾವ |
ನಿರ್ವೈಲೆ ನಿಜ ವಸ್ತು ಎಂಬುವದೇನೊ ||1||
ಏನೇನು ಇಲ್ಲದೆ ತಾನೇ ತಾನಾದವ |
ಏನೆಂದನೊ ಸುಳ್ಳೆಂತೆಂದನೊ |
ಸ್ವಾನುಭಾವದಿ ಸಂಧಾನವ ತಿಳಿ ನಿಜ |
ತಾನೆ ಹೌದೆಂಬೆರಡ್ಹಾನ್ಯಾವೇನೊ ||2||
ಎಲ್ಲಿ ನೋಡಲು ಮಾಂತಲ್ಲದಿಲ್ಲೆಂಬುವ |
ಬಲ್ಲಾಗಮವು ತಾವ್ಯಾವಪ್ಪನೊ |
ಸೊಲ್ಲಲಾಗದು ಸುಮ್ಮನಂಜಿಸು |
ಯಲ್ಲಪ್ಪನು ತಾನೇನಿಲ್ಲಪ್ಪನೊ ||3||
ಅಪೂರ್ವ
ಅಲಲಲಲಲೇನಿದು ಅಪೂರ್ವ |
ಮಹಾ ಮಾಂತ ನಿನ್ನ ನಿಜ ನಿಲವು |
ನೆಲ ಜಲ ಅನಲಾ ನೀಲಾಕಾಶಾತ್ಮ |
ರವಿ ಶಶಿ ತಾನೇ ಹಲವು ||ಪಲ್ಲ||
ಅವಲದೊಳನಾದಿ ಅನಾಮ ಬೀಜ |
ನಿರೂಪಮರ ನಿಃಕ್ರಿಯ ಕಾಯ |
ಅವಯದಿ ಸ್ವಯಂಭು ಸತ್ಕಳೇಸುನಾದ |
ಬಿಂದು ಬಹು ಬಿತ್ತುವಿನ ಹೆತ್ತಾಯಿ ||1||
ಇಲ್ಲದ ನೆನವಿನ ಬಯಲಾದಾತ್ಮನು |
ಮಹಾತ್ಮವು ತಾನೇ ಬಹು ರೂಪಾಗಿ |
ಅಲ್ಲೆಲ್ಲಿಗೆ ಭ್ರಮೆಗೊಳಿಸಿ ನೀ |
ಸಿಗದಿರು ಬಿಡಬ್ಯಾಡೆಂಬುವದು ಮೇಲಾಗಿ ||2||
ಒಂದರು ನೆನವಿನೊಳನಂತ ರೂಪ |
ಒಂದು ರೂಪಿಗಗಣಿತ ನೆನವು |
ಹಿಂದ ಮುಂದಿಡು ಎರಡಡಿ ಒಂದಂಗಕ್ಕೆ |
ದಾವದಕಾದ ಹಿರಿಕಿರಿ ತನವು ||3||
ವಿಭು ನೀ ಇರೆ ಪ್ರಭು ತಾನಲ್ಲೆಂದಾನು |
ತಾನಲ್ಲೆನೇ ಮಾಯಾ ಹ್ಯಾಂಗ್ಹೋಗುವದೊ |
ಆ ಭವ ಭವ ಎಂಬಭಿಪ್ರಾಯವ |
ತಿಳಿಯಲು ಸರ್ವವು ಖರೆ ಹ್ಯಾಂಗಿಹದೊ ||4||
ಅಲ್ಲಿನ ಗುರುವಿನ ಗುರುವಿಲ್ಹಾನ |
ತಾನಲ್ಲ ತಮ್ಮಪ್ಪಲ್ಲ |
ಎಲ್ಲ ಮಾಂತ ಮಾಂತ ನಮೊ ನಮೊ
ನಾನಿದ್ದಿಲ್ಲ ನೀನಿದ್ದಿಲ್ಲ ||5||
ನಿಜ ಗೊತ್ತು
ನಿರ್ವಯಲೆಂಬೊ ನಿಜ ಗೊತ್ತು |
ತಾನಿದ್ದು ಇಲ್ಲದೊಂದಲ್ಲಿತ್ತು |
ಅವಾಚ ಬ್ರಹ್ಮ ಎನಿಸಿತ್ತು |
ಆ ಬ್ರಹ್ಮವೆ ಪರಮಾತ್ಮ ಆಗಿತ್ತು ||ಪಲ್ಲ||
ಕದರ ಬಿದರಿಸಿದಂಗೆರಡಾಯಿತು |
ಅದು ಹರಹರಿಯೆಂಬೊ ನಾಮಾಯಿತು |
ಹರಹರಿಯಿಂದೆ ಸ್ವಾತ್ಮಾಯಿತು |
ಆ ಸ್ವಾತ್ಮನೇ ತಾನೆರಡಾತ್ಮಾಯಿತು ||1||
ಎರಡಾತ್ಮನೆ ಅರು ಮರುವಾಯಿತು |
ಆ ಅರುಮರುವೆ ಹಗಲಿರುಳಾಯಿತು |
ಹಗಲಿರುಳೊಳು ಯುಗ ಜಗವಾಯಿತು |
ಈ ಯುಗ ಜಗದೊಳುದಯ ಲಯವಾಯಿತು ||2||
ನೆಲ ಜಲ ಅನಲ ನೀಲಾಕಾಶ |
ಕೇಳು ಪಂಚಾನನ ಪರಮೇಶ |
ಪರಮೇಶನೆ ಗುರು ಮಾಂತೇಶ |
ಗುರು ಮಾಂತೇಶನೆ ಎನ್ನ ಭವನಾಶ ||3||
ಸುಳ್ಳೇ ನೀ ಮಾಡಿದ್ದೆಲ್ಲ
ಸುಳ್ಳ ಸುಳ್ಳೆ ಸುಳ್ಳೊ ನೀ ಮಾಡಿದ್ದೆಲ್ಲ ||ಪಲ್ಲ||
ಆಶಿ ಬಿಡದೆ ಪರದೇಶವ ತಿರದುಂಡು |
ಶ್ರೀಶೈಲುಳವಿ ಹಂಪಿ ಕಾಶಿಯಾತ್ರೆಗಳೆಲ್ಲ ||1||
ಪಟ್ಟದೈಯ್ಯನು ತಾನು ಕೊಟ್ಟ ಲಿಂಗಕ್ಕೆ ಮನ |
ಮುಟ್ಟಿ ಪೂಜಿಸಿ ನಯನಿಟ್ಟು ನೋಡುವದೆಲ್ಲ ||2||
ಅಷ್ಟಾವರ್ಣ ಪಿಡಿದಷ್ಟಾರ್ಚನೆಯಿಂದ |
ಶ್ರೇಷ್ಠ ಪೂಜಿತನಾಗಿ ದೃಷ್ಟಿ ತೋರುವದೆಲ್ಲ ||3||
ಮೂರು ಮಲವು ಬಿಟ್ಟು ಮೂರು ಮುದ್ರೆ ಅಳವಟ್ಟು |
ಆರು ವರ್ಗವ ಸುಟ್ಟು ಪೂರ ಜ್ಞಾನಾದುದ್ದೆಲ್ಲ ||4||
ಆರು ಮೂರರ ಮೇಲೆ ಏರಿ ನಿಂದ್ರಲು ಮುಂದೆ |
ವಿೂರಿದುನ್ಮನಿ ಪ್ರಭೆ ಸೂರ್ಯಗೊಂಬುವದೆಲ್ಲ ||5||
ಶೇಷನ ಮುಖದೊಳು ಸೂಸುವಮೃತ ಕೊಂಡು |
ಸಾಸಿರೆಸಳಿನಲ್ಲಿ ಘೋಷ ಕೇಳುವದೆಲ್ಲ ||6||
ಅತ್ತಲಿರುವ ಕಲೆ ಇತ್ತ ಸೆಳೆದು ತಂದು |
ಹತ್ತಿಸ್ಯದಕ್ಕಿದೆ ಗೊತ್ತು ಎಂಬುವದೆಲ್ಲ ||7||
ಬಿಳಿದು ಕೆಂಪಕೆ ಬಿತ್ತು ಒಳಗೆ ಬಂದದ್ದು ಚಿತ್ತು |
ಹಳದಿ ಹಸರು ಕಪ್ಪು ತಳಿದು ತಿಳಿಯುವದೆಲ್ಲ ||8||
ನಾನಾ ವಿನೋದದ ಮೋಹನ್ಮಾಂತೇಶನೆ |
ತಾನೆ ತಾನೆಂಬುದೊಂದೆ ನಾನು ನೀನೆಂಬುದೆಲ್ಲ ||9||
ಕಾಡುವ ಮನ
ಕಾಡುವ ನಡತಿ ಇದ್ಯಾಕ ಏ ಮನವೆ |
ಕೇಡು ಬಯಸಿ ಮರುಗುವದಿದು ಘನವೆ ||ಪಲ್ಲ||
ಸ್ವಲ್ಪ ಸುಖಕ್ಕೆ ದೊಡ್ಡ ಕಲ್ಪನೆಗಳದ್ಯಾಕೆ |
ಅಲ್ಪಿಸಿ ಅಳಿಸುವೆ ಬಲ್ಪಿದು ತರವೆ ||1||
ಮಾಡುವ ಧರ್ಮವ ಮಾಡಲು ಮರಸಿ |
ಮಾಡದ ಕರ್ಮವ ನೀ ಮಾಡಿಸುವದ್ಹಿತವೆ ||2||
ಸುಲಭ ಚಿಣಮಗೇರಿ ಸಲೆ ಮಹಾಂತೇಶನ |
ಒಲಿಸುವ ಸಮಯ ಬದಲಿಸುವದುಚಿತವೆ ||3||
ಮನವೆ
ಮನವು ಎತ್ಹೋದರ್ಹೋಗಲಿ ಜೀವೆ |
ತನು ನೀನೊಂದಾಗೋದಾಗಲಿ ||ಪಲ್ಲ||
ಘ್ರಾಣಿಲ್ಲದ್ವಾಸನೆ ಗೊಡದು |
ಕಣ್ಣ ಕಾಣದೆ ವರ್ಣವ ನೋಡದು |
ವಾಣಿಯಿಲ್ಲದೆ ಮಾತನಾಡದು | ನಿನ್ನ
ಪಾಣಿಯಿಲ್ಲದೆ ಏನು ಮಾಡದು ಜೀವೆ ||1||
ಮೂಲವ ಕೀಳದೆ ಕೇಳದು |
ಕಿವಿ ಆಲಿಸದಿರ್ದರೆ ಕೇಳದು |
ನಾಲಿಗಿಲ್ಲದೆ ಸವಿ ತಿಳಿಯದು | ನಿನ್ನ
ಕಾಲೇಳದೆ ತಾನೇಳದು ಜೀವೆ ||2||
ಅಂಗಿಲ್ಲದೆ ಲಿಂಗನಾಗದು | ನಿನ್ನ
ಅಂಗವಿಲ್ಲದೆ ಸಂಗಕ್ಹೋಗದು |
ಮಂಗ ತಾನಾಗದೆ ಯತ್ನ ಸಾಗದು | ನಮ್ಮ
ತುಂಗ ಮಾಂತೇಶನ ನೀಗದು ಜೀವೆ ||3||
ಮಹಾಂತನ ವಚನ
ಕೆಡಬೇಡೆಂದರೆ ಕೆಟ್ಟೇನಂದರಿಗೆ |
ಹೇಳುವದಿನ್ನೇನಿಲ್ಲ |
ಒಡೆಯ ಶ್ರೀಮಹಾಂತನ ವಚನ ಸಾರಿದೆ |
ನನ್ನಿಂದಾದೊಷ್ಟೆಲ್ಲ ||ಪಲ್ಲ||
ಹಿಡಿದವ ಹಿಡಿಸಿದವ ಹಿಡಿಸಿಕೊಂಡಾನೆಂಬೋ |
ನಡವಳಿ ನುಡಿ ಹಿಂಗಿತ್ತು |
ನಡಿನುಡಿ ಅರಿಯದೆ ಕಡಿ ಹೊಡಿಯೆಂದರೆ |
ಬಿಡಹುವದೆ ಹೆಡತಲಿ ಮಿತ್ತು ||1||
ಕಾಲ ಮುಂದ ನಿಂದು ಕರ್ಮವ ರಚಿಸಲು
ಕಾಲಕರ್ಮ ಸಂದಿಸಿತು |
ಈ ಲೋಕದ ಒಡನಾಡಿ ದೋಷವು |
ಸಾಲದೆ ಸಾಧು ನಿಂದಿಸಿತು ||2||
ತನ್ನ ಮಂತ್ರವದು ತನಗೇ ತಿರುಗುವದು |
ತನ್ನ ಪುಣ್ಯ ಪಾಪ ತನಗೇ |
ಹೊನ್ನು ಜಕಾತಿಗೆ ಒಟ್ಟಿಲಿಸಿಟ್ಟರೆ |
ಹೊನ್ನೊಂದುಳಿಯದೇ ತನಗೆ ||3||
ನೀತಿ ತಪ್ಪಿ ಮಾತಾಡುವ ಮಾನವರು |
ಕೋತಿಯಾಗುವದೇನರಿದೆ |
ಭೀತಿಗೆಟ್ಟು ಹಿಂದು ಮುಂದೊಂದವೆ |
ಗೊತ್ತು ಹಂದಿ ಜನ್ಮಿರದೆ ||4||
ಹೇತು ಬಂದು ತಿಂದಾತುಮೇ ಬಲಿದು |
ಮಾತು ಬಹಳ ಖಚ್ರ್ಯಾಕೆ |
ಕಾತುರದವರಿಗೆ ಯಾತರ ಭಯವದು |
ಜಾತ್ವಮ್ರ್ಹೇಳುವದು ಠೀಕೆ ||5||
ಬೇಕೆಂಬುದು ಭವ ಸಾಕೆಂಬುದು ವೈರಾಗ್ಯ
ಸಾಕುಬೇಕು ಎರಡಿಲ್ಲ |
ಕಾಕಗುಣದ ಜನರ್ಯಾಕಾಡೊಲ್ಲರು |
ಲೋಕೇಶ್ವರ ಬಲ್ಲೆಲ್ಲ ||6||
ಕೆಡಸಿದವರನ ಕೆಡಸಬಾರದೆಂದು |
ಕೆಡಗುಡದ್ಹಿಡಿದನುಮಾನ |
ಕೆಡಸಿದ ದ್ರೋಹ ತನ್ನ ಕೆಡಿಸದೆ ಬಿಡುವದೆ |
ಕೇಡು ಹಿಡಿ ನಿವೃತ್ತಿ ಕೂನ ||7||
ಅದು ಒಲ್ಲೆಂದರೆ ಅದು ಒಳಿತಾಯಿತು |
ಅದು ನರಿ ನಾಯಿಗೆ ಗಂಟು ಬಿತ್ತು |
ಅದು ತಾನಾದವಗದರನುಮಾನವ |
ಅದು ಇದು ನನಗೇನುಂಟು ||8||
ಹಿಡಿ ಹಿಡಿಯನೆ ದೈವ ಹಿಡಿವೆನು ಹಿಡಿದದು |
ಬಿಡು ಬಿಡುವೆನೆ ದೈವ | ಬಿಡುವೆನೆ
ಹಿಡಿಸಿ ಬಿಡಿಸಿದದಗಣಿತ ಮಹಾಂತನ |
ಕಡತದೊಳಗೆ ಬರದಿಡುವೆ ||9||
ನಿಜ ಪ್ರಕಾಶ
ಬಯಲ ಬೆರಸಬೇಡೆಲೊ ಆ |
ಬಯಲು ನಿನಗೆ ಕೇಡಲೊ ||ಪಲ್ಲ||
ಹಲವು ನೆನವು ತೋರುವಾ |
ಮಲಿನ ಜನನ ತಾಗುವಾ |
ಕುಲಚಲಕ್ಯಾಕ್ಹೋರುವೆ | ನಿನ್ನ
ನೆಲೆಕಲೆ ತಿಳಿ ಸಾರುವೆ ||1||
ಮನ ಬುದ್ಧಿ ಚಿತ್ತ ಅಹಂಕಾರ |
ತನು ಮನ ಧನ ಭಯಂಕಾರ |
ಘನಕ್ಕೆ ಘನ ಮಹಾ ಓಂಕಾರ | ಮೃದು
ತನದೊಳಿರುವ ಶಂಕರ ||2||
ಮಾಡೋ ಈ ಲೋಕುದಾಸಿನ |
ಬೇಡೋ ಶಿವಲೋಕೇಶನ |
ನೋಡೋ ಶ್ರೀಮಹಾಂತೇಶನ | ಬೇಗ
ಕೂಡೊ ನಿಜ ಪ್ರಕಾಶನ ||3||
ಬಯಕೆ ತುಂಬಿದ ಭಾವ
ಬಯಕೆ ತುಂಬಿದ ಭಾವ | ನೀ
ಬರಕಿ ಖಾಲಿಯ ಮಾಡೋ |
ಸ್ವಯ ವಿನೋದ ಸಾಕು ಮಾಡಿ |
ಸಕಲ ನಿಷ್ಕಲಗೂಡೋ ||ಪಲ್ಲ||
ಆರು ಚಕ್ರವನೇರೋ | ಮುಂದೆ
ಮೂರು ಚಕ್ರವ ಮೀರೋ |
ಸಾರಿ ಶೂನ್ಯವ ಸೇರೋ | ಆ
ಕಠೋರದಾಚಿಲಿ ಹಾರೋ ||1||
ನಿನ್ನ ನೀನೇ ಅರಿಯೋ | ಮತ್ತೆ
ನಿನ್ನ ನೀನೇ ಮರಿಯೋ ||
ನಿನ್ನ ನೀನೆ ಬೆರಿಯೋ | ಎಲೊ
ನಿನ್ನ ನೀನೇ ಮರಿಯೋ ||2||
ಬಯಲು ಬಯಲಾಗೋ | ಆ
ಬಯಲು ಬಯಲು ನೀಗೋ |
ಬಯಲು ಮಹಾಬೈಲಾಗೋ | ನಿ
ರ್ವಯಲು ಮಹಾಂತನ ಯೋಗೋ ||3||
ಸುರಪೂರ
ಈ ಊರು ಅರವತ್ತು ಒಂದಾಗೆ ನಡೆದರೆ
ಈ ಊರ ಸರಿ ಸುರಪೂರಲ್ಲ |
ಈ ಊರಡವಿ ತನ್ನ ಬೇಕಾದದ್ದು ಬೆಳಿವದು |
ಆ ಊರ ಸುತ್ತ ಮರಡಿಯ ಕಲ್ಲ ||ಪಲ್ಲ||
ಗೌಡರು ಮೂವರು ಕಮತ್ತಗೇರಾರ್ವರು |
ನಾಲ್ವರ್ಹಾರ್ವರು ಹತ್ತು ಮನಗಾರರು |
ಜೋಡಾಗಿ ನಡೆವರಿಪ್ಪತ್ತೈದು ರೈತರು |
ಕಾಡದ್ಹನ್ನೆರಡಾಯಿಗಾರರು ||1||
ಮೂರ ಸುತ್ತಿನ ಕೋಟಿ ಆರಗಸಿಯ ಬಾಗಿಲ |
ಮೂರ್ದಿಡ್ಡಿ ನಾಲ್ಕು ಕಾದುವ ಕೊತ್ತಲ |
ಚೋರವರ ಒಳಗಿರಿಸದೆ ಹೊರ ನೂಕಿ
ಪಾರೆ ತಿರಗುತ ಕಳಿ ಕತ್ತಲ ||2||
ಕೊಡುವಂಥದೆ ಕೊಟ್ಟು ಕೊಳುವಂಥದೆ ಕೊಂಡು |
ನಡಿವದೆ ನುಡಿವದು ನುಡಿದದ್ದೆ ನಡಿವದು |
ಒಡೆಯ ಚಿಣಮಗೇರಿ ಮೃಡ ಮಾಂತೇಶನ |
ಅಡಿಗಳೋಲೈಸಿ ದಯ ಪಡೆದು ||3||
ತಿಳಿದಾತ
ಈತನೇ ಸಾಕ್ಷಾತ ತನ್ನನೇ ತಾ ತಿಳಿದಾತ |
ಶಿವದಾತ ಸರ್ವಾತ್ಮ ತಾನಾದಾತ ಈತ ||ಪಲ್ಲ||
ನೀತಿಯಲ್ಲಿ ನಡಿವಾತ |
ಸಂಪ್ರೀತಿಯಲ್ಲಿ ಇರುವಾತ |
ಭೀತಿಯನಳಿದಾತ ಪರಂ |
ಜ್ಯೋತಿಯ ಕಾಣುವಾತ ಈತ ||1||
ತ್ಯಾಗಿಯಾಗಿ ಇರುವಾತ ಭವ |
ರೋಗವ ಕಳಿದಾತ |
ರಾಗವ ಅಳಿದಾತ | ಶಿವ
ಯೋಗವ ತಾಳಿದಾತ ಈತ ||2||
ಹಮ್ಮು ಹರಿದಾತ ತಾ |
ಸುಮ್ಮನೆ ಇರುವಾತ |
ಒಮ್ಮನದಿ ಇರುವಾತ | ಪರ
ಬ್ರಹ್ಮವಾಗಿ ಇರುವಾತ ಈತ ||3||
ವೈರಿಗಿ ವೈರಾಗ್ಯದಾತ |
ಸಂಸಾರ ಸೇರದಾತ |
ಮಾರನ ಮೀರಿದಾತ | ಕ
ಠೋರ ಹಾರುವಾತ ಈತ ||4||
ಆಶೆಯವುಡಿದಾತ ನಿ |
ರಾಶೆಯ ಹಿಡಿದಾತ |
ಕ್ಲೇಶವ ಕಡಿದಾತ | ಮಹಾಂ
ತೇಶನ ಪಡಿದಾತ ಈತ ||5||
ಘನದಾವುದೋ
ಮನವು ನೆನವು ಘನವದಾವುದೋ |
ನೀ ಹೇಳುವದೊ ||ಪಲ್ಲ||
ತಾಳ ತಂತಿ ಸ್ವರವನ್ನು ನೋಡಿ |
ಮೇಳ ಮೃದಂಗವನ್ನು ಕೂಡಿ |
ಹೇಳಿ ಕೇಳಿ ವೇಳೆಗಳದಿ |
ಊಳಗಿದರೋಳೇನು ತಿಳದಿ ||1||
ಬಸವ ಕಲ್ಯಾಣಕೆ ಬಂದು |
ಪಸರಿಸಿದ ಪವಾಡವೆಂದು |
ಉಸರ್ವರಿನ್ನಾಸೆಕ ಬಿತ್ತು |
ಬಸರು ಹಸಿತು ಪುಸ್ತಕ್ಹೇತು ||2||
ಅಡಗಿದವರ ಹಾಡಿಕೊಂಬಿ
ಪೊಡವಿ ಜನರ ಬೇಡಿ ಉಂಬಿ |
ಒಡಲು ಸೌಖ್ಯಾ ಮೆರೆವದೇನು |
ಮಡಿವಾಳಾಖ್ಯ ವರೆದ ಖೂನ ||3||
ನಿಜವು ತಿಳಿವಲ್ಲಿ
ನಿನ್ನ ನಿಜವು ನೀ ತಿಳಿವಲ್ಲಿ |
ಬನ್ನ ಬಡುವದೇನು |
ಮಣ್ಣಗೂಡುವದೇ ಬಲ್ಲಿ ||ಪಲ್ಲ||
ಹಲವು ಜನ್ಮದಿ ತಿರುಗುತ ಬಂದಿ |
ಮಲತ್ರಯೊಳಗೆ ಮೋಹಿಸಿ ನಿಂದಿ |
ಹೊಲಿಯೊಳು ಹುಟ್ಟಲಿಕ್ಕೊಲ್ಲೆಂದಿಗಂದಿ |
ಕುಲ ಛಲದಿಂದ ಗೆದ್ದು ಹಿಂದಿಂದೇನು ತಂದಿ ||1||
ಇಲ್ಲದಂತದಕೆ ಆಶೆಯ ಮಾಡಿ |
ಕಲ್ಲುದೇವರಿಗೆ ಭಾಗ್ಯವು ಬೇಡಿ |
ನೆಲ್ಲಿಕಾಯಷ್ಟು ಸಕ್ಕರಿ ನೀಡಿ |
ಇಲ್ಲೇನರಸಿದಿನ್ನೆಲ್ಲಿಂದ ತಂದಿತು ಖೋಡಿ ||2||
ಧರಿಯೊಳಧಿಕ ಶ್ರೀಚಿಣಮಗೇರಿ | ಅಲ್ಲಿ
ಮೆರೆವ ಮಂದಿರ ಮಹಾಂತನ ಸಾರಿ |
ಅರವು ವಿಚಾರಿಸು ಉನ್ಮನಿಗೇರಿ |
ಕುರುಹು ಕಂಡರೆ ನೀನು ಮರಳಿ ಭವಕೆ ಬಾರೀ ||3||
ಬತ್ತದು ಭಕ್ತಿ
ಅಳಳೊಟ್ಟಿ ಅಳಳೊಟ್ಟಿ ಅಳಳೊಟ್ಟಿ | ನೀ
ಬಳಲುವದ್ಯಾತಕೊ ಹುಚಗೊಟ್ಟಿ |
ಸುಳ್ಳೆ ನೀ ಮಾಡುದೆಲ್ಲ ಭ್ರಮಿ ಬಿಟ್ಟಿ |
ನಿನ್ನಂಗದೊಳಗೆ ಮೂರಾಬಟ್ಟಿ ||ಪಲ್ಲ||
ಹಟ್ಟದ್ಹಳ್ಳಕ್ಹೋಗುವದೊ | ನಿಂತು
ಹುಟ್ಟಿದ ಮಕ್ಕಳು ಸಾಹುವದೊ |
ಕಟ್ಟಿದ ಮನಿ ಬಿದ್ಹೋಗುವದೊ | ಹೊಲ
ನಟ್ಟನಗಸಲು ಬೀಳಾಗುವದೊ ||1||
ಅಟ್ಟುಂಡ್ಹೊರಯಕ್ಹೋಗುವದೊ | ನೀ
ತೊಟ್ಟುಟ್ಟಿದ್ಹರಕಾಗುವದೊ |
ಇಟ್ಟ ವಡವಿ ಸವೆದ್ಹೋಗುವದೊ | ಬ
ಚ್ಚಿಟ್ಟ ಬದುಕು ಬಯಲಾಗುವದೊ ||2||
ಭಕ್ತಿಯೆಲ್ಲ ಬತ್ತದ್ದೊ | ವಿ
ರಕ್ತಿ ಜಾರತ್ವದ್ದೊ
ಮುಕ್ತಿ ಮಾಯಿಗ್ಹತ್ಯಾದೊ | ಸ
ರ್ವಿಕ್ತಿ ಮಹಂತ ನಿತ್ಯಾದೊ ||3||
ಸಾಕ್ಷಿ ತಿಳಿಯೋ
ಸಾಕ್ಷಿ ತಿಳಿಯೋ ನಿಜದಾ ಏ ವಾದೀ |
ಮೋಕ್ಷದಾಯಕ ವಿರೂಪಾಕ್ಷಗೇನಾದೀ ||ಪಲ್ಲ||
ಆವದರಿಂದಿದು ಆಯಿತು ಬ್ರಹ್ಮಾಂಡ |
ಮೂವರೊಳಗ ಹಾನೆ ಮೋಜಿನ ಪಿಂಡ ||1||
ನೋಡುವ ನಯನಕ್ಕೆ ನಾನಾ ಕಲಾಪ |
ಜೋಡಳಿದರೆ ಅದು ಜ್ಯೋತಿ ಸ್ವರೂಪ ||2||
ಲೋಲ ಶ್ರೀ ಬಿದನೂರ ಮಹಾಂತೇಶ |
ಲೀಲ ಮಡಿವಾಳಾಖ್ಯ ತಾನೇ ಸರ್ವೇಶ ||3||
ಇನ್ಯಾಕೊ ಚಿಂತಿ
ಆಯಿತ ಆಯಿತ ಆಯಿತಂತಿ |
ಆಗ ಮಾಡದೇ ನೀ ಕುಂತಿ |
ಹೋಯ್ತು ಹೋಯ್ತು ಹೋಯ್ತೋಯ್ತೆಂಬುದು |
ಹೋಗದೆ ಸುಳ್ಳೇ ಕುಂತಿ ||ಪಲ್ಲ||
ನೀರಡಿಕೆ ಆಯಿತಂತಿ | ನೀರ ಕುಡಿಯಲಾಕೆ ಕುಂತಿ |
ನೀರಡಿಕಿ ನಿನಗಾದ ಮೇಲೆ | ನೀರಿಂದಿನ್ಯಾಕೋ ಚಿಂತಿ ||1||
ಹಸಿವು ಎನಗಾಯತಂತಿ | ಹಸಿದು ಅಶನವೆ ತಿಂತಿ |
ಹಸಿವು ನಿನಗಾದ ಮೇಲೆ | ಅಶನದಿನ್ಯಾಕೊ ಚಿಂತಿ |2||
ರತಿಯ ಮೋಹ ಆಯಿತಂತಿ | ಸತಿಯಳ ಕಾಲ್ದಸಿಲೆ ಕುಂತಿ |
ರತಿಯ ಮೋಹವಾದ ಮೇಲೆ | ಸತಿಯಳದಿನ್ಯಾಕೊ ಚಿಂತಿ ||3||
ನಿದ್ರಿ ಎನಗಾಯಿತಂತಿ | ನಿದ್ರಿ ಜೋಕಿಸುತೆ ಕುಂತಿ |
ನಿದ್ರಿ ನಿನಗಾದ ಮೇಲೆ | ನಿದ್ರಿಸುವದಿನ್ಯಾಕೊ ಚಿಂತಿ | |4||
ಸೊಗಸು ಎನಗಾಯಿತಂತಿ | ನಗುತ ಮಹಾಂತೇಶನಂತಿ |
ಸೊಗಸ ನಿನಗಾದೆ ಮೇಲೆ | ಬಗಿಯುವದಿನ್ಯಾಕೊ ಚಿಂತಿ ||5||
ಆಯುಷ್ಯ ನೆಚ್ಚಿಕಿಲ್ಲ
