Categories
Tatvapadagalu ಪರಮದೇವ ನರಹರಿ ಗುರು ಮತ್ತು ಇತರರ ತತ್ವಪದಗಳು

ಅಕಾರಾದಿ ತತ್ವಪದಗಳು

ಅತ್ತ ಕಲ್ಯಾಣಪುರದಲ್ಲಿ
ಅನುಭವದಡಗಿ
ಅಷ್ಟಾವರಣದ ನಿಜನಿಷ್ಠೆ
ಅಜ್ಞಾನದ ಕಾರ್ಯ
ಆಚೆ ಕೇರಿಯ ನಲ್ಲಿನ
ಆರಕ್ಕಾ ಈತನಾರಕ್ಕ
ಆರತಿ ಬೆಳಗಿರಿ
ಇದು ಎಂತಹ ದೇಸಿ ಜೀವನಪ್ಪ
ಈ ಸಾಗರ ದಾಟಿಸೋ
ಉರಿದು ಹೋದೆ ಕರ್ಮಿ
ಎಂಥ ಕನಸ ಕಂಡೆನೆ
ಎಂಥ ಪುಣ್ಯ ಪುರುಷನ
ಎಕ್ಕಲದೆ ಜೋಗವ್ವಾಯತ್ತಲ್ಯಾರೆ
ಎಷ್ಟು ಕಾಡತಾವ
ಎಷ್ಟು ನಿನ್ನ
ಎಲೆಜಾಣೆಗಾರತಿ
ಏತಕೆ ಚಿಂತೆಯನು
ಏನ ಹೇಳುವೆನಮ್ಮ
ಏನಾದರೆ ಒಂದಾಗಲಿ
ಏನು ಸೋಝಿಗ
ಏನು ಹೇಳಲೈಯ್ಯೋ
ಓಂ ಪರಮಾನಂದ
ಅಂಗದೊಳು ಶಿವಲಿಂಗ
ಕರ್ಪೂರದಾರತಿಯನೆತ್ತಿರೆ
ಕಲ್ಲೇಶಲಿಂಗನು
ಕರತಾರೆ ಶ್ರೀ ಕೈಲಾಸನಾಥನ
ಕಳೆದು ಹೋಯ್ತು
ಕಂಡೆನೆ ಕರಜೋದ್ಭವ
ಕಾಡಬೇಡಲೋ ರಮಣ
ಕಾಯಕಾಂತಾರವ ಪೊಕ್ಕು
ಕಾವ್ಯ ಬೇರೊಂದೆಡೆಗೆ
ಕುಸುಮಗಂಧಿನಿ
ಗುರುದೇವ
ಗಂಡದೊರೆತನವ್ವ
ಗಾಳಿಗಿಟ್ಟ ದೀಪದಂತೆ
ಘಳಿಗೆ ಬಿಟ್ಟಿರಲಾರೆ
ಜಯದೇವ
ಜೋ ಜೋ
ಜೋತಿ ಬೆಳಗುತಿದೆ
ಜ್ಞಾನಾನುಭವದ ಅಡಿಗೆ
ತನ್ನ ತಾ ತಿಳಿಯಲು
ತಂಗಿ ಕೇಳ ನಿನ್ನ
ತಂಗಿ ಹೋಗುನು
ತಂದು ತೋರಿಸದೆ
ತಿಳಿಸುವ ಮಾತಿಲ್ಲ
ದಾಟಿ ದಾಟಿ
ದೂರವಿಲ್ಲವೊ ಮುಕ್ತಿ
ದೇವರ ದೇವ
ಧರೆಯ ಭೋಗವಬಿಟ್ಟು
ನಾಯಿ ಎಂಥಹ ನಾಯಿ
ನಿಶ್ಚಿಂತನಾಗಿ ಬಾಳು
ನುಡಿನೆಡಿ ಬರೆ ಸುಳ್ಳೆ
ನೋಡಮ್ಮನಲ್ಲನ ಬುದ್ಧಿ
ನೋಡಿ ನಡಿಯಲೆ ಮೂಢ
ನೋಡಿದೇನೈ ನಿನ್ನ
ಪಡುವಲಿಗ್ಹೋದವರಾ
ಪಾರು ಮಾಡೋ ಪರಮ
ಬಲ್ಲದ ಗಂಡನ
ಬಾರಾನೆನೆ ಮುದ್ದು ಗೌರೀಶ
ಬೆಳಗುತಿದೆ ಜೋತಿ
ಬೆಳಗಿರಾರತಿಯನು
ಬ್ರಹ್ಮಜ್ಞಾನಿಯಾಗಬೇಕು
ಭಕ್ತಿ ಭಾವದ ಶರಣಮ್ಮ
ಮನವೆಂಬ ಗಿಳಿಯ
ಮುದುಕಿಯಾದ ಮೇಲೆ
ಮೂಕೊರೆಯ ಮೂಳಿ
ಮೂರು ಅವಸ್ಥೆ ಮುಗಿದವು
ಯಾಕೆ ಮನಸೋತಳಮ್ಮ
ಯಾತಕ್ಕೆ ಬೇಕು ನಡೆಯೋ
ಯಾವದು ಬಹು ಪಾಡೋ
ವಾರಿಜನಯನ
ವ್ರತಗೇಡಿ ನಾನು
ಶರೀರವೆಂಬೋ
ಶಿವನ ಮನಿ ಈ ಜಗ
ಶಿವನ ಭಜನೆ ಮಾಡಬೇಕು
ಶ್ರೀಗಿರಿ ಗಿರಿಗಿನ್ನು ಮೇಲಾದ
ಸಂಸಾರದಿಂದ ಸದ್ಗತಿ ಹೊಂದಿ
ಸ್ಥಿರಮುಕ್ತಿ ಪಡೆಯದ
ಹೇಗೆ ಸೈರಿಸಲೆ ಭಾವಕಿ
ಹೇಗೆ ಮಾಡಲಮ್ಮ ಕನಸ

 

ಪರಮದೇವ ಮತ್ತು ನರಹರಿ ಗುರು

ಅಂತಃಕರುಣೆ
ಅಚ್ಚರಿಯವಾದುದು
ಅಭಿಷೇಕ ಮಾಡುವೆನು
ಅನುದಿನದಲಿ
ಅರಿಷಡ್ ವೈರಿಗಳು
ಅರ್ಥವಿಲ್ಲದ ನರನು
ಆನಂದವಾದ
ಆರಕ್ಕ ಈತನಾರಕ್ಕ
ಇದು ಏನು
ಇದೀವ ಅಂತಿರೊ
ಇದ್ದರೆ ಹೀಗೆ
ಇಡೀ ಬ್ರಹ್ಮಾಂಡ
ಇನ್ನೇತರೊಳಗಾದೆ
ಇಂದಿನದಿನ
ಇಂದಿನ ಜನ್ಮದಲಿ
ಇಂದ್ರ ದಿಕ್ಕಿನೊಳಿದ್ದ ಸೂರ್ಯ
ಈಸಿ ಈಸಿ ನಾ
ಈಸಲಾರೆ ಗುರುವೆ
ಈಸಬೇಕೊ
ಈಗಳೋ ಆಗಳೋ
ಉತ್ತಮರಿಗಿದರುಣ
ಊರ ಒಳಗಣ ಹೊಲೆಯ
ಊರದೇವರ ಮಾಡಿ
ಊರಿಗೆ ನಾನೋಗಬೇಕಣ್ಣ
ಎನ್ನಿಂದಲೇನಾಗ್ವುದೋ
ಎಲ್ಲಿ ಹುಟ್ಟಿದರೇನು
ಎಚ್ಚರಾಗೊ ತಮ್ಮ
ಎಂಥಾ ಗಾರುಡಿಗ
ಎಂಥಾ ಮಾನವ
ಎಂಜಲು ಬೀರಿ
ಎಲ್ಲಾ ಇಲ್ಲೇ
ಎಂಥಾ ಕನಸ
ಎಂಥಾ ಮಹಿಮೆ ಗುರುವೆ
ಎಂಥಾ ಕುದುರೆ
ಎಂಥಾ ದೈವುಳ್ಳ
ಎಂಥಾ ಮಹಿಮೆ ನೋಡಮ್ಮ
ಎಂಥಾದ್ದೊ ಘನವೆಂಥಾದ್ದೋ
ಎಂಥಾ ಪಾತಕವೋ
ಎಂಥಾ ಕುದುರೆ ನಾನು
ಏನು ಮಾಡಲಿ
ಏನು ಇದ್ದರೇನು
ಏನು ಮಾಡಿದರಿಲ್ಲವೊ
ಏನನಾದರೂ
ಏನು ಪುಣ್ಯವಕ್ಕಾ
ಏನೆಂದು ಹಾಡಲಿ
ಏನಿದೆ ಬರಿ ಮಾಯೆ
ಏನೇನು ಬುದ್ಧಿ
ಏನೇನಿಲ್ಲದ
ಓಂ ನಾಮವ
ಓಂ ಎಂದು
ಓದಿ ಓದಿ
ಒಂದು ಕೊಟ್ಟರೆ
ಕೂಗಿನೊಳಗಿನ ಕೂಗು
ಕಾರೆ ಮಿಂಚಿನ ತೆರದಿ
ಕಂಡಿರೇನು ಆ ತಾರುಣ್ಯ
ಕಾಲ ಕಳೆದೀರಲ್ಲಾ
ಕರುಣಿಸೋ ಗುರುದೇವಾ
ಕುಲಚಲವೆನ್ನುವುದು
ಕೋಳಿಯ ಕಂಡಿರಾ
ಕನಸೋ ಮನಸಿನ
ಕಪ್ಪು ಕಡೆಗೊತ್ತಿ
ಕರ್ಮ ಹರನಾಗಬೇಕು
ಕಾಕು ಜನರ ಸಂಗ
ಕಾಂತನ ಕಾಣದೆ
ಕೆಟ್ಟಿತು ಕಾಲಗತಿ
ಕೆಟ್ಟು ಹೋಯಿತು
ಕಾಲನವರ
ಕೆಟ್ಟ ಕಾಲ ಬಂತು
ಕುಟ್ಟಿಕೊಳ್ಳೊ
ಕೋಲು ಕೋಲೆ
ಗಡಗಿ ಜೋಕಿ ತಂಗಿ
ಗುಡಿಯ ತುಂಬಾ
ಗುರುಧ್ಯಾನವ
ಗುರುವಿನ ಮಹಿಮೆ
ಗುಡಿಯತುಂಬಾ
ಗಿರಿಯನೇರೋಣು
ಘನಶ್ರೀ
ಚಂದ್ರಸೂರ್ಯ
ಚಿಕ್ಕಟನೆಂಬ
ಚಿಂತಿ ಏಕತೆ
ಛೀ ಛೀ ಬಿಡು
ಡಿಂಬದೊಳಗೆ
ತನುವಿನೊಳಗೆ
ತುಂಬಿ ತುಳುಕಾಡುತೈತೆ
ತೂಗುತಾಳ
ಧರ್ಮವ ಬಿಡಬ್ಯಾಡ
ದಾರಿ ಬಿಟ್ಟು
ದೇವರ ಮನೆಯಿದು
ದಿವ್ಯ ಪಾರುಮಾರ್ಥದ
ದುರಿತಕಾನನ
ದಾರಿಯ ನೋಡಿದೆನೇ
ದೆವ್ವ ಬಡಿದೀತವ್ವ
ದುಂಬಿಗಾನವು
ದಂಡು ಬರುತಿದೆ
ಧರಣಿಯ ನಾಳ್ವ
ದುರ್ಜನರಿಗೀ
ಧರಣಿಯವಾಳ್ವ
ದಾರಿಬಿಟ್ಟು
ದಾರಿಯ ನೋಡಿದೆನೇ
ದುರ್ಜನರಿಗೀ
ದಂಡುಬರುತಿದೆ
ದುಂಬಿಗಾನವು
ದೆವ್ವ ಬಡಿತೀತವ್ವ
ದೇವರ ಮನೆಯಿದು
ನಗೆ ಬರುವುದು
ನಾದವ ಕೇಳುತ
ನಾವು ಹೊಲೆಯರು
ನಾಳೆನೋಡಿಹೆ
ನಿನ್ನ ನಿಜವ
ನಿನ್ನಯ ನಿಜವ
ನಿನ್ನ ನಿಜವು
ನಿನ್ನಾತ್ಮದೊಳು
ನಿಮ್ಮಿಚ್ಛೆ
ನಿನ್ನೊಳು ನೀನೆ
ನಿಧಿಯು ಸಿಕ್ಕಿದೆ ಎನಗೆ
ನೀರಿಗ್ಹೋಗನು ಬಾರೆ
ನೀರಿನೊಳಗೆ
ನೂರಾರು ದೇವತೆಗಳ
ನೋಡಬ್ಯಾಡವ್ವ
ಪಕ್ಷಿಯ ನೋಡಿದಿರಾ
ಪ್ರಪಂಚವೆಂಬುದು
ಪ್ರಾರಬ್ಧ ಕರ್ಮ
ಪ್ರಾಣಕ್ಕೆ ಕಡೆಗಾಲ
ಬರ ಹೇಳೇ
ಬರಗಾಲದುರಗ
ಬರಿಯ ಭ್ರಮೆಯೊಳು
ಬಂಗಾರಯಾತಕ
ಬಹು ಕಾಲಕೆ ಕಂಡೆ
ಬಂಗಾಲಿಸಂತಿ
ಬಾರಯ್ಯಾ ಶ್ರೀಗುರುದೇವಾ
ಬ್ಯಾನೆ ಬಿಡುಗಡೆ
ಬ್ಯಾಡ ಬಿಡೋ
ಭಕ್ತವತ್ಸಲ ಬಾರೋ
ಭಾಸುರ ಶಂಕರನಾಮವಾ
ಬೆಡಗಿನ ಮಾಯೇ
ಬೆಳಗಪ್ಪ ಜಾವದಲಿ
ಬೆಳಗಾಯ್ತು ಬಿಡೋ
ಮರುಳಾಟವೆನಗಿನ್ನು
ಮಾನವ ನೀ ತಿಳಿ
ಮಾನವೇನು
ಮುದದಿ ತನ್ನಯ
ಮುನಿದ ಭಾವುನದಂಡು
ಮುಟ್ಟದಿರಯ್ಯ
ಮೊದಲು ಪಾಡುವೆ
ಯಾಕೆಂದು
ಯಾಕಂತೆ ಸುಮ್ಮನೆ
ಯಾಕಿಂಗೆ ಗುರುವೆ
ಯಾಕೆ ಬಯಸುವೆ
ಯಾತಕೀ ಮೋಹವು
ಯಾರಂಜಿಕಿ
ಯಾರು ಇದ್ದರೇನು
ಯಾರಿಗೆ ಹೇಳೋಣ
ಯಾರಿಗಾದರೂ ಬಿಡದು
ಯಾತರ ಸುಖವೆಂದು ಸುರುವಿ
ಯಾವ ಕಾಲ ತಪ್ಪಿದರು
ಯಾವ ಊರು
ಯಾವಮನುಜರೊಳಗು
ಯಾವಕಣ್ಣಲಿ ನೋಡಿದ್ಯೋ
ಯೋಗಿಯಾಗಬೇಕು
ರತ್ನದಾರತಿ ಎತ್ತುವೆನು
ಲೋಕದಲ್ಲಿ ದೇವರೊಬ್ಬನೆ
ವ್ಯರ್ಥವಾದೆನಲ್ಲ
ವ್ಯರ್ಥವಾಯಿತೆನ್ನ
ಶರಣು ಬಂದೆನು ಗುರುವೇ
ಶರೀರಕ್ಕಿನೆಲ್ಲಿ ಸುಖವು
ಶಿವ ಮಂತ್ರದ
ಶಿವ ಧ್ಯಾನವ
ಶಿವಶಿವ ಎನ್ನುತ
ಶಿವ ಬಂದಾ ನಮ್ಮ ತಂಗಿ
ಶಿವನು ಮಾಡಿದ ದೇಗುಲ
ಶಿವನ ಸ್ಮರಣೆ ಬಿಡಬ್ಯಾಡ
ಶಿವನಾಮ ಸ್ಮರಿಸಲೋ
ಸಂಸಾರ ಸಾಗರವಮ್ಮಾ
ಸಾಕುಸಾಕು ಸವಿದಚ್ಚಿತು
ಸಾರಿ ಸಾರಿ ಹೇಳತೀನಿ
ಸುಳ್ಳು ಸಂಸಾರ
ಸುಳ್ಳು ಸುಳ್ಳೋ
ಸುಮ್ಮನಿರುವಿರಾ
ಸುಮ್ಮನಿಹುದೇನಯ್ಯ
ಸುಳಿ ಸುಳಿದಾಡುತ
ಸೋಬಾನವೆನ್ನಿರೆ
ಹಂದರದಾಗ ಹಾಲುಗಂಬ
ಹತ್ತನೆ ಬಾಗಿಲು
ಹರಿದಾಡುವಂಥ
ಹಾವು ಕಚ್ಚಿತಮ್ಮ
ಹುಚ್ಚನು ನಾನಾದೆ
ಹುಚ್ಚು ಹಿಡಿಯಿತು
ಹೊತ್ತಂಥಾ ಕೊಡನವ್ವ
ಹೊತ್ತು ಕಳೆಯುವರೇನೋ
ಹೊತ್ತು ಕಳೆಯಬ್ಯಾಡ
ಹೋದ್ರೆ ಹೀಗೆ
ಜ್ಞಾನವ ತಿಳಿದು
ಜ್ಞಾನಿಗಳು ಬಳಸೊ.

Categories
Tatvapadagalu ಪರಮದೇವ ನರಹರಿ ಗುರು ಮತ್ತು ಇತರರ ತತ್ವಪದಗಳು

ಬಿಡಿ ತತ್ವಪದಗಳು

ಎಂಥ ಗಾರುಡಿಗ
ಎಂಥ ಗಾರುಡಿಗ ಸದ್ಗುರುನಾಥ |
ಎಂಥಾ ಗಾರುಡಿಗನಮ್ಮಾ ಎಂಥ ಗಾರುಡಿಗನು ||ಪ||
ಕಾಂತೆ ಏನ್ಹೇಳಲೀ ಹರಿದಾಡೋ
ಮನಸ್ಸನ್ನು ಹಿಡಿದು ಮಠ ಸೇರಿಸಿದಾ |
ಊರೊಳಗಿರು ಅಂದಾನೋ ಊರಿನ
ಬಾವಿ ನೀರನ್ನು ಸೇದೆಂದಾನೋ ||1||
ಆರಾರು ಅರಿಯದ ತುಂಬಿದ ಕೊಡ ಹೊತ್ತು |
ನಂಬಿಗಿಯಿಂದಲಿ ನೀ ಬಾ ಮನಿಗೆಂದನೋ |
ಮಂಚವ ಹಾಕಂದಾನೋ ಮೈ ಮ್ಯಾಲೆ ಶಾರೀ |
ಕುಬಸ ಕಳ ಅಂದಾನೋ ||2||
ಮಲಗಿರೋ ಎಂದರ ಮಲಗಿಕೊಂಡೇನು ತಂಗೀ ಮಲ್ಲಿಗಿ ಹೂವಿನಂಥಾ |
ಮಂತ್ರವ ಜಪಿಸಿದಾ ದುಗುಡೆಲ್ಲ ಬಿಡು ಅಂದಾನೂ ||
ಹುಡುಗಾಟ ರಂಡೀ ಗಡಿಜಡಕಿಗೆ ನಡಿ ಅಂದಾನೊ ||
ಬೆಡಗಿನ ಪುರುಷರ ನುಡಿ ಕೇಳಿ ಬಾ ಮನಿಗೆ ಬಲ್ಲಿದ ಸಕ್ಕರಿ ತಾತನ ಸೇರಂದ ||3||

ಕೂಗಿನೊಳಗಿನ ಕೂಗು
ಕೂಗಿನೊಳಗಿನ ಕೂಗು ಶಿವಪೂರಾ ಅದು
ಎಲ್ಲೊದೂರ ಕೂಗಿ ಕೂಗೀ ಸತ್ತರೆಲ್ಲರಾ
ಯೋಗಶಾಸ್ತ್ರ ಜವೀ ಜವೀ ಮಾಡತೀವೀ ತರಕವಾದೀ
ಮಾಡತೀಯೋ ತರಕವಾದಿ ಹಿಡದಿದೀ ಯಮಪುರದ ಹಾದಿ ||1||
ಮೂರುಕಾಲೀನ ಮಂಟಪವನ್ನೇರೀ ಆದ
ಸೀರಿ ನೋಡಲೂ | ಕಾಣುವದು ಶಿವಪೂರದ ಹಾದೀ
ಮೇಲೆ ರತ್ನದ ಬೆಳಕನೋಡೋ ನಿತ್ಯಾನಂದಕೂಡೋ
ನಿತ್ಯಾನಂದ ಕೂಡೋ ಮಹಾಲಿಂಗನ ಒಡಗೂಡೋ ||2||
ಅಡಿ ಅಡಿಗೇ ಗಂಡೀ ಪೂರ ಜಡಿಯರಾರಟ್ಟಿ
ಗುರುದೇವ ಭಟ್ಟಿ ಬೆಳಕಿನೊಳಗಿನ ಬೆಳಕು ತಂದಿಟ್ಟೀ
ಮೇಲಗಿರಿಯ ಏರಿ ನೀನಂ ಗುರುವಿನಲ್ಲಿ ಬೆರೆ
ಯೋಚೀನಾ ಗುರುವಿನಲ್ಲಿ ಬೆರೆಯೋ ಬೇಗಾ ||3||

ಮಾಡಬೇಡ ಭೃಷ್ಟರ ಸಂಗಾ
ಜ್ಞಾನವ ತಿಳಿದು ನೋಡೋ
ಈ ದೇಹದೊಳು ಯಾವದು ಬಲು ಪಾಡೋ ಮನುಜ ||ಪ||
ಹುಟ್ಟುತ ತಾಯಿ ತಂದೀ
ಯಾವ ಕೂನೆ ಹಿಡಿದು ಬಂದೀ
ನಾಳೆ ಬಿಟ್ಟು ಹೋದೆನಂದೀ ಮಡದಿ ||1||
ಮಕ್ಕಳ ಒಡಲಿಗಾಗಿ ದುಡಿದು ದುಡಿದು ಸತ್ತ
ಹೋದೆಲ್ಲೊ ಮೂಢಾ ಸರ್ವದವು ಶಾಂತೀ
ಸುಳ್ಳ ಹಚ್ಚಿಕೊಂಡೆಲ್ಲೊ ಬ್ರಾಂತಿ
ಮಾಡೋ ಗುರುಪಾದ ಚಿಂತಿ ||2||
ಹುಟ್ಟುತೆ ಮಾಡಬೇಡ ಸಂಗಭ್ರಷ್ಠರ ಸಂಗಾ
ದುಡುದು ಸತ್ತ ಹೋದೆಲ್ಲೊ ಮಂಗ
ಮೂರು ಲೋಕದಲ್ಲಿ ನೀನು ಹೋಗುವದು ಯಾವೆಲ್ಲಿ ||3||
ಇದರ ತಾಣವ ತಿಳವಲ್ಲೀ
ಏರೀ ನೋಡೊ ಕೈಲಾಸದ್ವಾರ ಹಾಡಿ ಹರಸಿದೆ ಗುರುಸಿದ್ಧ ನೆಲ್ಲಿ ||4||

ಶರೀರಕ್ಕಿನ್ನೆಲ್ಲಿ ಸುಖವೋ
ಸನ್ಯಾಸೀನಾದ ಮ್ಯಾಲೆ ಶಿವಶಿವ ಶರೀರಕ್ಕಿನ್ನೆಲ್ಲಿ ಸುಖವೋ |
ಜಂ ಜನ್ನ ಭರಿತ ಕರೆದಲ್ಲಿ ಉಣ್ಣಬೇಕೊ ||ಪ||
ಮೂರು ಮಳ ಜಾಗದಲ್ಲಿ ಮಲಗಬೇಕೊ ಡಂಬ |
ಬಡಿವಾರವ್ಯಾಕೋ ಸದ್ಗುರು ರಾಯ ||
ಒಂಬತ್ತು ಎಣಿಸುವದ್ಯಾಕೋ ಜಗ್ನ ಭರಿತ |
ಹಂಬಲಿಸುವದ್ಯಾಕೋ ಸದ್ಗುರುನಾಥ ಅಮೃತ ಕಾಣಬೇಕೋ ||2||
ಜಪವ ಮಾಡುವದ್ಯಾಕೋ ಸದ್ಗುರುನಾಥಾ ||
ತಪವ ಮಾಡುವದ್ಯಾಕೋ ಜಗ್ಜ ಭರಿತ |
ಅಪಕೀರ್ತಿ ಹೊರುವದ್ಯಾಕೋ ಸದ್ಗುರುನಾಥಾ ||
ಉಪದೇಶಿ ಕಾರಣ ಬೇಕೊ ||
ಸಿದ್ಧಾರೂಢನಾದ ಮ್ಯಾಲೆ ಶಿವಶಿವ ಸಿದ್ದಿವೇಸನಂಗಳ್ಳಾಕೋ ||
ಶಿವ ಶಿವ ಇದ್ದಲ್ಲೇ ಇರಬೇಕೋ ಸದ್ಗುರುನಾಥ ಉದ್ಧಾರ ಮಾಡಬೇಕೂ ||3||
ಜವಳಿಗೇರಿ ನಾಗಲಿಂಗ ಶಿವ ಶಿವ ವಾಸ ಮಾಡೇನ ನವಲಗುಂದ ||
ಕರುಣವಿರಲಿ ನಿಂದಾ ಶಿವ ಶಿವ ವರಕೊಡಲೀ ಬಂದು || ||4||

ಈಸಿ ಈಸಿ ನಾ ದಣಕೊಂಡೆ ಪ್ರಭುವೇ
ಈಸಿ ಈಸಿ ನಾ ದಣಕೊಂಡೆ ಪ್ರಭುವೇ
ಸನಿಯಕೆ ಬರದೊಲ್ಲದು ಆಚೆ ದಂಡೆ ||ಪ||
ಇಚಿ ದಂಡ್ಯಾಗೈತಪ್ಪಾ ಬಹಳ ಗದ್ದಲಾ ಆಚೆ ದಂಡ್ಯಾಗೈತಪ್ಪ
ಬಹಳಹುದಲಾ ಬರಬಾರದಿತ್ತಪ್ಪಾ ನಾ ಮೊದಲ ಹೆಂಗ
ಹಾದಿ ತಪ್ಪಿ ಬಂದಿನಪ್ಪಾ ತಿಳಿಲಿಲ್ಲಾ ||1||
ಎರಡು ದಂಡಿ ಧಡಾ ಸೊಸಿ ಅದರಾಗ ದಾಟುದು ಬಹಳ
ಬಿರಿ ಅದೆ ಮುಕ್ಕಟ್ಟೀ ಬರುತಾವೋ ಮೂರು ತೆರಿ
ಆರುತೋರಿ ಆರ್ಭಾಟ ಭಾರಿ ||2||
ನೀರಿನ ಸೆಳವು ಐತಿ ಬಲು ಭಾರಿ ಎನ್ನ ನಿಂದರಗೊಡವಲ್ದೋ
ಕಾಲುರಿ ತೇರದಾಳ ತುಕಾರಾಮ ಮಹಾಧೀರಾ ಅವಾ ದಣವು
ಇಲ್ಲದ ಈಸಿ ಪಾರಾದಾ ||3||

ಜಾಣತನ ಜೇಷ್ಠರಲಿ
ಜಾಣತನ ಜೇಷ್ಠರಲಿ | ಮೂರುಂಟು ದಾರಿ |
ಕೀಳುಗುಣ ಕೋಣರಲಿ | ವೊಂದುಂಟು ದಾರಿ |
ಅಹಂಭಾವ ಮಸ್ತಿಯಲಿ | ಸಾಗುವುದು ತೋರಿ |
ಅವಸರದಿ ಪಡೆಯುವರು | ದುರ್ಮರಣ ಕೋರಿ ||ಪ||
ತಾ ಹೋಗ ದಾರಿಯಲಿ | ಎದುರೊಬ್ಬ ಕಂಡಾಗ
ಇಬ್ಬರಲಿ ಈ ಭಾವ | ಬದಿಗಾಗೂ ಗುಣದೊಳಗಾ |
ಮೂರಾಗಿ ದಾರಿಗಳು | ಅದುವೊಂದರೊಳಗಾ ||
ಪರಿಪರರ ಭಾವೈಕ್ಯ | ಪ್ರೀತಿ ಮನದೊಳಗಾ ||1||
ಕೋಣನ ಗುಣದವರು | ಇಬ್ಬರಲಿ ಅಹಂಭಾವ
ಕೊಬ್ಬಿನಲಿ ಲೆಕ್ಕಿಸದೇ | ಮಧ ಮಂದ ಮತಿಯವ |
ಅಪಘಾತ ಪಡೆದಲ್ಲಿ | ಅಪಾಯಧನುಭವ |
ಜೀವ ಬೆಲೆ ಅರಿಯದಿಹ | ಮಂಗಮತಿಯು ಗರ್ವ ||2||
ಈ ಕೋಣನ ತಡೆಯಲು | ಶಿವನಾಮ ದಾರಿ
ಶ್ರೀ ಗುರು ಭೀಮಧಾತರೂ ತೋರಿದ ದಾರಿ
ಪಾದವ ನಂಬಿದೇ ಗುರುವನು ಕೋರಿ
ಅರಿವೆಂಬ ಮಂತ್ರದಿ ಕೋಣನ ಹಿಡಿಯಿರಿ ||3||

ಅರಿಷಡ್ ವೈರಿಗಳ ಗೆಲ್ಲು
ಅರಿಷಡ್ ವೈರಿಗಳ ಗೆಲ್ಲು | ಮಾನಸಿಕ ನೆಮ್ಮದಿಗೆ
ಸದಾ ಸೌಖ್ಯ ಶಾಂತಿಯು | ಸ್ಥಿರವಿರಲೀ ಬಾಳಿಗೆ |
ಅಳಿಯಬೇಕು ಮನದಿಂದ | ದುರಾಸೆಯ ಬೆಸುಗೆ |
ಸದಾಚಾರ ಬಲದಿಂದ ದುರ್ಗತಿಯ ಸುಳಿಗೆ ||1||
ಕಾಮ ಕ್ರೋಧದ ಕೇಡು | ಅವನತಿಯ ಬೀಡು |
ಮಧ ಮೋಹ ಮತ್ಸರವು | ಬುದ್ಧಿಮಾಂದ್ಯದ ಜೋಡು |
ಸದ್ಭಾವ ಸಮ್ಮತಿಯು | ಧ್ಯಾನದೋಳು ನೀ ಕೂಡು |
ಲೋಭ ತನದ ಗತಿಯಿಂದ | ಹೊರ ಬಂದು ನೀ ನೋಡು ||2||
ಸುಜ್ಞಾನದ ಸೊಡರಿಂದ | ಅಜ್ಞಾನವ ದೂಡು |
ಇದರಿಂದ ಅಳಿಯುವುದು | ನಿನ್ನ ನಿಸ್ವಾರ್ಥದ ಕುರುಡು |
ಸದಾಚಾರ ಶಾಸ್ತ್ರವನು | ಕೈಹಿಡಿದು ನೀ ಮಾಡು |
ದಮನಿಸು ದುರ್ಗುಣವ | ಅವನತಿ ಕರಿಕಾಡು ||3||
ದೇಹದಾ ಗಾದಿಯಲ್ಲಿ | ಇವು ಸೇರಿ ಕೊಂಡಿಹವು
ನಿರ್ಮಲದ ಮನದಲ್ಲಿ | ಕೊಳೆ ಹಾಸು ಹಾಸಿಹವು |
ಹರುಷದಲಿ ಅಶಾಂತಿಯ | ಬಿರುಗಾಳಿ ಬೀಸಿಹವು |
ಅಹಂಕಾರವ ಸೃಷ್ಟಿಸಿ | ಗೋಳಿಗೆಡೆ ಮಾಡುವುದು ||4||
ಅದಕ್ಕಾಗಿ ಓ ಮನುಷ್ಯ ಅರಿಷಡ್ವರ್ಗಗಳ ಗೆಲ್ಲು
ದುಷ್ಕಾಮ ಕ್ರೋಧ ಮದ ಮತ್ಸರಗಳ ಕೊಲ್ಲು |
ಲೋಭ ಮೋಹ ಮತ್ಸರ | ಬುದ್ದರೆದುರೊಳು ಚೆಲ್ಲು |
ಭೀಮನ ವಾಕ್ಯದಲಿ ವಿಠಲ | ಶುದ್ಧಾಗಿ ನೀ ನಿಲ್ಲು ||5||

ಶಿವನ ಸ್ಮರಣೆ ಬಿಡಬ್ಯಾಡ ಮನುಜ
ಶಿವನ ಸ್ಮರಣೆ ಬಿಡಬ್ಯಾಡ ಮನುಜ ಬರುವುದಿನ್ನ ಕೇಡಾ ||ಪ||
ಕಡ ಕಡ ಕಡ ಕಡ ಮಾತನಾಡು ಗುರುಭಜನೆ ಮಾಡು ||ಅ.ಪ||
ಯಾವ ಊರಿನವ ಜನ್ಮವ ಯಾವುದು
ಯಾತರವನಮೋಡ
ಹಡೆದ ತಾಯಿ ತಂದೆ ಒಡಹುಟ್ಟಿದವರು ಎಲ್ಲೋ
ನಿನಗೆ ಜೋಡಾ ||1||
ಈ ಸಂಸಾರ ಇರುವುದು ಘೋರಾ
ತಿಳಿದು ನೋಡು ಪೂರಾ
ಪುರಾಣ ಓದಿ ತಿಳಿಯದೆ ಹೋದಿಯೋ
ನಿನ್ನ ಹಣೆಯ ಬರಹ ||2||
ಬಿಡು ಬಿಡು ಬಿಡು ಬಿಡು ಹೀನ ಬುದ್ಧಿಯ
ಬಿಟ್ಟು ನಡೆಯಬೇಡ
ಹಡೆದ ತಾಯಿ ತಂದೆ ಒಡಹುಟ್ಟಿದವರು ಇಲ್ಲೋ
ನಿನಗೆ ಜೋಡಾ ||3||

ಹಂದರದಾಗೆ ಹಾಲು ಕಂಬ ಯಾಕೋ
ಹಂದರದಾಗೆ ಹಾಲುಗಂಬ ಯಾಕೋ
ಗುಡಿ ಮುಂದೆ ಮಾಲೆಕಂಬ ಯಾಕೋ
ಮಸುದ್ಯಾಗ ಗಂಟೆ ಇಲ್ಲ್ಯಾಕೋ
ಬದುಕ ಮುನ್ನ ಕೇಳಿ ಪಡೆಕೋ ||1||
ಆಕಾಶಕ್ಕೆ ಆಸರೇನೆಯ್ತೆ ಭೂಮಿ ಮಿಗಿಲೇನಯ್ತೆ
ತಾಯಿ ತಂದೆ ದೇವರಾದರೋ
ಬದುಕ ಮುನ್ನ ಕೇಳಿ ತಿಳಿಕೋ ||2||
ಕಲ್ಲು ದೇವರು ಕೋಳಿಯಾಯಿತೇನೋ
ಬಲ್ಲ ದೇವರು ಬೇಡಾತೇನೋ
ಬಡವನ್ನ ಪಡೆಯೋ ಅಂತಾರೋ
ಬದುಕ ಮುಂದೆ ಕೇಳಿ ಪಡಕೋ ||3||
ರೇಣುಕಾ ಹೋಗಿ ಎಲ್ಲಮ್ಮ ಯಾಕೋ
ಅಲ್ಲಿಗೋಗುವುದು ಅನ್ನೋದು ಯಾಕೋ
ಎಲ್ಲಮ್ಮನ ಗುಡ್ಡದಾಗೆ ಮುಲ್ಲಾಂದು ಎನೈತೋ
ಬದುಕ ಮುನ್ನ ಕೇಳಿ ನೀ ಪಡಕೋ ||4||

ಶಿವನಾಮ ಸ್ಮರಿಸಲೋ
ಶಿವನಾಮೆ ಸ್ಮರಿಸಲೊ ಮನವೆನಿಸಿ ವಿವರಿಸಿ
ಜ್ಞಾನವ ತಿಳಿ ಮನವೆ ಅವಗುಣ ಅಳಿಯೋ
ಆತ್ಮವ ತಿಳಿಯೋ ಭವಸಾಗರ ದಾಟೆಲೋ ಮನವೆ ನೀ ||ಪ||
ಇಚ್ಛೆ ಬಂದಂತೆಲೊ ಮನವೆ
ಹುಚ್ಚೆದ್ದು ಕುಣಿಯ ಬೇಡೆಲೊ ಮನವೆ ನೀ
ಎಚ್ಚರವಿಟ್ಟು ಯಾರೆಂಬುದನ್ನು
ನಿಶ್ಚಯ ಮಾಡಿಕೋ ಎಲೋ ಮನವೇ ನೀ ||1||
ಯಾರಿಗೆ ಯಾರಿಲ್ಲೆಲೊ ಮನವೆ ನಾ
ಸಾರಿ ಹೇಳುವೆ ಸತ್ಯ ತಿಳಿ ಮನವೇ
ಮೂರು ದಿನದ ಸಂತಿ ಈ ಶರೀರದ ಭ್ರಾಂತಿ
ಘೋರಕ್ಕೆ ಬೀಳಬೇಡಲೋ ಮನವೇ ನೀ ||2||
ಇಂತು ತಿಳಿದು ನೀ ನಡೆ ಮನವೇ
ಸಂತೋಷ ಸುಖದೊಳಿರು ಮನವೇದಾಂತ
ಶ್ರೀಗುರುವರ ಧ್ಯಾದೊಳಿರು ಏಕಾಂತೇಶನು
ನೋಡಗೊಡೆಲೊ ಮನವೇ ||3||

ಏನೆಂದೂ ಹಾಡಲಿ ಗುರುವೇ
ಏನೆಂದೂ ಹಾಡಲಿ ಗುರುವೇ
ಎಲ್ಲು ಕಡೆಗೂ ನೀ ತುಂಬಿರುವೆ ||ಪ||
ಹಾಲಿನಲ್ಲಿ ತುಪ್ಪದಂತೆ | ಮಲ್ಲಿಗೆಯಲ್ಲಿ ಗಂಧದಂತೆ
ಶಿಲ್ಪದಲ್ಲಿ ಶಿವ ಕಲೆಯಂತೆ | ಕಲ್ಪವೃಕ್ಷ ನೀನಾದ ಬಳಿಕಾ ||1||
ಬೂದಿ ಮರೆಯ ಕೆಂಡದಂತೆ | ನೆಲದ ಮರೆಯ ನಿಧಾನದಂತೆ
ಮೋಡ ಮರೆಯ ಆಕಾಶದಂತೆ | ಸಕಲರೆಲ್ಲಾ ಚೇತನದಂತೆ |
ಚಿದಾನಂದ ನೀನಾದ ಬಳಿಕಾ ||2||
ನೋಡುವ ದೃಷ್ಟಿಯಲ್ಲಿ ನೀನೆ | ಇಡುವ
ಹೆಜ್ಜೆಯಲ್ಲಿ ನೀನೇ | ಆಡುವ ನಾಲಿಗೆಯಲ್ಲಿ ನೀನೇ
ಮಾಡುವ ಕಾಯಕ ನೀನಾದ ಬಳಿಕಾ | ||3||
ವಿಶ್ವಕೆ ನೀ ಪ್ರಭುವಾಗಿ ಬಂದೆ | ಜಗತ್ ರಕ್ಷಕ ನೀನಾಗಿ ಬಂದೆ |
ತತ್ವ ಸಾರಿದ ಬ್ರಹ್ಮನಿಗೊಲಿದೆ | ಶಿಸುವೀಗೆ ನಾಲಿಗೆಯಾದೆ ||4||

ಹೊತ್ತಂಥ ಕೊಡ
ಹೊತ್ತಂಥ ಕೊಡನವ್ವಾ | ಬಿತ್ತೆಂದರೆ ಸಿಗದವ್ವಾ |
ಎಚ್ಚರದಿಂದ ನಡಿಯೇ ತಂಗ್ಯವ್ವಾ | ಶಿರ ಬಾಗಿ ನಡಿಯೇ ||ಪ||
ಹಸಿಯ ಮಣ್ಣಿನ ಕೊಡ | ಬೆಸಿಗೆಯಿಲ್ಲದ ಕೊಡ |
ಬಸಿದು ಬಸಿದರೆ ಹೋಗುತೈತವ್ವಾ | ತಂಗ್ಯವ್ವಾ |
ಶಿರ ಬಾಗಿ ನಡಿಯೇ ||ಅ.ಪ||
ಆರು ಗಾಲಿ ತೇರವ್ವ | ಮೂರು ಬಣ್ಣದ ಕಳಸವವ್ವಾ |
ತೇರು ಸಾಗಿದೆ ನೋಡು ತಂಗ್ಯವ್ವ | ಸಂಸಾರದ
ತೇರು ಸಾಗಿದೆ ನೋಡು ತಂಗ್ಯವ್ವ ||1||
ಆಲಯದ ಗುದ್ದಲಿಯವ್ವಾ | ಹೋಳಿ ಹುಣ್ಣಿಮೆ ಹೊಯಕೇರಿತವ್ವಾ |
ಕಳಸ ಬೆಳಗದು ಗೌರಿ ಹುಣ್ಣಿಮೆಯವ್ವಾ | ತಂಗ್ಯವ್ವಾ |
ಮೂರಬ್ಬ ಕೊಡವ್ವ ಬಾರವ್ವಾ ||2||
ಮಾಯದ ಮೋಡನವ್ವ | ಬಿರುಗಾಳಿ ಬೀಸತವ್ವಾ
ಸುತ್ತ ಮುತ್ತಾ ಉತ್ತರ ಮಳೆಯವ್ವಾ | ತಂಗ್ಯವ್ವಾ
ಬಟ್ಟೆಯು ನೆನೆಲಿಲ್ಲಾ ಬಾರವ್ವಾ ||3||
ಸಂಸಾರ ಸಾಗರನವ್ವಾ | ಈಜಿ ಬರಬೇಕವ್ವಾ |
ಭವದೊಳು ಬಂದು ಬಿದ್ಯವ್ವಾ | ತಂಗ್ಯವ್ವಾ |
ಶಿರಬಾಗಿ ನಡಿಯೇ ||4||
ಪರಮ ಬೋಧ ತಿಳಿಯವ್ವಾ | ಪರಮಾತ್ಮನ ನೆನೆಯವ್ವಾ
ಪರಮಾರ್ಥ ತಿಳಿದು ನೋಡವ್ವಾ | ತಂಗ್ಯವ್ವಾ |
ಶಿರಬಾಗಿ ನಡೆಯೇ ||5||
ಈ ಜನ್ಮ ಕಡೆಯವ್ವಾ | ತಿರುಗಿ ಬರುಬಾರದವ್ವಾ |
ಎಳ್ಳಷ್ಟು ಸುಖವೇಯಿಲ್ಲವ್ವಾ | ತಂಗ್ಯವ್ವಾ |
ಶಿರಬಾಗಿ ನಡಿಯೇ ||6||
ವಸುಧೆಯೊಳಗೆ ನಮ್ಮ | ಹುಬ್ಬಳ್ಳಿ ಪುರವಾಸ | ಗುರುಸಿದ್ದಾ
ರೂಢರ ನೆನೆಯವ್ವಾ ತಂಗ್ಯವ್ವಾ | ಶಿರಬಾಗಿ ನಡೆಯೇ ||7|||

ಗಡಗಿ ಜೋಕೆ ತಂಗಿ
ಗಡಗಿ ಜೋಕೆ ತಂಗಿ | ಬ್ರಹ್ಮ ಕೊಟ್ಟ ಗಡಗಿ ಜೋಕೆ ತಂಗಿ |
ಒಮ್ಮನಸಿಂದಾ ನೀ ಕೊಂಡಕೊಂಡೀ | ಬ್ರಹ್ಮ ತೆಗೆದನಾ
ನವಕಿಂಡೀ | ಅದರೊಳಗೆ ಸುಖ ನೀ ನೋಡೀ ತಂಗಿ ||ಪ||
ನೆರೆಮನೆ ಕಡೆಗೋಲು | ಕಡವಾಗಿ ಇಸಕೊಂಡಿ
ಕಡವಾಗಿ ಇಸಕೊಂಡಿ ನೀನು ಮಜ್ಜಿಗೆ ಕಡಕೊಂಡಿ
ಅದರೊಳು ಬೆಣ್ಣೆಯ ಕಳಕೊಂಡಿ ||1||
ಮುಟ್ಟುಚಟ್ಟಿಗೆ ತಡೆಯಿಲ್ಲಾ | ಗಡಿಗಿ ಮುಟ್ಟಿ ಮಟ್ಟಿ ಸುಡಲಿಲ್ಲಾ
ತಳಸತ್ತು ಹೋಯ್ತಲ್ಲಾ | ಗಡಗಿ ಒಂದು ದಿನ ನುಡಿಯಲಿಲ್ಲಾ |
ಗಡಿಗಿಯ ಅನುಭವ ತಿಳಿಯಲಿಲ್ಲಾ ||2||

ನಿನ್ನಿಂದ ನಿಜ ತೋರ್ವುದೊ
ಎನ್ನಿಂದಲೇನಾಗ್ವುದೊ | ಸಂಗಮನಾಥ | ನಿನ್ನಿಂದ ನಿಜ ತೋರ್ವುದೊ ||
ಪನ್ನಂಗಧರ ನಿನ್ನ ಪಾದ ಸೋಂಕಿದ ಮೇಲೆ | ನಿನ್ನಂತೆ ನಾನಾದೆನೋ
ಸಂಗಮನಾಥ | ನಿನ್ನಿಂದ ನಿಜವಾದೇನೊ ||ಪ||
ಹುಟ್ಟಿದ್ದು ಹೊಲೆವೂರವೋ ||ಸಂ|| ಬೆಳೆದದ್ದು ಮಲೆನಾಡವೋ |
ಕವಲೂರಿಗೆ ಕಡಿಯಾದೆನೋ ||ಸಂ|| ಬಯಲಿಗೆ ಬಯಲಾದೆನೋ
ಫಣಿಯ ಕುಂಡಲಿ ಮಧ್ಯ | ಮನೆಯ ಮಂಟಪದೊಳಗೆ |
ಗತಿಲಿಂಗ ನೀನಾದೆಯೋ |ಸಂ| ನಿಜಲಿಂಗ ನೀನಾದೆಯೋ ||1||
ನಿನ್ನೊಳಗೆ ನಾನಾದೆನೊ ||ಸಂ|| ನಿನ್ನಿಂದ ಜ್ಞಾನ ಓದಿದೆನೋ |
ನರದೇಹದೊಳು ನೀನು | ಮನೆಯ ಮಾಡಿರುವಂಥ |
ನಿನ್ನಂಥೆ ನಾನಾದೇನೋ ||ಸಂ|| ನಿನ್ನಿಂದ ನಿಜವಾದೆನೋ ||2||
ದೇಶಕಧಿಕವಾದ ಹುಬ್ಬಳ್ಳಿ ಪುರವಾಸ ||ಗುರುಸಿದ್ಧ ನೀನಾದೆಯೋ |
ಗುರುಶಂಕರ ನೀನಾದೆಯೋ || ಎನ್ನಿಂದ ||3||

ನೀರಿಗ್ಹೋಗನು ಬಾರೆ ತಂಗಿ
ನೀರಿಗ್ಹೋಗನು ಬಾರೆ ತಂಗಿ | ಊರ ಮುಂದೆ ಹರಿಯುತಾಳೆ ಗಂಗೀ |
ಧಾರುಣಿ ಜನರಾಟ ದೂರಿಟ್ಟು ಹೊರಗ್ಹೊಂಟು |
ವಾರಿಗೋಗೆಯನು ಬಾರೆ ತಂಗೀ |
ಗುರು ರಾಯರು ಕೊಟ್ಟಂಥ ಅಂಗೀ ||ಪ||
ನೊಸಲು ಬ್ರಹ್ಮನ ಕೊಡಕೆ | ಅಸಲಿನುಕ್ಕಡ ಹಚ್ಚಿ
ಬಿಸ್ಮಿಲೆಂದೆಳೆಯನ ತಂಗಿ |
ಹರಿಯೊಳಗಿರುವಳು ಮಂಗಳಾಂಗಿ ||1||
ಉಸಿರು ಹಗ್ಗವ ಮಾಡಿ |
ಬಿಸಜಾಕ್ಷನ ಕೂಡಿ |
ವಸದಿದೂಡನು ಬಾರೆ ತಂಗಿ |
ಹರಿಯೊಳಗಿರುವಳು ಪಾತಾಳ ಗಂಗೀ ||2||
ಅವರ್ಣದ ಸೋಪು | ಯಾರೂ ಕಾಣದೆ ಹಚ್ಚಿ
ಬಾರವ್ವಾ ತೊಳೆಯನ ತಂಗೀ
ಗುರು ರಾಯರು ಕೊಟ್ಟಂಥ ಅಂಗಿ || ||3||
ಸತ್ಯದೇರಿಯನತ್ತಿ ನಿತ್ಯ ಜ್ಞಾನವೆಂಬ ನೀರಾ
ಹಚ್ಚಿ ತೊಳೆಯೆನು ಬಾರೆ ತಂಗಿ ||4||
ಅಷ್ಟ ಮದಕೆ ಹತ್ತಿದ ಧೂಳಿಂಗೀ ||
ಶ್ರವಣವೆಂಬ ಬಿಸಿಲೊಳಗೆ | ಮನವೆಂಬಾ ಬಟ್ಟೆ ಒಣಗಿಸಿ
ನಿಜ ಧ್ಯಾಸದೊಳು ತಾನು ತಿರುಗಿ | ನಮ್ಮ ನಿಜಲಿಂಗ ಪಾದಕ್ಕೆ ಎರಗಿ ||5||

ಇಂದ್ರ ದಿಕ್ಕಿನೊಳಿದ್ದ ಸೂರ್ಯ
ಇಂದ್ರ ದಿಕ್ಕಿನೊಳಿದ್ದ ಸೂರ್ಯ | ಚಂದ್ರಗುಪ್ತದ ಪುರದೊಳು ಮುಳುಗಿ
ಚೆಂದ ಚೆಂದದಿ ಬೆಳಗು ತೋರ್ಪುದೊ || ಓಂ ಸಿದ್ಧ
ನಿಂದು ನೋಡಲು ಬಯಲಿಗೆ ಬಯಲದು ||ಪ||
ಗಿರಿಯ ಶಿಖರಗ್ನಿ ಮುಖದೋ | ಳಿರುವ ಅರ್ಕೇಶ್ವರನ ಹಿಂದೆ |
ಸುರಿವುದಮೃತದ ಪಂಚಧಾರೆಯೇ | ಓಂ ಸಿದ್ಧ
ಅರಿದು ಸೇವಿಸಿ ಮರಣವಿಲ್ಲವೊ ||1||
ಇಂತು ಶ್ರೀಶೈಲದ ಘನವಾ | ಭ್ರಾಂತಿಯೊಳ್ ತಿರುಗಿ ನೋಡಿ
ಅಂತರಂಗದ ಗುಹೆಯ ಹೊಕ್ಕೆನೊ || ಓಂ ಸಿದ್ಧ
ಶಾಂತ ಮಲ್ಲನೆ | ನೀನೇಯಾಗಿರ್ದೆ ||2||

ಮಾಡಬಾರದು
ದಾರಿ ಬಿಟ್ಟು ಅಡವಿಯ ಕೂಡಬಾರದು |
ನಡತೆಯಿದ್ದ ಮನೆಗೆ ಕೇಡು ಬಗೆಯಬಾರದು |
ಬಡವರಿಗೆ ಭಾಷೆ ಕೊಟ್ಟು ತಪ್ಪಬಾರದು ||ಪ||
ಸುಳ್ಳರ ಮಾತ ಕೇಳಬಾರದು |
ಕಳ್ಳರ ಗೆಳೆತನ ಮಾಡಬಾರದು |
ಒಳ್ಳೆಯವರ ಗೆಳೆತನ ಬಿಡಬಾರದು |
ಮಳ್ಳೀ ಹಾಂಗೆ ಒಬ್ಬರ ಬುಡಕೆ ದೊಗ್ಲಾಬಾರದು ||1||
ಹೆಂಡ್ತಿ ಮುಂದೆ ತಾಯ ಬೈಯ್ಯಬಾರದು |
ಹಸಿವೆಂದರೆ ಕಿವಿಯಲ್ಲಿ ಕೇಳಬಾರದು |
ಶಿಸ್ತಿನಿಂದ ಮುಂದಕ್ಕೆ ಹೋಗಬಾರದು |
ಕೋರರ ಕೂಡ ಕುಸ್ತಿ ಹಿಡಿಯಬಾರದು ||2||
ಸಂತಿ ಸೂಳೇರ ಸಂಗ ಮಾಡಬಾರದು |
ಅಂಕೆಗೆಟ್ಟು ಓಣಿ ಓಣಿ ತಿರುಗಬಾರದು |
ಶಾಂತ ಗುಣ ಒಂದು ಬಿಡಬಾರದು |
ನಮ್ಮ ಗುರುಸಿದ್ದರ ಪಾದ ಮರಿಯಬಾರದು ||3||

ಬಿಡು ನಿನ್ನ ಜೀವದ ಅಹಮ್ಮು
ಯಾವ ಕಣ್ಣಲಿ ನೋಡಿದ್ಯೊ ಬ್ರಹ್ಮ |
ಬಿಡು ನಿನ್ನ ಜೀವದ ಅಹಮ್ಮ |
ನೀನ್ಯಾವ ಕಣ್ಣಲಿ ನೋಡಿದ್ಯೋ ಬ್ರಹ್ಮ ||ಪ||
ನಿಶ್ಯಬ್ಧ ಬ್ರಹ್ಮ ಅಂತಾ ಹೇಳುತಿದಿ ತಮ್ಮಾ |
ಹೇಳಲಿಕ್ಕೆ ಹೇಗೆ ಬಂತೋ ಬ್ರಹ್ಮ ||ಅ.ಪ||
ಜಾತಿ ಜಾತಿಗೆ ವೈರಿ | ನೀತಿ ಮೂರ್ಖರಿಗೆ ವೈರಿ |
ಅಜ್ಞಾನಿ ಜ್ಞಾನಿಗೆ ವೈರಿ | ಜ್ಞಾನಿ ಜಗಕೆ ವೈರಿ |
ನೋಡಿದ್ದೇನು ಸುಳ್ಳಲ್ಲ | ಹೇಳಿದ್ದೇನೂ ಖರೆ ಅಲ್ಲ |
ನೋಡಿದವನು ಹೇಳಿಲಿಲ್ಲ | ಹೇಳಿದವನು ಕೇಳಲಿಲ್ಲ ||1||
ಜಗದ ಭವರೋಗದೊಳ್ | ಅದ್ವೈತ ತಿಳಿಯದೆ |
ವಡಲೊಳು ಪರಂಜ್ಯೋತಿ ಚೈತನ್ಯ ತಿಳಿಯದೆ |
ಹೀರೆತನ ಹೇಳೊದಲ್ಲ | ಯಾವೊಂದೇನು ಅಧಿಕಾರವಿಲ್ಲ |
ವುಂಭರಜ ಗುರುಸಿದ್ಧ ತಿಳಿಸ್ಯಾನೊ ಭವಕ್ಕೆಲ್ಲಾ ||2||

ಹಾವು ಕಚ್ಚಿತಮ್ಮ
ಹಾವು ಕಚ್ಚಿತಮ್ಮ | ಯಾರಿಗೆ ತಿಳಿಯದಿದರ ಮಹಿಮೆ |
ಹಾವಿನ ವಿಷವು ಎನಗೇರಿತಮ್ಮ |
ದೇವಿ ಕರುಣದಿಂದ ಉಳಿದೇನಮ್ಮ ||ಪ||
ಮೀರಿದ ಹಾವಮ್ಮ | ಮೂರು ಲೋಕ ಮುಚ್ಚಿತ್ತಮ್ಮ |
ಬ್ಯಾಸರವಿಲ್ಲದ ಮಾಡ್ಯಾನ ಬ್ರಹ್ಮ ||
ನೆನಪಾದರೇ ಮೈ ಅನುತೈತೆ ಜುಮ್ಮಾ ||1||
ಅಷ್ಟ ಗೇಣಿನ ಹುತ್ತ | ಹುತ್ತಕ್ಕೆ ಒಂಬತ್ತು ರಂದ್ರಯಿತ್ತ |
ಯಾವ ರಂಧ್ರದೊಳಗೆ ಹಾವುಯಿತ್ತ |
ಬೆಲೆಯಿಲ್ಲದ ರತ್ನ ಹೆಡೆಯೊಳಗಿತ್ತ ||2||
ಸಣ್ಣ ಗೊರಕೆ ಬಂತೋ | ಹುತ್ತ ಹಾವು ಸಹಿತ ನುಂಗಿತೋ |
ಮೊದಲೇ ಗೊರಕೇ ಯಾವಲಿತ್ತೋ |
ಮಣಿಪುರದ ಕಮಲದೊಳ್ ಮಲಗಿಕೊಂಡಿತ್ತು ||3||
ಗೊಲ್ಲರ ಹುಡುಗನಮ್ಮ | ಹೇಳಲು ಮೂಲ ಮಂತ್ರವು ಪ್ರಣಮ |
ಗೊಲ್ಲನ ಮಂತ್ರಕೆ ಅಂಜುವುದಮ್ಮ |
ವಿಷದ ಕೊಳಚೆಯ ತೊಳೆದೊದಿತಮ್ಮ ||4||
ಧರೆಯೊಳು ಮೆರೆಯುವ ಬಳಬಟ್ಟ ಗ್ರಾಮ |
ಗುರು ಭೀಮಾ ದಾತನು ಮಾಡಿದ ನಾಮ |
ಆತನ ಪಾದವ ಹೊಂದಿದೆವಮ್ಮಾ ||5||

ಮುಕ್ತಿದಾಯಕ
ಕಂಡೀರೇನು ಆ ಕಾರುಣ್ಯ ಬ್ರಹ್ಮನಾ ||
ಕಂಡುಂಡಂತಹಾ ಮಹಾ ಜ್ಞಾನಿಗಳೆಲ್ಲಾ ||ಪ||
ಮೊಳಕೆಯೊಡೆಯಾದ ಬೀಜವ ಬಿತ್ತಿ |
ಅಳತೆಯಿಲ್ಲದ ರಾಶಿಯ ಮಾಡಿ |
ಬಳತ ಮನೆಯನು ತುಂಬಿ ಹೆಚ್ಚಾದ ಬೀಜವಾ
ಅಳೆದು ಮಾರುವಂಥ ಮಹಾ ಜ್ಞಾನಿಗಳಿರಾ ||1||
ನಾಲಿಗೆಯಿಲ್ಲದ ಘಂಟೆಯ ನುಡಿಸಿ |
ನಾದಬ್ರಹ್ಮನೊಳ್ ಹಿಡಿದು ನಿಲ್ಲಿಸಿ |
ನಾದ ಬ್ರಹ್ಮನೊಳ್ ಐಕ್ಯವಾಗುವಂಥಾ ಮಹಾ ಜ್ಞಾನಿಗಳಿರಾ ||2||
ಕಾವುಯಿಲ್ಲದ ಕೊಡಲಿ ಹಿಡಿದು |
ಮೂಡಲದಿಕ್ಕಿನ ಮರಬೇರನ್ನು ಕಡಿದು |
ಒಂದೇ ಕಡ್ತಕ್ಕೆ ಮೂರು ತುಂಡು ಮಾಡುವಂಥಾ |
ಮಹಾ ಜ್ಞಾನಿಗಳಿರಾ ||3||
ಭಯವು ನಿರ್ಬಯವು ಕೂಡಿದವನೇ ಭಕ್ತಿ |
ಎರಡು ಸೇರಿದವನೇ ಮುಕ್ತ.
ಮುಕ್ತಿದಾಯಕ ನಮ್ಮ ಗುರುಭೀಮದಾತ |
ಆತನ ಪಾದವ ಹೊಂದಿದ ಮಹಾ ಜ್ಞಾನಿಗಳಿರಾ ||4||

ಸುಜ್ಞಾನದ ಗುರುವೇ ಸಿಕ್ಕಿ
ಏನು ಪುಣ್ಯವಕ್ಕಾ | ಸುಜ್ಞಾನದ ಗುರುವೇ ಸಿಕ್ಕಿ |
ಎಲ್ಲಿ ಯಾರಿಗೆ ಸಿಕ್ಕಿ | ತಾನಿಲ್ಲದಡಿಯಿಲ್ಲಕ್ಕಾ |
ಬಲ್ಲ ಶರಣಳೊಗೊಕ್ಕಿ | ಅಲ್ಲೇ ಕಳೆದನು ದುಃಖಿ |
ನಾಣು ನೀನೆಂಬ ಲೆಕ್ಕ | ತಾನೇ ಕಳೆದಾನಕ್ಕ | ||ಪ||
ನತ್ತ ಮೂಗಿಗೆ ಇಟ್ಟು ಸಂಪತ್ತಿನ ತಾಳಿ ಕಟ್ಟಿ |
ಮುತ್ತೈದೆ ಮಾಡಿಟ್ಟ | ಸತ್ಯಾವೇಳಿ ಕೊಟ್ಟ ||
ಹಿರಿಯ ಹಾವು ಹಿಡಿದಾ || ಕೈ ಸೆರೆಯ ಮಾಡಿನೆಳೆದಾ |
ಪಾರಮಾರ್ಥ ತಿಳಿದಾ | ಪರಮಯೋಗಿ ಪಡೆದಾ ||1||
ಮೂರು ನದಿಯ ಮಧ್ಯೆ | ಸಂಚಾರವಿಲ್ಲದೆ ಇದ್ದು |
ಜಾರಿನೀರಿಗೆ ಬಿದ್ದ | ಮೀರಿದ ಪಾಪವ ಗೆದ್ದಾ |
ಆಶೆ ಪಾಶೆಯ ಸುಟ್ಟು | ಬಹುಲೇಸು ಮಾಡಿ ಬಿಟ್ಟ |
ಮೋಸ ಹೇಳದೆ ಬಿಟ್ಟ | ಬಹು ಸೋಸಿ ಹೇಳಿ ಕೊಟ್ಟ ||2||
ಗುಪ್ತಗಾಮಿನಿ ಗಂಗಾ | ನಿರ್ಲಿಪ್ತ ಅಂತಾರಂಗ |
ಸಪ್ತ ವರ್ಣದ ಲಿಂಗ | ಪ್ರಾಪ್ತಿ ಪಾಪದ ಭಂಗ |
ದೇಶದೊಳಗೆ ನಮ್ಮ | ಹುಬ್ಬಳ್ಳಿ ಪುರದ ವಾಸ |
ಕೈಲಾಸ ಮಂಟಪದೀಶ | ಸಿದ್ದಾರೂಢರ ದಾಸ ||3||

ಬ್ರಹ್ಮಾಂಡ ತುಂಬಿದ ಗಡಿಗಿ
ಇಡೀ ಬ್ರಹ್ಮಾಂಡ ತುಂಬಿದ ಗಡಿಗೀ ನೀನೇ ಮಾಡಿದಿ |
ಬ್ರಹ್ಮ ಕುಂಬಾರ ಮಾಧವನಾಗಿ ||ಪ||
ಮಮಕಾರ ಮೆದುವ ಮಣ್ಣ | ನೀನೆ ತಂದಿದಿ |
ನಿರ್ಗುಣ ನೀರನು ಹಾಕಿ ಕೆಸರ ತುಳದಿದಿ |
ಶಕ್ತಿಯೆಂಬಾ ಭಕ್ತಿಯ ತುಂಬಿ | ತಿಗರಿ ತಿರುಗಿಸಿ ||1||
ಗಡಿಗಿಗೆ ಒಂಬತ್ತು ರಂಧ್ರವ ತೆಗೆದಿದಿ |
ಬ್ರಹ್ಮನ ನಾಮವ ಹೇಳಿ ಗಡಿಗಿ ಮಾಡಿದಿ |
ಗಡಿಗಿಯೊಳಗೆ ಹುಡಿಕ್ಯಾಡಿದರೇ ನೀನೇ ಸಿಗುವಲ್ಲಿ ||2||
ಲಕ್ಷ ಲಕ್ಷಾಂತರದ ಗಡಿಗಿ ಮಾಡಿದಿ |
ಗಡಿಗಿ ಮ್ಯಾಲೆ ನಾನಾತರದ ಚಿತ್ರ ಬರೆದಿದಿ |
ಗಡಿಗಿ ಒಡೆದು ಹೋದ ಮ್ಯಾಲೆ ಮುಕ್ತಿ ಕೊಡುತಿದಿ ||3||
ಅವರವರ ಹಣೆಬರಹ ನೋಡಿ ಗಡಿಗಿ ಮಾಡಿದಿ |
ಗಡಿಗಿಗೆ ನೂರು ವರ್ಷ ಆಯುಷ್ಯ ಬರೆದಿದಿ |
ರಾಮನಾಮ ಬೆಂಕಿ ಕೊಟ್ಟು ಗಡಿಗಿ ಸುಟ್ಟಿದಿ ||4||
ಎಲ್ಲಿಗೆ ಮುಟ್ಟಿಸುವ ಗಡಿಗಿ ಅಲ್ಲಿಗೆ ಮುಟುಸಿದಿ |
ಗಡಿಗಿಗೆ ಮುನ್ನೂರ ಅವರತ್ತು ಪೆಟ್ಟಾ ಹಾಕಿದಿ |
ಎಲ್ಲೂ ಗಡಿಗಿ ಚೌಕಾಸಿ ಮಾಡಿ | ಹಾಜರಿ ಬರೆದಿದೆ ||5||

ಶಿವನು ಮಾಡಿದ ದೇಗುಲ
ಶಿವನು ಮಾಡಿದ ದೇಗುಲ | ಇದು ಅವನ ನಾಟಕದ ಲೀಲಾ |
ಭವಕೆ ಬರುವುದು ಮೂಲ
ಈ ಭ್ರಮೆಗಳಳಿದರೇ ಸುಖದ ಕೀಲಾ ||1||
ಕಲ್ಲಿನ ದೇಗುಲ |
ಈ ತೇರಿಗೊಂಬತ್ತು ಬಾಗಿಲ |
ಆರು ಕಂಬಗಳ ಸಾಲಾ | ಇದು
ಮೂರು ತೊಲಿಗಳ ಕೀಲಾ || ಶಿವನು ||2||
ಗಾಳಿಗೋಪುರ ಇದಕುಂಟು |
ಏಳ್ವದು ಬೀಳ್ವದು ಉಂಟು |
ಆಳ ಸಂಸಾರದಲಿ ನೆಂಟು |
ಇದು ಕಾಲಯಮನರ ಕೈಯ ಗಂಟು ||ಶಿವನು ||3||
ಎಂಟು ಗೇಣಿನ ವಿಸ್ತರ |
ಇದಕಂಟದವನೇ ಸರ್ದಾರ |
ತುಂಟ ಅರಿವರು ವಿಚಾರ |
ಏರಿ ನೋಡಿದವನೇ ಧೀರ |
ನಮ್ಮ ಕಾಯ್ವ ಗುರುಸಿದ್ದೇಶವರಾ || ಶಿವನು ||4||

ಪುನೀತನಾದೆನು
ಪುನೀತನಾದೆನು ಪುಣ್ಯ ಜನುಮದಲಿ | ಇನ್ನೇಕೆ ಹೆದರಲಿ |
ಮಡ್ಡುಗಟ್ಟಿದಾ ವಜ್ರದೇಹದಿ
ಅಜ್ಜನಂತೆ ಹೆಜ್ಜೆಯಿಡುತಾ
ಗೊಜ್ಜಲಾದ ಕುಣಿಯೊಳಗೆ
ಬಿದ್ದು ನಾನು ಬಳಲುತಿದ್ದೆ ||1||
ಮೊದಲು ನನ್ನನು ಬದಿಗೆ ಎಳೆದೊಯ್ದ |
ವಿಧ ವಿಧದಿ ಹರಳಿಸಿ ಬೋಧ ಹೇಳಿ
ಹಾದಿ ಹಚ್ಚಿದನು ||
ಹುಚ್ಚನಂತೆ ಕಣ್ಣು ಮುಚ್ಚಿ |
ಲಕ್ಷ್ಯಕೊಟ್ಟು ನಾನು ಕುಳಿತೆ |
ಅಂತರಂಗದ ಸುದ್ದಿ ಎನಗೆ |
ಹಂಚಿಕೊಟ್ಟ ಗುರುರಾಯ ||2||
ಕೆಟ್ಟ ಗುಣಗಳ ಸುಟ್ಟು ಹಾಕಿದೆನೊ |
ಎಡಬಿಡದೆ ಎನ್ನನು
ಸ್ನೇಹ ತನ್ನೊಳು ಬೆಳೆಸಿಕೊಂಡನು |
ಕೆಟ್ಟ ಮನಸಿಗೆ ಶಿಕ್ಷೆ ಕೊಟ್ಟು
ಮೋಕ್ಷವೆಂಬಾ ವರವನಿಟ್ಟು
ಪರಮಭಕ್ತಿ ಎಂಥಾ ಗುರುವು
ಎಲ್ಲ ಮರ್ಮವ ಹೇಳಿಕೊಟ್ಟ ||3||
ಕ್ರೋಧವೆಂಬಾ ವ್ಯಾಘ್ರನನ್ನು |
ಹರಿಹರಿದು ತಿಂದು
ಹರನ ನಾಮನ ಮರೆಸಿ ಬಿಟ್ಟಿತು |
ಕಾಸು ಬಾಳದ ಹೇಸಿ ಮನಸು
ಆಸೆಗೆ ಹಚ್ಚಿ ಮೋಸ ಮಾಡಿ
ಇದ್ದು ಇಲ್ಲದಂತೆಯಾದೆನು ||4||

ಗುರು ಬೇಕಾ ತಂಗೀ
ಗುರು ಬೇಕಾ ತಂಗೀ | ಗುರು ಬೇಕಾ ನಿನ್ನ
ಶಿರದೊಳು ಕರವಿಟ್ಟು ಮುಕ್ತಳನ್ನು ಮಾಡುವಂಥಾ ||ಪ||
ಶರಣರ ಪಾದಕ್ಕೆ ಶಿರ ಹಚ್ಚಿ ಬಾಗೆಂದು |
ಮರೆತು ಸಾವಿರ ತಪ್ಪು ಕರೆದು ಬೋದಿಸುವಂಥಾ ||1||
ಪರದೇಶಿ ಮಗಳೆಂದು ಮರಮರ ಮರುಗುತ್ತಾ |
ಪಿಡಿದು ಜೋಕೆಯ ಮಾಡಿ ಹರನಿಗರ್ಪಿಸುವಂಥಾ ||2||
ಹಡೆದವರ ಮರೆಸುತ್ತಾ ನಡೆನುಡಿ ಕಲಿಸುತ್ತಾ |
ವಡಲ ಅಳಿಸಿ ಭವ ಕಡಲ ದಾಟಿಸುವಂಥಾ ||3||
ಅಂಗನೇ ಕೇಳುವ ಅಂಗದ ಮೇಲಿನ
ಲಿಂಗ ಪೂಜೆಯ ಗುಂಗ ಎನಗೆ ಹಿಡಿಸುವಂಥಾ ||4||
ಪಿಡಿದು ಧ್ಯಾಸದಿ ನಿನ್ನ ಹೆಡಮುರಿಗೆಯ ಕಟ್ಟಿ
ಕೆಡಹುವ ಯವನಾಳ ಹೊಡೆದು ಓಡಿಸುವಂಥಾ ||5||
ದೇಶದೊಳ್ ಬೆಳಕಾಗಿ ಮೆರೆಯುತಲಿಹ ನಮ್ಮಾ |
ಹಸನಾದ ಸದ್ಗುರು ಓಂಕಾರ ಸ್ವಾಮಿಯಂಥಾ ||6||

ದೇವರ ಮನೆಯಿದು
ದೇವರ ಮನೆಯಿದು ಮೂಜಗವೆಲ್ಲ |
ಬಾಡಿಗೆದಾರರು ನಾವುಗಳೆಲ್ಲ || ದೇವರ ||ಪ||
ಇಷ್ಟೇ ದಿವಸ ಇಷ್ಟೇ ವರುಷಾ |
ಇರಬೇಕೆನ್ನುವಾ ಕಟ್ಟು ಕರಾರು |
ಏನಿಹುದೇನೊ ಅರಿತವರಾರು ||1||
ನೀನೆ ಕಟ್ಟಿಸಿದೆ | ನೀನೇ ಹುಟ್ಟಿಸಿದೆ |
ಎಂಬುವುದೆಲ್ಲ ಜಂಬದ ಸೊಲ್ಲು |
ಅಂತ್ಯಕೆ ತೋರುವುದು ಈ ಜಗ ಜೊಳ್ಳು ||2||
ಈಗಲೇ ಬಿಡುವುದೋ ಬಿಡಬೇಕೆನ್ನುವರು |
ಇನ್ನೂ ಇರುವೆ ನಾ ಬಿಡಲಾರೆ |
ಎಂದರೇ ನಡೆಯದೇ ಈ ಪ್ರತಿಕಾರ ||3||
ಇಷ್ಟನ್ನ ಕೊಟ್ಟಿರುವುದು ಆತನ ಕರುಣೆ |
ಒಂದಿಷ್ಟಾದರೂ ಆತನ ಸ್ಮರಣೆ ||
ಬಿಡಿಸುವ ಇರಿಸುವ ಅವನಧಿಕಾರ |
ನಾವಿರುವುದು ಈ ದೇವರ ಆಸ್ತಿ |
ಈ ಜಗವೆಲ್ಲಾ ದೇವರ ವಸತಿ |
ತಿಳಿದರೆ ಒಳಿತು ಬಾಡಿಗೆ ಸಲ್ಲಿತ್ತು ||4||

ಎಂಥಾ ಕುದುರೆ
ಎಂಥಾ ಕುದುರೇ ನಾನು ಕೊಂಡುಕೊಂಡೆ |
ಕುಂತು ನಿಂತು ಅದರ ಗುಣವಾ ತಿಳಕೊಂಡೆ |
ಸಿಕ್ಕದಂಥಾ ಕಡೆ ಬುಕ್ಕುತ್ತೈತೆ |
ತೆಕ್ಕೆ ಹುಲ್ಲು ತಿಂದು ನೆಲ ನೆಕ್ಕುತ್ತೈತೇ ||1||
ಈ ಊರ ಮುಂದೆ ಕುದುರೆ ಏರಬೇಕು |
ಏರಿದ ಮೇಲೆ ಅದರ ಜನ್ಮ ಅರಿಯಬೇಕು |
ಸೂರ್ಯ ಮುಳುಗ ಹೊತ್ತಿಗೆ ಊರ ಸೇರಬೇಕು |
ಸೇರದಿದ್ರೆ ಕಾಸಿಗೆ ಮಾಡಬೇಕು ||2||
ಆರು ದುರ್ಗಗಳನ್ನು ಅಳಿಯಬೇಕು |
ಅಳಿದು ಗುರು ಗೋವಿಂದನ ಪಾದ ಹಿಡಿಯಬೇಕು |
ಶಾಂತ ಗುಣದಿಂದ ನಡೆಯಬೇಕು |
ಗುರು ಸಿದ್ದಾರೂಢರ ನಾಮ ನೆನೆಯಬೇಕು ||3||

ಐಶ್ವರ್ಯ ಕಂಡೇನವ್ವಾ
ಎಂಥಾ ದೈವುಳ್ಳ ಗಂಡನ್ನ ಮಾಡಿಕೊಂಡೆನವ್ವಾ |
ಗುರುವಿನಂತಲಿ ಬಂದು | ಶಂಭುವಿನಂತಲಿ ಬಂದು |
ಎಂಥಾ ಐಶ್ವರ್ಯ ಕಂಡೇನವ್ವಾ ||1||
ದುಂಡು ಸೀರೆ ಉಡುವುದು ಬಿಡಿಸಿದನವ್ವಾ |
ಬೆಂಕಿ ಕೆಂಡದಂಥಾ | ಸೀರೆ ತಂದು ಉಡಿಸಿದನವ್ವಾ |
ವಾಲೆ ಬುಗುಡಿ ಜುಮಕಿ ತಂದು ಇರಿಸಿದನವ್ವಾ |
ಅದರ ಸುತ್ತಾ ಮುತ್ತಾ | ಮಾಣಿಕ್ಯದರಳ ಬಿಡಿಸಿದನವ್ವಾ ||2||
ಚಿಂತೆಲಿಂದಾ ಬಂದು ಕುಳಿತು ಕೊಂಡೆನವ್ವಾ |
ಹರ ಹರ ಚಿಂತೆ ಬಿಡಿಸೊ | ಶಿವ ಶಿವ ಚಿಂತೆ ಬಿಡಿಸುವಂಥಾ
ಶಂಕರನ ಕಂಡೆನವ್ವಾ ||3||
ಓಂ ನಮಃ ಶಿವಾಯ ನುಡಿಸಿದನಮ್ಮ | ಕನಕ ಮಲ್ಲೇಶಂಗೆ |
ಗುರುಸಿದ್ದೇಶಂಗೆ ಮಲ್ಲಿಗೆ ಹೂವ ಮುಡಿಸಿದನವ್ವಾ ||4||

ಕಣ್ಣನು ನೀ ತೆರೆದು ನೋಡು
ದಿವ್ಯ ಪಾರುಮಾರ್ಥದ ಕಣ್ಣನು ನೀ ತೆರೆದುನೋಡೊ
ಅಂಧ ಅಜ್ಞಾನದ ಪೊರೆಯನ್ನು ನೀ ಕಳಚಿನೋಡು ||ಪ||
ದೇಹದೋಳು ಯಾವುದು ಸರಿಯೆಂದು ತಿಳಿದು ನೋಡು
ಪಂಚ ಭೂಗಳೈವರನ್ನು ಸೋಸಿ ನೋಡೋ ||1||
ಆರುಶಾಸ್ತ್ರ ಹದಿನೆಂಟು ಪುರಾಣವ ಓದಿ ನೋಡೋ |
ಇಪ್ಪನಾಲ್ಕರ ಮರ್ಮವನ್ನು ಬಿಡಿಸಿ ಹೇಳೋ |
ನಾಲ್ಕು ಆಗಮ ನಾಲ್ಕು ವೇದ ಬೋಧಿಸಿ ತಿಳಿಯೋ |
ಎಂಟರೊಳಗಿನ ಗಂಟಿನಗುಟ್ಟ ರಟ್ಟಾಗಿ ಅರಿಯೊ || ಪಾರುಮಾರ್ಥ ||2||
ಇಪ್ಪತ್ತೊಂದು ಉಪನಿಷತ್ತನ್ನು ಅರಿತ ನಡೆಯೋ |
ಉಪನಿಷತ್ತಿನ ತಿರುಳಿನ ರುಚಿಯ ಸವಿದು ಬಾರೋ
ಸ್ಥೂಲ ಸೂಕ್ಷ್ಮಕಾಯದ ಮೋಹವ ಮರೆತು ನೋಡೋ |
ಅದರೊಳಗಿರುವ ಗುರುಮೂಲವನ್ನು ಗುರುತು ಹಿಡಿಯೋ || ಪಾರುಮಾರ್ಥ ||3||
ಧರೆಯೊಳು ವಾಸುಳ್ಳ ಹೆಸರಾದ ಅರಸಿನಗಟ್ಟ |
ಜಗಕೆ ಪವಾಡ ಪುರುಷ ಶ್ರೀ ಗುರು ಓಂಕಾರಸ್ವಾಮಿ |
ಪಾದಗಳಿಗೆ ಅರ್ಚನೆ ಮಾಡಿ ಕಾಯದ ಕರ್ಮವ ಕಳೆಯೋ || ಪಾರುಮಾರ್ಥ ||4||

