ಪಾಲಿಸಯ್ಯಾ ಪಂಚವದನ ಪರಮ ಪಾವನಾ
ಪಾಲಿಸಯ್ಯಾ ಪಂಚವದನ ಪರಮ ಪಾವನಾ |
ಫಾಲಾಕ್ಷನೆ ಬೇಡಿಕೊಂಬೆ ನಿಮ್ಮ ಬಾಲಕ ನಾ ||ಪಲ್ಲ||
ಮಾತೆ ನೀನೆ ಪಿತನು ನೀನೆ ಸದ್ಗತಿಯು ನೀನೇ |
ಪ್ರತಿಪಾಲಕ ಉದ್ಧಾರಕ ಅತಿ ಹಿತವನು ನೀನೇ ||1||
ಭವಭವದಲ್ಲಿ ಬಳಲಿ ಬೆಂದೆನೋ ಬಹಳ ನೊಂದನೋ |
ಭವಸಾಗರದೊಳಗೆ ಮುಳುಗಿದೆನೋ ಭವಕಡಿಯೊ ನೀನು ||2||
ತನು ಗುಣಗಳ ಕಳೆಯೊ ಮನದಾಶೆಯ ಅಳಿಯೊ |
ಧನದ ಮಿತ್ರ ಇಟಪುರೀಶ ನೀನೆನ್ನ ಪ್ರಾಣೇಶ ||3||
ನಂಬಿದೆ ನಾ ನಿನ್ನ ಹಂಬಲಗೊಂಡು
ನಂಬಿದೆ ನಾ ನಿನ್ನ ಹಂಬಲಗೊಂಡು |
ಇಂಬು ನೀಡುವ ಶಿವಲಿಂಗ ನಮೋ ನಮೋ ||ಪಲ್ಲ||
ಅಕ್ಕರದಲಿ ಜಾಗೃತಿಯನ್ನೊಳಗೊಂಡ |
ಮುಕ್ಕಣ್ಣ ಮೂಜಗ ಪಾಲ ನಮೋ ನಮೋ ||1||
ಭಕ್ತ ಜನರ ಮನ-ಭಾವಕೊಲಿವ ಘನ |
ಯುಕ್ತಿಲಿ ಪೊರೆವ ಮಹೇಶ ನಮೋ ನಮೋ ||2||
ಸೊಕ್ಕಿದವರ ಶಿರ ಹರಿದು ಸಂತೈಸಿ ನೀ |
ಮಿಕ್ಕಿ ಮೆರೆವ ಮುನಿಲೋಲ ನಮೋ ನಮೋ ||3||
ಕಂದನ ಕಾಯ್ದ ತೆರ ಕರುಣಿಸಿ ಅಭಯ |
ಬಂಧನ ಅಳಿವ ಶಿವಶಂಕರ ನಮೋ ನಮೋ ||4||
ಕುಂಭಿನಿಗೀಶ್ವರ ಕರಕಮಲದೊಳಾಡುವ |
ಶಂಭೋಶಿವ ಇಟಪುರೀಶ ನಮೋ ನಮೋ ||5||
ಪರಮ ಪಾವನ ಮನೋಹರ
ಗಿರಿಜಾರಮಣ ವರಗುರು ಮನೋಹರ |
ಪರಾತ್ಪರ ಪರಮ ಪಾವನ ಮನೋಹರ ||ಪಲ್ಲ||
ತನುಮನಧನ ಮೂರಾ ನಿನಗರ್ಪಿಸುವರಾ |
ಘನಪದ ಸುಖಸಾರಾ ಅಪರಂಪರಾ ||1||
ನಿನ್ನನೆ ಭಜಿಪರು ನಿನ್ನದೆ ಆಧಾರ |
ನಿನ್ನ ನಾಮದಿಂದುದ್ಧಾರಾ ನಿನ್ನದೆ ಉಪಕಾರಾ ||2||
ಜಯತು ಜಯಕರ ವರ ಇಟಪುರ ಧೀರಾ |
ಜಯ ನಮಃ ಪಾರ್ವತಿ ಪತಿ ಹರಹರಾ ||3||
ಗತಿಯೇನು ಹೇಳು ಮುನ್ನ
ತಂದೆ ಎನ್ನಪರಾಧವೇನೋ |
ಅಂದಿಗಿಂದಿಗೆಂದಿಗಿಲ್ಲದ |
ಇಂದು ನೀ ಕಾಡುವುದಕ ||ಪಲ್ಲ||
ಮನೋಜಹರನೆ ಪುತ್ರರ |
ಮನ ವಿದಾರಿಸದಿರ |
ಮಾನವರೊಳಗೆನ್ನಪಮಾನವ |
ಮಾಡುವುದಕೆನ್ನಪರಾಧವೇನೋ ||1||
ತಪ್ಪು ಎನ್ನದಾಗಿರಲು |
ತಕ್ಕ ಶಿಕ್ಷೆ ಮಾಡೀಗಲೂ |
ಅಪ್ಪಿಕೊಳ್ಳದೆನ್ನ ವೈರಿಗೆ |
ಒಪ್ಪಿಸಿ ಕೊಡಲಿಕೆನ್ನಪರಾಧವೇನೋ ||2||
ಮಾತಾಪಿತ ನೀನೆಯೆನ್ನ |
ಗತಿಯೇನು ಹೇಳು ಮುನ್ನ |
ಹಿತಮನ ಪ್ರೀತಾದಾತಾ |
ಇಟಪುರೀಶ ಎನ್ನಪರಾಧವೇನೋ ||3||
ತೋರು ಮುಕ್ತಿ ಪಥವ
ಬಾರಯ್ಯಾ ಬಾಬಾ ಗುರು ಶಂಭೋಲಿಂಗಿ | ನೀ |
ಭರದಿ ಬೇಗನೆ ಬಂದು ಬೆರೆಯೊ ಸರ್ವಾಂಗ ||ಪಲ್ಲ||
ತನುಮನಧನವನ್ನು ನಿಮಗೆ ಅರ್ಪಿಸುವೆ |
ಅನುಮಾನ ಯಾಕಿನ್ನು ತೋರು ಮುಕ್ತಿ ಪಥವ ||1||
ಅಷ್ಟೈಶ್ವರ್ಯಾದಿ ಸಕಲ ಸಂಪತ್ತಷ್ಟು |
ನಷ್ಟವಾಗಿಯೆ ಹೋಗಲಿ ನಿಮ್ಮೊಳು ಚಿತ್ತ ||2||
ಕರುಣಿಸಿ ಪಾಲಿಸು ದೇವ ಕಠಿಣತ್ವ ಯಾಕೆ |
ಧರಣಿ ಸುಖ ಸಾಕೆನಗೆ ನಿಮ್ಮ ಚರಣವು ಬೇಕು ||3||
ಬಂದ ಕಂಟಕಗಳನು ನೀ ಬಯಲು ಮಾಡೋ |
ತಂದೆ ಸದ್ಗುರುರಾಯ ಕರುಣದಿ ನೀ ನೋಡೋ ||4||
ಜಯ ಜಯ ಜಗದೀಶ ಜಯತು ದಿವ್ಯ ಪ್ರಕಾಶ |
ಜಯ ಎನ್ನ ಪ್ರಾಣೇಶ ಇಟಪುರೀಶ ||5||
ಭೇದಕೆ ಮೀರಿದಾ ನಾದಮಯನೊ ನೀನೆ
ಶಿವ ಶಿವ ಕೈಲಾಸವಾಸ ದೇವಾ |
ಸಾಧು ಸಜ್ಜನ ಉಲ್ಲಾಸ ||
ಜಗದೀಶನೆ ತ್ರಿಲೋಕ ಸಂಚಾರಿ ಸರ್ವಮಹೇಶನೆ ||ಪಲ್ಲ||
ಒಂಬತ್ತು ದ್ವಾರದೊಳು ತುಂಬಿ ತುಳುಕುವನೆ |
ಅಂತರಂಗದ ಮನೆಯೊಳು ಆನಂದಭರಿತನೆ ||1||
ವೇದಾಂತ ವೇದದೊಳು ವೇದಶಾಸ್ತ್ರವು ನೀನೆ |
ಭೇದಕೆ ಮೀರಿದಾ ನಾದಮಯನೊ ನೀನೆ ||2||
ಅಂಗದೊಳು ಒಳಹೊರಗಾತ್ಮ ವಿಚಾರನೂ ನೀನೆ |
ತುಂಗ ಶ್ರೀ ವೀರಭದ್ರನು ನೀನೇ ||3||
ಬಲವಂತರು ಪೇಳಿರಣ್ಣ
ಅದು ಬರುವುದು ಒದಗಿ ಬರುವದು |
ಬದಿಯಲ್ಲೆ ಆದಾ ಬಯಲಿಗೆ ಬಯಲು
ಬದಲಿಲ್ಲದಕೆ ಬಲ್ಲಂತವರಿಗೆ
ಬಲವಂತರು ಪೇಳಿರಣ್ಣ ||ಪಲ್ಲ||
ಮಾತ್ಮಾ ತಿಳಿದ ಸಾತ್ವಿಕರಿಗೆ |
ಆತ್ಮ ಜ್ಞಾನದ ಆನಂದಾ
ಜಾತಿ ಸೂತಕ ಭೇದ ಮಾಡುವರು
ಆತ್ಮ ಅವರೇನು ಬಲ್ಲರು ||1||
ಅವರನು ಕಂಡವರವರಂತಿರೆ |
ಇವರನು ಕಂಡವರವರಂತಿರೆ
ಇವರವರ ತಿಳಿಯದೆ ನೀವು ಕುಂತಿರೆ
ಶಿವಪೂಜಾ ಮಾಡಬೇಕಂತಿರೆ ||2||
ಹೋಗುವ ಕಾಲಕೆ ಬ್ಯಾಗನೆ ತಿಳಿದವ |
ಯೋಗಿ ಬಲ್ಲ ಆ ಮಾತು
ಬ್ಯಾಗನೆ ಸೌಡಾ ಮಾಡಿಕೊಂಡು
ಹೋಗುವ ತಾ ಇಟಪೂರೀಶಾ ||3||
ಸತ್ತಾನಂತೀರಿ ಸತ್ತವನ್ಯಾರೋ
ಸತ್ತಾನಂತೀರಿ ಸತ್ತವನ್ಯಾರೋ |
ಹೊತ್ತವನ್ಯಾರೋ ಗೊತ್ತಿಲ್ಲಾ
ಗೊತ್ತು ತಿಳಿಯದೆ ಹತ್ತು ಮಂದಿಯೊಳು
ಅಲ್ಲಂತಂದರೆ ಹಲ್ಲು ಮುರಿಯುವನು ||ಪಲ್ಲ||
ಅಲ್ಲಂತಂದರೆ ಹೌದಂತೆಂಬುವ |
ಬಲ್ಲಂತವರ ಬಾಯಿ ಒಳಗೆ
ಖುಲ್ಲ ಜನರ ಮುರಿದನು
ಬಲ್ಲಂತವನೇ ಬಸವಣ್ಣ ||1||
ಗುರುವಿನ ಬಲವು ಆದಮ್ಯಾಲೆ |
ಕರವು ಹಾಲು ಸುರಿದಂತೆ
ಪರಿಚಾರಕರು ನೀವೇನು ಬಲ್ಲಿರಿ
ಚರಮೂರ್ತಿ ಶಿವಯೋಗಿ ಬ್ಯಾರೆ ||2||
ಅವನ ಬಲವು ನಮಗಿರಲಿಕ್ಕೆ |
ನೀವೇನು ಮಾಡುವಿರಿ ನಮಗಿನ್ನು
ಭಾನುಶೇಖರನ ಧ್ಯಾನ ಮಾಡೊ
ಮುನ್ನ ಸ್ಥಾನ ಇಟಪೂರೀಶಾಗ ಖೂನಾ ||3||
ಕೊಡು ಪುತ್ರನ ಶಿವನೆ, ವರದ ಶಂಕರನೆ
ಕೊಡು ಪುತ್ರನ ಶಿವನೆ ವರದ ಶಂಕರನೆ |
ಕಡು ಪಾಪಿಗಳಿಗೊಮ್ಮೆ ಕರುಣಿಸು ಭವನೆ ||ಪಲ್ಲ||
ಮೃಢನಲ್ಲದೆ ಅನ್ಯ ಒಡೆಯರಿನ್ಯಾರುಂಟು |
ಕೊಡು ನಿನ್ನ ನಿಜವಾಕ್ಯ ತಡೆಯದೆ ತ್ವರಿತದಿ ||1||
ಮಕ್ಕಳಿಲ್ಲದೆ ಮಹಾ ದುಃಖಿಷ್ಟರಾದೆವು |
ಕಕ್ಕುಲತೆ ಮಾಯಾ ಕೊಟ್ಟು ಸುಖ ಬಡಿಸು ದೇವ ||2||
ಮಾರ ಸಂಹರನೆ ಮೊರೆ ಹೊಕ್ಕೆವು ನಿನ್ನ |
ಮಾರಿ ತಿರುಗಿಸದಿರು ನಾವು ಭವಿಗಳೆಂದು ||3||
ಭಕ್ತರಿಗೆ ಬಳಲಿಕೆಯುಂಟೆ ಘೋರ ಪರಿಹರಿಸಯ್ಯ |
ಮುಕ್ತಿ ಶಕ್ತಿಗಳೆರಡು ನಿನ್ನೊಲುಮೆ ಕಾಣಯ್ಯ ||4||
ಹಿಂದೆ ಮಾಡಿದ ಕರ್ಮ ಹಿಂಬದಿಗೊಂಡು ಬಂದಿತು |
ಇಂದು ಸಂತತಿ ಇಟಪುರೀಶ ನಿಮ್ಮಯ ಕರುಣ ||5||
ಚಿಂತಿ ಪರಿಹರಿಸು
ಎನ್ನ ತಾಯಿ ತಂದೆ ಗುರುರಾಯ ಹೇಳಿದ ಮಾತು |
ಮುನ್ನ ಮುನ್ನವೆ ಗುಹ್ಯದೊಳು ತಿಳಿವದು |
ಎಲ್ಲರೊಳಗೆ ಒಬ್ಬ ಅಲ್ಲಮ ಪ್ರಭುರಾಯ |
ಎಲ್ಲ ಲೋಕದ ಒಡೆಯ ಏಕಾಂತದೊಳು ||ಪಲ್ಲ||
ಮಲ್ಲಿಗಿ ಮಂಟಪದೊಳು ಬೆಳ್ಳಂಬೆಳಗಿನೊಳ |
ಬಲ್ಲಂಗೆ ಥಳಥಳಿಸುವನು |
ವಲ್ಲಭನಿವಗೆಂದು ಬಲ್ಲರಿಗೆ ಬಗೆ ತುಂಬಿ |
ಉಲ್ಲಾಸದಲಿ ತಿಳಿವದು ಉತ್ತಮ ಜ್ಞಾನ ||1||
ಕಣ್ಣಿಲ್ಲ, ಮೂಗಿಲ್ಲ, ಕಾಲಿಲ್ಲ, ಕೈಯಿಲ್ಲ |
ಮೋಹಿಸಿ ಇರುತಿರ್ಪನೊ |
ನಾಣ್ಯದಿಂದಲಿ ವೇಣು ನಾದಲೀಲಾಮೃತ |
ಅಣುರೇಣು ತೃಣಕಾಷ್ಠ ಭರಿತ ಮಹಿಮಾ ||2||
ಚಿಂತೆಯಳಿಸು ನಿಶ್ಚಿಂತನಾಗಿ ದೇಹ |
ಚಿಂತಿ ಪರಿಹರಿಸುವನೊ |
ಕಂತುಹರ ಇಟಪುರೀಶನ ಧ್ಯಾನದಿ ||
ಮಂತ್ರ ಪಠಿಸಿದರೆ ಹಸನ ಮಾರ್ಗ ||3||
ಗುರುವು ಹೇಳಿದ ಮಾತು
ಗುರುವು ಹೇಳಿದ ಮಾತು ಗುರುತು ಇಲ್ಲದೆಯೇ |
ಗುರುಪುತ್ರನಾದರೇನು |
ಪರೋಪಕಾರ ಭಕ್ತಿ ಅರುವಿನೊಳು ಬರದೆಯೇ |
ವಿರಕ್ತನಾದರೇನು ||ಪಲ್ಲ||
ಲಕ್ಷಾಧೀಶ ತಾ ಭಿಕ್ಷೆ ನೀಡದೆಯೇ |
ಲಕ್ಷ ಲಕ್ಷ ಗಳಿಸಿದರೇನು |
ಮೋಕ್ಷ ಗುರುವಿನ ಶಿಕ್ಷೆ ಇಲ್ಲದೆಯೇ |
ದೀಕ್ಷಿತನಾದರೇನು ||1||
ಶಿವನಾಮ ಅಪೇಕ್ಷೆ ಇಲ್ಲದವ ಅಸರಂತ |
ತವಶಿಷ್ಯನಾದರೇನು |
ಭವ ಬಾಧೆಯೊಳು ಬಿಡದೆ ತಪಿಸುವವ |
ಕವಿಗಾರನಾದರೇನು ||2||
ಚರಿಸ್ಯಾಡುವ ಮನ ನಿಲಿಸದೆ ಮಾನಸ |
ಪೂಜೆ ಮಾಡಿದರೇನು |
ಗುರು ಇಟಪುರೀಶನ ಘಟದೊಳು ಕಾಣದೆ |
ಘನ ಹೇಳಿದರೇನು ||3||
ಕಾಯ ಕಾಂತಾರದೊಳು
ಎಂಥದ್ದೊ ! ಮೃಗವೆಂಥದ್ದೋ ಗುರುವೆ |
ಇಂಥ ಕಾಯ ಕಾಂತಾರದೊಳು ಸೇರಿರುವದೊ ||ಪಲ್ಲ||
ಪಂಚವರ್ಷದ ಬಾಲೆ, ವಂಚನಿಲ್ಲದೆ ಅದು |
ಹಂಚಿಕಿಲಿಂದಲಿ ಆಡುವದೊ |
ಕಂಚಿಯೊಳಗೆ ಬಲು ಮಿಂಚಾಗಿ ಇರುವದು |
ಸಂಚಾರ ಮಾಡುವದು ಸರ್ವರೊಳು ||1||
ಅಂಗವೆಂಬುದೆ ಅಡವಿ ಬಂಗಾಳಿ ಮಾಡಿನ್ನು |
ಕಂಗಳೊಳಗೆ ಕಳವಳಿಸುವದು |
ಮುಂಗಾರು ಮಿಂಚಿನೊಲು ಒಳಗೆ ಜ್ಯೋತಿಯ ಹಚ್ಚಿ |
ಬಂಗಾರ ಥಳಥಳಿಸಿ ತಾನೇ ತಾನಿರುವದು ||2||
ಹೊತ್ತು ಹೋಗದೊಂದು ಹುತ್ತಿನೊಳಗೆ ಬಂದು |
ಗೊತ್ತು ಮಾಡಿಕೊಂಡು ಗೊತ್ತು ತಿಳಿಯದಂಗೆ |
ಅತ್ತಿತ್ತ ಲೋಡಾಡಿ ಗುಹ್ಯದೊಳಿರುವ |
ನಿತ್ಯನಾದ ಇಟಪುರೀಶ ನೋಡೋ ||3||
ಪಾರು ಮಾಡುವನು ಪಾಪ ಕರ್ಮಗಳಿಂದ
ಯಾರಂಜಿಕೆ ನಮಗೆ, ಗುರುವಿನ ದಯವಾದ ಮೇಲೆ |
ದೂರ ಮಾಡುವನು ದುರ್ಜನ ದುರ್ಗುಣ |
ಪಾರು ಮಾಡುವನು ಪಾಪ ಕರ್ಮಗಳಿಂದ ||ಪಲ್ಲ||
ನರರೇನು ಬಲ್ಲರು ಶಿವನಾಮ ಸ್ಮರಣೆ ಸುಖ |
ಸ್ಥಿರ ಮುಕ್ತಿ ಪಡೆವಂಥ ಸುಜ್ಞಾನ ವರ್ಮ |
ಚಿರಕಾಲ ಶ್ರೀಗುರು ವಚನ ಲಭಿಸಿದ ಮೇಲೆ ||1||
ಸಾರುವದು ಸಾಮವೇದ ಸರ್ವರೊಳು ಬೋಧ |
ಭೂರಿ ಮಂತ್ರ ಪ್ರಸಿದ್ಧ ಸಾಕ್ಷಿರ್ಭೂತಗಳಿಂದ |
ದಾರಿ ಮೋಕ್ಷಕೆ ಶಿಕ್ಷೆ ಮಾಡಿ ತೋರಿದ ಗುರುವು ||2||
ಪ್ರಣವ ಬೀಜ ಮಂತ್ರ ಪ್ರಣವ ಪಂಚಾಕ್ಷರಿ |
ಅಣುರೇಣು ತೃಣಾಕಾಷ್ಠ ಮೊದಲಲ್ಲಿರುವದು |
ರಣಭೇರಿ ವಾದ್ಯದಿ ಪೂರ್ಣನಾದ ಇಟಪುರೀಶ ||3||
ಹುಕುಂ ಬಂದ ವ್ಯಾಳೆದಲಿ
ಹುಕುಂ ಬಂದ ವ್ಯಾಳೆದಲಿ
ದಿಕ್ಕಿಗೊಬ್ಬರು ಆದರು
ಧಿಕ್ಕರಿಸಿ ದಿಟ್ಟಿಸಿ
ಬಕ್ಕಳ ಗಂಟ ಕಟ್ಟಿಕೊಂಡು ||ಪಲ್ಲ||
ಲೆಕ್ಕಣಿಕೆ ಹಿಡಿದು ಬರೆಯುವ ಅವನೆ
ಲೆಕ್ಕ ನೋಡಿ ಓದಿ ಹೇಳುವ ಅವನೆ
ಅಕ್ಕರದಲಿ ಲೋಲ್ಯಾಡುವ ಅವನೆ
ಬಿಕ್ಕು ಬಿಡಿಸಿಕೊಂಡೋಗುವವನೆ ||1||
ಖಡ್ಗ ಹಿಡಿದು ಖಂಡಿಸುವದು
ಹುಡುಗರೆಲ್ಲಾ ನೀವೇನು ಬಲ್ಲಿರಿ
ಬಡ ಬಡ ಎರಡು ಮಾತಾಡುವದೆ
ಜಡ ಬಂದರೆ ಓಡಿ ಹೋಗುವದೆ ||2||
ಹರನ ಸ್ಮರಣಿ ಗುರುವಿನ ಕರುಣಾ
ಚರಣಕೆರಗುವೆ ಶರಣರಿಗೆ
ಪ್ರಾಣನಾಥ ಇಟಪೂರೀಶಾ
ಪೂರ್ಣ ಪಯೋಧರ ಜಗತ್ ಪ್ರಖ್ಯಾತ ||3||
ಶಕ್ತಿಯ ಸೃಷ್ಟಿಕರ್ತ
ಸಿದ್ಧರಾಮ ಎಂಥಾತ ಸಿದ್ಧರೊಳಗೆ ಪ್ರಸಿದ್ಧ ತಾ
ಕುಂದು ಇಲ್ಲದಾತ ಆನಂದದೊಳಗೆ ತಾ ಭರಿತಾ
ಭುವನದೊಳಗೆ ಪ್ರಖ್ಯಾತ ||ಪಲ್ಲ||
ಭಕ್ತಿಯಲ್ಲಿ ಬಂಧುರ ಭವನಾಶಾ
ಮುಕ್ತಿಯಲ್ಲಿ ಮಾಹೇಶಾ
ಶಕ್ತಿಯ ಸೃಷ್ಟಿಕರ್ತ ತಾ
ದೃಷ್ಟಿ ಲಿಂಗೈಕ್ಯ ಲೀನಕರ್ತ ತಾ ಜಗದೀಶಾ ||1||
ಸಿದ್ಧರಾಮನ ಪುರಾಣ
ಸಿದ್ಧಾಂತ ಓದಿ ಹೇಳಿದ ಮಾತಾ
ಏಕಾಂತ ಲೋಕಾಂತ ಪ್ರಾಣನಾಥಗೆ ಪ್ರೀತಾ
ಶರಣರೊಳಗೆ ಇಂಥ ಶರಣನನು ಕಾಣೆನು ||2||
ಭಕ್ತಿ ವಿಶ್ವಾಸ ಶಾಂತಾ
ಮುಕ್ತಿ ಮುಕ್ಕಣ್ಣ ಸಿದ್ಧರಾಮ ಇಟಪೂರೀಶಾ
ಘಟ ಎಂಬ ಮಠ ಮಾಡಿ
ಹಟಯೋಗದಲಿ ಬಹುದಿಟ್ಟು ಸಿದ್ದರಾಮ ತಾ ||3||
ಜ್ಞಾನ ತಿಳಿಯಬೇಕು
ಬಾಗಿ ನಡೆಯಬೇಕೋ | ಏ ಮನುಜ
ಬಾಗಿ ನಡೆಯಬೇಕೋ ||ಪಲ್ಲ||
ಬಾಗಿ ಬಾಗಿ ಸಂಸಾರ ಮಾಡಿ ನೀ
ಯೋಗಿಯಾಗಬೇಕೋ ||ಅ. ಪಲ್ಲ||
ಧನವು ಗಳಿಸಬೇಕೋ | ದಾನ
ಧರ್ಮ ಮಾಡಲಿ ಬೇಕೋ
ಮಾನಹೀನರ ಸಂಗವ ತ್ಯಜಿಸಿ
ಜ್ಞಾನ ತಿಳಿಯಬೇಕೋ ||1||
ನೀತಿಲಿ ನಡಿಯಬೇಕೋ | ಏ ಮನುಜ
ಜಾತಿ ಅಳಿಯಬೇಕೋ
ಜಾತಿ-ಜನ್ಮಗಳು ಅತೀತವೆಂಬ
ಮಾತು ಅರಿಯಬೇಕೋ ||2||
ಸಾರವಿಲ್ಲ ನೋಡೋ ಈ ಸಂ
ಸಾರ ಬ್ಯಾರೆ ತಿಳಿದು ನೋಡೋ!