ಕಾಲ ಒದಗಿ ಬರುವಷ್ಟತಿಗೆ ನಿನ್ನ |
ಕರ್ಮವು ತೀರಿರಬೇಕಪ್ಪ |
ಬಾಲಪ್ರಾಯ ಮುಪ್ಪಾಗುವತನಕ
ಆಯುಷ್ಯ ನೆಚ್ಚಿಕಿಲ್ಲಪ್ಪ ||ಪಲ್ಲ||
ಕರ್ಮವು ತೀರಷ್ಟ್ಹೊತ್ತಿಗೆ
ಸಂಶ್ರುತಿ | ಹತ್ತಿಡಬೇಕಪ್ಪ |
ಧರ್ಮ ವಿಚಾರದಿ ಬಯಕೆಯ ತೋರದ |
ಮರ್ಮವನರದಿರಬೇಕಪ್ಪ ||1||
ತನು ಮನ ಧನ ತ್ರಿವಿಧ ವಂಚನಿಲ್ಲದೆ |
ಘನ ಗುರುವಿಗೆ ಸಲ್ಲಿಸುವದಪ್ಪ |
ಅಣು ಹಿಡಿದಣು ಮಹತ್ವೇನಾದುದೆಂಬ |
ಅನುಭವ ಸಾಧಿಸುವದಪ್ಪ ||2||
ನಿರಂಕಾರ ನಿರಾಸತ್ವವೆ ನಿಜದರು |
ಯಿರು ಅರಮನಿ ತಾನಪ್ಪ |
ಮೆರೆವ ಚಿಣಮಗೇರಿ ಗುರು ಮಹಾಂತೇಶನ |
ಪರಮ ನಿರಂಜನ ನೀನಪ್ಪ ||3||
ಭವಮಾಲೆ
ಭವಮಾಲಿ ಎನಿಸುವ ಭವನೋಡೊ ಮನವೆ |
ಅವನಿಯ ಅವಯವದೊಳಿಹ |
ನವ ನವಗೂಡು ಘನವೆ ||ಪಲ್ಲ||
ಮೂರು ಮೂರು ಮೂರಾರ್ಹೌದು |
ಮುವ್ವತ್ತಾರಾಗಿಹುದು |
ನೂರು ಸಾಸಿರ ಮೀರಿ ಬೇರೆ |
ಆರಿಗಾರೆನಿಸುದೊ ||1||
ಎತ್ತ ನೋಡಿದಡತ್ತೆ ಅದು |
ಹತ್ತೆ ಮಾಡಿದರ್ಹತ್ತೆ |
ಒತ್ತಿ ಹಿಡಿದರೊತ್ತಿಲಿಹುದು |
ಮುತ್ತಲು ತನ್ನ ಸುತ್ತೆ ||2||
ತ್ರಾಸಿಗೂಸುರಲಿಲ್ಲ ಲೋ |
ಕೇಶ್ವರ ಸರಿಯೆಲ್ಲ |
ವಾಸ ಚಿಣಮಗೇರಿ ಮಾಂ |
ತೇಶ ಖಾಸನಲ್ಲ ||3||
ಆ ಯಮಧರ್ಮನೆ ಸಾಧು
ಆ ಯಮಧರ್ಮನೆ ಸಾಧುಯೆಲೊ |
ನೀ ಮಾಡಬೇಡ ವಿಪ್ರ ಭೇದವ ||ಪ||
ನಿಷ್ಠುರನಾಗಿ ಹಳಿವ ನೋಡುವ |
ಭ್ರಷ್ಟರನವ ಕಾಡುವ |
ಅಷ್ಟಾವರಣ ಹಿಡಿದಾಡುವ | ಅವ
ಶ್ರೇಷ್ಠರು ಬರೆ ಎದ್ದೋಡುವ ||1||
ಮಾತೆ ಮೃತ್ಯೇಶ್ವರನೆಂಬುವ |
ಬಾಯ ಬಡಿದು ಮನ ಕೊಂಬುವ |
ನಾಯಕ ನರಕ ತುಂಬುವ |
ಅವ ಸುಗುಣರಿಗೆ ಶಿವನೆಂಬುವ ||2||
ಸುಲಭ ಚಿಣಮಗೇರಿ |
ಸಲೆ ಮಹಾಂತೇಶನ ದಾರಿಯ |
ಒಲಿಸಲು ಹೌದು ಭೈರಿಗೆಯ | ಅವ
ಒಲಿಯುವ ತನ್ನ ತಾ ವೈರಿಯ ||3||
ಸುವ್ವಾಲೆವ್ವ ಸುವ್ವಾಲೆ
ಸುಳ್ಳೆಂಬುವರಿಗೆ ಹೊಯ್ಯಿ ಬಾಯಿ ಮೇಲೆ | ಸುವ್ವಾಲೆವ್ವಾ ಸುವ್ವಾಲೆ |
ಬೈವರ ಬೈಗಳು ಮುಯ್ಯ ಕೈಯ್ಯ ಮೇಲೆ
ಸುವ್ವಾಲೆವ್ವಾ ಸುವ್ವಾಲೆ ||ಪಲ್ಲ||
ಮಾಡಿದವರಿಗದು ಮಾಡಿದಷ್ಟಾಗುವದು |
ನೀಡಿದವರಿಗದು ನೀಡಿದಷ್ಟಾಗುವದು ||1||
ಕಾಡಿದವರಿಗದು ಕಾಡುವದೆ ಇರುವದು |
ಕೇಡು ಬಯಸಿದವರಿಗದು ಕೇಡೇ ಆಗುವದು ||2||
ಕೊಂದವರಿಗಿ ಕೊಲಿ ಎಂದಿಗಿ ತಪ್ಪದು |
ನಿಂದೆ ಮಾಡಿದವರಿಗೆ ಹಂದಿಯ ಜನ್ಮವು ||3||
ಬಾಯಿಗೆ ಬಂದಂಗೆ ಬೊಗಳುವ ಮಾನವರು |
ನಾಯಾಗಿ ಎಲವಾಯ್ದು ಹಾಳೂರ ಕಾಯುವರು ||4||
ಮಾನವಳಿದಾವ ಮಾನಿಲ್ಲದೆ ಹೋಗುವ |
ಧಾನ್ಯ ದಹಿಸಿದವ ಹಾನ್ಯೊ ಹಾನ್ಯಾಗುವ ||5||
ಲಂಚವ ತಿಂದವ ಹಂಚಾಗಿ ಹೋಗುವ |
ಸಂಚಿತ ಭೋಗವು ವಂಚಿಸಬಾರದು ||6||
ಸಂತಾನನಳಿದವ ನಿಸ್ಸಂತನಾಗುವ |
ಸಂತರ ಹಳಿದವ ಅಂತರ ಪಿಶಾಚಿ ||7||
ನಿಷ್ಠೆಯಿಲ್ಲದವನು ತಾ ನಷ್ಟಾಗಿ ಹೋಗುವ |
ದೃಷ್ಟಿ ಒಳ್ಳೇದಿಲ್ಲದವ ಭ್ರಷ್ಟ ತಾನಾಗುವ ||8||
ಬಡವರ ಬಗಿವಲ್ಲ ನಡುಗೂಲಿ ಸಿಗಲಿಲ್ಲ |
ಉಡುವವರ ಸೇರುವಲ್ಲ ಎಡವಿದುಂಗುಷ್ಟರವಿಲ್ಲ ||9||
ದೈವ ಮನ್ನಿಸುವಲ್ಲ ದೈವತ್ವ ತನಗಿಲ್ಲ |
ಸಾವಧಾನ ನುಡಿಯಿಲ್ಲ ನೋವು ತನ್ನ ಬಿಡಲಿಲ್ಲ ||10||
ತಾ ಪುಣ್ಯದವನಲ್ಲ ಪಾಪದ ಭಯವಿಲ್ಲ |
ಆ ಪರಶಿವ ಮಹಾಂತಪ್ಪನ ದಯವಿಲ್ಲ ||11||
ಪರಮಾತ್ಮ
ಜಡದೇಹಿ ನೀನಲ್ಲ ಜಡ ಆತ್ಮ ನಾನೆಂಬಿ |
ಜಡನ ಹೌದೆಂತಲೆ ಜೀವಾತ್ಮ |
ಜಡವಾಗ ಜಡಹೋಗಬಲ್ಲಡಾ ಜಡಜಡ |
ಜಡ ಜಡವಲ್ಲ ನೀ ಪರಮಾತ್ಮ ||ಪಲ್ಲ||
ಇಲ್ಲಾತ್ಮನೆ ನೀನಿದ್ದಾತ್ಮಾಗುವಿ |
ಇದ್ದಾತ್ಮನೆ ನೀನಿಲ್ಲಾತ್ಮಾಗುವಿ |
ಇಲ್ಲದ್ದೊಂದಿದ್ದದೊಂದಿದ್ದರೆ ಇದ್ದದ್ದು |
ಇಲ್ಲಾಗ ಬರದಿರೋದಾಗುವಿ ||1||
ಧರ್ಮ ಒಂದಾಗಲಿಕೆ ಕರ್ಮ ಹತ್ತಾದವು |
ಕರ್ಮವೊಂದಕೆ ಧರ್ಮ ಹತ್ತಾದವು |
ಕರ್ಮ ಹತ್ತರೊಳಗಾದ ಧರ್ಮ ಧರ್ಮೆ ಜಯ |
ಧರ್ಮ ಹತ್ತರಿಂ ಕರ್ಮ ಕರ್ಮೇಲಯ ||2||
ಧರ್ಮಾಗಬಲ್ಲುವಿ ಕರ್ಮಾಗಬಲ್ಲುವಿ |
ಧರ್ಮಾಗಿ ಕರ್ಮಾಗದಿದ್ದರೆ |
ಧರ್ಮವೆ ಧರ್ಮವು ಕರ್ಮವೇ ಕರ್ಮವು |
ಧರ್ಮ ಕರ್ಮಿಲ್ಲಾಗದಿರಬಹುದು ||3||
ಅರುವಾಗುವದಕ್ಕೆ ನೀ ಅರುವಾಗೊ ದಿನಸಾದಿ |
ಮರುವಿಗೆ ಮರುವಾಗೂ ದಿನಸಾದಿ |
ಅರುವಿನ ದಿನಸದು ಮರುವಾಗಬಾರದು |
ಮರುವಿನ ದಿನಸರುವಾಗೆಸದು ||4||
ಅರುಮರುವಾಗುವದು ಮರು ಅರುವಾಗುವದು |
ಅರುವು ತಾನಲ್ಲ ತಾ ಮರವಲ್ಲ |
ಅರುವು ಅರುವಾದರೆ ಅರುವು ಹರಿದಿರಬೇಕು |
ಮರುವಾದ ಮರುವು ಹೋಗದಿರಬೇಕು ||5||
ಅರುವಾಗ ಬಲ್ಲುವಿ ಮರುವಾಗ ಬಲ್ಲುವಿ |
ಅರುವು ಮರುವಾಗದಿದ್ದರೆ |
ಅರುವಿಗೆ ತಾನಧಿಕಾರಿಯೆಂದರೆ ಬೇರೆ |
ಮರುವಿಗೆ ಮತ್ತೊಬ್ಬನೆನಬೇಕೊ ||6||
ಅರುವಾದ ಸುಖವನ್ನು ಅರಿತೊಮ್ಮೆ ನೋಡಿದಿ |
ಮರುವಾದ ಸುಖವು ನೋಡದರಂತೆ |
ಅರುವಾದರರುವಾದಿ ಮರುವಾದರ ಮರುವಾದಿ |
ನೆರೆ ಆದರಾಗದಿದ್ದರಿಲ್ಲ ||7||
ರೂಪಾಗುವದಕೆ ರೂಪಿಗೇನನಬೇಕು |
ರೂಪಾಗೋ ರೂಪಾದಿ ಎಲೆ ಆತ್ಮ |
ರೂಪಾಗೋ ರೂಪು ನಿರೂಪಾದ ಮೇಲೆ |
ಪಾಪ ಪುಣ್ಯಗಳೆರಡೇನಾದುವು ||8||
ಸತ್ತದೊಂದ್ವಿನೋದ ಅತ್ತದೊಂದ್ವಿನೋದ |
ಸತ್ತದ್ದೆ ಅತ್ತದ್ದು, ಅತ್ತದ್ದೇ ಸತ್ತದ್ದು |
ಸತ್ತಾದರೆ ಚಿತ್ತಾಯಿತು, ಚಿತ್ತಾಯಿತು ಸತ್ತಾಯಿತು |
ಮತ್ತೊಂದಿದ್ಹ್ರೇಳು ಮಹಾಂತ ನೀನಲ್ಲದ್ದು ||9||
ಬಲ್ಲ ಜಾಣರು
ಅಲ್ಲಂತ್ಯಾವದ್ಹೇಳಲಿ ನಾನು
ಹೌದಂತ್ಯಾವದ್ಹೇಳಲಿ |
ಅಲ್ಲೆ ಹೌದು ಹೌದೆ ಅಲ್ಲ |
ಬಲ್ಲ ಜಾಣರು ಬಲ್ಲಂತಿರಲಿ ||ಪಲ್ಲ||
ಶಾಸ್ತ್ರ ಓದಿ ಹೇಳೋದ್ಹೌದು |
ಶಸ್ತ್ರ ಹೋಯ್ದು ಹೇಳೋದ್ಹೌದು |
ಶಾಸ್ತ್ರೆ ಶಸ್ತ್ರ ಶಸ್ತ್ರೆ ಶಾಸ್ತ್ರ
ಶಾಸ್ತ್ರ ಶಸ್ತ್ರ ವಸ್ತು ಅಲ್ಲ ||1||
ಧರ್ಮ ಬಿತ್ತಿ ಬೆಳೆವದ್ಹೌದು |
ಕರ್ಮ ಹತ್ತಿ ಅಳಿವದ್ಹೌದು |
ಧರ್ಮೆ ಕರ್ಮ ಕರ್ಮೆ ಧರ್ಮ
ಧರ್ಮ ಕರ್ಮಕೆ ವರ್ಮೆನಿಲ್ಲ ||2||
ನಾವೇ ಐನೋರರೆಂಬುದ್ಹೌದು
ನೀವು ಭಕ್ತರೆಂಬುದುದ್ಹೌದು
ನಾವೇ ನೀವು ನೀವೇ ನಾವು |
ನಾವು ನೀವು ಮಹಾಂತೇಶನಲ್ಲ ||3||
ಮಾನಾಡ ದೈವ
ನ್ಯಾಯ ಹೇಳರಿ ಮಾನಾಡ ದೈವ ||ಪಲ್ಲ||
ಒಬ್ಬವಳ ಹೊಟ್ಟಿಲೆ ಇಬ್ಬರು ಹುಟ್ಟ್ಯಾರ |
ಒಬ್ಬರಿಗೊಬ್ಬರು ಹೋರ್ಯಾಡುತ |
ಒಬ್ಬನವನೊಬ್ಬ ಉಬ್ಬುಬ್ಬಿ ಬೈವಾಗ |
ಇಬ್ಬರ ಹೇಳುವದಲ್ಲ ಒಬ್ಬವನ ತೋರಿರಿ ||1||
ಸೂಳಿಯ ಮಕ್ಕಳು ಏಳೇಳು ಲೋಕವು |
ಕಾಳಗದಲಿ ಬಂದು ಕಾದುತಲಿ |
ಸೂಳೆ ಮಕ್ಕಳಿಗೆ ಸೂಳೆ ಮಕ್ಕಳೆಂಬ |
ಸೂಳೆ ಮಕ್ಕಳಿಗೆ ಸೂಳೆ ಮಕ್ಕಳು ||2||
ಷಂಡನ ಸುಗಡಿಗೆ ಗಂಡನ ಮಾಡಲು |
ಗಂಡಗೆ ಗಂಡಾಸ್ತಾನಿಲ್ಲೆಂಬುವಳು |
ಪುಂಡ ಮಹಾಂತನ ಮುಡಿಗೆ ಸಾಕ್ಷಿಯಾದ |
ಕಂಡ ಮಾತಿಗೆ ಬಹಳ ಭಂಡಾಟವ್ಯಾತಕೆ ||3||
ಬ್ರಹ್ಮಯೆಂಬುವದು ಬ್ಯಾರಿಲ್ಲ
ಬ್ರಹ್ಮಯೆಂಬುವದದು ಬ್ಯಾರಿಲ್ಲ |
ಬ್ರಹ್ಮವೇ ತಾನಹುದೀ ಭುವನವನೆಲ್ಲ ||ಪಲ್ಲ||
ಅಷ್ಟತನುವಿನ ಮರಿವಳಗಾದೆ |
ಅಷ್ಟಮದಗಳ ತಳಿದುಳಿದಾದೆ ||
ಅಷ್ಟಪಾಶಕೆ ಸಿಕ್ಕು ಮಿಕ್ಕ್ಯಾದೆ | ಅದು
ಅಷ್ಟಪರ್ವತಕ್ಕಿಂದತಿ ಸ್ಥೂಲ ಬಹು
ಕಷ್ಟ ಬಿಡಿಸುವ ಕಾಲಗೆ ಕಾಲ | ಅದು
ಇಷ್ಟು ಸಾಸಿವಿ ಸಾವಿರ ಪಾಲ ||1||
ಯೋಗಿ ಭೋಗಿಯು ತಾನಾಗ್ಯಾದೆ |
ಆಗಮಗಳಿಗೆ ಅಣಕಿಸುತಾದೆ |
ತೂಗೊ ತೊಟ್ಟಿಲೋಳೋಲ್ಯಾಡುತಾದ | ಅದು
ಹ್ಯಾಗೊಯೆಂದರೆ ಬಂಧನ ಭಾರ | ನಾ
ಬೇಗ ತಿಳಿವೇನಂದರೆ ಘೋರ | ಈ
ಭೂಗಗನದೊಳು ತುಂಬ್ಯಾದ ಪೂರ ||2||
ಆರು ಮೂರೆರಡಳಿದೊಂದೆ ಆದೆ |
ವಿೂರಿ ಅಗಣಿತ ತೋರುತಲಾದೆ |
ಬಾರೆನುತ ಕರದಾರೋ ಎನುತಾದೆ | ಅದು
ಆರಿಸಿ ನೋಡಲು ಕಾಣುವದಿಲ್ಲ | ವಿ
ಸ್ತಾರ ಹೇಳಲು ಬಾಯಿಗೆ ಬೆಲ್ಲ | ಬಿದ
ನೂರ ಮಡಿವಾಳ ದೇಸಿಕ ಬಲ್ಲ ||3||
ಬೆಡಗಿನ ನಿಜಸುಖ
ಮೃಢ ಮಹಾಂತೇಶನ ಬೆಡಗಿನ ನಿಜಸುಖ |
ಹುಡಕಿ ಪಡೆದ ಮಡಿವಾಳ ಯೋಗಿ |
ಪೊಡವಿಯೊಳಗೆ ಅರುಪಡೆದು ಸಮಸ್ತಕೆ |
ಹೊಡವಡುವೇನು ಇದೇ ತಲೆ ಬಾಗಿ ||ಪಲ್ಲ||
ಮೇಲುಗಿರಿಗೆ ಹೋದಾ ಲೋಕದವರ ಕಾಲಿಗೆ
ಬೀಳುವದ್ಹ್ಯಾಂಗಲ್ಲೆ |
ಈ ಲೋಕದ ಗಣ ಸಾಲದೆ ಶರಣ್ಹೋಗೆ
ಮೂಲೋಕವು ಅದು ತನಗಿಲ್ಲೆ ||1||
ಚತುರ ಸಿಂಹಾಸನ ಪತಿಗಳು ಪದಯುಗ
ಧೃತ ರಜ ಫಣಿ ತಿಲಕವನಿಟ್ಟೆ |
ನುತಶೆಡು ಕೋಟ್ಯಾಧಿಪತಿಗಳ ಮತ್ತೋರ್ಜಿತ |
ನೀತಿ ಕೀರ್ತಿಗೆ ಕಿವಿ ಕೊಟ್ಟೆ ||2||
ಹಿರಿತನದವರುಟ್ಟರೆ ಹರಿದೊಗೆದೊಸನವ |
ಭರದಿ ಸೆಳೆದು ಮೈಗ್ಹೊದಕೊಂಡೆ |
ಪರಿ ಪರಿ ಬಹುಬಗಿಯ ಮೆರೆವ ಮಹಾಂತರ |
ಚರಣರಕ್ಷಿ ಕಣ್ಣಿಲಿ ಕಂಡೆ ||3||
ನೆಲೆಗಾಣೊ
ತಾನೆ ಬಯಲಾಗುವದೊ ತನ್ನೊಳು |
ತಾ ತಿಳಿದ್ಹೋಗುವದೊ |
ತಾನೆ ನಾನು ನೀನೆಂಬೋಸಾರವ ತಿಳಿದ ಮೇಲೆ ||ಪಲ್ಲ||
ಚಿಕ್ಕವರೆಲ್ಲರು ಕೂಡಿ ಚಿಕ್ಕನೆ ಗ್ರಾಮವನು ಮಾಡಿ |
ಫಕ್ಕನೆ ಹೆತ್ತವರು ಅತ್ತ ಕರಿಯಲು |
ಆಟವೆಲ್ಲ ಲೊಳಲೊಟ್ಟಿ ಆಗಲು ||1||
ಡೊಂಬರೆಲ್ಲರು ಕೂಡಿ ಬೊಂಬಿ ಆಕಾರವ ಮಾಡಿ |
ಅಂಬರದೊಳಗೆ ಗಿಮಿಗಿಮಿ ತಿರುಗುತೆ |
ಸಂಭ್ರಮಾಗಲು ಸರಿದು ಹೋಗಲು ||2||
ಫಲವನೆಲ್ಲವ ಹರಿದು ತಾ ನಲಿದು ಮಟ್ಟಿಯನು ಬಿಗಿದು |
ಸಲೆ ಮಹಾಂತೇಶನು ಮಟ್ಟಿಯನುಳಿಸಲು |
ನೆಲೆಯಿಲ್ಲದೆ ತಾ ನೆಲೆಗಾಣೆಲೊ ||3||
ನಿನಗ್ಯಾಕೊ ಏಕಾಂತ
ಯಾವನೋ ಮಹಾ ಮಹಾಂತ
ಬ್ಯಾಡೋ ಬಹುಭ್ರಾಂತ |
ಆದದ್ದೆಲ್ಲನು ತಾನೆ
ನಿನಗ್ಯಾಕೋ ಏಕಾಂತ ||ಪಲ್ಲ||
ಪಹಿಲೆ ಹುಟ್ಟಿದವನ ಹೆಸರು
ಇಟ್ಟವರ್ಯಾರು ಹೇಳು |
ಸೋಹಂ ಎಂಬ ಅರ್ಥವು
ನಿನಗೆ ತಿಳಿಯದಿದ್ದರೆ ಕೇಳು ||1||
ಬ್ರಹ್ಮವೆಂದು ಕೂಗುತಾವ
ಬಲ್ಲವೇನೋ ವೇದವು |
ಬ್ರಹ್ಮ ತಾ ಮುಂಚಿದ್ದ ಮೇಲೆ
ವೇದ್ಯಾಂಗ ಬಲ್ಲಾದವೋ ||2||
ಬ್ರಹ್ಮ ತಾ ತಾನಾಗುವದಕ್ಕೆ
ವೇದ ಅಗಣಿತ ಆದಾವೊ |
ಬ್ರಹ್ಮಾನಂದ ಆದೆನೆಂಬೋ
ಯೋಗಿಗೆ ಏನಾದವೋ ||3||
ನಾಮ ಆತಗೆ ಇರಬೇಕಾದರೆ
ಅಕ್ಷರ ಯಾರಿಂದಾದಾವೋ |
ಆ ಮಹಾತ್ಮನಿಂದಾದಕ್ಷರ
ಆತಗ ನಾಮ್ಯಾಂಗಾದಾವೋ ||4||
ಪಂಚಮುಖ ಸಹಸ್ರಮುಖ
ಅನಂತಮುಖ ಆಗಮಸಿದ್ಧಿ |
ವಂಚನ ಇದ್ದ ಮೇಲೆ
ನಿನಗೆ ಆಗುವದ್ಹ್ಯಾಂಗೋ ಶುದ್ಧಿ ||5||
ಒಂದೇ ಮಂತ್ರ ಒಂದೇ ಜಪವು
ಒಂದೇ ಮನ ಸಾಕಾಗದೆ |
ಸಂದೇಹದಲ್ಲಿದ್ದು ಇದ್ದು
ಸತ್ತುಹೋಗಿ ಜನ್ಮ ನೀಗದೆ ||6||
ವಸ್ತು ನೋಡುವೆವೆಂದು | ಕಣ್ಣು
ಕಿಸ್ತು ನೋಡುತ್ತಿದ್ದಿರೋ |
ವಸ್ತು ನೋಡುವವನ ತಾವೆಲ್ಲಿ
ಬಚ್ಚಿಟ್ಟುಕೊಂಡಿದ್ದಾರೋ ||7||
ಕಂಡವರ ಕಂಡುಂಡುಟ್ಟು
ಎಲ್ಲಾ ಇಲ್ಲೆ ತೊಟ್ಟು |
ಪುಂಡ ಲೆಂಡ ಷಂಡತನವನು
ಎಲ್ಲಾ ಇಲ್ಲೇ ಬಿಟ್ಟು ||8||
ಡಂಭಕರ ಆಡಂಬರ ಕಂಡು
ನಂಬುದಾಯಿತಲ್ಲವೋ |
ಡಂಭಕತನವಂದ್ಹೋದಮೇಲೆ
ಇಂಬು ತನಗಿಲ್ಲಾದವೋ ||9||
ಹರಿಹರರೆಂಬ ಮತವ ಹಿಡಿದು
ಮಥನ ಮಾಡಿ ಪೋದಾರೋ |
ಹರಿಹರ ಅವರ್ಹ್ಯಾಂಗೇ ಇರಲಿ
ತಮ್ಮಾ ನಿನ್ನನ್ನೇ ನೀ ತಿಳಿಕೋರೋ ||10||
ಕಂಜನೆಂದರೆ ಕಂಜನಾದಿ
ಕುಂಜನೆಂದರೆ ಕುಂಜನಾದಿ |
ನಂಜುಂಡನೆಂದರೆ ಅದು ಖಂಡರ್ಥ
ಮುಂದಕ್ಕೆ ನಡಿಯುವ ಧಂದಿ ||11||
ಬಸವ ಎನಗೆ ತಾಯಿ ತಂದಿ
ಬಂಧುವೆಂದು ಸಾರಿದಿ |
ಬಸವ ಪುರಾಣ ಶಿವಪೂಜೆ ಗಂಟು
ಯಾವನ ಮ್ಯಾಲೆ ಹೇರಿದಿ ||12||
ಸ್ವಾಮಿ ಸ್ಮರಣಿ ನೇಮಿಸಿ ನೀನು
ಪರವಶದೊಳಗಾದೇನಂದಿ |
ಕಾಮಿತಾರ್ಥವು ಕೊಡಬೇಕಾದರೆ
ಸ್ವಾಮೀ ಬಂದರೆ ಏನಂದಿ ||13||
ಬಲ್ಲವರು ಕೇಳುವದಲ್ಲಾ
ಅರಿಯದವರಿಗೆ ಹೇಳುವದಲ್ಲಾ |
ಎಲ್ಲಿ ಇಲ್ಲದಂಥಾದ್ದೊಂದು
ಏನೋ ತಾನೇ ಆಗ್ಯಾದಲ್ಲಾ ||14||
ದಡ್ಡನಾಗಿ ದೊಡ್ಡ ಗುಡ್ಡದ
ಯೋಗಿ ಎಂದು ನಲಿದಿ |
ದಡ್ಡನಲ್ಲಾ ಶಹಣೇನಲ್ಲಾ
ಮೊದಲೇ ತಾನೇ ಇಲ್ಲವೋ ||15||
ಅನುಭಾವದಡಗಿ ಮಾಡಮ್ಮ
ಗಡಗಿ ತೊಳೆದು ಅಡಿಗಿ ಮಾಡಮ್ಮಾ | ತನು
ಗಡಗಿ ತೊಳೆದು ಅಡಿಗಿ ಮಾಡಮ್ಮಾ ||ಪ||
ಅನುಭಾವದಡಗಿಯ ಮಾಡಿ ಎಡಿಯ ಮಾಡಮ್ಮಾ |
ದೇವರಿಗೆಡಿಯ ಮಾಡಿ ಚರಗಂಡ ಗುಣಿಸಮ್ಮಾ ||ಉ.ಪ||
ಕರ್ಮವೆಂಬ ಜೋಳ ಬೀಸವ್ವ | ನೀ
ಧರ್ಮ ಜಲಡಿಯಿಂದ ಹಿಟ್ಟ ಸೋಸವ್ವ |
ನಿರ್ಮಳಾತ್ಮ ನೀರ ಹಾಕವ್ವಾ | ನೀ
ನೇಮದಿಂದ ಕಣಕ ನಾದವ್ವಾ ||1||
ಗುರುಲಿಂಗ ಜಂಗಮ ಮೂರವ್ವ |
ಪರಸಾಕ್ಷಿ ಒಲಿಗುಂಡ ಹೂಡವ್ವ |
ಪರಿಪರಿ ಕಷ್ಟದ ಕಾಷ್ಟ ಸುಡುವವ್ವ |
ಹರಿದಾಡುವ ಮನಸಿಟ್ಟು ಕೂಡವ್ವ ||2||
ಸಂಚಿತ ಕರ್ಮದ ಹಂಚ ನಿಂದವ್ವ |
ಮುಂಚಲೆದ್ದು ಸ್ವಚ್ಛಾಗಿ ತೊಳಿಯವ್ವ |
ಹಂಚಿಕಿಲಿಂದ ಜ್ಞಾನದಗ್ನಿ ಉರಿಸವ್ವ |
ಸಂಚಿನಿಂದ ಪರ ರೊಟ್ಟಿ ಬೇಸವ್ವ ||3||
ಭಕ್ತಿ ಎಂಬ ಭತ್ತ ಕುಟ್ಟವ್ವ | ನೀ
ಖಟ್ಟ ಅಕ್ಕಿ ಹಿಡಿದು ಹೊಟ್ಟ ತೆಗಿಯವ್ವ |
ನಿಷ್ಠೆಯಿಂದ ಅನ್ನ ಮಾಡಿ ಚರಗಂಡ ಗುಣಿಸವ್ವ |
ಶ್ರೇಷ್ಠ ಮಹಾಂತೇಶಗೊಲಿಸಿ ಮುಕ್ತಿ ಪಡಿಯವ್ವ ||4||
ಕೇಳೋ ಜಾಣ
ಕೇಳೋ ಜಾಣ ಜ್ಞಾನದಿಂದ ಶಿವಧ್ಯಾನ ಮಾಡಣ್ಣ ||ಪ||
ಗರ್ವ ಅಹಂಕಾರ ಖಲಾಸ ಮಾಡೊ |
