ಚಿತ್ತ ದೋಷ ಕಳಿ
ಶ್ರೀಗುರು ವರ ಸುಖ | ದಾಗರನಂಘ್ರೀಗ|
ಳೀಗೆ ಸಂತಸವನಖಿಳರಿಗೆ ||ಪಲ್ಲ||
ಹರನಡಿಗಳ ಬಂಧುರದೊಳಿಡಿಸಿ ಬಹು |
ದುರಿತ ದುರ್ಗಣಂಗಳ ಕೆಡಿಸಿ ||
ವರಮಂತ್ರಾಮೃತವೆರೆದು ಸತ್ಯಪಥ |
ಕಿರದಖಿಳರ ತಾ ತಿರುಗಿಸುವ ||1||
ಶರಣ ಸಂಗದೊಳಿರಿಸಿ ಶಮೆದಮೆಯ |
ನರುಪಿವಾದವಶ್ಯಗಳಳಿಸಿ ||
ಸಿರಿಸತಿಸುತರನು | ಮರಿಸಿ ಬೇಗದಲಿ |
ವಿರತಿಯೊಳಖಿಲರ ಬದುಕಿಸುವ ||2||
ಚಿತ್ತ ದೋಷ ಕಳಿ | ಸುತ್ತ ನಿಗಮದೊಲ |
ವಿತ್ತು ನಿಕೃತಿಯನು ಪರಿಹರಿಸಿ ||
ಉತ್ತುಂಗ ವಿಭವವೆತ್ತು ಮುದದಿ ಘನ
ವೃತ್ತಿಗಳಖಿಳರಿಗೊದಗಿಸುವ ||3||
ಮುಸುಗಿದ ಮರವೆಯ ನಶಿಸಿಯೇಕ ಮಾ |
ನಸವನು ಹೃದಯದಿ ಕರಿಗೊಳಿಸಿ ||
ವಸೆದಾತ್ಮಾರ್ಥವನು ಸುರಿ ಸಂಶಯವ|
ಪರಿಹರಿಸ್ಯಖಿಳರ ಪಾಲಿಸುವ ||4||
ಶಿವಜೀವೈಕ್ಯದ ವಿವರವ ತೋರಿಸಿ |
ಭವಮಾಲೆಯ ಬಿಡದಿಲ್ಲೆನಿಸಿ ||
ತವೆಶಂಕರನೆಂಬುವನಾಮವನಾಂ |
ತವನಿಯೊಳ ಖಳರ ಪೋಷಿಸುವ ||5||
ಶ್ರೀಗುರೂತ್ತಮ ಪಾಲಿಸೀಗೆನ್ನನು
ಶ್ರೀಗುರೂತ್ತಮ ಪಾಲಿಸೀಗೆನ್ನನು |
ಆಗಮಾಗೋಚರ ನಿರೋಗಿ ನೀನು ||ಪಲ್ಲ||
ಸಾಧಕ ಜನಾಂತರಸು | ಶೋಧಕ ವಿಶುದ್ಧಮತಿ |
ಭೋಧಕ ದುರೀಷಣ ನಿಷೇಧ ಕಸದಾ ||
ವ್ಯಾದಿಕಲುಷಪ್ರಕರ | ಬಾಧಕಮದಾಷ್ಟ ಕವಿ |
ರೋಧಕ ಮನೋಗತಿ ನಿರೋಧಕ ಭೂ ||1||
ಮಾನಾಷ್ಟಮೀರ್ದಮುನಿ | ಮಾನಸ ಮನೋಜ್ಞತರ |
ಮಾನಸ ಮರಾಳ ಬಹು ದೀನರಕ್ಷ ||
ಮಾನವಾಘ ಘನಪವಮಾನಪೂಜಿತಪದ ಸ |
ಮಾನರಹಿತಗಣಿತ ನವೀನಚರಿತ ||2||
ಕಾಮಕ್ರೋಧಾದಿರಿಪು | ಸ್ತೋಮವರ್ಜಿತ ಮುಕ್ತಿ |
ಧಾಮ ಭವಭೀಮ ನಿಸ್ಸೀಮ ಮಹಿಮ ||
ನೇಮಶಿಷ್ಯಾಂಬುನಿಧಿ | ಸೋಮದೇಶಿಕ ಸಾರ್ವ |
ಭೌಮಶಂಕರ ವಿಮಲ ನಾಮಾಂಕಿತ ||3||
ಪಾಹಿಮಾಂ ಪಾಹಿಮಾಂ ಪಾರ್ವತೀಶ
ಪಾಹಿಮಾಂ ಪಾಹಿಮಾಂ ಪಾರ್ವತೀಶ
ರೋಹಿತಾಶ್ವಾಕ್ಷ ಭವರೋಗ ನಾಶ ||ಪಲ್ಲ||
ದುಷ್ಟ ಜನ ದರ್ಪಹರ ಶಿಷ್ಟ ಜನ ಪಾಲಕ ಸ
ದಿಷ್ಟ ಜನ ಸನ್ನುತ ವಿಶಿಷ್ಟ ಚರಿತ
ಅಷ್ಟದಿಗಧೀಶ ಸುರ ಶ್ರೇಷ್ಠಾದಿನತ ಪಾದ
ಸೃಷ್ಟಿ ನಾಯಕ ಮನೋಭೀಷ್ಟದಾತ ||1||
ದಂಡಧರಬಾಧಿತಮೃಕಂಡು ಸುತರಕ್ಷ ಪರಿ
ಪಾಂಡುರ ಶರೀರ ಬ್ರಹ್ಮಾಂಡ ಭರಿತ
ಪಂಡಿತ ಜನೌಘವರ ಪುಂಡರೀಕಾರ್ಕಭವ
ಖಂಡಿತ ಲಸದ್ಗುಣ ಸುಮಂಡಿತ ಸದಾ ||2||
ಸತ್ಯಮಯ ವಾಕ್ಯಶುಭ ಕೃತ್ಯ ಸಚ್ಛರಣ ಪದ
ಭೃತ್ಯ ನಿಗಮಾಗಮ ವಿನುತ್ಯ ಮಹಿಮ
ದೈತ್ಯಮದ ಮರ್ದನಾದಿತ್ಯ ಶತ ದೀಪ್ತಿಯುತ
ನಿತ್ಯ ಗುರು ಶಂಕರನೆಯತ್ಯಧಿಕ್ಯ ||3||
ಪಂಪಾಪತಿ ಪ್ರಸುಖ ಸಂಪತ್ಕರ
ಮಾಂಪಾಹಿ ಮಾಂಪಾಹಿ ಮುಪ್ಪುರ ಹರ |
ಪಂಪಾಪತಿ ಪ್ರಸುಖ ಸಂಪತ್ಕರ ||ಪಲ್ಲ||
ತಾಮರಸಲೋಚನ ಪಿತಾಮಹ ಸುಪೂಜ್ಯವಿತ |
ತಾಮಯವಿದೂರ ಸತತಾಮಲವೃತ ||
ತಾಮಸ ರಹಿತ ಜನನ ತಾ ಮರದೃಮವಿಲಸಿ |
ತಾಮದ ಗುಣಾಢ್ಯ ಸುತ್ರಾಮ ವಿನುತ ||1||
ಭಾವಜಾಂತಕಯತಿಸ | ಭಾವಲಯ ಮಂಡನಶು |
ಭಾವಹ ಮಹೇಶ ದುರ್ಭಾವ ಶೂನ್ಯ ||
ಪಾವನಚರಿತ್ರಸುರ | ಪಾವನ ತಪದ ಸತ್ಕೃ |
ಪಾವನಧಿ ವಿಶ್ವರೂಪಾವರ್ತಕ ||2||
ಸಾಮಜಾಸುರಹರರ | ಸಾಮರ ಪರಿಸ್ತುತ ಝ |
ಸಾಮಂದಯುತ ವೇದಸಾಮಲೋಲ ||
ಕಾಮಪಿತನತಪದಾ | ಕಾಮಶರಣ ಪ್ರಿಯನಿ |
ಕಾಮ ಶುಭಲೀಲ ಗುರುಶಂಕರೇಶ ||3||
ಹಿಮಗಿರೀಂದ್ರ ಸುತೆ
ಹಿಮಗಿರೀಂದ್ರ ಸುತೆ | ಪಾಹಿಮಾಂ
ವಿಮಲತರ ಚರಿತೆ ದಯಾನ್ವಿತೆ ||ಪಲ್ಲ||
ಶಮಿಜನಾಳಿನುತೇ | ಮೃಗಪತೀ
ಗಮನೆರ ಮಾನಮಿತೆ ವಿರಾಜಿತೆ ||1||
ಉರಗ ಸಮವೇಣಿ | ತ್ರಿಭುವನೋ |
ದ್ಧರಣಿ ಶರ್ವಾಣಿಲ ಸದ್ ||2||
ಪರಮ ರುದ್ರಾಣಿ ಮಹಿಷ ಬಲ |
ಹರಿ ವಿಶಾಲ ನಯನಿ ವಿಚಕ್ಷಣಿ ||3||
ಪಂಕರುಹ ವದನಿ | ಗುರೂತ್ತಮ |
ಶಂಕರ ಸುರಮಣಿ ಸುಖಸದನಿ ||4||
ಶಾಂಕರೀ ಕರುಣಿ ನಿಖಿಲಮಹಿ |
ಮಾಂಕಿತೆ ಭವಾನಿ ಭಯ ಹರಿಣಿ ||5||
ಶ್ರೀ ಗೌರಿ ನೀ ಪಾಲಿಸೆನ್ನ ಭುವನೇಶ್ವರಿ
ಶ್ರೀ ಗೌರಿ ನೀ ಪಾಲಿಸೆನ್ನ ಭುವನೇಶ್ವರಿ |
ಯೋಗಿ ಹೃದಯವಸೆ ನಿಗ |
ಮಾಗಮನುತೆ ನಾ ಬಾಗಿ ನಮಿಪೆ ||ಪಲ್ಲ||
ಜನನ ಮರಣ ಜರೆಯನು ಗೆಲಿದ ಸುಧಾ |
ದಿನವಗಲದೆ ಸೇವಿಸದಜ ಹರಿಮುಖ ||
ರನು ಭಂಗಿಸಿದಾ | ಘನವಿಷ ಶಿವ ಸವಿ |
ದನು ನಿನ್ನಯ ಮಾಂಗಲ್ಯ ಬಲದಿ ||1||
ಉಸುರಲು ತನ್ನಗೆ | ಹೆಸರಿರದ ಭವನು |
ದೆಸೆಯಿಲ್ಲದೆ ವಾಸಿಸುತಿರಲಾತನ ||
ಹಸನ ಮುಖದಿಸಂತಸದಿಂ ಕೈವಿಡಿ |
ದೆಸವ ತ್ರಿಭುವನಕರಸನೆನಿಸಿದಿ ಶ್ರೀ ||2||
ನಿನಗರ್ಧಾಂಗವ | ಮನಸಿಜಹರನಿತ್ತನುಯೆಂದೊರವರು ||
ಬಿನುಗು ಕವಿಗಳೀಶನಿಗೆ ಮಂತ್ರಮಯ |
ದನುಪಮ ಮೂರ್ತಿಗಳ |
ನುಗೊಳಿಸುತ ಪೂಜ್ಯನ ಮಾಡಿದಿ ||3||
ಶರೀರದಿ ಬೂದೆಯ | ಧರಿಸಿ ಮನೆ ಮನೆಯ |
ತಿರುದುಣ್ಣುತ ಪರಿ ಕರದಿ ಸ್ಮಶಾನದಿ ||
ಮರುಳಗಳೊಳು ಸಂಚರಿಸಿದ ರುದ್ರನ |
ಪರಮ ಪಾವನ ಚರಿತನೆನಿಸಿದಿ ||4||
ಗುರುಶಂಕರನೊಳು | ಪರಿಕಿಸಲೇಂ ಶುಭ |
ಕರ ಮುಂಟೀತಗೇ ಸಿರಿ ಸಂಪದ ಘನ ||
ತರ ವಿದ್ಯಾ ಬಂಧುರ ಸಿದ್ಧಿಗಳನು |
ಸರಸದಿ ನೀನನುವರಿದಿತ್ತಿಯು 5
ಕರುಣಸೆನ್ನನು ಮುದದಿ
ಕರುಣಸೆನ್ನನು ಮುದದಿ | ಕಾತ್ಯಾಯನಿಯೆ ಸಂ |
ಸ್ಮರಿಸುವೆನ್ನನು ದಿನದಿ ||ಪಲ್ಲ||
ತ್ರಾಣಿಯೆ ಪನ್ನಗಾಭಸಮ ವೇಣಿಯೆ |
ಸಾರವರಾಭಯ ಪಾಣಿಯೆ | ಸುಂದರತರ ಶರ್ವಾಣಿಯೆ ||
ವಾಣಿಸೇವಿತೆ ಮೃಢಾಣಿಯೆ |
ಸದ್ಗುಣ ಶ್ರೇಣಿಯೆ ವರ ಕಲ್ಯಾಣಿಯೆ ವರದೆ ||1||
ಕಾಳಿಯೆ ಕ್ರೂರದಾನವರ ದಾಳಿಯೆ |
ಭಜಿಪಭಜಕರ ದಯಾಳಿಯೆ ಕರುಣವಾರಿಧಿ ಕರಾಳಿಯೆ ||
ಶೀಲೆ ಸುಗುಣ ಶುಭಲೀಲೆ ಸುಚರಿತವಿ |
ಶಾಲೆ ಲೋಕತ್ರಯ ಪಾಲಯೆ ಗಿರಿಜೆ ||2||
ಶಾಂಕರಿ ಶೋಭಿಪ ಶಾಂತೆ ಸುಖಂಕರಿ |
ಶರಣ ಜಣಕರ ಕಿಂಕರಿ ದುಷ್ಟ ಜನೌಘ ಭಯಂಕರಿ ||
ಶ್ರೀಂಕೀಲಕವಿ ದ್ಯಾಂಕಿತೆ ನಿರ್ಮಲೆ |
ಪಂಕಜಮುಖಿ ಗುರು ಶಂಕರ ಶಕ್ತಿ ||3||
ಪಾಲಿಪುದೈ ವರ ನೀಲಕಂಧರಯೆನ್ನ
ಪಾಲಿಪುದೈ ವರ ನೀಲಕಂಧರಯನ್ನ ಪಾಲಿಪುದೈ ||ಪಲ್ಲ||
ಕರಿ ಚರ್ಮಾಂಬರ ಪರತರ ಶ್ರೀಕರ |
ಸರಸಿಜ ಶರಹರ ಪರಮ ಸುಖ ನಿಕರ |1||
ವಾಸುಕಿ ಭೂಷಣ ವಾಸವ ಪೋಷಣ |
ಭಾಸುರತನು ಜಗದೀಶ ಭವನಾಶ ಮೃಢ || | |2||
ಸುರಮುನಿ ಸನ್ನುತ ಹರಿಯಜ ವಂದಿತ |
ಪುರಹರ ಶಂಕರ ಗುರುವರ ನಿರುತದಿ ||3||
ಈಶ ಪಾಲಿಸೆನ್ನ
ಈಶ ಪಾಲಿಸೆನ್ನ ಜಗದೀಶ ಪಾಲಿಸೆನ್ನ |
ಕ್ಲೇಶ ದೋಷ ನಾಶ ತ್ರೈಜಗದೀಶ ಪಾಲಿಸೆನ್ನ ||ಪಲ್ಲ||
ಚಂದಿರಧರಣ ಸುಂದರಚರಣ |
ಮಂದರಾದ್ರಿಮಂದಿರ ಜಗ ||1||
ವಾಸವವಿನುತ ಪೂಶರವಿಜಿತ |
ದಾಸ ಪರಿ ಪೋಷಣ ||2||
ಗಿರಿಜಾರಮಣ ಶರಣೋದ್ಧರಣ |
ವರಗುರು ಶಂಕರ ಜಗದೀಶ ||3||
ಇಂದುಧರ ಭವ ಬಂಧಹರ
ಪರಿಪಾಹಿಮಾಂ ಹಿಮಗಿರಿ ಜಾನನಾಬ್ಜಾರ್ಕ ||ಪಲ್ಲ||
ಮಂದರಾದ್ರಿ ಮಂದಿರ ಸಿತಿ ಕಂಧರ ಮುನಿ ವೃಂದನುತ |
ಸ್ಕಂದೇಭ ಮುಖಪಿತ ಇಂದುಧರ ಭವ ಬಂಧಹರ |
ಬೃಂದಾರಕ ಸಮುದಯೇಂದ್ರಾರ್ಚಿತಾಂಘ್ರಿಯುಗ ||1||
ಶೂಲಧೃತಕ ಪಾಲಕರ ವಿಶಾಲ ಮಹಿಮ |
ನೀಲಗಳ ಮೂಲೋಕ ಪಾವನ ಶೀಲಾನ್ವಿತ ವೃತ |
ಜಾಲಾನ್ವಿತ ಫಾಲಾಕ್ಷಿವಿಲಸಲ್ಲೀಲಾಗಣಿತ ಮೃಢ ||2||
ಮಾರದಹನ ಮೇರುಚಾಪ ಸಾರದಯಾ ಕಾರಮಹಾ |
ಘೋರಾಘ ಗಣ ಸಂಹಾರ ಶಿವ ವೃಷದೇರಭವ |
ಧೀರಾಶ್ರೀತ ಜನೋದ್ಧಾರ ಶಂಕರ ಗುರು ||3||
ಪಾಲಿಸೆನ್ನ ಶಶಿಭೂಷ
ಪಾಲಿಸೆನ್ನ ಶಶಿಭೂಷ ಶುಭಲೀಲ ಭಕುತ ಪರಿಪೋಷ
ಭಕುತ ಪರಿಪೋಷ ||ಪಲ್ಲ||
ನಿಟಿಲನೇತ್ರ ಸ್ಫಟಕಗಾತ್ರ ನಿಷ್ಕುಟಿಲ ಕುಜನ ಸಂಹಾರ |
ಧೂರ್ಜಟಿಲ ಸದ್ಗುಣವಿಹಾರ ಘಟಿತ ಮಹಿಮ ಫಣಿ |
ಕಟಿಬಂಧನ ಮೃಢ ||1||
ತ್ರಿಜಗನಾಥ ಸುಜನ ಪ್ರೀತ ಪುರ ವಿಜಿತ ಮೇರುಗಿರಿ ಚಾಪ |
ವಾರಿಜ ಶರಾರಿಭವಲೋಪ ಅಜಸುರನಮಿತ ನಿ |
ರಜಸು ರುಚಿರುಹರ | |2||
ಮರಣ ರಹಿತ ಕರುಣ ಭರಿತ ವಿಸ್ಫುರಣ ರೂಪ ಸುವಿಲಾಸ |
ಸಚ್ಚರಣ ನಿರುತ ಮೃದುಹಾಸ ಪರತರಗುರು |
ಶಂಕರ ಶಶಿಧರ ಶಿವ ||3||
ದೋಷವಿನಾಶ ಗಿರೀಶ
ಈಶ ಮಹೇಶ ಉಮೇಷ ಪರಾತ್ಪರ |
ದೋಷವಿನಾಶ ಗಿರೀಶ ಜಯ ||
ಶೇಷವಿಭೂಷ ಭೂತೇಶ ತ್ರಿಣಯ |
ಮಂದಹಾಸ ಕೈಲಾಸ ನಿವಾಸ ಜಯ ||ಪಲ್ಲ||
ಕಾಲ ಸಂಹರವುಡುಮಾಲಮುಕುತಿ ನಿಜ |
ಮೂಲ ಮಹತ್ವ ವಿಶಾಲ ಜಯ ||
ಫಾಲನಯನಸುರ ಜಾಲಪೂಜಿತ ಪದ
ನೀಲಕಂಧರ ಶುಭ ಲೀಲ ಜಯ ||1||
ನಾರದ ಸನ್ನುತ ಮಾರದಹನ ಸಖ |
ವಾರಿಧಿ ದುರ್ಭವ ದೂರ ಜಯ |
ಗೌರವವಾದ ಶರೀರದಿಂ ಶೋಭಿಪ
ಸಾರಶಂಕರಗುರು ಧೀರ ಜಯ | |2||
ಚಂದದಿ ಸಲಹೆನ್ನ
ಚಂದದಿ ಸಲಹೆನ್ನ ಶಿವಾಧವ ಚಂದದಿ ಸಲಹೆನ್ನ |
ಚಂದದಿ ಸಲಹು ಬಾಲೇಂದುಶೇಖರ ಮುನಿ
ವೃಂದಪೂಜಿತ ಪದ ನಂದಿವಾಹನನೆ ನೀ ||ಪಲ್ಲ||
ವಸಿದು ರಾವಣನು ವಂದಿಸಲಿನ್ನೊರೊಂದು |
ಮಿಸುಪಕ್ಷಿಗಳ ನಿನ್ನ ಸಮಪಾದದಿ ಕಂಡು |
ಉಸುರಿಕ್ಕದೆ ಈಕ್ಷಿಸುತಂ ಇದು ಪೊಸತೆಂದಚ್ಚರಿಪಡುತಂ |
ವೆಸನದೊಳಿರುತಿರೆ ಸಸಿನದಿ ನೋಡುತ |
ಹಸನ ಮನದಿ ಗಹಗಹಿಸಿದ ದೇವನೆ ||1||
ಗಿರಿಜೆಯ ಉರು ಭಾಗ ನೆರೆ ನೋಡಲ್ಕಲ್ಲಿ |
ಶಿರಗಳೈವತ್ತುನಾಲ್ಕು ಮೆರವನೂರೆಂಟು ನಯನಾ |
ತುರದೊಳು ಷಣ್ಮುಖ ನೋಡಿ ಕಣ್ದೆರದಚ್ಚರದೊಳು ಕೂಡಿ |
ಇರುತಿರಲವನುರುತರ ಮುಗ್ಧತ್ವದ
ಪರಿಯರಿದು ನಗುವ ಪರಮೇಶ್ವರನೇ | ||2||
ಥಳಥಳಿಸುವ ಮಣಿಗಳ ಭಿತ್ತಿಯ ಮಂಜುಳ |
ಮಂಚದ ಮೇಲ್ಮಲಿಗಿ ಗಿರಿಜೆಯನು |
ಸೆಳೆದು ಬಿಡದೆ ರಮಿಸುತಿರಲ್ ನಿಚ್ಚಳ |
ಸುಖದಿಂ ಮೆರೆಯುತಿರಲ್ ತೊಳಪಾ ಭಿತ್ತಿಯ |
ನಿಲದೀಕ್ಷಿಸಿ ಸಲೆ ತಲೆ ಬಾಗಿಸಿ ನಗುತಿಹ ಶಂಕರನೆ | |3||
ಚಂದದಿ ಸಲಹೆನ್ನ
ಶರಣರ ಹೃದಯದ ಸರಸಿರುಹವೆ ಮಂದಿರ |
ಮೆನಿಸಿಹುದೈ ತವ ಪಾದ ವರಯೋಗಿಗಳಂತರ |
ಲಕ್ಷದಿ ಸುಖಕರಿಸಿ ತೋರುವದು ತವಪಾದ ||ಪಲ್ಲ||
ಖಳನು ಗಿರಿಯನೆತ್ತಲು ಭರಿದಿ ರಸಾ |
ತಲಕೊತ್ತಿಟ್ಟಿತು ತವಪಾದ ಜಲದೊಳು ಲಿಖಿಸಿದ |
ಮಲಚಕ್ರವು ಬಿಡದಳೆತು ಸುರನನು ತವ ||1||
ಹರಿಮೃಗ ರೂಪವ ಧರಿಸುತ್ತರಸಲು |
ದರಿಸಿಸದ್ಹೋಯಿತು ತವಪಾದ ಪರಿಭಾವಿಸೆ |
ಪಾತಾಳ ಸಪ್ತಕಿಳಿದುರೆ ರಂಜಿಸಿತೈ ತವಪಾದ ||2||
ಪದಪಿಲಿ ದನುಜನ ಎದೆಯ ಮೇಲೆ ಕುಣಿ |
ದುದು ಕಟ್ಟಳೆಯೊಳು ತವ ವಿಧವಿಧ ತಿರುಗುತ |
ವದವಿದ ಮುಪ್ಪುರ ಹೆದರದೆ ದಹಿಸಿತು ತವ ||3||
ಉರಿದ ಸರವಿಯಂತಿರಲಂಗಜನನು |
ಭರದೊಳು ತುಳಿದಿತು ತವ | ಧರೆಯಂಬ ರಥಾ |
ಗರವನಧೋಗತಿ | ಗಿರಿರತು ಗಡ ತವ ||4||
ಧರಣಿಯೊಳೊಪ್ಪುವ ಹರಕವಿವರರಿಂ ನೆರೆಬಣ್ಣಿ |
ಪುದೈ ತವ ಗಿರಿಜಾವರ ಪರತರ |
ನಿರುಪಮ ಶಿವ | ನಿರವಧಿ ನಿತ್ಯವು ತವ ||5||
ಉರಗದನುಜ ಕಿನ್ನರ ಮನು ಮುನಿಸುರ |
ನರರು ಭಜಿಸುವದು ತವ | ಸ್ಮರಿಪರಘ ಗಹನ |
ಗಿರಿಪವಿನುತ ಜನ | ಶರಧಿಸೀತಕರ ತವ ||6||
ಕನಕಾದ್ರಿ ನಿಲಯ ಜನನ ರಹಿತಧನ |
ದನ ಸಖನಿರವಯ ತವ | ವಿನಮಿತ ದಿವಿಜರ |
ಘನ ಮಕುಟದ | ಬೆಳಗಿನೊಳೊಡವಿಡಿದುದು ||7||
ಪ್ರಣವದ ನೆಲೆ ಮನುಗಣದ ನಿಧಿಲ |
ಸದ್ಗುಣ ಕುಲಜಲ ನಿಧಿ ತವ ಗಣತತಿಗಳ ಬೀಡಣಿ |
ಮಾದಿಗಳಣಿ | ತಣುವಿನ ತಾಣವು ತವ ||8||
ಕಾಮಿಸಿ ಪೂಜಿಸಿದಾ ಮಾನವರಿಗೆ |
ಕಾಮಧೇನು ವೈತವ ಪ್ರೇಮದಿ ಧ್ಯಾನಿಪ |
ನೇಮಕರಿಗೆ ಚಿಂತಾಮಣಿಯನಿಪುದು ತವ ||9||
ದುರಿತ ತಮದ ಭಾಸ್ಕರ ಭವ ರೋಗದ |
ಪರಮೌಷಧ ವೈತವ ಪರಮುಕ್ತಿಯ ಮಂದಿರ |
ಶುಭದಂ ಗಡಿಗುರು ಶಂಕರ ನಿನ್ನಯ ಪಾದ ||10||
ಗುರೂತ್ತಮ ಪಾಹಿಮಾಂಪದ
ಗುರೂತ್ತಮ ಪಾಹಿಮಾಂ ಪದ
ಸರೋಜ ಸ್ಮರಿಪೆ ಭವರೋಗ ಭೇಷಜ ||ಪಲ್ಲ||
ಯಮಾದಿ ಪರಮಾಷ್ಟಮಾಂಗಯೋಗ |
ನಿಯಮಾನ್ವಿತ ಘನಮಹಿಮಾಕರ ಪೂಜಿತ |
ಶಮಾದಿ ಷಡ್ಗುಣ ಕ್ರಮಾವರ್ತನಿರುಪಮಾ |
ಶ್ರೀತಪಾಲ ನಮಾಮಿ ಸುಖಕರ ||1||
ಇಳಾಪಾವನೋಜ್ವಳಾಸ್ಯವಿಲಸತ್ಕಳಾಂಶಯುತ |
ನಿಚ್ಚಳಾಪ್ತ ಭಕ್ತಪ್ರೀಯ ಖಿಳಾರಿವರ |
ನಿರ್ಮಳಾಂತರಂಗಾತುಳಾನತ ಶರಣ |
ಕುಳಾಬ್ಧಿಚಂದಿರ ||2||
ನಿರಾಸಿಕಭಸಿತ ಧರಾಂಗ ದುಷ್ಕೃತ |
ಹರಾಖಿಲ ಸುಚರಿತ ರಾಜಯೋಗೀಂದ್ರ |
ವಿರಾಗಮತಿ ಪರತರಾನಂದ ಭಾಸ್ವರಾ
ಪ್ರತಿಮ ಶಂಕರಾರ್ಯಯತಿವರ ||3||
ಕರುಣಿಸೆನ್ನ ಗುರವರೇಣ್ಯನೆ
ಕರುಣಿಸೆನ್ನ ಗುರವರೇಣ್ಯನೆ ತವ ಸ್ಮರಣಿಗೈವೆ |
ಕರುಣಿಸೆನ್ನ ಗುರುವರೇಣ್ಯ ಕರುಣಸಾಗರೇಂದು |
ನಿನಗೆ ಕರವನೊಡ್ಡಿ ಬೇಡಿಕೊಂಬೆ ಕರಣ |
ವಿಜಯನೆನಿಸಿ ಸದಾ ||ಪಲ್ಲ||
ಮೂರು ಮಲಗಳಲ್ಲಿ ನೊಂದೆ |
ಮೂರು ತಾಪದೊಳಗೆ ಬೆಂದೆ |
ಮೂರು ಪದಗಳರ್ಥ ಮರೆದು |
ಮೂರು ಮಾಯಗಳೊಳು ಬೆಂದೆ ||1||
ನಾಲ್ಕು ಜಾತಿಯಲ್ಲಿ ಜನಿಸಿ |
ನಾಲ್ಕು ಸಾಧನವನು ತ್ಯಜಿಸಿ |
ನಾಲ್ಕು ಭಾವಗಳೊಳು ಬೆರೆದು |
ನಾಲ್ಕು ಮುಕ್ತಿ ಕಳೆದುಕೊಂಡೆ ||2||
ಪಂಚ ವಿಷಯದೊಳಗೆ ಮುಳಗಿ |
ಪಂಚ ಕ್ಲೇಶದಿಂದ ಕೊರಗಿ |
ಪಂಚಮಹಾ ಪಾತಕವ |
ಪ್ರಪಂಚದಲ್ಲಿ ಮಾಡಿ ಕೆಟ್ಟೆ ||3||
ಆರು ಶಮಾದಿಗಳನಳಿದು |
ಆರು ವರ್ಗದೊಳಗೆ ಸುಳಿದು |
ಆರು ಅಕ್ಷರಗಳ ಮರೆದು |
ಆರು ಭ್ರಮೆಗಳಿಂದ ತೊಳಲ್ದೆ ||4||
ಏಳವಸ್ಥಯೊಳಗೆ ಶಿಲ್ಕಿ |
ಯೇಳು ವೆಸನಗಳಿಗೆ ಬಳ್ಕಿ |
ಯೇಳು ಜ್ಞಾನ ಭೂಮಿಕೆ |
ಬಿಟ್ಟೇಳು ಜನ್ಮ ತಿರಿಗಿ ಬಂದೆ ||5||
ಅಷ್ಟ ಪುಷ್ಪಗಳನು ಬಿಟ್ಟು |
ಅಷ್ಟ ಮದಗಳನ್ನು ತೊಟ್ಟು |
ಅಷ್ಟ ಕಷ್ಟದಿಂದೆ ಕೂಡಿ |
ಅಷ್ಟ ನರಕ ಭಾಗಿಯಾದೆ ||6||
ದೋಷ ಕುಜ ಕುಠಾರ ಭಕ್ತ |
ಪೋಷ ಭಯ ವಿದೂರ ಸುಗುಣ |
ಭೂಷ ಜಗೋದ್ಧಾರ ಭಜಕ |
ತೋಷ ಶಂಕರಾರ್ಯ ನೀನೆ ||7||
ಪಾದಪೂಜೆಯ ಮಾಡುವೆ ಶ್ರೀಗುರು ನಿನ್ನ
ಪಾದಪೂಜೆಯ ಮಾಡುವೆ ಶ್ರೀಗುರು ನಿನ್ನ |
ಪಾದಪೂಜೆಯ ಮಾಡುವೆ ||
ಪಾದಪೂಜೆಯೆ ಸಾಧಕರ್ಗೆಯನಾದಿ |
ಮುಕ್ತಿಯ ಹಾದಿಯೆನುತಲಿ |
ವೇದವಾಕ್ಯವನೋದಿ ಮನದೊಳು |
ಭೇದವಳಿದಾಮೋದದಿಂದೆ ||ಪಲ್ಲ||
ಸಂದೇಹವನ್ನೂ ಬಿಟ್ಟು ನೀರೊಳಗೆ ನಾ ಮಿಂದು |
ಮಡಿಯನೇ ವುಟ್ಟು | ಒಂದೇ ಭಾವನೆಯನಿಟ್ಟು |
ನಿರ್ಮಲ ಜಲ ತಂದು ಮಜ್ಜನವ ಕೊಟ್ಟು |
ಚಂದನದ ಸದ್ಗಂಧ ಘನ ಮಕರಂದವಿಡಿದರ |
ವಿಂದ ಪತ್ರಿಗಳಿಂದು ಮೃದುವಹ ದ್ವಂದ್ವ ಚರಣ |
ಕ್ಕಂದದೊಳು ನಲುವಿಂದ ಧರಿಸುತ ||1||
ಕಾಪಟ್ಯ ಕಳಿಯುತಲಿ ಅಂಗದೊಳಿಹ |
ಚಾಪಲ್ಯಮಳಿಯುತಲಿ ಧೂಪಾಗ್ನಿ ಬೆರೆಸುತಲಿ |
ಸಮ್ಮುಖದೊಳು ದೀಪವನುರಿಸುತಲಿ |
ಶ್ರೀ ಪರಬ್ರಹ್ಮೋಪಮಾನ ಸ್ವರೂಪ ದುರಿತವಿ |
ಲೋಪಷಡೃಚಿಲೇಪ ನೈವೇದ್ಯೋಪಕರಿಸೆಂದೀ |
ಪರಿಯೊಳು ಸದಾ ಪದುಳದಿಂ ||2||
ಚರಿಪಮನವ ನಿಲ್ಲಿಸಿ ಸದುಕ್ತಿಯಿಂ |
ಸ್ಮರಿಸಿ ಭಕ್ತಿಯ ಸಲ್ಲಿಸಿ ನೆರೆ ಸದ್ಗತಿಗೆ ಭ್ರಮಿಸಿ
ಧ್ಯಾನಿಸಿ ಮತ್ತ ನಿರುತದೊಳಭಿ ನಮಿಸಿ
ಹರನಿಗಿಂ ಶ್ರೀಗುರು ವಧಿಕನೆಂದೊರವ ಶೃತಿಗನುಸರಿಸಿ
ಸಮ್ಮುದವೆರಸಿ ಬಿಡದಾಚರಿಸಿ ಮಹಿಮವ
ಸ್ಮರಿಸಿ ಗುರು ಶಂಕರನೆ ನಿನ್ನ ಪಾದ ಪೂಜೆಯ ಮಾಡುವೆ ||3||
ಬಾಲ ಶಶಿಧರ ವಿಶಾಲ ಮಹಿಮ ಮುನಿ
ಬಾಲ ಶಶಿಧರ ವಿಶಾಲ ಮಹಿಮ ಮುನಿ |
ಜಾಲನುತನೆ ದೇವರ ದೇವ ||
ಶೂಲ ಪಾಣಿಫಣಿಮಾಲಭವರ ಹಿತ |
ಕಾಲಜಿತನೆ ದೇವರ ದೇವ ||ಪಲ್ಲ||
ಜನನಿ ಜನಕರೊಳು ಜನಿಸದೆ ರೂಪವ |
ಘನವೆತ್ತನೆ ದೇ ||
ಮನದ ಸಹಾಯವನಿನಿತಿರದೆಲ್ಲವ |
ನರಿತಿರುವನೆ ದೇ ||1||
ತಿರಿದುಣ್ಣತ ಬಂಧುರದಿ ಲೋಕಗಳ |
ಪರಿಪೂರೆವನೆ ದೇ ||
ಸರಸದಿ ನಿಗಮವನೊರದ ಸುಗತಿಯೊಳು |
ಮೆರದಿರುವನೆ ದೇ ||2||
ಮುನಿಗಳ ಮಾನಸವನಜಾಲಯದೊಳು |
ಬಿನದಿಸುವನೆ ದೇ ||
ಧನದನ ಗೆಳೆತನವನು ಗೈಯ್ಯುತ ನಿಧಿಯನು |
ಪೊರೆದನೆ ದೇ ||3||
ಬರೆದ ಚಕ್ರದೊಳಸುರನ ಮಸ್ತಕವ |
ತರಿದೊಗಿದನೆ ದೇ ||
ಸುರರ ಬಲುಹನಪಹರಿಸಿದ ವಿಷ |
ಕಂಧರದಿಟ್ಟನೆ ದೇ ||4||
ಸೇವಿಸದಾರನು ಸೇವೆಗೊಂಡುವರ |
ವೀವಮೃಢನೆ ದೇ ||
ಭಾವ ಜನಂಗವ ತೀವರ ದಹಿಸಿದು |
ಮಾವಡಿಯನೆ ದೇ ||5||
ದಕ್ಷನ ಯಾಗದೆ ದಕ್ಷದೊಳವನನು |
ಶಿಕ್ಷಿಸಿದನೆ ದೇ ||
ಲಕ್ಷಿತ ಬಾಲನ ಭಕ್ಷಿಸಲೋಸುಗ |
ಪೀಕ್ಷಿಸಿದನೆ ದೇ ||6||
ಮೋದದಿ ಯಿಪ್ಪತ್ತೈದು ಲೀಲೆಗಳ |
ಗೈದೆಸದನೆ ದೇ ||
ವೇದವಿದರಿಗುಂಟಾದ ಬಾಧೆಯನು
ಛೇದಿಸುವನೆ ದೇ ||7||
ಸುರಪ ಚತುರ್ಮುಖ ಹರಿಮುಖ್ಯ ಮಿತರಿ |
ಗೊರವಿತ್ತನೆ ದೇ ||
ಪರಿಭಾವಿಸಿ ಮುಂದರಿಯಲು ಗುರುಶಂಕರ
ನೋರ್ವನೆ ದೇ ||8||
ಶಿವ ಶಿವಯೆನುತಿರೆಲೋ ಹೇ ಮಾನವ
ಶಿವ ಶಿವಯೆನುತಿರೆಲೋ ಹೇ ಮಾನವ |
ಶಿವ ಶಿವಯೆನುತಿರೆಲೋ ||
ಶಿವನೆಂದರೆ ನಿನ್ನ ಭವವಳಿಯುವದು |
ಮೇಣ್ವಿರಳ ಮೋಕ್ಷ ಸಂಭವಿಸುವದನುದಿನ || ||ಪಲ್ಲ||
ಹಿಂದಗಣಿತ ಭವದಿ ಮಾಡಿದ ಪಾಪ |
ಬೆಂದು ಪೋಪುದು ಭರದಿ |
ಚಂದದೊಳಮ್ಮೆ ನೀನಂದರೆ ಮುಕ್ತಾಂಗನೆ |
ಬಂದು ವರಿಸುತಾನಂದಿಸುವಳು ತಾ |
ಮಂದಿರವನು ಬಿಡುಬೇಡ |
ಗಿರಿ ಕಂದರದಲಿ ನಿಲಬೇಡ |
ಬಹು ಕಂದ ಮೂಲ ಸವಿಬೇಡ |
ಮಂದ ಬುದ್ಧಿಯಿಂದಂದಗೆಟ್ಟು |
ಭ್ರಮೆಯಿಂದ ದೇಹವನು ಕಂದಿಸಬೇಡ ||1||
ಸನಕದಧೀಚಿಯಗಸ್ತ್ಯ ಸೂತಶೌನಕ |
ರೆನಿಪರುಷಿಗಳು ನಿತ್ಯ ನೆನೆದಿದರಿಂ |
ಮುಕ್ತಿಯನು ಪಡಕೊಂಡರು ಮುನಿಸಾ
ನಂದಸೌಮಿನಿಸ್ವೇತ ಮುಖ್ಯರು |
ದಿನಕರಸುತನನ್ನೊದೆದರ್ ಮನಸಿನ |
ಬಲುಹವನುರೆ ಮುರಿದರ್ ಸಾಂಬನ |
ತಕ್ಷಣದೊಳೊಲಿಸಿದರ್ ಇನಿತೆಲ್ಲವನರಿದನು |
ಮನಮಿಲ್ಲದೆ ದಿನವಗಲದೆ ನೀನನುಪಮ ಭಕ್ತಿಲಿ | ||2||
ಪರಿಭವಾಂಬುಧಿಬೈತ್ರ ಜನ್ಮಾಂತರ |
ದುರಿತ ತಿಮಿರಮಿತ್ರ
ಮರವೆಯಂಬುವ ಮಹಾ ಗಿರಿಗೆ ವಜ್ರಾಯುಧ
ಪಿರಿದಾಶಯೆಂಬುವ ಹರಿಣಕೆ ಪೆರ್ಬುಲಿ
ಧರೆಯೊಳು ಶಿವಯೆಂಬೆರಡು ಅಕ್ಷರ
ಮುಚ್ಚರಿಸಲ್ಕೊರಡು ಅಂಕುರಿಪುದು
ಭಕ್ತಿಯ ಪರಡು ಉರಗಸರವಿ ವಿಷ
ಪರಮಾಮೃತವಹು ದರಿಸಖನಹಶಂಕರ ಗುರುಪಾಲಿಪ ||3||
ಕಾಮ ಹರ ಕೈಲಾಸಧಾಮ
ಶ್ರೀಮಹಾದೇವ | ಸುತ್ರಾಮನುತ ಚರಣ |
ಕಾಮ ಹರ ಕೈಲಾಸ | ಧಾಮ ನಿರ್ಮಣವು || ಪಲ್ಲ||
ನಿರುಪಮ ನಿರೀಹ ಹರ | ನಿರಘನಿರ್ಲೆಪ |
ನಿರಪಾಯ ನಿರವಯ ತ್ರಿಪುರಹರ ಪ್ರದೀಪ || 1||
ನಂದಿವಾಹನ ಭರ್ಗ | ಮಂದರ ನಿವಾಸ |
ಕಂದುಗಳ ವಿಭು ನಿಜಾ | ನಂದ ಮೃದುಹಾಸ ||2||
ವಾಗೀಶ ವಂದ್ಯ ನಿಗ | ಮಾಗಮವಿನುತ್ಯ |
ನಾಗಭೂಷಣ ಭವನಿರೋಗ ಶುಭ ಕೃತ್ಯ | |3||
ಪರಮ ಪರತರ ಶಾಂತ | ವರದ ಭವ ಭಂಗ |
ಕರುಣ ಸಾಗರ ಪೂಜ್ಯ | ಶರಣ ಜನ ಸಂಗ ||4||
ಶಿವ ಚಂದ್ರಧರ ಸದಾ | ಶಿವಭಕ್ತಲೋಲ |
ಭುವನೇಶ ಮೃಢಗೌರಿ | ಧವ ರುಂಡಮಾಲ ||5||
ಶೂಲಿ ಫಾಲಾಂಬಕ | ಕಪಾಲಿ ಸರ್ವಜ್ಞ |
ನೀಲಲೋಹಿತ ಮುಕ್ತಿ | ಮೂಲ ನಿರ್ವಿಘ್ನ ||6||
ವಿಶ್ವತೋ ಬಾಹುವರ | ವಿಶ್ವಾತ್ಮ ಸೋಮ |
ಶಾಶ್ವತ ಪಿನಾಕಿ ಜಗ | ದೀಶ್ವರ ನಿಕಾಮಾ ||7||
ಕಾಲಾರಿ ಕೂಟಸ್ಥ | ಹಾಲಾಹಲ ಧರ |
ಮೂಲೋಕಪಾಲ | ಸಲ್ಲಿಲ್ಲ ಸುಖ ವಿಕರ || 8||
ಧನದ ಸಖ ವೇದಾಂಗ | ಚಿನುಮಯ ಗಿರೀಶ |
ಅನಘ ಪಂಚಾಕ್ಷರ | ಸುಮುನಿನುತ ಮಹೇಶ ||9||
ವಾಮುದೇವಾ ಘೋರ | ಭೀಮ ಭಯ ದೂರ |
ಯೋಮ ಕೇಶಾ ಭವನಿ | ರಾಮಯ ಗಭೀರ ||10||
ಯತಿ ಹೃದಯ ನಿಲಯ ಪಶು | ಪತಿ ವಿಜಯ ರುದ್ರ |
ವಿತತ ಚಾರಿತ್ರ ಗಣ | ಪತಿ ಜನಕ ಭದ್ರ ||11||
ಗಿರಿಶ ಓಂಕಾರ | ತತ್ಪುರುಷ ಪ್ರಖ್ಯಾತ |
ಪರಮಾತ್ಮ ಪಂಚಮುಖ | ಪರಮಾರ್ಥ ಪ್ರೀತ ||12||
ತ್ರಿಣಯ ಸದ್ಯೋ ಜಾತ | ಗಣನಾಥ ಸಾಂಬ |
ಪ್ರಣುತ ಸನ್ಮಹಿಮ | ನಿರ್ಗುಣ ನಿರಾಲಂಬ ||13||
ದೇವದೇವಾಭಯನಿ | ರಾವರಣ ಧೀರ |
ಭಾವಪೂರಿತ ಭಕ್ತ | ಜೀವನೋದ್ಧಾರ ||14||
ಇಂತೆಸವ ಶಂಭುವಿನ | ನಂತನಾಮಗಳ
ಸಂತ ತೋದಯದೊಳುರೆ | ಪಠಿಸಲ್ಕೆ ವಿಮಳ ||15||
ವರಭೋಗ ಮೋಕ್ಷಪುಂ | ಕರುಣಿಸುವ ನೊಲಿದು
ಗುರುಶಂಕರೇಶ | ಸತ್ವರದಿ ಕೈವಿಡಿದು ||16||
ಶ್ರೀಮಹಾದೇವಿಯೆ
ಶ್ರೀಮಹಾದೇವಿಯೆ ನಿ | ರಾಮಯೆಶಿವಾನಿ
ಸೋಮಧಾರಿಯೆ ಮುಕ್ತಿ | ಧಾಮೇ ಭವಾನಿ ||ಪಲ್ಲ||
ಓಂಕಾರಿಯೇ ದುರ್ಗಿ | ಶಾಂಕರಿಯೆ ಸುಮತೆ
ಶ್ರೀಂಕೀಲಕಾದಿ | ವಿದ್ಯಾಂಕಿತೆ ಸುಲಲಿತೆ ||1||
ಚಂಡೀಶ್ವರೀಯಮೃತೆ | ಚಂಡಕರಮೂರ್ತಿ
ಮಂಡಲತ್ರಯನಿಳಯೆ | ಚಂಡಿಕೆ ಸುಕೀರ್ತಿ ||2||
ವೇದಾಗಮಾತೀತೆ | ನಾದಮಯೆ ಗೌರೀ
ಅದಿಮಧ್ಯಾಂತ | ರಹಿತೇ ದಯಾಕಾರಿ ||3||
ಶರ್ವಾಣಿಯೇ ವಿಮಲೆ | ಗೀರ್ವಾಣವಿನುತೆ |
ಸರ್ವಮಂಗಳೆ ಕಮಲೆ | ಸರ್ವಸಿದ್ಧಿಯುತೆ ||4||
ಪರಮ ವೈಭವೆ ನಿರಾ | ವರಣೆ ಕೌಮಾರೀ |
ಶರಣ ಹಿತೆ ಮಹನೀಯೆ | ವಿರಜೆ ರಮೆ ಗೌರಿ ||5||
ಮನುವಂದೆ ಕುಟಿಲೆವರ | ಮುನಿಪೂಜ್ಯೆ ಪದ್ಮೆ |
ಚಿನುಮಯೆ ವರದೆ | ಮನೋನ್ಮನಿಯೆ ಸುಖಸದ್ಮೆ ||6||
ಮಾಯೆ ಮಾತಂಗಿ | ಗುಹ ತಾಯೆ ಸನ್ಮುಖಿಯೇ |
ಗಾಯತ್ರಿಯೇ ವಿಲಸಿ | ತಾಯ ತಾಂಬಕಿಯೆ | |7||
ಸಾವಿತ್ರಿಯೇ ಮಂತ್ರ | ದೇವತೆ ಮೃಢಾಣೀ |
ಭಾವಪೂರಿತ ಚತುರೆ | ಪಾವನೆ ಸುವಾಣಿ ||8||
ಅದ್ರಿಜಯೆ ಭಕ್ತ | ಕಲ್ಪದೃಮೆ ಭಗವತೀ |
ಭದ್ರಕಾಳಿಯೆ ಅಭಯ | ಮುದ್ರೆ ಹೈಮವತೀ || 9||
ಧರಣಿ ಧರ್ಮಾನಿಗತೆ | ಕರುಣಸಾಗರಿಯೆ |
ಮರಣ ಭವರಹಿತೆ | ಸಚ್ಚರಿತೆ ವೈಷ್ಣವಿಯೇ || 10||
ಸತ್ಯೆ ಭೈರವಿಯೆ ಶುಭ | ಕೃತ್ಯೆ ಕಲ್ಲ್ಯಾಣಿ
ನಿತ್ತೆ ನಿರ್ಮಲೆ | ಲೋಕಸ್ತುತ್ಯೆ ಮೃದುಪಾಣಿ ||11||
ದಕ್ಷಸಂಜಾತೆ | ಸಲ್ಲಕ್ಷಣಿಯೆ ಮಾನ್ಯೇ |
ಮೋಕ್ಷದಾಯಕಿ ದುಷ್ಟ | ಶಿಕ್ಷೇ ಸುರರನ್ನೆ ||12||
ಮೇನಕಾತ್ಮಜಯೆವರ | ಮೀನಾಕ್ಷಿ ಶಕ್ತೀ |
ಗಾನ ಪ್ರಿಯೆ ಆರ್ಯೇಘ | ನಾನಂದ ಯುಕ್ತಿ ||13||
ನಾರಾಯಣೀ ಸಹಜೆ | ಶಾರದೆಯ ಪೂರ್ಣೆ |
ಧೀರೆ ಚಾಮುಂಡೀಗಂ | ಭಿರೆಜಯ ಪೂರ್ಣಿ ||14||
ಐಂಕಲಾ ಮಾಲಿನಿಯೆ | ಸಂಕಟವಿದೂರೆ
ಹ್ರೀಂಕಾರಿ ಮಾತೃಕೆ ನಿ | ರಂಕುಶೌದಾರೆ ||15||
ಉಮೆಮೃಗಪವಾಹಿನಿಯೆ | ಶಮೆಶುಕಾಲಾಪೆ |
ದಮೆರಕ್ತದಂತಿಕೆ | ಮಹಿಮೆ ವಿಶ್ವರೂಪೆ ||16||
ಪೀತಾಂಬರೀ ತ್ರೀಜಗ | ಮಾತೆ ಕಾಮಾಕ್ಷೆ |
ಪಾತಕ ವಿನಾಶೆ | ಪ್ರಖ್ಯಾತೆ ರಕ್ತಾಕ್ಷಿ ||17||
ಪರಮೇಶ್ವರೀ ಮಹೇ | ಶ್ವರಿಯೆ ಸದುಹೃದಯೆ |
ಪರತರಾಂಬಿಕಿಯೆ | ಭಾಸುರ ಸುಪ್ರಮದೆಯೆ ||18||
ಇಂತಮಳ ಶಾಂಭವಿಯ | ನಂತ ನಾಮಗಳ |
ಸಂತತೋದಯದೆ | ಪಠಿಸಲ್ಕವರ್ಗೆ ವಿಮಳ ||19||
ನೆರೆ ಭೋಗ ಮೋಕ್ಷಮಂ | ಕರುಣಿಸುವಳೊಲಿದು |
ಗುರುಶಂಕರನ ರಾಣಿ | ಸ್ಥಿರದಿ ಕೈವಿಡಿದು | |20||
ಸುರವರ ನುತ ಜಯ ಪರಮೇಶ
ಸುರವರ ನುತ ಜಯ ಪರಮೇಶ |
ಪರತರ ಗಿರಿ ವರ ಪುರನಾಶ ||ಪಲ್ಲ||
ಮಾಪಕೃತ ರೋಪಗಿರಿ | ಚಾಪಭವ ಲೋಪಸುಪ್ರ |
ತಾಪಜಿತ ಪಾಪಸುಕ | ಲಾಪವಿ ಲೋಪಸದೋಪ ಚರಿತ ||1||
ಕಾಲ ಕಾಲ ವ್ಯಾಲ ಮಾಲ | ಸೀಲಘನ ಲೀಲ ಮುನಿ |
ಜಾಲ ಪರಿಪಾಲಕರ | ಶೂಲ ದಯಾಲ ವಿಶಾಲ ಮಹಿಮಸುರ ||2||
ಗೌರವ ಶರೀರ ಗುಣ | ಹಾರ ಶಂಕರಾರ್ಯ ಮೃಢ ಮಾರಹರ |
ಸಾರಸಾರಿ ಧಾರಗಭೀರ ಕು | ಮಾರ ಜನಕ ಸುರವರನುತ ||3||
ಪಾಲಿಸನುದಿನ ಎನ್ನ ಪಾಲಿಸನುದಿನ
ಪಾಲಿಸನುದಿನ ಎನ್ನ ಪಾಲಿಸನುದಿನ |
ಶೂಲಪಾಣಿ ನೀಲಕಂಠ | ವ್ಯಾಲ ನಿಕರ ಮಾಲ ಸಾಂಬ ||ಪಲ್ಲ||
ಮಂದರಗಿರಿ ಮಂದಿರ | ಗೋವಿಂದ ವಿಧಿ ಪುರಂದರಾದ್ಯ |
ಮಂದ ಸುರಸನಂದ ಸನಕ | ವೃಂದನುತ ಪದೇಂದು ಮೌಳಿ ||1||
ಚಿತ್ರತರ ಚರಿತ್ರ ಘನವ | ಪವಿತ್ರಮಯ ಪುರತ್ರಯಹರ |
ಗೋತ್ರ ವೈರಿ ಪುತ್ರ ವಿಮಲ | ಪತ್ರದ ಶುಭ ಗಾತ್ರತ್ರಿಣಯ ||2||
ಸಂಕಟ ಕುಕಲಂಕ ಹರ | ನಿರಂಕುಶ ವೃತ ಸಂಕಲಿತ ಸು |
ಖಂಕರ ಗುರು ಶಂಕರ | ಮಹಿಮಾಂಕ ಭವ ಭಯಂಕರ ಶಿವ | 3||
ಮೃಢನೆ ಎನ್ನವಗುಣಗಳೆಣಿಸುವದೇಕೈ
ಮೃಢನೆ ಎನ್ನವಗುಣಗಳೆಣಿಸುವದೇಕೈ |
ನಿನ್ನೊಡಲೊಳವಗುಣಗಳಡಸಿಲ್ಲವೆ ಸಾಕೈ ||ಪಲ್ಲ||
ಹರಿಸುತನಂಗವ ನರ ನಿಮಿಷದಿ ನೀ |
ನುರಿದು ಬೂದಿಯನು ಮಾಡಿದಿ |
ವಿರಸದಿಂದೆ ತ್ರೈಪುರ ದಹಿಸಿದಿ |
ವಾಗ್ವರನ ಶಿವನರಿದಿ ಗಿರಿಧರನ ನಯನ ಕೀಳ್ದಿ |1||
ಖತಿಯಿಂ ತೆಂಕಲಪತಿಯಂ ಕೊಲ್ಲಿದಿ |
ಶೃತಿಗಳ ಶುನಕನ ಮಾಡಿದಿ |
ವ್ರತದಿಂ ದಕ್ಷನುಕ್ರತುಗೈಯ್ಯಲ್ಕದ |
ನತಿಗೆಡಿಸಿದಿ ಭರದಿ ಮುನಿ ಸತಿಯರ ಲಜ್ಜಿಸಿದಿ ||2||
ತಿಳಿದೆಳಸಿದ ನಿನ್ನೊಳಗಿಹ ದುರ್ಗುಣಗಳು |
ಹೇಳಲ್ಕವು ತೀರವು ತಿಳಿಯದೆಸಗಿದೆ |
ನ್ನೊಳಗಿಗಿಹ ದೋಷಗಳಳಿಯೊ
ಶಂಕರೇಶ ನಿರ್ಮಳ ಸುಚರಿತಕೋಶ 3||
ಭವ ಮೂಲ ಕಂಟಕವನ್ನಳಿದು
ಪಾಲಿಸೆನ್ನನು ಪದುಳದಿಂ ಶ್ರೀ ಪಾರ್ವತೀಶ |
ಭವ ಮೂಲ ಕಂಟಕವನ್ನಳಿದು ತವ |
ಬಾಲನೆಂದಿಹ ಪರದಿ ನೀನೆ ||ಪಲ್ಲ||
ನರನ ರೂಪವ ಧರಿಸಿನಾ ನೀ ಧರೆಗೆ ಬಂದೆ |
ಪುಶಿ ಮರವೆಯೆಂಬುವ ರೋಗಪೀಡಿತನಾಗಿನೊಂದೆ |
ಈ ಬರಿಯ ಸಂಸ್ಕೃತಿಯಂಬ ವುರಿ ಮಧ್ಯದೊಳು ಬೆಂದೆ |
ಪರಿ ಪರಿಯ ವಿಷಯಂಗಳೆಂಬುವ ಗರಳ ಸರ್ಪಗಳೆನ್ನ ಕಚ್ಚ |
ಲ್ಕರಿವುಯಿಲ್ಲದೆ ತಮ್ಮ ಚರಣವ ಮರೆದು ಧರೆಯೊಳು ಮರುಳನಾದೆ || 1||
ನಾರಿಯರ ಸೌಂದರ್ಯ ರೂಪಗಳನ್ನು ನೋಡ್ದೆ |
ಮನ ಸೂರೆ ಮಾಡುತ ಕಣ್ಣನಿಂದಲಿಸನ್ನೆ ಮಾಡ್ದೆ |
ಗಿಳಿದೇರ ನಾಟಕೆ ಕರೆದು ರತಿಗೇಳಿಯೊಳು ಕೂಡ್ದೆ |
ಭೂರಿ ಭ್ರಾಂತಿಯು ಸೇರಿಶುೃತಿ ನುಡಿ ಮಿರಿ ಮದತಲಿ ಗೇರಿ ನೀತೆಯ |
ಮಾರಿ ತವನುತಿ ದೂರಿಜ್ಞಾನದ ದಾರಿಗಾಣದೆ ದೈನ್ಯದಿರುವೆ ||2||
ಕಾಡುತಿಹ ಕರ್ಮೇಂದ್ರಿಯಗಳಿಗೆ ಮನವಗೊಟ್ಟಿ |
ಈ ಖೋಡಿ ತನುವಿದು ನಾನೆಯಂದು ನಂಬಿ ಕೆಟ್ಟೆ |
ನಾ ಮಾಡಬಾರದ ಪಾಪಕೃತಿಗಳ ಮಾಡಿಬಿಟ್ಟೆ |
ಗಾಡಿಕೋರರ ಕೂಡಿ ಪರರನ್ನು ನೋಡಿ ನಿಂದೆಯನಾಡಿ ಕುಂದಿದೆ |
ನಾಡಿನೊಳು ಗುರು ಶಂಕರೇಶನ ಪಾಡಿ ಮುಕ್ತಿಯ ಬೇಡದಿರುವೆ | |3||
ಬೇಡಿದ ವರವನಿತ್ತಿ ಜಗದೀಶ
ಮಾಡಬಾರದ ಕೃತ್ಯ ಮಾಡಿ ಕೆಲಬರಿಗೆ |
ಬೇಡಿದ ವರವನಿತ್ತಿ ಜಗದೀಶ | ||ಪಲ್ಲ||
ಕೆರಗಾಲಿನಿಂದಂಗಕ್ಕಿರದೆ ವದಸಿಕೊಂಡಿ |
ಬಿರುಗಲ್ಗಳಿಡೆ ಪೆಟ್ಟು ತಾಳಿಕೊಂಡಿ |
ವರದನುವಿಂದೆ ಪೊಡಿಸಿಕೊಂಡಿ |
ಶರ್ತಾಗಿ ನೆರೆಬಾಗಿಲವನೆ ನೀ ಕಾದುಕೊಂಡಿ ||1||
ಚರನಾದಿ ನಟನಾದಿ ಪರಿಶಿಷ್ಯನಾದಿ ಮೇಣ್ |
ಸರಸದಿಂದಲಿ ಕುಂಟಿಣಿಗನಾದಿ ವರನಾದಿ |
ಸುತನಾದಿ ಪರಮಕೋಪದಿ ಬಹಿಷ್ಕರಿಸಲು |
ಕಡೆಗೆ ನೀ ಕುಲ ಭ್ರಷ್ಟನಾದಿ ||2||