ಧೀರ ಇಟಪುರೀಶನ ಧ್ಯಾನಿಸಿ
ಪಾರಾಗುವುದು ಬಹು ಪಾಡೊ ||3||
ಶೀಲ ಮಾಡುವದ್ಯಾತಕೋ
ಶೀಲಾ ಮಾಡುವದ್ಯಾತಕೋ
ಶೀಲದೊಳಗೇನು ಇಲ್ಲಾ
ಕಾಲಕ್ಕೆ ಯಮದೂತರು ಬಂದು
ಶೂಲಕ್ಕೆ ಒಯಿದ್ಹಾಕುವರಲ್ಲಾ ||ಪಲ್ಲ||
ಶೀಲಾ ಎಂಬ ಭಾವ ಭಕ್ತಿ ಸು
ಶೀಲಾ ಎಂಬುವದು ಬ್ಯಾರಿಲ್ಲಾ
ಪಾಲಿಸು ಶಿವನ ಧ್ಯಾನ ಮಾಡಿ
ಆಲಿಸಿ ಮನದೊಳು ತಿಳಿಯೋ ಖೋಡಿ ||1||
ಅರಿವು ಇಲ್ಲಾ ಗುರುವು ಯಾಕೆ ನಿಮಗೆ
ಸರ್ವರೊಳಗೆ ಸಮರಸವಾಗಿ
ಭಿನ್ನಿಲ್ಲಾ ಭೇದಿಲ್ಲಾ
ಭೇದ ಮಾಡಿದರೆ ಬ್ಯಾರಿಲ್ಲಾ ||2||
ಮಾಡಿದಿ ಶೀಲಾ ನೋಡಿದಿ ಕಾಲಾ
ಕಾಡುವದ್ಯಾತಕೋ ತಿಳಿ ಮೂಲಾ
ಬ್ಯಾಡಗೆ ಒಲಿದಾ ಭಕ್ತಿಯಲಿಂದಾ
ಇಟಪೂರೀಶಾ ಆನಂದಾ ||3||
ಬೇಡುವದ್ಯಾಕೋ
ಬೇಡುವದ್ಯಾಕೋ ಇನ್ನೂ
ಬೇಡಿ ಉಂಬುವನ ಕಾಡುವದ್ಯಾಕೋ ನೀನು ||ಪಲ್ಲ||
ತ್ರಿಪುರ ಸಂಹಾರ ಮಾಡಿದ
ತ್ರಿಜಗದೀಶಾ ತ್ರಿಗುಣಗಳ ಕಳೆದಾ
ಅಪರಿಮಿತ ಇಹ ಗುಪ್ತದೊಳು ಅನುಭವ
ಚಪಳ ತತ್ವ ತಿಳಿಸಿದಾ ಚಪಳನ ಕಾಣೆನು ||1||
ಜನನ ಮರಣ ಭಯವು ಇನ್ಯಾಕೋ
ಅನುದಿನ ಸ್ಮರಣೆಯು ಬೇಕೋ
ಅನ್ಯನೆ ನೀ ಎನಗೆ ನೀ ಎನ್ನ ಮಹೇಶನೆ
ಸನ್ನುತ ಗುಣನಿಧಿ ಸಂಗನಬಸವನೆ ||2||
ತ್ರಿಕೂಟ ಸಂಗಮ ನೀನೇ
ತ್ರಿಲೋಕ ಸಂಗನು ನೀನೇ
ತ್ರಿಲೋಕ ಸಂಚಾರ ಮಾಡುವನೆ
ಸ್ಮೃತಿ ವಾಕ್ಯ ಸಕಲ ಮಂದಿರ ಭಕ್ತ ಸೋಮನೆ
ಶ್ರುತಿಗೊಳಿಸಿದಾತಾ ಇಟಪೂರ ಈಶನೇ ||3||
ಮಾತಿಗೆ ಮರುಳಾದೆನೋ
ಮಾತಿಗೆ ಮರುಳಾದೆನೋ | ಸದ್ಗುರುರಾಯ
ಮಾತಿಗೆ ಮರುಳಾದೆನೋ ||ಪಲ್ಲ||
ಮಾತಿಗೆ ಮರುಳಾದೆ ಆ ಮಾತು ಹೇಳಲಳವಲ್ಲ
ಮಾತು ಮಾತಿನೊಳು ಅತಿ ಪ್ರೀತಿ ತೋರಿಸಿದಂಥ ||1||
ಗಗನದ ಗಿರಿಯೊಳು, ಮಿಗಿಲಾದ ಸುಖವದು
ಹಗಲಿರುಳು ಅನುದಿನ, ಅಗಲದೆ ಇರುವಂಥ ||2||
ತತ್ವಮಸಿ ಮಹಾ ಅರ್ಥವ ಬೋಧಿಸಿ
ನಿತ್ಯನಾಗಿರು ಎಂದು ತಥ್ಯ ಪೇಳಿದಂಥ ||3||
ಈ ನ್ಯಾಯದೊಡೆಯನೆ ಜ್ಞಾನಿ ಇಟಪುರೀಶನೆ
ನಾನು ನೀನೆಂಬುವ ಏನೂ ಭೇದ ಉಳಿಸದಂಥ ||4||
ಇವ ಎಂಥ ಗಾರುಡಿಗ
ಇವ ಎಂಥ ಗಾರುಡಿಗ ಹಾನೇ, ಅವ್ವಯ್ಯ ನೋಡೇ
ಇವ ಎಂಥ ಗಾರುಡಿಗ ಹಾನೇ ||ಪಲ್ಲ||
ತಂತು ತಿಳಿದು ಇವನ ಹಂತೆಕೆ ಹೋದರೆ
ಪಂಥ ಗೆಲ್ಲಿಸುವನೇ ||ಅ.ಪಲ್ಲ||
ಲಕ್ಷ ಹಿಡಿದು ಆರಕ್ಷರ ಓದಿಸಿ
ನಿಕ್ಷೇಪದೋರಿ ನಿಜ ವಸ್ತು ಕೊಡಿಸುವ ||1||
ನಿಚ್ಚನಿಚ್ಚವು ಮಹದೆಚ್ಚರ ಬೋಧಿಸಿ
ಅಚ್ಚ ಪರವಶದಿ ಹುಚ್ಚು ಹಿಡಿಸಿದವ ||2||
ಸೇರಿರುವ ಭಕ್ತರ ದುರಿತವೆಲ್ಲವನು
ದೂರ ಮಾಡುವ ಇಟಪುರೀಶ ತಾ ||3||
ಎನ್ನ ಮೊರೆ ಕೇಳೊ
ಎನ್ನ ಮೊರೆ ಕೇಳೋ ಏ ಮಹಾಗುರುವೇ
ಇನ್ನು ಕರುಣಿಸೊ ನಿಜ ಧ್ಯಾನದೊಳಿರುವೆ ||ಪಲ್ಲ||
ನಾಚಿ ನಾಚಿ ನಡುಗತಿದ್ದೆ ಮುನ್ನ
ಯೋಚನ್ಯಾತಕೊ ಎರಗಿದೆ ನಿನ್ನ |
ಸೂಚನದಿ ಪೇಳೊ ಸುಖನಾದವನ್ನ
ಚಾಚು ಜ್ಯೋತಿಯ ಸರಿಗಾಣೆನು ನಿನ್ನ ||1||
ಧೀರ ನಾನರಿಯೆ ದಿವ್ಯದ ವರ್ಮ
ತೋರಿಸಿಕೊಡು ನನಗೆ ತ್ವರಿತದಿ ವರ್ವ
ಯಾರಿಗೆ ಯಾರಿಲ್ಲ, ಎಳೆವಾಗ ಯಮಧರ್ಮ
ಘೋರ ಪರಿಹರಿಸೊ ನೀ ಅಳಿ ಎನ್ನ ಕರ್ಮ ||2||
ತತ್ತಿ ಖೂನ ತಾಯಿಗಿರುವದಿಲ್ಲ
ಸುತ್ತಲಿರುವಂಥ ಹಿತವರಾರೂ ಇಲ್ಲ
ಕತ್ತಲಾಗಿ ಕೊಂಡೊಯ್ಯುವರಲ್ಲ
ಸತ್ಯ ಸದ್ಗುರು ಇಟಪುರೀಶನೆ ಬಲ್ಲ ||3||
ಹ್ಯಾಂಗ ಮರೆಯಲಿ ನಾ
ಹ್ಯಾಂಗ ಮರೆಯಲಿ ನಾ
ಎನ್ನ ಮನದ ಒಲಿಸಿದಾತನ ||ಪಲ್ಲ||
ಹ್ಯಾಂಗ ಮರೆಯಲಿ ನಾ ಚೆನ್ನಿಂಗ ಚೆಲುವನ
ಅಂಗರಹಿತ ಭವ ಹಿಂಗಿಸಿದ ಮಹಿಮನ ||ಅ.ಪಲ್ಲ||
ತನ್ನ ನಂಬಿದೆನೆಂದು ತಾನೆ ಮೋಹದಿ ಬಂದು
ಮನ್ನಿಸಿ ಬೆರೆದಂಥ ಮನಮೋಹನನ ||1||
ಪರತತ್ವ ಸುಜ್ಞಾನ ಪರಿಯ ಬೋಧಿಸಿಯೆನ್ನ
ಪರವಶ ಮಾಡಿದ ಪರಮ ದಯಾಳನ ||2||
ನಿಟಿಲ ಭ್ರೂಮಧ್ಯದಿ ತ್ರಿಪುಟಿ ಕೂಡುತಲೆನ್ನ
ಘಟದೊಳು ಮೆರೆವಂಥ ಇಟಪುರೀಶನ ||3||
ಕಲ್ಲ ಕರಗಿಸಿ ಬೆಲ್ಲ ಮಾಡೀದಿ
ಭಲೆರೇ ಭಲೆರೇ ಗುರು ಮಹಾರಾಜಾ
ಕಲ್ಲನು ಕರಗಿಸಿ ಬೆಲ್ಲ ಮಾಡೀದಿ ||ಪಲ್ಲ||
ಇಬ್ಬರ ಹೂಡಿ ಒಬ್ಬಳಿ ಮಾಡಿ
ಹುಬ್ಬು ಹುಬ್ಬಿನ ಕೆಳಗೆ ಹಬ್ಬ ಮಾಡೀದಿ ||1||
ಕೂಡಿತು ಸ್ನೇಹ ಓಡಿತು ಮಾಯಾ
ಮೂಡಿದ ನಡುನಾಡಿ ಚಡಾವು ಮಾಡೀದಿ ||2||
ಅಂತರ ಕೀಲು ನಿಂತಿತು ಮೇಲು
ತಂತು ತಿಳಿಸಿ ನಿಶ್ಚಿಂತಿ ಮಾಡೀದಿ ||3||
ಅಂಗಾಚಾರದಿ ಲಿಂಗ ವಿಚಾರದಿ
ಅಂಗ ಲಿಂಗದ ಸಂಗೀಗ ಮಾಡೀದಿ ||4||
ಇಂದು ಉಲ್ಲಾಸ ಇಟಪುರೀಶ
ಮಂದಮತಿಯಳಿದಾನಂದ ಮಾಡೀದಿ ||5||
ಮಾತು ಮಾತಿಗೆ ಮರುಳು ಮಾಡಿದನಮ್ಮ
ಮಾತು ಮಾತಿಗೆ ಮರುಳು ಮಾಡಿದನಮ್ಮ
ಮಹಾಂತ ಇಂಥವನ ಕಾಣಲಿಲ್ಲಮ್ಮ ||ಪಲ್ಲ||
ಭಲೆರೆಂದು ಕೂಗುತ, ಎಡಬಲ ತೂಗುತ
ಬಲ್ಲಂಗ ಊದಿ ಬೂದಿ ಚೆಲ್ಲಿದನಮ್ಮ ||1||
ಕಸಿವಿಸಿ ನಾ ಬಿಡುವೆ ಹಸಿ ಹುಸಿ ತಾ ನುಡಿವ
ಮುಸಿ ಮುಸಿ ನಗುತ ಪ್ರೀತಿಸಿ ನೋಡಿದನಮ್ಮ ||2||
ನಿನ್ನ ನಾಮವೇನೆನ್ನಲು ನೆಲೆ ಕಲೆ ಕೇಳಲು
ಪನ್ನಂಗಧರನೆಂದು ಪೇಳಿದನಮ್ಮ ||3||
ತನುಮನಧನವನು ತನಗೊಪ್ಪಿಸು ಎಂದಾನು
ಅನುಮಾನನಿಲ್ಲದೆ ತನ್ನ ಕೂಡೆಂದನಮ್ಮ ||4||
ಇನ್ನೇನ್ಹೇಳಲಮ್ಮ ಇಟಪುರೀಶನ ಪ್ರೇಮ
ಬೆನ್ನಿಗೆ ಇರಲಿನ್ನು ಭಯವೇತರದಮ್ಮ ||5||
ಮರೆಯಲಾರೆನು ನಿಮ್ಮಯ ಉಪಕಾರ
ಮರೆಯಲಾರೆನು ನಿಮ್ಮಯ ಉಪಕಾರ | ಗುರುವೆ
ಮರೆಯಲಾರೆನು ಮನೋಹರ ||ಪಲ್ಲ||
ಕರುಣದಿಂದಲಿ ಜ್ಞಾನ ಕರುಣಿಸಿದೀ ಕ್ಷಣ
ಮರುಳಾದೆನು ನಿಮ್ಮ ಚರಣಕ್ಕೆರಗುವೆ ||ಅ.ಪಲ್ಲ||
ಅರಿಯದ ಮೂರ್ಖಗೆ ನೀವು | ಬಹು
ಪರಿಯಲಿ ಬೋಧಿಸಿದಿ ಎನಗೆ ಅರಿವು
ಮರುಳೆ ಈ ಮಹಾಕಾವ್ಯ ಮರೆಯದಿರೆಂದು ಓಂ
ಕಾರಪಂಚಾಕ್ಷರ ಪೊರೆದು ಪೇಳಿದಿ ಗುರುವೆ ||1||
ಮತ್ಸರ ಮೋಹವ ಬಿಡಿಸಿ | ಮಹಾ
ಎಚ್ಚರದೊಳು ಮನವ ಬೆರಸಿ
ಪಶ್ಚಿಮಗಿರಿಯೊಳು ಪರಮಾನಂದದಿ
ನಿಶ್ಚಯದೊಪ್ಪಿಸಿ ನಿಜವ ತೋರಿದಿ ಗುರುವೆ ||2||
ಹೊನ್ನು ಮಾಣಿಕ್ಯ ನೆಲೆಗೊಂಡು | ನಾ
ಚೆನ್ನಾಗಿ ಅಮೃತ ಸವಿದುಂಡು
ಇನ್ನೇನು ಬೇಡಲಿ ಇಟಪುರೀಶನೆ ನಿನ್ನ
ಪುಣ್ಯದಿ ಪರಿಪೂರ್ಣ ಸಂಪನ್ನಗೊಳಿಸಿದ ಗುರುವೆ ||3||
ಸಾರ ಸುಖವನು ತೋರಿತಲ್ಲಾ
ಸಾರ ಸುಖವನು ತೋರಿತಲ್ಲಾ | ಸಂ
ಸಾರ ಮಾಡಿ ಮನವು ತಿಳಿಯಾಯಿತಲ್ಲಾ
ಹರಹರನ ಧ್ಯಾನ ಮಂತ್ರವ ಪಠಿಸಿದರೆ
ಪಾರಮಾರ್ಥ ಭೇದ ಪರಿಪೂರ್ಣ ||ಪಲ್ಲ||
ಪೂರ್ವ ಪುಣ್ಯಾ ಫಲದಿಂದ ಗುರುರಾಯ
ಪೂರ್ಣನಾಗಿ ತಾನೆ ಬಂದಾ
ಪರೋಪಕಾರೆಂಬೊ ಭಕ್ತಿ ಭಾವಕೆ ಮೆಚ್ಚಿ
ಸ್ಥಿರಮುಕ್ತಿ ಪಡೆವಂಥ ಶ್ರೀಗುರು ವಚನವನು ||1||
ವೇದ ವೇದಾಂತ ಸಾರವನು ಇನ್ನು
ನಾದವೆ ಪರಬ್ರಹ್ಮವದು
ಬೋಧ ಚಿದಾನಂದ ಸ್ವರೂಪ ಸರ್ವೆಲ್ಲಾ
ವೇದಕೆ ಸಾಕ್ಷಿಯೇನು ಸಾಧುಸಂಗವೆ ಮೂಲಾ ||2||
ಬ್ರಹ್ಮ ಮಾಡಿದ ತದ್ರೂಪೆಲ್ಲಾ
ಬ್ರಹ್ಮ ಮೂಲಕ ಸರಿ ಏನಿಲ್ಲಾ
ಸುಮ್ಮನೆ ಇರುವಂಥ ಸುಜ್ಞಾನ ಸುಖವನು
ಒಮ್ಮನವನೆ ಮಾಡಿದಾ ಇಟಪೂರೀಶಾ ತಾ ||3||
ಒಮ್ಮನ ಮಾಡಿ ಸುಮ್ಮನೆ ಇರುವದು
ಏಕೋ ನಾಮವೆ ಶಿವ ನಾಮವೆ
ಜಗದೊಳು ಝೇಂಕಾರ
ಜಪ ಸ್ತೋತ್ರ ಆಕಾರಿಲ್ಲಾ
ನಿರಾಕಾರ ಪ್ರಕಾಶ ಕೋಟಿ ಸೂರ್ಯ
ತೇಜಸ್ವಿಕಾಂತಿ ಪ್ರಕಟಿಸಿ ಮನದೊಳು
ಪಂಕಜಲೋಚನ ಪಾದಾಂಕಿತ ನೆನದವಗಿನ್ನೇನು ಭಯ ||ಪಲ್ಲ||
ಬ್ರಹ್ಮ ಮಾಡಿದ ಬೊಂಬಿಗಳಾಟ ಎಂಥದು ಇನ್ನು
ಬ್ರಹ್ಮಜ್ಞಾನ ತಿಳಿದುಕೊಂಡಿರುವಂಥಾದು
ಒಮ್ಮನ ಮಾಡಿ ಸುಮ್ಮನೆ ಇರುವದು
ಸುಷುಪ್ತಿಯೊಳು ಶಾಂತನಾಗಿ ತಾ
ಹಮ್ಮು ಅಳಿದು ಪರಬ್ರಹ್ಮನ ತಿಳಿದು
ಪಾಕೀಜಾಗಿ ಮನ ಪಥಕ ಹೊಂದುವದು ||1||
ಕಾಲಕರ್ಮದ ಹಾದಿ ತಪ್ಪಿಸುವಂಥದೊ
ಕೇವಲ ಭಕ್ತಿ ಮಾಡಿ ಮುಕ್ತಿಮಾರ್ಗ ತಿಳಿವಂಥದೊ
ಕಾಲಕಾಲದಲಿರುವ ವಿಮಲ ತೋರಿ
ಮೂಲಮಂತ್ರಮಠವಾಸಾ ಶ್ರೀ ಜಗದೀಶಾ
ಆಲಿಸಿ ಮನದೊಳು ಪಾಲಿಸೋ
ಉರಗಭೂಷಾ ಭವನಾಶಾ ಮಹೇಶಾ ||2||
ಮದಮಾತ್ಸರ್ಯಗಳ ಮರೆತು ಶೋಕು ಮುರಿವಂಥದೊ
ಇಂದುಧರನ ಸ್ಮರಣೆಯ ಮಾಡಿ ಪೂರ್ಣವಾಗಿರುವಂಥದೊ
ಮಂದಾರ ಗಿರಿವಾಸಾ ಬಂಧುರ ಮನದೊಳು
ಬಂಧು ಬಳಗ ತಾನೆಂದು ತೋರಿ ಇನ್ನು
ಅಂದು ಇಂದು ಎನ್ನೆಲೋ
ಸಂದೇಹವಿಲ್ಲದೆ ಬಂದು ಕೂಡಿದಾ ನಮ್ಮ ಇಟಪೂರೀಶಾ ||3||
ಶರೀರದ ಭ್ರಮೆ ಕಳಕೊಂಡು
ಬರಿ ಗಂಟೆ ಶರೀರದ ಭ್ರಮೆಯು ಕಳಕೊಂಡಂತೆ
ಆತನ ಮಹಿಮಾ ತಿಳಿಯದೆ ಮನುಜಾ
ನೀತಿ ತಿಳಿದರೆ ಬರಿ ಗಂಟೆ ||ಪಲ್ಲ||
ಮಾತಿನ ಖೂನಾ ಗುರುತಿಲ್ಲದೆ
ಓದಿ ಸಾಧಿಸಿ ಪೇಳವರ
ಓದಿಸಿ ಮನದೊಳ ಬರಿ ಗಂಟೆ ||1||
ಆತ್ಮ ವಿಚಾರ ಮಹತ್ವವ ತಿಳಿಯದೆ
ಆಚಾರ ಮಾಡುವದು ಬರಿ ಗಂಟೆ
ಆಚಾರ ಮನದೊಳು ಸೂಚನೆ
ತಿಳಿದರೆ ಸಾಚನಾಗುವದಿನ್ನುಂಟೆ ||2||
ಗುರುವಿನ ಕರುಣಾ ಆಗೋ ಮನುಜಾ
ಗುರುತು ಹೇಳಿದರೆ ಬರಿ ಗಂಟೆ
ಪರಕೆ ಪರತರ ಇಟಪೂರೀಶನ
ಮಹಿಮಾ ತಿಳಿಯದವರಿಗಿನ್ನುಂಟೆ ||3||
ಬಿತ್ತಿದವನೆ ಬಲ್ಲ ಬೀಜ ಮಂತ್ರವ
ಸುಳ್ಳು ಶಾಸ್ತ್ರವು ಸುಳ್ಳಲ್ಲಾ
ಸುಜ್ಞಾನವು ಅಜ್ಞಾನಿ ಏನು ಬಲ್ಲಾ
ಸುಜ್ಞಾನ ಎಂಬಂಥ ಬೀಜ ಸುಗುಣನೆ ಬಲ್ಲ
ಬಿತ್ತಿದವನೆ ಬಲ್ಲ ಬೀಜ ಮಂತ್ರವ ||ಪಲ್ಲ||
ಅರಿವು ಎಂಬ ಅಕ್ಷರ ಒಂದೆ ಆತ್ಮದೊಳಗೆ
ಗುರುಕೀಲು ಸ್ತೋತ್ರ ಪರ ಉಪಕಾರೆಂಬೊ
ಭಕ್ತಗೆ ಭಕ್ತಿ ಒಂದೆ ಮುಕ್ತಿ ಮಾರ್ಗಕೆ ದಾರಿ
ಮೂಲಮಂತ್ರವು ಒಂದೆ ||1||
ಪಂಚಾಗ ದೇಹಾ ಒಂದೆ
ಪರಬ್ರಹ್ಮ ಮೂರ್ತಿ ಸ್ವರೂಪ ಒಂದೆ
ಪರಕೆ ಪರತರವಾದ ಪರಂಜ್ಯೋತಿ ಒಂದೆ
ಪರಬ್ರಹ್ಮವು ಮಾಡಿದ ಪರತತ್ವವು ಒಂದೆ ||2||
ಗುರುವಾಕ್ಯ ಸೌಖೆ ಒಂದೆ
ಗುಪ್ತದೊಳ ಗುಂಭಾರ್ಥ ತಿಳಿವುದೊಂದೆ
ಇಟಪೂರೀಶನ ಧ್ಯಾನ ಒಂದೆ ಮನ ಒಂದೆ
ಸ್ಥಾವರ ಒಂದೆ ಸ್ಥಲ ಒಂದೆ ಸ್ಥಾವರಲಿಂಗ ಒಂದೇ ||3||
ತಿಳಿಯೋ ಜ್ಞಾನವ
ತಿಳಿಯೋ ಜ್ಞಾನವಾ ತಿಳಿಯೋ ಜ್ಞಾನವಾ
ತಿಳಿಯೋ ಜ್ಞಾನವಾ ||ಪಲ್ಲ||
ತಿಳಿಯೋ ನಿನ್ನೊಳು ಅವಗುಣಗಳ
ತಿಳಿದು ಪೊಳಿವಾ ಮಿಂಚಿನೊಳು
ಕಳವಳಿಸುವ ಮನ ನಿಲ್ಲಿಸಿ
ತಿಳಿಯೋ ನಿನ್ನೊಳು ತತ್ವ ವಿಚಾರವಾ ||1||
ಹುಚ್ಚನೆಂಬುವರೆಲ್ಲಾ ನಿನ್ನ
ಎಚ್ಚರಿಲ್ಲದೆ ಜ್ಞಾನವನು
ಶಾಂತನಾಗಿ ಯೋಗಧ್ಯಾನ ಮಾಡೋ
ಸಂಧಾನ ತಿಳಿಯೋ ||2||
ಮರವಿನೊಳಗೆ ಅರಿವು ಅಕ್ಷರ
ಕುರಹು ತಿಳಿಯದೆ ನೀವು
ಗರ್ವಲಿಂದಾಡುವದ್ಯಾಕೊ ಮುರಿದಾನಲ್ಲಿ
ಇಟಪೂರೀಶನಾ ತಿಳಿಯೋ ಜ್ಞಾನವಾ ||3||
ಏನಂತ ಹೇಳಲಿ ಸದ್ಗುರು ರಾಯ
ಏನಂತ ಹೇಳಲಿ ನಾ ಸದ್ಗುರುರಾಯ
ಹೇಳಿದ ಏಕಾಂತವ ಏನಂತ ಹೇಳಲಿ
ಹೆಸರಿಲ್ಲದಕ್ಷರ ಪಸರಿಸಿ ಮನದೊಳು
ಬೀಜ ಬಿತ್ತಿದ ತಂದೆ ||ಪಲ್ಲ||
ಏಕೋ ಚಿತ್ತಾನಂದ ಏಕೋ ಧ್ಯಾನ
ಏಕೋ ನಾಮಸ್ಮರಣೆಯನು ಮೂಕನಾಗಿ
ತಿಳಿವಂಥ ಮೂಲಮಂತ್ರ ಓಂಕಾರ
ಜಪಸ್ತೋತ್ರ ಝೇಂಕಾರ ಜನ್ಮದೊಳು ||1||
ನಂಬು ನೀ ಶಂಭುವನೆ ನಂಬಿದವಗೆ
ಹಿಂಬಾಲಿರುತಿರುವನೋ
ಶಂಭು ಫಾಲನೇತ್ರ ಶಂಭೋ ಶಂಕರ
ಲೀಲಾಮೃತ ಸುರಿವಂತೆ ಆತ್ಮ ವಿಚಾರವನು ||2||
ಲಿಂಗವೆ ಆಕಾಶವು ಅಂಗದೊಳಗೆ
ಲಿಂಗವಿರುವದು ಶಿವಪೂರ ಕಂಗಳೊಳಗ
ಮೆರಿವ ಹೊಳಿವ ಮುಂಚುಗಳೆಲ್ಲಾ
ಥಳಥಳಿಸುವದೋ ಇಟಪೂರೀಶಾ ಬಲ್ಲಾ ||3||
ಯೋಗ ತಿಳದು ಬಾಗಿರಬೇಕು
ಹ್ಯಾಂಗಿರಬೇಕೋ ಹ್ಯಾಂಗಿರಬೇಕೋ
ಯೋಗಿ ತಾನಾದವ ಹ್ಯಾಂಗಿರಬೇಕೋ
ಬಾಗಿ ಬಾಗಿ ಸಂಸಾರ ಮಾಡಿ ಮನದೊಳ ಶಿವ
ಯೋಗ ತಿಳದು ಬಾಗಿರಬೇಕೋ ||ಪಲ್ಲ||
ಕಂಗಳೊಳಗಿನ ಬೆಳದಿಂಗಳಂತೆ
ಲಿಂಗಮನ ಪಾಕೀಜಾಗಿರಬೇಕೋ
ಜಂಗಮಲಿಂಗಾ ಜಗಭರಿತನ| ಗುರು
ಭಜನಿಯ ಮಾಡಿ ಕೊಂಡಿರಬೇಕೋ ||1||
ನಾದಬ್ರಹ್ಮದೊಳು ವೇದಶಾಸ್ತ್ರದ
ಮೂಲಕೀಲ ತಿಳಿದುಕೊಂಡಿರಬೇಕೋ
ದಾನಧರ್ಮ ಮಾಡಿ ಜಗದೊಳು | ಶಿವ
ಧ್ಯಾನದೊಳಗೆ ತಾ ಇರಬೇಕೋ ||2||
ಭೋಗ ಬಿಟ್ಟು ವೈರಾಗ್ಯ ತೊಟ್ಟು
ವಿರಕ್ತನಾಗಿ ತಾನಿರಬೇಕೋ
ಇಟಪೂರೀಶನ ಧ್ಯಾನವು ಮಾಡಿ | ಶಿವ
ಘಟದೊಳು ತಿಳಕೊಂಡಿರಬೇಕೋ ||3||
ಏನು ಹೇಳಿದಿ ಗುರುವೇ ಎನಗೆ ನೀ
ಏನು ಹೇಳಿದಿ ಗುರುವೇ ಎನಗೆ ನೀ ಒಲಿದು
ಭಾನುಶೇಖರ ಮಹಾನುಭಾವ ಭಕ್ತಿಯನು ||ಪಲ್ಲ||
ಸಾರಸುಖವನು ಎನಗೆ ತೋರಬೇಕೆನುತ
ಮಾರಹರನೆ ನಿನ್ನ ಸ್ತುತಿ ಮಾಡುವೆನು
ನಿನ್ನ ನಾಮಾಂಕಿತವು ನಿಜ ಹೌದೆಂದು
ಸಾರುವೆನು ಶಶಿಧರನೆ ನಾಮ ಉಸುರುವೆನು ||1||
ಕಾಯ ಗುಣಗಳಲಿ ಸಿಲಿಕಿ ಮಾಯೆ ಪಾಶವು ಮುಸುಕಿ
ಆಯಾಸದೊಳು ನೊಂದೆ ನಾ
ರಾಯ ರಾಯರಿಗೆಲ್ಲ ಮೀರಿದಂಥನುಭಾವ
ದಯಮಾಡಿ ನೀನಿನ್ನು ದಾರಿ ತೋರಿಸಿ ||2||
ಪರತತ್ವ ಜ್ಞಾನಭರಿತ ನೀನೆಂದು
ಸ್ಥಿರಮುಕ್ತಿ ಪದವಿಯನು ಬೇಡುವೆ ಕರುಣದಲಿ
ಇಟಪೂರಿ ವೀರಮಹೇಶ ತಾ
ಅನುವು ತಿಳಿಸಿ ಮನದ ಭ್ರಮೆಯ ಅಳಿಸಿದಾ ||3||
ನೀ ಕಾಣದಿರಲು ಉಳಿಯದು ಪ್ರಾಣ
ನೀ ಕಂಡರೆ ಮನ ಸಮಾಧಾನ
ನೀ ಕಾಣದಿರಲು ಉಳಿಯದು ಪ್ರಾಣ ||ಪಲ್ಲ||
ಸಾಧನದೊಳು ನೀನಿರಲು
ಸಂಭ್ರಮ ಇರುಳು ಹಗಲು
ಚದುರ ನೀ ಎನ್ನನಗಲಿರಲು
ಎದೆಯೊಳು ಭುಗಿಲು ಭುಗಿಲು ||ಅ.ಪಲ್ಲ||
ಭಾರಿ ಕೃಪಾಭರಣ ನಿನ್ನದು
ವಾರಿನೋಟ ಒನಪು ನನ್ನದು
ಬೆರೆಯದೆ ತತ್ವವನರಿದು
ಭೋಗಕೊಲಿವದು ಅಳಿಮನ ನಮ್ಮದು ||1||
ಹೆತ್ತ ತಾಯಿ ತಂದೆ ಸುಳ್ಳೆ
ಅತ್ತೆ-ಮಾವ ಮೈದುನರನ್ನೊಲ್ಲೆ
ಎತ್ತ ಭಾವಿಸಲೇನು ಹುರುಳಿಲ್ಲ
ಚಿತ್ತ ನಿನ್ನೊಳು ಸಿಲುಕಿದೆಯಲ್ಲ ||2||
ಹಿಂದಿನ ಸುಕೃತದಭಿಲಾಷೆ
ಮುಂದುಗೊಂಡಾಯಿತು ಮನ ಮೋಸ
ಇಂದುಧರ ಇಟಪುರೀಶ
ತಂದೆ ಆನಂದ ಪ್ರಾಣೇಶ ||3||
ಗೊತ್ತು ಗುರಿಯ ತಿಳಕೊಳ್ಳಮ್ಮ
ಮರೆಯದಿರೆನ್ನ ಮನೋಹರನ ನೀ
ಮರೆಯದಿರಮ್ಮ ಅನವರತ ||ಪಲ್ಲ||
ಮರೆಯದಿರು ಮಹಾ ಗುರುವಿನ ಚರಣವ
ಮರಳಿ ಈ ಜನ್ಮ ದೊರೆವುದು ದುರ್ಲಭ ||ಪ.ಪಲ್ಲ||
ಏನೋ ಭಾವದಿ ನೀನಿಂದು
ಸಾಕು ಸಾಕು ಈ ಸಂಸಾರ ಎಂದು
ಏಕೋ ಧ್ಯಾನದಿ ಸಾಕಾರ ಮಾಡಿಕೊ
ಏಕೈಕನೆನಿಸುವ ತ್ರಿಲೋಕದೊಡೆಯನ ||1||
ಸತ್ಯ ವಾಕ್ಯವ ನಮ್ಮ ಸಹಜವು
ಗೊತ್ತು ಗುರಿಯ ತಿಳಕೊಳ್ಳಮ್ಮ
ನಿತ್ಯ ನಿರ್ಮಲ ನಿಜಪದ ಸೇವಿಸಿ
ಮುಕ್ತಳಾಗು ನೀ ಮುಕ್ತಿಯ ಪಥವಿದು ||2||
ಏಸೊ ದಿನದ ಕಾಯಾ ಒಂದಿನ
ನಾಶಗೊಳುವದು ಫಾಸಿ ಮಾಡಿ
ಸಾಸಿರ ನಾಮವು ಸಾಲದೆನುತಲಿ
ಮೋಸವಾಗದಿರು ಇಟಪುರೀಶನೊಳು ||3||
ಬೇಡುವೆ ಸದ್ಗುರು ರಾಯ
ಬೇಡುವೆ ಸದ್ಗುರು ರಾಯ | ಅಭಯವ
ಬೇಡುವೆ ಸದ್ಗುರುರಾಯ ||ಪಲ್ಲ||
ಬೇಡುವೆ ಕರದ್ವಯ ಜೋಡಿಸಿ ಶಿರ ಬಾಗಿ
ಬೇಡಿದಾಕ್ಷಣ ದಯಮಾಡೋ ದಯಾವಂತ ||ಅ.ಪಲ್ಲ||
