Categories
Tatvapadagalu ಶಿಲವೇರಿ ಶಿವಪ್ಪನವರ ತತ್ವಪದಗಳು

ಅಕಾರಾದಿ ತತ್ವಪದಗಳು

ಪರತತ್ವ ಕಾವ್ಯ – ಭಾಗ 1
ಅರಸನು ಕರತಂದು ಗುರುವಿನ
ಅಂಧಕಂಗಿವ ನಂಗ ಕಾಣದು
ಆಗಲೇಳೈ ಎಂದ ಗುರುವರ
ಇಂತು ಕೆಡಿಸುವ ನವನ ಪಂಥವ
ಇಂತು ಪೇಳಿದ ಗುರು ರಾಯನೊಳು
ಈಗದರ ವೃತ್ತಾಂತವೆಲ್ಲವ
ಎಲವೋ ಜೀವನೆ ನೋಡು ಇವ ಬಲು
ಏನು ಏನೈ ಶರಣು ನರಪತಿ
ಗುರು ವಂಚಕರು ಶಿಷ್ಯರೀಪರಿ
ಗುರುಸೇವ ವಿಧವೆಲ್ಲ ಮುಂದದ
ಜೀವನೇ ನೀ ಕೇಳ್ವಿ ಸಮರಸ
ನಿಮ್ಮ ಸುತೆಯರು ಹೇಳಿದೋಚವು
ಪರಮನನುಭವ ಪಡದು ಮತ್ತಾ
ಪರಮ ರೂಪದಿ ನರನ ರೂಪವು
ಪುಣ್ಯಶಿಷ್ಯ ಶಿಖಾಮಣಿಯ ಕೇಳ್
ಪೂಜಿಸುತ ಕೇಳಿದನು ಗುರುವಿನ
ಬಾರಯ್ಯ ಜೀವೇಶನೇ ಬಹು
ಬಿಡದೆ ಹಿಡಿಯಲಿ ಬೇಕಿ ವಾಕ್ಯವ
ಮತ್ತು ಸಂಶಯ ಒಂದು ತಿಳುಪುವೆ
ಮುನ್ನ ತನ್ನೊಳಿದ್ದನಾಥರ
ಮೊದಲು ದಿನವೇ ಕಲಲವಾಕಲ
ಯಾತಕೀ ಪರಿ ಇಂದಿನವರತಿ
ಯೋಗ ತಪ ಜಪ ಮತ ಪಾತಕವು
ಲಾಲಿಸೈ ಗುರು ಸೇವಕನ ನುಡಿ
ಲೇಸಾದ ಗುರುರಾಯ ನಿಂತವ
ವಾಯಾಗ್ನಿ ಭೂಜಲವಾಕಾಶ
ಶ್ರೀ ಪರಾತ್ಪರ ದೈವ ಕರುಣದಿ
ಸ್ಥಲಕಿಳಿದು ನುಡಿಸಿದರು ಏನೈ
ಸತ್ಯವೇ ಜಗದೊಳಗೆ ಶ್ರೇಷ್ಠವು
ಸುಖದೊಳಿಲ್ಲಿಹ ಜನಗಳೆಲ್ಲಕೆ
ಹ್ಯಾಗೆನಲು ಸಾಧಕನು ಒಬ್ಬವ
ಹೇಳುವೆನು ಬಿನ್ನಪವ ದೈವವೇ
ಪದದ ಶೀರ್ಷಿಕೆ ಅನುಸರಿಸಿ
ಅರುವೇ ಗುರುವೆಂಬ ಮಾತಲ್ಲೆನಿಸುವ ವಿಚಾರ
ಒಬ್ಬ ವೃದ್ಧನು ತನ್ನದೆಂಬುವದು ಮರಿಯದೇ ಧನ್ಯನಾದ ವಿಚಾರ
ಕನಿಷ್ಟ ಶಿಷ್ಯರ ವಿಚಾರ
ಗುರು ವಂಚಕರ ವಿಚಾರ
ಗುರುವಿನ ನ್ಯಾಯಕ್ಕೆ ವಿರುದ್ಧವಾದ ಪ್ರಹ್ಲಾದನ ವಿಚಾರ
ಗುರುವು ರಾಜಗೆ ಉಪದೇಶ ಮಾಡಿದ ವಿಚಾರ
ಗುರುರಾಯನು ಜೀವನಿಗೆ ದೈವ ಸಮರಸ ತೋರಿದ ವಿಚಾರ
ಗುರುರಾಯನು ಪೇಳಿದ ಸತ್ಯ ವಿಚಾರ
ಗುರುರಾಯನು ಸುಖದುಃಖ ತೀರ್ಮಾನ ಕೊಟ್ಟ ವಿಚಾರ
ಗುರು ಸುತೆಯರು ರಾಜಗೆ ಉಪದೇಶ ಮಾಡಿಸಿದ ವಿಚಾರ
ಗುರು ಸುತೆಯರು ರಾಜಗೆ ಸ್ವಪ್ನ ಪೇಳಿದ ವಿಚಾರ
ಗುರುಸೇವ ವಿಚಾರ
ಗುರುವು ಜೀವಾತ್ಮ ಪರಮಾತ್ಮರಲ್ಲಿ ಪುಸಿ ತೋರಿದ ವಿಚಾರ
ಜನನ ಮರಣ ವಿಚಾರ
ಜನನ ಮರಣ ಸಂಶಯ ಛೇದನ ವಿಚಾರ
ಜೀವಗೆ ಗುರುರಾಯ ತನು ಮೋಹ ಬಿಡಿಸಿದ ವಿಚಾರ
ಜೀವನು ದೈವ ಸಮರಸ ಕೇಳಿದ ವಿಚಾರ
ದೈವ ಮಹಿಮೆ ವಿಚಾರ
ದೈವವು ಜೀವಾತ್ಮನನ್ನು ದೇಹದಲ್ಲಿ ವಗಿಸಿದ ವಿಚಾರ
ದೈವ ತನ್ನಲ್ಲಿದ್ದ ನಾಥರ ಆದಿ ಮಾನವರಿಂದ ಉತ್ಪತ್ತಿ ಮಾಡಿದ ವಿಚಾರ
ದೈವ ಮಾನವಗೆ ವಿವಾಹ ಮಾಡಿಸಿದ ವಿಚಾರ
ದೊರೆ ದಾನ ಕೊಟ್ಟು ಹೀನನಾದ ವಿಚಾರ
ಪಂಚಭೂತ ದೇಹ ವಿಚಾರ
ಪಂಚಾಪ್ರಶ್ನ ವಿಚಾರ
ಪಿಂಡೋತ್ಪತ್ಯ ವಿಚಾರ
ಮಾನವ ಯಮದೂತರಿಂದ ಬಾಧೆಪಡುವ ವಿಚಾರ
ಲೇಸಾದ ಗುರೂಪದೇಶ ವಿಚಾರ
ವಿಧಿ ದೂತನು ದೈವಾಜ್ಞೆ ಧಿಕ್ಕರಿಸಿದ ವಿಚಾರ
ವಿಧಿ ದೂತ ಮಾನವನ ಮೋಸ ಮಾಡಿದ ವಿಚಾರ
ವಿಧಿ ದೂತನ ಪ್ರತಿಜ್ಞೆ ಭಂಗ ಮಾಡಿದ ವಿಚಾರ
ಶಿಷ್ಯರೊಂಚಿಪ ಗುರುಗಳ ವಿಚಾರ
ಹೆಣ್ಣು ಮಕ್ಕಳ ವಿದ್ಯಕ್ಕೆ ಗುರುವು ಆತ್ಮಸಾಕ್ಷಿ ಕೊಟ್ಟ ವಿಚಾರ
ಬಿಡಿ ಪದಗಳ ವಿಷಯಾನುಕ್ರಮಣಿಕೆ
ಪದದ ಮೊದಲ ಸಾಲು ಅನುಸರಿಸಿ
ಅಂಗಾ ಸಂಗವೆ ಎನಗೆ
ಅಯ್ಯೋ ಎನ್ನ ದುರ್ಗತಿ
ಎಚ್ಚರ ವಿಲ್ಲೆಚ್ಚರ
ಕಂಡೆ ಕನಸು ಮರೆತೆ
ಕರುಣಾಳ್ಳಾದೈವನೂ
ಕಾದು ಕಾದು ಮಾನವಾ
ಗುರುವರ ಶುಭಕರ ಬಂದ
ಗುರು ರಾಯನೇ ಈತನೇ
ಜಯ ಶುಭಾಂಗ ಗುರುವರ
ಜನನೀ ಜನಕನಾಜ್ಞೆ
ತನುವಿನ ಬಾಧೆ
ತೆರಳೂವಾ ಜೀವಾ
ದೈವದ ದೂಷಣೆ
ನಾಚಿಕಲ್ಲೇ ಎನಗೇಳಲ್ಕೆ
ನೀಚನುಪದೇಶ ಬಹು
ನಿಮವಾಕ್ಯಂ ನಮಗಾಶ್ಚರ್ಯಂ
ಬಂದ ರಾಜನೂ
ಬ್ಯಾಡಣ್ಣಾ ನೋಡಣ್ಣಾ
ಮರತೂ ನೀನಿರಬ್ಯಾಡೈ
ಮಾನಸ ಈ ಪರಿಯಾ
ಮುಕ್ತನು ಜೀವಾ
ಮುಂದಾಗಿ ಪ್ರಭುವಿನ
ಮೃಗಜಲ ದಿನ ಸಾಯ್ತೂ
ಮೌನ ಬ್ಯಾಡ ನಿನಗೆ
ಯಾತಕೆ ಗುರುಕೀರ್ತನೆ
ಯಾತಕೋ ಮಾನವ ಬಂದೇ
ಯಾಕಮ್ಮಾ ದುಃಖಿಸುತಿಹೆ
ವಿಚಾರ ಗುರುವಿನ ಸಾರಾ
ಶುಭಾಶುಭ ಸುಖದುಃಖ
ಶ್ರೀಗುರುವೆಮ್ಮಾ ನೀ ಕಾಯ್ದೆ
ಶ್ರೀಗುರು ಸಿಗಬೇಕಿಂತವನು
ಶ್ರೀಗುರುವರ ನಿಮ್ಮ
ಸತ್ತೂ ಮತ್ತುಟ್ಟೂದುಂಟೇ
ಹಿರಿಯರರಿತು ಕೊಡುನಿ ಧರ್ಮಾ

ಪರತತ್ವ ಕಾವ್ಯ – ಭಾಗ 2
ಅಗಣಿತ ಮಹಿಮ ಅನಂತ ತೇಜದೊಳಿರುವಾ
ಅನಾದೀನದ ಸೂನ್ಯನಾ ದೈವಾಧೀನಾ
ಅನುಭವಿಲ್ಲಾದಾಡುತಿರುವರೇ ಘನದೈವ ನಿಜವೀ
ಅನುವಾಗದೇ ನಿಮ್ಮಾ ಕಾರ್ಯ ಅನುವಾಗದೆ
ಅಭಯಾ ಪಾಲಿಪ ಪ್ರಭೂ ಅವಗೇ ಬಾರದ ವಿದ್ಯಾ
ಅರಿತವರೆನಬಹುದೂ ಮರು ವರುವು ಮೀರಿದ್ದೇನದೂ
ಆರಾದಡೆಯೇನ್ ದಾರಿಯ ಕೇಳ್ವದಕೆ
ಆಡಬಹುದೇ ಇಂಥಾ ನಿಂದ್ಯಾ ಎಲ್ಲಾ
ಆನಂದವಾನಂದ ವಾಯಿತೈ ನಾನತ್ವವಳಿದೂ
ಆವ ಅನುಭವದಲಿ ಅತಿಶಯವುಂಟು ಮಹಾಗುರುವೇ
ಆರತಿಯ ಬೆಳಗೀರೆ ದೇವನಿಗೆ
ಇತರಿಲ್ಲದೆ ಇಹದಲಿ ನಿಜ ತುಂಬಿಹದಂತೆ
ಇದ್ದ ವಸ್ತುವ ಇಲ್ಲದಂತೇ ಇಲ್ಲದದನೂ ಇದ್ದರೀತೆ
ಇದು ನೋಡೋ ಏಕೋ ಮೂರ್ತಿಯ ಪ್ರಾರ್ಥನೆ
ಇದೊಂದ ಚೋದ್ಯಾ ಅತ್ಯಧಿಕ ಹಿರಿಯರನು ಕಂಡು
ಇರಬಹುದಿರಾಬಹುದೈ ನಿರವಯನು ನರನೂ
ಇಹಪರರಿಗೆ ಇಷ್ಟೇ ಭೇದಾವೂ ಇನ್ನೇನೂ ಇಲ್ಲಾ
ಇಂದಿಗಾಯಿತು ಎನ್ನಾ ಸಂದೇಹ ಛೇದಿಪಾ
ಈ ಜಗದೊಡಿಯನ ಬಗಿಯ ಕಂಡೂ
ಉದ್ಯೋಗಾ ಹೂಡಿದೆ ಇಲ್ಲದನೂ ಮಾರಿದೆ
ಎಂತದೀ ಜಗವೂ ಬಂತೇ ಮರಣಾವೂ
ಎಂತ ಭಕ್ತರೋ ಇವರೂ ಎಂತ ದೇವರೋ
ಎಂತಾ ಗುರುವರಾ ಎಂತಾ ಪರಾತ್ಪರಾ
ಎಂತಾದಾಶ್ಚರ್ಯ ಕಂಡೆನೋ ಗುರುಪಾದ ಕರುಣದಿ
ಎಂತಾ ದೇವರ ತೋರಿದನಮ್ಮಾ ಶಾಂತಾದಿ ರೂಪ ಗುರು
ಎಂತು ಮರಿಯಲಿಂತಾ ಗುರುವಿನಾ ಜಗದಂತರಾತ್ಮನಾ
ಎಂತು ಮಾಡಲಿ ಗುರುವೇ ಇಂತ ಸಂಗಟವೇ
ಎಂದೆಂದಿಗ್ಹೋಗಾದಲ್ಲಾ ಎನ್ನಯ ಸ್ಥಿತಿ
ಎಚ್ಚರ ಪಾಲಿಸಿ ರಚ್ಚಿಯೋಳ್ ಕೆಡಹುವದಕ್ಕೆ
ಎಚ್ಚರ ಮರತಿರಲಿ ಬ್ಯಾಡಿರಿದೂ ಸಮಯ ನೋಡಿರಿ
ಎನ್ನಂತ ಕಡುಪಾಪಿ ಇನ್ನುಂಟೆ ಲೋಕದೊಳ್
ಎನ್ನಂತಾ ದ್ರೋಹಿ ಎಲ್ಲಿ ಇಲ್ಲವೂ
ಎನ್ನಾನು ಗುರುವು ದಂಡಿಸಿದಾ
ಎನ್ನೊಳು ಮರ್ಮವು ಎನಗೇ ಸುತ್ತಿದನೇ
ಎಲ್ಲ ತಾನಾಗಿ ತಾನಲ್ಲದಿರುವದೂ ಬಲ್ಲಾ ಧನ್ಯರೆ ಪೇಳಿರಿ
ಎಲ್ಲಾನು ಬಲ್ಲೀಯಲ್ಲೋ ಇಹದೊಳಗೆ
ಎಷ್ಟೋ ನಿನ್ನಾದೂ ದಯಾ ಏ ಸ್ವಾಮಿ
ಒಂದು ನಡತಿ ನಡಿಯದೆ ಇರುತೀರಲ್ಲಾ
ಒಂದಾದಂತಾ ಸಂಧಿ ತಿಳಿಯಾದ್ಹೇಳುವರೇ
ಕನಸೀನ ಗಂಟೀನಂತೋ ಕಲಿಯಿದು ಕಾಣದೆ
ಕನಸು ಕಂಡೆನೇ ಮನಸು ಇಟ್ಟೆನೆ ದಿನಸಿನೊಳಗೆ
ಕಂಡೇ ಪ್ರಾಣಾನಂದವ ಕೊಡುವಾ ಗುರು ಪಾದವಾ
ಕಾಣಬೇಕೋ ಗುರು ದೈವದ ಪಾದಾ
ಕಾಣಬಾರದೋ ಕಲಿಜನಕೇ ಜ್ಞಾನಿ ಕಂಡದೂ
ಕಾಣುತಿಹುದೂ ಆಶ್ವರ್ಯಾವು ಎನಗೆ
ಕಿರಿತನಕೇ ಸರಿ ಇಲ್ಲೆಂಬುವದೂ
ಕೇಳಿಕೋ ಕ್ಷೇಮ ತಾಳಿಕೋ ನಾಳೆನ್ನದೀ ದಿನ
ಕೇಳೂವೆ ಹೇಳೀರಿ ಬಾಲಾನ ಪ್ರಶ್ನವೂ
ಗಾಧೇ ಬಹಿರಂಗ ಓದಲಿಬ್ಯಾಡ
ಗುರು ಕುಮಾರರ ಗೋಪ್ಯವಿದು ಸತ್ಯಾ
ಗುರುಪುತ್ರರಿಗೆ ನಾನು ಶಿರ ಬಾಗಿ ಕೇಳ್ವೆನೂ
ಗುರುವಾದ ಮ್ಯಾಲೆ ಈ ಪರಿ ಸಾಂಗತ್ಯವು ತನ್ನಾ
ಗುರುವಿಲ್ಲದಿರಬಾರದಿಹದೀ ಮುಂದೆ ದೊರಿಯಾದು
ಗುರುವಿನ ಘನ ಕಾರಣಾರ್ಥವೂ
ಗುರುವಿನಾ ಚರಣಕ್ಕೆ ಶಿರಬಾಗಿ ನಿಲ್ಲಾಲೂ ನರರಾಧಿಕಾರವಾ
ಘಟವೆ ನಿನ್ನ ಸಂಗದಿ ಲಂಪಟ ಎನಗಾಯ್ತೆ
ಚಪಲಾತ್ಮರು ಅಪಹಾಸ್ಯದಿ ಕುಟಿಲದಿ ಕೂಡ್ಯಾಡಿ ಬಂದು
ಚಿನುಮಹೇಶ ಗುರುವಿನಾ ದಿನಸೀನ ಮುಖದಿ ಕಂಡೆನಾ
ಜಾಣರಾದವರುಗಳು ಗಾಣದಂತಿರುವ ಘಟ ಜಾಣತನದಲಿ
ತಂಗೀ ಬಾ ಬೀಸೋನೂ ಮಂಗಾಳಾ ಗುರುವರನೂ
ತನ್ನ ತಾನೆ ತಿಳುಪುವಾ ಧನ್ಯರ ಸದನಾ
ತಮ್ಮ ನಿನ್ನಯ ಪ್ರಶ್ನೆ ತೆರನಧಿಕ ಘನವೂ
ತಿಳಿದವನೆ ಇಳಿಯೊಳು ಧೀರಾ ಒಳ ಹೊರಗನ್ನದೆ
ತಿಳಿಯೋ ನಿನ್ನಾ ಕಳಿಯೋ ತಾನೂ ನಾನೆಂಬು ಭಯ ತಿಳಿಯೋ
ತಿಳೀ ನಿನ್ನಾ ಜಾತಕಾ ಕಳೀ ಪೂರ್ವದ ಸೂತಕಾ
ತಿಳಿಯಾದು ನಾಟಾಕಾ ನಾಟವೂ ಇಳಿ ಜನರಿಗೆ
ತಿಳುಹಿಬಾರೆಂದೂ ಕಳುಹೀದಾರೆನ್ನಾ
ದಾವ ವಿಧಾದಿ ನಾನು ದೈವಾ ಪೂಜಿಸುವೆನು
ದಿಟ್ಟಾ ಗುರು ಕೊಟ್ಟಾ ಪಟ್ಟಾಧಿಕಾರವೂ
ದೈವಾಧೀನವು ಜಗವೆಂದೂ ಈ ಧಾತ್ರಿಯೋಳ್
ನಗುವೆನಗೇ ನಿಲ್ಲಾದಲ್ಲೋ ನಿಗಮದಿ ನೀನಿರುವದು ಕಂಡೂ
ನನ್ನದೆಂದು ನೀ ನಟಿಸುವೇ ನಿನ್ನದೇನದ್ಹೇಳು ಮಾನವಾ
ನಾನೆ ಎಂಬೂವ ರೀತಿ ನರಕವೇ ಗತಿ
ನಿನ್ನ ಹುಡುಕೋ ನಿಜವಾದ ಆದಿಪ್ರಭು ಪ್ರಸನ್ನ
ನಿರಾಮಯದ ಗುರುವಿನ ಗುರುತೂ ಮನಕೆ ಘನವಾಯ್ತು
ನೀ ಮರತಾಡಿದಿಷ್ಟಾಯಿತಲ್ಲಾ ಸೋಮಾರ್ಕ
ನೀನು ನಾನಿಲ್ಲದದು ತಾನು ತಾನಿರುವದದರೋಳೇನು
ಪಕಪಕ ನಗೀ ಬರುತದೆ ಸಕಲವರಿತು
ಪರತತ್ವ ಗುರುವಿನಾ ಪ್ರಾರ್ಥಿಪೆನೂ ಪೇಳಿ
ಪರವಸ್ತು ಎಲ್ಲಿಹದು ನರನೆಲ್ಲಿಹನೂ ಇದನು ತಿಳಿ ನೀನೂ
ಪ್ರಭುವಿನ ಅಚೋದ್ಯ ಕಂಡೆನೋ ನನ್ನ ನಾನನು
ಪುಣ್ಯ ಚಲೋದಾಯ್ತೇ ಮೂರನೆ ಕಣ್ಣೇ ಕಾರಣಾಯ್ತೆ
ಪುಣ್ಯ ಜನರೇ ಗುರು ಧನ್ಯನ್ಹೇಳಿದ
ಪೂರ್ವ ಪರಮಾತ್ಮನೋಳ್ ಸೇರಿ ಇದ್ದೆವು ಹ್ಯಾಗೆ
ಪ್ರಾಣ ಪರಮಾತ್ಮನೋಳ್ ಬೆರದಾದೆಂಬುವರೀಗೆ
ಪ್ರಾಣಾನಂದ ಹೆಚ್ಚೀತೆ ಆಹಾ ಈಗ
ಬಲ್ಲವರ್ಯಾತಕೊಪ್ಪುವರೂ ಬಯಲೆ ಬ್ರಹ್ಮವು ಎಂದು
ಬ್ರಹ್ಮಾನಂದಾ ರಮ್ಯಾ ರಂಜಿಸಿತೈ ಅರುವಿನೊಳು
ಬ್ಯಾಗ ಬಂದು ಗುರುವಿನ ಕೂಡಿರಿ
ಭಕ್ತರು ದೇವಾರ ಬೆರದೂ ಮತ್ತು ತಾ ಬ್ಯಾರಾದ ಬಗೆ
ಬೆಳಗಿರಾರತಿ ಗುರುವೀಗೇ ಬ್ರಹ್ಮಾಂಡ ಭರಿತಗೆ
ಬೆಳೆವದಣ್ಣ ಕರ್ಮಾ ಇಳಿಯೊಳು ತಿಳಿಯದಿರುವೆ ಮರ್ಮಾ
ಬೇಡುವರೇನೋ ಹಿರಿಯರು ಮೋಕ್ಷಾ
ಮರಣಕ್ಕೆ ಯಾಕಂಜಿದೇ ಮಾನವ
ಮರುಗಾದಿರಲೋ ಮನುಜಾ ಗುರುವಿನ ಚರಣಾವೊ
ಮಾನಸ ಈ ಪರಿಯಮೆವುದೈ ಮಹನೀಯ ಮಹಮೂರ್ತಿ
ಮೂರ್ಖ ಮಾತಾಡಬಹುದೇ ಅರ್ಕಕಳೆಗಧಿಕ ಸುಜ್ಞಾನ ತೊರಿದು
ಮಿತ್ರರಾಗಿಹರೆಂದು ಈ ಮಹೀಜನರ ನೀನತ್ಯಾಂತ ಸ್ನೇಹದಿಂದಾ
ಮೋಸಗಾರತಿ ನಾಶವಾಗುತೀ ಲೇಸುಪೇಳಿದಾರ್ಯರ ಮನ ನೋಯ್ಸಿ
ಯಾಕೆ ಗುರುವ್ಯಾಕೇ ಹೀನ ಜನರಿಗ್ಯಾಕೆ ಗುರುವ್ಯಾಕೆ
ಯಾಕೆ ತಿಳಿಯಲಿ ಬಾರದೂ ಗುರು ರೂಪಾವೂ
ಯಾಕೆ ಹಿಂದಿನ ಹಿರಿಯಾರೆಲ್ಲನೇಕರನು ಕಂಡಿಲ್ಲವೆ
ಯಾತರ ಬಾಳೋ ಈ ಧರಿತ್ರಿಯೊಳೂ ಜಗಧಾತನರಿಯದಿರೆ
ಲಯಕಾಲಾ ಜಯಲೀಲಾ ಕಾಣದ ಇಹ ವಿದ್ಯವದು ಯಾಕೆ
ಲಯವಾದ್ಯಾಯೇ ಮಾಯೀ ನಿನ್ನ ಜೈಸೀದ ಗುರುವೇ ಸಹಿ
ಸಚರಾಚರಂಗಳು ಕ್ಷಣದಿ ಮಾಡಿದ ಪ್ರಭುವಿನ್ಹೆಸರು
ಸತ್ತು ಹೋದಾನೆಂದು ಲೋಕಾ ಸಾರಿ ಸಾರಿ ಹೇಳುತದೆ
ಸದುಪಾಯ ಮಾರ್ಗದವರ ಒದಗಿ ನಾನು ಕೇಳಿಕೊಂಬೆ
ಸಪ್ತಾ ಸೋಪಾನಾವೂ ಜ್ಞಪ್ತಿಯಲ್ಲೇರಿಳಿವೋ
ಸರಿದು ಹೋದ ಹಿರಿಯಾರಾ ಗೊಡಿವ್ಯಾಕೋ
ಸರ್ವ ನಾಟಕ ಸ್ವಾಮೆಂದೆನುವಾ ನರರಿಗ್ಯಾಕಿನ್ನು ಗುರುವಾ
ಸರ್ವ ವ್ಯಾಪಕನಾ ಸಾಕ್ಷಿಯ ಮಾಡಿ ಕೆಡುವದೂ
ಸಾರ್ಥಕವಾಗದು ನರಜನ್ಮಾ ಸಾಮರ್ಥ್ಯ ಗುರು ಸೇರದೆ ತಮ್ಮಾ
ಸಾಧುಗಳಿರಾ ಸಾರೀ ಹೇಳುವೇ ಕೇಳಿರಿ
ಸಾಧು ಸಜ್ಜನನಾ ಮನಸಿನ ಶೌರ್ಯ ಸರಿಯುಂಟೆ
ಸಾರೂವೆ ಸಾಧು ಸಭೆಯ ಕಂಡು ಪ್ರಭು ಯಾರ್ಯಾರಿಲ್ಲದೆ ಕಾಣ್ವದು
ಸಾವುದಾ ಮುಂದ್ಹೊರಡುವಾ ಉಪಾಯವೂ
ಸಾಯದ ಮುಂದೆ ಸತ್ತ ಸಾಂಗತ್ಯ ಸಾಧನೆ ಅಲ್ಲಣ್ಣಾ
ಸಾಯದಿರೊಡಂಬಡನೂ ಸರ್ವೇಶಾ
ಸುಳ್ಳುದಾವದ್ಹೇಳಿರಣ್ಣಾ ಬಲ್ಲಂತ ಜನರೆಲ್ಲಾ
ಶೋಭಾನ ಪಾಡಿರೇ ಸುಗುಣ ಸುದತಿಯರೆಲ್ಲಾ
ಹಿರಿಯರೆಂಬಾ ಹೊಲದಿ ಬಿತ್ತೀ ಬೆಳಿಯಬಾರದೆ
ಹಿರಿಯರೊಂದಿದವ ವಿಚಾರದೊಳಿರಬೇಕು
ಹೀನಮತಿ ಇಹ ಜನರೆ ಜ್ಞಾನಿಗಳ ಸಂಗ
ಹೇಳುವರ ಕಾಣೆನಯ್ಯಾ ಏಕೋ ಮೂರ್ತಿ ನರರ ಸಂಗತಿ
ಹೆಂಗಾದೀತು ಸಂಗಾ ಪರ ಸುಖಾ ಪ್ರಾಣಾನಂದಾ
ಹೋಗಿರುವಾ ನರನಾ ಭಾವಾ ಸಾಗಿಸೀತೆನ್ನ ಗುರುವಾ
ಹೋಗುವೆವು ನಾವು ಹೋಗೆಲ್ಲಿರುವೆವೊ
ಕ್ಷೋಣಿ ಜನರೊಂದು ಕೂನ ಕೇಳ್ವರು.

Categories
Tatvapadagalu ಶಿಲವೇರಿ ಶಿವಪ್ಪನವರ ತತ್ವಪದಗಳು

ಮರ್ಮ ಪದ್ಧತಿ ಪ್ರಕರಣವು

ಸಾಧುಗಳಿರಾ ಸಾರೀ ಹೇಳುವೇ ಕೇಳೀರೀ
ಸಾಧುಗಳಿರಾ ಸಾರೀ ಹೇಳುವೇ ಕೇಳೀರೀ || ಪ ||
ಪ್ರಥಮ ನಿಮ್ಮಯ ಕುಲಹತ ಮಾಡಿರೀ
ಸತತ ಸ್ವಾಮಿಯ ಕುಲಸ್ಥಿರ ನೋಡಿರೀ
ಕ್ಷಿತಿಯೊಳ್ಹಿರಿಯರೆಲ್ಲಾ ಮಥಿಸಬೇಕಾಯಿತಲ್ಲಾ ಸಾರೀ || 1 ||
ನಿಮ್ಮ ಪ್ರಕಾಶ ನಿರ್ಮಲ ಮಾಡಿರೀ
ಬ್ರಹ್ಮ ಪ್ರಕಾಶ ಭದ್ರದಿ ನೋಡಿರೀ
ಧರ್ಮ ಪದ್ದತಿಯಿದೂ ಧಾತ್ರಿಯೋಳ್ ನಡವದು || 2 ||
ಚೆರಿಯ ನಿಮ್ಮವು ಇಲ್ಲಿ ಛೇದಿಸಿರಿ
ಪರಿಪೂರ್ಣ ಪ್ರಭುವಿನೋಳ್ ಬೆರದಾಡಿರೀ
ಅರಿತವರೆನ್ನುತ ನಿರುತ ನಿಮ್ಮನು ಕಾಯ್ವ || 3 ||
ಸ್ವಾಮೆಂಬೊ ನಾಮ ಸಾಕ್ಷಿ ತಿಳೀರೀ
ನಾಮ ನಿಮ್ಮವು ಇಲ್ಲಿನಷ್ಟೆನ್ನಿರಿ
ಗುಣಧಾಮನೆನ್ನುತ ತನ್ನಾ ಪ್ರೇಮದಿಂ ಪಾಲಿಪ || 4 ||
ಬಲ್ಲಂತ ಹಿರಿಯಾರು ಭೇದಿಸಿರೀ
ಅಲ್ಲಿಸಾಹೇಬು ಗುರುವು ಅಧಿಕೆನ್ನಿರೀ
ಇಲ್ಲದ್ಹೋದರೆ ಮರ್ಮ ಎಲ್ಲೆಲ್ಲಿ ಕಾಣಿರೀ || 5 ||

ಒಂದಾದಂತಾ ಸಂಧೀ ತಿಳಿಯಾದ್ಹೇಳುವರೇ
ಒಂದಾದಂತಾ ಸಂಧೀ ತಿಳಿಯಾದ್ಹೇಳುವರೇ
ಮಂದಜ್ಞಾನಿಗಳೇ || ಪ ||
ವೇಷಾ ಮೊರೆ ಮಾಡಾಡುವ ಒಬ್ಬ ಪುರುಷಾ
ಕೈ ತೋರ್ಪ ಸ್ತ್ರೀಯರಂತೆ ಖಾಸಾ
ವೇಷ ಮಹಿಮೆಯನು ನಾಶ ಮಾಡದೆ
ದೋಷವಿಲ್ಲದ ಪ್ರಭು ಏಕಾಗುವನೇ || 1 ||
ಮಲೆಯೂ ಅದರಲ್ಲಿ ಸೇರಿಹದು
ಹುಲಿಯೂ ಹ್ಯಾಗಾದಿತು ದರ್ಶನ ಕಳೆಯೂ
ಶಿಲ ಛೇದಿಸುತಿಹ ವಜ್ರಕುಲಿಶದಿಂ
ಮಲೆಯ ಬಲಿಸುಹುಲಿ ಥಳಥಳಿಸುವದೂ || 2 ||
ಹಾಲೂ ಕೆಡದಿರೆ ದಧಿ ಹ್ಯಾಗಾಯಿತ್ಹೇಳೂ
ದಧಿನಷ್ಟಿಸು ಹೇಳುವೆ ಕೇಳೂ
ಶೀಲ ತೋರ್ಪ ಬೆಣ್ಣೆಗ್ನಿಜ್ವಾಲದಿಂ
ಧಾಳಿಡುಘೃತ ಆ ವ್ಯಾಳ್ಯ ಕಾಣ್ವದೂ || 3 ||
ಜಾಣಾ ಚೀಣಾ ಸಕ್ಕರೆ ಆದ ವಿಧಾನಾ
ಲಯವಾಯಿತೆ ಕಬ್ಬೀನ ಕೂನಾ
ಮಾನ ಭೂಷಣನ ಮರ್ಮದಲ್ಲಿ
ಜಗಹೂನ ಮಾಡು ನಿಜತಾನೆ ಕಾಣ್ವನೂ || 4 ||
ಕರ್ಮಾ ಭಸ್ಮೀಕರಿಸುವದೀ ಮರ್ಮಾ
ಅಲ್ಲೀ ಸಾಹೇಬು ಗುರುವಿನ ಧರ್ಮಾ
ಪೂರ್ಣ ಹಿರಿಯರಿಗೆ ಪೂರ್ತನ್ಮಯಿವಿದು
ಅರಮತಿ ಜನರಿಗಿದಸಾಧ್ಯಕರವೇ || 5 ||

ಅಭಯಾ ಪಾಲಿಪ ಪ್ರಭೂ ಅವಗೇ ಬಾರದ ವಿದ್ಯಾ
ಅಭಯಾ ಪಾಲಿಪ ಪ್ರಭೂ ಅವಗೇ ಬಾರದ ವಿದ್ಯಾ
ಆರ್ಯರಲ್ಲಿರುವೋದಂತೇ || ಪ ||
ಅನುದಿನ ಅವರ ಪಾದಣುವಾಗಿದ್ದವನಿಗೇ
ಅಗ ಪಾಲಿಪರಂತೇ
ಘನವಾದ ಪ್ರಭೂ ಇವ ಎನಗೆ ಭಕ್ತನು ಎಂದು
ದಣಿಸಾದೆ ದಿನತನ್ನಾ ಮನಿಯೋಳಿಡುವೋನಂತೇ || 1 ||
ಗುರು ತನ್ನ ಶಿಷ್ಯಾಗೆ ಅರುವು ಮಾಡಲು ಕಂಡು
ಪರಮಾತ್ಮ ನಗುವೋನಂತೇ
ಸರಿಯಾಗಿ ನಿಲ್ಲಾರು ಅರಿಯೆ ನೀನೆನುವಾರು
ಪರಿಮರ್ಮವನು ಕೇಳೀ ಹರುಷ ತಾಳಿಪನಂತೇ || ಪ ||
ಕಂಣ್ಗೆ ಕಾಣುವೋದಂತೇ ಕಾಣದಿರುವೋದಂತೇ
ಕಾಲಾಂತ್ರ ನಡಿವೋದಂತೆ
ಕಾರಣ ಬ್ರಹ್ಮಕ್ಕೆ ಕೈ ಸಾಧ್ಯವಾಗದಂತೇ
ಪೂರ್ಣ ಹಿರಿಯರಲ್ಲೀ ಪೂರ್ತಿ ತುಂಬಿಹದಂತೇ || 3 ||
ತಾನೆ ಹೇಳುವನಂತೇ ತನಗೆ ಬಾರದಂತೇ
ತಾ ಚೋದ್ಯ ಬಡುವೋನಂತೇ
ಭಾನುವಿನಂತೆ ಪ್ರಜ್ವಲಿಪ ಹಿರಿಯರಲ್ಲೀ
ಬಹುಕಾಲ ಕಾದರೆ ಅನುಕೂಲಿಸುವೊದಂತೇ || 4 ||
ಗುಡಿಕಲ್ಲು ಅಲ್ಲಿಸಾಹೇಬು ಗುರು
ಗುಣನಿದಿ ಗುಟ್ಟು ಗುರಿ ತೋರ್ಪಾನಂತೆ
ಪೊಡವಿ ಪಾಲಿಪ ಪ್ರಭುವಿಗೆ ಬಾರದಾ ವಿದ್ಯಾ
ಧೃಢ ಮನಸಿಗೆ ಸಾಕ್ಷಿಬಿಡದೆ ಮಾಡುವೊನಂತೇ || 5 ||

ಇತರಿಲ್ಲದೆ ಇಹದಲಿ ನಿಜ ತುಂಬಿಹದಂತೇ
ಇತರಿಲ್ಲದೆ ಇಹದಲಿ ನಿಜ ತುಂಬಿಹದಂತೇ
ಅದು ಯಾವದಂತೆ ಈಗ ಇತರಿಲ್ಲದೇ || ಪ ||
ಪಂಚಭೂತವೆಂಬೋ ಭಾವ ಭರಿತವಲ್ಲಂತೇ
ಕಿಂಚಿತ ಘನವೆಂಬೊ ಗಣಿತಕ್ಕೆ ಮಿಕ್ಕಿಹದಂತೇ
ಮುಂಚಿತೆನ್ನುವ ಮೂಲವೆ ತಿಳಿಯಾದಂತೇ
ಪ್ರಪಂಚ ವ್ಯಾಪಿಸಿ ಪರಿಶೋಭಿಪ ದಂತಿತರಿಲ್ಲದೇ || 1 ||
ಕೊಳೆಯುವ ಬೆಳೆಯುವ ಇಳೆದಿನುಸೇ ಅಲ್ಲಂತೇ
ಆಳದ್ಹೋಗುವ ಅದೃಶ್ಯ ಭಾವವಲ್ಲಂತೆ
ಕೆಳಗೆ ಮ್ಯಾಲೆಂಬ ಅಳತಿ ಅಂತಿಲ್ಲದಂತೇ
ಒಳಹೊರಗಿಲ್ಲದೆ ಸಂದಿಲ್ಲದಂತೇ || 2 ||
ಆದಿ ಬಹಿರಂತರ್ಯ ಅಖಂಡವಾಗಿಹದಂತೇ
ಶೋಧಿಸಲಿ ಲೋಕ ಸ್ವಲ್ಪಾದರು ಇಲ್ಲಂತೇ
ಹೋದಿತೆನುವಂತ ವಂಚನೆ ತೃಣ ಇಲ್ಲಂತೇ
ಈ ದಿನ ಬಂತೆಂದ್ಹೇಳಲಾಗದಂತಿತರಿಲ್ಲದೇ || 3 ||
ಧರಿತರ ವರ್ಣವು ಮುರಿದರದು ಮುರಿಯದಂತೇ
ಪರಿವಿಧ ಅದರಾಪ್ರಾಂತವೆ ಸೇರಿಹದಂತೇ
ನರರನದುರಿನಲಿ ಎದರಾಗಿರುತಿಹದಂತೇ
ಚೆದರದೇ ಬೆದರದೇ ಸದಾಯಿರುವದಂತಿತರಿಲ್ಲದೇ || 4 ||
ಎಲ್ಲರಲ್ಲಿಯೂ ಈ ಅನ್ವಯವಿಲ್ಲಂತೇ
ಅಲ್ಲಿಸಾಹೇಬು ಗುರುಪಾದದಿ ಸೇರಿಹದಂತೇ
ಅಲ್ಲಮಗುರು ಭಕ್ತರಿಗೆ ಎನುಭ ನಿಜವಂತೇ
ಎಲ್ಲಿ ನೋಡಲಲ್ಲೆಲ್ಲಿ ಇರುವೊದಂತಿತರಿಲ್ಲದೇ || 5 ||

ಉದ್ಯೋಗಾ ಹೂಡಿದೇ ಇಲ್ಲದನೂ ಮಾರಿದೇ
ಉದ್ಯೋಗಾ ಹೂಡಿದೇ ಇಲ್ಲದನೂ ಮಾರಿದೇ || ಪ ||
ಇಲ್ಲದನು ನಾ ಈಡ್ಯಾಡಲೂ
ಎಲ್ಲಾದ್ದು ಅನುಭವಾಗಲು
ಒಳ್ಳೆ ಸಮಯವೆಂದೊಂದು ದಿನ ಬಿಡದೇ
ಎಲ್ಲಾರೇನಂದರು ಸೊಲ್ಲು ಕೇಳದೇ || 1 ||
ಎಂತಾಯ್ತುದ್ಯೋಗ ವರ್ಣನೇ
ಶಾಂತ ಪ್ರಭುತಾನೆ ಕೊಂಡನೇ
ಎಂತ್ಹೇಳಲಿ ಅಂತಿಲ್ಲದ ಲಾಭವು
ಕುಂತರೆ ಕೊಡುವನು ಎಂತು ಬಿಡಲಿ || 2 ||
ಪಾಷಾಣ ಬ್ಯಾಗದಿ ಕೊಟ್ಟೇ
ಪರಿಶುದ್ಧ ವಜ್ರವು ತೊಟ್ಟೇ
ವೇಷವ ಸುಮತಿಲಿ ಈ ಸವಿ ವ್ಯವಹಾರ
ನಾ ಸವಿ ಕಂಡು ಧ್ಯಾಸದಿ ದಿನ || 3 ||
ಶೂನ್ಯ ಸರಕೆಲ್ಲಾ ಸುರಿವೀ
ಸ್ಥಿರವಾದ ಸರಕೇ ಅರಿವೀ
ಗಾನ ಭಜನೆ ಘನ ಏಳು ಪ್ರಕಾಶವು
ನಾನೇ ಸುಮ್ಮನಿರಲು ತಾನೇ ನುಡಿವಾ || 4 ||
ಮಾಡಿನೋಡೆಂದ್ಹೇಳಿದನೇ
ರೂಢಿಯೋಳ್ ಪುಣ್ಯ ಪುರುಷನೇ
ನಾಡೊಳಗಿಲ್ಲಲ್ಲಿ ಸಾಹೇಬು ಗುರುಸರಿ
ಜೋಡಡಿಗಳು ದಯಮಾಡಿದದಕ್ಕೇ || 5 ||

ಪೂರ್ವ ಪರಮಾತ್ಮನೋಳ್ ಸೇರಿ ಇದ್ದೆವು ಹ್ಯಾಗೇ
ಪೂರ್ವ ಪರಮಾತ್ಮನೋಳ್ ಸೇರಿ ಇದ್ದೆವು ಹ್ಯಾಗೇ
ಧಾರುಣಿ ಜನರಿಂದೆ ಹ್ಯಾಗೆ ಸೇರಿಹನೈ
ವಿಚಾರ ಪೇಳಿದ ಧೀರ ಗುರುವರ
ಚರಣ ಸೇರಿದ ಸೇವ ಜನರಿಗೆ ಬಾರಿಬಾರಿಗೆ
ಸ್ವಾಮಿ ದರ್ಶನ ತೋರಿ ಸಖತನ ಸೇರಿರುವದೈ || ಪ ||
ನಿಗಮ ಅತೀತನ ಅಗಲಿದನ್ಮಯ ಹ್ಯಾಗೇ
ಅಗಲಿ ಅವನೊಳು ಬೆರಿವೊ ಬಗೆಯು ಬ್ಯಾಗೇ
ಸೊಗಸಾದ ಅತಿ ಸೂಕ್ಷ್ಮ ಮಧ್ಯದಿ
ಸಿಗದು ನಿನ್ನಧಿಕಾರ ಸಿಕ್ಕರೆ
ಜಗವು ಭಸ್ಮವು ಕಾಣ್ವೋದಾಕ್ಷಣ
ಅಘಾದಾದಿಯ ಅನುಭವುಂಟೈ || 1 ||
ದರ್ಶನ ಸ್ಮರಿಸದಿಂ ನರನು ಬೆರತ ಹ್ಯಾಗೇ
ಬೆರತು ಬ್ಯಾರೆರಡಾದಾ ಬೀದಿ ನಿನಿಗೆ
ಗುರುತು ಇಲ್ಲದ ಗುರಿ ಕಾಣ್ವದಕ್ಕೆ
ಹಿರಿಯರೇ ಬೇಕಾಯಿತಲ್ಲಾ
ಶರೀರಾತ್ಮದಿ ನಿಜವರಿಯದಿರೆ
ಪರಂಪರಾ ಅದರನುಭ ಸಿಗದೈ || 2 ||
ಅಸಲಿನಿಂ ವಸುಧೆಯೋಳ್ ಪಸಲಾಗಿ ನಿಂತೆವೂ
ವಸಲಾಗದಿರೆ ಎಮಗೆ ಬಹು ಭಾರವೈ
ಮಿಸುನಿ ಚಿನ್ನದ ರಶಿಕದಂತೇ
ಪ್ರಕಾಶಿಸುತಿಹ ಪೂರ್ವಸಾರ
ದುರ್ವಿಷಯ ಉದರ ಭ್ರಾಂತಿಯಿಲ್ಲದ
ಹಸನಾದ ಗುರು ಅನುಭ ಪೇಳ್ವಾ || 3 ||
ಮಲಗೀದ ಮಾನವ ಬಲವು ಮರತ ಹಾಗೇ
ಮಲಿನ ಕಲಿಯಿಂದಲಿ ಮನ ಮರತದೈ
ಬಲು ಪುಣ್ಯ ಮಾಡೂ ಬಿಡೆಂಬುವ
ತಿಳಿಯಲರಿಯದ ಹಿರಿಯರಲ್ಲದೆ
ನಿಲಕಿಲ್ಲದಾಸೇ ಭಯಂಕರ
ಚೆಲಿಸುತಿಹರಿಗೆ ಸಿಗದೀ ಮರ್ಮಾ || 4 ||
ಅಧಿಕ ನಿನ್ನ ಕರ್ತವ್ಯವಣುವಿ ನೋಷ್ಟಿಲ್ಲಾದೇ
ಸದೆ ಬಡಿವನು ಅಲ್ಲೀಸಾಹೇಬು ಗುರುವಾ
ಒದಗಿ ಕಿಂಕರನಾಗಿ ಗದಗದ
ಬೆದರಿ ಭಯದಿಂದರಾಗಳೆ
ಹೃದಯದೊಳು ದಯ ಪುಟ್ಟಿ ಪೂರ್ವದ
ಪದವಿಯೋಳಿರುವದನು ಪೇಳ್ವಾ || 5 ||

ಪುಣ್ಯ ಚಲೋದಾಯ್ತೇ ಮೂರನೆ ಕಣ್ಣೇ ಕಾರಣಾಯ್ತೇ
ಪುಣ್ಯ ಚಲೋದಾಯ್ತೇ ಮೂರನೆ ಕಣ್ಣೇ ಕಾರಣಾಯ್ತೇ
ಕಣ್ಣೇ ಕಾರಣ ದೋಳಿನ್ನೊಂದು ಛೇದಿಸಿ
ಶೂನ್ಯ ಪರಮಹಿಮೆಯೋಳ್ ಧನ್ಯಾನಾಗುವಂತ || ಪ ||
ಅರುವು ಮರುವು ಬಿಡದೇ
ನೂತನವರ ವಜ್ರಾಗ್ಯದೇ
ದೊರೆತಿರಿದುಣುವನ ಸರಿಯಾಗಿರುತದೆ
ಅರ ಮರಕಿಲ್ಲದೆ ಗುರುತು ಕಂಡದಕೇ || 1 ||
ಸ್ವರ್ಗದ ಆಸಿಲ್ಲೇ
ಯಮನರ ಘರ್ಜನೆ ಭಯವಿಲ್ಲೇ
ನಿರ್ಜರರ ಸುಖಕೆ ಯಮನರ ದುಃಖಕೆ
ಮೀರ್ಬೋರ್ಗರಿಸುವ ಮಾರ್ಗ ಸಿಕ್ಕದಕೇ || 2 ||
ಅನೃತ ಘಟಕೆ ಮೀರೀ
ನೃತಕರ ಧಣಿಯೋಳ್ ದಿನ ಸೇರೀ
ಅನಿತಿರುತಿಹ ಅಯಿದನೆ ಅನ್ಮಯದೊಳು
ಘನ ಅಂತರ್ಯದಿ ಕುಣಿಕುಣಿದಾಡುವ || 3 ||
ನೆರಳಿಲ್ಲದ ಲೀಲಾ
ಸಿಕ್ಕದಕೆ ತಿಳದಿತಿದರ ಮೂಲಾ
ನರರ ಗಣನೆಯೊಳು ಸರಿ ಹೊಕ್ಕೆನು ನಾ
ಸುರರಿಗೆ ಸಿಲ್ಕದ ಗುರು ಮೂಲದಿ ಎನ್ನ || 4 ||
ಕರುಣ ರೂಪಶಾಲೀ
ಅಲ್ಲಿಸಾಹೇಬು ಗುರುವೆ ಮರ್ಮದ ವಲೀ
ಚರಣ ಸ್ಮರಿಸದಿಂ ಶರೀರ ಕರ್ಮವು
ಹರಿದು ಹೋಗಲಿಕೆ ಸರಿಯಿಲ್ಲದ ಎನ್ನಾ || 5 ||

ಶೋಭಾನನ ಪಾಡೀರೇ ಸುಗುಣ ಸುದತಿಯರೆಲ್ಲಾ
ಶೋಭಾನನ ಪಾಡೀರೇ ಸುಗುಣ ಸುದತಿಯರೆಲ್ಲಾ
ಆದಿ ಅಂತರ್ಯ ಬಹಿರಂಗ ಶೋಭಾನವೇ || 1 ||
ಅಸಲೀನಿಂ ಇಳದೇವೇ ಪಸಲಾಗಿ ನಿಂತೇವೇ
ಒಸಲ ಮಾಡಿದ ಗುರುರಾಯಾ ಶೋಭಾನವೇ || 2 ||
ಅಂದಿನ ನಮ್ಮ ವೃತ್ತಾಂತಾ ಚಂದಾದಿಂ ಪೇಳೂತ
ಸಂದೇಹ ಬಿಡಿಸಿದನಮ್ಮ ಶೋಭಾನವೇ || 3 ||
ಅಂದೀನ ಅಂತರ್ಯಾ ಇಂದೀನ ನಮ್ಮ ಚೆರಿಯಾ
ಒಂದೂಗೂಡೆರಡನುಭಾವಾ ಶೋಭಾನವೇ || 4 ||
ಒಂದೇ ಎಂದ್ಹೇಳೇವೇ ಎರಡಿಂದ ಕಂಡೇವೇ
ಮಂದಿ ಅರಿಯಾರು ಸಂಧಿಮರ್ಮ ಶೋಭಾನವೇ || 5 ||
ನಂಬೀಗೆ ನಿಜವೆಂದಾ ಇಂಬಿಲ್ಲದ್ಹೇಳಿದ
ಸಂಭ್ರಾಮ ಸೂರೆ ಮಾಡಿದಾನೆ ಶೋಭಾನವೇ || 6 ||
ವಿವರೀಸೀ ನಂಬೆಂದಾ ಇಲ್ಲದನೂ ಹಿಡಿಯೆಂದಾ
ಸವಿ ಕಂಡೂ ಜಗದಿ ಶೋಭಿಸೆಂದಾ ಶೋಭಾನವೇ || 7 ||
ನಾಚೀಕೆ ಬಿಡು ಎನುವಾ ಲೇಸಾದ ವಸ್ತೂವಾ
ಧ್ಯಾಸಾದಿ ಮನದೋಳಿಡು ಎಂದ ಶೋಭಾನವೇ || 8 ||
ಧೈರ್ಯಾದೀ ನಿಲ್ಲೆಂದಾ ಧೀರತ್ವಾ ಧರಿಸೆಂದಾ
ವೈದಾಡುವಾ ವಜ್ರ ಕುಲಿಶದಿಂದ ಶೋಭಾನವೇ || 9 ||
ನಂಬೀಗೆ ವಿವರಾವೋ ನಾಚೀಕೆ ಧೈರ್ಯಾವೂ
ಸಂಭ್ರಾಮ ಹಿರಿಯಾರ ರೀತೆ ಶೋಭಾನವೇ || 10 ||
ಸಪ್ತ ಪ್ರಕಾಶವೂ ಸಪ್ತ ನೀಲದ ಸ್ಥಲವೂ
ನಿಶ್ಯಬ್ದ ತಟ್ಟೆಯೊಳಿಟ್ಟು ಬೆಳಾಗೆ ಶೋಭಾನವೇ || 11 ||
ಸಮಾಧಿಯೋಳ್ ಶ್ರಮನೋಳ್ಪಾ ನಮ ಮನಕೇ ಗೊತ್ತಲ್ಲೆ
ಶ್ರಮದೋಳು ಸಮಾಧಿ ಸಾಕ್ಷಿ ನೋಡೇ ಶೋಭಾನವೇ || 12 ||
ಅಸ್ಥೀರ ಶ್ರಮದೊಳೂ ಸ್ಥಿರ ಸಮಾಧಿ ನೋಡಲ್ಕೇ
ನಿತ್ಯಾ ಕಲ್ಯಾಣ ಮಹೋತ್ಸವಾವೆ ಶೋಭಾನವೇ || 13 ||
ಸ್ವರ್ಗದ ದೂರಾಸೀಗೆ ಗರ್ಜಿಪ ಯಮ ಬಾಧೀಗೆ
ಮಾರ್ಗ ಉಂಟಮ್ಮ ಮೀರಿದಂತ ಶೋಭಾನವೇ || 14 ||
ಆರಾರೀಗಳವಲ್ಲೇ ಅಲ್ಲಿಸಾಹೇಬು ಗುರು
ಪಾದಾ ಸೇರಿದವರೀಗನುಭಾವ ಶೋಭಾನವೇ || 15 ||

ಪರವಸ್ತು ಎಲ್ಲಿಹದು ನರನೆಲ್ಲಿಹನೂ ಇದನು ತಿಳಿನೀನೂ
ಪರವಸ್ತು ಎಲ್ಲಿಹದು ನರನೆಲ್ಲಿಹನೂ ಇದನು ತಿಳಿ ನೀನೂ || ಪ ||
ನೋಡೂವ ನೋಟ ಸ್ಥಲದೊಳೂ
ಗಾಢ ಸಿಗುತಿಹನ್ಯಾರೇಳೂ
ನೋಟ ವಿವರೆಲ್ಲ್ಯಾಯಿತು ಪೇಳೂ
ಜೋಡಿದರ ವಿವರ ಮಾಡಿಕೊಡುವ
ಗುರು ನಾಡೊಳು ಪಿರಿಯವು ನೋಡಿ
ಹುಡುಕೊ ನೀ ಬಿಡದೆ ತಿಳಿ ನೀನೂ || 1 ||
ಸಿಕ್ಕು ಎಲ್ಲಡಗಿರುತಿಹನೂ
ಮಿಕ್ಕು ಕಾಣ್ಬರುತಿಹದೇನೂ
ಸಿಕ್ಕವನ ಶೀಘ್ರಕಳಿವದೇನೂ
ಮಕ್ಕಳಾಟದೊಳು ಗಕ್ಕನೆ
ಪೊಕ್ಕಂತೊಕ್ಕರೆ ನಿನಕೈ
ಸಿಕ್ಕುವುದೆಲ್ಲಾನೂ ತಿಳಿ ನೀನೂ || 2 ||
ಏಕಾಂಗ ಈ ಬಹಿರಂಗಾ
ಏಕತ್ವ ಅನುಭವ ಸಂಗಾ
ಸ್ವೀಕರಿಪದು ಸಿಕ್ಕರೆ ಸತ್ಸಂಗಾ
ಲೋಕ ಏಕೋಪ್ರಭು ಯಾಕಡೆ
ಇರುವವಿದೇಕಿಯ ಪಾದವ ಸೋಕಿ
ತಿಳಿಯೋನೀ ಇದನು ಬಿಡದೆ ನೀನೂ || 3 ||
ಆದಿ ಅನಾದಿಡಿಕೊಡುವಂಥಾ
ಹಾಧ್ಯನನೀ ಪಿಡಿಗುಣವಂತಾ
ಸಾಧ್ಯಾಗುವದು ಭಯದ ಸಾಮರ್ಥ್ಯ
ಎದ್ದು ಮಲಗಿದರು ಎಡಬಿಡದಲೆ
ಬಹು ಚೋದ್ಯಾಗುವದಿದ
ಬದ್ಧವಲ್ಲನೀ ಇದ್ದೇ ತಿಳಿ ನೀನೂ || 4 ||
ಗಿರಿಗೆ ಗುರಿ ಮಾಡಲುಬಹುದೂ
ಭರಿತ ಪರವಸ್ತೆನಬಹುದೂ
ತರುಳರಿಗೇಳದಲೆ ಬರುತಿಹುದೂ
ಅರಿತ ಅಲ್ಲಿಸಾಹೇಬು ಗುರುವಿನ ಪಾದವು
ಸರಿಯಲ್ಲೆನುವದು ಶಿರ ಬಾಗಿಸಿ ನೀ
ಇದನು ತಿಳಿ ನೀನೂ || 5 ||

ಅರಿತವರೆನಬಹುದೂ
ಅರಿತವರೆನಬಹುದೂ
ಮರುವರುವು ಮೀರಿದ್ದೇನದೂ || ಪ ||
ಮರುವರುವು ಮೀರಿ ಇರುವದೂ ಗುರು
ಮಾರ್ಗ ತೀವ್ರ ತಿಳವದೂ
ಅರಿಯದಿರೆ ಘಾತ ಕಾಣ್ವದೂ
ಅರಿತರ್ಗೆ ಕೊರತೆ ಬಿಡಿಪದೂ ಅದೂ || 1 ||
ಉಭಯಕ್ಕೆ ಮೂಲ ಮೂರ್ತ್ಯದೂ
ತ್ರಿಭೂವನದಿ ತುಂಬಿತೋರ್ಪದೂ
ಶುಭ ಪರಕೆ ಪರುಷ ತಾನದೂ
ಅಭಯ ಅಂಬುಧೀ ಎಂಥಾದ್ದು ಅಹುದು || 2 ||
ಪರಮಾತ್ಮ ಮೊದಲೆ ಅಲ್ಲದೂ
ಜರ ಮರಣ ರಹಿತ ನಿಜವದೂ
ಕೊರತೆಗಳ ಕೈಗೆ ಸಿಲ್ಕದೂ
ಕಿಳಿತನಕೆ ಕೇವಲಾಪ್ತದೂ ಇಹುದೂ || 3 ||
ಶರಧಿ ಪರಿಯಾಂತ್ರ ನೋಡದೂ
ಚರಣ ಸೇವಕರ ಮ್ಯಾಲದೂ
ಕರುಣಶಿಖ ಶಿರದೊಳಿರುವದೂ
ಅರಿತವರ ಅಧಿಕರೆನಿಪದೂ ದಿಟದೂ || 4 ||
ಅಹಲ್ಲಾದ ಅನುದಿನಿರುವದೂ
ಅಲ್ಲಿಸಾಹೇಬು ಗುರುವೆ ತಾನದೂ
ಪಾಲ ಪ್ರಾರಾಬ್ಧ ಅನದದೂ
ಮೇಲೆನಿ ಮನಕೇ ನಿಜವಾಗಿಹುದೂ || 5 ||

ನಿನ್ನ ಹುಡುಕೋ ನಿಜವಾದ ಆದಿಪ್ರಭು
ನಿನ್ನ ಹುಡುಕೋ ನಿಜವಾದ ಆದಿಪ್ರಭು
ಪ್ರಸನ್ನನಾಗುವನಣ್ಣಯ್ಯಾ
ನಿನ್ನ ಮರತರೇ ಚಿನ್ಮಯ ಮೂರುತಿ
ಸಿಗನೆಂದಿಗೆ ಸಿದ್ದವು ಖರಿಯಾ || ಪ ||
ನಾಮನಾಕ್ಷಿ ನೀ ತಾಮಸ ಮಾಡದೆ
ಈ ಮಹಿಯೊಳು ತಿಳಿಯುವದಯ್ಯಾ
ಆ ಮಹ ಆದಿ ಪ್ರಭುವಿನ ಬೆರವದು
ಅನುದಿನ ಅರುವಾಗುವೊದಯ್ಯಾ || 1 ||
ಅರುವಿನಲ್ಲಿ ಮರಣಾಗಿ ಹೋಗುವದು
ಶರೀರಿದ್ದು ತಿಳಿಬೇಕಯ್ಯಾ
ಅರುವು ಮರವಿಯೊಳು ಬರಿದಾದರೆ
ನಿನ ಸರಿತನ ಮರಣಾಗುವದಯ್ಯಾ || 2 ||
ಇದ್ದ ಶರೀರವು ಅಬದ್ಧ ಮಾಡುತ
ಇದ್ದವನ ಬೆರಿಬೇಕಯ್ಯಾ
ಗೆದ್ದಿಹನೆಂಬುವ ಗರ್ವವು ಬಾರದೆ
ಆಧ್ಯರನನುಸರಿಸಿರುವೊದಯ್ಯಾ || 3 ||
ಹೊಂದಿ ಅವನ ನಾನೆಂದು ಹೇಳುವದು
ಎಂದಿಗಿಲ್ಲೊ ಇನ್ನೊಂದುಭಯಾ
ಮಂದಿಯಂತೆ ನೀ ಮೈ ಮರತಿದ್ರೆ
ಮುಂದೆ ಕಾಯ್ವರ‍್ಯಾರಿಲ್ಲವಯ್ಯಾ || 4 ||
ದಾರಿ ಕೇಳುವದಕ್ಯಾರೇ ನೆನ್ನುತ
ತಡಿಯದೆ ಕೇಳ್ವದು ಧರ್ಮವಯ್ಯಾ
ಆರ್ಯ ಅಲ್ಲಿಸಾಹೇಬು ಗುರು
ನಿನ್ನಯ ಗುರಿ ಊರು ತೋರಿಬಿಡಿಸುವ ಸರೆಯಾ || 5 ||

ಸಪ್ತ ಸೋಪಾನವೂ ಜ್ಞಪ್ತಿಯಲ್ಲೇರಿಳಿವೋ
ಸಪ್ತ ಸೋಪಾನವೂ ಜ್ಞಪ್ತಿಯಲ್ಲೇರಿಳಿವೋ
ಆಪ್ತಾನ ಅಡಿ ಹಿಡೀರೀ || ಪ ||
ಪ್ರಥಮ ಸೋಪನದಲಿ ಲೋಕದೋಳ್
ಹಿತದಿಂದಾಲಿರುವಾನೂ
ಮತಿಯುಳ್ಳ ಸುಜನರ್ಗೆ ತನ್ನಯ
ಮಾರ್ಗ ದೋಳ್ಬೆರಿಪನೂ
ಗತೀವ್ರತ ಸ್ಥಿತಿ ಮೀರಿದಂತಾ
ಪತಿಯಾಗಿ ಪ್ರಕಾಶಿಪನೂ || 1 ||
ಸೋಪಾನ ಎರಡತ್ತಿದಾಗಳೆ
ತಾಪತ್ರಾ ಬಿಡೀಪಾನೂ
ಆ ಪಾಪಿ ಕರ್ತವ್ಯವಳಿದೂ
ಗೋಪ್ಯತಾ ತಿಳಿಪಾನೂ
ತಾ ಪೂರ್ವ ಮೂರ್ತ್ಯಾಗಿ ಇರುವನೂ
ಆ ಪರಂಧಾಮಾದಿ ಅಧಿಪತೀ || 2 ||
ತ್ರಿವಿಧ ಸೋಪಾನೇರಿದಾಗರವಿಗೆ
ಮಿಕ್ಕೂ ರಂಜಿಸುವನೂ
ನಯನವೀ ನಾನಂದದೊಳಗೇ
ನಾನೆ ತಾನೆಂಬಾನೂ
ಸುವಿಚಾರವೆ ಅನುದಿನದಲಿ
ಸೂರೆಗೊಡುತಲಿ ಸೇರಿರುವನೂ || 3 ||
ನಾಲ್ಕು ಸೋಪನೇರಿದಾಗಾ
ನಾಮ ನಿರ್ಣೈಸುವಾ
ಬಾಲ್ಕರೆಂದೂ ಬಹು ಕರುಣದೀ
ಬಾಹ್ಯಾದೀ ತಾ ತಿಳಿವಾ
ಮೂಲ್ಕ ತಿಳಿಸೀ ಮೂರ್ತಿ ಬೆರಿಸುವಾ
ಮುಂದೆ ಬೆರಿದೂ ಹೊಂದಿ ಇರುವಾ || 4 ||
ಆಯಿದನೆ ಸೋಪಾನ ಏರುತೆ
ಅಂತರ್ಯ ಬೆರದಾನೂ
ವೈದಾಡಲಿಕ್ಕಿವರಿಗೆಲ್ಲಾ
ಒಳಗೆ ವಜ್ರಾದನೂ
ಕೈ ಪಿಡಿದು ತನ್ನ ಕರುಣ ರಸದಿಂ
ಕರ್ಮಿಯನ್ನದೆ ಕಲತಿರುವನೂ || 5 ||
ಅರು ಸೋಪಾನತ್ತಿದಾಗಾ
ಅದಿಯೆಲ್ಲಮನಸ್ಕಾ
ಸೇರಿ ಸರ್ವಾಜಗವು ತನಕೆಳತಾನೆ
ಕಾಣ್ವ ಅನೇಕಾ
ಪಾರ್ಮಾಡುವ ಪಾಪಿ ಜನರಾ
ಬಾಯಿಂದ ನುಡಿಸಲ್ಕೆ ಧೀರಾ || 6 ||
ಏಳು ಸೋಪಾನದ ಮಹತ್ತೂ
ಹೇಳಿಕೇಳೂವದಲ್ಲಾ
ದಯಾಳು ಅಲ್ಲಿಸಾಹೇಬು ಗುರುವರ
ಧನ್ಯಾನೆ ತಾ ಬಲ್ಲಾ
ನಾಳೆ ನೋಡೋನೆನ್ನದೇ ಮುಂದೀಲೀಲೇ
ಬೆರದಾಡೋ ಮನುಜಾ || 7 ||

ನಗುವೆನಗೇ ನಿಲ್ಲಾದಲ್ಲೋ ನಿಗಮದಿ
ನಗುವೆನಗೇ ನಿಲ್ಲಾದಲ್ಲೋ ನಿಗಮದಿ
ನೀನಿರುವದು ಕಂಡೂ ಪ್ರಭುವೇ || ಪ ||
ಕಣ್ಗಳಿಗೆ ಕಟ್ಟು ಹಾಕಿದೇ
ಕಾಣ್ದಂತಕಾರಣವಾದೇ
ಜನಗಳಿಗೆ ಜಡರುಸುತ್ತಿದೇ
ನಿನ್ಘನತೆ ನೀನೇ ಕಾಣ್ತಿದೆ || 1 ||
ಎಂತಾಮೂರ್ತಿ ಅಂತಾವಾರ್ತಿ
ಅಂತರದಿ ನೀಯಾಡುತ ಕುಂತೀ
ಇಂತಾಖಿಲಾಡಖಿಲಹೀನತಿ
ಚಿಂತಿಗೆ ಸಿಗದಂತ್ಹೊರಗಿರುತೀ || 2 ||
ದೂರದಿ ಮರಿಯಾದಿ ಮಾಡುತೀ
ಸಾರೆ ಹತ್ತಿರ ಸಾಕ್ಷಿ ತೋರುತೀ
ಬ್ಯಾರೆಮಾಡಿ ಬ್ಯಾಗೆ ಬೆರಿಯುತೀ
ಗಾರಡಿತನ ಎಲ್ಲಿ ನೀ ಕಲತೀ || 3 ||
ಸುಖವು ದುಃಖ ಸುತ್ತಿದಿಯಲ್ಲೋ
ಸಕಲರೊಡಿಯ ನಿನಗಿಂತಿಲ್ಲೋ
ಸುಖಾ ಸಂಕಟವು ಭಯಾಕೆನಲೂ
ಸುಕೃತ ಪೂರ್ವ ಬೋಧಿಪೆಯಲ್ಲೋ || 4 ||
ಕಾಣುತ ನಗುತಿರುವಳು ಸುದತೀ
ಕಾಲೆಡಹಿದಂತೆ ಮಾಡುತೀ
ಜಾಣ ಜತನ ಜರಿಯದಿರೆನುತೀ
ಜಗದ ಜಡರು ಜೈಸೆಂದ್ಹೇಳ್ತೀ || 5 ||
ಘಕ್ಕನೆ ಹೊರಡಿಸಿದ ವಾಕ್ಯವೇ
ಘನತೆ ಹೋಗದೀಗ ನಡಿಸುವೇ
ಮಿಕ್ಕವರ ಕೈಲಿಯಾದವೇ
ಶಕ್ತನು ನೀನಾಡಿ ನೋಡುವೇ || 6 ||
ಎಲ್ಲ ಆಟ ಆಡುತ ಮಿಕ್ಕೇ
ಅಲ್ಲಿಸಾಹೇಬು ಗುರುವಿಗೆ ಸಿಕ್ಕೇ
ಬಲ್ಲಿದಾಧ್ಯನಾಟಾಡೆನಲೂ
ಬಾರದೆಂದು ಪಕಪಕ ನಕ್ಕೇ || 7 ||

ದೈವಾಧೀನವು ಜಗವೆಂದೂ
ದೈವಾಧೀನವು ಜಗವೆಂದೂ
ಈ ಧಾತ್ರಿಯೋಳ್ ವೈದಾಡುವದೂ ವೇದವೂ
ಅಹುದು ಎನಲಿಕ್ಕೊಂದರಿಂದೇ
ಅಖಿಲ ಕಲ್ಪಿತ ಮಾಡಿದಾ || ಪ ||
ತ್ರಿವಿಧ ವಿಧದಿಂ ತಿಳಿಯಲೆಂದತಿ
ತರತರಂಗಳು ತೋರಿದಾ
ಪರಿಜವದಿ ತಮ್ಮ ಭಾವ ಕಾಣಲ್ಕಿವಿಧ
ತವಕದಿ ಭುವಿಯೋಳ್ ಮಾಡಿದಾ || 1 ||
ಚರ್ಮಮುಖ ಸಾದೃಶ್ಯ ಮಾರ್ಗದಿ
ಸೌಂದರ್ಯವೆ ಮಾಡಿದಾ
ಕರ್ಮಹೊತ್ತ್ಯಾರಾಡೋತರಗಳ
ಕಾಲು ಕೈ ಮುರಿದಾಕಿದಾ || 2 ||
ಚರ್ಮಬಲ ಇನ್ನೆಷ್ಟು ಹೇಳಲಿ
ಚತುರ್ಮುಖವೇ ತುಂಬಿದಾ
ಈ ಮರ್ಮ ಸಿಗಲಿಕೆ ಬ್ಯಾಗದಿ
ಈ ಸಾಮ್ಯ ತರಗತಿ ಸಾಕ್ಷಿ ಮಾಡಿದಾ || 3||
ಮ್ಯಾಣದಿಂ ಮಹ ಮದಗಜಂಗಳು
ಮಿತಿ ಇಲ್ಲದೇ ಮಾಡಿದಾ
ಮನವಾ ಖಗ ಪಕ್ಷಿ ಮೃಗ
ಶುನಕಾದಿಯೋಳ್ ಸೂರ್ಯಾಡಿದ || 4 ||
ಜಾಣರಿದ ತಿಳಿಯಲ್ಕೆ ಬಹು
ಸುಜ್ಞಾನವೇ ದಯಮಾಡಿದಾ
ತಾನೆ ನಿನ ಸ್ವಾಧೀನ ಬರಲಿಕೆ
ಈ ಕೂನ ಸಂಧಾನ ಮಾಡಿದಾ || 5 ||
ಹೇಮ ಮುಖದಿಂ ನಾಣ್ಯ ರಮ್ಯವು
ರಂಜಿಸುತ್ತೇ ಮಾಡಿದಾ
ಭೂಮಿ ವಾಯಾಗ್ನಿ ಜಲಂಗಳು
ಪೇಳ್ವದಕೆ ತಾ ಮಾಡಿದಾ || 6 ||
ಸ್ವಾಮಿ ದಯ ಸರಿಯುಂಟೆ ಸಾಯ್ವನ
ಸಾಯದಂತೇ ಮಾಡಿದಾ
ನಾಮ ಮಾತ್ರವೆ ಇವಗಳೆಲ್ಲವು
ನಾನಿಹೆನು ನೋಡೆಂದು ನುಡಿದಾ || 7 ||
ಬಿದಿರಿನಿಂ ಬಹು ವಿಧವಿಧವು
ನಿಮ್ಮೆದಿರಿಗಿಟ್ಟೂ ತೋರಿದಾ
ಅದ ಕಾಣುತಹುದಲ್ಲ ವೆಂಬದು
ಅನುಭವೇ ಹದ ಮಾಡಿದಾ || 8 ||
ಹೃದಯ ಯೋಚನೆಯಿಂದ ನೋಡೆಂದ್ಹೊಳ
ಹೊರಗೆ ತಾ ತುಂಬಿದಾ
ಇದರನುಭ ತಿಳಿದವನು ಎಲ್ಲಿಯೂ
ಹೆದರದಿರುವನು ಸದಾಕಾಲಾ || 9 ||
ಅಗಣಿತವು ತಿಳಿಪದಕೆ ಅಲ್ಲಿಸಾಹೇಬು
ಗುರುವಿನ ಕಳುಹಿದಾ
ಕೈ ಮುಗಿದು ಬಹುಕಾಲ ವರ
ಸೇವೆಯೋಳಿದ್ದರೇ ದಯ ಮಾಡಿದಾ ||10||
ಯುಗ ಯುಗಾಂತರ ವೇದವಾಕ್ಯವು
ಮನದೊಳಗೆ ಸರಿ ಮಾಡಿದಾ
ಸಿಗದು ನಿನ್ನಧಿಕಾರ ಸಿಕ್ಕರೆ
ಶೀಘ್ರ ದೇವರು ಸಿಗುವನೆಂದಾ ||11||

ಪ್ರಭುವಿನ ಅಚೋದ್ಯ ಕಂಡೆನೋ
ಪ್ರಭುವಿನ ಅಚೋದ್ಯ ಕಂಡೆನೋ
ನನ್ನ ನಾನನು ದಿನ ನೋಡಿದೆನೋ
ಅಚೋದ್ಯ ಕಂಡೇನವನಿಯೊಳಗೆ ಎನ್ನಸ್ಥಿತಿ
ಶೂನ್ಯ ಯಾರಲ್ಲಿ ಬೆರಿಯದಂತ ಚೋದ್ಯ || ಪ ||
ತನ್ನ ತಿಳಿಯಲೆಂದೇ ಎನ್ನ ಮ್ಯಾಲತಿ ಕರುಣದಿಂದೇ
ತನ್ನ ಸಮಾ ನಿನ್ನಾರು ಕಾಣದಂತೆನ್ನ
ಸರೀ ಇನ್ನೆಲ್ಲಿ ಇಲ್ಲದಕೆ || 1 ||
ಅಂತರಂಗದೆನ್ನಾ ಅವತಾರ ಕಂಡು ಬಿಟ್ಟೆನಣ್ಣಾ
ಒಂತು ಬಾರದೆ ಭೂಪ್ರಾಂತದ ಮರಣವೂ
ಅಂತು ತಿಳಿದು ಸಂತೋಷದಿಂದನಾ || 2 ||
ಬಹಿರಂಗಾದೊಳಗೇ ಇರುವಪರಿ ಭೇದಿಸಿದೆನ್ನೊಳಗೇ
ಅಹುದು ನೋಡಿದ ಶೃತಿವಾಕ್ಯ ಸರೀ
ಜಗವಹುದಾಗ್ಯದೆ ದೈವಾಧೀನವು ಎಂಬ ಚೋದ್ಯ || 3 ||
ಭುವನದೊಳಗೆ ಎಲ್ಲಾ ಕಲ್ಪಿತ ಬ್ಯಾರೆ ಕಾಣ್ವೊವೆಲ್ಲಾ
ತವಕಾಭಾವಾ ತಾತ್ಸಾರಿಸದೆ ನಾ
ವಿವರದವನೊಳಗೆ ಏಕಾಗುವಂತ || 4 ||
ಎನ್ನ ಪ್ರಕಾಶವನೂ ತಿಳಿದದಕೆ ಎಚ್ಚರ ತಪ್ಪಿದೆನೂ
ಪುಣ್ಯಪುರುಷ ಅಲ್ಲಿಸಾಹೇಬು ಗುರುವಿನ
ಪೂರ್ಣ ದಯದಿ ನಾ ಧನ್ಯ ನಾಗುವಂತ ಚೋದ್ಯ || 5 ||

ಪಕಪಕ ನಗೀ ಬರುತದೇ
ಪಕಪಕ ನಗೀ ಬರುತದೇ
ಸಕಲವರಿತು ನಾಮ ನೇಮ
ಮರತದಕೆ ನಗೀ ಬರುತದೇ || ಪ ||
ಅದು ತಾ ಮೊದಲಿನಿಂದದೇ
ಗೋಪ್ಯದ ಹೃದಯ ದೋಳೊಂದಿಹದೇ
ತಾ ಸದಾ ನಿಂತದೇ
ಬಹು ವಿಧ ಪದವಿ ಪಡಕೊಂಡದೇ || 1 ||
ಅದು ತಾ ಸ್ವಾಮಿ ಬೆರತದೇ
ಜ್ಞಾನದ ಪ್ರೇಮಿ ತಾನಾಗ್ಯದೇ
ತನಗಿಹ ಮದವು ಬಿಟ್ಟದೇ
ಅನುಭವದ ನೇಮವೆ ತೊಟ್ಟಿಹದೇ || 2 ||
ಅದುತಾ ಆಶೆ ತೋರಿದದೇ
ಲಯ ಭಯ ಸೂಸೀ ಗೆದ್ದಿಹದೇ
ಸ್ಥಿರ ತಾ ಧ್ಯಾಸ ತೊಟ್ಟದೇ
ಈ ಘಟ ಲೇಸಲ್ಲೆನುತಿಹುದೇ || 3 ||
ಅದುತಾ ಕರ್ಮ ತೊರಿದದೇ
ಪೂರ್ವದ ಮರ್ಮವೆ ಇಡದಿಹದೇ
ಪ್ರಾಣಕೆ ನಿರ್ಮಲಾ ಕಂಡದೇ
ಆರ್ಯರಧರ್ಮದೆ ಧರಿಸಿಹುದೇ || 4 ||
ನಾಮದ ಕುರುಹು ಕಾಣದೇ
ಕೇಳಲ್ಕೆ ಘಟ ರೂಪೆನುತಿಹುದೇ
ಜಗವೂ ಮರುಳುಗೊಂಡದೇ
ಅಲ್ಲಿಸಾಬು ಗುರು ಕೃಪೆ ಅಳವಡದೇ || 5 ||

ಇದ್ದ ವಸ್ತುವ ಇಲ್ಲದಂತೇ
ಇದ್ದ ವಸ್ತುವ ಇಲ್ಲದಂತೇ
ಇಲ್ಲದದನೂ ಇದ್ದಾರೀತೇ
ಬುದ್ಧಿ ಇಲ್ಲದ ಜನರೀ ಪರಿಯಾ
ಕಾಂಬುವದೇ ಮಾಯೀ || ಪ ||
ಇದ್ದ ಅಗಣಿತ ಇದ್ದಾ ಪರಿಯಾ
ಇಲ್ಲದೀ ಜಗ ಕಾಂಬುವ ಹಿರಿಯಾ
ಬುದ್ಧಿವಂತರ ಮನದೊಳ ಹೊರಗೆ
ಮಾಯೆ ಇಲ್ಲವೂ || 1 ||
ತನು ಮದಂಗಳು ಮಾಯಿಯದಲ್ಲಾ
ತನಯ ಸತಿ ಸುತೆ ತಾಯ್ತಂದೆಲ್ಲಾ
ಧನವು ಧಾನ್ಯಾ ಮಾಯಿ ಎಂಬರು
ದಾರಿ ಕಾಣದೇ || 2 ||
ತನುವಿನಿಂದೇ ಧನವೇನಿಲ್ಲಾ
ತನುವು ಬಿಟ್ಟೂ ತೆರಳುವೊದಲ್ಲಾ
ವಿನಯ ಪರಸುಖ ವಿಚಾರ ಪುರುಷರ
ಮನವೊಪ್ಪೋದಿಲ್ಲಾ || 3 ||
ಸಪ್ತ ಜ್ಯೋತಿಗಳನ್ನೂ ಕೂಡಿ
ಸಕಲರನ್ನೂ ರಕ್ಷಿಪನೋಡಿ
ಯಾಪ್ತಾನಾ ತಾ ವರಿಯಾದಂತೇ
ಇರುವುದೇ ಮಾಯೀ || 4 ||
ಗುಪ್ತ ಮರಣವ ತಿಳಿಸುವ
ಗುರುವಿನ ಗುಲಾಮ ನಾಗದ್ದೇ ಮಾಯೀ
ಮರ್ತ್ಯದೊಳಗೆ ಇದಕೆ ಬ್ಯಾರೆ
ಮಾಯೆ ಇಲ್ಲವೂ || 5 ||
ಮಾಳ್ಪೆ ನಾ ನೆಂಬುವದೇ ಮಾಯೀ
ಮಾಡೋದಿಲ್ಲೆಂಬುವದೇ ಮಾಯೀ
ಬಾಳ್ಪರಿಯ ಬಂದನು ಭವ ತಿಳಿಯದೆ
ಉಣ್ಣುವುದೇ ಮಾಯೀ || 6 ||
ಮೂಲ್ಪರಿಯ ತಿಳಿದನುಭವಶಾಲಿಗೆ
ಮೂರು ಜಗದೊಳಗಿಲ್ಲವು ಮಾಯೀ
ಕಲ್ಪಿತಾದಿಯ ಕೈ ಸಿಕ್ಕವಗೇ
ಮಾಯೆಯಿಲ್ಲವೂ || 7 ||
ಸಾಧಿಸುವಾ ಯೋಗವು ಮಾಯೀ
ಗಾಧೆ ಮುದ್ರೇ ನೋಳ್ಪದು ಮಾಯೀ
ಅನಾದಿಯನು ಕಾಣ್ದಂತಿರುವದು
ಘನವಾದ ಮಾಯೀ || 8 ||
ವೇದ ಸಾರ್ವವನಾಥ ಬಂಧುವ
ಆದೀತೋರ್ವಲ್ಲಿಸಾಹೇಬು ಗುರುವಾ
ಪಾದ ಕಾಣದವನೇ ಮಾಯೀ
ಮಾಯಿ ಮನೆಯಲ್ಲೇ ಇರುವಾ || 9 ||

ಚಿನು ಮಹೇಶ ಗುರುವಿನಾ
ಚಿನು ಮಹೇಶ ಗುರುವಿನಾ
ದಿನಸೀನ ಮುಖದೀ ಕಂಡೆನಾ || ಪ ||
ತರುಣಾನ ಕಿರಣದ ಕೂನಾ
ಧರಾವರ್ಣದನುಸಂಧಾನ
ನರರೀಗೆ ನಿಜವೆನವಾದಾ ತೆರನಾ || 1 ||
ಬಿರುಗಾಳೀ ಬೀರ್ವೋ ಘರ್ಜನಾ
ಧೂಳಿಂದಹುದಾದ ವಿಧಾನ
ನಿರಾಳ ನಿಜವೆನಗಾದಾ ತೆರನಾ || 2 ||
ಮಲ ಸಮೇತ ವಿಲ್ಲವದು ಘನಾ
ಮನಸಿನೋಳ್ ನಿಂತಿತು ಶೂನ್ಯಾ
ಕಲತು ನಿಜತೋರೀ ತನುದಿನಾ || 3 ||
ಷಡುಚಕ್ರ ವರ್ಗಿಲ್ಲದಕೇ
ಕಡು ರಮ್ಯ ಲಯ ಬೇಕದಕೇ
ಎಡರು ಕೈಕೊಂಬೋ ಶೂನ್ಯನಾ || 4 ||
ಜೀವನದರೋಳ್ ತುಂಬಿಹುದೂ
ದೇಹದೋಳ್ ಸ್ವಾಶಿಹುದೂ
ದೇಹ ಗುರುತಿಲ್ಲದಂತ ನರನಾ || 5 ||
ಕಾಣೂವೊದದೂ ಮನಸೀಗೇ
ಜಾಣಾರ ಚರ್ಮ ಕಣ್ಣೀಗೇ
ಪ್ರಾಣ ಸುಖ ಪೂರ್ಣಾಯ್ತೀ ದಿನ || 6 ||
ಅಲ್ಲಿಷಾ ಗುರುವಿನಾ
ಅಲ್ಲಿ ನಿಂತಿತು ತ್ರಿಕಾರಣಾ
ಅಲ್ಲಿಂದಲೆನಗಾಯ್ತೇ ಬೋಧನಾ || 7 ||

ಈ ಜಗದೊಡಿಯನ ಬಗಿಯ ಕಂಡೂ
ಈ ಜಗದೊಡಿಯನ ಬಗಿಯ ಕಂಡೂ
ಬೆರಗಾಯ್ತೆ ಮನಾ ಮಾಡೀದ ನಿರ್ಮಾಣಾ || ಪ ||
ಇಲ್ಲದಿರುವದು ಭಯ ಎನಗೆ
ಇರುವದೊಂದೇ ತನಗೇ
ಎಲ್ಲೆಲ್ಲೀ ತಾನೇ ತಾನಾಗದ ತೆರನ ಕಂಡೆನೇ
ಕಡುಚೋದ್ಯವಾದೆನೇ || 1 ||
ಇದ್ದು ಕಾಣದಿರುತಿಹನೀದೆಂತ ಗಾರಡೀ
ಅಬದ್ಧವಾದಾ ನರನ ಸಧ್ಯಾ ತೋರಿಪ ನೋಡೀ
ಇದೆಂತ ಖಿಲಾಡೀ || 2 ||
ಅರೂಪಿ ರೂಪ ಕೂಡ್ವದಕೆ ಸ್ವರೂಪವೆ ವೂಡೀ
ನರಾಧಮಂಗೆ ಬೋಧಿಪಾ ಗುರೂಪ ಕೂಡ್ಯಾಡಿ
ತಾರೀಪೆ ತಾ ಮಾಡೀ || 3 ||
ಬೋಧದೊಳಪರೂಪ ಬೋಧನಾದಿ ಮಾಡಿದು
ಅನಾದಿ ಸ್ಥಿರ ಸಮಾಧಿಯಾದಾ ಸಾಕ್ಷಿ ತೋರಿದಾ
ಇದೆಂತ ಸುವಾದಾ || 4 ||
ಆದಿ ತೋರ್ಪ ಸುವಾದ ಬ್ಯಾರೆ ನೋಡದಾ ಭೇಧಾ
ವಾದ ಭೇದ ವುಂಟಿದರೊಳಧಿಕ ವಿನೋದಾ
ತಾನಾಜ್ಞೆ ಮಾಡಿದಾ || 5 ||
ಮಾಡಿದಾಜ್ಞೆ ಮೀರುವನೀ ರೋಢಿಯೋಳಿಲ್ಲೇ
ಮಾಡದವರ ಮ್ಯಾಲೆಡರೊಡಗೂಡಿಪನಲ್ಲೇ
ದುಡುಕಾಯಿತೀ ಲೀಲೇ || 6 ||
ದುಡುಕೆಂಬದ ದುಗುಡ ಬಿಡಿಪ ಧನ್ಯನಿಳುಹಿದಾ
ಗುಡಿಕಲ್ಲಲ್ಲಿಸಾಬು ಇಷ್ಟಾಗುರುಮುಖದಿಂದಾ
ಭವಮಾಲ ಗಳಿಸಿದಾ || 7 ||

ನಿರಾಮಯದ ಗುರುವಿನ ಗುರುತೂ
ನಿರಾಮಯದ ಗುರುವಿನ ಗುರುತೂ
ಮನಕೆ ಘನವಾಯ್ತೂ || ಪ ||
ಜಮಾ ರೂಪು ಜಾಣ ನಾಗ್ಯದೇ
ಜಗದಧಿಕಾರಕೆ ಬೆರಿಯದೆ ತಾ ಬ್ಯಾರೆ ಕಾಣ್ತದೇ
ತಾ ಬಾಹ್ಯದೋಳ್ ಬ್ರಹ್ಮನೋಳ್
ಬೆರತಕೇಳ್ ಭಕ್ತರ ಸೌಭಾಗ್ಯವಾದಾ || 1 ||
ನಿರಂಜನಗೆ ನರನಿಗೆ ಉಭಯಾ
ಉಲ್ಲಾಸ ಕೊಡುವ ಪರಮ ಪುರುಷ ನಿರುತ ನಿಂತಿಹಾ
ಜರಾಮರಣಿಲ್ಲಾ ನೆರಳಿಲ್ಲಾ ನಿಜಮೂಲಾ
ಬೆರತ ಜನಕೆ ಪರುಷವಾಗಿಹ || 2 ||
ದೇವರಿಗಿಹ ಸಪ್ತಜ್ಯೋತಿಯಾ
ಸಪ್ತಸ್ಥಲದೊಳಗಾವರಿಸೀ ಕೊಂಡಾಡುತಿಹಾ
ತಾ ದೇವನಲ್ಲಾ ನರನಲ್ಲಾ ಜೀವನಲ್ಲಾ
ಕೋವಿದರಿಗೆ ಕಾಣುವಂತಾ || 3 ||
ಅಂಧಕಾರತಮಾ ಸಮಯದಾ ಚೋರನು
ರಾಜನ ಸುಂದರೊದನ ಕಂಡೂ ಜೈಸಿದಾ
ಅಚಂದಸರೀ ಸಾಧುಗುರೀ ಕಂಡಪರೀ
ಎಂದಿಗೆ ಇನ್ನೊಂದಿಲ್ಲದಾ || 4 ||
ದಿಟ್ಟ ಸಾರ ಇಷ್ಟ ಗುರುವಿನಾ
ಅಲ್ಲಿಸಾಬು ಮೂರ್ತಿ ಕೊಟ್ಟ ಪರಿಷ್ಟಾಯ್ತೆ ಯೋಚನಾ
ಕಷ್ಟವಿಲ್ಲಾ ಯೋಗವಲ್ಲಾ ಇದ್ದಮೂಲಾ
ಸಾರ್ವಕಾಲ ಸಾಗಿಸುವದೂ || 5 ||

ಅನಾದೀನದ ಸೂನ್ಯನಾ ದೈವಾಧೀನ
ಅನಾದೀನದ ಸೂನ್ಯನಾ ದೈವಾಧೀನ
ಅನಿಕೂಲೇಳುವ ಆರ್ಯನಾ
ದಿನಾ ಪ್ರತಿ ಪುಣ್ಯನಾಯನ್ನಾ
ಮನಾಕಾಂಬೇನೆನುವಾದೂ
ಘನಾ ಆದನ್ಯನಾ ದರ್ಶನ
ಕಲತಾಗಳೇ ಕರ್ಮ ನಾಶನಾ || ಪ ||
ಏಕಾಂಗದೊಳಗೀ ನಿಂದಾ
ಅರುವಿನ ಪೂರಾ ಸಾಕಾರ ಮೂಲದಿಂದಾ
ಆಕಾರಧರಿಸಿ ತಾ ನತ್ಯಾಂತಧಮನಾಗಿ
ಮೂಕನಂತಿರುತಿಹ ಲೋಕಕೂ ನಿನಿತಾದರಿಲ್ಲದಾ || 1 ||
ಧಗಿಪ ಸಪ್ತ ಜ್ಯೋತಿಯಾ ಮಹಿಮೆಯಿಂದಾ
ದೇವಾರೆ ತಾ ಪೊರತಿಹಾ
ಮಗುವಿನಂತಿಹ ಭಕ್ತಾ ಮಹಿಮಿಲ್ಲದಲೇ ನಿಂತಾ
ಯುಗ ಯುಗ ಭ್ರಾಂತ ಎಂದಿಗೆ ಬಿಡದಾ ನಿಶ್ಚಿಂತ || 2 ||
ಬಿಡೆನು ಬಿಟ್ಟೇನೆಂದೆಂಬಾ
ಬಿಂಕದ ಕಾರ್ಯ ನಡಿಸೂವಾ ನರನಿಲ್ಲೆಂಬಾ
ನುಡಿವ ಆಗಮ ವಾಕ್ಯಾ ನಡತೀ ನಿಜವಾಯ್ತಲ್ಲಾ
ಎಡರು ದುಃಖ ಸುಖಾ ಸಡಗರದಿ ಒಪ್ಪಿರುವ ಸಜ್ಜನಾ || 3 ||
ಇಲ್ಲದಿರು ತಾನಂತ್ಯಲ್ಲಾ
ನಿರ್ಮಲ ಶೀಲಾ ಇಲ್ಲದಿರುತಿಹದ್ಯಾಮೂಲಾ
ಇಲ್ಲೆಂದರಿಹನಲ್ಲಾ ಇಹನೆಂದಾರೆಲ್ಲಿಲ್ಲಾ
ಬಲ್ಲೀದರ್ಹೇಳಿ ಬಂದದನುಣಿಸೀ ಪರಕೆ ಕಳುಪುವಾ || 4 ||
ಶೂನ್ಯ ನಿಶ್ಯೂನ್ಯರಿವರಾ
ಶೋಧಿಸಿ ಮನದೋಳ್ ಸೊಗಸಾಗಿ ತೋರುವರಾ
ಚೀನ ದೇಶದೊಳಿರಲೀ ಸೇರಾಲಿಬಹುದೆಂದಾ
ಆನಂದಲ್ಲಿಸಾಹೇಬು ಗುರುವೆ ಗೋಪ್ಯದಿ ಕರುಣ ಮಾಡಿದಾ || 5 ||

