ಪೊರೆಯೆನ್ನಪ್ರಭುವೆ
ಪೊರೆಯೆನ್ನಪ್ರಭುವೇಶ್ರೀಗುರುವೆಂಬ
ವರಕಲ್ಪತರುವೇ ||ಪ||
ಕರುಣಾಕಟಾಕ್ಷವೀಕ್ಷಣದಿಂದಲೆನ್ನಯ |
ದುರಿತದುರ್ಗುಣವೆಣಿಸದೆಕೃಪೆಯಿಂದಲಿ ||ಪೊರೆಯೆನ್ನ|| ||ಅ.ಪ||
ಗುರುಬಂಧುಮಿತ್ರ | ಗೋತ್ರವುಸೂತ್ರ |
ಗುರುವೆಪವಿತ್ರ | ಗುರುಬ್ರಹ್ಮಗುರುವಿಷ್ಣುಗುರುಪರಶಿವನೆಂದು
ವರಲುವಶ್ರುತಿನಂಬಿನಿಮ್ಮಡಿನಂಬಿದೆ ||1||
ತಂದೆತಾಯಿಗಳು | ನಂಬಿದಮಿತ್ರ|
ಬಂಧುವರ್ಗಗಳು | ಎಂದಿದ್ದರೆನ್ನನುಬಿಟ್ಟೋಗುವರುನೀನು
ಎಂದೆಂದುಬಿಡವನಲ್ಲೆನುತನಂಬಿದೆನಯ್ಯ ||2||
ನಾರಿಮಕ್ಕಳನು | ತನುಮನವನು |
ಭೂರಿಭಾಗ್ಯವನು | ಮೀರಿದಮಾನಾಭಿಮಾನವೊಪ್ಪಿಸಿಕೊಟ್ಟ
ಹೇರನೊಪ್ಪಿಸಿದವನಿಗೆಸುಂಕವುಂಟೆ ||3||
ಸಗುಣನಿರ್ಗುಣನೇ | ನಿರ್ಮಲನೇ | ನಿಗಮವಂದಿತನೇ |
ಅಗಣಿತಕಿಲ್ಬಿಷವಳಿದುಪಾಲಿಸುವನೆ|
ಸುಗುಣಿಮುಕ್ತಿಯಗಣಿವರಚಿಂತಾಮಣಿಯೇ ||4||
ಶಿರಿಸೊಬಗೆಂಬ | ಮೋಹವುದುಃಖ
ದುರಿತವೆಂತೆಂಬ | ಶರಧಿಯದಾಂಟಿಸಿಮುಕ್ತಿಪಾಲಿಪೆನೆಂಬ
ಬಿರುದುಪೊತ್ತಿಹಗುರುಮಹಲಿಂಗರಂಗನೆ ||5||
ಪರಮದಯಾನಿಧಿಯೇ
ಪರಮದಯಾನಿಧಿಯೇ | ಶ್ರೀಗುರುನಿತ್ಯ
ಪರಮಪಾವನಮೂರ್ತಿಯೇ ||ಪ||
ದುರಿತಅಜ್ಞಾನವನಳಿದುಸುಜ್ಞಾನವ
ವರದೆನಿನ್ನಂಥದಯಾಳುಂಟೆ
ಜಗದೊಳುಪರಮದಯಾನಿಧಿಯೆ ||ಅ.ಪ|
ಇಳೆಯಭೋಗಂಗಳೆಂಬಾ | ಆಸೆಯಮೋಹ
ಬಲುರಾಗದ್ವೇಷವೆಂಬ |
ಸುಳಿಯಸಂಸಾರಸಾಗರದಿತಡಿಗಾಣದೆ
ಮುಳುಗಿಪೋಗುತಲಿರೆಕರವಿಡಿದೆತ್ತಿದೆ ||1||
ವರಪುಣ್ಯವನುಗಳಿಸಿ | ಸ್ವರ್ಗವನೇರಿ
ಉರುಭೋಗವನ್ನನುಭವಿಸಿ|
ತಿರುಗಿಮತ್ರ್ಯಕೆಬಂದುಬಳಲಿಬಾಯಾರದೆ
ಸ್ಥಿರಮುಕ್ತನಾಗೆಂದುಕರೆದುಬೋಧಿಸಿದಂಥ ||2||
ಹಠಯೋಗಾದಿಗಳಿಂದಲೆಲೋಕಕ್ಕೆಮೆಚ್ಚು
ಚಟುಲಸಿದ್ಧಿಗಳಿಂದಲಿ |
ಸಟೆಯುಜೀವನ್ಮುಕ್ತಿಯದರಿಂದಲೆನ್ನುತ
ಘಟಿತವಾಗಿಹರಾಜಯೋಗಬೋಧಿಸಿದಂಥ ||3||
ಚಿನ್ನವಾಭರಣವಾಗಿ | ತೋರುವಪರಿ|
ಯುನ್ನತಜಗವಿದಾಗಿ
ನನ್ನಿಯಿಂಪರಮಾತ್ಮನೊಬ್ಬತೋರುವನೆಂಬ
ಸನ್ನುತಜ್ಞಾನವನ್ನುಬೋಧಿಸಿದಂಥ ||4|
ಸರ್ವತತ್ವಂಗಳನ್ನು | ವೇದಾಂತದ
ಸರ್ವರಹಸ್ಯವನ್ನು |
ಸರ್ವಕ್ಕಧಿಕವಾದಅಪರೋಕ್ಷಜ್ಞಾನವ
ಸರ್ವಶ್ರೀಗುರುರಂಗನಾಗಿಬೋಧಿಸಿದಂಥ ||5||
ಗುರು ಪರಬ್ರಹ್ಮಾ
ಗುರು ಪರಬ್ರಹ್ಮಾ | ಸರ್ವರಿಗು ಶ್ರೀ |
ಗುರು ಪರಬ್ರಹ್ಮಾ ||ಪ||
ಗುರುವೆ ಸಾಕ್ಷಾತ್ ಪರಬ್ರಹ್ಮನಲ್ಲದೆ ಬೇರಿಲ್ಲ |
ಪರತತ್ವವೆಲ್ಲ ಪ್ರಕಾಶ ಮಾಡುವನಾಗಿ ||ಅ.ಪ||
ಭವಬೀಜ ಸುಡುವ | ಇಷ್ಟಾರ್ಥವ |
ಜವದಿ ಪಾಲಿಸುವ | ಶಿವ ಪಂಚಾಕ್ಷರಿ ಮಂತ್ರ ಗೋಪ್ಯದಿಂದರುಹುತೆ
ನವವಿಧ ಭಕ್ತಿಯರದಿ ಮುಳುಗೆಂಬುವ ||1||
ನರಲೋಕ ಸುಖವು | ಭೋಗವು ರೋಗ|
ದುರಿತ ಭಯವು | ವರ ಇಂದ್ರ ಪದವಿಯು ಪರಶತ್ರುಗಳ ಭಯ
ಉರುವೈರಾಗ್ಯೊಂದೆ ನಿರ್ಭಯವೆಂದು ಬೋಧಿಪ ||2||
ಅಲೆಯ ನಿಲಿಸಿ | ಅಜ್ಞಾನದ
ಮೂಲವ ಕೆಡಿಸಿ | ನೀಲಯೋಯದ ಮಧ್ಯೆ ಅಪೋಜೋತಿಯನು
ಲೀಲೆಯಿಂ ತಾರಕ ತ್ರಯವ ಸೂಚಿಸುವಂಥ ||3||
ಧರೆಮೊದಲಾದ ಭೂತಗಳಿಂದ |
ವಿರಚಿತಮಾದ | ನೆರೆ ಪಂಚವಿಂಶತಿ ತತ್ವಸಂಕುಲವೆಲ್ಲ
ವರಸಾಂಖ್ಯ ಯೋಗದಿ ವಿವರಿಸಿ ಹೇಳುವ ||4||
ಮರವೆಯ ತೆಗೆಸಿ | ಬ್ರಹ್ಮಜ್ಞಾನ
ಗುರುವಿನೊಳಿರಿಸಿ | ಗುರು ಮಹಲಿಂಗರಂಗನೆ ನೀನೆಂದರುವಿತ್ತು
ಉರತರದಮನಸ್ಕ ಮುದ್ರೆ ಸೂಚಿಸುವಂಥ ||ಗುರು ||5||
ಅಭಿವಂದಿಸುವೆನಷ್ಟ ತನುವಾಗಿ ತ್ರೈಜಗಕೆ
ಅಭಿವಂದಿಸುವೆನಷ್ಟ ತನುವಾಗಿ ತ್ರೈಜಗಕೆ |
ಪ್ರಭುವಾಗಿ ರಾಜಿಪ ಪರಬ್ರಹ್ಮಲಿಂಗಕೆ ||ಪ||
ಧರೆಯು ಗಿರಿ ತೃಣ ಅಗಿಲು ಚಂದನವೃಕ್ಷ |
ಪರುಷರತ್ನವು ರಜತ ಸ್ವರ್ಣ ಪಾಶಾಣ
ವರತ್ವಕ್ಕು ನಖರೋಮ ಮಾಂಸಾಸ್ಥಿಗಳು ಎನಿಸಿ
ಪರಿಯ ಪೆಸರ್ವಡೆದ ಪೃಥ್ವಿಲಿಂಗಕ್ಕೆ || ಅಭಿ ||1||
ವಾರಿನಿಧಿ ನದಿನದಗಳಮೃತ ಮೊಲೆಹಾಲು |
ಕ್ಷೀರ ದಧಿಘೃತ ತೈಲಮದ ವಿಷವು ಮಧ್ಯ |
ವೀರ್ಯ ಶೋಣಿತ ಮಜ್ಜೆ ಪಾದರಸವೆನಿಸಿ |
ತೋರಿ ದ್ರವಿಸುತ್ತಿರ್ಪ ಅಪ್ಪು ಲಿಂಗಕ್ಕೆ || ಅಭಿ ||2||
ಕಡಲೊಳಗೆ ಕಲ್ಲೊಳಗೆ ಮರದೊಳಗೆ ಮಾನವರ |
ಒಡಲೊಳಗೆ ಕಾಮಿಗಳ ಮನದೊಳಗೆ ಜ್ಞಾನಿಗಳ |
ನುಡಿಯೊಳಗೆ ಯೋಗಿಗಳ ಕಣ್ಣೊಳಗೆ ರಾಜಿಸುತ|
ಲಡಗಿಕೊಂಡಿರ್ಪಮಲತರ ಜ್ಯೋತಿರ್ಲಿಂಗಕ್ಕೆ || ಅಭಿ ||3||
ಶರದಿ ಸಪ್ತಕ ಮೇಘಚಯ ಜೀವಕೋಟಿಗಳ |
ವರನಾಸಿಕವು ಜನನಿಯರ ಗರ್ಭಪಿಂಡದಲಿ |
ನಿರತಷ್ಟದಿಕ್ಕಮೃತ ವಿಷ ಕೊಳಂಗಳಲಿ |
ತೆರಪುಯಿಲ್ಲದೆ ಚರಿಸುತಿಹ ವಾಯುಲಿಂಗಕ್ಕೆ|| ಅಭಿ ||4||
ಕಲಶಘಟ ಮಠವೇಘ ಕುಟಿ ಬಿಡಾರದೊಳು |
ಸಲೆ ಸ್ವರ್ಗಮತ್ರ್ಯ ಪಾತಾಳ ಲೋಕದೊಳು |
ನೆಲೆಯಾಗಿ ಗ್ರಹಗಳಿಗೆ ಬೀಡಾಗಿ ಕಿಕ್ಕಿರಿದು |
ಚರಿಸಿದಾವಾಗ ತುಂಬಿದಾಕಾಶ ಲಿಂಗಕ್ಕೆ || ಅಭಿ ||5||
ಬಲನೇತ್ರ ಬಲಶ್ವಾಸದ್ವಾದಶಾದಿತ್ಯನೆನಿಸಿ |
ಸಲೆ ಕರ್ಮಸಾಕ್ಷಿ ಜೀವಗಳಾಯುವಳಿಯುವ |
ಕೊಳಗತ್ರೈಮೂತ್ರ್ಯಾತ್ಮನೆನಿಸಿ |
ಬೆಳಗುವ ಹಿರಣ್ಮಯನೆನಸುವಾದಿತ್ಯ ಲಿಂಗಕ್ಕೆ ||ಅಭಿ ||6||
ಎಡನೇತ್ರ ಎಡಶ್ವಾಸ ಗಗನಮಣಿಯೆನಿಸಿ
ಬಿಡದೆ ವೃದ್ಧಿ ಕ್ಷಯದಿ ಸಸ್ಯಾಧಿಪತಿಯೆನಿಸಿ
ಉಡುಪತಿ ಕಳಾ ನಿಧಿಯು ಅಮೃತಕರನೆನಿಸಿ
ಪೊಡವಿಯೊಳು ರಾಜಿಸುತಿಹ ಸೋಮ ಲಿಂಗಕ್ಕೆ ||ಅಭಿ ||7||
ನೆರೆ ಸಗುಣ ನಿರ್ಗುಣನು ತತ್ಸಾಕ್ಷಿಯೆನಿಸಿ |
ಗುರು ಮಹಾಲಿಂಗನೆಂದೆನಿಸಿ ಭಕ್ತರಂ |
ಪೊರೆವ ದಕ್ಷಿಣಾ ಮೂರ್ತಿಯೆನಿಸಿ
ಸೂಕ್ಷ್ಮದಿಂದಿರುವಷ್ಟದಳ ಕಮಲಸ್ಥಿತಾತ್ಮ ಲಿಂಗಕ್ಕೆ || ಅಭಿ ||8||
ಕೈವಲ್ಯ ನವನೀತೆಂಬತುಲ ಪೆಸರದಕೆ
ಕೈವಲ್ಯ ನವನೀತೆಂಬತುಲ ಪೆಸರದಕೆ |
ಓವಿ ಒಂದರ್ಥಮಂ ಲಾಲಿಪುದಭಿಜ್ಞರ್ ||ಪ||
ಉರುತರಾಮ್ನಾಯವೆಂಬ ಮೊಲೆ ನಾಲ್ಕುಳ್ಳ |
ಪರಭೋಮವೆಂಬೊಂದು ಕಾಮಧೇನಿರಲು |
ಸುರಸಿತಷ್ಟೋತ್ತರ ದಶಸಾಸಿರುಪನಿಷತ್ |
ವರ ಕ್ಷೀರಶರಧಿ ಪರಿ ಜಗ ಭರಿತಮಾಗಿತ್ತು ||1||
ಅದರೊಳು ಮಹಾವಾಕ್ಕೆಂಬ ಸವಿಪಾಲ್ತೆಗೆದು ||
ಬುಧ ಜನರು ಆಧ್ಯಾತ್ಮ ಶಾಸ್ತ್ರವೆಂದೆಂಬ |
ಸದಮಲದ ಭಾಂಡದೋಳ್ತುಂಬಿ ಮಥನಗ್ನಿಯಂ |
ಹದವಾಗಿ ಕಾಸಿರಲವಕ್ಕುಡಿತೆ ಗ್ರಹಿಸಿದೆನು | ಕೈವಲ್ಯ || ||2||
ಮೂಲ ಶ್ರೀ ಗುರು ಬೋಧಯೆಂಬ ಹೆಪ್ಪನು ಕೊಡಲು |
ಪೇಳಲೇನ್ ದಿವ್ಯ ಕೆನೆಮೊಸರಾಯಿತದಕೆ
ಕೇಳಿಸುತ ಸುಜ್ಞಾನವೆಂಬ ಮಂತನು ಭಕ್ತಿ |
ತಾಳಿ ಸೋಹಂ ಹಗ್ಗ ಸುತ್ತಿ ಕಡೆಯಲ್ಕೆ ||3||
ಕರಗಿ ಅಜ್ಞಾನ ಆವರಣೆಂಬ ಗಡ್ಡೆಗ
ಳ್ನಿರುಪಮದ ಅಪರೋಕ್ಷ ಜ್ಞಾನವೆಂತೆಂಬ
ಉರುತರದ ನವನೀತ ಬಂತೆನ್ನ ಕರತಲಕ್ಕೆ
ದುರಿತ ಕರ್ಮವುಯೆಂಬ ತಕ್ರ ಕೆಳಗಿಳಿದು ||4||
ಘನದಿ ಆ ನವನೀತ ತೆಗೆದು ಮೂಜಗದೊಳಗೆ |
ತನಗನ್ಯವಹ ವಸ್ತುವಿಲ್ಲವೆಂಬುವ ನಿಜದ |
ಅನುಭೂತಿಯಿಂ ಕಾಸಿದಮಲ ಘೃತವನ್ನು |
ಅನಘ ಗುರು ಮಹಲಿಂಗರಂಗನಿಗೆ ಒಪ್ಪಿಸಿದೆ |
ಕೈವಲ್ಯ ನವನೀತವೆಂಬತುಲ ಪೆಸರಿದಕೆ ||5||
ಭಜನೆಯ ಮಾಡುವ ಬನ್ನಿರೊ
ಭಜನೆಯ ಮಾಡುವ ಬನ್ನಿರೊ |
ಸದಾಶಿವನ ಭಜನೆ ಮಾಡುವ ಬನ್ನಿರೋ ||ಪ||
ಭಜನೆ ಮಾಡುವ ನಿತ್ಯ | ಸುಜನರೆಲ್ಲರೂ ಕೂಡಿ |
ಕುಜನ ಸಂಗವ ದೂರ ಮಾಡಿ | ಸದ್ಭಕ್ತಿಯಿಂ || ಭಜನೆ ||
ಶತಕೋಟಿ ಪಾಪವನು | ಮಾಡಿದ ಮಹ |
ಪತಿತರು ನಾವು ನೀನು
ಪತಿತ ಪಾವನನೆಂಬ ಬಿರುದುಳ್ಳ ದೇವನು |
ಕ್ಷಿತಿಯೊಳುತ್ತಮ ಗತಿ ತೋರೆಂದು ಶಿವನ | ಭಜನೆ ||1||
ಘಡು ಘುಡಿಸುತ ಬರುವ ಯಮನಾಳ್ಗಳಂ
ಕಡಿದು ಮಾಡುತ ಕೋಪವ |
ಝಡಿದು ಶೂಲದಿ ಭಕ್ತರನು ಕೈಯ್ಯ ಪಿಡಿದು |
ಕಡುಗರಣದಿ ಪೊರೆಯುವ ಮೃತ್ಯುಂಜಯನ |
ಭಜನೆ ಮಾಡುವ ಬನ್ನಿರೋ ||2||
ಪಂಚವಿಂಶತಿ ತತ್ವದಿ ತಾನಿರ್ದು ಪ್ರ
ಪಂಚದೋಳಾನಂದದಿ ||
ಪಂಚವಿಂಶತಿ ಲೀಲೆ ತೋರಿ ತನ್ನ ಭಕ್ತರ
ಸಂಚಿತ ಕರ್ಮವನುರಹಿದ ಶಿವನ| ಭಜನೆ ||3||
ಕಷ್ಟ ಕರ್ಮಗಳ ನೋಡಿ ನಿಮಿಷಾರ್ಧದಿ |
ಸುಟ್ಟು ನಿರ್ಮೂಲವ ಮಾಡಿ |
ಇಷ್ಟಾರ್ಥಗಳನಿತ್ತು ಕರುಣದಿ ಪಾಲಿಪ |
ಅಷ್ಟದಳದ ಪದ್ಮದಲ್ಲಿರುವ ಶಿವನ || ಭಜನೆ ||4||
ಕರುಣರಸವನೆ ಬೀರಿ | ಯೋಗವು ತತ್ವ |
ನೆರೆ ಶಾಂತಿ ವಿರತಿ ತೋರಿ |
ಧರೆಯೊಳಧಿಕ ಜ್ಞಾನ ಬೋಧಿಸಿ ಪೊರೆಯುವ |
ಗುರು ಮಹಲಿಂಗನೆ ನೀನೆಂದು ಶಿವನ ಭಜನೆ ||5||
ಸ್ಮರಣೆ ಮಾಡೆಲೋ
ಸ್ಮರಣೆ ಮಾಡೆಲೋ | ನಾಮ
ಸ್ಮರಣೆ ಮಾಡೆಲೋ ||ಪ||
ಸ್ಮರಣೆ ಮಾಡು ಭವದ ಬಲೆಯ
ಹರಿಯೊ ಶಿವನೆ ಶಿವನೆಯೆನುತ ||ಅ.ಪ||
ಮನದೆ ರಾಗ ದ್ವೇಷಗೈಯ್ಯ
ದನೃತ ವಚನುಡಿಯದಿನಿತು
ತನುವಿನಿಂ ಅಹಿಂಸನಾಗಿ
ದಿನವು ಕರಣ ಶುದ್ಧಿಯಿಂದ ||1||
ಯೆಳೆಯ ಭೋಗಕ್ಕೆಳೆವ ಮನವ
ಶಳದು ಆತ್ಮನಲ್ಲಿ ನಿಲಿಸಿ
ಕಲಿಯ ಕಲ್ಮವಳಿವುದಿದನು
ಘಳಿಲದು ಮನದಿ ಭಕ್ತಿಯಿಂದ ||2||
ಭಕ್ತಪಾಲಕನೆಂಬ ಬಿರುದು |
ಪೊತ್ತುಯಿಹನ ನಂಬಿ ನಿತ್ಯ
ಮುಕ್ತಿ ಭಾಗ್ಯ ಸೂರೆಗೊಂಬ
ಯುಕ್ತಿಯಿದನು ಅರಿತು ಮನದಿ ||3||
ಭೃಂಗ ಸಂಗದಿಂದ ಕೀಟ
ಅಂಗಭಾವವಳಿದು ಅಂತ
ರಂಗದಲ್ಲಿ ನೆನೆದು ಸಾಕ್ಷಾದ್
ಭೃಂಗವಾದ ಪರಿಯ ಮನದಿ ||4||
ಕಂಗಳೂರಿನಲ್ಲಿ ಪೊಳೆವ
ಮಂಗಳ ಪ್ರಭಾವನಾದ
ತುಂಗಶ್ರೀ ಗುರು ರಂಗಲಿಂಗಗೆ
ಅಂಗಮೂರನಿತ್ತು ನಿತ್ಯ ||5||
ಪಾಲಿಸೆನ್ನನು ಕರುಣದಿಂದ ತ್ರಿಪುರಸುಂದರೀ
ಪಾಲಿಸೆನ್ನ ಕರುಣದಿಂದ | ತ್ರಿಪುರಸುಂದರೀ | ನಿನ್ನ
ಬಾಲನೆಂದು ಯೆನ್ನ ಕೈಯ್ಯ ಬಿಡದೆ ಶಂಕರೀ || ಪ ||
ಹರನ ಶಕ್ತಿ ಹರಿಯ ಶಕ್ತಿ ಅಜನ ಶಕ್ತಿಯೇ | ವ್ಯೋಮ |
ಧರಣಿ ಶಕ್ತಿ ಸಲಿಲ ಶಕ್ತಿ ಜ್ವಲನ ಶಕ್ತಿಯೆ ||
ಕರಣ ಶಕ್ತಿ ಪ್ರಾಣ ಶಕ್ತಿ ಜೀಜ ಶಕ್ತಿಯೂ |
ಎನಿಸಿ ಧರೆಯು ಜೀವಿಗಳನು ಪೊರೆವ ಲೋಕ ಜನನಿಯೆ || ಪಾಲಿಸು ||1||
ಆದಿ ಶಕ್ತಿ ಭೋಗಶಕ್ತಿ ಭಾಗ್ಯಶಕ್ತಿ | ತರ್ಕ
ವಾದ ಶಕ್ತಿ ಕ್ರೋಧಶಕ್ತಿ ಶಾಂತಿ ಶಕ್ತಿಯೆ |
ವೇದಶಕ್ತಿ ಮಂತ್ರಶಕ್ತಿ ತಂತ್ರ ಶಕ್ತಿಯೂ | ಎನಿಸಿ |
ಮೋದದಿಂದಲೆಮ್ಮ ಪೊರೆವ ಲೋಕಜನನಿಯೆ || ಪಾಲಿಸು ||2||
ಧ್ಯಾನ ಶಕ್ತಿ ಧಾತೃ ಶಕ್ತಿ ಧೈರ್ಯಶಕ್ತಿಯೆ | ಶ್ರವಣ
ಘ್ರಾಣ ಶಕ್ತಿ ಸ್ಪರ್ಶಶಕ್ತಿ ಈಕ್ಷಶಕ್ತಿಯೆ |
ಜ್ಞಾನ ಶಕ್ತಿ ಕಾರ್ಯಶಕ್ತಿ ಇಚ್ಛಾಶಕ್ತಿಯೂ | ಎನಿಸಿ
ಸಾನುರಾಗದಿಂದ ಪೊರೆವ ಸರ್ವಲೋಕ ಜನನಿಯೆ | ಪಾಲಿಸು ||3||
ಮನನ ಶಕ್ತಿ ಶ್ರವಣಶಕ್ತಿ ಬೋಧಶಕ್ತಿಯೇ | ದೇವಿ |
ಗಣದ ಶಕ್ತಿ ಮಹಿಮೆಶಕ್ತಿ ಯೋಗಶಕ್ತಿಯೇ |
ಪ್ರಣವ ಶಕ್ತಿ ಬಿಂದುಶಕ್ತಿ ನಾದಶಕ್ತಿಯೂ | ಎನಿಸಿ
ಜನಗಳೀಪ್ಸಿತಾರ್ಥವೀವ ಲೋಕ ಜನನಿಯೆ ||4||
ಸರ್ವ ಕರ್ತ ಸರ್ವ ಭೋಕ್ತ ಸರ್ವನಿಯಮಳೂ | ಎನಿಸಿ
ಸರ್ವಕಾಲದಲ್ಲಿ ಚಂದ್ರ ಚಂದ್ರಿಕೆ ಚಂದದಿಂ |
ಸರ್ವಶ್ರೀ ಗುರು ರಂಗಲಿಂಗನು ಅಗಲದೆ | ಇರುತ |
ಸರ್ವ ಭಕ್ತರನ್ನು ಪೊರೆವ ಲೋಕ ಜನನಿಯೆ | ಪಾಲಿಸೆನ್ನ ||5||
ಪೊರೆಯೆನ್ನ ಶಂಕರನೇ
ಪೊರೆಯೆನ್ನ ಶಂಕರನೇ | ಲೋಕ ಶಂಕರನೇ |
ಚರಣ ಕಿಂಕರರ ಕಿಂಕರ ನಾನು ಶಿವನೇ ||ಪ||
ಗುರುಬ್ರಹ್ಮ ಗೋಶಿಶುವು ಭ್ರೂಣ ಹತ್ಯಗಳು |
ವರಸ್ವರ್ಣ ಚೋರತ್ವ ವಿವಿಧ ಪಾಪಗಳು |
ಪರಧನವು ಪರಸತಿಯಂ ಕೆಡಿಸಿ ಮೋಸಗಳು |
ಆರಿಸಿ ಮಾಡಿದ ಪಾಪ ಕ್ಷಮಿಸಿ ಚಿತ್ತದೊಳು ||1||
ದುರಿತವಿಲ್ಲದೆ ಪುಣ್ಯವಣು ಮಾತ್ರವಿಲ್ಲ |
ವರಸೋಡರಿನಿಂದುಡುಕಿ ನೋಡೆಯೆದೆಯಲ್ಲಾ |
ಸ್ಮರಣ ಮಾತ್ರದಿ ಕೈಯ್ಯ ಬಿಡುವ ಶಿವನಲ್ಲ |
ಪೊರೆವನೆಂಬುವ ಶ್ರುತಿಯ ನಂಇಯಿಹನಲ್ಲ ||2||
ನಿನ್ನ ಸತಿ ಮಕ್ಕಳನು ನಿನ್ನ ಭಕ್ತರನು ನಿನ್ನ |
ಮಂತ್ರಾಗಮವು ಗುರು ಪ್ರಸಾದವನು |
ನಿನ್ನನರಿತ ಜ್ಞಾನಿಗಳಾ ದೂಷಣೆಯ ನಾನು |
ಮುನ್ನೆಷ್ಟು ಮಾಡಿದೆನೋ ಅದ ಕ್ಷಮಿಸಿ ನೀನು ||3||
ಎನ್ನಂಥ ಪತಿತ ಮೂಲೋಕದೊಳಗಿಲ್ಲ |
ನಿನ್ನಂಥ ಪತಿತ ಪಾವನನು ಮುನ್ನಿಲ್ಲ |
ವೆನುತಲಿ ನಿಮ್ಮಡಿಯ ಪಿಡಿದು ಇಹೆನಲ್ಲ |
ಯೆನ್ನ ಬಿಡಲಪಕೀರ್ತಿ ತಪ್ಪುವದೆಯಿಲ್ಲ ||4||
ಒಂದು ಬಿನ್ನಪವನ್ನೂ ಲಾಲಿಪುದು ಮುನ್ನ |
ಮಂದಮತಿಯಾದೆನ್ನ ಅಪರಾಧ ನಿನ್ನ |
ಕಂದನೆನ್ನುತ ಕ್ಷಮಿಸಿ ಪಾಲಿಸೆನ್ನ ತಂದೆ |
ಗುರು ಮಹಲಿಂಗ ವರಸುಪ್ರಸನ್ನ ||5||
ರಕ್ಷಿಸೊ ಯನ್ನನು
ರಕ್ಷಿಸೊ ಯನ್ನನೂ | ಅಕ್ಷಯ ಗುಣ ಪೂರ್ಣ |
ಭಕ್ತ ಬಂದೂ | ನಿನ್ನಾ
ಕುಕ್ಷಿಯೋಳ್ ಇಂಬಿಟ್ಟೂ | ಇಕ್ಷಚಾಪಹರ ಭಕ್ತಬಂಧು ||ಪ||
ಅಘದ್ವಾಂತ ರವಿ ಮೂರು |
ಜಗಕಾದಿ ಒಡೆಯನೆ ಭಕ್ತ ಬಂದೂ ನಿನ್ನಾ
ಬಗೆಗಾಣದೊರಲ್ವವೂ | ನಿಗಮಜಾಲಂಗಾಳೂ || ಭಕ್ತ ಬಂಧು ||1||
ಶಶಿ ಮುಖಿಯರ ಮೋಹ
ವ್ಯಸನದಿ ಮುಳುಗಿದೆ | ಭಕ್ತ ಬಂಧು ಮೋಹ
ವಿಷಯ ವಿಷವ ಮಾಡೋ | ಶಶಿಕಂಧರ ಯನ್ನಾ || ಭಕ್ತ ||2||
ಮನದೀ ನಿಶ್ಚಯವಿಲ್ಲಾ |
ಗುಣ ಮೊದಲಿಗೆಯಿಲ್ಲಾ | ಭಕ್ತ ಬಂದೂ | ಸತ್ಯಾ
ಗುಣ ಮಾರ್ಗ ತೋರಿಸೋ | ಮುನಿಕುಲಸೇವ್ಯನೇ || ಭಕ್ತ ||3||
ನರರ ಸೇವೆಯಗೈದು |
ನರಕ ಭಾಜನನಾದೇ |ಭಕ್ತ ಬಂಧು |
ಗುರುಹಿರಿಯರಡಿದಾವರೆ | ಕರುಣಾದಿ ತೋರಿಸೋ | ಭಕ್ತ ||4||
ಹರಿದಾಡೋ ಯಿಂದ್ರಿಯಾ |
ಕರಣಗಳ್ತುಳಿದು ನೀ | ಭಕ್ತಬಂಧು | ನಿನ್ನ
ಚರಣಾಬ್ಜ ಧ್ಯಾನದೋಳಿರಿಸೆನ್ನ ಗುರುಮಹಲಿಂಗ| ಭಕ್ತಬಂಧು ||5||
ಯಾಕೆನ್ನ ಮರೆತಿರುವೆ
ಯಾಕೆನ್ನ ಮರೆತಿರುವೆ ಕರುಣದಿಂ ಪೊರೆಯದೆಲೆ |
ಲೋಕನಾಯಕ ಸರ್ವ ಭಕ್ತ ಜನಬಂಧು ||ಪ||
ರವಿಯೋರ್ವ ಧರೆಗೆ ಗಗನ ಪಾತಾಳ ಲೋಕಕ್ಕೆ |
ಕವಿದ ಕಾರ್ಗತ್ತಲೆಯನುರುಹಿ ನಿಮಿಷದಲ್ಲಿ |
ತವೆ ಪಾಪಿ ಪುಣ್ಯಾತ್ಮ ಮೊದಲಾದ ಜೀವರ್ಗೆ |
ಲವಲವಿಕೆಯಿಂ ಕಾಣ ಬರುತಿಹನು ಪ್ರತಿದಿನದೀ || ಯಾಕೆ ||1|
ನೀ ಕೋಟಿ ರವಿಯಂತೆ ಬೆಳಗುತಿರೆ ಕಂಗಳಿಂ |
ನಾ ಕಾಣದಂತಾಯ್ತು ಕರ್ಮದಿಂದಕಟಾ |
ನೀ ಕರುಣಿ ತತ್ಕರ್ಮ ಹರಿಸುತ್ತೆ ತವೆಮೂರ್ತಿ |
ಸಾಕಾರ ದರುಶನವೀಯದಲೆ ಪುರಹರನೆ || ಯಾಕೆ ||2|
ಸುರರು ಅಮೃತವ ನರರು ಅನ್ನವ ಭ್ರಮರ ಪುಷ್ಪವ
ಉರಗ ಪವನವ ಕುಮುದ ಕಮಲಗಳ್ ಜಲವ
ನಿರುತಲಾಶ್ರೈಸಿ ಜೀವಿಸುವಾ ಪರಿಯಲಿ ನಿನ್ನ |
ಚರಣಗಳನಾಶ್ರಯದಿ ಜೀವಿಸುವದರಿತು || ಯಾಕೆ ||3|
ವರಹಂಸೆ ಪದ್ಮಗಳ ಜಾತಕವು ಮೇಘವನು |
ನೆರೆಕಮಲ ಭಾಸ್ಕರನ ಚಂದ್ರನ ಚಕೋರಂ |
ಅರಿವ ಲತೆ ವೃಕ್ಷವನು ಪತಿವ್ರತೆಯು ಪುರುಷನನು |
ಮರೆಯದಾಶ್ರಯಿಸಿ ಇರುವಂತೆ ನಂಬಿರುವದರಿತು || ಯಾಕೆ ||4|
ನಿರುತ ನಿನ್ನಾಶ್ರಯಿಸಿದೆನ್ನ ಚಿತ್ತದ ನಿಜವ |
ನರಿಯದವನೆನಲಿಕ್ಕೆ ಸರ್ವಜ್ಞ ಮೂರ್ತಿ |
ಕರಣಸಾಕ್ಷಿಕ ವೇದ ಪ್ರತಿಪಾದ್ಯನೆನಿಸಿರುವ |
ಪರಮಗುರು ಮಹಲಿಂಗರಂಗ ಭವಭಂಗಾ || ಯಾಕೆನ್ನ ||5|
ರಕ್ಷಿಸೈ ಕಾರುಣ್ಯ ಸಿಂಧುವೆ
ರಕ್ಷಿಸೈ ಕಾರುಣ್ಯ ಸಿಂಧುವೆ |
ರಕ್ಷಿಸೈ ಕುಲಬಂಧುವೆ ||ಪ||
ರಕ್ಷಿಸೆನ್ನಯ ಕೈಯ ಬಿಡದೇ |
ಪಕ್ಷಪಾತವ ಮಾಡದೆ ||ಅ||
ಮಾನಪ್ರಾಣ ಧನವು ನಿನ್ನದು
ಹಾನಿವೃದ್ಧಿಯು ನಿನ್ನದು ||
ಜ್ಞಾನ ಮೇಣಜ್ಞಾನ ನಿನ್ನದು |
ದಾನ ಧರ್ಮವು ನಿನ್ನದು ||1||
ಭೋಗ ಭಾಗ್ಯವು ಗುಣವು ನಿನ್ನದು |
ರಾಗ ರಸ ರುಚಿ ನಿನ್ನದು ||
ರೋಗ ದುಃಖ ವ್ಯಸನ ನಿನ್ನದು |
ತ್ಯಾಗ ಕೃಪಣತೆ ನಿನ್ನದು ||2||
ಯನ್ನ ಭವರೋಗವನು ಹರಿಸೊ |
ಉನ್ನತದ ಸುಖ ತೋರಿಸೋ ||
ಚನ್ನ ಶ್ರೀ ಗುರು ರಂಗಲಿಂಗನೆ |
ಯನ್ನ ದೇವರ ದೇವನೆ ||3||
ಶಿವನೆ ಪಾಲಿಸು ಯನ್ನನೂ
ಶಿವನೆ ಪಾಲಿಸು ಯನ್ನನೂ | ಜಗದೊಡೆಯ
ಶಿವಪದವಿಯಿತ್ತು ಮುದದೀ | ಘನದೀ ||ಪ||
