ನಮ್ಮ ಶಿವನನ್ನು ಧ್ಯಾನವ ಮಾಡಿ
ನಮ್ಮ ಶಿವನನ್ನು ಧ್ಯಾನವ ಮಾಡಿ|
ನಿಮ್ಮ ಪಾಪಕ್ಕೆ ಹೆದರಲೆಬೇಡಿ ||ಪ||
ಒಮ್ಮೆ ಮನಸಾರ ನುಡಿಯದ ಖೋಡಿ|
ಸುಮ್ಮನೇ ಪೋಪ ನರಕಕ್ಕೆ ನೋಡಿ ||ಅಪ||
ನೀಲಕಂಠನ ಗುಡಿಯೊಳಗಿರುವಾ|
ನಾಲಗೆಯೆಯಿಲ್ಲದಾ ಘಂಟೆ ನುಡಿವಾ||
ಮೂಲನಾದವ ಕೇಳಿ ಮೈಮರೆವಾ|
ಲೀಲೆಯಿಂದಿರ್ಪಶರಣಗೆ ಮಣಿವಾ ||1||
ಮೂಲಕುಂಡಲಿಯನ್ನೀಗ ತಡೆದು|
ಕಾಲಕರ್ಮದ ಸಂಯೋಗ ತೊಡೆದು ||
ಹೇಳಲಾಗದಾನಂದವ ಪಡೆದು|
ಮೂಲಮಂತ್ರವ ತಾನಾಗಿ ನುಡಿದು ||2||
ಗಂಗೆ ಗೌರಿಯರೊಡಗೂಡಿ ಬಂದು|
ಮಂಗಳಾತ್ಮಕತಾನಾಗಿ ನಿಂದು||
ಕಂಗಳಿರೆ ಮೂರವಸ್ಥೆಯ ತಂದು|
ಲಿಂಗವಾದನು ನರಹರಿಯಿಂದು ||3||
ಸುಲಭ ಪೂಜೆಯ ಮಾಡೆಲೈ ಮನವೇ
ಸುಲಭ ಪೂಜೆಯ ಮಾಡೆಲೈ ಮನವೇ| ನಿನ್ನೊಳಗೆ ಪರಶಿವ|
ಕಳೆಯ ಕೂಡುತಲಹುದು ನಿರ್ಗುಣವೇ ||ಪ||
ಕಳೆದು ಕಾಯವ ತಿಳಿದುಪಾಯವ|
ಹೊಳೆವ ಮಂತ್ರವತಳೆದು ತಂತ್ರವ||
ನಿಲಲು ವೈಭವ| ಉಳಿಯಧೀ ಭವ|
ಸಲುವುದಾ ಶಿವನೊಲುಮೆಯನುಭವ ||ಅಪ||
ನಿನ್ನ ಮೈಯನು ನೀನೆ ತೊಳೆವಾಗ| ಅಭಿಷೇಕ ಶಿವನಿಗೆ|
ಎನ್ನುತಾ ಚರಿಸುವುದೆ ಸುವಿರಾಗ||
ನಿನ್ನ ಮುಖ ಕೈಕಾಲ ತೊಳೆದರೆ|
ಇನ್ನು ಶಿವನಿಗೆ ಪೂಜೆಯೆಂದರೆ||
ಮುನ್ನ ಮಾಡಿದ ಕರ್ಮವೆಲ್ಲವು|
ನಿನ್ನ ಪಾಲಿಗೆ ನಿಲ್ಲಲಿಲ್ಲವು ||1||
ಆವಗಂಧವ ಮೂಸಿಸಲು ನೀನು| ಶಿವನಿಗೆ ಸಮರ್ಪಿಸು ||
ಜೀವ ಭಾವವೆ ನೀಗಿತಿನ್ನೇನು ||
ಆವ ರಸ ರುಚಿ ರೂಪ ಸ್ಪರ್ಶವ|
ಆವ ಶಬ್ದದೊಳಾದ ಹರ್ಷವ||
ದೇವದೇವನಿಗರ್ಪಿಸಲು ಶಿವ|
ನೀವ ನಿತ್ಯಾನಂದ ಪದವ ||2||
ಏನು ಮಾಡುವುದೆಲ್ಲ ಶಿವಗೆಂದು | ಮಾಡುತ್ತಲಿದ್ದರೆ |
ಹೀನ ಕರ್ಮದ ಬಾಧೆ ನಿನಗಿರದು||
ಧ್ಯಾನ ಮೌನವು ಜ್ಞಾನ ಸರ್ವವು|
ತಾನೆ ಶಿವನೆಂದೆಲ್ಲ ಕಾಲವು||
ಮೌನಿ ನರಹರಿ ಪಾದಕಮಲವ |
ನೀನು ನಂಬಲು ಪಡೆವೆ ಮೋಕ್ಷವ ||3||
ಜ್ಞಾನಗಂಗೆಯ ಸೇರಿ
ಜ್ಞಾನಗಂಗೆಯ ಸೇರಿ| ಸ್ನಾನ ಮಾಡೆಲೆ ನಾರಿ|
ಮಾನಸವೆನ್ನುವ ವೈಯಾರಿ ||ಪ||
ಹೀನ ಗುಣ ಮೈಲಿಗೆಯ| ನೀನಳಿದು ನಿಜ ಮಡಿಯ|
ಸ್ವಾನುಭಾವದಿ ಹೊಂದಿ ಸನ್ಮತಿಯ ||ಅಪ||
ತಾಯಿ ತಂದೆಯ ಸೇವೆ| ಗೈಯಲಾಯಿತು ಸ್ನಾನ|
ಮಾಯಗುಣವಳಿದಿರಲೊಂದು ಸ್ನಾನ |
ಬಾಯಲ್ಲಿ ಶಿವಮಂತ್ರ ಧ್ಯಾನವೆಂಬುದು ಸ್ನಾನ|
ಕಾಯ ಕರ್ಮವ ಮೀರಲೊಂದು ಸ್ನಾನ ||1||
ನಿತ್ಯ ಶ್ರವಣವಗೈದು| ಸತ್ಯಾರ್ಥವಂ ತಿಳಿದು|
ಚಿತ್ತಶುದ್ಧಿಯಗೈವುದೊಂದು ಸ್ನಾನ||
ಶೃತ್ಯರ್ಥ ಮನನದೊ| ಳುತ್ತಮ ಸುಜ್ಞಾನ|
ವೇತ್ತನಾಗಿರುವುದೆ ನಿಜ ಸ್ನಾನ ||2||
ವಿನಯ ಸೌಶೀಲ್ಯಸಾ | ಧನ ನೀತಿ ಸ್ನಾನವು||
ಧನಮದವಳಿದಿರ್ಪುದದು ಸ್ನಾನ||
ಜನನ ಮರಣಂಗಳ | ನೆನಹಿಲ್ಲದುದೆ ಸ್ನಾನ|
ನೆನೆಯೆ ನರಹರಿಯನ್ನು ನಿಜಸ್ನಾನ ||3||
ಕಂಡೆನೆನ್ನೊಳಗೆವುದ್ಧಂಡ ಮುನೀಂದ್ರರ
ಕಂಡೆನೆನ್ನೊಳಗೆ ವುದ್ಧಂಡ ಮುನೀಂದ್ರರ|
ಖಂಡಿಸಿದರೆನ್ನ ದುರ್ವ್ಯವಹಾರ ||ಪ||
ಕಂಡಕೂಡಲೆ ಜ್ಞಾನ | ಮಂಡಿಸಲು ಶಿವಧ್ಯಾನ|
ಮಂಡಲತ್ರಯ ಮಧ್ಯ ಸಂಧಾನ ||ಅ|ಪ||
ತನುಗುಣಗಳೆನಿಸುತ್ತ | ಮನದಲ್ಲಿ ಜನಿಸುತ್ತ |
ಶುನಕನಾಯಿತು ನುಡಿಯ ಬೊಗಳುತ್ತ ||
ಶುನಕ ಗರ್ಭದಿ ಜನಿಪ| ಅನುಭಾವ ನುಡಿಮುನಿಪ||
ಪ್ರಣವ ಶೌನಕನಿದ್ದ ಸುಖ ರೂಪ ||1||
ಕತ್ತೆಯಂತೀ ತನುವ | ಹೊತ್ತು ತಿರುಗುವ ಮನವ |
ಸತ್ತು ಹುಟ್ಟುವ ತನುವ ಬಿಡಿಸಿರುವಾ||
ಕತ್ತೆ ಗರ್ಭದಿ ಜನಿಸಿ| ಮತ್ತೆ ಗಾರ್ಗ್ಯನುಯೆನಿಸಿ||
ಉತ್ತಮ ಜ್ಞಾನಿಯಾದನು ಸೊಗಸೀ ||2||
ಸುಖರೂಪ ಸನ್ನುಡಿಯ | ಶುಕ ಗರ್ಭದೊಳು ಪುಟ್ಟಿ||
ಅಕಳಂಕ ಮಂತ್ರಕೋಟಿಯ ನುಡಿದು ||
ಶುಕಮುನಿಯು ಭಾಗವತ | ಪ್ರಕಟ ಕಾವ್ಯವ ಬರೆದ |
ಸಖನಾದ ನರಹರಿಗೆ ಸುಖಬೋಧಾ ||3||
ದೇವರೇ ಮಾಡಿಟ್ಟ ದೇವಾಲಯ
ದೇವರೇ ಮಾಡಿಟ್ಟ ದೇವಾಲಯ ||
ನೀವಿಲ್ಲಿ ಪೂಜೆಯ ಮಾಡಿರಯ್ಯ ||ಪ||
ಪಾವನಕ್ಕೆ ಪಾವನವು ದೇಹಾಲಯ |
ಕೈವಲ ಸಾಧನಕ್ಕೆ ಸದಾಶ್ರಯ ||ಅಪ||
ದೇವರಿಲ್ಲಿ ಠಾವು ಮಾಡಿ ನಿಂತನಯ್ಯಾ |
ಜೀವನನ್ನೆ ಕಾವಲಿಟ್ಟು ಕುಂತನಯ್ಯ ||
ಸಾವು ಹುಟ್ಟು ಇಲ್ಲದಾತ್ಮ ನೋಡಿರಯ್ಯ |
ಸಾವು ಹುಟ್ಟು ಲೀಲೆಯಾಡುತಿರ್ಪನಯ್ಯ || 1||
ಮುನಿಗಳೆಲ್ಲ ಮೌನವಾಗಿ ಜಪಧ್ಯಾನವ |
ಮನುಗಳೆಲ್ಲ ಮಂತ್ರಾನುಸಂಧಾನವ ||
ವಿನಯಶೀಲರಾಗಿಗೈವ ಸುವಿಧಾನವ |
ಮನವು ಕಂಡು ಕಲಿಯಲಾಗಿ ನಿಧಾನವ ||2||
ಅಮರರಿಲ್ಲಿ ಅಮರಗಾನ ಮಾಡುತ್ತಿರೆ |
ರಮಿಸಿ ಬೋಧ ಸುಧೆಯ ಪಾನ ಮಾಡುತ್ತಿರೆ ||