ವೈರಿ ಕಂಟಕ ಬಂದೊದಗಲಾರದಂತೆ
ಧೈರ್ಯ ಬರಿಸಿಯೆನಗೆ ಶೌರ್ಯ ತರಿಸುವಂಥ ||1||
ಭ್ರಾಂತಿ ಹಲವು ಚಿಂತೆ ಬರಿ ಭ್ರಮೆಯಲಿ ಕುಂತೆ
ಭ್ರಾಂತಗೊಳ್ಳದೆ ಮನ ಶಾಂತನಾಗಿರುವಂಥ ||2||
ಯುಕ್ತಿ-ಶಕ್ತಿಯಲಿಂದ ಇಟಪುರೀಶನೆ ನಿಮ್ಮ
ಭಕ್ತಿ ಬೆರೆದು ಜೀವನ್ಮುಕ್ತಿ ದೊರಕುವಂಥ ||3||
ಆರು ನಾನೆಂದು ವಿಚಾರಿಸಿ ನೋಡು
ಗುರು ಧ್ಯಾನವ ಮಾಡೋ | ಪಾವನಾ
ಪಾರು ಮಾಡುವ ತ್ರಿಪುರದೊಡೆಯ ||ಪಲ್ಲ||
ಘೋರದೊಳು ಆದಿ ಮನೆ ಮಾರು ನಿನ್ನದೇನೊ
ಆರು ನಾನೆಂದು ನೀ ವಿಚಾರಿಸಿ ನೋಡೋ ||1||
ಇಂದು ನೀ ಜ್ಞಾನ ಹೊಂದಿದರೆ ಭವ ಭವ
ಬಂಧನ ಬಿಡುವದಾನಂದದೊಳಾಡೋ ||2||
ಆಸೆಯಳಿದು ಪರರ ಉಲ್ಲಾಸದೊಳನುದಿನ
ಲೇಸಾಗಿ ಇಟಪುರೀಶನೊಳು ಕೂಡೋ ||3||
ಇಬ್ಬರು ಒಂದೆ, ಅಲ್ಲ ಬ್ಯಾರೆ
ನಮ್ಮ ಗುರುವು ಹೇಳಿದ ಮಾತು
ನಮ್ಮ ಅರಿವಿಗೆ ಸರಿ ಬಂತು
ಒಮ್ಮನ ಅಕ್ಕಿ ತಂದು ಥಳಿಸಿ
ಸುಮ್ಮನೆ ಇರುವಂಥದ್ದು ||ಪಲ್ಲ||
ಬಂಗಾರದುಂಗುರ ಉಡುದಾರಕ್ಕಿಂತ
ಶೃಂಗಾರ ಲಿಂಗನ ಸ್ಮರಣೆಯು
ಲಿಂಗ ಒಂದೆ ಜಂಗಮ ಒಂದೆ
ಇಬ್ಬರು ಒಂದೆ ಅಲ್ಲ ಬ್ಯಾರೆ ||1||
ಪ್ರಾಣ ಒಂದೆ ಪ್ರಣವವು ಒಂದೆ
ಪ್ರಣವದೊಳಗಿನ ಪ್ರೀತಿಯು ಒಂದೆ
ಕಾರಣ ಒಂದೆ ಕಾಮಿತವು ಒಂದೆ
ಶರಣರು ಒಂದೆ ಗುರುವು ತಂದೆ ||2||
ಲಕ್ಷಣ ಒಂದೆ ಅಪೇಕ್ಷೆಯೊಂದೆ
ಸಚ್ಚಿದಾನಂದ ಸದಿಚ್ಛೆ ಒಂದೆ
ಮೋಕ್ಷ ಒಂದೆ ಮುಮುಕ್ಷು ಒಂದೆ
ಇಟಪುರೀಸನ ಧ್ಯಾನ ಒಂದೆ ||3||
ನೀನೆ ಪರಬ್ರಹ್ಮ
ಅಲ್ಲಲ್ಲಾ ಇಲ್ಲಿಲ್ಲಾ ಶಿವನಲ್ಲಿಲ್ಲ ಶಿವನೆಲ್ಲಿಲ್ಲಾ
ನಿನ್ನ ನೀ ತಿಳಿ ನೀನೆ ಪರಬ್ರಹ್ಮನಲ್ಲಾ ||ಪಲ್ಲ||
ಆರು ಶಾಸ್ತ್ರವ ಓದಿದರಿಲ್ಲ
ಮೂರಾರು ಪುರಾಣ ಮುಗಿಸಿದರಿಲ್ಲ
ಘೋರ ಸಂಸಾರದ ಸತಿಯಳ ಬಿಟ್ಟು
ಯಾರೂ ಇರದ ಅಡವಿ ಸೇರಿದರಿಲ್ಲ ||1||
ಗುಡ್ಡ ಗಂವ್ಹಾರ ಸೇರಿದರಿಲ್ಲ
ಗಡ್ಡ ಜಡೆಯ ಬಹಳ ಬೆಳಸಿದರಿಲ್ಲ
ದೊಡ್ಡವರೆಂದು ಕರ ಮುಗಿದರೂ ಇಲ್ಲ
ಗೊಡ್ಡಾಕಳಿನಂತೆ ಚರಿಸ್ಯಾಡಿದರಿಲ್ಲ ||2||
ಕರ್ಣಕೆ ನಖ ಊರಿ ಕೂಗಿದರಿಲ್ಲ
ಧರ್ಮಶಾಸ್ತ್ರ ಪಠಿಸಿದರಿಲ್ಲ
ನಿರ್ಮಲ ಮನದೊಳು ಇಟಪುರೀಶನನರಿಯದೆ
ಬೆರಳೊಳು ಜಪಮಣಿ ಎಣಿಸಿದರಿಲ್ಲ ||3||
ಕಣ್ಣಾರೆ ನೋಡೊ
ಕಣ್ಣಿನೊಳು ಕಣ್ಣಾರೆ ನೋಡೋ
ನಿನ್ನೊಳು ನೀ ಕಿರಿಗಣ್ಣಿನಲಿ ಒಡಗೂಡೋ ||ಪಲ್ಲ||
ಗಂಗೆ ಯಮುನೆಯರೆಂಬ ಸಂಗಮದೊಳು ಮಿಂದು
ಗಂಗಾಧರನ ಸ್ತುತಿ ಮಾಡೋ ||1||
ಲಜ್ಜೆ ನಾಚಿಕೆ ಬಿಡೋ ಸಜ್ಜಾಗಿ ಸಾವಧಾನದಿ |
ಹೆಜ್ಜೆ ಹೆಜ್ಜೆಗೆ ಹೆಣಗಾಡೋ ||2||
ಲಕ್ಷವು ನೀಡೊ ಬಹು ಸೂಕ್ಷ್ಮ ತರದಿಂದೆ
ಸಾಕ್ಷಾತ್ ಪ್ರಭುವ ಕೊಂಡಾಡೋ ||3||
ಕಾಗೆಯಂದದಿ ನೀ ಕೂಗಿ ಕೂಗಿ ಬರೆ
ಯೋಗ ಸಾಧಿಸಬ್ಯಾಡೋ ||4||
ನೋಟ ಕೂಟವು ಬಲಿದು ಇಟಪುರೀಶನೊಳು
ಬೂಟಕತನವ ಬಿಡೋ ||5||
ಗುರುರಾಯ ಚಿಂತಿ ಪರಿಹರಿಸು
ಎಂಥಾತ ಗುರುರಾಯಾ ಚಿಂತಿ ಪರಿಹರಿಸಿದಾ
ಮನೋಹರ ತಾ ಕುಂತ ಏಕಾಂತದೊಳು
ಚಿಂತ್ಯೊಂದೆ ಶಿವಲೀಲಾ ಮತ್ತೇನು ಬ್ಯಾರಿಲ್ಲಾ
ಮನು ಮುನೀಶ್ವರನ ಧ್ಯಾನ ||ಪಲ್ಲ||
ಪೂರ್ಣದಯಾ ಅಂತರಂಗ
ಎನ್ನ ಕಾರಣಕರ್ತ ಶಿವಲಿಂಗ
ಮಣಿಗುಣಸ್ತೋಮಾ ಅಣುರೇಣುತೃಣಕಾಷ್ಠ
ಪ್ರಣಮ ಬೀಜಮಂತ್ರ ಬಿತ್ತಿದೆ ನೀನೇ ತಂದೆ ||1||
ಸುತ್ತೇಳು ಲೋಕಕ್ಕೆ ಸುಗುಣಾ
ಸತ್ತು ಚಿತ್ತು ಆನಂದ ಸರ್ವೇಶಾ
ಹೊತ್ತು ಹೋಗುವುದು ಗೊತ್ತು ಉತ್ತಮ ಉಪದೇಶಾ
ಗೊತ್ತು ತಿಳಿದುಕೊಂಡು ಉತ್ತಮರಾಗುವದು ||2||
ಉರವಿಗೆ ಅಧಿಕ ಗುರುರಾಯಾ
ದುರ್ಜನರ ಹಲ್ಲು ಮುರಿವಾ
ಪರಿಹಾರ ಮಾಡುವ ಪಾಪಕರ್ಮಗಳೆಲ್ಲ
ಪಂಕಜಲೋಚನ ಇಟಪೂರೀಶಾ ||3||
ದೇಶ ತಿರುಗುವದ್ಯಾಕೊ
ಮಾಡೆಲೋ ಮಾನವಾ ಮಾಡೆಲೋ ಧ್ಯಾನವ
ಗಂಟುಗಳ ನಮ್ಮ ನೆಂಟ ಒಂಟಿಲಿರುವನು
ಅವನೇ ತೊಂಟ ಕಂಟಕ ಪರಿಹಾರ ಮಾಡುವನು
ಬಂಟ ಬಹು ಸೂರಾ ||ಪಲ್ಲ||
ಸಾಚಾ ಅವನು ವಂಚಕನಲ್ಲಾ
ಹಂಚಿಕಿ ಯಾರಿಗೆ ತಿಳಿಯೊಣಿಲ್ಲಾ
ಮುಚ್ಚಿಕೊಂಡಿರುವನಲ್ಲಾ
ಸಂಚಾರ ಮಾಡುವನು ಎಲ್ಲಾ ||1||
ದಾರಿಗಿ ನಿಲುಕುವನಲ್ಲಾ
ಚೂರಿ ಪಾತಕನೆಂಬುವದಲ್ಲಾ
ಮೀರಿದವರಿಗೆ ಗಂಡನಲ್ಲಾ
ಅರಣ್ಯದೊಳು ಸೇರಿರುವನಲ್ಲಾ ||2||
ನಾಸ್ತಿಕ ಅಲ್ಲಾ ಅವನೂ
ನಾಸ್ತಿಕನಂದಾ ನೀನೇ ಅವನು
ದೇಶ ತಿರುಗುವದ್ಯಾಕೋ ಇನ್ನೂ
ಈಶಾ ನಿನ್ನೊಳು ಇಟಪೂರೀಶಾ ||3||
ಮಂಗಳಾರುತಿ ಬೆಳಗಬೇಕಮ್ಮ
ಮಂಗಳಾರುತಿ ಬೆಳಗಬೇಕಮ್ಮ
ಪಾರ್ವತೀಶನಿಗೆ
ಮಂಗಳಾರುತಿ ಬೆಳಗಬೇಕಮ್ಮಾ
ಅಂಗಲಿಂಗ ಸಂಗಭರಿತ ಗಂಗಾಧರನಿಗೆ ||ಪಲ್ಲ||
ಕಾಲ ಕಾಲ ಮೂಲ ಮೂಲ
ಶೀಲ ಶಂಕರಗೆ
ಬಾಲಮೌಳಿಚಂದ್ರ ಮುನಿ
ಪಾಲದೇವನಿಗೇ ||1||
ಅಜಹರಿ ಸುರರ ಅನುವು
ಮೀರಿದವನಿಗೆ
ಗಜಚರ್ಮಧರಿಸಿದವನಿಗೆ
ಗೌರಿನಾಥನಿಗೆ ||2||
ಅವನಿಯೊಳಗ ಇಟಪೂರೀಶ
ವೀರಭದ್ರನಿಗೆ
ಪಾವನಮೂರ್ತಿ ದೇವನಿಗೆ
ಪರಮಾರ್ಥನಿಗೆ ||3||
ಆರತಿ ಬೆಳಗಿರೆ ಸಿದ್ಧಲಿಂಗನಿಗೆ
ಮಂಗಳಾರುತಿ ತಂದು ಬೆಳಗಿರೆ ಸಿದ್ಧಲಿಂಗನಿಗೆ
ಮಂಗಳಾರುತಿ ಕಂಗಳೊಳ ಬೆಳ
ದಿಂಗಳಾತ್ಮದ ಅಂಗ ಮಹಿಮನಿಗೆ
ಜಯ ಜಯ ಮಂಗಳಾರುತಿ ||ಪಲ್ಲ|
ಸಾರ ಹೃದಯದ ಸಾರ ಸವಿಸುಖ
ಮೀರಿ ಚರಿಸುವ ಮಾರಮರ್ದನನಿಗೆ ||1||
ಕ್ಷೇತ್ರಪಾತ್ರ ವಿಶಾಲನೇತ್ರ
ಮೋಕ್ಷದಾಯಕ ಕೀರ್ತಿ ಶಂಕರಗೆ ||2||
ಆನಂದ ಮನದೊಳು ಬಂದು ನಿಂದು
ಚಂದ ತೋರುವ ಚಂದ್ರವದನನಿಗೆ ||3||
ಕಾಲಮದಹರ ಮೂಲ ಮೂರುತಿ
ಇಟಪೂರೀಶನಿಗೇ ||4||
ನಾದವ ಕೇಳಿರಣ್ಣಾ ಶಿವ
ನಾದವೆ ಪರಬ್ರಹ್ಮವಸ್ತು ನೋಡಣ್ಣಾ ||ಪಲ್ಲ||
ಅಂಡಪಿಂಡ ಬ್ರಹ್ಮಾಂಡ ಭೂ
ಮಂಡಲಮಯವಾಗಿ ನುಡಿವುದಣ್ಣ
ನುಡಿಗಳು ಕೇಳಿರಣ್ಣ
ನುಡಿ ಒಳಗೆ ಹೊರಗ ಒಂದೇ ತಾನೇ ತಾನಣ್ಣ ||1||
ನಾನು ನಾನೆಂದೆನಬೇಡಾ
ನಾನು ನೀನೆಂದು ತಿಳಿಯದೆ ಕೆಡಬೇಡ ಮೂಢಾ
ಮುಂದೆ ಬಹು ನೊಂದು ಕೇಡಾ
ಚಂದದಿಂದಲಿ ತಿಳಿಯೊ ನೀನೊಂದು ಪಾಡಾ ||2||
ಆತ್ಮದೊಳಗೆ ಆನಂದ ಶಿವ ಮಹಾತ್ಮೆಯ
ತಿಳಿಯೋ ನೀನು ಗೊತ್ತದರಿಂದ
ಮತ್ತೇನು ಬ್ಯಾರಿಲ್ಲಾ ಮುಂದೆ
ಮುತ್ಯಾ ಇಟಪೂರೀಶನ ಕರುಣದಿಂದ ನಾದವು ಕೇಳಿರಣ್ಣ ||3||
ಪಾತರಗಿತ್ತಿ ಸಂಗ
ಪಾತರಗಿತ್ತಿ ಸಂಗ ಮಾಡಿದರೆ ಪುಣ್ಯವೇನೋ
ನಿಮಗೆ ಪುಣ್ಯವೇನೋ
ಪಾತೇ ಕೊಟ್ಟು ಪಾಪ ಗಳಿಸಿಕೊಂಬುವದೇನೋ ||ಪಲ್ಲ||
ವೇದ ಶಾಸ್ತ್ರ ಓದಿ ಓದಿ ತಿಳದಿ ಏನೋ
ನೀನು ತಿಳದಿಯೇನೋ
ಗದ್ದಿಕೋರ ವಾದಿ ಪಂತಗಳು ಅವುದೇನೋ
ನೀ ಆಡುವದೇನೋ ||1||
ಸತ್ಯವಂತರು ಸತ್ಯ ವಚನ ಸಾರುವದೇನೋ
ಅವರು ಸಾರುವದೇನೋ
ಹೊತ್ತು ಹೋಗುವಾ ಗೊತ್ತು
ನೀ ತಿಳಿಯಬಾರದೇನೋ ||2||
ಕರ್ತು ಗುರುವಿನ ಪಾದ ಪಿಡಿಯುವ ತನಕ
ತಿಳಿಯುವದೇನೋ
ಇಟಪೂರೀಶನ ಧ್ಯಾನ ಮಾಡುವದೇನೋ ||3||
ಶಾಸ್ತ್ರ ಓದುವದೇನೋ ಮನುಜಾ
ಶಾಸ್ತ್ರ ಓದುವದೇನೋ ಏ ಮನುಜಾ
ಶಾಸ್ತ್ರದೊಳಗ ಏನು ಇಲ್ಲಾ
ಶಾಸ್ತ್ರ ಹೇಳುವದೆಲ್ಲಾ ಅಪಾತ್ರದೊಳಾಗುವದೇ
ಸೂತ್ರದಾರ ಒಳಗೆ ಸುಶೀಲವು ತಿಳಿಯದೇನೋ ||ಪಲ್ಲ||
ಕತ್ತಲ ಮನಿಯೊಳಗೆ ಹೊತ್ತು ಹೋಗುವ
ಗೊತ್ತು ತಿಳಿಯಬೇಕಿನ್ನು ಮತ್ತೇನು ಬ್ಯಾರಿಲ್ಲಾ
ಉತ್ತಮ ಉಪದೇಶ
ಗೊತ್ತು ತಿಳಿದ ಮ್ಯಾಲೆ ಸತ್ತರೆ ಚಿಂತಿಲ್ಲಾ ||1||
ನಾನೂ ಬಲ್ಲವನೆಂದು ಪೇಳಿದರೆ
ನಿನಗೇನು ಬಂತು ಇನ್ನು
ನೀನು ಮಾಡಿದ ಕರ್ಮ ಬಿಟ್ಟು ಹೋಗುವದೇನೋ
ಏನು ಎಂದು ನರಕದೊಳಾಗುವರೇ ||2||
ಸುಳ್ಳೆಂದು ಪೇಳುವಂಥಾ ಅಜ್ಞಾನರಿಗೆ
ಸುಜ್ಞಾನ ಏನು ಅವು
ಇಟಿಪೂರೀಶನ ಮಹಿಮಾ ತಿಳಿಯದೆ
ವಟವಟ ಕೊಂಡಾಡಿದರೇನು ಫಲವಿಲ್ಲ ||3||
ಏನು ಹೇಳಲಿ ನಿನ್ನ ಮಹಿಮೆ
ಏನು ಹೇಳಲಿ ಶಿವನೆ ನಿನ್ನ ಮಹಿಮೆಯನು
ಮಾಣದೇಕೋ ಚಿತ್ತ ಜ್ಞಾನದೊಳು ನೀನು
ಕಾನನ ನಗರದೊಳು ಕಾಣದರಸುವ ತತ್ವ
ಜ್ಞಾನ ತಾನರಿಯದವ ಕಾಣನವನು ||ಪಲ್ಲ||
ಕಾಯದೊಳು ತಿಳಿಯದೆ
ಬಾಯಿ ಬಣ್ಣರು ಮಾತು ವಾಕ್ಯಗಳು
ನುಡಿವರು ಮೂಢ ಜನರು
ಕಾಣಬೇಕೆಂದೆಂದು ಶಿವನ ||1||
ಪುಂಡ ಜನರು ಎಲ್ಲಾ
ಮಂಡಲಪತಿ ಮಹಿಮಾ ಕಂಡವರಿಲ್ಲಾ
ಅಂಡಪಿಂಡಾಂಡದೊಳಾನಂದ ಭರಿತಾದ
ಬ್ರಹ್ಮಾಂಡಮಯವಾದ ಯೋಗಿ ಬಲ್ಲ ||2||
ಶ್ರೀಗುರು ಇಟಪೂರಿ ವೀರಭದ್ರನೆ
ದೇವಾ ಪರಮಾನಂದದಿ
ಪ್ರಣವ ತಾನೆ ಕರುಣಾಸಾಗರ ಮೂರು
ಪರಕೆ ಪರತರವಾದ ಪರಮಕೀರ್ತಿ ||3||
ದೇವರು ಏಲ್ಲ್ಯೋ ನೀವಿಲ್ಲೋ
ನಮ್ಮ ದೇವರೆಂಬವುದು ಏನೋ |
ನಿಮ್ಮ ದೇವರು ಏಲ್ಯೋ ನೀವಿಲ್ಲೋ
ನಮ್ಮ ದೇವರು ನಿಮ್ಮ ದೇವರು ಎಲ್ಲಾ ಒಂದಲ್ಲೇನೋ
ತಮ್ಮಾ ನೀನೇ ತಿಳಿದರೆ ನೀನೇ ದೇವರು ನಿನ್ನ ಬಿಟ್ಟು ದೇವರಿಲ್ಲಾ ||ಪಲ್ಲ||
ಅಂಗೈದೊಳಗ ನೀ ಕುಂತಿ
ಆಗಮ ಪುರಾಣ ಓದಿ ಓದಿ ತಿಳಿಯಬೇಕಂತಿ
ಯೋಗ ಧ್ಯಾನ ಬಾಗಿಲೊಳಗೆ ಜಾಗಾ ತಿಳಿಯೋ
ಬಾಗಿ ತಿಳಿಯದೆ ಬಾಗಿ ನಡೆಯದೆ ಬಟ್ಟ ಬಯಲಾಗುವುದೇನೋ ||1||
ಮೂರ್ಖ ಗುಣ ಅತಿ ಮೂರ್ಖಾ ನೀ ಬಿಡೋ
ಕರ್ಗಸದಿಂದಾ ಕರಕರ ಯಮ ಕೊಯಿಸುವ ನೋಡೋ
ನಾಮ ಒಂದೆ ರೂಪ ಒಂದೆ ಕ್ರಿಯಾ ಒಂದೆ ಜಪವು ಒಂದೆ
ಶಾಸ್ತ್ರ ಒಂದೆ ದಾರಿ ಒಂದೆ ದಾರಿ ತಿಳಿದರೆ ದೇವರೊಂದೆ ||2||
ಕಾಲಾ ತಿಳಿದು, ಮೂಲಾ ನೀ ತಿಳಿಯೋ ಆಲಿಸಿ ಮನದೊಳು
ಪಾಲಿಸು ನಿಧಾನ ನೀ ಮಾಡೋ ಮೂಲ ತಿಳಿಯದ ಮೂರ್ತಿದಾರೋ
ಬಾಲನಂತೆ ಎಲ್ಲರೊಳಗೆ ಶೀಲಾ ಸುಶೀಲಾ ಎಂಬೊ
ಭಾವ ಭಕ್ತಿ ತಿಳಿದವ ಇಟಪೂರೀಶಾ ||3||
ಕೆಡಕು ಮಾಡೋದ್ಯಾಕೋ
ಹರನ ಸ್ಮರಣೆ ಮಾಡಿ ಗುರು ಕರುಣದ ಪಡಕೊಂಡು
ಸ್ಥಿರಮುಕ್ತಿ ಪಡಿವುದ ಗುರು ಶಿಷ್ಯನೇ ಬಲ್ಲ ||ಪಲ್ಲ||
ಹಿರಿಯ ತಾನಾದ ಮ್ಯಾಲೆ
ಶಿರ ಬಾಗಿ ನಡೆದದ್ದೇ ಸಾಕ್ಷಿ
ನುಡಿದಂತೆ ನಡೆ ಇಲ್ಲಾ ನಡೆದಂತೆ ನುಡಿಯೋಣಿಲ್ಲಾ
ಕೆಡಕು ಮಾಡೋದ್ಯಾಕೋ ಬ್ಯಾಡ ಕಾಣಪ್ಪ ನೀ ||1||
ಜಂಗಮ ತಾನಾದ ಮ್ಯಾಲೆ ಜಾಣ ಕೇಳೋ
ಲಿಂಗೈಕ್ಯ ಸ್ಥಲ ಎಲ್ಲ್ಯಾದೋ
ಜಂಗಮ ಎಲ್ಲ್ಯಾದೋ ಲಿಂಗಸ್ಥಲ ಅಲ್ಲಿ
ಜಂಗಮ ಒಂದ ಲಿಂಗಸ್ಥಲ ಒಂದೆ ಮಂಗಾ ||2||
ಪರಿಚಾರಕರೆಲ್ಲಾ ಪಾಪಿಷ್ಟರು
ಪಾಪಕ್ಕೆ ಗುರಿಯಾಗುವರು
ಆ ಪರಬ್ರಹ್ಮನ ತಾನರಿಯದೆ ಇರುವದೆಂತು
ಕಪಟ ಗುಣದಿಂದ ಕಾಣೇನು ಇಟಪೂರೀಶಾ ||3||
ಮಂತ್ರ ಪಠಿಸಿದರೇನು ಫಲ
ಮನೋಹರನ ಧ್ಯಾನವ ಮಾಡದೇ
ಮನದೊಳು ಮಂತ್ರವ ಪಠಿಸಿದರೇನು ಫಲ ||ಪಲ್ಲ||
ಹಲವು ಮಂತ್ರಗಳು ಯಾಕೋ ಫಲವಿಲ್ಲಾ
ಸುಲಭದಿ ವಸ್ತು ತಿಳಿಬೇಕೋ
ಸುಲಭದಿ ಸುಷುಪ್ತಿ ಸುಜ್ಞಾನ ಸುಗುಣ ನಿನಗೆ
ಹಲವು ಹಂಬಲ ಬಿಟ್ಟರೆ ಏನೂ ಇಲ್ಲಾ ||1||
ಪ್ರಣವವೆಂಬ ಬೀಜಮಂತ್ರ
ಪ್ರಣವವನ್ನು ತಿಳಿಯದೆ ಗಣಿತ ಹಾಕುವದೇನೋ
ಎಣಕಿ ತಿಳಿಯದೆ ನೀನು ಏನು ಓದಿದರೇನೋ
ಗುರುವೊಂದಿರಬೇಕೋ ಗುಣಕಚ್ಛಾ ||2||
ಗುರುವು ಇಲ್ಲಾ ಗುರ್ತು ಅರಿವು ಇಲ್ಲದೆ
ಅರ್ಥ ವ್ಯರ್ಥ ಹೇಳಿದರೇನಿಲ್ಲ
ಇಟಪೂರೀಶನ ಘಟದೊಳು
ತಿಳಿಯದೆ ಘನವಾಕ್ಯ ಮಾಡಿದರಿಲ್ಲಾ ||3||
ಕಾಡಿನೊಳು ಕೂಡುವ ಕಾಡ ಸಿದ್ಧ
ಪದ ಹಾಡಬೇಕಂತೀರಿ ಪದ ಹಾಡಿದಲ್ಲಿ
ಪದವಿ ಬಂದೀತೇ ನಿಮಗೆ
ಪದದೊಳಗಿನ ಭೇದ ಪದ ಮಾಡಿದವ ಬಲ್ಲ
ಪಾದಪದ್ಮಂಗಳಿಗೆ ಪಾದಸೇವಕನಾ ||ಪಲ್ಲ||
ಆಧಾರ ಅಂಥರವೆಂಬೋ ಆತ್ಮಜ್ಞಾನ ಬೇಕು ನಿಮಗ
ಆಧಾರವೆಂಬಂಥ ಹದ ತಿಳಿದು
ಪದ ಮಾಡಿ ಹಚ್ಚಿ ಹೊಡೆದರೆ
ನಿಮಗೆ ಆಧಾರ ಸಿಕ್ಕೀತು ||1||
ಗ್ವಾಡಿಯ ಮರಿಯಲಿ ನೀವು ಕುಂತು ಗೋಳ್ಯಾಡಿದರೆ
ಗ್ವಾಡಿಕಾರ ನೀಡುವನಾ
ನಾಡಿನೊಳಗ ಇಂತ ಗಾರುಡಿಗ್ಯಾ ಇಲ್ಲಾ
ಬೇಡಿಕೊಂಡರೆ ಬಾರಾ ಬೇಡಿ ಉಂಬುವ ಅವನು ||2||
ಮನೆ ಮಾರು ಇಲ್ಲಾ ಅವನು ಹೋಗಿ
ಕಾಡಿನೊಳಗ ಕೂಡುವನು
ಕಾಡಿನೊಳು ಕೂಡುವ ಕಾಡಸಿದ್ಧ ಅವನು
ಬೇಡದಂತೈಶ್ಚರ್ಯ ಕೊಡುವ ಇಟಪುರೀಶಾ ||3||
ಹಸನಾಗು
ಹಸನಾಗದೆ ಕಣ್ಣು ಕಿಸಿದಲ್ಲೇನಾದೊ |
ಕಿಸಿವಂಥ ಬಗೆಯದು ಬೇರಾದೋ ||ಪಲ್ಲ||
ಕಸಿವಿಸಿ ಹಂಬಲ ಕಳೆದು ಕಣ್ಣು
ಕಿಸಿದು ನೋಡಿ ವಸ್ತು ವಶಮಾಡೊ ಜಾಣಾ ||ಅ. ಪಲ್ಲ||
ಅರಿವು-ಮರೆವು ಮೀರಿ, ಘನ ಮಹಾಧಾರದ
ಅರಿವುಳ್ಳ ಮಹಿಮಗೆ ಮರೆವು ಉಂಟೇ
ಮರೆವು ಮಾಯಾ ಎಂಬ ಪರದೆಯ ಹರಿದು ನೀ
ಪರಬ್ರಹ್ಮವ ಬೆರೆದು ಪಾರಾಗೊ ಜಾಣಾ ||1||
ಭ್ರಾಂತರಾಗದೆ ಮುಕ್ತಿ ಚಿಂತೆಯೊಳು ಮಸಣಿಸಿ
ಶಾಂತರಾದರು ನಮ್ಮ ಶಿವಶರಣರು
ಅಂಥಿಂಥ ಮಾತಲ್ಲ ಕಂತು ಹರನೆ ಬಲ್ಲ
ತಂತು ತಿಳಿದು ನಿಶ್ಚಿಂತನಾಗೊ ಜಾಣಾ ||2||
ಬಡಿವಾರ ನೀಗಿ ಬಾಗಿ ಸರ್ವರಿಗೆ
ಅಡಿವರ್ಗನಾಗಿ ನೀ ಮಡಿಯಬೇಕು
ಪೊಡವಿ ಪತಿಯಾದ ಇಟಪುರೀಶನ ಪಾದ
ವಿಡಿದು ಭವದ ಪಾಶ ಕಡಿದುಕೊ ಜಾಣಾ ||3||
ಬಯಲಿಗೆ ಬಯಲಾಕಾರ
ನೋಡು ನೋಡೆಲೊ ಕಾಣುತಾದೋ
ನಿನ್ನಯ ಕರಸ್ಥಳದೊಳಾಡುತಾದೋ ||ಪಲ್ಲ||
ನೋಡುತ ಎಡಬಲ ಹಾಡುತ ಆಡುತ
ಕೂಡಲೊ ಕೂಡಲಸಂಗಮ ದೇವತ ||ಅ. ಪಲ್ಲ||
ಏಳುತ ಮೇಲೇಳುತ ನಡೆಯೊ
ಏಳು ಸುತ್ತಿನ ಕ್ವಾಟಿ ದಾರಿ ಹಿಡಿಯೋ
ತಾಳುತ ಬಾಳುತ ತನುಮನ ಬಾಗುತ
ಮೇಲಗಿರಿಯ ಮನೆ ಸೇರಿ ನೀ ಮೆರಿಯೊ ||1||
ಜೀವ ಶಿವಗ ಭೇದ ಇಲ್ಲ | ನೀ
ಜೀವ ಭಾವವಳಿದರೆ ಬ್ಯಾರೆ ಇಲ್ಲ
ಸಾಯುವ ಹುಟ್ಟುವ ಯಾವ ಭಯಗಳಿಲ್ಲ
ಸಾವಧಾನದಿ ನೀ ಸಾಧಿಸಿಕೊಳ್ಳಲೊ ||2||
ಬಯಲಿಗೆ ಬಯಲಾಕಾರ | ನಿ
ರ್ಬಯಲೊಳು ಇಟಪುರ ಧೀರ |
ಬಯಲನೆ ಹಿಡಿಯುತ ಬಯಲನೆ ಪಡೆಯುತ
ಬಯಲ ಬ್ರಹ್ಮನೊಳು ಬಯಲಾಗಿ ಭಜಿಸುತ ||3||
ಅನ್ಯರ ಅಂಜಿಕೆ ಎನಗೇಕಯ್ಯ
ನಿನ್ನ ನಿಜವ ನಂಬಿದೆನಯ್ಯ
ಇನ್ನೆನಗಾರ ಭಯ
ಅನ್ಯರ ಅಂಜಿಕೆ ಎನಗೇಕಯ್ಯ
ಪನ್ನಂಗಧರ ಪೂರ್ಣ ದಯ ||ಪಲ್ಲ||
ಕತ್ತಲೊಳಗೆ ಹೊತ್ತುಗಳೆದು
ಅತ್ತಿತ್ತ ಎಳಸುತ್ತಿರಲು
ಕತ್ತಲಳಿಸಿ ನೀ ಭಕ್ತಿ ಮೂಗುತಿ
ಮುತ್ತು ತೊಡಿಸಲಾರ ಭಯ ||1||
ಅಂಧಕ ತಾ ಅಡವಿ ಬೀಳಲು
ಮುಂದಿನ ಮಾರ್ಗ ತಪ್ಪಿರಲು
ಬಂದು ಕರವ ಪಿಡಿದು ಮುಕ್ತಿ
ಮಂದಿರ ತೋರಿಸಲಾರ ಭಯ ||2||
ಏಸು ಎನ್ನಯ ಕರ್ಮ ದುರಿತ
ದೋಷವಳಿಸಿ ಇಂದು ಪರ್ಯಂತ
ವಾಸವಾಗಿರ್ದ ಇಟಪುರೀಶ
ವಿಶ್ವಾಸ ಮೂಡಿಸಲಾರ ಭಯ ||3||
ಭಕ್ತಿಯ ನಿಜ ಬಗೆಯನು ತಿಳಿಯಬೇಕು
ಗಂಡನೊಲಿದ ಮೇಲೆ ಘಟಿತಾರ್ಥದಲಿರಬೇಕು
ಕಂಡ ಕಡೆಯಲಿ ಕಣ್ಣು ಇರಿಸುವುದ್ಯಾಕೋ
ಭಂಡಗೇಡಿಯಂತೆ ಜನರೊಳು ತಿರುಗುತ
ಅನ್ಯರ ಮೇಲೆ ಮನಸಿಟ್ಟು ಮೆರೆಯುವುದಿನ್ಯಾಕೋ ||ಪಲ್ಲ||
ಕಾಯ ಪ್ರಾಯವ ನಂಬಿ ಕಾಮನ ಆಟದೊಳು
ಮಾಯೆ ಬಲೆಗೆ ಸಿಲುಕಿ ಮರೆತಿರಬಹುದೆ?