ಇಂತಹ ಹೀನಮಾದಂತಹ ಕೃತ್ಯವ |
ನೆಂತು ಮಾಡಿದಿಯೊ ಮಾಡಿಸಿದರೆಂತು |
ಕಂತುಹರನೆ ಇದರಂತಸ್ತವರಿಯನೆ |
ನ್ನಂತವೆ ಪೊರೆ ಗುರುಶಂಕರ ದೇವ
ಕರಿದೊಗಲುಟ್ಟು ನೀ ಪರಿಶುದ್ಧನೆನಿಸಿದಿ
ನಿನ್ನ ಮಹಿಮವ ನಾನಿನ್ನು ಪೇಳುವ ಶಕ್ತಿ |
ಎನ್ನೊಳಿಲ್ಲ ಭವ ನೀನೇ ಸಲಹು ||ಪಲ್ಲ||
ಕರಿದೊಗಲುಟ್ಟುನೀ ಪರಿಶುದ್ಧನೆನಿಸಿದಿ |
ಸ್ಮರನನು ಕೊಂದು ಸತ್ಕರುಣಿಯನಿಸಿದಿ |
ತರುಣಿಯನು ಕೂಡಿ ವಿರತನೆಂದೆನಿಸಿದಿ |
ತಿರಿದುಂಡು ಸಿರಿವಂತನೆನಿಸಿದಿ ದೇವ ||1||
ನಲಿದುಂಡು ಸ್ವಪಚನೋಳ್ಕುಲವಂತನೆನಿಸಿದೆ |
ಸಲೆರುಂಡ ಧರಿಸಿ ನಿರ್ಮಲನೆಂದೆನಿಸಿದಿ |
ಬಲು ಪೆಟ್ಟು ತಿಂದುರೆ ಕಲಿಯೆನೆಸಿದಿ ಮತ್ತ |
ಪಲಲವ ಬಯಸಿ ಪಾವನಾದಿ ದೇವ ||2||
ಚರನಾಗಿ ಮೂಲೋಕ ದೊರೆಯನಿಸಿದಿ ಬಿಟ್ಟಿ |
ಗೆರವಾಗಿ ಪೂಜ್ಯನೆನಿಸಿದಿ ಪ್ರೀತಿಯೊಳು |
ನೆರೆ ಭೂತ ಬಳಗದಿ ಪರಿ ಪರಿ ಕುಣಿದು |
ಸಚ್ಚರಿತನೆನಿಸಿದಿ ಶಂಕರ ಗುರುದೇವ ||3||
ನಾನರಿಯೇ ದೇವ
ಹೀನ ನಡತೆಗೆ ನೀನೊಲಿದ ಬಗೆ
ಯೇನು ನಾನರಿಯೇ ದೇವ ||ಪಲ್ಲ||
ಮಣಿಮಯಗಳಿರೆ ಮರೆದು ಭೀಕರ |
ಫಣಿಗಳನು ತಾಳ್ದಿ ದೇವ ||
ಗಣ ಸಮೋಹವ ಗಣಿಸದರ್ಥಿಲಿ |
ಕುಣಿದಿ ಭೂತಗಳೋಳ್ ದೇವ | |1||
ಜರದ ವಸನವ ಜರಿದು ಧರಿಸಿದಿ |
ಕರಿಯ ಚರ್ಮವನು ದೇವ ||
ಸುರ ಗಿರಿಯ ನೀಂ ತೊರೆದು |
ಮಸಣದಿ ವಿರಚಿಸಿದಿ ಮನೆಯ ದೇವ ||2||
ಘನ ಸುಗಂಧವ ಮುನಿದು ಬೊಳದಿಯು |
ಹೆಣದ ಬೂದಿಯನು ದೇವ ||
ಮುನಿಪ ಸುಧೆಯಿರೆ ಮನುಜ ಮಾಂಸಕೆ |
ಮನವ ನೀ ನಿತ್ತೀ ದೇವ ||3||
ವಾರಣಾದಿ ವಾಹನಗಳುಳಿ |
ದೇರಿದೆತ್ತನ್ನು ದೇವ ||
ಭೂರಿ ವಿಶ್ವಾಧಾರನೆನಿಸುತ
ದೂರಿ ತಿರಿದುಂಡಿ ದೇವ ||4||
ಬಿಡದ ಭೇದದ ನಡತಿಯನು |
ನೀ ನಡೆದು ತೋರಿಸಿದಿ ದೇವ ||
ಗಡಯೆನಗಿದನೆ ಕೊಡುತೆ ಪೊರೆ |
ಗುರುವಡಿಯ ಶಂಕರನೇ ದೇವ || 5||
ನಿನಗೆಯಿದು ನ್ಯಾಯವೆ
ಕಾಲಹರನೆಯನ್ನ ಪಾಲಿಸದಿರುವದು |
ನಿನಗೆ ನಿನಗೆಯಿದು ನ್ಯಾಯವೆ |
ಕಾಲಕಾಲದಿ ಭವಜಾಲದಿ ಬಳುವೆ ||ಪಲ್ಲ||
ಮಾತೆಯ ಗರ್ಭದಿ ರೇತುರಕುತದಿಂ |
ನೂತನ ತನುವನು ನಾ ತಳೆಯುತ ಬಂದು |
ಭೂತಲದಲಿ ಬಹು ಪಾತಕದಲಿ ನೊಂದು |
ಭೂತದಯವು ತಪ್ಪಿ ಧಾತುಗುಂದಿದೆನೈ ||1||
ಗುರು ದೈವಾರ್ಥಕೆ ನೆರೆ ಸೋಲ್ದಿಳೆಯೊಳು |
ಪರದೋಷಣಿಗಳೋಳ್ಬೆರೆದಪವಾದಕೆ |
ಗುರಿಯಾಗುತ ಸತ್ಯವರಿಯದೆ ದುಃಖದಿ |
ಧರೆಯೊಳು ಪರಿಪರಿ ಕೊರಗಿ ಸೊರಗಿದೆನು ||2||
ವಿಷಯ ಸುಖವು ಮಹಾ ವಿಷವೆಂದರಿಯದೆ |
ವಿಷಮ ಸಂಸಾರದಿ ಮೃಷ ತನುವೆಂದು |
ಭಾವಿಸದೆ ಗುರೂತ್ತಮನ ಸಮಶಂಕರನ |
ಪೂಜಿಸದನುದಿನದುರ್ವೆಸನದಿ ಕೂಡಿದೆ ||3||
ಭವ ಬಾಧೆಯ ಬಿಡಿಸು ಭವ
ಭವ ಬಾಧೆಯ ಬಿಡಿಸು ಭವ ಶಿವಶಂಭುವೆ
ಎನ್ನವಿವೇಕವಳಿದು ||ಪಲ್ಲ||
ಮರುತಗಳಂತಃಕರಣೇಂದ್ರಿಯಗಳು |
ಪರಿ ಪರಿ ವಿಷಯದ ಭ್ರಾಂತಿಗಳು |
ಮುರಿದೊತ್ತುತ ದಾಯಾದ್ಯರತೆರದಲಿ |
ಪಿರಿದೆನ್ನನು ಮರಮರ ಮರುಗುಸುವವು ||1||
ತನುವಿನ ಗುಣಗಣ ಮೆನಿಸುವಹ |
ಸುತೃಷಿನಿದ್ರೆ ನೋವುಗಳು ಎಡವಿಡದೆ |
ಶುನಕಂಗಳ ರೀತಿಯ ದೋರುವ ವೈ |
ಮನೆ ಪ್ರೀತಿಯು ಬಳ್ಳಿಯ ತೆರ ತೊಡರ್ದುದು ||2||
ಅರಿವರ್ಗವು ಬಂಧುರದಿಂ ಪಗೆಯಂ |
ತಿರಿದು ಕೊಲ್ಲತೈತರುತಿಹುದು |
ಸ್ಮರಕಾಲರು ಚೋರರ ತೆರ ಕ್ರೋಧದಿ |
ವರ ಮುಕ್ತಿಯ ಪಥಕಡ್ಡಾಗಿರುವರು ||3||
ನೆರೆ ತೆರೆ ಮೇಣ್ ಜರೆ ಮರಣಗಳೆನ್ನನು |
ಪಿರಿಯ ಪುಲಿಗಳಂತಡರುವವು
ಮರಹೆಂಬುವದೆನ್ನಯ ಜ್ಞಾನಾಕ್ಞಿಗೆ
ಭರದಿಂ ತಮದೊಲು ಮುಚ್ಚಿ ಮುಸುಗುವದು ||4||
ಮನವೆಂಬುವ ಕಪಿ ಮುನಿದಣಿಕಿಸುತಿಹು |
ದನುದಿನ ದಿನ್ನುಳಿದಿಹ ಬಾಧೆ
ಘನ ಮುಂಟವನೆಲ್ಲವನೇನೊರೆಯಲಿ
ಚಿನುಮಯ ಶ್ರೀಗುರು ಶಂಕರದೇವನೆ | ||5||
ಈಕ್ಷಿಸಬಾರದೇನು
ಈಕ್ಷಿಸಬಾರದೇನು ಶಿವಾಧವ ಈಕ್ಷಿಸಬಾರದೇನು |
ಈಕ್ಷಿಸಬಾರದೇನಕ್ಷಯ ದಯದಿ |
ನಿನ್ನಕ್ಷಿ ಮೂರೆನ್ನನು ರಕ್ಷಿಸಲೀಗಳೆ ||ಪಲ್ಲ||
ಅಂಗಜನನು ಮುನ್ನ ನೀ ದಹಿಸಿರೆ |
ಪಿಂಗದೆ ಮಗುಳೆನ್ನ ಅಂಗದೊಳುದಯಿಸು |
ತಂಗನಾಮಣಿಯರಾಲಿಂಗನ ಶೌಖ್ಯದ |
ಸಂಗ ಕಿಚ್ಛಿಸುವಂತೆ ತುಂಗಶಕ್ತಿಯಿಂದೆಳೆದು |
ಮನ್ಮಂಗಲ ಗುಣಗಳ ಕಳೆದು |
ಭಂಗ ಕಡೆಗೊಳಿಪನಂಗನುರುಹಿ ಭಸಿ |
ತಂಗೊಳಿಸಿ ನೊಸಲದಿಂಗಳ ನೇತ್ರದಿ ||1||
ಬಿಡದಘದಿರುಳಿನಲಿ ದುರ್ನಡೆ ಘೂಕ |
ವೆಡೆವಿಡದೊದರುತಲಿ ತಡಿಯದೆನ್ನಯ ತಲೆ |
ಬಡಿದಪಜಯದಿಂ ದಡಿಗಡಿಗತಿ ಭಯ |
ಪಡಿಪುದು ಎದೆಯೆಂಬ ಜಡರುಹ ತಾಪುಗಿದಿಹುದು |
ಮತಿಯಡಗಿ ಶೂನ್ಯ ತೋರುವದು |
ಮೃಡ ಮಾರಾರಿಯೆ ಕಡು ಜವದಿರುಳನು |
ಕೆಡಿಸುತೀಗ ಬಲಭಾನು ನಯನದಿಂ ||2||
ಮರೆವಯಂಬುವ ತಮದಿ ಷಡ್ರಿಪುವೆಂಬ |
ದುರುಳ ಚೋರರು ಭರದಿ |
ಶರೀರದೊಳಿಹಯೆನ್ನ ಪರಮ ವಿವೇಕದ |
ವರ ರತನವನಪಹರಿಸಲೋಸುಗ |
ಸಂಚರಿಸುತ್ತತಿ ಶೋಧಿಪರು ಬಂಧುರದಿಂದೆ |
ತ್ನೈಸುವರು ಮರುಗುವೆನಿವರನ್ನಿರ |
ದೋಡಿಸಿ ಶಂಕರನೆ ಯಡದ |
ಹಿಮಕರ ದೃಗದಿಂ ನೀ ||3||
ಪಾಲಯಮಾಂ ಶಿವಶಂಕರಾಭವ
ಪಾಲಯಮಾಂ ಶಿವಶಂಕರಾಭವ |
ಪಾಲಯಮಾಂ ಸುಖ ||ಪಲ್ಲ||
ಪಾಲಯಮಾಂ ಸುಖಶಾಲ ಸುರಾರ್ಚಿತ
ಕಾಲ ವಿಜಿತ ಹರಿಮಾಲ ವಿರಾಜಿತ ||1||
ಅಂಬರಕೇಶ ದಿಗಂಬರ ನಾರದ |
ತುಂಬುರಸನ್ನುತ ಶಂಬರ ರಿಪುಹರ ||2||
ಮಂದರಗಿರಿ ನಿಜ ಮಂದಿರ ಭಾಸ್ವರ
ಚಂದಿರಧರ ಶರಭೇಂದ್ರ ಜಯಾನ್ವಿತ ||3||
ಅಂಬಾಪತಿ ಪೊರಿಯೈ
ಶಂಭೋ ಸುಖಕರ ಲಂಬೋದರ ಪಿತ
ಅಂಬಾಪತಿ ಪೊರಿಯೈ ||ಪಲ್ಲ||
ಸುರವರ ನುತ ಪದ ಸರಸಿಜ ಸುರುಚಿರ
ಪರತರ ಶಂಕರ ಭೋ ||1
ಯತಿ ತತಿ ನುತ ಪಶುಪತಿ ಕ್ಷಿತಿರಥ ಸ್ಮರ
ಜಿತ ಮೃತಿಹತ ಮೃಢ ಭೋ ||2||
ಮನು ಮುನಿ ಸೇವಿತ ಘನ ಗುಣಗಣಯುತ
ಮಿನುಪ ಹರ ಶರಭ ಭೋ ||3||
ದಂಭೋಳಿಧರ ನುತ ಸಂಭಾವ್ಯ ಸಮುದಿತ
ಶಂಭೋಮಾಂ ಪಾಹಿಮಾ ದಾಂಭೋಜ ಸ್ಮರಿಸುವೆ |
ದಂಭೋಳಿಧರ ನುತ ಸಂಭಾವ್ಯ ಸಮುದಿತ ||ಪಲ್ಲ||
ಕರುಣಾಬ್ಧಿ ಪರಶಿವ ಶರಣಾಳಿ ಪಾಲಕ |
ತರುಣೇಂದು ಚಿತದೃಗ ಶರಣೆಂಬೆ ಶಂಕರ ||1||
ಸಿದ್ಧಾಮರ ಮುನಿ ಮನೂದ್ಧಾರ ದುರಿತ |
ವಿರುದ್ಧಾವನಿರಥ ಸದುದ್ದಾಮ ಚರಿತನೆ ||2||
ಸ್ಯಾಮಾಂಗಸಖ ಕವಿ ಭೀಮಾಖ್ಯ ಸನ್ನುತ
ಸ್ವಾಮಿ ಶ್ರೀ ಶರಭ ಸುಪ್ರೇಮ ಸರ್ವೇಶನೆ ||3||
ವರದೇವ ನಿರಂಜನ ನಿರ್ವಯ ಶ್ರೀ
ವರದೇವ ನಿರಂಜನ ನಿರ್ವಯ ಶ್ರೀ |
ಕರ ಸನ್ನುತ ನಾಮ ಪರಾತ್ಪರನೆ |
ಸ್ಮರಿಪೇಂ ನಿಜಭಕ್ತಿಯೊಳಾಂ ಪೊರೆನೀಂ |
ಚಿರಕಾಲದಿ ಶ್ರೀಗುರು ಶಂಕರನೆ ||ಪಲ್ಲ||
ಭವದೊಳ್ಬಲು ಚಿಂತಿ ಪರಜ್ಞೆತೆಯಂ |
ಜವದೊಳ್ಕಳೆಯುತ್ತರು ಸಾಹಸದಿಂ |
ಶಿವಭಾವವ ಸುಸ್ಥಿರ ಮಾಗುವ ಪರಿ |
ತವೆ ಬೋಧಿಪ ಶ್ರೀಗುರು ||1||
ಸುರಧೇನಿರದಿಚ್ಛಿತ ಮಿತ್ತಪುದೈ |
ಸ್ಮರಿಸುತ್ತಲಿ ಭಕ್ತಿಲಿ ಬೇಡ್ದರಿಗೆ
ನರರಿಂಗೆ ಸುದರ್ಶನದಿಂ ಸುಖ |
ತ್ತಿರಿಸುತ್ತಿಹ ಶ್ರೀಗುರು ಶಂಕರನೆ | |2||
ಪರುಷ ಸ್ಪರಿಶಾಕ್ಷಣ ಲೋಹವು ತಾಂ |
ಸ್ವರಣಾಂಗ ಮದಾದೊಡೆನಸ್ಯವು ಈ |
ಧರಣೀ ಜನ ತಮ್ಮಯ ದರ್ಶನದಿಂ |
ಪರ ಮುಕ್ತರು ಶ್ರೀಗುರು ಶಂಕರನೆ ||3||
ಪಿತನಂ ಸುತಕಾಡಿದಡರ್ಥವ ತಾ
ಮಿತಿಯಿಂ ಕೊಡುತಾ ಸುತನಂ ಪೊರೆವಂ |
ಮಿತಿಯಿಲ್ಲದೆ ಯಾತ್ಮ ಸುಖಾರ್ಥವ
ನೀವುತೆ ರಕ್ಷಿಪಶ್ರೀ ||4||
ಶರಣಾಗತ ಪಾಲಕ ನಿರ್ವಯ ನಿ |
ರ್ಮರಣಾಮಲ ನಿಶ್ಚಲ ಶಾಂತಮನೋ |
ಹರ ನಿಷ್ಕಲ ಶಾಶ್ವತ ಪೂಜಿತ ಸ |
ತ್ಕರುಣಾ ಕರಶ್ರೀ ||5||
ಭುವನಾತ್ಮಕನಾವನು ಸಿದ್ಧಿಗೆ ಮಂ |
ತ್ರವ ನಾವನು ಸರ್ವಕೆ ಸಾಕ್ಷಿಕ ನಾ |
ದವನಾರವ ನೀನೆಯು ಸತ್ಯನು |
ದುರ್ಭವನಾಶಕ ಶ್ರೀ ||6||
ಕ್ಷಿತಿಯೋಳು ನಿಜ ಮಾತೆಯು ಪಾಲ್ಗೊಡಲಾ |
ಸುತಸಮ್ಮುದಗೊಂಬುವನೋರ್ವ ಖಿಳರ್ |
ಹಿತಗೊಳ್ವರು ನಿಮ್ಮಯ ಚಿತ್ಕರುಣಾ |
ಮೃತದಿಂ ಸಲೆಶ್ರೀ ||7||
ದಯದೊರದೆ ಜೀವಿಯ ಕೊಲ್ಲಲು ಪಾ |
ಪಿಯು ಯೆಂದೆನುತಿಪ್ಪರು ನೀನಿಳೆಯೋಳ್ |
ಕ್ಷಯಿಸುತ್ತಿರೆ ಜೀವದ ಭಾವವ ಚಿ |
ನ್ಮಯನೆಂಬರು ಶ್ರೀ ||8||
ಶೃತಿಯಂ ಪರಿಶೋಧಿಸಿ ನೋಡಲ್ಸ |
ನ್ಮತಿಯಿಂ ಘನನಿರ್ಗುಣ ನೀ ನಿರುತಾ |
ದ್ಭುತ ತೋರುವಿನೀ ಸಗುಣಾಂಶದಿ ಕೂ |
ಡುತೆ ಲೋಕಕೆ ಶ್ರೀ ||9||
ಭವರೋಗದ ಬಾಧೆಯ ಬಂಧನದಿಂ |
ಜವಗಟ್ಟೆಹ ಭಕ್ತರ ನೋಡುತೆ ನೀಂ |
ಶಿವ ಮಂತ್ರವ ಬೋಧಿಸಿ ಮೋಕ್ಷದ ಮಾ |
ರ್ಗವ ತೋರುವಶ್ರೀ ||10||
ಜಡ ಭಾವನೆಯನ್ನಳಿದರ್ಥಿಲಿ ತ |
ಮ್ಮಡಿದಾವರೆಗಳ್ಗೆರಗುತ್ತಿನಿ ಶಂ |
ಬಿಡದರ್ಚಿಪ ಭಕ್ತರ ಬಂಧನ ಮಂ |
ಕಡಿದೌಂಕಿಪಶ್ರೀ ||11||
ಘನ ಪಾಪ ತಮೌಘ ಪ್ರಬಾಕರ ಸ |
ನ್ಮುನಿ ಚೂತವಸಂತ ಶುಭಾಕರ ದು |
ರ್ಜನ ದೂರದಯಾರ್ಣವ ಚಂದಿರ ಪಾ |
ವನ ಮೂರುತಿಶ್ರೀ ||12||
ತವ ಬೋಧ ಸುಧಾಸಲೆ ಸ್ವೀಕರ ನುಂ |
ತವ ಪಾದ ಸುಪೂಜಕನಾಗಿರುವಂ |
ತವ ಸೇವಕ ಭೀಮನಿದನ್ನೊರೆದಂ |
ತವ ಸ್ತೋತ್ರವ ಶ್ರೀಗುರು ಶಂಕರನೆ ||13||
ಜಯ ನಿರ್ಗುಣ ಹೃನ್ಮಯನಿಸ್ಪೃಹನೆ |
ಜಯ ಮುಕ್ತಿಯ ಭಾಜನ ಪೂರಿತನೆ |
ಜಯ ಭೂತಲ ಪಾಲಕ ಸನ್ನುತನೆ |
ಜಯ ಮಂಗಲ ಶ್ರೀಗುರು ಶಂಕರನೆ ||14||
ಗಿಣಿಯೇ ಮುದ್ದು ಗಿಣಿಯೇ
ಗಿಣಿಯೇ ಮುದ್ದು ಗಿಣಿಯೇ | ನೀ
ಕ್ಷಣವಗಲದೆ ವರ ತ್ರಿಣಯನ ಧ್ಯಾನಿಸು ||ಪಲ್ಲ||
ಪರಮೇಶ ತಪವನಾಂತಿರಲಾಗ ಶರ ವೆಚ್ಚ |
ಲುರಿದ ಮನ್ಮಥನನ್ನು ಜರಿದು ಬಿಟ್ಟು |
ಸರಸದಿ ಬಂದು ಭಾಸುರ ಗೌರಿಕಾಂತನ
ಸ್ಮರಿಸಿ ಸಂತೋಷದೊಳಿರು ನೀನು ನಿರುತದಿ ||1||
ಯತಿಯೋಗಿಗಳ ಮಹಾ ವೃತಗಳ ಕೆಡಿಸುವ |
ಮತಿಹೀನ ಮನಸಿಜನತಿ ಕ್ರಮಿಸಿ |
ನುತಿಪರಿಗನುದಿನ ಕ್ಷಿತಿಯೊಳಿಷ್ಟಾರ್ಥ |
ಗಳತಿಕರಿಸಿ ಯುವ ಸಿತಿಕಂಠನಡಿವಿಡಿ ||2||
ಗಂಡರನಗಲಿದ ಮಿಂಡೆಯರನು ಕೊಲ್ವ |
ಭಂಡ ಕಾಮನ ದೂರಿ ಭರದಿ ನೀನು |
ದಂಡಧರನ ಕುಟ್ಟಿ ದಿಂಡು ಗೆಡಹಿದಹಿ |
ರುಂಡಮಾಲನ ಕೂಡಿ ಕೊಂಡಿರು ಸೌಖ್ಯದಿ | |3||
ಅಂಗದೊಳುದಿಸಿಯನಂಗನೆಂದೆನಿಸಿದ |
ಮಂಗಳಾರ್ಯನ ಮಹಿಮಂಗಳನು |
ಸಿಂಗರದಿಂ ನುತಿ ಯಂಗಯ್ಯದೀಗಳೇ |
ಭಂಗ ರಹಿತ ಭಕ್ತ ಸಂಗ ಶಿವನ ಬೆರಿ ||4||
ಖಳರೋಳಗ್ಗಳನಾದ ನಳಿನ ಶರನ ಸಂಗ |
ಕೆಳಿಸಿ ನೀ ನಲಿಯಲು ಇಳೆಯೊಳಗೆ |
ಗಿಳಿಯೋದಿ ಕಡೆಗೆ ತಾ ಮಲವ ಭುಂಜಿಸಿತೆಂಬ |
ಕೊಲೆಗೆಡೆಯಾಗುವಿ ಗುರುಶಂಕರನ ಪೊಂದು ||5||
ನಿನ್ನ ಪ್ರಿಯ ವಸ್ತುಗಳನೊಲ್ಲೆನ ಭವ
ನಿನ್ನ ಪ್ರಿಯ ವಸ್ತುಗಳನೊಲ್ಲೆನ ಭವ |
ಎನ್ನೊಳೊಂದುದಿಪುದದ ಕಾಶಿಸುವೇ ದೇವ ||ಪಲ್ಲ||
ಹರನೆ ನಿನ್ನಶನದಿಂ ಶರಿರ ಸುಡುವದು ನಿನ್ನ |
ಪರಮ ಭೂಷಣದಿಂದೆ ಶುಭಗಾಣದು
ವರ ನಿನ್ನ ವಸನದಿಂದರಿಯಲು ವಿಲಕ್ಷಣವು
ನೆರೆ ನಿನ್ನ ಗಂಧದಿಂ ಜನ ಮೆಚ್ಚರು ||1||
ಪುರಮರ್ದನನೆ ನಿನ್ನ ತುರಗದಿಂಗಮನೇಚ್ಛೆ |
ಪರಿಪೂರ್ತಿಸದು ನಿನ್ನ ನಿಲಯದಿಂದೆ |
ಪಿರಿದಮಂಗಳ ತೋರದಿರದು ನಿನ್ನಾಳ್ಗಳಿಂ |
ದುರುತರದ ಭಯಭೀತಿಗಳು ತೋರ್ಪವು ||2||
ನಿನ್ನಯ ಸಗುಣ ಸಿರಿಯನುನ್ನಿಸಲ್ಕದರಿಂದ |
ಲನ್ಯರಪಹಾಸ್ಯಕ್ಕೆ ಗುರಿಯಪ್ಪುದು |
ಇನ್ನಿವುಗಳೊಳದೊಂದ ನೆನ್ನಗೀಯದೆ
ಸದಾ ನಿನ್ನ ಭಕ್ತಿಯೆನಿತ್ತು ಪೊರೆ ಶಂಕರ ||3||
ಎನ್ನನು ಮರೆದುದು ನಿನ್ನ ನಿರ್ದಯಮಲ್ತೆ
ಎನ್ನನು ಮರೆದುದು ನಿನ್ನ ನಿರ್ದಯಮಲ್ತೆ
ಮುನ್ನಿನ ಪಾಪಿಗಳನ್ನು ರಕ್ಷಿಸಿ ಶಂಭೋ ||ಪಲ್ಲ||
ಧರಣಿಯ ಜನರಿಂದೊರೆಯಲಸಾಧ್ಯಮಾ |
ದುರುತರ ಪಾಪಿಯಾಗಿರುವ ವಿರಳನಿಗೆ |
ಕರುಣಾ ಪಾಂಗದಿ ಭರದಿಂದೀಕ್ಷಿಸಿ |
ಹರಗಣಪದವೆಯ ಕರುಣಿಸಿದೊಲವಿಂ ||1||
ಬಿನುಗಿನಂತ್ಯಜೆಯೊಳು ತನಗುದಿಸಿದ ಸುತೆಯನು |
ಕೂಡುತ ಪಾಪಿಯನಿಸಿದ ಸುಕುಮಾರ |
ತನುಬಿಡಲವನನು ಮುನಿಯದೆ ಮೋಹದಿ |
ಮಿನಗುವ ನಿನ್ನ ಕಾಂಚನಪುರಕೊಯ್ದಿಯು ||2||
ಧರೆಯೊಳು ಮಾರನ ವಿರಹದಿ ಜಾರತ್ವ |
ವಿರಚರಿಸಿ ಶೂದ್ರನ ವರಿಸಿ ದ್ವಿಜತೆಗೆಟ್ಟು |
ಮರಳಿ ಚಾಂಡಲರೊಳಿರದುದಿಸಿದ ಪಾಪಿ |
ತರುಣಿ ಸೌಮಿನಿಗೊಲಿದುರೆ ಸುಖದಿರಿಸಿದಿ ||3||
ಭೂತಲದಲಿ ವಿಟ ಖ್ಯಾತನೆನಿಸಿ ಮಹಾ |
ಪಾತಕಿಯಾಗಿರ್ಪ ಸ್ವೇತನ ಪಿಡಿದತಿ |
ಘಾತಿಸಿತಿರಲು ಕಂಡಾತುರದೆ ಮನಕೊಂದು |
ಆತನ ಬಿಡಿಸಿ ಸಂಪ್ರೀತಿಲಿ ಸಲಹಿದಿ ||4||
ಅರಿಯಲು ಇವರಂತೆ ದುರಿತವನಾರ್ಜಿಸಿ |
ಮರದೊಮ್ಮೆ ನೆನಿಸಿದ ಪರಮ ಪಾತಕಿಯೆ ನಾ |
ಸ್ಮರಿಸುವೆ ನಿರುತ ಶಂಕರನೆ ಶರಣ ಮಮ
ಶರೀರವೆಂದೊರೆದುಕ್ತಿ ಸ್ಮರಣೆಗೆ ತರದೇ ನೀ || 5||
ಕರುಣದಿಂದೆಮ್ಮನುರೆ ಕಾಪಾಡಲಿ
ವಿರಚಿಸಿದ ಪ್ರಶ್ನದುತ್ತರದ ವರ್ಣಗಳ ಮೂರರ |
ಮಧ್ಯದಕ್ಷರಗಳನ್ನೋದಲು |
ಧರೆಯೊಳಾವನ ನಾಮ ಬರುವದಾ ದೇವ ತಾ |
ಕರುಣದಿಂದೆಮ್ಮನುರೆ ಕಾಪಾಡಲಿ ||ಪಲ್ಲ||
ತರುಣಿಯರ ಕರ್ಣದಾಭರಣ ಮೇಣಂಧಕಗೆ |
ಕರೆವ ಪೆಸರೇನು ನೊಣಕೇನೆಂಬರು |
ಸರಸಿಜಾಹ್ವಯವೇನು ಹರನಾರಿಗಿರದೆ |
ಕಿಂಕರನಪ್ಪನಾ ದೇವನೆಮಗೆ ಸುಖ ಕೊಡಲಿ ||1||
ವೆಸನಕ್ಕೆ ನೀಚಂಗೆ ಪೆಸರಂಗಳೇನು |
ಸಂತಸದ ಪ್ರತಿನಾಮ ಮೇನೆಮನಿರುತಿಹ |
ದಿಶವಾವುದಂಘ್ರಿಗುಪಮಿಸುಪ ನಾಮಾವುದಾ |
ಅಸಮದೇವನು ಯಮ್ಮನೊಸೆದು ಪಾಲಿಸಲಿ ||2||
ಮದನ ಶರವಾವುದುರು ಸುದತಿ ಮುಡಿಗೇನೆಂಬರು |
ಉದಿತ ವಿಸ್ತಾರಕ್ಕೆ ಬಹು ಕಷ್ಟಕೆ ವದ |
ವಿದಾಹ್ವಯಗಳೇಂ ಸದಮಲ ನೃಪಾಖ್ಯಮೇಂ |
ಪದಪಿನಿಂದೆಮ್ಮನಾ ದೇವ ರಕ್ಷಿಸಲಿ ||3||
ಮಂಗಲ ಜಯಪುರ ಭಂಗ ಶರಣ ಸಂಗ
ಮಂಗಲ ಜಯಪುರ ಭಂಗ ಶರಣ ಸಂಗ |
ಉತ್ತುಂಗ ಕೃಪಾಂಗ ||ಪಲ್ಲ||
ಪಾಪ ಪರಿಲೋಪ ಭಸ್ಮ ಲೇಪಗಿರಿ ಚಾಪ |
ವಿಶ್ವ ವ್ಯಾಪಕ ಮುದೋಪಯುತ ತಾಪದೂರ |
ಮಾಪಕೃತ ರೊಪರಜನೀಪ ಸುಕ ಕಲಾಪ ಸದ |
ಯಾಪರ ಚಿದೃಪಲಸ ದೋಫ ಚರಿತ ||1||
ವ್ಯಾಲಗಣಮಾಲ ಶುಭು ಲೀಲಘನ ಸೀಲಸುರ |
ಶೈಲ ಸುವಿಶಾಲರುಚಿರಾಲಯ ಸದಾ |
ಬಾಲಶಶಿ ಮೌಳಿಕಕಪಾಲಧರ ಕಾಲಹರ |
ಶೂಲಧರ ನೀಲಗಳ ಫಾಲನಯನ ||2||
ಸಾರಸಶರಾರಿಭವ ದೂರಗುಣ ಹಾರವೃಷ |
ದೇರವರ ಗೌರವ ಶರೀರ ವಿಭವ |
ನಾರದಾದಿ ಚಾರುಮುನಿ ವಾರ ಹೃದಯಾರವಿಂದ
ಸಾರ ರವಿ ಧೀರ ಶಂಕರಾರ್ಯ ದೇಶಿಕ ||3||
ಅನುಪಮ ಮೋಕ್ಷವು ನಿನಗಹುದಾಗಳೆ
ಅನುದಿನದಲಿ ಗುರು ಹರ ನಿನ್ನನು ನೆನಿ |
ಅನುಪಮ ಮೋಕ್ಷವು ನಿನಗಹುದಾಗಳೆ ||ಪಲ್ಲ||
ತನುವಿದೇನು ಎನ್ನನು ಪೊಂದಿಹುದೇಂ |
ಜನನ ಮರಣ ಸಂಕಟಮೇನರಿಯುವ |
ಅನುಭವಿಸುವ ಕೇಳುವ ಸೋಂಕುವ ಘಟ |
ದನುವೇ ನಾನಾರಸುಗಳಿವೆನೆಂದ ||1||
ಧರೆಯೊಳು ಹಿತದಿ ಜಾಗರಿದಿರ್ದೆನು ನಾ |
ನಿರುಳೊಳು ಪವಡಿಸಿ ಸ್ವಪ್ನದ |
ಚಿತ್ರಗಳರಿದವನುಳಿದು ಸಪ್ತಿಯ ಸುಖ ಸವಿದೆ |
ಚ್ಚರದೊಳು ನಿಜಮೆನುತೆಸಗಿದೆನೆಂದ ||2||
ಜನನಿಯ ಗರ್ಭದ ಮನೆಯೊಳು ಪೇಯದ |
ಘನ ಬಾಧೆಯನಾಂತುದಿಸಿದೆನಿಸುವಿರ್ಪ |
ದಿನಗಳೊಳ್ ಶಂಕರ ಗುರುವಿನೊಲಿಸಿ ಭವ |
ವನುಗೆಲಿವಡೆ ಧರ್ಮವೆ ನಿಜ ಗತಿಯೆಂದ ||3||
ಹೊಲಸಿನ ದೇಹವನೊಲಿದಜ್ಞಾನದ ಬಲೆಗೆ ಬಿದ್ದಿ
ಎಂದಿಗಾರ್ಜಿಸುವಿ ನಿರ್ಬಂಧವಾದ ನಿಜಮೋಕ್ಷವನ್ನು ||ಪಲ್ಲ||
ಮಲವಣುವಿರಲಲ್ಲಿ ನಿಲದೋಡುವಿ ಕೆಟ್ಟ |
ಹೊಲಸಿನ ದೇಹವನೊಲಿದಜ್ಞಾನದ ಬಲೆಗೆ ಬಿದ್ದಿ ||1||
ತನುವಿದು ಭೂತದಿಂ ಜನಿಸುತ ಜಡ ದೃಶ್ಯ
ಮೆನಿಸುತ ನಿದ್ರೆ ಕನಸಿನೊಳಿಲ್ಲದ ಘಟವನು ನಂಬಿದಿ ||2||
ಶರೀರವಂದಿದನಿತ್ತು ನೆರೆ ತಪವಾಂತು ಶಂಕರನೊಲಿ
ಸದೆ ಗಾತ್ರದುರು ಮೋಹದಿ ಮೈಮರೆದು ಬಿಟ್ಟೆ ||3||
ಕಾಕ ಮನವೆ ಇದೇನು ನಡತಿಯು
ಲೋಕದೋಳು ವಿರತಿಯನುಳಿದು |
ನೀನೇಕೆ ವಿಷಯಕ್ಕೊಲಿದಿರುವಿ ಬಿಡು |
ಕಾಕ ಮನವೆ ಇದೇನು ನಡತಿಯು ಸಾಕು ಸಂತೈಸು ||ಪಲ್ಲ||
ಮೆರೆವ ಸವಿವಾಲಿರಲು ಪ್ರೀತಿಲಿ |
ಸುರೆಯ ಸೇವಿಸುವಂತೆ ಮಧುರಾ |
ನ್ನಿರಲು ಮಾಂಸವ ಭಕ್ಷಿಪಂತೌಷಧಿಯು ಸಿದ್ಧಿರಲು |
ಉರಿವ ವಿಷಗೊಂಡಂತೆ ವರಕತ್ತುರಿಯಿರಲು |
ಕೆಸರನು ಧರಿಸಿದಂತುರುತರಧ್ಯಾತ್ಮಾರ್ಥ |
ಮಿರೆಪುಶಿವಿಡಿದು ಬಾಳುವರೆ ||1||
ಸಾರಮಣಿಗಳನುಳಿದು ಗಾಜಿನ |
ಹಾರಕಂಠಕೆ ಹಾಕಿದಂತೆ ಸುಮೇರು |
ಗಿರಿಯನ್ನುಳಿದು ಕಿರಿಮೊರಡಿಯನು ಸೇರ್ದಂತೆ |
ಚಾರುನದಿಯಿರಲುಳಿದು ಬಚ್ಚಲ |
ನೀರಿನಲಿ ಮಿಂದಂತೆ ತತ್ವವಿ |
ಚಾರಮಿಲ್ಲದೆ ಜ್ಞಾನ ತೊರೆದಜ್ಞಾನಕೆಳಿಸುವರೆ ||2||
ತುರಗವನು ಬಿಟ್ಟಮಿತಮೋಹದಿ |
ಖರವ ಪಿಡಿದೇರ್ದಂಗೆ ಧರ್ಮದ |
ತುರುವನೊಲ್ಲದೆ ಬಿಟ್ಟು ಗಡ ಸೂಕರವನಾಳ್ದಂಗೆ |
ಮರುಳನೆಂಬರೆ ನೀನು ಗುರುಶಂ |
ಕರನ ಪೊಂದದೆ ಬಿಟ್ಟು ಲೌಕಿಕವೆರಸಿದೊಡೆ |
ಮರುಳರೊಳು ಮರುಳನೆನದೆ ಬಿಡರು ತಿಳಿಯೋ ||3||
ಹೊತ್ತುಗಳಿಯಬೇಡೆಲೊ ಮನುಜ ನೀ
ಹೊತ್ತುಗಳಿಯ ಬೇಡೆಲೊ ಮನುಜ ನೀ |
ಹೊತ್ತುಗಳಿಯ ಬೇಡೆಲೊ ಮನುಜ |
ಹೊತ್ತುಗಳಿಯ ಬೇಡೊತ್ತಿ ಪೇಳುವೆ ನಿನ್ನ
ಚಿತ್ತದಿಂದ ಬ್ರಹ್ಮನ ಗೊತ್ತು ಮಾಡದೆ ವ್ರಥಾ ||ಪಲ್ಲ||
ಧರೆಯನೆಲ್ಲ ಧೂಳಿಯಗೈಸೆ |
ಪರಮಾಣುಗಳಾಗುವವೈಸೆ |
ಅರಿಯಲಿನಿತು ದೇಹ |
ಧರಿಸಿದಿಯಗಣಿತ ಮರಳಿ ಜನ್ಮಿಸದಂಥ |
ಪರಿಯನು ಹುಡುಕದೆ ||1||
ಜರೆ ಬಡತನ ರುಜೆ ಭಯನಷ್ಟ |
ವಿರಸ ಶೋಕ ಯಾಚನೆ ಕಷ್ಟ |
ಮರಣ ವಿಷಯ ರತಿ |
ವಿರಹಗಳೆಲ್ಲವು ಪರಿದು ಪೋಗುತಿಹ
ತೆರವನು ತಿಳಿಯದೆ ||2||
ಹಲವು ದುಃಖಗಳ ಸಾಗರದಿ |
ಮುಳಿಗಿ ಮುಳಿಗಿ ಸಾಯುವಿ ಭರದಿ |
ಸಲೆ ಗುರು ಶಂಕರ |
ನೊಲಿಪ ಭಕ್ತಿಯಂ ಬೆಳಿಸಲು ನಿಜಸುಖ |
ನೆಲೆಯಂದರಿಯದೆ || ||3||
ಪಿಂಡೋತತ್ತಿಯ ನಿಜ ಕಥೆಯನ್ನು
ಬಿತ್ತರಿಸುವೆ ನಿನಗಿನ್ನು ಪಿಂಡೋತತ್ತಿಯ ನಿಜ ಕಥೆಯನ್ನು
ಚಿತ್ತದೊಳೀದನರಿಯದೆ ಶಿವ ನಾನೆಂಬ
ಯುಕ್ತಿದೋರದು ಘನ ಮುಕ್ತಿ ದೊರೆಯದೆಲೊ ||ಪಲ್ಲ||
ಶರೀರ ತೊರೆದು ಜೀವಾತ್ಮ ತಾನು |
ಪರದೊಳು ಗಮಿಸುತ ಸೂಕ್ಷ್ಮ|
ಶರೀರವಿಡಿದು ಈ ಧರೆಯೊಳು ಕೃತಪುಣ್ಯ |
ದುರಿತದಿ ಸುಖ ದುಃಖವೆರಡನುಭವಿಸಿ |
ನೂಕಿಸಿಕೊಂಡು ಮರುತಾಗ್ನಿ ಮೇಘ ಗತಿವೆರಸಿ |
ವರ್ಷಿಸಿ ಸಶ್ಯಾಂಕುರುದೊಳು ಧಾನ್ಯಮೆಂದೆನಿಸಿ |
ಆ ಧಾನ್ಯವ ವರ ಪಿತ ಮಾತೆಯರಿರದುಣಲದು |
ರೇತು ರಕುತ ರೂಪದಿ ಬೆರೆವದು ಕೂಟದಿ ||1||
ದಿನವೊಂದಕೆನಿಪುದು ಕಲಲ ಎಂಟು |
ದಿನಕೆ ರಕುತ ಮತ್ತ ಪಲಲ ದಿನ ಚತುರ್ವಿಂಶತಿ |
ಗನುವಿನಿಂದೈಮೊಳೆ ಕೊನೆಗಾಣ್ದೊಂದು ತಿಂಗಳಿಗೆ |
ಶಿರಾಗ್ರವು ಜನಿಪುದೆರಡು ತಿಂಗಳಿಗೆ ಬಾಹು ದ್ವಯ |
ಮಿನುಪ ಮೂರು ತಿಂಗಳಿಗೆ ಪಾದಂಗಳು |
ಅನುವಾಗೆಸವವು ನಾಲ್ಕಕೆನ ವರಂ |
ಧ್ರನಿತರ ಮೇಲೈದಕೆ ಕುಕ್ಷೆಯು ತಿಳಿ ||2||
ಬೆರಳುಗಳಾರು ತಿಂಗಳಿಗೆ ಪೂರ್ಣ |
ಶರೀ ರವುಯೇಳು ತಿಂಗಳಿಗೆ |
ವರಚೈತನ್ಯವವೆರಸಿಯಂಟಕೆ ಪದ್ಮಾ |
ಸನದಿಂ ಕೂತುಕೊಳುವನು ವಿಣ್ಮೂತ್ರದಿ |
ಪರಿಪರಿ ಕಳವಳಿಸುವನು ಕಾಲನ ಮಹಾ |
ನರಕಮಿದೆಂದು ಯೋಜಿಪನು ಅನಿತರಲಿ |
ವರಸೂತಿಮರುತನಿರದಾರ್ಭಟಿಸಲು |
ಮರೆದೆಲ್ಲವನವತರಿಪನು ಭಗದಿಂ ||3||
ನೆಲದೊಳು ಬಂದು ಬೀಳುತಲಿ ಹೇಯ |
ಮಲಮೂತ್ರದೊಳು ಹೊರಳುತಲಿ |
ಮೊಲೆಯ ಕೀವೆನಿಪ ಪಾಲ್ಸಲೆ ಸವಿಯುತ ಬಾಲ್ಯ |
ಕಳೆದೆವ್ವನ ಕಾಲದೊಳೆ ಸ್ತ್ರೀಯಾದಿ ಮಹಾ |
ವಿಳಸಿತವಾದ ಭೋಗದೊಳು ಇದುನು ಮೀರಿ |
ಬಲಗತಪಾದ ಮುಪ್ಪಿನೊಳು ರೋಗಂಗಳಿಂ |
ಬಲುನೊಂದೈಮಲದೊಳ ಮುಳಿಗೇಳುತ |
ತೊಳಲುವಕ್ರಮದಿಂದಿಹಪರ ತಿರಗುತ ||4||
ಪರಿಪರಿ ಬಹು ವೇಷವನು |
ಓರ್ವ ಧರಿಸುತಲೆಂತು ನಟಿಪನು |
ಅರಿಯಲಿಂತಗಣಿತ ಶರೀರ ಧರಿಸಿ ಸೂಕ್ಷ್ಮ |
ಶರೀರವು ನಟಿಪುದು ದೃಢದಿ ಖಗವುತರು |
ತರುವ ನಾತ್ರೈಸಿದ ವಿಧದಿ ಈ ಲಿಂಗಾಂಗ |
ಗುರು ಶಂಕರನ ಸುದಯದಿ ತನ್ನಿರವ ತಾ |
ನರಿದಜಕಲ್ಪಾವಧಿಯ ಬಂಧವನು |
ಉರಿದು ಮೋಕ್ಷದಿಂ ಬ್ರಹ್ಮನಾಗುವನು ||5||
ಕೆಡುಬೇಡೊ ಮಾನವ
ಕೆಡುಬೇಡೊ ಮಾನವ ಕೆಡು ಬೇಡೆಲೋ |
ಒಡಲೊಳಗಿಹ ವರ ಮೃಢನನು ಮರೆದೀ
ಜಡ ಸಂಸಾರವ ಬಿಡದೆ ನಂಬಿ ||ಪಲ್ಲ||
ನಂದನ ಭಾರ್ಯಾ ಬಂಧುಗಳೆನ್ನವ |
ರೆಂದರೆ ನೀ ಮೃತಿ ಪೊಂದಲು ನಿನ್ನೊಡ |
ಹಿಂದೆ ಬಹರೆ ಧನ ತಂದೀವರೆ ಗಡ |
ಬಂದು ಯಮನ ಭಯದಿಂದುಳಿಪರೆ ||1||
ಇವರೆಲ್ಲರು ನಿನ್ನವರಾದರೆ ನೀ |
ನವನಿಯೊಳಿರುವನಕಿವರಿರುವರೆ ಪೇಳ್ |
ಭುವಿಯೊಳು ಬಳಿಕುದ್ಭವಿಸಲು ನಿನ್ನೊಡ |
ನವತರಿಪರೆ ಭವಭವದಿ ಬರಿದೆ ||2||
ತನುವಿದು ಕೋಲ್ಮಿಂಚಿನ ಪ್ರಭೆ ಸುತ ಹಿತ |
ವನಿತೆಯರರಿಮರ ದನ ಖಗ ವೃಂದವು
ನಿನಗಿದರಿಂದೆಳ್ಳನಿತು ಫಲಮೆ ಬಿಡು
ಘನ ಗುರು ಶಂಕರನನು ಪೊಂದೆಲೊ ||3||
ನಂಬಬೇಡೆಲೊ ಮೂಢ ಮಾನವನೆ
ನಂಬಬೇಡೆಲೊ ಮೂಢ ಮಾನವನೆ |
ಕುಂಭಿನಿಯೊಳೀ ಮೃತ್ತಿಕೆ |
ಬೊಂಬೆಯಂತೆ ಮಿಸುಪಂಗವ |ಪಲ್ಲ||
ಭೂತ ಪಂಚಕದಿಂ ಭೂತಲದಲಿ ಪುಟ್ಟು |
ತೀತನು ತಾನೆಂದು ಪ್ರೀತಿಯಂತಾಳುತೆ |
ಖ್ಯಾತಿ ಪೊಂದಿ ಕಡೆಗಾತುರದಿಂ ಸತ್ತು |
ಬಾತು ಬೀಳಲ್ನಾಯನ್ನರಿಯಾತು ತಿನ್ನುತ್ತಿರ್ಪೀ |
ಪಾತಕದ ಜಡತನವನು ||1||
ನೂರು ಸಂವತ್ಸರ ಪೂರ ಬಾಳ್ವೆನೆಂದು ಹಾರೈಸಿ ತನ್ನನ್ನು |
ಸೇರಿರ್ಪರಾಶೆಯ |
ಪಾರು ಮಾಡದೆ ತಾ ಮೀರಿ ಮಧ್ಯದೊಳು |
ಬೇರೆಯಾಗುತ ಭೂಮಿಗೆ |
ಸೋರಿ ನಿಮಿಷಾರ್ಧದೊಳುರೆ |
ತೋರಿಯಳಿಯುವ ಕಾಯುವ ||2||
ಸತ್ತು ಹುಟ್ಟಿ ತಾನೆ ಸತ್ಯಮೆನ್ನುತ |
ಗುರೋತ್ತಮ ಶಂಕರನರ್ಥಿಯಿಂ ಧ್ಯಾನಿಸಿ |
ನಿತ್ಯನಾಗದಿಲ್ಲಿ ವಿತ್ತಾದಿ ಭೋಗಕ್ಕೆ |
ಚಿತ್ತವಿಟ್ಟಿಹ ಮತ್ತರ ಒತ್ತರದೊಳಿಹಪರ ಕೇಳಿ |
ಸುತ್ತ ನಸಿಸುವ ಗಾತ್ರವ ||3||
ನಂಬಿ ಕೆಡಬೇಡಮ್ಮ ತಂಗಿ
ನಂಬಿ ಕೆಡಲಿ ಬೇಡಮ್ಮ ತಂಗಿ ನಂಬಿ ಕೆಡಬೇಡಮ್ಮಾ |
ನಂಬಿ ಕೆಡಲಿ ಬೇಡೆಂಬುವೆ ಹೇಸಿಗೆ
ತುಂಬಿದ ತತ್ವದ ಬೊಂಬೆ ತನುವಿದನು ||ಪಲ್ಲ||
ಮಲ ಮೂತ್ರದ ಭಾಂಡ |
ರಕ್ತದ ಕುಳ ಕೀವಿನ ಕುಂಡ ಎಲುವಿನ ಪಂಜರ ||
ಪಲಲದ ಸೀಮೆಯು ಹೊಲಸಿನ |
ಬಚ್ಚಲ ಹುಳಗಳ ಹೊಂಡ ||1||
ಹಸಿದೊಗಲಿನ ಡೊಣಿಯ ನೆಣದಿಂ |
ಬಸಿದೊಸರುವ ಕುಣಿಯು ||
ಹಸಿವು ತೃಷೆಗಳಿಗಾಯಸ ಪಡುವದು ನರ |
ವಿಸರದಿ ಬಿಗಿ ಕಟ್ಟಿದ ಹಂದರವಿದು ||2||
ನೇತ್ರದೊಳಗೆ ಮಲವು ನೋಡಲು |
ಶ್ರೋತ್ರದೊಳಗೆ ಮಲವು ||
ಗಾತ್ರವು ಕರ್ಮದ ಪಾತ್ರವು ದುರಿತದ |
ಬೈತ್ರವು ಬಿಡದ ಪವಿತ್ರದ ನಿಲವು | ||3||
ರೇತು ರಕ್ತ ಬೆರದು ಈ ತನು |
ನೂತನಾಯ್ತು ಪಿರಿದು ||
ವಾತ ಪಿತ್ತ ಶ್ಲೇಷ್ಮಾತು ಕೊಂಡು ಬಹು |
ಸೂತಕಗಳಿಗಿದು ಭೂತಮೆನಿಸಿಹುದು ||4||
ಶರೀರದಾಶೆ ಮರೆದು ಗುರು ಶಂಕರನ |
ಪಾದವಿಡಿದು ಪರಿಪರಿಯಿಂ ನೀ ||
ಸ್ಮರಿಸಿ ಭವ ಮರಣ ಪರಿದು ಸುಖಿಸು |
ನಿಜ ಮುಕ್ತಿಯ ಪಡೆದು ||5||
ಸತಿ ಸುತರುಯೆನ್ನ ಸುಖಕತಿ ವೆಥಿಪರೆಂಬುವ
ಸತಿ ಸುತರುಯೆನ್ನ ಸುಖಕತಿ ವೆಥಿಪರೆಂಬುವ |
ಮಮತೆ ನಿನ್ನೊಳಿಹುದವರೊಳಿಲ್ಲ ತಿಳಿಯೊ ||ಪಲ್ಲ||
ಮರಣ ನಿನಗೊದಗಲಾ ತರುಣಿ ನಿನ್ನನು ನೋಡಿ |
ಸರಸದಿಂ ಪೊರೆವ ಪತಿಪೋದನೀಗ ||
ಧರಣಿಯೊಳು ವಿಧವೆಯಾಗಿರಲೆಂತಕಟವೆಂದು |
ಮರ ಮರನೆ ಮರುಗುವಳು ತನ್ನ ಸುಖಕೆ ||1||
ಸುತನು ಬೇಗನೆ ನಿನ್ನ ಮೃತಕ ದೇಹವ ಕಂಡು
ಪಿತನೆ ನೀನೊಂದಾದರುಸುರದೀಗ ||
ಗತಿಸಿದರೆ ಮುಂದೆನಗೆ ಗತಿ ಯಾರೆನುತ |
ತಾ ಮಿತಿ ಮೀರಿ ದುಃಖಿಸುವ ತನ್ನ ಸುಖಕೆ ||2||
ವನಿತಾತ್ಮಜರ ಸುಖಕ್ಕೆನಿತು ನೀ ಬಳಲಿದರು |
ನಿನಗ ಸನಿರಯ ಬಾಧೆಗಳಲುತಿಹರೇ ||
ಅನಘ ಶ್ರೀಗುರು ಶಂಕರನ ಕೃಪೆಯ ಪಡೆದು
ನೀ ಘನ ಸುಖದಿ ಕೂಡ್ದು ಭವವೀಡ್ಯಾಡೆಲೊ ||3||
ಹೇಸಬಾರದೇನೊ ಎಲೊ ನೀ
ಹೇಸಬಾರದೇನೊ ಎಲೊ ನೀ |
ಹೇಸಬಾರದೇನೋ ಹೇಸಬಾರದೇನ |
ಏಸು ಜನ್ಮರೆ ಮೋಸದಿ ತಿರುಗುವಿ ಹೇಸಿ ಮಾನವನೆ ||ಪಲ್ಲ||
ಪಡಿಯದ ಪದಮಿಲ್ಲ ಜಿಹ್ವದಿ ನುಡಿಯದ ನುಡಿಯಿಲ್ಲ |
ನಡಿಯದ ನಡೆಯಿಲ್ಲ ಬೇಡ್ದಡೆ ಕೊಡದ ದಾನಮಿಲ್ಲ |
ಬಿಡದೆ ಪೊಡವಿಯೊಳು ನಡೆದು ನೋಡ್ದ ಶಿವ |
ಗುಡಿಗಳುಳಿಯಲಿಲ್ಲ ಸಲ್ಲ ||1||
ಕೂಡದ ಕುಲಮಿಲ್ಲ ಕಣ್ಣಿಲಿ ನೋಡದ ಕ್ಷೇತ್ರಿಲ್ಲ |
ಆಡದಾಟಮಿಲ್ಲ ಕಾಯದಿ ಮಾಡದ ಪಾಪಿಲ್ಲ |
ನಾಡೊಳು ಧನವನು ಕೂಡಿಸಿ ಕದನವ |
ಮಾಡುವದುಳಿಲಿಲ್ಲ ಸಲ್ಲ ||2||
ಬೆರಿಯದ ಮರವಿಲ್ಲ ಅನುಭವಿಸಿರದ ವಿಷಯವಿಲ್ಲ |
ಜರಿಯದ ಜನರಿಲ್ಲ ನೀ ಮರೆತಿರುವ ನೇಮಮಿಲ್ಲ |
ಧರಣೆಯೊಳನುದಿನ ಸರಸದೊಳೋದುವ |
ವಿದ್ಯಗಳುಳಿಲಿಲ್ಲ ಸಲ್ಲ ||3||
ಬಿಡದ ಕರ್ಮಮಿಲ್ಲ ಸಾಧಿಸಿ ಪಡೆಯದ ಪದವಿಲ್ಲ |
ಪಿಡಿಯದ ವ್ರತಮಿಲ್ಲ ಜನಿಸುತ ಮಡಿಯದ ನೆಲಮಿಲ್ಲ |
ಮೃಡನ ಮೂರ್ತಿಯನ್ನೊಡೆಯನೆಂದು ಬಾಯ್ಬಿಡುವದು
ಉಳಿಯಲಿಲ್ಲ ಸಲ್ಲ ||4||
ಬರದ ಯೋನಿಯಿಲ್ಲ ನಿನ್ನನು ಇರಿಸದ ಮಸಣಿಲ್ಲ |
ಅರಿಯದ ತಂತ್ರಿಲ್ಲ ಬಿಡದಾಚರಿಸದ ಮಂತ್ರಿಲ್ಲ |
ಗುರು ಶಂಕರನಡಿ ಸ್ಮರಿಸಿ ನಿನ್ನ ನಿಜವರಿದು |
ಸುಖಿಸಲಿಲ್ಲ ಸಲ್ಲ ||5||
ಸ್ಥಿರವಲ್ಲೊ ಸಿರಿ ಸತಿ ಸುತರು
ಸ್ಥಿರವಲ್ಲೊ ಸ್ಥಿರವಲ್ಲೊ |
ಈ ಸಿರಿ ಸತಿ ಸುತ ಸ್ನೇಹಿತರು ಭೂಮಿಯೊಳು ||ಪಲ್ಲ||
ಹಸಿಯಿರಲಿಳೆಯೊಳು ಸಸಿ ವೃದ್ಧಿಸುವ ತೆರ |
ಮಿಸುಪ ಸುಕೃತಮಿರೆ ಸಿರಿಯಿರ್ಪುದು |
ನಸಿಸಲು ಹಿಂದೆಯಾರ್ಜಿಸಿದ ಪುಣ್ಯಾಂಶವು |
ಪುಸಿಯಾಗುವದು ಕಂಡ ಸಿರಿಸಂಪದವು ||1||
ವರ ಜಾತ್ರೆಯೊಳು ಜನ ನೆರೆದೊಂದೆರಡು ದಿನ |
ಇರದೆ ಬೈಲಾಗಿ ಸಂಚರಿಸುವಂತೆ |
ತರುಣಿ ತನಯ ಸಹೋದರರೆಲ್ಲ |
ಕಾಲ ಬಂದರೆ ನಿನ್ನಗೊರಿಯದೆ ಭರದಿ ಪೋಪುರು ||2||
ಪರಿಮಳವಿಹ ಸರಸಿರುಹಕ್ಕೆ ಭ್ರಮರಗಳೆರಗುವ |
ಪರಿಯಂತೆ ನಿನ್ನವರು ಸಿರಿಯಿರೆ|
ನಿನ್ನುಪಚರಿಪರು ಅದು ತೀರಿದರೆ |
ವೈರಿಯಂತೆ ನೋಡುವರು ನಿನ್ನನು ||3||
ನಿನಗತಿ ಹಿತಮಾದ ತನುವೆ ನಿನ್ನನು ಬಿಟ್ಟು |
ಕನಸಿನ ಪರಿ ಮಾಯವಾಗುವದು |
ನಿನಗನ್ಯಮಾಗಿಹ ತನಯ ಮುಖ್ಯಾಪ್ತರು |
ನಿನಗೆಂತು ಸಂಬಂಧವಾಗುವರೆಲೊ ||4||
ಸುರಚಾಪದಂತೆಯಸ್ಥಿರಮಾದ ಸಿರಿಯಾದಿ |
ಪರಿಕರದೊಳು ಮೈಮರಿಯದೇ ನೀನು |
ವರ ಗುರು ಶಂಕರನಿರವನರಿದು ಪಾದ |
ಸ್ಮರಣಿಯೊಳಗೆ ಹೊತ್ತುಗಳೆದು ಸುಖೀಸು ||5||
ತನು ತಳಮಳಿಸುವದೂ ಎನ್ನ