ಜೋಕಾಲಿ
ಜೋಕಾಲಾಡನು ಬಾರೋ ನಾನು ನೀನು |
ನೀನು ನಾನು ಜೋಕಾಲಾಡನು ಬಾರೋ ||ಪ||
ಮದವೆಂಬ ದೆಂಬ ಮರಕೆ ಅರಿವೆಂಬ ಹಗ್ಗವ ಬಿಗಿದು |
ಅರಿಷಡ್ವರ್ಗಳೆಂದು ಹರೆಯೊಳಗೆ ಕುಣಿಕೆಯ ಬಿಗಿದು
ಆರೂಢನಾಥನ ಧ್ಯಾನದಿ ಕುಳಿತುಕೊಂಡು | || ಜೋಕಾಲಿ ||1||
ಮನದೊಳಗಿರು ನೂರೊಂದು ಗುಣವ ಸುಟ್ಟು |
ಮಾನವ ಜನ್ಮದಿ ಮಹದೇವನ ಗುರಿಯನು ಇಟ್ಟು
ಆಯುಷ್ಯ ಕಾಲದ ಜೋಕಾಲಿಯನ್ನು ಕಟ್ಟೆ || ಜೋಕಾಲಿ ||2||
ಪಂಚೇಂದ್ರಿಯಗಳನೆಲ್ಲಾ ಪಾಕಶಾಲೆಯ ಮಾಡಿ
ಅರಿವೆ ಗುರುವೆಂಬ ಮಂತ್ರವ ಜಪಮಾಡಿ
ನೇತಾಡುವ ಹಗ್ಗದಂತೆ ಪ್ರಾಣಪಣವನು ಮಾಡಿ || ಜೋಕಾಲಿ ||3||
ಭಕ್ತಿ ಭಾವನೆಗಳೆಂಬ ನರದಿಂದ ಹಗ್ಗವವಸೆದು
ಪಂಚಾಕ್ಷರಿ ಮಂತ್ರ ಪಂಚಕೋನದಿ ಇರಿಸಿ
ನಾರಾಯಣನೆಂಬಾ ನಾರಿನ ಜೋಕಾಲಿ || ಜೋಕಾಲಿ ||4||
ಧರೆಯೊಳು ದಾಸುಳ್ಳ ತರಳ ಬಾಳು ಸಿರಿಗೆರೆ ದಾಸ
ಬ್ರಹ್ಮನ್ಮರದೊಳು ನೆಲದಂತಾ ಶ್ರೀ ಮರುಳೇಶ
ವಿಶ್ವಬಂಧುಗಳೆಂಬ ಜ್ಞಾನದ ಜೋಕಾಲಿ || ಜೋಕಾಲಿ ||5||

ಓಂ ಎಂದು
ಓಂ ಎಂದು ಕುಟ್ಟುವೇ | ಸೋಹಂ ಎಂದು ಬೀಸುವೇ |
ಓಂ ಸೋಹಂ ಎರಡು ತಿಳಿಯಬೇಕಮ್ಮನಾರಿ | ಹಾಕಿವ್ವ ಹೇರಿ ||ಪ||
ಅಜ್ಞಾನೆಂಬ ಹರಕೆ ಹಿಡಿದು ಸದ್ಗುರುವಿನ ಪಾದವ ಹಿಡಿದು
ಮಾಯ ಪ್ರಪಂಚವಿದು ತಿಳಿಯಬೇಕವ್ವನಾರಿ
ಹಾಕಿವ್ವ ಹೇರಿ ||1||
ಆಕೆಯನು ತಿಪ್ಪಯ್ಯ | ಸತ್ಯವುಳ್ಳವಳು ಕಾಣೋ
ಸತ್ಯೆಮ್ಮೆ ಹಾಲ ಕರೆದವಳು ನಾರಿ | ಹಾಕಿಟ್ಟು ಏರಿ ||
ಸತ್ತ ಎಮ್ಮೆ ಹಾಲ ಕರೆದು ಪಾಯಸ ಮಾಡಿ
ಸುತ್ತೇಳು ಮಠಕ್ಕೆ ಕಳುಸ್ಯಾಳೋ ನಾರಿ
ಹಾಕಿಟ್ಟು || ಓಂ ಎಂದು ||2||
ಧರೆಯೊಳು ದಾಸುಳ್ಳ ನಾಯನಹಟ್ಟಿ ಪುರದೊಳು
ಶ್ರೀಗುರುವು ತಿಪ್ಪೇಶ | ಪವಾಡ ಪುರುಷನ ಕರುಣೆಯ
ಪಡೆದೆವು || ಓಂ ಎಂದು ||3||

ಮಾನವರೇನು ಘಟ್ಟ್ಯಲ್ಲಾ
ಮಾನವರೇನು ಘಟ್ಟ್ಯಲ್ಲಾ
ಮಹಾ ತಿಳಿದ ಮಹಾತ್ಮರಿಗೇನು ಬಿಟ್ಟಿಲ್ಲಾ
ಮರಣ ಬಂದರೇನು ಸಿಟ್ಟಿಲ್ಲಾ
ಮಹಾದೇವಗ ನೆನೆದವ ಕೆಟ್ಟಿಲ್ಲಾ ||ಪ||
ಲಟಪಿಟಿ ಸಂಸಾರ ನೀಟಿಲ್ಲಾ
ಇದು ಯಾರ್ಯಾರಿಗೂ ಕಟಕೊಂಡು ದಾಟಿಲ್ಲ
ಘಟದೊಳು ಘಟ್ಟಾಗಿರಬೇಕು
ಹಸ್ತವಿಟ್ಟು ಗುರು ಮುಟ್ಟಿರಬೇಕು
ಬಾಯಿ ಪೂರದೊಳಿರಬೇಕು ||1||
ಕೈಲಾಸದೊಳು ಮನಿ ಕಟ್ಟಿರಬೇಕು
ಸುಳಿದಾಳಿ ಕಟ್ಟ ಬೇರಿರಬೇಕು
ನಮ್ಮ ಗುರು ಮಹಂತೇಶನ ನೋಡಿರಬೇಕು ||2||
ಮಣಿಪುರದಲ್ಲಿ ಮನೆ ಮಾಡಿರಬೇಕು
ಮನದೊಳು ಗುಣಗಳ ಸುಟ್ಟಿರಬೇಕು
ಗುರುವಿನ ಗುಲಾಮನಾಗಿರಬೇಕು
ಮುಕ್ತಿಯನು ಮನದಲ್ಲಿ ಧ್ಯಾನಿಸಬೇಕು ||3||

ಬಾರಯ್ಯ ಶ್ರೀಗುರುದೇವಾ
ಬಾರಯ್ಯ ಶ್ರೀಗುರುದೇವಾ |
ಬಹು ನೊಂದು ಬೆಂದಿದೆ ಜೀವಾ |
ತಡ ಮಾಡದಿರು ಶ್ರೀಗುರುವೇ |
ಶಿರ ಬಾಗಿ ಬೇಡುತಲಿರುವೇ ||ಪ||
ಸುಖಶಾಂತಿ ನೆಮ್ಮದಿ ಇರದಾ |
ಸಂಸಾರದೊಳಗ್ಹೆಂಗಿರಲೀ |
ರಾಗ ದ್ವೇಷ ಮೋಹ ಭ್ರಾಂತಿಗಳು |
ಬಹು ಬಾಧೆ ಪಡಿಸುತಲಿಹವು ||1||
ಮನವೆಂಬ ಮರ್ಕಟವೆನ್ನ |
ಕ್ಷಣನಿಲ್ಲದೆ ಮತಿಗೆಡಿಸಿಹುದು |
ನಿನ್ನ ನಾಮಸ್ಮರಣೆಗು ಬಿಡದೆ |
ಭವ ಚಿಂತೆಯೊಳು ಮುಳುಗಿಹುದು ||2||
ಉಂಡುಟ್ಟು ಉಸಿರಾಡಿದೆನು |
ಅರಿವಿಲ್ಲದಲೆದಾಡಿದೆನು |
ಸಂಸಾರಕಾಗಿ ಹಲುಬಿದೆನೊ |
ಅದಕಾಗಿ ನಾ ಕೊರಗಿದೆನು ||3||
ಸತಿಯಿಂದ ದಿನ ಬರಿ ದುಃಖ |
ಸುತರಿಂದ ಬರಿ ಆತಂಕ |
ಹಿತವೆಂದು ನಾ ಮತಿಗೆಟ್ಟೆ |
ಇನಿತಾದರೂ ಸುಖ ಉಂಟೆ ||4||
ಕರುಣಾಳು ಗುರು ಹರಸಯ್ಯ |
ದಯೆ ತೋರಿ ನೀ ಕೃಪೆ ಮಾಡಿ |
ತಡಕೊಳ್ಳಲಾರೆನನುಭವವಾ |
ತಡ ಮಾಡದಿರು ಗುರುದೇವಾ ||5||
ಇಳೆ ತುಂಬ ಬಳಗಿದ್ದರೇನೋ |
ಏನೆಲ್ಲಾ ಎನಗಿದ್ದರೇನೋ |
ಗುರು ಕನ್ನೇಶ ನೀನೊಬ್ಬನಿರದೇ |
ನಿಸ್ಸಾರವೀಜಗವೆಮಗೆ ||6||

ಎಚ್ಚರಾಗೋ ತಮ್ಮ ಎಚ್ಚರಾಗೋ
ಎಚ್ಚರಾಗೋ ತಮ್ಮ ಎಚ್ಚರಾಗೋ |
ಮರೆತು ನೀನು ಮಲಗಬೇಡ ಎಚ್ಚರಾಗೋ ||ಪ||
ಭವದ ಕನಸ ಕಾಣಬೇಡ ಎಚ್ಚರಾಗೋ |
ಮೋಹ ಪಾಶದ್ಹೊದಿಕೆ ತೆಗೆದು ಎಚ್ಚರಾಗೋ |
ಮತ್ತೆ ಸಿಗದು ಮನುಜ ಜನ್ಮ ಎಚ್ಚರಾಗೋ |
ವ್ಯರ್ಥವಾಗಿ ಹೋಗಬೇಡ ಎಚ್ಚರಾಗೋ ||1||
ಶಿವನಾಮವೆಂಬ ಗಂಟೆ ಹೊಡೆಯುತಿಹುದು ಎಚ್ಚರಾಗೋ |
ಭಕ್ತಿಯಿಂದ ಶಿವನ ಭಜಿಸಿ ಧನ್ಯನಾಗೋ |
ಸುಡುವ ರಾಗ ದ್ವೇಷದಿಂದ ಮುಕ್ತನಾಗೋ |
ಹೆಣ್ಣು ಹೊನ್ನು ಮಣ್ಣಿನಿಂದ ಎಚ್ಚರಾಗೋ ||2||
ಕಾಮ ಕ್ರೋಧ ಮದಗಳಿಂದ ಎಚ್ಚರಾಗೋ |
ಅಹಂಕಾರದಿಂದ ನೀನು ಎಚ್ಚರಾಗೋ |
ಅರಿವು ನೀಡೋ ಗುರುವು ಬಂದ ಎಚ್ಚರಾಗೋ |
ಕರವ ಮುಗಿದು ಶಿರವ ಬಾಗಿ ಧನ್ಯನಾಗೋ ||3||
ನರಳಿ ನರಳಿ ಸಾಯಬೇಡ ಎಚ್ಚರಾಗೋ |
ಮತ್ತೆ ಮತ್ತೆ ಹುಟ್ಟಬೇಡ ಎಚ್ಚರಾಗೋ |
ಹೇಳೀ ಕೇಳಿ ಬರದು ಸಾವು ಎಚ್ಚರಾಗೋ |
ಸಗುಣ ರೂಪ ಗುರುವು ಬಂದ ಎಚ್ಚರಾಗೋ ||4||
ಹೊಡೆಯುತಿಹುದು ಜಾಗಟೆ ಎಚ್ಚರಾಗೋ |
ಮೊಳಗುತಿಹುದು ಶಂಖನಾದ ಎಚ್ಚರಾಗೋ |
ನಾನು ಎಂಬ ಗರ್ವದಿಂದ ಎಚ್ಚರಾಗೋ |
ಅಂದು ಇಂದು ಎನ್ನಬೇಡ ಎಚ್ಚರಾಗೋ ||5||
ದುರಾಸೆ ದುವ್ರ್ಯಸನದಿಂದ ಎಚ್ಚರಾಗೋ |
ಮೋಸ ಕಪಟ ದ್ರೋಹದಿಂದ ಎಚ್ಚರಾಗೋ |
ದಾರಿ ತೋರೋ ಗುರುವು ಬಂದ ಎಚ್ಚರಾಗೋ |
ಕನ್ನೇಶನಿರುವನಿಲ್ಲಿ ಎಚ್ಚರಾಗೋ ||6||

ಎಂಥಾ ಮಹಿಮ ನೋಡಮ್ಮಾ
ಎಂಥಾ ಮಹಿಮ ನೋಡಮ್ಮ |
ನಮ್ಮಯ ಗುರು | ಮನ ಸೂರೆಗೊಂಡನಮ್ಮಯ್ಯ ||ಪ||
ಎಲ್ಲರಂಥವನಲ್ಲಾ | ಬಲ್ಲಿದನು ಅವನೆಲ್ಲಾ!
ಕಂಗಳಿಂದಲೆ ಎನ್ನ | ಭ್ರಾಂತಿ ಬಿಡಿಸಿದನಲ್ಲಾ |
ಪ್ರೇಮ ಪೂರಿತನವಗೆ | ಸರಿಸಾಟಿ ಇಲ್ಲಾ ||1||
ಪೂರಕವ ಮಾಡೆಂದನೇ | ನಮ್ಮಯ ಗುರು ರೇಚಿಸಿ ಬಿಡು ಎಂದನೇ |
ಕುಂಬಿಸಿ ತಡೆಯೆಂದಾ | ತನ್ಮಯಳಾಗೆಂದಾ |
ಹಂಸೋಹಂ ಎನ್ನುತ್ತ | ಭವಧ್ವಂಸ ಮಾಡೆಂದಾ | ||2||
ನಲ್ಲೇ ನೀ ಬಾ ಎಂದನೆ | ಮೆಲ್ಲಾನೆ ಉಸುರಿದನೇ |
ನಯನಗಳ ಮುಚ್ಚಿಸಿದ | ನಡುಗಣ್ಣಾ ಬಿಡಿಸಿದಾ |
ಸಚರೇರು ಸ್ತಂಭದಿಂದಂಬರಕೇರಿಸಿದಾ ||3||
ಝೇಂಕಾರ ಮಾಡಿದನೆ | ನಮ್ಮಯ ಗುರು ಓಂಕಾರ ಕೇಳೆಂದಾನೆ |
ದಶನಾದಗಳ ವಿಧ | ಸ್ವರಗಳನು ನುಡಿಸಿದನೆ |
ಆನಂದದ್ಹೊಳೆಯಲ್ಲಿ ತೇಲಾಡು ನೀ ಎಂದ ||4||
ಅಂಗನೇ ಬಾ ಎಂದನೇ | ತಿಂಗಳ ಹುಣ್ಣಿಮೆಯ ನೋಡೆಂದನೆ |
ಶತಕೋಟಿ ರವಿತೇಜ | ಭೃಕುಟಿಯೊಳು ನೋಡೆಂದ |
ವರ್ಣಿಸಲಸದಳದ | ರಮಣೀಯವ ನೋಡೆಂದ ||5||
ಕಾಂತೆ ನೀ ಬಾ ಎಂದನೇ | ನಮ್ಮಯ ಗುರು ಸೋಜಿಗವ ನೋಡೆಂದನೆ |
ಭ್ರಾಂತಿ ಇನ್ನಿಲ್ಲೆಂದ | ಪ್ರಾಣಕಾಂತನ ಕೂಡೆಂದ |
ಬಣ್ಣಿಸಲಸದಳದ | ಬೆಳ್ಚೆಟ್ಟಿ ನೋಡೆಂದ ||6||
ಜಪತಪಗಳೇಕೆಂದನೇ | ಗುರುವರಗೆ ಶರಣಾಗು ಬೇಗೆಂದನೇ |
ತಡಮಾಡಬೇಡೆಂದ | ಸೆರಗೊಡ್ಡಿಬೇಡೆಂದ |
ಕನ್ನೇಶ ಗುರುವರನ | ಕೃಪೆ ಒಂದೆ ಸಾಕೆಂದ ||7||

ಎಂಥಾದ್ಹೋ ಘನವೆಂಥಾದ್ದೋ
ಎಂಥಾದ್ದೋ ಘನವೆಂಥಾದ್ದೋ |
ಬಹು ಸೋಜಿಗವಾಗಿರುವಂಥಾದ್ದೋ |
ಎಲ್ಲೆಲ್ಲೂ ತುಂಬಿರುವಂಥಾದ್ದೋ |
ಅದು ಇದ್ದರು ಕಾಣದಂಥಾದ್ದೋ ||ಪ||
ಸಾಕ್ಷಿಯು ಆಗಿರುವಂಥಾದ್ದೋ |
ಸರ್ವ ವ್ಯಾಪಕವಾಗಿರುವಂಥಾದ್ದೋ |
ಬಲ್ಲೀದರಿಗೆ ಬೆಲ್ಲವಾಗಿಹುದೋ |
ನಾನು ಎನುವರಿಗಿಲ್ಲವಾಗಿಹುದೋ ||1||
ಸದ್ಭಕ್ತರಿಗೆ ಸಾಕ್ಷಿಯಾಗಿಹುದೋ |
ದುರ್ಮಾಗರಿಗೆ ಮರೆಯಾಗಿಹುದೋ |
ಶರಣರಿಗೆ ನಿಜವಾಗಿಹುದೋ |
ದುರುಳರಿಗೆ ದೂರವಾಗಿಹುದೋ ||2||
ನಿಜಸಾಧಕರಿಗಿದು ಸತ್ಯ ಕಣೋ |
ಒಣಬಡಿವಾರಕ ಶಖ್ಯ ಕಣೋ |
ಅನುಭವಿಗಳಿಗದು ವೇದ್ಯ ಕಣೋ |
ಅಜ್ಞಾನಿಗಳಿಗಸಾಧ್ಯ ಕಣೋ ||3||
ಎಲ್ಲಾದರೊಳಗದು ತುಂಬಿಹುದೋ |
ನಿರ್ಲೇಪ ನಿಸ್ಸಂಗವಾಗಿಹುದೋ |
ಏನೊಂದಿಲ್ಲಾದೆ ತಾನಿಹುದೋ |
ಆದರೂ ಅದೆಯೆಲ್ಲಾ ಮಾಡುವುದೋ ||4||
ಕಣ್ಗಳಿಲ್ಲದೆ ಎಲ್ಲಾ ನೋಡುವುದೋ |
ಕೈಕಾಲಿಲ್ಲದೆ ನಡೆದಾಡುವುದೋ |
ಭಕ್ತರ ತನ್ನತ್ತ ಸೆಳೆಯುವುದೋ |
ಗುರುವು ಕನ್ನೇಶ್ವರನಾಗಿಹುದೋ ||5||

ಓದಿ ಓದಿ ನಿಜದೋಣಿಯನರಿಯದೆ
ಓದಿ ಓದಿ ನಿಜ ದೋಣಿಯನರಿಯದೆ |
ವ್ಯರ್ಥ ಜನುಮವಾ ನೀಗಿದರು |
ಹಾಡಿ ಹಾಡಿ ಅದರರ್ಥವ ತಿಳಿಯದೆ |
ಹುಟ್ಟಿ ಹುಟ್ಟಿ ಮತ್ತೆ ಸಾಯುವರು ||ಪ||
ಶ್ರದ್ಧಾ ಭಕ್ತಿಗಳಿಲ್ಲದ ಮನುಜರು |
ಸಂಸಾರದ ಅಲೆಗೀಡಾಗುವರು |
ರಾಗದ್ವೇಷದ ಹೊಂಡದಿ ಮುಳುಗಿ |
ದೂರವಾದರು ಪರಮಾತ್ಮನಿಗೆ ||1||
ತನ್ನ ಉದ್ಧಾರದ ಹಾದಿಯನರಿಯದೆ |
ಪರರಿಗೆ ಬೋಧವ ಮಾಡುವರೋ |
ಅಹಂಕಾರದೆಡೆ ಓಂಕಾರ ಸುಳಿಯದು |
ಎಂಬುವ ಸತ್ಯವ ಮರೆತಿಹರು ||2||
ಹೃದಯವರಳದೆ ಕರುಣೆ ಅಂಕುರಿಸದೆ |
ದಯಾಮಯನ ಕೃಪೆಯಾಗುವುದೆ |
ಸಹನೆ ಶಾಂತಿ ಪ್ರೀತಿಗಳಿಲ್ಲದಾ |
ವೇಷಧಾರಿಗೆ ಗುರು ಒಲಿಯುವನೆ ||3||
ವೇದ ಶಾಸ್ತ್ರ ಪುರಾಣಗಳೋದಿದ |
ಬುದ್ಧಿವಂತರೆದ್ದು ಓಡಾಡುವರೋ |
ಬ್ರಹ್ಮಾನಂದದೊಳಿರುವ ಮಹಿಮರು |
ಸದ್ದು ಇಲ್ಲದೆ ಬಿದ್ದು ಕೊಂಡಿಹರು ||4||
ಹರಗುರು ಶಿವನೊಳು ದೃಢಮನವಿರಿಸದೆ |
ಒಣ ಬಡಿವಾರವ ಮಾಡುವರು |
ಸತ್ಯವಾಗಿಯೂ ಸತ್ಯವ ನುಡಿದರೆ |
ಗುರು ಕನ್ನೇಶನ ದೂರುವರು ||5||

ಕರುಣಿಸೋ ಗುರುದೇವಾ
ಕರುಣಿಸೋ ಗುರುದೇವಾ | ಕೃಪೆ ತೋರೋ ಗುರುದೇವಾ |
ಈ ಭವ ಸಾಗರದಿಂದ ಎನ್ನನು | ದಾಟಿಸು ಬಾರೋ ಗುರುದೇವಾ ||ಪ||
ಜಗವಿದು ಬಲು ಸೊಗಸೋ | ತಿಳಿದರೆ ಬದುಕಿದು ಬರಿ ಕನಸೋ |
ಮೋಹ ಭ್ರಾಂತಿಯ ಪಾಶವ ಬಿಡಿಸಿ | ಪಾವನ ನೀಗೊಳಿಸೋ |
ಮಾಯೆಗೆ ಸಿಲುಕಿದೆನೋ | ಶಿವ ನಿನ್ನರಿಯದೆ ದುಡುಕಿದೆನೋ |
ತಿಳಿದೋ ತಿಳಿಯದೆ ಮಾಡಿದ ಪಾಪಕೆ | ಕ್ಷಮೆಯೇ ಇಲ್ಲೇನೋ ||1||
ದೇಹವ ಸೃಷ್ಟಿಸಿದೆ | ಜೀವಿಯನದರೊಳು ಸಿಲುಕಿಸಿದೇ |
ಮಾಯಾ ಮೋಹದ ಪಾಶವ ಬಿಗಿದು | ಮಾನವನಾಗಿಸಿದೇ |
ಯಾರಿಗೆ ಯಾರಿಲ್ಲಾ | ಆದರೂ ಅಪ್ಪಿಕೊಂಡಿಹೆನಲ್ಲಾ |
ಸಾವಿಗೆ ಮುನ್ನವೆ ಧಾವಿಸಿ ಬಾರೋ | ಒಪ್ಪಿಕೊಳ್ಳುವೆನಲ್ಲಾ ||2||
ಆರು ವರ್ಗಗಳು | ಶಿವ ಶಿವ ಎನ್ನದೆ ತಡೆದಿಹವು |
ಮೂರು ಗುಣಗಳು ನಿನ್ನನು ಸೇರಲು | ಅಡ್ಡಿಪಡಿಸಿಹವು |
ಚಂಚಲವಡಗಿಸೋ | ಗುರುವೆ ಮನವ್ಹರಿದಾಡದೆ ನಿಲ್ಲಿಸೋ |
ಪೂಜಿಸಿ ಪಾದವ ಬೇಡುತಲಿರುವೆ | ಏಕಾಗ್ರತೆಗೊಳಿಸೊ ||3||
ಸುಖವಿಹುದೆನಗೆಂದೆ | ಶಿವ ಶಿವ ಭವದೊಳು ಬಲು ನೊಂದೆ |
ಬಂಧು ಬಾಂಧವ ಸಾಕೀ ಜನುಮವು | ಶರಣಾಗುವೆ ತಂದೆ ||
ಜನನ ಮರಣ ಬೇಡೋ | ಗುರುವೆ ದರುಶನವನು ನೀಡೋ |
ಗುರು ಕನ್ನೇಶ್ವರ ಎನ್ನುತಲಿರುವೆನು | ಅಭಯ ಹಸ್ತವ ನೀಡೋ ||4||

ತುಂಬಿ ತುಳುಕಾಡುತೈತಮ್ಮ
ತುಂಬಿ ತುಳುಕಾಡುತೈತಮ್ಮಾ | ಆ ಪರಂಜ್ಯೋತಿ | ಹರಡಿಕೊಂಡಾಡುತೈತಮ್ಮಾ |
ಆನಂದ ಜ್ಯೋತಿ | ತಾನೊಂದೆ ಬೆಳಗುತೈತಮ್ಮಾ ||ಪ||
ಸ್ಥೂಲವದಲ್ಲಮ್ಮಾ | ಸೂಕ್ಷ್ಮಕ್ಕೂ ಮಿಗಿಲಮ್ಮಾ |
ಸರ್ವ ವ್ಯಾಪಕ ಸ್ವಪ್ರಭೆಯದಮ್ಮಾ |
ಭೂಮಂಡಲವ ಸುತ್ತಿ | ಅಷ್ಟದಿಕ್ಕುಗಳಾಚೆ |
ಸಪ್ತಸಾಗರಕದು ಸಾಕ್ಷಿ ನೋಡಮ್ಮಾ ||1||
ಸೂರ್ಯ ಚಂದ್ರರ ಬೆಳಗಿ | ಧರೆಗಗನವೇಕಾಗಿ |
ಮಿನುಗು ನಕ್ಷತ್ರಗಳ ಹೊಳಪು ನೋಡಮ್ಮಾ |
ಸಪ್ತಲೋಕಂಗಳ | ಪಂಚ ಭೂತಂಗಳ |
ಬೆಳಗುತ್ತಿರುವ ಚಿತ್ಕಳೆ ನೋಡಮ್ಮಾ ||2||
ಕೈಲಾಸದತ್ತತ್ತಾ | ವೈಕುಂಠ ಬೆಳಗುತ್ತಾ |
ಚಂದ್ರಶೇಖರ ಪುರದ ಸೊಗಸ ನೋಡಮ್ಮಾ |
ನೇತ್ರ ಪಾವನ ಮನ | ಒಂದೇ ಮುಖವ ಮಾಡಿ |
ಜ್ಯೋತಿ ಬೀದಿಯ ಸಾಲುದೀಪ ನೋಡಮ್ಮ ||3||
ಆರು ಚಕ್ರವ ಮೀರಿದಾಲಯದೊಳುಗೂಡಿ |
ನೀಲಾದುಪ್ಪರಿಗೆಗಳ ಮಧ್ಯ ನಿಂತು ನೋಡಮ್ಮಾ |
ಲೋಕವ ಬಯಲು ನುಂಗಿ | ಬಯಲ ನಿರ್ಬಯಲು ನುಂಗಿ |
ಪರಮಾನಂದದ ಸ್ವಯಂಜ್ಯೋತಿ ನೋಡಮ್ಮಾ ||4||
ಸಂತೆ ಬೆನ್ನೂರು ದಾಟಿ | ದೇವರ ಗುಡ್ಡ ಹತ್ತಿ |
ಬೆಳಗುತ್ತಿರುವ ಬೆಳ್ಚೆಟ್ಟಿ ನೋಡಮ್ಮಾ |
ಗುರುವೆ ಕನ್ನೇಶ್ವರ | ಸ್ವಾಮಿ ಪ್ರಭಾಕರ |
ಭೇದವಿಲ್ಲದ ಘನ ಬೆಳಕ ನೋಡಮ್ಮಾ ||5||

ನಿಧಿಯು ಸಿಕ್ಕಿದೆ ಎನಗೆ
ನಿಧಿಯು ಸಿಕ್ಕಿದೆ ಎನಗೆ | ಘನವಾದ ಭಂಡಾರ ಸಿಕ್ಕಿದೆ |
ಲೋಕದೊಳಗೆ ಅಪರೂಪವಾದ | ಸಂಪತ್ತು ಸಿಕ್ಕಿದೆ ||ಪ||
ತುಂಬಿದವೇಳು ಕೊಪ್ಪರಿಗೆಗಳು |
ನಿಧಿ ಕಾಯುತ್ತಿತ್ತು ಸರ್ಪ ಹಗಲು ಇರುಳು |
ಮಲಗಿದ ಸರ್ಪವ ಬಡಿದೆಬ್ಬಿಸಿ |
ವಿಘ್ನೇಶ್ವರನ ದರುಶನ ಪಡೆದೆ ||1||
ಗುರುಮಂತ್ರವೆಂಬ ಗುದ್ದಲಿ ಹಿಡಿದೆ |
ದೃಢಭಕ್ತಿಯೆಂಬ ಹಾರೇಲಿ ಮೀಟಿದೆ |
ಬ್ರಹ್ಮ ವಿಷ್ಣು ರುದ್ರ ಸದಾಶಿವರನು ಪೂಜಿಸಿ |
ವಶಮಾಡಿಕೊಂಡೆ ಕೊಪ್ಪರಿಗೆಗಳ ||2||
ಇಪ್ಪತ್ತೊಂದು ಸಾವಿರದ ಆರುನೂರು |
ಘನಮಂತ್ರಗಳು |
ಅನುದಿನ ಅರ್ಪಿಸಿ ಆ ಪರಶಿವನಿಗೆ |
ಘನ ಸಂಪತ್ತಿನ ಒಡೆಯ ನಾನಾದೆ ||3||
ಹೊನ್ನು ಮುತ್ತು ಚಿನ್ನ ಮಾಣಿಕ್ಯವಲ್ಲಾ |
ಕಾಮಧೇನು ಕಲ್ಪವೃಕ್ಷವಲ್ಲಾ |
ರತ್ನ ವಜ್ರ ವೈಢೂರ್ಯವಲ್ಲಾ |
ಚಿಂತೆಯ ಕಳೆಯುವ ಚಿಂತಾಮಣಿಗೂ ಮಿಗಿಲಾದ ||4||
ಭವಿಗಳ ಕಣ್ಣಿಗೆ ಕಾಣದ ನಿಧಿಯು |
ಮುಟ್ಟಲಾರದಂತ ಘನತರ ನಿಧಿಯು |
ಧನಿಕರ್ಯಾರು ಬೆಲೆ ಕಟ್ಟಲಾರದ ನಿಧಿಯು |
ನಿಂದಕ ವಂಚಕ ನೀಚಕರಿಗೆ ಅದು ಎದುರಿಗೆ ಇದ್ದರೂ ಸಾರ್ಥಕವಾಗದ ||5||
ಕರೆದರೆ ಬಾರದು ಅಗೆದರೂ ಸಿಕ್ಕದು |
ಗದರಿದರ್ಹೆದರದು ನರಕುನ್ನಿಗೆ ಒಲಿಯದು |
ಮಬ್ಬು ಮಾನವರು ನಿಟ್ಟುಸಿರಿಟ್ಟು ನೀರು ಕುಡಿದರೂ |
ದಕ್ಕದೆ ಬೆಳಗುವ ಜ್ಞಾನದ ನಿಧಿಯು ||6||
ರಾಜಯೋಗಿಗಳಿಗದು ರಾರಾಜಿಸುವುದು |
ಘನಾನುಭವಿಗಳ ಬಳಿಯಲ್ಲಿರುವುದು |
ಚಿನ್ಮಯ ಚಿದ್ಘ್‍ನ ಚಿದ್ರೂಪನಾಗಿ |
ಗುರು ಕನ್ನೇಶನೇ ತಾನಾಗಿರುವ ||7||

ನೂರಾರು ದೇವತೆಗಳ ಅರ್ಚನೆಯು ಸಾಕು
ನೂರಾರು ದೇವತೆಗಳ ಅರ್ಚನೆಯು ಸಾಕು |
ಪರಾತ್ಪರ ಗುರು ಒಬ್ಬ ನಮಗಿಂದು ಬೇಕು ||ಪ||
ಸ್ಥೂಲಲೋಕದ ಆಟಪಾಟಗಳು ಸಾಕು |
ಮೂಲಲೋಕಕೆ ಪಯಣ ಬೆಳೆಸಲೇ ಬೇಕು ||1||
ಪತಿತಗೊಳಿಸುವ ಕರ್ಮ ಬಂಧನವು ಸಾಕು |
ಸತತ ಆತ್ಮಜ್ಞಾನನಿರುತವಿರಬೇಕು ||2||
ಅಜ್ಞಾನ ತಿಮಿರದಲಿ ತೊಳಲುವುದು ಸಾಕು |
ಸುಜ್ಞಾನ ರವಿಕಿರಣ ನಮಗಿಂದು ಬೇಕು ||3||
ದೇಹಾಭಿಮಾನದ ಅಟ್ಟಹಾಸವು ಸಾಕು |
ದೇಹೀಯ ಅಭಿಮಾನ ಮೈಗೂಡಬೇಕು ||4||
ವಂಚಿಸುವ ಮಾಯೆಯ ಆಟವಿದು ಸಾಕು |
ಸ್ವಸ್ವರೂಪದ ಚಿಂತನೆಯು ಸತತವಿರಬೇಕು ||5||
ಭೋಗಲಾಲಸೆವಿಭವ ನಮಗಿನ್ನು ಸಾಕು |
ಯೋಗಧಾರಣೆ ಜ್ಞಾನ ಸೇವೆಗಳು ಬೇಕು ||6||
ಶಂಭುವನು ಮರೆತ ಆಡಂಬರವು ಸಾಕು |
ಸಂಭ್ರಮದ ಅತಿಸರಳ ಜೀವನವು ಬೇಕು ||7||
ಜನನ ಮರಣಗಳ ಜಾಡ್ಯವಿದು ಸಾಕು |
ಚಿದ್ರೂಪ ಚಿನ್ಮಯನೊಳೊಂದಾಗಬೇಕು ||8|
ಪರಿಪರಿಯಾ ನೋವುಗಳ ಬೇಗೆಯಿದು ಸಾಕು |
ನಿರ್ಗುಣದ ನಿಜ ತತ್ವ ನಾವಾಗಬೇಕು ||9||
ಸಂಸಾರದಳ್ಳುರಿಯ ತಾಪವಿದು ಸಾಕು |
ಸದ್ಗುರುವೆ ಶ್ರೀ ಚರಣಧೂಳಾಗಬೇಕು ||10||
ಸ್ಥಿರ ಮುಕ್ತಿ ಸಂಪದವು ನಮಗೊಂದೆ ಬೇಕು |
ಕನ್ನೇಶ ಗುರುವರನ ನಿಜಪದ ಸೇರಬೇಕು ||11||

ಭಕ್ತವತ್ಸಲಾ ಬಾರಾ
ಭಕ್ತವತ್ಸಲಾ ಬಾರಾ | ಬಂದು ನೀ ದಯ ತೋರಾ |
ಇರಲಾರೆನೋ ದೂರ | ಸಹಿಸೆ ಸಂಸಾರದ ಭಾರಾ ||ಪ||
ಅದು ಬೇಕು ಇದು ಬೇಕು | ಎಂಬ ಬಯಕೆಗಳು |
ಸತಿಗೆ ಮಿತಿ ಇರದ | ಅತಿಯಾದ ಆಸೆಗಳು |
ಸುತರಿಗೇನಾಗುವುದೆಂಬ | ಚಿಂತೆ ಹಗಲಿರುಳು ||1||
ದ್ವೇಷ ಅಸೂಯೆಗಳು | ಬಿಡದೆ ದಿನ ಕಾಡಿದವು |
ಸುಖಿಗಳನು ಕಂಡೊಡನೆ | ಉರಿಯುವುದು ಎನ್ನೊಡಲು |
ಇನ್ನೊಬ್ಬರುನ್ನತಿಯ | ಸಹಿಸದಾಯಿತು ಮನವು ||2||
ಮಿತಿ ಇಲ್ಲದಾಸೆಗಳು | ಮತಿ ಭ್ರಮಣಿಗೊಳಿಸಿದವು |
ಕೋಪ ತಾಪಗಳಂತು | ಹುಚ್ಚೆದ್ದು ಕುಣಿಯುವವು |
ಪಾಪ ಕರ್ಮಗಳೆನ್ನ | ಎಳೆದೊಯ್ಯುತಿಹವು ||3||
ಕ್ಷಣ ನಿನ್ನ ಸ್ಮರಣೆಯನು | ನಾ ಮಾಡಲಿಲ್ಲಾ |
ಒಂದು ದಿನ ನಿನಗಾಗಿ | ಕಂಬನಿಯಗರೆಯಲಿಲ್ಲಾ |
ಮಡದಿ ಮಕ್ಕಳಿಗಾಗಿ | ಚಿಂತಿಸಿದ ಕ್ಷಣವಿಲ್ಲಾ ||4||
ನಿನಗಾಗಿ ಎಂದೆಂದು | ಗೋಗರೆಯದ್ಹೋದೆ |
ಇಹಸುಖದ ಭ್ರಮೆಯಲ್ಲಿ | ದಿನಗಳನು ಕಳೆದೆ
ಮಹಿಮಾತಿಶಯ ನಿನ್ನ | ನಾನರಿಯದಾದೆ ||5||
ಕ್ಷಣಿಕದಾಸೆಗಳಂತೂ | ಕುಣಿದು ಕುಪ್ಪಳಿಸಿದವು |
ಪಾಪ ಕಾರ್ಯಗಳೆ | ಬಹಳ ಹಿತವೆನ್ನಿಸಿದವು |
ಕರುಣಾಳು ಕನ್ನೇಶ | ಕಾಪಾಡೋ ಬಂದು ||6||

ಯಾಕಿಂಗೆ ಗುರುವೆ ನೀನು ಮಾಡುತಿ
ಯಾಕಿಂಗೆ ಗುರುವೆ ನೀನು ಮಾಡುತಿ |
ನಿನ್ನ ಭಜಿಸುತ್ತಿದ್ದರು ಬಿಡದೆ ಮರೆಯಲ್ಲಿದ್ದು ಕಾಡುತಿ ||ಪ||
ಶಿಷ್ಯಾರ ಬಲು ಮುದ್ದು ಮಾಡುತಿ |
ಗಲ್ಲ ಮುಟ್ಟಿ ಚೂರು ಬೆಲ್ಲ ಕೊಡುತಿ |
ತೊಟ್ಲಿಗ್ಹಾಕಿ ಲಾಲಿಪದ ಹಾಡುತಿ |
ಸುಮ್ಮನಿರುವ ಮಗುವ ಚಿವುಟಿ ಗೊತ್ತಾಗ್ದಂಗಿರುತಿ ||1||
ಕೆಳಗಿಂದ ಮೇಲಕ್ಕೆ ಹತ್ತಿಸ್ತಿ |
ಕೇಳದಿದ್ರು ಎಲ್ಲಾ ನೀನು ಕೊಡುತಿ |
ಇದ್ದಾಕ್ಕಿದ್ದಂಗೆ ಮೈಯ ಮರೆಸ್ತಿ |
ತಡವೇ ಇಲ್ದಂಗೆ ಕೆಳಗೆ ಕೆಡವುತಿ ||2||
ಶಾಂತಿಯಿಂದಿರಬೇಕೆನ್ನುತಿ |
ಕೋಪ-ತಾಪ ಬೇಡವೆಂದ್ಹೇಳುತ |
ಸ್ಥಿರವಲ್ಲ ಯಾವುದೆಂದು ಕೂಗುತಿ |
ಬೇಡಿದ್ದೆಲ್ಲಾ ಕೊಡುವೆನೆಂದು ಜಗಕೆಲ್ಲಾ ಸಾರುತಿ ||3||
ಏನೇನೋ ಆಗಿ ನೀನು ಕಾಣುತಿ |
ಸುಮ್ಮನಿದ್ರು ಬಿಡದೆ ಆಸೆ ತೋರುತಿ |
ನನ್ನಾದೆಂದ್ರೆ ಕೆನ್ನೆಗೆ ನೀನು ಹೊಡಿತಿ |
ಸುಖವಾಗಿರೋಣ ಎಂದ್ರೆ ಅದೆ ಇಲ್ದಂಗ್‍ಮಾಡುತಿ ||4||
ಹೆಣ್ಣು ಹೊನ್ನು ಮಣ್ಣು ಸೃಷ್ಟಿ ಮಾಡುತಿ |
ಮಡದಿ ಮಕ್ಕಳ್ನೆಲ್ಲಾ ಗಂಟ್ಹಾಕುತಿ |
ನೆಚ್ಚಿಕೊಳ್ಳಬೇಡಿ ಬರಿ ಭ್ರಮೆ ಎನ್ನುತಿ |
ಬಿಟ್ಟು ಇವರ ನಿತ್ಯ ನನ್ನ ಧ್ಯಾನ ಮಾಡಿರೆನ್ನುತಿ ||5||
ನಿನ್ನ ನಂಬದವರ ಕಾಪಾಡುತಿ |
ನಂಬಿದವರ ಬೆನ್ನ ಬಿಡದೆ ಕಾಡುತಿ |
ಸಾಯ್ತೀನಿ ಬಾರೋ ಅಂದ್ರೆ ಸುಮ್ಮನಿರುತಿ |
ಸಾವು ದೇಹಕ್ ನಿನಗಲ್ಲ ಎಂದು ನಗುತಿರುತಿ ||6||
ಕಣ್ಣಾ ಮುಚ್ಚಿ ಧ್ಯಾನ ಮಾಡಿರೆನ್ನುತಿ |
ಮನವು ಕ್ಷಣ ನಿಲ್ಲದಂಗೆ ಮಾಡುತಿ |
ದೃಷ್ಟಿ ನನ್ನ ಕಡೆಗಿರಲೆನ್ನುತಿ |
ಇಲ್ದಿದ್ವಿಚಾರನೆಲ್ಲ ತಲೆಯೊಳಗೆ ತುಂಬುತಿ ||7||
ಭಕ್ತಾವತ್ಸಲನೆಂದ್ಹೇಳುತಿ |
ಕಾಪಾಡೊ ಬಾರೋ ಮತ್ತೆ ಕರುಣಿಸಿ |
ಗುರುವೆ ಕನ್ನೇಶನೆಂದು ಸ್ತುತಿಸಿ |
ಶರಣು ಮಾಡುವೆವಯ್ಯ ತಲೆ ತಗ್ಗಿಸಿ ||8||

ಶರಣು ಬಂದೆನೋ ಗುರುವೆ
ಶರಣು ಬಂದೆನೋ ಗುರುವೆ | ಶಿರವ ಬಾಗಿದೆನೋ |
ಬೇಡಿಕೊಳ್ಳುವೆನೋ | ತಪ್ಪನೊಪ್ಪಿಕೊಳ್ಳುವೆನೋ ||ಪ||
ಅರೆಕ್ಷಣ ಮನಸನು ತಡೆಯದಾದೆ |
ಸಾಧನೆಯಂತೂ ಮಾಡದೆ ಹೋದೆ |
ಇಹ ಸಂಸಾರದ ಕೈ ಬಿಡದ್ಹೋದೆ |
ದುರಹಂಕಾರದಿ ದುರುಳ ನಾನಾದೆ ||1||
ಜ್ಞಾನಿಯಂತೆ ನಾ ಮಾತುಗಳಾಡಿದೆ |
ಭಕ್ತನಂತೆ ನಾ ಭಜನೆಯ ಮಾಡಿದೆ |
ಯೋಗಿಯಂತೆ ಕಣ್‍ಗುಡ್ಡೆ ತಿರುಗಿಸಿದೆ |
ತ್ಯಾಗಿಯಂತೆ ಬರಿ ಬುರುಡೆಯ ಹೊಡೆದೆ ||2||
ಸಾಧನೆ ಮಾಡದೆ ಕಾವಿಯ ತೊಟ್ಟೆ |
ಅನುಭವವಿಲ್ಲದೆ ಗಡ್ಡವ ಬಿಟ್ಟೆ |
ಶಾಸ್ತ್ರವನೋದಿ ನಾ ಮತಿಗೆಟ್ಟೆ |
ಸತ್ಪುರುಷರೊಳು ಸಂಶಯ ಪಟ್ಟೆ ||3||
ಒಳಗಡೆ ನಾ ಬದಲಾಗದೆ ಹೋದೆ |
ಹೊರಗಡೆ ವೇಷವ ಬದಲಾಯಿಸಿದೆ |
ನಿಶ್ಚಲ ನಿರ್ಮಲ ಧಾರಾಳವಿಲ್ಲದೆ |
ಶರಣನಂತೆ ಬಹು ನಾಟಕವಾಡಿದೆ ||4||
ಹೀನ ಗುಣಂಗಳ ಕೈ ಬಿಡದ್ಹೋದೆ |
ದುಷ್ಟರೊಳಗೆ ಬಲು ಭ್ರಷ್ಟನಾನಾದೆ |
ಸದ್‍ಭಕ್ತರೊಳಗೆ ಬೆರೆಯದೆ ಹೋದೆ |
ಕುಟಿಲ ಕುತಂತ್ರವ ಕೈ ಬಿಡದಾದೆ ||5||
ಮಾಡಿದ ತಪ್ಪನು ಕ್ಷಮಿಸೋ ತಂದೆ |
ಕೈ ಹಿಡಿದೆನ್ನನು ನಡೆಸೋ ಮುಂದೆ |
ಶಿವ ನಿನ್ನರಿಯದೆ ಭವದೊಳು ನೊಂದೆ |
ಗುರು ಕನ್ನೇಶ್ವರ ಕರುಣಿಸೋ ಇಂದೆ ||6||

ಶಿವ ಬಂದಾನಮ್ಮ ತಂಗಿ
ಶಿವ ಬಂದಾನಮ್ಮ ತಂಗಿ ಗುರು ಬಂದಾನೇ |
ಗುಟ್ಟಾಗಿ ಮಾತೊಂದನುಸುರಿದನೇ ||ಪ||
ಚಲನವಲನಗಳೆಲ್ಲಾ ಬಿಡು ಎಂದಾನೇ |
ಚಲಿಸುವ ಮನ ಸ್ಥಿರಗೊಳಿಸೆಂದಾನೇ |
ಅರಿವರ್ಗಗಳ ಸದೆ ಬಡಿ ಎಂದಾನೇ |
ತ್ರಿಕರಣಗಳ ಶುದ್ಧಿಗೊಳಿಸೆಂದಾನೇ ||1||
ಗಟ್ಯಾಗಿ ಗುರುಪಾದ ಹಿಡಿ ಎಂದಾನೇ |
ಗುಟ್ಟಾಗಿ ಗುರಿ ಸಾಧಿಸಬೇಕೆಂದಾನೇ |
ಮನನ ನಿಧಿಧ್ಯಾಸವಿರಲೆಂದಾನೇ |
ಗುರುವಾಕ್ಯವಿದು ಮರಿಬೇಡೆಂದಾನೇ ||2||
ಭಾನು ಸೋಮರ ಹಾದಿ ಹಿಡಿ ಎಂದಾನೇ |
ಮನ ಸೋಹಂ ಎನ್ನುತಲಿರಲೆಂದಾನೇ |
ಎರಡೇ ಅಕ್ಷರ ಸಾಕು ನಿನಗೆಂದಾನೇ |
ಕೋಟೆ ಬಾಗಿಲು ಏಳು ಹಾಕೆಂದಾನೇ ||3||
ಗಂಗಾಯಮುನೆಯ ತಡೆದು ಬಿಡು ಎಂದಾನೇ |
ತ್ರಿಪುಟಿಯೊಳಗೆ ದೃಷ್ಟಿ ಇಡು ಎಂದಾನೇ |
ಮೇರು ದಂಡವನೇರಿ ಬಾ ಎಂದಾನೇ |
ಆರು ಮೆಟ್ಟಿಲ ಹತ್ತಿ ನೋಡೆಂದಾನೇ ||4||
ಶತಕೋಟಿ ರವಿತೇಜ ನೋಡೆಂದಾನೇ |
ಪೂರ್ಣ ಸೋಮನ ಸ್ವಾದ ಸವಿಯೆಂದಾನೇ |
ದಶ ವಿಧ ನಾದಗಳ ಬಿಡದೆ ಕೇಳೆಂದಾನೇ |
ಬ್ರಹ್ಮಾನಂದವನುಣಿಸಿ ಸುಮ್ಮಾನಿರಿಸಿದನೇ ||5||
ಯತಿಗಳಿಗಿದು ಅತಿಶಯವೆಂದಾನೇ |
ಮತಿಗೇಡಿಗಳಿಗಸದಳವೆಂದಾನೇ |
ಘನ ಅನುಭವ ಸಾರವಿದು ಎಂದಾನೇ |
ನಮ್ಮ ಘನ ಗುರು ಕನ್ನೇಶನರುಹಿದನೇ ||6||

ಸುಮ್ಮನಿರುವಿರಾ ನೀವು ಮೌನಾಗಿರುವಿರಾ
ಸುಮ್ಮನಿರುವಿರಾ | ನೀವು ಮೌನಾಗಿರುವಿರಾ |
ನಿತ್ಯ ಶಿವನ ಧ್ಯಾನವ ಮಾಡಿ | ಮುಕ್ತರಾದಿರಾ ||ಪ||
ಕಂಡೆ ಎಂದಿರಾ | ಕಾಣಲಿಲ್ಲವೆಂದಿರಾ |
ತಿಳಿದೆನೆಂದಿರಾ | ತಿಳಿದು ಸುಮ್ಮನಿದ್ದೀರಾ |
ಒಂದೇ ಎಂದಿರಾ | ಎರಡಿಲ್ಲಾವೆಂದಿರಾ |
ಶರಣು ಬಂದಿರಾ | ಗುರು ಸೇವೆ ಮಾಡಿದಿರಾ ||1||
ಅದು ಎಂದಿರಾ | ನೀವು ಇದು ಎಂದಿರಾ |
ಅಂದು ಎಂದಿರಾ | ಜೋಕೆ ಅಂಗೆ ಹೋದೀರಾ |
ಶ್ರವಣ ಮಾಡಿದಿರಾ | ಶಿವನ ಮನಸ ಮಾಡಿದಿರಾ |
ಭಜನೆ ಮಾಡಿದಿರಾ | ನಿಧಿ ಧ್ಯಾಸ ಮಾಡಿದಿರಾ ||2||
ಸೋಹಂ ಎಂದಿರಾ | ಹಂಸೋಹಂ ಎಂದಿರಾ |
ಧ್ವಂಸ ಮಾಡಿದಿರಾ | ಭವವ ನಾಶ ಮಾಡಿದಿರಾ |
ಬಾಯಿ ಮುಚ್ಚಿದಿರಾ | ಕಿವಿಯೊಳು ನಾದ ಕೇಳಿದಿರಾ |
ಕಣ್ಣು ಮುಚ್ಚಿದಿರಾ | ಮಧ್ಯೆ ಅಂತರ್‍ಜ್ಯೋತಿ ನೋಡಿದಿರಾ ||3||
ನಾನು ಎಂದಿರಾ | ನನ್ನದಿದು ಎಂದಿರಾ |
ಕೊಟ್ಟೇನೆಂದಿರಾ | ನೀವು ಇಟ್ಟು ಬಿಟ್ಟೇನೆಂದಿರಾ |
ರೋಷ ಬಿಟ್ಟೀರಾ | ನೀವು ದ್ವೇಷ ಬಿಟ್ಟೀರಾ |
ಆಸೆ ಬಿಟ್ಟೀರಾ | ಮೋಹ ನಾಶ ಮಾಡಿದಿರಾ ||4||
ಪವನ ತಡೆದೀರಾ | ನೇತ್ರ ಮನ ಒಂದೆ ಮಾಡಿದಿರಾ |
ದೃಷ್ಟಿನಿಟ್ಟೀರಾ | ಅಲ್ಲೆ ನಿಂತು ನೋಡಿದಿರಾ |
ಸತ್ಯವೆಂದಿರಾ | ಶಿವನ ನಿತ್ಯವೆಂದಿರಾ |
ಕೂಗಿ ಕರೆದಿರಾ | ಬಾರೋ ಕನ್ನೇಶನೆಂದಿರಾ ||5||

ಊರ ಒಳಗಣ ಹೊಲೆಯ
ಊರ ಒಳಗಣ ಹೊಲೆಯ ನಾರೆಂದೊಡಾಂ ಪೇಳ್ವೆ
ಭೂರಿಯೊಳಗಿರ್ಪ ಜನರೊಲಿದು ಕೇಳಿ ||ಪ||
ಶಿವನಿಲ್ಲ ಸರ್ವರೊಳಗೆಂಬುವ ಧರ್ಮನು ಹೊಲೆಯ
ಶಿವನೆ ಶಾಸನನೆಂದು ತಿಳಿಸದವ ಹೊಲೆಯ
ಶಿವಶರಣರೊಚನಕ್ಕು ಸರೆಯ ಸೇರಿಪನೊಲೆಯ
ಶಿವಮತದೊಳುದಿಸಿ ಶಿವನರಿಯದವ ಹೊಲೆಯ ||1||
ತನ್ನಮತ ಜರಿದು ಪರರನ್ನ ಪೊಗಳುವವ ಹೊಲೆಯ
ತನ್ನತಾ ಕೊಂಡಾಡುತಿಹನೊಬ್ಬ ಹೊಲೆಯ
ಅನ್ಯಶಾಸ್ತ್ರಕ್ಕೊಲಿದು ಅವಧರಿಪನವ ಹೊಲೆಯ
ಮಾನ್ಯರಿಗೆ ನಿಂದಿಸುವವನವ ಶುದ್ಧ ಹೊಲೆಯ ||2||
ಅಕ್ಕರಾಡಂಬರ ವಿತರ್ಕ ಮಾಡುವನ್ಹೊಲೆಯ
ಚಕ್ಕಮುಲಿಕಲಿ ಛೇಡಿಸುವನೊರ್ವ ಹೊಲೆಯ
ಅಕ್ಕಟಕಟ ಮುರಡಿ ಬೊಕ್ಕಸಿದ್ದನ ಪದವಿ
ಕಕ್ಕುಲತಿಯಿಲ್ಲದವನವ ಪೂರ್ಣ ಹೊಲೆಯ ||3||

ಎಂಥಾ ಕುದುರೆ ನಾನು ಕೊಂಡುಕೊಂಡೆ
ಎಂಥಾ ಕುದುರೆ ನಾನು ಕೊಂಡುಕೊಂಡೆ
ಕಪ್ಪಣ್ಣ ಮಾವು ನೋರೆ ನೀವು ಕೇಳಿ ||ಪ||
ಎಂಥಾ ಕುದುರೆ ಇದು ಎಂಥಾ ಕುದುರೆ ಇದು
ಒಂದು ದಿನಕ ಮೂರು ಸೇರು ಉಳ್ಳಿಯನ್ನು ಮುಕ್ಕುತೈತೆ
ಮೂರು ದಿನಕ ಒಂದು ಪಯ್ಣ ನಡೆಯುತೈತೆ ||1||
ಪರಸೆ ಬುಟ್ಟು ಸಂತೆ ಕಡಿಕ ನಡುವುತೈತೆ
ಕೊಂಡ ಕಾಸು ಸಾಲವಾಗಿ ಉಳಿಯುತೈತೆ
ಮೊಂಡಿ ಬಿದ್ದು ಬಡ್ಡಿ ಕಾಸು ಬೆಳವುತೈತೆ ||2||
ತೀರಸೆಂಬೊ ಸಿಂತೆಕಾಸ್ತ ಇಲ್ಲದೈತೆ
ಸಿವ ಅಂಬೊ ಮಾತಮಾರ್ತು ಅಲವುತೈತೆ
ಶಿದ್ದಪ್ಪಶಾಮಿ ಗುರುವೆ ಬುದ್ದಿ ಕೊಡಬೇಕೈತೆ ||3||
ಗುಲಾಬೋನ ದೊರೆ ಅಮ್ತ ಮುಕ್ಕುತೈತೆ
ಸಾಲ ಮಡಗಿ ಓಗೋದೆಂಗೊ ತಿಳಿಯದೈತೆ
ಶಿದ್ದಪ್ಪಶಾಮಿ ಗುರ್ವೆ ದಾರಿ ತೋರಬೇಕೈತೆ ||4||

ನಾಳೆ ನೋಡಿಹೆನೆನ್ನ ಬೇಡ
ನಾಳೆ ನೋಡಿಹೆನೆನ್ನ ಬೇಡ ಸುಳ್ಳಲ್ಲವಣ್ಣ
ನಾಳೆ ನೀಡಿಹೆನೆನ್ನ ಬೇಡಣ್ಣ
ನಾಳೆ ನೋಡಿಹೆನೆನ್ನುತಲಿ ಬಾಳುವಾತ ಲಕ್ಕನೀನು
ಕೋಳಿ ಪಿಳ್ಳೆ ಆಡುವಾಗ ಖೂಳ ಹದ್ದು ಎತ್ತಿದಂತೆ ||ಪ||
ಹೆಂಡಿರು ಮಕ್ಕಳು ಸುಳ್ಳಣ್ಣ
ಮಂಡೆ ತುಂಬಿದ ಬಳಗ ಇಲ್ಲಣ್ಣ
ಕುಂಡು ಗೋರಿ ಯಮದೂತರು ಬಂದು
ಕುಂಡೆ ಮಂಡೆ ಗುಮ್ಮುವಾಗ
ಹೆಂಡಿರು ಮಕ್ಕಳು ನಿನ್ನ
ಕಂಡು ಬಿಡಿಸುವರಾರು ಇಲ್ಲ ||1||
ಸತ್ತ ಹೆಣನ ನೋಡುತಿಯಲ್ಲ ಹಣದ
ಬುತ್ತಿಯನ್ನು ಒಯ್ಯಲಿಲ್ಲ
ಮೃತ್ಯುವಿನ ಬಾಯಿಗೆ ನೀನು
ತುತ್ತಾಗಿ ಪೋಗ ಖೇಡ ಆ
ನಿತ್ಯವೆಂದು ತಿಳಿದು ನೀನು
ಮತ್ತೆ ಗುರುವಿನ ಪಾದ ಹೊಂದು ||2||
ಕೂಡೆ ಇಂತು ಜನ್ಮ ಕಾಣಣ್ಣ
ದೊರಕುವುದು ನಿನಗೆ ಮಂದಮತಿಯು ಒಂದಿತಲ್ಲಣ್ಣ
ಹಿಂದಣ ಕಷ್ಟವನೆ ಬಿಟ್ಟು ಮುಂದಣ ಹಮ್ಮನೆ ಕಡಿದು
ತಂದೆ ಗಂಗಾಧರನ ಪಾದ ಹೊಂದಿ ಮುಕ್ತನಾಗು ನೀನು ||3||

ಎಲ್ಲಾ ಇಲ್ಲೇ ಇರತತೀ ಯಾಕಳತೀ
ಎಲ್ಲಾ ಇಲ್ಲೇ ಇರತತೀ ಯಾಕಳತೀ ಜನ್ಮ
ಸಾರ್ಥಕಾಗುವ ಮಾರ್ಗ ಮರತೀ ||ಪ||
ಅಲ್ಲಮಪ್ರಭುವಿನ ಆಟ ತೀರಿದ ಮೇಲೆ
ಇಲ್ಲೇಸು ದಿನ ಸ್ಥಿರವಾಗಿರತೀ ||ಅ.ಪ||
ಜೀವ ಕಾಯ ಎರಡು ಜೊಡೋ ಇದರ
ಪಾಯಾ ತಿಳಿದು ಮುಂದ ನೋಡೋ
ಮಾಯಾ-ಛಾಯಾ ಈಡ್ಯಾಡೋ ಶರಣರ
ಛಾಯಾದೊಳಗ ಮನಸಿಡೋ
ಸಾಧು ಸತ್ಪುರುಷರ ಸಂಗದೊಳಾಡೊ
ಸ್ವರ್ಗ ಮೋಕ್ಷದಲಿ ಕೂಡೊ ||1||
ಹಿಂದ ಬಂದದ್ದು ಮುಂದಿನರವೋ, ಮತ್ರ್ಯಕ
ಬಂದದ್ದು ಈ ಕ್ಷಣ ಮರವೋ
ಮಂದಬುದ್ಧಿಯ ನಿಮ್ಮಲ್ಲಿ ಸ್ಥಿರವೋ
ಚಂದಾಗಿ ತೋರುತ್ತಿಹದು ಕಾಯದರವೋ
ಒಂದೇ ಭಾವದಿಂದ ಒಳಹೊರಗೆ ನೋಡೋ
ಮುಂದ ನಿಂತಾನ ಗುರುವೋ ||2||
ಯಾರೋ ನೀ ಎಲ್ಲಿಂದ ಬಂದೀ
ದಾರೀವಳಗೆ ಇದ್ದಾರೇನೋ ಮಂದೀ
ಪೂರ್ವಪುಣ್ಯ ಉಣ ಬಂದೀ
ಸಂಸಾರದೊಳಗ ನೊಂದಿ ಬೆಂದೀ
ಮಾರಹರ ನಾಗಲಿಂಗನ ಪಾದಕ ಸೇರೀ
ಬೇಗನೆ ಮುಕ್ತಿಹೊಂದೋ ||3||

ಊರ ದೇವರ ಮಾಡಿ ಉಣಲಿಲ್ಲ
ಊರ ದೇವರ ಮಾಡಿ ಉಣಲಿಲ್ಲ, ನಮ್ಮನೆಯೊಳು
ನೂರೊಂದು ಕೋಳಿಗಳ ಕೊಂದೆವಲ್ಲಮ್ಮೆ ||ಪ||
ಒಂಬತ್ತು ಬಾಗಿಲವಾಡ ಕದಗಳ ಮೆತ್ತಿದೆವು
ಸಂಭ್ರಮದಿ ನಾವು ಸಾರಣೆಗೊಂಡೆವು
ಅಂಬರಕೆ ಎಸೆವ ಸುಣ್ಣದ ಬೋರ ಬಿಡಿಸಿದೆವು
ಶಂಭು ಶಂಕರಗೆ ಇರುವಂತೆ ಮಾಡಿದೆವು ||1||
ಹಸೆಯ ಹಂದರಕೆ ಗೂಟಗಳಿಂದ ಕಡಿಸಿದೆವು
ಹಸನಾಗಿ ನಾವು ಹರಿದರವ ಹಾಕಿದೆವು
ಎಸಳು ವದವೆಂಬ ಮಾವಿನ ತಳಿರ ಕಟ್ಟಿದೆವು
ಶಶಿಮುಖಿಯರ ಕೈಯ ರಂಗವ ಹೊಯಿಸಿದೆವು ||2||
ಮುತ್ತೈದೆರೈವರನು ಒಪ್ಪುತ್ತ ಹಿಡಿಸಿದೆವು
ಮತ್ತೈದು ಕುಂಭದ ಗಡಿಗೆ ಹೊರಿಸಿದೆವು
ಇತ್ತರದ ಓಣಿಯೊಳು ಉಧೋ ಉಧೋ ಎನಿಸಿದೆವು
ಹತ್ತು ಮೇಳದ ಆಸಾದಿಯ ಕರೆಸಿದೆವು ||3||
ಕೋಣಗಳ ಹಿಡಿತರಿಸಿ ಗೋಣುಗಳ ಕೊಯಿಸಿದೆವು
ಹೂಣಲೆಳೆದವು ಮೂಲದಾದಿ ಮನೆಗೆ
ಜಾಣತನದಲಿ ನಾವು ಕೊರಕೊರದು ಒಟ್ಟಿದೆವು
ಮಾಣದೆ ಗಡಿಯೊಳಗಡಿಗೆ ಮಾಡಿದೆವು ||4||
ಪೋತುರಾಜನ ಕಯ್ಯ ಹೋತುಗಳ ಹಿಡಿಸಿದೆವು
ಮಾತಂಗಿಯರ ಮೇಲೆ ಹಡಲಿಗೆ ಕಳಿಸಿದೆವು
ಭೀತಿಗೊಡುವಂತ ರಾಹುಗಳ ಉಣಬಡಿಸಿದೆವು ||5||
ಇಷ್ಟು ಬಗೆಯಿಂದ ದೇವರ ಪೂಜೆಗಳ ಮಾಡಿ
ಎಷ್ಟು ಕಾಮನೆಗಳನ್ನೆಲ್ಲ ಬೋಳುವುದು ಚೆಲ್ಲಿ
ಮುಟ್ಟಿ ಪ್ರಣಮವೆಂಬ ಬೀಜಗಳನೆ ಬಿತ್ತಿ
ಮೆಟ್ಟಿ ಬೆಳೆದೇವು ಮಹದಾನಂದ ಬೆಳೆಯ ||6||
ಜ್ಞಾನಜ್ಯೋತಿಯ ಬೆಳಗು ಆನಂದ ಜಲ ಸುರಿಯೇ
ನಾನಾ ಬಗೆಯಲಿ ಕಂಡ ಕಣಜ ತುಂಬಿ
ಭಾನುವಿನ ಉದಯದೊಳು ಜ್ಞಾನ ಪ್ರಭೆಯನೆ ಕಂಡು
ತಾನು ತಾನಾದನೆ ಅಮರಗುಂಡೇಶ ||7||

ಚಿಕ್ಕಟನೆಂಬ ಮನೆಯಲ್ಲಿ
ಚಿಕ್ಕಟನೆಂಬ ಮನೆಯಲ್ಲಿನ
ಮ್ಮೆಕ್ಕನ ಗಂಡ ಕೊಡೇರು
ಚಿಕ್ಕಟನೆಂಬ ಮನೆಯಲ್ಲಿ | ||ಪ||
ಅತ್ತೆ ಮಾವಂದಿರಿಬ್ಬರು ಬಲು
ಅತ್ತತ್ತ ತಾವೆಲ್ಲ ದಣಿದಾರಯ್ಯ ||1||
ಅತ್ತೆಯು ಅತ್ತೆಯ ಮಕ್ಕಳ ಒಂದು
ಮಿಥ್ಯದ ಕೀಡಿ ಬಂದು ಸುಟ್ಟಿತವ್ವ ||2||
ಆರು ತಲೆ ಕಪಿಯು ತಾನು
ಸೇರಲಾರದೆ ನಮ್ಮಣ್ಣ ತಮ್ಮರ ನುಂಗಿ
ತೋರಿತು ಗುರು ಬಸವೇಶನ ಪಾದವ ||3||

ದುರುಳರು ಹೆಚ್ಚಾದ ರುಣ
ಉತ್ತಮಂಗಿದ ರುಣ ಅನಸ್ತದ
ದುರುಳರು ಹೆಚ್ಚಾದ ರುಣ ||ಪ||
ಹೆಣ್ಣಿನ ಆಶೆ ಮಾಡಿ ಹಿಗ್ಗುವರಣ್ಣಾ
ಹೊನ್ನಿಗೆ ಆಶ ಮಾಡಿ ಹೆಣಗುವರಣ್ಣಾ
ಮಂಣು ಕಡಿ ಮಾಯಲಂಪಟದೊಳಾಗಾಗಿ
ಸುಣ್ಣದ ಕಲ್ಲಿನಂದ ಸುಡುವರಣ್ಣಾ ||1||
ಬಡ್ಡಿಗುಡ್ಡನಾಗಿ ನಡವತೈಕಣ್ಣಾ
ಗುಡ್ಡ ಬಡ್ಡಿಯಾಗಿ ಆಗಲಾಡದಣ್ಣಾ
ಹೆಡ್ಡೆರ ಹೆಬಗರು ಮುಂದಾದರಣ್ಣಾ ||2||
ಕಡಿದಾಟ ಬಡಿದಾಟ ಹೆಚ್ಚಾವದಣ್ಣಾ
ಮಡದಿ ಮಕ್ಕಳು ಮನಿ ತನ್ನದಲ್ಲಣಾ
ಒಡೆದು ಹೋಗಿ ಬಂಟನಾಳಾದನಣ್ಣಾ
ನಡೆಯುತಪ್ಪಿ ಮಳೆ ಬೆಳೆ ಅಡಿಗ್ಯಾವೇಳಣ್ಣ ||3||
ಮುತ್ತಿಗೆ ಬರುತೈತಿ ಮುಲೋಕಣ್ಣ
ಭಕ್ತಿಯ ಭರನಾಗೋ ನಾಡೋಳಗಣ್ಣಾ
ತತ್ತ್ವ ಸಂಸ್ಕೃತಗಳ ಓದಿ ಕತ್ತಲೆಳಾದದ್ದು ಕತೆ ಆಟಣ್ಣಾ ||4||
ವೇದ ಪುರಾಣವ ಓದಿರಣ್ಣ
ಶೋಧನ ಮಾಡಿ ಹುಡುಕಲಿಲ್ಲಣ್ಣಾ
ನಾದ ಚನ್ನಬಸವಣ್ಣ ಕಾಣದೆ ದಂ
ಡೆದ್ದು ಕಣದೊಳು ಮಡಿದರಣ್ಣಾ ||5||

ನಾವು ಹೊಲೆಯರು
ನಾವು ಹೊಲೆಯರು ನಮ್ಮ ಮೈಯೆಲ್ಲ ತೊಗಲು
ನೀವು ಯಾತರವರು ನಿಮ್ಮ ಗೋತ್ರವಾವುದು ||ಪ||
ಒಂಬತ್ತು ತಿಂಗಳೊಳಿಂಬುಗೊಂದು ಹೊಲಸಿನೊಳು
ದಂದುಗದೊಳು ಬಿದ್ದು ತೊಳಲಿದೆನೊ
ನಂಬಿಕೊಂಡು ಗುರುಪಾದ ಹೊಂದಿ ಭವ ಕಳೆದವಗೆ
ಹಿಂದೆ ಮುಂದೆ ನುಡಿದವರು ಹಂದಿ ಹೊಲೆಯರು ||1||
ತತ್ತಿಯೊಳಗಿನ ಹಾಲು ಮುಚ್ಚು ಮರೆಯಿಲ್ಲದೆ
ನಿತ್ಯ ಖಂಡುಗ ಕುಡಿದು ಬೆಳೆದೆ ನಾನು
ನಿಶ್ಚಿಂತೆ ನಿರಾಳ ನೀನೆ ಗತಿ ಎಂದವಗೆ
ಹೆಚ್ಚು ಕುಂದ ನುಡಿದವರು ಹುಚ್ಚ ಹೊಲೆಯರು ||2||
ಹಿಂದೆ ಬಂದುದೆಡದ ಕಳಿದು ಲಿಂಗದೇಹಿ ಎಂದೆನಾ
ನಿಂದ್ಯದ ಮಾತು ನೀವು ನುಡಿದರೇನೋ
ಕಂದರ್ಪಹರ ಕಾಡಸಿದ್ಧಗೊಂದಿ ಭವ ಕಳೆದವಂಗೆ
ಸಂದಿಗೊಂದಿ ನುಡಿವರು ಅಂಥ ಹೊಲೆಯರು ||3||

ಕನಸೋ ಮನಸಿನ ಕಾತರವೋ
ಕನಸೋ ಮನಸಿನ ಕಾತರವೋ ಇದ
ವಿನಯದಿಂ ತಿಳಿಯಕ್ಕ
ಮನ ಬೇಯಲು ಮನೆಯೊಳಗಿರ್ದರುರಿಯದೆ
ಬಿನದಿಸುತಿಹರ ನೋಡೆಯಕ್ಕ ||ಪ||
ಆನೆಯ ತಲೆ ಮೇಲಾಡು ಕುಳಿತು ಬಹು
ಮಾನದಿ ಬಾಹದ ಕಂಡೆ
ಏನೆಂಬೆ ಪಟ್ಟಣ ಚೊರಲಂತೋರ್ವ
ಮಾನಿನಿ ಸಿಕ್ಕುವಳು ||1||
ಮೀನಿಗೆ ಗರಿಪುಟ್ಟಿ ಹಾರಲು ಕಲಿಯಲು
ಆನೆ ಆಡುಗಳು ಸತ್ತು
ಮಾನಿನಿ ಸಂಸಾರ ಬಿಡಲವಳತ್ಯಂತ
ಗಾನವ ಪಾಡುವಳು ||2||
ಗಿಳಿ ಇರುಹೆಯ ಕಂಡು
ಎಳೆ ನೇಸರವ ಕೊಳ ನಳಿನಲರಳಲಿಕೆ
ಕಳಹಂಸ ಮುಲ್ಲಾಸದಿಂದಾಡುತಿರಲಾ
ಖಳ ಬಿಲ್ಲ ಬಿಸುಡುವನು ||3||
ಮೇಲುಪ್ಪರಿಗೆಯ ಮೇಲೊಬ್ಬ ಪೊಲತಿ-ಮಹಾ
ಲೀಲೆಯಿಂ ನಿಂದಿರಲು
ಸಾಲು ಕೇರಿಯೊಳಿರ್ದ ಸತಿಯರವಳ ಕಂಡು
ಕಾಲಿಗೆ ಬೀಳುವರು ||4||
ಎನಲೆಂದಳವಳು ನಿನಗೆ ಲೇಸಿದು ತಂಗಿ
ಚಿನುಮಯ ಗುರು ಬಸವೇಶನ
ಘನದೊಲುಮೆಯ ಸೂಚನೆಯು ಸಂಶಯಬೇಡ
ವೆನಲು ಮೌನದೊಳಿರ್ದಳು ||5||

 

ಗುಡಿಯ ತುಂಬಾ ದೇವರ ಕಂಡೆ
ಗುಡಿಯ ತುಂಬಾ ದೇವರ ಕಂಡೆ
ಅಡಿ ಇಡಗೊಡನೆನ್ನ ಹಿಡಕೊಂಡಿತಕ್ಕ ||ಪ||
ಕೈಯಿಲ್ಲಾ ಕಾಲಿಲ್ಲಾ ಮೂಗಿಲ್ಲಾ ಮಾರಿಲ್ಲಾ
ಮೈಯ್ಯೆಲ್ಲಾ ನೋಡಲು ಮರ್ಯಾದೆಯಿಲ್ಲಾ
ಸೈಯೆನಿಸೀ ತಾ ಜಗಕೆಲ್ಲ ಮಿಗಿಲಾದ
ವೈಯ್ಯಾರ ಇಲ್ಲದ ದೇವರು ಸಿಕ್ಕೀತಕ್ಕ ||1||
ಹೆಣ್ಣಲ್ಲಾ ಗಂಡಲ್ಲಾ ಹಣ್ಣಲ್ಲಾ ಕಾಯಲ್ಲಾ
ಹೂ ಇಲ್ಲದೆ ಪೂಜೆಗೊಂಡಿಹುದು ಪೂಜೆ ಮಾಡುವ
ಪೂಜಾರಿ ನುಂಗಿತು
ಮೂಜಗದೊಳಗಿದು ಸೋಜಿಗವೆನ್ನೀ ||2||
ಅರಿತು ನೋಡಲು ಬೆರೆತು ನಿಂತಿಹುದಲ್ಲಾ
ಮರೆತು ಹೋಯಿತು ನಾಂನಂಬುವದೆಲ್ಲಾ
ಗುರುತವ ಬಲ್ಲರು ಗುರುಭಮೌರಕ
ಭಜಕ ಹೊರತು ತಿಳಿಯದು ಜನಕೆ ||3||

ನಿಮ್ಮ ಪಾದ
ನೀರಿನೊಳಗೆ ಬೇರಬಿಟ್ಟು ಬೇರಿನೊಳಗೆ ಸಸಿಯ ನಾಟಿ
ನೂರ ಒಂದು ಟೊಂಗೆ ಜಿಗಿದು ಹೂವು ಕಾಯಿ ಸುರಿಸುತಾರ
ಮರೆಯಲಾರೆ ನಿಮ್ಮ ಪಾದವ ಶಿವಶಂಕರೇಶ ||1||
ಅಂದಚೆಂದದ ಗಿಡಗಳ್ಹಚ್ಚಿ ಚೆಂದಚೆಂದ ಹೂವನಿರಿಸಿ
ಸಾಲ ಬಾಗಿಲ ಗೆರೆದು ಮಾಯಗಾರನ ಬಿಟ್ಟು ಹೊಂಟೆ
ಮರೆಯಲಾರೆ ನಿಮ್ಮ ಪಾದವ ಶಿವಶಂಕರೇಶ ||2||
ಅಷ್ಟಗಂಧ ಪುಷ್ಪವಿರಿಸಿ ಬಿಲ್ಲಪತ್ತುರಿ ಮಗ್ಗಲಿಟ್ಟೆ
ಲಿಂಗಪೂಜೆಗೆ ನಿಜವಾಗಿಟ್ಟೆ ಹೂವಿನ ಮಾಲೀ ಹಾಕಿ ಹೊಂಟೆ
ಮರೆಯಲಾರೆ ನಿಮ ಪಾದವ ಶಿವಶಂಕರೇಶ ||3||
ತೇರು ಕಟ್ಟಿ ಮಂಟಪದೊಳು ಗಂಟಿ ಜಾಗುಟಿ ಅದರೊಳಗಿಟ್ಟು
ನೀರಿನೊಳು ತೆಪ್ಪಬಿಟ್ಟು ಸರ್ವಜನರಿಗೆ ದುಃಖ ಕೊಟ್ಟು
ಮರೆಯಲಾರೆ ನಿಮ್ಮ ಪಾದವ ಶಿವಶಂಕರೇಶ ||4||
ನೂರ ಒಂದು ಹಗ್ಗ ಹಚ್ಚಿ ತೇರಕಟ್ಟಿ ಎಳಸುತಾರ
ದಾರಿಯಲ್ಲಿ ಕೀಲು ಮುರಿದು ಸೂರಿ ಮಾಡಿ ಚೆಲ್ಲುತಾರ
ಮರೆಯಲಾರೆ ನಿಮ್ಮ ಪಾದವ ಶಿವಶಂಕರೇಶ ||5||
ಮಾತಿಗೆಲ್ಲ ಮಾಳಿಗೆ ಮುನಿ ರೊಕ್ಕಕೆಲ್ಲ ಮಕ್ಕಳಾಣೆ
ಕೆಟ್ಟ ಗುಣಗಳ ಬಿಟ್ಟು ಕೊಟ್ಟೆ ಗುರುವಿನ ಪಾದಕೆ ಹೊಂದಿಬಿಟ್ಟೆ
ಮರೆಯಲಾರೆ ನಿಮ್ಮ ಪಾದವ ಶಿವಶಂಕರೇಶ ||6||
ಅರಿಯಲಾರೆ ನಿಮ್ಮ ಪಾದ ಹಗಲು ಇರುಳು ನಿಮ್ಮ ಧ್ಯಾನ
ಇಂಥ ಮಾಳಗೊಂಡನಕೊಪ್ಪದಲ್ಲಿರುವ ಅನಮಿಷಾರಣ್ಯ ಸ್ವಾಮಿ
ಮರೆಯಲಾರೆ ನಿಮ್ಮ ಪಾದವ ಶಿವಶಂಕರೇಶ ||7||

ಶಿವ ಮಂತ್ರವ ಜಪಿಸೋ
ಶಿವ ಮಂತ್ರವ ಜಪಿಸೋ ಮೂಢ
ಶಿವ ಮಂತ್ರವ ಜಪಿಸೋ ||ಪ||
ಶಿವನೇ ನೀನಾಗುವೆಯೆಂದು ನಂಬುತ
ಸ್ನಾನ ಬೇಡ ಸಂದ್ಯಾಕರ್ಮವು ಬೇಡ
ಧ್ಯಾನ ಬೇಡ ಧಾರಣೆ ಬೇಡ
ಮೌನ ಬೇಡ ಮಣಿ ಮಾಲಿಕೆ ಬೇಡ ||2||
ಧ್ಯಾನ ಬೇಡ ಪಶುವಧೆಗಳು ಬೇಡ
ದೇಶಕಾಲ ಪಾತ್ರವ ನೋಡಬೇಡ
ಕಾಷಾಯಾಂಬರ ಧಾರಣೆ ಬೇಡ
ಭಾಸುರ ಜಡೆಯನು ಬೆಳೆಸಲು ಬೇಡ ||3||
ಈ ಶರೀರವನೆ ದಂಡಿಸಬೇಡ
ಕಾಲನ ದೂತರು ಎಳೆಯದ ಮುನ್ನ
ನಾಲಿಗೆ ತನ್ನಾಧೀನವಾಗಿರುವಾಗ
ಏಳು ಕೋಟೆ ಮಂತ್ರಕೆ ಮಣಿಯದ ವಿ
ಶಾಲ ಕೆಳದಿ ರಾಮೇಶ್ವರನೆ ಗತಿಯೆಂದು ||4||