ಪ್ರಮಥರೆಲ್ಲ ಶಿವನ ಧ್ಯಾನ ಗೈಯುತ್ತಿರೆ |
ಸಮತೆಯನ್ನು ಸಾರಿ ಶರಣರಾಗುತ್ತಿರೆ ||3||
ನಾದವಾದ್ಯ ತಾನೆ ತಾನೆ ನುಡಿಯುತ್ತಿದೆ |
ವೇದ ಘೋಷ ನಿತ್ಯವಾಗಿ ನಡೆಯುತ್ತಿದೆ ||
ಸಾಧುಸಂತರಿಂದ ಪೂಜೆಯಾಗುತ್ತಿದೆ |
ಬೋಧೆ ಎಂಬ ಗಂಗೆಯಿಲ್ಲೆ ಹರಿಯುತ್ತಿದೆ ||4||
ಒಂಭತ್ತು ಬಾಗಿಲುಳ್ಳ ದೇವಾಲಯ |
ಇಂಬಾಗಿ ಲೋಕಕೆಲ್ಲ ಮಹಾಪ್ರಿಯ ||
ನಂಬಿಕೊಂಬ ಹುಂಬರಿಂಗೆ ಮಹಾಭಯ |
ಡಾಂಭಿಕರ್ಗೆ ಶಿಕ್ಷೆಯೀವ ಯಮಾಲಯ ||5||
ಎಂಟು ಗೇಣು ಉದ್ದವಾದ ದೇವಾಲಯ |
ಉಂಟು ಇಲ್ಲಿ ಎಲ್ಲ ಸೃಷ್ಟಿ ಸ್ಥಿತಿಲಯ ||
ಬಂಟರಾದ ಸುರರಿಗಾಯ್ತು ಮಹಾಲಯ|
ಅಂಟಿ ಅಂಟದಿರುವ ಆತ್ಮನಿರಾಮಯ ||6||
ಪಂಚಪ್ರಾಣವೆನ್ನುವಂಥ ಪರಿಚಾರರು |
ಕೊಂಚ ಬಿಡುವು ಇಲ್ಲ ನಿತ್ಯ ಸಂಚಾರರು||
ಮಿಂಚಿನಂತೆ ಹೊಳೆವ ಬುದ್ಧಿ ಮನವೆಂಬರು|
ಸಂಚು ತಿಳಿದುಕೊಂಡು ಸೇವೆ ಮಾಡುವರು ||7||
ಎಲ್ಲ ಪುಣ್ಯ ತೀರ್ಥಕ್ಷೇತ್ರ ಉಂಟಿಲ್ಲಿಯೆ |
ಎಲ್ಲ ಭಕ್ತಿ ಜ್ಞಾನ ಯೋಗ ಗಂಟಿಲ್ಲಿಯೆ ||
ಎಲ್ಲಿ ನೋಡಲಿಲ್ಲ ಇಂಥ ಗುಡಿಯಲ್ಲವೆ ||
ಎಲ್ಲ ಲೋಕ ಇಲ್ಲೆ ಉಂಟು ಕಂಡಿಲ್ಲವೆ ||8||
ದುಷ್ಟರೇನು ಬಲ್ಲರಿದರ ಮಹತ್ವವ |
ಇಷ್ಟ ಬಂದ ಹಾಗೆ ಕುಣಿದು ದಿವ್ಯತ್ವವ ||
ನಷ್ಟ ಮಾಡಿಕೊಂಡರಲ್ಲ ನಿಜ ತತ್ವವ |
ಸ್ಪಷ್ಟ ತಿಳಿಯುವಾತ ಪಡೆವ ಪರ ತತ್ವವ ||9||
ಸಪ್ತ ಕೋಟಿ ಮಂತ್ರಪಾಠಕ್ಕಿದೇ ಸ್ಥಲ |
ಗುಪ್ತವಾಗಿ ದೇವರೊಲಿಸಲಿದೇ ಬಲ ||
ಕ್ಲುಪ್ತವಾಗಿ ಸರ್ವಭೂತಕ್ಕಿದೆ ಫಲ |
ಜ್ಞಪ್ತಿ ಮಾತ್ರ ನರಹರೀಂದ್ರ ನಿರಾಕುಲ ||10||
ಯಾರಿಗಂತೆ ಮೋಕ್ಷ
ಯಾರಿಗಂತೆ| ಮೋಕ್ಷ | ಯಾರಿಗಂತೆ ||ಪ||
ತೋರ ತನುವಿಗೊ| ಜೀವ ನಿಂಗೋ|
ಜಾರಿಕೊಳ್ಳುವ ಮನಸಿಗಾಯ್ತೊ ||ಅ|ಪ||
ಪಂಚ ಪ್ರಾಣಕೊ| ಪಂಚ ವಿಷಯಕೊ |
ಪಂಚ ಜ್ಞಾನೇಂದ್ರಿಯಕೆ ಮುಕ್ತಿಯೊ ||
ಪಂಚ ಕರ್ಮೇಂದ್ರಿಯಕೊ ಬುದ್ಧಿಗೊ |
ಪಂಚ ಕೋಶಕೆ ಮುಕ್ತಿಯಾಯ್ತೊ ||1||
ಭೂತಗಳಿಗೋ ತ್ರಿಗುಣಗಳಿಗೋ |
ಜಾತಿ ಕರ್ಮಕೋ ಭಕ್ತಿ ಭಾವಕೊ ||
ನೀತಿ ನಿಯಮಕೊ ಚಿತ್ತವೃತ್ತಿಗೋ |
ಕೀರ್ತಿ ಗೌರವಗಳಿಗೆ ಮುಕ್ತಿಯೋ ||2||
ಮನೆಗೊ ಹೊಲಕೋ| ಧನಕೋ ಧಾನ್ಯಕೋ||
ವನಿತೆಪುತ್ರರಿಗಾಯ್ತೋ ಮುಕ್ತಿ ||
ಜನನಿ ಜನಕರಿಗಾಗುತಿಹುದೋ|
ಜನಿಸಿದಾಹಂಕಾರಕಾಯ್ತೋ ||3||
ಎಲವು ತೊಗಲು ರಕ್ತಮಾಂಸಂ |
ಗಳಿಗೆ ಮುಕ್ತಿಯಾಗುತಿಹುದೇ ||
ಕಳಚಿಕೊಳ್ಳುವ ಸ್ಥೂಲ ತನುವಿಗೊ |
ತಿಳಿಯದಿದ್ದ ಮಲಿನ ಮನಕೊ ||4||
ಯಾರಿಗಿಲ್ಲವು ಮುಕ್ತಿ ದೇಹವ |
ಸೇರಿಕೊಂಡ ಜೀವ ತಾನೇ ||
ಬೇರೆ ದೇಹ ಬೇರೆಯೆಂದು |
ಮೀರಿ ನರಹರಿಯಲ್ಲಿ ಸೇರಲು ||5||
ಬಲು ಸುಖಸಾರ ಆತ್ಮವಿಚಾರ
ಬಲು ಸುಖಸಾರ | ಆತ್ಮವಿಚಾರ ||ಪ||
ಸುಲಲಿತ ಪೂರ| ಮೂಲಾಧಾರ ||ಅಪ||
ಜಗವಿದು ಮಿಥ್ಯ | ಬ್ರಹ್ಮವೇ ಸತ್ಯ ||
ಅಗಣಿತ ಬ್ರಹ್ಮ| ಜಗದಾಧಾರ ||1||
ಶಿವನ ವಿಯೋಗ | ಭವಭಯ ರೋಗ ||
ಶಿವನೊಳಗೈಕ್ಯ| ಜೀವಗೆ ಸೌಖ್ಯ ||2||
ವ್ಯಷ್ಟಿಯೆ ಜೀವ ಸ| ಮಷ್ಟಿಯೆ ಶಿವನು ||
ದೃಷ್ಟಿಗೆ ಕಾಣನು| ಶ್ರೇಷ್ಠನು ಶಿವನು ||3||
ಕಲ್ಪಿತ ಜೀವನು | ಅಲ್ಪನ ನಿತ್ಯನು ||
ಕಲ್ಪನಾತೀತನು | ಶಿವನೇ ನಿತ್ಯನು ||4||
ಭ್ರಾಂತಿಯ ಜೀವ| ವಿ| ಶ್ರಾಂತಿಯಕಾಣನು ||
ಶಾಂತಿಯೆ ಶಿವನೀ| ಚಿಂತಾಹರಣನು ||5||
ವಿಶ್ವವಿರಾಟ | ನಶ್ವರಮಾಟ |
ಶಾಶ್ವತನೀಶ್ವರ | ತಾನೆ ಸ್ವರಾಟ ||6||
ದೇಹವ ದಹಿಸುವ | ಮೋಹ ನಿಗ್ರಹವ ||
ವಹಿಸಿ ನಿಂತಿರುವ | ಸೋಹಂಭಾವ ||7||
ದುರ್ಗುಣ ನರಕ | ಸದ್ಗುಣ ನಾಕ ||
ನಿಗ್ರಹ ಶೋಕ | ನಿರ್ಗುಣ ಮೋಕ್ಷ ||8||
ನಿರ್ಮಲ ನೀತಿ | ಧರ್ಮದ ಜ್ಯೋತಿ ||
ಕರ್ಮದ ಭೀತಿ ಇಲ್ಲದ ಮೂರ್ತಿ ||9||
ನರಹರಿಬೋಧಾ | ಪರಮಾಹ್ಲಾದ ||
ಶರಣರ ವೇದಾ | ದೊರೆತರೆ ಸ್ವಾದ ||10
ಉಪವಾಸವನು ಮಾಡಿರಿಂತು
ಉಪವಾಸವನು ಮಾಡಿರಿಂತು| ಗುರು|
ಉಪದೇಶವನ್ನಾಂತು ನಿಜದಲ್ಲಿ ನಿಂತು ||ಪ||
ಕಪಟ ನಾಟಕ ಸೂತ್ರಧಾರಿ | ಗುರು |
ಕೃಪೆಯಿಂದಲಾಗುವುದು ಮುಕ್ತಿಗೆ ದಾರಿ ||ಅಪ||
ಅನ್ನ ಬಿಡುವುದೆ ಉಪವಾಸ| ಎನ|
ಲನ್ಯಾಯವಿದು ಎಂದ ಗುರು ಪರಮೇಶಾ ||
ಅನ್ಯ ವಿಷಯಗಳಾಸೆ ಬಿಟ್ಟು| ತನ|
ಗನ್ಯವಿಲ್ಲೆನ್ನುವುದುಪವಾಸ ಗುಟ್ಟು ||1||
ತನು ಭೋಗ ತನಗೆಂಬುದೂಟ| ಸರ್ವ|
ತನು ಭೋಗ ತನಗಿಲ್ಲವೆನಲುಪವಾಸ||
ಮನ ವೃತ್ತಿ ತನಗೆಂಬುದೂಟ | ಸರ್ವ|
ಮನ ವೃತ್ತಿರಹಿತ ತಾನೆನಲುಪವಾಸ ||2||