ಶಿವ ಬ್ರಹ್ಮ ವಿಷ್ಣು ರುದ್ರ | ಇಂದ್ರ ಶಶಿ |
ಶಿವ ಮಹಿಗೆ ಭೋಜ ಬೀಜವಾಗಿ
ಶಿವಭೋಜ್ಯ ಭೋಕ್ತನೆನಿಸಿ | ಸರ್ವದಲಿ |
ಶಿವಶಕ್ತಿಯಾಗಿ ಪೊರೆವ | ಜಗವ || ಶಿವ ||1||
ಶಿವನಗರಿಗೊಡೆಯ ಮೃತ್ಯುಂ | ಜಯನಿರಘ
ಶಿವಶರಣ ಕಾಮಧೇನು | ನೀನು |
ಶಿವ ಭವಾಂಭೋನಿಧಿಯ ಕುಡಿವ | ಬಡಬಾಗ್ನಿ |
ಶಿವ ಸಚ್ಚಿದಾನಂದ ಮೂರ್ತಿ | ಕೀರ್ತಿ || ಶಿವ ||2||
ನಿಮ್ಮ ಮೂರ್ತಿ ಧ್ಯಾನ ಮನದೊಳಗೆ |
ಶಿವಮಂತ್ರ ಪಠಣೆ ಜಿಹ್ವೆಯಲ್ಲಿ |
ಶಿವಪೂಜೆ ಕರದಿಗೈವ ಭಕ್ತಿಯನು |
ಶಿವ ಕರುಣಿಸೈ ಯನಗೆ ಇಂದು ಬಂದು || ಶಿವ ||3||
ಶಿವಭಕ್ತ ಬಂಧುವೆನಿಸಿ ಜೀವರ್ಗೆ |
ಶಿವ ಕ್ಷೇತ್ರವೆಂಬ ಕಾಶಿ | ಸ್ಥಲದಿ
ಶಿವನೆ ತಾರಕಮಂತ್ರವಂ ಬೋಧಿಸುತ|
ಶಿವಲೋಕವೀವ ಪ್ರಭುವೇ ಗುರುವೆ || ಶಿವ ||4||
ಶಿವಪಾದಾಂಭೋರುಹವನು ನೆನೆನೆನೆದು |
ಶಿವ ಸುಖಾಮೃತವ ಸವಿ ನೀನೆಂದು |
ಶಿವನೆ ಗುರು ಮಹಲಿಂಗನೆಂದೆನಿಸಿ |
ಶಿವಭಕ್ತ ಸುಧೆಯ ನೆರೆದು ಕರೆದು || ಶಿವನೆ ||5||
ಏನು ಹೇಳಲಿ ದಿವ್ಯ ಶಿವಮಂತ್ರ ಮಹಿಮೆಯನು
ಏನು ಹೇಳಲಿ ದಿವ್ಯ ಶಿವಮಂತ್ರ ಮಹಿಮೆಯನು
ಮಾನಸೇಂದ್ರನ ಭಜಿಸಿ ಭವನಾಶಿಯಾಗೈ ||ಪ||
ಗುರು ಬ್ರಹ್ಮವಧೆ ಪಾಪವೆಂಬ ಕಾರ್ಗತ್ತಲೆಗೆ |
ಉರಿವ ಮಧ್ಯಾಹ್ನಾರ್ಕ ಮಂಡಲವು ಯೆನಿಸುತ |
ಸುರೆಯ ಸೇವನೆ ದೋಷವೆಂಬತುಲ ಮೇಘಕ್ಕೆ |
ಉರುತರ ಪ್ರಚಂಡ ಮಾರುತವು ಯೆನಿಸಿಹುದು ||1||
ಕನಕತಸ್ಕರ ಪಾಪವೆಂಬ ತುಲ ಪರ್ವತಕೆ |
ಮೊನೆಯಾದ ವಜ್ರಾಯುಧವೆನಿಸಿಹುದೂ ||
ವಿನುತ ಗುರುಸತಿ ಗಮನ ಪಾಪವೆಂಬುವ ಜಗಕೆ |
ಜನಜನಿತ ಪಂಚಾನನವು ಯೆನಿಸಿರುವುದು ||2||
ಅನೃತ ಭಾಷಾಲತೆಗೆ ಗಂಡುಗೊಡ್ಲೆನಿಸಿ |
ಘನಪಾತಕಾರುಣ್ಯ ಕಾಲಾಗ್ನಿಯೆನಿಸಿ
ಮುನಿ ವಿಪ್ರ ಗುರು ವೇದವೇದಾಂತ ದೂಷಣೆಯ |
ನೆನಹೆಂಬ ಸರ್ಪಕ್ಕೆ ಹಸಿದ ಗರುಡನೆನಿಸಿರುವದು ||3||
ಪರಸತಿ ಸ್ವಮಾತೃ ತನ್ನ ಭಗಿನಿ ಸಂಗಮವು |
ಪರಧನವು ಗೃಹ ಗ್ರಾಮ ಅನ್ನ ವಂಚನೆಯು ||
ಉರುಭ್ರೂಣ ಗೋಹತ್ಯೆ ಮೊದಲಾದ ಅಘವೆಂಬ |
ದುರುಳ ರಕ್ಕಸಕೋಟಿ ಶಿರಚಕ್ರವೆನಿಸಿರುವುದು ||4||
ಅಡಿಗಡಿಗೆ ನಡೆನುಡಿಗೆ ಮನದಿ ನೆನೆದರೆ ಸಾಕು |
ಮಡಿಯ ಮೈಲಿಗೆಯೆಂಬ ತಡೆಬಡೆಗಳಿಲ್ಲ |
ಕಡು ಸುಲಭ ಯಮ ಭಟರ ಕಡೆವಸಿತ ಖಡ್ಗವಿದು |
ಮೃಡರೂಪ ಮಹಲಿಂಗ ಗುರು ಪ್ರಸಾದವಿದು ||5||
ಭಜಿಸು ಭಕ್ತರ ಬಂಧುವೆನಿಪನ
ಭಜಿಸು ಭಕ್ತರ ಬಂಧುವೆನಿಪನ
ಭಜಿಸು | ಬ್ರಹ್ಮಾನಂದನ ||ಪ||
ಭಜಿಸು ಕರುಣಾ ಸಿಂಧುವೆನಿಪನ |
ಭಜಿಸು ತ್ರೈಜಗಭರಿತನ ||ಅ ಪ||
ವೇದ ಪುರುಷನ ವೇದವೇದ್ಯನ
ವೇದ ಆಗಮವಂದ್ಯನ |
ವೇದ ಜನಕ ವೇದರೂಪನ ವೇದ ಪಾಠಕ ವಂದ್ಯನ ||1||
ಭಕ್ತ ಪ್ರಿಯನ ಭಕ್ತಭಾಗ್ಯನ
ಭಕ್ತ ಹೃದಯ ವಿಹಾರನ |
ಭಕ್ತ ಜನಕನ ಪುತ್ರನ ಭಕ್ತ ಜನ್ಮಕುಠಾರನ ||2||
ಯೋಗಬೋದ್ಯನ ಯೋಗ ಸಾಧ್ಯನ
ಯೋಗಮುದ್ರಕರಾಬ್ಜನ ಯೋಗಪ್ರಿಯನ
ಯೋಗಸಿದ್ಧನ ಯೋಗ ದೀಕ್ಷಾಬದ್ಧನ ||3||
ಧ್ಯಾನ ಪ್ರೀತನ ದಾನ ಪಾತ್ರನ
ಧ್ಯಾನ ಫಲಪ್ರದ ಖ್ಯಾತನ
ಧ್ಯಾನ ಧಾತೃ ಧ್ಯೇಯರೂಪನ ಧ್ಯಾನ ನಿತ್ಯಾನಂದನ ||4||
ಜ್ಞಾನಗಮ್ಯನ ಜ್ಞಾನನೇತ್ರನ
ಜ್ಞಾನ ಸಾಗರ ಚಂದ್ರನಾ |
ಜ್ಞಾನಿ ಗುರುಮಹಲಿಂಗ ರಂಗನ ಜ್ಞಾನಿ ದಕ್ಷಿಣ ವಕ್ತ್ರನ | ಭಜಿಸು ||5||
ಮಾತು ಮಾತಿಗೆ ಶಂಕರ
ಮಾತು ಮಾತಿಗೆ ಶಂಕರ| ಶ್ರೀ ಗುರುವೆ ಸ
ರ್ವೋತ್ತಮನೆನಬಾರದೆ ||ಪ||
ಜೋತಿ ಸಂಗದಿ ವುರಿದೋಗ್ವ ಕರ್ಪುರದಂತೆ
ಪಾತಕರಾಸಿದಿಂತುರಿದು ಹೋಗುವದಾಗಿ |ಮಾತು ||ಅ.ಪ||
ಸ್ನಾನವ ಮಾಡುವಾಗ | ನೇಮದಿ ಆತ್ಮ
ಧ್ಯಾನ ಮಾಡುವಾಗ |
ಜಾಣತನದಿ ಅನ್ನವುಂಡು ಗಂಗಾಮೃತ
ಪಾನವ ಮಾಡುವ ಕಾಲದಿ ಮನವೆ |ಮಾತು ||1||
ಬಿಸಜಾಕ್ಷಿ ನೋಡುವಾಗ | ಕೂಡುತ ನಿತ್ಯ
ವಸೆದು ಮಾತಾಡುವಾಗ
ಬಸುರಿಲಿ ಬಂದ ಸುಮಗನ ಮುದ್ದಿಸುವಾಗ
ಹಸನಾದ ವಸ್ತ್ರಂಗಳನುಡುವಾಗ ಮನವೆ |ಮಾತು ||2||
ಬೆಟ್ಟವನೇರುವಾಗ | ಕಾಲೂರಿದಲ್ಲಿ
ಥಟ್ಟನೆ ಬೀಳುವಾಗ
ಅಷ್ಟಭೋಗದಿ ನಿತ್ಯ ಲೋಲುಪ್ತಿ ಪಡೆವಾಗ
ದಟ್ಟ ದಾರಿದ್ರ ಬಂದಾಗಲು ಮನವೆ ||ಮಾತು ||3||
ಗುರುಚರಣ ಪ್ರಣವ
ಗುರುಚರಣ ಪ್ರಣವವೆಂತೆಂಬ ಮರ್ಮವನು
ಶ್ರೀಗುರುವಿನಿಂದರಿತು ಪೂಜೆಸುವನುತ್ತಮನು ||ಪ||
ಶಿರವಧಿಕವೆನಿಸಿರಲಾ ಚರಣ ಪೂಜೆಂತೆನಲು |
ಶಿರವು ಜ್ಞಾನಸ್ಥಾನ ನಿರ್ಗುಣೆನಿಸುವುದು |
ಚರಣ ಕರ್ಮಸ್ಥಾನ ಸಗುಣವೆನಿಸಿಹುದಾಗಿ
ಚರಣ ಪೂಜಿಸಲಾಯ್ತು ಪ್ರಣವ ರೂಪಿಂದ ||1||
ತಾರಕದ ಪರಂಜ್ಯೋತಿ ಕರ್ನ ಕುಂಡಲ ಮತ್ತೆ |
ಚಾರುಬಿದಿಗೆಯ ಚಂದ್ರ ಬಂದು ರೂಪವಾಗಿ |
ತೋರಿ ಅಜಹರಿರುದ್ರ ಈಶ್ವರ ಸದಾಶಿವರು |
ಮೀರದಲೆ ದೇವತೆಗಳು ಯೆನಿಸಿ ರಾಜಿಪರು ||2||
ಅಲ್ಲಿ ಭಕ್ತಿಯು ನಿಂತ ಪುರುಷನಿಗೆ ಶ್ರೀ ಗೌರಿ
ವಲ್ಲಭನು ವೊಲಿದು ವರಕಾಮ್ಯ ಮೋಕ್ಷವನು
ಒಲ್ಲೆನೆಂದರು ಕರೆದು ಕೊಡುವೆನೆಂಬುದನು |
ಬಲ್ಲ ಹರ ಗುರುಭಕ್ತರೊಲಿದು ಪೂಜಿಪರೂ ||3||
ಚರಣ ಪ್ರಣವಾಕಾರವೆನಿಸಿ ಭಕ್ತರ್ಗೆಲ್ಲ |
ಚರಣರಜದುರಿತಗಿರಿ ವಜ್ರವಾಗಿರುತ
ಚರಣ ತೀರ್ಥಖಿಳ ರುಜೆಗೌಷಧವು ಯೆನಿಸುತ್ತ |
ಚರಣ ಪೂಜೆಯೆ ಸರ್ವಕಧಿಕವೆನಿಸಿಹುದು ||4||
ಇಂತು ಶ್ರೇಷ್ಠತ್ವಲ್ಲಿ ಅಡಗಿರುವುದನ್ನರಿತು |
ಕಂತು ಹರನಚ್ಚುತನು ಅಜ ಮುಖ್ಯರಾದವರು |
ಪಿಂತೆಸಿರದೊಳಗಾಂತು ಕೊಂಡಾಡಿ ಪೂಜಿಪರು |
ಸಂತಸದಿ ಗುರು ಮಹಾಲಿಂಗನಡಿಗಳಂ ||5||
ಕರವೆತ್ತಿ ಬೆಳಗುವೆನು
ಕರವೆತ್ತಿ ಬೆಳಗುವೆನು | ಕರ್ಪೂರ ಜ್ಯೋತಿ |
ಕರವೆತ್ತಿ ಬೆಳಗುವೆನು || ಪ ||
ಧರಣಿ ಪಾವನಕಾಗಿ | ಅವತಾರವನು ಗೈದ |
ಕರುಣ ಸಾಗರನಾದ | ಶ್ರೀಗುರು ಮೂರ್ತಿಗೆ ||ಅ||
ವರನಂದಿ ಖಗಹಂಸ | ವಾಹನನೆನ್ನಿಸಿ |
ಕರದಿ ತ್ರಿಶೂಲ ಕಮಂಡಲ ವರಚಕ್ರ |
ನಿರುತ ಉಮೆಯು ರಮೆ | ಭಾರತಿ ಹೊಂದಿಹ |
ವರಪ್ರಣವಾತ್ಮಕ | ಗುರು ಪಾಹಿಮಾಂ ಎಂದು ||1||
ಗುರು ಮಹಲಿಂಗ ರಂಗನೆ ಮೂರು ರೂಪಾಗಿ |
ಇರುವನೆಂಬುವ ಮರ್ಮ ಸೂಚಿಪನೆಂಬಂತೆ |
ಶಿರ ಮೂರರಿಂದಲಿ ಅವತಾರವನುಗೈದ |
ಪರಮ ದತ್ತಾತ್ರೇಯ | ಗುರು ಪಾಹಿಮಾಂ ಎಂದೂ ||2||
ನಿನ್ನ ಹಿತಕೋಸುಗವೆ ಪೇಳುವೆ
ನಿನ್ನ ಹಿತಕೋಸುಗವೆ ಪೇಳುವೆ |
ಯನ್ನ ಮಾನಸರಾಜನೇ ||ಪ||
ಮುನ್ನವಿರತಿಯ ಧನವನಾರ್ಜಿಸು |
ನಿನ್ನದಾಗಿದೆ ಮುಕ್ತಿಯು ||ಅ.ಪ||
ಸ್ವಪ್ನದಂದದಿ ರಾಜ್ಯಲಕ್ಷ್ಮಿಯು |
ಸ್ವಪ್ನದಂದದಿ ಭಾಗ್ಯವು |
ಸ್ವಪ್ನದಂದದಿ ಪುತ್ರ ಸತಿಯರು |
ಸ್ವಪ್ನದಂದದಿ ಪ್ರಾಯವು ||1||
ದುಃಖ ಜನನವು ಮರಣ ಕಾಲದಿ |
ದುಃಖ ಬಹು ರೋಗಂಗಳಿಂ |
ದುಃಖ ಶತ್ರುಗಳಿಂದಲನುದಿನ |
ದುಃಖಮಯ ಸಂಸಾರವು ||2||
ದುಃಖ ಧನವನಾರ್ಜಿಸುವ ಕಾಲದಿ |
ದುಃಖ ರಕ್ಷಿಪ ಕಾಲದಿ |
ದುಃಖ ಚೋರರು ಅಗ್ನಿಭಯ ಬಹು |
ದುಃಖ ಒಬ್ಬರಿಗೀಯಲು ||3||
ನಿತ್ಯವಲ್ಲವು ಹೆಣ್ಣು ಹೊನ್ನುಗಳ್ |
ನಿತ್ಯವಲ್ಲವು ಮಣ್ಣಿದು |
ನಿತ್ಯ ಮೃತ್ಯುವುಯೆನಿಸಿ ತ್ರಿಜಗವ |
ನಿತ್ಯ ನುಂಗುತಲಿರುವುದು ||4||
ಈಷಣತ್ರಯದಾಸೆಯಿಂದಲೆ |
ಘಾಶಿಯಾಗುವದೀ ಜಗಂ |
ಆಸೆ ಶ್ರೀಗುರು ರಂಗನಲ್ಲಿಡು |
ಈಶನಾಗುವೆ ಸಂತತಂ ||5||
ವಾಣಿ ಪಾಣಿ ಮಾಣಿ ಮೂರು
ವಾಣಿ ಪಾಣಿ ಮಾಣಿ ಮೂರು
ಕಟ್ಟಿದವನು | ಶ್ರೇಷ್ಟನಪ್ಪನು ||ಪ||
ವಾಣಿ ಪಾಣಿ ಮಾಣಿ ಮೂರು
ಬಿಚ್ಚಿದವನು | ಭ್ರಷ್ಟನಪ್ಪನು ||ಅ.ಪ||
ಸುಳ್ಳು ಠಕ್ಕು ಚಾಡಿ ಕುಹಕವಾಡಬೇಡ |
ವಾಕ್ಕಿನಿಂದ | ಒಳ್ಳೆ ನುಡಿಯು |
ಮಂತ್ರಧ್ಯಾನ ಬಿಡಲು ಬ್ಯಾಡಾ |
ಮನಸಿನಿಂದ || ವಾಣಿ ||1||
ಕಳುವು ಹಿಂಸೆ ಕೊಲೆಗಳನ್ನು |
ಮಾಡಬ್ಯಾಡಾ ಹಸ್ತದಿಂದ |
ಸಲಿಗೆಯಿಂದ ಬೇಡಿದರೆ |
ಕೊಡುವ ಶಂಭು ದೃಢದಿ ನಂಬು || ವಾಣಿ ||2||
ಮೋಹ ಬಿಡು ಕಾಮಿನಿಯರ |
ಕೂಟದಲ್ಲಿ | ನೋಟದಲ್ಲಿ |
ಮೋಹವಿಡು ಗುರು ರಂಗನಡಿಯಲ್ಲಿ |
ಮನಸಿನಲ್ಲಿ || ವಾಣಿ ||3||
ಮನ ವಿರಕ್ತಿಗೆ ಮುಕ್ತಿಯಲ್ಲಿದೆ
ಮನ ವಿರಕ್ತಿಗೆ ಮುಕ್ತಿಯಲ್ಲದೆ |
ತನು ವಿರಕ್ತಿಗೆ ಯಿಲ್ಲವು ||ಪ||
ಮನವೆ ಬಂಧವು ಮೋಕ್ಷ ಪದವಿಗೆ |
ಮನವೆ ಕಾರಣವೆನಿಪುದು ||ಅ.ಪ||
ಮನದಿ ಮೋಹವು ಆಶೆಯಳಿದವ |
ಮನೆಯೊಳಿದ್ದರು ಮುಕ್ತನು
ಮನದಿ | ಮೋಹವು ಆಶೆಯುಳ್ಳವ |
ವನದೊಳಿದ್ದರು ಬದ್ಧನು | ಮನ ||1||
ತನುವು ಧನದಭಿಮಾನವಳಿದವ |
ಮನೆಯೊಳಿದ್ದರು ಮುಕ್ತನು |
ತನುವು ಧನದಭಿಮಾನವುಳ್ಳವ |
ಮನದೊಳಿದ್ದರು ಬದ್ಧನು || ಮನ || ||2||
ಆಶೆಯಿಂದಲಿ ಮನಕೆ ಬಂಧವು |
ಆಶೆಯಳಿಯಲು ಮುಕ್ತಿಯು |
ಆಶೆ ಗುರು ಮಹಲಿಂಗನಲ್ಲಿಡೆ |
ಈಶನಾಗುವೆ ಸಂತತಂ || ಮನ || ||3||
ಅಬ್ಬಬ್ಬಿನ್ನೆಂಥಾವನೋ ಈ ಕಾಮ
ಅಬ್ಬಬ್ಬಿನ್ನೆಂಥಾವನೋ | ಈ ಕಾಮನು |
ಅಬ್ಬಬ್ಬಿನ್ನೆಂಥಾವನೋ | ||ಪ||
ಮಬ್ಬು ಕಣ್ಣಿಗೆ ಮುಚ್ಚಿ ಮೋಹ ಬಲೆಯ ಬೀಸಿ
ಒಬ್ಬೊಬ್ಬರನು ಗೋಣ ಮುರಿಯುವ ಪಿಡಿದು | ಅಬ್ಬಬ್ಬ ||ಅ.ಪ||
ಘನತಪಗೇಡಿಯೆಂದು ಕಿಡಿಗಣ್ಣಿನ
ಘನತಾಪ ಜ್ವಾಲೆಯಿಂದ ತ್ರಿನಯನನು
ಸುಟ್ಟು ಬೊಟ್ಟಿಟ್ಟರು ಸಾಯದೆ |
ಮನಸಿಜನೆನಿಸಿ ಮೂಲೋಕವ ಸುಡುವನು ||1||
ಸತ್ತ ನಾಯರಿಯನು | ಪ್ರತ್ಯಕ್ಷ ತಾ
ಹೆತ್ತಾ ಮಗಳನರಿಯನು |
ಅತ್ತೆ ಅತ್ತಿಗೆ ತಾಯಿ ತಂಗಿಯೆಂದೆಣಿಸದೆ |
ನಿತ್ಯ ಭೋಗಿಸಿ ನೀತಿಗೆಟ್ಟು ಸಂಚರಿಸುವ ||2||
ಪತಿವ್ರತೆಯರ ಕೆಡಿಸಿ | ಯೋಗವು ಧ್ಯಾನ
ವ್ರತ ನೇಮಂಗಳ ಮರೆಸಿ |
ಸ್ಥಿತಿಗತಿ ಕೆಡಿಸುತ್ತ ಸೂಳೆರ ಬಾಗಿಲೆ |
ಗತಿಯೆಂದು ತಿರಿದುಂಬ ಪರಿಮಾಡ್ವನಹಹ ||3||
ನೆರೆ ಪಂಚ ಬಾಣದಿಂದ| ಮೋಹಾದಿಗಳ |
ಪರಮ ಸಹಾಯದಿಂದ |
ವರಜ್ಞಾನ ರತ್ನಾ ಹಾರಿಯನ್ನಿಸುತಲಿ |
ಧರೆಯೊಳು ಪ್ರಖ್ಯಾತಿಯಾಗಿಹ ಪುರುಷನು ||4||
ಧೀರ ಶ್ರೀ ಗುರುರಂಗನ ಪಾದದಿ ಭಕ್ತಿ
ತೋರದಿರುವ ಮೂಢನ |
ನಾರಿ ಮೋಹವದೆಂಬ ಬಲೆಯೊಳು ತಾ ಕಟ್ಟಿ |
ಚೂರಿಯಿಲ್ಲದೆ ಕೊರಳನು ಕೊಯ್ವ ಮೆಟ್ಟಿ ||5||
ಬಿಡು ಬಿಡಿನ್ಯಾತರ ಜ್ಞಾನ
ಬಿಡು ಬಿಡಿನ್ಯಾತರಜ್ಞಾನ | ನಿನ್ನ
ನಡೆ ನುಡಿಯೊಂದಾಗದಿಹುದೆ | ಅಜ್ಞಾನ | ಬಿಡು ||ಪ||
ಗುರುಭಕ್ತಿ ನೆಲೆಯಾಗಿಯಿಲ್ಲ | ನಾನೇ |
ಗುರುವೆಂದು ಹಮ್ಮಿನಿಂದುರಿಯುವೆಯಲ್ಲ |
ಕರುಣ ಶಾಂತಿಯು ಸತ್ಯವಿಲ್ಲ | ಕೆಟ್ಟ
ಅರಿವರ್ಗ ಮದ ಹೆಚ್ಚಿ ಮೆರೆಯುವೆಯಲ್ಲ || ಬಿಡು ||1||
ಚದುರನೆಂದೆನಿಸಿಕೊಂಡಿರುವೆ | ದಿವ್ಯ |
ಪದುಮದಿಂದೊಪ್ಪುವ ಮುಖದಿ ಶೋಭಿಸುವೆ||
ಮಧುರ ವಾಕ್ಯವನಾಡುತಿರುವೆ | ನಿನ್ನ
ಹೃದಯದಿ ಕತ್ತಿಯನ್ನಿಟ್ಟುಕೊಂಡಿರುವೇ || ಬಿಡು ||2||
ತನುವಿನಾಶೆಯ ಬಿಡಲಿಲ್ಲ | ಹೇಸಿ
ಮನದ ಸಂಕಲ್ಪಾಗಳ್ ಬೋಳಾಗಲಿಲ್ಲ |
ಅನುಮಾನವನು ಬಿಡಲಿಲ್ಲ | ನಮ್ಮ
ಗುರು ಮಹಲಿಂಗನೋಳ್ | ಸಮರಸವಿಲ್ಲ || ಬಿಡು ||3||
ಜಾಗ್ರದಲ್ಲಿ ಜಾಗ್ರನಾಗಿ
ಜಾಗ್ರದಲ್ಲಿ ಜಾಗ್ರನಾಗಿ ಗುರುವಿನಂಘ್ರಿಯಾ ಹೊಂದು |
ಶೀಘ್ರದಿಂದ ದಾಟಿಸುವನು ಭವದ ಶರಧಿಯಾ ||ಪ||
ಬೂರುಗಾದ ಫಲವ ಗಿಣಿಯು |
ಆರು ಮಾಸ ಹೂವು ಕಾದು |
ಹಾರಿ ಪೋದುದಿನಿತು ಸಾರವರಿಯದಾ ಪರಿ |
ಘೋರ ಸಂಸಾರ ವೃಕ್ಷದ ಫಲವು |
ನೂರು ವರುಷ ಕಾಯ್ದರಿಲ್ಲವೆಂಬುದರಿತುಕೋ ||1||
ಶರಧಿ ಅಲೆಗಳುಡುಗಿದಾಗ ಸ್ನಾನಗೈಯ್ಯುವೆನೆಂದು |
ಮರುಳನೋರ್ವ ಕಾಯ್ದ ಪರಿ ಸಂಸಾರವೆಂಬುವ
ಶರಧಿಯಲಿ ಪುತ್ರಮಿತ್ರ ಗೋತ್ರ ಬಾಂಧವರೆಂಬ
ತೆರೆಗಳುಡುಗಿದಾಗ ಶಿವನ ಭಜಿಪೆನೆನ್ನದೆ ||2||
ಕೋಟಿಗೊಂದು ಮಾತು ಪೇಳ್ವೆ ಜಗವಿದೆಲ್ಲವು ಮಿಥ್ಯೆ
ಬೂಟಕಿದನು | ಸ್ವಪ್ನದಂತೆಂದರಿತು ನಿನ್ನಯ |
ದೃಷ್ಟಿಯೊಳಗೆ ಗುರು ಮಹಾಲಿಂಗರಂಗನ ಕಂಡು |
ನಿಷ್ಠೆಯಿಂದ ಭಜಿಸಿ ನಿತ್ಯ ಮುಕ್ತನಾಗೆಲೋ ||3||
ತಿಳಿದು ಭಕ್ತಿ ಮಾಡು
ತಿಳಿದು ಭಕ್ತಿ ಮಾಡು ಗುರು ಪಾದದಲ್ಲಿ | ಮನಸಿನಲ್ಲಿ |
ಬಲವಂತ ಮಾಘಸ್ನಾನವಲ್ಲಾ | ಕೇಳೊ ಸೊಲ್ಲಾ ||ಪ||
ಕೋಪತಾಪದಿಂದ ಸತ್ಯ ಜ್ಞಾನನಾಶ | ಯಮ ಪಾಶ |
ತಾಪಸೋತ್ತಮರ ಸೇವೆ ಕ್ಲೇಶನಾಶ | ಭವನಾಶಾ ||1||
ಆಶತ್ರಯದಿಂದ ನೀನು | ಘಾಶಿಯಾಗುವೆ | ಮೋಸ ಹೋಗುವೆ |
ಈಶನಲ್ಲಿ ಆಸೆ ಇಡು ಹೇಸಿ ಜೀವವೇ | ಮುಕ್ತನಾಗುವೆ ||2||
ತನುತ್ರಯ ಬೆಳಗುವ | ಆತ್ಮನೊಬ್ಬನೂ ಸತ್ಯವೆಂದೂ |
ಕನಸಿನಂತೆ ತೋರ್ಪ ಜನ | ಮಿತ್ಯವೆಂದೂ | ಮನಸಂದೂ ||3||
ಗುರುದೇವ ಸರ್ವ ತತ್ವ | ಬೋಧಕರ್ತ ಕೇಳೊ ಮರ್ತ್ಯಾ |
ಗುರುಪಾದ ಹೊಂದದಿರೆ ಜನ್ಮ ವ್ಯರ್ಥ | ಇದು ಸತ್ಯಾ ||4||
ಸಲೆ ಗುರು ಮಹಲಿಂಗ ರಂಗ ಬಂದಾ | ದಯದಿಂದಾ |
ಕಳಚುವನು ಭಕುತರ | ಭವಬಂಧಾ | ಕ್ರಮದಿಂದಾ ||5||
ನಾಳೆಯೆಂಬನ ಮನೆ ಹಾಳು
ನಾಳೆಯೆಂಬನ ಮನೆ ಹಾಳು | ನೀನು
ನಾಳೆತನಕಿರುವುದು | ನಿಜವೇನು ಹೇಳು ||ಪ||
ಕ್ಷಣ ಭಂಗುರವು ಯನ್ನಿಸಿದೆ | ನಿನ್ನ
ತನುವು ಆಚಂದ್ರಾರ್ಕವಾಗಿ ನಿಲ್ಲುವದೆ
ದಿನವು ರೋಗದಿ ಸಾಯುತ್ತಿದೆ | ಇದನು
ಮನದೊಳಗರಿತು ಶೀಘ್ರದಿ ಮುಕ್ತನಾಗದೇ ||1||
ಹಾಳು ವಾದವ ಮಾಡಬಲ್ಲೆ| ನಿನ್ನ |
ಮೂಲ ತತ್ವವ ಕಿವಿಯೊಳಲೊಲ್ಲೆ|
ಖೂಳ ಕುಹಕ ವಿದ್ಯೆ ಬಲ್ಲೆ | ಎಷ್ಟು
ಹೇಳಲು ಆಸೆ ಮೋಹವ ಬಿಡಲೊಲ್ಲೆ ||2||
ಕೊಡಬೇಕಾದರೆ ನಾಳೆಯೆಂಬೆ | ಕಟ್ಟಿ
ಇಡಬೇಕಾದರೆ ಯನ್ನದೀಗಲೆ ಯೆಂಬೆ |
ಮಡದಿ ಮಕ್ಕಳಿಗಿರಲೆಂಬೆ | ನಾಳೆ |
ಜಡಿಯವ ಯಮಭಟರುಗಳಿಗೆ ಯೇನೆಂಬೆ ||3||
ಬರುವ ಕಾಲದಿ ಬರಿಗೈಯಿ | ನೀನು
ಹೊರಡುವ ಕಾಲದೊಳಗೆ ಬರಿಗೈಯ್ಯಿ |
ಪರರನ್ನು ಜರಿಯುವ ಬಾಯಿ | ಇಹ
ಪರ ಕಾಣದಾಡುವ | ತಲೆ ಹುಳಿತ ನಾಯಿ ||4||
ವಿರತಿ ಸದ್ಭಕ್ತಿಯ ತಾಳು | ಕೆಟ್ಟ
ದುರಿತಾದಿ ಕುದಿಯುವುದ್ಯಾತರ ಬಾಳು |
ಸ್ಥಿರ ಮುಕ್ತಿ ಕಾಂತೆಯನಾಳು | ನಮ್ಮ
ಗುರು ಮಹಲಿಂಗನಾ ವಚನವ ಕೇಳು ||5||
ಕೆಡುವುದುಚಿತವೆ
ಕೆಡುವುದುಚಿತವೆ | ಮೃಢ
ನಡಿಯಾ ಪಿಡಿಯದೇ | ಕೆಡುವದುಚಿತವೇ ||ಪ||
ಒಡಲೊಳು ಭವನಡಿ ನೆನೆಯುತಲೀ ಭವ
ಕಡಲನು ದಾಂಟದೆ ಮೂಢತೆಯಿಂದಲಿ ||ಅ.ಪ||
ಸ್ಥಿರವಿಲ್ಲಾ ತನುವಿದು | ಮರಳಿ ತಾ ಬಾರದೂ |
ಅರಿತರೆ ಈ ಜನ್ಮದೊಳು ಮುಕ್ತಿ ಸಾಧನ |
ಮರೆತರೆ ಘನ ನರಕಾರ್ಣವ ಶಾಸನ || ಕೆಡು ||
ಮಾನಿನಿ ಭ್ರಮೆಯಲೀ | ಶ್ವಾನನಂದದಲೀ |
ಓಣಿಓಣಿಯೊಳಾಡಿ ಕೆಡುವೆ ನೀ ಮತಿಗೆಟ್ಟು |
ಮೀನು ಗಾಣಕೆ ಸಿಕ್ಕಿ ಪ್ರಾಣ ಬಿಟ್ಟಂತೆ || ಕೆಡು ||2||
ಮಾನಾಭಿಮಾನದಿ ಜ್ಞಾನವ |ನೀಗಿದಿ
ಮಾಣುಮಾಣೆಲೋ ನಿನ್ನ ಜಾಣತನಂಗಳ
ಜ್ಞಾನಿಗಳೊಡನಾಡಿ ನೀಗೋ ದುರ್ಗುಣಗಳ || ಕೆಡು ||3||
ನಾನೆಂ¨ ಗರ್ವದಿ ನೀನುಬ್ಬಿ ಉರಿಯದೇ
ಧ್ಯಾನ | ಜಪವ ಗುರು ಭಕುತಿಯ ಮಾಡುತ |
ನೂನವಿಲ್ಲದ ಪದ ಸೇರಿಕೊ ನೋಡಿ || ಕೆಡು ||4||
ವಾಸನದೂರನು | ಭಾಸುರ ತೇಜನು
ಪಾಶ ಛೇದಕ ಪರಮೇಶನು ಯೆನಿಸಿದ
ದೇಶಿಕ ಮಹಲಿಂಗನರಿಯದೆ ಬರಿದೆ || ಕೆಡು ||5||
ಕೊಬ್ಬಿ ನೀ ಕೆಡಬೇಡವೋ
ಕೊಬ್ಬಿ ನೀ ಕೆಡಬೇಡವೋ | ಮತ್ತೊಬ್ಬರ
ನ್ನುಬ್ಬಿ ಆಡಲಿ ಬ್ಯಾಡವೋ ||ಪ||
ಮಬ್ಬು ಕಣ್ಣಿಗೆಮುಚ್ಚಿ | ಮರೆತರೆ ಶಿವಧ್ಯಾನ
ಹೆಬ್ಬುಲಿಯಂತೆ ನುಂಗುವ ಯಮನವನ ||ಅ||
ಕಾಸುವೀಸಂಗಳನೂ | ಕೂಡಿಸಿ ಧನದ |
ರಾಸಿಯ ಮಾಡಿ ಮಾಡಿ |
ಆಸೆಯಿಂದಿರೆ ವೀಸದಾನವ ಮಾಡದೇ | ಕಾಲ
ಪಾಶಕ್ಕೆ ಗುರಿಯಾಗಿ ಕೆಟ್ಟೆಲ್ಲೋ ಪ್ರಾಣಿ ||1||
ಎಂಟು ಮಂದಿಗಳ ಕಟ್ಟೀ | ಎಚ್ಚರದಿಂದಾ |
ತುಂಟರೈವರನು ಕಟ್ಟೀ |