ಏನನಾದರೂ ಬರೆಯೋ ಎನ್ನ ಪಣೆಯೊಳಗೆ
ಏನನಾದರೂ ಬರೆಯೋ ಎನ್ನ ಪಣೆಯೊಳಗೆ
ನೀನಿಷ್ಟ ಬರೆಯಬೇಡವೋ ಮೂಢ ವಿಧಿಯೇ ||ಪ||
ಬಾಲತನದಲಿ ಬಹಳ ಭಾಗ್ಯ ಸಂಪದಗಳೆನು
ಮೇಲೆ ಯೌವನ ಬರಲು ಬಡತನವನು
ಲೋಲಾಕ್ಷಿಯರಿಗೆ ಮರುಳಾಗಿ ಸಂಚರಿಪುದನು
ಹಾಲು ಅನ್ನವಿಕ್ಕಿದವರಿಗೆ ಮುನಿವುದನು ||1||
ಮುಪ್ಪಿನಲಿ ಯೌವನದ ಸ್ತ್ರೀಯ ಸಂಭೋಗವನು
ತುಪ್ಪವಿಲ್ಲದ ಭೋಜನದ ರುಚಿಯನು
ಅಪ್ಪುತಿಹ ಮಕ್ಕಳಿಲ್ಲದ ಕುಸಂಸಾರವನು
ಕಪ್ಪುಗೊರಲನ ನೆನೆಯದೇ ದಿನವ ಕಳೆವುದನು ||2||
ಪರರೊಡವೆಯನು ತಿಂದ ಶರೀರವನೆ ಪೊರೆವುದನು
ಪರರ ನಿಂದೆಯ ಮಾಡಿ ಬಾಳುವುದನು
ವರ ಕೆಳದಿ ರಾಮೇಶ ನಿನ್ನ ಪಾದಾಂಬುಜವ
ಸ್ಮರಿಸಿದಂತನ್ಯಮತದಲ್ಲಿ ಸಂಭವಿಪುದನು ||3||

ಇದೀವ ಅಂತಿರೋ ಮಕ್ಕಳಿರ್ಯಾ
ಇದೀವ ಅಂತಿರೋ ಮಕ್ಕಳಿರ‍್ಯಾ ಭೂಮಿ
ಎದ್ದೆದ್ದು ಬಡದೀತು ಮಕ್ಕಳಿರ‍್ಯಾ
ಹದ್ದು ಕಾಗಿ ಹರಕೊಂಡು ತಿನುವಂತಾ ದಿನುಮಾನ ಬರತವಾ ಮಕ್ಕಳಿರ‍್ಯಾ ||ಪ||
ಎತ್ತೆತ್ತು ಹೋದೀರೋ ಮಕ್ಕಳಿರ‍್ಯಾ ಸುತ್ತುಗಟ್ಟಿತು ಹಾವಳಿ ಮಕ್ಕಳಿರ‍್ಯಾ
ಯಾವಲ್ಲಿ ಹೋದೀರಿ ಮಕ್ಕಳಿರ‍್ಯಾ ಹಾವಳಿ ಬಂದೀತು ಮಕ್ಕಳಿರ‍್ಯಾ
ಸಾವಿರ ಗಾವುದ ಹಾದಿಯ ಹೋದರೂ ಸಾವೆಂದೂ ತಪ್ಪದು ಮಕ್ಕಳಿರ‍್ಯಾ ||1||
ರೊಕ್ಕವು ಘಳಿಸಿರೋ ಮಕ್ಕಳಿರ‍್ಯಾ ನೀವು ದಿಕ್ಕು ಪಾಲಾದಿರೋ ಮಕ್ಕಳಿರ‍್ಯಾ
ನೆತ್ತರ ಕಾಪಲಿ ಹರಿವಾಗ ಮತ್ತೇಕೆ ಸತ್ಯವಂತರು ಜುರುತಾರು ಮಕ್ಕಳಿರ‍್ಯಾ
ರೊಖ್ಯದ ಕೊಡಗೋಳ ಎತ್ತಿ ಎತ್ತಿ ಕೊಡುವಾಗ ಬಿಕ್ಕಿ ಬಿಕ್ಕಿ ಅತ್ತಿರೋ ಮಕ್ಕಳಿರ‍್ಯಾ ||2||
ಕೋಪಾಗಿ ತಿರಿಗಿರೋ ಮಕ್ಕಳಿರ‍್ಯಾ
ಮುಂದ ಪಾಪವು ಹೆಚ್ಚೀತೋ ಮಕ್ಕಳಿರ‍್ಯಾ
ದ್ವಾಪಾರವೆಲ್ಲ ತಿರುತಿರುಗಿ ಬಂದರೂ ವ್ಯಾಪಾರ ಹೊಂದದು ಮಕ್ಕಳಿರ‍್ಯಾ ||3||
ಆಶೆಯ ಮಾಡಿರಿ ಮಕ್ಕಳಿರ‍್ಯಾ ನಾಳೆ ಪಾಪಕ್ಕೆ ಬಿದ್ದೀರಿ ಮಕ್ಕಳಿರ‍್ಯಾ
ಚಂದನೊಳುಳಿವಿಯ ಶರಣರು ಬರುವಾಗ ಘಾಸಿ ಆದೀರಿ ಮಕ್ಕಳಿರ‍್ಯಾ
ನಿಂದೇನ ನಾಡಿರಿ ಮಕ್ಕಳಿರ‍್ಯಾ ||4||
ಮುಂದ ಚಿಂದನಕ ಬಿದ್ದಿರಿ ಮಕ್ಕಳಿರ‍್ಯಾ
ಈಶನ ಉಳವಿಯ ಶರಣರು ಬರುವಾಗ ಬಂದನ ಘನ ಘನ ಮಕ್ಕಳಿರ‍್ಯಾ
ಬಂದೀಲಿ ಬಂದೀರಿ ಮಕ್ಕಳಿರ‍್ಯಾ ನಾಳೆಬಂದೀಲಿ ಓಡಿರಿ ಮಕ್ಕಳಿರ‍್ಯಾ
ದಂಡನಾಯಕ ಚನ್ನಬಸವಣ್ಣ ಬರುವಾಗ ಬಂಡಾಗಿ ಹೋದಿರೋ ಮಕ್ಕಳಿರ‍್ಯಾ ||5||
ಹನ್ನೊಂದು ವಚನಕ್ಕೋ ಮಕ್ಕಳಿರ‍್ಯಾ ತಂದು ಚನ್ನಪ್ಪ ಬರುತಾನು ಮಕ್ಕಳಿರ‍್ಯಾ
ಪನ್ನಂಗಧರ ತಾ ವರವೀಯ ಲೋಕೇಶ ವಾಕ್ಯವು ಮಕ್ಕಳಿರ್ಯಾ ||6||

ಮಾನವ ಜನ್ಮ
ಎಂಥ ಮಾನವ ಜನ್ಮವಿದಕೆ ಬುದ್ದಿ ಇಲ್ಲಿಲ್ಲೋ
ಗುರುವಿನ ಶುದ್ಧ ಭೋದಾಮೃತವನ್ನೇ ಕಳೇದೀರಲ್ಲೋ ||ಪ||
ಹದ್ದಿನಂತೆ ಆಯಸ್ಸು ಕಳೇದೀತಲ್ಲೋ
ಒಂದು ದಿನ ನಂದು ನಿಂದು ಎಲ್ಲ ಬಿಟ್ಟು ನಡೇದೀತಲ್ಲೋ ||1||
ಮಾನವ ಜನ್ಮ ದೊಡ್ಡದೆಂದು ತಿಳೀಲಿಲ್ವಲ್ಲೋ |
ಹೋಗುವಾಗ ಯಾರೂ ತಡೆಯಲಿಲ್ವಲ್ಲೋ ||2||
ರಾಮ ರಾಮ ರಾಮ ಎಂದು ಸ್ಮರಿಸಲಿಲ್ವಲ್ಲೋ
ರಾಮನ ಪಾದ ಸೇರುವಾಗ ಕತ್ತಲಾಯ್ತಲ್ಲೋ ||3||

ಗುಣವಂತೆ
ಬಂಗಾರ ಯಾತಕ ಮೈಮ್ಯಾಗ |
ನಮಗೆ ಸಿಂಗಾರ ಮಾಡಲು ಜನದಾಗ |
ಬಂಗಾರ ಎಂಬುದು ಸ್ಥಿರವಲ್ಲಾ |
ನಾವು ಅದಕಾಗಿ ಚಿಂತಿಸಿ ಫಲವಿಲ್ಲಾ ||ಪ||
ಗುಣವೊಂದು ಇದ್ದರೆ ಹಸನಾಗಿ |
ಹೇಳು ಏನೈತಿ ಅದಕೂ ಮಿಗಿಲಾಗಿ |
ತಿಳಿಯಾದ ಮನಸೇ ಆಭರಣ
ನೋಡು ಮ್ಯಾಗಿಂದ ಇಳಿವುದು ಕೈಲಾಸ || ಬಂ ||1||
ಇದನರಿತ ನಾರಿ ಗುಣವಂತಿ
ಯಾಕೆ ಇದಕೆ ನೀನು ಒಲ್ಲಂತಿ
ಸ್ವಾರ್ಥವ ಬಿಟ್ಟು ಬಾಳ್ವೆಯ ಮಾಡಲು
ಬೇರೇನಿದೆ ಈ ಜಗದೊಳಗೆ || ಬಂ ||2||

ಸಾಕಾದ ಈ ಊರು
ಶಿವಧ್ಯಾನವ ನೀ ಮಾಡವ್ವ |
ಈ ಭವದಂಜಿಕೆ ನಿನಗ್ಯಾಕವ್ವ |
ಅವರಿವರನ್ನಲಿ ಬೇಡವ್ವ | ಮನ
ವಿವರಿಸಿ ನೋಡ ಬೇಕವ್ವ || ಶಿ ||ಪ||
ಎಷ್ಟು ದುಡಿದರೇನಾಯ್ತು | ಗೇಣು
ಹೊಟ್ಟಿಗಾಗಿ ನೀ ಬಡಕೊಂಡಿ
ಗುಟ್ಟಾಗಿ ಮನಿಮಾರು ನಂದಂತಿ
ನಿನಗಿಟ್ಟು ಬರುವ ಮನಿ ಹೊರಗೈತಿ ||ಶಿ ||1||
ಬರಹೋಗೋದು ಬಂಗಾಳಿ ಸಂತಿ
ತಿರುಗುತ ಸಂತಿಯೊಳು ಕುಂತಿ
ಮರವಿಗೆ ಬಿದ್ದಚ್ಚಿಗೊಂಡಿ ಚಿಂತಿ
ಗುರುವರ ಕರುಣದಿ ಬಹು ನಿಶ್ಚಿಂತಿ ||ಶಿ ||2||
ನಾನಾರೆಂಬುದು ಮತಿ ಇಟ್ಟು
ಸುಜ್ಞಾನ ವಚನಗಳ ಕಿವಿ ಕೊಟ್ಟು
ಚೆನ್ನಾಗಿ ಉನ್ಮನಿ ಅಳವಟ್ಟು
ತಿಳೀ ಚಿನ್ಮಯ ಶಿವ ಶರಣನ ಗುಟ್ಟು ||ಶಿ ||3||

ಕಾಕು ಜನರ ಸಂಗ ಮಾಡಿದರೇನು
ಕಾಕು ಜನರ ಸಂಗ ಮಾಡಿದರೇನು |
ಮೂಕ ನೊಳೇಕಾಂತ ಮಾಡಿದರೇನು |
ಲೌಕಿಕ ಸನ್ಯಾಸಿಗೆ ಹೇಳಿದರೇನು |
ಬೇಕಾಗುವ ವಸ್ತು ಎಲ್ಲಿದ್ದರೇನು ||ಪ||
ಶಿಲೆ ಇಲ್ಲದ ಕಲ್ಲು ಎಷ್ಟೊಡ್ಡಿದರೇನು |
ಬಲವಿಲ್ಲದವರಿಗೆ ಯಾರಿದ್ದರೇನು |
ಸುಳು ಹಿಡಿಯದ ಶ್ವಾನ ಬೊಗಳಿದರೇನು
ಚಲುವಿಲ್ಲದ ನಾರಿ ಶೃಂಗಾರವೇನು || ಕಾ ||1||
ಉಪವಾಸವಿದ್ದವಗೆ ಊರು ತುಂಬಿದರೇನು |
ಅಪಹಾಸ್ಯ ಮಾಡುವ ಗೆಳೆಯನಾದರೇನು |
ಕಪಟವ ಬಿಡದವ ಕೂಡಿ ಉಂಡರೇನು |
ಚಪಲತ ವಿಲ್ಲದ ಸ್ತ್ರೀ ಸಂಗವೇನು || ಕಾ ||2||
ಆಶೆ ಇಲ್ಲದವರಿಗೆ ಅಮೃತವಿದ್ದರೇನು |
ಭಾಷೆ ತಪ್ಪುವವನ ನಂಬಿಗಿನ್ನೇನು |
ಧ್ಯಾನಿ ಇಲ್ಲದವರಿಗೆ ಗುರುಬೋಧೆಯೇನು |
ಈಶ ಶಿರಗೇಶನ ನೆನಿಯದಿದ್ದರೇನು || ಕಾ ||3||

ವಾರಿನೋಟ
ನೋಡ ಬ್ಯಾಡವ್ವ ತಂಗಿ ನೋಡಬ್ಯಾಡ
ಕೂಡಿಕೊಂಡರಾಗುವುದವ್ವ ಬಹುಪಾಡಗಿ ||ಪ||
ಕಂಡ ಕಂಡ ಪುರುಷರ ನೊಡಬ್ಯಾಡ
ಮಾಡಿಕೊಂಡ ಗಂಡನ ಕೂಡ ಬಹುಪಾಡ ||1||
ಹೊನ್ನು ಹೆಣ್ಣು ಮಣ್ಣು ಈ ಮೂರು ಬ್ಯಾಡ
ಬಣ್ಣ ಬಣ್ಣದಲ್ಲಿ ನಿನ್ನ ಮೋಹ ಬ್ಯಾಡ ||2||
ಸಣ್ಣ ಸಣ್ಣ ಹುಡುಗರ ನೋಡಬ್ಯಾಡ
ಕಣ್ಣ ಮುಚ್ಚಿ ಕಾಲನ ಬಾಧೆಗೆ ಬೀಳಬ್ಯಾಡ ||3||
ಇಲ್ಲ ಸಲ್ಲದ ಮಾತುಗಳನ್ನ ಆಡಬ್ಯಾಡ
ನಲ್ಲರ ಕಂಡು ಮಲ್ಲ ಯುದ್ಧ ಮಾಡಬ್ಯಾಡ ||3||
ದೇಶದೊಳು ಲೇಸುಳ್ಳವರ ಸವಾಸ ಮಾಡ
ವಾಸಮಾಡಿ ಗುರುಮಠಸ್ಥಲ ನೋಡ ||4||
ಕೂಸಿನಂಗ ದ್ಯಾಸವಿಟ್ಟು ಸೋಸಿ ನೋಡ
ಈಶಗುರು ಶರಣೇಶ ನೊಡಗೂಡ || ನೋ ||5||

ಪಕ್ಷಿಯ ನೋಡಿದಿರಾ
ಪಕ್ಷಿಯ ನೋಡದಿರಾ ದೇಹದೊಳು
ಪಕ್ಷಿಯ ನೋಡಿದಿರಾ
ಲಕ್ಷಣ ಪೂರ್ಣ ವಿಲಕ್ಷಣ ರೂಪದಿ
ಅಕ್ಷಿಯೊಳು ಮನೆ ಮಾಡಿಕೊಂಡಂತಾ ||ಪ||
ಪಕ್ಕವಿಲ್ಲದೆ ಹಾರುವ ಪಕ್ಷಿ
ಲೆಕ್ಕವಿಲ್ಲದೆ ಗುಣಿಸುವ ಪಕ್ಷಿ
ಅಕ್ಕರೆಯಿಂದಲಿ ಆಡುವ ಪಕ್ಷಿ
ಚೊಕ್ಕವಾದ ಚಿನ್ಮಯ ಪಕ್ಷಿ ||1||
ಮೂರು ಕಾಲಲಿ ಕುಣಿಯುವ ಪಕ್ಷಿ
ಆರಿಗೂ ಪಿಡಿಯಲು ಸಿಲುಕದ ಪಕ್ಷಿ
ತೋರಿ ಆಗಸದೊಳ ಅಡಗುವ ಪಕ್ಷಿ
ನಿರಾಕಾರದ ನಿರ್ಮಲ ಪಕ್ಷಿ ||2||
ಬಣ್ಣಿಸಲಳವಲ್ಲಾ ಸಂಸಾರ ಪಕ್ಷಿ
ಬಣ್ಣ ಬಣ್ಣದೊಳ ಬೆರೆಯುವ ಪಕ್ಷಿ
ತನ್ನೊಳ ತಾನು ಉನ್ನತ ಪಕ್ಷಿ
ಉನ್ಮನಿ ಗುರು ಶರಣೇಶನ ಪಕ್ಷಿ ||3||

ಸಾಕು ಸಂಸಾರ
ಸಾಕು ಸಂಸಾರ ಯಾರಿಗೆ ಬೇಕು ಈ ಘೋರ
ಆರುಮಂದಿ ಅಕ್ಕ ತಂಗಿ ಮೂರು ಮಂದಿ ಮೋಡದವರು
ಮಾರಿ ಮುರಿದು ಬ್ಯಾರಿಯಾಗಿ ದಾರಿಗಾಣದೆ ದೂರಾದರವ್ವ ||ಪ||
ಒಂಬತ್ತು ಬಾಗಿಲ ಮನಿಯ ಒಳಗ
ತುಂಬಿಕೊಂಡಿರುವ ಹುಂಬ ಜನರು
ದಂಡತನದಿ ನಂಬಿಗಿಲ್ಲದೆ
ಇಂಬು ಆಗಿ ಹೋದರವ್ವಾ || ಸಾ ||1||
ದೇಶದೊಳು ಅಸಗಿ ಊರ ವಾಸಗುರು
ಶರಣೇಶ ದೇವರ ದ್ಯಾಸದೊಳು ಮನವನಿರಿಸಿ
ಈಶನ ಪಾದಕೆ ಹೊಂದಿಕೊಂಡೆ || ಸಾ ||2||

ಸುಳ್ಳು
ಸುಳ್ಳು ಸುಳ್ಳೋ ಸುಳ್ಳು ಸುಳ್ಳೋ |
ಸುಳ್ಳಾದ ಜನವು ಸುಳ್ಳೋ ||
ಆದಿ ಅನಾದಿ ಆದದ್ದು ಸುಳ್ಳೋ
ನಾದ ಬಿಂದು ಚಿತ್ಕಳೆಗಳು ಸುಳ್ಳೋ
ವೇದ ಶಾಸ್ತ್ರಗಳು ಹೇಳುವುದು ಸುಳ್ಳೋ
ಬೋಧವ ಕೊಡುವಂತ ಗುರುಗಳ ಸುಳ್ಳೋ ||ಪ||
ತತ್ವ ಪಂಚ ಪರ ತತ್ವವು ಸುಳ್ಳೋ
ಚಿಮ್ಮು ಹಮ್ಮು ಕಲ್ಪನೆ ಸುಳ್ಳೋ
ಮತ್ತೆ ಮತ್ತೆ ಅದು ಕಾಂಬುದು ಸುಳ್ಳೋ
ಸತ್ತು ಹುಟ್ಟುವುದು ಮೊದಲೇ ಸುಳ್ಳೋ ||1||
ನಾಕಲೋಕ ಇಹ ಲೋಕವು ಸುಳ್ಳೋ
ಆಕಾರ ನಿರಾಕಾರ ಛೇಂಕಾರ ಸುಳ್ಳೋ
ನಾಕೇಶ ಲೋಕೇಶ ಸಾಕ್ಷತ ಸುಳ್ಳೋ
ಭೋಕಾಂತ ಗುರುವು ಶಿವಶರಣನು ಸುಳ್ಳೋ ||2||

ಜೀವನದ ಸಾಗರ
ಈಸಬೇಕು ಈಸಿ ಜಯಿಸಬೇಕು
ಕಾಕ ಗುಣಗಳ ಕಳೆಯಬೇಕಣ್ಣ
ಮರ್ದಳೆಂಟನು ನೂಕಬೇಕಣ್ಣ
ಸಾಕಾರದಲ್ಲಿ ದೃಷ್ಟಿ ಚಲಿಸದೆ | ಆಕಾರ ನಿರಾಕಾರ
ವೆರಡೊ ಕೂಡಿ || ಈಸಿ ||ಪ||
ಮನಸಿನ ಮೈಲಿಗೆ ತಿಳಿಯಬೇಕಣ್ಣ
ಕನಸಿನ ಸಂಸಾರ ತಿಳಿಯಬೇಕಣ್ಣ
ನಾನು ನೀನೆಂಬುವ ಬ್ರಾಂತಿಯು ಹೋಗಿ
ಮಾತಾದ ಮಾನಗಳೆರಡು ನೀಗಿ || ಈಸಿ ||1||
ಚಿತ್ತಿನ ಚಂಚಲವಳಿಯಲಿ ಬೇಕು
ಸತ್ಯ ಶರಧಿಯೊಳಾಳಲಿ ಬೇಕು
ಕರ್ತೃ ಗುರುವಿನ ಅರಿತು ಧ್ಯಾನಿಸಿ
ಸತ್ಯಾ ಸತ್ಯಗಳೆರಡು ಮೀರಿ || ಈಸಿ ||2||
ಕಾಮ ಕ್ರೋಧಗಳ ತುಳಿಯಲಿ ಬೇಕು
ಪ್ರೇಮ ಭಾವನೆ ತ್ಯಜಿಸಲಿ ಬೇಕು
ಹೇಮ ಭೂಮಿ ಕಾಮಿನಿಯರ ತ್ಯಜಿಸಿ
ನಾಮ ರೂಪಗಳೆರಡು ಮೀರಿ || ಈಸಿ ||3||

ಯಾರಂಜಿಕಿ ಮನಸೀನಂತಿ ಶಿವ
ಯಾರಂಜಿಕಿ ಮನಸೀನಂತಿ ಶಿವ
ಶರಣರೊಳು ಚರಿಸ್ಯಾಡಂತಿ
ಹರಿಹಾಡು ಮನವನು ನಿಲಸಂತಿ
ನಿಜ ಪರಮಾತ್ಮನ ನೆಲಿ ತಿಳಿಯಂತಿ ||ಪ||
ಆಗೀನೆಂಬುದು ಬ್ಯಾಡಂತಿ
ಸುಖ ಭೋಗ ವಿಷಯಗಳು ನೀಗಂತಿ
ಸಾಗಿ ಹೋಗಿ ಮುಂದೆ ನಡೆಯಂತಿ
ನೀ ಯೋಗದೋಳುಲಯ ವಾಗಂತಿ ||1||
ಕಾಯದ ಕಲ್ಪನೆ ಬಿಡುವಂತಿ
ನಿರ್ಮಾಯದೊಳು ನಿಂತು ನಲಿಯಂತಿ
ಬಯಲೊಳು ನಿರ್ಭಯ ಅಂತಿ
ಈ ಬಯಲಾಳಿದವಗ್ಯಾತರ ಚಿಂತಿ ||2||

ಬುದ್ಧಿ ಮಾತು
ತಿಳಕೊಂಡು ಮಾಡಪ ಸಂಸಾರ
ಇದು ಒಳಕೊಂಡು ಹೋಗಿಲ್ಲೊ ಯಾರ‍್ಯಾರ
ಕಳಕೊಂಡು ಹೋಗ್ಯಾರ ಬಹು ಜನರಾ
ಉಳಕೊಂಡಾಕೋ ನೀ ಭವಸಾರ || ತಿ ||ಪ||
ಮೂರು ದಿನದ ಸಂತಿ ಬಜಾರ
ಅದಕಾರ ಮಂದಿದಾದಪ ಸಂಚಾರ
ತೋರದಂಗಿರುವರು ನಿಮ್ಮ ಎದುರ
ಪಾರಾಗಿ ಹೋಗುವುದು ಬಹು ಘೋರ || ತಿ ||1||
ಹತ್ತೆಂಟು ಮಂದಿಯ ಬಲು ಜೋರ
ಅಲ್ಲಿ ಕತ್ತಲದೊಳಗವ ವ್ಯಾಪಾರ
ಸುತ್ತ ಮುತ್ತಲು ಹಾಕ್ಯಾರು ಗೇರಾ
ಅತ್ತಲೇ ವೈವರು ಯಮ ಪುರಾ || ತಿ ||2||
ಸಂತರ ಸಂಗದೊಳು ಇರು ಪೂರಾ
ಮನ ಬ್ರಾಂತಿ ನೀಗುವುದು ಪರಿಹಾರ
ಅಂತರ ಗುರು ಶರಣಾಧಿಕಾರ
ಚಿಂತಿ ಯಲ್ಲವು ಮಾಡುವ ದೂರ || ತಿ ||3||

ಸ್ಥಿರವಿಲ್ಲದ ಸಂಸಾರ
ಸುಳ್ಳು ಸಂಸಾರವಿದು ಸ್ಥಿರವಲ್ಲಾ | ಖರೆ
ಎಳ್ಳಿನಷ್ಟು ಸುಖವಿದಕಿಲ್ಲಾ
ಪೊಳ್ಳಿನೊಳಗೆ ಕಾರಾಸುವದೆಲ್ಲಾ |
ಮಳ್ಳು ಜನರಿಗಿದುತಿಳಿದಿಲ್ಲಾ || ಸು ||ಪ||
ತಂದೆ ತಾಯಿ ಬಂದುಗಳೆಲ್ಲಾ | ನಿನ್ನ
ಹೊಂದಿಕೊಂಡಸತಿಸುತರೆಲ್ಲಾ
ಬಂದು ಯಮದೂತರುಬಂಧಿಸಿ ಒಯ್ವಾಗ |
ಬಂಧನ ಬಿಡಿಸುವವರ್ಯಾರಿಲ್ಲಾ || ಸು ||1||
ಅರ್ಥ ದಾಶೆಗಾಗಿ ಅನುಗಾಲ ನೀ
ವ್ಯರ್ಥವಾಗಿಕಳೆದೆಲ್ಲಾ ಕಾಲ |
ಮರ್ತು ಮರವಿನೊಳುಶುರ್ತು ತಿಳಿಯದೆ |
ಮತ್ತೆ ಬೀಳ್ವಿ ಮಾಯದಜಾಲ || ಸು ||2||

ದಾರಿಯ ನೋಡಿದೆನೇ ಸುಖಮಯ
ದಾರಿಯ ನೋಡಿದೆನೇ ಸುಖಮಯ
ಊರಿಗೆ ಹೋಗೋದಕ | ದಾರಿಯ ನೋಡಿದೆನೆ
ಬಾರಿ ಬಾರಿಗೆ ಘೋರ ಮಾರ್ಗದೊಳು
ಪಾರಾಗಿ ತೆರಳುತ || ದಾ ||ಪ||
ಆರು ಬೆಟ್ಟು ದಾಟಿ ಮೇಲಕೆ ಏರಿಹೋಗಿ ಗಟ್ಟಿ
ಧೀರನಾಗಿ ಪರ ತಾರಕ ಬ್ರಹ್ಮದಿ ಮೀರಿದ
ಉನ್ಮನಿ ಸೇರಿ ಚಿದ್ರೂಪನ || ದಾ ||1||
ಗಂಗೆ ಯಮುನೆ ಕೂಡಿ ನಡುನಾಡಿ
ಸಂಗಮ ದೊಡಗೂಡಿ ಅಂಗದೊಳಗೆ
ನವಲಿಂಗ ಸ್ಥಾನದಲಿ ಮಂಗಲ ಮೂರುತಿ
ಜಂಗಮ ನಿರುವಂತ || ದಾ ||2||
ಧರೆಯೊಳು ಶಿವಯೋಗಿ ಬೆಟ್ಟದ ಪುರದೊಳು
ಸ್ಥಿರವಾಗಿ ಕರುಣದಿ ಭಕ್ತರ ನಿರುತದಿ
ಪೊರೆಯುವ ಮರಣ ರಹಿತ
ವರಗುರು ಶಿವ ಶರಣನ || ದಾ ||3||

ಗಿರಿಯ ನೇರೊಣು
ಗಿರಿಯನೇರೊಣು ತಂಗಿ ಬಾರ ಅಲ್ಲಿ
ಪರಶಿವನಿರುವ ಮೇಲೇರ | ಆರ್ಯಾರು
ಅರಿಯದ ಮೀರಿದ ಸ್ಥಳವಿದು ತೋರಿದನು ಗುರುವು ||ಪ||
ಭಾರಿ ಗುಡ್ಡಗಳು ಆರು | ತಂಗಿ
ಏರಿ ಹೋಗೋದು ಬಹು ಘೋರ
ಧೀರಳಾಗಿ ನೀ ಏರವ್ವ ಅಲ್ಲಿ
ಚೋರ ಚಂಚರ ಭಯ ದೂರ || ಗಿ ||1||
ಸಾರಿ ಹೋಗೋನು ಬಹುದೂರ
ಸತ್ಯ ಶರಣರೆಲ್ಲರೂ ಅಲ್ಲೇ ಹಾರ
ಭೇರಿ ಜಾಂಗುಟಿ ಝೇಂಕಾರವ್ವ
ನಿತ್ಯ ವೀರ ಮಹಾಲಿಂಗವ ಪೂಜೆ || ಗಿ ||2||
ಮುಂದೆ ಹೋಗೋನು ತಂಗಿ ಬಾರ
ಅಲ್ಲಿ ಸೂರ್ಯ-ಚಂದ್ರರೊಂದು ಗೂಡ
ಚಂದ ಚಂದನ ಬೆಳಕವ್ವ
ಮನ ನಿಂದು ನೋಡಲು ನಿರ್ಭಯ || ಗಿ ||3||

ದೆವ್ವ ಬಡಿದೀತವ್ವ ಯನಗೊಂದು
ದೆವ್ವ ಬಡಿದೀತವ್ವ ಯನಗೊಂದು
ಅವ್ವ ಅಕ್ಕ ಕೇಳಿರಿ ಬಂಧು ಬಳಗವ
ಗಲಿಸಿದ ದೆವ್ವ | ಮಂದ ಬುದ್ದಿಯ ಬಿಡಿಸಿದ ದೆವ್ವ
ಸಂದು ಸಂದಿನೊಳು ತುಂಬಿಕೊಂಡು
ಸಂದಾನಧೊಳಾನಂದ ದೆವ್ವ ||1||
ಸತ್ಯ ಮಾರ್ಗ ಹಿಡಿಸಿದ ದೆವ್ವ
ಮಿಥ್ಯ ಪ್ರಪಂಚವ ಕೆಡಿಸಿದ ದೆವ್ವ
ಚಿತ್ತ ಭಾವದೊಳು ಭಕ್ತಿಯನೆರಸಿ
ಉತ್ತಮ ಗುರುವಿನ ಕೂಡಿದ ದೆವ್ವ ||2||
ಉಕ್ಕಡ ಗಾತ್ರಿಯ ಧಿಕ್ಕರಿಸಿದ ದೆವ್ವ
ಶಿವ ಶರಣನ ಮಠದೊಳಗಿರುವ ದೆವ್ವ
ಭವನಾಶಕ ಶರಣೇಶನ ಶರಣದಿ
ಜವನ ಅಂಜಿಸಿ ಅಡಗಿದ ದೆವ್ವ ||3||

ಹುಚ್ಚನು ನಾನಾದೆ ಜಗದೊಳು
ಹುಚ್ಚನು ನಾನಾದೆ | ಹುಚ್ಚನು ನಾನಾದೆ
ಯಚ್ಚರ ದೊಳಗಿದ್ದು | ಸಚ್ಚಿದಾನಂದ
ಸ್ವಚ್ಛ ಮಾರ್ಗದೊಳು || ಹು ||ಪ||
ಮರವು ಮಾಯವು ನೋಡಿ
ಅರವಿನೊಳ ಚರಿಶ್ಯಾಡಿ ಪರವಸ್ತು ನಾನೆಂಬ
ಸ್ಥಿರ ಬುದ್ದಿ ಕರಿಗೋಡು || ಹು ||1||
ಭೂತ ಪಂಚಕದೇಹ ನೇತಿಗಳೆದು
ಪರಮಾತ್ಮನು ನಾನೆಂಬ
ಸ್ಥಿರ ಬುದ್ಧಿ ಕರಿಗೊಂಡು || ಹು ||2||
ನಾನು ನಾನೆಂಬ ಅಹಂಕಾರದಿ ಮೆರೆದು
ಪರಮಾತ್ಮನು ನಾನೆಂಬ
ಸ್ಥಿರ ಬುದ್ದಿ ಕರಿಗೊಂಡು || ಹು ||3||

ನಗೆ ಬರುವುದು ನಿನನೋಡಿ ಈ ಲೋಕದೊಳಗೆ
ನಗೆ ಬರುವುದು ನಿನ ನೋಡಿ ಈ ಲೋಕದೊಳಗೆ
ನಗೆ ಬರುವುದು ನಿನನೋಡಿ ||ಪ||
ಮೂಲ ಅಹಂಕಾರದಲ್ಲಿ ಮನೆಮಾಡಿ
ಬಾಲೆಯರ ಶೃಂಗಾರ ನೋಡಿ
ಕಾಲನ ಭಾದೆಯೊಳಗೂಡಿ
ಶೂಲಿ ಪಾದವನು ಮರತೆಲ್ಲ ಖೋಡಿ ||1||
ಆರು ಗುಣಗಳ ಮರ್ಮ ತಿಳಿಯದೆ
ಮೂರು ಗುಣಗಳ ಬೇದವಳಿಯದೆ
ಸಾರ ಸುಗುಣದ ಮಾರ್ಗವಿಡಿಯದೆ
ಪರ ಇಂತಹದೊಳು ಹೊರಳಾಡುವವನಿಗೆ ||2||
ತನ್ನ ತಾನು ಅರಿಯದ ಮನುಜನೆ
ಭಿನ್ನ ಭೇದವ ನೋಡುವ ಕುಲಜಗೆ
ನೋಡಿ ನೋಡಿ ಸಾಕಾಗಿರುವ ಈ ಸಮೂಹಕೆ
ನಗೆ ಬರುತಿದೆ ನಿನನೋಡಿ ನಗೆ ಬರುತಿದೆ ||3||

ನಿನ್ನ ನಿಜವು ನೀ ನೋಡಲೋ ಮೂಢ
ನಿನ್ನ ನಿಜವು ನೀ ನೋಡಲೋ ಮೂಢ
ಭಿನ್ನ ಭೇದವು ಮಾಡಲಿ ಬೇಡ |||ಪ||
ಹೊನ್ನು ಹೆಣ್ಣು ಮಣ್ಣು ಅಸತ್ಯ
ಬೆನ್ನು ಬಿಡಲಿಹುದೋ ನಿನಗೆ
ಮೃತ್ಯು ನಿನ್ನೊಳಿರಲಿ
ಶತು ಧತು ನಿತ್ಯ | ಸನ್ಮಾರ್ಗವ ಬಿಡದಿರು ನಿತ್ಯ ||1||
ಮಡದಿ ಮಕ್ಕಳ ಮಮತೆಯ ಬಿಟ್ಟು
ಜಡದೇಹದ ಅಭಿಮಾನ ಸುಮ್ಮ
ಕೂಡದ ತೆರದೊಳು ತಾನಿದರಿಟ್ಟು
ದೃಢ ಜ್ಞಾನವು ನಿನ್ನೊಳವಟ್ಟು ||2||
ಮರವು ಮೊದಲಾದಿಗಳನ್ನೆಲ್ಲಾ ತೊರೆದು
ದುರಿತ ಕರ್ಮಾಧಿಗಳ ಭಾದೆ ಪರಿದು
ನಿರತು ನಿರ್ಗುಣ ನಿಲುಮೆಯನರಿತು
ಗುರು ಶರಣರ ಸಂಗದಿ ಬೆರೆದು ||3||

ನಿನ್ನಾತ್ಮದೊಳು ನೋಡೋ
ನಿನ್ನಾತ್ಮದೊಳು ನೋಡೋ ಅನುಮಾನವು ಬ್ಯಾಡೋ
ಉನ್ನತ ಗುರುವಿನ ಕೂಡೋ ಉನ್ಮನಿ ಆಲಯದೊಳಾಡೋ ||ಪ||
ಕಣ್ಣೊಳು ಕುರುವಿಟ್ಟು ಮುನ್ನ ದೃಷ್ಠಿಯ ನಟ್ಟು
ನಿನ್ನೊಳು ನಿಜವಿಟ್ಟು ಚನ್ನಾಗಿ ನೆದರಿಟ್ಟು ||ನಿ ||1||
ಬಯಸಲು ತೋರಿತು ಲಯಸಲು ಅಡಗಿತು
ಬಯಲೊಳು ನಿನ್ನ ಗುರ್ತು ಬಯಲಾಗಿದವ ಕರ್ತೃ ||2||
ಅಲ್ಲಿಲ್ಲಂಬುವದಲ್ಲೊ ಇಲ್ಲದ ಮಾಯದ ಜಾಲ
ಮೂಲ ಸದ್ಗುರು ಶೀಲಾಲೀಲ ಶರಣೇಶ ಬಲ್ಲ ||3||

ಚಿಂತೆ ಏತಕೆ ಮನಸಿನ ಭ್ರಾಂತಿ ಏತಕೆ
ಚಿಂತಿ ಏತಕೆ ಮನಸಿನ ಭ್ರಾಂತಿ ಏತಕೆ
ಅಂತರಂಗ ನಿಜ ಶಾಂತ ಮೂರ್ತಿಗೆ ||ಪ||
ಅನುದಿನ ಗುರುವಿನ ನೆನವಿನೊಳಿರುವಾಗ
ಜನನ ಮರಣ ಭಯವೇತಕೆ
ಧನಕನಕೂಗಿ ಚಾಡಿಗಳೇತಕೆ
ಜನದಪವಾದಭಿಮಾನೇತಕೆ ಚಿನ್ಮಯಾತ್ಮನ ಸನ್ನಿಧಿ ಸೇರಿ
ಉನ್ಮನಿ ಸ್ಥಲವನು ಚೆನ್ನಾಗಿ ಅರಿತವಂಗೆ ||1||
ಪರಿಪೂರ್ಣದಿ ಕಲ್ಪನೆ ತಿಳಿದಿರುವಂತೆ ಮರವಿ
ಮೋಹಗಳೇತಕೆ ಉರುತರ ಪಾಶದ ಬಿಗುವೇತಕೆ
ಪರ ಇಹಫಲ ದಾಶೆಗಳೇತಕೆ || ನಿರುತದಿ
ಪರಚರ ಪರವಶದೊಳ್ಮನ ||2||
ಚಿತ್ತೆ ಶುದ್ಧ ಶಿವ ತತ್ವದೊಳಿರುವಂಗೆ
ನಿತ್ಯ ನೇಮಗಳೇತಕೆ ಸತ್ಕರ್ಮ ಕೃತ್ಯಗಳೇತಕೆ
ಮುತ್ತದೊದಗುವ ಭಯವಿನ್ನೇತಕೆ ಮತ್ತೆ
ವ್ಯಕ್ತಿಯೊಳು ಮತಿಯಡಗಿ ಗುರು ಸತ್ಯವಾದ
ಶರಣೇಶನ ಅರಿದವಂಗೆ ||3||

ಗುರು ಧ್ಯಾನವ ಮಾಡಲಿ ಮನವೆ
ಗುರು ಧ್ಯಾನವ ಮಾಡಲಿ ಮನವೆ
ಹರ ನಾಮವ ಜಪಿದಲೆಯನವೆ
ಹರನು ಗುರುವು ಸರ್ವವು ಒಂದಂಬರಿವಿನೊಳಗಿರು ಎಲೆ ಮನವೆ ||ಪ||
ಕರ್ಮವು ಬಾರದಂತಲೆ ಮನವೆ
ಧರ್ಮದೊಳಗಿರುತಿರು ಯಲೆ ಮನವೆ
ಕರ್ಮ ಧರ್ಮಗಳ ಮರ್ಮವ ತಿಳಿದು
ನಿರ್ಮಲ ನಾಗಿರುಯಲೆ ಮನವೇ ||1||
ನಾನು ನೀನೆಂಬುದಳಿಯಲೇ ಮನವೇ
ನೀನೇ ನೀನಾಗಿರು ಯಲೆ ಮನವೇ
ಮಾನಗಳೆಂಬವು ಮೀರಿನಿಂದೆನು
ಸಂಧಾನದೊಳಗಿರು ಯಲೆ ಮನವೇ ||2||
ಉನ್ನತ ಮನವೇ
ಸನ್ಮಾರ್ಗದೊಳಿರು ಯಲೆ ಮನವೇ
ಸನ್ನುತ ಗುಣನಿಧಿ ಗುರು ಶರಣೇಶನ
ಸನ್ನಿಧಿಯೊಳಗಿರು ಯಲೆ ಮನವೇ ||3||

ನಮ್ಮೂರ ದಾರಿ
ಊರಿಗೆ ನಾನೋಗಬೇಕಣ್ಣಾ | ದಾರ್ಯಾವುದಣ್ಣಾ ||ಪ||
ಊರಿಗೆ ನಾನೋಗಬೇಕು ದಾರಿ ಎನಗೆ ತೋರಬೇಕು
ಮಾರ ಹರನ ಪಾದದಲ್ಲಿ ಸೇರಿ ಮುಕ್ತನಾಗಬೇಕಣ್ಣಾ ||ಅ.ಪ||
ತಂದೆ ತಾಯಿಯ ನೋಡಬೇಕಣ್ಣ | ನಾವೇನೇ ಆದರೂ
ತಂದೆ ತಾಯಿಯ ನೋಡಬೇಕು | ಅವರ ಮನವ ತಣಿಸಬೇಕು
ತಣಿಸಿ ಅವರ ಮನವ ಸೇರಿ | ಮುಕ್ತನಾಗಬೇಕಣ್ಣಾ || ಊ ||1||
ಬಂದು ಬಳಗವ ಬೆಸೆಯಬೇಕಣ್ಣಾ | ನಾವೆಲ್ಲೆ ಹೋದರೂ
ನಂಟು ದಾರಿಯ ಹಿಡಿಯಬೇಕಣ್ಣಾ | ಎಲ್ಲರ ಮನದಿ ಕೂಡಬೇಕು
ಎಲ್ಲಾರೊಳಗೊಬ್ಬನಾಗಿ ತಾನೂ ಎಲ್ಲಾರಂತಿರಬೇಕಣ್ಣಾ || ಊ ||2||
ಅಕ್ಕ ತಂಗಿಯ ನೆನೆಯಬೇಕಣ್ಣಾ | ನಾವೆಂತಿದ್ದರೂ
ಅವರ ಪ್ರೀತಿಯ ಗಳಿಸಬೇಕಣ್ಣಾ | ತವರು ಪ್ರೀತಿ ನೀಡಬೇಕು
ಅವರ ನೆಮ್ಮದಿ ನೋಡಿ ನಾವೂ ನೆಮ್ಮದಿ ಕಾಣಬೇಕಣ್ಣಾ || ಊ ||3||
ಊರಿಗೆ ನಾನೋಗಬೇಕಣ್ಣಾ | ನಮ್ಮೂರ ದೇವಿಯ
ದರುಶನವ ಪಡೆಯಬೇಕಣ್ಣಾ | ಎಲ್ಲರೂ ಚಿತ್ತ ಮನದಿ
ಕೇಜಿಗಮ್ಮನ ಪಾದ ಸೇರಿ ನಾವು ಮುಕ್ತರಾಗಬೇಕಣ್ಣಾ || ಊ ||4||

ಮೊದಲು ಪಾಡುವೆ ನಾ ಸದಮಳ ಗುರುವಿನ
ಮೊದಲು ಪಾಡುವೆ ನಾ ಸದಮಳ ಗುರುವಿನ
ಚದುರ ಮತಿಗಳನು ಬಲಗೊಂಡು | ಈ ತತ್ವ
ಪದಗಳನು ಮುದದಿಂದಾ ||ಪ||
ಆಕಾಶದೊಳಗಣ ಜ್ಯೋತಿಯ ಪ್ರಭೆ ಬಂದು
ಲೋಕಂಗಳೊಳಗೆ ಮುಸುಕಲು | ಅದ ಕಂಡು
ಏಕಾಂಗಿಯಾದ ನಾ ಮುಕ್ತನಾದೆ ||1||
ನೂರೊಂದು ಮಣೆಯನ್ನು ಮೂರು ಭಾಗವ ಮಾಡಿ
ಮೂರು ಪುರುಷರಿಗೆ ಅಳವಡಿಸಿ | ಮೂವರನು
ಸೇರಿ ನಾನಳಿದು ಬಯಲಾದೆ ||2||
ಕೋಟಿ ರವಿಶಶಿಗಳಿಗೆ ನೀಟಾದ ಪ್ರಭೆ ಬಂದು
ನಾಟೀತು ಎನ್ನ ಮನದೊಳಗೆ | ಅದರಿಂದ
ದಾಂಟೀದೆ ಭವದ ಕೊಳಗಳನು ||3||
ಆರು ಮುಖದ ಮುತ್ತು ನೀರೊಳಗಿರಿಸಲು
ನೀರಳಿದು ಮುತ್ತುಳಿಯಲು | ಆ ಮಣಿಯು
ಸೇರಿತು ಎನ್ನ ಪುರದೊಳಗೆ ||4||
ಹಿತ್ತಲ ಬಾಗಿಲ ತೆಗೆದು ಸತ್ತವನ್ನೆಬ್ಬಿಸಿರಿ
ಹೆತ್ತಮ್ಮನ ಕರವ ಪಿಡಿದು | ಅವಳಾಗ
ಕೊಟ್ಟಾಳು ತನ್ನ ಪದಕವ ||5||
ಪಶ್ಚಿಮದ ಕೊಳದಲ್ಲಿ ಅಚ್ಚ ತಾವರೆ ಅರಳಿ
ನಿಚ್ಚಳದ ಗಂಧಬೆಸೆಯಲು | ಅದ ಕಂಡು
ಸತ್ ಚಿತ್ತದ ಭ್ರಮರವೆರಗೀತು ||6||
ಕುಂಡಲಿಯ ಸರ್ಪನು ಕೊಂಡು ಮೇಲಕ್ಕೆ ತಗೆಯೆ
ಮಂಡಲವು ಮೂರು ಬೆಳಗಾಗಿ | ನಡೆವಾಗ
ಅಖಂಡ ಜ್ಯೋತಿಯೊಳು ಬಯಲಾದೆ ||7||
ನೆಲೆಯಿಲ್ಲದ ತೋಟದಲಿ ಎಲೆಯಿಲ್ಲದ ಗಿಡಹುಟ್ಟಿ
ಫಲವಿಲ್ಲದ ಹಣ್ಣು ತಳೆದಿರಲು | ಅದ ಕಂಡು
ಮೆಲಲಿಲ್ಲದೆ ಸವಿದೇನೊ ||8||
ಸಪ್ತ ಸಾಗರ ಬತ್ತಿ | ಹತ್ತು ಹಂಸೆಯು ಸತ್ತು
ಮುತ್ತು ಮಾಣಿಕವು ತಲೆದೋರೆ | ಅದ ಕಂಡು
ಸತ್ತವನೆದ್ದು ಕುಣಿದಾನು ||9||
ಹತ್ತು ಸಾಗರದಲ್ಲಿ ಮತ್ತೆ ಸ್ನೇಹವ ಮಾಡಿ
ಹತ್ತೊಂದು ತೆರದ ಉಣಿಸುಗಳ | ನಾನುಂಡು
ಕತ್ತಲೆಯಳಿದು ಬಯಲಾದೆ ||10||

ಗುರುವಿನ ಮಹಿಮೆ ಗುರುಭಕ್ತರೆ ಬಲ್ಲರು ಚಂದಮಾಮ
ಗುರುವಿನ ಮಹಿಮೆ ಗುರುಭಕ್ತರೆ ಬಲ್ಲರು ಚಂದಮಾಮ
ಮೂಢ ನರರೇನು ಬಲ್ಲರು
ನಡು ರಂಗದ ಜ್ಯೋತಿಯ ಚಂದಮಾಮ ||ಪ||
ತಡರು ಗಾತ್ರದ ಮರ ಕುದುರೆ ಗಾತ್ರದ ಹೂ ಚಂದಮಾಮ
ಆನೆ ಗಾತ್ರದ ಕಾಯಿ ಒಂಟೆ ಗಾತ್ರದ ಹಣ್ಣು ಚಂದಮಾಮ
ಕಣ್ಣಿಲ್ಲದಾತನು ಕಂಡವನೆ ಆ ಮರದ ಚಂದಮಾಮ
ಕೈಯಿಲ್ಲದಾತನು ತಬ್ಬವನೆ ಆ ಮರವ ಚಂದಮಾಮ
ಮೂಢ ನರರೇನು ಬಲ್ಲರು
ನಡುರಂಗದ ಜ್ಯೋತಿಯ ಚಂದಮಾಮ ||1||
ಕಾಲಿಲ್ಲದಾತನು ಹತ್ತವನೆ ಆ ಮರವ ಚಂದಮಾಮ
ಕೈಯಿಲ್ಲದಾತನು ಕಿತ್ತವನೆ ಆ ಹನ್ಣು ಚಂದಮಾಮ
ತಳವಿಲ್ಲದ ಪುಟ್ಟಿಯಲ್ಲಿ ಇಟ್ಟವನೆ ಆ ಹಣ್ಣು ಚಂದಮಾಮ
ಶಿರವಿಲ್ಲವಾದತನು ಹೊತ್ತವನೆ ಆ ಹಣ್ಣ ಚಂದಮಾಮ
ಮೂಢ ನರರೇನು ಬಲ್ಲರು
ನಡುರಂಗದ ಜ್ಯೋತಿಯ ಚಂದಮಾಮ ||2||
ಸತ್ತು ಹುಟ್ಟುವ ಸಂತೇಲಿಟ್ಟವರೆ ಆ ಹಣ್ಣ ಚಂದಮಾಮ
ಕಾಸಿಲ್ಲದಾತನು ಬೆಲೆ ಮಾಡಿದ ಆ ಹಣ್ಣ ಚಂದಮಾಮ
ಬೆರಳಿಲ್ಲದಾತನು ಕುಟುಕಿ ನೋಡಿದ ಆ ಹಣ್ಣ ಚಂದಮಾಮ
ಚಾಕಿಲ್ಲದಾತನು ಕುಯ್ದು ಆ ಹಣ್ಣ ಚಂದಮಾಮ
ಮೂಢ ನರರೇನು ಬಲ್ಲರು
ನಡುರಂಗದ ಜ್ಯೋತಿಯ ಚಂದಮಾಮ ||3||
ಚಾಕಿಲ್ಲದಾತನು ಕುಯ್ದ ಮೇಲೆ ಆ ಹಣ್ಣ ಚಂದಮಾಮ
ನಾಲಗಿಲ್ಲದಾತನು ರುಚಿಯ ನೋಡಿದ ಆ ಹಣ್ಣ ಚಂದಮಾಮ
ಅಂಗುಳಿಲ್ಲದಾತನು ನುಂಗ್ಯಾನೆ ಆ ಹಣ್ಣು ಚಂದಮಾಮ
ಮರದಲ್ಲಿ ಮರ ಹುಟ್ಟಿ ಮರ ಮಾಯವಾಯಿತೋ ಚಂದಮಾಮ
ಮೂಢ ನರರೇನು ಬಲ್ಲರು
ನಡುರಂಗದ ಜ್ಯೋತಿಯ ಚಂದಮಾಮ ||4||

ಶಿವಶಿವ ಎನ್ನುತ ನುಡಿಯಮ್ಮಾ
ಶಿವ ಶಿವ ಎನ್ನುತ ನುಡಿಯಮ್ಮಾ
ನೀನು ಹರಹರ ಎನ್ನುತ ನಡೆಯಮ್ಮ
ನಿನ್ನ ನಡೆನುಡಿ ಒಂದಾಗಿ ನಡೆದರೆ
ಪಡೆದು ಪದವಿ ಸುಖ ಹೊಂದಮ್ಮ ||ಪ||
ಹುಟ್ಟಿದ ಮೂಲವ ತಿಳಿಯಮ್ಮಾ
ನಿನ್ನ ಮುಟ್ಟಿನ ದೇಹವ ಮರೆಯಮ್ಮ
ಪಟ್ಟಣ ಕಾವೇರಿ ನದಿಯಲ್ಲಿ ಮುಳುಗಿದರೆ
ಮನವು ಶುದ್ಧವಾಗುತ್ತೈತಿ ತಿಳಿಯಮ್ಮ ||1||
ಪರ್ವತಕ್ಕೋದರೂ ಇಲ್ಲಮ್ಮ
ಪರ ಪುರುಷನ ಕೂಡಿದರೆ ಇಲ್ಲಮ್ಮ
ಪರಮ ಪ್ರಸಾದವ ನೆಲೆಯನು ಅರಿತರೆ
ಪರಶಿವನೆ ಸತಿ ನೀನಮ್ಮ ||2||
ತಿರುಪತಿ ಯಾತ್ರೆಯೊಳಿಲ್ಲಮ್ಮ
ನೀನು ತಿರುತಿರುಗಿ ಬಹು ನೊಂದ್ಯಮ್ಮ
ತಿರುಗುವ ತಿರುಪತಿ ನೆಲೆಯನು ಅರಿತರೆ
ತಿರುಗಿ ಬರುವುದೇನು ಇಲ್ಲಮ್ಮ ||3||
ಖಂಡಿತ ಮಾತದು ಬೇಡಮ್ಮಾ
ಅದ ಕಂಡವರಿಲ್ಲ ಕೇಳಮ್ಮಾ
ಖಂಡಿತ ಮಾಡುವ ಜಾಗವನು ಅರಿತರೆ
ಅಖಂಡ ಮೂರುತಿ ನೀನಮ್ಮ ||4||

ತನುವಿನೊಳಗೆ ಅನುದಿನವಿದ್ದು
ತನುವಿನೊಳಗೆ ಅನುದಿನವಿದ್ದು
ಎನ್ನ ಮನಕ್ಕೊಂದ ಮಾತ ಹೇಳದೆ ಹೋದೆ ಹಂಸ ||ಪ||
ಹಳ್ಳ ಕೊಳ್ಳದ ಮಧ್ಯ ತಂಪಿನ ಬಳ್ಳಿ ಹುಟ್ಟಿ
ಬಳ್ಳಿಯ ಹಣ್ಣು ನೆಲಕ್ಕುದುರಿ ಹೋಗುವಾಗ
ತನ್ನ ಬಳ್ಳಿಗೊಂದ ಮಾತ ಹೇಳದೆ ಹೋದೆ ಹಂಸ ||1||
ಕಾಯದೆ ಕೊಂಬೆ ಮೇಲೆ ಮಾಯಾದ ಗಿಳಿ ಕುಳಿತು
ಕಾಯವ ಬಿಟ್ಟು ಗಿಳಿ ಹಾರಿ ಹೋಗುವಾಗ
ತನ್ನ ಕಾಯಕ್ಕೊಂದ ಮಾತ ಹೇಳದೆ ಹೋದೆ ಹಂಸ ||2||
ಗಾಳಿ ಪಂಜರದಂತೆ ಮಾಳಿಗೆ ಮನೆ ಮಾಡಿ
ಗಾಳಿಯೂ ಬೀಸಿ ಎಲೆ ತೂರಿ ಹೋಗುವಾಗ
ಎನ್ನ ತಾಳಿಗೊಂದ ಮಾತ ಹೇಳದೆ ಹೋದೆ ಹಂಸ ||3||
ಕಾರೆಂಬೊ ಕತ್ತಲಲ್ಲಿ ಬೋರೆಂಬೊ ಮಳೆ ಸುರಿದು
ಕೆರೆಕಟ್ಟೆ ಬಯಲಾಗಿ ಹೋಗುವಾಗ
ತನ್ನ ಬಯಲೀಗೊಂದ ಮಾತ ಹೇಳದೆ ಹೋದೆ ಹಂಸ ||4||
ಆಯುಳ್ಳ ಗಿಡದ ಮೇಲೆ ಛಾಯುಳ್ಳ ಗಿಳಿ ಕುಳಿತು
ಪಕ್ಷಿ ಮಾಡಿತು ಮರಿಗಳ ಸುಖದಲ್ಲಿ
ಪಕ್ಷಿಗೆ ಸಾವು ಬಂದು ಪಕ್ಷಿ ಹಾರಿ ಹೋಗುವಾಗ
ಪಕ್ಷಿಗೊಂದ ಮಾತ ಹೇಳದೆ ಹೋದೆ ಹಂಸ ||5||
ನೀರುಳ್ಳ ಕೆರೆಯನು ಏರಿಯು ತಡೆದಂತೆ
ನೀನೆ ನನ್ನ ತಡೆದೆ ಹೇ ದೇಹವೇ
ಏರಿಯು ಒಡೆದು ನೀರರ್ಹಿದು ಹೋಗುವಾಗ
ತನ್ನ ಏರಿಗೊಂದ ಮಾತ ಹೇಳದೆ ಹೋದೆ ಹಂಸ ||6||
ಹಳ್ಯಾದ ಕೆರ‍್ಯಾಗ ಪುಣ್ಯಾದ ಸ್ಥಳದಲ್ಲಿ
ಬಳ್ಳಿ ಬಿಟ್ಟಿತ್ತು ಹೂವು-ಕಾಯಿಗಳ
ಬಳ್ಳಿಯ ಒಡೆಯ ಕುಯ್ಕೊಂಡು ಹೋಗುವಾಗ
ತನ್ನ ಬಳ್ಳಿಗೊಂದ ಮಾತ ಹೇಳದೆ ಹೋದೆ ಹಂಸ ||7||

 

ಅನುದಿನದಲಿ ತನುವ ಸೂರೆಗೊಂಡೆ
ಅನುದಿನದಲಿ ತನುವ ಸೂರೆಗೊಂಡೆ
ಎನಗೊಂದು ಮಾತ್ಹೇಳು ಜೀವವೆ ||ಪ||
ಘನಕೋಪದಿಂದ ಬಂದು ಯಮರೆಳೆದೊಯ್ವಾಗ
ನಿನಕೂಟ ಯಾತರ ಮಾತು ಕಾಯವೆ| ||ಅಪ||
ಬೆಲ್ಲದ ಹೇರಿನಷ್ಟು ಬಂದೈತೆ ಬಂಧುಬಳಗ
ನಿಲ್ಲು ಮಾತಾಡ್ತೀನಿ ಜೀವವೆ
ನಿಲ್ಲಗೆಡದೆ ಬಂದು ಯಮರೆಳೆದೊಯ್ವಾಗ
ಬೆಲ್ಲ ಬೇವಾಯಿತು ಕಾಯವೆ ||1||
ಸಕ್ಕರೆ ಹೇರಿನಷ್ಟು ಸವಿದುಂಡೆ ಹಾಲುಮೊಸರು
ಬಿಟ್ಟೆಲ್ಲ ಹೋಗ್ತಿಯಾ ಜೀವವೆ
ದುಃಖಗೊಡದೆ ಬಂದು ಯಮರೆಳೆದೊಯ್ವಾಗ
ಸಕ್ಕರೆ ಇಸವಾಯಿತು ಕಾಯವೆ ||2||
ಅಂದಾಣದೈಶ್ವರ್ಯ ದಂಡಿಗೆ ಪಲ್ಲಕ್ಕಿ
ಮಂದಗಮನೆಯಾರು ಜೀವವೇ
ಮಂದಗಮನೆಯಾರು? ಮಡದಿ ಮಕ್ಕಳ್ಯಾರು
ಬಂದಂತೆ ಹೋಗ್ತೀನಿ ಕಾಯವೆ ||3||
ಹುಟ್ಟಿದ್ದು ಹೊಲೆಯೂರು ಬೆಳೆದಿದ್ದು ಮೊಲೆಯೂರು
ಹೋಗ್ತೀನಿ ಕಾಡೂರಿಗೆ ಕಾಯವೆ
ಸೃಷ್ಟಿಗಧಿಕವಾದ ಬಸವಾದಿ ಪ್ರಮಥರ
ಮುಟ್ಟಿ ಪೂಜಿಸು ನೀನು ಕಾಯವೆ ||4||

ಎಂಥ ಸೋಜಿಗವಾಯಿತಲೆ ಕಾಂತೆ
ಎಂಥ ಸೋಜಿಗವಾಯಿತಲೆ ಕಾಂತೆ
ಇದರಂತಸ್ತವನ್ನು ಕೇಳೆ ಮತಿವಂತೆ ||ಪ||
ಹೂವೊಂದು ಉಡವನು ಹಡದೀತು
ಬರುವ ಕೋಟಿಗಳೆಂಟನು ಬಡದೀತು ||1||
ಪ್ರಾಣವಿಲ್ಲದ ಶಿಶು ಹುಟ್ಟೀತು
ಹೆತ್ತ ಬಾಣಂತಿಯನು ನುಂಗಿಬಿಟ್ಟೀತು ||2||
ಕೋಗಿಲೆ ಗಿಡುಗನ ಕೊಂದೀತು
ಚಿಕ್ಕ ಮೊಲ ಬೇಟೆನಾಯಿಗಳ ಕಚ್ಚೀತು ||3||
ಕಾಗೆಗೂಗೆಯ ತಿಂದು ತೇಗೀತು
ಕಂಡ ಬೋಗಿಯ ಹೆಡೆಯೆತ್ತಿ ತೂಗೀತು ||4||

ಸೋಬಾನವೆನ್ನೀರೆ ಸೋಬಾನವೆನ್ನೀರೆ
ಸೋಬಾನವೆನ್ನೀರೆ ಸೋಬಾನವೆನ್ನೀರೆ
ಸೋಬಾನ ಎನ್ನಿ ಶಿವ ಎನ್ನಿ ಸೋಬಾನವೇ ||ಪ||
ಸೋಬಾನದ ಸೊಬಗನ್ನ ನರರೇನು ಬಲ್ಲರು
ತಾ ಬಲ್ಲ ತನ್ನ ತಿಳಿದಾತ ಬಲ್ಲ ಸೋಬಾನವೇ ||1||
ಧರೆಯ ರಕ್ಷಣೆಗಾಗಿ ನರನ ರೂಪವ ಧರಿಸಿ
ಧರಣಿಗುಪಕಾರಿ ಗುರುರಾಯ ಸೋಬಾನವೇ ||2||
ಸಂಸಾರ ಸಂಕಟ ಹತ್ತಿ ಧ್ವಂಸವಾಗ್ವದು ಕಂಡು
ಕಂಸಾರಿ ನಿಮಿತ ಗುರುಬಂದ ಕೈಹಿಡಿದು
ಎನ್ವೊಂಶ ಉದ್ಧಾರ ಮಾಡಿದನೆ ಸೋಬಾನವೇ ||3||
ಗುರುವಿನ ಗುಪ್ತದಲ್ಲಿ ಇರುವ ಶರೀರಕ್ಕೆ
ಮರುಳ್ಹುಟ್ಟುವ ಚಿಂತೆ ಮೊದಲಿಲ್ಲ ಸೋಬಾನವೇ ||4||
ಮರುಳ್ಹುಟ್ಟುವ ಚಿಂತೆ ಮೊದಲಿಲ್ಲ ಯಮರಾಯ
ಮರತೊಮ್ಮೆ ಮುಟ್ಟಲರಿಯನೆ ಸೋಬಾನವೇ ||5||
ಅಂತರಂಗದ ಪ್ಯಾಟೆ ಸಂತಿಗ್ಹೋದನೆ ತಂಗಿ
ಚಿಂತಿಸಲದೆಕೊಂಡೆ ರತುನಾವ ಸೋಬಾನವೆ ||6||
ಚಿಂತಿಸದಲೆ ಕೊಂಡೆ ರತುನಾದ ಬೆಳಕೀಲೆ
ಕಾಂತೆ ಕೇಳವ್ವ ಕೌತುಕವ ಸೋಬಾನವೆ ||7||
ಕಂಗಳ ಮುರನ ಕಂಡೆ ಮಂಗಳಾತ್ಮನ ಕಂಡೆ
ಗಂಗೆಯ ಕಂಡು ಗವಿಹೊಕ್ಕು ಸೋಬಾನವೆ ||8||
ಗಂಗೆಯನೆ ಕಂಡು ಗವಿಹೊಕ್ಕೆ ಗುರುಪಾದ
ಎನ್ನಂಗದೊಳು ಕಂಡು ಮಯ್ಯ ಮರತೆ ಸೋಬಾನವೆ ||9||
ಭಕ್ತಿ ಭಾವಗಳಿಂದ ಯುಕ್ತಿ ಸಂಗ್ರಹ ಮಾಡಿ
ಮುಕ್ತಿಯ ತವರು ಮನೆಗ್ಹೋದೆ ಸೋಬಾನವೆ ||10||

ಅಂತಃಕರುಣಿ ನೋಡೆನ್ನ ಗುರುರಾಯಾ
ಅಂತಃಕರುಣಿ ನೋಡೆನ್ನ ಗುರುರಾಯಾ
ತನ್ನಂತೆ ಮಾಡಿದೆ ಎನ್ನ ಕಾಯಾ ||ಪ||
ಭೃಂಗ ಸಂಗದಿ ಕ್ರೀಡಿದಗಳಿದಂತೆ
ಮಂಗಳಾತ್ಮಕ ಹೊಗಿ ಬೆರಿವಂತೆ
ಹಿಂಗಿ ಹೋಯಿತು ತಿರುಗಿ ಬಾರದಂತೆ ||1||
ಮುತ್ತೊಂದು ಚಿಪ್ಪಿನೊಳಗೆ ಪುಟ್ಟಿದಂತೆ
ಚಿತ್ತದೊಳಗೆ ಚಿನ್ಮಯ ಬೆರೆದಂತೆ
ಮುತ್ತು ಕೊಟ್ಟನು ಇಟ್ಟುಕೊಳಂತೆ ||2||
ಅಂತಾದಿಂಥಾದೆಂಬುದು ಮನಸಿಗೆ ತಾರೆ
ಎತ್ತ ನೋಡಿದರೂ ಹಂಸ ಉದ್ಧಾರಾ
ನಿಶ್ಚಿಂತನಾದ್ಯನು ಮೌನಧೀನ ||3||

ಹಾ ಸಂಬಂಧಾ
ಪುರ ಪರಮೇಶನ ವರಶಾಸನ ವಸು
ಶರದೊಳು ನೋಡಿ ಸಂಭ್ರಮದಿಂದ
ಬರಿದಾನಂದದೊಳಿರವೋಲಾಡುವ
ಗುರು ಮಹಿಮೆಯು ಹಾ ಸಂಬಂಧಾ ||1||
ಹಿಮ್ಮೆಟ್ಟಿದ ದರುಶನಕರವಾದಾಂತು
ಹೆಮ್ಮೆಯ ತಪವೆಂಬ ತಳವೂರಿ
ಘಮ್ಮನೆ ದುರಿತವೆಂಬರಿಗಳ ಜಯದೊಳು
ಗಿಮ್ಮಡಿಸುವ ಕಲಿ ಹಾ ಸಂಬಂಧಾ ||2||
ಜನರೂಪಿನ ಹೊಸ ದೊರೆಗಳನೋಲೈಸಿ
ಮನವೊಲಿದೆರಗಿ ಮಜ್ಜರೆಡಿಂದಾ
ಕನಲಿ ಬದ್ಧದ ಮನುಜ ನಿಜಸೇವೆಯ
ನನುಗೋದಿಸುವ ಕಲಿ ಹಾ ಸಂಬಂಧ ||3||
ಸಲೆ ಜಿನರಾಜ ಎನ್ನೊಡೆಯನೆ ಗತಿಯೆಂದು
ತೊಲಗೆಲಾ ತಂತುಪ ಕಂಡಕವೆಂಬ
ಬಲುಗಯ್ಯ ಬಂಡನ ಗೆಲಿದು ಗಂಡೇರುವ
ಸಲೆ ಬಿರುದಿನ ಕಲಿ ಹಾ ಸಂಬಂಧ ||4||
ಕುಂದದೆಸೆ ನೆಗೆವದಾ ಪಟ್ಟಾಂಬರಕೆ
ಚಂದಿರ ಲಕ್ಷ್ಮೀಸೇನ ಬರೆವ
ಚಂದದಿಂದ ಕೊಪಣಿದಿ ಆರಾಧಿಸುವ
ಚಂದ್ರನಾಥನ ಹೊಸ ಹಾ ಸಂಬಂಧ ||5||

ಇದು ಏನ ಪೇಳಲಿ ಗುರುರಾಯಾ
ಇದು ಏನ ಪೇಳಲಿ ಗುರುರಾಯಾ
ನೋಡ ನೋಡುತ ಕಳದೆಲ್ಲೊ ಮಾಯಾ ||ಪ||
ನರದೇಹ ನಾನೆಂಬುದಿತ್ತು ಮರವು
ನೀನೇ ಬ್ರಹ್ಮೆಂದು ತೋರಿದಿ ಅರವು ||1||
ತತ್ವಮಸಿ ಮಹಾವಾಕ್ಯವು ಕೇಳಿ
ಹಾರಿಹೋಯಿತು ದ್ವೈತದ ಧೂಳಿ ||2||
ಮಾಣಿಕ ಪ್ರಭು ಪೆಸರಾದದ ಲೋಪ
ಉಳಿತು ಆ ಸಚ್ಚಿದಾನಂದ ಸ್ವರೂಪಾ ||3||

ಬ್ರಹ್ಮಾನಂದದ ಸಭೆಯೊಳಗೆ
ಸುಮ್ಮನಿಹುದದೇನಯ್ಯ
ಊಡಿದರುಣ್ಣದು ಒಡನೆ ಮಾತಾಡದು ||ಪ||
ಕಾಡದು ಬೇಡದು ಕಂಗೆಡದು
ನಾಡಮಾತ ಬಲ್ಲುದು ಬಂದಾಡದು
ನೋಡಿದಡಿಂತಹುದೇನಯ್ಯ ||1||
ಆದಿಮೊದಲಿಲ್ಲದು ಆರಿಗೆ ತಿಳಿಯದು
ನಡೆದು ನುಡಿ ಎಲ್ಲವ ಕಡೆಗಿಡದು
ಪೋಪವಿಯೊಳಗನುಭಾವಿಗಳೊಳಗಿಹ
ಬೆಡಗ ತಿಳಿವಡಾರಿಂಗಳವಲ್ಲ ||2||
ನಿಲ್ಲದು ನಿಲುಕದು ಎಲ್ಲರ ನೋಡದು
ಸೊಲ್ಲಿಗೆ ನಿಲುಕದು ಸೋಜಿಗವು
ಬಲ್ಲ ಮಹಾಗುರು ಸಂಗನ ಶರಣರ
ನಿಲ್ಲದೆ ಕೂಡಿದಡಲ್ಲಿಹುದು ||3||

ಹುಚ್ಚು ಹಿಡಿಯಿತು
ಹುಚ್ಚು ಹಿಡಿಯಿತು ಎನಗೆ ಹುಚ್ಚು ಹಿಡಿಯಿತು
ನಿತ್ಯ ನಿತ್ಯದಲ್ಲಿ ಪ್ರಣಮ ನಾದವನ್ನು ಕೇಳಿ ಕೇಳಿ ||ಪ||
ಸಚ್ಚಿದಾನಂದ ದ್ವಯಾಬ್ದಿ, ಮುಚ್ಚಿ ಮುಸುಕಿ ಮುಂದುವರಿದು
ಬಚ್ಚ ಬರಿಯ ಬ್ರಹ್ಮದೊಳಗೆ ಸ್ವಚ್ಛವಾಗಿ ಚರಿಸುವಂತ ||1||
ಅಂಗದೊಳಗೆ ಲಿಂಗ ಬೆರದು ಲಿಂಗದೊಳಗೆ ಅಂಗ ಬೆರೆದು
ಮಂಗಳಾತ್ಮಕನಾಗಿ ಮಾಯ ಹಂಗ ಹರಿದು ಚರಿಸುವಂತ ||2||
ನಾನು ನೀನು ಎಂಬ ಭೇದ ಏನು ಇಲ್ಲದೆ ಮೌನವಾಗಿ
ಸ್ವಾನುಭಾವದೊಳಗೆ ಮುಳುಗಿ ಸ್ವಚ್ಛವಾಗಿ ಚರಿಸುವಂತ ||3||
ಅಂಗವಾರು ಲಿಂಗವಾರು ಸಂಗವಾರದೊಳಗೆ ನಿಂದು
ಮಂಗಳಾತ್ಮನಾಗಿ ಮಹಾನಂದದೊಳಗೆ ಚರಿಸುವಂತ ||4||
ಬಟ್ಟ ಬಯಲ ತುಟರ್ಟತುದಿಯ ಮೆಟ್ಟಿ ನಿಂದು ನಿಷ್ಠನಾಗಿ
ಶ್ರೇಷ್ಠ ಶ್ರೀಗುರು ಬಸವಲಿಂಗನೊಳಗೆ ಬೆರೆದು ಚರಿಸುವಂತ ||5||

ದುಂಬಿ ಗಾನವು ಪಾಡಿತು
ದುಂಬಿಗಾನವು ಪಾಡಿತು ಎನ್ನೊಳಗೊಂದು
ತುಂಬಿ ಗಾನವು ಪಾಡಿತು ||ಪ||
ಮನಸಿನಾಳದಿ ನಿಂದು ಎನ್ನ ಒಳ-ಹೊರಗೊಂದು
ಗುನುಗುನು ಎಂದು ಘನಗಾನವ ಪಾಡಿತೊಗುನುಗಾಡಿತೊ ||1||
ವನದೊಳೆಲ್ಲಾ ಹಾರಾಡಿಸುಮಧುರ ಸಾರ ಹೀರಿ
ಬಿನದಿ ಆಗಸಕೇರಿಇನಿದು ಗಾನವ ಪಾಡಿತೊಗುನುಗಾಡಿತೊ ||2||
ಮಧುರ ರಸದಿಂದ್ಹುಟ್ಟಿಮಧುರ ಭಾವವು ಹುಟ್ಟಿ
ಮುದಮೋದದಿಂ ಕೊಬ್ಬಿಉದಯರಾಗವ ಹಾಡಿತೊಗುನುಗಾಡಿತೊ ||3||
ಅಂಕೆ ಶಂಕೆಯ ಕಳೆದುಕೊಂಕು ನುಡಿಯವುಳಿದು
ಬಿಂಕ ಬಿಸುಗಳಳಿದುಓಂಕಾರವ ನುಡಿಯಿತೊ ಝೇಂಕಾರವ ಮಾಡಿತೊ ||4||
ತುಂಬಿ ಬಂದಿದೆ ಭಾವವುತಂದೀದೆ ಲೋಕವು
ಚುಂಬಿಸಿ ಜೀವವತುಂಬಿ ಗಾನವು ಪಾಡಿತೋ ಸಂಭ್ರಮಿಸಿ ದುಂಬಿಗಾನವ ಪಾಡಿತೊ ||5||
ಮನಸೀಗೆ ಕಾಣದ ಮಾತಿಗೆ ಮೀರಿದ
ತಾನೆ ತನ್ಮಯವಾದಚಿನ್ಮಯ ನೀನೆಂದು ಮೈಮರದು ಪಾಡಿತೊ ಗಾನವು ಪಾಡಿತೊ ||6||

ನಾದವ ಕೇಳುತ ನಿದ್ರೆಯ ಮಾಡಿದೆ
ನಾದವ ಕೇಳುತ ನಿದ್ರೆಯ ಮಾಡಿದೆನಾ ಬ್ರಹ್ಮನಾದೆ
ನಾದವ ಕೇಳಲು ನಾನಾ ಅವಗುಣಗಳು
ಹೋದವು ತಾವು ನೀಗಿ ||ಪ||
ಕೂಡಲು ದೃಷ್ಟಿಯ ಪರಬ್ರಹ್ಮದೊಳ್ ಅನುದಿನಗಳಲ್ಲಿ
ಹುಡುಕಿದಲ್ಲುವು ಮನ ಇಂದ್ರಿಯಗಳು ಹೋದವು ತಾವೆಲ್ಲಿ ||1||
ನಾನಾ ವರ್ಣದ ಛಾಯವ ಕಾಣುತ ನಿದ್ರೆಯ ಮಾಡಿದೆನು
ಜ್ಞಾನ ಪ್ರಕಾಶನ ಬೆಳಗಿನ ನಾದವ ಕೇಳಿದೆನು ||2||
ಕಾಣದ ರೂಪವು ಕಾಣಬೇಕೆನುತಲಿ ಕಾಮಿಸಿ ಮಲಗಿದೆನೋ
ಜ್ಞಾನಿ ಚಿದಾನಂದ ಸದ್ಗುರುನಾಥನ ಧ್ಯಾನವ ಮಾಡಿದೆನೋ ||3||

ಸುಳಿಸುಳಿದಾಡುತ ಸುಳ್ಳುಹಿನ ಜ್ಯೋತಿಯ
ಸುಳಿಸುಳಿದಾಡುತ ಸುಳ್ಳುಹಿನ ಜ್ಯೋತಿಯ
ಹೊಳೆಹೊಳೆದಾಡುವದೇನಮ್ಮ ||ಪ||
ಸ್ವಾತಿಯ ಮಳೆ ಬಂದು ಚೌತಿ ಮುತ್ತಾದಂತೆ
ನೇತ್ರಕೆ ಬೆಳಗುವುದೇನಮ್ಮ
ಪಾತಕ ತಪ್ಪಿತು ಪರಮಾತ್ಮನಾದನು ಶಿವ
ನಾತುಕೊಂಡೈದನೆ ನೋಡಮ್ಮ ||1||
ಕಣ್ಣಿನೊಳಗೆ ಕಂಡು ದಣ್ಣನೆ ದಣಿಸುವ
ತಣ್ಣಗೆ ಬೆಳಗುವದೇನಮ್ಮ
ಹುಣ್ಣಿಮೆ ಚಂದ್ರಾಮ ಹುಟ್ಟಿದ ಥರದಿ
ತಣ್ಣಗೆ ಬೆಳಗುವದೇನಮ್ಮ ||2||
ಕಂಗಳು ಊರಿನ ಶೃಂಗಾರದ ಬೀದಿಯ
ಶೃಂಗಾರವಾಗುವದೇನಮ್ಮ
ಮಂಗಲ ಮಹಿಮನು ರಂಭಪುರದ ರುದ್ರನು
ಲಿಂಗಕಳೆಗಳು ನೋಡಮ್ಮ ||3||

ಹತ್ತನೆ ಬಾಗಿಲು ತೆರೆದೈತೆ
ಹತ್ತನೆ ಬಾಗಿಲು ತೆರೆದೈತೆ ಅಲ್ಲೆ
ಪುತ್ಥಳಿ ಬೊಂಬೆಯು ನಿಂತೈತಿ ಅಲ್ಲೆ
ಮುತ್ತುರತ್ನವು ಸುರಿದೈತೆ ಬಹು
ಚಿತ್ರ ಪ್ರಕಾಶದಿ ಹೊಳೆದೈತಿ ||1||
ನೇತ್ರದೊಳಗೆ ಮನೆ ಮಾಡೈತೆಪರ
ಸೂತ್ರದ ಬೊಂಬೆ ನಿಂತೈತೆ ನವ
ಧಾತ್ರಿಯಲ್ಲ ಅಲ್ಲೆ ಅಡಗೈತೆಇದು
ಚಿತ್ರ ಪ್ರಕಾಶದಿ ಹೊಳೆದೈತೆ ||2||
ನಿಮ್ಮಂಗದೊಳಗೆ ಶಿವಲಿಂಗೈತೆ
ನಿಮ್ಮ ಕಣ್ಣಳ ಮಧ್ಯೆ ಕಾಣುತಿದೆಇದು
ಮಂಗಳಕರವಾಗಿರುತೈತೆಗುರು
ಚನ್ನಾರೂಢನೊಶವಾಗೈತೆ ||3||