ಬೋಧಾಮೃತದ ಹಾಲ ಕುಡಿದು| ಪಕ್ವ|
ವಾದನುಭವವೆಂಬ ಪಣ್ಗಳ ತಿಂದು||
ಸಾಧುತ್ವ ತೀರ್ಥವ ಕೊಂಡು| ತತ್ವ|
ಸಾಧನೆಯೆಂಬ ಪ್ರಸಾದವ ಪಡೆದು ||3||
ವಿಷಯ ಸಂಗ್ರಹದೂಟ ದೋಷ| ನಿ|
ರ್ವಿಷಯಾನುಭವ ಜ್ಞಾನವದು ಉಪವಾಸ||
ಸಸಿನ ಸುಜ್ಞಾನ ವಿಲಾಸ| ಪರ|
ವಶನಾಗಿ ತಾನಿರ್ಪುದದು ಉಪವಾಸ ||4||
ಧ್ಯಾನದಲ್ಲಿಹುದುಪವಾಸ| ಪರ|
ಮಾನಂದ ಮಯನಾದರದು ಉಪವಾಸ||
ಮೌನವೆನ್ನುವುದುಪವಾಸ| ಸು|
ಜ್ಞಾನಿ ಶ್ರೀನರಹರಿ ಗೈದುಪದೇಶ ||5||
ಹಿಂದಕೆ ಮುಂದಕೆ ತೂಗಿಸಾಗಿ
ಹಿಂದಕೆ ಮುಂದಕೆ ತೂಗಿ ಸಾಗಿ|
ಬಂದನವ್ವ| ಅಲ್ಲೆ| ನಿಂದನವ್ವ ||ಪ||
ಅಂದಿಗೆ ಇಂದಿಗೆ ಎಂದಿಗೆ ಒಂದೇ
ಎಂದನವ್ವ| ನಿತ್ಯಾನಂದನವ್ವ ||ಅಪ||
ಹುಚ್ಚರಿಗಚ್ಚರಿಯಾದ ಲೋಕ |
ನೆಚ್ಚನವ್ವ | ಕಂಡು| ಮೆಚ್ಚನವ್ವ||
ಎಚ್ಚರಕೆಚ್ಚರ ಹೆಚ್ಚಿರುವಾತ
ಸ್ವಚ್ಛನವ್ವ| ಮುಂದೆ| ಸ್ವೇಚ್ಛನವ್ವ ||1||
ಸುತ್ತಲು ಕತ್ತಲು ಮುತ್ತಲು ಬೆಳಕು|
ಇತ್ತಾನವ್ವ| ಎಲ್ಲ| ಹೊತ್ತಾನವ್ವ ||
ಎತ್ತಲು ಬೆತ್ತಲೆಯಾಗಿ| ನಿಂತು|
ಸುತ್ತ್ಯಾನವ್ವ| ನಿತ್ಯ| ಸತ್ಯಾನವ್ವ ||2||
ನೂತನ ಚೇತನದಾತನ ಕಂಡು|
ಸೋತೆನವ್ವ | ಭೂತ| ನಾಥನವ್ವ||
ಜಾತಕ ಸೂತಕ ಪಾತಕ
ಹರಿಸುವಾತನವ್ವ| ಮುಕ್ತಿ| ದಾತನವ್ವ ||3||
ಮಂತ್ರವ ತಂತ್ರವ ಯಂತ್ರವ ಬಲ್ಲ|
ಸಂತನವ್ವ| ಪುಣ್ಯ| ವಂತನವ್ವ||
ಶಾಂತಿಯ ಕಾಂತಿಯ ನಾಂತಿರುವಾತ|
ನಿಂತನವ್ವ| ಇಲ್ಲೆ| ಕುಂತನವ್ವ ||4||
ಎಂಜಲು ಮುಂಜಲಿಗಂಜದೆ ಉಂಡು|
ಬೆಳದೇನವ್ವ| ಪಾಪ| ಕಳೆದೇನವ್ವ ||
ಸಂಜೆಗೆ ಮುಂಜೆಗೆ ರಂಜಿಪನೀತ|
ಕಂಡೇನವ್ವ| ನಂಬಿ| ಕೊಂಡೇನವ್ವ ||5||
ನರಹರಿ ತಾತನು | ಕರುಣಿಸಿದಾತನ|
ಬೆರೆದೆನವ್ವ| ಬೋಧೆಯರಿದೆನವ್ವ ||
ಮರಣಕೆ ಸಿಕ್ಕದೆ| ದುರುತಕೆ ದಕ್ಕದೆ |
ಸರಿದೆನವ್ವ| ಮೈಯ ಮರೆದೆನವ್ವ ||6||
ತ್ರಿಗುಣಗಳಿಂದಲೆ ಜಗವಿದು ನಡೆವುದು
ತ್ರಿಗುಣಗಳಿಂದಲೆ| ಜಗವಿದು ನಡೆವುದು|
ತ್ರಿಗುಣಗಳೇ ತ್ರೈಮೂರ್ತಿಗಳು ||ಪ||
ತ್ರಿಗುಣಾತೀತನೆ| ಜಗದಾತ್ಮಕನು||
ಸಗುಣಾಶ್ರಯನಾ ಪರವಸ್ತು ||ಅ|ಪ||
ಸತ್ಯವು ಶಾಂತಿಯು| ಭಕ್ತಿ ವಿರಕ್ತಿಯು|
ಸತ್ವಗುಣದ ನಿಜವೃತ್ತಿಗಳು||
ನಿತ್ಯವು ಕರ್ಮಾ| ಸಕ್ತಿರ ಜೋಗುಣ|
ವೃತ್ತಿಯೊಳಿರುವುದು ತಾಮಸವು ||1||
ನಿರ್ಮಲವಾಗಿಹ| ಧರ್ಮವೆ ಸತ್ವವು|
ಉಮ್ಮಳಿಸುವುದೆ ರಜೋಗುಣವು ||
ಕರ್ಮದಿ ಮುಳುಗುತ| ಧರ್ಮವನರಿಯದ|
ಹಮ್ಮೆನಿಸಿಹುದೆ ತಮೋಗುಣವು ||2||
ಅರಿವು ಸತ್ವಗುಣ| ಮರೆವು ತಮೋಗುಣ|
ಅರಿವು ಮರೆವುಗಳ ಹರಿದಾಟ||
ಅರಿಯೆ ರಜೋಗುಣ| ಮೆರೆವ ಮೂರು ಗುಣ|
ಬೆರೆಯದೆ ಇರುವುದೆ ಪರಮಾತ್ಮ ||3||
ಸಾತ್ವಿಕ ರಾಜಸ | ತಾಮಸ ಗುಣಗಳ|
ವೃತ್ತಿಯೊಳಿಲ್ಲವು ಪರಮಾತ್ಮ||
ವೃತ್ತಿಗಳೆಲ್ಲ ನಿ| ವೃತ್ತಿಯ ಮಾಡುವ|
ನಿತ್ಯ ಸಾಕ್ಷಿಕನು ಪರಮಾತ್ಮ ||4||
ಸೃಷ್ಟಿ ರಜೋಗುಣ| ಲಯವೆ ತಮೋಗುಣ|
ಸೃಷ್ಟಿಲಯಂಗಳ ನಡುವಿರುವ||
ಶ್ರೇಷ್ಠ ಸ್ಥಿತಿಯೇ| ಸತ್ವಗುಣವುನಿ|
ರ್ದಿಷ್ಟವು ತಮರಜಕಾಶ್ರಯವು ||5|
ತನುವೇ ತಾಮಸ| ಮನವೇ ರಾಜಸ|
ಅನಘಾತ್ಮನು ತಾಂ ಸಾತ್ವಿಕನು ||
ಘನತರ ಮಹಿಮನು| ಮನುಮುನಿ ವಂದ್ಯನು||
ವಿನುತನು ನರಹರಿ ಗುರುವರನು ||6||
ಗಗನದರ್ಧವು ಜ್ಞಾತೃವಾಯಿತು
ಗಗನದರ್ಧವು ಜ್ಞಾತೃವಾಯಿತು|
ಗಗನದುಳಿದರ್ಧದಲಿ ನಾಲ್ಕಾ|
ಗೊಗೆದು ವಾಯುವು ಅಗ್ನಿಯಾಪೋ ಪೃಥ್ವಿಗಳ ಸೇರಿ ||
ಸೊಗಸಿ ಮಾನಸ ಬುದ್ಧಿ ಚಿತ್ತವು|
ಮಿಗಿಲಹಂಕಾರಗಳು ಕ್ರಮದಲಿ|
ಗಗನ ಪಂಚಕವೆನಿಸಿದುವು ತಾನಂತರಿಂದ್ರಿಯವು ||1||
ಮಾರುತ ದರ್ಧವು ದಾನವಾಯಿತು|
ಮರುತದೊಳಗುಳಿದರ್ಧ ನಾಲ್ಕಾ|
ಗಿರುತ ಲಂಬರವಗ್ನಿಯಾಪೋ ಪೃಥ್ವಿಗಳ ಸೇರಿ||
ಮೆರೆವ ವ್ಯಾನಸಮಾನ ಪ್ರಾಣವು|
ನೆರೆಯ ಪಾನವು ಕ್ರಮದೊಳಾದುವು|
ಮರುತ ಪಂಚಕವೆಂದೆನಿಸಿದವು ಪಂಚಪ್ರಾಣಗಳು ||2||
ಅನಲದರ್ಧವೆ ನೇತ್ರವಾಯಿತು|
ಅನಲದುಳಿದರ್ಧವದು ನಾಲ್ಕೆಂ|
ದೆನಿಸಿಯಂಬರವಾಯುವಾಪೋ ಪೃಥ್ವಿಗಳ ಸೇರಿ|
ವಿನುತ ಶ್ರೋತ್ರವು ತ್ವಕ್ಕು ಜಿಹ್ವಾ|
ಘನದ ಘ್ರಾಣವು ಕ್ರಮದೊಳಾದುವು
ಅನಲ ಪಂಚಕವಿವುಗಳೇ ಜ್ಞಾನೇಂದ್ರಿಯಗಳೆನಿಸಿ ||3||
ಜಲದೊಳರ್ಧವೆ ರಸವು ಎನಿಸಿತು|
ಜಲದೊಳುಳಿದರ್ಧದಲಿ ನಾಲ್ಕಾ|
ಗುಳಿದ ವ್ಯೋಮವು ವಾಯುವಗ್ನಿಯು ಧರೆಗಳಂಸೇರಿ||
ಪೊಳೆವ ಶಬ್ದವು ಸ್ಪರ್ಶ ರೂಪವು |
ಸುಳಿವ ಗಂಧವು ಕ್ರಮದೊಳಾದುವು |
ತಿಳಿಯಲಿವು ಜಲಪಂಚಕವು ವಿಷಯಂಗಳೆನಿಸಿದುವು ||4||