ಇದೊಂದಚೋದ್ಯಾ ಅತ್ಯಧಿಕ ಹಿರಿಯರನು ಕಂಡು
ಇದೊಂದಚೋದ್ಯಾ ಅತ್ಯಧಿಕ ಹಿರಿಯರನು ಕಂಡು
ಕೇಳಿಕೊಂಬೆ ನಾ ಒಂದಚೋದ್ಯ || ಪ ||
ಇಲ್ಲದಿರುವದೊಂದೆಲ್ಲಡಗಿರುವದೂ
ಬಲ್ಲ ಪ್ರಭುಡರಿದನಾ ಅಲ್ಲಮಪ್ರಭು
ಮುಂದೆರಡಂತಸ್ತದಿ ಅಲ್ಲಿರುವದು
ನಾ ಬಲ್ಲೆನೆಂಬುವದು ಅಚೋದ್ಯಾ || 1 ||
ಪುನಹ ಇಲ್ಲದೊಂದೀ ಜನ ಘನತೆಯಾ
ಅನುದಿನ ಕೆಡಿಪದನಾ
ತನಯ ತಾಯಿತಂದೆ ತರತರ ಲಂಪಟ
ಉಣಬಡಿಸುತ ಗುರುಗಮನ ಕೆಡಿಪದಂತಚೋದ್ಯಾ || 2 ||
ಇರುವದೊಂದು ಅದು ಮುರಿಯದು
ಅರಿಯದು ಸ್ಥಿರಕರ ಚೆರಿಪದನಾ
ಶರಧಿಯಂತೆ ತಾ ಚಲ್ವರದಿಹದೊಳು
ಭರಿತವಾಗಿ ಬೆಳಕಿನಿತಿಲ್ಲದಂತ ಅಚೋದ್ಯಾ || 3 ||
ಜಾಣರ ಕಣ್ಣಿಗೆ ಕಾಣುವದೊಂದದೂ
ಪೂರ್ಣ ಹಿರಿಯರಿದನಾ
ಕ್ಷೋಣಿ ಜಗನ್ಮಯಾತ್ರಾಣಿ ಉಭಯ
ಆ ಕಾಣುವ ಮೂಲದಿ ಕಲಿಯದಿರುವ ದೊಂದಚೋದ್ಯ || 4 ||
ನಾಲ್ಕು ವಿಧದ ಬಗೆ ನಟಿಪದು
ಲೋಕದಿ ನಾ ಕಂಡ್ಹೇಳಿದೆನಾ
ಮೂಲ್ಕ ತಿಳಿಪದಲ್ಲಿಸಾಹೇಬು ಗುರುವಿನಾ
ಬಾಲ್ಕರ ಕೇಳುವೆ ಬ್ಯಾಗಿದನು ಪೇಳೀಯಚೋದ್ಯಾ || 5 ||

ಎಲ್ಲ ತಾನಾಗಿ ತಾನಲ್ಲದಿರುವದೂ
ಎಲ್ಲ ತಾನಾಗಿ ತಾನಲ್ಲದಿರುವದೂ
ಬಲ್ಲಾಧನ್ಯರೇ ಪೇಳಿರೀ || ಪ ||
ಗಿಳಿವರ್ಣ ಸ್ಪಟಿಕ ಕೆಂಪು ಕರಿದು ನೀಲಾವೂ
ಜಿಲೆಗಳಲ್ಲದ ಬ್ರಹ್ಮವೂ
ಬಲಿಮೆಯಿಂ ನೇತ್ರ ಸ್ತಾನವು ಹಸ್ತದಿಂ ಪಿಡಿದೂ
ಘಳಿಗೆ ಕಂಡು ಬಿಟ್ಟಾಗಳಿದು ಹೋಗದಂತೇ || 1 ||
ಜೀವ ವಿಲ್ಲದಿ ಕಾಯಾ ಜೀವದಿಂದಿಹ ದೇಹಾ
ದೈವಾವು ಭಯದೊಳಿರುವದೂ
ಜೀವಿದ್ದ ದೇಹ ಸಾಯದ ಮುಂದೆ ಸತ್ತಿಹಾ
ಭಾವವುಂಟಾದ ಭಕ್ತರ ದೇವ ಬ್ಯಾರಾದ || 2 ||
ಇತರಿಲ್ಲದಿಹನಾಗೀ ಗತಿ ನಷ್ಟಲ್ಲದನಾಗೀ
ಶೃತಿ ವೇದ ಸಮ್ಮತಾಗೀ
ಪ್ರತಿದೀನ ಪ್ರಕಟೀಪ ಮತಿಗೆ ನಿಚ್ಚಯ ತೋರ್ವಾ
ಅತಿಪುಣ್ಯ ಸಾಧು ದರ್ಶನ ಕೋಟೀ ಫಲವೆಂಬಾ || 3 ||
ತಾನೆ ತಾನಲ್ಲೆಂಬಾ ಜ್ಞಾನವಿಲ್ಲದನೊಬ್ಬಾ
ಆನೆಯಿಂದ್ಹತವಾದಂತೇ
ಧ್ಯಾನ ಗುರುವಾಕ್ಯ ಭಂಗವೆಯಾಗಿ ಪರಮಾತ್ಮ
ಕೂನರಿಯದೆ ಲಯಹೀನವಾದನಂತೇ || 4 ||
ಕ್ಷೀರದದಿ ಶುಭ್ರ ಬೆಣ್ಣೆಯೂ ಘೃತದಿಂದೇ
ಬ್ಯಾರೆ ಘೃತ ಬೆರಿಯಾದಂತೇ
ಪೂರ ವಿಚಾರ ಪಾರವಾರಾ ಘಟತತ್ವ
ಸೇರಿ ಅಲ್ಲಿಸಾಹೇಬು ಸೇರದಿಹ ಗುರುಪ್ರಭೂ || 5 ||

ನಾನೆ ಎಂಬೂವ ರೀತಿ ನರಕವೇ ಗತೀ
ನಾನೆ ಎಂಬೂವ ರೀತಿ ನರಕವೇ ಗತೀ
ನೀನೇ ಎಂಬದು ಹೀನತೀ
ನಾನು ನೀನೆಂಬುಭಯಕೆ
ಇನ್ನೇನು ಉಂಟೋ ತಿಳಿಯೋ ಮನಕೇ
ಜ್ಞಾನ ತರಗತಿ ತಗಿ ತಡ್ಯಾಕೇ
ಭೂನ ಭೂಂತ್ತರ ಹೋಯ್ತೀ ದಿನಕೇ || ಪ ||
ಅಂತಾವನನು ಬೆರಿಯೋ ನಿಗಮಂತರ
ಕುಂತಾವನನು ಕಳಿಯೋ
ಅಣಮತದ್ರೋಹಿ ಯಾಗಿಹನು
ಗುರುಪ್ರಾಂತ ಸೇರದೆ ಕೆಟ್ಟಿಹನೂ
ಜಗ ಪ್ರಾಂತದೀ ನಾನೆನುವನೂ
ಅವನಂತೆ ಕೆಡಿಪದಕ್ಕಾಡಿಸುವನೂ || 1 ||
ಉಭಯ ಮೂಲಾಧಾರಿಯಾ ಕಾಣದಿರೇ
ಶುಭ ಮಾರ್ಗ ವಾಗಾದೈಯ್ಯಾ
ತ್ರಿಭುವನದಿ ತುಳಿಕ್ಯಾಡುತಿಹನೂ
ಉಭಯ ಮಾತಾಡದಲೆ ಇರುವನೂ
ಪ್ರಭು ಮಾರ್ಗ ಸಿಕ್ಕವಗೆ ಸಿಗುವನು
ಅಭಯ ಕೊಡುವನು ನಾನೆಂದ್ಹೇಳನೂ || 2 ||
ತಿಳಿದೂ ಹೇಳುವೆವೆಂದಿರೀ
ನಾನೆಂಬೂದೇ ಕಳದಾರೆ ಘನವಾದಿರೀ
ಅಳತಿ ಮಿಕ್ಕದೆ ಆದಿ ವಸ್ತುವ
ತಿಳಿಯುವರು ಭೂತಳ ದೊಳಿಲ್ಲಾ
ಪ್ರಳಯ ಮಾಳ್ಪದು ಗುರುಪದಾಂಬುಜ
ದೊಳಗೆ ಮಿಳಿತಾದವನೆ ಬಲ್ಲಾ || 3 ||
ಧರಿಜನರಂತೆ ಇಲ್ಲಾ ಜಗಧಾತಾ ನಾ
ಬೆರತು ಬ್ಯಾರಾಗ್ಯಾದಲ್ಲಾ
ಪರಮ ಪುಣ್ಯನ ನೀ ಬೆರಿಯದೇ ಪರ
ವಸ್ತು ನಾ ನನುತಿದೇ
ಅರಿತದಕೆ ಗುರುತೇನು ಹೇಳದೇ
ಬರಿದೆ ಬಾಯಿಲಾಡಿ ಕೆಡುತಿದೇ || 4 ||
ಅಲಂಬಲಂ ಪಟಕೇ ನಿರಾಲಂಬ
ಮೂಲಾಲೀಮೃತಕೆ
ಕೀಲಿ ತಾನಾಗಿಹನು ಲೋಕದಿ
ಮೇಲಾದ ವಜ್ರವು ಥಳಥಳ ಪ್ರವಾಳ
ಅಲ್ಲಿಸಾಹೇಬು ಗುರುವಿನ
ಬಾಲನಾದವ ಬಲ್ಲನೈಯ್ಯಾ || 5 ||

ತಿಳಿಯೋ ನಿನ್ನಾ ಕಳಿಯೋ
ತಿಳಿಯೋ ನಿನ್ನಾ ಕಳಿಯೋ
ತಾನೂ ನಾನೆಂಬುಭಯ ತಿಳಿಯೋ
ನಿನ್ನಾ ಕಳಿಯೋ ಇಳಿಯೋಳು
ಇದನಾವೂ ತಿಳಿ ಬಂದೇವಲ್ಲಾದೇ
ಕುಲಚಲ ವಾಂಚಲ್ಯಾ
ಕಲಹ ಸಂಗ್ರಹವಲ್ಲಾ || ಪ ||
ಆಕಾರವಿಲ್ಲಾದಯೇಕೋ ನಿರಾಳಾದೀ
ಲೋಕವಿತ್ತದು ಹ್ಯಾಗೆ ಈ ಕೂನ ಮನಸೀಗೆ || 1 ||
ಏಕೋ ಮೂರುತಿ ಈಗಾ ಲೋಕದಿಂದಿಹನ್ಯಾಗೇ
ಬೇಕೇ ಸಾಧುಜನಕೇ ನೋಟ ಶೃಂಗಾರಿದೂ || 2 ||
ಅಂತರ್ಯ ಬಹಿರಂಗಾ ಎಂತಿರುವನು ದೈವಾ
ಕುಂತು ಯೋಚಿಸೆ ಕರ್ಮಾನಂತ ನಾಶವಿದೂ || 3 ||
ಮನುಜನಂತರಂಗಾ ಬಹಿರಂಗೇನನುಕೂಲಾ
ದಿನಪ್ರತಿ ಯೋಚಿಸೇ ಮನಕೆ ಸಂಶಯವಿಲ್ಲಾ || 4 ||
ನಾದವು ಭಯಗಳೀಗಾಧಾರವೇನುಂಟೂ
ಶೋಧೀಸಲುಲ್ಲಾಸ ಸಾಕ್ಷಿ ಕಾಂಬುವದಿದೂ || 5 ||
ಏಳು ಜ್ಯೋತಿಗಳು ಕೂಡೆಲ್ಲಿ ಶೋಭಿಸುವಾವೂ
ಏಳಕ್ಕಾಧಾರಾದ್ದೂ ಎಲ್ಲಿ ಬಹಿರಂಗಾವೂ || 6 ||
ಪ್ರಾಣಕ್ಕೆ ಪಿತನಾದ ಪೂರ್ಣಾನಂತರ್ಯಾಗೇ
ಕ್ಷೋಣೀಯೊಳಿರುವದೂ ಕಾಣಾದೆ ಇರುವೋರೇ || 7 ||
ಒಂದೆ ರೂಪವಂತೇ ದ್ವಂದ ರೂಪಿಹದಂತೇ
ಒಂದೆರಡರನುಭವದಿ ಸಿಗುವದಂತೇ || 8 ||
ಒಂದೆರಡಾಗೀ ತಾ ನಿಲ್ಲದೋಯಿತಂತೇ
ಸಂಧಿ ಕೆಳಗೆ ಮ್ಯಾಲೇ ಹೊಂದಿಕೊಂಡಿಹನಂತೇ || 9 ||
ಈಸು ವಿಚಾರವೂ ಲೇಸೆಂದರಿಯದಿರೆ
ಈ ಪಶೂಗಣ ದೊಳೂ ನೀ ಸರಿ ಕಾಂಬುವೇ || 10 ||
ಕಡೆ ಮೊದಲಿದರಲ್ಲಿ ನುಡಿದಂತೇ ತೋರೀಪಾ
ಗುಡಿಕಲ್ಲು ಅಲ್ಲೀಸಾಹೇಬು ಗುರುವಿನ ಪಾದಾ || 11 ||

ಗಾದೇ ಬಹಿರಂಗ ಓದಾಲಿ ಬ್ಯಾಡ
ಗಾದೇ ಬಹಿರಂಗ ಓದಾಲಿ ಬ್ಯಾಡ
ನಮಗಾಧಾರವೇನಾದನರಿಯೋ || ಪ ||
ಅಂಗಾದಲಂಕಾರವಲ್ಲೋ
ಏಕಾಂಗಾ ಜಗಂಗಾಳು ಇಲ್ಲೋ
ಕಂಗಾಳು ಕಾಣಾವೋ ಕಾಣವೂವ ಮನಸೀಗೆ || 1 ||
ಮನಸೀನ ಬೆಳಕೂ ನಿಂತಾಗಾ
ತನುವಿಲ್ಲಾವಾಗಾ ತನುಮನವು ಲಯವಾದ
ಘನ ದೈವಾ ತಾನಾದ || 2 ||
ಮನಸೀನ ಬೆಳಕೆಂಬದರುವೋ
ಅರುವೀಗೆ ಸರಿಯಿಹದೆ ಮರುವೂ
ಅರುವೀಗೆ ಮರುವೀಗೆ ಬೆರದೇಕವಾಗಿರುವಾ || 3 ||
ಅಧಿಕಾರಿ ಆಧಾರಿತಾನೇ
ವಿಧವಿಧಕೆ ಎದರಾಗಿ ಇಹನೇ
ಮೊದಲು ತಾನೇ ಕಡಿಗೆ ತಾನಾಗಿ ಕಲತಿರುವಾ || 4 ||
ಕೊಂಬೆ ಇಂಬಿಲ್ಲಾದಂತ್ಯಾಗೇ
ತುಂಬೀ ಮಿಕ್ಕಿದಂತೆ ಎಲೀಗೇ
ಮುಂಭಾಗ ಹಿಂಭಾಗ ಒಂಬೂಧಿ ತನಕನಮಾ || 5 ||
ಆಧಾರವರಿಯಾದ ಮನುಜಾ
ಹೋದ ಯಮಲೋಕಕ್ಕೆ ಸಹಜಾ
ಹೋಗಾದೆ ಬ್ಯಾಗಾದಿ ಈಗಾಲೆ ಕಂಡುನಮಾ || 6 ||
ಕೆಳಗೆ ಮ್ಯಾಲೊಳ ಹೊರಗಿಹನೇ
ತಿಳಿಯಾದಂತಿರುವವನು ನರನೇ
ತಿಳಿಪಾನಲ್ಲಿ ಸಾಹೇಬು ಗುರುತಾನು ಜಗಕೆಲ್ಲಾ
ಆಧಾರ ವೇನಾದನರಿಯೋ || 7 ||

ಕನಸು ಕಂಡೆನೇ ಮನಸು ಇಟ್ಟೆನೇ
ಕನಸು ಕಂಡೆನೇ ಮನಸು ಇಟ್ಟೆನೇ
ದಿನಸಿನೊಳಗೆ ದಿನ ಸಾಗಿನಾ ಧೈರ್ಯ ತೊಟ್ಟೆನೇ || ಪ ||
ಒಂದೇ ಕನಸದೂ ಎಂದಿಗೋಗದೂ
ಮಂದಿಯಂತೆ ಮರವಿನೊಳಗೆ ಎಂದಿಗಾಗದೂ || 1 ||
ಬಿದ್ದ ಕನಸದೂ ಬೀಳುತಲಿಹದೂ
ಸಿದ್ಧವಾದ ಸುದ್ದಿಯೊಳಗೆ ಭದ್ರ ಕಾಣ್ವದೂ || 2 ||
ಅರಿವಿನೋಳಿಹದೂ ಮರವು ಬಾರದೂ
ಅರುವೂ ಮರುವು ಕುರುಹು ಕೂಡಿ ನಿರುತ ಕಾಣ್ವದೂ || 3 ||
ಹಗಲೆ ಬೀಳ್ವದೂ ಸೊಗಸು ಕಾಣ್ವದೂ
ಜಗದ ಜನರ ಜಾಣತನವು ಕಾಣಬಾರದೂ || 4 ||
ಘಟದೊಳಿರುವದೂ ಘಟ ಹೊರಗಿಹದೂ
ಘಟ ಬೀಳಲೂ ಪ್ರಾಣ ಪಿಡಿದೂ ನಟನೆ ಮಾಳ್ಪದೂ || 5 ||
ಪ್ರಾಣ ಕನಸದೂ ಪರಕೆ ಸೇರ್ವದೂ
ಪೂರ್ಣ ಭಾವದೊಳಗೆ ತಾ ಸಂಪೂರ್ಣ ಕಾಣ್ವದೂ || 6 ||
ಕಂಡ ಕನಸಿದೂ ಕರ್ಮ ಕಳಿವದೂ
ಮಂಡಲದೊಳು ಪುಣ್ಯವೆಂಬ ಮಾತು ತಿಳಿಪದೂ || 7 ||
ಪಾಪವೆಂಬದೂ ಪ್ರತ್ಯಕ್ಷ ಕಾಣ್ವದೂ
ಪಾಪ ಪುಣ್ಯ ಭೀತಿ ಭ್ರಾಂತಿ ನಿಜವು ನಿಲುವದೂ || 8 ||
ಪಾಪವೆಂಬದೂ ಪುಣ್ಯ ಕಾಣ್ವದೂ
ಪಾಪ ಕಳಿಪ ಅಲ್ಲಿಸಾಹೆಬು ಗುರು ಸುಫಲವಿದೂ || 9 |

ತಿಳಿದವನೇ ಇಳಿಯೊಳು ಧೀರಾ
ತಿಳಿದವನೇ ಇಳಿಯೊಳು ಧೀರಾ
ಒಳಹೊರಗನ್ನದೆ ಪ್ರಭುವಿನ ಒಳಪೊಕ್ಕುಳಿದವ ಪೂರಾ || ಪ ||
ತಾನೇ ಎಂದ್ಹೇನಿಸದೇ ನಾನೆಂದು ನಕರವು ಸೇರದೇ
ತಾನು ನಾನುಂಟಾಗಿ ತನಗಿಂತಿನ್ನೊಂದಿಲ್ಲದೇ
ಭಾನು ಕೋಟಿ ಜ್ಞಾನಾ ಬಂದಾ ಸಂದಿಯ ತಿಳಿದೂ
ತಾನೂ ತಾನೇ ಬೆರದೂ ಶೂನ್ಯಾ ನಿಂದ್ಹೊರಡಿಪದೂ || 1 ||
ಅರುವಿನೋಳ್ ತನ್ನ ಪಿಡಿವಾ
ಮರವಿಯೋಳ್ ನಿರವಯ ನಿರುವಾ
ಅರುವು ಮರವಿಯೊಳೂ ಬರಿದಾಗೀ ನರನಿರುವಾ
ಪರುಷವು ಭಯದ ಸಂಧೀ ಬೆರತೂ
ಪರಿಪರಿಶಾಸ್ತ್ರಾಕರ ಸೋಕಿದ ಘಂಟಾ
ತ್ವರಿತದಿ ಬರಿದ್ಹಾಕಿದ ಭಾವಾ || 2 ||
ಮಾತಪಿತ ಸುತನಿಂದರ್ಭೂತಾ ಸುಖ ಸಂಕಟವೂ
ಸೋತೂ ಸಮ್ಮತ ಬಟ್ಟಾ ಆ ತೆರನೇ ಜಗ ಗತಿಯೂ
ಧಾತನಿಂದಾಗುವ ಪರಿಪ್ರೀತೀಯಿಂ ಕೈಕೊಂಡಾ
ನಾಥನಾಭಯ ಭ್ರಾಂತೀ ಯನುದಿನದಲ್ಲಿ ಅನುಭಾವಾ || 3 ||
ಪ್ರಾಣ ಹೃದಯವು ಚಿತ್ತಾ ಸೂಕ್ಷ್ಮಾದಾವ ಸ್ತಲದಲ್ಲೀ
ಪೂರ್ಣವಾಗಿರುತಿರ್ಪಾ ಪುಣ್ಯಾ ಮಾರ್ಗವು ತಿಳಿದೂ
ಕಾಣುವೋ ಹೆಣದಂತೆ ಜಾಣ ಜಾಗ್ರದಿಯಾಗೀ
ತ್ರಾಣಿಯಾಗಿಹ ದೇವರ ಸೇರೀ ಸ್ಥಿರಪದ ಸುಖವೂ || 4 ||
ಇದ್ದು ಕಾಣದೆ ಇರುವಾ ಇಲ್ಲದನೂ ತೋರಿಸುವಾ
ಸಿದ್ಧ ಮನ ಮುನಿಗಳಿಗೇ ಸಿಗದ್ಹೋಯ್ತಿದರಾ ಕುರುಹ
ಅಭೇದ್ಯ ಭೇದಿಸಿದಲ್ಲಿಸಾಹೇಬು ಅರಿವಿನ ಗುರುವಾ
ಇದ್ದದಿಲ್ಲದ ಬೆರಸೀ ಮಧ್ಯ ತಾ ಬ್ಯಾರಿರುವಾ || 5 ||

ಬ್ರಹ್ಮಾನಂದಾ ರಮ್ಯಾ ರಂಜಿಸಿ ತೈ
ಬ್ರಹ್ಮಾನಂದಾ ರಮ್ಯಾ ರಂಜಿಸಿ ತೈ || ಪ ||
ಅರುವಿನೊಳು ಪರವಸ್ತು
ಅಹುದಾಗಿರುತಿರುವರೊಳು ಮಾಯೆ ಇಲ್ಲವೂ
ಅರುವು ಮರವಿಯ ನಿರಂಜನನಿಹ
ಅರಿತ ನರನೇ ಆತುಕೊಂಡಿಹಾ || 1 ||
ಹಾಲು ಉಣುತಿಹ ಬಾಲ ಸುಖನಿಧಿ ಲೋಲ
ನಾಗಿನ್ನುಳಿದ ಮೊಲೆಮ್ಯಾಲಾ
ಲೀಲೆ ಅಹುದಾದರೀತಿಯಾ ಜಾಲ
ಇಹಪರ ಸಾರ ತಿಳಿದವಗೇ || 2 ||
ಸುಮ್ಮನಿರುತಿಹ ಅಕ್ಷರದಿ ಬಹು
ರಮ್ಯದನ್ಮಯವಡಗಿ ದಂದದಿ
ತಮ್ಮ ತಾವೇ ಬೆರದು ಬೆರಿಯದೆ
ತಾಸಿಗೊಮ್ಮೆ ತನ್ನ ತಿಳಿದವಗೇ || 3 ||
ಪೂರ್ವ ತಾನಿಹ ನಿರ್ವಾಹ ಪರಿ
ಊರ್ವಿಯೋಳ್ ಮನ ಒಪ್ಪಿತದು ಸರೀ
ಪರ್ವತಕೆ ಸಿಡಿಲೆರಗಿ ದಂದದಿ
ಪ್ರಳಯ ಕಾಣ್ವದು ಗಳಿಗೆ ಬಿಡದೇ || 4 ||
ಪೃಥ್ವಿ ಸುಖಕೇ ಸ್ವಪ್ನ ಸ್ವಲ್ಪವೂ
ಜ್ಞಪ್ತಿ ಜ್ಞಾನಕೆ ಪೃಥ್ವಿ ಅನೃತವೂ
ಸಪ್ತ ಜ್ಯೋತೀ ಜಗ ಪ್ರಕಾಶವೂ
ಆಪ್ತ ಅಲ್ಲಿಸಾಹೇಬು ಗುರುವೂ || 5 ||

ಆನಂದವಾನಂದ ವಾಯಿತೈ
ಆನಂದವಾನಂದ ವಾಯಿತೈ
ನಾನತ್ವವಳಿದೂ ಸದಾನಂದ ಸಿಕ್ಕಿದ್ದರಿಂದಿಗಾ || ಪ ||
ವಾದಾ ಮತ ಭೇದಾಲಯವಾದಾ ನಿಜ ಭೋದಾ
ಆದಿಗುರುವಿನಿಂದಾದನುಭವ
ವಿನೋದ ಕಂಡು ಸುವಾದದೊಳಗೆ ಎನ್ನಾ || 1 ||
ಇಲ್ಲಾ ಜಗವೆಲ್ಲಾ ಕಾಣ್ದಲ್ಲಾ ಕಂಡಿಲ್ಲಾ
ಮುಳ್ಳು ಮೊನೆಯತುದಿ ಎಲ್ಲ ತಾನಾದಾ
ಉಲ್ಲಾಸವು ಬಲ್ಲಾತಗಾಗುವಂತಾನಂದ || 2 ||
ದುಃಖಾ ಸುಖ ಮಿಕ್ಕಾ ಇರುತಕ್ಕಾ ನಿಜ ಸಿಕ್ಕಾ
ಲೆಕ್ಕದ ಗಣಿತಕೆ ಮಿಕ್ಕು ಮೀರಿದಾ
ಪಕ್ಷಪಾತಿ ಎನ್ನ ಪಕ್ಷವಾದ್ದರಿಂದಾನಂದ || 3 ||
ಲೋಕಾ ಸುರಲೋಕ ಯಮಲೋಕಾ ಪರಲೋಕಾ
ಏಕೋದೈವಾ ರೂಪಾಕಾರಗಣಿತ
ಸೋಕಲಿವೆಲ್ಲವು ನಾಶವಾದ್ದರಿಂದಾನಂದ || 4 ||
ಅಲ್ಲೀ ಪೂರ್ವದಲ್ಲೀ ಅರುವಿನಲ್ಲೀ ಅಖಂಡದಲ್ಲೀ
ಅಲ್ಲಿಂದಿರುತಿಹ ಅಲ್ಲಿಸಾಹೇಬು ಗುರು
ಇಲ್ಲಿಂದೆನ್ನೋಳಲ್ಲೀತನಕ ಕೊಟ್ಟಾನಂದವಾನಂದ ವಾಯಿತೈ || 5 ||

ಅಗಣಿತ ಮಹಿಮ ಅನಂತ ತೇಜದೊಳಿರುವಾ
ಅಗಣಿತ ಮಹಿಮ ಅನಂತ ತೇಜದೊಳಿರುವಾ
ಬಗಿಯ ಬ್ಯಾಗಿನೆ ನೀನೂ ಭೇದಿಸಮ್ಮಾ || ಪ ||
ಲೇಸಾದ ಮೊದಲು ಪ್ರಕಾಶ ತಿಳಿಯಲು
ಘಟವೂ ಏಸಿದ್ದರಿಲ್ಲವಮ್ಮಾ
ತಾಸದಾ ಕಾಲದಲಿ ನಿಂತಿಹ
ಸೋಸಿ ಶೋಧಿಪ ಸೊಗಸು ಜ್ಞಾನಿಯ
ಲೇಸೆನಿಪ ಮಹಸ್ಥಳದ ಪ್ರಾಣದಿ
ವಾಸ ಮಾಡಿಹನಮ್ಮ ಭವಹರ || 1 ||
ರಸಿಕೆರಡು ಜ್ಯೋತಿಯೋಳ್
ಮಸಿಕಿ ಹೋಗುವೊ ರವಿಶಶಿ ನಕ್ಷತ್ರಗಳಿಲ್ಲಮ್ಮಾ
ರಶಿಮೆ ತಿಳಿಯಲ್ಕೆ ಸದಾ ಗುರು
ಪಾದದ ಧೂಳಿಯಲ್ಲಿರು
ಹುಸಿಯ ಮಾತಿದಲ್ಲ ನೋಡಿರು
ಕುಶಲ ಹಿರಿಯರ ಕೂಡಿಕೊಂಡಿರೂ || 2 ||
ಮೂರು ಪ್ರಕಾಶದಾ ಮೂಲ ಹೇಳುವೆ ನಾನೂ
ಮೋಹಾದಿ ನೀ ಕೇಳಮ್ಮ
ಯಾರ್ಯಾರು ಭ್ರಮೆಯಂತೆ ನಡಿಪದು
ಏರಿಳಿವು ಏನಿಲ್ಲದಿರುವದು
ಮೀರಿ ಎಲ್ಲರ ಮ್ಯಾಲೆ ತೋರ್ಪದು
ಸಾರ ಸಖತನ ಗುರುವಿನಲ್ಲಿದು || 3 ||
ತೋರಿತಲ್ಲಮ್ಮ ನಾಲ್ಕನೆ ತೇಜ ಸಾರಾವೊ
ತೂರ್ಯಾದಿ ನೀ ಕೇಳಮ್ಮಾ
ಮೀರಿ ನಡವದು ಮಹಾಗರ್ವದ
ತೋರುತಿಹುದೀ ತನುವು ದುರ್ವಿಧ
ಸೂರೆ ಮಾಡಿದ ಗುರು ಮಹಾತ್ಮದ
ಯಾರಿಗಳವಲ್ಲಿದನು ಪೇಳ್ವದಾ || 4 ||
ಇತ್ತ ನೋಡೈದನೇ ತೇಜಾ
ಸುತ್ತಿಕೊಂಡದೇ ಸಹಜಾ
ಅತ್ಯಾಶ್ಚರ್ಯವು ಆಯಿತೇ
ಎತ್ತ ನೋಡಲ್ಕೆಯು ಮಹಾತ್ಮದೇ
ಚಿತ್ತ ಧ್ವನಿಗಳು ಸೂಸಿ ಅರಿವುದೇ
ಗುಪ್ತ ಸ್ಥಳದೊಳು ಕೂಡಿಕೊಂಡದೇ
ಮತ್ತೆ ಮ್ಯಾಲೆ ಮೀರಿತಾನದೇ || 5 ||
ಷಡುತೇಜ ಬೆಳಕೀನ ಬೆಡಗೇನ್ಹೇಳಲಮ್ಮಾ
ನುಡಿವೊದಕ್ಕಸದಳವೇ
ಎಡೆಬಿಡದೆ ಭೂ ಗಗನ ಮಧ್ಯದಿ
ತುಡಿಕಿ ತುಳುಕುವ ಚಿತ್ರ ರಮ್ಯದಿ
ನಡವೆ ತಾ ವಿವರಿಸುವ ತೋಷದಿ
ಕಡಿಗೆ ಮಿಕ್ಕು ಕಾಣುತಿಹುದೀ || 6 ||
ಏಳು ಪ್ರಕಾಶದಾ ಲೀಲೆಯೇನ್ಹೇಳೆಲೇ
ಸಾಲುವೇದವೂ ಸಾಲದೇ
ಬಾಲೆನಡಿ ಅಲಸ್ಯ ವೇತಕೆ
ವಿಶಾಲ ಅಲ್ಲಿಸಾಹೇಬು ಗುರುವರ
ಮೂಲ ತಿಳಿಪನು ಮುಖ್ಯಬ್ರಹ್ಮದ
ಕೀಲೀ ನಿನ ಕೈಯಲ್ಲಿ ಕೊಡುತಿಹಾ || 7 ||

ಎಂತಾ ಗುರುವರಾ ಎಂತಾ ಪರಾತ್ಪರಾ
ಎಂತಾ ಗುರುವರಾ ಎಂತಾ ಪರಾತ್ಪರಾ
ಎಂತಾ ಸೋಜಿಗ ತೋರಿದಾತಂಗೀ
ಎಂತಾ ಸೋಜಿಗಿದೋ ಕುಂತಾರೆನ್ನಾಗಿದೂ
ನಿಂತಾರೆ ನಿಜವೆ ತಾನದೇ ತಂಗೀ || 1 ||
ಜಗವೂ ದೈವಾಧೀನ ಸೊಗಸೂ ಕಂಡಿತು ಮನಾ
ಜಗದಾ ದೋಷಂಗಳಿಲ್ಲದಾ ಘನ
ಜಗದಾ ದೋಷಾ ಹೀನಾ ತೆಗೆದಾನೂ ನಿರ್ಮಾಣಾ
ಬಗೆಯಲ್ಲ ಭೇದಿಸೀ ಕೊಟ್ಟಾನೇ ತಂಗೀ || 2 ||
ನೀಚಾ ದುರ್ಗಂಧವೂ ವೂಚಾ ಸುಗಂಧವು
ನಾಸೀಕ ತಾಕೀ ಹೋದಾವೇ ತಂಗೀ
ನಾಸೀಕ ತರಲಿಲ್ಲೇ ಘಾಶೆ ಸುಖಾಯ್ತಲ್ಲೇ
ದೋಷಾ ಕಲ್ಪೀತ ತೋರಿದಾ ತಂಗೀ || 3 ||
ಮಾಡೋ ಬಿಡೋಣಿಲ್ಲೇ ರೂಡೀ ಗೊಡೀಯನಲ್ಲೇ
ಮಾಡೀಪಬೀಡಿ ನಮ್ಮಾ ತಂಗೀ
ಕೂಡೀ ಪಾಡೀಪನೂ ಕೇಡೂ ಕೀರ್ತಿಗಳನ್ನೂ
ನಾಡೊಳು ನರರಿಗೆಂದನೇ ತಂಗೀ || 4 ||
ಪರಮಾನ ತ್ರಾಣವೂ ನರನಾ ನಿತ್ರಾಣವೂ
ಬೆರಸೀ ಜೋಡೀಸಿ ತೋರಿದಾ ತಂಗೀ
ಗಿರಿಕೀಯ ಚಕ್ರವೂ ಚೆರಿಸೂವ ನ್ಯಾಯವೂ
ಮರತಾರರಿತಾರೆ ಮರೆವುದೇ ತಂಗೀ || 5 ||
ಮರ್ಮಾ ಮಹನ್ಯರ ಮರವೂ
ಕರ್ಮಾಮನೂಜಾರರುವೂ ಧರ್ಮಾ
ಹಿರಿಯಾರ ಸರಿಯಲ್ಲೇ ತಂಗೀ
ಧರ್ಮಾವೆಂದರೆ ತಮ್ಮಾ
ದಾನ ಮಾಡಿಹರಮ್ಮಾ
ದುರ್ಮಾರ್ಗದಂಡ ನಿಲ್ಲಮ್ಮಾ ತಂಗೀ || 6 ||
ಮರತಾರೆ ಮಹಸ್ವಾಮಿ
ಬೆರತೇಕವಾಗಿರುವಾ
ಚೆರಿತೇಯ ಪುಣ್ಯ ಸರಿಯಲ್ಲೇ ತಂಗೀ
ಅರುವೂ ಬಂದರೆ ಕರ್ಮಾ
ನರನೂ ನಾನೆಂಬೂವಾ
ಗಿರಿಮೇರು ಮ್ಯಾಲಿದ್ದರೇನೇ ತಂಗೀ || 7 ||
ದೇವ ದಾನವರೀಗೆ
ದೊರಿಯಾದಂತಾದೆನಗೇ
ದೈವಾ ಗುರುದೇವಾ ಕೊಟ್ಟಾನೇ ತಂಗೀ
ಭಾವಾ ಭೇದೀಸಾದೇ
ಜಗವೂ ಬಿದ್ಹೋಗ್ವದೇ
ಭಾವೇನಾವೇನು ಮಾಡೋನೇ ತಂಗೀ || 8 ||
ಕೊಟ್ಟಾ ಗುರುವಿನ ನಾನೂ
ಎಷ್ಟೂ ಧ್ಯಾನಿಸಲಮ್ಮಾ
ಎಷ್ಟೂ ಧ್ಯಾನೀಸೆ ತೀರದೇ ರಿಣಾ
ನಷ್ಟವಾದರೆ ರಿಣಾ
ವಷ್ಟೂ ತೀರುವುದಮ್ಮಾ
ಶ್ರಿಷ್ಟಿಯೋಳ್ ಜನನ ಶ್ರೇಷ್ಟವೇ ತಂಗೀ || 9 ||
ಮದಗಾಳೆಂಟೂ ಕಳದಾ
ಮೊದಲಂತೆ ಮಾಡಿದಾ
ಕದನಾ ಷಡ್ವರ್ಗ ಕಳದನೇ ತಂಗೀ
ಮೊದಲೂ ಇಲ್ಲದೆ ಇದ್ದೇ
ಇದ್ದವನ ಮರತಿದ್ದೇ
ಇದನೂ ಈಗೆನಗೆ ತೋರಿದಾ ತಂಗೀ || 10 ||
ವೀರಾ ಪೀರಾ ಬೀರಾ
ಜಾರಾ ಚೋರ್ಹರಿಹರಾ
ದಾರಾದಾ ಗೊಂಬೆಗಳಮ್ಮಾ ತಂಗೀ
ನಿರಾಕಾರ ಸಾರಾ
ಎಲ್ಲರಿಗಾಧಾರ
ಅಲ್ಲಿಸಾಹೇಬು ತೋರಿದಾ ತಂಗೀ || 11 ||

ಪುಣ್ಯ ಜನರೇ ಗುರು ಧನ್ಯನ್ಹೇಳಿದ
ಪುಣ್ಯ ಜನರೇ ಗುರು ಧನ್ಯನ್ಹೇಳಿದ
ದನ್ನು ಎನ್ನಗರುಪಿರಿ ಭಿನ್ನ ಭೇದವಿನ್ಯಾಕೆ || ಪ ||
ತನೂವಿನಾ ಶೋಧನಾ
ದಿನಾದಿನದಿ ನಿಮ್ಮನೆಣಿಸೆಂದೇಳಿದನೇನೂ || 1 ||
ಯೋಗಾ ಘನಾ ಭೋಗಾ ಜನಾ
ವಾಗೀದಾರೀಯೊಳಗೆ ಹೋಗಿರೆಂದ್ಹೇಳಿದನೇನೂ || 2 ||
ಮುದ್ರಾಧ್ಯಾನಾ ಭದ್ರಾಸಾನಾ
ಚಿದ್ರೂಪ ಕಂಡೂ ನಿಮ್ಮ ಚೆರಿಸೆಂದ್ಹೇಳಿದನೇನೂ || 3 ||
ಮಂತ್ರಾಧ್ಯಾನಾ ಯಂತ್ರಾತನಾ
ಪ್ರಾಂತ ನಿಮ್ಮಗೆ ಬೋಧದಂತರಂಗ್ಹೇಳೀದನೇನೂ || 4 ||
ಹೇಳೀದನಾ ಕೇಳೂವನಾ
ಬಾಳೂವೆ ಮೋಕ್ಷಪದ ಭಾವವೆ ನಂಬೆಂದನೇನೂ || 5 ||
ಪಾಪಾಕ್ಷೀಣಾ ಪುಣ್ಯಾಘನಾ
ವಾಪಾಕನಾಗ್ವ ಉಪದೇಶವ ಮಾಡಿದನೇನೂ || 6 ||
ಸ್ವರ ಸಾಧನಾ ಕರ ಕಂಕಣಾ
ಶಿರದಾ ಮ್ಯಾಲಿಟ್ಟು ನೋಡೀ ಮರಣದಾರರಿ ಎಂದನೇನೂ || 7 ||
ದೈವಾಧೀನಾ ದಾರೀ ಘನಾ
ದೈವಾವೆ ಸರ್ವವೆಂಬ ದಾರಿಯೊಳಿರೆಂದನೇನೂ || 8 ||
ಮನೂವಿನಾ ಮಾತಿನಾ
ಮನನವರಿ ಎಂದನು ಮಮಗುರಲ್ಲಿಷಾರ್ಯನೂ || 9 ||

ತಮ್ಮ ನಿನ್ನಯ ಪ್ರಶ್ನೆ ತೆರನದಿಕ ಘನವೂ
ತಮ್ಮ ನಿನ್ನಯ ಪ್ರಶ್ನೆ ತೆರನದಿಕ ಘನವೂ
ನಮ್ಮನು ಬ್ರಹ್ಮ ನಿರ್ಮಿಸಿದಂತ ಫಲವೂ
ಒಮ್ಮೆಲೇ ಕೆಳಿದಂತಾ ಧೈರ್ಯ ಸಮವೂ || ಪ ||
ಕಾಣೆನು ಕಾಣೆನೈ ಕಲಿಜನರೊಳಗೇ
ಕಾಣಿಸಿಕೊಟ್ಟೆ ನೀನೀದಿನ ಎನಗೆ || 1 ||
ಸ್ವಾಮಿ ಎನ್ನುವ ನಾಮ ನಿಜದ ಗುರುತೇನೂ
ಆ ನಾಮದಾವ ನಾಮದಿ ಕಂಡೆ ನೀನೂ || 2 ||
ಉಭಯ ನಾಮಕೆ ಮೊದಲು ಪುಟ್ಟಿದ್ದದೇನೂ
ಉಭಯಂಗಳೇರ್ಪಡಿಪದದರ ಹೆಸರೇನೂ || 3 ||
ಪರಮಾತ್ಮ ನರನೆಂಬ ಪ್ರಶ್ನ ನೀ ತೊಟ್ಟಿ
ನರನ ರಾಜ್ಯವು ದಾವದದು ಮೊದಲೆ ಬೆಟ್ಟಿ || 4 ||
ರಾಜ್ಯದೊಳು ದೇಶದಾವದು ಗೃಹವು ಗೃಹದ ಹೆಸರೇನೂ
ಗೃಹದಲ್ಲಿ ಇರುವವನು ನರನೋ ನಾಟಕನೋ || 5 ||
ನಾಟಕಗೋ ನರನಿಗೋ ನಷ್ಟದನುಭವಾ
ನೋಟದೊಳಾ ನಾಟಕನೋ ನರನೋ ಕಾಣ್ತಿರುವಾ || 6 ||
ಹೋಗಿ ಬರುತೀನೆಂಬದಾ ಹೆಚ್ಚರಿಲ್ಲೆ
ಹೋಗದ ಮುನ್ನವೇ ಹೋಗಿರುವದಿಲ್ಲೆ || 7 ||
ಇಲ್ಲಿಂದ ಹೋಗಿ ನಾವೆಲ್ಲಿರಲಿ ಬೇಕೋ
ಇಲ್ಲಿಯೇ ಈ ಮರ್ಮ ತಿಳದುಕೊಳಬೇಕೂ || 8 ||
ಪಾಪ ಪುಣ್ಯಗಳೆಂಬ ಪರಿಶೋಧನಿಲ್ಲೆ
ಪಾಪದ ದೆಶೆಭಯವು ಪುಣ್ಯದಿಂದಾಶೆ
ಭಯದಾಶೆ ಉಭಯ ನಿಲ್ಲುವುದರಿಯಲಿಲ್ಲೆ || 9 ||
ನಾಲ್ವರೋಳರುವು ಮರಿವಿಯೊಳಿರುವರಾರೂ
ನಾಲ್ವರು ಯಾರ್ಯಾರು ನಾಥರುದಾರು || 10 ||
ಸಾಕು ಸಾಕಿಲ್ಲಿಗೆ ಸಾಕು ಮಾಡಿಪದೂ
ಬೇಕಾದ ಜನಕೆಲ್ಲ ಬೇಡಲ್ಹೇಳುವದೂ || 11 ||
ಇಂತಿದೆಲ್ಲನು ಭಾವದಂತರಂಗದಲೀ
ಪ್ರಾಂತವಾಗೀ ತಿಳಿದ್ಯಾ ಗುರುಪ್ರಾಂತದಲ್ಲಿ || 12 ||
ಬ್ರಹ್ಮ ನಿರ್ಮಿತ ರಮ್ಯ ತಿಳಿದಿತೋ ತಮ್ಮಾ
ಸುಮ್ಮನೇ ಕೇಳಿದಡೆ ಸೊಗಸಾದಮ್ಮಾ || 13 ||
ನೆಲಿವಿಗೇರದ ನರಿಗೆ ನಿಲುಕುವುದೆ ಸ್ವರ್ಗಾ
ಖಲನಿಗ್ಯಾತಕೆ ಮಹಾ ಕೈಲಾಸ ಮಾರ್ಗ || 14 ||
ಆದಡೇನಾಯ್ತು ನೀನಾಡಿದಾ ನುಡಿಗೇ
ಭೇದವಿಲ್ಲದೆ ಕೇಳು ಪೇಳುವೆನು ನಿನಗೆ || 15 ||
ಸಮ್ಮತವಾದಡೆ ಸಹಿಯನಲಿ ಬಹದೂ
ಸಮ್ಮತಿಲ್ಲವೆ ಪ್ರತೀ ಪ್ರಕಟಿಸಲಿ ಬಹುದೂ || 16 ||
ಕೇಳಿ ಸಮ್ಮತವಿಲ್ಲ ನೀ ಹೇಳಲಿಲ್ಲಾ
ತಾಳು ಬೋಳಾಗುವಂತಾದ್ದು ತರವಲ್ಲ || 17 ||
ಅಗಣಿತಖಂಡಿರುವದಾ ಪರಬ್ರಹ್ಮ
ಬಗೆಯು ಬಹಿರಂಗವಾಗದ ಕಾಣೆರಮ್ಮಾ || 18 ||
ಗಣಿತ ಕಂಡಿಸಿ ತನ್ನ ಘನತರುಲ್ಲಾಸಾ
ಕುಣಿಕುಣಿಸಿ ತೋರುವನು ಜಗಚಿತ್ರ ವೇಷಾ || 19 ||
ನಾದ ಒಂದೇರಮ್ಯ ರಾಗದಿಂದಲ್ಲೇ
ರಾಗ ಬಿಟ್ಟರೆ ನಾದ ರಮ್ಯವೇ ಇಲ್ಲೇ || 20 ||
ಏಳು ಜ್ಯೋತಿಯು ರಚನ ಎಂತು ಬಹಿರಂಗಾ
ಏಳಲಾರದನಾಥ ಮನುಜರ ಸಂಗಾ || 21 ||
ಹೇಳೆಂದು ಶೃತಿ ಮುಖದಿ ಗುರುಮುಖ ಕೂಡೀ
ಹೇಳಿಸಿದನಣ್ಣಯ್ಯ ತಾನೆ ದಯ ಮಾಡೀ || 22 ||
ತನ್ನ ಚೆರ್ಯವನಂತ ತನ್ನ ನಾಮಗಳಾ
ಉನ್ನತದ ಮಾನವರ ಮ್ಯಾಲೆ ರಚನೆಗಳೂ || 23 ||
ತೋರುತಿಹವೆಂತೆಂದು ತ್ವರಿತ ನಿರ್ಮಿಸಿದಾ
ದಾರಿ ತೋರ್ದಲ್ಲಿಷ ಗುರು ಕರುಣದಿಂದಾ || 24 ||

ಮರಣಕ್ಕೆ ಯಾಕಂಜಿದೇ
ಮರಣಕ್ಕೆ ಯಾಕಂಜಿದೇ
ಮಾನವಾ ಪರಮಾ ಕಳುಹಲು ಬಂದದೇ ಮಾನವಾ || ಪ ||
ದೊಡ್ಡಾವ ಕಳುಪೀರೆ ಗುಡ್ಡಡವಿ ಸೇರಿದೆ
ದಡ್ಡಾತನ ನಿನದಲ್ಲದೇ || 1 ||
ಬಂದದನು ಬಾರೆಂದು ದ್ವಂದಾಮನ ಮಾಡದೇ
ವಂದೀಹೋಗೋನೆನ್ನದೇ || 2 ||
ಓಡಾಲೂ ಬೆನ್ನಿಂದೆ ಗಾಢಾ ಓಡೀ ಪಾರು
ರೂಢೀಲೀ ಕಂಡಾಡೀದೇ ಮಾನವಾ || 3 ||
ಪರೀಕ್ಷಿತ ರಾಜಾ ತಾ ಮರವಿಂದಲೋಡಿದ
ತ್ವರಿತಾವಧಾ ಬಂದದೇ ಮಾನವಾ || 4 ||
ಹೆತ್ತಯ್ಯ ಪಾಂಡುವ ಮುತ್ಯಾ ತಾ ದೇವೇಂದ್ರಾ
ನಷ್ಟಾಗೆ ಕಷ್ಟೋಗ್ಯದೇ ಮಾನವಾ || 5 ||
ಮರಣಾಗೋ ಜಾಗಾದಿ ಮರಣಾನಿ ಬ್ಯಾಡೆನುವೇ
ಮರವೆಂಬದಧಿಕಾಗ್ಯದೇ ಮಾನವಾ || 6 ||
ಸಾವಿಲ್ಲ ಯಮನಲ್ಲಿ ಸಾಯಾಬೇಕೆನ್ನೂವೇ
ನ್ಯಾಯಾವಧಿಕ ಕೆಟ್ಟದೇ ಮಾನವಾ || 7 ||
ಗಿಳಿಸತ್ತ ಉಪಾಯ ಇಳಿಯಲ್ಲಿ ಕಲಿಯಣ್ಣಾ
ತಿಳಿಪನಲ್ಲಿಷ ಗುರುವದೇ ಮಾನವಾ || 9 ||

ಹೋಗುವೆವು ನಾವು ಹೋಗೆಲ್ಲಿರುವೆವೊ
ಹೋಗುವೆವು ನಾವು ಹೋಗೆಲ್ಲಿರುವೆವೊ
ಬಾಗಿದ ತಿಳಕೊಳ್ಳಣ್ಣಯ್ಯಾ || ಪ ||
ರಾಜ್ಯ ಬಿಟ್ಟು ಬಂದಿವೀಗಾ
ರಾಜ್ಯದಾವುದದರರ್ಥಾ
ಸಜ್ಜನರಿಂದದು ನೀನೂ ಸಾಕ್ಷಿ ತಿಳಕೋ
ದುರ್ಜನದ ಸಂಗದಿಂದ ಪೂಜ್ಯದಂಮರತು
ಪೂರ್ತಿ ಲಜ್ಜಿಗೇಡಾಗದೆ ಕಡಿ
ಗಜ್ಜ ತೋರಿದು ತೂರ್ಯ || 1 ||
ದೇಶದಾವುದದರರ್ಥ
ನಾಶವಾಗದ ಮುಂಚಿತ
ಸಾವಿರ ಕೆಲಸ ಬಿಟ್ಟು ಸಾಕ್ಷೀ ತಿಳಕೋ
ಮೋಸವಿಲ್ಲದಾರಿ ಮುಂದೆ
ಘಾಶೆಯಿಲ್ಲ ನಾಶ ಭಯ
ಲೇಶವಿಲ್ಲ ತನುಧನ ಈ ಸುಜನರನು ಬಿಟ್ಟು || 2 ||
ಪುರವು ದಾವುದದರರ್ಥ
ವರಿದು ಬ್ರಹ್ಮಲೀಲದಲ್ಲಿ
ಹೊರಗೆ ಒಳಗೆ ಹೊಂದುವಂತಾದ್ದರುವು ಮಾಡಿಕೋ
ಹಿರಿಯರಿಂದದಿಕ ಘನ
ವರಿದು ಸಂಶಯಂಗಳೆಲ್ಲಾ
ತರಿದು ನಿಸ್ಸಂಕಲ್ಪದಿಂದ
ಶರೀರಾಸೆಯನು ಬಿಟ್ಟು || 3 ||
ಮಂದಿರವುದಾವುದದು
ಒಂದಿಹದೇನರ್ಥವೇನು
ಚಂದಾವಾದ್ಹಿರಿಯರಲ್ಲಿ ಎಂದ ತಿಳಕೋ
ಮಂದ ಮತಿವರ್ತಿಯಾಗಿ
ಮುಂದದೆತ್ನ ಮರಿತು ಹೋದ
ಇಂದಿನ ವಾರ್ತೆಗಳಿಂದ ಬಂದದ್ದೇ ನಮ್ಮನುಭವ || 4 ||
ನಾಮದರ್ಥ ನಿಜವೇನು
ಸ್ವಾಮಿ ಸರ್ವರೆನ್ನುವರು
ನೇಮ ನಿನ್ನ ನಾಮ ವಿವರವೆರತು ತಿಳಕೋ
ಕ್ಷೇಮ ಕೊಟ್ಟಿತೀಗ ಮುಂದೆ
ಪ್ರೇಮಗುರಲ್ಲಿಷ ಪರಂಧಾಮನ
ಕೇಳಿಕೊಂಡಿಲ್ಲಿ ಸೀಮೆ ಬಿಟ್ಟು ಸೇರಲಿಕ್ಕೆ || 5 ||

ಯಾಕೆ ಹಿಂದಿನ ಹಿರಿಯಾರೆಲ್ಲಾ
ಯಾಕೆ ಹಿಂದಿನ ಹಿರಿಯಾರೆಲ್ಲಾ
ನೇಕರನು ಕಂಡಿಲ್ಲವೇ
ಸಾಕು ಒಬ್ಬುಪದೇಶಿ ಎಂದೂ
ಸುಮ್ಮನೇ ಕೂತಿಲ್ಲವೇ || ಪ ||
ಅಷ್ಟ ಈ ವಿಧ ಗುರುಗಳೆಂದೂ ದಿಟ್ಟರೂ ಹೇಳಿಲ್ಲವೇ
ನಷ್ಟಹಂ ಛೇದಿಸುವ ಸಂಶಯ ಶ್ರೇಷ್ಟಾತನಂದಿಲ್ಲವೇ || 1 ||
ಒಳ್ಳೇ ಗುರುವಿನ ಕಾಣು ಎನಲಾ ಜಳ್ಳು ಕಂಡಂತಲ್ಲವೇ
ಆಳ್ಳು ಬಿಟ್ಟೂ ಒಳ್ಳೆದದು ತೆಕ್ಕೊಳ್ಳಿ ಹೇಳಿದರಲ್ಲವೇ || 2 ||
ಕೇಡು ಕೊಡುವಾ ಮೂಢ ಗುರುವಿನ ಬ್ಯಾಡವೆಂದ್ಹೇಳಿಲ್ಲವೇ
ಕೇಡು ಎಂಬದು ಯಮನ ದಾರೀ ಕಂಡು ಹೇಳಿದರಲ್ಲವೇ ||3 ||
ಮಹಮ್ಮದಿಯರೊಳು ಮಹನ್ಯನೊಬ್ಬಾತನ ಮಾರ್ಗ ಕೇಳಿಲ್ಲವೇ
ಅಹಂನಾಶಿಪ ಗುರುವಂತ್ಯಕ್ಕೇಳತ್ತು ಜನರುಪದೇಶವೇ || 4 ||
ಹೊಟ್ಟೆ ತುಂಬುವ ತನಕ ಕೇಳ್ವದು ಕೆಟ್ಟದಂತಾಡಿಲ್ಲವೇ
ಕೆಟ್ಟದದು ಕೇಳ್ದವನದೆಂದರು ಕೇಳಬೇಕಹುದಲ್ಲವೇ || 5 ||
ಸಾಲಿ ಅಯ್ಯಗೆ ತೆನುಗಭ್ಯಾಸಾ ಸಂಸ್ಕೃತಂ ಸ್ಮರಿಸಿಲ್ಲವೇ
ಕೀಲಿ ಸಂಸ್ಕೃತ ತಿಳಿಪ ಸಿಗಲಾ ಸಾಲಿ ಬಿಡಬೇಕಲ್ಲವೇ || 6 ||
ವೇದಘೋಷಂ ಮಹಂನಾಶಂ ಮನಾಥಾಪ್ತಂ ಬಂಧುವೇ
ಬೋಧಿಪಲ್ಲಿಷ ಗುರುವರಾರ್ಯನ ಬೆರದವಗೆ ಭಯವಿಲ್ಲವೇ || 7 ||

ಕೇಳಿಕೋ ಕ್ಷೇಮ ತಾಳಿಕೋ
ಕೇಳಿಕೋ ಕ್ಷೇಮ ತಾಳಿಕೋ
ನಾಳೆನ್ನದೀ ದಿನ ತನುವಿದನು
ತೋರಿವದು ಕೇಳಿಕೋ || ಪ ||
ಕೇಳು ಶುಲಭೋಪಯ ವಣ್ಣಾ
ಪೇಳುತಿರುವನು ಗುರುವರಣ್ಯಾ
ಕೋಳಿ ಪಿಂಡಾವಂಡ ಬಿಟ್ಟೂ
ಹೋಳಾಗಿ ಹೋದಂತ ದಾರೀ || 1 ||
ಪನ್ನಂಗ ತನ್ನಂಗ ಸಳದೂ
ಭಿನ್ನದಂಗದು ಬಿಟ್ಟ ದಾರೀ
ಎನ್ನದಂಗವ ಬಿಡಿಸಿ ಎನ್ನಯ
ಶೂನ್ಯಂಗದಲಿ ಸೇರಿಸುವನೂ || 2 ||
ಜೀವ ಉಂಟಹಲ್ಲಾದ ಉಂಟೂ
ಜೀವಾತ್ಮಗಾಭಾವ ಉಂಟೂ
ದೇವ ಗುರುವರಗನುಭವುಂಟೂ
ಸೇವಕನಿಗೆ ಪೇಳ್ವದುಂಟೂ || 3 ||
ಜೀವದಾತ್ಮದು ಸಿಗಲು ಇಲ್ಲಾ
ದೈವಾದಾತ್ಮದು ದೊರವದಲ್ಲಾ
ಜೀವ ದೈವಾ ವಂತರಾತ್ಮ
ದೇವಗುರು ಬೋಧೀಪನಿದೆಲ್ಲಾ || 4 ||
ಸಾರವೆಲ್ಲಾ ಗಜಂ ಸೆಳೆವಾ
ಬ್ಯಾರೆ ಮಾಡೀ ಬೆಳಲ ತೋರುವ
ದಾರಿನಾನತ್ವದಂ ಪೀರ್ವಾ
ತೋರುವಾ ನಿಸ್ಸಾರಗನುಭವ || 5 ||
ನಿಸ್ಸಾರದಿಂದಿರುವ ನೀನರ
ಸುಸ್ಸಾರ ಭರಿತಾ ಪರಾತ್ಪರ
ದುಸ್ಸಾರ ದೈವಾಕ್ಕೆ ದೂರಾ
ತತ್ಸಾರ ತೋರುವನು ದಯಕರ || 6 ||
ಅಂಗ ಸಂಯೋಗಗಲಿಸುವನೈ
ಭಂಗ ಸಂಗಟ ಬಾಧದಿಲ್ಲೈ
ಮಂಗಳಲ್ಲಿಷ ಗುರುವಿರುವನೈ
ಹಿಂಗ ಬ್ಯಾಡೈ ಈ ವಿಚಾರೈ || 7 ||

ಸಾರ್ಥಕವಾಗದು ನರಜನ್ಮಾ
ಸಾರ್ಥಕವಾಗದು ನರಜನ್ಮಾ
ಸಾಮಥ್ರ್ಯ ಗುರು ಸೇರದೆ ತಮ್ಮಾ || ಪ ||
ವ್ಯರ್ಥದಿಂದ ಜಗದರ್ಥಪೇಕ್ಷೇಸಿ
ಕರ್ತಧಿಕ ದೈವಕೆ ದೂರಾಗಲೂ || 1 ||
ಅಂಬಿಗನದಿ ದಾಂಟಿಪ ಪ್ರತಿ ಪೇಳದೇ
ಮುಟ್ಟಿದಟ್ಟಿಸದಿರೆ ಕೆಟ್ಟಾ ಪರಿಯಾ || 3 ||
ಹುಡುಗಿಯ ಕೊಡದಿರೆ ಕೆಡುತಿಹುದೀ ಪರಿ
ತಡಿಯದೆ ಗುರುವಿಗೆ ತನುಮನ ಕೊಡದಿರೆ || 4 ||
ಕ್ಷೀರಾಕಾರಕೆ ಎಪ್ಪದು ತಪ್ಪಲು
ಸೇರಾದಾಪರಿ ಘೃತದೊಳಾಪರಿ || 5 ||
ಕುರುಬನ ಬೆರಿಯದ ಕುರಿ ಜೀವನವೇ
ಪರಿತೋಳನ ಬಾಯ್ದರಿ ಸೇರಿದಂತೆ || 6 ||
ಕ್ರೂರರು ಯಮನರು ಕರುಣಿಗಳಲ್ಲವು
ದೂರಾಲೋಚಿಸೇ ಕುರಿ ದಾರಿಯಂತೆ || 7 ||
ಗುರುವೇ ಮಾತಾ ತರುಳಗೆ ಸತತಾ
ತರುಳನ ಕಷ್ಟದೊಳೂರಳಿಪದನುಚಿತಾ || 8 ||
ಮನುವಿನ ಕಷ್ಟವು ಘನವದು ಶ್ರೇಷ್ಟವು
ನಿನಗದು ತೋಳ್ವಲ್ಲಿಷ ಬೆರಿಯದೆ || 9 ||

ಆರಾದಡೆ ಏನ್ ದಾರಿಯ ಕೇಳ್ವದಕೇ
ಆರಾದಡೆ ಏನ್ ದಾರಿಯ ಕೇಳ್ವದಕೇ
ಗುರು ಪರಮಾರ್ಗಕ್ಕೆ
ಬೇರಿಲ್ಲಾ ಹೊಲಿಗೇರಿಲ್ಲಾ ಸ್ಥಲಕೆ
ಗುರು ಪರಮಾರ್ಗಕ್ಕೆ || ಪ ||
ನಾರುವನೆನ್ನದೆ ನಾರದ ಕೇಳಿದ
ಅರಿವ ಗುರುವಿನ ಸಾರುವ ವಾಕ್ಯಕೆ || 1 ||
ನದಿ ಮೂಲಾದಧಿವಿಧ ಜನರನ್ನದೇ
ಹೃದಯಾರ್ಪಣ ಉಂಟದರಂತರಿಯಲ್ಕೇ || 2 ||
ಪರಮ ನೊಳೈಕ್ಯವ ನರರಿಗಿದನುಭವ
ನರುಪುವ ದೊಡ್ಡವ ಖರಿಯಹುದೆನಲಿಕೆ || 3 ||
ಈ ಸ್ಥಲ ನರನಿರುವೀ ಸ್ಥಲ ಪರಮ
ಮಹಸ್ಥಲವೆಂಬುವ ಸುಸ್ಥಲ ಸೇರಲ್ಕೇ || 4 ||
ಗುರುಸ್ಥಲ ಕಾಶೀವರಸ್ಥಲ ವಿವರವ
ನರಸ್ಥಲಕೆಲ್ಲಕೆ ನರಕವು ತಪ್ಪಲ್ಕೇ || 5 ||
ಇಲ್ಲದ ನರನಿಂಗೆಲ್ಲಾ ನರಕವು
ಇಲ್ಲದವನೇ ಸುಖದಲ್ಲೀ ಬೆರವದಕೇ || 6 ||
ಅರುವಿಲ್ಲದೆ ಸುಖ ನರಕವು ಬರುವದು
ಸುರಿವದು ಸಂಶಯ ಪರಿಹರ ಮಾಗಲ್ಕೇ || 7 ||
ಸಂಶಯ ಭೋಜನ ಯಮ ಸಂಸಾರವು
ಹಿಂಸೆಯ ಮನೋರೋಗ ಇದನಂ ಪರಿಹರ ಮಾಗ್ವದಕೇ || 8 ||
ಮನವಿನ ರೋಗಕೆ ಮದ್ದದು ತಿಳಿಪನು
ಘನಗುರುವಲ್ಲಿಷ ಮನೋರೋಗ ಗೆದ್ದದಕೇ || 9 ||

ಎಲ್ಲಾನು ಬಲ್ಲೀಯಲ್ಲೋ ಇಹದೊಳಗೆ
ಎಲ್ಲಾನು ಬಲ್ಲೀಯಲ್ಲೋ ಇಹದೊಳಗೆ
ಕುಲ್ಲಾ ನಿನ್ನ ಮರದಲ್ಲೋ || ಪ ||
ಧನ ಕನಕ ವಸ್ತ್ರಾವೆ ಘನ ಹೀನ ಗ್ರಹಿಸೂವೆ
ನಿನ ಘನವೆ ಹೀನಾವೆ ಮನನಾ ಮನಸಿಗಿಲ್ಲ || 1 ||
ಹತ್ತೂ ಜನ ತಮ್ಮ ಗೊತ್ತೂ ಮರತು ನದೀ
ಹೊತ್ತು ಕೊಂಡೋಯಿತೆಂದತ್ತತ್ತು ಸತ್ತಂತೆ || 2 ||
ಬೆಸ್ತಾ ಗಾಯುಷ್ಯಾವು ವಿಸ್ತಾರವಿಲ್ಲೆಂಬ
ಪ್ರಸ್ತಾಪ ಪೇಳಿ ಬ್ರಾಹ್ಮಣಸ್ತಮಯವಾದಂತೆ || 3 ||
ಹೇಮಾದನುಭಾವಾವು ಕ್ಷೇಮಾವು ಕಾಣಾದೆ
ತಾ ಮೋಸ ಹೋಗಿ ತನ್ನ ಸೀಮೀಗೆ ಹೋದಂತೆ || 4 ||
ಓದೀದ ಪಶು ಜನರಾದೀಲಶುವಾಗೂತೇ
ಹೋದಾ ಕಾರ್ಯವು ಮರತು ಬಾಧಿಯೊಳಗೆ ಬಿದ್ದಂತೆ || 5 ||
ನಿನ್ನ ಶೂನ್ಯ ನಿರ್ಮಾಣ ನಿನ್ನ ತಿಳದ್ದೆ ಪುರಾಣ
ಪುಣ್ಯ ಸಮನಿಲ್ಲಣ್ಣ ಪೂರ್ತಿ ಮರತಿ ಪಾಪ ಘನಾ || 6 ||
ಅಲ್ಲೀಷಗುರುವೀನ ಇಲ್ಲೀ ಬೆರದರೆ ಘನ
ಕುಲ್ಲತನ ಛೇದಾನ ಇಲ್ಲ ನಿನ್ನ ಸಮಾನ || 7 ||

ಮೋಸಗಾರತೀ ನಾಶವಾಗುತೀ
ಮೋಸಗಾರತೀ ನಾಶವಾಗುತೀ
ಲೇಸು ಪೇಳಿದಾರ್ಯರ ಮನ ನೋಯ್ಸುತಾ ನಿಂತೀ || 1 ||
ಮನವು ನೋಯ್ಸಿದೇ ನಿನಗತೆಲ್ಲದೇ
ದಿನವು ನಾಳೆ ಘನ ದೈವಾವು ಬಿಡನು ದಂಡಿಸದೇ || 2 ||
ಬಿಡನು ಯಾತಕೇ ಒಡಿಯಾನಲಯಕೆ
ಕಡುದುರಾಕ್ಷಿ ನೊಯ್ಸಿದದಕ ನಡಿ ಯಮ ಪುರಕೆ || 3 ||
ಜಪ ತಪಾಗದೇ ಸುಫಲ ಕೆಡಿಸದೇ
ಚಪಲ ಚಿತ್ತ ಚಲನಾಗ್ಯದೇ ಜಪವು ಸಿದ್ದಿಸದೇ || 4 ||
ರೂಪ ಚರ್ಯವೆ ಪಾಪದಲ್ಲವೇ
ಯಾ ಪರಾತ್ಪರ ಪರಬ್ರಹ್ಮಾ ಪೇಳಲಿಲ್ಲವೇ || 5 ||
ಬ್ರಹ್ಮ ವಾಕ್ಯವೇ ಇದು ನಮ್ಮಾ ವಾಕ್ಯವೇ
ಬ್ರಹ್ಮ ನಮ್ಮಾ ಮೀರಿದಮ್ಮಾ ನಿಮ್ಮಾ ಸಮಾನವೇ || 6 ||
ಮೀರಿದಾ ಫಲಾ ಏರಿಯೋ ಶೂಲಾ
ತೋರಿತಲ್ಲಿಷಾ ಗುರು ಶಾಪಾ ಜಾರಿತೆನಲಾ || 7 ||

ಮಂಗಳಂ ಮಂಗಳಂ ಮಹಮೂರ್ತಿಗೇ
ಮಂಗಳಂ ಮಂಗಳಂ ಮಹಮೂರ್ತಿಗೇ
ಸಂಗಾ ಸರ್ವಾಂಗಾಯೇಕಾಂಗಗೆ
ದಯಾಂಗಗೇ ಶುಭಾಂಗಗೆ || ಪ ||
ಅರುವಿನ ರೂಪಗೆ ಮರುವಿಲ್ಲವಗೇ
ಮರುವರುವು ಮಧ್ಯದಿರುತಿಹ ಗುರುವಿಗೆ || 1 ||
ನೆರಳಿಲ್ಲದವಗೆ ಮರುಳ ಹಿತನಿಗೇ
ಶರೆಗಳ ಭಕ್ತರ ಪರಿಹರ ಮಾಳ್ಪಗೆ || 2 ||
ಪಿತ ಪ್ರಾಣಗಳಿಗೆ ಸತತಿರುತಿಹನಿಗೇ
ಮತ ಮಮಿಕಗೆ ಮತಿ ಮಧ್ಯಾತ್ಮಗೇ || 3 ||
ಮಾಯಾ ವೈರಿಗೆ ನ್ಯಾಯಾ ಸಾರಗೆ
ಕಾಯಾ ಚಾರಿಗೆ ಕಲುಷ ಹಿತನಿಗೇ || 4 ||
ಕಣ್ಣೊಳು ಕಾಣ್ವಗೆ ಕಾರಣ ರೂಪಗೆ
ಮಣ್ಣು ವಾಯಾಗ್ನಿ ಉದಕಾಗದವಗೆ || 5 ||
ಭಕ್ತರ ಪೋಷಗೆ ಮುಕ್ತಿ ಪ್ರದಾಯಿಗೆ
ಶಕ್ತಿ ಪ್ರಕಾಶದಿ ಸ್ಥಿರಕರಿರುತಿಹಗೆ || 6 ||
ಪರಕಧಿಪತಿಗೆ ಪರಮಾತ್ಮ ಪ್ರಿಯಗೇ
ಪರಮಾನುಭಾವ ನರರಿಗೆ ಕೊಡುವಗೆ || 7 ||
ವಿಗ್ರಹ ಶಿಲೆಗಳ ಶೀಘ್ರ ಶಿಕ್ಷಿಪಾನು
ಗ್ರ ದೈವದೊಳು ಜಾಗ್ರ ಬೆರಿಪನಿಗೆ || 8 ||
ಭವಗಣ ಹರನಿಗೆ ಪೂರ್ವ ಸ್ವರೂಪಗೇ
ಜವದಲ್ಲಿಸಾಹೇಬು ಗುರುವರಾರ್ಯನಿಗೆ || 9 ||

Categories
Tatvapadagalu ಶಿಲವೇರಿ ಶಿವಪ್ಪನವರ ತತ್ವಪದಗಳು

ನೀತಿ ಪದ್ಧತಿ ಪ್ರಕರಣ

ಕೇಳೂವೆ ಹೇಳೀರಿ ಬಾಲಾನ ಪ್ರಶ್ನವೂ
ಕೇಳೂವೆ ಹೇಳೀರಿ ಬಾಲಾನ ಪ್ರಶ್ನವೂ
ಬಲ್ಲಂತ ಹಿರಿಯಾರೆಲ್ಲಾ || ಪ ||
ಮನವು ಚಿತ್ತವು ಉಭಯ ಘನ ಬ್ರಹ್ಮನ್ಮಯದಿ
ಪ್ರತಿದಿನವಾದ ಮಾಳ್ಪೊರಲ್ಲಾ
ಅನಿತ ಇನ್ನುಂಟೆ ಅಜಾಂಡವೆಲ್ಲವ ನಾಟೆ
ಎನುತ ಪೇಳಲು ಚಿತ್ತ ಮನವಪ್ಪದಿದು ಹ್ಯಾಗೆ || 1 ||
ಅತಿಶುದ್ಧನೆನುತಾಲಿ ಅಧಿಕ ವೇದ ಶೃತಿ
ಅನುದಿನ ಪ್ರಾರ್ಥೀಪವೇ
ಮಿತಿಯಿಲ್ಲದನ್ಯಾಯ ಮಹಯೋಳಾಗುವದೇ
ದುರ್ಗತಿ ನುಡಿ ಎನುತೆ ಸುಮ್ಮತಿ ಆಕ್ಷೇಪಿಸುವೋದು || 2 ||
ಅತಿ ಮೋಹಾ ಸತಿ ತಾನೆ ಪತಿಯಾಗಿರುವ ತಾನೇ
ಸುತ ಸೋಸೆ ಸರ್ವವಾಗಿಹನೇ
ಕ್ಷಿತಿಯೊಳ್ಹಿರಿಯರಲ್ಲಿ ಪ್ರತಿದಿನ ಕೇಳಿಹೆ
ಮತಿ ಕೂಡ ಚಿತ್ತತಾನತಿವಾದ ಮಾಳ್ಪಾದೂ || 3 ||
ವಸುಧೆಯೋಳ್ ಪಶುಗಳು ಸತಿಸುತೆಯನ್ನಾದೆ
ರತಿ ಸಂಕಲ್ಪಿಸಿದ ಹಾಗೇ
ದುರ್ವಿಷ ಭ್ರಾಂತಿ ನಡಿಸಲ್ಕಾ ಪಶುಭಾವ ಧರಿಸಿದ್ಯಾ
ಶಶಿಕಾಂತಿ ಮೀರಿದ ಕುಶಲ ಮಾನವನುತಾದೇ || 4 ||
ಮನವೆ ನಿನ್ನಯ ವಾಕ್ಯ ಮನ್ನಿಸಿದವರಿಗೆ
ಮರ್ಮಯಂದಿಗೆ ದೊರಿಯಾದೆ
ಘನದೈವವೆನುತಿಹೆ ಘನವಲ್ಲೆಂದಾಡುವೆ
ಎನಗೆ ಸಮ್ಮತ ವಿಲ್ಲೆಂದನುತಿರುವದು ಚಿತ್ತ || 5 ||
ಶುನಕಗಳವನೆಂದು ಸುಲಭದಿಂದನ್ನುವೆ
ಶುನಕ ಭ್ರಾಂತುಳ್ಳಾವನೇ
ಅಣುವಿನೊಷ್ಟಾದರೂ ಆಸ್ಪದಿಲ್ಲವೆ ದೋಷ
ಘನಗೇಡಿ ಹೋಗೆಂದು ಮನವನ್ನುತಿರುವಾದೂ || 6 ||
ನಿನ್ನಂತೆ ನಡವರ್ಗೆ ಇನ್ನುಂಟೆ ಪರಸುಖ
ಮಣ್ಣು ತಿನ್ನಿಸಿ ಬಿಡುವೇ
ನಿನ್ನ ನೀಗುವಲ್ಲಿಸಾಹೇಬು ಗುರುಸರಿ
ಇನ್ನುಂಟೆ ಎಂದು ಮನವನ್ನುತ ನಿಂತಾದೆ || 7 ||

ಸಾವುದಾ ಮುಂದ್ಹೊರಡೂವಾ ಉಪಾಯವೂ ತಿಳಿಯಾದೆ
ಸಾವುದಾ ಮುಂದ್ಹೊರಡೂವಾ ಉಪಾಯವೂ ತಿಳಿಯಾದೆ
ಆಯೂಸಾ ಬಡೂವೋರೇ ಅತಿ ಮೂರ್ಖರೇ || ಪ ||
ಸತ್ತವರ ಸಮುದ್ರ ತನ್ನಾ ತಲಿಯ ಮ್ಯಾಲೊರುವೋದಣ್ಣಾ
ಸತ್ತು ನೀ ನಿಂತಾರಿನ್ನಾ ತಾ ನ್ಹೊರುವನೂ
ಯತ್ನವಿಲ್ಲೆಮ ಬಾಧಕರಾ ಎತ್ತಿಹನೂ ಪೂರ್ವಾಕಾರಾ
ಹಸ್ತ ಜೋಡೀಸಿ ನಿಲ್ಲುತಿಹರೇ
ನೀನರಿಯದಿರುವರೇ || 1 ||
ಸಂತೋಷ ಬಂದ ವ್ಯಾಳ್ಯದಾ ಚಿಂತೆ ಸತ್ಹೋದಾ ವಿಧಾ
ಅಂತಿಲ್ಲದಾರ್ಯರ ಬೋಧಾ ಅತಿ ಆನಂದಾ
ವಂತೂ ಬಾರದಾ ಮುಂದೆ ಗುರುಪ್ರಾಂತಾ ಸೇರೆಂದ್ಹೇಳಿದೇ
ಇಂತ ಸುಖಬಿಟ್ಟೂ ಬಾಳುವರೇ ವೃಥಕಾಲ ಕಳಿವರೇ || 2 ||
ಸರ್ವವೂ ಪ್ರತಿ ಶರೀರವೂ ಒಪ್ಪದಿಂಬಿಟ್ಟಾ ವಿಧವೂ
ಗೋಪ್ಯದೋಳ್ ನಿನ್ನಾ ಸಾವೂ ಅತಿ ಸುಲಭವೂ
ಕುಪ್ಪಾಸ ಬಿಡವೊ ವ್ಯಾಳ್ಯದಾ ಕ್ವಚಿತಾದರಿಲ್ಲಾ ಬಾಧಾ
ಕ್ಷಿಪ್ರದಿಂ ಸುಖವೂ ಕೊಡುತಿಹರೇ ಗುರುಹಿರಿಯಾರಿಹರೇ || 3 ||
ಬಾಲರೆಲ್ಲಾರು ಕೂಡೀ ಬಹಿರಂಗಾದಾಟಾ ಹೂಡೀ
ಕಾಲ ಬಾರದೆ ಸತ್ತೀಯನ್ನೂವರೂ
ಕೈ ಹೊಡದು ಕಿಲಿಕಿಲಿ ನಗುತೇ ಕಷ್ಟಿಲ್ಲದ ಮರಣವಾಯಿತೇ
ಈ ಲೀಲ ಹಿರಿಯರು ಮಾಡುವರೇ ನೀ ಸುಮ್ಮನಿರುವರೇ || 4 ||
ಎಲ್ಲಿ ಹುಡುಕಾಲಿ ಬ್ಯಾಡೋ ಅಲ್ಲಿಷಾ ಗುರುವಿಹ ನೋಡೋ
ಸುಳ್ಳಿನಿಂ ಮುಖ ತಿರುಹೀ ನೀ ಕರುಣಾ ಬೇಡೋ
ಕೊಲ್ಲೂವ ಕೊಲೆ ತಪ್ಪಿಸುವಾ ಅಹಲ್ಲಾದವನು ದಿನ ಕೊಡುವಾ
ಜಲ್ಮಸಾಫಲ್ಯ ಮಾಡುತಿಹರೇ ನೀ ತೀವ್ರ ಬಂದರೇ || 5 ||

ಘಟವೆ ನಿನ್ನ ಸಂಗದಿ ಲಂಪಟ ಎನಗಾಯ್ತೇ
ಘಟವೆ ನಿನ್ನ ಸಂಗದಿ ಲಂಪಟ ಎನಗಾಯ್ತೇ
ಎನ್ನ ಭಟತನ ಹೋಯ್ತೇ || ಪ ||
ಮಧುರ ಜೇನು ಮರ್ಮರಿಯದೆ ಉದರ ತೃಪ್ತಿಗೇ
ಬಹು ಮುದದಿ ಹೋದ ನೊಣದ ಬಾಧೆ ಅಧಿಕವಾದ್ಹಾಗೆ
ಆ ವಿಧ ವಾಯ್ತೆನಗೇ || 1 ||
ಜೀವವೆ ನಿನ್ನನುಭದಿಂದೆ ಚಿಂತಿಸುತಿಹೆನೋ
ಇನ್ನೆಂತು ಮಾಳ್ಪೆನೋ ನೀನಿರಲಿಕ್ಕನುದಿನಾನನ್ಯರ ಕಾಯ್ವೇ
ಅವರೇನಾ ಜ್ಞಾಪಿಸಲು ಅದನು ಆ ಕ್ಷಣ ಕೇಳ್ವೇ
ಅತಿ ಕಷ್ಟ ನಾ ಬಡುವೇ || 2 ||
ಸರ್ವ ಮಧುರ ರುಚಿಕರ ನಿನ್ನ ಜಿಹ್ಮ ನೋಳ್ಪದೇ
ಸರ್ವರೀಗೆ ಸಾಕ್ಷಿಯಾಗಿ ತನುವೆ ನಿಂತದೇ
ಎನ್ನ ಸುಮ್ಮನನುತಿದೇ || 3 ||
ನಿನ್ನಿಂದನ್ನುದಕವನ್ನು ತಿನ್ನುತಿರುವೆನೋ
ಈಗನ್ನಘಾತಕ ನುಡಿಗಳು ಎನ್ನಾಡುವರೇನೋ
ಅನ್ಯಾಯ ನಿಂದೇನೋ || 4 ||
ಮೋಹದಿ ಸತಿಸುತರ ಪಿಡಿದು ಮುದ್ದಿಪೆಯಲ್ಲೋ
ಗಹಗಹಿಸಿ ನಗುತಲವರ ಲೋಲ ನೀನಲ್ಲೋ
ಎನ್ನನುಭವೇನಿಲ್ಲೋ || 5 ||
ದಾರಿ ಹಿಡಿದು ನೀ ತೆರಳಲು ಧಾತ್ರಿ ಗೊರಗುವೇ
ಸೇರರು ಸತಿಸುತರು ಎನ್ನಸಾರಿ ಹೇಳುವೇ
ಘೋರ ನಿನ್ನಿಂದಲ್ಲವೇ || 6 ||
ಇರುವ ತನಕ ಪರಿಪರಿ ವಿಧ ಹರುಷ ನಿನ್ನದೇ
ಸ್ಮರೀಶವಾಗಿ ನಿನ್ನ ಸಹಾಯ ನಿರುತ ಮಾಡಿದೇ
ನಾ ಬರಿದೆ ಬಳಲಿದೇ || 7 ||
ಜನನಿ ಜಠರದಲ್ಲಿ ನಾನು ಶೂನ್ಯನಾಗಿದ್ದೇ
ಘನತೆಯಿಂದ ಬಂದು ಎನ್ನ ಘನವ ಕೆಡಿಸಿದೇ
ಮನೆಮನೆ ತಿರುಗಿಸಿದೇ || 8 ||
ಉಭಯ ವ್ಯಾಜ್ಯ ವಿಭಾಗಿಸುವ ಪ್ರಭು ಸ್ವರೂಪನೂ
ಅಭಯ ಪಾಲಿಪನಲ್ಲಿಸಾಹೇಬು
ಗುರುವಿರುತಿಹನೂ ನಡಿತನುವೆ ಹೋಗೊನೂ || 9 ||

ಸತ್ತು ಹೋದಾನೆಂದು ಲೋಕಾ
ಸತ್ತು ಹೋದಾನೆಂದು ಲೋಕಾ
ಸಾರಿಸಾರೀ ಹೇಳುತದೇ
ಅರ್ಥವೇನು ಹೋದ ಸಂಧೀ
ಅನುಭವಿಲ್ಲಾದಾಡುತಿದೇ || ಪ ||
ಪಂಚಭೂತ ಹೋಯಿತೆಂದೂ
ಪ್ರಪಂಚವೆ ಪಾಡುತದೇ
ಕಿಂಚಿತ್ಹೋಗಿ ತಮ್ಮ ಕುಲದ
ವಾಂಚಲ್ಯವೆ ಘನವಾಗ್ಯದೇ || 1 ||
ರೂಪು ಮಾಯಾವಾಯಿತೆಂದೂ
ರೂಢಿಯಲ್ಲ ಆಡುತದೇ
ಗೋಪ್ಯ ಮನಸೀನಲ್ಲಿ ಅದೇ
ರೂಪವು ನಿಜ ಕಾಣುತದೇ || 2 ||
ಶ್ರಮಾಭೂಸ್ಥಾಪ್ಯ ಮಾಡಲು
ಸಮಾಧಿ ಎಂದ್ಹೇಳುವರೂ
ಭ್ರಮಾ ಪುಟ್ಟಿ ಪೂಜಿಸಲ್ಕೆ
ಗಮಾಗಮಿಸಿ ಹೋಗುವರೂ || 3 ||
ಶಾಸ್ತ್ರಸಾಕ್ಷಿ ಗುರುವಿನೋಕ್ಯದಿ
ಸುಖದುಃಖವೆ ತಪ್ಪದಲ್ಲಾ
ಯೋಚಿಸಿ ನೋಡಲ್ಕೆ ಒಂದೂ
ಸಾಸಿವೆಷ್ಟೂ ಹೋಗಲಿಲ್ಲಾ || 4 ||
ಸತ್ತ ಗುರೀ ಗೊತ್ತು ಪೇಳ್ವಾ
ಸಾಯದಂತ ಸ್ಥಿರವು ತೋರ್ವಾ
ಮಸ್ತಿ ಮುರಿವನಲ್ಲಿಸಾಹೇಬು
ಗುರು ಮಾರ್ಗದಿ ಇದರನುಭವಾ || 5 ||

ಸುಳ್ಳುದಾವದ್ಹೇಳಿರಣ್ಣಾ
ಸುಳ್ಳುದಾವದ್ಹೇಳಿರಣ್ಣಾ
ಬಲ್ಲಂತ ಜನರೆಲ್ಲಾ ಭೇದಿಸೀರಣ್ಣಾ
ಸುಳ್ಳು ಕಂಡರೆ ಸುಖಾವಂತೇ
ಕಳ್ಳಮುದ್ರೆಗಳೆಲ್ಲಾ ಕಳಿಯೂವುದಂತೆ
ಎಳ್ಳಿನಷ್ಟೂ ದೋಷಿಲ್ಲಾವಂತೆ
ಅಲ್ಲಮಾ ಪ್ರಭು ಬೆರದಾಡುವೊದಂತೆ || 1 ||
ಲೋಕದೋಳ್ತುಂಬೀಹದಂತೆ
ಬಹುಪಾಕ ವಾದ್ಹಿರಿಯಾರು ಪೇಳೂವರಂತೇ
ಅನೇಕ ಕಾಲದಿ ಇರುವೋದಂತೆ
ಸೋಕಿಸೋಕದ್ಹಾಗೆ ಸುಳಿದಾಡೊದಂತೆ || 2 ||
ಇಲ್ಲ ಇದ್ದಾಂಗಿರುವೊದಂತೆ
ಎಲ್ಲಾರಲ್ಲಿರುವೋದಾ ಇಲ್ಲೆನಿಸ್ಯಾದಂತೆ
ಬಲ್ಲಾ ಶರಣರೆ ಬಲ್ಲಾರಂತೇ
ಕಲ್ಲು ಪೂಜಿಪರಲ್ಲಿ ಘನವಾಗ್ಯಾದಂತೆ || 3 ||
ಅನ್ನ ತೋರಿದರೆ ಹೋಗಾದಂತೆ
ಅರಣ್ಯ ಸೇರಿದಾಡೆಗಧಿಕಾಗೋದಂತೆ
ಬೆನ್ನತ್ತಿ ತಿರುಗೂವೊದಂತೆ
ಪುಣ್ಯ ಪುರುಷರಲ್ಲಿ ಪರಿಪಕ್ವವಂತೆ || 4 ||
ಸುಳ್ಳು ಶೋಧನೆ ಸಿಗುವದಕೇ
ಅಲ್ಲಿಸಾಹೇಬು ಗುರುಹಾನೆ ತಡವ್ಯಾಕೆ
ನಿಲ್ಲಾದೆ ನಡಿ ಕೇಳೂವದಕೆ
ಇಲ್ಲಾದ್ಹೋದರೆ ನಿಜ ನಿಲಕಾದೋ ಮನಕೆ || 5 ||

ಸದುಪಾಯ ಮಾರ್ಗದವರ
ಸದುಪಾಯ ಮಾರ್ಗದವರ
ಒದಗಿ ನಾನು ಕೇಳಿಕೊಂಬೆ
ಎದರಿಲ್ಲದಯೇಕೊನಾಥ ಕೇಳಿದದಕೆ ಹೇಳಿರೆಂಬೆ || ಪ ||
ಪರಸುಖಾ ದುರಾಸೆ ಇಟ್ಟು
ಕೊರತೆಯ ಮನ ಭೀತಿ ತೊಟ್ಟು
ನಿರುತ ಎನಗೆ ಮಾಡಿದಂ
ತ ಚರಿತೆ ದಾವದೆಂದು ಕೇಳ್ವಾ || 1 ||
ಭೂ ಗಗನದ ಮಧ್ಯದಿಂದೆ
ಬ್ಯಾಗ ಹೋಗಿರೆನುತಿಹನೇ
ಹೋಗದೀಗ ನಿಂತಾಗಳೇ
ಯೋಗಿಗಳಲ್ಲೆನುತಿಹನೇ || 2 ||
ಗುರುಮುಖ ಸಾಧನಗಳಿಂದ
ದೊರಿವನೆಂದುಡಿಕಿ ನಿಂದಾ
ಪರ ರಾಜರ ಸಾಧಿಸಿದಾ
ಪರಿಯನ್ನನು ಮಾಳ್ಪರೆಂದು || 3 ||
ನರರು ಮಾಳ್ಪನಡತೆ ಮರದು
ಸುರಾಸುರರ ಹಮ್ಮು ಪಿಡಿದು
ಗುರುಕುಮಾರ ರೆಂದ್ಹೇಳಲು
ಬರಿದೆ ಭ್ರಮೆಗಳನುತಿಹನೇ || 4 ||
ಜಗದಾಧ್ಯನ ನುಡಿ ಕೇಳಲು
ಹಗರಣ ನಮಗಾಯಿತಲ್ಲಾ
ಧಗಧಗಿಪಲ್ಲಿಸಾಹೇಬು ಗುರು
ಸೇವಕ ನಾ ಕೇಳ್ವೆನಲ್ಲಾ || 5 ||

ಕ್ಷೋಣಿ ಜನರೊಂದು ಕೂನ ಕೇಳ್ವರು
ಕ್ಷೋಣಿ ಜನರೊಂದು ಕೂನ ಕೇಳ್ವರು
ಜಾಣ ಸುಜ್ಞಾನಿಗಳೆ ಹೇಳಿರೈ || ಪ ||
ಕಂಡಿರಲ್ಲಾ ಖಂಡ ವಸ್ತುವ
ಇದೇ ಕಣ್ಣಿನಿಂದೆ
ಮಂಡಲದಿ ನೀವು ಕಂಡ ದಿನಸೇ
ಕಂಡೇವು ನಾವು ಕಾಣದಿರುವೊದ್ಹ್ಯಾಗೆ || 1 ||
ನಾಣ್ಯ ವಸ್ತ್ರದಿ ಮನ ರಕ್ಷಣೆ
ಪ್ರಾಣ ಸಮ್ಮತವೇ ಸಹಜವೇ
ಜ್ಞಾನವಿಲ್ಲದ ಹೀನಜನ
ಸಂಧಾನ ನಿಮ ಜ್ಞಾನ್ಹೆಚ್ಚೇನೆನುವರು || 2 ||
ಪಾತ್ರೆ ವಿಧ ಬಹೂಚಿತ್ರದಿಂ
ಈ ಧಾತ್ರಿಯೋಳಿಹವೆ ಸಹಜವೇ
ನೇತ್ರದಿಂ ನೀವು ನೋಡಿ ಕರಿಯುವ
ಗೊತ್ತಾಗ್ಯದೆ ನಿಜವಸ್ತು ಕಂಡದ್ಹ್ಯಾಗೆ || 3 ||
ನೀವು ಕಂಡದೆ ನಾವು ಕಾಣ್ವೆವೂ
ಭಾವ ನಿಮದೆಚ್ಚೇನು ಹೇಳಿರೈ
ಆವವಿಧದನುಭಾವವತಿಶಯ
ತೀವ್ರ ಹೇಳಿರಿ ಕೇಳುವೆವೆಂಬರು || 4 ||
ಕಡು ದುಗುಡವನು ಬಿಡಿಸುವ ಆಧ್ಯನು
ಪೊಡವಿಯೋಳಿಹನೇ ಪುಣ್ಯನೆ
ಜಡಮತಿ ಜನರನು ನುಡಿ ಛೇದಿಸುತಿಹ
ಗುಡಿಕಲ್ಲಲ್ಲಿಸಾಹೇಬು ಗುರುವರನೇ || 5 ||

ಬಲ್ಲಾವರ್ಯಾತಕೊಪ್ಪುವರೂ
ಬಲ್ಲಾವರ್ಯಾತಕೊಪ್ಪುವರೂ
ಬಯಲೇ ಬ್ರಹ್ಮವು ಎಂದೂ ಭಾವಿಸಿ ಪೇಳಾಲೂ || ಪ ||
ಬಯಲೀನೋಳ್ಬಿರುಗಾಳೀ
ಹೊಯಿದಾಡುವದು ಕೇಳಿ
ಉಭಯಾರು ಉಂಟೇನು ಪೇಳಿ
ಒಬ್ಬನಿಹ ನೋಡಿ ಹೇಳಿ || 1 ||
ಮಧ್ಯಾಹ್ನದೊಳು ಸೂರ್ಯ
ಮಹ ಬೆಂಕಿಮಯವಯ್ಯಾ
ರುದ್ರಾನ ರೌದ್ರಾವೆ ಬಯಲಾ
ರಂಜಿಸುವದೂ ಆ ವ್ಯಾಳ್ಯಾ || 2 ||
ಕಾಳಾರಾತ್ರಾಗಲೂ
ಕಾಣಬಾರದು ಬಯಲೂ
ಪೇಳಲ್ಕೆ ಪ್ರತಿನಾಮಗಿರಲೂ
ಬಯಲೇ ಭಾವ ಕೆಟ್ಟಿರಲೂ || 3 ||
ಇತರಿಲ್ಲದಿಹ ವಸ್ತೂ
ಏಕಾಂಗದರ ಶಿಸ್ತೂ
ಪ್ರತಿಯಿಲ್ಲದಿರುವೋದು ಇನಿತೂ
ಪೇಳೆ ಮತಿ ಕೆಟ್ಟೋಯಿತು || 4 ||
ಬಯಲಾಗಿರಲಿ ಬೇಕು
ಪ್ರತಿ ಇಲ್ಲದಿರಬೇಕು
ಮೂಲ ಮೂರ್ತಲ್ಲಿಸಾಹೆಬೂ
ಗುರುಮನ ಒಪ್ಪಾಬೇಕು || 5 ||

ಬೇಡೂವರೇನೋ ಹಿರಿಯರು ಮೋಕ್ಷಾ
ಬೇಡೂವರೇನೋ ಹಿರಿಯರು ಮೋಕ್ಷಾ
ಬೇಡೂವರೇನೋ ಈ ರೂಢಿ ಜನರ ಹಾಗೆ
ಈಡಿಲ್ಲ ಪ್ರಭು ಒಡಗೂಡಿ ಆಡುವೋ ಪ್ರೌಢ ಮನುಜರೂ || ಪ ||
ಸೂರ್ಯ ಪ್ರತಿ ಬೆಳಕಾ ಬಯಸೂವೊದುಂಟೇ
ಧೀರತಾನೇಕಾ ಹಾರ್ಯರಾ ವಿಧವಾಗೀ ಅವನೊಳೈಕ್ಯವಾಗೀ
ಧಾರೂಣಿ ತರಿದು ಹೊರಟ್ಹೋಗುವರು ಬಹು ಧೀರರಾಗಿ || 1 ||
ಮಧುರುಳ್ಳ ಜೇನೂ ಕಬ್ಬಿನ ಸ್ವಾಗೆ ತುದಿ ಕೇಳ್ವದೇನೂ
ಹೃದಯಾಧಿಕನ ಕಂಡೂ ಪದವಿ ತಾವು ಕೈಕೊಂಡು
ಕದನುಳ್ಳ ಕಲಿಯುಗ ಸದೆ ಬಡಿದು ಹದಮಾಳ್ಪ ಅಧಿಕರು || 2 ||
ಜಲಗಂಗನಿಂದೆ ಚಲಿಮೆಯ ಉದಕ ಚಲೊಸವೆನ್ನುವದೇ
ಬಲು ದುರಾಸೆ ಸ್ವರ್ಗಾ ಭಯವುಳ್ಳ ಯಮ ಮಾರ್ಗಾ
ಲಯಮಾಳ್ಪ ಹಿರಿಯರು ಭಯವು ಭಯವು ಬಯಸುತಿಹರೇ || 3 ||
ಧನಪತಿ ತಾನೇ ದಾರಿದ್ರನ ಧರ್ಮಾ ಬೇಡುವನೇ
ಘನಕೃಪ ರಸಗುರೂ ಧಣಿಯಾಗಿ ನಿಂತೀರೆ
ತನಸೋಂಕಿದವರೆಲ್ಲ ಕನಸೆಂದು ಸ್ವರ್ಗನುವೊರಲ್ಲಾ || 4 ||
ಸಾಧು ಸಭರತ್ನಾ ಅಲ್ಲಿಸಾಹೆಬು ಗುರು ಸಂಜೀವನಾ
ಬೊಧಾದಿಪ್ರಭು ಬೆರಿವೋ ಭೇದಾ ದಯಾ ಮಾಳ್ಪನು
ಗಾಧೆ ಇಹ ಸ್ವರ್ಗ ಬೋಧ ಬದಿಯಲಿ ಓದೋದುಂಟೆ || 5 ||