ನ್ಯಾಯದ ನುಡಿ ಹೇಳಿ ಪರನಾರಿಗರಸುತ
ಬಾಯಿ ಮಾತುಗಳಿಂದ ಬಡಿವಾರಿನ್ಯಾಕೋ ||1||
ಚಿಕ್ಕತನದ ಬುದ್ಧಿ ಚಿತ್ತ ಚಂಚಲದಿಂದೆ
ಧಿಕ್ಕರಿಸುವರೇನೋ ಧೀರ ಪುರುಷನ?
ಲೆಕ್ಕವಿಲ್ಲದ ಕಾವಲಿಕ್ಕಿ ಕಾಯುತಲಿದ್ದು
ಸೊಕ್ಕು ಮುರಿದ ಮೇಲೆ ಸೋಗು ಇನ್ಯಾಕೋ ||2||
ಭಕ್ತಿಯೆಂಬ ನಿಜ ಬಗೆಯನು ತಿಳಿಯದೆ
ಒಗ್ತನ ಹರಿಯುವುದೆ ವಾರಿಗಿ ವರನೊಡನೆ?|
ಯುಕ್ತಿಲಿ ಕೂಡಿನ್ನು ಇಟಪುರೀಶನೊಳು |
ಮುಕ್ತಿ ಪಡೆಯದೆ ಮೂಗು ಮುರಿವದಿನ್ಯಾಕೋ ||3||
ಮದನವೈರಿ ಅಮರತ್ವ ಕಂಡ
ಜೀವ ಕೊಡು ಲಿಂಗದಲಿ ಎಲವೊ ಜೀವಾತ್ಮ
ಜೀವ ಭಾವವಳಿದರೆ ಆಗುವಿ ನೀ ಪರಮಾತ್ಮ ||ಪಲ್ಲ||
ಜೀವ ಕೊಡುವ ಭಾವ ಹೇಳಿಕೊಡುವೆನು ಈಗ
ಸಾವಧಾನದಿ ತಿಳಿಯೊ ಸಾವಿಲ್ಲೆಲೋ ನಿನಗ ||ಅ.ಪಲ್ಲ||
ಅರಿವೆ ಗುರು ಎಂಬ ಬಿರುದು ಸಾರುತ ಮೊದಲು
ಮೆರೆಯುವ ಚಿದ್ಬಿಂದು ಲಿಂಗಮನನಾಗಲು
ವರ ಜಂಗಮ ಜಗದ್ಭರಿತೆಂಬುದು ನೆಲೆಗೊಳಲು
ಅರಿವು-ಆಚಾರದ ಸಂಭ್ರಮ ಇರುಳು ಹಗಲು ||1||
ಚದುರ ಮಾರ್ಕಂಡೇಯ ನಂಬಿ ತಾ ಪಡಕೊಂಡ
ಮದನ ವೈರಿಗೆ ಅಪ್ಪಿ ಅಮರತ್ವ ಕಂಡ
ಅದರಂತೆ ಆ ಪದವಿ ನೀ ಪಡೆಯೊ ಪ್ರಚಂಡ
ಎದುರಾರು ನಿನಗೆ ನೀನೇ ಯಮನ ಗಂಡ ||2||
ಮತ್ತೊಂದು ಬಯಸದೆ ಬಿಡು ನೀ ಹಂಬಲದಾಶಾ
ಅತ್ತಿತ್ತ ಮನ ಹರಿಯೆ ಆಗುವಿ ಅಪಹಾಸ್ಯ
ಸತ್ಯ ಸದ್ಗುಣ ಭಾವ ಸರಿಸು ದುರ್ಗುಣ ದೋಷ
ಇತ್ತ ಬಾರೆಂದಾಗ ಕರೆದಾನು ಇಟಪುರೀಶ ||3||
ಲಿಂಗ ಧ್ಯಾನಿ ಗಗನದಿ ವಾದ್ಯ ಕೇಳುವನು
ವರಭಕ್ತ ಲಿಂಗ ಧ್ಯಾನಿ ಗಗನದಿ ವಾದ್ಯ ಕೇಳುವನು ||ಪಲ್ಲ||
ಮೊದಲ ಪೀಠವೆ ಬಿಂದು ಆಮೇಲೊದಗುವ ನಾದ ಧ್ವನಿ
ಸದಮಲ ಗುಣ ಕಳೆಯದೆಯೇ ಖಣಿ
ಮುದದಿ ಸಂಪದದಿ ಇರುವ ನಮ್ಮ ಧಣಿ
ಗುರುಜ್ಞಾನಿ ಗಗನದಿ ವಾದ್ಯ ಕೇಳುವನು ||1||
ಹತ್ತು ವಾಯುಗಳು ಮತ್ತೊಡಗೂಡಿ ಉಸಿ-
ರೆತ್ತುವನದನರಿದು ಉನ್ಮನಿಯೊಳು
ಚಿತ್ತ ಪಲ್ಲಟನಾಗದೆ ಚಿನ್ಮಯನ ಬೆರೆದು
ತತ್ವಜ್ಞಾನಿ ಗಗನದಿ ವಾದ್ಯ ಕೇಳುವನು ||2||
ಜಗದ್ಭರಿತ ಜಯ ನಮ್ಮ ಇಟಪುರೀಶನ
ಜಯಿಸುವುದೇನಗಾಧ ಹಗಲು ಇರುಳು
ಮುಗಿದು ಕರ ಅಗಲದಿರುವನು ನಮ್ಮ ಧಣಿ
ಬ್ರಹ್ಮಜ್ಞಾನಿ ಗಗನದಿ ವಾದ್ಯ ಕೇಳುವನು ||3||
ಬಯಲೆ ಬ್ರಹ್ಮ
ಬಯಲೆ ಬ್ರಹ್ಮವೆಂದು ಭಜಿಸುವಾತನೆ ಶರಣ
ಬಯಲೆ ಭಕ್ತನ ಪ್ರಾಣ ಬಯಲೆ ಗುರು ಕರುಣ ||ಪಲ್ಲ||
ಭಯಭಕ್ತಿ, ನಿಜ ಮುಕ್ತಿ ನಂಬುಗೆ ನೆಲೆಗೊಂಡು
ಸ್ವಯಂ ಲಿಂಗ ಧುರೀಣ ಗೆಲಿದು ಜನನ ಮರಣ ||ಅ.ಪಲ್ಲ||
ಮಮಕಾರ ಮಾಯೆ ಕತ್ತಲನೊಳಗೊಂಡು
ನಿಮಿಷ ಮಾತ್ರದಿ ತಾ ನಿಶ್ಚಲನೊ
ಶಮೆ-ದಮೆ ಸಹಿತ ಸುಷುಮ್ನನಾಳವ ಪೊಕ್ಕು
ಶಮನೆ ಗಮನೆಯೆಂದು ಮೆರೆವ ಗಂಭೀರನೇ ||1||
ಹುಬ್ಬು ಕಿವಿ ನೇತ್ರ ದವಡಿ ನಾಲಿಗೆ ದಂತ
ಹಬ್ಬಬ್ಬಿ ಲಿಂಗಕ್ಕೆ ನುಗ್ಗುವನೋ|
ಕಬ್ಬು ಗಾಣಕೆ ಕೊಟ್ಟು ರಸವುಂಡ ಪರಿಯಂತೆ
ಉಬ್ಬುಬ್ಬಿ ಸುರಿವ ಅಮೃತ ಪಾನವನೋ ||2||
ಸಟೆಯು ಶಾಶ್ವತವಲ್ಲ ದಿಟವೆ ಕಾರಣವೆಂದು
ಘಟದ ದುರ್ಗುಣ ಗಣ ನಿಗ್ರಹಿಸುವನೋ
ನಿಟಿಲ ಭ್ರೂಮಧ್ಯದಿ ಸ್ಫಟಿಕ ಜ್ಯೋತಿಯ ಕಂಡು
ಇಟಪುರೀಶನ ಕೂಡ ಹಿಗ್ಗುತಲಿಹನೋ ||3||
ಬ್ರಹ್ಮಾನಂದ
ತಂದೆ ನೀ ಎನಗೆ ಎಂಥ ಪದವಿಯ ಕೊಟ್ಟಿ |
ಬ್ರಹ್ಮಾನಂದವ ತೋರಿದಿ ಮನ ಮುಟ್ಟಿ
ಅಂಧಕಾರ ಮಾಯಾ-ಮೋಹ ಸುಟ್ಟಿ ||ಪಲ್ಲ||
ರಾಮಲಿಂಗ ಎನ್ನ ಧಣಿಯು ಧವಳಾಂಗ
ರಾಯಚೂಟಿಯ ಶರಭ ಪೂರ್ಣ ಸರ್ವಾಂಗ
ರಾಜಾಧಿರಾಜ ಹೊಳೆಯುತಾನಂತರಂಗ ||1||
ಅಪ್ಪಾ ಇದು ಏನು ಆಶ್ಚರ್ಯಕರ |
ಮುಪ್ಪುರಾರಿ ಮರೆಯಲ್ಹ್ಯಾಂಗ ಉಪಕಾರ
ಅಪ್ಪಿಕೊಳಲು ಆಯಿತು ಪಾಪ ಪರಿಹಾರ ||2||
ಐದು ಐದು ಇಪ್ಪತ್ತೈದು ತತ್ವ!
ಅದರೊಳು ತೋರ್ಯಾದ ಲಿಂಗದ ಮಹತ್ವ
ಅನುವುಗೊಳಿಸಿ ಅಮಳ ಸುಖ ಪೂರ್ಣತ್ವ ||3||
ಅರ್ಥ ನೀನೇ ಅಷ್ಟ ಪದವಿ ನೀನೆ |
ಅರ್ತು ನೋಡುವ ಅಲ್ಲಮಪ್ರಭು ನೀನೇ
ಮೃತ್ಯುಂಜಯ ಮುಕ್ತಿದಾಯಕ ನೀನೇ ||4||
ಹುಟ್ಟು ಸಾವು ಹೋಯಿತು ಪ್ರಾಣೇಶ |
ಬಟ್ಟ ಬಯಲುಗೊಳಿಸು ಭವನಾಶ
ಗಟ್ಟಿ ಮುಟ್ಟಿದಾನೊ ನಮ್ಮ ಇಟಪುರೀಶ ||5||
ಮಾಡೊ ಸದ್ಗುರು ಸೇವಾ
ಮಾಡೋ ಮಗನೆ ಸದ್ಗುರು ಸೇವಾ
ಮಾಡೋ ಮಗನೆ ಸಾಧುರ ಸೇವಾ
ಮಾಡಿ ಭೇದವ ತಿಳಿದವನ್ಯಾರೋ
ಮೇದಿನಿಪುರದೊಡೆಯ ಹಾದಿ ನೋಡಲಿರುವ ||ಪಲ್ಲ||
ಕಪಟ ಗುಣವ ಬಿಟ್ಟು
ಗುಪ್ತ ಮಾರ್ಗದಲಿ
ಚಪಲತ್ವ ಇವನಂಥ
ಚಪಳನ ಕಾಣೆನೆಂದು ||1||
ಬುತ್ತಿ ಕಟ್ಟುವದ್ಯಾಕೋ
ಹೊತ್ತು ತಿರುಗುವದ್ಯಾಕೋ
ತುಪ್ಪ ಬಾನ ಉಂಬುವಂಥ
ತಾತ್ಪರ್ಯ ಬೇಕೆಂದು ||2||
ಅರಗಳಿಗಿ ಗುರುಕೃಪಾ
ಕರುಣವು ಪಡಕೊಂಡು
ಶರಣ ಸೇವಕನಾಗೋ
ಇಟಪೂರೀಶಾನ ||3||
ನ್ಯಾಯವಾದಿ ಯಾರ ಗುಮಾನೆ
ಯಾರ ಗುಮಾನೆ ಇನ್ಯಾರ ಅವಸರ |
ಯಾರ ಗುಮಾನೇನು
ಧೀರ ಶರಣನ ಮೀರಿ ಆನಂದ
ನಿರಾಳ ನಿಂದವನಿಗೆ ಇನ್ನೇನು ಗುಮಾನೆ ||ಪಲ್ಲ||
ಯೋಗಿ ಚಾಗಿ ಜಗಭೋಗಾ |
ತ್ಯಾಗದಿ ಜನ್ಮ ನೀತಿ ಜ್ಞಾನ
ಭೋಗ ಭಾಗ್ಯ ಉಳ್ಳವನಿಗೆ ಇನ್ನಾರ ಗುಮಾನೆ ||1||
ಕಾಯ ಕರಗಿ ಗುರುರಾಯಗೊಪ್ಪಿಸಿ ಪ್ರೀತಿ |
ಕಾಯ ಕೀಟ ಭೃಂಗ
ನ್ಯಾಯವಾದವನಿಗೆ ಇನ್ಯಾರ ಗುಮಾನೆ ||2||
ಇಂಬುಕೊಂಡು ಇಟಪೂರೀಶನೊಳು ಹೊಳೆಯುತ |
ತುಂಬಿ ತುಳಕದಂಥ
ಕುಂಭನಾದವನಿಗೆ ಇನ್ಯಾರ ಗುಮಾನೆ ||3||
ಮುತ್ತಿನ ಮೂಗುತಿ ಇಟ್ಟು ಹೋದಿ
ಮುತ್ತಿನ ಮೂಗುತಿ ಇಟ್ಟು ಹೋದಿ ಜೋಕೆ |
ಮುತ್ತನು ಜತನಾಗಿ ಇಟ್ಟುಕೊಳ್ಳಬೇಕೆ || ||ಪಲ್ಲ||
ಹತ್ತು ಎಂಟು ಕಳ್ಳರದರ |
ಸುತ್ತಮುತ್ತ ಸುಳಿಯುತಾರ
ಅತ್ತ ಸೇರದಂತಲ್ಲಿರಬೇಕು ಬಹು ಜೋಕೆ ||1||
ಶಿವನಾಮ ಸರಸದಿ |
ಸಾವಧಾನ ಸೊಗಸದಿ
ಮನ ನೀ ಮೌನದೊಳಿರಬೇಕು ಬಹು ಜೋಕೆ ||2||
ಮನೋಹರನ ಸೇವೆಯು ಮರಿಯದೆ |
ವನಿತೆ ನಿರುತಾಗಿರಬೇಕೆ ||3||
ಮೊದಲಿನ ಪುಣ್ಯಾಫಲವು|
ಒದಗಿ ಬಂದಿಹ ಗೆಲವು
ಎದುರುಗೊಂಡು ತಾನಲ್ಲಿರಬೇಕು ಬಹು ಜೋಕೆ ||4||
ಇಟಪೂರೀಶಾ ಹಾನದಕೆ |
ಇತರ ವಸ್ತಾ ವಡವಿ ಯಾಕೆ
ಕಟ್ಟಿದ ತಾಳಿ ಇಟ್ಟ ನತ್ತು ಸಾಕೆ ||5||
ಏನು ಮಾಡಲಿ ಯೋಚನಾ
ಏನು ಮಾಡಲಿ ಯೋಚನಾ |
ಆಹಾ ಏನು ಮಮ ತಾಯಿ
ಪ್ರಾಣತ್ರಯರನುಳವಿಕೊಳ್ಳ
ಪರತರ ಮುಮ್ಮಾಯೀ ||ಪಲ್ಲ||
ಪಿತನ ದೈತ್ಯ ಬಕಾಸುರನ |
ಸುತ ಮೈಸಾಸುರನ
ಹತವು ಮಾಡಲಿ ಬರುವ ನಮ್ಮ
ಗತಿಗೆ ನೀನಾಗು ಸಾಕಾರ ||1||
ಕಣ್ಣೀರು ಕಳಿಯುತ ಮುಖ ಪ್ರ |
ಸನ್ನವಾಯಿತು ಆವ ಕಳೆ
ಇನ್ನು ನೀ ಪ್ರಸನ್ನಳಾಗಿ ಬಾ
ಮುನ್ನ ಜಗದ ಜನ ಕಳೆ ||2||
ಬಂದ ಕಂಟಕ ಬಯಲು ಮಾಡಿ |
ಸಲುಹೆ ಸತ್ಯವಾಣಿಯೇ
ಇಂದು ಪಾಲಿಸಿ ಪೊರಿಯೇ
ಈ ಕ್ಷಣ ಇಟಪೂರೀಶನ ಪ್ರಾಣಿಯೇ ||3||
ಹೇಸಿಗೆ ದೇಹದೊಳಗೆ
ಬಂದು ಜಂಗಮ ಬೇಡಿದರೆ ವಚನ
ಇಂದು ಕೊಡುವೆನು ಪ್ರಾಣ
ತಂದೆ ಸಿರಿಯಳ ತಾಯಿ ಚಂಗಳಾ
ಮುಂದೆ ತಡವ್ಯಾತಕಿನ್ನಾ ||ಪಲ್ಲ||
ಹರನ ವಾಕ್ಯಕೆ ಸರಿಯಾಗಿ ನಡೆಯಿರಿ
ಹರುಷವ ಪಡೆಯುವಿರಿ
ಕರಕರ ಕಾಯ ಕೊರೆದು ಕೊಡಿ ದೇಹ
ಅರುಪಿಸುವುದು ಕೈಲಾಸದ ದಾರಿ ||1||
ಏಸು ಕಾಲ ಬದುಕಿದರೇನು ಈ
ಹೇಸಿಗೆ ದೇಹದೊಳಗ
ಈಶನ ಚರಣಕೆ ಹೊಂದುವೆನು
ತುಸು ಅಂಜೆನು ನಾನು ||2||
ಸಟೆ ಸಂದೇಹವ ಬಿಡಬೇಕು
ದಿಟ ಸಹಜವ ಹಿಡಿಬೇಕು
ಇಟಪುರೀಶನ ಬೆರಿಯಬೇಕು
ನಟರಾಜ ಬಹುಪರಾಕು ||3||
ಅಲ್ಲಂತ ಅನಬ್ಯಾಡಣ್ಣ
ಅಲ್ಲಂತನಬ್ಯಾಡಿರಣ್ಣ
ಅಲ್ಲಂತ ಅಂಬುವದಲ್ಲಣ್ಣ
ಬಲ್ಲಂಥವನು ಯಾರಣ್ಣ?
ಬಲ್ಲಂಥವನೇ ಬಸವಣ್ಣ ||ಪಲ್ಲ||
ಬಲವಂತನ ಶೀಲಾವದಣ್ಣ
ಬೆಲೆಗಳಿಸುವದು ತಿಳಿಯಣ್ಣ
ಮೊಲೆಯಿದ್ದುದಕೆ ಕಾಣಣ್ಣ
ಹಾಲುಗರೆಯುತಾವಣ್ಣ ||1||
ಶಿಲಾಶಾಸನ ಓದಣ್ಣ
ಹಲವು ಮಾತುಗಳಿಲ್ಲಣ್ಣ
ಕೆಲಸಕೆ ಬರುವದು ಮುಂದಣ್ಣ
ನೆಲೆ ಯಾರಿಗೂ ತಿಳಿಯದಣ್ಣ ||2||
ನೇಮ ನಿತ್ಯ ಎದಕಣ್ಣ
ಕಾಮ ಸುಟ್ಟೋಗುದಕಣ್ಣ
ದೇವಭಕ್ತನಾಗಣ್ಣ
ಇಟಪುರೀಶ ಮೆಚ್ಚುವನಣ್ಣ ||3||
ತಿಳಿದು ಸಾಗಬೇಕು
ಹೇಗಿರಬೇಕು ಹೇಗಿರಬೇಕು
ಯೋಗಿ ತಾನಾದವ ಹೇಗಿರಬೇಕು ||ಪಲ್ಲ||
ಬಾಗಿ ಸಂಸಾರ ಮಾಡಿ ಮನದೊಳು
ಯೋಗ ತಿಳಿದು ತಾ ಸಾಗಿರಬೇಕು ||ಅ.ಪಲ್ಲ||
ಕಂಗಳೊಳಗಿನ ಬೆಳದಿಂಗಳಂತೆ
ಲಿಂಗಮನ ಪಾಕೀಜಾಗಿರಬೇಕು
ಜಂಗಮಲಿಂಗ ಜಗದ್ಭರಿತ ಪರಮನ
ಭಜನೆ ಮಾಡಿಕೊಂಡಿರಬೇಕು | ಗುರು
ಭಜನೆ ಮಾಡಿಕೊಂಡಿರಬೇಕು ||1||
ನಾದಬ್ರಹ್ಮನೊಳು ವೇದಶಾಸ್ತ್ರ ಪುರಾ
ಣಾದಿ ಮೂಲ ಕೀಲು ತಿಳಿದಿರಬೇಕು
ಅನ್ನದಾನ ಧರ್ಮ ಮಾಡಿ ಜಗದೊಳು
ಧನ್ಯನಾಗಿ ತಾ ಇರಬೇಕು | ಶಿವ
ದ್ಯಾನದೊಳಗೆ ತಾ ಇರಬೇಕು ||2||
ಭೋಗ ಬಿಟ್ಟು ವೈರಾಗ್ಯ ತೊಟ್ಟು ಸಲೆ
ತ್ಯಾಗಿ ವಿರಕ್ತಿ ತಾನಾಗಿರಬೆಕು
ಯೋಗಿ ಇಟಪುರೀಶನ ಸ್ಮರಿಸು
ಈ ಘಟದ ಒಳಗೆ ತಿಳಕೊಂಡಿರಬೇಕು
ತಾ ಘಟದೊಳು ಶಿವನ ಕಂಡಿರಬೇಕು ||3||
ಯಾತರ ಶಾಣ್ಯಾ
ಶಾಣ್ಯಾ ಸದ್ಗುರು ಕರುಣೆಯಿಲ್ಲದೆ ನಾ
ಶಾಣ್ಯಾನಂದರೆ ಯಾತರ ಶಾಣ್ಯಾ
ಶಾಣ್ಯಾನಾಗಿ ತಾ ಸಾಧುರ ಸೇವಿಸಿ
ಶಾಣ್ಯಾನಾದವನೇ ಶಾಣ್ಯಾ ||ಪಲ್ಲ||
ಮೂರು ಮಲದ ಕಸ ಮುಸುರಿಟ್ಟುಕೊಂಡು
ಧೀರನೆಂದರೆ ಯಾತರ ಶಾಣ್ಯಾ
ಬ್ಯಾರೆ ಬ್ಯಾರೆ ಕುಲ ಭಾವಿಸಿ ಭವದ | ವಿ
ಚಾರವಿಲ್ಲ ಯಾತರ ಶಾಣ್ಯಾ ||1||
ಮೀರಿದ ಉನ್ಮನಿಯೊಳು ನಿಂದು ಜಾಣ ಸಂ
ಸಾರದಿ ಇದ್ದಿಲ್ಲದವನೇ ಶಾಣ್ಯಾ
ಪುರಾಣ ಪುಸ್ತಕ ಪಠಿಸಿದರೇನು
ಪರ ವಸ್ತುವರಿಯದೆ ಯಾತರ ಶಾಣ್ಯಾ ||2||
ಅಸ್ಥಿರ ದೇಹದ ವಿಸ್ತಾರ ತಿಳಿಯದೆ
ಕುಸ್ತಿಯಾಡಿದರೆ ಯಾತರ ಶಾಣ್ಯಾ
ಪುಸ್ತಕ ಪುರಾಣದೊಳು ಸ್ವಸ್ಥಾನಂದದಿ | ಗುರು
ಸ್ತೋತ್ರದೊಳಗಿದ್ದವನೇ ಶಾಣ್ಯಾ ||3||
ಮಾನವ ಜನ್ಮದ ಖೂನವ ತಿಳಿಯದೆ
ಶ್ವಾನನಾದರೆ ಯಾತರ ಶಾಣ್ಯಾ
ಜ್ಞಾನಭರಿತ ನಮ್ಮ ಇಟಪುರೀಶನೊಳು
ತಾನೇ ತಾನಾದವನೇ ಶಾಣ್ಯಾ ||4||
ಶಿವಯೋಗಿ
ಆನಂದದಿ ಮೆರೆಯುವನೊ | ಶಿವಯೋಗಿ
ಆನಂದದಿ ಮೆರೆಯುವನೊ ||ಪಲ್ಲ||
ಉನ್ಮನಿಯೊಳು ಘನ, ಚಿನ್ಮಯನೊಳು ಬೆರೆದು
ತನ್ಮಯ ತಾನಾಗಿ ||1||
ಕನ್ನಡಿ ಕಾಂತಿಯು ಕಂಗೊಳು ಹೊಳೆಯುತ
ತನ್ನೊಳು ತಲೆದೂಗಿ ||2||
ನಿರ್ಗುಣ ಭಾವದಿ ನಿರ್ಭಯದೊಳು ಮನ
ನಿರ್ಮಲ ನಿಜವಾಗಿ ||3||
ಪರಿಪರಿ ಭಾವದಿ | ಪರಮನೊಳಾಡುತ
ಪರವಶ ಪರನಾಗಿ ||4||
ವಿನಯದೊಳು ಇಟಪುರೀಶನ ಸ್ಮರಿಸುತ
ಚಿನ್ಮಯ ತಾನಾಗಿ ||5||
ಬಗೆಯ ತಿಳಿಯದ ಜನರು
ನಗುತಾನ ಎಂಬುವರೆ ಶರಣ
ನಗದಿರುತಾವ ಎಂಬುವರೇ? ||ಪಲ್ಲ||
ನಗುವ-ಅಳುವ ದ್ವಯ ಭಾವವಳಿದ
ಬಗೆಯ ತಿಳಿಯದ ಜಗದ ಜನರು ||ಅ. ಪಲ್ಲ||
ಅಂದರೇನಾಗುವದು, ಅನದಿದ್ದರೇನು?