ಅಚ್ಚರಿಯವಾದುದೊಂದ ಕನಸು
ಅಚ್ಚರಿಯವಾದುದೊಂದ ಕನಸ ಕಂ
ಡೆಚ್ಚತ್ತು ಕೊಂಡಿದ್ದೆನವ್ವ
ಮುಚ್ಚಿ ಕೊಂಡೆಚ್ಚರುಡಗಿ ಮೈಮರೆದು
ಹುಚ್ಚಗೊಂಡಿರ್ದೆನಮ್ಮಾ ||ಪ||
ದುಂಡು ಕೋಲಿನ ನಾಳದಿ ಧಗಧಗಿಸಿ
ಕೆಂಡ ಪ್ರಜ್ವಲಿತವಾಗಿ
ರಂಡೆಯೋರ್ವಳು ಕೆಂಡವನುಂಗುವುದ
ಕಂಡು ನಿಬ್ಬೆರಗಾದೆನು ||1|
ಮೂಲಗ್ರಾಮದೊಳು ಕಿಚ್ಚು ಬಲು ಹೆಚ್ಚಿ
ನಾಲಿಗೆಯ ನೀಡಲಾಗಿ
ಸಾಲು ಮನೆಗಳು ಬೇಯಲು ಜ್ವಾಲೆಯಿಂ
ಮೇಲೂರ ನಿಂದುರುಹಿತು ||2||
ನೀರ ಮೇಲಣ ತಾವರೆಗೊಳದೊಳಗೆ
ತಾರಕಿಯನುರಿಯಡರಲು
ತಾರಕಾಗ್ರದಿ ರಂಜಿಪ ಚಂದ್ರಮನ
ಮೀರಿ ತನ್ಮಯವಾಯಿತು ||3||
ಮೀನ ಬಾಯೊಳು ಕಿಡಿಗಳು ಹೊರ ಹೊಮ್ಮಿ
ಭಾನುವೆಲ್ಲವ ಮುಸಕಲು
ನಾನದನು ಕಂಡು ನೋಡಿ ನನ್ನೊಳಗೆ
ನಾನೆ ವಿಸ್ಮಯಗೊಂಡೆನು ||4||
ಜಗವೆಲ್ಲ ಬೆಳಗೆಸೆಯಲು ನಾನೊಂದು
ಪೊಗುವ ದೆಸೆಯನು ಕಾಣದೆ
ಬಿಗಿದಪ್ಪಿ ಗುರುಸಂಗನ ಬೆರೆದು ಮಿಗೆ
ಯಗಲದಿರ್ದೆನು ಭಾವದಿ ||5||

ಬೆಡಗಿನ ಮಾಯ
ಬೆಡಗಿನ ಮಾಯ ಜಗದೊಳಗೊಂದು
ಕಂಡೆನು ಕನಸೊಂದಾ ||ಪ||
ಕನಸಿನೊಳಗೆ ಕನ್ನೆಯು ಬಂದು
ಏನೇನು ಕಥೆಯ ಹೇಳುತ ನಿಂತಳು
ಕೆನ್ನೆಗೆ ಕೆನ್ನೆಯನಿಟ್ಟು ನಲ್ಲ ನೀನಾಗೆಂದಳು ಮಾ
ತನು ನಂಬಿ ಕಣ್ಣನು ಬಿಟ್ಟು ನೋಡಲು ಅವಳೇ ಇಲ್ಲ ||1||
ಕಾಡಿನೊಳಗೆ ನಡೆಯುತ ಹೋಗಲು ಕಂಡೆನು ಅರಮನೆಯೊಂದಾ
ಅಡಿಯನು ಇಟ್ಟು ಒಳಗೆ ಹೋಗಲು
ನೋಡಿದೆ ಹೊನ್ನಿನ ರಾಶಿಯನು
ಸಡಗರದಿಂದಲಿ ಕಣ್ಣನು ಬಿಟ್ಟು ನೋಡಲು ಹೊನ್ನೇ ಇಲ್ಲ ||2||
ಸಂಸಾರವೆಂಬೋ ಸಾಗರದೊಳಗಡೆ ಈಜಲು ಹೋದೆನಲ್ಲಾ
ಈ ಕ್ಷಣತ್ರಯದ ಅಲೆಗಳೇಳಲು
ದಡವನು ಸೇರಲೇ ಇಲ್ಲಾ
ಭಯದೊಳು ಆಗ ಕಣ್ಣನು ಬಿಟ್ಟುನೋಡಲು ಯಾರೂ ಇಲ್ಲ ||3||
ದೂರವ ಬೆಟ್ಟವನೇರುತ ಹೋಗಲು ಕಂಡೆನು ಗುಡಿಯೊಂದಾ
ಹರುಷದಿ ಒಳಗೆ ಹೋಗಲು ಆಗ
ಗಂಟೆಯ ಬಡಿದರು ಗುಡಿಯಲ್ಲಿ
ಆರತಿ ಬೆಳಗಲು ಕಣ್ಣನು ಬಿಟ್ಟು ನೋಡಲು ದೇವರೆ ಇಲ್ಲಾ ||4||
ಇಂಥ ಬೆಡಗಿನ ಜಗವನು ನಂಬುತ ಮೋಸವು ಹೋದೆನಲ್ಲಾ
ಸತತವೂ ಈ ತೆರ ಚಿಂತೆಯ ಮಾಡಲು
ಬಂದನು ನಿತ್ಯಾನಂದನು
ಭ್ರಾಂತಿಯ ಬಿಡಿಸಿ ಕರೀಂಪೀರನಿಗೆ ಸತ್ಯವನೆಲ್ಲಾ ತೋರಿದನಲ್ಲಾ ||5||

ಎಂಥ ಕನಸ ಕಂಡೆನೆ
ಎಂಥ ಕನಸ ಕಂಡೆನೆ ಕೇಳಾ ಸುಜಾಣೆ
ಕಾಂತ ಮುನಿಸುಗೊಂಡನೆ
ಇಂತು ಕನಸು ಕಂಡೇ ಭ್ರಾಂತಿಗೊಂಡಿಹನೆ ಏ
ಕಾಂತದಿ ತಿಳಿಯ ಪೇಳೌ ದಯಾಳೆ ||1||
ಆಲದಮರನೊಂದಕ್ಕೆ ಅತ್ತಿಯ ಕಾಯಿ
ಬಾಳತಂತಿಹುದ ಕಂಡೆ
ಬಾಲೆ ಎನ್ನನುಮಿನ ಲೋಲದೃಷ್ಟಿಗೆ ವೃಕ್ಷ
ಮೂಲವೆ ಬಯಲಾಯಿತೆ ಕೇಳೌ ಸುಜಾಣೆ ||2||
ತುಂಬಿದ ಕೆರೆಯೊಂದಕೆ ಬಾಯಂದೆರೆದಿರ್ಪ
ಒಂಬತ್ತು ತುಂಬ ಕಂಡೆ
ಒಂಬತ್ತರೊಳಗೊಂದು ತುಂಬಿಬಂಧಿಸಲಾಗಿ
ತುಂಬಿದ ಕೆರೆ ಬತ್ತಿತೆ ಕೇಳೌ ಸುಜಾಣೆ ||3||
ಮಡದಿಯರೊಡನಿಲ್ಲದೆ ನಾನೊಬ್ಬಳೆ
ಕೊಡ ನೀರ ತರುತಿರ್ದೆನೆ
ನಡೆವ ದಾರಿಗೆ ಹೊತ್ತ ಕೊಡವೊಗೆದು ನೀರ
ಬಿಡದೆ ಹೊತ್ತಿರುತಿರ್ದೆನೆ ಕೇಳೌ ಸುಜಾಣೆ ||4||
ಊರಲಿಲ್ಲದ ಚೇಳಿಕೆ ಏರಿದ ಬೇನೆ
ಗೂರೆಲ್ಲ ನರಳಿತಲ್ಲೆ
ಬೇರು ಹುಟ್ಟಿ ಎಲೆಯೂರು ಮುಟ್ಟದಹಚ್ಚ
ಊರು ಬೆನ್ನಳಿಯಿತಲೆಯೌ ನೀನೆ ಬಲ್ಲೆ ||5||
ಈ ರೀತಿ ಕನಸಿನೊಳು ನಿಬ್ಬೆರಗಿನಿಂ
ದೊರ್ವಳೆ ಒರಗಿರ್ದೆನೆ
ಸೌರ ಸುಂದರ ಚೆನ್ನವೀರನಪ್ಪಲು ನಿದ್ರೆ
ಹಾರಿ ಕಣ್‍ದೆರೆದೆನಲ್ಲೆ ಇಂತಾಯಿತಲ್ಲೆ ||6||

ಕಂಡೆನಾ ಸ್ವಪ್ನವನು
ಬೆಳಗಪ್ಪ ಜಾವದಲಿ ಕಂಡೆನಾ ಸ್ವಪ್ನವನು
ಇಳೆಗಧಿಕ ಲಕ್ಷ್ಮೀಶನೈಶ್ಚರ್ಯಂಗೆ
ತೊಳತೊಳಗು ಜಪಮಾಲೆ ಬೆರಳಲ್ಲಿರುವತ್ತ
ಫಳಿಲನೆ ಬರುವುದೈ ನಮ್ಮ ಮನೆಗೆ ||ಪ||
ಆದಿಶಾಸ್ತ್ರವ ಬಲ್ಲ ಆಚಾರ್ಯರೈದು ಜನ
ಓದಿಸುವ ಮಕ್ಕಳೀರಾರು ಜನ
ಬೋಧಿಸುವ ಪಂಡಿತರು ನಾಲ್ಕಾರು ಜನ ಸಹಿತ
ಪಾದ ಮಾರ್ಗದಿ ಬರುವ ನಮ್ಮ ಮನೆಗೆ ||1||
ಕಾಮಕ್ರೋಧವ ಬಿಟ್ಟು ಕರದಿ ಸಿಂಚನವ ಪಿಡಿದು
ಸ್ವಾಮಿ ಸರ್ವಜ್ಞರಾಸ್ಥಾನದಿಂದ
ಪ್ರೇಮದಿಂದಲಿ ಬರುವ ನಮ್ಮ ಬಾಗಿಲ ಮುಂದೆ
ಮಾಲೆಯನಿಟ್ಟು ಬರುವದಾ ಕಂಡೆ ||2||
ಬಂದ ಮುನಿಗಳ ನಾನು ವಂದಿಸಿ ಬಲಗೊಂಡು
ಚೆಂದದಿಂದವರ ಬಾವಲಿಯನಿರಿಸಿ
ವಂದನೆಯ ಮಾಡಿ ಮಂದಿರಕೆ ಕರೆದೊಯ್ದು
ಇಂದು ಮುನಿರಾಯ ಬರುವುದಾ ಕಂಡೆ ||3||
ಅಷ್ಟ ವಿಧಾರ್ಚನೆಗಳಿಂದ ಪಾದಪೂಜೆಯ ಮಾಡಿ
ಸಾಷ್ಟಾಂಗವೆರಗಿ ತಾವು ಭಕ್ತಿಯಿಂದ
ಕೊಟ್ಟರವುಂಟೆನಾಗೆಂದು ದಿವ್ಯ ಫಲವನು ಹರಸಿ
ಅಷ್ಟಮದೈಶ್ವರ್ಯ ಆಗಲೆಂದು ಬೆಳಗಿಪ್ಪ ||4||
ಅಂಗಯರೈವರು ಮಂಗಳಾರತಿಯವಿಡಿದು
ಶೃಂಗಾರವಾಗಿ ತಾವು ಭಕ್ತಿಯಿಂದ
ರಂಗುಳೇದಾರುತಿಯತ್ತುವ ಮಾಗಿ ಕೋಗಿಲೆಯಂತೆ
ರಾಗವನು ಪಾಡುತ್ತ ಯೋಗಿ ಸಿದ್ದಾಂತರಿಗೆ ||5||
ಆರತಿಯೆತ್ತಿ ಆಗಮ ಸಿದ್ದಾಂತಯೋಗಿಗಳ
ಧರ್ಮೋಪದೇಶವನು ಯೋಗಿಗಳ
ಉಪದೇಶವನು ಮುಗುಳ್ನಗೆಯಿಂದ ಪೇಳಿದ
ಶ್ರಾವಕ ಸೋಮಗಳಿಗೆ ||6||

ಆನಂದವಾದ ಚಿದ್ ಘನವಸ್ತು ನಾ ಕಂಡೆ
ಆನಂದವಾದ ಚಿದ್‍ಘನವಸ್ತು ನಾ ಕಂಡೆ
ಭಾನುವಿಲ್ಲದ ಬಿಸಿಲೇನಮ್ಮಾ ||ಪ||
ತಾನು ಅಲ್ಲದೆ ತನ್ನ ತವರೂರ ಮನೆಯೊಳು
ಏನು ಮಾಡಿದ ಪುಣ್ಯ ತನಗಮ್ಮಾ ||ಅ.ಪ||
ಸೇರುತ ಉನ್ಮನಿಯೊಳು ಗುರುವಿನ ಪುಣ್ಯದಿ
ಘನವಸ್ತು ದೊರಕಿತು ಎನಗಮ್ಮಾ
ಕೈಲಾಸ ನಗರಲ್ಲ ಕನಕ ಭೂಷಣವಲ್ಲ
ಬೈಲೊಳನಾಡುವೆ ನಾನಮ್ಮಾ ||1||
ನಡುನೀರ ಮಧ್ಯದಿ ವಟವೃಕ್ಷ ಗಿಡ ಕಂಡೆ
ಹೂವುನಿಲ್ಲದ ಮಿಡಿಗಾಯವಮ್ಮಾ
ಮಂಡಲದೊಳಗೊಂದು ನಿಲದಗನ್ನಡಿ ಹಚ್ಚಿ
ಬೈಲೊಳಗಾಡುವುದೇನಮ್ಮಾ ||2||
ಅಖಂಡವನದೊಳು ಅಮೃತ ಕುಂಡನೊರೆ
ಉಂಡುಟ್ಟು ನೀಬಾಳ ಮಾಡಮ್ಮಾ
ವರಕವಿನಾಗಲಿಂಗ ಗುರುವಿನ ಪುಣ್ಯದಿ
ಘನಮೋಕ್ಷ ದೊರಕಿತು ಎನಗಮ್ಮಾ ||3||

ತೂಗುತಾಳೆ ಘನದ ಉಯ್ಯಾಲೆ
ತೂಗುತಾದೆ ಘನದ ಉಯ್ಯಾಲೆ – ಮನದ ಕೊನೆಯ
ಮೇಲೆ ತೂಗುತಾದೆ ಘನದ ಉಯ್ಯಾಲೆ
ಘನಕೆ ಘನವಾದ ಪರಬ್ರಹ್ಮನೆಂಬು ಮಗನ ಹಡೆದು ||ಪ||
ಅರವು ಎಂಬ ತೊಟ್ಟಿಲೊಳಗ ವರವ ಕೊಡುವ ಮಗನ ಹಾಕಿ
ಶರೀರವೆಂಬ ಮನಿಯವಳಗ ಪರಮಸುಖದಿ ಜೋಗುಳಿಟ್ಟು ||1||
ಮುತ್ತಿನ್ಹಾರ ಕೊರಳಿಗ್ಹಾಕಿ ಮುಚ್ಚಿ ತೆರೆದು ಮುದ್ದನಿಟ್ಟು
ಚಿತ್ತ ಶುದ್ಧವಾದ ಚಿದಾಕಾರ ವಸ್ತುಯಿದೆ ಎಂದು ||2||
ತಾನು ತಾನೆ ಆದೆನೆಂದು ತವಕದಿಂದೆ ಎಲ್ಲರ ಕಲೆದು
ಮೌನವಂತ ಹೆಸರನಿಟ್ಟು ಮನಶುದ್ಧನಾಗಿ ನಿಂದು ||3||

ಆರಕ್ಕಾ ಈತನಾರಕ್ಕಾ
ಆರಕ್ಕಾ ಈತನಾರಕ್ಕಾ
ಬಾರೆ ಬಾರೆ ಎಂದು ಎನ್ನಕರೆದು ಮುಟ್ಟಿದನಕ್ಕಾ ||ಪ||
ತಕ್ಕೈಸಿ ಎನ್ನನು ತಾನು ಬರುತಲೆ ಮರುಳ ಮಾಡಿ
ಚಿಕ್ಕವಳ ಸಕ್ಕರೆಯ ಕೋ ಎಂದು ನಗಿವುತಾ
ದಕ್ಕಿದೆ ನಾ ನಿನಗೆ ಮೇಲಕ್ಕೆ ಬಾ ಎಂದೆತ್ತಿಕೊಂಡು
ತೊಕೊತಾ ಶಾಸ್ತ್ರಾರ್ಥದಿಂದಾಕಾರಾದಿ ಬೆರೆದನೆನ್ನ ||1||
ಮಂದಗಮನೆ ನೋಡೆಂದು ಸುಗಂಧ ಕಸ್ತೂರಿಯ ಮೈಗೆ
ಚಂದದಿಂದದಿ ಲೇಪಿಸಿ ಆನಂದವಾಗುತಾ
ಎಂದು ಎಂದೂ ಕಾಣೆ ನಾನು ಇಂತಾ ಸೋಜಿಗಾ ಬೇ
ಕೆಂದು ಎಲ್ಲ ಚವುರಾಶಿ ಬಂಧನಗಳಿಂದಾ ||2||
ಭೇದವೇನಿಲ್ಲದೆ ಎನ್ನನಾದರಿಸೇ ಎಂದು
ಬೋಧಿಸಿದಾ ಎನಗೆ ಕರ್ಣಾಮೃತವಾಗಿರಲು
ಸುದತಿಯೆ ನೀ ಕೇಳು ನಾ ಮುದ್ದು ಸಂಗಮದೇವ
ನೆಂದು ಪೇಳಿ ಎನ್ನ ತನ್ನೊಳಗೆ ಮಾಡಿಕೊಂಡನಲ್ಲೇ ||3||

ಕಾಂತನ ಕಾಣದೆ ನಾ ತಾಳಲಾರೆನೆ
ಕಾಂತನ ಕಾಣದೆ ನಾ ತಾಳಲಾರೆನೆ
ಭ್ರಾಂತಳಾದೆನು ಇಂದು ಸುಂದರಾಂಗ ಬಾರನೆ ||ಪ||
ಇಂದು ಚಂದ್ರಿಕೆಗೆ ಝುಮ್ಮೆಂದಿತು ಕಾಯ
ಮಂದ ಮಾರುತ ಬಂದು ನೊಂದಾಳೆಂದು ಬಾರನೆ ||1||
ಅಂಗಬೌತನ ತಾತ ಅಂಗದಲ್ಲಿ ಅತಿಶಯ
ಹ್ಯಂಗ ತಾಳಲಮ್ಮ ಮಂಗಳಾಂಗ ಮನಿಗೆ ಬಾರನೆ ||2||
ಪರಿಮಳದ್ರವ್ಯದಿ ಮರಗುವೆನೆನ್ನಯ್ಯ
ಅರಸು ಮುಚಖಂಡಿವೀರನೆ ಕರುಣಾಸಾಗರ ಬಾರನೆ ||3||

ಬರಹೇಳೆ ಇಲ್ಲಿಗೆ
ಬರಹೇಳೆ ಇಲ್ಲಿಗೆ ಸಾಗಿ ಬರಹೇಳೆ ಹೇ
ಬರಹೇಳೆ ನನಗೊಂದ ತರಹೇಳೆ ಮುತ್ತಿನ
ಸರವ ಕಾಮಾಟದೊಳಗಿರುವಂಥ ಕುಶಲನ ||ಪ||
ಅಸಿಯಳೆ ಹಬ್ಬಿದ ಲೋಹ ಅವನ
ಹೆಸರ ಹೇಳಿದರೆನಗೆ ವಿರಹ ನವ
ರಸಗಳ ತೋರಿ ನಾಳೆ ಬರುತ್ತಿಹೆನೆಂದು
ನಸುನಗುತಲೆ ಹೋದ ನಾಯಕರನ್ನನು ||1||
ಅರಮನೆಯೊಳಗಿದ್ದರೆ ಲೇಸೆ ಅರಸಿ
ಕರದಲ್ಲಿ ಬಂದರೆ ವಾಸೆ ನಮ್ಮ
ಸರಿಯ ನಾರಿಯರ ಮುಂದೆ ಪರಿಹಾಸ್ಯಗಳನೆ ಮಾಡಿ
ಬರುತ್ತೇನೆಂಬುತಲಿತ್ತ ತಿರುಗಿ ನೋಡದೆ ಹೋದ ||2||
ಅಲರು ಮಾಲೆಗಳ ತೊಟ್ಟಿಹನೆ ಪರಿ
ಮಳದ್ರವ್ಯಗಳ ತಾನಿಟ್ಟಹನೆಬಹು
ಕಲೆಗಾತಿಯರಸಿ ಕಂಡು ಕಿಲಕಿಲನೆ ನಗುವಂಥ
ಸುಲಿಪಲ್ವ ಚೆಲ್ವನ ಸುಳಿದಾಡುತಿಹನೊಮ್ಮೆ ||3||
ಹೇಳಿದರೆ ಕೇಳಿದರೆ ಬಹಳ ಚಂದ ಹೇಳಿ
ಕೇಳದಿದ್ದರೆ ಮುಂದೆ ಬಂದ ಹೀಗೆ
ನಾಳೆ ನಾಡಿದ್ದೆಂದು ವ್ಯಾಳ್ಯವ ಕಳೆದರೆ
ತಾಳೆಲಾರೆನು ನಾನು ತವಕ ಹೆಚ್ಚಿತು ತನ್ನ ||4||

ಮುಗಿದೆ ನಿನಗೆ ಕೈಯ್ಯ
ಮುಟ್ಟದಿರಯ್ಯ ದಮ್ಮಯ್ಯ ಮುಗಿದೆ ನಿನಗೆ ಕೈಯ್ಯ
ನಿಷ್ಟು ಫಲವೇಕಯ್ಯ ಬೇಡದಮ್ಮಯ್ಯ ||ಪ||
ನೆಟ್ಟನೆ ನಾಲ್ವರ ಮುಂದೆ ಬಟ್ಟಗಂಗಳೆ ಬಾರೆಂದು
ತಟ್ಟನೆ ಗಲ್ಲವ ಪಿಡಿದೆ
ಬಾಯೊಳು ಬಾಯನಿಕ್ಕಿ ಚುಂಬನವಗೈದೆ ಬೇಡವೆಂದರೆ
ದಿಟ್ಟತನದಲಿ ಬಂದು ಬಟ್ಟಕುಚನವೆ ಪಿಡಿದೆ ||1||
ಸಾರತ್ತಲೆಂದರೆ ಹಂತೆ ಸೇರಿ ಕದಪಿನೊಳ
ಗೂರಿ ಚಂದುಟಿಯನು ಮೀರಿ ಮೋಹನವನು
ತೋರಿ ಮುಂದುವರಿದು ಮೀರಿ ಹೀಗ
ಧಾರಣಿಯೊಳೆಲ್ಲರ ಮುಂದೆ ಸೆರಗೆಳದೆ ||2||
ನೀರಿನ ತೆರೆಗಳು ಬಲು ಕಾಣಣ್ಣಾ
ತೋರುವ ದಡಗಳು ಮುಟ್ಟಿದವಣ್ಣಾ
ಸಾರಿದ ಮನುಜರ ಮುಳಗಿಸಿ ಬಿಟ್ಟರೆ ಅವ
ರಾಗು ಹೋಗೆಲ್ಲ ನಿನ್ನದಣ್ಣ ||3||
ತೇಪೆಯ ಹರಗೋಲ ಹಾಕಬೇಡಣ್ಣ
ಲೋಪದ ಹರಗೋಲ ಹಾಕೊ ನಮ್ಮಣ್ಣ
ನೋಪೆಯ ನೋನುವೆ ಗುರುಬಸವೇಶನ
ತಾಪವಿಲ್ಲದೆ ದಾಂಟಿಸಣ್ಣ ||4||

ಬೆಳಗಾಯ್ತು ಬಿಡೊ
ಬೆಳಗಾಯ್ತು ಬಿಡೊ
ಬೆಳಗಾಯ್ತು ಬಿಡೊ ಎನ್ನ ಒಂದು
ಗಳಿಗೆಯ ಮೋಹಕ್ಕೆ
ಒಳಗಾದವರ್ಳಿ ಬೇಡ ಕಳೆಯ ಉಳ್ಳಯ್ಯ ಬಿಡೋ ||ಪ||
ರಂಗುದುಟಿಯ ಮೇಲೆ ರತ್ನದ ಕಡೆಗೆಂಪು
ಹಿಂಗಿರಲಾರೆ ಬಿಡೊ ನಿನ್ನ
ಅಂಗದ ಭಾವಕ್ಕೆ ಅತಿ ಮನಸೋತೆನು
ಜಂಗಮ ಪ್ರೇಮಿ ಬಿಡೊ ||1||
ಬಿಗಿದಪ್ಪಿಕೊಳ್ಳಲು ಬೆವತು ತಲ್ಲಣಿಸಿದೆ
ಅಘಹರನೆ ಬಿಡೋ ನಿನ್ನ
ಅಗಲಿದ ಕಾಲಕ್ಕೆ ಶೃಂಗಾರವಾಗಿರ್ದೆ
ನಗೆಮೊಗದಯ್ಯ ಬಿಡೊ ||2||
ಬಟ್ಟಕುಚದ ಮೇಲೆ ಇಟ್ಟವು ನಖರೇಖೆ
ಪಟ್ಟದ ಪ್ರಭುವೆ ಬಿಡೊ
ಸಿಟ್ಟಿಲಿ ನುಡಿದರೆ ಶ್ರೀಗಿರಿಮಲ್ಲ
ಕೊಟ್ಟದ ರಾಚ ಬಿಡೊ ||3||

ಕಳೆದುಹೋಯ್ತು ಕಾಲಾ ತಿಳಿದು ತಿಳಿಯದೆ
ಕಳೆದುಹೋಯ್ತು ಕಾಲಾ ತಿಳಿದು ತಿಳಿಯದೆ ವೃಥಾ ||ಪ||
ಮರವೆ ಇದರ ಮೂಲಾ| ಆಹಾ ಮರವೆ ಇದರ ಮೂಲಾ |
ಪರಮನೊಳಗೆ ಬೆರೆಯದೆ ನಿಜವರಿಯದೆ ಗುರಿತೊರೆದು ವೃಥಾ ||1||
ಬರಿದೆ ಮೋಹಜಾಲಾ | ಅಹಾ ಬರಿದೆ ಮೋಹ ಜಾಲಾ |
ಮರಳಿ ಮರಳಿ ದುರುಳ ವಿಷಯದುರಳಿ ಮನವು ನರಳಿವೃಥಾ ||2||
ಪರಸುಖಾನುಕೂಲಾ | ಆಹಾ ಪರಸುಖಾನುಕೂಲಾ|
ಹರಿಹರಗುರು ಚರಣಯುಗಲ ಸ್ಮರಣೆ ಮರೆದು ತೊರೆದು ವೃಥಾ ||3||

ಶರೀರವೆಂಬೋ ತರುವಿನಲ್ಲೀ
ಶರೀರವೆಂಬೋ ತರುವಿನಲ್ಲೀ | ಇರುವ ಜೀವವೆಂಬೋ ಗಿಳಿಯೂ
ಬರಿದೆ ಮೋಹವೆಂಬೋ ಬಲೆಯೊಳ್ ಭರದಿ ಸಿಕ್ಕಿತೂ ||1||
ಮೂಡಲೋಳು ಸೂರ್ಯಬಿಂಬಾ | ಮೂಡಿ ಅಲ್ಲೇ ಮುಳುಗಲಾಗೀ|
ಗಾಢವಾಗಿ ನೋಡಾ ನೋಡಾ | ಕತ್ತಲಾಯಿತೂ ||2||
ಅಂಧಕಾರದಲ್ಲೀ ಗಿಳಿಯೂ | ಕುಂದಿಕಣ್ಣು ಕಾಣದಿರಲೂ |
ಮುಂದೆ ಇರುವದೊಂದೂ ಭಾವೀಲಿ ಬಂದು ಬಿದ್ದೀತೂ ||3||
ಬಿದ್ದ ಬಳಿಕಾ ಭಾವಿಯೊಳಗೆ | ಇದ್ದ ಕ್ರೂರವಾದ ಭೂತ |
ಎದ್ದು ಬಂದೂ ಮುದ್ದುಗಿಳಿಯಾ | ಪದ್ದು ಕೆಡಿಸಿತೂ ||4||
ಪಂಚಗಿರಿಯಾ ಶಿಖರಾಗ್ರಾದೀ | ಹೊಂಚಿ ಹೊಂಚಿ ನೋಡುವಂತಾ |
ಪಂಚಮುಖದಾ ಭುಜಗೇಂದ್ರಾನಾ | ಬಳಿಗೆ ಸೇರಿತೂ ||5||
ಸೇರಲಾಗ ಆರುವರ್ಣ ಮೀರಿ ಘೋರವಾದ ಹುಲಿಯೂ |
ಮೂರು ಮುಖದೊಳ್ ಜಗವಾನೆಲ್ಲಾ ಮೊದಲೆ ತೋರಿತೂ ||6||
ತೋರಲಾಗ ದೊಡ್ಡ ಕೊಳ್ಳೀ | ನೀರಿನಲ್ಲಿ ಹುಟ್ಟಿ ಬಂದು |
ಬೇರು ಇಲ್ಲದ ಮರವಾ ಸುತ್ತೀ | ಭಾರಿ ಸುಟ್ಟಿತೂ ||7||
ಸುಡುತಲಿರುವ ಸಮಯದಲ್ಲಿ| ಕುಡುಕೆಗಂಗಳೆ ಚಲ್ವೆ ತಂನ್ನ |
ಒಡೆಯನಲ್ಲೀ ಅಡಗಿ ಇರುವಾ ನುಡಿಯ ಕೇಳಿದಳು ||8||
ಕೇಳಲಾಗಸ ನೀರ ಕಮಲನಾಳದಗ್ರ ಭಾಗದಲ್ಲೀ |
ಕೋಳಿ ಕೂಗಲು ಬಾಲೆಯೋರ್ವಳು | ಬಯಲಿಗೆ ಬಂದಳು ||9||
ಬಂದು ಗಿಳಿಗೆ ಸುಂದರವಾದ | ಒಂದು ಮುದ್ದು ನುಡಿಯಾ ಕಲಿಸೀ |
ಎಂದಿಗಿದನು ಮರಿಯಬ್ಯಾಡಾ | ವೆಂದು ಹೇಳಿದಳು ||10||
ಹೇಳಿದಂತಾ ಮುದ್ದು ನುಡಿಯಾ | ಕೇಳುವಾಗ ಉತ್ತರದಿಕ್ಕೂ |
ಧಾಳಿಗೊಂಡೂ ಸೂರ್ಯ ಚಂದ್ರ | ತಾನೇ ಹುಟ್ಟಿದರು ||11||
ಹುಟ್ಟಿಬೆಳೆವ ಪಂಚಗಗನಾ | ಮುಟ್ಟಿ ಬೆಳಗುವ ಬೆಳಕೂ ತುಂಬೀ |
ಬಟ್ಟಬಯಲಿಗೆ ಬಯಲಾದೀತೂ | ಭ್ರಾಂತಿ ಹೋಯಿತೂ ||12||
ತಾನು ತಾನೇ ತಿಳಿಯಲಿಲ್ಲಾ | ತಾನು ತಂನ್ನಾ ಮರಿಯಾಲಿಲ್ಲ|
ಸ್ವಾನುಭವ ತಂನ್ನದೇ ಹರಿಹರ ಗುರುವೇ ತಾ ಬಲ್ಲ ||13||

ನೋಡಿದೇನೈ ನಿನ್ನ ಕೂಡಿದೇನೈ
ನೋಡಿದೇನೈ ನಿನ್ನ ಕೂಡಿದೇನೈ |
ಆಡಿಬರುವ ಜೋಡುಪಕ್ಷಿ ಗೂಡಿನಲ್ಲಿ ಜಾಡ ತಿಳಿದು ||ಪ||
ಮೇಲು ಮಾಲಿನಲ್ಲಿ ಇರುವ ನೀಲ ಮೇಘ ಜಾಲದಲ್ಲಿ |
ಬಾಲಚಂದ್ರ ಮೂಲಕಾಂತಿ ಕೀಲು ತಿಳಿದು ಆಲೆತೆರೆದು ||1||
ಕೋಟೆ ಏಳು ದಾಟಿ ಆರು ತೋಟದೋಳು ಕೋಟಿ
ಕೋಟಿ ಸೂರ್ಯ ಮೇಟಿ ಕಾಂತಿ ಲೂಟಿ ಮಾಡಿ ನೀಟು ಮೂರು ಕೂಟದಲ್ಲಿ ||2||
ದ್ವಾರ ನಾಲ್ಕು ಸೇರಿ ಪೋಗಿ ಮೂರು ಮೂಲೆ ದಾರಿಯಲ್ಲಿ
ತೋರುವಂಥ ಮೇರುಗಿರಿಯ ನೇರಿ ಶಿಖರ ಮೀರಿ ಸಾರಿ ||3||
ಅಂಗಮೂರು ಲಿಂಗದಲ್ಲಿ ಲಿಂಗ ಮೂಲ ಲಿಂಗಭಾವ
ಸಂಗಮಾದ ಲಿಂಗದಿಂದ ಲಿಂಗದೇಹ ಭಂಗ ಮಾಡಿ ||4||
ಗುರುತ ಹಿಡಿದು ಗುರಿಯ ಪಡೆದು ಗುರಿಯಲಿರುವ
ಹರಿಹರಲಿಂಗ ಗುರುವಿನಲ್ಲಿ ಬೆರೆತು ಶರೀರ ಮರೆತು ಪರಮನರಿತು ಬಂದೆ ||5||

ಬಲ್ಲಿದ ಗಂಡನ ಮಾಡಿಕೊಂಡೆ
ಬಲ್ಲಿದ ಗಂಡನ ಮಾಡಿಕೊಂಡೆ
ಇವನಿಂತಲ್ಲಿ ಬಂದುಳಿದುಕೊಂಡೆ ||ಪ||
ದೂರು ಮಾಡಿದನು ಈ ಭವವ ನನಗೆ ಬೇಕಾದಂಥ
ಘನಸುಖದ ಪರಮನೋಳೈಕ್ಯದವರವ
ನಾ ಕಂಡೆ ನಿಜ ಪದವ ||1||
ಚಿತ್ತ ಅವನೊಳು ಸೆಳೆದು ನಿತ್ಯಾನಂದ ಪ್ರಭೆಯಲ್ಲಿ ಸುಳಿದು
ಚಿತ್ತದ ಪೂರ್ಣತ್ವವು ತಿಳಿದು
ಸರ್ವೋತ್ತಮನಾಗಿವುಳಿದು ||2||
ಜಗವೆ ನಾನಾಗಿ ನನ್ನೊಳಗೆ ಜಗ ಸುಳ್ಳಾಗಿ ನಾನೆಂಬುದು ನೀಗಿ
ಬೆಳಕಿಗೆ ಬೆಳಕಾಗಿ ಮನಸಿನ ಕಳವಳ ಪೋಗಿ
ಅಂತರ ಹೃದಯ ಬೆಳಕಾಗಿ ||3||
ಒಳ ಹೊರಗೆಂಬ ಭಾವಹೋಗಿ ಅರುವಿನೊಳು ಅರುವಾಗಿ
ಮೂರು ವಾಸನೆ ದೂರಾಗಿ ನಾಲ್ಕು ಸಾಧನ ಸಾಧಿಸಲಾಗಿ
ಧರೆಯ ಭೋಗ ತ್ಯಾಗಿ ಆದವನೆ ಶಿವಯೋಗಿ ||4||
ಅಕ್ಕಲಕೋಟೆ ಗುರುಸ್ಥಳವಾಗಿ ಶಿವಶರಣರಿಗೆ ಶಿರಬಾಗಿ
ಕರುಣಾರೂಢನೊಳಡಗಿ ಗುಡದನಾಳ ಭೂಪೂರ ಒಂದೇ ಒಂದಾಗಿ
ಎರಡೆಂಬ ಭೇದಹೋಗಿ ಶ್ರೀ ರಾಮಾನಂದನ ಸೇವೆಯು ನಿಜವಾಗಿ ||5||

ಗುರುದೇವ ಗುರುದೇವ
ಗುರುದೇವ ಗುರುದೇವ
ನಿನ್ನ ನೆನಹಿನೊಳಗಿದ್ದವ ಮಹಾದೇವ ||ಪ||
ಪ್ರಪಂಚದ ಹುಚ್ಚು ಬಿಡಿಸಿದಿ ನೀನು
ನಿನ್ನ ಮೆಚ್ಚಿ ಬಂದೆನು ನಾನು
ಸತ್ಸಂಗದಲ್ಲಿಟ್ಟಾತ ನೀನು
ದುಃಸಂಗ ಬಿಟ್ಟಾತ ನಾನು
ನಾನೇ ನೀನು ನೀನೇ ನಾನು
ಒಂದೇ ಬೇರಿಲ್ಲ ದೇವ ||1||
ಆರು ಮೂರು ಅಳಿದವ ನೀನು
ಇವುಗಳ ಸ್ವಾದ ತಿಳಿದವ ನಾನು
ಆಸೆ ಅಳಿದವ ನೀನು
ನಿರಾಸಿಕನಾಗಿ ಬಂದೆ ನಾನು
ಆಸಿಗೆ ಘಾಸಿಯಾದವರುಂಟೆ ಉಂಟಯ್ಯ ||2||
ಮೋಕ್ಷ ಕೊಟ್ಟವ ನೀನು
ಭವಪಾಶ ಬಿಟ್ಟಾವ ನಾನು
ಜಗವುದ್ಧರಿಸುವವ ನೀನು
ಜಗದಿದ್ದು ಮೀರಿದವ ನಾನು
ಗುರುವಿನೊಳು ರಾಮಾನಂದನ ಐಕ್ಯ ನೋಡಯ್ಯ ||3||

ಇದು ಎಂತಹ ಹೇಸಿ ಜೀವನಪ್ಪ
ಇದು ಎಂತಹ ಹೇಸಿ ಜೀವನಪ್ಪ
ಸಂಜೀವರಾಯನ ಬಿಟ್ಟು ಕೆಟ್ಟಿತಪ್ಪ ||ಪ||
ಆತ್ಮರಾಮನಲಿ ಗಂಟು ಇತ್ತಪ್ಪ
ಅನಾತ್ಮನ ಮೆಚ್ಚಿ ಹುಚ್ಚು ಹಿಡಿತಪ್ಪ
ಜೀವನದಲಿ ವಾಸನೆ ಬಿಡದಪ್ಪ
ಸುಳ್ಳು ಗುರುಬೋಧ ಪಡೆದು ಸತ್ತು ಹೋಯಿತಪ್ಪ ||1||
ಜೀವ ಶಿವ ಒಂದೆಂಬ ಭಾವಬಿಟ್ಟು
ಭವಬಾಧೆಗೆ ಒಳಪಟ್ಟು
ಎದ್ದು ಬಾರದಯ್ಯ ಬುದ್ಧಿಗೆಟ್ಟು
ಪುಣ್ಯದ ಗಳಿಕಿ ಈ ಜನ್ಮದಲ್ಲಿಟ್ಟು ||2||
ದೇವರಭೂಪೂರ ಎಂತಹದಪ್ಪ
ಸತ್ಸಂಗದ ರುಚಿ ಕಂಡಾರಪ್ಪ
ದುಃಸಂಗದ ಕೊಳೆ ಕಳೆದಾರಪ್ಪ
ರಾಮಾನಂದ ಶರಣ ಕಂಡು ಹರುಷಿತನಾದಾನಪ್ಪ ||3||

ಗಂಡ ದೊರೆತನವ್ವ ನನಗಿಂಥ ಪುಂಡ ದೊರೆತನವ್ವ
ಗಂಡ ದೊರೆತನವ್ವ ನನಗಿಂಥ ಪುಂಡ ದೊರೆತನವ್ವ
ಚಿಂತಿ ಮರೆಸಿ ಭ್ರಾಂತಿ ಬಿಡಿಸಿ ಭವ ನೀಗಿಸಿದನವ್ವ ||ಪ||
ಶೋಕ ಮೋಹ ಕೆಡಿಸಿ ಮಾಯದ ಮಮಕಾರ ಬಿಡಿಸಿದನವ್ವ
ಹರಿದಾಡುವ ಮನಸು ನಿಲ್ಕು ಮಾಡಿದನವ್ವ
ನಾಶವಾಗದ ವಸ್ತು ಎನಗೆ ತಿಳಿಸಿದನವ್ವ ಯಾರಂಜಿಕಿಲ್ಲವ್ವ ||1||
ಕರುಣದಲಿ ಎನ್ನ ಕೈ ಹಿಡಿದಾನವ್ವ
ನಾಡಿ ಪರೀಕ್ಷೆ ಮಾಡಿದನವ್ವ
ರೋಗಕ್ಕೆ ಐದು ಗುಳಿಗಿ ಕೊಟ್ಟಾನವ್ವ
ಇದು ಭವ ಖಂಡಿತ ವಚನವ್ವ ||2||
ಅಕ್ಕಲಕೋಟಿಯ ಶಾರವ್ವ
ಸದ್ಗುರು ಶರಣನ ನೆನಿಯವ್ವ
ಅರಿವಿನಲಿ ನೀ ನಡೆಯವ್ವ
ಮರೆತಡೆ ಬಂಧನ ಬಿಡದವ್ವ ||3||

ದಾಟಿ ದಾಟಿ ಈ ಭವನದಿ ದಾಟಿ
ದಾಟಿ ದಾಟಿ ಈ ಭವನದಿ ದಾಟಿ
ಗುರುವಿನ ಧ್ಯಾನದಿ ಗುರುತು ಇಟ್ಟು ದಾಟಿ ||ಪ||
ಶ್ರಮದಿಂದ ಕಡಲನು ಕಡೆ ಮಾಡಿ ದಾಟಿ
ತನ್ನರಿವು ಗುರುವಿಗೆ ತಾರಕ ಮೀಟಿ
ಸಾಧನಮಾಡಿ ಸಾಧಿಸಿ ದೀಟಿ
ನಿಜ ಸ್ವರೂಪದ ಸಾಕ್ಷಿಗೆ ಸಾಟಿ ||1||
ಆರು ತೆರೆಗಳು ಒಂದೊಂದು ದಾಟಿ
ಮೂರು ಸುಳಿಗಳು ಮುರಿದು ಮೆಟ್ಟಿ
ರೇಗಿಬರುವ ಎಂಟು ಸೆಳೆವು ದಾಟಿ
ಭೋರೆಂಬ ನಾದ ಬ್ರಹ್ಮದೊಳಿಟ್ಟಿ ||2||
ಧರೆಗೆ ಮಿಗಿಲಾದ ಅಕ್ಕಲಕೋಟಿ
ಶಿವಶರಣರ ಪಾದವಿಡಿ ಬಿಡಬೇಡ ಗಟ್ಟಿ
ಗುಡದನಾಳ ಗ್ರಾಮದಿ ಗುರುಮನಿ ಕಟ್ಟಿ
ಅರುವಿನ ಆಲಯ ಮುಕ್ತಿಗೆ ಮುಟ್ಟಿ ||3||

ಈ ಸಾಗರ ದಾಟಿಸೊ ದೇವ
ಈ ಸಾಗರ ದಾಟಿಸೊ ದೇವ
ನಿತ್ಯ ಮಾಡುವೆ ನಿನ್ನ ಸೇವ ||ಪ||
ಈ ಧರೆಯ ಪೊರೆವ ಅಂಬಿಗನಾಗಿ
ನಾಲ್ಕು ವೇದ ತಂದಿ ಗುರು ರೂಪನಾಗಿ
ಮಾನವ ಜನ್ಮ ಉದ್ಧಾರಕ್ಕಾಗಿ
ಸಾಕ್ಷಾಧೀಶನೆ ನೀನೇ ನೀನಾಗಿ ||1||
ಪೂರ್ವದ ಪುಣ್ಯದ ಫಲವಾಗಿ
ಗುರುಸೇವಕೆ ಶಿರಬಾಗಿ
ಭೋಗದ ಭ್ರಮೆ ನೀಗಿ
ಭವ ಜೀವನ ಸದ್ಗತಿಗಾಗಿ ||2||
ಸಂಸಾರ ಸಾಕಾಗಿ ಬಂದೆ ನಿನ್ನಡಿಗೆ
ಭೂಪೂರ ಗುರುಸ್ಥಳ ರಾಮಲಿಂಗ ದೊರೆಗೆ
ಕರುಣಿಟ್ಟು ಕಾಯೊ ಎನಗೆ
ಶರಣು ಹೊಕ್ಕೆನು ನಿಮಗೆ ||3||

ಧರೆಯ ಭೋಗವ ಬಿಟ್ಟು ಭುವನ ವೈಭವ ಬಿಟ್ಟು
ಧರೆಯ ಭೋಗವ ಬಿಟ್ಟು ಭುವನ ವೈಭವ ಬಿಟ್ಟು
ಗುರುಪಾದ ಸೇವಕ ಬರ್ತೀರಾ ಇಲ್ಲೇ ಇರ್ತೀರಾ ||ಪ||
ವೈರಾಗ್ಯದ ಬಲವ ತೊಟ್ಟು ಆತ್ಮನ ಅಳವಟ್ಟು
ಸತಿಸುತರ ಮೋಹ ಬಿಟ್ಟು ಗಳಿಸಿದಾಸೆಯ ಬಿಟ್ಟು
ಬಂಧು ಬಳಗವ ಬಿಟ್ಟು ಇಷ್ಟ ಮಿತ್ರರ ಬಿಟ್ಟು
ತಂಟೆ ತಗುಲವ ಬಿಟ್ಟು ಬರ್ತೀರಾ ಇಲ್ಲೇ ಇರ್ತೀರಾ ||1||
ಆರು ಮೂರು ಗುಣ ಬಿಟ್ಟು ಅಂತರಂಗದಿ ಗುರಿಯಿಟ್ಟು
ಮೂರು ವಾಸನೆ ಕೆಟ್ಟು ಅಷ್ಟಮದಗಳ ಬಿಟ್ಟು
ದುಷ್ಟರ ಸಂಗ ಬಿಟ್ಟು ತಾಮಸಗುಣ ಸುಟ್ಟು
ಭ್ರಾಂತಿ ಸಂಸಾರ ಬಿಟ್ಟು ಬರ್ತೀರಾ ಇಲ್ಲೇ ಇರ್ತೀರಾ ||2||
ಜಾತಿ ಸೂತಕ ಬಿಟ್ಟು ಅಜಾತನ ಸುಖಪಟ್ಟು
ಸತ್ಯಕ್ಕೆ ಮನಸಿಟ್ಟು ನಿಜ ಭಾವೈಕ್ಯತೆ ನೆಟ್ಟು
ನಿರಾಕಾರದ ನೆಲೆಗಟ್ಟು ತತ್ಮಸಿ ವಾಕ್ಯದ ಗುಟ್ಟು
ಮೋಕ್ಷ ಸಂಪದ ಗಂಟು ಪಡೆಯಲು ಬರ್ತೀರಾ ಇಲ್ಲೇ ಇರ್ತೀರಾ ||3||
ನಾಮರೂಪ ತೋರಿಕೆ ಬಿಟ್ಟು ನಂದು ನಾನೆಂಬ ಪುಸಿಗಂಟು ಬಿಟ್ಟು
ಪರವ ಮನಗಾಣದೆ ಗತಿಗೆಟ್ಟು ಸರ್ವಾತ್ಮನಾಗಿ ಬಾಳುವುದು ಬಿಟ್ಟು
ಸುಳ್ಳುಪೊಳ್ಳಿಗೆ ಲತ್ತಿಪೆಟ್ಟಿ ಸಾಕ್ಷಿಬ್ರಹ್ಮನ ಸ್ಥಿತಿಯ ಬಿಟ್ಟು
ಜನ್ಮಜನ್ಮಾಂತರ ದುಃಖ ತಿಳಿಯಲು ಬರ್ತೀರಾ ಇಲ್ಲೇ ಇರ್ತೀರಾ ||4||
ಇಹ ಸುಖದ ಹಂಬದ ಬಿಟ್ಟು ಪರಸುಖದ ಆಸೆಪಟ್ಟು
ಬೇಧಭಾವ ಬಿಟ್ಟು ಅಕ್ಕಲಕೋಟಿಗೆ ನೆದರಿಟ್ಟು
ಧೀರ ಗಂಭೀರನಾಗಿ ಶರಣರಲಿ ಶಿರವಿಟ್ಟು
ಮುಕ್ತಿಸಂಪದ ಪಡೆಯಲು ಬರ್ತೀರಾ ಇಲ್ಲೇ ಇರ್ತೀರಾ ||5||

ನೋಡಿ ನಡಿಯಲೆ ಮೂಢ ಪಾಮರನೆ
ನೋಡಿ ನಡಿಯಲೆ ಮೂಢ ಪಾಮರನೆ
ಈ ಮಾಯ ಮೋಹಕ ಬಿದ್ದು ಉರುಳಿ ಸಾಯಬೇಡಲೊ ||ಪ||
ಕಳ್ಳಕಾಕರನು ನೂಕಿ
ಸುಳ್ಳು ಚೋರರನು ತಾಕಿ
ಮಳ್ಳ ಮನುಜರ ಮಾತು ಸಾಕೆಲೊ
ಈ ಭವಕ್ಕೆ ಬಂದು ನಿನ್ನ ನೀ ಮರೆಯಬೇಡಲೊ
ಮರೆತರೆ ಬಲುಕೇಡಲೊ ||1||
ಜನಜಂಗುಳಿ ಹಂಗು ಹರಿಯಲೊ
ಈ ಲಿಂಗ ದೇಹದ ಭಂಗಗೆಟ್ಟು ಹೋಗಬೇಡಲೊ
ಮಂಗ್ಯಾನ ಮನಸಿನ ಬೆನ್ನುಹತ್ತಿ ದಿಂಗಬಂಗ ಕುಣಿಯಬೇಡ
ಮಂಗಳಾತ್ಮನ ಸಂಗ ಮಾಡಲೊ ಗುರುಪುತ್ರನಾಗಿ ||2||
ಧರಿಯೊಳಕ್ಕಲಕೋಟಿ ನೋಡಲೊ
ಈ ಶ್ರೇಷ್ಠ ಜನ್ಮದ ಜನನ ಮರಣರಹಿತನಾಗಲೊ
ಸದ್ಗುರು ರಾಮಾಲಿಂಗ ಗುರುವಿನ ಮೋಕ್ಷ ಸಂಪದ ನೋಡಲೊ
ಧೀರ ಜ್ಞಾನಯೋಗಿ ಬ್ರಹ್ಮಾಕಾರವಾಗಲೊ ||3||

ಎಷ್ಟು ನಿನ್ನ ಮಾಯದ ಹಂಬಲ
ಎಷ್ಟು ನಿನ್ನ ಮಾಯದ ಹಂಬಲ
ಯಾರ್ಯಾರಿಗಿಲ್ಲ ನಿನ್ನ ಬೆಂಬಲ ||ಪ||
ಸತ್ತು ಹುಟ್ಟಿ ಬಂದಿದ್ದಿ ಕಾಲಾನುಕಾಲ
ಬಿಟ್ಟು ಹೋಗುತ್ತಿದ್ದಿ ಇಂಥ ಮನಿ ಹೊಲ
ಸತಿ ಸುತರ ಮಮಕಾರ ಜಾಲ
ಬಾಡ್ಗಿ ಎತ್ತಾಕಿ ದುಡಿದಿ ರಾತ್ರಿ ಹಗಲ ||1||
ದುಡಿದುಡಿದು ದುಡ್ಡು ಗಳಿಸಿಟ್ಟಿ ಬಹಳ
ಗಳಿಸಿಟ್ಟ ದುಡ್ಡು ದಡ್ಡರ ಪಾಲ
ಲೋಭಿಯಾಗಬೇಡ ತಿಳಿಯಲೊ ಖುಲ್ಲ
ಅಪವಾದ ಹೊತ್ತು ಸತ್ತು ಹೋಗುವೆಯಲ್ಲ ||2||
ಸುಳ್ಳೆ ಬಯಸಬೇಡ ಸದ್ಗುರು ಬಲ
ಕದಿಯದಂಥ ಧನಗಳಿಸಿಲ್ಲ ಮೂಳ
ಬಹಳ ಮಂದಿ ಹೋಗ್ಯಾರ ನಿನ್ನಂತೆ ಹಾಳ
ಇನ್ನಾರ ನೋಡಿನಡಿ ಬಂದೀತ ಗೋಳ ||3||
ಗುರುವುನಾಡಿದ ನುಡಿ ಮುತ್ತಿನ ಮೂಲ
ನೀ ತಿಳಿಯಲಿಲ್ಲ ಭೇದದ ಮೂಲ
ಇಂಥ ಜನ್ಮ ಎಂದೂ ಸಿಗೋದಿಲ್ಲ
ಸದ್ಬುದ್ಧಿ ಹೇಳುವುದು ಸದ್ಗುರುಶಾಲಿ ||4||
ರೇವಣಸಿದ್ಧನ ಕೃಪ ನಮ್ಮ ಮೇಲ
ಧರಿಯೊಳಕ್ಕಲಕೋಟಿ ಸ್ಯಾರ ಮೀಗಿಲ
ಸೇವಾಮಾಡಿ ಜಯಿಸು ಮೃತ್ಯುಕಾಲ
ಇದು ರಾಮಾನಂದರು ನುಡಿದ ಕೀಲ ||5||

ಏನು ಸೋಜಿಗ ಕಾಣುವುದಮ್ಮ
ಏನು ಸೋಜಿಗ ಕಾಣುವುದಮ್ಮ
ಈ ಮಾಯ ಪ್ರಪಂಚ ||ಪ||
ಶೆಳವು ನೋಡು ಬಹಳಮ್ಮ
ಸತ್ಯಮಿಥ್ಯರೆಡು ತಿಳಿಗೊಡದಮ್ಮ
ಸತ್ಯ ಸದ್ಗುರುವಿನ ನೆಡಿಯಿಲ್ಲವಮ್ಮ
ಬಾಯಿಲೆ ಬ್ರಹ್ಮೆಂದು ನುಡಿಯುವರಮ್ಮ ||1||
ಮೋಹ ಭ್ರಾಂತಿಯೊಳಗೆ ಮುಳಿಗೋಗ್ಯಾದಮ್ಮ
ನಿಜದರ್ಶನ ಸುಳಿದಿಲ್ಲವಮ್ಮ
ತನ್ನತಾ ಮರೆತು ಮೋಕ್ಷ ಬೇಡುವರಮ್ಮ
ಸುಳ್ಳಿಗೆ ಸುಖವು ಎಳ್ಳಷ್ಟಿಲ್ಲವಮ್ಮ ||2||
ತಾನ ತಾನಾದವನ ಸಂಗ ಮಾಡಮ್ಮ
ಶ್ರೀ ರೇವಣಸಿದ್ಧ ಗುರುರಾಯನಮ್ಮ
ಮುಕ್ತ ಸಂಪದ ಕೇಳಿಕೊಳ್ಳಮ್ಮ
ಸಂಶಯವಿಲ್ಲದೆ ಸಾಗಿ ಹೋಗಮ್ಮ ||3||

ಬ್ರಹ್ಮಜ್ಞಾನಿಯಾಗಬೇಕು
ಬ್ರಹ್ಮಜ್ಞಾನಿಯಾಗಬೇಕು ಭವದ ಹಂಗು ಹರಿಯಬೇಕು
ಭ್ರಾಂತಿ ಸಂಸಾರವ ನೀಗಿ ಧೀರನಾಗಬೇಕು ||ಪ||
ಅರಿತು ತಿಳಿಯಬೇಕು
ಗುರುವಿಗೆ ನಿರುತಾಗಿರಬೇಕು
ಪಾಪದ ಗುಣಗಳ ಮೆಟ್ಟಿರಬೇಕು
ಪುಣ್ಯದಲ್ಲಿ ಮನನಿಂತಿರಬೇಕು ||1||
ಸುಖದುಃಖ ಎರಡು ಸಮರಸಬೇಕು
ಸದ್ಗತಿಗೆ ಕೈ ಹಾಕಿರಬೇಕು
ಗುರುವಿನ ಆಜ್ಞೆಯಲಿ ಎಚ್ಚರಬೇಕು
ಹುಚ್ನಾಗಿ ತಿರುಗೋದು ಸಾಕು ||2||
ಅಕ್ಕಲಕೋಟಿಗೆ ಹೋಗಬೇಕು
ಶಿವಶರಣರ ಪಾದಕೆ ಮಣಿಬೇಕು
ಆನಂದದಿಂದ ಸವಿದುಗುಣಬೇಕು
ಜನನ ಮರಣದ ಬೇರು ಅಳಿಬೇಕು ||3||

ಗಾಳಿಗಿಟ್ಟ ದೀಪದಂತೆ ಬಾಳುವೆ
ಗಾಳಿಗಿಟ್ಟ ದೀಪದಂತೆ ಬಾಳುವೆ
ಸಾಕು ಸಾಕು ಛೀ ಥೂ ಹಾಳು ಬಾಳುವೆ ||ಪ||
ಕಾಲಕಾಲಕೆ ಮೆಚ್ಚಿ ಹುಚ್ಚು ಹಿಡಿಸೀತು ಬಾಳುವೆ
ಬಂಧು ಬಳಗಕೆ ಮರುಳುಮಾಡಿ ಅರವುಗೆಡಿಸಿತು ಬಾಳುವೆ
ಹಳ್ಳಹರಿದು ಗುಳ್ಳೆಹೊಡೆದು ಹೊಳಿಯ ಕೂಡಿದ ಬಾಳುವೆ ||1||
ಭೋಗವಿಲ್ಲ ಭಾಗ್ಯವಿಲ್ಲ ಭ್ರಾಂತಿ ಜೀವನ ಬಾಳುವೆ
ಹಮ್ಮಿಗ್ಹೋಗ ದಾರಿಯಲ್ಲಿ ಬ್ರಹ್ಮದಾದಿ ತಿಳಿಯಲಿಲ್ಲ
ವ್ಯರ್ಥ ಕೂಗಿ ಮೃತ್ಯು ಬಾಯಿಗೆ ಬಾಳುವೆ ||2||
ಹೆಂಡರಿಲ್ಲ ಮಕ್ಕಳಿಲ್ಲ ದಿಕ್ಕು ಇಲ್ಲದ ಬಾಳುವೆ
ಇಂದು ಇಲ್ಲ ಮುಂದು ಇಲ್ಲ ಎಲ್ಲ ಸುಳ್ಳು ಬಾಳುವೆ
ತಂದೆತಾಯಿ ನೂಕಿಹೋದ ನರಕ ಜೀವನ ಬಾಳುವೆ ||3||
ದಾನಧರ್ಮದ ನೇಮವಿಲ್ಲ ಕಳ್ಳಕೋರನ ಬಾಳುವೆ
ಆಸೆ ಗುಣಗಳು ಅಳಿಯಲಿಲ್ಲ ಹೇಸಿ ಮನವು ತೊಳೆಯಲಿಲ್ಲ
ಘಾಸಿ ಮಾಡಿ ಹೋಗುವಾಗ ಹಲ್ಲು ಕಿಸಿದ ಬಾಳುವೆ ||4||
ತಾನು ಇಲ್ಲ ತನ್ನದಿಲ್ಲ ಕ್ರೂರ ತಂತ್ರದ ಬಾಳುವೆ
ಮೂಲ ಮಂತ್ರದ ಕೀಲು ತೋರಿದ ಸ್ವಂತ ಸದ್ಗುರು ಬಾಳುವೆ
ತ್ಯಾಗ ಭಾವದಲ್ಲಿ ಸೇವೆ ಮಾಡಿದ ರಾಮಾನಂದನ ಬಾಳುವೆ ||5||

ಎಷ್ಟು ಕಾಡತಾವ ಕಬ್ಬಕ್ಕಿ
ಎಷ್ಟು ಕಾಡತಾವ ಕಬ್ಬಕ್ಕಿ
ಹೊಲದಲ್ಲಿರುವೆ ನಾನೊಬ್ಬಾಕಿ ||ಪ||
ಕವಣಿ ಬೀಸಿ ಬೀಸಿ ಬಂತೆನಗೆ ಬೇಸರಕಿ
ಮನಸಿಗಿ ಹತ್ತಿತು ಕಳವರಿಕಿ ||ಅ.ಪ||
ಚೌಕಟ್ಟು ಹೊಲದಲ್ಲಿ ಮೆಟ್ಟು ಹಾಕಿ
ಓಂ ಎಂದು ಕೂಗಿದರಿಲ್ಲ ಎಚ್ಚರಕಿ
ಸೊಣ್ದೆಪ್ಪಿ ಬರುತಾವ ಮುಬೆರಕಿ
ಹೊಡೆದು ದೂಡಿದರಿಲ್ಲ ನಾಚಿಕಿ ||1||
ಸುತ್ತುಗಟ್ಟಿ ಬರುತಾವ ಹಠಮಾರಿ ಹಕ್ಕಿ
ತಿಂದು ತೇಗ್ಯಾವ ಯಾರದಿಲ್ಲ ಅಂಜಿಕಿ
ಹೊಲದವರಿಗಿಲ್ಲದೆ ಜೆಪ್ಪಿಸಿ ನೆಕ್ಕಿ
ತಮ್ಮೊಳಗೆ ಬಿದ್ದಾವ ತೆಕ್ಕಿ ಮಿಕ್ಕಿ ||2||
ಸುಳ್ಳ ಮುಪ್ಪಾಗ್ಯಾವ ಮುದಿ ಹಕ್ಕಿ
ಸಣ್ಣ ಮರಿಗೆ ಕಲಿಸಿಲ್ಲ ಪಾಯ ಹಾಕಿ
ತುದಿ ಕಾಳು ತಿಂದು ಹೊಡಿತ್ಯಾವ ಡುರುಕಿ
ಬರೆ ಬಚ್ಚು ಮಾಡ್ಯಾವ ಉಳಿದಾದ ಕಣಿಕಿ ||3||
ಗುಡದನಾಳಪುರದ ಜಾಣಕ್ಕಿ
ಕ್ರಮತಪ್ಪಿದ ಹಕ್ಕಿಗೆ ಕುಕ್ಕಿ
ಅಕ್ಕಲಕೋಟಿ ಶರಣರಿಗೆ ದೀರ್ಘ ದಂಡಾಕಿ
ಶ್ರೀ ರಾಮಾನಂದ ಹೊಡಿದ ಮೋಹದ್ಹಕ್ಕಿ ||4||

ತನ್ನ ತಾ ತಿಳಿಯಲು ಮುಕ್ತನಮ್ಮ
ತನ್ನ ತಾ ತಿಳಿಯಲು ಮುಕ್ತನಮ್ಮ
ಪರಬ್ರಹ್ಮವೆ ನಾನೆಂಬ ಮರ್ಮವ ತಿಳಿದು ||ಪ||
ಹಮ್ಮಿನ ಮೂಲವ ಸುಟ್ಟು
ಧರ್ಮ ಸಮ್ಮತವಾಗದ ಹಾದಿಯ ಬಿಟ್ಟು
ಆತ್ಮನ ನಿಜ ಅಳವಟ್ಟು
ಶಿವೋಹಂ ಬೋಧದ ಕವಚವ ತೊಟ್ಟು ||1||
ಜಾತಿಭೇದದ ಭ್ರಾಂತಿ ಪೋಗಿ
ವಿಷಯದ ರತಿಭೋಗ ನೀಗಿ
ನಿತ್ಯಾತ್ಮನು ದೃಢವಾಗಿ
ಅತ್ತಿತ್ತ ಚಲಿಸದ ನಿಶ್ಚಲ ಚಿತ್ತನಾಗಿ ||2||
ಪರಮಾನಂದ ತುದಿಗೇರಿ
ಮುನ್ನ ಶರೀರದಲ್ಲಿರ್ಧಭಿಮಾನ ತೂರಿ
ಪರಿಪೂರ್ಣ ಭಾವ ತೋರಿ
ಶಿವಶರಣರೊಳಗೆ ಸೇರಿ ||3||

ನಾಯಿ ಎಂತಹ ನಾಯಿ
ನಾಯಿ ಎಂತಹ ನಾಯಿ
ರೀತಿ ನೀತಿ ಮೀರಿದ ನಾಯಿ ||ಪ||
ಹಸಿ ತಿಂದು ಬಿಸಿ ಬೊಗಳುವ ನಾಯಿ
ಪರನಿಂದೆ ಮಾಡಿ ಕೆಟ್ಟಂಥ ನಾಯಿ
ಬುದ್ಧಿ ಇಲ್ಲದ ಬುದ್ಧಿಗೇಡಿ ನಾಯಿ
ಶುದ್ಧ ಮನವನು ಹೊಲಗೆಡಿಸಿದ ನಾಯಿ ||1||
ಆಚಾರವಿಲ್ಲದ ಅಡ್ನಾಡಿ ನಾಯಿ
ಕ್ರಿಯ ತಪ್ಪಿದ ಕಿಡಿಗೇಡಿ ನಾಯಿ
ಕಾರ್ಯಕಂಟಕದ ಕಟುಗರ ನಾಯಿ
ಕುಲದ ಗುರುತರಿಯದ ಕುಲಗೇಡಿ ನಾಯಿ ||2||
ವಾದ ತರ್ಕ ಮಾಡುವ ತಳ್ಳಿಕೋರರ ನಾಯಿ
ಮನಿಮನಿ ತಿರುಗಿದ ತಿರುಕರ ನಾಯಿ
ಉಂಡಮನಿ ಜಂತಿ ಎಣಿಸಿದ ಜಮಗೇಡಿ ನಾಯಿ
ಸಿದ್ಧನಮಠ ಕಾಣದ ಹುಟ್ಟುಗುರುಡ ನಾಯಿ ||3||

ಅನುಭವದಡಗಿ ಮಾಡಿಟ್ಟ ಜಾಣ
ಅನುಭವದಡಗಿ ಮಾಡಿಟ್ಟ ಜಾಣ
ತಿನುಭವಿಗೆ ಹತ್ತಲಿಲ್ಲ ಕೂನ ||ಪ||
ಮೇಲ್ಮಟ್ಟಕ್ಕೆ ಹಾರಿದ ಜಾಣ
ಬಿದ್ದಲ್ಲಿ ಬಿದ್ದ ಹಾಳೂರ ಕೋಣ
ತಿರುತಿರುಗಿ ಆದ ನಿತ್ರಾಣ ||1||
ಆರು ಅಳಿದವ ಆಚಾರಿ
ಮೂರು ಬಿಟ್ಟಾವ ವಿಚಾರಿ
ಆರು ಮೂರು ಬಿಡದವ ಭ್ರಷ್ಟಾಚಾರಿ
ಅನಾಚಾರಿಗೆ ನರಕದ ದಾರಿ ||2||
ಸತ್ಯಕ್ಕೆ ಒಂದೇ ದಾರಿ
ಸುಳ್ಳಿಗೆ ಸಾವಿರ ದಾರಿ
ಸತ್ಯಮಿಥ್ಯ ಎರಡು ಸೋಸಿ ನೋಡಿರಿ
ತಿಳಿಯದಿದ್ದರೆ ಆರೂಢನ ಕೇಳಿರಿ ||3||

ಸಂಸಾರದಿಂದ ಸದ್ಗತಿ ಹೊಂದಿ
ಸಂಸಾರದಿಂದ ಸದ್ಗತಿ ಹೊಂದಿ
ಅಷ್ಟಾವರಣವನರಿತು ಮಾಯವನು ಜೈಸಿ ||ಪ||
ಮರಣ ಗೆಲಿದವನೆ ಶಿವಯೋಗಿ
ಹರನ ತಿಳಿದವನೆ ಪರಭೋಗಿ ||ಅ.ಪ||
ಆಕಾಶ ಬಯಲು ಬ್ರಹ್ಮದಲಿ ಬೆರೆತು
ಬಾಹ್ಯ ಕರ್ಮಗಳನು ಬಯಸಿ
ಉಂಡು ವಾಕರಿಸಿ ಬಹುಜ್ಞಾನಿಯಾದಿ ||1||
ಈ ಶರೀರದಲ್ಲಿ ಇದ್ದು ಶಿವನ ಆಶ್ರಯವಿಡಿದು
ಅನುವರಿತು ಸರ್ವವಿಷಯಗಳು ಭೋಗಿಸಿ
ಘಟದ ಚೇಷ್ಟಿಯನು ಹೊತ್ತುಕೊಂಡು
ಚಿತ್ರಗುಪ್ತರ ಲೆಕ್ಕಕೆ ಸಿಗದ ಶಿವಯೋಗಿ ||2||
ಹಿಂದೆ ಮಾಡಿದ ಪುಣ್ಯದ ಫಲದಿಂದ
ಈ ಧರೆಗೆ ಬಂದು ಗುಡದನಾಳ ಗ್ರಾಮದಲಿ ನಿಂದು
ಗುರುಸೇವಕೆ ದಣಿದು ಸುಂದರ ಶರೀರದೊಳು ಸೇರಿ
ಚಂದದಲಿ ಮೆರೆದವನೆ ಆನಂದಭೋಗಿ ||3||

ಭಕ್ತಿ ಭಾವದ ಶರಣಮ್ಮ
ಭಕ್ತಿ ಭಾವದ ಶರಣಮ್ಮ
ಗುರುಪಾದಕ್ಕೆ ಶಿರಬಾಗಮ್ಮ ||ಪ||
ಬಡವರ ಭಕ್ತಿ ಪುಣ್ಯದ ಶಕ್ತಿಯಮ್ಮ
ಭಕ್ತಿಯಿಂದ ಶಕ್ತಿ ಬರುವುದು
ಯುಕ್ತಿಯಿಂದ ಆಗುವುದು ಮುಕ್ತಿ
ಮುಕ್ತಿ ಪಡೆದರೆ ನೆಮ್ಮದಿಯಮ್ಮ ||1||
ಸದ್ಗತಿ ಹಾದಿ ಹಿಡಿಯಮ್ಮ
ಈಶನ ಧ್ಯಾನದಲಿ ಉಳಿಯಮ್ಮ
ಶರಣರ ಸತ್ಯ ಮನದಲಿ ನಿತ್ಯವಮ್ಮ
ಅನುದಿನದಿ ಬಿತ್ತಿ ಬೆಳೆಯಮ್ಮ ||2||
ದೇವರಭೂಪೂರ ಸ್ಥಾನಮ್ಮ
ಆರೂಢನ ಮಠ ನೋಡಮ್ಮ
ಆಸೆ ಅಳಿದು ರೋಷ ಕಳೆಯಮ್ಮ
ವಂಶ ಉದ್ಧಾರದ ಶಿವಶರಣಮ್ಮ ||3||

ನಿಶ್ಚಿಂತನಾಗಿ ಬಾಳು ಮನುಜ
ನಿಶ್ಚಿಂತನಾಗಿ ಬಾಳು ಮನುಜ
ದುಃಶ್ಚಿಂತಿ ದೂರ ಮಾಡು ||ಪ||
ಭ್ರಾಂತಿ ಭ್ರಮೆಗಳ ನೀಗು
ಗುರು ಪಾದಕ್ಕೆ ಶಿರಬಾಗು ||ಅ.ಪ.||
ಪೊಳ್ಳಿನ ಸಂಸಾರ ಮೆಚ್ಚಿ
ಕೊರಗಿ ಸೊರಗಿ ಸತ್ತಿ
ನೀನೆಂತ ಹುಚ್ಚಿ ನಿನ್ನಿಂದೆ ಸತಿ ಬರುವಳೆ ಮೆಚ್ಚಿ
ಸಂಸಾರ ತ್ಯಾಗವ ಮಾಡ್ಯಾರ ಪರವನೆಚ್ಚಿ ||1||
ಶ್ರುತಿ ವಚನ ಮರೆಯಬೇಡ
ಹುಚ್ಚನಂತೆ ತಿರುಗ್ಯಾಡಬೇಡ
ನೀಚ ಗುಣಗಳಳಿದು ನೋಡ
ಅರುವಿನ ಭಾವದಿ ಗುರುವಿನ ಕೊಂಡಾಡ ||2||
ಸತ್ಸಂಗ ಮಾಡು ದುಃಸಂಗ ಬಿಡು
ಪಾದ ದಯ ಧರ್ಮದ ಗೂಡು
ಭಾವದಿಂದ ಭಗವಂತನ ಕೂಡ
ಭವ ಹಿಂಗುವುದು ತಿಳಿ ಮೂಢ ||3||
ಸುಜಾಣನಾಗಿ ಮುಕ್ತಿ ಬೇಡು
ಸಿದ್ಧಾರೂಢನ ಸೇವೆಯ ಮಾಡು
ನೀತಿ ಕ್ರಿಯೆ ಆಚಾರ ಮರೆಯದೇ ಮಾಡು
ಶಿವಶರಣರ ಪಾದದಲಿ ಕೂಡು ||4||

ಓಂ ಪರಮಾನಂದವಿದು
ಓಂ ಪರಮಾನಂದವಿದು
ಓಂ ಶಿವಶಿವ ಓಂಕಾರನಾದವಿದು ||ಪ||
ಯೋಗಿಗಳಿಗೆ ಲೀಲ ಪಥವಿದು
ಭೋಗಿಗಳಿಗೆ ಸಲ್ಲದಾ ಪಥವಿದು
ಭವರೋಗಿಗಳಿಗೆ ರುಚಿಸದಾ ರಸವಿದು
ಓಂ ಶಿವ ಶಿವಯೋಗಾನಂದ ಸುಖವಿದು ||1||
ಭ್ರಾಂತಿ ಅಳಿದು ಚಿಂತಿ ಮರೆದು
ಮಂತ್ರಮೂಲ ಮೊದಲೆ ತಿಳಿದು
ಅಂತರಂಗದ ಕೀಲು ನಿಂತು
ತನಗೆ ಬರಲು ಅಂತ್ಯಕಾಲ ಮರಣ ತಿಳಿಯುವದು ||2||
ಪರಮಾರೂಢನ ವಾಕ್ಯವಿದು
ಓಂ ಶಿವ ಶಿವ ಈ ಬೋಧೆ
ಮೂಲ ಮಂತ್ರವಾಗಿ ನಿಲ್ಲುವುದು
ಕಂತುಹರನ ಪಾದದಲ್ಲಿ ಅನಂತಕಾಲ ಬಾಳುವುದು ||3||

ಶಿವನ ಭಜನೆ ಮಾಡಬೇಕು
ಶಿವನ ಭಜನೆ ಮಾಡಬೇಕು
ಮನಸ್ಸು ಜಳಜಳವಿರಬೇಕು ||ಪ||
ಕಳಕಳಿಸುವ ಮಾಯದ ಢಂಬಿಗೆ
ಥಳಥಳ ಹೊಳೆಯದ ಮೋಹದ ಬಿಂದಿಗೆ
ಜಳಜಳವಿರದ ಮನಸ್ಸಿಗೆ
ಥಳಥಳಿಸುವ ಗುರುರಾಯ ಎಂತೊಲಿಯಬೇಕು ||1||
ತಿಳಿದುಳಿಬೇಕು ನರಜನ್ಮ ಸಾರ್ಥಕ ಮಾಡಬೇಕು
ದಯವಿಲ್ಲದೆ ಧರ್ಮ ಗಳಿಸದೆ
ಪಾಪದ ತಾಪ ಹೇಗೆ ಹೋಗಬೇಕು
ಪಾಶವ ಹರಿಯುವ ದಾರಿಯ ಹುಡುಕು ||2||
ಭೂಪೂರ ಗುರುಸ್ಥಲ ನೋಡಬೇಕು
ಆರೂಢಸಿದ್ಧಗೆ ಬಾಗಬೇಕು
ಅರುವಿಗೆ ಸಾಕ್ಷಿಗುರುವೇ ಕಾರಣ
ಆನನ ಮರಣದ ಬಾಧೆ ಕಳೆಯಬೇಕು ||3||

ಪಾರು ಮಾಡೋ ಪರಮ ಆರೂಢನೆ
ಪಾರು ಮಾಡೋ ಪರಮ ಆರೂಢನೆ
ಈ ರೂಢಿ ಜನರನು ಪಾರು ಮಾಡೊ ||ಪ||
ಮೀರಿದ ಆರು ಮೂರು ಗುಣಗಳನು
ನಿನ್ನಂಘ್ರಿಯಲಿ ಧ್ವಂಸ ಮಾಡಿ ಸೇವೆಗೈದವನು
ಶ್ರುತಿ ಸಾರಸಮ್ಮತ ಮನದ ಸಂಶಯ ಭ್ರಾಂತಿ ಅಳಿದ ವೈರಾಗ್ಯ ನಿಷ್ಠನು
ಹಿಂದೆ ಗುರುತರ ಪುಣ್ಯದಿಂದಲಿ ಜನ್ಮ ಬಾಧೆ ಕಳೆದ ಗುರುವಿನ
ನೆನವಿನೊಳಗೆ ನಿಲ್ಲಿಸಯ್ಯ ಘನ ಚಿದಂಬರೀಶನೆ ||1||
ಆಸೆ ಮೂಲ ಭವದ ಬೀಜವನು
ಸದ್ಬೋಧ ಸುಖದಲಿ ನೆಲೆಗಳೆದು
ಗತಿಯ ಗಂಡವನು ತಾಳಿ ಬಾಳಿ ಉಳಿದವನು
ಉಣ್ಣದೂಟವುಣಿಸಿದ ಗುರು
ತನ್ನ ಶಿಷ್ಯರ ಗುಣವನೋಡಿ ಭೃಂಗಕೀಟ
ನ್ಯಾಯದಂತೆ ಶುದ್ಧಿಗೊಳಿಸಿದಿ ಶಂಭುಲಿಂಗನೆ ||2||
ಕಾಯ ವಾಚ ಮನದ ತ್ರಿಕರಣ
ಗಜದಂಡ ಗುರುವಿನ ಪಾದ ಕಮಲದೊಳು ಬೆರೆದವನೆ
ಹನ್ನೆರಡು ವರ್ಷ ಸೇವೆಗೈದು ಸಿದ್ಧನಾದವನೆ
ಈ ಜಗದಿ ಮೆರೆದು ಬುದ್ಧಿಗಲಿಸಿ ತಿದ್ದಿ ಪೇಳಿದವನೆ
ಮುಮುಕ್ಷಿ ಜೀವಿಗೆ ಮೋಕ್ಷದಾತನಾಗಿ ಬಂದಿಹ ಹರಹರ ಆರೂಢನೆ ||3||

ಮುದುಕಿಯಾದ ಮೇಲೆ ಮುರುಕು ನಿನಗ್ಯಾಕ
ಮುದುಕಿಯಾದ ಮೇಲೆ ಮುರುಕು ನಿನಗ್ಯಾಕ
ಮುದಕನ ಮುಂದ ಸೋಗು ಮಾಡುವುದು ಸಾಕ ||ಪ||
ಆರು ಮಂದಿನ ಅಪ್ಪಿಕೊಂಡು ಬಂದುಬಿಟ್ಟಿ
ಮೂವ್ವರನ ಮುಂದಕ್ಕೆ ತಂದಿ
ತೊಡರಿನೊಳು ತೊಡರಚ್ಚಿಗೊಂಡಿ
ಮುದುಕಿ ನಿನಗಿಲ್ಲ ನಾಚಿಕಿ ||1||
ಅತ್ತೆ ಮಾವನ ಹತ್ತಿಕ್ಕಿ ಬಂದಿ
ಖಾಸ ಗಂಡನ ಮನೆ ಬಿಟ್ಟು ಬಂದಿ
ದಿಕ್ಕುಗಣಾದ ದಂಗಭಂಗದ ಮುದುಕಿ
ಹೇಸಿ ಮನಸಿಗೆ ಸಿಲುಕಿ ||2||
ಸಪ್ತವ್ಯಸನ ಮುಸುಗಾಕಿ
ಗಂಟುಗಳ್ಳರ ನೆಂಟರನ ಸಾಕಿ
ಭಂಟಳಾಗದೆ ಮೂರು ಕಾಲುಗಳು ನೂಕಿ
ಶುದ್ಧಿಲ್ಲದ ಸುರಿಗೇಡಿ ಮುದುಕಿ ||3||
ಒಂಭತ್ತು ಬಾಗಿಲ ಮನಿಮೆಚ್ಚಿದಾಕಿ
ಜನನ ಮರಣದ ಭಯವಿಲ್ಲದಾಕಿ
ಎಚ್ಚರಾಗದೆ ತಿರಿಗಿದಿ ಹಳೆ ಮುದುಕಿ
ನಿನಗಿಲ್ಲ ಯಾವುದೇ ಅಂಜಿಕಿ ||4||
ಭೂಪೂರ ಜಾಗ ನೋಡು
ಮನ ಹಸನಮಾಡಿಕೊಂಡು ಕೂಡು
ಮಾನವ ಜನ್ಮ ಸಾರ್ಥಕ ಮಾಡು
ಆರೂಢಸಿದ್ಧಗೆ ಭೆಟ್ಟಿ ಕೊಡು ||5||