ಬೆಳವದಣ್ಣ ಕರ್ಮಾ ಇಳಿಯೊಳು
ಬೆಳವದಣ್ಣ ಕರ್ಮಾ ಇಳಿಯೊಳು
ತಿಳಿಯದಿರುವೆ ಮರ್ಮಾ
ಒಳ ಹೊರಗೇ ನೀ ಉತ್ತುಮನಾಗದೆ
ಪ್ರಳಯಕ್ಕೆ ಸಿಕ್ಕು ಪ್ರಳಾಪಿಸವೆ ಕೇಳ್ || ಪ ||
ಮಡದಿಯಿಂದ ಘಟವೂ
ಕಡುಸುಖ ಬಡುತಿಹದೆನುತಿಹೆವೂ
ನಡಿವೆ ಬಂದಿಹದು ಹುಡುಗಾಟಿಕೆಯೊಳು
ನಡತಿ ತಪ್ಪಿ ನೀನುವೊದಕ್ಕೆ ಕೇಳ್ || 1 ||
ಕ್ಷೀರಘ್ರತ ಸಹಾಯಾ ದೇಹ
ತೋರುತಿಹದು ಕಳೆಯಾ
ಆರ ಭಯವಿಲ್ಲದಾಡುತಿರುವೆ ನೀ ಧಾರುಣಿ ಧಣಿ
ಪ್ರಭು ಮೀರಿ ಮರತದಕೆ || 2 ||
ದ್ರವ್ಯಧಾನ್ಯದಿಂದೇ ಶುಭ ಸುಖ
ಅವ್ಯಕವ್ಯವೆಂದೇ ಸಾಯ್ವ ಕಾಲದೊಳು
ಸಹಾಯವಿಲ್ಲದೆ ಕೈ ಒಳಗಿದ್ದರು
ಕಾಣಬಾರದೈ || 3 ||
ಶುನಕನ ಮೈಮ್ಯಾಲಾ ಪಾಷಾಣ
ಸುಲಭದೊಗಿವ ಬಾಲಾ
ಎನಮ್ಯಾಲಿದು ಯಾವುಪರಿ ಬಂತೆಂಬದು
ಶುನಕಗೆ ತಿಳಿಯದು ನಿನಗಾವಿಧ ಕೇಳ್ || 4 ||
ದೇವರ ಸ್ನೇಹಿತನೋ ಅಲ್ಲಿಸಾಹೆಬು
ಗುರುದೇವರು ತಾನೋ
ಕೇವಲ ಸೇವಕ ಜನ ಸಂಜೀವನ
ಕೈಯೋಳು ಶಿಶುವಾದರೆ ಕರ್ಮಿಲ್ಲವು || 5 ||

ಸಾಯದ ಮುಂದೇ ಸತ್ತ ಸಾಂಗತ್ಯ ಸಾಧನೆ ಅಲ್ಲಣ್ಣಾ
ಸತ್ತು ಹೋದವರ ಗೊತ್ತು ಹೇಳಿದವ ಸತ್ತಿರುತಿಹನಣ್ಣಾ || ಪ ||
ಮುದ್ರೆಯಿಂದ ಈ ಮೂಲದೊರಿಯದೂ
ಮೋಸವಾದಿತಣ್ಣಾ
ಭದ್ರವಾದ ಪ್ರಭು ಮಾರ್ಗದವರಿಗೆ
ಬಯಲಾಗಿಹುದಣ್ಣಾ || 1 ||
ಯೋಗ ಸಾಧಿಪರು ವ್ಯರ್ಥವಾಗುವರು
ಯೋಗಿಗಳಲ್ಲಣ್ಣಾ
ಮೂಗು ಪಿಡಿದು ಸಂಧ್ಯಾಗಮ ಜಪತಪ
ಬಹು ಮತ್ಸರವಣ್ಣಾ || 2 ||
ನಾಶಿಕ ಶ್ವಾಸವು ಈಸಾಯ್ತೆಂಬದು
ಕಾಸಿನ ಕಾರ್ಯಣ್ಣ
ಆಶೆಯಿಂದ ಆಯುಷ್ಯ ಹೆಚ್ಚಿಪರು
ಮೋಸಗಾರರಣ್ಣಾ || 3 ||
ನೇತ್ರ ಲಕ್ಷ್ಯದಿಂ ನಿತ್ಯ ಕಂಡಿತೆಂಬ
ನೀಚರು ನೋಡಣ್ಣಾ
ಧಾತ್ರಿ ಪಶುವಿಗೀ ನೇತ್ರವುಂಟು
ಆ ಸೂತ್ರವಾಯಿತಣ್ಣಾ || 4 ||
ನಿನ್ನ ತಿಳಿಪದಲ್ಲನ್ಯ ಮಾರ್ಗವಿದು
ಧನ್ಯರೊಪ್ಪರಣ್ಣಾ
ಚಿನ್ನ ರಸಿಕ ಅಲ್ಲಿಸಾಹೆಬು ಗುರುವಿನ
ಸೇರಿರುತಿಹುದಣ್ಣಾ || 5 ||

ಕಿರಿತನಕೇ ಸರಿ ಇಲ್ಲೆಂಬುವದೂ
ಕಿರಿತನಕೇ ಸರಿ ಇಲ್ಲೆಂಬುವದೂ
ಅರಿತವಗೆ ಇದರ ಅನುಭವಾ
ಧರೆಪಾಲಿಪ ದೊರೆ ನೋಡಣ್ಣಾ
ತರುಳರ ತಪ್ಪಿಡಿಯದೆ ಇರುವಾ || ಪ ||
ಮನೆ ಹಿರಿಯ ಚಿಕ್ಕ ತರುಳ ನಾ
ಮ್ಯಾಲತಿ ದಯ ಮರಿಯದೆ ಇಡುವಾ
ನೀನೆ ಕಿರಿಯ ನಿಜವಾಗಾದರೇ
ತಾನೆ ನೋಡಿ ದಯ ಪಾಲಿಸುವಾ || 1 ||
ಜ್ಞಾನ ಮುಖದ ಶೋಧನೆಯಿಂದೆ
ನೀನೇ ಚಿಕ್ಕವನಾದರೆ ಮುಂದೆ
ಏನು ಜಡರಿಗೊಪ್ಪಿಸಿ ಕೊಡದೇ
ಪೂರ್ಣಪುಣ್ಯ ಪೊರಿವನಲ್ಲದೇ ||2 ||
ಮಕ್ಕಳ ಮುದ್ದಿಕ್ಕುತ ಮೋಹದಿ
ಅಪ್ಪಿಕೊಂಡು ಆಡಿಸುತಿಹರೂ
ತಪ್ಪು ಅವರ ಕಡೆಯಿಂದಾಗಲೂ
ಅಪ್ಪ ಬಾ ಎಂದ್ಹರುಷ ತಾಳ್ವರೂ || 3 ||
ಕ್ಷಿಪ್ರತಂದು ಕ್ಷೀರಸಕ್ಕರೆ
ಚಿಪ್ಪಿಲಿಯರಿಯುತ್ತ ಇರುವರೂ
ನೆಪ್ಪಿನಿಂದ ಚಿಕ್ಕವನಾಗಿರೂ
ತಪ್ಪನದೆ ರಕ್ಷಿಪ ದೇವರೂ || 4 ||
ಛೇದಿಸಿ ನೋಡಣ್ಣಾ ಕ್ಯಾದಿಗೇ
ಚೆಲೋ ಪರಿಮಳಿಹದದರೊಳಗೇ
ಶೋಧಿಸೆ ಸಣ್ಣಿರುತಿಹ ಸ್ವಾಗೇ
ಶ್ರೇಷ್ಟಾಗ್ಯದೆ ತಿಳಿ ಜಗದೊಳಗೇ || 5 ||
ತಾ ಧರಿಪರು ಶಿರದತಿ ಬ್ಯಾಗೇ
ತಮ್ಮ ಗರ್ಭ ಶಿಸು ಮಕ್ಕಳಿಗೇ
ಬೋಧದಲ್ಲಿ ಕಿರಿತನ ನಿನಗೇ
ಆ ಧರಿಪರ ಹುಡುಕತಿ ಬ್ಯಾಗೆ || 6 ||
ಕಿರಿತನದ ಗುಲಾಮ ನೀಡೂ
ಸರಿಬಾರನು ಶೂರನು ನೋಡೂ
ದೊರೆ ಅರಮನೆ ಅರುತಿಹ ಜಾಡೂ
ಇರುತಿಹ ರಾಣಿಯರನು ಕಂಡೂ || 7 ||
ವರಹ ಹತ್ತು ಸಾವಿರ ತಿಂಬಾ
ಪರಾಕ್ರಮರ ಹೊರಗಿರು ಎಂಬಾ
ಶಿರಬಾಗಿ ನೋಡದಿರೆಂಬಾ
ಕಿರು ಮನುಜನ ಒಳಗೋಗೆಂಬಾ || 8 ||
ವಿಸ್ಮಯ ಬಡುದಿರು ನೀ ನಿಜದಿ
ಈ ವಿಚಾರ ತಿಳಿದರೆ ಗೆದ್ದೀ
ವಿಶ್ವತುಂಬಿ ತುಳುಕುವೊ ಹಾದಿ
ಅಲ್ಲೀಸಾಹೇಬು ಗುರುವೆ ಗುಣನಿದಿ || 9 ||
ಮಸ್ತಕಿಡೋ ಆತನ ಪಾದದಿ
ಅಸಹ್ಯ ಕಿರಿತನ ಬೇಕಂದೀ
ಸುಸ್ತಾದರೆ ನೀ ಬಹುಬೆಂದೀ
ಶಿಸ್ತು ಬೇಡ್ವರಿಲ್ಲೀ ಜಗದೀ || 10 ||

ಎಚ್ಚರ ಮರತಿರಲಿ ಬ್ಯಾಡಿರಿದೂ
ಎಚ್ಚರ ಮರತಿರಲಿ ಬ್ಯಾಡಿರಿದೂ
ಸಮಯ ನೋಡಿರೀ
ಮತ್ಸರದಿಂ ಹೊತ್ತು ಕಳದರೇ
ವ್ಯರ್ಥವಾದಿರೀ || ಪ ||
ಮರಣ ಬಾರದ ಮುಂದೆ ಹೊರಡುವಾ
ಮಾರ್ಗ ಕಾಣಿರೀ
ಕರುಣುಳ್ಳಾ ಗುರುವಿನ ಪಾದಾ
ಬೆರದು ನೋಡಿರೀ
ಶರೀರಿಡಿದು ಸಾಧೀಪ ದಾರೀ
ಬೆರಿಯ ಬ್ಯಾಡಿರೀ
ನರನ ನಾಮಕೆ ಗುರುತೇನುಂಟೋ
ತ್ವರಿತ ಕಾಣಿರೀ || 1 ||
ಸುಖವು ದುಃಖ ಮಿಕ್ಕ ಸುಲೀಲಾ
ಸಾಕ್ಷಿ ನೋಡಿರೀ
ಸಕಲ ಸಂಶಯ ಜಯಿಸುವೊ ಜ್ಞಾನಾ
ಶರಧಿ ಕಾಣಿರೀ
ಪ್ರಕೃತ ಶ್ರಮದೊಳು ಸಮಾಧಿ ನಿಂತದೆ
ನಿಕರ ನೋಡಿರೀ
ಮುಕುತಿ ಬೇಡುವ ಮಾರ್ಗವಿದಲ್ಲಾ
ಮರಿಯಬ್ಯಾಡಿರೀ || 2 ||
ಆಶೆ ಭಯಕೇ ಅಧಿಕ ದಾರಿದೂ
ಸೂಸಿ ನೋಡಿರೀ
ಮೀಸೆಯುಳ್ಳ ಪುರುಷರ ಬಿರಿದೂ
ಕಾಶಿ ಧರಿಸರೀ
ಆಶೆ ಸ್ವರ್ಗ ಯಮನ ಭಯಕೇ
ಅಯ್ಯೋ ಎಂದಿರೀ
ಗೀಚಿ ಬಿಡುವ ಪ್ರಭು ಲೆಕ್ಕದೊಳೂ
ಸ್ತ್ರೀಯರೇ ಸರೀ || 3 ||
ಇಂದಿನವರ ನುಡಿ ಎಲ್ಲೆಂದು
ಎಂದಿಗನದಿರೀ
ಕುಂದಿಲ್ಲದ ಪ್ರಭು ಇಲ್ಲಹನೇ
ಮುಂದೆ ಕಾಣಿರೀ
ಸಿಂಧು ಸಿಗಲು ಸಣ್ಣ ಹಳ್ಳವು
ಚಿಕ್ಕದೆನ್ನಿರೀ
ಹೊಂದಿದರೇ ಇದರನ್ಮಯವೂ
ಅಂದ ಕಂಡಿರೀ || 4 ||
ಅವನಿಯೋಳೇಳಲ್ಕೆ ಬಾರದಿದೂ
ಅಹುದು ಎನ್ನಿರೀ
ಕವಿಜನರಿಗೆ ಕಲಹವಾಗ್ಯದೇ
ಕಂಡು ನೋಡಿರೀ
ಅವಿರಳದೊಳು ಅಡಗಿ ಇದ್ದಿರಿ
ಮರತುಬಿಟ್ಟಿರೀ
ಭುವಿರತ್ನಲ್ಲಿಸಾಹೆಬು ಗುರುವಿನಾ
ಬ್ಯಾಗೆ ಕೇಳಿರೀ || 5 ||

ಎಂತ ಭಕ್ತರೋ ಇವರೂ
ಎಂತ ಭಕ್ತರೋ ಇವರೂ
ಎಂತ ದೇವರೋ ಅವರೂ || ಪ ||
ಧೂಳಿ ಹೋಗಿ ರವಿ ತಾಕದು ಎಂದು
ಮೈಲಿಗೆಂಬದೊ ಮೊದಲಿಲ್ಲೆಂದು
ಕೇಳಿ ಕಂಡು ಇದು ಕಷ್ಟಿಲ್ಲೆಂದು
ಕೀಲಿ ಹಿಡಿದು ದೇವರ ಸ್ತುತಿಸೋದೂ || 1 ||
ಸ್ವಲ್ಪ ಕಾರದಿಂದಿಕ್ಷುಸಾಗರಾ
ಸಾರ ಕೆಡದು ಎಂದೆಂದಿಗೆ ಮಧುರಾ
ಕಲ್ಪಿತ ನಿಜ ಕಂಡಿರುವರು ಪೂರಾ
ಮೂಲ್ಪಿಡಿದೆಮ್ಮನು ರಕ್ಷಿಪು ಎಂಬರಾ || 2 ||
ವಜ್ರಾಯುಧದಿಂ ಹುಲ್ಲು ಹೋಗುವದು
ನಿರ್ಧತಮ್ಮೊಳು ನಿಜವೇ ತಿಳಿದೂ
ಭದ್ರವಾಗಿತಾವದು ಭಾವಿಸಿ ನಿಜವಿದ್ದರೆ
ಎಮ್ಮನು ನೀ ಪೊರಿ ಎಂಬದೂ || 3 ||
ಅಹಾಲ್ಯ ಅಡವಿಯೊಳು ಬಿದ್ದದು ಕೇಳಿ
ಬಾಲೆ ಎದ್ದು ಬಹು ದೈರ್ಯವು ತಾಳಿ
ವ್ಯಾಳ್ಯ ಇದೆ ಎಂದೊಚನವು ಹೇಳೀ
ಮೂಲದಿಂದ ಮೂಗಿಡುವರು ಕೇಳೀ || 4 ||
ದ್ರೌಪತಿ ಮನವು ತೀವ್ರದಿ ಪೊರತೀ
ಈ ಪೃಥವಿಯೊಳಹುದೆನಿಸಿ ಕೊಂಬುತೀ
ಈ ಕಥೆ ನಿಜವರೆ ಎಮ್ಮ ಪೊರಿಯುತೀ
ರೀತಿ ಕೇಳ್ಬಹುದೆ ಭಕ್ತರ ವೃತ್ತೀ || 5 ||
ವಿಭೀಷಣಗೆ ಲಂಕಾದ್ರಿಯ ಕೊಟ್ಟೀ
ಅಭಯವಲ್ಲದಿರೆ ಎಮ್ಮನು ಬಿಟ್ಟೀ
ಕುಭಾವ ಕೇಳದೆ ಬಿರಿದನೆ ತೊಟ್ಟೀ
ಸ್ವಭಾವ ಕೇಳ್ತಿಹ ಭಕ್ತರ ಮೇಟೀ || 6 ||
ಶೌರ್ಯಯಿಟ್ಟು ಬಹು ಸಿಕಂಚಿದೊಳಗೆ
ಸೇರಿಸಿ ನೋಳ್ಪರು ಸರಿಯೇ ತಮಗೆ
ಆರ್ಯ ಅಲ್ಲಿಸಾಹೇಬು ಗುರು ಸ್ವರೂಪಗೆ
ಕ್ರೂರರು ಕಾಂಬರು ಕುಟಿಲದಿ ಹೀಗೆ || 7 |

ಗುರುಪುತ್ರರಿಗೆ ನಾನು ಶಿರಬಾಗಿ ಕೇಳ್ವೆನೂ
ಗುರುಪುತ್ರರಿಗೆ ನಾನು ಶಿರ ಬಾಗಿ ಕೇಳ್ವೆನೂ
ಸರೆ ತಪ್ಪೊ ಪರಿಯನ್ನೂ ಕರುಣೀಪದೂ || ಪ ||
ದೇಹ ತಪ್ಪಾದವೂ ದಿಕ್ಕೇ ತಪ್ಪಿದ್ದೆವು
ಧನ್ಯಾರೆ ಸರೆ ನೀವೂ ದಯಮಾಡಿರೀ
ದೈವಾ ಕಾಯುವನೆಂದೊ ದೈನೋಕ್ತಿಯಲಿ ನಿಂದೂ
ಬಾಯಿಲೊಪ್ಪಿದ ಮ್ಯಾಲೆ ಬಹುಭಾರ ಎಮಮ್ಯಾಲೇ || 1 ||
ಪೃಥ್ವೀ ಆಳುವ ರಾಜಾ ತಪ್ಪೇ ತಿಳಿದರೆ ಸಹಜ
ಮುಪ್ಪೂರ ಪೇಳಾಲೂ ಬಿಡನೂ ನಿಜಾ
ಅಪ್ಪೀ ಬಂದುಜಾಲ ಅಯ್ಯೋಂದರಾಕಾಲಾ
ಒಪ್ಪೀಹ ನೆನ್ನೂತ ಅಪ್ಪಳಿಸೂವ ದಾತಾ || 2 ||
ಅನ್ಯಾರ ನೋಯಿಸೂತಾ ಎನ್ನಾ ಕಾಯನ್ನೂತಾ
ಮುನ್ನಾ ನಾ ಪೇಳಲೂ ಮೆಚ್ಚಾದಾತಾ
ಎನ್ನಿಮದ ನೊಂದಾವ ಮುನ್ನೆ ತಾ ಸ್ತುತಿಸುವಾ
ಎನ್ನಾ ಕೈ ಯೊಳಗಾ ನನ್ನೇ ಬಂಧಿಸಿತಾಗಾ || 3 ||
ದಾತ ನೋಳ್ಬೆರದಾರೂ ದುರಿತ ಬಿಡದೆಂದಾರೂ
ಧಾತ್ರೀಯೋಳ್ ಹಿರಿಯಾರೂ ಪೇಳಿಹರೂ
ಈ ಮಾತ ಕೇಳಿ ನಿಮ್ಮಯ ಮೊರೆ ಹೊಕ್ಕು ಬೇಡೂವೇ
ಪ್ರೀತಿಯಿಂದಲಿ ಎನ್ನಾ ಭೀತಿ ಬಿಡಿಸಬೇಕೂ || 4 ||
ಆದಿ ಅಂತರ್ಯಾವನಾದೀ ಬಹಿರಂಗಾವೂ
ವಿನೋದವೊಂದುವ ವಿವರಾ ಹೇಳುವದೂ
ಅಧಾರವಾಗಿರುವಾ ಅಲ್ಲಿಸಾಹೆಬು ಗುರುವಾ
ಅಹುದೆಂದೊಪ್ಪಿರಬೇಕೂ ವತಿಧೈರ್ಯವಿರಬೇಕು || 5 ||

ಮಿತ್ರರಾಗಿಹರೆಂದು ಈ ಮಹೀಜನರ
ಮಿತ್ರರಾಗಿಹರೆಂದು ಈ ಮಹೀಜನರ
ನೀ ನನತ್ಯಾಂತ ಸ್ನೇಹದಿಂದಾಡದಿರು ಮನುಜಾ
ಪ್ರತ್ಯಕ್ಷವ ಪ್ರಮಾಣದ ಪ್ರಪಂಚದ ನಡತಿ
ದೃಷ್ಟಾಂತ ತೋರುವೆನು ದಾರಿ ಹಿಡಿ ಸಹಜಾ || ಪ ||
ಅರ್ಧಾಂಗಿನಿಯಳಾಗಿ ಅನುದಿನವು ನಿನ ರುಚಿಯು
ಪೀರ್ದು ಬಹು ಕಾಲದಿಂದ ತನಪ್ರೀಯವಾ
ವೃದ್ಧಾ ನೀನಾಗೆ ನೀನಿದ್ದ ಠಾವಿಗೆ ಬರದೆ
ಶ್ರಾದ್ಧ ಹೋಗದಿದೆಂದು ನಿನ್ನ ಶಪಿಸುವಳೂ || 1 ||
ಜಗದಾಂಬಕನ ಕಂಡು ಜಾಗ್ರದಿಂ ಕಮಲಗಳು
ನಗಿ ಮುಖದಿ ಸೊಗಸಾಗಿ ಮೊಗವು ಮ್ಯಾಕೆತ್ತೇ
ಹಗೆಯಿಂದಲಾ ನೀರು ಅಣುವಿಲ್ಲದಲೆ ಮಾಡಿ
ಧಗಧಗಿಪ ಕಿರಣದಿಂದಗ್ಧ ಮಾಡುವನೂ || 2 ||
ನಿನ್ನೊಳತಿ ದ್ರವ್ಯವಿರೆ ನಿನ್ನಿಂದೆ ತಿರುಗುವರು
ನಿನ್ನಿಂದ ಕೆಲವು ದ್ರವ್ಯವು ಧರಿಸುತಿಹರೂ
ನಿನ್ನ ದ್ರವ್ಯವು ಸರಿಯೆ ನಿನ್ನೊಳತಿ ಶತ್ರುತನ
ಗನ್ನಘಾತಕ ತನವು ಘನ ಮಾಡುತಿಹರೂ || 3 ||
ಹುಲಿ ತನ್ನ ನೇತ್ರ ವೇದನೆ ತಾಳಲಾರದೆ
ಬಲಿಸುವದು ತನ್ನ ಬಾಲಕರನ್ನದೇ
ಕಲಿಜನರ ಶತೃತ್ವ ಕುಟಿಲ ಬಹು ಹುಲಿಗಿಂತ
ಹೊಲಬನರಿದಿವರ ಹೊಂದಿರಬ್ಯಾಡೋ ಮನುಜಾ || 4 ||
ಹರಿ ಅಜಾದಿಗಳಿಗಧಿಕನ ಕಂಡು ನೀನಿರೂ
ನರರು ಮುನಿದರೆ ಏನು ಮಾಡದಿರುತಿಹರೂ
ಗುರಿ ತಿಳಿಯಲಿಕ್ಕೆ ಗುಡಿಕಲ್ಲು ಅಲ್ಲಿಸಾಹೇಬು
ಗುರುಚರಣದಲ್ಲಿ ಸಾಯದೆ ಸತ್ತಿರೂ || 5 ||

ಒಂದು ನಡತಿ ನಡಿಯದೆ ಇರುತೀರಲ್ಲಾ
ಒಂದು ನಡತಿ ನಡಿಯದೆ ಇರುತೀರಲ್ಲಾ
ಕಡಿಮೇ ನಡತೀಗಳೆಲ್ಲಾವು ನಡಿಯೂವಿರಲ್ಲಾ || ಪ ||
ದಾಹವಾಗದ ಬಾವಿ ನೀರೂ
ದಣಿದು ಮುಂದೆ ತಂದಿಡುವಿರೀ
ಭಾವವೆಲ್ಲಾ ನ್ಯಾಯವೇ ಸೈ
ಸಾಯದಾ ಮುಂದೆ ಸಾಯುವಂತಾ || 1 ||
ಹತ್ತು ವರುಷದ ಭತ್ಯವಿರುತಿರೆ
ಮತ್ತೆ ಮುಂದಿನ ಯತ್ನ ಯೋಚನೆ
ಮತ್ರ್ಯವೆಲ್ಲಾ ಮಾಳ್ಪೊದಲ್ಲಾ
ಸತ್ತು ನಿಲ್ಲುವೊ ಯತ್ನವಿಲ್ಲಾ || 2 ||
ಛಳೀ ಮಳಿಗೆ ಸಿಗದಂತೆ ದೇಹವು
ಒಳ ಹೊರಗೆ ವಸ್ತ್ರಂಗಳೊದಿಸುವೇ
ಪ್ರಳಯ ಕೈ ಸಿಗದಂತಾನುಭವ
ಘಳಿಲನೇ ನೀ ತಿಳಿಯಲಿಲ್ಲಾ || 3 ||
ಒಬ್ಬರೊಡವಿನ್ನೊಬ್ಬ ಕೇಳಲು
ಎಬ್ಬಿಸಿಲ್ಲಿಂದೆನುವಿಯಲ್ಲೋ
ತದ್ವಿಧದಿ ನಿನ್ನೊಡಿವೆ ಗುರುವಿನ
ಹದ್ದಿನೋಳ್ಪರಿಸೊ ವಿಧಾನ || 4 ||
ಮಂಡಲವ ತುಂಡಾಗಿ ಹೋಗುವ
ಚಂಡ ಮಾರುತ ಪ್ರಳಯಕ್ಕೆ
ಎದುರ್ಗೊಂಡು ನಿಲ್ಲುವ ಅಲ್ಲಿಸಾಹೆಬು
ಗುರುಮಂಡಲದಿ ಸುಗುಣನಾಗುವ || 5 ||

ಜಾಣರಾದವರುಗಳು ಗಾಣದಂತಿರುವ
ಜಾಣರಾದವರುಗಳು ಗಾಣದಂತಿರುವ
ಘಟ ಜಾಣತನದಲಿ ಇದರ ಕ್ಷೀಣಿಸಲಿಬೇಕೂ || ಪ ||
ಕರಡಿ ಅಜ್ಞಾನ ಧರಿಸಿ ತನ್ನ ಪೊರತ
ವನ ಶಿರವ ಛೇದಿಸಿದಂತೆ ಈ ಘಟವನೂ
ಅರಿವಿನಿಂತರಿತರಿದು ಅತಿ ಮೋಹ ತೊರಿದು
ದುರ್ಮರಣಕ್ಕೆ ಸಿಗದಂತ ದಾರಿ ನೋಡುವದೂ || 1 ||
ಗಿಳಿತನ್ನ ಘನ ಉಪಾಯದಿ ಸಾಯಿದೆ ಸತ್ತು ಬಿದ್ದಿರೇ
ಒಳಗಿಂದ್ಹೊರಗಾಕಲಾರಿ ಹೋದಂತೇ
ಪ್ರಳಯ ಬಾರದ ಮುಂದೆ ಘಟ ಬಿಟ್ಹೊರಡುವಾ
ಹೊಲಬ ನರಿದಿದರ ಒಡದ್ಹೋಗುವದೇ ವಿಹಿತಾ || 2 ||
ತಾಯಿಗಬಲತ್ವವಿರೆ ಕೂಸಿಗತಿ ಲಘುವೂ
ತಾಯಿ ಬಲವಿರೆ ಕೂಸಿಗಬಲತ್ವವೂ
ನ್ಯಾಯ ತಿಳಿದೀ ಘಟವು ನಶಿಸಿದಾಗಲಾ ಪ್ರಾಣ
ಮಾಯ ವಿರಹಿತವಾಗಿ ಮೆರವುತ್ತಲಿಹುದು || 3 ||
ತರುಣುದಯವಾದಾಗ ತಮನಸಿದು ಹೋದಂತೆ
ಗರುವಿಕೆಯ ತೋಳಘಟ ಹುಲಿ ಹೊಡದ ರೀತೇ
ನರಿಯು ನಗುತಾಗ ಶನ್ನಾನಂದ ಬಟ್ಟಂತೆ
ಪರಿಪೂರ್ಣ ಪ್ರಾಣಕಳೆ ಘಟವು ನಶಿಯಲ್ಕೆ || 4 ||
ಹಳೆ ಅಂಗಿನೀ ತೋರಿದಂತಿದರ ಮರಿಯೂದಿ
ಗಳಿಲನೇ ತೋರ್ವ ಅಲ್ಲಿಸಾಹೆಬು ಗುರುವಾ
ಒಳಗಾಗದಿರೆ ಕೇಳು ಪ್ರಳಯ ಕಾಲದಿ ನಿನಗೆ
ತಳಮಳವು ಚಿಳಿ ಚಿಟಲು ಮಳೆಯು ಸುರಿದಂತೇ || 5 ||

ಹೀನಮತಿ ಇಹ ಜನರೆ ಜ್ಞಾನಿಗಳ ಸಂಗದನ್ಯೊನ್ಯ
ಹೀನಮತಿ ಇಹ ಜನರೆ ಜ್ಞಾನಿಗಳ ಸಂಗದನ್ಯೊನ್ಯ
ವಿಲ್ಲದತಿ ವಾದ ಮಾಡುವರೇ
ಪ್ರಾಣ ಪರಮಾತ್ಮನೋಳ್ ಬೀಳ್ಕೆಡಹಿ ಪ್ರಳಯವನು
ತಾನುಂಡು ಜೀರ್ಣಿಪರು ತ್ರಾಣವುಳ್ಳವರೂ || ಪ ||
ಪರವಸ್ತು ಕಂಡದಕೆ ಧರೆ ಜನರ ಸಂಪತ್ತು
ಅರಿಯದೇ ಕರಕರಿಯೊಳೊರಳುವದಿದ್ಯಾಕೆ
ಸರಿತನಯ ಸತಿ ಸಹಿತ ಮರಣ ವ್ಯಾಕೆಂದೆನುತ
ಪರಿಹಾಸ್ಯ ಮಾಳ್ಪರಿಗೆ ಪೇಳುವೆನು ಕೇಳೀ || 1 ||
ದುರ್ವಿಭೀಷಣ ಊರ್ವಿ ಸುಖವು ಬೇಕಾದದಕೆ
ಪರ್ವತಕೆ ಮೀರಿದಣ್ಣನ ಬಲಿಸಿದಾ
ಸರ್ವ ಜೀವರ ದೈವಾ ಸಾಕ್ಷಿಯಾಗುವದಕ್ಕೆ
ಸತಿಯೇನು ಸುತನೇನು ಹತವಾಗಬಹುದೂ || 2 ||
ಅತಿ ಶೂರ ಫಲ್ಗುಣನ್ನೊಂದು ಕ್ಷೋಣಿಯ ಬಲಿಸಿ
ಶತ ಸಹೋದರನ ಭೀಮ ಚಂಡಾಡಿದಾ
ಕ್ಷಿತಿ ಸುಖಕೆ ಇಷ್ಟಾಯಿತು ಮಿತಿ ಮಿಕ್ಕ ಪ್ರಭು ಸುಖಕೆ
ರತನೇನು ರಾಜ್ಯೇನು ಹತವಾಗಬಹುದೂ || 3 ||
ಅತಿ ದ್ರವ್ಯ ತರುತಿರಲು ಅಶುವಾಯ್ತೆನಲು ಒಬ್ಬ
ಅತಿ ತೂರ್ಯ ಅನ್ನನಾ ತರುವೆ ಹೋಗೆನಲು
ಮತಿಗೇಡಿ ಅನ್ನದೊಳು ವಿಷಹಾಕಿ ತಂದಿಡಲು
ಹತವಾದರಿದರ ಸ್ನೇಹಿತವ್ಯಾಕೋ ಮರುಳೇ || 4 ||
ದಿಟ್ಟ ಗುರುವಲ್ಲಿಸಾಹೇಬು ಗುರು ಮಾರ್ಗದೊಳಗೆ
ಅಡಿಯಿಟ್ಟು ಹಿಂದಕೆ ತೆಗೆದವ ಪುರುಷನಲ್ಲಾ
ಘಟ್ಟವೂ ಶಿರದಮ್ಯಾಲ್ತಟ್ಟನೇ ಬೀಳ್ವದನು
ಪಾದಾಂಗುಷ್ಟದಿಂದ ಪಾರು ಮಾಡುವನೂ || 5 ||

ಹಿರಿಯರೊಂದಿದವ ವಿಚಾರದೋಳಿರಬೇಕು
ಹಿರಿಯರೊಂದಿದವ ವಿಚಾರದೊಳಿರಬೇಕು
ಭರಿತ ಅಭರಿತ ಉಭಯ ಭೇದಿಸಲಿಬೇಕು
ಸಿರಿನೆಚ್ಚಿ ಚಿದ್ಘನದ ಸುವಿಚಾರವರಿಯದಿಲೆ
ಪುರುಷಿಲ್ಲದ ಬಲೆ ಮರಿಯಾದಿಲ್ಲದಂತೇ || ಪ ||
ಅಲ್ಲೆಲ್ಲಿಗಹುದೆನಿಸಿ ಆತ್ಮದನುಭವದ
ಪರಿಉಲ್ಲಾಸದೋಳ್ಮನವು ಹೊಯ್ದಾಡಬೇಕು
ಇಲ್ಲದಿರೆ ಸೊಲ್ಲು ಕೇಳುತ ರಾಜ
ಮುಖಮೀಸೆ ಎಲ್ಲವನು ತೆಗಿಸೆ ನಲ್ಲಳು ನಕ್ಕರೀತೇ || 1 ||
ನವರತ್ನ ವ್ಯವಹಾರ ವೈಶ್ಯ ನಡಿಸುವ ವ್ಯಾಳ್ಯ
ತವಕ ಪಟಾಣಿಗ ವಜ್ರವು ತಗೋ ಎನಲು
ಅವಿವೇಕವಹುದಾಗಿ ವಿವರದೊಳು ಶಿರ ಬಾಗಿ
ಅವಮಾನೆ ತ್ಯಾಗಿ ಅವನಿಯೊಳಿದ್ದ ರೀತೇ || 2 ||
ದಶಕಂಠ ಹೇಮಾದ್ರಿ ಅಸಮ ಸಾಹಸದಿ ತರೆ
ವಶತಪ್ಪಿ ತಾವಳಿಯಕೆ ಬೀಳಲು
ಕುಸುಮ ಸ್ವೀಕರಿಪ ಭೃಂಗನ ರೀತೆ
ಕೆಲಕಾಲ ಹಸೆಗೆಡುತಾ ಅಳುತೆ ಅಧಮನು ಆದರಿತೇ || 3 ||
ಒಮದ ಮುರಿವ ಮಹಂಧಾತ ಹೃದಯ ದಿಟವರಿಯದೇ
ವಿಧಿ ಹೋಗಿ ತಾಕಿತಾ ಬರಿದಾಗುತೇ
ವಿಧಿ ಗಂಡನೆಂದು ಹೆದರದೆ ಪೆಂಡೆತಾ ಧರಿಶೆ
ಬದಿಯಲ್ಲಿ ಇರದೆ ಬ್ಯಾಗದಿ ಹೋದರೀತೆ || 4 ||
ಅಪರಿಮಿತ ಪುಣ್ಯಶಾಲಿಯ ಕೈಗೆ ಕುಪಿತಸಿಗೆ
ಅಪಹಾರ ಪ್ರಾಣ ಮಾಡುವ ವ್ಯಾಳ್ಯದಿ
ಚಪಲ ಚಿತ್ತದಿ ಉಗುಳೆ ಶಾಂತ ತಾನಾದ ಪರಿ
ವಿಪಿನದೀ ನಡತೆ ಅಲ್ಲಿಸಾಹೇಬು ಗುರುಚರಿತೆ || 5 ||

ದಾವ ವಿಧದಿ ನಾನು ದೈವಾ ಪೂಜಿಸುವೆನು
ದಾವ ವಿಧದಿ ನಾನು ದೈವಾ ಪೂಜಿಸುವೆನು
ಭಾವಾವೆ ಕೆಟ್ಟಿಹವೂ ಲೋಕದಿ || ಪ ||
ಹಾಲು ತಂದು ಜಗಪಾಲಾನ
ಪಾದಾನಾ ಮೇಲಾಗಿ ಪೂಜಿಸಲ್ಕೆ
ಮೂಲ ಭೇದಿಸಲು ರಕ್ತಾಲಯವನೆ ಕೆಟ್ಟು
ಶೀಲಿಲ್ಲದಾ ಮಾಂಸಾ ಸೇರಿ ಬಂದಿರುವವೂ || 1 ||
ಗಂಗೋದಕದಿ ಎನ್ನಾ ಅಂಗ
ದಣಿಯೋ ಹಾಗೇ ಹಿಂಗಾದೆ ಪೂಜಿಸಲ್ಕೆ
ಮಂಗಳಿಲ್ಲದ ಮಶ್ಚ್ಯಾ ಕೂರ್ಮ ಮಂಡೂಕವೂ
ಸಂಗಾದಿ ಹೇಂಜಾಲು ಸತತ ತುಂಬಿರುವಾವೂ || 2 ||
ಮಧುರ ಪ್ರಸಾದಾದಿಂ ಮೆಚ್ಚಿ
ಪೂಜಿಪದಕ್ಕೆ ಅದರಲ್ಲಿ ದೋಷಿಹದೂ
ವಿದವಿಧ ನೊಣ ಇರುವೆಯು ಮೊದಲಾಗಿ
ಬಾಯಿತುದಿ ಕಚ್ಚಿರುವೊವಲ್ಲ ವದರಲ್ಲತಿಶಯವಿಲ್ಲ || 3 ||
ಅನ್ನದಿಂದನಾ ನಾ ಧನ್ಯನಾ ಪ
ಪಾದ ಬಹು ಚನ್ನಾಗಿ ಪೂಜಿಸಲ್ಕೆ
ಮಣ್ಣೂ ಮತ್ತೊಂದರೋಳ್ ಮಹಿಯೊಳುಂಟಾಗ್ಯಾದೆ
ಕಣ್ಣೀಲಿ ನೋಡಿ ಪೂಜಿಸುವೋದಿದನ್ಯಯಾ || 4 ||
ಅತಿ ಸಂದೇಹದಿ ಅಲ್ಲಿಸಾಹೇಬು ಗುರುವಿನ
ಸ್ತುತಿ ಮಾಡಿ ಕೆಳಿದೆನೂ
ಕ್ಷಿತಿಯೋಳಿಲ್ಲಾ ಮಾತಾಪಿತರೀಗೆ ಜನಿಸಿಲ್ಲಾ
ಮತಿಗೆ ನಿಶ್ಚಯವಾದ್ದಿದರ್ಪಿಸೆಂದನಲ್ಲಾ || 5 ||

ಇಹಪರರಿಗೆ ಇಷ್ಟೇ ಭೇದಾವೂ ಇನ್ನೇನು ಇಲ್ಲಾ
ಇಹಪರರಿಗೆ ಇಷ್ಟೇ ಭೇದಾವೂ ಇನ್ನೇನು ಇಲ್ಲಾ
ವಿವರಾವಿಲ್ಲದೆ ಹೀನವಾದಾವೂ ಲೋಕವೂ || ಪ ||
ಕಾರಣ ಪರ ವಸ್ತೂ ಎನ್ನೂತೇ
ಕೈ ಜೋಡಿಸುತ್ತೇ ಕಲ್ಲುಕಳದು ಖಚಿತವಾಯಿತೇ
ಧಾರುಣಿ ದಣಿ ಕಂಡೂ ತಮ್ಮಾ
ಧಾತ್ರಿ ನಡತೆಯಂತೇ ನಡದಾ
ವಿಚಾರವಾದ ಹಿರಿಯಾರ
ಕೈಸೇರಿ ಸಾರಾ ಸ್ವೀಕರಿಸಾದೇ || 1 ||
ಕನ್ನಡಿಯನೂ ಕೈಲೀ ಹಿಡಿಯೂತೇ
ಪ್ರತಿಬಿಂಬ ನೋಡಿ
ಕನ್ನಡಿಯನೂ ಮಧ್ಯ ಕಳಿಯೂತೇ
ಚನ್ನಾಗಿಹದಯ್ಯಾ ಭಾವಾ
ಸೇರದಿಹರೂ ಗುರು ಪಾದಾವಾ
ಉನ್ನಾತಿಷ್ಟೆ ಇದರನುಭಾವ
ನಿನ್ನಾ ನೀಗೀ ನಿಲ್ಲೀಸಿರುವಾ || 2 ||
ಅಪರಾಮಿತಾಪತ್ತು ಬರಾಲು
ಅರ್ಥವನೂ ಎಲ್ಲಾ
ಚಪಲಾವಿಲ್ಲದೆ ಸೂರೆ ಮಾಡಲೂ
ಕುಪಿತಾ ತಾಪ ತಾವೂ ತೊಡದೇ
ಕೊಟ್ಟಿರುವೋದೂ ಗೊತ್ತು ಬಿಡದೇ
ಸುಫಲಾ ನಿಮ್ಮಾ ನಾಮಾಕುರುಹು
ವಿಪಿನಾದೊಳಗೇ ಇಲ್ಲಾದಿಹದೇ || 3 ||
ಡೊಂಬತಿ ನಾಟಾಕಾದಾ
ಕಾಲಾ ನೋಡುವ ಮನುಜಾ
ಗಂಬಾಲಿಲ್ಲಾ ಡಿಂಬಾದಾ ಮ್ಯಾಲಾ
ಸಂಭ್ರಾಮಿಹದೂ ಡಿಂಬಾದಿಂದೆ
ಸೊಗಸಿಹದಾ ವಾಳಾಟಾದಿಂದೇ
ಕುಂಭಿನೀ ಜನದೈವಾ ಗೊಪ್ಪಾ
ಕಾಣಾದೇ ಕಂಗೆಟ್ಟಿರುತಿಹುದೇ || 4 ||
ದೈವಾವೆಂಬಾ ನಿಶ್ಚಯದಾ ಕುರುಹೂ
ನಿಜ ಕಂಡಮ್ಯಾಲಾ ಜಗದೈವಾವು, ಜಾಗ್ರ ಸತ್ತಾವೂ
ನಿಗಮಾಭಾವಾ ನಿಜವೇಯಲ್ಲಾ
ನಿಜವೂ ಕಾಣದೇ ಸಾಯ್ವೋದಲ್ಲಾ
ಅದನೂ ಕಂಡಲ್ಲೀಷಾ ಗುರೂ
ನಗುತಾಲಿಹುದು ನೋಡಿರೆಲ್ಲಾ || 5 ||

ಸರ್ವ ನಾಟಕ ಸ್ವಾಮೆಂದೆನುವಾ
ಸರ್ವ ನಾಟಕ ಸ್ವಾಮೆಂದೆನುವಾ
ನರರೀಗ್ಯಾಕಿನ್ನು ಗುರುವಾ || ಪ ||
ನಿಜ ನಾಟಕನು ದೈವಾ ತ್ರಿಜಗಾ ಕೊಂಡಾಡುವಾ
ಅಜಹಾರಾ ನೀಗಾದಾನುಭವ ಬಲ್ಲಾನಿಗೆ ಬೇಕು ಗುರುವಾ || 1 ||
ಹಮ್ಮಿನಿಂ ಬ್ರಹ್ಮನಾಡಿದಾಕೋಯ್ತವನ ಗರ್ವಾ
ರಮ್ಯತಿಳಿಸುವೋದಕ್ಕೆ ಗುರುವಾ ದೈವಾ ಬ್ಯಾರೇ ತೋರಿಸುವಾ || 2 ||
ಬ್ರಹ್ಮತ್ಯದಿಂದ ಪಾರ್ವತಿಪತಿ ಬಹು ಕಾಲ
ಗಮ್ಮಾನೆ ಪಿಡಿದ ಕಪಾಲ ಮೂಲ ಸಿಗಲಿಲ್ಲೊ ಬಾಲ || 3 ||
ಕರದಿ ಕಪಾಲ ಕಾಣುತಲೆ ಆ ಗೋಪಾಲಾ
ಭರದಿಂದಾಹುತಿಯಿತ್ತಾ ಕಾಲಾ ಎನ್ನೂವದೂ ಶಾಸ್ತ್ರಾಮೂಲಾ || 4 ||
ಕಡೆ ಮೊದಲವರ ಕಾದ್ಯಾಟವೆ ಘನವಾಯ್ತೆ
ಒಡಿಯನಾಟೊಂದಿಲ್ಲದಾಯ್ತೆ ಒಳಗೆ ಸಂದೇಹ ಬಿತ್ತೇ || 5 ||
ಅಣುಮಾತ್ರ ದೋಷವಿಲ್ಲದಲಾಡಿಪನು ಲೋಕಾ
ಮನ ನುಡಿವದು ಪ್ರಥಮ ವಾಕ್ಯ ಪಾಟಿಪರಿಗುಂಟೇ ಸುಖಾ || 6 ||
ಹರಿ ಅಜ ಅಸುರಾ ಹರನು ಇನ್ನಾರಾದಾರೂ
ಸ್ಥಿರದೊಳ ಸ್ಥಿರ ತಿಳಿಯುವಗೇ ಅಲ್ಲಿಸಾಹೇಬು ಗುರುವೇ ಬೇಕವಗೆ || 7 ||

ಸಾರೂವೆ ಸಾಧು ಸಭೆಯ ಕಂಡು
ಸಾರೂವೆ ಸಾಧು ಸಭೆಯ ಕಂಡು
ಪ್ರಭು ಯಾರ್ಯಾರಿಲ್ಲದೇ ಕಾಣ್ವದು
ಧಾರುಣಿಯೊಳಿರುವೋ ವಿಚಾರವು
ತೋರಿ ಕೊಡುವೇ ಸಾಕ್ಷಿನಾ || ಪ ||
ಆಕಾರ ಒಂದೆ ಅಜಾಂಡಗಲ
ತುಂಬಿ ತೋರುವ ಬಗೆಯನಾ
ಆರಿಲ್ಲ ನಾವಿರುವ ಸ್ಥಲಕಾ
ಪಾರಾವಾರ ಪ್ರಭು ಕಾಣ್ವ ಬಗೆ || 1 ||
ಉದಯಾದ್ರಿಯೋಳ್ಸೂರ್ಯ
ಉದಿಸಿದಾಗಳೆ ಊರ್ವಿ ಸದನಂಗೋಳ್ಸೇರಿದಾ
ವಿಧದಿ ಹೃದಯೇಶಾಧ್ಯಾಂತ ತಾ
ಒಪ್ಪೀದಂತಾ ನಿಜ ಭಾವವೂ || 2 ||
ವದನ ಬಾಗಿಸಿ ನಿಶ್ಯೂನ್ಯನ
ಕಾಣದಿರೆನಮಗತಿ ಕಷ್ಟವೂ
ಒದಗಿ ಮರಣವು ಮುಂದೆ ಹೊಂದಿದ
ಪದವಿ ಕೈ ಕೊಂಡಾ ಪಾರಮಾರ್ಥ || 3 ||
ದ್ವಿತಿದೀನ ಶಶಿಯು ಬಹಳತಿ ಸೂಕ್ಷ್ಮೇಯಿಂದ
ಈ ಕ್ಷಿತಿಗೆಲ್ಲಾ ತಾ ಕಂಡಂತೆ
ಪತೀ ಸಕಲಾಧಾರಿ ನಮ್ಮಯ
ಮತಿಯೋಳ್ಬೆರದಾಡುವ || 4 ||
ಲಯಗತಿಯಹುದಾದಂಥ
ಸಾಧುಸ್ಥಿತಿ ಗಾಯಿತಿದರನುಭವ
ಅತಿಶಯ ಕಾಣ್ವದಕೆ ತಮ್ಮಯ ಗತೀ
ಮರಿಯದ ಮತೀಮಂತರ್ಗೆ || 5 ||
ದೇಶಾಂತ್ರ ಹೋದ ಪುರುಷನ
ನೆನಸಿ ಸತಿ ತಾ ಸಂತೋಷಾ ದೋಳ್ಸೇರಿದಂತೆ
ಧ್ಯಾಸ ಮಾತ್ರ ರಹಸ್ಯ ರುಚಿಕರ
ತಾ ಸವಿದು ಸಮೀಪದಿ || 6 ||
ಆಶೆ ಭಯ ಎರಡಕ್ಕೆ
ಮೀರಿದನುಭವಾಯ್ತಾ ಸಮಯದಿ
ಈಸು ವಿಚಾರವೆ ನಿಜ ಗುರುಪದೇಶದಿಂ
ಜಗದೀಶ ಕಾಣ್ವದೂ || 7 ||
ಅಂಜಾನವಾಕಿ ಬಹುರಂಜಾನ ಧನವು
ಯಾರಂಜಿಕಿಲ್ಲದೆ ಕಂಡಂತೆ
ಜ್ಞಾನಾಂಜನ ದಾರಿಯಿಂದಾ
ನಿರಂಜನ ನಾ ಕಾಣುತೇ || 8 ||
ತಾನಂಜಿ ತನ್ನಂದ ಚಂದವು
ತಾತ್ಸಾರಿಸದೆ ಧರಿಸುತೆ
ಜೇನು ಶತ ಭಾಗದೊಳುವುಳಿ
ಸಂಧಾನ ಸಮರ ಸಾಕ್ಷಿ ಯಾದಂತೆ || 9 ||
ಇದ್ದಾದೊಂದು ಇಲ್ಲದೆ ಒಂದು ಕಾಣ್ವೋದು
ಇಹವೆಲ್ಲದರೋಳಿರುವದೂ
ಆಧ್ಯಾವಲ್ಲಿಸಾಹೇಬು ಗುರುವಿನ
ಅನುಸರಿಸಿದರೆ ತಿಳಿಪದೂ || 10 ||
ಗೆದ್ದಿಹನು ನೋಡೆಂಬೊ ಗುರುವಿನ
ಹದ್ದಿನೊಳಗೆ ಕಾಣ್ವದು
ಇದ್ದು ಇಲ್ಲದು ಇಲ್ಲದಿರುವದು
ಎದ್ದು ಮಲಗಿದರೆಮಗೆ ಬಿಡದೂ || 11 ||

ಆಡಬಹುದೇ ಇಂಥಾ ನಿಂದ್ಯಾ ಎಲ್ಲಾ
ಆಡಬಹುದೇ ಇಂಥಾ ನಿಂದ್ಯಾ ಎಲ್ಲಾ
ಮಾಡೂವ ದೈವಾ ತಾನಂದ್ಯಾ
ಬ್ಯಾಡ ಕೇಳಿ ತಿಳಿದೂ ಕಂಡು ಕಲಿಯದೆ ನುಡಿದ್ಯಾ
ಮಾಡೂವೊನಲ್ಲೊ ಅನ್ಯಾಯ ಮಹ ದಯಶಾಲೀ || ಪ ||
ಹಿರಿಯಾರಾಡಿದ ವಾಕ್ಯ ವಿವರಾ
ಮಾಡಿ ಪರಿಕೀಸಿ ನೋಡುವಂತವರಾ
ಅರಿಯಾದೆ ನಿಂದ್ಯ ಮಾಡುವೊರೆಂದು
ಈ ಭೂವಿ ನರರಾಡುವದು ಕೇಳಿ ನಗಿ ಬಂತೇ
ಆ ಮಹಾ ನಿರವಯನು ಅಖಿಲಾದ ಜನರ
ನಿರ್ಮಾಣ ಸರಿ ಮಾಡುವಾ
ತಾತ್ಸಾರಿದೇ ನಾಟಕವ ನಡಿಸುವ
ನ್ಯಾಯ ತಿಳಿಯದೆ ನುಡಿಯುವ
ಶರಧಿ ಘನತೆಯು ಕಾಣದೇ
ಈ ಚಲಿಮೆ ಹಿಡಿದಾಚರಿಸೋ ಜನರೂ || 1 ||
ನಿಂದಿಸಿ ನುಡಿಯಾದಿರೆಂದೂ
ನ್ಯಾಯಾ ದಂದೂಗ ಹಿರಿಯಾರೆ ತಂದೂ
ಇಂದೂಧರನ ಚಾಳೀವಂದೂಳಿಯದೆ ಪೇಳೀ
ದಂದಾವು ನಾವಾಡಿದರೆ ನಿಮಗತಿ ಕೋಪೆ
ಕುಂದು ಕುಟಿಲವು ಇಲ್ಲದಂಥ
ಕ್ವಚಿತ ಘನಕೆ ಮಿಕ್ಕಿಹ
ನಿರವಂದ್ಯನನು ನಿರ್ಭೀತಿಯಿಂದ
ನೀನೆ ಸಕಲವು ಎನುತಿಹ
ಮಾಂದ್ಯ ಘಟದವರ ಮರಿಯಾದಿ
ಮಹಸ್ವಾಮಿಗೆ ಇಲ್ಲದ್ಹೋಯಿತೇ || 2 ||
ಕ್ರೂರಾವು ಮನ ತೊಡರಿದರೂ
ಪ್ರೀತಿ ಪೂರೈಸಿ ನೀನಡಿಯದಿರೂ
ಆರ್ಯರ‍್ಹೇಳಿದ ನ್ಯಾಯಾ
ಆಗದೆಮ್ಮಗೆ ಪಾಯ ತೋರುವೆ
ನಿದಕೆ ದೃಷ್ಟಾಂತ ಈ ಧಾರುಣಿ
ನೀರಲ್ಹಣ್ಣಿನ ವಿಷಯವಾಗಿ ನೀರೆ ದ್ರೌಪತಿ ಹೀನತೀ
ಮನದೋರಿದದಕೇ ತೊಡರಿತಯ್ಯೊ
ಎಂದಿಗ್ಹೋಗದ ಪಕ್ಷಿತೀ
ಈ ದಾರಿ ಶೋಧಿಸಿ ಆಡುತಿರುವರ
ಸೇರದಿಹರೆಮನರಿಕೆ ಕುರಿಗಳೂ || 3 ||
ಮನವೇ ಕಾರಣವೆಂದು ನುಡಿವಾ
ವೇದಾದನುಭಾವ ದೈವಾ ಒಪ್ಪಿರುವಾ
ಮನಕೆಟ್ಟು ತನುವು ಮಾನವು ಪಡಿಯುವದುಂಟೆ
ದಿನಕಾರ ಕಾಣದ ದಿವ್ಯ ಕ್ಷೇತ್ರಗಳಾವು
ತನಸತಿಯ ಮನದಿಟ್ಟ ತಿಳಿದರೆ
ತನುವು ತಾನೆಲ್ಲಿದ್ದರೇನೂ
ಮನವು ಚಂಚಲಯಿದ್ದ ಸತಿ
ಒಳ ಮನಿಯೊಳಿಹೆ ಪತಿ ಒಪ್ಪನೂ
ಚಿನು ಮಹೇಶನು ಮನವು ನೋಡುವ
ಶ್ರೇಷ್ಟ ಸಂಪದ ಸ್ಥಿರವು ಕೊಡುವಾ || 4 ||
ಉದಕಾದಿಂ ವೃಕ್ಷ ಸಂತತಿಯೂ
ಊರ್ವಿಯೋಳ್ ಉದಿಸಿ
ತೋರುವದು ಬಹು ಕಳೆಯೂ
ಅದರಲ್ಲಿ ವಿಷಜ್ವಾಲೆ ಉದಕಾದೊಳಿಲ್ಲಾವು
ಅದರಂತೆ ಪಾಪವಿಲ್ಲದ ಪರಮಾತ್ಮನ ಸದನ
ಅಲ್ಲಿಸಾಹೇಬು ಗುರುವಿನ ಚರಣ ಸೇವಕ ಪೇಳುವಾ
ಕದನಳಿದು ಬಹು ನ್ಯಾಯ ಪದ್ದತಿ
ಕೈಲಿಡಿದು ತಾ ಸಾರುವಾ
ವದನ ಬಾಗಿಸಿ ದೈವಾ ನಿಜ
ಕುರುಹೃದಯದೊಳು ತಾವು ಕಾಣದ್ಹೀಗೇ || 5 ||

ಸರಿದು ಹೋದ ಹಿರಿಯರಾ ಗೊಡಿವ್ಯಾಕೋ
ಸರಿದು ಹೋದ ಹಿರಿಯರಾ ಗೊಡಿವ್ಯಾಕೋ
ಮರ್ಮಾಸಿಯು ಪರಮಾತ್ಮನಿಂಬೆರಿವ ಬಗೆ ಭೇದಿಸದೇ || ಪ ||
ಪ್ರತಿದಿನ ನೀನು ಏಕೋಮತಿಯಿಂದ ಧ್ಯಾನಿಸೆ
ಸ್ಥಿತಿಯೊಳಾರ್ಧಯ ದಯ ಪಾಲಿಪಾರೇ || 1 ||
ಸಮಾಧಿ ಸನ್ನಿಧಿಯಲ್ಲಿ ಘಮಾಘಮಿಪ ಗಂಧ ಕಸ್ತೂರಿ
ಕ್ರಮಾ ನಮಗನುಭಾವನು ಕೂಲಿಪುದೇ || 2 ||
ವಂಶದೊಳಾಗೆ ಒಬ್ಬಾಹಂಶ ಪುರುಷಳಿದೂ ಹೋಗೇ
ಪ್ರಶಾಂಶನೀ ಪೇಳೇ ಫಲಿಸಾಲಿಲ್ಲಾ || 3 ||
ಧನಿಕರು ಧಾತ್ರಿಯಲ್ಲೀ ದಿನಾ ಸುಖದ ಲೀಲೆ ಸಂಪದ
ಮನುಜ ಪೇಳುವಗೀದನುಭವುಂಟೇ || 4 ||
ದಾಂಟಿ ಹೋದ ಹಿರಿಯರಾಗಲೀ ಧಾತ್ರಿಯಲ್ಲಿ ಶಿಲೆಗಳಾಗಲೀ
ಜಂಟೆ ಬಿಡಿಪ ಅಲ್ಲಿಸಾಹೆಬು ಗುರುವಿರಲು || 5 ||

ಕಾಣುತಿಹದೈ ಆಶ್ಚರ್ಯಾವು ಎನಗೇ
ಕಾಣುತಿಹದೈ ಆಶ್ಚರ್ಯಾವು ಎನಗೇ
ಪ್ರಾಣ ಘಟ ಬಿಟ್ಹೊರಡಿಸುವ ಭೀತಿಗೆ || ಪ ||
ನಾಸಿಕದಿ ನಟಿಸುವವು ಶ್ವಾಸವನೂ
ಈಸು ಶತ ಸಹಸ್ರಾದಗಣಿತವನೂ
ಧ್ಯಾಸದಿಂ ಪೇಳ್ವೊನಂತೆ ಕಿಂಕರನೂ
ತಾಸು ಬಿಡದೆ ಧಟ್ಟಿಪನಂತೆ ಯಮನೂ || 1 ||
ಧಟ್ಟಿಸಲು ಧೈರ್ಯ ಕೆಟ್ಟು ಹಾಕಲಾ
ಕೆಟ್ಟ ಭೀತಿ ಘನವಾಗೆ ದಿಕ್ಕಿಲ್ಲಾ
ಹೊಟ್ಟೆ ಶಾಂತಿಲ್ಲದಕೆ ಅನ್ನಂತೆನಲಾ
ಮುಟ್ಟಿಹದು ಎಂದೇಳುವೂರಂತೆ ಬಾಲಾ || 2 ||
ಉದಕವೆಂದು ವೈದಾಟ ಘನವಾಗೆ
ಅದಕೆ ದೂತ ಹೇಳುವನಂತೆ ಇವಗೇ
ಎದಕೆ ಬಯಸೂವೆ ಈ ಭೂಮಿಯೊಳಗೆ
ಬದುಕಲರಿಯಂದೇಳುವರಂತೆ ಹ್ಯಾಗೆ || 3 ||
ಪೈತ್ಯ ಕಫ ವಾತ ವಿಷಜ್ವರದಿಂದೇ
ಸಹಿತ ಮರಣಾವು ಮ್ಯಾಲೆ ಬಂದಿಹದೇ
ಹೋಯ್ತೆ ಸುಖ ಹೊಯ್ದಾಟದಿ ಬಿದ್ದು ಬೆಂದೇ
ಕೈ ಕಾಲು ಮ್ಯಾಲೆ ಕೆಳಗಾಗುತಿಹುದೇ || 4 ||
ಯರದ ಬೇಲಿಯ ಮ್ಯಾಲೆ ಬೆರದಾಡಿದಂತೇ
ಉರಿ ನೇತ್ರ ಹಸ್ತ ಅಂಗದಿ ಇಡುವೋನಂತೇ
ಗಿರಿ ಮಹಾ ಮೇರು ಮೈಮ್ಯಾಲೊರಿಸಿದಂತೇ
ಬಿರಿಸಿನಿಂಬಿಕ್ಕು ಬಾಯಿಂದ್ಹೊರಡೋದಂತೇ || 5 ||
ಜಡ ತನುವಿದನೂ ಗಡಿಗೆಯಂತೆ ಮಾಡೀ
ಪಿಡಿಕೊಂಡಿರುವ ಆಸೆ ಕಡೆಗೋಲೆ ಹೂಡೀ
ಬಿಡದಿರುವೊವು ಶ್ವಾಸ ಬಿಗಿ ಹಗ್ಗ ಕೂಡೀ
ಝಡಿದು ಪ್ರಾಣವಯ್ಯೋರಂತೆ ವೈದಾಡೀ || 6 ||
ಅಯ್ಯೋ ಇಂತಿಪ ದುಃಖಾ ಎಂತು ತಪ್ಪುವದೋ
ಸಯ್ಯೋ ಸಾಧು ಶಿಖಾ ಸಾಕ್ಷಿ ಕಾಂಬುವದೋ
ಜೀಯಾ ಅಲ್ಲಿ ಸಾಹೇಬು ಗುರುವೇ ರಕ್ಷಿಪದೋ
ಕೈಯೋಳು ಶಿಶುವಾಗದಿರೆ ಕಷ್ಟ ಬಿಡದೋ || 7 ||

ಎಂತದೀ ಜಗವೂ ಬಂತೇ ಮರಣವೂ
ಎಂತದೀ ಜಗವೂ ಬಂತೇ ಮರಣವೂ
ಚಿಂತೆಯು ಇಲ್ಲಾವೂ || ಪ ||
ಶಶಿಧರನೊಶವಾಗೀ ಋಷಿ ಮಾರ್ಕಾಂಡೇಯ
ಬಹು ವ್ಯಸನುಳ್ಳ ಮರಣಗೆದ್ದಾ
ರಸಿಕ ತಿಳಿದು ಗುರು ವಶವಾಗಿ ಮರಣಕ್ಕೆ ವಶ ಮಾಡಿಕೊಂಡು
ಬಹಳಸನಾಗಿ ನಿಲ್ಲಾದೆಂತದೀ || 1 ||
ರಘುರಾಮ ದಶಕಂಠ ನಗಿಯಿಂದ ರಣದೊಳೂ
ಜಿಗಿದಾಕುವದು ತಾ ಕಂಡೂ
ಮುಗಿದು ಕೈ ಸಾಗಿ ಮರಣ ಗೆದ್ವಿಭೀಷಣ
ಬಗಿಯಂತೆ ಬರುವ ಮುಂದಿನ ಮಾರ್ಗ ತಿಳಿಯಾದೆಂತದೀ || 2 ||
ಗಯನೆಂಬಾ ಗಂಧರ್ವ ಗರುಡಾ ವಾಹನ ಗಂಜೀ
ಗಾಂಢೀವೀ ಕೈ ಸೇರಿದಾ
ಭಯವೆಂಬುತ್ಪಾತ ಮರಣ ಕೈ ತಾ ಸಿಗದಂತೇ
ದಯಗುರು ಸೇರಿಧನ್ಯರ ಬಿರಿದು ಧರಿಸಾದೆಂತದಿ || 3 ||
ಅತಿ ಭೀತಿ ಮರಣಾವು ಅತಿಪ್ರೀತಿ ಕಾಣ್ವಾ ಸಂಗತಿ
ಆರ್ಯರರುಪೂವರೂ
ಸತತ ಸಾಕ್ಷಿಕನಾಗಿ ಸಲಹೋ ಸುಜ್ಞಾನ
ಸಮ್ಮತಿ ಅಲಿಸಾಹೇಬು ಗುರು ಸ್ಥಿತಿ ಇರುತೀದೆಂತದೀ || 5 ||

ಇರಬಹುದಿರಾಬಹುದೈ
ಇರಬಹುದಿರಾಬಹುದೈ
ನಿರವಯನು ನರನೂ ಇರಬಹುದಿರಾಬಹುದೈ
ಇರದಿರೇ ಪರಸುಖವು ಯಾರಿಗೆ || ಪ ||
ಸೂರ್ಯ ಸಮ್ಮುಖದಲ್ಲಿ ಜ್ಯೋತಿ ತಾ ನಿದ್ದತೇ
ತೋರಿ ಪರಮಾತ್ಮನೋಳ್ ಸೇರಿತಾ ಬ್ಯಾರ‍್ಯಾಗಿ
ಯಾರ್ಯಾರು ಇಚ್ಛಾನುಸಾರದಿ
ತಾ ಸೇರಿ ತನ್ನಂತೆ ಅವರನು
ಸಾರಾಂಶ ಸುಜ್ಞಾನ ಕೊಡುತಲಿ
ಪಾರು ಮಾಡುವೊ ಪಾರಮಾರ್ಥದಿ || 1 ||
ಸೊನ್ನೆ ಒಂದರ ಹೊಂದೀ ಶೂನ್ಯನಾಗಿದ್ದಂತೆ
ಭಿನ್ನಾಭೇದಿಲ್ಲಾದೆ ಬೆರದಿರ್ಪದೂ
ಎನ್ನ ಸ್ನೇಹಿತರನ್ಯಾಯವಿದು
ಇನ್ನು ಯಾ ವಿಧ ತಿಳಿಯದ್ಹೋದರೆ
ಉನ್ನತಿರುವದು ಒಳಹೊಕ್ಕು ಬಹು
ಧನ್ಯರಾಗ್ಯಾ ಚಿನ್ಮಯಾತ್ಮನೋಳಿರ || 2 ||
ಧಗಿಪ ಚಂದ್ರನ ಕೂಡಿ ಗಗನದೋಳಿಹ ತಾರೆ
ಹಗೆಯಿಲ್ಲದೊಂದಿ ತಾ ವಡಿಗಿರುವೊವೈ
ಹಗಲಿರುಳು ಆಧಾರ ನಾಟಕನಗಣಿತವು
ನರ ನೋಡಿ ನೀಗುತ
ಬಗಿಯ ಬೆರದಿಹ ಭಾಗ್ಯವಂತರ
ಬೆರದು ಕಲಿಯುಗ ಸೊಗಸಿನೊಳಗೇ || 3 ||
ಮೊರಿಯಾಗಿರುವೊಹಾರ್ಮ್ಯ ಮನಸಿನೊಳಿದ್ದಂತೇ
ಇರೆನಿ ನೀ ಪರಿದೋಷಾ ಎಂದಿಗಿಲ್ಲೈ
ಪರಮಸಂಪದ ಪೂರೈಸಿ ಸ್ವೀಕರಿಪ
ಪುರುಷರ ಪುಣ್ಯ ಮಾರ್ಗಿದು
ಅರಿಯುತೆ ಅಣುಪಾಪವಿಲ್ಲದೆ
ಸರಿದು ಹೋಗುವ ಸಾಕ್ಷಿ ಕಾಣುತ || 4 ||
ನಂಬೀಗೆ ವಿವರ ನಾಚಿಕೆ ಧೈರ್ಯ ನಾಲ್ದೆಸೇ
ತುಂಬಿ ತೋರುವದಿದೂ ಧರ್ಮವಾಗೀ
ಜಂಭಾಟ ನಿನ್ಕಡಿಯ ಬಿಡಿಪನು
ನಿರಾಲಂಬನೋಳ್ಳಿನ್ನ ತೋರ್ಪನು
ಅಂಬಲಿರುವರಿಗೆ ಆಧಾರ
ಅಲ್ಲಿಸಾಹೆಬು ಅಧಿಕ ಗುರುವರಾ || 5 ||

ಮೂರ್ಖ ಮಾತಾಡಬಹುದೇ
ಮೂರ್ಖ ಮಾತಾಡಬಹುದೇ
ಅರ್ಕ ಕಳೆಗಧಿಕ ಸುಜ್ಞಾನ ತೊರಿದು || ಪ ||
ನವಖಾಂಡ ಪೃಥಿವಿಯಲ್ಲಾ
ನಿಜಸಾಧು ಅವಸಾಯ ಕಾಲ ಮಾಡೀ ಅಧಿಕಾ
ಅವಿರಳ ವಿನೋದ ನೋಡಿ ಅನುದಿನವು
ಸವಿಯದಾ ಸುಖ ಬಂದಿರೇ || 1 ||
ಶತ ಕುರಿಯ ಶೋಧಿಸುತ್ತಾ ಚಿಕ್ಕಮರಿ
ಮಥಿಸುತ್ತ ಹಾಲು ಕುಡಿಯೇ ಅದಕೇ
ವೃಥ ಸುಖವು ಆಗೋದುಂಟೇ
ಜಗಪತಿಯ ಜತೆ ಜನಕ್ಕಿಲ್ಲೆ ಸುಖವೂ || 2 ||
ಜಾಜಿ ಮಲ್ಲಿಗೆ ಸಂಪಿಗೆ ಜಾಣ ಬಹು
ಜತನದಿಂ ತಾ ಕಾಯಲೂ ಕಡಿಗೇ
ಸಹಜ ಪರಿಮಳ ಹೋದಿತೇ
ಅದರಂತೆ ಸಾಧು ಸುಖ ಸೇರಿರುವನೂ || 3 ||
ಕ್ಷೀರಘೃತ ಮಧುರ ಸಾರಾ ಉಂಡವಗೇ
ಸೇರದಿರುವದೆ ರುಚಿಕರಾ ಮನುಜ
ಮೀರಿದಾ ಪರವಸ್ತುವಾ ಬೆರದು
ಲಯಸೇರಿ ಸುಖ ತೂಗ್ಯಾಡುವಾ || 4 ||
ಚೀನೀ ಚೀನಾಂಬರೊಸ್ತ್ರಾ ಕಸ್ತೂರಿ ಸೇರಿ
ಬರಿದಾಗೊದುಂಟೇ ಮನುಜಾ
ಕಾನನದಿ ಬಿದ್ದು ದಾರಿ ಕಾಣದೆ ಕಷ್ಟಕ್ಕೆ
ಒಳಗಾಗುವೇ ಮನುಜಾ || 5 ||
ಮೈಮರದು ಮ್ಯಾರೆದಪ್ಪೀ ತಿರುಗುವನ
ಮಹನೀಯನೆನ್ನ ಬಹುದೇ ಮನುಜಾ
ಕೈಯೊಳೊಯ್ಯಿ ಕುಂಠತೋರೆ ನಂಬದಿರು
ನಿನ್ನಲೈ ಸುಳಿಪರಾರೋ ತಿಳಿಯೋ || 6 ||
ಅಮನಸ್ಕದೋಳ್ ನಾಂಖ್ಯವು ಅಹುದೆನಿಸಿ
ಅತ್ಯಧಿಕ ತನ್ನ ತಾನೇ ಬೆರಸಿ
ತಮ ತೆಗದು ನಿನ್ನ ತೋರ್ಪಾ ಅಲ್ಲಿಸಾಬು
ಗುರು ಸುಮನ ಸುಖ ಕೊಡುವನೋ ಮನುಜಾ || 7 ||

ಸಾಧು ಸಜ್ಜನನ ಮನಸಿನ ಶೌರ್ಯ ಸರಿಯುಂಟೇ
ಸಾಧು ಸಜ್ಜನನ ಮನಸಿನ ಶೌರ್ಯ ಸರಿಯುಂಟೇ
ಸರ್ವೇಶನನು ಹಿಡಿದೂ ಬಿಡದ್ಹೋಯಿತೇ || ಪ ||
ಪಾಷಾಣ ಮಣಿಸೂಜೀ ಬಯಸಿ ಬಾಯೋಳ್ಪಿಡೀ
ದಾ ಸಾಕ್ಷಿ ಸರಿಯಾಗೀ ಸಾಧೂ ಮನಾ
ಪಾಪಾ ನಿರ್ಲೇಪವಾಗಿಹ ಪರಾತ್ಪರ ದೈವಾ ತಾ
ಪರಿಕಿಸಿ ಕಂಡೂ ತನ್ನಾ ತಾ ತಿಳದಿಹ || 1 ||
ಕಾಗಿ ಸಮೋಹ ಕೋಗಿಲಿ ಸುತ್ತಿ ಬಾಧಿಸೇ
ರಾಗಾ ಬಿಡದೆ ಮತ್ತಾ ಕೂಗಿದಂತೇ
ಭೋಗಾಯಿಹ ಜನರು ಬಾಯಿಗೆ ಬಂದ ಬಿಡಿನುಡೀ
ಕೂಗಿ ಕಚ್ಚಲು ಯೋಗೀ ಕಾಗೀಳಿವರೆಂಬಾ || 2 ||
ಸೀತಧ್ಯಾಸ ರಾಮಾನಾಥಾನು ಬಂದಾಗಾ
ಮಾತಾನಾಡಿಸೊ ತನಕಾ ಮನವಿಡಿದಂತೇ
ಧಾತಾ ಶ್ರೀಗುರುಕಾರಾಜಾತಾನು ನಿರ್ಮಾಣ ದೇಶಾದೋಳ್
ಮನ ಒಪ್ಪಿದಾ ಪುಣ್ಯಶಾಲಿಯಾ || 3 ||
ಪ್ರಹ್ಲಾದನೋಳ್ ಹೃದಯಾ ಅಹಲ್ಲಾದ ವಿಡಿದಂತೆ
ಕಾಲಾಂತಕನ ಬಾಧೆ ಘನವಾದರೂ
ಶೀಲಾವಿಶಾಲ ಜ್ಞಾನದ ಲೋಲ ಲೌಕಿಕಾ
ಜಾಲಾ ಲಂಪಟ ಬರಲೂ ಜೆರಿಯಾದೆ ದಿಟವಾದಾ || 4 ||
ಪ್ರಾಣಾದ ಮ್ಯಾಲೆ ಪರಮಾತ್ಮ ನಾಮವುಂಟೂ
ನಾಮಾದ ಮ್ಯಾಲ್ವಿವರಾ ಅತ್ತಲರುವೂ
ಅರುವೀನ ಮ್ಯಾಲತ್ತಲರುಪೀದ ಏಕಾಂಗಾ
ಗುರುವಲ್ಲಿಸಾಹೇಬೂ ಬಿರುದಿಂತ ವೈರಾಗ್ಯಾ || 5 ||

ನನ್ನದೆಂದು ನೀ ನಟಿಸುವೆ ನಿನ್ನದೇನದ್ಹೇಳು ಮಾನವ
ನನ್ನದೆಂದು ನೀ ನಟಿಸುವೆ ನಿನ್ನದೇನದ್ಹೇಳು ಮಾನವ
ನಿಂದಾದ್ದು ತಿಳಿದು ಪೋದರೇ ನಿಜಾನಂದ ನಿನಗದನುಭವಾ || ಪ ||
ಜನನಿ ಜಠರ ನಿನ್ನದಲ್ಲದೂ ಜಾಣ
ತೊರಿದು ಬಂದೆ ನೋಡದೂ
ಮನನವಾಗಲಿಲ್ಲ ತಿಳಿವದೂ
ಮಹಾನಿಯರ ಕೇಳಿಕೊಂಬದು || 1 ||
ಬಾಲ ಯೌವ್ವನಾ ವೃದ್ಧತ್ವಾ
ಬಂದು ನಿಂತದೀ ಘಟತತ್ವಾ
ಮೂಲ ನೋಡು ಇದರ ಬಲತ್ವಾ
ಕಾಲ ಕಳಿಯಲಿದು ಬಿನ್ನತ್ವಾ || 2 ||
ಪ್ರಾಣ ಹೃದಯ ನಿನ್ನದಲ್ಲದೂ
ತ್ರಾಣ ನಿರಾಮಯದ ಮಹಿಮದೂ
ಕಾಣದೆ ನಂದಿದೆಂದ್ಹೇಳ್ವದೂ
ಜಾಣರು ನಿನ್ನ ಕಂಡು ನಗುವದೂ || 3 ||
ಅರುವು ಮರವು ನಿನ್ನದಲ್ಲದೂ
ಬರಿದೆ ಅರಿತೆ ಮರಿತೆನೆಂಬದೂ
ಕೊರತೆ ಕೈಗೆ ಸಿಗುವೊ ಭಾವಿದೂ
ಮರತು ಇದ್ದರೆ ಮುಂದೆ ಘಾತಿದೂ || 4 ||
ಸತೀ ಸುತರು ನನ್ನದೆಂಬದೂ
ಶೃತೀ ವೇದಿದಲ್ಲವೆಂಬುದೂ
ಜತೇ ಮುಂದಿಂದೆಲ್ಲೆ ಕಾಣ್ವದೂ
ವ್ಯಥೆ ವೃಥಾದಂತ ಭಾವಿದೂ || 5 ||
ಷಡುಚಕ್ರ ನಿನ್ನದಲ್ಲ, ದೂ
ಸರ್ವಕಾಲ ಎಣಿಕೆ ಯಾಕದೂ
ಹುಡುಗರಲ್ಲಿ ಸಹಾಯಿರುವದೂ
ಬಿಡೂ ನನ್ನದೆಂಬದ್ಹೇಳ್ವದೂ || 6 ||
ಅರಿಷಡ್ವರ್ಗಲ್ಲ ನಿನ್ನದೂ
ಅವನಿಯೊಳಾ ಪಶುವಿಗಿರುವದೂ
ಸಿರಿಧಾನ್ಯ ಷಣ್ಮತಲ್ಲದೂ
ಸಕಲರಲ್ಲಿ ಸಾಕ್ಷಿ ಕಾಂಬದೂ || 7 ||
ನಾಡಿ ರೋಮವಲ್ಲ ದೈವದೂ
ನಾಡೆಲ್ಲ ಅದೇ ಇರುವದೂ
ನೋಡು ನೋಡು ನಿನ್ನದಲ್ಲದು
ಗಾಢ ತಿಳೀ ಬಿಡಲಿ ಬಾರದೂ || 8 ||
ನಾದು ಬಿಂದು ನಿನ್ನದಲ್ಲದೂ
ವಾದ ಭೇದ ಮಾತಿದಲ್ಲಿದೂ
ಸಾಧು ಜನರ ಕೇಳಿ ಕೊಂಬದೂ
ಹೋದ ಸ್ಥಲದಿ ಹೊಂದಿಕಾಗ್ವದೂ || 9 ||
ಸಕಲರಲ್ಲಿ ಇರುವೊದಲ್ಲದೂ
ಶೋಧಿಸಿ ತಿಳಿ ನಿನ್ನದೆಂಬದೂ
ಸುಖಾಪಡದು ಸ್ಥಿರದಿ ನಿಲ್ವದೂ
ಅಕಾಳಂಕನಲ್ಲಿ ಇರುವದೂ || 10 ||
ಅಪರೂಪ ನಿನ್ನದೆಂಬದೂ
ಅಲ್ಲಿಸಾಹೇಬು ಗುರುವಿಗರುವದೂ
ಕುಪಿತ ತೊರಿದು ಕೇಳಿಕೊಂಬದೂ
ವಿಪಿನ ಜನಾವಳಿಗಸಾಧ್ಯದೂ || 11 ||

ಹೆಂಗಾದೀತು ಸಂಗಾ ಪರಸುಖಾ
ಹೆಂಗಾದೀತು ಸಂಗಾ ಪರಸುಖಾ
ಪ್ರಾಣಾನಂದಾ || ಪ ||
ಪಂಚಿಂಶತಿ ಘಟಭಾವವಲ್ಲದ
ಚಂಚಲವಿಲ್ಲದ ಶೂನ್ಯ ಸಿಗದಿರೇ || 1 ||
ದ್ವಿತಿದಿನ ಚಂದ್ರನ ಸ್ಥಿತಿ ಇರುವಪರಿ
ಮತಿಯೊಳು ತನ್ನಯ ಮೂಲ ತಿಳಿಯದಿರೇ || 2 ||
ಚಿತ್ರಿಕನೊಳಗೆ ಚಿತ್ರದಾವಪರಿ
ಪ್ರತ್ಯಕ್ಷ ತನ್ನ ಭಾವ ತಿಳಿಯದವ || 3 ||
ಹೋಗಿರುವೊ ಬಗಿಯ ಹೊಲಬನರಿಯದೇ
ಯೋಗಭ್ಯಾಸದಿ ವ್ಯಥೆಬಟ್ಟ ಮನುಜಗೆ || 4 ||
ದಾನ ಕೊಟ್ಟ ಪರಿ ಮಾನ ಹಿಡಿದಂತೆ
ಜ್ಞಾನಿ ತನ್ನ ತಾ ಕೂನ ತಿಳಿಯದಿರೇ || 5 ||
ಬತ್ತಿ ಜ್ಯೋತಿಯೊಳು ಬೆರವದು ದಿನದಿನ
ಕತ್ತಲಿಲ್ಲದಂತೆ ಕಾಣದ ಮನುಜಗೇ || 6 ||
ಗುರುವಿನ ಸ್ಮರಿಸದಿ ಗುರುವಾದಾಪರಿ
ಅರುವು ನಡತಿಯೊಳು ಕಿರಿಯ ನಾಗದಿರೇ || 7 ||
ಬಸವ ಗುಲಾಮನ ಭಾವ ಧರಿಸಿದಾ
ರಶಿಕ ತಿಳಿಯದಿರೇ ವಸುಧೆ ಜನರಿಗೆ || 8 ||
ಪರಮ ನಿರಾಮಯ ಅರಿತೆ ವೆಂಬುವರು
ಬರಿದೆ ಅಲ್ಲಿಸಾಹೇಬು ಗುರುವೆ ಸಿಗದೆ ತಮಗ್ಹೆಂಗಾದೀತು || 9 ||

ಚಪಲಾತ್ಮರು ಅಪಹಾಸ್ಯದಿ ಕುಟಿಲದಿ
ಚಪಲಾತ್ಮರು ಅಪಹಾಸ್ಯದಿ ಕುಟಿಲದಿ
ಕೂಡ್ಯಾಡಿ ಬಂದು ಕಲಹದಿ ನುಡಿಯೇ
ಅಪರಮಿತ ಪ್ರಾಣಾನಂದವು
ಉಪಯೋಗವು ಹೊಂದಿದದಕ್ಕೆ ಅವರೇ ನಮ್ಮವರೂ
ಭವಕಳಿಯಲ್ಕೆ ವಿವರ ಪುಟ್ಟಿಪರೂ
ಭುವಿಯೋಳಿಂದಾಳಿದಾ ಭೂ ಭುಜರಿಗೆ
ಇಂಥಾ ಅವಿವೇಕರೆಡೆ ಬಿಡಾದಾಡಿ ಕಾಡಿದದಕ್ಕೆ
ಅವರಿಗುಂಟಾಯಿತೇ ಕೀರ್ತಿವಾರ್ತಿರವಿಗೆ ಮಿಕ್ಹೋಯಿತೇ || 1 ||
ಕಲಿಯಂಬುವ ಕಳನೊಬ್ಬವ ನಳನನು
ನಟ್ಟಡವಿಯಲ್ಲಿ ನಾರಿಯ ಬಿಡಿಸೇ
ಇಳಿಯೊಳು ಕೀರ್ತಿಷ್ಟಾಯಿತೇ
ತಿಳಿದವರಾಭಾವ ಧರಿಸೇ
ಧೀರಾರಾಗುವರೂ
ನಿಂದಿಸಿ ನುಡಿಯೇ ಕ್ರೂರಾರೆಂದನರೂ
ಶ್ರೀಗುರು ಧ್ಯಾನ ಸೇರಿದ
ಸಾಧೂ ಸುಗುಣಾನಾ ಜಾಗಾರವಿರಲಿಕ್ಕೆ
ಸಾಗಿಸಿದೊಚನಾವೂ ಅವರೇ ನಮ್ಮವರೂ || 2 ||
ಸತ್ಯಾತ್ಮನು ಹರಿಶ್ಚಂದ್ರನು ಮೃತ್ತಿಕಿವಿಧಿ ಬಂದು
ತಾಕಿ ಹೊಲೆ ಮನೆಯ ಮಾರೇ
ಸತ್ತನು ಸುತನೂ ಎನ್ನದೆ ಗೊತ್ತಿಲಿತಾ
ತೂಗಿದದಕ್ಕೆ ಗುಣವಂತಾನಾದಾ
ಗಾಂಭೀರತ್ವಾ ಘನ ಪುಣ್ಯನಾದಾ
ಜನರು ಸದ್ಗುಣರಾಗೀ ಘನ ನಿರಂಜನ
ಸಾಂಗತ್ಯನು ದಿನ ನುಡಿದೆಮ್ಮಾ
ನನುವರೆಲ್ಲರು ಈಗ ಅವರೆ ನಮ್ಮವರೂ || 3 ||
ಪಾಂಡವರ ಬೆಂಬಿಡದೇ ಪುಂಡರು ದುರಿಯೋಧನಾದಿ
ಶತ ತಮ್ಮಂದರು ಕಂಡಂತೆ ಕಾಡಿದದಕೇ
ಪಂಡಿತರಾ ವಾರ್ತಿ ಕೀರ್ತಿ ಪೇಳೂವೊರಲ್ಲಾ
ಸದ್ವಾರ್ತೆಯು ಸ್ಥಿರದಾಯಿತಲ್ಲಾ
ಪಿಂಡ ಮಾಂಸ ಜನವೂ ಬಿಡಿ ನುಡಿಗಢಣಾವೂ
ಕಂಡಿತೆನ್ನಯ ಮನ ಘನರಮ್ಯ ಹೆಚ್ಚಿತೈ
ಅವರೇ ನಮ್ಮವರೂ || 4 ||
ಮಲಹರನ ಭಕ್ತರಾದವ ರೆಳಹೂಟಿಯ ಕಟ್ಟಿಸೆಳಿಯೇ
ಕಲ್ಯಾಣದೊಳೂ ಘಳಿಲನೆಪರ ಕೈದಿದರೇ
ಬೆಳದ್ಹೋಯಿತೆ ಪರಂಪರಕೆ
ಬಲ್ಲಿದರಾ ಕೀರ್ತಿ ಬಿಜ್ಜಳನಿಂದೇ ಬೆಳದೀ ತಾವಾರ್ತೀ
ಕಲಿಜನರೆಮ್ಮಾ ಕಾರಣ ಬ್ರಹ್ಮದೆಡೆಯೊಳೂ
ಕಲತಿರಬೇಕೆಂದೂ ಕಾಂಕ್ಷಿಯಿಂನುಡಿವರೂ
ಅವರೇ ನಮ್ಮವರೂ || 5 ||
ರಾಜಾಹಂಸನ ಬಳಿಯೊಳು
ಬಾಜಾರದಿ ಬಿದ್ದ ಪತ್ರಾವಳಿಯೊಳು ಅನ್ನಂ
ಭೋಜನ ಮಾಡುವ ಕಾಗಿಯು
ಮಾಜದೆ ಮಂಡೂಕ ಕೇಳೇ ಮಾಣಿಕ್ಯವದಕೇ
ಅರುವಾಯಿತೇವತಿ ನಾಣ್ಯಾಮನಕೇ
ಈ ಜನದೇಹಾ ಸಂಗತಿ ಕೇಳಿನಿರ್ಹೇ ಹಾ
ಆದಿ ಸ್ವರೂಪ ಅಖಂಡಾ ವೆನಪಾಯಿತೇ
ಅವರೇ ನಮ್ಮವರೂ || 6 ||
ಕರುಣವ ಪೊರಿಯುವ ಗುರುವಿನ
ನರನನುತಿಹ ಜನದ ನುಡಿಗೆ
ನಾಯಕ ನರಕೆಂಧರುಪಿದ ಹಿರಿಯರ ವಾಕ್ಯವು
ಪರಿಪರಿಯನುಭವಕೆ ಬಂತೇ
ಆ ಪುಣ್ಯನಿಂದೇ ಗುರುವಿನ ನಾನೂ ಪರವಸ್ತೂವೆಂದೇ
ನಿರಮಯ ನಿಜಸ್ವರೂಪರುಪಿದಲ್ಲಿಸಾಹೇಬೂ
ಗುರುರೂಪು ನಿಂತಾ ಮಾಡಿದ ಕೋಟಿ ಜನರೆಲ್ಲಾ
ಅವರೇ ನಮ್ಮವರೂ || 7 ||

ಎಂದೆಂದಿಗ್ಹೋಗಾದಲ್ಲಾ ಎನ್ನಯ ಸ್ಥಿತಿ
ಎಂದೆಂದಿಗ್ಹೋಗಾದಲ್ಲಾ ಎನ್ನಯ ಸ್ಥಿತಿ
ಅಂದಾದಿ ನಿಂತೀತಲ್ಲಾ
ಒಂದೇ ದೇವರೊಳೂ ಒಳಗ್ಹೋಗಿ ಉಳಿತಲ್ಲಾ
ಮುಂದೆ ಸದಾನಂದ ಹೊಂದಿಕಾಯಿತಲ್ಲಾ || ಪ ||
ಇಂದುವಿನ ಕಳೆ ಸವಿದು ಮುಂದಿನ
ಅಂದ ಹೋಗಾದಂದದೀ
ಸಿಂಧುತೆರ ನೊರೆ ಇಲ್ಲದಿರೆ
ನರನಂದವಾಯಿತಾ ನ್ಯಾಯದೀ
ಒಂದೆ ಎನ್ನುವ ದ್ವಂದ್ವ ಕಾಣುವ
ಮಂದಿ ಅರಿಯರು ಸಂಧಿಯನುಭವಾ || 1 ||
ಮಲ ಮಯದ ಭಾಂಡದಲಿ ಹುಣ್ಣಿನ
ಕಲಿಯ ಹೋಗಾದಾ ಪರೀ
ಜಲಮಯದಿ ಲವಣುಳಿದು
ಅಹುದಲ್ಲೆನುವ ಹೊಲಬಾಯಿತೆನ ಪರಿ
ಕಲಿತು ಕಲಿಯದೆ ಕಡಿಗೆ ಕಾಣ್ವನು
ನಿಲಯ ನಿಜಗುರು ಮಧ್ಯ ನಿಂತನೂ || 2 ||
ಮದನ ಕದನದಿ ಚೆದುರೆ ನಯನುಡಿ
ವಿಟ ವಿಲಾಸಗೆ ನಿಂತಿತೇ
ಹೃದಯ ಬ್ಯಾಸರ ಒದಗಿ ದಾಗಳೆ
ಮೊದಲು ಸ್ಥಿತಿ ನೆನಪಾಯಿತೇ
ಸದನ ಶೂನ್ಯದ ವದನ ಚರಿತೆ ಸೇರಿ
ಅರಿವಿಲಿ ತೋರಿ ನಿಂತಿತೇ || 3 ||
ಗಾನ ಪ್ರಭುಡನ ಮನದಿ ಸುತಿಸ್ವರ
ಧ್ಯಾನದೋಳ್ ನಿಂದಂದದಿ
ನಾನೆಂಬೊ ಗುರಿ ಪರಾತ್ಪರದೊಳು
ಕೂನ ನಿಂತಿತೆ ಜ್ಞಾನದೀ
ಪ್ರಧಾನಿ ನಿರ್ಮಲ ಧ್ಯಾನಿ ಪಟ್ಟದ
ಧಣಿಯೆಂದರು ಪಾತ್ರ ನಂದದೀ || 4 ||
ಇಲ್ಲದಿರುವದು ಸದಾ ಇರುವುದು
ಉಭಯ ಮೂಲಾ ಕಾಣ್ವದೂ
ಅಲ್ಲಿಸಾಹೇಬು ಗುರು ಕರುಣನಿಧಿ
ಅಹುದು ಮಾಡಿದ ಮರ್ಮಿದು
ಇಲ್ಲದಿರುತಿಹ ಇತರವೇ ಲಯ
ಮೂಲ ಕಂಡಿಹ ಮೂರ್ತಿ ಸ್ಥಿತಿಯಾ || 5 ||