ನೆಂಟರಿಷ್ಟರಭಿಮಾನವ ದೂರಿಟ್ಟೂ
ಬಂಟನಾಗದೆ ಶಿವ ಶರಣಾರ ಪಾದಾದೀ ||2||
ನಿನ್ನೊಳಡಗಿರುವಾ | ಗರ್ವವು ಕ್ರೋಧ
ವಿನ್ನು | ಮತ್ಸರವ ನೀಗಿ |
ಉನ್ನತ ಶಾಂತಿಯ ಪಡೆಯದೊಳ
ಗನ್ಯರ ಗುಣ ದೋಷವೆಣಿಸಿ ನೀ ಸುಮ್ಮನೆ ||3||
ಪರಮಗುರು ಮಹಲಿಂಗನ |
ಚರಣ ನಂಬಿಹಗೊಬ್ಬಗಲ್ಲದೆ | ಸದಮಲ
ವಿರತಿಯಿಂದ | ಎದೆ ಏರಿ ತುಳಿದು ಕಾಡುವ ಗುಣಗಳು
ಮೂರ| ಬಡಿಯಬೇಕಲೆ ಮೋಹ ಭಯಲಜ್ಜೆ ಮೂರ ||4||
ಸಾಧಿಸುತೀ ಪರಿಯಾ | ನಿನ್ನೊಳು ನೀನೇ |
ಛೇದಿಸಿ ಮದ ಗರ್ವವಾ |
ವೇದ ಪುರುಷಗುರು ಮಹಲಿಂಗರಂಗನ |
ಪಾದಪಲ್ಲವ ಪಿಡಿದು ಸುಖಿಯಾಗೋ ಮನುಜಾ ||5||
ಕೇಳಿದಾಗಲೆ ಹೇಳಬಾರದೂ
ಕೇಳಿದಾಗಲೆ ಹೇಳಬಾರದೂ | ಪರಬ್ರಹ್ಮ ವಿದ್ಯವ
ಕೇಳಿದಾಗಲೆ ಹೇಳಬಾರದೂ ||ಪ||
ಕೇಳಿದಾಗಲೆ ಹೇಳಬಾರದು
ಹೇಳಿದಾ ಪರಿಯಿರದೆ ಗುರುವಿಗೆ
ಹೇಳುವೆನು ತಿರುಮಂತ್ರವೆಂಬುವ |
ಖೂಳನಾದಧಿಕ ಪ್ರಸಂಗಿಗೆ | ||ಅ ಪ||
ಗುರುವರನ ಭಕ್ತಿಯಲಿ ಪೂಜಿಸದೆ | ತನು ಮನವು ಧನವನು |
ಗುರುವಿನಡಿ ಕಮಲಕ್ಕೆ ಒಪ್ಪಿಸದೆ ||
ನಿರುತ ಶಾಸ್ತ್ರಾಗಮಗಳೋದಿ |
ಹಿರಿಯರನು ನಿಂದಿಸುತ ಗರ್ವದಿ |
ಬರಿಯ ಮಾತಿನ ಬಣವೆ ವೊಟ್ಟುತ |
ಅರಿತು ಅರಿಯದ ನರಕದುಳುವಿಗೆ || ಕೇಳಿ ||1||
ಆರು ವರ್ಗದಿ ಕುದಿದು ಸಾಯುತ್ತ |ಹಗಲಿರುಳು ಬಳಲುತ |
ಮೂರು ತಾಪದಿ ಮುಳುಗಿ ತೇಲುತ್ತ |
ನಾರಿ ಮಕ್ಕಳ ಮೋಹವಡಗದೆ ||
ಸೇರುವೆನು ನಿಜ ಮುಕ್ತಿಯೆನುತಲಿ |
ದೂರುತನ್ಯರ ತನ್ನ ಗುಣವಿ |
ಸ್ತಾರದಿಂದಲಿ ಹೊಗಳಿಕೊಂಬಗೆ || ಕೇಳಿ ||2||
ಈಶನಡಿಯಲಿ ಭಕ್ತಿಯಿಲ್ಲದಲೆ | ದುರ್ಮಾರ್ಗತನದಲಿ
ರೋಷ | ಹೆಚ್ಚುವ ಶಾಂತಿಯಿಲ್ಲದಲೆ |
ದೂಷಿಸುತ ಮಹಾಸಾಧು ನಡೆಗಳ |
ಮೋಸ ಹಾದರ ಕಳವು ಪರಧನ |
ದಾಶೆಯಲಿ ಮನ ಮುಳುಗಿ | ಜ್ಞಾನದ
ದೇಶವರಿಯದ ಹೇಸಿ ಮೂಳಗೆ || ಕೇಳಿ ||3||
ಜ್ಞಾನಗುರುವೆಂತೆಂದು ನಂಬುತ್ತ| ಹಂನೆರಡು ವರುಷವು
ನ್ಯೂನವಿಲ್ಲದೆ | ಸೇವೆಗೈಯ್ಯುತ್ತ
ಏನು ಹೇಳಲು ನಂಬಿಕಿಲ್ಲದೆ |
ಹೀನ ವಿಷಯದಿ ಸಿಲ್ಕಿಯನುದಿನ |
ಗಾಣದೆತ್ತಿನ ಪರಿಯ ತಿರುಗುತ |
ಜ್ಞಾನ ಹೊಂದದ ಮೂರ್ಖ ಮನುಜಗೆ || ಕೇಳಿ ||4||
ಧರೆಯ ಭೋಗವು ರೋಗವೆಂದೆನುತ ತನ್ನೊಳಗೆ ಅರಿತು |
ಸ್ಥಿರದ ಮುಕ್ತಿಯ ಹೊಂದಬೇಕೆನುತ ||
ಸದೆ ಬಡಿಯಲಿ ಬೇಕು | ವಾಸನೆ ಮೂರ
ಪರಮ ಪಾತಕರಿಂಗೆ ಬ್ರಹ್ಮವ |
ನಿರುತ ಬೋಧಿಸೆ ಹಬ್ಬದದರಿಂ || ಕೇಳಿ ||5||
ಕೇಳಿದಾಗಲೆ ಹೇಳ್ವ ಸದ್ಗುರುವು
ಕೇಳಿದಾಗಲೆ ಹೇಳ್ವ ಸದ್ಗುರುವು | ಸುಜ್ಞಾನ ಮಾರ್ಗವ |
ಕೇಳಿದಾಗಲೆ ಹೇಳ್ವ ಸದ್ಗುರುವು ||ಪ||
ಕೇಳಿದಾಗಲೆ ಹೇಳ್ವ ಶಿಷ್ಯಗೆ ಲೀಲೆಯಿಂದಧಿಕಾರವರಿತು |
ಕೇಳಿದವರಿಗೆ ಹೇಳ್ವುದಲ್ಲದೆ |
ಪೇಳ್ವದಿನ್ನ್ಯಾರಿಂಗೆ ಜಗದೊಳು || ಕೇಳಿದಾಗಲೆ ||ಅ.ಪ||
ತನುವು ಧನ ಮನವಿತ್ತು ಗುರುವರಗೆ | ಆಧ್ಯಾತ್ಮ ಶ್ರವಣದಿ
ಜನಿಸಿ ಬ್ರಹ್ಮಜ್ಞಾನ ಮನದೊಳಗೆ |
ಯೆನಿತು ಅಭಿಮಾನಿಡದೆ ರಾಜ್ಯದಿ |
ತೃಣಸಮಾನದಿ ಕಂಡು ಧರಣಿಯ |
ಘನದಿ ಆಳಿದ ಜನಕನಂದದಿ |
ಮನವು ನಿಲಿಸುವ ಪ್ರೌಢನಾದರೆ || ಕೇಳಿ ||1||
ಬಾಲತನದಲಿ ಬ್ರಹ್ಮ ಬೋಧಿಸಿದ ಪ್ರಣವಾಕ್ಷರಕ್ಕೆ ವಿ |
ಶಾಲ ಅರ್ಥವ ತಾನೆ ಬೋಧಿಸಿದ
ಬಾಲಕನ | ಜ್ಞಾನಕ್ಕೆ ಹರ್ಷವ
ತಾಳಿ ಪರಶಿವ ನಿಜವನರುಹಲು |
ಕೇಳಿ ಮುಕ್ತಿಯ ಪಡೆದ ಗುಹನಂ |
ತ್ಹೇಳಿ ಕೇಳ್ವಧಿಕಾರಿಯಾದೊಡೆ || ಕೇಳಿ ||2||
ಧರೆಯೊಳುತ್ತಮ ವ್ಯಾಸಮುನಿವರನ |ಪ್ರಿಯಪುತ್ರನೆನ್ನಿಸಿ
ಪರಮ ಶಾಂತಿಯೊಳ್ಹೊಂದಿ | ಪರಶಿವನ
ತರುಣಿ ಮೋಹದ ಬಲೆಗೆ ಶಿಲ್ಕದೆ |
ಉರುತಪವ ತಾ ಗೈದು ಜ್ಞಾನವ |
ಧರಿಸಿ ಮಕ್ತಿಯ ಪಡೆದ ಶುಕಮುನಿ |
ಪರಿಯ ವಿರತಿಯೊಳಿರುವದಾದರೆ || ಕೇಳಿ ||3||
ತೊರೆದು ತನ್ನ ಮಗನೆಂಬ ಭ್ರಾಂತಿಯನು | ಕಪಿಲ ಮುನಿಯಲಿ |
ಇರಿಸಿ ತನ್ನ ಗುರುವೆಂಬ ಭಾವವನು |
ಅರಿತು ಯೋಗವು ಪರಮ ಜ್ಞಾನವ
ನಿರುತ ಸರ್ವವು | ಬ್ರಹ್ಮವೆಂಬುವ |
ಅರಿವು ಮರೆಯದ ದೇವಹೂತಿಯ
ಪರಿಯ ನಿಶ್ಚಲನಾಗ್ವನಾದಡೆ || ಕೇಳಿ ||4||
ಧರೆಯೊಳಾರಾದೊಡೆಯು ಮುಕ್ತಿಯನು | ಹೊಂದುವೆನು ಯೆನ್ನುತ |
ತರಿದು ಮದಗುಣ ಮೋಹ ವ್ಯಸನವನು |
ಪರಮ ಗುರು ಮಹಲಿಂಗರಂಗನ ಚರಣ ಸೇವೆಯೊಳಿರಲು ಕರ್ಮವು |
ಹರಿದು ನಿರ್ಮಲವಾದ ಮನವನು |
ಪರಿಕಿಸಲು ಕರ್ಪೂರವಾಗಿರೆ || ಕೇಳಿ ||5||
ನಾನು ನಾನೆಂದು ಗರ್ವದಲಿ ಮೆರೆಯದೆ
ನಾನು ನಾನೆಂದು ಗರ್ವದಲಿ ಮೆರೆಯದೆ |
ನೀನು ನೀನೆಂದು ಶಿರ ಬಾಗೊ | ಗುರುವರಗೆ ||ಪ||
ನಾನೆನುತ ರಾವಣನು ಅಸುವಳಿದ ಅವನನುಜ |
ನೀನೆನುತ ಲಂಕೆಯೊಳು ಸ್ಥಿರಜೀವಿಯಾದ |
ನಾನೆಂದ ಕೌರವನ ಮನೆಗೆ ಹೋದನೆ ಕೃಷ್ಣ
ನೀನೆಂದು ನೆನೆದ ವಿದುರನ ಮನೆಯ ಪಾಲುಂಡ || ನಾನು ||1||
ನಾನೆಂದ ಶಿಶುಪಾಲ ಶಿರವಿತ್ತ ಚಕ್ರಕ್ಕೆ |
ನೀನೆಂದ ದ್ರೌಪದಿಯ ಮಾನ ಕಾಯ್ದನು ಹರಿಯು |
ನಾನೆಂದ ದೈತ್ಯರಿಂಗಾಯ್ತು ವರ ಪಡೆಹಾಳು |
ನೀನೆಂದ ದೇವತೆಗಳಿಗಾಯ್ತು ಸ್ಥಿರಬಾಳು || ನಾನು ||2||
ತವೇ ಸಜ್ಜೆ ಶಿರ ಬಾಗದಲೆ ಬೆಳೆದು ಲೋಕದೊಳು |
ನವಧಾನ್ಯದೊಳು ಸೇರದ್ಹೊರಗಾಯ್ತು ನೋಡು |
ಭುವನದೊಳು ಶಿರಬಾಗಿ ಬೆಳೆದ ಭತ್ತವು |
ನಮ್ಮ ಶಿವನ ನೈವೇದ್ಯಕ್ಕೆ ಯೋಗ್ಯವಾದುದನರಿತು || ನಾನು ||3||
ದೇಶಿಕೇಂದ್ರನೆ ನನಗೆ ಮುಕ್ತಿಯೆಂತಾಗ್ವುದೆನೆ |
ನಾ ಸತ್ತರಾಗ್ವುದೆಂದ ಗುರುವರನ |
ಆಶಯವನರಿಯದಲೆ ಮೂರ್ಖ ಶಿಷ್ಯನು ಒಮ್ಮೆ |
ಮೋಸದಿಂ ಗುರುವಧೆಯ ಗೈದನಿದನರಿತು || ನಾನು ||4||
ನಾನೆ ಪ್ರಾಜ್ಞನು ಯೆಂಬ ಗರ್ವಗಿರಿಯನು ಏರಿ |
ಹೀನನಾಗಲು ಬೇಡವೆಲೋ ಮಾನವ |
ಮಾನಾಭಿಮಾನ ಸುಖದುಃಖವೆಲ್ಲವನು |
ಜ್ಞಾನಿ ಗುರು ಮಹಲಿಂಗನಿಗೊಪ್ಪಿಸಲು ಸುಖಿಯಪ್ಪೆ || ನಾನು ||5||
ಮುಳುಗಿ ಹೋದೆಯಲ್ಲೋ ಭವದಲಿ
ಮುಳುಗಿ ಹೋದೆಯಲ್ಲೋ ಭವದಲಿ |
ಮುಳುಗಿ ಹೋದೆಯಲ್ಲೋ ||ಪ||
ತಿಳಿಯದೆ ಜ್ಞಾನವ | ಗುರು ಮುಖದಿಂದಲಿ |
ಹೊಲೆತನುವಾ ನೆಂಬೀ | ಮೋಹಕೆ ಶಿಲ್ಕಿ| ||ಅ ಪ||
ಕುಲಛಲ ಗೋತ್ರಗಳು | ಪಿತಸುತ
ಲಲನೆಯ ಮೋಹದೊಳು
ಸಿಲುಕಿನ ಮನವನು ತೆಗೆಯದೆ | ನರಕದ
ಹುಳುವಿನ ಪರಿ | ಸಂಸಾರದ ಕೂಪದಿ ||1||
ಓದಿ ತರ್ಕಶಾಸ್ತ್ರ ತತ್ವದ |
ಹಾದಿ ತಿಳಿಯದಿರಲು
ಸಾಧಿಸಿ ಶಿವರಾಮೆನುತ ಗಂಭೀರದಿ |
ಓದಿದ ಗಿಣಿ ಮಲ ತಿಂದಂತಿಹುದು ||2||
ಪಾಯಸವನು ಕೊಡಲು | ತಿನ್ನದ
ನಾಯಿಕುನ್ನಿಯಂತೆ |
ರಾಯ ಶ್ರೀ ಗುರು ಮಹಲಿಂಗನೆ ನಿನ್ನಯ |
ಕಾಯದಿ ಇರುವದ ಕಾಣದೆ ವ್ಯರ್ಥದಿ ||3||
ಜಾತಿ ಸೂತಕವೆಂಬ ಮಾತಿಲ್ಲ
ಜಾತಿ ಸೂತಕವೆಂಬ ಮಾತಿಲ್ಲ | ಸುಜ್ಞಾನ ಮರ್ಗದಿ |
ಜಾತಿ ಕರ್ಮಾದಿಗಳು ಮೊದಲಿಲ್ಲ ||ಪ||
ಜಾತಿಗೋತ್ರಕೆ ಬದ್ಧರಾಗುತ | ಆತ್ಮನರಿಯದ ಕರ್ಮಿಗಲ್ಲದೆ |
ಜಾತಿ ಕಲ್ಪನೆಯಳಿದು ಆತ್ಮ |
ಜ್ಯೋತಿಯಲಿ ಮುಳುಗಿದ ಮಹಾತ್ಮಗೆ || ಅ.ಪ ||
ಬ್ರಹ್ಮ ಬೀಜವೆ ಸರ್ವ ಯೋನಿಯೊಳು | ಪುಟ್ಟಿರುವದೆಂಬುವ |
ಮರ್ಮವರಿಯದ ಮೂಢ ಜನರುಗಳು ||
ನಮ್ಮ ಕುಲ ಮೇಲೆನುತ ವಂದಿಸಿ |
ನಿಮ್ಮ ಕುಲ ಕೀಳೆನುತ ನಿಂದಿಸಿ
ಹಮ್ಮು ಮದ ಮತ್ಸರದಿ ಸಾಯುತ |
ಒಮ್ಮೆ ನರಕಕೆ ಯಿಳಿವರಲ್ಲದೆ || ಜಾತಿ ||1||
ಇಲ್ಲ ಜಾತಿಯು ಸ್ವರ್ಗ ನರಕದೊಳು | ತ್ರೈಮೂರ್ತಿಗಳಿಗು |
ಇಲ್ಲ ಜಾತಿಯು ತೀರ್ಥಕ್ಷೇತ್ರದೊಳು ||
ಯೆಲ್ಲ ಬ್ರಹ್ಮೆಂಬರುವು ಯಿಲ್ಲದೆ |
ಯಿಲ್ಲದುಂಟೆಂತೆಂಬ ಕಂಗಳು
ಇಲ್ಲದಿಹ ಘಾತಕಗಳ ನಡೆಯೊಂ |
ದಲ್ಲದಲೆ ಸುಜ್ಞಾನ ಪಥದೊಳು || ಜಾತಿ ||2||
ಅನ್ನಮಯದೀಕಾಯವೆಂಬುದು | ಸರ್ವರಿಗು ವೊಂದೆ |
ಭಿನ್ನವಲ್ಲದೆ ತೋರಿಯಡಗುವುದು ||
ಮುನ್ನಲೇ ಅಂಡಜವು ಸ್ವೇದಜ |
ಉನ್ನತುದ್ಭಿಜವರಜರಾಯುಜ |
ಎನ್ನುತೀ ಪರಿ ನಾಲ್ಕು ಜಾತಿಯ |
ನನ್ನಿಯಿಂದಜ ಸೃಜಿಸಿಯಿರಲು || ಜಾತಿ ||3||
ಜಾತಿ ವರ್ಣವು ಗೋತ್ರಷನ್ಮತವು | ಅಜ ಸೃಷ್ಟಿಯಲ್ಲವು |
ಖ್ಯಾತಿ ಜೀವಿಗಳಿಂದ ನಿರ್ಮಿತವು ||
ಜಾತಿ ಅಜ ನಿರ್ಮಿತವದಾದೊಡೆ |
ಮಾತಿನಿಂದಲಿ ಕೆಡದು ಜಗಪ್ರ |
ಖ್ಯಾತಿಯಾಗಿಹ ಮನುಜ ನಿರ್ಮಿತ |
ಜಾತಿ ಗೋತ್ರವು ಕೆಡುವುದದರಿಂ || ಜಾತಿ ||4||
ಕರದಿ ಕುಂಭವು ಕುಂಭದೊಳು ಕ್ಷೀರ | ಪ್ರತ್ಯೇಕವಾಗಿ
ಇರುವ ಪರಿಯಾತ್ಮನಿಗೆ ಬೇರಾಗಿ |
ಶರೀರ ಕುಲವರ್ಣಾಶ್ರಮಂಗಳು |
ಬರಿದೆ ತೋರಡಗುವವು ಅಲ್ಲದೆ |
ಪರಮಗುರು ಮಹಲಿಂಗರಂಗನೋಳ್ ||ಪ||
ರಿಕಿಸಲು ಲವಮಾತುವಿಲ್ಲವು || ಜಾತಿ ||5||
ಧರೆಯೊಳಗೆ ಪಂಚ ಮಲಗಳು
ಧರೆಯೊಳಗೆ ಪಂಚ ಮಲಗಳು ಪ್ರಸಿದ್ಧವಾಗಿಹವು |
ಅರಿಯಬೇಕು ಮುಮುಕ್ಷುವಾದಿಯೊಳಗೆಲ್ಲವನು || ಪ ||
ಉರುತರಾನಾವ ಕಾರ್ಮಿಕವು ಮಾಯಾ ಮಾಯೆಯ
ವರತಿರೋಧಾನವೆನುತಲೈದಿಹವು ಇವುಗಳೋಳ್
ಪರಮ ಬ್ರಹ್ಮಜ್ಞಾನ ಜನಿಸಿದಂತಡಿಗಡಿಗೆ
ಮರವೆಗೆಳಸುವದೆ ಆಣವಮಲವದೆನಿಸುವದು ||1||
ಗುರುವರನ ಮುಖದಿಂದಲಧ್ಯಾತ್ಮ ಶಾಸ್ತ್ರಗಳ |
ನರಿಯಬೇಕೆಂತೆಂಬ ಮತಿಯಿರಲ್ಕದನು |
ಸ್ಥಿರಗೊಡದೆ ವಿಷಯಂಗಳ ನೆನೆಸುತ್ತ ತಿರುಗದು |
ಉರುತರದ ಕಾರ್ಮಿಕದ ಮಲವು ಯೆನಿಸುವುದು || ಧರೆ ||2||
ಬಾಲ್ಯ ಯೌವನ ವಾರ್ಧಿಕದೊಳ್ಹಗಲಿರುಳು |
ಹಾಳು ಕಥೆ ಕಿವಿಗಿಳಿಯಲಾನಂದ ಸ್ಫುರಿಸುತ್ತ |
ಕೇಳುಗೊಡದೆಲೆ ಬ್ರಹ್ಮ ತತ್ವಗಳ ಕಿವಿಯೊಳಗೆ
ಶೂಲ | ಹೊಡೆದಂತಿಹುದೆ ಮಾಯಾಮಲವೆನ್ನಿಸುವುದು || ಧರೆ ||3||
ದುರುಳ ಸಂತತಿ ದ್ರೋಹ ಚಿಂತನೆಯು ದ್ಯೂತ |
ನಿರುತ ಕೊಂಡೆಯು ಕಪಟ ದುರಿತಕರ್ಮಗಳೆನಿಪ |
ಭರಿತಪೇರ್ಮಡುವಿನೊಳು ಮುಳುಗಿ ಮನವೆಂದೆಂದು |
ಹೊರ ಸೂಸದಿಹುದೇ ಮಾಯೆಯ ಮಲವೆನ್ನಿಸುವುದು || ಧರೆ ||4||
ಪರಮ ಗುರುಮಹಲಿಂಗನೊಬ್ಬ ತ್ರೈಜಗದೊಳಗೆ |
ಭರಿತನಾಗಿಹನೆಂಬ ಜ್ಞಾನವನೆ ಸರ್ವರಿಗು |
ಮರಸಿ ಪರಿಪರಿಯ ದೇವರಂ ಪೂಜಿಸುವ ಮತಿಯಿತ್ತು |
ಮರಳಿ ಜನ್ಮವ ಕೊಡುವುದೆ ತಿರೋಧಾನಮಲವು || ಧರೆ ||5||
ತೋರದು ಸುಖ ಮಾನಸೇಂದ್ರ
ತೋರದು ಸುಖ ಮಾನಸೇಂದ್ರ | ನೀನು|
ತಾರಕ ಬ್ರಹ್ಮದಿ ಮುಳುಗದೆ ಸುಮ್ಮನೆ ||ಪ||
ಹರಿದಾಡುವಿಂದ್ರಿಯ ಕರಣಗಳನು ಕಟ್ಟಿ
ಅರಿಗಳಾರ್ವರನೆಂಟು ಮದಗಳ ಶಿರ ಮೆಟ್ಟಿ
ಸ್ಥಿರ ಕಾಯನಾಗಿ ಚಿತ್ರಾಸನದಲಿ ಕುಳಿತು
ಅರುವಿಂದ ದೃಷ್ಟಿಯ ನಿಲ್ಲಿಸಿ ನೋಡದೆ | ತೋರದು ||1||
ವರ ಗಂಗೆಯಮುನೆ ಸಂಗಮದೊಳಗಿಳಿದು
ಪರಿಭವಕೋಟಿ ದುಷ್ಕರ್ಮವ ತೊಳದು
ವರನೀಲಗಿರಿ ಮಧ್ಯದಶನಾದ ತಿಳಿದು
ವರಬಿಂದು ಕಲರುಚಿಯೊಳು ನಲಿದು ನೀ ಮುಳುಗಾದೆ ||2||
ವರಚಂದ್ರ ಸೂರ್ಯಬೀದಿಗಳಲ್ಲಿ ತೂರಿ
ಶಿರದೊಳಗಿರುವಜ ರಂಧ್ರವನೇರಿ
ಭರದಿ ಪಶ್ಚಿಮ ದಿಕ್ಕಿನೊಳು ರಾಜಿಸುತಲಿಪ್ಪ
ವರಮೋಕ್ಷಾಂಗನೆ ಕೂಡಿ ಆನಂದ ಪಡಿಯದೆ ||3||
ಅನುದಿನವಾ ಮೋಕ್ಷಕಾಂತೆಯ ಕೂಡುತ್ತ
ಕ್ಷಣಿಕವೀಳ ಸಂಸಾರವೆಂದನುಭವಿಸುತ್ತ
ಜನನ ಮರಣವೆಂಬ ಎರಡನ್ನು ತೊಳೆಯುತ್ತ
ಅನುಪಮದ್ವಯ ಬ್ರಹ್ಮಚಿಂತನೆಗೈಯದೆ ||4||
ದೇಹವನಾನೆಂಬುವ ಭ್ರಾಂತಿಯ ನೀಗಿ
ಸೋಹಂ ಭಾವದಿ ಚಿತ್ತ ನಿಶ್ಚಲವಾಗಿ
ಮೋಹ ಮತ್ಸರ ಪಾಶಗಳು ವುರಿದೋಹಿ
ಮೋಹರಹಿತ ಗುರು ರಂಗನೋಳ್ ಬೆರೆಯದೆ ||5||
ವರ ಪಂಚಮುದ್ರೆಗಳ
ವರ ಪಂಚಮುದ್ರೆಗಳ | ಶ್ರೀ ಗುರುವಿಂದ
ಲರಿತು ಸಾಧಿಸೆ ಮುಕ್ತನು ||ಪ||
ಕರಣ ನಿಗ್ರಹವೆಂಬ ಭಸ್ಮವ
ಧರಿಸಿ ಕೃಷ್ಣಾಜಿನದಿ ವಿಜನದಿ
ಸ್ಥಿರ ಕಳೇಬರನಾಗಿ ಕುಳಿತು
ಪರಮ ಬ್ರಹ್ಮಾತ್ಮೈಕ್ಯ ನಿಷ್ಠೆಯೋಳ್ ||ಅ.ಪ.||
ಕಣ್ಣು ರೆಪ್ಪೆಯ ಪಾಟನು | ನಿಲ್ಲಿಸಿ ಮನ
ಪವನದೊಳಗೆ ಸೇರಿಸಿ
ತನ್ನ ಶಿರವನು ಎತ್ತಿ ನೋಡಲು
ನನ್ನಿಯಿಂಫಾಲದೊಳುರವಿ ಶಶಿ
ಯುನ್ನತದ ಕಳೆ ಬಿಂದು ತೋರ್ಪುದು
ಮುನ್ನ ಖೇಚರಿ ಮುದ್ರೆ ಲಕ್ಷ್ಯದಿ |ವರ ||1||
ಎರಡು ಕಂಗಳ ಕೊನೆಯ ನೋಟವನೊಯ್ದು
ಇರಿಸೆ ನಾಶಿಕ ತುದಿಯೋಳ್
ಅರಿವ ಮನಪವನೆರಡು ನಿಂತು
ವುರಿವುದಮಲ ಜ್ಯೋತಿ ಬಾಹ್ಯದಿ
ವುರುತರಾನಂದಮೃತ ಸುರಿವುದು
ಪರಮ ಭೂಚರಿಮುದ್ರೆ ಲಕ್ಷ್ಯದಿ |ವರ| ||2||
ನಯನಂಗಳರ್ಧ ಮುಚ್ಚಿ | ಭ್ರೂಮಧ್ಯದೋ|
ಳುಯಚಿಲತ್ತಮರುತನಾಗಿ
ನಿಯಮ ಕಾಲವು ನೋಡಿ ಭ್ರಾಂತಿಯು
ಲಯಿಸೆ ವಿದ್ರುಮ ತಾರೆ ಮಿಂಚುಗ
ಳ್ಬಯಲಿನಲಿ ವಿಭ್ರಾಜ ಮಾನದಿ
ಪ್ರಿಯದಿ ತೋರಲು ಮಧ್ಯಲಕ್ಷದಿ |ವರ| ||3||
ಆರು ಅಂಗುಳಿಯಿಂದಲಿ | ಬಿಚ್ಚಿರುವಂಥ
ಆರು ದ್ವಾರಗಳ ಮುಚ್ಚಿ
ಚಾರು ಆಜ್ಞಾ ಸ್ಥಾನವೇರಲು
ಭೇರಿ ನಾದ ಮೃದಂಗ ವಾದ್ಯವು
ತೋರುವುದು ಪರಬಿಂದು ಕಳೆಯು
ಚಾರುಷಣ್ಮುಖಿ ಮುದ್ರೆ ಲಕ್ಷ್ಯದಿ | ವರ| ||4||
ಮನಸಿನೊಳಗೆ ಲಕ್ಷವು | ಬಾಹ್ಯದಿ ನಿತ್ಯ
ಅನಿಮಿಷ ದೃಷ್ಟಿಯಿರೆ
ಬಿನುಗುಯಿಂದ್ರಿಯ ವಿಷಯವುಡುಗುತ
ಘನ ಪರಂಜೋತಿ ಪ್ರಕಾಶದಿ
ಅನಘ ಗುರು ಮಹಲಿಂಗ ತೋರ್ಪನು
ವಿನುತ ಶಾಂಭವಿ ಮುದ್ರೆ ಲಕ್ಷ್ಯದಿ | ವರ| ||5||
ಶಿವ ಪದವಿ ಸೂರೆಗೊಂಬೆ
ಶಿವ ಪದವಿ ಸೂರೆಗೊಂಬ | ಕಂಗಳೊಳು |
ಶಿವಜ್ಯೋತಿ ಕಂಡ ಪುರಷಂ | ನಿಮಿಷಂ |
ಶಿವ ಪದವಿ ಸೂರೆಗೊಂಬ ||ಪ||
ಶಿವನಕ್ಷಿಮಣಿ ಭಸ್ಮವಂ ಧರಿಸಿ | ಮನ
ಶಿವ ಷಡಾಕ್ಷರಿ ಮಂತ್ರದೀ ನಿಲಿಸಿ |
ಶಿವಕೂಟದಲ್ಲಿ ದೃಷ್ಟೀ ಅಗಲದಿಹ |
ಶಿವಯೋಗ ಪೂರ್ಣಕಾಮಾ | ಭೀಮಾ || ಶಿವ ||1||
ಶಿವಪ್ರಣವ ನಾದಸುಧೆಯಾ | ಸೂರೆರಣಡಿದಿದ್ಬುಚಿನ |
ಶುಚಿಯಾ ಕಂಡುರದು |
ಶಿವನ ಚಿತ್ಕಳೆ ಶರಧಿಯೊ |
ಳೀಸಾಡಿ ಶಿವಜ್ಞಾನ ತೃಪ್ತನಾದ ಮೋದ || ಶಿವ ||2||
ಶಿವ ಜೀವರತ್ನ ವಜ್ರ | ಮಾಣಿಕ್ಯ |
ಶಿವ ಚಂದ್ರ ಸೂರ್ಯ ಕೋಟಿಯಂತೆ |
ಶಿವನ ಪೂರ್ಣ ಪ್ರಕಾಶದಿ ಮುಳುಗಿದ |
ಶಿವ ತಾನೆ ತಾನಾದ ಸ್ವಸ್ಥಾ ಚಿತ್ತ || ಶಿವ ||3||
ಶಿವ ಪುರುಷ ಲಿಂಗದಂತೆ ಭಕ್ತರ್ಗೆ |
ಶಿವಕಲ್ಪ ವೃಕ್ಷದಂತೆ ಇರುವ |
ಶಿವನೆ ಪ್ರವಿಮಲಭೂತಿಯನರಿತಾತ |
ಶಿವಸದಾನಂದ ಮೂರ್ತಿ ಕೀರ್ತಿ || ಶಿವ ||4||
ಶಿವನೆ ತಾರಕರೂಪದೀ ಅಣುವಾಗಿ |
ಶಿವದಾರತೂರಿ ಹೊರಗೆ | ಒಳಗೆ |
ಶಿವಮಹಾಲಿಂಗರಂಗ ಗುರುವಾಗಿ |
ಶಿವಪುರದಿ ಬೆಳಗೆ ಬಂದು ನಿಂದು || ಶಿವ ||5||
ಕೇಳಬೇಕು | ನಾದ ಕೇಳಬೇಕು
ಕೇಳಬೇಕು | ಕೇಳಬೇಕು | ಕೇಳಬೇಕು ನಾದ ಕೇಳಬೇಕು |
ಮೂಲಾ ಬ್ರಹ್ಮದಿ ಮನಲೈಸಬೇಕು ಆಲೈಸಬೇಕು ||ಪ||
ವಾಚಾದಿಂದಾಲಿ ಮುಕ್ತಿಯಾಗುವುದೇ | ವಸ್ತು ತೋರುವುದೇ |
ಯೋಚಿಸಿ ದೃಷ್ಟಿ ಮನ | ನಿಲ್ಲಿಸಾದೆ ಧ್ಯಾನ ಬಲಿಸಾದೆ ||1||
ಒಡಲಿನೊಳಗೆ ಪರಶಿವನಿಹನು | ತಾನೆ ಸಾಕ್ಷಿಯಿಹನು |
ಪೊಡವಿ ಮಾನವನಿದ ಕಾಣದಿಹನು | ಮುಂದುಗಾಣದಿಹನು ||2||
ಅಷ್ಟಾಮದಂಗಳನಟ್ಟಬೇಕು | ಬಲ್ಘಟ್ಟಿಬೇಕು |
ಭ್ರಷ್ಟಾರಾ ದೈವರ ಕಟ್ಟಬೇಕು | ಬೇಗ ಕುಟ್ಟಬೇಕು ||3||
ಸೂಸುತಿಹ ವಾಯು ಕಂಡು | ಹಿಡಿಯಬೇಕು | ಅಲ್ಲಿ ತಡಿಯಬೇಕು |
ಬಾಸೂರ ಪ್ರಭೆಯೊಳು | ಹೊಳೆಯಬೇಕು | ನಿಜವ ತಿಳಿಯಬೇಕು ||4||
ಕಂಗಳ ಮಧ್ಯದಿ ಕಾಣಬರುವ | ಕಳೆಗೂಡಿ ಬರುವ
ಶೃಂಗಾರ | ಗುರು ಮಹಲಿಂಗನಿರುವ | ತಾನಿಂದು ಮೆರೆವ ||5||
ಓದಬಾರದೆ ತರಳ
ಓದಬಾರದೆ ತರಳ ಓದಬಾರದೇ
ಓದಿನೊಳಗಣೋದು ಶ್ರೀಗುರು
ಬೋಧಿಸಿರುವ ಅರ್ಥವರಿತು ||ಪ||
ಮೂರು ನದಿಯ ನಡುವೆ ಮಿಂದು
ಚಾರು ಬ್ರಹ್ಮಗಿರಿಯ ಮಠದ
ಆರು ಮೆಟ್ಟುಲುಗಳೇರಿ ಸಣ್ಣ
ದ್ವಾರವನ್ನು ತೆರೆದು ನೋಡಿ ||1||
ಜಲಜವಾರು ಕಂಡುವೊಳಗೆ
ಪೊಳೆವ ವಕಾರಾದಿಯಾಗಿ