ಧರಣಿಯರ್ಧವೆ ಗುದವು ಎನಿಸಿತು | ಧರಣಿಯುಳಿದರ್ಧವದು ನಾಲ್ಕಾ|
ಗಿರುತಲಂಬರ ವಾಯುವಗ್ನಿಯು ಜಲಗಳಂ ಸೇರಿ||
ಮೆರೆವ ವಾಕ್ಕುವುಪಾಣಿ ಪಾದವು|
ಸುರಿವ ಗುಹ್ಯವು ಕ್ರಮದೊಳಾದುವು|
ಧರೆಯ ಪಂಚ ಕವಿವುಗಳೆ ಕರ್ಮೇಂದ್ರಿಯಗಳಹವು ||5||
ಪಾರಮಾರ್ಥವ ಪಡೆದೇ
ಪಾರಮಾರ್ಥವ ಪಡೆದೇ | ಭವಸಾಗರವ|
ಪಾರುಗಾಣಿಸಿ ನಡೆದೇ ||ಪ||
ಮೂರು ಲೋಕದ ಸ್ವಾಮಿ| ತೋರದಂತರ್ಯಾಮಿ||
ಸೇರಿರ್ಪಮರ್ಮವ| ತೋರಿಸಿದ ಗುರುದೇವ ||ಅಪ||
ಶಿವನು ಯನ್ನೊಳಗಿದ್ದನು| ನಾನರಿಯದೆ|
ಭವಬಂಧದೊಳು ಬಿದ್ದೆನು ||
ಶಿವನೆ ಗುರುರೂಪಾಗಿ| ಭುವಿಗವತರಿಸುತ್ತ||
ಶಿವನ ಸ್ವರೂಪಾನು| ಭವವ ಪೇಳಲ್ಕೆನಗೆ ||1||
ಶರಿರೇಂದ್ರಿಯಗಳೆನ್ನವು| ಎನ್ನುತ ನಾನು|
ಬರಿದೇ ದುಃಖದೊಳಿರಲು||
ಶರಿರೇಂದ್ರಿಯಕೆ ಸಾಕ್ಷಿ| ಯಿರುವೆನೀ
ನೆಂದೆನಗೆ||ಅರಿವಿತ್ತು ಅಜ್ಞಾನ|
ಹರಿಸಿದ ಗುರುದೇವ ||2||
ಜಗವೆ ನಿಜವೆಂದೆನ್ನುತೆ| ಭ್ರಮೆಯೊಳಗಿದ್ದೆ|
ಜಗದೀಶ್ವರನ ಮರೆತೇ||
ಜಗವುನಶ್ವರವೆಂದು| ಜಗದಾತ್ಮ ನೀನೆಂ
ದು|| ನಿಗಮಾರ್ಥದನುಭವ|
ಬಗೆಗೊಳಿಸೆ ನರಹರಿ
ಮಾಯಾಮಯ ಕಾಯ
ಮಾಯಾಮಯ ಕಾಯ| ಮಾಯಾ ನಿರ್ಮಿತ ಮನಛಾಯಾ ||ಪ||
ಮಾಯೆಯ ನಂಬಲಿಬೇಡ|
ಮಾಯಾ ಹಂಬಲ ಬಿಡುಗಾಡ ||1||
ಕಣ್ಣನು ಸೇರಿತು ಮಾಯಾ|
ಬಣ್ಣವ ತೋರಿತು ಬಲು ಛಾಯಾ ||2||
ಅನ್ಯವನರಿವುದೆಮಾಯಾ|
ತನ್ನನು ತಿಳಿದರೆ ನಿರ್ಮಾಯಾ ||3||
ಬಹಿರಂಗವೆ ಸಾಕಾರ|
ಮಹಿ| ಮಾ ರೂಪ ನಿರಾಕಾರ ||4||
ಮಾಯಾಮಯ ಸಾಕಾರ|
ಮಾಯೋಪಾಧಿ ನಿರಾಕಾರ ||5||
ಸಗುಣಗಳೆಲ್ಲವು ಮಾಯಾ||
ಸಗುಣವನಳಿದುದೆ ನಿರ್ಮಾಯಾ ||6||
ಮೋಹಿಸುತಿರ್ಪುದು ಮಾಯಾ||
ಮೋಹವಳಿದು ನೆನೆ ನರಹರಿಯಾ
ಪಂಚವಿಂಶತಿ ಲೀಲೆಯ
ಪಂಚವಿಂಶತಿ ಲೀಲೆಯ| ತೋರುವ ಕಾಯ|
ಪಂಚಮುಖ ಶಿವನಾಲಯ ||ಪ||
ಪಂಚವಿಂಶತಿ ತತ್ವ| ಪಂಚವಿಂಶತಿ ಲೀಲೆ||
ಪಂಚಭೂತಂಗಳೇ| ಪಂಚಮುಖ ಶಿವನಿಗೆ ||ಅಪ||
ಧರೆಯ ಮುಖದೊಳಗೀತನು| ಗಂಧವ ಧರಿಸೀ |
ಉರಗ ಭೂಷಣನಾದನು|
ಹರಿವ ಜಲ ಮುಖಗಂಗಾ| ಧರನೀತ ಗುರುಲಿಂಗ|
ಧರಿಸುತ್ತ ಸುರಸವ| ಪೊರೆವ ನೀಲೋಕ ||1||
ಅಗ್ನಿಮುಖವನ್ನಾಂತನು| ಅಂಧಕಹರಣ |
ಪ್ರಜ್ಞಾನ ಸುಖವಂತನು ||
ಅಜ್ಞಾನವಳಿದುಸ| ರ್ವಜ್ಞನೆಂದೆನಿಪನು||
ಅಜ್ಞಾಚಕ್ರದಿರೂಪ| ಮಗ್ನ ನಟರಾಜನು ||2||
ಮರುತ ಮುಖವನು ತಾಳಿದಾ| ಯೋಗವ ಕೂಡಿ| ಬೆರೆತ
ಸ್ಪರ್ಶದೊಳಾಳಿದಾ||
ವರನೀಲಕಂಠ | ಸುಂದರ ಡಮರುಗ ಧರಿಸಿ |
ಚರಿಪ ನಂದಿಯನೇರಿ| ಮರವೆಮಾಯೆಯ ತೂರಿ ||3||
ವ್ಯೋಮಕೇಶನು ಯೆನ್ನಿಸೀ| ಶಬ್ದವ ಕೂಡಿ|
ವ್ಯೋಮ ಮುಖದೊಳು ರಾಜಿಸೀ|
ಸೋಮಶೇಖರನಾಗಿ| ಕಾಮಸಂಹರ ಯೋಗಿ|
ತಾಮಸಂಗಳ ನೀಗಿ| ಸಾಮರಸ್ಯಕೆ ಭಾಗಿ ||4||
ಪಂಚಭೂತವು ಕೂಡುತಾ | ಅದರೊಳು ಜ್ಞಾತೃ |
ಪಂಚಕಂಗಳು ಮೂಡುತಾ||
ಪಂಚವಾಯುಗಳಲ್ಲಿ | ಪಂಚ ಜ್ಞಾನೇಂದ್ರಿಯ|
ಪಂಚವಿಷಯವ ಪೊಂದಿ| ಪಂಚ ಕರ್ಮೇಂದ್ರಿಯ ||5||
ಪಂಚಮುಖ ಪರಶಿವನು| ಸದ್ಗುರುವರನು
ಪಂಚೀಕರಣವೊರೆದನು ||
ಪಂಚಭೂತಗಳ ಪ್ರ| ಪಂಚವಂ ಲಯಿಸಿದ|
ಸಂಚಿತಾರ್ಥದ ಪಾಪ| ಮಿಂಚಿ ನರಹರಿಯಾದ ||6||
ಗಂಧದ ಬಾಗಿಲ ಸುಂದರ ದೇವರ
ಗಂಧದ ಬಾಗಿಲ ಸುಂದರದೇವರ|
ಮಂದಿರವೆಲ್ಲಿದೆ ನೋಡಣ್ಣ ||ಪ||
ಎಂದಿಗು ಮುಚ್ಚದು ಬಂಧುರ ಬಾಗಿಲು|
ಇಂದಿಗು ಬೀಗವೆ ಇಲ್ಲಣ್ಣ ||ಅಪ||
ಒಳಗೆ ಪ್ರವೇಶಿಸಿ ನೋಡಿದರಲ್ಲಿಯೆ |
ಬೆಳಗಿವೆ ರವಿಶಶಿ ಕೋಟಿಗಳು ||
ಇಳೆಯೇಳಲ್ಲಿಯೆ ಕಳಕಳಿಸುತ್ತಿವೆ|
ನೆಲಸಿಹರಲ್ಲಿಯೆ ದೇವರ್ಕಳು ||1||
ಹೊರ ಬರಲಾಕ್ಷಣ ಬರಿ ಬಯಲಾಗಿದೆ|
ಪರಮಾದ್ವೈತದ ನಿಜಸುಖವು||
ಪರಿಪರಿ ತೋರ್ಕೆಗಳಿರದಂತಾದುವು|
ಮರೆದೆನು ಶರೀರವ ಚಿನ್ಮುಖವು ||2||
ಪಾವನ ಗರ್ಭದ ಗುಡಿಯೊಳು ಬೆಳಗುವ|
ದೇವನು ನರಹರಿ ನೋಡಣ್ಣ ||
ದೇವರ ಕಂಡರೆ ಸಾವಿಲ್ಲವು ನಮ|
ಗಾವುದು ದುಃಖವು ಇಲ್ಲಣ್ಣ ||3||
ಅರ್ಥವಿಲ್ಲದ ಓದು ವ್ಯರ್ಥಾ
ಅರ್ಥವಿಲ್ಲದ ಓದು ವ್ಯರ್ಥಾ| ಗುರು|
ಸೂತ್ರವಿಲ್ಲದ ಬೋಧೆಯಿಂದಲಪಾರ್ಥ ||ಪ||
ಕರ್ತೃವಿಲ್ಲದ ಕಾರ್ಯ ವ್ಯರ್ಥ| ಸ|
ತ್ಪಾತ್ರವರಿಯದ ದಾನದಿಂದಲನರ್ಥಾ ||ಅಪ||
ಭೋಗವಿಲ್ಲದ ಭಾಗ್ಯವೇಕೆ | ಸುವಿ|
ರಾಗವಿಲ್ಲದ ಯೋಗ ತರವಲ್ಲ ಜೋಕೆ ||
ತ್ಯಾಗವಿಲ್ಲದ ಸಿರಿಯೇಕೆ| ಭವ|
ರೋಗವಿಲ್ಲದೆ ಬ್ರಹ್ಮವಿದ್ಯೆಯು ಬೇಕೆ ||1||
ಭಾವವಿಲ್ಲದ ಭಕ್ತಿ ಬೇಡಾ| ಸಮ|
ಭಾವವಿಲ್ಲದ ಜ್ಞಾನ ನಿಜವಲ್ಲ| ನೋಡಾ||