ಕಾಮ ಕ್ರೋಧವನು ಕಡಿಯಾಕ ಮಾಡೊ |
ಖೊಟ್ಟ ಗುಣ ಸುಟ್ಟು ಬೂದಿಯ ಮಾಡೊ |
ಸಿಟ್ಟು ಬಂದರೆ ನಿಧಾನ ಮಾಡೊ |
ನಡಿ ನುಡಿ ಎಂಬುದು ಬಿಗುವು ಮಾಡಣ್ಣ ||1||
ಆರು ಶಾಸ್ತ್ರಗಳ ಸಿದ್ಧಿಯ ಮಾಡೊ |
ಹದಿನೆಂಟು ಪುರಾಣ ಪಠಣ ಮಾಡೊ |
ರೊಕ್ಕ ನೋಡಿ ನೀ ವ್ಯಾಪಾರ ಮಾಡೊ |
ಎಂಟೆಂಟು ದಿನಕ್ಕೊಮ್ಮೆ ಸಂತಿಯ ಮಾಡೊ |
ಹುಣ್ಣಿ ಅಮವಾಸಿಗೆ ಒಂದತ್ತು ಮಾಡೊ |
ಹಸ್ತು ಬಂದವರಿಗೆ ಅನ್ನವ ನೀಡಣ್ಣ ||2||
ದಾನ ಧರ್ಮ ಪರ ಉಪಕಾರ ಮಾಡೊ |
ನಾಡಿಯ ನೋಡಿ ವೈದ್ಯವ ಮಾಡೊ |
ಹೆತ್ತ ತಾಯಿ ತಂದಿಯ ಪೂಜೆಯ ಮಾಡೊ |
ಅತ್ತಿ ಮಾವಗ ಮರ್ಯಾದೆ ಮಾಡೊ |
ಮನಿ ಬಿಚ್ಚಿ ಮ್ಯಾಲ ಮಾಳಿಗೆ ಮಾಡೊ |
ನಿನ್ನೊಳಗ ನೀ ವಿಚಾರ ಮಾಡಣ್ಣ ||3||
ಬೆಳ್ಳಂ ಬೆಳತನ ಭೋಗವು ಮಾಡೊ |
ಬೆಳಗು ಮುಂಜಾನಿ ಗುರು ಭಜನಿಯ ಮಾಡೊ |
ವೈರಿ ಕಂಡಲ್ಲಿ ಧೈರ್ಯವ ಮಾಡೊ |
ಸರಕಾರ ಕಂಡಲ್ಲಿ ಸಲಾಮು ಮಾಡಣ್ಣ |
ಹೊತ್ತು ಮುಣಗಿದಲ್ಲಿ ವಸ್ತಿಯ ಮಾಡೊ
ಧರಿಯೊಳು ಕಡಕೋಳ ಮುಕ್ಕಾಂ ಮಾಡಣ್ಣ ||4|||
ಬ್ರಹ್ಮಾನಂದ
ಕಲ್ಪಿತವು ನಿನಗ್ಯಾಕೊ ಕಂದ |
ನಿರ್ವಿಕಲ್ಪಿತವು ತಾ ಬ್ರಹ್ಮಾನಂದ ||ಪಲ್ಲ||
ಒಂದೆಂಬೊ ಸಂದೇಹವೇನೊ ಇದು ಒಂದೆಂಬೊ ಸಂದೇಹವೇನೊ
ಅದು ಏಸೊಂದಾಗುವದಿಲ್ಯಾಕ ತಾನೊ ||1||
ವೇದ ವೇದ ವೇದಾಂತವು ಮಿಥ್ಯ |
ನೀನು ಸಾಧಿಸುವದೇನಾದೊ ಸತ್ಯ ||2||
ಸತ್ಯ ಸುಲಭ ಶ್ರೀಗುರು ಮಹಾಂತ ಅಲ್ಲ |
ಮಹಾ ಚಲುವ ಮುಕ್ತಿ ಎಂಬುದೇನಿಲ್ಲ ||3||
ಓ ಎಂಬುವ ದನಿ
ಓ ಎಂಬುವ ದನಿ ತೋರುವದೇನೊ | ಅಲ್ಲಿ
ಬಾಯೆಂಬೊ ಕರ್ತ ಯಾಂವ್ಹನೊ ||ಪಲ್ಲ||
ಕರೆದರೋಯೆನುವದು ಖರೆಯೊ | ತನ್ನ
ಕರೆದಂವ ಯಾಂವ್ಹನೊ ನಾನದನರಿಯೆ ||1||
ತನ್ನನ್ನೇ ತಾ ಕರಕೊಂಬುತಾನೆ | ಮತ್ತೆ
ತಾನಿದ್ದಿರಲದೋಯೆಂಬ ||2||
ಸ್ವಯವೇ ಶ್ರೀಗುರು ಮಹಾಂತೇಶ | ಕೇಳೊ
ಕ್ರಿಯವೇ ತಾ ಕರ್ಮೋಪದೇಶ ||3||
ಹುಸಿ ಸ್ವಯಂಭು ತಾನೆ
ಇಲ್ಲೆ ನಿಜ ನಿರ್ವಯಲೋಳು | ತೋರಡಗುವ
ಹುಸೀ ಸ್ವಯಂಭು ತಾನೆ |
ಎಲ್ಲ ರಸಾದ್ರ ವಿಚಿತ್ತ ಕರಣ |
ನೆರಳೆಂಬು ಗುರಳಿ ಜಗ ತಾನೆ ||ಪಲ್ಲ||
ತಾನೆ ಮಹದಾಕಾಶ ಗಗನ ಗುಂಹೆ ಗುಪ್ತ್ತ |
ಅನಾಮಿಕ ತಾನೆ |
ಮಿಸಕು ಸ್ಯಂದೋಳು ನಾ
ಹತ್ತ ರೇಣಣು ಮಹ ಮಹಾತ್ತಾನೆ ||1||
ತಾನೆ ಚಿತ್ಕಳೆ ಚಿನ್ನಾದ ಚಿದ್ಬಿಂದು |
ಎನಿಸುವದು ತಾನೆ |
ತಾನೆ ಅಸ್ತಿ ಭಾತಿ ಪ್ರೀತಿ |
ಅತಿಥಿ ಆದದ್ದು ತಾನೆ ||2||
ಕನ್ನೆ ಶೂನ್ಯರಾಕೃತಿ ಸುಪ್ತ ಭುಜಂಗ |
ಸ್ವರೂಪವು ತಾನೆ |
ಓಂ ನಮಃಶಿವಾಯ ಸಿದ್ಧಂ ಅಂಅಃಳ |
ಕ್ಷರ ಕ್ಷರವು ತಾನೆ ||3||
ಆದಿ ಅನಾದಿ ಸುರಾಳ ನಿರಾಳೆಂದನು |
ಪಮಂ ನಿರೂಪಂ ತಾನೆ |
ವೇದಾಗಮ ಶಾಸ್ತ್ರುಪನಿಷದ್ದೆಂತ್ರವು |
ಮಂತ್ರವು ತಂತ್ರವು ತಾನೆ ||4||
ಒಂದೆರಡ್ಮೂರು ನಾಲ್ಕೈದಾರೇಳೆಂ |
ಟೊಂಬ್ಹತ್ತು ತಾನೆ |
ಮುಂದ್ಹತ್ತು ಶತಸಹಸ್ರ ಅನಂತ |
ಸಂಖ್ಯಗಣಿತಾ ಗಣಿತವು ತಾನೆ ||5||
ತೃಟಿಘಟಿಕಾಲೋ ಎಲೊ ಯುಗ ಜುಗ |
ಪ್ರಳಯ ಪ್ರಳಯವು ತಾನೆ |
ಸ್ಫಟಿಕ ಘಟಾಂತರ ಜ್ಯೋತಿಯೋಳೆಸೆವ |
ತೇಜೋರಾಶಿಯು ತಾನೆ ||6||
ತನು ಕರಣೇಂದ್ರಿಯು ಪ್ರಾಣ ಪ್ರಕೃತಿ |
ಪರಿಪೂರ್ಣವಯವು ತಾನೆ |
ತನ್ಮಯ ಚಿನ್ಮಯ ನಿರುಪಾದಿ ರೂಪಾದಿ |
ಸಹಜ ಸಹಜವು ತಾನೆ ||7||
ದೃಗಮನಭಾವ ವಸ್ತು ಮುದ್ರ |
ಲಕ್ಷಾ ಲಕ್ಷವು ತಾನೆ |
ಬಗೆ ಬಗೆ ಚಿತ್ರ ವಿಚಿತ್ರ ದಶಾಂಗುಲ |
ಪ್ರಮಾಣ ಪ್ರಮಾಣವು ತಾನೆ ||8||
ಕುರುಡ ಕುಂಟಾದರು ಕರಚಲ್ವಾದರು |
ಮರಣರುವಿಲ್ಲವು ತಾನೆ |
ಬರೆಮೈಯಿದ್ದರು ಜರತರ ಹೊದ್ದರು |
ತಿರಿತನ ಧೊರಿತನ ತಾನೆ ||9||
ಘಳಿಗಳಿಯಲು ಸ್ಥಿರವಾಗುಳಿಯಲು |
ಅಳಿಯುವದು ಉಳಿಯುವದು ತಾನೆ |
ಕರಿಮುರಿ ಕರವಿಗೆ ಒಪ್ಪುವ ತಿಪ್ಪಿಗೇ |
ದ್ವಾದಶಕ್ಕೆ ದೋಷನು ತಾನೆ ||10||
ಹುಟ್ಟದ ಮೊದಲಿನದು ಸತ್ತಾಯ್ತು
ಸತ್ತದ್ದು ಹುಟ್ಟಿದ್ದು ತಾನೆ |
ಹುಟ್ಟೋದು ಸಾಯುದು ಭ್ರಾಂತಿಗೆ ಭ್ರಾಂತಿ
ಭ್ರಾಂತಾಭ್ರಾಂತವು ತಾನೆ ||11||
ತಾನೇ ನೀನು ನೀ ತಾನಲ್ಲ ನೀ |
ತಾನಾಗದು ಇಲ್ಲ ತಾನೆ |
ತಾನಾದರಿದು ತಾನಾದ್ದರಿಯದು
ಏನೋ ತಾನಲ್ಲ ತಾನೆ ||12||
ಭುವನದೊಳೊಪ್ಪುವ ಕಡಕೋಳ ಗುಡ್ಡದ
ಮಹಂತಪುರ ಪತಿಯು ತಾನೆ |
ತವನಿಧಿ ನಿಜಸುಖ ಸುಧಾಬ್ದಿ
ಚಂದ್ರಮಭಿ ಮುಕ್ತಾದತಿ ತಾನೆ ||13||
ನಾಡ ಹಗರಣ
ನೋಡೆ ಆತಪವಾರ್ಧಿ ಇದ್ದದ್ದು ಇಲ್ಲದ್ದು |
ನಾಡ ಹಗರಣವಿದು ಹೌದಾದೊ ಅಲ್ಲಾದೊ ||ಪಲ್ಲ||
ಕ್ಷಣ ತಾಸು ದಿನಮಾಸು |
ಎಣಿಸೊ ಬಹು ಯುಗಗಳೇಸು |
ಅಣುರೇಣು ಜಗವೇಸು |
ಗುಣಿಸು ಭಾಗಿಸು ಓಸು ||1||
ಅದೆ ಬ್ರಹ್ಮವಾಯಿತು ಬಂದು |
ಇದೆ ಹಮ್ಮು ಇದು ದ್ವಂದು |
ಅದು ಇದು ಅಲ್ಲೆಂದು |
ಚದುರೆ ನೀ ತಿಳಿ ಮುಂದು ||2||
ಬಿಸಲ ದೊರೆ ನೀರಿಗೆ |
ತೃಷೆಯಿಂದ ಮೃಗ ಹೋಗೆ |
ಅಸುವಳಿದ್ಹೋಯ್ತು ಹ್ಯಾಗೆ |
ಉಸರಲೇನದು ಈಗೆ ||3||
ದೂರಲು ತೋರಿತು |
ಸಾರಲು ಸಾರಿತು |
ಮಾರಿಗೆ ವಿೂರಿತು |
ಬ್ಯಾರ್ಯಾಗಿ ಬೀರಿತು ||4||
ಅಲ್ಲಿಯೂ ಬಿಸಲಲ್ಲೆ |
ಇಲ್ಲಿಯೂ ಬಿಸಲಲ್ಲೆ |
ಎಲ್ಲ ಮಾಂತನಲ್ಲೆ |
ಅಲ್ಲೆ ನಿಮ್ಮಂತೀಲೆ ||5||
ಘನಕೆ ಗೋಚರವಲ್ಲ
ಆಡಬಾರದ ಮಾತ ಆಡಿದೆ ನಿನಗೊತ್ತು |
ನೋಡಲಾದು ಧಾತು ನಾಡೆಲ್ಲ ಹಬ್ಬೀತು ||ಪಲ್ಲ||
ಬಾಯಿಲ್ಹೇಳುವದಲ್ಲ ಕಿವಿಗೆ ಕೇಳುವದಲ್ಲ |
ಮೈಗೆ ಮುಟ್ಟುವದಲ್ಲ ಕಣ್ಣಿಗೆ ಕಾಣುವದಲ್ಲ ||1||
ಕಾಲಿಂದ ನಡಿಯೋದಲ್ಲ ಕೈಲಿಂದ ಹಿಡ್ಯೋದಲ್ಲ |
ಸೋಲು ಗೆಲುವದಲ್ಲ ಕೂಡಲಿಕ್ಕೆರಡಲ್ಲ ||2||
ಮನವು ನೆನವುದಲ್ಲ ಮನಕೆ ತಾ ಬ್ಯಾರ್ಯಲ್ಲ |
ಘನಕೆ ಗೋಚರವಲ್ಲ ತನಗೆ ತಾ ಮಹಾಂತಲ್ಲ ||3||
ಅಪೂರ್ವ
ಅಪೂರ್ವ ಎನಗಿಹುದು ಅಪರಂಪಾರಾಯಿತು |
ನಿಪುಣರಿಗಹುದಲ್ಲೋ ಅಪೂರ್ವ |
ಗುಪಿತದಿ ಗುರುಪುತ್ರರು ಸುರೆ ಸೇವಿಸಿ |
ಜಪತಪ ಮಾಡುವದೊಂದಪೂರ್ವ ||ಪಲ್ಲ||
ಸಡಗರದ ಸಂಪತ್ತು ಮಡದಿ ಮಕ್ಕಳ ಬಿಟ್ಟು |
ಒಡಲಿಗೆ ತಿರಿದುಣುವದೊಂದಪೂರ್ವ |
ತಡಬಡಿಸುವ ಮನ ತಡಿಯದೆ
ತಾಮಸಿ ದೃಢವೃತ ನಡೆಸುವದೊಂದಪೂರ್ವ ||1||
ಒಡಲವಗುಣಗಳು ಕಡಿಯದೆ ಮಂತ್ರವ |
ಲೊಡಲೊಡನುಡೊದೊಂದಪೂರ್ವ |
ಪಡುಶಕ್ತಿಯೊಳೊಡಗೂಡದೇ ಮುಕ್ತಿಯ |
ಪಡೆವೆನೆಂಬೋದೊಂದಪೂರ್ವ ||2||
ಮನಿಯೊಳು ಮಾನಿನಿ ಮನವಲಿದನುವಿರೆ |
ಭಿನ್ನ ಸ್ತ್ರೀಯಳಿಗೆ ಹೋಗೋದೊಂದಪೂರ್ವ |
ತನುಮನ ಧನವನು ಘನ ಗುರುವಿಗರ್ಪಿಸಿ
ಅನುಮಾನಿಸಿದೊಂದಪೂರ್ವ ||3||
ಕನಸಿನ ರೋಗಕೆ ಕನಸಿನಲೆಚ್ಛತ್ತವಗೆ
ವೈದ್ಯನ ಕರಸೊದೊಂದಪೂರ್ವ
ತನಗೊದಗಿರೆ ನಿಜದನುಭವ ಸುಖ |
ತನುತಾಪ ಹೋಗುದೊಂದಪೂರ್ವ ||4||
ಪಾತ್ರಾ ಪಾತ್ರ ವಿಶೇಷವನರಿಯದೆ |
ಕ್ಷೇತ್ರ ಯಾತ್ರಿಗ್ಹೋಗುದೊಂದಪೂರ್ವ
ಮೂತ್ರಿಸಲಸಾಧ್ಹ್ಯೆಳವನಂಧಕ ತಾ |
ಜಾತ್ರಿಯ ಬಯಸುವದೊಂದಪೂರ್ವ ||5||
ನೇತ್ರತ್ರಯ ಮಹಾ ಮಹಾಂತನ ಸ್ತೋತ್ರಕ್ಕೆ |
ಶ್ರೋತವ ಕೊಡುವದೊಂದಪೂರ್ವ
ರಾತ್ರಿ ಬೀಳ್ಲಾದ್ರ್ಬಾವಿಗೆ ಹಗಲೆ ಕಂಡು
ಧೋತ್ಹ್ರಾಸ್ಹ್ಯಾರೊಂದಪೂರ್ವ ||6||
ಸಾಯುಜ್ಯ
ತಾವೆರಡೊಂದಾದ ಸುಖ ಸಾಮ್ರಾಜ್ಯ |
ಮುವ್ವರೊಂದಾದನುಭವವೇ ಸಾಯುಜ್ಯ ||ಪಲ್ಲ||
ಸಾಲೋಕ್ಯ ಸಾಮಿಪ್ಯ ಸಾರೂಪ್ಯ ಆಪೇಕ್ಷಿ |
ಚಿಲ್ಲಾಳ ಶ್ರೀಯಾಳ ಚಂಗಳಿ ಸಾಕ್ಷಿ ||1||
ಚಿತ್ತು ಚಿದ್ರೂಪಾದರದು ಬಹು ಘೋರ |
ಚಿತ್ತು ಚಿತ್ತಾದರೆ ಚಿನ್ಮಯಾಕಾರ ||2||
ಬಲ್ಲನೊ ಮುಕ್ತೆಂದರೆ ಹಿರ್ರನೆ ಹಿಗ್ಗತಿ |
ಮೆಲ್ಲನೆ ಬರವಲ್ಲಿ ಸರ್ರನೆ ಸಗ್ಗತಿ ||3||
ಕಂಡ ಬ್ಯಾಟಕ್ಕಿಂತ ಕಿವಿ ಬ್ಯಾಟಗಳ ಅಗ್ಗಳವೊ |
ಕಂಡುಂಡವನೆ ಬಲ್ಲ ಅದರಳಲ ಬಳಲವೊ ||4||
ಕೆಡುವೆನೆಂಬವನ ವಾಕ್ಯಕೇನು ಪ್ರಮಾಣೆ |
ಕೆಡುವೆವೆಂದು ತಿಕ್ಕೆಗೊಂಡರೇನು ತನ್ನ ತ್ರಾಣೆ ||5||
ತಾ ನಿರಾಳಾಗೋದೆಂದಿಗೆ ಅರಿಯ |
ನೀ ನಿರಾಳಾಗೆಂಬೋದೆಂದೆಂದು ಮರಿಯ ||6||
ಸತ್ಕರ್ಮವೆಂದು ಮಾಡುವ ಬೆಟ್ಟದಷ್ಟು |
ದುಷ್ಕರ್ಮವಾಗುದು ಸುಖವಿಲ್ಲೆಳ್ಳಷ್ಟು ||7||
ಒಳ್ಳೇದ್ಹೊಲ್ಲಾದ ಮೇಲ್ಹೊಳ್ಳಾದಹುದೇ |
ಕಳ್ಳ ನಾಣ್ಯವು ಕಳವಳಿಕ್ಯಾಗದಿಹುದೇ ||8||
ಅಲ್ಲೆಂಬೋ ಶಬ್ದದರ್ಥಾಗದನರ್ಥ |
ಬಲ್ಲೆನೋ ಮಹಾಂತಪುರ ಮಹಾಂತ ಸಮರ್ಥ ||9||
ಕನವರಿಸುವ ಕನಸು
ನಿರ್ಬೈಲೊಳು ಹುಸಿ
ನಿಲವು ತಾನಾಯಿತು ಹಲವು |
ಮಾಡುವದ್ಯಾತಕೆ ಕುಲ ಛಲವು
ಎಲ್ಲ್ಯಾದ ಫಲ ಪದವು ||ಪಲ್ಲ||
ರೂಪ ತಾನಾಯಿತು ಚಿದ್ರೂಪ |
ಶುಕ್ಲ ಶ್ರೋಣಿತ ಕೂಪ |
ತಾಪತ್ರಯದ ಮೂಕ ಸಂತಾಪ |
ಎಲ್ಲ್ಯಾದ ಸುಖ ರೂಪ ||1||
ಜೀವನ ನಿರ್ಜೀವನ ಸ್ವಭಾವ |
ಅದಕೆಲ್ಲ್ಯಾದ ಸಾವ |
ದೇವಾಧಿದೇವನವನ್ಯಾವ |
ತಿಳಿತೇನನುಭಾವ ||2||
ಒಡಲಾತ್ಮದೊಳಗೆ ತಾ ಮನಸು |
ಆಯಿತು ಬಹು ದಿನಸು |
ಮೃಢ ಮಹಾಂತೇಶ್ವರನೆಂದೆನಿಸು |
ಕನಕರಿಸುವ ಕನಸು ||3||
ಶೂನ್ಯ ಸಂಪಾದನೆ
ಕ್ರಿಯೆ ನಿಷ್ಪತ್ತಿ ಜ್ಞಾನ ನಿಷ್ಪತ್ತಿ |
ಶೂನ್ಯ ಸಂಪಾದನೆ ಎಂಬೊ ಭಾವ |
ಆಯತವಾಯ್ತೆ ಪ್ರಮಥರಿಗೆ |
ಪ್ರಭುವಿನ ತಿಳಿ ಪೂರ್ಣನುಭಾವ ||ಪಲ್ಲ||
ಕಾಮವೆ ಕಾರಣ ಬಂದಸ್ತಿ ಮೂಲ |
ಕರ್ಮ ನಿರ್ಮಲಕ್ಕೆಂಥನುಕೂಲ |
ಸ್ವಾಯತವ ಮಾಡ್ಗಂಜಿ ಗೊಂಗಡಿಗೆ |
ನಾಡ ಮಾತಿನೊಳದೆ ಶೀಲ ಶೂಲ ||1||
ಶಿವನ ನಿಜ ತಿಳಿವುದೆ ಮಹಾಜ್ಞಾನ |
ತಿಳಿವವನಾದರ್ಯಾತರ ಧ್ಯಾನ |
ಭವಭವೆಂಬೊದೆಲ್ಲೆದೆಲ್ಲರಿಗೆ |
ಭ್ರಾಂತಿ ಕಲ್ಪಣೆಗಾಯ್ತನುಮಾನ ||2||
ಸರ್ವ ರೂಪಿಗೆ ಶೂನ್ಯಧಿದೈವ |
ಶೂನ್ಯ ಸಂಪಾದನಿಗ್ಯಾವ ಜೀವ |
ನಿರ್ವಯಲಾದ ಮಹಾಂತನಿಗೆ |
ಮರುವರಿವುದಕ್ಕಿನ್ನೆಲ್ಲದ ಕಾವ ||3||
ನಿಜವೆಂದಿಗಿ ಕಾಣ
ಎಲ್ಲ ಸ್ವರೂಪವು ತಾನಲ್ಲ ಬ್ರಹ್ಮವೆಂಬುದ ಸೊಲ್ಲ |
ಬಲ್ಲೆ ಬಲ್ಲನೆಂಬುದು ಭ್ರಮಿ ಹೊಲ್ಲ ನಾನು ನೀನಲ್ಲ |
ನಲ್ಲೆ ವೇದಾಗಮ ಓದಿದ ಜಾಣ ಸುಪ್ರವೀಣ
ಪೌರಾಣ ಬಹುರಾಣ ನಿಜವೆಂದಿಗಿ ಕಾಣ ||ಪಲ್ಲ||
ಮಾಯಿಯೆಂಬುದೆ ಮಹಾಂಕಾಳಿ ಗಾಳಿ ಗೋಪಾಳಿ
ಬಾಯಿಗೆ ಬಂದದ್ದೆ ಭೂಪಾಳಿ ರೂಪಿಲ್ಲದ ವಾಳಿ ||
ನ್ಯಾಯ ಅನ್ಯಾಯವಾಯಿತು ಆದದ್ದಾಯಿತ್ತು |
ಮೋಹವು ಮಾಯಿತು ಸುಳುವಿಲ್ಲದೆ ಹೋಯಿತ್ತು ||1||
ಸೂರ್ಯನ ರೂಪ ಸ್ವಲ್ಪಾಕಾರ ಬಿಸಲು ಅಪಾರ |
ಕಾರ್ಯಕಾರಣ ಕಿರಣ ಖೂರ ಇದು ತೋರಿ ತೋರ |
ಎಲ್ಲರಿಗೂ ಮಾಡಿದ ಹೊತ್ತು ಅವನ ಗೊತ್ತು ಯಾವಲ್ಲಿತ್ತು |
ತನ್ನ ಪತ್ತು ತನಗಿಲ್ಲ ಹೊತ್ತು ||2||
ಓಂ ಎಂಬುವದೊಂದೇ ಮಂತ್ರದ ಮೂಲ
ಷಟ್ಶಾಸ್ತ್ರದ ಜಾಲ ಆಯಿತಾ ಕಸಕಸಿ ಸಹಸ್ರ ಪಾಲ |
ಅದು ಅವಾಚ್ಯ ಲೀಲ ಏಐ ಎಂಬೋ ಅರುವು ಮಹಾಂತೇಶ |
ಮಹೇಶಾ ಸರ್ವೇಶ ಸುಪ್ರಕಾಶ ಸ್ವಪ್ನನಿವೇಶಾ ||3||
ವಿನೋದಕ್ಕೆ ಹಲವು
ತನ್ನ ವಿನೋದಕ್ಕೆ ತಾ ಹಲವಾದರೆ
ಬಣ್ಣಿಸಲ್ಯಾಕೆ ಮಹಾ ಮಹಾಂತೇಶ್ವರನ |
ಬಣ್ಣಿಸುವದು ತಾ ಹಲವಿನೊಳಲ್ಲದೆ |
ಮನ್ನಿಸು ನಿನ್ನೊಳು ಸರ್ವಾತ್ಮನ ||ಪಲ್ಲ||
ಕಾಯದ ಕಳವಳ ಕರುಣದೊಳಳಿದರೆ |
ಮಾಯೆಯ ಛಾಯೆಯ ಭ್ರಮೆ ಅದು ಸುಳ್ಳೆ |
ಮಾಯೆಯು ಛಾಯೆಯ ಭ್ರಮೆ ಸುಳ್ಳಾದರೆ |
ಆಯಸವ್ಯಾತಕ್ಕೆ ನೀ ತಿಳಕೊಳ್ಳೆ ||1||
ಅಲ್ಲ ತಾನೆ ತಾನು ತಾನೆ |
ಸೊಲ್ಲಡಗಲಿಬೇಕದೆ ನಿಜಭಕ್ತಿ |
ಸೊಲ್ಲಡಗಲು ನಿಃಶಬ್ದವೆ ಬ್ರಹ್ಮವು |
ಅಲ್ಲಿ ನಿಂದರೆ ಜೀವನ್ಮುಕ್ತಿ ||2||
ನಿರುಪಮ ನಿಃಕಲ ನಿರ್ಗಳ ನಿಚ್ಚಳ
ಸ್ವಯಂಭು ಚಿತ್ಪ್ರಭೆ ಅರುವಿನ ತಿರುಳೆ |
ತಿರುಳೊಳು ಬೆರೆತಿಹ ಗುರ್ತವ ಮರ್ತರೆ |
ಅದರರ್ಥವು ನಿರುತಲೆ ಗುರು ಮಹಾಂತ ||3||
ಸದ್ಗುಣ ಸಂತಾನ
ಬ್ರಹ್ಮೇತಿ ಬ್ರಹ್ಮೇತಿ ಈ ಬ್ರಹ್ಮಾಂಡಿರು ಪರ್ಯಂತರ
ನಿಮಗದು ಬ್ರಹ್ಮೇತಿ ಬ್ರಹ್ಮೇತಿ ||ಪಲ್ಲ||
ಮಾನ್ಯವಂತ ಮನ್ನಣಿ ಸತ್ಕುಲ ಧನಧಾನ್ಯ |
ಅನ್ನ ಸಂಪನ್ನ ಸೌಖ್ಯರಿಗೆ ||
ಮಾನವಂತ ಮನ್ನಣಿ ಸತ್ಕುಲ ಧನಧಾನ್ಯ |
ಅನ್ನ ಸಂಪದನಳಿದವರಿಗೆ ||1||
ರೂಪು ವಿದ್ಯ ತಪ ನಿಷ್ಠೆ ನಿಧಾನ ಸು
ಲಾಪ ಸತ್ಯ ಸತ್ಕ್ರಿಯ ಸಜ್ಜನರಿಗೆ ||
ರೂಪು ವಿದ್ಯ ತಪ ನಿಷ್ಠೆ ನಿಧಾನ ಸು
ಲಾಪ ಸತ್ಯ ಸತ್ಕ್ರಿಯ ಸಜ್ಜನರಿಗೆ ||2||
ಶಾಂತ ಪೂಜ್ಯ ಸದ್ಗುಣ ಸಂತಾನ ಮ
ಹಾಂತ ರಾಜ ತೇಜದೊಳಿರುವವರಿಗೆ |
ಶಾಂತ ಪೂಜ ಸದ್ಗುಣ ಸಂತಾನ ಮ
ಹಾಂತ ರಾಜ ತೇಜದೊಳಿರುವವರಿಗೆ ||3||
ಅಪರಿಮಿತ ಮಹಾಂತಲೀಲಾ
ಎಲ್ಲಾ ತಾ ನಿರ್ಬಯಲೆ ನೀ |
ನಲ್ಲಿ ತಿಳಿಯೊ ಮೂಢ |
ಸಲ್ಲದಿಂಥ ಗರ್ವ ನಿನಗೆ |
ಸೊಲ್ಲುವೆ ಧರ್ಮದ ಜಾಡ ||ಪಲ್ಲ||
ಸತ್ತು ಚಿತ್ತು ಅರಹು ಮರಹು |
ಎತ್ತಿಂದಾಯಿತೊ ಮೂಢ |
ಗೊತ್ತು ತಿಳಿಯದೆ ಹೋದರೆ |
ವ್ಯರ್ಥ ಹತ್ತದೆ ಮನ ಪೀಡಾ ||1||
ಏಕಮೇವನರಿ ಈ ಮಾತ |
ಅನೇಕವ್ಯಾಕೋ ಮೂಢ |
ಬೇಕು ಬ್ಯಾಡಾದುಳಮೆ ತಿಳಿದ |
ಲೋಕ ನಿಜದ ಗೂಢ ||2||