ಮಾನಸ ಈ ಪರಿಯಮೆವುದೈ
ಮಾನಸ ಈ ಪರಿಯಮೆವುದೈ
ಮಹನೀಯ ಮಹಮೂರ್ತಿ || ಪ ||
ಹೆತ್ತಪಿತನ ಕಂಡುತ್ತುಮ ಸುತ
ನತ್ಯಾಂತರುಷ ತಾಳೀ
ಚಿತ್ತ ಚದರದೇ ಮತ್ಯಾರನ್ನಾದತ್ಯಾಡುವ ಕೇಳೀ
ನಿತ್ಯ ನಿರಾಳನ ನಿಜ ಕಂಡನುದಿನ
ಸತ್ಯಪಾಲರ ಸಾರ ಶರಧಿಯೊಳು || 1 ||
ಕಾಮಿನಿ ಪುರುಷನ ಕಾಣುತ
ಬ್ಯಾರೆ ಕಾರಣೆನ್ನದಿಹಳೂ
ಸ್ವಾಮಿ ಸಮರಸ ಪ್ರೇಮಿ
ಸಕಲಂತರ್ಯಾಮಿಯಾಗಿಹನು ಕೇಳುವ
ಭೂಮ ಚತುರ್ದಶ ಚೆರಿಸಲಣು ಪರಿ
ಆ ಮಹ ಧನ್ಯಂಗರಮರಿಕಿಲ್ಲದೆ || 2 ||
ಯಾದವ ಕುಲ ಧಣಿ ಮಾಧವ
ಕಾಣುತಾಧಾರನ್ನುವ ವಿದುರಾ
ಬೋಧ ನಿಜ ಮಾರ್ಗ ಸಾಧು ಕಾಣುತಿಹ
ವೇದಾಂತಾಗಮಸಾರಾ
ಆದಿ ಬೆರದು ತಾ ನಧಮನಾದ
ಸುವಾದ ಉಳ್ಳ ಬಹು ಸುಖನಿಧಿ ಅಂತರ || 3 ||
ಜಲಜ ವಿಕಸಿತವು ಜಗದಾಂಬಕನಿಹ
ಜಾಜ್ವಲವೆ ತಾ ಕಂಡೂ
ಸುಲಭ ಪರಾತ್ಪರದರ್ಯನ ಸುಜನನು
ಇರುವ ವಿವರ ಸುಖವುಂಡೂ
ಮಲಿನ ವಿಲ್ಲದೇ ಪ್ರಾಣಘಟವು ಚಿತ್ತ
ಮರಿಯದೆ ಸಿದ್ಧಿಯ ಮಾಡಿದ ಪುಣ್ಯನ || 4 ||
ಸಮರದಿ ಹಿತಪರ ಸವ್ಯಸಾಚಿ ಮನ
ಸಾರ್ವಕಾಲ ಹ್ಯಾಗಿಹದೂ
ಸುಮನ ಅಲ್ಲಿಸಾಹೇಬು ಗುರು ಗಮನ ಕರುಣ
ನರಾಧಮನ ಮ್ಯಾಲಿಹುದು
ಯಮನ ಭಯಂಕರ ಎಳ್ಳಿನಿತಿಲ್ಲದೆ
ವಿಮಲ ಏಕಾಂಗ ವಿಚಾರ ಪರನಿಗೆ || 5 ||

ಯಾತರ ಬಾಳೋ ಈ ಧರಿತ್ರಿಯೊಳೂ
ಯಾತರ ಬಾಳೋ ಈ ಧರಿತ್ರಿಯೊಳೂ
ಜಗಧಾತನರಿಯದಿರೆ || ಪ ||
ಶಿರಾವರಿಸಿಕೊಂಬ ಕುರಿಮರಿಯು ತನ್ನ
ತಾಯಿಯ ಬಿಡದಣ್ಣಾ
ಪರಿಶೋಧನೆಯಿಂ ಬೆರಿಯುತಿಹುದಣ್ಣಾ
ಅರುವುಳ್ಳ ನರನಾಗಿ ನಿಜದೀ
ಕುರಿಮರಿಗೆ ಕಿರಿದಾದೆ ಜಗದಿ
ಸೆರೆಸೂರೆ ಐಶ್ವರ್ಯ ನಿಮುಷದಿ
ಬರೇ ಬತ್ತಲೆ ಹೋಗುವೆ ದಿಟದೀ || 1 ||
ಶುನಕನ ಮನವೇ ಘನತೆ ಕಾಂಬದೂ
ಹೇಳುವೆ ಕೇಳುವದೂ
ಧಣಿಯು ಬಂದರೆ ಘನತೆ ಭಾವಿಪದೂ
ಜನನಿ ಜಠರದಿ ಜನಿಸಿ ನೀ ಬಂದೆ
ಚಿನುಮಯಾತ್ಮನ ಕಾಣದೆ ನಿಂದೇ
ಋಣಬಾಧ್ಯದಾ ಹೆಣದಂತಾದೆ
ಗುಣವಂತರ ಘನತೆಯು ನೀ ತಿಳಿಯದೆ || 2 ||
ತರುಣನ ಕಿರಣವು ಶರಧಿಯಾ ಮ್ಯಾಲಾ
ಬೀಳುತಲೇ ಕೇಳಾ
ತ್ವರಿತದಿ ವಿಕಸಿತದೀ ಬಿರಿವವೋ ಕಮಲಾ
ಪರಮ ಸಖನೂ ಬಂದಾನೆನುತೇ
ಹರುಷತಾಳೀ ತಾವು ಅರಳುತೇ
ಪರವಸ್ತು ನಾವು ಕಂಡದರಂತೆ
ತಿರಗದೆ ತಿಂಡಿಗೆ ಬಿದ್ದು ಹೊರಳುತೇ || 3 ||
ಪರಮ ಪತಿವ್ರತೆ ಪುರುಷನ
ಬಿರಿದಿನೊಳೂತನು ಸೂರೆ ಮಾಳ್ಪಳು
ಮರಿಯದೆ ಆಜ್ಞೆಯ ಮೀರಿ ನಡಿಯದಿಹಳೂ
ತರುಳೆ ನಡಿವ ವಿಚಾರದಂತೆ
ಧರಿಗಧಿಕನನು ಕಾಣದೆ ನಿಂತೇ
ಬರಿದೆ ಒರಗುವದೊಳಿತಲ್ಲಂತೆ
ನರೀ ಶುನಕ ಪರಿಸರಿಯಾಯ್ತಂತೆ || 4 ||
ಸೊಲ್ಲು ಕೇಳುತಲೆ ನಿಲ್ಲದೆ ನಡಿಯೇಳೊ
ಉಲ್ಲಾಸವು ತಾಳೊ
ಅಲ್ಲಿಸಾಹೆಬು ಗುರುವಿನ ಮೊರೆ ಬೀಳೋ
ಕೊಲ್ಲುವ ಕೊಲೆ ತಪ್ಪಿಸುತಿಹನೇ
ಜಲ್ಮವೆಂಬದು ಜಾಗ್ರ ತಿಳಿಪನೇ
ಕುಲ್ಲ ಮನುಜ ಹೋಗದೇ ನಿಂತನೇ
ಹಲ್ಲು ಮುರಿವ ಯಮನಲ್ಲಿ ಸಿಗುವನೇ || 5 ||

ಕಾಣಬಾರದೋ ಕಲಿಜನಕೇ
ಕಾಣಬಾರದೋ ಕಲಿ ಜನಕೇ
ಜ್ಞಾನಿ ಕಂಡದೂ
ಜಾಣಗುರು ಸಂಧಾನ ದೊರಿಯದೆ
ಪ್ರಮಾಣ ಶತವರುಷ ಏನು ಬಾಳಿದರು || ಪ ||
ನಾಮ ಬಲ್ಲದೋ
ನಾಮದನೂಮಾನ ಹೋಗದೋ
ಆ ಮಹಾ ನಿಜಮಾರ್ಗ ನಿಲಕದಿರೆ
ನಾಮ ನಿಜ ಕುರುಹು ಈ ಮಹಿಯೊಳಗೆ || 1 ||
ಮರ್ಮ ಸುಜನನೂ ಕಂಡದೂ
ಕರ್ಮ ಮನುಜನೂ
ಚರ್ಮ ಬಲದಿ ಕಂಡೇನಂದರೇ
ಪಾರ್ಮಾಡೋ ಅಪರ ವಸ್ತುವ || 2 ||
ದೇವರೊಂದಲ್ಲೈ ಜಗದೊಳಗೇ
ದಾವದಾಗಲೈ
ಕೇವಲನುಭ ಆತ್ಮಪರೀಕ್ಷೆ
ಆವಭಾವಾ ಅವ ಕಂಡೇಳುವ || 3 ||
ಕುಕ್ಷಿ ಮಾರ್ಗಲ್ಲೋ ಈ
ಕ್ಷಿತಲಕ್ಷೆಗೊಳಿಸಿತಲ್ಲೋ
ಮೋಕ್ಷಪೇಕ್ಷ ದುರಾಶೆ ಸಂಗದಿಂ
ಲಕ್ಷ ಶತವರುಷ ಕಷ್ಟ ಬಟ್ಟರು || 4 ||
ಪುಣ್ಯ ಪುರುಷನೂ
ಅಲ್ಲಿಸಾಹೇಬು ಗುರುವೆ ಧನ್ಯನೂ
ನಾಣ್ಯ ನಿಜ ಬೋಧಾಮೃತದೊಳಗೆ
ಸಣ್ಣವನಾದರೆ ಕಣ್ಣಾರ ಕಾಂಬೆ || 5 ||

ಸರ್ವ ವ್ಯಾಪಕನಾ ಸಾಕ್ಷಿಯ ಮಾಡೀ ಕೆಡುವದೂ
ಸರ್ವ ವ್ಯಾಪಕನಾ ಸಾಕ್ಷಿಯ ಮಾಡೀ ಕೆಡುವದೂ
ಸಾಧು ಜನರಿಗಿದೂ ಸರಿಯಲ್ಲೈ || ಪ ||
ಚುಕ್ಕೆಯಂತೆನುವದೂ ಲೆಕ್ಕ ಗಣಿತವೈ
ಮಿಕ್ಕಿರುವನೆ ಸಾಕ್ಷಿ ಮಾಡುವರೇ
ದುಃಖ ಸಾಗರದೊಳು ಕಕ್ಕಸ ಬಟ್ಟಿರೀ
ಯುಕ್ತವಲ್ಲಿದು ಬಹು ಎಚ್ಚರಿರಲೈ || 1 ||
ಚಂದ್ರನಂತೇ ಕೆಲರೂ ಮಂದಮತಿಗಳೆ
ಆನಂದದೀದಾಡುವದೀದತಿ ಮೂರ್ಖತೇ
ಕುಂದು ಬಂದಿರುವನಾ ವಂದಿಸಬಹುದೇನೊ
ಎಂದಿಗಾದರಿ ಪಾಪಾ ಬೆಂದಿಪದೋ || 2 ||
ಜ್ಯೋತಿಯಂತೆನುವ ಹೀನತಿಜನ ನುಡಿಯು
ಸುಜಾತಿ ಮನಕೆ ಇದು ಸಮ್ಮಾತುಂಟೇ
ಈ ತೆರನಕಲೇ ಪ್ರಭೂ ಧಾತನ ಮಾಡುವದೂ
ಭೂತಳದೊಳು ನಿಮಗೆ ಪಾತಕುಂಟೈ || 3 ||
ಮ್ಯಾಣದೊಳಗೆ ಮೃದು ಕಾಣದಂತಿರುವಂತೆ
ಹೀನರು ಸಾಕ್ಷಿ ಮಾಡಿ ಸಾರೂವರೂ
ಏನು ಅನ್ಯಾಯ ಖೈದೀ ಕಾನಿನೊಳು ಕೆಡಿಪದೂ
ಪ್ರಾಣಘಾತಕ ನಿಮ್ಮ ಬಿಡುವೊದುಂಟೇ || 4 ||
ಅಂತಿಲ್ಲದವನ ಜಗದಂತಿನೋಳ್ ತರುವದೂ
ಶಾಂತ ಗುರುಮೂರ್ತಲ್ಲಿಸಾಹೇಬು ಗುರುವಾ
ಎಂತು ಒಪ್ಪುವನೊ ಪಾದಾ ಪ್ರಾಂತ ಸೇರುವೊ ತನಕಾ
ನಂತ ಕರ್ಮಾವು ಹೆಚ್ಚೆ ಕಾಣುವೊದೈ || 5 ||

ಅಣುವಾಗದೇ ನಿಮ್ಮಾ ಕಾರ್ಯಾ ಅಣುವಾಗದೇ
ಅಣುವಾಗದೇ ನಿಮ್ಮಾ ಕಾರ್ಯಾ ಅಣುವಾಗದೇ
ಅನುಚಿತಾ ಬಹು ಘನವಾಗ್ಯದೆ ಹ್ಯಾಗೆ || ಪ ||
ಕೀರ್ತಿವಾರ್ತಿ ಬಹು ಮೂರ್ತೆನಿಸುವದೆ
ಪೂರ್ತಿ ನಿಮಗಿರಪಕೀರ್ತಿ ಬರುವೊದಿದು ಹ್ಯಾಗೆ || 1 ||
ಸತಿ ಸುತರ ಸೌಖ್ಯ ಸತತಿರುವದು ನಿಮ್ಮ ಮತಿ ಬೇಡಲು
ಭೂಗತವಾಗುತಿರುವೊರ್ಯಾಗೆ || 2 ||
ಅಂಗರೋಗ ಕೈ ಸಂಗತವಾಗದ
ಸಂಗರ ಮಾಡಲು ಭಂಗ ಬಡುವೊದಿದು ಹ್ಯಾಗೆ || 3 ||
ಶತವರುಷಾದರು ಗತವಾಗದ ಸಮ್ಮತ ನಿಮಗಿರೆ
ಹತಕಾಲ ಅನುಕೂಲಿಪುದ್ಯಾಗೆ || 4 ||
ಕನಕಮಯದ ಬಹು ಘನ ಸೌಧಂಗಳು ಕನಸಿನಂತೆ
ಒಂದು ನಿಮುಷದಿ ಕಾಣುವೊಧ್ಯಾಗೆ || 5 ||
ಮೃಣ್ಮಯದೊಳು ಮಲಗುವ ದಿನವಾಯಿದೆ
ತಣ್ಣಗೆ ಮನೆಯೊಳು ತಾಸು ಶೈನ ಇಲ್ಲ್ಯಾಗೆ || 6 ||
ಇಂತಿಹ ಜಗಸುಖ ಭ್ರಾಂತವೆ ಒಳಿದತಿ
ಶಾಂತಲ್ಲಿಸಾಹೇಬು ಗುರು ಚಿಂತನಾಗೋ ಬಗೆ || 7 ||

ಅನುಭವಿಲ್ಲಾ ದಾಡುತಿರುವರೇ
ಅನುಭವಿಲ್ಲಾ ದಾಡುತಿರುವರೇ
ಘನದೈವ ನಿಜವಿದನುಭವಿಲ್ಲಾ ದಾಡುತಿರುವರೇ
ಅನುಭವಿಲ್ಲಾ ದಾಡುತಿಹರೂ ಮನುಜರೆಲ್ಲರೂ
ಮನದ ತುದಿಯ ಬದಿಯ ತುಂಬಿ
ಮಹಾಮಹಿಮ ಮೆರವ ಪ್ರಭುವಾ || ಪ ||
ಪಂಡಿತಾಧ್ಯರೆಲ್ಲರವನ ಕಂಡು ಕಲಿಯದೇ
ಕಂಡ ಹಾಗೆ ಬಹಿರಂಗ ಬಹಳ ಪರಿಯ ಪೇಳ್ವೊರಲ್ಲಾ || 1 ||
ಸತಿಯ ಪತಿಯ ಸುತ್ತಿಸೆ ಮತಿಯ ವ್ಯಥೆಯ ತೀರಿತೇ
ಗತಿಯ ಮುಕುತಿ ಬೇಡ್ವ ಮಂದುಮತಿಯ ಮಾರ್ಗ ಮಾತಿದೆಲ್ಲಾ || 2 ||
ನಾಟಕಾಡ್ವ ಸ್ಥಲದಿ ಕುರುಡ ನಕ್ಕ ರೀತಿಯಾ
ಜಗದಾಟ ಜನರು ಭಜಿಪುದೆಲ್ಲ ಬ್ಯಾರೆನಲ್ಲ ಭೇದವಿಲ್ಲಾ || 3 ||
ಶುನಕರೆಲ್ಲ ಕೂಗುತಿರಲು ಶ್ಯಾಣೆ ನದರೊಳೂ
ದಣೀದಿರ್ಯಾ ಕೇಳೆನಲು ವ್ಯಾಘ್ರ ನರಿಯ ಪರಿಯ ಚೆರಿಯ ಜನರೂ || 4 ||
ಕುದಿರೆ ಸೇವೆ ಮಾಡುತಿರುವ ಚೆದುರನ ಭಾವಾ
ಮದ ಮದಾಂಧರಾದ ಜನರ ಮರವಿಯಲ್ಲಿ ಇರುವೊಪರಿಯಾ || 5 ||
ಕಳ್ಳನೊಬ್ಬ ರಾಜನಿಂದೆ ಉಳ್ಳವನಾಗಿ
ಕಳ್ಳ ರಾಜನರಿಯದಂತೆ ಕಾಣರೀ ಕಲಿ ಜನರೂ || 6 ||
ಕಳದುಳಿದವ ಜಾಣನೆಂದು ಇಳಿಯೊಳನುವರೇ
ಕಳಿಪ ಉಳಿಪ ಅಲ್ಲಿಸಾಹೇಬು ಗುರು ಪ್ರತಾಪ ಗುರಿ ಕಾಣದೇ || 7 ||

ಲಯಕಾಲಾ ಜಯಲೀಲಾ
ಲಯಕಾಲಾ ಜಯಲೀಲಾ
ಕಾಣದ ಇಹ ವಿದ್ಯವದು ಯಾಕೇ || ಪ ||
ಫಲವಿಲ್ಲದ ತರುವೂ ಬಹುವಿಧ
ಬೆಳದರದನುಚಿತವೂ
ಚಲದಿ ಮರಣ ಮಾರ್ಮಲತು ನಿಂತಿಹುದು
ಕುಲಚೆಲ ಚೆಲುವಿಕೆ ಬಲಿಯಗೊಳಿಪ || 1 ||
ಧನ ಮಂತ್ರಿಯು ಮರಣಾ
ಸಮಯದೊಳು ದಣಿದನರ್ಥ ಹರಣಾ
ತೃಣದೊಳು ವಿಧಿತಾ ತೆಗಿಯುತಿರುವಾಗ
ತನಗಿಹ ಸಹಾಯ ದೂರಾಯಿತೇ || 2 ||
ಸಮಯಕಿಲ್ಲದ ಪುರುಷಾಭರಣಗಳು
ಧರಿಸಲುಂಟೇ ಹರುಷಾ
ಭ್ರಮಪುಟ್ಟಿದಾಗ ಬಾರದ ವಚನದ
ಸಮಯಾಯಿತಯ್ಯ ಶುಭವಿಲ್ಲವು || 3 ||
ಗಜರಾಜನು ತಿಂದಾ ಹಣ್ಣಿನೊಳು
ಘನವಿಲ್ಲದ ಚಂದಾ
ತ್ರಿಜಗದಿ ನರವಿಧ ತೆರನಾಗುವದೇ
ನಿಜ ವೆಂದ್ಹಿಡಿಯಲು ನಿಷ್ಫಲವದೂ || 4 ||
ಜಯವಾಗುವೊ ಲಯವೂ ಬೋಧಿಸುವಾ
ಅಲ್ಲಿಸಾಹೇಬು ಗುರುವೂ
ಭಯಭಕ್ತಿಯಿಂದ ಬ್ಯಾಗಪೋಗಿ ನಿಜ
ವಿದ್ಯದು ನೀ ಕಲಿಯದೇ

ತಿಳೀ ನಿನ್ನಾ ಜಾತಕಾ
ತಿಳೀ ನಿನ್ನಾ ಜಾತಕಾ
ಕಳೀ ಪೂರ್ವದ ಸೂತಕಾ
ಹೇಳಿ ತನುವಿನ ಪಾತಕಾ
ಭಳಿರಾಯಿತು ಸಾರ್ಥಕಾ || ಪ ||
ಮೂತ್ರ ತನುವಿನೊಳಿಲ್ಲದೂ
ನೇತ್ರ ಮನದೊಳಗಿರುವದೂ
ಕ್ಷೇತ್ರಕೆಲ್ಲಾ ಘನವದೂ
ಚಿತ್ರ ನಿರ್ಮಲ ಶೂನ್ಯದು || 1 ||
ಮುನ್ನ ಸೂತಕ ಪಾಪದೂ
ಹೊನ್ನಿನಿಂದಾ ಹೋಗದೂ
ತನ್ನ ತಿಳಿಯಲು ಪೋಪದೂ
ತನ್ನ ಮರಿಯಲು ಹೋಗದೂ || 2 ||
ಉರಗ ತೊರಿದೂ ಹುತ್ತನೂ
ಎರಗಲ್ಯಾಗೇ ಸಾಯ್ವನೂ
ಮರುಳು ಡಂಭಕ ಮನುಜನೂ
ಶರೀರಿಡಿದಾ ಚರಿಪನೂ || 3 ||
ಜಾತಸ್ಯ ಮರಣಂ ಧೃವಂ
ಶಾಸ್ತ್ರ ಸಮ್ಮತವದು ನಿಜಂ
ಗಾತ್ರ ತನು ಪಿಡಿದ್ಯಾಕಿದಂ
ಸೂತ್ರ ಜಾತಕಾ ಬ್ಯಾರದಂ || 4 ||
ಜಾತಕಾ ತಿಳಿದಾತನೇ
ಜಾತಿಗೆ ಹೆಚ್ಚಾತನೇ
ಜಾತಕಾ ಮರದಾತನೇ
ಜಾತಿಗೆಲ್ಲಾ ಹೀನನೇ || 5 ||
ನಿಷ್ಟ ಜಾತಕ ಸಿಕ್ಕಿತೇ
ಅಷ್ಟ ಮದವೇ ಹೋಯಿತೇ
ಕಷ್ಟವೇ ಕಡೆ ಮಾಡಿತೇ
ಇಷ್ಟು ಫಲ ಬಗೆ ಬಂದಿತೇ || 6 ||
ಪೂರ್ವ ಫಲದನುಭಾವವಂ
ದೈವ ಬಲದ ಸಹಾಯವಂ
ತೋರ್ವ ಅಲ್ಲಿಷಾ ಗುರುಪದಂ
ಸರ್ವ ಪಾಪ ನಿವಾರಣಂ || 7 ||

ಭಕ್ತರು ದೇವಾರ ಬೆರದೂ
ಭಕ್ತರು ದೇವಾರ ಬೆರದೂ
ಮತ್ತು ತಾ ಬ್ಯಾರಾದ ಬಗೆ
ಶಕ್ತನು ಗುರುಕರುಣ ಪಡದಾ ಸುಜನರ್ಹೇಳಿರೈ || ಪ ||
ಭಾವ ಹೇಳಿರನುಭವ ಬ್ಯಾಡಾ
ಜೀವ ಗುಣವು ಜೆರಿಯುವಂತೇ
ದೇವರ ಬೆರದಿಹದು ನರನೇ
ಜೀವನೇ ಹೇಳಿರೈ || 1 ||
ಉಭಯದೊಳೊಬ್ಬ ಬೆರತ ಮ್ಯಾಲೇ
ಶುಭ ಸುಖ ಸಂಧಾನಾರಿಗೇ
ಸೊಬಗು ತಿಳಿದೂ ಹೇಳಿರೆನಗೇ
ಸಾಧುಪ್ರಿಯರೇ || 2 ||
ಗುರು ಬೆರಿಯದ ಗುಣ ಹೀನರಿಗೇ
ಘೋರ ಕೊಲೆಯೂ ಕಾಣದಂತೇ
ಬೆರತ ಜನಕೆ ಸಿರಿ ಇಲ್ಲೆನಲು
ಹರುಷವಾದಿತೇ || 3 ||
ಚಕ್ರಬಿಂಬದನುಭ ಪರೀ
ಚಕ್ರಧರ ಸಹೋದರಿಗೇ
ವಿಕ್ರಮರಾರ್ಯಾಡೊ ಆವಿಧ
ಹೇಳಿಕೊಟ್ಟಾಗೇ || 4 ||
ಇಲ್ಲ ಸುಖವು ದುಃಖವೆಂದೂ
ಹೇಳುವದದು ಹುಚ್ಚುಭಾವ
ಅಲ್ಲಿಸಾಹೇಬು ನಿಜಗುರು
ತಾ ನನ್ನುತಿರುವಾ || 5 ||

ಪ್ರಾಣ ಪರಮಾತ್ಮನೋಳ್
ಪ್ರಾಣ ಪರಮಾತ್ಮನೋಳ್
ಬೆರದಾದೆಂಬುವರಿಗೆ
ಪರಸುಖ ಎಂದಿಗಿಲ್ಲೈ ಬೆರಿಯಾದೆ
ನರನು ಬ್ಯಾರಿರುವೊದು
ಬೆರಿಪೊಂತ ದರಿಯಾದಾಡುವೊರಿಗೆ
ತ್ವರಿತ ತೋರುವೆ ಸಾಕ್ಷಿ || ಪ ||
ಜ್ಯೋತಿ ಪ್ರಕಾಶಕ್ಕೆ ಜಾತಿ ಭೇದವುಂಟೆ
ಆತುಕೊಂಡಿಹ ಬತ್ತಿ ಬಿಟ್ಟಾದೀತೆ
ಆ ಮಾತಿನಂತೆ ನರನೂ ಆತುಕೊಂಡಿರುವ
ಸುಜಾತಿ ತನ್ನಯ ಸ್ಥಿತಿ ಸೊಗಸರಿಯದೆ ಬರೇ || 1 ||
ಗಂಧ ಪರಿಮಳಗಾಳೋಳ್ ದ್ವಂದವಾಗುವೊದುಂಟೆ
ಹೊಂದೀದ ಕೊರಡೀನ ಹೊರತಾದೀತೆ
ಗಂಧಾದಿ ಕೊರಡೋಗಿ ಹೊಂದೀ ಕೊಂಡಹಾಗೆ
ಅಂದ ತನ್ನಯ ಚಂದ ಅಹುದೆನಿಸದೆ ಬರೇ || 2 ||
ಮೇಲಾದ ಮಧುರ ತಾ ಹಾಲುಬಿಟ್ಟಿರುವೋದೆ
ಹಾಲು ಮಧುರ ಅನುಭಾವಾದಾ ಪರಿ
ಮೂಲಾಕಬ್ಬಾಗ್ಯದೇ ಲಯಕಾಲ ಹೊಂದ್ಯಾದೆ
ಕೀಲರಿಯದೆ ತನ್ನ ತಿಳಿಯದಾಡುವರಿಗೆ || 3 ||
ತುಪ್ಪಾ ಸುಸ್ವಾದಾವೂ ಅಪ್ಪಿ ಕೊಂಡಿರುವಾವೂ
ನೆಪ್ಪಿನಿಂ ನೋಡಾಲೂ ಬಿಟ್ಟಾದೀತೆ
ಗುಪ್ತದೋಳ್ ತನ್ನಯಾ ಗುರಿ ಹಾಗೇ ಕಾಣಾದೆ
ಅಪ್ತಾನ ಕಳೆದು ಕೊಂಡಂತ್ಯಾಕುಡಿಕಿದರಿಲ್ಲಾ || 4 ||
ನಾವೆಂತೊ ನಮ್ಮ ಪ್ರಕಾಶೆಂತೊ ಸುಖದುಃಖಾ
ನಮ್ಮ ಬಿಡದೆ ರಾಜೀ ಬಿಡಿಪೋದೆಂತೊ
ಜಾವ ನಿಲ್ಲಾದೆ ಸಂಜೀವಲ್ಲಿಷಾ ಗುರೂ
ಭಾವಿಸಿ ಕೇಳಿ ಬೆರಿವನ ಬ್ಯಾಗ ತಿಳಿಯಾದೆ || 5 ||

ಪ್ರಾಣಾನಂದ ಹೆಚ್ಚಿತೇ ಆಹಾ
ಪ್ರಾಣಾನಂದ ಹೆಚ್ಚಿತೇ ಆಹಾ
ಈಗಾ ಪ್ರಾಣಾನಂದ ಹೆಚ್ಚಿತೆ
ಕ್ಷೋಣಿದುರ್ದೋಷ ಸೋಕದ
ದೇವರಹುದಾಗೆ || ಪ ||
ಭಾನುವಿನ ಕಳೆ ಭೂ ಸರ್ವರೊಳು
ಭರಿತವಾದಾ ಭಾವವೆ
ಹೀನ ಮಲಮಯ ಕೂನ
ತನ ಸಂಧಾನ ಆಗದನ್ಯಾಯವೆ
ಮಾನಭೂಷಣ ಮಹಿಜನರಿಗೆ
ಮ್ಯಾಗಿರುವೊ ಬಗೆ ತಿಳಿದಮಹನ್ಯಗೆ || 1 ||
ಉದಕ ಒಂದೆ ವೃಕ್ಷ ಸಂತತಿ
ಒಳ ಹೊರಗೆ
ತಾ ತುಂಬಿತ್ತೆ ಅದರಲ್ಲಿ
ವಿಷಕಾರ ಲವಣ ಅಣುವಿಲ್ಲೆ ತೋರಿತೆ
ಅದರಂತೆ ಆಧ್ಯಾಂತ ದೈವಾ
ಅಗಣಿತಹುದಾದಂತ ಆಧ್ಯಗೆ || 2 ||
ಚೀನಿ ಚೀನಾಂಬರ ಸುವಸ್ತ್ರವು
ಸೇರಿದಂತೆ ಕಸ್ತೂರಿ
ಮಾನವರು ತಾ ತೂಗಿ ನೋಡಲೂ
ತೂಕ ಸರಿಯಾದಾ ಪರಿ
ಜಾಣ ಸುಜನಗೆ ತ್ರಾಣಿ ದೇವರು
ಜಗದಮ್ಯಾಗೆ ಝಗಿಸುವದಕೆ || 3 ||
ಘೃತವೆ ಸಕಲ ಪದಾರ್ಥ ಬೆರದು
ಸತತ ಸಾಕ್ಷೀ ತೋರಿತೆ
ಅಪರಮಿತ ಪರವಸ್ತು ಹಾಗೆ ಬೆರದು
ಬೆರಿಯದೆ ನಿಂತಿತೆ
ಮಿತವಸ್ತು ನರನ್ಹತವಾಗಿ ಆ ಸ್ಥಿತಿ
ಮತಿಯೊಳು ತಿಳಿದ ಪುಣ್ಯಗೆ || 4 ||
ಕೇಳಿ ತಿಳಿದೂ ಕಂಡು ಕಲಿತ
ದಯಾಳು ಧನ್ಯರ ವಾಕ್ಯವೂ
ಪೇಳಲ್ಕೆ ಪನ್ನಂಗನಣೆ ಮ್ಯಾಲಾದ
ಪರಿಯಾ ಜೀವವೂ
ಸುಲೀಲಲ್ಲಿಸಾಹೇಬು ಗುರು
ಸಾಕೀಲ ತೆರಹುದಾದದಕೆ || 5 ||

ಹೋಗಿರುವಾ ನರನಾ ಭಾವಾ ಸಾಗೀಸೀತೆನ್ನ ಗುರುವಾ
ಹೋಗಿರುವಾ ನರನಾ ಭಾವಾ ಸಾಗೀಸೀತೆನ್ನ ಗುರುವಾ
ತೂಗಿತಾನಂದ ತೊಟ್ಲ ತೂರ್ಯವಾ || ಪ ||
ಹಸ್ತ ಅಕ್ಷರಮಧ್ಯಾ ಹತವಾಗಿರುವೊ ಘಂಟಾ
ಶಿಸ್ತೆ ಮಾಡಿದ ನರನಾ ಚೇತನ್ಯವಾ
ಉತ್ತುಮದೋನ್ಮತ್ತಾ ಅತ್ತಿತನುಭಾವ ಬಿಡದೇ
ಗೊತ್ತೀಲಿ ತೂಗಿತು ಸಂತೋಷವಾ || 1 ||
ಧ್ಯಾಸ ಪ್ರತಿಬಿಂಬದೋಳೂ ತಾಸು ಕುಂತಿರೆ
ಕೇಳೂ ನಾಶೊಂದಿ ಕನ್ನಡಿಹದು ಕೈಯೊಳೂ
ಸೂಸಿ ನೋಡಲ್ಕೆ ನಿಜ ವಿಲಾಸಾದಿ ನರನಂತಿರುವಾ
ಆಶೆಭಯ ಇಲ್ಲದಾಯಿತಾನಂದವಾ || 2 ||
ದಾರಿ ಹಿಡಿದು ಹೋದಾ ಮನುಜಾ ಸೇರಿದಂತೆ ಮನದಿ ಸಹಜಾ
ತೋರಿ ಅಡಗಿ ಇರುವ ನರನು ಕೂಡಿದಾ ನಿಜಾ
ಘೋರ ಕರ್ಮದ ಕೊಲೆ ಪಾತಕದ ಸೇರದಂತಾಡೂವೊ ವಿಧಾ
ಯಾರಿಗಾದರು ಬೇಕಾಗಿಹುದೆ ನಿಜ ನಿರ್ವೀವಾದಾ || 3 ||
ಬಾಲ್ಯದಾಟಾ ಹೋಗಿ ಇರುವಾ ಭಾವವೆ ಸುಜ್ಞಾನದರುವಾ
ಕಾಲ ಬಂದ ಸಮಯಾದಿ ಕಲತೋಗುವಾ
ಜಾಲ ವಿಷಯ ಲೋಲನಾಗಿ ಈ ಲೀಲೆ ತಿಳಿಯಾದೆ ಹೋದರೆ
ಕೀಲು ಮುರಿದ ಗಾಲಿಯಂತೆ ಕಾಣುವಾ || 4 ||
ಇಲ್ಲದಿರುವನ ಈ ಭಾವವೂ ಎಲ್ಲವಾಗಿಹ ನಿಜ ಸಂಧಾನವೂ
ಅಲ್ಲಿಸಾಹೇಬು ಗುರುವಿಗರುವಿ ಅಂಗೈಕ್ಯವೂ
ನಿಲ್ಲದೆ ಕೇಳಿದ ಸುಜನ ಎಲ್ಲಿ ಹೋದರಿಲ್ಲನುಮಾನಾ
ಉಲ್ಲಾಸ ಉಕ್ಕೇರುವದು ನಿಜಗುರು ಕಾರುಣ್ಯಾ || 5 ||

ಕನಸೀನ ಗಂಟಿನಂತೋ
ಕನಸೀನ ಗಂಟಿನಂತೋ
ಕಲಿಯೀದು ಕಾಣದೆ ನೀ ಮರತೊ
ಮಾನವ ಕಾಣಾದೆ ನೀ ಮರತೊ || ಪ ||
ಕಂಡಾರಿಂದೀನ ದಿನ ಕಂಡೀತನ್ನಯ ಘನ
ಕಂಡೂ ಹೇಳುವೊ ಜನ ಕೈ ಸೇರಿ ಕನಸೀನ
ಮಂಡಾಲ ತೆರನಾ ಮಾಡೊ
ಮಾನವಾ ಮಾರ್ಗ ನಿಜಾಗ್ರಾ ನೋಡೊ || 1 ||
ನೀರೂ ಗುಳ್ಳಿನ ಭಾವ ತೋರೂವದಿ ತನುವಾ
ಸೇರಿ ನಿರಾಮಯವ ಸೇರಾದಕೂಭಾವ
ದಾರಿ ಬಹುದಣಿಸೂವದೊ
ಮಾನವ ಧೈರ್ಯಾದಿ ನೀ ಬಾಳ್ವದೊ || 2 ||
ಭಾಂಡಾತ ಕೈಜಾರಿ ಬಂಡೆಮ್ಯಾಲಾದ ಪರಿ
ಕಂಡೂ ನೀವು ಕೇಳಿರಿ ಪಿಂಡಾಂಡವದೇ ಪರಿ
ಭಂಡಾಟ ಘನವಾದಿತೊ ಮಾನವಾ
ಬಾಳಿದ್ದು ವ್ಯರ್ಥಾದಿತೊ || 3 ||
ಬಾಳೆ ಹಣ್ಣಿನ ಮರ ಫಲಭೋಗ ಸುಖ ಸಾರ
ಬಾಳೂವೊ ಈ ನರರ ಬಾವಾವೆ ಸಹಿಪೂರ
ಬೇಲಿಗುಪಚಾರಾವಾಯಿತೋ ಮಾನವಾ
ಬಹು ಕೇಡು ಬಂದೊದಗಿತೊ || 4 ||
ಜಿಹ್ವಾ ಚಾಪಲ್ಯಾ ಬಹುರಮ್ಯಾ ಅರ ನಿಮಿಷಾವೂ
ಗಮ್ಮಾನೆ ತಾತೋರಿ ಕಾಣಾದ್ಹೋದ ಪರಿ
ಇಮ್ಮಾಹಿ ಅಹುದೆನ್ನಿರೋ ಮಾನವಾ
ನಿಂ ಮನಸಿನೋಳಿಡದಿರೊ || 5 ||
ಕಣ್ಣೂ ಕಟ್ಟಿನ ವಿದ್ಯ ಕಾಣ ತೋರಿದ
ತನ್ನೊಳ್ತಿಳಿದ ಬದ್ದ ತಾ ಕಾಸು ಕೇಳಿದ
ಉನ್ನಾತಿ ಊರ್ವಿ ಸುಖಾ ತಿಳಿಯದಿರಿ
ದನ್ಯಾಯವನ್ನೋದಕಾ ತಿನ್ನುವದಿದನ್ಯಾಯ ವನ್ನೋದಕಾ || 6 ||
ಹಾದಿ ತಪ್ಪಿ ತಿರಗಾದೆ ಗಾದೆಮಾತಿಗ್ಹೋಗಾದೇ
ಸಾಧೂ ಮಣಿ ಅಲ್ಲಿಸಾಹೇಬು ಗುರುವಿನ ಬಿಡದೇ
ಬೋಧಾದಿ ಜಗಲೈಸುವಾ ಕನಸಿನಂತಹುದಾಗಲೀ
ಮಾನವಾ ಅನುಭವಾ ಅಹುದಾಗಲಿ ಮಾನವಾ || 7 ||

ತಿಳಿಯಾದು ನಾಟಕಾ ನಾಟವೂ
ತಿಳಿಯಾದು ನಾಟಕಾ ನಾಟವೂ
ಇಳಿಜನರಿಗೆ ಬ್ಯಾಗಾ ಈಗ ತಿಳಿಯಾದು ನಾಟಾಕ || ಪ ||
ನಿಖಿಲ ಜಗ ನಿರಂಜನನೊಳು
ನಿಜದಿಂದ ಇದ್ದ ರೀತಿಯಾ
ಸುಖನಿಧಿ ನಿಜಗುರು ಸೇರಿ ತನ್ನ
ಈ ಪ್ರಕೃತಾಡಿಪ ಪರಿಪರಿಶೋಧನಿಲ್ಲದಿರೆ || 1 ||
ಮೊದಲು ರಾಮಾಯಣಾಗಮಾ
ಮೋಹದಿಂ ಕೇಳ್ದ ಮನುಜಗೆ
ಚದುರ ರಾಮ ರಾವಣನ ಚರ್ಮದಿಂದದ
ಮಾಡಾಡಿ ಪೂದಹುದ್ಯಾಗಾಗುವೊದೈ || 2 ||
ಪಂಚಮುಖ ಪಾರ್ವತೀಶಗೆ
ಮುಂಚೀತ ಕೇಳ್ದ ಮನುಜಗೆ
ಪೊಂಪಾಕ್ಷೇತ್ರವು ಪೊಕ್ಕರು ಪ್ರತಿದಿನ
ಪಂಚಬಾಣನ ದಹಿಸಿದ ಶಿವವೆನ್ನುವ ಬಗೆ || 3 ||
ಮೋಹಿನಿ ಮದನ ಪಿತನಾದನೂ
ಮದ ಮುರಿದು ಭಸ್ಮಾಸುರನನೂ
ತಾಹೀನ ಶಿವನು ತೆರನಾದನುಭವ
ಮಾನಸದೊಳು ಮೊದಲಹುದಾಗದವನಿಗೆ || 4 ||
ಪ್ರಥಮ ಕಥೆ ಕೇಳ್ದ ಮನುಜಗೆ
ವೃಥ ನಾಟಕ ಕಂಡಿತೋ ಹಾಗೆ
ಮತಸಾದಲ್ಲಿಸಾಹೇಬು ಗುರು ಸಿಗದೆ
ಕಥೆ ಪೂರ್ವದ ತನ್ನ ಸ್ಥಿತಿ ಎಂದಿಗಾದರೂ || 5 ||

ಸಾಯದಿರೊಡಂಬಡನೂ ಸರ್ವೇಶಾ
ಸಾಯದಿರೊಡಂಬಡನೂ ಸರ್ವೇಶಾ
ಸತ್ತವರ್ಹತ್ತರಿಹನೂ ಸರ್ವೇಶಾ || ಪ ||
ಸಾಯದೆ ಸೌಮಿತ್ರೀ ಸತ್ತನು ಸುಮ್ಮತಿ
ನ್ಯಾಯವು ನೋಡಿ ರಾಮನಪ್ಪಿಕೊಂಡರೀತೆ || 1 ||
ಇಕ್ಕದ ಮಾರನೂ ಗಕ್ಕನೆ ಸತ್ತನೂ
ಮುಕ್ಕಣ್ಣ ಮೋಹದಿ ದಕ್ಕರ ಬಟ್ಟರೀತೆ || 2 ||
ಬಾಲನು ಬಾಲಿಗೆ ಬಲಿಯಾಗಿ ಹೋದನೂ
ಶೀಲನು ಕಾಲವಾಗೆ ಬಾಲೆಯು ಒಪ್ಪಿದಂತೇ || 3 ||
ಚಂದ್ರ ವದನೆಗಾಗಿ ಸಂದು ಹೋಗಲು ಒಬ್ಬಾ
ಆನಂದ ಬಟ್ಟು ತಾನಪ್ಪಿ ಕೊಂಡಂತೆ ಸರ್ವೇಶಾ || 4 ||
ನಿಜಗುರುವಲ್ಲಿಸಾಹೇಬು ಬಿಟ್ಟು ತ್ರಿಜಗವೂ
ಭಜನೆಯಂ ಸಿದ್ಧಿ ಎಂದಿಗೆ ಬೆರಿಯದಂತೆ ಸರ್ವೇಶಾ || 5 ||

ಯಾಕೇ ಗುರುವ್ಯಾಕೆ ಹೀನ ಜನರಿಗ್ಯಾಕೇ ಗುರುವ್ಯಾಕೇ
ಯಾಕೇ ಗುರುವ್ಯಾಕೆ ಹೀನ ಜನರಿಗ್ಯಾಕೇ ಗುರುವ್ಯಾಕೇ
ಏಕೋ ದೈವವು ಬೆರದೇಕಾಂತರಿಯದವಗ್ಯಾಕೆ ಗುರುವ್ಯಾಕೇ || 1 ||
ಕತ್ತೆಯ ಹಿಡಿತಂದು ಒತ್ತಾಲು ಮುದ್ರೆಯ
ಕತ್ತೆಯಲ್ಲದೆ ಬಸವಾ ನುತ್ತುಮವದಕೆಲ್ಲಿ || 1 ||
ನರಿಗ್ಯಾಕೆ ಸುರಲೋಕ ಸಿರಿದೇವಿ ಸತಿಯಾಕೆ
ನಿರುತ ನಪುಂಸಕ ನಾಗಿರುತಿಹನಿಗೆ ಯಾಕೇ || 2 ||
ಎತ್ತು ತೆಂಗಿನಕಾಯಿ ಎತ್ತ ತಿನ್ನುವುದಯ್ಯಾ
ಕತ್ತೆ ಕಸ್ತೂರಿ ಸಾರಾ ಕಂಡು ಬಾಳುವೊದುಂಟೆ ಯಾಕೇ || 3 ||
ಕಾಣದಂಧಕಗ್ಯಾಕೆ ಕನ್ನಡೀ ಕೈಯೊಳು
ಗಾಣದೆತ್ತಿಗೆ ಗೆಜ್ಜೆ ಘನ ರಮ್ಯವಾದೀತು ಯಾಕೇ || 4 ||
ಕಳ್ಳಗೆ ಘನವಾದ ಕಲಸಾನ್ನ ಬುತ್ಯಾಕೆ
ಜೊಲ್ಲು ಸುರಿವಗೆ ವೀಳ್ಯ ಸೊಗಸು ಶೋಭಿಸುವದೆ ಯಾಕೇ || 5 ||
ಕೊಳತಿರ್ದ ಹೆಣಮಾಂಸ ಕುಳಿತು ತಿನ್ನುವ ನರಿ
ಕಳಸ ಶುಭ ಶೋಭಾನ ಘೃತ ಭಕ್ಷ ಭೋಜಾನ ಯಾಕೇ || 6 ||
ಹರಿಕೆ ಕುರಿಯು ತನ್ನ ಮರಣರಿಯದೆ ಬ್ಯಾಗ
ತರುಗೆಲೆಯ ತಿನುವಂತೆ ಮರವೆ ನರಜನರಿಗೆ ಯಾಕೇ || 7 ||
ಉಣ್ಣೆ ಕೆಚ್ಚಲೊಳಿದ್ದು ಉಣ್ಣಲೊಲ್ಲದು ಕ್ಷೀರ
ಅಣ್ಣರಾಗಿರುತಿರೀಗಲ್ಲೀಸಾಹೇಬು ಗುರುವ್ಯಾಕೆ
ನರರಿಗ್ಯಾಕೆ ಹೀನ ಜನರಿಗ್ಯಾಕೇ ಗುರುವ್ಯಾಕೇ || 8 ||

Categories
Tatvapadagalu ಶಿಲವೇರಿ ಶಿವಪ್ಪನವರ ತತ್ವಪದಗಳು

ಗುರು ಭಕ್ತಿ ಪ್ರಕರಣವು

ಗುರುವಿಲ್ಲದಿರಬಾರದಿಹದೀ
ಗುರುವಿಲ್ಲದಿರಬಾರದಿಹದೀ
ಮುಂದೆ ದೊರಿಯಾದು ಗತಿಮುಕ್ತಿ ಹಾದೀ
ಅರುವು ಅರಿಯದೆ ಯಮನಾ ಸೆರೆಯೋಳ್ ಬಿದ್ದಾಗಲೂ
ಗುರುವೆ ಎಂದರೆ ಕರ ಪಿಡಿದು ಪೊರಿಯುವಂತಾ || ಪ ||
ಆದಿ ಭೇದವನು ಪೇಳುವನೂ
ಅಂತರಂಗದ ಮರ್ಮ ತಿಳಿಸುವನೂ
ಅಂತರಂಗದ ಮರ್ಮ ಅಹುದು ಮಾಡುತಲೇ
ಅತಂತ್ರ ಚೇತನ್ಯವು ಅದರೋಳ್ ತೋರೀಪನಣ್ಣಾ
ಚಿಂತೆ ಬಿಟ್ಟ ತಾನಪಾದ ಪ್ರಾಂತ ಸೇರಿದ ಮ್ಯಾಲಾ
ನಂತಕರ್ಮಗಳೆಲ್ಲ ಕಾಷ್ಟದೋಳ್ ಸೇರಿಸುತಾಲೆ
ಅಂತೆ ಕಾಲದ ಭಯ ಬಿಡಿಸಿ
ನಿಶ್ಚಿಂತನೋಳ್ ಸೇರಿಪನೊ ಮನುಜ || 1 ||
ಆದಿ ಪ್ರಕಾಶಂಗಳಿಹವೂ
ಅನಾದಿಯ ನಟನೆ ಮಾಡಿಪವೂ
ಆದಿ ಅನಾದಿಗೆ ಆಧಾರವಾಗಿಹ
ಸಾಧು ಶಿಖಾಮಣಿ ಸಕಲ ಲೋಕಾಧಾರಿ
ಪಾದ ದರ್ಶನ ಕಂಡ ಮ್ಯಾಲೆ ಈ ಧರೀಯಿರು
ವೊ ದುಂಟನುವಾದ ವಜ್ರ ಸ್ವರೂಪವಾದರೆ
ಅಲ್ಲದ ಪಾಷಾಣವುಂಟೆ ಬಲ್ಲಿದಾ ಗುರುವಿನ
ಪಾದನಿಲ್ಲದೆ ಹುಡುಕುವದೊ ಮನುಜಾ || 2 ||
ನಿಜ ಸ್ವರೂಪವನು ತಾಳಿಹನೂ
ಅಲ್ಲೀಸಾಹೇಬು ಸಾಕ್ಷಾತ್ತು ಗುರುವರನೂ
ಅಜಹಾರಿಗಳಿಗೆಲ್ಲ ಅಸದಾಳವಾಗೀಹ
ನಿಜಬ್ರಹ್ಮವನು ನಿಮ್ಮ ಹೃದಯದೊಳ್ ತೋರೀಪನಣ್ಣ
ಭಜನ ಮಾಡಿರೊ ಭಕ್ತವೃಂದ ಭಯವಿಲ್ಲದೆ
ಕೊಡುವ ಆನಂದ
ನಿಜ ಸರೋವರ ಹೊಕ್ಕು ಬಂದಾ ನಿಮ್ಮನು ರಕ್ಷಿಸುವೆನೆಂದ
ಇಹದಾ ಮೀರಿದ ಮ್ಯಾಲೆ ನಿಮ್ಮ ಸದಾ ರಕ್ಷಿಪರಿಲ್ಲೊ ಮನುಜಾ || 3 ||

ಎನ್ನೋಳು ಮರ್ಮವು ಎನಗೇ ಸುತ್ತಿದನೇ
ಎನ್ನೋಳು ಮರ್ಮವು ಎನಗೇ ಸುತ್ತಿದನೇ
ಎಂತಾ ಗುರುವರನೇ
ಘನವು ಮನಕೆ ಸನುಮತ ಮಾಡಿದನೇ
ಎಂತಾ ಗುರುವರನೇ || ಪ ||
ಎಲ್ಲಿ ನೋಡಲೂ ಅಲ್ಲೇ ಇರುತಿಹನೇ
ಉಲ್ಲಾಸದಿ ಎನ್ನಲ್ಲೇಕವಾಗಿಹನೇ
ಹುಲ್ಲೆಮರಿ ಹುಲಿಯಲ್ಲಿ ನಿಲಸೀ
ಬಲ್ಲಿದಾ ತೋಳಾನ ಬಲಿಸೀ
ಸೊಲ್ಲಿನೊಳು ಅತಿಸೂಕ್ಷ್ಮವು ಬೆರಿಸೀ
ಅಲ್ಲಹುದೆಂಬುವ ಅರ್ಥವು ತಿಳಿಸೀ || 1 ||
ಏಳು ಪ್ರಕಾಶವು ಎಂದಿಗೆ ಕಾಣೆನೆ
ಹೇಳಿ ಎನ್ನೊಳು ಏಕವ ಮಾಡಿದನೇ
ಕಾಳರಾತ್ರಿಯ ಕಳದದರಲ್ಲೀ
ಜಾಳು ಮನುಜನಾ ಜಾಗ್ರದಿ ಕೊಲ್ಲೀ
ಹೇಳೋ ಮಗನೇ ಭಯವಿನ್ನೆಲ್ಲೀ
ದಯಾಳು ಗುರುನಿಧಿ ಧೈರ್ಯವು ಹೇಳೀ || 2 ||
ಸುಖ ದುಃಖ ತನುವಿಗೆ ಸಖತನ ಮಾಡಿದನೇ
ಅಕಳಂಕ ಮಹಿಮನ ನಟನೆಯ ನೋಡೆಂದನೇ
ನಿಕರ ನಿನ್ನೊಳು ನಿಲ್ಲುವದಕೇ
ನಿಶ್ಚಯವಾಗಿಹ ಸಾಕ್ಷಿಯು ಅದಕೇ
ಸಕಲ ಲೋಕ ಲಯಗೊಳಿಸಿದ ಮನಕೇ
ತಕೋ ತಡವ್ಯಾಕೆಂದು ತೆರಳಿದ ಗೃಹಕೇ || 3 ||
ಲಯ ಎನ್ನುವದರ ಭಯವೇ ಬಿಡಿಸಿದನೇ
ಇಹ ಪರ ಮೀರಿದ ಅವತರವಾಗಿಹನೇ
ಲವಕಿಕ ದವರಂತೆ ನೆರಳಿಲ್ಲಲ್ಲೇ
ಅಡಿ ಇಟ್ಟರೆ ನಡೆ ಜಾಡಿಲ್ಲಲ್ಲೇ
ಹುಡುಕಿದರೆಲ್ಲೀ ಹೊರಗಿಲ್ಲಲ್ಲೇ
ತೊಡಕಿನ ತನುವಿನೋಳ್ ತೋರಿದನಲ್ಲೇ || 4 ||
ರಾಜಯೋಗಿಗಳ ರಕ್ಷಣ ಬೆರಸಿದನೇ
ಮೂಜಗದೊಳಗೇ ಮೃತ್ಯುವು ಜೈಸಿಹನೆ
ಸಹಜ ಸಾಧೂ ಸಭೆಯಲ್ಲಿರುವ
ದುರ್ಜನರಿಗೆ ಬಹುದೂರಾಗಿರುವಾ
ವಜ್ರದಂತೆ ವರ್ತಿಸುತಿರುವಾ
ಸಜ್ಜನಶಿಖ ಅಲ್ಲಿಸಾಹೇಬು ಗುರುವಾ || 5 ||

ಎಚ್ಚರ ಪಾಲಿಸಿ ರಚ್ಚಿಯೋಳ್ ಕೆಡಹುವದಕ್ಕೆ
ಎಚ್ಚರ ಪಾಲಿಸಿ ರಚ್ಚಿಯೋಳ್ ಕೆಡಹುವದಕ್ಕೆ
ಇಚ್ಛಿದೇನೋ ಗುರುವರನೆ ಸಮ್ಮತೇನೋ || ಪ ||
ತಂದೆ ತಾಯಿ ತನ ಯಾರೂ ಹಿಂದೆ ಬರುವೋರಲ್ಲಾ
ವೆಂದು ಪೇಳುತಾ ಮತ್ತಾ ಬಂಧನದಲಿ ಕಂದನ
ಕೆಡಹುದಕ್ಕಿದೂ ಇಚ್ಛದೇನೋ || 1 ||
ಲಲನೇಯ ಮೋಹವೂ ಬಲುದೊಡ್ಡ ದುರ್ಗುಣವೂ
ತಿಳಿದೂ ಹೇಳುತಾ ಮತ್ತಾ
ಬಲೆಯೊಳು ಕೆಡಹಿ ಬ್ಯಾರಿರುವದು ಬಹು ನಿನಗೆ || 2 ||
ಕರುಣಾನಿಧಿಯೇ ನಿನ್ನ ಕರುಣಾವು ಪಾಲಿಸಿ
ಮರುಳೂ ಇಹದೊಳೆನ್ನ ಹೊರಳಿಸಿ
ತ್ವರಿತದಿ ಒರಗಿರುವದಕ್ಕೆ ನಿನಗೆ ಇಚ್ಛದೇನೋ || 3 ||
ಆಶೆ ಪಾಶಾಗಳಲ್ಲಿ ಮೋಸ ಹೋಗದಿರೆಂದು
ಧ್ಯಾಸಾದೀ ನಿಲಿಸೀ ಮತ್ತ ದೋಷದಿ
ಘಾಶೆಯ ಕೂಶಿನಮಾಡುವೊದಕ್ಕೆ ಇಚ್ಛದೇನೋ || 4 ||
ಅತಿ ದುಃಖವಾಗಾಲೆಂದೂ ಮತಿಮಹಿಮೆ ಹೆಚ್ಚಾಲೆಂದೂ
ಸುತರಾ ಮ್ಯಾಲೆಣ ಕರುಣ ಅತಿ ತ್ವರಿತವು
ಅಲ್ಲಿಸಾಹೇಬು ಗುರುವರನೆ ಇಚ್ಛದೇನೋ || 5 ||

ಯಾಕೆ ತಿಳಿಯಲಿ ಬಾರದೂ
ಯಾಕೆ ತಿಳಿಯಲಿ ಬಾರದೂ
ಗುರು ರೂಪಾವೂ ಸಾಕಾರವಾಗಿಹುದೂ
ಲೋಕ ವರ್ಣಶ್ರಮದ ಅಹಿತ
ಅನೇಕ ಸಂಶಯ ಪರಿಹರಿಸಿ
ಪರಲೋಕ ಸೇರಿಪನೆಂದು ಈ
ಕಲಿ ಲೋಕದಲಿ ಕಲಿತ್ಯಾಡುತಿಹದೂ || ಪ ||
ದಯ ಶರಧಿ ಧರಿಸಿಹುದೂ
ದಾರಿಯೋಳಾ ಬಂದ ದ್ರೋಹಿಗಳ್ ದಾಂಟಿಪದೂ
ಮರತು ಬಂದಿಹ ಪೂರ್ವ ಸ್ವಪ್ನವು
ಚರಿತೆಯನು ಸಾಲಿಡಿದು ಪೇಳ್ವದು
ಅರಿತ ತಕ್ಷಣ ಅಂತರಾತ್ಮದಿ
ನಿರುತ ಸುಖಲೀಲೆಯೊಳು ಬೆರಿಪದೂ || 1 ||
ಪರಮಾತ್ಮನಲ್ಲಿವಂದೂ
ಅಭಯವು ಪಡದೂ ಹರುಷಾವು ತಾಳಿಹುದೂ
ಚರಣ ಸೇವಕ ಭಕ್ತ ಜನರು
ಮರತು ಮರಣಾಂತವನು ಹೊಂದಲು
ಪರೀಕ್ಷಿಸದೆ ಪಾಲಿಪುದು ಎನುತಲಿ
ವರವು ಪಡದೂ ಬೆರತು ನಿಂತದೆ || 2 ||
ಹಿತದಿಂದ ರಕ್ಷಿಪದೂ
ಮಾತೆಯರೆಂಬೋ ಶತಮಂದಿ ಮೀರಿಹುದೊ
ಹತವಾಗೋ ಭಯವೆಂಬೋ ವ್ಯಥೆಗಳು
ಮತಿಯಲ್ಲಿ ತೃಣ ಇಲ್ಲದಂದದಿ
ಗತಿನಷ್ಟಗೊಳಿಸುತ್ತ ನಿಮ್ಮಗೆ
ಮಿತಿಯಲ್ಲದೈಶ್ಚೈರ್ಯ ಕೊಡುವದೂ || 3 ||
ಈಗ ಬಂದದ್ದೆಲ್ಲವೂ
ಇಲ್ಲಿಂದಾಲೆ ಬ್ಯಾಗ ಹೋಗುವೊದಲ್ಲವೂ
ಸಾಗಿಬಂದಿಹ ಯುಗಯುಗಾಂತರ
ಭೋಗಬಟ್ಟಿಹ ಭೂತಗಣ
ಲಯವಾಗಿ ಹೋದರು ತಾನು ಹೋಗದೆ
ಈ ಜಗಕೆ ಎದರಾಗಿ ನಿಂತದೆ || 4 ||
ತೀವ್ರದಿ ತಿಳಿಯುವದೂ
ಶಾಂತದೊಳೂ ಚಂದ್ರನಂತೆ ಕಾಣ್ವದು
ನೀರೊಳುಟ್ಟಿದ ಮುತ್ತಿನಂದದಿ
ಧಾರುಣೀ ಜನರಲ್ಲಿ ಜನಿಸಿಹ
ಅಮೃತಸಾರ ಅಲ್ಲಿಸಾಹೇಬು ಗುರುವರ
ಧೀರ ಪೂರ್ವಾಕಾರವಾಗಿಹ || 5 ||

ಎಂತು ಮರಿಯಲಿಂತಾ
ಎಂತು ಮರಿಯಲಿಂತಾ
ಗುರುವಿನ ಜಗದಂತರಾತ್ಮನಾ || ಪ ||
ಮಾಯ ರಹಿತ ಮರ್ಮಾ ಪ್ರಭುವಿನಾ
ಮದ್ಯಧಿಕ ದೇಶದಾ ಭಾವಶುದ್ಧಾ ಬ್ರಹ್ಮಾ ಪ್ರಿಯನಾ
ಜಾವಾ ಬಿಡದೇ ಸೇವ ಜನರಾ ಜೀವನುಕ್ತ ದೇವನಾಗೀ
ಆಯುವೃದ್ಧಿ ಸ್ಥಿರ ಪದವಿತ್ತಾ ಸಾವು ಇಲ್ಲದ ಬಿರದನೆ ಹೊತ್ತಾ || 1 ||
ಜಮಾರೂಪು ಜಾಣದೇವನಾ ಜಗಮಿಕ್ಕು ಕಾಣ್ವನಾ
ವಿಮಾಲ ಮಾನಸಾ ವಾಸನಾ ಭ್ರಮಾರಂಜೀವವೂ
ಪ್ರತಿಕೀಟ ತನ್ನಾ ಹಾಗೆ ಭ್ರಮಿಸಿ ಮಾಡಲ್
ಪಟ್ಟಾಗೆ ನಮಾ ಜನ್ಮ ಮಾಡಿದ ಹಾಗೆ || 2 ||
ಲೋಕದ ಜನರಂತೆ ಚರಿಸುವನೂ ಪರಲೋಕದಲ್ಲಿ
ನಿರಾಕಾರದಲಿ ನಿಜವಾಗಿರುತಿಹನೂ
ಅನೇಕ ಪಾಪಪಾತ್ರಾ ಜನರಾ ಸೋಕಿದಷ್ಟೂ ಮಾತ್ರಾ
ಅವರಾ ಪಾಕಮಾಡಿ ಪರಿಹರಿಪಂತಾ
ಪೂರ್ವರೂಪ ನಿಜಗುರು ಶಾಂತಾ || 3 ||
ಪ್ರಪಂಚ ವಿಧ ಪರಿಪರಿ ತೋರುವನೂ
ಪರಿಸಂಕೋಚವನೂ ಪರಬ್ರಹ್ಮ
ಮರ್ಮದೊಳಡಗಿಪನೂ
ಚರ್ಮಕುರುಹು ನೋಡೇನೆಂದರೆ ನಿರ್ಮೂಲ ಮಾಡಿದ
ಭಾಪುರೇ ಕರ್ಮರೀಗೆ ಕಾಣದೆ ಇಹರೇ
ಪಾರ್ಮಾಡೊ ದಯಾಳುವಾಗಿರೆ || 4 ||
ಮೋಕ್ಷ ಬ್ಯಾಡವೆಂದೂ ಪೇಳುವನೂ
ಸಾಕ್ಷಾತ್ತು ಸ್ವಾಮಿಯಾ ನಿಶ್ಚಯ ನಿಜ ಸ್ವರೂಪ
ತೋರಿವನೂ ಮೋಕ್ಷಪೇಕ್ಷ ಸ್ತ್ರೀಯರ ನಡತೀ
ಸಮಕಾಂಬೋ ಪುರುಷರ ಖ್ಯಾತೀ
ಲಕ್ಷವಿಲ್ಲ ಲೌಕಿಕ ಭೀತಿ ನಿರ್ಲಕ್ಷ
ಅಲ್ಲಿಸಾಹೇಬು ಮೂರ್ತಿ || 5 ||

ಗುರುವೀನಾ ಚರಣಕ್ಕೆ ಶಿರಬಾಗಿ ನಿಲ್ಲಾಲೂ
ಗುರುವೀನಾ ಚರಣಕ್ಕೆ ಶಿರಬಾಗಿ ನಿಲ್ಲಾಲೂ
ನರರಾಧಿಕಾರವಾ ಅರೂಪುವಾ || ಪ ||
ದಿನಕರಾ ನೆದರೀಲಿ ದೀಪಾ ಶೋಭಿಸಿದಂತೆ
ನಿನ ಚೇತನ್ಯವಾನೊಳೂ ನಿಜ ತೋರ್ಪನೂ
ಮನುವು ಮಾರ್ಗಿದು ಹಾಮ್ಯ ತನುವಿನ
ಅನುಸರಿಸಿ ಮುದ್ರಾದಿಯೋಗವ
ಗಣಿತವಾಗುವದೆಂದು ಅಗಣಿತ ನಿನಗರುಪಿ
ನಿನ ತೃಣವು ಮಾಳ್ಪನೂ || 1 ||
ಹೇಮ ಸನ್ನಿಧಿಯಲ್ಲಿ ಹಿತ್ತಾಳಿ ಯೋಗ್ಯದಂತೆ
ಆ ಮಹಾತ್ಮನಲ್ಲೀ ನಿನದೇ ತೆರನಂತೆ
ಭೂಮಿಯೊಳಗಿಹ ಭುಕ್ತಿ ಪ್ರಿಯರಿಗೆ
ಈ ಮರ್ಮ ಅಸದಳವು ಅವರಿಗೆ
ನಾಮಸ್ಥಳ ನಿಜವಿಲ್ಲೆಂದಿಗೆ ನೀ
ಮನದಿ ನೋಡೆಂದು ಪೇಳ್ವನೂ || 2 ||
ಮಾರುತ ಬೀಸಾಲು ಮೇಘ ಬಿಟ್ಹೋಡಲೂ
ದೂರಾ ನೇತ್ರದಾ ದೃಷ್ಟಿಗೆ ನೀರು ಕಂಡಂತೆ
ವಿಚಾರದಿಂ ನೋಡಲ್ಕೆ ಅಲ್ಲಿಯೂ
ನೀರು ಮೇಘರಡಿಲ್ಲದಂದದಿ
ಘೋರ ಕರ್ಮದ ತನುವು ದುಷ್ಫಲ
ಸಾರವಿಲ್ಲದ ಸಾಕ್ಷಿ ಮಾಳ್ಪನೂ || 3 ||
ಹುಲಿಯ ಭೀಕರದ ಮುಂದೆ ಹುಲ್ಲೇಯ ಮರಿಗಳಂತೆ
ಕಲಿಯು ಕಾರಣಾ ಬ್ರಹ್ಮದೊಳಣುವಿನಂತೆ
ಮಲಿನವಿಲ್ಲದ ಮಧ್ಯಲೋಕದ
ಮನೆಯು ಇದೆ ನಿಜ ನೋಡು ಎನ್ನುತೆ
ಚೆಲುಸುತಿಹ ಚಿತ್ತವನು ನೀಗುತೆ
ಬಲು ಹರುಷದಿಂ ಬಾಳು ಎನುತಿಹಾ || 4 ||
ಪೊಡವಿಯೋಳ್ ಪುಣ್ಯಪುರುಷಾ
ಗುಡಿಕಲ್ಲಲ್ಲಿ ಸಾಹೇಬು
ಶ್ರೇಷ್ಠಾ ತಡಿಯಾದೆ ಮಾಡುತಿಹನೂ
ತೀವ್ರಜಗನಷ್ಟಾ
ಪೊಡವಿಗೊಡಿಯಾ ಅದಿಯಲಿತಾ
ನುಡಿದಾ ವಾಕ್ಯಕೆ ರುಜು ಮಾಡಿದ
ದೃಢಜನರಿಗೀ ಬೋಧ ತೀವ್ರದಿ
ಬಿಡದೆದನುಭವವೆಂದು ಪೇಳ್ವೆನೂ || 5 ||

ಗುರುವಿನ ಘನಕಾರಣಾರ್ಥವೂ
ಗುರುವಿನ ಘನ ಕಾರಣಾರ್ಥವೂ
ನರಿಗಳೆಂಬೋ ನರಪಶುಗಳು ಕಾಣಲರಿಯಲ್ಕೆ ಕೇಳಿರೈ
ಗುರುವಿನ ಗುರುತೆಲ್ಲ ಚಿಕ್ಕ ತರುಳನಾಗಿ
ಹೇಳಿಕೊಂಬೆ ಅರಿತ ಶಿಷ್ಯ ಗಣ ಸಮೂಹ
ತ್ವರಿತ ಎನಗೆ ಹೇಳಿರಯ್ಯ || ಪ ||
ಉದಯ ಸೂರ್ಯ ಹುಟ್ಟುವಾಗಲೂ
ಗುರು ನಿಂತರಾಯಿತೇ ಬದಿಯಲಿ
ನೆರಳಿರಲಿಬಾರದೈ ಕೇಳಿರೈ
ಕದನ ಪ್ರಿಯರಿಗೆ ಇದರ
ಹದನ ತಿಳಿಯಲರಿಯದಯ್ಯ
ಮದನ ಭಸ್ಮವಾದ ತೆರದಿ ಮಡಿದವನೆ ತಿಳಿದುಕೊಂಬ || 1 ||
ದಿವ್ಯ ವಸ್ತ್ರ ದೇಹದ ಮ್ಯಾಲಾ ಹಾಕೆಳಿಯಲಾಗಿ
ಆಯಾಸಿಲ್ಲದೆ ಬರುವುದೈ ಕೇಳಿರೈ
ಈ ವಿಧಾನ ಈ ಇಳೆಯೊಳು
ನಾವು ತಿಳಿಯಲಿಕ್ಕೆ ಮುಂದೆ
ಸೇವಕರಾದಾರೆ ಇದರ ಭಾವ
ಕೈಯ ಸಿಗುವೋದಯ್ಯ || 2 ||
ಬೀದಿ ಹಿಡಿದು ಬೈಲಿ ಗೊರಡಲೂ
ಮಹಾಸುಗಂಧ ವೈದಾಡುವೊದಯ್ಯ
ಅನುದಿನಾ ಕೇಳಿರೈ
ಕಯಿದಿ ದೇಹದೊಳಗೆ ಈಗ ಅಹುದಾಗುವದಕ್ಕೆ
ಬ್ಯಾಗ ಜೀವದಿಕಾರಿಯನು
ಕಂಡರೀ ವಿಧಾನ ಅನುಭವಯ್ಯ || 3 ||
ಸದಾಕಾಲ ಮೇಘವೆಂಬುದೂ ಭೂ ಚಕ್ರದಂತೆ
ಪ್ರಧಾನವಾಗಿ ನರಳುತಿರುತಿಹುದೈ ಕೇಳೀರೈ
ಒದಗಿದವನೆ ಇದರನ್ಮಯ ಒಂದು ಬಿಡದೆ
ತಾ ತಿಳಿವನು ಚೆದುರನಾಗಿ
ಲೋಕ ಭ್ರಾಂತಿ ಶ್ರೇಷ್ಟೆನಿಪಗೆ ಸಿಗದು ಸತ್ಯ || 4 ||
ದಾರಿ ಹಿಡಿದು ತಾ ಬರುತಿರಲು
ಶಿಲೆವಿಗ್ರವೆಲ್ಲ ಧಾತ್ರಿಗೆ ಬಿದ್ಹೊರಳು
ತಿರುವೋವೈ ಕೇಳೀರೈ
ಈ ವಿಚಾರ ಗುರುಮುಖದಿಂ ಈಗಳೆ
ನಿಜ ಕಾಣಬೇಕು ಬಾಯಿಲಾಡಿ ಬರಿದಾದರೆ
ಭಕ್ತಿ ನಿಲ್ಲದಯ್ಯ ಸಹಜ || 5 ||
ಪಾದಸೋಕಿ ಪಾಷಾಣಗಳೆ ಪರಿಶುದ್ಧರವೆಯು
ಪರಿಪರಿ ಸೊಗಸಾಗುತಿರುವೊವೈ
ಕೇಳಿರೈ ಗಾದೆ ಮಾತಿದಲ್ಲ
ಈಗ ಶೋಧಿಸಿ ನೋಡಲ್ಕೆ
ಮರ್ಮ ಅಹುದೆನಿಸೂವಂತ
ಗುರುವಿನೀ ವಿಶ್ವದಿ ಹುಡುಕಬೇಕು || 6 ||
ಅರ್ಥರಹಿತ ಅಲ್ಲಿಸಾಹೇಬು
ಗುರುಮಹಾ ಮೂರ್ತಿದರರ್ಥ ನಮಗೆ
ತಿಳಿಸುತಿರುವೋನೈ ಕೇಳಿರೈ
ಇತ್ತಬಿಟ್ಟು ಭೂಮಿಸುತ್ತ ಎತ್ತ ಹುಡುಕಲಿಲ್ಲವಯ್ಯ
ನಿತ್ಯಕಾಲ ನಿಜರ್ವರೂಪ
ಪ್ರತ್ಯಕ್ಷದಿ ನಿಂತನಯ್ಯಾ || 7 |

ಮರುಗಾದಿರಲೋ ಮನುಜಾ
ಮರುಗಾದಿರಲೋ ಮನುಜಾ
ಗುರುವೀನ ಚರಣಾವೊ ದೊರಿತಾದೆ ಶುಭವೆನ್ನು ನೀ
ಧರಣಿಯೊಳು ಪರಿಪರಿಯ ಕರಕರೆ
ಕೊರತೆಗಳ ಹಗಲಿರುಳು ಎನಿತಲಿ
ಮರಿಯದಿರುವ ಮಹಮೂರ್ತಿ ಶೋಧನೆ
ಬೆರಿಯೋ ನಿನ್ನಯ ಸೆರೆಯ ಬಿಡಿಪನೂ || ಪ ||
ಈಡಿಲ್ಲದಾ ಪ್ರಭೂ ಬೇಡೂ ಎಂದಾಗಳೇ
ಬೇಡಿದ್ದೆ ಈಡಾಗದೇ ನಿನ್ನಯ ನಡತೀ ನಾಡೊಳೂ ಬ್ಯಾರಾಗೆದೇ
ಕೇಡು ಬರುವ ವಿಚಾರ ತಿಳಿಯದೆ
ಮಾಡುತಿರುವೇ ಮಾರ್ಗ ಬಿಟ್ಟೂ
ನೋಡು ನಿನ್ನನುಭವದಲಿ ಹೆಚ್ಚಿರೆ
ಮಾಡುವನು ನೀ ಗಾಢ ತಿಳಿಯೋ || 1 ||
ತಿಳಿದಾವರಿಗೆ ಇಂತಾ ಇಳಿಯೋಳ ಕಷ್ಟಾವು
ಬಳಲಿಸುವುದು ಪೇಳುವೇ
ಈ ಮೂಲವೂ ಉಳಿದವರಿಗೆ ಅಳವೇ ಅಳತಿ ಆಗೆದೆ
ಆದಿಕರ್ಮವು ಇಳಿಯೋಳು ಈಡಾಗಿ ಬಂದದೆ
ಕಳಿಯುವದಕೆ ಕಷ್ಟಬಡಿಪನು
ಕಾಲಾಂತ್ಯಕೆ ಮೇಲು ತೋರ್ಪನೂ || 2 ||
ಅರುಣವಿಲ್ಲದವರಿಗೆ ಸಿರಿ ಬಂದ
ಪರಿಯು ನಾ ಪರಿತೋಷದಿಂ ಪೇಳುವೆ
ಕೇಳಿದವರ್ಗೆ ಕರುಣುಳ್ಳ ದಯಪ್ರಭುವೇ
ತರತರದಿ ಅನುಭವಿಸಿ ಪುಣ್ಯವು
ಸರಮಾಳ್ಪ ಮರಣಾಂತ ಕಾಲಕೆ
ಕರಕರಿಪ ಕಾಲಾಂತಕನ ಕೈ ಸೆರಿಯೋಳು ಜಝ್ಝರಿಸುತಿಹನೂ || 3 ||
ಸಟೆ ಎಂದೆನದಿರು ಭೂತಟದಿ ನಿನ್ನನುಭ
ಸಂಕಟ ಸುಖಗಳು ಕೊಡುವಾ
ದಿಟವೆನದಿರೇ ಕುಟಿಲರೆಂದನುತಿರುವಾ
ಪಟುತರದ ಸುಜ್ಞಾನ ಬೀದಿಯೋಳ್
ಕಟಕಟಾ ನಟನಗಳೆ ಬಹಳಾ
ಧಿಟಿನಾದರೀ ಮಾರ್ಗ ರುಚಿ ಸಂಘಟಸುವದು ಸೊಲ್ಲಾಲಿಸು ನೀ || 4 ||
ರಣಶೂರನಿಗೆ ರಾಜಾ ಕ್ಷಣ ತಡ ಮಾಡದೇ
ಗಣಿತ ತಾ ಮಾಡುವನೂ
ಪರನೃಪರನ್ನೂ
ತಣಿಕೆಯೋಳ್ ಇರು ಎಂಬನೂ
ರಣಹೇಡಿ ಹೆಣದಂತವನು
ಆ ಘನರಾಜನಾ ಮನಕೆ ಬಾರನು
ನಿನಗೆ ಸುಜ್ಞಾನೆಚ್ಚಾಗುತೇ
ಕ್ಷಣಕ್ಷಣಕೆ ನಿನದಣಿಸುತಿಹನೂ || 5 ||
ಕ್ಷೀರ ಪಶು ಕುಚದಿಂದೇ ಪೀರೂವ ವ್ಯಾಳ್ಯಾದಿ
ನೀರು ಮುಂದಿಡುತಿಹರೂ
ಹೆಪ್ಪಾಗುತೇ ಬ್ಯಾರೆ ತೋರುವರು ನೀರೂ
ಕ್ಷೀರದೊಳು ಬೆರೆದಿರ್ಪ ನೀರನು
ಬ್ಯಾರ ಮಾಡಿದ ಪರಿಯ ನಿನ್ನನು
ವಿಚಾರದಿಂದವನೊಳಗೆ ಬೆರದಿಹೆ
ಬ್ಯಾರಾಗಿ ಭಯವಿಲ್ಲದಿರುತಿಹೇ || 6 ||
ಎತ್ತಣ ಅಧಿಕಾರಾ ಎತ್ತಾಣ ದಯಪೂರಾ
ಎತ್ತಾಣ ಸುಖಸಾರವೂ
ಈ ಮೂಲಾವೂ ಗೊತ್ತು ನೀ ತಿಳಿ ತೀವ್ರವೂ
ಮತ್ತ ಮದದಿ ಮರಿವರೆಂದು
ಉತ್ತಮನು ಅಲ್ಲಿಸಾಬು ಗುರುಪ್ರಭು
ಪುತ್ರರಾ ಮ್ಯಲತಿ ಕರುಣದಿಂ
ನಿತ್ಯ ಕೃತನಿಜಗೊತ್ತು ತೋರ್ಪನೂ || 7 ||

ಹೇಳುವರ ಕಾಣೆನಯ್ಯಾ
ಹೇಳುವರ ಕಾಣೆನಯ್ಯಾ
ಏಕೋ ಮೂರ್ತಿ ನರರ ಸಂಗತೀ
ದಯಾಳು ಗುರು ನಿನ್ನ ಬಿಟ್ಟರೇ ಈ ಧಾತ್ರಿಯೊಳಗೇ || ಪ ||
ಪ್ರಾಣ ಪಿಡಿದು ಪ್ರಯಾಣದಾವದೂ
ಪ್ರಾಣಕ್ಕೇ ತ್ರಾಣದಾವದೂ
ಕ್ಷೋಣಿಯೋಳಿದರನ್ಮಯ ಪೇಳುವ ಜಾಣಾರೇ ಇಲ್ಲಾ
ಕಾಣದೇ ಕಲಿಯುಗದ ರಭಸದಿಂ
ಕಂಗೆಟ್ಟು ಕೆಡುವರಲ್ಲದೇ
ಪೂರ್ಣ ಪುಣ್ಯ ಮಾರ್ಗದ ಮರ್ಮಾ ಭೇದಿಪೊರಿಲ್ಲೇ || 1 ||
ಹೃದಯ ಆಶ್ರಮವೊಂದಿಹದೇನೋ
ಹೃದಯಕ್ಕೆ ಅಧಿಪತಿ ಇನ್ನೇನೋ
ಹದ ಮಾಡುವರಾರಾರಿಲ್ಲೇ ಅನ್ಯಾಯವಾಯಿತೇ
ಸದನದಲ್ಲಿ ಚಾತೂರ್ಯರಲ್ಲದೇ
ಸಾಕ್ಷಿಯಾದ ಶೋಧನೆ ಇಲ್ಲದೇ
ಮುದಿಮಂಗಗಳಾಗೋಗುವರಲ್ಲದೆ ಮರ್ಮವಿಲ್ಲದೆ || 2 ||
ಚಿತ್ತಕ್ಕೆ ಶ್ರೇಷ್ಠದಾವದೂ
ಚಿತ್ತದೊಳಗೆ ಸೇರಿ ಇರುವದೂ
ಗೊತ್ತು ಪೇಳ್ವ ಉತ್ತುಮರು ಇನ್ನೆ ಇಲ್ಲವೈ
ಮರ್ತ್ಯಪುಟ್ಟಿ ಅನ್ಯಾಯವಾಯಿತೇ
ಮಾರ್ಗ ಕೆಟ್ಟು ಮೊದಲೆ ಹೋಯಿತೇ
ವ್ಯರ್ಥವಾಗಿ ರಕ್ತಮಾಂಸವೂ ಹೊಂದಿ ಕೆಡುವೊರೈ || 3 ||
ಸೂಕ್ಷ್ಮದೊಳಗೆ ಬೆರದಿಹದೇನೋ
ಸೂಕ್ಷ್ಮ ಮಿಕ್ಕ ಸ್ವತಂತ್ರವೇನೋ
ಮೋಕ್ಷಾಪೇಕ್ಷ ಮಿಕ್ಕ ಪುರುಷರಾ ಮರ್ಮ ಮಾರ್ಗವೈ
ಲಕ್ಷ್ಯವಿಲ್ಲ ಲೋಕದಮ್ಯಾಗೆ
ಲಕ್ಷ್ಯಗೊಟ್ಟು ನಟಿಸೋ ಜನರಿಗೆ
ಸಾಕ್ಷಾತ್ತು ಪ್ರಭುವಿನ ಬೆರಿವಾ ಸಾರದೊರಿಯದೇ || 4 ||
ಪ್ರಾಣ ಹೃದಯ ಚಿತ್ತ ಸೂಕ್ಷ್ಮವೂ
ಶ್ರವಣ ನೇತ್ರ ಜಿಹ್ವ ಸಪ್ತವೂ
ಪೂರ್ಣ ಹಿರಿಯ ಪೇಳುವ ಅಲ್ಲೀಸಾಹೇಬು ಗುರುವೂ
ತ್ರಾಣ ಇವಕೆ ಇತ್ತ ಕಡಿಯಲೀ
ಕ್ಷೀಣಬಾಧ ಇದರ ಬದಿಯಲೀ
ಜಾಣ ಶಿಷ್ಯ ಮಗನಾದವಗೇ ಶೀಘ್ರ ಪೇಳುವಾ || 5 ||

ಲಯವಾದ್ಯಾ ಏ ಮಾಯೀ
ಲಯವಾದ್ಯಾ ಏ ಮಾಯೀ
ನಿನ್ನ ಜೈಸೀದ ಗುರುವೆ ಸಹೀ || ಪ ||
ಪತಿಯೊಳತಿ ಹಿತದಿ ಕ್ಷಿತಿಯೊಳಾಡುತಿದೆ
ಜಗಪತಿ ತೋರಿಸಿ ಹತ ನಿನ್ನ ಮಾಡಿದಾ ಗುರುವೇ ಸಹೀ || 1 ||
ಘಾತಕ ನಿನ್ನಯ ಗಂಡನ ಗಾಣವು
ಧಾತನ ಪಾದದಿ ತವಕ ಬಲಿಸಿ ಬಿಟ್ಟಾ ಗುರುವೇ ಸಹೀ || 2 ||
ಗುರುತಿಲ್ಲದ ನಿನ್ನ ಪುರುಷನ ಮರ್ಮವು
ಅರುಪಿಸಿ ನಿನ್ನ ಸಹ ಮರಣ ಮಾಡಿನಿಂತ ಗುರುವೇ ಸಹೀ || 3 ||
ಕುಟಿಲದಿ ಘಟದೊಳು ನಟಿಸಿದೆ ಬಹುವಿಧ
ದಿಟಗುರು ಬಂದೊಳಮಠ ಬಿಟ್ಟೊರಡಿಸಿದ ಗುರುವೇ ಸಹೀ || 4 ||
ಸಿಂಹನ ನೇತ್ರವು ಶರಭ ಕಿತ್ತಿದಾ
ರಮ್ಯದಿ ನಿನಕಣ್ಘಮ್ಮನೆ ತೆಗಿಸಿದಾ ಗುರುವೇ ಸಹೀ || 5 ||
ಕಮಲದ ನಾಳವು ಕರಿ ಕಿತ್ತಿದಂತೇ
ನಿನಗಿಹ ಜಿಂಹವು ನಿಮುಷದಿ ಕಿತ್ತಿಸಿದಾ ಗುರುವೇ ಸಹೀ || 6 ||
ಮಸ್ತಕ ಮಣಿಯಂತಲ್ಲಿ ಸಾಹೇಬು ಗುರು
ಶಿಸ್ತಿನಿಂದ ನಿನ್ನ ಮಸ್ತಕ ಬಾಗಿಸಿದಾ ಗುರುವೇ ಸಹೀ || 7 ||

ತಂಗೀ ಬಾ ಬೀಸೋನೂ
ತಂಗೀ ಬಾ ಬೀಸೋನೂ
ಮಂಗಳಾ ಗುರುವರನೂ
ಸಾಂಗತ್ಯಾ ಸಾರಿಹನೂ
ಹಿಂಗಾದೇ ಈಡ್ಯಾಡೋನೂ || ಪ ||
ಹಾಗಾಯ್ತೇ ಅಕ್ಕಯ್ಯಾ
ಬ್ಯಾಗೇಳೇ ಇದರನ್ಯಾಯ
ಸಾಗಿಸೇ ನಿನ್ನಾಜ್ಞೆಯಾ
ಹೋಗಾದಿರುವೆನು ನಿನ್ನ ಬದಿಯಾ || 1 ||
ಗುರುಪೀಠೆಂಬುದು ಘನವಲ್ಲೇ
ವರತಾಗೀ ನೀ ವಂದಿಲ್ಲೇ
ಮರತಾರೇ ಮರಿಯಾದಿಲ್ಲೇ
ಸರಿತಂಗೀ ಇದು ಸರಿಯಲ್ಲೇ || 2 ||
ಗುರುಪೀಠೆಂಬುದು ಕುರುವೇನೇ
ಬರಿ ಮಾತಿಲಿ ಬಂದದ್ದೇನೆ
ಮೊರೆ ಮಾಡಿಡುವದು ಸರಿಯೇನೇ
ಕರತಾಗಳೆ ನಿನ್ನ ಕಲತೇನೆ || 3 ||
ಪೀಠೆಂಬುವದು ಪರವಸ್ತೇ
ಸಾಟಿಲ್ಲೇ ಈಜಗಸಿಸ್ತೇ
ಪಾಟಿಪರಿಗೆ ದಿನ ಬಹು ಪ್ರಸ್ತೇ
ಮೇಟ್ಯಾಗೆಲ್ಲಕೆ ಮ್ಯಾಲೈತೆ || 4 ||
ಗುರುವಿನ ಕುರುಹೇ ಪರಬ್ರಹ್ಮ
ಗುರುನಿಜ ತಿಳಿನೀ ತಂಗೆಮ್ಮಾ
ವರದ್ಹೇಳಿದೆ ಅದು ಸರಿಯಮ್ಮಾ
ಬೆರಿಯುವ ಬಗೆ ಬಾಗ್ಹೇಳಮ್ಮಾ || 5 ||
ಕ್ಷೀರದಿ ನೀರೂ ಬೆರೆತಂತೆ
ವಿಚಾರದಿ ನೀನು ಅದರಂತೆ
ಸೇರಿಕೊ ಹೇಳುವೆ ಕೇಳ್ಸುದತೀ
ನಾರಿ ಶಿಖಾಮಣಿ ನೀ ಕಾಣ್ತಿ || 6 ||
ನೀರುಕ್ಷೀರ ನಾ ಬೆರಸೇನೇ
ಸಾರವಸ್ತು ಹ್ಯಾಗೆ ಬೆರತೇನೇ
ದಾರಿ ತೋರದ್ಹೇಳುವರೆನೇ
ದೂರ ಮಾಡುವದು ಧರ್ಮೇನೇ || 7 ||
ದಾರಿಗೆ ಭಕ್ತಿ ಸಾರುಂಟೇ
ತೋರುತಿಹುದಜ್ಞಾನದ ಜಂಟೇ
ಮೀರಿದಂತ ವೈರಾಗ್ಯುಂಟೇ
ಮೂರರಲ್ಲಿ ಮರ್ಮಗಳುಂಟೇ || 8 ||
ಭಕ್ತಿಯಲ್ಲಿ ಏನು ಬಂದೀತೇ
ಯುಕ್ತಿಜ್ಞಾನದೊಳೇನೈತೆ
ರಕ್ತೇನೊಯಿರಾಗ್ಯದರೀತೇ
ಭುಕ್ತಿ ಬ್ರಾಂತಿ ಬಹು ದೂರಾಯ್ತೇ || 9 ||
ಬೆಂಕಿ ಹುಟ್ಟುವುದು ಭಕ್ತಿಯಲೀ
ಪಂಕಜ ಪ್ರಕಾಶ ಜ್ಞಾನದಲೀ
ಮಂಕು ಮುರಿವೋದು ವೈರಾಗ್ಯದಲಿ
ಮಹ ಬಿಂಕವೆಲ್ಲ ಪುಸಿ ಮಾಡುತಲೀ || 10 ||
ಪುಸಿ ನಿಜ ತೋರೆನಗಕ್ಕಯ್ಯಾ
ವ್ಯಸನವಾಯಿತೀಗಳೆ ಖರಿಯಾ
ವಸುಧೆಲ್ಲಾ ನಿಜ ತುಂಬೀಹಾ
ಶಶಿಮುಖಿ ದಯಮಾಡೀ ಉಭಯಾ || 11 ||
ಪುಸಿನಿಜ ಗುರುತೆರಡನು ಕೇಳ್ತೀ
ವಶವಿಲ್ಲೆನ್ನನು ಹೇಳಂತೀ
ಕುಶಲ ಅಲ್ಲಿಸಾಹೇಬು ಗುರು ಭ್ರಾಂತೀ
ವ್ಯಸನಿದ್ದರೆ ಒಂದುದಿನ ಕಲತೀ || 12 ||

ಎಂತದಾಶ್ಚರ್ಯ ಕಂಡೆನೋ
ಎಂತದಾಶ್ಚರ್ಯ ಕಂಡೆನೋ
ಗುರುಪಾದ ಕರುಣದೀ
ಎಂತಾದಾಶ್ಚರ್ಯ ಕಂಡೆನೋ
ಎಂತಾದಾಶ್ಚರ್ಯ ಕಂಡೇಳಂತಸ್ತೇರಿಕೊಂಡೇ
ಒಂತು ಬಾರದವ ಮುಂದೆ ಝಾಂಡೇ
ಹೊರಗೆ ಹಾಕಿ ನಿಂತುಕೊಂಡೆ || ಪ ||
ಏಳು ಅಂತಸ್ತಿನ ಪಾಂಟಿಗೆ
ಏರಿದಾಗಳೆ ಎಲ್ಲ ಕಂಡೆ
ಗಾಳಿ ಬೀಸಲು ಜಾಳು ಜಗವೂ
ಜಲ ತೆರೆಗಳಂದದೀ ಕಂಡೆ
ಕೀಳುನುಡಿ ಗಢಣಗಳಿಗೆದರೇನೇ
ಕೇಳೆದ್ರವರ್ಗೆ ಮೇಲಾದ ಸಾಮ್ಯವನು ಸಾರುವೆನೇ
ಬಾಲಮೀನ್ಮರಿ ಭಯಕೆ ಆನೆಯು
ಭಯಪಟ್ಟು ಬಾಳುವದೆ ನೀರಿಲಿ
ಕಾಲಿಲೀಗೆನ ಲೇಳಿ ಕೇಳದೆ
ಕಲತು ಹೋಗದೆ ಕರಿ ರಭಸದಲಿ || 1 ||
ಆರು ಅಂತಸ್ತೀನ ಮರ್ಮಾ
ಆರಾರಿಗಳವಲ್ಲವೆಂದೇ
ಧೀರತ್ವದೀ ಧಾರುಣಿಯನೂ
ಸೇರಿಸೀಕೊಂಡಿಹದು ಮುಂದೇ
ಕ್ರೂರರೆಲ್ಲರ ಕೊಲ್ಲಿಬಿಟ್ಟಿಹದೂ
ಕುಚೇಷ್ಟಿ ಜನರಾ ದಾರಿಮುಳ್ಳೀನಂತೆ ಬಿಸುಡುವದೂ
ಊರೊಳಗೆ ಶೂಕರನು ಬಂದೂ
ಓಣೋಣಿ ವಾರಣಕೆ ತಂದವತಾರ
ನಿನಗಾಗಿಹುದು ಎಂದೂ
ಹೆದರದೇ ಹೇಳೇಳಿ ಕೊಡುವದೂ || 2 ||
ಐದು ಅಂತಸ್ತೀನ ಐಕ್ಯವು
ಅಲ್ಲೆಲ್ಲಿ ಗಹುದನುವದಣ್ಣಾ
ಹೊಯ್ದಾಟ ವೆಂದೆಂದಿಗಿಲ್ಲದೆ
ವರ್ಣಗಳ ಮಾಡುವದು ಸಣ್ಣಾ
ಬಹು ದಿವ್ಯಜ್ಞಾನಕ್ಕೆ ಬಲವಣ್ಣಾ
ಪತಿಯಂತೆ ಸತಿಯಿರೇ ಈಲೋಕ
ಸಂಸಾರ ಸುಖವಣ್ಣಾ
ಈ ವಿಧವು ನಿಲಕಿಲ್ಲದ್ಹೋದರೆ ವೆದಿಸುವದೂ
ಮುಳ್ಳು ಹೂವಿನ ಈದಾರಿ ಹಿಡಿಯದಿರೆ
ಬಾರದು ಬೋಧ ಬರಿದೆ ಗಾದೆ ಮಾಳ್ಪದೂ || 3 ||
ನಾಲ್ಕು ಅಂತಸ್ತೀನ ನಡತೀ
ನಾನೇ ತಾನೆಂಬುವದು
ಕೀಲ್ತಿಳಿದವರೆಂತರಂಗದಿ
ಕಿಲಿಕಿಲೀ ತಾತಾನೆ ನಗುವದು
ಬಾಲ್ಕರಾದವರೆಲ್ಲ ಬಲ್ಲಾರು
ಬರೆ ಮಾತಿನವರು
ಬೈಲಿಗುಪಚಾರಂತೆ ಒಪ್ಪುವರೂ
ಕೈಲಿ ಕಟ್ಟಿಡದಂತ ದ್ರವ್ಯ ಖಚಿತವಾಗದು
ಎಂದಿಗರುವಾ ಕೇಳಿದಾಗಳೆ
ಪರಮ ಪದವ ಕಲತಂತೆ
ಇರುತಿಹುದೀಯನುಭವಾ || 4 ||
ಮೂರು ಎರಡಿನ್ನೊಂದು ಇರುವವು
ಮೊತ್ತ ಏಳಂತಸ್ತು ಆದವು
ಬ್ಯಾರೆ ಪೇಳುವ ಗುರುವೆ ಬಲ್ಲವು
ಭಕ್ತಿಯಲಿ ನಾವು ನಿಂತು ಕೇಳೆವೂ
ಪೂರದಯ ಹುಟ್ಟಿದರೆ ಪೇಳುವನೂ
ಕೇಳುತ್ತೆ ಮನುಜನು ತೀವ್ರ
ತನ್ನೊಳು ತಾನೆ ಕಾಣುವನೂ
ಯಾರೆನಂದರು ಹಾರ್ಯರಣುವಾವಾಗಿ
ಧಾರುಣೀಯಲ್ಲಿ ಇರುವನು
ಪೂರ್ಣ ಅಲ್ಲಿಸಾಹೇಬು ಪುಣ್ಯನು
ಪಾರು ಮಾಡುವೊ ಬಿರಿದು ತೊಟ್ಟನೂ || 5 ||