ಹೇವವಿಲ್ಲದ ಹೆಣ್ಣು ಬೇಡಾ| ನಿಜ|
ಸೇವೆಯರಿಯದ ಧಣಿಯ ನಂಬಿದವ ಮೂಢಾ ||2||
ಧ್ಯಾನವಿಲ್ಲದ ಪೂಜೆ ಮರುಳು| ಸುವಿ|
ಧಾನವಿಲ್ಲದ ಬೋಧೆಯೊಳಗಿಲ್ಲ ಹುರುಳು||
ನಾನತ್ವವನು ಬಿಟ್ಟು ತೆರಳು| ಮತಿ|
ಹೀನ ತಿಳಿವನೆ ನರಹರಿ ಬೋಧೆ ತಿರುಳು |3||
ರೂಪಾಂತರದೊಳಿತ್ತು ಹಿರಿಯ ಮಾಯೆ
ರೂಪಾಂತರದೊಳಿತ್ತು ಹಿರಿಯ ಮಾಯೆ ||
ಪಾಪಾಂತರದೊಳಾಯ್ತು ಕಿರಿಯ ಮಾಯೆ ||ಪ||
ರೂಪಾಂತರದೊಳೀಶ್ವರನ ಮಾಯೆ|
ಪಾಪಾಂತರದೊಳಾಯ್ತು ಜೀವ ಛಾಯೆ ||ಅಪ||
ದೃಶ್ಯಕ್ಕೆ ಮೂಲವೀಶ್ವರನ ಮಾಯೆ||
ವಿಶ್ವಕ್ಕಧೀನವೀ ಜೀವ ಛಾಯೆ||
ನಶ್ವರವೆನಿಸಿದೀ ಕಾಯ ಮಾಯೆ||
ಶಾಶ್ವತ ಬ್ರಹ್ಮದೊಳಿಲ್ಲ ಮಾಯೆ ||1||
ಲೇಪವಿಲ್ಲದೆಯಿತ್ತು ಹಿರಿಯ ಮಾಯೆ|
ಲೇಪವಾಗುತಲಿತ್ತು ಕಿರಿಯ ಮಾಯೆ||
ತಾಪದೂರದೊಳಿತ್ತು ಶಿವನ ಮಾಯೆ|
ತಾಪದಿಂದಳುತಿತ್ತು ಜೀವ ಛಾಯೆ ||2||
ಸಗುಣ ಸಾಕಾರವೀಶ್ವರನ ಮಾಯೆ|
ಜಗರೂಪ ತಾಳಿತ್ತು ಬರಿಯ ಛಾಯೆ||
ಸಗುಣ ನಿರ್ಗುಣವನ್ನು ಬ್ರಹ್ಮಗೈಯೆ |
ಜಗದಾತ್ಮ ನರಹರಿ ಮಂತ್ರಕಾಯೆ ||3||
ಜಗವೆ ನಾಟಕಶಾಲೆಯಾಯ್ತು
ಜಗವೆ ನಾಟಕ ಶಾಲೆಯಾಯ್ತು| ಯುಗ|
ಯುಗದಿಂದ ನಿಲ್ಲದೆ ನಡೆಯುತ್ತ ಹೋಯ್ತು ||ಪ||
ಹಗಲೆ ನಾಟಕ ನಡೆದಿತ್ತು| ರಾ|
ತ್ರಿಗೆ ಮಾತ್ರ ಬಿಡುವಾಗಿ ವಿಶ್ರಾಂತಿಯಿತ್ತು ||ಅಪ||
ನೀಲ ಗಗನವೆ ದೊಡ್ಡ ಢೇರಾ| ಸುವಿ|
ಶಾಲ ಪೃಥ್ವಿಯೆ ಹಾಸಿಗೆಯಾಗಿ ಪೂರಾ||
ಮೇಲೆ ಹೊಳೆಯುವ ದೀಪಸೂರ್ಯ| ನಟ|
ಜಾಲ ಜೀವಿಗಳು ತಾಳಿದ ವೇಷ ತೂರ್ಯ | |1||
ಶಿವನೆ ನಾಟಕ ಸೂತ್ರಧಾರಿ| ವೈ|
ಭವ ಪೂರ್ಣವಾಯ್ತು ನಾಟಕ ಕಳೆಯೇರಿ||
ಅವಸಾನ ಕಾಲಕ್ಕೆ ಜಾರಿ| ನಾ|
ಟ್ಯವೆ ನಿಂತುಹೋಯ್ತು ಜೀವನೆ ಪಾತ್ರಧಾರಿ ||2||
ಜಾಗ್ರದಲ್ಲಿಯೆ ಬಲು ದೃಶ್ಯ| ನಟ|
ವರ್ಗ ದಣಿದಿರಲು ವಿಶ್ರಾಂತಿಯವಶ್ಯ||
ಶೀಘ್ರ ಪರದೆಯು ಬೀಳೆ ಹಾಸ್ಯ ಲಘು
ದೀರ್ಘ ಸ್ವಪ್ನವ ಕಂಡು ಸುಪ್ತಿಗೆವಶ್ಯ ||3||
ಅಂಕವೈದುಳ್ಳು ನಾಟಕವು| ಮೊದ|
ಲಂಕ ಜನನವು ಬಾಲ್ಯ ಯೌವನ ಮುಖವು||
ಸಂಕಟಾತ್ಮಕ ವಾರ್ಧಿಕವು | ಕೊನೆ|
ಯಂಕವಾಯಿತು ಮರಣ ನಿಂತು ನಾಟಕವು ||4||
ಎಲ್ಲರಾಡುವರು ನೋಡುವರು| ಇದ|
ರಲ್ಲಿ ಭೇದವೆಯಿಲ್ಲ ಹುಟ್ಟಿ ಸಾಯುವರು||
ಬಲ್ಲವರು ಕಡೆಗಾಗುತಿಹರು| ಶಿವ|
ನಲ್ಲಿ ಸೇರಲು ನರಹರಿಯ ಬೇಡುವರು ||5||
ಪಂಚೀಕರಣದೊಳು ಪ್ರಪಂಚವಾಗಿಹುದ
ಪಂಚೀಕರಣದೊಳು ಪ್ರಪಂಚವಾಗಿಹುದ | ನಿ |
ರ್ವಂಚನೆಯೊಳರುಹಿದ ಗುರುವರನು ||ಪ||
ಪಂಚಭೂತವು ಹಂಚಿ ಹಂಚಿ ಬೆರಸಲಿವು|
ಪಂಚವಿಂಶತಿ ತತ್ವವೆನಿಸಿದುವು ||ಅಪ||
ಜ್ಞಾತೃಮನ ಬುದ್ಧಿಚಿತ್ತಾಹಂ ಕೃತಿಗಳೈದು |
ಜ್ಞಾತೃಪಂಚಕವಾಗಸಾಂಶಂಗಳು ||
ಜ್ಞಾತೃವಂತಃಕರಣ | ವೃತ್ತಿಯೊಳುಮೈದೋರಿ|
ನಿತ್ಯ ಪ್ರವೃತ್ತಿ ಮುಖವಾದವುಗಳು ||1||
ವ್ಯಾನವು ದಾನ ಸಮಾನ ಪ್ರಾಣಾಪಾನ|
ಪ್ರಾಣಪಂಚಕ ವಾಯು ವಂಶಂಗಳು||
ತ್ರಾಣದಿಂದೀ ಸ್ಥೂಲನಾನಕರ್ಮಂಗಳ|
ತಾನೆ ನಡೆಸುತಲಿ ಬಾಳಿದುದೀಗಲು ||2||
ಶ್ರೋತ್ರತ್ವಗಿಂದ್ರಿಯ ನೇತ್ರ ಜಿಹ್ವಾಘ್ರಾಣ|
ಮಾತ್ರ ಜ್ಞಾನೇಂದ್ರಿಯವಗ್ನಿಯಂಶ||
ಸೂತ್ರವಾಗಿಹವರಿವಿತ್ತು ಜಾಗ್ರದಿ ದೇಹ|
ವೃತ್ತಿಗಾಶ್ರಯವಾಗಿ ಬೆಳಗುವುವು ||3||
ಶಬ್ದ ಸ್ಪರ್ಶವು ರೂಪ ರಸಗಂಧ ವಿಷಯವು|
ಲಬ್ಧವಾಗಲು ಜಲದಂಶಂಗಳು||
ಹಬ್ಬಿ ಜನ್ಮಗಳ ಪ್ರಾರಬ್ಧರೆನ್ನಿಸಿ ಬಂದು|
ಉಬ್ಬಿದಂಬುಧಿಯಂತೆ ಮುಳುಗಿಪವು ||4||
ವಾಕ್ಕುಪಾಣಿಯು ಪಾದಗುದಗುಹ್ಯವೆಂಬಿವು|
ಅಕ್ಕು ಕರ್ಮೇಂದ್ರಿಯ ಧರೆಯಂಶವು||
ಸೊಕ್ಕಿ ಕರ್ಮದಿ ಜನ್ಮ ಮರಣ ಕಾರಣವಿವು|
ಸಿಕ್ಕಿ ನರಹರಿಗೆ ಪಾವನವಾದುವು ||5||
ಜ್ಞಾತೃವ್ಯಾನವ ಸೇರಿ
ಜ್ಞಾತೃವ್ಯಾನವ ಸೇರಿ| ಶ್ರೋತ್ರದಲ್ಲಿಯೇ ಸಾರಿ|
ಅರ್ಥವಾಯಿತು ಶಬ್ದವದು ತೋರಿ ||ಪ||
ಮತ್ತೆ ಶಬ್ದಕೆ ದಾರಿ| ಯಿತ್ತ ವಾಕ್ಕಿದು ಜಾರಿ|
ಸೂತ್ರದಾಕಾಶ ಸೇರಿತು ಹಾರಿ ||ಅ|ಪ||
ಮನವ ಸೇರುತ ಜ್ಞಾತೃ | ಘನವುದಾನದಿ ನಿಂತು|
ಗುಣಿಸಿ ತ್ವಗೀಂದ್ರಿಯವನ್ನಾಂತು||
ನೆನೆದು ಸ್ಪರ್ಶವ ಪೊಂದಿ| ವಿನುತ ಪಾಣಿಯೊಳಾ
ಕ್ಷಣದಿ ವಾಯುವನೈದಿ ಲಯವಾಯ್ತು ||1||
ಬುದ್ಧಿಯೊಡನೆ ಜ್ಞಾತೃ| ವಿದ್ದುಸಮಾನ ಪ್ರ |
ಸಿದ್ಧವಾಯುವ ಸೇರಿ ನೇತ್ರವನು||
ಹೊದ್ದಿ ರೂಪವನರಿದಿದ್ದ ಪಾದದಿ ನಡೆದು|
ಶುದ್ಧವಾಗುತ ಸೇರಿತಗ್ನಿಯನು ||2||
ಚಿತ್ತದೊಡನೆ ಸೇರಿ ಜ್ಞಾತೃ ಪ್ರಾಣವ ಕೂಡಿ|
ಮತ್ತೆ ಜಿಹ್ವೆಯ ತೂರಿ ರಸವನಾಂತು||