ಉಪಕಾರಾರ್ಥ ಸುಳಿದ ಸುಳುಹು |
ವಿಪರೀತಾಯ್ತು ಮೂಢ |
ಅಪರಿಮಿತ ಮಹಾಂತಲೀಲಾ |
ಸುಪಥ ಸುಖದ ಬೀಡಾ ||3||
ಅವಾಚ್ಯ ಬ್ರಹ್ಮ
ಅವಾಚ್ಯ ಬ್ರಹ್ಮವು ತಾನೆ
ನಾನು ನೀನು ಅವಾಚ್ಯ ಬ್ರಹ್ಮವು ||ಪಲ್ಲ||
ಅವಾಚಾನಾಹಂ ಅವಾಚ ಕೋಹಂ
ಅವಾಚ ಸೋಹಂ ಹೌದು |
ಭವಾಯಚ ಶಿವಾಧವಾಯಚ
ಸರ್ವೆವಾಯಚ ಆದವದಾವ ತಾನೆ ನಾನು ನೀನು ||1||
ಅಶಬ್ದ ಪ್ರಕೃತ ಶಬ್ದ |
ಜೀವನ ಸುಶಬ್ದ ಶಿವಕಳೆವಾದ |
ಅಶಬ್ದ ಕುಶಬ್ದ ಸುಶಬ್ದ ಓಂ ನಮಃ ಶಬ್ದ |
ಬ್ರಹ್ಮವು ತಾನೆ ನಾನು ನೀನು ||2||
ಅವಾಚ ಸ್ಥಾಣು ಚೋರ ಅವಾಚಾದ |
ಅನುಮಾನ ಅವಾಚಸ್ಥಿರ ಚರವಾದ |
ಅವಾಚ ಸ್ವಯಂಭು ಅವಾಚ ಯಾವನೋ
ಅವಾಚ ಗಿವಾಚ ಮಹಾಂತ ಗಿಹೀಂತ ತಾನೆ ||3||
ಭಾವೇ ಭವದ ಬೀಜ
ನೀನು ತಿಳಿದರ ತಿಳೀತಿ |
ತಿಳಿಯದಿದ್ದರ ತಿಳಿಯುವದುಳೀತೆ |
ಭಾವಿಸಿಕೊಂಡರೇನಳೀತೆ |
ಭಾವಿಸದಿದ್ದರೇನುಳಿತೆ ||ಪಲ್ಲ||
ತಿಳಿದವನು ತಿಳದೇ ಇಲ್ಲ |
ತಿಳಿಲಾರ್ದವ ತಿಳಿದೇನು ಬಲ್ಲ |
ತಿಳಿದವರು ತಿಳಿಲಾರ್ದವರು ಎಲ್ಲ |
ತಿಳಿಯೆಂಬೋದಿದರೊಳಗಿಲ್ಲ ||1||
ಸ್ವಪ್ನಪ್ತೆಂಬೊ ಪುರುಷ |
ಸಂಪತ್ಯಿಪರೀತ ಮಾಡಿದ ಪರುಷ |
ಅಪರಂಪಾರ ಮನ ಹರುಷ |
ತನುವೀಗ ಪುಟ್ಟಿಲ್ಲೊ ಸ್ಪರುಷ ||2||
ಇದ್ದದ್ದು ಇಲ್ಲದ್ದು ತಿಳಿಯೊ |
ಇದು ಎಲ್ಲಾರಿಗಿ ನೀರ ಹೊಳಿಯೊ |
ಬಲ್ಲೆನೆಂಬುದು ಅಳಿಯೊ |
ಬಲ್ಲಾದರೆ ನೀ ಭವ ಕಳಿಯೊ ||3||
ದೇವ ಮಹಾಂತರಾಜಾ |
ಸದ್ಭಾವ ತಿಳಿಸಿದ ಸಹಜ |
ಭಾವ ಭವದ ಬೀಜ |
ನಿರ್ಭಾವವೇ ಸಾಯುಜ್ಯ ||4||
ತಿಳಿದರೆ ತಿಳಿಯುವದಲ್ಲ
ತಿಳಿದರೆ ತಿಳಿಯುವದಲ್ಲ | ಅದ
ತಿಳಿವಲ್ದವ ತಿಳಿವುದೇನು ಬಲ್ಲ |
ತಿಳಿದವರ್ತಿಳಿಯಲ್ದವರೆಲ್ಲ |
ತಿಳಿ ಅದರೊಳಗಾಗದೆ ಇಲ್ಲ ||ಪಲ್ಲ||
ಮುವ್ವರ ಮಾತು ಮುರಿಯೋ | ಆ
ಮುವ್ವರೇವಲ್ಲ್ಯಾದರು ತಿಳಿಯೋ |
ಮುವ್ವರು ಮೂರು ಚರಿಯೊ |
ಮುವ್ವರಾವರಿಸಿದವ ಧೊರಿಯೊ ||1||
ಅಷ್ಟಾವರಣವಹುದೊ | ಅವ
ರ್ನಿಷ್ಟಿ ಯಾವನಿಗಿಹುದೊ |
ದೃಷ್ಟ ವೇದಾಂತಿಹುದೊ |
ದೃಷ್ಟ ನಷ್ಟ ತನಗ್ಯಾಕಹುದೊ ||2||
ಪಾಪಿಯ ಕಣ್ಣಿಗೆ ಪರುಷ | ಕಲ್ಲು
ರೂಪಾಯಿತವಸ್ಪರುಷ |
ವೋಪ ಮಹಾಂತರು ಹರುಷ |
ತ್ರೈತಾಪ ಅನಂತ ವರುಷ ||3||
ಒಲ್ಲೆ ನಿನ್ನ ಸಂಗ
ಒಲ್ಲೆನ್ಹೋಗ ನಿನ್ನ ಸಂಗ |
ನಿನ್ನ ನೀನೆ ನೋಡಿಕೊ ||ಪಲ್ಲ||
ಇಲ್ಲದೊಂದು ಹುಟ್ಟಿಸುತಾನೆ |
ಇದ್ದದೊಂದು ಸಾಯಿಸುತಾನೆ |
ಅಲ್ಲದವನ ಮಾತು ಕೇಳಿ |
ಬಲ್ಲಾಂಗೆ ಹೊಯಿದಾಡುತಿ ||1||
ಮನಸಿಕರಾಯನು ಬಂದು |
ಕನಕರಿಸಿ ಸೌಭಾಗ್ಯ ತಂದು |
ತನಗೆ ತನಗಾಗದ ಸೊಮ್ಮು |
ನನಗೆ ನನಗೆಲ್ಲಿಯ ಹಮ್ಮು ||2||
ಸತ್ತವ ಸಾವೋದಿಲ್ಲ |
ಬದುಕಿದವ ಬದುಕೋದಿಲ್ಲ |
ಗೊತ್ತು ತಿಳಿಯದೆ ಸುಮ್ಮನೆ ಇದ್ದಿ |
ಎತ್ತ ಹೋಯಿತು ನಿನ್ನ ಬುದ್ಧಿ ||3||
ಭಾವನ ತಮ್ಮ ಜೀವನ ಗಂಡ |
ಜೀವನ ತಮ್ಮ ಮೈದುನ ಉಂಡ |
ಅವನಿಗವನಿಗೆ ನಿಂದೇನದ |
ಭಾವಿಸಿಕೋ ಅರಿಯದ ನಿನಗೇನದ ||4||
ಸತ್ತವಸಾಯ್ವಲ್ಹಾನ |
ಬದುಕಿದವ ಬದುಕಲ್ಹಾನ |
ಕತ್ತಲಿ ಬೆಳಗು ಕಾಣದಾತ |
ಸತ್ತದ್ದು ಬದುಕಿದ್ದು ನೋಡುವಾತ ||5||
ಸುಳ್ಳಿನ ಸುದ್ದಿ ಸುಳ್ಳಿಗಿಲ್ಲ |
ಸುಳ್ಳು ಸುಳ್ಳೆಂಬುವ ಏನು ಬಲ್ಲ |
ಸುಳ್ಳಿನಾಚಿಲಿ ಯಾವನಿದ್ದ |
ಸುಳ್ಳೆ ತಿಳದೇನೆಂಬವ ಬಹಳ ಬದ್ಧ ||6||
ಏನೋ ಏನೋ ಹ್ಯಾಂಗ್ಯಾಂಗಾಯ್ತೊ |
ಏನೋ ಏನೋ ಹ್ಯಾಂಗ್ಹ್ಯಾಂಗ ಹೋಯ್ತು
ಏನೋ ಆದುದು ಏನೋನೆ ಬಲ್ಲಾ |
ನಾನಿನಗ್ಹೇಳೋ ಸೊಲ್ಲೇ ಇಲ್ಲಾ ||7||
ಅಪ್ಪನ ಪಣಜನ ತಾಯಿ ಮಲ ಅತ್ತಿ |
ತಪ್ಪಿಸಿಕೊಂಡರೆ ಹೊರಳ್ಹೊರಳತ್ತಿ |
ಜಪ್ಪಿಸಿಕೋ ನೀ ಯಾವ ಮಹಾಂತ |
ಬಪ್ಪದು ಹೊಪ್ಪದು ಇಲ್ಲೇ ಭ್ರಾಂತ ||8||
ಬೇಕಾದ ಗಂಡ
ನನ್ನ ಒಳಗ ನಾ ತಿಳಿಕೊಂಡೆ | ನನಗ
ಬೇಕಾದ ಗಂಡನ ಮಾಡಕೊಂಡೆ |
ಆಜ್ಞೆ ಪ್ರಕಾರ ನಡಕೊಂಡೆ |
ನಾ ಎಲ್ಲರ ಹಂಗೊಂದು ಹರಕೊಂಡೆ ||ಪಲ್ಲ||
ಆರು ಮಕ್ಕಳನು ಅಡವಿಗಟ್ಟಿದೆ |
ಮೂರು ಮಕ್ಕಳ ಬಿಟಗೊಟ್ಟೆ |
ಅವನ ಮ್ಯಾಲ ನಾ ಮನಸಿಟ್ಟೆ |
ನನ್ನ ಬದಕು ಬಾಳುವೆಯಲ್ಲಾ ಬಿಟಗೊಟ್ಟೆ ||1||
ಒಂದನಾಡಿದರ ಕಡಿಮೆ ಎಂದೆ |
ಮತ್ತೊಂದನಾಡಿದರೆ ಅತಿ ಹೆಚ್ಚೆಂದೆ |
ಲಿಗಾಡ ಮಾತಿಗೆ ನಿಜವೆಂದೆ |
ಇದು ಸುಜ್ಞಾನಿಗೆ ತಿಳಿದಿರಬೇಕೆಂದೆ ||2||
ಶಿವನ ಹಾದಿ ನಾ ಬೇಡಿಕೊಂಡೆ |
ಗುರೂಪದೇಶವ ಪಡಕೊಂಡೆ |
ಈ ಭವಕೆ ಬಾರದಂತೆ ಮಾಡಿಕೊಂಡೆ
ಗುರು ಮಹಾಂತನ ಪಾದ ಹಿಡಕೊಂಡೆ ||3||
ಇಬ್ಬರ ಹೆಂಡಿರ ಕಾಟ
ಒಲ್ಲೆನಪ್ಪೋ ಹೆಂಡಿರನೊಲ್ಲೆನಪ್ಪೊ |
ಇಬ್ಬರ ಹೆಂಡಿರ ಕಾಟಿಗಾಗಿ |
ಮಗ್ಗದ ಕೋಣಿಯೊಳು ಡೊಗ್ಗಿದೆನಪ್ಪೊ |
ಎಪ್ಪೊ ಸಾಯ್ತೀನರೊ ಸತ್ತು ಹೋಗತೀನರೊ ||ಪಲ್ಲ||
ಗಬ್ಬಿದ ಕುರಿಯಂತೆ ಸೂಳೇರು ಬಂದು |
ಗುದ್ದ್ಯಾಡಿ ಮೈಮ್ಯಾಲ ಬಿದ್ದಾರಪ್ಪೊ |
ಮುದ್ದಿಯಾಗಿ ಮಲಗಿದ ನನ್ನ |
ಗುದ್ದಿ ಗುದ್ದಿ ಎಬ್ಬಿಸ್ತಾರ ||1||
ಮಕ್ಕಳ ಮರಿಗಳ ಕಕ್ಕುಲಾತಿಗಾಗಿ |
ಚಿಕ್ಕ ಹೆಂಡತಿ ಮಾಡಿಕೊಂಡೆ |
ಮಕ್ಕಳ ಮಾರಿಗೆ ಬೆಂಕೀ ಹಚ್ಚಲಿ |
ಒಲ್ಲೇನಪ್ಪ ಮರೇ ನಾ ಒಲ್ಲೆನಪ್ಪೊ ||2||
ಸಂವ ಸಂವತೇರು ಇಬ್ಬರು ಕೂಡಿ |
ಸಣ್ಣಕ್ಕಿ ಬಾನ ನೀಡಿ |
ಸಂವನಾಗಿ ಉಣಸೇನೆಂದು |
ಸ್ವಾಟಿ ಸ್ವಾಟಿ ತಿವಿದಾರಪ್ಪೊ ||3||
ಇಂದ ಒಬ್ಬಕ್ಕಿ ಸಾಯಲಿ |
ನಾಳಿಗೆ ಒಬ್ಬಕ್ಕಿ ಸಾಯಲಿ |
ಚಿಣಮಗೇರಿ ಮಹಾಂತೇಶಗ |
ಜೋಡಕಾಯಿ ಒಡದೇನಪ್ಪೊ ||4||
ಮದವಿ ಗಂಡನಿಲ್ಲದ ಮಗ
ಮಗನೊಂದು ಹಡದೇನಲ್ಲ |
ಮದವಿ ಗಂಡ ಮನಿಯಾಗಿಲ್ಲ |
ಎಂಥಾದು ಜಗವೇ ತಾಯಿ |
ಜಾಣಿ ನಾ ಸುಳ್ಳ ಹೇಳೂದಿಲ್ಲ ||ಪಲ್ಲ||
ಜಠರದಲ್ಲಿ ಜನಿಸಲಿಲ್ಲ
ತುಪ್ಪ ಎಣ್ಣೀಲಿ ಎರಿಯಲಿಲ್ಲ |
ಚಪ್ಪಳಿಗಿ ಬಾರಿಸಲಿಲ್ಲ |
ಮುಪ್ಪಿನವರು ಕರಿಯಲಿಲ್ಲ ||1||
ಊರ ಕೇರಿ ತಿರುಗಲಿಲ್ಲ |
ಜಾರತನವು ಮಾಡಲಿಲ್ಲ |
ಪಾರ ಒಂದು ಹುಟ್ಟಿತಲ್ಲ |
ನಾರೇರು ಕೇಳಿರಿ ಸೊಲ್ಲ ||2||
ಉಂಡು ಉಟ್ಟು ತಿರುಗಲಿಲ್ಲ |
ಮಿಂಡಿ ನಾ ಬಸಿರಾಗಲಿಲ್ಲ |
ಪುಂಡ ಮಹಾಂತೇಶ ನಿನ್ನ
ಕಂಡು ಹೆಸರ ಇಟ್ಟೇನಲ್ಲ ||3||
ಸೋಜಿಗ ಬಂಗಾಲೆ
ಏಸೋ ಬಾನ ಲೀಲೆಯಿದು ಐ
ಸೋಜಿಗ ಬಂಗಾಲೆ |
ಸೂಸಿತು ಸುಸುಮ್ನೆ ಸುಳಿಗಾಳೆ |
ಹೇಸಲ್ದ ಹೋಯಿತು ಕುಂಡಿಲೆ ||ಪಲ್ಲ||
ತಾ ಸುಳ್ಳ ಖರೆ ಇಲ್ಲ |
ನೀ ಸುಳ್ಯಾಕೊ ಮುಲ್ಲ |
ದ್ಯಾಸಕ್ಯಾವನು ತರಲಿಲ್ಲ |
ಏಸೋ ಕಾಲಾದಿತಲ್ಲ ||1||
ನಾ ಸುಳ್ಳು ಸಹಜಾದ |
ನೀ ಸುಳ್ಯಾಕೋ ವಾದ |
ನಿಶೂನ್ಯವಾದದ್ದೆ ನಾಲ್ಕು ವೇದ |
ವಾಸನೆ ಹೋದದ್ದೆ ಹಸಾದ ||2||
ಆಗಮಗಳೋದಿ ನಾಳೆ |
ಕೇಳಾಗ ಹಾಯ್ದಿತು ಗೂದಿ |
ಹೋಗುದು ಬರುವದು ತಿಳಿಲಿಲ್ಲ ಹಾದಿ |
ಕೂಗಿ ಹೇಳಿತು ಗುರು ಬೋಧಿ ||3||
ಬ್ರಹ್ಮಾಂಡಾದುದ್ದೆಲ್ಲ ಪರ
ಬ್ರಹ್ಮವು ಮಾಡಿಲ್ಲ |
ಹಮ್ಮು ಹಾರಿಸಿದವನೆ ಬಲ್ಲ |
ನಮ್ಮನ ಹಡದವಳ್ಯಾವಳಿಲ್ಲ ||4||
ದೀಕ್ಷಕೆ ಮಹಾಂತಯೋಗಿ |
ತಾ ಮೋಕ್ಷಕ ಮರಗಿ |
ಸೋಹಂ ಎಂಬುದು ತಾನೆ ಪೋಗಿ |
ಸಾಕ್ಷಾತ್ ತಾನಿದ್ದುದು ಇಲ್ಲದ್ದಾಗಿ ||5||
ಸಮಾಧಾನ
ಆರು ತನಗೇನಂದರೇನು ಅಗೋ ಸಮಾಧಾನ
ದೇವನು ತಾನಾದ ಮೇಲೆ ವಾಸನೆ ಹೋದುದೇ ಖೂನ ||ಪಲ್ಲ||
ಅರಿಯದೆ ಅಜ್ಞಾನಿ ಮೊದಲು ಎಲ್ಲರೊಂದೆಯಾಗಿ
ಅಲ್ಲದೊಂದು ಮಾತು ಕೇಳಿ ಬಲ್ಲೆನೆಂಬುದು ನೀಗಿ
ಸೊಲ್ಲಿ ಸೊಲ್ಲಿನಲಿ ಒಬ್ಬ ಖುಲ್ಲರ ಹೊಟ್ಟಿಯ ಸೀಳಿ ||1||
ಹತ್ತು ಮಂದಿ ಕೂಡಿ ಒಂದು ಗೊತ್ತಿಗೆ ಹೋಗಲಾಗಿ
ಸತ್ತದ್ದೊಂದು ಕಂಡು ಜನರು ಮುಕರಿಕೊಂಡರು ಭೇಗಿ
ಉತ್ತಮನೊಬ್ಬ ಒಲ್ಲೊಲ್ಲಂದರೆ ಸತ್ತುದೆಂಬುದೆ ಕಾಗಿ ||2||
ಒಡಲೊಳಾತ್ಮ ನೀನೆ ಸರ್ವ ಒಡೆಯನಿಲ್ಲದಲ್ಹೋಗಿ
ಬುಡ ನಡು ಕಡೆಗಾಣದೆ ಯಮ ನರ್ಕದ ಮಡುವಿಗೆ ಬಿದ್ದಿರ್ಹೋಗಿ
ಮೃಢ ಮಹಾನಂದ ಚಿನ್ಮಯ ಮಹಾಗುರು ಮಹಾಂತಯೋಗಿ | |3||
ನೆನವ ಮನ ನಿಲ್ಲಿಸು
ಆಯತವಾಗೋದೊಂದರಿಯೋ ಮುಂದೆ |
ಸ್ವಾಯತವಾಗೋದಾನಂದವಾ ಹರಿಯೋ ||ಪಲ್ಲ||
ಹಲವು ನೆನೆವ ಮನ ನಿಲಿಸೊ | ನಿನ್ನ
ನೆಲೆ ಆದಾತ್ಮನ ಚಿಂತಿಯ ಬಲಿಸೋ ||
ಸಲುವ ಸತ್ಕರ್ಮವ ಕಲಿಸೋ | ಚಲ್ವ
ಸುಲಭ ಶ್ರೀಗುರು ಕರುಣಾಮೃತ ಸಲಿಸೋ ||1||
ಹಾದರ ಹುಸಿ ಕಳು ಬೇಡೋ | ಅವು
ಮೇದಿನಿಯೊಳು ಪ್ರಾಣಾರ್ಥ ಅಭಿಮಾನಕ್ಕೇಡೋ ||
ಆದಿ ಅನಾದಿಯು ನೋಡೋ | ಒಳ್ಳೇ
ಸಾಧು ಪುರುಷರ ಸಹವಾಸದೊಡನಾಡೋ ||2||
ದೃಢಮತ ನೇಮವ ಹಿಡಿಯೋ | ನಿನ್ನ
ಒಡಲವಗುಣಗಳ ತಡಿಯದೆ ಕಡಿಯೋ ||
ಬಿಡದೆ ಓನಾಮವ ನುಡಿಯೋ | ನಮ್ಮ
ಮೃಢ ಮಹಾಂತೇಶನ ಪಾದ ಪಿಡಿಯೋ ||3||
ನೀ ಕಂಡರೆ ನೆಲೆ
ನೀ ಕಂಡರೆ ನಿನ ನೆಲಿಗಾಣುವದೊ |
ನೀನೆ ಕಂಡು ನೋಡಮೆ | ಬಹು ಹೀನ ಕೃತಿ ಬ್ಯಾಡಮೆ ||ಪಲ್ಲ||
ಹೆಣ್ಣು ಹೊನ್ನು ಮಣ್ಣು ಮೂರು
ಆಶಿ ಬಿಟ್ಟು ನೋಡಮೆ | ಆಶಿ ಬಿಟ್ಟು | ನೋಡಮೆ |
ನೀನಾಶಿ ಬಿಟ್ಟು ನೋಡಮೆ |
ಪನ್ನಗಶೈನನ ಗುರ್ತು | ಇಲ್ಲೆ ಕಾಣ್ತಾದ ನೋಡಮೆ ||1||
ಅಷ್ಟಾವರ್ಣದಾಗಿನ ಮಾತು |
ಆಚಾರಕ ತರಬ್ಯಾಡಮೆ | ಆಚಾರಕ ತರಬ್ಯಾಡಮೆ
ಬಹು ವಿಚಾರಿಸಿ ನೀ ನೋಡಮೆ |
ಬಹು ವಿಚಾರಿಸಿ ನೀ ನೋಡಮೆ | ನೀ ನೋಡಮೆ ||2||
ಗುರುವಿನ ಗುಲಾಮ ಆಗೂತನಕ |
ಗೌಪ್ಯದೊಳು ಸುಳಿದಾಡವೆ | ಗೌಪ್ಯದೊಳು ಸುಳಿದಾಡಮೆ |
ಗುರು ಮಹಾಂತೇಶನ ಬದಿಲಾಡಮೆ |
ಗುರು ಮಹಾಂತೇಶನ ಬದಿಲಾಡಮೆ | ಬದಿಲಾಡಮೆ ||3||
ಬುಡಕಡಿಯಿಲ್ಲದ ನಿಂಗವ್ವ
ಬುಡಕಡಿಯಿಲ್ಲದ ನಿಕ್ಕಲ ನಿಂಗವ್ವ
ಅಡನಾಡಿ ಸಂಗವ್ವ |
ಒಡಲೊಳು ಒಡಿಯನ ನೋಡದು ಪಾಡವ್ವ |
ಜಡ ದೃಶ್ಯಾದೃಶ ಆಗುದು ಸಿದ್ಧವ್ವ |
ಬಿಡು ಭ್ರಮಿ ಮುದ್ದವ್ವ ||ಪಲ್ಲ||
ಜೀವ ತನುವಿನ ಮರುವಿನ ಮಾಳವ್ವ |
ದೇವರ ಬೋಳವ್ವ |
ಭವರಹಿತ ಸಂಪ್ಹರಿ ಕಾಳವ್ವ |
ಪಾವನ ಶ್ರೀಗುರು ಶರಣರ ಧೂಳವ್ವ |
ಸೇವಿಸಿ ಬಾಳವ್ವ ||1||
ಸೋಹಂ ಬ್ರಹ್ಮಾದಿ ಎಂಬುವದೆಲ್ಲವ್ವ |
ಭಯವಿಲ್ಲೇಳವ್ವ |
ಲಯ ನಿರ್ಲಯ ಕಲಕೊಂಬುವದಲ್ಲವ್ವ |
ನಾನೆರಡಿಲ್ಹೇಳೆನ್ನದಿರು ಕಲ್ಲವ್ವ |
ಜಯ ಜಗ ಮಲ್ಲವ್ವ ||2||
ಬಲ್ಲಿದ ಮಹಾ ಮಹಾಂತೇಶ್ವರನಾಗವ್ವ |
ಯಲ್ಲಕ್ಕು ಬಾಗವ್ವ |
ಇಲ್ಲದು ಹುಡುಕದು ಯಾತರ ಯೋಗವ್ವ |
ತಲ್ಲಣಿಸುವರೇನ ಪಾತ್ರದ ಭೋಗವ್ವ |
ಸಲ್ಲದು ರಾಗವ್ವ ||3||
ಮುದ್ದು ಬಾಳಿಯ ರಂಗ
ಮುದ್ದ ಬಾಳಿಯ ರಂಗ ಎದ್ದು ಬಾರನು ಬೇಗ
ಬುದ್ಧಿ ಸಲ್ಲದೊ ಮುದ್ದ ಬಾಳಿ
ಬಿದ್ದುದ ಬಾಯಿ ಹಾರುತಾದಲ್ಲೊ ||ಪಲ್ಲ||
ಜೋಳದ್ಹೊಲವನು ಬಿಟ್ಟೆ |
ಜಾಣ ಗಂಡನ ಬಿಟ್ಟೆ |
ಜೋಳದ್ಬಾನ ಹೆಸರ ಬ್ಯಾಳಿ |
ಗುಸ್ಸು ಗುಸ್ಸು ನುಂಗಲಾರದ ಜೀವ ||1||
ನವಣಿ ಹೊಲವ ಬಿಟ್ಟೆ |
ಹವಣಿ ಗಂಡನ ಬಿಟ್ಟೆ |
ನವಣಿಬಾನ ಹುಣಸಿನ ಕಾಯಿ ಆಂಬ್ರ
ಸರ್ಪುರ್ ಸುರಿಯಲಾರದೊ ಜೀವ ||2||
ಸಜ್ಜಿ ಹೊಲನ ಬಿಟ್ಟೆ |
ಗೆಜ್ಜಿ ಕಾಲಿನ ಮಗನ ಬಿಟ್ಟೆ |
ಸಜ್ಜಿರೊಟ್ಟಿ ಚವಳಿಕಾಯಿ |
ಗುಸ್ಸು ಗುಸ್ಸು ನುಂಗಲಾರದು ಜೀವ ||3||
ಸಗರನಾಡ ಸಂತೆಗೆ ಹೋಗಿ ಸಾದಾ ರುಂಬಾಲ ತಂದೆ
ಸುತ್ತಿಕೊಳ್ಳಂದರ್ಯಾಕೊಲ್ಲೆ |
ಯಾರವರು ಹೋಗವರು ಯಾಕ್ಯಾಕ
ಯಾರೂ ಇಲ್ಲ ಬಾ ನನ್ನ ಕಾಣುದ ಜೀವ ||4||
ಜಾಲಳ್ಳ ಸಂತೆಗೆ ಹೋಗಿ |
ಜಾತ ಪರಿಮಳ ತಂದೆ |
ಧರಿಸಿಕೊಳ್ಳಂದರ್ಯಾಕೊಲ್ಲೆ |
ಯಾರವರು ಅಡ್ಡ್ಯಾಡವರು ಯಾಕ್ಯಾಕ ಯಾರೂ ಇಲ್ಲ ||5||
ಕಡಗ ಕಂಕಣ ದೊರೆ |
ಕೊಡನೆ ಹೊತ್ತಾಳು ನಾರಿ |
ನಡಗಿ ನಡದಾಳ ಸುಂದರಿ |
ಯಾರ್ನಿಂತವರು ಯಾಕ್ಯಾಕ ಯಾರು ಇಲ್ಲ |6||
ಗುಡ್ಡದೊರಿಯ ಮಹಾಂತ |
ಬಡ್ಡ ಗಣ್ಣಿನ ಹುಡಿಗಿ |
ದುಡ್ಡು ಕೊಟ್ಟರ್ಯಾಕೊಲ್ಲಿ |
ಯಾರ್ಕುಂತವರು ಯಾಕ್ಯಾಕ ಯಾರು ಇಲ್ಲ ||7||
ಗೆಳದಿ
ನಾವು ನೀವು ಕೂಡಿದ್ದೇವ ಚಿಕ್ಕಂದ ಗೆಳದಿ |
ಕರೆಯಲಿಕ್ಕೆ ಬಂದಾರವ್ವ ದೂರಲಿಂದ ||ಪಲ್ಲ||
ಬಂದು ಭಾವ ಎತ್ತಿ ಹಿಡಿದ ಮುಂದ ಹೊರಗ ಗೆಳದಿ |
ಒಲ್ಲೇನಂದರ ಜಗ್ಗೀ ಒಯ್ತೀನಂದ ಗೆಳದಿ ||1||
ಸಂತಿ ಆದರ ನೆರದಾದ ಒಳ್ಳೆ ಜಾಮರ ಗೆಳದಿ
ಬೇಕಾದ ಕೊಂಡುಕೊರ ಫಳಿಯಾರ ಗೆಳದಿ ||2||
ನೆರದ ಮಂದಿ ಹರದ ಹೋಯ್ತು ಭರರ ಗೆಳದಿ |
ಯಾರಿಗೆ ಯಾರಿಲ್ಲ ನಿರ್ಬ್ಯೆಲ ಗೆಳದಿ ||3||
ಹಿಂದಿನೂರ ಹೆಸರ್ಹೇಳೇನಂದ್ರ ಗೊತ್ತಯಿಲ್ಲಾ ಗೆಳದಿ |
ಮುಂದಿನೂರ ಮಾಡ ಬಂದು ಮರಿಯಾಯ್ತ ಗೆಳದಿ ||4||
ನಾವು ನೀವು ಆಗಲಿ ಈಗ ಹೊಗೋಣಾಯ್ತು ಗೆಳದಿ |
ಗುರು ಮಹಾಂತನ ಪುರದೊಳು ಆಡೋಣಾಯ್ತು ಗೆಳದಿ ||5||
ಪೂರ್ಣನುಭಾವ
ಆಯಾತವಾಯಿತೆ ಪ್ರಮಥರಿಗೆ |
ಪ್ರಭುವಿನ ತಿಳಿ ಪೂರ್ಣನುಭಾವ ||ಪಲ್ಲ||
ಕಾಯವೆ ಕಾಣ ಬಂದಸ್ಥಿ ಮೂಲ |
ಕರ್ಮ ನಿರ್ಮಲಕೆ ತನ್ನನುಕೂಲ |
ಸ್ವಾಯತ ಮಾಡ್ಗಂಜಿ ಗೊಂಗಡಿಗೆ |
ನಾಡ ಮಾತಿನೊಳಾದೆ ಶೀಲ ಶೂಲ ||1||
ಶಿವನ ನಿಜ ತಿಳಿವುದೆ ಮಹಾಜ್ಞಾನ |