ಎಂತು ಮಾಡಲಿ ಗುರುವೇ ಇಂತ ಸಂಗಟವೇ
ಎಂತು ಮಾಡಲಿ ಗುರುವೇ ಇಂತ ಸಂಗಟವೇ
ಘಟ ಸಂಚಿತೆಂಬುವ ಕೆಟ್ಟಗಾಣಕ್ಕೆ ಸಿಲುಕಿದೆನೂ
ಇಂತ ವೈದಾಟ ನಿಲಕಿಲ್ಲದಕೆ ಎಂದಿಗೆ
ಕಿಂಚಿತದ ಭೋಗ ಭ್ರಷ್ಟತ್ವ ಕೆಳಸುವದೂ || ಪ ||
ಭಾವಿ ಬಿಟ್ಟುದಕ ಭಾಂಡದಿ ಬಿದ್ದು ಕೆಟ್ಟಂತೇ
ಉಪಾಯರಿಯದಿದರೊಳಗೆ ಬಿದ್ದು ಭ್ರಷ್ಟಾದೇ
ಸಾಯ್ವ ಕಂಸನು ಸಣ್ಣ ಶಿಶು ಸಂಹರಿಸಿದಂತೇ
ತಾ ಸಾಯ್ವ ಸಂಕಟಕೆ ತೊಡಕಿಪದು ಎನ್ನಾ || 1 ||
ಪೂರ್ಣಗುರು ನಿನ್ನ ಬೋಧಾಮೃತದ ಖಡ್ಗದಲಿ
ಛೀರ್ಣಿಸಲು ಚೆದರಿ ಚೂರಾಗಿ ಹೋಗುವದು
ಕಾರಣ ದೊಳಿರಲೆಂದು ಕ್ವಚಿತ ಸ್ಥಲನೀ ಕೊಡಲು
ಬೇರಿಳಿಡು ಎನ್ನಗತಿ ಬ್ಯಾಸರಿಡುತಿಹುದೊ || 2 ||
ಒಲ್ಲಿದರ ಸಂಗವೆಂದೊಂದಿಸಿದೆ ಪಾದಕ್ಕಿ
ಪೂರ್ವದಲ್ಲೇ ನಿನಗೆ ಪೇಳೀಕೊಂಡೇ
ಕುಲ್ಲ ಕುಟೆಲರ್ಗೆ ಕೇಳದಲೆ ಕೊಡು ಕೊಂಬುವದು
ಅಲ್ಲೊ ನಿಂದೆನಲು ಉಲ್ಲಂಘಿಸುವೊದೆನ್ನಾ || 3 ||
ಸುಖವು ಬಂದರೆ ಎದ್ದು ಪಕಪಕನೆ ನಗುತಿಹುದು
ವಿಕಟ ಬಂದರೆ ಎನ್ನ ಹೀನಿಸುವುದು
ಬಕನಂತೆ ಈ ಜೀವಬಲಿದು ಎನ್ನೊಳಿಹುದು
ಅಕಟ ಹಾಳಾಗ್ಹೋಗದೆನುತಿಹುದು ಎನ್ನಾ || 4 ||
ದೂರು ಹೇಳಲು ನಿನಗೆ ತೋರುತಿಹೆ ದೃಷ್ಟಾಂತ
ಧಾರುಣೀ ನಳ ಹರಿಶ್ಚಂದ್ರರುಗಳೂ ಕ್ರೂರರಿಂದತಿ
ಕಷ್ಟ ಕಂಡದಕೆ ಕೀತ್ರ್ಯಾಯಿತು ಸಾರಿ ನಿಜತೋರ್ವೆ
ಅಲ್ಲಿಸಾಹೇಬು ಗುರುವೇ || 5 ||

ಆವ ಅನುಭವದಲಿ ಅತಿಶಯವುಂಟು ಮಹಗುರುವೇ
ಆವ ಅನುಭವದಲಿ ಅತಿಶಯವುಂಟು ಮಹಗುರುವೇ
ನೀವು ಕೈಲ್ಹಿಡಿದದಕ ನರನಾದೆನೋ
ಭಾವಿಯೋಳ್ ಬಿದ್ದ ಕಲ್ಲಿನರೀತಿ ಬ್ಯಾರಿಲ್ಲೊ
ಜೀವ ಉಳಿಸೀ ಮ್ಯಾಕೆ ಜಿಗದೆತ್ತಿದಲ್ಲೋ || ಪ ||
ಮಾತೆ ತನ ಬಾಲಕನ ಮರತು ಒಳಮನೆಯಲ್ಲಿ
ಕಾತರಿಸೆ ಪ್ರತಿ ಕೆಲಸದೋಳಿರುತಿರೇ
ಮಾತು ಬಾರದ ಬಾಲ ಮಲಮೂತ್ರದಲಿ
ಬಿದ್ದ ರೀತಿನ್ನೆನೂ ನೀ ಪಿಡಿಯದೆ ಬಿಟ್ಟರೇ || 1 ||
ಶಾಸ್ತ್ರಗಳು ಎಂತಿಹವೊ ಶ್ರವಣಗಳು ಕೇಳಿಲ್ಲೇ
ನಾಲ್ಕು ವೇದಗಳೇನೊ ನಯನ ಕಂಡಿಲ್ಲೇ
ಮೂಲ್ಕ ತಿಳಿಪಿದರಿಂದೆ ಮುಂದೆ ನಿಂತಿರುತಿಹಪು
ಬಾಲ್ಕರೋಳ್ ಶತಮೂರ್ಖನಧಿಕಾರವೂ || 2 ||
ವೀಣ ಬಹು ಘನವಲ್ಲೆ ಎಲ್ಲಕಿಂತಲು ವಾರ್ತೆ
ತ್ರಾಣನಾಗಿಹ ಜಾಣ ನಿಲ್ಲದಿರೆ ವ್ಯರ್ಥೇ
ಕೋಣ ಪಾಮರ ನಾನು ಕೋಟ್ಯಾಂತ್ರ ಗಳಿಸಿದರು
ಬಾಣ ತಾಕಿದ ಆನೆಬಿದ್ದು ಸತ್ತಂತೇ || 3 ||
ಯತಿಗಣಾ ಪ್ರಾಸಂಗಳೆಂದಿಂದಿಗೂ ಕಾಣೆ
ಮತಿನೇತ್ರ ಮಧ್ಯನೀ ಮಾಡಿಕೊಡುವೇ
ಸುತಿಯಂತೆ ನಾನು ಸಾರಾಂಶ ರುಚಿ ನುಡಿ ನಿನ್ನು
ಹಿತವು ತೊಟ್ಟಿದರಿಂದ ಎಲ್ಲಕೆ ಮುಂದೆ ನುಡಿದೇ || 4 ||
ಹಸ್ತ ಸೋಕಿದ ಘಂಟ ಅಧಿಕವೇದ ಶೃತಿಯು
ವಿಸ್ಮಯವ ಇಲ್ಲದಲೆ ಎಳದು ಬಿಸುಡುವದೂ
ಮಸ್ತಕ ಶಿಖಾಮಣೀ ಅಲ್ಲಿಸಾಹೇಬು ಗುರುವೆ
ನಾಸ್ತಿ ಎಂದದಕೆ ರಕ್ಷಿಸಿದಲ್ಲೊ ಪ್ರಭುವೇ || 5 ||

ಸಚರಾಚರಂಗಳು ಕ್ಷಣದಿ ಮಾಡಿದ
ಸಚರಾಚರಂಗಳು ಕ್ಷಣದಿ ಮಾಡಿದ
ಪ್ರಭುವಿನ್ಹೆಸರು ನಿಜ ಕಂಡ ಗುರುವಿನ
ಕೇಳ್ಪದೂ ಬಿಸಲು ಕುದಿರಿಗಳಂತೆ ಬುದ್ಭುದಾಕಾರ
ನಾಲ್ದೆಸೆಯಿಂದ ಕಾಣ್ವ ಸಂಶಯವೆ ಛೇದಿಪದೂ || ಪ ||
ಲೋಕವೆಂಬುದು ಜಮಾ ವಾಕ್ಯವಾಯಿತಿದರಲ್ಲನೇಕ
ಗೋಪ್ಯಂಗಳೆಲ್ಲವು ತಿಳಿಪದೂ
ವೋಕುತಾಕಿಲ್ಲದನು ಒಳಹೊರಗೆ ತುಂಬಿಪದು
ಮೂಕ ರುಚಿಕಂಡ ಮರ್ಯಾದೆ ಮಾಡುವದೂ || 1 ||
ಶಶಿಗೆ ಷೋಡಶ ಕಳೆ ಸೇರಿದಂತೀ ಭುವನ ರಸಿಕ
ಹೀಂಗಿಹುದೆಂದು ಹೇಳಿಕೊಡುತಿಹುದೂ
ನಶಿದು ಶಶಿಹ್ಯಾಗೆ ಹೋಗುತ್ತಿಹದೊ ಅದರಂತೆ
ವಸುಧೆ ಜ್ಞಾನಾಂಕುಶದಿ ವೈದು ಕೆಡಹುವದೂ || 2 ||
ಹೋಗಿದೆಂಬುವ ವಾಕ್ಯ ದನ್ಮಯವು ಬ್ಯಾಗೆ
ಶಿರಬಾಗಿದವಗ್ಹೇಳುವದು ಬಹು ನ್ಯಾಯದಿಂ
ಹೋಗಿ ಒಳಗಿಹುದು ಒಳಗಿರುವೊದೊರಗಿಲ್ಲಿದೂ
ತೂಗಿ ನೋಡೆಂದು ನಿನ್ನನು ನೀಗುತಿಹುದೂ || 3 ||
ಕೊಟ್ಟಿಗೆಂಬುವ ಘಟವು ತಟ್ಟನೇ ಬೀಳ್ವದಕೆ
ಶ್ವೇಷ್ಠಕಂ ಒಗಳುತಾ ನಾಲ್ಕು ಸೆಳಿಯುವವೂ
ಬಿಟ್ಹೋಗೆನದ ಮುಂದೆ ಬಿಡಿಸಿ ಬ್ಯಾರಿಟ್ಟಿಹುದು
ಕಟ್ಟಳೆಯು ಕಡೆ ಮಾಡಿ ಕಾಪಾಡುತಿಹುದೊ || 4 ||
ನಿತ್ಯ ಅನಿತ್ಯದ ಕುರುಹು ನಿಜಕಂಡ ಗುರುವಿನಾ
ಅರ್ಥ ಇಷ್ಟಾಗುವದು ಅನುದಿನದಲೀ
ಪ್ರತ್ಯಕ್ಷ ಅಲ್ಲಿಸಾಹೇಬು ಪಾದಪದ್ಮವದು
ಎತ್ಹೋಗದಿದರೊಳಗೆ ಸುತ್ತಿ ಬಿಡುತಿಹುದೂ || 5 ||

ಎಂತಾ ದೇವರ ತೋರಿದನಮ್ಮಾ
ಎಂತಾ ದೇವರ ತೋರಿದನಮ್ಮಾ
ಶಾಂತಾದಿ ರೂಪಗುರು ಎಂತಾ ದೇವರ ತೋರಿದನಮ್ಮಾ
ಆದ್ಯಾಂತ ನಿಗಮವಳಿದ್ಯೆಂತ ದೇವರ ತೋರಿದನಮ್ಮಾ
ಎಂತಾ ದೇವರ ತೋರಿದಂತಾರಂಗದಿ
ಈ ಭೂಪ್ರಾಂತಾದಾವರಿಗದರಂತೇ ತಿಳಿಯದಂತಾ || ಪ ||
ಜಂಗಮ ಜೋಗೆಂತೆ ಚರಿಸುವೊದಲ್ಲಾ
ಅಂಗಾಂಗಕೆ ಮಿಕ್ಕಡಗಿಹದೆಲ್ಲಾ
ಈ ಕಂಗಳಿಗದು ಕಾಣುವುದಲ್ಲಾ
ಹೀಂಗಿಹದೆನಲಿಕ್ಕಸದಳವಲ್ಲಾ
ಲಂಗಿಲ್ಲದೆ ಲೋಕಂಗಳೆಲ್ಲವು
ಜಂಗಿನಂತೆ ತಾ ಧರಿಸ್ಯಾದಲ್ಲ || 1 ||
ಬೆಂದೋಗುವ ಸಂದೋಗುವದಲ್ಲಾ
ಎಂದಿಗೆ ಇನ್ನೊಂದದರೊಳಗಿಲ್ಲಾ
ಇಂದುಮುಂದು ಎಡಬಲವಂದಿಲ್ಲಾ
ಒಂದೆನಲೆರಡಿಂದಿಟ್ಟಿಹದಲ್ಲಾ
ಮುಂದಿಂದಾಗದೆ ಮೊರೆತೆರೆಯಿಲ್ಲದೆ
ಅಂದವಾದ ಪ್ರಾಣಕ್ಕಧಿಪತಿಯಾದಂತಾ || 2 ||
ಕೊಳವದು ಬೆಳವದು ಕ್ವಚಿತದಕಿಲ್ಲಾ
ಬಳಕುತ ಬಿದ್ದೊಡದ್ಹೋಗುವದಲ್ಲಾ
ಇಳಿಯೊಳು ಇನ್ನೊಂದದಕೆದರಿಲ್ಲಾ
ತಳಮಳ ಶಿಳಿ ಚಿಟಿಲ ರಭಸಂಗಳು
ಪ್ರಳಯಕಾಲದಿ ಬೇಳ್ಕೆಡಹದೆ ರಕ್ಷಿಪಾಯಂತಾ || 3 ||
ಅಷ್ಟದಿಕ್ಕುಗಳನನುಸರಿಲ್ಲಾ
ನಷ್ಟವಾಗದವರಿಷ್ಟತೆ ಇಲ್ಲಾ
ಅನಿಷ್ಟ ಸ್ಥಲಂಗಳೊಳದೂ ಸೇರಿಲ್ಲಾ
ಸೃಷ್ಟಿಯಲ್ಲ ಸ್ತ್ರೀರಂತ್ಹಡದಿಲ್ಲಾ
ಸ್ಪಷ್ಟವಾದ ಐದಕ್ಷರವಾಕ್ಯದಿ
ಸೃಷ್ಟಿಯಲ್ಲ ಪ್ರತಿಷ್ಟಿಸಿತಲ್ಲಾ || 4 ||
ಒಬ್ಬರಂತೆ ತಾ ಹುಟ್ಟುವೊದಲ್ಲಾ
ಶೂಭ್ರ ಹಿರಿಯರೊಳಗಿರುತಿಹುದಲ್ಲಾ
ಗರ್ಭೀಕರಿಸ್ಯದೆ ಕಲಿಯುಗವೆಲ್ಲಾ
ಅದ್ಭುತ ಸಂಶಯ ಒದಗಿಸಿತಲ್ಲಾ
ತದ್ಗತ ಜಗಮಾಡುತ ಅಲ್ಲಿಸಾಹೇಬು
ಗುರುಚಿದ್ಘನ ಬೆರಸಿರಿಸಿದನಲ್ಲಾ || 5 ||

ತನ್ನ ತಾ ತಿಳುಪುವಾ ಧನ್ಯರ ಸದನಾ
ತನ್ನ ತಾ ತಿಳುಪುವಾ ಧನ್ಯರ ಸದನಾ
ಸದನ ಕಾರಣರೀ ಜನಾ ಗುರುವಿನಾ ಕಾಣರೀ ಜನಾ || ಪ ||
ಉದಕಾದೊಳೈಕ್ಯ ಲವಣವೂ
ಹೊರಗೆ ಬಂದಂತೇ ತನ್ನಾ
ವಿಧ ಸಕಲರೊಡಿಯ ಇತರಿಲ್ಲದೆ ನೀವು
ಒದಗಿ ಕೊಂಡಿರುವೋದದ ಮಾಳ್ಪಾಧ್ಯರನಾ || 1 ||
ಉಳಿಯು ಜೇನು ಶತ ಭಾಗದೊಳು
ಒಳಗ್ಹೋಗಿ ಮತ್ತುಳಿದಂತೇ
ಕೆಳಗೆ ಮ್ಯಾಲೊಳಹೊರಗಳೀತಿಗೆ
ಮಿಕ್ಕ ನಿಷ್ಕಳನೊಳು ನೀವಿರುವಳ ಪಡಿಪಾಧ್ಯರನಾ || 2 ||
ಕಸ್ತೂರಿ ಸೋಕಿದ ವಸ್ತೂ
ಕಲಿಯದಿರುವದು ತನ ಶಿಸ್ತೂ
ಹಸ್ತನಖ ನೇತ್ರ ಮಸ್ತಕಿಲ್ಲದ ಪ್ರಭು
ಪ್ರಸ್ತಾಪದ ಪರಿ ಪೇಳುವ ಗುರುವರನಾ || 3 ||
ಕ್ಷೀರದೊಳು ಬೆರತ ನೀರನೂ
ಬ್ಯಾರೆ ಮಾಡಿದ ರೀತಿಯಾ
ಧಾರುಣಿ ಧಣಿಯೊಳು ನೀವಿರುವದು
ವಿಚಾರ ಪರಿಮುಖದಿ ತೋರುವ ಸುಖಪರನಾ || 4 ||
ಶಶಿಯೊಳು ಷೋಡಶ ಕಳೆಯಾ
ರವೀವಶದಿಂದ ತೋರುವ ಹಾಗೆ
ಕುಶಲ ಅಲ್ಲಿಸಾಹೇಬು ಗುರುವರ ಪೇಳುವ
ನಶಿದ ಶಶಿರೀತಿ ರಸಿಕನರಾಧಮನಾ || 5 ||

ಎನ್ನಾಗುರುವು ದಂಡಿಸಿದಾ
ಎನ್ನಾ ಗುರುವು ದಂಡಿಸಿದಾ
ನಿನ್ನಾನು ನೀ ತಿಳಿದು ಧನ್ಯಾ ಹ್ಯಾಗಾದೆಂದು || ಪ ||
ನಖ ನೇತ್ರವಿಲ್ಲಾದಾ ನಟಿಸುವೋ ಪ್ರಭುವೀನ
ಸುಖಕರನು ಭವಶೂನ್ಯನಿಗೆ
ಎಂತಾಯಿತೆಂದೆನ್ನಾನು ಗುರುವು ದಂಡಿಸಿದಾ || 1 ||
ನೀನೆ ಇಲ್ಲದೆ ನಿಂತೆ ತಾನೇ ಶಾಶ್ವಿತವಾಯ್ತೆ
ಈ ಕೂನಾ ನಿನ್ನಗೆ ಸಂಧಾನ ಹ್ಯಾಗಾಯಿತೆಂದೂ || 2 ||
ನಿರ್ವಿಕಲ್ಪನು ನಿಜವಾಗುತೆ ನೀ ಮರಣವಾದ
ಕುರುಹು ಕಂಡಿಹ ಮಾರ್ಗಪರಿಯಾ ಪೇಳೆಂದೂ || 3 ||
ನಿಜ ಬೋಧಾಮೃತ ಸಾರಾ ನಿನಗೆ ಸಿಕ್ಕಿತು ಸಹಜಾ
ಅಜನಾ ಗರ್ವತವಾದಂತಾದೇ ಅನುಭವ ಹ್ಯಾಗೆಂದು || 4 ||
ಉಭಯಕ್ಕೆ ಮೂಲ ಕಾಣದ ಜನಕೆ ಸುಖವಿಲ್ಲಾ
ಶುಭಗುರು ಅಲ್ಲೀಸಾಹೇಬು ದಿವ್ಯ ನುಡಿಗಳಿಂದ || 5 ||

ಇಂದಿಗಾಯಿತು ಎನ್ನಾ ಸಂದೇಹ ಛೇದಿಪಾ
ಇಂದಿಗಾಯಿತು ಎನ್ನಾ ಸಂದೇಹ ಛೇದಿಪಾ
ನಂದಾವಾದ ಗುರು ಕರುಣಾದಿಂದೇ || ಪ ||
ಅಂತರಂಗ ದೊಳಾಪ್ತನು ಜ್ಞಾಪಕವಾಗೇ
ನಿಂತು ಈ ನೇತ್ರಕ್ಕೇ ನಿಜವಾದಂತೇ
ಅಂತರ್ಯಾಮಿ ದೇವರು ಆ ಪರಿ
ಈ ದ್ವೀಪಾಂತರ ಸಪ್ತವೂ ಸರೀ ತೋರಿದದಕೇ || 1 ||
ರತಿಪತಿ ಪಾರ್ವತೀ ಪತಿಯಿಂದ್ಹತವಾಗೇ
ಮತಿಯಲ್ಲಿ ನೆನಿಸಲ್ಕೆ ಸತತಿದ್ದಂತೆ
ಸುಮ್ಮತಿ ಗುರು ಮಾರ್ಗದೀ ಜಗಪತಿ ಎನಗೆ ಸಮ್ಮತಿ
ದಿನ ದರಿಶಿನಾ ಸಾಕ್ಷಿ ಸಾದೃಶ್ಯದಿಂದೇ || 2 ||
ಪಾಂಡುವ ಪಕ್ಷಪಾತೀ ಪುಂಡರೀಕಾಕ್ಷನೂ
ಕಂಡೇವೆಂದಾಗಳೇ ದಾರ್ಗೊಂಡು ನಿಂದಂತೆ
ಪಂಡೀತ ಶಾಸ್ತ್ರ ಸಮ್ಮತ ಮನೋ ನಿಶ್ಚಯಾ ಮಂಡೇ
ಮಾಣಿಕ್ಯ ಗುರು ನಿಜಮಾರ್ಗ ಮಹಿಮೆಯೋಳ್ || 3 ||
ಅಸುರೇಂದ್ರ ದಶಕಂಠಾ ನಸಮಮೂಲ್ಬಲ ಕೆಲ್ಲಾ
ದಶರಥಸುತ ರಾಮಾ ತಾನೇ ನಿಂದಂತೆ
ರಸಿಕ ತೋರಿತು ಎನಗೇ ರಂಜಿಸಿತು ಗುರು ಕಾರುಣ್ಯಾ
ವಸುಧೆಲ್ಲಾ ಹೊರಳೀತಲ್ಲಾ ಒಬ್ಬಾ ದೇವರೆ ಹಬ್ಬಿತಲ್ಲಾ || 4 ||
ಗುರುದೈವ ಉಭಯಾರೂ ಇರುವೊ ಮೂಲ್ಪರಿ ಸಂಧೀ
ಅರುಪಿದಲ್ಲಿಸಾಹೇಬು ಗುರುವರನೂ
ನಿರತ ಬಿಡದೂ ಎನ್ನಾ ಅರಿದು ಹೋಯಿತನೂ ಮನ
ಬರಿದೆ ಮಾತಲ್ಲಿ ಧ್ಯಾನಾ ಮರಣಗೆದ್ದು ನಿಂತಿತಣ್ಣಾ || 5 ||

ಪರತತ್ವ ಗುರುವಿನ ಪ್ರಾರ್ಥೀಪೆನೂ ಪೇಳೀ
ಪರತತ್ವ ಗುರುವಿನ ಪ್ರಾರ್ಥೀಪೆನೂ ಪೇಳೀ
ದನುಭವಾ ಎಲ್ಲಾವನೂ || ಪ ||
ಸುರ ಅಸುರ ಭುವನ
ಪರವಸ್ತುವಿನೋಳಿರುತಿರುವದು
ಅರಿಯದಾ ರಾರಿಗಾಧಾರವಾಗಿ
ಹೊರ ಒಳಗೆನ್ನದೆ ಭರಿತವಾದ ಪರಿ || 1 ||
ಇಂಬಾದ ಸ್ಥಲದಿ ತುಂಬಿದ ದೈವವು
ನಂಬಿಗೆ ಇಂಬಹುದೆನಿಸಿದನೂ
ನಂಬಿದ ಸುಜನನಂ ತುಂಬಿದ ದೇವನು
ಉಭಯಹುದೆಂಬುವದನುಭ ಮಾಡಿದನು || 2 ||
ಸುಜನ ನಂಬಿದವ ಸತ್ತು ಸ್ಥಿರಕರವ
ತ್ರಿಜಗದೊಡಿಯ ನಿಂದಿರುತಿಹನೂ
ಅಜಹರಿಗಸಾಧ್ಯ ಹತವಾಗಿರುವದ
ನಿಜ ಎನಗಿರೆ ಭೂಜನರಿಗಿಲ್ಲದಕ್ಕೆ || 3 ||
ಜನನಿ ಜನಕನಿಗೆ ಜನಿಸದಂತ
ಒಂದು ದಿನಸೆನ್ನಗೆ ಅಹುದೆನಿಸಿದನೂ
ಮನವು ಪ್ರಾಣಚಿತ್ತ ತನುವಿನೊಳಿಲ್ಲದು ಘನ
ನಿರಂಜನನ ಘಳಿಗೆ ಬಿಡದದಕೆ || 4 ||
ತಾನೆ ಎಲ್ಲ ತಾನಲ್ಲೆಂಬುವೊ ಸಂಧಾನ
ಸಕಲರೋಳರುಪಿದನೂ
ಹೀನತೆ ಯೆಳ್ಳಿನ ಮಾತ್ರಿನಿತಿಲ್ಲದೆ
ತಾನಾಡಿಪುವದು ತೆರನಹುದೆನಿಸಿದ || 5 ||
ಏಳು ಪ್ರಕಾಶವು ಹೇಳಿಯಣಿನಟಿಪ
ಎಂತಾಶ್ಚರ್ಯವು ತೋರಿದನೂ
ಬೀಳೊಯ್ದನು ಪಂಚಂಶತಿ ಬಣವಿಯ
ಹಾಳಾಗೆ ಬಣವಿ ಚೋಳು ಸರ್ಪಾಲಯ || 6 ||
ಗಿರಿ ಕರ್ಪೂರವು ಅಣು ಉರಿಬೀಳಲು
ಬರಿದಾಗಹುದಾಗಿರುವದನೂ
ಅರುಪಿದೆನ್ನದರಂತಲ್ಲಿ ಸಾಹೇಬುಗುರು
ಶರಧಿ ಜ್ಞಾನ ಹರುಷ ಕೊಟ್ಟದಕೆ || 7 ||

ಕಂಡೇ ಪ್ರಾಣಾನಂದವ
ಕಂಡೇ ಪ್ರಾಣಾನಂದವ
ಕೊಡುವಾ ಗುರು ಪಾದವ || ಪ ||
ಕಂಡಾಗಳೆ ಎನ್ನ ಕಲುಷ ತಿಮಿರ
ಆ ದಿನಮಣಿ ಕಿರಣವು ತೆಗೆದಂತೇ
ತೆಗದನುಭವ ಮನಕದು
ನಿಜವಾಯ್ತೆ ಏನಿದಗಣಿತೇ
ನಾನೆಂಬ ಸ್ಥಿರ ತಾನೆಂಬ ದುಸ್ಥಿರ
ಧ್ಯಾನಂತರ್ಯದಿ ಕೂನ ತಿಳಿಪ || 1 ||
ಹೆಳವನ ಪಾಪವ ಕಳಿಯುವದಕೆ ತಾ
ಜಲನಿಧಿ ತೆರೆ ತಾಕಿದ ತೆರನೇ
ನರಪಶುಭವಲತೆ
ಪರಿಹರಿಸಿಹನೇ ದಯ ಧರಿಸಿಹನೇ
ಲಯ ಮರಣೆಂಬದ ಭಯಮುಂದೆ ಬಿಡಿಸಿ
ಜಯವಾಗೆನ್ನುತ ಅಭಯ ಕೊಡುವ || 2 ||
ಬಡವನು ಭಾಗ್ಯದ ಕೊಡನ ನೆಡೆಹಿ ತಾ
ಕಡು ಸಡಗರ ಕಂಡಾ ಪರಿಯ
ಎಡೆ ಬಿಡದನುಭವ ಸಡಗರ
ಕರಿಯಾ ಪೂರ್ವದ ಸ್ಥಿತಿಯಾ
ಬಿಡದಿದೆಂದನುತ ಕೊಡುವನ
ತೋರುತ ನುಡಿದಂತಹುದೆನಿಸುವ ದೃಢ ಮೂರುತಿ || 3 ||
ಹಸಿದ ಮಾನವಗೆ ರುಚಿ ಪಕ್ವಾನ್ನವ
ವಶವಾಗುತೆ ಸುಖವೆಸದಂತೇ
ವ್ಯಸನ ಸಮೋಹವು ನಶಿದರಿದ್ಹೋಯ್ತೇ ಕುಶಲೆನಗಾಯ್ತೇ
ಶಿಶುವಿನ ಮ್ಯಾಲ್ಕರುಣೆ ಸವಮಾತೆಯರ
ಶತ ಸಹಾಸ್ರಾದಯ ಸತತಧಿಕಿರುವನ || 4 ||
ಪ್ರಾಣದ ಹಾರ ನಿರಾಮಯ ಮನಸಿಗೆ
ಪೂರ್ಣ ರೂಪ ಪೋಷಕ ತೊಡಿಸೀ
ತ್ರಾಣ ಪ್ರಕಾಶಾಭರಣವೆ ಧರಿಸೀ
ಚರಿಯನುಸರಿಸೀ ಕ್ಷೋಣಿಯೋಳ್ಬೆರಿಯದ
ಶೂನ್ಯ ಗೊಂಬೆಯಾ ಕೂನ
ತಿಳಿಪನಲ್ಲಿಸಾಹೇಬು ಗುರುವಿನ || 5 ||

ಬ್ಯಾಗ ಬಂದು ಗುರುವಿನ ಕೂಡಿರಿ
ಬ್ಯಾಗ ಬಂದು ಗುರುವಿನ ಕೂಡಿರಿ
ಸಾಗರ ಸಂಸಾರ ದಾಂಟಿಪ ನೋಡಿರೀ
ನೀವು ಧನ್ಯರಾದಿರೀ || ಪ ||
ಹರ ಮುನಿದರೆ ಗುರು ಪೊರಿವನೆಂದೆಂಬ
ನಿರುತ ಹಿರಿಯರ ವಾಕ್ಯವು ಕೇಳಿರೀ || 1 ||
ದಧೀಮಧಿಸೆ ಉದಿಸಿದ ಬೆಣ್ಣಿನ ವಿಧಾ
ಪದವಿ ಮುಕ್ತಿಪದ ಪಡಕೊಳ್ಳಿರೀ || 2 ||
ಸ್ವಾತಿ ಉದಕದಿಂ ಜಾತಿ ಮುತ್ತಿನ ಪರಿ
ನೀತಿವಂತರು ಮಾಳ್ಪರು ಬನ್ನಿರೀ || 3 ||
ಬರುತಿವೆಂದು ಬಂದಿರುತಿವಿ ಧರಿಯೊಳು
ಮರತರೆ ಮರ್ಯಾದಿಲ್ಲ ಕೇಳಿರೀ || 4 ||
ಬರುವಾಗಾನಂದ ಪರ ಭೋಗುಣುವಂತ
ಗುರುತೆ ತಿಳಿದು ಬನ್ನಿ ಮರುತೀರೀ || 5 ||
ಯುಗ ವಿದ್ದೋಗುವ ಬಗಿಯರಿಯದವಗೇ
ನಗಿ ಗೀಡಾಗುವದು ನಂಬಿ ಕೊಳ್ಳಿರಿ || 6 ||
ಹೋದ ಹೋಗಿರುವ ಹೋಗದನೊಬ್ಬವ
ಬ್ಯಾಗೀ ತ್ರಿಭಾವ ಕೇಳಿ ತಿಳಿರೀ || 7 ||
ದಾಂಟಿ ಹೋಗುವೆವು ದಾವಲ್ಲಿರುವೆವು
ಜಂಟೆ ತಿಳಿಕೊಂಡರೆ ಜಾಣರಾದಿರೀ || 8 ||
ಜಾಣರು ಘಟವನು ಕ್ಷೀಣ ಮಾಡುವರು
ಪ್ರಾಣ ಪರಮಸುಖ ಭಾವ ಕಂಡಿರೀ || 9 ||
ಸುಖಪ್ರಾಣ ಭಾವ ಯುಕತಿ ತೋರುವರು
ಮುಕುತಿಗೆ ತಕ್ಕ ಮಾನವರಾದಿರೀ || 10 ||
ಪುಣ್ಯ ಅಲ್ಲಿಸಾಹೇಬು ಗುರು ದೊರಿಯದವಗೆ
ಉಣ್ಣೆ ಕ್ಷೀರರಿಯದಂತೇ ಸರಿ || 11 ||

ನೀನು ನಾನಿಲ್ಲದದು ತಾನು
ನೀನು ನಾನಿಲ್ಲದದು ತಾನು
ತಾನಿರುವದದರೋಳೇನು ಮೊದಲುದಿಸಿ ತಿಳೀ
ಧ್ಯಾನ ಗುರುಸೇವೆಯೊಳು ದೀನ ನಾಗುತ ನಿಂತೆ
ಕೂನ ತಿಳಿದವ ಪುಣ್ಯಶಾಲೀ || 1 ||
ತಾನಿಹ ನಿರಾಮಯದಿ ನಾನು ನೀ ನೇರ್ಪಡಿಪ
ಜ್ಞಾನ ಮೂರುತಿ ಪುಟ್ಟಿತಲ್ಲೀ
ನಾನು ನಾನೇ ಎಂದು ನನಗಿಂತಿದಿತರೆಂದು
ತಾನ್ಹಾಂಕರಿಸಿದ ವ್ಯಾಳ್ಯದಲ್ಲೀ || 2 ||
ಕ್ರೂರ ತರಗತಿವಂದು ಬೀರುತಲೆ ಗಡಬಡಿಸಿ
ಕ್ರೂರ ನೋರಡಿಸಿದ ಕೇಳೀ
ಘೋರ ಕರ್ಮದ ಹಾಮಘನ ಗಿರಿಗಳಂದದೀ
ಸೇರವನ ವಶವಾಯಿತಲ್ಲೀ || 3 ||
ಮತ್ತೊಂದು ತರಗತಿಲಿ ಮರ್ತ್ಯವೆಲ್ಲವು ಕಂಡು
ಮರವೆ ಬಿಟ್ಟೊರಡಿಸಿದ ಕೇಳೀ
ಅತ್ತ ಮೊದಲಾದ ಮದಮತ್ತ ಮರವಿಯ ಮಾಯಿ
ಇತ್ತ ಉಭಯವು ಕೂಡಿತಲ್ಲೀ || 4 ||
ಕೂಡಿದ ಉಭಯರೊಳು ಮೂಡಿದವು ತ್ರಿಗುಣಗಳು
ನೋಡುಹರಿ ರುದ್ರ ಬ್ರಹ್ಮಾ
ಮಾಡಿದವು ಅಪರಂಪರಾಡಿದವು ಜಗವೆಲ್ಲ
ಕಾಡೆದ್ದು ಕುಂತಿತೋ ತಮ್ಮಾ || 5 ||
ಮೂಲ ಏಕೋ ದೈವ ಲೀಲದೊಳಧಿಕ
ವಿಶಾಲ ತಿಳುವಿಕೆ ಪುಟ್ಟಿತಲ್ಲೀ
ಕಾಲಗಣಿತ ಮಿಕ್ಕ ಕಲತತ ಸ್ವಾರೂಪ
ಕಂಡು ಭ್ರಮಪಟ್ಟ ತಾನಲ್ಲೀ || 6 ||
ನನ್ನದೆನ್ನುತ ಆಗ ತನ್ನ ತಾನೇ ನೋಡಿ
ಧನ್ಯನಿರೆ ಬೋಧ ಮಾಡೀ
ನನ್ನ ನಿನ್ನಗೆ ಬೇಧವಿನ್ನಿಲ್ಲವೆಂದೆನುತ
ಚಿನ್ಮಯನು ಕರುಣ ಮಾಡೀ || 7 ||
ಕರುಣ ಪಡದಾದಿ ಗುರು ಚರಣಾರವಿನ ಮುಖದಿ
ಚರಿಯ ನಾಲ್ಕಹುದಾದವಲ್ಲೀ
ನಿರುತ ನಂಬಿಗೆ ವಿವರ ಚರಿತ ನಾಚಿಕೆ ಧೈರ್ಯ
ಪರಿಯಾಯಟ್ಟಿತದರಲ್ಲೀ || 8 ||
ನಂಬುವದಕೇ ಪ್ರಾಣ ಬೆಂಬಳಿಯ ತಂದಿತ್ತು
ಹಾಂಭಾವ ವಳಿದು ನಿಂತಿತ್ತೂ
ಎಂಬತ್ತು ನಾಲ್ಕು ಲಕ್ಷಾ ಜೀವ ಚೈತನ್ಯ
ಗುರುತಾಗಿ ತುಂಬಿ ತುಳಿಕಿತ್ತೂ || 9 ||
ವಿವರಿಸುವದಕೆ ಮನವು ತವಕ ತನ್ನೊಳಗಿತ್ತು
ಅವಿವೇಕವಡಗಿ ನಿಂತಿತ್ತೂ
ಭವಸಾಗರದ ಭಾರ ಪರಿಹಾರ ಮಾಡಲಿಕೆ
ಭಕ್ತರ ಪ್ರೇಮಿಯಾಗಿತ್ತೂ || 10 ||
ಚಿತ್ತ ನಾಚುವುದಕ್ಕೆ ಗೊತ್ತು ತೋರುತಲಿತ್ತು
ಮೃತ್ಯುಭಯ ಮೀಂಮೆರದಿತ್ತೂ
ಎತ್ತ ನೋಡಿದರದಕೆ ನೆರಳು ಜಾಡಿಲ್ಲದಂ
ತತ್ಯಾಂತವಾನಂದವಿತ್ತೂ || 11 ||
ಲೈ ಸೊಬಗೆ ಜೈ ಸೊಬಗೆ ಧೈರ್ಯ ವೈರಾಗ್ಯದೊಳು
ಕೈ ಸೇರಿದವರಿಗ್ಹೇಳಿತ್ತೂ
ಮಹಿಷ ನಂತಿಹ ಮಾನವನ ಮರವಿ ಕಳಿಯಲಿಕ್ಕೆ
ಮಹಿಯೊಳಗೆ ಮತ್ತು ಉದಿಸಿತ್ತು || 12 ||
ಪರ್ವತಕೆ ಪ್ರತ್ಯಕ್ಷ ಪರಮ ಪುರುಷಾದಾಗ
ಗಿರಿಯು ಕಿರಿದಾಗಿ ಕಾಣ್ತಿತ್ತು
ಗರ್ವ ಕಲ್ಪಿತ ರಾಜ ಕಂಗಳ್ಹೋಗದೆ ಮಾಡಿ
ನಿರ್ವಾಹ ನಿಜ ಪೊರತಿತ್ತೂ || 13 ||
ಅಂಗದೋಳೊಂದೊಸ್ತ್ರ ಸಂಗ ಮಾಡೆಳಿಯಾಲು
ಕುಂಗದೇ ಕಡಿಗ್ಯಾಗುತಿತ್ತೂ
ಮಂಗಳ ಪ್ರಮುದಾಯ ಮಾರ್ಗಿಡಿದು ತಾ ಹೋಗೆ
ಮಹ ಸುಗಂಧವೆಯ ಸವುತ್ತಿತ್ತೂ || 14 ||
ನಟಿಸುತಿರೆ ಪಾಷಾಣ ತಟದು ನಿಂತಿರೆ ನೋಡೆ
ಸ್ಫಟಿಕ ವಜ್ರಾಗಿ ಹೊಳಿತಿತ್ತೂ
ಸಟೆಯಂದ ಜನಕಿಲ್ಲಿ ಸಾಕ್ಷಿ ತೋರುತೆ ನಿಂತು
ಸರ್ವರೋಳ್ಬೆರದಾಡುತಿತ್ತೂ || 15 ||
ಇಹ ಜನಕೆ ಲಯವಾಯ್ತು ಪರಜನಕೆ ಸ್ಥಿರವಾಯ್ತು
ಜಯ ಜಯಾ ಎನಲಿಬೇಕಾಯ್ತು
ಲಯಭಯಂಕರ ಭಕ್ತರ ಬಾಧೆತಾ ಒಪ್ಪಿದದಕೆ
ಭಯಭಕ್ತಿ ಬಯಸ ಬೇಕಾಯ್ತೂ || 16 ||
ಇಂತ ಗುರು ಮೂಲಾಧಾರ ವಾದ್ಯಾಂತ
ವಲ್ಲಿಸಾಹೇಬು ಗುರುವೇ ತಿಳದಿತ್ತೂ
ಪ್ರಾಂತ ಪಾದಾನುಗ್ರಪಡದ ಬಾಲರಿಗೆಲ್ಲ
ಬಹುತರದಿದನುಭವ ಕೊಡುತಿತ್ತೂ || 17 ||

ಗುರುವಾದ ಮ್ಯಾಲೆ ಈ ಪರಿ ಸಾಂಗತ್ಯವು ತನ್ನಾ
ಗುರುವಾದ ಮ್ಯಾಲೆ ಈ ಪರಿ ಸಾಂಗತ್ಯವು ತನ್ನಾ
ತರುಳಾಗೆ ಬೋಧಿಪದೂ || ಪ ||
ಮಾಯಿ ಜೋಡಾಗಿ ತಾ ದಾಯಾದಿ ಸರಿತೋರ್ವ
ಗಾಯಕನನು ತೋರ್ವದೂ ತಾ ಪೇಳ್ವದೂ
ಗಾಯಾಕನನು ತೋರ್ವದೂ
ಪಾಯ ತಪ್ಪೀಸಿ ಅಪಾಯದೊಳ್ಮುಳಗೀಸಿ
ಆಯಾಸ ಇವನಿಂದ ಅತಿಕಷ್ಟಾಗುವದೆಂದೂ || 1 ||
ಜಗದಾಧ್ಯನಲ್ಲಿ ಈ ನಿಗಮವೆಲ್ಲವು
ಬಹುಸೊಗಸೀನಿಂ ಸೇರಿಹದೂ ಬೋಧಿಪದೂ
ಸೊಗಸಿನಿಂ ಸೇರಿಹದೂ
ಮಗನಾದವನ ಕಂಗಳಿಗೆ ಈಗ ತೋರ್ವಾದು
ಸಿಗನಿಂಥ ಗುರುವೆಂದು ಶಿಷ್ಯಾ ಹೇಳುವ ಹಾಗೇ || 2 ||
ಮನವು ಪ್ರಾಣವು ಚಿತ್ತ
ತನುದೇಹವಿದು ದಾವದನುಸಾರಿ ಸಿರುತಿಹದೂ
ಅದು ಪೇಳ್ವಾದುದನುಸರಿಸಿರುತಿಹದೂ
ತ್ರಿಣಿನೇತ್ರದೊಳು ದಾವ ಧಣಿಯಾಗಿ ಕಾಂಬನೋ
ತೃಣದೊಳು ದೃಷ್ಟಾಂತ ತನಯಾಗ್ಹೇಳಲಿ ಬೇಕೈ || 3 ||
ಧಿಟ ಸಟೆಯೊಳಗೆ ಸಂಘಟಿಸಿರುತಿಹ ಗುರಿ
ಪ್ರಕಟಾನೆ ಮಾಡೂವದೂ ಪ್ರತ್ಯಕ್ಷಾದೂ
ಪ್ರಕಟಾನೆ ಮಾಡುವದೂ
ಧಿಟದೋಳು ಸಟೆತೋರಿ ಸಟೆಯೋಳು ದಿಟ ತೋರಿ
ನಟಿಸೋಗು ಎಂದು ಭೂತದಿ ಹೇಳಲಿಬೇಕೈ || 4 ||
ಆವಭಾವದಲ್ಲೀ ಯಾಡುತಿರಲು ಒಂದೂ
ಜಾವಬಿಡದಿರುವಂಥಾದೂ ತಿಳಿಸುವದೂ
ಒಂದೂ ಜಾವ ಬಿಡದಿರುವಂಥಾದೂ
ಸಾಯಾದ ಮುಂದೆ ಉಪಾಯದಿಂ ಸತ್ತೀಹ
ಸೇವ ಜನರಿಗೆ ಸಂಜೀವಲ್ಲಿಸಾಹೇಬು || 5 ||

ಗುರುಕುಮಾರರ ಗೋಪ್ಯವಿದು ಸತ್ಯಾ
ಗುರುಕುಮಾರರ ಗೋಪ್ಯವಿದು ಸತ್ಯಾ
ಪರವಸ್ತು ಬೆರದಿಹ ಗುರುಕುಮಾರರ ಗೋಪ್ಯವಿದು ಸತ್ಯಾ
ಗುರು ಕುಮಾರರ ಗೋಪ್ಯ ಪೇಳುವೆ
ಸರಿಯಾಗದಿರುತಿಹರು ನ್ಯಾಯದೀ
ದರಿತು ತಮ್ಮಯ ಗೊತ್ತು ಮರಿಯದೆ
ಸಿರಿಪಡಿವ ಸುಜ್ಞಾನ ಸಾಕ್ಷಿಯ || ಪ ||
ಹುಡುಗ ಒಬ್ಬವ ಅಡವಿಯೋಳ್ಪೋಗಿ
ಮೀನ್ಮರಿಯ ಸಿಗದೇ ತಡಬಡಿಸುತಿರೇ
ರಾಜ ತಾ ಪೋಗಿ ಸಡಗರದಿ ಎಳದ್ಹಾಕಿ ಪೋಗುವ
ಪೊಡವಿಪತಿ ಕೈ ಪಿಡಿದು ನಿಲ್ಲಿಸಿ
ನಡಿಯಲಾಗದಿದರ್ದ ನಿನ್ನದು
ನುಡಿಯೆ ಪೊಡವೀ ಕೊಟ್ಟ ಪರಿಯಾ || 1 ||
ಮುದುಕ ಮೋಹದಿ ಬಂದು ನಿಂದಂತೇ
ಮಹನೀಯ ಬೇಕೆಂದೊದಗಿ ಸಭೆಯೊಳು ಸೇರಿಕೊಂಡಂತೇ
ಪದವಿ ಪಡದಿಹ ಪುಣ್ಯ ಪುರುಷರ
ಹೃದಯದೊಳಗತಿ ಭ್ರಾಂತರಾಗೀ
ಹೆದರದಿರುತಿಹರ್ಯಾರೆನಂದರು
ಮೊದಲ ಸಲ ಮೂಲ ತಿಳಿದಿಹ || 2 ||
ಕಾಲ ಕಳಿಯುವ ಕಟ್ಟಿಗೆಯು ಮಾರೀಕಲೋಚಿತಾ
ಜಗಪಾಲ ಬಂದನು ತಪ್ಪಿ ತಾ ದಾರೀ
ಬಾಲ ಕಾಣದೆ ಭಾರವೆತ್ತೆಂದ್ಹೇಳಲೂ
ನಗುತೆತ್ತಿ ಪೋದಾ
ಮ್ಯಾಲೆ ನಿಜ ಚೈತನ್ಯ ಕಾಣುತ
ಕೀಲ್ಹಿಡಿದು ಸುಖ ಪಡದ ಪರಿಯಾ || 3 ||
ಹದ್ದು ಮೀರಿದ ಖಂಡನೀ ನಹುದೋ ನಿನ್ನಂತೆ
ನಮಗೊದ್ಹದ್ದು ಮೀರಿದ ಕಾರ್ಯ ಬಂದಿಹದೋ
ಗುದ್ಯಾಟ ಸರಿಯಾಗಿ ಮಾಡೀ
ಮುದ್ದು ಬರುವಂತಾಡಿ ಪಾಡೀ
ಮಧ್ಯ ಜಗದ್ಗುರು ಕರುಣ ಕೂಡೀ
ಗೆದ್ದು ಪಕಪಕ ನಗುತಲಿರುವಾ || 4 ||
ನಿರ್ಮಿಸಿದ ನಿನ ಕಾರ್ಯ ನಿಂತಿಹವೇ
ಅದರಂತೆ ನಮ್ಮಯ ನಿರ್ಮಾಣ ಸರಿಯಾಗಿ ಕುಂತಿಹವೇ
ಕರ್ಮ ವಿರಹಿತವಾದ ಪ್ರಭುವಿನ
ಕಂಡ ಜನರಾ ಲೀಲನುಡಿ ಈ
ಮರ್ಮ ದಯಪಾಲಿಸಿದನಾದಿಯ
ಪಾರ್ಮಾಡುವ ಅಲ್ಲಿಸಾಹೇಬು || 5 ||

ಕಾಣಬೇಕೋ ಗುರುದೈವದ ಪಾದಾ
ಕಾಣಬೇಕೋ ಗುರುದೈವದ ಪಾದಾ
ಜಾಣಾ ಪೂರ್ಣಾ ಪ್ರಾಣಾನಂದದಿ || ಪ ||
ಪರ ರೂಪವೂ ಧರ ರೂಪವೂ
ಬೆರತೀಹವೂ ಬ್ಯಾರೆ ಮಾಡುತಾ || 1 ||
ಬ್ಯಾರೆ ಮಾಡೀ ಬೆರತೂ ನೋಡೀ
ದಾರಿ ಹಿಡೀ ಧೀರನಾಗಿ || 2 ||
ಅಂತರಂಗಾ ಎಂತಸಂಗಾ
ಕುಂತೇಕಾಂಗಾ ಭ್ರಾಂತನಾಗಿ || 3 ||
ಘನ ಸೂತ್ರದಿ ಮನೋ ನೇತ್ರದಿ
ತನ ಕ್ಷೇತ್ರದಿ ದಿನರಕ್ಷಕನ || 4 ||
ದಯ ನ್ಯಾಯನಾ ಇಹ ಪಾಲನಾ
ಭಯ ದೂರನಾ ಬೇಡಿದ್ದೀವನ || 5 ||
ಅಧಿಕಾರನಾ ಆಧಾರನಾ
ಹೃದಯೇಶನಾ ಬದಿಯಲ್ಲಿಹನ || 6 ||
ಗುರುವಲ್ಲಿಷಾ ಪರಮ ಪುರುಷಾ
ಬೆರತಾ ತೋಷಾ ಬಂದ್ಹೇಳಿಪೋದಾ || 7 ||

ದಿಟ್ಟಾಗುರು ಕೊಟ್ಟಾ ಪಟ್ಟಾಧಿಕಾರವೂ
ದಿಟ್ಟಾಗುರು ಕೊಟ್ಟಾ ಪಟ್ಟಾಧಿಕಾರವೂ
ಇಷ್ಟಾ ಪಟ್ಟಂಥ ಜನಕೆ ಕೊಡುವೆ ಬೋಧವೂ || ಪ ||
ಶ್ರೀಗುರುವಿನಾಜ್ಞತೆಯನು ಶಿರದಿವೊತ್ತೆನೇ
ಬಾಗಿ ಶಿರವ ಬರುವ ಜನಕೆ ಬ್ಯಾಗೆ ಪೇಳ್ವೆನೇ
ಆಗಮಕ್ಕತೀತ ದೈವಾವಹುದು ಮಾಳ್ಪೆನೇ
ನಾಗರೀಕ ಸುಜನ ಜನಕೆ ನಿಜವಾ ತೋರ್ಪೆನೆ || 1 ||
ನಿಜವೆನಿಸುತೆ ಗಜಹಯ ಭುಜಗಾದಿಗಳೆಲ್ಲಾ
ತ್ರಿಜಗದೊಡಿಯ ದೈವದೊಳಗೆ ತೋರಿಪೆಯಲ್ಲಾ
ಅಜ ಹರಿಹರ ಶ್ರಿಷ್ಟಿಕರ್ತಾ ಈತನೇ ಎಲ್ಲಾ
ಭಜಕಂ ಭಕ್ತಾದಿ ಭಾಗ್ಯ ಪರದೊಳಗೆಲ್ಲಾ || 2 ||
ದೈವಾಧೀನ ಜಗವೆಂಬುದ ದಾರಿ ತೋರ್ಪನೆ
ದೈವಾಯಿದು ಜಗವೆಂಬುದ ತಿಳಿಯಪಡಿಸುವೆನೇ
ಲಯವಾಜಯ ವೆಂಬುದೀಗಾ ಜಗಕೆನಿಸುವೆನೇ
ವಿವರದಿ ನೋಡಲ್ಕಿಜಗವು ಇಲ್ಲೆನಿಸುವೆನೇ || 3 ||
ಇದ್ದು ಕಾಣದಂತ ಖಂಡ ಇದನು ತೋರುವೇ
ಇದ್ದರೂಳಿಲ್ಲದನು ತೋರೀ ಇರುತಿಹದೆನುವೇ
ಇದ್ದು ಸತ್ತು ಇಲ್ಲ ಚಿತ್ತೂ ಉಭಯ ನಿಂತವೇ
ಮಧ್ಯ ರೂಪು ಮರ್ಮದಿಂದೇ ಮನಕೆ ಕಂಡವೇ || 4 ||
ಅಲ್ಲಿಸಾಹೇಬು ಗುರುದಾಸನು ಶಿವಸೇವಕನೂ
ಇಲ್ಲಿಂದತಿಭಕ್ತಿ ಜನಕೇ ಬೋಧ ಕೊಡುವನೂ
ಉಲ್ಲಾಸಾ ಪೂರ್ವಭರಣದೊಳಗೆ ಬೆರೆಪನು
ಕುಲ್ಲಕುಟಿಲತನಗಳೆಲ್ಲಾ ಕೊಲ್ಲಿಬಿಡುವನೂ || 5 ||

ಹಿರಿಯಿರೆಂಬಾ ಹೊಲದಿ ಬಿತ್ತೀ ಬೆಳಿಯಬಾರದೇ
ಹಿರಿಯಿರೆಂಬಾ ಹೊಲದಿ ಬಿತ್ತೀ ಬೆಳಿಯಬಾರದೇ
ಸಿರಿಯು ಪರಮ ಖರಿಯ ಬಾಹದೂ ಮರಿಯಬಾರದೇ || ಪ ||
ಬಿತ್ತಿದವರೆ ಬೆಳವರಿಹದೀ ನಿತ್ಯವಿರುತಿದೆ
ಬಿತ್ತದಲನುಭವಿಪರುಂಟು ಸಾರ್ಥವಾಗದೇ || 1 ||
ಒಂದಕೆ ದಶ ಸಪ್ತಫಲವೂ ಹೊಂದಬಾರದೇ
ಎಂದೋ ಎನ್ನದಿರಿಂದು ಮುಂದೂ ಬಂದು ಘಟಿಪುದೇ || 2 ||
ತೃಣವು ಶೇಷ ಕುಣಿಯ ಒಳಗೇ ರಣವು ಜೈಸ್ಯದೇ
ಗುಣ ಸುಗುಣಾರ್ಯರಿಗೆ ಕೊಟ್ಟಾ ಫಲದ ಬಲವದೇ || 3 ||
ಪರತತ್ವಾ ಹಿರಿಯರಿಂದೀ ಫಲವು ಬರುತದೇ
ಕರತತ್ವಾ ನರಗಿಯ್ಯೇ ಫಲವು ನಶಿಪುದೇ || 4 ||
ಸತ್ಯವಂತರಿಗಿತ್ತರೀ ಫಲಾ ಸುತ್ತಿಕೊಂಬದೇ
ಸತ್ಯವಂತರು ಸಾಯದೇ ಸತ್ತಿರುವರ ಬಿಡದೇ || 5 ||
ದ್ರವ್ಯಘಾತ ದೇಹದುರಿತಾ ದೂರವಾಗ್ವದೇ
ಅವ್ಯಕವ್ಯ ಶುಭ ಶಕುನಗಳನುದಿನಿರುವದೇ || 6 ||
ಅಲ್ಲಿಷಾರ್ಯರ ಹೊಲದಿ ಬೀಜಾ ಚಲ್ಲಬಾರದೇ
ಮಲ್ಲಿಗೆ ವನದಂತೆ ಫಲವೂ ಮೆರವುತಿರುವದೇ || 7 ||

ತಿಳುಹೀ ಬಾರೆಂದೂ ಕಳುಹೀದಾರೆನ್ನಾ
ತಿಳುಹೀ ಬಾರೆಂದೂ ಕಳುಹೀದಾರೆನ್ನಾ
ಉಳಹೀಕೊಳದೇ ಗುರುವಿನ ಮರ್ಮ ರಚನಾ || ಪ ||
ಜಾಗ್ರದರ್ಥವ ಶೀಘ್ರ ಪೇಳೀ
ಉಗ್ರ ಮರಣವು ತಪ್ಪಿಪೊಂತಾ
ನುಗ್ರ ದಯಪಲಿಪರು
ಇಹರಾಲಸ್ಯಮಮೃತಂ ವಿಷಂ ಎಂದೂ || 1 ||
ಕನಸಿನರ್ಥವ ಮನಸಿಗಿಲ್ಲಹು
ದೆನಿಸುವಂತಾ ಹಿರಿಯರೀಹರೇ
ಘನದ ನೆನವಂಜೀವ ಕಾಣ್ವಂ
ಅನುಮನಂ ಸಂಕಟಂ ಎಂದೂ || 2 ||
ಷುಪ್ತಿಯೋಳುಜ್ಞಪ್ತಿಯನು ಮರದಿಹ
ಗುಪ್ತದನುಭವ ಜೀವವನ್ನೂ
ಷುಪ್ತಿ ಸಂಶಯ ಛೇದಿಪಂತಾ
ಸೂಕ್ಷ್ಮ ಮಾರ್ಗವ ಸೇರಿರೆಂದೂ || 3 ||
ಮಕ್ಕಳೊಂಬತ್ತಿದ್ದು ಹಿರಿಯರು
ಲೆಕ್ಕವಿಲ್ಲದೆ ಬಳಸಿದಂತೇ
ರೊಕ್ಕ ಕನಕವು ಇದ್ದು ಇಲ್ಲದೇ
ತಿಳಿದು ಧನ್ಯರಾಗಿರೆಂದೂ || 4 ||
ಎತ್ತು ತುತ್ತೂ ಗೊತ್ತು ಹೊತ್ತೂ
ಮರ್ತ್ಯ ಮನುಜರು ಮರದಿರುವರೂ
ಉತ್ತುಮಮಗುರವಲ್ಲಿಸಾಹೆಬು
ಹೆಚ್ಚರಿತ್ತೀಗೆಬ್ಬಿಸೆಂದೂ || 5 ||

ಮಂಗಳಾರುತಿ
ಬೆಳಗಿ ರಾರತಿ ಗುರುವಿಗೇ ಬ್ರಹ್ಮಾಂಡ ಭರಿತಗೆ
ಬ್ಯಾಗೆ ಬೆಳಗಿರಾರತೀ ಗುರುವಿಗೇ
ಬೆಳಗಿರಾರತೀ ತಂದೂ ಭಕ್ತ ಸಂಧಣೆ ನಿಂದು
ಇಳಿಯೊಳು ಥಳಥಳಿಸುವ ಪರಸುಖವನು
ಘಳಿಲನೆ ಘಟದೋಳಳವಡಿಸಿ ದಾದ್ಯಗೆ || ಪ ||
ಲೋಕ ದೈವಾದ ಸಂಧೀ ಏಕತ್ವ ಪರುಷಾವೇದೀ
ಸೋಕಿದ ನರರನು ಸುಳಿವಿಲಿ ತನ್ನಯ
ಶೇಖರ ಮರ್ಮದಿ ಸ್ಥಿರಪದ ಕೊಡುತಿಹಗೇ || 1 ||
ಹರ್ಷಂಕಾಲದಿ ತನ್ನಯ ಹೆಸರು ಪಾಡೀದ ಕರ್ಮಿಯಾ
ಶಶಿ ಶಾಂತಿ ಮೀರಿದ ಕರುಣ ರಸದಿ
ಬಹು ಪಶುಜನರನು ತನ್ನ ವಶ ಮಾಡಿಕೊಂಬಗೆ || 2 ||
ತನ್ನ ಭಕ್ತರ ಬಾಧೆಯಾ ಮುನ್ನ ಬಿಡಿಸಿದ ಯೋಗಿಯಾ
ಚಿನ್ಮಯ ವಂದದಿ ಚಿದ್ರೂಪಡಿಗಳು
ಕಂಣೊಳು ತುಂಬಿಹ ಪುಣ್ಯ ಪುರುಷಗೆ || 3 ||
ಅತಿಭಯಾ ಮರಣಾವನ್ನೂ ಹಿತಕರ ಮಾಡುವನೂ
ಸತತ ನಿಜಾಲಯ ಸಾಕ್ಷಿ ತನ್ನಮಯ
ಮತಿಯೊಳು ಕೂಡಿದ ಮೃತ್ಯುವು ಜೈಸಿಹಗೆ || 4 ||
ಜಾಜ್ವಲ್ಯಮಯ ಸ್ವರೂಪನೇ ಅಲ್ಲಿಸಾಹೇಬು ಗುರುವೆ
ಕುಂತನೆ ವಾಗ್ಜೃಂಭಣದೊಳು
ಪರಬ್ರಹ್ಮನ್ಮಯ ವಿಜೃಂಭಿಪ ತಮಗರ್ಭದ ಶಿಶುಗಳಿಗೆ || 5 ||

Categories
Tatvapadagalu ಶಿಲವೇರಿ ಶಿವಪ್ಪನವರ ತತ್ವಪದಗಳು

ಪರತತ್ವ ಕಾವ್ಯ ದೈವ ಪ್ರಾರ್ಥನೆ ಪ್ರಕರಣ

ಇದು ನೋಡೋ ಏಕೋ ಮೂರ್ತಿಯ
ಇದು ನೋಡೋ ಏಕೋ ಮೂರ್ತಿಯ
ಪ್ರಾರ್ಥನೆ ಭಜನೇ || ಪ ||
ಮುಗಿಲು ತೊಲೆ ಕಂಬಿಲ್ಲದಂತೆ
ಹಗಲಿರುಳು ಇರುವಂತೆ ಮಾಡಿದ || 1 ||
ತರುಗಳೊಳು ಪುಟ್ಟಿರುವ ಕುಸುಮವು
ಮರಕೆ ಬೆರಿಯದ ಪರಿಯ ಮಾಡಿದ || 2 ||
ಮಾನವರ ಘಟಹೀನವಾದರು
ಪ್ರಾಣಧಿಕ ನಿರ್ಮಾಣ ಮಾಡಿದ || 3 ||
ಪಶುವಿನಾ ಘಟ ಪರಿಶುದ್ಧವೇ
ಮಿಸುಪ ಜೀವನ ಹೀನ ಮಾಡಿದ || 4 ||
ಭಾನುಯಿಂದೂ ಬಿಂಬ ಒಂದೇ
ಬಡಬಾಗ್ನಿ ಶಾಂತುಭಯ ಮಾಡಿದ || 5 ||
ಶರಧಿ ನಿಲಿಸಿಹ ಭೂ ಬಗಿಯ
ದೇ ಹರಗೆ ಹರನಿಗಸಾಧ್ಯವಾದ || 6 ||
ಕನಕ ಘನವೇ ಕಲಿಜನರಿಗೆ
ಕಲ್ಪಿಸಿದ ರುಚಿ ಸ್ವಲ್ಪಿಲ್ಲದ || 7 ||
ಗಿರಿಗೆ ಸರಿ ಕರಿ ತುರಗ ದೇಹವು
ಸರಿಯಲ್ಲದ ಕೀಟಕದಿ ನೊಂದಿಪ || 8 ||
ಇಂತನುತಿಗೊಪ್ಪಂತ ದೈವವು
ಎಂತವರಿಗವರಂತೆ ಸೇರಿಹ || 9 ||
ಮೊಗವು ನಖನೇತ್ರಿಲ್ಲದಾ ಪ್ರಭು
ಯುಗಯುಗದ ಅಗಣಿತ ಪರಾತ್ಪರ || 10 ||
ವರ್ಣವಲ್ಲದು ನಿಜ ನಿರ್ಣಯಾ ಪೂರ್ಣ
ಅಲ್ಲಿಸಾಹೇಬು ಗುರುವಿಧ || 11 ||

ಎಷ್ಟೋ ನಿನ್ನದೂ ದಯಾ
ಎಷ್ಟೋ ನಿನ್ನದೂ ದಯಾ
ಏ ಸ್ವಾಮಿ ಜಗದಾ ಜಿಯಾ
ಭ್ರಷ್ಟರು ನಿನ್ನ ಕಾಣದೆ ಬ್ಯಾರೆ
ಬಯಸುವದಿದನ್ಯಾಯ || ಪ ||
ಪುಟ್ಟೀದ ಶಿಶುವಿಗೆ ಕ್ಷೀರಾ
ತಟ್ಟಾನೆ ಪುಟ್ಟಿಪೆಯಲ್ಲೋ
ಹೊಟ್ಟಿಂದ ಹೆತ್ತ ತಾಯಿಗೆ
ಪುಟ್ಟಿಪದಕೆ ಬಾರದಿದಲ್ಲೋ || 1 ||
ಮಲೆ ಉಣುವ ಬಗೆಯ ಬೋಧವೂ
ನೆಲೆಯ ದಯಮಾಡಿದಿಯಲ್ಲೋ
ಕುಲಬಂಧು ತಾಯಿ ತಂದೆಯೂ
ಹೊಲಬರಿಯದೆ ಇರುತಿಹರಲ್ಲೋ || 2 ||
ದಂತದಲ್ಲಿರುವ ನಾಲಿಗೆ
ಅಂತಿಲ್ಲದಾಡಿಪೆ ಹೀಗೇ
ಕಿಂಚಿತ ಸಿಗದಂತ ಬಾಧಿಗೆ
ತಂತರ ಬಾರದು ಎಲ್ಲರಿಗೇ || 3 ||
ಕಣ್ಣೆರಡು ರಕ್ಷಿಪೆಯಲ್ಲೋ
ನಿನ್ನಂತ ಪ್ರಭುವಿನ್ನೆಲ್ಲೋ
ಸಣ್ಣ ದೊಡ್ಡ ಜನದ ನ್ಯಾಯಾ
ಜರಿಯದೆ ನೀ ಪೊರಿಯುವಿಯಲ್ಲೋ || 4 ||
ಅಡವಿಯೊಳಾ ಪಶು ಪಕ್ಷಿಗಳಾ
ಬಿಡದೆ ಪೋಷಿಪೆ ಕೋಟಗಳಾ
ಗಿಡ ಮೊದಲಾಗಿರುವ ಮರಗಳಾ
ಬಿಡದಿವಗಳಿಗಿಡುವೆ ಸುಖಗಳಾ || 5 ||
ಮಕರ ವ್ಯಾಘ್ರಗೆ ಕೊಡದೆ ಚೋರಗೇ
ಸುಖವು ಇತ್ತೇವಬ್ಬತೀತಗೆ
ಸಕಲಕೆ ಸುಖ ಕೊಡುವಡಿಗಡಿಗೆ
ವಿಕಟ ಕಪಟ ಜನರನದ್ಹಾಗೇ || 6 ||
ಅಲ್ಲಿಸಾಹೇಬು ಗುರು ಸಮ್ಮುಖದಿ
ಎಲ್ಲರಿಗೆ ಕರುಣ ತೊಟ್ಟಿದಿ
ಕುಲ್ಲರನದೆ ಬೋಧ ಕೊಡುತಿದೀ
ಇಲ್ಲೋ ನಿನ್ನ ಸರಿಯೀ ಜಗದೀ || 7 ||

ನೀ ಮರತಾಡಿದಿಷ್ಟಾಯಿತಲ್ಲಾ ಸೋಮಾರ್ಕ
ನೀ ಮರತಾಡಿದಿಷ್ಟಾಯಿತಲ್ಲಾ ಸೋಮಾರ್ಕ
ಭೂಮಿ ಗಗನ ಜನ ಮಹಪ್ರಭೂ
ನೀ ಮರತಾಡಿದಿಷ್ಟಾಯಿತಲ್ಲಾ || ಪ ||
ಮರುವಿಲ್ಲದಿರುವೆ ನಿನ್ನರುವೆಂಬೋ ಕರುಹಾನು
ಹೊರಗಾಗುವದಕಿದೊಂದಾಡಿಬಿಟ್ಟೆ
ಮರುವು ಸಮೀಪಕ್ಕೆ ಬರದಂತೆ ನೀನಿಂದು
ಶರೀರ ಜೀವೇಶಾಗೆ ಬೆರಸಿಬಿಟ್ಟೆಲ್ಲಾ || 1 ||
ಜೀವದಾಕಾರಕ್ಕೆ ಕೇವಲ ಶೂನ್ಯಕ್ಕೆ
ತಾಯಿ ರಕ್ತಬಿಂದೂ ತೊಡಕೀಸೆದೇ
ಜೀವ ನಿನ್ನನು ಮರದ ಸಹ್ಯಾವೆ
ಘನವೆಂದಾ ಕಾಯವಾಗೋಪರೀ ಕಲ್ಪಿಸೀದೆಲ್ಲಾ || 2 ||
ಪ್ರಥಮ ಮಾಸದಿ ಮುದ್ದೆ ದ್ವಿತಿ ಮಾಸ ಗಟ್ಟ್ಯಾಗಿ
ತೃತಿಯ ಮಾಸದಿ ಚೆಗರೇ ರೂಪಂತೇ
ಚತುರ ಪಂಚಮಿ ಷಷ್ಟಿ ಸಪ್ತಷ್ಟ ನವಮಾಸ
ಜತೆಮಾಡಿ ಚೇತನ್ಯ ಗತಿ ನೀ ಕೊಟ್ಟೆಲ್ಲಾ || 3 ||
ಸಡಗರಾ ಶಿಶುಲೀಲ ಒಡಗೂಡುಡುವೋ ವ್ಯಾಳ್ಯಾ
ಸಿಡಿಲಿನಂತವಾಯು ಘಡಿಘಡಿಸೇ
ನಡುನೆತ್ತಿ ಗೊಡಿಯಾಲು ವಡದಿರಿ ಗಧೋಮುಖ
ತಡಿಯಾದೆ ಮಾಡಿ ತತ್ತರಗೊಂಡಿತಲ್ಲಾ || 4 ||
ತತ್ತರ ಬಡುತಾಗ ಎತ್ತೆತ್ತ ತಿರುಗದೆ
ಬತ್ತಲೆ ತಂದು ಮರ್ತೆಕ್ಕಾಕಿದೆ
ಹೆತ್ತಯ್ಯ ಮುತ್ತಯ್ಯ ಅತ್ತೆ ಮಾವ ಭಾವ
ಸುತ್ತ ಸಮೋಹಾವು ಸುತ್ತಿದರಲ್ಲಾ || 5 ||
ಏಕಾಂಗ ಮೇಲುಗುಟ ರೂಪಾಮುಖಂಡಿಂಚಿ
ರೂಷಾಮೆಲುಗುಟ ರೂಢಿ ರೂಪಮುಂಚಿ
ರೂಢಿ ರೂಪಮುಲಂದು ಪಾಪ ಮುಲೊಪ್ಪಿಂಚಿ
ಪಾಪಾದುಲ್ಹರಿಯಿಂಚೆ ಗುರುರೂಪ ಮುಂಚೀ || 6 ||
ಮಿಗುಲಾಜಾತೆನುಟಿಕು ಪಗುಲೈ ಪ್ರಕಾಶಿಂಪ
ಯುಗಮು ಮೀರಿನ ಗುರುತು ಲೇಡೆಲುಗುಟಾ
ಸೊಗಸೈನ ಸ್ಥಲಮೂಲು ಸುಡಿದ್ರಿಷ್ಟಿ ಜತಗಲ್ಪಿ
ತೆಗತ್ಯಾರ ಕಾಡೈ ತೆರಚಾಟುಂಡೆದೆಲ್ಲಾ || 7 ||
ಏಡೇಡು ಪದುನಾಲು ಗೆಲುಗೂಟ ಮಲುಗೂಟಿ
ಏಮಿಗಾನಿ ಶ್ರಮಮು ಎದರೂಗುಂಚೀ
ಚೂಡಮಾಟಾಡುಟ ಚೂಪುಲೊ ಪಲಕುಲೋ
ಯಾಡ ಚೂಚಿನ ಉನ್ನಟ್ಟಾಡಿಂಚೆದೆಲ್ಲಾ || 8 ||
ಚೆರಿಯ ನೀದೆಲುಗೂಟ ಮರಿಯಾದಿ ನಿಲುಚೂಟ
ಪರಿಪರಿ ಚೀನಿ ಚೀನಾಂಬರಂಬೂ
ನಿರ್ಮಿಂಚಿ ಕರುಣಿಂಚಿ ಕೊರಗಾನಿ ಸಂಪದ
ಮರಕಂಡಿ ಕೋರಂಡಿಚ್ಚೆದ ಜೆವ್ವೆದೆಲ್ಲಾ || 9 ||
ನೆಪ್ಪುದಪ್ಪಿ ಮೀರು ತಪ್ಪು ಜಾಡಲೊ ಎನ್ನ
ನಿಪ್ಪುಲ ಪಾಲೌದುರಿದಿ ನಿಜಮೂ
ಜೆಪ್ಪುಮು ತಪ್ಪಕ ಟಪ್ಪಟಪ್ಪ ಟಿಕಿಲಲೊ
ಗೊಪ್ಪಗುರುವುಲಚಾತ ಜೆಪ್ಪಿಂಚೆದೆಲ್ಕಾ || 10 ||
ಝೂಟಾ ಖುದಾಯಾಂಕು ಝೂಟಾಯೀ ದುನಿಯಾಕು
ಸಾಚಾಹೈ ಬೋಲ್ಯಾಸೋ ಕಾಫಿರಾಂಕು
ಕಾಟಾ ಜುಬಾಕುಪ್ಟರ್ ಖೂಟಾಂಸಿ ಮಾರೇಂಗಾ
ಭಾಟ ಬಿಸರನಕೋ ಬೋಲ್ಯಾ ಹೈ ಅಲ್ಲಾ || 11 ||
ಖಬರಮೆ ಮುನ್ಕೀರ ಜಬಾಬ ಸಬು ಪೂಚಾಸೂ
ಸುಬಾಹನಲ್ಲಾ ವೋಬಿ ಸಚ್ ಕರ್ಯಾ
ಗಫಲಸ್ಸೆ ನೈ ಬೊಲೆ ಖಬರ್ ದೋಜಕ್ ಹೋಂಗ
ಅಬ್ ಜಲ್ ದುಷಿಯಾರ್ ವೊ ಬೋಲ್ಯಾ ಹೈ ಅಲ್ಲಾ || 12 ||
ದೇಕೊಸುನ್ ಹಷರಮೆ ಆಕರ್ ಹಮ್ ಪೂಚೇಂಗ
ನೇಕು ನೀಯತ್ತು ಸೊಬ್ಬಿ ಕ್ಯಾಕ್ಯಾ ಹೈಸೋ
ನೇಕು ನೈಸೊ ಬದ್ದೀಲೊಕಾಂಕು ದೋಜಕ್ ಮೆ
ವೋ ಖಾಯಂ ಬೋಲ್ಯಾ ಹೈ ತೂ ಖಾದರಲ್ಲಾ || 13 ||
ನನ್ನಾ ಬಚ್ಚಾ ಕೈಸ ಮೈಫನ್‍ನೈಸೊ ವೈಸ
ಘನಲಾಯಿಲಾಮೆ ಕೋನಾವೆಗಾ
ಜನ್ನತ್ವಾಸ್ತೆ ಉಸ್ಕು ಜಾಗಾ ಹಂ ರಕುದಿಯ
ಫಸಹುಂ ಮವಜಹುಲ್ಲಾ ಬೋಲ್ಯಾ ಹೈ ಅಲ್ಲಾ || 14 ||
ಷಾಯದಂಬಿಯಾಹೈ ಷಾಹೆಚ್ಚರಸಾಹೆಬ್ ಹೈ
ಸಾಹೆದಲ್ಲಿಸಾಹೇಬ್ ಪೀರ ಫಕೀರ್ ಹೈ
ಗವಾಯಿ ಭೇಜಹೈ ಜಗಮೇ ಧಂಡೂರ ಪುರಕಾನ್ಮೇ
ವಾಹುವ್ವ ಬೇಪರ್ವಹೈ ಬೆನಮೂನಲ್ಲಾ || 15 ||

ಎನ್ನಂತ ಕಡುಪಾಪಿ ಇನ್ನುಂಟೆ ಲೋಕದೊಳ್
ನಿನ್ನಂತ ಪ್ರಭು ಕಾಣೆನೋ
ಮಹಾಗುರುವೇ ನಿನ್ನಂತ ಪ್ರಭು ಕಾಣೆನೋ || ಪ ||
ತೃಣ ಸಂದಿಲ್ಲದಲೆ ತುಂಬಿಹನೆರಿದು ಶೃತಿತತೀ
ಎನುತಿರುವದು ಕೇಳಿದೆ ನಿನ ಮಾರ್ಗಾದಿ ಮನಸಿನೋಳ್ ನಿಜ ಮಾಡಿದೆ
ಅನುಭವದಿ ಅಹುದೆನಿಸಿ ಮತ್ರ್ಯದಿ
ಘನತೆ ಮಾಡದೆ ಕೆಡುತಲಿರುವೆನೇ
ನಿನಕರುಣ ನಿಂತದಕೆ ಭುವನದಿ
ಮನುಜರೋಳ್ ನಾ ಗಣನೆಯಾದೆನೂ || 1 ||
ಪಶುಮೃಗ ಪಕ್ಷಿ ಪಾಮರ ಭೂತ ಗಣ ತೃಪ್ತಿ
ಕುಶಲಾದಿ ದೂಡುತಿರುವೆ
ಇಲ್ಲೆನಲಿಕ್ಕೆ ಗತಿ ಇಲ್ಲದವನಲ್ಲವೇ
ಮಸಣಿಸುವ ಸಂಶಯದಿ ಬಿದ್ದು
ವಸುಧೆ ಜನರಾವರ್ನು ವಿಡಿದೂ
ಹಸಗೆಟ್ಟು ಪೋಗುವನನೀ ಕಂಡ
ಸಮ ಕರುಣದಿ ವಶಕೆ ತೆಗದೇ || 2 ||
ನಂಬೀದ ಸುಜನಾರು ಗಂಭೀರರಾದರೂ
ಮುಂಬಾರಿದೊರಟೋದರೂ
ಹಿಂದಾದವರು ನಂಬದ ನ್ಯಾಯಾದರೂ
ಮುಂಬರಿದು ಮೊದಲವರು
ಬಾಗಲ ಕಂಬದಂತೆ ನಿಂತುಕೊಂಡರೂ
ಜಂಬಾಟಿ ಈಗೆನಗೆ ಅಗೆದೆ ಬೆಂಬಿಡದೆ ನಿಂತದೇ || 3 ||
ಜಗಪತೀ ಮೊಗವು ಕಾಣದೆ ಕಟ್ಟಿಗೆತ್ತೆನಲೂ
ನಗುತೆತ್ತಿ ನಡದ್ಹೋದನೋ ಕಟ್ಟಿಗೆ ಕೇಳೇ
ಒಗೀ ಸಾವಿರ ವರ ಎನುವನೂ
ಧಗಿಪ ಸಿಂಹಾಸನವ ಕಂಡು
ಧಾತನೆನ್ನುತ ಧನ್ಯವಾದನೂ
ಆ ತೆರನ ನಾನಂಬಿ ಉಳಿಯದೆ
ಘಾತಕದಿ ನಾ ಬಿದ್ದು ಕೆಡುವೆನೂ || 4 ||
ಅಧಿಪತಿ ಅಲ್ಲಿಸಾಹೇಬು ಗುರುಪ್ರಭು ಮೂರ್ತಿ
ಅಧಮ ನಾ ಒಬ್ಬಿದ್ದೆನು
ನಾ ಬಂದೀಗ ಮುದುಕಿಯಂತೊದಗಿದ್ದೆನೊ
ಬದಿಯಲ್ಲಿ ಕಾದಿರೂ ಎಂದರೆ
ಬದಿಕಿ ಹೋದೆನೊ ಪ್ರಭು ಸ್ವರೂವೇ
ಇದನು ಎನು ಎನುವದಪರಾಧವೆ
ಹೃದಯೇಶ ಕ್ಷಮಿಸಿದನು ಗುರುವೆ || 5 ||

ಎನ್ನಂತ ದ್ರೋಹಿ ಎಲ್ಲಿ ಇಲ್ಲವೂ
ಎನ್ನಂತ ದ್ರೋಹಿ ಎಲ್ಲಿ ಇಲ್ಲವೂ
ನಿನ್ನಂತ ಪ್ರಭು ಕಂಡು ನಂಬಿಗ ಇಲ್ಲವೂ || ಪ ||
ಪಶುಗಣಾ ಶುನಕ ತನ್ನಾ ಪಾಲಿಸುವನೂ ಬರೇ
ಕುಶಲದಿ ಕಲತೂ ಕಂಡಾಡುವದು ಎನ್ನಿಂದಾಗದೂ || 1 ||
ಹುಡುಗನ ಪಿಡಿದು ಮಾತೇ ಬಡಿದು ಬಾಧಿಸಿದರೂ
ಎಡಬ¯ ಒಡಗೂಡುವ ದೃಡವು ಎನ್ನಿಂದಾಗದೂ || 2 ||
ಮಾರುತಿ ಮಾತೆ ಗರ್ಭಸೇರಿ ಕಚ್ಚಿರುವಂತಾ
ಸಾರವೆಇಲ್ಲಾವೆನಗೇ ನರಾಧಮನಾದೆ ಹ್ಯಾಗೆ || 3 ||
ಧಾತ ಒಬ್ಬನಾಥನಾ ಜಾತಾಕ ನಾಮಾ ಕೇಳೇ
ಸೋತು ನಿಮ್ಮೆಚಿತ್ತುವೆಂಬಾ ಮಾತು ಎನಗೇ ಬಾರದೂ || 4 ||
ಯಾರು ಈ ವಸ್ತ್ರ ಕಾಯ್ವಾರ್ಯಾರ ನೀನಿಟ್ಟು ಪೋದೆ
ಯಾರು ನಿಮ ಕಳುಹಿದವರೆ ಇಹರೆಂದಾರೆನ್ನಿಂದಾಗದೂ || 5 ||
ಹಿಂದೆ ಹಿರಿಯಾರು ಸುಖಾ ಬಂದರೆ ಬಳಲುವರೂ
ಕುಂದು ಬಂದರೆ ತೋಷಾ ಕೂಡ್ವರಾಭಾವವಿಲ್ಲವೂ || 6 ||
ತಿಳೂವಿಕೆ ನಂಬಿಗೆ ನಡತೀ ತ್ರಿಭಾವದಿಂದಿರುವ ಮಹನ್ಯರಾ
ಬಳಿಯಲ್ಲಿ ಧೂಳಿಯ ಮಾಡೀ ಪಾಲಿಶನ್ನಂತ ಪಾಪಿ || 7 ||
ಆಶೆ ಪಟ್ಟವರನೆಲ್ಲಾ ನಿರಾಶೆ ನೀ ಮಾಡೇಯಿಲ್ಲಾ
ಲೇಸಾದ ಕರುಣವ ಕೇಳ್ವೆ ದೋಷಕಾರೆನ್ನಂತವನು || 8 ||
ಸತತ ನಿಮ್ಮಾನು ಬೆರದಾ ಸ್ವರೂಪ ಅಲ್ಲಿಸಾಹೇಬು ಗುರುವಾ
ಇತರ ನೋಡಾದ ಬೋಧ ಬೋಧಿಪ ನಾನಂಬಲಾರೆ ಎಲ್ಲೀ ಇಲ್ಲಿಯೂ || 9 ||

Categories
Tatvapadagalu ಶಿಲವೇರಿ ಶಿವಪ್ಪನವರ ತತ್ವಪದಗಳು

ಪಾರಮಾರ್ಥ ಶರಧಿ : ಭಾಗ – 2

ನಾಚಿಕಿಲ್ಲೇನ್ ಎನಗೇಳಲ್ಕೆ ನೀಚಾಗೆರಗಲ್ಕೆ
ನಾಚಿಕಿಲ್ಲೇನ್ ಎನಗೇಳಲ್ಕೆ ನೀಚಾಗೆರಗಲ್ಕೆ
ಛೀಛೀ ನರನೂ ಜಡದಾಕಾರಿ ಸೇವಾಭಾವಾ ನೀ ಒಪ್ಪಲ್ಕೇ || 1 ||
ಕೊಟ್ಟಾನೇನೂ ಇಷ್ಟಾರ್ಥವನೂ ಭ್ರಷ್ಟಾಗೆರಗಲ್ಕೆ
ಅಷ್ಟಾಸಿದ್ಧಿ ಗಣಿಮಾದಿಗಳೆಷ್ಟೋ ಜನಕೆ ಕೊಟ್ಟವನೆನ್ನದೆ || 2 ||
ಬಂದೀತೇ ನಿನ್ನೊಂದೂ ದೇಹಾವಂದಿ ನಟಿಸಲ್ಕೆ
ಸಿಂಧೂ ಸಪ್ತಾಸ್ಥಲಗಳೆಲ್ಲಾ ಒಂದೇ ದಿನ ಓಡ್ಯಾಡುವನೆನ್ನದೆ || 3 ||
ಪವನಾ ವಿಡಿದೂ ಭುವನಾ ಬಿಟ್ಟೂ ಜವದಿಂ ಮ್ಯಾಲಕೆ
ಸಾವಕಾಶಾದಿಂ ಗಗನಕ್ಕೇರಿ ಥಟ್ಟನೆ ಇಳಿವಾದಿಟ್ಟಹ ನೆನ್ನದೆ || 4 ||
ಅಲ್ಲೀಷಾ ಗುರು ದಾಸಾದಧಮಂಗಿಲ್ಲೀ ಗೆರಗಲ್ಕೆ
ಎಲ್ಲಾದಭವಾ ದೈವಾ ಪೇಳಲ್ ಉಲ್ಲಂಘಿಸುವಾ ಬಲ್ಲಿದನೆನ್ನದೆ || 5 ||

ಅಯ್ಯೋ ಎನ್ನ ದುರ್ಗತಿ ಜೀಯ ದೈವ್ವಿತ್ತೀಗತಿ
ಅಯ್ಯೋ ಎನ್ನ ದುರ್ಗತಿ ಜೀಯ ದೈವ್ವಿತ್ತೀಗತಿ
ಮೈಯ ಸುತ್ತಿತೆ ಹೀನತಿ ಸೈಯಾದನೇ ನರಪತಿ || 1 ||
ಶರಣು ಮಾಡದೆ ಕೆಟ್ಟೆನೆ ನರನ ವನ ಜರಿದಿಟ್ಟೆನೇ
ಪರಮನಾಜ್ಞೆಯ ಬಿಟ್ಟೆನೆ ಶರಧೀಚೆಯಲಿ ಬಿದ್ದೆನೆ || 2 ||
ವೇದಶಾಸ್ತ್ರಾ ಯೋಗವೂ ಸಾಧನೆನಸರಿ ದೇಹವೂ
ಮೇಧಿನಿ ಯೊಳ್ಯಾರಿಲ್ಲವೂ ಗಾಧಕಂಡವು ಈಗವೂ || 3 ||
ಆಧ್ಯರಾದೂತಧಿಕರೂ ಮಧ್ಯಯನಗತಿ ಪೇಳ್ದರೂ
ಸಿದ್ಧ ಕೆಡುತಿದ್ದೆಂದರೂ ತದ್ವಾಕ್ಯ ನಿಜ ತೋರ್ದರೂ || 4 ||
ನಾ ಘನೆಂಬದು ಕೆಡಿಸಿತೆ ನಾನತ್ವಲಯ ಉಳಿಸಿತೇ
ಆಗ ಅಲ್ಲೀಷ ಗುರು ಪೇಳಿತೆ ಬ್ಯಾಗ ಕೇಳದೆ ನಿಂತಿತೇ || 5 ||

ಗುರುವರ ಶುಭಕರ ಬಂದಾ
ಗುರುವರ ಶುಭಕರ ಬಂದಾ
ಪರಮ ಮುಕುತಿ ಪದ ತಂದಾ
ತಗೋ ಎಂದಾ ಬಹು ಚಂದಾ || ಪ ||
ರಾಜ್ಯ ಮರತಿ ನೋಡಂದಾ
ಪೂಜ್ಯವಿಹದು ತಿಳಿ ಮುಂದಾ
ರಾಜ್ಯದೊಳಗೆ ಸುಖ ಪೂಜ್ಯನಿಗನುಭವ
ಪ್ರಜ್ವಲಿಸುವ ಪ್ರತ್ಯಕ್ಷ ತೋರಲಿಕೆ || 1 ||
ದೇಶ ಮರತಿ ನೋಡೆಂದಾ
ಲೇಸಿಹುದದು ತಿಳಿಮುಂದಾ
ದೇಶದೊಳಗೆ ದಾವ ದೇಶವು ಬೆರಿಯದ
ದೇಶಕೂನ ಸುಖ ದೇಶ ಬೆರಸಲಿಕೆ || 2 ||
ಪುರವ ಮರತಿ ನೋಡೆಂದಾ
ಬರುವುದು ಸುಖ ಹ್ಯಾಗೆಂದಾ
ಪುರವದು ಮಹದೈಶ್ಚರ್ಯವದಿರುವುದು
ಮೆರವದು ಮಧ್ಯದಿ ಬೆರೆಸುವದಕೆ ತಾ || 3 ||
ಗೃಹವು ಮರತಿ ನೋಡೆಂದ
ಗ್ರಹವು ಭೂತಗಳು ಮುಂದಾ
ಗೃಹಕೆ ಕೇಡು ತರುತಿಹವೀ ದಿನದಲಿ
ಸಹಜಿರುತಿವನಗ್ರಹಿಕೆ ಮಾಡಲಿಕೆ || 4 ||
ನಾಮದ ವಿವರಿಲ್ಲೆಂದಾ
ಸ್ವಾಮಿ ನಿನಗೆ ದೂರೆಂದಾ
ನಾಮದ ವಿವರವು ನೆಲದ ಬರಹ ಪರಿ
ನಾಮದು ಇರುವದು ಸ್ವಾಮಿ ಬೆರಸಲಿಕೆ || 5 ||
ಉಭಯರ ಮರತಿದ್ದೆಂದಾ
ಉಭಯರ ತೋರುತ ಬಂದಾ
ಶುಭ ಸ್ವರೂಪದಿಂದುಭಯರು ಸಿಗುವರು
ಪ್ರಭಲ ಪರ ಸುಖಕೆ ಪಾತ್ರರೆನಿಸಲಿಕೆ || 6 ||
ಅರೂಪ ಸ್ವರೂಪದಿಂದಾ
ಗುರೂಪನಲ್ಲಿಷ ಬಂದಾ
ತರಾ ರೂಪನಿಗೆ ಪರೀಪರೀ ಬೋಧರುಪಿಸಿ
ತನಸರಿಗುರೂಪ ಕೊಡಲಿಕೆ || 7 ||

ತೆರಳೂವ ಜೀವಾ ದೇಹವ ತೊರಿದೂ
ತೆರಳೂವ ಜೀವಾ ದೇಹವ ತೊರಿದೂ
ತೆರಳೂವ ಜೀವ || ಪ ||
ತೆರಳೂವ ಜೀವ ಬಲ್ ಬರಳೂವಾದಿಯ ಸಿಗದೇ
ದುರುಳಾ ಯಮನನ ಭಟರಾ ಕರ ಖಡ್ಗಾಯುಧ ಕಂಡೂ || 1 ||
ಪೈತ್ಯ ಕಫ ವಿಷಜ್ವರಾ ಸೈತ್ಯ ಸಮುದಾಯಗಳೂ
ಥೈಥೈಯಾಡುತ ಬರಲೂ ತಡಿಯಾಲಾರದೆ ಜಾವಾ || 2 ||
ರೋಗ ಶಾಂತಿಗೆ ವೈದ್ಯಾ ಯೋಗಿ ತಾ ಬಂದೊಯ್ವಾ
ಭೋಗಿ ವಿಷ ಸಮವಾದಂತಾಗತ ತಡಿಯಾದೆ || 3 ||
ಬಿಂದೊಂದು ಜಲ ಕೊರಳೊಳ್ ಒಂದೊಂದಿಳಿವದಕೆ
ಸಿಂಧೂ ತೋರು ಸಮಯಾ ಶಾರೇಶಾರೋಯ್ವದಕೇ || 4 ||
ಶ್ವೇತವರ್ಣದ ಪಾತ್ರೇ ನೂತಾನದುದಕದಿಂ
ಘಾತಾಗೊಳಿಸುವ ವಿಧೀ ದೂತಾದ್ವಿತಿ ದೈಯ್ವೆನುತಾ || 5 ||
ಗುರು ಪುತ್ರಾನಾಗಿಲ್ಲಾ ಗರುವಿನಿಂ ನುಡಿಯಲ್ಕೇ
ನರಪುತ್ರ ನಾನೆಂದೂ ನರಕಾತ್ಮನಾಗಲ್ಕೆ || 6 ||
ಅಲ್ಲೀಷ ಗುರುವಿನಾ ಇಲ್ಲೀ ಬೆರಿಯದೆ ಮುನ್ನಾ
ಎಲ್ಲಿಹನಿಲ್ಲೆಂದು ಕುಲ್ಲಾತನುವ ನಂಬಿ || 7 ||

ಅಂಗ ಸಂಗವೆ ಎನಗೆ ಇಂಗಿಸೈ ಗುರುವೇ
ಅಂಗ ಸಂಗವೆ ಎನಗೆ ಇಂಗಿಸೈ ಗುರುವೇ
ಭಂಗಾವೆ ಇದರಾ ಪ್ರಸಂಗಾವಸಹ್ಯವೇ || ಪ ||
ತೊಳಿಯಾಲಾರಿದನಿಲ್ಲೀ ಕೊಳಲಾನೊಂಬತ್ತು
ಕೊಳಕೂ ಗೂಡುಗಳಲ್ಲಿ ಉಳಗಾಳೆಸುತ್ತಾ || 1 ||
ಮ್ಯಾಲೆ ರೋಗದ ಸಾಲೇ ಲೀಲೇ ಇರಳಗಲೇ
ತಾಳೇ ಸ್ಥಾಣುವಿನಂತೆ ಸ್ಥೂಲಾಯಾಸಗಳೇ || 2 ||
ಬರೆಬಿಟ್ಟೀ ಮೊಟ್ಟೀಯ ಹೊರಲಾರೆನಯ್ಯಾ
ಧರಿಯಲ್ಲಿಂತನ್ಯಾಯ ಪರಿಕಾಣೆನಯ್ಯಾ || 3 ||
ಕೂಲೀ ಕೊಡುವರಿಲ್ಲಾ ಕಾಲ್ಯಾಯಿತಲ್ಲಾ
ಕೋಲಿಲ್ಲಾದೊಡತಾಯ್ತು ಕಂಡೇನಿದನೆಲ್ಲಾ || 4 ||
ಬಾಲಾಮಾತೆಯ ಸ್ತನ್ಯಾ ಬಿಟ್ಟಂತೆ ಎನ್ನಾ
ಕಾಲಾದೀ ಶುಲಭಾವಾ ಕರುಣಿಸೈ ಮುನ್ನಾ || 5 ||
ಒಲ್ಲೆಂದ್ಹೇಳಿದ ವಾಕ್ಯಾ ಇಲ್ಲೀಗರುವಿತ್ತೇ
ಎಲ್ಲೆಂದಿಲ್ಲಿಗೆ ಬಂದೆ ನದನಿಲ್ಲಿ ಮರತೇ || 6 ||
ಇದ್ದೆನೆಲ್ಲಿರುವಂತಾ ಸುದ್ದೀಯ ಪರಿಯಾ
ಬದ್ಧವಲ್ಲರುವೀಗೆ ಬರಗೊಡದೀಕಾಯ || 7 ||
ಅಧಿಕಾರಣ್ಯಧಿಸೂರ್ಯ ತುದಿಗದ್ರೀ ಮೊರೆಯಾ
ವಿಧ ತೋರಿತೈ ನಿಮ್ಮಾ ಬದಿ ಬಿದ್ದೆನಯ್ಯಾ || 8 ||
ಗುರು ದೇವಲ್ಲಿಷ ಮೂರ್ತೀ ಗರುಪಯ್ಯಾ ವಾರ್ತೀ
ಬೆರಸೈ ಪರಮನಲ್ಲೀ ಮೆರಸೈ ಸತ್ಕೀರ್ತಿ || 9 ||