ಸಲೆಕ್ಷಕಾರದಂತ್ಯವರಿತು
ದಳದೊಳಕ್ಷರೈವತ್ತನ್ನು | ಓದ | ||2||
ಈಡೆಪಿಂಗಳಯೆಂಬುವಂತಾ
ನಾಡಿಯರಡು ಪಡೆದು ಬ್ರಹ್ಮ
ನಾಡಿಯ ಮಧ್ಯೆ ಕುಳಿತು ಮುದದಿ
ನೋಡಿ ಸೋಹಂ ಸೋಹಂ ಎನುತ ||3||
ಚಾರುಪಚ್ಚೆ ಹಲಿಗೆ ಮೇಲೆ
ಸಾರಬ್ರಹ್ಮ ಸೂತ್ರ ಪಿಡಿದು
ಮೂರು ಮುಖದ ಕಂಠದಿಂದಾ
ಸಾರಮಂತ್ರ ಪ್ರಣವ ಬರದು | ಓದ| ||4||
ಚಟುಲ ಶ್ರೀಗುರು ರಂಗಲಿಂಗ
ಸ್ಫುಟದಿ ವರೆದ ಮಂತ್ರ ರಾಜ
ಕುಟಿಲವಳಿದು ಭಕ್ತಿಯಿಂದ
ಘಟವುಯೆಂಬೊ ಮಠದಿ ನಿತ್ಯ ಓದಬಾದೆ ತರಳ || ||5||
ಭಜನೆ ಬ್ರಹ್ಮಾನಂದರಸವು
ಭಜನೆ ಬ್ರಹ್ಮಾನಂದರಸವು | ಸೋಹಂ |
ಭಜನೆ ಬ್ರಹ್ಮಾನಂದರಸವು ||ಪ||
ಕಜನಿಚೇತೋರಜನಿ ಹರಣ |
ಸುಜನ ಹೃದಯಾಂಗಣ ಪರಾಯಣ |
ಅಜಸುರೇಂದ್ರ ಮುನೀಂದ್ರ ಸೇವ್ಯನ |
ಭುಜಗಭೂಷಣ ಭವ್ಯ ಶಿವನ | ಭಜನೆ ||ಅ||
ಮೂರೈದು ಗೇಣಿನ ಗುಡಿಯಾ | ಹದಿ |
ನಾರು ಸ್ಥಂಭವು ಸಪ್ತ ಪ್ರಕಾರದೊಳವು |
ದ್ವಾರವೆಂಭತ್ತೈದು ಕಲಶಗ |
ಳಾರು ಮೆಟ್ಲುಗಳೈದು ವರ್ಣದ
ತೋರಣಂಗಳು | ಕಾದುಯಿರುತಿಹ |
ದ್ವಾರಪಾಲಕರೀರ್ವರೊಪ್ಪುವ ||1||
ನವರತ್ನ ಖಚಿತ ಮಂಟಪದ | ದ್ವಾರ
ಆವದಿ ಷಡಂಗುಳಿಯಿಂದಲಿ | ತೆರಿಯೇ
ಪ್ರವಿಮಲಾತ್ಮೇಶ್ವರನು ತೋರುವ |
ತವಕದಿಂದ್ರಿಯ ಕರಣವೆಂಬುವ |
ವಿವಿಧ ಪುರಜನರೆಲ್ಲ ಬಂದು |
ಶಿವನ ಸೇವೆಯೊಳಿಹರು ನಿಂದು ||2||
ಪರಬ್ರಹ್ಮ ದಂಡಿವೀಣೆಯನು ಮಾಡಿ |
ಮೆರೆವೇಳು ಚಕ್ರಗಳ್ಮೆಟ್ಟುಗಳ್ಮಾಡಿ |
ಇರಿಸಿ ಪ್ರಾಣಗಳೆಂಬ ತಂತಿಯ |
ತಿರುವಿ ವಿಷಯಗಳೆಂಬ ಬಿರಡೆಯ |
ಸ್ಮರಣೆಯೆಂಬಂಗುಳಿಯ ಮೀಟುತ |
ವರ ಸರಸ್ವತಿಯಂತೆ ಪಾಡುವ ||3||
ಮೂರು ಮೂರ್ತಿಯ ಸಭೆಯಲ್ಲಿ | ಚಂದ್ರ |
ತಾರೆಯ ಬೆಳಕಿನೊಳಾನಂದದಲ್ಲಿ |
ಸಾರ ಸಂಗೀತಗಳು ಧಣಧಣ |
ಭೇರಿ ಗಂಟೆಯು ತಾಳ ಝಣಝಣ |
ಚಾರು ಘೋಷಕೆ ಬೆದರಿ ಪಾತಕ |
ಊರು ಬಿಟ್ಟೋಡುವದು ಆ ಕ್ಷಣ ||4||
ಶ್ರೀ ಗುರು ಮಹಲಿಂಗರಂಗನ | ಕೃಪೆ |
ಯಾಗಲು ಭಕ್ತನ ಭವನಾಶನ |
ಭೋಗ ಸುಖವಂ ಭಯಸಿ ಜಲದೊಳು |
ಕಾಗೆಯಂದದಿ ಮುಳುಗಲೊಲ್ಲದೆ |
ಯೋಗ ನಿದ್ರೆಯೊಳ್ಮುಳುಗಿ ಉರಗಭವ |
ರೋಗವಳಿದಿಹ ಬ್ರಹ್ಮ ನಿಷ್ಠರ ||5||
ಜೋ ಜೋ ಸದಾನಂದ
ಜೋ ಜೋ ಸದಾನಂದ |
ಮರಸ ಬೋಧೆಯಿಂದಾ | ಜೋ ಜೋ ವಿಶಾಲಾಕ್ಷಿ |
ಪಡೆದವರ ಕಂದಾ | ಜೋ ಜೋ ||ಪ||
ನವ ಮೋಹನಾಂಗಿ ಅನುವರಿತು | ಗುರುವರನೂ |
ಕಿವಿಯೊಳಗೆ ಬಿತ್ತಿದನು | ಮಂತ್ರ ಬೀಜವನೂ |
ತವಶುಕ್ತಿಯಲಿ ಜೋತಿ ಮುತ್ತಾದ ರೀತಿ |
ನವಮಾಸದೊಳು ಮಂತ್ರ ಪಿಂಡ ಪ್ರಖ್ಯಾತಿ | ಜೋ ಜೋ ||1||
ನವಚಕ್ರದೊಳಗಾಡೀ ಕಳಹಂಸ ಶಿಶುವೂ |
ರವಿ ಕೋಟಿ ಕಾಂತಿಯಲಿ ಜನಿಸಿದುತ್ಸಹವೂ | ಜೋ ಜೋ ||
ಶಿವಗಂಗೆಯಲಿ ಮಾಡಿಸಿದರು ಮಜ್ಜನವ |
ನವರತ್ನ ತೊಟ್ಟಿಲೊಳು ಪವಡೀಸಿ ಮಗುವಾ || ಜೋ ಜೋ ||2||
ಹನ್ನೆರಡು ಗೊಣಶಿನ ಪಚ್ಚೆ ಸರಪಣಿಗೆ |
ನನ್ನಿಯಿಂದಲಿ ತೊಟ್ಲು ಕಟ್ಟಿ ಬಾಲಕಗೇ ||
ಚಿನ್ನದುಂಗುರ ವಿರತಿ ಕಸ್ತೂರಿ ಬಟ್ಟೂ |
ಭಿನ್ನ ಭಾವಗಳಳಿದಾ ಆಭರಣವಿಟ್ಟೂ || ಜೋ ಜೋ ||3||
ರವಿ ಚಂದ್ರ ಮಂಡಲವೆ ತಾಟಂಕಮಾಗೇ |
ಕವಿದತುಳ ಚಿತ್ತಳೆತೆ ಪೀತಾಂಬ್ರದುಡಿಗೇ ||
ತವೆಕುಂಕುಮರಿಶಿನವು ಕಾಡಿಗೆಯ ಸೋಗೇ |
ಎವೆಯಿಕ್ಕದೀಕ್ಷಿಸುವ ಜನನಿ ಕಂಗಳಿಗೇ || ಜೋ ಜೋ ||4||
ನೋಡಿದರು ಮುತ್ತೈದೆರೈವರೊಂದಾಗೀ |
ಮಾಡಿ ಮಂಗಳ ಪ್ರಣವ ನಾದಯಿಂಪಾಗೀ ||
ಮಾಡಿ ಆರತಿ ಪಂಚರತ್ನ ಭಾಜನದೀ
ಕೂಡು | ಅಮೃತಾಂಗನೆಯನೆನುತರಸಿ ಮುದದೀ || ಜೋ ಜೋ ||5||
ಆರು ಚಕ್ರದ ಮೇಳಣಾಲಯದಿ ಸುರಿದಾ |
ಸಾರಚೆನ್ನದ ಮೃತ ಸುಧೆಯ ಸೇವಿಸುವ || ಜೋ ಜೋ ||
ಮೂರು ಮಂಡಲ ಮೀರಿದುನ್ಮನೆಯ ಸೇರೀ |
ಭೂ ಆನಂದದಲಿ ಸುಖಸುಪಿ ತೋರಿ || ಜೋ ಜೋ ||6||
ಅರಿವು ಮರವೆಗಳಡಗಿದಮನಸ್ಕವಾಗಿ |
ನಿರುಪಮದ್ವಯ ನಿತ್ಯ ತೃಪ್ತ ತಾನಾಗೀ ||
ಹರಿದು ಭವಮಾಲೆಯನು ಸ್ಥಿರಮುಕ್ತನಾಗಿ |
ಪರಿಪೂರ್ಣ ಪರಬ್ರಹ್ಮ ಶಿಶುವು ತಾನಾಗೀ || ಜೋ ಜೋ ||7||
ಸುಳ್ಳು ಮಾಯಾ ಭ್ರಮೆಗೆ | ದೂರವಾಗಿರುವೇ |
ಮುಳ್ಳು ಮೊನೆಗೆಡೆಯಿಲ್ಲದಂತೆ ತುಂಬಿರುವೇ ||
ಎಲ್ಲಿ ನೋಡಿದಡಲ್ಲೆ ತಾನೆಯಾಗಿರುವೇ |
ಎಲ್ಲ ಜೀವಿಗಳೊಳಗೆ ಒಬ್ಬನಾಗಿರುವೇ || ಜೋ ಜೋ ||8||
ಕನಸಿನಂತೀ ಜಗವು ಪುಸಿಯಾಗಿ ತೋರೀ |
ಕ್ಷಣಿಕವಾಗುವುದೆಂಬ ನಸುನಗೆಯ ಬೀರೀ ||
ವಿನಯದಿಂದಾಡುವನು ಬಾಲ ಲೀಲೆಯನೂ |
ಅನಘ ಗುರು ಮಹಲಿಂಗ ರಂಗನಾತ್ಮಜನು || ಜೋ ಜೋ ||9||
ತೆರೆದ ಬಾಗಿಲ ಸುಂಕವಿಲ್ಲದ
ತೆರೆದ ಬಾಗಿಲ | ಸುಂಕವಿಲ್ಲದ |
ಪುರವುಂಟು | ಬಂದು ನೋಡಿ |
ಹರಿಹರ ಬ್ರಹ್ಮಾದಿಗಳ |
ಕಾವಲದಕುಂಟು |ಬಂದು ನೋಡಿ ||ಪ||
ಪುರಕ್ಕರಸರು ಮುವ್ವರೊಂಬತ್ತು ಬಾಗಿಲು | ಬಂದು ನೋಡಿ |
ಎರಡು ಕಿಟ್ಟಿಗೆ ಸೂರ್ಯ ಚಂದ್ರರ ಬೀದಿಯಾ | ಬಂದು ನೋಡಿ
ವರಚಕ್ರ ಮಧ್ಯದೊಳಿಹ | ಓಂಕಾರೇಶ್ವರ | ಬಂದು ನೋಡಿ
ಕರುಣೀಕರೈವರು | ಕರ ಜೋಡಿಸಿಹರಲ್ಲಿ | ಬಂದು ನೋಡಿ ||1||
ಏಳು ಸುತ್ತಿನ ಕೋಟೆ ಮೇಲೊಂದು ಗವಿಯುಂಟು | ಬಂದು ನೋಡಿ
ಏಳು ಲೋಕಂಗಳನೊಳಗೊಂಡು ಯಿಹುದಲ್ಲಿ | ಬಂದು ನೋಡಿ
ಒಂದು ಏಳೆಡೆ ಸರ್ಪವಲ್ಲಿ ಭೋರು ಗುಟ್ಟುತಲಿದೆ | ಬಂದು ನೋಡಿ ||
ಏಳೆಡೆ ಸರ್ಪನ ತಲೆಯೊಳು ರತ್ನವುಂಟು || ಬಂದು ನೋಡಿ ||2||
ಎರಡು ಪಕ್ಷದೊಳೊಂದೆ ಪಕ್ಷಿಯಾಡುತಲಿದೆ | ಬಂದು ನೋಡಿ
ಎರಡು ರೆಕ್ಕೆಯು ಪುಕ್ಕ ಪಕ್ಷೀಗಿಲ್ಲವು | ಬಂದು ನೋಡಿ
ಧರಣಿ ಜೀವರ್ಕಳಿಗಾಧಾರವಾಗಿದೆ | ಬಂದು ನೋಡಿ
ಕರಸ್ಥಳದೊಳಗಿದೆ ಕರಕೆ ಸಿಕ್ಕುವುದಲ್ಲ | ಬಂದು ನೋಡಿ ||3||
ಗರುಡ ಸರ್ಪಗೆ ಅತಿ ಸ್ನೇಹವುಂಟಾಗಿದೇ | ಬಂದು ನೋಡಿ
ಸುರರಸುರರು ಮಿತ್ರ ಭಾವದೊಳಿರ್ಪರು | ಬಂದು ನೋಡಿ
ಇರುವೆ ಸಿಂಹವ ನುಂಗಿ ತಾನೊಂದೆ ಕುಳಿತಿದೆ |ಬಂದು ನೋಡಿ
ವುರು ವಿಷವಮೃತವು ಆಯಿತೆನೆಂಬೆನು ||ಬಂದು ನೋಡಿ ||4||
ಚಾರು ಭೋಜನ ಶಾಲೆ ತೆರೆದಿದೆ ಎದುರಿಗೆ | ಬಂದು ನೋಡಿ
ಊರ ಜನರು ಉಂಡು ಧಣಿವರಾನಂದದಿ | ಬಂದು ನೋಡಿ
ದೂರದೊಳಿಲ್ಲವು ಜ್ಞಾನ ಭಂಡಾರವು | ಬಂದು ನೋಡಿ
ಧೀರ ಶ್ರೀ ಗುರು ಮಹಲಿಂಗನೊಳಗಿದೆ | ಬಂದು ನೋಡಿ ||5||
ಬಂದು ಕೂತಿಹಳು ನೋಡಿ
ಬಂದು ಕೂತಿಹಳು ನೋಡೀ | ಗಾಯಿತ್ರಿ ನೀ
ವಿಂದು ಕಣ್ದೆರೆದು ನೋಡಿ ||ಪ||
ಒಂದು ನಿಮಿಷವು ಧ್ಯಾನಿಸಲ್ಭವ
ಬಂಧನವ ಕಳಚಿ ಬ್ರಹ್ಮಾ
ನಂದ ಶರಧಿಯೊಳದ್ದಿ ಸಲಹುವೆ
ನೆಂದು ಹೃದಯಾಂಗಣದಿ ಮುದದಿ ||ಅ.ಪ||
ಮೂರು ವರ್ನದ ಕಾಯವು | ಗಾಯತ್ರಿಗೆ
ಆರು ಬಂಣದ ವುಡಿಗೆಯು
ಯೇರಿಸಿರಗಳ ಪಂಚಬ್ರಹ್ಮರ
ಮೇರುವಿಗೆ ಪನ್ನೆರಡು ಗೊಣಸುಗ
ಳ್ಸೇರಿಸಿವುಯ್ಯಾಲೆಯಾಡುತ
ಮೂರು ಲೋಚನೆ ಮುಕ್ತಿ ಕಾಂತಿಯು ||1||
ಮಿಸುನಿಲವಜ್ರಗಳ ರುಚಿ | ಚತುರಾಶ್ರಮೇ
ಲೆಸೆವಾರು ಕಲಶಂಗಳು |
ಅಸಮ ಸಿಂಹಾಸನದಿ ವಾಸಿಯು |
ವಸೆದು ಹತ್ತವತಾರಕೆತ್ತಿದ |
ಮಿಸುಪವಡ್ಯಾಣಿರಿಸಿ ನಡುವಿಗೆ |
ನಸುನಗುತ ಸಾವಿತ್ರಿ ದೇವಿಯು ||2||
ವರಕುಚಯುಗಳ ಮಧ್ಯೆ | ದ್ವಾದಶ ವಜ್ರ
ಸ್ಫುರಿಸಿ ತೋರುವ ಪದಕ
ಯರಡು ಮೂರೈದಾರು ಸೇರಿದ
ಸರವುಯೇಕಾವಳಿಯು ಕಂಠದಿ
ಧರಿಸಿ ವೈಖರಿ ರೂಪಿನಿಂದಲಿ
ವೊರೆವ ಬ್ರಹ್ಮಾತ್ಮೈಕ್ಯ ಸರಸ್ವತಿ ||3||
ನೀಲ ದರ್ಪಣ ಪಿಡಿದು | ಕೆಂಪಿನ ಬಟ್ಟು
ಫಾಲಮಧ್ಯವ ನೋಡಿಟ್ಟು
ವಾಲೆ ಝುಮುಕಿಯು ಶೃತಿಗೆ ಸಿರಸಿನ
ಮೇಲೆ ಸಾಸಿರದಳದ ಪದ್ಮವು
ಲೀಲೆಯಿಂದುನ್ಮನೆಯೊಳಾಡುವ
ಯೇಳುಕೋಟಿ ಸುಮಂತ್ರ ದೇವತೆ ||4||
ಚಿತ್ತ ನಕ್ಷತ್ರದಂತೆ | ವಿಭ್ರಾಜಿಗ
ಮುತ್ತಿನ ಮೂಗುತಿಯು
ಸತ್ತು ಚಿತ್ತಾನಂದ ರೂಪಿಣಿ
ಮಿಥ್ಯೆ ಮಾಯಾಕಲುಷ ಹಾರಿಣಿ
ಕರ್ತೃ ಗುರು ಮಹಲಿಂಗರಂಗನ
ಶಕ್ತಿ ಸಾಕ್ಷಾತ್ರಿಪುರ ಸುಂದರಿ | ಬಂದು ಕೂತಿಹಳು ||5||
ರತ್ನ ಬಂದಿದೆ ನೋಡಿರೋ
ರತ್ನ ಬಂದಿದೆ ನೋಡಿರೋ | ಉನ್ನತ ಜೀವ |
ರತ್ನ ಬಂದಿದೆ ನೋಡಿರೋ ||ಪ||
ಪೃಥ್ವಿಗಧಿಕ ಬ್ರಹ್ಮಪುರದಿಂದ ಬಂದಿದೆ
ರತ್ನ ಪರೀಕ್ಷೆಯ ಬಲ್ಲ ಸತ್ಪುರುಷ
ರತ್ನ ಬಂದಿದೆ ನೋಡಿರೋ || ಉನ್ನತ ||ಅ ಪ||
ಶಿರದೊಳಡಗಿದೆ | ಯಾವಾಗಲೂ
ಕರದಲ್ಲಿ ಕಾಣುತ್ತಿದೆ |
ವರಚಂದ್ರ ಸೂರ್ಯ ಬೀದಿಗಳೊಳಗಿಟ್ಟಿದೆ |
ದುರಿತ ಕರ್ಮಗಳಳಿದವಗೆ ಕಾಣುತಲಿದೆ || ರತ್ನ ||1||
ಅಷ್ಟದಳಗಳಿಂದಾ | ಆ ರತ್ನವು
ದಿಟ್ಟವಾಗಿಹುದರಿಂದ |
ದೃಷ್ಟಿಯನಗಲದೆ ನೋಡಿದ ಪುರುಷನು |
ನಷ್ಟ ಪಾತಕನಾಗಿ ಶ್ರೇಷ್ಠನಾಗುವನಂತೆ || ರತ್ನ ||2||
ಕಳ್ಳರ ಭಯವಿಲ್ಲವು ಈ ರತ್ನಕ್ಕೆ |
ಸುಳ್ಳರ ಸುಳುಹಿಲ್ಲವು ||
ಎಲ್ಲೆಲ್ಲಿ ನೋಡಲಲ್ಲಲ್ಲೆಕಾಂಬುದು ತಾನು
ಒಲ್ಲೆನೆಂದರು ಬಿಡದೆದುರಿಗೆ ನಿಲ್ವದು || ರತ್ನ ||3||
ಶಿರದೊಳು ರತ್ನವನ್ನು | ಧರಿಸಿರುವಂಥ |
ಉರಗನ ಹೃದಯವನ್ನು
ಉರಗಭೂಷಣ ಪಕ್ಷಿ ಹಂಸವಾಹನ ಮುಖ್ಯ |
ಸುರಮುನಿ ಹೃದಯದಿ ನಿತ್ಯ ಬೆಳಗುವಂಥ || ರತ್ನ ||4||
ದೊರೆ ದೇಸಾಯಿಗಳಲ್ಲಿಯೂ | ನವಕೋಟಿಯ
ವರ | ನಾರಾಯಣನಲ್ಲಿಯು |
ನೆರೆ ಚಕ್ರವರ್ತಿ ಬೊಕ್ಕಸದೊಳಗಿಲ್ಲ |
ಶ್ರೀ ಗುರು ಮಹಲಿಂಗನ ಭಂಡಾರದೊಳಗಿಹ || ರತ್ನ ||5||
ಭಯ ನಿವಾರಣವಾಯಿತಿಂದು
ಭಯ ನಿವಾರಣವಾಯಿತಿಂದು | ಗುರು
ದಯವೆಂಬ ವಜ್ರಾಂಗಿ ತೊಡಿಸಲು ಬಂದು ||ಪ||
ಆಶಪಾಷದ ಕೈಕಾಲುಡುಗೀ | ನಿಲ್ಲೆ
ಭಾಸುರ ಬ್ರಹೋಪದೇಶವೆಮಗಾಗೀ |
ಸೂಸುವಿಂದ್ರಿಯ ವ್ಯಾಪಾರುಡುಗೀ | ಕಮ
ಲಾಸನಂತರ್ಲಕ್ಷ ಸ್ಥಿರವಾಗಲಾಗೀ | ||1||
ತರಣೀಂದುಗಳ ಗತಿಯಳಿಯೇ | ಕಂಗ
ಳೆರಡರ ನಡುನೀಲ ಜ್ಯೋತಿನಿಂತುರಿಯೇ |
ಹರಿದು ಕತ್ತಲು ಬೆಳಕರಿಯೇ | ಅಲ್ಲಿ |
ವರಬಿಂದು ರುಚಿ ಕೋಟಿ ಮಿಂಚಿನೋಳ್ ಪೊಳೆಯೆ ||2||
ಸಣ್ಣಾ ಸೂಜಿಯ ಗಂಡಿಯೊಳಗೆ | ದೊಡ್ಡ
ಉಣ್ಣಿಮೆಯ ಚಂದ್ರನ ಕಳೆಯುಕ್ಕಿ ಬೆಳಗೇ |
ಕಣ್ಣಾರ ಕಂಡಾಯಿತೊಳಗೇ | ಸುಖಾ
ಬಣ್ಣಿಸಲಸದಳ ಬ್ರಹ್ಮಾದಿಗಳಿಗೇ ||3||
ಏಳು ಕೋಣೆಯ ಮನೆಯಲ್ಲಿ | ಘಂಟೆ
ತಾಳ ಮದ್ದಳೆ ಧಣಧಣ ಘೋಷವಲ್ಲೀ |
ಸಾಲು ದೀವಿಗೆ ಬೆಳಕಲ್ಲೀ | ಆಗ್ವ
ನೀಲಕಂಠನ ಪೂಜೆ ನೋಡಲಿಕ್ಕಲ್ಲೀ ||4||
ಧರಣೀ ಕತ್ತಲು ಮುಸುಕಿರಲೂ | ಸೂರ್ಯ
ಶಿರದೊರಲೆಸರಿಲ್ಲಾದಡಗುವ ವೊಲು |
ಗುರು ಮಹಲಿಂಗನ ಸೇರಲೂ | ಪೂರ್ವ
ದುರುಕರ್ಮರಾಶೀ ನಿಂತುರಿದು ಹೋಗಲೂ ||5||
ಎಷ್ಟು ಮಾತ್ರ ಭವದ ಕಡಲದು
ಎಷ್ಟು ಮಾತ್ರ ಭವದ ಕಡಲದು |
ಗುರುಕೃಪಿರಲು ದಾಂಟಲೊಂದು ಗೋಷ್ಟದವೆನಿಪುದು ||ಪ||
ಅಷ್ಟ ಭೋಗದಾಶೆ ಬಿಟ್ಟು |
ಅಷ್ಟಪಾಶಗಳನ್ನು ಸುಟ್ಟು |
ಅಷ್ಟದಳದ ಕಮಲ ಮಧ್ಯೆ |
ದಿಟ್ಟಿ ಬಲಿದಿತೀಶ್ವರಂಗೆ | ಎಷ್ಟು ಮಾತ್ರ ||ಅ||
ಯೋಗ ಸೂತ್ರವೆಂದು ಸಾಧಿಸಿ | ಈ ಕಾಯವೆಂಬ |
ಯೋಗ ಮಂಟಪವನ್ನು ಶೋಧಿಸಿ
ನಾಗ ಸರ್ಪದೆಡೆಯ ತುಳಿಯೆ |
ನಾಗರತ್ನ ಕಾಂತಿ ಪೊಳೆಯೆ |
ನಾಗಸ್ವರದಿ ಮನವು ಮುಳುಗೆ |
ರಾಗವಳಿದ ಯೋಗಿವರಗೆ || ಎಷ್ಟು ||1||
ಆರು ಬಾಗಿಲನ್ನು ಮುಚ್ಚಲು ದ್ವಿದಳವೇರೆ |
ಆರು ಮೂರು ಕಮ ಬಿಚ್ಚಲು |
ಮೂರು ನದಿಯ ಮಧ್ಯದಲ್ಲಿ
ಮೂರು ಕಾಲಿನ ಹಂಸೆ ಸಣ್ಣ
ದ್ವಾರ ತೆಗೆದು ಬಡಿವ ಘಂಟೆ
ಭೇರಿರವವಕೇಳ್ದ ಯತಿಗೆ ||2||
ದುರುಳ ಸಂತತಿ ದೂರಗೈಯುತ ನಮ್ಮ ಶಿವನ
ಶರಣ ಸಂತತಿಯಲ್ಲಿ ಸೇರುತ |
ಧರೆಯೊಳಧಿಕವೆನಿಸಿ ಮೆರೆವ |
ಪರಮ ಶ್ರೀ ಗುರು ರಂಗಲಿಂಗನ |
ಚರಣ ಕಮಲ ಬೆರೆತು ಜಗವ |
ಮರೆತು | ಮುಕ್ತನಾದ ಯತಿಗೆ ||3||
ಸ್ಥಿರಮುಕ್ತಿ ಸಂಪದಕೇ
ಸ್ಥಿರಮುಕ್ತಿ ಸಂಪದಕೇ |
ಶ್ರೀ ಗುರು ಕೊಟ್ಟೆರಡಕ್ಷರಗಳೇ ಸಾಕು ||ಪ||
ನಿರುತ ನಿರಕ್ಷರಕುಕ್ಷೆಂದುಪೇಕ್ಷಿಸಿ
ವರಮೋಕ್ಷಲಕ್ಷ್ಮಿ ಕೈ ಬಿಡುವಳೆ ಅವನ ||ಅ ಪ||
ನಿಶ್ಚಲನಾಗಿ ಕುಳಿತು | ಕಂಗಳು ಅರೆ
ಮುಚ್ಚಿದುನ್ನತ ಖೇಚರಿ |
ಮಿಂಚಿನೋಳ್ಮನಸಿನ ಚಂಚಲವಡಗಿಸಿ |
ಸಂಚಿತ ಕಳೆದು ನಿಶ್ಚಿಂತನಾಗುವಂಥ ||1||
ಅಕ್ಷರವೆರಡರಿತು ಆಡುವ ಹಂಸ |
ಪಕ್ಷಿಯ ಕಾಲ್ಮುರಿದು |
ಲಕ್ಷವು ಚದರದೆ ಈಕ್ಷಿಸಲಾಕ್ಷಣ |
ನಕ್ಷತ್ರ ಮಳೆ ತನ್ನ ಕುಕ್ಷಿಯೋಳ್ಸುರಿದವಂಥ ||2||
ಭೇದಭೇದಗಳಳಿದು | ತಾರಕಬ್ರಹ್ಮ |
ಬೋಧೆ ತನ್ನೊಳು ತಿಳಿದು |
ಮೋದದಿಂ ಕಳೆಬಿಂದು ನಾದದೊಳ್ಮುಳುಗುತ್ತ |
ಆದಿ ಶ್ರೀ ಗುರು ಮಹಲಿಂಗರಂಗನಾಗಿರುವಂಥ ||3||
ಎಂದು ಕಾಣದೊಂದು ಸ್ವಪ್ನಾ
ಎಂದು ಕಾಣದೊಂದು ಸ್ವಪ್ನಾ | ಕಂಡೆ ರಾತ್ರಿ ಚಿತ್ರವಾಯ್ತೆ
ಸುಂದರಾಂಗಿ | ಏನು ಹೇಳಲಿದರಂದವಾ | ಬ್ರಹ್ಮಾನಂದವಾ ||1||
ಪಾದನಾಲ್ಕೊಂದಾದ | ನವರತ್ನಮಯದ ಮಂಚ ರಚಿಸೀ
ಮೋದದಿಂದ ಹಂಸತಲ್ಪ | ಏರಿ ಒಬ್ಬಳೇ ನಿದ್ರೆಲಿದ್ದೆನೆ ||2||
ಪುತ್ರ ಮಿತ್ರ ಭಾತೃ ಕಳತ್ರಾಭಿಮಾನವ | ಕಳಚಿ ಶ್ರೀ ಗುರೂ |
ಸೂತ್ರ ಕಚ್ಚಿ ನೇತ್ರ ಬಿಚ್ಚಿ ದಿವ್ಯಚಿದ್ಬಿಂದು ರುಚಿಯಾನುಂಡೇನೇ ||3||
ಕಣ್ಣ ಕಪ್ಪಿನ ಭರಣಿಯಲ್ಲಿ | ಚಂದಮಾಮನ ಪ್ರಭೆಯೊಳೊಂದು
ಹೆಣ್ಣು ಬಾಯಿ ತೆರೆದೆನ್ನಾ ನುಂಗಲದಕೇ ಬೆರಗಾದೆನೇ ||4||
ಪಡುವಣಾದ್ರಿಯೇರಲು ಚಿದ್ಭಾನು ವಿಷಯಾ | ಚಕೋರ ರತ್ನವೂ |
ಒಡನೆ ಚೇತೋಪದ್ಮಿನಿಯು ನಕ್ಕ ಭಾವವಾ ನೋಡುತಿದ್ದೆನೆ ||5||
ಎನ್ನ ಪ್ರಾಣಕಾಂತ ಗುರು ಮಹಲಿಂಗಾ ರಂಗದೇವನಾ |
ಭಿನ್ನಪವಿಲ್ಲದಮರ್ದಪ್ಪಿ ಮುಕ್ತಿಭಾಗ್ಯವ ಸೂರೆಗೊಂಡೆನೆ ||6||
ಬಿಚ್ಚಿ ಪೇಳಿರಿದರರ್ಥ ಬಲ್ಲ ಜಾಣರು
ಬಿಚ್ಚಿ ಪೇಳಿರಿದರರ್ಥ ಬಲ್ಲ ಜಾಣರು |
ನಿತ್ಯ ಮುಕ್ತರು ಮುಚ್ಚು ಮೋರೆ ಯಾಕಿನ್ನು |
ಕಂಡ ಮಾತಿಗೆ ಉಂಡ ಸುಖಕೆ ||ಪ||
ಬಿಚ್ಚಿ ಪೇಳಿ ಕಾಯ ಪುರಿಯಲ್ಲಿ | ಮೂರು ಕೆರೆಗಳುಂಟು |
ಅದರಲ್ಲೊಂದು ವೊಯ್ಯೋ ಮಳೆಗಾಲದಲ್ಲು ತುಂಬೋದಲ್ಲಾ |
ವಣಗೋದಲ್ಲಾ ||1||
ಬರಿಗೆರೆಗಳೆರಡರ ಮಧÉ್ಯ | ಜ್ಯೋತಿರ್ಲಿಂಗವಿಹುದು |
ನಿರುತ ದೇವಗಂಗೆಯ ಭಿಷೇಕಗೈವಳೂ | ಶಿವನ ಪ್ರಿಯಳು ||2||
ಪೂಜೆ ಇಲ್ಲ ರಾತ್ರಿಯಲ್ಲು ಹಗಲಲ್ಲು | ಆತ್ಮಲಿಂಗಕ್ಕೇ |
ಪೂಜೆಗೈದರಾತ್ರೆ ಹಗಲು ವಂದೆಯಾಗೀ | ದೃಢವಾಗಿ ||3||
ಹತ್ತು ಎಂಟು ಏಳು ಆರು ಐದು ದಳದಾ | ಪುಷ್ಟ ಕೊಯ್ದು
ಹಸ್ತವಿಲ್ಲದರ್ಥಿಯಿಂದಲರ್ಚಿಸಿದನೂ | ಒಬ್ಬ ಜಾಣನು ||4||
ಹೆತ್ತಮಾತೆ ಶಿರವ ಚಂಡಾಡಿದಾನು | ರಾಮನಂತೆ |
ನಿತ್ಯ ಪೂಜ್ಯನೆನಿಸಿಕೊಂಡನಿಹದಲ್ಲೂ | ಪರದಲ್ಲೂ ||5||
ಕುರುಡ ನಿಂತು ಪೇಳೆ ಬಲು ಬೆರಗಾದಾ | ಹೆಳವಾನು |
ಧರೆಯೊಳಿದ ನೋಡಿದವಗೆ | ನಾಲಿಗಿಲ್ಲಾ | ಪೇಳೆಸಲ್ಲಾ ||6||
ಜಲಕಂಠೇಶ್ವರನಿಂದ ಸುರಿವಾ | ಮೃತವಾನುಂಡ ಪುರುಷ |
ಸಲೆ ಗುರು ಮಹಲಿಂಗ ರಂಗನಹನು ನಿಸ್ಸಂಗನಹನು ||7||
ಮಂಗಳವಾಗಿ ಇದೆ
ಮಂಗಳವಾಗಿ ಇದೆ | ಜಯ ಜಯ
ಮಂಗಳಾವಾಗಿ ಇದೆ ||ಪ||
ಕಂಗಳ ಕೊನೆಯಲ್ಲಿ ಥಳಥಳ ಹೊಳೆಯುವ |
ತಿಂಗಳ ಬೆಳಗಿನ ತಿಳಿರಸವುಕ್ಕುತ | ಮಂಗಳವಾಗಿ ಇದೆ ||ಅ ಪ||
ಆರು ಚಕ್ರವ ಮೀರಿ | ಸೂಕ್ಷ್ಮ |
ದ್ವಾರದೊಳಗೆ ಸೇರೀ |
ಏರಿ ಸಾಸಿರದಳ ಪದ್ಮ ಸಿಂಹಾಸನ |
ಭೂರಿ ಬ್ರಹ್ಮಾನಂದ ಪದವಿಯ ಸೇರಲು ||1||
ವಿರತಿಯೆಂಬುವ ಬತ್ತಿ | ಭಕ್ತಿಯು
ಎರಕವಾಗಿಹ ತೈಲ |
ಎರಡು ವೊಂದಾಗಿರಲರುವೆಂಬ ಜ್ಯೋತಿಯು |
ಉರಿಯಲು ತಾಮಸ ಕತ್ತಲೆಯಳಿದು ||2||
ರವಿಶಶಿ ತಾರೆಗಳ | ಬೆಳಗುವ |
ಪ್ರವಿಮಲ ಚಿತ್ಕಳೆಯು
ಕವಿದೊಳಗೊರಗೆಂದೆಂಬುದ ತೋರದ |
ಅವಿರಳ ಗುರು ಮಹಲಿಂಗನ ತೇಜವೇ ||3||
ಜಗದುದಯದಂತ್ಯದೊಳು ತುಂಬಿದೆ