ತಿಳಿಯದವನಾದರ್ಯಾತರ ಜ್ಞಾನ |
ಭವಭವಯೆಂಬುದೆಲ್ಲ್ಯಾದೆಲ್ಲರಿಗಿ |
ಭ್ರಾಂತಿ ಕಲ್ಪನಿಗಾಯಿತನುಮಾನ ||2||
ಸರ್ವ ರೂಪಿಗೆ ಶೂನ್ಯಾದಿ ದೈವ |
ಶೂನ್ಯ ಸಂಪದ ನೀಗ್ಯಾವ ಜೀವ |
ನಿರ್ವಯಲಾದ ಮಹಾಂತನಿಗೆ |
ಮರವರಿವದಕ್ಕೆಲ್ಲಾದ ಢಾವ ||3||
ನಿಲಕಿಸಿಕೊ ಮೇಲಿನ ಕಾಯಿ
ನಿಲಕಿಸಿಕೊ ಮೇಲಾದ ಕಾಯಿ | ಕೆಳ
ಗ್ಹಲಿಬಿ ತೆರಿವದ್ಯಾತಕೆ ಬಾಯಿ |
ಮೇಲಿರುವದು ಅದು ತಿಳಿ ಕಾಯಿ | ನೀ
ಸುಳ್ಳೆ ವ್ಯರ್ಥ ಮಾಡಬೇಡ ಈ ಕಾಯಿ ||ಪಲ್ಲ||
ಒಂದೆ ಬೇರಿಗೆ ಮೂರೆಲಿಯಾಗಿ | ಅದ
ರ್ಹೊಂದಿಗಿಪ್ಪತ್ತೈದು ಶಾಖೆಗಳಾಗಿ |
ಮುಂದೆ ಮುವ್ವತ್ತಾರು ಆಗಿ |
ಇದರನುಭವ ತಿಳಿದವ ಶಿವಯೋಗಿ ||1||
ಹಣ್ಣಿನೊಳು ರಸಪೂರ್ಣ ತುಂಬ್ಯಾದ | ಆ
ಹಣ್ಣು ಕಾಯ್ಕೊಂಡು ಒಂದು ಗಿಳಿಯಾದ |
ಕಣ್ಣಿಟ್ಟು ನೋಡೋ ಕಾಣಿಸುತಾದ | ಇದು
ಅಣ್ಣಪ್ಪಗಳಿಗೆಲ್ಲ ಬಲ್ಲಾದ ||2||
ನೆಲ ಜಲ ತೇಜ ವಾಯು ಆಕಾಶ |
ಅದರೊಳಗ ಕಾಣಿಸುತಾದೋ ಆ ದೇಶ |
ಸಲೆ ಕಲ್ಪವೃಕ್ಷ ಶ್ರೀಮಹಾಂತೇಶ |
ಇದರನುಭವ ತಿಳಿದವ ಜಗದೀಶ ||3
ಬಿರುದು ನಿಮ್ಮದು ಮಹಾಂತ
ಕೊಂಬು ಹೊಲಿಯಂದೊ ಏಕಾಂತ |
ಬಿರುದು ನಿಮ್ಮದೊ ಶ್ರೀಮಾಂತ |
ಪ್ರಜಾಪರರದೊಳು ನಿಂತ |
ಹೊಡೆದು ಪರರ ತಿಳಿಸಿದ ಅದರಂತ ||ಪಲ್ಲ||
ಮೊದಲವೇನಿತ್ತೊ ಅಖಂಡ |
ಮೂಲ ಮಾಯಿ ಮಾಡಿತು ಬಂಡ |
ಓಂಕಾರ ಒದರಿತು ಅಕ್ರ ತಂಡ |
ಜಗ ಹುಟ್ಟಿತು ತಂಡ ತಂಡ ||1||
ಮಸಳಿ ಮಾರಿ ಮಾಯಿಯ ದಂಡ |
ಬಾಣ ಸೊಕ್ಕಿ ಸುರದಾವ ಗುಂಡ |
ದಸಿಗಿ ಬಾಯಿ ಬಿಡುವುದ ಕಂಡ |
ವಸುಧಿ ಒಳಗ ಏನಿದು ಭಂಡ ||2||
ಅಂಧಕಾರ ಎದ್ದಿತು ಗಾಳಿ |
ಮುಚ್ಚಿಕೊಂಡಿತೊ ಕೆಂಧೂಳಿ |
ಆಗತೈತ್ರಿ ಜಗದೊಳು ಹೋಳಿ |
ಬಿರುದು ಹಿಡದೇನೊ ಮಹಾಂತನ ಕಾಳಿ ||3||
ಸಾಕಾಯಿತು ಊರ
ಸಾಕಾಯಿತು ಈ ಊರವ್ವ |
ಭಾಳ ಜ್ವಾಕಿಲಿ ಹೋಗನು ಬಾರವ್ವ |
ಒಂಬತ್ತು ಬಾಗಿಲದೊಳಗವ್ವ |
ನಾನಿರುವ ಮನಿಯು ಭಾಳ ದೂರವ್ವ ||ಪಲ್ಲ||
ಆರು ಮಂದಿ ಗೆಳತೇರವ್ವ |
ತಂಗಿ ಬ್ಯಾರಿದ್ದವರು ಮೂವರವ್ವ |
ಕಂಡರೆ ಎನ್ನ ಬಿಡರವ್ವ |
ಬಹಳ ದಿಡಗಿಲೆ ಹೋಗನು ಬಾರವ್ವ ||1||
ಆಯಿತವಾರ ದಿವಸ ಆಯಿತವ್ವ |
ತಂಗಿ ಬಾಹುದು ಸಾಹುದು ಹೋಯಿತವ್ವ |
ಸಾಯಸ ಎನಗಿದು ಆಯಿತವ್ವ |
ನಿಜ ಭಾವಿಸಿ ನಿರ್ವೈಯಲಾಯಿತವ್ವ ||2||
ಏನು ಹೇಳಲಿ ಅವತಾರವ್ವ |
ತಂಗಿ ಮಹಾಂತಪುರದ ವಿಸ್ತಾರವ್ವ |
ಮಹಾಗುರು ಮಹಾಂತ ಯೋಗೆವ್ವ |
ಆತನ ಪಾದಕೆ ಹೊಂದನು ಬಾರವ್ವ ||3||
ಪರದೇಶಕ ಹೋಗನು
ಸಾಕಾಯಿತು ಈ ಊರವ್ವ
ಪರದೇಶಕ ಹೋಗನು ಬಾರವ್ವ
ಕಾಕು ಜನರು ಸೇರರವ್ವ
ಮನ ವಾಕರಿಸಿತು ಕಾಯಪೂರವ್ವ ||ಪ||
ಆರು ಮಂದಿ ಸರದಾರವ್ವ |
ತಂಗಿ ಇದೇ ಊರಾಗ ಇರತಾರವ್ವ
ಸಾರಿ ಜವಾನರು ಬರುತಾರವ್ವ
ನಿನ್ನ ಪಾರೆದೊಳಗ ಕೊಡತಾರವ್ವ ||1||
ಬಂಧು ಬಳಗ ಬಳದ ಹೋಯಿತವ್ವ
ನಿನ್ನ ಕೈಯಾಗ ಜೋಳಿಗಿ ಬಂತವ್ವ
ಕೇಳುವ ಧಣಿ ಯಾರಿಲ್ಲವ್ವ ತಂಗಿ
ಹಾಳಾಯಿತು ಈ ಊರವ್ವ ||2||
ಮುಂದಕ್ಕಿಟ್ಟಿದ ಪಾದವ್ವ ನೀನು
ಹಿಂದಕ್ಕ ತಿರುಗಿಡಬ್ಯಾಡವ್ವ
ಮಹಾಂತಪುರಕ ಕರಿ ಬಂದಾರವ್ವ
ಅಲ್ಲಿ ಆನಂದಪುರಕ ನಡಿರವ್ವ ||3||
ಸರಕಾರವಿಲ್ಲದ ಊರು
ಬರಬಾರದಿತ್ತೊ ಹಿಂತಾ ಊರಿಗೆ |
ಸರಕಾರವಿಲ್ಲದ ಹಾಳಗ್ವಾಡಿಗೆ ||ಪಲ್ಲ||
ಕಳ್ಳಸುಳ್ಳರು ಕೂಡಿ |
ತಳ್ಳಿತನವು ಮಾಡಿ |
ವಳ್ಳೆರಾತರಿ ನೋಡಿ |
ಮೊಳ್ಳು ಮಾಡ್ಯಾರ ಗ್ವಾಡಿ ||1||
ಪಂಜಗಳ್ಳರು ಮೂರು |
ಸಂಜಿಲೆ ಮನಿಹೊಕ್ಕು |
ವಂಚಿಸಿ ಹ್ವಾದರೆನಗೆ |
ಗುಂಜಿ ಭಂಗಾರ ಬಿಡದೆ ||2||
ತರ ತರದಂಗಿ ನಾನು |
ತಿರಿಗೊಮ್ಮೆ ತೊಡಲಿಲ್ಲಾ |
ಮುರಿದು ಕೀಲಿಯ ಮನಿ |
ಬರಿದೆ ಮಾಡಿ ಹೋದರಮ್ಮಾ ||3||
ಸಣ್ಣನಾದಿತೋ ಜೀವ |
ಮಣ್ಣೂಗೂಡಿತೋ ಮೋಹಾ |
ಮಾನ್ಯ ಮಡಿವಾಳ ನೀ |
ಪುಣ್ಯ ಸರಕಾರ ಬಿಟ್ಟು ||4||
ಮುತ್ತಿನ ಮಾಲಿ ಅಂಗಿ |
ಮಹಾಂತೇಶ್ವರ ತೊಟ್ಟಿದ್ದಾನು |
ಯತ್ತಿ ಬಡಿವದು ಕಂಡು |
ಅತ್ತು ಸಾಯಲಿ ಬ್ಯಾಡಾ ||5||
ಟುಬಾಕ
ಭಲೆರೆ ಹುಡುಗ ಹೌದ್ಹೊಡದಿ |
ಗುರಿ ಬಡದಿತು ಟುಬಾಕ ಹಿಡದಿ |
ಮೂರಾರು ಫೌಜಿನೊಳು ಕಡದಿ |
ಭಂಟ ಯಾರಿಗಿ ಸಿಗದಂಗ ನಡದಿ ||ಪಲ್ಲ||
ಏಳು ಗೇಣಿನ ಟುಬಾಕ ಹಿಡದಿ
ಗುರು ವಾಕ್ಯದ ಮದ್ದಗುಂಡು ಜಡದಿ |
ತತ್ತ್ವದ ಮುಜರಿ ಹಿಡದಿ |
ಗುಂಡು ಉರುಳ್ಯಾಡದಂಗ ಗುರಿ ಒಗದಿ ||1||
ನಾಲ್ಕಂಗುಲ ಮದ್ದು ಕಟ್ಟಿ |
ನಿನ್ನ ಮನಿಕೊನಿ ಅದರೊಳಗಿಟ್ಟಿ |
ಜ್ಞಾನದ ಕೊಳ್ಳಿಯ ಕೊಟ್ಟಿ |
ಒಂಬತ್ತು ತೂತಿನೊಳು ಸುಟ್ಟಿ ||2||
ಇಲ್ಲಿರಬೇಡಲ್ಲಿಗಿ ನಡಿ |
ಮಹಾಂತಪುರದಲ್ಲಿ ಹಾನ ನಿನಗಡಿ |
ಹರಿಹರ ಬ್ರಹ್ಮರಿಗೆ ಹೋಗದು ರಾಡಿ |
ಗುರು ಮಹಾಂತನೊಳೊಡಗೂಡಿ ||3||
ಜೀವ ಭಾವ ಭ್ರಮೆ
ಆವ ಭಯವು ಇನ್ನೇನವಗ
ಮಾಯಾ ನಿರ್ಮಾಯನಾದವಗ
ಸಾವುದು ಹುಟ್ಟುದು ಜೀವ ಭಾವ ಭ್ರಮೆ
ಸಾವೇನು ಸಾಯದೇನು ನೋವೇನವಗ ||1||
ಏನೇನು ಇಲ್ಲದಲೊಂದು
ಏನೋ ತಾನಾಯಿತೊಂದು
ಜ್ಞಾನಜ್ಞಾನವು ಯೋಗ ಭೋಗವು
ತಾನದು ಹುಸಿ ಹುಸಿಯೆಂದರಿದವಗ ||2||
ಸ್ಥಾಣುವಿನೊಳು ತಸ್ಕರ ತಾನದು
ಕಾಣಿಸಿಕೊಳ್ಳುವದನುಮಾನವೇನು
ಪ್ರಾಣಪ್ರಪಂಚವು ಅಣುರೇಣು ಮಹಾತ್ಮವು
ಮಾಣದೆ ಹುಸಿ ಕನಸೆಂದವಗ ||3||
ಇದ್ದದ್ದಾಗತಾದ ಹ್ಯಾಂಗ
ಅದು ಇಲ್ಲದ್ದಾಗುವದು ಹ್ಯಾಂಗ
ಇದ್ದದ್ದಾಗದು ಇಲ್ಲದ್ದಾಗದು
ಇದ್ದಿದ್ದಿಲ್ಲಲ್ಲಿಲ್ಲಿಲೆಂದರಿದವಗ ||4||
ಭವಯೆಂಬುವ ಶಿವನಾಮಿಹುದು
ಭವಯೆಂಬ ಅಂಜಿಕೆಲ್ಲಿಹುದೊ
ಭವ ಭವ ಶಂಕರ ಸೋಯೆಂಬೊ ಹರಹರ
ಶಿವ ಅಲ್ಲಾ ಅಲ್ಲಾಯಂದರಿದವಗ ||5||
ದೇಶಧಿಕ ಸುರಪುರದೇಶ
ಕಡಕೋಳ ಗುಡ್ಡದ ಮಹಾಂತೇಶ
ಕೊಡುವರು ಬಿಡದನುಭವ ಕರುಣಾಮೃತ
ಪಡೆದುಕೊಂಡು ಉಂಡಿಲ್ಲಾದವಗ ||6||
ಕ್ವಾಡಗನ ಕೋಳಿ ನುಂಗಿತ್ತು
ಕ್ವಾಡಗನ ಕೋಳಿ ನುಂಗಿತ ಕೇಳಕ್ಕಯ್ಯ
ಕ್ವಾಡಗನ ಕೋಳಿ ನುಂಗಿತ ||ಪಲ್ಲ||
ಆಡ ಮಾಡವು ನುಂಗಿ |
ಗ್ವಾಡಿ ಸುಣ್ಣವು ನುಂಗಿ |
ಆಡ್ಲಕ ಬಂದ ಪಾತರಗಿತ್ತಿನ ಮದ್ದಲಿ ನುಂಗಿತಕ್ಕಯ್ಯ ||1||
ವಳ್ಳ ವಣಕಿಯ ನುಂಗಿ
ಬೀಸೋಕಲ್ಲ ಗುಂಜಿ ನುಂಗಿ |
ಕುಟ್ಲಾಕ ಬಂದ ಮುದುಕಿನ ನೊಣ ನುಂಗಿತಕ್ಕಯ್ಯ ||2||
ಎತ್ತ ಜತ್ತಿಗಿ ನುಂಗಿ |
ನೇಗಿಲು ಮುಂಜಾವ ನುಂಗಿ |
ಸುತ್ತ ಮುತ್ತ ಗಳಿಯ ಹೊಡೆವ ಅಣ್ಣನ ಮೇಳಿ ನುಂಗಿತಕ್ಕಯ್ಯ ||3||
ತೋಟ ಬೇಲಿಯ ನುಂಗಿ |
ಬೇಲಿ ತೋಟವ ನುಂಗಿ
ಬ್ಯಾಟಿಕಾರಣ್ಣನ ಮೊಲ ನುಂಗಿತಕ್ಕಯ್ಯ ||4||
ಕರಡಿ ಮರಡಿಯ ನುಂಗಿ |
ಮರಡಿ ಮಹಾಂತನ ನುಂಗಿ |
ವಿದ್ಯೆ ಹೇಳ ಗುರುವಿನ ಆತ್ಮ ನುಂಗಿತಕ್ಕಯ್ಯ ||5||
ತಿಳಿ ಬಾಳಿರಬೇಕು ನಿಂಗವ್ವ
ತಿಳಿ ಬಾಳಿರಬೇಕು ನಿಂಗವ್ವ |
ನಿನ್ನ ಅಂಗದ ಗುಣ ಅಳಿಬೇಕವ್ವ |
ಭಾವ ಭಕ್ತಿ ಬೆರಿಬೇಕವ್ವ |
ಗುರು ಸೇವೆ ಮಾಡಿ ಭವ ನೀಗವ್ವ ||ಪಲ್ಲ||
ಆರು ಮಂದಿ ಮಹಾ ಬೆರಕೆವ್ವ |
ಸುತ್ತಮುತ್ತ ಪಾರೆ ತಿರಗುವರವ್ವ |
ರಮಿಸಿ ಬಲಿಗ್ಹಾಕುವರವ್ವ |
ಬಲು ಹುಶೇರಿಲಿಂದ ಪಾರಾಗವ್ವ ||1||
ಕಾಕುಬುದ್ಧಿ ನಿನಗ್ಯಾಕವ್ವ |
ನಿಜ ಅರವಿನೊಳಗಿರಬೇಕವ್ವ |
ಸುಖದುಃಖ ಒಂದಾಗಿರಬೇಕವ್ವ |
ಪರಿಪಾಕ ಮಾಡಿ ಉಣಬೇಕವ್ವ ||2||
ಸಡಗರ ಸಂಪತ್ತ ಕಾಳವ್ವ |
ಹೋಗಿ ಬುದ್ಧಿವಂತರನ ಕೇಳವ್ವ |
ಸಂತರ ಚರಣದ ಧೂಳವ್ವ |
ನೀ ಸೇವಿಸಿ ವೇಳೆಗಳಿಯವ್ವ ||3||
ದಾರಗೊಡವಿ ನಿನಗೇನವ್ವ |
ಗುರು ಧ್ಯಾನದೊಳಗೆ ಬಲು ಮಾನವ್ವ ||
ಸುಳ್ಳೆ ಸಂಸಾರ ಕನಸವ್ವ |
ಅದು ತಿಳಿದರೆ ದೇವರು ನೀನವ್ವ ||4||
ಬೇಕೆಂಬುವ ಮೊಳಕಿ ಕಡಿಯವ್ವ |
ಬೈಲೂರ ಸೀಮಿ ದಾರಿ ಹಿಡಿಯವ್ವ |
ಸರ್ವಕೆ ಶಿರ ಬಾಗಿ ನಡಿಯವ್ವ |
ಗುರು ಮಹಾಂತನ ಕೂಡಿ ಮುಕ್ತಿ ಪಡಿಯವ್ವ ||5||
ಅಲಗರ್ಜಿ ಅನುಭೋಗ
ಅಲಗರ್ಜಿ ಅನುಭೋಗ |
ತಳಳಳ ಎನ್ನಿರಿ ಈ ಇಂದ್ರ |
ಜಾಲ ಮಹೀಂದ್ರ ಜಾಲ |
ಬಲು ಮನಸಿಗಿ ತಂದಿರಿ ||ಪಲ್ಲ||
ಏನೋ ತಾನೊಂದಾಗಿ |
ತಾನೊಂದು ಹಲವಾಗಿ |
ಏನೋ ತಾನೊಂದಾದ ಮೇಲೆ |
ನಾನೀನೆಂಬುದ ಅನ್ಯಾಯೊ ||1||
ಎತ್ತು ಮನಿಗಿ ಬಂತು |
ಹತ್ತು ಹೋಳಿಗಿ ತಿಂತು |
ಸತ್ತು ಹೋಗದು ಹೋಗಲಿಲ್ಲ |
ಸತ್ತ ಸತ್ತೆಂಬುದ ಅನ್ಯಾಯೊ ||2||
ದಿಂಡರಕಿ ಉರುಳಲಿ ಹೋದೊ |
ಕಂಡೆನು ಬಂದವನಾದೊ |
ಕೊಂಡದೊಳಗೆ ಬೀಳುವ ಹೆಣ್ಣಿನ |
ರಂಡ್ಯಾಗುವದೊಂದನ್ಯಾಯೊ ||3||
ನಾ ಹೆಚ್ಚು ನೀ ಹೆಚ್ಚು |
ತಾ ಹೆಚ್ಚು ಕಲಗಚ್ಚು |
ಈ ಹುಚ್ಚು ಹೋಗುವತನಕ |
ಮೋಕ್ಷ ಬಯಸುವದನ್ಯಾಯೊ ||4||
ತೆಲಗಾಣಿಲಿ ತೇಲಿಸಿಕೊಂಡಿ |
ಮಲಗಾಣಿಲಿ ಹೂಳಿಸಿಕೊಂಡಿ |
ಹೊಲಿ ದೇಹ ಸಿದ್ಧಿಸಿಕೊಂಡಿ |
ಬಲು ಮಹಾತ್ಮೆಂಬುದನ್ಯಾಯೊ ||5||
ಕಡ್ಡಿನೆ ಗುಡ್ಡವಾಯ್ತು |
ಗುಡ್ಡವೆ ಕಡ್ಡಿಯಾಯ್ತು |
ಗೊಡ್ಡ ಬಂಗಾಲಿಯ ಮಾಯಾ |
ಒಡ್ಡಿ ಬೇಡುವದನ್ಯಾಯೊ ||6||
ಅಪರೂಪ ಜ್ಞಾನ ಶಕ್ತಿ |
ಅಪರೂಪ ಶಕ್ತಿಯುಕ್ತಿ |
ಅಪರೂಪ ಮುಕ್ತಿದೋರಿತು |
ಅಪರೂಪ ಜಗವೆಂಬುದನ್ಯಾಯೊ ||7||
ಪೊಡವಿಯೊಳು ಬಿದನೂರ |
ಒಡೆಯ ಮಹಾಂತನ ಸಾರ |
ಕೊಡುವೆನು ಸವಾಲ ಹಾಕೊ |
ತಡಮಾಡುವದೊಂದನ್ಯಾಯೊ ||8||
ಶಿವ ಸಮಯದವರು
ಮೂರು ಸಮಯದೊಳು ಶಿವ
ಸಮಯದವರೊ ನಾವು |
ಮೂರು ಸಮಯದೊಳಗೆ ಶಿವನ
ಭಜಿಸುವರಡಿಗಡಿಗೆ ||ಪಲ್ಲ||
ಮೂರು ಸಮಯದತಿಗೆ
ಬೇರೊಬ್ಬ ಪರ ವಸ್ತು
ಬ್ಯಾರಿಲ್ಲೊ ಏಕ ಸಾಕ್ಷಿ |
ತಾರಕವಾದ ಮೇಲೆ ||1||
ಮೂರು ಲಿಂಗದ ಮಂತ್ರ
ಸಾರ್ಯೆಲ್ಲಾ ಒಂದೆ ಒಂದೆ |
ಏರಿ ಕೊಂಡ್ಹೋಗಿ ಶಿವನ
ಇರವ ಕಂಡೆನು ನಾನು ||2||
ಗುರು ಹಿರಿಯರಿಗೆ ಭೇದ
ಅರವು ಮರವು ಒಂದೆ |
ಪರಕೆ ಪರವಾದ ಮಹಾಂತ
ಪರಬ್ರಹ್ಮನೊಳು ಬೆರಿದ ||3||
ಷಟ್ಸ್ಥಲ
ಷಟಸ್ಥಲ ಒಂದಾಗೊ ಸಮಯಕೆ
ಕಡಿ ಸಿಡಿಯುತ್ಯಾಕೆ |
ಮಡಿವಾಳ ಯೋಗಿ ನಾಗಶ್ಯಾಸ
ಸಿದ್ಧರಾಮ ಮಹಾಂತ ಮಡದಿ ||ಪಲ್ಲ||
ಆರು ಸ್ಥಲವು ಲಿಂಗವಾದರೆ ಮೂರು ಲಿಂಗ ಬೇರೆ |
ಮೂರು ಮುದ್ರಿ ಮುಂದಗೊಂಡರೆ ತಾರಾದ್ರಿದೂರೆ |
ಕಾರು ಮಿಂಚಿನೊಳೊಪ್ಪು ಕಣ್ಣಿಗೆ ತೋರಿ
ತೋರದಂಧಕರೆ | ಷಟಸ್ಥಲ ಒಂದಾಗೋ ||1||
ಅಷ್ಟಾವರ್ಣ ಅಂಗವಾಗಲು ಸೃಷ್ಟಿ ಸೇವೆ ಸಿಗಲು |
ನಿಷ್ಠಿವಂತರಾಪ್ತರಾಗಲು ಸೃಷ್ಟಿ ಚಿನ್ನಕ್ಕೆ ಮಿಗಲು |
ಭ್ರಷ್ಟ ಭಯವು ಬಂದು ನೋಡಲು |
ಅಷ್ಟರೊಳಗೆ ದೃಷ್ಟಿ ತಾಗಲು | ಷಟ್ಸ್ಥಲ ಒಂದಾಗೋ | |2||
ಬಲ್ಲಿದನೆನಸಿ ಮೆರೆವ ಬಿದನೂರ |ಲ್ಲಿರುವನ್ಯಾರು ಸುಲಲಿತ ಮಹಾಂತ ಮಹಾಗುರು |
ಬಲ್ಲವರೆ ಬಲ್ಲರದು ಎಲ್ಲಿ ಇಲ್ಲದನುಭವಕೆ |
ಬೆಲ್ಲ ಬೇವ ಸವಿಯದ್ಹೋದರು | ಷಟ್ಸ್ಥಲ ಒಂದಾಗೋ ||3||
ಜಾರತನ
ಜಾರತನವು ನಾ ಮಾಡಿದೆನಮ್ಮ |
ಜಂಗಮನೊಡಗೂಡಿ |
ಹಾದಿ ತಿಳಿಯದೆ ಗಾದಿಯನಾಡುವರು |
ವಾದ ತರ್ಕದಿಂದೆ ||ಪಲ್ಲ||
ಪೂರ್ವದ ಹಾದಿ ಕಡೀಸಿದನ |
ಪುನರಪಿ ಬೋಧಾ ಹೇಳಿದನ |
ಮನಸ್ಸಿನ ಮೈಲಗಿ ಬಿಡಸಿದನ |
ಕನಸಿನ ಎಚ್ಚರ ಮರಸಿದನ |
ಮೆಚ್ಚು ಮಾಡಿ ಹುಚ್ಚು ಹಿಡಿಸಿದನ |
ಸತ್ಯ ಸದ್ಗುರು ವಿರೂಪಾಕ್ಷನ ||1||
ಜಾರತನದಿ ಜಾಣೀ ಕಾಡಿದನ |
ಜಾತಿಯ ಭೇದವು ಹೇಳಿದನ |
ಜನ್ಮರಹಿತ ಜಗಪಾಲನ |
ಸುಜ್ಞಾನ ಸುಜಾತ ಸುಶೀಲನ |
ಐಕ್ಯದೊಳನುಭವ ಜ್ಞಾನವ ತಿಳಿಸಿ |
ಆತ್ಮದೊಳಗ ಅಡಕಾದನ ||2||
ಅಂಗ ಲಿಂಗದ ಸಂಗ ಬಿಡಿಸಿದನ |
ನಿಸ್ಸಂಗ ನಿರಾಳ ಮಾಡಿದನ |
ಶಿವಲಿಂಗ ಶಂಭೋ ರಸಿಕನ |
ಅಂಗದೊಳಡಗಿ ಬೈಲಾದನ |
ಗುರು ಬಿದನೂರ ವಿರೂಪಾಕ್ಷನ |
ಆತನ ಉದರದಿ ಮಡಿವಾಳ ಜನಿಸಿದನ ||3||
ಎಲ್ಲಾ ರೂಪಾದ ಶಿವ
ಎಲ್ಲಾ ರೂಪವು ತಾನಂತೆ ತಾನಂತೆ | ಶಿವ
ನೆಲ್ಲೆಲ್ಲಿ ತುಂಬಿಹನಂತೆ ||ಪಲ್ಲ||
ಅಲ್ಲಲ್ಲರಸುತ ಗುಡಿಗಳ ತಿರುಗುವ |
ಕಳ್ಳ ಜನರಿಗೆ ಕಲ್ಲಂತೆ ಶಿವ ||ಪಲ್ಲ||
ಅನ್ಯವೆಂಬುದು ತನಗಿಲ್ಲಂತೆ | ಶಿವ |
ಕಣ್ಣಿಗೆ ಕಾಣದಿಹನಂತೆ |
ಕಣ್ಣನು ತೆರೆದು ಅರಸುವ ಜನರಿಗೆ
ಬಣ್ಣ ಬಣ್ಣವಾಗಿಹನಂತೆ ಶಿವ ||1||
ದೃಶ್ಯಾದೃಶ್ಯವು ತಾನಂತೆ | ಶಿವ
ದೃಶ್ಯಾದೃಶ್ಯಗಳೆರಡಂತೆ |
ದೃಶ್ಯಾದೃಶ್ಯಗಳ ನಡುವೆ |
ಶಾಶ್ವತ ರೂಪವು ತಾನಂತೆ ಶಿವ ||2||
ಶಂಕರನಾದವ ತಾನಂತೆ | ಶಿವ
ಕಿಂಕರರೊಳು ಸೇರಿಹನಂತೆ |
ಬಿಂಕವನಳಿಸುವ ಈ ಮರ್ತ್ಯದ ಪಿರಿ
ಮಂಕರಿಗೆ ಬಲು ದೂರಂತೆ ಶಿವ ||3||
ಕಲ್ಲು ಕಟ್ಟಿಗೆಯೊಳಗಂತೆ | ಶಿವ
ಮುಳ್ಳು ಮೊನೆಗಳಲ್ಲಿಹನಂತೆ |
ಕಲ್ಲು ಕಟ್ಟಿಗೆಯ ನಂಬುತೀ ಜಗದೆ
ಮುಳ್ಳಾದವರಿಗೆ ತಾನಿಲ್ಲವಂತೆ ಶಿವ ||4||
ನಂಬಿದ ಜೀವಕೆ ಇಂಬಂತೆ | ಶಿವ
ನಂಬದ ಜೀವಕೆ ಕಂಬಂತೆ |
ನಂಬಿ ಕರೆದಡೆ ಓ ಎಂದು ಭಕ್ತರ
ತುಂಬಿ ತುಳುಕಿ ಹರಸುವನಂತೆ ಶಿವ ||5||
ಕಲ್ಲಲಿ ಕಲ್ಲಾಗಿಹನಂತೆ | ಶಿವ
ಕಲ್ಲೊಳು ಕಳೆ ತೋರ್ತಾನಂತೆ |
ಕಲ್ಲು ಕಲ್ಲೇ ಲಿಂಗವೆಂದರಿತ |
ಬಲ್ಲಿದ ಶರಣಗೆ ಆಳಂತೆ ಶಿವ ||6||