ತನು ತಳಮಳಿಸುವದೂ ಎನ್ನ |
ಜಡ ತನು ತಳಮಳಿಸುವದು ||
ತನು ತಳಮಳಿಸುವದನುದಿನ ಪರಿಭವ |
ದನುಚಿತಾ ಕಾರ್ಯಗಳನು ವಿಚಾರಿಸಲು ||ಪಲ್ಲ||
ದುರಿತ ಗುಣದಿ ಗಿಡಮರ ಕ್ರಿಮಿ ಕೀಟಕ |
ನೊರೆಜು ಪತಂಗಾದಿಗಳಾಗಿ ||
ಪರಿಪರಿ ಖಗಮೃಗಪಶುರೂಪಾಗುತ |
ಬರುತಿಹ ಬಾಧೆಯ ಭಯವ ಕೇಳುತಲಿ ||1||
ಭೂತವೈದು ರೂಪಾತಿ ಶೈಸಿ ಮೇಣ್ |
ಧಾತು ಸಪ್ತಕವು ತಂದೆಯೊಳು ||
ಮಾತೆಯ ಸೂತಕ ರಕ್ತ ರೂಪದಿಂ |
ಈ ತನುವಾಗುವ ಸಂಗತಿಯರಿದು ||2||
ತರಳ ತರುಣ ಮುಪ್ಪಿನ ರೂಪಾಗುತ್ತಿರದೆ |
ನರಕಿಯಾಗಿ ಈ ಕ್ರಮದೋಳ್ ||
ಚರಿಸಲಾರೆ ಶ್ರೀಗುರು ಶಂಕರನೀ |
ಪೊರೆಯನ್ನನು ಬಿನ್ನೈಪೆ ಭೀತಿಯೊಳು ||3||
ಜ್ಞಾನಾಂಶರಹಿತ ನೀನೆಲೊ ಜೀವನೆ
ಜ್ಞಾನಾಂಶರಹಿತ ನೀನೆಲೊ ಜೀವನೆ |
ಜ್ಞಾನಿಯೆಂದು ಕೊಂಡಾಡುವರೆ ||ಪಲ್ಲ||
ಚೇತನ ರೂಪನೆ ಖ್ಯಾತಮಾಗಿ ಪುಸಿ |
ಭೂತದ ದೇಹವ ನೀನೆನುವಿ |
ಪೂತಮಾಗಿಹ ನಿಜಾತುಮನಿರ್ದತಿ |
ಸೂತಕ ವಿಧಿಯನು ಪಿಡಿದಿರುವಿ ||1||
ತೋರುವವಸ್ಥಾ ಮೂರನು ತಿಳಿಯುತ |
ಬೇರೆ ಸಾಕ್ಷಿ ನೀನಾಗಿರುವಿ |
ಸಾರ ಹೀನ ಸಂಸಾರದ ಸಂಕಟ |
ಕಾರದೆ ದುಃಖದಿ ಕೂಡಿರುವಿ ||2||
ಚಿತ್ತೊಂದದುವೆ ಗುರೋತ್ತಮ ಶಂಕರ |
ಸತ್ಯನೆಂದು ಶೃತಿರುವದೈ |
ಮತ್ತ ಷಡು ಭ್ರಮಾ ಪತ್ತಿಗೆ ಶಿಲ್ಕಿಯ |
ಸತ್ಯದಿ ಕೂಡಿದ ಬಗಿಯೇನೈ ||3||
ಮನುಜ ನೀನಾರಿಗಿಚ್ಛೈಸ ಬೇಡ
ಮನುಜ ನೀನಾರಿಗಿಚ್ಛೈಸ ಬೇಡ |
ಮನ ನಯನ ಕರಗಳಿಂ ಸೋಂಕದಿರು ಮೂಢ ||ಪಲ್ಲ||
ತರುಣಿಯ ಲಲೀ ಕಳೇಬರದ ಲಾವಣ್ಯಕ್ಕೆ |
ನೆರೆ ಭ್ರಮಿಸಿ ಮನವನಲ್ಲಿಗೆ ಕಳಿಸಲು |
ವರ ಪಯೋಧರ ಮಧ್ಯದಿರುಕಿನೊಳ್ಳಸಿಲ್ಕಿ |
ಹಿಂದಿರುಗದಲ್ಲಿಯೆ ನಾಶ ಪೊಂದುವದರಿಂದ ||1||
ಪರಮ ಜವ್ವನದ ಗಂಹರದ ಮಧ್ಯದೊಳು ಮದ |
ಕರಿ ಸಿಂಹ ದುಷ್ಟ ಮೃಗ ಸೇರಿರ್ಪವು |
ಮರುಳ ನಿನ್ನಯ ನಯನ ಹರಿಣಗಳು ಚರಿಸಲಾ |
ಕರಿ ಸಿಂಹಗಳು ಕೊಂದು ಬಿಡುವವದರಿಂದ ||2||
ಕರಕಮಲದಿಂದವಳ ಶರೀರ ಸೊಂಕಲ್ಕಲ್ಲಿ |
ಚರಿಪ ಸ್ಮರ ನಿನ್ನ ಕರಕಮಲ ತನ್ನ |
ಶರಕೆ ಸೇರಿಸಿ ಕೊಳುವನರಿದೀಮನಾಕ್ಷಿತನು |
ಗುರು ಶಂಕರನೊಳಿರಿಸೆ ಸುಖ ದೊರೆವದು |
ಮಾನಿನಿಯರಿಗೆ ಮೋಹಿಸಿ ಕೆಡಬೇಡೊ
ಮಾನಿನಿಯರಿಗೆ ಮೋಹಿಸಿ ಕೆಡಬೇಡೊ |
ಏನಿಹುದವರೊಳು ಮಾನವ ನೋಡೊ ||ಪಲ್ಲ||
ಬೇಡಿದುದನು ಕೊಟ್ಟು ಕೂಡಿದ ಪುರುಷನ |
ನೋಡದನ್ಯನ ಸನ್ನೆ ಮಾಡಿ ಕರಿವರೊ ||1||
ಕಲೆಯ ಸ್ಥಲಗಳನು ತಿಳಿದು ರಮಿಸುವಂಥ |
ಚಲುವನಿರಲ್ಕವನಲಿ ಮನವಿಡರು ||2||
ಒಬ್ಬನೊಳಿರ್ದು ಮತೊಬ್ಬನ ಧ್ಯಾನಿಸುತೊ |
ಒಬ್ಬನ ನುಡಿಸುತಲೊಬ್ಬನಿಚ್ಛಿಪರು ||3||
ಲಲನೆಯರಣು ಸುಖಕೊಲಿದರೆ ಗಿರಿಯಷ್ಟು |
ನೆಲೆಗೊಳುವದು ಪಾಪ ತಿಳಿತಿಳಿ ಮನದಿ ||4||
ಸುದತಿಯರಂಗ ಸಂಗದ ಸುಖಕೊಲಿಯದೆ
ಸದಮಲ ಶಂಕರ ಪದವನು ಸ್ಮರಿಸೋ ||5||
ಮಾನಿನಿಯರಿಗೆ ಮೋಹಿಸಿ ಕೆಡಬೇಡೊ
ಮಾನಿನಿಯರಿಗೆ ಮೋಹಿಸಿ ಕೆಡಬೇಡೊ |
ಏನಿಹುದವರೊಳು ಮಾನವ ನೋಡೊ ||ಪಲ್ಲ||
ಬೇಡಿದುದನು ಕೊಟ್ಟು ಕೂಡಿದ ಪುರುಷನ |
ನೋಡದನ್ಯನ ಸನ್ನೆ ಮಾಡಿ ಕರಿವರೊ ||1||
ಕಲೆಯ ಸ್ಥಲಗಳನು ತಿಳಿದು ರಮಿಸುವಂಥ |
ಚಲುವನಿರಲ್ಕವನಲಿ ಮನವಿಡರು ||2||
ಒಬ್ಬನೊಳಿರ್ದು ಮತೊಬ್ಬನ ಧ್ಯಾನಿಸುತೊ |
ಒಬ್ಬನ ನುಡಿಸುತಲೊಬ್ಬನಿಚ್ಛಿಪರು ||3||
ಲಲನೆಯರಣು ಸುಖಕೊಲಿದರೆ ಗಿರಿಯಷ್ಟು |
ನೆಲೆಗೊಳುವದು ಪಾಪ ತಿಳಿತಿಳಿ ಮನದಿ ||4||
ಸುದತಿಯರಂಗ ಸಂಗದ ಸುಖಕೊಲಿಯದೆ
ಸದಮಲ ಶಂಕರ ಪದವನು ಸ್ಮರಿಸೋ ||5||
ಎಚ್ಚರಿರು ಕಂಡ್ಯಾ ಮನುಜಾ
ಎಚ್ಚರಿರು ಕಂಡ್ಯಾ ಮನುಜಾ ಎಚ್ಚರಿರು ಕಂಡ್ಯಾ |
ತುಚ್ಛ ವಿಷಯಗಳಚ್ಚರದಿ |
ನಿನಗಿಚ್ಛೆ ಪುಟ್ಟಿಸಿ ಮುಚ್ಚಿ ಕೆಡಿಪವು ಪಲ್ಲ||
ಹರಿಣ ಶಬ್ದಕೆ ನೆರೆ ಭ್ರಮಿಸಿವಾ |
ಗುರಿಗೆ ಬೀಳುತೆ ಮರಣಗೊಳುವದು ||
ತರುಣಿಯಳ ನುಡಿಗಿರದಪೇಕ್ಷಿಸಲ್ |
ನರಕದೊಳು ನಿನ್ನಿರಿಸುವನು ಯಮ ||1||
ಸ್ಮರಿಸಿ ವಿಷಯಕೆ ಚರಿಸಿ ಬೇಗನೆ |
ಕರಿಯು ಬಂಧಕೆ ಗುರಿಯದಪ್ಪುದು ||
ಧರೆಯೊಳಬಲೆಯ ಶರೀರ ಸೋಂಕಲು
ಭರದಿ ಯಮ ನಿನ್ನುರಿಸಿ ಬಿಡುವನು ||2||
ಶಲಭ ದೀಪದ ಲಲಿತ ರೂಪ |
ಕ್ಕೊಲೊದೆರಗಿ ತಾ ಜ್ವಲಿಸಿ ಪೋಪುದು ||
ಲಲನೆಯಳ ತನು ಚಲುವ ರೂಪ |
ಕೊಲಿದೊಡೆ ಯಮ ನಿನ್ನಳೆದು ದಂಡಿಪ ||3||
ರಸ ರುಚಿಗೆ ಮೋಹಿಸುತೆ ಮಶ್ಚವು |
ಮಿಸುಕದಾಗಳೆ ನಸಿಸುವದು ಗಡ ||
ವಸೆದು ನಾರಿಯ ಮಿಸುಪ ಸುಧೆ |
ಸೇವಿಸಲು ನಿನ್ನನು ನಸಿಸುವನು ಯಮ ||4||
ಕಮಲ ಗಂಧವ ನಮಿತ ಪ್ರೇಮದಿ |
ಭ್ರಮಿಸಿ ಬೇಗನೆ ಭ್ರಮರ ಕೆಡುವದು ||
ರಮಣಿಯಂಗನ ವಿಮಲ ಗಂಧವ |
ಭ್ರಮಿಸೆ ನಿನ್ನನು ಯಮನು ಶಿಕ್ಷಿಪ ||5||
ಪೊಡವಿಯೊಳಗೊಂದೊಂದು ವಿಷಯದಿ |
ಮಡಿದವೈದೀ ಪ್ರಾಣಿಗಳು ತಿಳಿ ||
ಜಡ ಮನುಜ ನಿನಗೈದು ವಿಷಯವು |
ತೊಡರಿರಲು ನೀನುಳಿವದೆಂತೈ ||6||
ಬರಿಯ ಸಂಸ್ಕ್ರತಿ ಸ್ಥಿರಮಿದೆಂದರಿ |
ದರಿದು ವಿಷಯದಿ ಬೆರಿಯದನುದಿನ ||
ಪರಮ ಗುರು ಶಂಕರನ ಮನದೊಳು |
ಸ್ಮರಿಸಲಾತನು ಪೊರೆವನನುದಿನ ||7||
ಕಾಮವನು ಕಳಿಬೇಕು ಬಲ್ಲ ಯೋಗಿ
ಕಾಮವನು ಕಳಿಬೇಕು ಬಲ್ಲ ಯೋಗಿ ಆ |
ಕಾಮವಿರಲವನೆ ದುರ್ಭವದ ರೋಗಿ ||ಪಲ್ಲ||
ಶೃತಿಯ ವಿಧಿಗಳನು ಸನ್ನುತ ಜಪತಪಂಗಳನು |
ಅತಿಶೈಸಿ ತನಗೊದಗುತಿಹ ಸಿದ್ಧಿಗಳನು ||
ಕ್ಷಿತಿಯ ಪೂಜ್ಯತೆಯನು ವಿರತಿ ಭಾವವನು |
ಮೇಲೆ ಹಿತಮಾದ ವ್ರತಗಳನು ಕೆಡಿಸುವದರಿಂದ ||1||
ಹರನ ಭಕ್ತಿಯನು ಪಿರಿಯರ ಪ್ರೀತಿಯನು |
ಅರಿತವರ ಸಂಗವನು ರಾಜ ಮನ್ನಣೆಯನು ||
ಶರೀರ ಬಲವನು ಯೋಗ ದುರು ಸಾಧನವನು |
ತನ್ನಿರವನಿದು ಪರಿಹರಿಸಿ ಬಿಡುವದರಿಂದ ||2||
ತನಗೆ ಮುಂದಹ ದೇವಮುನಿ ಪ್ರಮಥ ಪಟ್ಟವನು |
ಚಿನುಮಯಾತ್ಮ ಗುರುಶಂಕರನೊಳೈಕ್ಯವನು |
ಇನಿತೆಲ್ಲ ಸಂಪದದ ಘನತೆಯನು ಕೆಡಸಿರಿಸಿ |
ಬಿನುಗರೊಳು ಬಿನುಗನೆಂದೆನಿಸುವದರಿಂದ ||3||
ಯಾತಕೆನ್ನನಿಂತು ನೀನು ಕಷ್ಟ ಕೊಡುವಿ
ಯಾತಕೆನ್ನ ನಿಂತು ನೀನು ಭೂತಲದೊಳು ಕಷ್ಟ ಕೊಡುವಿ |
ರೀತಿಯಲ್ಲ ಸಾಕು ಕೈಯ್ಯ ಮುಗುವೆನಾಶೆಯ ||ಪಲ್ಲ||
ಅರರೆ ನಿನ್ನ ನಂಬಿಸಿಲ್ಪಿಯರಿದು ದೇಶ ದೇಶ ಸುತ್ತಿ |
ಧರೆಯಗಳಿ ವನಸ್ಪತಿಗಳನರೆದು ರಸವನು |
ವಿರಚಿಸುತ್ತ ಧಾತುಗಳನು ವುರಿಸಿ ಮಸಣವಾಸನಾಗಿ |
ಮುರುಕು ಕಾಸು ದೊರೆಯಲಿಲ್ಲ ಮೀರಿದಾಶೆಯೆ ||1||
ಅವನಿಪತಿಗಳಲ್ಲಿ ಪೋಗಿ ಕವಿತೆಯನ್ನು ಪೇಳಿ ಶಾಸ್ತ್ರ |
ಶ್ರವಣಗೊಳಿಸುತೊಲಿಸಿ ಸಹೋದರರ ವಂಚಿಸಿ
ಹವಣವರಿಯದನೃತ ಮಾತಿಗವಧಿಯಿಲಲ್ಲದನ್ಯರೊಡನೆ
ತವೆ ವಿರೋಧ ಬೆಳಿಸಿ ಪಾಪಿಯಾದೆನಾಶೆಯ ||2||
ಧನಿಕರಲ್ಲಿ ದುರ್ಗುಣಂಗಳೆನಿತುಯಿರ್ದೊಡವನು ಬಿಟ್ಟು |
ಮನಕೆ ಬಂದ ತೆರದಿ ಸುಗುಣಗಳನೆವರ್ಣಿಸಿ |
ಜನಕೆ ಬೆದರಿಮೈಯ್ಯ ಮುದುಡಿ ಘನತೆಗೆಟ್ಟು ಬಾಯಿ ತೆರೆದು |
ಬಿನುಗರಲ್ಲಿ ಬಿನುಗನಾಗಿ ಕುಳಿತೆನಾಶೆಯೆ || 3||
ಹೊಲದಗೆಲಸ ಕೆಳಿಸುತೆನ್ನ ಕಳೆಯಗೆಡಿಸಿ ಜನ್ಮ ಗ್ರಾಮ |
ನಿಳಯಗಳನು ಬಿಡಿಸಿ ಕೀರ್ತಿಯನ್ನು ಮಾಜಿಸಿ |
ಇಳೆಯ ಭೋಗ ಕೆಡಿಸಿ ಪರಕೆ ತೊಲಗದಂತೆಗೈದು ಬಂಧು
ಬಳಗಕೆಲ್ಲ ಬೇಸರೆನಿಸಿ ಬಿಟ್ಟಿಯಾಶೆಯೆ ||4||
ಇಷ್ಟು ಪರಿಯೊಳೆನ್ನನಿಲ್ಲಿ ಕಷ್ಟವ ಬಿಳವಿತ್ತಿಹದಿ |
ಕನಿಷ್ಟನೆಂದೆನಿಸಿದರಿರಲಿ ಮುಂದೆ ಕೃಪೆಯೊಳು |
ಸೃಷ್ಟಿಗೊಡಿಯ ಶಂಕರ ಗುರು ಶ್ರೇಷ್ಟ ನಡಿಯೊಳಿರಿಸಿದರಿರು|
ಇಷ್ಟಮಿಲ್ಲದಿರಲು ಬಿಟ್ಟು ನಡಿವದಾಶೆಯ ||5||
ಕೂಡಿ ವರ್ತಿಸುವರು ಮಹಾ ಮೂಢರಲ್ಲವೆ
ನೋಡಿ ಕೇಳಿ ಮಗುಳಿಯಾಶೆ |
ಮಾಡಿ ಭೋಗಪೂಗದೊಳಗೆ |
ಕೂಡಿ ವರ್ತಿಸುವರು ಮಹಾ ಮೂಢರಲ್ಲವೇ ||ಪಲ್ಲ||
ಪೊಡವಿಯೊಳಗೆ ಪ್ರೀತಿಯಿಂದ |
ಪಡೆದ ತಂದೆ ತಾಯಿ ತನ್ನ |
ಬಿಡದ ಮಿತ್ರರಗಲದಿರ್ಪ ಮಡದಿ ಮಕ್ಕಳು |
ಸಡಗರದ ಸಹೋದರರೆಸವಡೆದ ಶೂರರ ಮಿತಜಾಣ |
ರೊಡೆಯರೆಲ್ಲ ತಮ್ಮ ಮುಂದೆ|
ಮಡಿದು ಪೋಗುತಿರ್ಪುದಂ ||1||
ರಾಮ ರಾವಣಾಂಬರೀಷ |
ಭೀಮ ಪಾರ್ಥ ಧರ್ಮಜಾಭಿ |
ರಾಮ ಕರ್ಣ ಕೌರವ ನಳ ನಹುಷ ವಾಲಿಯು |
ಕಾಮ ಪರಶುರಾಮ ಮುಖ್ಯ |
ನೇಮವಿಲ್ಲದಪರಮಿತೋದ್ದಮ |
ಸಾಹಸಿಗಳು ಬಿಡದೆ ಮರಣವಾದ ಕಥೆಯನುಂ ||2||
ದೀಪಕೆರಗಿ ಮರಣ ಪೊಂದಿ |
ದಾಪತಂಗಗಳನು ನೋಡ್ದು |
ತಾಪಗೊಳದೆ ಮತ್ತ ಪುಳಗಳೆರಗುವಂದದಿ |
ರಾಪು ಮಾಡದಖಿಳ ವಿಭುಧ |
ರೀ ಪರಿಯರಿದಿಳೆಯ ಸುಖಕೆ |
ತೂಪರಿಯದೆ ಬಯಪುವರಿರ್ದೇಂ ಫಲ ಗುರುಶಂಕರ ||3||
ಧನಲೋಭ ಬಿಡು ಸಾಕು ಮನುಜ
ಯಾಕ ಧನಲೋಭ ಬಿಡು ಸಾಕು ಮನುಜ |
ನೀ ಕೆಡುವಿಯಿದರಿಂದೆ ಲೋಕದಿ ನಿಜ ||ಪಲ್ಲ||
ಇದನು ಕೂಡಿಸುವ ಕಾಲದಿ ಕಷ್ಟ ಕೂಡಿಸಿಡ |
ಲಿದನಾರುಶೆಳೆದೊಯ್ವರೆಂದೊಡಲೊಳು |
ಉದಯಿಸುವಕಷ್ಟಮಿಂತೊದಗುವವಿದರಕಾಂಕ್ಷೆ |
ಮೊದಲಳಿಯೆ ಸುಖದ ಸಂಪದವು ಪ್ರಾಪ್ತಿಪುದು ||1||
ಧನಕೆ ಕೆಲದಾಯಾದ್ಯರೆನಿಪರವರೊಳಗೆ |
ಧರ್ಮನು ಪಿರಿಯನವನನಿಂದಿಸಲಿಮಿಕ್ಕ |
ಅನುಜರಾದಹಿಚೋರ ಅನಲ ಮರುಳೆಂಬುವರು |
ಘನ ಕೋಪದಿಂದದನುನಸಿಸದಿರರು ||2||
ಬಿಡದೆ ಸತಿಸುತರ ಮುದವಿಡಿದವರ ರಕ್ಷಣೆಗೆ |
ದುಡಿದು ದುಡ್ಡನೆ ಕೂಡಿಸಿಡುತ ನೀನು |
ಕೊಡದೆ ದಾನವ ಕಡೆಗೆ ಮಡಿಯಲೆಮನಾಳುಗಳು |
ಪಿಡಿದೆಳೆಯಲಾಗ ಬಿಡಿಸುವರೆ ನಿನ್ನವರು ||3||
ಮಡದಿಯಳನನ್ಯರಿಗೆ ಕೊಡದೆ ಭೋಗಿಸದ ಸ್ತನ |
ವಿಡಿದೊತ್ತಿ ಹಿಗ್ಗುವ ನಪುಂಸಕನೊಲು |
ಕೊಡದೆ ದಾನವ ಪರರಿಗಿಡದೆ ನೀನುಣದೆ ಧನ |
ವಿಡಿದೆಣಿಸಿ ನೆಲದಿ ಹೂಳಿಡಲು ಫಲವೇನು ||4||
ಇದು ಮೋಸದಾಗು ದೋಷದ ಜನ್ಮಭೂಮಿ ವೆಸನದ |
ಪಯೋನಿಧಿ ನಿಷ್ಠರದ ಚಾವಡಿ |
ಇದು ನಿನಗೆ ನೀಚದುರ್ಮದ ಭರಿತ ಕಪಟ |
ಮೀರಿದ ಕುಟಿಲ ಕುತ್ಸಿತ ನೆನಿಸದೆ ಬಿಡದು ||5||
ಧನಲೋಭದಿಂ ಘನತಾಪ ಪಡುತಿರಲು |
ತನಯ ನಚಿಕೇತ ತಾ ದಾನಮಾಗಿ
ವಿನಯದಿಂ ಪೋಗಿಕಾಲನ ಸ್ಮರಿಸಿ ವರಪಡದು
ಜನಕ ಉದ್ದಾಲಕನ ದೋಷವಳಿಸಿದನು ||6||
ಮರಳಿ ಋಷಿ ಶ್ರಿಂಗಮುನಿ ವರನಿದೇ ಲೋಭದಿಂ |
ಪರಮ ತನ್ನಯ ತಪಸ್ಸಿನ ಕೀರ್ತಿಯಳಿದು
ಪರಿತಾಪವಡೆದ ನೀನರಿದಿದನು ಬಿಡಲು
ಶಂಕರ ಗುರುವರೇವಣ್ಯ ಕೈವಿಡಿದು ರಕ್ಷಿಪನು ||7||
ಮನಮೆಂಬುವ ಕಪಿಯನು ಬಂಧಿಸಿ
ಮನಮೆಂಬುವ ಕಪಿಯನು ಬಂಧಿಸಿ ತವ |
ನೆನಹಿನೊಳಿರಿಸೈ ದೇವ ||ಪಲ್ಲ||
ತರುಣಿಯರೆಂಬುವ ಮಿರುಗುವವನದೊಳು |
ಪರಿಪರಿಯಲಿ ಸಂಚರಿಸುವದು |
ಕರಚರಣಾದ್ಯವಯವಗಳೆಂಬ ಘನ |
ತರ ಕೊಂಬೆಗಳಿಗೆ ಹಾರುತಲನುದಿನ |
ಮರುಳುಗೊಳಿಸಿಯನ್ನುರುಳುಗೆಡಿಸುವದು ||1||
ಗುರು ಮಂತ್ರದ ನಿಡು ಸರಪಿಣಿಯನದರ |
ಕೊರಳಿಗೆ ತಳ್ಕಿಸಿ ಪಿಡಿದಿರಲು |
ಉರವಣಿಸುತ ಪಲ್ಗರಿದಣಿಕಿಸುವದು |
ಇರದಿಚ್ಛಿತ ಸ್ಥಲಕೆನ್ನೆಳದೊಯ್ವದು |
ಬರಿ ವಿಷಗಳಿಗೆ ಮರುಳುಗೊಳಿಸುವದು | |2||
ಕುಣಿವುದೆ ಜನ್ಮದ ಗುಣವಾ ಕೋತಿಗೆ |
ಎಣಿಕೆಗೆ ಮೀರಿದ ಭುವಿಯಲ್ಲಿ |
ಕುಣಿಯದನೆನ್ನನು ಕುಣಿಸುತಲಿರುವದು |
ಕ್ಷಣಕ್ಷಣಕಗಣಿತ ಗುಣವನೆ ತೋರ್ಪುದು |
ದಣಿದೆನು ಗುರು ಶಂಕರ ಸಲಹೆನ್ನನು ||3||
ಮಾಯಿಗೆ ಮೋಹಿಸಬೇಡೊ
ಮಾಯಿಗೆ ಮೋಹಿಸಬೇಡೊ ಆ |
ಮಾಯವ ಕಳೆವುಪಾಯವ ಮಾಡೋ ||ಪಲ್ಲ||
ರವಿಯಿಂದುದಿಸಿದ ಮೇಘವದು ಆ |
ರವಿಯ ರೂಪವನೆಲ್ಲ ಕವಿದುಕೊಂಡಿಹುದು |
ಭೂವನಕ್ಕೆ ಕಿರಣವ ಬಿಡದು ಇಲ್ಲಿ |
ರವಿಯೆಯಾತ್ಮನು ಮಾಯವೆ ಮೇಘವಹುದು ||1||
ಬೆಂಕಿಯಿಂದಾದ ಹೊಗೆಯದು ಆ |
ಬೆಂಕಿಯನೆಲ್ಲ ಮುಸುಂಕಿಕೊಂಡಿಹುದು |
ಅಂಕಿಸಲದು ತೋರಗೊಡದು ಇಲ್ಲಿ |
ಬೆಂಕಿಯಾತ್ಮವು ಮಾಯವೆ ಹೊಗೆಯಹುದು ||2||
ಸಿಂಗ ಮುಖದೊಳಿರ್ಪ ಪಲಲ ಪಕ್ಷಿ |
ಪಿಂಗದೆ ಕಸುಕೊಂಡು ನುಂಗಿದಂತಲಲ |
ಭಂಗಿಸು ಮಾಯವನಮಲ ಗುರು |
ಲಿಂಗ ಶಂಕರನರಿಯಲ್ಕೆ ಮುಕ್ತಿಯಲ ||3||
ವೇಷಾಡಂಬರ ಪೋಷಾಖ ತನುವಿನ
ವೇಷಾಡಂಬರ ಪೋಷಾಖ ತನುವಿನ |
ಪೋಷಣೆಯೊಳು ಕೆಡುಬೇಡೆಲೋ |
ಪೋಷಣೆಯೊಳು ಕೆಡುಬೇಡೆಲೋ ಶಶಿ
ಭೂಷನ ಸ್ಮರಣಿಯ ಮಾಡೆಲೋ ||ಪಲ್ಲ||
ಮರದೊಳು ಖಗವು ತಾನಿರುವಂತೊಡಲೊಳ |
ಗಿರುವಿನೀನದನರಿಬೇಕೆಲೋ ಮರ ಬೀಳಲು ಖಗ
ಮಿರದೋಡ್ದಂತೀ ಶರೀರವಳಿಯ ನೀಂ ಬೇರೆಲೊ | |1||
ದಾರವಿಡಿದ ಸೂತ್ರ ಧಾರನಿಂ ಪ್ರತಿಮೆ ಗಂ |
ಭೀರದಿಂ ಕುಣಿವಂತೀಗೆಲೋ ತೋರಾಂಗವು ನಿನ್ನಂ
ದಾರಾಜಿಪುದುನೀ ಸಾರಲಂತ್ಯದಿ ಸುಡುಗಾಡೆಲೋ || 2||
ಈತನು ನಾನೆಂದಾತುರ ವಿಡಿದಿಹ |
ರೀತಿಯನೆನ್ನಗೆ ಸಾರೆಲೊ ಭೂತದ ದೇಹವ
ಭೂತಲದೊಳು ಬಿಟ್ಟು ನೀ ತೆರಳುವ ಸ್ಥಲ ಬೇರೆಲೋ ||3||
ನೀನಲ್ಲದ ತನು ನಾನೆಂದರಿದ |
ಭಿಮಾನದಿ ಕೂಡುವರೇನೆಲೊ ಹಾನಿ ವೃದ್ಧಿಗೆ ಘಟ
ತಾನಹುದಿದನುಳಿದಾನಂದಮಯನು ನೀನೆಲೋ ||4||
ಹಮ್ಮಿನಿಂ ಘಟವನು ನೆಮ್ಮಿಸು ಜನ್ಮವ |
ಸುಮ್ಮನೆ ಕಳಿವದಿದೇಕೆಲೊ ಬೊಮ್ಮನೆ ನೀನೆಂ
ದೊಮ್ಮನದಿಂ ತಿಳಿದುಮ್ಮನಗೊಳುವದು ಸಾಕೆಲೊ ||5||
ದೇಹವೆ ನಾನೆಂದೂಹಿಸಿ ಮನದೊಳು |
ಮೋಹವಿಡಿದು ಕೆಡುಬೇಡೆಲೊ ನಾಹಮೆನದೆ ಬಹು
ಸಾಹಸದಿಂ ವರ ಸೋಹಂಭಾವದಿ ನೀ ಕೊಡೆಲೊ ||6||
ಭೂರಿ ಭ್ರಮೆಯನು ನಿವಾರಿಸಿ ಗುರು ಶಂಕ |
ರಾರ್ಯನ ಸೇವೆಯೋಳ್ಸೆರೆಲೊ ತಾರಕತ್ರಯದವಿ
ವಿಚಾರವರಿದು ಸಾಸೀರಾರರ ಸುಷಿರದಿ ತೊರೆಲೊ |7||
ಗುರುದೇವನ ಭಜಿಸೊ ಎಲೋ ನೀ
ಗುರುದೇವನ ಭಜಿಸೊ ಎಲೋ ನೀ |
ಗುರುದೇವನ ಭಜಿಸೋ
ಗುರುದೇವನ ಭಜಿಸಜಹರಿಸುರರಾ |
ಗುರುವಿನೊಲಿಸಿ ದೇವತ್ವ ಪಡಿದಿಹರು ||ಪಲ್ಲ||
ಗುರುನಾಮವೆ ಮಂತ್ರ ಗುರುಪದ |
ದಿರುವಧೂಳಿ ಭಸಿತ |
ಗುರುಪಾದಮೆ ಸಿದ್ದಿಯ ಜನನ ಸ್ಥಲ |
ಗುರು ನಿರೂಪಮೆ ಸಕಲ ಕಾರ್ಯಕೆ ಜಯ ||1||
ಗುರು ಕರವೇ ಪರುಷ ಗುರುವಿನ |
ದರಿಶನ ಸಿದ್ಧರಸ
ಗುರು ಭಜನಮೆ ಮಹದಿಷ್ಟ ಪೂಜಮಾ
ಗುರು ಕಟಾಕ್ಷ ಸುರಧೇನೆಂದರಿಯುತ ||2||
ಗುರು ಭಕ್ತಿಯೆ ಚಿಂತಾಮಣೀಯಿದು |
ದುರಿತ ಗ್ರಹದ ಯಂತ್ರ |
ವರಜ್ಞಾನಾರ್ಣವಕಿದು ಶಶಿಕಿರಣವು |
ಹರನ ಪದ ಸೌಧಕಿದು ಸೋಪಾನಾವು ||3||
ಇದು ಮುಕ್ತಿಗೆ ಮೂಲ ಭಕ್ತಿರಿ |
ಗಿದು ನಿಜ ಸುಖಲೀಲಾ |
ಇದು ಮಾಯಾ ತಿಮಿರೌಘಕೆ ದಿನಕರ |
ಮಿದು ಭವರೋಗಕ್ಕೌಷಧ ಸಾಧನ ||4||
ಗುರು ಸೇವೆಯೆ ತಪವು ಭಕ್ತಗೆ |
ಗುರು ಸ್ಮೃತಿಯೇ ಜಪವು |
ಗುರು ನಿಷ್ಠಾ ನಿಧಿಯೇ ನಿಧಾನ |
ಸದ್ಗುರು ಪದಾಬ್ಜ ಧ್ಯಾನಮೆ ಸಧ್ಯಾನವು ||5||
ಸತಿಯ ಸಂಗ ತೊರೆದು ಬಲುಸ |
ದ್ವ್ರತದಿ ವಿರತಿ ಪಿಡಿದು |
ಶತ ವರುಷ ತಪೋ ಕೃತಫಲ ನಿಮಿಷದಿ |
ಕ್ಷಿತಿಯೊಳು ಗುರು ಸನ್ನುತಿಯಿಂದಪ್ಪುದು ||6||
ಕಡಿವಡೆ ದುಷ್ಕೃತವ ಬೇಗದಿ |
ಸುಡುವಡೆ ಭವ ವನವ
ಪೊಡವಿಯೊಳಗೆ ನಿಜ ಪಿಡಿವಡೆ ಮುಕ್ತಿಯ
ಪಡಿವಡೆ ಗುರುವರನಡಿ ಭಕ್ತಿಯೆ ತಿಳಿ ||7||
ಗುರು ಭಕ್ತಿಯ ಬಿಟ್ಟು ಭುವನದಿ |
ಹರನೊಳು ರತಿಯಿಟ್ಟು ಸ್ಮರಿಸಲು ಮುಕ್ತಿಯ |
ದೊರೆಯದೆಂದು ಶೃತಿಯೊರಲುವ ನುಡಿಗಳ |
ನರಿದು ಭರದಿ ನೀ ||8||
ಭಕ್ತಿಯೊಂದರಲ್ಲಿ ಚತುರ್ವಿಧ |
ಭಕ್ತಿಯಾದವಿಲ್ಲಿ ಯುಕ್ತಿಲಿ ವನರಿದು |
ಭಕ್ತಿಯ ನಡಿಸಲು ಮುಕ್ತನ ಮಾಡುವ |
ಶಂಕರೇಶ ಗುರು ||9||
ಗುರುನಾಮವ ನುತಿಸೋ
ಗುರುನಾಮವ ನುತಿಸೋ ಎಲೋ ನೀ |
ಗುರುನಾಮವ ನುತಿಸೊ |
ಗುರುನಾಮವ ನುತಿಸನುದಿನದಲಿ |
ಸದ್ಗುರುವಿನ ಗುಣಗಣಮೆಣಿಸದೆ ಭಕ್ತಿಲಿ ||ಪಲ್ಲ||
ನಿಂದಸ್ಥಲವೆ ಕ್ಷೇತ್ರ ಗುರುವರ |
ನಂದ ನುಡಿಯೆ ಮಂತ್ರ ಮಿಂದ ಜಲಮೆ ಮಕ |
ರಂದದ ತೀರ್ಥಮಿದೆಂದರಿದು ಮನಕೆ |
ತಂದು ತವಕದಿಂ ||1||
ನೋಡುತ ಕೆಲಬರಿಗೆ ಸವಿ ಮಾ |
ತಾಡುತ ಪಲಬರಿಗೆ ಬೇಡದಿರುವರಿಗೆ |
ರೂಢಿಯೊಳಗೆ ತಡಮಾಡದಿಷ್ಠ ಫಲ |
ಕೊಡುವ ದರ್ಶನದಿ ||2||
ಪಿಡಿದುದೆ ಘನ ಮತವು ಗುರುವರ |
ನಡೆದುದೆ ಸದ್ವ್ರತವು ಮೃಢ ಗುರು ಶಂಕರ |
ನಡಿವಿಡಿದಂತರ ನಡೆ ನುಡಿ ಕೆಡದೆಡೆ |
ವಿಡದೆ ಪೊಡವಿಯೊಳು ಗುರು ನಾಮವ ನುತಿಸೊ ||3||
ಪರಿಪಾಲಿಸನಭವ ಮಾನವ ನಿನ್ನ
ಪರಿಪಾಲಿಸನಭವ ಮಾನವ ನಿನ್ನ |
ಪರಿವಾಲಸನ ಭವ ಪರಿಪಾಲಿಸನು |
ಸತ್ಕರುಣದಿ ತಿಳಿತ್ರೈ ಕರಣದ ದೋಷಗಳಿರುತಿರೆ ನಿನ್ನನು| ||ಪಲ್ಲ||
ಪರ ವಧುವಿನ ಕೂಟ ಪರಾರ್ಥಾಪ |
ಹರಣ ಹಿಂಸದ ಬೇಟ ಧರೆಯೊಳ ಭಕ್ಷಸ್ವೀ |
ಕರಣಮೆಂಬೀ ನಾಲ್ಕು ದುರಿತಗಳೊಡಲೊಂದಿರುತಿರೆ ನಿನ್ನನು ||1||
ಅನುಚಿತ ನಿಷ್ಠುರತೆಯು ವೈಸೂನ್ಯವು |
ಬಿನುಗಿನ ಪುಸಿ ನುಡಿಯುಯೆನಿಪೀ ನಾಲ್ಕಾದ |
ಘನತರ ಪಾಪಗಳನುಗೊಂಡಿರಲು ವಚನದೊಳು ನಿನ್ನನು ||2||
ಜನರೊಲಿಯದ ಕಾರ್ಯ ಅನಿಷ್ಠ |
ಚಿಂತನೆ ಪರಧನ ಭಾರ್ಯರನುದಿನಾಕಾಂಕ್ಷಮಿಂ |
ತೆನಿಪೀ ನಾಲ್ಕ ಗಮನದೊಳಿರಲು ಶಂಕರ ಗುರು ನಿನ್ನನು
ಹಿಗ್ಗದಿರು ತಗ್ಗದಿರು ಸುಖ ದುಃಖಕೆ
ಹಿಗ್ಗದಿರು ತಗ್ಗದಿರು ಸುಖ ದುಃಖಕೆ |
ವೆಗ್ಗಳದಿ ನೀನಿಂತರಿದ ಮೇಲೆ ಮರುಳೆ ||ಪಲ್ಲ||
ರೋಗಂಗಳೆಲ್ಲ ನೀನಾಗಿ ಬಯಸದೆಯಂತು |
ತಾಗಿ ತಳಮಳಿಪಂತೆ ಬಾಧಿಸುವವೊ |
ಭೋಗಂಗಳಿದರ ಪರಿಯಾಗಿ ಕಾಲಕ್ಕೆ |
ತಾವಾಗಮಿಸಿ ಸಂತೋಷಗೊಳಿಸುತಿಹವು ||1||
ಬರಲುಳ್ಳ ದುಃಖ ಬಂಧುರದೊಳನುಭವಿಸದೇ |
ಪೆರದಕ್ಕಿಲ್ಲ ಪರಿಹರಿದುಪಾಯ |
ವರ ರಾಮನಳಪಾಂಡವರು ಕಷ್ಟ ಪಟ್ಟದನು
ನೆರೆ ಶಾಸ್ತ್ರವನೆ ನೋಡಿ ನಿನ್ನೊಳರಿದು ||2||
ಪೊಡವಿಯೊಳು ಭವ ಮರಣ ಗಡಣೆಯೊಳಗಿನಿತಾದ |
ರೊಡೆತನವದಿಲ್ಲನಿನ್ನೊಳುತೋರ್ಪವು |
ಜಡ ದೇಹ ಪ್ರಾರಬ್ಧವಿಡಿದಂತಹುದು ಸುಮ್ಮ
ನಡಿವಿಡಿದು ಗುರು ಶಂಕರನ ಸ್ಮರಿಸುತಿರೆಲೊ ||3||
ಕಾಕು ಮನುಜನೆ ನಿನ್ನಗೇಕೊ ಗರ್ವ
ಕಾಕು ಮನುಜನೆ ನಿನ್ನಗೇಕೊ ಗರ್ವ |
ಕಾಕು ಮನುಜನೆ ನಿನ್ನಗೇಕೊ ಗರ್ವ |
ಸಾಕು ನೀನೆನಿತರವ ಲೋಕದೊಳಗೆ ||ಪಲ್ಲ||
ಬಲದೊಳು ದಶಾನನನೆ ಕಲಿಯೊಳು ಧನಂಜಯನೆ |
ಕುಲದೊಳು ವಶಿಷ್ಟಮುನಿ ತಿಲಕನೇನು |
ಒಲುಮೆಯಲಿ ಭೃಗಮುನಿಯೆ ಛಲದಿ ದುರ್ಯೋಧನನೆ |
ನೆಲದಿ ಮನುಮಥನ ಸಮ ಚಲುವನೇನು || 1||
ಹಟದಿ ಪ್ರಲ್ಹಾದನೆ ಕಪಟದೊಳು ಶಕುನಿಯೆ |
ನಿಷ್ಕುಟಿಲದೊಳು ಭರತಭೂಪಾಲನೇನು |
ದಿಟಗೆಲಸದಲಿ ಧೃವನೆ ವಿಟತನದಿ ಕ್ಯಷ್ಣನೇ |
ಪಟು ಪರಾಕ್ರಮದಿ ಮಾಂಧಾತನೇನು ||2||
ಮೌನದಲಿ ಶುಕನೆ ಶಿವ ಧ್ಯಾನದಲಿ ವ್ಯಾಸನೇ |
ಗಾನದಲಿ ಬ್ರಹ್ಮಮಾನಸಪುತ್ರನೇನು |
ದಾನದಲಿ ಕರ್ಣನೆ ನಿಧಾನದಲಿ ಧರ್ಮಜನೆ |
ನೀನು ಸತ್ಯದಿ ಹರಿಶ್ಚಂದ್ರನೇನು ||3||
ಪಿತ್ರಾಜ್ಞಯಲಿ ಜನಕಪುತ್ರಿಯಳ ವಲ್ಲಭನೆ |
ಭ್ರಾತೃವತ್ಸಲದಿ ಸೌಮಿತ್ರಿಯೇನು |
ಧಾತೃತ್ವದಲಿ ಭೋಜ ಧಾತ್ರಿಪಾಲಕನೆ ಸುಪ |
ವಿತ್ರದೊಳು ಮಾರುತನ ಮಿತ್ರನೇನು ||4||
ಸ್ನೇಹದಿ ವಿಭೀಷಣನೆ ಸಾಹಸದೊಳನಿಲಜನೆ |
ಬಾಹು ವಿಕ್ರಮದಲ್ಲಿ ಬಾಣನೇನು |
ದೇಹವಾನೆಂಬ ಮರೆಮೋಹಕೀಡಾಗದು |
ಉತ್ಸಾಹದಿಂ ಗುರು ಶಂಕರನ ಭಜಿಸು ನೀನು ||5||
ವಿಧಿಯೆ ನಿನಗಿನ್ನಿದಿರಾರಿಳೆಯೊಳು
ವಿಧಿಯೆ ನಿನಗಿನ್ನಿದಿರಾರಿಳೆಯೊಳು |
ಅಧಿಕರನುರೆಯಳಲಿಸಿ ಬಳಲಿಸಿದಿ ||ಪಲ್ಲ||
ಜಡಜಾಕ್ಷನ ದಶಭವದೊಳು ಬರಿಸಿದಿ
ಜಡಜನಾಭನ ನಡುದಲೆಯ ಕಡಿಸಿದಿ |
ಜಡಜಾರಿಯ ದೇಹ ಕಳೆಯನು ಕೆಡಿಸಿದಿ |
ಜಡಜ ಶರನ ತನು ಬೂದಿಯೆನಿಸಿದೆ ||1||
ವಾಸವನಂಗದಿ ಯೋನಿಯನೆಸಗದಿ |
ವ್ಯಾಸಮುನೀಂದ್ರನ ತೋಳನಿಳಿಸಿದಿ ||
ಭಾಸುರ ಶುಕ್ರನ ನಯನಮೊಂದಳಿಸಿದಿ |
ಲೇಸಿನ ನಳನಶ್ವದೂತನೆನಿಸಿದಿ ||2||
ವರ ಹರಿಶ್ವಂದ್ರನ ಹೊಲೆಯನಾಳೆನಿಸಿದಿ |
ಧರಣಿಪ ರಾಮನ ವಿಪಿನಕೆಳಿಸಿದಿ ||
ಧರೆಯೊಳು ಪಾಂಡವರನು ತಿರಿದುಣಿಸಿದಿ |
ಮೆರವ ಶೃತಿಗಳನು ಶುನಕನಾಗಿಸಿದಿ ||3||
ದಿನಕರನನು ರಾಹುವಿನಿಂದಣಿಸಿದಿ |
ಮಿನುಪ ನಹುಷನಹಿಯಾಗಿ ಪರಿಸಿದಿ ||
ಮನಸಿಜಾಂತಕನನು ಮಸಣದೊಳಿರಿಸಿದಿ |
ಘನ ವಿಕ್ರಮ ಭೂವರನ ನೋಯಿಸಿದಿ ||4||
ಉರಗಪತಿಯ ಸುರಾಸುರರಿಂದೆ ಕಡಿಸಿದಿ |
ಕರಿಫಣಿ ಖಗಗಳ ಸೆರೆಯೊಳೊಂದಿಸಿದಿ |
ಪರಮ ಮಹಿಮರನೀ ಪರಿಯೊಳು ಕೆಡಸಿದಿ |
ಗುರು ಶಂಕರನ ಶಾಸನವ ನಡಿಸಿದಿ ||5||
ಪ್ರಾರಬ್ಧಕನುಸರಿಸಿ ಮತಿ ಪೋಪುದು
ಪ್ರಾರಬ್ಧಕನುಸರಿಸಿ ಮತಿ ಪೋಪುದು |
ಮೀರಲಾರಳವಲ್ಲ ಭೋಗಿಸದೆ ಬಿಡದು ||ಪಲ್ಲ||
ಹರನು ವಿಧಿಯನ್ನು ಧಿಕ್ಕರಿಸಬೇಕಂದನೇ |
ಸುರರು ಯಜ್ಞಕೆ ಪೋಗಬೇಕಂದರೆ |
ಸ್ಮರನು ಶಂಕರಗೆ ಪೂಶರ ಬಿಡುವೆನಂದನೇ |
ಹರಿಯು ಭೃಗು ಸತಿಯ ಕೊಲುಬೇಕಂದನೇನು ||1||
ಅಸುರ ಗುರುದಾನಕಡ್ದಾಗಬೇಕಂದನೇ |
ಸಸಿಯ ತಾರೆಯನೊರಿಸಬೇಕಂದನೇ |
ಮಿಸುಪಹಲ್ಯೆಯನಿಂದ್ರ ಕೂಡಬೇಕಂದನೇ |
ಮಿಸುನಿ ಮೃಗ ರಾಮಪಿಡಿಬೇಕಂದನೇನು ||2||
ಸಲೆ ಹರಿಶ್ಚಂದ್ರ ಭೂಪಮುನಿಗೀವೆನಂದನೇ |
ನಳನು ದ್ಯೂತವನಾಡಬೇಕಂದನೇ |
ಬಲಭದ್ರ ಗೋವಧೆಯ ಮಾಡಬೇಕಂದನೇ |
ಖಳನವನಿಜೆಯನೊಯ್ಯಬೇಕಂದನೇನು ||3||
ತುರಗವನು ಶೂದ್ರೀಕನೇರಬೇಕಂದನೇ |
ಹರನ ವ್ಯಾಸನು ಜರಿಯಬೇಕಂದನೇ |
ಉರಗದಿ ಪರೀಕ್ಷತನು ಸಾಯಬೇಕಂದನೇ |
ವರಸಗರ ಯಾಗ ಮಾಡುವೆನಂದನೇನು | |4||
ಹಿರಿಯರಿಂತಿರದೆ ವಿಧಿಗೊಳಗಾಗಿ ದುಃಖವನು |
ನೆರೆ ಭೋಗಿಸಿದರು ನೀನೆನಿತರವನು |
ಗುರು ಶಂಕರನ ಪಾದಕೆರಗಿ ನಿನ್ನಿರ ನೀ |
ನರಿಯಲದು ಇದ್ದಿಲ್ಲದಂತಹುದು ಮರುಳೆ 5||
ಇನಿತು ವೆಸನಪಡುತಿರುವಿ
ಯಾತಕಿನಿತು ವೆಸನಪಡುತಿರುವಿ |
ಹೇ ಮಾನವೇಂದ್ರ |
ಯಾತಕಿನಿತು ವೆಸನ ಮಾಡಿ |
ಧಾತುಗೆಟ್ಟು ಬಾಯ ಬಿಡುವಿ |
ಭೂತನಾಥನಾದ ಶಿವನು |
ಭೂತಲದಲಿ ಪೊರೆವ ನಿನ್ನ ||ಪಲ್ಲ||
ಆರು ಪ್ರೀತಿಲಿ ಪೊರೆವರೆನಗಿಲ್ಲ |
ಹೀಗೆಂದು ಬರಿದೆ |
ಭೂರಿ ಭ್ರಾಂತಿಗೊಳುವದೊಳಿತಲ್ಲ |
ಮೂರುಲೋಕಂಗಳನು ಪಾಲಿಪ |
ಮಾರಹರ ಗೌರೀವರನು |
ನಿನ್ನೋರುವನ ಕೈ ಬಿಡುವನೆ |
ಗಭೀರದಿಂದನುದಿನದಿ ರಕ್ಷಿಪ ||1||
ಪಡೆದ ಮಕ್ಕಳ ಸಲಹಲೆಂತೆಂದು |
ವಳಗೊಳಗೆ ವ್ಯರ್ಥ |
ಮಿಡುಮಿಡುಕಿ ದುಃಖಿಸುವದೇಕಿಂದು |
ಒಡಲೊಳಗೆ ಸುತರಿದ್ದ ಕಾಲದಿ |
ಬಿಡದೆ ಸಲಹಿದ ದೇವದೇವನು |
ಪಿಡಿದು ಪ್ರೇಮದಿ ಪಾಲಿಸುವ ತಾ |
ಬಿಡುಬಿಡೆಲೊಹಂಕರಣ ಭಾವವ ||2||
ಸೃಷ್ಟಿಯೊಳಗಿರುತಿರ್ಪ ಪ್ರಾಣಿಗಳಂ |ಆವಾಗಲನ್ನವ |
ನಿಟ್ಟು ಸಾಕುವನೀಶನೇಯನುತಂ |
ನಿಷ್ಟೆಯಿಂ ನಂಬಿರಲು ಬುತ್ತಿಯ |
ಕಟ್ಟಿ ತಂದುಣಬಡಿಪನವರನು |
ಹುಟ್ಟಿಸಿದ ಹರನರಿಯನೇ ಭಯ |
ಬಿಟ್ಟು ಗುರು ಶಂಕರನ ಧ್ಯಾನಿಸು ||3||
ದಾನವನೆ ಮಾಡಿ ನೀ ದಾನಿಯೆನಿಸು
ದಾನವನೆ ಮಾಡಿ ನೀ ದಾನಿಯೆನಿಸು |
ಮಾನವನೆ ಪುಣ್ಯದಭಿಮಾನವಿರಿಸು ||ಪಲ್ಲ||
ಕೊಟ್ಟದ್ದು ನಿನಗೆ ಬೈಚಿಟ್ಟದ್ದು ಪರರಿಂಗೆ |
ಕೊಟ್ಟು ನಾನಿಳೆಯೊಳಗೆ ಕೆಟ್ಟೆನೆಂದು |
ಬಿಟ್ಟಾಡದಿರು ಮುಂದೆ ಕಟ್ಟಿರ್ದಬುತ್ತಿ ತೆರ |
ಹೊಟ್ಟಿಗಾಗುವುದು ಕೈ ಮುಟ್ಟಿ ನೀನು ||1||
ದೇವನಿಂದವನಿಯೊಳಗೀವವನೆಯಧಿಕ ತಿಳಿ
ದೇವ ತನ್ನನು ನಂಬಿ ಸೇವಿಸುವರ |
ಭಾವವಂ ನೋಡಿ ತಾನೀವನೀವವನು |
ಮತ್ತಾವದನು ನೋಡದಲೆಯೀವನದರಿಂದ ||2||
ಹಿಂದೆ ನೀ ಕೊಟ್ಟದ್ದರಿಂದೆ ನಿನಗಿನಿತು ಸಿರಿ |
ಬಂದಿರ್ಪುದಿಗ ನೀ ಮರಳಿ ಕೊಡಲು |
ಮುಂದೆ ಬಹ ಜನ್ಮದಿಯ ಮಂದ ಸಂಪದವಡೆದು |
ಕುಂದು ಕೊರತೆಗಳಿಲ್ಲದಂದಗೊಳುವಿ ||3||
ಹಾಲು ನಿನ್ನಲ್ಲಿರ್ದ ಕಾಲದಲೆ ಹಬ್ಬವೆಂದೀ |
ಲೋಕದಲಿ ಯಥಾಶಕ್ತಿವಿಡಿದು ಕೇಳದಾರನು
ಧರ್ಮಪಾಲನೆಯ ಮಾಡಿದರೆ
ಮೇಲಾಸ್ವರ್ಗ ಸುಖ ಪ್ರಾಪ್ತಿಸುವದು ||4||
ಆಗ ಬಾ ಈಗ ಬಾ ಸಾಗಿ ಬಾ ಅತ್ತಿತ್ತ |
ಪೋಗಿ ಬಾರೆನ್ನದೇ ಪಾತ್ರವರಿದು |
ಆಗಲೇ ಕರೆದು ನಿಜವಾಗಿ ಧರ್ಮವ ಮಾಡೆ |
ಯೋಗಿ ನುತ ಗುರು ಶಂಕರೇಶ ಪಾಳಿಸುವ ||5||
ನಡಿರಿ ಬೇಂಟೆಯನಾಡುವ ಬಂಧುರದಿಂದೆ
ನಡಿರಿ ಬೇಂಟೆಯನಾಡುವ ಬಂಧುರದಿಂದೆ |
ನಡಿರಿ ಬೇಂಟೆಯನಾಡುವ ನಡಿರಿ |
ತನುವಿನ ಕಾಡಡವಿಯೊಳಿಹ ಮಾಯಾ |
ಕಡುಮೃಗಖಗಗಳ ಪೊಡೆದಿಡುತಲಿ ಬೇಗ ||ಪಲ್ಲ||
ಕುಟಿಲ ಗುಣಗಳೆಂಬ ಚೆಟುಲ ನರಿಗಳುಂಟು |
ಕಠಿಣ ವೃತ್ತಿಗಳೆಂಬ ಕರಿಗಳುಂಟು ಹಟ |
ಮೋಹವೆಂಬುವ ಕಟಪೆರ್ಬುಲಿಗಳುಂಟು |
ಸಟಿಯಂಬ ಮೊಲಗಳನಂತಮುಂಟು ||1||
ಅಷ್ಟಮದಗಳೆಂಬ ದುಷ್ಟ ಕೋಣಗಳುಂಟು
ಕಷ್ಟಮೆಂಬುವ ಕತ್ತೆಗರುಗಳುಂಟು |
ಭ್ರಷ್ಟತೆಯೆಂಬ ಪಾಪಿಷ್ಟಚಿರ್ಚುಗಳುಂಟ |
ನಿಷ್ಟವೆಂತೆಂಬ ಚಿಗರಿಗಳುಂಟು ||2||
ಕ್ಲೇಶಂಗಳೆಂಬ ಕಾಗಿಗಳುಂಟು ಮುಸುಗಿದ |
ವಾಸನೆಯಂಬ ಕೌಶಿಕಗಳುಂಟು |
ಪಾಶಾಷ್ಟವೆಂಬ ಬಕಗಳುಂಟು |
ನೆಲೆಯಾದ ದ್ವೇಷವೆಂಬಖಿಳ ಪದ್ದುಗಳುವುಂಟು ||3||
ಕೋಪವೆಂತೆಂಬಪರೂಪ ಸಿಂಹಗಳುಂಟು |
ತಾಪಂಗಳೆಂಬ ಕರಡಿಗಳುಂಟು |
ಪಾಪಗಳೆಂಬುವ ವರಹಗಳುಂಟು |
ಅತಿಕಾಪಟ್ಯವೆಂತೆಂಬ ವ್ರಕಗಳುಂಟು ||4||
ಹರಭಕ್ತಿಯೆಂತೆಂಬ ಬಂದೂಕವನು ಪಿಡಿ |
ದರಿವೆಂಬ ಮೆರವ ಮದ್ದನೆ ಜಡಿದು
ಗುರು ಶಂಕರನ ಕೃಪೆಯಂಬ ಗುಂಡನೆ ವತ್ತಿ
ಭರದಿಂದೆ ಬಡಿದು ಕೊಲ್ಲುವ ಬನ್ನಿರೋ ||5||
ತನುವೆಂಬ ಗದ್ದೆಯನನುವಿಂ ಹದ ಮಾಡಿ
ತನುವೆಂಬ ಗದ್ದೆಯನನುವಿಂ ಹದಮಾಡಿ |
ಘನ ತತ್ವ ಬೆಳೆಯನ್ನು ಬೆಳೆದುಣ್ಣಿರೊ ||ಪಲ್ಲ||
ಹರ ಗುರು ಭಕ್ತಿಯೆಂಬೆರಡೆತ್ತುಗಳ ಹೂಡಿ |
ವಿರತಿಯಂಬುವ ನೇಗಲಿಯನೆ ಮಾಡಿ |
ಬರಿಯ ಭ್ರಮೆಯದೆಂಬ ಕರಿಕೆಯ ತೆಗೆದು |
ಭಾಸುರ ಸುವಿಚಾರೆಂಬು ಗೊಬ್ಬರಿಟ್ಟು ||1||
ವರ ಸಾಧನಗಳೆಂಬ ಮಡಿಗಳನೆಸಗಿ |
ಬಂಧುರ ಸತ್ಯವೆಂಬ ಕಾವಲಿಯಗೈದು |
ಮಿರಗುರುವ ಶೃತಿಯೆಂಬ ಕೆರೆಯ ನೀರನ್ನು |
ವಿಸ್ತರದ ಶ್ರವಣದಲಿ ತುಂಬಿಂ ಕಳಿಸುತಲಿ ||2||
ಗುರು ಮಂತ್ರವೆಂತೆಂಬ ಪರಮ ಬೀಜವ ಚಲ್ಲಿ |
ಅರಿವೆಂಬ ಪೈರವ ಬೆಳಿಸುತಲಿ |
ಸ್ಥಿರ ಮುಕ್ತಿ ಭತ್ತವ ಬೆಳೆದುಂಡು ಶಂಕರ |
ಗುರು ಕೃಪೆಯೊಳು ಭವ ಬರ ಗೆಲಿರೊ || 3||
ಎಂತಹುದೋ ಮುಕ್ತಿ ಎಂತಹುದೋ
ಎಂತಹುದೋ ಮುಕ್ತಿ ಎಂತಹುದೋ |
ಎಂತಹುದರಿವಿನಿಂದಿಂತುಲ ಸದ್ಗುಣ |
ಸಂತತಿಗೂಡಿರದಂತಹ ಮನುಜನಿಗೆಂತಹುದೊ ||ಪಲ್ಲ||
ಗುರುವರನಡಿ ಸೇವ ಸತ್ಪುರುಷರ |
ದರಿಶನ ಸದುಭಾವ ಕರಣ ವಿಜಯವೀಶ್ವರನರ್ಚನೆ ವಿದ್ಯಾ |
ಮೆರವ ವಿವೇಕ ಧರ್ಮ ವರ ಶಮೆದಮೆ ಸತ್ಯ |