ಜಗದುದಯದಂತ್ಯದೊಳು ತುಂಬಿದೆ |
ಅಗಣಿತನುಪಮ ಬ್ರಹ್ಮವು ||ಪ||
ಸ್ವಗತ ಭೇದವು ಪೊಗದ ನಿರ್ಗುಣ |
ನಿಗಮ ವಂದಿತ ಬ್ರಹ್ಮವು ||ಅ ಪ||
ಏಕಮೇವಾದ್ವಿತೀಯಮಚಲವು |
ನಾಕನಿಳಯ ಪ್ರಕಾಶವು |
ಶೋಕಹರ ಸರ್ವತ್ರ ಭರಿತವು |
ಲೋಕಸಾಕ್ಷಿಯದೆನ್ನಿಸಿ || ಜಗ ||
ನಿತ್ಯ ಶುದ್ಧ ಪ್ರಭುದ್ಧ | ಮುಕ್ತಂ
ಸತ್ಯಸಂವಿನ್ಮಾತ್ರಕಂ |
ಸತ್ತು ಚಿತ್ತಾನಂದ ರೂಪಂ |
ನಿತ್ಯ ಪೂರ್ಣರದೆನ್ನಿಸಿ || ಜಗ ||
ಉರುತರಾನಂದೈಕ ರಸಮಣಿ |
ನಿರುತ ಶ್ರುತಿಯ ಶಿರೋಮಣಿ |
ನೆರೆ ಅವಿದ್ಯಾಧ್ವಾಂತ ದಿನ ಮಣಿ |
ನಿರಘ ನಿಶ್ಚಲವೆನ್ನಿಸಿ || ಜಗ ||
ಅನಘನಚ್ಯುತ ಅಪ್ರಮೇಯಂ |
ಜನಿರಹಿತ ಜಗದಾಶ್ರಯಂ |
ವಿನುತಜ್ಞಾನಾಜ್ಞಾನಾ ಸಾಕ್ಷಿಯು |
ಪ್ರಣವ ಪರತರವೆನ್ನಿಸಿ || ಜಗ ||
ನೆರೆಯ ವಾಚ್ಯಮ ಸಂಗಭೆದ್ಯನು |
ನಿರುತ ಬೋಧಾ ಬಾಧ್ಯನು |
ಪರಮ ಗುರು ಮಹಲಿಂಗರಂಗನು |
ನಿರುತ ಚಿನಮಯನೆನ್ನಿಸಿ || ಜಗ ||
ಪರಮಾತ್ಮನರುಹಿನೊಳಗಿರು
ಪರಮಾತ್ಮನರುಹಿನೊಳಗಿರು ಮಾನಸೇಂದ್ರ |
ಪರಮಾತ್ಮನಹೆ ನೀನು ಯೋಗಿಕುಲ ಚಂದ್ರ ||ಪ||
ಘನ ಸುಪ್ತಿಯೊಳು ಬೆರೆಯದೆಲೆ ನಸಿಯದಿರುವ |
ಮನದ ವೃತ್ತಿಗಳೆಂಬ ಲಿಂಗತನುಲಯವಾ
ವಿನಯದಿಂದಲಿ | ಹೊಂದಿ ಹೊಂದದಲೆಯಿರುವ
ಅನುಪಮಾದ್ವಯ ಜ್ಞಪ್ತಿಯೆನಿಸಿ ಭಾಸಿಸುವ ||1||
ನಿರುತ ಪ್ರಾರಬ್ಧಗಳನುಣಲು ಬಂದಿರುವ |
ಶರೀರ ಸುಖ ದುಃಖಗಳನನುಭವಿಸುತಿರುವ |
ವರಜೀವ ಭೋಗಕ್ಕೆ ಮನೆಯೊಳಗೆ ಉರಿವ
ನೆರೆಸೊಡರಿನಂದದಲಿ ಸಾಕ್ಷಿಯಾಗಿರುವ ||2||
ವರಜಾಗ್ರ ಮೊದಲಾದ ಮೂರವಸ್ಥೆಯೊಳು |
ನಿರುತ ನೇತ್ರವು ಕಂಠ ಹೃದಯ ಸ್ಥಾನದೊಳು |
ಬೆರೆತು ಜೀವೇಶ್ವರರ ಪಾಲಿಸುತಲಿರು ನೆರೆ ಪ್ರಕೃತಿ
ಪರಮಗುರು ಮಹಲಿಂಗನೆಸಿರುವ ||3||
ಆಮಮ ಮಾಯಾ ಮಹಿಮ
ಆಮಮ ಮಾಯಾ ಮಹಿಮೆ ಅರಿಯಲರಿದೆಂದು |
ನಮಿಸಿ ಬ್ರಹ್ಮಾದಿಗಳು ವಂದಿಸಿದರಂದೂ ||ಪ||
ನಿರುಪಮದ್ವಯ ನಿತ್ಯ ಪರಿಪೂರ್ಣನಾದ |
ಪರಮಾತ್ಮದೊಳಗುದಿಸಿತವ್ಯಕ್ತಮಾದ |
ವರಶಕ್ತಿ ಮಣ್ಣಿನೊಳು ಕಲಶಗಳ ಶಕ್ತಿ |
ಭರದಿ ತೋರುವ ಚಂದದಿಂದ ಚಿಚ್ಛಕ್ತಿ ||1||
ಅದು ಸತ್ತುವಲ್ಲ ಮೇಣದು ಅಸತ್ತಲ್ಲ |
ಅದು ಭಿನ್ನವಲ್ಲ ಮತ್ತದು ಅಭಿನ್ನವಲ್ಲ ||
ಅದಕ್ಕೆ ಅವಯವವಿಲ್ಲ ನಿರವಯವು ಅಲ್ಲ |
ಅದು ಅನಿರ್ವಚನೀಯವೆಂಬುವರು ಯೆಲ್ಲ ||2||
ಜಗವೆ ಸತ್ಯವು ಬ್ರಹ್ಮ ಮಿಥ್ಯವೆಂದೆನಿಸಿ |
ತ್ರಿಗುಣಗರ್ಭಿತಮಾಗಿ ತ್ರೈಲೋಕ ರಚಿಸಿ ||
ಜಗದಿ ಸರ್ವರ ಹೊಂದಿ ಪೂಜೆಗೊಂಬುವುದು |
ನಿಗಮ ಶಿರಗಳ ಮಾತೆಯೆನಿಸಿ ರಾಜಿಪುದು ||3||
ಪಠವ ಬಿಚ್ಚಲು ವಿವಿಧ ಚಿತ್ರ ಕಾಂಬಂತೆ |
ಪಠವ ಮುಚ್ಚಲು ಚಿತ್ರ ಕಾಣದಿರುವಂತೆ |
ಕುಟಿಲದಿಂ ಜಗವ ತೋರುವುದು ತಾನೆ |
ಚಟುಲದಿಂ ಮರೆ ಮಾಡಿಕೊಳ್ಳುವುದು ತಾನೆ ||4||
ಪೂರ್ಣ ಬ್ರಹ್ಮದಿ ಮಿಥ್ಯವಾಗಿ ತೋರಿರುವ |
ಹೀನಮಾಯಾತಮವು ಮುಚ್ಚಿ ಮೂಜಗವ |
ಜ್ಞಾನಹೀನರ ಗೋಣು ಮುರಿದು ನುಂಗುವದು |
ತಾನೆ ಗುರುಮಹಲಿಂಗನೊಳಗೆಯಡಗುವುದು ||5||
ಆದಿ ಅಂತ್ಯದೊಳಿಲ್ಲದಿರುವ
ಆದಿ ಅಂತ್ಯದೊಳಿಲ್ಲದಿರುವ ಪುಸಿಮಾಯ ||
ಆದಿಯಿಂದಾವರಿಸಿತಾತ್ಮ ನಿರ್ಮಾಯ ||ಪ||
ಸದಮಲಾತ್ಮನೊಳಾಯ್ತು ಶುಕ್ತಿಯಲಿ ರಜತ |
ಮುದದಿ ತೋರುವ ಪರಿಯ ಮಾಯಾ ಸಂಜನಿತ ||
ಅದು ಅವಿದ್ಯಾವ್ಯಕ್ತವದು ತ್ರಿಗುಣಮಯವು |
ಅದು ಮೋಹವಜ್ಞಾನ ಜಡ ದುಃಖಮಯವು ||1||
ಎಂದಿಗಿಲ್ಲದ ಪ್ರಕೃತಿಯಾತ್ಮಯಾನಾವರಿಸಿ |
ಕುಂದು ಹೆಚ್ಚಿನ ಮಾಯಾವಿದ್ಯೆಯೆನಿಸಿ ||
ಒಂದು ಸಾತ್ವಿಕ ಒಂದು ರಾಜಸವದೆನಿಸಿ |
ಚಂದದಿಂದೆರಡಾಗಿ ಇಹುದು ನಿಜವೆನಿಸಿ ||2||
ಪರಮ ಸತ್ವ ಪ್ರಧಾನವೆನಿಪ ಮಾಯೆಯೊಳು |
ವರಮೇಘ ಜಲ ಕೂಡಿಕೊಂಡು ಗಗನದೊಳು ||
ಎರಕವಾಗಿರುವಂತೆ ಪ್ರತಿಫಲಿಸಿ ಇಹನು |
ಧರೆಗೆ ಸರ್ವಜ್ಞೆಂಬ ಪೆಸರೊಡೆದು ಆತ್ಮ ||3||
ಮಲಿನಸತ್ವ ಪ್ರಧಾನಗುಣ ಅವಿದ್ಯೆಯೊಳು |
ಕಲಶ ನಭಜಲದೊಳಗೆ ಅಭ್ರತಾರೆಗಳು ||
ಹೊಳೆಯುವಂದದಿ ತಾನೆ ಪ್ರತಿಫಲಿಸಿ ಇಹನು |
ನಿರುತ ಕಿಂಚಿಜ್ಞೆಂಬ ಹೆಸರೊಡೆದು ಆತ್ಮ ||4||
ಭರದಿ ವಿದ್ಯಾವಿದ್ಯವೆಂಬುಪಾಧಿಯನು ಧರಿಸಿ |
ಈಶನ ಜೀವನೆನಿಸಿ ತೋರುವನು ||
ಅರಿಯಲಿಬ್ಬರು ಮಾಯಾ ಮಕ್ಕಳೆಂಬಂತೆ |
ಪರಮ ಗುರು ಮಹಲಿಂಗರಂಗ ಸಾಕ್ಷಿಯಂತೆ ||5||
ಜೀವ ಈಶ್ವರರಿಬ್ಬರೂ
ಜೀವ ಈಶ್ವರರಿಬ್ಬರೂ | ಜನಿಸಿರುವ |
ಭಾವಭೇದವನರಿಯಲೋ ವತ್ಸ | ಜೀವ ಈಶ್ವರರಿಬ್ಬರೂ ||ಪ||
ಸತ್ವ ಗುಣ ಪ್ರತಿಬಿಂಬಿತ |
ಚೈತನ್ಯ ಮತ್ತೆ ಮಾಯಾ ಧಿಷ್ಠಿತ | ಬ್ರಹ್ಮ |
ಸತ್ವಗುಣ ಮಾಯೆ ಮೂರು | ಒಂದಾಗಿ
ಪೃಥ್ವಿಗೀಶ್ವರನೆನಿಸಿದ | ಆತ್ಮ ||1||
ನಿರುತ ಮಾಯೋಪಾಧಿಯೆನಿಪೀಶ
ಗಿರವಾಯ್ತು ಕಾರಣಾಂಗ | ಸುಪ್ತಿ |
ಸ್ಫುರಿಸುವಾನಂದಕೋಶ | ಘನವಾಗಿ |
ಸರ್ವಜ್ಞನೆಂದೆನಿಸಿದಆತ್ಮ ||2||
ಮಲಿನ ಗುಣ ಪ್ರತಿಬಿಂಬಿತ |
ಚೈತನ್ಯ ಮವಿನ ಮಾಯಾಧಿಷ್ಠಿತ | ಬೊಮ್ಮ
ಮಲಿನ ಗುಣ ಮಾಯೆ ಮೂರೂ | ಒಂದಾಗಿ
ಮಲಿನ ಜೀವನು ಎನಿಸಿದ ಆತ್ಮ ||3||
ವರಚಿದಾಭಾಸವೆನಿಪ | ಆಜೀವ |
ಗಿರವಾಯ್ತು ಕಾರಣಾಂಗ || ಸುಪ್ತಿ
ಸ್ಫುರಿಸುವನಂದಕೋಶ | ದೊಳು
ಸೇರಿ ನಿರುತ ಕಿಂಚಿಜ್ಞನಾದಾ | ಆತ್ಮ ||4||
ಕಲಶ ಜಲ ಪ್ರತಿಬಿಂಬಿತ ನಭದಂತೆ |
ಸಲೆಯು ನಿದ್ಯೋಪಾಧಿಯೆನಿಸಿ | ತಾನೆ |
ಹೊಲೆತನುವಿನಭಿಮಾನದಿಂದ |
ಬಳಲಿ ತಿಳಿವ ತಾ ಗುರುಲಿಂಗನೆಂದು ||5||
ಜೀವಿ ಕರ್ಮದ ಭೋಗ
ಜೀವಿ ಕರ್ಮದ ಭೋಗದನುಭವಕೆ ಜಗವನ್ನು |
ತಾ ವಿನೋದದಿಗೈಯ್ಯಲನುವಾದನೀಶ್ವರನೂ ||ಪ||
ಶುದ್ಧ ಸತ್ವಪ್ರಧಾನ ಮಾಯೆಯೊಳು ಬೆರೆತೀಶ
ಶುದ್ಧ ತಾಮಸವಾದ ಗುಣ ಪ್ರಧಾನವದೆನಿಪ |
ಮುದ್ದು ಮಾಯಾದೇವಿಯನು ಕಣ್ತೆರೆದು |
ಬದ್ಧದಿಂದೀಕ್ಷಿಸಿದ ಸೃಷ್ಟಿಯಂ ನೆನೆದು ||1||
ಧರಣಿಯೊಳು ವಟಬೀಜ ನಾಟಿ ನೀರೆರೆಯೆ |
ಸ್ಫುರಿಸುತಂಕುರ ಶಾಖೆ ವೃಕ್ಷವಾದಂತೆ ||
ಭರದಿಂದಲಾ ಬ್ರಹ್ಮಶಕ್ತಿಯಿಂದ ವಿಚಿತ್ರ |
ತರದಖಿಳ ಬ್ರಹ್ಮಾಂಡ ವಿಜೃಂಭಣವದಾಯ್ತು ||2||
ಅದು ಮಹದಹಂಕಾರ ತ್ರಿಗುಣ ಗರ್ಭಿತವು |
ಪದುಳ ಸತ್ವವು ರಜವು ತಾಮಸವು ಯೆನಿಸಿ ||
ಅದರಿಂದ ಶಬ್ದದಿ ಪಂಚತನ್ಮಾತ್ರೆಗಳು |
ವಿದಿತಮಾದವು ಸೂಕ್ಷ್ಮ ಭೂತಂಗಳೆನಿಸಿ ||3||
ವರಸತ್ವ ಗುಣದಿಂದ ಕರಣೇಂದ್ರಿಯಾದಿಗಳು |
ನೆರೆ ರಜೋಗುಣದಿಂದ ಪ್ರಾಣ ಕರ್ಮೇಂದ್ರಿಯಗ ||
ಳುರುತಮೋಗುಣದಿಂದಲೊಂದೊಂದು ಕ್ರಮವಾಗಿ |
ಭರಿತ ನಭ ಮೊದಲಾದ ಭೂತಮೈದೊಗದವು ||4||
ಇದರೊಳಗೆ ಸ್ಥೂಳ ಕಿರಿ ಕಾರಣವು ಯೆನುತ |
ವಿದಿತವಾದವು ತನುತ್ರಯಂಗಳು ತಿಳಿಯ ||
ಲವರೊಳಗೆ ಜೀವಿ ಪರಮಾತ್ಮರಗಲದಲೇ |
ಪದುಳದಿಂದಿಹರದಕ್ಕೆ ಸಾಕ್ಷಿ ಗುರು ಮಹಲಿಂಗನು ||5||
ಕೇಳು ವತ್ಸನೆ
ಕೇಳು ವತ್ಸನ ಜೀವಗಾದ ಜನ್ಮ ಸ್ಥಿತಿಯ |
ಪೇಳುವೆನು ಸೂಕ್ಷ್ಮದಿಂ ಶ್ರುತ್ಯಾನುಭವದಿಂದಾ || ಕೇಳು ||ಪ||
ತಾನೆ ತನ್ನನು ಮರೆತು ಕಲ್ಪಕೋಟಿಗಳಿಂದ
ಹೀನ ತನುವಭಿಮಾನದಿಂ ಸಗ್ಗನಕರದಿ ಕು |
ಯೋನಿಯೆಂಬ ಕುಲಾಲಿಚಕ್ರದಲ್ಲಿ ಶಿಲ್ಕಿ | ಮುಂ
ಗಾಣದೆ ಭವಾರಣ್ಯ ಚರಿಸುತಿರೆ ಸುಕೃತದಿಂದ ||1||
ವರವೃಷ್ಟಿಯಿಂದುಲಿದು ಜೀವ ನವಧಾನ್ಯದೊಳು |
ಬೆರೆತುಂಬುವನ್ನರಸದೊಳಣುವಾಗಿ | ನಿತ್ಯ
ಸುರಿವ ಮಾಯಾ ಬಿಂದು ಧಾರೆಯೊಳು ಕಳೆದುಳಿದು
ವರಜನಕನುದರದಲಿ ಮೂದಿಂಗಳಿರುವಂ ||2||
ಜನನಿ ಜನಕರ ಮೋಹ ಜನಿತ ಕಾಮಾಗ್ನಿಯೊಳು |
ಕ್ಷಣಿಕ ಸಂಯೋಗದಲಿ ಬೆಣ್ಣೆ ಬೆಂಕಿಯ ಶಖೆಗೆ |
ಜಿನಿಗಿಳಿವ ಭಂಗಿಯಲಿ ಶುಕ್ಲರೂಪಿಂದಿಳಿದು |
ಜನನಿರುತ ಕಮಲ ವರಳಿರಲ್ಕದರೊಳಗೆ ನಿಲ್ವಂ ||3||
ವಿನುತ ಶೋಣಿತ ಶುಕ್ಲ ಬೆರೆತು ಬೊಬ್ಬುಳಿಯಾಗಿ |
ಘನಶುಕ್ತಿಯೊಳು ಸ್ವಾತಿ ಬಿಂದು ಮುತ್ತಾದಂತೆ |
ತನುನಯನಕರಚರಣ ಮುಂತಾದ ಸರ್ವಾಂಗ |
ತನಗೆ ತಾನಾಗ್ವುದೇಳು | ಮಾಸಕ್ಕೆ ಜಠರದೊಳು ||4||
ವನಜ ವಿಕಸಿತಮಾಗೆ | ಗಂಧವುದಿಸುವ ಪಾಂಗು |
ತನಪೂರ್ವ ಸುಜ್ಞಾನಮುದಿಸಿ ಚೇತಿಸುತ |
ಜನನಿಯುಂಡನ್ನ ರಸವ ನಾಭಿ ಮುಖದೊಳುಣುತ್ತ |
ಜನನಿ ಜಠರವದೆಂಬ ನರಕದೊಳಗಿರುವಂ ||5||
ಉರುಜರಾಯುಜವೆಂಬ ಚೀಲದಿಂ ಬಿಗಿವಡೆದು |
ಅರಿತು ಪೂರ್ವಾಪರದ ಜ್ಞಾನಾನುಭವವನ್ನು |
ಕೊರಗುತೀಭವ ಬಾಧೆ ನೆನೆಯುತ್ತ ಮನದೊಳಗೆ |
ಹೊರಗೆ ಬರಲೆಡೆಗಾಣದಲೆ ದುಃಖಿಸುತಿರುವಂ ||6||
ತನ್ನ ಮರತಜ್ಞಾನದಿಂದ ಬಂದೆನು ಭವಕೆ |
ಇನ್ನು ಜನನಿಯ ಜಠರದಿಂ ತಾ ಪೊರಮಟ್ಟು |
ಉನ್ನತಾತ್ಮಜ್ಞಾನದಿಂ ಮುಕ್ತನಾಗುವೆನು |
ಎನ್ನುತಲಿ ಶಿವಧ್ಯಾನ ನಿಷ್ಠನಾಗಿರುವಂ ||7||
ನವಮಾಸದೊಳ್ ಯೋನಿಮುಖದಿ ಜನಿಸಿದಾ ಕ್ಷಣದಿ |
ಕವಿದು ಮೋಹವು ಪೂರ್ವಜ್ಞಾನವಂ ಮರೆತು |
ವಿವಿಧ ಬಾಲಕ್ರೀಡೆ ತೋರುತ ಯೌವನದಿ |
ತವೆ ಗರ್ವದಿಂ ಪಾಪಗೈಯ್ಯುತ್ತ ನರಕಕಿಳಿಯುವನು ||8||
ಇರುತಿರುತಲೀ ಪರಿಯಲಂತ್ಯ ಜನ್ಮಕ್ಕೆ |
ವಿರತಿಯು ಪರತಿ ಜ್ಞಾನ ಜನಿಸಿ ತನ್ನೊಳಗೆ |
ಶರಧಿ ಜಲದೊಳು ಜಲವು ಬೆರೆತ ಪರಿಯಾಜೀವ
ಪರಮ ಗುರು ಮಹಲಿಂಗರಂಗನೊಳ್ಬೆರೆವಂ ||9||
ಪಂಚಕೋಶಗಳಿಂದ ಕೂಡಿರುವದೀ ಕಾಯ
ಪಂಚಕೋಶಗಳಿಂದ ಕೂಡಿರುವದೀ ಕಾಯ |
ಪಂಚಕೋಶಗಳಂಟದಿಹನು ನಿರ್ಮಾಯ ||ಪ||
ಕ್ಷೋಣಿಯೊಳು ನಿಜ ಜನಕ ಜನನಿಯರ ಶುಕ್ಲ |
ಶೋಣಿತದಿ ಜನಿಸಿರುವ ತನುವನ್ನ ಮಯಕೋಶ |
ಪ್ರಾಣ ಕರ್ಮೇಂದ್ರಿಯಗಳ್ಹತ್ತು ಒಂದಾಗಿರುತ |
ಪ್ರಾಣಮಯ ಕೋಶವೆಂದೆನಿಸಿಕೊಂಬುವದು ||1||
ಮನವು ಜ್ಞಾನೇಂದ್ರಿಯಗಳೈದು ಒಂದಾಗಿರಲು |
ಘನ ಮನೋಮಯ ಕೋಶವೆಂದೆನಿಸಿಕೊಂಬುವದು |
ವಿನುತ ಬುದ್ಧಿಯು ಪಂಚ ವಿಷಯಂಗಳೊಂದಾಗಿ |
ಜನಜನಿತ ವಿಜ್ಞಾನಮಯ ಕೋಶವೆನ್ನಿಸುವುದು ||2||
ನಿರತ ಪ್ರಿಯ ಮೋದವು ಪ್ರಮೋದ ವೃತ್ತಿಗಳು |
ಬೆರೆತ ಅಜ್ಞಾನಾನಂದಮಯಕೋಶವೆನಿಸಿ |
ವರಕೋಶವೈದಕ್ಕೆ ವೈಲಕ್ಷಣನುಯೆನಿಸಿ |
ಪರಮಗುರು ಮಹಲಿಂಗರಾಜಿಸುತಲಿಪ್ಪಂ ||3||
ಮೂರು ವಿಧದಿ ಶಿಷ್ಯರಿಂಗೆ
ಮೂರು ವಿಧದಿ ಶಿಷ್ಯರಿಂಗೆ |
ಚಾರುಬ್ರಹ್ಮ ಬೋಧಗೈವ |
ಧೀರಾಗುರುವರನಮಳ ಮಹಿಮೆ | ಬಹಳ ಚೋದ್ಯ ||ಪ||
ಗುರುವಿನಾಜ್ಞೆಯನ್ನು ಮೀರದಿರುವ ಶಿಷ್ಯನನ್ನು ಒಮ್ಮೆ |
ಕರುಣದಿಂದ ನೋಡೆ ಶರಧಿಯೊಳಗಣಂಡವೂ
ಹರಿವ ಮತ್ಸ್ಯವ ಕಂಡ ಕ್ಷಣದೊಳಿರದೆ | ಮತ್ಸ್ಯಗಳಾಗ್ವ ಪಾಂಗು |
ಗುರುವೆ ಆಗಿ ಚರಿಸುತಿಪ್ಪ ಸ್ವಪ್ರಕಾಶದಿ ||1||
ದಿನವು ಸೇವೆಗೈಯುತರಲು | ಮನದಿ ನೆನೆಯೇ ಶಿಷ್ಯನನ್ನು
ಘನದಿ ಜಲದೊಳಿರಲು ಕಮಠಾ | ಒಂದು ದಿವಸದ |
ನೆನೆದಕ್ಷಣದೊಳಂಡಗಳೊಡೆದು | ವಿನುತ ಕಮಠವಾಗುವಂತೆ |
ಅನುಪಮದ್ವಯ ಗುರುವೇ ಆಗಿ ಚರಿಸುತಿಪ್ಪನು ||2||
ಗುರುವು ಮುಟ್ಟಲಾಗಿ ಶಿಷ್ಯ ಪರಮಗುರುವೇ ಆಗುತಿಹನು |
ಸ್ಪರುಶದಿಂದ ಅಂಡಗಳೊಡೆದು ಪಕ್ಷಿಯಾದಂತೆ |
ಧರೆಯೊಳಿಂತು ದೃಷ್ಟಿ ಧ್ಯಾನ | ಸ್ಪರ್ಶವೆಂಬ ಮೂರು ವಿಧದಿ |
ಕರುಣಿಸುವನು ಒಬ್ಬ ಶ್ರೀಗುರುರಂಗನೆನ್ನಿಸಿ ||3||
ಸಾಧನ ಚತುಷ್ಟಯಂಗಳುಳ್ಳ
ಸಾಧನ ಚತುಷ್ಟಯಂಗಳುಳ್ಳ ಸಂಪನ್ನಾ |
ಸಾಧಿಸಲು ಮೋಕ್ಷವನು ಅಧಿಕಾರಿ ಮುನ್ನಾ ||ಅ||
ಇದು ಅನೃತ ಜಡ ದುಃಖಮಯ ದೇಹವೆನುತ |
ಸದಮಲಾದ್ವಯ ಬೊಮ್ಮವಿದರೊಳಿಹನೆನುತ |
ವಿದಿತ ಶಾಸ್ತ್ರವಿವೇಕದಿಂದ ಮನನೀಯ |
ಕದಲದಲೆ ನಿಲೆ ಮನದಿ ಪ್ರಥಮ ಸಾಧನೆಯು ||1||
ಧರೆಯ ಭೋಗವೆ ರೋಗವಿದಕಧಿಕ ಮುಂದೆ |
ಸುರಲೋಕ ಸುರಭೋಗ | ಬಲು ರೋಗವೆಂದೇ |
ತೊರೆದೆರಡು ಭೋಗ ಸುಖ ಮಲ ಮೂತ್ರಪಾಯ |
ಮರಳಿ ನೆನೆಯದ ವಿರತಿ ದ್ವಿತೀಯ ಸಾಧನೆಯೂ ||2||
ವರ ಶಮೆಯುದಮೆ ಶಾಂತಿ ದ್ವಂದ್ವದ ತಿತಿಕ್ಷಿ|
ಉರುತರ ಸಮಾಧಾನ ಶ್ರದ್ಧೆಯೊಳು ಲಕ್ಷ್ಯ |
ಇರೆ ಶಮಾದಿಯಷಟ್ಕವೆಂಬ ವಾಸನೆಯು |
ವರ ಮುಮುಕ್ಷುಗಳಿಗೆ ತೃತೀಯ ಸಾಧನೆಯು ||3||
ಉರಿಯ ಮನೆಯಿಂ ಪೊರಟು ಪ್ರಾಣ ರಕ್ಷಣೆಗೆ |
ಹೊರಬೀಳ್ವನಂತಖಿಳ ಸಂಸಾರ ಬೇಗೆ |
ಭರಿಸಲಾರದೇ ಪಿಡಿದು ಗುರುವರನ ಅಡಿಕಮಲ |
ವರಮುಕ್ತಿ ಬಯಸಲದು ಚತುರ್ಥ ಸಾಧನೆಯು ||4||
ಅರಿಯಲೀಪರಿ ನಾಲ್ಕು ಸಾಧನೆಯ ಮಹಲಿಂಗ |
ಗುರು ಹೊಂದಲಿಕೆ ಮೊದಲು ತರುವಾಯಲಾದರು |
ಸ್ಥಿರವಾಗಿ ನೆಲೆಗೊಳೆ ಮುಮುಕ್ಷುವಾದವಗೆ |
ಪರಮೋಕ್ಷ ಸಾಮ್ರಾಜ್ಯ ಪದವಿ ಲಭಿಸುವದು ||5||
ಬಂಧ ಮೋಕ್ಷದ ವಿವರ
ಬಂಧ ಮೋಕ್ಷದ ವಿವರ ಮೊದಲರಿಯೊ ಕಂದ |
ಬಂಧ ಮೋಕ್ಷಕೆ ಮನವೆ ಮೂಲವದರಿಂದ ||ಪ||
ಜನನ ಮರಣ ದಿಟವೆಂಬ ಮರೆವೆಯೇ ಭವಬಂಧ |
ಜನನ ಮರಣ ಸಟೆಯೆಂಬ ಅರಿವೆ ವರಮೋಕ್ಷ |
ಘನವಿರತಿ ಬಿಡೆನೆಂಬ ಸಂಕಲ್ಪವೇ ಬಂಧ |
ಘನವಿರತಿಯು ಪರತಿಯ ನಿಜದರುವೆ ಮೋಕ್ಷ ||1||
ಮಾನ ಅಭಿಮಾನದಲಿ ಕೊರಗುವದೆ ಭವಬಂಧ |
ಮಾನ ಅಭಿಮಾನದ ನಿಲುಗಡೆಯೆ ಮೋಕ್ಷ |
ಜ್ಞಾನ ಅಭ್ಯಾಸವನು ಗೈವನೆಂಬುದೆ ಬಂಧ |
ಜ್ಞಾನ ಅಜ್ಞಾನಕ್ಕೆ ಸಾಕ್ಷಿಯಿರೆ ಮೋಕ್ಷ ||2||
ಕರ್ಮ ಧರ್ಮಗಳೆರಡು ಬಿಗಿದ ಯಮಬಂಧ |
ಕರ್ಮ ಧರ್ಮವ ಗುರುವಿನಿಂ ತಿಳಿಯೆ ಮೋಕ್ಷ |
ಕರ್ಮ ಜ್ಞಾನೇಂದರಿಯವ ಗೆಲುವೆನೆಂಬುದೆ ಬಂಧ |
ಕರ್ಮ ಜ್ಞಾನೇಂದ್ರಿಯಕ್ಕೆ ಸಾಕ್ಷಿಯೇ ಮೋಕ್ಷ ||3||
ಆಶ್ರಮಂಗಳ ವರ್ಣ ಧರ್ಮಂಗಳ ವಿಧಿ ಬಂಧ |
ಆಶ್ರಮಂಗಳು ವರ್ಣ ಧರ್ಮಸಾಕ್ಷಿಯೆ ಮೋಕ್ಷ |
ವಾಸನತ್ರಯದಾಸೆ ಬಿಡದಿಹುದೆ ಬಂಧ |
ವಾಸನತ್ರಯ ನಾಶವಾಗಲದು ಮೋಕ್ಷ ||4||
ಸರ್ವ ಸಂಕಲ್ಪಗಳ ಪಿಡಿದಿಹುದೆ ಬಂಧ |
ಸರ್ವ ಸಂಕಲ್ಪಳಿಯೆ ಕರತಲದಿ ಮೋಕ್ಷ |
ಶರ್ವ ಬೇರಿಹನೆಂಬುವ ಜ್ಞಾನವೇ ಬಂಧ |
ಶರ್ವ ಗುರು ಮಹಲಿಂಗನೊಳು ಬೆರಿಯೆ ಮೋಕ್ಷ ||5||
ತನ್ನೊಳರಿಯಲುಬೇಕು ಆತ್ಮನ
ತನ್ನೊಳರಿಯಲುಬೇಕು ಆತ್ಮನ |
ಮುನ್ನ ಸಮ್ಯಜ್ಞಾನದಿಂ ||ಪ||
ತನ್ನೊಳರಿಯದೆ ಇರಲು ಲೋಕದ |
ಭಿನ್ನವಾದನೆಯಡಗದು ||ಅ ಪ||
ವೇದ ವೇದ್ಯನು ಜ್ಞಾನಸಾಧ್ಯನು
ವೇದಪುರುಷಾವ್ಯಕ್ತನು |
ಭೇದಭಾವನ ಷಣ್ಮತಂಗಳ |
ವಾದ ತರ್ಕಕಸಾಧ್ಯನು ||1||
ವೇದ ಜನಕನು ಕ್ರೋಧರಹಿತನು |
ಆದಿಮಂಗಳ ಮೂರ್ತಿಯು |
ಪಾದನಾಲ್ಕರ ಪ್ರಣವ ಪರತರ |
ವಾದನಿರ್ಗುಣ ಬ್ರಹ್ಮನು ||2||
ನೆನೆಯದೊಣಗದ ಮಳೆಗೆ ಬಿಸಿಲಿಗೆ
ಮೊನೆಕಠಾರಿಗೆ ಸೀಳದ |
ಜನಿಸದಳಿಯದ ಸುಡದ ಸುಳಿಯದ |
ಘನಚಿದಂಬರನಾತ್ಮನಂ ||3||
ದುಃಖವಂಟದ ನಿಜ ಸುಖಡಗದ |
ಉಕ್ಕಿದಾನೆಂದೆನಿಸುವಾ
ಠಕ್ಕು ಮಾಯಾ ಕುಟಿಲ ಜಗವನು |
ಮಿಕ್ಕು ರಾಜಿಸುವಾತ್ಮನಂ ||4||
ಪರೆಯು ಪಶ್ಯಂತಾದಿವಾಕ್ಕಿಗೆ |
ಅರಿವ ಮನಸಿನ ಊಹೆಗೆ |
ಪರೆತೆನಿಸಿ ಪರಿಪೂರ್ಣವಾಗಿಹ |
ಪರಮ ಗುರು ಹಲಿಂಗನಂ ||5||
ಯಾಕೆ ತಿಳಿಯದೋದೆ
ಯಾಕೆ ತಿಳಿಯದೋದೇ | ಮನುಜಾ ನೀ
ಯಾಕೆ ತಿಳಿಯದೋದೇ ||ಪ||
ಯಾಕೆ ತಿಳಿಯೆ ನೀನಾತ್ಮ ಜ್ಞಾನವ |
ಮೂಕನ ಪರಿಯಲಿ ಮೂಲೆಯ ಹಿಡಿದು ||ಅ.ಪ||
ಗಾಣವ ತಿರುಗುತಲೀ ಬಳಲುವ |
ಕೋಣನ ಪರಿಯಲ್ಲಿ |
ಕ್ಷೋಣಿಯ ತಿರುಗುತ ಬಳಲಿದೆಯಲ್ಲದೆ |
ಕ್ಷೋಣಿಯ ಬೆಳಗುವ ಆತ್ಮನ ನಿನ್ನೊಳು ||1||
ಕರತಲರತ್ನವನು | ಅರಿಯದೆ
ನೆರೆಮನೆ ಮಕ್ಕಳನು |
ಶರಗೊಡ್ಡಿ ಬೇಡುವನಂದದಿ ದೇಹದಿ |
ಪರಮನು ಇರುತಿಹ ನೆಲೆಯನು ನಿನ್ನೊಳು ||2||
ಜಲದೊಳು ಮುತ್ತಾದ ಬಳಿಕದು |
ಜಲದೊಳು ಬೆರೆಯುವುದೇ |
ತಿಳಿಯಲಿ ಕಾಪರಿತತ್ವದಿ ಬೆರೆತವ |
ಇಳೆಯೊಳು ಪುಟ್ಟನು ಯೆಂಬುವ ನಿನ್ನೊಳು ||3||
ಕುಲಚಲದಭಿಮಾನ ಕೂಪದಿ |
ಮುಳುಗಿತು ನಿನ್ನ ಜ್ಞಾನ