ಬಂದು ಬಾರದ, ನಿಂದು ನಿಲ್ಲದ
ಸಂದುಗಡಿಯದೆ ಮನ
ಆನಂದಿಪ ಶರಣಗ ||1||
ಒಲುವಿನ ತಾಯಿ ಮಹಾಮಾಯಿ
ಕಲಿಸುವ ತಂದೆ ನಿಜನಿರಾಳ ವಾಕ್ಯ
ನೆಲೆಯರಿದು ದೃಢದಲಿ ಭಜಿಸುತ
ತಲೆದೂಗುವ ಶರಣಗ ||2||
ನಿಚ್ಚಳವೆಂಬೊ ನಿಜದ ಪ್ರಕಾಶ
ಅಚ್ಚ ಭಕ್ತಿಗೆ ಬೆರೆದ ತಾ ಇಟಪುರೀಶ
ಮೆಚ್ಚಿ ನಡೆವ ಶರಣಗ ||3||
ತಾನೇ ಹಾನ ತಿಳಿರಣ್ಣ
ಹದ ಬಂದಾಗಲೆ ಪದ ಮಾಡಿ ನೀ ಪಡೆ
ಸದಮಲ ಜ್ಞಾನ ಸಂಪೂರ್ಣ
ಅದು ಏನು ಬಲ್ಲಿರಿ ಆತ್ಮ ಜ್ಞಾನ ||ಪಲ್ಲ||
ನಾದ ವಿನೋದ ವಿಲಾಸದೊಳು ಮನ
ಮೇದಿನಿಪುರದೊಳು ಪರಿಪೂರ್ಣ
ಚಿದಮಲ ಮರ್ಮೆಲ್ಲ ಹಸನಾಗಿ ಈಶನ
ಕರುಣದಲಿ ಪಾದಕ್ಕೆರಗುವ ಹಸನ! ||1||
ಮನವರಿಯದೆ ಜನರೆಲ್ಲ ಆಡುವರು
ಮನ ಮುನೀಶ್ವರ ತಾ ಬಲ್ಲ
ದಿನಕರನೊಪ್ಪುವ ತನುವಿನೊಳಗೆ ತಾ
ತಾನೇ ಹಾನ ತಿಳಿರಣ್ಣ ||2||
ಶಿವ ಪೂಜೆಯಾಗುವ ಸ್ಥಲ ಎಲ್ಲ್ಯಾದ
ಭವ ನೀಗುವ ಹುಕುಂ ಎಲ್ಲ್ಯಾದ
ಕವನ ಮಾಡುವ ಕರ್ತೃತ್ವ ಎಲ್ಲ್ಯಾದ
ಅವಿರಳ ಇಟಪುರೀಶನ ಬಲ್ಲ್ಯಾದ ||3||
ಜ್ಞಾನದ ಸವಿಯು ಎಂಥಾದೊ
ಜ್ಞಾನದ ಸವಿಯು ಎಂಥಾದ್ದೋ! ಸು
ಜ್ಞಾನಿ ಸುಪುತ್ರರು ತಿಳಿವಂಥದ್ದು
ಮಾನಹೀನರ ಸಂಗ ಬಿಟ್ಟು ದೂರಾಗಿ
ತಾನೆ ತನ್ನ ಒಳಗೆ ತಿಳಿವಂಥದ್ದು ||ಪಲ್ಲ||
ನಿಜಬೋಧ ನಿಜದರಿವು ಎಂಥಾದ್ದೋ?
ನಿಜವೆಂದು ಗುರುಧ್ಯಾನ ಮಾಡುವದೋ
ನಿತ್ಯಾನಂದದಿ ಸತ್ಯವಂತರು ಬಹಳ
ಪ್ರೀತಿಲಿ ದಯ ಧರ್ಮ ಬಗೆವಂಥದ್ದು ||1||
ನರಜನ್ಮ ಹುಟ್ಟುವುದ್ಯಾತಕೋ?|
ಗುರುಧ್ಯಾನ ಮರೆಯದೆ ಮಾಡುವುದಕೋ
ಪರಿಪೂರ್ಣ ಮನದೊಳು ಪರತತ್ವದನುಭವ
ಅರಿತು ಆಚರಿಸಿ ತೋರುವುದಕೋ ||2||
ಅಟವಿ ನಡು ಪರ್ವತ ಪವಿತ್ರ ನದಿ
ಮಠ, ತೀರ್ಥಯಾತ್ರೆ ಹೋಗುವುದ್ಯಾಕೆ?
ಇಟಪುರೀಶ ತಾನು ಘಟದೊಳಿರಲಿಕೆ
ತಟವಟ ಹುಡುಕ್ಯಾಡುವದ್ಯಾಕೆ? ||3||
ಮಾತು ಕೇಳಬೆÉೀಕು ಎಂಥದ್ದು
ಮಾತು ಕೇಳಬೇಕು ಎಂಥದ್ದು?| ಬಹು
ನೀತಿ ಬೋಧಿಸುವಂಥದ್ದು
ಹತ್ತು ಮಂದಿಯಲಿ ಅರಿತು ಅರಿಯದಂಗ
ಗೊತ್ತು ತನಗೆ ತಿಳಿದಿರುವಂಥದ್ದು ||ಪಲ್ಲ||
ಗುರುವಿನ ಸುಪುತ್ರ ತಾನಾಗಿ
ಗುರುವಿನ ಗುರ್ತು ಬಲ್ಲಂಥದ್ದು
ಮರೆಯದೆ ಮನದೊಳು ಮಂತ್ರವ ಪಠಿಸೆ
ಮಾರ್ಗ ತನಗೆ ತೋರುವಂಥದ್ದು ||1||
ದಾರಿ ಹಿಡಿದು ಸೇರಿ ಉನ್ಮನಿಯೊಳಗೆ
ಪಾರಮಾರ್ಥ ತಿಳಿಯುವಂಥದ್ದು
ಮೇರು ಮಂದಿರ ಪರ್ವತದೊಳಗೆ
ಪೂರ ಪಾಕೀಜಾಗಿರುವಂಥದ್ದು | ಮನ
ಪೂರ ಪಾಕಿಜಾಗಿರುವಂಥದ್ದು ||2||
ದುಷ್ಟ ಗುಣಗಳ ನಷ್ಟವ ಮಾಡಿ
ಶ್ರೇಷ್ಠನಾಗಿರುವಂಥದ್ದು
ಇಟಪುರೀಶನ ಸ್ಮರಣೆಯಲಿದ್ದು
ಘಟದೊಳಗೆ ಕಾಣುವಂಥದ್ದು | ಮನುಜ
ಘಟದೊಳಗೆ ಕಾಣುವಂಥದ್ದು ||3||
ಚಾಳೀಸ
ಚಾಳೀಸ ನೋಡಬೇಕೆಂಥದ್ದು | ಶಿವ
ನಾಳ ತಿಳಿದುಕೊಂಬಂಥದ್ದು ||ಪಲ್ಲ||
ಏಳು ಜನ್ಮದ ಪಾಪವು ತಾನೇ
ಕೋಳು ಹೋಗುವಂಥದ್ದು ||ಅ.ಪಲ್ಲ||
ಭವಭವಾಂತರ ತಿರುಗುವ ಬಾಧೆ
ಅವಿರತ ತಪ್ಪಿಸುವಂಥದ್ದು
ಜೀವಭಾವ ಹೋಗಲಾಡಿಸಿ ತಾನು
ಜೀವೇಶನ ತಂದು ಕೊಡುವಂಥದ್ದು ||1||
ಸಾಕಾರನಿಷ್ಠೆ ಭೂತಂಗಳೊಳನುಕಂಪೆ
ಆತ್ಮದೊಳಗೆ ತಿಳಿಸುವಂಥದ್ದು
ಆಕಾರವಿಲ್ಲದ ನಿರಾಕಾರದ ಅರಿವು
ಏಕ ಪ್ರಕಾರ ತೋರುವಂಥದ್ದು ||2||
ಗುರುವು ತೋರಿದ ಅಖಂಡ ಜ್ಞಾನವ
ಗುಪ್ತದಿ ತಿಳಿಯುವಂಥದ್ದು
ಇಟಪುರೀಶನ ದರುಶನ ನಿರಂತರ
ಘಟದೊಳು ಬಿರುವಂಥದ್ದು ||3||
ಭವ ಸಾಗರ ದಾಟೊ
ಬಹು ದೂರ ಬಹು ದೂರ ಬಹು ದೂರ
ಭವ ಸಾಗರ ಕಡೆ ದಾಟೊ ವ್ಯಾಪಾರ ||ಪಲ್ಲ||
ನಾನು ನೀನೆಂಬುದು ಅಳಿದು | ನಿಜ
ಜ್ಞಾನಬೋಧದ ನೆಲೆಯ ತಿಳಿದು
ಸಹೃದಯ ಭಾವದಿ ಸಹಜಾನಂದದಿ
ತಾನೇ ತಾನು ಬಯಲಾಗುವ ತನಕ ||1||
ಗುರು ಮಂತ್ರದಿ ಮನಮರ್ದಿಸಿ ತನ್ಮಯ
ಪರವಶದೊಳು ತಾ ಪರಿಪೂರ್ಣನಾಗಿ
ಅರುವಿನಿಂದಲೆ ತ್ರಿಪುಟಿ ನೋಟಕ
ಗುರು ಸಾಧನ ಗುರಿ ದೊರೆಯುವ ತನಕ ||2||
ನೀರ ಮೇಲಿನ ಗುರುಳಿ ಪ್ರಕಾರ
ನಿಶ್ಚಯಿಸಿದೆ ಈ ಘಟ ವಿಸ್ತಾರ
ಪಾರಾಗಲು ಇಟಪುರೀಶನವರ
ಪರಮ ಸೌಭಾಗ್ಯ ಪಡೆಯುವ ತನಕ ||3||
ಹೊಸ ಆಟಾ
ಇದು ನೋಡೋ ಹೊಸ ಆಟಾ
ಇದರನುವು ತಿಳಿದರೆ ಹಸನಾಟ ||ಪಲ್ಲ||
ಸದ್ಗುರು ಶಿಷ್ಯರು ದ್ವಯರು ಸಮಾನ
ಸಾಧಿಸಬೇಕು ಬ್ರಹ್ಮಾಸ್ಮಿ ಜ್ಞಾನ
ಸದಾಸದಭಕ್ತಿ ಏಕೋ ಸಂಧಾನ
ಸದಾಮುಕ್ತಿಗೆ ದ್ವಾರಯಿಕೋ ಜಾಣ ||1||
ಬಾಗಿ ಬಾಗಿ ನಡೆವುದು ಪಾಡೋ | ಕೈ
ಲಾಗದವನ ಗೆಳೆತನ ಬ್ಯಾಡೋ
ಯೋಗಿ ಶರಣನಲಿ ಸುಳಿದಾಡುತ ಸಾಗಿ
ಪೋಗಿ ಮುಂದಕ ಶಿವಲಿಂಗನ ಕೂಡೊ ||2||
ಕೆಳಗೆ ನೋಟ, ಮೇಲಿನ ಮಾಟ
ಎಡಬಲ ಕೂಟ ಅಷ್ಟದಳ ಪೀಠ
ಮನೋಹರ ಇಟಪುರೀಶನ ಕಡೆ ಆಟ
ಮರೆತರೆ ಅದು ತಾ ಮಹಾ ವಿರಾಟ ||3||
ಬೈಲಾಟ
ಆಟ ಹೂಡೆಲೊ ಬೈಲಾಟ ಹೂಡೆಲೊ ||ಪಲ್ಲ||
ಆಟ ಹೂಡೆಲೊ ತ್ರಿಕೂಟ ಸ್ಥಾನದಲಿ
ನೋಟ ಬಲಿದು ಕೋಟಿ ಭಾನು ಪ್ರಕಾಶದ ||ಅ.ಪಲ್ಲ||
ಮೇಲು ಛಾವಣಿಗೊಂಡು
ಮೇಲ್ಗಿರಿಯ ಮೂಲ ತಿಳಕೊಂಡು
ಘಾಲು ಮೇಲಾಗದೆ ಭವ ಬಂಧನದಿ
ಲೋಲನಾಗದೆ ಭವ ನಿವಾರಣದ ||1||
ನಾನತ್ವವ ಬಿಟ್ಟು ಸಕಲ
ಮಾನವತ್ವವ ತೊಟ್ಟು
ಅನುಪಮ ಮಹಾಂತನ
ಘನಕೆ ಘನ ಅರಿಯುವ ||2||
ಶೂನ್ಯಕೆ ಶೂನ್ಯ ನಿಶೂನ್ಯ
ನಿರಾಲಂಬ ಶಾಂತಿಯೊಳಗೊಂಡು
ಮನಚಿದ್ರೂಪ ಇಟಪುರೀಶನ ಕೃಪದಿ
ಚಿಂತೆಯಳಿದು ನಿಶ್ಚಿಂತನಾಗುವ ||3||
ನರ ಜನ್ಮವ್ಯಾತಕೋ ಪರಮನ ಕಾಣದ
ನರಜನ್ಮವ್ಯಾತಕೋ ಪರಮನ ಕಾಣದ
ನರಜನ್ಮವ್ಯಾತಕೋ ||ಪಲ್ಲ||
ಗುರುಭಜನೆ ಗುಪ್ತದಲಿ ಮಾಡೊ
ಪರಿಹರಿಸುವ ತಾ ಪಾತಕವನ್ನು
ಕಿರಿಕಿರಿ ಸಂಸಾರ ಶರಧಿಯಲದ್ದಿ
ಇರಬಾರದೆಂಬಂಥ ಅರಿವು ಇಲ್ಲದ ||1||
ವೇದಶಾಸ್ತ್ರ ಪುರಾಣ ಪಠಿಸಿಯದರ
ಭೇದವರಿಯದೆ ಬರೆ ಓದಿದರೇನೋ!
ಸಾಧಿಸಿ ಸದ್ಗತಿ ಪಡೆಯದೆ ಭಾವ
ಬಾಧೆಯಲಿ ಭವಭವ ತಿರುಗುವ ||2||
ಬಲದಿಂದೊಬ್ಬರ ಹಲವು ನೀತಿಗಳ
ತಿಳಿಯ ಹೇಳಿದರೆ ಫಲವೇನೋ
ಇಳೆಯನಾಳುವ ಇಟಪುರೀಶನ
ಒಲಿಸುವ ಬಗೆಯ ಅರಿಯದನ್ನಕ ||3||
ಸಂತೆ ಸಂಸಾರ ನೋಡಣ್ಣ
ಸಂತೆ ಸಂಸಾರ ನೋಡಣ್ಣ | ನೀ
ಹೊತ್ತು ಮಾರಿಕೊಂಡ್ಹೋಗಣ್ಣ
ಸಂತೆಗೆ ಬಂದಿದಿ ಚಿಂತೆ ಯಾಕೋ
ಶಿವಗ್ಯಾಕ ಬೈತಿದಿ ಹುಚಗೋಟಿ ||ಪಲ್ಲ||
ಹೆಂಡರು ಮಕ್ಕಳು ಯಾರಣ್ಣ?
ಗಂಡಗ ವೈರಿ ನೋಡಣ್ಣ
ಭಂಡು ಮಾಡುವರು ನಿನಗಣ್ಣ
ಖಂಡಿತ ಈ ಮಾತು ತಿಳಿರಣ್ಣ ||1||
ರೊಕ್ಕ ಗಳಿಸಿ ಮಕ್ಕಳಿಗುಣಿಸಿ
ಮುಕ್ಕಣ್ಣನ ನೆನಿಯಬೇಕಣ್ಣ
ಲೆಕ್ಕ ನೋಡಿ ಮನವಕ್ಕರದಿಂದ
ಸಿಕ್ಕು ಬಿಡಿಸಿಕೊಂಡ್ಹೋಗಣ್ಣ ||2||
ಚಂಡಿ ಮಾತಾಡ ಬ್ಯಾಡಣ್ಣ | ಇವ
ಪುಂಡುಗಾರನೆಂಬುವರಣ್ಣ
ದುಂಡುಮಲ್ಲಿಗೆ ಇಟಪುರೀಶನ
ಕಂಡು ಒಗೆತನ ಮಾಡಣ್ಣ ||3||
ಸ್ಥಿರವಲ್ಲ ದ್ರವ್ಯ
ಸ್ಥಿರವಲ್ಲ ದ್ರವ್ಯ ಸ್ಥಿರವಲ್ಲ
ಸ್ಥಿರವೆಂದು ನಂಬಿದರೆ ಸ್ಥಿರವಾಗುವದೇನೋ ||ಪಲ್ಲ||
ಅಸ್ಥಿರದೇಹ ಸುಸ್ಥಿರವಾದುದಲ್ಲ
ವಸ್ತಿಕಾರನಂತೆ ಹೊಯಿದಾಡುವಿಯಲ್ಲ
ಹಸ್ತು ಬಂದವರಿಗೆ ಅನ್ನ ನೀಡದ ಖೋಡಿ
ಎಷ್ಟು ಗಳಿಸಿದರೇನು? ||1||
ನೆಂಟರ ಬೀಗರ ನಂಬಬ್ಯಾಡ ನೀ
ತಂಟೆಕೋರ ಅವರು ತೊಂಟಿ ತೆಗೆವರು
ಕಂಟಕಗಳು ಬಂದುಕಾಡುವ ಕಾಲಕ್ಕೆ
ನೆಂಟರು ಬೀಗರು ತಾ ನಗುವರಲ್ಲ ||2||
ತಾನು ಮಾಡಿದ ಕರ್ಮ ತನಗೆ ಬಂದಿರಲಿಕ್ಕೆ
ತಾನು ಭೋಗಿಸದೆಯೇ ಗೊಣಗಾಟವ್ಯಾಕೋ
ನಾನು ಗೆದ್ದೆನೆಂದು ಶಾನೆ ನಗುತ್ತಿದ್ದರೆ
ತಾನು ಮೆಚ್ಚುವನೇನು ಇಟಪುರೀಶ ||3||
ಸೆರೆ ಬಿಡಿಸುವರ್ಯಾರೊ ದೊರಿ ಮಗನಾದರು
ಅರಿವು ಮರಿಯದಲಿರುವುದು ಮಹಾನಂದಾ |
ಜೀವಾತ್ಮಾ ನೀನು ನರಕ ಸೇರದಿರಲು ಪರಮಾನಂದಾ
ಅರುವನೆ ಮರಿಯಲು ನರಕಕ್ಕೆ ಬೀಳಲು
ಸೆರೆ ಬಿಡಿಸುವರ್ಯಾರೊ ದೊರಿ ಮಗನಾದರು ||ಪಲ್ಲ||
ನಾದ ವಿನೋದದಿ ಆಲಿಸಿ ಕೇಳಿ |
ಆದಿ ಅಂತ್ಯಯಲಿ ಶೋಧಿಸಿ ಸವನಿಸಿ
ವಾದ ಭೇದಗಳ ಬಾಧಿಗೆ ನಿಲ್ಲದೆ
ಸಾಧಕದೊಳು ಗುರುವು ಸಾಕಾರಿರುವನೋ ||1||
ನೋಟದೊಳು ನೋಟವ ನಿಲಿಸಲಿಬೇಕೋ |
ನೋಟ ನಿಲಿಸಿ ಕೂಟ ಲಿಂಗಾಂಗವ ಕೂಡಿಸಬೇಕೋ
ತಾಟಕ ಬೂಟಕ ಬಯಸಿ ಬೆರಿಯದಿರೆ
ಕೀಟ ಭೃಂಗ ನ್ಯಾಯವನು ನೀ ಸಾಧಿಸೆಲೋ ||2||
ಜರೆಯು ಮರಣವು ಬಿಡಲಿ ಬೇಕೋ |
ಜೈ ಇಟಪೂರೀಶನ ಶರಣರ ಸಂಗವ ಪಡೆದಿರಬೇಕೋ
ಪರಿಪರಿ ಅಗಲದೆ ಪ್ರಭುರಾಯನ ನೀ
ಪರಬ್ರಹ್ಮನೊಳು ಪ್ರಾರ್ಥನೆ ಸಾರುತ ||3||
ಬೊಗರಿ ನೋಡಿರೆ
ಬೊಗರಿ ನೋಡಿರೇ ಭಲೆರೆ ಬೊಗರಿ ನೋಡಿರೆ |
ಬೊಗರಿ ನೋಡಿರಿ ಈ ತನು ನಗರದೊಳು ನರ್ತನ ಮಾಡಿ
ಹೆಗರಿ ಹೋಗುವ ಕಾಲಕ್ಕೆ ಬಲು
ಹಗರಣದಿಂದ ಆಡಿ ಹೋಗುವ ||ಪಲ್ಲ||
ಎಂಥ ಮಹಿಮಾ ಇದರ ಮಳಿಯು |
ಜಂತ್ರ ಜಾಳಿಗಿಲ್ಲದೆ
ಶಾಂತಮೂರ್ತಿ ಸರ್ವ ಜನರ
ಅಂತರಂಗದೊಳಾಡುತಿರುವಾ ||1||
ಹಂಬಲ ಅವಗುಣ ಅಳಿದು |
ಗಂಭೀರ ಘನವಂತರಾಗಿ
ಅಂಬರ ದ್ವಾರದ ಅಗಾಧ ಅನುಭವ
ನಂಬಿದ ನಿಜದಲ್ಲಿರುವಾ ||2||
ಧರೆಯೊಳು ಇಟಪೂರೀಶನ |
ವರವ ಪಾಲಿಸಿ ಒಲಿದು ಬಲಿದು
ಪರಮ ಸುಖದಿ ಪರವಶದಲಿದ್ದು ತಾನೂ
ಪರಿ ಪರಿ ಪರಮಾತ್ಮನಾಡುವಾ ||3||
ಮನ ನಿನಗೊಪ್ಪಿಸಿದೆನೋ ಗುರುರಾಯ
ಮನ ನಿನಗೊಪ್ಪಿಸಿದೆನೋ ಗುರುರಾಯ |
ಮನಮೋಹನಯ್ಯಾ ಮನ ಒಪ್ಪಿಸಿದೆನೋ
ಅನುಮಾನಿಸದೆ ಮನ ಒಪ್ಪಿತ
ಮನಕೆ ಮನವೇ ಸಾಕ್ಷಿ ||ಪಲ್ಲ||
ವೈರದಲ್ಲಿ ಒತ್ತೆ ಬಿದ್ದಿತು ಅವರ ಕೈ ಸೇರಿತು |
ಐದಾರು ಮಂದಿ ಇದ್ದರು ಬಲು ಜತ್ತು
ಧೀರನು ಎನಗಾ ತೋರಿದ ಜ್ಞಾನ ವಿ
ಚಾರ ಖಡ್ಗದಿ ಠಾರ ಹೊಡೆದಿ ಮನ ||1||
ಎಂಟು ಮಂದಿ ಭಲೆ ಸರ್ದಾರರೋ ಬಹು |
ತೊಂಟರೋ ಅವರೊ ಅಂಟಾಗಿದ್ದರು ಹತ್ತು
ಕುಂಭ್ಹೇರು ಗಂಟಗಳ್ಳರಲ್ಲಿ ಗಂಟು ತಕ್ಕೊಂಡು ತಂಟೆ
ಅರುವಾಯಿತು ಕಂಟಕ ಕಡಿದುಕೊಂಡು ||2||
ಮನ ಒಪ್ಪಿಸಲು ಮಾಣಿಕವನು ಕೊಟ್ಟ |
ಮಾಯವನ್ನು ಸುಟ್ಟು ಅನುಭವದ ಅಮೃತ
ಸವಿಯೊಳಿಟ್ಟ ವಿನಯಾತ್ಮಕ ಪಾವನ
ಮಾಡೆನ್ನನು ಘನವರ ಇಟಪೂರಿ ಮನೋಹರನೆ ||3||
ಬಯಲಿಗೆಳೆಯ ಬ್ಯಾಡ
ಬಯಲಿಗೆಳೆಯಬ್ಯಾಡವೊ |
ಬರಿದು ಅಂತರಂಗದಿ ಕೂಡೆಲೊ ||ಪಲ್ಲ||
ಜನರೊಳು ಜಾಗ್ರದೊಳಾಡಿ ಜಾರತನವ ತೋರದೆ |
ಮನೋಹರನ ನೀ
ಮರೆಯದೆ ಕೂಡೆಲೋ ||1||
ಮೇಲುಗಿರಿಯ ಮಾಲಿನೊಳು |
ಮೀರಿದ ಉನ್ಮನಿಯಲ್ಲಿ
ಆರು ಕಾಣದಲ್ಲಿರುವದು ಪಾಡೆಲೋ ||2||
ಇರುಳು ಹಗಲು |
ಚರಣದೊಳಗಿರುವೆ ಇಟಪೂರೀಶ ನೀ
ಶರಧಿಯೊಳೆನ್ನ ಪಾವನ ಮಾಡೆಲೋ ||3||
ಛೀ ಛೀ ನಿಂದ್ಯಾತರ ಜನ್ಮವು
ಛೀ ಛೀ ನಿಂದ್ಯಾತರ ಜನ್ಮವು
ನಾಚಿಕಿ ಬಾರದು ಎಲೆ ಮನವೆ
ಖೇಚರಿ ಧನುರ್ವಾಯು ಆಚಾರ್ಹೇಳಬಲ್ಲಿ
ನೀಚತೆ ನಿನ್ನೊಳಗೆ ನೀ ತಿಳಿಯದವನು ||ಪಲ್ಲ||
ಆಗೋ ಈಗೋ ಹೋಗುದಂತೀದಿ | ಮಾಯಾ
ಸೋಗಿನೊಳಗೆ ಮುಳುಗಿ ಕುಂತೀದಿ
ನಾಗಭೂಷಣೆಂಬೊ ನಾಮವ ನೆನೆಯದೆ
ಗೂಗ್ಯಾಗಿ ಭವಭವ ತಿರುಗತೀದಿ ||1||
ದವಡಿ ರುಚಿಯ ಸವಿ ಕಲತೀದಿ
ಪ್ರವರ್ಧ ಸಾಧುರ ಸಂಗ ಮರತೀದಿ
ಲೇವಡ್ಯಾಗದು ಮುಂದೆ ತಿಳಿಯಲ್ಹೋದಿ
ಕವಡಿಗಿ ಸಲ್ಲದು ಈ ನಿನ್ನ ಬುದ್ಧಿ ||2||
ಅರಿವು ಗಳಿಸದೆ ನೀನು ಅಳತೀದಿ | ಸುಳ್ಳೆ
ಮರೆವಿನೊಳಗೆ ಹೊತ್ತು ಗಳಿತೀದಿ
ಧರೆಯೊಳಧಿಕನಾದ ಇಟಪುರೀಶನ ಪಾದ
ಕ್ಕೆರಗದೆ ಕಾಡಡವಿ ಬೀಳತೀದಿ ||3||
ಸಾಕು ಬಿಡೊ ಈ ಛಲವನ್ನು
ಸಾಕು ಬಿಡೊ ಈ ಛಲವನ್ನು
ಮುಂದಾಗುವ ಮಾತು ಅರಿವಲ್ಲಿಯೇನು?