ನುಡಿ ನೆಡಿ ಬರೆ ಸುಳ್ಳೆ ನುಡಿ
ನುಡಿ ನೆಡಿ ಬರೆ ಸುಳ್ಳೆ ನುಡಿ
ನುಡಿದಂತೆ ನಡಿ ಇದೆ ಜನ್ಮ ಕಡಿ ||ಪ||
ಶ್ರುತಿ ನುಡಿದಂತೆ ಜಾಗ್ರದಿ ನೆಡಿ
ಮಹಾನ್ಯರು ತೋರಿದ ದಾರಿ ಹಿಡಿ
ಅಡ್ಡದಿಡ್ಡಿ ಹೋಗಬೇಡ ಚೀರ್ಯಾಡಿ
ತತ್ವದಾನುಭವ ತಿಳಿಯಲಿಲ್ಲ ಖೋಡಿ ||1||
ಜನ ಮೆಚ್ಚಿಗೆ ಸೋಗು ಗೋಣೆತ್ತಿ ಆಡಿ
ಮನ ಮೆಚ್ಚಿಗೆವಿಲ್ಲದೆ ರಾಗ ರಚನೆ ಮಾಡಿ
ಹಮ್ಮಿನ ಭಾವದಿ ಕೈ ಎತ್ತಿ ಹಾಡಿ
ಲಂಡ ಭಂಡರೆಲ್ಲ ಜೊತೆಗೂಡಿ ||2||
ಅಭೇದದಲ್ಲಿ ಭೇದ ಮಾಡಿ
ಮಾಯ ಮೋಹದೊಳು ಬಿದ್ದು ವದ್ದಾಡಿ
ಗುರುವಿನ ಗುರುತರಿಯದೆ ಕುಲಿಗೇಡಿ
ಸುಗಂಧ ಸ್ಥಾನ ದುರ್ಗಂಧ ಮಾಡಿ ||3||
ಹೊನ್ನು ಹೆಣ್ಣಿನ ಆಸೆ ಮಿತಿ ಮೀರಿ
ಹೇಸಿ ಗುಣದಿಂದ ಛೀ ಹುಚ್ಚು ಮಾರಿ
ದಾನ ಧರ್ಮಿಲ್ಲದ ಡಂಭಾಚಾರಿ
ಕತ್ತೆಯಾಗಿ ತತ್ವ ಬಿಟ್ಟಿರಿ ದಾರಿ ||4||
ಹೆರವರ ಮಾತಿಗೆ ದೇಹ ಸಣ್ಣಾಗಿ
ಬಣ್ಣದಂತೆ ಮಾತಾಡಿ ಹುಣ್ಣಿಯಂತಾಗಿ
ಆರೂಢರ ಕೂಗು ಕೇಳಿದ ಗೂಗಿ
ಗಜದಂಡ ಕಣ್ಣು ಮುಚ್ಚಿ ದೂರಾಗಿ ||5||

ಶಿವನ ಮನಿ ಈ ಜಗವೆಲ್ಲ
ಆರೂಢ ಶಿವನವತಾರ
ಶಿವನ ಮನಿ ಈ ಜಗವೆಲ್ಲ
ಬಾಡಿಗೆದಾರರು ಈ ಜಡದೇಹಿಗಳೆಲ್ಲ ||ಪ||
ಶಿವಜೀವ ಒಂದೆಂಬ ಭಾವ
ಬರದೆ ಭವದೊಳು ಮುಳುಗುವ ಜೀವಿಗಳೆಲ್ಲ ||ಅ.ಪ||
ಪಂಚಭೂತದ ಜೀವನ ಮನಿ
ಭುವನ ವೈಭವ ಶಿವನ ಮನಿ
ಶಿವ ಜೀವರ ಘನತ್ವತಿಳಿಯದೆ
ಜವನ ಬಾಯಿಗೆ ಜೀವಗಳೆಲ್ಲ ||1||
ತಂಟು ತಗುಲಿದ ಮನಿ
ಭಂಟ ವಿರುವ ಮನಿ
ಭಂಟ ಹೊಂಟೋದರೆ
ಗಂಟೆ ಬಾರಿಸಿದಂತೆ ಖಾಲಿ ಮನಿ
ಆರೂಢ ಗಳಿಸಿದ ಖಾಸ ಮನಿ ||2||
ಯಾರ ಮನಿ ಇದು ಯಾರ ಮನಿ
ಹೆರವರ ಮನಿಗೆ ಮನಿ ನಂದು ಅಂತಿದಿ
ಇಷ್ಟೇ ವರ್ಷ ಇಷ್ಟೇ ದಿವಸ
ಕಟ್ಟು ಕರಾರು ಇಲ್ಲದ ಮನಿ ||3||
ಆಸಿ ಮನಿ ಇದು ಹೇಸಿ ಮನಿ
ನಾಶವಾಗಿ ಹೋಗುವ ಮನಿ
ಈಶನ ದಾಸ್ಯದಲಿ ಆಸೆ ತಿಳಿದವ
ಆತ್ಮಾನುಭವಿಯಾದ ಪರಮಾತ್ಮನ ಮನಿ ||4||

ಯಾತಕ್ಕೆ ಬೇಕು ನಡೆಯೋ ತಂಗೆವ್ವ
ಯಾತಕ್ಕೆ ಬೇಕು ನಡೆಯೋ ತಂಗೆವ್ವ
ಮನಿ ಮೂರ್ಖರ ಮಾತು ಯಾತಕ್ಕೆ ಬೇಕು ||ಪ||
ಕೆಟ್ಟ ಮೂವ್ವರ ಸಲುಗೆಯ ಬೇಡವ್ವ
ಮುರದಿಕ್ಕುವರವ್ವ ಆರು ಮಂದಿ ತಳ್ಳಿ ಖೋರರು
ನಿತ್ಯ ಸುಲಿಗಿ ಮಾಡುತಿಹರು
ಇದ್ದ ಗಂಟು ಕದ್ದುಕೊಂಡು ಸುದ್ದಿ ಇಲ್ಲದೆ ಗದ್ದಲದೊಳು ||1||
ಎಂಟು ಮಂದಿ ಕಲಿಕಂಟಕರವ್ವ ಗಂಟಾಕುವರವ್ವ
ಕಾಡಿದವರನ್ನ ಕಾಲೀಲೊದ್ದು ಅವರ ಸಂಗ ಮಾಡದೆ ನೀನು
ಜನನ ಮರಣವ ನೀಗಿ ಧೀರಳಾಗಿ ನಡಿಯೊ ತಂಗಿ ||2||
ಸಂದು ಸುಳವಿನ ಸುದ್ದಿ ಯಾಕವ್ವ
ಶುದ್ಧಭಾವದಿ ನೆಡಿಯವ್ವ
ಜಡ ದೇಹದ ಹಮ್ಮು ಅಳಿದು ಸತ್ಯಾತ್ಮನ ಗುರ್ತು ಹಿಡಿದು
ಭ್ರಾಂತಿ ಸಂಸಾರ ಒಗೆದು
ಗುರುವಿನ ವಾಕ್ಯ ಗಟ್ಟಿ ಹಿಡಿಯವ್ವ ||3||
ಗುರುವಿನ ಬೋಧ ಸಣ್ಣದಲ್ಲವ್ವ
ಬಹಳ ಬಿರುಸಾದವ್ವ
ಗುರುಬೋಧವೆಂಬುದು ಬೆಂಕಿಯ ಮಟ್ಟಿ
ಮರೆತು ನಡೆದರೆ ಸುಡುವುದು ಗಟ್ಟಿ
ಶರಣರು ಸಾರಿದ ವಚನವ ಬಿಟ್ಟಿ
ಸಾಕ್ಷಿ ಗುರುವಿನಲಿ ನಂಬದೆ ಕೆಟ್ಟಿ ||4||
ಒಂದೇ ಒಂದಲ್ಲದೆ ಇನ್ನೊಂದುಂಟೆನೊ
ಕಣ್ಣು ತೆರೆದು ನೋಡು
ಭಂಟರಾಗಿ ನಾವು ನೀವು ತುಂಟಲಾಟ ಮಾಡದಂತೆ
ತಂದೆ ಸದ್ಗುರು ಸಿದ್ಧನ ಕೂಡಿ
ಮುಕ್ತ ಜೀವನ ಮಾಡು ತಂಗಿ ||5||

ಅಷ್ಟಾವರಣದ ನಿಜ ನಿಷ್ಠೆ ಎಲ್ಲಿ ಉಳಿದೈತಿ
ಅಷ್ಟಾವರಣದ ನಿಜನಿಷ್ಠೆ ಎಲ್ಲಿ ಉಳಿದೈತಿ
ನಿಷ್ಠೆ ತಪ್ಪಿ ಭ್ರಷ್ಟತನದಿ ಕೆಟ್ಟು ನಿಂತೈತಿ ||ಪ||
ಭಕ್ತರ ಬಂಧು ಗುರು ಶ್ರೇಷ್ಠೆಂದು ಶ್ರುತಿ ಸಾರೈತಿ
ಶ್ರೇಷ್ಠತ್ವ ಶೋಧಿಸಲು ಎಲ್ಲಿ ಉಳದೈತಿ
ಅಂಗದ ಮೇಲೆ ಲಿಂಗದ ಮಹಿಮೆ ಎಲ್ಲಿ ತಿಳದೈತಿ
ಆತ್ಮಲಿಂಗ ಮರೆತು ಅನಾತ್ಮದಲ್ಲಿ ಬೆರೆತೈತಿ ||1||
ಜಗದ್ಭರಿತ ಜಂಗಮನ ಗುರುತು ಎಲ್ಲಿ ತಿಳದೈತಿ
ಜಗದ ಜಂಗಮರಾಗಿ ಜಗದೊಳು ಅನಾಚಾರ ಬೆಳದೈತಿ
ಪಾದೋದಕ ಪ್ರಸಾದ ಶುದ್ಧತ್ವ ಉಳಿಯದೆ
ಶ್ರೇಷ್ಠ ಜನ್ಮ ತಿಳಿಯದಂಗಾಗೈತಿ ||2||
ಭೋಗದ ವ್ಯಸನದಿಂದ ಭಸ್ಮ ಧರಿಸೈತಿ
ಅಂತರ ಹೃದಯದಿ ದುರ್ಗುಣ ತುಂಬೈತಿ
ಕ್ಷುದ್ರ ಗುಣಂಗಳೂ ಮನದೊಳಿದ್ದರೆ
ರುದ್ರಾಕ್ಷಿ ಧರಿಸಿದರೇನೈತಿ ||3||

ಮೂರು ಅವಸ್ಥೆ ಮುಗಿದವು ಪೂರ
ಮೂರು ಅವಸ್ಥೆ ಮುಗಿದವು ಪೂರ
ತನ್ನ ನಿಜ ಸ್ವರೂಪ ತಿಳಿಲಿಲ್ಲ ||ಪ||
ಮುಡುದಾರ ಜನ್ಮ ಜನ್ಮಂತರ ಬಹು ಘೋರ
ಅಜ್ಞಾನಿಗೆ ಬಲು ಅಹಂಕಾರ
ಇವನಿಗೆ ಮುನಿದ ಗುರುವರ ||1||
ಧರಿಯ ಭೋಗ ಮೆಚ್ಚಿದಜ್ಞಾನಿ ಕಣ್ಣು ಕಾಣದ ನಾಯಿ
ಸಂತಿಗೆ ಬಂದಂತೆ ದಯ ಧರ್ಮವಿಲ್ಲದ ಮನುಜ
ಹಾಳ ದೇಗುಲದಂತೆ ನಿಂದಕರೆಲ್ಲ ಕಂದಕದ ಹಂದಿಯಂತೆ ||2||
ಆಸಿಗೆ ಘಾಸಿಯಾದವ ಅಗಸರ ನಾಯಿಯಂತೆ
ಉಪಕಾರಿಗೆ ಅಪಕಾರದ ನರನು ನೆರಳಿಲ್ಲದ ಮರದಂತೆ
ಬಾಯಿ ರುಚಿಗೆ ಕಚ್ಚಾಡುವ ಖಂಡ ತಿನ್ನುವ ನಾಯಿಯಂತೆ ||3||
ತತ್ವದ ಅಥರ್ ಅರಿಯದವ ಕತ್ತಿಯಂತೆ
ನೀತಿ ಕ್ರಿಯ ಬಿಟ್ಟಾವ ಪಾಪಿಷ್ಠನಂತೆ
ಶರಣರು ಸಾರಿದಂತೆ ನೆಡಿಯದವ ಇದ್ದು ಸತ್ತಂತೆ
ಸತ್ತು ಸಾಯದ್ಹಂಗ ಇದ್ದಾವ ಜ್ಞಾನಿಯಂತೆ ||4||
ಕಾತುರ ಬಿಟ್ಟಾವರ ಅತಿ ಧೀರನಂತೆ
ಮೂರು ಸಂಸಾರ ಸಾಧಿಸಿದವ ವೀರನಂತೆ
ಗುರುಸೇವೆಗೈದಾವ ನಿಜ ಶೂರನಂತೆ
ಇಹಪರ ಎರಡರ ಸಾಕ್ಷಿಗೆ ಸುಜ್ಞಾನಿಯಂತೆ ||5||

ವ್ರತಗೇಡಿ ನಾನು
ಕತ್ತೆ ಬೂದಿಲಿ ಹೊರಳಿ ಕಲ್ಲನಡಕುವ ತೆರನು
ಸತ್ಯ ಸಹಿತಿಲ್ಲದಾ ವ್ರತಗೇಡಿ ನಾನು ||ಪ||
ಕಾದ ಬಲ್ಲಾತ ಖಂಡೆವ ಕಟ್ಟಿ ಜಗದೊಳಗೆ
ಸಾಧಿಸುವ ಬಿರುದ ರಣದೊಳಗೆ ಹೊಕ್ಕು,
ಕಾದಲರಿಯದ ಹೇಡಿ ಖಂಡೆವ ಕಟ್ಟಿದರೇನು
ಕಾದಲರಿದನ ಕಬ್ಬಿಣವಲ್ಲದೇ
ವೇಧಿಸಿ ಸತ್ಯ ನಡೆದಾತ ಲಿಂಗವ ಧರಿಸಿ
ಸಾಧಿಸುವನಿಹಪರದ ವೀರನಾತ
ವೇಧಿಸಿ ಸತ್ಯ ನಡೆಯದ ಪಾಪಿ ನಾ ಧರಿಸಿ
ವೇಧಿಸೊಮ್ಮೆ ನೋಡಿ ಕಲ್ಲಲ್ಲವೇನು ||1||
ವ್ಯಸನವುಳ್ಳಾತ ಹೆಂಗಸನಪ್ಪಿ ಭೋಗವನು
ಹಸನಾಗಿಕೊಂಡು ಫಲಗಳನುಂಡರೂ
ವ್ಯಸನವಿಲ್ಲದೆ ತಟ್ಟಿ ಹೆಣ್ಣನಪ್ಪಿದಾತಗೆ
ವ್ಯಸನವಿಲ್ಲದ ಹೆಣ್ಣು ಗಂಡಲ್ಲವೇನು
ಹಸನಾಗಿ ಸತ್ಯ ನಡೆದಾತ ವಿಭೂತಿ ಧರಿಸಿ
ಬಸವಭಕ್ತನೆಂಬ ಮುಕ್ತಿಯ ಕಾಂಬನು
ಹಸನಾಗಿ ಧರ್ಮದಿ ನಡೆಯದ ಪಾಪಿ ನಾ ಧರಿಸಿ
ಹುಸಿಯಲ್ಲ ನೋಡಿ ಬೂದಿಯಲ್ಲವೇನು ||2||
ನಯನವುಳ್ಳಾತ ಚಿನ್ನವನೊರೆದು ಜಗದೊಳಗೆ
ನಯ ಚಿನ್ನ ಗಾಯಕನೆಂದು ದಶವ ಪಡೆವ
ನಯನವಿಲ್ಲದ ಕುರುಡ ಚಿನ್ನವ ಹಿಡಿದರಾತಗೆ
ನಯ ಚಿನ್ನವೂ ಕಲ್ಲು ಸರಿಯಲ್ಲವೇನು
ಭಯಭಕ್ತಿ ಸೈರಣೆಯುಳ್ಳಾತ ರುದ್ರಾಕ್ಷಿಯ ಧರಿಸಿ
ಸ್ವಯವಾಗಿ ರುದ್ರಪದಗಳ ಕಾಂಬನು
ಭಯಭಕ್ತಿ ಸೈರಣೆಯಿಲ್ಲದ ಪಾಪಿ ನಾ ಧರಿಸಿ
ಮಹಿಮಿಲ್ಲದ ಆ ಭಕ್ತಿಕಾಯಲ್ಲವೇನು ||3||

ಮೂಕೊರೆಯ ಮೂಳಿ ಮೂಳನು ನಾನು
ಮೂಕೊರೆಯ ಮೂಳಿ ಮೂಳನು ನಾನು ಈ ಪರಿಯ
ಲೋಕದೊಳು ಕಳ್ಳನಿದ್ದಂತೆ ಕೆಮ್ಮೆರೆದು
ಬಾಕಿಗೊಳಗಾದೆ ಬಲು ದೈವ ಬಂದರೆ ಹಿಡಿದು
ಮೇಖ ಹಾಸ್ಯಾಖ್ಯರು ಕುಂದೊಳಗೆ ಬಿಡರು ||ಪ||
ಸೃಷ್ಟಿಗಿಲ್ಲದ ಮಳೆಯ ತರಿಸಿಹೆನೆಂದು ಮೂಳನಾ
ಭ್ರಷ್ಟಿಸಿದ ಅಂಕಿಯ ಮೆರೆವುತೇನೆ
ಕಷ್ಟಮಾಡದೆ ಜೀತ ಅದಾರು ಇಸಕೊಟ್ಟಾರು
ದುಷ್ಟ ಕರ್ಮಕ ಮಳೆಯ ತರಿಸ್ಯಾರವರು
ಸೃಷ್ಟಿಯೊಳು ಧರ್ಮ ನಡೆದವರಿಗೆ ಮಳೆಯುಂಟು
ಕಷ್ಟ ಮಾಡದೆ ಜೀತ ಕೊಂಬ ತೆರನು
ಸೃಷ್ಟಿಯೊಳು ಧರ್ಮರಿಗೆ ಶಿವ ಮಳೆಯ ಕೊಡುವನು
ಭ್ರಷ್ಟ ತರಿಸಿದೆನೆಂಬ ಹಮ್ಮು ಯಾಕೆ ||1||
ಬಂದಬಂದವರು ಬಂದು ಶೀಲವೆಂದರೆ ನಾನು
ಮುಂದೆ ದೈವದ ಕೈಲಿ ಕೊಡಿಸೇನೆಂಬೆ
ಚಂದ್ರನಿಲ್ಲದ ಬೆಳದಿಂಗಳದಾರು ಕರಿಸ್ಯಾರು
ಮುಂದೆ ಕರ್ಮಕ ಬದುಕ ಕೂಡಿಸ್ಯಾರವರು
ಎಂದೆಂದು ಸತ್ಯದಲಿ ನಡೆದವಗ ಬದುಕುಂಟು
ಚಂದ್ರನುದಯಕೆ ಬೆಳಗು ಕರೆವುತಿಹನ
ಎಂದೆಂದು ಸತ್ಯಕ್ಕೆ ಬರುವ ಪದದನುಭವ
ಎಲ್ಲವೂ ಅವರಿದು ನೋಡೆ
ಅಲ್ಲವೆಂದರೆ ಪದನ ಕಡೆಗಿಟ್ಟು ಕೈಲಾಸಪಥವ
ಬಲ್ಲರೇ ಬೇಗ ತೋರಾ ||2||

ಪಡುವಲಿಗ್ಹೋದವರಾ
ಪಡುವಲಿಗ್ಹೋದವರಾ ತಿರುಗಿ ಬಂದರಿವರಾ
ನೋಡಯ್ಯಾ ತಿರುಗಿಬಂದರಿವರಾ
ಕೇಳಿರಯ್ಯ ನೀವು ನಿಮ್ಮ ಪಡುವಲಿಗ್ಹೋದವರಾ ||ಪ||
ಒಂದು ತಂಡ ಹಿಂದ ನೋಡೈ ಒಂದು ತಂಡ ಮುಂದ
ಮುಂದಿನ ತಂಡದಲಿ ನಮ್ಮ ಕೋಟಿಯೆಲ್ಲ ನೆರೆದು
ಅಯ್ಯದವರು ತೊಡರಬಾವಲಿಯವರ
ಕಡಕ ಚವುರದವರು ನೋಡೈ ಎಡಬಲದ ||1||
ಅಯ್ಯ ಒಂದು ಕಿವಿಯ ಹಾಸಿ ಒಂದು ಕಿವಿಯ ಹೊದ್ದು
ಮೂರು ಮನೆಯ ಕಾಯ್ದು ನೋಡೈ ಮದನ ಕೊಂಬವರು
ಅಯ್ಯ ಮೇಲಂಕಣದವು ಮೇಲ ನೋಟದವರು
ಇಂಥಾ ಪರಿಯಿಂದ ನೋಡೈ ನಿಜವ ಪಡೆದವರಾ ||2||
ಪಂಚಗುಡಿಯ ಒಳಗೆ ಹೊನ್ನರಳಿಯ ಮರನ
ಪಂಚೈವರು ನೆರೆದು ನೋಡೈ ಮಾರಣ ನಡೆಸುವರ
ಉಳಿವಿಯಲ್ಲಿ ಮಾರಣ ಮಾತನಾಡಿಸುವರಾ ನೋಡೈ
ಮಾತನಾಡಿಸುವರಾ ಪ್ರಭುರಾಯನ ನೆನೆದು ನೋಡೈ ಮುಕ್ತಿ ಪಡೆದವರ ||3||

ಉರಿದು ಹೋದೆ ಕರ್ಮಿ ನಾನು
ಪರಿಸತಿ ಪರಧನ ಪರನಿಂದೆಗಳ ಕೇಳಿದರು
ಕರುಣದಿಂದ ಎನಗೆ ಈ ಪರಿಯ ಭವ
ರೋಗವದು ತಟ್ಟಲಿಕೆ ಮುಂದೆ
ಉರಿದು ಹೋದೆ ಕರ್ಮಿ ನಾನು ||ಪ||
ಊರು ಊರಿಗೆ ಪಟ್ಟಮನೆಗಳು ಕಟ್ಟಿ
ಕೇರಿ ಕೇರಿಗೆ ಠಾಣ್ಯವಾಗಿ
ನೀರಹೊಳೆಗೆ ಅನಪು ಅಗಸರ ಮನಿಗನಪು
ದಾರು ಒಬ್ಬರಿಗೊಬ್ಬರುಂಟೇ
ಊರಿಗೆ ರಣಗಂಬಗಳ ನಟ್ಟಿನ್ನು
ದಾರಿ ಬಟ್ಟೆಗಳಟ್ಟಿ ಧರೆಯೊಳಗೆ
ಸಾರಿದೂರವ ದೈವವಿದು ಕೇಳಿದ ಕರ್ಮಿ ನಾ
ಸಾರಿಗೆಗೊಳಗಾದೆನೀ ಪರಿಯ ||1||
ಮುನ್ನೂರ ಅರವತ್ತು ರೋಗಿಗಳು ದೇವರ ಕೈಯ
ಚೆನ್ನಾಗಿ ಪಂಜನಯ ವೀಳ್ಯವ ಕೊಂಡು
ಇನ್ನು ನಾನೆಲ್ಲಿ ಹೊಕ್ಕರೆ ಬಿಡನೆಂದು ಪಾಪಿಯ
ನಾನೊಮ್ಮೆ ಗಣದಾಳಿ ನೋಡೆ
ಹೊನ್ನ ಮದದಲಿ ಹಾಯ್ದೆನೆಂದರೆ
ಹೊನ್ನ ಮದಕವು ಚೋರಭಯವು
ನನ್ನ ಮಂದಿಯ ಬಲದಿಂದ ಹಾಯ್ದೆನೆಂದರೆ
ನನ್ನ ಮಂದಿಗೆ ರೋಗ ಬಿಡದು ||2||
ನಾಲ್ಕು ದಿಕ್ಕಿಗೆ ಕೇಡು ಬಂದರೆ ಪಾಪಿ ನಾ
ನಾಲ್ಕು ದಿಕ್ಕಿಗೇನೇ ಹೋಗಲುಬಹುದೇ
ಏಕವಾಗೆಂಟು ದಿಕ್ಕಿನಲಿ ಪಾಪಿ ನನ್ನಿಂದ
ಏಕವಾಗೈದು ನಾಡೊಳಗೆ
ಲೇಖ ಬಂದೋದುತಿರೆ ಪರಲೋಕದವರ
ಲೋಕದೊಳಗವು ಸಾರಿ ದೂರ
ನೀಕರಿಸಿ ಪಾಪವನು ಬಿಡಹೇಳೆ ಬಿಡೆ ನಾನು
ನೂಕು ನುಗ್ಗಾದೆ ನಾಡೊಳಗೆ ||3||

ತಿಳಿಸುವ ಮಾತಿಲ್ಲ
ತಿಳಿಸುವ ಮಾತಲ್ಲ ತಿಳಿಸದೆ ತಿಳಿಯುವ ಮಾತಲ್ಲ |
ತಿಳಿಸದೆ ತಿಳಿಯದು ತಿಳಿಯದೆ ಹೊಳೆಯದು |
ಹೊಳೆಯದೆ ಉಳಿಯದು ತಿಳಿಸುವ ಮಾತಲ್ಲಾ ||ಪ||
ಬೇದವಳಿಯಬೇಕು ಮನಸಿನ ನಿಶಾದ ಕಳೇಯಬೇಕು |
ಸಾಧು ಶರಣರ ಸಂಗ ಸಾಧಿಸಿ ತತ್ತ್ವದ ಹಾದಿಯ ತಾ |
ಮೋದದಿ ತಿಳಿಯದೆ ತಿಳಿಸುವ ಮಾತಲ್ಲಾ ||1||
ಸಾಧಿಸುವದು ಮುಕ್ತಿ ನಿಜಾನಂದ ಬೋಧದೊಳಿಹುದು ಯುಕ್ತಿ |
ಆದಿ ಮೂರುತಿ ಭವತಾರಕ ದೇವನ ಪಾದ ಪೂಜಿಸಿ |
ಸದ್ಗುರುವನು ಭಜಿಸದೆ ತಿಳಿಸುವ ಮಾತಲ್ಲಾ ||2||
ಕರ್ಮವಳಿಯಬೇಕು ತಾ ನಿಜ ಧರ್ಮ ತಿಳಿಯಬೇಕು |
ಮರ್ಮ ಮೂರುತಿ ಕರಿವೃಷಬೇಂದ್ರನ ಸದ್ಧರ್ಮವ |
ತಿಳಿದು ಕರುಣವ ಪಡೆಯದೆ ತಿಳಿಸುವ ಮಾತಲ್ಲಾ ||3||

ಏನೂ ಹೇಳಲೈಯ್ಯೋ ನಾನು
ಏನೂ ಹೇಳಲೈಯ್ಯೋ ನಾನು
ಎಂಥ ಕರ್ಮ ಮಾಡಿದ್ದೇನೇನೋ |
ಇಂಧೂಧರ ಶ್ರೀಗುರು ಎನಗೇ
ಕರುಣಮಾಡದೇ ಪೋದನೋ ||ಪ||
ಭವದ ಬಾಧೇ ತಡಿಯಲಾರೆ |
ಜನನಾದಿ ದುಃಖ ನಾ ಸಹಿಸಲಾರೇ |
ಸತ್ತು ಸತ್ತು ಹುಟ್ಟಿ ಹುಟ್ಟಿ | ಈ ಭವಕೆ ನಾ ಬರಲಾರೇ ||1||
ಪ್ರಪಂಚವೆಂಬೂದು ಎನಗೆ ಬಹು ದುಃಖವಾಗಿರುವದು |
ವಿಷಯಾದಿ ಮೋಹಗಳಲಿ ಬೆಂದು ಬೆಂದು ಹೋಗಿರುವೆನು ||2||
ಯಾರಿಗೆ ಕಷ್ಟ ಪಡಿಸಿದ್ದೆನೇನೋ |
ಯಾರಿಗೆ ವಿಪರೀತ ಕಾಡಿದ್ದೆನೇನೋ |
ಪರರ ಹಣಕೊಡಲಾರದೆನಾನು |
ಯಾರ ಮನವ ಬಹಳ ನೋಯಿಸಿದ್ದೇನೇನೋ ||3||
ಶಿಶು ಹತ್ಯ ಮಾಡಿದ್ದೆನೇನೋ |
ಸ್ತ್ರೀಹತ್ಯ ಮಾಡಿದ್ದೆನೇನೋ|
ಬ್ರಹ್ಮಹತ್ಯವ ಮಾಡಿ ಯಾವ|
ಶರಣರ ಶಾಪಕೆ ಒಳಗಾಗಿರುವೆನೇನೋ ||4||
ಪೂರ್ವದಲಿ ಆರಿಗೆ ಅಪಹಾಸ್ಯವ |
ಮಾಡಿ ಮೆರೆದಿದ್ದೆನೇನೋ ||
ಸಾಧು ಸತ್ಪುರುಷರ ನಿಂದೆಯ ಮಾಡಿ |
ಬಾಯಿಗೆ ಬಂದಂಗ ಬೊಗಳಿದ್ದೆನೇನೊ ||5||
ಭಾನು ಕೋಟಿ ತೇಜ ಶ್ರೀಗುರು ಆರೋಢ |
ಎನಕಡೇ ನೋಡದೆ ಪೋದನೋ |
ದೇಶಕ್ಕಧಿಕವಾದ ನಂದ್ಯಾಳದೀಶ |
ಶ್ರೀಗುರು ಆರೂಢೇಶನ ಪಾದವನಗಲಿ ನಾನಿರಲಾರೇ ||6||

ತಂಗಿ ಕೇಳ ನಿನ್ನ ಅಂಗದ ಸ್ಥಳದೊಳು
ತಂಗಿ ಕೇಳ ನಿನ್ನ ಅಂಗದ ಸ್ಥಳದೊಳು
ಸಂಗಮಕ ಹೋಗುನು ಬಾ |
ಶರಣರ ಸಂಗದೊಳು ಆಡುನು ಬಾ |
ಮನವೆಂಬು ಮಂಗ್ಯಾನ ದೂಡುನು ಬಾಬಾ ||ಪ||
ಅಣುಮಲ ಮಾಯಮಲ ಕಾರ್ಮಿಕ ಬಿಟ್ಟು|
ಕಾಮ ಮೋಹಾದಿಗಳ ಕೂಡಿಸಿ ಸುಟ್ಟು |
ಕಾಯಾ ವಾಚಾ ಮನ ಮೂರು ಮೂರುತಿ |
ನ್ಯಾಯ ಮೂರುತಿ ಶ್ರೀಗುರುವಿನ ಕರುಣದಿ ||1||
ಹೇಸಿಕಿ ಒಂಬತ್ತು ಬಾಗಿಲ ಮುಚ್ಚ |
ಹೊರಗಿನ ಆಶೆಕೆಲ್ಲಾ ಹಚ್ಚವ್ವ ಕಿಚ್ಚ|
ಬಾರಿ ಪಾಪ ನಾಶ ಆಗುವದವ್ವಾ |
ಬಸವ ಲಿಂಗಕೆ ಹಚ್ಚಡ ಹೊಚ್ಚ ||2||
ಮೂರು ಹೋಳೆಗಳಲ್ಲಿ ಕೂಡ್ಯಾವ ತಂಗಿ |
ಮಧ್ಯದೊಳು ನೋಡು ಕೂತಾದ ಬ್ರುಂಗಿ |
ಉನ್ಮನಿ ಮಧ್ಯದಿ ಚಿದಾನಂದನ |
ಕೂಡಿಕೊಂಡು ನೀ ಹಡೆದಂತ ತಂಗಿ ||3||
ನಾಡಿನೊಳಗೆ ಅಂಬರಗೊಳ್ಳೆಂಬ ಊರ |
ಆರೂಢ ಪತಿಗೆ ನೀ ನಲಿದಾಡ ಪಾರ|
ಮೂಢ ಜನರ ಸಂಗ ಏನಾದ ತಂಗಿ ಬಾಡಿಗಿ|
ಬಂದ ಮೇಲೆ ಹಣ ತೆಗೆದುಕೊಂಡು | ಸಂಗಮಕ ಹೋಗುನು ಬಾ ||4||

ಅಂಗದೊಳು ಶಿವಲಿಂಗ ಮೂರುತಿ ಹಾನ
ಅಂಗದೊಳು ಶಿವಲಿಂಗ ಮೂರುತಿ ಹಾನ |
ತಂಗಿ ನಿನಗೇನಕೂನ ರಂಗಮಂಟಪದೊಳು|
ಜಂಗುಮಯ್ಯ ಹಾನ ||1||
ಒಂಬತ್ತು ಬಾಗಿಲ ಕಂಬನಿಲ್ಲದ ಗುಡಿಯೋ |
ಶಾಂಬ ಒಳಗಾನ ಒಡಿಯೋ |
ನಂಬಿದ ಭಕ್ತರಿಗೆ ನಾಲ್ಕು ಸಂಪತ್ತ ಪಡಿಯೋ ||2||
ಅರಿತದಿ ದುರಿತದಿ ಹಾರಿ ಹೋಯಿತೋ |
ಧೂಳೋ ನಿನ್ನ ಪರಿಭವ ಹಾಳೋ |
ನಿನ್ನ ಪರಿಭವ ಹಾಳೋ ||3||
ಅಷ್ಟ ಶ್ರೇಷ್ಠವಾದ ಭಾರಾ ಜ್ಯೋತಿರ್ಲಿಂಗ |
ಕಷ್ಟ ಬಿಡಬ್ಯಾಡ ಮಂಗ |
ನಿಷ್ಠಿವಂತರ ಪಾದ ಹಿಡಿಯೋ ಸಂಗ ||4||
ದೇಶಕಧಿಕವಾದ ವಾಸುಳ್ಳ ತೆಲಗುಬಾಳ |
ಶಾಂಭ ಶಿವ ಮಡಿವಾಳ |
ಆತನ ಪಾದಕೆ ಹೊಂದೊ ನೀ ಮೂಳಾ ||5||

ಅಜ್ಞಾನದ ಕಾರ್ಯ
ಯೇನೂ ಹೇಳಲಿ ಯನ್ನ ಅಜ್ಞಾನವಶವಿದೂ |
ನಾನೂ ನನ್ನನು ಮರತೇ |
ನಾನಾ ಜನ್ಮವ ತಿರುಗಿ ತಿರುಗಿ |
ಹೀನ ಮನ ಸಂಸಾರಿಯಾಗಿ |
ಶ್ವಾನ ಸೂಕರನಂತೆ ಊನ್ಮನಿ |
ಖೂನ ಅರಿಯದೇ ವ್ಯರ್ಥ ಕೆಟ್ಟೆ ||ಪ||
ಆತ್ಮನೇ ತಾನಿದ್ದು ಅರಿಯದ್ಯಾತಕೆ ಹೋದೆ |
ಭೂತ ಪಂಚಕದ ದೇಹವ ಮೆಚ್ಚಿ |
ಯಾತರಿಂದಲಿ ಬಂತು ಯನಗಿದು |
ಜೀವ ಶಿವ ಯಂತೆಂಬೋ ಭೇದವು |
ಮಾತು ಮಾತಿಗೆ ಶಬ್ದ ಸೂತಕ
ಪಾತಕದಲಿ ಮುಳುಗಿ ಹೋದೇ ||1||
ಭಾನು ಪ್ರಕಾಶವು ಬ್ರಹ್ಮಾಂಡ ತುಂಬಿಹುದು |
ತಾನು ತನ್ನೊಳು ಹೊಳೆಯುತಿಹುದು |
ಯೇನೂ ಕಾರಣ ಮಾಯೆ ಕತ್ತಲೆ ತಾನೆ|
ಮುಸುಕಿ ತೋರುತಿಹುದು|
ನಾನು ನೀನು ಯಂತೆಂಬ ಖೂನವೂ|
ಯೇನು ಕಾರಣ ತಿಳಿಯಗೊಡದಿದು ||2||
ಪರುಷವು ತನ್ನೊಳು ಪರಿಪೂರ್ಣ ವಿರಲಿಕ್ಕೆ|
ಕರವೊಡ್ಡಿ ಬೇಡುವದು ಬಡತನವಲ್ಲವೇ|
ಹರನೆ ತಾನಾಗಿದ್ದು ತನ್ನಲ್ಲಿ ನರನಭಾವದಿ ನುಡಿದ ನುಡಿಗಳು|
ಶ್ರೀಗುರುಕೂಡಲುರೇಶ ನಿಮ್ಮಯ ಚರಣ
ಕಾಣುವ ಮೊದಲಿಗಿತ್ತು ||3||

ಏತಕೆ ಚಿಂತೆಯನು ಮಾಡುವಿ
ಏತಕೆ ಚಿಂತೆಯನು ಮಾಡುವಿ ಮೂಢಾ|
ವಿಶ್ವನಾಥನೇ ಪೋಷಿಪ ಯೋಚಿಸಬೇಡ ||ಪ||
ಯಾರು ನಮಗಾಗುವ ಸಹಾಯರಿಲ್ಲವೆಂದು|
ಹಾರೈಸಿ ಸುಮ್ಮನೇ ಬಳಲುವಿಯಲ್ಲಾ|
ಮೂರು ಲೋಕಂಗಳನು ಪಾಲಿಸಬಲ್ಲ|
ನಮ್ಮ ಮಾರವೈರಿ ನಿನ್ನನು ಮರೆಯುವುದಿಲ್ಲಾ ||1||
ಮಕ್ಕಳು ಮರಿಗೆ ಮುಂದೆ ದಾರಿ ಏನು|
ಎಂದು ದುಃಖದೊಳು ಕೊರಗಿ ಸಾಯುವಿ ನೀನು|
ಮಕ್ಕಳು ಗರ್ಭದೊಳಿರುವಾಗ ತಾನು|
ತುತ್ತನಿಕ್ಕಿ ಸಾಕಿದೀಶ ನೀವಾಗಿಲ್ಲವೇನು ||2||
ಬೆಟ್ಟದ ದುತಿಯೊಳಿರ್ಪ ಪ್ರಾಣಿಗಳಿಗೆ|
ಅನ್ನವಿಟ್ಟು ಸಾಕು ಈಶನೇ ದಿಕ್ಕೆನ್ನುತೊಳಗೆ|
ನಿಷ್ಠೆಯಿಂ ನಂಬಿರೆ ತಪ್ಪದರಗಳಿಗೇ|
ತಾನೆ ಕಟ್ಟಿ ತಂದು ಕೊಡುವ ನಿನ್ನಯ ಬಳಿಗೆ ||3||
ಆಸೆಯಿಂದಿರುವೆ ನಾಳೆಗುಂಬೆನೆಂದು |
ಧಾನ್ಯ ರಾಶಿಯನೆ ಮಾಡಿ ಹೋಗುವದು ಸತ್ತು|
ಏಸು ಕಾಲ ಜೀವಿಸಿರಲಾರೆ ಮುಂದಕೆಂದು |
ಮೇವನಾಸಿಸದೆ ಬಾಳ್ವದು ತಿಳಿನೀನಿಂದು ||4||
ಪಕ್ಷಿಗಳತತ್ತಲೈದು ಮೇಯುವಂತೆ ಸರ್ವ|
ವೃಕ್ಷಂಗಳೇನೈದು ಮೇವವೇ ಮಂಕೇ|
ಪಕ್ಷಿವೃಕ್ಷಾದಿಗಳ ಪೋಷಿಸುವಂತೆ ನಿನ್ನ|
ರಕ್ಷಿಪನು ಶ್ರೀಗುರು ಶಿದ್ಧನೆಲೊ ಬಿಡು ಭ್ರಾಂತೇ ||5||

ಜ್ಞಾನಾನುಭವದ ಅಡಿಗೆ
ಅನುಭವದಡಿಗೆಯ ಮಾಡಿ|
ಅದಕ್ಕನುಭವಿಗಳು ಬಂದು ನೀವೆಲ್ಲಾ ಕೂಡಿ ||ಪ||
ತನುವೆಂಬ ಬಾಂಡೆವ ತೊಳೆದು |
ಕೆಟ್ಟ ಮನದ ಜಂಜಡವೆಂಬ ಮುಸುರೆಯ ಬಳಿದು|
ಘನವೆಂಬ ಮನೆಯನೆ ತೊಳೆದು |
ಅಲ್ಲಿ ಬಿನಗು ತ್ರಿಗುಣವೆಂಬ ಒಲೆಗುಂಡ ತುಳಿದು ||1||
ವಿರತಿಯೆಂಬುವ ಮಡಿಯುಟ್ಟು | ಪೂರ್ಣ
ಹರ ಭಕ್ತಿ ಯೆಂಬುವ ನೀರನೆಯೆಸರಿಟ್ಟು|
ಅರಿವೆಂಬ ಬೆಂಕಿಯ ಕೊಟ್ಟು | ಮಾಯಾ
ಮರವೆಯೆಂಬುವ ಕಾಷ್ಟಗಳೆನ್ನೆಲ್ಲಾ ಸುಟ್ಟು ||2||
ಪರವೆಂಬ ಸಾಮಗ್ರಿಗೂಡಿ | ಸಾರ
ತರ ಮೋಕ್ಷವೆಂದೆಂಬೆ ಪಾಕವ ಮಾಡಿ|
ಹರ ಶರಣರು ಸವಿದಾಡಿ | ನಮ್ಮ
ಶ್ರೀಗುರು ಸಿದ್ಧದೇವನ ಚರಣವ ಪಾಡಿ ||3||

ಕಾಯ ಕಾಂತಾರವ ಹೊಕ್ಕು
ಕಾಯ ಕಾಂತಾರವ ಹೊಕ್ಕು ಬೇಂಟೆಯನಾಡಿ
ಮಾಯಾ ಮೋಹದ ಮೃಗಗಳ ಕೊಲ್ಲಿರೋ ||ಪ||
ಕೋಪವೆಂದೆಂಬುವ ಹುಲಿಗಳುಂಟು
ಪಾಪವೆಂದೆಂಬ ಸೂಕರಗಳುಂಟು
ಚಾಪಲ್ಯ ಗುಣಗಳೆಂದೆಂಬ ಜಿಂಕೆಗಳುಂಟು
ಕಾಪಟ್ಯವೆಂದೆಂಬ ನರಿಗಳುಂಟು ||1||
ಮೆರೆವಷ್ಟ ಮಧಗಳೆಂಬ ಕೋಣಗಳುಂಟು
ಬರಿಯ ಡಂಬಗಳೆಂಬ ಕರಡಿಗಳುಂಟು
ಉರಿವ ಮತ್ಸರ ಬುದ್ಧಿಯೆಂಬ ಕೇಸರಿಯುಂಟು
ಮರವೆಯೆಂದೆಂಬುವ ಗಜಗಳುಂಟು ||2||
ಪರಮ ಸದ್ಭಕ್ತಿಯೆಂದೆಂಬ ಬಿಲ್ಲನೆ ಮಾಡಿ
ವಿರತಿಯೆಂದೆಂಬ ಸಿಂಜಿನಿಯ ಹೂಡಿ
ಅರಿವೆಂಬ ಬಾಣದೊಳೆವನೆಚ್ಚು ಕೆಡಹುತೆ
ಶ್ರೀಗುರು ಸಿದ್ಧನಂಘ್ರಿಗುಳ್ಗುಪಹಾರಿಸಿ ||3||

ಸ್ಥಿರ ಮುಕ್ತಿ ಪಡೆಯದ
ಸ್ಥಿರ ಮುಕ್ತಿಪಡೆಯದ ನರಜನ್ಮವೇಕೆ |
ಪರಮನ ನೆಲೆಗಾಣದತಿಜಾಣ್ಮೆಯೇಕೆ ||ಪ||
ಸಲೆ ಸತ್ಯವಿಲ್ಲದ ಸುಜನತ್ವವೇಕೆ |
ಮೊಳೆವಕಾಮನ ಕೊಲ್ಲದತಿತನವೇಕೆ |
ಅಳಿಯಾಸೆಗೆಡದಿಹ ಸನ್ಯಾಸವೇಕೆ |
ಒಳಗೆ ಸಂಶಯಗೊಂಬವದ್ವೈತವೇಕೆ ||1||
ಹರಿವ ವಾಯುವ ನಿಲ್ಲಿಸಿದ ಯೋಗವೇಕೆ |
ಪರಮಾರ್ಥ ವಿಡಿಯದ ಬಹು ಶಾಸ್ತ್ರವೇಕೆ |
ಕರುಣಿ ಶಾಂತಿಗಳಿಲ್ಲದಿಹ ತಪವೇಕೆ |
ಹೊರಗೊಳಗೊಂದಾಗದನುಭವವೇಕೆ ||2||
ತನುವ ಬೇರಿಡದನುಸಂಧಾನವೇಕೆ |
ತನಗೆ ನಿಶ್ಚಯವಿಲ್ಲದುಪದೇಶವೇಕೆ |
ಮನದ ಬಯಕೆಯುಡಗದ ಮೌನವೇಕೆ |
ಘನವನಾಲಿಂಗಿಸದುಪರತಿಯೇಕೆ ||3||
ನೀನಾನೆಂಬುವುದಳಿಯದ ಭಕ್ತಿಯೇಕೆ |
ನಾನತ್ವವನು ಭೇದಿಸದ ತತ್ತ್ವವೇಕೆ |
ತಾನಾರುಯಂದರಿಯದ ಯುಕ್ತಿಯೇಕೆ|
ಜ್ಞಾನವಿಲ್ಲದ ದೀರ್ಘ ವೈರಾಗ್ಯವೇಕೆ ||4||
ಪರಿಭವವನು ಕೆಡಿಸದ ಗುರುವೇಕೆ |
ಪೆರತಾಗಿ ಪೂಜೆಗೊಂಬುವ ದೈವವೇಕೆ |
ಪರಿಪೂರ್ಣ ಭಾವಲ್ಲದ ಲಕ್ಷವೇಕೆ |
ಗುರುಶಿದ್ಧನಾಗಿ ನಿಲ್ಲದ ಸೌಖ್ಯವೇಕೆ ||5||

ದೂರವಿಲ್ಲವೋ ಮುಕ್ತಿ
ದೂರವಿಲ್ಲವೋ ಮುಕ್ತಿ | ದೂರವಿಲ್ಲವೋ
ಪಾರಮಾರ್ಥ ತತ್ತ್ವಸುಖವ |
ಸೂರೆಗೊಂಬ ಯತಿಗದೇನು ||ಪ||
ಜನಿಸಿ ತೋರ್ಪ ಜಗವಿದೆಲ್ಲಾ | ಕನಸಿನಂತೆ ಕೆಡುವುದೆಂದು|
ಮನದೊಳರಿದು ಜನಿಸಿ ಕೆಡದ|
ವಿನುಮಯಾಂಶ ವಿಡಿದ ಯತಿಗೆ ||1||
ತೋರುವಖಿಳ ವಿಷಯಗಳ ವಿ| ಕಾರದಾಹ ಯಾ ಕೃತಿಗಳ |
ಮೀರುತಸ್ತಿ ಭಾತಿ ಹಿತ ವಿ|
ಚಾರವರಿದು ಸುಖಿಪ ಯತಿಗೆ ||2||
ಮೆರೆವ ದೃಕ್ಕೆ ಬ್ರಹ್ಮ ವಿಶ್ವ | ದಿರವೆ ದೃಶ್ಯವೆಂಬುದರವ|
ಮರೆದು ಶ್ರೀಗುರು ಶಿದ್ಧನಲ್ಲಿ |
ಬೆರೆದು ಪೂರ್ಣನಾದ ಯತಿಗೆ ||3||

ತಂಗಿ ಹೋಗುನು ಬಾರೆ
ತಂಗಿ ಹೋಗುನು ಬಾರೆ | ಬಾರೆ ಒಗಿಲಾಕ
ಹೊಳಿ ಐತಿ ದೂರ | ಮನ್ಯಾಗಿಲ್ಲವ್ವ ಯಾರ|
ಹೊಳಿ ನೀರ ತರಬೇಕಂದ್ರೇ | ಅಳುತಾದೌವ್ವ ಪಾರ ||1||
ಸೀರಿಗೊಳೇಸ ದೋತರ ಹಾಸ|
ಕುಪ್ಪಸ ವಗಿಯುದರೊಳಗೆ ಹೊತ್ತ ಉಳಿತ ತಾಸ ||2||
ಅಡಗಿ ಮಾಡೆನಂದರೆ ಮನ್ಯಾಗಿಲ್ಲವ್ವ ಗಡಗಿ |
ಅಡಗಿ ಮಾಡದಿದ್ದರೆ ಬಂತವ್ವ ಬಡಿಗಿ ||3||
ಸಣ್ಣಹಳ್ಳಿ ಬೂದಿಬಸವ ರಾಮಾಪುರದ ಬಕ್ಕ
ತನ್ನೊಳು ತಾತಿಳಿದು ಕೂತಲ್ಲೆ ಮಾಯವಾದನಕ್ಕ ||4||

ಯಾವದು ಬಹು ಪಾಡೋ
ಯಾವುದು ಬಹು ಪಾಡೋ |
ಮನುಜಾ ಜ್ಞಾನದಿಂದ ನೋಡೋ |
ಇಹದೊಳು ಯಾವದು ಬಹು ಪಾಡೋ ಮನುಜಾ |
ಜ್ಞಾನದಿಂದ ನೋಡೋ ||ಪ||
ಹುಟ್ಟುತ ತಾಯಿ ತಂದಿ | ಯಾವ ಖೂನ ಹಿಡಿದು ಬಂದೀ |
ಬಿಟ್ಟು ಹೋದೇನಂದಿ ಮಡದಿ ಮಕ್ಕಳ ಮೋಹವು ಬಹಳ|
ದುಡಿದು ದುಡಿದು ಸತ್ತು ಹೋದೆಲ್ಲೋ ಮೂಢಾ ||1||
ಸರ್ವರ ಉಪಶಾಂತಿ ಸುಳ್ಳೇ ಹಚ್ಚೀಕೊಂಡಿದಿ ಭ್ರಾಂತಿ |
ಮಾಡೋ ಶ್ರೀಗುರು ಪಾದದ ಚಿಂತಿ | ಹುಟ್ಟಿ ಮಾಡಲೂ ಬೇಡ|
ದುಷ್ಟ ಮನುಜರ ಸಂಗ | ಕಟ್ಟಕಡೆಗೆ ಕೆಟ್ಟು ಹೋದೆಲ್ಲೋ ಮೂಢಾ ||2||
ಮೂರು ಲೋಕದಲ್ಲೀ ಸತ್ತರೆ ಹೋಗುವದು ಯಾವಲ್ಲಿ|
ಆರು ನೆಲೆಗಳ ಏರಿ ನೋಡಲ್ಲಿ ಶ್ರೀಗುರು ಆರೂಢ |
ಕೂಡಲುರೇಶನ ಪಾದವ ಕೂಡಿಕೋ ಮೂಢಾ ||3||

ಎಂಥ ಪುಣ್ಯ ಪುರುಷನಮ್ಮ
ಎಂಥ ಪುಣ್ಯ ಪುರುಷನಮ್ಮ
ಏಣಲೋಚನೆಯ ಗಂಡ, ತ
ನ್ನಂತೆ ಮಾಡಿ ಎನಗೆ ಬೋಧ
ಪೇಳಿದ ಕೇಳು ಜಾಣೆ ||ಪ||
ಜಾಣೆ ನೀ ಕೇಳೂ ಜಗದೊಳಗೆಲ್ಲ ಬೆಳಗುವ
ಮಾಣಿಕ್ಯ ರೂಪನಂತೆ ಎನ್ನ ಗಂಡ
ಅತ್ತ ಇತ್ತ ನೋಡಬೇಡ ಜತನಾಗಿ ಮನೆಯ ಹೊಂದಿ
ರತ್ನ ಉಂಟು ಸರ್ಪನಂತೆ ಕಾದಿರೆಂದ ಎನ್ನ ಗಂಡ ||1||
ಹತ್ತು ಮಂದಿ-ಕಳ್ಳರುಂಟು ಹಿಡಿದು ತಂದು
ಕಟ್ಟಿ ನಿನ್ನ ಹತ್ತಿರಿಟ್ಟುಕೊಳ್ಳೆ ವಸ್ತು ಹೋದೀತೆಂದ ಎನ್ನ ಗಂಡ
ಅತ್ತ ಇತ್ತ ಹೋಗಬೇಡ ಜತ್ತನಾಗಿ ಮನೆಯ ಹೊಂದಿ
ರತ್ನವಿದ್ದ ಸರ್ಪನಂತೆ ಕಾದಿರೆಂದ ಎನ್ನ ಗಂಡ ||2||
ಜಾಣೆ ನೀನು ಕೇಳು ಜಗದೊಳಗೆಲ್ಲ ಬೆಳಗುವ
ಮಾಣಿಕ್ಯ ಅಪರೂಪ ಸಿಕ್ಕೀತೆಂದ ಎನ್ನ ಗಂಡ
ಪ್ರಾಣದಂತೆ ಜೋಕೆ ಮಾಡು ಪಾಪಿಗಳಿಗೆ ಹೇಳಬೇಡ
ಪುಣ್ಯವಿರಲಿಕೆ ನಮಗೆ ಸಿಕ್ಕೀತೆಂದ ಎನ್ನ ಗಂಡ ||3||
ಹಿಂಗದಂತೆ ಜೋಕೆ ಮಾಡು ಹಿತದಿಂದ ಸಾಧಿಸಲು
ಮಂಗಳಾಂಗಿ ಕೇಳೂ ಮೋಕ್ಷ ಕೊಡುವದೆಂದ ಎನ್ನ ಗಂಡ
ಕಂಗಳಲ್ಲಿ ಭಾವದಲ್ಲಿ ಕರಗಳಲ್ಲಿ ಮನದಲ್ಲೀ ಮಹಾ
ಲಿಂಗದಲ್ಲಿ ತುಂಬಿದಂಥ ವಸ್ತುವೆಂದ ಎನ್ನ ಗಂಡ ||4||
ಎಲ್ಲಿ ಕುಳಿತರೇನು ಎತ್ತ ಹೋದರೇನು ನಿನ್ನ ಬಿಟ್ಟು
ಎಲ್ಲಿಗೆ ಹೋಗುವಂಥಲ್ಲವೆಂದು ಎನ್ನ ಗಂಡ
ಬಲ್ಲಾಕೆ ಕೇಳು ನಿಲ್ಲೆಸೆರಡು ಕಂಗಳಲ್ಲಿ
ಸುಳ್ಳಲ್ಲ ವಸ್ತು ಬೇಗ ಸಿಕ್ಕೀತೆಂದ ಎನ್ನ ಗಂಡ ||5||
ಕದ್ದು ಹೋಗುವಂಥ ಕಳ್ಳರುಂಟು, ಬಹಳ ಮಂದಿ
ನಿದ್ರೆ ಮಾಡಬೇಡ ರತ್ನ ನಿಲ್ಲದೆಂದ, ಎನ್ನ ಗಂಡ
ಬುದ್ಧಿವಂತೆ ಕೇಳೂ ಭ್ರೂಮಧ್ಯದಲ್ಲಿ, ದೃಷ್ಟಿ ಇಟ್ಟು
ಎದ್ದು ಕಾದಿರೆಂದು ಸಂಗಮೇಶ ಪೇಳಿದ ಕೇಳು ಜಾಣೆ ||6||

ಯಾಕೆ ಮನ ಸೋತಳಮ್ಮಾ
ಯಾಕೆ ಮನ ಸೋತಳಮ್ಮಾ ಈ ಮಗಳಿ
ಗಿನ್ಯಾರು ಕಲಿಸಿದರು ಬುದ್ಧಿ
ಸಾಕೆಂದು ಸಂಸಾರ ಮನಿಯ ಗಂಡನ ಬಿಟ್ಟು
ಲೋಕಕ್ಕೆ ಹೊರತಾದಳೊ ||ಪ||
ಆರು ಮಕ್ಕಳು ಬಿಟ್ಟಾಳೊ ಬಂಗಾರ
ಮೂರು ತೊಲಿ ಎದುರಿಟ್ಟಾಳೊ
ಮ್ಯಾಲೆ ಇನ್ನೂರು ಸಾವಿರ ಲಕ್ಷ
ಸೂರೆಗೊಟ್ಟಾಳೊ ಅವನಿಗೆ ||1||
ನಮ್ಮ ಸೀಮೆಯನಳಿದಾಳೊ ಮಗಳಿನ್ನು
ಗ್ನಾನ ರೂಪವ ತೊಟ್ಟಾಳೊ
ನೇಮ ನಿತ್ಯ ಜಪತಪವನರಿದು
ಸ್ವಾಮಿಯಂದದಿ ಪೋದಳೊ ||2||
ಪರಿಪರಿಯ ಬೋಧವನ್ನು
ಬರೆದಾರು ಪೇಳಿದರೊ
ಮರೆತು ನಮ್ಮೆಲ್ಲರನು ಬಿಟ್ಟು
ವಿರವಾಗಿ ತಿರುಗಿ ಬಾರದೆ ಹೋದಳೋ ||3||
ಅತ್ತೆ ಮಾವ ಮೈದುನ
ಉಳಿದದ ಅತ್ತಿಗೆಯ ಮಾದುನಿಯರ
ಹೆತ್ತ ತಾಯಿ ತಂದೆ ಅಣ್ಣ ತಮ್ಮರ ಮರೆತು
ಮೃತ್ಯುವನೊರಗಾದಳೊ ||4||
ಹತ್ತೆಂಟು ಬಳಗೊದಳಗೆ | ಈ ಮಗಳು
ಅಹುದಹುದೆನಿಸಿಕೊಂಡಿರ್ದಳೊ
ಇತ್ತ ಕೂಡಲೂರು ಈಶನ ಒಳಗಾಗಿ
ತಿರುಗಿ ಬಾರದೆ ಪೋದಳೊ
ಯಾಕೆ ಮನ ಸೋತಳಮ್ಮಾ | ಈ ಮಗಳಿ
ಗಿನ್ಯಾರು ಕಲಿಸಿದರು ಬುದ್ಧಿ ||5||

ಎಂಥ ಕನಸ ಕಂಡೆನೆ
ಎಂಥ ಕನಸ ಕಂಡೆನೆ ವಾರಿಜಗಂಧಿ
ಎಂಥ ಕನಸು ಕಂಡೆನೆ
ಎಂಥ ಕನಸು ಕಂಡೆ ಕಾಂತೆರನ್ನಳೆ ಕೇಳು
ಅಂತಕರಿಪು ಗುರುಮಂತ್ರ ಘೋಷಗಳಿಂದ ||ಪ||
ಅಂಬುಜಾಕ್ಷಿಯೆ ಕೇಳಮ್ಮಾ
ಕುಂಬಿನಿಯೊಳು ಬಿಂಬ ಪ್ರಜ್ವಲಿಸುತಿರೆ
ಒಂಭತ್ತು ಬಾಗಿಲೊಳು ರಂಭೆ ಒಬ್ಬಳು ಬಂದು
ತುಂಬಿದುಯ್ಯಾಲೆ ಏರಿ ಅಂಬರ ಕಾಡೋದು ||1||
ಭ್ರಮರ ಕುಂತಳೆ ಕೇಳಮ್ಮಾ
ಬ್ರಹ್ಮಾಂಡವಾಗಮಕಾದಿ ಚರಿಸುವನೆ
ರಮ್ಯದಿಂದಲಿ ಪೋಗಿ ಬ್ರಹ್ಮಪುರವ ಹೊಕ್ಕು
ಬ್ರಹ್ಮನ ಒಡಗೂಡಿ ಬ್ರಹ್ಮವಾಗಿರ್ದನೆ ||2||
ಮಂದಗಮನೆ ಕೇಳಮ್ಮಾ
ಮಂದಿರದೊಳು ಇಂದ್ರನ ಸೊಬಗಿಹುದೆ
ರಂಧ್ರ ಮಾಣಿಕ ಕೋಟಿ ಚಂದ್ರನ ಬೆಳಕೀಲಿ
ಸಾಂದ್ರನು ಹೆಡೆಯೆತ್ತಿ ಚಂದದಿ ನಳಿವೋದು ||3||
ಸರಸಿಜ ಮುಖಿ ಕೇಳಮ್ಮಾ
ವೈರಿಗಳನು ಮರಿ ನುಂಗಿ ಮಾಯವಾದೀತೆ
ಮೂರುಪುರಗಳೆಂಬೊ ದಾರೀಲಿ ಒಳ ಹೊಕ್ಕು
ಮೇರು ಗಿರಿಯನೇರಿ ಸೂರೆಗೊಂಡಿಹುದೊ ||4||
ಕುಡುತೆಗಂಗಳೆ ಕೇಳಮ್ಮಾ
ದೃಢಕ್ಕೆ ಮೆಚ್ಚಿ ನಾಡೊಳಿಟ್ಟಿಗೆ ಸಂಗಮ
ಈಡ ಪಿಂಗಳ ನಡುಮಧ್ಯದಿ ತುದಿಯಲ್ಲಿ
ಒಡಗೂಡಿ ಎನ್ನನು ಬಿಡದೆ ಕೂಡಿದನಮ್ಮಾ ||5||

ಹೇಗೆ ಮಾಡಲಮ್ಮ ಕನಸ ಹೀಗೆ ಕಂಡೆ
ಹೇಗೆ ಮಾಡಲಮ್ಮ ಕನಸ ಹೀಗೆ ಕಂಡೆ ಇನ್ನು
ಹಾಗೆ ಹೀಗೆ ಮಾಡಿ ಮನೆಯೊಳು
ಗೂಗೆ ಕೂಗಿ ಹೋಯಿತೆ ಹೇಗೆ ಮಾಡಲಮ್ಮ ||ಪ||
ಗೂಗೆಯ ಶಬ್ದವ ಕೇಳಿ ಬೇಗಲೆದ್ದು ಕುಳಿತೆನಮ್ಮಾ
ಜಾಗರ ಸ್ವಪ್ನಗಳಳಿದು ಜಾಣನಾಗಿ ನಿಂದೆನೆ
ಬೇಗ ಬೇಗ ಬಂದು ಮನೆಯ ಬಾಗಲೊಳಗೆ ಕುಳಿತಲೊಮ್ಮ
ಕಾಗೆ ಮೋರೆ ತೊತ್ತು, ಹೇಗೆ ಮಾಡಲಮ್ಮಾ ||1||
ಕಾಗೆ ಮೋರೆ ತೊತ್ತು ಕಂಡು ಬೇಗನೆದ್ದು ಕುಳಿತೆನವ್ವಾ
ಯೋಗ ಬಲದಿಂದಲವಳ ಮೂಗ ನಾನು ಕೊಯಿದೆನೆ
ಹಾಗೆ ಹೀಗೆ ಮಾಡಿ ಅವಳ ಹಕ್ಕಿಯೊಳಗೆ ತಂದೆನಮ್ಮಾ
ಮೂಗಿನುಸುರ ಹಿಡಿದು ಅವಳ ಮೂರು ಹಲ್ಲ ಕಳದೆನೆ ಹೇಗೆ ||2||
ಹಲ್ಲು ಕಳವಂತು ಮನಸು ಎಲ್ಲರಿಗೆ ಬಾರದು
ಅಲ್ಲಮ ಪ್ರಭುವಿನ ಪಾದ ಅಲ್ಲಿ ಪೂಜೆ ಮಾಡಿದ
ಬಲ್ಲಿದನು ಕಾಡಸಿದ್ಧ ಕರುಣದಿಂದ ತೋರಿ ಹೋದ
ಇಲ್ಲೆ ಕಂಡೆ ಇಂಥ ಕನಸ ಈಗಲೆ ಎಚ್ಚತ್ತೇನೆ ಹೇಗೆ ಮಾಡಲಮ್ಮಾ ||3||

ಏನಾದರೆ ಒಂದಾಗಲಿ ಶಿವನೆ
ಏನಾದರೆ ಒಂದಾಗಲಿ ಶಿವನೆ
ಏನಾದರೆ ಒಂದಾಗಲಿ ಗುರುವೆ
ಏನಾದರೆ ಒಂದಾಗಲಿ ||1||
ಅತ್ತೀಯ ಕಣ್ಣು ಹೋಗಲಿ
ಮಾವನ ಕಾಲು ಮುರಿಯಲಿ
ಹಿತ್ತಲ ಗೋಡೆ ಬೀಳಲಿ ಕಾ
ಳ್ಗತ್ತಲ ದಾರಿ ಕವಿಯಲೊ ಶಿವನೆ ||2||
ಮನಿಯ ಗಂಡ ಮಾಯವಾಗಲಿ
ಬಿನುಗು ದೈವ ಮರುಳಾಗಲಿ
ನನ್ನ ನೆಗೆಣ್ಣಿಯಣ್ಣ ಸಾಯಲಿ
ನಮ್ಮ ಇಬ್ಬರೊಡಗೂಡೋ ತನಕಾ
ದನಕಾರ ಅತ್ತಿತ್ತ ಹೋಗಲಿ ||3||
ಕಂದನ ಕಣ್ಣು ಮುಚ್ಚಲಿ
ಚಂದ್ರಮಾರ್ಗ ಹಾವು ಕಚ್ಚಲಿ
ಗಂಧಕಸ್ತೂರಿ ಹಚ್ಚಲಿ ನಮಗೆ
ಗುರು ಗುಹೇಶ್ವರಾ ಮೆಚ್ಚಲೊ ||4||

ಎಲೆ ಜಾಣೆಗಾರತಿ ಇತ್ತ ಬಾರೆ
ಎಲೆ ಜಾಣೆಗಾರತಿ ಇತ್ತ ಬಾರೆ
ಎನ್ನ ಪ್ರಾಣಕಾಂತಗೆ ಇಂದು ನೀರೆ ||ಪ||
ನೀಲ ಕುಂತಳೆ ನಿರ್ಮಳಾಂಗಿ ಬಹು
ಶೀಲೆ ಸುಜನಾಂಗ ಮಾಲಿಂಗ
ಮೂಲೋಕದರಸು ಸುಚಿತಾಂಗ ||1||
ಇಂದುವದನೆ ಸುಂದರಾಂಗಿ ಪರಮಾ
ನಂದ ಗಾರತಿ ಲಲಿತಾಂಗಿ
ಸಂದೇಹವಳಿದ ಸುಜತಾಂಗಿ ||2||
ಕರಸ್ಥಲಧೀಶ ಮಹೇಶ
ಪರಮ ಭಕ್ತರಿಗೆಲ್ಲ ಉಲ್ಲಾಸ
ನಿರುತ ಶ್ರೀಕರಿಬಸವೇಶಾ ||3||

ಆಚೆ ಕೇರಿಯ ನಲ್ಲನಾ ಸಂಗವು
ಆಚೆ ಕೇರಿಯ ನಲ್ಲನಾ ಸಂಗವು | ಆದರೆ ಬಹುಸುಖವು
ಲೋಚನ ತಿರುಹಿ ನೋಡಲು ನೋಟಕೆ
ಗೋಚರಿಸದೆ ಮಹಾ ಗುಪ್ತದಲಿರುವಾ ||ಪ||
ಆದರ ದಿನದ ಮನೆಗಳಿಗೆಲ್ಲ ಆತನೆ ಧಣಿಯಲ್ಲೆ
ಹಾದಿ ಮೆಟ್ಟಿದಾ ಕ್ಷಣಕ್ಕೆ ಹಿಂದಣ ಹಂಬಲ ಅಳಿದೆನಲ್ಲೆ
ಬೀದಿ ಹೊಕ್ಕರೆ ಕೋಟಿ ಸೂರ್ಯನ ಬೆಳಕು ಬಿದ್ದಿದಲ್ಲೆ
ಸಾಧಿಸಿ ಆತನ ಕೂಡಿದವರಿಗೆ ಸರಿಯಾರು ನೋಡಿದರಿನ್ನೆಲ್ಲೆ ||1||
ರೂಪು ರಹಿತ ತಾನೆನಿಸಿಕೊಂಡು ನಿಜರೂಪಾಗ್ಯಾನಲ್ಲೆ
ದೀಪವಿಲ್ಲದೆ ಮನೆಗಳಿಗೆಲ್ಲ ದಿವ್ಯತೇಜ ತಾನಲ್ಲೆ
ಭಾಪುರೆ ಆತನ ಬೆರೆದವರಿಗೆಲ್ಲ ತೃಣ-ಸಮಾನಲ್ಲೆ
ನೋಪಿ ನೂತವರಿಗಲ್ಲದೆ ಆತನ ನೆರಳು
ನೋಡೇನೆಂದರೆ ದೊರೆಯದಲ್ಲೆ ||2||
ಭ್ರಾಂತಿ ಉಡಗಿ ನಿಶ್ಚಿಂತನಾದರೆ ಬೆಳಕು ತೋರುತದೆ
ಸಂತಿಗೆ ಬರುವೋ ದಾರಿ ಬಿಡಿಸಿ ತನ್ನಂತಲಿರಿಸುತಾನೆ
ಕಾಂತಿಯಾದ ಏಕಾಂತ ಮಂಟಪದಿ ಬೆರದು ಕೂಡುತಾನೆ
ಕಂತುಹರ ಏನೆಲೆ ಪತಿ ಚನ್ನವೀರನ ಕೂಡಿದ ಮೇಲೆ ಕಡಿಮೆನ್ನೇನೆ ||3||

ನೋಡಮ್ಮ ನಲ್ಲನ ಬುದ್ಧಿ ನೋಡಮ್ಮ
ನೋಡಮ್ಮ ನಲ್ಲನ ಬುದ್ಧಿ ನೋಡಮ್ಮ
ನೋಡಮ್ಮ ವಿನಯ ಮಾತನಾಡುತ ಕೈಸನ್ನೆ
ಮಾಡಿ ಎನ್ನ ಸ್ಮರನ ಕ್ರೀಡೆಗೆ ಕರೆದಾನು ||ಪ||
ಹಿಡಿದು ತುಂಬ ಬಿಳಿಯಲೆ ಗರಿಯಿಂದ ತಾನು
ಪಿಡಿದನು ಸುಣ್ಣ ಕೇಳ್ವ ನೆವದಿಂದ
ಕಡುಬೆಡಗಿನ ಮಾತಿನ ಚದುರಿಂದ ಗಂಧ
ವಿಡಿ ಪೂಸಿ ಪೂಮಾಲೆ ತೊಡರಿಸಿ ತುರುಬಿಗೆ
ಮಡದಿ ಏಕಾಂತಕ್ಕೆ ನಡೆ ಎಂದು ಕರೆದನು ||1||
ಗಂಡಸರೊಳಗುಟ್ಟೇನೆ | ಎನ್ನ ಕಂಡಲ್ಲಿ ಕರವೋದು ತಟ್ಟೇನೆ ಇಂಥ
ಬಂಡಾಟ ಮಾಡುವುದುಂಟೇನೆ
ಗಂಡನುಳ್ಳವಳೆನ್ನ ಪೂ ಚಂಡಿನಿಂದಲಿ ಇಟ್ಟು
ಹಿಂಡಿ ಅಧರಾಮೃತ ಉಂಡು ಸೇವಿಸಿ ಹೋದಾ ||2||
ಸಟೆಯಲ್ಲ ಇದು ಮಾತು ನಿನ್ನಾಣೆ
ಕೋಟಿ ವಿಟರೂಪಿನಿಂದ ಬಂದನು ಕಾಣೆ ಬಹು
ಕುಟಿಲದ ಮಾತನಾಡಿದ ಜಾಣೆ
ಹಟದಿಂದ ತಾಂಬೂಲ ಗುಟಕನಿಕ್ಕಿ ಮಂಚದಿ
ಕಟಿಯ ಸಡಿಲೀಸಿ ವಿಸ್ಫುಟ ರತಿ ಕೂಡಿದಾ ||4||
ಬಾಳುವ ಬಡವರಿಗೇನೆ ಅಲ್ಲಿ | ಹೇಳಿಕೇಳುವುದು ವಿಚಾರವೇನೆ ನಾನು
ಸೂಳೆ ಹೆಣ್ಣುಗಳೊಳು ಜಾರೇನು
ಕೊಳುಗೊಂಡನು ರತಿ ಏಳು ಏಳೆನುತಲಿ
ಬಾಳಲೋಚನ ಶ್ರೀ ಕೋಳೂರು ಅಮರೇಶಾ ||5||

ಮನವೆಂಬ ಗಿಳಿಯ ವೈಯಾರದಿಂದೋವಿ
ಮನವೆಂಬ ಗಿಳಿಯ ವೈಯಾರದಿಂದೋವಿ ಮೆ
ಲ್ಲನೆ ಮುದ್ದು ನುಡಿಯ ಕಲಿಸೆಲೆ ಮಾನಿನಿ ||ಪ||
ಆರು ಜಾಳಂಧರವೆಸವಾಗ್ನೇಯ ಮಿಂ
ಚೇರಿದ ರನ್ನ ಪಂಜರದೊಳಗೆ
ಮೂರು ವರ್ಗದ ಕೋಲಿನ ಮೇಲಿರಿಸಿ ಕಾಲ್ಗೆ
ಪಾರದಂತೆ ಸುಸರಪಣಿಯ ಹೂಡಿ ||1||
ನಯನವಟ್ಟಲೊಳು ಚಿನ್ನಯವೆಂಬಗೆನೆಯೂಡಿ
ಸ್ವಯ ಸುನಾದ ತನಿವಣ್ಣನಿತ್ತು
ಭಯವೀವ ರಿಪುವೆಂಬ ಚೀರೆಯನೆಬ್ಬಟ್ಟಿ
ಪ್ರಿಯದಿ ಮೈದಡವಿ ಭಾವದ ಕೈಯೊಳು ||2||
ನಾಮ ವಿದೂರ ನಿಸ್ಸೀಮ ನಿತ್ಯಾನಂದ
ಧಾಮ ಬೋಧಾದ್ವಯಾನಂದರೂಪ
ನೇಮರಹಿತ ಶಂಭುಲಿಂಗವೆನಿಸುವಾತ್ಮಾ
ರಾಮನೆ ಶಿವಶಿವನೆಂದೋದಿಸಿ ||3||

ಕಲ್ಲೇಶಲಿಂಗನು ಕಾಣಿಸಲಿಲ್ಲನು ಹ್ಯಾಗೆ ಮಾಡಲೇ
ಕಲ್ಲೇಶಲಿಂಗನು ಕಾಣಿಸಲಿಲ್ಲನು ಹ್ಯಾಗೆ ಮಾಡಲೇ
ನಾನಿನ್ನೆಂತು ತಾಳಲೆ ನಿನ್ನಾಣೆ
ಎಲ್ಲಿ ನೋಡಿದರಿಲ್ಲ ಎಂತು ತಾಳಲೇ ||ಪ||
ಕೊರಳೊಳು ಹಾವ್ಗಳು
ಮರುಳು ಜಂಗಮನೀತ, ಹ್ಯಾಗೆ ಮಾಡಲೇ ಚಿಕ್ಕ
ತರಳೆ ಹೆಣ್ಣಿಗಾಗಿ ತಲೆ ಜಡೆಗಟ್ಟಿತು ಎಂತು ತಾಳಲೇ ||1||
ಪಂಚಮುಖದ ಶಿವ ಮಂಚದ ಮೇಲಿಲ್ಲ
ಹ್ಯಾಗೆ ತಾಳಲೇ
ಕಂಚುಗಾರ ಶಿವ ಕಂಚು ಮಿಂಚಾದನು ಹ್ಯಾಗೆ ಮಾಡಲೇ ||2||
ಎಲ್ಲಾರಿಗೆ ಒಲಿದು ಅಲ್ಲಾಮ ಪ್ರಭುವಾದ
ಹ್ಯಾಗೆ ಮಾಡಲೇ
ಕಲ್ಲೂರ ಸ್ಥಳದಲ್ಲಿ ಕರುಣದಿ ನೆಲಸಿದ ಹ್ಯಾಗೆ ಮಾಡಲೇ ಕಲ್ಲೇಶ ||3||

ಘಳಿಗೆ ಬಿಟ್ಟಿರಲಾರೆನೇ ಲಿಂಗಯ್ಯನ
ಘಳಿಗೆ ಬಿಟ್ಟಿರಲಾರೆನೇ ಲಿಂಗಯ್ಯನ
ಘಳಿಗೆ ಬಿಟ್ಟಿರಲಾರೆನೇ
ಘಳಿಗೆ ಬಿಟ್ಟಿರಲಾರೆನೇ ನಳಿನಾಕ್ಷಿ ತೋರಿಸೆ
ಘಳಿಲನೆ ಕರೆ ತಾರೆ ಘನ ಮಹದೇವನಾ ||ಪ||
ಸೂಕ್ಷ್ಮದೊಳಿರುವಂತನಾ
ಸಾಕ್ಷಿಗೆ ಸಾಕ್ಷಿ ಸಂಚಾರದೊಳು ಸುಳಿವಾತನಾ
ಅಕ್ಷರದೊಳು ಮೊದಲಕ್ಷರ ತಾನಾದ
ಅಕ್ಷಿದ್ವಯನಗಳ ಸಾಕ್ಷಿಯಾಗಿರುವನಾ ||1||
ಮುಖದೊಳು ನೇತ್ರ
ಮುಕ್ಕಣ್ಣ ಪರಶಿವನ
ಸಖಿಯರಿಬ್ಬರಿಗೊಲಿದ ಸಕಲ ಭೂತಾತ್ಮನ
ನಾ ಕಾಣದಿರಲಾರೆ
ಏಕಾಂತವಾಸನ ಘಳಿಗೆ ಬಿಟ್ಟಿರಲಾರೆ ||2||
ಇನಕೋಟಿ ಪ್ರಭೆಯುಳ್ಳನ ಮನು
ಮುನಿ ಪ್ರಮಥರ ಮಧ್ಯದಿ ಸುಳಿವನಾ
ಜ್ಞಾನ ಸುಜ್ಞಾನ ಶ್ರೀ ಬಸವನರಮನೆಯೊಳು
ಶೂನ್ಯಪೀಠದಿ ಪೂಜೆಗೊಂಬೊ ಮಹಾತ್ಮನಾ
ಘಳಿಗೆ ಬಿಟ್ಟಿರಲಾರೆನೇ ಲಿಂಗಯ್ಯನಾ ||3||

ಶ್ರೀಗಿರಿ ಗಿರಿಗಿನ್ನು ಮೇಲಾದ ಗಿರಿಯುಂಟೆ
ಶ್ರೀಗಿರಿ ಗಿರಿಗಿನ್ನು ಮೇಲಾದ ಗಿರಿಯುಂಟೆ ||ಪ||
ಎದೆಯ ಹೃದಯ ಗಿರಿ ಹೃದಯಾ ಕಮಲದಾ ಗಿರಿ
ತುದಿ ಸಣ್ಣನಾಗಿ ಬೆಳೆದಾಗಿರಿಯೊ
ಮೃದವಾಗಿರಿ ಆ ಗಿರಿ ಮದನ ಸ್ಥಾನವಾಗಿರಿ ಇಂಥ
ಚದುರೆಯ ಗಿರಿಗಿನ್ನು ಸರಿಯುಂಟೆ ರಮಣಾ | ಶ್ರೀ ಗಿರಿ ||1||
ಹೆಣ್ಣು ರೂಪಿನ ಗಿರಿ ಕಣ್ಣಿಗೆ ಪ್ರಣಯದ ಗಿರಿ
ಹಣ್ಣಾಗಿ ನೆಲಕೆ ಬೀಳದಾ ಗಿರಿಯೊ
ಚನ್ನಿಗರಾಟದ ಗಿರಿ ಸಣ್ಣವರೂಟದ ಗಿರಿ ಇಂಥಾ
ಬಣ್ಣದ ಗಿರಿಗಿನ್ನು ಸರಿಯುಂಟೆ ರಮಣಾ | ಶ್ರೀ ಗಿರಿ ||2||
ಮುಸುಕ ಮೋರೆಯ ಗಿರಿ ನಿಸುವು ಸೇರುವ ಗಿರಿ
ಹಸನಾಗಿ ಕ್ಷೀರವ ತೋರುವ ಗಿರಿಯೊ
ಕುಸುಮ ನಾಭಪ್ರಿಯ ನಂಜುಂಡ ಕವಿಲಿಂಗಗೆ ಕೈ
ವಶವಾದ ಗಿರಿಗಿನ್ನು ಸರಿಯುಂಟೆ ರಮಣಾ | ಶ್ರೀ ಗಿರಿ ||3||