ಪರಮಾರ್ಥದ ಸುಶ್ರವಣ ಜೀವರೊಳತ್ಯಂತಃಕರುಣ |
ಪರಿಸತಿಯ ಕಂಡೆರಗದಧಟು ಬಾಸುರ ಭಕ್ತಿಗಳಾ |
ಗರಮಮಿಲ್ಲದವನಿಗೆಂತುಹುದೊ ||1||
ಯತಿ ಜನರೊಳ ಪ್ರೀತಿ ನಿಖಿಳರೊಳು ಹಿತ ಬಯಸುವ ರೀತಿ |
ಶೃತಿಯಾಗಮ ಸಂತತಿಯೊಳು ಶ್ರದ್ಧೆಯು
ಕ್ಷಿತಿ ಮೊದಲಾದ ಸಂಸೃತಿಯೊಳ ಶಾಶ್ವಿತೆ
ನುತ ಸದುಗತಿಯೊಳು ಭ್ರಾಂತಿ ವಿಲಸಿತ ನಡೆನುಡಿ ಬಹು ಶಾಂತಿ
ಸತತ ವಿಧಿಗಳನು ಕೃತಿಸುವ ನೇಮ ಸ್ವ
ಮತ ನಿಷ್ಠೆಗಳ ಮಿಳಿತಮಿಲ್ಲದವನಿಗೆಂತಹುದೋ ||2||
ಅರಿತೆಮಿಗಳ ಧ್ಯಾನ ತೋರುವ ತನ್ನ |
ಶರಿರದೊಳುದಾಸೀನ ದುರಿತಕೆ ಭೀತಿ ಪೂ
ಶರಗಂಜದ ಧೃತಿ ವರ ಪುಣ್ಯವನಾ
ಚರಿಸುವ ಪದ್ದತಿ ಮರೆವೆಯಮಿರುದ ಯೋಗ
ಇಹ ಪರಭೋಗದೊಳು ವಿರಾಗ ಗುರು ಶಂಕರನಾ
ವರಿಸಿ ಕೀಟಮಧುಕರ ನ್ಯಾಯವನನು
ಸರಿಸದಿರುವವನಿಗೆಂತಹುದೋ ಮುಕ್ತಿ ||3||
ತ್ರಿವಿಧ ಕರಣದಲ್ಲಿಯಿಂತು ಸವಿಯದಂತೆ ಭಕ್ತಿ ಧವನ
ತ್ರಿವಿಧ ಕರಣದಲ್ಲಿಯಿಂತು ಸವಿಯದಂತೆ ಭಕ್ತಿ ಧವನ |
ಜವದೊಳಿತ್ತು ಸೇವೆಗೊಂಡು ಪಾಲಿಸೆನ್ನ ಶಂಕರ ||ಪಲ್ಲ||
ಆರಿಕೆ ಮನಸಿಗಿಲ್ಲದಾಲಿಯರಡವೆಂತು ತಮಗೆ ತಾವೆ |
ನಿರುತದಲ್ಲಿ ನಡೆಯುತಿರ್ಪ ರೀತಿಯಿಂದದಿ |
ಧರೆಯೊಳೆನ್ನ ಮನವದೆಲ್ಲಿ ಚರಿಸುತಿರ್ದೊಡಿರಲಿ ಸ್ಥೂಲ |
ಶರೀರ ನಿನ್ನ ಪೊಜೆ ಮಾಳ್ಪ ಕಾಯಕದ ಸುಭಕ್ತಿಯಂ ||1||
ಶರೀರಯೆತ್ನಗೈಯ್ಯದಿರ್ದೊಡೆರಡು ಶ್ವಾಸವೆಂತು ನಿರಂ |
ತರದಿ ತಮಗೆ ತಾವೆ ನಡೆದುಕೊಳ್ಳುವಂದದಿ |
ಶರೀರವಾ ವ್ಯವಸ್ಥೆಯಲ್ಲಿ ಬೆರೆದೊಡೇನು ಯನ್ನರಸನೆ |
ಪರಮ ನಿನ್ನ ಮಂತ್ರ ನುಡಿವ ವಾಚಕದ ಸುಭಕ್ತಿಯಂ || 2||
ಎರಡು ರೆಪ್ಪೆಯರಡು ಶ್ವಾಸ ಚರಿಸುತಿರಲು ಪ್ರಾಣವಾಯು |
ಮರಿಯದಂತೆ ನೈಜ ಕೃತ್ಯಮೆಸಗುವಂದದಿ |
ಶರೀರ ಜಿಹ್ವವೇನು ಮಾಡ್ದೊಡಿರಲಿ ಶಂಕರೇಶ ಯನ್ನ |
ಪರಿವ ಮನವು ನಿನ್ನ ಸ್ಮರಿಪ ಮಾನಸದ ಸುಭಕ್ತಿಯಂ ||3||
ಈವುದೆನಗೇ ಈಪುದೆನಗೆ
ಈವುದೆನಗೇ ಈಪುದೆನಗೆ ಬಿಡ |
ದಾವಾವ ಕಾಲದೊಳೀವರಗಳ ನೀವುದೆನಗೆ ಪಲ್ಲ||
ಮನಸಿಗೆ ನಿನ್ನ ನೆನೆವದನು ರಸನೆಯ |
ಕೊನೆಗೆ ನಿನ್ನಯ ಮಂತ್ರ ನುಡಿವುದನು |
ತನುವಿಗೆ ನಿನ್ನ ಸೇವಿಪುದನು ಕರ್ಣಕ್ಕೆ |
ಯನುದಿನ ದಶನಾದವನೆ ಕೇಳುವದ ನೀವುದೆನಗೆ ||1||
ಘನ ಬಿಂದುವನು ನೋಳ್ಪುದಕ್ಷಿಗೆ ತವ |
ಪೂಜೆಯನು ನಿರಂತರ ಮಾಳ್ಪುದನು ಕರಕೆ |
ವಿನಯದಿ ನಿನ್ನಡಿವನಜ ದ್ವಂದ್ವಂಗಳೀ |
ಗನುವಾಗಿ ನಮಿಸುವದನು ನಿಟಿಲಕೆ ||2||
ಧರೆಯೊಳು ತತ್ವಾನುಭವವನು ಸಂಸಾರ |
ಬರಿಯ ಭ್ರಮೆಯಿದೆಂಬ ಪ್ರಜ್ಞೆಯನು |
ಅರುವಿನೊಳಾನೆ ನೀನೆಂಬುವದನು ಪರ |
ತರ ಗುರು ಶಂಕರನೊಳು ಕೈವಲ್ಯನೀವುದೆನಗೆ ||3||
ಈಸು ಗುಣಗಳಿಂತು ಬೇಗದಿ
ಈಸು ಗುಣಗಳಿಂತು ಬೇಗದಿ |
ಕೈಲಾಸಪುರ ನಿವಾಸಯೆನಗೀಯನುದಿನದಿ |ಪಲ್ಲ||
ಎಡರಿನಲ್ಲಿ ಧೃತಿಯ ಸಿರಿಯ ಸಡಗರದಿ ವಿನಯವ ಮನದಿ |
ಪಿಡಿದ ನೇಮ ನಡಿಪ ಛಲವ ಮೃಢನ ಶರಣರಡಿಗಳಿಂಗೆ |
ಕೆಡೆದು ಸುಖಿಸುತಿರ್ಪ ಭೋಗವ |
ಬ್ರಹ್ಮದೊಳು ಲಕ್ಷವಡರಿಯಗಲದಿರ್ಪ ಯೋಗವ |
ಮಡದಿ ಪೊಡವಿ ಮನೆ ಧನಾದಿ ಗಢಣದೊಳು ವಿರಾಗವ ||1||
ಪರ ವಧುವಿನ ಸಂಗಕ್ಕೆಳಸ| ದಿರುವ ಕರಣ ವಿಜಯವ ಸಂ |
ತರುವಸೆದಹುದೆಂಬ ನಡೆಯ ಮೆರವ ಜವ್ವನದೊಳು |
ವಿಕೃತಿಗೆರಿಗಿ ಕೆಡದ ಮನ ನಿಧಾನವ ಬಿಡದಾವ ಕಾಲ |
ಹರನೆ ನಿನ್ನ ನಾಮ ಧ್ಯಾನವ ಮರವಿಂದಲಾದ |
ಬಂಧಪರಿವ ಸಹಜ ಜ್ಞಾನವ ||2||
ಪರರಿಗಿತ್ತು ಸುಖಿಪ ಮಹಾ ಸಿರಿಯ ಜೀವಿಸಿರುವ ತನಕ |
ಪರಮನರಿದು ಚರಿಸುವ ಸತ್ಪುರುಷರ |
ದರಿಶನವ ಪುಶಿಯ ನೊರೆದು ಬಾಳದಂಥ ವೃತ್ತಿಯ |
ಶಂಕರಗುರುವಿನ ಚರಣದಲ್ಲಿ ಪರಮ ಭಕ್ತಿಯ |
ಧರೆಯೊಳಂತ್ಯ ಕಾಲದಲ್ಲಿ ಸಾರತರ ಸುಮುಕ್ತಿಯ ||3||
ಕರುಣಿಸು ನೀನೆನ್ನ
ಕರುಣಿಸು ನೀನೆನ್ನ ಕರುಣ ಮೂರರ ದೋಷ |
ಪರಿದು ಪುಣ್ಯವನಿತ್ತು ಪುರಭಂಗ ಸುರಚಿರ ಕರುಣಾಂಗ |
ವರ ವೃಷಭ ತುರಂಗ ಬೇಗ ಕರುಣಿಸು ||ಪಲ್ಲ||
ಪರಸತಿ ರತಿ ದುರ್ಭಕ್ಷಣೆ ಜೀವ ಹಿಂಸಾದಿ |
ಶರೀರದಘಂಗಳ ಪರಿಹರಿಸಿ ಗುರು ಸೇವೆ ತವ ಪೂಜೆ |
ಪರ ಪೋಷಣಾದಿಯಾಚರಣೆಯನೊದಗಿಸು ಶಶಿಭೂಷ |
ಸುರನರೋರಗ ಪೋಷನಿರುಪಮ ನಿರ್ದೋಷ ಬೇಗ ಕರುಣಿಸು | |1||
ಅನುಚಿತ ಪುಶಿಪೈ ಸೂನ್ಯತೆ ಕಾರ್ಕಸ್ಯಾದಿಯಂ |
ದೆನಿಪ ವಚನದಘಗಳ ಕೆಡೆಸಿ ಘನ ವೇದಮನು ಜಪ |
ಸತ್ಯಭಾಷಣ ಮುಖ್ಯವನೆ ಸ್ಥಿರಗೊಳಿಸು ಭುವನ ಪಾಲ |
ಮನುಮುನಿ ನುತ ಲೋಲ ಕನಕಾದ್ರಿ ನಿಜಶಾಲ ಬೇಗ ಕರುಣಿಸು || 2||
ರಸೆಯೊಳು ಪರಧನ ಪರವನಿತೇಚ್ಛಾದಿ ಮುಸುಗಿದ ಮನದಘಗಳ |
ಕೆಡಿಸಿ ಮಿಸುಪ ಶಮೆ ದಮೆ ಶಂಕರ ನಿಷ್ಠೆ ಮುಖ್ಯವ |
ನೊಸೆದೆನ್ನಗೀಯೊ ವಿಮಲ ಭಾವ ಭಸಿತೋದ್ಧೊಳಿತ ದೇವ |
ಲಸಿತಗಜೆಯ ಜೀವ ಬೇಗ ಕರುಣಿಸು ||3||
ಎನಗಿದನೆ ಕರುಣಿಸಭವ
ಎನಗಿದನೆ ಕರುಣಿಸಭವ |
ಘನಮುಕ್ತಿಯ ಸಾಧನವನನುದಿನದಿ ||ಪಲ್ಲ||
ಭುವನದೊಳದಿದೆಂಬುವ ತತ್ವಂಗಳ |
ತವೆ ಶೋಧಿಸಿ ಕಳೆದುಳಿದಿರುವ |
ಶಿವತತ್ವವೆ ನಿಶ್ಚಯನಾಹುದೆಂ |
ದವಿರತ ನಂಬಿರಲದೆ ಸುಜ್ಞಾನವು ||1||
ದೇಶ ಕಾಲ ಬಳಿಕಾಸುವಸ್ತುವಿ |
ನೊಳೋಸರಿಸದ ಪ್ರೀತಿಯು ತನ್ನೋಳ್ |
ಲೇಸೆನಿಪಾ ತೆರ ಗುರುದೈವತರಲಿ |
ಸೂಸುವಹಿತಮಿರುತಿರಲದೆ ಭಕ್ತಿಯು ||2||
ವನಿತಾದಿ ಸಕಲ ಬಿನಗು ವಿಷಯ ಸುಖ |
ಕಿನಿತಾದರು ಮನವನು ಕೊಡದೆ |
ಅನಘಾದ್ವಯ ಶಂಕರ ಗುರುವರನಂ |
ತನವರತಮಿರಲ್ಕದೆ ವೈರಾಗ್ಯವು ||3||
ವೃಷಭ ವಾಹನನೆ ದುರ್ವಿಷಯಗಳಳಿದು
ವೃಷಭ ವಾಹನನೆ ದುರ್ವಿಷಯಗಳಳಿದುಸ |
ದ್ವಿಷಯಗಳನು ಪೌರುಷದಿಂದೀಯೊ ನೀ |
ಮಿಷವಗಲದೆನಗೆ ||ಪಲ್ಲ||
ತರುಣಿಯ ಸುಂದರ ಮುಖಮಂ |
ನೆರೆ ನೋಡ್ದಾಶ್ಚರಿ ಪಡುವಾ |
ವರ ನೇತ್ರಕೆ ಭಾಸುರ ಸತ್ಪುರುಷರ |
ದರಿಶನದಿಚ್ಛೆಯನಿರಿಸುತ ಕಾಯೊ ||1||
ಯುವತಿಯಳಾಡುವ ನುಡಿಯಂ |
ಜವದಿಂ ಕೇಳುವ ಕಿವಿಗೆ |
ಶಿವ ನಿನ್ನತ್ಯುತ್ಸವದಿಂದಲಿ|
ಪಾಡುವ ಶಬ್ದವನಿತ್ತವಿರತ ಕಾಯೊ ||2||
ಸುದತಿಯ ಮಾಂಸದ ತುಟಿಯಂ |
ಮುದದಿಂದಾಪೇಕ್ಷಿಸುವ ಮೃದರಸನೆಗೆ ತವ |
ಸದಮಲವಹ ಮಂತ್ರದ |
ಪರಮಾಮೃತ ವದಗಿಸಿ ಕಾಯೊ | |3||
ಪ್ರಮದೆಯ ಮೈಬೆಮರಿನ ಗಂ |
ಧಮನಾಘ್ರಾಣಿಪೆನೆಂದು ಭ್ರಮಿಸುವ ಘ್ರಾಣಕೆ |
ಕ್ಷಮೆಯಿಂ ತವಪದ ಕಮಲದ ಗಂಧವ |
ನಮರ್ದಿಸಿ ಕಾಯೊ | |4||
ವನಿತೆಯ ಸ್ಪರಿಶನ ಸುಖಮಂ |
ನೆನಿಸುತ ತಾನಾಶಿಸುವ |
ತನುವಿಗೆ ಶಂಕರ ಘನ ಗುರು ಸೇವೆಯ
ನನುಗ್ರಹಿಸುತ್ತನುದಿನದಲಿ ಕಾಯೊ ||5||
ದೇಶ ಕಾಲ ವಸ್ತು ಮೂರರಿಂದ ದುಷ್ಕೃತಗಳಳಿದು
ದೇಶ ಕಾಲ ವಸ್ತು ಮೂರರಿಂದ ದುಷ್ಕೃತಗಳಳಿದು |
ಮೇಶ ಪೊರೆವನೀ ಕ್ರಮದಿಂದಂ ಈ ಶರೀರವಿಡಿದು |
ಮನುಜನೀಶನೆನಿಪ ಭಕ್ತಿಯಿಂ | |ಪಲ್ಲ||
ವಾರಣಸಿಯೊಳೋರ್ವ ವಿಪ್ರ ಜಾರತನದಿ ಸತಿಯಗೂಡಿ |
ಸಾರತರದ ತನ್ನ ಮತವ ದೂರಿ ಸುರೆಯ ಭಾಂಡದಲ್ಲಿ |
ಜಾರಿ ಬಿದ್ದು ಪ್ರಾಣವಳಿದನು ಸುರೇಶ್ವರನೆಂದೆಂಬ ಲಿಂಗವಾಗಿ |
ಮೆರೆದನು ಮಾರಹರನ ಪುರಕೆ ಪೋಗಿ ಭೂರಿಪದವ ಪಡೆದನು || 1||
ಕುಲ ವಿಹೀನಳಾದ ಓರ್ವ ಲಲನೆಗೊಲಿದು ತನಗುದಿಸಿದ |
ಚಲುವ ಸುತೆಯ ರಮಿಸಿ ದುರಿತ ಬಳಗದಿ ಸುಕುಮಾರನಿವನು |
ವಿಲಿಸಿತ ಶಿವರಾತ್ರಿ ಕಾಲದಿ ಶಿವಲಿಂಗವನು ನಲಿದು ನೋಡ್ದ ಪುಣ್ಯದ |
ಬಲದಿ ಮಲಹರನವನಿಗೆ ಗಣಪದ ನಿಲದೆ ಕೊಟ್ಟ ಕರುಣದಿ ||2||
ದುರುಳ ಪಾಪಿ ವ್ಯಾಧನೊರ್ವ ಮರಣ ಪೊಂದಿ ಬಿದ್ದಿರಲ್ಕೆ |
ಧರೆಯೊಳೊಂದು ಶುನಕ ಮಸಣದಿರುವ ಬೂದಿಯನ್ನು ತುಳಿದ |
ಚರಣವ ವನಫಾಲ ಭಾಗದಿ ಇಟ್ಟೈದಲಾಗ ಗುರುವರ ಶಂಕರನು ಪ್ರೇಮದಿ |
ದುರಿತ ಕೋಟಿಗಳನು ಪರಿದು ಪೊರೆದನವನುದಾರದಿ | |3||
ನಿರ್ಮಲ ಶಿವಭಕ್ತಿ ಪೇರ್ಮೆಯಿಂದಿರೆ
ನಿರ್ಮಲ ಶಿವಭಕ್ತಿ ಪೇರ್ಮೆಯಿಂದಿರೆ ಕಾಲ |
ಕರ್ಮ ಮಾಯಗಳ ಜೈಸಲಿಬಹುದು ||ಪಲ್ಲ||
ಧರೆಯೊಳು ಪದಿನಾರು ವರುಷದಾಯುಷ್ಯದ |
ಪರಿಮಿತಿ ತೀರಿದ ಸಂಗತಿಯರಿದು ಮಾರ್ಕಂಡೇಯ |
ಕಳವಳವೆರಸಿ ಪರಮೇಶ್ವರನ ಪೂಜಿಸಿ |
ಧುರದೊಳೆ ಮನನು ಮುರಿದು ಜೈಸಿತ |
ಪರಮ ನಿತ್ಯತೆ ಪಡದನಾಗಿ ||1||
ನರಧರ್ಮದೊಳು ಮಾಡದಿರದ |
ಕೃತ್ಯಗಳನ್ನು ವಿರಚಿಸಿ ಪಾಪಿಯಾಗಿಹ ವಿದಳ |
ಮರಣ ಸಮಯದೊಳಿರದ ಹಾರಮೆನುತ್ತ ತನಗಹ |
ನರಕ ದುಃಖದ ಪರಿಭವಣೆಯನು
ವರಿಸದ ಭವನ ವೆರಸಿ ಮುಕ್ತಿಯ ಪಡದನಾಗಿ ||2||
ಪುಶಿಯಾದ ಮಾಯೆ ವಂದಿಸಲಾರೆ ನಿನಗೆಂದು |
ಉಸುರಿದ ನುಡಿಗೇಳಿ ಗಿರಿಜಾತೆಯು
ಅಸವಸೆಯೊಳೆನ್ನಂಶ ತಾರೆನೆ ಮಿಸುಕದಾಗಳೆ |
ಬಿಸುಟೆ ಭೃಂಗಿಯು ಅಸಮ ಶಂಕರನಿಂದೆ ಮೂರನೆ |
ಪೊಸ ಚರಣವನು ಪಡದನಾಗಿ ||3||
ಹರನ ಸದ್ಭಕ್ತಿಯೊಂದಿರಲವರಿಗೆ
ಹರನ ಸದ್ಭಕ್ತಿಯೊಂದಿರಲವರಿಗೆ ಮಹಾ |
ದುರಿತ ಕಾರ್ಯಗಳೊಳ್ಳೆವಾಗಿ ತೋರುವವು || ಪಲ್ಲ||
ದ್ಯೂತದಿನಳಮಾಂಧಾತ ಧರ್ಮಜರೆಲ್ಲ |
ಸೋತು ರಾಜ್ಯವನು ದುಃಖದಿ ಕೂಡ್ದರಾ
ದ್ಯೂತನಾಡುತ ಮೂರ್ಖನಾ |
ನಾಥನು ಕೈಲಾಸ ಕಾತುರದಿಂ ಪೋದ |ಭೂತಲವರಿವಂತೆ ||1||
ಮೃಗ ಬೇಂಟೆಯನ್ನಾಡಿ ಜಗದೊಳು ಶ್ರೀರಾಮ |
ನಗಣಿತ ಕಷ್ಟಕ್ಕೆ ಗುರಿಯಾದಾನಾ |
ಮೃಗ ಬೇಂಟೆಯಿಂ ಕಣ್ಣಯ್ಯಗೆ ಶಂಕರನು ಮೆಚ್ಚಿ
ಮಿಗೆ ಹರುಷದಿ ಮುಕ್ತಿ ಕೊಡಲಿಲ್ಲವೇನು ||2||
ಹೊನ್ನು ಹೆಣ್ಣಿಗೆ ಭ್ರಾಂತಿಯನ್ನು ಗೈದಖಿಳ |
ಭೂಮಾನ್ಯ ರಾಜರು ದುಃಖಕೊಳಗಾದರಾ
ಹೊನ್ನು ಹೆಣ್ಣಿಗೆ ಮನವನ್ನಿತ್ತ ಶಿವನಂಬಿ
ಉನ್ನತ ಮುಕ್ತಿ ಪಡೆದ ಶರಭೇಶನಿಂ ||3||
ಶಂಭುವಿನೊಳುರೆ
ಶಂಭುವಿನೊಳುರೆ
ನಂಬಿಗಿರೆ ಸಾಕೈ ಪಿರಿದಂಬಲಮೇಕೈ |ಪಲ್ಲ||
ಮಾನವರಿಗೆ ಶಿವ ಧ್ಯಾನಮೆಂಬ ಮಡಿ
ತಾನಿರಲು ಜಲಧಿ ಸ್ನಾನಮದೇಕೈ ||1||
ಹರಸಖ್ಯಮೆನಿಪ ಸುರಧೇನಿರೆ ಗೋ
ಕರ್ಣಕೆ ನೀ ಸಂಚರಿಸುವದೇಕೈ ||2||
ಗುರು ಶರಭನ ಪದ ಸ್ಮರಣಮೆಂಬ ಧನ
ಮಿರೆ ಕಾಸಿಗೆ ನೀ ತೆರಳಿವದೇಕೈ ||3||
ನಂಬಿಭಜಿಸೋ ಮನುಜ ಶಂಕರನನು
ನಂಬಿ ಭಜಿಸೋ ಮನುಜ ಶಂಕರನನು |
ನಂಬಿ ಭಜಿಸೋ ಮನುಜಾ |
ನಂಬಿ ಭಜಿಸಲಾ ಸಾಂಬಸದಾ ನಿ |
ನಗಿಂಬಾಗಿರುವನು ||ಪಲ್ಲ||
ಸಾರವೇ ಸಂಸಾರವಿದು ನಿಸ್ಸಾರವೆನಲವನಿಗೆ ಸುಖಾಸ್ಪದಪು
ಅನುದಿನ ಸಾಧನದೊಳ್ಕೂಡ್ಡನುಪಮ |
ದೇವನವಿದ್ಘನತರ ನಾಮಗಳನು ನೆನಿಯುವ |
ಭಾವನಮೊಂದಿರುತಿರೆ ಖಳಗಾಳೆನಿಪನು ||1||
ಗುರು ಪಾದಕ್ಕೆರಗಿ ಕರುಣವನು ಪಡೆದು |
ಹರನ ಪ್ರತಿರೂಪನೆಂದಿಳೆಯೊಳರಿದು |
ನರಾಧಮರಾರವರಾಶ್ರಯನಳಿದು |
ಸ್ಮರಿಸಲು ಸಂಪದದಿ2ರಿಸುವ ನಿರುತದಿ ||2||
ಯತಿ ತತಿಗಳ ಕೂಡಿ ಅತಿ ಹಿತದಿಂದೊಡನಾಡಿ |
ನುತಿಗೊಮ್ಮೆನ ಮಾಡಿ ನೋಡಿ ವೆಥಿಸುತ|
ನುತಿಸುತ ಶಾಸ್ತ್ರ ಸಮ್ಮತಿ ಸುತ ಕ್ಷಿತಿಯೊಳಗಿರಲಾ |
ಪಥ ನಾಮಕ ಪುರಿಪತಿ ಶರಭಮಾರ ಹಿತನನೆಗಳ್ವನೆ ||3||
ಪಾಳಿಸು ಶಿವ ಶಂಭೋಯನ್ನ ನೀಂ
ಪಾಳಿಸು ಶಿವ ಶಂಭೋಯನ್ನ ನೀಂ |
ಪಾಲಿಸು ಶಿವಶಂಭೋ ಪಾಲಿಸುನುತಿಯನು |
ಲಾಲಿಸು ಸುಖಕನು ಕೂಲಿಸು ಬೇಗನೆ |
ಶೂಲಿ ಸುಖಾಬ್ದಿಯೆ ||ಪಲ್ಲ||
ಪುರ ಪರಿಪಾಲಿಸುಪ ರಾಜನನು |
ಸ್ಮರಿಸಲ್ಕೆಲ ಹಣವ ಸರಸದಿಂದೆ ಕೊಡುವ |
ನಂಬಿಕೊಂಡಿರುವರನ್ನು ಪೊರೆವ
ಹರನೆ ನೀಂ ತ್ರಿಜಗಕರಸನಾಗಿ ಸಲೆ
ಸ್ಮರಿಸುವ ಬಾಲನ ಮರಿವದು ನ್ಯಾಯವೆ ||1||
ಕನಸಿನೊಳಗೆ ಬಂದು ಸುತನೆ ಈಯನುವನು ಮಾಡೆಂದು
ಘನ ಪದವಹುದೆಂದು ಪೇಳು ಪೇ
ಳೆನಗಭಯವನೊಂದು |
ಮುನಿನುತ ನಿನ್ನಯ ತನಯನನೀ ಪರಿ |
ಅನುಮನಗೊಳಿಪುದು ನಿನಗಿದು ಶ್ರೇಯವೆ ||2||
ಪೊರೆಯುವನೆಂದರೆದರಿದು ನಿರುತನಾ |
ಸ್ಮರಿಸುವೆನೈಪಿರಿದು ತರುಳನನ್ನು ಜರಿದು |
ಬರಿದೆನೀ ಮರುಗಿಸುವರೆ ಮರೆದು |
ಧರೆಯೊಳೆನ್ನನನ್ಯರ ಬಳಿಗೈಸಲು |
ವರಬುಧರಿದಕೊಪ್ಪರು ಶರಭೇಶನೆ |3||
ಮುಕ್ತಿ ದೊರೆಯದಣ್ಣ ಸುಮ್ಮನೆ
ಮುಕ್ತಿ ದೊರೆಯದಣ್ಣ ಸುಮ್ಮನೆ |
ಮುಕ್ತಿ ದೊರೆಯದಣ್ಣ |
ಮುಕ್ತಿ ದೊರೆಯದು ವಿರಕ್ತಯಿಂದೆ ಸಲೆ |
ಸತ್ಯ ತಿಳಿದು ಗುರು ಭಕ್ತಿಯಿಲ್ಲದಿರೆ ||ಪಲ್ಲ||
ತನುಮನು ದಂಡಿಸಲಿ ಚರಿಸುವ |
ಮನವನು ನಿಲ್ಲಿಸಲಿ ಮನೆಯನುಳಿದು ಗಿರಿ |
ಕೊನೆಯೊಳೆ ತಪಿಸಲಿ ದಿನದೊಳೊಮ್ಮೆ ಗುರು |
ವಿನ ನೆನೆಯದವಗೆ ||1||
ಶೃತಿ ಶಾಸ್ತ್ರವ ಪಠಿಸಿಯರ್ಥವ |
ಹಿತಜನರಿಗೆ ತಿಳಿಸಿ ಯತಿಯನಿಸಲಿ ಬಹು |
ಚತುರನೆನಿಸಲಿ ಕ್ಷಿತಿಯೊಳು ಗುರು |
ಸನ್ನುತಿ ವಿರಹಿತನಿಗೆ ||2||
ಹರಿವ ವಾಯು ನಿಲಿಸಿ ಲಕ್ಷವ |
ಸರಸದಿಂದೆ ಬಲಿಸಿ ನೆರೆ ಸುಖಿಸಲಿ |
ಶ್ರೀಗುರು ಶಂಕರನೊಳು ಸ್ಥಿರ ಮನವಿಲ್ಲದ |
ಮರುಳ ಮತಿಗಳಿಗೆ ||3||
ಬಂದನು ಗುರು ಮನಿಗೆ ಸಂತೋಷದಿ
ಬಂದನು ಗುರು ಮನಿಗೆ ಸಂತೋಷದಿ |
ಬಂದನು ಗುರು ಮನಿಗೆ |
ಬಂದನು ಗುರು ಮನಿಗಿಂದುಯೆನ್ನಯ ಭವ
ಬಂಧವ ತರಿಯಬೇಕೆಂದತ್ಯಾತುರಿಂದೆ ||ಪಲ್ಲ||
ನಗುರೋರಧಿಕನೀತನು |
ತತ್ವಾರ್ಥದೊಳಗಣಿತ ಪ್ರಖ್ಯಾತನು
ಜಗದೊಳೆನ್ನಗೆ ಬಂದು ತಗಲುವ ದುರ್ವಿಷಯಗಳ
ಬೇರನು ಕೀಳ್ವ ಬಗೆಗಾಗಿ ಬಹು ಬೇಗ ||1||
ಭವರೋಗ ವೈದ್ಯಾನೀತ ಶೋಭಿಪ ವರ |
ಶಿವಯೋಗಿ ಸಚ್ಚರಿತ ಅವನಿಯೊಳೆನ್ನನು |
ಅವತುಕೊಂಡಿಹ ದುಷ್ಕರ್ಮವನು ಕಡೆದು |
ಶಾಸ್ತ್ರ ಶ್ರವಣಗೊಳಿಸಲಿಕ್ಕೆ ||2||
ಉಪಮಾನ ವರ್ಜಿತನು ಶಂಕರ ಗುರು
ತಪಸಿಯೆಂಬುವನೀತನು
ಕುಪಿತನಾದೆನ್ನಗೆ ಕೈಪೆಯಿಂದ ಕೈ ಪಿಡಿ
ದುಪದೇಶವಿತ್ತು ಪಾಲಿವುದಕ್ಕೆ ಪದುಳದಿ ||3||
ಸಂತೋಷವಾಯಿತು ಮನ
ಸಂತೋಷವಾಯಿತು ಮನ ಸಂತೋಷವಾಯಿತು
ನಿರ್ದೋಷ ಗುರುವಿನ ಸುಭಾಷೆಗೇಳಿ ||ಪಲ್ಲ||
ನಾನಾ ಕ್ಷುಲ್ಲಕ ಯೋನಿಯೊಳಗೆ |
ಜನಿಸೀ ನರಜನ್ಮಕೆ ಬಂದೆನು |
ಅಜ್ಞಾನದುರಿಗೆ ಬಲು ಬೆಂದೆನು |
ದುಮ್ಮಾನದೊಳಗೆ ನಾ ನೊಂದೆನು |
ಯೇನು ಮುಂದರಿಯದಾನಿರುತಿರೆ ಶಿವ |
ಮಾನವ ರೂಪದಿ ತಾನಿಳಿಯಲು ಸಂತೋಷ ||1||
ಹೇಯವಾದ ಯೀ ಕಾಯವ ತಾಳುತ |
ಮಾಯದ ಸಂಸೃತಿ ನೋಡಿದೆ |
ಅನ್ಯಾಯ ಮಾರ್ಗದೊಳು ಕೂಡಿದೆ |
ಆಮ್ನಾಯಗಳನು ಪುಶಿ ಮಾಡಿದೆ |
ಸಾಯುವ ಪುಟ್ಟುವ ಪಾಯಗಳೆಂಬುವ |
ಆಯಸ ಕಳೆವವುಪಾಯ ಕಂಡು | |2||
ಮಾರನು ತನ್ನಯ ಕ್ರೂರ ಕಣೆಗಳ |
ನ್ನೂರಲ್ಕೆದೆಯೊಳು ಭರದಿ | ಮನ |
ಸೂರೆಗೊಂಡನಾ ಕ್ಷಣದಿ | ಸುವಿ |
ಚಾರ ಹಿಂಗಿತಂತರದಿ ನಾರಿಯಿಂ | ಪಡೆದ |
ಭೂರಿಪಾಪ ಸಂಹಾರ ಗುರು | ಶಂ
ಕರಾರ್ಯನೆಂದು ಸಂತೋಷವಾಯಿತು | ||3||
ಗುರು ದೇವಾ ನಾ ತಾಳಲೆಂತು
ಗುರು ದೇವಾ ನಾ ತಾಳಲೆಂತು |
ಗುರು ದೇವಾ ನಾ ತಾಳಲೆಂತು |
ಧರೆಯೊಳು ಭವ ಬಾಧೆ |
ಪಿರಿದೆನ್ನ ಬಳಲಿಸುವದೀಗ |ಪಲ್ಲ||
ಎಡರು ಬಂದೆನ್ನನು |
ಕಡೆಹಿ ದುಃಖಿಸುವದು |
ಮಡದಿ ಪೊಡವಿ ಮೋಹ |
ತೊಡೆರ್ದು ತೊಳಲಿಸುವದೀಗ ||1||
ಕರಣೇಂದ್ರಿಯಗಳೆನ್ನ |
ಶರೆಯೊಳಿಟ್ಟನುದಿನ |
ದುರಿತ ದುರಿಗೆನೂಕಿ |
ಪರಿತಾಪ ತೋರುತಿಹವು ||2||
ಮನವೆಂಬ ಕೋತಿಯು |
ದಿನಕ್ಕೊಂದು ಯೋಚಿಸಿ |
ಜನರಲಿ ಕುಣಿಸುತ |
ಘನ ಹಾಸ್ಯ ಮಾಳ್ಪುದೀಗ ||3||
ಆರು ವೈರಿಗಳೆನ್ನ |
ದಾರಿ ಬಂಧಿಸಿ ಮಕ್ಕ |
ಮಾರಿಗಳಂತೆವಳ |
ಸೇರಿ ವೇಧಿಸುವವಕಟ ||4||
ಮರಹೆಂಬುದು ಜ್ಞಾನ |
ದಿರವನು ಕೆಡಿಪುದು |
ಗುರು ಶಂಕರೇಂದ್ರ |
ದಯದಿಂದೇ ನೀ ಪಾಲಿಸೆನ್ನ ||5||
ಬೋಧಿಸೋ ಸಲೆ ಬೋಧಿಸೋ
ಬೋಧಿಸೋ ಸಲೆ ಬೋಧಿಸೋ |
ವೇದಕ್ಕೆನಿಲ್ಕನಾದಿ ಶ್ರೀಗುರುವೆ ಸ |
ಮ್ಮೋದದಿಂ ಶಿವ ಜೀವ ಭೇದವ ಬಿಡಿಸಿ ನೀ ||ಪಲ್ಲ||
ಪುಟ್ಟುವದೀ ಕಾಯಮಿಹದಿ ವೇಷ |
ತೊಟ್ಟು ಸಂಚರಿಪುದು ಭರದಿ ತಾನೆ |
ಕೆಟ್ಟು ಪೋಪುದು ಕೆಲ ದಿನದಿ |
ಇಷ್ಟದಿಂದಲಿ ಲಾಲಿಸಿಷ್ಟೇತರಿಂದಾದು |
ದಷ್ಟೆನ್ನಗೀಗ ಸಂತುಷ್ಟದಿ ತಿಳಿಸಿ ನೀ ಬೋಧಿಸೋ ||1||
ಕರ ಕಾಲು ಕಟಿ ಗುಂಹ್ಯ ಗುದವು ಮೇಲೆ |
ಶಿರ ಕರ್ಣ ನೇತ್ರ ನಾಸಿಕವು ಮತ್ತ |
ಮುರ ಸ್ತನವಂಗುಲ ನಖವು |
ನರ ಕೇಶಗಳು ಕೂಡಿ ಶರೀರವಾಯ್ತೇತಕ್ಕೆ |
ಮರುಗುವೆನರಿಯದೆ ಸರಸದಿ |
ತಿಳಿಸಿ ನೀ ಬೋಧಿಸೋ ||2||
ಆರು ಚಕ್ರಗಳಿಹ ನೆಲೆಯ ಮಿತಿ |
ಮೀರಿದುನ್ಮನೆಯ ಸುನಿಳಯ ಸುಖ |
ಸಾರ ಬ್ರಹ್ಮನ ನಿಜ ಕಳೆಯ |
ಭೇರಿಮ್ಮದಂಗಾದಿ ಭೂರಿನಾದಗಳೆಲ್ಲಿ |
ದೀರ ಶ್ರೀಗುರು ಶಂಕರಾರ್ಯನೆ ತಿಳಿಸಿ ನೀ |
ಬೋಧಿಸೊ ಸಲೆ ಬೋಧಿಸೋ ||3||
ಹೊಕ್ಕೆನು ಮರೆ ಹೊಕ್ಕೆನು
ಹೊಕ್ಕೆನು ಮರೆ ಹೊಕ್ಕೆನು |
ಸಿಕ್ಕು ಸಂಸಾರದಿ ಬಿಕ್ಕಿ ಬಾಯ್ಬಿಟ್ಟು |
ನಾ ಚಕ್ಕನೆ ಗುರುವೆ ಪದಕ್ಕೆ |
ಬೀಳುತ ಮರೆ ಹೊಕ್ಕೆನು ||ಪಲ್ಲ||
ಖಗ ಮೃಗ ಪಶು ರೂಪ ತಾಳಿದೆ ಅಲ್ಲಿ |
ಅಗಣಿತ ಕಷ್ಟದೊಳ್ಕೂಡಿದೆ ಕಲಿ |
ಯುಗದಲ್ಲಿ ನರನಾಗಿ ಪುಟ್ಟದೆ |
ಬಗೆ ಬಗೆವದಗುವ ಮಿಗೆ ದುಃಖ ತಾಳದೆ |
ನಗುರೋರಧಿಕನೆಂದು |
ಜಗದೊಳರಿದು ಮರೆ ಹೊಕ್ಕನು ||1||
ನವ ಯವ್ವನದಿ ನೀತಿಗೆಟ್ಟೆನು ರೂಪ |
ಯುವತಿಯರಿಗೆ ಚಿತ್ತವಿಟ್ಟೆನು ಶೃತಿ |
ನಿವಹ ನುಡಿಯ ಮರೆದಿಟ್ಟೆನು ಭವ |
ಭವ ತಿರಗುವ ಭವಣೆಗೆ ಬೆದರುತ |
ಭವ ರೋಗ ವೈದ್ಯನೆಂಬುವದನರಿದು ||2||
ಮರೆ ಮೋಸದುರಿಯೊಳು ಸುಟ್ಟೆನು ಯತಿ |
ವರರ ದೂಷಿಸಿ ಮತಿಗೆಟ್ಟೆನು ಕೆಟ್ಟ |
ದುರಿತ ಕಾರ್ಯಕೆ ಮನಗೊಟ್ಟೆನು |
ಹರ ಮುನಿದರೆ ತಾನೆ ಗುರು ಕಾಯ್ವನೆಂಬ |
ಬಂಧುರ ನುಡಿ ಶಾಸ್ತ್ರದಿಂದರಿದು ಶಂಕರ ||3||
ಎಂತು ದೊರಕುವದೊ ನರರಿಗೆ
ಎಂತು ದೊರಕುವದೊ ನರರಿಗೆ |
ಯಂತು ದೊರಕುವದೋ ಇಂತು
ಲಿಂಗ ಪೂಜೆಯನೆಸಗುವದಿದ
ನಂತ ಜನ್ಮದ ಸುಪುಣ್ಯಮಿರದೆ ತಾನೆಂತು ||ಪಲ್ಲ||
ಘನ ಲಿಂಗದ ಕಳೆಯನು ಭಾವಿಸುವನು |
ದಿನದೊಳು ಹೃದ್ವನಜದಿ ನೆನೆವ
ಮಿನಗುವ ದ್ವಯಲೋಚನದಿಂದ ನೋಡುವ
ತನುವ ಚೋಮನಸಿಗಿಂ ಬಿಡುತಿಹ ಸುಖ ||1||
ಸರಸದಿ ಮಜ್ಜನವೆರವ ವಸನವನು |
ಧರಿಸುವ ಗಂಧಾಕ್ಷತೆಯಿಡುವ |
ಪರಿಪರಿಯಿಂ ಸಿಂಗರಿಸಿ ಧೂಪ |
ವಿತ್ತುರಿವ ಜೋತಿಯಾರತಿ ಬೆಳಗುವ ಸುಖ ||2||
ಸವಿ ರಸಗಳನೂಡುವವರ ತಾಂಬೂ |
ಲವ ನೀಡುವ ಛತ್ರವನಿಡಿವ ನವಚಾಮರ ವೆ |
ತ್ತುವ ಮುಕುರವ ಪಿಡಿಯುವ |
ಬೀಸಣಿಗೆಯ ಬೀಸುವ ಘನಸುಖ ||3||
ಕರಣ ಶುದ್ಧಿಯಿಂದಿರದೆ ಭಕ್ತಿ |
ಯಾಂತೆರಗುವ ತನುಪುಳಕವನಿಡಿದು |
ನೆರೆ ಪಾಡುವ ಮುಂಬರಿದು ನೇತ್ರದೊಳು |
ಪರಮಾನಂದಾಶೃಗಳು ಸುರಿವ ಸುಖ ||4||
ವಿಲಸಿತ ಪುಷ್ಪಾಂಜಲಿ ಗೆಯ್ಯುವ |
ನಿಚ್ಚಳದಿಂ ಬಗೆಬಗೆ ಬಣ್ಣಿಸುವ |
ಮಲಹರ ಶಂಕರ ಸಲೆ ಗುರುವೆನಿಸುವ |
ಇಳೆಯೊಳಿನಿತು ಲಿಂಗದ ಸಂಭ್ರಮ ಸುಖ ||5||
ಯಾತರ ಭಯ ಎನಗೆ
ಯಾತರ ಭಯ ಎನಗೆ ಇಳೆಯೊಳಿ |
ನೇತರ ಭಯವೆನಗೆ ಯಾತರ ಭಯ ಗುರು |
ನಾಥನಡಿವಿಡಿಯಲಾತನು ಮುಂದಿನ |
ಭೀತಿ ಕಳೆದನಿನ್ನೇತರ ||ಪಲ್ಲ||
ಮರಹೆಂಬುವ ತಮವು ಯನ್ನಾ |
ವರಿಸಿತ್ತನುದಿನವು ಗುರುವೆಂಬ ದಿವಾ |
ಕರನುದಯಿಸಲದು ಪರಿದು |
ತೋರದಂತಿರದೋಡಿತು ಇನ್ನೇತರ ||1||
ಪರಿಪರಿ ದುರ್ಗುಣದಿ ಕಾಯವು |
ಕರಿಗೊಂಡಿತ್ತಿಹದಿ ಗುರು ಕರ ಪರುಷವು
ಶಿರವನು ಸೋಂಕಲು ಪರಿಶುದ್ಧ |
ವದಾಯ್ತರ ನಿಮಿಷದಿಯಿನ್ನೇತರ ||2||
ಭೂತಲದೊಳು ಮುನ್ನ ಮಾಯಾ |
ಭೂತವು ಬಂದೆನ್ನನಾತುಕೊಂಡು ಬಹು
ಘಾತಿಸುತಿರೆ ಗುರುನಾಥನ ಮಂತ್ರಕೆ
ತಾ ತೊಲಗಿತುಯಿನ್ನೇತರ ||3||
ಗುರು ಶಂಕರ ಬೋಧಯಂಬುವ |
ಪರಮಾಮೃತ ಸ್ವಾದ ಧರಿಸಲು ಧರೆಯೊಳು
ಶರೀರಾದಿ ತ್ರಯ ದುರತವಡಗಿ ಸುಖ
ಪರನಾದೆನುಯಿನ್ನೇತರ ಭಯವೆನಗೆ ||4||
ಯೋಗಿಯ ಸಂಸಾರ ನೋಡಮ್ಮ
ಯೋಗಿಯ ಸಂಸಾರ ನೋಡಮ್ಮ |
ನಿನಗಾಗಿ ನಾ ಪೇಳುವೆ ಕೇಳಮ್ಮ ||ಪಲ್ಲ||
ಪರ ವಿದ್ಯೆಯಂಬ ಪ್ರಮದೆಯುಂಟು ಮತ್ತ |
ಪರಿತೋಷಮೆಂಬ ತನುಜನುಂಟು |
ವಿರತಿಯೆಂಬನುಕೂಲ ಚರನುಂಟು |
ಧರ್ಮಕರುಣಿಯೆಂಬಾ ಶ್ರೀತಜನರುಂಟು ||1||
ವಿಮಲ ಮಾನಸಮೆಂಬ ಮನೆಯುಂಟು ಒಳ್ಳೆ |
ಶಮೆ ಶಾಂತಿಯಂಬ ಸ್ನೇಹಿತರುಂಟು |
ದಮೆ ಧೃತಿಯೆಂಬ ಚಾಕರುಂಟು ಸತ್ಯ |
ಕ್ಷಮೆಯೆಂಬ ಪ್ರೋತ್ಸಾಹಿಸುವರುಂಟು ||2||
ಸುವಿವೇಕಮೆಂಬ ಜನಕನುಂಟು ರಾಜಿ |
ಸುವ ಶ್ರದ್ಧೆಯೆಂಬ ಜನನಿಯುಂಟು |
ತವೆ ಶಾಂತಿಯೆಂಬ ವಾಹನಮುಂಟು ಮಹಾ |
ಶಿವನೆಂಬ ಮನೆಯ ದೈವತಮುಂಟು ||3||
ಶ್ರುತಿಯಾಗಮಗಳೆಂಬ ಸಿರಿಯುಂಟು |
ವಿಲಸಿತ ಯೋಗಮೆಂಬ ಕ್ಷೇತ್ರಮದುಂಟು |
ನುತ ವಿಶ್ವಾಸೆಂಬುವಗ್ರಜನುಂಟು ಜಯ |
ಯುತ ಸುವಿಚಾರೆಂಬನುಜನುಂಟು ||4||
ಲಕ್ಷವೆಂದೆಂಬುವ ಹೊಲನುಂಟು |
ನಿಷ್ಟಕ್ಷಪಾತೆಂಬ ಕೃಷಿಕನುಂಟು |
ಅಕ್ಷಯ ಸುಖಮೆಂಬ ಬೆಳಸುಂಟು |
ವರ ಮೋಕ್ಷೈಕ ಶಂಕರ ಗುರುವುಂಟು ||5||
ಅನುದಿನ ಯೋಗ ಸಾಧನದೊಳಿರು
ಅನುದಿನ ಯೋಗ ಸಾಧನದೊಳಿರು ನಾಲ್ಕು |
ಜನರನು ತಿಳಿಸುವೆನಿದರಲ್ಲಿ ||ಪಲ್ಲ||
ಬಲಶೂನ್ಯನನುರಾಗಿಯಲಸು ಕಪಟಿ ಒಳ್ಳೆ
ಗೆಲಸ ವಿಹೀನನ್ಯವಶವರ್ತಿಯು |
ಸಲೆ ರೋಗಿ ಗೃಹ ಕೃತ್ಯ ನೆಲೆಯೋಳ್ರತನು ಇವ |
ನಿಳೆಯೊಳು ಮೃದುಯೋಗಿಯೆಂದೆನಿಸುವನು ||1||
ಸಮ ಭಾವಿ ಸುಖಿಕಾರ್ಯ ಸಮುದಾಯದೊಳು ಸಾಕ್ಷಿ |
ವಿಮಲಮತಿಯು ದೃಢತರ ದೇಹಿಯು |
ಸಮುದಿತ ಸುವಿವೇಕಿಯು ಮಿತಶಾಂತನು ಶಮೆ |
ದಮೆ ಭರಿತನುಯಿವ ಮಧ್ಯನೆನಿಪನು ||2||
ತವೆ ನೀತಿ ಧೈರ್ಯ ಸತ್ಯವಚನ ಶೌರ್ಯ ಗೌ |
ರವ ಸ್ಥಿರಚಿತ್ತ ಸುಧರ್ಮ ವಿವೇಕ |
ನವಯುಕ್ತಿ ವಿದ್ಯೆಯುತ್ಸವ ನಿರ್ಧಾರಣ ಗುಣ |
ನಿವಹಮಿರಲ್ಕಿವನತಿ ಮಾತ್ರನೆನಿಪ ||3||
ಇಹ ಪರಭೋಗವಿರಹಿತನು ಕರ್ಮನಿ |
ವಹ ದೂರನ ವಿಕಾರಿ ನಿರ್ಮಳನು |
ಬಹು ಶಾಸ್ತ್ರವಿದನುರುಸಹಸಿಯು ತತ್ವ |
ಸನ್ನಿಹಿತನುಯಿವನೀಗಲತಿ ಮಾತ್ರತರನು ||4||
ಇನಿಬರೊಲಿದು ಮಂತ್ರಲಯ ಹಟರಾಜಮೆಂ |
ದೆನಿಸುವ ನಾಲ್ಕನುಕ್ರಮವಿಡಿದು |
ಮನಟ್ಟಿಗೈದು ಚಿದ್ಘನ ಗುರುಶಂಕರೇ |
ಶನ ದಯದಿಂ ನಿಜ ಸುಖ ಪಡೆಯುವರು ||5||
ಯೋಗವನು ಮಾಡೋ ಎಲೋ ನೀ
ಯೋಗವನು ಮಾಡೋ ಎಲೋ ನೀ |
ಯೋಗವನು ಮಾಡೋ |
ಶ್ರೀಗುರು ಮುಖದಿಂದೀಗರಿದು ಪಂಚ
ಯೋಗ ರಚಿಸೆ ನಿನಗಾಗುವದು ಮುಕುತಿ ||ಪಲ್ಲ||
ಮಿರಿದ ವಂದೆರಡಾರೆಂಟಕ್ಕರ |
ದಾರಾಜಿಸುತಿಹ ಮಂತ್ರಗಳ |
ಸಾರಛಂದಗಳ ನಾರೈದೆಳಿಸು |
ತ್ತೋರಂತೆ ಜಪಿಸೆ ಮಂತ್ರ ಯೋಗವಿದು 1||||
ವರನಾದದಿ ಮೇಣ್ ಮಿರುಗುವ ಬಿಂದುವಿ |
ನುರು ತೇಜದೊಳಾಗಲಿಯೆಸುವ |
ವೆರಸುತ ಭೇದದಿ ಪೊರಬ್ರಾಂತಿಯನಳಿ |
ದಿರುತಿರೆ ಮನವಿದು ಲಯ ಯೋಗೆನಿಪುದು ||2||
ನಿಲದೆ ಪೋರಗೊಳಗೆ ಚಲಸುವ ಪ್ರಾಣಾ |
ನಿಲನಘ್ರಾಣದೊಳು ಕುಂಭಕದಿಂ |
ನಿಲಿಸುತಾರನೆಯ ನೆಲೆಯೊಳೆಸವ ಪ್ರಭೆ |
ಯೊಲಿದು ನಿರೀಕ್ಷಿಸಲಿದೆ ಹಟಯೋಗವು ||3||
ಪೊರಗೊಳಗಣ ಮೂದೆರ ಲಕ್ಷಗಳಿಂ |
ದುರಿದು ತತ್ವಗಳ ನಿಕರವನು ಚರಿಸುವ ಮಾನಸ |
ಕರಿಗೊಳಿಸುತಲೆಚ್ಚರ ಮರದಿರುತಿರೆ |
ರಾಜಯೋಗವಿದು ||4||
ಪರತರ ಗುರು ಶಂಕರನರ್ಚನೆಯಾ |
ದ್ಯುರುತರಮಾದೈದಿವುಗಳನು |
ಧರಣಿಯೊಳನುದಿನ ಸ್ಥಿರಮಾನಸದಿಂ |
ನೆರೆ ಸಾಧಿಸುತಿರಲಿದೆ ಶಿವಯೋಗವು ||5||
ನಿನ್ನೊಳಿಹ ಮಂತ್ರ ಜಪಿಸು
ನಿನ್ನೊಳಿಹ ಮಂತ್ರ ಜಪಿಸು |
ಯೋಗಿ ನಿನಗಿನ್ನನ್ಯ ಮಂತ್ರವ್ಯಾಕೊ ಸಾಕು ||ಪಲ್ಲ||
ಇಂದು ರವಿಮಾರ್ಗದೊಳಗೆ |
ಸವಿಸರ್ಗ ಬಿಂದು ಶಿವಶಕ್ತಿ ವರ್ಣವೆರಡು |
ಪೊಂದಿ ಚಲಿಸುತ್ತೆಲ್ಲರೋಳ್ ಬಿನದಿಸುವ |
ಕುಂದದಾತ್ಮ ಪ್ರಸಾದವಹುದು ||1||
ಮೂರೇಳು ಸಾಹಸ್ರದ ಮೇಲಾರು |
ನೂರು ಜಪದಿಂದಹ ಫಲವಹುದು |
ಪೂರ ದಿನಮೊಂದೊಂದಕೆ ಉದಯದೊಳು |
ಮೀರದಾ ಮಂತ್ರ ಜಪಿಸುತಿಹುದು ||2||
ಎರಡಕ್ಷರದ ಮನುವಿದು ಆ ಯೆರಡು |
ಚಿರದ ಸಂಗಮ ಸ್ಥಲದೊಳು ನಾದ |
ಹೊರಡುವದು ವಿಧವಿಧದೊಳು ಅರಿಯಲಿದೆ |
ಪರಮ ಪ್ರಣವ ಮಂತ್ರಪು ನಿಜವು ||3||
ಆರಬ್ಜದೆಸಳೆನಿಸಿದ ಐವತ್ತು |
ಸಾರಮಾತೃಕೆಯ ಮಂತ್ರವಹುದು |
ಭೂರಿ ಕರ್ಣಿಕೆಗಳಾಗಿ |
ತೋರುವನಕಾರಾದಿಯಹ ಮಂತ್ರವೇ ಮೂಲ ||4||
ಇನಿತಮಲಮಂತ್ರ ನಿಚಯ ವಾಚಕವಿವನು |
ಬೆರದ ಗುರುಶಂಕರ ವಾಚ್ಯ |
ಮನಸಿನಿಂದಿವುಗಳರಿದು ಜಪಿಸೆ ಪರ |
ತರ ಮುಕ್ತಿ ಸಿದ್ಧಯಹುದು ಸತ್ಯ || 5||
ಅರನಿಮಿಷಾದರು ಹರ ನಿನ್ನ ನೆನಹು
ಅರನಿಮಿಷಾದರು ಹರ ನಿನ್ನ ನೆನಹು ನಿಂ |
ದಿರಲು ಸುಮೋಕ್ಷ ದೊರೆಯದಿಹುದೇ ||ಪಲ್ಲ||
ಗಂಗಾದಿ ಮೂನದಿ ಸಂಗಮದೊಳು ಮಿಂದು |
ಭಂಗಗೊಡುವ ಮೂಮಲದೊಳಿದು |
ಪಿಂಗಿ ಮೂಗುಣವನುತ್ತುಂಗ |
ಪ್ರಕಾಶದೊಳಂಗವಿಸುವ ಮನಸನಿಲಾಕ್ಷಿಗಳು ಕೂಡಿ ||1||
ಅನಿಲನ ಗಮನದೊಡನೆ ಚರಸುವಡ್ವದಂದ್ವ |
ಮಿನಗುವಕ್ಷರಗಳ ಪೆಸರಳಿದ |
ಘನತಾಣದೊಳುಯೇಕಮೆನಿಪಕ್ಷರಿಯನಾದವನು |
ಕೇಳ್ವ ಸುಖದೊಳನ್ಯವ ಮರೆದು ||2||
ಹಾದಿನಾಲ್ಕರ ನಡುವೇದಿಕೆಯೊಳಗುರಿ |
ವಾದೀವಿಗೆಯೆ ತಾನೆಯಾಗಿರುವ |
ವೇದಾಗಮಾತೀತ ದೇದೀಪ್ಯ ಚಿನ್ಮಯ |
ನಾದ ಶ್ರೀಗುರು ಶಂಕರನೊಳೊಂದೆ ಭಾವದಿಂ ||3||
ನಿನ್ನೊಳಿಹ ತೀರ್ಥಕ್ಷೇತ್ರಗಳನರಿಯದೆ
ನಿನ್ನೊಳಿಹ ತೀರ್ಥಕ್ಷೇತ್ರಗಳನರಿಯ |
ದಿನ್ನನ್ಯ ಬಯಪುದೇಕೊ ಮೂಢ ||ಪಲ್ಲ||
ಎಡದ ನಾಡಿಯೆ ಗಂಗೆಯು |
ಮೆರವ ಬಲಗಡೆಯ ನಾಡಿಯೆ ಯಮುನೆಯು |
ಮತ್ತಾ ನಡುನಾಡಿಯೆ ಸರಸ್ವತಿ ಇವು ಕೂಡಿ |
ದೆಡೆಯೇ ತ್ರಿಕೋಣ ನೋಡು ಮುದದಿ ||1||
ಶಿರಮೆಂಬುವದೆ ಶ್ರೀಗಿರಿ |
ಶ್ರೋತ್ರಂಗಳುರುತರದ ಗೋಕರ್ಣವು |
ಕುಚವೇ ಕುರುಕ್ಷೇತ್ರವುರಮೆವುಳುಮೆ |
ಕರಕಾಂಚಿ ವರ ಭೃಕುಟಿ ಮಧ್ಯಕಾಶಿ ಪುರವು || ||2||
ಒಳಗಿರ್ಪ ತೀರ್ಥಗಳಲಿ ಮಿಂದು ತ್ರೈ |
ಮಲದೊಳೆದು ಕ್ಷೇತ್ರಗಳನು ನೋಡಿ |
ನಿಲೆ ಶಂಕರೇಶನೆನಿಪ ಬಿಂದುತ್ರಯ |
ಸಲೆ ಲಿಂಗವೆಂದು ತಿಳಿದು ಭಜಿಸೋ || ||3||
ಎಂತು ಮುಕ್ತಿಯ ಪಡಕೊಳುವಿ ಮನವೆ
ಎಂತು ಮುಕ್ತಿಯ ಪಡಕೊಳುವಿ ಮನವೆ |
ನಿಜವಂ ತಿಳಿಯದಿನ್ನೆಂತು ||ಪಲ್ಲ||
ನಾಡಿ ಬಳಗದೊಳುಜ್ವಲಿಸುತಿರುವ ಸುಷುಮ್ನದಂತರ |
ಗೂಡನತಿ ಭೇದಿಸುತೆ ರಂಜಿಸುವ |
ನಾಡೆ ಶೃಂಗಾಟಕದ ಪೀಠವ |
ನೋಡಿಯಡರ್ದೀರೈದು ವಿಧದಿಂ |
ಕೂಡೆ ಘೋಷಿಪ ಪ್ರಣವಧ್ವನಿ ಹಿತ |
ಗೂಡಿ ಕಿವಿಯಿಂ ಕೇಳದೇ ನೀನೆಂತು ||1||
ಆಲಿಗಳ ಕಾಲಾಟವನು ನಿಲಿಸಿ ಸಂಚರಿಪ ಮನವನು |