ಅತ್ತಗುಹ್ಯದಿರಸ ನಿವೃತ್ತಿಯಗೈದು |
ಮತ್ತೆಯಪ್ಪುವಿನಲ್ಲೆ ಲಯವಾಯಿತು ||3||
ಹಮ್ಮು ಸೇರುತ ಜ್ಞಾತೃ| ನಿರ್ಮಲಾ ಪಾನದೊಳು|
ರಮ್ಯ ಘ್ರಾಣದಿ ಗಂಧವನ್ನರಿತು||
ದುರ್ಮಲವಂ ಗುದದಿಂದ ವಿಸರ್ಜಿಸಿ |
ಸೌಮ್ಯದಿಂಧರೆಯಲ್ಲೆ ಲಯವಾಯಿತು ||4||
ಪಂಚಭೂತಗಳಿಂದ| ಹಂಚಿಬಂದೀಕರಣ|
ಮುಂಚಿನಂದದಿ ಭೂತದೊಳು ಲಯವು||
ಪಂಚಭೂತಂಗಳು | ಮಿಂಚಿ ಪರಬ್ರಹ್ಮದಿ|
ಹೊಂಚಿ ನರಹರಿಯಲ್ಲೆ ಲಯವಾದವು ||5||
ಪಂಚತನ್ಮಾತ್ರೆಗಳಿಂದಾ
ಪಂಚತನ್ಮಾತ್ರೆಗಳಿಂದಾ| ಈ|
ಪಂಚಭೂತಂಗಳಾದುದು ಬಲು ಚೆಂದಾ ||ಪ||
ಪಂಚವಿಂಶತಿ ತತ್ವದಿಂದಾ| ಶಿವ|
ಪಂಚವಿಂಶತಿ ಲೀಲೆಗಳು ಸಮವೆಂದಾ ||ಅ|ಪ||
ಭೂತ ಪಂಚಕದಿಂದ ಜಗವು| ಸಂ|
ಭೂತವಾಗಿಹುದು ಜೀವಿಗಳಿಂಗೆ ಸೊಗವು||
ಚೇತನಾ ಚೇತನಗಳಿರವು| ಸಂ|
ಜಾತವಾದುದು ನಾನಾ ದೇಹ ವಿಸ್ತರವು ||1||
ಐದು ಜ್ಞಾನೇಂದ್ರಿಯಗಳಿಗೆ| ಬಲ|
ವಾದ ಭೂತಂಗಳೈದಿರುತಿರಲೊಳಗೆ||
ಐದು ವಿಷಯಂಗಳರಿವಿಗೆ| ಬಲ|
ವೈದಿತನ್ಮಾತ್ರೆಗಳು ಕಾರಣವಾಗೆ ||2||
ಪಂಚಮುಖಗಳು ಪರಶಿವಂಗೆ | ಈ|
ಪಂಚಭೂತಗಳೆಂಬುದುನು ತಿಳಿದವನು ||
ಮಿಂಚಿ ಬಾರನು ಜನ್ಮಗಳಿಗೆ | ನಿ|
ಶ್ಚಂಚಲ ಜ್ಞಾನ ನರಹರಿಯೀಯೆ ತನಗೆ
ಗುಣವಂತನೇ ಗುರುಭಕ್ತ
ಗುಣವಂತನೇ ಗುರುಭಕ್ತ| ದು|
ರ್ಗುಣ ನೀಗಿ ಸದ್ಗುಣ ಪಡೆದಾತ ಶಕ್ತ ||ಪ||
ಹಣವಂತ ಸದ್ಗುಣಯುಕ್ತ | ಎಂ|
ದೆನಿಸಿಕೊಂಡರೆ ಸಾಕು ಅವನೀಗ ಮುಕ್ತ ||ಅ|ಪ||
ಭಾಗ್ಯವಂತರ ಕಂಡು ಮರುಗೀ| ನಿ|
ರ್ಭಾಗ್ಯ ತಾನೆಂದುಕೊಳ್ಳದೆ ಮನ ಕರಗಿ||
ಯೋಗ್ಯರಾದವರ ಕಂಡೆರಗಿ| ವೈ|
ರಾಗ್ಯಶೀಲರ ಸೇವೆ ಮಾಡುತಿರಲಾಗಿ ||1||
ಕಾಮ ಕ್ರೋಧಂಗಳನಳಿಸೀ| ನಿ|
ಷ್ಕಾಮ ಶಾಂತಿಗಳನ್ನು ಮನದಲ್ಲಿ ಗಳಿಸೀ||
ಸೌಮ್ಯ ಭಾವದೊಳು ಕಂಗೊಳಿಸೀ| ದು|
ರ್ದಮ್ಯ ಲೋಭವ ಬಿಟ್ಟು ತ್ಯಾಗಿಯೆಂದೆನಿಸೀ ||2||
ಮದ ಮತ್ಸರಂಗಳ ನೀಗಿ| ನಿ|
ರ್ಮದ ನಿರ್ಮಾತ್ಸರ್ಯ ಭಾವವು ನೆಲೆಯಾಗಿ||
ಸದಯನಾದವ ರಾಜಯೋಗಿ| ಸದು
ಹೃದಯವುಳ್ಳವ ನರಹರಿ ಕೃಪೆಯಾಗಿ ||3||
ಶರೀರವೆನ್ನುವ ಸೆರೆಮನೆಯೊಳಗೆ
ಶರೀರವೆನ್ನುವ ಸೆರೆಮನೆಯೊಳಗೆ |
ಸೆರೆಯು ತಪ್ಪದು ಸಾಯುವವರೆಗೆ ||ಪ||
ನಿರುತ ದುಃಖವು ಸೆರೆಯಾಳುಗಳಿಗೆ|
ತೆರಪು ಇಲ್ಲದ ಶಿಕ್ಷೆ ಜೀವರಿಗೆ ||ಅಪ||
ಚಿತ್ರಹಿಂಸೆಯ ಸೆರೆಮನೆ ದೇಹ|
ಚಿತ್ರಗುಪ್ತರ ಕಾವಲು ಗೇಹ||
ಚಿತ್ತಪಲ್ಲಟವಾಗಲು ಮೋಹ|
ಮತ್ತೆ ಮತ್ತೆ ವಿಚಿತ್ರದ ದಾಹ ||1||
ರೋಗರುಜಿನಂಗಳೆನ್ನುವ ಶಿಕ್ಷೆ|
ರಾಗದ್ವೇಷಂಗಳುಪಟಳ ಶಿಕ್ಷೆ||
ನೀಗಲಾಗದು ನಷ್ಟದ ಶಿಕ್ಷೆ|
ಸಾಗಲಾರದು ಕಷ್ಟದ ಶಿಕ್ಷೆ ||2||
ಮೊದಲ ಶಿಕ್ಷೆಯು ಜೀವರ ಜನನಾ|
ತುದಿಯ ಶಿಕ್ಷೆಯು ಜೀವ ರಮರಣಾ||
ತುದಿಗೆ ಮೊದಲಿಗೆ ಶಿಕ್ಷೆಯ ಸದನಾ|
ಬದುಕು ಬಾಳುವೆ ದುಃಖದ ಕಥನಾ ||3||
ಸತಿಯ ಮೋಹದ ಬೆಂಕಿಗೆ ಬಿದ್ದು|
ಸುತರ ಹಂಬಲ ಬಲೆಗೆ ಸಿಕ್ಕಿದ್ದು|
ಹಿತರ ಕಾಣದೆ ಎಲ್ಲವನೊದ್ದು |
ಗತಿಯು ನರಹರಿ ಎಂಬುದೆ ಮದ್ದು ||4||
ಶ್ರೀ ಗುರುಬೋಧೆ
ಶ್ರೀಗುರುಬೋಧೆ ಸ| ರಾಗದಿ ಕೇಳ್ದವ|
ಈಗಲೆ ಮುಕ್ತಿಯಪಡೆಯುವನು ||ಪ||
ಆಗಮ ನಿಗಮ ಸ| ಮಾಗಮ ಪಡೆದವ|
ಯೋಗಿಗಳರಸನೆ ಆಗುವನು ||ಅಪ||
ಅಂತಃಕರಣವು ಶಿವ ಚೈತನ್ಯವ|
ನಾಂತರೆ ಸ್ವಪ್ನವು ತೋರುವುದು ||
ಅಂತರ್ಬಾಹ್ಯದಿ ಶಿವ ಚೈತನ್ಯವು |
ನಿಂತಿರೆ ಜಾಗ್ರವದೆನಿಸುವುದು ||1||
ಅಂತರಂಗದೊಳು ಅಂತರಾತ್ಮನೊಳು|
ಅಂತರ್ಬಾಹ್ಯದ ಕರಣಗಳು||
ಶಾಂತಿಯಾಂತುವಿಶ್ರಾಂತಿಯ ಪೊಂದಲು|
ಸ್ವಾಂತದಿಸುಪ್ತಿಯುತೋರುವುದು ||2||
ಮೂರವಸ್ಥೆಗಳ ಸೇರುತ ಏಕಾ|
ಕಾರದೊಳಿರುವ ಪರಮಹಂಸಾ||
ತೋರಿಯು ತೋರದೆ ಧಾರಿಣಿ ಪಥದೊಳು |
ಸಾರುವ ನರಹರಿ ಮಂತ್ರವಶಾ ||3||
ಪಂಚ ಸ್ಥಾನದಿ ಪಂಚಭೂತಗಳ
ಪಂಚ ಸ್ಥಾನದಿ ಪಂಚ ಭೂತಗಳ|
ಹಂಚಿಟ್ಟನು ಸದ್ಗುರು ದೇವಾ ||ಪ||
ಪಂಚೇಂದ್ರಿಯಗಳೆ ಪಂಚ ತತ್ವಗಳ |
ಹೊಂಚಿರುವಂದವನರುಹಿಸುವಾ ||ಅಪ||
ಘ್ರಾಣದೊಳಗೆ ಆಘ್ರಾಣಿಸಿ ಗಂಧವ|
ಸ್ಥಾನವು ಪೃಥ್ವಿಗಿ ದೇ ಎಂದಾ||
ತಾನೆ ನಿರಂತರ ಮೌನದಿಚರಿಸುವ| ಜ್ಞಾನಿಗಳಿಗೆ ಹಂಸನೆ ಎಂದಾ ||1||
ರಸನೆಯೊಳಗೆ ಷ| ಡ್ರಸಗಳನುಣ್ಣುತ|
ಒಸೆದೀ ಸ್ಥಲವೇ ಜಲವೆಂದಾ||
ಸಸಿನಸುಮಂತ್ರವನು ಸುರುತ ಕೊನೆಯೊಳು|
ಎಸೆದನು ಸೋಹಂಫಲವೆಂದಾ ||2||
ಚಕ್ಷುವಿನೊಳು ತಾನೀಕ್ಷಿಸಿ ರೂಪವ
ರಕ್ಷಿಸುವಗ್ನಿಗೆ ಸ್ಥಲವೆಂದಾ||