ಹೇಗೆ ಸೈರಿಸಲೆ ಭಾವಕಿಯೆ
ಹೇಗೆ ಸೈರಿಸಲೆ ಭಾವಕಿಯೆ, ಹೋಗಿ ಕರತಾರೆ
ಭೋಗಿ ಭೂಷಣನ ಭಾವಜಹರನಾ
ರಾಗವಿರಹಿತನು ಯೋಗದೆ ನಿಲುಕನಾ | ಹೇಗೆ ||ಪ||
ಈರೈದು ಭುಜಗಳುಳ್ಳಾತನಾ
ಈರೇಳ್ಭುವನ ಉದರದೊಳಿಂಬಿಟ್ಟ ಮಹಿಮನಾ
ಚಾರುಚರಿತ್ರನನ ಮಾರಸಂಹರನಾ
ಸಾರಶರಣ್ಯ ಮಂದರ ಸುಧೀರನಾ | ಹೇಗೆ ||1||
ಪಂಚವದನ ಪರಾತ್ಪರನಾ
ಮಿಂಚು ಜಡೆಗಳ ಗೊಂಚ
ಹೊಂಚಲುಳ್ಳ ಮಹಿಮನಾ
ಪಂಚೇಂದ್ರಿಯಗಳ ಸಂಚರಗೆಡಿಪನಾ
ಸಂಚಿತವರ ಸಿದ್ಧಾಗಮ ಗೆಲಿದನಾ | ಹೇಗೆ ||2||
ಹರಿಸುರ ನಮಿತ ತಾ ಬಂದು
ಪರಮ ಪಾವನ ವರದ ಶ್ರೀವಿಷ್ಟಲಿಂಗ
ಪರಿಪರಿ ವಚನದಿ ಸರಸಸಲ್ಲಾಪದಿ
ಪುರಹರ ಗರಧರ ನೆರೆದ ಕಾಣಮ್ಮಾ | ಹೇಗೆ ||3||

ಕಾಡಬೇಡಲೊ ರಮಣ
ಕಾಡಬೇಡಲೊ ರಮಣ ಕರಕರಗೆ ನಾನಾದೆ ಏನ
ಮಾಡಲಿಂದಿರುಳೆ ಮನೆಗೆ ಬಾ ರಮಣಾ
ಕಾಡಬೇಡಲೊ ರಮಣ ಕರಕರಗೆ ನಾನಾದೆ ||ಪ||
ಮುಂಗುರುಳ ಪಿಡಿಯದಿರು, ಮುಂಬಲ್ಲಿಲೊತ್ತದಿರು
ಇಟ್ಟ ಕಸ್ತುರಿ ತಿಲಕ ಇದು ಎಲ್ಲಿದೊ
ಪಟ್ಟ ಬೆದಿಯಲಿ ಬಾರೊ ಬಂದಲ್ಲಿ ನೀ ನಿಲ್ಲೊ
ಪಟ್ಟೆ ಮಂಚದ ಮೇಲೆ ಪವಡಿಸೈ ರಮಣಾ | ಕಾಡಬೇಡಲೊ ||1||
ಮುಚ್ಚಿ ಕೈವಶವಾದೆ ಮನಕೆ ಸಂಚಲವೇಕೆ
ಸರಿ ಬಂದ ಮೋಹಕಿನ್ನಳುಕೇತಕೆ
ಸರಸ ಸತ್ಕವಿ ಲಿಂಗ ಎನ್ನೊಡೆಯ ಕಪ್ಪಿನ ಪತಿ
ಒಳಗು ಮಾಡಿದನಮ್ಮ ಶ್ರೀರಾಜ ವದನ | ಕಾಡಬೇಡ ರಮಣ ||2||

ಕುಸುಮಗಂಧಿನಿ ಈತನ್ಯಾರಮ್ಮ
ಕುಸುಮಗಂಧಿನಿ ಈತನ್ಯಾರಮ್ಮ, ಚೆಲ್ವ
ಸಸಿಯ ಸೂಡಿದ ದೇವ, ಈತ ಕಾಣಮ್ಮಾ || ಕುಸುಮ ||ಪ||
ಕರದ ತ್ರಿಶೂಲದ ಮೇಲೆ ಹೆಣನ ಹೊತ್ತು
ಉರಪಾಟದೊಳು ಬಾಹನ್ಯಾರಮ್ಮಾ
ಪರಿಪರಿ ಯಗ್ನ ಕರ್ಮವ ಗೆದ್ದು
ಉರಗಾಭರಣವ ಧರಿಸಿರ್ಪ ಈತ ಕಾಣಮ್ಮಾ || ಕುಸುಮ ||1||
ಭಸಿತ ಭೂಷಿತನಾಗಿ ಎಸೆವ ಕೆಂಜಡೆಯೊಳು
ಪೊಸ ಹೆಣ್ಣ ಹೊತ್ತಿಹನ್ಯಾರಮ್ಮಾ
ಅಸುರ ಸುರರ ಸಿರದ ಮಾಲೆಯ ಕೊರಳೊಳಗಾಂತು
ವೃಷಭವಾಹನನೆಂಬೊನೀತ ಕಾಣಮ್ಮಾ ||ಕುಸುಮ ||2||
ಮೃಗವ ಕೈವೊಳಗಾಂತು ನಗುತ ಕಪಾಲವ
ಸೊಗಸಿಂದ ಪಿಡಿದಿಹನ್ಯಾರಮ್ಮಾ
ಬಗೆಬಗೆಯಲ್ಲಿ ವಿನೋದದಿಂದಾಡುತ
ಅಘಹರನೆಂಬೋನೀತ ಕಾಣಮ್ಮಾ || ಕುಸುಮ ||3||
ಢಕ್ಕೆ ಢಮರುಗವ ಪಿಡಿದು ಭೂತಗಣದೊಳು
ಅಕ್ಕರಿಂದಲಿ ಬಾಹನ್ಯಾರಮ್ಮಾ
ಮಿಕ್ಕಿನ ದೈತ್ಯರ ಸೊಕ್ಕ ಮುರಿದ ನಿಂತ
ಮುಕ್ಕಣ್ಣನೆಂಬಾತನೀತ ಕಾಣಮ್ಮಾ|| ಕುಸುಮ ||4||
ಅಲ್ಲಾಮ ಪ್ರಭುವಾಗಿ ಎಲ್ಲ ಕಾರಣರೊಳು
ಬಲ್ಲಿದನಾಗಿಹನ್ಯಾರಮ್ಮಾ
ಒಲ್ಲದೆ ವರದಾಂಬಿಕೆಯ ಸಿರದೊಳಗಾಂತು
ಮಲ್ಲೇಶನೆಂಬಾತನೀತ ಕಾಣಮಾ || ಕುಸುಮ | ||5||

ಕಾವ್ಯ ಬೇರೊಂದೆಡೆಗೆ ಕಲಿಯಲೇಕೆ
ಕಾವ್ಯ ಬೇರೊಂದೆಡೆಗೆ ಕಲಿಯಲೇಕೆ
ದಿವ್ಯ ಕಾಮಿನಿಯರಂಗ
ದೇಶದೊಳಗರ್ಧವಿರಲೇಕೆ ||ಪ||
ಹರಿಣಾಕ್ಷಿಯರ ನೋಟ ಹರಿಶ್ಚಂದ್ರ ಕಾವ್ಯ
ಸರಸಿಜವದನೆ ಸೌಂದರಪುರಾಣ
ಅರಸಂಚೆಗಮನೆ ವೆಗ್ಗಳ ನೀಲಾವತಿ ಯವಳ
ಪರಮ ಐಶ್ವರ್ಯ ಪ್ರಭುಲಿಂಗಲೀಲೆ | ಕಾವ್ಯ ||1||
ತಿದ್ದಿಟ್ಟ ನೊಸಲ ಕತ್ತುರಿಯ ತ್ರಿಭುವನ ತಿಲಕ
ಮುದ್ದು ಮುಖದ ಚೆಲ್ವೆ ಮುಡಿ ಭಾರತ
ಶುದ್ಧ ಲಾವಣ್ಯ ಸೊಬಗಿನ ಸೋನೆ ವನಿತೆಯರ
ಹೊದ್ದಿದ್ದ ಅಂಬರವೆ ಪೊಸ ರಾಮಚರಿತೆ | ಕಾವ್ಯ ||2||
ಚಾರು ಸ್ತ್ರೀಯರ ಬುದ್ಧಿ ಚಂದ್ರಮತಿ ಕಾವ್ಯವು
ರಾಜಿಸುತ್ತಿಹದೆ ರಾಮಾಯಣ ಸ್ವಾಮಿಶ್ರೀ
ನಂಜುಂಡ ಸತಿಯೊಳಗೂಡಿದನು
ಆರತಿ ಹಾಸ್ಯ ಅದು ಭಾಗವತವೂ | ಕಾವ್ಯ ||3||

ಎಕ್ಕಲದೆ ಜೊಗವ್ವಾಯತ್ತಲ್ಲಾರೆ ಹೋಗುವಾ
ಎಕ್ಕಲದೆ ಜೊಗವ್ವಾಯತ್ತಲ್ಲಾರೆ ಹೋಗುವಾ
ಸದುಶರಣರ ಪಾದಕ್ಕೆರಗುತಲೆ ತಲೆ ಬಾಗುವಾ ||ಪ||
ಭರತ ಹುಣ್ಣಿಮೆ ಮುಂದೆ ತರುತಮ್ಮೆಗಳ ಮಾಡಿ
ಆರತಿಯ ಅಕ್ಷತಿಯನಿಟ್ಟು ಮೂರ್ತಿ ಮುಂದೆಯದರ ಗೊಂಬಿ ||1||
ಅಮರ ಪಡಿತಳೆ ಕೇಳು, ಭ್ರಮರ ಕುಂತಳೆ ಬೇಡಿಕೊಂಬೆ
ತಿಮಿರಿತದ ಹೋದ ಮೇಲೆ ಗುಮರ ಗೊಂದಳ ಹಾಕಿಸುವೆ ||2||
ಹರುಷದಿಂದವದು ಸದಾಮನೆಂಬ ಕೋಲ ಕೈಯಲ್ಲಿ ಪಿಡಿದು
ನಿರಸ ಮಾಡಬೇಡ ನಮ್ಮ ಕೂಡ ಹರುಷದಿಂದ ಬಂಧುರಾಂಗ ತುಂಬು ||3||
ಹೊತ್ತು ಹೋದ ಮೇಲೆ ಸಾರು ಹೊತ್ತಿನೊಳು ಹೊತ್ತನಾಡಿ
ಹೊತ್ತು ನೆತ್ತಿ ಮೇಲೆ ಜೋತಿ ಬತ್ತಲೆ ಕುಣಿದಾಡುವಾ ||4||
ಸಡಗರದಿಂದಲಿ ಅಡಗಿಯ ಮಾಡಿ ಹಡಲಿಗಿಯನು ತುಂಬಿಸುವೆ
ನಡೆಯಲೆ ನಮ್ಮ ವರದ ವರ ಗುಡ್ಡದ ಮಹಮ್ಮಾಯೆಗೆ ||5||
ಚಂದವುಳ್ಳ ದೇಹಕ ಶ್ರೀಗಂಧವನ್ನು ಪೂಸುವೆನು
ಮಂದಹಾಸೆ ಇಂದುವದನೆ ಕಂದ ನಿನ್ನ ದತ್ತನೆ ||6||

ಆರಕ್ಕಾ ಈತನಾರಕ್ಕಾ
ಆರಕ್ಕಾ ಈತನಾರಕ್ಕಾ ಬಾರೆ ಬಾರೆ ಎಂದು
ಕರೆದು ಮುಟ್ಟಿದನಕ್ಕಾ ||ಪ||
ತಕ್ಕಿಸಿ ಎನ್ನನು ತಾನು ಬರುತಲೆ ಮರುಳ ಮಾಡಿ
ಚಿಕ್ಕಾವಳೆ ಸಕ್ಕರೆಯ ಕೋ ಎಂದು ನಗಿವುತಾ
ದಕ್ಕಿದೆ ನಾ ನಿನಗೆ ಮೇಲಕ್ಕೆ ಬಾ ಎಂದು ಎಂದೆತ್ತಿಕೊಂಡು
ತೊಕ್ಕೋತ ಶಾಸ್ತ್ರಾರ್ಥದಿಂದ ಕಾರಾದಿ ಬೆರೆದರೆನ್ನ ||1||
ಮಂದ ಗಮನೆ ನೋಡೆಂದು ಸುಗಂಧ ಕಸ್ತುರಿಯ ಮೈಗೆ
ಚಂದದಿಂದಲೆ ಲೇಪಿಸಿ ಆನಂದವಾಗುತಾ
ಎಂದು ಎಂದೂ ಕಾಣೆ ನಾನು ಇಂತಾ ಸೋಜಿಗ ಬೇ
ಕೆಂದು ಎನ್ನ ಚೌರಾಶಿ ಬಂಧನಗಳಿಂದಾ ||2||
ಭೇದವೇನಿಲ್ಲದೆ ಎನ್ನನಾದರಿಸೊ ಎಂದು
ಬೋಧಿಸಿದಾ ಎನಗೆ ಕರ್ಣಾಮೃತವಾಗಿರಲು
ಸುದತಿಯ ನೀ ಕೇಳು ನಾ ಮುದ್ದು ಸಂಗಮದೇವ
ನೆಂದು ಪೇಳಿ ಎನ್ನ ತನ್ನೊಳಗೆ ಮಾಡಿಕೊಂಡನಲ್ಲೆ ||3||

ತಂದು ತೋರಿಸದೆ ಎನ್ನ ಮನೋಹರನ
ತಂದು ತೋರಿಸದೆ ಎನ್ನ ಮನೋಹರನ ಸುವಿಚಾರನ ಸುರ
ಮಂದಾರನಾ ಅಶರೀರನ ಅಖಿಲಾಧಾರನ
ತಂದು ತೋರಿಸೆ ಎನ್ನ ಮನೋಹರನ ||ಪ||
ಮೇಲೆನಿಸಿಹ ಚಂದ್ರಸಾಲೆಯೊಳೆನ್ನ ಮೋಹ
ಲೋಲನಾಗಿಹ ಭೋಗ ಶಾಲನ ತ್ರಿಶೂಲನ ಕ
ಪಾಲನ ರುಂಡಮಾಲನ ಕಕ್ಷಪಾಲನ ತಂದು ತೋರಿಸೆ ||1||
ಉತ್ತಮವಹ ರತ್ನಮಾಲಿಕೆ ಕೊರಳೊಳು
ಸುತ್ತಿ ಎನ್ನನೊಲಿಸಿದ ಕರ್ತನ ಪರ
ಹಿತಾರ್ಥನ ಪಾಪದೂರನ ಸಕಲ ಸ್ವಾರ್ಥನ ತಂದು ತೋರಿಸೆ ||2||
ನಗಿಸುತಾ ಬಗೆ ಬಗೆ ಸೊಬಗಿನಿಂದಲಿ ಎನ್ನ
ನಗಲದೆ ಇಹ ನಗಚಾಪನ ದಿವ್ಯರೂಪನ
ಪರಭೂಪನ ಬಹುಪ್ರತಾಪನ ನಿಖಿಲವ್ಯಾಪನ ತಂದು ತೋರಿಸೆ ||3||
ಸತತವು ಸಮರತಿ ಸುಖಂಗಳಿಂದ
ಲತಿಮುದದಿಂದಲೆನ್ನನಾಳಿದವನ ಪ್ರಾಣನಾಥನ ಊರ್ಧ್ವ
ರೇತನ ಶ್ರುತಿ ಸನ್ನುತನ ಜಗವಿಖ್ಯಾತನ ತಂದು ತೋರಿಸೆ ||4||
ಠೀವಿಯಲೆನಗೆ ಬೇಕಾದವನೆಲ್ಲವ
ಕಾವಿಸಿ ದಯಪಾಲಿಸುವನ ಅಭಯವೀವನ
ದೇವದೇವನ ಸರ್ವಜೀವನ ಸದ್ಭಾವನ ತಂದು ತೋರಿಸೆ ||5||
ವರನು ಎನ್ನೊಳು ತಾನು ಬೆರೆದದು ನಿರುತವನು
ಪೊರೆವುತಲಿಹ ಕರುಣಾವಾರಿಯ ಮದ
ನಾರಿಯ ರಣಶೌರಿಯ ದನುಜಾರಿಯ ತಂದು ತೋರಿಸೆ ||6||
ಸದಮಲ ಗುರು ಮುದ್ದು ಸಂಗನೆನಿಸಿಯು
ಮೇದಿನಿಯೊಳು ಘನವಾದನ ನಿರವೇದನ ನಿ
ಷ್ಕ್ರೋಧನ ನಿಜಬೋಧನ ನಾದಮೋದನ ತಂದು ತೋರಿಸೆ ||7||

ಕರತಾರೆ ಶ್ರೀ ಕೈಲಾಸನಾಥನ ತಂದು
ಕರತಾರೆ ಶ್ರೀ ಕೈಲಾಸನಾಥನ ತಂದು
ತೋರೆ ಎನ್ನಯ ಪ್ರಾಣಕಾಂತನ ||ಪ||
ಹಲವು ಬೋಧೆಯ ತುಂಬಿ ಎನ್ನ ನಂಬಿಸಿ ತಾನು
ಎಲ್ಲವರೊಳಗೆ ತನ್ನವಳೆಂದು ಎನಿಸಿ ಈಗ ಬಾರನೆ
ತನ್ನವಳೆಂದು ಎನಿಸಿ ಈಗ ಬಾರನೆ ಕರತಾರೆ ||1||
ಹೇಳಿದ ಮಾತನು ಮೀರಲಿಲ್ಲವೆ ಸಖಿ
ಆಳುವರಿಗೆ ನಮ್ಮ ಮ್ಯಾಲೆ ಸುಕಾಳಗವ್ಯಾತಕೆ
ನಮ್ಮ ಮ್ಯಾಲೆ ಸುಕಾಳಗವ್ಯಾತಕೆ ಕರತಾರೆ ||2||
ಪಟ್ಟದರಸಿಯೆಂದು ನೆಟ್ಟನೆ ಎನಗೇಕಾ
ಕೊಟ್ಟ ಭಾಷೆಯು ಮನದಿಟ್ಟನೋ ಅಲ್ಲದೆ ಎನ್ನ
ಬಿಟ್ಟನೋ ಮರದಿಟ್ಟನೋ ಅಲ್ಲದೆನ್ನ ಬಿಟ್ಟನೊ ಕರತಾರೆ ||3||
ಸ್ಥಿರವೆಂದು ತಾ ಪರನಾರಿಯರನು ಮಚ್ಚಿ
ಬಾರ ಮನೆಗೆ ಬರ ಹೇಳೆ ಎನ್ನ ಪ್ರಿಯದರಸನ
ಬರ ಹೇಳೆ ಎನ್ನ ಪ್ರಿಯದರಸನ ಕರತಾರೆ ||4||
ಆವಾಗಲತಿ ಮೋಹ ಭ್ರಾಂತಿಯಲೆನ್ನಯ
ಭಾವನೆಯೊಳು ಸಂಜೀವನವಾಗಿಹ ದೇವನ
ಸಂಜೀವನವಾಗಿಹ ದೇವನ ಕರತಾರೆ ||5||
ನಿಲ್ಲಿಸಲಾರೆ ಮನದೊಲ್ಲಭನಿಲ್ಲದೆ
ತಲ್ಲಣವಾಯಿತು ತನುವೆಲ್ಲವು ಮೇಲಿಲ್ಲದೆ
ಎನ್ನ ತನುವೆಲ್ಲವು ಮೇಲಿಲ್ಲದೆ ಕರತಾರೆ ||6||
ಕುಸುಮಶರನ ದಾಳಿ ಎಸವುತಲಿದೆ ಈಗ
ರಸಿಕತ್ವದಿಂದ ತಂದು ಬೆರಸು ಎನ್ನೊಳು ಶಶಿಮೌಳಿಯ
ತಂದು ಬೆರಸು ಎನ್ನೊಳು ಶಶಿಮೌಳಿಯ ಕರತಾರೆ ||7||
ವರಮುನಿ ಸುರನಾರದಾಭಿನುತನೆನಿಸಿಹ
ಕಾರುಣ್ಯನಿಧಿ ಮುದ್ದು ಸಂಗಮದೇವನೀಗಲೆ
ಗುರು ಮುದ್ದು ಸಂಗಮ ದೇವನೀಗಲೆ ಕರತಾರೆ ||8||

ಬಾರಾನೆನೆ ಮುದ್ದು ಗೌರೀಶ, ಬಾರಾನೆನೆ
ಬಾರಾನೆನೆ ಮುದ್ದು ಗೌರೀಶ, ಬಾರಾನೆನೆ
ಬಾರಾನೆನಗೆ ಮುಖದೋರನೆ ಕರುಣವ ಬೀರನೆ ತ್ರಿ
ಪುರ ಸಂಹಾರನೆ ಶರಧಿಗಂಭೀರನೆ ಎನ್ನ ಮನ
ಹಾರನ ಸದು ಕರೆತಾರೆಲೆ ನೀರೆ ||ಪ||
ಅಂದ ಗಂಧ ಶ್ರೀ ಗಂಧವನುರದೊಳು
ಹೊಂದಿಸಿ ತೆಕ್ಕೆಯೊಳ್ ಸಂದು ಗೊಡದೆ ಆ
ನಂದದ ಕರದೊಳು ಹಿಂದೆಲೆ ಪಿಡಿದು
ಚಂದುಟಿವೀಂಟುವ ಇಂದುಧರೇಶಾ ||1||
ನೆರೆ ಮೋಹದೊಳಕ್ಕರದೊಳಗರೆ ನುಡಿ
ಪರಿಪರಿ ಸರಸದ ಹರುಷದ ತನುಲತೆ
ಎರಡೊಂದೆಣಿಸಲು ನೆರೆದುಳುಹಿದ
ಚ್ಚರಿಯೆಂದನೆ ಮನಗರುವೀವ ಸುಗುಣ ||2||
ಅಂಕೆಗೆ ನಿಲುಕದ ಮೀನಾಂಕನ ಮದಗಜ
ದಂಕುಶವೆನಿಪ ಕುಂಕುಗುರುಗಳ ರವ
ದಿಂಕಿದ ಕುಚದೊಳೀ ಸೋಂಕಲು ತನುಪುಳ
ಕಾಂಕುರಗೊಳಿಸುವ ಬಾರಾನೆನೆ ||3||
ಹಿಂಗದು ಬಯಸವೀ ಕಂಗಳೊಳೀರ್ವರ
ಕಂಗಳ ಅರೆ ನೋಟಂಗಳ ಬೆಮರ್ವನಿ
ಅಂಗಲತೆಯೊಳು ಪೊಂಗಲು ಗಾಢಾ
ಲಿಂಗನ ಪರಿದಿಹ ಇಂಗಿತಶಾಲಿ ||4||
ಎಣೆಯಿಲ್ಲದ ಗುಣಮಣೀ ಕಂಕಣ ಝಣ
ಝಣರವದೊಳು ಸಂದಣಿಸಲು ಸಮರತಿ
ಗಣಕೆಗೆ ಎಲ್ಲರ ದಣಿಸುವಂದದಿ ಮನ
ದಣಿಸುವ ಶೇಷಭೂಷ ಬಾರಾನೆನೆ ||5||

ಏನ ಹೇಳುವೆನಮ್ಮಾ ಸೊಬಗ
ಏನ ಹೇಳುವೆನಮ್ಮಾ ಸೊಬಗ
ಎನ್ನ ಪ್ರಾಣಕಾಂತನ ಬೆಡಗ ||ಪ||
ಧಾರುಣಿಯೆಂಬುದು ತೋರಿ ಬಹು
ನೀರಿನ ಕಡಲೊಳು ತಡಿಯನ್ನು ಸಾರಿ
ಏರಿ ಏರಿ ಹರಿವೇರಿ ಮೇಲೆ ಭೊರೆಂಬೊ ಝೇಂ
ಕಾರದೊಳು ಬೆರೆದಾಡಿದಾ ಸೊಬಗ ||1||
ಮೂರು ಪುರಂಗಳ ಬೆರೆದ ಮೈ
ಉರವಣಿಸಿರುವಂತ ಉರುಗನ ಪಿಡಿದ
ವರ ಚೌಕಮಧ್ಯದೊಳ್ ಬೆರೆದ ಅಲ್ಲಿ
ಪರಿಪೂರ್ಣಕಾಂತಿಯೊಳ್ ಸೆಳೆದಪ್ಪಿದೊಯಿದ ||2||
ಕಾಣದಾಭರಣಗಳಿಟ್ಟಾ ತನ್ನ
ಪ್ರಾಣವಾದ ಅರುವೆಯ ತಾನುಡಕೊಟ್ಟ
ಮಾಣದ ಮಾಯೆಯ ಮುಂದಿಟ್ಟ ಅಲ್ಲಿ
ಮಾನಿನಿ ಬಾರೆಂದು ಕರದೊಳಿಂಬಿಟ್ಟ ||3||
ಹತ್ತು ನಡದ ದಾರಿ ತೋರಿಸಿ ಅಲ್ಲಿ
ಬೆತ್ತದ ಪೀಠದೊಳೆನ್ನ ಬೋಳೈಸಿ
ಅತ್ಯಂತ ರಮಣಿಯ ಗ್ರಹಿಸಿ ಅಲ್ಲಿ
ಒತ್ತಿಲಿ ತಾನಾದ ಕೂಟದೊಳು ಬೆರಸಿ ||4||
ಚಾಯಿಗೆ ನಾ ಮರುಳಾದೆ ಅಲ್ಲಿ
ಬಾಯ ರಂಗೆ ಬಂದು ನಾ ಬಯಲಾದೆ
ಹೇಯ ಬಾಧೆಗಳನ್ನು ತೊರೆದೆನು
ಸುಯಿಗ್ನಾನ ಲಿಂಗದೊಳ್ಬೆರೆದು ನಾ ಲೀಯವಾದೆ ||5||

ವಾರಿಜನಯನ ಪೂಜಿತನ ನೋಡುತ ಭವ
ವಾರಿಜನಯನ ಪೂಜಿತನ ನೋಡುತ ಭವ
ದೂರವಾದ ಪುಣ್ಯನೀರ ತರುವೆ
ತಾರೆ ಬಿಂದಿಗೆಯ ತಂಗೆಮ್ಮ ತಾರೆ ಬಿಂದಿಗೆಯ ||ಪ||
ಚಿನ್ನದ ಬಿಂದಿಗೆ ರನ್ನದ ಸಿಂಬಿ
ಕನ್ನಡಿ ಪೋಲುವ ಕದಪಿನ ಕಾಂತೆ
ಚೆನ್ನ ಸರವು ಚಿಂತಾಕ ಮುತ್ತಿನ ಬೊಟ್ಟು
ಮಿನ್ನದಿಂದೊಪ್ಪುವ ಕನ್ನಡ ಜಾಣೆ ||1||
ಮುತ್ತಿನ ಮುಡಿಯೋಳೆ ಮೂರು ಎಸಳಿಂದ
ಕೆತ್ತಿಸಿದ ಹತ್ತೆಗಟ್ಟಿನ ತೋರ
ಮುತ್ತಿನ ಮೂಗುತಿ ವಿಸ್ತಾರದ ಪದಕ
ಹಸ್ತ ಕಂಕಣ ಹರಳೋಲೆಯ ಚೆನ್ನೆ ||2||
ತೋಳ ಬಾಪುರಿಗಳ ಸಾಲಿನಿಂದೊಪ್ಪುವ
ಏಳೆಂಟು ಕೋಟಿಗೆ ಮಿಗಿಲಾದ
ಕೀಲು ಕೀಲಿಗೆ ವಜ್ರ ಬಿಗಿದ ಕಾಂಚಿಯ ದಾಮ
ಜಾಲದಿಂದೊಪ್ಪುವ ಬಾಲಕಿ ನೀನು ತಾರೆ ||3||

ಆರತಿ ಬೆಳಗಿರಿ ತೋರುವ ಲಿಂಗಕೆ
ಆರತಿ ಬೆಳಗಿರಿ ತೋರುವ ಲಿಂಗಕೆ
ಮೂರು ತನುವಿನಲ್ಲಿ ಮೀರಿ ತೋರುವ ಲಿಂಗಕೆ ||ಪ||
ವರ ಆಧಾರದಿ ನೆರೆ ನಿಂತು ಅಗಲದ
ಪರಮ ಪವನ ರೂಪದಾಚಾರ ಲಿಂಗಕೆ ||1||
ಸ್ವಾದಿಷ್ಟಾನದಿ ಬಗಿಯ ಭೇದಿಸಿ ತಿಳಿದಂಥ
ಬಾಧೆಯಿಲ್ಲದ ವಿನೋದ ಗುರುಲಿಂಗಕೆ ||2||
ಮಣಿಪೂರದಲ್ಲಿ ಸೆಣಸಿಯಿರುತಲಿರ್ದ
ತ್ರಿಣಯ ಶಿವಲಿಂಗಕ್ಕೆ ಹವಣಿಸಿ ಎಲ್ಲರು ||3||
ಅನಾಹತ ಸ್ಥಲದಲ್ಲಿ ಸನುಮತದಿಂದ ಇರ್ದ
ನನುಮಯ ರೂಪಾದ ಜಂಗಮಲಿಂಗಕೆ ||4||
ಹಸನಾದ ವಿಶುದ್ಧಿಯೊಳ್ ಕುಶಲದಿ ನಿಲಸಿದ
ಎಸೆವ ಪ್ರಸಾದ ಲಿಂಗವ ಅಪ್ಪಿದವರೆಲ್ಲ ||5||
ಅಗ್ನಿಮಂದಿರದೊಳು ಸೌಜೆಯಿಂದಲಿ ಮೆರೆವ
ವಿಗ್ನವಿಲ್ಲದ ಸಗ್ನಾನ ಮಹಾಲಿಂಗಕೆ ||6||
ಅಜ ರಂಧ್ರದೊಳಗಿರ್ದ ಸುಜನರಿಂಗಿತವರಿಯೆ
ಗಜೆ ಬಜೆ ನೀಗಿದ ನಿಷ್ಕಳಲಿಂಗಕ್ಕೆ ||7||
ಶಿಖಿಯೊಳು ಇದ್ದ ಸುಖಗಳ ಗೆದ್ದ
ಮುಕುತಿಯ ಕೊಡುವಂಥ ನಿಃಶೂನ್ಯ ಲಿಂಗಕೆ ||8||
ನವವಿಧ ಚಕ್ರದೊಳ್ ಸುವಿವೇಕದಿ ಇರುವ
ರವಿಕೋಟಿ ತೇಜ ಪ್ರಕಾಶದ ಲಿಂಗಕ್ಕೆ ||9||
ಶರೀರದ ಕಮತಿಗೆ ಪುರದೊಳು ಇರುವಂಥ
ಕರದ ಶ್ರೀಗುರು ಸಿದ್ಧರಾಮಲಿಂಗವೆಯಾಗಿ ||10||

ಜೋತಿ ಬೆಳಗುತದೆ ಜಗ ಝಗ
ಜೋತಿ ಬೆಳಗುತದೆ ಜಗ ಝಗ
ಜೋತಿ ಬೆಳಗುತದೆ ||ಪ||
ಅಸ್ತಮಗಿರಿ ಚೆಲ್ವ ಮಸ್ತಕದೊಳು ಚಿನ್ನ
ವಸ್ತು ಕಾಣುತದೆ ಜಗಝಗ ಜೋತಿ ||1||
ಮಾನಸ ತುದಿಯಲ್ಲಿ ಧ್ಯಾನಕ್ಕೆ ಸಿಲುಕದೆ
ತಾನೆ ಹೊಳವುತದೆ ಜಗಝಗ ಜೋತಿ ||2||
ಕಂಗಳ ಮಧ್ಯದಿ ತುಂಗ ಗುಡ್ಡದ ಯೋಗಿ
ಲಿಂಗ ಹೊಳವುತದೆ, ಜಗಝಗ ಜೋತಿ ||3||

ದೇವರ ದೇವ ಧವಳಾಕರಗೆ
ದೇವರ ದೇವ ಧವಳಾಕಾರಗೆ
ಪಾವನತರ ಮಹಿಮಾರ್ಣವ ಶಂಕರಗೆ
ಭಾವಜಾರಿ ಹರಿನುತ ಸಚ್ಚರಣಗೆ ||ಪ||
ಶರಣರ ಸುರತರು ಕರಿಚರ್ಮಾಂಬರ ಕಾಲ ಕಾಲ
ಧರ ಧರ ಧನುಕರ ಮುರಹರ ಶರಭೂಪಾಲ
ಸರಸಿಜರಿಪು ಶ್ರೀಕರ ಗಿರಿಜಾಧವ
ನಿರುತ ಭರಿತ ಸದಾ ಜಯ ||1||
ಅಂಗಜ ದಮನ ಕುರಂಗ ಪಾಣೀ ನುತಿಶೀಲಾ ಲೋಲ
ಪಿಂಗಳ ದೃಶ್ಯ ಭವ ಭಂಗ ಸುಜನಪಾಲ
ಮಂಗಳಮಯದ ಭುಜಂಗಮ ಭೂಷಣ
ಲಿಂಗ ಸಂಗಿಗಳ ಪೊಂಗಿದಭವ ಜಯ ||2||
ಪರಿಮಳ ಮೂಷಕ ಪುರಗುರು ಸಿದ್ಧನ ರೂಪ ಶ್ರೀಪ
ನಿರುತದಿ ಪೊರಿ ಕರಿವೃಷಭೇಂದ್ರನೆ ಜಿತಪಾಪ
ಸರಸಕವಿ ವಿನುತ ಚರಣ ಸುಧಾಷೇಕ
ಪರತರ ಸದ್ಗುಣ ಗಣಭೂಷಣ ಜಯ ||3||

ಬೆಳಗಿರಾರತಿಯನು
ಬೆಳಗಿರಾರತಿಯನು ಬೆಳಗಿರಾರತಿಯನು
ಕಳೆಯುಳ್ಳ ಶಿವಗೆ ||ಪ||
ಒಂಬತ್ತು ದ್ವಾರದೊಳ್ ತುಂಬಿ ಬೆಳಗುತ್ತ ತಾನು
ಒಂಬತ್ತು ಪ್ರಣಮಾವ ಬೆರೆದ ಲಿಂಗಕ್ಕೆ
ಒಂಬತ್ತು ಲಿಂಗ ಕೀಲವಂಗನಿಗಿತ್ತು
ರಂಭೇರೊಂದಾಗಿ ಬೆಳಗಿರಾರತಿಯನು ||1||
ಮೂರು ಬಣ್ಣವ ಮೀರಿ ಕರಸ್ಥಲವನು ಸೇರಿ
ಚರಣತೀರ್ಥಕೆ ಹಾರಿದ ಪರಮಲಿಂಗಕ್ಕೆ
ವರ ಏಕಾದಶ ಶೇಷಕೆ ಹರಣವಾಗಿರುವಂಥ
ಸುರನಾರಿಯರೆಲ್ಲ ಬೆಳಗಿರಾರತಿಯನು ||2||
ಕ್ಷಿತಿಯೊಳತಿಶಯವೆನಿಸುವ ಕಮತೀಯ
ಪ್ರತಿವಾರ ಗುರುಸಿದ್ಧರಾಮ ಲಿಂಗಕ್ಕೆ
ಪತಿವ್ರತರಾದ ಸ್ತ್ರೀಯರು ವಿತತ ಮೋಕ್ಷವ(ನೀವಗೆ)
ನಳಿನದಳ ನೇತ್ರಹಾರ ಶರಣಿಯರು ಬೆಳಗಿರಾರತಿಯನು ||3||

ಕರ್ಪೂರಾರತಿಯನೆತ್ತಿರೆ ಕಾಂತೆಯರೆಲ್ಲ
ಕರ್ಪೂರಾರತಿಯನೆತ್ತಿರೆ ಕಾಂತೆಯರೆಲ್ಲ
ಕಪ್ಪುಗೊರಳ ಹರಗೆ ಸಪ್ಪಳಡಗಿದ ಶರಧಿಯಂ
ತಪ್ಪ ಗ್ನಾನದೊಳಪ್ಪ ಯೋಗಿಗಳಪ್ಪುವಂಥ ಜ್ಯೋತಿ ಎನಿಸುವ
ಸರ್ಪಭೂಷಣ ಸಾಂಬಮೂರ್ತಿಗೆ
ಕರ್ಪೂರಾರತಿ ಎತ್ತಿರೆ ||ಪ||
ನೂರೊಂದು ಸ್ಥಲಗಳಿಗೆ ಮಂದಿರವಾದ
ಮೂರು ಸಂಗಮ ಕ್ಷೇತ್ರದಿ
ಚಾರಕ್ಕರ ರವಿಶಶಿ ಕೋಟಿ ಪ್ರಭೆಗಳ
ಮೀರಿ ಜಗಜಗಿಸುವ ಪರಾತ್ಪರ
ತಾರಕವೆ ತಾನಾಗಿ ಬೆಳಗುವ
ಸಾರತರ ದಿವ್ಯ ಪ್ರಕಾಶಗೆ
ಕರ್ಪೂರಾರತಿ ಎತ್ತಿರೆ ||1||
ನಾದಬಿಂದುಗಳೆರಡು ಬಂಧಿತ
ವಾದ ಪ್ರಣಮ ಪೀಠದಿ
ಸಾಧಿಸುವ ವೇದಾಂತಿಗಳೀಗ
ಗಾಧವಾಗಿ ಸದೃಶದಿ ಬೆಳಗಿ ವಿ
ನೋದಿಸುವ ಮೈಮೋದ ಕಾರಣವಾದ ಶಾಂತಗೆ
ಕರ್ಪೂರಾರತಿ ಎತ್ತಿರೆ ||2||
ಮಂಡಲತ್ರಯದಿ ಖಂಡಿತವಾದ
ಖಂಡ ಪ್ರಣಮ ಪೀಠದಿ
ದಂಡ ಕರ ಮಾರ್ತಾಂಡ ಕಿರಣ ರುದ್ರರಾ
ಖಂಡದೊಳು ಮಂಡಿಸಿದ ಮೈಮೋದ್ಭವ
ಖಂಡ ಪ್ರಭು ತೋಂಟದಾರ್ಯಗೆ
ಕರ್ಪೂರಾರತಿ ಎತ್ತಿರೆ ||3||

ಬೆಳಗುತಿದೆ ಜೋತಿ ಹೊಳವುತಿದೆ ಜೋತಿ
ಬೆಳಗುತಿದೆ ಜೋತಿ ಹೊಳವುತಿದೆ ಜೋತಿ
ಉರಿವುತಿದೆ ಜೋತಿ ನೋಡಮ್ಮಾ ||ಪ||
ಎಣ್ಣೆ ಬತ್ತಿಯ ಹಂಗು ಮುನ್ನ ತಾನಿಲ್ಲದೆ
ಕಣ್ಣ ಕಪ್ಪಿನೊಳಗೆ ನೋಡಮ್ಮಾ ಬೆಳಗುತಿದೆ ||1||
ಪಶ್ಚಿಮ ಸ್ಥಲದೊಳು ಸಚ್ಚಿದಾನಂದದಿ
ನಿಶ್ಚಿಂತ ಜೋತಿ ನೋಡಮ್ಮಾ ಬೆಳಗುತಿದೆ ||2||
ಗುರುಸಿದ್ಧ ವೃಷಭೇಶ್ವರನು ತಾನಾಗಿಯೆ
ಪರಮ ವಿಜೋತಿ ನೋಡಮ್ಮ ಬೆಳಗುತಿದೆ ||3||

ಕಂಡೆನೆ ಕರಚೋದ್ಯವ ಕಾಮಿನಿ ಕೇಳೆ
ಕಂಡೆನೆ ಕರಚೋದ್ಯವ ಕಾಮಿನಿ ಕೇಳೆ
ಕಂಡೆನೆ ಕರ ಚೋದ್ಯವ
ಖಂಡ ತೇಜೋಮಯದ
ಮಂಡಲಂಗಳ ಸಣ್ಣ
ಗಿಂಡಿಯೊಳಗೆ ಪೊಳವಂಡಲೆವತಿಶಯವ ಕಂಡೆನೆ ||ಪ||
ರನ್ನವೆಟ್ಟುವಿನಗ್ರದಿ ಪೊಳೆವುತಿಹ
ಮುನ್ನೀರಿನ ನಡುವೆ
ಬಿನ್ನಾಣವಾದ ಮಡುವಿನೊಳು ಉರಿಪುತಿಹ
ರನ್ನದೀವಿಗೆಯ ಕಂಡೆನೆ ಕಾಮಿನಿ ಕೇಳೆ ||1||
ನಿಡಿದಾದ ಬಳ್ಳಿ ಹೊಂಗೆ ಮಾಮರ ಸಾಲು
ವಿಡಿದಡವಿಯ ನಡುವೆ
ಕಡು ಸಣ್ಣಗೆಲಸದ ಬೆಡಗಿನ
ಗುಡಿಯೊಳು ಮೃಡನ ಮೂರುತಿ ಕಂಡೆನೆ ||2||
ಬಿಂಬತ್ರಯದ ತಾರಕ ನಭದೊಳು
ಅಂಬುಜಾರಿಯ ಮಧ್ಯದಿ
ಬಿಂಬದೊಳಗೆ ಪ್ರತಿಬಿಂಬಿಪ ಗುರುಸಂಗ
ನೆಂಬ ಚಿದ್ಘನ ಲಿಂಗವು ಕಾಮಿನಿ ಕೇಳೆ ||3||

ಜೋ ಜೋ ಎನ್ನಿ ಜನ್ಮಕ ಬಂದು
ಜೋ ಜೋ ಎನ್ನಿ ಜನ್ಮಕ ಬಂದು
ನಿತ್ಯ ನಿರಂಜನ ಪ್ರಭು ಎಂದು
ಸಹಜ ಹೇಳಿದ ಮಾತ ಮನಸಿಗೆ ತಂದು
ನಿತ್ಯ ಬೀಜ ಮಂತ್ರಗಳ ಜೋಗುಳ ಪಾಡಿರೆಂದು, ಜೋ ||ಪ||
ಆರು ಇಲ್ಲದಂದು ತಾನಾದ ಶಿವನು
ಪ್ರಣಮ ಉದ್ಭವಿಸಿದ ಕಂದನಾದನು
ಪ್ರಾಣಲಿಂಗಿಯೆಂದು ಪೆಸರ ಪಡೆದನು ನಿಜ
ಜ್ಞಾನದಿಂದಲಿ ತಾನು ಲೀಲೆ ಆಡಿದನು, ಜೋ ಜೋ ||1||
ಆರು ಮೂರು ಲಿಂಗ ನವರತ್ನಮಾಲೆ
ಪರಶಿವ ತತ್ತ್ವದ ಪದಕ ಕೊರಳೋಲೆ
ಧೀರ ಗಂಭೀರ ಎರಡ ಕಡಗ ಬಂದೋಲೆ
ಹೀಗೆ ಇನ್ನೂರು ಹದಿನಾರು ಮುತ್ತಿನರಳೆಲೆ ಜೋ ಜೋ ||2||
ಅಷ್ಟವರ್ಣದ ಶಾಲೆ ಸಡಗರದಲ್ಲುಟ್ಟು
ನಿಷ್ಠೆ ಪಂಚಾಚಾರದ ಕುಪ್ಪಸ ತೊಟ್ಟು
ಶ್ರೇಷ್ಠ ಷಡುಸ್ಥಲ ವಸ್ತುಗಳಿಟ್ಟು ನಮ್ಮ
ಇಷ್ಟಲಿಂಗೇಶನ ತೂಗಿ ಮುದ್ದಿಟ್ಟು ಜೋ ಜೋ ||3||
ಬಣ್ಣದ ತೊಟ್ಟಿಲ ಹೃತ್ಕಮಲದೊಳು
ಹನ್ನೆರಡೆಸಳಿನ ಹಾಸಿಕೆ ಮೇಲೆ
ಚಿನ್ಮಯ ಲಿಂಗನ ಮಲಗಿಸಿ ಬೇಗ ನಿಚ್ಚ
ಕನ್ನೆ ಮುತ್ತೈದೇರು ತೂಗಿರೆ ಹೀಗೆ ಜೋ ಜೋ ||4||
ಸಾಕ್ಷಾತು ಗುರು ತಾ ಬಂದ ಹಸ್ತದಲ್ಲಿ
ಮೋಕ್ಷದ ಗುಗ್ಗುರಿ ಹಚ್ಚಿದಳು ಕೂಡುತಲಿ
ಅಕ್ಷತಿಯ ಕಡುಬನಿಕ್ಕಿದಳು ಉಡಿಯಲ್ಲಿ ನಮ್ಮ
ಪಕ್ಷುಳ್ಳ ಶರಣೇರ ಕರಸಿರಿ ಬರಲಿ, ಜೋ ಜೋ ||5||
ತೊಟ್ಟಿಲು ಇರುವದು ಅಂತ್ರಸ್ಥಾನದಲ್ಲಿ
ತುಟ್ಟು ತುದಿಯ ಕೊನಿ ಷಡುಸ್ಥಲದಲ್ಲಿ
ಕಟ್ಟಿದ ಉನ್ಮನಿ ಪಾವನ ಮಸ್ತದಲ್ಲಿ
ದಿಟ್ಟಿಸಿ ತೂಗಿರಿ ಚಿತ್ತ ಹಸ್ತದಲ್ಲಿ, ಜೋ ಜೋ ||6||
ತಾನೆ ತೊಟ್ಟಿಲವಾಗಿ ತಾನೆ ಮಲಗಿದನು
ತನ್ನ ಕೈಯಲಿ ತೂಗಿ ನಿದ್ರಿಸ್ತನಾದ
ತಾನೆ ಎಚ್ಚರವಾಗಿ ಎದ್ದು ಕುಳಿತಿಹನು
ಶ್ರೀ ಗುರು ಪ್ರಭು ನಿರಂಜನ ಲೀಲಾ ವಿನೋದ, ಜೋ ಜೋ ||7||

ಜಯದೇವ ಜಯದೇವ ಜಯ ಜಯ
ಜಯದೇವ ಜಯದೇವ ಜಯ ಜಯ
ಶಂಕರನೆ ಜಯತೆಂದು ನುತಿಸುವೆ
ಜಯ ಸಾಂಬಶಿವನೆ ||ಪ||
ತೈಲವಿಲ್ಲದ ಜೋತಿಯ ಬೆಳಗಬಲ್ಲುದ ಕಂಡೆ ನಯನ
ವಿಲ್ಲದೆ ಕಂಡೆ ಕಿವಿಯಿಲ್ಲದ ಕೇಳಿದ ಬಾಯಿ
ಯಿಲ್ಲದೆ ಸವಿದುಂಡೆ ದೇಹವಿಲ್ಲದೆ ತೃಪ್ತಿ ಘ್ರಾಣ
ವಿಲ್ಲದ ಗಂಧ ಹೂವೆಯಿಲ್ಲದ ಕಾಯಿ
ಇಲ್ಲದ ಹಣ್ಣು ನಮಗಂದೆ ಜೋ ಜೋ ||1||
ಹತ್ತು ಮೂವತ್ತು ಮೇಲ ಹತ್ತು ದಳನೆತ್ತಿ ಮೇಲ
ಹತ್ತು ದಳವೆತ್ತ ತೆತ್ತೀಸ ದಳದಲ್ಲಿ ಮುಪ್ಪುರಿಯ
ಬತ್ತಿಯು ಮುಪ್ಪರಿಯ ಬತ್ತಿ ಪತ್ತಿಸಿ ಬೆಳಗುವೆ
ಪತ್ತೆರಡು ಪರಂಜೋತಿ ಪನ್ನೆರಡು ಜೋತಿ
ಎತ್ತಿ ಬೆಳಗುವೆ ಶಿವಗೆ ಜಗಜೋತಿ ಜೋ ಜೋ ||2||
ಏರಿದುನ್ಮನಿಯೊಳು ಆರತಿ ಪಿಡಿದು
ಆರತಿ ಪಿಡಿದು ತಾರಕ ಬ್ರಹ್ಮದಾಖಂಡ ಬೆಳ
ಗರಿದು ಬ್ರಹ್ಮಾಂಡಾಖಂಡ ಬೆಳಗರಿದು
ಗುರು ಬೆರಟೂರ ಪತಿ ಬಂದಾನೊಲಿದು
ಕರದಲ್ಲಿ ನೆಲಸಿದ ಮನಭಾವ ಬಲಿದು | ಜೋ ಜೋ ||3||

ಅತ್ತ ಕಲ್ಯಾಣಪುರದಲ್ಲಿ ಮಾಯಮಥನ ಹುಟ್ಟಿ
ಅತ್ತ ಕಲ್ಯಾಣಪುರದಲ್ಲಿ ಮಾಯಮಥನ ಹುಟ್ಟಿ
ಇತ್ತ ಕೈಲಾಸಪುರದಲ್ಲಿ ಇಪ್ಪತ್ತೈದು ಲೀಲೆಯ ತೊಟ್ಟಿ
ಹಿಂದಕ್ಕೆ ಹತ್ತು ಮುಂದಕ್ಕೆ ಹನ್ನೊಂದೆಂಬ ಲೆಕ್ಕವನಿಟ್ಟಿ
ಏಳುನೂರು ಎಪ್ಪತ್ತು ವರುಷಕೆ ಬರುವುದೇ ಗಟ್ಟಿ ಜೋ ಜೋ ||1||
ಕಲ್ಯಾಣಪುರದೊಳು ಮಾಯಮಥನ ತಾ ಹುಟ್ಟಿ
ಹರಳಯ್ಯ ಮಧುವಯ್ಯ ಎಳೆಹೂಟ ಕಟ್ಟಿ
ಅಲ್ಲಿ ಬಸಯ್ಯನ ಹಸ್ತ ಕರ್ಣಕ್ಕೆ ಮುಟ್ಟಿ
ಬಲ್ಲಿದಿಬ್ಬರು ಹುಟ್ಟಿ ಬಿಜ್ಜಳನ ಹೆಟ್ಟಿ ಜೋ ಜೋ ||2||
ಮಡಿವಾಳ ಮಾಚಯ್ಯ ಶರಣ ತಾ ಹುಟ್ಟಿ
ನಿಂದಕ ದ್ರೋಹಿಗಳ ಹಲ್ಲತಾ ಕುಟ್ಟಿ
ಇದಿರಾದ ಭವಿಗಳ ಇರಿದು ತಲೆಗುಟ್ಟಿ
ನಮ್ಮ ಶರಣ ಗಣಂಗಳು ಉಳಿವಿಗೆ ಮುಟ್ಟಿ ಜೋ ಜೋ ||3||
ತ್ರಾಹಿ ತ್ರಾಹಿ ಮಾಂ ಪ್ರಭು ಅಂಗ ಸುಸಂಗ
ತ್ರಾಹಿ ತ್ರಾಹಿ ಮಾಂ ಪ್ರಭು ಅಂಗದೊಳ್ ಲಿಂಗ
ತ್ರಾಹಿ ತ್ರಾಹಿ ಮಾಂ ಪ್ರಭು ದೀರ್ಘದಂಡ ಕೃಪಾಂಗ ಜೋ ಜೋ ||4||
ಪಟ್ಟಕ್ಕೆ ಚೆನ್ನಬಸವಣ್ಣ ಬಂದ
ಇಂಧುಧರನ ಪೂಜೆ ಮಾಡ್ಯಾನಾನಂದ
ಬಂದ ಬಂದ ಗಣಂಗಳ ದರುಶನದಿಂದ
ಬಂದು ದೇಹಾನಂದ ಪರಿಪೂರ್ಣವೆಂದ ಜೋ ಜೋ ||5||
ಮಾರಿ ಬಂದಳು ಮತ್ರ್ಯಲೋಕಕ್ಕೆ ಹಿಂದೆ
ಸಾರಿ ಬಂದವು ನಮ್ಮ ದಿನಗಳು ಮುಂದೆ
ನಾವು ಬಂದಂದಿಗೆ ನೀವು ಬಂದಿರಿ
ನಾವು ನೀವು ಕೂಡಿದಂದಿಗೆ ಹದಿಮೂರು ಆನಂದವೆನ್ನಿ ಜೋ ಜೋ ||6||
ಕೈಲಾಸದಿಂದಲಿ ಶಿವತಾನು ಬಂದ
ಗಂಧಕಸ್ತೂರಿ ಪುಷ್ಪ ಮಾಲೆಗಳಿಂದ
ಅಲ್ಲಿಗಲ್ಲಿಗೆ ಗುಡಿತೋರಣದಿಂದ
ಬಂದ ಶಾಕ ಪಾಕ ನೈವೇದ್ಯಗಳಿಂದ ಜೋ ಜೋ ||7||
ಏಳು ವರುಷದ ಪಟ್ಟರಾಯ ತಾ ಹುಟ್ಟಿ
ಲಕ್ಷದ ಮೇಲೆ ಮಿಗಿಲು ಕುದುರೆಯ ಕಟ್ಟಿ
ಉತ್ರದ ಕಾಸಿಯ ಕ್ಷೇತ್ರಕ್ಕೆ ಮುಟ್ಟಿ
ನಮ್ಮ ಮುಂದಿನ ಕಾರ್ಯಕ್ಕೆ ಪ್ರಸ್ತಾಯ ಹುಟ್ಟಿ ಜೋ ಜೋ ||8||
ರಾಯ ರಾಯರು ಕೂಡಿ ಕಾಸಿ ರಾಜ್ಯವ ಕಟ್ಟಿ
ಕಾನ ಕಾನರೊಳು ಮಲ್ಲು ಕಾನ ತಾ ಹುಟ್ಟಿ
ಲಕ್ಷದ ಮೇಲೆ ಇಪ್ಪತ್ತೈದು ಸಾವಿರ ಕುದುರೆಯ ಕಟ್ಟಿ
ಅಲ್ಲಿಂದ ರಾಯರ ಬೆನ್ನಟ್ಟಿ ಆನೆಗೊಂದಿಗೆ ಮುಟ್ಟಿ ಜೋ ಜೋ ||9||
ಬಂದ ಕಾನರು ವಾಲಿ ಭಂಡಾರವನೊಡದು
ಬಂಗಾರದ ಹಂದಿಯ ಕುಂಡಾನ ಗಡಿದು
ಹನ್ನೊಂದು ಕ್ಷೋಣಿ ಹೊನ್ನ ರಾಸಿಯನಿಡಿದು
ನಮ್ಮ ಸಂಗಮೇಶ್ವರ ಬಂದು ದಂಡನೆಲ್ಲಕಡಿದು, ಜೋ ಜೋ ||10||
ಶರಣರೆಲ್ಲರು ನಂದಿ ಧ್ವಜಕಾಗಿ ಮುತ್ತಿ
ಶ್ರೀಶೈಲದ ಮಲ್ಲೇಶ್ವರಗೆ ಆರತಿಯನೆತ್ತಿ
ಶ್ರೀ ಗಂಗೆ ಪರ್ವತದ ಪಾತಾಳ ಬತ್ತಿ
ಅಲ್ಲಿ ಚಂದ್ರಗುತ್ತಿರಾಯನಿಗೆ ಉಶ್ರಾಪಗಳೆತ್ತಿ, ಜೋ ಜೋ ||11||
ವೀರ ವಸಂತರಾಯ ವಿರುಪಾಕ್ಷನಲ್ಲಿಗೆ ಮುಟ್ಟಿ
ಶರಣ ಸದು ಭಕ್ತನಾಗೆಂದು ಹಸ್ತವನಿಟ್ಟಿ
ಮುತ್ತೈದೆ ಸಹವಾಗಿ ಲಿಂಗವ ಕಟ್ಟಿ
ಕಲ್ಯಾಣ ಪಟ್ಟಣವಿರಲೆಂದು ಕಟ್ಟಿ, ಜೋ ಜೋ ||12||
ಕಲ್ಯಾಣ ಸ್ಥಿರಪಟ್ಟ ಲೆಖ್ಖವೆಷ್ಟೆಂದು
ಐದು ಸಾವಿರದೈನೂರ ಸ್ಥಿರವಾಗಿ ತಂದು
ಸ್ವಯದಿ ಇಪ್ಪತ್ತೈದು ವರುಷ ಆಳೆಂದು
ಏಳು ಪಟ್ಟಕೆ ಕಲಿ ಸರಿಯಾಯಿತೆಂದು, ಜೋ ಜೋ ||13||
ಜೋಗುಳ ಪದಗಳ ಕೇಳಿದವರಿಗೆ
ಮೂಜಗದೊಡೆಯನ ಕೃಪೆಗಳವರಿಗೆ
ಈ ಮಾಡಿದ ಪದಗಳ ಪಾಡಿದವರಿಗೆ
ಶಿವನು ಬೇಡಿದ ವರಗಳ ಕೊಡುವನವರಿಗೆ ಜೋ ಜೋ ||14||
ಕಲಿಯುಗದೊಳು ಸಿದ್ಧರಾಮಯ್ಯಗುರುವೆ
ಆದಿ ಈಶ್ವರನ ಪುರದಿಂದ ಬರಿವೆ
ಬಂದ ಬಂದ ಗಣಂಗಳನರಿಯೆನ್ನದಿರಿವೆ
ನಿಮ್ಮ ಕರುಣ ಪ್ರಸಾದವ ನಮಗೆ ತಂದೊರಿವೆ, ಜೋ ಜೋ ||15||

Categories
Tatvapadagalu ಪರಮದೇವ ನರಹರಿ ಗುರು ಮತ್ತು ಇತರರ ತತ್ವಪದಗಳು

ನರಹರಿ ಗುರುಗಳ ತತ್ವಪದಗಳು

ಜ್ಞಾನ ಬರಲಿಲ್ಲಾ
ಕಾಲ ಕಳೆದೀರಲ್ಲಾ ಜ್ಞಾನ ಬರಲಿಲ್ಲಾ |
ಕಾಲ ಯಮನರು ಬಂದು ಎಳೆದರೇ
ಬಂಧುಗಳ್ಯಾರು ಇಲ್ಲಾ ||1||
ಸಂತೆ ಹೊಂಟಿಯಲ್ಲಾ | ನಿಶ್ಚಿಂತೆನಾಗಲಿಲ್ಲಾ |
ನಾನು ನನ್ನದು ಎಂಬ ಮೋಹವ
ದೂರ ಸರಿಸಲಿಲ್ಲಾ ||2||
ಯಾತ್ರೆ ಮಾಡಲಿಲ್ಲ | ಸುಳ್ಳೆ ಜಾತ್ರೆ ನಂಬಿದೆಯಲ್ಲಾ
ಮರಳು ಜಾತ್ರೆಯ ತೇರು ನೋಡಿ ಮಂಗ್ಯನಾದಿಯಲ್ಲಾ ||3||
ನಡೆದುಕೊಳ್ಳಲಿಲ್ಲಾ | ಇದದ್ದು ಪಡೆದುಕೊಳ್ಳಲಿಲ್ಲಾ
ನಡೆದದ್ದು ಮರೆತು ಪಡೆದದ್ದು ಮರೆತು
ಮರಕೋತಿಯಾದಿಯಲ್ಲಾ ||4||
ಆಯುಷ್ಯ ಪೂರವೆಲ್ಲಾ | ಅರ್ಥ ಮಾಡಿಕೊಳ್ಳಲಿಲ್ಲಾ
ಅಜಮುನಿ ಗುರುಗಳಾದ ನರಹರಿಯ ಪಾದ ಪೂಜಾಲಿಲ್ಲಾ ||5||

ಯಾತಕೀ ಮೋಹವು
ಯಾತಕೀ ಮೋಹವು ಪಾತಕಿ ಜೀವನೆ ಒಡಲೊಳು ||1||
ನುತವೆ ನಿನಗಿದು ಘಾತಿಸಿ ಕೆಡುವದು ಕಡೆಯೊಳು ||ಅನುಪಲ್ಲವಿ||
ಪ್ರೀತಿ ಪಾತ್ರವೆ ಮಲ ಮೂತ್ರದ ಭಾಂಡವು ಮಾಂಸದ
ಗಾತ್ರವಿದನು ಅಪವಿತ್ರವೆಂದರಿಯದೆ ಮರುಳತೆ ||2||
ಸುರಿವ ಶ್ಲೇಷ್ಮವು ರಕ್ತ ಪರಿಯಾವ ಕ್ರಿಮಿಗಳ ಬಳಗದಿ
ಭರಿತವಾಗಿದೆ ದೇಹ ಪರಿಕಿಸಲರಿಯದೆ ಬರಿದೆ ||3||
ನಿತ್ಯವಲ್ಲದ ದೇಹ ಸತ್ಯವೆಂದೆನ್ನುತ ಕೆಡುವರೆ
ಪ್ರತ್ಯಗಾತ್ಮನು ನೀನೆ ನಿತ್ಯನೆಂದರಿಯದೆ ಮರಳತೆ ||4||
ಬಿಡದೆ ವಿಷಯದೊಳು ಕಡುಸೌಖ್ಯ ಕಲ್ಪಿಸಿ ನಿನ್ನನು
ಕಡೆಯೊಳು ನರಕದ ಮಡುಹಿನೊಳ್ಕೆಡಹುವ ಕಾಯದಿ ||5||
ಪೊಡವಿಯೊಳ್ ರಾಯಾದ್ರಿ ವಡೆಯ ಶ್ರೀನರಹರಿ ಗುರುವಿನ
ಅಡಿಯ ಸೇವಿಸಿ ಮುಕ್ತಿ ಪಡೆಯದೆ ಕೆಡಿಸುವ ಒಡಲೊಳು ||6||

ವಿಷ ಬೆರೆದ ಸವಿಯಾಟ
ಬ್ಯಾಡಬಿಡೋ ವಿಷಯದೊಡನಾಟ
ಕೇಡು ನೋಡೋ ವಿಷ ಬೆರೆದ ಸವಿಯೂಟ ||ಪ||
ಕೇಳಿದಾಕ್ಷಣ ಮೋಹಿಪರೆ ಭ್ರಾಂತ ಕೇಳಿ ತಿಳಿಯಬೇಕು ಧೀಮಂತ
ಕೇಳಿಕಂಡ ನುಡಿವ ಸತ್ಯವಂತ ಕೇಳದಿರುವವನೆ ನಿಶ್ಚಿಂತ ||1||
ಸ್ಪರ್ಶಭಾವವ ತಿಳಿಯಲು ಬೇಕು ದುಸ್ಪರ್ಶವಾಗೆ ನಿಂದಿಸಬೇಕು
ಸುಸ್ಪರ್ಶವರಿತು ವಂದಿಸಬೇಕು ನಿಸ್ಪರ್ಶಸುಖವಪೇಕ್ಷಿಸಬೇಕು ||2||
ಕಾಣಬಹುದು ಏನಾದರು ಜಾಣ ಕಾಣುತಲೆ ತ್ವರೆಪಡುವರೆ ಕೋಣ
ಕಾಣುತ್ತರಿಯಬೇಕು ನಿಜಋಣ ಕಾಣದಿರುವವನೆ ಸುಪ್ರವೀಣ ||3||
ರಸದೊಳಗೆ ರುಚಿಯನ್ನುವುದಿಲ್ಲ ರಸಕಹಿಯಂದುಗುಳ್ವುದು ಸಲ್ಲ
ರಸ ಸೀಯಂದು ಭ್ರಮಿಸುವಿಯಲ್ಲ ರಸಪ್ರಥ್ವಿ ಬೆರೆತು ರುಚಿಯಾಯ್ತೆಲ್ಲ ||4||
ಗಂಧದಿಕೇಳ್ಹುರುಳಿಲ್ಲ ದುರ್ಗಂಧವೆಂದು ತೊರೆವುದು ಸಲ್ಲ
ಸದ್ಗಂಧವೆಂದು ಮೋಹಿಪೆಯಲ್ಲ ಗಂಧವು ಪೃಥ್ವಿಯ ಗುಣವೆಲ್ಲ ||5||
ನುಡಿ ಮಾತಿನೊಳಿಲ್ಲವು ಬಾಧೆ ನುಡಿಯಿಂದಲಹುದು ನಿಜ ಬೋಧ
ನುಡಿದಾಕ್ಷಣ ಪಡುವರೆ ಕ್ರೋಧ ನುಡಿನಿಜವರಿತು ಪಡಿ ಪ್ರಮೋದ ||6||
ಭ್ರಾಂತಿ ಪಥವೆಂದಿಗೂ ಹಿಡಿಬ್ಯಾಡ ಭ್ರಾಂತಿ ಇಹುದು ಬಹು ಜನ್ಮದ ಕೇಡ
ಭ್ರಾಂತಿಯಳಿವುದು ವಿಭುಧರ ಜಾಡ ಭ್ರಾಂತನಾದರೆ ಕೆಡುವಿಯೊ ಮೂಢ ||7||
ಎಷ್ಟು ಲಾಭವಿರಲಿ ಬಿಡು ದುಃಸಂಗ ಎಷ್ಟು ನಷ್ಟ ಬರಲಿ ಹಿಡಿ ಸತ್ಸಂಗ
ಇಷ್ಟವಿದ್ದರೆ ಕೇಳ್ನೀಗು ವಿಭಂಗ ಎಷ್ಟು ಹೇಳಲಿ ನಿಜ ಸೌಖ್ಯದ ರಂಗ ||8||
ನರಹರಿ ನುಡಿಗಳಿವು ಸತ್ಯ ನರಕುರಿಗಳಾಡುವರ ಸತ್ಯ
ಪರಮಾರ್ಥವಾಗಿ ನೋಡು ನಿತ್ಯ ಈ ತೆರನರಿತವ ಕೃತಕೃತ್ಯ ||9||

ಹೊತ್ತು ಕಳೆಯುವರೇನೋ ಮೂಢಾ
ಹೊತ್ತು ಕಳೆಯುವರೇನೋ ಮೂಢಾ ಚಿತ್ತ ಜಾರಿಯ ಸ್ಮರಿಸದೇ ||ಪ||
ವಿತ್ತಮದವದು ಹೆಚ್ಚಿ ವಿಷಯದ ಮೊತ್ತದಿಂದಲಿ ಬಳಲುತಾ ||ಅ.ಪ||
ಹಿಂದೆ ಮಾಡಿದ ಪುಣ್ಯ ಫಲದಿಂ ಬಂದಿತೀ ನರಜನ್ಮವು
ಇಂದು ನೀ ಭವ ಬಂಧಕಂಜದೆ ಮಂದಮತಿಯಿಂ ಕೆಡುವಿಯೊ ||1||
ಮೊಲೆಯ ಹಾಲನು ಸವಿದು ಬಾಲ್ಯವ ಕಳೆದು ಮುಂದಕೆ ಪ್ರಾಯದಿ
ಚೆಲುವ ಲಲನೆರ ಸಂಗದಿಂದಲಿ ಮಲಹರನ ಗುರುತರಿಯದೇ ||2||
ಧರಣಿ ತಲದೊಳಗಿರುವ ರಾಯ್ಗಿರಿಪುರದಿ ಮೆರೆಯುವ ನರಹರಿ
ಪರಮ ಸದ್ಗುರು ಎಂದು ಭಾವಿಸಿ ಚರಣಗಳ ಸಂಸ್ಮರಿಸದೆ ||3||

ಹೊತ್ತ ಕಳೆಯಬ್ಯಾಡ
ಹೊತ್ತು ಕಳೆಯಬ್ಯಾಡ ಮೂಢಾ ಗೊತ್ತು ತಿಳಿಯೊ ಗಾಡಾ ||ಪ||
ಕೇರಿ ಕೇರಿ ತಿರುಗೀ ಮಾರನ ಕ್ರೂರ ಶರಕೆ ಕೊರಗೀ
ವಾರ ಸ್ತ್ರೀಯರೊಳು ಜಾರತನದಿ
ಮನಸೂರೆ ಮಾಡಿ ಭವವಾರಿಧಿಯೊಳು ಬಿದ್ದು ||1||
ಜ್ಞಾನವಿನಿತು ಇಲ್ಲದೇ ಶ್ರೀಗುರು ಧ್ಯಾನದೊಳಗೆ ನಿಲ್ಲದೇ
ಏನು ತಿಳಿಯದಲೆ ಹೀನನೆಪರರಭಿ
ಮಾನವನೆಣಿಸುತ ಶ್ವಾನನಂದದಲಿ ||2||
ಧರಣಿಯೊಳುತಿರುವಾ ರಾಯ್ಗಿರಿ ಪುರವರದೊಳು ಮೆರೆವಾ
ಗುರು ನರಹರಿ ಶ್ರೀ ಚರಣವ ಸ್ಮರಿಸದೆ
ಕುರುಡನ ಪರಿ ಇಹಪರಗಳ ತಿರುಗುತ ||3||

ಕುಲಚಲವೆನ್ನುತ ತೊಳಲುವೆ
ಕುಲಚಲವೆನ್ನುತ ತೊಳಲುವೆ ಸುಮ್ಮನೆ
ತಿಳಿಯದೆ ಮರ್ಮವ ಬಳಲುವಿ ಮನುಜಾ ||ಪ||
ಇಳೆಯೊಳು ತೋರುವ ಕುಲವೆಲ್ಲವು ಮಾಯಾ
ಲಲನೆ ಕಲ್ಪನೆಯಂದು ತಿಳಿಯಲೊ ಮನುಜಾ ||1||
ಪಂಕದಿ ಪುಟ್ಟಿದ ಪಂಕಜ ಕುಸುಮವು
ಶಂಕರನರ್ಚನೆಗೆ ಶ್ರೇಷ್ಠವೆ ಮನುಜಾ ||2||
ಗೋವಿನ ಮಾಂಸದೊಳೋದವಿದ ಕ್ಷೀರವು
ಭಾವಜಾರಿಗೆ ಅಭಿಷೇಕವೆ ಮನುಜಾ ||3||
ಪುನಗಿನ ಮಾರ್ಜಾಲ ತನುವಿನ ಬೆವರೆಂತೊ
ಮನಸಿಜಾರಿಯ ಪೂಜೆಗನುಕೂಲ ಮನುಜಾ ||4||
ಮೃಗದ ರಕ್ತದೊಳಾದ ಮೃಗಮದ ವೆಂತುಂಟೊ
ಮೃಗಧರ ಲೇಪನೆಗೆ ಮುಖ್ಯವೆ ಮನುಜಾ ||5||
ದೇವರಿಗ್ಯಾವ ಕುಲ ಜೀವನಿಗ್ಯಾವ ಕುಲ
ಭಾವ ಭೇದವೆ ಕುಲ ಭಾವವು ಮನುಜಾ ||6||
ನೆರೆಹೀನನಾದರೇನು ಆರುವಿರಲಾತನದೆ
ಧರೆಯೊಳುತ್ತಮ ಕುಲವರಿಯಲೋ ಮನುಜಾ ||7||
ಧರೆಯೊಳು ಕುಲಧರ್ಮವರಿತ ಶ್ರೀನರಹರಿ
ಗುರುಪದ ಸೇವಿಸಿ ಅರಿತುಕೊ ಮನುಜಾ ||8||

ಪಾಮರ ಜನ್ಮವ್ಯಾಕೆ
ಘನ ಶ್ರೀಗುರುವಿನೊಳ್ತನ್ನ ತಾನರಿಯದ ಜನ್ಮವ್ಯಾಕೆ
ಉನ್ನತ ಬ್ರಹ್ಮಾನಂದವನನುಭವಿಸದ ಜನ್ಮವ್ಯಾಕೆ ||ಪ||
ಕೈಯಾರೆ ಗುರುಸೇವೆಗೈಯದ ಪಾಮರ ಜನ್ಮವ್ಯಾಕೆ
ವೈಯಾನೆ ತತ್ವ ವಿಚಾರವ ಮಾಡದ ಜನ್ಮವ್ಯಾಕೆ ||1||
ಗುರುಗಳ ಚರಣಕ್ಕೆ ಎರಗದಿರುವ ಮೂರ್ಖ ಜನ್ಮವ್ಯಾಕೆ
ಸರಸದಿಂದಲಿ ತತ್ವ ಶಾಸ್ತ್ರವನೋದನ ಜನ್ಮವ್ಯಾಕೆ ||2||
ಸಾಧು ಜನರ ಕಂಡು ಆದರಿಸದ ಪಾಪಿ ಜನ್ಮವ್ಯಾಕೆ
ಬೋಧಿಸೆ ಗುರುಮಂತ್ರ ಸಾಧಿಸದಿರುವಂಥ ಜನ್ಮವ್ಯಾಕೆ ||3||
ಮಾಯೆಗೆ ಮರುಳಾಗಿ ಬಾಯಿಬಿಡುವ ಹೇಡಿ ಜನ್ಮವ್ಯಾಕೆ
ಹೇಯವಾಗಿರುವ ಈ ಕಾಯವೆ ಸ್ಥಿರವೆಂಬ ಜನ್ಮವ್ಯಾಕೆ ||4||
ಕರ್ಮವನೀಗಿ ನಿಷ್ಕರ್ಮಿಯಾಗದ ಮೂಢ ಜನ್ಮವ್ಯಾಕೆ
ಮರ್ಮವರಿತು ನಿತ್ಯ ಕರ್ಮವನೆಸಗದ ಜನ್ಮವ್ಯಾಕೆ ||5||
ತಾನೆದಿರೆನ್ನುವ ಜ್ಞಾನವಳಿಯದಿಹ ಜನ್ಮವ್ಯಾಕೆ
ತಾನಿ ಬ್ರಹ್ಮವೆಂದು ಮೌನವಾಶ್ರೈಸದ ಜನ್ಮವ್ಯಾಕೆ ||6||
ಸ್ಥಿರ ಭಕ್ತಿ ವೈರಾಗ್ಯವರ ಜ್ಞಾನವಿಲ್ಲದ ಜನ್ಮವ್ಯಾಕೆ
ನರಹರಿ ಗುರುಪಾದಕ್ಕೆರಗದಿರುವ ನರ ಜನ್ಮವ್ಯಾಕೆ ||7||

ನೀ ನೆನೆ ಮನುಜಾ
ಭಾಸುರ ಶಂಕರನಾಮವ ಮನದಲಿ |
ಬೇಸರಿಸದೆ ನೀ ನೆನೆ ಮನುಜಾ ||ಪ||
ಭವ ಶರಧಿಯ ನೀ ದಾಂಟಬೇಕಾದರೆ |
ಶಿವನಲ್ಲದೆ ಬೇರೆ ಗತಿಯುಂಟೆ |
ಶಿವನೊಳು ದ್ವೇಷವ ಸಾಧಿಸಿದವರಿಗೆ
ಜವನವರಲ್ಲದೆ ಬೇರುಂಟೆ ||1||
ಏಸು ಜನ್ಮದ ಪುಣ್ಯರಾಶಿಯು ಒದಗಲು |
ಈಸು ಮನುಷ್ಯ ದೇಹ ಬಂದಿಹುದೆ |
ಈಶಭಕ್ತರ ಸಹವಾಸವ ಮಾಡುತ |
ದೋಷಗಳನು ಕಳೆದುಳಿ ಮನುಜಾ ||2||
ತರುಣ ಯೌವನದಲಿ – ತರುಣಿಯರನು ಕೂಡಿ |
ಇರುವುದು ಸುಖವೆಂದು ಸ್ಮರಿಸುವಿಯಾ |
ಮರಣ ಕಾಲದಿ ಯಮಪುರದ ದಾರಿಲಿ ನಿನ್ನ |
ಕೊರಳರಿವುದನೀಂ ಕೇಳಿದಿಯಾ ||3||
ಸತ್ಯನಿಷ್ಠೆಯ ಗೊತ್ತುಗುರಿಯಿಲ್ಲದೆ ಗಾಣ |
ದೆತ್ತಿನ ಪರಿಯಲಿ ಸುತ್ತುವಿಯಾ |
ಮತ್ತನಾಗದೆ ವಿದ್ಯಾತತ್ವ ಶಾಖೆಯ ನೋಡು
ತುತ್ತುಮ ಶೃತಿವಾಕ್ಯ ತಿಳಿಯಲು ಬೇಕೈ ||4||
ಗುರು ಹಿರಿಯರ ಕಂಡೆರಗುತ ರಾಯಾದ್ರಿ |
ಪುರಪರಿಪಾಲನ ಭಕ್ತರಲಿ | ಬೆರೆತು
ನಿರುತ ಸುಖವಿರುವುದನರಿಯದೇ
ಅರಿಗಳಾರ್ವರ ಕೈಲಿ ಶಿಲ್ಕುವರೇ ||5||

ಎಂಥಾ ಪಾತಕವೋ
ಎಂಥಾ ಪಾತಕವೋ ನಾನೆಂತು ವರ್ಣಿಸಲಿನ್ನು |
ತನಗನ್ಯಭಾವಿಪ ಅಜ್ಞಾನವಾ ||ಪ||
ಸಂತತ ತ್ವಮೇವ ಬ್ರಹ್ಮಾಸ್ಮಿಯೆನ್ನುತವೆ |
ದಾಂತಪ್ರಬಲ ಶೃತಿ ಚಿಂತನೆಗೈಯದೆ ||ಅ.ಪ||
ಎಂತುರಜ್ಜುವು ಸರ್ಪದಂತೆ ಕಲ್ಪಿತ ದೃಶ್ಯ |
ಭ್ರಾಂತಿಗಳಿಗೆ ಶಿಲುಕಿ ಬಳಲೂವರೆ |
ಯದೃಶ್ಯಂ ತನಶ್ಯ ಮೆಂದಿರೆ ಶೃತಿ ಸತ್ಯ |
ವೆಂತ ಭಾವಿಸದೆ ಅನಾತ್ಮ ಸಂತತಿಯನ್ನು ||1||
ಸರ್ವಶೃತಿಗಳಹಂ ಪ್ರಭುರೀಶ್ವರಾಯಂದು |
ಸಾರ್ವವು ಆದ ವಿಚಾರಿಸಿನೋಡದೆ |
ಸರ್ವ ಜಗತ್ತು ನಿನಗೆ ಭೋಗ್ಯವಾಗಿರೆ |
ಊರ್ವಿಯೊಳಗೆ ನೀ ನೀಂ ತಧಮನಾಗುವರೆ ||2||
ಯೋಶ್ವೇತರಂ ಮನು ತೇನಸವೇದೆಂದು |
ವಿಶ್ವದೊಳ್ ಶೃತಿವಾಕ್ಯವೆಶೆಯುತಿರೆ |
ಈಶ್ವರನೆಂಬುವ ಬೇರೆಂದು ಭಾವಿಸಿ |
ಪಶುವಿನಂದದಿ ಅನ್ಯರೋಶವಾಗಿ ಮರುಗುವಿ ||3||
ಮಾನಿತ ಶೃತಿಯಹಂ ಬ್ರಹ್ಮಾಸ್ಮಿ ಎನ್ನುತ |
ನೂನಮಾಗಿಯೆ ನುಡಿಯುತಲಿರಲು |
ನೀನೇ ಜಗತ್ಕರ್ಕ ಮುಕ್ತನೆಂದರಿಯದೆ |
ಹೀನನಾಗನ್ಯವ ಧ್ಯಾನಿಸುತ್ತಿರುವುದು ||4||
ನಾನಾ ಪಶ್ಯನ್ಮೃತ್ಯುಂಗಚ್ಛತಿಯನ್ನುತ |
ಭೂನುತ ಶೃತಿ ಸಾರುತಿರೆ ಕೇಳದೆ |
ದೀನತೆಯಿಂ ದನ್ಯದೈವವ ಭಜಿಪರೆ |
ಯೇನೋ ಇನ್ನಷ್ಟು ಜನ್ಮದ ಕರ್ಮಬಂಧವೋ ||5||
ಅಲ್ಲಲ್ಲಿ ಎನ್ನದೆ ಎಲ್ಲಿ ನೋಡಿದರಲ್ಲಿ |
ಮುಳ್ಳುಮೊನೆಗೆಯಡೆ ಇಲ್ಲಸರ್ವಂ |
ಖಲ್ವಿದಂ ಬ್ರಹ್ಮಂದು ಬಲ್ಲ ಶೃತಿಯು ಪೇಳೆ |
ಎಲ್ಲಿರ್ಪೆಯೋ ನೀನೆಲ್ಲಿ ನಿನ್ನಯದೈವ ||6||
ಬ್ರಹ್ಮೈವೇದ ತದ್ ಬ್ರಹ್ಮೈವ ಭವತೆಂದು |
ನಿರ್ಮಲ ಶೃತಿಯನ್ನು ನೆರೆಬೋಧಿಪ |
ಕರ್ಮರಹಿತ ನರಹರಿ ಗುರುಪದಸೇರಿ ಮರ್ಮ
ತಿಳಿಯದೆ ಬಹುಜನ್ಮಕೆ ತೆರಳುವೀ ||7||