ಕೂಲಿನಿಂ ಮರುತನೊಳು ಮೈಳೈಸಿ |
ಮೇಲೆ ಸವನಾಸಾಗ್ರ ಬಯಲೊಳು |
ಬಾಲರವಿ ವಿದೃಮ ಕನಕದಂ |
ತೋಲೈಸಿ ರಾಜಿಸುವ ಬಿಂದುವ |
ಲೀಲೆಯಿಂ ಕಣ್ಣಾರೆ ಕಾಣದೆ | ||2||
ಸ್ಫುರಿಪ ಕರಣೇಂದ್ರಿಯಗಳಾನನದಿ |
ಪೊರ ಸೂಸಿ ಲೋಕವ ಮೆರವ ಚಂದ್ರನ |
ಜೋನ್ನವಾತುರದಿ ಉರುತರದೊಳಾಚ್ಛಾದಿಸುತ
ಶಂಕರ ಗುರುವೆ ತಾನಾದ ಕಳೆಯನು |
ಪರಿಪರಿಯ ಕಲ್ಪನೆಗಳಿಳಿಯುತ ಸರಸ ಭಾವದಿ |
ಭಾವಿಸದೆ ನೀನೆಂತು ಮುಕ್ತಿಯ ಪಡಕೊಳುವಿ ||3||
ಬೋಧಿಸಿದನು ಎನಗೆ ಶ್ರೀ ಗುರುವರ
ಬೋಧಿಸಿದನು ಎನಗೆ ಶ್ರೀಗುರುವರ |
ಬೋಧಿಸಿದನು ಎನಗೆ ಬೋಧಿಸಿದನು |
ಯೋಗ ಸಾಧಿಸಿ ಶ್ವಾಸ ನಿರೋಧಿ ಬ್ರಹ್ಮವ |
ಶೋಧಿಸಿ ನೋಡೆಂದು ||ಪಲ್ಲ||
ಸಾರ ಕುಂಡಲಿಯಹಿಯ ಪೆಡೆಯನೆತ್ತಿ |
ಮೀರಿದೇಳನೆ ನೆಲೆಯ ಸೇರಿ ಮೆಲ್ಲನೆ ವಳ |
ತೂರಿ ಸ್ರವಿಸುತ ಭೂರಿಯಮೃತವನು |
ಪೀರಿ ನೀ ಸುಖಿಸೆಂದು ||1||
ಅಷ್ಟದಳದೊಳೆಸೆವ ಸರೋಜವ |
ಮೆಟ್ಟಿ ಚರಿಸುತಿರುವ ಶ್ರೇಷ್ಟ ಹಂಸನ |
ಸಂತುಷ್ಟದಿಂ ಜಾನಿಸಿ ನಿಷ್ಠಯಿಂ ಮನವನ |
ಲ್ಲಿಟ್ಟು ನೀ ನಲಿಯೆಂದು ||2||
ಚರಿಸುವ ರವಿ ಶಶಿಯ ನಡೆಗೆಡಿಸಿ |
ಮೆರವ ಸುಷುಮ್ನ ತುದಿಯ ಭರದೊಳಡರಿ ಭವ್ಯ |
ತರದ ಪಶ್ಚಿಮದಗ್ರ ಗಿರಿಯೊಳಿರುವ ಮುಕ್ತಿ |
ತರುಣಿಯನೊರಿಸೆಂದು ||3||
ವೇದದಂತ್ಯದ ಭಾಗದೊಳಗೆ ಗೌಪ್ಯ |
ಮಾದ ತತ್ವವನೀಗ ಮೋದದಿ ತಿಳಿದು ನೀ
ಹಾದಿ ನಾಲ್ಕರ ನಡುವೀದಿಯೊಳುಲಿವ
ಚಿನ್ನಾದವ ಕೇಳೆಂದು ||4||
ಸಲೆ ಗುರುಶಂಕರನು ಪೂರ್ಣಾನಂದ |
ಮಿಲಿತ ಸುಕವಿಕರನು ತಿಳಿದೆ ನಂಬಿರವದ
ನುಳಿದು ಯೆನ್ನೊಳು ನೀನು ಬಳಿಕೇನು ತೋರದೆ
ಮಿಳಿತೇಕವಾಗೆಂದು ||5||
ಧ್ಯಾನಿಸು ಯೋಗಿ ನೀ ಧ್ಯಾನ ಮುದ್ರೆಯನಾಂತು
ಧ್ಯಾನಿಸು ಯೋಗಿ ನೀ ಧ್ಯಾನ ಮುದ್ರೆಯನಾಂತು |
ನೂನಮಾಗಿಹ ನವಚಕ್ರಗಳ ||ಪಲ್ಲ||
ಮೂರು ಬಳಸಿನಿಂ ಭಕಾರದಿಂ |
ತ್ರೀಕೋಣಾಕಾರದ ಬ್ರಹ್ಮಚಕ್ರವದೆಂಬುದು |
ಸೇರಿರುವದು ಮೂಲಾಧಾರದೊಳಿಷ್ಟಾರ್ಥ |
ತೀರಿಸಿ ಪಾಲಿಪಾಧಾರ ಶಕ್ತಿಯನು || ||1||
ತವೆ ಸ್ವಾಧಿಷ್ಠಾನ ಸೌಜ್ಞವನಿಡಿದಿಹ |
ಕಮಲವು ತೋರ್ಪುದಲ್ಲಿ ಪ್ರಣವ ರೂಪದ |
ಶಿವನ ಉಡ್ಡ್ಯಾಣ ಪೀಠವದು ಮತ್ತಿದನುರೆ |
ಸವನಿಸಿ ಪಶ್ಚಿಮ ಮುಖನಾದ ಶಿವನನು ||2||
ಸಲೆ ನಾಭಿಯೆಡೆಯೊಳೈದೊಲಯದಿ ಮಿಂಚಿನು |
ಜ್ವಲದಿ ತೋರುವ ಮಣಿ ಪೂರಕದಿ |
ಇಳೆಯೊಳಿಚ್ಛಿತ ಸಿದ್ದಿಗಳನೊಲಿಸೀವ ನಿ
ರ್ಮಳವಾದ ಕುಂಡಲಿಯೆಂಬ ಶಕ್ತಿಯನು ||3||
ಹೃದಯ ಚಕ್ರವು ವರ ಕದಳಿಯ ಕುಸುಮದಂದದಿ |
ಕೆಳಮುಖವಾಗಿ ಬಿರಿದಿರುವ ಸದಲಮವಾದ ಬಾ |
ಹ್ಯದಯೆಂಟೆಸಳಿನ ಮಧ್ಯದ ನಾಲ್ಕುದಳದ |
ಜೋತಿರ್ಮಯ ಲಿಂಗವ ||4||
ವಿಮಲ ವಿಶುದ್ಧಿ ಚಕ್ರಮದೆಂಬ ಪೆಸರಿನ |
ಕಮಲದಿ ನಾಲ್ಕಂಗುಲದ ಮಿತಿಯ |
ಸಮನಿಸಿದಿಡೆ ಪಿಂಗಳೆಯ ಮಧ್ಯದಿಹ ನಿರು |
ಪಮ ಸುಖಿಯಾದ ಸುಷುಮ್ನೆ ಶಕ್ತಿಯನು | |5||
ರಸನೆಯ ಧೋದಂತ ವಿಸರದೂಧ್ರ್ವದಿ ಘಂಟಿ |
ಕಾಮೂಲ ರಾಜದಂತಕಗಳಿವು ವಸೆದೆರಡರ ಮಧ್ಯ |
ದೆಸವರಮನೆಚಕ್ರ ದಸಮಾಮೃತವನು ಸಂ |
ತಸದೀವ ಬಿಂದುವ ||6||
ಬಳಿಕ ಸುಷುಮ್ನೆಗೆ ನೆಲೆಯಾಗಿಮೆರದಿರ್ಪ |
ತೊಳಪೇಕನಾಳದ ಭೂಚಕ್ರವು ಇಳೆಯೊಳು |
ವಾಕ್ಸಿದ್ಧಿಗಳನೀವುದಾಗ ಮಂಜುಳ ಜ್ಞಾನ ನಯನ |
ಪ್ರಾಸಾದ ಜ್ಯೋತಿಯನು ||7||
ಪರಮ ಚಿದಾನಂದ ಪರಬ್ರಹ್ಮವೆನಿಪ ಭಾ |
ಸುರ ಬ್ರಹ್ಮ ರಂಧ್ರದ ತಾಣದೊಳು |
ಮೆರೆವ ನಿರ್ವಾಣಮೆಂಬುರುತರ ಪೆಸರಿನ |
ವರ ಮೋಕ್ಷವೀವ ಜಾಳಂಧರಪೀಠವ ||8||
ಕಳೆನಾದ ಬಿಂದು ಮಂಡಲ ತ್ರಯದಿಂದೊಡ |
ಮಿಳಿತ ಷೋಡಶ ಸ್ವರಾಕ್ಷರ ಚಕ್ರದಿ |
ಮಲಹರ ಶಂಕರನೈಕ್ಯವ ಮಾಳ್ಪ ನಿಶ್ಚಲ|
ಶೂನ್ಯರೂಪದೂಧ್ರ್ವಗೆಯ ಶಕ್ತಿಯನು ||9||
[/ದೇಶದೊಳ್ಮೇಲೆನಿಸಿ ತೋರ್ವ |
ಕಾಶೀಕ್ಷೇತ್ರಯೆನ್ನೊಳಿಹುದು |
ಕ್ಷೇಶ ಕಳೆದು ಯಾತ್ರಾ ಮಾಡಿದೆನು
ಅಹೋ ಶ್ರೀಶಂಕರೇಶ ನಾಶ ರಹಿತನಾಗಿನಿಂದೆನು |ಪಲ್ಲ||
ವಾರಣಸಿಯೆ ಮುಖ್ಯಮಾಗಿ |
ಮಿರಿದೆಂಟು ನಾಮವಿಡಿದು |
ತೋರುವ ಸುಸ್ಥಾನಗಳ ದಾಂಟಿ |
ಅಹೋ ಶ್ರೀ ಸಾರಿ ಪಂಚಕ್ರೋಶವ ಕಂಡೆನು ||1||
ಹರಿವ ಗಂಗೆಯ ಪಶ್ಚಿಮ ತಟದಿ |
ಹರುಷದಿಂದೆ ಮಿಂದು ನಾನು |
ಮಿರುಗುವನ್ನಪೂರ್ಣೆಯನು ನೋಡಿ | ಅಂ
ಮರಳಿ ಮಣೀಕರ್ಣಿಕೆಗೆ ಬಂದೆನು ||2||
ಕಾಲಭೈರವನಿಂದ ನಡೆವ |
ಲೀಲೆಗಳನು ಕಂಡು ಕಡೆಗೆ |
ಮೇಲು ಮಹಿಮದಖಿಳ ಲಿಂಗಗಳ | ಅಂ
ಸಾಲಿನೊಳ್ಸುಖಿಯಾಗಿ ಚರಿಸಿದೆನು ||3||
ತಾರಕೇಶ್ವರನೆಡೆಗೆ ಪೋಗಿ |
ಸಾರ ವಿಶ್ವೇಶ್ವರನ ಕಾಣಲ್ |
ತಾರಕ ಮಂತ್ರವದು ಸಿದ್ಧಿಸಿತು | ಅಂ
ತಾರಕಬ್ರಹ್ಮದೊಳು ಬೆರೆದನು | ||4||
ದೇಶದೊಳ್ಮೇಲೆನಿಸಿ ತೋರ್ವ
ದೇಶದೊಳ್ಮೇಲೆನಿಸಿ ತೋರ್ವ |
ಕಾಶೀಕ್ಷೇತ್ರಯೆನ್ನೊಳಿಹುದು |
ಕ್ಷೇಶ ಕಳೆದು ಯಾತ್ರಾ ಮಾಡಿದೆನು
ಅಹೋ ಶ್ರೀಶಂಕರೇಶ ನಾಶ ರಹಿತನಾಗಿನಿಂದೆನು |ಪಲ್ಲ||
ವಾರಣಸಿಯೆ ಮುಖ್ಯಮಾಗಿ |
ಮಿರಿದೆಂಟು ನಾಮವಿಡಿದು |
ತೋರುವ ಸುಸ್ಥಾನಗಳ ದಾಂಟಿ |
ಅಹೋ ಶ್ರೀ ಸಾರಿ ಪಂಚಕ್ರೋಶವ ಕಂಡೆನು ||1||
ಹರಿವ ಗಂಗೆಯ ಪಶ್ಚಿಮ ತಟದಿ |
ಹರುಷದಿಂದೆ ಮಿಂದು ನಾನು |
ಮಿರುಗುವನ್ನಪೂರ್ಣೆಯನು ನೋಡಿ | ಅಂ
ಮರಳಿ ಮಣೀಕರ್ಣಿಕೆಗೆ ಬಂದೆನು ||2||
ಕಾಲಭೈರವನಿಂದ ನಡೆವ |
ಲೀಲೆಗಳನು ಕಂಡು ಕಡೆಗೆ |
ಮೇಲು ಮಹಿಮದಖಿಳ ಲಿಂಗಗಳ | ಅಂ
ಸಾಲಿನೊಳ್ಸುಖಿಯಾಗಿ ಚರಿಸಿದೆನು ||3||
ತಾರಕೇಶ್ವರನೆಡೆಗೆ ಪೋಗಿ |
ಸಾರ ವಿಶ್ವೇಶ್ವರನ ಕಾಣಲ್ |
ತಾರಕ ಮಂತ್ರವದು ಸಿದ್ಧಿಸಿತು | ಅಂ
ತಾರಕಬ್ರಹ್ಮದೊಳು ಬೆರೆದನು | ||4||
ನಿನಗೆ ಸುಮೋಕ್ಷ ಗಮ್ಮನೆಯಾಗುವದು
ನಿನಗೆ ಸುಮೋಕ್ಷ ಗಮ್ಮನೆಯಾಗುವದು |
ನೀನನುದಿನದಿಂತು ಸಾಧನೆಗಳ ಕೃತಿಸೋ | |ಪಲ್ಲ||
ನಡು ನಾಡಿಯ ತುದಿಯಡರಿ ಚತುಃಪೀಠ |
ದೆಡೆಯೊಳು ನಿಂತು ಭೋರಿಡುವ ನಾದಗಳನು |
ತಡಿಯದೊಂದೊಂದೊಡವಿಡಿದು ನೀನಾಲಿಸು ||1||
ಆಲಿಮನ ಮರುತನೋಲೈಸುತ ಘ್ರಾಣ |
ದಾಲಸದಾಗಸದಾಲಯದೊಳು ಬಿಂದು |
ಜಾಲದುನ್ನತಿಯ ವಿಶಾಲದಿಂದೀಕ್ಷಿಸು ||2||
ಕರಣಂಗಳ ಬೆಳಗಿರದಿಂದ್ರಿಯಗಳೊ |
ಳ್ಪೊರ ಸೂಸುತ ಹಿಮಕರ ಜೊನ್ನದಿಶಂ |
ಕರಗುರುವಹ ಪರತರಕಳೆ ಭಾವಿಸು ||3||
ಕೋಳಿ ಕೂಗುವದು ಪ್ರಣವದ
ಕೋಳಿ ಕೂಗುವದು ಪ್ರಣವದ |
ಕೋಳಿ ಕೂಗುವದು |
ಮೇಲೆಸದಿಹ ಗಗನಾಲಯದೆಡೆಯೊಳು ||ಪಲ್ಲ||
ದಳ ನಾಲ್ಕಾದಿ ದ್ವಿದಳ ಕಡೆಯಾಗಿಹ |
ನಳಿನಗಳಾರರ ಸರಿಸದೊಳು |
ಸಲೆ ಪರಿಯುವ ನದಿಗಳ ಮೂರರೊಳು |
ಜ್ವಲಿಪ ಬಿಂದುವಿನ ಬಳಗದಿ ಬೆಳಗುತ ||1||
ಮರವೆಯೆಂಬ ತಮ ಮರುಗಿ ಸುರುಗಿ ತಾ |
ಕೊರಗಿ ಭರದೊಳೋಡುವದೀಗ
ಅರಿವೆಂಬುವ ಭಾಸ್ಕರನುದಯಿಸುವನು
ಮರಿಯದ ಭವನನು ಸ್ಮರಿಸಿರೆದ್ದೆನುತ ||2||
ಧ್ವನಿಗೇಳಿದ ಸಜ್ಜನರಿಗೆ ನಾನನು |
ದಿನ ಸಿದ್ಧಿಗಳೀವುತೆ ಮತ್ತಂ
ಮುನಿಗಳಿಗನುಪಮ ಘನ ಶಂಕರ ಗುರು
ವಿನ ತೋರಿಸಿ ಮುದವನುಗೊಳಿಪೆನೆನುತ ||3||
ಯೋಗಿ ಬಾರಿಸುವ ಹಾರ್ಮೋನಿಯ ನೋಡ್ಸಖಿ
ಯೋಗಿ ಬಾರಿಸುವ ಹಾರ್ಮೋನಿಯ ನೋಡ್ಸಖಿ |
ರಾಗ ರಸವು ಸೊಗಸಾಗಿ ಬೀರುವದು ||ಪಲ್ಲ||
ತನುವೆಂಬ ಪೇಟಿಗಾಧಾರ ಪೋಷಶವು ಮೇಣ್ |
ಮಿನಗುವಷ್ಟಾದಶ ಮರ್ಮಸ್ಥಾನಗಳೆಂದೆನಿಪ ಮೂವತ್ತು |
ನಾಲ್ಕೆನುವ ಪಿಲ್ಲಟಗಳ ಮನಸಾದಿ ಚತುಃಕರಣವೆಂಬ ಕೈಬೆರಳಿನಿಂ ||1||
ಪದುಮಾಸನಮೆಂಬ ಕುರ್ಚಿಯ ಮೇಲ್ಕೂತು |
ಸದಮಲರೇಚಕ ಪೂರಕಮೆಂಬ ದ್ವಿ
ಪದ ದಿನಶಶಿಯಂಬ ಮರ್ಮಸ್ಥಲಗಳನು
ಪದಪಿ ನಿಂತುಳಿದು ಮೌನದಿ ತನ್ನೊಳು ತಾ ||2||
ಪರೆಪಶ್ಯರಂತಿ ವೈಖರಿ ಮಧ್ಯಮೆಯೆಂಬ |
ಮಿರಗುವ ಶ್ರೀಶಂಕರ ಗುರುವಿನ ಸ್ತುತಿ
ಪರಗೀತಗಳನು ಪರಮ ಚಿನ್ನಾದದಿ
ಪರಿಪರಿ ಕಿವಿಗಿನಿದಾಗಿ ಕೇಳಿಸುವಂತೆ ||3||
ಆಸನವನು ಕಲಿಸೊ ಯೋಗಿಯೆ ನಿತ್ಯ
ಆಸನವನು ಕಲಿಸೊ ಯೋಗಿಯೆ ನಿತ್ಯ |
ಆಸನವನು ಕಲಿಸೊ ಸೂಸುವ ಮನ ನಯ |
ನಾಸುಗೂಡಿಸಿ ನಿನ್ನ ನಾಸಾಗ್ರದಲಿ ನಿಲ್ಲ |
ಲೀಶ ತಾ ತೋರುವ ||ಪಲ್ಲ||
ಎಡದಂಘ್ರಿ ಹಿಮ್ಮಡವ ಮೂಲಾಧಾರ |
ಕಿಡಿದೊತ್ತಿ ಬಲಪಾದವ ಬಿಡದೆತ್ತಿ ಮೇಢ್ರದಿ
ತಡಿಯದೆ ಮಡಗಿಸಿ ಒಡಲು ಸ್ಥಿರದೊಳಿರಲ್ಕಿದೆ ಸಿದ್ಧಾಸನ ತಿಳಿ ||1||
ತೊಡೆ ಕಿರುತೊಡೆ ಮಧ್ಯದಿ ತನ್ನಯವೆರಡಡಿಯ ತೂರಿಸಿ ಭರದಿ |
ಒಡಲು ಚಲಿಸದಂತೆ ತಡೆದವಯವಗಳ
ದೃಢತರದಿಂದಿರಲಿದೆ ಸ್ವಸ್ತಿಕಾಸನ ||2||
ಎಡದೊಡೆ ಮೇಲ್ಬಲದ ಮಡವ ಬಲ |
ದೊಡೆಯ ಮೇಲೆಡ ಪಾದದ ಮಡವ ಸೇರಸಿ ಮತ್ತ |
ಒಡಲು ಚಲಿಸದಂತೆ ಬಿಡದೆವಾಸಿಸಲಿದು ದೃಢ ಪದ್ಮಾಸನವರಿ ||3||
ಎಡಮಡ ಕೆಳ ಗೂರುತೆ ಬಲದ ಮಡ |
ಯೆಡದೊಡೆ ಮೇಲೇರುತೆ ಪೊಡವಿಯೊಳಗೆನೇರಿ |
ತ್ತೊಡಲಿಂದು ಕುಳ್ಳಿರೆ ನುಡಿವರಿದಕೆ ವೀರಾಸನಮೆಂದು ಮುನಿಗಳು ||4||
ತನಗಿಷ್ಟವಾಗಿರುವ ರೀತಿಲಿಯಾ |
ಸನವ ಬಲಿಸಿ ತನುವನನುವಾಗಿ ನಿಲಿಸಿ ಚಿ |
ದ್ಘನ ಗುರು ಶಂಕರನನು ಧ್ಯಾನಿಸುತ್ತಿರ್ಪುದಿದುವೆ ಸುಖಾಸನ || 5||
ಭಜಿಸು ಭಜಿಸು ಯೋಗಿ ಬಿಡದೆ ನೀ
ಭಜಿಸು ಭಜಿಸು ಯೋಗಿ ಬಿಡದೆ ನೀ |
ಭಜಿಸು ಭಜಿಸು ಯೋಗಿ ಭಜಿಸಲು ನಿನ್ನಯ |
ಭವಮೆಂಬುವ ಘನ ರುಜೆಯನು ಕಳೆವ ನಿ |
ರಜಪರ ಹಂಸನ ||ಪಲ್ಲ||
ಚತುರದಳಗಳಿಂ ಚತುರಾಕ್ಷರದಿಂ |
ಸತತ ಪೀತವರ್ಣದಿ ಮೆರವ |
ವಿತತಾಧಾರೆಂಬುವ ಚಕ್ರಕ್ಕಧಿ |
ಪತಿ ಗಣಪತಿಯಭಿದಾನದ ಹಂಸನ ||1||
ಆರುದಳಗಳಿಂ ದಾರಕ್ಷರದಿಂ |
ಸಾರ ಸ್ವೇತ ಬಣ್ಣವನಿಡಿದು |
ತೋರುವ ಸ್ವಾಧಿಷ್ಠಾನಕ್ಕಧಿಪತಿ |
ಚಾರು ಚತುರ್ಮುಖ ಪೆಸರಿನ ಹಂಸನ ||2||
ಹತ್ತು ದಳದಿ ಮೇಣ್ ಹತ್ತಕ್ಷರದಿಂ |
ಮತ್ತ ರಕ್ತ ಬಣ್ಣವನಿಡಿದು |
ವೃತ್ತದಿಂದೆಸವ ಮಣಿಪೂರಕಕಧಿ |
ಕರ್ತ ವಿಷ್ಣುವಿನ ಪೆಸರಿನ ಹಂಸನ ||3||
ಪನ್ನೆರಡಕ್ಕರವನ್ನು ಧರಿಸುತಲಿ |
ಪನ್ನೆರಡು ದಳದಿ ರಂಜಿಸುವ |
ಚನ್ನೆಸವ ನೀಲ ಬಣ್ಣದನಾಹುತ |
ಸನ್ನಿತ ಪತಿ ರುದ್ರಾಹ್ವಯ ಹಂಸನ ||3||
ಷೋಡಶ ಪತ್ರದಿ ಷೋಡಶ ವರ್ಣದಿ |
ಕೂಡೆ ಸ್ಫಟಿಕ ಬಣ್ಣದಿ ಪೊಳೆವ |
ನಾಡೆ ವಿಶುದ್ಧಿಯದಕ್ಕಧಿದೈವತ |
ಗೂಢ ಈಶ್ವರನ ಪೆಸರಿನ ಹಂಸನ ||4||
ಎರಡು ದಳದಿ ಮೇಣೆರಡರಕ್ಷದಿಂ |
ವರ ಮಾಣಿಕ್ಯದ ವರ್ಣದಲಿ |
ಮೆರವಾಗ್ನೇಯವಿದಕ್ಕೆ ಕರ್ತ |
ಶ್ರೀಕರ ಸದಾಶಿವನ ಪೆಸರಿನ ಹಂಸನ ||5||
ಸಾಸಿರ ದಳದಿಂ ಸೂಸುವದನುದಿನ |
ಸಾಸಿರ ಶಶಿಸೂರ್ಯರ ಪ್ರಭೆಯಿಂ |
ಆ ಸರಸಿಜಕಧಿದೈವತನೆನಿಸುತ |
ವಾಸಗೈದ ಗುರು ಶಂಕರ ಹಂಸನ ||6||
ಎಂತು ಮರಿಯಲಿ ನಾ ನಿನ್ನೆಂತು
ಎಂತು ಮರಿಯಲಿ ನಾ ನಿನ್ನೆಂತು |
ಮರಿಯಲಿ ಎನ್ನಂತರದೊಳಗೊಪ್ಪುವ ಶಿವನಂ |
ತೋರಿದ ಗುರುವರನನು ||ಪಲ್ಲ||
ವೇದಾಗಮ ಶಾಸ್ತ್ರಂಗಳ |
ನೋದಿದ ವಿಬುಧರಿಗಸದಳ |
ಮಾದ ಪರಬ್ರಹ್ಮವೆನೆ |
ನಗಾದರದಲಿ ತೋರಿದನಾ ||1||
ದಂಡಿಸಿ ತನು ತಾಪಸಿಗಳು |
ಕಂಡು ಸುಖಿ ಪರತತ್ವವ |
ನಂಡದೊಳಿಹುದನು |
ಬಿಡದುದ್ದಂಡತೆಯಲಿ ತೋರಿದನಾ ||2||
ಗುರು ಶಂಕರ ರೂಪದಿ ತಾ |
ನಿರದಾಗಮಿಸುತ್ತೆನ್ನಯ |
ಶರೀರದೊಳಿಹ ವಸ್ತುವ ತಾ |
ನರನಿಮಿಷದಿ ತೋರಿದನಾನೆಂತು ಮರಿಯಲಿ ||3||
ಈಶ ನೀನೇಳು ನಿನಗಿಹುದೆ ನಿದ್ರಿ
ಈಶ ನೀನೇಳು ನಿನಗಿಹುದೆ ನಿದ್ರಿ |
ಪಾಶ ಮಲ ಮೋಹಗಳ ನಾಶ ನೀನಿರ್ದಿ |ಪಲ್ಲ||
ಪರನಾದವೆಂಬ ಭಾಸುರ ಕುಕ್ಕುಟವು ಉಚ್ಚ |
ಸ್ವರವೆತ್ತಿ ಕೂಗುತಿದೆ ಬಿಂದುವೆಂಬ |
ಮೆರವ ಪ್ರಾಚೀನದಘ ಗಿರಿಯು ಕೆಂಪಡರುತಿದೆ |
ಮರವೆಯೆಂಬುವ ತಮವದಂಜಿ ಪರಿಯುತಿದೆ ||1||
ಭರದಿ ಕುಂಡಲಿಯೆಂಬ ತರಣಿ ತಲೆದೋರುತಿದೆ |
ನೆರದುಲಿವುತಿವೆ ವಿಧಿಗಳೆಂಬ ಪಕ್ಷಿಗಳು |
ಇರದೆದೆಯದೆಂಬಬ್ಜ ಪರಿಮಳಿಸುತಿದೆ ಮನೋ |
ಪರಿ ವಿಕೃತಿ ತತಿಯೆಂಬ ಕುಮುದ ಕೊರಗುತಿದೆ ||2||
ಜನಿತ ಮಮಕಾರಂಗಳೆನುವ ತಸ್ಕರರ |
ಭಯವನುಗೆಡುತಿದೇ ಮದಗಳೆಂಬ ರಾಕ್ಷಸರ |
ಘನ ಸುಳುಹು ತೋರದಿದೆ ಬಿನಗು ಇಂದ್ರಿಯಗಳೆಂ |
ದೆನಿಸುವ ಚಕೋರಗಳು ಮುನಿಸಿಯೆಡಗುತಿವೆ ||3||
ಸಲೆ ಸುಕೃತವೆಂತೆಂಬ ಖಿಳ ಜನರುಚಿತ |
ಕರ್ಮಗಳನೆಸಗಲುದ್ಯುಕ್ತರಾಗುತಿಹರು |
ಬಲುದುರಿತವೆಂತೆಂಬ ಖಳ ಕೌಶಿಕಗಳೆಲ್ಲ |
ನಿಲದೋಡುತಿವೆ ತಮ್ಮಗೂಡಿಗಾಗೀಗ | ||4||
ಜಿನಗು ಸಂಸೃತಿಯೆಂಬ ಕನಸು ತಾನಳಿಯುತಿದೆ |
ಮಿನುಪ ಪ್ರಾರಬ್ಧವೆಂತೆಂಬ ವಿಷಯಗಳು |
ಅನುವಿನಿಂ ಮತಿದೃಗಕೆ ಕೊನೆಗಾಣುತಿವೆ ಕುಭಾ
ವನೆಗಳೆಂಬುವ ತಾರೆಗಳು ಮೈಗರಿತಿವೆ ||5||
ಮಿನಗುತಿಹ ಗಂಗಾಯಮುನೆಯೆಂಬ ಕೋಕಗಳು |
ಬಿನದಿಸುತ್ತಿವೆ ಹಮ್ಮಿನಿರವೆಂಬ ಶಶಿಯು
ಅನುಗೆಟ್ಟು ಮಾಜುತಿದೆ ಮನಸಾದಿ ಕರಣ ಮಿಗಿ
ಲೆನಿಪ ಮುದ್ರಿಗಳೆಂಬ ಭಜಕರೆರಗುವರು ||6||
ನುತ ಯೋಗವೆಂಬ ಶೋಭಿತ ಪೂಜೆದುಪಚಾರ |
ತತಿಗೊಡಲನಿತ್ತು ಚೌಕದ ಮಧ್ಯದೆಸೆವ
ಅತುಲ ಪೀಠದಿ ವಿಭವದತಿಶಯದಿ ಮೆರದಿರೆ
ಲಲಿತ ಲಕ್ಷಮೆಂಬ ನೃಪನೋಲಗಕೆ ಬರುವ ||7||
ಕವಿವ ದಶವಿಘ್ನಮೇಂಬುವ ವೈರಿಗಳು ಬಿಟ್ಟು |
ಜವದೊಳೋಡುವರು ಬಹು ಭಯವ ತಾಳುತಲಿ
ಹವಣಿಸಲ್ಬಾರದನು ಭವಿಯೆಂಬ ದೂತನೊಪ್ಪುವ
ಮಂತ್ರಮೆಂಬ ವಿಜ್ಞಾಪನೆಯ ಕೇಳಿ ||8||
ಈ ಸಮಯದಲ್ಲಿ ನೀ ಬೇಸರಿಯದೆನ್ನನು |
ಉಲ್ಲಾಸದಿಂ ನೋಡಿಯನುದಿನವು ನೀ ಬಿಡದೆ
ದಾಸ ನಿನಗಿನ್ನುಭವದಾಸರಿಲ್ಲೆಂದ ಭಯ
ಲೇಸಿನಿಂದಿತ್ತು ಗುರು ಶಂಕರನೆ ಸಲಹು ||9||
ಯೋಗಿಯೆನಿಸುತೆನ್ನನೀಗ
ಯೋಗಿಯೆನಿಸುತೆನ್ನನೀಗ ವಿಷಯ ಸುಖ |
ಭೋಗಿಯೆನಿಸದಿರು ಗುರುದೇವ |
ಯೋಗಿ ಸಹಜ ಭಾವ ಆಗಮನುತ ಜೀವ |
ಯೋಗಿಯೆನಿಸು ಯೋಗಿಯೆನಿಸು ||ಪಲ್ಲ||
ವರ ಶೃಂಗಾಟಕದೊಳು ಮೆರವ ಪ್ರಣವನಾದ |
ಸರಸದಿಂ ಬೋಧಿಸಿ ಧರೆಯಲ್ಲಿ ತರುಣಿಯ ಚಪಲೋಕ್ತಿ |
ಸ್ವರಕೆ ಕಿವಿಗೊಡದಂತೆ ಕರುಣಿಸು ಕಾಲಕರ್ಮ ವಿನಾಶ |
ವರ ಗುಣನಿಧಿ ಕೋಶ ಹರಪಂಚ ವಿಧ ಕ್ಲೇಶ ಯೋಗಿಯೆನಿಸು ||1||
ಚಲಿಸದಾಸನ ಬಂಧ ಸಲೆ ಮುದ್ರೆಗಳ ಮೊದ |
ಲಲಿ ಕ್ರಮವಾಗಿ ನಿಲಿಸಿ ಬೇರೆ ಲಲನೆ ಸಂಗಕ್ಕೆ ತನು |
ವಲಿದುಯೆರಗದಂತೆ ಸಲಹು ಘನದ ಜಂಝಾವಾತ |
ವಿಲಸಿತ ಸುಖದಾತ ಮಲಹರ ನಿರ್ಭೀತ ಯೋಗಿಯೆನಿಸು ||2||
ಮೂರು ಮಂಡಲದೊಳು ರಾರಾಜಿಸುವ ಖಂಡ |
ಸಾಪ್ರಭೆಯ ತೋರಿಸುತಲನ್ಯ ನಾರಿ ರೂಪಕೆ ಲಕ್ಷ |
ಸೇರದಂತೆತ್ನಿಸಿ ಕಾರುಣ್ಯದಿಂ ಪೊರಿ ಸಲ್ಲೀಲ |
ಚಾರು ಮುಕುತಿ ಮೂಲ ಭೂರಿ ಪಾವನಶೀಲ ಯೋಗಿಯೆನಿಸು ||3||
ನಡು ನಾಡಿಯಗ್ರದಯೆಡೆಯಮೃತವನು |
ಯೆನ್ನೊಡಲಿಗೆಯೊಲಿದೀಂಟಿಸುತ ಪೊರಗೆ |
ಜಡಜಾಕ್ಷಿಯಧರದ ಕಡು ಸುಧೆಗಾನನ |
ವಿಡದಂತೆ ರಕ್ಷಿಸು ಗಂಭೀರ ಜಡ ಸಂಸರಣ ದೂರ |
ಮೃಢ ಶರಣೋದ್ಧಾರ ಯೋಗಿಯೆನಿಸು ||4||
ನವ ಹೃದಯದ ಜಲ ಭವದಿ ಶೋಭಿಪ ಸುಗಂಧವ |
ನಾಸಿಕಕ್ಕೊದಗಿಸಿ ಬಳಿಕಂ ಯುವತಿಯುಸರಗಂಪಿ |
ಗವಸರ ಪಡದಂತೆ ಅವಿರತ ಕಾಯೊ ಶಂಕರಲಿಂಗ |
ಭವತಿಮಿರ ಪತಂಗ ತವೆ ಘನ ಮಹಿಮಾಂಗ ಯೋಗಿಯೆನಿಸು ||5||
ಬಂಧ ಮೂರ ಲಕ್ಷಣವರಿದೊಡೆತ್ತಿ
ಬಂಧ ಮೂರ ಲಕ್ಷಣವರಿದೊಡೆತ್ತಿ |
ಬಂಧವಳಿದಹುದು ಮುಕ್ತಿ ತ್ವರಿತ ||ಪಲ್ಲ||
ಪವನಮಂ ತಡೆದು ನಿಲಿಸಿ ಅಪಾನ ಮೆಂ |
ಬುವ ಸೂರ್ಯ ಹೃದ್ವನಜದ ಪ್ರಾಣ |
ಪವನಮೆಂಬುವ ಶಶಿಯೊಳು ಕೂಡುತೆ ನಡುವಿನ |
ನರ ಬೆರೆಯೆ ಮೂಲ ಬಂಧ ||1||
ಸಲೆ ನಾಡಿ ಕಂದದೆಡೆಯ ವರ ನಾಭಿ |
ಕೆಳಭಾಗ ಮೇಲ್ಭಾಗವ ಬಿಡದೆ |
ಬಲ ಸಾಹಸದಿ ಬಂಧಿಸಿ ಪಿಡಿಯಲಿದೆ |
ತೊಳಪುಡ್ಯಾಣ ಬಂಧವಹುದು ||2||
ಕೊರಳನುರೆ ಸಂಕೋಚಿಸಿ ದಿಟ್ಟಿಗಳ |
ನಿರದೆದೆಯ ಭಾಗದಿರಿಸಿ ಜಾಲಂ
ಧರ ಬಂದಮಪ್ಪುದು ಇದೇ
ಸುಧೆಯ ಶಂಕರನ ಕೃಪಿಯಿಂದೀವುದು ಸತ್ಯ ||3||
ಯೋಗದಂಗಗಳು ಎಂಟಾಗಿರುವವು
ಯೋಗದಂಗಗಳು ಎಂಟಾಗಿರುವವು ನಿಗ |
ಮಾಗಮದಿಂ ತಿಳಿವುದೆ ಯೋಗ್ಯವು |ಪಲ್ಲ||
ಯಮವಹಿಂಸಾದಿ ದ್ವಿಪಂಚವು ಮತ್ತ
ನಿಯಮಯೆಂಬುವದೆ ತಪೋ ಮುಖದಶವು |
ವಿಮಲದಾಸನ ಸ್ವಸ್ತಿಕಾದಿಯಖಿಳವು |
ಉತ್ತಮ ರೇಚಕಾದಿ ಪ್ರಾಣಾಯಾಮವೇಳು ||1||
ಚರಿಸುವಿಂದ್ರಿಯಗಳಂ ತರಸೆಳೆವುದೆ ಪ್ರತ್ಯಾ |
ಹರಣವು ತಡಿವುದೆ ಧಾರಣವು |
ಹರನ ಚಿಂತಿಪುದೇ ವಿಸ್ತರ ಧ್ಯಾನ ಶಿವನೊಳು |
ಮರಳದ ಚಲವಾದ ಮನವೆ ಸಮಾಧಿ |3||
ಮೊದಲಿನ ನಾಲ್ಕು ಬಾಹ್ಯದವೆನಿಸುತ ಕಾಮ |
ಮದ ರೋಗವಘಗಳನಳಿಸುವದು |
ಒದವಿದಂತ ನಾಲ್ಕುಳಿದವವು ವಿಷಯಮೋ
ಹದ ಭ್ರಮೆಯಳಿಸಿ ಶಂಖರನೋಳ್ಸೇರಿಪವು| ||4||
ಶ್ರೇಷ್ಠವಾಗಿಹ ನಿರ್ಗುಣಾಷ್ಟಾಂಗ ಯೋಗದ
ಶ್ರೇಷ್ಠವಾಗಿಹ ನಿರ್ಗುಣಾಷ್ಟಾಂಗ ಯೋಗದ ವಿ |
ಶಿಷ್ಟ ಕಲೆಯರಿದ ಯತಿಗಹುದು ಮುಕ್ತಿ ||ಪಲ್ಲ||
ಶರೀರ ಕರಣೇಂದ್ರಿಯ ವಿಸರದೊಳು ವಿರಾಗ |
ಜನಿಸಿರುವದೇ ಯಮ ಬ್ರಹ್ಮದೊಲವೆ ನಿಯಮ |
ನೆರೆ ವಿಷಯ ಭ್ರಮೆಯಳಿದುದಾಸನ ಪ್ರಪಂಚ ಪುಶಿ |
ಯರಿದು ಬಾಳುವದೆ ಪ್ರಾಣಾಯಾಮವು ||1||
ಮತಿಯನೊಳಸೆಳೇವಸುವೆ ವಿತತ ಪ್ರತ್ಯಾಹಾರ |
ನುತ ಜ್ಞಾನದಲ್ಲಿ ನಿಲಿಸುದೆ ಧಾರಣ |
ಅತಿಶುದ್ಧ ಚೈತನ್ಯ ತಾನೆಂಬುದೇ ಧ್ಯಾನ |
ಸತತ ಸ್ಥಿರಮಾದ ಬುದ್ಧಿಯೆ ಸಮಾಧಿ ||2||
ಸಲೆ ಪೇಳಿದಷ್ಟಾಂಗದೊಳು ಮೊದಲಿನೈದಂಗ |
ಬಲದೊಳರಿವರ್ಗ ಗೆಲಿದಿಹ ಮನವನು |
ಉಳಿದ ಅಂಗ ತ್ರಿವಿಧದಿಂ ತೊಳಪ ಗುರು ಶಂಕರನ |
ಗಲದಂತೆಸಗಲದೆ ಸುಯೋಗವಹುದು ||3||
ತೋರುವದು ಪರತತ್ವವು ತಕ್ಷಣದಿ
ತೋರುವದು ಪರತತ್ವವು ತಕ್ಷಣದಿ |
ಈ ಮೂರು ಲಕ್ಷದಿ || ||ಪಲ್ಲ||
ಆರು ಚಕ್ರಗಳ ಸೇರಿ ಸುಷುಮ್ನೆಯ |
ಸಾರನಾಡಿಯಗ್ರವನಾಂತು |
ರಾರಾಜಿಸುತಿಹ ಭೂರಿ ತಟತ್ಪ್ರಭೆ |
ಯೋರಂತೆ ಮನಸಿನೊಳು ಪರಿಭಾವಿಸೆ ||1||
ವರ ನಾಸಾಗ್ರದಿ ಕರಿದು ಕೆಂಪು |
ಪಾಂಡುರ ಪೊಗೆ ಪೀತ ಸುವರ್ಣಗಳ |
ಮೆರವ ದಶಕ ಪನ್ನೆರಡಾರೆಂಟು |
ಚತುರ ಬೆರಳಿನ ಮಿತಿಯರಿದಿರಿಸೀಕ್ಷಿಸೆ ||2||
ಫಲವು ತಾರೆ ಶಿಖಿ ಜಲಜಾಹಿತರವಿ |
ಸಲೆ ರನ್ನಗಳ ಪ್ರಕಾಶವನು |
ಒಳವಿಡಿದನುಪಮ ಶಂಕರ ಗುರುಪದ |
ಮೊಲಿದನು ಸಂಧಾನಿಸುತಿರೆ ತೀವ್ರತಿ ||3||
ತಾರಕ ತ್ರಯದ ವಿಚಾರ ಮಾಡೊ
ತಾರಕ ತ್ರಯದ ವಿಚಾರ ಮಾಡೊ |
ವಿಚಾರ ಮಾಡಲು ಭವ ದೂರು ನೋಡೋ ||ಪಲ್ಲ||
ಪಂಚಭೂತಗಳನು ಪಂಚೀಕರಿಸಿದಂಥ
ಪಂಚವಿಂಶತಿ ತತ್ವವರಿದವುಗಳನು |
ಪಂಚಲುಳಿದುದೆ ತಾನೆಂಬುದಿದುವೆ ಸಾಂಖ್ಯ |
ಮಿಂಚಿಡಿದಿಹ ಪೂರ್ವ ತಾರೆಯಿದು ||1||
ಇಳೆಯ ತಾಣದ ಯುಗದೊಳು ಅನಿಲಾಪ್ತನ |
ಸ್ಥಲ ದ್ವಂದ್ವದೊಳು ನಭ ನೆಲೆವೆರಡರೊಳು |
ಚಲನೆಗೈಯ್ಯದೆ ಷಡಂಗುಲಗಳನಪುಗಳೋಳ್ |
ಬಲಿದೀಕ್ಷಿಸುತ ಕೇಳಲಿದು ಮಧ್ಯತಾರೆ ||2||
ಪೊರ ವಿಷಯ ವೆಸನ ತೊರೆದೆವೆರೆದಕ್ಷಿ |
ಸ್ಫುರಿಸದ ನಿಲನಿಂದು ಕರಿಗೊಂಡು |
ಗುರು ಶಂಕರೇಶನೊಳಿರುವ ಮನವಿದನು |
ಅರಿಯಲಂತರ್ಮುದ್ರೆಯ ಮನಸ್ಕರ ತಾರೆ || 3||
ನೋಡೆ ರಮಣಿ ನೀ ನೋಡೆ ರಮಣಿ
ನೋಡೆ ರಮಣಿ ನೀ ನೋಡೆ ರಮಣಿ |
ನೋಡು ರಮಣಿ ಬ್ರಹ್ಮವ ನಡು |
ನಾಡಿಯ ತುದಿಗೇರಿ ಬಿಡದೆ ||ಪಲ್ಲ||
ಸರಸಿರು ಹಾಸನದೊಳು |
ಸುಸ್ಥಿರ ಕಾಯದಿ ವಾಸಿಸಿ |
ಸಂಚರಿಸುವ ಮನ ಪವನ ನೋಟ |
ವೆರಸಿ ಬಹಿರ್ಲಕ್ಷದಿಂದೆ ||1||
ಚಲಿಸುವ ದುಷ್ಟೇಂದ್ರಿಯಗಳ |
ಬಲವನೆಲ್ಲ ಮುರಿದುನ್ಮನಿ |
ನಿಲಯದಿನಿಂದಾಲಿಯನುರೆ |
ನಿಲಿಸಿ ಮಧ್ಯ ಲಕ್ಷದಿಂದೆ ||2||
ಮಂಡಲ ಮೂರರೊಳೊಪ್ಪುವ |
ಖಂಡ ಶಂಕರೇಶನು |
ನಿನ್ನಂಡದೊಳಿರುತಿಹುದನು ಮುದ |
ಗೊಂಡಂತರ್ಲಕ್ಷದಿಂದೆ ||3||
ನೋಡು ಯೋಗಿಯೆ ನೀ
ನೋಡು ಯೋಗಿಯೆ ನೀ |
ನೋಡು ಯೋಗಿಯೆ ನೀ |
ಓಡುವ ರವಿ ಶಶಿಗಳನುರೆ |
ಕೂಡಿಸಿ ಚಲಿಸಿದೆ ಬ್ರಹ್ಮವ ||ಪಲ್ಲ||
ಎಳೆಮೌಕ್ತಿಕ ಮಣಿ ತಾರಾವಳಿ |
ವಿದೃಮಲತೆಯಂದದಿ|
ಸೆಳೆ ಮಿಂಚಿನ ಪರಿಯಲಿ |
ಮಂಜುಳ ರವಿಶಶಿಯಂತೆ ಸವದು ||1||
ತನುವಾನೆಂಬುವದೆಚ್ಚರವನು |
ಕಳೆದು ಸುಖಾಸನದಿಂ |
ಮನ ನಿಲ್ಲಿಸಿದಾ ಕ್ಷಣದೊಳು |
ಘನ ಬೆಳಗಿನೊಳುರೆ ಮೆರವದು || 2||
ಗುರು ಶಂಕರ ಬೋಧಿಸಿದಾ |
ಹರ ಮಂತ್ರವನುಸುರಲ್ಕಂ |
ತರ ತೇಜವೆ ಪೊರ ಭಾಗದಿ |
ಬಿಂದುವೆನಿಸಿ ಪ್ರಜ್ವಲಿಪುದು || ||3||
ಇನ್ನೆಲ್ಲಿ ಭವ ಬಂದನವು ಯೋಗೀಂದ್ರನೆ
ಇನ್ನೆಲ್ಲಿ ಭವ ಬಂದನವು ಯೋಗೀಂದ್ರನೆ |
ಇನ್ನೆಲ್ಲಿ ಭವ ಬಂಧನವು |
ಇನ್ನೆಲ್ಲಿ ಭವ ಬಂಧ ಸನ್ನುತ ಶಿವನನು |
ತನ್ನೊಳರಿದು ಮಾಯೆಯನ್ನು ಮೀರಿದ ಮೇಲೆ ||ಪಲ್ಲ||
ವಾದವಾಸ್ಯಗಳ ಬಿಟ್ಟು ಬೇರೂರಿದ |
ಖೇದ ಭೇದಗಳ ಸುಟ್ಟು |
ಹಾದಿ ನಾಲ್ಕರ ನಡುವೀದಿಯನಾಂತು |
ವಿನೋದದಿ ದಶವಿಧ ನಾದಕೇಳಿದ ಮೇಲೆ ||1||
ಹರನಕ್ಷಿ ಭಸ್ಮವನು ಅಂಗಾಂಗದಿ |
ಧರಿಸಿ ಸುಮಂತ್ರವನು |
ಸ್ಮರಿಸುತ ತ್ರೀಕೂಟ ಗಿರಿಯನಡರಿ ಲಕ್ಷ |
ಸ್ಥಿರದಿ ಬಿಂದುವನು ಬಂಧುರದಿ ನೋಡಿದ ಮೇಲೆ ||2||
ಆಶ ಪಾಶಗಳ ನೀಗಿ ಮುಸುಗುತಿರ್ಪ |
ಕ್ಲೇಶ ಪಂಚಕವು ಪೋಗಿ ನಾಶ ರಹಿತ |
ಶಂಕರೇಶ ಚಿತ್ಕಲೆಯ ಪ್ರಕಾಶದಿ ತೋರಲ |
ಪ್ರವೇಶಿಸಿ ಬೆರದ ಮೇಲಿನ್ನೆಲ್ಲಿ ಭವ ಬಂಧವು ||3||
ತೋರದು ನಿಜ ಸುಖವು ಹೇ ಮಾನವ
ತೋರದು ನಿಜಸುಖವು ಹೇ ಮಾನವ |
ತೋರದು ನಿಜಸುಖ ತಾರಕ ಬ್ರಹ್ಮವ |
ಆರೈದು ನೋಡಿತಾ ಸೇರದೆ ಸುಮ್ಮನೆ ||ಪಲ್ಲ||
ಆಲಿವೆಳಗನರ್ಕನ ತಡೆದು ಬ್ರಹ್ಮ ನಾಳದವರಸದನ |
ಲೀಲೆಯಿಂದೊಳ ಪೊಕ್ಕು ನೀಲ ತೋಯದಿ ನಿಂದು |
ಮೇಲೆಸೆಯುವನಾದ ವಾಲಿಸದಿದ್ದರೆ ||1||
ಆಸನವನು ಬಲಿಸಿ ವಿಷಯದೊಳು ಸೂಸುವ |
ಮನ ಮುರಿಸಿ ಬೇಸರಗೊಳ್ಳದೆ ವಾಸಿಸಿಯಾಲೆಯ |
ಅಭ್ಯಾಸದಿ ನಿಲ್ಲಿಸಿ ಲೇಸದಿ ನೋಡದೆ || ||2||
ದೇಹದ ಭ್ರಮೆಯಳಿದು ಮುನ್ನಿನ ಮಾಯಾ ಮೋಹದ |
ಗುಣವಳಿದು ಸೋಹಂಭಾವದಿ ಒಳ್ಳೆ ಸಾಹಸದೊಳು |
ಚೇತೋ ಗೇಹದಿ ಗುರು ಶಂಕರೇಶನ ತಿಳಿಯದೆ ||3||
ಮಾನಿನಿ ನೋಡು ಕಣ್ಣಾರೆ ಕಾಣುವದು ಬಿಂದು
ಮಾನಿನಿ ನೋಡು ಕಣ್ಣಾರೆ ಕಾಣುವದು ಬಿಂದು |
ನೀ ನೆನಿ ಮಂತ್ರ ಶಾಂಭವಿಯ ಕೋಣಿಯೊಳು ನಿಂದು ||ಪಲ್ಲ||
ಸ್ಥಿರ ಕಾಯಳಾಗಿ ಸುಖದಾಸನವನು ನೆರೆ |
ಬಲಿಸು ವೆವಹರಿಪ ನಿನ್ನ ದುಷ್ಟೇಂದ್ರಿಯಗಳನುರೆ |
ನಿಲಿಸು ಮನ ಪವನ ದೃಷ್ಟಿ ಮೂರ್ಬೆರಿಸು |
ಘ್ರಾಣ ತುದಿಗಿರಿಸು ವೇದಕನು ಸರಿಸು ||1||
ಎಳೆ ಮುತ್ತಿನಂತೆ ಪ್ರಜ್ವಲಿಪ ದೀಪದುರಿಯಂತೆ |
ಸೆಳೆ ಮಿಂಚಿನಂತೆ ನಳನಳಿಪ ಲತೆಗೆ ರಸದಂತೆ |
ಥಳಥಳಿಪ ಪೂರ್ಣ ಶಶಿಯಂತೆ |
ಮಿಸುಪ ರವಿಯಂತೆ ಪವಳ ಮಣಿಯಂತೆ ||2||
ಶರೀರದೊಳು ರಂಜಿಸುವ ಚಿತ್ಪ್ರಕಾಶವದು ಗಮಿಸಿ |
ಸತ್ವರದಿ ನೇತ್ರದಿಂ ಪೊರಭಾಗಕ್ಕವತರಿಸಿ |
ಗುರು ಶಂಕರೇಶ ತಾನೆನಿಸಿ |
ಪೊರಗೊಳಗೆ ನೆಲಿಸಿ ಘನ ಬೆಳಗುವೆರಸಿ ||3||
ಕಂಡೆ ಕಣ್ಣಿನಂಡದೊಳು ನಾನು
ಕಂಡೆ ಕಣ್ಣಿನಂಡದೊಳು ನಾನು |
ಪರತತ್ವವನ್ನು ಕಂಡೆ ಕಣ್ಣಿನಂಡದೊಳು ನಾನು |
ಕಂಡೆ ಕಣ್ಣಿನಂಡದೊಳ್ಮಾರ್ತಾಂಡ ಪವನಾಪ್ತಾಬ್ಜಮೆಂಬ |
ಮಂಡಲ ತ್ರಯ ಮಧ್ಯ ಸುಸ್ಥಲದಿ ಬಹು ಪುಣ್ಯ ಫಲದಿ ||ಪಲ್ಲ||
ಮೂರು ನದಿಗಳ ಸಂಗಮದಿ ಮಿಂದು |
ಸೊಗಸಾಗಿ ತೋರುವ |
ಮೂರು ಪರ್ವತದಗ್ರದೊಳು ನಿಂದು |
ಮೂರು ಲಿಂಗದಿ ಭಾವ ಬೆರೆದು |
ಮೂರು ಮೂರ್ತಿಗಳಿರವನರಿದು |
ಮೂರು ಪದಗಳ ಮೂಲ ಮಂದಿರದಿ ಬಹು ||1||
ಆರು ವೈರಿಯ ಎದೆಯ ಮೆಟ್ಟುತ್ತೆ |
ಮೇಲ್ವಾಯ್ದು ಬರುತಿಹ |
ಆರು ಭ್ರಮೆಗಳ ಮುರಿದು ಕಟ್ಟುತ್ತೆ |
ಆರು ಚಕ್ರವದಾಂಟೆ ಸಾಸೀರಾರ |
ಸಾರಸದೊಳಗೆ ಮೆರೆವ |
ಆರು ಅರಿಯದ ಸೂಕ್ಷ್ಮ ಬಾಗಿಲದಿ ಬಹು ||2||
ಮೂರು ಲಕ್ಷದ ಮರ್ಮವನು ನೋಡಿ |
ಸಾದನದಿ ಕೂಡಿ |
ಮೂರು ತಾರಕದಧ್ಯಯನ ಮಾಡಿ |
ಮೂರು ಮಲಗಳ ನಾಶಗೈದ |
ಧೀರ ಶ್ರೀಗುರು ಶಂಕರೇಶ |
ಸಾರ ಕರುಣದಿ ಬೋಧಿಸಿದ ಬಲದಿ |
ಬಹುಪುಣ್ಯ ಫಲದಿ ||3||
ಗುರು ವರೇಣ್ಯನೆ ತವ ಕರುಣದಿ ಧನ್ಯನಾದೆನೈ
ಗುರು ವರೇಣ್ಯನೆ ತವ ಕರುಣದಿ ಧನ್ಯನಾದೆನೈ |
ಕರುಣಾಕರ ಶರಣೋದ್ಧರಣಾ ನಿಮ್ಮಯ |
ಸಚ್ಚರಣಾ ದೊರೆಯಲು ಬಹು ||ಪಲ್ಲ||
ಆರೆನಿಪ ಸುದ್ವಾರಗಳು ತಾರತಮ್ಯದಿಂದೆ |
ಬಂಧಿಸೆ ಭೂರಿಚಿಣಿ ಛಿಟಿಛಿಟಿ |
ಭೇರಿ ನಾದಂಗಳು ಸೇರಿ |
ಝೇಂಕರಿಸಲು ಧನ್ಯನಾದೆನೈ ||1||
ಸಾರ ಚಕ್ರದಾರಿ ಹಿಡಿದು |
ಮೂರು ನದಿಯ ಮೀರಿ ಭರದಲಿ |
ಏರಿ ಮುಂದಕೆ ನಾ ತೂರಲ್ಬಿಂದುಕಂಗೆ |
ತೋರಿ ಮಿಗೆ ಪೊಳಿಯಲು ||2||
ಸೂಸುವ ಮನ ಪವನ ದೃಷ್ಟಿ |
ಮೋಸವಿಲ್ಲದೊಂದು ಗೂಡಿಸೆ
ಸಾಸೀರಾರದಿ ತಾ ವಾಸಿಸಿದ ಶಂಕರ |
ಲೇಸಿನಿಂದೆಸೆಯಲು ಧನ್ಯನಾದೆನೈ ||3||
ಆಗದಯ್ಯಾ ಮುಕ್ತಿಯಾಗದಯ್ಯಾ
ಆಗದಯ್ಯಾ ಮುಕ್ತಿಯಾಗದಯ್ಯಾ |
ಶ್ರೀಗುರುವಿನ ಕೃಪೆಯಾಗದೆ ಸುಮ್ಮನೆ ||ಪಲ್ಲ||
ಅಷ್ಟ ಭೋಗವ ಬಿಟ್ಟು ಅಷ್ಟಮದವ ಸುಟ್ಟು |
ಅಷ್ಟದಳಾಬ್ಜದಿ ದೃಷ್ಟಿಯುನಿಲ್ಲದೆ ||1||
ಆರು ಭ್ರಮೆಯ ಮೀರಿ | ಆರರ ನೆಲೆಗೇರಿ |
ಆರು ಅರಿಯದ ಸೂಕ್ಷ್ಮ ದ್ವಾರವ ತೂರದೆ ||2||
ಮೂರು ವಾಸನೆಯಳಿದು ಮೂರು ನದಿಯೊಳು ಮಿನಿದು |
ಮೂರು ಮಂಡಲದೊಳು ಸೇರಿ ಸಂತೈಸದೆ|||| ||3||
ಹತ್ತು ಇಂದ್ರಿಯ ತಡೆದು ಹತ್ತು ವಾಯುಗಳ ಬಲಿದು |
ಹತ್ತ ವಿಧದ ನಾದ ಮೊತ್ತವ ಕೇಳದೆ || ||4||
ದ್ವಿತೀಯ ಭಾವವನೀಗಿ ದ್ವಿತಿಯ ದಳದಿ ಪೋಗಿ
ದ್ವಿತೀಯರ ಹಿತ ಶಂಕರೇಶನ ಕಾಣದೆ ಆಗದಯ್ಯಾ | |5||
ನೋಡು ನಿನ್ನಯ ನಿಜ ಪೋಟುವ
ನೀ ನೋಡು ನಿನ್ನಯ ನಿಜ ಪೋಟುವ |
ತಡ ಮಾಡದಂತೇರುತ್ರೈಕೂಟವ ||ಪಲ್ಲ||
ದ್ವಾರವಾರನು ಮುಚ್ಚಿ ಸಾರ ಪಶ್ಚಿಮದಲ್ಲಿ |
ತೂರಿ ಬೇಗದಿ ವಳಸೇರಿ ಸಂತೋಷದಿಂದೆ ||1||
ಮೇಲೆಸದಿರುವ ಸುನೀಲ ತೋಯದ ಮಧ್ಯ |
ಮಾಲಯವನು ಪೊಕ್ಕು ಲೀಲೆಯಿಂದನುದಿನ ||2||
ಗಂಗೆ ಯಮುನೆಗಳ ಸಂಗಮ ಸ್ಥಾನದಿ |
ಮಂಗಲ ಸ್ಥಾನಗೈದು ಶೃಂಗಾಟಕದಿ ನಿಂದ ||3||
ಮೂಡಲದಿಂ ನಡು ನಾಡಿಯಗ್ರದ ಗುಪ್ತ |
ಗೂಡಿಗೆ ನಡೆದು ನೀ ಕೂಡಿದ ಹರುಷದಿ ||4||
ನೆರೆ ಲಕ್ಷಿಸಲು ಶಂಕರ ಗುರು ತೋರ್ಪನಿನ್ನಿರವಿದೆ |
ತಿಳಿ ಬೇರೆಯರಸದೆ ಸರಸದಿ ನೋಡು ನಿನ್ನಯ ||5||
ಕಣ್ಣ ಮುಂದೆ ಪರತತ್ವ
ಕಣ್ಣ ಮುಂದೆ ಕಾಣಿಸುತ್ತದೆ |