ಛಳಿಮಳೆ ಬಿಸಿಲಿಗೆ | ಅಳುಕದೆ ಹೊಳೆಯೊಳು |
ಮುಳುಗುವೆಯಲ್ಲದೆ ಆತ್ಮನ ನಿನ್ನೊಳು ||4||
ಕರ್ಮಕೋಟಿಯನು ಬಿಡಿಸಿ |
ಜ್ಞಾನದ ಮರ್ಮವ ನೆರೆ ತಿಳಿಸಿ |
ಕರ್ಮದ ಧರ್ಮದ ಭೀತಿಯ ಬಿಡಿಸುವ |
ನಿರ್ಮಲ ಗುರು ಮಹಲಿಂಗನ ನಿನ್ನೊಳು ||5||
ತನ್ನೊಳಿರುವಾತ್ಮನನು ತಾಕಾಣದವನು
ತನ್ನೊಳಿರುವಾತ್ಮನನು ತಾ ಕಾಣದವನು |
ಕಣ್ಣಿದ್ದು ಕಾಣದಿಹ ಕುರುಡನೆನಿಸುವನು ||ಪ||
ಶರೀರದೊಳು ಪ್ರಾಣಗಳು ಇಂದ್ರಿಯಂಗಳು ವಿಷಯ |
ಮರೆವ ರೂಪಿನ ಮನವು ಅರಿವಿನಾಮತಿಯು |
ವರಚಿತ್ತಹಂಕಾರ ಕರಣದ ವಿಕಾರ |
ಇರುವ ದೇಹದೊಳಾತ್ಮ ತಾ ನಿರ್ವಿಕಾರ ||1||
ಕರಣ ಇಂದ್ರಿಯಗಳಿಗೆ ಪ್ರೇರಕನು ಯೆನಿಸಿ |
ಅರಿವನೆಲ್ಲವ ತಾನೆ | ಸಾಕ್ಷಿಯೆಂದೆನಿಸಿ |
ವರ ಮುಕುರದೊಳು ಮುಖವು ಎಸೆದು ತೋರ್ಪಂತೆ |
ಪರಮ ಸಾತ್ವಿಕ ಬುದ್ದಿಯಲ್ಲಿ ಪರಮಾತ್ಮ ||2||
ಅದು ನೀನೆ ಅಹುದಂದು ತತ್ವಮಸಿ ವಾಕ್ಯ ವಿಧಿಸಿಹುದು
ಅದು ಬ್ರಹ್ಮವದು ಅಪ್ರತಕ್ರ್ಯ
ಅದು ಜ್ಞಾನವದು ಜ್ಞೇಯವದುವೆ ಅವಿನಾಶಿ |
ಅದಕನ್ಯವಿಲ್ಲೆನಲು ವೇದಗಳ ರಾಸಿ ||3||
ವರ ಜಾಗರವು ಸ್ವಪ್ನ ಸುಷುಪ್ತಿಯೊಳು ಕ್ರಮದಿ |
ನರವಿಶ್ವ ತೈಜಸನು ಪ್ರಾಜ್ಞನಾಮಕದಿ |
ಉರು ವಿಷಯವನುಭವಿಪ ಮೂರು ಜೀವರನು |
ಪೆರತಾಗಿ ರಾಜಿಸುವ ತುರ್ಯವೆನಿಸುವನು ||4||
ಭೂತಭೌತಿಕ ವರ್ತಮಾನ ಕಾಲದೊಳು |
ಖ್ಯಾತ ಪ್ರಾಗ್ಭಾವಾದಿ ಘಟವಿಭೇದಗಳು |
ಆತ್ಮದೊಳು ಪೊಗದಿರಲು ಅವ್ಯಕ್ತನಾಗಿ |
ಸಾತಿಶಯ ಮಹಲಿಂಗರಂಗ ಗುರುವೆ ತಾನಾಗಿ ||5||
ಇಲ್ಲೇ ಕೈವಲ್ಯ ಕಾಣಿರೋ
ಇಲ್ಲೇ ಕೈವಲ್ಯಕಾಣಿರೋ | ಮತ್ತಿನ್ನೆಲ್ಲಿ
ಹುಡುಕಿ ನೋಡಿದೊಡಿಲ್ಲ ಕೈವಲ್ಯ | ||ಪ||
ದೇಹವು ದೇವಾಲಯವದರೊಳು ಸೂಕ್ಷ್ಮ |
ದೇಹದೊಳಿಹ ಜೀವ ಶಿವನೆಂದು ಭಾವಿಸಿ |
ಮೋಹರಾಗವು ಯೆಂಬ ನಿರ್ಮಾಲ್ಯ ತ್ಯಜಿಸಿ |
ಸೋಹಮೆನ್ನುತ ಪೂಜೆಗೈವ ಸುಜ್ಞಾನಿಗೆ ||1||
ವರಛಿದ್ರಘಟದಿ ರಾಜಿಸುತಿಪ್ಪ ಜ್ಯೋತಿಯು |
ಉರಿಯಂತತನು ನೇತ್ರ ಮೊದಲಾದ ಇಂದ್ರಿಯ |
ಕರಣಾದಿಗಳಿಗೆ ಸಾಕ್ಷಿಕನಾಗಿ ಸರ್ವತ್ರ |
ಪರಿಪೂರ್ಣ ಭಾವದಿ ಸುಖಿಪಾತ್ಮ ನಿಷ್ಟಂಗೆ ||2||
ಸುಪ್ತಿ ಜಾಗರದೊಳು ತೋರುತಲಿರ್ಪ |
ಚಿತ್ತಹಂಕಾರದಿ ಗುಣಕೆ ಬೇರಿಪ್ಪ |
ಜ್ಞಪ್ತಿ ಸಂವಿನ್ಮಾತ್ರತುರ್ಯಲಕ್ಷ್ಯದಿನಿತ್ಯ |
ತೃಪ್ತ ನಿರಂಜನನಾದ ಚಿನ್ಮಾತ್ರಂಗೆ ||3||
ಉರು ಪುಣ್ಯಪಾಪದ ತೊಡಕಿಲ್ಲವಾಗಿ |
ತೆರೆಮಿತ್ರ ಶತ್ರುಭಾವನ ತೋರದಾಗಿ |
ವರಬಂಧ ಮೋಕ್ಷದ ಕಲ್ಪನೆಯುಡುಗೆ |
ಪರತತರ್ವದೊಳು ಬೆರತಿಹ ಶಿವಜ್ಞಾನಿಗೆ ||4||
ಬಹು ನಾಮರೂಪಿನ ಜಗ ಭ್ರಾಂತಿಯುಡುಗೆ |
ಸಹಜ ಬ್ರಹ್ಮಾನಂದ ಶರಧಿಯೊಳ್ಮುಳುಗಿ |
ಮಹಲಿಂಗರಂಗ ಸದ್ಗುರುವೆ ತಾನಾಗಿ |
ಇಹಪರ ಸಾಕ್ಷಿಯಾದ ಪರೋಕ್ಷ ಜ್ಞಾನಿಗೆ ||5||
ನೋಡು ನೋಡಲೆ ಮಾನಸೇಂದ್ರನೆ
ನೋಡು ನೋಡಲೆ ಮಾನಸೇಂದ್ರನೆ |
ನೋಡು ಮುನಿಕುಲಚಂದ್ರನೆ |
ನಾಡು ನಾಡುಗಳರಸಿ ಬಳಲದೆ |
ನೋಡು ನಿನ್ನೊಳು ಬ್ರಹ್ಮವಾ || ನೋಡು ||ಪ||
ನಿರುಪಮದ್ವಯನಿರಘ ನಿಷ್ಕ್ರಿಯ |
ಭರಿತಸರ್ವಜಗಾಶ್ರಯ |
ನಿರುತ ನಿಷ್ಕಳ ನಿತ್ಯ ನಿಜಪದ
ಪರಮ ನಿರ್ಗುಣ | ಬ್ರಹ್ಮವಾ | ನೋಡು ||1||
ಶಶಿಯು ರವಿ ಹವಿ ಮಿಂಚುಗ್ರಹಗಳು |
ಎಸೆವ ತಾರಾಗಣಗಳ |
ಬಸುರಿನೊಳ ಹೊರಗೆಸೆದು ಬೆಳಗುವ |
ಅಸಮ ಜ್ಯೋತಿ ಪ್ರಕಾಶವ ||2||
ತ್ರಿಗುಣವಲ್ಲದ ತ್ರಿಮಲಮಲ್ಲದ |
ಸ್ವಗತ ಭೇದಗಳೊಗೆಯದ |
ಅಗಣಿತನುಪಮ ಅಪ್ರತರ್ಕ್ಯದ |
ನಿಗಮವಂದಿತ ಬ್ರಹ್ಮವ ||3||
ಕರಣ ಇಂದ್ರಿಯಗಳಿಗೆ ಪ್ರಭುವು |
ಕರಣ ದೋಷಗಳಿಲ್ಲವು |
ಅರಿವು ಮರವೆಯ ಮೇಲಣರಿವು |
ಪರಮ ಸಚ್ಚಿದ್ರೂಪವು ||3||
ಜನನ ಮರಣದ ಜಡರು ಸೋಂಕದ |
ಪ್ರಣವ ಪರತರವೆನಿಸಿದ |
ಅನಘ ಗುರು ಮಹಲಿಂಗರಂಗನು |
ಎನಿಸಿ ರಾಜಿಪ ಬ್ರಹ್ಮವಾ ||4||
ನಿನ್ನಲ್ಲೇ ನೋಡು ಪರಬ್ರಹ್ಮನ
ನಿನ್ನಲ್ಲೇ ನೋಡೋ ಪರಬ್ರಹ್ಮವ
ನಿನ್ನಲ್ಲೆ ನೋಡೋ ||ಪ||
ನಿನ್ನನುಭವ ಜ್ಞಾನದೃಷ್ಟಿಯಿಂದಲಿ ನೋಡು
ನಿನ್ನಲ್ಲೇ ಸಾವಧಾನದಿ ತೋರುತಿಹುದು || ನಿನ್ನಲ್ಲೆ ||ಅ ಪ||
ಚಿನ್ನಾವ ಬಿಟ್ಟು ಆಭರಣಗಳ್| ಮುನ್ನಿಲ್ಲವಾಗಿ
ಮಣ್ಣು ಬಿಟ್ಟರೆ ಮಡಿಕೆಯು ಇಲ್ಲವೆಂಬಂತೆ |
ತನ್ನ ಬಿಟ್ಟರೆ ದೇವರಿಲ್ಲವೆಂಬನುಭೂತಿ ||1||
ಕೆನೆವಾಲಿನಲ್ಲಿ ನವನೀತವು | ಜನಿಸಲಿಕ್ಕದನು |
ಅನುವಾಗಿ ಕಾಸಿದ ತುಪ್ಪದಿ ಮುಖವಾ |
ಕ್ಷಣದಿ ಕಾಣುವ ಪರಶಿವ ತತ್ವ ಕಾಂಬುದು ||2||
ತನುವಿಂದ್ರಿಯಗಳ | ತಾಮಸ ರಜೋ ಗುಣಗಳಿಗಧಿಕ
ವೆನಿಪ ಸಾತ್ವಿಕ | ಮನಕರುಹಿಟ್ಟು ನೋಡಲಾ |
ಮನೆಗೊನೆಯೊಳು | ತುಂಬಿ ತುಳುಕಾಡುತ್ತಿಹುದು ||3||
ಹುಟ್ಟು ಸಾವಿಲ್ಲ | ಮಾಯಾಂಗನೆ ಕಾಟದಕಿಲ್ಲ |
ಎಂಟು ದಿಕ್ಕಿನೊಳಂಟಿ ಅಂಟಾದೆ ತುಂಬಿಹು
ದಂಟು ಮುಟ್ಟಿಗೆ ಸಿಕ್ಕದಲೆ ದೃಕ್ಕಾಗಿಹುದು ||4||
ಕನ್ನಡಿಯಲ್ಲಿ | ಪ್ರತಿಬಿಂಬಿಸಿ | ತನ್ನ ಕಾಂಬಂತೆ
ಉನ್ನತ ಸಾತ್ವಿಕ| ಬುದ್ಧಿಯೊಳ್ಬೆಳಗುವ
ಚನ್ನ | ಶ್ರೀ ಗುರು ಮಹಲಿಂಗ ಸದ್ರೂಪನ ||5||
ಜ್ಞಾನಿಯ ಜ್ಞಾನಿಗಳಾ ಭಾವಲಕ್ಷಣ
ಜ್ಞಾನಿಯ ಜ್ಞಾನಿಗಳಾ ಭಾವಲಕ್ಷಣಂ |
ಸಾನುರಾಗದಿ ನೋಡಿ ಅರಿಯವನಭಿಜ್ಞಂ ||ಪ||
ಹಾಲು ನೀರೊಂದಾಗಿ ಬೆರೆಯೇ ಲೋಕದಲ್ಲಿ |
ಹಾಲು ನೀರಿನ ಭೇದ ತಿಳಿಯದಂದದಲಿ |
ಖೂಳ ದೇಹದೊಳಾತ್ಮ ಬೆರೆತು ಕೊಂಡಿಹನು |
ಜಾಳು ಕರ್ಮಿಯ ಕಣ್ಗೆ ಕಾಣದಡಗಿಹನು ||1||
ಪರಮಾತ್ಮನ ಕಳೆಯನರಿಯದಲೆ ಸತತ |
ತೋರ್ಪ ಜಡತನುವಾತನು | ಎಂದು ಅರಿವಾತ
ಕ್ಷೀರ ನೀರಿನ ಗುಣ ಅರಿಯದಲೆ ಕುಡಿವ |
ಚಾರುಬಕದಂತೆಯ ಜ್ಞಾನಿಯೆನ್ನಿಸುವ ||2||
ಲೀಲೆಯಿಂತನು ಗುಣಗಳನ್ನು ಕಳೆದಿಡುತ |
ಲೋಲ ಆತ್ಮನ ಲಕ್ಷಣವನು ಅರಿವಾತ |
ಹಾಲು ಮಾತ್ರವ ಕುಡಿವ ನೀರನ್ನು ಬಿಡುವ
ಮೇಲ ಹಂಸದ ಪರಿಯ ಜ್ಞಾನಿಯೆನ್ನಿಸುವ ||3||
ದೊರೆಯು ಅಂತಃಪುರದೊಳಿರಲು ದುರ್ಮತಿಯು
ಕರಣಿಕನ ದೊರೆಯೆಂದು ವಂದಿಸುವ ಪರಿಯ |
ವರಹೃದಯ ಭರತಾತ್ಮನರಿಯದಲೆ ಪೊಳೆವ |
ಶರೀರಾತ್ಮಭಾವಿಯ ಜ್ಞಾನಿಯೆನ್ನಿಸುವ ||4||
ದೇಹವೆಲ್ಲವನಾದಿ ಸಿದ್ಧವಾಗಿರುವ |
ಸೋಹಮೆಂಬುವ ಬೋಧೆಯೊಳಗೆ ಮುಳುಗಿರುವ |
ದೇಹಿ ಗುರು ಮಹಲಿಂಗರಂಗನಾಗಿರುವ |
ಮೋಹರಹಿತನೆ ಜಗದಿ ಜ್ಞಾನಿಯೆನ್ನಿಸುವ ||5||
ಬ್ರಹ್ಮವತಂದು ತೋರಲು
ಬ್ರಹ್ಮವ ತಂದು | ತೋರಲು
ಆ ಬ್ರಹ್ಮ ಬೇರಿಹುದೇ ||ಪ||
ಕರ್ಮಕೋಟಲೆಯಲ್ಲಿ ಕೊರಗಿ ಸಾಯದೆ
ಪರ | ಬ್ರಹ್ಮವೆ ತಾನೆಂದು ಅರಿಯಬೇಕಲ್ಲದೆ ||ಅ ಪ||
ಕ್ಷಣಿಕ ಸಂಸಾರ | ಕಲ್ಪಿತ ಮಾಯ |
ಗುಣಕತಿ ದೂರ | ಮಣಿಗಣಸೂತ್ರದಂತಿರುತೆಲ್ಲ ದೇಹದಿ |
ಗಣನೆಗೆ ಬಾರದದ್ವಯನೆನ್ನಿಸಿರುವ ||1||
ನಿಗಮಾಗಮಕ್ಕೆ | ಸಿಕ್ಕದೆ ಮೂರು
ಜಗದಿ ತುಂಬಿರುವ | ಸ್ವಗತಾದಿ ಭೇದತ್ರಯದ ಬಾಧೆಯಿಲ್ಲದೆ |
ಗಗನದಂದದಿ ನಿರವಯವಾಗಿ ಇರುವ ||2||
ತೆಗೆದು ಅಜ್ಞಾನ | ಆವರಣವ |
ನೆರೆ ವೀಕ್ಷೇಪವನು ಅರಿತ ಪರೋಕ್ಷ ಜ್ಞಾನದಿ ತನ್ನ ನಿಜವನು |
ಗುರುಮಹಲಿಂಗನೆಂದರಿಯಬೇಕಲ್ಲದೆ ||3||
ತಿಳಿಯಬಾರದೆ ಹೀಗೆ
ತಿಳಿಯಬಾರದೆ | ಹೀಗೆ ತಿಳಿಯಬಾರದೆ ||ಪ||
ಅಳಿವುದೆಲ್ಲ ಜಗವು ತಾನೆ ||
ಉಳುಮೆಯಾದ ಬ್ರಹ್ಮವೆಂದು ತಿಳಿಯಬಾರದೆ ||ಅ ಪ||
ನೂರು ವರುಷದೊಳಗೆ ಮಡಿದು |
ಭಾರಿ ಭಾರಿ ಭವಕೆ ಬರುವ |
ತೋರದೇಹಮಯಕೆ ದೂರ ಸಾಕ್ಷಿ ಬ್ರಹ್ಮವೆಂದು || ತಿಳಿ ||
ಪ್ರಳಯವಾಗುವನ್ನ ಇರುತ
ಬಳಲಿ ಮೋಹ ರಾಗದಲ್ಲಿ |
ಅಳಿವ ಲಿಂಗ ದೇಹ ನೋಡ್ವ
ಉಳಿಮೆ ಬ್ರಹ್ಮ ತಾನೆ ಯೆಂದು || ತಿಳಿ ||
ನೂರು ಜನ್ಮ ಸುಕೃತ ಫಲದಿ |
ಚಾರು ಜ್ಞಾನವುದಿಸಲಳಿವ |
ಕಾರಣಾಂಗ ಸಾಕ್ಷಿಯಾದ |
ಪೂರ್ಣ ಬ್ರಹ್ಮತಾನೆ ಎಂದು || ತಿಳಿ ||
ಮೂರು ತನುವು ಮೂರು ಶಕ್ತಿ |
ಮೂರವಸ್ಥೆ ಮೂರು ಜೀವ |
ಮೂರು ಗುಣಗಳಂಟದಿರುವ |
ಸಾರಚಿನ್ಮಯ ಬ್ರಹ್ಮವೆಂದು || ತಿಳಿ ||
ಕರುಣಿ ಶ್ರೀಗುರು ರಂಗಲಿಂಗ |
ವರದತತ್ವ ಸಾರತಿಳಿಯೆ |
ನಿರಘನಿತ್ಯ ಮುಕ್ತ ತಾನೆ |
ನಿರುಪಮದ್ವಯ ಬ್ರಹ್ಮವೆಂದು || ತಿಳಿ ||
ಅರಿವುದೆ ಚಂದ ಬ್ರಹ್ಮಾನಂದ
ಅರಿವುದೆ ಚಂದ ||ಪ||
ಅರಿವುದೆ ಚಂದ ನಿರ್ಮಲ ಪ್ರಜ್ಞೆಯಿಂದ |
ಅರಿವು ತಾನಲ್ಲದೆ ಬೆರಿಲ್ಲವೆಲೊ ಕಂದ | ಅರಿವುದೆ ||ಅ ಪ||
ಹೇಳುವದಲ್ಲ | ಕಿವಿ ಕೊಟ್ಟಿನ್ನು |
ಕೇಳುವುದಲ್ಲ ಹೇಳದೆಯಿರಲದು |
ತಿಳಿಯುವದಲ್ಲ | ಹೇಳಿ ವಾಚಕದಿಂದ ಕೆಡಿಸುವದಲ್ಲ ||1||
ಪರಿಪರಿ ನಾಮ ರೂಪುಗಳೆಲ್ಲ | ನೆರೆ ಕಳೆದುಳಿದ
ವರದ್ರಷ್ಟು ದರ್ಶನ ದೃಶ್ಯಾದಿಗಳಿಗೆಲ್ಲ |
ಪೆರತಾದನಿರುಪಮ ನಿರ್ಗುಣ ಬ್ರಹ್ಮವ ||2||
ಹೆಣ್ಣು ಗಂಡಲ್ಲ | ಹೊನ್ನಲ್ಲವು |
ಮಣ್ಣೆಂಬೊದಲ್ಲ | ಹೆಣ್ಣು ಗಂಡಾಗಿ ತುಂಬಿದೆ ಜಗವೆಲ್ಲ |
ಕಣ್ಣಿಗೆ ಕಾಣಿಸುವುದು ನಿಜವಲ್ಲ ||3||
ಧ್ಯಾನದೊಳಿಲ್ಲ | ಧಾರಣೆ ಯೋಗ
ಮೌನದೊಳಿಲ್ಲ | ಧ್ಯಾನಧಾರಣ ಯೋಗಕ್ಕಾದಿ ಅಂತ್ಯದೊಳು |
ತಾನೊಂದು ಸಾಕ್ಷಿಯಾಗಿಹುದು ನಿಶ್ಚಲಮಾಗಿ ||4||
ವರ ಶಾಂತನಾಗಿ | ಮಾನಾಭಿಮಾನ
ಯರಡನ್ನು ನೀಗಿ | ನಿರುತ ಅಖಂಡೈಕ ರಸಮಯನಾಗಿ ಶ್ರೀ |
ಗುರು ಮಹಲಿಂಗರಂಗನೆ ತಾನೆಯಾಗಿ ||5||
ಜ್ಞಾನಾಮೃತ ಸಿಕ್ಕಿತು
ಜ್ಞಾನಾಮೃತ ಸಿಕ್ಕಿತು | ಹೃನ್ನಾಳದಿ |
ಜ್ಞಾನಾಮೃತ ಸಿಕ್ಕಿತು ||ಪ||
ನಾನು ನೀನೆಂಬ ಕತ್ತಲೆ ಹರಿದೋಗಲು ||
ಪೂರ್ಣ ಚಂದ್ರಾನಂದ ಬೆಳಕಿನೊಳ್ಬೆಳಕಾಗಿ || ಜ್ಞಾನಾ ||ಅ.ಪ||
ಕುಹಕ ಕುಟಿಲವಡಗಿ ಶಾಂತಿಯು |ಮೌನ
ಸಹಜ ಸದ್ಗುಣ ಬೆಳಗಿ |
ಇಹ ಭೋಗ ಸಾಮ್ರಾಜ್ಯ ತೃಣಗಣವಾಗೀ |
ಬಹು ಜನ್ಮ ಸುಕೃತದ ಫಲ ಲಭ್ಯವಾಗಿ || ಜ್ಞಾನಾ ||1||
ಚಿನುಮಯಾತ್ಮನ ಆರಣೀ ಮಾಡುತ | ಮೂಲ
ಪ್ರಣವಮೇಲರಣಿ ಮಾಡಿ |
ಮನದಿ ಸೋಹಂ ಭಾವದಿಂದಲಿ | ಮಥಿಸಿ
ಅನುಭವ ಜನಿತ ಚಿನ್ನಾದ ಚಿತ್ಕಳೆಂಬ | ಜ್ಞಾನಾ ||2||
ವರಸಿಂಧು ಮಥನದೊಳು |
ಕೂಡಿದ ರಾಕ್ಷಸರ ಪಡೆಯಡಗಲಾಗಿ |
ವರದೇವ್ತೆಗಳಿಗೆ ದಿವ್ಯಾಮೃತ ಬಂದಂತೆ ||
ಉರುಜೀವತ್ವಳಿಯೆಚಿದಂ ಬುಧಿಯಿಂ ಬಂದ ಜ್ಞಾನಾ ||3||
ಇದು ದಿವ್ಯ ಸಿದ್ಧರಸ | ಚಂದ್ರಾಮೃತ
ವಿದು ಬ್ರಹ್ಮಬೋಧರಸ |
ಇದು ಭವರುಜೆಗೌಷಧವು ನಿಜವೆನ್ನುತ್ತ |
ಮುದದಿ ಸೇವಿಸೆ ವರ ಮುಕ್ತಿಯನೀವಂಥ || ಜ್ಞಾನಾ ||4||
ಕರ್ಮನಿಷ್ಟಗೆ ಸಿಕ್ಕದ | ಸಾಧಿಪ ವ್ರತ
ಕರ್ಮಭ್ರಷ್ಟಗೆ ದಕ್ಕದ |
ಕರ್ಮದ ಬೀಜ ಜ್ವಾಲಾಗ್ನಿಯೂ ದಹಿಸುವ |
ಮರ್ಮವರಿತ ಗುರುರಂಗನ ಕೃಪೆಯೆಂಬ || ಜ್ಞಾನಾ ||5||
ಆನಂದ ಪದವಿಯನು ಹೇಳಲಾರಿಂದಹುದು
ಆನಂದ ಪದವಿಯನು ಹೇಳಲಾರಿಂದಹುದು |
ಆನಂದದೊಳ್ಮುಳುಗಿ ಮನ ಮೌನವಾಗಿರಲು ||ಪ||
ಹಸಿವಿಗನ್ನವು ದೊರೆಯಲಾನಂದ ಸರ್ವರಿಗೆ |
ಪಶುವುಗಳಿಗಾನಂದವೆಳೆಗರುವ ನೆಕ್ಕಲ್ |
ವಿಷಯ ನಿದ್ರಾನಂದ ಮೃಗ ಪಕ್ಷಿಪಶುಗಳಿಗೆ |
ಅಸಮ ಯೋಗಾನಂದ ವರ ಯತೀಶ್ವರಗೆ || ಆನಂದ ||1||
ವರಚಕ್ರವರ್ತಿಮಾನುಷ ದೇವ ಗಂಧರ್ವ |
ಪರಮ ದೇವರ್ಕಗಳಿಂದ್ರ ಬೃಹಸ್ಪತಿಯು |
ಪರಮೇಷ್ಟಿ ನವಬ್ರಹ್ಮಗುರುಗಳ ಮಹದಾನಂದ |
ವಿರುವ ವೊಂದಕ್ಕೊಂದು ನೂರು ಮಡಿಯಧಿಕವೆನಿಸಿ || ಆನಂದ ||
ಅರಿಯಲಿಂತಾನೆಂದ ಪದವಿಗಳು ಜಗದೊಳಗೆ |
ನರಸ್ವಪ್ನದಂತೆ ತೋರಡಗುವದರಿಂದ |
ನಿರುಪಮದ್ವಯ ಪೂರ್ಣ ಬೋಧೆಯಿಂದೊಗೆದ |
ಪರಬ್ರಹ್ಮಾನಂದದೊಳು ಲವಮಾತ್ರದೆನಿಸದಾಗಿ || ಆನಂದ ||
ವೊಳಹೊರಗೆ ಪರಿಪೂರ್ಣ ಕುಂಭ ಜಲದಂತೆ |
ವೊಳಹೊರಗೆ ಮಿಗೆ ಶೂನ್ಯ ಕುಂಭ ನಭದಂತೆ |
ಸಲೆಕರಣ ವೃತ್ತಿ ಬ್ರಹ್ಮಾನಂದ ಶರಧಿಯೊಳು
ಮುಳುಗಿ |ಮೈಮರೆದ ನಿಜಸ್ವಾನುಭವದನುಪಮದ || ಆನಂದ ||
ಸತ್ತೆನಿಸಿ ಜಗದಾದಿ | ಮಧ್ಯದಲಿ ತುಂಬಿರುವ |
ಚಿತ್ತೆನಿಸಿ ಮೂರವಸ್ಥೆಗಳ ಬೇರಿಟ್ಟರಿಯುವ |
ಮತ್ತೆ ಆನಂದವೆನಿಸಿ ಪೆರತೊಂದು ತೋರದಿಹ |
ನಿತ್ಯ ಪರಿಪೂರ್ಣ ಪರಮಗುರು ಮಹಲಿಂಗನಾಗಿರುವ || ಆನಂದ ||
ಶಿವಯೆಂಬ ಕಾಮಧೇನು ಇರಲಾಗಿ
ಶಿವೆಯೆಂಬ ಕಾಮಧೇನು ಇರಲಾಗಿ |
ಭವವೆಂಬ ಬರವು ಉಂಟೆ ವತ್ಸಾ ಶಿವೆಯೆಂಬ ||ಪ||
ಆದಿಪ್ರಣವಾಕೆ ಮುಖವು | ಪಾದಗಳು |
ವೇದನಾಲ್ಕಾರು ಶಾಸ್ತ್ರ ಸ್ಮೃತಿಯು |
ವಾದತರ್ಕಗಳೆ ವುದರಂ | ಪುಚ್ಚದಿಂ
ದಾದರೈವರು ಬ್ರಹ್ಮರು ವತ್ಸ || ಶಿವೆ ||1||
ಮೂಲಕುಂಡಲಿ ಎಬ್ಬಿಸಿ | ವರಬ್ರಹ್ಮ
ನಾಳವನು ದೂರದಲ್ಲಿ | ತಾನೆ |
ಲೀಲೆಯಿಂ ಕಾಣುತಿಹಳು |
ಪರಬ್ರಹ್ಮ ನೀಲತೋಯದ ಮಧ್ಯದಿ | ವತ್ಸ || ಶಿವೆ ||2||
ವರಧರ್ಮ ಆರ್ಥಕಾಮ ಮೋಕ್ಷವಂ |
ಕರೆದು ಭಕ್ತರಿಗೀವುದಂ ಕಂಡು |
ಸುರಲೋಕದವರ ಪೊರೆಯುತ್ತಿರುವಂಥ |
ಸುರಧೇನು ನಾಚುತ್ತಿಹುದೈ | ವತ್ಸ || ಶಿವೆ ||3||
ಮೂಲ ಶಿವಜೀವರೆಂಬ ಮಕ್ಕಳನು |
ಲೀಲೆಯಿಂದ ಪಡೆದು ಜ್ಞಾನವೆಂಬ |
ಪಾಲಿತ್ತು ಎಡಬಿಡದೆಲೆ ಪ್ರೀತಿಯಿಂ |
ಪಾಲಿಸುವ ಲೋಕಜನನೀ | ವತ್ಸ || ಶಿವೆ ||4||
ಮೃತ್ಯುಹರ ಕಾಮಧೇನು ಗುರು | ರಂಗ
ನೊತ್ತಿನೊಳುಯಿರುವದಾಗಿ |
ನಿತ್ಯ ಭಕ್ತಿಯಿಂದಾಶ್ರಯಿಸಿದವರ ಪೊರೆವಂಥ |
ಸತ್ತು ಚಿತ್ತಾನಂದಳು | ವತ್ಸ || ಶಿವ ||5||
ಶಿವನೆಂಬ ಕಲ್ಪವೃಕ್ಷ ಇರಲಾಗಿ
ಶಿವನೆಂಬ ಕಲ್ಪವೃಕ್ಷ ಇರಲಾಗಿ |
ಭವವೆಂಬ ತಾಪವುಂಟೆ || ವತ್ಸ ||
ಶಿವನೆಂಬ ಕಲ್ಪವೃಕ್ಷ ||ಪ||
ಏಳು ಲೋಕಗಳಡಗಿಹ ಈ ವೃಕ್ಷ |
ಮೂಲದಲಿ ಬ್ರಹ್ಮ ಮಧ್ಯದಲಿ |
ಲೀಲೆಯಿಂ ವಿಷ್ಣು ರುದ್ರ ಅಗ್ರದಲಿ |
ಆಲಯವ ಮಾಡಿ ಇಹರು | ವತ್ಸ || ಶಿವ ||
ಆರು ನೆಲೆಗಳ ಭೇದಿಸಿ ತೊಂಭತ್ತು |
ಆರು ಶಾಖೆಗಳೊಳಾಡಿ ಸೂಕ್ಷ್ಮ |
ದ್ವಾರದೊಳಗೆರಡು ಪಕ್ಷಿ ಸೇರಿ ಸುಖ |
ಸಾರ ಉಣ್ಣುತಲಿಪ್ಪವು | ವತ್ಸ || ಶಿವ ||
ವರಜಾಗ್ರತ್ತೆಂಬ ನದಿ ರಾಜಿಸುವ |
ಮರದಿ ಒಂಭತ್ತು ಪುಷ್ಪ | ಅರಳಿ
ವರ ಬಿಂದುಕಳೆ ನಾದವು ಎಂತೆಂಬ |
ಪರಿಮಳವು ಪೊತ್ತೆಸೆವುದು | ವತ್ಸ || ಶಿವ ||
ಪುದಿದ ಅಜ್ಞಾನವೆಂಬ | ಪಣ್ಣೆಲೆಗ
ಳುದುರಿ ಪರಬೊಮ್ಮ ಬೋಧ | ಎಂಬ
ಮೃದುವಾದ ಚಿಗುರೆಲೆಗಳು ನೆರಳಾಗಿ |
ಹೃದಯಕಾನಂದ ಪೂಣ್ಗುಂ ವತ್ಸ | ಶಿವ ||
ಪರಮ ಜ್ಞಾನಾಮೃತವನೇ ತುಂಬಿರುವ |
ವರಮೋಕ್ಷವೆಂಬ ಫಲವಂ ಇತ್ತು |
ಗುರು ಮಹಲಿಂಗನಾ ಭಕ್ತರ್ಗೆ |
ಕರೆದು ಕೊಡುವದರಿಂದಲಿ ವತ್ಸ || ಶಿವ ||
ಚಿಂತಾಮಣಿ ಸಿಕ್ಕಿತು ಶ್ರೀಗುರುವೆಂಬ
ಚಿಂತಾಮಣಿ ಸಿಕ್ಕಿತು ಶ್ರೀಗುರುವೆಂಬ |
ಚಿಂತಾಮಣಿ ಸಿಕ್ಕಿತು ||ಪ||
ಚಿಂತಿಸಲು ಅಜ್ಞಾನ ಪಟಲವ |
ಮುಂತೆ ಛೇದಿಸಿ ಜ್ಞಾನಬೋಧೆಯ |
ಸ್ವಾಂತರಂಗದಿ ತುಂಬಿ ಹಿಂದಣ |
ಭ್ರಾಂತಿಯಲ್ಲವ ಕಳೆದು ರಾಜಿಪ || ಚಿಂತಾ ||ಅ.ಪ||
ಪರುಷವೇದಿಯ ಸೋಂಕಿದ ಕಬ್ಬಿಣ ತಾನೆ |
ವರೆ ಅಪರಂಜಿಯಾದ ಪರಿಯ |
ವರ ಅಮೃತಸ್ತ ಮಸ್ತಕ | ಸ್ಪರಿಶದಿಂ ತನ್ನಂತೆ ಮಾಡುತ
ತರಿದು ಭವಶಾಪವನು ಕರುಣದಿ |
ಸ್ಥಿರ ಮುಕುತಿ ಸಾಮ್ರಾಜ್ಯವಿತ್ತ || ಚಿಂತಾ ||1||
ಶರೀರವು ನಶ್ವರವು ಇಂದ್ರಿಯಾ ಪ್ರಾಣ |
ಕರಣಗಳ್ | ಚಂಚಲವು |
ಅರಿಯಲಿವಕಾಧಾರಮಾಗಿಯೆ |
ಮೆರೆವ ಮುವತ್ತೆಂಟು ಕಳೆಗಳ್ |
ಬೆರೆತು ಬೆಳಗುವ ಸ್ವಪ್ರಕಾಶದ |
ಪರಮಪ್ರತ್ಯಗ್ವಸ್ತುವೆಂಬುವ || ಚಿಂತಾ ||2||
ಕಾಣುವ ನಾದಬಿಂದು ಚಿತ್ಕಳೆಯೊಮ್ಮೆ |
ಕಾಣದೆ ಪೋಪುದೆಂದು |
ಭಾನುವಿಗೆ ವರದೀಪದಾರತಿ |
ಜಾಣರೆತ್ತುವ ಪರಿಯ ಯೋಗದಿ |
ಏನು ಫಲವಿಲ್ಲಮಲಬ್ರಹ್ಮ