ಕೋಳಿಯ ಕಂಡಿರಾ
ಕೋಳಿಯ ಕಂಡಿರಾ ನಮ್ಮಯ |
ಕೋಳಿಯ ಕಂಡಿರಾ ||ಪ||
ಕೇಳಿರಿ ನಮ್ಮಯ ಕೋಳಿಯ ಕೂಗನು |
ಕೇಳದ ಜನಗಳ ಬಾಳುವೆ ವ್ಯರ್ಥವು ||ಅ.ಪ||
ಏಳನೆ ನೆಲೆಯಲ್ಲಿ ನಟಿಸುತ |
ಸ್ಥೂಲದಿ ಚರಿಸುತಲಿ |
ಜಾಳು ಅವಿಧ್ಯವ ಶೀಳಲು ವರ್ಣದಿ |
ಮೇಳವಿಸುತ ಸುಖಕ್ಕೊಳಗೂಡುವದದು ||1||
ಹೆತ್ತಿಹುದೈವತ್ತು ಶಿಶುಗಳ | ಮೊತ್ತವ ತಾ
ಹೊತ್ತು | ಬಿತ್ತರದಲಿ ಅರವತ್ತು ನಾಲ್ಕು ಕಳೆ |
ವೆತ್ತು ಕೂಗುವದು ಹತ್ತು ವಿಧದೊಳು ||2||
ವೇದದ ಶಿರದಲ್ಲಿ ನಾಲಕು ಪಾದದಿ ಕುಣಿಯುತಲಿ |
ಮೋದದಿ ತ್ರೈಜಗದಾದಿಯ ಬಿಂದುವ |
ಭೇದಿಸಿ ಬ್ರಹ್ಮವ ಸಾಧಿಸಿ ಕೊಡುವದು ||3||
ಪಗಲಿರುಳಾಡುವದು ತುರ್ಯವ ನಗಲುತ ಸಾಯುವದು |
ಒಗೆದು ಮತ್ತೊಂದೆಡೆ ಬಗೆ ಬಗೆ ನುಡಿವುದು |
ಗಗನವೇರಿ ಚಿದ್ಗಗನವ ಸೇರ್ವುದು ||4||
ನರಹರಿ ಗುರುವರನು ತೋರಿದ ವರಮಾನಸ ಸರದಿ |
ಪರಿಪರಿ ಸಂಶಯ ಹರಿಸುತ ಬೋಧಿಪ |
ಪರಮ ಹಂಸ ತನ್ನಿರವೆಂದೆನಿಪುದು ||5||

ಹರಿರುದ್ರ ಜೀವಾತ್ಮ
ಮುದದಿ ತನ್ನಯ ದೇಹ ಮಧ್ಯದಿ
ಪದುಳದಿಂದಿಹ ಸಪ್ತಚಕ್ರದೊ
ಳದವಿ ತೋರುವ ಗಣಪನಜ ಹರಿರುದ್ರ ಜೀವಾತ್ಮಾ |
ಸದಮಲನು ಪರಮಾತ್ಮ ಮೊದಲಹಸುರರು
ಸದ್ಗುರು ರೂಪವೆನ್ನುತ
ಚದಲದಲೆ ಧ್ಯಾನಿಪುದು ಭಕುತಿಯಲಿಂದ ಶಬಲವನು ||1||
ಇದುವೆ ಗೌಪ್ಯಹಕಾರ ಸಂಜ್ಞಿಕ
ಸದಮಲಾತ್ಮನು ತನ್ನ ಶಕ್ತಿಯ
ಪುದುಗಿ ಕೊಳುತ ಸಕಾರ ಸಂಜ್ಞಿಕಮಾದ ಪ್ರಕೃತಿಯಲಿ |
ಮುದದಿ ತನ್ನ ಸ್ವರೂಪ ಮರತಾ
ಚದುರೆಗೊಳಗಾಗುತ್ತ ಭ್ರಾಂತಿಯೊ
ಳೊದವಿ ಹಂಸ ಸ್ವರೂಪ ಶಬಲಬ್ರಹ್ಮನೆನಿಸಿದನು ||2||
ಅನಘ ಕೇಳಾ ಶಬಲಬ್ರಹ್ಮನು
ಘನತರನವ ದ್ವಾರ ಪುರದೊಳ್
ಮನಮರುತ ಮೊದಲಾದ ಪರಿಕರದಿಂದ ಒಳಪೊಕ್ಕು |
ಮಣಿಮಯದ ಪಂಜರದೊಳಾಡುವ
ವಿನುತ ಶುಕ ಬಾಹ್ಯಕ್ಕೆ ಬರಲೆಡೆ
ಇನಿತು ಕಾಣದ ತೆರದಿ ಭೋಗಗಳನನುಭವಿಸುತ್ತಿಹನೂ ||3||

ನಿನ್ನಯ ನಿಜವದೆಂದರಿ
ನಿನ್ನಯ ನಿಜವದೆಂದರಿಯಲೆ ತನುಮನ |
ಸನ್ನುತ ಪಂಚಲಕ್ಷಣಯುತ ಬ್ರಹ್ಮವೆ ||ಪ||
ಭುವನ ರೂಪಿಸ ಕಾರ್ಯೋದಯಕೆ ಸಾಧನವೆನಿ |
ಸುವ ಕಾಲ ಪರಮಾಣು ಪ್ರಕೃತಿ ಕರ್ಮ |
ವ್ಯವಹಾರಜೀವರ್ಗಿಧಿಷ್ಟಾತೃ ಪದವೆನಿ |
ಸುವ ತೋರದಡಗದ ಪಾರಮಾರ್ಥಿಕ ಸತ್ತೆ ||1||
ಈ ವಿಕೃತಿಗಳ ವಿಕ್ಷೇಪ ವೈದಿಪ ಮಾಯೆ |
ಯಾವ ರಣಗಳಿಂದೆ ತನಗಾಗಿಹ |
ಜೀವೇಶ ಕೂಟಸ್ಥ ಬ್ರಹ್ಮಾದಿಬಹುನಾಮ |
ಭಾವನೆಗಳ ತೋರುವ ಪರೋಕ್ಷಮಯ ಚಿತ್ತೆ ||2||
ನೆರೆ ವಿಷಯ ಬ್ರಹ್ಮವಾಸನೆ ಮುಖ್ಯಸು |
ಸ್ಥಿರ ನಿಜಾತ್ಮಾದ್ವೈತ ವಿದ್ಯೆವೆಂದು |
ಮೆರೆವಷ್ಟ ವಿಧದಿಂದೆ ಲೌಕಿಕಾಧ್ಯಾತ್ಮಂಗ |
ಳಿರವಾಗಿ ಹೊರಗೊಳಗಳಿಯದಾ ನಂದವೆ ||3||
ತೆರೆಯೊಳಗುರಿವ ದೀವಿಗೆಯಂತೆ ಕರಣಗ |
ಳ್ಮರದಂದುತಾನಿರ್ದು ತಿಳಿದಾಗಲು |
ಎರೆಯುವ ಪ್ರಾಗಾದ್ಯ ಭಾವಚತುಷ್ಟಯ |
ವೆರಸದ ನಿತ್ಯ ನಿರ್ಮಿಲ ಪರಂಜ್ಯೋತಿಯೋ ||4||
ಕಾಲಾದಿ ತ್ರಿಪರಿಚ್ಛೇದವ ಮೀರಿ ಬ್ರಹ್ಮಾಂಡ |
ಮಾಲಾ ಕೋಟಿಯೊಳೇಕ ಸೂತ್ರಮಾಗಿ |
ಮೂಲಮಾಯಾಧಿ ಕರಣವೆನಿಸುತೆ ವಿಶ್ವ |
ಲೀಲೆಗೊಂಬುವ ಪೂರ್ಣಮಯ ಗುರುಸಿದ್ಧನೆ ||5||

ಬ್ಯಾನೆ ಬಿಡುಗಡೆಯಾದುದೊ
ಬ್ಯಾನೆ ಬಿಡುಗಡೆಯಾದುದೊ ಜಾಣಗುರು ವೈದ್ಯನೆ |
ಬ್ಯಾನೆ ಬಿಡುಗಡೆಯಾದುದೊ ||ಪ||
ತಾಪತ್ರಯಾ ಜ್ವರದ | ತಾಪದೊಳ್ ಪಾಪದ |
ರೂಪದೋಷವು ಎನ್ನೊಳ್ ವ್ಯಾಪಿಸಲ್ ಭಯಪ್ರದ ||1||
ಆಸೆ ಎನ್ನುವ ದಾಹ | ಏಸು ವಿಷಯದಿಂದ |
ಲೇಶ ಶಾಂತಿಯಗೊಡದೆ | ಘಾಸಿ ಪಡಿಸುವಂಥಾ ||2||
ಆವರಣವೆಂಬ ಸನ್ನಿ | ಆವರಿಸಿ ಮತಿಗೆಡಿಸಿ |
ಜೀವ ಭಾವದಿ ಎನ್ನ | ಧಾವತಿ ಪಡಿಸುವ ||3||
ದೋಷದ್ವೈತದ ಪಥ್ಯ | ದೋಷವೆನ್ನೊಳು ಸೇರಿ |
ಏಸು ಕರ್ಮವಗೈಯಲ್ | ಶೇಷ ಹರಿಯದಂಥ ||4||
ಹೀನ ಸಂಸಾರದೊಳ್ | ನಾನು ಬಳಲುತಿರೆ |
ಮೌನಿಶ್ರೀನರಹರಿ ಜ್ಞಾನಸುಧೆಯ ನೀಡೆ ||5||
ಮಿಥ್ಯ ಮಾಯಾವಾದಿಗಳಿಗೆ ಎಂದೆಂದು ಸಿಗದು ||6||

ಪ್ರಾರಬ್ಧ ಕರ್ಮವಾಸನೆ
ಪ್ರಾರಬ್ಧ ಕರ್ಮವಾಸನೆಯೊಂದೆ ನಾಲ್ಕು |
ಪ್ರಕಾರವಾಗಿಹುದು ಜೀವನ್ಮುಕ್ತರ ||ಪ||
ಅರಿತ ಮೇಲೊಡಲು ವಿಡಿದು ಭೋಗದೊಳು ಮನ |
ವೆರಕವೆಂದೆನಿಸಿ ಪಶುವಿನಂದದಿ |
ಮೆರೆವಾತ್ಮನೊಳು ಪ್ರೀತಿ ಮಾತ್ರವೆ ಕರ್ಮ
ದೊಳುರಿವ ಸಂಸ್ಕಾರದ ತೀವ್ರವಿದು ||1||
ಭೋಗಕ್ಕೆ ಮುಖ್ಯತೆ ದೋರೆ ತಾನಾತ್ಮವಶ |
ನಾಗಿ ಬಾಲಕನಂತೆ ಬೋನದೋಳು |
ರಾಗಿಯನಿಸಿ ನಲಿದಾಡುತಿರಲು ಕರ್ಮ |
ವೇಗದೊಳಿದು ಮಧ್ಯದಿರಪಹುದು ||2||
ತೊಲಗಿ ಭೋಗವನು ಪರಾತ್ಮನೊಡನೆ ಮತಿ |
ನೆಲಿಸಿ ಸುರತ ಸುಖಿ ಮಿಥುನದಂತೆ |
ಸಲೆ ನಿಜಾನಂದದಿಂದಿರೆ ಕರ್ಮಗಂಧದ |
ಬಲದಿಂದೆ ಮೃದುವೆನುತಿಹರದನು ||3||
ನಿರುಪಮದ್ವಯ ನಿತ್ಯಪರಿಪೂರ್ಣ ಸುಖಭೋದ
ತುರ್ಯಾತ್ಮನಾಗಿ ನಿಂದನು ಗೆಡದೆ |
ಪರಮ ಮುಕ್ತನಂತೆ ಪದುಳಮಿರೆ ಕರ್ಮದ |
ವರಸುಪ್ತಭಾವನೆಯನಿಪುದು ||4||
ಇಂತು ಕರ್ಮದ ಭೇದವೆಂತು ಫಲಿಸುತಿಹು |
ದಂತೆ ಜ್ಞಾನಿಗಳಿಗೆ ಪಲವಂದದಿ |
ಸಂತಸದೊಳು ಶಂಭುಲಿಂಗವಾಗಿರೆ ಮೋಕ್ಷ |
ವಂತವರಿಗೆ ಸಮಾನವೆಯಹುದು ||5||

ಸಿರದೂಗುವ ತೆರದಿ
ಕೋಗಿಲೆ ತಾನೆ ಕೂಗುತಲಿದೇ |
ಯೋಗಿ ಜನರು ಸಿರದೂಗುವ ತೆರದಿ ||ಪ||
ರಾಗದಿ ತನುಮನ ತಾನೆಂದಿಹ ಪರ |
ಭೋಗ ಕೆಳಸಿಜೀವ ಭಾವದಿ ಬಳಲುತ |
ಮಾಗಿಯು ಪೋಗಲುಚಿನ್ಮಯ ರೂಪನೆ |
ಯಾಗಿಹನೆಂಬುವಸಂತವು ತೋರಲ್ ||1||
ಶರೀರವೆಂಬುವ ರಸಾಲ ತರುವಿನೋಳ್ |
ಅರುವೆನ್ನುವ ಎಳೆತಳಿರು ಮೆಲ್ಲುತಲಿ |
ಪರಿವನದಿತ್ರಯ ತೀರದ ಚೌಕದೋ
ಳಿರುತ ನಿತ್ಯಾನಂದ ಸುಖದಿ ಮೈಮರೆದು ||2||
ಮಾಣದೆ ಇನಶಶಿ ಚರಣವ ನೊತ್ತಿ |
ಜ್ಞಾನ ಕರ್ಮಗಳೆಂಬ ಪಕ್ಷಗಳೆತ್ತಿ |
ಸ್ವಾನುಭವಾಮೃತ ಸುರಿಸಿ ಕತ್ತೆತ್ತಿ |
ಆನಿರ್ಗುಣ ಚಿದ್ಗಗನಕೆ ಹತ್ತಿ ||3||
ಯಾರಿಗು ಸಿಲುಕದ ಏಕಾಕ್ಷರದಿ |
ಮೂರೊಳು ಮೂವತ್ತಾರು ರೂಪದಿ |
ಸಾರಮಾಗಿಹ ನಿಗಮಾಗಮ ಶಾಸ್ತ್ರ
ಕಾರದಿ ಸುಖವಸು ಧಾರೆಯೆರೆಯುತ ||4||
ಅರಿವುದೋರದ ಪಾಮರರ ನುದ್ಧರಿಸಲು |
ಶರೀರ ಧರಿಸಿ ಧರೆಗಿಳಿದೈ ತಂದು |
ಅರಿವು ದೋರಿದ ಪರವಸ್ತುವೆಯನ್ನು ವೋಲ್ |
ಯಸೆಯುವ ನರಹರಿ ಗುರುವೆಂದೆನುತಾ ||5||

ಎಂಜಲು ಬಲುಸವಿಯಣ್ಣಾ
ಎಂಜಲು ಬಲು ಸವಿಯಣ್ಣಾ | ಸವಿಯಣ್ಣಾ |
ಭವಭಂಜನೆಗೈವುದು ಇದು ನಿಜವಣ್ಣಾ ||ಪ||
ಅಂಬದೊಳಗಡಗಿಹುದು ಅಡಗಿಹುದು | ಆ
ಡಂಬರದಲಿ ಶಂಭು ಜಡೆಗಿಳಿಯುವುದು |
ಕುಂಭಿನಿಯಲ್ಲಿ ಕಾಣುವುದು | ಎಷ್ಟು
ಸಂಭ್ರಮದುಣಲು ಹೆಚ್ಚಾಗಿ ಮಿಕ್ಕಿಹುದು ||1||
ಆರನೆ ನೆಲೆಮೇಲಿಂದ ಕೋಳೆಕಂದ | ಅಗ್ನಿ
ಸೇರಿ ಪಕ್ವಾಯಿತು ನವರಸದಿಂದ |
ಸೋರುವದಮೃತದ ಬಿಂದಮದ
ನಾರಿಯೆ ಬಲ್ಲನದರ ನಿಜಾನಂದ ||2||
ಸುರಮುನಿಗಳು ಕೊಂಡಾಡುವರು-ಪಾಡುವರು |
ಹರಿ ಹರ ಬ್ರಹ್ಮಾದಿಗಳು ಕೈ ಚಾಚಿ ಬೇಡುವರು |
ಸರಿಯೆ ಶೇಷಾನ್ನಕೆಂಬುವರು | ಇದ
ನರಿತು ಸೇರಿಸುವರೆ ಧನ್ಯರಾಗಿಹರು ||3||
ಆಕಾಶದೊಳು ಮೂಲವಿಹುದು ನಿಜವಹುದು | ಅದರ
ಶಾಖೆ ಕವಲು ಪತ್ರ | ಭೂಮಿಗ್ಹಬ್ಬಿಹುದು |
ಆಕಾಶದೊಳು ಫಲಿಸುವುದು | ಅದು
ಲೋಕೇಶನೊಬ್ಬನೆ ಸ್ವೀಕರಿಸುವುದು ||4||
ಧರೆಯಿಂದ ಗಗನ ಸೇರುವುದುಸಾರುವುದು |
ಸೇರಿಮರುತಸುತನ ಕೆಣಕೆಣಕಿ ಎನಿಸುವದು |
ಸರಿಯುಂಟೆ ನಿನಗ್ಯಾರೆಂಬುವುದು | ಸಪ್ತ
ಮರುತರ ಪಡೆದ ಬ್ರಹ್ಮವೆ ನೀನೆನ್ನುವುದು ||5||
ಬಾಲಭಾಷೆಗಳಲ್ಲವಣ್ಣ-ಬಲುತಿಣ್ಣ | ವೃಥಾ
ಕಾಲಕಳೆಯಬ್ಯಾಡ ತಿಳಿಯೋ ಸಂಪನ್ನ |
ಶೂಲಧರನ ಸಾಕ್ಷಿಯಣ್ಣ | ಇದ
ಕೇಳದವನು ಭವಕೀಡಾಗ್ವನಣ್ಣ ||6||
ರಾಯ ದುರ್ಗದಿ ಮೆರೆಯುವುದುಸುರಿಯುವುದು |ಗುರು
ರಾಯ ಶ್ರೀ ನರಹರಿ ದಯದಿ ದೊರೆಯುವುದು |
ಆಯಬಲ್ಲರೊಳರಿಯುವುದು | ಮಿಥ್ಯ
ಮಾಯಾವಾದಿಗಳಿಗೆ ಎಂದೆಂದು ಸಿಗದು ||7||

Categories
Tatvapadagalu ಪರಮದೇವ ನರಹರಿ ಗುರು ಮತ್ತು ಇತರರ ತತ್ವಪದಗಳು

ಪರಮದೇವ ನರಹರಿ ಗುರು ಮತ್ತು ಇತರರ ತತ್ವಪದಗಳು

ನಿಮ್ಮಿಚ್ಛೆಏನೇನುಇಲ್ಲ
ನಿಮ್ಮಿಚ್ಛೆ ಏನೇನು ಇಲ್ಲ | ಎಲ್ಲಾ ಪರಮಾತ್ಮನಾಟ ||ಪ||
ಪಗಳಿರುಳಾದಿಂದಬಹುದು |
ರವಿ ಶಶಿ ದಿಗುವಿವರವ ಬೆಳಗುತಲುದಿಸುವರು |
ಗಗನ ಮಾರ್ಗದಿ ಮಳೆ ಬಹುದು |
ಜಗದುದರನಾಟದಿ ಸೃಷ್ಟಿ ಸ್ಥಿತಿಲಯವಹುದು ||1||
ಜ್ವಲಿಸಿ ತಾರೆಗಳುದಿಸುವುದು |
ಜಾಲದೊಳಗೆ ಮುಳುಗದಂತೆ ಇಳೆಯು ಇರುತಿಹುದು |
ಸುಳಿದು ಗಾಳಿಯು ಬೀಸುತಿಹುದು ಮೃತ್ಯು |
ಎಳೆದು ಹೊಸೆದು ಕಾಲಬಳಿ ಕೊಲ್ಲುತಿಹುದು ||2||
ನಿನ್ನಿಂದಲೇನಾಗುತಿಹುದು ನಾನು |
ನನ್ನದು ನಾನು ಮಾಡಿದೆನೆನ್ನುತಿಹುದು |
ತನ್ನ ತಾನಾಗಿ ಹೋಗುವುದು ಕೆಟ್ಟ |
ರೆನ್ನನು ಶಿವನು ಕೆಡಿಸಿದನೆನ್ನುತಿಹುದು ||3||
ಬಾಲ್ಯ ಯೌವನವು ತೋರುವುದು ನಿನ್ನ
ಸ್ಥೂಲ ಶರೀರದೊಳಗೆ ಮುಪ್ಪು ಬಹುದು |
ಕಾಲಕಾಲಕಾಗುವುದಾಗುತಿಹುದು ಅವಧಿ |
ಕಾಲ ತೀರಲು ತನಗೆ ತಾ ಲಯವಹುದು ||4||
ಎಳ್ಳಷ್ಟ ಮೀರದಂತಿಹುದು ಎಲೆ |
ಅಲ್ಲಾಡಲಾತನಾಜ್ಞೆಯಲಾಡುತಿಹುದು |
ನಿಲ್ಲ ದೋಡುವ ವಾಯುಸುತನ ಕೋಣೆಯ ಲಕ್ಷ್ಮೀ |
ನಲ್ಲನಪ್ಪಣೆಯ ಊಳಿಗ ಸಾಗುತಿಹುದು ||5||

ಏನ ಮಾಡಲಿ ಎನ್ನ ರೋಗಕೆ
ಏನ ಮಾಡಲಿ ಎನ್ನ ರೋಗಕೆ | ರಾಮ
ಧ್ಯಾನದಮೃತವುಂಡು ಪೋಗಬೇಕಲ್ಲದೆ ||ಪ||
ಗೂಡಿನೊಳಗೆ ಜರೆ ಮುತ್ತಿತು | ಅದಕೆ ಬಲ
ಗೂಡಿ ರೋಗವು ಮತ್ತೆ ಪುಟ್ಟಿತು |
ಕಾಡಿನೌಷಧಿಯ ಕೊಂಡು ತೀರಿತು |
ನಿತ್ಯ | ಮಾಡುವ ಜಪತಪ ನಿಂತಿತು ||1||
ಯಾರಾರೇನೆಂದುದೆಲ್ಲವ ಮಾಡಿತು |
ಅದು ಸಾರ ನಿಸ್ಸಾರವಾಗಿ ಹೋಯಿತು |
ಮಾರು ದೂರ ನಡೆಯೆ ಕಾಲು ಬತ್ತಿತು |
ಶರೀರದೊಳಗೆ ಕ್ಷೀಣವಾಯಿತು ||2||
ವಾಂತಿ ಭ್ರಾಂತಿಗಳೆರಡಾಯಿತು | ರೋಗ
ಶಾಂತಿಯಿಲ್ಲದೆ ಚಿಂತೆ ಬಂದಿತು |
ಮುಖದ ಕಾಂತಿ ಕಮಲ ಕಂದಿತು | ಕಾಲ
ಬಂತೊ ಎಂಬಂತೆ ಮನವಾಯಿತು ||3||
ಹಿಂದೆ ಮಾಡಿದ ಪಾಪ ಬಂದಿತು |
ಈಗ | ಳೊಂದುರುಪಾಗಿ ಎನ್ನ ಕಾಡಿತು |
ಎಂದು ಮನದಿ ಹಂಬಲವಾಯಿತು | ಇನ್ನು |
ಎಂದೆನೆಂದರೆ ದನಿ ಕುಂದಿತು ||4||
ಕಾಮನಯ್ಯನ ಚಿಂತೆ ಬಂದಿತು | ರೋಗ |
ನಾಮಸ್ಮರಣೆಯಿಂದ ಹೋಯಿತು |
ಕ್ಷೇಮ ಕುಶಲಕೆಲ್ಲಿ ಭೀಮನ | ಕೋಣೆ |
ಲಕ್ಷ್ಮೀರಮಣನಪ್ಪಣೆಯಿದ್ದಂತಾಯಿತು ||5||

ನಡೆವ ನಡತೆ ಕೆಟ್ಟಿತು
ಯಾವ ಮನುಜರೊಳಗು ನಡೆವ ನಡತೆ ಕೆಟ್ಟಿತು |
ಭಕ್ತಿಭಾವಗಳು ಸ್ವಲ್ಪ ಮಾತ್ರವಿಲ್ಲವಾಯಿತು ||ಪ||
ಗುರುಗಳಿವರು ಹಿರಿಯರಿವರು ಶರಣರೆಂದು
ತಾರತಮ್ಯದಿರವನರಿತು ಅರಿಯದಂತೆ ಸಿರಿಯ ಮದದಲಿ |
ಬೆರೆತುಕೊಂಡು ಸಾಧು ಜನರು ಬರಲು ಶುನಕನಂತೆ
ನೋಡಿ ಮರಳು ತಿಹರು ಏನನೆಂಬೆ ನೆಲವ ನೋಡದೆ ||1||
ನಿಟ್ಟಿಸದೆ ಸಾಧುಗಳನು ಪ್ರಾಯ ಮದದ ಹಮ್ಮಿನಿಂದ
ಭ್ರಷ್ಟ ಜನರು ಪುಣ್ಯ ಪಾಪಗಳನು ತಿಳಿಯದೆ |
ಅಷ್ಟದಿಕ್ಕು ತಮ್ಮದೆಂದು ಗರ್ವಗಿರಿಯನೇರಿ ತಾವೆ ಶ್ರೇಷ್ಠ
ರೆಂದು ತಮ್ಮ ತಾವೆ ಕೊಂದುಕೊಂಬರೋ ||2||
ನೂತನದಾಭರಣ ವಸ್ತ್ರ ಜಾತಿಯನ್ನು ಉಟುಕೊಟ್ಟು
ಪ್ರೀತಿಯಿಂದ ತಮ್ಮ ತಾವೆ ನೋಡಿ ಹಿಗ್ಗುತಾ |
ಧಾತು ತಪ್ಪಿ ನಡೆವ ಜನರ ವಾತಸುತನ ಕೋಣೆ
ಲಕ್ಷ್ಮೀನಾಥ ಬಲ್ಲ ನಮಗೆ ಅವರ ಮಾತಿನ್ನೇತಕೋ ||3||

ಇನ್ನೇತರೊಳಗಾಸೆ ಎನಗಿಲ್ಲವೋ
ಇನ್ನೇತರೊಳಗಾಸೆ ಎನಗಿಲ್ಲವೋ | ಈಗಳಿನ್ನು
ಹರಿನಾಮ ಸಂಕೀರ್ತನೆಯೊಂದು ಹೊರತಾಗಿ ||ಪ||
ನೋಡಿ ಸಾಕಾಯ್ತು ಲೋಕದ ಪ್ರಪಂಚವನು |
ಪೇ | ಚಾಡಿ ಸಾಕಾಯ್ತುದರಮಂ ಪೊರೆಯಲು |
ಆಡಿ ಸಾಕಾಯ್ತು ಸುಜನರೊಳನೃತಗಳನು | ಒಡ
ನಾಡಿ ಸಾಕಾಯ್ತು ಕುಜನರ ಸಂಗದೊಳಗೆ ||1||
ಉಂಡು ಸಾಕಾಯ್ತು ಸಂಸಾರ ಸುಖ ದುಃಖವನು |
ನಾ | ಕಂಡು ಸಾಕಾಯ್ತು ಸುಜನರ ಭಂಗವನು |
ತಂಡಿ ಸಾಕಾಯ್ತು ಪರಸೇವೆಯನು ಮಾಡಿ | ಜನ
ರಂಡಲೆದು ಬೇಡಿ ಸಾಕಾಯ್ತು ಈ ಭವಕೆ ||2||
ತಿರು ತಿರುಗಿ ಸಾಕಾಯ್ತು ತಲೆ ಹುಳಿತ ನಾಯಂತೆ |
ದಿನ | ಪರಿಪರಿಯ ದುಃಖಗಳನುಣ್ಣುತ |
ಚರಿಸಿದೆನು ಮರುತಸುತ ಕೋಣೆ ಲಕ್ಷ್ಮಜೀ | ರಮಣ
ಇರಿಸಿದಂತಿರಬೇಕು ಸಕಲ ಜನರು ||3||

ಇಂದಿನ ದಿನ ಸುದಿನ
ಇಂದಿನ ದಿನ ಸುದಿನ | ನಾಳೆಗೆಂದರೆ ಅದು ಕಠಿಣ |
ಮಂದಮತಿಯು ನೀ ನಾಗದೆ ಈಗ ಮುಕುಂದನ ನಾಮ
ಕೀರ್ತನೆಯ ಮಾಡುವುದಕೆ ||ಪ||
ಯೋಗಿಗಳೊಡನಾಡು | ವಿಷಯದ ಭೋಗವ ನೀಡಾಡು |
ಆಗಳು ಈಗಳು ಪೊಲೆಗೂಡಿನೊಳಗೆ ನಿನ್ನನೀ ತಿಳಿವುದಕೆ ||1||
ಅಸ್ಥಿರ ದೇಹವಿದು ನಾನಾವಸ್ಥೆ ಬಾಧಿಸುತಿಹುದು | ಕಸ್ತೂರಿ ರಂಗನ
ದಾಸರೊಡನೆ ಉದಯಾಸ್ತಮಾನವು ಬಿಡದೊಡನಾಡುವುದಕೆ ||2||
ಸಾಧು ಸಂಗತಿಯಿಂದ ಪಾಪ ವಿಚ್ಛೇದನವದರಿಂದ | ಸಾಧಿಸಲಹುದು
ಭೀಮನಕೋಣೆ ವಾಸ ಚಿದಾನಂದ ಲಕ್ಷ್ಮೀರಮಣನ ಪೂಜಿಸಲಿಕೆ ||3||

ಏನೇನಿಲ್ಲದ ಧನ ಹೀನನಿಗೆ ಹರಿ
ಏನೇನಿಲ್ಲದ ಧನ ಹೀನನಿಗೆ ಹರಿ ನಾಮವೆ ಭಾಗ್ಯಕರ |
ನೀನಿದನರಿತು ಜಪಿಸು ಬಿಡದನುದಿನ ಸಾಧಿಸು ಮುಕ್ತಿಕರ ||ಪ||
ಹಿಂದಣ ಜನ್ಮದೊಳಗೆ ದಾನ ಧರ್ಮಗಲನೊಂದನು ಮಾಡದಿರೆ |
ಇಂದಿನ ಜನ್ಮದೊಳಗೆ ದಾರಿದ್ರ್ಯವು ಬಂದು ಪೀಡಿಸುತಲಿದೆ |
ಮುಂದೆ ಸಾಧಿಸಿಕೊಂಬೆನೆಂದರೆ ಕೈಯೊಳೊಂದರೆ ಕಾಸಿಲ್ಲವು |
ನೊಂದೆನು ಭವ ಸಿಂಧುವಿನೊಳು ಮುಳುಗಿ ಮುಕುಂದ ಪಾಲಿಸೊ ಹರಿಯೇ ||1||
ದಟ್ಟ ದಾರಿರ್ದ್ಯದೊಳಗೆ ಹುಟ್ಟಿದೆನೆಂದು ಕುಟ್ಟಿಕೊಂಡರೆ ಪಣೆಯ |
ಕೊಟ್ಟು ನಡೆಸಿಕೊಂಬುವರಿಲ್ಲ ಮರುಳೆ ನಿನ್ನಿಷ್ಟವ ಮನದಣಿಯ |
ದಿಟ್ಟಿಸಿ ನೋಡಲು ಪೂರ್ವದೊಳಗೆ ಪಡೆದಷ್ಟುಣ್ಣಬೇಕಲ್ಲದೆ |
ಹುಟ್ಟಿದನಿತನುಂಡು ಇನ್ನಾದರು ಮನಮುಟ್ಟಿ ಪೂಜಿಸೋ ಹರಿಯ ||2||
ಸಾಕಾಯಿತು ಸಂಸಾರದೊಳಗೆ ಕ್ಷಣಮಾತ್ರವು ಸುಖವಿಲ್ಲ |
ಸಾಕು ನಿ ಪಡೆದುದನುಂಡು ಸುಖಿಸಿ ಜಗದೇಕ ವಂದ್ಯನ ನೆನೆಸು |
ಲೋಕದೊಳಧಿಕ ಭೀಮನಕೋಣೆ ಶ್ರೀ ಲಕ್ಷ್ಮೀಶನ ಭಜಿಸಿದರೆ |
ಬೇಕಾದನಿತುವನಿತ್ತು ಕಡೆಗೆ ತನ್ನ ಲೋಕವ ಪಾಲಿಪನು ||3||

ವ್ಯರ್ಥವಾದೆನಲ್ಲ
ವ್ಯರ್ಥವಾದೆನಲ್ಲ ನರಜನ್ಮದಿ ಜನಿಸಿ | ನಾ ವ್ಯರ್ಥವಾದೆನಲ್ಲ | ಮೃತ್ಯು ಮುನಿದು
ಎಳೆದೊಯ್ಯದ ಮುನ್ನ | ಪುರುಷೋತ್ತಮಾಚ್ಯುತ ನಂಘ್ರಿಯ ನೆನೆಯದೆ ||ಪ||
ಕೂಳಿನ ಬಲದಿಂದ ಬೆಳೆದಿಹ ಕಾಯದ ಮದದಿಂದ | ಖೂಳರೊಡನೆ
ಒಡನಾಡುತ ಯೌವನ ಕಾಲದ ಸಡಗರದಲಿ ದಿನಗಳೆದು ||1||
ಸತಿಸುತರೊಡನಾಡಿ ಮುಂದಣ ಗತಿಯನು ನೀಗಾಡಿ | ಅತಿಮದಗೊಬ್ಬಲಿ
ಸತತ ನಡೆದು ಪರಗತಿಯನು ಕೊಡುವ ಮುರಾರಿಯ ಭಜಿಸದೆ ||2||
ಪುಣ್ಯ ಕ್ಷೇತ್ರಗಳ ನಾ ಮೆಟ್ಟದೆ ಮೀಯದೆ ತೀರ್ಥಗಳ |
ಕಣ್ಣಿನಿಂದ ಹರಿ ಮೂರ್ತಿಯ ನೋಡಿ ನಾ ಪುಣ್ಯ ಪುರುಷರ ಸಂಗವ ಮಾಡದೆ ||3||
ಹರಿಶರಣರ ನಾ ನೋಡಿ ಎರಗದೆ ತುಚ್ಛತನವನೇ ಮಾಡಿ | ದುರುಳ
ತನದಿ ಹರಿಕಥೆಗಳ ಕೇಳದೆ ಹರಿಯ ಪೊಂದದೆ ಶ್ರೀ ಹರಿಯನರ್ಚಿಸದೆ ||4||
ಒಂದಿನ ಸುಖವಿಲ್ಲ ಕಾಲವು ಸಂದು ಹೋಯಿತಲ್ಲ | ಮುಂದೆ ನೀ
ಕರುಣಿಸೋ ಮರುತಸುತನ ಕೋಣೆ ಇಂದಿರೆರಮಣ ಮುಕುಂದ ಮುರಾರೇ ||5||

ನಿನ್ನ ಪಥಕೆ ಬಾರರೋ
ಯಾರು ಇದ್ದರೇನು ನಿನ್ನ ಪಥಕೆ ಬಾರರೋ | ಶ್ರೀ ಹರಿ
ಮುರಾರಿ ಎಂದು ಗತಿಯ ನೋಡಿಕೊಂಡಿರೋ ||ಪ||
ಹೊನ್ನು ಹಣವು ಚಿನ್ನ ಚಿಗುರು ಬಣ್ಣ ಬಂಗಾರವಿರಲು ಎನ್ನವರು
ತನ್ನವರು ಎಂದು ಬರುವರೋ | ಅನ್ನಕಿಲ್ಲದಿರಲು ಕೆಟ್ಟು ಅಲ್ಲಿ
ಪರಿವ ಕಾಲದಲ್ಲಿ ನಿನ್ನ ಕುಶಲ ವಾರ್ತೆಗಳನು ಮುನ್ನ ಕೇಳರೋ ||1||
ಇಂದು ಹಬ್ಬ ಹುಣ್ಣಿಮೆಂದು ಬಂಧು ಬಳಗವೆಲ್ಲ ನೆರೆದು |
ತಿಂದು ನಿನ್ನ ಹಿಂದೆ ಮುಂದೆ ತಿರುಗು ತಿಪ್ಪರೋ |
ಬಂದ ಬಹಳ ಭಾಗ್ಯವೆಲ್ಲ ಕುಂದಿ ಹೋದ ಕಾಲದಲ್ಲಿ
ಬಂಧು ಬಳಗವೆಲ್ಲ ನಿನ್ನ ಮನೆಯ ಮುಂದೆ ಸುಳಿಯರೋ ||2||
ಒಡವೆ ವಸ್ತು ಧನವು ಧಾನ್ಯ ಮನೆಯ ಒಳಗೆ ತುಂಬಿಯಿರಲು |
ಎಡದೆ ಬಿಡದೆ ನೆಂಟರಿಷ್ಟರೆಂದು ತಿಂಬರೋ | ವಡವೆ ವಸ್ತು
ನಷ್ಟವಾಗಿ ಬಡತನವು ಬಂದ ಬಳಿಕ ಬಿಡುವ
ಕೈಯ ನಿನ್ನನೊಂದ ನುಡಿಯ ನುಡಿಸರೋ ||3||
ಮಡದಿ ಮಕ್ಕಳೆಲ್ಲ ನಿನ್ನ ಒಡವೆ ಹುಟ್ಟಿದವರು ಸಹಿತ ಕಡು
ಮಮತೆಯಿಂದಲವರು ನೋಡಿ ನಡೆವರೋ | ಉಡಲು ತೊಡಲು
ಒಡಲಿಗಿಷ್ಟು ಕಡಿಮೆಯಾಗಿ ಕೆಡುತ ಬರಲು ಒಡೆದು ಪಾಲ ಮಾಡು
ಎಂದು ಹೊಡೆದುಕೊಂಬರೋ ||4||
ಮೃತ್ಯು ನಿನ್ನ ಹತ್ತಿರಿದ್ದು ಹೊತ್ತು ವೇಳೆ ನೋಡುತಿಹುದು |
ವ್ಯರ್ಥವಾಗಿ ಇವರ ನಂಬಿ ಕತ್ತೆ ಕೆಡದಿರೋ | ಸತ್ತು ಹುಟ್ಟಿ
ಸಾಯಬೇಡ ಚಿತ್ತದಲ್ಲಿ ಭೀಮನಕೋಣೆಗೊತ್ತಿಲಿದ್ದ
ಲಕ್ಷ್ಮೀಪತಿಯ ಒತ್ತಿ ಭಜಿಸಿರೋ ||5||

ಏನು ಇದ್ದರೇನು
ಏನು ಇದ್ದರೇನು ನಿನ್ನ ಸಂಗಡ ಬಾರದೇನು |
ದಾನಧರ್ಮವ ಮಾಡಿದ್ದೊಂದು ಬೆನ್ನ ಬಿಡದದೇನು ||ಪ||
ಆಳುಕಾಳು ಮಂದಿ ಮನುಷರು ಬಹಳವಿದ್ದರೇನು |
ಮಾಳಿಗೆ ಕೈಸಾಲೆ ಚಂದ್ರಶಾಲೆಯಿದ್ದರೇನು |
ನೀಲ ಮುತ್ತು ಕೆಂಪಿನುಂಗುರ ಕೈಯಲಿದ್ದರೇನು |
ಕಾಲನವರು ಎಳೆಯುತಿರಲು ನಾಲಗೆಗೆ ಬಾರದೇನು ||1||
ನೆಟ್ಟ ಹಿತ್ತಲು ತೋಟ ತೆಂಗು ಎಷ್ಟು ತಾನಿದ್ದರೇನು |
ಹಟ್ಟಿಯೊಳಗೆ ಹಸುವು ಮಹಿಷಿ ಸಾವಿರವಿದ್ದರೇನು |
ಪಟ್ಟೆ ಶಾಲು ಚಿನ್ನದ ಕುಲದ ಘಟ್ಟಿಯಿದ್ದರೇನು |
ಕಟ್ಟಿಯಿಟ್ಟ ಗಂಟು ನಿನ್ನ ಸಂಗಡ ಬಾರದೇನು ||2||
ಲಕ್ಷವಿತ್ತ ಜಯಿಸಿ ರಾಜ್ಯ ಪಟ್ಟವಾದರೇನು |
ಕಟ್ಟಿದಾನೆ ಮಂದಿ ಕುದುರೆ ಹತ್ತಿರಿದ್ದರೇನು |
ನೆಟ್ಟನೆ ಜೀವಾತ್ಮಗೂಡ ಬಿಟ್ಟು ಪೋಗದೇನು |
ಕುಟ್ಟಿಕೊಂಡಳುವುದಕ್ಕೆ ಮಂದಿ ಎಷ್ಟು ಇದ್ದರೇನು ||3||
ಮಕ್ಕಳು ಮೊಮ್ಮಕ್ಕಳು ಹೆಮ್ಮಕ್ಕಳಿದ್ದರೇನು |
ಚಿಕ್ಕ ಪ್ರಾಯದ ಸತಿಯು ಸೊಸೆದಿಕ್ಕಳಿದ್ದರೇನು |
ಲೆಕ್ಕವಿಲ್ಲದ ದ್ರವ್ಯ ನಿನಗೆ ಸಿಕ್ಕುಯಿದ್ದರೇನು |
ಡೊಕ್ಕೆ ಬೀಳೆ ಹೆಣವ ಬೆಂಕಿ ಗಿಕ್ಕಿ ಬರುವರೋ ||4||
ಹೀಗೆ ಎಂದು ನೀನು ನಿನ್ನ ತಿಳಿದುಕೊಳ್ಳಬೇಕೋ |
ಆಗೋದ್ಹೋಗೋದೆಲ್ಲ ಈಶ್ವರಾಜ್ಞೆ ಎನ್ನಬೇಕೋ |
ಮಾಗಧ ವೈರಿ ಕೋಣೆ ಲಕ್ಷ್ಮೀರಮಣನ ಭಜಿಸಬೇಕೋ |
ಯೋಗ ಮಾರ್ಗದಿಂದ ನೀನು ಮುಕ್ತಿ ಪಡೆಯಬೇಕೋ ||5||

ನೀ ಪಡೆಯದ ಮೇಲೆ
ಏನು ಮಾಡಿದರಿಲ್ಲವೋ ನೀ ಪಡೆಯದ ಮೇಲೆನ್ನೇನ ಮಾಡಿದರಿಲ್ಲವೋ ||ಪ||
ಆಸೆ ಮಾಡಿದರಿಲ್ಲ | ದೇಶ ತಿರುಗಿದರಿಲ್ಲ |
ಈ ಶರೀರವ ದಣಿಸಿ ಘಾಸಿ ಮಾಡಿದರಿಲ್ಲ ||1||
ಮೊಟ್ಟೆಯನು ಹೊತ್ತರಿಲ್ಲ | ಕಷ್ಟ ಮಾಡಿದರಿಲ್ಲ |
ಘಟ್ಟ ಬೆಟ್ಟವ ಹತ್ತಿ ಕುಟ್ಟಿಕೊಂಡರು ಇಲ್ಲ ||2||
ಟೊಂಕ ಕಟ್ಟಿದರಿಲ್ಲ | ಲಂಕೆಗೆ ಹೋದರು ಇಲ್ಲ |
ಬೆಂಕಿ ಬಿಸಿಲೊಳು ತಿರುಗಿ | ಮಂಕು ಮರುಳಾದರಿಲ್ಲ ||3||
ಊರ ನೀ ಬಿಟ್ಟರಿಲ್ಲ | ಪರ ಊರಿಗೆ ಹೋದರಿಲ್ಲ |
ಆರಿಗ್ಹೇಳಿದರಿಲ್ಲವಾರ ಸೇರಿದರಿಲ್ಲ ||4||
ವಾತಸುತನ ಕೋಣೆ ವಾಸ ಲಕ್ಷ್ಮೀಶನು |
ಆತ ಕೊಟ್ಟರೆ ಉಂಟು ಆತ ಕೊಡದರಿಲ್ಲ ||5||

ಕೆಟ್ಟಿತು ಕಾಲ ಗತಿಯ
ಕೆಟ್ಟಿತು ಕಾಲ ಗತಿಯ ದುರ್ಜನರಟ್ಟಳಿಯಲಿ ಜಗತಿ ಹೊಟ್ಟು ಬೇವಂದದಿ
ಬೇಯುತಲಿದೆ ವರ್ಮ ಬಿಟ್ಟು ಕೆಡಿಸುವರು ಸಾಧು ಸಜ್ಜನರ ||ಪ||
ಊರು ಕೇರಿಕೇರಿಗಳೊಳಗೆ ಒಳಿತುಣಲಾರು ಸೈರಿಸದಿಹರು |
ಕ್ರೂರ ಜನರು ಕೂಡಿ ಕೆಡಿಸುವ ಬಗೆಯ ವಿಚಾರವನೆಣಿಸುತಹರು ದುರ್ಜನರು ||1||
ಒಳಗು ಹೊರಗು ಹುಳುಕನರಸುತ ಕಾಣದೆ ಕಳವಳಿಸಿ | ಒಳಗೆ ಕದಿನಿ
ಉಂಟೆನುತ ಚಾಡಿಯನಾಡಿ ತಿಳಿಯದಂದದಿ ಮುದಿಗೂಬೆಯಂತಿಹರು ||2||
ಮನ ಮುನಿಸುಗಳಿಂದ ಸಜ್ಜನರನು ಧನಿಗಳ ಮುಖದಿಂದ ತನು ಬಿರಿಯಲು
ಕೊಲಿಸುವ ಬಗೆಯನು | ವಾಯುಸುತನ ಕೋಣೆಯ ಲಕ್ಷ್ಮೀರಮಣನೆ ಬಲ್ಲ ||3||

ಸುಮ್ಮನೆ ದಿನವನು ಕಳೆಯದೆ
ಸುಮ್ಮನೆ ದಿನವನು ಕಳೆಯದೆ ನೀ ಪರಬೊಮ್ಮನ ಧ್ಯಾನಿಸು ಕಂಡ್ಯಾ |
ಹಮ್ಮನುಳಿದು ನಿರಹಂ ಮಮತೆಯಲಿ ಸೋಹಂ ಎನುತಿರು ಕಂಡ್ಯಾ ||ಪ||
ಬಂದ ಜನ್ಮಕೆ ಸಾಕಾಯಿತು ಸುಡು ಸುಡು ಒಂದು ನಿಮಿಷ ಸುಖವಿಲ್ಲ |
ಸಂದಿತು ವಿಧಿ ಬರೆಯದಾಯುಷ ತನು ಬಲಗುಂದಿತು ದಿನದಿನಕೆಲ್ಲ |
ಬಂದುದೆ ಹೊತ್ತು ಯಮನಾಳಳು ಏಳೇಳೆಂದು ಎಳೆವರಲ್ಲ |
ಮುಂದೇನು ಗತಿಯೋ ನಾನರಿಯೆನು ಇದನು ಗೋವಿಂದನೆ ತಾ ಬಲ್ಲ ||1||
ಹೀನವಿದುತ್ತಮವಿದೆನ್ನದೆ ನಾನಾ ಯೋನಿಯೊಳಗೆ ಜನಿಸಿ |
ನಾನದನೆಲ್ಲವನುಳಿದು ಈಗಳು ನರ ಮಾನವನೆಂದೆನಿಸಿ |
ಏನೋ ಪುಣ್ಯದಿ ಪುಟ್ಟಿದೆನಿಲ್ಲಿ ನಿಧಾನದಿ ಸಂಚರಿಸಿ |
ಧ್ಯಾನಿಸು ನೀ ಪರಮಾತ್ಮ ಸ್ವರೂಪನ ಆನಂದಮಯನೆನಿಸಿ ||2||
ಎಲ್ಲಾ ಜನ್ಮದೊಳ್ಳಿತು ನೀನಿದರಲ್ಲಿ ಸಾಧಿಸು ಗತಿಯಾ |
ಹೊಲ್ಲದ ತನುವಿದ ನಂಬಿ ನೀ ಕೆಡದಿರು ಪೊಳ್ಳೆ ನಿನಗೆ ತಿಳಿಯ |
ಬಲ್ಲಡೆ ಜಿಹ್ವೆಯೊಳಗೆ ನೀ ನಿರಂತರ ಸೊಲ್ಲಿಸು ಶ್ರೀ ಹರಿಯ |
ಮೆಲ್ಲನೆ ಭಜಿಸಿ ವಾಯುಜನನ ಕೋಣೆಯ ಲಕ್ಷ್ಮೀನಲ್ಲನ ಪೋಗು ಮರೆಯ ||3||

ಮರುಳಾಟವೆನಗಿನ್ನು ಕಾಶಿ
ಮರುಳಾಟವೆನಗಿನ್ನು ಕಾಶಿ | ಸುಮ್ಮನಿರುವುದೊಳ್ಳಿತು ಮನೆಯಲಿ ಸುಖವಾಸಿ ||ಪ||
ಕೈಯೊಳರ್ಥವು ಮೊದಲಿಲ್ಲ | ಹಾಗಾದರು |
ಮೈಯೊಳಗೇನೇನು ಗುಣ ಕಾಂಬುದಿಲ್ಲ |
ಧೈರ್ಯಲಕ್ಷ್ಮೀಯು ತುದಿಗಿಲ್ಲ |
ಪರರ ಕೈಯ ಬೇಡಲು ಕಾಣೆ ಕೊಡುವವರಿಲ್ಲ ||1||
ಹೊಳೆ ಕೆರೆ ಬಾವಿಯಿದ್ದಲ್ಲಿ | ಭಗೀರಥಿ |
ನೆಲೆಸಿ ಕೊಂಡಿಹಳಿಲ್ಲಿ |
ಮುಳುಗಿ ಮಿಂದರೆ ಭಕ್ತಿಯಲ್ಲಿ |
ಕಾಶಿಯೊಳಗೆ ಗಂಗೆಯ ಮಿಂದ ಫಲ ಬಹುದಿಲ್ಲಿ ||2||
ಜ್ಞಾನವಿಲ್ಲದೆ ಮೋಕ್ಷವಿಲ್ಲ | ಮುಕ್ತಿ |
ಮಾನಿನಿಯನು ಕೂಡಿ ಸುಖಿಸಲು ಬಲ್ಲ |
ಜ್ಞಾನಿಗಳಿಗೆ ತೋರ್ಪುದೆಲ್ಲ |
ಹರಿಸೂನು ಕೋಣೆಯ ಲಕ್ಷ್ಮೀರಮಣ ತಾನೆಲ್ಲ ||3||

ಏನಿದು ಬರಿ ಮಾಯೆ
ಏನಿದು ಬರಿ ಮಾಯೆ | ತೋರ್ಪುದಿದೆಲ್ಲವು ಪುಸಿ ಮಾಯೆ |
ಮಾನಿನಿ ಮನೆ ಮನೆ ವಾರ್ತೆ ಮಕ್ಕಳು |
ತಾನಿದು ಕನಸಿನ ಬಾಳ್ವೆ ನಿಧಾನ ||ಪ||
ಕೇರೆಯ ನುಂಗಿದ ಓತಿ ಕೊಸರುತಿರಲು ತೆರೆಯಿತೆನಗೆ ಕಣ್ಣು |
ವಾರೆ ಮಾಡಿದರದು ತಿಳಿವುದೋ ಉಳಿವುದೋ
ತೆರೆಯ ಕ್ಷುಧೆ ಗೇನು ಕಾಣೆನು ಗತಿಯ ||1||
ಯಾವಾವ ತನುವಿಡಿದು ಬರುವುದೋ ಅವಾವ ಠಾವಿನಲಿ |
ಜೀವ ಜೀವವ ತಿಂದು ಜೀವಿಸಿಕೊಂಡು ಸಾಯುತ
ಜನಿಸುತಲಿರುವುದು ಪ್ರಾಣಿ ||2||
ತಿಳಿಯಲೊಂದಕೆ ಒಂದು ತಿನಿಸಿಗೆ ಬೆಲೆ ಮಾಡಿದವ ಬೇರೆ |
ಒಳಗು ಹೊರಗು ತಾನೆ ಬೆಳಗುತಲಿರುವನು
ಚಲನಭವನ ಕೋಣೆ ಲಕ್ಷ್ಮೀರಮಣ ||3||

ಏನಾದರೇನಿಲ್ಲಿ ಇರಕೂಡದು
ಏನಾದರೇನಿಲ್ಲಿ ಇರಕೂಡದು | ಹೋಗಿ |
ಆನಂದ ಕಾನನದೊಳಿರೆ ಸುಖವದು ||ಪ||
ನರ ಮನುಜರೊಳಗಿಲ್ಲಿ ಜನಿಸಿ ಭೂತಳಕೆಲ್ಲ
ದೊರೆಯೆನಿಸಿ ಭೋಗಪಡಿಸುವುದರಿಂದಲು |
ನೊರಜಾಗಿ ಜನಿಸಿ ಕಾಶಿಯೊಳು ಮಣಿ ಕರ್ಣಿಕೆಯ
ಸರಸಿಯಲಿ ಚರಿಸಿ ಮಡಿದರೆ ಮುಕ್ತಿಯಹುದು ||1||
ರೊಕ್ಕದಲಿ ವನಿತೆ ಮನೆ ಮಕ್ಕಳಲಿ ಪಶುಗಳಲಿ ಹೆಕ್ಕಳದೊಳಿಲ್ಲಿ
ಸಾವುದರಿಂದಲು | ಹೊಕ್ಕು ಮನೆ ಮನೆ ಬಿಡದೆ ಕಾಶಿಯಲಿ
ತಿರಿದುಂಡು ಡೊಕ್ಕೆಯನು ಬಿಡೆ ಮೋಕ್ಷ ಪದವಿಯಹುದು ||2||
ಹರಿಸುತನ ಕೋಣೆಲಕ್ಷ್ಮಿಪತಿಯ ಪಾದ ಸರಸಿರುಹದಲಿ
ಜನಿಸಿರ್ದ ಜಾಹ್ನವಿಯಲಿ | ನರೆ ಮುಳುಗಿ ಕಾಶಿ
ವಿಶ್ವೇಶ್ವರನ ಸನ್ನಿಧಿಯೊಳೊರಗಿದರೆ ಮರಳಿ ಜನ್ಮಕೆ ಬಾರೆನೋ ||3||

ಯೋಗಿಯಾಗಬೇಕು
ಯೋಗಿಯಾಗಬೇಕು | ಅಲ್ಲವೇ | ಭೋಗಿಯಾಗಬೇಕು |
ಯೋಗಿ ಭೋಗಿಯಾಗದ ಮನುಜನಾಗಿ ನೀ ಪೋಗಬೇಕು ||ಪ||
ತನ್ನ ತಾನು ತಿಳಿದು ಆತ್ಮಜ್ಞಾನಿಯಾಗಬೇಕು |
ಅನ್ನವಸ್ತ್ರಗಳನು ಚಾತುರ್ವಣಕೀಯ ಬೇಕು |
ತನ್ನದೆಂಬ ಮಮತೆಯನ್ನು ಬಿಟ್ಟು ಚರಿಸಬೇಕು |
ಭಿನ್ನಭಾವ ವಳಿದು ಏಕೋ ದೇವನಾಗಬೇಕು ||1||
ದಾನ ಧರ್ಮಗಳನು ಸತ್ಪಾತ್ರಗೀಯಬೇಕು |
ನಾನಾ ಜೀವ ಜಂತುಗಳಲಿ ಪ್ರೇಮವಿರಲುಬೇಕು | ತಾನು
ತಾನೆಯಾಗಿ ಹರಿಯ ಧ್ಯಾನಿಸುತಿರಲುಬೇಕು |
ಭಾನುಸುತನ ಕೈಗೆ ಸಿಕ್ಕದಂತೆ ಇರಲು ಬೇಕು ||2||
ಅರುಣನುದಯದಲ್ಲಿ ನಿತ್ಯ ಕರ್ಮವ ಮಾಡಬೇಕು |
ಕರುಣದಿಂದ ದೀನ ಜನರ ನಿರುತ ಪೊರೆಯಬೇಕು |
ಗುರುಗಳಲ್ಲಿ ಹಿರಿದು ವಿಶ್ವಾಸವಿರಲು ಬೇಕು |
ಮರುತ ಸುತನ ಕೋಣೆ ಲಕ್ಷ್ಮೀರಮಣನ ಕೂಡಬೇಕು ||3||

ಕೆಟ್ಟು ಹೋಯಿತು
ಕೆಟ್ಟು ಹೋಯಿತು ಪ್ರಜೆಗಳು ಎಲ್ಲಾ |
ಬಾಯ ಬಿಟ್ಟುಪಾಯವ ಹೇಳುವರಿಲ್ಲ ||ಪ||
ಸುಳ್ಳು ಹೇಳಲು ಹೆದರುವುದಿಲ್ಲ ಪೊಳ್ಳಾಗಿ ಹಲ್ಲ ಬಿಡುವರು ಎಲ್ಲ |
ಕಲ್ಲೆದೆಯರು ಕರೆಸಿದರೆಲ್ಲ ಚಿನ್ನ ಬೆಳ್ಳಿ ತಾಮ್ರಗಳ ಮಾರಿದರೆಲ್ಲ ||1||
ಹೆಚ್ಚು ಮಟ್ಟಿಗೆ ತೇರುಗಳಿಂದ ಒಳ್ಳೆ ಚೊಚ್ಚಲಾಕಳು ಎಮ್ಮೆಗಳಿಂದ|
ಹೆಚ್ಚಿನಾಭರಣ ಬಣ್ಣಗಳಿಂದ ಕೊಟ್ಟು ನಿಶ್ಚಲವಾಯಿತು ಕೋರಡೆಯಿಂದ ||2||
ತಿಂಬೆವೆಂದರೆ ಅನ್ನಕೆ ಇಲ್ಲ ಮುಂದೆ ನಂಬಿ ಕೊಡುವೆನೆಂಬುವರಿಲ್ಲ |
ಡಿಂಬವಿದೇಕೆ ಬೀಳುವುದಿಲ್ಲ ಎಂದೆಂಬರು ಚಿಕ್ಕ ದೊಡ್ಡವರೆಲ್ಲ ||3||
ಸರಕಿನ ಮಾರು ಮಾರ್ಗವು ಕೆಟ್ಟು | ಮೆಣಸಿನ |
ಸೆರೆಯ ಮಾರಲಿಕಿಲ್ಲದೆ ಕೆಟ್ಟು | ಮತ್ತರ ಮನೆಗದರ ತುಟ್ಟಿಯ ಕೊಟ್ಟು
ಪ್ರಜೆ ಬಾಯಿ ಬಿಡುತಿದೆ ಬಾಯನು ಬಿಟ್ಟು ||4||
ನರ ಗುರಿಯಾಯ್ತ ಪ್ರಜೆಗಳು ಎಲ್ಲ | ದೊರೆಗಳಿಗೆಳ್ಳಷ್ಟು ಕರುಣವದಿಲ್ಲ |
ಇನ್ನಿರುವ ಬಗೆಯ ಕಾಣುವುದಿಲ್ಲ | ಮುಂದೆ |
ಹರಿಸೂನು ಕೋಣೆ ಲಕ್ಷ್ಮೀಶನ ಬಲ್ಲ ||5||

ಯಾರಿಗೆ ಹೇಳೋಣ
ಯಾರಿಗೆ ಹೇಳೋಣ ಪ್ರಜೆ ಕೆಟ್ಟು ಹೋದುದಿನ್ಯಾರಿಗೆ ಹೇಳೋಣ |
ಊರಿದ ಬೇಲಿಯ ಕೋಲುಗಳೆದ್ದು ಹೊಲ ಮೆದ್ದರಾರಿಗೆ ಹೇಳೋಣ ||ಪ||
ಎದ್ದನು ದುರ್ಜನ ಬಿದ್ದ ಬಿನುಗು ಪ್ರಜೆ
ಉದ್ದಗುದ್ದಗಳೆಲ್ಲ ಸಮನಾಯಿತು |
ಇದ್ದ ಹೆಣ್ಮಕ್ಕಳ ಮೈಮೇಲಕೆ ಒಂದು
ಉದ್ದಿನ ಕಾಳಷ್ಟು ಚಿನ್ನಗಳಿಲ್ಲ ||1||
ಕಂಚುತಾಮ್ರವು ಮಾರಿ ಹೋಯಿತು
ಕೊಂಚ ತಣ್ಣೀರ ಕೊಳ್ಳಲಿಕಿಲ್ಲ |
ಸಂಚಕಾರವು ಪ್ರಾಣಕಾಯಿತು | ನಾವಿನ್ನು
ಪಂಚತ್ವವನ್ನೈದಿದರೊಳ್ಳಿತು ಎಂಬರು ||2||
ಭೂರಿ ಹೇಮರಜತಗಳ ಮಾರಿಯಾಯಿತು |
ಭಾರಿ ತೆರಿಗೆ ಶ್ರಮ ಸೀಮೆ ಪ್ರಜೆಗಳಿಗಾಯ್ತು |
ಭೀಮನಕೋಣೆ ಲಕ್ಷ್ಮೀರಮಣನ ನಂಬಿ ಭಿಕ್ಷೆಗೆ ಮನವ ತಾಳಿರಣ್ಣ ||3||

ಇವರಿಂದಲೆ ಕೆಟ್ಟಿತು ಜಗವು
ಇವರಿಂದಲೆ ಕೆಟ್ಟಿತು ಜಗವು |
ಇವರರುವರ ಹಿಡಿದು ಬಂಧಿಸಿ ನೀವು ಬೇಗ ||ಪ||
ಬಿಮ್ಮನೆ ಬಿಗಿದು ಕಾಮನ ಕಟ್ಟಿ ಅವನ
ತಮ್ಮನ ಹಿಡಿದು ತಲೆಯ ಕುಟ್ಟಿ |
ಸುಮ್ಮನೆ ಲೋಭವನ ಕೈಕೆಟ್ಟಿ ಗುಮ್ಮಿ
ಜುಮ್ಮನೆ ಮೋಹನ ದವಡೆಗೆ ತಟ್ಟಿ ||1||
ದಂಡಿಸಿರೈ ಮದವೆಂಬುವನ ತಲೆಯ |
ಚಂಡ ಹಾರಿಸಿ ಮತ್ತೆ ತುಡಿಗೆ ಮತ್ಸರನ |
ಮಂಡೆ ಮಂಡೆಗೆ ತಟ್ಟಿರಿ ಇವರ | ಬಿಡದೆ
ಹೆಂಡಿರು ಮಕ್ಕಳ ಸೆರೆಯೊಳಗಿಕ್ಕಿ ||2||
ಅರಿಗಳನರುವರ ಜಯಿಸಿ ಸದ್ಗುರುವಿನ
ಕರುಣ ಕಟಾಕ್ಷವ ಧರಿಸಿ | ಪರಮಾತ್ಮ
ಪರಿಪೂರ್ಣನೆನಿಸಿ | ಹರಿಸೂನು ಕೋಣೆ ಲಕ್ಷ್ಮೀಶನ ಸ್ಮರಿಸಿ ||3||

ಯಾರಿಗಾದರು ಬಿಡದು
ಯಾರಿಗಾದರು ಬಿಡದು ಪೂರ್ವಾರ್ಜಿತ | ಬೆನ್ನ |
ಸಾರಿಹುದು ಭವಭವದೊಳದು ಕಾಡುತ ||ಪ||
ಇಂದ್ರ ದೊಡ್ಡವನೆಂದರವಗೆ ಮೈ ಕಣ್ಣೆಲ್ಲ | ಚಂದ್ರ
ದೊಡ್ಡವನೆನಲು ಹೆಚ್ಚು ಕುಂದು | ಇಂದ್ರಜಾಲೆಯು ಲಕ್ಷ್ಮೀದೇವಿ
ದೊಡ್ಡವಳೆನಲು ಮಹೇಂದ್ರ ಜಾಲೆಯು ಒಂದು ಕಡೆ ನಿಲ್ಲಳು ||1||
ಸರಸಿರುಹಭವ ದೊಡ್ಡನೆನಲು ನಡು ತಲೆಯಿಲ್ಲ | ತರಣಿ
ದೊಡ್ಡವನೆನಲು ಸಂಚಾರವು | ಉರಿಯು ದೊಡ್ಡವನೆನಲು ಮೈಯೆಲ್ಲ
ಧೂಮಮಯ | ಉರಗ ಮಿಗಿಲೆನೆ ಶಿರದಿ ಪೊತ್ತ ಭಾರ ||2||
ಮೇರು ದೊಡ್ಡವನೆನಲು ಏಳಲಿ ಬಗೆಯಿಲ್ಲ |
ವಾರಿಧಿಯು ದೊಡ್ಡಿತೆನೆ ಪಾನಕಿಲ್ಲ |
ಮಾರುತಾತ್ಮಜ ಕೋಣೆ ವಾಸ ಲಕ್ಷ್ಮೀರಮಣ ಯಾರಿಗೂ
ಸ್ವತಂತ್ರವನು ಕೊಟ್ಟುದಿಲ್ಲ ||3||

ದಂಡು ಬರುತಿದೆ
ದಂಡು ಬರುತಿದೆ ಆರೇರ ದಂಡು ಬರುತಿದೆ |
ದಂಡಿನೊಳಗೆ ಸಿಕ್ಕಿ ಸೋಲಿಸಿಕೊಂಡು ಬಂದೆವು ನಾಲ್ಕು ಮಂದಿ ||ಪ||
ಅಮ್ಮ ಲಿಮ್ಮಿ ಬೊಮ್ಮಿ ನಾನು
ಸುಮ್ಮನೊಂದು ಮರೆಯಲಿರಲು |
ಜುಮ್ಮನವರು ಬಂದು ಹಿಡಿದು ಗುಮ್ಮಿ ಹೋದರು ನಮ್ಮನೆಲ್ಲ ||1||
ಅತ್ತೆ ಮಾವ ಮೈದುನರು ಎತ್ತ ಹೋದರೋ ಕಣ್ಣಲಿ ಕಾಣೆ |
ಕತ್ತೆ ಹೆಣ್ಣೆ ಹೋಗು ಎಂದು ಬತ್ತಲೆ ಬಿಟ್ಟರು ಎನ್ನ ||2||
ದಿಂಡ್ಯ ದಿಂಡ್ಯ ಜವ್ವನೆಯರು ಕಂಡ ಕಡೆಗೆ ಹೋಗಿ ಬೇಗ |
ದಂಡಿನವಗೆ ಸಿಕ್ಕಿ ಕೆಟ್ಟುಕೊಂಡು ಬಾಳ್ವುದೊಳ್ಳಿತಲ್ಲ ||3||
ರಂಡೆ ಮುಂಡೆರೆಂದವರು ಬಿಡರು |
ಕಂಡ ಮಾತ ಹೇಳುತೇನೆ |
ಪೆಂಡಾರರಿಗೆ ಸಿಕ್ಕು ಕೆಟ್ಟು ಗಂಡುಕೂಸು ಪಡೆಯದಿರಿ ||4||
ಮಾನವುಳ್ಳ ಹೆಣ್ಮಕ್ಕಳು ನಾನು ಪೇಳ್ವ ಮಾತ ಕೇಳಿ |
ತಾನೆ ಸೇರಿ ಲಕ್ಷ್ಮೀರಮಣ ಧ್ಯಾನವನ್ನು ಮಾಡು ಕಂಡ್ಯಾ ||5||

ಯಾವ ಊರು ಎನ್ನಲಯ್ಯ
ಯಾವ ಊರು ಎನ್ನಲಯ್ಯ | ಎನಗಿನ್ನು |
ಯಾವ ಊರು ಎನ್ನಲಯ್ಯ ||ಪ||
ಈ ಜಗತ್ತಿನೊಳಧಿಕ ಸಂಸಾರವೆಂಬ ಸಾಗರನಗರದೊಳು |
ಮೂಜಗವನು ಸೃಜಿಸಿದನೊಂದು ಮನೆಮಾಡಿ ನೀನಿಲ್ಲಿ ಇರು ಎಂದನು ||1||
ಸೊಕ್ಕಿದಾನೆಗಳು ಎಂಟು ಈ ಮನೆಯ ಹೊಕ್ಕು ಬಾಧಿಸುತಿಹವು |
ಮಿಕ್ಕ ವೈರಿಗಳಾರು ಮಂದಿ ಊರೊಳು ಪೊಕ್ಕು ಸುಲಿಯುತಿಹರು ||2||
ಕಳಭಂಟರೈದು ಮಂದಿ ಈ ಊರೊಳು ಬಹುಳುಪದ್ರಿಸುತಿಹರು ||
ಖುಲ್ಲ ಮನ್ಮಥನುಪಟಳಕೆ ನಾ ನೆರೆ ಸಿಕ್ಕಿ ಜಳ್ಳಿನಂತಾದೆನಯ್ಯ ||3||
ಇಷ್ಟು ಸಂಕಟ ತಾಳದೆ ಈ ಊರು ಬಿಟ್ಟು ಪೋಗುವೆನೆಂದರೆ |
ಘಟ್ಯಾಗಿ ಬಿಗಿದು ಕಟ್ಟಿದ ಮಾಯೆ ಹುರಿ ನೆಣಕಟ್ಟೆ ಬಿಚ್ಚುವರಿಲ್ಲವಯ್ಯ ||4||
ಊರುಗಳೆಷ್ಟಾಯಿತೋ ಊರು ಮನೆ ಸುಟ್ಟು ಹಾರಿದುದೆಷ್ಟಾಯಿತೋ |
ಮಾರುತಾತ್ಮ ಜನ ಕೋಣೆ ಲಕ್ಷ್ಮೀರಮಣಗೆ ದೂರಿಟ್ಟು ಸಾಕಾಯಿತೋ ||5||

ಯಾಕೆಂದು ದಣುಕೊಂಬಿರಿ
ಯಾಕೆಂದು ದಣುಕೊಂಬಿರಿ | ಸುಮ್ಮನೆ ವೃಥಾ |
ಯಾಕೆಂದು ದಣುಕೊಂಬಿರಿ |
ಶ್ರೀಕಾಂತನ ದಿವ್ಯ ನಾಮವೊಂದಿದ್ದ ಮೇಲೆ ||ಪ||
ನಾನಾ ಶಾಸ್ತ್ರಗಳೆಂಬ ಕಾನನದೊಳಗೆ ಕ
ಣ್ಗಾಣದವರವೋಲು ತಿರುಗುವಿರಿ |
ಆನಂದಾತ್ಮಕ ಶ್ರೀನಾಥನೆ ಸರ್ವರೊಳು
ತಾನೇ ತಾನಾಗಿ ಚರಿಸುತಿದ್ದಾ ಮೇಲೆ ||1||
ಕಾಶಿ ರಾಮೇಶ್ವರ ಎಂದು ದೇಶವ ತಿರುಗಾಡಿ |
ಘಾಸಿ ಮಾಡುವುದೇಕೆ ದೇಹವನು |
ಆಸೆ ಎಂಬಾ ಮಾಯಾ ಪಾಶವ ಹರಿದು ವಿ
ಲಾಸದೊಳಾತ್ಮನ ನೆಲೆಯನು ತಿಳಿಯದೆ ||2||
ಧನ ಧಾನ್ಯ ಧಾರುಣಿ ಮನಕೆ ಬಂದಿಹ ಸತಿ
ತನುಜರು ತನ್ನಯ ಮಂದಿರವು |
ಅಣುಮಾತ್ರವು ನಿನ್ನ ಸಂಗಡ ಬಾರದೋ |
ತನುವಿದು ಸ್ಥಿರವಲ್ಲ ತೃಣವಿತ್ತು ಸಾರಿದೆ ||3||
ಕಡಿದ ಹೆಮ್ಮರನಂತೆ ಮಡಿದು ಕಿಚ್ಚಿನೋಳ್ ಸುಟ್ಟು
ಹುಡಿಹುಡಿಗೊಂಬ ಶರೀರಕಿನ್ನು |
ಮಡಿಮೈಲಿಗೆ ಶುಚಿ ಕುಡಿಹುಬ್ಬು ತೊನೆಮೀಸೆ
ಕಡುಬಿಂಕ ಸೊಕ್ಕಿನ ಬಡಿವಾರ ಥರವಲ್ಲ ||4||
ವ್ರತನೇಮಗಳಲಿ ಸದ್ಗತಿಯೀಗ ದೊರಕದೋ |
ಮತಿಗೆಟ್ಟು ಸುಮ್ಮನೆ ತೊಳಲದಿರು |
ಕ್ಷಿತಿಯೊಳಧಿಕ ಭೀಮನಕೋಣೆಯ ಶ್ರೀಲಕ್ಷ್ಮೀ
ಪತಿಯನು ನೆನೆದು ಜ್ಯೋತಿಯ ಕೂಡು ಕಂಡ್ಯಾ ||5||

ಕಾಲನವರ ದಂಡು ಬರುತಿದೆ
ಕಾಲನವರ ದಂಡು ಬರುತಿದೆ | ಬಂದು |
ಮೂಲ ದೇಹದಿ ಪಾಳ್ಯ ಬಿಡುತಿದೆ |
ನಾಳೆ ನಾಡದೋ ಕಾಣೆ ತನುಪುರವಿದು
ಹಾಳಾಗುವ ಕಾಲ ಬರುತಿದೆ ||ಪ||
ಬಂದು ಬಂದವರೆ ಮುತ್ತಿಗೆಯಿಕ್ಕಿ | ರವಿ |
ನಂದನನಾಳು ಪದ್ರವವಿಕ್ಕಿ | ಹಿಂದು
ಮುಂದಕು ಝಾವಣೆಯಿಕ್ಕಿ ಪುರದ ಮಂದಿಯ ಕಾವಲನಿಕ್ಕಿ ||1||
ಪುರದೊಳಗೇನು ಬೀಯಗಳಿಲ್ಲ | ಮುಂದೆ |
ಬರುವ ಮಾರ್ಗವ ಕಟ್ಟಿದರೆಲ್ಲ |
ಕರಣವೃತ್ತಿಗಳು ತಗ್ಗಿತು ಎಲ್ಲ ಕೋಟೆ |
ಜರಿದು ಹೋಯಿತು ಸುತ್ತಲು ಎಲ್ಲ ||2||
ಕಾಲು ಕೈಗಳ ಧಾತು ತಪ್ಪಿತು | ನುಡಿವ |
ನಾಲಗೆ ಹಿಂದಕೆ ಸರಿಯಿತು | ಕಣ್ಣಾಲಿಯೊಳಗೆ ನೀರು ಉಕ್ಕಿತು |
ವಸ್ತು | ಗಾಳಿಯೊಳಗೆ ಮಾಯವಾಯಿತು ||3||
ಮಡದಿ ಮಕ್ಕಳಿಗೆಲ್ಲ ಹೊಡೆದಾಟ | ಬಲಕೆ |
ಎಡಕೆ ಹೊರಳದಿರಿ ಎನುವಾಟ | ಕಿಚ್ಚಿನೊಡನೆ
ಗೂಡನು ಸುಡುವಾಟ | ಕೆಲವು |
ಕಡೆಯವರೆಲ್ಲ ತೆರಳುವಾಟ ||4||
ಹೇಳದ ಯಮದೂತರಿಗಂದು | ಕಡು |
ಖೂಳ ಪಾಪಿಗಳೆಳತಹುದೆಂದು | ಲಕ್ಷ್ಮೀ
ಲೋಲನಾಳುಗಳ ಮುಟ್ಟದಿರೆಂದು |
ತನ್ನಾಳಿಗೆ ಕಟ್ಟು ಮಾಡಿದನಂದು ||5||

ಸಾರಿ ಸಾರಿ ಹೇಳುತೀನಿ
ಸಾರಿ ಸಾರಿ ಹೇಳುತೀನಿ ಕಡ್ಡಿ ಮುರಿದು ನಾನು |
ಬಾರಿಬಾರಿಗೆ ಸತ್ತು ಹುಟ್ಟುತಲಿಹೆ ನೀನು ||ಪ||
ದಿನವು ಸಂಜೆ ಮಾಡಿಕೊಂಡು ಹಗಲು ಇರುಳು ವಿಷಯದೊಳಗೆ |
ಮನವನಿರಿಸಿ ಮಡದಿ ಮಕ್ಕಳೆಂಬ ಬಲೆಯಲಿ ತನುವು
ಸಿಲುಕಿಯಿರಲು ಮೃತ್ಯು ಬರುವ ಪರಿಯನರಿಯದಿದು |
ಇನ ಸುತನ ದೂತರೊಡನೆ ಕೊಲಿಸಿಕೊಳದಿರು ||1||
ನೀನು ಹುಟ್ಟಿ ಬರುವ ಮುನ್ನ ಇವರಿಗೆಲ್ಲ ವಾಸವೆಲ್ಲಿ |
ನೀನದೆಲ್ಲಿ ಮಕ್ಕಳೆಂದು ಈಗ |
ಪ್ರಾಣವನ್ನು ತಿನಲು ಬಂದ ನರಿಗಳಿವದಿರು ||2||
ದಾರಿ ಹೋಕರಿವರು ನಿನ್ನ ಋಣವು ತೀರಿ ಹೋದ ಬಳಿಕ |
ಯಾರಿಗಾರು ಇಲ್ಲ ನಿನಗೆ ನೀನದಲ್ಲದೆ |
ಬೇರೆ ಗತಿಯ ಕಾಣೆ ಬಕನ ವೈರಿ ಕೋಣೆ ಲಕ್ಷ್ಮೀಪತಿಯ
ಸೇರಿ ನಾಮ ಸ್ಮರಣೆಯಿಂದ ಮುಕ್ತಿ ಪಡೆದಿರು ||3||

ಹರಿದಾಡುವಂಥ ಮನ
ಹರಿದಾಡುವಂಥ ಮನವ ನಿಲಿಸುವುದು ಬಲು ಕಷ್ಟ ||ಪ||
ಉರಿಯನಪ್ಪಲ ಬಹುದು | ವಿಷವನು ಕುಡಿಬಹುದು |
ಕರಿಯದಾಡೆಗೆ ಸಿಕ್ಕು ಮರಳಿ ಜೀವಿಸಬಹುದು ||1||
ಗಗನಕೇಣಿಯ ಸಾರ್ಚಿ ಮುಗಿಲ ಮುಟ್ಟಲುಬಹುದು |
ಅಗಜೆಯರಸನ ಉರಿಯನಯನಕಾನಲುಬಹುದು |
ಹೊಗರು ಧೂಮವ ಹಿಡಿದು ಹಸುಬೆ ತುಂಬಲುಬಹುದು ||2||
ಮಳಲು ಗಾಣಕೆಯಿಕ್ಕಿ ತೈಲಗಾಣಲು ಬಹುದು |
ಹುಲಿಯ ಹಿಡಿದು ಕಟ್ಟಿ ಹಾಲ ಕರೆಯಲು ಬಹುದು |
ಬಿಳಿಗಲ್ಲ ಬೆಣ್ಣೆವೋಲ್ ಜಗಿದು ನುಂಗಲುಬಹುದು ||3||
ಖಡ್ಗಧಾರೆಯ ಮೇಲೆ ನಾಟ್ಯವಾಡಲು ಬಹುದು |
ಬಸಿದ ಶೂಲಕೆ ಮೈಯ ಚಾಚಿ ಜೀವಿಸಬಹುದು |
ವಿಷದ ಉರುಗನ ಕೂಡೆ ಸರಸವಾಡಲು ಬಹುದು ||4||
ಮರುತಸುತನ ಕೋಣೆ ವಾಸ ಲಕ್ಷ್ಮೀಶನ |
ಸ್ಮರಣೆ ಮಾತ್ರದಿ ಸಕಲ ದುರಿತ ನಾಶನವಹುದು |
ಮರಳಿ ಜನ್ಮಕೆ ಬಾರದಂಥ ಪದವಿಯಹುದು ||5||