ಪರತತ್ವ ತಾನೆ ಕಣ್ಣ ಮುಂದೆ ಕಾಣಿಸುತ್ತದೆ |
ಕಣ್ಣ ಮುಂದೆ ಕಾಣಿಸುತಿರಲಣ್ಣಗಳಿರಿದನ್ನು ಬಿಟ್ಟು |
ಮಣ್ಣು ಕಲ್ಗಳಲ್ಲಿ ಹುಡಿಕಿ ಬಣ್ಣಗೆಟ್ಟು ಪೋಪರೇಕೋ ||ಪಲ್ಲ||
ಕರಿದು ಬಿಳಿದು ಕೆಂಪು ಛಾಯದಿ |
ಬಹ್ವಂದಮಾಗಿ ತರಣಿ ಸೋಮಶಿಖಿಯ ನಾಮದಿ |
ಸ್ಫುರಿಪ ಮೂರು ಮಂಡಲದಂ |
ತರದಿ ಮೂಡಿ ತೋರ್ಪವಖಿಳ |
ಪರಿಯ ಬಿಂದುವಿನೊಳುದಿಸಿದ |
ಪರಮ ತೇಜ ನಿಕರದಲ್ಲಿ ||1||
ಚಲಿಸುತಿರ್ಪ ದಿಟ್ಟಯ ನಿಲಿಸಿ |
ಎಡೆವಿಡದೆ ನಡೆವ ಪೊಳೆವ ಮರುತನನ್ನು ಕುಂಭಿಸಿ |
ಇಳೆಯೊಳನ್ಯ ವಿಷಯ ವಿಕೃತಿ |
ಗೆಳಸದಿರ್ಪ ಮನಸಿನಿಂದೆ |
ಮಲವಿರಹಿತ ಮತಿಯಗೂಡಿ |
ನಿಲದೆ ನಿರೀಕ್ಷಿಸಲು ಬೇಗ ||2||
ಎಲ್ಲ ಲೋಕದೊಳ ಪೊರಗಿರುವ |
ನಾನಾತ್ವಗಳನು ನಿಲ್ಲದೆ ತಾ ನೋಡಿ ತಿಳಿಯುವ |
ಬಲ್ಲಿದ ಗುರು ಶಂಕರೇಶ |
ನುಲ್ಲಸಿತ ಸುವಸ್ತುವೆನಿಸುತೆಲ್ಲರ ಹೃದಯಾಬ್ಜ |
ಪೀಠದಲ್ಲಿಹುದುರೆ ಭಾವಿಸಿದೊಡೆ ಕಣ್ಣ ಮುಂದೆ ಕಾಣಿಸುತ್ತಿದೆ ||3||
ನೋಡು ನಿನ್ನೊಳು ನಡೆವ ನಾಟಕವ ನಿತ್ಯದಲಿ
ನೋಡು ನಿನ್ನೊಳು ನಡೆವ ನಾಟಕವ ನಿತ್ಯದಲಿ ನೀನೆ |
ನೋಡು ನಿನ್ನೊಳು ನಡೆವ ನಾಟಕವ |
ನೋಡು ನಿನ್ನೊಳು ನಡೆವ ನಾಟಕ |
ಕೀಡುತೋರ್ಪವೆ ಅನ್ಯನಾಟಕ |
ನೋಡಿ ಧನ ವ್ರಯ ಮಾಡಿ ವ್ಯಸನದಿ |
ಕೂಡಿ ಕೆಡುವದು ಖೋಡಿತನವಿದು ||ಪಲ್ಲ||
ಶರೀರವೆಂಬುದೆ ನಾಟಕಾಲಯ |
ಪುಚಿದ್ಬಯಲದೆಂಬುದೆ |
ಮೆರವ ರಂಗಸ್ಥಾನದಂಗಣವು |
ಮಿರಗುವಾಧಾರಾದಿ ಯಾರಾಗಿರುವ |
ಚಕ್ರಗಳೇ ಪರದೆಗಳು ತರತರದ ಮಂಡಲಗಳೇ |
ಚಿತ್ತರದ ಸೀನಾಗೆಸವ ವಕ್ಷಿಗೆ ||1||
ಎಣ್ಣೆಯಿಲ್ಲದ ಜೋತಿಯುರಿವವು |
ಕ್ಷಣಕ್ಷಣಕೆ ನಾನಾ ಬಣ್ಣದೋರ್ದು ಪರದೆಗಳಡಗುವವು
ಸಣ್ಣ ಪಡಿ ಉಡುಗಣದ ಪರಿಯೊಳು |
ಬಣ್ಣಿಗೆಯ ಬಗೆಬಗೆಯೊಳೊಪ್ಪುವ |
ತಣ್ಣಗಾದ ಎಲೇಕ್ಟರುಗಳತಿ |
ನುಣ್ಣಗೆಸವವು ಕಣ್ಣಿಗೀಗಳೆ ||2||
ಹೊಸತರದ ಹಾರ್ಮೊನಿಯ ಸುನಾದ |
ಫಾರ್ಟಕರು ಪಾಡುವ ಮಿಸುಪ ನಾದ |
ತಬಲದ ಮೇಲ್ನಾದ ಬೆಸುಗೆಯಿಂದಿನಿದಾಗಿ |
ಕೇಳುವದ ಸಮಗಾಯಕರೆನಗೆ ತೋರರು |
ಒಸೆದು ಮೇನೇಜೇರನೆಂದೆನ್ನಿಸಿದ |
ಶಂಕರನೋರ್ವ ತೋರ್ಪನು ||3||
ಯೋಗಿಗೆ ಶಿರ ಬಾಗಿ ನಮಿಪೆ ಭಕ್ತಿ
ಯೋಗಿಗೆ ಶಿರ ಬಾಗಿ ನಮಿಪೆ ಭಕ್ತಿ |
ಯೋಗದಿಯನುದಿನದಿ |
ಪರಮ ಶಿವಯೋಗಿಗೆ ಯೋಗಿಗೆ ವಿಷಯ |
ವಿರಾಗಿಗೆ ಸಂಕೃತಿ ತ್ಯಾಗಿಗೆ ನಿರುತ ನಿರೋಗಿಗೆ ಪರಶಿವ ||ಪಲ್ಲ||
ಉಡು ವಲ್ಲಭನನು ಮಿಡುಕದನಾಮಿಕ |
ಕಿರಬೆರಳಿಂ ಬಲಿದು ರುಜು ಕಾಯದಿ ವಾಸಿಸಿ |
ದೃಢ ಮಾನಸದಿಂ ಬಿಡದಂಗುಷ್ಟದಿ |
ಜಡಜಾಪ್ತನ ತಡೆದು ಅಗ್ನಿಯೊಳು ಬೆರೆಸಿ ಪತ |
ವಿಡಿದು ಗಡನಡಿದು ವಾಸನೆಗಳ ಕಡೆದು |
ನಡು ನಾಡಿಯ ತುದಿಗಡರಿವದಾಗಸ |
ದೆಡೆಯೊಳಮೃತವನು ಕುಡಿದು ಸುಖಿಪ ಶಿವ ||1||
ಜಗದಿ ಬಂಧ ಲಕ್ಷಗಳೆಂಬವುಗಳ |
ಮೊಗವ ನಿರೀಕ್ಷಿಸದೆ ಮುದ್ರಾಸನಾದಿಗಳ |
ನೆಗಳುವ ಒಳ ಕರಣಗಳನು ನಿಲಿಸುವ |
ಹಗರಣ ಕಡಿಯಿಡದೆ ಪೂರ್ಣಾನುಭವದಿ |
ಮನ ಮುಗಿದು ನಿಜಬಗೆದು ಬರಿ ತಗಲುಗಳುಗಿದು |
ಸೊಗಸುವ ನಾದವು ಝಗಿಸುವ ಬಿಂದು |
ಕಳೆಗಳನು ಕಾಂಬುವ ಬಗೆ ಮರೆದಿಹ ಶಿವ ||2||
ಗುರು ಶಂಕರನೆಸಗಿರುವಧ್ಯಾತ್ಮದ |
ವರ ಬೋಧದ ಬಲದಿ ಅಜರಂಧ್ರದ ನೆಲೆಯೊಳು
ಪರಬ್ರಹ್ಮದ ಶುಭಕರ ಪ್ರಕಾಶ ಕಂಡುರುತರ |
ಸಂತಸದಿ ಕರಕಮಲ ಮುಗಿದು ಅಂತರದಿ |
ಬಂಧುರದಿ ಪೂಜಿಸುತಾದರದಿ |
ನಿರುತದಿ ಪರಿಪರಿ ಸ್ಮರಿಸು ಮುಕ್ತಿಯ |
ನೆರೆ ಯಾಚಿಸಿ ಹಿತಕರಮಾಗಿಹ ಶಿವ ||3||
ಇಷ್ಟಲಿಂಗವನ್ನು ಪೂಜಿಸೊ ಯೋಗೀಂದ್ರ ಬಿಡದೆ
ಇಷ್ಟಲಿಂಗವನ್ನು ಪೂಜಿಸೊ ಯೋಗೀಂದ್ರ ಬಿಡದೆ |
ಇಷ್ಟಲಿಂಗವನ್ನು ಪೂಜಿಸೋ ಇಷ್ಟಲಿಂಗವನ್ನು |
ಪೂಜಿಸಷ್ಟವಿಧಾರ್ಚನೆಯೊಳುಂ ವಿಶಿಷ್ಟ ಯೋಗಗಳಿಗೆ |
ಮಹಾ ಶ್ರೇಷ್ಠವಾದುದಿದೆ ಪರತರ ||ಪಲ್ಲ||
ಮೊದಲಿನ ಪುಣ್ಯದ ವಿಶೇಷದಿ ನಿನಗಾಗಿ ಈಗ |
ಸದಮಲ ಶಿವಲಿಂಗ ಬೇಗದಿ |
ಮುದವನಾಂತು ವದಗಿ ತಾ ಕರದವರ |
ಕಮಲದೊಳು ಕಾಣಿಸಿದುದು ಪ್ರಭೆ ವಿಡಿದು ವಿರಾಜಿ |
ಪುದು ಸುನೋಟಕಿದೆ ಪರತರ ||1||
ಮೆರವ ಮುನ್ನಿನಾಸನೆಂಬುದೆ |
ಬಿಂದ್ವಾಗಿ ಮೇಲಿನೆರಕ ಪೀಠನಾದವಾಗಿದೆ |
ಪರಮ ಗೋಮುಖವೆ ಕಳೆಯಾಗಿರದಾನಿಷ್ಕಳನೆ |
ಲಿಂಗದುರು ನಿಜವಾಗಿರಲದರೊಳು |
ಪರಿಶೋಭಿಪುದಿದೆ ಪರತರ ||2||
ಗಿರಿಯಗಲತೆಯೆನ್ನೊಳ ವಿಡಿದು ಪೊಳೆವಾ |
ದರ್ಶದ ಪರಿಯಾರಬ್ಧಗಳಿಂಬೊಡೆದು |
ಮಿರುಗುವ ಬೊಮ್ಮಕ್ಕನುದಿನ ಸರಸದೊಳಾ |
ಶ್ರಯವಾಗಿಹ ವರಶಕ್ತಿಯವೆರಸಿದ |
ಶಂಕರತಾನಾದಿದೆ ಪರತರ ||3||
ಪ್ರಾಣಲಿಂಗವನ್ನು ಪೂಜಿಸೊ ನಿರಂತರದೊಳು
ಪ್ರಾಣಲಿಂಗವನ್ನು ಪೂಜಿಸೊ ನಿರಂತರದೊಳು |
ಪ್ರಾಣಲಿಂಗವನ್ನು ಪೂಜಿಸೊ
ಪ್ರಾಣಲಿಂಗವನ್ನು ಪೂಜಿಸೂಣೆಗೊಳದೆ ನಿನ್ನೊಳಿರ್ಪ
ತಾಣ ಗುರುವಿನಿಂದ ತಿಳಿದು ಜಾಣನಾಗಿ ಕಂಡು ನಿರುತ ||ಪಲ್ಲ||
ವರ ವಿವೇಕ ಜಲವ ನೀಡುತೆ|
ಅಭಿಷೇಕಗೈದು ವಿರತಿ ಭಸ್ಮವನ್ನು ತೀಡುತೆ|
ಮೆರವ ಷಾಂತಸಾಂತಮಾದ
ನಿರಘ ಶೈವ ಶಕ್ತಿ ಬೀಜದೆರಕದಲ್ಲಿ ಝೇಂಕರಿಸುವ
ಪರಮ ನಾದವಾಲಿಸುತ್ತ ||1||
ಹರುಷವೆಂಬ ಪುಷ್ಪ ಧರಿಸುತೆ |
ಸುವಿಚಾರವೆಂಬ ಮಿರುಗುವಕ್ಷತಿಯನು ಇರಿಸುತೆ
ನಿರುತ ಮೂಲ ಮುಖ್ಯವಾರು
ತೆರದ ಚಕ್ರಶಕ್ತಿಯರೊಡ
ನಿರದೆ ನಿಖಿಲ ಪ್ರಭೆಯ ತೋರ್ಪ
ಪರಮ ಬಿಂದು ವೀಕ್ಷಿಸುತ್ತ ||2||
ಸಲೆ ವಿಚಾರ ಧೂಪವಿಕ್ಕುತೆ |
ಚಿದ್ಬಿಂದುವೆಂಬ ಜ್ವಲಿಪ ದೀಪವನ್ನು ಯತ್ತುತೆ
ಪೊಳವ ಗಾಜಿನೊಳಿಹ ದೀಪ
ಮೊಳಪೊರಗತಿ ಬೆಳಗುವಂತೆ
ನಿಲದೆ ನಿನ್ನೊಳೆಸದಿಹ ಚಿ
ತ್ಕಳೆಯೆ ಶಂಕರೇಶನೆಂದು ||3||
ಭಾವಲಿಂಗವ ಪರಿಭಾವಿಸು
ಭಾವಲಿಂಗವ ಪರಿಭಾವಿಸೆಜಿಸು ಯೋಗಿ |
ಜೀವ ಶಿವರದ್ವೈತ ಭಾವನೆ ನೀಗಿ ||ಪಲ್ಲ||
ಧರಣೀಯೇ ಪೀಠ ಮೇಣ್ದಿಶೆಯೆ ಗೋಮುಖ ಪೂರ್ಣ |
ಭರಿತಮಾಗಿರುತಿರ್ಪ ಬಯಲೆ ಗೋಳಕವು
ಇರದೆಲ್ಲ ಲೋಕವನೊಳಕೊಂಡ ಲಿಂಗವ
ಅರಿವೆಂಬ ವರಕರ ಸರಸಿಜದಿರಿಸಿ ||1||
ನದಿಗಳ ನೀರಿನಿಂ ಮುದದಿ ಮಜ್ಜನಗೈದು
ಸದಮಲ ಶಶಿ ಭಾಸ್ಕರ ಪುಷ್ಪಂಗಳ
ಪದೆದು ಧರಿಸಿ ವನೌಷಧಿಗಳನೆಲ್ಲತೀ
ವಿದನೈವೇದ್ಯವನಯದಿಂದರ್ಪಿಸಿ ||2||
ಅರಿಯಲು ಇದರಂತರದೊಳಿರುವ ಶಂ
ಕರ ಗುರು ನಾನೆಂದು ನಿರುತದಿನಿನ್ನೊಳು
ಸ್ಮರಿಸುತ ಸೇವ್ಯ ಸೇವಕ ಭಾವಂಗಳ
ಪರಿದು ಸರ್ವಂಖಲ್ವಮೆಂಬ ಶೃತಿಯರಿದು ||3||
ಲಿಂಗಪೂಜೆ ಮಾಡೊ ಎಲೊ ಎಲೊ
ಲಿಂಗಪೂಜೆ ಮಾಡೊ ಎಲೊ ಎಲೊ |
ಲಿಂಗಪೂಜೆ ಮಾಡೊ
ಲಿಂಗಪೂಜೆ ಮಾಡಂಗದೊಳನುದಿನ
ತುಂಗ ಸಾಧನೆಗಳಿಂ ಗಮ್ಮನೆ ನೀಂ ||ಪಲ್ಲ||
ಶಿವ ಸಕಲಾಧಾರೆಂಬುವದಾಸನ
ಶಿವ ಜಗಭರಿತೆಂಬುವದಾಹ್ವಾನ
ಶಿವ ಚಿನ್ಮಯನೆಂಬುವದೆ ಉಪಾದ್ಯವು
ಶಿವ ಕರುಣಾರ್ಣವನೆಂಬುವದಘ್ರ್ಯ ||1||
ಹರ ಸರ್ವೆಂಬುವದಾಚಮನೀಯ್ಯವು
ಹರ ಪಾವನನೆಂಬುವದಭೀಷೇಕ
ಹರ ಪರಿಪೂರ್ಣನದೆಂಬುದೆ ವಸ್ತ್ರವು
ಹರ ನಿತ್ಯನುಯೆಂಬುವದೆದೆ ಸೂತ್ರ ||2||
ಶಮೆಯೆಂಬುವದೆಯಲಂಕಾರವು
ನಿರುಪಮವಹ ಸದ್ಭಕ್ತಿಯದಕ್ಷತಿಯು
ದಮೆಯೆಂಬುದೆ ಲೇಪನ ನಿರ್ವಿಷಯವೆ
ವಿಮಲ ಧೂಪ ಚಿದ್ಬಿಂದುವೆ ದೀಪ ||3||
ಮತಿಯ ಭೇದ ನೈವೇದ್ಯವು ತ್ರೈಗುಣ |
ದತಿಶಯ ಪರಿಮಳ ತಾಂಬೂಲ
ಕ್ಷಿತಿಯೊಳು ಸೋಹಂಭಾವ ಪ್ರದಕ್ಷಿಣ
ವಿತತ ತತ್ವಮಿರ್ದುದೆ ವಂದನವು ||4||
ಪರತರ ಗುರು ಶಂಕರನೊಳೈಕ್ಯವನು |
ವೆರಸಿ ಸುಮ್ಮನಿರುತಿಪ್ಪುದೆ ಯೋಗ
ಅರುವಿನ ಕುರುಹಿಂ ಪರಮ ಸುಖದಿ
ನಿಬ್ಬೆರಗಾಗಿರುತಿಹುದೆ ವಿಸರ್ಜನವು ||5||
ಬೆರದೇಕಿಕರಿಸು ಯೋಗಿ
ಬೆರದೇಕಿಕರಿಸು ಯೋಗಿ
ಮೂಲಿಂಗದಿ ಬೆರದೇಕಿಕರಿಸು ಯೋಗಿ
ಬೆರದೇಕಿಕರಿಸು ಸ್ವೇತರ ಭಾವ ಪರಿಸು
ಸುಸ್ಥಿರ ನಂಬಿಗಿರಿಸು ಅಂತರದೊಳು ಸ್ಮರಿಸು ನೀ ||ಪಲ್ಲ||
ಅರಿವೆಂಬ ಪರಿಮಳವ ನಿರಂತರ
ಧರಿಸಿಕೊಂಡುರೆ ಮೆರವ ಸ್ಫುರಿಸಿದ ಹೃತ್ಸರ
ಸಿರುಹ ಕರ್ಣಿಕೆಯೊಳು ಪರಿಶೋಭಿಸುವ
ಪರತರಿಷ್ಟಲಿಂಗದಿ ||1||
ಗಂಗೆ ಮೇಣ್ ಯಮುನೆಗಳು ಒಂದಾಗಿರ್ಪ
ಸಂಗಮಸ್ಥಾನದೊಳು ಕಂಗೊಳಿಸುವ ಗಗ
ನಾಂಗಣದಿರುತಿಹ ತುಂಗತರದ ಪ್ರಾಣ
ಲಿಂಗದೊಡನೆ ನೀನು| ||2||
ಗುರು ವರಶಂಕರನು ಅನಾರತ
ಪರಮಾನಂದೊಳು ತಾನು ಚರಿಸುವ
ನಡುವಿನ ಮೆರವ ನಾಡಿಯ ಸುಮಂದಿರದಿ
ವಾಸಿಸಿದ ಬಾಸುರ ಭಾವಲಿಂಗದಿ ||3||
ಯೋಗಿಗಳಿಗೈದವಸ್ಥೆಗಳು ನೋಡೋ
ಯೋಗಿಗಳಿಗೈದವಸ್ಥೆಗಳು ನೋಡೋ
ಬೇಗದಿಂದರಿದು ನಿಜಸುಖದಿ ಕೂಡೊ ||ಪಲ್ಲ||
ಇಳೆಯ ಪರಲೋಕ ಸುಖಗಳನುಳಿದು ತನಗೆ
ನಿರ್ಮಳ ಮೋಕ್ಷವೆಂತಪ್ಪುದೆಂದು ಸತತಂ
ಸಲೆ ಶೃತಿ ಗುರೂಕ್ತಿಗಳ ತಿಳಿದು ಶಮೆ ಸತ್ಯಾದಿ
ಬಲು ಸುಗುಣಗಳೊಳೆಚ್ಚರಿಹುದೆ ಜಾಗ್ರ ||1||
ಸುರಚಾಪ ಶರದಭ್ರ ಮರುಮರೀವೆಕೆಯಂತೆ
ನೆರೆ ಭ್ರಾಂತಿಯಿಂ ತೋರ್ಪ ಸಂಸರಣವು
ಬರಿ ಗಂಟೆದೆಂದುಮುಂ ಬರಿದಾತ್ಮನುಳುಮೆಯನೆ
ಪರಿಭಾವಿಸುತ್ತಿರಲ್ಕಿದೆ ಸ್ವಪ್ನವು ||2||
ಭೇದವಳಿದ ವಿರಳ ಸುಬೋಧವಳವಟ್ಟು
ಮತ್ತಾದ ಪ್ರಾರಬ್ಧ ಸುಖ ದುಃಖಂಗಳ
ಮೋದ ಖೇದವು ಬಂದ ಹೋದ ಹೊಲಬಿಲ್ಲ
ದಂತಾದೊಡೆ ಧರಾತಲದೊಳಿದೆ ಸುಷುಪ್ತಿ | |3||
ಪೊರಗಿರ್ಪ ಬರಿಗೊಡದ ಪರಿಯಂತೆ ಬಾಹ್ಯ
ವಂತರದ ಭಾವನೆಯ ಸಂಶಯವಿಲ್ಲದ
ಶರಧಿಯೊಳು ಮಗ್ನವಾಗಿರುವ ಘಟದಂತೆ
ಬಂಧುರದಿ ಪೂರ್ವತೆಯೊಳಿರಲಿದುವೆ ತೂರ್ಯ ||4||
ತನು ವಿಡಿದು ಮಿಕ್ಕಾವ ಮನಸಿನಭಿಮಾನವ
ವೆಳ್ಳನಿತು ತೋರದೆ ಶಂಕರೇಶ ನೆನಿಸಿ
ಬಿನಗುವಾದಿಗಳೆಲ್ಲ ಮನಕೆ ಬಂದಂತೆ ಶಾ
ಸನಗೊಳಿಸಿದಿರವೆ ತೂರ್ಯತೀತವು ||5||
ಧ್ಯಾನ ಮಾಡುವೆ ಗುರು ಧ್ಯಾನ ಮಾಡುವೆ
ಧ್ಯಾನ ಮಾಡುವೆ ಗುರು ಧ್ಯಾನ ಮಾಡುವೆ
ಮಾನವಮಾನಗಳೆಲ್ಲ ಸಮಾನವೆಂದು ತಿಳಿಯುತ ಗುರು | |ಪಲ್ಲ||
ನಿಂದಿಸಿ ನುಡಿಯಲಿ ಎನ್ನನು ವಂದಿಸಿ ಸತ್ಕರಿಸಲಿ ಗಡ
ನಿಂದಾ ವಂದನೆಗಳು ಸಮವೆಂದಂತರ್ಮತಿಯಲಿ ಗುರು ||1||
ಯೋಗಿಯಂದು ಭಜಿಸಲಿ ಬಹು ರೋಗಿಯಂದು ತೆಜಿಸಲಿ ನಿಗ
ಮಾಗಮದೊಳು ವಿಧಿಸಿದ ಶಿವಯೋಗ ಮುದ್ರೆಯಿಂದಲಿ ಗುರು || 2||
ಪಾಡುತ ಸ್ಮರಿಸಲಿ ವಿಧವಿಧ ಕಾಡುತ ಜರಿಯಲಿ ಕೋಪದಿ
ನೋಡುತ ನಿಜ ಮುಕ್ತಿಯ ದಯಮಾಡಿದ ಶ್ರೀಶಂಕರನನು ||3||
ಆರು ತೆರದಿಂದೆಸವ ಗುರುಗಳಿಹರು
ಆರು ತೆರದಿಂದೆಸವ ಗುರುಗಳಿಹರು
ಸಾರ ಸಂಭ್ರಮದಿ ಶೀಷ್ಯರನು ಪಾಲಿಪರು ||ಪಲ್ಲ||
ನರ ವಸೀಕರಣಾದಿ ಪರಿವಿಡಿದು ಸುಖ ದುಃಖ
ವೆರಡನೀವಾತನೆ ನಿಷೇಧಕ ಗುರು
ಪರಮ ಸಂಪದವಿಲ್ಲಿ ಪರಲೋಕದಲಿ ಸುಖವ
ಕರುಣದಿಂದೀವನೇ ಕಾಮ್ಯದ ಗುರು ||1||
ಭೇದ ಮತಿ ಬಿಡಿಸುತ ಕ್ಷಮಾದಿ ಸಾಧನ
ಗುಣಗಳಾದರದೊಳಿಡಿಸುವನೆ
ಸೂಚಕ ಗುರು ವೇದಾಂತದೊಳು ಗೌಪ್ಯವಾದ
ತತ್ವವನೆ ಸಮ್ಮೋದದಿಂ ತಿಳಿಸುವನೆ ವಾಚಕ ಗುರು ||2||
ಎರಡಾಗಿ ತೋರುತಿಹ ಪರಮ ಜೀವರನೈಕ್ಯ
ವೆರಸಿ ತೋರಿಸುವಾತ ತಾರಕ ಗುರು
ಪರತರಾನಂದ ಶಂಕರ ಗುರುವೆ ತಾನಾದ
ವರ ಮೋಕ್ಷ ಪಾಳಿಪನೆ ವಿರಹಿತ ಗುರು ||3||
ಬೋಧೆ ಯಾತಕೆ ಶ್ರೀಗುರು ಬೋಧೆ ಯಾತಕೆ
ಬೋಧೆ ಯಾತಕೆ ಶ್ರೀಗುರು ಬೋಧೆ ಯಾತಕೆ
ವೇದಾಂತ ಶೃತಿಯೋದಿ ವಾದಿಪಗೆ ||ಪಲ್ಲ||
ಮಾನವ ಜನ್ಮದಿ ತಾನುದಿಸಿ ಶಿವನ
ಧ್ಯಾನಗೈದುವರ ಬೇಡದೆ
ಸದ್ದಾನ ಧರ್ಮಗಳ ಮಾಡದೆ
ಸುಜ್ಞಾನ ಮಾರ್ಗವನು ನೋಡದೆ
ಹೀನ ವಿಷಯದಭಿಮಾನವಿಡಿದು
ಮದ್ದಾನೆಯಂತೆ ಬಲು ಮೌನದೊಳಿರುವಗೆ ||1||
ಹರಚರಗುರು ಸಚ್ಛರಣರ ಕಂಡಡೆ
ಸರಸದಿಂದೆ ತಲೆವಾಗದೆ
ಸಂತರ ಸುದರ್ಶನಕೆ ಪೋಗದೆ
ದುಶ್ಚರಿತ ಗುಣಗಳನು ನೀಗದೆ
ಹರ ಯೋಗಿಗಳಂತರವರಿಯದ ಬಹು
ಜರಿದು ವರ್ತಿಸುವ ಮರುಳು ಮತಿಗಳಿಗೆ ||2||
ಧಾರಿಣಿಯೊಳೆ ಪರನಾರಿಯ ಸಂಗದಿ
ಸೇರಿ ಸ್ವಪತ್ನಿಯ ದೂಷಿಸಿ
ಅವಿಚಾರ ನಡೆಯೊಳು ಪ್ರವೇಶಿಸಿ
ಔದಾರ ಗುಣಗಳನು ನಾಶಿಸಿ
ಧೀರ ಗುರು ಶಂಕರೇಂದ್ರನ ಪದಪಂ
ಕೇರುಹ ಭಜಿಸದ ಕ್ರೂರ ಕುಹಕರಿಗೆ ||3||
ಎಂದಿಗಾಗದು ಮೋಕ್ಷವು ಎಂದಿಗಾಗದು
ಎಂದಿಗಾಗದು ಮೋಕ್ಷವು ಎಂದಿಗಾಗದು
ಚಂದದಿ ವಿಧಿಗಳ ಪೊಂದದೆ ಸುಮ್ಮನೆ ||ಪಲ್ಲ||
ಜಗದಿ ಸತ್ಯ ಮಿಥ್ಯಗಳನು ತಿಳಿಯದೆ
ಮಿಗೆ ಭೋಗದ ಭ್ರಾಂತಿಯ ಬಿಡದೆ
ಸೊಗಸುವ ಷಟ್ಸಾಧನಗಳು ಬಯಲಿದೆ
ಬಗೆದು ವೇದ ನುಡಿಗಳ ಕೊಂಡಾಡದೆ ||1||
ಗುರುವರನಡಿದಾವರೆಯ ಸೇವೆಯನು
ಸ್ಥಿರಚಿತ್ತದಿ ಮಾಡದೆ ಜೀವ
ಪರಮರನೈಕ್ಯವ ನೆರೆಗಯ್ಯದೆ ಸಂ
ತರ ಸಂಗದ ಸಾಗರದೊಳು ಮುಳುಗದೆ ||2||
ನಾನು ನೀನೆನುವ ಭಾವಮನಳಿಯದೆ
ಹೀನ ನಡೆ ನುಡಿಯನಾಶಿಸದೆ
ಜ್ಞಾನ ಸೌಧ ಸೋಪಾನವ ಮೆಟ್ಟದೆ
ನಾನಾ ಕಲ್ಪನೆಗಳನೀಡಾಡದೆ ||3||
ತನುವಿನುಪಾಧಿಗಳನು ಬೇರಿಡದನು
ದಿನದೊಳು ಸದುಗತಿಗಿಚ್ಛಿಸದೆ
ಮಿನಗುವ ಸಂಸೃತಿ ಕನಸೆಂದರಿಯದೆ
ಮನವನು ಶಿವ ಮನುವಿನೊಳೊಡವೆರಿಯದೆ ||4||
ದ್ವೈತವಳಿದು ವಿಪರೀತ ಭಾವನೆಯ
ರೀತಿಗಳನು ಮರೆಮಾಚಿಸದೆ
ಸಾತಿಶಯ ಸುಖ ವಿದಾತನೆನಿಪ ಗುರು
ನಾಥ ಶಂಕರೇಶನು ನೀನಾಗದೆ || 5||
ಜ್ಞಾನ ವೈರಾಗ್ಯೋಪರತಿ ಮೂರು ಮುಕ್ತಿಗೆ
ಜ್ಞಾನ ವೈರಾಗ್ಯೋಪರತಿ ಮೂರು ಮುಕ್ತಿಗೆ
ನೂನ ಸಾಧನಗಳೆಂದೆನಿಸುವವು |ಪಲ್ಲ||
ಶ್ರವಣಾದಿಗಳೆ ಕಾರಣವು ಹಂಕೃತಿಗಳನು
ತವಿಸುವದೇ ರೂಪವು ಸಂಸೃತಿಯ
ತವೆ ಸಾಕ್ಷಿತ್ವವೆ ಕಾರ್ಯವಿವೆ ಮೂರು ಜ್ಞಾನಕ್ಕೆ
ಭುವಿಯೊಳು ನಿಜಮೆಂದೆಂಬುವರು ಬಲ್ಲರು ||1||
ವನಿತಾದಿ ದೋಷದ ದರ್ಶನವೆ ಕಾರಣವು
ಮತ್ತನುವಿನಿಂದವನುಳಿವುದೆ ರೂಪವು
ಮನವೆತ್ತಲೆರಗಿದಪ್ಪುದೆ ಕಾರ್ಯವಿವೆ ಮೂರು
ಘನ ವಿರತಿಗೆ ಸ್ಥಾನಮಾಗಿಹವು ||2|
ಯಮನಿಯಮಾದಿ ಯೋಗಮೆ ಕಾರಣವು ಸ್ಥಿರ
ವಿಮಲ ಚಿತ್ತವೆ ರೂಪು ಕರ್ಮಗಳ
ಭ್ರಮಿಸದಿಪ್ಪುದೆ ಕ್ಯಾರ ಕ್ರಮದಿಂದಲಿವೆ ಮೂರು
ಉತ್ತಮದು ಪರತಿಗೆ ಮೂಲಗಳಾಗೆಸವವು ||3||
ಅರಿವಿಲ್ಲದೆರಡಿರುತಿರೆ ಮುಕ್ತಿಯಾಗದು
ಉತ್ತರ ಲೋಕ ಗತಿ ಮಾತ್ರ ಪ್ರಾಪ್ತಿಪುದು
ವಿರತಿಯು ಪರತಿಗಳೆರಡಿರದರಿವೊಂದೆ
ಯಿರೆ ಮೋಕ್ಷವಹುದಾರಬ್ಧದ ಕರ್ಮ ಬಿಡದು ||4||
ವಿರತಿಗೆ ಸರ್ವವು ತೃಣಮೆಂಬುವದೆ ಕೊನೆ
ಪರ ಉಪರತಿಗೆ ಎಚ್ಚರಮಿಲ್ಲದೆ
ಧರೆಯೊಳಿಹುದೆ ಕೊನೆಯರಿವಿಗೆ ಶಂಕರ
ಗುರುವೆ ನಾನೆಂಬ ಬಂಧುರ ಬುದ್ಧಿ ಕೊನೆಯು ||5||
ಜ್ಞಾನವನೆ ದೃಢ ನೀನಂಬು ಮನುಜಾ
ಜ್ಞಾನವನೆ ದೃಢ ನೀನಂಬು ಮನುಜಾ
ಮಿಕ್ಕೇನು ಬಯಸದೆ ||ಪಲ್ಲ||
ಪರಿಪರಿ ಕರ್ಮದ ಶರಧಿಯೊಳಗೆ
ಬಿದ್ದೊರಳುತ ಜ್ಞಾನವ ಮರೆಮಾಜಿ
ನಿರುಪಮ ಮೋಕ್ಷವ ನೆರೆ ಭ್ರಾಂತಿಸಿದೊಡೆ
ದೊರೆಯದದೆಂದಿಗು ಬರಿದೆ ಕೊರಗಿದೀ ||1||
ನುತ ವೇದಾಗಮ ತತಿಯೊಳು ವಿಧಿಸಿದ
ವಿತತ ಯಾಗಯೋಗಾದಿಗಳು ಮತಿಯೊಳರಿವುದಿಸೆ
ಕ್ಷಿತಿಯೊಳು ಕೋಟೆಯೊಳು
ತಿಳಿಯೆಲೊಂದಂಶಕೆ ಸರಿಯಲ್ಲೀ ||2||
ತನುವನು ದಂಡಿಸಿ ಮನವನು ನಿಲ್ಲಿಸಿ
ಧನವ ನೀಗಿ ಮನೆಯನು ತೊರೆದು
ವನವಾಸಮದೇಕಿನಿತು ಜ್ಞಾನ ಸಂ
ಜನಿಸಲಘದ ಕುಲಮನು ಕೆಡಿಸುವದೀ ||3||
ಅರಿವೆಂಬುವದಿದೆ ಪರಮ ಮೋಕ್ಷ ಪಥ
ಮರಳಿ ಬೇರೆಯೊಂದಿಲ್ಲೆಂದು
ವರ ಶೃತಿನಾನ್ಯಃಪಂಥಮೆನುತ
ಸಾರಿರುವದದನೀನರಿದು ದಿನದೀ ||4||
ಪರತರ ಗುರು ಶಂಕರನ ಜ್ಞಾನವಂ
ತರದೊಳಳವಡಲು ಸ್ಥಿರಮಾಗಿ
ಪರಮಾನಂದದ ಪುರುಷವು ನಿನ್ನಗೆ
ದೊರೆವದು ಸತ್ಯವು ಬರಿ ಮಾತಲ್ಲೀ
ಜ್ಞಾನವನೆ ದೃಢ ನೀನಂಬು ಮನುಜ ||5||
ಅರಿವಿದೆ ಸತ್ಯವೆಂದರಿದುವರ್ತಿಸುಯೋಗಿ
ಅರಿವಿದೆ ಸತ್ಯವೆಂದರಿದು ವರ್ತಿಸು ಯೋಗಿ
ಭರದಿ ಮುನ್ನಿನ ಜಡ ಮತಿನೀಗಿ ಪಲ್ಲ||
ದುರಿತ ತಿಮಿರ ದಿನಕರ ಪರಿಭವ ಮೇಘ
ಬಿರುಗಾಳಿಯ ಜ್ಞಾನವನನ್ಹಿ
ಕರುಣ ಕಶ್ಮಲ ಗಿರಿವರ ವಜ್ರವನು ತಾಪ
ಕರಿ ಸಿಂಹ ಕ್ಲೇಶ ಕುಜ ಕುಠಾರ || 1||
ಪರಮ ಸುಖದದುಗ್ಧ ಶರಧಿ ಹಿಮಾಂಶು
ಭಾಸುರ ಕೈವಲ್ಯದ ಸಾರ ಸುರಭೂಜ
ಮೆರವ ಸಿದ್ಧಿಗಳ ಮಂದಿರವು ಸುಕೃತದುರು
ತರಮಾಗಿ ತೋರ್ಪರೋಹಣ ಶೈಲ ||2||
ಶೃತಿಯ ಸಂತತಿಯು ನಿರುತದೊಳರಸುವ
ಲಲಿತ ಯೋಗಿಗಳು ಹೃದ್ವನಜದಲ್ಲಿ
ಹಿತದಿ ಸ್ಮರಿಪ ಸುರಪತಿ ಮುಖ್ಯ
ದಿವಿಜರು ನುತಿಪ ಶಂಕರನಿರ್ಕೆ ಇದು ನೋಡು ||3||
ಸುಮ್ಮನೆ ಬಳಲ್ವರು ತಮ್ಮೊಳಗಿಹ
ಸುಮ್ಮನೆ ಬಳಲ್ವರು ತಮ್ಮೊಳಗಿಹ
ಪರಬೊಮ್ಮವನರಿಯದೆ ಪೊರಗರಿಸಿ |ಪಲ್ಲ||
ಸಕಲ ತತ್ವಗಳನು ಯುಕುತಿಯಿಂ ತಿಳಿದನಾ
ತ್ಮಕವೆಂದು ನೇತಿಗಳೆದು ಒಳಗೆ
ಪ್ರಕಟದಿಂದಿವಕೆಯಧಿಕರಣವೆಂದಿನಿಪ
ಅಕಳಂಕ ಪರ ತತ್ವವದು ತಾವೆಂದರಿಯದೆ ||1||
ನಿರುತದಿ ನಡೆವ ಜಾಗರಣ ಕನಸು ಸುಪ್ತಿ
ಮಿರಗುವ ಮೂರವಸ್ಥೆಗಳಲ್ಲಿ ಶರೀರದಿ ಬೇರಾಗಿ
ಸ್ಫುರಿಪ ವಿಶ್ವಾದಿ ಜೀವರನಂಟ
ದಾನಂದವೇ ತಾವೆಂದರಿಯದೆ ||2||
ಸ್ವಗತಾದಿ ಮೂರು ಭೇದಗಳ ಭಾವನೆಯು
ತನ್ನಗೆಯಿನಿತಿಲ್ಲದೆಯನುದಿನದಿ
ಗಗನದಂತ ವಿರಳವಹ ಗುರು ಶಂಕರ
ನಗಲಿಕೆ ತಮಗಿಲ್ಲವೆಂದು ನಿಶ್ಚೈಸದೆ ||3||
ಉಳಿವದೇನೊಂದದುವೆ ನೀನಿರುವಿ
ಉಳಿವದೇನೊಂದದುವೆ ನೀನಿರುವಿ
ಹೇ ಮಂದಮತಿಯೆ ಉಳಿವದೇನೊಂದದುವೆ ನೀನು
ಅಹುದಿಳೆಯೊಳಗೆ ನಾನಾತ್ವ ಕಲ್ಪನೆಗಳನುಳಿದು
ಬಹುವಾದ ತತ್ವಂಗಳನು ಶೋಧಿಸಿ ಕಳಿಯಲಾ ಕ್ಷಣ ||ಪಲ್ಲ||
ಹೃದಯ ಗ್ರಂಥಿಯ ಮೂಲವನ್ನಳಿದು
ಪ್ರಾಪ್ತಿಸದ ಮುಂದಿನ ಪದ ಫಲಗಳಾಶಯನು
ನೆರೆಗಳೆದು ಸದ ಸದದ ಭೇದವನರಿದು
ದುರ್ಮದ ಕುಟಿಲ ಮೋಹಾದಿ ಗುಣಗಳ
ಸದೆದು ನೀನದಿದೆಂಬ ಸಂಕಲ್ಪದ
ವಿಪಿನವನು ದಹಿಸಲಾಕ್ಷಣ ||1||
ಮುಂದೆ ನಿನಗಹ ಮುಕ್ತಿಯನು ಬಿಡದೆ ಲೌಕಿಕ
ವಿಷಯಾನಂದ ಕಾರ್ಯಕೆ ಚಿತ್ತವನು ಕೊಡದೆ
ಹಿಂದೆ ನಿನಗಾಗಿರ್ಪಖಿಳ ಭವ
ಬಂಧದೊಳಗಿನ್ನೊಮ್ಮೆ ಪೋಗದೆ
ಎಂದಿಗಳಿಯದ ನಿಜ ಸುಖದಿ ನೀ
ನಿಂದುವಂದರೊಳಡಗಲಾ ಕ್ಷಣ |2||
ಪೊರಗೊಳಗೆ ಎರಡೆಂಬುದನು ಬಿಟ್ಟು
ಇಹ ಪರಗಳೆಂಬುವ ಮರುಳ ಮಾತಿನ
ಮಮತೆ ಕಡಿದಿಟ್ಟು ಹಿರಿಕಿರಿಯರಿವರೆಂಬುದನು ಗಡ
ಮರೆದು ಮರವರಿವೆಯ ಶಿಖರದೊಳು
ನಿರುತ ನೆಲೆಯಾಗಿರುವ ಗುರು
ಶಂಕರನೊಳೈಕ್ಯವ ಪೊಂದಲಾ ಕ್ಷಣ ||3||
ನಿನ್ನಯ ನಿಜವಿದೆ ನಿನ್ನೊಳು ತಿಳಿ
ನಿನ್ನಯ ನಿಜವಿದೆ ನಿನ್ನೊಳು ತಿಳಿ ತಿಳಿ
ಭಿನ್ನವಿಟ್ಟರಸಿ ನೀ ಬನ್ನಬಡುವರೆ ||ಪಲ್ಲ||
ಘನ ಬ್ರಹ್ಮಾಂಡೈಕ ರೂಪಿನ ಕಾರ್ಯಕೀಗ
ಸಾಧನವಹ ಕಾಲ ಕರ್ಮಾಣು ಪ್ರಕೃತಿಯು
ಮಿನಗುವ ವ್ಯವಹಾರ ವಿನಿತು ಜೀವರುಗಳಿವನು
ದಿನವಧಿಕರಣೆನಿಪ್ರಸದ್ರೂಪವೆ ||1||
ನೆರೆದ ವಿಕೃತಿಗಳನಿರದೆ ವಿಕ್ಷೇಪವ
ನೆರೆ ಕೃತಿಸುವ ಮಾಯಾವರಣದಿ ತನಗಾ
ವರಿಸದ ಜೀವೇಶ ಕೂಟಸ್ಥ ಬ್ರಹ್ಮಾದಿ
ಪರಿಪರಿ ನಾಮದಿಂ ಮೆರವ ಚಿದೃಪವೆ ||2||
ಭೂತ ವಿಷಯ ಬ್ರಹ್ಮ ವಾಸನೆಯಾದ ನಿ
ಜಾತುಮಸಮ್ಮಂಧಾದ್ವೈತಮ ವಿದ್ಯಾ
ಭೂತಲದೆಂಟಾದ ಲೌಕೀಕಾಧ್ಯಾತ್ಮಗಳ
ಜಾತಕೆ ನೆಲೆಯಾದ ಸ್ಥಿರ ಸುಖ ರೂಪವೆ ||3||
ಎರಡೆಂಬುದನ್ನು ತಾ ಮರೆದೊಂದಾಗಿರುತಿಹ
ನಿರುತ ಪ್ರಾಗಾದಿಯ ಭಾವ ನಾಲ್ಕನ್ನು
ವರಿಸದೆ ನಿತ್ಯ ನಿರ್ಮಲವಹ ತನ್ನ
ಭಾಸುರ ಬೆಳಗಿಲಿ ತೋರ್ಪ ಪರಜ್ಯೋತಿ ರೂಪವೆ | |4||
ಮೂರು ಪರಿಚ್ಛೀದ ಮೀರುತ ಬ್ರಹ್ಮಾಂಡಾ
ಪಾರಮಾಲಿಕೆಗೇಕ ಸೂತ್ರಮಾಗಿ
ತೋರುವ ಮೂಲ ಮಾಯಾ ರಮೆಯಳಿಗೆಯಾ
ಧಾರನಾಗಿಹ ಪರಿಪೂರ್ಣ ಶಂಕರನೆ ||5||
ನೀನೆ ಬ್ರಹ್ಮನಹುದು ಅನುಮಾನ ಬೇಡೆಲೊ
ಜ್ಞಾನಮಾರ್ಗದಲ್ಲಿ ನಿನ್ನ ನೀನೆ ತಿಳಿದು ನೋಡೆಲೊ ||ಪಲ್ಲ||
ನಾನು ನೀನುಯಂಬ ಭೇದ ಭಾವವಳಿಯಲು
ಸ್ವಾನುಭಾವದಿಂ ಬಹುತ್ವ ಕೂನ ಕಳಿಯಲು ||1||
ಮಿನಗುವ ಜಗ ಕನಸಿನಂತೆ ನಿನಗೆ ಘಟಿಸಲು
ಜನಿಭವವಿಲ್ಲೆಂಬ ಶೃತಿಯ ಮನದಿ ಪಠಿಸಲು ||2||
ಭೂತ ಪಂಚಕಾದಿ ತತ್ವ ಜಾತ ಪುಶಿಯಲು
ಪೂತ ಶಂಕರೋರ್ವ ಸತ್ಯನಾತನೊಳಗೆ ಬೆರೆಯಲು ||3||
ಭವ ನಿನಗಿಲ್ಲವು ಜೀವನೆ
ಭವ ನಿನಗಿಲ್ಲವು ಜೀವನೆ
ಸುವಿವೇಕಿಸಿ ನೋಡು ನೋಡು ಪಲ್ಲ||
ಕಳವಳಗಳ ಕಳೆಯುತ
ಹೃನ್ನಳಿನದಿ ಮತಿ ನಿಲಲಾ ಕ್ಷಣದಿ
ಸಲೆ ಬೆಳಗಿನ ಬಳಗದೊಳುರೆ
ಪೊಳೆಯುವ ಶಿವ ನೀನೆಯಿರುವಿ ||1||
ಶರೀರೇಂದ್ರಿಯ ಕರಣದ ಕೃತಿ
ನೆರೆ ಭೂತ ನಿಕರವನು ಬಿಟ್ಟು
ಸರಸದಿ ಮುಂದರಿದೀಕ್ಷಿಸೆ
ಪರ ತತ್ವವು ನೀನೆ ಇರುವಿ ||2||
ನಿರಘ ನಿರಾವರಣ ಪರಾ
ತ್ಪರನದ್ವಯ ನಿರವಯನೆಂದು
ವರ ಶೃತಿ ಸಾರಿರುವದರಿಂ
ಗುರು ಶಂಕರ ನೀನೆಯಿರುವಿ ||3||
ತಾನೆ ತನ್ನನರಿದಾನಂದಿಸುವ
ತಾನೆ ತನ್ನನರಿದಾನಂದಿಸುವ
ಮಹಾನುಭವಿಯ ಸುಖಕೆಣೆಯುಂಟೆ
ಜ್ಞಾನಾಮೃತವನು ಪಾನಮಾಡ್ದವಗೆ
ಹೀನ ಕರ್ಮದಭಿರುಚಿಯುಂಟೆ ||ಪಲ್ಲ||
ಸಲೆ ಸಂಕಲ್ಪಗಳಳಿದು ನಿಂದವಗೆ
ಕುಲದಭಿಮಾನವು ನಿಲಲುಂಟೆ
ವಿಲಸಿತ ಪೂರ್ಣತೆಯಳವಡಿಸಿದಗಿಳೆ
ಯೊಳು ವ್ರತ ನೇಮಗಳಿಲಲುಂಟೆ ||1||
ಹೊರಗೊಳಗೊಂದಾಗಿರುತಿರ್ಪನಿಗೆ
ಸ್ವ ಪರಮೆಂಬುವ ಭಿನ್ನತೆಯುಂಟೆ
ಪರಮನ ಮನದಿಂದರಿತಾಗೆ ವನ
ಗಿರಿಯೊಳು ತಪಿಸುವ ಭ್ರಮೆಯುಂಟೆ ||2||
ಶರೀರವ ಪರವೆಂದರಿದವನಿಗೆ ಭವ
ಮರಣದಂಜಿಕೆ ಬರಲುಂಟೆ
ಚರಿಸುವ ಮನಸಿಗೆ ನೆರೆ ಸಾಕ್ಷಿ
ಕನೆಂದರಿದಗಿತರ ವಾಸನೆಯುಂಟೆ ||3||
ಧ್ಯಾನ ಧ್ಯೇಯಗಳ ಖೂನವ ಮರೆದಗೆ
ಮೌನ ಸಮಾಧಿಯ ತಗಲುಂಟೆ
ನಾನಾತ್ವವಗಡ ಹಾನಿಗೈದವಗ
ನೂನ ಸಂಸರಣ ತಡೆಯುಂಟೆ ||4||
ವನಜ ಭವಾಂಡವ ಹಾನಿಗೈದವಗ
ಜನದಪವಾದದ ಹೆದರುಂಟೆ
ಘನ ಬ್ರಹ್ಮವೆ ತಾನೆನಸಿ ಮೈಮರೆದವನಿಗೆ
ವಿಧಿ ನಿಷೇಧಗಳುಂಟೆ ||5||
ದ್ವಂದ ರೋಗ ಕಳೆದೊಂದೆಂಬುವನಿಗೆ
ಕುಂದು ಕೊರತೆಗಳ ಭಯಮುಂಟೆ
ಬಂಧ ಹರ ಶಂಕರೇಂದ್ರ ಗುರುವೆ ತಾ
ನೆಂದರಿದಗೆ ಪೆರತಿನ್ನುಂಟೆ ||6||
ನಿನಗೆ ಸುಮೋಕ್ಷಯಂತಹುದು
ನಿನಗೆ ಸುಮೋಕ್ಷಯಂತಹುದು ನಿನ್ನ
ಮನದೊಳು ನಾನಾತ್ವ ಮನೆಯ ಮಾಡಿಹುದು ||ಪಲ್ಲ||
ಅರಿವರ್ಗವನು ಜೈಸಲಿಲ್ಲ ಮತ್ತ
ಸಿರಿ ಸತಿ ಸುತ ಭೂಮಿಗಳ ಬಿಡಲಿಲ್ಲ
ಹೊರಗೊಳಗೊಂದಾಗಲಿಲ್ಲ ಇಹ
ಪರ ಭೋಗದಾಪೇಕ್ಷ ಮರೆದಿರಲಿಲ್ಲ ||1||
ಬರಿ ಕರ್ಮಗಳನಳಿಲಿಲ್ಲ ನಿನ್ನ
ಶರೀರದ ಮೋಹ ವಿಸ್ಮರಣಾಗಲಿಲ್ಲ
ಸ್ಮರ ಕಾಲರನು ಗೆಲಿಲಿಲ್ಲ ಜೀವ
ಪರಮರೊಂದೆಂಬ ಎಚ್ಚರ ಬರಲಿಲ್ಲ ||2||
ಕಾಪಟ್ಯ ಗುಣ ಕಳಿಲಿಲ್ಲ ನಿನ್ನ
ಚಾಪಲ್ಯತನಗಳ ಲೋಪಿಸಲಿಲ್ಲ
ಸೋಪಾಧಿಕವ ಬಿಡಲಿಲ್ಲ ನಾಮ
ರೂಪಗಳಿಗೆ ಬೇಗ ಶಾಪಿಸಲಿಲ್ಲ ||3||
ಧ್ಯಾನ ಧ್ಯೇಯವ ತೊರಿಲಿಲ್ಲ ನಾಮ
ನೀನೆಂಬುದಳಿದು ನಿಧಾನಿಸಲಿಲ್ಲ
ಮಾನವೆಂಟನು ಮೀರಲಿಲ್ಲ ಒಳ್ಳೆ
ಜ್ಞಾನದಿ ನಿನ್ನನು ಜಾನಿಸಲಿಲ್ಲ ||4||
ಮರವೆಯ ತರಿದಿಡಲಿಲ್ಲ ಕುಲ
ದರಿಶನದಭಿಮಾನ ದೂರಾಗಲಿಲ್ಲ
ಗುರು ಶಂಕರಾನೆನ್ನಲಿಲ್ಲ ಘಾಳಿ
ಯೊರತುರಿಯುವ ಜ್ಯೋತಿ ಪರಿ ತೋರಲಿಲ್ಲ ||5||
ನಿನ್ನಗಿಂ ಬೇರಿನ್ನು ಶಿವನುಂಟೆ
ನಿನ್ನಗಿಂ ಬೇರಿನ್ನು ಶಿವನುಂಟೆ
ನಿರುಪಮ ಸುಜ್ಞಾನವೆ ||ಪಲ್ಲ||
ನಿರುತದಿ ವರ ಜಾಗರಣದವಸ್ಥೆ
ಯೊಳಿರದೊದಗುವ ಜಡ ಕಾರ್ಯಗಳ
ಪರಿಯ ವಿಶ್ವನೆಂಬುರು ನಾಮದಿ
ಭಾಸುರನೇತ್ರದಿ ನೀನರಿದು ಕೊಳುವಿ ಗಡ ||1||
ಅನುದಿನದೊಳು ಕನಸಿನೊಳುದಿಸುವ
ಕಲ್ಪನೆಗಳ ಮೂಲವನನುವಾಗಿ
ಘನತೈಜಸ ನೀನೆನಿಸುತ ಭರದೊಳು
ಮನವೆಂಬುವ ಸಾಧನದೊಳರಿವಿ ಗಡ ||2||
ನೆರೆ ನಿದ್ರೆಯೊಳಾವರಿಸಿದ ಮೂಲಾ
ವರಣ ವೃತ್ತಿ ಕರಣದಿ ನಿಂದು
ಮಿಗುವ ಪ್ರಾಜ್ಞ ಪೆಸರಿನಿಂ ಪರಸುಖ
ವರಿದು ಶಂಕರನೆ ನೀನಾಗುವಿ ಗಡ ||3||
ಏನಾಶ್ಚರ್ಯವೋ ಇದು ಏನಾಶ್ಚರ್ಯವೋ
ಏನಾಶ್ಚರ್ಯವೋ ಇದು ಏನಾಶ್ಚರ್ಯವೋ
ನೀನಿರೆ ಮೋಕ್ಷವು ತಾನಹುದಂತಿದು ||ಪಲ್ಲ||
ಉಳ್ಳ ವಿಷಯಗಳನೆಲ್ಲವನುವಿನಿಂ
ನಿಲ್ಲದೆ ವಿಧ ವಿಧದಲ್ಲಿ ಬಗೆಗೊಳುವಿ ||1||
ಒಂದರೊಳೊಂದಿರದಂದವಸ್ಥಗಳೊಂದದೆ
ಸಾಕ್ಷಿಕನೆಂದು ಶೋಭಿಸುವಿ ||2||
ಜಗದೊಳು ತನು ಭಿನ್ನಗಳಾಗಿರ್ದರವುಗಳ
ಬೆರಸಿ ಹಾನಿಗಳಿಲ್ಲದಿರುವಿ ||3||
ಭೂವಿಯೊಳು ದಿನ ಮಾಸವು ಮನ್ವವು
ಯೆಂಬುವ ಬಹು ಕಾಲದೊಳವತುಕೊಂಡಿರುವಿ ||4||
ವರ ದೃಗಮನಮೀಶ್ವರ ಬೊಮ್ಮಾಗಿಹ
ಗುರುಶಂಕರ ದೇವರ ನಿಜಮೆನಿಸಿದಿ ||5||
ಧನ್ಯನಾದೆನು ನಾ ಬಲು ಧನ್ಯನಾದೆನು
ಧನ್ಯನಾದೆನು ನಾ ಬಲು ಧನ್ಯನಾದೆನು
ಮುನ್ನಿನ ಜೀವದ ಭಾವವಳಿದು ಬಲು ||ಪಲ್ಲ||
ನೆರದ ಸಭಾ ಮಂದಿರದ ಜನರ
ಮುಂದುರಿಯುವ ಜ್ಯೋತಿಯ ಪರಿಯಂತೆ
ಕರಣೇಂದ್ರಿಯ ಪರಿ ಪರಿ ವಿಷಯಂಗಳ
ನೆರೆ ಸಾಕ್ಷಿಕ ನಾನೆಂದು ತಿಳಿದು ಬಲು ||1||
ಮನೆ ಗವಾಕ್ಷ ಗತದಿನ ಕಿರಣದಿ ಕರವನು
ಚಲಸೆ ರವಿಚಲಿಸಿತೆಂದು ಅನಿಸುವ ತೆರದೊಳು
ಜನನ ಮರಣ ಜೀವನಿಗೆ ತೋರ್ಪ
ವೆನಗಿಲ್ಲೆನ್ನುತ ಬಲು ||2||
ಬೆಳಗು ತಮಗಳನು ತಳೆದಾಗಸ ನಿ
ರ್ಮಳವಿಹ ಪರಿಮರವರಿವೆಗಳ
ಬಳಕೆಯೊಳಿರ್ದವುಗಳ ಬೆರಸದ
ಅವಿರಳ ಶಂಕರ ಗುರುನಾನೆಯಂದು
ಬಲು ಧನ್ಯನಾದೆನು ||3||
ಆಗದು ನಿಜ ಸುಖವು ಹೇ ಮನುಜ
ಆಗದು ನಿಜ ಸುಖವು ಹೇ ಮನುಜ
ಕೂಗಿ ಪೇಳವೆ ನಿನಗೆ ಆಗದು ನಿಜ ಸುಖ
ಭೋಗಿಗಳಿಗಿಹದೋಳಿಗ ಬ್ರಹ್ಮವನುವಾಗಿ ತಿಳಿಯದಿರೆ |ಪಲ್ಲ||
ನಿಗಮಾಗಮಗಳ ನೋಡುತೆ
ಹಗಲಿರುಳಲಿ ನುತಿ ಮಾಡುತೆ
ಸೊಗದಿಲಿ ಗೀತಗಳಾಡುತೆ
ಸುಗುಣಗಳೊಳು ನೀಂ ಮಿಗೆ
ಶೋಭಿಸಲೇಂ ಜಗದೊಳು
ನಿನ್ನಯ ಬಗೆಯೊಂದರಿಯದೆ ||1||
ಕಪಟ ಗುಣಂಗಳನಳಿಯುತೆ
ಚಪಲತನವ ನೀ ತಳೆಯುತೆ
ಅಪರಮಿತ ಮಂತ್ರ ತಿಳಿಯುತೆ
ಜಪಮಾಡಿದರೇಂ ಗುಪಿತದಿ
ಗುರುವರನುಪದೇಶದ
ಸತ್ಕೃಪೆಯನು ಪಡಿಯದೆ ||2||
ಅಷ್ಟ ಸಿದ್ಧಿಗಳ ಪಡೆಯುತೆ
ಅಷ್ಟ ಮದಗಳನು ಕಡಿಯುತೆ
ಅಷ್ಟ ಕಷ್ಟಗಳ ತೊಡೆಯುತೆ
ಇಷ್ಟಮಹತ್ವದನೆಷ್ಟು ಮಾಡ್ದರೇಂ ಶ್ರೇಷ್ಟ
ಗುರು ಶಂಕರೇಶನ ತಿಳಿಯದೆ 3||
ಎನಿತು ಸುರಿದರು ತೀರದು
ಎನಿತು ಸುರಿದರು ತೀರದು ಎನಗಾದ
ಘನ ಸಂತಸದ ಬಗೆಯನು ಶಿವನೆ ||ಪಲ್ಲ||
ಪರಿಭವದ ಭಯಕೆ ಬೆದರಿ ಆರಿಂದ
ಪರಿಹರಮಿದಪ್ಪುದೆಂದು ಮನದಿ
ಕೊರಗಿ ಗುರುಪದವ ಪಿಡಿಯೆ ತದ್ಭಯವು
ಇರದೋಡಿ ತಾ ಕ್ಷಣದೊಳು ಶಿವನೆ ||1||
ಶರೀರವಾನೆಂದು ಮಾಯಾದುರುಮೋಹ
ಶರಧಿಯೊಳು ಬಿದ್ದು ಮರುಗೀ ಬಳಿಕಾ
ನರಿದು ಯೋಚಿಸಿ ನೋಡಲು ಆದನುಳಿದು
ಪರಮ ನಾನೆಂದೆನಿಸಿದೆ ಶಿವನೇ ||2||
ಧರೆಯೊಳಾನೆಂಬುವರ್ಥವೇನೆಂದು
ವರ ಶೃತಿಯ ಮತವನಿಡಿದು ಬೇಗದಿಂ
ಪರಕಿಸಲು ನೀನೇ ನಾನು ಆಗಿರುವೆ
ಮೆರವ ಶ್ರೀಗುರು ಶಂಕರ ಶಿವನೇ ||3||
ಮಿಥ್ಯಯಾದ ಘಟವೆ ನೀನು
ಮಿಥ್ಯಯಾದ ಘಟವೆ ನೀನು