ಹಲವು ಭವದೊಳು ಬಂದು ನೀನು
ಈ ಲೋಕದ ಜನರ ನಿಂದೆ ಮಾಡಿದರೇನು? ||ಪಲ್ಲ||
ಪಂಚಾಚಾರವು ಇಲ್ಲಂದಿ
ಪಂಚಾಚಾರಿಲ್ಲದೆ ಎಲ್ಲಿಂದ ಬಂದಿ?
ಚಾರಿ ಹಿಟ್ಟು ಮನೆಮನೆ ಬೇಡಿ ತಂದಿ
ಹಂಚಿನಾಗ ಸುಟ್ಟು ನೀನೇ ತಿಂದಿ ||1||
ಸಕಲ ಶಾಸ್ತ್ರವ ಹೇಳುವಿ ನೀ
ಬಕ ಪಕ್ಷಿ ಧ್ಯಾನವ ಮಾಡುವಿ ನೀ
ತಕತಕ ಥೈಥೈ ಕುಣಿಯುವಿ ನೀ
ಪಕಪಕ ಒದ್ದಾಡಿ ಸಾಯುವಿ ನೀ ||2||
ಧರೆಯೊಳು ಇಟಪುರ ದಯವಾಸ
ಗುರು ಬಸವಲಿಂಗ ಶಾಂತೇಶ
ನೆರೆ ಕಂಡು ಭಜಿಸು ಮನ ಉಲ್ಲಾಸ
ಉರಿಯುಂಡ ಕರ್ಪೂರ ನಿಜ ನಿವಾಸ ||3||
ಯಾತರ ಸಂಸಾರಿದು
ನಾರಿ ಪುರುಷನನು ಮೀೀರಿ ನಡೆದ ಮೇಲೆ
ಯಾತರ ಸಂಸಾರಿದು ||ಪಲ್ಲ||
ಕೇರಿ ಕೇರಿ ಕರಕರಿಸುವುದ ಕೇಳಿ
ಯಾರಿಗಾದರೂ ಅಪಹಾಸ್ಯ ತೋರ್ಪುದು ||ಅ.ಪಲ್ಲ||
ತಾನೇ ತರ್ಕದಲಿ ತನ್ನವರ ನಿಂದೆಯೆಣಿಸಿ
ತಾನೇ ಬಾಯಿ ಬಡಿಯುವದು
ಮಾನಾಭಿಮಾನದ ಖೂನವನರಿಯದೆ
ಶ್ವಾನನಾಗಿ ಬೊಗಳುವದು
ಮಾನವರೊಳು ಮಹಾಜ್ಞಾನಿಯೆನಿಸಿದರೂ
ಮಾನಿನಿ ಮುಖಮಸಿ ಮಾಡುವಳು ||1||
ಬುದ್ಧಿಗೇಡಿ ಇಂಥ ಬುದ್ಧಿ ಬ್ಯಾಡೆಂದು
ಬುದ್ಧಿ ಹೇಳಿದರೂ ಕೇಳಳು
ಎದ್ದೆದ್ದು ಹೊರಳಿಸಿ ವಾಲಗಗೈದರೂ
ಗುದ್ದಿಗವಳು ಹೆದರಳು
ಬುದ್ಧಿವಂತರ ಬುದ್ದು ಮಾಡುವ ಹೆಣ್ಣು
ಮುದ್ದು ಮುಖದ ಮೂಳ ಏನು ಫಲ ||2||
ಕಾಮಿನಿಯಳ ಗುಣ ಕಾಸಿಗೆ ಸಲ್ಲದು
ಕಾಲ ಮೃತ್ಯುವಾಗಿಹಳು
ಪ್ರೇಮಿಸಿದ ಸತಿಯಲಿ ಪ್ರೇಮವಿಲ್ಲದಿರೆ
ಮಾಮಾಯೆ ಯಾರಿಗೂ ತಿಳಿಯದು
ನಾಮ ಇಟಪುರೀಶನ ಸ್ಮರಣೆಯೊಳಿರುತಿರೆ
ನೇಮಿಸಿದ ಸತ್ಯ ಶಾಶ್ವತವು ||3||
ಕಲ್ಪವೃಕ್ಷವನೇರಿ ಕಡೆಯಾಗೊ ಜಾಣ
ಕೇಳ್ತಮ್ಮ ಕೇಳೆಲೋ | ಇದು
ಕಾಳಗತ್ತಲೆಯಾದೆಲೋ ||ಪಲ್ಲ||
ಕೇಳು ಕಿವಿಗೊಟ್ಟು
ಕೇಳುವ ಬಗೆ ಹೇಳುವೆನು
ಕೇಳದಿದ್ದರೆ ಬಗೆ ಹೇಳುವೆನು
ಕೇಳದಿದ್ದರೆ ನಾಳೆ ಯಮನವರು
ಕಾಳಾಗಿ ಕಾಡುವರೆಲೋ ||ಅ.ಪಲ್ಲ||
ನಾಲಗೆ ಸವಿಯಿಂದ ನರಕದ ಸಂಗ ಈ
ಬಾಲ ಖಯಾಲಿ ಬಿಟ್ಟು ಬಿಡು ನೀ
ಮೇಲು ಮಂದಿರ ನಡುನಾಡಿಯಮೃತ
ಕೀಲಿನೊಳು ಹರನೊಡನಾಡು ಜಾಣ ||1||
ಬಲು ಬಲು ಪರಿಯಲಿ ಬಲಿದು ಆಧಾರವ
ಭಾಳಾಕ್ಷನೊಳು ತೊಡರಿ ಒಲಿಸಿಕೊಳ್ಳೊ
ಅಲ್ಪ ಜ್ಞಾನದಿಂದ ಅರಿತರೆ ಫಲವಿಲ್ಲ
ಕಲ್ಪವೃಕ್ಷವನೇರಿ ಕಡೆಯಾಗೊ ಜಾಣ ||2||
ನಾನು ಎಂಬ ಮಹಾಕಾನನ ಕಡಿಯದೆ
ಏನೇನೋ ಮಾಡಿದಲ್ಲೇನಾದೋ
ಸ್ವಾನುಭಾವದಿ ತಾನು ತಾನೇ ತಾನಾದಲ್ಲಿ
ಜ್ಞಾನಿ ಇಟಪುರೀಶ ಕೂಡುವನು ಜಾಣ ||3||
ಅರುವಿನೊಳಿರುವುದು ಆತ್ಮಜ್ಞಾನ
ಕೆಡಬ್ಯಾಡಿರಯ್ಯ ಕಾನನ ಬಿದ್ದು |
ಕೆಡಬ್ಯಾಡಿರಯ್ಯ ||ಪಲ್ಲ||
ಹಿಂದಿನ ಪುಣ್ಯ ಬಲದಿಂದೆ
ಹೊಂದಿದೆ ಈ ಸಿರಿಯ ತಂದೆ
ಮುಂದಿನ ಗತಿ ಕಾಣದಿರುವನು ಚಂದೆ
ಹಂದಿಯಂತೆ ಮುಣಿಗಾಡುದು ಒಂದೆ ||1||
ಒಂದೊಂದು ಜನ್ಮದಿ ಹಾ ಹೋ ಎಂದಿ
ಬಂಧನಕೊಳಗಾಗಿ ತಿರುತಿರುಗಿ ಬಂದಿ
ಮುಂದರಿಯದೆ ಭವಭವದೊಳು ಬೆಂದಿ
ಹೊಂದು ಗುರುಪಾದಕೆ ಇಂದಾದರೂ ನಂಬಿ ||2||
ಮನಿಮಾರು ಮಡದಿ ಮಕ್ಕಳು ಕಂಡು
ಮನ ಬಂದ ರೀತಿಲಿ ಕುಣಿವರುಂಡುಂಡು
ಯಮನವರು ಒಯ್ಯುವಾಗ ನಿನಗೆ ಎಳಕೊಂಡು
ಮನೆಮಡದಿ ಬರುವಳೆ ನಿನ್ನೊಡಗೊಂಡು ||3||
ಅರುವಿನೊಳಿರುವುದು ಆತ್ಮಜ್ಞಾನ
ಅರಿತರೆ ಮನುಜನಿಗೆ ಬಹುಮಾನ
ಖರೆಯೆನಿಸಿ ಕಾಲಗಳೆದವ ಜಾಣ
ಅರುಹುಗೊಂಡುದಕೆ ಕುರುಹೆ ಖೂನ ||4||
ಮನದೊಳು ಗುರೂಪದೇಶ ಗುರ್ತನು
ಮನನ ನಿಧಿಧ್ಯಾಸ ಮಾಡಿಕೊ ಅನುವನು
ಮನದೊಳಗಿರುವ ಇಟಪುರೀಶ ತಾನು
ಹಾನಿ ಲಾಭಗಳನು ತಾನೆ ತೂಗುವನು ||5||
ಕೆಣಕಬ್ಯಾಡ ಕೆಣಕಿ ತಿಣಕಬ್ಯಾಡಪ್ಪ
ಕೆಣಕಬ್ಯಾಡಪ್ಪ ಕೆಣಕಿ ತಿಣಕಬ್ಯಾಡಪ್ಪ ||ಪಲ್ಲ||
ಕೆಣಕಿದಂಗೆ ತಿಣಕತೀದಿ ಅಣಕಬ್ಯಾಡಪ್ಪ
ಎಣಕಿಯಿಂದ ಕಣಕ ಉಂಡು
ಒಣಕಿ ಹಿಡಕೊಂಡ್ಹೋಗಪ್ಪ ||ಅ.ಪಲ್ಲ||
ಹಣವ ಗಳಿಸಿ ಉಣಬೇಕಪ್ಪ
ದಾನ ಧರ್ಮ ಮಾಡಬೇಕಪ್ಪ
ದಾನ ಮಾಡದೆ ದೀನನಾದರೆ
ಏನೂ ಸಿಗದಿಲ್ಲ ನೋಡಪ್ಪ ||1||
ಸಾಧುರ ಸಂಗ ಮಾಡಪ್ಪ
ಸಾಧುರ ಸಂಗವೆ ಲಿಂಗಪ್ಪ
ಸಾಧುರ ಸೇವಾ ನಿಷ್ಠಿಲಿ ಮಾಡಿ
ಭೇದ ತಿಳಕೋಬೇಕಪ್ಪ ||2||
ವಾದದ ವಾಕ್ಯವ ಬಿಡಪ್ಪ
ಸಾಧಿಸಿ ತಿಳಿದು ನೋಡಪ್ಪ
ಶೋಧಿಸಿ ಮನವ ನಾದವ ಕೇಳಲು
ಇಟಪುರೀಶನೆ ನೀನಪ್ಪ ||3||
ಸಾರ್ಥಕ
ಹ್ಯಾಂಗಾದೀತು ಜನ್ಮ ಸಾರ್ಥಕ | ಭವ
ಹಿಂಗದೆ ಬಾಳ್ವುದು ಅಸಾರ್ಥಕ ||ಪಲ್ಲ||
ಹಿಂದೆ ಮಾಡಿದ ಪುಣ್ಯದಿಂದೆ
ಇಂದು ಬಂದೆ ಮನುಜ ಜನ್ಮದಿಂದೆ
ಮಂದಮತಿ ಮಾಯೆ ಸಂದು ಗಡಿಯದು ನಿನ್ನ
ಎಂದಿಗೆನಿಸಿಕೊಂಬೆ ಗುರುಜ್ಞಾನಿಯೆಂದು ||1||
ಗುರು ಮುಟ್ಟಿ ಗುರುವಾಗಬೇಕೋ
ಗುರುಲಿಂಗ ಜಂಗಮ ಭಾವ ನೆಲೆ ತಿಳಿಯಬೇಕೋ
ಗುರು ಹಿರಿಯರಲಿ ಭಯ ಭಕ್ತಿ ಇರಬೇಕೋ
ಗುರುಪುತ್ರನೆನಿಸಿಕೊಂಡು ಗುಡುಮ್ಹಂಚಿಕಿ ಯಾಕೋ ||2||
ಕುಟಿಲ ಕುಹುಕತನ ಬ್ಯಾಡೋ | ಸುಳ್ಳೆ
ವಟವಟ ಒದರುತ್ತ ಹೊತ್ತುಗಳೆಯಬ್ಯಾಡೋ
ಘಟಿತ ಗಂಭೀರ ಗುಣ ಪಟುತರ ಬಿಡಬ್ಯಾಡೋ
ಇಟಪುರೀಶನ ಮರೆತು ಇರಬಾಡೋ ಮೂಢ ||3||
ಯಾರ ಗೊಡವಯೇನು
ಯಾರಗೊಡವಿಯೇನು | ಏ ಮಾನವ ನಿನ
ಗ್ಯಾರ ಗೊಡವಿಯೇನು?
ಮಾರಹರನ ಮನ ಸಾಧಿಸಿ ಭಜಿಸೆಲೊ
ಯಾರ ಗೊಡವಯೇನು ||ಪಲ್ಲ||
ಮಾಯಾ ಪ್ರಪಂಚದ ಮಾಯವ ತಿಳಿದು ನೀ
ಕಾಯದ ಗುಣಗಳ ಕಳೆದುಳಿದು
ಆಯಾಸ ಪಡದೆ ನಿರಾಳದಿ ಬೆರಿಯೊ
ಯಾರ ಗೊಡವಿಯೇನು ||1||
ಗುರು ಧ್ಯಾನವನು ಅನುದಿನ ಪಠಿಸುತ
ಮರೆಯದೆ ಕ್ಷಣ ಕ್ಷಣ ಮನದೊಳಗೆ
ಪರಮಾನಂದದಿ ವರ ಗುರುವಿನೊಳಿದು
ಯಾರ ಗೊಡವಿಯೇನು ||2||
ಅಂಬಿಗ ಗುರಿಯಂತೆ ನಂಬಿ ನಿಜಗುರು
ಸಾಂಬನ ಸ್ಮರಿಸುವ ಸೇವೆಯನಗಲದೆ
ಇಂಬುಗೊಂಡಿರು ಇಟಪುರೀಶನೊಳು
ಯಾರ ಗೊಡವಿಯೇನು ||3||
ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
ಆಯಿತು ವ್ಯಾಳೈ ||ಪಲ್ಲ||
ಮುತ್ತು ಹೋದ ಮೇಲೆ ಸತ್ತ ಹೆಣಕೆ ಕುಂತು
ಅತ್ತತ್ತು ಕರೆದಲ್ಲಿ ಏನೂ ಇಲ್ಲ
ಜ್ಯೋತಿ ಹೋದ ಮಾಲೆ ಕತ್ತಲಾಯಿತು ಮನೆ
ಅತ್ತು ಹಲವಾಡಿದರೂ ಹೊತ್ತೊಯ್ಯಬೇಕು ||1||
ಪಡೆದ ಪ್ರಾರಬ್ಧವದು ಯಾರಿಗೂ ಬಿಡದು
ಒಡೆಯ ಮೃಡನನ್ನು ಬೈಯ್ಯುವದ್ಯಾಕೆ?
ಕಡ ತಂದ ವಸ್ತುವ ಕೊಡದೆ ಕೊಟ್ಟವರಿಗೆ
ಹೊಡೆದಾಡಿ ಬಡಿದಾಡಿ ಕಡೆಗಾಗುದ್ಯಾಕೆ ||2||
ತನ್ನ ಮಕ್ಕಳೆಂದು ತೆಕ್ಕೀಲಿ ಹಿಡಕೊಂಡು
ಇನ್ನೆಷ್ಟು ಎತ್ತಿಕೊಂಡು ಮುದ್ದಾಡುವದೊ?
ತನ್ನ ಮಕ್ಕಳು ಯಾರೊ, ಮಕ್ಕಳು ತನಗಾರೋ
ಇನ್ನು ಮುಕ್ಕಣ್ಣ ಬಲ್ಲ ತಾ ಇಟಪುರೀಶ ||3||
ಕಜ್ಜಿಯೆಂಬುದು ಪರಮ ತುರಿಯು
ಕಜ್ಜಿಯೆಂಬುದು ಪರಮ ತುರಿಯು
ಲಜ್ಜೆ ನಾಚಿಕೆ ಬಿಟ್ಟಂಥ ಸಿರಿಯು ||ಪಲ್ಲ||
ಹೆಜ್ಜೆ ಹೆಜ್ಜೆ ಹೆದರವಲ್ಲದು
ಕಜ್ಜಿ ಬಿಜ್ಜಿ ಕವರೇ ಕವರುತ
ಗಿಜ್ಜಿಗಿಜ್ಜಿ ತಾನಾದರೂ ನಿನ್ನ
ಅಜ್ಜ ಮುತ್ತ್ಯಾರಿಗೂ ಬಿಡೆನೆಂಬುವದು ||ಅ.ಪಲ್ಲ||
ಆನಂದದತಿರೇಕದಾಶ್ಚರ್ಯ
ಎನ್ನಿಂದಾಗದು ಹೇಳಲಾಚರ್ಯ
ಚಿನ್ಹ ಕಳೆಯದು ಸಣ್ಣ ಗುಳ್ಳಿಯು
ಚೆನ್ನಾಗಿರುವ ಬೆರಳ ಸಂದಿಯಲಿ
ಮನ್ನಿಸಿ ಮರ್ದನ ಮಾಡಲು
ಇನ್ನೂ ತುರ್ಸೆ ತುರ್ಸು ಎನ್ನುವದು ||1||
ತಲ್ಲಣಿಸಿ ಸೊಲ್ಲು ತಡೆದ ಸಮಯವೋ
ಮೆಲ್ಲಮೆಲ್ಲನೆ ತೊಡೆಯ ಸಂಭ್ರಮವೋ
ಎಲ್ಲ ಪರಿಯಲಿ ಬರುವ ಬಾಧನೆ
ಬಲ್ಲಬಟ್ಟಿ ಬರಕು ಬರಕುತ
ಬೆಲ್ಲ ಮೆದ್ದ ಕೋತಿಯಂತೆ
ಹಲ್ಲು ಕಿಸಿದು ನಗುವಂಥ ||2||
ಕಜ್ಜಿಯೆಂಬುದು ಪರಮ ತುರಿಯು
ಲಜ್ಜೆ ನಾಚಿಕೆ ತೊರೆದಂಥ ಸಿರಿಯು
ಇಕೋ ಇಟಪುರೀಶನ ಕರುಣ
ಸಿಕ್ಕನೊಬ್ಬ ಮಹಾಕಾಲ ಶರಣ ||3||
ಆಡೊ ಗುಗ್ಗಳವ
ಆಡೊ ಗುಗ್ಗಳವ ಅಡಿಗಡಿ
ಗಾಡಿಸೊ ಗುಗ್ಗಳವ ||ಪಲ್ಲ||
ಈಡಾ ಪಿಂಗಳವೆಂಬ ಜೋಡಿನ ಗೆಳೆಯರು
ಕೂಡಿಕೊಂಡು ನಡುನಾಡ ಬೆಳಗಿನೊಳು ||ಅ.ಪಲ್ಲ||
ಎಚ್ಚರದಲಿ ನೋಡೋ ಇಳೆಯಂಬರ
ಬಿಚ್ಚಿ ಬಯಲು ಮಾಡೋ
ಪಶ್ಚಿಮ ಪೀಠದ ನಿಶ್ಚಯ ಪಥವಿದು
ತುಚ್ಚ ಮಾಡದೆ ಕಿಡಿಕಿಡಿ ಜಯ ಜಯಾಯೆಂದು ||1||
ಆರು ಸ್ಥಲವ ಹಿಡಿಯೊ ಅರಿತೈದು
ಆರು ಅಕ್ಷರ ನುಡಿಯೊ
ಭೇರಿ ನಗಾರಿ ನೌಬತ್ತು ಬಾಜಿಗಳಿಂದ
ಕೇರಿಕೇರಿ ಕಕ್ಕಲಲಲ ಎನ್ನಲು ||2||
ಸಟೆಯಾಡದೆ ಬಂದು ಸಹಜದಿ
ಘಟಿತುನ್ಮನಿಯೊಳು ಸಂದು
ಇಟಪುರೀಶನ ಹಿತದಿಂ ಭಜಿಸುತ
ಪುಟಿದು ಪುಟಿದು ಭೌಪರಾಕ್ ಪರಾಕೆಯ ||3||
ಮನಸ್ಸು
ಏನಾದರೇನು ವರ ಪಡೆದವರಿಗೆ
ಸುಜ್ಞಾನದೊಳಿರಿಸುವುದಿದೇ ಮನಸ್ಸು
ಜ್ಞಾನವನರಿಯದ ಅಜ್ಞಾನಿಯು ಗರ್ವದಿ
ನಾನು ನೀನೆಂಬವದಿದೇ ಮನಸ್ಸು
ಗುರುವೆ ಇದೇ ಮನಸ್ಸು ||ಪಲ್ಲ||
ಮದನನ ತಪದಿ ಅನ್ಯ ಮಾನಿನಿಯಳ
ಸದನಕೆ ಎಳೆಸುವದಿದೇ ಮನಸ್ಸು
ಮದದ ಮರೆವಿನಲಿ ಮಾಯೆಗೆ ಮೋಹಿಸಿ
ಮಾದಿಗನೆನಿಸುವುದಿದೇ ಮನಸ್ಸು
ಹೃದಯದ ಬಗೆ ಬಗೆ ತಿಳಿದವರಿಗೆ ಮುಕ್ತಿ
ಪದವಿ ತೋರಿಸುವುದಿದೇ ಮನಸ್ಸು
ಗುರುವೆ ಇದೇ ಮನಸ್ಸು ||1||
ನೆಚ್ಚಿಕಿಲ್ಲದ ದೇಹ ಮನೆಮಾರು ಸಂಸಾರ
ಮೆಚ್ಚಿಸ ಹಚ್ಚುವದಿದೇ ಮನಸ್ಸು
ಮಚ್ಚರ ಗುಣದಲಿ ಮನುಜರ ಪರಿಪರಿ
ಹುಚ್ಚು ಹಿಡಿಸುವುದಿದೇ ಮನಸ್ಸು
ಎಚ್ಚರಗೊಳಿಸಿ ಗುರುವಚನ ಓಂಕಾರ
ಕಿಚ್ಚು ಹೊತ್ತಿಸುವದಿದೇ ಮನಸ್ಸು
ಗುರುವೆ ಇದೇ ಮನಸ್ಸು ||2||
ತಾಟಕತನದಲಿ ಥೈಥೈ ಕುಣಿಸುತ
ಚಟಾಕಿ-ಚಿನಾಲಿ ಇದೇ ಮನಸ್ಸು
ಬೂಟಕತನದಲಿ ಗುರು ಹಿರಿಯರಿಗೆರಗದೆ
ಕಟುಕನೆನಿಸುವುದಿದೇ ಮನಸ್ಸು
ಇಟಪುರೀಶನ ಹಿತದಿಂ ಭಜಿಸುತ
ಘಟಿತಾರ್ಥದಲಿರುಸುವುದಿದೇ ಮನಸ್ಸು
ಗುರುವೆ ಇದೇ ಮನಸ್ಸು ||3||
ನಾವು ತುರುಕರು
ತುರುಕರೋ ನಾವು ತುರುಕರು | ಇಂಥ
ಕಿರಿಕಿರಿ ಸಂಸಾರ ಶರಧಿ ದಾಟಿರುವಂಥ ||ಪಲ್ಲ||
ಮರೆವು ಮಾಯಾಯೆಂಬ ಮನದ ಮೈಲಿಗೆ ಬಿಟ್ಟು
ಗುರುಭಕ್ತಿಯೆಂಬಂಥ ಗುಡಗಿ ಚಣ್ಣಾ ಉಟ್ಟು
ಅರಿವಿನ ಅಂಗಿ ಬಂಧುರ ಮುಂಡಾಸ ತೊಟ್ಟು
ಮುರುಗಿ ಹೊಡೆದು ಮೂರು ಜಗವ ಸುತ್ತಿರುವಂಥ ||1||
ಮುರುಕು ಮನೆಯ ಬಿಟ್ಟು ಮೂರು ಹಣವ ಕೊಟ್ಟು
ಸರ್ಕಾರಕ ಮನ ಒಪ್ಪಿ ಸೈಯೆನಿಸಿ ಗುರು ಕೊಟ್ಟ
ಬಿರುದಾವಳಿ ಸಹಿತ ಕರಕೆ ಕಂಕಣ ಕಟ್ಟಿ
ಅರಕೇರಿ ಠಾಣೆಯಿಂದ ಮೆರಕೋತ ಬಂದಂಥ ||2||
ಧೈರಿಯದ ಶಾಲು, ವೈರಾಗ್ಯದ ಸುರಾಯಿ
ವೈರಿಗಳನ್ನೆಲ್ಲ ಒಡನೆಯೇ ಒರಗಿಸಿ
ಈರಣವ ಗೆದ್ದು ಇಟಪುರೀಶನೊಳು
ಸ್ಮರಣಿಲಿ ಮನಸಂಪನ್ನಾಗಿರುವಂಥ ||3||
ಹಸನ
ಹೋಗುತಾನೀ ದಿನ ಹಸನ | ಭವ
ನೀಗಿ ಜಳಾಜಳಾಗಿ ಹಸನ
ಹೋಗುವ ಸೂತ್ರದಿ ಜಾಗ್ರದೊಳರಿವಿನ
ಸಾಗುವ ಸದ್ಗುರು ಬೋಧ ಮಂಟಪಕಿಂದು ||ಪಲ್ಲ
‘ಅ’ಕಾರ ‘ಉ’ಕಾರವನ್ನರಿದು ಮುಂದೆ
‘ಮ’ಕಾರ ಮರ್ಮವ ತಿಳಿದು
ಸಾಕಾರವಿಡಿದು ಯಮ ಸೆರೆಯೊಳು ಸಿಲುಕದೆ
ಧಿಕ್ಕಾರ ಮಾಡಿ ಮನ ಹಕಾರಿ ಹೊಡಿಯುತ ||1||
ಭಸಿತಾಭರಣರಿಗೇ ಶರಣು | ಬಹು
ಸುಶೀಲ ಮಹಿಮರಿಗೆ ಶರಣು
ಬಸವ ಸಂಪ್ರದಾಯಕರಿಗೆ ಶರಣು
ಮುಸಲ್ಮಾನರಿಗೆ ಸಲಾಂ ಎಂದು ||2||
ಜಯ ಜಯ ಜಯ ಜಯ ಮನೋಹರ
ಜಯಪ್ರದನು ನಮ್ಮ ಇಟಪುರ ಧೀರ
ಜಯಶುಭ, ಶುಭವರ ಜಯ ಶೋಭಿತವರ
ಜಯ ನಮಃ ಪಾರ್ವತಿ ಪತಿ ಹರಹರ ಎಂದು ||3||
ಈ ಪರಿಯ ವಾದವು ಯಾತಕೆ
ಪ್ರಾರಬ್ಧ ಪ್ರಯತ್ನ ವಿಚಾರ ತಿಳಿಯದೆ ಈ |
ಪರಿಯ ವಾದವು ಯಾತಕೆ
ಪರವಸ್ತು ಎರಡರ ಪೊರೆವ ಸಾಕ್ಷಿ ಜಗ
ವರಿಯುವ ಕೂಗುವ ಶ್ರುತಿ ಅರಿಯಬಾರದೇಕೆ ||ಪಲ್ಲ||
ಅರಿವು ಮರವು ದ್ವಯ ಇರುವ ನುಡಿವ ಶಬ್ದ |
ಅರಿವು ಮರವಿಗೆ ಸಾಕ್ಷಿ ಏನಾದೋ
ಬರೆ ಮಾತು ಇದು ಅದೊ ಬರೆ ಎಂದು ತಿಳಿವಾ
ಕುರುಹಿಗೆ ಉಪಾಯ ಏನಾದೋ
ಅರಿವ ಜಾಣರು ಅರ್ಥ ಮಾಡಿಕೊಳ್ಳಿರಿ
ಪರಬ್ರಹ್ಮನ್ಹೊರತ್ಯಾವದೇನು ಬಾರದೋ ||1||
ಹದಿನಾರು ವರ್ಷದ ಆಯುಷ್ಯವಿರಲು ನಿಜ |
ಪದವಿ ಬಂದಾಶ್ಚರ್ಯ ಮೃದುವಾದ ಮಾರ್ಕಂಡೆಯ
ಮದನವೈರಿಯನಪ್ಪಿ ಆದ ಚಿರಂಜೀವಿ
ಇದರಂತೆ ತಿಳಿರಿನ್ನು
ಅದರಿದರ ಗೊಡಿವೇನು
ಸದರಿಗಿರುವಾ ಸಾಕ್ಷಾತನೆ ಖರೆ ||2||
ಹರಹರಿ ಪ್ರಯತ್ನದಿ ಹರಿದಾಡಿ ದಣಿಯಲು |
ಬರಿದಾಗೋ ಚರಿಯಾ ಏನೋ
ಹರಿಹರನೆ ಎನ್ನ ಹಣೆಬಾರ ಎಂದೆಂದು
ಸ್ಥಿರಗಾಣದಿರುವದೇನೋ
ಪರಮ ಪಾವನ ಸರ್ವ ಜಗದ ಉದ್ಧಾರಕನು
ಪರತರ ಇಟಪೂರೀಶನೆ ಕರ್ತು ತಾನು ||3||
ಚಿಂತಿ ಯಾತಕೋ ನಿನ್ನೊಳು
ಚಿಂತಿ ಯಾತಕೋ ನಿನ್ನೊಳು |
ಛೀ ಬಿಡೋ ಮರುಳೆ ||ಪಲ್ಲ||
ಚಿಂತಿಯಾತಕೋ ನಿನ್ನೊಳು |
ಕಂತುಹರನ ದಯಾ ಕರುಣ
ಅಂತರಂಗದ ತುಂಬಿ ಗುರು
ಮಂತ್ರ ಕಾಯನಾದ ಮ್ಯಾಲೆ ||1||
ಸಾಧನ ಮೌನ ಸಕಲ |