ಅಣುವಿಗೆ ಅಣುವಾಗಿಹನಂತೆ
ಮಹತ್ತಿಗೆ ಮಹತ್ತಾನಂತೆ |
ನೆನಿಯದ ದುರುಳಗಂತಕನಂತೆ |
ಗುಣಿಗಳ ಮನದಲ್ಲಿಹನಂತೆ ಶಿವ ||7||
ಮಂತ್ರ ಮೂರ್ತಿಯಾಗಿಹನಂತೆ | ಶಿವ
ಮಂತ್ರಾಕ್ಷತೆ ಸುಪ್ರಿಯನಂತೆ
ಮಂತ್ರ ಬಾಯ ತಂತ್ರದ ಕೈಗೆ
ಮಹಾಂತೇಶ ಶಿವ ಸಿಗನಂತೆ ಶಿವ ||8|
ನೀನೇ ದೇವರು
ಹೌದಪ್ಪ ಹೌದು ದೇವರು | ನಿಂದು
ನೀ ತಿಳಿದರೆ ಇಲ್ಲಪ್ಪ ದೂರು ||ಪಲ್ಲ||
ನೀರು ಇಲ್ಲದೆ ಜಳಕ ಮಾಡಿರಬೇಕು |
ಮಡಿಯನಿಲ್ಲದೆ ಬಟ್ಟೆ ಉಟ್ಟಿರಬೇಕು ||1||
ಊಟಾ ಮಾಡಲ್ದೆ ಹೊಟ್ಟಿ ತುಂಬಿರಬೇಕು |
ಎಚ್ಚರದೊಳು ನಿದ್ದಿ ಹತ್ತಿರಬೇಕು ||2||
ತಂಬಾಕಿಲ್ಲದೆ ಬತ್ತಿ ಸೇದಿರಬೇಕು |
ಎಬಡ ತಬಡ ನಾಲಿಗಿ ಬಿದ್ದಿರಬೇಕು ||3||
ಶೆರಿಯ ಕುಡಿಯಲ್ದೆ ನಿಶಾ ಆಗಿರಬೇಕು |
ಝೋಲಿ ಹೋಗಿ ಮಹಾಂತನ ಮುಟ್ಟಿರಬೇಕು ||4||
ಗುಣವಂತಿ
ನಾ ಹೋದಮ್ಯಾಲ ನೀ ಹ್ಯಾಂಗಿರ್ತಿ |
ನಿನ್ನ ಮರಿಯಲ್ಹ್ಯಾಂಗ ಗುಣವಂತಿ ||
ಪೂರ್ವ ಜನ್ಮದ ಹಿಂದಿನ ಗೆಳತಿ |
ನಾ ಮಾಡಿಕೊಂಡಿದ ನಿನ್ನಗ ಹೆಣತಿ ||ಪಲ್ಲ||
ಮಡಿಯಲಿಂದ ಮನಿಮಾರ ಸಾರಸಿ | ನೀ
ಮೈ ತೊಳದಿದಿ ಬಿಸಿ ನೀರ ಕಾಸಿ ||
ಅಷ್ಟಗಂಧ ವಿಭೂತಿ ಧರಿಸಿ |
ಐದು ಬೆರಳಿಲಿಂದೆನ ಗುಣಿಸಿ ||1||
ದೇಶ ದೇಶ ತಿರುಗುತ ಬಂದ |
ವರ ನೋಡಿ ನಿನ್ನಗ ತಂದ |
ಮಾಸಿ ತಾಳಿ ಕಟ್ಟಿನಿ ಮುಂದ |
ಅದು ಕಾಣಿಸ್ತಾದ ಬಹು ಚಂದ ||2||
ದೇಶದೊಳು ಚಿಣಮಗೇರಿ ಸ್ಥಳಕ |
ಮಹಾಗುರು ಮಹಾಂತ ತೋರಿದ ಬೆಳಕ |
ನನಗ ನಿನಗ ಹಾಕ್ಯಾನ ತಳಕ |
ಅಳಬ್ಯಾಡ ಸುಮ್ಮನ ನಡಿ ಒಳ್ಯಾಕ ||3||
ಸವತಿ
ಸವತಿ ಕೇಳ ನಿನ್ನ ಸಲಿಗಿ ಛಲೋದಲ್ಲಗ |
ಬಹಳ ದಿವಸ ಕೂಡಿ ಕೆಟ್ಟ ಕಾಡಿದೆನ್ನಗ |
ಈ ಲೋಕದೊಳು ಆಳಿ ಉಳಿದವರು ಯಾರು ನಿನ್ನಗ |
ನಮ್ಮ ಅಜ್ಜ ಮುತ್ಯಾ ಸತ್ತು ಹೋದರು ನಿನ್ನ ಕಾಲಾಗ ||ಪಲ್ಲ||
ಹುಟ್ಟಿದಪ್ಪನ ಮನಿ ನಿನಗ ನೆಪ್ಪಿಲ್ಲೇನಗ |
ಬಿಟ್ಟು ಗಂಡನ ಕೂಡಿ ಕೆಟ್ಟಿ ಅನ್ಯರ ಹುಡುಗಗ |
ಆರು ಮಂದಿ ಹುಡುಗರ ಹರ್ಯಾ ಬ್ಯಾರೆ ನಿನಗ |
ಅವರ ಕೂಡಿಕೊಂಡು ಕುಂಡಿ ಬಿಟ್ಟು ತಿರಗ್ಯಾಡ್ತಿ ಊರಾಗ ||1||
ಒಂಬತ್ತ ಮನಿಯ ತಪ್ಪು ದಾರಿ ನೋಡತಿ |
ಮುರುಕ ಮನಿಯಾಗ ಹರಕ ಚಾಪ್ಯಾಗ ಬಾಳೆ ಮಾಡತಿ |
ಗಂಡನ ಮನಿಗಿ ಹೋಗಂದರ ಆಗದಂತಿ | ನೀ
ಮಿಂಡನ ಕರಕೊಂಡು ಮುಳ್ಳದೊಡ್ಡ್ಯಾಗ ಹ್ಯಾಂಗ ಉಳ್ಳಾಡತಿ ||2||
ಈಸ ದಿನ ಸಣ್ಣವಳಿದ್ದು ಕಾಡಿದೆನ್ನಗ |
ಹರಿಯ ಬಂದದ ಈಗ ನನಗ ಹಾರಿ ಒದಿಯಂಗ |
ಜಪ್ಪನೆ ನನ್ನ ಮನಿಯ ಬಿಟ್ಟು ಎದ್ದೇಳೆಲ್ಲಗ |
ನಮ್ಮ ಗುಡ್ಡದ ಮಹಾಂತ ಬಂದು ಒದ್ದರ ಓಡಿದೆಲ್ಲಗ | |3||
ಪೋರಿ
ಅಜಪ್ತ ತಮಾಸಿ ಪೋರ್ಯಾಳೊ |
ಅಜ ಹರಿ ರುದ್ರಗ ಮೀರ್ಯಾಳೊ |
ಅಜ ಗಜ ಮಾತಿಗೆ ದೂರಾಳೊ |
ಮಜ ಮಹಾಜ್ಞಾನಕೆ ತೋರ್ಯಾಳೊ ||ಪಲ್ಲ||
ಪೋರಿ ನೋಡಿದರ ತುತ್ತ ಹಾಳೊ |
ದಾರಿ ತೆಲಿಮ್ಯಾಲ ಹೊತ್ತಾಳೊ |
ಸೀರಿ ನಿಲಿಗಿ ಮ್ಯಾಲಕ್ಕೆತ್ಯಾಳೊ |
ಮೂರು ಲೋಕ ಮುರಿದು ಒಳಗೊತ್ತ್ಯಾಳೊ ||1||
ಈ ಹೆಣ್ಣ ಯಾರಿಗಿ ಕಾಣ್ಯಾಳೊ |
ಎಲ್ಲರ ಕಣ್ಣಾಗ ಹೂಣ್ಯಾಳೊ |
ತುಣ್ಣಿಗಿ ಹುಟ್ಟಲ್ದ ಹೆಣ್ಣ ಹಾಳೊ |
ಕಣ್ಣ ಕಟ್ಟಿ ನೋಡೊ ಕಾಣಿಸುತಾಳೊ ||2||
ತೊಗಲ ಮ್ಯಾಲ ಬೆಳಸ್ಯಾಳ ಶೆಪ್ಪ |
ಮುಗಿಲಿಗಿ ಮುಟ್ಯಾವ ನೋಡಪ್ಪ |
ಅಗಲಾಡಿತು ಜಗ ಜನರಪ್ಪ | ಈ
ಬುಗಲಿನೊಳಗ ಮಡಿವಾಳನಪ್ಪ ||3||
ಸಾಕು ಸಾಕವ್ವ ಸಂಸಾರ
ಸಾಕು ಸಾಕು ಸಾಕು ಸಾಕವ್ವ
ಕಾಕು ಸಂಸಾರ ಸುಡಲಿನ್ನಾರಿಗೆ ಬೇಕವ್ವ ||ಪಲ್ಲ||
ಎರಡು ಹಿಡಿಗಳೊಂದು ಕೊಡ ನಾ ತಕ್ಕೊಂಡು |
ಸರಸರ ಊರ ಬಾವಿಯ ನೀರಿಗ್ಹೋದೆನವ್ವ ||
ತ್ವರೆಯಿಂದ ಪಾವಟಿ ಇಳಿಯುವಾಗ ಕಾಲು ಜಾರಿ |
ಉರುಳಿ ಬಿದ್ದಾಗೆನ್ನ ನಡ ಮುರಿದ್ಹೋಯಿತು ತಂಗಿ ||1||
ಒಮ್ಮೆ ಇಮ್ಮನ ಗೋದಿ ನಾ ತುಂಬಿಕೊಂಡು |
ಒಮ್ಮಿಲೆ ಬೀಸಲು ಕಲ್ಲಿಗೆ ಕೂತಿದೆ ||
ಗಮ್ಮನೆ ಗರಗರ ಕಲ್ಲು ತಿರುಗುವ ಮೊದಲು |
ಹಮ್ಮಿನ ಗೂಟವು ಕಿತ್ತಿ ಬಡಿದು ಹಲ್ಲು ಉದರಿಸಿತವ್ವಾ ||2||
ಹರಕು ಚಿಂದಿ ಬಟ್ಟೆಗಳ ನಾ ತಕ್ಕೊಂಡು |
ಕರಿ ಕಟ್ಟಿ ಕೌದಿ ನಾ ಹೊಲಿಯಬೇಕೆಂದು ||
ಕರದಿ ಸೂಜಿಯ ಪೋಣಿಸಿ ಹೊಲಿಯಬೇಕೆನ್ನಲು |
ಅರಿಯದೆ ಕೈ ತಪ್ಪಿ ಸೂಜಿ ಕಣ್ಣಿಗೆ ಚುಚ್ಚಿ ಕುರುಡಾದೇನವ್ವ ||3||
ಅಡಗಿ ಮಾಡಲೆಂದು ದಿಡಗಿಲೆ ನೀರಿಟ್ಟು |
ಗಡಗಿಗೆ ಎಸರಿಟ್ಟು ಒಲೆಗೆ ಉರಿ ಹಚ್ಚಿ ||
ಕುದಿಸ್ಹತ್ತಿದೆ ಕುದಿಯುವ ಮೊದಲೆ ಅದ ಹಳಸಿತ್ತು |
ಕೆಡುವದೆಂದು ಇಳಹಿದರೆ ಕೈ ಸುಟ್ಟು ಚೂರಾಯಿತವ್ವ ||4||
ಏನು ಮಾಡಲಿ ಎಂತು ಮಾಡಲಿ ತಾ ಕೈ ಕೊಡತಿಹುದು |
ಅಜ್ಞಾನದ ಬಾಳೆಲ್ಲಾ ಹೀಗೆಂದೇ ತಿಳಿಯುವುದು ||
ಇನ್ನು ದಿನಗಳ ಕಳೆಯದೀ ಸಂಸಾರ ನೆಚ್ಚಿದೆ |
ಜ್ಞಾನಿ ಮಹಾಂತೇಶನ ಸಂಸಾರ ಹೊದ್ದುವೇನವ್ವ ||5||
ತಾರಿ ಪದ್ಹೆಣ್ಣ
ಅಲಲಲ ತಾರಿ ಪದ್ಹೆಣ್ಣ |
ಎಲ್ಲರದು ಅದ ನಿನಮ್ಯಾಲ ಕಣ್ಣ |
ಬಲ್ಲವರಿಗೆ ಮುಕ್ಕಿಸಿ ಮಣ್ಣ |
ಬಲು ಮರುಳು ಮಾಡಿ ಹಚ್ಚಿದಿ ಹುಣ್ಣ ||ಪಲ್ಲ||
ಹ್ಯಾಗೆ ಸೇವಿಸಲಿ ಮನದೋಳು | ಹೇಳ
ನಾಗವೇಣಿ ಏನಾದ ಮೇಲು |
ಯೋಗಿ ಜಾರಿ ಬಿದ್ದರು ಕಾಲು | ಹ್ವಾದರ
ಹೋಗಬೇಕು ನಿನ್ನಂಥವಳ ||1||
ಹಾದರ ಮಾಡಿದಿ ಬಲು ಹಬ್ಬ | ನಿನ್ನಗ
ಹ್ವಾದ ಪುರುಷ ಉಳದಿಲ್ಲ ಒಬ್ಬ |
ಗಾದಿ ಜನಕ ಹಿಡದಿತ್ತು ಮಬ್ಬ | ದೊಡ್ಡ
ಸಾಧು ಜನಕ ರಸದಾಳಿ ಕಬ್ಬ ||2||
ನಿನಗ್ಹ್ವಾದ ಪುರುಷರು ಧನ್ಯ |
ಮಾನ್ಯರೆನಿಸಿ ಪಡೆದರು ಪುಣ್ಯ |
ಭಿನ್ನ ಭವಕ ಕಾಮನ ಶೂನ್ಯ |
ಸನ್ನುತ ಮಡಿವಾಳನ ನಾಣ್ಯ ||3||
ಬಿಡು ಜಡ ದೇಹದ ಸಂಗ
ಬಿಡು ಬಿಡು ಬಿಡು ಇಂಥ |
ಜಡ ದೇಹದ ಸಂಗ |
ಸುಡುವ್ಯಾತಕೆ ಮರುಳೆ | ಛೀ ||
ಸುಡು ಯಾತಕೆ ಮರುಳೆ |
ದೃಢ ಶರಣರ ನಂಬಿ |
ಪಡೆದವರಿಗೆ ಮುಕ್ತಿ ತಡವೇನಲೆ ಮರುಳೇ ||ಪಲ್ಲ||
ಆನಿಯೇರಿದ ಮಡ್ಡ |
ಕೋಣನೇರಿದವಗ |
ಮಾನಿತವೇ ಮರುಳೇ ಇದು ನಿಮಗೆ ||
ಮಾನಿತವೇ ಮರುಳೇ |
ಜಾಣರಹಿತನಾಗಿ |
ತಾನೆ ನಿಂದಕನಾದರಿನ್ನೇನೆಲೆ ಮರುಳೇ ||1||
ಕುನ್ನಿ ನೀ ಮೋರೆತ್ತಿ |
ಅನ್ಯ ಶಿವನೆಂಬುವದು |
ಅನ್ಯಾಯವೆಲೆ ಮರುಳೆ ನಿಮಗಿದು |
ಅನ್ಯಾಯವೆಲೆ ಮರುಳೇ |
ತನ್ನೋಳಾತ್ಮನ ಬಿಟ್ಟು |
ಪುಣ್ಯಪಡಿಯಲ್ಹೋದರೆ ಇನ್ನೇನೆಲೆ ಮರುಳೆ ||2||
ಚದುರತನದಲಿ |
ಕೆದರಿ ವಿಷದೊಳು |
ಬರಿದಾಗುವದು ಮರುಳೆ ಛೀ ನಿನಗೆ ||
ಬರಿದಾಗುವದು ಮರುಳೇ |
ಚದುರ ಮಹಾಂತೇಶನ |
ಪಾದಕ್ಕೊಂದಿದ ಮೇಲೆ ಕುದಿ ಯಾತಕ್ಕೆ ಮರುಳೆ ||3||
ಭಾವಕ ಹೆಣ್ಣ
ಬಾಬಾ ಭಲೆ ಭಾವಕ ಹೆಣ್ಣಾ |
ದಾರಿಗೆ ತಿಳಿಯದು ನಿನ ಬಣ್ಣಾ |
ಅನಂತ ಕಾಲದಲಿ ಸಾಧಿಸಿ ಬಂದರೆ | ಕಾಣಲಿಲ್ಲ ಬಣ್ಣಾ ||ಪಲ್ಲ||
ನೆತ್ತಿಲಿ ಕಣ್ಣಾದ ಕಾಲೊಳು ಬೈತಲಿ ತಗದಾದ |
ಮುತ್ತನಿಟ್ಟಾದ ಮೂಗಿನ ಸೊಳ್ಳಿನ ಕೊಯಿದದ |
ಮುತ್ತದ ಬಾಗಿಲ ಎಲ್ಲ್ಯಾದ | ಮುಗಿಲು ಮಗನನ್ನು ಹಡಿದದ ||1||
ಮಲಿಯು ಒಂದಾದ ಹಾಲಿನ ಹೊಳಿಯ ಹರಿಯುತಾದ |
ಹುಲಿಯನೇರ್ಯಾದ ಹಾವಿನ ಹೆಡೆಯ ಎತ್ತೇದ |
ತಳಮಳಗೊಂಬುವ ಕಾಮನ ಕೈಯಲಿ | ಕಠಾರಿ ಹಿಡದದ ||2||
ಹೆಣವನೇರ್ಯಾದ ಹಸ್ತರ ನೊಣವ ನುಂಗ್ತಾದ |
ತೃಣವ ಪಿಡದಾದ ಸತ್ತ ಹೆಣಕ ಜಯಸ್ತಾದ |
ಅನಂತ ಮಹಾಗುರು ಮಾಂತಗೆ | ಅನುಕೂಲದಲ್ಲಾದ ||3||
ಹೀನ ನಾಯಿ
ನಾಯಿ ಬರುತಾದೋ ಏ ಮನುಜ |
ಎಚ್ಚರಿರಬೇಕೊ ಮನುಜ |
ನಾಯಿ ಅಂದರೆ ನಾಯಿ ಅಲ್ಲ |
ಜ್ಞಾನ ತಪ್ಪಿದೊಂದು ಹೀನ ನಾಯಿ ||ಪಲ್ಲ||
ಉಂಡು ಮಲಗಿಕೊಂಬುವ ನಾಯಿ |
ನಂಬಿದವರನ್ನು ಕೆಡಿಸುವ ನಾಯಿ |
ಅವರ ಕಟ್ಟಿ ಮೇಲೆ ಕುಂತು |
ಅವರ ಇಚ್ಛಾ ಹೇಳುವ ಲುಚ್ಛಾ ನಾಯಿ ||1||
ಪಟ್ಟದ ಸ್ತ್ರೀಯಳಿಗೆ ಬಿಟ್ಟಂವ ನಾಯಿ |
ಹೆಂಡತಿಗೆ ಬಿಟ್ಟು ಅನ್ಯರ ಸಂಗಕ್ಕೆಳಸಂವ ನಾಯಿ |
ಗಂಡನಿಲ್ಲದ ಸ್ತ್ರೀಯಳ ಹಿಂದೆ ಬಿದ್ದು|
ಭಂಡ ಮಾಡುವವ ಹಂಡ ನಾಯಿ ||2||
ತಂದ ಸಾಲ ಕುಡುವಲ್ದಂವ ನಾಯಿ |
ಕೊಟ್ಟ ಭಾಷೆ ತಪ್ಪಂವ ನಾಯಿ |
ಗಟ್ಟಿ ಗುರು ಮಹಾಂತೇಶನ ಪಾದ
ಮರೆತು ಕೂಡುವವ ಮಳ್ಳ ನಾಯಿ ||3||
ನಿನ್ನೊಳು ನೀ ತಿಳಿ
ತನ್ನಿಂದ್ಹೊರತಿನ್ನಾರವ್ವ ತಂಗೀ |
ನಿನ್ನೊಳು ನೀ ತಿಳಿ ಪೂರವ್ವಾ ||ಪಲ್ಲ||
ತನ್ನೊಳು ಶಿವಮೂರ್ತಿ ಹಾನವ್ವಾ |
ನಿನ್ನ ಬಿಟ್ಟು ಹುಡುಕಬಾರದು ಪೀರವ್ವಾ ||1||
ಕಾಲ ಮುಂದಾಗಿ ಹುಡಕ್ಕೊಳ್ಳವ್ವಾ |
ಸಣ್ಣ ಬಾಲನಾಗಿ ದುಡಕೊಳ್ಳವ್ವಾ | |2||
ಸರ್ವ ರೂಪದಲ್ಲಿ ಸುದ್ದವ್ವಾ |
ನಿರ್ಮಲ ಮನದಲಿ ಎದ್ದೆವ್ವಾ ||3||
ಸರ್ವರಿಗಾದಿ ಅತಿ ಮುದ್ದವ್ವಾ |
ಮಹಾಂತನ ಪಾದಕೆರಗಿ ಬಿದ್ದೆವ್ವಾ ||4||
ಫುಗಡಿ
ಫುಗಡಿಯ ಹಾಕತೀನಿ | ಈತನಗೂಡ
ಇಗಡಿಯ ಮೈಗುಣ |
ಬಿಗಡಿಸಿ ಪೋದನವ್ವ ||ಪಲ್ಲ||
ಜರದ ಸೆಲ್ಯಾನುಟ್ಟು |
ಹಿಂದಿನ ಹಳೆಯ ಹಾದರ ಸುಟ್ಟು |
ಧಡ ಮಾಡಿಸಿದಂತಹ ನತ್ತ-ಬುಗಡಿ ಇಟ್ಟು ||1||
ಕಾಲಕಾಲಕ್ಕ ಸುತ್ತಿ |
ನಿಲಕಿಲ್ಲ ಈಕಿ ಹಾಳೋ ಮಹಾಸತಿ |
ತಳಕ ಹಾಕತೀನಿ ಝಳಕ ಹೊಡಿಯತೀನಿ ||2||
ಬೆಳಕಿನೊಳಗೆ ನಾ ಊರಿಗಿ |
ಹೊಳೆವ ಹೆಣ್ಣ ಬೋಧಿಸಿ ಬಾಳೆಹಣ್ಣ ತಿನಿಸಿ |
ಚಿಣಮಗೇರಿ ಮಹಾಂತ ಇಟ್ಟಾನ ಕಣ್ಣ ||3||
ನಿಶ್ಯಬ್ದ ಬ್ರಹ್ಮ
ನಿಶ್ಯಬ್ದ ಬ್ರಹ್ಮನೆಂಬುವ ಶೃತಿಯಿದು ತಿಳಿದಿತ್ತೇನ್ರಯ್ಯ |
ತಿಳಿದರೆ ಧೋರಣ ಹೇಳ್ರಯ್ಯ |
ನಿಃಶ್ಯಬ್ದ ಶಬ್ದ ಅವಾಚ್ಯ ವಾಚ್ಯ ನಿಃಕಾರಣ ಕೇಳ್ರಯ್ಯ ||ಪಲ್ಲ||
ಬುದ್ಧಿ ಸುಬುದ್ಧಿ ಕುಬುದ್ಧಿ ಮೂರಿವು ನಂಬಿಗೇನ್ರಯ್ಯ |
ಶಿವ ಶಿವ ಸಿದ್ಧಾಂತ ಶುದ್ಧವಾದ ಮೇಲೆ ಹಂಬಲವ್ಯಾಕ್ರಯ್ಯ ||1||
ಜ್ಞಾನ ಅಜ್ಞಾನವಾದ ಮೇಲೆ ಯೋಗವು ಯಾಕ್ರಯ್ಯ |
ಶಿವ ಶಿವ ಮಾನಾಪಮಾನಾಗುವಂಥ ಮಾನ್ಯಗಳ್ಯಾಕ್ರಯ್ಯ ||2||
ಧರ್ಮ ಅಧರ್ಮವಾಗುವದು ಅದ್ಯಾತಕ್ರಯ್ಯ |
ಶಿವ ಶಿವ ಕರ್ಮ ಅಕರ್ಮವಾಗುವದು ಅದೇನ್ರಯ್ಯ ||3||
ಹುಟ್ಟುವದೆ ಭವ ಬೆಳೆಯುವದೆ ಬಂಧವಯ್ಯ |
ಶಿವ ಶಿವ ಸಾಯುವದೆ ಸಕಲಕೆ ಸಾಕ್ಷ್ಯವಯ್ಯ ||4||
ಗುರು ಮಹಾಂತೇಶನು ಮಡಿವಾಳಲ್ಲೆನು ಬೆಡಗಿನ ಕನಸಯ್ಯ |
ಶಿವ ಶಿವ ಜಡ ತೋರಿಕೆ ಜಡರಳಿಯರದೃಶ ಬಡಿವಾರ ಮನಸಯ್ಯ ||5||
ಹೊರಸು
ಹೊರಸೊಂದು ಹೆಣಿದೇನ ತಂಗಿ ನಾ |
ಗುರುವಿಗೆ ಪವಡಿಸಲು ||ಪಲ್ಲ||
ಚತುರ್ದಿಕ್ಕು ಸಾಗೋಣಿ ಅಂದದಾ ಚೌಕಟ್ಟು |
ಚತುರತನದಲ್ಲಿಗೈದ ಓರಣದಂಬಟ್ಟು ||
ಗತಿಯಲ್ಲಿ ಸುಮತಿ ಸುಗತಿ ರಂಗೋಲಿ ರಂಗಿಟ್ಟು |
ಹಿತದಲ್ಲಿ ಪಂಚತತ್ವ ತೈಲ ಲೇಪಿಸಿ ನಾ ||1||
ನರಜನ್ಮ ನಾರು ಬಿಡಿಸಿ ತೇದು ಸಿಪ್ಪೆ ಮಾಡಿ |
ಕರದೆಡಬಲ ಹೊಸೆದು ಉದ್ದನುಲಿಯನೆ ರಚಿಸಿ ||
ಗುರಿಯೆಂಬ ಗುರಿ ಕಟ್ಟಿ ನೀಟಾಗಿ ದುಂಡ ಸುತ್ತಿ |
ಪರಿಯಿಂದ ಹೆಣೆಹೆಣೆದು ಗುರುದೇವಗೆ ನಾ ||2||
ಕರಪಾದಗಳೊಗ್ಗೂಡಿಸಿ ನಾಲ್ಕು ಪಾದಗಳ ಮಾಡಿ |
ನರನೂರಾರ ಜೋಡಿ ಹುರಿಗೋಲ ಮಾಡಿ ||
ಕರಣ ಚತುಷ್ಟಯ ಎಂಬ ಕಾಚಾವ ಪಿಡಿಸಿ |
ಹಿರಿದಾರು ಗುಣಗಳ ಕಿರಿ ಹಗ್ಗ ಬಿಗಿದು ನಾ ||3||
ಎರಡು ಸಾವಿರ ಸಂದು ನೂಲಿಕೆಯಲಿ ಮುಚ್ಚಿ |
ಆರವಿನಾ ಎಡೆಜೋಡು ಜೋಕೀಲಿ ಬಿಡಿಸಿ ||
ಕರಿಗೊಂಡಲೆಯುವ ಕುಂಡಲಿಯ ತಡಿಯದಲಿರಿಸಿ |
ಬರಿ ಜೋಡು ನುಲಿಕೆಯ ಬಿಗಿದು ಬಯಲಲ್ಲಿ ನಾ ||4||
ನಿರವಯಲೇಕಾಂತದ ಅರಮನೆಯಲ್ಲಿ ಹೊರಸ್ಹಾಕಿ |
ಸಮರ್ಪಣ ಭಾವದ ದಿಂಬು ಗಾದಿಗಳಿರಿಸಿ ||
ಕರ್ಮ ಸಂಚಿತ ಕಳೆದು ಸರ್ವಸ್ವ ಮಡಿ ಮಾಡಿ |
ಸರ್ವೇಶ ಗುರುಮಹಾಂತ ಪತಿಗೂಡಿ ಮಲಗಲು ನಾ ||5||
ಬೆರಕಿ ದೆವ್ವ
ಅಲಲಲಲಲ ದೆವ್ವ ಏನ ಬೆರಕಿಯವ್ವ |
ದೇವರ ಹಂತಿಲಿ ವಸ್ತಿ ಮಾಡ್ತಾದವ್ವ ||ಪಲ್ಲ||
ಕೂಡಿಕೊಂಡೇನಂದರ | ಅದು ಕೂಡಲಿಲ್ಲವ್ವ |
ಕಡಿಗೇರ ಅದಾ ಅಂದರ | ಕಡಿಗಿಲ್ಲವ್ವ ||1||
ದೆವ್ವಿನ ಮಹಿಮಾ ಇದು | ಎಂತಹದವ್ವ |
ಮಹಾ ತತ್ವಜ್ಞಾನಿಗೆ | ತಿಳಿದಾದವ್ವ ||2||
ಹಂಡ ದೆವ್ವ ಭಾಳ ಬೆರಕಿ | ಹೆಸರ ಹೇಳದವ್ವ |
ಪುಂಡ ಪುಂಡ ಮಂದಿಗೆಲ್ಲ | ಭಂಡಾಟಕ ಹಚ್ಚ್ಯಾದೆವ್ವ ||3||
ಪುರಾಣ ಪುಸ್ತಕ ಓದವರಲ್ಲಿ | ಕಾರಭಾರ ಮಾಡ್ಯಾದವ್ವ |
ನೀಲಿ ಹೊತ್ತಿಗಿ ಓದಿದವರಲ್ಲಿ | ನಿದ್ದಿ ಮಾಡ್ಯಾದವ್ವ ||4||
ಸಾಧು ಆಗಿ ತಿರಗವರಿಗಿ | ಸಾಲಿಗ್ಹಾಕ್ಯಾದವ್ವ |
ಗುರು ಮಹಾಂತನ ಧ್ಯಾನದೊಳು | ನೆಲಿಯಾಗ್ಯಾದವ್ವ ||5||
ಎಂಥ ಮದವಿ
ಎಂಥ ಮದವಿ ಮಾಡಿಕೊಂಡೆ ನೋಡಕ್ಕಯ್ಯ |
ಹಂದರದಾಗ ಮಿನಿದವರೆಲ್ಲ ಖರೇ ಬೋಳೇರಯ್ಯಯ್ಯ ||ಪಲ್ಲ||
ತುಂಡ ಮುಂಡರೈವರು ಕೂಡಿ ನೀರ ಮಿನಿದಿದರು |
ಗಂಡನಿಲ್ಲದೆ ಗೈಯ್ಯಾಳೇರು ಐರಣ ಹೊತ್ತಿದರು ||1||
ಕುಂಟರ್ಯಾಳರು ಎಂಟು ಮಂದಿ | ನೆಂಟರು ಮಾಡಿದೇವ
ಬಂಟರೈವರು ಕೂಡಿ ಎನಗೂಡ | ತಂಟ ತೆಗದಿದರೈಯ್ಯಯ್ಯೊ ||2||