ಕೆಟ್ಟ ಕಾಲ ಬಂತು ಪ್ರಜೆಗೆ
ಕೆಟ್ಟ ಕಾಲ ಬಂತು ಪ್ರಜೆಗೆ ಎಷ್ಟು ಪೇಳ್ದರೇನು ಕೆಲಸ |
ದಿಟ್ಟರಾಗಿ ಅರಿಗಳನ್ನು ಕುಟ್ಟಿ ತೆಗೆಯದಿದ್ದ ಮೇಲೆ ||ಪ||
ದಂಡು ಬಂತು ಎಂದು ಜನರು ಗಂಡು ಹೆಣ್ಣು ಮಕ್ಕಳೆಲ್ಲ
ಕಂದುಗಳನು ಕಟ್ಟಿ ಗೋವಿನ ಹಿಂಡನೆಲ್ಲ ದಾರಿಗೊಳಿಸಿ |
ಕಂಡ ಕಡೆಗೆ ಹೋಗಿ ಸೇರಿಕೊಂಡುಯಿರಲು ಸೋವಿನಿಂದ
ದಂಡಿನವರು ದಾರಿಗಟ್ಟಿಕೊಂಡು ಸುಲಿದು ಕಡಿದ ಮೇಲೆ ||1||
ಅಲ್ಲಿ ಬಂತು ಇಲ್ಲಿಬಂತು ಎಂದು ಬೆದರಿಕೊಂಡು
ಕುಣಿಗಳಲ್ಲಿ ಭತ್ತ ಭಾಂಡವಿಕ್ಕಿ ನಿಲ್ಲದೆಲ್ಲ ಊರ ಬಿಟ್ಟು |
ಕಲ್ಲು ಮುಳ್ಳು ಗುಡ್ಡ ಕಾನಿನಲ್ಲಿ ಸೇರಿಕೊಂಡು ಇರಲು
ಬಚ್ಚಿಯಿಟ್ಟ ವಸ್ತು ವಡವೆ ಅಲ್ಲಿ ನಷ್ಟವಾದ ಮೇಲೆ ||2||
ಮತ್ತೆ ಕುದುರೆಯಿಲ್ಲ ಮಂದಿ ಹೊತ್ತು ಪ್ರಜೆಗಳನ್ನು
ಮಾರ್ಗದೊತ್ತಿನಲ್ಲಿ ತರುಬಿನಿಂದು | ಕತ್ತಿಯನ್ನು
ಕಿತ್ತು ಗೋಣ ಕುತ್ತಿ ಕೆಡಹಿ ಕೆಲರ ಮೈಯ
ರಕ್ತವನ್ನು ಬರಿಸಿ ಯಾವತ್ತು ವಡವೆ ವಸ್ತುಗಳನು
ಮತ್ತು ಮತ್ತು ಸುಲಿದ ಮೇಲೆ ||3||
ಮುಟ್ಟು ಪಟ್ಣೆ ಸಹಿತ ವರದಿಯೆತ್ತ ಕೊಟ್ಟು ಬೋಳ
ಭೂಮಿ ನಷ್ಟ ತೆತ್ತು ಹಳೆಯ ಅರಿವೆ ಬಟ್ಟೆ ಗಟ್ಟಿ ಬೀದಿ
ಬದಿಗೆ ಕಟ್ಟಿ ದನವ ಹಿಂಡು ಗುರಿಯ ಕೆಟ್ಟ ಗೌಡಿ ದ್ವಿಗುಣಿ
ಸುಂಕ ತೆತ್ತು ಕೊಟ್ಟು ಪ್ರಜೆಗೆ ಘಟ್ಟ ಬೆಟ್ಟ ವಾಸವಾದ ಮೇಲೆ ||4||
ಇಕ್ಕಿ ಕದವ ರಾಜ್ಯವನ್ನು ಹೊಕ್ಕು ಅರಿಗಳೆಲ್ಲ ಸುಲಿದು ಸೊಕ್ಕಿನಿಂದ
ಪಾಳ್ಯವನ್ನು ಹೊಕ್ಕರಯ್ಯ ನಮ್ಮ ಕಡೆಗೆ ದಿಕ್ಕ ಕಾಣೆ ಪ್ರಜೆಗಳನ್ನು
ರಕ್ಷಿಸುವರು ಬೇರೆ ಉಂಟು ಭಕ್ತಿಯಿಂದ ಭೀಮನಕೋಣೆ
ಲಕ್ಷ್ಮೀರಮಣನ ನಂಬಿ ಜನರು ||5||

ನಿಂತರಿಪಲು ಬಗೆಯಿಲ್ಲ
ನಿಂತರಿಪಲು ಬಗೆಯಿಲ್ಲ | ಕಷ್ಟ ಬಂತು
ಪ್ರಜೆಯನು ಪಾಲಿಪರೊಬ್ಬರಿಲ್ಲ ||ಪ||
ದಂಡಾಡಿ ರಾಜ್ಯವು ಕೆಟ್ಟು | ಪೋಕ |
ಪುಂಡರು ಹೆಚ್ಚಿ ಮಾರ್ಗವ ತೋರಿಕೊಟ್ಟು |
ಪೆಂಡಾರರಿಗೆ ಸುಲಿಗೆ ಕೊಟ್ಟು | ಭೂ |
ಮಂಡಲ ದೊಳಗಣ ಜನರೆಲ್ಲ ಕೆಟ್ಟು ||1||
ಎತ್ತು ಮುಟ್ಟುಗಳೆಲ್ಲ ಹೋಗಿ | ಬೀಳು |
ಬಿದ್ದು ಗದ್ದೆಯ ಪೈರು ನಿಸ್ಥಳವಾಗಿ |
ತುತ್ತುರಿಗಳು ಸುಟ್ಟು ಹೋಗಿ | ದಂಡು |
ನಿತ್ತು ಪ್ರಜೆಗೆ ಮನೆ ಮುಖವಿಲ್ಲದಾಗಿ ||2||
ಕರಿದೋ ಬಿಳಿದೋ ಕಾಣೆ ಕ್ಷೀರ | ಕೊಡುವ |
ತುರುಗಳಿಲ್ಲವು ಮರ ಒಣಗಿ | ಆರಮನೆಯತ್ತಣಿಂ
ಘೋರ | ಕರೆ ಕರೆಯೊಳು ಬಂದಿತಯ್ಯ ಗ್ರಹಚಾರ ||3||
ಗಂಜಿಗಾಸ್ಪದ ವಿಲ್ಲವಾಯ್ತು | ಮೂರು |
ಸಂಜೆಯ ದೀಪಕೆ ಕೊಳ್ಳಿ ಬೆಳಕಾಯ್ತು |
ಅಂಜನ ಪಾತ್ರೆ ಹೆಚ್ಚಾಯ್ತು | ಬದುಕಲು |
ನಾಲ್ಕು ವರ್ಣ ಒಂದಾಯ್ತು ||4||
ಕಾಲಗತಿಯು ಬಲು ಬಿರುಸು | ಮುಂದೆ |
ಬಾಳುವ ಜನರಿಗೆ ನೃಪರಿಂದ ಹೊಲಸು |
ಶೂಲಿ ಸಾಯುಜ್ಯವ ಬಯಸು | ಲಕ್ಷ್ಮೀ |
ಲೋಲನ ನಾಮವ ಮನದೊಳುಚ್ಚರಿಸು ||5||

ಕುಟ್ಟಿಕೊಳ್ಳೊ ಮಾಣಿ ನಿನ್ನ
ಕುಟ್ಟಿಕೊಳ್ಳೊ ಮಾಣಿ ನಿನ್ನ ಹುಟ್ಟಿಸಿರುವ ದೈವಕೆ |
ಹೊಟ್ಟೆ ತುಂಬ ಬಾಯಿಗಾನು ಬಿಟ್ಟೆನೆಂದ್ರೆ ಕ್ಷೀರವಿಲ್ಲ ||ಪ||
ಕೊಟ್ಟು ಪಡೆಯಲಿಲ್ಲ ಮುನ್ನ ಹುಟ್ಟಿ ಪಡೆಯಲಿಲ್ಲ ಮುಂದೆ |
ಹಟ್ಟಿಯೊಳಗಣಾಕಳೆಲ್ಲ ನಷ್ಟವಾಯ್ತು ರೋಗದಿಂದ ||1||
ಅತ್ತು ಸಾಯಬೇಡ ನೀನು ಎತ್ತಿಕೊಂಬರೊಬ್ಬರಿಲ್ಲ |
ಭತ್ತವನ್ನು ಕುಟ್ಟಿ ನಾನು ತುತ್ತಮಾಡಿ ತಿನ್ನಿಸುವೆನು ||2||
ನೀರು ದಾದು ಬಂತು ಬಿಸಿಯ ನೀರ ನೆರೆವೆನೀಗ ನಿನಗೆ
ಸಾರಿ ಮೊಲೆಯ ನೂಡಿ ನನ್ನ ಸೀರೆ ಸೆರಗ ಹಾಸಿ ಕೊಡುವೆ ||3||
ದೊಡ್ಡ ಕೂಸ ಕಾಣೆಯವಳು ಗುಡ್ಡೆ ಬಸವಿಯಾದಳೀಗ |
ಚಡ್ಡೆಯಿಲ್ಲದೆ ಹೋಗುತಿಹಳು ಸಡ್ಡೆ ಮಾದಳೆನ್ನ ಮಾತ ||4||
ಇಂತೆನುತ್ತ ಬಾಲಕನ್ನ ಸಂತವಿಟ್ಟು ನಾರಿ ಲಕ್ಷ್ಮೀಕಾಂತ
ಮಾಡ್ಡ ಲೀಲೆಗಳನು ನಿಂತು ಪಾಡಿ ಪೋದಳಾಕೆ ||5||

ಸಾಕು ಸಾಕು ಸವಿದಟ್ಟಿತು
ಸಾಕು ಸಾಕು ಸವಿದಟ್ಟಿತು |
ನನಗೀಗ ಸಾಕಾಯ್ತೀ ಸಂಸಾರದ ಸುಖವು ||ಪ||
ಸಂಜೀವನದ ಅಮೃತವ ನಾ ಕಂಡಮೇಲೆ ಗಂಜಿಗಾಸೆ ಮಾಡುವೆನೆ |
ರಂಜಿತ ಚಿದಾನಂದವನು ಕಂಡ ಮೇಲೆ ಗುಂಜಿನ ಮೈ ಸುಖವೆ ಪೇಳೋ ||1||
ಹಾಲ ಸಮುದ್ರವ ಕಂಡ ಮೇಲೆ ಪಶುಜಾಲವ ಬಯಸುವೆನೆ ಪೇಳೋ |
ಲಾಲಿಸಿ ಚಿದಾನಂದವ ಕಂಡಮೇಲೆ ಜಾಳು ವಿಷಯದ ಚಿಂತೆಯೇ ಪೇಳೋ ||2||
ಪರುಷದ ಪರ್ವತವ ನಾ ಕಂಡ ಮೇಲೆ ಸಿರಿ ಬೇಕೆಂಬಂಧ ಚಿಂತೆಯೇ ಪೇಳೋ
ಪರಮಾತ್ಮಸಿದ್ಧವ ಕಂಡೆ ಗುರು ಚಿದಂಬರನನಿನ್ನೇತರ ಚಿಂತೆ ಪೇಳೋ ||3||

ಮುನಿದ ಭಾವುನ ದಂಡು ಕಂಡು
ಮುನಿದ ಭಾವುನದಂಡು ಕಂಡು |
ನಿನ್ನ ಮನೆ ಮಾರಿನಾಸೆಯನು ನೀಡಾಡು ||ಪ||
ಲಂಬಾಣಿ ಜನ ಬಂತು ನೋಡು |
ನೀನು ದಿಬ್ಬವ ಹತ್ತಿ ಕಾನಿಗೆ ಓಡು |
ತಂಬಿಗೆಗಳ ಜೊತೆ ಮಾಡು |
ತಲೆ ಚಂಬಿಗೆ ಬಂತು ಮಾನವರಿಗೆ ಕೇಡು ||1||
ಕಂಡಕಂಡವರನು ಹಿಡಿದು |
ಕರ ಚೆಂಡಾಡಿ ಹೊಯ್ದು ಕೆಡಹಿ ಮೆಟ್ಟಿ ತಿವಿದು |
ಖಂಡೆಯದೊಳು ಘಾಯಗರೆದು |
ಮೈ ರೊಂಡಿ ಮುರಿದು ಗಂಟಿಗೆ ನೀರನೆರೆದು ||2||
ಕತ್ತಿಯ ಕಿತ್ತು ಕೈಯೆತ್ತಿ ಗೋಣ ಕುತ್ತಿ ಹಸ್ತಕೆ
ಹಸ್ತವನು ತರಿದೊತ್ತಿ | ರಕ್ತ ಮಾಂಸದ ಕರುಳೊತ್ತಿ |
ಹಾರಿತು ಗೂಡಿಂದ ಜೀವನು ಕಣ್ಣ ಕುತ್ತಿ ||3||
ಹಂತಕಾರಿಗಳೊಂದೆ ರೂಪು | ಪಾಪವಂತರಿಗಿನಜ
ತೋರಿಸುವ ವಿದ್ರೂಪ | ನರ ಜಂತುಗಳಿಂಗೆ
ಇವರೆ ಮೃತ್ಯು ರೂಪ | ಚಪ್ಪು ಕಂತೆಯ
ಬಿಡದೆ ಸುಲಿಯಲಿಕೆ ಸಾಪು ||4||
ಶೀಲವಂತರು ಶೀಲಗೆಟ್ಟರು ದುಃಶೀಲರು
ಶೀಲದಾಚಾರವ ತೊಟ್ಟರು | ಕೀಳು
ಮೇಲೊಂದಾಯಿತಷ್ಟು ಲಕ್ಷ್ಮೀಲೋಲ
ಮಾಡಿಸುವ ಕುಚೇಷ್ಟೆ ಇವಿಷ್ಟು ||5||

ಕೋಲು ಕೋಲೆ
ಕೋಲು ಕೋಲೆ ಕೋಲು ಕೋಲನ್ನ ಕೋಲೆ ||
ಮೂಲೆಮೂಲೆಯ ಹೊಕ್ಕು ಅಡಗಿರ್ದ ಕೋಲೆ ||ಪ||
ಕೆಂಜಿಗ ಉಡನು ಬಂದು ಮುಂಚಿ ಕವಲ ಕೊಟ್ಟು
ಅಂಚೆಡೆಗಳನೆಲ್ಲ ಸುಲಿದಿರ್ದಿ ಕೋಲೆ ||1||
ಆನೆ ಕುದುರೆಯಿಲ್ಲ ಸೇನೆ ಬಹಳವಿಲ್ಲ |
ಏನೆಂದು ಬೇಸಗೊಂಬರಿಲ್ಲದ ಕೋಲೆ ||2||
ಮುನಿಯ ಭಾವನ ದಂಡು ಮನೆಮನೆಗಳ ಹೊಕ್ಕು
ಧನಕನಕಂಗಳ ಸುಲಿದಿರ್ದಿ ಕೋಲೆ ||3||
ಮಕ್ಕಳು ಮರಿಗಳು ವೃದ್ಧ ಜವ್ವನರನ್ನು ದಿಕ್ಕು
ದಿಕ್ಕಿನ ಕಾನಿಗಟ್ಟಿದ ಕೋಲೆ ||4||
ಜನರನು ತರಿದು ಸುಲಿದು ಕರುಗಳ |
ತುರುಗಳ ಹಿಂಡನು ಹೊಡೆದಿರ್ದ ಕೋಲೆ ||5||
ಕೊಟ್ಟ ಕಣ್ಣಿಯನೆಲ್ಲ ಕಿತ್ತೊಯ್ದು ಸೂಸ್ಯಾನು |
ಪಟ್ಟೆ ಪೀತಾಂಬರಗಳನೊಯ್ದ ಕೋಲೆ ||6||
ದಂಡೋ ಭಂಡೋ ಪುಂಡೋ ಕಾಣೆ ಜೀವರನೆಲ್ಲ |
ಹಿಂಡಿ ಹಿಳಿದು ಹಿಪ್ಪೆ ಹೀರಿದ ಕೋಲೆ ||7||
ಇಟ್ಟ ವಡವೆ ವಸ್ತು ಇಟ್ಟಲ್ಲಿ ಇಲ್ಲದೆ |
ಕೆಟ್ಟು ಜನರು ಹೊಟ್ಟೆ ಹೊಡಕೊಂಬರು ||8||
ಉಟ್ಟು ತೊಟ್ಟುದನೆಲ್ಲ ಸುಲಿದು ಬೆತ್ತಲೆ ಮಾಡಿ
ಬಿಟ್ಟು ಮನೆಗೆ ಬೆಂಕಿ ಕೊಟ್ಹೋದ ಕೋಲೆ ||9||
ಕೆಲರ ತಲೆಯ ಕುಟ್ಟಿ ಕೆಲರು ಸುಲಿದು ಬಿಟ್ಟು ಕೆಲರಿಗೆ
ಮುರುವಾಳವಿಕ್ಕಿದ ಕೋಲೆ ||10||
ಅಟ್ಟಡಿಗೆಯನುಂಡು ಇಟ್ಟೊಡವೆಯ ಕೊಂಡು |
ಕುಟ್ಟಿ ಖಂಡವ ಚೂರು ಮಾಡಿದ ಕೋಲೆ ||11||
ಉಪ್ಪಿನ ಕಾಯಿ ಕೊಡ ತುಪ್ಪ ತೈಲದ ಪಾತ್ರೆ |
ಜಪ್ಪಿ ವಡೆದು ನೆಲ ಕುಣಿಸಿದ ಕೋಲೆ ||12||
ಚಿನ್ನ ಚಿಗುರು ಬೆಳ್ಳಿ ಕಂಚು ತಾಮ್ರಗಳನ್ನು ನುಣ್ಣಗೆ
ಹೊರೆಗಟ್ಟಿ ಹೊತ್ತೊಯ್ದ ಕೋಲೆ ||13||
ಉಣ್ಣ ಉಡಲಿಕಿಲ್ಲ ಹೊನ್ನು ಕೈಯೊಳಗಿಲ್ಲ |
ಎಣ್ಣೆ ಬೆಣ್ಣೆಗೆ ಬಾಲನಳಿಸಿದ ಕೋಲೆ ||14||
ಮುಂಜ ಮುಚ್ಚಲಿಕಿಲ್ಲ ಗಂಜಿಗೆ ಲವಣಿಲ್ಲ |
ಸಂಜೆ ದೀಪಕೆ ತೈಲವಿಲ್ಲದೆ ಕೋಲೆ ||15||
ಅತಿಥಿಗಿಕ್ಕಲಿಲ್ಲ ಪ್ರತಿಮೆ ಪೂಜೆಗಳಿಲ್ಲ |
ವ್ರತನೇಮಗಳನು ಕಟ್ಟಿರಿಸಿದ ಕೋಲೆ ||16||
ತೆಪರಾರನಪದಾರ ಕಾಲಾಟದೊಳು ಜಪತಪ
ಗಳಿಲ್ಲದೆ ಕೂಳ ತಿನ್ನಿಸಿದ ಕೋಲೆ ||17||
ನಗರದ ಕೋಲೆದ್ದು ತೆಪರಾರ ಮೇಲ್ಬಿದ್ದು ಜಿಗಿದು
ಹಿಂದಕೆ ಜಾರಿ ಜುಣುಗಿದ ಕೋಲೆ ||18||
ಹಿಂದಣ ಬೆಳೆ ಮಣ್ಣ ಕೂಡಿತು ಕುಳಿಯಲಿ |
ಮುಂದಣದುದುರಿತು ಹಣ್ಣಾಗಿ ಕೋಲೆ ||19||
ಕೆಳಗು ಮೇಲಕು ದಂಡು ಒಳ ಪ್ರಾಂತದೊಳು ದಂಡು |
ನೆಲೆಗೊಂಡು ಜನರು ತಲ್ಲಣಿಪರು ಕೋಲೆ ||20||
ಸುಬ್ಬರಾಯನ ವೀರ ಭದ್ರನ ಪ್ರಸಾದ ಸರ್ವ
ಜನರ ಬಾಯ್ಗೆ ಬಿತ್ತಣ್ಣ ಕೋಲೆ ||21||
ಧರೆಯ ಭಾರವನಪಹರಿಸಲು ನರರೂಪ ಧರಿಸಿ
ಲಕ್ಷ್ಮೀಶನು ಹೊಯ್ಸೂವ ಕೋಲೆ ||22||

ಪ್ರಾಣಕ್ಕೆ ಕಡೆಗಾಲ ಬಂದಿತೋ
ಪ್ರಾಣಕ್ಕೆ ಕಡೆಗಾಲ ಬಂದಿತೋ | ಶಿವ ಶಿವ ಇನ್ನೇನಿನ್ನೇನು |
ಭೂಣನಸಗದ್ದೆಯೊಳಿರುತಿದೆ ನಾಡಿನಲಿನ್ನೇನಿನ್ನೇನು ||ಪ||
ಮುನಿಯ ಭಾವನ ದಂಡು ನಾಲ್ದೆಸೆಯೊಳು ಬಂತು ಇನ್ನೇನಿನ್ನೇನು |
ಮನೆಯೊಳು ಸಿಕ್ಕಿದೆ ಜಾರಲಿ ಕಣಿಯಿಲ್ಲವಿನ್ನೇನಿನ್ನೇನು |
ದನ ಕರುಗಳನೊಂದನುಳಿಸದೆ ವೈದರು ಇನ್ನೇನಿನ್ನೇನು |
ಜನರೆಲ್ಲ ಕೈಶೆರೆಯನು ಸಿಕ್ಕಿ ಹೋಯಿತು ಇನ್ನೇನಿನ್ನೇನು ||1||
ಅಂಗಳದೊಳು ಪಾದವಿಕ್ಕಿತು ಜನರಿಗೆ ಇನ್ನೇನಿನ್ನೇನು |
ಭಂಗಾರವ ತನ್ನಿರೆಂದು ಝಂಕಿಸಿದರು ಇನ್ನೇನಿನ್ನೇನು |
ಭಂಗಪಡುವ ಕಾಲ ಬಂತು ಮಾನವರಿಗೆ ಇನ್ನೇನಿನ್ನೇನು |
ಅಂಗನೆಯರ ಹಿಡಿದೆಳೆದು ಸುಲಿದರು ಇನ್ನೇನಿನ್ನೇನು ||2||
ಉಡಿಗೆ ತೊಡಿಗೆಯನ್ನು ಸೆಳೆದರು ಸತಿಯರ ಇನ್ನೇನಿನ್ನೇನು |
ಕಡಿದರು ಕೆಲರ ತೋಳ್ ತೊಡೆಗಳ ಶಿರಗಳ ಇನ್ನೇನಿನ್ನೇನು |
ಕಡಲಿಟ್ಟು ಹರಿದುದು ರಕ್ತ ಪ್ರವಾಹವು ಇನ್ನೇನಿನ್ನೇನು |
ಕಡುಪಿಂದ ಕಾಲ್ ಕೈಗೆ ಮುರವಾಳವಿಕ್ಕಿದರಿನ್ನೇನಿನ್ನೇನು ||3||
ಸುಲಿದರು ಚಿನ್ನ ಚಿಗುರು ಬೆಳ್ಳಿ ವಸ್ತುವನಿನ್ನೇನಿನ್ನೇನು |
ಹೊಳಲಿಗೆ ಬೆಂಕಿಯನಿಕ್ಕಿದರಲ್ಲಲ್ಲಿ ಇನ್ನೇನಿನ್ನೇನು |
ಪ್ರಳಯಕಾಲದೊಳೊಬ್ಬನೀಶ್ವರನು ಉಳಿದೊಲು ಉಳಿದೆನು ಇನ್ನೇನಿನ್ನೇನು |
ಜಲಜಾಕ್ಷ ನಿನ್ನಯ ಕರುಣ ಕಟಾಕ್ಷದಲಿನ್ನೇನಿನ್ನೇನು ||4||
ಹಿಂದಂಬರೀಶ ಗಜೇಂದ್ರನ ಕಾಯ್ದಂತೆ ಇನ್ನೇನಿನ್ನೇನು
ಇಂದಿನ ದುರಿತವ ಪರಿಹರಸಿದೆ ನೀನು ಇನ್ನೇನಿನ್ನೇನು |
ಬಂಧಿಸಿ ಹೊಡೆದ ಗೋಕುಲವನು ತಂದಿತ್ತೆ ಇನ್ನೇನಿನ್ನೇನು |
ಮಂದ ಮಾರುತನಣುಗನ ಕೋಣೆ ಲಕ್ಷ್ಮೀಶ ಇನ್ನೇನಿನ್ನೇನು ||5||

ಇದ್ದರೆ ಹೀಗೆ ಇರಬೇಕು
ಇದ್ದರೆ ಹೀಗೆ ಇರಬೇಕು | ಇಲ್ಲದಿದ್ದರೆ ಕಾಯವ ಬಿಡಬೇಕು |
ಶುದ್ಧ ಚಿತ್ತನಾಗಿ ಹೃದಯದೊಳಿದ್ದ ವಸ್ತುವನ್ನು ನಿನ್ನ ಬುದ್ಧಿಯಿಂದ
ನೀನೆ ತಿಳಿಯುತಿದ್ದು ಜೀವನ್ಮುಕ್ತನಾಗಿ ||ಪ||
ಕಲ್ಲು ಮರಳು ಕಾಷ್ಟತರುಗಳಲ್ಲಿ ಜಲದಿ ಜೀವ ನಿಚಯದಲ್ಲಿ
ತೃಣ ಸಮೂಹ ಗಿರಿಗಳಲ್ಲಿ ಚರಿಸುವ | ಹುಲ್ಲೆ ಕರಡಿ ವ್ಯಾಘ್ರ
ಸಿಂಹದಲ್ಲಿ ಪಕ್ಷಿ ನಾನಾ ಮೃಗಗಳಲ್ಲಿ ವಸ್ತುವೊಬ್ಬ
ನಲ್ಲದಿಲ್ಲವೆಂದು ಭಾವಿಸುತ್ತ ||1||
ದ್ರಷ್ಟವಾಗಿ ತೋರ್ಪುದೆಲ್ಲ ನಷ್ಟವಾಗಿ ಪೋಪುದೆಂದು
ದಿಟ್ಟನಾಗಿ ತಿಳಿದು ಜ್ಞಾನ ದೃಷ್ಟಿಯಿಂದಲೆ |
ದುಷ್ಟ ಜನರ ಸಂಗವನ್ನು ಬಿಟ್ಟು ಅರಿಗಳರುವರನ್ನು ಕುಟ್ಟಿ ಕೆಡಹಿ |
ಆಶಪಾಶವೆಂಬ ಹಗ್ಗವನ್ನು ಹರಿದು ||2||
ಗೇರು ಹಣ್ಣಿನ ಬೀಜ ಹೊರ ಸಾರಿ ಇರ್ದವೊಲು
ಸಂಸಾರವೆಂಬ ವಾರಿಧಿಯೊಳು ಕಾಲಗಳೆಯುತ |
ನೀರ ಮೇಲಕಿದ್ದ ನಳಿನದಂತೆ ಹೊರಗೆ ಬಿದ್ದು ಬಕನ
ವೈರಿ ಕೋಣೆ ಲಕ್ಷ್ಮೀಪತಿಯ ಚಾರು ಚರಣ ಸ್ಮರಣೆಯಿಂದ ||3||

ನಿನ್ನೊಳು ನೀನೆ ತಿಳಿದು ನೋಡು
ನಿನ್ನೊಳು ನೀನೆ ತಿಳಿದು ನೋಡು |
ಗುರುವಿನ್ನೊಬ್ಬ ಬೇಡ ಧ್ಯಾನಿಸಿ ನೋಡು ||ಪ||
ಹಿಂದಣ ಭವ ಮುಳುಗಿ ನೀನಾರು | ಅಲ್ಲಿ |
ತಂದೆ ತಾಯಿಗಳು ಮತ್ತವರಾರು | ಅಂದಿನ
ವನಿತೆಯಾಗಿಹಳಾರು | ನಿನ್ನ |
ನಂದನರೆನಿಸಿ ಬಂದವರಾರೋ ||1||
ಮುನ್ನ ಮಾಡಿದ ಹೊಲಮನೆಯೆಲ್ಲಿ |
ನಿನ್ನ | ಬೆನ್ನು ಬಂದಗ್ರಜಾನುಜರೆಲ್ಲಿ |
ಚೊಕ್ಕ | ಚಿನ್ನ ಚಿಗುರು ಬೆಳ್ಳಿ ನಗವೆಲ್ಲಿ |
ಪಶು | ಹೊನ್ನು ಕನಕ ಮಿತ್ರ ಜನರೆಲ್ಲಿ ||2||
ಇಂದಿನ ಭವದೊಳು ನಿನಗೆಲ್ಲಿ | ಈಗ |
ಬಂದು ಕೂಡಿದ ಸಂಸಾರವೆಲ್ಲಿ | ಮುಂದೆ |
ಹೊಂದಿ ಹುಟ್ಟುವ ಠಾವುಗಳೆಲ್ಲಿ | ಅಲ್ಲಿ |
ಬಂಧು ಬಳಗ ನೆರೆದಿಹುದೆಲ್ಲಿ ||3||
ಹಲಬರ ನೆರವಿಯ ದೇಹವಿದು | ಹೊಳೆ |
ಯೊಳಗೆ ಕೂಡಿದ ಕೊರಡಂತಿಹುದು |
ಬಳಿಕ | ತನ್ನಯ ಈ ಋಣ ತೀರುವುದು | ಎಲ್ಲ |
ಬಯಲಿಗೆ ಬಯಲಾಗಿ ಹೋಗುವುದು ||4||
ಸಾರವಿಲ್ಲದ ಸಂಸಾರವಿದು |ನಿ|
ಸ್ಸಾರದೊಳಿಹ ಪರ ಕೆಡುಕಿಹುದು | ಈ |
ಘೋರವನುಳಿದು ನಿರ್ಮಲನಹುದು | ಲಕ್ಷ್ಮೀ |
ನಾರಾಯಣನ ಪಾದ ಕೂಡುವುದು ||5||

ಯಾತರ ಸುಖವೆಂದುಸುರುವಿ
ಯಾತರ ಸುಖವೆಂದುಸುರುವಿ | ಈ
ಭೂತಳದೊಳಗಿನ್ನು ಬಿನುಗು ಮಾನವರಿಂಗೆ ||ಪ||
ನೆತ್ತಿಯ ಮೇಲೊಂದು ಕೆರೆಯುಂಟು ಅದು ತುಂಬಿ
ಸುತ್ತಲು ಹರಿ ನೀರು ಹರಿದಾಡಿತು |
ಒತ್ತಿತು ಮೂಗಿನೊಳುಸುರನು ಕಿವಿಯನು
ಕುತ್ತಿತು ಪರರೆಂದ ಮಾತು ಕೇಳಿಸದಂತೆ ||1||
ಊಟದ ಸುಖವದೇನೆಂದೆನೆ ಕ್ಷೀರದಧಿ ಘೃತ
ಮಧುಕೈಟಭಾರಿಯ ಮನೆಯೊಳಗುಂಟು |
ತೋಟದೊಳಿಹ ಬಾಳೆದಿಂಡು ಕುಂಡಿಗೆ ತಿಂದು |
ಪಾಟಿಸಿ ಸರ್ವಾಂಗವನು ಧಾತುಗೆಡಿಸಿಹುದು ||2||
ಶಯನವೆಂದರೆ ಪರರ ಸುಲಿಗೆಯಿಂದ ಭೂ
ಶಯನವೆ | ಶಯನ ನಿಶ್ಚಯವಾಯಿತು |
ನಯನ ಮೂರುಳ್ಳ ದೇವನ ಮಿತ್ರ
ಶ್ರೀ ಲಕ್ಷ್ಮೀರಮಣನೊಬ್ಬನೆ ಬಲ್ಲ | ನಾನೊಬ್ಬನು ಬಲ್ಲೆನು ||3||

ಅರ್ಥವಿಲ್ಲದ ನರನು ವ್ಯರ್ಥ
ಅರ್ಥವಿಲ್ಲದ ನರನು ವ್ಯರ್ಥ | ಬಹುಕಾಲ
ಪೃಥ್ವಿಯೊಳು ಬಾಳ್ವಡವನೆ ಪುರುಷಾರ್ಥ ||ಪ||
ನಂಟರಿಷ್ಟರ ಮನೆಗೆ ಪೋದರಾ ಬಾಂಧವರು
ಒಂಟೆಯಂದದಿ ನಿನ್ನ ನೋಡುತಿಹರು |
ಪಂಟಿಯನು ತೆಗೆಯಲಿಕೆ ಬಂದನೆಂಬರು ಒಳಗೆ
ಗಂಟಲೊಣಗಿದವರಿಗೆ ತೃಷೆ ಕೇಳರೋ ||1|
ಹತ್ತು ಮಂದಿಯ ನಡುವೆ ಕುಳ್ಳಿರಲಿಕವರು ಗೋ
ಣೆತ್ತಿ ನೋಡರು ಕೂಡೆ ಮಾತಾಡರು |
ವಿತ್ತವಿದ್ದವ ಬಂದರೆದ್ದು ಕೊಂಡುಪಚರಿಸಿ
ಪುತ್ರ ಮಿತ್ರ ಕಳತ್ರ ಸುಖ ಕೇಳ್ವರೋ ||2||
ಸಕ್ಕರೆಗೆ ಸಮವೆನಿಪ ಬೆಲ್ಲ ಜಲ ಜೀರಿಗೆಯ
ನಿಟ್ಟು ಹರಿವಾಣದಲಿ ತಂದಿಡುವರೋ |
ತೆಕ್ಕೊಳ್ಳಿರೆಂದು ಸನ್ಮಾನಿಸುತ ಬೇಗ
ಸ್ನಾನಕ್ಕೆ ಏಳಿರೆಂದುಡಲು ಮಡಿ ಕೊಡುವರೋ ||3||
ಕೊಟ್ಟುಮಣೆ ಕುಣಿಬಾಳೆಯನು ಮಾಡಿ ಕುಳ್ಳಿರಿಸಿ
ಅಟ್ಟುದನು ಸಾಲೊಳಿಸಿ ನೀಡುತಿಹರೋ |
ದುಷ್ಟಗೆ ಮನೋಹರಗಳೆನಿಸುತಿಹ ವಗ್ಗರಣೆ
ಕೊಟ್ಟಿರ್ದ ಶಾಖಗಳನುಣಬಡಿಪರೋ ||4||
ಕಡುಬು ಕಜ್ಜಾಯ ಪಾಯಸ ಕ್ಷೀರದಧಿಘೃತವ
ಸಡಗರಿಸಿ ಮೃಷ್ಟಾನ್ನ ಪಾನದಿಂ
ಕಡುಹರುಷದಿಂ ತೃಷ್ಟಿಪಡಿಸುವರು ಧನಿಕನನು
ಬಡವಗಿಕ್ಕುವ ಕೈಯ ಲಕ್ಷ್ಮೀಶ ಬಲ್ಲ ||5||

ಧರಣಿಯನಾಳ್ವ ಪಾರ್ಥಿವರಿಂಗೆ
ಧರಣಿಯನಾಳ್ವ ಪಾರ್ಥಿವರಿಂಗೆ ಪ್ರಜೆಗಳು ಬೇಡವಾಯ್ತು |
ವರಹದ ಮೇಲಣಾಸೆಯಿಂದ ರಹಿತರ ಬಡಿವುದಾಯ್ತು ||ಪ||
ರಾಜ್ಯಕೆ ದಂಡ ಹಾಕಿದರು | ತೀರಿತೆಲ್ಲಿ ಪ್ರಜೆಗಳ ಬಾಳು
ನಜರು ಕೊಡುವುದಾಯ್ತು | ಕೊಡುವುದಿಲ್ಲವೋ
ರೋಸಿ | ಉಡಲು ತೊಡಲಿಕಿಲ್ಲ ಕೈ
ಬೀಸಿ ಎದೆ ನಡುಗಿ ಸಾವೆನು ನಾನು ಪರದೇಶಿ ||2||
ಅತಿಥಿಗಿಕ್ಕಲಿಕೆ ತನಗೇ ಇಲ್ಲ |
ಪ್ರತಿಮೆ ಲಿಂಗ ಪೂಜೆಗಳು ಜನ್ಮದೊಳಿಲ್ಲ |
ವ್ರತನೇಮ ದಾನಧರ್ಮಗಳಿಲ್ಲ | ಪರ
ಗತಿಗೇನು ಮುಂದೆ ಸಾಧನವಿಲ್ಲ ||3||
ಸಂಸಾರದೊಳಗೇನು ಸುಖವಿಲ್ಲ | ಪರಮ
ಹಂಸನಾಗಲು ಮುಂದೆ ಪಥವಿಲ್ಲ |
ಕಂಸಾರಿ ಸ್ಮರಣೆ ಎಂದಿಗು ಇಲ್ಲ | ತಮ
ಧ್ವಂಸಿಯಣುಗನ ಕೈವಶರೆಲ್ಲ ||4||
ಕಾಲಗತಿಯು ಬಲು ಬಿರುಸಣ್ಣ | ಜನ
ಬಾಳುವ ಪರಿಯಿನ್ನು ಹೆಂಗಣ್ಣ |
ಕೂಳಿಗೆ ಬಗೆ ಯಿಲ್ಲದಾಯ್ತಣ್ಣ |
ಲಕ್ಷ್ಮೀಲೋಲನ ಮೇಲೆ ಭಕ್ತಿಯಿಲ್ಲಣ್ಣ ||5||

ಯಾಕುಂತೆ ಸುಮ್ಮನೆ ಕಕುಲಾತಿ
ಯಾಕುಂತೆ ಸುಮ್ಮನೆ ಕಕುಲಾತಿ |
ನರ ಲೋಕದಿ ಸಂಸಾರದೊಳು ಸುಖವಿಲ್ಲ ||ಪ||
ದುಂಡನೆ ಬಂದಿಹೆ ದುಂಡನೆ ಹೋಗುವೆ
ಹೆಂಡಿರು ಮಕ್ಕಳ ನಡುವೆಯಲಿ |
ತಂಡ ತಂಡದಿ ಹುಟ್ಟಿಕೊಂಡವರು ನಚ್ಚಿ
ಕೊಂಡಿವರನು ಪರಗತಿಯ ಕೆಡಿಸದಿರು ||1||
ಹುಟ್ಟುತ ತರಲಿಲ್ಲ ಹೋಗುತ ವೈಯೊಲ್ಲ |
ನಟ್ಟ ನಡುವೆ ಬಂದ ಸಿರಿಯಿದು |
ಕಟ್ಟಕಡೆಗೆ ನೀನು ಮಡಿಯಲಿಕರುವೆಯ
ಬಟ್ಟೆಯ ಶವ ಕಿತ್ತಿಲಿದು ಒಳ್ಳಿತೆಂಬರು ||2||
ಎನ್ನ ಮನೆಯು ಎನ್ನ ತೋಟ ತುಡಿಗೆ ಇದು |
ನಿನ್ನದು ಪಶುಧನಕನಕಂಗಳು ಎಂ
ದೆನುತ ಹಿಗ್ಗದಿರು ಇದರೊಳಗೊಂದು
ಬೆನ್ನ ಬಾರದು ಕಾಲನವರೆಳೆದೊಯ್ವಾಗ ||3||
ಘಟ್ಟದ ಕೆಳಗುಪ್ಪು ಬೆಟ್ಟದ ಮರಗಾಯಿ
ಹುಟ್ಟಿದ ಬಯಲ ಸೀಮೆಯ ಮೆಣಸು |
ಕುಟ್ಟಿದ ಸಾಸುವೆ ಸಂಬಾರಗಳು ಕೂಡಿ
ಒಟ್ಟಾದ ಲವಣ ಶಾಕದ ವೋಲು ಸಂಸಾರ ||4||
ಜಾಣನಾದರೆ ಪರ ಗತಿಯ ನೀನೊಲುವೊಡೆ |
ತ್ರಾಣವಿರಲಿಕೆ ತೊಡಕ ಬಿಟ್ಟುಕಾಣು
ಸಂಸಾರವ ವಿಷವೆಂದು ತ್ಯಜಿಸಿ ಗೀರ್ವಾಣ
ವಂದಿತ ಲಕ್ಷ್ಮೀ ರಮಣನ ಮೊರೆ ಹೋಗು ||5||

ಬರಗಾಲದುರಗ ಜನರ ನುಂಗಿತು
ಬರಗಾಲದುರಗ ಜನರ ನುಂಗಿತು |
ಹೊಟ್ಟೆ ಹೊರೆಯಲು ಸರ್ವಸ್ವವನು ನುಂಗಿತು ||ಪ||
ಚಿನ್ನ ಚಿಗುರು ಕಂಚು ತಾಮ್ರವನು ನುಂಗಿತು |
ಹೊನ್ನೋಲೆ ಮಣಿ ಮುರುಗಳ ನುಂಗಿತು |
ಬಣ್ಣ ಬಂಗಾರವ ನುಂಗಿತು ಹೊಟ್ಟೆಗೆ |
ಸಣ್ಣ ಹೆಣ್ಮಕ್ಕಳ ನೆರೆ ನುಂಗಿತು ||1||
ಮಡದಿ ಮಕ್ಕಳ ಮೇಲಣಾಸೆಯ ನುಂಗಿತು |
ಜಡಿದು ಜನರ ಸತ್ವಗಳ ನುಂಗಿತು |
ಬಡವ ಬಲ್ಲಿದರನು ಬಿಡದಪ್ಪಿ ನುಂಗಿತು |
ಪೊಡವಿಯೊಳಗಿರುವಾಸೆಯನು ನುಂಗಿತು ||2||
ಎಡಬಲದವರೊಡವೆಯ ಕದ್ದು ನುಂಗಿತು |
ಕಡಕಟ್ಟ ತಂದುಕೊಡದೆ ನುಂಗಿತು |
ಕೊಡುವ ಬಿಡುವ ಧನಿಕರ ಕೈಯ ನುಂಗಿತು |
ಕಡು ಲೋಭಿ ವಿತ್ತವನೆಲ್ಲ ನುಂಗಿತು ||3||
ದುಡ್ಡಿಗೆ ಪಾವಕ್ಕಿಯ ತಂದು ರಾಗಿಯ
ದೊಡ್ಡಂಬಲಿ ಕಾಸಿದರೆ ನುಂಗಿತು |
ಗುಡ್ಡದಂತವರೆಲ್ಲ ಮಣೆಗೆ ಮಂಡಿಸಿಕೊಂಡು |
ದೊಡ್ಡಪ್ಪಗಳಿಗೆಲ್ಲ ಸುರಿದುಂಡಿತು ||4||
ಮುನ್ನ ಮಾಡಿದ ಹೊಲಮನೆಯನ್ನು ನುಂಗಿತು |
ಜನ್ನೆ ಆಕಳ ಮಹಿಷಿಯ ನುಂಗಿತು |
ಅನ್ನವೆ ನುಂಗಿತು ಜನರನ್ನು ಲಕ್ಷ್ಮೀಯನಾಳ್ದ
ವನದಾಸ ರಿಂಗೊಲಿಯಿತು ||5||

ಯಾವ ಕಾಲ ತಪ್ಪಿದರು
ಯಾವ ಕಾಲ ತಪ್ಪಿದರು ಸಾವ ಕಾಲ ತಪ್ಪದೋ |
ಯಾವ ಜೀವಜಂತುಗಳಿಗು ಕಾಯವಿಡಿದು ಬಂದ ಬಳಿಕ ||ಪ||
ಇರಲಿ ಜನನಿ ಜಠರದೊಳಗೆ ಧರೆಗೆ ಜನಿಸಿ ತಂದೆ ತಾಯ
ಕರದೊಳಿರಲಿ ಸ್ತನವನುಂಡು ಭರದಿ ನಿದ್ರೆ ಗೈಯುತಿರ್ಲಿ |
ನೆರೆದ ಬಾಲರೊಡನೆ ಆಡಿ ಚರಿಸುತಿರಲಿ ಬಾಲಕತ್ವ |
ತೆರಳಿ ಜವ್ವನವು ಬಂದು ರಮಣಿಯನ್ನೆ ವರಿಸಿ ಇರಲಿ ||1||
ಇರಲಿ ಸಿರಿಯ ಸಡಗರದಲಿ ಕರಿಹಯಂಗಳನ್ನೆ ಹತ್ತಿ ಮೆರೆಯುತಿರಲಿ |
ದೊರೆಗಳೊಡನೆ ಚರಿಸುತಿರಲಿ ಮೇರುಗಿರಿಯ ಶಿರದೊಳಿರಲಿ |
ಶರಧಿ ಮಧ್ಯಪುರದೊಳಿರಲರಣ್ಯದೊಳಗೆ ತಿರುಗುತಿರಲಿ |
ಅತಳ ವಿತಳ ಸುತಳವನ್ನೆ ಪೊಕ್ಕು ಇರಲಿ ||2||
ಕಾಯವಿದುವೆ ತನ್ನ ಪೆತ್ತ ತಾಯಿತಂದೆಗಳಿಗೋ |
ಜಾಯೆ ಸುತರ ಗೃಧ್ರ ಭಲ್ಲುಕಾದಿಗಳಿಗೋಪುಲಿಗೋ |
ವಾಯಸಾದಿ ಕ್ರಿಮಿಗೋ ಕೀಟಕಾದಿಗಳಿಗೋ | ನಾಯಿ ನರಿಗೋ
ವಾಯುಸುತನ ಕೋಣೆ ಲಕ್ಷ್ಮೀರಮಣನೊಬ್ಬ ಬಲ್ಲನಿದನು ||3||

ಈಗಳೋ ಆಗಳೋ ಇನ್ನಾವಾಗಳೋ
ಈಗಳೋ ಆಗಳೋ ಇನ್ನಾವಾಗಳೋ ಜೀವವಿದು
ಗೂಡಿನಿಂದ ಸಾಗಿ ಹೋಗುವಂಥ ಕಾಲ ||ಪ||
ಏಳು ಏಳು ಎಂದು ಯಮನ ಆಳು ಬಂದು
ಪಾಶವಿಕ್ಕಿ ಕಾಲ ಹಿಡಿದು ಕಲ್ಲು ಮುಳ್ಳು
ಮೇಲೆ ಎಳೆದು ಒಯ್ವ ಹೊತ್ತು ||1||
ಅಷ್ಟಪುರದ ಕಾವಲವರು ಕಟ್ಟ ಕಡೆಗೆ ತೊಲಗೆ
ಬಾಯ ಬಿಟ್ಟು ಹೊರಗೆ ಜೀವ ಕಂಗೆಟ್ಟು
ಹೋಗುವಂಥ ಕಾಲ ||2||
ದಾರಿಯೊಳಗೆ ಪಾಪಿಗಳನು ಘೋರ ಬಡಿಸಿ
ದಂಡದಿಂದ ಬೇರುಗೊಲೆಯ ಕೊಂದು ಯಮನ
ಊರಿಗೊಯ್ವ ಹೊತ್ತು ವ್ಯಾಳ್ಯಾ ||3||
ಹೆಂಡಿರಿಲ್ಲ ಮಕ್ಕಳಿಲ್ಲ ಬಂಧು ಬಳಗವಿಲ್ಲವಲ್ಲಿ
ಖಂಡವನ್ನು ಕಿತ್ತು ನರಕದ ಗುಂಡಿ ಗದ್ದಿ ತೆಗೆವ ಕಾಲ ||4||
ಬುದ್ಧಿವಂತರಾದರೆಚ್ಚರಿದ್ದು ಪಾಪವನ್ನು ಮಾಡದಿದ್ದು |
ಮರುತಸುತನ ಕೋಣೆ ಲಕ್ಷ್ಮೀಪತಿ
ಸ್ಮರಣೆಯಿದ್ದು ಭವವ ಗೆಲುವ ಹೊತ್ತು ||5||

ಬಹು ಕಾಲಕೆ ಕಂಡೆ ಚೋದ್ಯವ
ಬಹು ಕಾಲಕೆ ಕಂಡೆ ಚೋದ್ಯವ |
ಇದು ಅಹುದಾದರಹುದೆನ್ನಿ ಇಲ್ಲವೇ ಛೀ ಎನ್ನಿ ||ಪ||
ಕುಂಬಾರಗೌಡನ ಮನೆಯಲ್ಲಿ ಪುಟ್ಟಿದ
ತಂಬಿಗೆ ಚಂಬು ಚರಿಗೆಯಂತೆ |
ಹಂಬಿತು ಮನೆ ಮನೆ ತಪ್ಪದೆ ವಿಪುರ
ಜಂಬವ ತೆಗೆಯಿತು ತಾನೆ ತಾನಾಗಿ ||1||
ಸ್ನಾನಪಾನಕೆ ನಿತ್ಯ ನೇಮಕೆ ಶೌಚಾಚಮನಕೆ ಸಕಲಕ್ಕು
ತಾನಾಗುತ | ಮಾನವರಿಗೆ ಬಹುಳುಪಕರಿಸುತ ಕೆಟ್ಟ
ಹೀನ ಜಾತಿಯ ನಡತೆಯ ನಡೆಸುವುದನು ||2||
ಹಿರಿಯತನವು ಬಂದಿತೆಂದ ಹಂಕರಿಸದೆ
ನರರು ಸರ್ವತ್ರ ಸಮಗಾಣುತ |
ಭರಿತದೊಳಿರೆ ಕಾವವಶದಿಂದ ಎಜ್ಜ ಬಿದ್ದು
ಸುರಿಯಲು ಮನೆಯೆಲ್ಲ ನೀರೆ ನೀರಾದುದ ||3||
ನೀಲ ಕುಂತಳೆಯರ ಕೈಯಿಂದ ಕೆಟ್ಟವ
ಮಲಕೊಳಗು ತಾನು ಬಲಿಸಿ ಕೊಂಡು |
ನಾಳಿಕೇರದ ಚಿಪ್ಪು ಹಾಳೆ ಬಾಳೆಯದೊನ್ನೆ |
ಮೇಳದಿ ಏಕೋ ಪಾತ್ರಗಳಿಂದ ಮೆರೆದುದು ||4||
ತಿಥಿ ಮತಿ ಹವ್ಯಕವ್ಯಕು ತಾನೆ ತಾಗಿ |
ಅತಿ ಜತನವು ಎಂದೆನ್ನಿಸಿಕೊಳ್ಳುತ | ಕ್ಷಿತಿಯೊಳಧಿಕ ಭೀಮನ ಕೋಣೆ
ಶ್ರೀ ಲಕ್ಷ್ಮೀಪತಿಯಭಿಷೇಕಕ್ಕು ತಾನೇ ತಾನಾದುದ ||5||

ಛೀ ಛೀ ಬಿಡು
ಛೀ ಛೀ ಬಿಡು ಸಂಸಾರದಾಬ್ಧಿಯ ದಾಂಟಲು ನಾವೆಯ ಚಾಚು |
ಛೂ ಛೂ ಎಂದರು ಸರ್ವನು ಒಂದಿಷ್ಟು ನಾಚಿಕೆಯಿಲ್ಲ ಈಸು ||ಪ||
ಆಯಾಸಗೊಳುತಿಲ್ಲಿರುವುದರಿಂದಲು ಕಾಯವ ಬಿಡುವುದೆ ಲೇಸು |
ಬಾಯೊಳು ಬ್ರಹ್ಮವ ನುಡಿದರೆ ಬ್ರಹ್ಮದ ಹಾದಿಯು ತಿಳಿಯದು ಲೇಸು |
ಮಾಯೆಯ ಮರೆಯಲಿ ಏನು ತೋರದು ಪ್ರಾಚೀನ ಕರ್ಮವಿದೀಸು |
ನಾಯಕ ನರಕಕೆ ಬೀಳದೆ ಮನದೊಳು ತಾರಕ ಮಂತ್ರವ ಸೂಸು ||1||
ಹೊನ್ನಿನ ಬಳಿಯಲಿ ಸರ್ವಾಭರಣವು ಚಿನ್ನವು ಎನಿಸಿದ ಹಾಗೆ |
ಕನ್ನಡಿ ಮಸಕನು ಬೆಳಗಲು ವದನವು ಚೆನ್ನಾಗಿ ತೋರುವ ಹಾಗೆ |
ತನ್ನೊಳು ತಾನೆ ಜ್ಞಾನದಿ ತಿಳಿಯಲು ಚಿನ್ಮಯ ರೂಪನು ತಾನಾದ ಹಾಗೆ ||2||
ರೇಚಕ ಪೂರಕ ಕುಂಭಕದಿರವನು ಸಾಧಿಸು ನಿನಗದು ಊಚು |
ಯಾಚಿಸು ಗುರುವಿನ ಕರುಣದ ಕಿಡಿಯಲಿ ಜ್ಯೋತಿಗೆ ಬತ್ತಿಯ ಚಾಚು |
ಈ ಸಚರಾಚರ ದೊಳಗಣ ಜನರಿಗೆ ನೀಚರ ಸಂಗಕೆ ನಾಚು |
ಕೀಚಕನ ವೈರಿಯ ಕೋಣೆ ಲಕ್ಷ್ಮೀಶನ ಗೋಚರದೊಳು ಲಘು ತೋಚು ||3||

ವ್ಯರ್ಥವಾಯಿತೆನ್ನಿ ಜನ್ಮ ಸ್ವಾರ್ಥವಿಲ್ಲದೆ
ವ್ಯರ್ಥವಾಯಿತೆನ್ನಿ ಜನ್ಮ ಸ್ವಾರ್ಥವಿಲ್ಲದೆ |
ಪರಮಾರ್ಥವಾಗಿ ಕೃತ್ತಿವಾಸನ ಪೂಜೆಯನ್ನು ಮಾಡದೆ ||ಪ||
ಹಿಂದೆ ಜನನಿ ಗರ್ಭವಾಸದಿಂದ ಪೊರಟು ಬಂದ
ಮೇಲಕೊಂದು ದಿವಸ ನಾನು ನಿಷ್ಠೆಯಿಂದಲಿರ್ದು
ಆಗಮೋಕ್ತದಿಂದ ಶಿವಗೆ ಜಲದಿ ರುದ್ರದಿಂದ ಜಳಕಗೈದು
ಶ್ರೀಗಂಧ ಪುಷ್ಪ ಪತ್ರೆಯಿಂದ ಪೂಜೆಯನ್ನು ಮಾಡದೆ ||1||
ಪುಣ್ಯನದಿಯು ಪುಣ್ಯಕ್ಷೇತ್ರ ಪುಣ್ಯಭೂಮಿಯಲ್ಲಿ ವಾಸ
ಪುಣ್ಯಕಥೆಯು ಪುಣ್ಯತೀರ್ಥ ಸ್ನಾನವಿಲ್ಲದೆ |
ಪುಣ್ಯ ಮೂರ್ತಿಯಲ್ಲಿ ಧ್ಯಾನ ಪುಣ್ಯ ಪುರುಷರೊಡನೆ ಸಂಗ |
ಪುಣ್ಯ ಕಾಲದಲ್ಲಿ ಶಿವನ ಪೂಜೆಯನ್ನು ಮಾಡದೆ ||2||
ಮಂಡೆ ಜುಟ್ಟು ಸೂತ್ರವನ್ನು ಖಂಡಿಸಿರ್ದು ಯತಿ ಎನುತ್ತ
ದಂಡವನ್ನು ಧರಿಸಿ ಪೀತ ಕೌಶೇಯ ವಸನವನ್ನು ಪೊದ್ದು |
ಮೊಂಡ ತನದಿ ಸಕಲ ವಿಷಯ ಭೋಗವನ್ನು ಭೋಗಿಸುತ್ತ |
ಮಂಡೆ ಬೋಳನಾದರೇನು ಮನವ ಬೋಳ ಮಾಡದೆ ||3||
ಸಾರಮೇಯನಂತೆ ಬರಿದೆ ಚರಿಸದಿನ್ನು ನಿನ್ನ ನೀನು
ವಿಚಾರಿಸಿನ್ನು ಮರಳಿ ಜನ್ಮ | ಬಾರದಂತೆ ಭಜಿಸು
ಕಾಮಾರಿಯನ್ನು ಆಗಮೋಕ್ತದಿಂದ ಪೂಜೆಯನ್ನು ಮಾಡಿ |
ಘೋರ ಪಾತಕಂಗಳನು ಸುಟ್ಟು ಸೂರೆ ಮಾಡದೆ ||4||
ಬೆಟ್ಟದೊಳಗನಂತ ವೃಕ್ಷ ಹುಟ್ಟಿ ಮಡಿದವೋಲು | ಜನ್ಮ |
ನಷ್ಟವಾಯ್ತು ವಿಧಿಯು ಬರೆದಿಟ್ಟ ದುರ್ಲಿಖಿತವೆಲ್ಲ |
ತುಟ್ಟಿಸಿತ್ತು ತಿಳಿದು ಶಿವನ ಮುಟ್ಟಿ ಪೂಜಿಸಾದರಿನ್ನು
ಕೆಟ್ಟು ಹೋಗಬೇಡ ಲಕ್ಷ್ಮೀಪತಿಯ ಸ್ಮರಣೆ ಮಾಡದೆ ||5||

ಇಂದಿನಾ ಜನ್ಮದಲಿ ದರಿದ್ರನು
ಇಂದಿನಾ ಜನ್ಮದಲಿ ದರಿದ್ರನು |
ಹಿಂದಿಲ್ಲ ಮುಂದಿಲ್ಲ ಇಂದು ಕೂಡಲಿಕೆ ಇಲ್ಲ |
ಎಂದೆಂದಿಗೂ ಹುಟ್ಟು ದರಿದ್ರನು ||ಪ||
ಮುಂದಿನ ಜನ್ಮದಲಿ ದಾನಧರ್ಮಗಳನ್ನು ಅನ್ನವನು
ಅತಿಥಿಗಿಕ್ಕದ ಕಾರಣ | ಚನ್ನಾಗಿ ವ್ರತ ನೇಮಗಳನು
ಶಿವಪೂಜೆಯನು ತನ್ನ ಕೈಯಾರೆ ಮಾಡದ ಕಾರಣ ||1||
ತೀರ್ಥಕ್ಷೇತ್ರಗಳಲ್ಲಿ ಗೋದಾನ ಧನವ ಸ
ತ್ಪಾತ್ರಕೀಯಲು ಇಲ್ಲದ ಕಾರಣ |
ಮಾತೃ ಪಿತೃ ಗುರುದೇವತಾ ಭಕ್ತಿಯಿಲ್ಲದಿರೆ
ಧಾತ್ರಿಯೊಳು ದರಿದ್ರನದು ಕಾರಣ ||2||
ಬೇಡುವುದು ಪರರೊಡನೆ ಕಾಡುವುದು ಕೊಡದಿರಲು
ಮಾಡುವುದು ಕೋಪವನು ಅದು ಕಾರಣ |
ಗೂಡಿನೊಳು ರುಜೆ ರೋಗ ಹುಟ್ಟಿ ದಣಿಯುತ್ತಿಹುದು |
ರೂಢಿಯೊಳು ದರಿದ್ರನದು ಕಾರಣ ||3||
ಉಣ್ಣಲುಡಲಿಕೆ ಇಲ್ಲ ಹೆಣ್ಣಿನಲಿ ಸುಖವಿಲ್ಲ |
ಬಣ್ಣ ಬಂಗಾರವಿಲ್ಲದು ಕಾರಣ | ತಣ್ಣನಿರಲಿಕೆ
ಒಂದು ಮನೆಯಿಲ್ಲ ಸ್ಥಳವಿಲ್ಲ | ಮುನ್ನ
ದಾನವ ಮಾಂಡದಿಹ ಕಾರಣ ||4||
ಸಿರಿವಂತನಾಗಬೇಕಾದರೆ ಶಿವಾರ್ಚನೆಯ |
ನೆರೆಮಾಡಿ ಭಕ್ತಿಯೊಳು ದಾರಿದ್ರವಪರಿಹರಿಸಿ |
ಮರುತಸುತ ಕೋಣೆ ಲಕ್ಷ್ಮೀರಮಣನೊಲಿದವರಿಗೆ
ಭಾಗ್ಯಬಹುದದು ಕಾರಣ ||5||

ಹೋದ್ರೆ ಹೀಗೆ ಹೋಗಬೇಕು
ಹೋದ್ರೆ ಹೀಗೆ ಹೋಗಬೇಕು ಗೂಡಿನಿಂದ ಜೀವ |
ಸಾಧನೆಯನ್ನು ಮಾಡಿದಾತ ಲಾಗವನ್ನು ಹಾಕಿದಂತೆ ||ಪ||
ಬೇನೆ ಮೈಯೊಳೇನು ಇಲ್ಲದೆ ಜ್ಞಾನವಿದ್ದು ಎಚ್ಚರಿದ್ದು
ಕಾನ ಕಪಿಯವೋಲ್ ಮನಸು ಹೀನ ವೃತ್ತಿಗೆ ಹೋಗದಂತೆ ||1||
ಹುಚ್ಚುಗೊಳದೆ ಭಂಗಿಯನ್ನು ಹಚ್ಚದಾತ ಕುಣಿಯದಂತೆ
ಸ್ವಚ್ಛವಾಗಿ ಕಾಯದೊಳಗೆ ತುಚ್ಛ ಮನವು ಇಲ್ಲದಂತೆ ||2||
ಅತ್ತಲಿತ್ತ ಹೊಡೆಕಣಿಲ್ಲದೆ ಸುತ್ತಮುತ್ತ ಕಾದುಕೊಂಡ |
ಪುತ್ರಮಿತ್ರ ಕಳತ್ರದಲ್ಲಿ ಮತ್ತೆ ಮಮತೆಯಿಲ್ಲದಂತೆ ||3||
ನಾರಾಯಣ ಹರಿ ನರಕಾಂತಕ ರಾಮಕೃಷ್ಣ |
ವಾರಿಜನಾಭ ಹರಿಯೆ ಎನ್ನ ಸಲಹೋ ಬಿಡದೆ ಎನ್ನುತ ||4||
ವಾಂತಿ ಭ್ರಾಂತಿಯೆರಡು ಇಲ್ಲದೆ ಉತ್ಕ್ರಾಂತಿ ಕಾಲದಲ್ಲಿ
ಲಕ್ಷ್ಮೀಕಾಂತ ನಾಮಸ್ಮರಣೆ ಜಿಹ್ವೆ ನಿರಂತರದಲ್ಲಿ ನುಡಿಯುತಿರ್ದ ||5||

ದುರ್ಜನರಿಗೀ ಕಾಲ ಶುಭದ ಕಾಲ
ದುರ್ಜನರಿಗೀ ಕಾಲ ಶುಭದ ಕಾಲ |
ಸಾಧು ಸಜ್ಜನರಿಗನ್ನ ಕಿಲ್ಲದೆ ಸಾವ ಕಾಲ ||ಪ||
ಅರಮನೆಯ ಬಾಗಿಲನು ಕಾದು ಕೊಂಡಿರ್ದು
ನೃಪವರ ನೊಡನೆ ಮಾತು ಕಥೆಗಳ ನಡೆಸುತ |
ವರ ಮಂತ್ರಿಯಾಗಿ ರಾಜ್ಯಾಧಿಕಾರಂಗಳನು ನಿರುತ
ಮಾಡುವಂಗೆ ಇದು ಒಳಿತು ಕಾಲ ||1||
ಅಡಿಗಡಿಗೆ ಮಂತ್ರಿಗಳನಾಶ್ರಯಿಸಿ ಕೋವಿದರು
ಗಡಿಗಳನು ಕೊಡಿಸೆನಗೆ ತನಗೆನ್ನುತ |
ಒಡನೆ ಮೇಲಾಡಿ ಹೆಚ್ಚಿಗೆಮುಟ್ಟಿಗೆಯ ಹೊತ್ತು
ಕೊಡಿರೆಂದು ಪ್ರಜೆಗಳನು ಬಡಿವ ಕಾಲ ||2||
ಮತ್ತಿವರನಾಶ್ರಯಿಸಿ ಕೆಲರು ಮಣಿಹಂಗಳನು
ಪೊತ್ತು ಸೀಮೆಯ ಗ್ರಾಮಗಳ ನೋಡುತ |
ಇತ್ತು ಕುಳಸ್ಥಳ ವಂಚನೆಗಳೆಂದು ಒಂದಕಾ
ರೆತ್ತಲೊಕ್ಕಲು ಬಾಯ ಬಿಡುವ ಕಾಲ ||3||
ಬುಡಗಳನ್ನು ಗೈದೆ ಹಾಳ್ಮಾಡಿಕೊಂಡಿರ್ದರಿಗೆ
ಕಡ ಮೊದಲುಗಳ ಕೊಟ್ಟು ಪೋಗೆಂಬರು |
ಅಡೆಯಂಚು ಮೂಲೆಗಳ ಗೈದು ಕುಳದೆರಿಗೆಯನು
ಕೊಡುವರಿಗೆ ಈ ಕಾಲ ದಣಿವ ಕಾಲ ||4||
ಚಾಡಿಕಾರರು ಹೆಚ್ಚಿ ಕೆಡಿಸಿ ವರರಾಜ್ಯವನ್ನು
ರೂಢಿಪತಿಗಳಿಗೆಲ್ಲ ಕಿವಿಯೇ ಕಣ್ಣು |
ನೋಡಿದರೆ ಮರುತ ಸುತ ಕೋಣೆ ಲಕ್ಷ್ಮೀರಮಣ
ನಾಡಿಸಿದ ವೋಲು ಜಗವಾಡುತಿಹುದು ||5||

ಕರ್ಮ ಹರನಾಗಬೇಕು
ಕರ್ಮ ಹರನಾಗಬೇಕು
ಕರ್ಮ ಹರನಾಗಿ ಕಬ್ಬಿಣ ಕರುಗುವಾ ತೆರದಿ
ಬ್ರಹ್ಮವನು ಪಿಡಿದು ಕರ್ಮವಾ ಕರಗಬೇಕು ||ಪ||
ತವುವೊಂಬೊ ಕುಲಿಮೆಯಲಿ
ಮನದ ಕರ್ಮವನಿಟ್ಟು
ಜ್ಞಾನ ಜ್ಞಾನವೆಂಬೊ ಇಕ್ಕಳವ ಪಿಡಿದು
ನೆನರಸುಂ ಸ್ತಿತಿಯೊಂಬೊ ಕಿಚ್ಚಿಕ್ಕಬೇಕು ||1||
ಅರಿಷಡ್ವರ್ಗಂಗಳನು ತರಿದು ಇದ್ದಲು ಮಾಡಿ
ಹರನೆಡೆಯೊಂಬೊ ಕುಲಿಮೆ ಹೂಡಿ
ನರವ ಪ್ರಣವದ ಜೋಡು ತತ್ತಿಗಳನ್ನೇ ಕೂಡಿ
ನೆರೆತನ್ನ ಜನ್ಮದಿ ಜಾತ್ಯವನು ಕರಗುವಡೆ ||2||
ಕರಗಿ ರಸವಾಗಿ ನಿಂತಿದ್ದವನವನೆ ಕಂಡು
ಪರಮಯೋಗದಿ ಆತ್ಮ
ನರತಿಹ ತಿಳಿದು ಕರುಣಾತ್ಮದೊಳು ಬೆರೆದು
ಕರುಣಯತಿಗಳು ಪ್ರಿಯಕರಸ್ಥಳದ ನಾಗಲಿಂಗರಾಯ ||3||

ಎಲ್ಲಿ ಹುಟ್ಟಿದರೇನು ಎಲ್ಲಿ ಮಡಿದರೇನು
ಎಲ್ಲಿ ಹುಟ್ಟಿದರೇನು ಎಲ್ಲಿ ಮಡಿದರೇನು |
ಅಲ್ಲಿಗಲ್ಲಿಗೆ ರಾಮಸ್ಮರಣೆ ಸೊಲ್ಲು ಸೊಲ್ಲಿಗೆ ಬರುತಿರಲು ||ಪ||
ಇಹವು ಎಂಬತ್ತನಾಲ್ಕು ಲಕ್ಷ ಜೀವರಾಶಿಯಲ್ಲಿ
ಮರಳಿ ಮರಳಿ ಹುಟ್ಟಿ ಸತ್ತು ಬರುವ ಜನ್ಮದೊಳಗೆ
ಜ್ಞಾನವಿರಲಿಕಲ್ಲಿ ಹರಿಯ ಸ್ಮರಣೆ ನಿರುತವಿರಲು
ನೀಚ ಜನ್ಮ ದೊರಕಲದುವೆ ಯಾವ ಜನ್ಮದಲ್ಲಿ ಬಂದರದು ಆನಂದ ||1||
ನೊರಜು ಕೀಟ ಸರಿಸೃಪಾದಿ ಕ್ರಿಮಿ ಮೃಗಾದಿ ಪಕ್ಷಿನಿಚಯ
ತರುಲತಾದಿ ಸಕಲ ಜೀವ ಜಂತು ಜನ್ಮದಲ್ಲಿ ಜ್ಞಾನ
ವಿರಲಿಕಾವ ಜನ್ಮದಲ್ಲಿ ಬಂದರೇನು ಅಳಿದರೇನು
ಹರಿಯ ನಾಮಸ್ಮರಣೆ ಜಿಹ್ವೆ ಕೊನೆಯೊಳಿರಲಿಕದು ಆನಂದ ||2||
ಊಚು ನೀಚು ಜನ್ಮವೆಲ್ಲ ಪ್ರಾಚೀನದ ಕರ್ಮ ವಶದಿ
ಕೂಚು ಮಾಡಿ ಜನ್ಮ ಕಿಕ್ಕಿ ಬಾಚಿ ಬರಗುತ್ತಿಹಳು ಮಾಯೆ |
ಈ ಚರಾಚರಂಗಳೆಲ್ಲ ಬ್ರಹ್ಮವೆಂದು ತಿಳಿದವರಿಗೆ |
ಕೀಚಕಾರಿ ಕೋಣೆ ಲಕ್ಷ್ಮೀಪತಿಯ ಸ್ಮರಣೆಯೊಂದು ಆನಂದ ||3||

ಈಸಲಾರೆ ಗುರುವೆ ಸಂಸಾರ ಶರಧಿಯ
ಈಸಲಾರೆ ಗುರುವೆ ಸಂಸಾರ ಶರಧಿಯ |
ಮೋಸದಿಂದ ಬಿದ್ದು ನಾನು ಘಾಸಿಯಾಗಿ ನೊಂದೆ ಗುರುವೆ ||ಪ||
ಗುರುವೆ ಬೇರೆ ಗತಿಯ ಕಾಣೆ ನೀನೆಗತಿ ದಿಗಂಬರೇಶ
ಮರೆಯಹೊಕ್ಕೆನಿಂದು ನಿಮ್ಮ ಚರಣ ಕಮಲವ |
ಕರುಣದಿಂದಲೆನ್ನ ಭವದ ಶರಧಿಯನ್ನು ದಾಟುವಂಥ
ಪರಿಯನೊರೆದು ನಾವೆಯಿಂದ ದಡವ ಸೇರಿಸೋ ||1||
ಮಡದಿ ಮಕ್ಕಳೆಂಬುದೊಂದು ನೆಗಳು ಖಂಡವನ್ನು ಕಚ್ಚಿ
ಮಡುವಿಗೆಳೆದು ತಿನ್ನುತಾವೆ ತಡೆಯಲಾರೆನು |
ನಡುವೆ ಸೊಸೆಯು ಎಂಬ ನಾಯಿ ಜಡಿದು ಘೋರ
ಸರ್ಪದಂತೆ ಕಡಿಯೆ ವಿಷವು ನೆತ್ತಿಗಡರಿ ಮಡಿವ ಕಾಲ ಬಂದಿತು ||2||
ಹಲವು ಜನ್ಮದಲಿ ಬಂದು ಹಲವು ಕರ್ಮವನು ಮಾಡಿ
ಹಲವು ಯೋನಿಯಲ್ಲಿ ಹುಟ್ಟಿ ಹಲವು ನರಕವ
ಹಲವು ಪರಿಯ ಲುಂಡು ದಣಿಸು ನೆಲೆಯ ಗಾಣದೆನ್ನ
ಜೀವ ತೊಳಲಿತಿನ್ನು ಗತಿಯ ಕಾಣೆ ಗುರು ಚಿದಂಬರ ||3||
ಕಾಲವೆಲ್ಲ ಸಂದು ತುದಿಯ ಕಾಲ ಬಂತು ಕಂಡ ಪರಿಯ
ಹೇಳಿಕೊಂಡೆ ಗುರುವೆ ಎನ್ನ ಮೇಲೆ ದಯವನು |
ತಾಳಿ ಕಿವಿಗೆ ಊರ್ಧ್ವಗತಿಗೆ ಪೋಪ ಮಂತ್ರವನ್ನು
ತಿಳಿಸಿ ನಿರಾಳ ವಸ್ತುವನ್ನು ತೋರೋವರ ದಿಗಂಬರ ||4||
ಆಸೆಯೆಂಬ ನಾರಿಯನ್ನು ನಾಶಗೈದು ಗುರುವಿನಡಿಗೆ
ಹಾಸಿ ತನುವ ದಡದಂತೆ ಬೇಡಿಕೊಂಡೆನು |
ಈ ಸಮಸ್ತ ಲೋಕವನ್ನು ಪೋಷಿಸುವ ಲಕ್ಷ್ಮೀಪತಿಯ
ದಾಸಭಯವಿತ್ತು ಕಾಯೋ ವರ ದಿಗಂಬರ ||5||

ಒಂದು ಕೊಟ್ಟರೆ ಶಿವ ಮತ್ತೊಂದು ಕೊಡನಯ್ಯಾ
ಒಂದು ಕೊಟ್ಟರೆ ಶಿವ ಮತ್ತೊಂದು ಕೊಡನಯ್ಯಾ
ಆನಂದ ವಸ್ತುವಿಗೊಂದು ಲೀಲೆ ಇದಯ್ಯ ||ಪ||
ರೊಕ್ಕವಿದ್ದವರಿಗೆ ಮಕ್ಕಳೆಂಬವರಿಲ್ಲ | ಮಕ್ಕಳಿದ್ದರೆ ತಕ್ಕವನಿತೆಯಿಲ್ಲ |
ಚೊಕ್ಕ ಸತಿಯ ಸಿಕ್ಕಿ ತಾನು ರೂಪದೊಳಿಉ್ವ
ಪಕ್ಕನೆ ಅಗಲಿ ಪೋಗುವರೊಬ್ಬರಯ್ಯ ||1||
ಚೆಲುವ ಹೆಣ್ಣಿಗೆ ತಕ್ಕ ಚೆಲುವ ಪುರುಷನಿಲ್ಲ
ಚೆಲುವನಾದವಗೊಳ್ಳೆ ಲಲನೆಯಿಲ್ಲ |
ಹಲವು ಜನ್ಮದ ಪುಣ್ಯ ಫಲದಿಂದ ಸೇರಲು ಹೊಳೆದು
ಹೋಗುವರಿದರೊಳಗೊಬ್ಬರಯ್ಯ || ||2||
ಸತಿ ಸುತರು ಇರುತಿರಲು ದಾರಿದ್ರ ತಿಂಬುವುದಕಿಲ್ಲ |
ಗತಿ ಇಲ್ಲದವನಿಗೆ ನರಕವಲ್ಲ | ಅತಿಶಯವಾಗಿ ತಿಂಬುದಕಿದ್ದ ನರರಿಗೆ
ಸತತ ಶಾರೀರ ಸುಖವಿಲ್ಲವಯ್ಯ | ||3||
ಉಂಬಲೂಡಲು ಸರ್ವ ಸಕಲ ಸಂಪತ್ತೆಲ್ಲ
ತುಂಬಿರಲು ತನ್ನ ಗೃಹದೊಳೆಲ್ಲ |
ಬೆಂಬಿಡದೆ ರೋಗವು ಪುಟ್ಟಿ ತನುವಿನೋಳ್
ತಿಂಬುದಕವಗೆ ಬಾಯಿಗಳಿಲ್ಲವಯ್ಯ | ||4||
ಸಕಲ ಜೀವರಿಗು ಚಿಂತೆಗಳಿಲ್ಲದವರಿಲ್ಲ |
ಸುಖವು ಸ್ವಪ್ನದೊಳು ಕಾಣುವುದಿಲ್ಲವಯ್ಯ |
ಬಕನ ವೈರಿಯ ಕೋಣೆಯ ಲಕ್ಷ್ಮೀಪತಿ ಪ್ರಿಯ
ಮಕರಕೇತನ ವೈರಿಯಾಟವಿದಯ್ಯ | ||5||

ಯಾಕೆ ಬಯಸುವೆ ಸಿರಿಯ ನೆಲೆ
ಯಾಕೆ ಬಯಸುವೆ ಸಿರಿಯ ನೆಲೆ ಮಾನವ | ಸಿರಿಯು
ನಾಕಪತಿ ಮೊದಲಾದವರಿಗಸ್ಥಿರವು ||ಪ||
ಧನಕನಕ ವಸ್ತುವಾಹನವೊಂದು ಸ್ಥಿರವಲ್ಲ |
ಕನಸಿನಂದದಿ ಬಾಳ್ವೆ ಅಭ್ರಮಿಂಚು |
ತನುವಿನಲಿ ಹರಿಯ ಸೆರೆವಿಡಿದು ಕೊಂಬುದೆ ರೊಕ್ಕ |
ಚಿನುಮಯನ ಪಾಡುವುದೆ ಸಕಲ ಬದುಕು | ||1||
ಇಂದು ನೀನರಿದು ಜ್ಞಾನದಿ ನಡೆವುದೆ ಮೋಕ್ಷ |
ಸಿಂಧು ಶಯನನ ನಾಮ ವೈಕುಂಠವೋ |
ಕಂದರ್ಪನುಪಟಳವ ಕಟ್ಟುವುದೆ ಕೈಲಾಸ |
ಮಂದರಧರನ ನೆನೆವುದೆ ಸಕಲವಸ್ತು ||2||
ಭಕ್ತವತ್ಸಲನ ನೆನೆವುದೆ ಸಕಲ ಸಂಪತ್ತು |
ಚಿತ್ತ ಶುದ್ಧಿಯಾಗುವುದೆ ಸಕಲಭಾಗ್ಯ
ಮತ್ತೆ ಭೀಮನಕೋಣೆ ಲಕ್ಷ್ಮೀಪತಿಯ ನೆನೆದು
ಉತ್ತರಿಸಿದರೆಭವದ ಸಕಲ ಪದವಿ ||3||

ಏನೇನು ಬುದ್ಧಿ ನಿನಗಿಲ್ಲವೋ
ಏನೇನು ಬುದ್ಧಿ ನಿನಗಿಲ್ಲವೋ | ಮೃತ್ಯುವ
ಧೀನನಾಗಿ ಕೆಡದಿರು ಮೂಢ ||ಪ||
ನಿನ್ನೊಳಗೆ ನೀ ತಿಳಿದು ನೋಡಿದರೆ ಮಾಯೆ
ಚೈತನ್ಯ ಸಾಲದು ಕಾಯಕಂ ಮುಸುಕಲು |
ಪನ್ನಗಾರಿಧ್ವಜನ ನಾಮ ಸಂಕೀರ್ತನೆಯ
ಚೆನ್ನಾಗಿ ಮಾಡಲದು ಸಾಫಲ್ಯವು ||1||
ನಾನು ನಾನೆಂದೆಂಬ ಹಮ್ಮಿನಲಿ ಮನ ಮುಳುಗಿ
ಶ್ವಾನ ಸೂಕರನಂತೆ ಸಂಚರಿಸುತ
ಸ್ನಾನ ಸಂಧ್ಯಾವನಂದನಾದಿ ಹರಿಯರ್ಚನೆಗ
ಳೇನು ಇಲ್ಲದೆ ಕಾಲವನು ಕಳೆವರೆ ||2||
ಅಂತಕನ ದೂತರಿಗೆ ಕೈ ಸಿಕ್ಕದಿರು ಮರುಳು
ಭ್ರಾಂತೆ ಸದ್ಗುರುಗಳ ಕಟಾಕ್ಷದಿಂದ |
ಅಂತರಂಗದೊಳು ಭೀಮನಕೋಣೆ ಶ್ರೀ ಲಕ್ಷ್ಮೀ
ಕಾಂತನನು ಭಜಿಸಲಪ್ಪುದು ಮೋಕ್ಷಪದವಿ ||3||