ಜ್ಞಾನವೇ | ಶ್ರೇಷ್ಠೆನುತ ವರದ || ಚಿಂತಾ ||3||
ಪುಂಸ್ತ್ರೀ ನಪುಂಸ ಭೇದ ರೂಪಿನ ಭ್ರಾಂತಿ |
ಧ್ವಂಸಗೈಯುತ ಪೂರ್ವದ |
ಸಂಶಯದ ಕರ್ಮವನು ದಹಿಸುತ |
ಹಂಸಹಂಸೋಹಮೆನ್ನುತ್ತ |
ಶಿಂಶುಮಾರದಿ ಆಡುತ್ತಿರುವ |
ಹಂಸಪಕ್ಷಿಯ ಶಿರದಿ ಢಾಳಿಪ || ಚಿಂತಾ ||4||
ಕ್ಷುಧೆ ತೃಷೆ ಮೊದಲಾದ ಆರೂರ್ಮಿಗೆ |
ಮೊದಲೆ ತಾ ಸಾಕ್ಷಿಯಾದ |
ಪದುಳ ಗುರು ಮಹಲಿಂಗನೆನ್ನಿಸಿ |
ಹೃದಯದೊಳ ಹೊರಗೆಲ್ಲ ಭರಿತದಿ |
ಪದುಮ ಶತಕೋಟಿಯಂದದಿ |
ವದಗಿ ಥಳಥಳ ಬೆಳಗುವಂಥ || ಚಿಂತಾ ||5||
ಪುರುಷ ಕಣಿಯೆಂಬ ರತ್ನ
ಪುರುಷ ಕಣಿಯೆಂಬ ರತ್ನ ದೊರೆತವನೆ |
ಧರೆಯೊಳಗೆ ಪುಣ್ಯಾತ್ಮನು ವತ್ಸ |
ಪುರುಷ ಕಣಿಯೆಂಬ ||ಪ||
ಬ್ರಹ್ಮಗಿರಿಯೊಳಗಿರ್ಪುದು | ಅದನರಿತ
ಬ್ರಹ್ಮ ಇಂದ್ರಾದಿ ಸುರರು | ಮುನಿಗಳ್
ಪೇರ್ಮಿಯಿಂ ಋಷಿಸಿದ್ಧರು ಕಾದಿಹರು |
ತಮ್ಮ ಉಜ್ಜೀವನವು ಯೆಂದು | ವತ್ಸ || ಪುರುಷ ||
ಸೃಷ್ಟಿಯೊಳು ಶ್ರೇಷ್ಠವೆನಿಸಿ | ಸುಕೃತಿಗಳು
ದೃಷ್ಟಿ ಗೋಚರಮಪ್ಪುದು | ಇದನು
ಮುಟ್ಟದವರಘವ ಸುಟ್ಟು | ತನ್ನಂತೆ
ಶ್ರೇಷ್ಟತೆಯಗೈಯುತಿಹುದು | ವತ್ಸ | ಪುರುಷ ||
ಪರಮತುರ್ಯನಿಮದು ಇದು ಸತ್ಯ |
ವಿರತಿ ಉಪರತಿಯು ಬೋಧೆಯೆಂಬ |
ಪರಮ ಕಲ್ಯಾಣ ಗುಣದಿಂ | ಬೆಳಗುತಿಹ |
ವರಚಿಹ್ನೆಯಿಂದಿರುವದೂ | ವತ್ಸ || ಪುರುಷ ||
ವರಜ್ಞಾನ ಭೂಮಿಯೆಂಬ ಥಳ ಥಳಿಪ |
ಪರಮ ಜ್ಯೋತಿರ್ಲತೆಗಳು | ನಿತ್ಯ
ಉರು ಸಮಾಧಿಗಳೆಂಬುವ ಅಮೃತಲತೆ |
ಸ್ಫುರಿಸಿ ಪರಿವೇಷ್ಠಿಸಿಹುವು | ವತ್ಸ || ಪುರುಷ ||
ಕಲ್ಲುಕುಣಿಯಲ್ಲ ಬ್ರಹ್ಮವೆಂತೆಂಬ |
ಸಲ್ಲಲಿತ ಜ್ಞಾನರತ್ನ ಜಗದಿ |
ಕಲ್ಲು ಬೆಲ್ಲವ ಮಾಡಿದ|
ಗುರು ರಂಗನಲ್ಲಡಗಿಕೊಂಡಿರ್ಪುದು | ವತ್ಸ || ಪುರುಷ ||
ಮರುಜ ಮಣಿಯೆಂಬ ರತ್ನ
ಮರುಜ ಮಣಿಯೆಂಬ ರತ್ನ ದೊರೆತವಗೆ |
ಮರಣ ಬಾಧೆಗಳಿಲ್ಲವು |
ವತ್ಸ ಮರುಜ ಮಣಿಯೆಂಬ ||ಪ||
ಚಿನುಮಲಾದ್ರಿಯೊಳಿರ್ಪುದೂ | ರವಿಯಂತೆ
ನಿರ್ಮಳದಿ ಬೆಳಗುತಿಹುದು | ಇದಕೆ |
ಮನ್ಮನಿಗಳಜಮುಖ್ಯರೂ ಕಾದಿಹರು ||
ನೆಮ್ಮಿ ತಪವನು ಗೈಯುತ ವತ್ಸ || ಮರು ||1||
ಸತ್ತವರ ಬದುಕಿಸುವದು | ತೃಣವೆನಿಸ
ದುತ್ತಮದ ಜೀವರತ್ನ | ಇದನು
ಅರ್ಥಿಯಿಂ ಪೂರ್ವದವರು | ಪಡೆದು
ತಮ್ಮ ಮೃತ್ಯುಬಾಧೆಯನಳಿದರು | ವತ್ಸ || ಮರು ||2||
ಹಿಂದೆ ರಾವಣ ಯುದ್ಧದೀ ಸೌಮಿತ್ರಿ |
ಕಂದಿ ಮೂರ್ಛಿತನಾಗಿರೆ | ಹನುಮ |
ತಂದ ಸಂಜೀವನದ ಗಿರಿಯಿಂ | ದೆಚ್ಚೆತ್ತ |
ನೆಂದುಕೊಂಬರು ಜಗದೊಳು || ಮರು ||3||
ಇಂದು ಆತ್ಮಾರಾಮನೂ | ಪುಸಿಮಾಯ |
ಬಂದಿಯಿಂ ತಾ ಮರತಿರೇ ಗುರುವು |
ಬಂದು ಪ್ರತ್ಯಕ್ಷ ಕೊಟ್ಟ | ವಾಕ್ಯದಿಂ
ಬಂಧನವೆ ಬಯಲಾಯಿತು | ವತ್ಸ || ಮರು ||4||
ಮೀರಿರುವ ಜಾಡ್ಯಕಿದರ ಸುಳಿಗಾಳಿ |
ದೂರ ಬೀಸಿದ ಮಾತ್ರದಿ ಅವನ |
ಪ್ರಾರಬ್ಧವೆಲ್ಲ ನಸಿದು ನಿರ್ಮಳದಿ |
ಧೀರ ಗುರುರಂಗನಪ್ಪಂ ವತ್ಸ |
ಮರುಜಮಣಿಯೆಂಬ ರತ್ನ | ವತ್ಸ || ||5||
ಅಮನಸ್ಕಯೋಗವಿದು
ಅಮನಸ್ಕಯೋಗವಿದೂ | ಮಾನಸ ರಾಜ |
ಕ್ರಮದಿನೀ ಸಾಧಿಪುದು ||ಪ||
ಅಮಲ ಬ್ರಹ್ಮ ಜ್ಞಾನನಿಧಿ ಬ್ರಹ್ಮ ಇಂದ್ರಾದಿ |
ಪ್ರಮುಖರಿಂ ಪೂಜಿತ ನಿರ್ವಾಣ ಪಥವು ||ಅ ಪ||
ಧರೆಯೊಳು ಪ್ರಖ್ಯಾತಿಯು ಯೋಗಂಗಳೋಳ್ |
ಮೆರೆವ ಶಿಖಾಮಣಿಯು |
ವರಸೂಕ್ಷ್ಮ ಬುದ್ಧಿಗೆ ಸುಲಭವು ಸಾಧ್ಯವು |
ಉರು ಮಂದಬುದ್ಧಿಗೆ ಕಠಿಣವಸಾಧ್ಯವು || ಅಮ ||1||
ಮನವೆ ವಾಸನಮಯವು ಸರ್ವಾರಂಭ |
ಮನವೆ ಮಾಯಾ ಗುಣವು |
ಮನವೆ ಸಂಶಯ ರೂಪ ಜಡವಣು ಮಾತ್ರವು |
ಮನವೆ ನಾಶನವಾಗಲಮನಸ್ಕವೆನಿಪುದು || ಅಮ ||2||
ಅರಿವರ್ಗ ಮದಗುಣವು ನಾಶವು ಕೆಟ್ಟ |
ದುರಿಯ ಕರ್ಮವು ನಾಶವು
ಪರಮ | ಗುಹ್ಯಾದ್ಗುಹ್ಯವೆನಿಸಿಕೊಂಡಿಹುದಿದು |
ಗುರುಮಹಲಿಂಗ ಬೋಧಿಪ ಬ್ರಹ್ಮವಿದ್ಯವು || ಅಮ ||3||
ಮನವ ಜೈಸಲರಿದು
ಮನವ ಜೈಸಲರಿದು | ಜೈಸದೆ
ಘನಸುಖವಳವಡದು ||ಪ||
ಕ್ಷಣದೊಳನರ್ಗಳ ಕಾರ್ಯವಗೈವನು |
ಮನುಜ ಮಾಡದ ಕೆಲಸೀನ್ನೇನಹುದು |
ಮನವ ಜೈಸ ||ಅ ಪ||
ಹುಲಿಯ ಹಾಲು ವಂದು | ಸಾಸಿರ
ಕೊಳಗದಿ ತಂದೊಯ್ದು |
ಇಳೆಯೊಳಗುತ್ತಮ ಶಿವರಾತ್ರಿ ದಿವಸದಿ |
ಮಲಹರಗಭಿಷೇಕ ಮಾಡಲುಬಹುದು | ಮನ ||1||
ಮೊಲದ ಗಿಣ್ಣು | ತಂದು ಪಾಯಸ |
ನಲಿವಿನಿಂದಲಿಗೈದು |
ಸಲೆ ದ್ವೀಪಾಂತ್ರದಿ ಪರುಷಲಿಂಗಕ್ಕೆ |
ನಲವಿಂದ ನೈವೇದ್ಯ ಮಾಡಲುಬಹುದು || ಮನ ||2||
ಜೀವದ ಕೇಸರಿಯ ನಖಗಳ |
ಸಾವಧಾನದಿ ತಂದು
ಭಾವಿಸಿ | ಬಿಲ್ವ ಪತ್ರೆನುತ ಗಜೇಶನಿಗೆ |
ಸಾವಿರ ಮಂತ್ರದಿ ಪೂಜಿಸಬಹುದು || ಮನ ||3||
ಉರುಗನ ಹೆಡೆಯೊಳಗೆ |
ರಾಜಿಪ ಜೀವರತ್ನವನು |
ಧರೆಯೊಳಗಮೃತೇಶ್ವರನಿಗೆ ಉನ್ನತ |
ಸರವನು ಪೋಣಿಸಿ ಅರ್ಪಿಸಬಹುದು || ಮನ ||4||
ಏನು ಮಾಡಿದಡೇನು ಮನಸಿಗೆ |
ತಾನೆ ಸಾಕ್ಷಿ ಇರುವ ಜ್ಞಾನಿ |
ಶ್ರೀಗುರು ಮಹಲಿಂಗನ ಕಾಣ್ದಿರೆ |
ಕೋಣ ಗಾಣವಸುತ್ತಿ ಸತ್ತಂತಹುದು || ಮನ ||5||
ಕೋತಿ ಮನವ ನಂಬಬಹುದೆ
ಕೋತಿ ಮನವ ನಂಬಬಹುದೆ | ಇಂಥ
ಕೋತಿ ಮನದ ಚೇಷ್ಟೆಗೊಳಗಾಗಬಹುದೆ | ಕೋತಿ ಮನವ ||ಪ||
ತನುವೆಂಬೋ ವೃಕ್ಷದೊಳಿಹುದು ದುಷ್ಟ |
ಗುಣವೆಂಬ ಕೊಂಬೆಗಳಿಗೆ ಹಾರುತ್ತಿಹುದು |
ಅನುಮಾನಗಳ ರೂಪಾಗಿಹುದು |
ಒಂದು ಕ್ಷಣದಿ ಈರೇಳು ಲೋಕವ ಸುತ್ತುತ್ತಿಹುದು || ಕೋತಿ ||1||
ದಶದಿಕ್ಕುಗಳ ನೋಡುತಿಹುದು ಒಮ್ಮೆ |
ಬಿಸಜಾಕ್ಷಿಯರ ನೋಡಿ ಪಲ್ಕಿಸಿಯುವುದು |
ವ್ಯಸನವೇಳರ ಪಾಲಾಗಿಹುದು ಕೆಟ್ಟ |
ವಿಷಯಂಗಳೆಂಬ ಪಣ್ಗಳ ಮೆಲ್ಲುತ್ತಿಹುದು | ಕೋತಿ ||2||
ವರಜ್ಞಾನದರಮನೆ ಸೇರದು | ನಿತ್ಯ
ದುರಿತ ಕರ್ಮದ ಬನದೊಳಾಡತ್ತಿಹುದು |
ನರಕದಿ ಬಿದ್ದು ಹೋಗುವುದು ನಮ್ಮ |
ಗುರು ಮಹಲಿಂಗನ ಮರೆತುಕೊಂಡಿಹುದು || ಕೋತಿ ||3||
ಮನವ ಜರಿಯಬೇಡಣ್ಣ
ಮನವ ಜರಿಯಬೇಡಣ್ಣ ನಿನ್ನ |
ಮನವ ನೀನರಿತರೆ ನೀನೆ ಮುಕ್ಕಣ್ಣ |
ಮನವ ಜರಿಯಬೇಡಣ್ಣ ||ಪ||
ಮನವೆ ಭಕ್ತಿಯ ಮಾಡುತ್ತಿಹುದು ಮತ್ತೆ
ಮನವೆ ವಿರಕ್ತಿಯಿಂದೆಲ್ಲ ತೋರೆಯುವದು |
ಮನವೆ ಸದ್ಗುರು ಹೊಂದುತಿಹುದು | ಇಂಥ |
ಮನವೆ ಮಾನಸ ಪೂಜೆಯೊಳು ರಮಿಸುವುದು || ಮನವ ||1||
ಮನವೆ ಹಠವ ಸಾಧಿಸುವದು | ಒಮ್ಮೆ
ಮನವೆ ಯೋಗದಿ ಸಿದ್ಧಿ ಹೊಂದುತಲಿಹುದು |
ಮನವೆ ಮಂತ್ರವ ಜಪಿಸುವುದು | ಇಂಥ |
ಮನವೆ ದೈವವ ಸ್ವಾತಂತ್ರದೊಳಿರಿಸುವುದು || ಮನವ ||2||
ಮನವೆ ಮುದ್ರೆಯ ಸಾಧಿಸುವದು | ನಿತ್ಯಾ
ಮನವೆ ತಾರಕ ಬ್ರಹ್ಮದೊಳು ಬೆರೆಯುವದು |
ಮನವೆ ಮೌನದಿ ಕುಡುರುವದು | ಇಂಥ |
ಮನವೆ ಆತ್ಮನ ನೆನೆದಾನಂದಿಸುವುದು || ಮನವೆ ||3||
ಮನವೆ ತತ್ವಗಳರಿಯುವುದು | ಮತ್ತೆ
ಮನವೆ ಸರ್ವೇಂದ್ರಿಯ ರಾಜನಾಗಿಹುದು |
ಮನವೆ ಸೂಕ್ಷ್ಮದಿ ಸುಳಿಯುವದು |
ಇಂಥ ಮನವೆ ಬ್ರಹ್ಮಾಂಡ ಪಿಂಡಾಂಡವಾಗಿಹುದು || ಮನವ ||4||
ಮನವೆ ಜ್ಞಾನವ ಸಾಧಿಸುವದು | ಖ್ಯಾತಿ
ಮನವೇ ಮುಕ್ತಿಯ ರಾಜ್ಯವನ್ನು ಆಳುವದು |
ಮನವೆ ಬ್ರಹ್ಮನ ಹೊಂದುತಿಹುದು | ಇಂಥ |
ಮನ ಗುರು ಮಹಲಿಂಗನೊಳಗೈಕ್ಯವಹುದು || ಮನವ ||5||
ಮನವು ನಾಶವಾಗೂವನ್ನ
ಮನವು ನಾಶವಾಗೂವನ್ನ |
ಜನಿಸದಾತ್ಮಜ್ಞಾನ ಮುನ್ನಾ |
ಮನವೆ ನಾಶಗೈದಾ ಪುರುಷಾ ಜ್ಞಾನಸಂಪನ್ನ ||ಪ||
ನಿರುತ ನೀರು ಕ್ಷೀರೊಂದಾಗಿ |
ಬೆರೆತಿರುವ ಪರಿ ವಾಯು ಮನವು |
ಎರಡು ಬೆರೆತೊಂದಾಗಿ ಚರಿಸುತಿಪ್ಪ ವದರಲ್ಲಿ |
ಚರಿಸಲೊಂದು ಬಳಿಕಿನ್ನೊಂದು |
ಚರಿಸುತ್ತಿಹುದು | ಮತ್ತಿನ್ನೊಂದು |
ಚರಿಸದಿರಲು ಸುಮ್ಮನಿರುವವೆರಡು ಒಂದಾಗಿ|| ಮನವು ||1||
ವಿನುತಾಷ್ಟಾಂಗಯೋಗದಿ ನಿತ್ಯ |
ತನುವ ದಂಡಿಸುತ್ತಲೆಷ್ಟು |
ಎಣಗಿದರು ವಾಯುಸಾಧ್ಯವಾಗದೆಂದಿಗು |
ಮನವು ನಾಶವಾಗುವದೊಂದೆ
ಕ್ಷಣಕೆ | ಸದ್ಗುರು ಕರುಣಾದಿಂದ |
ಮನವು ನಶಿಸಿಯಾಲಮನಸ್ಕವೆಂದೆನಿಪುದೆಂತೆನೆ || ಮನವು ||2||
ವರಮಾನಸಾ ಸರೋವರದೀ ಭರದಿ |
ಮುಳುಗಿದು ವಾಯಸವೂ |
ಪರಮ ಹಂಸನಾಗುವಂತೇ ಹೀನ ಮನವಿದು |
ಉರುತರಾಮೃತಾಕೊಳದಿ ಒಮ್ಮೆ |
ಹರುಷದಿಂದಾ ಮುಳುಗಲಾಗಿ |
ಪರಮಾತ್ಮನೆ ಆಗಿ ನಿತ್ಯ ಬೆಳಗುತಿಪ್ಪುದು || ಮನವು ||3||
ನಾನಾ ಪುಷ್ಪಕ್ಕೆರಗುವ ಭ್ರಮರ |
ತಾನೆ ಸಂಪಿಗೆ ಪುಷ್ಟಕ್ಕೆರಗಿ |
ಪ್ರಾಣ ಬಿಟ್ಟ ಪರಿಯ ನಾನಾ ಕರ್ಮಧರ್ಮದಿ |
ತಾನೆ ತಿರುಗುವ ಮನವು |
ಪೂರ್ಣ ಬ್ರಹ್ಮದಿ ಮುಳುಗಲಾಗೀ |
ಹೀನ ವಿಷಯ ಮರೆತು ಮಗ್ನತೆಯಾಗುತಿರ್ಪುದು || ಮನವು ||4||
ಮನವು ನಶಿಸಿಯೆ ಪ್ರಾಣೇಂದ್ರಿಯ |
ಗುಣಗಳಿದು ಕೆಡುವುದು ಕರ್ಮ |
ವರ್ಣಗಣಸುಪ್ತಿಯಲ್ಲಿ ಕರದ ಪುಷ್ಟವ |
ಮರದಂತೆ ಮನವಳಿಯಾದ್ವೈತವು |
ತನಗೆ ತಾನೆ ಸಿದ್ಧಿಸುವುದು |
ಅನುಪಮದ್ವಯ ಗುರು ರಂಗನು ತಾನೆಯಾಗುವ || ಮನ ||
ಜ್ಞಾನ ಹದ ನಿರ್ಣಯವ
ಜ್ಞಾನ ಹದ ನಿರ್ಣಯವ ಜ್ಞಾನ ಗುರುವೆ ಬಲ್ಲ |
ಜ್ಞಾನವಿಲ್ಲದ ಮತ್ರ್ಯ ಮನುಜೇನು ಬಲ್ಲ | ಜ್ಞಾನಹದ ||ಪ||
ಧರೊಯೊಳ್ವಜ್ರದ ಗಿರಿಯಾ |
ವರವಜ್ರ ಮೊಳೆಯಿಂದ
ಕೊರೆದು | ಚೂರ್ಣೀಕೃತವಾಗೈದು ಬಿಡುವಂತೆ |
ಗಿರಿಯಂತೆ ಬೆಳೆದಿರುವಾ |
ಉರುಕಲ್ಪಿತದ ಮನವ |
ವರಸೂಕ್ಷ್ಮಮನದಿಂ | ಕೊರೆದು ಬಿಡುವಂಥ || ಜ್ಞಾನ ||1||
ಭವಿಯೊಳುಕ್ಕಿನ ಘಟ್ಟಿ |
ತವೆಯಕ್ಕಿನುಳಿಯಿಂದ ತವಕದಿಂ |ಕತ್ತರಿಸಿ ಹಾಕುವಂದದಲಿ |
ವಿವಿಧ ಸಂಕಲ್ಪಗಳೂ |
ಕವಿದ ತಾಮಸ ಮನವ |
ನವಿನಮಾನಸದಿಂದ ಕತ್ತರಿಸುವಂಥಾ || ಜ್ಞಾನ ||2||
ಜಗದೊಳುದಿಸಿದ ಕೆಸರ |
ಜಲದಿಂದ ತೊಳೆವಂತೆ|
ಹೊಲೆ ಮನದಿ ಜನಿಸಿರುವ | ಮಲತ್ರಯ ಕೇಸರ|
ನಲಿದು ಮನದಿಂ ತೊಳೆಯ
ಸಲೆ ಬ್ರಹ್ಮ ಮಯವಾಗಿ |
ಇಳೆಗಧಿಕ ಮಹಲಿಂಗ ಗುರುವಾಗುವಂಥಾ || ಜ್ಞಾನ ||3||
ಮನದಿ ವಿಕಾರವಿಲ್ಲ
ಮನದಿ ವಿಕಾರವಿಲ್ಲ | ಸುಜ್ಞಾನಿಗೆ
ತನುಗುಣ ದೋಷವಿಲ್ಲಾ ||ಪ||
ಮನ ಚಂಚಲಣುಮಾತ್ರ ಜಡದೃಶ್ಯವೆನಿಪುದು |
ತನುಮನ ಸಾಕ್ಷಿಯಾಗಿಹ ಚಿದ್ರೂಪಗೆ ನಿತ್ಯ ||ಅ ಪ||
ಮೊದಲಂತೆ ಕರಣೇಂದ್ರಿಯಗಳ ದೋಷಂಗಳು
ಮೊದಲಂತೆ ಕಾಮಾದಿ ವಿಷಯ ದ್ವೇಷಗಳು ||
ಮೊದಲಂತೆ ಜೀವಭಾವನ ಗುಣವಂಟವು |
ಸದಮಲ ಬ್ರಹ್ಮದಿ ಮುಳುಗಿರುವುದರಿಂದ || ಮನ ||1||
ಮುಗಿಲು ಗುಡುಗು ಮಿಂಚು ಪವನದಾರ್ಭಟಗಳು |
ಗಗನವಂಟದಪರಿ ಮೂರು ಕಾಲದೊಳು |
ಬಗೆಬಗೆ ವಿಷಯ ಸಂಸಾರದೊಳಿದ್ದರು |
ಜಗದೊಳು ನಿರ್ಲೇಪನಾಗಿರುವದರಿಂದ || ಮನ ||2||
ರವಿ ಶಶಿಯದುರಿಗೆ ರಾಹು ಸಂಚರಿಪಂತೆ |
ತವೆಮನ ಸುಳಿದಾಡುತ್ತಳಿದು ಪೋಗುವದು |
ಪ್ರವಿಮಲಾದ್ವಯನ ಚಲಾವ್ಯಕ್ತನೆನಿಸುವ |
ಶಿವ ಗುರು ಮಹಲಿಂಗನಾಗಿರುವದರಿಂದ ಮನದಿ ವಿಕಾರ || ಮನ ||3||
ಸನಾಗಲೋ | ಪರಮ
ಹಂಸನಾಗಲೋ | ಪರಮ
ಹಂಸನಾಗಲೋ ||ಪ||
ಸೋಹಂ ಸೋಹಂ ಸೋಹಂ ಎನ್ನುತ |
ಧ್ವಂಸಗೈದು ದೈತ್ಯಭಾವಾ ||ಅ||
ಮಾಯೆ ಮೂಲವನ್ನು ತಿಳಿದೂ |
ಮಾಯೆ ಗುಣಗಳನ್ನು ಅಳಿದೂ |
ಮಾಯೆ ಕಳೆಯೆ ತಳೆದು ಮುದದೀ |
ಮಾಯೆದಳೆಗತೀತನಾಗೀ ||1||
ನೀರನುಳಿದು ರಾಜಹಂಸಾ |
ಕ್ಷೀರ ಸವಿಯುವಂತಾ ತೆರದೀ |
ಮೂರು ದೇಹವುಳಿದು ಪೊಳೆವ |
ಸಾರ ತತ್ವಸಾರ ಸವಿವಾ ||2||
ನಿರುತ ಬ್ರಹ್ಮಚರ್ಯ ಶಾಂತೀ |
ಕರವೆನಿಪ್ಪ ಬ್ರಹ್ಮಪುರದೊಳಿರುವ |
ಅಮೃತಕೊಳದಿ ಮುಳುಗಿ ಪರಮಾ |
ಅಮೃತರಸವ ಸವಿವಾ ||3||
ನಿರುತ ಪಾಪ ಪುಣ್ಯವೆಂಬಾ |
ಮೆರೆವ ಕಮಲವನವ ಮೆಲುತ್ತಾ |
ಸ್ಪುರಿಪ ಜ್ಞಾನವೆಂಬ ಮನದೀ |
ಪರಮ ಸುಖದಿ ಚರಿಸುವಂಥಾ ||4||
ಪೂರ್ಣ ಬ್ರಹ್ಮನಲ್ಲಿ ಆಡೀ |
ಪೂರ್ಣ ಬೋಧನಾಗಿ ಉಂಡಾ |
ಅನ್ನ ಅಮೃತ ಮಾಡಿ ಸವಿದ |
ಚನ್ನ ಶ್ರೀ ಗುರು ರಂಗನೆಂಬಾ ||5||
ಇಲ್ಲ ಇಲ್ಲ ಇಲ್ಲ ಮುಕ್ತಿ ಒಬ್ಬರಿಗೂ
ಇಲ್ಲ ಇಲ್ಲ ಇಲ್ಲ ಮುಕ್ತಿ ಒಬ್ಬರಿಗೂ | ಸತ್ಯವಾಗಿ
ಅಲ್ಲವಾದ್ದು ಬೆಲ್ಲವಾಗಿ ಬೆಲ್ಲ ಬೇವು ಆಗೋತನಕ ||ಇಲ್ಲ ||ಪ||
ಭೋಗ ಭಾಗ್ಯ ಆಸೆ ಮೋಹ ವಿಷವಾಗೀ | ತೋರಲಾಗೀ
ಕಾಗೆ ಗೂಗೆ ನಾಯಿ | ಹಂದಿ ಸವಿಯಾಗಿ ಮೆಲ್ಲೊತನಕ || ಇಲ್ಲ ||1||
ಅತ್ತೆ ಸೊಸೆಯಾಗಿ ಹತ್ತು ಐದು ಆಗಿ | ಸುಖವಾಗಿ
ಹತ್ತು ಮಂದಿ ಸತ್ತು ಹೋಗಿ ಬೆತ್ತಲಾಗಿ ನಿಲ್ಲೋತನಕ || ಇಲ್ಲ ||2||
ಕಣ್ಣು ಇದ್ದು ಕಾಣದಿಹ ಕುರುಡನಾಗಿ ಮೂಕನಾಗಿ
ತನ್ನೊಳಿಹ ಗುರು ರಂಗನನ್ನು ತಾನೆ ಕಾಣೊತನಕ || ಇಲ್ಲ ||3||
ಬಲು ಸುಲಭವು ಬ್ರಹ್ಮವಿದ್ಯೆ
ಬಲು ಸುಲಭವು ಬ್ರಹ್ಮವಿದ್ಯೆ | ಗುರು |
ಒಲಿದ್ಹೇಳದಿರಲದು ಬ್ರಹ್ಮಗಸಾಧ್ಯ |
ಬಲು ಸುಲಭವು ಬ್ರಹ್ಮವಿದ್ಯ ||ಪ||
ಶರೀರಾಭಿಮಾನವಳಿದವಗೇ ಒಮ್ಮೆ |
ಉರುಕರ್ಮ ಜ್ಞಾನಾಗ್ನಿಯಲಿ ದಹಿಸಿದವಗೆ |
ಪರಮ ಉನ್ಮನೆಯೊಳಾಡುವಗೇ ಒಮ್ಮೆ |
ಉರುಕರ್ಮ ಜ್ಞಾನಾಗ್ನಿಯಲಿ ದಹಿಸಿದಗೆ |
ಪೊರಮ ಉನ್ಮನೆಯೊಳಾಡುವಗೆ ನಿತ್ಯ |
ವರಶಾಂತಿ ಸಿಂಹಾಸನ ಏರಿದವಗೆ || ಬಲು ||1||
ರಾಗದ್ವೇಷವನಳಿದವಗೆ | ಸರ್ವ |
ತ್ಯಾಗ ಮಾಡುವ ಮರ್ಮವನು ಅರಿತವಗೆ |
ಯೋಗವೆಂಟನು ಮೀರಿದವಗೆ ನಿಗ |
ಮಾಗಮವರಿಯದಾತ್ಮನ ಅರಿತವಗೆ || ಬಲು ||2||
ಮಾನುನಿ ಭ್ರಮೆಯಳಿದವಗೆ | ದಿವ್ಯ |
ಜ್ಞಾನ ಪಂಚಾಮೃತ ಸಾರ ಸವಿದವಗೆ |
ನಾನತ್ವವನು ಆಳಿದವಗೆ | ನಿತ್ಯ
ಭಾನುವಿನಂದದಿ ಸಾಕ್ಷಿಯಾದವಗೆ || ಬಲು ||3||
ಚಿತ್ತವು ಬ್ರಹ್ಮದಿ ಬೆರೆತವಗೇ | ತಾನೆ |
ಸತ್ತು ಸಾಯದ ಪರಿ ಜೀವಿಸುವನಿಗೆ |
ಮೃತ್ಯುಪಾಶವ ಗೆಲಿದವಗೆ | ಘನ |
ಸತ್ತು ಚಿತ್ತಾನಂದ ನಿತ್ಯಪೂರ್ಣನಿಗೆ || ಬಲು ||4||
ಯರಡೆಂಬ ಭೇದವನಳಿದವಗೆ | ಭಾನು
ವರಶಶಿ ಕಳೆ ಹೊಂದಿ ಪೂರ್ಣನಾದವಗೆ |
ಗುರು ರಂಗಲಿಂಗನಾದವಗೆ | ಚಿತ್ತ |
ವರಚಿತ್ರದೀಪದ | ಪರಿ ನಿಂತವನಿಗೆ | ಬಲು ಸುಲಭವು ಬ್ರಹ್ಮವಿದ್ಯೆ ||5||
ವಿರತಿ ಬೋಧೆಯು ಪರತಿಯು
ವಿರತಿ ಬೋಧೆಯು ಪರತಿಯು
ಪರಮ ಜೀವನ್ಮುಕ್ತರಿಂಗೆ |
ನಿರುತ ಅಂಗವೆನಿಸಿ ರಾಜಿಸುತ್ತಲಿಪ್ಪವು ||ಪ||
ಧರೆಯ ಸರ್ವ ಭೋಗದಾಶೆ |
ತೊರೆದು ಮನ ಹಾರದಂತೆ |
ಮರಳಿ ಮನದಿ ನೆನೆಯದಿಹುದೇ ವಿರತಿ ಎನಿಪುದು
ನಿರುತ ಶ್ರವಣಾ ಮನನ ಬಲದಿ |
ಅರಿತೂ ಆತ್ಮಾನಾತ್ಮಾ ವಿವರ
ಶರೀರ ಸಾಕ್ಷಿ ತಾನೆಂದರಿಯುತ್ತಿಹುದೆ ಬೋಧೆಯು || ವಿರತಿ ||1||
ಕರುಣಾ ವಿಷಯಂಗಳನು ಜೈಸಿ |
ನಿರುತಷ್ಟಾಂಗಯೋಗದ ಬಲದಿ |
ಧರೆಯ ಕಾರ್ಯಗಳನು ಮರೆಯಲು ಪರಿತಿಯದು |
ಇರಲು ಮೂರಿಂತಹುದು ಮುಕ್ತಿ |
ವಿರತಿಯು ಪರತಿ ಎರಡು ಇರುತ |
ಪರಮ ಬೋಧೆ ಇಲ್ಲದವಗೆ ಪುಣ್ಯ ಲೋಕವು || ವಿರತಿ ||2||
ಪರಮ ಬೋಧೆಯೊಂದೆ ಇರಲು |
ಮರದ ಕೊಂಬೆ ಮುರಿಯೆ ಕೆಳಗೆ |
ಭರದಿ ಬೀಳ್ವಂತಾಗುತಿಹುದು ಮುಕ್ತಿ ಇದರೊಳು |
ಉರುಪ್ರಾರಬ್ಧದಿಂದ ಕೆಲರ |
ಕರಣ ವೃತ್ತಿಯ ಭೇದವಿರಲು |
ಗುರು ರಂಗನೊಳ್ ಬೆರೆವರೆಲ್ಲಾರೊಂದೆ ಸಮನಾಗಿ || ವಿರತಿ ||3||
ಜ್ಞಾನಾಗ್ನಿ ಸರ್ವಕರ್ಮಗಳ ಸುಟ್ಟು
ಜ್ಞಾನಾಗ್ನಿ ಸರ್ವಕರ್ಮಗಳ ಸುಟ್ಟು
ತಾನೆ |ಪ್ರಜ್ವಲಿಸುತಿಹುದೈ | ವರ ಜ್ಞಾನಾಗ್ನಿ ||ಪ||
ಗುರು ಮಖದಿ ಶಿವಯೋಗಮಂ |
ಸಾಧಿಸುದೆ ಅರಿವರ್ಗ ಮೋಹ ಮನವಂ ಸುಟ್ಟು |
ವರತುರ್ಯ ಪದವಿಯಲ್ಲೀ ರಾಜಿಸುವ |
ಉರುಚಿದಾಗ್ನಿಯ ಕುಂಡದಿ | ಉರಿವ ಜ್ಞಾನಾಗ್ನಿ ||1||
ಭರದಿ ಅಟವಿಯೊಳಗ್ನಿಯು |
ಮೃಗಪಕ್ಷಿ ತರಗುಲ್ಮಲತೆಯ ಸುಡುವ |