ಭೇದ ಭಾವಗಳನೆಲ್ಲ ಅಳಿದು
ಆದಿ ಅಂತ್ಯ ಮೀರಿದ ಗುರು
ಪಾದದಲ್ಲಿ ಗುರುತಿಟ್ಟು ಚರಿಸಲು ||2||
ಶಾಂತ ಮನದಿ ಸಂಭ್ರಮವರಿತು |
ಇಂತು ಇಟಪೂರೀಶನ ಅರಿದು
ಪಂಥ ಗೆಲಿಸೋ ಇಹ ಪರದ
ಚಿಂತಿಯನಳಿವ ಆತೆಂದು ತಿಳಿದ ಮೇಲೆ ||3||
ಈಸಲಾರೆನೋ ಈಶಾ ಈ ಸಂಸಾರ
ಈಸಲಾರೆನೋ ಈಶಾ ಈ ಸಂಸಾರ |
ಈಶಾ ಇದಕೇನು ವಿಚಾರ ||ಪಲ್ಲ||
ಆಸೆ ಒಡಲು ಮೆಚ್ಚಿ |
ಹೇಸಿಯ ಮನ ಕಚ್ಚಿ
ಮೋಸದಿ ಘನ ಕೊಂಡಾಡಿ
ಕಾಸು ಕೈ ಚಾಚಿ ಬೇಡಿ ||1||
ಅನ್ಯರೊಳು ಭಕ್ತಿ |
ಹಾಸ್ಯವಾದುದೆ ಸತ್ಯ
ಸುಜ್ಞಾನ ಸುಳಿವು ನಿಂತಿಲ್ಲಾ
ಸುಗುಣ ಸುಮನಾಗುವದಲ್ಲಾ ||2||
ಧ್ಯಾನ ನಿನ್ನದು ಬಿಟ್ಟು |
ಶ್ವಾನನಂತೆ ತಿರುಗಿದೆ
ನೀನೇ ನಿನ್ನ ನಿಜ ದೃಷ್ಟಿಯಲಿ ನೋಡು
ಇಟಪೂರೀಶನೇ ನೀನೊಲಿಯೋ ||3||
ಖರೆ ಖರೆ ಸರಿ ಮಾಡೆಲೊ
ಖರೆ ಖರೆ ಸರಿ ಮಾಡೆಲೊ |
ಸೌದಾ ಸುಳ್ಳು ವ್ಯಾಪಾರ ಸುಳ್ಳೆ ಬ್ಯಾಡಲೋ
ಬರೆ ಬರೆ ಬಾಯಿ ಬ್ರಹ್ಮ
ಬರೆ ಗಂಟ್ಯಾಗಲಿ ಬ್ಯಾಡೋ ||ಪಲ್ಲ||
ಅರಿಯೋ ನೀನೂ ಅಂಗ ವಿಚಾರ |
ಅನುಚಾರ ಚರನಾಗೋ ಚಾತುರ್ಯಗಾರ ||1||
ಹಸಿ ಬಿಸಿ ಭಾವಿಸಿ ಜ್ಞಾನ |
ವಶವಾಯಿತೆನಬೇಡಾ
ಹಸನಾಗಿ ತತ್ವಮಸಿ ಮಹಾವಾಕ್ಯ
ಸರಿ ಇಟ್ಟು ತಿಳಿಯೋ ಹುಸಿ ಬ್ಯಾಡಾ ||2||
ಘಟಸ್ಥಲದ ಮಟದೊಳಗಿರ್ದ |
ಇಟಪೂರೀಶನ ಬಿಡುಬ್ಯಾಡ
ಸಟಿಯಾಗದೆ ನೀ ದಿಟವರಿದು ಉನ್ಮನಿ
ಮಠ ಸೇರುವದೆ ಬಲು ಪಾಡ ||3||
ವರ ಗುರುಚರಣಂಗಳ ಬೆರೆದ ಶಿವ
ವರ ಗುರುಚರಣಂಗಳ ಬೆರೆದ ಶಿವ |
ಶರಣಗಾನಂದ ಮಂಗಳ ||ಪಲ್ಲ||
ಅರಿವು ಆಚಾರ ಅರಿಯದೆ ಬರೆ ಡಂಬಕರಿಗೆ |
ದೊರೆವುದೆ ಆನಂದ ಮಂಗಳ ||1||
ಆರು ಸ್ಥಲವು ಅರಿಯೋಣಿಲ್ಲ ಮೇಲೆ ಕೀಲರಿತು |
ಮೂರು ಬೆರಿಯೋಣೀಲ್ಲ
ಧೀರತ್ವದಲಿ ಮನೋಹರನ ಸ್ಮರಿಸುತ ಬೆರಿಯೋಣೀಲ್ಲ
ಬೆರೆದರೆ ಶಿವಶರಣಗಾನಂದ ಮಂಗಳ ||2||
ವೇದವಾದಿಗಳೆಲ್ಲ ವೇದದ ಭೇದವು ತಿಳಿಯಲಿಲ್ಲ |
ಓದಿ ಓದಿ ತಾ ಕೂಚ ಭಟ್ಟನಾದಂತೆ ಅವನ
ಭವ ಬಾಧೆಯು ಬಿಡಲಿಲ್ಲ ||3||
ವಿದ್ಯಾ ಅಧಿಕ ಇದ್ದ ಸ್ಥಲ |
ಇಟಪೂರೀಶನೆ ಸಾಧ್ಯವಲ್ಲ
ವಿದ್ಯಾ ಅವಿದ್ಯಾ ತಿಳಿಯಿದ್ದ ಜಾಣನು
ಬ್ರಹ್ಮವಿದ್ಯಾ ಸಾಧಿಸಬಲ್ಲ ||4||
ಅಗಲಿ ಇರಬ್ಯಾಡೆಲೊ ಕಂದಾ
ಅಗಲಿ ಇರಬ್ಯಾಡೆಲೊ ಕಂದಾ |
ಅರಗಳಿಗಿ ಗುರುವಿನ
ಅಗಲಿ ಇರುಬ್ಯಾಡೆಲೋ ಕಂದಾ
ಹಗಲಿರುಳು ಗುರುವಿನ ||ಪಲ್ಲ||
ಈಡ ಪಿಂಗಳೊಂದೆ ಮಾಡುತ |
ಆಡುವ ನಡುವೆ ನಾಡಿ ಭಾವದಿಂದ ಕೂಡುತ
ಕೂಡುವ ಕೂಟವನರಿದು
ನೋಡು ನಾಸಿಕಾಗ್ರ ಬೆರಿದು
ಆಡುತಿರುವಾ ಆಧಾರ ಬಲಿದು
ಆರು ಚಕ್ರದ್ವಂಶದಿರುವಾ ||1||
ಮಾಯೆ ಮೋಹ ಮೋಹನಾಗದೆ |
ಮನಸೊಂದೆ ಮಾಡಿ ದೇಹವ ನಿಲ್ಲಿಸಿ ತೂಗದೆ
ವಾಯು ವಶಮಾಡದೆ ಅರಿವುದೆಲ್ಲ
ಒಲಿದ ಗುರುವು ಕೂಡ ಬಲ್ಲ
ಬಾಹ್ಯಬ್ರಹ್ಮ ನುಡಿಗಳೆಲ್ಲ
ಭಾವ ತಿಳಿದ ಶರಣನೆ ಬಲ್ಲ ||2||
ನಿನ್ನ ಬಿಟ್ಟು ಬೇರೆ ಇಲ್ಲಾ |
ನಿನ್ನೊಳಗೆ ತಿಳಿಯೋ
ತನ್ನ ಬಿಟ್ಟು ದೇವರಿಲ್ಲಾ
ಪುಣ್ಯ ಅಧಿಕಾರಿಗಿದು ಪೂರ್ಣಜ್ಞಾನ ಫಲಿಸುವುದು
ಇನ್ನು ಇಟಪೂರೀಶನ ವಿನಾ ||3||
ಏನ ಹೇಳಲಿ ಹುಟ್ಟಿದ ಮಾರ್ದೇಶ
ಜಾಕನ ಹಳ್ಳಿಯಲಿ ಸಿದ್ಧಲಿಂಗ ಹಾನ |
ಜನ ಕೇಳಿರಿ ಕವನಾ
ಅಧಿಕ ಚಿಂತ್ನಳ್ಳಿ ಗವಿಸಿದ್ಧಲಿಂಗ ಹಾನ
ಆತ ವರಪಿಂಡ ಹಾನ ||ಪಲ್ಲ||
ಏನ ಹೇಳಲಿ ಹುಟ್ಟಿದ ಮಾರ್ದೇಶಾ |
ಆತನ ಪ್ರಕಾಶಾ
ಚರಿಗಳು ತೂರುವಾ ಬಹುದಿಶಾ
ನೋಡು ನಾಲ್ಕು ದೇಶಾ
ಜ್ಞಾನವಂತರಿಗೆ ಬಹು ಸಂತೋಷಾ
ಘನ ಗುಣ ಮಣಿ ಭೂಷಾ ||1||
ಗುಡ್ಡ ಗಂವಾರಾ ಗವಿ ಸುಳಿದಾನ |
ಗಟ್ಯಾಗಿ ನಿಂತಾನ
ಹಾದಿ ಹಿಡಿಯದೆ ಅನುಗಾಲ ಅರಣ್ಯ ಸೇರ್ಯಾನ
ಹುಲಿ ಕರಡಿಗಿ ಅಂಜದೆ ನಡು ಅಡವ್ಯಾಗ ನೆಲಸ್ಯಾನ ||2||
ಪರಿ ಪರಿ ಕಷ್ಟದಿ ತಪಸು ಮಾಡಿ |
ವರವನು ಪಡೆದಾನು
ದುರಿತ ದೋಷ ದುರ್ಗುಣಗಳ ಸುಟ್ಟಾನ
ವರ ಧೀರನು ತಾನು
ಪರಕೆ ಪರಸ್ಥಲ ಖರೆಗೊಂಡಾನಲ್ಲಿ
ಪರಿಪೂರ್ಣನು ತಾನು ||3||
ಮೂಲ ಜ್ಞಾನವೆಲ್ಲಾ ಆತನಿಗೆ ಹಿತವು |
ಮೆಚ್ಚನು ಅಜ್ಞಾನವ
ಪಾಲು ಅರ್ಪಿತಾ ಪ್ರಸಾದ ವರ್ಜಿತವು
ಪರಧನ ಪರಸತಿಯೋ
ಸ್ಥೂಲ ಮಲತ್ರಯ ಮಾಡ್ಯಾನೋ
ತಾನು ಹತವು ತಿಳಿದಿಯೂ ಸಪ್ತದವು ||4||
ಮನಿ ಮಾರು ಸಂಸಾರ ಮಾಡ್ಯಾನ ತ್ಯಾಗಾ
ಮಾಯೀನ ಜರದಾನ |
ಕನಸಿನಂತೆ ಕಂಡಾನು ಜಗ ಭೋಗ
ಖರೆ ಖರೆ ಜೊಳ್ಳು ತ್ಯಾಗ
ತೊರದಿಹನೋ ಭವರೋಗ ||5||
ಬಡವರಿಗೆ ತಾ ಮಾನ್ಯತೆ ಕೊಡುವಾ |
ಬಹಳ ಸಂತೋಷಪಡುವ
ತಡಿಯದೆ ಮುಖಮಾರ್ಜನ ಮಾಡಿಸುವಾ
ತಾನೇ ಎದ್ದೇಳುವಾ
ಗಡಿಬಿಡಿ ಓಡಿಸ್ಯಾಡಿ ಪ್ರಸಾದ ಬಡಿಸುವಾ
ಘನ ಕನಿಕರ ಬಡುವಾ ||6||
ಹಿಂದಿನ ಪುರಾನತರಿಂದ ಆಚಾರ |
ಇಂದು ಬಂಧು ಭಾವವು
ನಿಂದು ನಿಲಕದಿಹ ಭಕ್ತ ಜನ ಪರಿಯಾ
ಕಂದುಗೊರಳನಾ ಕೃಪಾವೊಂದು ಖರಿಯಾ
ಕಣ್ಣಂದಿತು ಚರಿಯಾ ||7||
ಕವಿಗೊಂದಿನಾ ಖರೆಗೊಂಡಾನು ಸೋಪಾನ
ಕಣ್ಮರೆವು ಕಾಣ |
ಕನಸಿನೊಳು ಬಂದು ಮಹತ್ವವ ನುಡಿದಾನ
ಕವಿಯು ಮಾಡಂದಾನ ಮೌನದಿ ಮೆಚ್ಚಿಲೇ ಮನ
ಸಾಕ್ಷಾತ್ ಸೂಚನಾ ಮುಟ್ಟಿ ನಡಸ್ಯಾನ ವಚನ ||8||
ಗತಪಿ ಗ್ರಾಮದೊಳು ಭಕ್ತರ ಮನೆಯೊಳು |
ಆಕಳ ಬಸಿರೊಳು ಅಧಿಕ ಪುಟ್ಟಿತು
ಬಸವನಂತೆ ಚೆಲುವು
ಇದು ನಿಮಗೆ ಸಲ್ಲಲಿ ಎಂದು
ಭಕ್ತನು ಅರ್ಪಿಸಿದನಾ ಕ್ಷಣವು ||9||
ಬಸವನ ಗುಣ ಹೇಳಲಳವಲ್ಲಾ |
ಪಶುವಿನ ತೆರನಲ್ಲ
ಸುಶೀಲ ಸುಮತಿಯ ಶಬ್ದ ಮಾತ್ರವಿಲ್ಲಾ
ಸುಳು ಬಲ್ಲನು ಎಲ್ಲಾ
ಕುಟಿಲ ಭಕ್ತರ ಮನಿಗೊಂಚನವಿಲ್ಲಾ
ಕುಟಿಲರ ಮನಿಗೊಲ್ಲಾ ||10||
ಶರಣು ಭಾವ ಶರಣರಿಗೆ ಅರಿದವರಿಗೆ ಅರ್ತಿ |
ಅವನ ನಿಂದೆ ಮಾಡುವನೇ ಬೆರಕಿ
ತುರಗನ ಸರ ಓಡಿಸ್ಯಾಡುವಳೆ ಪಿರಕಿ
ಕರಿಯಾ ಕತ್ತೆಡಕೀ ||11||
ಇಳಿಯೊಳು ಈ ಪದ ಹಾಡುವವರಿಗೆ ಚಂದ |
ಈ ಮಾತು ಪಸಂದಾ
ತಾಳಮದ್ದಲಿ ಸ್ವರ ನಾದಗಳಿಂದ ತಲೆದೂಗಿರಿ ಇಂದ
ತಿಳಿ ಹೇಳಿದಾ ಇಟಪೂರೀಶನ ಕಂದಾ
ತಾ ಬ್ರಹ್ಮಾನಂದಾ ||12||
ಗುರುವೆ ತಾಯಿ ತಂದಿ
ಗುರುವೆ ತಾಯಿ ತಂದಿ ಗುರು ಪಾದಕ ಹೊಂದಿ |
ಗುರುವೆ ಗತಿ ಎಂದು ಅಂದುಕೊಳ್ಳಿರಿ ತಂಗಿ ||ಪಲ್ಲ||
ದೃಢದಿ ಬಾಗಿ ಮನೋಹರ ಒಡೆಯನ ಪಡಿರೆಮ್ಮಾ ||ಅ.ಪಲ್ಲ||
ಗುರುವೆ ಜಗಜೀವಾ ಗುರುವೆ ಸಂಜೀವಾ |
ಗುರುಭಕ್ತರ ಜೀವದ ಜೀವ ಕೇಳಿರಿ ತಂಗಿ ||1||
ಗುರುಭಾವ ಅರಿಯುತ ಗುರುಲಿಂಗ ಬೆರೆಯುತ |
ಮರೆವ ಜಂಗಮ ಜಗಭರಿತಾ ಕೇಳಿರಿ ತಂಗಿ ||2||
ಏಸು ದಿನದ ಇದು ಹೇಸಿಕಿ ಸಂಸಾರ |
ಈಶನ ಬಿಟ್ಟರೆ ಯಮಪೂರ ಕೇಳಿರಿ ತಂಗಿ ||3||
ಮುಕ್ತಿಗೆ ಮೂಲಮಾರ್ಗಾ ಭಕ್ತಿಯೇ ಸುಮಾರ್ಗ |
ಯುಕ್ತಿಲೆ ನುಡಿದಾರೆ ಸ್ವರ್ಗಾ ಕೇಳೀರಿ ತಂಗಿ ||4||
ಜನ್ಮ ಜನ್ಮಾಂತರ ಜನಿಸಿ ಬರುವದು ನಿಂತರ |
ಸನ್ಮಾರ್ಗ ಅರಿಯದ ತಂತ್ರ ಕೇಳಿರಿ ತಂಗಿ ||5||
ಮನು ಮುನಿಗಳೆಗೆಲ್ಲಾ ಮಹಾಗುರು ಸ್ತುತಿ ಬೆಲ್ಲಾ |
ಗುಣಹೀನರಿಗೆ ಇದು ಸಲ್ಲದು ಕೇಳಿರಿ ತಂಗಿ ||6||
ನಿಟಿಲಾಕ್ಷನ ನೆನಹು ನಿಷ್ಠಿಲಿ ನಿಧಾನವು |
ನಡಿ ಸಾಲದೆ ಬಹುಮಾನವು ಕೇಳಿರಿ ತಂಗಿ ||7||
ವಂಚನೆ ಮನ ಸಲ್ಲಾ ಕಿಂಚಿತ ಗುಣ ಸಲ್ಲಾ |
ಪಂಚಮುಖನ ದಯವಿಲ್ಲಾ ಕೇಳಿರಿ ತಂಗಿ ||8||
ಬಣ್ಣದ ಬಡಿವಾರ ಬೆಳಕೀಲಿ ನಡಿವರು |
ಪುಣ್ಯವ ಪಡಿವುದು ಬಹುದೂರಾ ಕೇಳಿರಿ ತಂಗಿ ||9||
ಅನುಮಾನ ಬರೆ ಭ್ರಾಂತಿ ಹಲವು ಹಂಬಲ ಚಿಂತಿ |
ಅನುಗಾಲ ಸುಡಗಾಡ ಸಂತಿ ಕೇಳಿರಿ ತಂಗಿ ||10||
ನೆಚ್ಚಿಕಿಲ್ಲದ ದೇಹಾ ಮೆಚ್ಚುವದನ್ಯಾಯ |
ಎಚ್ಚರದಿರುವುದು ನಿರ್ಭಯ ಕೇಳೀರಿ ತಂಗಿ ||11||
ಸತ್ಯವ ಹಿಡಿಬೇಕೋ ಅಸತ್ಯವ ಬಿಡಬೇಕೋ |
ಸತ್ತು ತಾವು ಬದುಕಿರಬೇಕೋ ಕೇಳಿರಿ ತಂಗಿ ||12||
ಭೂಮಂಡಲವು ಬಯಲು ಬೆರೆದರೆ ನಿರ್ಬಯಲು |
ಬ್ರಹ್ಮವು ಬಯಲಿಗೆ ಬಯಲದ ಕೇಳಿರಿ ತಂಗಿ ||13||
ತಿಳಿಕೊಳ್ಳಿರಿ ಇದರ ಘನವ ಅರಿತುಕೊಳ್ಳಿರಿ |
ಕದನವು ಮನಸಿನ ಕಾಳ ಕೇಳಿರಿ ತಂಗಿ ||14||
ವಲ್ಲಭನ ಸೇವೆಯಲ್ಲಿ ಬಾಗಿರುವಾ ನಲ್ಲೆ |
ಬಾಲೆಯರ ಶಿವ ಕಾಯುವನು ಕೇಳಿರಿ ತಂಗಿ ||15||
ಮುಸ್ಲಮಾನರ ಬಾಲಾ ಉಸರಿದ ಗುರುಲೀಲಾ |
ಹಸನನ ನುಡಿ ನೀವು ಹಸನಾಗಿ ಕೇಳಿರಿ ತಂಗಿ ||16||
ಜಯ ಜಯ ಜಗದೀಶಾ ಜಯ ಇಟಪೂರೀಶಾ |
ಜಯ ಎಂದು ಪಡಿರಿ ಉಪದೇಶಾ ಕೇಳಿರಿ ತಂಗಿ ||17||
ಮಾಯದ ಸಂಸಾರ ಮೋಹಿಸಿ
ಸುಮ್ಮನಲ್ಲಾ ಸುಮ್ಮನಲ್ಲಾ ಸುಜ್ಞಾನವೆಲೋ |
ಮಾಯಾ ಸಂಹಾರದೊಳು ಮೋಹಿಸದೀ ಮನ ||ಪಲ್ಲ||
ಮಾಯಾ ಮೋಹ ರಹಿತನ |
ಮಾಯ ಮೋಹ ತಿಳಿಯದೆಲೋ ||1||
ಆಶೆ ಹಿಡಿದು ಭವಪಾಶ ಬೀಳುವ ನರ |
ಈಶನೊಲಿಸಿ ಪರವಶದೊಳಿದ್ದೆಲೊ ||2||
ಹೀನ ಗುಣವ ಜರಿದು ಇಟಪೂರೀಶನ |
ಧ್ಯಾನವರಿದು ಘನಜ್ಞಾನ ಪಡಿವುದೆಲೋ ||3||
108. ಸುಮ್ಮನಿರು ಸುಮನಾ
ಸುಮ್ಮನಿರು ಸುಮನಾ ಸುಗುಣದಿ ನೀ |
ಪರಬ್ರಹ್ಮಾನಂದದೀ ಬ್ರಹ್ಮನಾಗಿ ನೀ ||ಪಲ್ಲ||
ಕಾಯದ ಗುಣದೊಳು |
ಕಳವಳಗೊಳ್ಳದೆ
ಮಾಯಾ ವಿರಹಿತನ
ಮಹಿಮೆಯೊಳಡಗಿ ನೀ ||1||
ಜೇಂಕಾರ ಜಣಿತಕ್ಕ |
ಜೇಂ ಎಂದು ನುಡಿಸುತ
ಶಂಕರನಗಲದೆ
ಶಾಂತ ಗುಣದಲಿ ನೀ ||2||
ಭೀತಿ ಭಯದಿ ಮನ |
ಸೋತವರಂದದಿ
ಈ ತರ ಜುಟ
ಇಟಪೂರೀಶನೊಳಗಾಗೀ ||3||
ನಿನ್ನನು ಅರಿದು ಬೆರಗಾದೆ
ಜೀ ಹೋ ಜೀ ಹೋ ಜೀ |
ಮಹಾ ಅರುವೆ ನಿನ್ನರಿದು ಬೆರಗಾದೆ ||ಪಲ್ಲ||
ಆಧಾರ ಅರಿದು ಅನುದಿನಾ |
ಆರು ಸ್ಥಲವ ಸುಳಿದು ನಾ
ನಾದ ಬಿಂದು ಕಳೆಯ ತೋರಿ
ಸಾಧಿಸಿ ಸುಖಿಯಾದೆ ನಾ ||1||
ಪಂಚ ತತ್ವ ಕೂಡಿದೆ |
ಪಂಚ ಮುದ್ರೆಯ ಹೂಡಿದೆ
ಪಂಚ ವಸ್ತುವಿನ ಪರದಿ ಹರಿದು
ಪರಬ್ರಹ್ಮನೊಳಗಾದೆ ನಾ ||2||
ನೀತಿಲಿ ನಿಜ ಧ್ಯಾನವು |
ನಿನ್ನನಗಲಿದ ನಿಮಿಷವೆ
ಸೋತು ಸೊರಗಿ ಸವೆದ ಖಂಡ
ಜ್ಯೋತಿಯೊಳಗಾದೆ ನಾ ||3||
ಕಾಯವನ್ನು ಕರಗಿಸಿ |
ಮಾಯ ಮೋಹ ಒರಗಿಸಿ
ಬಾಹ್ಯ ಬ್ರಹ್ಮವನ್ನು ಕಳೆದು
ಬಯಲಿಗೆ ಬಯಲಾದೆ ನಾ ||4||
ಸತ್ಯ ಸಮರಸವಾಯಿತು |
ಅನಿತ್ಯವು ಅಳಿದ್ಹೋಯಿತು
ನಿತ್ಯ ಅನಿತ್ಯವನರಿದು ನಿನ್ನ
ಗೊತ್ತಿದೆ ಸೇರಿದೆ ನಾ ||5||
ಅರುವಿನೊಳಗಾಡಿದೆ |
ಮರವೆಯ ಮರೆ ಮಾಡಿದೆ
ಅರುವು ಮರವು ಅಡಗಿ ಪರಕೆ
ಪರವಶಕೊಳಗಾದೆ ನಾ ||6||
ಕಂಪು ಕಲ್ಪವೃಕ್ಷನೆ |
ಇಂಪು ಸೊಂಪುದಿಂದೆ
ಇರುವ ಇಟಪೂರೀಶ ನೀನೇ ನಾ ||7||
ಗುರು ಕರುಣಾ ಬೆರಿಯುವ ತನಾ
ಮರವು ಮಹಾ ಆದರವು ಬೆರಿದು |
ಗುರು ಕರುಣಾ ಬೆರಿಯುವ ತನಾ ಬಹು ದೂರಾ ||ಪಲ್ಲ||
ಕುಟಿಲ ವಿಷಯ ಗುಣ ಕಡಿದು ಕಡಿದು ಸಂಹರಿಸದೆ |
ಸಟಿಯಾಗಿ ತೋರದೀ ಸಂಸಾರ ||1||
ಯೋಗ ಮುಖದಿ ತತ್ವ ಬೋಧಿಸದೆ ಶಿವ |
ಯೋಗದ ಸುಖವು ಬಹುದೂರಾ ||2||
ಈ ಪರಿ ತಿಳಿದರೆ ಇಟಪುರೀಶನ ಬೋಧಾ |
ಪಾಪ ಎಂದೆಂದಿಗೆ ಪರಿಹಾರ ||3||
ಎಂಥಾ ಗಾರುಡಿಗ್ಯಾ
ಎಂಥಾ ಗಾರುಡಿಗ್ಯಾ ಹಾನೇ ಅವ್ವಯ್ಯ ನೋಡೇ |
ಎಂಥಾ ಗಾರುಡಿಗ್ಯಾ ಹಾನೇ ||ಪಲ್ಲ||
ಅಂತ ತಿಳಿಯದೆ ಇವನ ಹಂತೇಕ ಹೋದವರನ |
ಪಂಥ ಗೆಲಿಸುವಂಥ ಗಾರುಡಿಗ್ಯಾನೆ ||1||
ಲಕ್ಷ ಹಿಡಿದು ಅರಕ್ಷರ ಓದಿಸಿ |
ನಿಕ್ಷೇಪ ತೋರಿ ನಿಜ ವಸ್ತು ಕೊಡಿಸುವ ||2||
ನಿಚ್ಚ ನಿಚ್ಚವು ಮಹದೆಚ್ಚರ ಬೋಧಿಸಿ |
ಅಚ್ಚ ಪರವಶದಿ ಹುಚ್ಚು ಹಿಡಿಸಿದಾ ||3||
ಸೇರಿರುವ ಭಕ್ತರ ದುರಿತವನು |
ದೂರ ಮಾಡುವಾ ಇಟಪೂರೀಶಾನು ||4||
ನಿಜವನು ಅರಿದು ನೀ ನೋಡು
ನಿನ್ನ ನಿಜವನರಿದು ನೀ ನೋಡಿದ್ಯಾ |
ಪನ್ನಂಗಧರನಾ ಪೂರ್ಣದಯದಿ
ನಿನ್ನ ನಿಜವನರಿದು ||ಪಲ್ಲ||
ಹೇಸಿಕಿ ದೇಹದ ವಾಸನವಳಿದು |
ಮನ ಹೇಸಿಗೂಡದೆ
ಗುರು ಧ್ಯಾನದೊಳಗೆ ಇರು ||1||
ಸತಿ ಸುತರ ಹಂಬಲ ಸಟೆಯೆನ್ನುತ ನಿನ್ನ |
ಮತಿಯೊಳಿಂದು ಸದ್ಗತಿ ಪಥದಿ ||2||
ಬಂಧನ ಭವ ಸೆರೆ ಬ್ಯಾಸರಗೊಂಡು |
ಇಂದು ಇಟಪೂರೀಶನ ಒಲಿಸೋ ||3||
ತಂದೆ ನೀನೊಲಿದರೆ
ರಾಜಾಧಿರಾಜಶೇಖರಾ ಸಹಜ ಸೃಷ್ಟಿಕರ್ತ |
ಮೂಜಗದ ಉದ್ಧಾರ ಅಧಿಕಾರಾ ||ಪಲ್ಲ||
ತನು ಮನ ಧನ ಮೂರು ನಿನಗರ್ಪಿಸಿದವರ |
ಘನ ಪದವಿಯ ನೀ ಗುಣ ಮಣಿಹಾರಾ ||1||
ಭಾವ ಭಕ್ತಿ ವಿಚಾರ ಭಾವಿಸಿ ಭಜಿಪರು |
ಆವ ಕುಲದವನಾದರು ದೋಷಗಾರ ||2||
ತಂದೆ ನೀನೊಲಿದರೆ ಬಂದ ಕಂಟಕದೂರ |
ಇಂದುಧರ ಇಟಪೂರೀಶನೆ ಧೀರಾ ||3||
ಹೀನ ಅಳಿಯಬೇಕು
ಮೋಸವ ಮಾಡಿದಾ ಮೋಸವ ಮಾಡಿದಾ |
ಮೋಹಿಸಿ ಎನ್ನ ||ಪಲ್ಲ||