ಸಂತಗತ್ತಿ ಶಾಸಿದಾಗ ಒಂದು ಕೂಸ ಸತ್ತಿತು |
ಅಲ್ಲಿದು ಇಲ್ಲಿದು ಬೀಗ ಬೀಗತಿ ಅಳಕೋತ ಹೊಂಟಿತಯ್ಯಯ್ಯೊ ||3||
ಸುಂಟರ ಗಾಳಿ ಸುತಕೊಂಡ ಕೊಂಪಿಗಿ ಬೆಂಕಿ ಹತ್ತಿತೈಯ್ಯಯ್ಯೊ |
ಥೊಂಟ ಮೂತಿ ಬೀಗತಿ ಬೀಗ ಹೊರಗ ನಿಂತಿದರೈಯ್ಯಯ್ಯೊ ||4||
ಏಸೋ ಕಾಲದ ಗುರು ಗುಡ್ಡದ ಮಹಾಂತಗ ನೆನದೀನ |
ಗುಡ್ಡದ ಮಹಾಂತನ ಪಾದದೊಳಗ ಮಾಯವಾಯ್ತಯ್ಯಯ್ಯೊ ||5||
ಧನವು ಗಳಿಸಬೇಕು ಇಂಥದ್ದು
ಧನವ ಗಳಿಸಬೇಕು ಇಂಥಾದ್ದು | ಈ
ಜನರಿಗೆ ತಿಳಿಯದಂಥಾದ್ದು |
ಅನುದಿನ ಅಜಹರಿ ಮನು ಮುನಿಗಳಿಗೆಲ್ಲ |
ಹೌದು ಹೌದು ಹೌದೆಂಬಂಥಾದ್ದು ||ಪಲ್ಲ||
ಕೊಟ್ಟರೆ ಹೋಗದಂಥಾದ್ದು | ಅದು
ಇಟ್ಟರೆ ತೀರದಂಥಾದ್ದು |
ಕಟ್ಟಿದ ಗಂಟು ಬೈಲೊಳಗಿಟ್ಟರೆ |
ಮುಟ್ಟಲಿ ಬಾರದಂಥಾದ್ದು ||1||
ಕರ್ಮ ಬಾರದಂಥಾದ್ದು | ಅದರ
ಮರ್ಮ ತೋರದಂಥಾದ್ದು |
ನಿರ್ಮಳವಾದ ಮನಕೆ | ದಾನ
ಧರ್ಮವನು ಮಾಡುವಂಥಾದ್ದು ||2||
ಮರವಿಗೆ ಬಾರದಂಥಾದ್ದು | ನಿಜ
ಅರುವಿನಲ್ಲಿ ಇರುವಂಥಾದ್ದು |
ಮರವು ಕಳೆದು ಶ್ರೀಗುರು | ಮಹಾಂತೇಶನ
ಕರುಣದಿಂದ ಕಾಯುವಂಥಾದ್ದು ||3||
ಗಂಡನ ಸುಖ
ಈ ಗಂಡನ ಸುಖವು ಎನಗೆ ತೋರಿತವ್ವ |
ಭವ ನೀಗಿದೆನವ್ವ ನೆರಮನಿ ಸೂಳೇರ |
ಅಂಜಿಕೆ ಏನವ್ವಾ ಗಂಡ ಕೆಟ್ಟವನವ್ವ ||ಪಲ್ಲ||
ಆರು ಮಂದಿಯೆನ್ನ ನೆಗಿಯಣ್ಣಿದೇರವ್ವ |
ಕಾಲ ಕಣ್ಣೇರವ್ವ ನನ್ನ ಕಂಡರೆ | ಮಣ್ಣು ಸೇರರವ್ವ ||
ದೇಶ ದಿಕ್ಕಾಪಾಲಾಗಿ ದೂರ ಹೋದರವ್ವ | ಒಬ್ಬಳುಳದೇನವ್ವಾ ||1||
ಮೂವರು ಗೆಳೆಯರು ಕಣ್ಣು ಇಡುವರವ್ವ |
ಅವರು ಮೋಹವ ಬಿಡರವ್ವ | ಓಡಿ ಮೂಲಿಮನಿ ಸೇರಿಕೊಂಡೆನವ್ವ
ಗಂಡ ಮಾಡಿಸಿಕೊಟ್ಟ ನತ್ತ ಬುಗಡಿಯವ್ವಾ | ನಾನಿಡುವುವೆನವ್ವಾ ||2||
ದೇಶಕಧಿಕವಾಧ ಮಹಾಂತ ಪೂರನವ್ವಾ |
ಅಲ್ಲಿ ಇರಹುವನವ್ವಾ ಮದವಿಯ ಗಂಡ | ಎನ್ನ ಮಹಾಂತೇಶನವ್ವಾ
ತಾಳಿ ಕರಮಣಿ ಕಟಗೊಂಡೆನವ್ವ | ಮುಕ್ತಿ ಪಡದೇನವ್ವಾ ||3||
ಎಂಥ ಕಾಟದವಳು ನಮ್ಮತ್ತೆವ್ವ
ಎಂಥ ಕಾಟದವಳೀ ನಮ್ಮತ್ತೆವ್ವ
ಇಂಥ ಕಿಟಿಕಿಟಿ ತಾಳಲಾರೆ ಎನ್ನವ್ವಾ
ಕಟಕಟ ತಿಂತಾಳ ಹಲ್ಲ ತನ್ನವ್ವಾ
ಮಾರಿ ಮಿಟಿಮಿಟಿ ನೋಡತಾಳೆನ್ನವ್ವಾ ||ಪ||
ಆರು ಮೂರು ತೂತಿನ ಕೊಡನವ್ವಾ
ನೀರ ತಾ ಅಂತಿರಿ ಭಡನವ್ವ
ಹ್ಯಾಂಗ ನೀರು ನಿಂತಾವು ತಡದವ್ವ
ಅತ್ತಿ ಹ್ಯಾಂಗ ಮಾಡಬೇಕು ಹೇಳ ಭಡನವ್ವ ||1||
ಹಸಿ ಲದ್ದಿ ಕೊಡದ ನಂಬಿಗೇನ
ಆಸಿ ಬಿದ್ದು ಕೊಡ ತುಂಬಲೇನ
ಫಾಸಿ ಹಾಕುವ ಯಮಧರ್ಮ ತಾನ
ಸೂಸಲಾದ ಮಠ ಗುರುವಿನ ಧ್ಯಾಸವನ್ನ ||2||
ನೆತ್ತೀ ಮ್ಯಾಲ ಹೊತ್ತು ಕೊಡ ಒಡದೀನ
ನೀ ಸತ್ತು ಹುಟ್ಟು ಎಂಥಾದು ಅಳದೀನ
ಮುತ್ಯಾ ಅಜ್ಜನ ಹೆಜ್ಜೀ ಮ್ಯಾಲ ನಡೆದೀನ
ಮುತ್ತು ಮಹಾಂತೇಶ ಯೋಗಿನ ಪಡೆದೀನ ||3||
ಕಣ್ಣಿನೊಳಗಣ ಹೆಣ್ಣು
ಅಲಲಲ ಆಶ್ಚರೀ ಕಂಡಾದಿತು
ಎನ ಜೀವ ಘಾಬರಿ |
ಅರಿಯದ ಮೂರ್ಖರಿಗಿದೇ ಮರಿ
ಗುರುಭಕ್ತರಿಗಿಟ್ಟಾಂಗಿದರ ಗುರಿ ||ಪಲ್ಲ||
ಮಾರಿ ಇಲ್ಲದೆ ಮೈಯ್ಯಾದೋ
ಮೈಯಿಗೆ ಸಹಸ್ರ ಕಾಲಾವೋ |
ಕಾಲಿನ ತುದಿಯಲಿ ಕಣ್ಣಾದೋ | ಆ
ಕಣ್ಣಿನೊಳಗವಂದು ಹೆಣ್ಣಾದೋ ||1||
ಹೆಣ್ಣಿನ ನೆಲಿ ಬಹು ದೂರಾದೋ | ಮೂರು
ಕಣ್ಣಿನವಗ ಭ್ರಮಿಗೊಳಿಸ್ಯಾದೋ |
ಬಣ್ಣಿಸಿ ಬಾಯಿ ತೆರಿಸ್ಯಾದೋ | ಅದು
ಪುಣ್ಯ ಪುರುಷಗ ವಶವಾದೋ ||2||
ಕವಿಗಳ ಕಣ್ಣ ತಗಿಸ್ಯಾದೋ | ದೊಡ್ಡ
ಶಾಸ್ತ್ರಿಕರ ಹಲ್ಲ ಮುರಿಸ್ಯಾದೋ |
ಕಿವಿಯೊಳು ನಾಲಿಗೆ ಚ್ಯಾಚ್ಯಾದೋ
ಗುರು ಮಹಾಂತನವತಾರ ತಾಳ್ಯಾದೋ ||3|
ಜನ್ಮ ಪಾವನ
ಜನ್ಮ ಪಾವನ ಆಯಿತವ್ವ |
ತಾಯವ್ವಳವುವದ್ಯಾಕವ್ವ ||ಪಲ್ಲ||
ಸ್ಥೂಲದೇಹ ನಿಂದವ್ವ |
ಒಳಗಿರುವ ವಸ್ತು ಯಾರವ್ವ |
ನಿನ್ನ ಗುರ್ತು ತಿಳಿಯವ್ವ ಮಕ್ಕಳ್ಯಾರು ಸುಳ್ಳವ್ವ ||
ಹಿಂದಿನ ಕರ್ಮದಿಂದವ್ವ |
ನಾದ ಬಿಂದು ರೂಪ ತಾಳಿದೆನವ್ವ |
ಬಂದ್ಯಾ ನಿನ್ನೊಳು ಜನಿಸೆವ್ವ ತಾಯವ್ವ ಅಳವುವದೇಕವ್ವ ||1||
ನೀರ ಮ್ಯಾಲಿನ ಗುರುಳೆವ್ವ |
ಅದರಂತೆ ಈ ಜನ್ಮವ್ವ |
ಹಿಂದೇಸು ಮಂದಿ ತಾಯಿ ತಂದೆವ್ವ ನಾ |
ಬಿಟ್ಟು ಬಂದಿನಿ ಹೊರಟವ್ವ |
ಅದರಂತೆ ಈ ಜಗವವ್ವ |
ತಾಯವ್ವಳವುದು ಯಾಕವ್ವ ||2||
ಹನ್ನೊಂದು ಮಕ್ಕಳ್ಹಡದೆವ್ವ |
ಅವರೆಲ್ಲಿವರೆಲ್ಲಿ ಹಾರವ್ವ |
ಯಾರಿಗೆ ಯಾರಿಲ್ಲ ದೂರವ್ವ ||
ಈ ಸಂಸಾರವು ಬಲು ಕಷ್ಟವ್ವ |
ನಿರ್ಬಯಲ ಮಹಾಂತನ ಕೂಡವ್ವ |
ಮುಕ್ತಿಯ ಪಡಿಯೇ ಹಡದವ್ವ ||3||
ಪಾವನ ಬಿದನೂರ
ಭೂವರ ಗ್ರಹಕರ ಮನಿಯೆಂಬಿರಿ |
ದಾವ ಪೂರ್ಣಾಲಯವ ನೀವೆಂಬಿರಿ |
ಅವನ ಮನಿ ಭರಿಸೇನು ತುಂಬಿರಿ ||ಪಲ್ಲ||
ಶಿಕ್ಷ್ಯ ಲಕ್ಷ್ಯ ಸುಲಕ್ಷ್ಯ ಸಮಕ್ಷ್ಯದೊಳಿರತಿರಲಾಗಿ |
ಅಕ್ಷಯ ಭೋಗ ನಿರೀಕ್ಷಿಸಿ ಸರ್ವರುಪೇಕ್ಷಿಸುವದು |
ಏನದ ಮಿಗಿಲಾಗಿ ಏನದ ಮಿಗಿಲಾಗಿ ||1||
ಕರ್ಮ ಮುಂದವೋ ಕಾಲ ಮುಂದವೋ |
ಕರ್ಮ ಕಾಲಕೇನಾದಿ ನಿರ್ಮಲರಾಗುವ |
ವರ್ಮವ ತಿಳಿ ನಿಃಕರ್ಮಕಿಸೋದಾವದ್ಹಾದಿ ||2||
ಪಾವನ ಬಿದನೂರ ಓ ಓ ಮಹಾಂತನ |
ಸೇವಕರಾಗೋದ ಅಗಡಾ ಕೇವಲ ಸಮರಸ |
ಭಾವಭರಿತ ಸಂಜೀವ ಕಳಾನಂದೆ ತೋರ್ವದೇ ತಾಬಿತಾ ||3||
ಗಡಗಿ ತೊಳೆದು ಅಡಗಿ ಮಾಡು
ಗಡಗಿ ತೊಳದು ಅಡಗಿ ಮಾಡಮ್ಮಾ| ತನು
ಗಡಗಿ ತೊಳದು ಅಡಗಿ ಮಾಡಮ್ಮಾ ||ಪ||
ಅನುಭಾವದಡಗಿ ಮಾಡಿ ಎಡಿಯ ಮಾಡಮ್ಮಾ |
ದೇವರಿಗೆಡಿಯ ಮಾಡಿ ಗಂಡಗುಣಿಸಮ್ಮಾ ||ಅ.ಪ||
ಕರ್ಮವೆಂಬ ಜೋಳ ಬೀಸವ್ವ | ನೀ
ಧರ್ಮ ಜಲಡಿಯಿಂದ ಹಿಟ್ಟ ಸೋಸವ್ವ |
ನಿರ್ಮಳಾತ್ಮ ನೀರ ಹಾಕವ್ವಾ | ನೀ
ನೇಮದಿಂದ ಕಣಕ ನಾದವ್ವಾ ||1||
ಗುರುಲಿಂಗ ಜಂಗಮ ಮೂರವ್ವ |
ಪರಸಾಕ್ಷಿ ಒಲಿಗುಂಡ ಹೂಡವ್ವ |
ಪರಿಪರಿ ಕಷ್ಟದ ಕಾಷ್ಠ ಸುಡುವವ್ವ |
ಹರಿದಾಡುವ ಮನಸಿಟ್ಟು ಕೂಡವ್ವಾ ||2||
ಸಂಚಿತ ಕರ್ಮದ ಹಂಚ ನಿಂದವ್ವ |
ಮುಂಚಲೆದ್ದು ಸ್ವಚ್ಛಾಗಿ ತೊಳಿಯವ್ವ |
ಹಂಚಿಕಿಲಿಂದ ಜ್ಞಾನದಗ್ನಿ ಉರಸವ್ವ |
ಸಂಚಿನಿಂದ ಪರ ರೊಟ್ಟಿ ಬೇಸವ್ವ ||3||
ಭಕ್ತಿ ಎಂಬ ಭತ್ತ ಕುಟ್ಟವ್ವ | ನೀ
ಖಟ್ಟ ಅಕ್ಕಿ ಹಿಡಿದು ಹೊಟ್ಟ ತೆಗಿಯವ್ವ |
ನಿಷ್ಠೆಯಿಂದ ಅನ್ನ ಮಾಡಿ ಚರಗಂಡ ಗುಣಿಸವ್ವ
ಶ್ರೇಷ್ಠ ಮಹಾಂತೇಶಗೊಲಿಸಿ ಮುಕ್ತಿ ಪಡಿಯವ್ವ ||4||
ಭವ ನೀಗನು ಬಾರ
ಎಂಥ ಊರವ್ವ ತಂಗಿ ಎಂಥ ಊರ
ಸಿಂತರಕೋರ ಮಂದಿ ಇಲ್ಲಿ ಬಹಳ ಹಾರ
ಸಂತಿ ಮಾಡಿಕೊಂಡು ಜಲ್ದಿ ಹೋಗನು ಬಾರ | ಅವರ
ಸಂತಾರಲಿ ನಿಂತಲ್ಲಿ ಸುಳಿಯುತಾರ ||ಪ||
ಎಂಟು ಮಂದಿ ಭಾಳ ತುಂಟ ಹಾರ | ಅಲ್ಲಿ
ಬಂಟರು ಮೂವರು ನಿಂತು ದಾರಿ ಕಾಯುತಾರ
ಘಂಟಿ ಬಾರಿಸುವನೊಬ್ಬ ಸೂತ್ರಧಾರ
ಕುಂತು ಕೇಳುವಂಥ ತುಡುಗರು ಇಬ್ಬರ ಹಾರ ||1||
ಮೂರಿಪ್ಪತ್ತು ನಿಕ್ಕಾ ಎರಡು ದೀಡನೂರ | ಇಂಥ
ಖೋಡಿ ಸೂಳೆಮಕ್ಕಳು ಊರ ತುಂಬ ಹಾರ
ಇವರಿಗಿ ಹದ್ದು ಹರಿದು ತಿನ್ನಲ್ಲಿ ಎಷ್ಟುದ್ದ ಬೆಳದಾರ
ಸದ್ದು ಮಾಡದೆ ಸುಡಗಾಡು ಸೇರತಾರ ||2||
ಕಡೆಯ ಕಡಕೋಳ ಗ್ರಾಮ ನಮ್ಮ ತವರೂರ
ಸುತ್ತ ದೇಶಕ್ಕೆ ಆಯಿತು ಜಾಹಗೀರ
ಎಂಥ ವ್ಯಾಳ್ಯಾ ತಂದ ಮಹಾಂತ ಕರ್ತೃವೀರ
ಆತನ ಸೇವೆ ಮಾಡಿಕೊಂಡು ಭವ ನೀಗನು ಬಾರ ||3||
ಧಡಿಯ ಧೋತರ
ಧಡಿಯ ಧೋತರ ಝಮಕೊಂಡಿ
ನೀ ಯಾರ ಮನ್ಯಾಗ ಮನಕೊಂಡಿ
ಕಟ್ಟಿದ ತಾಳಿ ಕಳಕೊಂಡಿ
ನೀ ಫಿರ್ಯಾದಿ ಬಂದೇ ಹುಚರಂಡಿ ||ಪ||
ಖೊಟ್ಟಿ ಗುಣಗಳು ನಿನ್ನಲ್ಲಿ ಇಟಗೊಂಡಿ
ಆ ಖೊಟ್ರಪ್ಪಗ ನೀ ಎತಗೊಂಡಿ
ಕೊಟ್ಟದ್ದು ಕುಡು ಅಂದ್ರ ಬಡಕೊಂಡಿ
ಸುಳ್ಳ ಆಡಿದರ ಒದ್ದೇನು ಕುಂಡಕುಂಡಿ ||1||
ಊರ ಮುಂದಿನ ಗುಡಿ ನಂದಂದಿ
ಆ ಮಸೂತಿ ಬಾವಾಗ ಹೋಗಿ ಹಿಡಕೊಂಡಿ
ದೆವ್ವ ಆಗಿ ಮಂದಿಗಿ ನೀ ಬಡಕೊಂಡಿ
ಘಳಿಗ್ಯಾಗ ಬಾಳ್ಯಾ ಎಲ್ಲ ಬಳಕೊಂಡಿ ||2||
ನಿನ್ನ ನಿಜವು ನೀ ತಿಳಿವಲ್ಲಿ
ನಾ ಹೇಳಿದ ಮಾತ ಕೇಳವಲ್ಲಿ
ಕಳ್ಳ ಗುಣ ಬಿಡು ಹುಚಮಲ್ಲಿ
ಗುರು ಮಹಾಂತ ಪಾದ ನೀ ಬಿಡದಿರು ಅಲ್ಲಿ ||3||
ಆಲಾಯಿ ಆಡಿದೆನಾ
ಭಂವಸೈ ಆಡಿದೆನಾ ಮೋಹರಮ್ಮಕ
ಆಲಾಯಿ ಆಡಿದೆನಾ ಮೋಹರಮ್ಮಕ
ಭವ ಎಂಬ ಭವಸೈ ಅರುವಿನ ಆಲಾಯಿ
ಮೂರು ಕೂಡಿದಲೇ ಮೋರಮ್ಮ ಮಾಡಿದೆನಾ ||ಪ||
ತನು ಮಸೂತಿಯೊಳು ನಾ
ಪಂಚ ತತ್ವ ಪಂಜೆಯ ಕೂಡಿಸಿ
ಈಡಾ ಪಿಂಗಳ ಹಸೇನಿ ಹುಸೇನಿ
ಜೀತ ಪೀರ ಮೌಲಾಲಿಗೆ ತನುವನ್ನು ಒಪ್ಪಿಸಿ ನಾ ||1||
ನಡೆ ನುಡಿ ಲಾಡಿ ಮಾಡಿದೆನಾ
ಹರಕಿಯ ಬೇಡಿ ಕೊರಳೊಳು ಹಾಕಿಕೊಂಡೆ ನಾ
ಪಂಚಾಕ್ಷರಿ ಮಂತ್ರ ಫಾತೆಯ ಕೊಟ್ಟು
ಕಂದೂರಿ ಮಾಡಿ ಫಕೀರಗೆ ಉಣಸಿದೆ ನಾ ||2||
ದುಷ್ಟ ಯಜೀದನು ಸುಖ ಸುಜಾತಿ ಮುಸಲ್ಮಾನನು
ಝರ ಬಾರ ಝಟಪಟಿ ಖತ್ತಲ ರಾತ್ರಿ
ಲಟಪಟ ಘಟವೇರಿ ಪರತರ ದಫನಾಯಿತು ||4||
ಸತ್ಯುಳ್ಳ ಶರಣರು ಪೀರ ಪೈಗಂಬರರು
ಸತ್ಯವ ತೋರಿದರು ಸತ್ತು ಸಾಯಲ್ದಂಗ
ಇದ್ದು ಇಲ್ಲದಂಗ ಮಕ್ಕಾ ಮದೀನದಲ್ಲಿ
ತಾನೆ ಐಕ್ಕವಾದ ಮಡಿವಾಳನು ||5||
ಕುಸ್ತಿ
ಕುಸ್ತಿಯ ಆಡವನೇ ಜಾಮರ್ದ
ತನ್ನ ಆಶಿಯ ತೊರೆದು
ಕುಸ್ತಿ ಆಡವನೇ ಜಾಮರ್ದ ||ಪ||
ಬೀಳಬಾರದೆಂಬ ಬಿರ್ದವ ಕಟ್ಟಿ
ಬಿಂಕಲೆ ಜಿಗಿದಾಡಿ ಚಡ್ಡಿಯನ್ನುಟ್ಟು
ಸಂಚಿತ ಫಣಿಯಲಿ ಹಳದಿಯ ಬಟ್ಟು
ಟೊಂಕಿನಲಿ ಸತ್ಯದ ನಡುಕಟ್ಟು | |1||
ಮಾಯಾ ಮೋಹವೆಂಬ ಮುಸುಕವ ಹರಿದು
ಭಯ ನಿರ್ಭಯನಾಗಿ ಮೆಲ್ಲನೆ ಜಿಗಿದು
ಸೋಹಂ ಸಹಸ್ರವೆಂಬ ಮುಂಡಿಯ ಸೆಳೆದರೆ
ಭವಗಡಿ ಒಲ್ಲೆಂದು ಅಂಜಿ ಎದಿ ಒಡೆದು ||2||
ಆರು ಮಂದಿಗಿ ಅಡಗಾಲ ಕಟ್ಟಿ
ಎಂಟು ಮಂದಿಗಿ ಹಿಡಿದಾನ ಘಟ್ಟಿ
ಹತ್ತು ಮಂದಿಗಿ ಒಗೆದಾನ ಜಟ್ಟಿ
ಸತ್ಯದ ನುಡಿ ಕೇಳೊ ನೀ ಮನ ಮುಟ್ಟಿ ||3||
ಮೂರು ಮೂರು ಮಂದಿ ಪಂಚರು ಕೂಡಿ
ಬಹಳ ಮಂದಿ ಬೆರಗಾದರು ನೋಡಿ
ಬೆಳೆದ ಗಡಿಗೆ ಮುಯ್ಯವ ಮಾಡಿ
ವರಗುರು ಮಹಾಂತನ ಅಡಿಗಳ ಪಾಡಿ ||4||
ಊರಿಗ್ಹೋಗುವೆನೆಂದೆ
ಸೀರಿ ಬಿಟ್ಟು ಉಟ್ಟುಕೊಳ್ಳವ್ವ
ಪರ ಊರಿಗ್ಹೋಗುವೆನೆಂದೇ ಹೇಳವ್ವ
ಸೇರದವರ ಕರಕೊಳ್ಳವ್ವ | ಈ
ಊರ ಬೀಳುವುದು ಹಾಳವ್ವ ||ಪ||
ಭಾಳ ದಿನವು ತೊಟ್ಟು ಬಿಟ್ಟೆವ್ವ
ಗುಳೇವೈದು ಒಂದು ಬಿಟ್ಟಿಲ್ಲವ್ವ
ತಾಳಿ ಕರಮಣಿ ಕೂಡಿ ಕಟ್ಟಿಲ್ಲವ್ವ
ಹೇಳಿ ಕೇಳಿ ದಾರಿ ಮೆಟ್ಟವ್ವ ||1||
ಬುದ್ಧಿವಂತಿ ನೀನಾಗವ್ವ | ತಂಗಿ
ಅಲ್ಲಿ ಹೋಗದ ಜಾಗ ನೋಡವ್ವ
ಮೇಲಿನ ಮನಿ ಸೇರಿಕೊಳ್ಳವ್ವ
ಬೆಲಿ ಇಲ್ಲದ ಪುರುಷನ ಸೇರವ್ವ ||2||
ಘಂಟಿ ಕಟ್ಟಿದ ದ್ವಾರಮ್ಮ
ಮಂಟಪದೊಳು ಮಹಾಂತೇಶ್ವರಮ್ಮ
ವಂಟಿಲ್ಹೋಗಿ ಅವರ ಸೇರಮ್ಮ | ಇಷ್ಟು
ತಂಟಿ ಇಲ್ಲದಲಿ ಇರುವಮ್ಮ ||3||
ಅರಿವು ಒಂದೆ
ಬಾರಯ್ಯ ಬಾರಪ್ಪ ಬಾ ತಂದೆ
ಬ್ಯಾರೆ ಬ್ಯಾರೆ ಎಂಬುದುದು ತೋರ್ಯಾನ ಮುಂದೆ
ತೋರದಿದ್ದರೆ ನಿನ್ನ ಮಾರಿಕೊಂಡು ಬಂದೆ ||ಪ||
ಗಂಧ ಘ್ರಾಣ ಒಂದೆ ರುಚಿ ಜಿಹ್ವೆ ಒಂದೆ
ನಾಭಿ ಕೊರಳ ಫಣಿ ಪದುಳ
ನೆತ್ತಿ ಶ್ರೋತ್ರ ಗಾತ್ರ ಒಂದೆ ||1||
ಮಧುರ ಶಿವಯೋಗ
ಶುದ್ಧ ಸೇವನೆಯ ಸುಖ ಒಂದೆ
ಮಗನ ಮೋಹನ ಸುದತಿ ಸತಿ ಸ್ನೇಹ ಒಂದೆ ||2||
ನೋಟ ಬ್ಯಾಟಗಳು ಒಂದೆ ಊಟ ಖಾರಗಳು ಒಂದೆ
ಚಾಟು ಕಾಟಮಿ ಬಿಂಕ ಒಂದೆ
ಕೂಟ ಕೋಟ ಸಂದು ಸೂಟಿ ಒಂದೆ ||3||
ಎರಡು ಮೂರಾರು ಒಂದೆ
ಮೂರಾರು ಎರಡು ಒಂದೆ
ಪರತಿನ್ನೂರು ಹದಿನಾರು ಒಂದೆ ||4||
ತೆರನಿಲ್ಲದ ಗಣಿತಕ್ಕೆ ಮೆರೆವ
ಸೈದಾಪುರದೊಳಿರುವ
ಮಹಾಂತಯೋಗಿ ಅರಿವು ಒಂದೆ ||5||
ಬಯಲ ರೂಪ
ಬಯಲ ಬಯಲ ರೂಪ ಮಾಯ
ಬಯಲ ನಿರೂಪಲ್ಲ
ಸ್ವಯಮೇವ ಬ್ರಹ್ಮವೆಂಬುದು ತಾನು ತಾನೆಲ್ಲ ||ಪ||
ವಾಯು ಇಂದ್ರಿ ಭೂತವರ್ಗ
ವರಣ ಕರಣ ತಾರಾಗ್ನೇಯ
ಜ್ಞಾನ ಜ್ಞಾತ್ರು ಭೋಕ್ತೃ ಸ್ಥಾಣು ಚೋರಾಕಾರ ||1|
ಭಕ್ತ ಮಹೇಶ ಪ್ರಸಾದಿ
ಪ್ರಾಣಲಿಂಗ ಶರಣ ಐಕ್ಯ ನ್ಯಾಯ
ಶಕ್ತಿ ಭಕ್ತಿ ಯುಕ್ತಿ ಮುಕ್ತಿ ಪಾರಿ ಶೇಷ ನ್ಯಾಯ ||2|
ಪೊಡವಿಗಧಿಕ ಮೆರೆವ ಬಿದನೂರೊಡೆಯ
ಮಹಾಂತೇಶ ಕಡಲ ಅಡಪ
ಆಂiiತ ಸ್ವಾಯತ ಸನ್ನಿಹಿತ ಸ್ವಪನ ಈಶ ||3||
ಸುಳ್ಳಗಿ ಖರೇ ಮಾಡ್ಯಾನ ಬಾಳ
ಎವ್ವಾ ಹ್ಯಾಂಗ ಮಾಡಲೇ
ಎಪ್ಪ ಹ್ಯಾಂಗ ಮಾಡಲೇ
ಹತ್ತ್ಯಾದ ಕೆಸರ
ಮೈಯೆಲ್ಲ ಹಸರ ||ಪ||
ಆನಾದಿಯೊಳಗ ಆಗ್ಯಾದ ಬಸರ
ಬ್ರಹ್ಮ ವಿಷ್ಣು ರುದ್ರಗ ಹತ್ತ್ಯಾದ ಕೆಸರ
ನಿಂತಲ್ಲೇ ನಿಂತು ಆಗ್ಯಾದ ಹಸರ
ನೀರ ಹಾಕಿ ತೊಳೆದರ ಹೋದೀತ ಕೆಸರ ||1||
ಬ್ರಹ್ಮ ವಿಷ್ಣು ರುದ್ರ ಮೂವರೂ ಸುಳ್ಳ
ಕನಸಿನೊಳಗ ಆಗಿದ್ದು ಸುಳ್ಳ
ಮುಳ್ಳಿನಿಂದ ಮುಳ್ಳ ತೆಗೆದಾನ ಕಳ್ಳ
ವೇದ ಪುರಾಣ ಆಗ್ಯಾವ ಸುಳ್ಳ ||2||
ಶಬ್ದ ಸುಳ್ಳ ಅಕ್ಷರ ಸುಳ್ಳ
ಮಹಾಂತ ಸುಳ್ಳ ಮಡಿವಾಳ ಸುಳ್ಳ
ಕಡಕೋಳ ಮೊದಲಿಗೇ ಸುಳ್ಳ
ಸುಳ್ಳಿಗಿ ಖರೆ ಮಾಡ್ಯಾನ ಬಾಳ ||3||
ಖರೆ ಗಂಡ
ಎಂದೂ ಬಾರದ ಗಂಡ
ಇಂದೇಕೆ ಮನಿಗೆ ಬಂದ
ಖೂನ ಇಲ್ಲ ಗುರುತ ಇಲ್ಲ
ತಾ ಮನಿಗಿ ಬಂದಾನಲ್ಲ ||ಪ||
ಹೊತ್ತು ಗೊತ್ತು ಅರಿಯಲಿಲ್ಲ
ತನ್ನ ಹೊತ್ತಿಗೆ ಬಂದಾನಲ್ಲ
ಕೈಪಿಡಿದ ಗಂಡ ಎನ್ನ
ಕೈ ತಾನು ಬಿಟ್ಟಾನಲ್ಲ ||1||