ಮುಕ್ತನು ಜೀವಾ ಭಕ್ತನು ಭಾವಾ
ಮುಕ್ತನು ಜೀವಾ ಭಕ್ತನು ಭಾವಾ
ಶಕ್ತನು ಗುರುವಾ ಸೇರಿಪ ಪದವಾ || ಪ ||
ಅನುಭವ ಕೊಡುವಾ ಮನುವಿಗೆ ನಿಜವಾ
ದಿನದಿನದಿ ತೋರ್ವ ಧನ್ಯನ ಮಾಡ್ವಾ || 1 ||
ದೈವನೊಳ್ ಜೀವಾ ದೇಶಿಕನೆನುವಾ
ದೈವ ಜೀವನೂಭವ ಕೈವಲ್ಯ ಕೊಡುವಾ || 2 ||
ದೀಪ ಪ್ರಕಾಶವಾಲೇಪಮೊಂದಿರುವ
ಗೋಪ್ಯ ಬತ್ತನುಭಾವ ಗುಣ ಶೂನ್ಯನಿರುವಾ || 3 ||
ಉಪಮಾನ ಕೊಡುವಾ ಚಪಲತೆ ಕಳಿವಾ
ವಿಪಿನದಿ ದೃಷಾಂತವಾ ವಿವರ ನೋಡೆನುವಾ || 4 ||
ಪರಿಮಳ ಗಂಧವಾ ಬೆರದೊಂದೆ ಭಾವ
ಕೊರಡೈಕ್ಯ ಅನುಭವ ನರನಿಡಿ ಕೊಡುವಾ || 5 ||
ಅಳಿಯಗನುಭವಾ ನಳಿನಾಕ್ಷಿ ಸ್ಥಲವಾ
ಉಳದಿರುತಿಹ ಮಾವಾನೊಳಗಿಲ್ಲ ಸುಖವಾ || 6 ||
ಪ್ರಾರಭ್ದತ್ರಯವಾ ಬರುವುದು ನಿಜವಾ
ದಾರಿಯ ಜೈಸುವ ಧೈರ್ಯವ ಕೊಡುವಾ || 7 ||
ನದಿಯ ಡೊಂಕಿರುವ ನಿಧಿಯಲ್ಲಿ ಪೂಗುವಾ
ವಿಧದಿ ವಿಶ್ವದಭಾವವದನೆಲ್ಲ ಕಳಿವಾ || 8 ||
ಅಲ್ಲಿಷ ಗುರುವಾ ಇಲ್ಲೀದನುಭವಾ
ಬಲ್ಲಿದ ಕರುಣವಾ ಉಲ್ಲಾಸ ಪೊರಿವಾ || 9 ||

ಯಾತಕೆ ಗುರು ಕೀರ್ತನೆ ಇವಗ್ಯಾತಕೆ ಕವಿತಾ ರಚನೆ
ಯಾತಕೆ ಗುರು ಕೀರ್ತನೆ ಇವಗ್ಯಾತಕೆ ಕವಿತಾ ರಚನೆ
ಯಾತಕೆ ನಡೆನುಡಿ ನಂಬಿಗೆ ನಟನಿಲ್ಲದ ಕುಟಿಲಾತ್ಮಂಗೆ || ಪ ||
ನಡೆಯಲಿದ್ದವ ಗುರುವಿನ ಎಡೆಬಿಡದಲೆ ಕಾದಿರುವಾ
ನುಡಿಗಳ ನೊಂದೊಂದದನು ಕಡುರಚನಿಗೆ ತರುವಾ
ಸಡಗರವಾತಗೆ ಪಡಿಸುವ ಉಡುಪತಿ ಕಂಡಾ ಕುಮುದವ
ತಡಮಾಡದೆ ಬಾಯ್ಬಿಟ್ಟಿದ ತೆರಿನಾಪರಿ ಇರುತಿರುವಂ
ತಾತಗೆ ಗುರು ಕೀರ್ತನೆ || 1 ||
ನುಡಿಯಲ್ಲಿದ್ದವ ಗುರುವಿನ ನುಡಿಯದನೇ ಕೇಳ್ತಿರುವಾ
ಪೊಡವಿಯ ಬಗೆ ಪರಸುಖಘನ ಬಂದರು ಬರಲೆನುವಾ
ತಡಮಾಡದೆ ಮಂಡಿಯ ಮ್ಯಾಲ್ಜೆಡೆಯಂದದಿ ಹೊತ್ತಿರುವಾ
ನುಡಿ ನಡಿಸದೆ ಉದಕನ್ನವ ಉಣಲೊಲ್ಲೆಂದೆನುತಿರುವಂ
ತಾತಗೆ ಗುರು ಕೀರ್ತನೆ || 2 ||
ನಂಬಿಗೆಯೊಳಗಿದ್ದವ ಗುರುವಂಬಲಿಸಿದ ಸಂಭ್ರಮವಾ
ತುಂಬಿದ ತನುಮನ ಧನವನು ತೂರ್ಯದೊಳೊಪ್ಪಿಸುವಾ
ತಂಬುವ ನುಡಿ ಕವಿ ವಚನಕೆ ಬೆಂಬಿಡದಿರುತಿಹ ದೈವಾ
ವಂಬುಧಿ ಸಪ್ತಾ ಜ್ಯೋತಿಯೊಳೊಲಿವನನು ದಿನಬಿಡದಂ
ತಾತಗೆ ಗುರುಕೀರ್ತನೆ || 3 ||
ತನು ಮನ ಧನ ಘನ ಗುರುಮುಂಚಿತ ನಿನಗಾತನುಯಿತ್ತಾ
ಮನ ಮುನಿಗಳಿ ಗೆರಿಯುವದನು ನಿನಗೆರದನು ಸತ್ಯಾ
ಕನಸೇನಿನ ತನುಮನಧನ ಕೊಡುವದಕಳುತೀ ಕೃತ್ಯಾ
ಘನವಾತನ ಋಣಕಾರಣ ಕಳಕೊಳ್ಳದೆ ನಿಂತ್ಯಾ
ಯಾತಕೆ ಗುರುಕೀರ್ತನೆ || 4 ||
ಗುರುಮಠದಂಗಳ ಪಾಕವ ಕರಕಮಲವು ಕಲತಿರುವಾ
ಕರಗಳೆ ಗುರುಕೀರ್ತನೆ ಕವಿರಚನಿಗೆ ಶೋಭಿಸುವಾ
ದರಿತಲ್ಲಿಷ ಗುರುಪೀಠವ ಕರದವನಿಗೆ ಕೊಡುತಿರುವಾ
ಪರಿಪರಿ ಪಾಪಾದಿ ಗಳಾಪರಸುಖಕ್ಹೊಂದಿಸು ತಿರುವಂ
ತಾತಗೆ ಗುರುಕೀರ್ತನೆ || 5 ||

ನೀಚನುಪದೇಶ ಬಹೂ ದೋಷದೇ
ನೀಚನುಪದೇಶ ಬಹೂ ದೋಷದೇ
ವಾಚ ಮನವೆರಡು ಒಂದಾಗದೇ ನೀಚನುಪದೇಶ || ಪ ||
ಮನದೊಳು ಮತವದೆ ಜನದೊಳಗ್ಹಿತವದೆ
ಘನದೈವೆನುವದೆ ಘನವ ಕೆಡಿಪ || 1 ||
ಹಣ್ಣೆನ್ನುವದೇ ಮಣ್ಣು ತಿನ್ನಿಪದೇ
ಬಣ್ಣ ತೊಡಿಸಿ ಈ ಕಣ್ಣಿಗೆ ಕಾಣ್ವುಪದೇಶ || 2 ||
ಸತಿಪತಿ ದ್ವಿತಿಗಳ ವತಿರಹಸ್ಯವದೆ
ಮಿತಿಮಿಕ್ಕ ಗುರುವಿನತಿ ಗುಂಭ ಕೆಡಿಪುಪದೇಶ || 3 ||
ರಾವಣ ಮೋಸಿದೆ ಭಾವನ ತುಂಬ್ಯದೆ
ಭಾವಿಸಿ ನಂಬಲು ಭಾಮಿನಿ ಬಿಡಿಪುಪದೇಶ || 4 ||
ನುಡಿವದು ವಂದನೆ ನಡಿವದು ದ್ವಂದದೆ
ನುಡಿಕೆಡಿಸಿ ಮತದ ತೊಡಕು ತೊಡಿಪನುಪದೇಶ || 5 ||
ಎರಡೆನ್ನಬಹುದೆ ಎರಡಿರಬಹುದೇ
ಎರಡ್ಹೋಗಿ ಮುಂದೆ ಕುರುಡ ನಾಗ್ವನುಪದೇಶ || 6 ||
ಪಾಷಾಣಳಿದದೆ ಪರಿಶುದ್ಧಾಗ್ಯದೆ
ಭಾಷಾ ಪೇಳಿ ಪಾಷಾಣ ತೋರ್ವನುಪದೇಶ || 7 ||
ಬಹು ಜನೋಗುವದೆ ಬಹು ವಿಸ್ತಾರದೆ
ಬಹುಜನ ಯಮಗೃಹ ಬಾಧಿಗೆ ಕಳಿವುಪದೇಶ || 8 ||
ಯೋಗದಿದಾಗದೆ ಭೋಗ ಬ್ಯಾರಿಹುದೇ
ಹೋಗಲಾಡಿದವರೀಗ ನಗಿ ಗೆಡುಪದೇಶ || 9 ||
ರೂಪ ಭೋಜನದೆ ಪಾಪ ರಹಿತದೇ
ಗೋಪ್ಯ ಕಳದು ಈ ರೂಪದೊಳಿಳಿಪುಪದೇಶ || 10 ||
ನರರ ನಳಿಯದವ ಗುರು ಹ್ಯಾಗಾದವ ನರರೂಪಳಿದವ
ಗುರುವಲ್ಲಿಷ ನುಪದೇಶ ಬಹುಲೇಸದೇ ಮದ್ಗುರು ವಿಚಾರ ವಿಶೇಷದೇ || 11 ||

ಎಚ್ಚರ ವಿಲ್ಲೆಚ್ಚರ ದಲ್ಲಿರುವಾ
ಎಚ್ಚರ ವಿಲ್ಲೆಚ್ಚರ ದಲ್ಲಿರುವಾ
ಹೆಚ್ಚಿನ ಮಾರ್ಗವ ಕೊಟ್ಟನು ಗುರುವಾ
ಹುಚ್ಚನಂತೆ ಮೈ ಮುರಿಯದ ನಾಥಗೆ
ಸ್ವೇಚ್ಛನುಭವದಿಹ ಪರದಿಂದಿರುವಾ || ಪ ||
ಸತ ಪ್ರಸವತಿ ಕಾಲದಿ ಸುತ ಸುತೆಯಳ
ಮತಿ ಗದನರಿಯದೆ ಮೈ ಮರತಿರುವಾ
ಸ್ಥಿತಿ ಜಗಪತಿಯೋಳ್ ಬೆರದತಿ ಹಿರಿಯರು
ಮತಿ ಮಾರ್ಗದಿ ಮತ್ತನುಭವ ನಿಜವಾ || 1 ||
ಚಿಕ್ಕವ ತನ್ನಯ ನೆರಳನು ಕಾಣುತ
ಗಕ್ಕನೆ ನಗುತಲೆ ತನ ಮರತಿರುವಾ
ಲೆಕ್ಕಕ್ಕಗಣಿತ ಇರುವ ಸ್ವರೂಪವ
ಮುಕ್ಕಣ್ಣಿಲಿ ನೋಡುತೆ ದೃಶ್ಯವಾ || 2 ||
ನಾಸಿಕ ಕೊಯ್ದಂತಾತನುದಾರವ
ಸೂಚಿಸೆ ಘೃತ ಭಕ್ಕರೆ ಕೊಡುವೆನುವಾ
ದೇಶಿಕರಾಯನ ಬೆರದು ಲಯತ್ವದಿ
ಧ್ಯಾಶಿಲ್ಲದೆ ದೈನ್ಯೋಕ್ತಿಯೋಳಿರುವಾ || 3 ||
ಬಾಲನು ಲೀಲಾ ಲೋಲಾ ಕಾಲಾ
ವಾಲಯ ಮರತಂತರುವಿಲಿ ಇರುವಾ
ಶೀಲನು ಬ್ರಹ್ಮಾಲೀಲದಿ ಚಿತ್ರನು
ಲೋಲಾಕಲಿ ಜಾಲದಿ ಮತ್ತಿರುವಾ || 4 ||
ತಂದ್ಹಾಕುವ ಸುಖ ದುಃಖವ ದೈವಾ
ದ್ವಂದಧಿಕತ್ವದಿ ಇಲ್ಲೆಚ್ಚಿರವಾ
ಮುಂದಾಗುವದನುಭವಾ ನರಗೆನುವಾ
ಚಂದವ ತಿಳಿಪಲ್ಲಿಷ ಸದ್ಗುರುವಾ || 5 ||

ನಿಮವಾಕ್ಯಂ ನಮಗಾಶ್ಚರ್ಯಂ
ನಿಮವಾಕ್ಯಂ ನಮಗಾಶ್ಚರ್ಯಂ
ರಮಾರಮಣ ನಿಜನರಿಯದಂತ
ಬ್ರಹ್ಮಹಂ ಎಂದು ಕಂಡಂತೆ ನುಡಿವ || ಪ ||
ಮುರಿಯದ ಪರಮನನರಿತಂತೀ ದಿನ
ಚರಿತೆಯ ಜಾಗ್ರದಿ ಜಿಹ್ಮದಿ ಪೇಳುವ
ಪರಿಯವ ವಿವರವ ಖರಿಯವ
ನೋಡಲು ಬರಿದೇ ಕಾಣುವದಲ್ಲ || 1 ||
ವೇದವು ಕಾಣದೆ ಹೋದವು ಮಹನಿಜ
ವಾದ ಸುವಸ್ತುವ ಇರುವ ಇಲ್ಲದ
ಲ್ಲಾದಿಯು ಸಿಗದಲೆ ಈದಿನ
ಮಾತಿನ ವಾದಿಗೆ ನಿಲ್ಲುವಿರಲ್ಲ || 2 ||
ಮುನಿಗಳ ಮೂಲವು ತನುಮನ ದಂಡಿಸಿ
ಘನ ಯೋಗದಿ ಕಡೆಗಾಲಕೆ ಕಾಣದೆ
ಚಿನುಮನ ಖಂಡವು ಸಿಗಲಿಲ್ಲೆನುವರು
ಕ್ಷಣದೊಳು ನುಡಿಯುವಿರಲ್ಲ || 3 ||
ನೀನೆನೆ ದರಿಶನಕೂ ನೇನದುಪೇಳ್
ನಾನೆನೆ ನಾಶನವನುಭವ ದಾರಿಗೆ
ತಾನೆನೆ ತಾಂಡಾಂಡಾದರರ್ಥೇನದು
ಕಾಣದೆ ಪೇಳುವಿರಲ್ಲಾ || 4 ||
ತಾಂಡಾಂಡ ಖಂಡಕೆಲ್ಲಿಂದಿಳದೀ
ಬ್ರಹ್ಮಾಂಡದಿ ಬಹಿರಂಗುಪಮಾನವು
ಕಂಡರೆ ತೋರ್ವದಿ ಗಲ್ಲಿಷ ಗುರುವಿನ
ಕಂಡಿರದು ಮೊದಲೆ ಇಲ್ಲ || 5 ||

ಯಾತಕೊ ಮಾನವ ಬಂದೇ ಗುರುಮಾತಿದು ಕೇಳುವ ಮುಂದೆ
ಯಾತಕೊ ಮಾನವ ಬಂದೇ ಗುರುಮಾತಿದು ಕೇಳುವ ಮುಂದೆ
ಇರ ನಿಮ್ಮಲ್ಲಿಗೆ ಬಂದೇ ಒಬ್ಬ ನರ ನುಡಿದನು ಗುರು ಮುಂದೇ || 1 ||
ಕೇಳಿದನಿದ ಗುರುತಂದೆ ತಿಳಿ ಹೇಳಿದಿರುವದರು ವಿಂದೇ
ಬಾಳಿದೆ ನಾನಿಹನೆಂದೇ ಬರುವದು ನಾಳೆ ದುಃಖ ಬೆನ್ನಿಂದೇ || 2 ||
ತಂದೆ ತಾಯಿಯಲ್ಲಿದ್ದೇ ನಿನ ಸುಂದರಿ ಶೈನದೊಳಿದ್ದೇ
ಮಂದಿ ಮಕ್ಕಳೊಳಗಿದ್ದೇ ನಮ್ಮ ಮಂದಿರ ನಿನ್ನಿರಗೊಡದೇ || 3 ||
ಇರಲಿಕ್ಕಿಲ್ಲವು ಇಲ್ಲೀ ನೀ ತೆರಳುವ ಸ್ಥಳ ನಮ್ಮಲ್ಲೀ
ಕರಿಯಾ ನಮ್ಮುಖದಲ್ಲೀ ಕಂಜದ ಶಿರವಿಲ್ಲಾ ಪರಿಯಲ್ಲೀ || 4 ||
ಕೀಟಕ ಮಾರುತ ಉಭಯಾಶುಭ ಕೂಟವು ಕಂಡಿಯಖರಿಯಾ
ಕೋಟೀ ತಾರಾ ಪ್ರಭೆಯ ರವಿ ನಾಟಕದೊಳು ತೋರುವಿಯಾ || 5 ||
ಮಶ್ಚಮಾಂಸ ಉಭಯವನೇ ನರಿ ಕಚ್ಚಿಡಿಯಲು ಪೋಗಿಹನೇ
ಹುಚ್ಚಾದ್ವಯ ಪೋಗಿಹನೇ ನಿನ್ನಿಚ್ಚೆಯು ಗುರುವಿರಗೊಡನೇ || 6 ||
ಜಿಹ್ವ ನೇತ್ರ ಶ್ರವಣವನೂ ನಂಬಿದ ತಮ್ಮನೆ ನಿನ ತನುವಿದನೂ
ಗಮ್ಮನೆ ಕಳದುಳಿಸುವನೂ ಬಹುವಿಧ ಕರ್ಮಕಾಂಡ ಕೀಳುವನೂ || 7 ||
ಸ್ಮರಹರ ತ್ರಿಣಿ ನೇತ್ರದಲಿ ತಕ್ಷಣ ಕರಗಿದ್ದಾಪರಿಯಲ್ಲಿ
ಗುರುವಿನ ಜಾನಕ್ಷಿಯಲೀ ನಿನ್ನನು ಕರಗಿಡಿಪನುಭವದಲ್ಲಿ || 8 ||
ನಾ ಸತ್ತರೆ ಮುಕ್ತೆಂಬಾ ಮಾತಿನ ಲೇಸಿಹುದದು ಗುರುಗುಂಭಾ
ಭಾಷಲ್ಲಿಷಾ ವಾಕ್ಜ್ರುಂಭಾ ಬೆರಿಯದೆ ಬರಿದೆ ಬಂದೆನೆಂದೆಂಬಾ || 9 ||

ದೈವದ ದೂಷಣೆ ಮಾಡಬಹುದೇ
ದೈವದ ದೂಷಣೆ ಮಾಡಬಹುದೇ
ಮಾಡಿದ ಫಲಾಮುಂದೆ ಕೇಡು ಬಾಹದೇ || ಪ ||
ಜಾರಾ ಚೋರಾ ಬಹುಶೂರಾ ಕ್ರೂರಾ ದುರಾಚಾರಾ
ಸಾರಾವಿಲ್ಲಾದ ವಿಚಾರಾ ದಾರೀಯೋಳ್ ಬೆರದೂ || 1 ||
ಕ್ರೂರಾನು ತಾನಾದರೆ ತೋರಾನುಭವ ಭಯನರರೇ
ಪಾರಾವಾರಾ ಸುಖ ದುಃಖ ಖರೆ ಸಾರಾವ ನಿನಗೆನದೇ || 2 ||
ಹುಲ್ಲೂ ನೆಲ್ಲೂ ತಿನ್ನೂವಾಗಿಲ್ಲೋ ಘೃತಾನ್ನನುಭಾವಾ
ಎಲ್ಲಾನು ನೀನೆನ್ನುವ ಸೊಲ್ಲಾಡುವಂತಾ || 3 ||
ಕಾರೆಂಬ ಕಾಕಸುರಾಕ್ಷಿರೋದಕಾತನ ಹಾರಾ
ಸೇರಿದಂತಾಯ್ತವತಾರಾ ತೋರಿತೀ ವಾಕ್ಯಾ || 4 ||
ನ್ಯಾಯಾ ದಯಾಧಿಪತಿ ಯಾ ನ್ಯಾಯಾ ತಪ್ಪಿದಾ ನುಡಿಯಾ
ಬಾಯೀಗೆ ಬಂದಾ ಪರಿಯಾ ಬಳಸುತಿರುವಂತಾ || 5 ||
ಶಿಕ್ಷೀಪ ಸಾಕ್ಷಿಯ ಮುಖದಿ ರಕ್ಷೀಪ ರಹಸ್ಯ ಸ್ಥಲದೀ
ಅಕ್ಷೀಯಿಂದಂತರಂಗದಿ ನಿಶ್ಚಯಿಸಿ ನೋಡದೆ || 6 ||
ಅಲ್ಲೀಷಾ ಗುರುವರ ತಿಳಿಪಾ ಎಲ್ಲತಾ ದೂಷಣೆ ಬಿಡಿಪಾ
ಕುಲ್ಲತನ ತೊರಿದು ತೀವ್ರ ಬಾ ಇಲ್ಲದಿರೆ ಕೆಡುತೀ || 7 ||

ಜನನೀ ಜನಕ ನಾಜ್ಞೆ ತನಯಾಧಿಃಕರಿಪನಾ
ಜನನೀ ಜನಕನಾಜ್ಞೆ ತನಯಾಧಿಃಕರಿಪನಾ
ವಿನಯರೊಪ್ಪುವರೇನೋ ಜೀವಾ || ಪ ||
ಪಿತನಾಜ್ಞೆ ತ್ಯಜಿಸೂವ ಸುತನನು ಶೃತಿಶಾಸ್ತ್ರ ಹೀನಿಪುದಿದಲ್ಲದೆ
ಪಿತನ ವಧ ಮಾಡಿಸಿದ ಸುತನಿಗೆ ಮುಕುತಿಯೇನ್ ಗತಿಯೇನ್ ಘನವೇನ್ || 1 ||
ಗಂಧಾಕ್ಷತೆಯ ಕುಂಕುಮ ಗರುಗಳಿಂದಲಂಕೃತಳಾದ ಮಾತೆಯ
ಚಂದವದನು ವಿಕಾರ ಮಾಡಿದ ಕಂದನೇನ್ ತಂದೆರ್ನೆ ಕೀರ್ತೆನ್ || 2 ||
ಮಾತ ಪಿತ ವಿಶ್ವಾಸ ರಹಿತವ ಧಾತಗುರು ಭಕ್ತೇನು ಮಾಡುವ
ಪ್ರೀತಿಯಲಿ ಗುರು ನುಡಿಗಳನದವ ನೀತಿಯೇನ್ ಭೀತಿಯೇನ್ ಭಕ್ತೇನ್ || 3 ||
ಭಕ್ತಿ ಇಲ್ಲದವಂಗೆ ಜ್ಞಾನತಿ ಶಕ್ತಿ ವೈರಾಗ್ಯದುವೆ ಇಲ್ಲವು
ಮುಕ್ತಿ ಎಲ್ಲಿಹುದಯ್ಯ ಜೀವನೆ ನಿತ್ಯವೇನ್ ಸತ್ಯವೇನ್ ಸಹಜೇನ್ || 4 ||
ನಿತ್ಯ ಸತ್ಯ ಪದಾರ್ಥದಾತ್ಮದಿ ಪ್ರತ್ಯಕ್ಷ ಕೊಡುವಲ್ಲಿಷಾ ಗುರು
ಕೃತ್ಯಧರ್ಮವ ಕಿತ್ಯಾಕುವಂ ಕರ್ತತಾಂ ಸಾರ್ಥಕಂ ಸಾರ್ವಂ || 5 ||
ತಲ್ಲಿ ದಂಡ್ರಿಮೀದ ದಯಲೇನಿ ಪುತೃಂಡು ಪುಟ್ಟ ನೇಮಿವಾಡು
ಗಿಟ್ಟನೇಮಿ ಪುಟ್ಟಲೋನ ಚೆದಲು ಪುಟ್ಟದಾ ಗಿಟ್ಟದಾ || 6 ||

ಯಾಕಮ್ಮ ದುಃಖಿಸುತಿಹೆ ಗುರುಮಾರ್ಗ
ಯಾಕಮ್ಮ ದುಃಖಿಸುತಿಹೆ ಗುರುಮಾರ್ಗ
ಬೇಕಿಲ್ಲದಲೆ ನಿಂತೀಹೆ ಸಾಕಮ್ಮ
ಲೋಕದಾನೇಕ ಸಂಶಯ ತೊರಿದು
ಬೇಕು ಮಾಡಿಕೊ ಮಾರ್ಗವಾ ಮಗಳೇ || ಪ ||
ಹಿರಿಯರೆಂಬಾಲಯದೋಳು
ಏ ಮಗಳೇ ಬೆರತು ಕೊಂಡಿರಲಿ ಬೇಕೇ
ಬೆರಿಯದೇ ಬ್ಯಾರಾದ ಕುರಿಯು
ತೋಳನ ಕೈಲಿ ಶರೆಯ ಸಿಕ್ಕಂತೆ ಕೇಳೇ ಮಗಳೇ || 1 ||
ಬೀಸು ಬೀಸುವಾಪಾಷಾಣದಾ ಮಧ್ಯದಲಿ
ಬೆರಿಯದಾ ಧಾನ್ಯದಂತೆ
ಲೇಸಾದ ಗುರುವಿನಾ ಪ್ರಾಸಾದ ಹೊಂದಿದವ
ರಾಪರಿಯ ಉಳಿವರಮ್ಮಾ ಮಗಳೇ || 2 ||
ಗುರುಕರುಣ ಕರಜಾತರೂ
ಧರಿಯೊಳಗೆ ಮರಣಾಗಿ ಹೋಗುತಿಹರೂ
ಗುರುಹೀನರಾದವರು ಸರಿದು ಹೋಗುವರುಭಯ
ಪರಿಯಾಯ ಸರಿಯಲ್ಲವೇ ತಂದೇ || 3 ||
ನುಡಿಯಬಹುದಮ್ಮ ಮಗಳೇ ಈ ಮಾತು
ನುಡಿಯುವದು ಸಹಜೀಗಳೇ
ಕೊಡುವೆ ನಿದಕೊಂದು ದೃಷ್ಟಾಂತ ತಿಳಿ ಬಿಡದೆ
ನೀ ದೃಢಚಿತ್ತಳಾಗಿ ಕೇಳೇ ಮಗಳೇ || 4 ||
ಅರುವಿನಿಂ ಪೋದರ್ಥಕೆ ನಗುವುಂಟು
ಮರುವಿನಿಂ ಪೋದೊಂದಕೇ
ಕೊರತೆ ನಿಜ ಗುರುಮಾರ್ಗ ಮರತು ಪೋಪರಿಗೆಲ್ಲಾ
ವರಿತು ಪೋಪರು ನಗುವರೇ ಮಗಳೇ || 5 ||
ಶವದ ಮ್ಯಾಗಿನ ದಾಗೀನಾ
ತೆಕ್ಕೊಂಡು ಶವಗಳನು ವೂಣಿಡುವರೇ
ಶವವುದಾವುದು ಶವದ ದಾಗಿನಗಳಾವುವು
ತಮದೊಳಗೆ ಬಿಡದೆ ತಿಳಿಯೇ ಮಗಳೇ || 6 ||
ಕರೆ ಮಣಿಯು ಬಳೆ ಮೂಗುತೀ
ಮಾಂಗಲ್ಯ ಧರಿಯೊಳಿವೆ ಒಡಿವಲ್ಲವೆ
ಸರಿದು ಕೊಂಡಾಕ್ಷಣವೆ ಮೃಣ್ಮಯ ದಿಶವ ವೂಣಿ
ಬರುವರೆಂಬದು ತಿಳದದೇ ತಂದೇ || 7 ||
ಇಂತ ಒಡಿವಿಗಳಲ್ಲವೇ ಪೇಳುವೆನು
ಅಂತರಂಗ ದೊಳಿರುವವೇ
ಭ್ರಾಂತ ಗುರುಭಕ್ತರಿಗೆ ಬಹುವಿಧದಿ ತುಂಬಿಹೆವು
ಚಿಂತಳಿದು ಕೇಳವ್ವನೀ ಮಗಳೇ || 8 ||
ಪ್ರಾಣದಾಭರಣ ತೆಗಿಯೇ ಏ ಮಗಳೇ
ಜಾಣೆನೀ ನೀನಾಗುವೇ
ಕಾಣದೆ ವೂಣಿಡಲು ಕೋಣದಂತಾಯ್ತೆ
ಮನ ಬಾಣಕ್ಕೆ ಗುರಿಯಾಗುವೇ ಮಗಳೇ || 9 ||
ಮನಸಿನಾಭರಣ ತೆಗಿಯೇ ಏ ಮಗಳೇ
ನಿನಗೆಣಿಯು ಯಾರಿಲ್ಲವೇ
ಮನಸಿನಾಭರಣವನು ಮರತು ಮಲಗಿದ ಮ್ಯಾಲೆ
ಘನತೆ ಎಂದಿಗೆ ಬಾರದೇ ಮಗಳೇ || 10 ||
ಚಿತ್ತದಾಭರಣ ತೆಗಿಯೇ ಏ ಮಗಳೇ
ಮತ್ಯಾರು ನಿನಗೆ ಸರಿಯೇ
ಚಿತ್ತದಾಭರಣವನು ಇತ್ತ ನೀ ಮರತ್ಹೋದ್ಯಾ
ಕತ್ತಲೊಳು ಬಿದ್ದೊರಳುವೆ ಮಗಳೇ || 11 ||
ತನುವಿನಾಭರಣ ತೆಗಿಯೇ ಏ ಮಗಳೆ
ವನುತೆಯರ ರತ್ನ ಸರಿಯೇ
ತನುವಿನಾಭರಣವನು ತೆಕ್ಕೊಳ್ಳದಲೆ ಹೋದ್ಯಾ
ಘನಗೇಡಿ ಗತಿ ಬಾಹದೇ ಮಗಳೇ || 12 ||
ಶ್ರವಣದಾಭರಣ ತೆಗಿಯೆ ಏ ಮಗಳೇ
ಸವನಲ್ಲಿ ಭುವನದೊಡಿವೇ
ಶ್ರವಣದಾಭರಣ ನಿನಕೈ ಸೇರದಲೆ ಹೋದ್ಯಾ
ಜವನರಾರ್ಭಟದಿ ಸಿಗುವೇ ಮಗಳೇ || 13 ||
ನೇತ್ರದಾಭರಣ ತೆಗಿಯೇ
ಹೇಳಿಕೊಡು ಸೂತ್ರದಾವದನು ತಿಳಿಯೇ
ನೇತ್ರದಾಭರಣವನು ನೀ ತಿಳಿಯದಲೆ ಹೋದ್ಯಾ
ಶಸ್ತ್ರದಿಂ ಚುಚ್ಚುತಿಹರೇ ಮಗಳೆ || 14 ||
ಜಿಹ್ವದಾಭರಣ ತೆಗಿಯೇ ಏ ಮಗಳೇ
ರಮ್ಯದೊಳ್ ನೀನು ಬೆರಿಯೇ
ಗಮ್ಮನೇ ತೋರ್ವಲ್ಲಿಷಾ ಮಹಾಗುರುವರನ
ನಿಮ್ಮನದಿ ಹುಡುಕಲೊಲ್ಲೆ ಮಗಳೇ || 15 ||

ಶುಭಾಶುಭ ಸುಖ ದುಃಖ
ಶುಭಾಶುಭ ಸುಖ ದುಃಖ
ಮೂಲಗಳೂ ನರಗನುಭವಂಗಳೂ
ಪ್ರಭುವಾಜ್ಞೆ ಪಡೆದದ್ದೆ ಬ್ಯಾಗ್ಹೇಳೂ || ಪ ||
ಪಡದುದೇ ವಡಗೂಡಿತೆಂಸೆನಲೂ ನಂಬಿದನು
ನೋಡಲು ಪಡದುಕೊಳಬಹುದಿತ್ತೆ ಪದವಿಗಳೂ
ಪಡಿಯುವದಕೇ ಪೂರ್ವಖಂಡದಿ
ಕೊಡುವದಾವನೋ ಕೊಂಬದಾವನೊ
ಕೊಡುವನಿಲ್ಲದ ಪಡದನೇನೂ
ಬಿಡದೀಗಳೆ ಹುಡುಕು ನೀನೂ || 1 ||
ಅರುವರಿಯದಾ ನರನು ನಿಜವಾದಾ
ಅರಿತರಿತು ಕೊಡುವಾ ಪರವಸ್ತು ಪ್ರತ್ಯಕ್ಷ ತಾನಾದಾ
ಕೊರತೆ ಕೆಲರಿಹರರುಷ ಕೆಲರಿಹ
ಚರಿತವೇನಿದು ಭಿನ್ನಭೇದಾ
ಮರತು ಕೊಟ್ಟನೆ ನರಿತು ಕೊಟ್ಟನೆ
ಮರುವಿಲ್ಲದಾ ಮಹ ಕಾರಣನೇ || 2 ||
ತಿಳಿದು ಕೊಡುವನು ಎಂಬದೇ ಘನವೂ
ತಿಳಿದ ನಂತರವೂ ಬಳಲಿಪಾ ಯಮಬಾಧ ಪರಿಹರವೂ
ತಿಳಿವದ್ಯಾತಕೆ ಕಳಿವದ್ಯಾತಕೆ
ಬಳಲೂವ ದ್ಯಾಕೆಂಬ ವಿಧವೂ
ಕಳದೋಯಿತನ್ಯಾಯ ನ್ಯಾಯವೂ
ಕಳಿಯದಲೆ ಉಳದಿರುವ ಪದವೂ || 3 ||
ನ್ಯಾಯ ಪರಜನಕುಳದಿರಲಿ ಬೇಕೂ
ನ್ಯಾಯವಳಿದ ಮಾರ್ಗ ನ್ಯಾಯ ನರಕಿಗಳಾಗಿರಲಿ ಬೇಕೂ
ನ್ಯಾಯವನ್ಯಾಯಕ್ಕೆ ದೈವ ಸಹಾಯವೇ ಸೇರಿರಲಿಬೇಕೂ
ನ್ಯಾಯದವರನ್ಯಾಯದವರಾ
ನಾನತ್ವ ನಾಶಾಗಿ ಮತ್ತಾ || 4 ||
ಅಲ್ಲಿಷಾರ್ಯರ ನಗರೋರಧಿಕರನಾ
ಈ ನ್ಯಾಯ ರಚನಾ ಇಲ್ಲಿಕೇಳಿ ತಿಳಿದವನೆ ಸುಜನಾ
ಇಲ್ಲಿ ತೊರಿದಿನ್ನೆಲ್ಲಿ ಹೋದರು
ಕಲ್ಲಿಡಿದು ಕಚ್ಚೀದ ತೆರನಾ
ಕಲ್ಲು ಸಕ್ಕರೆ ಮಾಡುಣಿಪನಾ
ಉಲ್ಲಾಸ ಗುರುವಿಲ್ಲಿ ತೋರ್ಪನಾ || 5 ||

ಗುರುರಾಯನೇ ಈತನೇ ಜೀವಾನಂದೀವನೇ
ಗುರುರಾಯನೇ ಈತನೇ ಜೀವಾನಂದೀವನೇ || ಪ ||
ಜೀವಾನು ಮುಕ್ತನಾದಾ ದೇಹಾವೆ ತೋರಿದಾ
ದೇಹಾನಟಕಾ ದೈವಾ ಸೇರಿ ದಾರಿ ತೋರಿದಂತ || 1 ||
ಸಾಯದಾ ಜೀವನೆಂದಾ ನ್ಯಾಯ ನಂಬೀ ಗಹುದಾದಾ
ಕಾಯದರ್ಥಾ ಪೇಳಿದಾ ದೇಹಾದಾಸೆ ದೂರೆನಿಸಿದ || 2 ||
ದೇಹದಾ ಸ್ನೇಹದಿಂದಾ ದಾಹ ತಾಪಾಗಳಿಂದ
ದೇಹ ಜಂಝಾಟ ಕಳದಾ ದೈವಕಾಯ್ವಾ ಜಯವು ತೋರ್ದಾ || 3 ||
ವಿಷಯದಾವಾಸೆಯಿಂದಾ ವಿಷವೆ ಮುಂದಾಗುವದೆಂದಾ
ವಿಷವೆ ವಿಶ್ವಾಸವೇವಳಿದ ಕುಶಾಲ ವಿಶಾಲ ಕುಡಿಸಿದಮೃತ || 4 ||
ಸವತಿ ಸಂತಾನ ನೋಡಿದಾ ಸಮತಿ ದೇಹಾ ನೋಡೆಂದ
ಭವತಿಮಿರ ನಿನಗಿಲ್ಲೆಂದಾ ಭಾವನುಭಾವಾ ದೇವ ಕೊಟ್ಟ || 5 ||
ಇಂತ ಗುರು ಶಿಷ್ಯರಾನಂದ ಸಂತೆ ಜಾರರಿಗ್ಯಾಕೆಂದ
ಪಂಥಗಾರರಿಗುಂಟೆಂದಾ ಭ್ರಾಂತಾ ಶಾಂತಾನಂತರೂಪ || 6 ||
ಬಾಹ್ಯಡಂಬಾವಲ್ಲೆಂದ ಬ್ರಹ್ಮಾದಿಗಸದಳವೆಂದಾ
ರಮ್ಯವಲ್ಲೀಷಾ ಗುರೂ ಸೋಹಂ ಜೀವಂ ಸೊಗಸೆನಿಸಿದ || 7 ||

ಸತ್ತೂ ಮತ್ತುಟ್ಟೋದುಂಟೇ ಮಾನವ
ಸತ್ತೂ ಮತ್ತುಟ್ಟೋದುಂಟೇ ಮಾನವ
ಕತ್ತೇ ಎತ್ತಾಗೋದುಂಟೇ || ಪ ||
ಬತ್ತ ಬಿತ್ತೀ ನೋಡಿ ಬ್ಯಾರೆ ಬೀಜ ಮಾಡಿ
ಧಾರುಣೀಯ ಕೂಡಿ ವಿಚಾರ ತೂಗಿ ನೋಡಿ
ಬತ್ತಾ ಮುತ್ತಾಗೋದುಂಟೇ ಮಾನವಾ || 1 ||
ತರುಗೇಲೆ ಬಿತ್ತೇ ಮರಕೇ ಹತ್ತಿತೇ
ಕರಕಾರೆ ಬಂತೇ ನಿರುತಾ ನಿಂತ್ಹೋಯ್ತೇ
ತೊರತಲ್ಲಿ ತಾಕೋದುಂಟೇ ಮಾನವಾ
ಬರತಾನೆಂಬೂವದುಂಟೇ || 2 ||
ತಪ್ಪಿ ಬಿದ್ದ ಭಾಂಡಾ ಮುಪ್ಪೇ ಸೈ ಕಂಡ್ಯಾ
ಒಪ್ಪ್ಪಿತೈ ಪಿಂಡಾಂಡ ಹುಟ್ಟಲಿಲ್ಲಾ ಪಿಂಡಾ
ಅಪ್ಪು ಪೃಥ್ವಿಯಾಗೋದುಂಟೇ ಮಾನವಾ
ಕತ್ತೇ ಎತ್ತಾಗೋದುಂಟೇ || 3 ||
ಭೂಪರೆಲ್ಲ ಆಳೀ ಭೂಮಿಮ್ಯಾಲೆ ಮರಳೀ
ಸ್ಥಾಪ್ಯವುಂಟೇಪೇಳಿ ಜ್ಞಾಪ ಮಾಡಿಕೊಳ್ಳಿ
ಪಾಪೀತ ಬರುವೋದುಂಟೇ
ಬರುವದಕೆ ಆ ಪಾಪ ಬಿಡುವೋದುಂಟೇ || 4 ||
ಅಣ್ಣ ತಮ್ಮರೆಲ್ಲಾ ಕ್ಷೀಣವಾದರಲ್ಲಾ
ಜಾಣರುಟ್ಟಲಿಲ್ಲಾ ಕಾಣದೋದರಲ್ಲಾ
ಪ್ರಾಣ ಮನ ನಂಬೋದುಂಟೇ ಮಾನವಾ || 5 ||
ಬ್ರಹ್ಮನ ಕಪಾಲಾ ಭಿನ್ನವಾಯ್ತಾ ಕಾಲಾ
ನಿರ್ಮಾಣವೇ ಇಲ್ಲಾ ನಿತ್ಯ ಶಾಸ್ತ್ರಾ ಮೂಲಾ
ಸುಮ್ಮಾನೆ ಎನ್ನೋದುಂಟೇ ಮಾನವಾ || 6 ||
ಪಿತೃ ಪೂಜೆಯೆಂದೂ ಪ್ರೀತಿಯಿಂದ ಬಂದೂ
ತಾತ ಮುತ್ಯಾನೆಂದೂ ದಾಸನಾಗೀ ನಿಂದೂ
ನಿತ್ಯಪೂಜೆ ನಿಲುಕೋದುಂಟೇ ಮಾನವಾ || 7 ||
ಒಂದರಿಂದೊಂಬತ್ತೂ ಹೊಂದಿತೆ ತೊಂಬತ್ತೂ
ಸಂದು ಬಂದಾನೆಂತೂ ಸಾಕ್ಷಿಯಿಲ್ಲದಾಯ್ತು
ಸಿಂಧು ನೆಲೆ ಸಿಗುವೋದುಂಟೇ ಮಾನವಾ || 8 ||
ಸತ್ತು ಹುಟ್ಟದಂತಾ ಸಾಕ್ಷಿ ತೋರುವಂತಾ
ಸಾಧು ಸತ್ಯವಂತಾ ಅಲ್ಲಿಸಾಬು ಗುರುಶಾಂತಾ
ಮುಟ್ಟದೆ ಧಿಟ್ಟಾಗೋದುಂಟೇ ಮಾನವಾ || 9 ||

ಮೌನ ಬ್ಯಾಡ ನಿನಗೇ ಮುದ್ರಾ ಬ್ಯಾಡ
ಮೌನ ಬ್ಯಾಡ ನಿನಗೇ ಮುದ್ರಾ ಬ್ಯಾಡ
ನಾನೆಂಬದಳೀದುಳಿದೂ ನಾಶಕ್ಕನುಭವ ಕಂಡೇ || ಪ ||
ನಾಶ ಶಾಶ್ವಿತವೆಂಬಾ ಲೇಸಾದು ಭಯ ಕಂಡೇ
ಕಾಶೀ ರಾಮೇಶಕ್ಕೆ ಗಮನ ಮಾಡುವದ್ಯಾಕೆ || 1 ||
ದ್ವಂದ ಕರಗಳಲ್ಲಿ ಎಂದೆಂದಿಗೋಗದಾ
ಒಂದು ಇರುವದಿಲ್ಲಾದೊಂದೂ ಪಿಡಿದುಕೊಂಡೇ || 2 ||
ಊರಿದೆ ಉಭಯವೂ ಏರಿದೆ ಮಹದ್ವಾರಾ
ಜಾರೂವದುಂಟೇ ಈ ಧಾರುಣಿ ಜನರಂತೇ || 3 ||
ಹಣ್ಣಾದದನುಭವಾ ಉಣ್ಣೂವದನು ಕಂಡೆ
ಮಣ್ಣೀನ ಗೊಡಿವ್ಯಾಕೆ ಕಣ್ಣೀನ ದ್ರೀಷ್ಟ್ಯಾಕೇ || 4 ||
ಲೇಸಾದ ಮುಕುತೀಯ ವಾಸತಿ ಸುಖ ಕಂಡೆ
ವೇಶ್ಯಾಸ್ತ್ರೀ ಸುಖಕ್ಷಣಾ ಘಾಶೇ ಕಾಣುವ ಪರೀ || 5 ||
ಕಣ್ಣೀರು ತೆಗಿಪೊಂತಾ ಹೆಣ್ಣೀನ ಪಿಡಿವೋರೇ
ಕಣ್ಣಾಮನದ ಸ್ಥಲದೀ ಪುಣ್ಯಾ ಚಿತ್ರಿಯ ಕಂಡೇ || 6 ||
ಕೋಣದುದ್ಯೋಗೆಂದಾ ಮೌನಾಭಾವದ ಚಂದಾ
ಪೂರ್ಣಾನಲ್ಲಿಷ ಗುರೂ ಪೇಳುತ ತಾ ಬಂದು || 7 ||

ಬಂದ ರಾಜನೂ ಈ ಭಾವದಿಂದಾ
ಬಂದ ರಾಜನೂ ಈ ಭಾವದಿಂದಾ
ಬಂದ ರಾಜನೂ || ಪ ||
ಸಂದೀನೋಳ್ ನಿಲ್ಲುತಾ
ಮಂದೀಯ ನುಡಿ ಕೇಳುತಾ
ಎಂದೀಗೀಪರಿ ಇಲ್ಲೆನುತಾ
ಇಂದೀಗೆ ಪುಟ್ಟೀತೆನು ತಡಿಯಿಡುತಾ || 1 ||
ಮಾನಾ ಬಂದಾರೇ ಘನವೇ
ಹೀನತಾ ಕಾಲೆಂತಿರುವೇ
ಏನುಂಟೋ ಪೂರ್ವಾರ್ಜಿತವೇ
ತಾನಾಡಿಪುವದೂ ಬಿಡದೆಂದೆನುತ || 2 ||
ನಾನತ್ವದೋಳ್ ತುಂಬಿಹನೂ
ಮಾನಾವ ಬೇಕೆನ್ನುವನೂ
ತಾನಾದ ಗುರುವಲ್ಲಿಷನೂ
ನಾನತ್ವ ಹೀನಿಪ ನರಿಯದೆ ಬಿಡದೆ || 3 ||

ಹಿರಿಯರರಿತು ಕೊಡು ನೀ ಧರ್ಮಾ ದೊರಿಯೆ ಮರಿಯದೆ
ಹಿರಿಯರರಿತು ಕೊಡು ನೀ ಧರ್ಮಾ ದೊರಿಯೆ ಮರಿಯದೆ
ಸಿರಿಯು ಪರಮ ಖರಿಯ ಬಾಹದಿ ದರಿಯೆ ಬಿಡದೇ || ಪ ||
ಬಿತ್ತಿದವರೆ ಬೆಳವರಿಹದೀ ನಿತ್ಯವಿರುತದೆ
ಬಿತ್ತದಲನುಭವಿಪರುಂಟು ಸಾರ್ಥವಾಗದೇ || 1 ||
ಒಂದಕೆ ದಶ ಸಪ್ತಫಲವು ಹೊಂದಬಾರದೇ
ಎಂದೋ ಎನ್ನದಿರಿಂದುಮುಂದೂ ಬಂದು ಘಟಿಪುದೇ || 2 ||
ತೃಣವು ಶೇಷ ಕುಣಿಯ ಒಳಗೆ ರಣವು ಜೈಸದೇ
ಗುಣ ಸುಗುಣಾರ್ಯರಿಗೆ ಕೊಟ್ಟಾ ಫಲದು ಬಲವದೇ || 3 ||
ಪರತತ್ವಾ ಹಿರಿಯರಿಂದೀ ಫಲವು ಬರುತ್ತದೆ
ಕರತತ್ವಾ ನರರಿಗೀಯ್ಯೇ ಫಲವುನಶಿಪುದೇ || 4 ||
ದ್ರವ್ಯಘಾತ ದೇಹದುರಿತ ದೂರ ವಾಗ್ವದೇ
ಅವ್ಯಕವ್ಯ ಶುಭ ಶಕುನಗಳನುದಿನಿರುವದೇ || 5 ||
ಅಲ್ಲಿಷಾರ್ಯರ ಮುಖದಿ ಧರ್ಮ ಸಲ್ಲಿಸು ಬಿಡದೇ
ಮಲ್ಲಿಗೆ ವನದಂತೆ ಫಲವು ಮೆರವುತಿರುವದೇ || 6 ||

ಮರತು ನೀನಿರಬ್ಯಾಡೈ ರಾಜಾ
ಮರತು ನೀನಿರಬ್ಯಾಡೈ ರಾಜಾ
ಅರಿತರುವಿನ ಗುರುವಿನ ಬೇರಿಸಹಜಾ || ಪ ||
ಬಾಯಾರಿದಾಗಾ ಭಾವಿ ಯಾವಾಗ
ಆಯಾಸ ಬಹಳಾದೀತಾಗಾ ಈಗ || 1 ||
ಹೋದಲ್ಲೀ ಬುತ್ತೀಯಾದಿತೈ ತೃಪ್ತೀ
ಆಧಾರ ಮಾಡಿಕೊ ಮರತೀ ಗತಿ || 2 ||
ದಾರಿ ನೀ ತಿಳಿಯೈ ಊರೋಳು ತಿಳಿಯೈ
ಭವಭಾರ ಬೇಲಿ ಮುಂದಳಿಯೈ ಕಳಿಯೈ || 3 ||
ನರಜನ್ಮಾವಾದ್ಯಾ ಅರಿಯಾದೇ ಹೋದ್ಯಾ
ಮರಳಿ ನೀ ಬರಲಾರೇ ತಿಳಿದ್ಯಾ ಬಂದ್ಯಾ || 4 ||
ಎಲ್ಲಾರಲ್ಲಿರುವಾ ಅಲ್ಲೀಷಾ ಗುರುವಾ
ನಿಲ್ಲಾದೆ ನಡಿಕೇಳೂ ಪೊರಿವಾ ನಿಜವಾ || 5 ||

ಕಂಡೇ ಕನಸು ಮರತೇನಯ್ಯಾ
ಕಂಡೇ ಕನಸು ಮರತೇನಯ್ಯಾ
ಪಂಡಿತರೆನ್ನಾಗೇ ಪೇಳಬೇಕಯ್ಯಾ || ಪ ||
ಪೇಳುವುದು ಕಂಡಿಲ್ಲ
ಕಂಡದ್ಹೇಳಲ್ಕೆ ಬರಲೊಲ್ಲದೆಂಬಾ
ಬಾಳ ಜನರಾಡೂವ ವಾಕ್ಯವು
ತಾಳಿತೀದಿನ ನಿಜವು ಎನಗೇ || 1 ||
ರಾತ್ರಿಯಲ್ಲಿ ಬೆಳಕಾಯಿತಾ
ಬೆಳಕೆಲ್ಲಿ ಹೋಯಿತೋ ತಿಳಿಯಲಿಲ್ಲಾ
ರಾತ್ರಿಯಿಂದಧಿಕೆನ್ನ ಕೊರವದು
ನೇತ್ರಕೀದಿನ ತೋರಿರೆನಗೇ || 2 ||
ಅಲ್ಲಿಷಾ ಗುರು ಕರುಣ ಪಡೆದವರಿಲ್ಲಿ
ಈ ಜನರಲ್ಲಿ ಇರಲಾ
ಉಲ್ಲಾಸ ತೋರೀಗ ಎನಗೆ
ಎಲ್ಲಾರು ಸುಖದಲ್ಲರುವದೈ || 3 ||

ಶ್ರೀಗುರೂವೆಮ್ಮಾ ನಿ ಕಾಯ್ದೆ
ಶ್ರೀಗುರೂವೆಮ್ಮಾ ನಿ ಕಾಯ್ದೆ
ಹೋಗೂವ ಸಿರಗಳ ಬ್ಯಾಗಾ ನಿಲ್ಲಿಸದೆ || ಪ ||
ಮಾತಾ ಪಿತ ವಾದಿನಾಥ ಧಾತರಸಾಮುನದದ್ದೀ ತಾ
ಜಾತಸ್ಯಂ ಮರಣಮೆಂಬ ಭೀತಿ ಬಿಡಿಸಿದೆ || 1 ||
ಬಂತು ಬಹಿರಂಗ ಕಂಡೆ ವಂತರಂಗಕ್ಕಹುದು ಮಾಡೀ
ಶಾಂತ ಮೂರುತೀಗ ನಿಮ್ಮನೆಂತು ಬಿಟ್ಟೆವೈಯ್ಯಾ || 2 ||
ಹೆಳವನಲ್ಲೀಗಂಗೆ ಬಂದೂ ತೊಳವರೀತಿ ಕಂಡಿತಯ್ಯಾ
ತಳಮಳವ ತುಂಡಿಸೀಗ ಉಳಹಿಕೊಂಡಲ್ಲಿಷ || 3 ||

ಏಳು ಸೋಪಾನಂಗಳಿಹವು
ಏಳು ಸೋಪಾನಂಗಳಿಹವು
ಕೇಳಿ ಏರಿಳೀವಂತಾದಿ ಯಾತ್ಮ ಘನವೂ || ಪ ||
ಪ್ರಥಮ ಸೋಪಾನದಲ್ಲಿರುವಾ
ಮಥನ ಮಾಡುವ ಬೋಧಾ ಮಾರ್ಗವಾದರುವಾ
ಜತನದಿಂದೈವ ಸಂಗ್ರಹವಾ
ಸುತನಾದವಗೆ ಪೇಳಿ ಸೌಖ್ಯತಾ ಕೊಡುವಾ || 1 ||
ದ್ವಿತಿ ಸೋಪಾನದೊಳಿದನೂ ಪೇಳ್ವಾ
ಗತಿಭೋಗಾ ಸ್ವರ್ಗ ಸಂಗತಿಯಾ ಬ್ಯಾಡೆನುವಾ
ಸತಿಯರಾ ನಡತಿ ನೋಡೆನುವಾ
ಪತಿ ಜಗದೊಡಿಯಾನ ಬೆರಿಯಬೇಕೆನುವಾ || 2 ||
ತ್ರಿವಿಧ ಸೋಪಾನದೋಳ್ ಮೆರವಾ
ರವಿಚಂದ್ರ ಗಗನಾಭುವನಕೆ ಹೆಚ್ಚಾಗಿರುವಾ
ಸುವಿಚಾರ ಮುಂದೆ ತೋರಿಸುವಾ
ಅವಿರಳ ಪರಬ್ರಹ್ಮ ನಾನೆ ತಾನೆನುವಾ || 3 ||
ಚತುರ ಸೋಪಾನ ತಾನೇರ್ವಾ
ಇತರ ನಾನೆನುವಾ ನಾ ಗತಿಯ ನಷ್ಟಿಸುವಾ
ಸತತ ತಾನವನ ತೆಕ್ಕೊಳುವಾ
ಶತಮಾತ ದಯಾದೀ ಧನ್ಯನ ನವನೆನಿಸುವಾ || 4 ||
ಪಂಚ ಸೋಪಾನದೋಳ್ ಬೆರವಾ
ವಂಚನಿಲ್ಲದೆ ತಾನೇ ಮುಂಚಿತ ಕಾಣ್ವಾ
ತೋರೂವ ಭಕ್ತ ಸಾಹಸವಾ
ಯಾರ್ಯಾರು ಪಡಿಯಾದಾ ಪಡದಾ ನೊಂದೊರವಾ || 6 ||
ಏಳು ಸೋಪಾನವಾ ನಿಜವಾ
ಹೇಳಲಸದಳ ವಸ್ತೂವಮಳೈಕ್ಯಾಗಿರುವಾ
ಹೇಳೀದನಲ್ಲಿಷಾ ಗುರುವಾ
ನಾಳೆನ್ನದಿ ದಿನಾ ಕಂಡಿರೈ ಸುಖವಾ || 7 ||

ಮುಂದಾಗಿ ಪ್ರಭುವಿನ ಚಂದಾಗಿ ವಂದಿ ನೀನು
ಮುಂದಾಗಿ ಪ್ರಭುವಿನ ಚಂದಾಗಿ ವಂದಿ ನೀನು
ಒಂದಾಗಿ ಒಳಗೆ ಹೊರಗೆ ಹೊಂದಬಾರದೇ
ಹಿಂದಾಗಿ ಇಹದಲ್ಲಿ ಬೆಂದ್ಹೋಗಿ ಕಂದಿ ಕುಂದಿ
ಒಂದೆ ದಿನ ಒಂದೆನೆಂದರಾಗದಾಗದೇ || 1 ||
ಒಂದೇ ಎನ್ನುವ ವೇದದಂದಾ ಇಂದಿನದಲ್ಲೀ
ವಂದೀ ಮುಂದ್ಹೋಗೊ ಮಾರ್ಗ ಮಾಡಬಾರದೇ
ಮುಂದೇನು ಭಯವಿಲ್ಲಾ ಇಂದೇ ನಿನ್ನಯ ಪಾಪಾ
ಬೆಂದ್ಹೋಗಿ ಪರಮಾನಂದ ಹೊಂದಬಾರದೇ || 2 ||
ನ್ಯಾಯಾ ತಪ್ಪಿದ ಸತಿ ಕಾಯಾ ಪರರಿಗಿತ್ತೂ
ಸಾಯ್ವಾಗ ಪತಿಸ್ನೇಹ ಸೇರದಾಗದೇ
ಮಾಯಾಂಧಕಾರದಿ ಮರ್ಮಾವರಿಯದೆ ಲಯ
ಕಾಲಾದಿ ಬೇಡಲಾಗ ಬಾಧೆ ಬಿಡದೇ || 3 ||
ದೇಹಾದಂಡನೆ ಉಂಡಾ ದ್ರವ್ಯಾವೆ ಕಳಕೊಂಡಾ
ಧಾತ್ರೀಶನಾಜ್ಞೆ ಮುಂಚಿತಾ ತಿಳಿಯದೇ ದೈವಾ
ಸಯ್ಯೋಗಾವಾ ದೇಹಾಂತರಂಗದಲ್ಲೀ
ಕಾಯ್ವಾ ಕೊಲ್ಲುವನಿರುವ ಕಾಣಬಾರದೇ || 4 ||
ರೂಪಾ ಯೌವ್ವನ ಮ್ಯಾಲೆ ಪಾಪಾಧಿಕಾರ ಜ್ವಾಲೇ
ತಾಪಾಕ ವಿವೇಕ ತಾಕಿಕೊಂಡದೇ
ತಾಪಾ ತಪ್ಪಿಸಿಕೊಂಬ ವ್ಯಾಪಾರೆತ್ತಕಡಿಯೋ
ಲೇಪಾವಾಗ್ಯಾದೋ ಯೋಚಿಸಬಾರದೇ || 5 ||
ಮಂಗಾಗೇ ಮದ್ಯಪಾನ ಮ್ಯಾಲೆ ವೃಶ್ಚಿಕ ಕೂನಾ
ಭಂಗಾ ಮಾಡುವ ದೆವ್ವ ಬಡಕೊಂಡದೇ
ಮಂಗಾನಂತೀ ಜಗವು ಕಂಗೆಟ್ಟು ಪೋಗ್ಯಾದೆ
ಸಂಗಾದೊಳಗೆ ಬಿದ್ದು ಸಾಯಬಹುದೇ || 6 ||
ಅರವೀನ ಸ್ವರೂಪ ಗುರುವಲ್ಲಿಷಾ ರೂಪ
ಚರಣಕ್ಕೆ ಹೊಂದಿ ಸ್ಥಿರವಿರಬಾರದೇ
ಅರುವಿಂದನುಭವಿಲ್ಲ ಮರತದ್ದು ತಿಳಿಸಲಿಲ್ಲಾ
ಬರಿದೇ ತಿರುಗುವರಿಗೆರಗಬಾರದೇ || 7 ||

ಬ್ಯಾಡಣ್ಣಾ ನೋಡಣ್ಣಾ
ಬ್ಯಾಡಣ್ಣಾ ನೋಡಣ್ಣಾ
ಬಹುವಿಧ ಕಾಡುವುದು ಗುರುಮಾರ್ಗ || ಪ ||
ಕಾಡಿ ಕಾಡಿ ನಿನ್ನಿಘಾಶೆ ಮಾಡಿಮಾಡಿ ಚಪ್ಪಳಿಟ್ಟೂ
ನೋಡಿನೋಡಿ ನಗುವ ರೀತಿ ಮಾಡುವ ದಾಹ ಕೋಡಿ || 1 ||
ಹಾಸ್ಯ ಮಾಡೂವಬ್ಬನಲ್ಲ ಏಸೋ ಜನರಿಂದಾಡಿಸಿ
ನಾಶ ನಿನ್ನ ನೀಗಮಾಡಿ ಘಾಶೆ ಕೊಡುವ ಕೋಡಿ || 2 ||
ಬಲ್ಲಿದ ಶ್ರೀಮಂತ ನೀನೆಂದಿಲ್ಲಿ ನಿನ್ನ ನೋಳ್ಪದಲ್ಲಾ
ಸೊಲ್ಲಿ ಸೊಲ್ಲಿನಿಂದ ಇಲ್ಲಿ ಕೊಲ್ಲುತಿಹುದು ಕೋಡಿ || 3 ||
ತಿಕ್ಕಿ ತಿಕ್ಕಿ ನಿನ್ನನೀಗಾ ದುಃಖದಲ್ಲಿ ದೇಹವಿಟ್ಟು
ತಕ್ಕ ಸತಿ ಮಕ್ಕಳೆಲ್ಲ ಒಕ್ಕಲಿಕ್ಕಿಪ ಕೋಡಿ || 4 ||
ಸಾಧು ಗುರುವಲ್ಲಿಷಾನ ಬೋಧ ಮಾರ್ಗ ತಾಕುವದು
ಬಾಧೆಗಳ ಗಣಿತಣ್ಣಾ ಗಾದೆ ಮಾತಿದಲ್ಲ ಕೋಡಿ || 5 ||

ಶ್ರೀಗುರೂ ಸಿಗಬೇಕಿಂತವನೂ
ಶ್ರೀಗುರೂ ಸಿಗಬೇಕಿಂತವನೂ
ಯೋಗಾ ಮುದ್ರಾನಿದ್ರಾ ದೇಹ ಬಿಡಿಸುವನೂ || ಪ ||
ದೈವಾಧೀನವು ಜಗ ಸರ್ವವನೂ
ಕಾಯ್ವಲೊಲ್ಲುವ ಕರ್ತಾ ಕಾರಣನಿವನೂ
ಕೈಯಾರ ಮಾಡ್ವಾ ವೇದವನೂ
ಸಾಯ್ವಾ ಸಾಯದಲಿರುವಾ ನರನಾ ತೋರಿಪನೂ || 1 ||
ನಿರ್ಮಾಣ ಪಾಪ ಪುಣ್ಯವನೂ
ಧರ್ಮಾ ಸಂಗ್ರಹ ಶಾಸ್ತ್ರಾ ಸಮ್ಮಾತಗಳನೂ
ಮರ್ಮಾ ಉಪದೇಶ ಮಾಡವನೂ
ಕರ್ಮಾ ನಿರ್ಮಣ ಪುಣ್ಯದ ಪುಂಜೆನಿಪನೂ || 2 ||
ಜಾತಸ್ಯಂ ಮರಣವೆಂಬದನೂ
ಮಾತಾ ಮರ್ಮದ ದಾರೀ ಮನಕೊಪ್ಪಿಸುವನೂ
ಭೂತ ಪಂಚಕವಲ್ಲೆಂಬುವನೂ
ಯಾತಾನ ದೇಹ ಎಲ್ಲರೊಳು ತೋರಿಪನೂ || 3 ||
ವೇದಕ್ಕತೀತ ದೈವವನೂ
ಸಾಧೂವನಾಥರಾ ಪ್ರೀತಿ ಸ್ನೇಹಿತನೂ
ಮೂದೇವರಿಗೆ ಶಿಲ್ಕಾದವನೂ
ಈದಿನಾ ತೋರೀ ಇತರವ ಛೇದಿಸುವನೂ || 4 ||
ನಾಲ್ಕು ವಚನಾರ್ತ ತತ್ವವನೂ
ಮೂಲ್ಕ ತಿಳಿಪಡಿಪಲ್ಲೀಷ ಗುರುವರನೂ
ಬಾಲ್ಕಾರ ಪರವಾಗಿರುವನೂ
ಮೇಲ್ಕವೀ ಜನಕೆಲ್ಲಾ ಮಧುರವಾಗಿಹನೂ || 5 ||

ಮಾನಸ ಈ ಪರಿಯಾ ಮೆರೆವುದೈ
ಮಾನಸ ಈ ಪರಿಯಾ ಮೆರೆವುದೈ
ಮಹನೀಯ ಮಹಮೂರ್ತಿ
ಮಾನಸ ಈ ಪರಿಯಾ ಮೆರೆವುದೈ || ಪ ||
ಹೆತ್ತ ಪಿತನ ಕಂಡುತ್ತಮಸುತ
ನತ್ಯಾಂತರುಷ ತಾಳೀ
ಚಿತ್ತ ಚೆದುರದೇ ಮತ್ಯಾರನ್ನಾ
ದತ್ಯಾಡುವ ಕೇಳೀ
ನಿತ್ಯ ನಿರಾಳನ ನಿಜ ಕಂಡ ದಿನ
ಸತ್ಯಪಾಲರಾ ಸಾರಶರಧಿಯೊಳು || 1 ||
ಕಾಮಿನಿ ಪುರುಷನ ಕಾಣುತೆ ಬ್ಯಾರೇ
ಕಾರಣೆನ್ನದಿಹಳೂ
ಸ್ವಾಮಿ ಸಮರಸ ಪ್ರೇಮಿ ಸಕಲಂತರ್ಯಾಮಿ
ಯಾಗಿಹನು ಕೇಳೂ
ಭೂಮಿ ಚತುರ್ಧಶ ಚರಿಸಲಣುಪರೀ
ಯಾಮಹಧನ್ಯಂಗರಮರಿಕಿಲ್ಲದೆ || 2 ||
ಜಲಜ ವಿಕಸಿತವು ಜಗದಾಂಬಕನಿಹ
ಜಾಜ್ವಲ್ಯವೆ ತಾ ಕಂಡು
ಸುಲಭ ಪರಾತ್ಪರ ದರಿಸಿನ ಸುಜನನು
ಇರುವ ವಿವರ ಸುಖವುಂಡೂ
ಮಲಿನ ವಿಲ್ಲದೆ ಪ್ರಾಣಘಟವು
ಚಿತ್ತ ಮುರಿಯದೆ ಸಿದ್ಧಿ ಮಾಡಿದ ಧನ್ಯನ || 3 ||
ಯಾದವ ಕುಲಧಣಿ ಮಾದವ ಕಾಣು
ತಾಧಾರವೆನ್ನುವ ವಿದುರಾ
ಬೋಧ ನಿಜಮಾರ್ಗ ಸಾಧು ಕಾಣುತಿಹ
ವೇದಾಂತಾಗಮ ಸಾರಾ
ಆದಿ ಬೆರದು ತಾನನಾದಿಯಾದ
ಸುವಾದವುಳ್ಳ ಬಹುಸುಖ ನಿಧಿಯಂತರ || 4 ||
ಸಮರದಿ ಹಿತಪರ ಸವ್ಯ ಸಾಚಿಮನ
ಸಾರ್ವಕಾಲ ಹ್ಯಾಗಿಹುದೂ
ಸುಮನ ಅಲ್ಲಿಸಾಹೇಬು ಗುರುಗಮನ ಕರುಣ
ನರಾಧಮನ ಮ್ಯಾಲಿಹುದೂ
ಯಮನ ಭಯಂಕರ ಎಳ್ಳಿನಿತಿಲ್ಲದೆ ವಿಮಲ
ಏಕಾಂಗ ವಿಚಾರ ಮೂರ್ತಿಯ || 5 ||

ಶ್ರೀಗುರುವರ ನಿಮ್ಮ ಕರುಣದ ರುಚಿಕರ
ಶ್ರೀಗುರುವರ ನಿಮ್ಮ ಕರುಣದ ರುಚಿಕರ
ಭಜಿಪೆನು ಪ್ರಥಮದಲಿ ನೀಗಿದೆ
ನಾನೆಂಬುವ ಘನಪಾಪವು ನಿರ್ಮಲ ಖಡ್ಗದಲೀ || 1 ||
ಒಂದಿಹ ಘಟದೊಳಗಿಂದ್ರಿಯ ದಶಗಳ
ನೊಂದಿಪದೊಂದಿಲ್ಲೀ
ಕೊಂದೆನಿಪುಣ್ಯನೆ ಒಂದದನೊಂದಿಸಿ
ದಿಂದಿಗೆ ಚಂದದಲಿ || 2 ||
ನಾನತ್ವವು ನಾಶೆಂಬುವದನುಭವ
ನಿಶ್ಚಯ ಮಾರ್ಗದಲೀ
ನಾನತ್ವಕೆ ಪುಣ್ಯಗಣಿತ ಬರುವದ
ನಿರ್ಧರಿಸಿದಿರಿಲ್ಲೀ || 3 ||
ತಪ್ಪಿತವೆಲ್ಲವನೊಪ್ಪಿತ ಮಾಡಿಸಿ
ತಪ್ಪಿಸಿದಿಹದಲ್ಲೀ
ತೃಪ್ತಿತ್ತೀದಿನ ಜ್ಞಪ್ತಿಗತೀತಾ
ಭಕ್ತಾಪ್ತಂಗಿಲ್ಲೀ || 4 ||
ಬರಲುಳ್ಳೆಮ ಭಯ ಪಾರ್ಮಾಡುವ ದಯ
ಧರಿಸಿಹೆ ಮರ್ಮದಲೀ
ಹರ ಮುನಿದರೆ ಗುರು ಪರಿಹರಿಪೆಂಬದು
ಸ್ಥಿರ ನಿಂತ್ಹೋಯ್ತಿಲ್ಲೀ || 5 ||
ಅರಸನು ಮುನಿದರೆ ಸರಸನು ಮಂತ್ರಿಯು
ಪೊರಿವನು ಲೋಕದಲೀ
ಕರತಲಮಲಕ ವಾಗಿರುತಿರ ನರನನೀ
ಪೊರಿವದು ನಿಜವಿಲ್ಲೀ || 6 ||
ರಾಜನ ರತ್ನಗಳೆಲ್ಲವು ಚೋರರು
ಕದ್ದರು ರಾತ್ರಿಯಲೀ
ರಾಜಗೆ ಸಿಕ್ಕರು ಸಿಗದಲೆ
ಹೋದಾರಮ್ಯ ತಿಳಿಸಿದಿಲ್ಲೀ || 7 ||
ಜ್ಞಾನಾಂಜನ ಚಕ್ಷಂತೌ ಬಲವದು
ಕೂನವು ತೋರ್ದಿಲ್ಲೀ
ನಾನಾ ವೇಷಂ ನಾಶಂ ಸರ್ವಂ
ನಂಬಿಗೆ ಕೊಟ್ಟಿಲ್ಲೀ || 8 ||
ನಗುರೋರಧಿಕಂ ಎಂಬುವ ವಾಕ್ಯವು
ಯುಗದಿಂಬಂತಿಲ್ಲೀ
ನಿಗಮದಿ ನಿಜವಲ್ಲಿಷ ಗುರು ಮೂರುತಿ
ನಿಂತಿದೆಯಾತ್ಮದಲೀ || 9 |

ತನೂವಿನ ಬಾಧೆ ತನಗಿಲ್ಲವೆಂದೇ
ತನೂವಿನ ಬಾಧೆ ತನಗಿಲ್ಲವೆಂದೇ
ತನು ಬಾಧೇ ದಾವದಿಲ್ಲಿ ತಿಳಿ ಮುಂದೇ || 1 ||
ಹಿರಿಯರೀ ಪರಿಯಾ ಬರದರೂ ಖರಿಯಾ
ಧರಿಯಲೀ ದಿನ ಬಂತೀಗತಿ ಸಂಶಯಾ || 2 ||
ಅರಿಯುವ ಮುರಿಯೂವ ಪರೀಪರೀದನೂಭವ
ಶರೀರ ಕುಂಟಾಯಿತಲ್ಲಾ ಸುಖ ದುಃಖವಾ || 3 ||
ಪಂಚವಿಂಶತಿತನೂ ಬಾಧಿಗೆ ಕಾರಣೆನೂ
ಕಿಂಚಿತಾಕಾರವಿಲ್ಲಾವೆಂತಿದನೂ || 4 ||
ಪರಾಲೀಲ ನರಕಾಲೋಲಾ ಪರೀಪರೀಸ್ತ್ರಸೊಲ್ಲಾ
ಸರಿಯಂದೇನಲ್ಕಾ ಸ್ಥಲದೀ ಶರೀರವಿಲ್ಲಾ || 5 ||
ಯಾತನಾ ದೇಹಾವೆಂದೇ ಚೇತನಾವಿಲ್ಯಾಕಂದೇ
ಚೇತನವಿಲ್ಲಾದವಗೇ ವಂದಿತೆಂದೇ || 6 ||
ವಂದುವನ್ಯಾಯಾ ವಂದೀಸೇ ಹಿರಿಯಾ ಎಂದಿಗೇ
ಬೀಳ್ವೊನಲ್ಲಾ ಸೆರೆಮನೆಯ || 7 ||
ಬಹುಜನ ಸೆರೆಯಾ ಬಿಡೀಪನೂ ಮನೆಯಾ
ಇಹುದೂ ಇಲ್ಲಿರುವಂತಾತನು ನಿಶ್ಚಯಾ || 8 ||
ಅನೂಭವ ತನೂವಾ ಮನಾನವಾ ಕೊಡುವಾ
ಚಿನೂಮಗಿಲ್ಲೆನಿಪಲ್ಲೀಷಾ ಗುರುವಾ || 9 ||

ವಿಚಾರ ಗುರುವಿನ ಸಾರಾ ವತಿ ಮಧುರಾ
ವಿಚಾರ ಗುರುವಿನ ಸಾರಾ ವತಿ ಮಧುರಾ | | ಪ ||
ಜಯ ಮಂಗಳಾ ಚರಣಾ
ಗುರುವಂಗೆ ಶುಭವದನಾ
ಶೂನ್ಯಂಗ ಬೆರದೇಕಾಂಗವಾಗಿಹ ಸಾರಾ || 1 ||
ವಾಸನೆಯು ಮೂರಿಲ್ಲಾ
ಶೇಷದಕೆ ದೋಷಿಲ್ಲಾ
ಕೂಸಿನ ಪರಿಯಾ ಭಾಷೆ ನಯನುಡಿ || 2 ||
ವರ್ಗಂಗಳದಕಿಲ್ಲಾ
ಸ್ವರ್ಗಾಸೆ ಬೇಕಿಲ್ಲಾ
ಭೋರ್ಗರಿಪ ಬ್ರಹ್ಮ ಮಾರ್ಗಪೇಕ್ಷಾ || 3 ||
ಮರತಾಗ ಬೆರತಿಹುದೂ
ಪರಮಾತ್ಮನೆಡೆ ಬಿಡದೂ
ತರವಿರುವದರುವಿನದನುಭವಾಮೃತ || 4 ||
ನಾನೆನುವ ದೊರೆ ಸತ್ತಾ
ತಾನಾದ ದೊರನಿತ್ಯಾ
ಗುರುದಾನಿ ಕೊಟ್ಟಾ ಧೈರ್ಯವಳವರ || 5 ||
ಕೊಟ್ಟಿರುವೆ ನೀ ಗುರುವೇ
ಶ್ರಿಷ್ಟೀತಗೊಪ್ಪಿಸುವೇ
ಕಟ್ಟಿತ್ತ ಕಲ್ಪಿತ ಬುತ್ತಿ ಭೋಜನ || 6 ||
ಆರತಿಗಳೆತ್ತಿಸುವೇ
ಬ್ಯಾರೆನದೆ ಕೊಡು ಎನುವೇ
ಧೀರರಲ್ಲಿಷಾ ಗುರುಕ್ಷೇತ್ರ ರಚಿಸುವೆ || 7 ||

ಮೃಗಜಲ ದಿನಸಾಯ್ತೂ
ಮೃಗಜಲ ದಿನಸಾಯ್ತೂ
ಜಗವಿದು ಸೊಗಸನುಭವ ಬಂತೂ
ಯುಗಯುಗ ದಿಂದ್ರುಗ್ವಿದು ನಿಜವಿರುವದು
ಭಗವತ್ಸ್ವರೂಪ ಗುರುವಹುದೆನಿಸಿದ || 1 ||
ರಜ್ಜಿವಧಮನಾಯ್ತೂ
ಭುಜಗನ ಹಜ್ಜೆಗಳಿಲ್ಲಾಯ್ತೂ
ಮುಜ್ಜಗವಾಪರಿ ಪ್ರಜ್ವಲಿಪಾ ಪ್ರಭು
ಮಜ್ಜನಕಾಗುರು ಸಜ್ಜನ ಮಾರ್ಗದಿ || 2 ||
ಮಹಗಜ ನಿಜವಾಯ್ತು
ಮಹಿಷಶ್ವಾಗದುಶ್ಯಾಯ್ತೂ
ಮಹಿಮಾನವಗನುಭವ ಇರುವಾ ಪರಿ
ಗ್ರಹಿಕಿಲ್ಲದ ಗಿದ್ದವಗುರು ತೋರಲು || 3 ||
ಉರಿದ ಚಣಕವಾಯ್ತೂ
ವೃಕ್ಷದು ಮರಣ ಸುಕೃತ ಬಂತೂ
ಗುರು ಕೃಪದಗ್ನಿಯ ನರನಾನತ್ವವ
ಉರಿದನುಭವದಲ್ಲಿರುವ ಇಲ್ಲೆನುವಾ || 4 ||
ಚೋರನೆ ಇಲ್ಲಾಯ್ತೂ
ಸ್ಥಾಣುವೆ ತೋರಿಲ್ಲದಲಿತ್ತೂ
ತೋರಿತು ಜೀವಾತ್ಮಾ ಇತರಾತ್ಮವ ಸೇರಿತು
ಮನದಲಿ ಸಾರಿತಿದನುಭವ || 5 ||
ತಮದಲಿ ಕಾಣಿಸಿತೂ
ಬೆಳಕಲಿ ಕ್ರಿಮಿಯೊಷ್ಟಿಲ್ಲಾಯ್ತೂ
ತಮದಿಂನೋಳ್ಪರ ಯಮಭಟರಳವರು
ಮಮನಾಸರಿದರಿಗೆ ಮನಾಳ್ಗಳು ಸಹ || 6 ||
ಸತ್ತದು ದೃಕ್ಕಾಯ್ತೂ
ನಾಮದು ಇತ್ತೆನಬೇಕಾಯ್ತೂ
ಮುತ್ತುಗಳೇಳೂ ನತ್ತು ಸಮೇತದಿ
ಉತ್ತುಮ ಗುರುವಲ್ಲಿಷ ನಿತ್ತದಕೆ || 7 ||

ಮಂಗಳಾರುತಿ
ಜಯಶುಭಾಂಗ ಗುರುವರ ಮಂಗಳಂ
ವಿಹಂಗಮಾರ್ಗ ನರಂಗೀವ
ಜಯ ಶುಭಾಂಗ ದಯಾಂಗ ಮಂಗಳಂ || ಪ ||
ದಯನಿಧಿ ವಂದಿತ ಭಯ ಪರಿಹರಪಿತ
ಜಯಕರನೇ ಜಗಮಯನೇ
ಜನಪ್ರಿಯನೆ ಸತತ
ದಯಾಂಗ ಶುಭಾಂಗ ಮಂಗಳಂ || 1 ||
ಟಭಕ್ತರ ಮೊರಿವನೆ ಶಕ್ತರ ಬಿಡುವನೇ
ಮುಕ್ತಿವನೇ ಯುಕ್ತಿಗನೇ
ಶಕ್ತೀವ ಸತತ ದಯಾಂಗ || 2 ||
ಪರಮನ ಒಳ ಹೊರಗರುಪಿದ ಪುಣ್ಯನೆ
ಮರಣವನೆ ಮರಸಿದನೆ
ಬೆರಸಿದನೆ ಸತತ ದಯಾಂಗ || 3 ||
ನಾಥನನಾಥರನೀತನೇ ತೋರ್ದನೆ
ಜಾತಕನೇ ಶಾಸ್ತ್ರವನೇ
ಜತೆಮಾಳ್ಪ ಸತತ ದಯಾಂಗ || 4 ||
ತ್ರಿವಿಧಾಯತವನು ಜವದಲಿದೆನುವನೇ
ಭವಹರನೇ ಜವ ನರನೇ
ಜೈಸಿದನೆ ಸತತ ದಯಾಂಗ || 5 ||
ಶ್ರಮದೊಳು ಸಮಾಧಿ ಸಮರಸ ತಿಳಿಪನೆ
ಸುಮನಸನೇ ಸುಮಕಾಣನೇ
ತಮನಾಶ ಸತತ ದಯಾಂಗ || 6 ||
ಮಸ್ತಕದಲಿ ತನ್ಹಸ್ತವ ನಿಟ್ಟನೇ
ಶಿಸ್ತದನೇ ನಿತ್ಯದನೇ
ಸುತ್ತಿದನೆ ಸತತ ದಯಾಂಗ || 7 ||
ಶೃತಿಗಳ ಸಾರವ ಹಿತವನೆ ಮಾಳ್ಪನೆ
ಮತಿಗದನೇ ಮರ್ಮವನೇ
ಮೆರಸುವನೆ ಸತತ ದಯಾಂಗ || 8 ||
ನಾದದೊಳಗೆ ದ್ವಿತಿ ನಾದವ ತೋರ್ಪನೆ
ಭೇದವನೇ ಬೋಧಿಪನೆ
ವಾದಳಿದ ಸತತ ದಯಾಂಗ || 9 ||
ಉಭಯರ ಪೀಠವದಭಯವ ಕೊಡುವನೇ
ಉಭಯರನೇ ವಿವರಪನೇ
ಶುಭವದನ ಸತತ ದಯಾಂಗ || 10 ||
ಮಲ್ಲಿಗೆ ರೂಪನೆ ಅಲ್ಲಿಷರಾರ್ಯನೆ
ಎಲ್ಲಿಹನೇ ಶಿವನಲ್ಲಿಹನೇ
ಬಲ್ಲಿದನೇ ತ್ವರಿತ ದಯಾಂಗ || 11 ||

Categories
Tatvapadagalu ಶಿಲವೇರಿ ಶಿವಪ್ಪನವರ ತತ್ವಪದಗಳು

ಪಾರಮಾರ್ಥ ಶರಧಿ : ಭಾಗ–1

ದೈವ ಮಹಿಮೆ ವಿಚಾರ
ಶ್ರೀ ಪರಾತ್ಪರ ದೈವ ಕರುಣದಿ
ಶ್ರೀ ಗುರಾಶೀರ್ವಾದ ವಚನದಿ
ಶ್ರೀ ಪರಮಪದ ನರರಿಗನುಭವ ಪಾರಮಾರ್ಥವಿದೂ
ಲೇಪಮಾಗಲಿ ಎಂದಪೇಕ್ಷಿಸಿ
ರೂಪವಿಲ್ಲದ ದೈವ ನಿಜಗುರು
ತಾವು ಪೇಳಿಸಿದ ತೆರನ ನುಡಿವೆನು ನುಡಿಗಳಾಲಿಪುದೂ ||1||
ನುಡಿಯಾಲಿಪುದು ಗಗನ ನಿಲಸಿಹ
ತೊಡಕು ತೊಲೆ ಕಂಭೇನು ಇಲ್ಲದೆ
ನಡಿವೆ ಬಡದೊಡದಾಡಿ ಹೋದವು ಯುಗ ಮಹಾಯುಗವಾ
ಕೆಡದೆ ನಿಂತಿಹದಾ ಮಹಾತ್ಮನ
ಬೆಡಗ ವರ್ಣಿಸ ವಸದಳಾರಿಗೆ
ಕಡೆ ಮೊದಲು ಕರ್ತಾದಿನಾಥನಖಂಡ ತುಂಬಿಹನೇ ||2||
ಕನಕ ನಿರ್ಮಿತ ರುಚಿಗಳಿಲ್ಲಾ
ಪುನುಗು ನಿರ್ಮಿತ ಪರಿಮಳೆಲ್ಲಾ
ಜನಕೆ ನಿಜವಾಗಿಹುದು ಕಾರ್ಯವಾಶ್ಚರ್ಯವಿದನೂ
ಘನದೊಳ್ ಹೀನವೆ ಹೀನದೋಳ್ ಘನ
ಮನುಜ ತನುವಿಗೆ ಪಶುತನುವಿಗಿದ
ನನುವರಿತು ನೋಡಿದಡೆ ಸಹಜಾವಾಗಿ ಕಾಣುವದೂ ||3||
ಜಲದ ಮ್ಯಾಲೀ ಭೂಮಿ ಲೇಪನ
ಜಲವೆ ಭೂಮಿಯ ಮೇಲೆ ಲೇಪನ
ಜಲಭೂಮಿ ಕೆಳಭಾಗ ನಿಲಸಿಹ ಕಠಿಣ ಪಾಷಾಣಾ
ನೆಲೆಯ ತಿಳಿಯಲಿಕಾದಿತಲ್ಲದೆ
ಕಲತು ಕಲಿಪಿತ ವಾಗದಾರಿಗೆ
ಬಲವಂತ ಪ್ರಭು ಮಹಿಮೆ ಮಾಡಿಹ ಮರ್ತ್ಯರಿರುವದಕೇ ||4||
ದಂತದಲ್ಲಿಹ ಜಿಹ್ವಾಗ್ರ ವೀ
ದಂತಾಯುಧಂಗಳಿಗೆ ಸಿಲುಕದ
ಅನಂತ ನುಡಿಗಳು ನುಡಿವದೀ ನುಡಿ ಕಲಿಸಿದವರಾರು
ಪಂತು ರಾಜನ ಕಲಿಕಿ ಎನಲಾ
ಪಂತು ರಾಜಂಗಂತೆ ತಿಳಿಯದು
ಇಂತಗಣಿತ ಅಖಿಲಾಂಡ ಕೋಟಿಗಳಾಡಿಸುತ್ತಿಹನೇ ||5||
ಮಂಗಳಾಂಗಿಯರಿಲ್ಲ ವಾತಂ
ಗಂಗ ಶೃಂಗಾರಿಲ್ಲ ವೆಂದಿಗೆ
ಲಿಂಗಾಂಗ ಏಕಾಂಗ ಗರ್ಭೋಜಗತ್ಸರ್ವದೂ
ಹೀಂಗೆ ಶೃತಿ ತತಿ ಎನುತಲಿರಲಿಕೆ
ಕಂಗೊಳೋಲಿಕೆ ಮಾಡಿ ನುಡಿವವರಿಂಗೆ
ಭಂಗಾಬಂದು ಘಟಿಪದು ಬಿಡದದು ಮುಂದೆ ||6||
ಉದಯಾದ್ರಿ ಯೋಳುದಿಸೆ ಭಾಸ್ಕರ
ಉದಯ ಕಾಣ್ವದು ಸಪ್ತ ದ್ವೀಪಕೆ
ಹೃದಯ ಗಾಲೋಚನಿಗ ಸಾಧ್ಯದು ಎಂತದಾಶ್ಚರ್ಯ
ಉದಯಾದ್ರಿಗಸ್ತಾದ್ರಿ ದೂರವೆ
ಎದರಾಗಿ ಎಲ್ಲಕ್ಕೆ ಕಾಣ್ವಂತಿದನು
ನಿರ್ಮಿತವಾದಿನಾಥನ ಕಾರ್ಯಗಣಿತಿಹವೇ ||7||
ಆದಿನಾಥನು ಎಂದಾಗಳಾ
ನಾಥನಿದ್ದಂತಾಯ್ತಿ ಮಾತಿನ
ಭೇಧದ್ವಿತಿ ಈಗಿಲ್ಲ ಕಾಂಬದು ಬಂತೆ ಸಂಶಯವೂ
ಗಾದೆ ಮಾತಿದೆಲ್ಲ ವೆನಲಾ
ವೇದ ಘೋಷಣ ನಾಥ ಬಂಧುವ
ತಾ ದಾರಿ ಎದರಾಗಿ ನಿಂತದೆ ತಾತ್ಸಾರಿಪುದ್ಹ್ಯಾಗೇ ||8||
ಯಾತನದ ದೇಹಂಗಳಡಿದೆಮ
ನಾಥ ನೋಡಿವನು ಬಡಿವನೆಂಬಾ ಮಾತು ಮಹನ್ಯರು
ಬರದಿರುತ್ತಿರೆ ಬ್ಯಾರೆ ಮಾತೇನೂ
ನಾಥನಾಥರು ಉಭಯ
ರಿದ್ದಂತಾ ಖಂಡಿತಾ ಕಾಣುತಿರುವುದು
ಜಾತಕಾ ನಿರ್ಮಾಣದನುಭವ ನಿಜವೆನಲಿಬೇಕೈ ||9||
ಉಭಯರಿಹರೆನೆ ಪಾಪನಾಥಗೆ
ಶುಭ ಪರಂಪರ ಕೆಡುವ ದೀತಗೆ
ಶುಭ ಮಹೋತ್ಸವ ಕೆಟ್ಟ ಮ್ಯಾಲಿವ ಹುಟ್ಟಿ ಫಲವೇನೂ
ತ್ರಿಭುವನದೊಳಿಹ ಜಂತು ಜಾಲದ
ಸಭಾಕೆಲ್ಲಕೆ ಶ್ರೇಷ್ಠನೆಂಬಾ
ಪ್ರಭಲ ಕೆಡುವದೆ ಕೆಡದ ದೋಷಾ ರಹಿತವದು ಹ್ಯಾಗೇ ||10||
ಇಹನೆನಲು ಪಾಪಧಿಕ ಕಾಣುವ
ದಿಲ್ಲೆಂದರನ್ಯಾಯವಾಗುವ
ದಿಹನು ಎಲ್ಲೆಂಬರ್ಥ ತಿಳಿದಾಡಿದಡೆ ಲೇಸಿಹುದೂ
ಇಹಪರದೊಳೀತನ ಸಮಾನ
ರವಿ ಶಶಾಂಕಾ ತಾರ ವೃಂದಾ
ಬಹವೆ ಬಾರವು ಬಿರಿದಾಂಕಿತರೆನಿಸಿಕೊಂಬುವನೇ ||11||
ಪಾಪದನ್ಯಾಯೆಂಬ ತೊಡಕಿದು
ತಾಪ ಪರಿಹರ ಮಾಗಲೋಸುಗ
ಜ್ಞಾಪಕಾತ್ಮಾ ಗುರು ಮಹಾತ್ಮನ ಕೇಳಿ ತಿಳಿಯುವದೂ
ಆ ಪರಂಧಾಮಾದಿ ನಿಜಗುರು
ತಾಪ ತೊಡಕಂ ಬಿಡಿಸಿ ಶ್ರಿಷ್ಟಿಯ
ನೀ ಪರಿಯ ನಿಜದೈವ ನಿರ್ಮಿತ ಪೇಳ ತೊಡಗಿದನೂ ||12||
ದೂತ ಸಮುದಾಯವನೆ ಪ್ರಥಮದಿ
ಧಾತ ನಿರ್ಮಿತ ಮಾಡಿ ಕೆಲ ದಿನ
ಪ್ರೀತಿಯಲಿ ಬೆರದಾಡಿ ನೋಡಿದನಾಥರನುಭಾವಾ
ಈ ತರುಳರದನಂಗ್ರಹಿಸುವಾ
ಚೇತನವ ಸರಿ ಹೋಗದಿವರಿಂ
ಗಾ ತಪೋ ಬಲವಂತರಿವರೆಂದಾಜ್ಞೆ ನೇಮಿಸಿದಾ ||13||
ದೇವರ್ಕಗಳ ದೈತ್ಯ ಗಣಗಳ
ದೈವಕರ್ತಧಿಕದಲಿ ನಿರ್ಮಿಸಿ
ಭಾವ ಇವರುಗಳಂತರಂಗಾ ಭೇದಿಸಲ್ಕಲ್ಲೀ
ಯಾವನಾದರು ವಂದಿನೆಮ್ಮನು
ಕಾವನ್ಯಾವನು ಇರುವನೆಂಬಾ
ಜೀವ ಮೋಹಿತರಲ್ಲಿವರು ಬಹು ಕೆಟ್ಟವರು ಎಂದಾ ||14||
ಕುಕ್ಕುಟನ ಮರಿ ಸಮುದಾಯ
ಪ್ರಾಯ್ವುಕ್ಕೇರಿ ಬಂದಾಗ ತಂದಿಯ
ಲೆಕ್ಕಿಸದೆ ಬಡದಾಡಿ ತಮ್ಮೊಳು ತಾವೆ ಸತ್ತಂತೆ
ರಕ್ಕಸಾ ದೇವರ್ಕಲಹಾ
ಲೆಕ್ಕವಿಲ್ಲದೆ ಮಡಿದು ಕಡಿಗಾ
ದುಃಖಿತರು ಬ್ರಹ್ಮಾನುಭವಕೇ ಬಹು ದೂರವೆಂದಾ ||15||
ಏನು ಮುಂದಿನ್ನಿದಕುಪಾಯವು
ಧ್ಯಾನ ದೇಹವು ಬೇಡ್ವನಿಲ್ಲವು
ಚೀನಿ ಚಿನಾಂಬರ ಸುವರ್ಣವು ಘನಕೆ ಮಿಕ್ಕಿಹವೇ
ತಾ ನಾಲೋಚಿಸಿ ಕುಲ ಶರಧಿಯೋಳ್
ಪೇನಪೇನ ವಿಚಿತ್ರ ಜಗದಾ
ನಾನಸೂನ್ಯಾನಾಥರನು ತನ್ನೊಳಗೆ ತಾ ಕಂಡಾ ||16||
ಬಾಳೆತರು ಸುಳಿಯಲ್ಲಿರುವ ಪತ್ರಾ
ವಳಿಯ ತೆರನಂತೆ ತೋರ್ಹರು
ಕೇಳ್ವದರಿಯರು ಬಾಳ್ವದರಿಯರು ಬಲಹೀನರೆಂದೂ
ತಾಳಿದನು ಮಹದಯ ಸಮುದ್ರಾ
ವ್ಯಾಳ್ಯದಲಿ ಉಕ್ಕೇರಿ ಇವರ್ಗಳ
ಮ್ಯಾಲೆ ತೆರೆಗಳು ಬೀಳ್ಕಿಡಹಿ ಜೀವಾತ್ಮರೆನಿಸಿದನೂ ||17||
ಜೀವಾತ್ಮರಾಗಿರುವರೆಂದಡೆ
ಯಾವಾಗಲಾ ಜರ ಮರಣ ಇಲ್ಲಾ
ವಾಗಿ ಇರುತಿಹರು ಇದಕೊಂದುಪಮಾನ ನೋಡಿ
ದಾವಾಗ್ನಿ ಶೀತವಿಲ್ಲಾ ಶಶಿ
ದೇಹ ಪಶ್ಚಿಮ ದೇಶದಲ್ಲಿಹ
ಕೇವಲಾ ಸೂಕ್ಷ್ಮಾಕಾರಗಳು ಕಾಣುತ್ತಲಿಹವೇ ||18||
ಕಂಡನಿವು ಸೂಕ್ಷ್ಮಾಂಗವಾದವು
ಬೆಂಡಿನಂದದಿ ಬಳಕುತಿರುವವು
ದಿಂಡಾಗಿ ಕಾಣ್ವದಕೆ ಕಾರಣ ಮಾಡಬೇಕೆಂದೂ
ಛಂಡತರ ದುದ್ಧಂಡ ಕುಲದಾ
ಖಂಡದಿಂ ಕಡಲುಕ್ಕೇರಿ ಈ
ಮಂಡಲಂಗಳ ತಾಕಲಂತಾರಾತ್ಮರೆನಿಸಿದನೂ ||19||
ಅಂತರಾತ್ಮಾಕಾರಗಳು ಭೂ
ಪ್ರಾಂತ ಕಮಲಾ ಭ್ರಾಂತ ಉದಯದಿ
ಎಂತು ಕಿರಣದ ರಶಿಮೆ ಇಲ್ಲದರಂತೆ ಕಾಣ್ಬಂತೆ
ಇಂತಿವಗಳನು ಸ್ಥೂಲದೇಹದೊ
ಳಂತು ಕೂಡಿಸುವದಕೆ ಒಂದೂ
ತಂತು ಮಾಡೀ ಪಂಚಭೂತದ ಕಾಯ ಕಲ್ಪಿಸಿದಾ ||20||