ತಥ್ಯದಂತೆ ತೋರಿ ಬಿಡದ
ಪಥ್ಯ ಮಾರ್ಗಕ್ಕೆಳಸಿ
ಮೋಹಗೊಳಿಪುವುಚಿತವೆ ||ಪಲ್ಲ||
ಮೊಟ್ಟ ಮೊದಲು ಮೃತ್ತಿಕೆಯೊಳು
ದಿಟ್ಟಿವರಿದೊಡಿಲ್ಲ ನೀನು
ಪುಟ್ಟಿದ ಬಳಿಕೊಡೆದು ಧೂಳಿಯಾಗಲಿಲ್ಲವು
ಮೊಟ್ಟ ಮೊದಲು ಕಟ್ಟ ಕಡೆಯೊಳೆಷ್ಟು
ಶೋಧಗೈದರಿಲ್ಲ ನಟ್ಟನಡುವೆ
ನಿನ್ನಗಾವ ರೂಪು ನಿಜವದು ||1||
ನರರ ಮುಖದ ಬರಿಯ ನುಡಿಗಳ
ರವಿನಿಂದ ಕಣ್ಗೆ ಚಂದವೆರಸಿ ಕಲ್ಪಿತಾ
ಕೃತಿಯಂತಳೆದು ತವಕದಿ
ವರ ವಿವೇಕ ವಿರಹಿತರ್ಗೆ
ಪರತರಾರ್ಥವೆನೆಸಿ ತೋರ್ಪೆ
ಪರಿಕಿಸಲ್ಕೆಯೆಂದಿಗಿಲ್ಲ
ನಿನಗೆ ತೋರ್ಕೆಯು || 2||
ಇಲ್ಲೆನಿಸದೆ ಕಾಲ ಮೂರರಲ್ಲಿ
ತೋರದಡಗದಿರ್ಪ
ಸಲ್ಲಲಿತದಿ ತೋರ್ಪ ಮಣ್ಣೆಯಲ್ಲವೆ ನೀನು
ಉಳ್ಳ ಮಣ್ಣಿನಂತೆ ಈಗಳಿಲ್ಲಿ
ಶಂಕರರೇಶನಂದವೆಲ್ಲವಿಡಿದು
ತೋರ್ಪುದು ಜಗ ನಿನ್ನ ತೆರೆದೊಳು 3||
ನೀನಾರೆಂದಭಿದಾನವ ಕೇಳ್ದರೆ
ನೀನಾರೆಂದಭಿದಾನವ ಕೇಳ್ದರೆ
ನಾನೇನೊರೆಯಲಿ ಕಮಲಮುಖಿ
ನಾನು ನನ್ನೊಳು ನಿಧಾನಿಸಿ ನೋಡಲು
ನಾನೆ ಸಚ್ಚಿದಾನಂದ ಸಖಿ ||ಪಲ್ಲ||
ನಿರವಧಿಕನು ನಾ ನಿರ್ಮಾಯನು ನಾ
ನಿರಸದ್ಯನು ನಾ ನಿರಘನು ನಾನೆ
ನಿರುತದಿ ಮಾಯೆಯ ಬೆರದಿರುವವ ನಾ
ಪರಿಪರಿ ರೂಪದೊಳಿರುವವ ನಾನೆ ||1||
ಜನನ ರಹಿತ ನಾ ಜಗದಿ ಭರಿತ ನಾ
ಮನುಮುನಿಯಾಗಿರುವವ ನಾನೆ
ಘನ ಚರಿತನು ನಾ ಮನ ಸಹಿತನು ನಾ
ವನ ಜೋದ್ಛವ ಹರಿಹರ ನಾನೆ ||2||
ಅರಿಯದವ ನಾನರಿದಿರ್ದವ ನಾ
ಶರೀರದೊಳಿಹ ಜೀವನು ನಾನೆ
ಗುರು ಶಂಕರನೊಳು ಬೆರದನುದಿನದೊಳು
ಮೆರೆಯುವ ಪರಿಪೂರ್ಣನು ನಾನೆ ||3||
ಫಲವು ಬಗೆಯಾಗಿ ಕಂಗೊಳಿಪ ವಿಶ್ವವನೆಲ್
ಫಲವು ಬಗೆಯಾಗಿ ಕಂಗೊಳಿಪ ವಿಶ್ವವನೆಲ್ಲ
ಪೊಳೆವ ಶಿವಮಯವೆಂದು ಸ್ಮರಿಸುವನೆ ಮುಕ್ತಾ |ಪಲ್ಲ||
ಸರಿಗಿ ಕಷ್ಮಾಣಿಯುಂಗರ ಕಂಕಣಗಳೆಲ್ಲ
ವರಿಯಲೊಂದೇ ಕನಕಮಿರ್ಪಂದದಿ
ಪೊರ ಕಲ್ಪನೆಯೊಳು ಪರಿಪರಿ ನಾಮರೂಪಿ
ನಿಂದಿರುವ ಜಗಮೆಲ್ಲಾತ್ಮವೊಂದೆಯೆಂದು ||1||
ತೊಲೆ ಬೋದು ತೋರಣದ ಚಲ ಕಂಭಮೆಲ್ಲ
ತಿಳಿಯಲು ಕಾಷ್ಟಮೊಂದೆಯಾಗಿರ್ಪ ತೆರದಿ
ಕುಲದೈವ ಜಾತಿ ಸಂಕುಲ ದರ್ಶನಗಳೆಲ್ಲ
ತೊಳಗುತಿಹ ಪರತತ್ವವೊಂದೆಯೆಂದು ||2||
ಝಗಿಪ ಬೊಂಬೆಯ ಪದಕರಗಳೆಲ್ಲ ಭಾವಿಸೆ
ಮತಿಗೆ ಮೃತ್ತಿಕೆಯದೊಂದೆ ತೋರುವಂತೆ
ಬಗೆಯಲ್ಕೆ ಜೀವೇಶ ಮಿಗುವ ಕೂಟಸ್ಥ
ಬ್ರಹ್ಮಗಳೆಲ್ಲ ಗುರು ಶಂಕರೋರ್ವನೆಂದು ||3||
ವರಮೋಕ್ಷ ನಿನಗೆಂತಹುದೊ
ವರಮೋಕ್ಷ ನಿನಗೆಂತಹುದೊ ಶೃತಿ
ಗುರು ವಾಕ್ಯ ಸ್ವಾನುಭವ
ಸಮನ್ವಯಿಸದಿರ್ದರೆ ಮನುಜನೆ ||ಪಲ್ಲ||
ದರ್ಪಣವ ನೋಡಲ್ಕೆ ಮುಖ
ಮುಂದೊಪ್ಪಿ ತೋರ್ಪಾ ತೆರದಿ ನಿನ್ನೊಳ
ಗಿಪ್ಪ ಚಿಜ್ಜ್ಯೋತಿಯ ಸ್ವರೂಪವು
ತಪ್ಪದದು ತಾ ತೋರದಿರಲು ||1||
ತರುಣಿಯರ ನೋಟದ ಸುಮಾಸ್ತ್ರವು
ಭರದೆ ಎಳೆ ಜವ್ವನಿಗರೆದೆಯೊಳೆರಕ
ಗೊಂಡಂತನುದಿನದಿ ಗುರುವರೆದ
ನುಡಿಗಳು ನೆಲಸದಿರಲು ||2||
ಪಿರಿಯ ಪುಲಿ ನೋಡಿದ ಪಥಿಕನೆ
ಚ್ಚರವ ಮರೆದಂತೊಡೆಯ ಶಂಕರ
ನಿರವದಂ ತನ್ನನುಭವದಿ
ಸುಖವೆರಸಿ ಪರವಶನಾಗದಿರಲು ||3||
ಗುರು ಬೋಧೆಯ ನೀ ಪಡಿ
ಗುರು ಬೋಧೆಯ ನೀ ಪಡಿ ಗುರು
ವರೆದ ಮಂತ್ರವನು ನುಡಿ
ಗುರು ಬೋಧೆಯ ಪಡೆದರೆ
ನಿನ್ನಯ ಭವ ಮರಣಗಳಳಿವವು
ಬರಿ ಮಾತಲ್ಲಿದು ||ಪಲ್ಲ||
ಸತಿ ಸುತ ಹಿತಬಾಂಧವರು ನಯ
ಯುತರಾಗಿಹ ಸೇವಕರು
ಜತೆಯಾಗಿರ್ದೇಂ ಕ್ಷಿತಿಯಲಿ
ಬ್ರಹ್ಮವ ಮತಿಯೊಳರಿಯದಿರೆ
ಗತಿಯಾಗದು ಗಡ ||1||
ತುರಗ ವಾರಣ ತತಿಗಳು ಘನ
ಸಿರಿಸಂಪದ ಸೌಖ್ಯಗಳು
ನೆರೆ ನಿನ್ನೊಳು ಬಿಡದಿರಲೇಂ ನಿನ್ನಿರ
ವರಿಯದಿರೆ ಮುಕುತಿ
ದೊರಿಯದು ತಿಳಿ ಗಡ ||2||
ಬಲ ಸಾಹಸ ಚಲುವಿಕೆಯು
ಸತ್ಕುಲ ವಿದ್ಯೆಯು ಜಾಣ್ಣುಡಿಯು
ಸಲೆಯಿರ್ದೇಂ ನಿನ್ನೊಳು
ಶಂಕರನಿಹ ನೆಲೆಯರಿಯದೆ ಸುಖ
ಫಲಮಾಗದು ಗಡ ||3||
ತಿಳಿ ನಿನ್ನ ನಿಜವನೀಗಳೆ ಗುರು ಪದಕ್ಕೆರಗಿ
ತಿಳಿ ನಿನ್ನ ನಿಜವನೀಗಳೆ ಗುರು ಪದಕ್ಕೆರಗಿ
ಅಳಿವ ಕಾಯದ ಸುಖಕ್ಕೊಲಿದವಧಿ ಬೇಡೊ ||ಪಲ್ಲ||
ಹಿಂದೆ ಮಾಡಿದ ಪುಣ್ಯದಿಂದೆ ಮಾನವನ ಜನ್ಮ
ಬಂದಿರ್ಪುದೀಗ ನಿನ್ನರಿಯದಿರಲು
ಮುಂದಕೀ ಜನ್ಮವೆಂದೆಂದಿಗೊದಗದು ಮೂಢ
ಬಂಧವೇ ನಿನಗೆ ಮಂದಿರಮೆನಿಪುದದರಿಂ ||1||
ವರ ಸುಕೃತ ಶೇಷದಿಂ ಮರಳಿ ನರಜನ್ಮ
ಬಂದುರು ಬಹುದು ಗುರುನಾಥ ದೊರೆಯನಾಗ
ಗುರು ದೊರಕಿದರು ನಿನ್ನನರಿವ ಸುವಿವೇಕವಂ
ತರದಿ ಬಂದಪುದೊ ಬಾರದೊ ತಿಳಿಯದದರಿಂ ||2||
ಕರುಣ ಕಾಲನಿಗುಂಟೆ ಮರೆವೆ ಮೃತ್ಯುವಿಗುಂಟೆ
ಇರದೆಳೆವ ಯಮಭಟರಿಗವಧಿಯುಂಟೆ
ಬರೆದಿಟ್ಟ ಚಿತ್ರಗುಪ್ತರಿಗೆ ವಿಸ್ಮೃತಿಯುಂಟೆ
ಮರಣದವಧಿಯನೆ ಎಣೆಪರು ಸಕಲರದರಿಂ ||3||
ಇರುಳು ನೋಡಿದ ಭಾವಿ ಮರಳಿ ಹಗಲಿನೊಳು ತಾ
ನುರುಳಿ ಬಿದ್ದ ಅಸು ಬಿಟ್ಟ ಮೂರ್ಖನಂತೆ
ಬರಿಯ ಸಂಸೃತಿಯಿದೆಂದೊರವ ಶೃತಿಗೇಳ್ದು ಮೈ
ಮರದರಂತಕನ ಘನನಿರಯ ಬಿಡದದರಿಂ ||4||
ಧನವೆ ಬ್ರಹ್ಮವು ನಿನ್ನ ತನಯರೇ ವೇದಾಂತ
ವನಿತೆಯಾಲಿಂಗನವೆ ಮುಕ್ತಿಯಂದು
ಮನದೊಳುಬ್ಬಿದೊಡೆ ಬಂಧನಕೆ ಬೀಳುವಿ ಮತ್ತ
ಮನಘ ಗುರುಶಂಕರನು ಮುನಿಯದಿರನದರಿಂ ||5||
ದೇಶಿ ಕೇಂದ್ರ ಪರಿಪಾಲಿಪುದೊಲಿದು
ದೇಶಿ ಕೇಂದ್ರ ಪರಿಪಾಲಿಪುದೊಲಿದು
ಶ್ರೀ ಶಿವ ಮೂರುತಿ ನೀನೆಂದರಿದು
ಅಶಯೊಳಾಂ ನುತಿಸುವೆ ಕೈಮುಗಿದು
ಕ್ಲೇಶ ಪಂಚಕವುಯೆನ್ನೊಳು ಬಲಿದು
ಪೌಶದಂತೆ ಸರ್ವಾಂಗಕೆ ಬಿಗಿದು
ಮೋಸಗೊಳಿಸಿ ಕಾಡುವವೈ ಪಿರಿದು ||ಪಲ್ಲ||
ಧರೆಯೊಳ ವಿದ್ಯಾ ಕ್ಲೇಶವು ತಾನು
ಮರೆಮಾಡಿತು ಬ್ರಹ್ಮನ ರೂಪವನು
ನೆರೆ ತೋರಿತು ಸಂಸೃತಿ ಬಂಧವನು
ಮರವೆಯೊಳಿರಿಸಿತು ಮಾಡುವದೇನು
ಪರಿಪರಿಯಿಂ ಕೊರಗಿಸಿತೆನ್ನನ್ನು
ಮರೆ ಹೊಕ್ಕೆನು ಪರಿಹರಿಸೈ ಇನ್ನು ||1||
ಎರಡನೆಯ ಸ್ಮಿತವೆಂಬುವ ಕ್ಲೇಶ
ಭರಿದಿಂದೆನ್ನೊಳು ಮಾಡ್ದು ಪ್ರವೇಶ
ಶರೀರದಿ ಕಲ್ಪಿಸಿತಾತ್ಮಾಧ್ಯಾಸ
ವರ ಶೃತಿ ಮೊತ್ತಕ್ಕಿಟ್ಟಿತು ಮೋಸ
ಪರಿಪರಿಯಿಂದೆಸಗಿತ್ತ ವಿಲಾಸ
ಪೊರೆಯುವರಿಲ್ದೆನಗಾಯ್ತಾಯಾಸ ||2||
ಮೂರನೆ ರಾಗ ಕ್ಲೇಶ ಮದುದಿಸಿ
ನಾರಿಯಾದಿ ಬಹು ಭೋಗವ ಬಯಸಿ
ಭೂರಿ ವಿಷಯ ಸುಖಗಳ ಸ್ವೀಕರಿಸಿ
ಪಾರಮಾರ್ಥ ಸುಖ ಸಂಪದ ಮರಿಸಿ
ದಾರೇಷಣ ಮುಖ್ಯ ತ್ರಯ ಸ್ಮರಿಸಿ
ಘೋರಿಪುದುಳಿಸುವರಿಲ್ಲಾದರಿಸಿ ||3||
ದ್ವೇಷಮೆಂಬ ನಾಲ್ಕನೆಯದು ಪುದಿದು |
ಆಶಾ ಭಂಗದಿ ಕೋಪವ ಬಲಿದು
ಘಾಶಿ ಮಾಡುವದು ಎನ್ನನು ಪಿಡಿದು
ಸೂಸುವ ಸದ್ಗತಿ ಸೂತ್ರವ ಕಡಿದು
ನಾಶನವಾಗುವ ತನುವಿಂಗೊಲಿದು
ಹೇಸದೆ ಬಳಲಿಸುವದು ಹಟವಿಡಿದು ||4||
ಶರೀರದೊಳೈದನೆಯಭಿನಿವೇಶ ತಾ |
ದೊರೆದ ವಿಷಯ ಸುಖಗಳ ಬಿಡದಿರುತ
ತರತರ ದುಃಖಕ್ಕೆಡೆ ಮಾಡುತ್ತ
ಕೊರಗಿಸುತಿಹುದೈ ತಳಮಳಿಸುತ್ತ
ಪರಿಹರಿಸುವರಿಲ್ಲೈದರ ಮೊತ್ತ
ಗುರು ಶಂಕರ ನೀ ಕೈವಿಡಿಯುತ್ತ ||5||
ಶಿವನೆ ತಾನೆಂದರ್ಚಿಸುವಗೆ ಕೈವಲ್ಲ್ಯವಾ
ಶಿವನೆ ತಾನೆಂದರ್ಚಿಸುವಗೆ ಕೈವಲ್ಲ್ಯವಾ
ಶಿವನನ್ಯನೆನುವಗಳಿಯುವದೆ ಭವಬಂಧ ||ಪಲ್ಲ||
ತನು ವಚೋಮನಮೆಂಬ ವಿನಿತರಿಂದೀಶ್ವರಾರ್ಚನೆ
ಯು ಮೂದೆರಮಾಗಿ ತೋರುತಿಹವಾ
ತನುವು ಭಜಿಪುದು ವಚನವಿನುತಿಗೈದವದು ಮತ್ತ
ಮನವು ಚಿಂತಿಪುದಿದರೊಳೊಂದಕೊಂದಧಿಕ ||1||
ತನುವಿನಿಂದತಿ ಸಿರಿ ವಚನದಿಂದೆ ಸುರದುರ್ಗ
ಮನಸಿನಿಂ ಸಾಯುಜ್ಯ ದೊರಕೊಳುವದಾ
ತನುವಿನಿಂ ವಚನದಿಂ ಮನಸಿನಿಂದರ್ಚಿಸಲು
ತನಗುಂಟಹುದಿ ಭುಕ್ತಿಪರದಿ ನಿಜ ಮುಕ್ತಿ ||2||
ಪರಮ ಮೋಕ್ಷಾರ್ಥಿ ಶಿವಪೂಜಾ ವಿಧಾನವನು
ಗುರು ಮುಖದೊಳರಿದು ತನ್ನೊಳು ನಿತ್ಯದಿ
ಮೆರದಿರ್ಪ ಸಚ್ಚಿದಾನಂದ ಶಿವನನ್ನು
ಸಂಸ್ಮರಿಸಿ ಮನದಿಂದರ್ಚಿಸುವದಿದತಿ ಯೋಗ್ಯಂ ||3||
ಮೆರವ ಮುಕ್ತಂಗನೆಯ ಕರವಿಡಿಯಬೇಕೆಂಬ
ವರ ಮುಮುಕ್ಷುಗಳು ಹೃದ್ವನಜದೊಳಗೆ
ಮಿರಗುವ ತಟಿತ್ಪಳಕು ತಾರೆ ಶಶಿಯಂತೆಸವ
ಹರನ ಕಂಡು ಶಿವೋಹಮೆಂದರ್ಚಿಸುವರು ||4||
ಬಿಂದು ನಾದಾಭ್ರಮನು ಭವನ ಮೂರ್ತೆಂಬಾರು
ಚಂದಮಾದಾತ್ಮದಾರಾಧನೆಯನರಿತು
ಅಂದಿಂದೆನದೆ ಗುರೂತ್ತಮ ಶಂಕರನ
ಮನಸಿದಿಂದರ್ಚನೆಯ ಮಾಳ್ಪುದನುದಿನದೊಳೊಲಿದು ||5||
ಎಂತು ಮುಕ್ತರಿವರಾಗುವರು ಬಿಡದಿಂತು
ಎಂತು ಮುಕ್ತರಿವರಾಗುವರು ಬಿಡದಿಂತು
ಗುಣ ಗಣದೊಳಿರುವವರು ||ಪಲ್ಲ||
ಹಿತವಿದಹಿತವೆಂಬರಿವಂತೆ
ಸಂತತ ವಿಷಯದೊಳಭಿರತಿಯಂತೆ
ಶೃತಿಯೊಳು ನಿಜ ನಂಬಿಗೆಯಂತೆ ಗುರು
ಮತ ಮಾರ್ಗಕೆ ಮನಮಿಲ್ಲಂತೆ ||1||
ಅತಿಶಯ ತಮ್ಮೊಳು ಶಮೆಯಂತೆ
ಸಂಸೃತಿಯೊಳು ಪರಮ ಮರುಕವಂತೆ
ಕ್ಷಿತಿಯೊಳು ಸತ್ಕೃತಯುತರಂತೆ
ಸದುಗತಿಗೆ ನಿರಾಶಿಕ ಮತಿಯಂತೆ ||2||
ನಿರುಪಮಾದ್ವಯದ ನಡೆಯಂತೆ
ಕುಲದರಿಶನಾಶ್ರಮದೊಳೊಲವಂತೆ
ಪರಮ ಜೀವರೊಂದಹರಂತೆ ಪರಿ
ಪರಿ ಸಂಶಯ ತೋರುವದಂತೆ ||3||
ಗುರುವರನ ಉಪದೇಶವರಿಯಲು
ಗುರುವರನುಪದೇಶವರಿಯಲಿಹದೊಳು
ಮೂದೆರವಹುದಾಗ ಸಾಧಕರಲ್ಲಿ || ಪಲ್ಲ||
ಪರಮ ಹೀನನ ಗುಣವರಿಯದೆ ಕರಕರ
ದೊರೆದ ಬ್ರಹ್ಮದ ಬೋಧೆಯದು ನೋಡೆ
ಉರಿವ ಬೆಂಕಿಯೊಳು ಕಾದಿರುವ ಕರ್ಬುನದ
ಮೇಲೆರೆದ ನೀರಿನ ತೆರ ಬರಿದಹುದು ||1||
ಧರೆಯೊಳು ಸತ್ಕರ್ಮ ನಿರತ ನೆನಿಪ ಮಧ್ಯ
ತರನಿಗೆ ಪೇಳ್ದಾತ್ಮವರ ಬೋಧೆ
ಸರಿಸಿಜದೆಲೆಯೊಳಗುರುಳಿದ ಜಲದಂತೆ
ವರ ಮುಕ್ತಾಕೃತಿಯಾಗಿ ತೋರುವದು ||2||
ಮರಣ ಜನನ ಭಯದುರಿಗಂಜಿ ಮರೆ ಹೊಕ್ಕ
ವರ ವಿಶಿಷ್ಟನ ನೋಡಿ ಕೃಪೆಯಿಂದೆ
ವರೆದ ಶಂಕರ ಗುರುವರನ ಮಂತ್ರವು ಸಿಂಪಿ
ಬೆರದಂಬು ಮುತ್ತಾಗುವದು ಸಫಲ ||3||
ಎಂದಿಗಾಗದು ನಿಜ ಮುಕುತಿ
ಎಂದಿಗಾಗದು ನಿಜ ಮುಕುತಿ ಎಂದಿಗಾಗದು
ಚಂದದಿ ಗುರು ಮುಖದಿಂದೆ ತಿಳಿದೊಡೇ
ನೆಂದಿನಂತೆ ಜೀವದ ಭಾವವಿರಲು ||ಪಲ್ಲ||
ಕಾಮಮುಖರಿಪು ಸ್ತೋಮವನೊದಿಯದೆ
ನಾಮರೂಪು ಪುಶಿಯಂದೆನದೆ
ಪ್ರೇಮಾಪ್ರೇಮದ ಸೊಲ್ಲಡಗದೆ ಬಹು
ನೇಮ ನಿತ್ಯಗಳ ಕಾಮವದಿರುತಿರೆ ||1||
ಕುಲಗೋತ್ರದ ಭ್ರಮೆಯಳಿಯದೆ ಕರ್ಮದ
ಬಲಿಯನು ಕತ್ತರಿಸದೆ ಜವದಿ
ಮಲ ಮೂರರನುರೆ ಗೆಲಿಯದೆ ಹಸು
ತೃಷೆಗಳಿಗೀಡಾಗಿಹ ಪರದೊಲವಿರುತಿರೆ ||2||
ಹೀನವಾದ ತನುವಾನೆಂದೆನುಭವಿ
ಮಾನವನ್ನು ಸಲೆಮಾಜಿಸದೆ
ಜ್ಞಾನಾಂಬುಧಿ ಶ್ರೀಗುರುವರ ಶಂಕರ
ತಾನಾಗಿರದಜ್ಞಾನದೊಳಿರುತಿರೆ ||3||
ಕುರುಬರೊ ನಾವು ಕುರುಬರೊ
ಕುರುಬರೊ ನಾವು ಕುರುಬರೊ
ನಮ್ಮ ಕರಣೇಂದ್ರಿಯಗಳೆಂಬ ಕುರಿಗಳ ಕಾಯುವ ||ಪಲ್ಲ||
ವರ ಶೃತಿದಂಡವ ಕರದೊಳು ಪಿಡಿದು
ಸದ್ಗುರು ಕೃಪೆಯೆಂಬ ಕಂಬಳೆಯ ಪೊದ್ದು
ಪರಮ ವಿವೇಕೆಂಬ ಶುನಕನ ಸಾಕಿ
ಈಶ್ವರ ಭಕ್ತಿಯೆಂಬ ಕೊಳಲನೂದುತಿರುವಂಥ ||1||
ಸುವಿಚಾರವೆಂಬ ಮಾರ್ಗವ ಪತ್ತಿಕರ್ಮ
ವೆಂಬುವ ವನದೊಳು ಕುರಿಗಳನು ಬಿಟ್ಟು
ಶ್ರವಣವೆಂಬೊಡೆ ಹುಲ್ಲುತ್ಸವದಿಂದೆ ತಿನಿಸುತ
ತವೆ ಶಾಂತಿಯೆಂಬ ನೀರ್ಗುಡಿಸಿ ಸುಖಿಸುವಂಥ ||2||
ಅರಿ ವರ್ಗವೆಂಬ ಕೊಬ್ಬಿರುವ ತೋಳಗಳಿಗೆ
ವರ ನಾಯಿಯನ್ನು ಕಾವಲಿಯನಿಟ್ಟು
ಪರಿದಪ್ಪಿ ತಿರುಗುವ ಕುರಿಯನು ದಂಡದಿ
ಪರಿಪರಿ ಬಡಿದು ಎಚ್ಚರವಗೊಳಿಸುವಂಥ ||3||
ಮನನವೆಂಬುವ ಹಟ್ಟಿ ಮನೆಯೊಳು ಕುರಿಯ
ಹಿಂಡನು ಪೊಗಿಸುತ ನಿಧಿ ಧ್ಯಾಸವೆಂಬ
ಘನಬೇಲಿ ಬಾಗಿಲಿಗನುವಾಗಿ ನಿಲಿಸಿ
ಭಾವನ ತ್ರಯವೆಂಬ ಚೋರರ ಬರಗೊಡದಂಥ ||4||
ಸಲೆ ಜ್ಞಾನವೆಂಬುವ ಚಿಲಿಪಾಲ ಕರೆದು
ನಿರ್ಮಲವಾಗಿ ನಿತ್ಯದಿ ಸಲಿಸುತಲಿ
ಇಳೆಯೊಳಾನಂದೆಂಬ ಬಲು ಜಿಡ್ಡಿನಿಂ ಕೂಡಿ
ತೊಳಗುವ ಗುರುಶಂಕರನೊಳೈಕ್ಯ ಪಡೆವಂಥ ||5||
ವೇದವಾಕ್ಯ ಭೇದ ತ್ರಯದ ಹಾದಿ ಪೇಳುವೆ
ವೇದವಾಕ್ಯ ಭೇದ ತ್ರಯದ ಹಾದಿ ಪೇಳುವೆ
ಮೇದಿನಿಯೊಳನಾದಿ ನುಡಿಗಳೋದಿವುಗಳನರಿಯಲೊ ||ಪಲ್ಲ||
ಪ್ರೇಮದಿಂ ಸಕಾಮ ಯಾಗ ಸ್ತೋಮಮಂ ಸದಾ
ನೇಮದಿಂದೆ ಮಾಳ್ಪುದೆಂಬುದೀ ಮಹಾ ವಿಧಿ ವಾಕ್ಯವು ||1||
ಇಳೆಯೊಳು ಸುರೆ ಫಲಲಗಳನು ವಲಿದು ನಿತ್ಯದಿ
ತಿಳಿಯದಿವನು ಸಲಿಸದಿರೆಂಬುದೆ ನಿಷೇಧ ವಾಕ್ಯವು || 2||
ಎರಡು ವಾಕ್ಯ ಮರೆದು ಶಂಕರೇಶ ಬ್ರಹ್ಮನಂ
ಸ್ಮರಿಪುದೇ ಸಿದ್ಧಾರ್ಥ ಬೋಧಕ ಪರಮ ಶ್ರೇಷ್ಠ ವಾಕ್ಯವು ||3||
ಪ್ರತ್ಯಕ್ಕಾತಂಕಗಳು ಮೂರು
ಆತ್ಮನ ಪ್ರತ್ಯಕ್ಷಕ್ಕಾತಂಕಗಳು ಮೂರು
ಆತುಕೊಂಡಿರುತಿಹವು ಆತುಕೊಂಡಿರುತಿಹವು
ನಾ ತಿಳಿಸುವೆನಿಲ್ಲಿ ಪ್ರೀತಿಲಿ ಕೇಳ್ ನಿನ್ನ
ರೀತಿಗೆ ಮೀರಿಹವು ||ಪಲ್ಲ||
ಗುರುವರನಡಿಗೆ ನೀನೆರಗಿ ಸದುಕ್ತಿಯ
ಸ್ಥಿರ ಭಕ್ತಿಯಿಂದೆ ಕೇಳಿದಡೇನು ನಿನ್ನಯ
ಮರವಿಯೊಳಾದ ಸ್ತ್ರೀಯರ ಸಂಗ ಸೌಖ್ಯವು
ಚಿರಕಾಲದಲಿ ನಿನ್ನ ಸ್ಮರಣೆಗೆ ತೋರುತ
ಪರಿಪರಿ ಮರುಗಿಪುದೊ ಇದು
ಪರಿಪರಿ ಮರುಗಿಪುದು ಪೇರಿದೇನು ಪೇಳಲಿ
ಅರಿ ನಿನ್ನೊಳಿದು ಭೂತ ಪ್ರತಿಬಂಧಮೆನಿಸುವದು ||1||
ಜಡಬುದ್ಧಿ ಜನ ಸಂಗ ಕುಟೆಲಾಟ ವಿಷಯಾಶ
ಬಿಡದೆ ನೀ ಸತ್ಪುರುಷರ ದೂಷಣೆಯ ಮಾಡಿ
ಅಡಿಗಡಿಗಾನೆಂಬ ಅಭಿಮಾನವಿರೆ ನಿನ್ನ
ತಡಿಯದೆ ಕೆಡಿಸುವದು ಇದು |
ತಡಿಯದೆ ಕೆಡಿಸುವದು ದೃಢಮನದಿಂ ತಿಳಿ
ಪೊಡವಿಯೊಳಿದು ವರ್ತಮಾನೆಂಬ ಪ್ರತಿಬಂಧವು ||2||
ಶೃತಿ ಸ್ಮೃತಿಗಳನೆಲ್ಲ ವಿತತಾರ್ಥವನೆ ಮಾಡಿ
ಸತತೋದಿದಡೇನು ಜನ್ಮಾಂತರವನಿಲ್ಲ ||
ದತಿಶಯ ಪ್ರಾರಬ್ಧ ತೀರದೆನ್ನುತ
ಶಂಕರೇಶನ ಮರಿಸುವದು ಶಂಕರೇಶನ ಮರಿಸುವದು
ಕ್ಷಿತಿಯೊಳು ನಿನ್ನ ಸುಮತಿಯಿಂದ
ತಿಳಿಯಿದು ಆಗಾಮಿ ಪ್ರತಿಬಂಧವು ||3||
ಸಾರುವೆ ನಾ ಸಾರುವೆ
ಸಾರುವೆ ನಾ ಸಾರುವೆ
ಮುಕ್ತಿಗೆ ವಿಘ್ನವು ಮೂರಿರುವವನಿಲ್ಲಿ ||ಪಲ್ಲ||
ನೀನೆ ಪರಬ್ರಹ್ಮನೆಂದು ನಿಶ್ಚೈಸಲು
ನ್ಯೂನಮಿಲ್ಲದೆ ಮುಕ್ತಿಯಹುದೆಂದು
ಗುರು ಪೇಳಿದಾ ನುಡಿ ಮರೆಯುತ
ನಾ ನರನೆಂಬುದ ಸಂಭಾವನೆಯು ತಿಳಿಯೋ ||1||
ಜಹದಜಹಲ್ಲಕ್ಷಣಗಳಿಂದೆ ಸಾಕ್ಷಿಯಾಗಿಹ
ತತ್ವಮಸ್ಯಾದಿ ವಾಕ್ಯಾರ್ಥ ನಿನ್ನೊಳು
ಗ್ರಹಿಸುತಲಾಂ ಬ್ರಹ್ಮನಹುದಲ್ಲೆಂಬುವದಿದು
ಸಂಶಯ ಭಾವನೆಯೋ ||2||
ಕ್ಷಿತಿಯೊಳಗಾಂ ಬ್ರಹ್ಮನಾದೆನೆಂಬುವ ನುಡಿ
ಶೃತಿಸ್ಮೃತಿ ಗುರುಶಂಕರೇಶನಿಂದರಿಯುತ
ಮತಿಗೆ ತಾರದೆ ಯೋಚಿಸುತ ಜೀವನೆಂಬುದೆ
ವಿಪರೀತ ಭಾವನೆಯೋ ||3||
ಗುರು ಸರ್ವೇಶ್ವರನು ಈತನ
ಗುರು ಸರ್ವೇಶ್ವರನು ಈತನ
ನರನೆಂಬನೆ ಖಳನು ||ಪಲ್ಲ||
ರೂಪು ನಾಮದಿಂದೆ ಎಸಗಿದ
ಪಾಪ ನಿಕರದಿಂದೆ ತಾಪದಿರಲವನು
ತಾ ಪದುಳದಿ ಗಡ ಲೋಪಿಸಿ ನೀ| ಚಿ
ದ್ರೂಪನೆಂದೊರೆದ ||1||
ಮರಣ ಜನನ ಭಯದಿ ಪರಿಪರಿ
ಮರುಗುತಿಹಲ್ಕಿಹದಿ ಕರುಣದಿ ಬಂದಾ
ಮರಣ ಜನನ ಭಯ ಪರಿದು ನೀನೆ ಭವ
ಹರನೆಂದುಸುರಿದ ||2||
ಶರೀರವೆ ನಾನೆಂದು ಕರ್ಮದ
ಸರಣಿಯೊಳಗೆ ನಿಂದು ಮರೆವೆಯೊಳಿರಲಾ
ಶರೀರವಲ್ಲ ನೀ ಪರಮನೆಂದು ತಾ
ನರುಪಿದ ಶಂಕರ ಗುರು ಸರ್ವೇಶ್ವರನು ||3||
ಯೋಗಿಂಗೆ ಕರ್ಮ ಕೋಟಲೆಗಳುಂಟೆ
ಯೋಗಿಂಗೆ ಕರ್ಮ ಕೋಟಲೆಗಳುಂಟೆ
ಮೇಗೆಸವ ಭಜನಾದಿಯಿಂ ಪುಣ್ಯಮುಂಟೆ | |ಪಲ್ಲ||
ಪೊಡವಿಪಗೆ ಕನಸಿನೊಳು ಬಡತನ ವದಗಲಾ
ಕಡು ದುಃಖವೆಚ್ಚರದೊಳಳಿವಂದದಿ
ಬಿಡದೆ ಸಂಸೃತಿ ವಿಕೃತಿವಿಡಿದು ತೋರಲ್ಕೆಯಿದು
ಜಡವೆಂದು ತಿಳಿದು ತತ್ವಾನುಭವದಿರುವ ||1||
ಧರೆಯಾದಿಯಗಣಿತಾ ವರಣ ವರ್ಜಿತ ಪರಮ
ಶರೀರಂಗಳೊಳು ಜೀವ ನೆನಿಸಿ ತನಗೆ
ಎರಡಾಗಿ ತೋರೆಯದು ಪರಿಕಿಸಲು ಪುಶಿ ನಿರಾ
ವರಣನೆ ನಾನೆಂದು ನಂಬಿಕೊಂಡಿರುವ ||2||
ರವಿಯೆಂತು ಕರ್ಮಕ್ಕೆ ತವೆ ಸಾಕ್ಷಿಯಾಗಿರ್ಪ
ನವನಿಯೊಳುಗಂತಿರ್ಪೆನರಿಯಲೆನಗೆ
ಭವ ಮರಣಮಿಲ್ಲ ಬಂಧವದಿಲ್ಲ ಶಂಕರ
ಗುರುವರ ನಾದವಿರಳನೆ ನಾನೆಂದು ನಡೆವ | |3||
ಜ್ಞಾನಿಯೆಂದೆನಲವ ಜ್ಞಾನಿಯೆ ಮಾತಿನಿಂ
ಜ್ಞಾನಿಯೆಂದೆನಲವ ಜ್ಞಾನಿಯೆ ಮಾತಿನಿಂ
ಜ್ಞಾನ ಚಿನ್ಹಗಳಿಂತಿರಲು ಜ್ಞಾನಿಯು ||ಪಲ್ಲ||
ಪರಮ ಹಿತವಹಿತಮೆಂಬರಿವಿಗೆ ವಿಷಯದಿ
ವಿರತಿಬೇಕಾ ವಿರತಿಗೆ ವಪ್ಪುವ
ಪರಮ ಶಮೆಯುಬೇಕು ಅರಿಯಲಾಶಮೆಗನ
ವರತ ಸುಮೋಕ್ಷದಿ ರತಿಯಿರಬೇಕು ||1||
ಪರಮ ಮೋಕ್ಷದೊಲಿಮೆಗೆ ಗುರು ಸೇವೆ ಬೇಕು
ಶ್ರೀಗುರು ಸೇವೆಗಾತ್ಮಾರ್ಥ ಶೃತಿ ಬೇಕು
ಪರಮಾರ್ಥ ವೇದಕ್ಕೆ ಶರೀರ ನೇತಿಯು ಬೇಕು
ಶರೀರ ನೇತಿಗೆ ನಾನಾರೆಂಬುದು ಬೇಕು ||2||
ಇಳೆಯೊಳಾನಾರೆಂಬ ನೆಲೆಗೆ ಸೋಹಂಭಾವ |
ಕಳೆಬೇಕು ಮತ್ತಾ ಸೋಹಂಭಾವಕೆ
ಸಲೆ ಸುಖಬೇಕು ನಿಶ್ಚಳ ಸುಖಮಿತ
ನಿರ್ಮಳ ಗುರು ಶಂಕರನಾಗಿರಬೇಕು ||3||
ಆವ ದೋಷದ ಫಲವಿದೆಂದೆನಲಿ
ಅವದೋಷದ ಫಲವಿದೆಂದೆನಲಿ ಈ ಜನರು
ನಡೆಯುವ ದಾವ ದೋಷದ ಫಲವಿದೆಂದನಲಿ ಆವ
ದೋಷದ ಫಲವಿದೆಂದಾಂ ಭಾವಿಸಲಿ ಮತ್ತಾವ
ರೀತಿಲಿ ಜೀವ ಶಿವರೊಂದೆನ್ನದರಿಯದೆ ಭಾವ
ಭೇದದಿ ಭ್ರಮಿಸಿ ಕೆಡುತಿಹರಾವ ದೋಷದ ಫಲ ||ಪಲ್ಲ||
ಅಂಡದೊಳು ಬ್ರಹ್ಮಾಂಡವನು ತಿಳಿದು ಬ್ರಹ್ಮಾಂಡವನು
ಪಿಂಡಾಡದೊಳು ಸಮಗಂಡು ಮನವೊಲಿದು ಮಂಡಲ
ತ್ರಯ ಮಧ್ಯ ರಂಜಿಪ ಖಂಡ ಶಿವನಂ ಗುರು
ಮುಖದಿ ತಿಳುಕೊಂಡು ಸುಖಿಸದೆ ಭಂಡತನದಲಿ
ಗುಂಡುಗಲ್ಲಿಗೆ ಮಂಡೆ ಬಾಗುವರಾವ ||1||
ಭೂರಿ ತತ್ವಗಳನ್ನು ಶೋಧಿಸದೆ
ತಮ್ಮೊಳಗೆ ನೆಲಸಿರ್ಪಾರು ವೈರಿಗಳನ್ನು
ಬಾಧಿಸದೆ ಪಾರಮಾರ್ಥವಿಚಾರ ಧೀರರ ಸಾರ
ಸಂಗದಿ ಸೇರಿ ಸೇವಿಸುತಾರು ನಾನೆಂದಾರಿಸದೆ
ಈ ಥೋರತನುವಾವೆಂದು ಪೇಳುವದಾವ ||2||
ನಾಡೆ ಗುರು ಶಂಕರನ ದರ್ಶಿಸದೆ ಸದ್ಭಕ್ತಿ ಭಾವದಿ
ಕೂಡಿ ಪಾದಾಬ್ಜಗಳ ಪೂಜಿಸದೆ ನೋಡಿ ಶೃತಿಯನು ಪಾಡಿ
ಭವವೀಡ್ಯಾಡದನುದಿನ ನಾಡಿನೊಳು ನಾಡಾಡಿಗರೊಳೊಡ
ನಾಡಿ ಸಂತತ ಖೋಡಿಸಂಸೃತಿಗೊಲಿದು
ಬಾಳುವರಾವದೋಷದ ಫಲವಿದೆಂದೆನಲಿ || 3||
ಬೇಡಿ ಕೊಳುವೆಯೆನ್ನ ನೋಡಿ ಸಲಹು ದೇವ
ಬೇಡಿ ಕೊಳುವೆಯೆನ್ನ ನೋಡಿ ಸಲಹು ದೇವ
ಖೋಡಿ ಸಂಸೃತಿಯೊಳು ಕೂಡಿಸದಿರುಯೆಂದು ||ಪಲ್ಲ||
ಲೌಕೀಕ ವೈದೀಕಾನೇಕ ಕರ್ಮವ ಮುನ್ನ
ಜೋಕೆಯಿಂಗೈದು ವಿವೇಕಿಸಿದೆನು ನಿನ್ನ
ಸಾಕವುಗಳಿಗಿನ್ನು ನೂಕದಿರೆನ್ನನೆಂದು ||1||
ತನು ತ್ರಯಕ್ಕಂಟುವ ಘನ ರೋಗಗಳಿಂದೆ
ಜನಿಸುವ ದುಃಖವ ನೆನಿಸದಂತಿಳೆಯೊಳು
ಅನವರಿತದಿ ನಿನ್ನ ನೆನಹಿನೊಳಿರಿಸೆಂದು ||2||
ವರ ಪುಣ್ಯವ ಬಿಟ್ಟು ದುರಿತಗೈದುದರಿಂ
ಪರಿಪರಿ ಮುಸಗುವ ಉರುತರ ವ್ಯಸನಕೆ
ಗುರಿಯಿಹ ಪರಲೋಕ ಪರಿತಾಪ ಕಡಿಯೆಂದು ||3||
ಮನುಜನೆಯಾದಿ ಬ್ರಹ್ಮನೆ ಕಡೆಯಾಗಿರ್ಪ
ಘನತರದೊಳು ಸಂಜನಿಸುವ ನೂರ್ಮಡಿ
ಯನು ಮೀರಿದ ಸುಖವೆನಗೀವುದುಯೆಂದು ||4||
ಬೇರೆ ಬೇರಾಗಿರ್ಪ ಭೂರಿ ಗತಿಗಳಿಗೆ
ಸೇರಿಸದೆನ್ನನು ಸಾರ ಮೋಕ್ಷದ ನಿಜಾ
ಗಾರ ಶಂಕರ ಗುರು ಧೀರನೊಳ್ಬೆರಿಸೆಂದು | |5||
ಸಾರುವದೈ ಶೃತಿಯು ಉದ್ಘೋಷದಿ
ಸಾರುವದೈ ಶೃತಿಯು ಉದ್ಘೋಷದಿ
ಸಾರುವದೈ ಶೃತಿಯು ಸಾರುವದೈ ಶೃತಿ
ಪಾರಮಾರ್ಥದ ಸುವಿಚಾರಮೊಂದಿರದಿರೆ
ತೋರದು ಸುಖಮೆಂದು ||ಪಲ್ಲ||
ಕಂದ ಮೂಲವ ಸೇವಿಸಿ ಗಂಗೆಯೊಳಗೆ
ಮಿಂದು ಬೂದಿಯ ಧರಿಸಿ ಒಂದೆ ಭಾವದಿ
ಮುದದಿಂದೆ ಜಪಿಸೆ ಭವ ಬಂಧವು
ನಿನ್ನಗಿದೆಂದಿಗು ಬಿಡದೆಂದು ||1||
ತತ್ವಮಸಿಯ ಮರೆದು ವಾಕ್ಯದೊಳಿಹ
ತತ್ವಾರ್ಥವನೆ ಜರಿದು ಸತ್ವರದಿಂ ಪರ
ತತ್ವವರಿಯದೆ ಬಹುತ್ವದೊಳಿರೆ ನಿಜ
ಮುಕ್ತಿ ದೊರೆಯದೆಂದು ||2||
ಭಿನ್ನ ಭಾವನೆ ಮಾಣದೆ ತನ್ನೊಳಗಿಹ
ಚಿನ್ಮಯನನು ಕಾಣದೆ ಮಣ್ಣಿನ ಮೂರ್ತಿಗಳನ್ನು
ಪೂಜಿಸಿ ನಿತ್ಯ ಸನ್ನುತಿಗೈದರು
ಜನ್ಮ ತಪ್ಪದುಯೆಂದು ||3||
ವಾದವಶ್ಯವ ಬಿಡದೆ ಜೀವೇಶ್ವರ
ಭೇದ ಬುದ್ಧಿಯು ಕೆಡದೆ ಮೇದಿನಿಯೊಳು ಮಹಾ
ವೇದಾಂತ ಶಾಸ್ತ್ರವನೋದಲು ಮುಕ್ತಿಯ
ಹಾದಿ ದೊರೆಯದೆಂದು ||4||
ಜ್ಞಾನಾಮೃತವ ಪೀರದೆ ಕರ್ಮದ ಸುವಿ
ಧಾನಗಳನು ಮೀರದೆ ನಾನು ನೀನೆಂಬಭಿಮಾನ
ಬಿಡದೆ ಬರಿ ಮೌನದಿಂದಿರೆ ಸುಖ
ಸ್ಥಾನ ಸಂಧಿಸದೆಂದು ||5||
ಸಾಧು ಸೇವೆಯ ಮಾಡದೆ ಬ್ರಹ್ಮದ ಪರಿ
ಶೋಧನೆಯೊಳು ಕೂಡದೆ ಈ ಧರೆಯೊಳು
ಗುರುಬೋಧೆಯಿಲ್ಲದೆ ತಪ ಸಾಧಿಸಿದರೂ
ಭವ ಬಾಧೆ ತೊಲಗದೆಂದು ||6||
ಮರೆ ಮೋಸಗಳನು ಬಿಟ್ಟು ವಿಚಾರಕ್ಕೆ
ಸ್ಥಿರ ಮನವನ್ನು ಕೊಟ್ಟು ತರಿದು ಸಂಕಲ್ಪ
ಶಂಕರ ಗುರುವರನೊಳು ಬೆರದಿಹ ನರನೇ
ಶಂಕರನೆ ನಿಜಮಿದೆಂದು ||7||
ಜಾತಿ ಸೂತಕವಿಡಿದೇತಕೆ ಬಳಲುವಿ
ಜಾತಿ ಸೂತಕವಿಡಿದೇತಕೆ ಬಳಲುವಿ
ಜಾತಿ ನಿಬಂಧದ ಮಾತಿಲ್ಲ ಜ್ಞಾನದಿ ||ಪಲ್ಲ||
ಆತುಮನರಿಯದ ಪಾತಕಿಗಳು ಕೂಡಿ
ಜಾತಿಯ ಸೂತ್ರದಿ ಬದ್ಧರಾಗಿಹರು
ಜಾತಿ ಕಲ್ಪನೆಯಳಿದಾತುಮನೊಳು ಬೆರೆ
ದಾತಗೆ ಜಾತಿಯ ಸೂತಮುಂಟೆ ||1||
ಪರ ಶಿವ ಬೀಜ ಸರ್ವರ ಯೋನಿಯೊಳು
ಪುಟ್ಟಿರುವದೆಂಬುವ ಮರ್ಮವರಿಯದನವರು
ಧರೆಯೊಳು ಕುಲ ಫಲವೆರಸಿ ಜ್ಞಾನಿಗಳನು
ಪುರುಡಿಸಿ ನರಕಕೆ ಹಿರಿಯರಾಗುವರು ||2||
ಶರೀರವು ಸರ್ವರಿಗರಿಯಲ್ಕೊಂದಾ
ಗಿರುವದು ಭಿನ್ನವಿಲ್ಲದ ಭೂತಗಳಿಂ
ಮೆರವಂಡಜ ಮುಖ್ಯ ಪರಿ ನಾಲ್ಕಾಗಿಹ
ವರ ಜಾತಿಯೊಳು ವಾಗ್ವರ ಸೃಜಿಸಿರಲು ||3||
ಜಾತಿ ವರ್ಣವು ಕುಲ ಗೋತ್ರಗಳೆಲ್ಲಬ್ಜ
ಜಾತನ ಸೃಷ್ಟಿಯಲ್ಲೇತರ ಛಲವು
ಭೂತಲ ಮನುಜರಿಂ ರೀತಿಯಿಲ್ಲದ ಕುಲ
ಜಾತಿಗಳಾಗಿ ಪ್ರಖ್ಯಾತಿ ತೋರಿದವು ||4||
ಕುಲ ಜಾತಿಯು ಗೋತ್ರಗಳು ಬಹುವಾದೊಡೆ
ಸಲೆ ಜ್ಞಾನದೊಳೈಕ್ಯ ಪೊಂದುವವೇಕೆ
ಕುಲ ಮತ ಬಹುವೆಂಬ ಬಲೆಗೆ ಬೀಳದೆ
ನಿಚ್ಚಲ ಶಂಕರ ಗುರು ಕುಲದೊಳು ವಾಸಿಸು ||5||
ಬಾಧೆಗೊಳಿಸುತಿಹುದೆ ಕರ್ಮವು
ಬಾಧೆಗೊಳಿಸುತಿಹುದೆ ಕರ್ಮವು ಬಾಧೆಗೊಳಿಸುತಿಹುದೆ
ಬಾಧೆಗೊಳಿಸುತಿಹುದೇ ಧರೆಯೊಳು ಗುರು
ಬೋಧೆಯಿಂದ ನಿರುಪಾಧಿಯಾದವನ ||ಪಲ್ಲ||
ಹೃದಯಾಕಾಶದೊಳನುದಿನದಿ
ಮೇಣುದಯಾಸ್ತಗಳಿಲ್ಲದೆ ಭರದಿ
ಸದಮಲವಹ ಚಿತ್ಪದ ಸೂರ್ಯನ ವಿಧ
ವಿಧದಿ ಕಂಡು ಸಮ್ಮುದಗೊಂಬುವನನು ||1||
ಬೆಳಗು ಕತ್ತಲೆಯು ಧರಿಸುತಲಿ |
ನಿರ್ಮಳವಾದಾಗಸದಂದದಲಿ
ಇಳೆಯೊಳಘ ಸುಕೃತಗಳನು ಬಿಡದೆ ತಾ
ತಳೆದು ಸದಾ ಮಂಜುಳನಾಗಿರ್ಪನ ||2||
ಜಲದೊಳು ಪುಟ್ಟಿದ ಕಮಲದೆಲಿ
ಯಾ ಜಲವನು ಸೋಂಕದ ರೀತಿಯಲಿ
ಮಲಿನ ಸಂಸೃತಿಯಿಳೊಲಿರ್ದೊಡದರ
ಬಲೆಗೆ ಬೀಳದುಜ್ವಲ ಬ್ರಹ್ಮಜ್ಞನ ||3||
ನಾನು ನನ್ನದದಿದೆನ್ನುವರು
ಅಭಿಮಾನದಿ ಕರ್ಮವ ಮಾಡುವರು
ತಾನು ತನ್ನ ನಿಜ ಖೂನವರಿದು
ಚಿಧ್ಯಾನದೊಳಿರ್ಪ ಮಹಾನುಭಾವನನು ||4||
ಗುರು ಕರಜಾತರೆನಿಸದವರ್ಗೆ ಬಿಡಲರಿಯದು
ಕರ್ಮವು ಧರೆಯೊಳಗೆ ಗುರು ಶಂಕರನಿಂದರಿದು
ಜೀವಪರ ಮರಭೇದವನಳಿದಿರುವ
ಯೋಗಿಯನು ಬಾಧೆಗೊಳಿಸುತಿಹೆದೇ
ನಿರ್ಮಲ ಬ್ರಹ್ಮನ ತಿಳಿ
ಕರ್ಮ ಗುಣಗಳನು ಕಳಿ ನೀ |
ನಿರ್ಮಲ ಬ್ರಹ್ಮನ ತಿಳಿ
ದುರ್ಮದಗಳಿಗೆ ತವರ್ಮನೆಯನಿಸಿದ
ಚರ್ಮ ದೇಹವನು ಬರ್ಮನೆಂಬು ಪುಶಿ ||ಪಲ್ಲ||
ಪರಮಾತ್ಮನೆ ನೀನಾಗಿ ವಿಸ್ಮರಣದಿ |
ಸುಮತಿಯ ನೀಗಿ ಧರಣಿಯ ಮೂರ್ತಿಗೆ
ಶರಣೆನುತಲಿ ದ್ವಯ ಕರಗಳ
ಮುಗಿದಾಲ್ಪರಿದು ವರ್ತಿಸುವ ||1||
ಪಾರಮಾರ್ಥವನು ತೊರೆದು |
ಸಂಸಾರದಿ ನಿನ್ನನು ಮರೆದು
ನೀರೊಳು ಮುಳಿಗಿ ವಿಚಾರವಿಲ್ಲದೆ
ಶರೀರವ ಕಷ್ಟಕೆ ಸೇರಿಸಿ ನಡಗುವ ||2||
ನೇತ್ರಾನಂದಕ್ಕಾಗಿ ಸುಕ್ಷೇತ್ರಗಳಿಗೆ |
ನೀ ಪೋಗಿ ಧಾತ್ರಿಯೊಳನುದಿನ
ಯಾತ್ರೆಗೈದು ವ್ರತ ಸೂತ್ರವಿಡಿದು
ನಿನಗಾತ್ರ ಕೊರಗಿಸುವ ||3||
ಅಲ್ಲಿಹನ ಇಲ್ಲಿಲ್ಲೇನು ಶಿವ |
ನೆಲ್ಲಿ ನೋಡ್ದಡಲ್ಲಿ ಇಹನು
ಇಲ್ಲದಸ್ಥಲ ಮೊದಲಿಲ್ಲವು ತಿಳಿ
ನಿನ್ನಲ್ಲಿಹುದರಿಯದೆ ಕಲ್ಲಿಗೆ ನಮಿಸುವ ||4||
ಗುರು ಶಂಕರನಡಿ ವಿಡಿದು ಭಾಸುರ |
ನಿನ್ನಯ ನಿಜವರಿದು ಪರಶಿವ ನೀನೆಂದುರೆ
ನಿಶ್ಚೈಸದೆ ಪರಿಪರಿ ಕ್ರಿಯ್ಯದಿ
ಬೆರದು ಬಾಯ್ಬಿಡುವ ||5||
ಪರಮ ಶಾಂತಿಯೆಂಬ ಭಸ್ಮ ಧರಿಸು
ಯೋಗಿ ವೇಷ ತಾಳಿಯೊಳಗೆ ಯೋಗವರಿಯದಖಿಳರೊಡನೆ
ಯೋಗಿಯಂದು ಪೇಳ್ದೊಡವನೆ ಭವದ ರೋಗಿಯು ||ಪಲ್ಲ||
ವರ ವಿವೇಕವೆಂಬ ವಸನ ಶರೀರ ಕುಟ್ಟು ಸದ್ವಿಚಾರ |
ಕುರುಹುಯೆಂಬ ಕಾವಿ ಲಾಂಛನವನು ಹೊದಿಯುತೆ
ಮರುಕವೆಂಬ ಮನೆಯ ಬಿಟ್ಟು ಮರವೆಯೆಂಬ ಮಡದಿಯಳನು
ಜರಿದು ಸುಖಿಸುತಿರುವ ಗೃಹಿಯು ಯೋಗಿಯಲ್ಲವೆ ||1||
ಪರಮ ಶಾಂತಿಯೆಂಬ ಭಸ್ಮ ಧರಿಸಿ ಸುಗುಣ ನಿಕರವೆಂಬ |
ಹರನ ನೇತ್ರಮಣಿಗಳ ಕಂಧರದಿ ತಳ್ಕಿಸಿ
ಗುರುವಿನ ಕೃಪೆಯೆಂಬ ದಂಡ ಕರದಿ ಪಿಡಿದ ಭೇದವೆಂಬ
ಕಂಥೆಯಿಂದ ಇರುವ ಗೃಹಿಯು ಯೋಗಿಯಲ್ಲವೆ ||2||
ಜ್ಞಾನವೆಂಬ ಭಿಕ್ಷದನ್ನ ಸಾನುರಾಗದಿಂದೆ ಸವಿದು |
ಮೌನವೆಂಬ ಜಲವನೀಂಟಿ ಶ್ರದ್ಧೆಯೆಂಬುವ
ಕಾನನದಿ ಶಿವೋಹಮೆಂಬ ಧ್ಯಾನದಲ್ಲಿ ಶಂಕರ ಗುರು
ತಾನೆಯಾಗಿ ತೋರ್ಪಗೃಹಿಯು ಯೋಗಿಯಲ್ಲವೆ ||3||
ಜೀವನ್ಮುಕ್ತರು ಜೀವಿಸುವರು
ಜೀವನ್ಮುಕ್ತರು ಜೀವಿಸುವರು ನಾ |
ನಾ ವರ್ತನದಿಂದಿಹದಲ್ಲಿ ಈ
ವಿಧದಿರುವನ ಡಾವಳಿರೀತೆಯ
ಭಾವೆ ನಿನಗೆ ಪೇಳುವೆನಿಲ್ಲಿ ||ಪಲ್ಲ||
ಪ್ರಾರಬ್ಧದ ಸಂಸ್ಕಾರದ ಫಲದಿಂ ತೀವ್ರ |
ಮಂದ ಮಧ್ಯಂ ಸುಪ್ತಂ ಈ
ರೀತಿಯೊಳು ಚತುರ್ವಿಧದೆತಿಗಳು
ಭೂರಿ ಸುಖದೊಳಿರುವರು ಮತ್ತಂ ||1||
ಮನಸಿನ ಧರ್ಮದ ಘನತೆಯೊಳನುದಿನ |
ಜನಿಪವು ನಡೆ ನಾಲ್ಕವರಲ್ಲಿ
ನಿನಗೊರೆವೆನು ಮಾನಿನಿಯಳೆ ಮನ್ನಿಸು
ಅನುಮಾನಿಸದಿರು ಮನದಲ್ಲಿ ||2||
ಒಂದನೇದು ವಿಕ್ಷಿಪ್ತವು ಕೇಳಿನ್ನೊಂದು |
ಗತಾಗತ ಮತ್ತೊಂದು
ಚಂದಮಾದ ಸಂಶ್ಲಿಷ್ಟವದರ
ಮೇಲೊಂದು ಸ್ವಲೀನವು ತಿಳಿಯಿಂದು ||3||
ಬರಿದೆ ವಿಷಯ ಸುಖ ಕಿರಿದಾಪೇಕ್ಷಿಸಿ |
ಧರೆಯೊಳು ಕಾಲ ತ್ರಯದಲ್ಲಿ
ಮರುಗಿ ತಮೋಗುಣದಿರುವ ವೃತ್ತಿ
ವಿಕ್ಷಪ್ತಮದೆನಿಪುದು ಶೃತಿಯಲ್ಲಿ | |4||
ಒಮ್ಮೆ ಭೋಗ ಮತ್ತೊಮ್ಮೆ ಯೋಗದೋಳ್ |
ಗಮ್ಮನೆ ಬಿಡದೆ ರಜೋಗುಣದಿ
ನೆಮ್ಮಿ ಕೂಡ್ದುಭಯ ವಮ್ಮರಿಯದ ವೃತ್ತಿಯೆ
ಗತಾಗತವು ತಿಳಿ ಮನದಿ ||5||
ಬೇರೆ ವಿಷಯದಲಿ ಸೇರದಾತ್ಮದ ವಿ |
ಚಾರದಲ್ಲಿ ನಿಶ್ಚಲಮಾಗಿ
ಸಾರಸತ್ವದ ಮನೋರತಿ ತೋರ್ಪುದು
ಮೀರಿದ ಸಂಶ್ಲಿಷ್ಟಮದಾಗಿ ||6||
ನಾನು ನೀನೆನುವದೇನು ತೋರದೆ ಚಿ |
ದಾನಂದದಿ ಸುಪ್ತನ ತೆರದಿ
ತಾನಿರುತಿಹುದೆ ಸ್ವಲೀನಮದೆನುವರು
ನೀನರಿ ಬಿಡದತ್ಯಾತುರದಿ ||7||
ಈ ತೆರೆದೊಳು ಗುಣ ವ್ರಾತಮಿಹ ಮನೋ |
ಜಾತ ವರ್ತನದೊಳಿರಲವರ್ಗೆ
ಖ್ಯಾತ ಜನಕನಂತೇತರ ಭಯ
ಗುರುನಾಥ ಶಂಕರನ ಕೂಡ್ದರಿಗೆ ||8||
ಯೋಗಿಯ ನಡೆ
ಯೋಗಿಗೀ ನಡೆ ನಿಶ್ಚಯಮೆಂದು ಪೇಳ್ವ ಶೃ |
ತ್ಯಾಗಮಗಳಿಲ್ಲ ನಿಂದಿಪುದೇಕೆ ಮರುಳೆ ||ಪಲ್ಲ||
ಯೋಗಿಯೆಲ್ಲಿರ್ದಡೇಂ ಯೋಗಿಯೆಂತಿರ್ದೊಡೇಂ |