ಕಣ್ಣ ಮುಂದೆ ಕಂಡ ಗಂಡ
ಕಡಿಗೂ ಸಿಗಲೇ ಇಲ್ಲ
ಮನಸಿನಲ್ಲಿ ಇದ್ದ ಗಂಡ
ಮನಿಗೆ ಬರಲೇ ಇಲ್ಲ ||2||
ಕುಲಗೇಡಿ ಅಲ್ಲ ಗಂಡ
ಕುಲ ಹೊರಗ ಮಾಡಿದನಲ್ಲ
ಕಡೆವಾಕ್ಯ ಹೇಳಿ ಗಂಡ
ತಾ ಕಡೆಗಾಗಿ ಹೋದನಲ್ಲ ||3||
ಯಾರನ್ನು ಕೇಳಲಿ ಎಲ್ಲಿ ಹುಡುಕಲಿ
ಕಂಟಿಕಾರಿ ಕಮರಿ ಹುಡುಕಿದೆ ನಾ
ಗುಡ್ಡ ಗಂವ್ಹರ ತಿರುಗಿದೆ ನಾ
ಗುಡ್ಡದ ಮಹಾಂತ ಎನಗ ಖರೆ ಗಂಡ ||4||
ಕುಡ್ಡಿ ನಿನಗ್ಯಾಕ ಹಾದರ
ಕುಡ್ಡಿ ನಿನಗ್ಯಾಕ ಹಾದರ
ಮನಿ ಮಾಡಿದಿ ಹಾಳ ||ಪ||
ಕಾಲ ಸಪ್ಪಳ ಕೇಳಿ
ನೀ ಆದಿ ಕಚಿಬಿಚಿ
ನಾಲ್ಕು ಗುಡ್ಡ ಏರಿ ಬಿದ್ದಿ
ಎಷ್ಟು ನೀನು ಸೊಕ್ಕಿಗಿ ಬಂದಿ ||1||
ಹೋಗುವವರ ಖೂನಿಲ್ಲ
ಹುಚ್ಚ ಮೂಳ ಮಂಗಿ ನೀ
ಕೈ ಮಾಡಿ ಕರೆದೆಯಲ್ಲ
ಕೆಲಸ ಏನ ತಂಗಿ ನಿನ್ನ ||2||
ನಿನ್ನ ನೀನು ತಿಳಿಯಲಿಲ್ಲ
ಕಂಡದ್ದೆಲ್ಲ ನಂದಂದೆಲ್ಲ
ತಿಳಿದ ಮೇಲೆ ಆಗವ್ವ ನೀ
ನಿಜ ರೂಪ ನಿಜಗುಣ ಮಳ್ಳಿ ||3||
ದಿನಗಳೆದು ನೀ ಆದಿ
ಹಳಿ ಹುಚ್ಚ ಮುದುಕಿ
ಅರುವೆಂಬ ಮಕ್ಕಳೂ ಇಲ್ಲ
ಸುಳಗೇಡಿ ಹೆಣ್ಣ ನೀನು ||4||
ಅರುವೆಂಬ ಗುರುವಿನ ಕೂಡು
ಗುರು ಮಂತ್ರದ ಭೋಗ ಬೇಡು
ಗುರು ಗುಡ್ಡದ ಮಹಾಂತನ
ಖಾಸಾ ಹೆಂಡತಿ ಆಗು ನೀನು ||5||
ಜಂಗಮನೋಳು ಜಗವೆಲ್ಲ
ಜಂಗಮನಿಲ್ಲವ್ವ ಜಗದೊಳಗ
ಜಂಗಮನೋಳು ಜಗವೆಲ್ಲ
ತಂಗಿ ಕೇಳ ನೀ ನಿಂಗಮ್ಮ
ಮಂಗಳ ಮಾತಿನ ತಂಗೆಮ್ಮ ||ಪ||
ಶೂನ್ಯ ಸ್ಥಲದಿ ಜಂಗಮನವ್ವ
ಅಂವ ಸ್ನಾನಕ್ಕೆ ಬಂದಾನ ನೋಡವ್ವ
ಕಾನನ ಭವದೊಳಗ ಹಾನವ್ವ
ಸ್ವಾನುಭಾವದಿ ನೀ ತಿಳಿಯವ್ವ ||1||
ಆರು ಬಾಗಿಲದೊಳಗ ಆಡುವನವ್ವ
ಚಂದುಳ್ಳ ಮನಿಗೆ ಬಂದಿದ್ದನವ್ವ
ಅಂದ ಚಂದದಿಂದಲಿ
ಧ್ವನಿ ಮಾಡುವನವ್ವ ||2||
ಧರಿಯೊಳು ಚೌಡಾಪೂರ ಗುಡ್ಡವ್ವ
ಅಲ್ಲಿ ಅರಿವಿನೊಳಿರು ಎಡ್ಡವ್ವ
ಪರಮ ಮಂಗಲಕ್ಕೆ ಕೈ ಒಡ್ಡವ್ವ
ಗುರು ಮಹಾಂತನ ಕೂಡಿ ಮುಕ್ತಿ ಪಡೆಯವ್ವ ||3||
ಹಾಳ ಮನೆ
ಸುಳ್ಳೆ ಹಾಳ ಮನೆಗೆ ನ್ಯಾಯ ಮಾಡಲಿ ಬೇಡೊ
ನಮ್ಮನಿ ಹೊರಗಾದ ತಿಳಿದು ನೋಡೊ ||ಪ||
ಗಚ್ಚಿನಮನಿ ಕಟ್ಟಿ ಮೆಚ್ಚಲಿ ಬೇಡ
ನಿನಗಿಚ್ಚಿಸದವರನ್ನು ಮೋಹಿಸಬೇಡ
ಚಿಕ್ಕ ಯಮನರು ಬಂದು ನಿನ್ನ ಕಟ್ಟಿ ಎಳೆದೊಯ್ಯುವಾಗ
ಗಚ್ಚಿನ ಮನೆಯೊಂದು ನಿಜವೇನೊ ಮೂಢ ||1||
ಹಳ್ಳದ ಹೊಲ ಕಂಡು ಹಿಗ್ಗಲಿಬೇಡ
ಸುಳ್ಳೆ ಸೀಮಿಕಲ್ಲು ಸರಿಸಿ ಇಡಲು ಬೇಡ
ಕಳ್ಳ ಯಮನರು ಬಂದು ನಿನ್ನ ಕೊಲ್ಲಿ ಎಳೆದೊಯ್ಯುವಾಗ
ಹಳ್ಳದ ಹೊಲವಂದು ನಿಜವೇನೊ ಮೂಢ ||2||
ಭವದ ಭಾವಿಯ ಕಂಡು ಈಸೆನೆನಬೇಕು
ಒಳ್ಳೆ ಈಸೆನೆಂದವರಿಗೆ ಮುರದೀತು ಕೋಡ
ನಮ್ಮ ಗುರು ಮಹಾಂತೇಶ್ವನ ಮರಿಯಲಿ ಬೇಡ
ನಮ್ಮನೆ ಹೊರಗಾದ ತಿಳಿದು ನೋಡ ||3||
ಕರಿಯ ಹೆಂಟಿಯ ಮೇಲೆ ಬಿಳಿ ಬೀಜ
ಕರಿಯ ಹೆಂಟಿಯ ಮೇಲೆ ಬಿಳಿಯ ಬೀಜವು ವೂರಿ
ಶಂಭುವೇ ಶಂಭು ಲಿಂಗವೇ
ಹರಗಲ್ದೆ ಬಿತ್ತಲ್ದೆ ಮೊಳ ಉದ್ದ ತೆನೆಯಾಗಿ
ಶಂಭುವೇ ಶಂಭು ಲಿಂಗವೇ ||ಪ||
ಎರಡು ಕಾಲಿನ ಪಕ್ಷಿ ನೀರೊಳು ನಿಂತಿತ್ತು
ಶಂಭುವೇ ಶಂಭು ಲಿಂಗವೇ
ಹಿಂಡಲಿಕ್ಕೆ ಮೊಲೆಯಿಲ್ಲ ಕೊಡ ಹಾಲು ಕರೆದೀತು
ಶಂಭುವೇ ಶಂಭು ಲಿಂಗವೇ ||1||
ಪಕ್ಷಿಗೆ ಪಕ್ಕಿಲ್ಲ ಹಾರಿತ್ತು ಗಗನಕ್ಕೆ
ಶಂಭುವೇ ಶಂಭು ಲಿಂಗವೇ
ಆರು ಕಾಲಿನ ಪಕ್ಷಿ ಅಂತರಕ್ಕೆ ಹಾರ್ಯಾದ
ಶಂಭುವೇ ಶಂಭು ಲಿಂಗವೇ ||2||
ಒಬ್ಬಳು ಸ್ತ್ರೀಯರಿಗೆ ಇಬ್ಬರು ಪುರುಷರು
ಶಂಭುವೇ ಶಂಭು ಲಿಂಗವೇ
ಪುರುಷರಿಗೆ ರೂಪಿಲ್ಲ ಮಹಾಂತೇಶನೆ ಬಲ್ಲ
ಶಂಭುವೇ ಶಂಭು ಲಿಂಗವೇ ||3||
ಯಾಕೆ ಮರದಿಯೋ
ಓ ಯಾಕೆ ಮರದಿಯಲೋ
ಅಸಿಪದ ದಾಖಲಿರಲರಿದೆ
ಕಾಕು ಗುಣ ತಿಳಿದ್ಯಾರ ಬಳಲಿಪಿ
ಲೋಕ ನಿನ್ನೊಳಗೇಕ ಯೆಂಬುದು ||ಪ||
ಅಷ್ಟ ತೀರ್ಥದ ಶ್ರೇಷ್ಯಕ್ಕೇಯ್ಯೊ
ಮಮಯಷ್ಟು ನಿನ ಹೀನ ಮುಷ್ಟಿಕ್ಕಿದ್ದರೆ
ಸರಿಯಿಟ್ಟವರು ದಾರಿಷ್ಟು
ನಿನ್ನಿದಿರಿಟ್ಟು ಧರಿ ಶ್ರೇಷ್ಠತ್ವ ನೀನಹ ||1||
ಮಂದಮತಿ ಹೀನಗ್ಹೊಂದಿತ್ಯಾಕೋ
ನನ್ನಿಂದ ತನು ಇಹುದೆಂತರಾಗಲಿ
ಇಂದಿನಂದವ ಶಿಂಧುವಿನ ಪರಿಯೆಂದುಕೊಂಬುವೆ
ಚಂದವಿಪುದದು ನ್ಯಾಯವೇ ||2||
ದಾರಿಯೊಳು ಬರಲೋರ್ವ
ಚೋರನ ಮೀರಿ ಶೂರನೆಂಬುವ ಪರಿಯಲಿ
ಭಾರಿ ಗುಣ ಗಣ ಪಿರಿದನು
ಗಂಭೀರ ಮಡಿವಾಳಾಕಾರ ನೀನಿಹ ||3||
ನಿರ್ವಾಣ
ನಿರ್ವಾಣವಾಗುವುದಕ್ಕೆ ಯರ್ವೇನೊ
ವಿರ್ವದ ಸರ್ವಿ ಹರಿದು ಸತ್ತೆನೆಂಬುವನಂತೆ ||ಪ||
ಕನ್ನಡಿಯೊಳು ರೂಪ ಅನ್ಯವೆಂಬುದು
ಭವಾದರಿಂ ಅರಿವೇನು ನಿಜ ತತ್ವವನು
ಮನ್ನಿಸಿ ಅರಿವಿನೋಳೆನ್ನ ಜಗತ್ತಿದರುನ್ನತ ಹರಿದು
ನೀನಿರುವದೇನು ||1||
ರವಿ ತನ್ನ ಕಿರಣವು ಅರಿತಿನ್ನು ಲೋಕದಿ
ಗತಿ ಮಾಡಿ ಹೇಳುವೆನಂದದಿ ತನ್ನೊಳು
ವಹಿ ಗಟ್ಟಿರದು ಇಹಪರ ಭೋಗ ಸುಖವನು ಮೋಹಿತನು
ಗುಣ ಗಣ ಬಳಲಿಗಳು ||2||
ದಾರಿಯೋಳೂರಿದ ಕಾರಸ್ಥನೋಳ್
ಚೋರಕಾಶ್ರಯಿಸಿ ಮರಳಿ ತಿಳಿಯುವನಂದದಿ
ಮೀರಿತೆ ಭಯ ಬ್ಯಾರೆ ದಾರಿಯೊಳಿರೆ
ಸ್ಥಾಣು ಆರಿದ್ದರಂತು ಭಯ ಗಳದಿ ||3||
ಕನಸಿನೊಳಗೆ ರೋಗ ಘನವಾಗಲಿಕ್ಕೆ
ಕನಸಲೆಚ್ಚರದೊಳ ಉಪಚಾರ ಮಾಡಿ
ಘನ ಮಾತು ತಿಳಿದೆನೆಂಬುವನಂತೆ
ಬಹು ಜನ್ಮವನು ಕಳದಿಯೊ ಹುಸಿ ಜಗವು ಮಾಡಿ ||4||
ಒಂದಿಲ್ಲದಲಿ ಆರು ದ್ವಂದ್ವಾಗಿ
ಒಂದಾದೆನೆಂಬುವೆನಂತೆ ಸುಜ್ಞಾನದೊಳು ಹೊಂದಿ
ಆನಂದನಾದಾನೆಂದು ಮಡಿವಾಳನ
ಮುಂದ್ಹೊಂದಲ್ಲೆಂಬುದರೊಳ ||5||
ಏನೋ ತಾನೇ
ನಾನು ನೀನು ಅಲ್ಲ ತಾನೆ ಅಂದರೇನು
ಏನೋ ತಾನೇ ನಾನು ನೀನಾದಲ್ಲಿ
ತಿಳಿಯುವದೆನೋ ಮಾನುನಿ ಸ್ನೇಹದ ಪರಿಣಾಮವೇನು
ಸೊನ್ನಿ ಹಾನಿಯಾಗದಲರೊಳು ಸವಿ ಸುಖವೇನು ||ಪ||
ಮೊದಲೆ ನಾನು ನೀನು ತಾನೇ ಆದಮೇಲೆ
ಕದರಿ ನಾನು ತಾನೆಂಬುದೆಲ್ಲ ಖಾಲೆ
ಸದರಿ ಜಮಿಯು ಜಗವು ಬ್ರಹ್ಮ ಆದಮೇಲೆ
ಮದುವಿಯಾಗವ ಇದ್ದರೆ ಆಗುವುದು ಮೇಲೆ ||1||
ಮುಕ್ತಿಯೇ ಬೇಕೆಂಬುವಾತ ದಾವಾತನೇ
ಆ ಯುಕ್ತಿಯೊಳು ಉಂಟಾದರುಂಟು ಮುಕ್ತಿ ತಾನೇ
ಶಕ್ತಿಯು ಎಂಬುದಕ್ಕೆ ಪುರುಷ ತಾನು
ಶಕ್ತಿ ಇಲ್ಲದಾದ ಮೇಲೆ ಪುರುಷ ಎಲ್ಲಿಯವನು ||2||
ಕಾಕತಾಳ ನ್ಯಾಯದಂತೆ ನಾನು ನೀನು ತಾನೇ
ಏಕ ಮುಖಕಾರ ಆಯಿತೆಂಬುದೇನು
ಸಾಕು ನೀನೆಂದರೆ ಮಡಿವಾಳ ತಾನು
ಸಾಕು ಬೇಕು ಎಂಬುವುದಿಲ್ಲ ತಾನೇ ಏನು ಏನು ||3||
ಪಡಿವೆನೆಂದಿಗೆ ಮುಕುತಿ
ಪಡಿವೆನೆಂದಿಗೆ ಮುಕುತಿಯನು ಎಂಬುವನವನು
ತಡಿಯದೆ ಒಡಲಾತ್ಮವನು ಅರಿಯುತಲಿಹನು ||ಪ||
ಮೂರ್ತಾಪ ಜನಿತು ಯೌವ್ವನ ವೃದ್ಧನಳಿದು
ಸೇರ್ಪಡಿಯುವುದು ದುರ್ಲಭ
ಮನರ್ಕದೊಳು ಇರ್ಕಿರ್ಕೆ ಕೆಡಿಪುದು
ಆರರ್ಪರಿಪುದು ಬಂದ ವಿರ್ಪನಳಿದು ||1||
ಮಾತ ಕೇಳುತಲಿ ಸತ್ಯರಾಲ್ತಿದು ಆತ್ಮನ
ಜೀತ್ಮರಿದ ಯಾತ್ಕಡಿಲ್ಲದೆ ಸೆಳಿದುಳಿದು
ಇತ್ಸೆವ ಭಕುತಿ ಗುರೋಕ್ತಿಯಲ್ಲಿರಿಸಿ
ವಿದ್ಯಾತ್ಮನಿಂದರಿದು ಅವಿದ್ಯಾತ್ಮನಳಿದು ||2||
ಎಂದಿಗಿದ್ದರಿಂದಿನಂತೆ ಬಂಧನ ಆವರ್ಕದೊಳು
ಕಂದುಕುಂದ್ಯಾವ ಎದೆಗುಂದದೆ ಹೊತ್ತುಗಳೆದೆ
ಬಂಧುರ ಮಡಿವಾಳನು ಕಾಂಬೆನೆಂಬ
ಭಾವದಿಂದ ಹೊಂದುವದು ಒಂದು ಸಂದೇಹಗಳಿಲ್ಲದೆ ||3||
ಮಾಯದ ಬಲಿ
ನಾ ಬರಬಾರದಿತ್ತು ಈ ಊರಿಗ |
ಬಂದು ಬಿದ್ದೇನ ಮಾಯದ ಬಲಿಯೊಳಗ |
ಹೇಸಿಕಿ ಮಲಮೂತ್ರದೊಳಗ ||ಪಲ್ಲ||
ಒಂಬತ್ತು ಬಾಗಿಲ ಊರೊಳಗ |
ನಾ ಹೇಗೆ ದಾಟಲಿ ಇದರೊಳಗ |
ಎಂಟು ಮಂದಿ ಕಳ್ಳರ ಭಯ ಅದೆನಗ |
ಬೇಸರಾಯಿತು ಈ ಊರೆನಗ ||1||
ಮೂವರ ಸಿಟ್ಟು ಅದ ಎನ್ನ ಮ್ಯಾಗ |
ಐದು ಮಂದಿ ಪಾರ್ಯಾಕಾರ ಹಾರೆನಗ |
ಇಷ್ಟು ಎಲ್ಲಾ ತಪ್ಪಿಸಿ ಹೋಗುದರೊಳಗ |
ಇದಿಮಾಯಿ ಗಂಟ ಬಿತ್ತು ಹಾದ್ಯಾಗ ||2||
ಕಾಳಗತ್ತಲೆಗೈದಿತು ಎನಗ |
ಎತ್ತ ನೋಡಿದರತ್ತ ಮುಳ್ಳ ಹಾದ್ಯಾಗ |
ಯಮನಾರು ಕುಂತಾರ ಬಾಗಿಲದೊಳಗ |
ಜಗ್ಗಿ ಝೋಲಿ ಹೊಡಿಯತಾರ ಅವರೆನಗ ||3||
ದೇಶದೊಳು ಚಿಣಮಗೇರಿ ಗುಡ್ಡದೊಳಗ |
ಅಲ್ಲಿ ಇರುವನು ಮಹಾಂತಯೋಗಿ ಮಠದೊಳಗ |
ಭಕ್ತಿಲಿಂದೆ ಪೂಜಿಸು ನೀ ಆತನಿಗ |
ಮುಕ್ತಿ ಬೇಡಿಕೋರೊ ಗುರು ಮಹಾಂತನಿಗ ||4||
ಬಿಡು ಮನಸಿನ ಚಿಂತಿ
ಬಿಡು ಬಿಡು ಬಿಡು ಬಿಡು ಮನಸಿನ ಚಿಂತಿ |
ಮಹಾದೇವ ಮಾಡ್ಯಾನ ಇದಕೇನಂತಿ |
ನೀ ಹುಟ್ಟಿ ಬಂದಿ ಕಲಿಯುಗ ಸಂತಿ |
ಶಿವನ ಭಜನ ಮಾಡದೆ ಕುಂತಿ ||ಪಲ್ಲ||
ಸಾಧುರ ಸಂಗವ ನೀ ಮಾಡೊ |
ಸ್ವರ್ಗದ ಹಾದಿ ಅದೇ ನೋಡೊ |
ಭವಕೆ ಬರುವದು ಬಹು ಕೇಡೊ |
ಭವದ ಬೇರು ಕಿತ್ತುವಂತೆ ಮಾಡೊ ||1||
ತಾಪ ಕೋಪಕೇನು ಭೇದಿಲ್ಲ |
ನಿದ್ರಿ ಸಾವಿಗೇನು ದೂರಿಲ್ಲ |
ಭಕ್ತಿಯೆಂಬುದು ಅಯ್ತೆಲ್ಲಿ |
ಮುಕ್ತಿಯ ತಿಳಿದರೆ ಹಂತೀಲಿ ||2||
ಹುಟ್ಟುದು ಸಾಯುದು ಸಕಲರಿಗಿ |
ಅದರ ಭೇದ ತಿಳದಿಲ್ಲೊ ಯಾರ್ಯಾರಿಗಿ |
ಧರಿಯೊಳು ಬಿದನೂರಲ್ಲಿ
ಮಹಾಂತಯೋಗಿ ಇರುವನು ಅಲ್ಲಿ ||3||
ಮಹಾಂತನ ಧ್ಯಾನವ ಮರಿಬ್ಯಾಡ
ಯಾಕ ಚಿಂತಿ ಮಾಡತೀದಿ ಎಲೆ ಮನವೆ |
ನಿನಗೆ ಯಾತರ ಸುಖವಿಲ್ಲ ಎಲೆ ಮನವೆ |
ಲೋಕನಾಥನ ಧ್ಯಾನವ ಮಾಡಿ |
ಸಾಕಾರ ಮಾಡಿಕೊಳ್ಳೊ ಎಲೆ ಮನವೆ ||ಪಲ್ಲ||
ಕಳ್ಳತನ ಮಾಡಬಾರದು ಎಲೆ ಮನವೆ | ನೀ
ಸುಳ್ಳತನ ಹೇಳಬಾರದು ಎಲೆ ಮನವೆ |
ಬಲ್ಲಂಥ ಜ್ಞಾನಿಗಳು ಬಲ್ಲಷ್ಟು ಹೇಳಿದರ |
ಅಲ್ಲಂತ ಅನಬಾರದು ಎಲೆ ಮನವೆ ||1||
ಯಾರಿಗೆ ಯಾರಿಲ್ಲ ಎಲೆ ಮನವೆ |
ಇದು ಮೂರು ದಿನದ ಸಂತಿ ಎಲೆ ಮನವೆ |
ಸೇರದವರ ಮುಂದೆ ಜಾರಿ ಬೀಳದಂತೆ |
ಪಾರಾಗಿ ಹೋಗಬೇಕು ಎಲೆ ಮನವೆ ||2||
ಆಶೆ ಅಳಿಬೇಕು ಎಲೆ ಮನವೆ | ಇದು
ಹೇಸಿಕೆ ಸಂಸಾರ ಎಲೆ ಮನವೆ |
ದೇಶದೊಳಗೆ ನಮ್ಮ ಗುಡ್ಡದ ಮಹಾಂತನ |
ಧ್ಯಾಸವ ಮರಿಬ್ಯಾಡ ಎಲೆ ಮನವೆ ||3||
ಒಣ ಚಿಂತಿ
ಯಾಕ ಮಾಡತಿದಿ ನೀ ಒಣ ಚಿಂತಿ |
ನಿನಗ ಬಡಕೊಂಡಾದ ಮಾಯದ ಭ್ರಾಂತಿ |
ಅದಕ ಜೋತುಕೊಂಡು ನೀ ಕುಂತಿ |
ನಾಳೆ ಯಮ ಕೇಳಿದರ ಏನಂತಿ ||ಪಲ್ಲ||
ಮನಿಯ ಕಟ್ಟಿಸಿದಿ ಮಾಳಿಗಿ |
ನಿನಗ ಹೋಗೋದ ಬಂತಲ್ಲೊ ನಾಳಿಗಿ |
ಗೊಂಗಡಿದು ಮಾಡ್ಯಾರ ಜೋಳಿಗಿ |
ನಿನಗೆ ಇಟ್ಟು ಬಂದು ಉಣತಾರಲ್ಲೊ ಹೋಳಿಗಿ ||1||
ಹೆಂಡರು ಮಕ್ಕಳು ಸಂಪತ್ತು |
ನೀ ಹುಟ್ಟಿದಾಗ ಅದು ಎಲ್ಲಿತ್ತು |
ನಟ್ಟನಡುವೆ ಗಂಟ ಬಿದ್ದಿತ್ತು |
ನೀ ತಿಳಿದು ನೋಡೊ ಅದರೊಳು ಕುಂತು ||2||
ಸಂಕಷ್ಟ ಪಡುತಿದಿ ಸಾವುದಕ |
ಅದು ಸಟಪಟ ಹುಣ್ಣಲ್ಲೊ ಮಾಯುದಕ |
ಕರ್ತಗುರು ಮಹಾಂತನೆ ಬಲ್ಲ |
ಅವನ ಹೊರ್ತ ಮತ್ತ್ಯಾರಿಲ್ಲ ||3||
ಒಣ ಭ್ರಾಂತಿ
ಆಯಿತು ಹೋಯಿತು ಬಂತು ಬಾರದೆಂಬೊದ್ಯಾಕೊ |
ನಿನಗೀ ಒಣ ಭ್ರಾಂತಿ |
ಕಾಯಲು ಕೊಲ್ಲಲು ದೇವನಲ್ಲದೆ |
ಛೀ ಬಿಡು ನಿನ್ನ ಮನದಾನ ಚಿಂತಿ ||ಪಲ್ಲ||
ಸಂಚಿತ ಕರ್ಮವು ವಂಚಿಸಬಾರದು |
ಮುಂಚಗೊಂಡು ಮನ್ನಿಸೊ ಬೇಗ |
ಸಂಚು ಜನ್ಮವಿದು ಮಿಂಚಿ ಹೋದ ಮ್ಯಾಲ |
ಹಂಚಿಕಿ ಹಾಕುವದು ಆಗ್ಹ್ಯಾಂಗ ||1||
ಪ್ರಾರಬ್ಧ ಫಲ ಸಾಲದೆಂದು | ಅನು
ಕೂಲವಾಗಿ ಭೋಗಿಸೊ ನೀನು |
ಮೇಲವಾದ ನಿಷ್ಕಲವು ತಿಳಿದರೆ |
ಕಾಲ ಕಾಲಕ್ಕಾಗುವದು ತಾನೆ ||2||
ಆಗಲಿಯೆಂಬುದು ಆಗಲೆಂದರೆ | ಅದು
ಈಗ ಆಗಲಿಕ್ಕೆ ನಿನ್ನಿಚ್ಛೆ |
ಆಗಂತನು ಬ್ಯಾಡೆ ಭವರೋಗಯೆಂಬುದು |
ಬೇಗ ಹೋಗುವದು ತಾ ಕೊಚ್ಚೆ ||3||
ತನುಮನ ಧನ ಹಿಡಿದ ಅನುದಿನ |
ನೆನವು ನಾನಾ ಜನ್ಮವು ತಾನೆ | ಇದರ
ನೆನವಡಗಲು ಘನ ಮಾಂತೇಶನೊಳು |
ಚಿನ್ಮಯನೊಳು ತನ್ಮಯನು ತಾನೆ ||4||
ಮದವಿಯ ಚಿಂತಿ ನಿನಗ್ಯಾಕ
ನನ್ನ ಮದುವಿಯ ಚಿಂತೆ ನಿನಗ್ಯಾಕ |
ನನ್ನಂಗಕ ಲಿಂಗ ಕಟ್ಟಿದ ಬಳಿಕ | |ಪಲ್ಲ||
ಹೆಣ್ಣಿಲ್ಲಿ ಬಾಯೆಂದು ಎಣ್ಣೆ ಅರಿಷಿಣ ಮಿಂದು |
ಸಣ್ಣ ಬಚ್ಚಲದೊಳು ಪನ್ನೀರನೆರೆದು |
ಬಣ್ಣ ಬಣ್ಣದ ಚಂದದುಡಿಗೆಯನುಡಿಸಿ |
ಹೊನ್ನ ಹೂದಂಡೆಯ ಮುಡಿಗೆ ಬಿಗಿಸಿ |
ಕಣ್ಣಿಗೆ ಕಾಡಿಗೆ ಕೆನ್ನೆಗೆ ಗಂಧ ಹಚ್ಚಿದ ಬಳಿಕ ||1||
ಕಣ್ಣಿಗೆ ಕಣ್ಣಿಟ್ಟು ಸನ್ನೆ ಮಾಡಿದನಾತ
ತನ್ನ ಮನೆಯ ಯಜಮಾನಕಿ ನೀಡಿದನಾತ
ಅನ್ಯಳು ನೀನಲ್ಲವೆಂದಪ್ಪಿ ಹೇಳಿದಾತ
ಕಣ್ಣು ಮೂಗಿಂದ ಬಲು ಚೆಂದನವನೊಲಿಯುತ್ತ
ಹೊನ್ನ ತಾಳಿಯ ತಂದು ಕಟ್ಟಿದ ಬಳಿಕ ||2||
ಆಸನವೆಂಬುವ ಸ್ಯಾಸಿಯ ಕಟ್ಟಿ
ಸೂಸಲ ಮನದ ಅಕ್ಕಿಯ ಹಾಕಿ
ಏಸೊಂದು ಗೆಳತಿಯರು ಕೂಡಿ ಆರತಿ ಮಾಡಿ
ಯಾಸಿ ಮಾತುಗಳಾಡಿ ಈಶ ದಾಸಿಯ ನೋಡಿ
ಧ್ಯಾನಿಸಿರೆಲ್ಲೆನುತ ಸೋಬಾನ ಹಾಡಿದ ಬಳಿಕ ||3||
ಪಂಚ ತತ್ವಗಳೆಂಬ ಪಂಚ ಕಳಸಗಳ ಹೂಡಿ
ಪಂಚಾಕ್ಷರಿ ಮಂತ್ರ ಕಿವಿಯೊಳಗೂದಿ
ಸಂಚಿತ ಕರ್ಮ ಭವ ವಂಚನೆಗೊಳಿಸಿ | ನಿ
ಶ್ಚಿಂತಳಾಗೆಂದು ಕಾಲಾಂತಕ ಶಿವನವನು
ಕಾಂತ ನಿನಗೆಂದು ಏಕಾಂತ ತಿಳಿಸಿದ ಬಳಿಕ ||4||
ಗುರು ಹಿರಿಯರು ವಿಧಿಯನ್ನು ಸರ್ವಗೂಡಿಸಿ
ಸೆರಗು ಪದರುಗಳ ಗಂಟನ್ನು ಹಾಕಿಸಿ
ಮೆರವಣಿಗೆ ತೆಗೆದು ನಾಗೋಲಿ ತುಂಬಿಸಿ
ವರಪತಿ ಲಿಂಗಯ್ಯನ ಅರ್ಧಾಂಗಿ ನೀನೆಂದು
ಸರಸದಿ ಪ್ರಭು ಮಹಾಂತೇಶ ಹರಸಿದ ಬಳಿಕ ||5||