ಪಂಚಭೂತ ದೇಹ ವಿಚಾರ
ವಾಯ್ವಾಗ್ನಿ ಭೂ ಜಲವಾಕಾಶ
ಜೀಯ ದೈವಾದೂತನಿಂದಲಿ
ಪ್ರಿಯದಿಂ ತರಿಸೀ ಘಟಾಕಾರವನೆ ಮಾಡೆಂದೂ
ತೋಯ ಪಂಚಾವೀಸ ಪೃಥವಿಗೆ
ವೈಯ ಬೇಕದಿನಾರು ವೀಸಕೆ
ಕೈಯ ಸಿಗುತಿಹುದಯ್ಯಾ ಘಟದಾಕಾರ ಮಾಡ್ವದಕೆ ||21||
ಅಗ್ನಿ ವೀಸರಿ ವೀಸ ವಾಯುವು
ವಿಘ್ನವಿಲ್ಲಾಕಾಶ ವಣುಪರಿ
ಮಗ್ನಗೊಳಿಸೀ ಘಟದ ನಿರ್ಣಯ ಗಟ್ಟಿ ಮಾಡಿಸಿದಾ
ಲಗ್ನದಂತಾ ಶುಭ ಮುಹೂರ್ತವೊ
ಸುಜ್ಞಾನ ಘಟದ ಸಂತಾನ
ದಗ್ದ ಭೂಗತ ಘಟಗಳಳಿದರು ಕಾಣುತ್ತಲಿಹವೇ ||22||
ನಾಸಿಕಾಗ್ರದಿ ಪ್ರಾಣವಾಯುವ
ಘಾಶೆ ತೋರದ ಪಾನ ವಾಯುವ
ಲೇಸಾಗಿ ದೇಹಾದ್ಯಾಂತ ಚಿಲಿಪ್ಯಾನ ವಾಯುವದೂ
ಈ ಶರೀರದಿ ನಾಭಿಸ್ಥಲದಿಂ
ಸೂಸುವಾ ನಾಡಿ ಸಮೋಹಕೆ
ತಾಕುತಿಹುದು ಸಮಾನವಾಯ್ತು ಉದಾನ ಕಂಠದೊಳೂ || 23 ||
ಸರ್ಪ ವಾಯುವ ವಮನ ಮಾಳ್ಪದು
ರೆಪ್ಪೆಗಳ ನಾಡಿಪದು ಕೂರ್ಮದು
ತಪ್ಪದಲೆ ಕುಕ್ಕುಟನು ವಾಯುವ ಶೀನ ತರಿಸುವದೂ
ತಃಪ್ತಾಯ ಪಿಂಡಗಳ ತೆರನಂ ಕ್ಷಿ
ಪ್ರದಿಂ ದೇವದತ್ತ ಮಾಳ್ಪದು
ತಪ್ಪದಲೆ ಉಬ್ಬಿಪದು ಧನುಂಜಯ ವಾಯು ದೇಹವನೂ || 24 ||
ನರವು ಚರ್ಮವು ನಖವು ರೋಮವು
ಪರಿಪೂರ್ಣವಾ ಮಾಂಸ ಭಾವವು
ಧರಣಿದಂಶಾ ತಾತ್ಪರ್ಯವೀ ಗುಣ ಭಾವನೆಗಳೂ
ಶರೀರದಲ್ಲಿಯೆ ಕಾಣುತಿಹವಿವು
ಶರೀರ ದಲ್ಲಿನ್ನುಂಟು ಕೆಲವವು
ಬರದು ತೋರಲಿ ಬೇಕು ದೇಹಾತ್ಮನುಭವಂಗಳನೂ || 25 ||
ರಕ್ತ ಶುಕ್ಲವು ಜೊಲ್ಲು ಮೂತ್ರವು
ಶಕ್ತಿಯಿಂ ಕೈ ಕೆಲಸ ವ್ಯಾಳ್ಯದಿ
ಮುತ್ತಿನಿಂ ಮೈ ಬೆವರು ಸುರಿವಾವುದಕು ಗುಣಭಾವಾ
ವಿಸ್ತರಿಸೆ ಸರ್ವಾಘಟಗಳೊಳು
ಪ್ರತ್ಯಕ್ಷದಿಂ ಕಾಣುತಿರುವವು
ಪ್ರತ್ಯಕ್ಷವಾದಂತ ವಾಕ್ಯಕೆ ವಾದಗಳೆ ಇಲ್ಲಾ || 26 ||
ಹಸಿವು ತೃಷಿಗಳು ನಿದ್ರಸಂಗಲ
ಸಟೆಯು ಯೆಂಬೀವೈದು ಗುಣಗಳು
ಬಿಸಿಯದಗ್ನಿಯ ಭಾವವೆಂದೂ ಭಾವಿಸಲಿ ಬಹುದೈ
ಶಿಶುವು ವೃದ್ಧರಿಗೆಲ್ಲ ಬಿಡದದು
ವಸುಧೆ ಯೋಳಹುದಾಗಿ ಕಾಣ್ವದು
ಪಶುವು ಪಕ್ಷಿ ಮೃಗಾದಿ ಮೂಲಕ ಬಳಲಿಪದು ನಿತ್ಯಂ || 27 ||
ಗಮನ ದೀರ್ಘವು ಮೈಮುರಿವ ಬಹು
ಗಮಕದಿಂ ಗದಗದಿಪ ಮುಷ್ಟಿಯು
ಸುಮನ ಮಾರುತ ಗುಣಗಳೆಂದೇ ಗ್ರಹಿಸಬಹುದಾಯ್ತೈ
ಭ್ರಮದ ಘಟ ಪಟ ನಟನ ನಾಟಕ
ಕ್ರಮದ ಕಾರ್ಯಾ ಕಾಣ್ವದಲ್ಲದೆ
ರಮಣೀಯಮಾದಾ ಪರಾಸುಖಕನುಕೂಲವಿಲ್ಲಾ || 28 ||
ಕ್ರೋಧ ಕಾಮಾ ಭಯವು ಮೋಹಾ
ಮದಾ ಲಜ್ಜೆಯಂಬ ಗುಣಗಳು
ವಾದವಾಕಾಶಾ ಭೂತದಾವಾದ ಮ್ಯಾಲಿನ್ನೂ
ಐದು ಭೂತದ ಸ್ಥಲವು ಮತ್ತಾ
ವೈದು ಭೂತದ ರುಚಿಗಳುಂಟಾ
ವೈದರೊಳು ಷಡುಚಕ್ರ ಘಟದಲ್ಲಲ್ಲಿ ಉಂಟಾಯ್ತೇ || 29 ||
ಆಯ್ತೆ ಘಟದಾಕಾರ ಕೆಲ ದಿನ
ಹೋಯ್ತೆ ಬಿಸಲೊಳು ಗಾಳಿಯೋಳ್
ಬಿದ್ದಾ ತನಂತರ ವಾದಿನಾಥನು ಜೀವಾತ್ಮನನ್ನೂ
ಈ ತನುವಿನೊಳು ಬೆರೆಸುವದಕಾ
ಧಾತಲೋಚಿಸಿ ಜೀವನಿಗೆ ಇದ
ರಾತಿಶಯದನುಭವಗಳನು ಬೋಧಗಳ ತೊಡಗಿದನೂ || 30 ||

ದೈವವು ಜೀವಾತ್ಮನನ್ನು ದೇಹದಲ್ಲಿ ವಗಿಸಿದ ವಿಚಾರ
ಎಲವೊ ಜೀವನೆ ನೋಡು ಇವಬಲು
ಚಲುವ ನಿರುವನು ಇವನೊಳಗೆನಿ
ಕಲತು ನಟಸಲಿ ಬೇಕು ಘನತರ ಕಾರಣಗಳಿಹವೆ
ಬಲು ಪುಣ್ಯನಿವ ಬಲು ಶಾಂತ ನಿವ
ಬಲು ಭಕ್ತಿಯುಳ್ಳಂತ ಮಾನವ
ಫಲವು ಘನ ಬಹಿರಂಗವಾಗ್ವವು ಬೆರತುಕೋ ಎಂದಾ || 31 ||
ಇನ್ನು ಇವನಿಗೆ ಸತಿ ಪುತ್ರರುಗ
ಳುನ್ನತದ ವಸ್ತ್ರಲಂಕಾರಗಳನ್ನು
ನಿನ್ನಿಂದಿವಗನು ಭವಗಳಾಗುವವು ಕೆಲವೂ
ನಿನ್ನ ತಿಳಿಯುವ ಮಾರ್ಗ ಈ
ಗುಣರನ್ನ ನಿಂದಾಗುತ್ತದಲ್ಲದೆ
ಎನ್ನೊಳಿದ್ದೂ ನಿನ್ನ ತಿಳಿಯುವದಾಗದೈ ಎಂದಾ || 32 ||
ಸ್ಥೂಲವಿದರೊಳು ಬೆರದು
ಮತ್ತಾ ಶೀಲ ಸೂಕ್ಷ್ಮಾ ನಿನ್ನದಾಲಯ
ಕಾಲಕಗಣಿತ ಕಾರಣ ಮಹ ಕಾರಣವ ಕಾಣೂ
ಬಾಲ ಯೌವ್ವನ ವೃದ್ಧತ್ವ ವೀ
ಸ್ಥೂಲ ಘಟಕೋ ನಿನ್ನಾಲಯಕೋ
ಲೀಲವದರನುಭವವು ಮುಂದದೆ ಬೆರತುಕೋ ಎಂದಾ || 33 ||
ನಿನ್ನಾಲಯದ ರಾಜ್ಯದಾವದೊ
ನಿನ್ನಾಲಯದ ದೇಶದಾವದೊ
ನಿನ್ನಾಲಯದ ಪುರವದಾವದೊ ಪರಿಯರಿಯುವದಕೇ
ಎನ್ನಾಜ್ಞೆಯೊಳಾಗಿರುವ
ನಿವನನ್ನು ನೀ ಬೆರದಾಡಿ ನೋಡಲು
ನಿನ್ನಾಲಯದ ನಿಜವು ಸಿಗುವುದು ಬೆರತುಕೋ ಎಂದಾ || 34 ||
ನಿನ್ನಾಲಯ ಗೃಹವು ದಾವದೊ
ನಿನ್ನಾಲಯ ಸುಜಾತಿ ದಾವದೊ
ನಿನ್ನಾಲಯದ ನಾಮದೇಹವ ದಾವದೋ ಕಾಣೂ
ಇನ್ನಿವೆಲ್ಲವು ನಿನಗೆ ತಿಳುವಿಕಿ
ಮೃಣ್ಮಯಾತ್ಮನ ಪರಿಮುಖದಿ ಖರೆ
ಭಿನ್ನ ಭಾವನೆ ಮಾಡದೇ ನೀ ಬೆರತುಕೊ ಎಂದಾ || 35 ||
ನಿನ್ನಾಲಯಾಕಾರವೆಂತೊ
ನಿನ್ನಾಲಯಧಿಕತ್ವವೆಂತೊ
ನಿನ್ನಾಲಯಾ ರೂಪ ಚೆರಿಯ ಸ್ವತಂತ್ರವದು ಎಂತೊ
ನಿನ್ನಾಲಯಾ ಕಾಣ್ವ ಬಗೆ ಈ
ಉನ್ನತದ ಮಹಚಿತ್ರನಂತಾ
ಕಣ್ಣಾರ ನೀ ಕಾಂಬೆ ಇವನನು ಬೆರತುಕೋ ಎಂದಾ || 36 ||
ಹ್ಯಾಗೆ ಬೆರಿಯಲಿ ದೈವ ನೋಡಿವ
ಹ್ಯಾಗಿರುವ ಎನಗತಿ ಭಯಂಕರ
ಮಾಗಿ ಕಾಣ್ವದು ದೊಡ್ಡ ಗುಡ್ಡದ ಗವಿಯಂತೆ ಕಾಣ್ವಾ
ಹೋಗಿ ಬರುವೆನು ನಿನ್ನಾಜ್ಞೆ ಸರಿ
ಯಾಗಿ ಹೋಗಲಿಕೆ ಸಹಿಸದೆನಗೆಂ
ದಾಗಳೇ ಘನಜ್ಯೋತಿ ಕಲ್ಪಣೆ ಕ್ಷಣಕೆ ನಿರ್ಮಿಸಿದಾ || 37 ||
ಮುಂಗಾರಿ ಮಿಂಚಿನ ಸಮೋಹ
ಸಂಗ ಒಂದೇ ವ್ಯಾಳದಲಿ
ಬಂದಂಗಾಯಿತೀ ಜ್ಯೋತಿ ಜೀವನು ಕಂಡು ಮೋಹಿ
ಬಂಗಾರದಾ ಗೂಂಬೆ ತೋರ್ದಂ
ತಂಗ ಕಾಣಲು ಮುಂಗಡಾದಾ
ಯಿಂಗಡಿಂದಾ ದೈವಾಜ್ಞೆಯೋಳ್ ದೂತರೊಗಿಸಿದರೂ || 38 ||
ವಗಿಸಿ ದೂತರುತ್ಸಾಹದಿಂ
ಬಿಗಿಸಿದರು ಉಶ್ವಾಸ ಬಲದಿಂ
ಸೊಗಸಾಗಿ ಜೀವೇಶ ನಿಂತಾ ನಾ ಶರೀರದೊಳೊ
ಮಿಗೆ ಹರುಷ ಕಾಣ್ವದಕೆ ಜೀವಗೆ
ಜಗದೊಡಿಯ ಸ್ವರ ಕಿರಣ ರಾಗಾದಿ
ಗಳು ಗಾನಾರಚನೆಯಿಂ ಘಟದೊಳಗೆ ಕಲ್ಪಿಸಿದಾ || 39 ||
ಮಹಾ ತೇಜಃಪುಂಜ ಬೆಳಕಿಗೆ
ಮಹಾಗಾನಾ ಕಿರಣ ರಶಿಮಿಗೆ
ಮಹಾ ಪರಮಾನಂದ ಬಡುತಾ ಜೀವೇಶನಲ್ಲಿ
ಮಹಾದೈವದ ಮಹಿಮೆ ನೋಡಾ
ಮಹಾ ದೈವದ ಬೆಳಕು ನೋಡಾ
ಮಹಾ ದೈವಿನ್ನೇನು ಮಾಳ್ಪನೊ ನೋಡಬೇಕೆಂದಾ || 40 ||
ಪೂರ್ವ ವಾಸನೆ ಜೀವೇಶಗೀ
ಪೂರ್ವಿಯೋಳ್ ಚಿಜ್ಜೋತಿ ಕಾಣಲು
ನಿರ್ವಕಿಲ್ಲದೆ ತೂರ್ಯದಿಂದಾ ಸ್ಥಲಗಳಿಗೆ ಪೋಗುವಾ
ಪರ್ವತಾ ಮಠ ಶಿಲಗೃಹದ
ಗಂಧರ್ವ ಗಾನಾ ರಚನಂಗಳೀ
ಸರ್ವೋತ್ತುಮಂಗನುಭವ ವಾಗಲ್ಲೆ ನಿಲ್ಲುವನೂ || 41 ||
ಕಂಬದಂತೇ ಬಿದ್ದಿರುವ ಈ
ಡಿಂಬದೊಳಗೇ ಜೀವ ನಿಲ್ಲಲು
ಸಂಭ್ರಮದಿ ಮೈ ಮುರಿಯುತಾಗಳೆ ಎದ್ದು ತಾ ಕುಂತಾ
ಮುಂಬರಿದ ಮುಂದಾರು ಇಲ್ಲವೆ
ಇಂಬರಿದ ಹೆಚ್ಚರಿಪರಿಲ್ಲಾ
ವೆಂಬಾಗಹಂ ಬ್ರಹ್ಮಾಸ್ಮಿವೆಂಬ ಧ್ವನಿ ಬಂತೇ || 42 ||
ಅಹಂ ಬ್ರಹ್ಮವ ಧ್ವನಿ ಕೇಳಲಾ
ಗಹುದನಾಥರ ರಕ್ಷ ಬಂಧುವ
ಅಹಂ ನಾನಂಬಧಮ ಇಲ್ಲದವ ಸದಾ ನೀ ದೈವಾ
ಇಹಂ ಮಹಪರ ಪರಂ ಎನ ಗಾ
ವ ಭಯಂ ಬಾರದೆ ಪೊರಿಯು ವಂತಾ
ಜಯಂ ದಯಪಾಲಿಪುದು ಎಂದೆರಗಿದನು ಸಾಷ್ಟಾಂಗ || 43 ||
ಭಾಪುರೇ ಏಳ್ ಈ ದಿವ್ಯನುಡಿ
ಈ ಪೃಥಿವಿಯೊಳಾವ ನುಡಿಯಲಿಲ್ಲವು
ನಾ ಪ್ರತಿಷ್ಟಿಸಿದಂತ ಕಲ್ಪಿತಕೆಲ್ಲ ದೊರೆ ನೀನೂ
ನಾ ಪರಮನು ನಾ ಪರಾಕ್ರಮ
ನಾ ಸರ್ವನೂ ನಾ ಹಿರಿಯನೂ
ಈ ಪರಿಯ ನುಡಿದಾಡಿ ಹೋದರು ನರಕ ದೇಶಕ್ಕೇ || 44 ||
ಎಂದು ಈ ಪರಿ ದೈವದೂತಾ
ವೃಂದಕ್ಕೆಲ್ಲಾಜ್ಞೆ ಮಾಡಿದ ಸುಂದರಾಂಗಿ
ಇವನಿರುವ ಸರ್ವರೂ ಶರಣು ಮಾಡೆಂದಾ
ಎಂದಿಗಾದರು ಎನ್ನ ಮರಿಯದೆ
ಎಂದಿಗಾದರು ನಾನು ಎನ್ನದೆ
ಮುಂದಿಯನುಭವ ಬಹು ಪರಿಯಲೀ ಪ್ರಭಲಿಪನು ಕೇಳೀ || 45 ||
ಇದು ಏನಾಶ್ಚರಿ ತನ್ನ ದಾಸರ
ವದನ ಬಾಗಿಸಿರೆಂದನಲ್ಲಾ
ಇದರೊಳಗೆ ತಾನಿರುವನೇನೂ ಶುಭಗು ಮಾನದಳೂ
ಮುದದಿ ತಾ ಸ್ವಂತದಲಿ ಪೇಳುವ
ಇದನು ಮೀರ್ದರೆ ಮಹಾಪಾತಕ
ಒದಗುತಿಹದೋ ಎಂದು ಎಲ್ಲರು ಶಿರ ಬಾಗಿಸಿದರೂ || 46 ||
ಎಲ್ಲರೂ ಶಿರ ಬಾಗಲದರೊಳು
ಕುಲ್ಲನೆ ರೊಬ್ಬವ ಬಾಗಲಿಲ್ಲವು
ಎಲ್ಲರವನನು ಕೇಳಲವ ನಾ ಬಾಗುವದಿಲ್ಲೆಂದಾ
ಎಲ್ಲರೂಯೇ ದೈವವೇ ನ
ಮ್ಮೆಲ್ಲ ಕಿಂತೆಚ್ಚಾದನೇ ನಿವ
ಎಲ್ಲರೂ ನಿನ್ನಾಜ್ಞೆ ಕೇಳಿರೆ ಇಲ್ಲವನು ಕೇಳೀ || 47 ||
ಯಾಕೆಲವೊ ನೀ ಶರಣು ಮಾಡದ
ವೇಕ ವೇನದು ತಿಳಿಪು ನಿನಸರಿ
ಪಾಕ ಪರಿಶುದ್ಧಾಕಾರಗಳು ಪ್ರಭಲತರ ರಿಹರೇ
ಏಕೋ ದೈವವು ಏಕೋ ವಾಕ್ಯವು
ಏಕಾಜ್ಞೆ ಎಂದವರು ನಂಬಿರೆ
ಯಾಕೆ ನೀ ನಂಬದಲೆ ನಿಂತೀ ಹೇಳು ಹೇಳೆಂದಾ || 48 ||

ವಿಧಿದೂತನು ದೈವಾಜ್ಞೆ ಧಿಕ್ಕರಿಸಿದ ವಿಚಾರ
ಹೇಳುವೆನು ಬಿನ್ನಪವ ದೈವವೇ
ಹೇಳಿನೀವು ತರಿಸಿದಿರಿ ಮಣ್ಣಿದು
ಬಹಳವಾಗಿ ಹೀನ ವಿಹದಿದು ನಾನು ಮಾಡಿದೆನೋ
ಜ್ವಾಲ ಕುಲದವ ನಾ ಘನುಳ್ಳವ
ಜಾಳು ಮನುಜಿವ ಜಾಗ್ರದಂ ನೀವು
ಹೇಳಿದರು ನಾ ಕೇಳ್ವನಲ್ಲಾ ವೆಂದಿವಂ ನುಡಿದಾ || 49 ||
ಹೆಚ್ಚು ನಾನೆಂದೆ ಎಲವೊ ದೂತನೆ
ತುಚ್ಛ ನುಡಿಯದು ಬಿಡು ಬಿಡೀ ದಿನ
ಎಚ್ಚರ ನಾ ಮೆಚ್ಚಿದವನನು ಹೀನಿಸಿದೆ ನೀನೂ
ಮಚ್ಚರವ ಬಿಡು ಮಣ್ಣಲ್ಲವದು
ಇಚ್ಛೆಯಿಂ ನೋಡೆನ ಪ್ರಕಾಶದು
ಹುಚ್ಚು ಬಿಟ್ಟೆನ್ನಾಜ್ಞೆಯಂತೆ ಶರಣು ಮಾಡೆಂದಾ || 50 ||
ಒಬ್ಬ ದೂತನು ನಿಂತು ನುಡಿದನು
ಮೊಬ್ಬೇರಿತಜ್ಞಾನವದು ನಿನ
ಗೊಬ್ಬಾತ ಜಗದಾತ ದೈವಾದಾಜ್ಞೆ ಮೀರುವರೆ
ಅಬ್ಬರಿಸಿ ಭೂ ಗಗನ ತಾಳದ
ಶಬ್ದ ಮಾಡುವ ತ್ರಾಣ ಉಂಟೆನ
ಗೊಬ್ಬಾತ ನಾಜ್ಞೆಯನು ಮೀರದೆ ಒಪ್ಪಿರುತ್ತಿಹೆನೇ || 51 ||
ಪ್ರಾಣ ತೆಗಿಯುವ ದೂತ ಪೇಳಿದ
ಹೀನವಾದ್ಯಾ ದೈವದಾಜ್ಞೆಗೆ
ಧ್ಯಾನ ಮಾಡುತ ಶರಣು ಮಾಡೂ ಕ್ಷೇಮ ಕಾಣುವದೂ
ಕ್ಷೋಣಿ ಜಲಚರ ನರ ಸುರಾಸುರ
ಪ್ರಾಣಿಗಳು ಕ್ಷಣದೊಳಗೆ ತೆಗಿಯುವ
ತ್ರಾಣ ಉಳ್ಳವರೆಲ್ಲ ನಾವೀಗೊಪ್ಪಿರುತ್ತಿಹೆವೇ || 52 ||
ತೋಯಕಧಿಪತಿದೊತ ನುಡಿದೆಲ
ಪಾಯದಿಂ ನೀ ಕೆಡದಿರೀ ದಿನ
ಜೀಯನಾಜ್ಞೆಯ ಗ್ರಹಿಸಿ ಜಾಗ್ರದಿ ಶರಣು ಶರಣೆನ್ನೂ
ದೇಹ ದೀರ್ಘಾ ಪರ್ವತಂಗಳು
ತೋಯದಿಂ ಕಡಲೊಳಗೆ ಸೇರಿಪ
ಧೈರ್ಯ ಉಳ್ಳವರೆಲ್ಲ ನಾವೀಗೊಪ್ಪಿರುತ್ತಿಹೆವೇ || 53 ||
ಪವನಕಧಿಪತಿ ದೂತ ಪೇಳಿದ
ಭವನಪ್ಪಣೆಯನ್ನು ಕೈಕೊ
ಜವದಿ ನೀ ಸುಖಿಯಾಗಿ ನಿಲ್ಲುವೆ ಹೇಳುವೆನು ಕೇಳೂ
ಭುವನೇಳು ಲೋಕಂಗಳೆನ್ನಯ
ಪವನ ಮುಖದಿಂ ಗಗನಕೆ ಬೋಂ
ತವನು ನಾನಾಗಿದ್ದರೀ ಯಾಜ್ಞೆಯನು ಒಪ್ಪಿಹನೇ || 54 ||
ಈ ಪರಿಯ ದೂತಾರ್ಯರ‍್ಹೇಳಲು
ಪಾಪಾರ್ಯ ತಾ ಕೈಕೊಳದೆ ಬಹು
ಕೋಪ ವೆಗ್ಗಳ ಮಾಡಿದ ನುಡಿದನು ಕುಚಿತ ನುಡಿಗಳನೂ
ದೀಪಗಳು ನೀವು ನಾ ದಿವಾಕರ
ದೀಪಗಳಿ ಗಂಜುವೆನೆ ಛೀಛೀ
ಲೇಪ ಮಾಡಿದಿರಪಕೀರ್ತಿ ನಮ್ಮಯ ಕುಲಕ್ಕೆಂದಾ || 55 ||
ಇಕ್ಷುದಂಡದಿ ತೆನೆವುದಿಸಲಾ
ಇಕ್ಷುಕುಲ ಕೆಟ್ಟೋದ ತೆರನಾ
ಈ ಕ್ಷಿತಿಯೋಳ್ ದೊತ ಕುಲವಂ ಕೆಡಿಸಿ ಬಿಟ್ಟಿರೆಲ್ಲಾ
ದಕ್ಷರೂ ನಾವೆಂಬದರಿಯದೆ
ಭಿಕ್ಷಪಾತ್ರಂಗೆರಗಿದಂತಾ
ಭ್ರಷ್ಟರೂ ನೀವೆಲ್ಲ ಇಲ್ಲಿರಲಾಗದೈ ಎಂದಾ || 56 ||
ಎಂದ ನುಡಿಗಾ ದೈವ ರೌದ್ರದಿ
ಮಂದಮತಿ ದುರ್ನೀತಿ ಹೀನತಿ
ಕುಂದು ನುಡಿಯುವ ಸಿಂಧುಸ್ಥಲ ದಾಚೆಯಲಿ ವಗಿಯಂದಾ
ಎಂದನೆಂದಾ ಪವನಕಧಿಪತಿ
ಒಂದು ಉಶ್ವಾಸದಲಿ ತನ ಬಾ
ಯಿಂದಲೂದಿ ಕಡಲೇಳು ಸ್ಥಳದಾಚೆ ಕೆಡಹಿದನೂ || 57 ||
ಇತ್ತ ಪೇಳಿದ ದೈವದೂತರೆ
ಮತ್ತವನು ನಿಮ್ಮತ್ತರಾಗನು
ಮತ್ರ್ಯ ವಂತ್ಯಾಕಾಲ ತನಕವನ ನ್ಹಾಗೆ ನಿಲ್ಲುವನೂ
ಕ್ಙತ್ಯ ಕುಟಿಲವ ಮತ್ರ್ಯ ಜನಗಳಿ
ಗತ್ಯಾಂತ ವಾಗೋಂತಲೋಚನೆ
ನಿತ್ಯವಾಗೀ ಮಾಡುವಾನವ ಬಿಡುವದಿಲ್ಲೆಂದಾ || 58 ||
ಗುರುಮಾರ್ಗ ಘನವಲ್ಲವೆಂಬುವ
ನರಮಾರ್ಗ ನ್ಯಾಯ್ವೆಂದು ಪೇಳುವ
ಪರಮ ದಾರಿಯ ಕೆಡಿಪ ಗುರುವಿನ ಮಾರ್ಗ ಘನವೆನುವಾ
ನರನ ವಂಶವ ಕೆಡಿಸಿ ನರಕದ
ಶರಮುನಿಯ ಚರಿಸ್ಯಾಡೋ ಯೋಚನೆ
ನಿರುತ ಮಾಡುವ ನಾಗಿರುವನವ ಬಿಡುವದಿಲ್ಲೆಂದಾ || 59 ||
ನಮ್ಮಕುಲ ಹೆಚ್ಚೆನ್ನಿರೆಂಬುವ
ನಮ್ಮ ಮತ ಮೋಕ್ಷೆನ್ನಿರಂಬುವ
ನಿಮ್ಮ ಕುಲದಿಂ ನಿಮ್ಮ ಮತದಿಂ ಮೋಕ್ಷವಿಲ್ಲೆಂಬಾ
ಹಂ ಮಹಾ ದುರ್ನುಡಿಗಳಿಂದಾ
ಎಮ್ಮೊಳೈಕ್ಯಂ ಬಿಡಿಸಿ ಕಡಿಯೋ
ಳೆಮ್ಮನೇ ಇಲ್ಲೆನಿಸುವವನವ ಬಿಡುವದಿಲ್ಲೆಂದಾ || 60 ||
ಇಂತು ಪೇಳಿ ದೈವ ಈಗುಣ
ಶಾಂತ ನಾದಂತಾದಿ ಮಾನವ
ಪ್ರಾಂತ ವಾಮಾ ಭಾಗದೋಳ್ ಶ್ರೀಮಂತಳುಟ್ಟುಸಿದಾ
ಸಂತತೀ ಸಂತೋಷ ಚಿತ್ರಾ
ನಂತ ತನ್ನೋ ಳಿರ್ದನಾಥರ
ಗುಣವಂತಳಾಗರ್ಭ ಮುಖದಿಂದಾಗ ಬೇಕೆಂದಾ || 61 ||
ಉಪಚಾರ ಮಾಡವ್ವ ಈತಗೆ
ಸುಫಲ ನಿನಗಾಗುವದು ಮುಂದಿನ್ನಪರಮಿತ
ಮಹ ಹಿರಿಯರೂ ನಿಮ್ಮಿಂದಲಾಗುವರು
ಸುಫಲ ಪುತ್ರರು ಹೆಣ್ಣು ಮಕ್ಕಳು
ವಿಪರೀತ ಜನನಾ ನವರ್ತನ
ವಿಪಿನ ತುಂಬುವ ಪೂರ್ಣವಾಶೀರ್ವಚನ ಕೇಳೆಂದಾ || 62 ||
ಮಹ ಪ್ರಸಾದವೆ ಮಹ ವಿನೋದವೆ
ಮಹದೈವವೆ ಮಹಾವಾಕ್ಯವೆ
ಮಹಾಮಹಿಮನೆ ತಮ್ಮಾಜ್ಞೆ ಗಿನ್ನುಂಟೆ ನಮಗಿನ್ನೂ
ಮಹ ನಾಟಕನೆ ನಮ್ಮ ನಾಟಕ
ಮಹಸ್ಥಳದಾವಲ್ಲಿ ಇರುವುದೊ
ಮಹಮೂರ್ತಿ ನೀ ಬಲ್ಲೆ ತೋರೆಂದುಭಯರೆರಗಿದರೂ || 63 ||
ಜಂಬು ಮಾವೋ ನಿಂಬು ದ್ರಾಕ್ಷವು
ತುಂಬಿ ತುಳುಕುವ ಫಲವು ಪುಷ್ಪವು
ಇಂಬಿಲ್ಲ ಶುಕಪಿಕ ಮಯೂರಾ ಪಕ್ಷಿ ಶೃಂಗಾರಾ
ತಂಬು ವೀಣಾ ಗಾನ ರಚನವು
ಗಂಧರ್ವ ರನುದಿನವು ನಟನವು
ಗಂಭೀರ ಸ್ಥಲ ವನ ವಿನೋದ ತೋರಿದಾ ದೈವ || 64 ||
ತೋರಿ ಪೇಳಿದವನ ವಿಕೋ
ವಿಸ್ತಾರ ಬಹುವಿಧ ಸಾರ ರಸಫಲ
ಹಾರವಂ ಸ್ವೀಕಾರ ಮಾಡೀ ಸುಖಿಯಾಗಿರಿಲ್ಲಿ
ಬ್ಯಾರೆ ಮತ್ತಿನ್ಯಾರು ವಚನ
ಪಾರವಾರ ವಿಚಾರ ಸಂಗ್ರಹ
ತೋರಿ ಪೇಳಲು ಕೇಳದೇ ಕಾಲವನು ಕಳಿರೆಂದಾ || 65 ||

ದೈವ ತನ್ನಲ್ಲಿದ್ದನಾಥರ ಆದಿ ಮಾನವರಿಂದ ಉತ್ಪತ್ತಿ ಮಾಡಿದ ವಿಚಾರ
ಮುನ್ನ ತನ್ನೊಳಿದ್ದನಾಥರ
ಚನ್ನಾಗಿ ಮಹದರುವಿ ನಿಂದವ
ರುನ್ನತಂಗಳ ವಿವರ ಮಾಡಿದ ಫಲ ಭೋಗಗಳನೂ
ತನ್ನನ್ಯಾಯ ದಯಕ್ಕೆ ವಣುಪರಿ
ಭಿನ್ನ ಭೇದವು ದೋಷ ಬಾರದ
ಧನ್ಯರಹುದೆಂಬಾಲೋಚನೆಯ ಮಾಡತೊಡಗಿದನು || 66 ||
ಒಂದನ್ಹೊಂದಿದ ಬಿಂದನಂತಾ
ಹೊಂದಿದಾ ಸುಖ ದುಃಖ ಪ್ರಾಂತಾ
ಒಂದಾದ ಸಚ್ಚಿದಾನಂದ ವಂದಿಸಿದ ನ್ಯಾಯ
ಒಂದರಲ್ಲಿನ್ನೊಂದು ಬೆರಿಯದೆ
ಒಂದರ ಫಲ ಒಂದಕ್ಕೊಂದದೆ
ಇಂದ್ರ ಭಾಸ್ಕರ ನಡವ ತನಕದು ಕೆಡದೆ ಮಾಡಿದನೂ || 67 ||
ಆಲವು ಸೋಂಕಲು ಬೀಜದಂಕುರ
ಫಲವು ವಿವರವು ಬ್ಯಾರೆ ತೋರಿದ
ಜಲದೋಷವಿಲ್ಲಲ್ಲಿ ಇರುವವು ಫಲದೋಷ ಸುಫಲಾ
ಕಲತು ತನ್ನೋಳಿರ್ದನಾಥರ
ಫಲ ತ್ರಿಭಾವವ ಬೆರದದನುಭವ
ಕಲಿಸಿ ಲಿಖಿತವ ಲಿಖಿಸಿ ಒಪ್ಪಿತ ಮಾಡಿಸಿದನಲ್ಲಾ || 68 ||
ತಾನವರ ಮ್ಯಾಲಧಿಕಾರನೂ
ತಾನವರ ಫಲಪ್ರದಾಯಕನೂ
ತಾನೆ ಕೇಳಿಸಿ ತಾನೆ ಕೊಡಿಸೀ ತಾ ದೋಷಹಿತನೂ
ನಾನಸೂನ್ಯರು ನಾನವರ್ತನ
ನಾ ಘನಾ ಹೀನೆಂಬದರಿಯರು
ತಾನವರ ಚೇತನ್ಯ ವಿದ್ದಂತಾಡಿಸಿದನಲ್ಲಾ || 69 ||
ಮದುವೆ ಪ್ರಾಂತಾವಾದ ನಂತರ
ವಧು ವರರುಗಳನಲ್ಲಿ ನಿಲ್ಲಿಸಿ
ಬದಿಯಲಿರುತಿಹ ಯಜಮಾನರಾ ಬಾಲನಂ ಮಾಡಿ
ವಧು ಕರದಿ ವರನಿಂಗೆ ಕೊಡಿಸುತ
ವಧುವಿಗೆಯು ಸುಖ ದುಃಖ ವಂದಿಸಿ
ದದರ ಪರಿಯಾ ನರನೆನರಿಯಾ ತಾನರಿತನಲ್ಲಾ || 70 ||
ಉಡಿಯ ತುಂಬಿಸಿ ಕೊಟ್ಟು ಕಳುಪಿದ
ಒಡೆಯ ಅಖಂಡೇಶಾತ ಬಲ್ಲನು
ಬಡವ ಬಲ್ಲಿದ ಘನ ಹೀನ ನಾನಾ ಗಮನ ಮರಣಾ
ಆಡಿಯು ಮುಂದಿಂದಾಗದಾ ಪರಿ
ನಡಿಸಿ ಕೊಡುವವ ಇರುವ ದೈವವ
ಜಡರೂಪಿಗಳಿವೇನು ಬಲ್ಲನು ಪೂರ್ವದನುಭವವೂ || 71 ||
ಅರತಿವರುಗಳ ಚರಿತೆ ಫಲಗಳ
ನಿರುತ ನಿಜದಿಂ ತನ್ನೊಳ್ಳೆಕ್ಕಾ
ನರ ಸಮೂಹಗಳೇರ್ಪಡಿಸಿ ತಾ ಏಕಾಂಗನಾಗಿ
ಇರುತಿರಲು ವಿಧಿ ದೂತ ನರನನು
ಕರಕರಿಪೆ ಪರಿಪರಿಯ ವಿಧದಲಿ
ವರವ ಪಡಿವೆನು ನರನ ಕೆಡಿಸುವೆನೆಂದಲೋಚಿಸಿದ || 72 ||
ಇಂತದನುಭವ ಎನಗೆ ಬಂದಿತೆ
ಎಂತದುಡುಕಲಿ ಕೆಡಿಪಲೋಚನೆ
ಬಂತು ಬಹುಪರಿ ಹೀನನಾಗ್ವದು ಮೊದಲರಿಯದ್ಹೋದೆ
ಮುಂತದಜ ಹರಿಹರಗೆ ಎನಮಾಯಿತಂತು
ದಾರಿ ಸಿಗದೆ ಮಾಡಿದೆ
ಇಂತ ನರಕುರಿಯಿಂದ ನಾ ಬಹಿರಂಗವಾದಕಟಾ || 73 ||
ನಾನೆನಿಸಿದ ಜನಶಿರ ತೆಗೆಸಿದೆ
ನಾ ಹರಬ್ರಹ್ಮತ್ಯ ತೊಡಿಸಿದೆ
ನಾ ಹರಿಯ ಶರಭನಿಂ ಸಮರ ದೋಳಡ್ಡ ಕೆಡಹಿಸಿದೆ
ನಾನ ರೀತಿ ಬಳವಂತನಿಗೆ
ಹೀನ ನರಕುರಿಯಿಂದ ಎನಗಪ
ಮಾನ ಬಂದೂ ಸಿಂಧು ಕಡೆಯೋಳ್ ಬಿದ್ದು ಕೆಟ್ಟೆನಹಾ || 74 ||
ಎನ್ನ ನುಡಿ ನರ ನುಡಿದು ಇದ್ದರೆ
ಎನಗೀ ಗತಿ ಬರುವುದ್ಯಾತಕೆ
ಎನ್ನ ವಾಕ್ಯವ ಕೆಡುವ ನುಡಿ ನುಡಿದೆನ್ನ ಕೆಡಿಸಿದನೆ
ತನ್ನ ನುಡಿ ಪ್ರೇಮಾಯ್ತೆ ದೈವಕೆ
ಎನ್ನ ನುಡಿ ಹೀನಾಯ್ತೀ ದಿನಕೆ
ಇನ್ನೇನು ಗತಿ ಎಂದು ತನ್ನಯ ಕಣ್ಣೀರು ತೆಗೆದಾ || 75 ||
ಕುಲಮತಕೆ ನಾ ವೈರಿಗಾದೆನೆ
ಜಲದೀಚೆಯಲಿ ಬಂದು ಬಿದ್ದೆನೆ
ಎಲವೊ ಮಾನವ ನಿನ್ನ ಕುಲದೊಳು ಕುಲವೈರಿ ಮಾಳ್ಪೇ
ಕುಳಿತು ಮಲಗೆಲ ನಿನ್ನ ಕುಲದಲಿ
ಕುಲಹೀನ ರಾನೇಕ ಮಾಡುವ
ಛಲವ ಬಿಟ್ಟಿನೆ ನಿನ್ನಿಂದ ನಾ ಕೆಟ್ಟೆ ನಕಟಕಟಾ || 76 ||
ಉಗ್ರ ತಪವಂ ಮಾಳ್ಪೆ
ದೈವಾನುಗ್ರವಂ ನಾಂ ಪಡೆದುಕೊಳ್ಳುವೆ
ವಿಘ್ನ ಮಾನವ ಸಂತಾನ ನಾನೆ ಮನೊಶಕೆ ಕೊಡುವೇ
ಜಾಗ್ರದಿಂ ಮಾಡಬೇ
ಕೆಂದೆಂಬಾಗ್ರದಿಂ ನಾಸಾಗ್ರ ಬಂಧಿಸಿ
ಗಗನಾಗ್ರಕೇ ಕಾಯವೆಬ್ಬಿಸಿ ಘನತಪವ ತೊಟ್ಟಾ || 77 ||
ಮದ್ಯ ಗಗನದಿ ನಿಂತಿರಲ್ಕಾ
ಗದ್ದು ಕಾಗಿಗಳಿದೇನೆಂದೂ
ಗದ್ದಲಿಸಿ ಕೇಕೆ ಇಂಬೊಬ್ಬಿಡೆ ಚಲ ನಿಲ್ಲದಿರುವಾ
ಗದ್ದು ಪಕ್ಷಿಗಳೊದ್ದು ಪೋಗಲು
ಸುದ್ದಿ ಕೇಳುವರಿಲ್ಲವಾಗಾ ಸಿದ್ದರಿಗೆ
ತಾವ್ ಮಾಡ್ವ ಕೇಡೂ ತಮಗೆ ಶಿಕ್ಷಿಪದೋ || 78 ||
ಧೃವನ ಚುಕ್ಕೆಯು ನಿರುತ ನಿಂತಂ
ತವನು ದೃಢತರಮಾಗಿ ನಿಂತಾ
ಪವನ ಬಿಸಲಿಗೆ ಬೆದರದೆ ಭೀಕರ ತಪಂಗೈದಾ
ಭವಜನರ ಪೊರಿವಂತ ಬಿರದಿ
ರುವ ಭವ ತಾನಾಗಿದ್ದ ಕಾರಣ
ಜವದಿ ಕೇಳೆಲೊ ಕೊಡುವೆ ಇಷ್ಟವದೆಂದ ಘೋಷಿಸಿದಾ || 79 ||
ಮಹಾಧ್ವನಿಗವ ತಪವ ಬಿಟ್ಟಾ
ಗಹಾ ದೈವದ ದಯ ಸಮಯ
ಈ ಗಹಾಗಹಿಸುತ ಕರ ಚರಣದಿಂ ಭೂಭಾರ ಕಿಳದಾ
ಸಹಾಯಕನೆ ಸಕಲರೊಡೆಯನೆ
ಮಹಾವಾಕ್ಯವೆ ಮೊದಲು ಪೇಳಿದ
ದಯಾಭರಿತನೆ ನಡಸಿ ಕೊಡಬೇಕೆಂದು ಕರ ಮುಗಿದಾ || 80 ||
ಕೇಳು ಕೇಳಾಲಸ್ಯ ವ್ಯಾತಕೆ
ಕೇಳು ನಿನ್ನಭಿಲಾಷೆ ಏನದು
ಕೇಳಿದದು ಕೊಡುವದಕೆ ಸಿದ್ಧಾ ಕೇಳುವವರಿಲ್ಲಾ
ತಾಳಿಕೋ ಸತ್ಪಾತ್ರ ಶುಭಫಲ
ಕೇಳಿಕೋ ಕೈವಲ್ಯ ಪದಗಳ
ಬಹಳ ಕರ್ಮವ ನಿನ್ನದೆಲ್ಲವ ಪರಿಹರಿಪೆನೆಂದಾ || 81 ||
ಯೋಗ ತಪ ಜಪಗಳನು ಬಲ್ಲೆನು
ರಾಗ ರಚನೆಗಳೆಲ್ಲ ಬಲ್ಲೆನು
ಸಾಗರಂಗಳ ದಾಂಟಿ ಗಗನದೊಳಾಡ ನಾ ಬಲ್ಲೆ
ಈಗಿವೆಲ್ಲವು ಬ್ಯಾಡೆನಗೆ ಬೇ
ಕಾಗಿಹುದು ಕೇಳೆನ್ನ ಬಿನ್ನಪ
ಬ್ಯಾಗ ಮಾನವನ ಮನದೊಳಗೆ ಸ್ಥಲವೆನಗೆ ಕೊಡು ಎಂದಾ || 82 ||
ನಾನಿರುವ ಸ್ಥಲ ನೀನು ಕೇಳಿದೆ
ಏನು ನಿನ್ನಯ ದುಃಸ್ವಭಾವನ
ನಾನೆಂಬ ನುಡಿ ನರರಿಂದಾಡಿಸಿ ನರಕ ಸೇರಿಪೆಯಾ
ನಾನೆಂದು ನೀ ಹೀನನಾದೆಲ
ಹೀನ ನಿನ್ನದು ಕಳಕೊ ಎಂದರೆ
ನೀನು ಕೆಟ್ಟೋದ್ದಲ್ಲದೆ ಅನ್ಯರ ಕೆಡಿಸಬೇಕೆಂದ್ಯಾ || 83 ||
ಎಂದ ನುಡಿಗವನೆಂದ ತಾವು
ಮುಂದಂದ ವಾಕ್ಯವು ಒಂದೋ ದ್ವಂದೋ
ಒಂದಾದರದು ನಡಿಸಿಕೊಡಿ ದ್ವಂದಿದ್ದರೊಡಿಸಿ ಬಿಡಿ
ಎಂದಿಗಾದರು ದ್ವಂದವಿಲ್ಲೆಂ
ದೆಂಬುವದೆ ನಂಬಿದ್ದೆ ನೀವೀ
ಸಂದುಗ್ದ ತಾವು ಮಾಡಿ ನುಡಿದಡೆ ಯತ್ನವಿಲ್ಲೆಂದಾ || 84 ||
ಕೇಳೆಲವೊ ನಿನ್ನಯ ತಪಃ ಫಲ
ಬಹಳವಾಗಿತೆನ್ನ ಕಡಿಯೋಳ್
ಕೇಳೆನಲು ದುರ್ವಿನಯ ಕೇಳಿದೆ ಕೊಟ್ಟಿ ನೀ ಕೆಟ್ಟಿ
ಹಾಳಾಯ್ತು ನಿನ್ನಧಿಕ ಪುಣ್ಯವ
ಪೇಳರ್ಲೆ ಪಾಪಧಿಕ ಹೀನವ
ತಾಳಿತೆಂದಾಕ್ಷಣದ ಖಂಡವ ನಿಶ್ಯಬ್ದವಾಯ್ತೆ || 85 ||
ವೃಶ್ಚಿಕನ ತುದಿಭಾಗ ಮುಳ್ಳಿಗೆ
ನಿಶ್ಚಲದ ಶ್ರೀಗಂಧ ಪನ್ನೀ
ರಚ್ಚಿ ತಂಗಾಳಿಯನು ಬೀಸಲು ವಿಷ ಹೋಗದಂತೆ
ತತ್ಸಾಕ್ಷಿ ಸರಿಯಾಯ್ತಿವನ ಗತಿ
ದುಶ್ಚರಿತ್ರವ ಬಿಡದೆ ಹೋದನೆ
ಹುಚ್ಚಿಡಿದ ಶುನಿ ಸಿಂಹಾಸನಕೆ ಯೋಗ್ಯವಾಗುವುದೇ || 86 ||
ಸಿಕ್ಕಿತೆನ್ನಯ ಇಷ್ಟಾರ್ಥವೆಂ
ದುಕ್ಕೇರಿ ಮಾನವನ ಕೆಡಿಸುವ
ತಕ್ಕ ಯೋಚನೆ ತನ್ನೊಳುಡುಕುತ ತಾ ದಾರಿ ಹಿಡಿದಾ
ಸೊಕ್ಕು ಜವ್ವನೆ ಸ್ತ್ರೀಮೋಹ ದೋ
ಳಿಕ್ಕ ಬೇಕಿವನನ್ನು ದಾವ
ದಿಕ್ಕಿನೋಳ್ ಇರುವಳೋ ಸ್ತ್ರೀಯಳ ನೋಡಬೇಕೆಂದಾ || 87 ||
ಕಾಮಿನಿಯ ನಾ ಹುಡುಕಿ ತಂದರೆ
ಕಾಮಾತುರವಗಿಲ್ಲ ಹ್ಯಾಗಿದು
ಕಾಮಾತುರವ ಕಾಣ್ವ ಕಾರಣ ಮಾಡಬೇಕಲ್ಲಾ
ಕಾಮಾನ್ನಮಯಕೋಶ ದಿಂದಲೆ
ನೇಮ ನ್ಯಾಯವ ಕಾಣ್ವದಲ್ಲದೆ
ಪ್ರೇಮದಿಂದಲಿ ಗೋಧಿ ಕಜ್ಜಾಯವ ಉಣಿಸಬೇಕೆಂದಾ || 88 ||
ಹೋಗಿ ನೋಡಲಿ ಬೇಕು ಬ್ಯಾಗವ
ಹ್ಯಾಗಿರುವನೋ ಸ್ಥಲದಾವುದೆಂ
ದಾಗಳೆ ವಾಯು ವೇಗದಿಂದಲಿ ಬಂದಿಳಿದ ವನದೀ
ನಾಗವೇಣಿಯು ಉಪಚರಿಪ ಕಂ
ಡಾಗಳೆ ಕರವಡದು ನಗುತೆಂ
ದಾಗೆನ್ನ ಕೈಕೆಲಸ ಕೂಡಿತು ಕಷ್ಟವಿಲ್ಲೆಂದಾ || 89 ||
ಪುರುಷ ಪುರುಷಗೆ ಮೋಹ ಪುಟ್ಟಿಪ
ಪರಾಕ್ರಮ ಬಲವಂತ ನಾನಾ
ಹರಹರಿಗೆ ಮೋಹಿನಿಯ ಸಮಯದಿ ರತಿಯ ಮಾಡಿಸಿದೇ
ಹರಗೆ ಮತಿಯನು ಕೆಡಿಸಿದವನಿಗೆ
ನರನ ಪಾಡೇನನಗೆ ಈದಿನ
ತರುಳೆ ಇವನೆಡೆ ಬಲದಿ ಇರುತಿರೆ ಕೆಡಿಪದತಿಶಯವೇ || 90 ||
ಎಂದಲೋಚಿಸಿ ಎಡಬಲದಿ ಅವ
ರ‍್ಹಿಂದ ಮುಂದಾಡುತ್ತ ಮತ್ತಾ
ಇಂದುವದನಿಯು ಉಪಚರಿಪ ವಂತಂದವಂ ಕಂಡಾ
ಮಂದ ಮಾರುತನಂತೆ ವೈನದಿ
ಒಂದು ನುಡಿಯಂ ನುಡಿದ ತಾ ನಾ
ನಂದ ಕಪಟಾ ಕೃತ್ಯ ಮನವಾಚೆರಡು ಭೇದದಲಿ || 91 ||

ವಿಧಿದೂತ ಮಾನವನ ಮೋಸ ಮಾಡಿದ ವಿಚಾರ
ಏನು ಏನೈ ಶರಣು ನರಪತಿ
ನಾನು ಬಂದೆನು ಬಂದ ಭಾವವ
ತಾನಾದ ದೈವತಾ ಕಳುಹಿದ ಬಂದೆ ನಿಮ್ಮಲ್ಲೀ
ನೀನು ಕಲಿಯುವ ಶಾಸ್ತ್ರ ಅನೇಕವೆ
ನಾನು ನಿಮ್ಮೀರ್ವರಿಗೆ ಕಲಿಸುವೆ
ಏನ್ಹೇಳಿ ನಿಮ್ಮಿಷ್ಟವೇನದೆ ತಿಳಿಪಡಿಸಿರೆಂದಾ || 92 ||
ಎಂತ ಶಾಸ್ತ್ರದು ಹ್ಯಾಗದರ ವಿಧ
ಎಂತಾದರದು ಎಮಗೆ ಬರುವುದು
ಪ್ರಾಂತ ವಾಗ್ಹೇಳುತ್ತ ತಾವು ಬರೇನಂಬಬಹುದಲ್ಲಾ
ಗ್ರಂಥವೆಂಬುದು ಒಂದನೇಕವೋ
ಗ್ರಂಥಫಲ ಬಗೆ ಹೇಳೆಂದು ಶ್ರೀ
ಮಂತ ನಾದಂತಾದಿ ಮಾನವ ಕೇಳುತ್ತ ಬಂದಾ || 93 ||
ಕಾಮಶಾಸ್ತ್ರವು ಪ್ರಥಮ ಕಲಿಪೆನು
ಕಾಮಶಾಸ್ತ್ರವು ಪೂರ್ಣವಾಗುತೆ
ಪ್ರೇಮದತಿಶಯ ಕಳಾಶಾಸ್ತ್ರವು ಬ್ಯಾಡೆನಲು ಬಿಡದೂ
ಪ್ರೇಮದತಿಶಯ ಕಾಳಾಶಾಸ್ತ್ರವು
ಪೂರ್ಣವಾಗುತ್ತ ನಂತರವೆ
ನೇಮ ನಡಿಪಾ ಜ್ಯೋತಿಷ್ಯವು ನಿಮ್ಮ ಬಿಡದೆಂದಾ || 94 ||
ಎಂದು ನಮಗಭ್ಯಾಸ ಮಾಳ್ಪದು
ಎಂದು ಪ್ರಥಮಾರಂಭವಾ ಬೇ
ಕೆಂದಾಗ ಅಲಸ್ಯ ಮಾಡದೆ ಪೇಳುವುದು ಧರ್ಮ
ವೆಂದು ನುಡಿಯಲು ಕಪಟಿ ಸಮಯ
ಕ್ಕೊಂದಿಕೆ ಆಯ್ತೆಂದು ನುಡಿದಾ
ಸಂದುಗ್ಧ ಸಾಂಗತ್ಯವೆಲ್ಲವ ನುಸುರುತ್ತ ಬಂದಾ || 95 ||
ಕಾಮಶಾಸ್ತ್ರ ಕನ್ನಕಾರಣ
ನಾಮಾಡಿ ತಂದಿಡುವೆ ನಿಮಗೆ
ಈಮಹಾ ವನ ಪಣ್ ಫಲಾದಿಗಳಿಂದ ಬಾರದದೋ
ನಾಮಾಡಿ ತಂದಿಟ್ಟ ದುಣ್ಣಲು
ಪ್ರೇಮಾತಿಶಯ ದೇಹ ಬಲಕರ
ಕಾಮಶಾಸ್ತ್ರದ ತೂರ್ಯವಸ್ಥೆಯ ಹೇಳಲಾರೆಂದಾ || 96 ||
ಆಗಲೆಂದವರೊಡಂಬಡುತಾ
ಬ್ಯಾಗತರ ಹೋಗೆಂದು ಕಳುಹಲು
ಭೋಗ ಇಹದೊಳಗಿರುವ ಗೋಧಿ ಕಜ್ಜಾಯಗಳನೂ
ಬ್ಯಾಗ ತಂದೂಟ ಆಗಲೆಂದಾ
ನಾಗವೇಣಿಗೆ ನರಂಗುಣಿಸು
ತ್ತಾಗ ಕೆಡಿಸಿದೆನೆಂದು ತನ್ನೊಳು ತಾ ನಗುತ್ತಿರ್ದ್ದಾ || 97 ||
ಕೆಲವು ದಿನ ಸರಿದ್ಹೋಗುತಿರಲಾ
ಮಲವು ಘನವಾಗುತ್ತ ಬರಲಾ
ಬಲು ಕೇಡಿಗಿವ ಹೇಳದೆ ತಾ ಗಮನಾದನಲ್ಲಾ
ಚೆಲುವ ಸುಸ್ಥಲ ವನ ವಿಶಾಲಾ
ಮಲ ವಾಸನೆಯು ಕಂಡು ವನಚರ
ರೆಲವೊ ನೀವಿಲ್ಲಿ ಇರಲಾಗದೆಂದು ಹೊರಡಿಸಿದರವರಾ || 98 ||
ವನಪಾಲಕರು ಹೊರಡಿಸಲು
ವನಹಾರವಿಲ್ಲದೆ ಹೋಯಿತಿವರಿಗೆ
ಘನವಾದ ಕ್ಷುದ್ಬಾಧ ದಿನದಿನ ಘಾಸೆ ಮಾಡುವದೇ
ಮನ ಘಾತಕವ ಕೆಡಿಸಿ ಪೋದನೆ
ಎನಗ್ಯಾರು ಗತಿ ಇಲ್ಲವಾಯಿತೆ
ಮನದಾಣ್ಮಹಾ ಮಹಿಮನನ್ನೂ ಬೇಡುತ್ತ ನಿಂತಾ || 99 ||
ದೀನ ಬಂಧುವೆ ದಯಾ ಸಿಂಧುವೆ
ನಾನು ನಿಮ್ಮಯ ವಾಕ್ಯ ಮೀರಿದೆ
ಧ್ಯಾನರುವಿನೋಳ್ ಇಡದೆ ಕೆಟ್ಟೆನೆ ಮಲಬಾಧದಿಂದೆ
ಹೀನವಿಧಿ ಎಲ್ಲಿಂದ ಬಂದನೊ
ಹೀನನೋಕ್ಯವ ಕೇಳಿದೀ ದಿನ
ಮಾನ ಕಾಯೈ ಮಹತ್ತಾದಪರಾಧ ಕ್ಷಮಿಸೆಂದಾ || 100 ||
ಪಕ್ಷ ಭಕ್ತರ ಪೊರಿವಭವ ತಾ
ತಕ್ಷಣವೆ ಮೊರೆ ಕೇಳಿ ಕರುಣುಳ್ಳಕ್ಷಿಯಿಂ
ದನ್ನ ಪಾನಾದಿಗಳಾಗ ಕಳಹಿದನೂ
ಲಕ್ಷ ಮಾಡದೆ ಎನ್ನ ವಾಕ್ಯವ
ನಿಶ್ಚೈಸಿ ದಂತಾಜ್ಞೆ ಮೀರಿದೆ
ಕುಕ್ಷಿಬಾಧಿಗೆ ಸಿಕ್ಕಿದಾದರೆ ಹೆದರಬ್ಯಾಡೆಂದ || 101 ||
ದಿನದಿನದ ದಿವ್ಯಾನ್ನ ಭೋಜನ
ಚಿನು ಮಹೇಶನ ಪರಿಮುಖದಿ ಬಂ
ದುಣ ಬಡಿಸುತಿರೆ ದೇಹ ಮೋಹವ ತೂರ್ಯವಾಗುತಿರೆ
ಮನಸಿ ಜಾತನ ಮಹಾನರ್ತನ
ತನಗೆ ತಾ ನೀರ್ವರಿಗೆ ತೋರ್ವದೆ
ಘನ ಗೋವ ಕರ ತಾನುಣುವ ಹಾಲುಡಿಕಿಕೊಂಡಂತೆ || 102 ||
ಕಂಡನೀ ವಿಧ ಸರ್ವಖಂಡನು
ಕಂಡ ಹೇಳಿದ ದೂತರೇ ನೀವು
ಮಂಡಲಾ ಸ್ತ್ರೀ ಪುರುಷರು ಭಯರ ಮದುವೆಯಂ ಮಾಡಿ
ಕಂಡು ಬರಹೋಗೆಂದು ಕಳುಹಿದ
ಛಂಡತರ ಬಲವಂತರಾಕ್ಷಣ
ಮಂಡಯೋಳ್ ದೈವಾಜ್ಞೆ ತೆಕ್ಕೊಂಡಿಳಿದರಾ ಸ್ಥಲಕೇ || 103 ||

ದೈವ ಮಾನವಗೆ ವಿವಾಹ ಮಾಡಿಸಿದ ವಿಚಾರ
ಸ್ಥಲಕಿಳಿದು ನುಡಿಸಿದರು ಏನೈ
ಫಲವು ನಿಮ್ಮೀರ್ವರ ವಿವಾಹವು
ನಿಲಯ ಕೊಡಿಯಾ ದೈವದಪ್ಪಣೆ ಉಂಟಾಗೆದೆನಲೂ
ಬಳಿಕ ದೈವದಾಜ್ಞೆ ನಮ್ಮಯ
ತೆಲೆಯ ಮ್ಯಾಲಗಲಿರುಳು ಇರುವದೆ
ಹಲವು ಬಗೆ ನಮ್ಮಾಳ್ಪನಪ್ಪಣೆ ನಮಗಿಷ್ಟವೆನಲೂ || 104 ||
ಎಂದಾಗಳಾ ಧವಳಾಂಬರ ಗ
ಳಿಂದಾಗಳಾ ಉಡಿಸಿ ಉಡಿಗಿಯ
ಗಂಧಾಕ್ಷತೆಯು ಪುಷ್ಪ ಪನ್ನೀರವರ ಮೈಗೊರೆಸೀ
ಸಂಧಾನ ತಾವಾಗಿ ಮಧ್ಯದಿ
ಸಾಕ್ಷಿ ಮುಖದಿಂ ಮಹಾಮಾತೆಯ
ಕಂಧರಃಕ್ಕಾತನಿಂ ಮಾಂಗಲ್ಯವನೆ ಧರಿಸಿದರೂ || 105 ||
ಬಂದ ಕಾರ್ಯನುಭಾವವೆಲ್ಲವು
ಚಂದಾವಾಯ್ತೆಮಗಪ್ಪಣೆಯ ಕೊಡಿ
ಮುಂದೆ ನಮ ನಿಮಗೊಡಿಯ ದೈವ್ವಿನ್ನೇನು ಮಾಡಿಪನೋ
ವಂದನಿಗಳಿಂದೊಬ್ಬರೊಬ್ಬರ
ವಂದಿ ದ್ವಂದ್ಹಸ್ತಂಗಳಿಂದಾ
ನಂದದಿಂ ತೆರಳಿದರು ತಮ್ಮಯ ಮಹಾಸ್ಥಲಗಳಿಗೇ || 106 ||
ಅಂತರಂಗದ ಕಾಮಶಾಸ್ತ್ರವು
ಬಂತೆ ಕಣ್ಣೊಳು ಕಳಾಶಾಸ್ತ್ರವು
ಕಾಂತೆಯಳನನುಕೂಲ ಮಾಡಿತು ಜ್ಯೋತಿಷ್ಯ ಶಾಸ್ತ್ರಾ
ಸಂತಾನ ಸಂತೋಷ ಶುಭಫಲ
ಸಾಕ್ಷಿ ಕಾಂಬುವದಕ್ಕೆ ಉಭಯರು
ಏಕಾಂತದೋಳ್ ಬೆರೆದರಾಗಾ ಏಕಭಾವದೊಳು || 107 ||
ಋತುಮತಿಯಳಾದ ಐದನೆಯ ದಿನ
ಸತಿಪತಿಯ ರತಿ ಕೂಡಿತಾ ದಿನ
ಪತನ ಪುರುಷನ ವೀರ್ಯ ಬೆರಿಯಿತು ಸ್ತ್ರೀ ಗರ್ಭದಲ್ಲೀ
ಕ್ಷಿತಿಸ್ಥಲದ ಸಾಗರದ ಶುಕ್ತಿಯೋಳ್
ಅತಿರಮ್ಯ ಸ್ವಾತಿ ಜಲ ಬೀಳಲು
ರತನ ಮುತ್ತಾದಂತೆ ಪಿಂಡವು ಬೆಳೆಯುತ್ತ ಬಂತೇ || 108 ||

ಪಿಂಡೋತ್ಪತ್ಯ ವಿಚಾರ
ಮೊದಲು ದಿನವೆ ಕಲಲವಾಕಲ
ಲೈದು ದಿನ ಬೊಬ್ಬುಳಿಯಗೊಂಡಿತೆ
ಮೊದಲು ದಿನ ಮತ್ತೈದು ದಿನಕೇ ರಕ್ತಾತ್ಮವಾಯ್ತೇ
ಹದಿನೈದು ಮೊದಲಾಗಿ ದಿನದಿನ
ಕುದಿಸಿ ಮಾಂಸದಾಕಾರವಾ
ಮುದದಿ ಇಪ್ಪತೈದು ದಿನಕೇ ಮೈದೋರಿತಲ್ಲೀ || 109 ||
ತಿಂಗಳಲಿ ಶಿರಸಿನಾಕಾರವು
ತಿಂಗಳೆರಡಲಿ ಭೂಜಾರವು
ತಿಂಗಳು ಮೂರರೊಳು ಪಾದಾಂಕುರ ಕೇಶಗುಹ್ಯ
ತಿಂಗಳೂ ನಾಲ್ಕರೊಳು ನಾಶಿಕ
ನೇತ್ರ ಶ್ರೋತ್ರವು ರಂಧ್ರದ್ವಾರವು
ತಿಂಗಳೈದಸ್ಕಂದ ಜಠರಾ ಜೀವ ಚೈತನ್ಯಾ || 110 ||
ತಿಂಗಳಾರಾಗುದ ಪಾದಗಳು
ತಿಂಗಳೇಳಂಗ ಪೂರ್ಣಾಯಿತು
ತಿಂಗಷ್ಠಮಿ ನವಮಿದಂತ್ಯ ಪ್ರಸೂತಿ ವಾಯ್ವಶದಿ
ಮಂಗಳಾಂಗಿಯ ಗರ್ಭ ನಿರ್ಭೇ
ದಂಗ ಸಂಗಾವಾಗಲಾ ಶಿಶು
ಹೀಂಗೆ ನಿಲುವಿರುವದಿಂ ದಿರುವಿ ಯೋನಿಯಿಂ ಬಂದಾ || 111 ||
ಪುತ್ರರತ್ನವ ಪಡದಳೀಪರಿ
ಚಿತ್ರ ಹೊಸದದು ಇಳದಿತೀ ಧರಿ
ನೇತ್ರ ಭಾನುವಿನಂತೆ ತೋರ್ವದು ಸುಂದರಾಂಗವದೂ
ಇತ್ತೆರದೊಳರವತ್ತು ಪುತ್ರರು
ಇತ್ತೆರದೊಳರವತ್ತು ಸುತೆಯರು
ಉತ್ತು ಮರ ಸಂತಾನ ಫಲಫದ ಕೊಟ್ಟನಾದೈವ || 112 ||
ಇಂತಿವರ ಸಂತಾನ ಈ ಭೂ
ಪ್ರಾಂತ ಮಾನವನಂತವಾಗಿರೆ
ಇಂತಿದೆಲ್ಲದು ಎಂತೆಂದ ರಜ ಮುಖ ಭುಜಂಗಳೊಳೂ
ಬಂತು ಜನನವು ತೊಡೆ ಪಾದದೊಳು
ಗ್ರಂಥವೀ ದುಶ್ಚಿಂತ ನುಟ್ಟಿಸಿ
ಶ್ರೀಮಂತರಾ ಸಂತಾನ ವಿಧಿ ಕೆಡಿಸುತ್ತ ನಿಂತಾ || 113 ||
ಬ್ರಾಹ್ಮಣದರೊಳು ಭೇದ ಮಾಡಿದಾ
ಬ್ರಹ್ಮಮುಖಜಾವೆನ್ನಿರೆಂದಾ
ಹಂ ಮಹಂಕಾರಧಿಕರೆನಿಸಿದನಾ ಕ್ಷತ್ರಿಯರನಾ
ಬ್ರಹ್ಮಭುಜದಿಂದಲ್ಲಿ ಜನನವು
ತಮ್ಮ ಕುಲದಲಿ ನಾನವರ್ಣವು
ಇಮ್ಮಹೀ ಮಾನವರ ಕೆಡಿಸುತ ವಿಧಿದೂತ ನಿಂತಾ || 114 ||
ತೊಡೆಗಳೊಳು ವೈಶ್ಯಕುಲ ಜನನವು
ಪೊಡವಿಯಲಿ ಪರಿಪರಿ ವಿಧಾನವು
ಒಡದಾಡಿಸೀ ಪೊಡವಿಮನುಜರ ಕೆಡಿಸುತ್ತ ನಿಂತ
ತೊಡೆ ಮೊದಲು ತೋರುತ್ತ ಬರುವದು
ತೊಡಕು ತೊಡರಿಸಿ ಕೆಡಿಸಿ ಬಿಡುವದು
ನುಡಿ ಮೊದಲು ನುಡಿದಂತ ಪಂಥಾ ನಡಿಸುತ್ತ ನಿಂತಾ || 115 ||
ಪಾದದುದ್ಭವ ಶೂದ್ರ ಮಾನವ
ಭೇದನಂತವ ಮಾಡಿ ಕೆಡಿಸುವ
ಆದಿಮಾನವ ನಿಂದಲ್ಲವದು ಈ ಮಾರ್ಗ ನಿಜವಾ
ಓದಿಕೊಳಿರೀ ಓದಿನಿಂ ನೀವು
ಹೋಗುವಿರಿ ವೈಕುಂಠ ಮಾರ್ಗವ
ಭೋದಧಿಕ ಕರ್ಮ ಕಾಂಡೊಶದಿಂದೆಮನೊಶಕೆ || 116 ||
ಮಹಮ್ಮದಿಯರೊಳು ನಾಲ್ಕು ವರ್ಣವ
ಮಹಮ್ಮದಿಯರೊಳನೇಕ ಕಲಹವ
ಮಹಮ್ಮದಿಯರನು ಮೋಸಗೊಳಿಸುವ ಮಾಯದೂತ ನಿವಾ
ಮಹಮ್ಮದೀ ಜನ ಸಕಲ ಜನಗಳ
ನಹಂ ತನ್ನಂತಾಡಿಸಿ
ಮಹಂ ಮೇರುವ ನರಕ ರವರವ ಮನಿಯ ಸೆರಿಪನೂ || 117 ||
ಆದಿ ಮಾನವರಿಂದ ಜನಿಸಿ
ದ್ದೀ ದಿವ್ಯ ಜನ ಸಮುದಾಯದೋಳ್
ಭೇದ ಭಿನ್ನವನಂತ ಪುಟ್ಟಿಸಿ ಬಹು ದುಃಖ ಕೊಡುವಾ
ಕಾದ ಕಬ್ಬಿಣ ಮ್ಯಾಲ್ಬಿದ್ದ ಜಲ
ವಾದ ಪರಿಪರಿ ದುಃಖಾಬ್ದಿ ಸರಿ
ಯಾ ದಾರಿ ಪರಿಯಾಯ್ತು ಜನಗಳಿಗಾಧಾರವಿಲ್ಲಾ || 118 ||

ವಿಧಿದೂತನ ಪ್ರತಿಜ್ಞೆ ಭಂಗ ಮಾಡಿದ ಗುರುವಿನ ವಿಚಾರ
ಇಂತು ಕೆಡಿಸುವನವನ ಪಂಥವ
ಎಂತು ಭಂಗವ ಮಾಳ್ಪ ಮಾರ್ಗವ
ಬಂತು ಕಳುಪಿದ ಶ್ರೀಗುರುವಿನಾ ಪರಾತ್ಪರ ದೈವಾ
ಎಂತ ಗುರುವರ ಎಂತ ಶುಭಕರ
ಎಂತಾದಿ ಮಾನವರ ಸಂತಾ
ನಂತರ ಕ್ಷಿಪ ಶಾಂತಮೂರುತಿ ಇಂತಿರುವ ನೋಡೀ || 119 ||
ಬ್ರಂಹೈ ಕ್ಷತ್ರಿಯ ವೈಶ್ಯ ಶೂದ್ರರ
ರಮ್ಯ ವಾತ್ಮನುಭವದಿ ತೋರಿಪ
ಇಂಮಹೀ ವಾಕ್ಯವನು ಕಳಿಯದೀಗಾಂತರ್ಯ ತಿಳಿಪಾ
ಮರ್ಮ ಗುರುವರ ಪೂರ್ಣಬ್ರಹ್ಮದ
ಧರ್ಮ ದಯ ನ್ಯಾಯಗಳೆ ಬೋಧಿಸಿ
ಕರ್ಮ ಪಾತ್ರರ ನಿರ್ಮಲಾತ್ಮದಿ ನಿಲಿಸಲಿಕೆ ಬಂದಾ || 120 ||
ನಾಲ್ಕು ನೇತ್ರಗಳಿರುವಾತಗೆ
ನಾಲ್ಕು ಘನಬಗೆ ನಟಿಪವಾತಗೆ
ಮೂಲ್ಕ ತಿಳಿಸುವ ಗುರೂಪದಲಿ ಲೇಪಮಾಗಿಹನೂ
ಕೀಲ್ಕಂಟಕನ ವಿಧಿ ದೂತನನು
ಕಡೆ ಮೊದಲು ಕತ್ತರಿಸಿ ಬಿಡುವವನು
ಬಾಲ್ಕ ಭಕ್ತರ ತನ್ನೊಂದಿ ದವರನ್ನು ರಕ್ಷಿಪನೂ || 121 ||
ನೇತ್ರ ನಾಲ್ಕರೊಳಿರುವ ಮರ್ಮದ
ಸೂತ್ರ ತಿಳಿಸುವ ಪಾತ್ರ ಮಾನವ
ಗಾತ್ರ ತನುಧರ್ಮಗಳ ಚಂಚಲ ದಾರಿಯೀಗಳದೂ
ಚಿತ್ರ ದೇರ್ಪಾಟಾದಿಯಲಿ ಜಗ
ಚಿತ್ರ ದನುಭವ ಭೂತಪಂಚಕ
ಮಿತ್ರನಾಗೀ ಚಿದಾನಂದನ ಮಹಿಮೆ ತೋರುವನೂ || 122 ||
ಮೂರು ರೂಪಗಳಿರುವ ವಾತಗೆ
ಮೂರು ರೂಪಿರುವಂತ ವಿಧ ಬಗೆ
ಯಾರು ಇಲ್ಲದ ದೈವನಿರುವನೋಳೊಂದು ರೂಪಿಹದೋ
ತೋರವಿಲ್ಲದ ತರಾ ರೂಪದಿ
ಸರ್ವ ರೂಪಾಗಿಲ್ಲಿ ಕಾಣ್ವನು
ಏರಿ ಇಳಿಯುವ ಪಂಚಭೂತದರಂತೆ ನಟಿಸುವನೂ || 123 ||
ನಿಂತರೇ ನೆರಳಿಲ್ಲವಾತಂ
ಗಂತರಂಗದೆ ಘಟಾಕಾರಕೆ
ಎಂತೆಂದರೀಗೀ ನೇತ್ರದೊಳ್ ರೂಪದಂ ನೋಡೀ
ಎಂತು ಕಾಣ್ತಿಹುದಾಪರೀ
ಭೂಪ್ರಾಂತ ಮಾನವ ಅನಂತಕೋಟಿಯ
ಚಿಂತಾಪುರದ ಶರೆಯ ತಪ್ಪಿತ ಬಿಡಿಪದಕೆ ಬಂದಾ || 124 ||
ಕರ್ಮಕಾಂಡದ ತೊಡಕು ತಿಳಿಸುವ
ಮರ್ಮಕಾಂಡದಿ ಮನವ ಬೆರಸುವ
ನಿರ್ಮಲದ ಭಕ್ತೆಂಬ ಕಾಂಡಾ ಮರ್ಮದಾರೆರಿವಾ
ಮರ್ಮದಾರಿಲಿ ಕರ್ಮಕಾಂಡವ
ನಿರ್ಮೂಲ ನಾಶನವ ಮಾಡುವ
ಕರ್ಮವಿಧಿ ಕೈವಶಕೆ ಕೊಡದಲೆ ಕಾಪಾಡುತಿರುವ || 125 ||
ಜಗವು ದೈವಾಧೀನ ತೋರುವ
ಜಗದ ದೋಷಾ ರಹಿತ ದೈವವ
ಬಗೆಬಗೆಯಲೀ ಸಾಕ್ಷಿ ಮೂಲದಿ ಪರಿಶುದ್ಧ ಮಾಡುವ
ಯುಗಯುಗದ ವೇದ ನುಡಿ ಸತ್ಯವ
ಸೊಗಸಾದ ಸ್ವಾರಸ್ಯ ಮಾರ್ಗವ
ಮಗನಾದವನ ಮನಸಿಗೀಗಾ ಮಹಸುಖವ ಕೊಡುವಾ || 126 ||
ಬಾಣ ಗಮನಕೆ ತ್ರಾಣನೊಬ್ಬವ
ಜಾಣನಿಂದಾಗುತ್ತದಹುದೋ
ಬಾಣ ಗಮನವು ಘನವು ಸ್ವಲ್ಪವು ಧನಸಿಗೆನಬಹುದೋ
ತ್ರಾಣನಾಗಿಹ ಜಾಣನೊಗಿಯಲು
ಬಾಣ ಹೋಯಿತೋ ಬಿಲ್ಲು ವಗಿಯಿತೋ
ತ್ರಾಣನೊಗಿಯಲು ಹೋಯ್ತು ಧನಸಿಗೆ ದೋಷ ಬಂದಂತೆ ||127||
ಕರದಿ ಬೆರದಿಹ ಘಂಟದಾ ಪರಿ
ಕರವು ಚೆಲಿಸಲು ಚೆಲಿಪ ಪರಿಪರಿ
ಕರ ಕಮಲಗಳಿಗಿಲ್ಲ ದುಶ್ಚರಿ ಘಂಟಕುಂಟಾಯ್ತೇ
ನಿರವಯನುನ ನಿರುವನೀಪರಿ
ಪರಿನರಕ ಸುಖನರನಿಗೇ ಸರಿ
ನರನ ಚೇತನನಾಥ ನೆನಿಸುವ ನಿಜವಾದ ಗುರುವಾ || 128 ||
ಸ್ವರಮೊಂದರೋಳ್ ರಾಗನೇಕವು
ಸ್ವರಕಿಲ್ಲ ರಾಗಕ್ಕೆ ಹೀನವು
ಸ್ವರಪೀಠ ರಾಗಗಳ ಪೀಠವ ಸಾಕ್ಷಿ ತೋರುವನೂ
ಸ್ವರಪೀಠ ಕಾಣ್ವಂತ ಸ್ಥಲವಾ
ಸ್ವರದೊಳು ದುಸಿದ ರಾಗಪೀಠವ
ನಿರುತ ತೋರ್ವನು ನರ ಪರಮನನು ಗುರು ಮಹೇಶ್ವರನೂ || 129 ||
ಎಲ್ಲ ದೋಷವು ಜಗಕೆನಿಸುವನು
ಎಲ್ಲ ಜಗವನು ಇಲ್ಲೆನಿಸುವನು
ಎಲ್ಲರನು ತಾನಾದಿನಾಥನು ವಿವರಿಸಿದರೀತೇ
ಅಲ್ಲಿರುವ ನ್ಯಾಯ್ವಿಲ್ಲಿ ತೋರ್ವನು
ಇಲ್ಲಿಗಲ್ಲಿಗೆ ಏಕ ಮಾಳ್ಪನು
ಕುಲ್ಲವಿಧಿ ದೂತಹಂನೆನುವನ ಕೊಲ್ಲಿ ಬಿಡುತಿಹನೂ || 130 ||
ಆದಿ ಮಾನವ ಸಂತಾನಕೀ
ಬೋಧ ಬೋಧಿಸಿ ಭಯ ಬಿಡಿಸಿ ಮತ್ತಾ
ದಿ ಜೀವಂಗೀ ದೇಹದಾ ದೋಷ ಬಿಡಿಸುವನೂ
ಈ ದೇಹದೊಳಾದಿನಾಥನು
ಈ ಜೀವನ್ಹೋಗೆಂದು ವಗಿಸಿದ
ಈ ದೇಹ ಮಮಕಾರಾ ಜೀವಗೆ ಹೆಚ್ಚಾಯಿತಲ್ಲಾ || 131 ||
ಒಲ್ಲೆನೆಂದವ ದೇಹವಿಡಿದಿಹ
ಕುಲ್ಲ ಚಿತ್ತವ ಮಾತು ಕೇಳುವ
ಒಲ್ಲೆನೆಂದಾ ಮಾತು ಮರತೂ ಹೇಳಿಲ್ಲವೆನುವಾ
ಬಲ್ಲಿದುಗ್ರವ ವ್ಯಾಘ್ರ ಕುಲದವ
ನಲ್ಲಿ ಕುರಿಯಲ್ಲಿ ಬಿದ್ದಂತಿಲ್ಲಿ
ಈ ಶರೀರಾಶೆ ಭಯದೋಳ್ ಬಿದ್ದು ಕೆಟ್ಟಿಹನೇ || 132 ||
ಬರುವೆ ಹೋಗೆಂದದನು ಮರದಾ
ಪರಮನಾದಿ ಪ್ರಕಾಶ ಮರದಾ
ಪರಿಪೂರ್ಣ ಸಚ್ಚಿದಾಖಂಡಕೆ ಬಹು ದೂರವಾದ
ಎರದ ಬೇಲಿಯ ಬೆರದಂಬರವ
ಪರಿಯಾಯ್ತು ಪಾಣೇಶನನುಭವ
ಹೊರ ಒಳಗೆ ದುಖಾತ್ಮನಾಗೀ ಹೋಗುವವನಾದಾ || 133 ||
ಸತಿಯ ಸುತೆಯರ ನನ್ನದೆಂಬುವ
ಮಿತಿಯಿಲ್ಲ ಮಮಕಾರ ಮಾಡುವ
ಗತಿಸು ಗತಿ ಸನ್ಮಾರ್ಗಮರದೂ ಮೋಸವಾಗಿರುವಾ
ವ್ಯಥೆ ಅಹೋರಾತ್ರಗಲಿರುಳು ದು
ರ್ಗತಿ ದುರಾಲೋಚನೆಗಳಲ್ಲಿಯೇ
ಗತಿಗೆಟ್ಟು ಜಗಪತಿಯ ಬಿಟ್ಟೂ ಬಳಲುವವನಾದಾ || 134 ||
ಮಹಿಷನಿಂ ಬಲ ಗೋವ ಕೆಟ್ಟಂ
ತಿಹ ಪರದೋಳೀ ಜೀವ ಕೆಟ್ಟನೆ
ಮಹಿಯಲ್ಲಿ ಕೆಟ್ಟವನು ಮುಂದೆ ಕೆಡುತ ಪೋಗುವನೇ
ಭಯಮೋಹ ದುಃಖಾಭ್ದಿ ದೇಹದ
ಭಯ ಬಿಡಿಸಿ ಜಯದೊಳಗ ಬೆರಿಪನೆ
ದಯ ಮೂರುತೀ ಶ್ರೀಗುರಾರ್ಯನು ಬೋಧ ಮಾಡುವನೇ || 135 ||

ಜೀವಗೆ ಗುರುರಾಯ ತನುಮೋಹ ಬಿಡಿಸಿದ ವಿಚಾರ
ಬಾರಯ್ಯ ಜೀವೇಶನೇ ಬಹು
ಭಾರ ದೇಹಾಕಾರ ನಿನ್ನಾಕಾರ
ಮರಿದೀಬಿಟ್ಟಿ ಮೊಟ್ಟಿಯ ನೀನೊರಲಿಬಹುದೇ
ಧೀರ ಬ್ರಹ್ಮಾಚಾರ ನೀನಾಚಾರವಂತಾ
ಇಂತ ನೀಚಾಚಾರನಿಗೆ
ನೀಮೋಹ ಪಟ್ಟೀ ನಿನ್ನ ಮರದಿಟ್ಟೀ || 136 ||
ದಿವ್ಯ ಜಲವನು ಕೆಡಿಪದಿದು ಕೇಳ್
ದಿವ್ಯ ಮಧುರಾನ್ನಗಳ ಕೆಡಿಪದು
ದಿವ್ಯ ಫಲ ಪುಷ್ಪಾದಿ ಗಂಧವ ಕೆಡಿಪದಿದು ನಿಜವಾ
ದಿವ್ಯ ರಾಜ್ಯವ ನಿನ್ನ ದೇಶವ
ಜೀಯ್ಯನೇಳಿದ್ದಾದಿ ಪೂರ್ವವ
ಕೈಯ ಬಿಟ್ಟೀ ಕಾಯಕಾಂಕ್ಷವ ಮಾಡಬಹುದೇನೈ || 137 ||
ರೋಗಾಲಯದ ದೊಡ್ಡ ಹುತ್ತಿದು
ಭೋಗ ಭಯಗಳ ತವುರಮನಾಯಿತು
ರಾಗ ದ್ವೇಷತಿ ದೋಷಂಗಳೋಳ್ ರಂಜಿಸುತ್ತಿಹುದೂ
ಈಗ ನಿನಗಿದು ಹ್ಯಾಗೆ ಸೈರಣೆ
ಹೋಗಲಾಡಿ ಬಿಡೀಗ ಗುರುವಿನ
ಸಾಗರರುವಿನ ಪುರವ ಕಾಣೂ ಮಹಕಾರಣವನೂ || 138 ||
ಗೃಹ ಸುಜಾತಿಯು ನಾಮ ಸಾಕ್ಷಿಯು
ಗ್ರಹಿಸು ನಿನ್ನಾಕಾರ ಮರಿಯದೆ
ಗ್ರಹಬಾಧ ದುರ್ವಾದ ಘಟಿವಿದು ಗಜಿಗಿನಾ ತರುವೂ
ಬಹದೆ ನಿನ್ನಿಂದೆಂದಿಗಾದರು
ಇಹ ಪರದಿ ನಿನ್ನಧಿಕ ಬಳಲಿಪ
ಕುಹಕನನು ಕಚ್ಚಿಡಿದು ಇವನನು ಮಮತೆ ಮಾಡುವರೇ || 139 ||
ಅಧಿಕಾರವೂ ರೂಪು ಚರ್ಯವು
ವಿಧವನಂತವು ಚಿತ್ರಕಾರವು
ಮುದದಿ ನಿನ ನೋಡೆಂದು ದೈವವು ಹೇಳಲಿಲ್ಲೇನೂ
ಮೊದಲು ಹೇಳಿದ ವಾಕ್ಯ ಮರದಿಹೆ
ಮೊದಲು ಒಲ್ಲೆಂದದನು ಇಡದಿಹೆ
ಕುದಿದುಃಖಿ ಕೆಡುತಿರುವ ತನುವನು ನೀ ಕಾಯಬಹುದೇ || 140 ||
ಕಾರಗಾರವ ತೊರಿಯಲಿಕ್ಕಾ
ಚೋರ ನರುಷಾಕಾರನಾಗುವ
ನಾ ರೀತಿಯಂ ತನುವ ತೊರಿವದು ಲೇಸಿಹುದೋ ಜೀವ
ತೋರಿ ಕೊಡುವನು ಗುರುವನಾರ್ಯನು
ಮೀರದಿರು ಮತ್ಯಾರು ನಿನ್ನನು
ಪಾರು ಮಾಡುವರಿಲ್ಲ ಮರ್ತ್ಯದಿ ಬಳಿಪರು ಸಹಜಾ || 141 ||
ಮೇಘಮಂಡಲ ವಾಪರೀ ಘಟ
ಮೇಘ ಮ್ಯಾಲಿಹ ಇತರ ಶಶಿಘಟ
ಹೋಗಿರುವ ಯಾರಲ್ಲಿ ಬೆರಿಯದ ಶೂನ್ಯ ಸ್ಥಿತಿಯಾ
ಮ್ಯಾಗಿರುವ ಗಗನ ಖಂಡಾಕಾರ ಹಾಗೆ
ನಿನ್ನೊಳು ನಾಲ್ಕುವಿಧ ತಿಳಿ
ಈಗಳಿದರನುಭವವು ಜೀವನೆ ಗುರುಮುಖದೊಳಿಹುದೈ || 142 ||
ಈಚಬಾರದ ದೇಹಜಲದಲಿ
ನೀಚ ಶವನಾಗಲ್ಲಿ ಬಿದ್ದಿಹ
ಯೋಚಿಸೈ ನೀನಿಲ್ಲವಲ್ಲೀಗೆಲ್ಲಿ ನಿನಸ್ಥಲವೂ
ಊಚ ನಿರ್ಮಾಣಾ ಚಿತ್ರದಲಿ
ವಾಸನಾಗುವೆ ಮರದಿ ಯಾತಕೆ
ಗೋಚರವು ನಿನಗಿಲ್ಲಾಗುವುದು ಗುರುಮುಖಕೆ ಬಾರೈ || 143 ||
ಏರ್ವನಿಳಿವನು ಮಧ್ಯ ಚಂದ್ರನು
ಏರದಿಳಿಯದೆ ಇರುವ ಸೂನ್ಯನು
ತೋರ್ವನೋಟದಿ ಇಲ್ಲದಿರುವನು ವಿವರ ಮಾಡಲ್ಕೆ
ಪೂರ್ವ ನಿನ್ನಾಕಾರವಾ ಪರಿ
ಸರ್ವನಾಟಕ ನೊಂದಿ ಇರುವುದು
ಪೂರ್ವಿಯೋಳಿಹ ಗುರು ಹಿರಿಯರನು ಕೇಳಿ ತಿಳಿಯುವುದೈ || 144 ||
ಕೀವು ರಕ್ತವು ಮಾಂಸ ಮೂತ್ರವು
ಯಾವುದರೊಳಗಿಲ್ಲದಿರುವುದು
ಕೀವು ರಕ್ತವು ಇಲ್ಲದಾ ಕಲೆಯಂತೆ ಕಾಣುವುದೂ
ಸಾವು ಇಲ್ಲವು ಜೀವಗೆನುವಾ
ಶಾಸ್ತ್ರಾರ್ಥ ನಿನಗನುಭವವಾಗ್ವದು
ಜಾವಾದರಾಲಸ್ಯ ಮಾಡದೆ ಗುರುವಿನೊಡಗೂಡೈ || 145 ||
ದಶಮ ತನ್ನನು ಮರತು ಸಪ್ತಾ
ಗಸಣಿಯಲಿ ಬಿದ್ದಂತೆ ಜೀವನೆ
ದಶಮ ಸೊನ್ನೆಯು ಶೂನ್ಯ ಚಿತ್ರವು ಮರತು ಹೋಗಿರುವೆ
ದಶಮನನು ತೋರಿದವನಾಪ್ತನು
ದಶಮನಿಗೆ ದುಃಖ ದೂರೆನಿಸಿದ
ಕುಸುಮ ಮನವಿದ್ದಂತ ಗುರುವಿನ ಬೆರವದದು ಲೇಸೈ || 146 ||
ನವಸಂಖ್ಯಾ ಮ್ಯಾಲಿರುವನೊಬ್ಬವ
ನವನೆ ದಶಮನ ತೋರುತಿರುವವ
ನವನೊಳೈಕ್ಯವ ಚಿತ್ರದನುಭವ ಮರದಿರುವೆ ಜೀವಾ
ನವದ್ವಾರ ನಿನ್ನಾತ್ಮವಲ್ಲದ
ನವನೆ ದಶಮನು ಕಾಣ್ವದಜ್ಞಾನಹುದು
ಸಪ್ತಾವಸ್ಥೆ ಗುರುವರ ಪರಿಹರಿಪ ಬಾರೈ || 147 ||
ತನುವ ನೋಗಿಸಿದ ನಿನ್ನ ಮತ್ತೀ
ತನುವಿನೊಳು ಚಿಜ್ಯೋತಿ ಪುಟ್ಟಿಸಿ
ತನುವಿನೊಳು ಗಾನಾ ವಿನೋದಂಗಳನು ತೋರಿಸಿದಾ
ಚಿನು ಮಹೇಶನ ಮರತುಬಿಟ್ಟೀ
ಘನ ಜ್ಯೋತಿಗಳ ಕಲಿಯದಿರುತೀ
ಘನವು ಬಾರದು ನಿನಗಪಾಯವು ಕಾಣ್ವದೈ ಜೀವಾ || 148 ||

ಜೀವನು ದೈವ ಸಮರಸ ಕೇಳಿದ ವಿಚಾರ
ಇಂತು ಪೇಳಿದ ಗುರುರಾಯನೊಳು
ಭ್ರಾಂತಿ ಉಳ್ಳವನಾಗಿ ಜೀವನು
ಪ್ರಾಂತವಾಗೀ ಮೊದಲಿಂದ ಬಂದನು ಭವಂಗಳನೂ
ಶಾಂತನಾಗೀ ಕೇಳಿ ಮತ್ತಿಂತೆಂದ
ಇನ್ನುಳಿದೇಕೋ ದೈವಾ
ದಾಂತರ್ಯ ಸಮರಸ ಪಡಿಸೈ ಗುರು ನಮೋ ನಮಃ || 149 ||
ಜಾಲಿಮುಳ್ಳಿನ ಎಣತದಿಂ ಒಂ
ದಾಲಯ ಕೀಟಕನು ಕಲಿಪಿಸಿ
ಕಾಲ ಸಮಯ ಕವಾಟ ಬಂಧಿಸಿ ಮೃತಪಟ್ಟ ಪರಿಯಾ
ಶೀಲವಿಲ್ಲದ ದೇಹ ದೋಷದಿ
ಸಿಕ್ಕು ಪೋಪನ ತಪ್ಪಿಸಿದೆ ದಯ
ಲೀಲ ದೈವನೋಳೇಕ ತೋರೈ ಗುರು ನಮೋ ನಮಃ || 150 ||
ಪರೆಮುಚ್ಚಿ ದಹಿಯಂತೆ ಬಹುಪರಿ
ಶರೀರಾಶೆ ಭಯ ಮೋಹಪಾಶದಿ
ಸೆರೆಮನೆಯ ಸೇರ್ವದಕೆ ಶತವಿಧ ಸಿದ್ಧನಾಗಿದ್ದೇ
ಪರೆತೆಗೆದ ಸುಜ್ಞಾನ ಶಸ್ತ್ರದಿ
ಮರೆತದೆಲ್ಲನು ನಿರುತ ತೋರಿದೆ
ಬೆರೆತು ಪೋಗುವ ಮರ್ಮ ಪೇಳೈ ಶರೀರಾಸೆ ಬಿಡಿಸೈ || 151 ||