ಯೋಗಿವರ ಮಾಡ್ದದನು ಮಾಡ್ದಡೇನು
ಯೋಗಿಗಿದರಿಂದೆ ಬಾಧಕವಿಲ್ಲ ವಿಷಯ ಸುಖ
ಭೋಗಿಗಳಿಗಿದರ ಬಾಧಕವು ತಾ ಬಿಡದು ||1||
ಪರಮ ಸುಜ್ಞಾನಾಗ್ನಿಯಿಂದಖಿಳ ಕರ್ಮಗಳ |
ನುರಿದು ಜಲಗತ ಕಮಲ ಪತ್ರದಂತೆ
ಸರಸದಿಂದಿಹದಿ ಸಂಸೃತಿಯೊಳಿರಲಾತಂಗೆ
ಬರಿಯ ಕರ್ಮಗಳ ಕೋಟಲೆಗಳಂಟುವವೇ || ||2||
ಪಾಪ ಪುಣ್ಯಂಗಳ ಶುಭಾಶುಭಾದಿಗಳ ಫಲ |
ತಾಪ ಸುಖ ಕೊಡುವವಾತ್ಮನ ತಿಳಿಯದವರ್ಗೆ
ಆ ಪರಮನವರಿದು ಭವಲೋಪುಗೈದಿಹ ಯೆತಿಗೆ
ಪಾಪಪುಣ್ಯಗಳು ನಿರ್ಲೇಪವಲ್ತೆ ||3||
ಯೋಗಿ ನಿಂದುದೆ ಕ್ಷೇತ್ರ ಯೋಗಿ ಮಿಂದುದೆ ತೀರ್ಥ |
ಯೋಗಿ ನುಡಿದುದೆ ಮಂತ್ರಮಾಗಿರ್ಪುದು
ಯೋಗಿ ಪಿಡಿದುದೆ ಮತವು ಯೋಗಿ ನಡೆದುದೆ ವ್ರತವು
ಯೋಗಿಗಿಂದಧಿಕ ದೈವತ ಬೇರೆಮುಂಟೆ ||4||
ವಂದಿಸಲು ಸತ್ಕರ್ಮ ನಿಂದಿಸಲು ದುಷ್ಕರ್ಮ |
ವಂದಿಸುತ ನಿಂದಿಸಲು ಮಿಶ್ರ ಕರ್ಮ
ಬಂದು ಕೂಡುವವದಕ್ಕಾತನೊಳು ಗುಣ ದೋಷ
ಮೊಂದೆಣಿಸದರ್ಚಿಪುದು ಭಕ್ತಿಯಿಂದೆ ||5||
ಕರಡಿಗೆಯೊಳಿರಿಸಿರ್ಪ ಕರ್ಪುರವ ಕಡೆಗೆ ತೆಗ |
ದಿರಿಸಿ ಪರಿಮಳವು ತಾ ಬಿಡದಿರ್ಪ ತೆರದಿ
ಅರಿಯಲ ಜ್ಞಾನ ಸುಜ್ಞಾನಿಯೊಳಗುಂಟೆನಿಪು
ದರರೆನಿರವದ್ಯನೊಳು ಪುಶಿಯಲ್ಲವೆ ||6||
ವರ ಯೋಗಿಯೊಳು ತೋರ್ಪ ಕರಣ ಧರ್ಮಾವಳಿ |
ಗಳುರಿದ ಚಣಕಾಂಕುರಿಸಿ ತೋರದಂತೆ
ಮರಳಿ ಭೂಮಂಡಲದಿ ಮುಂದಾತ ಜನ್ಮದ
ಅಂಕುರಕೆ ಗುರಿಯಲ್ಲೆಂಬುದಿದು ವೇದವಾಕ್ಯ ||7||
ಭುವನದೊಳು ಗರುಡ ಮಂತ್ರವ ಬಲ್ಲವನೊಳುರಗ ತವೆ |
ತನ್ನ ದುರ್ಗುಣವ ತೋರದಿರ್ಪಂತೆ
ಶಿವಯೋಗಿಯಲ್ಲಿ ಸಂಸೃತಿಯಿರಲ್ಕದರಿಂದೆ
ಭವಕೆ ಬೀಜವ ಮಾಳ್ಪ ಶಕ್ತಿಯುಂಟೆ ||8||
ಪರಬೊಮ್ಮನರಿದ ಬಂಧುರ ಯೋಗಿನ್ನಾವ |
ಪರಿಯ ಭವಭಯಗಳಿಲ್ಲೆಂಬುದಕ್ಕೆ
ವರವಜ್ಞಾತ್ವಾಮುಚ್ಯತೇ ಯೋಗಿಯೆಂಬ ಶೃತಿ
ಯರಿದು ಗುರು ಶಂಕರನ ಪೊಂದು ಬಿಡದೆ ||9||
ಗುರುವರ ನಿಮ್ಮ ದತ್ಕರುಣದೊಳು
ಗುರುವರ ನಿಮ್ಮ ಸತ್ಕರುಣದೊಳೆನ್ನರವರಿದು |
ನಾ ಪರಿಪೂರ್ಣ ಸುಖಿಯಾದೆ ||ಪಲ್ಲ||
ನಾಮ ರೂಪಾಂಗವೆ ಧಾಮವೆನ್ನದುಯೆಂದು |
ಪಾಮರನಾಗಿ ತಾಮಸದಿರಲು
ಪ್ರೇಮಾಸ್ತಿ ಭಾತಿಯೆಂಬೀ ಮೂರು ನಿನ್ನ
ಸುಧಾಮವೆಂದೊಲದು ಬೋಧಿಸಲಾಗಿ ||1||
ತನು ಕರ ಶ್ರೋತ್ರ ನಯನ ಮನಮೆಲ್ಲವು |
ನಿನಗೆ ವಿಷಯಗಳೆಂದೆನಿಸುವವು
ನಿನಗಿವು ಹಾನಿಯೆಂದನಲುಂಟೆವಕೆ ಸಾಕ್ಷಿ
ಕನೆ ನೀನೆಂದೊಸಿದು ತಿಳಿಸಲಾಗಿ ||2||
ಧರಣಿ ತಲದೊಳಯಸ್ಕಾಂತ ಶಿಲೆಯನು ತಾ |
ದರಿಸಿಸಿ ಸೂಜಿ ಚಲಿಸುವಂದದಿ
ಶರೀರಾದಿಗಳು ನಿನ್ನ ಪರಮ ಸನ್ನಿಧಿಯಿಂದೆ
ಪರಚೇಷ್ಟಿಸುವವೆಂದೊರಿಯಲಾಗಿ ||3||
ಪಳುಕದುಪಾಧಿಯ ಬಳಿಯೊಂದಿತದೃಪ |
ಸಲೆ ದೋರುವಲು ನೀನಖಿಳ ತತ್ವದ
ಕುಳವಾಗಿ ಪೊಳೆಯಲು ಬಳಿಕದು ನಿಜವೆ
ನಿರ್ಮಳನೆ ನೀನೆಂದು ಸೂಚಿಸಲಾಗಿ ||4||
ಅಸುವಿನೊಳಗೆ ಮಹಾದಸುವಿನ ಪದವಾಗಿ |
ಹಸನಾಗಿ ಶೋಭಿಪವ ಪರೋಕ್ಷ
ದೆಸಿಯೆನಿಸುವ ಶಂಕರೇಶನೋಳ್ಬೆರೆದು
ಸಂತಸದಿ ನೀನಿರುಯೆಂದರುಪಲಾಗಿ ||5||
ಎಂದಿರುವೆನೇನೋ ನಿಜ ಸುಖದೊಳ
ಎಂದಿರುವೆನೇನೋ ನಿಜ ಸುಖದೊಳೆಂದಿರುವೆನೇನೋ
ಬಹುದಂದುಗಗಳವಳಿದಂಡವಡೆದು ನಾ ||ಪಲ್ಲ||
ತರುಣಿ ತನಯರನುಜರ ನಂಟರ |
ಮಿತ್ರರ ಸಿರಿತನುವಾಭರಣಗಳ
ನಿರುತದಿ ಮೋಹಿಸಿ ತೊರೆಯದಿಹದರತಿ
ವಿರತಿಯೊಳಿದನುರೆ ಜರಿದು ಜಗದಿ ನಾನೆಂದಿರುವೆ ||1||
ಪಿರಿಯ ಭೋಗಮೆನಿಸಿರುವ ಸ್ವರ್ಗ ಸುಖ |
ಕಿರದೆಳಿಸುತ ಜೋತಿಷ್ಟೋಮ
ವರಯಜ್ಞಗಳನು ವಿರಚಿಸಿ ಬೇಡುವ
ವರಗಳ ಬಾಧೆಯ ಮರದಿಹದೊಳು ನಾನೆಂದಿರುವೆ ||2||
ದುರಿತಕರ್ಮ ತೊಂದರೆಯಿಲ್ಲದೆ ತ |
ತ್ಪರಿಹಾರಕಮಾಗಿರುತಿರುವ
ಪರಿವಿಡಿದೊಳ ಬಾಹಿರ ಪೂಜೆಯ
ಬಂಧುರದೊಳುಳಿದು ಶಂಕರನವೆರಸಿ ನಾನೆಂದಿರುವೆ ||3||
ಜ್ಞಾನಿಯೇ ಬ್ರಹ್ಮ ಲೋಕದಿ
ಜ್ಞಾನಿಯೇ ಬ್ರಹ್ಮ ಲೋಕದಿ |
ಜ್ಞಾನಿಯೇ ಬ್ರಹ್ಮ
ಜ್ಞಾನದಿಂತಿವನ ತಾನೆ ತನ್ನೊಳರಿ
ದಾನಂದಾಬುಧಿಯಲ್ಲಿ ಮುಳುಗಿರುವ ||ಪಲ್ಲ||
ಮೂರು ದೇಹಗಳು ಮೂರು ಕರಣಗಳು |
ತೋರುವಿಂದ್ರಿಗಳೀರೈದು
ಬೇರೆಯೆಂದು ಸುವಿಚಾರದಿಂದೆ ಭವ
ಭಾರವಳಿದು ಗಂಭೀರದೊಳಿರುತಿಹ ||1||
ಕನಸಿನ ಪರಿ ಬಿಸಲ್ದೊರೆ ಪರಿಸುರಧನು |
ವಿನ ಪರಿಯೆಂತೀಜಗವೆಲ್ಲ
ಜನಿಸಿ ಸತ್ಯಮೆಂದೆನಿಸಿ ತೋರುವದಿ
ದೆನಗನ್ಯಮದಿಲ್ಲೆನುತ ಭೇದದಿಹ ||2||
ಹರುಷ ಶರಧಿ ಶಂಕರ ಗುರುವಿನೊಳೊಡ |
ವರೆದು ಲೌಕಿಕದ ವಾಸನೆಯ
ಪರಿದು ಕಲ್ಪನೆಯ ನೆರೆ ಸೂಸದೆ ಸು
ಸ್ಥಿರದಿಂ ಸಹಜವನರಿದು ಸುಖಿಸುತಿಹ ||3||
ಪರಮ ಜೀವನ್ಮುಕ್ತರ ಸಚ್ಚಾರಿತ್ರ
ಪರಮ ಜೀವನ್ಮುಕ್ತರ ಸಚ್ಚಾರಿತ್ರ |
ವರಿಯಲು ಮನಕೆಚ್ಚರ ||ಪಲ್ಲ||
ಧಾರಿಣಿಯೊಳೆ ಕೃಷ್ಣನು ಷೋಡಶ ದಶ |
ನೂರು ತರುಣಿಯರನು ಭೂರಿ ಪ್ರೇಮದಿ ಕೂಡಿ
ಜಾರತ್ವವನು ತೋರಿ ಧೀರ ಜಿತೇಂದ್ರಿಯಂ
ದಾರಾಜಿಸಿದ ತಾನು ||1||
ಜನಿಸುತ ಮುನಿ ಶುಕನು ದಿಗಂಬರ |
ನೆನಿಸಿ ವಿರತನಾದನು ಜನಕ ರಾಘವರೀರ್ವರನು
ಪಮ ರಾಜತ್ವವನು ಗೈದು ಕಡೆಗೆ
ಸನ್ಮುನಿಗಳೆನಿಸಿದರು ||2||
ಮೆರವ ವಶಿಷ್ಟ ತಾನು ಕರ್ಮದಿ ಕಡೆ |
ವರಿಗೆ ನಿರತನಾದನು ವರ ಪ್ರಹ್ಲಾದನು ಭಕ್ತಿ
ಪರನಾಗಿ ನಡೆದನು ಮರುತ ಸುತನು
ದೂತನಾಗಿ ಬಾಳಿದನು ||3||
ತ್ರೈಮೂರ್ತಿಗಳ ವರದಿ ತದಾಂಶದ |
ತ್ರೈಮೊಗದಿಂ ಬಾರದಿ ಸ್ವಾಮಿ ದತ್ತಾತ್ರೇಯನು
ನ್ಮತ್ತಾವಸ್ಥೆಯಿಂ ಭೂಮಿಯೊಳವ
ಧೂತನಾಗಿ ಬಾಳಿದನು ||4||
ಭರತ ವೃಷಭ ರಾವಣ ದೂರ್ವಾಸ ಸೌ |
ಭರಿ ಸ್ವೇತಕೇತು ಭಾಣ ಅರಿಯಲಿವರ ನಡೆ
ತರತರಮಾದರು ಪರಮೋಕ್ಷಮೊಂದಾಯ್ತು
ಗುರು ಶಂಕರನೆ ಬಲ್ಲ ||5||
ತನ್ನ ನಿಜವನೆಲ್ಲ ತಾನೆ ತನ್ನೊಳರಿದ
ತನ್ನ ನಿಜವನೆಲ್ಲ ತಾನೆ ತನ್ನೊಳರಿದ ಪರಮ ಯೋಗಿಯನ್ನು
ಪೂಜಿಸುವ ಸುಭಕ್ತ ಧನ್ಯನವನು ಶಂಕರ ||ಪಲ್ಲ||
ನಾನೆ ದೇಹಮೆಂದು ಮೊದಲು ನಾನು ನನ್ನ ಮರೆತಿರಲ್ಕೆ |
ನೀನೆ ಬಂದು ಗುರುವೆನಿಸಿ ವಿಧಾನದಿಂದೆ ಬೋಧಿಸೇ
ನಾನು ನೀನುಯೆಂಬ ಭೇದಮೆನುಮಿಲ್ಲದಂತೆಯಾಗಿ
ನಾನೆ ನೀನೆಯಾದ ಮಹಾ ಜ್ಞಾನಮೂರ್ತಿ ಶಂಕರ ||1||
ಜನ್ಮವೊಂದೆಯನುಭವಿಂಗೆ ಜನ್ಮ ದ್ವಯಾಭ್ಯಾಸಿಗೆ ಮೂ |
ಜನ್ಮ ಮುಮುಕ್ಷುವಿಗೆ ನೂರು ಜನ್ಮದವಧಿ ಕರ್ಮಿಗೆ
ಜನ್ಮಮಿಲ್ಲ ಚರಮನಿಗೀ ಜನ್ಮದಲ್ಲಿ ತನ್ನ ತಿಳಿದ
ಜನ್ಮದೆತಿಯನುತಿಸಿದರ್ಗೆ ಜನ್ಮಮುಂಟೆ ಶಂಕರ ||2||
ನೀರಿನಲ್ಲಿ ಪುಟ್ಟ ಕಮಲ ನೀರಿನಲ್ಲಿ ನೆಲಸಿಕೊಂಡು |
ನೀರನಂಟೆ ಕೊಳದೆ ತಾನು ತೋರುತಿರ್ಪ ತೆರದೊಳು
ಸಾರ ಶೂನ್ಯಮಾಗಿಹ ಸಂಸಾರದೊಳಗೆ ಸೇರಿ ಲಸ
ತ್ಸಾರತರಸು ಮೋಕ್ಷಪೊಂದಿ ಭೂರಿ ಸುಖಿಪ ಶಂಕರ ||3||
ಭೂವಲದೊಳಮಿತ ಶೋಭೆ ತೀವಿತೋರ್ಪವನಕೆ ಮಹಾ |
ದಾವವಡಿಸಲಲ್ಲಿರುವ ಮೃಗಾವಳಿ ಬಿಟ್ಟೋಡ್ವವು
ಈ ವಿಧಿಯಿಂ ಯೋಗಿವರನೊಳಾವರಿಸಿದ ಕರ್ಮಗಳವು
ತಾವೇ ಪೋಗುತಿಹವು ಜ್ಞಾನ ಪಾವಕವಂ ಶಂಕರ ||4||
ಸಾಧುವಿನ ನೀರಿಕ್ಷಿಸುತ ಖಳಾಧಮರು ವಿಭೇದದಿಂದು |
ಪಾಧಿ ಯುಕ್ತನೆನಲುನರ್ಕ ವೀಧಿಗೆ ಗುರಿಯಪ್ಪರಾ
ಸಾಧುವಿಂಗೆ ಬೇರೆ ದೈವಮಿ ಧರೆಯೊಳಗಿಲ್ಲವೆಂದು
ಸಾಧಿಸುವ ವಿವೇಕಿಗೆ ಭವ ಬಾಧೆಯುಂಟೆ ಶಂಕರ ||5||
ತೋರ ಚೂತವೃಕ್ಷವ ಕಂಡೋರುವ ಫಲದಾಶಗದ |
ನ್ನೇರಲಗ್ರ ಕೊಂಬೆ ಮುರಿದು ಜಾರಿಯವನು ಬೇಗದಿ
ಧಾರಿಣಿಂಗೆ ಬೀಳ್ವ ಭ್ರಾಂತಿ ಬಾರದಿರ್ದೊಡುರುಳ್ದ ತೆರದಿ
ಧೀರೆಯೆತಿಗೆ ತಾನೆ ಮೋಕ್ಷ ತೋರುವದೈ ಶಂಕರ ||6||
ಮಿರುಗುವಗ್ನಿಯಲ್ಲಿ ಮರವದಿರಲುದಗ್ಧವಹುದು ಮತ್ತ |
ಮರದೊಳಗ್ನಿಯಿರಲದಕ್ಕೆವರಿಸದಿರ್ಪ ತೆರದೊಳು
ಪರಮ ಯೋಗಿಯಲ್ಲಿ ಸಂಸೃತಿರದುಹತಮಾಗದಿರದು
ಮರಳಿಯಾ ಪ್ರಪಂಚದೊಳೆತಿ ಸರಸದಿರುವ ಶಂಕರ ||7||
ಪಾಪ ಗಂಗೆಯಿಂದ ಮಹಾ ತಾಪ ಚಂದ್ರನಿಂದೆದರಿ |
ದ್ರೋಪ ಕಷ್ಟ ಸುರತರುವಿಂ ಲೋಪಮಾಗಿ ಪೋಪವಾ
ಪಾಪ ತಾಪ ದೈನ್ಯ ಮೂರು ತಾಪಿಸಿಯ ಸುದರ್ಶನದಿ ನಿ
ರೂಪಮಾಗಿ ಸುಖ ವಿಶೇಷ ವ್ಯಾಪಿಸುವದು ಶಂಕರ ||8||
ಯೋಗಿಯಲ್ಲಿ ಕರ್ಮಮಿಲ್ಲ ಯೋಗಿಯಲ್ಲಿ ದ್ವೈತಮಿಲ್ಲ |
ಯೋಗಿಯಲ್ಲಿ ಪುಣ್ಯ ಪಾಪ ಪೂಗ ಮುನ್ನಮಿಲ್ಲವು
ಯೋಗಿಯಲ್ಲಿ ವಿಧಿ ನಿಷೇಧದಾಗು ಹೋಗು ಯಾವುದಿಲ್ಲ
ಯೋಗಿಯಲ್ಲಿ ಜನನ ಮರಣ ರೋಗವಿಲ್ಲ ಶಂಕರ ||9||
ಯೋಗಿನಿಂದ ಸ್ಥಲವೆ ಕ್ಷೇತ್ರ ಯೋಗಿ ಮಿಂದ ಜಲವೆ ತೀರ್ಥ |
ಯೋಗಿ ನುಡಿದ ನುಡಿಯೆ ಮಂತ್ರಮಾಗಿ ತೋರುತಿರ್ಪವು
ಯೋಗಿ ಸರ್ವರಲ್ಲಿ ಪ್ರೀತ ಯೋಗಿ ಭುಕ್ತಿ ಮುಕ್ತಿದಾತ
ಯೋಗಿಯೆ ನೀನಾಗಿ ಸದಾ ಯೋಗದಿರುವಿ ಶಂಕರ ||10||
ಬೆಂಕಿಯಿಂದೆ ಕರ್ಪುರ ಸುಡಲಂಕಿತಕ್ಕೆ ಬೇಕೆನಲ್ಕ |
ಳಂಕಮಿಲ್ಲದಂತೆ ಶಿಷ್ಯ ಸಂಕುಲದಘ ಮೊತ್ತವ
ಪಂಕಜೋದ್ಭವಾಂಡದೊಳ್ಸುಖಂಕರವರ ಫೂಲ ಚಿಂತಿ
ಶಂಕರೇಶನರ್ಚಿಸಲ್ ನಿರಂಕವಹುದು ಶಂಕರ 11||
ಶತಕೋಟಿ ಕರ್ಮವ ಕೃತಿಸಿದಡೆ
ಶತಕೋಟಿ ಕರ್ಮವ ಕೃತಿಸಿದಡೇಂ ಜನಿ |
ಮೃತಿತಪ್ಪದಪವರ್ಗ ಸಾಧಿಸದೊ ||ಪಲ್ಲ||
ಚಿತ್ತ ಶುದ್ಧಿಗೆ ಕರ್ಮ ಮೊತ್ತಮಲ್ಲದೆ ಇಲ್ಲಿ |
ತತ್ವ ಶುದ್ಧಿಗೆ ಕಾರಣಲ್ಲ ತಿಳಿ ಮತ್ತಮಾ ತತ್ವದ
ತ್ಯುತ್ತಮ ಸಿದ್ಧಿಸು ವೃತ್ತಿ ವಿಚಾರದಿಂ ಲಭಿಸುವದು ||1||
ಕರ್ಮದಿಂ ಡಾಭೀಕ ಧರ್ಮದಿಂ ಜನಿಮೃತಿ |
ನಿರ್ಮೂಲಮೆಂತಹುದಕಟಕಟ
ನಿರ್ಮಲ ಶೃತಿಯನ ಕರ್ಮಣಾಯೆಂಬುಕ್ತಿ
ಮರ್ಮವನರಿಯದೆ ಮೂಢರಾಗಿಹರು ||2||
ಯುಕ್ತಿ ಭಾಷ್ಯಗಳು ನಿರುಕ್ತಿ ಶಾಸ್ತ್ರದ ಮಹ |
ಶಕ್ತಿಯಮ್ನಾಯ ವೈದುಷ್ಯಮೆಲ್ಲ
ಭುಕ್ತಿಗಲ್ಲದೆ ಮತ್ತೆ ಮುಕ್ತಿಗದಲ್ಲ ವಿ
ರಕ್ತಿಯಿಂ ಗುರು ಶಂಕರನೊಳೊಡವೆರಿಯದೆ ||3||
ಜ್ಞಾನದಿಂ ಮೋಕ್ಷವು ತಾನಹುದು
ಜ್ಞಾನದಿಂ ಮೋಕ್ಷವು ತಾನಹುದಿದನುಳಿ |
ದೇನು ಮಾಡಿದಡೇನು ಬರಿಗಂಟು ||ಪಲ್ಲ||
ತನ್ನನು ಮರೆದದಕಿನ್ನಿಳೆಯೊಳು ನರ |
ಜನ್ಮ ಬಂದಿಹುದೀಗ ಭುವಿಯಲ್ಲಿ
ನಿನ್ನ ನೀನರಿದರೆ ಶೂನ್ಯವಹುದು ಜನ್ಮ
ಭಿನ್ನ ಭೇದಗಳಿರಲದು ತಪ್ಪದು ||1||
ವಿತ್ತ ಗೋವುಗಳ ವಿಪ್ರೋತ್ತಮರಿಗೆ ಧರ್ಮ |
ವಿತ್ತದರಿಂದ ಸ್ವರ್ಗಕ್ಕೆ ಪೋಗಿ |
ಉತ್ತಮ ಸುಖ ಸವಿಯುತ್ತ ಪುಣ್ಯವು ತೀರೆ
ಮತ್ತೆದುರ್ಭವಕೆ ನೀ ಗುರಿಯಾಗುವಿ ||2||
ಯೋಗಾದಿ ಬಲ್ಲಿದನಾಗಲಿ ವಿಷಯವ |
ತ್ಯಾಗ ಮಾಡದೆ ಮಹಾ ಭೋಗಿಯನಿಸಲಿ
ಭಾಗ ಲಕ್ಷಣೆಯಿಂದ ಬೇಗದಿ ಭೇದವ
ನೀಗಲು ಶಂಕರನಾಗಿ ರಂಜಿಪನು ||3||
ಇಲ್ಲ ಇಲ್ಲ ಮುಕ್ತಿಯಿಲ್ಲಯಿಲ್ಲ
ಇಲ್ಲ ಇಲ್ಲ ಮುಕ್ತಿಯಿಲ್ಲಯಿಲ್ಲ |
ಸಲ್ಲಲಿತ ಜ್ಞಾನದಿಂದಲ್ಲದಿನ್ನೇತರಿಂ ||ಪಲ್ಲ||
ಜಪವನೆಸಗಿದಡೇನು ತಪವನಡಿಸಿದಡೇನು |
ಉಪವಾಸದಿಂ ಶುಷ್ಕನಾದಡೇನು
ಗುಪಿತದಿಂ ಗುಡ್ಡ ಗಂಹರವ ಸೇರಿದಡೇನು
ಚಪಲತನದಿಂದೋದಿ ಕೇಳ್ದಡೇನು ||1||
ಹರಿವ ವಾಯುಗಳ ಬಂಧುರದಿ ಬಂಧಿಸಿದೊಡೇಂ |
ಸರಸದಿಂ ಲಕ್ಷ ನಿಲ್ಲಿಸಿದಡೇನು
ಚರಿಪ ಮನವನ್ನು ಹೃತ್ಸರಸಿಜದೊಳಿರಿಸಲೇಂ
ಧರಣಿಯೊಳು ಸಿದ್ಧಿಗಳ ತೋರ್ದಡೇನು ||2||
ಸಿದ್ಧಿ ತೋರ್ದಡೆ ಯೋಗ ಸಿದ್ಧಿಯಾಯ್ತದು ತೋರ |
ದಿದ್ದರಾ ಯೋಗ ನಿಷ್ಫಲವು ನೋಡು
ಸಿದ್ಧಿಯದು ಲೋಕ ಪ್ರಸಿದ್ಧಿಗಾಯ್ತದರಿಂದ
ಶುದ್ಧ ಮೋಕ್ಷವು ಶಂಕರೇಶನಿಂದಹುದೆ ||3||
ಭುವನದೊಳು ಕರ್ಮ ಬಿಡದವ
ಭುವನದೊಳು ಕರ್ಮ ಬಿಡದವನಾರು ಬಿಟ್ಟು ನಡೆ |
ಯುವನಾರದರ ಮರ್ಮವನು ಪೇಳ್ವೆನು || ಪಲ್ಲ||
ಶರೀರವೇ ನಾನೆಂದು ಸ್ಥಿರವಾಗಿ ನಂಬಿಕೊಂಡಿರುವ |
ಮೂಢನೆ ಬಿಡದೆ ಮಾಳ್ಪ ಕರ್ಮ
ಶರೀರ ನಾನಲ್ಲಿದಕೆ ನಿರುತ ಸಾಕ್ಷಿಕನೆಂದು
ನೆರೆ ಬಲ್ಲ ಸುಮತಿಗಿನೆಲ್ಲಿ ಕರ್ಮ ||1||
ಪೊರೆವ ಪರಮಾತ್ಮ ಬೇರಿರುವನಾವನ ಕಿಂಕರನೆಂದು
ತಿಳಿದವನು ಮಾಳ್ಪ ಕರ್ಮ
ವರ ತತ್ವಮಸ್ಯರ್ಥ ಗುರುಮುಖದೊಳರಿದು ನಿಂದಿರುವ
ಸುವಿವೇಕಿಗಿನ್ನೆಲ್ಲಿ ಕರ್ಮ ||2||
ಮನುಜನಾ ವಿಪ್ರ ನಾನೆನುತ ಮಹದಭಿಮಾನ |
ಜನಿತಮಾಗಿದ್ದವನು ಮಾಳ್ಪ ಕರ್ಮ
ತನುವಿಡಿದು ಜಾತಿ ಸಂಜನಿಸಿಹುದು ನಾನಜಾ
ತನುಯೆಂದು ತಿಳಿದಗಿನ್ನೆಲ್ಲಿ ಕರ್ಮ ||3||
ನಾನು ದೀಕ್ಷಿತನು ಪೌರಾಣಿಕನು ಶಾಸ್ತ್ರಾವ |
ಧಾನಿಯೆಂದರಿದವನು ಮಾಳ್ಪ ಕರ್ಮ
ನಾನು ನೀನದಿದೆಂಬದೇನು ತೋರದೆ ಬ್ರಹ್ಮ
ತಾನೆಯಂದರಿದೆಗಿನ್ನೆಲ್ಲಿ ಕರ್ಮ ||4||
ಉತ್ತಮಾದ್ವೈತದಲಿ ಚಿತ್ತವಿಲ್ಲದ ಮದೋ |
ನ್ಮತ್ತನಾಗಿರುವವನು ಮಾಳ್ಪ ಕರ್ಮ
ಮತ್ತಮಾ ಗುರುಶಂಕರೋತ್ತುಂಗನಲಿ ಬೆರೆದು
ನಿತ್ಯನಾಗಿರ್ಪಗಿನ್ನೆಲ್ಲಿ ಕರ್ಮ ||5||
ಪರಿಪರಿ ಯೋಗದಿ ಕೊರಗುವದೇಂ
ಪರಿಪರಿ ಯೋಗದಿ ಕೊರಗುವದೇಂ ಬಿಡು |
ಪರಬ್ರಹ್ಮ ನಿಜ ನಿಷ್ಠೆಯೊಂದಿರಲಿ ||ಪಲ್ಲ||
ಭುವಿಯೊಳು ಪ್ರಾರಬ್ಧ ನೆವದಿಂ ಮನದೊಳುದಿ |
ಸುವ ದೋಷ ಗುಣಗಳೆಲ್ಲವು ನಿನಗೆ
ತವೆ ವಿಷಯಗಳು ಮೇಣವುಗಳನರಿಯುವ |
ರಿವೆಯೇ ನಾನಹುದೆಂಬ ಪ್ರಜ್ಞಯೆ ಯೋಗ | |1||
ಬರಿದಾದ ವಿಕೃತಿಗಳೊರಿಸದ ದ್ವಯ ನಿತ್ಯ |
ಪರಿಪೂರ್ಣ ಚಿನ್ಮಯ ನೀನೆಂದು
ನೆರೆ ನಂಬಿ ಮತಿಯನು ಮರಿಯದೆ ಸಂತತ
ಸರಸದಿಂದಿರೆ ಶೃತಿಮತದ ಸುಯೋಗ ||2||
ಕರಣೇಂದ್ರಿಯಗಳ ನಶ್ವರ ವಿಷಯಗಳ |
ಸಾಕ್ಷಿಕನೆಂಬ ಗುರು ಶಂಕರಾನೆಂಬುವ
ಪರಿಕಲನೆಯ ಬಿಟ್ಟು ಮರುತನಿಲ್ಲದ ಜ್ಯೋತಿ
ಪರಿಯಂತೆ ಸುಮ್ಮನಿಹುದೆ ನಿಜ ಯೋಗ ||3||
ಭೋಗದಿ ಕೂಡಿರಲೊಂದೆ ಸಂಸೃತಿ
ಭೋಗದಿ ಕೂಡಿರಲೊಂದೆ ಸಂಸೃತಿ |
ತ್ಯಾಗವ ಮಾಡಿರಲೊಂದೆ
ಆಗಮ ಶೃತಿಗೊಶಮಾಗದ ಬ್ರಹ್ಮವ
ನೀಗತನ್ನೊಳರಿದಾ ಘನ ಯೋಗಿಯು ||ಪಲ್ಲ||
ಶರಣಾಗತ ಶಿಷ್ಯರಿಗುಪದೇಶಿಸಿ |
ಗುರುತನವಿಡಿದಿರಲೊಂದೆ
ಮರುಳನಂತೆ ಪರಿಚಯಲಿ ಬೂದೆಯ
ಧರಿಸಿ ಚರಿಸುತಿರಲೊಂದೆ ||1||
ತರುಣಿಯ ಮೋಹವ ಮರೆದು ಪೋಗಿ ಶ್ರೀ |
ಗಿರಿಯಲಿ ತಪಿಸಲದೊಂದೆ
ಮರುಕದಿಂದಲಾ ತರುಣಿಯೊಳನುದಿನ
ಸುರತ ಸುಖದೊಳಿರಲೊಂದೆ ||2||
ಧರಣಿಯೊಳೊಪ್ಪುವ ಧೊರೆಯೆಂದೆನಿಸುತ |
ಪರಮ ಸುಖದೊಳಿರಲೊಂದೆ
ತಿರುಕನಂತೆ ಸಂಚರಿಸುತ ಮನೆ ಮನೆ
ತಿರಿತಂದುಣ್ಣಲದೊಂದೆ ||3||
ಕುಲದಭಿಮಾನವ ಬಲಿಸಿ ಪೂಸರವ |
ನೊಲಿದು ಧರಿಸಿಕೊಳಲೊಂದೆ
ಅಲ್ಲದವನ ಕೂಡುತ ಎಲುವಿನ ಮಾಲೆಯ
ನಲಿದು ಹಾಕಿಕೊಳಲೊಂದೆ ||4||
ಬಲು ಮಾತಾಡುತೆ ಹುಲಿಯನೆಯೇರುತೆ |
ಬಲವನು ತೋರಲದೊಂದೆ
ನೆಲದೊಳು ಮೌನದಿ ಮಲಗುತ ಧೈರ್ಯ
ದೊಳಿಲಿಗೆಬಹುಬೆದರಲೊಂದೆ | |5||
ಬಿಡದೆಂ ಯೋಗವನು ನಡಿಸುತ ಸಿದ್ಧಿಯ |
ನಡಿಸಿ ತೋರಿಸಲದೊಂದೆ
ಅಡವಿಯೊಳನುದಿನ ಬಡಪಶುಗಳ ಪೊರೆ
ನಡಿಸಿತೋರಿಸಲದೊಂದೆ ||6||
ಮರಣದ ಕುರುಹುಗಳೊರೆದು ಕಾಸಿಯೊಳು |
ಶರೀರವ ತಾ ಬಿಡಲೊಂದೆ
ಗುರು ಶಂಕರನಡಿ ಸ್ಮರಿಸುತ ತನು ಪೊಲೆ
ಯರ ಮನೆಯೊಳು ಬಿಡಲೊಂದೆ ||7||
ಈ ನರ ಜನ್ಮದಿ ತಾನು ತನ್ನ ತಿಳಿ
ಮಾನವ ಮಾಡಲದೊಂದೆ ಜನರಪ |
ಮಾನವ ಮಾಡಲದೊಂದೆ
ಈ ನರ ಜನ್ಮದಿ ತಾನು ತನ್ನ ತಿಳಿ
ದಾನಂದಿಸುವ ಮಹಾನುಭಾವನಿಗೆ ||ಪಲ್ಲ||
ಇಂದುಧರನ ಸಮನೆಂದು ಭಕುತಿಯಿಂ |
ವಂದಿಸಿ ಪೊಗಳಲದೊಂದೆ
ಮಂದ ಭಾಗ್ಯನಿವನೆಂದು ಕಿನಿಸಿನಿಂ
ನಿಂದಿಸಿ ನುಡಿಯಲದೊಂದೆ ||1||
ಮೌನಿಯಂದು ಸುಮ್ಮಾನದಿಂದೆ ತವ |
ಧ್ಯಾನವ ಮಾಡಲದೊಂದೆ
ಸ್ವಾನನಂತೆ ಬಹು ಹೀನನೆಂದು
ಸಂಧಾನಿಸಿ ನುಡಿಯಲದೊಂದೆ ||2||
ತೋಷದಿಂದೆ ಸಂಭಾಷಣವೆಸಗುತ |
ಭೂಷಣ ಮಾಡಲದೊಂದೆ
ದೋಷಿಯಂದು ಪರಿ ಪೋಷಣಗೈಯ್ಯದೆ
ದೂಷಣೆ ಮಾಡಲದೊಂದೆ ||3||
ಭೋಗ ತೊರೆದ ಶಿವ ಯೋಗಿಯೆಂದು ಶಿರ |
ಬಾಗಿ ಕರ ಮುಗಿಯಲೊಂದೆ
ಯೋಗಿಯಲ್ಲ ಭವ ರೋಗಿಯೆಂದು ಜನ
ಕೂಗಿ ಬೊಬ್ಬಿಡಲದೊಂದೆ ||4||
ಶ್ರೇಷ್ಠ ಕುಲಜನೆಂದಿಷ್ಟದಿಂ ಕರೆದು |
ಮೃಷ್ಟಾನ್ನವನಿಡಲೊಂದೆ
ಸೃಷ್ಟಿಯೊಳಗೆ ಕುಲ ಭ್ರಷ್ಟ ಪರವi
ಪಾಪಿಷ್ಟನೆಂದುಸುರಲೊಂದೆ ||5||
ಆತು ಮನರಿದ ಪುನೀತನೆಂದು ಸಂ |
ಪ್ರೀತಿಯ ಬೆಳಿಸಲದೊಂದೆ
ಭೂತಲದಲಿ ಬಲು ಪಾತಕನೆನ್ನುತ
ಮಾತನಾಡದಿರಲೊಂದೆ ||6||
ಅಂಕಿಸಿ ಶ್ರೀಗುರು ಶಂಕರನೆನ್ನುತ |
ಕಿಂಕರರಾಗಲದೊಂದೆ
ಶಂಕಾತಂಕ ಕಲಂಕಿತನೆನ್ನುತ
ಬಿಂಕದಿ ಬೊಗಳಲದೊಂದೆ ||7||
ಅಂತರಾತ್ಮನರಿದಂಥ ಮಹಂತನು
ಅಂತಿಹ ನಿಂತಿಹನೆಂತಿಹನೆಂದು ಬಾ |
ಹ್ಯಾಂತರದಲ್ಲಿ ನಿಂದಿಸ ಬೇಡೊ
ಅಂತರಾತ್ಮನವರಿದಂಥ ಮಹಂತನು
ಎಂತಿರ್ದೊಡಾತ ಮುಕ್ತನು ನೋಡೊ ||ಪಲ್ಲ||
ವಸನಾಶನದ ಬಹು ವೆಸನದೊಳಗೆ ಸೇರಿ |
ಕಸವಿಸಿಯೊಳು ಯೋಗಿಯಿರಲೇನು
ಕೆಸರೊಳುದಿಸಿ ಮತ್ತ ಕೆಸರ ಬಳಿಯದೆ ರಂ
ಜಿಸುವ ಕುಂಬಾರ ಕೀಟಕದಂತಿರುವನು ||1||
ನಾಡೆಲ್ಲ ಮನೆ ಮನೆ ಕಾಡು ಭಿಕ್ಷವ |
ಬೇಡುತ ಯೋಗಿ ತಾನಿರಲೇನು
ರೂಢಿಯೊಳ್ಕಾಷ್ಠವ ಕೂಡಿ ತನ್ನಂತೆ ತಾ
ಮಾಡಿಕೊಂಡೆಸವಗ್ನಿಯಂತೆ ವರ್ತಿಪನು ||2||
ಎಲ್ಲರೊಡನೆ ಕೂಡಿ ಎಲ್ಲರೊಡನೆಯಾಡಿ |
ಯಲ್ಲ ಕಾರ್ಯದಿ ಯೋಗಿಯಿರಲೇನು
ಹಲ್ಲಿನೊಡನೆ ಕೂಡಿ ಹಲ್ಲಿನೊಡನೆಯಾಡಿ
ಹಲ್ಲಿಗೆ ಶಿಲ್ಕದರಸನೆಯಂತಿಹನು ||3||
ನಾರಿ ಮಕ್ಕಳ ಭ್ರಾಂತಿ ಸೇರಿ ಯೋಗೀಂದ್ರ |
ಸಂಸಾರಿಯೆನಿಸಿಕೊಳತಿರಲೇನು
ನೀರೊಳುದ್ಭವಿಸಿಯಾ ನೀರೊಳು ವಾಸಿಸಿ
ನೀರನಂಟದಬ್ಜಪತ್ರದಂತಿಹನು ||4||
ಹರ ಧ್ಯಾನ ಮರೆದು ಶರೀರ ಸ್ನಾನ ತೊರೆದು |
ಹೀನರ ಬಳಗದಿ ಯೋಗಿಯಿರಲೇನು
ಮರವೆಯ ಕಳೆದು ತನ್ನಿರವನು ತಿಳಿದು
ಶಂಕರ ಗುರುವರನೆ ತಾನಾಗಿರುತಿಹನು ||5||
ಹರನೇ ನೀನಿದ್ದೆಂಬ ತತ್ವಮಸಿ
ಹರನೇ ನೀನಿದ್ದೆಂಬ ತತ್ವಮಸಿ ಮೆರವ ಸಾಮ ವೇದೋಕ್ತಿ
ನೆರೆ ಶಬ್ದಕ್ಕನುಸರಿಸಿ ಪೇಳಲಿಲ್ಲಿದರಿಂ ದೊರೆವದು ಮುಕ್ತಿ ||ಪಲ್ಲ||
ನರನ ಬಿಡದೆ ಸುರ ವರ ನೀನೆನ್ನುತ |
ಪರಿಯೊಳು ಬಣ್ಣಿಸಿದಂತೆ
ಪರಬೊಮ್ಮನೆ ನೀನೆಂಬುವ ನುಡಿ ಸ್ತುತಿ
ಪರವಲ್ಲವು ಬಿಡು ಚಿಂತೆ ||1||
ಪರಿಚಾರಕನನ್ನರಸನೆಂದು |
ಪ್ರೋತ್ಸಾಹಿಸಿ ನುಡಿದಾ ತೆರಿದಿ
ಪರಮಾತ್ಮನೆ ನೀನೆಂಬುದುಪಚರಿಸಿ
ಯೊರೆದುದಲ್ಲ ತಿಳಿ ಮುದದಿ ||2||
ಪ್ರತಿಮೆ ದೇವತಾ ಕೃತಿ ಸತ್ಯಮಿದೆಂ |
ದತಿ ಶೈಸಿದ ಪರಿಯೀಗ
ಕ್ಷಿತಿಯೊಳು ಪೂಜಿಪರತಿಗಾಗಿದು
ಸಮ್ಮತಿಸಲಿಲ್ಲ ಬಹುದೇಗ ||3||
ಪೊಡವಿಯೊಳೊಟುವಿಗೆ ಸುಡುವ ಬೆಂಕೆನುತ |
ನುಡಿದು ತೋರಿದಂತಿಲ್ಲಿ
ಮೃಡ ನೀನೆಂಬುವ ನುಡಿ ಹೋಲಿಕೆಗಿದು
ನುಡಿಯಲಿಲ್ಲ ಶೃತಿಯಲ್ಲಿ ||4||
ಮಡಿಕೆಯು ಮಣ್ಣಿಂದೊಡನೆ ನುಡಿದ ತೆರ |
ವಸ್ತುವೆ ನೀನೆಂದಿಹ
ಬಿಡದೆ ಕಾರ್ಯ ಕಾರಣಗಳ ತಿಳಿಸುತ
ನುಡಿಯಲಿಲ್ಲ ಬಂಧುರದಿ ||5||
ಕರಿಯ ನೈದಲೆಮಿದೆಂಬುವಂತೆ ಪರಿ |
ಪರಿಗುಣಿ ಗುಣತ್ವವನ್ನು
ಪರಮನೆ ನೀನೆಂದಿಳೆಯೊಳು ತತ್ಪದ
ವರೆದುದಲ್ಲ ಕೇಳಿನ್ನು ||6||
ಚಿನುಮಯ ಗುರು ಶಂಕರ ನೀನೆಂಬುದ |
ಕನುಮಾನದ ತೊಡಕಿಲ್ಲ
ಅನೇನ ಜೀವೇನಾತ್ಮಮೆಂಬ ಶೃತಿ
ನಿನಗೆ ಸಾಕ್ಷಿ ತಿಳಿಯಲ್ಲ ||7||
ಶ್ರೀಗುರುವರನಡಿಗೆ ನಾ ಬಾಗುವೆ
ಶ್ರೀಗುರುವರನಡಿಗೆ ನಾ ಬಾಗುವೆ |
ಬೇಗದಿ ಭವದ ರೋಗವ ಕಡಿದ ||ಪಲ್ಲ||
ಅಷ್ಟಾದಶ ಶತ ದಷ್ಟಾತ್ರಂಶತಿ |
ಶ್ರೇಷ್ಟ ರಾಕ್ಷಸ ಸಂವತ್ಸರದ
ಜೇಷ್ಟ ಶುದ್ಧಾಷ್ಟಮಿ ಭಾರ್ಗವಾರೆನಗೆ ಸಂ
ತುಷ್ಟದಿ ಶಿವಮನುವ ಬೋಧಿಸಿದ ||1||
ತಾರಕ ತ್ರಯದ ವಿಚಾರವನೆನಗೆ ಗಂ |
ಬೀರದಿಂ ತಿಳುಪೆನ್ನಂತರದಿ
ತಾರಕ ಬ್ರಹ್ಮವ ತೋರಿ ಬಹುತ್ವದ
ದಾರಿ ಬಿಡಿಸಿ ನಿಜದಿ ನಿಲ್ಲಿಸಿದ ||2||
ವರ ತತ್ವಮಸಿಯ ಪರಮಾರ್ಥವ ತಾ |
ನೆರೆ ಸೂಚಿಸಿ ಸಂಸೃತಿ ಭ್ರಮೆಯ
ಪರಿಹರಿಸುತ ಶಂಕರ ನಾಮದಿ
ಬಂದಿರದೆನಗಮೃತವನು ಪಾಲಿಸಿದ ||3||
ಪ್ರೇಮದಿಂ ಪಠಿಸೆ ನಿಜ ಮುಕ್ತಿ ಪ್ರದಂ
ಶ್ರೀಮದಧ್ಯಾತ್ಮ ರಾಮಾಯಣಮಿದಂ |
ಪ್ರೇಮದಿಂ ಪಠಿಸೆ ನಿಜ ಮುಕ್ತಿ ಪ್ರದಂ ||ಪಲ್ಲ||
ವರ ಮೋಕ್ಷವೆಂತೆಂಬಯೋಧ್ಯಾನಗರದಲ್ಲಿ |
ಪರಬ್ರಹ್ಮನೆಂಬ ದಶರಥನಿರುವನು
ಪರಮ ಜ್ಞಾನೇಚ್ಛಾ ಕ್ರಿಯಾಯೆಂಬ ಸಲೆ
ಸುಮಿತ್ರೆ ಕೈಕಾ ಸತಿಯರಾತಗಿಹರು ||1||
ಅರಿವಿನ ಸುಶಕ್ತಿಯಹ ಕೌಸಲೆಗೆ ರಾಮ |
ಬಂಧುರದಿಚ್ಛೆಯೆಂಬುವ ಸುಮಿತ್ರಿಯಗಳಿಗೆ
ಪರಮ ವೈರಾಗ್ಯ ಭಕ್ತಿಗಳೆಂಬ ಲಕ್ಷ್ಮಣಸು
ಚರಿತ ಶತೃಘ್ನರುದಯಿಸಿದರಾಗ || 2||
ಕ್ಷಿತಿಯೊಳ ಶಕ್ತಿಯೆಂಬ ಕೈಕೆಗೆ ನಿಸ್ಪು ೃಹತೆ |
ಎಂಬ ಭರತ ತಾನವತರಿಸಿದ
ಹಿತದಾತ್ಮ ರಾಮನ ವ್ಯಕ್ತ ಬಾಲ್ಯದೊಳು
ಊರ್ಜಿತ ಸ್ವರೂಪ ವಿಚಾರ ಜ್ಞಾನ ಮರೆದ |3||
ಮರೆವೆಯಹ ಜೀವನೆ ತಾನೆಂಬ ಭ್ರಾಂತಿಯಿಂ |
ಶರೀರೇಂದ್ರಿಯಾದಿ ಸಂಸೃತಿಗೆ ಶಿಲ್ಕಿ
ಮಿರಗುವ ಶ್ರವಣವೆಂಬ ಗುರು ವಶಿಷ್ಟನ ಮುಖದಿ
ಪರಮಾರ್ಥದುಪದೇಶ ಪಡೆದ ಮುದದಿ ||4||
ಮಿನುಪ ವೈರಾಗ್ಯ ಲಕ್ಷ್ಮಣ ಸಹಿತನಾಗಿ ಗಡ |
ಮನನ ವಿಶ್ವಾಮಿತ್ರನೊಡನೆ ಹೊರಟು
ಘನತರದ ಷಟ್ಸಾಧನೆನಿಸುವ ಬಲಾತಿ
ಬಲ ಬಾಣವಿದ್ಯವ ಕಲಿತು ಧೀರನಾದ ||5||
ದುರಿತಕ್ಕೆ ಮಿಗಿಲಾದ ಪಂಚ ಪಾತಕವೆಂಬ |
ಗಿರಿಗಳೆಲ್ಲವದಾಂಟೆ ಜ್ಞಾನವೆಂಬ
ಶರದೊಳಾವರಣತಾಟಕಿಯ ತರಿದು ವಿಕಾರ
ನೆರೆದ ರಕ್ಕಸರ ಸಂಹಾರಗೈದ ||6||
ಇರದಿಚ್ಛೆಯೆಂಬ ಮಾರೀಚನಂ ಪಿಡಿದು ಸಾ |
ಗರಕೆ ನೂಕುತ ದುರಾಚಾರವೆಂಬ
ಉರುಸಿಲೆಯನೊದೆದು ಲಸದ್ ಆಚಾರವೆಂಬ
ಸುಂದರಿಯಹಲ್ಲೆಯಳನ್ನು ಮುದದಿ ಪೊರೆದ ||7||
ನಿಲದೆಯೇಕಾಂತ ಮಿಥಿಲಾನಗರ ಪೊಕ್ಕು |
ಸಲ್ಲಲಿತ ಶಾಂತಮದೆಂಬ ಜನಕ ನೃಪನ
ವಲಿದೀಕ್ಷಿಸುತಸೂಯಯೆಂಬ ಹರಧನು ಮುರಿದು
ಇಳೆಯೊಳಾನಂದ ಸೀತೆಯನೊರಿಸಿದ ||8||
ಮದದುವೆಂಬ ಪರಶುರಾಮನ ಗರ್ವ ಮುರಿದು |
ಮೋಕ್ಷದಯೋಧ್ಯಗೈದಾತ್ಮ ಸಾಮ್ರಾಜ್ಯದ
ಒದವಿ ಪಟ್ಟಕೆ ಸಿದ್ಧನಾಗಿರೆ ಕ್ರಿಯಾಶಕ್ತಿ
ಚದುರ ಕೈಕಾಕುಟೆಲ ಗುಣ ತಾಳ್ದಳು ||9||
ಅವಳು ತಂದೊಡ್ಡಿರುವ ಚಾಂಚಲ್ಯವೆಂಬ ವಿ |
ಘ್ನವುವದಗೆ ಬ್ರಹ್ಮ ದಶರಥನನಗಲಿ
ತವೆ ಮೋಕ್ಷವೆಂತೆಂಬಯೋಧ್ಯಾನಗರವನ್ನು
ತವಕದಿಂ ತನ್ನೊಳರಿದದನು ಬಿಟ್ಟ ||10||
ಆನಂದ ವೈರಾಗ್ಯ ಜಾನಕೀ ಲಕ್ಷ್ಮಣರ |
ತಾನೊರಿಸಿ ಬಹು ಬೇಗದಿಂದೆ ಹೊರಟು
ಮೌನಮಂ ತಾಳ್ದು ಚಿತ್ತಮದೆಂಬ ಮೆರವ ಸರ
ಯೂ ನದಿಯಿದಾಂಟೆ ಮತಿಗುಹನ ಕೂಡ್ದ ||11||
ಮಿನಗುತಿಹ ನಿಕ್ಷೇಪ ಘನ ವಿಪಿನ ಪೊಕ್ಕು ತಪ |
ವೆನಿಪ ಚಿತ್ರದ ಕೂಟದಲ್ಲಿ ನಿಂತು
ಅನುವಿನಿಂದಾಗಹಂಕಾರವೆಂಬುವವಿರಾ
ಧನ ನೋಡ್ದು ಕೋಪದಿಂ ಕಡಿದಿಟ್ಟನು ||12||
ಮನವೆಂಬ ಕಾಕಾಸುರನ ಪಿಡಿದು |
ಸಂಕಲ್ಪಕ್ಷಿ ಕಳೆಯುತ ನಿರ್ವಿಕಲ್ಪ ನೇತ್ರ
ಅನುಗ್ರಹಿಸಿ ವೀರ್ಯವೆಂತೆನುವಗಸ್ತ್ಯನ ಕಾಣ್ದು
ಘನ ಧೈರ್ಯವೆಂಬಸ್ತ್ರವನು ಪಡೆದನು ||13||
ಬೇಗದಿಂ ಕಾಮವೆಂಬುವ ಶೂರ್ಪಣಖಿಯ ಕಿವಿ |
ಮೂಗುಗಳ ಖಡ್ಗದಿಂ ಕತ್ತರಿಸುತ
ಆಗಾಮಿಕರ್ಮಂಗಳೆಂಬ ಖರ ದೂಷಣಾದಿಗಳ
ಶರದಿಂ ಕೊಂದು ಬಿಟ್ಟನಾಗ ||14||
ಮೀರಿದಿಚ್ಛೆಯದೆಂಬ ಮಾರೀಚನೊಂಚೆನಿಗೆ |
ವೈರಾಗ್ಯ ಲಕ್ಷ್ಮಣನ ಬಿಟ್ಟು ಪೋಗೆ
ಕ್ರೂರರಾಜಸವೆಂಬ ದಶಕಂಠ ರಕ್ಕಸನ
ಪಾರಡಂಭಮದೆಂಬ ಯೋಗಿಯಾದ ||15||
ದಾನವನು ಕಪಟದಿಂದಾನಂದವೆಂಬವರ |
ಜಾನಕಿಯ ಪಿಡಿದೆತ್ತಿಕೊಂಡು ಪೋಗೆ
ಕಾನನದೊಳಿಚ್ಛೆ ಮಾರೀಚನ ತರಿದು ರಾಮ
ನಾನಂದ ಸೀತೆಯನು ಕಾಣದಿರ್ದ ||16||
ಆ ರಾಮನಂತರ ವಿಚಾರವೆಂಬುವ |
ಚಿಂತೆಗೀಡಾಗಿ ವಿಕ್ಷೇಪವೆಂಬವ ನದಿ
ವೈರಾಗ್ಯ ಲಕ್ಷ್ಮಣನೊಡನೆ ಸ್ವೇಚ್ಛೆಯಾಗಿ
ಸಂಚಾರ ಮಾಡುತ ನಡೆದ ಯೋಚಿಸುತಲಿ ||17||
ಶಾಂತದಿಂ ಸುವಿವೇಕವೆಂಬುವ ಜಟಾಯುವಿನ |
ಪಂಥಮಂ ಕೇಳ್ದು ವಿಮಲತ್ವ ಗತಿಯ
ಸಂತಸದೊಳವಗಿತ್ತು ಚಿಂತೆಯೆಂಬ ಕ
ಬಂಧನನ್ನು ಶರೆ ಹಿಡಿದು ಸಂಹರಿಸಿ ಬಿಟ್ಟ || 18||
ಸಂತೋಷ ಶಬರಿಯಿಂದಂತರ ಮನೋವಿಕಾ |
ಸೆಂತೆಂಬ ಪೂಜೆ ಸ್ವೀಕರಿಸಿ ರಾಮಂ
ಸಂತತ ನಿಧಿ ಧ್ಯಾಸವೆಂತೆಂಬಧೀರ ಹನು
ಮಂತನೊಂದಿಗೆ ಪ್ರೀತಿಯನು ಬೆಳಸಿದ ||19||
ಏಳು ಬಂಧನಮೆಂಬ ತಾಳವೃಕ್ಷಗಳನ್ನು |
ಸೀಳಿ ಭಯವೆಂಬ ವಾಲಿಯನೆ ಕೊಲ್ಲಿ
ಮೇಲೆ ನಿರ್ಭಯಮೆಂಬ ಸುಗ್ರೀವ ಸಖ್ಯಮಂ
ಓಲೈಸಿ ಬೆಳೆಸಿದನು ಪ್ರೀತಿಯಿಂದೆ ||20||
ಘನ ನಿಧಿ ಧ್ಯಾಸದ ಪವನಜಗಾಜ್ಞಾಪಿಸಲ |
ವನು ಮೋಹವೆಂಬ ಸಾಗರವದಾಂಟೆ
ಕಿನಿಸಿನಿಂ ಲೋಭವೆಂಬುವ ಲಂಕಿಣಿಯ ಕೊಂದು
ವನದಿಯಾನಂದ ಸೀತೆಯನು ನೋಡ್ದ ||21||
ಇರದೆ ಸಂಕಲ್ಪವೆಂತೆಂಬಶೋಕದ ವನವ |
ಮುರಿದು ವಿಪರೀತವೆಂಬಿಂದ್ರಜಿತುವಂ
ನೆರೆ ತಿರಸ್ಕರಿಸಿ ರಾಜಸವೆಂಬ ರಾವಣಾ
ಸುರನ ಹಿಯ್ಯಾಳಿಸಿದ ಸತ್ವದಿಂದ ||22||
ಟಬಿಡದೆ ಮೌನಾಗ್ನಿಯಿಂ ಕಡು ದುಃಖವೆಂಬ
ಲಂಕಾನಗರ ಸುಟ್ಟು ಸನ್ಮೋಹಮೆಂಬ
ಜಡಧಿಯನು ದಾಂಟಿ ಬಹುದಿಡಗಿ
ನಿಂದಾತ್ಮನೆಂಬುವ ರಾಮನೆಡೆಗೆ ತಾನಾಗಮಿಸಿದ ||23||
ಆನಂದವೆಂತೆಂಬ ಜಾನಕಿಯ ವಾರ್ತೆ |
ಸುಮ್ಮಾನದಿ ನಿಧಿ ಧ್ಯಾಸ ಹನುಮ ಪೇಳೆ
ಭಾನು ಕುಲ ತಿಲಕನತಿ ಭರದಿ ನಿರ್ಭಯವೆಂಬ
ವಾನರೇಂದ್ರನ ನೋಡಿ ಹುರಿಗೊಳಿಸಿದ ||24||
ಬಲು ಶೌರ್ಯ ಸಾಹಸಗಳೆಂಬ ಕಪಿ ಸೈನ್ಯಮಂ |
ಬಲಿಸಿ ಮೋಹಾಂಬುಧಿಯ ಸೊಕ್ಕಡಗಿಸಿ
ಲಲಿತಾ ಚಲತೆಯ ಸೇತುವೆಯ ಬಂಧಿಸಿ ಮಹೋ
ಜ್ವಲ ಸತ್ವ ಗುಣ ವಿಭೀಷಣನ ಪೊರೆದ ||25||
ವಿಪರೀತಿ ಇಂದ್ರಜಿತುವೆಸೆದ ಸಂಶಯವೆಂಬ |
ಸುಪವಿತ್ರ ನಾಗಪಾಶಕ್ಕೆ ಶಿಲ್ಕಿ
ಚಪಲ ಸುವಿಚಾರ ಖಗಪತಿಯಿಂದೆ ಪಾರಾಗಿ
ವಿಪರೀತಿ ಇಂದ್ರಜಿತುವಿನ ಕೊಲಿಸಿದ ||26||
ಮುಂತೆ ತಾಮಸ ಕುಂಭಕರ್ಣನಂ ತರಿದು ವಿ |
ಭ್ರಾಂತಿ ಬಾಣಕ್ಕೆ ವೈರಾಗ್ಯವೆಂಬ
ಶಾಂತಿ ಲಕ್ಷ್ಮಣ ಮೂರ್ಛೆಯಿಂ ತಡಿಯದವನೀ ತಳಕ್ಕೆ
ತಾಂ ತತ್ಕಾಲದಲಿ ಬಿದ್ದನು ||27||
ಆತುಮನೆನಿಸುತಿರ್ಪ ಸೀತಾಪತಿಯು |
ನಿಧಿ ಧ್ಯಾಸ ಹನುಮಂತನಿಂ ನಿಷ್ಠೆಯಂಬ
ಪೂತ ಸಂಜೀವಗಿರಿಯಾತುರದಿ ತರಿಸಿ
ವೈರಾಗ್ಯ ಲಕ್ಷ್ಮಣನ ಎಚ್ಚರಗೊಳಿಸಿದ ||28||
ಇರುವ ಸಂಚಿತ ಕರ್ಮದುರು ಮೂಲ ಬಲವಸಂ |
ಹರಿಸಿ ಗಾಂಭೀರ್ಯ ಕೋದಂಡ ಪಿಡಿದು
ಪರಮ ಸುಜ್ಞಾನ ಶರದಿರದೆ ರಾಜಸ ಖಳನ
ತರಿದನು ದಶೇಂದ್ರಿಯಂಬುವ ತಲೆಗಳ ||29||
ಘನ ಪರೀಕ್ಷೆಯದೆಂಬ ಅನಲದೊಳಿ ಆನಂದ |
ಜನಕಸುತೆಯನು ಪೊಗಿಸಿ ನಿರ್ಭರದೊಳು
ಮನದ ಸಂಶಯವ ಬಿಟ್ಟನಿತರೊಳು ಪ್ರಾಣಿ
ಗ್ರಹಣ ಗೈದು ಬ್ರಹ್ಮ ದಶರಥನ ನೋಡ್ದ | |30||
ಸಲೆ ಸ್ವಯಂಜ್ಯೋತಿ ಮಂಜುಳ ಪುಷ್ಟಕವನೇರಿ |
ಲಲಿತ ಮೋಕ್ಷಮದೆಂಬಯೋಧ್ಯಗಿಳಿದು
ವಲಿದು ಶಂಕರನ ನೃಪಪಟ್ಟಮಂ ಪೊಂದಿ ನಿಶ್ಚಲ
ಬ್ರಹ್ಮ ದಶರಥನು ತಾನೆಯಾದ ||31||