ಲಕ್ಷಿಸಿ ಜಾಗ್ರವ| ಅಕ್ಷಿಯು ಮುಗಿಯಲು|
ತಕ್ಷಣ ಸುಪ್ತಿಯು ಬಹುದೆಂದಾ ||3||
ತ್ವಗಿಂದ್ರಿಯದಿತಾಂ| ತಗಲಿದ ಸ್ಪರ್ಶವ|
ಸೊಗಸುತ ವಾಯುಸ್ಥಲವೆಂದಾ||
ಅಗಣಿತ ಬ್ರಹ್ಮವ| ನಗಲದೆ ಯೋಗದಿ|
ಬಿಗಿದಿರಲೈಕ್ಯವೆ ಫಲವೆಂದಾ 4||
ಶ್ರೋತ್ರದಿ ಶಬ್ದವ | ನರ್ಥಿಯೊಳರಿಯುತ|
ಸೂತ್ರವು ಗಗನ ಸ್ಥಲವೆಂದಾ||
ಪಾತ್ರವು ಶ್ರವಣ ಪ| ವಿತ್ರ ಸುಬೋಧೆಗೆ|
ಸತ್ಯವು ನರಹರಿ ತಾನೆಂದಾ ||5||
ಮೂವರು ಮೂರ್ತಿಗಳೀ ಪುರವಾ
ಮೂವರು ಮೂರ್ತಿಗಳೀ ಪುರವಾ|
ಕಾವಲು ಮಾಳ್ಪುದುನರಿತಿರುವಾ ||ಪ||
ಭಾವದಿ ಸಂಶಯ ಹರಿದಿರುವಾ|
ಕೇವಲ ಜ್ಞಾನಿಯೆ ಪರದೈವಾ ||ಪ||
ಕಾಮನ ಪಿತನಿಹ ಜಾಗ್ರದೊಳು|
ಕಾಮನ ವೈರಿಸು ಷುಪ್ತಿಯೊಳು|
ತಾಮರಸೋದ್ಭವ ಸ್ವಪ್ನದೊಳು|
ನೇಮದಿ ಕಾಯ್ವರುಪಗಲಿರುಳು ||1||
ಮಂತ್ರದ ಸೃಷ್ಟಿಯು ಬ್ರಹ್ಮನಿಗೆ|
ಮಂತ್ರದ ರಕ್ಷಣೆ ವಿಷ್ಣುವಿಗೆ||
ಮಂತ್ರದ ಲಯವಾರುದ್ರನಿಗೆ|
ಸಂತತ ಕಾರ್ಯವು ಮೂವರಿಗೆ ||2||
ಕರಣ ಪ್ರವೃತ್ತಿಯೆ ಬ್ರಹ್ಮಗುಣ|
ಕರಣದರಕ್ಷಕವಿಷ್ಣು ಕಣಾ||
ಕರಣದ ಲಯವೇ ರುದ್ರ ಗುಣಾ|
ನರಹರಿಯೊಳು ಮೂವರ ಕಾಣಾ ||3||
ಶಿವಧರ್ಮವರಿಯಲು
ಶಿವ ಧರ್ಮವರಿಯಲು| ಗುರು ಧರ್ಮ ಮೊದಲು||
ಶಿವ ಮಂತ್ರವದು ತಾನೆ ಗುರು ವಶವಲ್ಲವೆ ||ಪ||
ಗುರು ಲಿಂಗ ಜಂಗಮ| ತೀರ್ಥ ಪ್ರಸಾದವು|
ವರವೀಭೂತಿ ರುದ್ರಾಕ್ಷ ಮಂತ್ರಗಳು ||1||
ಅಷ್ಟಾವರಣಗಳ | ನಿಷ್ಠೆಯೊಳಿರುವವ|
ಶ್ರೇಷ್ಠ ಶಿವಭಕ್ತನು| ಸೃಷ್ಟಿಯೊಳೆಲ್ಲಾ ||2||
ಗುರುವಿಂದಲಷ್ಟಾ| ವರಣಂಗಳಾದವು||
ಸರಸ ಸುಬೋಧೆಯೇ | ಮೆರೆವಷ್ಟಾವರಣ ||3||
ನುಡಿಬ್ರಹ್ಮ ಗುರುವು| ನಡೆಬ್ರಹ್ಮ ಲಿಂಗವು|
ನಡೆನುಡಿಯೆರಡರ| ನಡುವೆ ಜಂಗಮವು ||4||
ನಡೆಸು ಪ್ರಸಾದವು| ನುಡಿಪಾದ ತೀರ್ಥವು||
ನಡೆನುಡಿಯೊಂದಾದ| ಕಡೆ ಜ್ಞಾನ ರುದ್ರಾಕ್ಷಿ ||5||
ಶ್ರವಣ ವೀಭೂತಿಯು| ಮನನವೆ ಮಂತ್ರವು||
ಶಿವನಿಧಿ ಧ್ಯಾಸವೇ| ಶಿವಪೂಜೆಯಲ್ಲವೆ ||6||
ಅಷ್ಟಾವರಣಗಳ ಸ್ಪಷ್ಟವಾಗಿಯೆತಿಳಿದು||
ನಿಷ್ಠೆಯ ನರಹರಿಯೊ| ಳಿಟ್ಟವರೆ ಮುಕ್ತರು ||7||
ಅಭಯವ ಕೊಡು ಯೆನಗೆ
ಅಭಯವ ಕೊಡು ಯೆನಗೆ| ಲೋಕಕೆ|
ಪ್ರಭು ನೀನೇ ಕೊನೆಗೆ ||ಪ||
ಉಭಯವನಳಿಯುವ| ಶುಭ ಸುಜ್ಞಾನವ|
ಅಭವನೆ ಕೊಡು| ಚಿ| ತ್ಪ್ರಭೆಯೊಳು ಸುಳಿಯುವ ||ಅಪ||
ಯಮ ಯೋಗದ ಬಲದೀ | ಯಮ ಭಯ| ಕ್ರಮಿಸುವ ನಿಶ್ಚಯದೀ||
ಸಮತೆಯ ಸಾಧಿಸಿ| ಸುಮನಸನೆನ್ನಿಸಿ||
ಭ್ರಮೆಯನು ಭೇದಿಸಿ| ರಮಿಸುವೆ ಸುಖಿಸೀ ||1||
ಸುಸಮಾಧಿಯನಾಂತು| ನಿನ್ನನು| ಬೆಸೆಯುತ ನಾ ನಿಂತು||
ವಿಷಯಗಳೆನ್ನುವ| ಹೆಸರನ್ನಳಿಸುವ|
ಅಸಮಾನತೆ ಸಾ| ಧಿಸಿ ಸಂಭ್ರಮಿಸುವ 2||
ಹೊರಗಿನ ವ್ಯಾಪಾರ| ಏನೆಂ|ದರಿಯದವೊಲು ಪೂರಾ||
ಬೆರೆಯುತ ನಿನ್ನೊಳು| ಮರೆಯುತಲನ್ಯವ|
ಅರಿದೇಕತ್ವವ| ನರಹರಿಯೆನ್ನುವ ||3||
ಅಷ್ಟಾಂಗ ಯೋಗದ
ಅಷ್ಟಾಂಗ ಯೋಗದ| ನಿಷ್ಠಾ ಗರಿಷ್ಠರು|
ಸ್ಪಷ್ಟ ಮಾಡಿರುವರ್ಥ ತಿಳಿಯಣ್ಣಾ |ಪ||
ದುಷ್ಟ ಗುಣಗಳನೆಲ್ಲ| ನಷ್ಟ ಮಾಡುತ ಸರ್ವ|
ಶ್ರೇಷ್ಠ ಸದ್ಗುಣಗಳ ಪಡೆಯಣ್ಣಾ ||ಅಪ||
ಮಂತ್ರವೆ ಯಮಯೋಗ| ಮಂತ್ರ ನಿಯಮ ಯೋಗ|
ಮಂತ್ರ ಆಸನ ಯೋಗ ಕಾಣಣ್ಣಾ||
ಮಂತ್ರ ಪ್ರಾಣಾಯಾಮ| ಮಂತ್ರ ಪ್ರತ್ಯಾಹಾರ||
ಮಂತ್ರ ಧ್ಯಾನದ ಯೋಗ ಕೇಳಣ್ಣಾ ||1||
ಮಂತ್ರ ಧಾರಣ ಯೋಗ| ಮಂತ್ರ ಸಮಾಧಿಯು |
ತಂತ್ರವ ಗುರುವಿಂದ ತಿಳಿಯಣ್ಣಾ||
ಮಂತ್ರಾರ್ಥವಷ್ಟಾಂಗ| ವೆಂತೆನ್ನುವರ್ಥವ|
ಚಿಂತನದೊಳು ನೀನೆ ತಿಳಿಯಣ್ಣಾ ||2||
ಅಷ್ಟಾಂಗ ಯೋಗಸ| ಮಷ್ಟಿಯಾಗಲು ಮಂತ್ರ|
ಸೃಷ್ಟಿಯಾಗುವದೆಂದು ತಿಳಿಯಣ್ಣಾ||
ಕಷ್ಟವಿಲ್ಲದೆ ನುಡಿದು | ಶ್ರೇಷ್ಠ ಮಂತ್ರದ ಯೋಗ|
ದೃಷ್ಟಿಯಿಂ ನರಹರಿಯಸೇರಣ್ಣಾ ||3||
ತೂಗುಬಾರಮ್ಮ ಈ ತೊಟ್ಟಿಲು
ತೂಗು ಬಾರಮ್ಮ| ಈ ತೊಟ್ಟಿಲು| ತೂಗು ಬಾರಮ್ಮ ||ಪ||
ತೂಗಿದವರಿಗೆ ಮುಕ್ತಿ| ಯಾಗಿ ಬಿಡುತಿಹುದಮ್ಮ ||ಅಪ||
ಎಲ್ಲರಿಗೆ ನಡುವಿದ್ದು| ಎಲ್ಲರರಿಯದ ಬಾಲ||
ಬಲ್ಲವರೊಳಾಡುತ್ತ| ಸೊಲ್ಲೆನಿಸಿದ ಬಾಲ ||1||
ಇರವೆನ್ನಿಸಿದ ಬಾಲ| ಅರಿವೆನ್ನಿಸಿದ ಬಾಲ||
ಮರವೆಯಿಲ್ಲದ ಬಾಲ| ಪರಬ್ರಹ್ಮ ನೀ ಬಾಲ ||2||
ಶ್ರವಣವೆನ್ನುವ ಪಾಲ| ಸವಿದು ಬೆಳೆದಿಹ ಬಾಲ||
ಸುವಿರಾಗ ಸದ್ಭಾವ| ಸುವಿವೇಕವೀ ಬಾಲ ||3||
ಹುಟ್ಟಿದಾಕ್ಷಣ ನುಡಿಯ| ಥಟ್ಟನಾಡುವ ಬಾಲ||
ಕಟ್ಟಕಡೆಯಲಿ ಮೋಕ್ಷ| ಕೊಟ್ಟು ಬಿಡುವ ಬಾಲ ||4||
ಎಲ್ಲ ಲೋಕದ ಸುದ್ದಿ| ಯಿಲ್ಲೆ ತಿಳಿಯುವ ಬಾಲ||