ಓಂ ಮನಃವನು ಓದಿಸಿ ಉನ್ಮನಿ ಸಾಧಿಸಿ |
ಭಾನು ಪ್ರಕಾಶದ ಬೆಳಗಿನೊಳು ನೀನಿದ್ದಿ ||1||
ಸಾಸಿರ ನಾಮದ ಸಂಗವ ಬೆರಿಯಲು |
ಏಸೇಸು ಜನ್ಮದ ದೋಷದ ಗಳಿಸಿ ||2||
ತತ್ವದ ಬ್ರಹ್ಮರ ಅರಿವ ಸ್ಥಾನದಿ |
ನಿರ್ಮಲ ವಾಸನೆ ನಿರಾಳದೊಳಿರಿಸಿ ||3||
ನಾನು ನೀನೇ ಎನಿಸುವನು ಏನೇನೊ ಬೋಧಿಸಿ |
ಹೀನ ಗುಣವಳಿದು ಇಟಪೂರೀಶನು ||4||
ಬಿಡಿಸು ಗುರುವೆ ಎನ್ನವಗುಣವ
ಬಿಡಿಸೋ ಗುರುವೇ ಎನ್ನವಗುಣವ ಗಡಬಡಿಸುವಾ |
ಅಡಿಗಡಿಗೆ ಎನ್ನಂಗದೊಳಗೆ ನವನಡೆಗಳು ||ಪಲ್ಲ||
ಎಂಥ ಮರೆವಿದು ಮನಸಂತೆ ಕುಣಿದು |
ಭ್ರಾಂತಿಗಳಿವುದು
ತಂತು ತಿಳಿಯದೆ ಕುಂತು ನಾ ಬರೆ
ಚಿಂತಿಯೊಳು ಚರಿಸಾಡುವುದು ||1||
ಶೋಧಿಸಿ ಶಾಂತರ ಸಾಧಿಸಲಿಲ್ಲಾ |
ಬೋಧ ಮಂತ್ರ ಕ್ರೋಧ ವರ್ಗ
ಛೇದಿಸಿ ಎನ್ನ
ಸಾಧುರ ಸೇವೆಯೊಳಿರಿಸಿ ||2||
ಮಂದಮತಿಯಲಿ ಬಂದೊದಗುವ ಭವ |
ಬಂಧನ ಶೂಲ ಕುಂದೆಣಿಸದೆ
ಹೊಂದಿ ಮುಕ್ತಿ
ಇಂದು ಪಾಲಿಸೋ ಇಟಪೂರೀಶಾ ||3||
ಚಿಂತಿ ಯಾಕ
ಮಾಡೋ ಮಾಡೋ ಮಾನವಾ |
ಮನೋಹರನ ಧ್ಯಾನವಾ ||ಪಲ್ಲ||
ಚಿಂತಿ ಯಾವುದ್ಯಾತಕೋ ನಿ |
ಶ್ಚಿಂತ ನಿನ್ನ ಹೃದಯದೊಳು
ಅಂತರಂಗದಿ ಕೂಡಿ ಆಗೋ
ಅಂತಃಕರಣವ ||1||
ಗಂಟುಗಳ್ಳರೆಂಟರವರು |
ತಂಟೆ ಕೂಗಾಟೊಂದಿಲ್ಲಾಗಿ
ಬಂಟ ನೀ ಭಜಿಸೆಲೋ
ಭವದ ಕಂಟಕ ಕಳಿವಾ ||2||
ಬೇಸರಾಗದೆಲೋ ನಿಜ |
ಧ್ಯಾಸ ಮರೆಯದೆ
ಇಟಪೂರೀಶನೊಳುಲ್ಲಾಸದಿ ಬೆರಿ
ಮೋಸವಾಗದೊ ||3||
ಮೂರು ದಿನದ ಸಂತಿ
ತಿಳಿ ತಿಳಿ ತಿಳಿ ಮನವೇ ನೀ |
ತಿಳಿದರೆ ಮಹಾ ಘನವೆ
ಅಳಿ ನಿನ ದುರ್ಗುಣವ
ಅಳಿಯದಿದ್ದರೆ ಹಗರಣವೇ ||ಪಲ್ಲ||
ಮಂದಮತಿಯ ಭ್ರಾಂತಿ |
ಮಾಡುವದ್ಯಾಕೋ ಹಲವು ಚಿಂತಿ
ಮುಂದ ಅರಿಯದೆ ಕುಂತಿ
ಇದು ಮೂರು ದಿನದ ಸಂತಿ ||1||
ಪರರ ಗೊಡವಿ ಸಾಕೋ |
ಪರರವಸರೇನು ಬೇಕೋ
ಹರನ ನುಡಿಯೊಳು ಶೋಕೋ
ಮರಿಯದೆ ನೀ ಹೊಡಿ ಜೋಕೇ ||2||
ಕುಟಿಲತನವು ಬ್ಯಾಡೋ |
ಕಟಕಟಿಸುವದೇನು ಪಾಡೋ
ಇಟಪೂರೀಶನ ಕೂಡೋ
ಘಟದೊಳಗೆ ನೋಡಿಕೋ ಮೂಢಾ ||3||
ಕರುಣದಿ ಜ್ಞಾನ ಕರುಣಿಸು
ಗುರುವೆ ನಿಮ್ಮಯ ಉಪಕಾರ |
ಮರಿಯಲಾರೆನು ಮನೋಹರ
ಕರುಣದಿಂದಲಿ ಜ್ಞಾನ ಕರುಣಿಸಿದೀ ಕ್ಷಣ
ಮರುಳನಾದೆನು ನಿಮ್ಮ ಚರಣಕ್ಕೆರಗುವೆನು ||ಪಲ್ಲ||
ಅರಿಯದ ಮೂರ್ಖಗೆ ನೀವು ಬಹು |
ಪರಿಯಲಿ ಬೋಧಿಸಿ ಎನ್ನ ಗರ್ವ
ಮುರಿದು ಈ ಮಹಾ ವಾಕ್ಯ
ಮರಿಯದಿರೆಂದು ಪೇಳಿದಿ ಗುರುವೇ ||1||
ಮತ್ಸರ ಮೋಹವ ಬಿಡಿಸಿ ಮಹ |
ದೆಚ್ಚರದೊಳೆ ಮನ ಬೆರಸಿ
ಪಶ್ಚಿಮಗಿರಿಯೊಳು ಪರಮಾನಂದನ ಸುಖ
ನಿಶ್ಚಯದೊಪ್ಪಿಸಿ ನಿಜವು ತೋರಿದಿ ಗುರುವೇ ||2||
ಹೊನ್ನು ಮಾಣಿಕದ ಬೆಲೆ ಕಂಡೆ |
ಇನ್ನೇನೂ ಬೇಡಲಿ ಇಟಪೂರಿಶನೇ
ನಿನ್ನ ಪುಣ್ಯದಿ ಪೂರ್ಣ ಸಂ
ಪನ್ನ ಮಾಡಿದಿ ಗುರುವೆ ||3||
ನುಡಿಯ ಲಾಲಿಸು ಮನವೆ
ನುಡಿಯ ಲಾಲಿಸೋ ಮನವೇ |
ನಡಿಯಲು ಸೋಪಾನ
ಕೂಡು ಪ್ರಾಣನಾಥನ
ಕಂಡು ಕಾಣದಾತನ ||ಪಲ್ಲ||
ವಾದ ಭೇದವ ಕಳೆದು
ಉಳಿದುದೆ ರತನ
ಅದನು ಮಾಡಿಕೋ ಜನತಾ
ಇದರದು ಪ್ರಯತ್ನಾ ||1||
ಅಪರಂಪಾರ ಗುರತಾ |
ಅದರಂತೆ ಎಲ್ಲ ತತ್ವ
ತಾ ಪರಬ್ರಹ್ಮ ಭರಿತಾ
ಥಳಥಳ ಹೊಳಿಯುತ ||2||
ನೋಟ ಕೂಟ ನೇಮಸ್ಥಲ |
ನಟಿಸಲು ನಿರ್ಮಲ
ಇಟಪೂರೀಶನ ಲೀಲಾ
ಪಟಿಸಿ ಪಾರಾಗೆಲಾ ||3||
ಮರಿಯದಿರು ಮಾನವ
ಮರಿಯದಿರು ಮಾನವರೊಳಗೆ ಬಂದು |
ಬೆರಿಯೋ ಸದ್ಗುರುವ
ಪರಮ ಪಾವನಮೂರ್ತಿ ಕರುಣಾಸಾಗರ ನಿನ್ನ
ಕರದಿ ಕಂಗೊಳಿಸುವ ಪರತರ ಶಿವಲಿಂಗಾ ||ಪಲ್ಲ||
ಅದೆ ಮಹಾ ಪ್ರಕಾಶಾ |
ಅದರೊಡಗೂಡಲು ಆಗುವದು ಭವ ನಾಶಾ
ಮೊದಲು ಮಾಡಿದ ಪುಣ್ಯ ತೋರಿ ಒದಗುವ ಘನ
ಸದರ ನಿನ್ನೆದುರಿಗೆ ಅದಕ ಮರಿಯದೆ ನೋಡೋ ||1||
ತನು ಮನ ಪ್ರಾಣ ತ್ರಿವಿಧ ಭಾವ ತಿಳಿವ ಸಂಧಾನ |
ಅನುಮಾನಳಿದು ಪೂರ್ಣ ಅನುಮೇಶ ದೃಷ್ಟಿಲಿ
ಅನುಮಾನಿಸದೆ ಕೂಡೋ
ಅದೇ ನೋಡೋ ಪರಬ್ರಹ್ಮಾ ||2||
ಆಶೆಯು ಬೇಡಾ ಆ ಸುಳುವಿನೊಳು |
ಘಾಸಿ ಅನುಗಾಢ ಮೋಸಾ ಮೋಹವ ಬಿಟ್ಟು
ಲೇಸಾದ ಇಟಪೂರೀಶನ ಪಡೆದು
ಉಲ್ಲಾಸದಿ ಇರು ಕಂಡ್ಯಾ ||3||
ಮರವಿನ ಅಜ್ಞಾನಿಗೆ ಸಲ್ಲುವದೆ
ಗುರುಜ್ಞಾನ ಗುರುಭಕ್ತರಿಗಲ್ಲದೆ |
ಮರವಿನ ಅಜ್ಞಾನಿಗೆ ಸಲ್ಲುವದೆ ||ಪಲ್ಲ||
ಕಾಗೆಯು ಕರಕರ ಕೂಗಲು ಭೋರ್ಗರಿವ |
ಕೋಗಿಲ ಸ್ವರ ಸಮನಾಗುವದೆ ||1||
ಭೃಂಗವು ಪರಿಮಳ ಸಂಗಕೆ ಹಂಬಲಿಸಿ |
ಭೃಂಗಿ ಸುಗಂಧವ ಕೊಂಬುವದೆ ||2||
ಇಟಪೂರೀಶನ ಹಿತ ಶಿವ ಸಾಧನ |
ಕುಟಿಲ ಕುಹಕರಿಗೆ ಸಲ್ಲುವದೆ ||3||
ಜಗದ ಬಾಗಿಲ ತೆರಿಯೊ
ನಿಗಮಗೋಚರ ವರ ನಗುರೋರಧಿಕನ ನೆನಿಯೊ |
ಜಗದಿ ಜಗಜಗಿಸುವ ಮಿಗಿ ಬಾಗಿಲ ತೆರಿಯೊ ||ಪಲ್ಲ||
ಆಶಾಪಾಶವನಳಿದು ಮಲ ಪಂಚ |
ಕ್ಲೇಶದ ಮೋಹವ ಕಳೆದು
ನಾಶವಾಗುವ ದೇಹದ
ವಾಸನೆ ಅಳಿಯೊ ||1||
ತತ್ವ ಪದದೊಳು ತತ್ವವು ತಿಳಿದು |
ಅನುಭಾವ ತಡೆದದು ಅಸಿಪದವು
ಸತ್ ಚಿದಾನಂದನೊಳು
ಆನಂದದಿ ಉಳಿಯೊ ||2||
ಕುಟಿಲ ಕುಹಕ ಬಿಟ್ಟು |
ಕಟು ಮನವ ಸುಟ್ಟು
ಹಟಯೋಗ ಮನಕೆ ನಟ್ಟು
ಇಟಪೂರೀಶನ ಧ್ಯಾನದಿ ಪಟಿಸುತ ಮರಿಯೊ ||3||
ಬಾಯಿ ಬ್ರಹ್ಮದಿಂದ ಭವ ನೀಗದೊ
ನಿನ್ನ ತಿಳಿ ನಿನ್ನೊಳು ಜ್ಞಾನವಾ |
ತನ್ನೊಳಗಾತನ ಐಶ್ವರ್ಯವ ಕಾಣುವದು ||ಪಲ್ಲ||
ಓಂ ನಮಃ ಮಂತ್ರ |
ಓದಿಸಿ ಭೇದಿಸಿ ಸಾಧಿಸಿ
ಆಧಾರ ಬಲಿದು ಆಗೆಲೋ ಸುಮನಾ
ಆಗು ಘನಾ ಅನುದಿನಾ ||1||
ಆಯಾಸ ಬಡದವಗೆ ಸುಖವಾಗದೋ ||
ಬಾಯಿ ಬ್ರಹ್ಮದಿಂದ ಭವ ನೀಗದೋ
ಸಾಯದಲೇ ನೀ ಸಾಯಲೋ
ಸೋಲೆಲೋ ಇದು ಸ್ವಾಯಲೋ ||2||
ಅರುವೇ ಗುರುವು ಬಿಂದುವೇ ಲಿಂಗವು |
ಆಚಾರ ಜಂಗಮ ತ್ರಿವಿಧ ಸಂಗವು
ಬೆರಿಯಲಿ ಇಟಪೂರೀಶನೇ
ಆತನೇ ಎನ್ನ ದಾತನೇ ||3||
ಚಿಂತಿ ಅಳಿದು ನಿಶ್ಚಿಂತಯಾಗಿರು
ಎಂಥಾ ಸುಖವು ಬ್ರಹ್ಮಾನಂದಾ ಹೇಳಲಾಗದು ಎನ್ನಿಂದ |
ಎಂಥಾ ಸುಖವು ಬ್ರಹ್ಮಾನಂದಾ ಇದಕಂತ ತಿಳಿದವಗೆ
ಚಿಂತಿ ಅಳಿದು ನಿಶ್ಚಿಂತ ಇರಿಸುವುದು ||ಪಲ್ಲ||
ಮನ ಮನ ಒಂದಾಗಿ ಥರ ಥರ ನಡಗೂತ |
ಝನನ ಝನನ ಝೇಂಕರಿಸುವದೋ ||1||
ಕನ್ನಡಿ ಕಾಂತಿಯು ಕಂಗಳೊಳ ಹೊಳಿಯುವದು |
ಹೊಳೆಯುವ ಜ್ಯೋತಿಯ ಒಳಹೊರಗೆ ಥಳಥಳಿಸುವ ||2||
ಸೋತ ಭಕ್ತರ ಭಯ ಭೀತಿ ಬಿಡಿಸುವುದು |
ಶ್ರೀ ಇಟಪೂರೀಶನ ಕರುಣವು ||3||
ಭೋಗದೊಳಗಾತ್ಮ ಒಂದುಗೂಡುವುದು
ಭೋಗದೊಳಗಾತ್ಮ ಒಂದುಗೂಡದೆ ಶಿವ |
ಯೋಗಾನುಭವಿಸಿದ ಯುಕ್ತನೆ ಯೋಗಿ ||ಪಲ್ಲ||
ನಿಟಿಲ ತಟಿಯ ನಾಸಿಕ ಸಹಿತ ಏಕ |
ದೃಷ್ಟಿ ಸಂಘಟಿತ ಹೃದ್ಗತಿಯು ಹೃದಯ ಗತಿಯು
ತ್ವಂ ಶ್ರುತಿಯೊಳು ಬೆಳಗಿ ಕುಟಿಲ ದೃಷ್ಟೀಂದ್ರಿಯೊಳು
ಘಟಪೃಥ್ವಿಯು ಶೂನ್ಯಾಗಿ ಘಟ ಘನತೆ ನಿರ್ವಿಕಾರನೆ ಮುನಿ ||1||
ಅಂಗ ಭಾವ ಲಿಂಗ ಸಂಗ ವಿಚಾರ ಹೃತ |
ಸಂಗ ಸರ್ವಾಂಗದೊಳು ಲಿಂಗ ವೃತ್ತಿ
ಸಾಂಗಗೊಳಿಸಿ ಸಾಂಗೋಪಾಂಗ ಸತ್ ಕಳಿದು ಚಿತ್ತ
ಭೃಂಗಕೀಟನ್ಯಾಯ ಸಂಗಿ ತಾನೆ ಯೋಗಿ ||2||
ನೆನೆಸಿ ನೆನಿಯದ ನೆನವು ಉಣಿಸಿ ಗುಣಸದ ಗುಣವು |
ಮನಸಿಗಿ ಆಶ್ಚರ್ಯವಾಗಿ ಘಟ ಸುಖದಿ
ಜನಕದ ದಿಟ ಇಟಪೂರೀಶನ ಪಾದ ನೆರೆ ನಂಬಿ
ದಿನಕರ ಪ್ರಭೆಯ ಒಲಿವನೆ ಯೋಗಿ ||3||
ಆತ್ಮ ವಿಚಾರ ಮಹತ್ವವ ತಿಳಿ
ಬರಿ ಗಂಟೆ ಶರೀರದ ಭ್ರಮೆಯು ಕಳಕೊಂಡಂತೆ |
ಆತನ ಮಹಿಮಾ ತಿಳಿಯದೆ ಮನುಜಾ
ನೀತಿ ತಿಳಿದರೆ ಬರಿ ಗಂಟೆ ||ಪಲ್ಲ||
ಮಾತಿನ ಖೂನಾ ಗುರುತಿಲ್ಲದೆ |
ಓದಿ ಸಾಧಿಸಿ ಪೇಳವರ
ಓದಿಸಿ ಮನದೊಳ ಬರಿ ಗಂಟೆ ||1||
ಆತ್ಮ ವಿಚಾರ ಮಹತ್ವವ ತಿಳಿಯದೆ |
ಆಚಾರ ಮಾಡುವದು ಬರಿ ಗಂಟೆ
ಆಚಾರ ಮನದೊಳು ಸೂಚನೆ
ತಿಳಿದರೆ ಸಾಚನಾಗುವದಿನ್ನುಂಟೆ ||2||
ಗುರುವಿನ ಕರುಣಾ ಆಗೋ ಮನುಜಾ |
ಗುರುತು ಹೇಳಿದರೆ ಬರಿ ಗಂಟೆ
ಪರಕೆ ಪರತರ ಇಟಪೂರೀಶನ
ಮಹಿಮೆ ತಿಳಿಯದವರಿಗಿನ್ನುಂಟೆ ||3||
ಶಂಕರನೆ ಪಾಲಿಸೊ
ಶಂಕರನೆ ಪಾಲಿಸೋ ಮೊರೆಯಾ |
ಸದ್ಗುಣಸಾಗರ ದೊರಿಯೇ || ||ಪಲ್ಲ||
ನಿಜವು ಮಹಾಪದವು ಧರ್ಮವು ನರಕವು |
ಎಂದಾಡುವ ಅವರಿವರ ದ್ವಯ ಪದಗಳ ತಿಳಿಸಿ
ಮುದದಿ ಮುಕ್ತಯು ಸದರಗಾಣಿಸೋ
ಶಂಕರನೇ ದಯಪಾಲಿಸೋ ||1||
ಸುಗುಣವು ಹಿತವು ದುರ್ಗುಣವು ಅಹಿತ |
ಎಂದ್ಹೇಳುವ ಆ ಗುಣ ಈ ಗುಣ ನಿರ್ಗುಣ
ಜಾಗರದವನು ಶಿವಯೋಗಿಯು ನೀನೂ
ಭೋಗಿಯ ಭೂಷಣ ಶಂಕರನೆ ||2||
ದಿಟವು ಜ್ಞಾನಪುಟವು ಗುಣ ಸಟಿಯು ಸಂಕಟ |
ಎಂದುಸುರುವ ಹಟವು ತಟವು ಎಂಬೊ
ಕುಟಿಲವಳಿದು ಎನ್ನ ಜಠರಾಗ್ನಿಯು ಜೈಸಿ
ಇಟಪೂರೀಶಾ ಶಂಕರನೆ ಪಾಲಿಸೋ ||3||
ಕರುಣಾಸಾಗರ ಕರುಣಿಸು ದೇವ
ಮಾರಹರನೆ ನಿನ ಭಜನಿ |
ಮರೆದು ನಾ ಹ್ಯಾಂಗ ಇರಲಿ ದೇವಾ
ಘೋರ ದುರಿತವನ್ನೆ ನೀ ||ಪಲ್ಲ||
ಪಾರು ಹರಿಸಿ ಪೊರೆಯೋ ದೇವಾ ||ಪಲ್ಲ||
ನಂಬಿದಾ ನಿಜ ಭಕ್ತರನು |
ಇಂಬುಗೊಂಡು ಕಾಯ್ವೆ ನೀ
ಶಂಭೋ ಶಂಕರಾ ಗಂಗಾಧರಾ
ಅಂಬಾ ಗೌರಿ ವರನೇ ದೇವಾ ||1||
ಶರಣಸತಿಯು ಲಿಂಗಪತಿಯು |
ಸಾರುವ ಶ್ರುತಿ ಸಹಜವು
ಹಿರಿಯ ಸೇವಕ ನಾನೋ
ಕರುಣಾಸಾಗರ ನೀನೋ ಕರುಣಿ ದೇವಾ ||2||
ನಿನ್ನ ಸ್ಮರಣಿಯನೆ ಮಾಡುವೆ |
ನಿನ್ನನೆ ಕೊಂಡಾಡುವೆ
ನಿನ್ನ ಸರಿ ಇನ್ಯಾರು ಕಾಣೆ
ಇಟಪೂರೀಶನೆ ದೇವಾ ||3||
ಪಾಪಿಷ್ಟ ಜನ್ಮವಿದು
ಹರಿ ಹರ ಬ್ರಹ್ಮ ಪ್ರಳಾಪಿಸುವದ್ಯಾತಕೋ |
ವರದಿ ನಮ್ಮುದರದೊಳು ಜನಿಸಿದ್ದು
ಜನ ಸತ್ತಾಯಿತಿ ಹರಿಹರ ||ಪಲ್ಲ||
ಎಂಥದು ಮರವು ಎನ್ನದು |
ಎಂಥದು ನಾ ಚಿಂತಿಸಿ ಅರುವಿಲ್ಲದೆ
ಅಂತಃಕರಣಾ ಅಂತರಂಗದೊಳು
ಇಂತಾಯಿತು ಅಯ್ಯೋ ||1||
ಪಾಪಿಷ್ಟ ಜನ್ಮವಿದು |
ಪಾಪಿಯ ಮನ ಸಲ್ಲದು
ದಿಟತನದಿಂದ ಪವನರಿದು
ಸ್ವರೂಪವಾಯಿತು ||2||
ಸಟೆಯನುಸರಿಸದ ವಾಕ್ಯವನು ಸ್ಥಿರವೆನ್ನದೆ |
ಚಟ್ಟನೆ ಚೆಂಡಾಡುವನು
ಕುಟಿಲ ಬಿಡದಿರೆ ಇಟಪೂರೀಶನೊಳು
ಸಟೆ ಹಾರಾ ಹರಿಹರ ಬ್ರಹ್ಮಾ ||3||
ಹೇ ರಾಜಯೋಗಿ ಬಾಗಿ ನಡಿಯೆಲೊ
ಹೇ ರಾಜಯೋಗಿ ಬಾಗಿ ನಡಿಯೆಲೊ |
ಬಹು ಜನತಾಗಿ ನಡಿಯಲೋ ||ಪಲ್ಲ||
ನಾಗಭೂಷಣನೆಂಬೋ ನಾಮವ |
ಕೂಗಿ ಕರಿಯೆಲೋ
ಕುಂಭ ಕ್ಷೋಣಿಯ ಬಾಗಿಲದೊಳ
ಪೋಗಿ ಸುಳಿಯೋ ||1||
ಸಾಧನ ಮೌನದಿ ಸಕಲ |
ಭೇದ ಭಾವಗಳನೆಲ್ಲ ಒಗೆದು
ಆದಿ ಅಂತ್ಯ ಮೀರಿದ ಗುರು
ಪಾದದಲ್ಲಿ ಗುರುತಿಟ್ಟು ಬೇರಿಯೋ ||2||
ಪ್ರಾಣವನ್ನು ಘ್ರಾಣ ನೇತ್ರ |
ಕರ್ಣ ಜಿಹ್ವೆ ಒಲಿದು
ಮಾಣದೇಕೋ ಚಿತ್ತದಿಂದ
ಜ್ಞಾನಮಾರ್ಗ ಸ್ನಾನದಿಂದೆ ||3||
ಶಾಂತ ಮನದಿ ಸಂಭ್ರಮದಿನರಿದು |
ಇಂಥ ಇಟಪೂರೀಶನ ಒಲಿಸಿ
ಪಂಥ ಗೆಲಿಸೋ ಇಹ ಪರ
ಚಿಂತಿ ಅಳಿದು ತಂತು ತಿಳಿದು ||4||
ಭವಬಾಧೆಯೊಳ ಸಿಲ್ಕಿ ನೊಂದೆ
ಶಿವಲಿಂಗ ಸಭೆಗೆ ನಾ ಬಂದೆ |
ಭವಬಾಧೆಯೊಳ ಸಿಲ್ಕಿ ಬಹಳ ನೊಂದೆ ||ಪಲ್ಲ||
ಮಂಗಲ ಮಹಿಮನೆ ರಂಗಮಂಟಪದೊಳು |
ಸಂಗವೆ ಸುಖ ಸಂಭ್ರಮದಿಂದೆ ||1||
ಗಗನಮಾಲಿನೊಳು ಘನ ಗುರುವಿನ ಕಂಡು |
ಸೊಗಸಿದೆ ಸಂಜೀವಾ ಶರಣೆಂದೆ ||2||
ಘಟದ ಗಂಭೀರ ದೊರಿಯೇ ಘಟಮಠ ಸ್ಥಾನ ದೊರಿಯೆ |
ಇಟಪೂರೀಶಾ ನೀ ನಾನೊಂದೆ ಶಿವಲಿಂಗ ||3||
ಸದ್ಗುರು ರಾಯಾ ಬೇಡುವೆನಭಯ
ಸದ್ಗುರು ರಾಯಾ ಬೇಡುವೆನಭಯ |
ಬೇಡುವೆ ಸ್ವಯಂ ಕರ ಜೋಡಿಸಿ ಶಿರಬಾಗಿ
ಬೇಡಿದಾಕ್ಷಣ ದಯಮಾಡೋ ದಯವಂತ ||ಪಲ್ಲ||
ವೈರಿ ಕಂಟಕ ಬಂದು ಒದಗಲಾರದಂತೆ ಧೈರ್ಯ |
ತೋರಿಸಿ ಎನ್ನ ಶೌರ್ಯ ತರಿಸುವಂತೆ ||1||
ಭ್ರಾಂತಿ ಹಲವು ಚಿಂತಿ ಬರಿಯ ಭ್ರಮೆಯೊಳಗಾಗಿ ಕುಂತೆ |
ಭ್ರಾಂತನಾಗದೆ ಮನ ಶಾಂತನಾಗಿರುವಂತೆ ||2||
ಯುಕ್ತಿ ಶಕ್ತಿಯಿಂದ ಇಟಪೂರೀಶನೆ | ನಿಮ್ಮ
ಭಕ್ತಿ ಬೆರಿದು ಜೀವನ್ಮುಕ್ತನಾಗಿರುವಂತೆ ||3||
ಮರಳು ಮಾಡಿದಮ್ಮ
ಮಾತು ಮಾತಿನೊಳಗೆ ಮರಳು
ಮಾಡಿದನಮ್ಮ ಮಹಾಂತ |
ಇಂಥವನ ಕಾಣಲಿಲ್ಲಮ್ಮಾ ||ಪಲ್ಲ||
ಭಲೆರೆಂದು ಕೂಗುತ ಎಡ ಬಲ ತೂಗುತ |
ಬಲ್ಲಂಗ ಊದಿ ಬೂದಿ ಚೆಲ್ಲಿದನಮ್ಮ ||1||
ಕಸಿವಿಸಿ ನಾ ಬಡುವೆ ಅತಿ ಹುಸಿ ತಾ ನುಡಿವ |
ಮುಸಿಮುಸಿ ನಗನಗತ ಪ್ರೀತಿ ನುಡಿದನಮ್ಮಾ ||2||
ನಿನ್ನ ನಾಂ ಎನಲು, ನೆಲೆ ಕಲೆ ಕೇಳಲು |
ಪನ್ನಂಗಧರೆನೆಂದು ಹೇಳಿದನಮ್ಮಾ ||3||
ತನು ಮನ ಧನವನ್ನು ತನಗೊಪ್ಪಿಸೆಂದಾನು |
ಅನುಮಾನವಿಲ್ಲದೆ ತನ್ನ ಕೂಡೆಂದಾನು ||4||
ಇನ್ನೇನು ಹೇಳಲಮ್ಮಾ ಇಟಪೂರೀಶನ ಪ್ರೇಮಾ |
ಬೆನ್ನಲಿರುವಾಗ ಇನ್ನಾರ ಭಯವು ಏನಮ್ಮಾ ||5||