ತರದಿ ವರಜಪತಪ ವ್ರತಗಳಂ |
ಸುಟ್ಟುರುಹಿ ನಿರುತ ಕಾಲಾಗ್ನಿಯಂತೆ ಉರಿವ ಜ್ಞಾನಾಗ್ನಿ ||2||
ಪರಮಗುರು ಮಹಲಿಂಗನೇ ತಾನಾಗಿ |
ವರಬ್ರಹ್ಮ ಜ್ಞಾನವೆಂಬ ಶಿಖಿಯಿಂ |
ನೆರೆಸಂಚಿತಾದಿ ಕರ್ಮಗಳ ಸುಟ್ಟು |
ನಿರುತ ಹೃತ್ಕುಂಡದಲ್ಲಿ ಉರುವಾ ಜ್ಞಾನಾಗ್ನಿ ||3||
ಕರ್ಮಕೋಟಲೆಗಳಿಲ್ಲಾ
ಕರ್ಮ ಕೋಟಲೆಗಳಿಲ್ಲಾ | ತನ್ನರಿತ
ನಿರ್ಮಲಾತ್ಮ ಜ್ಞಾನಿಗೇ | ವತ್ಸ ಕರ್ಮ ಕೋಟಲೆಗಳಿಲ್ಲಾ ||ಪ||
ನಾನೆಂಬ ಮಲವು ಮನಕೆ ಅಂಟದಲೆ |
ತಾನೇ ಸಾಕ್ಷಿಕ ಬುದ್ಧಿಯಿಂದರಿತು ||
ಜ್ಞಾನ ವೈರಾಗ್ಯವೆಂಬಾ ಗಂಗೆಯಿಂ |
ತಾನೇ ತೊಳೆಯುವದರಿಂದಲೀ ಯತಿಗೆ || ಕರ್ಮ ||1||
ಮಲವ ತುಳಿದಡಿಯ ತೊಳಿಯಾ ಬೇಕೆಂದು |
ಬಳಲುವ ಜ್ಞಾನಿಯಂತೆ ಮೌಢ್ಯ|
ಹಲವು ಕರ್ಮಂಗಳು ಇಲ್ಲ ಮತ್ತದರ |
ಫಲತ್ಯಾಗ ಮೊದಲೆ ಇಲ್ಲ || ಕರ್ಮ ||2||
ತನಮೋಹವೆಂಬ ಮಾತೇ ಮೃತಳಾಗಿ |
ಘನ ಬೋಧೆಯೆಂಬ ಪುತ್ರಾ ಜನಿಸಿ |
ಜನಿಮೃತಿಯ ಸೂತಕೆರಡು | ಬರಲಾಗಿ |
ಇನಿತು ಕರ್ಮಂಗಳಿಲ್ಲಾ ಯತಿಗೆ || ಕರ್ಮ ||3||
ವಿನುತ ಹೃದಯಾಕಾಶದಿ | ಚಿತ್ತೆಂಬ
ದಿನಮಣಿಯ ಉದಯವಾಗೀ |
ನಿತ್ಯ ಘನ ಪ್ರಕಾಶದೊಳಿರುತಿರೇ | ನಿತ್ಯವಿಧಿ
ಮನದ ಸಂಕಲ್ಪನೆಗಳಿಲ್ಲಾ ಯತಿಗೆ || ಕರ್ಮ ||4||
ಏಕಮೇವಾತ್ಮ ನೀನೆ | ಎಂಬ
ಶೃತಿ ವಾಕ್ಯ ನಿಶ್ಚಯಪಡಿಸಿದಾ |
ಮುದದಿ ಲೋಕೇಶ್ವರೆನಿಪ ಗುರುವು |
ಮಹಲಿಂಗ | ಸಾಕಾರವಾಗಿ ಇರಲು ಯತಿಗೆ || ಕರ್ಮ ||5||
ಆಗದಾಗದು ಎಲ್ಲರಿಂದ
ಆಗದಾಗದು | ಎಲ್ಲರಿಂದ |
ಯೋಗಮಾಯ ಗೆಲುವೆನೆಂಬುದು ||ಪ||
ನೀಗಿ ತಾರಕಾದಿ ಯೋಗ | ಯೋಗರಾನೆಂಬ ಜ್ಞಾನ |
ಯೋಗಮುದ್ರೆ ಬಲಿದುತೈರೈ | ನಾಗಿ ತನ್ನ ಮೈಯ್ಯ |
ಮರೆವುದ ಏವೀತತ್ವಮಸಿಯ | ವಾಕ್ಯನ ವಾಚ್ಯ ಲಕ್ಷ್ಯ|
ತಾ ವವೇಕದಿ ಉಂದರಿಯುತ | ಜೀವಗಣಗಳುಡುಗಿ |
ಮನದಿ ಸಾವಧಾನದಿಂದ ಬ್ರಹ್ಮ | ಭಾವ ನೆಲಸಿ ಮನದಿ ಭಿನ್ನ |
ಭಾವ ಬಯಲು ಆಗುವನ್ನ || ಆಗ ||
ತತ್ವದೊಳಗೆ ತತ್ವವೆನಿಸುತ | ಬೆಳಗುವಂಥ ಅಸ್ತಿಭಾರ
ಪ್ರಿಯವನರಿಯುತ ಮಿಥ್ಯನಾಮರೂಪು ಅಡಗಿ |
ಸತ್ಯ ಸಹಜ ಶಾಂತನಾಗಿ | ಚಿತ್ತಬ್ರಹ್ಮದಲ್ಲಿ ಮಳುಗಿ |
ನಿತ್ಯ ತೃಪ್ತನಾಗುವನ್ನ || ಆಗ ||
ಪರಮ ಶ್ರೀ ಗುರು ರಂಗಲಿಂಗನ ಕರುಣದಿಂದ |
ದೊರೆತ ವಸ್ತು ನೆನೆಯುತನುದಿನ | ಮರೆದು
ಜಗದ ಭ್ರಾಂತಿಯನು | ಬೆರೆತು ಜ್ಞಾನಶಕ್ತಿಯನ್ನು
ಅರಿದು ಭವದ ಬಧೆಯನ್ನು ನಿರುತಪೂರ್ಣನಾಗುವನ್ನ | ಆಗಬಾರದು || ಆಗ ||
ಮಿಥ್ಯ ಮಾಯೋಪಾಧಿಯೆನಿಸಿರುವ ಜೀವನಿಗೆ
ಮಿಥ್ಯ ಮಾಯೋಪಾಧಿಯೆನಿಸಿರುವ ಜೀವನಿಗೆ
ಮಿಥ್ಯ ಸಪ್ತಾವಸ್ಥೆಗಳು ತೋರುತಿಹವೈಸೆ ||ಪ||
ವೊಗೆದು ಮೊದಲ ಜ್ಞಾನವಲ್ಲಿಂದಲಾವರಣ
ಮಿಗಿಲು ವಿಕ್ಷೇಪವು ಪರೋಕ್ಷ ಜ್ನಾನ ಸೋಕ ನಿವೃತ್ತಿವು
ಜಗಕಧಿಕ ಅಪರೋಕ್ಷ ಜ್ಞಾನ ಶೋಕ ನಿವೃತ್ತಿ
ಮಿಗೆ ನಿರಂಕುಶ ತೃಪ್ತಿಯೆನಿಸಿರುವೆಂತೆನಲು ||ಮಿಥ್ಯ ||1|
ವರಪ್ರತ್ಯಗಾತ್ಮನೇ ತಾನೆಂಬ ಜ್ಞಾನವ
ಮರತನ್ಯ ಜಡದೇಹ ತಾನೆಂಬುದಜ್ಞಾನ
ಪರಬೊಮ್ಮನೇಯಿಲ್ಲದಿರಲು ಕಾಣಿಪನೆಂಬ
ಯರಡು ವಿಧವಾದ ಮರವೆಯಾವರಣವೆನ್ನಿಸುವುದು |ಮಿಥ್ಯ ||2||
ನಿರುತ ಕರ್ಮಕೆ ಕರ್ತೃಭೋಕ್ತೃಜೀವನುಯೆನುತ
ಕೊರಗಿ ಸುಖ ದುಃಖ ದಾರಿದ್ರನೆಂಬುವದೆ ನಿಕ್ಷೇಪ
ಧರೆಗೆ ಕಾರಣನೊಬ್ಬನಿಹನೆಂದು ಗುರುವಿಂದ
ಅರಿತು ಅರ್ಚಿಸಲದು ಪರೋಕ್ಷ ಜ್ಞಾನವು ||3||
ಘನತತ್ವಮಸಿವಾಕ್ಯ ಗುರು ಬೋಧೆಯಿಂ ತಾನೆ
ವಿನು ಬ್ರಹ್ಮೆಂದರಿಯಲಪರೋಕ್ಷ ಜ್ಞಾನವು
ಚಿನುಮಯಾತ್ಮಕನಾದ ಯನಗೆ ಕರ್ಮದ ಬಾಧೆ
ಯಿನಿತಂಟದೆಂದರಿಯಲದು ಶೋಕ ನಾಶವು ||4||
ಶೋಕವಳಿದಾನಂದ ಪದ ನಿರಂಕುಶ ತೃಪ್ತಿ
ಏಕಮೇವಾತ್ಮ ಗುರುರಂಗನೆನಿಸುವದು
ಶೋಕ ಹರವರ ನಿರಂಕುಶ ತೃಪ್ತಿಯರಡು
ಸಾಕಾರವೆಂದೆನಿಪ ವರ ಪರೋಕ್ಷ ಜ್ಞಾನಕೆ ||ಮಿಥ್ಯ ||5||
ತತ್ವಮಸಿಯೆಂಬ ವಾಕ್ಯತ್ರಯವ
ತತ್ವಮಸಿಯೆಂಬ ವಾಕ್ಯತ್ರಯವ ಗುರು ಮುಖದಿ
ಚಿತ್ತವಗಲದೆ ತಿಳಿಲದವನೆ ಮುಕ್ತಂ ||ಪ||
ನೆರೆಯ ವಿದ್ಯೋಪಾಧಿ ಪ್ರತಿಬಿಂಬ ಜೀವನಯೆನಿಸಿ
ಕರಣವಿಂದ್ರಿಯ ಪ್ರಾಣ ತನುತ್ರಯಾದಿಗಳಂ
ಭರದಿ ಅಭಿಮಾನಿಸುವ ಅಲ್ಪಗುಣವಿಡಿದಿಹುದೆ
ನಿಲರು ತತ್ವಂಪದಕೆ ವಾಚ್ಯಾರ್ಥವೆನ್ನಿಲಸುವದು ||1||
ತನುತ್ರಯ ವಿಲಕ್ಷಣವು ನೆರೆ ಅವಸ್ಥಾತ್ರಯಕೆ
ದಿನವು ಸಾಕ್ಷಿಯು ಪಂಚಕೋಶ ವ್ಯತಿರಿಕ್ತೆನಿಪ
ಘನಸಚ್ಚಿದಾನಂದ ಕೂಟಸ್ಥ ಚೈತನ್ಯವೆ
ವಿನ ತತ್ವಂಪದಕೆ ಲಕ್ಷ್ಯಾರ್ಥವೆನ್ನಿಸುವದು ||2||
ಪರಮ ಸತ್ವಗುಣಾಖ್ಯ ಮಾಯ ಪ್ರತಿಬಿಂಬಿತದಿ
ವರೀಶನೆಂದೆನಿಸಿ ಸರ್ವಜ್ಞ ಮೊದಲಾದ
ಪರಮ ಕಲ್ಯಾಣ ಗುಣಗಳಿಂದೊಪ್ಪುದೆ
ನಿರತ ತತ್ವದಕೆ ವಾಚ್ಯಾರ್ಥವೆನ್ನಿಸುವುದು ||3||
ನಿರುಪಮದ್ವಯ ನಿತ್ಯ ಸಂವಿನ್ಮಾತ್ರ
ನಿರಘ ನಿರ್ಗುಣ ನಿತ್ಯಮುಕ್ತ ನಿರ್ಮಾಯ
ಪರಿಪೂರ್ಣ ಪರತತ್ವವೆನಿಪ ಪರಬೊಮ್ಮವೆ
ನಿರತ ತತ್ವದಕೆ ಲಕ್ಷಾರ್ಥವೆನ್ನಿಸುವದು ||4||
ಅಳಿದು ಈ ಜೀವೇಶರುಭಯ ವಾಚ್ಯಾರ್ಥಗಳ
ವುಳಿಲದ ನಿಲಜ ಚೈತನ್ಯವಸ್ತು ಅಸಿಪದವೆಂದು
ತಿಳಿಯಲದುವೆ ಅಖಂಡರಸ ಚಿತ್ತು ನೀನೆಂದು
ವೊಲಿದು ಬೋಧಿಪನು ಗುರು ಮಹಾಲಿಂಗರಂಗಂ ||5||
ಆಗದಾಗದಾಗದೂ ಯಲ್ಲರಿಂದ
ಆಗದಾಗದಾಗದೂ | ಯಲ್ಲರಿಂದ
ಯೋಗ ಮಾಯೆ ಗೆಲುವೆನೆಂಬುದು ||ಪ||
ನೀಗಿ ತಾರಕಾದಿ ಯೋಗ
ಯೋಗರಾಜನೆಂಬಜ್ಞಾನ
ಯೋಗಮುದ್ರೆ ಬಲಿದು ತೂರ್ಯ
ನಾಗಿ ತನ್ನ ಮೈಯ ಮರೆವುದು | ಆಗದಾಗದಾಗದೂ ||ಅ||
ಓವಿತತ್ವಮಸಿಯ ವಾಕ್ಯದಾ ವಾಚ್ಯಲಕ್ಷ್ಯ
ತಾವಿವೇಕದಿಂದಲರಿಯುತ್ತ
ಜೀವ ಗುಣಗಳುಡುಗಿ ಮನದಿ
ಸಾವಧಾನದಿಂದ ಬ್ರಹ್ಮ
ಭಾವ ನೆಲದಿ ಮನದಿ ಭಿನ್ನ
ಭಾವ ಬಯಲು ಆಗುವನ್ನ | ಆಗದಾಗದಾಗದೂ ||1||
ತತ್ವದೊಳಗೆ ತತ್ವೆನಿಸುತಾ ಬೆಳಗುವಂಥ
ಅಸ್ತಿಭಾತಿ ಪ್ರಿಯವನರಿಯುತ
ಮಿಥ್ಯನಾಮ ರೂಪು ಅಡಗಿ
ಸತ್ಯ ಸಹಜ ಶಾಂತನಾಗಿ
ಚಿತ್ತ ಬ್ರಹ್ಮದಲ್ಲಿ ಮುಳುಗಿ
ನಿತ್ಯ ತೃಪ್ತನಾಗುವನ್ನ | ಆಗದಾಗದಾಗದೂ ||2||
ಪರಮಶ್ರೀ ಗುರು ರಂಗಲಿಂಗನ ಕರುಣದಿಂದ
ದೊರೆತ ವಸ್ತು ನೆನೆಯುತನುದಿನ
ಮರದು ಜಗದ ಭ್ರಾಂತಿಯನ್ನು
ಬೆರತು ಜ್ಞಾನಶಕ್ತಿಯನ್ನು
ಹರಿದು ಭವದ ಭಾಧೆಯನ್ನು
ನಿರುತಪೂರ್ಣನಾಗುವನ್ನ | ಆಗದಾಗದಾಗದೂ ||3||
ಜೀವ ಈಶರಿಗೈಕ್ಯ
ಜೀವ ಈಶರಿಗೈಕ್ಯದನುಭವದ ವಾಕ್ಯ |
ತಾ ವಿವೇಕದೊಳರಿತುಕೊಂಡಾತ ಮುಕ್ತಾ ||ಪ||
ನಿರುತ ವ್ಯಷ್ಟಿ ಸಮಷ್ಟ್ಯೋಪಾಧಿಯೆನಿಸಿರುವ |
ವರಜೀವ ಈಶ್ವರರ ಜನನಿಯೆನಿಸಿರುವ |
ದುರುಳ ಮಾಯಾವಿದ್ಯತ್ಯಜಿಸಲಾತುಮನು |
ನಿರುಪಮದ್ವಯ ಪೂರ್ಣನಾಗಿ ರಾಜಿಪನೂ || ಜೀವ ||1||
ಸ್ವರ್ಣ ಮೃದ್ಘಟ ಯುಗದಿ ತುಂಬಿರುವ ಬಯಲು |
ಸ್ವರ್ಣ ಮೃದ್ಘಟಗಳಿಗೆ ಅಂಟದಿಹವೋಲು |
ಪೂರ್ಣಬ್ರಹ್ಮನು ಅಂಡ ಬ್ರಹ್ಮಾಂಡದೊಳಗೆ |
ನಿರ್ಣಯದಿ ತುಂಬಿಹನು ನಿಜ ಬೋಧೆಯೊಳಗೆ || ಜೀವ ||2||
ಧವಳಗಂಗೆಯು ಕೊಳಕು ನೀರು ಯರಡರೊಳು |
ರವಿ ಬೆಳಗುವಂತಾತ್ಮ ಸರ್ವ ದೇಹದೊಳು |
ಅವಿರಳಾನಂದದಲಿ ತುಂಬಿ ತುಳುಕುವನು |
ತವೆ ಜ್ಞಾನನೇತ್ರಕ್ಕೆ ಗೋಚರೆನಿಸುವನು || ಜೀವ ||3||
ವಿನುತ ಕಟಕವು ಮಕುಟವೆನಿಸಿ ಬಹು ವಿಧದಿ |
ಜನಿಪ ನಾಮಗಳಳಿಯೆ ಕನಕವುಳಿವಂತೆ |
ಗುಣಕಲ್ಪಿತದ ಜೀವ ಈಶ್ವರರನಾಮಾ |
ಅಣಗಲೆಂದಿಗು ತಾನೆ ಯೆನಿಪಾತ್ಮಾರಾಮ || ಜೀವ ||4||
ಮನೆಯ ಬೆಳಗುವ ದೀಪ ಕತ್ತಲಳಿಯುತ |
ಬಿನುಗು ವಿಷಯಗಳೊಂದು ತಲೆದೋರದಂತೆ |
ತನುಮೋಹವಭಿಮಾನಶಿದು ನಿರ್ಮಲದಿ |
ಮನವಿರಲು ಗುರುರಂಗನೆನಿಸುವನು ಜಗದಿ || ಜೀವ ||5||
ಬ್ರಹ್ಮ ತಾನೆಂದರಿಯಲಾಗೀ
ಬ್ರಹ್ಮ ತಾನೆಂದರಿಯಲಾಗೀ |
ಹೆಮ್ಮೆ ಜೀವತ್ವಡಗೂವದೂ |
ಒಮ್ಮೆ ಸೂರ್ಯನು ದಿಸೆ ಕತ್ತಲಡಗುವಂದದಿ ||ಪ||
ಎಂದೀಗಿಲ್ಲದ ಪಗ್ಗದಿ ಸರ್ಪ|
ಎಂದೀಗಿಲ್ಲದ ವಂದ್ಯಾಪುತ್ರ
ಎಂದೀಗಿಲ್ಲದ ಮೂಲದ ಕೋಡು ತೋರಿದಂದದಿ |
ಎಂದೀಗಿಲ್ಲದ ಮಾಯೆಯಿಂದ |
ಎಂದೀಗಿಲ್ಲದ ಜೀವಭ್ರಾಂತಿ |
ಬಂದು ಮುಸುಕಿತಾತ್ಮನಲ್ಲಿ ಬಹಳ ಚೋದ್ಯದಿ || ಬ್ರಹ್ಮ ||1||
ಭರದಿ ಶುಕ್ತಿಯಲು ಕಾಣು |
ತ್ತಿರುವ ಬೆಳ್ಳಿಯಲ್ಲಿ ಗೆಜ್ಜೆ |
ಸರಪಣಿಗಳು ಆಗುವದು ಸತ್ಯವಾದಲ್ಲಿ |
ನಿರುಪಮದ್ವಯ ಬೊಮ್ಮದಲ್ಲಿ |
ಸ್ಫುರಿಪ ಮಾಯಾ ಕಲ್ಪಿತೆನಿಸಿ |
ಮೆರೆವ ಜೀವತನುವು ಸತ್ಯವೆನ್ನಬಹುದೈಸೆ || ಬ್ರಹ್ಮ ||2||
ಜಗದಿ ಮೋಟ ಮರದಿ ಚೋರ |
ಗಗನದೊಳಗೆ ಅರವಿಂದಾವು |
ಬಗೆದು ತೋರಿಯಡಗುತಿರಲು
ಅಗರಾಣದ ಜೀವ ಗುಣವು |
ಒಗೆದು ತೋರಿಯಡಗುತ್ತಿರಲು |
ನಿಗಮ ಭೇದ್ಯನಿಂಗೆ ಅದರ ಸಂಗವಿಲ್ಲವೈ || ಬ್ರಹ್ಮ ||3||
ತಾನೆ ತನ್ನ ಮರೆತು ಎಣಿಸಿ |
ತಾನಿಲ್ಲೆಂದು ಬಳಲುತ್ತಿರಲು |
ನೀನೆ ದಶಮನೆಂದು ಓರ್ವನು ಮರೆತರಿತಂತೆ |
ನೀನು ಕಲ್ಪಿತ ಜೀವನಲ್ಲ |
ನೀನೆ ಪೂರ್ಣಬ್ರಹ್ನನೆನುತ |
ಜ್ಞಾನಿವಾಕ್ಯದಿಂದಲರಿಯೆ ಭ್ರಾಂತಿಲೈಸುಗು || ಬ್ರಹ್ಮ ||4||
ಉರಿವ ಜ್ಯೋತಿಯಿಂದ ಜ್ಯೋತಿ |
ಮೆರೆವ ಸೂರ್ಯನಿಂದ ಸೂರ್ಯ |
ಅರಿಯುವಂತೆ ತನ್ನ ತಾನೇ ಅರಿವ ಜ್ಞಾನಿಯು |
ನಿರುಪಮದ್ವಯ ಬ್ರಹ್ಮನಾಗಿ |
ನಿರುತಾಖಂಡೈಕರ ಸಮಯನಾಗಿ |
ಪರಮ ಶ್ರೀ ಗುರು ರಂಗನೆನಿಸಿ ಚರಿಸುತಿಪ್ಪನು || ಬ್ರಹ್ಮ ||5||
ತನುವೂ ಇಂದ್ರಿಯಂಗಳೊಂದು
ತನುವೂ ಇಂದ್ರಿಯಂಗಳೊಂದು |
ಅನುಪಮಾತ್ಮನಲ್ಲೆಂಬುದನು
ವಿನುತ | ಸೂಕ್ಷ್ಮ ಲಕ್ಷಣದಿಂದ ಅರಿಯಬೇಕೈಸೆ ||ಪ||
ಹಿರಿಯ ಅನ್ನಮಯದ ಕೋಶ |
ಕಿರಿಯ ಪ್ರಾಣಮಯದ ಕೋಶ |
ಚರಿಪ ಮನ ವಿಜ್ಞಾನಮಯವು ಎಂಬ ಕೋಶವು |
ಉರುತರಾನಂದವು ಎನಿಸಿ |
ಸ್ಫುರಿಸುವೈದು ಕೋಶಂಗಳಿಗೆ |
ನಿರುತ ವ್ಯತರಿಕ್ತೆನಿಸಿ ಪೊಳೆಯುತ್ತಿರುವನಾತ್ಮನು || ತನು ||1||
ಘಟವು ನೋಡ್ವ ಪುರುಷ ತಾನೆ |
ಘಟವು ಅಲ್ಲದೆ ಬೇರಿರುವಂತೆ |
ಕುಟಿಲಮಾಯಾ ಕೃತಕ ನಾಮರೂಪು ಉಳ್ಳಂಥ |
ಘಟವ ನೋಡುತ್ತಿರುವ ಆತ್ಮ |
ಘಟವೆಂದಿಗೂ ಅಲ್ಲವೆನಿಸಿ |
ಘಟಕೆ ಸಾಕ್ಷಿಯಾಗಿ ನಿತ್ಯ ಬೆಳಗುತಿಪ್ಪನು || ತನು ||2||
ಎನ್ನ ಮನೆಯು ಪಶುವು ಪತ್ನಿ |
ಚಿನ್ನಾಬೆಳ್ಳಿಯು ಯನ್ನದೆಂಬ |
ಮಾನ್ನವತದ್ವಸ್ತು ಒಂದೂ ಅಲ್ಲದಿರುವಂತೆ |
ಎನ್ನ ತನುವೀದೆಂಬುವಾತ |
ಕುನ್ನಿ ದೇಹ ತಾನಲ್ಲೆನುತ |
ಮುನ್ನ ದೇಹೇಂದ್ರಿಯಕ್ಕೆ ಸಾಕ್ಷಿಯಾಗಿ ಇರುವನು || ತನು ||3||
ನೆರೆದಶೇಂದ್ರಿಯಂಗಳ ದ್ವಾರ |
ಅರಿತ ಶಬ್ದ ಸ್ಪರ್ಶ ರೂಪು |
ಭರದಿ ರಸವು ಗಂಧ ಮತ್ತೆ ನುಡಿಯು ದಾನವು |
ಚರುಪುದಳಿಪುದೊಮ್ಮೆ ಮಲವ |
ವರ ಆನಂದಾದಿಗಳನ್ನು
ಅರಿವ | ನಿತ್ಯಮನದ ಮುಖದಿ ಆತ್ಮಾರಾಮನು | ತನು ||4||
ರವಿಯ ಕಾಂತಿಯಿಂದ ಜಗದಿ |
ವಿವಿಧಕರ್ಮ ನಡೆಸುತ್ತಿರಲಾ |
ರವಿಯು ಸರ್ವಸಾಕ್ಷಿಯಾಗಿ ಬೆಳಗುತ್ತಿರುವಂತೆ |
ಜವದಿ ಇಂದ್ರಿಯ ಕರಣಂಗಳು |
ವಿವಿಧ ಕಾರ್ಯಗೈಯ್ಯುತ್ತಿರಲು |
ಭುವನ ಕೊಡೆಯ ಗುರುರಂಗನು ಸಾಕ್ಷಿಯೆನಿಸಿಹನು || ತನು ||5||
ತೋರಿಯಡಗುವಂಥ ಜಳ್ಳು
ತೋರಿಯಡಗುವಂಥ ಜಳ್ಳು |
ತೂರಿ ಘಟ್ಟಿಯಾಗಿ ಉಳಿದ |
ಸಾರ ಬ್ರಹ್ಮವೆ ತಾನೆಂದರಿಯುವಾತ ಜ್ಞಾನಿಯು ||ಪ||
ಮೆರೆವ ದೇಶೇಂದ್ರಿಯಂಗಳ ಸ್ಫುರಿಪ ವಿಷಯಂಗಳು ದೃಶ್ಯ |
ಪರಿಪರ್ಣ ನಂದಾತ್ಮದೃಕ್ಕು ಎನಿಸಿ |
ಮರೆವನು ಶರೀರ ತ್ರಯಾತ್ರಿ ಗುಣಾದಿಗಳು |
ಅರಿಯೆ ಜೀವತ್ರಯವು ದೃಶ್ಯ |
ನಿರುತಾಖಂಡ ಬ್ರಹ್ಮದೃಕ್ಕೆನ್ನಿಸಿ ಮೆರೆವನು | ತೋರಿ ||1||
ಶರೀರ ದೃಶ್ಯ ನಯನೇಂದ್ರಿಯಕೆ |
ಸ್ಫುರಿಪ ನೇತ್ರವು ದೃಶ್ಯ ಮನಕೆ |
ಚರಿಪ ಮನವು ದೃಶ್ಯ ನಿಶ್ಚಲವಾದ ಬುದ್ಧಿಗೆ |
ಅರಿವಾ ಬುದ್ಧಿಯು ದೃಶ್ಯವಾತ್ಮ |
ನಿರತೃಕ್ಕು ಎನಿಸಿ ಪೊಳೆವ |
ನಿರುಪಮದ್ವಯ ಬ್ರಹ್ಮನಲ್ಲದೆ ಬೇರೆದೃಕ್ಕಿಲ್ಲ || ತೋರಿ ||2||
ಸ್ಪುರಿಪ ಕಾರಣಗಳಂತರ ದೃಶ್ಯ |
ವರಭೂತಂಗಳು ಬಾಹ್ಯಾ ದೃಶ್ಯ |
ಎರಡು ವಿಧದಿ ದೃಶ್ಯವೆನಿಸುವೀ ಪ್ರಪಂಚವ |
ನಿರುತ ಸಾಕ್ಷಿಯಾಗಿ ನೋಡುತ್ತಿರುವ |
ಸಂವಿನ್ಮಾತ್ರನಾದ ಪರಮ |
ಶ್ರೀಗುರು ರಂಗ ಸರ್ವಕ್ಕೆ ದೃಕ್ಕಾಗಿರುವನು || ತೋರಿ ||3||
ಪರಮ ಬ್ರಹ್ಮಾನಂದಭರಿತದಿ
ಪರಮ ಬ್ರಹ್ಮಾನಂದಭರಿತದಿ |
ಧರೆಯೊಳಿಹ ಯೋಗೀಶ್ವರಂ |
ಮೆರೆವ ಸೂರ್ಯನ ಪರಿ ವಿರಾಜಿಸಿ |
ನಿರುತ ಸಾಕ್ಷಿಕನೆನಿಸುವಂ ||ಪ||
ಪರಮಂಗಳ ಶಾಂತಿ ಸ್ನಾನವು |
ವಿರತಿಭಸ್ಮವ ಧರಿಸುವಂ |
ವರ ಪತಿವ್ರತೆ ಭಿಕ್ಷೆ ಕೊಳ್ಳುತ |
ಕರುಣಕರ ಪಾತ್ರೆನಿಸುವಂ || ಪರ ||
ನಿರುತ ತತ್ವವು ಎಂಬ ದೇಶದಿ |
ಚರಿಸುತಾತನ ಪೂರ್ವದ |
ವರಕುಲಗಳಿಪ್ಪತ್ತುವೊಂದನು |
ಭರದಿ ಪಾವನಗೈಯುವಂ || ಪರ ||
ಭಾವಿಸಲಿಕಿಂತಿರುವ ಯೋಗಿಯು |
ಯಾವ ರೋಗವು ದುಃಖದಿಂ |
ಯಾವ ವಿಧದಿಂ ಬಿಡಲು ಘಟವನು |
ವೋವಿ ತಾ ಬಯಲಾಗುವಂ || ಪರ ||
ಕ್ಷೀರ ಕ್ಷೀರವ ಘೃತವು ಘೃತವಂ |
ಸೇರುವಂದದಿ ಯತಿವರಂ |
ಪ್ರಾರಬುಧ ಉಣ್ಣುತಲಿ |
ಅಂತ್ಯಕೆ ಸೇರುವನು ಕೈವಲ್ಯವಂ || ಪರ ||
ಆತಗಿಲ್ಲವು ಶ್ರಾದ್ಧಕರ್ಮ |
ಗಳಾತಗಿಲ್ಲವು ದಹನವು |
ಆತ ಗುರು ಮಹಲಿಂಗನೆನ್ನಿಸಿ |
ಖ್ಯಾತಿ ಪೂಜೆಯ ಗೊಂಬುವಂ || ಪರ ||
ಶಿವಜೀವರೈಕ್ಯದನುವರಿತ ಸಂಮ್ಯಜ್ಞಾನಿ
ಶಿವಜೀವರೈಕ್ಯದನುವರಿತ ಸಂಮ್ಯಜ್ಞಾನಿ |
ವಿವಿಧ ಮಾಯಾ ಭ್ರಮಣೆಗೊಳಗಾಗದಿಹನು ||ಪ||
ಸವಿಪಾಲು ಧದಿ ತಕ್ರ ನವನೀತವಾಗಿರಲು |
ನವನೀತವಾ ತಕ್ರ ಬೆರೆಯದಂದದಲಿ |
ಅವಿರಳಾತ್ಮ ಸಮಾಧಿಯಲ್ಲಿಪ್ಪ ಶಿವಯೋಗಿ |
ವಿವಿಧ ಸಂಸ್ಕೃತಿ ಬೆರೆಯದಂತಿಹನು || ಶಿವ ||1||
ವರ ಇಂದ್ರ ಜಾಲದವ | ಪರಿಪರಿ ಚಿತ್ರಗಳ
ವಿರಚಿಸುವ | ಪುಸಿಯೆಂದು ಅರಿತಿರುವ ತೆರದಿ |
ಹಿರಿಯ ಮಾಯಾಕೃತ ಜಗವಿಂದ್ರಜಾಲವ ಪರಿಯ |
ನಿರುತ ಪುಸಿಯೆಂದರಿತು ತಾ ಸಾಕ್ಷಿಯಾಗಿಹನು || ಶಿವ ||2||
ಧರೆಯೊಳಿಂತಿಹ ಮುಕ್ತ ಮರಳಿ ಪುಟ್ವುವೆನೆಂದು |
ಅರಿಸಿ ತಪವಂಗೈಯ್ಯೆ ಜನಿಸೆ ಜ್ಞಾನಾಗ್ನಿಯಿಂ |
ದುರಿದ ಚಣಕದಪರಿಯ ಸುಟ್ಟಿರುವ ತನುಧರಿಸಿ |
ಗುರು ರಂಗನಾಗಿರುತ ಪ್ರಾರಬುಧ ಕಳೆಯುವನು || ಶಿವ ||3||
ಸಂಸಾರದೊಳು ಮುಕ್ತಿ ಸಿದ್ಧ
ಸಂಸಾರದೊಳು ಮುಕ್ತಿ ಸಿದ್ಧ |
ನಿತ್ಯ ಸಂಸಾರ ಯೋಗಿಯು ಲೋಕ ಪ್ರಸಿದ್ದಾ || ಸಂಸಾರದೊಳು ||ಪ||
ಜಲದೊಳಗುದಿಸಿ ರಾಜಿಸುತಿಪ್ಪ ಕಮಲವು |
ಜಲವಿನಿತಾದರು ಅಂಟದಿರುವಂತೆ |
ಮಲಿನ ಸಂಸಾರದಿ ಮುಳುಗಿ ತಾನಿದ್ದರು |
ಸಲೆಮಾಯ ವಶವಾಗದಾತ್ಮ್ಮಾನುಭವಿಗೆ || ಸಂಸಾರ | |1||
ತೊರೆದು ಮೋಹವುಯೆಂಬ ಮನೆ ಕ್ಷೇತ್ರವನ್ನು |
ಹರಿದು ಮಮತೆ ಎಂಬ ಸತಿ ಸಂಗವನ್ನು |
ಮರೆದು ಹಂಕಾರ ಎಂಬುವ ಮಗನನ್ನು |
ವರಶಾಂತಿ ಎಂಬ ದೇಶದೊಳಿಪ್ಪಗೆ || ಸಂಸಾರ ||2||
ಇರಿಸಿ ತನ್ನಯ ಚಿತ್ತ ಪರಮ ಪುರುಷನೋಳು |
ತ್ವರಿತದಿ ತನ್ನ ಗೃಹಕೃತ್ಯವ ನಡಿಸುವ |
ಉರು ವ್ಯಭಿಚಾರಿಣಿಯ ಪರಿಯಲಿ ಚಿತ್ತವ |
ನಿರುತಾತ್ಮನೊಳಗಿಸಿರುವ ಸತ್ಪುರುಷಂಗೆ || ಸಂಸಾರ ||3||
ಹವಿಯಂತೆ ಭಕ್ಷಿಪ ವಿಷಯಂಗಳೆಲ್ಲವು |
ರವಿಯಂತೆ ಸರ್ವಕ್ಕೆ ಸಾಕ್ಷಿಯಾಗಿರುವ |
ತವೆ ಪುಣ್ಯಪಾಪಂಗಳುಂಟಾಗದೆ ಯಿರುವ |
ಭುವಿಯೊಳಗಿದ್ದು ಇಲ್ಲದ ಮಹಾತ್ಮನಿಗೆ | ಸಂಸಾರ ||4||
ಕುಲಗೊಬ್ಬ ಭಕ್ತ ಕೋಟಿಗೆ ಒಬ್ಬ ಶರಣನು |
ಇಳೆಯೊಳು ಪಾವನನಾಗಿರುತಿಹನು |
ಸಲೆ ಗುರು ಮಹಲಿಂಗನ ಕಾರುಣ್ಯದಿಂದ |
ಮಲಹರನಡಿದಾವರೆಯ ಬಿಡದಿಹನು || ಸಂಸಾರ ||5||