ಬಲ್ಲವರ ಒಡನಾಟ| ದಲ್ಲೆ ಬೆಳೆಯುವ ಬಾಲ ||5||
ಗುರುಪಾದ ಕೃಪೆಯಿಂದ| ದೊರಕಿದಂಥಾ ಬಾಲ|
ಗುರು ಬೋಧಾಮೃತದಿಂದ| ಭರಿತನಾಗಿಹ ಬಾಲ ||6||
ಕಾಲಕರ್ಮವ ಮೀರಿ| ಲೀಲೆಯಾಡುವ ಬಾಲ||
ಏಳುಕೋಟಿಯ ಮಂತ್ರ| ಮೂಲವಾಗಿಹ ಬಾಲ ||7||
ಈರೇಳು ಲೋಕಕ್ಕಾ| ಧಾರವಾಗಿಹ ಬಾಲ||
ಮೂರವಸ್ಥೆಗೆ ಮೂಲ| ಕಾರಣನು ಈಬಾಲ ||8||
ಎತ್ತಿಕೊಂಡವರೆಲ್ಲ| ಮತ್ತೆ ಇಳಿಸದ ಬಾಲ||
ಕರ್ತ ನರಹರಿರೂಪ| ವೆತ್ತಿ ಬಂದಿಹಬಾಲ ||9||
ಜೋಜೋ ಜೋಜೋ
ಜೋಜೋ ಜೋಜೋ ಜೋಜೋ ಎಂದು|
ಜೋಗುಳವನು ಹಾಡಿ ತೂಗುವೆ| ಬೇಗನೆ ಮಲಗಮ್ಮ ||ಪ||
ಶರೀರವೆಂಬ ಅರಮನೆಯಲ್ಲಿ|
ಚರಿಸುವ ವರ ಹಂಸ| ನಿನಗೆ| ವರತೂಲಿಕಾತಲ್ಪ ||1||
ಬೆಳಕನು ನೋಡು| ನಲಿನಲಿದಾಡು|
ಅಳುವುದು ಯಾಕಮ್ಮ | ಸುಮ್ಮನೆ ಮಲಗಿರಬೇಕಮ್ಮಾ ||2||
ಚಿನುಮಯವಾದ| ಪ್ರಣವ ಸುನಾದದ|
ಘನ ಜೋಗುಳ ನಿನಗೆ| ಕೇಳುತ ತನ್ಮಯಳಾಗಮ್ಮ ||3||
ಮುತ್ತಿನಹಾರ| ಕತ್ತಿನೊಳಿಹುದು|
ಕಸ್ತೂರಿಯ ತಿಲಕ| ಹಣೆಯಲಿ| ಬಿತ್ತರಿಸುವುದಮ್ಮಾ ||4||
ಅಘಹರ ನರಹರಿ| ಮಗಳಾಗಿರುವೆ|
ಬಗಳಾಂಬೆಯು ನೀನೆ| ನಿಗಮ| ಆಗಮ ಪೂಜಿತಳೆ || 5||
ಸಪ್ತ ಚಕ್ರಗಳನ್ನು ಶೋಧಿಸು
ಸಪ್ತ ಚಕ್ರಗಳನ್ನು ಶೋಧಿಸು| ನಿ |
ರ್ಲಿಪ್ತ ಬ್ರಹ್ಮವನಲ್ಲಿ ಸಾಧಿಸು|
ಗುಪ್ತನಾದವನು ಸಂಪಾದಿಸು| ಸಂ|
ತೃಪ್ತಿಯನಲ್ಲಿಯೆ ಸಂಧಿಸು ಅಪ||
ಗುದದಲ್ಲಿ ಮೂಲಾಧಾರವು| ಧರೆ|
ಗಧಿಕ ಗಣೇಶ್ವರನಿರುತವು|
ಪಡೆದಾರು ನೂರರ ಜಪವನು| ಸಂ|
ಮುದದಿಂದ ಸ್ವೀಕರಿಸಿರ್ಪನು ||1||
ಸ್ವಾಧಿಷ್ಠಾನವು ಗುಹ್ಯವೆಂಬುದು | ಜಗ|
ದಾದಿ ಬ್ರಹ್ಮನ ಸೃಷ್ಟಿಗಾದುದು||
ಹೋದುವಾರ್ಸಾವಿರ ಜಪಗಳು| ಜಲ|
ವಾದಂಥ ತತ್ವವಿದಾಗಲು 2||
ಮಣಿಪೂರಕವು ನಾಭಿಯಲ್ಲಿದೆ| ರ
ಕ್ಷಣಗೈವ ವಿಷ್ಣುವಿಗಾಗಿದೆ|
ನೆನೆವಾರು ಸಾವಿರ ಜಪವನು |ಅ|
ರ್ಪಣ ಮಾಡಲಗ್ನಿತತ್ವೇಶನು ||3||
ಹೃದಯವನಾ ಹತಚಕ್ರವು| ಲಯ|
ಸದನರುದ್ರನಿ| ಗಿದು ಯುಕ್ತವು||
ಪಡೆದಾರು ಸಾವಿರ ಜಪಗಳು| ಮರು|
ತದ ತತ್ವವೆಂಬುರು ಮುನಿಗಳು ||4||
ಕಂಠವಿ ಶುದ್ಧಿಯ ಚಕ್ರವು |ಶಿವ|
ಭಂಟ ಜೀವನಿಗಿದು ಸ್ಥಾನವು||
ಉಂಟಿಲ್ಲಿ ಸಾವಿರ ಜಪಗಳು|
ಅಂಟಿತ್ತು ಗಗನದೊಳೀಗಲು ||5||
ಭ್ರೂಮಧ್ಯವಾಜ್ಞಾ ಚಕ್ರವು| ಗುರು|
ಸ್ವಾಮಿ ನಿಂತನು ನಿತ್ಯ ಸೌಖ್ಯವು||
ನೇಮಸಾವಿರ ಜಪ ಸಲ್ಲಲು| ಮನ|
ಧಾಮ| ಚಂದ್ರನ ತತ್ವ ನಿಲ್ಲಲು ||6||
ಬ್ರಹ್ಮರಂಧ್ರದಿ ಸಹಸ್ರಾರವು| ಗುರು|
ಬ್ರಹ್ಮ ನರಹರಿ ಸಂಪೂರ್ಣವು||
ಧರ್ಮ ಸಾಸಿರ ಜಪವಿಚಾರವು| ಮತಿ|
ರಮ್ಯಸೂರ್ಯ ಸತತ್ವಸಾರವು ||7||
ಏನು ಸೋಜಿಗವಯ್ಯ
ಏನು ಸೋಜಿಗವಯ್ಯ| ನೀನು ಪೇಳಿದುಪಾಯ|
ಸ್ವಾನುಭಾವ ಪ್ರಿಯ ಮಹನೀಯಾ ||ಪ||
ಮೌನವನು ಮಾಡೆಂದೆ| ಧ್ಯಾನದೊಳು ಕೂಡೆಂದೆ|
ಆನಂದಮಯ ಜ್ಞಾನ ಪಡೆಯೆಂದೇ ||ಅ|ಪ||
ದುರ್ಗುಣವ ಬಿಡು ಎಂದೆ| ಸದ್ಗುಣವ ಪಡೆಯೆಂದೆ|
ನಿರ್ಗುಣವೆ ಸದ್ಗುಣದ ಕೊನೆಯೆಂದೆ||
ಉಗ್ರವನು ನೀಗೆಂದೆ| ಶೀಘ್ರದೊಳು ಸಾಗೆಂದೆ|
ನಿಗ್ರಹದೊಳಿಂದ್ರಿಯವ| ನಿಲಿಸೆಂದೆ ||1||
ತನುವೆ ಸಾಕಾರವು| ತನುವಿಗಾಶ್ರಯವಾದ|
ಮನನಿರಾಕಾರವು ತಿಳಿಯೆಂದೆ||
ಮನಸ ಗುಣವಾಗಿತ್ತು| ಜನನ ಮರಣಕೆ ಬಿತ್ತು|
ಅನಘಾತ್ಮ ನಿರ್ಗುಣನು ನೋಡೆಂದ ||2||
ತೋರುವಿಂದ್ರಿಯ ಜಾಲ| ದ್ವಾರಮಾನಸ ಮೂಲ||
ಬೇರೆ ಬೇರೆನೆ ಸಗುಣಗಣ ಶೀಲ||
ಭೂರಿ ಬ್ರಹ್ಮವು ಸಗುಣ| ಹಾರಿತಾ ನಿರ್ಗುಣ|
ತೋರಿತೋರದ ನರಹರಿ ಜ್ಞಾನ ||3||
ತಾನೇ ಕಟ್ಟಿದ ಗುಡಿಯೊಳಗಿಟ್ಟನು
ತಾನೇ ಕಟ್ಟಿದ ಗುಡಿಯೊಳಗಿಟ್ಟನು |
ತಾನೇ ಮಾಡಿದ ದೇವರನು ||ಪ||
ತಾನೇ ಪೂಜಿಸಿ ನಮಿಸುತ ವರವನು|
ಮಾನವ ಪಡೆವುದು ನಿಜವೇನು ||ಅಪ||
ದೇವರು ತಾನಾಗಿರುವುದರಿಂದಲೆ|
ದೇವರ ಮಾಡುವ ಹಂಬಲವು||
ಸೇವೆಯ ಮಾಳ್ಪನು ದೇವರಿಗಾಗಿಯೆ|
ದೇವರ ಕಾಣುವುದೇ ನಿಜವು ||1||
ಕಾಣದ ದೈವಕೆ ಕಲ್ಪಿಸುತಿರ್ಪನು|
ಕಾಣುವ ವಿಗ್ರಹ ರೂಪವನು ||
ಕಾಣುವುದೆಲ್ಲವು ದೇವರೆಯೆಂದರೆ |
ಕಾಣುವನಲ್ಲಿಯೆ ದೇವರನು ||2||
ಮೂರ್ತಿಯ ಪೂಜೆಯ ಮಾಡುತ| ದೇವರ|
ಸ್ಫೂರ್ತಿಯ ತನ್ನೊಳು ತುಂಬುವನು||
ಮೂರ್ತಿಯ ಧ್ಯಾನವ ಮಾಡುತ
ನರಹರಿ | ಮೂರ್ತಿಯ ಕಾಣಲು ನಂಬುವನು ||3||
ವಿಗ್ರಹ ಪೂಜೆಯ ಮಾಡಿದರೇ ಮನ|
ನಿಗ್ರಹ ಮಾಡಲುಬಹುದಿನ್ನು||
ಹಗ್ಗದಿ ಕಟ್ಟಿದ ಪಶುವಿನವೊಲು ಮನ|
ಶೀಘ್ರದಿ ವಶವಾಗುವುದೆನ್ನು ||4||
ಹೊರಗಿನ ಮೂ%B