ಗುರುರಾಯನು ಜೀವನಿಗೆ ದೈವ ಸಮರಸ ತೋರಿದ ವಿಚಾರ
ಜೀವನೇನೀ ಕೇಳ್ವಿ ಸಮರಸ
ಬಾವನೇ ಲೇಸಾದ ಯೋಚನೆ
ದೈವನೇ ನೀನೇನು ಬ್ಯಾರೇ ದೇಶದವನಲ್ಲಾ
ಸಾಯ್ವನಲ್ಲೆನುವಂತ ನಿಜವಾ
ದೈವ ಸಮರಸವಾ ಸ್ವರೂಪವ
ನ್ಯಾಯ ಉಭಯವು ಸಿಕ್ಕಾಗ ವೈದಾಟ ನಿನಗಿಲ್ಲಾ || 152 ||
ಓಯೆಂಬ ಓಂಕಾರ ಕರ್ತವ
ನಾ ಎಂಬುವನಿ ಗನುಭವಾಗುವ
ಬಾಯಿಂದ ಬಹಿರಂಗ ತೋರಿದ ದಾತ್ಮದೊಳು ನೋಡೈ
ಓ ಮಹತ್ತಿನ ನಾ ಮಹತ್ತಿನ
ಮಹಾಯೆಂಬುದು ಉಭಯ ತೋರ್ವದು
ಮಹಾ ಮಧ್ಯ ಸ್ವರೂಪದನನು ಬೋಧಿಪೆ ಬ್ರಹ್ಮದೊಳು ಬೆರಿಪೆ || 153 ||
ನಿರಾಕಾರವೆ ದೈವನಿರುವದೆ
ಸ್ವರೂಪದನನು ಬಿಡದೆ ಬೆರೆತದೆ
ಸ್ವರೂಪದು ನಿನ ಪೀಠವಾಗ್ಯದೆ ಕೇಳಲೈ ಜೀವಾ
ಸ್ವರೂಪದು ಪೀಠ ಬೆರತಾಗಳೆ
ನಿರಾಕಾರದಿ ಬೆರತೆ ನೋಡೈ
ನಿರಾಯಾಸೈ ನೀನು ಮುಕ್ತೈ ಗುರು ಕರುಣ ನೋಡೈ || 154 ||
ಆದಿಬ್ರಹ್ಮ ಸ್ವರೂಪವಾತನು
ಆದಿನಾಥಂಗಧಿಕ ಪ್ರೀಯನು
ಆದಿನಾಥನಖಂಡ ಬಹಿರಂಗಾತನಿಂ ನೋಡೆ
ಆದಿ ಎಂದೆಂಬಂತರಂಗದೊ
ಳಾದಿ ರೂಪನಿಗಧಿಕಾರ ವಿಲ್ಲಾ
ದಿನಾಥನೋಳ್ ಏಕಾದಿಯೈ ಗುರು ಕರುಣ ನೋಡೈ || 155 ||
ಸತ್ತು ಚಿತ್ತಾನಂದ ಸಂಪದ
ವಿತ್ತು ನಿನಗೀದಿನ ಬೆರತೆ ನೋ
ಡೆತ್ತ ಕಡೆ ನೀನಿದ್ದರೂ ಬಿಡದತ್ತಿತೈ ನಿನಗೇ
ಸತ್ತು ಚಿತ್ತೆಂಬುಭಯ ಮಧ್ಯದು
ಕತ್ತಲೂ ಬೆಳಕಲ್ಲದಿರುವಾ
ನಿತ್ಯನೋಳ್ ಬೆರದಿರುವದನುಭವ ಗೊತ್ತಾಯ್ತೋ ಜೀವಾ || 156 ||
ಲೋಕ ದೈವದ ಸಂಧಿ ಕಾಣ್ವನು
ಲೋಕವಾಗನು ದೈವವಾಗನು
ಲೋಕನಂತ ನಾಮರೂಪಕೆ ಏಕ ರೂಪಿಹನೂ
ಏಕ ರೂಪವು ಏಕವಾಗುತೆ
ಏಕ ಖಂಡನೋಳ್ ನೀನು ಏಕವೇ
ಸಾಕು ಬಿಡು ಸಂದೇಹವಿಲ್ಲೈ ಗುರು ಕರುಣ ನೋಡೈ || 157 ||
ಕರುಣವಾಯಿತು ಗುರುವಾರಾರ‍್ಯನೆ
ಮರಣ ಜೈಸುವ ಮರ್ಮ ಕೊಡುವನೆ
ಪರಮನನು ಬೆರವಂತ ಪೀಠವ ತೋರಿದೈ ನೀನೇ
ಸರಿಯಹರೆ ನಿನಗರಿಹರರು ಸಹ
ಹಿರಿಯರ್ಹೇಳಿದ ವಾಕ್ಯ ನಿಶ್ಚಯ
ನರರಿಗಿದನೇ ಬೋಧಿಸೈ ಮಹಗುರು ನಮೋ ನಮಃ || 158 ||

ಗುರು ವಂಚಕರ ವಿಚಾರ
ಪರಮನನುಭವ ಪಡದು ಮತ್ತಾ
ಪರ ಹಿತಾರ್ಥವ ಬಯಸಿದಾದರೆ
ನರರ ಅವಗುಣವ ನೋಡಿದೇನೈ ಜೀವ ಸದ್ಭಾವಾ
ಗುರುವು ಬಂದರೆ ಕರಕರಿವ
ನ್ಯಾವ ಕರಸಿದವರೆಂದಾಡಿ ಕೊಂಬುವ
ಪರಮ ಪಾತಕ ಹೀನ ನರರಿಗೆ ಪೇಳಬಹುದೇನೈ || 159 ||
ಮೋರೆ ನೋಡುತ್ತಾರೊ ಎನ್ನುವ
ದೂರ ನೋಡಲು ವಾರೆ ಬೀಳುವ
ಕ್ರೂರ ಮೃಗ ಪರಿಯಾಯ್ತು ಗುರುವಿನ ಸ್ವಾರಸ್ಯವೆಲ್ಲಾ
ಘೋರ ನರಕಿಗಳಿಂಗೆ ಗುರುವಿನ
ದಾರಿ ತೋರ್ವದಕಿಂತ ಹೊಲದಾ
ಮ್ಯಾರೆಯಲಿ ಜೀವಿಸಲಿ ಬಹುದೈ ಜೀವಾತ್ಮ ಕೇಳೈ || 160 ||
ಕಂಡು ಕಾಣದೆ ಹೋಗುವರು ಬಹು
ಭಂಡ ರಿವರ್ಯಾತಕ್ಕೆ ಬಂದರು
ಮಿಂಡೆಯರ ಕಾಲ್ದೆಸಿಯ ಎಂಡಿಯ ತೆಗಿಯತಿರಬಹುದೈ
ಷಂಡ ಜನಗಳಿಗುಪದೇಶ ಗುರು
ಕಂಡು ಕೊಡುವುದಕಿಂತ ಇಹದಲಿ
ಗುಂಡೊಡದು ಕಾಲವನು ಕಳಿಯಲಿಬಹುದು ಜೀವಾತ್ಮ || 161 ||
ಶುನಿಗಳಿಗೆ ಶುಚಿಯಾದ ಗೋವಿನ
ತನಿರಸವ ಕ್ಷೀರೆರಿಯಬಹುದೇ
ಮನೆಮನಿಯ ಮೈಲೊರವ ಗಾರ್ಧಪಗ್ಯಾಕೆ ಕಸ್ತೂರಿ
ವಿನಯ ನಯಗುರು ವಿಶ್ವಾಸ
ನಾಲ್ಕನುವರಿತು ನಡವವಗೆ ಸಲ್ಲುವ
ಘನ ಪದಾರ್ಥವ ಪಶುಮಾನವಗೆ ಪೇಳಬಹುದೇನೈ || 162 ||
ಧೀರನಾಗಲಿ ಬೇಕು ಒಳ್ಳೆ ವಿ
ಚಾರನಾಗಲಿ ಬೇಕು ಇಲ್ಲವೆ
ಪೂರ್ಣವಾಗೀ ಭಕ್ತಿಸ್ಥಲದಲಿ ಭೃತ್ಯನಹ ಸರಿಯೇ
ಮೂರು ಸ್ಥಲ ದೊಳಗಿಲ್ಲನಿವ ದಾವ
ದಾರಿಯೊಳಿರಬೇಕು ಎಂದರೆ
ಊರು ಚೆರಿಸುವ ಶುನಿ ಶೂಕರರ ಸೇರಿರಲಿ ಬೇಕೈ || 163 ||
ಗುರುವಂಚಕನ ಚರಿತೆ ಬಹುಪರಿ
ಬರಿಯಬಾರದು ಬಿಡಬೇಕಿಲ್ಲಿಗೆ
ಗುರುಕೀರ್ತಿ ಬಿತ್ತಿದವನನು ದಿನ ಕೊಂಡಾಡಬೇಕೋ
ಗುರುವಿಗಪಕೀರ್ತಿಯನು
ತರುತಿಹ ನರನಾಗಿ ಪುಟ್ಟುವುದಕಿಂತಲು
ನರಿ ಮಂಗ ಇಲಿಯಾಗಿ ಪುಟ್ಟಲು ಲೇಸಿರುತ್ತಿಹುದೇ || 164 ||

ಶಿಷ್ಯರೊಂಚಿಪ ಗುರುಗಳ ವಿಚಾರ
ಗುರುವಂಚಕರು ಶಿಷ್ಯರೀಪರಿ
ಶಿಷ್ಯರೊಂಚಿಪ ಗುರುಗಳಾಪರಿ
ಪರಿವೇಷಗಳ ಧರಿಸಿ ನರರನು ನರಕ ಸೇರಿಪರೆ
ನರನನಾಥರ ನಾಥ ರಕ್ಷಿಪ
ಬಿರಿದುಳ್ಳ ಪರಮಾತ್ಮನೆಂಬುವ
ನಿರುತವೇದ ಸುಸತ್ಯ ಕೆಡಿಸುವರಾದರೈ ಜೀವಾ || 165 ||
ಪಂಚಮುದ್ರೆಯೊಳೂಂದು ಪೇಳ್ವರು
ಪಂಚಾಕ್ಷರಿಯು ಪಠಿಸು ಎಂಬುವ
ರೊಂಚನಿಲ್ಲದೆ ನಟಿಸು ನೀನೇ ಮುಕ್ತನಹೆ ಖರಿಯಾ
ಸಂಚಿತಃ ಪ್ರಾರಬ್ಧ ತ್ರಯಗಳ
ಪಂಚಾಕ್ಷರಿಯು ಕಳಿವದೇನೈ
ಮಂಚ ಹೊಡಿಯಲು ತಗುಣಿ ಸಾಯುವವೇನೈ ಜೀವಾ || 166 ||
ನಂಬಿದರೆ ಗುರುವಾಕ್ಯ ಮುಕುತಿಯ
ಸಂಭವಿಸುವುದು ಸಿದ್ಧ ಇಂದಿನ
ನಂಬಿದವರೆಲ್ಲರೂ ಮುಕುತಿಗೆರ ಹೋಗಲಿಲ್ಲೇನೂ
ನಂಬಿಕೆಯೊಳನು ಮಾನ ಬಂದರು
ನಂಬಲೇ ಬೇಕೆಂದು ಪೇಳ್ವರು
ನಂಬಿದನು ಪಾಷಾಣ ವಜ್ರವದಾಗದ್ಹೋಯ್ತಲ್ಲಾ || 167 ||
ಸಾಧುಸೂತಕ ವಿವರವರಿಯದೆ
ಸಾಧು ಎಂಬುದನನ್ನು ನಂಬುತೆ
ಮೇಧಿನೀಶನು ವಪನ ಮುಚ್ಚತೆ ಮಾಡಿಕೊಂಡಂತೆ
ಸಾಧು ಮಾತದು ವಿವರ ಮಾಡಲು
ಸತ್ತದಾಯಿತು ಕತ್ತೆ ಗುರುವಿನ
ಬೋಧ ನಂಬೆಂದೆಂಬ ಮಾತದು ನಗಿಗೇಡಾಗುವುದೇ || 168 ||

ಲೇಸಾದ ಗುರೂಪದೇಶ ವಿಚಾರ
ಲೇಸಾದ ಗುರುರಾಯ ನಿಂತವ
ಶೇಷ ವಾಹಂಭಾವ ಉಳಿಸದೆ
ನಾಶತ್ವ ನಾನೆನಿಸಿ ಪರಸುಖನಾಥ ಗುಣಪಡಿಸಿ
ಕೂಸಿನಂದದಿ ಮಾಳ್ಪಮರ್ಮದೊ
ಳಾಸೆ ಭಯ ಮಧ್ಯದೋಳ ದಾಂಟಿಪ
ಆಶೆ ಭಯ ಯದ್ವಿತಿ ನಿಲ್ಲುವಂತಾಧಾರವನೆ ತೋರ್ಪಾ || 169 ||
ಡೊಂಬತಿಯ ನಾಟಕದಿ ಸುಖ ದುಃ
ಖೆಂಬ ನ್ಯಾಯವು ನೋಳ್ಪಗನುಭವ
ಡಿಂಬದೆಚ್ಚರ ಇಲ್ಲದೆ ಇರುತಿಹನದರ ಪರಿಯಾ
ಕುಂಭಿಣಿಯ ನರನಹಂಭಾವವ
ತುಂಬಿರವದನ ತೆಗೆದು ಪರಸುಖ
ನಂಬಿಗಹುದೆನಿಸುವನು ಇರುವನ ಬೆರಸುವನು ಗುರುವಾ || 170 ||
ಸುತ ನಿಂದೆ ಸುಖ ದುಃಖ ಮಾತಾ
ಪಿತನಿ ಗಹುದಾದಂತ ನ್ಯಾಯದಿ
ಸುತನ ಹತ ಸತತವನು ಮಾಡದಲನುಭವಾದಂತೇ
ಶೃತಿ ವಚನ ಸಹಜೆನಿಸಿಯಾತ್ಮಗೆ
ಪ್ರತಿದಿನವು ಪ್ರತ್ಯಕ್ಷ ತೋರಿಸಿ
ಮತಿಗೆ ಸಂಶಯ ಬಿಡಿಸುವಂತ ನಾದವವನೆ ಗುರುವಾ || 171 ||
ದರ್ಪಣದ ಪರಿಮುಖದಿ ಪ್ರತಿಬಿಂಬೆ
ರ್ಪಡಿಸಿ ಕಂಡಾಗ ದರ್ಪಣ
ಸಮರ್ಪಾಗುತೆ ಶುಭಾಶುಭಗಳಿಹು ದಾದರೀತೇ
ತೋರ್ಪ ನೀ ನರನ ಚೇತನ್ಯವ
ಕರ್ಪೂರವು ಜೋತಿಯಲಿ ಕಂಡಂ
ತೇರ್ಪಡಿಸಿ ಬೆರಸುವನು ಬ್ರಹ್ಮದಿ ಪರತತ್ವ ಗುರುವಾ || 172 ||
ಮುಖವೇಣಿ ಪರಿಮುಖದಿ ಮನವ
ಸುಖರಾಗ ದುಃಖಲಾಪಂಗಳ
ಯುಕುತಿ ಬಹಿರ್ಭಾವಂತರಂಗಕ್ಕಹದೆನಿಪ ಗುರುವಾ
ಸಕಲರೊಡಿಯಾ ಬ್ರಹ್ಮವಾಧಾ
ರಖಿಲ ಭಾಷೆಗಳಲ್ಲಿ ತುಂಬಿದ
ಮುಖವೇಣಿಯಂತಧಮನುಭವ ತೋರುವನೊ ಜೀವಾ || 173 ||
ಏಸು ದರಿಶನದಿಂದ ಸ್ತ್ರೀಜನ
ನಾಶ ವಾಗರುವಿಂದಲಾಜ್ಞೆಯು
ಲೇಸು ಎಂದವರವರ ಕರ ಬೆರಳುಗಳ ಕೊರದಂತೆ
ಈಶ ದರುಶನವಾ ಸ್ವರೂಪ
ಪ್ರಕಾಶಗಳು ನರನಿಂಗೆ ಬೋಧಿಪ
ನಾಶ ತೋರಿಪ ವನುಭವಹುದೆನುಸುವನು ಗುರು ಪುಣ್ಯಾ || 174 ||
ವೃಶ್ಚಿಕನು ಸಂದಷ್ಟವಾಗಲು
ಹೆಚ್ಚಿನನುಭವ ದುಃಖ ನರನಿಗೆ
ವೃಶ್ಚಿಕನ ತಂದಲ್ಲಿ ನಿಲ್ಲಿಸಲಿಲ್ಲ ಕಳಿಲಿಲ್ಲಾ
ವೃಶ್ಚಿಕನ ಕರತಂದ ನಿರುವವ
ವೃಶ್ಚಿಕನ ನಿಲ್ಲದಲೆ ಮಾಡುವ
ಸಚ್ಚರಿತ್ರವ ನರನಿಗನುಭವ ತೋರ್ವ ಶ್ರೀಗುರುವಾ || 175 ||
ಸುಟ್ಟಕಾರದ ಕಾಯಿಮ್ಯಾಲ್ದೋ
ಷಿಟ್ಟವಾಪರಿ ಮನುಜ ಗನುಭವ
ಕೊಟ್ಟ ಪರ ಮನ ಮಹಿಮೆಯೋಳ್ ದೋಷಿಲ್ಲದಂತೋರಿ
ನಷ್ಟಗೊಳಿಸಿದ ನಹಂ ಎಂಬದ
ಎಷ್ಟೋ ಉಪಮಾನಗಳ ತೋರಿಸಿ
ಪಟ್ಟಗಟ್ಟಿದ ಪರಮ ರಾಜ್ಯವ ದಿಟ್ಟ ಗುರುರಾಯಾ || 176 ||
ಚತುರ ಭಾವನೆ ವಿತರಣನ್ಮಯ
ಸುತರಾದ ಸೇವಕರನಾಥ
ರ್ಗತಿಶಯದ ಪರಸುಖವ ಕೊಡುವಂತಾತನೇ ಗುರುವಾ
ಚತುರ ಭಾವದೊಳೊಂದು ಪಿಡಿದು
ನ್ನತ ವಿಶೇಷ ತ್ರಿತಯ ತ್ಯಜಿಸಲು
ಸತತ ದುಃಖ ಪ್ರಾಪ್ತಿ ನಿಶ್ಚಯ ಕೇಳೈ ಜೀವಾತ್ಮಾ || 177 ||
ನಂಬಿಗೆಂಬುವದೊಂದು ಪಿಡಿದಾ
ಶಂಭುವೇನಾನೆಂಬ ನರರೀ
ಕುಂಭಿಣೀಯೋಳೊಂದು ಕೋಡಿನ ಮಂಚದಂತಾಯ್ತೈ
ತುಂಬಿಹುದೆ ನಾನೆಂಬದತಿಭವ
ತೆಗಿಯಲಿಕೆ ಗುರುರಾಯ ಬಂದಾ
ಡಂಭ ವಾಕ್ಯವ ಕಳದುಳಿಯದಿರೆ ಗುರುಮಾರ್ಗವಲ್ಲೈ || 178 ||
ಅಗಸ ತನ್ನಯ ಗಾರ್ಧಪಂಗಾ
ಸೊಗಸಾದ ಹುಲಿಚರ್ಮ ಕವಚವ
ಮಿಗೆ ಹರುಷದಿಂ ತೊಡಿಸಿ ಬಿಡಲಾ ಹೀನಕುಲ ನುಡಿಯಾ
ತೆಗಿಯೆ ತಕ್ಷಣ ಹೊಲದವನು
ತನ ಹಗೆಯ ತೀರಿಸಿಕೊಂಡ ತೆರನಾ
ಬಗೆಯ ಕಂಡಿತು ನಾನೆಂಬ ನುಡಿ ಬಿಡಲಿಲ್ಲೊ ಜೀವಾ || 179 ||
ನಾನೆನಲು ನರಕವದು ತಪ್ಪದು
ನೀನೆನಲು ಹೀನತ್ವ ಬಿಡದದು
ನಾನಹಂ ಬ್ರಹ್ಮವೆಂದೆಂಬುವ ವೇದವಾಕ್ಯವದೂ
ನಾನಹಂವೇದ ಕೆಡಬಾರದು
ನೀನೆನಲು ಹೀನ ಬರಬಾರದು
ಮಾನವರಿಗೀ ಮಾರ್ಗ ಕೊಡುತಿಹ ಮಹಗುರುವ ಬೇಕೈ || 180 ||
ಎಲ್ಲ ನೀನೆಂದೆನುವ ಮಾತದು
ಹುಲ್ಲು ತಿನ್ನುವ ಪಶುಭಾವವದ
ನಿಲ್ಲಿ ವಿವರಿಪ ಹಿರಿಯರೊಪ್ಪರು ಯಾಕದೆಂತೆನಲೂ
ಎಲ್ಲ ನೀನೆನೆ ನರಕ ದಾರಿಗೆ
ಎಲ್ಲ ನೀನೆನೆ ಪರಸುಖಾರಿಗೆ
ಎಲ್ಲ ತಾನಹ ಇಲ್ಲದಾಗಿಲ್ಲಿದು ನೋಡೈ ಜೀವಾತ್ಮ || 181 ||
ನೀನೆ ಎಂಬುವ ಮಾತಿಗೊಬ್ಬವ
ಹೀನರೆಂದವ ನರ್ಧಾಂಗಿನಿಯ
ರಾನೆಯಿಂದ್ಹತವಾದನೊ ಭವ ಮಾರ್ಗ ಕಾಣದಲೇ
ಆನೆಯಾಗದೆ ಇರುವ ದೈವಾ ವಿ
ಧಾನ ವಿವರವ ತೋರಿ ಕೊಡದಲೆ
ನೀನೆ ನಿಜಗಜವ ನೃತಕನುಭವ ಕೊಡಲಿಲ್ಲ ಗುರುವಾ || 182 ||
ಚಿಕ್ಕ ಹೆಂಡತಿ ವಿವರ ಮೆಚ್ಚು
ತ್ತಕ್ಕರವ ಪಟ್ಟಾಗ ಬಹುಸುಖ ಗಕ್ಕ
ನೆ ಕೊಡುವದಕೆ ಕಾರಣನಾಗಿ ನಿಂತಂತೆ
ಲೆಕ್ಕಕಗಣಿತ ದೈವ ನಿನ್ನಯ
ಚಿಕ್ಕತನದಲ್ಲಿ ದೊರತ ಚಿತ್ರಕೆ
ದುಃಖ ದೂರಾಯ್ತಪರಮಿತ ಸುಖ ಪ್ರಾಪ್ತವೈ ಜೀವಾ || 183 ||
ಇಲ್ಲದವನಿಗೆ ಪರ ಸುಖನುಭವ
ಇಲ್ಲದವನಿಗೆ ನರಕ ರವರವ
ಇಲ್ಲದವನಿಗೆ ನರಕ ಬರುವದ ಕಾರಣವದೇನೋ
ಇಲ್ಲದವ ಇರುವನಿಲ್ಲೆನಿಸುವದ
ಕಿಲ್ಲದವನಿಗೆ ನರಕ ಬಾಧಕ
ಇಲ್ಲದವ ಇದ್ದವನ ಬೆರದನುಭವಿಗೆ ಪರಮ ಸುಖಾ || 184 ||
ಗುರುವೆ ನಿಮ್ಮಗೆ ತಿಳಿಪ ದೊಂದದೆ
ನರಪುವೆನು ನರರೊಳಗೆ ಕೆಲಜನ
ನರಕ ಪರಸುಖವಿಲ್ಲೆಂದು ಧಿಕ್ಕರಿಪರಿದಕ್ಯಾಗೆ
ಕರ ಚರಣವವಯವಗಳಿರುತಿರೆ
ಪರಿಪರಿಯ ಪಾಕಾದಿ ಭೋಜನ
ವಿರುತಿರಲು ಪಶುಜನ್ಮ ಭಾವವು ಧರಿಸಿಹರು ನೋಡೈ || 185 ||
ಸುಖ ನರಕವಿಲ್ಲೆಂಬ ಮಾತಿಗೆ
ಸಕಲ ಶಾಸ್ತ್ರಗಳೇನು ಕಾರಣ
ಸಕಲ ಶಾಸ್ತ್ರವದಿಲ್ಲೆನಲು ಗುರುವೇನು ಕಾರಣವೂ
ಸುಖ ಪುರುಷ ಸಾನಂದ ಗಣವರ
ಸುಖಿಗಳೆನಿಸಿ ದನೇಕ ನರರಾ
ಕಥೆಗಳನು ಕೇಳ್ವದನು ಬಿಡಬೇಕೇನೆಲೈ ಜೀವಾ || 186 ||

ಗುರುವಿನ ನ್ಯಾಯಕ್ಕೆ ವಿರುದ್ಧವಾದ ಪ್ರಹ್ಲಾದನ ವಿಚಾರ
ಬಿಡದೆ ಹಿಡಿಯಲಿ ಬೇಕಿ ವಾಕ್ಯವ
ಬಿಡಬಾರದೆನೆ ಬಿಡಿಸಿ ಬಿಟ್ಟನೆ
ಒಡೆಯ ಗುರುವಿನ ನುಡಿಯ ಲಾಲಿಸಲಿಲ್ಲ ಪ್ರಹ್ಲಾದ
ಪಡದ ತಂದಿಯ ಹೊಡಿಸಿ ಮತ್ತಾ
ಮೃಡನ ಮತ ಬೀಳ್ವಡಿಸಿದವನ ನೀ
ಪೊಡವಿಯಲಿ ಪುಣ್ಯಾತ್ಮ ನೆನುತಿಹ ರಲ್ರೋ ಜೀವಾತ್ಮ || 187 ||
ಗುರುದೈವ ಪಿತಬಂಧು ಮಾರ್ಗವ
ಬಿರಿದು ಬಿಟ್ಟಿಹ ಪುಣ್ಯನೇನವ
ಹರನ ಭಕ್ತರನೇಕ ರಿರುತಿರೆ ಹರಿಯ ನೆನದನವಾ
ಹರನಿಂದ ಪೂಜ್ಯತ್ವ ಪುಸಿಯೆಂ
ದರಿತ ನೆಂತೆಂದೆನಲಿ ಬಹುದೇ
ಹರಿಯ ಶರಭನು ಕೊಂದಾಗ ಹರಿನಾಮ ನರಿಯಾಯ್ತೆ || 188 ||
ಪಿತನ ವಾಕ್ಯವ ಕೈಕೊಂಡನಾ
ಸುತ ಸುಧನ್ವನು ಸತ್ಯವಂತನು
ಪಿತನ ವಾಕ್ಯವ ಭಂಗ ಮಾಡಿದ ಪ್ರಹ್ಲಾದನವನೂ
ಪಿತನವನು ಮತಿಯಿಂದ ಮಡಿದಾ
ಸುತಗೆ ಮುಕುತಿಯ ನೆನಲಿ ಬಹುದೈ
ಸುತನೆ ಪಿತನನು ಹೊಡಿಸಿದವನಿಗೆ ಮುಕುತಿ ಎನಬಹುದೇ || 189 ||
ಮನವು ಗುರುವಿನ ಜನನಿ ಜನಕನ
ಘನವೆನದೆ ನೊಂದಿಸಿದ ದ್ರೋಹಕೆ
ಕನಕನ್ನದಾನ ನಂತಿಟ್ಟರು ತೀರದೆನ್ನುವರೂ
ತನಯನಾ ಪ್ರಹ್ಲಾದ ಜನಕನ
ತನುವು ಮನ ಉಭಯವನು ನೊಂದಿಸಿ
ದೆನದೆ ದೊಡ್ಡವ ನೆನುವ ನುಡಿ ಇದನೊಪ್ಪನೈ ದೈವಾ || 190 ||
ಕೇಳಿ ಜನನಿಯ ಜನಕನಾಜ್ಞೆಯ
ತಾಳಿದನು ವನವಾಸ ತಕ್ಷಣ
ಹೇಳಿದಿಂತಾದಾಜ್ಞೆ ಸಿಗದೆಂದಾ ರಾಮಚಂದ್ರ
ನಾಳೀ ಕಲಿಜನ ಭಾವಿಸಲಿ ಎಂ
ದ್ಹೇಳಿ ಧರ್ಮಾಶಾಸ್ತ್ರ ಪದ್ದತಿ
ದ್ಹಾಳು ಮಾಡಿದ ಪ್ರಹ್ಲಾದ ಮತಾವಲಂಬನದೀ || 191 ||
ಬ್ಯಾರೆ ಮತ ಮಹಮ್ಮದೀ ಕ್ರೀಸ್ತರ
ದಾರಿಯಲಿ ಬೆರದ್ಹೋಗುತಿರುವರ
ಧಾರುಣಿಯ ಜನರನ್ನುತಿರುವರು ಮತ ಭ್ರಷ್ಟರೆಂದೂ
ತೋರಿ ಕೊಡುವರು ಶಾಸ್ತ್ರ ಸಮ್ಮತ
ತೋರುವರೆ ತೊರದಲೆ ಇರುವರೆ
ಪೋರ ಪ್ರಹ್ಲಾದನ ಮತಾರ್ಥವ ಮರತು ಬಳಸುವರೈ || 192 ||
ಮತದೊಳಿದ್ದದು ಮಾಳ್ಪ ರಾಜನ
ಹಿತವ ಬಯಸುವಲಿ ಬಹುದು ಇದುಯೇನ್
ಮತದೊಳಿಲ್ಲದು ಮಾತು ಮಾಡಿಹ ಮಾರ್ಗ ಸರಿಯಲ್ಲೈ
ಪಿತನ ಕೊಲ್ಲುವ ಕಾರಣೆನಲಾ
ಪಿತನ ಕೊಲ್ಲಿದ ನಾರಸಿಂಹ
ನ್ಹತವ ಮಾಡಿದ ವೀರಸುರನಂ ಕೊಲುವ ದತಿಶಯವೇ || 193 ||
ಮತದ ಮದ ಭೇದುಳ್ಳ ಮನುಜ ತಾ
ಗತ ವಾಗೋತನಕೇನು ಕಷ್ಟಿಸೆ
ಸತತ ಸ್ಥಿರಪದ ಮುಕುತಿ ದೊರಿಯದು ಯಾತಕೆಂತೆನಲೂ
ಮತದೊಳಗೆ ಒಂದೆರಡು ಸಾವಿರ
ದಶಲಕ್ಷ ತನಕಿರುವರೆಲ್ಲಕೆ
ಮುಕುತಿ ಸಿದ್ಧಿಪುದೆಂದು ಪೇಳಲು ಬಾಹ್ಯಳಿದಪಹಾಸ್ಯ || 194 ||
ದ್ವಿಜನಾಗಿ ಪುಟ್ಟಿದರೆ ಮುಕುತಿಯು
ನಿಜವಾಗಿ ಹೊಂದುವನಿದಲ್ಲದೆ
ದ್ವಿಜನಾಗದ್ದಾವ ಮತದವಗಿಲ್ಲ ಮುಕುತಿಯದೂ
ದ್ವಿಜರು ಹೇಳುವರಯ್ಯ ಜೀವನೆ
ಭುಜಬಲಹಂಭಾವಧಿಕವಾಯಿತೆ
ಸುಜನ ನಾನತ್ವಳಿದ ಸಜ್ಜನ ರೊಪ್ಪರೀ ವಿಧವಾ || 195 ||
ವೀರಶೈವ ಮತಾವಲಂಬನ
ಪೂರೈಸಿ ನಡೆವರ ನುಡಿ ಶಿವ
ದಾರ ಲಿಂಗಾಧಾರ ದೇಹಕೆ ಇಲ್ಲದಾ ಭವಿಗೆ
ದೂರ ಮುಕುತಿಯದೆಂದಿಗಾಗದು
ಧೈರ್ಯ ಹಂಭಾವದೊಳು ನುಡಿವ
ವಿಚಾರ ಮಾಡುವರೈಕ್ಯಸ್ಥಲದವ ರೊಪ್ಪರೈ ಜೀವಾ || 196 ||
ಮಹಮ್ಮದೀಯ ಮಹಿಜನರು ನುಡಿವವ
ರಹಂಧೀನ್ಮತ ದೊಳಗೆ ಬೆರದರೆ
ಬಹುಜನರಾ ಪರ ಮುಕುತಿಯ ಜನ್ನತಿಗೆ ಮಾರ್ಗಾ
ಗೃಹಂ ಕೃತ್ಯಗಳನಂತಂಗಳೋಳ
ಹಂ ಕೊರಳುದ್ದೂಣಿ ನುಡಿವವ
ರಿಹಂ ನಾಶತ್ವನುಭವಾ ಪುಣ್ಯಾತ್ಮರಹುದೆನರೈ || 197 ||
ಯೇಸು ಕ್ರಿಸ್ತನ ಮತದವರು ಬಹು
ಲೇಸಾಗಿ ನುಡಿಯುವರು ನಮ್ಮಯ
ಯೇಸು ಮಾರ್ಗದಿ ಸ್ನಾನ ಹೊಂದಲು ಎಲ್ಲರಿಗೆ ಮುಕುತೀ
ಈಸು ಮತದವರೆಲ್ಲ ಮುಕುತಿಯ
ದೇಶ ತುಂಬಲು ನರಕ ದೇಶವು
ನಾಶವಾಯಿತು ಗುರುರಾಯ ನಿನ್ಯಾತಕೆಲೋ ಜೀವಾ || 198 ||
ಹತ್ತಕೊಬ್ಬವ ನುಂಟು ಸತ್ಯನು
ಮತ್ತೆ ಸಾವಿರಕ್ಕೊಬ್ಬ ಶರಣನು
ಮುತ್ತಿನಂತವ ಕೋಟಿಗೊಬ್ಬವ ಮೇಟಿಯನುವಂತಾ
ಪ್ರತ್ಯಕ್ಷದಿರುವಂತ ನ್ಯಾಯವು
ಬಿಟ್ಟು ಮತದ್ಹಾಂಕರ ಧಾರಕ
ರತ್ಯುಗ್ರ ನರಕಾಗ್ರ ಸೇರ್ವದು ನಿತ್ಯವೈ ಜೀವಾ || 199 ||
ಒಂದು ಮತದೊಳಗನಂತಿರುವರು
ಮುಂದಿಂದಿನವರೆಲ್ಲ ಬೆರಸಲು
ಸಂದುಗೊಡದಂತಾಯ್ತು ಮಾರ್ಗವು ಬಹು ದೊಡ್ಡದಾಯ್ತೇ
ಬಂಧಾನದವರಾರು ಸುಖ
ಸಂಧಾನ ಬಡುವವರಾರು ನೋಡಲು
ಸಂಧಾನ ಸುಖ ಸಣ್ಣ ದಾರಿಯೊಳೊಬ್ಬರಿಬ್ಬರೆಲೈ || 200 ||
ಹಿರಿಯರೆಂಬ ವಿಚಾರವಂತರ
ಕಿರಿಯದಾರ್ಯದು ಪಿರಿಯವಾಗ್ಯದೆ
ಪಿರಿಯ ದಾರಿಯು ಪರಾನಂದಕೆ ಬೆರಿಯುವದು ಸಹಜಾ
ಸರಿಯಾದ ಮಾರ್ಗವನು ನೋಡದೆ
ನರರು ಮತ ಕಲಹದೊಳು ಬೀಳುತೆ
ಗುರುವಿನಾ ನಿಜದಾರಿ ಧರಿಸದೆ ಹೊರಳುವರೋ ಜೀವಾ || 201 ||
ಮಲೆಯೊಳಗೆ ಶ್ರೀಗಂಧ ತರು ಈ
ಶಿಲೆಯೊಳಗೆ ರತ್ನವನು ಇದ್ದಂ
ತಿಳಿಯೊಳಗೆ ಷಣ್ಮತದಿ ಮುಕ್ತರು ಸ್ವಲ್ಪ ಕಾಣ್ವರೆಲೈ
ಸಲೆ ನ್ಯಾಯ ನಿಜಗುರುಪದೇಶವ
ಕಲೆಯಾಡಿದವಗಾದಿತಲ್ಲದೆ
ಕುಲವೆಲ್ಲ ಮುಕ್ತೆಂಬ ಮಾತಿಗೆ ನಗಬೇಕಾಯ್ತಿದಕೇ || 202 ||
ದ್ವೈತರೊಳಗನುಮಾನ ಬಂತ
ದ್ವೈತರೊಳು ವಿವರಿಲ್ಲದಾಯಿತು
ಹೋಯ್ತು ಮನವಿನ ಮಾರ್ಗ ಕೆಟ್ಟಿತು ಮಾಳ್ಪದೇನಿನ್ನೂ
ದ್ವೈತವದ್ವೈತಗಳ ಮೂಲವ
ತಾಯಿ ತಂದಿಗಳಿಗಧಿಕ ಕರುಣವ
ನ್ಯಾಯ್ತಿಳಿಪ ಗುರುಸೇವ ನರಮಾಳ್ಪವನೆ ಮುಕ್ತನವಾ || 203 ||
ನ್ಯಾಯದಾವದು ಗುರುವೆ ನಿಮ್ಮ
ಉಪಾಯ ನರಕೋಟಿಗಳ ದಾಂಟಿಪ
ಮಾಯ ಕಳಿಯುವ ಮಾರ್ಗ ಕೊಡುವಂತಧಿಕ ಉಪಕಾರೀ
ಕಾಯ ಕಾಂತಾರದೊಳು ಸಿಲ್ಕೀ
ದಾಯಾದ್ಯರಾ ಭಾವಧರಿಸೀ
ಗಾಯಾಸ ಪಡುತಿರುವದದನಂ ಛೇದಿಸೈ ತಂದೇ || 204 ||
ಕಂದನೇ ನೀ ಕೇಳು ನ್ಯಾಯವ
ಒಂದನೊಂದಿದ ಬಿಂದು ಭಾವವ
ಎಂದಿಗೆಂದಿಗೆ ಬಿಡದು ಸುಖ ದುಃಖೈಕ್ಯದನುಭವಾ
ಚಂದವಾಗಿ ತೋರ್ಪ ಬಹಿರ್ಭಾವಂದ
ವದ್ವೈತಿದಂ ದ್ವೈತಾ
ತಂದೆ ಶ್ರೀ ಗುರುಸೇವ ನರಮಾಳ್ಪವನೆ ಮುಕ್ತನವಾ | | 205 ||

ಗುರುಸೇವ ವಿಚಾರ
ಗುರುಸೇವ ವಿಧವೆಲ್ಲ ಮುಂದದ
ನರುಪುವದಕೆ ಸಮಯ ವದಗಿತು
ಗುರುಸೇವೆ ಮಾಡದಲೆ ಪರಮೈಶ್ವೈರ್ಯವನುಭವದೂ
ಗುರುತಾಗ ದಜ ಭವಾದಿಗಳಿಗೆ
ಗುರುತಾಗಲಿಕೆ ಸೇವೆ ಕಾರಣ
ವರಿತು ಪೇಳಿದರೆಲ್ಲ ಹಿರಿಯರು ಪೃಥ್ವಿಯೊಳು ನಿಜವಾ || 206 ||
ಆತ್ಮ ಸೇವಕನ್ಯಾವನವ ಪುಣ್ಯಾತ್ಮ
ಗುರು ಬೇಡದಲೆ ಮುಂಚಿತ
ದಾತ್ಮಾರ್ಥ ದ್ರವ್ಯವ ಸಮರ್ಪಿತ ಮಾಡುತ್ತ ಮತ್ತಾ
ಆತ್ಮಸೇವೆಯ ನಡಸುತಾಗ ಮ
ಹಾತ್ಮನಿಗೆ ಸ್ನಾನಗಳ ತನ್ನಂ
ಗಾತ್ಮದಣಿಸುತ ಮಾಡಿಸಿ ತಾ ಧನ್ಯನಾಗುವನೂ || 207 ||
ವನಮಠವ ಶೃಂಗಾರ ಮಾಡುವ
ತನಗಧಿಕ ತಾಯ್ತಂದೆ ಬಂಧುವ
ಘನದೈವವೀ ಮುಖದೊಳನುಭವವೆಂದು ನಂಬುವಗೇ
ವಿನಯನಿವನೆಂದಾಗ ತನ್ನಯ
ಮನದ ತತ್ವಾಂಜನವ ಶಿಷ್ಯಗೆ
ಮನ ಮಾಡಿಪ ಪಾದಂಬುಧಿ ದಾಂಟಿಪನು ಗುರುವಾ || 208 ||
ಇಂತ ಗುರು ಸೇವೆಯನು ಮಾಡದ
ದೆಂತ ಕರಗಳು ಕಾಣ್ವ ತೆರನಾ
ಸಂತೆಯಲಿ ಸತ್ತಂತ ಹೆಣದಾ ಕರಗಳೆನಬೇಕೈ
ಚಿಂತಪುರ ದೇಶವನು
ದೂರೆನಿಪಂತ ಪುಣ್ಯನ ಪಾದಕಮಲಾ
ಪ್ರಾಂತ ಕುಸುಮವ ಕಾಣ್ದ ನಾಸಿಕ ಶುನಕ ನಾಶಿಕವೂ || 209 ||
ಗುರುವಿನಾ ರೂಪವನು ಕಾಣದ
ಗುರುವಿನಾ ನರನವನ ನೇತ್ರಾ
ವರುವಿನಾ ಕಣ್ಣಲ್ಲ ನವುಲಾಗರಿ ನೇತ್ರ ಸಮವೂ
ಮರುವಿನಾ ಮಾಯ್ವಿದ್ಯ
ಕಲಿಯುತ್ತರುವಿನಾ ಮರ್ಮವನು ಕಲಿಯದ
ಕರುವಿನಾ ಕಳದಂತೆ ಒದರುವ ಕಪ್ಪಗಳ ಸಮವೈ || 210 ||
ಗುರು ಮಹಾತ್ಮಗೆ ಕೊಡದ ಸಿರಿಯಾ
ಹೊರಗೆ ಘೋರಾರಣ್ಯ ಸ್ಥಲದಲಿ
ಪರಿಪರಿಯ ಬೆಳದಿಂಗಳಾವೃಥ ಬ್ಯಾರೆ ಮಾತಿಲ್ಲಾ
ಪರಮ ಪುರುಷನ ಹುಡುಕಲರಿಯದ
ನರರ ಕಾಲ್ಗಳು ಕುರಿ ಕಾಲುಗಳೆ
ಖರಿಯನರ ಕುರಿಗಳನು ಯಮ ಕತ್ತರಿಸದಲೆ ಬಿಡನೈ || 211 ||
ಗುರುವಿಗೆರಗದ ಶಿರವು ಸಂತೆಯ
ಹೊರೆಗೆ ಮಾರುವ ಕಟ್ಟಿಗೆಯ ಪರಿ
ಉರಿವ ಕಿಚ್ಚಿನ ಒಳಗೆ ಸೇರ್ವದು ವಂಚನಿಲ್ಲಿದಕೇ
ಗುರುವರನ ನರನಂತೆ ನೋಡಲು
ಧರಿಯೊಳದಿ ಕನ್ಯಾಯ ಮುಂದಾ
ಪರಮ ದಾರಿಯು ಎಂದಿಗಾದರು ದೊರೆಯದೈ ಜೀವಾ || 212 ||
ಗುಣವ ಗುರುವಿನ ಘನವ ಹೀನವ
ಎಣಿಕೆ ಮಾಡುವ ನರರು ನರಕದ
ಮನೆಯ ಸೇರ್ವರು ಎಂದು ಪೇಳ್ವರು ಯಾಕದರ ಗೊಡಿವೆ
ಮನವ ನೋಯ್ಸಿದ ಮನುಜರನು ದಿನ
ದಣಿವರಾ ಪದದಿಂದದ್ಯಾತಕೆ
ತನಗೆ ಬೇಕಾದನುಭವಾದಿಯ ಕೇಳ್ವದದು ಸತ್ಯಂ || 213 ||

ಗುರುರಾಯನು ಪೇಳಿದ ವಿಚಾರ
ಸತ್ಯವೇ ಜಗದೊಳಗೆ ಶ್ರೇಷ್ಠವು
ಸತ್ಯಸರಿ ವೇದಗಳು ಬಾರವು
ಸತ್ಯವಂತರು ಮುತ್ತಿನಂತವರೆಂದು ಪೇಳುವರೂ
ಸತ್ಯವೆಂದೆಂಬರ್ಥವೇನದು
ಮತ್ರ್ಯದಲಿ ಮಹ ಘನದಿ ಪ್ರಕಟಿಪ
ಪ್ರತ್ಯಕ್ಷವೀಗೆನಗೆ ತೋರೈ ಗುರು ಶಿಖಾಮಣಿಯೇ || 214 ||
ಪ್ರತ್ಯಕ್ಷ ತೋರುವೆನು ಜೀವನೇ
ಸತ್ಯದರ್ಥವ ನಡದ ಸಂಗವ
ನಿತ್ಯನಾದಂತೊಬ್ಬ ಗುರುವರ ತನ್ನ ಸೇವಕನಾ
ಸತ್ಯ ತೋರಿಸಿ ಸೆರೆಯ ಬಿಡಿಸಿದ
ರರ್ಥ ಸಂಗೋಪಾಂಗ ನಡದದ
ರುತ್ತರೋತ್ತರ ಚನ್ನಾಗಿ ಕೇಳೆಂದ ಗುರುರಾಯಾ || 215 ||
ದೇವ ಗುರುವರ ದೇಶ ಗಮನಕೆ
ಸೇವಕನ ಕರದೊಯ್ದು ಪೋಗುತ
ದೇವಲಾಪುರ ವೆಂಬ ಪಟ್ಣದಿ ವಾಸ ಮಾಡಿದನೂ
ಸೇವಕನು ಗುರುಸೇವೆ ಮಾಡುತೆ
ಸೇವ ತೀರಿದ ಮ್ಯಾಲೆ ಒಂದಿನ
ದೇಹದೊಡವಿಗಳೆಲ್ಲ ಧರಿಸುತ ಹೊರಟ ಪಟ್ಣದಲೀ || 216 ||
ಮನ್ಮಥಾಕಾರಿರುವ ದೇಹಕೆ
ಚಿನ್ಮಯದ ದಾಗಿನವು ಧರಿಸಲು
ಮನ್ಮಥನೆ ಇವನೆಂಬದೋಲಿಕೆ ಕಾಣುತ್ತಲಿಹನೇ
ತನ್ಮನೋಲ್ಲಾಸದಲಿ ಪೋಗುವ
ದನ್ಮಹಾ ಸುದತಿಯಳು ಕಂಡಿವ
ನನ್ಮಯವು ಕೇಳ್ತಿಳಿಯಲಿಕೆ ತಾಕರದು ನೋಡಿದಳೋ || 217 ||
ನೋಡಿದಳು ತನ್ನಂಗ ಸಮವಾ
ಜೋಡಿಸಿದ ತೆರನಂತೆ ಕಾಣುವ
ಮಾಡಿದವರ್ಯಾರುಂಟು ದೈವದ ಮಹಿಮಿರಲಿಬಹುದೂ
ಗಾಢ ನುಡಿದಳು ಎಲೈ ಸುಂದರ
ಮಾಡಿಕೊಂಬುವೆ ನಿನ್ನ ವಿವಹವ
ನೋಡಿಕೊಂಬುವೆ ಮುಂದೆ ಬಂದದನೆಂದು ಪೇಳಿದಳೂ || 218 ||
ತೋಳನೇ ಕುರಿಕಾದಿ ಎನಲಾ
ನಾಳ್ಯಾತವ ಕೀವತ್ತೇ ನೆಟ್ಟಗೆ
ಹೇಳಿದಂದದಿ ಇವನೊಡಂಬಡು ತಾಗಲೇಳೆಂದಾ
ಪೇಳಿದಳು ತಾ ಸಂತೋಷಪಡುತಾ
ಗ್ಹೇಳಿದಳು ತನತಾಯಿಗೀದಿನ
ಬಾಳ ನೂತನ ಪುರುಷ ಬಂದಿಹ ಕೂಡಿರವಗೆ ಎನ್ನಾ || 219 ||
ಕನ್ಯ ಬಾಯ್ಬಿಟ್ಟಾಡಲೀ ಪರಿ
ಇನ್ನ ವಾಲಸ್ಯ ಯೋಗ್ಯನ್ನುತ
ತನ್ನ ಭರ್ತನ ಕರದು ಪೇಳಿದಳಾತ್ಮಜಳ ನುಡಿಯಾ
ಇನ್ನನುಳಿಸಲಿ ಬಾರದೆನ್ನುತ
ಧನ್ಯರಾದಾ ಶಾಸ್ತ್ರದವರನು
ತನ್ನ ಬಳಿಯಲಿ ಕರಸಿ ಲಗ್ನವ ಮಾಡಿಸಿದನಾಗಾ || 220 ||
ಅಂಗದಾತುರವವನೊಳಗೆ
ಏಕಾಂಗವಾಗುವುದಕ್ಕೆ ತೂರ‍್ಯದಿ
ಮಂಗಳಾಂಗಿಯು ಕಾಮಗೃಹದೊಳು ಪ್ರೇಮ ಮಾಡಿದಳೋ
ಅಂಗಜನ ಲಿಂಗಾವೇಶ ತಾ
ಹ್ಯಾಂಗೆ ಮಾಡಲು ಬಾರದಾಯಿತು
ಭಂಗವಾಯಿತು ಕಾರ್ಯ ಭೋರನೆ ದುಃಖ ಮಾಡಿದಳು || 221 ||
ದುಃಖ ಕೇಳುತ ತಾಯಿ ತಾ ಬಲ್
ಗಕ್ಕನೇ ಬಂದಾಗ ಕೇಳಲು
ತಕ್ಕ ಪುರುಷನೆ ಬರಲು ಇಲ್ಲವ ನಪುಂಸಕನೆನಲೂ
ಮಕ್ಕಳಾಟಕೆ ಕಂಡಿತಯ್ಯೋ
ಮೋಸವಾಯಿತು ಕಾರ್ಯವೆನಲಾ
ಚಿಕ್ಕವರು ಹಿರಿಯರಾದವರೂ ಚಿಂತೆ ಮಾಡಿದರೂ || 222 ||
ಬೆಳಗವಾಗುತೆ ಮದಮಗನು ಇ
ನ್ನುಳಿಯಬಾರದು ಎಂದು ಹೊರಟನು
ನಳಿನಾಕ್ಷಿ ಇವನಿಂದೆ ಹೊರಟಳು ನಕ್ಕರೆಲ್ಲ ಜನಾ
ಕಳದುಳಿಪ ಕರ್ತಧಿಕ ಗುರುವರ
ಕಂಡನೀರ್ವರ ಕಾಣುತಾ ತ
ನ್ನೊಳಗೆ ತಿಳಿದನು ತಂದ ತಂಟೆ ಇದೆಂದು ಯೋಚಿಸಿದಾ || 223 ||
ಹೋದ ಗುರುವಿನ ಸ್ಥಳದಿವಳ ಭಾ
ಗಾದ ವರ ಭಾಗದಲಿ ನಾರಿಯು
ಬಾಧ ಬಡುತಾ ಕಣ್ಣೀರು ತೆಗೆಯುತ್ತ ನಿಂತಿರಲು
ಸಾಧು ಮೂರುತಿ ಸಕಲ ಜನರನು
ಸಾಗಿ ನಿಮ್ಮಯ ಗೃಹಕೆ ಎನ್ನುತೆ
ತಾ ದಯಾನಿಧಿ ತಾಯಿ ದುಃಖಿಸ ಬ್ಯಾಡೆಂದನಾಗಾ || 224 ||
ಏನು ಕಾರಣ ಬಂದೆ ನಿನಗಿವ
ನೇನಾಗುವನು ದುಃಖವ್ಯಾತಕೆ
ಯೇನಿವನು ಮುಂದಾದ ನೀನಿವನಿಂದೆ ಬರಲೇನೂ
ಮಾನವತಿ ನಡದಭಿಪ್ರಾಯವ
ಮಾರ್ಗಪೇಳಲು ತಿಳಿದು ಪೇಳುವೆ
ನಾನು ನಿನ್ನಯ ಮನದ ತಾಪವ ಪರಿಹರಿಪೆನೆಂದಾ || 225 ||
ಪೇಳಲೆನ್ನಯ ಮಾನ ಹೀನವು
ಪೇಳದಿರ್ದಡೆ ಪ್ರಾಣ ಸಂಕಟ ಪೇಳಲಾರೆನು
ಪೇಳುವೆನು ನೀ ಕೇಳೆನ್ನ ತಂದೆ
ಬಾಳ ಪ್ರಿಯದಿ ಇವನ ಸ್ವಂತದಿ
ಕೇಳಿ ವರನನು ಮಾಡಿಕೊಂಡೆನು
ಹಾಳಾಯ್ತು ಮನದಾಸೆ ಪುರುಷಾರತ್ನವಿಲ್ಲಿವಗೇ || 226 ||
ಈ ಪರಿಯ ಪೇಳಲ್ಕೆ ಸಂಗತಿ
ತಾಪ ಪರಿಹರ ಮಾಡಲೋಸುಗ
ದೀಪ ಮನಸಿನ ಬೆಳಕು ಮಾಡಿದ ಪರಮಗುರು ರಾಯಾ
ಕೋಪ ಸೇವಕನಲ್ಲಿ ನಾರಿಗೆ
ಜ್ಞಾಪ ಬಾರದೇ ಮಾಡಬೇ
ಕೆಂದಾ ಪರಿಯ ಇಂದಾದದನುಭವ ಪೇಳಲನುವಾದಾ || 227 ||
ನಿಮ್ಮ ಮನದೊಳಗಿರುವ ಫಲಿತವ
ನಿಮ್ಮಗಲ್ಲೆಲ್ಲಾದದನುಭವ
ನಿಮ್ಮಗಹುದೆನಿಸುತ್ತ ದುಃಖವ ಬಿಡಿಸುವೆನು ತಾಯೀ
ಸುಮ್ಮನೆ ನೀನಳುವದ್ಯಾತಕೆ
ಸಮ್ಮತಾಗಲು ಒಡಂಬಡುವದು
ನಿಮ್ಮ ಮನಸಿನ ತಾಪ ಪರಿಹರಿಸುವೆನು ನೋಡೆಂದಾ || 228 ||
ನಿನ್ನ ಜನಕನ ನಾಮ ರಾಮನು
ನಿನ್ನ ಜನನಿಯು ಸೋಮಕ್ಕ ಕೇಳ್
ನಿನ್ನಗ್ರಜಾನಂದ ತಮ್ಮನು ತಿಮ್ಮನಹುದಲ್ಲೇ
ನಿನ್ನ ನಾಮವು ಚನ್ನವ್ವ ಮ
ತ್ತಿನ್ನು ಮತ ಇಷ್ಟಾನುಸಾರವೆ
ನಿನ್ನಗಿದು ನಿಜವಹುದು ನಿನ್ನೊಳು ಒಪ್ಪಬೇಕೆಂದಾ || 229 ||
ಅಹುದು ಜೀಯನೆ ಇನ್ನು ಉಳಿದಂ
ತಹುದು ಮಾಡಿ ಕೊಡೀಗ ಎನ್ನಗೆ
ಅಹುದಾರದ ನೋಡಂ ಬಡುವೆನು ನಿಮ್ಮ ವಾಕ್ಯವನೂ
ಇಹುದಿವನ ಮ್ಯಾಲೆನ್ನಗತಿ
ರೌದ್ರವದು ಬರುವದು
ಎನ್ನ ಕೆಡಿಸಿದ ಇಹದೊಳಗೆ ಇಂತನ್ಯಾಯ ನೀವು ಕಂಡಿರಾ ಹೇಳೀ || 230 ||
ಕಂಡದ್ದು ನಿನ್ನಾತ್ಮದನುಭವ
ಉಂಡದ್ದು ಇವ ನಿನ್ನಗೀದಿನ
ಗಂಡನದ್ದಾಗದಲೆ ಇರುವುದು ಖಂಡಿಸುವೆ ನೋಡೂ
ಮಂಡಲದೊಳಿದು ಮಹಾನ್ಯಾಯ್ಮನ
ಕಂಡರಿವನನು ಶಿಕ್ಷೆ ಮಾಳ್ಪೆನು
ಗಂಡನಿನಗಿವನಲ್ಲ ಪೇಳುವೆ ಕೇಳೆಂದನಾಗಾ || 231 ||
ತಂದೆ ತಾಯ್ಗಳ ನಾಮಧೇಯವ
ವಂದಿದಗ್ರಜರನುಜ ನಾಮವ
ಚಂದವಾಗಿಹ ನಿನ್ನ ನಾಮವ ಇದುವೆ ನೋಡೆಂದಾ
ಮುಂದು ಇನ್ನುಳಿದಂತ ಕಾರ್ಯಗ
ಳಂದದಿಂದಲಿ ಪೇಳ್ವೆ ನಿನ್ನಯ
ದ್ವಂದಮನ ಮಾಡದಲೆ ಇದ್ದದ ನೊಪ್ಪಬೇಕೆಂದಾ || 232 ||
ಒಂದು ದಿನ ಮಧ್ಯಾಹ್ನದೋಲ್ ದು
ರ್ಗಂಧ ಸ್ಥಲದಲಿ ನೀನು ಪೋಗಿರೆ
ಬಂದನೊಬ್ಬಾ ಪುರುಷ ನಿನ್ನೊಡಗೂಡಿ ದವನಾದಾ
ಎಂದ ಮಾತಿಗೆ ದಿಕ್ಕು ತಪ್ಪಿದ
ಳಿಂದುಮುಖಿಯಳ ಕಂಡು ಗುರುವರ
ದ್ವಂದಮನ ಬ್ಯಾಡೆಂದ ನಿಜವಿದು ಒಪ್ಪಬೇಕೆಂದಾ || 233 ||
ಪುರುಷ ವೀರ್ಯವು ನಿನ್ನ ಗರ್ಭದಿ
ಬೆರದ ದಿನ ಮೊದಲಾಗಿ ನವಮಾ
ಸೊರಗೆ ನೀಬೆಸಲಾದೆ ಗಂಡು ಮಗುವ ನೆಂಬುವನಾ
ತರುಣ ನುಟ್ಟಿದ ಮುಂಚಿತಾಗಳೆ
ತರುಳನನು ನಿನ್ನೆತ್ತ ಮಾತೆಯು
ಕಿರಿಯ ಓಣಿಯೊಳಿಟ್ಟು ಬಂದೇನೆಂದಳಹುದಲ್ಲೆ || 234 ||
ತರುಳ ನಿನ್ನವನಲ್ಲಿ ಮಲಗಿಸಿ
ಬರುವ ವ್ಯಾಳ್ಯದಿ ನಿನ್ನ ಮಾತೆಯು
ಕೊರಿಯಲಿಕೆ ಕಾಗಿಗಳು ಸುತ್ತವನಲ್ಲಿ ಬೆರದಾಡೇ
ಕರದಿಂದೆ ಕಲ್ಲೆಸಿಯೆ ಕಲ್ಲಿನ
ಸ್ಮರಿಶದಿಂ ವಾಮಾಕ್ಷಿ ಮ್ಯಾಲಣೆ
ತೆರಿಯಲಿ ಕೆರಕುತಾದ್ದು ಕಂಡ್ಹೇಳಿದಳು ನಿನಗಹುದೇ || 235 ||
ಹೇಳಿದ್ದು ನಿಜವಯ್ಯ ಹಿರಿಯರೆ
ಹೇಳಿದಿರಿ ಹೇಳುವೆನು ಕೇಳಿರಿ
ಹೇಳಬಾರದದಂತರಂಗವ ಹೇಳಿ ತಿಳಿಸಿದಿರೀ
ಹೇಳಬೇಕಿವಗೆನಗೆ ನ್ಯಾಯವ
ತಾಳಿ ಧರಿಸಿದ ಎನ್ನ ಕೊರಳಿಗೆ
ಬಾಳ ತಾಪವ ಕಾಮಾತುರವ ಕೆಡಿಸಿದನೋ ತಂದೇ || 236 ||
ಇಂತ ನಿನ ಮಗನಣೆಯ ಗುರುತದೆ
ಎಂತು ನಿನ್ನೊಳು ಕಾಮವಾದಿತು
ಚಿಂತಿಳಿದು ನೀ ಪೋಗವ್ವ ನಿನ್ನಯ ನಿಜಾಲಯಕೇ
ಕಾಂತೆತಾ ಶಿರ ಬಾಗಿ ನಾಚಿಕೆ
ಪ್ರಾಂತದೋಳ್ ಮುಳಿಗ್ಯಾಡಿ ಪೋದಳು
ಎಂತಗುರು ನೋಡಿದ್ದದಿಲ್ಲದ ನರುಪಿದನು ಸತ್ಯಂ || 237 ||
ಜೀವನೇ ನೀ ಕೇಳು ಜಗದೋಳ್
ದಾವ ವಿಧವನು ನೀನು ಕಾಣುತೆ
ಭಾವದಲಿ ಇದ್ದದನು ಇಲ್ಲದ ವಿವರಿಪದು ಸತ್ಯಂ
ದೈವನೇ ಇದ್ದವನು ಇಲ್ಲದ
ಇರುವನೇ ಮಾನವನು ಕಾಣ್ವನು
ದೈವ ಮಾನವ ರೂಪ ರೂಪವ ಕಂಡಿರಲಿ ಬೇಕೈ || 238 ||
ಕಂಡು ಉಭಯರ ಕಲಿ ನಾಟಕದಿ
ಉಂಡಾಡಲತಿ ಪರಾನಂದವೆ
ಉಂಡಾಡಿದಾ ಕಂಡಾಡದಿರೆ ತಿಂಡಿಗನ ತೆರನೇ
ಮಂಡಲದಿ ಮಹಾ ವಿವಾಹೋತ್ಸವ
ಕಂಡೆ ಉಂಡೇನೆಂದನೊಬ್ಬವ
ಕಂಡ್ಯ ಮದುವಿಯ ಕಾರಣುಭಯಕರ ಕಾಣಲಿಲ್ಲೆಂದಾ || 239 ||
ಆ ತೆರನ ನಟಿಸುವುದು ನರಕುಲ
ಧಾತನಾಥರ ಕಂಡು ಕಲಿಯದೆ
ಮಾತಿನಲಿ ನಿಪುಣತ್ವ ಮರ್ಮದ ಮಾರ್ಗ ಮರದಿಹುದೇ
ಯಾತ ಕಾನರ ಜನ್ಮ ಛೀ ವೃಥ
ಯಾತನದ ದೇಹಾತ್ಮ ಯಮನಾ
ದೂತ ನಂಧಕ ಬದಿರನೊಶಕೈ ಸಿಗುವನೆಂತಕಟಾ || 240 ||

ಮಾನವ ಯಮದೂತರಿಂದ ಬಾಧೆ ಪಡುವ ವಿಚಾರ
ಅಂಧಕಂಗಿವ ನಂಗ ಕಾಣದು
ಕಂಗಳೆನ್ನದೆ ಕರ್ಣವೆನ್ನದೆ
ದ್ವಂದ ಕರಗಳ ಪಿಡಿದಾಯುಧದಿ ಕುಟ್ಟುತಿರುಹನೇ
ಇಂದೆ ಹಿರಿಯರು ಹೇಳಿಹರು
ಬಹು ಬಂಧಾನ ಒಂದಿವಸ ಬಾಳುವಿ
ಬಂಧಾನ ಪರಿಹಾರ ಗುರುವಿನಿಂದಾಗುವುದೋ ಜೀವಾ || 241 ||
ಬದಿರ ಬಡಿವದು ಬಲ್ಲನಲ್ಲದೆ
ಒದರುವನು ಇವ ಬಡಿಯಬಾರದು
ಮುದದಿ ಕರುಣವ ಪುಟ್ಟುವದ ಕಾ ಮಾರ್ಗವಿಲ್ಲಲ್ಲಾ
ಕದನರಂಗಗಲಿರಳು ಕಾಣ್ವದೇ
ಒದಗಿದವು ದಿನ ವಾಯ್ದದಿಲ್ಲವೆ
ಹೆದರಬೇಕಾಯ್ತಹಾ ಬಾಧಿಗೆ ಕೇಳಲೈ ಜೀವಾತ್ಮಾ || 242 ||
ಘೋರ ಬಾಧೆಯು ಮುಂದಪರಿಮಿತ
ತೋರಲದು ಮರದಿರುವದನುಚಿತ
ದಾರಿ ತಪ್ಪಿಸಿಕೊಂಬದರುವಿನ ದಾರಿ ಮರದಿಹುದೇ
ಯಾರಿಗ್ಯಾರು ವಿಚಾರವಿಲ್ಲದ
ದಾರಿ ಕಾಣದು ಧೈರ್ಯ ಬಾರದು
ಕ್ರೂರ ಮನುಜರಿಗಿಹ ದೊಳರುವಿಲ್ಲಾಯ್ತೆ ಗುರುವರನೇ || 243 ||
ಇಹದೊಳರವಿಲ್ಲಾ ಪಾಪಿಗಳಿಹ
ದರುವು ಯಮಲೋಕ ಬಾಧಿಯೊಳಿಹುದು
ಹಿರಿಯರು ಹೇಳಿದೋಕ್ಯವು ನೆನೆದ ದುಃಖದಲಿ
ಬಹದೆ ಪರಮಾನಂದ ಪ್ರಾಪ್ತವನ
ಬಹು ದೂರವೈ ನರರಿಗನುಭವ
ಇಹದೊಳಲ್ಲಿದ್ದರುವು ಇದ್ದರೆ ಜೈಸುವರೋ ಜೀವಾ || 244 ||
ಪುಣ್ಯಾತ್ಮರರುವಿಲ್ಲಿ ಕಾರಣ
ಪಾಪಿಗಳಿರುವಲ್ಲಿ ಕಾರಣ
ಪುಣ್ಯಾತ್ಮರರುವಿನ ಸುಖಾಸ್ಪದ ಪೇಳಲಸದಳವೈ
ಪುಣ್ಯವಂತರ ಸುಖ ಸುವಾರ್ತೆಯ
ಪೂರ್ಣವಾಗೀ ಕೇಳಬಹುದಾ
ಪುಣ್ಯಹೀನರ ದುಃಖಸಾಗರ ಕೇಳಲತಿ ಭಯವೇ || 245 ||
ಯಾರು ಈ ಬಾಧಿಗಳು ಕಂಡಿಹ
ರ್ಯಾರು ಸುಮ್ಮನೆ ಬರದರೆಲ್ಲದೆ
ಯಾರು ಕಾಣದ ಮಾತು ನಂಬಿಗೆ ಹ್ಯಾಗೆನ್ನುತಿಹರೂ
ಧಾರುಣಿಯ ಸುಖವದುವೆ ಪರಸುಖ
ದಾರಿದ್ರವದು ಯಮನ ಬಾಧಕ
ದಾರಿವಲ್ಲದದ್ಯಾರು ಕಂಡಿಹರೆನುವರೈ ಗುರುವೇ || 246 ||
ಸುಮ್ಮನೆ ಬರದಿಲ್ಲ ಮಾತದು
ಇಮ್ಮಹೀ ಮಾನವನು ಒಬ್ಬನು
ಗಮ್ಮನೇ ಮೃತಪಟ್ಟು ಯಮನಾ ಭಟರ ಕೈ ಸಿಕ್ಕೂ
ತಮ್ಮ ಬಾಧಿಪಯಾತ್ಮವ
ತಾವು ಕಂಡುಳಿದದ್ದು ದೇಹದಿ
ನಮ್ಮಗಿಂತನುಭವಾಭಯ ಪೇಳುವರಿಹರೋ ಜೀವಾತ್ಮಾ || 247 ||
ಸುಮಮಾರ್ಗ ಬೇಕಾದ ಜೀವನೆ
ಕ್ರಮವಾದದಿನ್ನೊಂದು ಪೇಳುವೆ
ಯಮಮಾರ್ಗಕಾ ದುರ್ಜನಂಗಳ ನೊಯ್ವ ಸಮಯದಲಿ
ಯಮಭಟರ ಕಂಡಾಗ ಪಶುಗಳು
ತಮಗಿರುವ ಕೊಳ್ಕಣ್ಣಿ ಕಿತ್ತುತ
ಗಮನ ಮಾಡಲಿಕಾ ಸಮದಲಿ ಗಡಬಡಿಸುತಿಹವೈ || 248 ||
ರುದ್ರಭೂಮಿಯೊಳಿರುವದಾರ್ಭಟ
ಕ್ಷುದ್ರ ಜನಗಳಿಗಿರುವ ಸಂಕಟ
ರೌದ್ರವನು ಕುರಿತುವು ಕೇಳೀ ಬೆದರುವವು ನೋಡೈ
ಭದ್ರ ವಾಗವಗಳನು ಕಾಯುವ
ಬೆದರಿದವು ಯಾಕೆಂದು ಮಾನವ
ರುದ್ರಾಲಯದಿ ಸಾಕ್ಷಿ ಕಂಡವರಿಹರು ಜೀವಾತ್ಮಾ || 249 ||
ಪರಮಗುರುವಿನ ಒಂದು ದಿನಯಾ
ಪರಮಾತ್ಮ ತನದೂತ ಮುಖದಿಂ
ಕರಸಿರಲು ಪರಲೋಕ ಚಿತ್ರವು ಕಂಡು ಕೇಳಿದರೂ
ಅರರೆ ಕೇಳೈ ದೂತ ಇವರ‍್ಯಾ
ರರನಿಮುಷ ಕರಚರಣ ಕೆಲಸಗ
ಳರಿತು ಮಾಡುವ ಬಿಡುವ ಕಾರ್ಯವದೇನೆಂದು ಕೇಳೇ || 250 ||
ಗುರುದೇವ ನೀವರಿಯದಿರುವದೆ
ಧರಲೋಕದೋಳ್ ನಿಮ್ಮ ಭಕ್ತರು
ಪರಲೋಕ ವಾರ್ತೆಗಳು ತೆಗಿಯಲು ತ್ವರಿತ ನಿರ್ಮಿಪರೂ
ಪರಲೋಕ ವಾರ್ತೆಗಳು ಬಿಟ್ಟಾ
ಧರಲೋಕ ದಾರಿಗಳು ಧರಿಸಲು
ಕರಚರಣ ಮುಂದಿಟ್ಟುಕೊಂಡು ಸುಮ್ಮನಿಹರೆಂದಾ || 251 ||
ಇಂತ ಶುಭವಾರ್ತೆಗಳು ಮುಂದಿಹ
ದಂತರಂಗವು ಕಂಡು ಹಿರಿಯರು
ಎಂತತಾಪತಿ ದುಃಖ ಬಂದರು ಪರಲೋಕ ವಾರ್ತೆ
ಕುಂತರೆದ್ದರು ಬಿಡದೆ ಬಹಿರಂ
ಗಂತರಂಗಾತ್ಮಾನುಭವಗಳು
ಭ್ರಾಂತ ಭಕ್ತಾ ಸಮುದಾಯಗಳಿಗರುಪುವರು ಬಿಡದೇ || 252 ||
ಶಂಕ ಬಂತೈ ಗುರುದಾಸನಿಗೆ
ಕಿಂಕರಾಶ್ರಯದಿಂದ ಬೇಡುವೆ
ಪಂಕಜಾತ್ಮನೆ ಪ್ರಶ್ನೆದೊಂದಿದು ಪೇಳಿಕೊಂಬುವೆನೈ
ಸಂಕಟ ಪಹರ ವಾಗೋಸ್ಥಲಗಳು
ಪುಂಕಾನಪುಂಕಲ್ಲಿ ಇರಲಾ
ಲಂಕಾರ ಲೌಕಿಕ ಮಠಗೃಹ ವ್ಯಾಕೈಯ ಗುರುವೇ || 253 ||
ಟಕ್ಕ ಶಿಷ್ಯಂಗೊಳ್ಳೆ ಸಮಯ
ಸಿಕ್ಕಿತೈ ಜೀವ ನಿನ ಪ್ರಶ್ನೆ
ರೊಕ್ಕ ಗುರುಮಠವನಕೆ ಕೊಡುವದು ತಪ್ಪಿತೈ ಎನುವಾ
ಬುಕ್ಕಿಟ್ಟೆವು ಪರಾಟೆ ಗುರುಕೃಪೆ
ತಿಕ್ಕಿಕೊಂಬದೆ ತಿಕ ಮುಕಕೆ ತಾ
ಗಕ್ಕನಾ ಲೋಚಿಪನು ಕೆಡುವನು ಧನ್ಯನೆಂತಹನೋ || 254 ||
ಗುರುಪೀಠ ಗುರುಮಠ ಕವಿಪುಟ
ಪರತತ್ವ ಘನ ಗ್ರಂಥವಿರದಿರೆ
ನರನಪರಾನಂದ ಸ್ಥಲಗಳು ಮೋಹಿಪನು ಹ್ಯಾಗೆ
ಕುರುಹು ಮಠ ಸೂತ್ರಾದಿ ವಿವರದಿ
ಬರುವ ದಾರಿಗೆ ಧನ್ಯನಾಗುವ
ದರಿಯದೇ ಯಾಕೆಂದು ಕೇಳ್ವದಿದಪಕೃತ್ಯ ತಿಳಿಯೈ || 255 ||
ಸುಖವೆ ಸ್ವರ್ಗವು ಎಂಬ ಮಾತಿಗೆ
ದುಃಖವೇ ಇಂದಿರುವದಲ್ಲದೆ
ಸುಖವಪೇಕ್ಷಿಸಲಿಲ್ಲ ಹಿರಿಯರು ದುಃಖ ಬಯಸಿದರೇ
ಸುಖವಿಹದು ಪಶು ಮಹಿಷ ದೇಹವ
ಸುಖಫಲವು ದುಃಖ ಕಟ ಕೆಡಿಸಿತೇ
ಸುಖ ಮರ್ತ್ಯರಿಗೆ ದುಃಖ ಮುಂದದು ಬಿಡದೊ ಜೀವಾತ್ಮಾ || 256 ||

ಗುರುರಾಯ ಸುಖದುಃಖ ತೀರ್ಮಾನ ಕೊಟ್ಟ ವಿಚಾರ
ಸುಖದೊಳಿಲ್ಲಿಹ ಜನಗಳೆಲ್ಲಕೆ
ಸುಖವೆ ಮುಂದಿಲ್ಲೆಂಬದಾಯಿತೆ
ಸುಖವು ಇಲ್ಲದ ದುಃಖ ಜನರಿಗೆ ಸುಖವು ಉಂಟಾಯ್ತೆ
ಸುಖವಿಲ್ಲವಗಲಿರುಳು ಕರೆಕರೆ
ಸಕಲ ಸಂಕಟದಲ್ಲಿ ಚೆರಿಪರೆ
ಸುಖ ಮಹಾತ್ಮನೆ ಸಂಶಯಾಸ್ಪವ ಛೇದಿಸೈ ಗುರುವೇ || 257 ||
ಕಾಲನಾಳ್ಗಳು ಕೀಲು ಕೀಲ್ಗಳು
ಪಾಳಿಸುವ ಯಮಭಟರ ಕೈಯೊಳು
ನಾಳೆ ಸಿಗುತಿಹ ಸಂಕಟಕೆ ಇದು ಸುಖವೆಂದು ತಿಳಿಯೈ
ಬಹಳ ಬಾಧೆ ಇದ್ಯಾತ ಕಾದಿತು
ಬಹಳ ಸುಖವೆಂದಂದ್ಹೇಳಬೇಕೈ
ಹೇಳಿದರು ಹಿರಿಯರೀ ಹೇಳಿಕೆ ಕೇಳೈ ಜೀವಾತ್ಮ || 258 ||
ವೃಶ್ಚಿಕನ ಹೊಡತದರಮ್ಯಾಲೆ
ಕಚ್ಚುವಾ ಕಬ್ಬಿಣದ ಮೂಗಿಲಿ
ಚುಚ್ಚುವಾ ಕಾಗಿಗಳ ಕಾಟವು ಘನವಿರಲು ಮುಂದೇ
ಮುಚ್ಚಿ ಮಲಗಲು ಹೇಳಿ ಕಚ್ಚುವ
ಚುಕ್ಕಾಡಿ ತಗುಣಿ ಕಾಟಿದು ಸುಖ
ಹೆಚ್ಚತ್ತು ಮರಮಾನಂದಗಳ ಪಡಿಯೋ ಪ್ರಾಣಾತ್ಮ || 259 ||
ಹಿರಿಯರೆಂಬ ಮಹಾತ್ಮರಿಹದಲಿ
ಪರಿಪರಿಯ ಸುಖ ಚರಿಯಲಿರುತಿಹ
ಹಿರಿಯರಿಗೆ ಇಂದು ಸುಖವೋ ಕಷ್ಟವೋ ಹೇಳಿ ಕೊಡಿರೆನಗೇ
ಕರಣಸಾಗರ ಸಂಶಯಂಗಳಂ
ಕುರಿಸದಂ ತಡಿಗಡಿಗೆ ಛೇದಿಪ
ಪರಮ ಸುಜ್ಞಾನೆಂಬ ಖಡ್ಗವ ಪಾಲಿಸೈ ಗುರುವೇ || 260 ||
ಸುರತರುವು ಸುರಧೇನು ಸುಂದರ
ಪರಿಪರಿಯ ಫಲಪುಷ್ಪ ಪರಿಮಳ
ಭರಿತ ರಸಗಳು ಸುರಿವುತಿರಲದನೇ ನೇಳಲಿನ್ನೂ
ಕರ ಚರಣ ದೊಳಗಾಸಿಗೆಗಳವೆ
ಚೆರಿಪ ಕಾಲದು ಬೆಳಗ ಝಾವದು
ಪರಮಪುಣ್ಯರ ಮುಂದು ಸುಖಕಿದು ಬಂದನವೋ ಜೀವಾ || 261 ||
ಗಾಳಿಯೊಳು ತಂಗಾಳಿ ನೋಡದು
ವ್ಯಾಳೆಯೊಳು ಶೀತೋಷ್ಣವಲ್ಲದು
ಬಹಳ ನೂತನ ಶ್ವೇತವರ್ಣದ ಮಳಲಿರುವ ಸ್ಥಲವೂ
ಮಾಳಿಗೆಗಳವು ಮದನ ಮಂಟಪ
ಜಾಲರುಗಳಂತಿರುವವೆಂಬಾ
ಲೀಲ ಸುಖವಾನಂದಕಿಹ ಸುಖದುಃಖೆಲೈ ಜೀವಾ || 262 ||
ದುಃಖ ಸುಖಗಳು ಇಹಪರರಿಗೆಯು
ಲೆಕ್ಕಗಳ ತೀರ್ಪಡಿಸಿ ಕೊಡುವವ
ಚೊಕ್ಕಟದ ಗುರು ನಿನ್ನ ಬಿಟ್ಟರೆ ಇಲ್ಲವೈ ಜಗದೀ
ಮುಕ್ಕಣ್ಣನೆಂಬರ್ಥ ನಿನ್ನಗೆ
ತಕ್ಕದಲ್ಲದೆ ಸಲ್ಲದ್ಯಾರಿಗೆ
ಮುಕ್ಕಣ್ಣು ಇದ್ದದಕೆ ಎಲ್ಲಕೆ ಮುಕ್ತಿ ಕೊಡುವವನೇ || 263 ||
ಇನ್ನು ನಿಮ್ಮನು ಕೇಳ್ವ ಕಾರಣ
ವನ್ನು ವಂದದೆ ಲಾಲಿಸೈ ಮಹ
ಧನ್ಯರಿರುತಿಹ ಸುಖ ಸ್ಥಲಗಳಿಗೆ ಮಿತಿಗಳುಂಟೇನೋ
ಎನ್ನಗದನೇ ಚನ್ನಾಗಿ ಪೇ
ಳಿನ್ನು ಪಾವನ ಮೂರ್ತಿ ನರಕುಲ
ಧನ್ಯರಂ ಮಾಡ್ವಂತ ಪುಣ್ಯನೆ ದಯಮಾಡು ಗುರುವೇ || 264 ||
ಅಗಣಿತನ ಬೆರದವರ ಸುಖಸು
ಗಗಣಿತಾಗಣಿತಲ್ಲೋ ಶಿಷ್ಯನೆ
ಅಗಣಿತಾತನು ಹ್ಯಾಗೋ ಹಿರಿಯರ ಕಾರ್ಯವ ಗಣಿತವೇ
ಅಗಣಿತನ ಕಾರ್ಯಗಳು ಗಣಿತವು
ಸೊಗಸಾದ ಚಿತ್ರಗಳು ಗಣಿತವು
ಬಗೆಗಳೊಳು ಬೆರದಾಡುವವರಾ ಸುಖವ ಪರಮಿತವೈ || 265 ||
ಅಪರಮಿತ ಸುಜ್ಞಾನಿಗಳು ಸುಖ
ವಪರಮಿತ ಪಾಪಿಗಳ ದುಃಖವ
ಸುಫಲ ದುಷ್ಫಲ ಕಡ್ಯಾದೊಡಿನ್ನೇನು ಭಯ ನಿನಗೇ
ಚಪಲ ಚಂಚಲ ಛೇದನಾಯಿತೆ
ವಿಪರೀತ ಭಾವಡಗಿ ಹೋಯಿತೆ
ಚಪಲವೈ ದಾಟನುಭವಿದ್ದೊಡೆ ಕೇಳ್ಯ ಜೀವಾತ್ಮಾ || 266 ||
ದೇವಲಾಲಿಸು ಎನ್ನ ಬಿನ್ನಪ
ಭೂವರಾಲಯದಲ್ಲಿ ಕೆಲವರು
ಜೀವನಿಗೆ ಸುಖದುಃಖ ತಾಕುವದೆನ್ನುವರೊ ತಂದೇ
ತಾವಿದನು ಒಪ್ಪುವದೊ ಒಪ್ಪದ
ದೈವ ಒಪ್ಪಿತ ಉಂಟೂ ಇಲ್ಲವೋ
ಜಾವ ವಾಲಸ್ಯಾಗದೆನ್ನಗೆ ಪೇಳ್ವದೈ ಗುರುವೇ || 267 ||
ಜನನ ಮರಣವು ನಿನಗೆ ಇಲ್ಲೆಂ
ದನುದಿನವು ಘನ ಹಿರಿಯರನುತಿರೆ
ಲನುಮಾನವಿನ್ಯಾಕೆ ನಿನಗೆ ಇಲ್ಲ ದುಃಖ ಸುಖಾ
ಚಿನುಮನೊಳು ಸಮರಸವೆ ನಿನಗೆ
ವಿನಹ ತರಹಾಕಾರ ಕುಂಟದ
ಕನುಕೂಲ ಸುಖದುಃಖ ವಿವರಿಸಿ ಇರುವ ನಾ ದೈವ || 268 ||
ಮಹದಕಾಶದಿ ಪರಿಮಳವು ತಾ
ಸಹಜದಿಂದಮಳೈಕ್ಯವಲ್ಲದೆ
ಮಹದಕಾಶಕೆ ಮರಿಮಳಕ್ಕೆ ಬಂಧನಗಳುಂಟೇ
ಇಹದು ಪುಷ್ಪಾಕಾರಕೀ ಗೆಂ
ತಹುದೊ ಬಂಧನ ಚಿತ್ರಕಾರ
ಕ್ಕಹುದು ತಿಳದೇನಿ ಗುರುಹಿರಿಯರಿಂಸದ ನಿಜಾನಂದೈ || 269 ||
ಪುಷ್ಪ ಸಮುದಾಯಗಳಿಗೆಲ್ಲಕೆ
ಒಪ್ಪ ಬಂಧನ ಕಂಡಿತೈ
ತಾವಪ್ಪಣೆಯ ಕೊಟ್ಟದಕೆ ಸಂಶಯ ವಡಿಯುತಿಹುದಲ್ಲಾ
ಗೋಪ್ಯ ಗುರುಕೃಪೆ ವಂದಿದಂತವ
ರೇರ್ಪಡಿಸಿ ಈ ಗುಳಿಯಲಿಲ್ಲವು
ಪುಷ್ಪದುಪಮಾನನುಮಾನ ತಾವು ತಪ್ಪಿಸೈ ಗುರುವೇ || 270 ||
ಕೇಳಬಹುದೈ ಜೀವ ಶಿಷ್ಯನೆ
ಹೇಳಬೇಕಹುದಾದ ಮಾರ್ಗವ
ಬಹಳ ಪುಷ್ಪಕುಂಟು ಬಂಧನ ಒಂದೆರಡಕಿಲ್ಲಾ
ತೋಳಿನಿಂ ಛೇದಿಸಿದ ತೆಂಗಿನ
ಹೋಳಿನಲ್ಲಿ ಬೆರದಿರುವ ಪುಷ್ಪಾ
ಲೀಲಸುಖ ಗುರುಬೆರದ ಚಿತ್ರಕ್ಕಿಲ್ಲ ಬಂಧನವೂ || 271 ||

ಜನನ ಮರಣ ವಿಚಾರ
ಮತ್ತು ಸಂಶಯ ಒಂದು ತಿಳುಪುವೆ
ಚಿತ್ತವಿಟ್ಟದು ಕೇಳು ಗುರುವರ
ಮರ್ತ್ಯದಲಿ ಮಹಪಾಪಿ ಮಡಿದೂ ಮತ್ತೆ ತಾ ಜನಿಸಿ
ಕತ್ತೆ ಎತ್ತಾಗ್ಯಾಡಿ ಪುನರಪಿ
ಸತ್ತು ಮತ್ತೂ ಪುಟ್ಟಿ ಮಾನವ
ಮುಕ್ತಿ ಪಡಿಯುವನೆಂದು ಪೇಳ್ವರು ಪೇಳ್ವದೇನಿದಕೆ || 272 ||
ಪೂರ್ವ ಜನ್ಮದ ಸುಕೃತ ಫಲಪದ
ಊರ್ವಿಯಲಿ ಸುಖ ದುಃಖದನುಭವ
ಸರ್ವರಿಗೆ ಉಂಟಿನ್ನು ಉಳದದ ಗುರುದರುಶನೊಂದೂ
ದುರ್ವಿಯೋಗದಿ ಗುರು ಬೆರಿಯದಿರೆ
ಪರ್ವತಾಗ್ರ ಸಮಾನ ನರಕವೆ
ಗರ್ವ ಖಂಡ್ರಿಪ ಗುರುಕೃಪಾಯ್ತಾನಂದ ಪೇಳುವುದೇ || 273 ||
ಪೇಳುವರ ನೀ ಕೇಳು ಜೀವನೆ
ಕೋಳಿ ಕತ್ತಿಗಳಂದಿ ಜನ್ಮದಿ
ಬೀಳುವರೋ ನೀವು ಬೀಳದವರೋ ಹೇಳು ಹೇಳೆನ್ನು
ಬೀಳುವರು ನಾವಲ್ಲ ವೆನಲಾ
ಗ್ಹೇಳು ನೀವು ನಾವೆಲ್ಲರೇಕವೆ
ಬೀಳುವರು ನಾವೆಂದೊಡಂಬಡೆ ಕೇಳಬಹುದಾಗಾ || 274 ||
ತಂದೆ ವೀರ್ಯವು ತಾಯಿ ರಕ್ತದಿ
ಸಂಧಿಸಿದ ದಿನದಿಂದ ಪಿಂಡವು
ತಂದೆ ರೂಪವೊ ತಾಯಿ ರೂಪವೊ ಧರಿಸಿ ಬರುತಿಹುದೂ
ದ್ವಂದ ರೂಪಗಳಳಿದಮೇಧ್ಯವ ತಿಂದು
ತಿರುಗುವ ಹೀನ ಪಶುವೆಂದೆಂಬಂದಿ
ಜನ್ಮವು ಧರಪದದು ಹ್ಯಾಗೆಂದು ಕೇಳ್ಜೀವಾ || 275 ||
ಪಾಪಿ ಮಾತೆಯ ಪಶುವ ಕೂಡಿತೆ
ಪಾಪಿ ಕತ್ತೆತ್ತಾಗುವದಕೇ
ಪಾಪಿ ಕತ್ತೆತ್ತಾಗಿ ಮಡಿದೂ ಪುಣ್ಯನಾಗಲ್ಕೇ
ಪಾಪವಿಲ್ಲದ ಗೋವ ಗಾರ್ಧಪ
ಪುಣ್ಯದುಪಚಾರಾಡಿರ್ಪವೇ
ನೀ ಪರಿಯ ಕೇಳುತ್ತಾ ಬಾರೈ ಜೀವ ಸಂಜೀವಾ || 276 ||
ಕೋಳಿ ಕತ್ತೆಗಳಿಂದ ಪಶುಗಣ
ನಾಳಿಗೀ ಮುಕ್ತಿ ಪದತ್ವವು
ತಾಳಿಕೊಂಬುವ ಪ್ರಯತ್ನಂಗಳು ಧರ್ಮ ನೀತಿಗಳೂ
ಹೇಳಿ ಇಲ್ಲವು ಮಾಡಲಿಲ್ಲವು
ಕೋಳಿ ನರಜನನೆಂತು ಧರಿಪವು
ಕೇಳು ಪೇಳುವರೇನೆನ್ನುವೊ ಕೇಳಬಹುದಾಗಾ || 277 ||
ಶೂಕರನ ಗರ್ಭದಲಿ ಮಾನವನೇಕ
ಜನ ಬಂದಿಹುದು ಕಂಡಿರೇ
ಲೋಕದೊಳು ಇವ ಪಾಪಿ ಇಂದಿನ ಜನ್ಮ ಪಾಪವಿದೋ
ತಾಕಿದದಕೀ ಪಶುವ ಯೋನಿಯ
ಸೋಕಿ ಬಂದಿಹನೆಂದು ನಂಬುವ
ದೀ ಕಲಿಯೊಳೆಲ್ಲಾದರುಂಟೇನೆಂದು ಕೇಳ್ಜೀವಾ || 278 ||
ಶೂಕರನೆ ಮಾನವರ ಗರ್ಭದಿ
ಲೋಕದೊಳಗೆಲ್ಯಾದರುದಿಸಿರೆ
ಯಾಕೆ ವಾದಿಯು ಕಂಡು ಕಂಡದ ನೊಡಂಬಡಬಹುದೈ
ಸೋಕಲದು ಯಾವ್ಕುಲದ ವೀರ್ಯವ
ದಾಕರ್ಷಣಾಕಾರ ತರುವದ
ಕ್ಯಾಕೆ ಸಂಶಯ ಪುನರ್ಜನ್ಮವದಿಲ್ಲೋ ಜೀವಾತ್ಮಾ || 279 ||
ಪೂರ್ವ ಜನ್ಮಗಳಿಳಿವವೀ ದಿನ
ವೂರ್ವಿಯೋಳ್ ಬ್ಯಾರ್ಯಾಗಿ ಚಿತ್ರವು
ತೋರ್ವವಗಳ ಪಿಡಿದು ಗುರುವರ ಮುದ್ರೆ ಮಾಡುವನೋ
ಸಾರ್ವಕಾಲವಗಳಿಗೆ ಸುಖಪದ
ಸೇರ್ವವೈ ಈ ಪಂಚಭೂತದ
ಗರ್ವವಷ್ಟ ಮದಂಗಳಳಿದೂ ಮುಕುತಿ ಸಿದ್ಧಿಪುದೈ || 280 ||
ಜಡವೆ ಜನ್ಮರಣೆಂಬುವರು ಕೆಲ
ಜಡರಹಿತ ಜೀವೇಶನೆನುವರು
ಹೊಡದಾಟ ಬಂದೊದಗಿತೆಂದಾಲೋಚಿಸರು ಕೆಲರೂ
ತೊಡಕು ಬಂತಿದ ಬಿಡಿಸಿ ಕೊಂಬದ
ಹುಡಿಕಿ ಕೊಂಬದರೊಳಗೆ ವಿದಿತಾ
ತಡ ಮಾಡದಾಕ್ಷಣವೆ ಹೊಡೆದಬ್ಬಿಪದೋ ಜೀವಾತ್ಮಾ || 281 ||
ಘನ ತಟಾಕದಿ ತೆರಿಯಮ್ಯಾಲ್ತೆರೆ
ಜನಿಸಿ ಬಂದಂದದಲಿ ಚಿತ್ರಗ
ಳನುದಿನದಿ ಹೊಸ ಜನನ ವಲ್ಲದಿಗಳಬ ಬರಲುಂಟೆ
ಮನುಜ ನಾದವಗನುಭವಲ್ಲದೆ
ತನುವ ನೋಳ್ಪರಿಗನುಭವವಾಗದು
ತನುವ ಜನನವದುಂಟೇನು ನೀನನುದಿನವು ಕೇಳೈ || 282 ||
ಕೇಳಲ್ಹೇಳುವರೈಯ್ಯ ಉತ್ತರ
ಬಹಳ ಯೋನಿಗಳಲ್ಲಿ ಬರುವವ
ಜಾಳುದೇಹವಿಲ್ಲ ಜೀವನೆ ಜನನ ಕಾರಣನೂ
ಕೂಳಾತುರಿವ ಪಂಚತತ್ವದ
ಮ್ಯಾಳದೋಳ್ ಮಿಳಿತಾಗಿ ಪೋಗುವ
ಕಾಲಕ್ಕೆ ಸರಿಯಾಗಿ ನಟಿಸುವನೆನುವರೈಗುರುವೇ || 283 ||
ಮರಣವಿದ್ದರೆ ಜನನವೆಂಬುದು
ಸರಿಯಾದ ಮಾತಾಗಿ ಕಾಣ್ವದು
ಮರಣವಿಲ್ಲದ ಜೀವೇಶನಿಗೆ ಜನನವೆನಬಹುದೇ
ಮರಣ ಜನನವ ಹೊಂದುವಂತ
ವರರುವಿನೋಳ್ ಬರಲಿಲ್ಲ ನಿಮ್ಮಗೆ
ಗುರು ಹಿರಿಯರನು ಕೇಳಿ ಕೊಳಿರೆಂದ್ಹೇಳೈ ಜೀವಾತ್ಮಾ || 284 ||
ಜಾಣಗ್ಹೇಳುವರಯ್ಯ ಜಗದೊಳು
ಜೀರ್ಣವಂಬರ ಬಿಟ್ಟ ತೆರದಲಿ
ಪೂರ್ಣ ಪ್ರಾಣನು ಜೀರ್ಣಘಟಗಳ ಬಿಡುವನಾ ತೆರದೀ
ತ್ರಾಣ ದೇಹದಿ ವಾಸತಾತನು
ತ್ರಾಣ ಕೆಡಲಿನ್ನೊಂದು ಧರಿಸುತ
ಪ್ರಾಣನೀಪರಿ ಜನನ ತೋರಿಕೆ ತೋರ್ವರೈ ಗುರುವೇ || 285 ||
ತ್ರಾಣ ಘಟವನು ಬಿಡುವನಲ್ಲಾ
ಜೀರ್ಣ ಘಟ ಬಿಟ್ಟಾಗ ಜೀವನು
ಕೋಣೆ ಹೊಸಘಟವಿಲ್ಲ ಪೋಪದ ಕೊಯ್ದಾಟ ಬಂತೇ
ಪ್ರಾಣನಿಲ್ಲದೆ ಪಿಂಡ ಬಲಿವುದೇ
ಕಾಣೆವೈ ಬೀಜಿಲ್ಲದಂಕುರ
ಜಾಣರರುಪಿದ ಜನನವದರೊಳನು ಮಾನ ಕಾಣಿಪುದೈ || 286 ||
ಜನನವೆಂಬುವ ಮಾತದಾಗದು
ತನುವ ನೂತನ ಧರಿಪನೆಂಬುದ
ಕನುಮಾನ ತೋರಿಕೆಯು ತೋರ್ವದು ಯಾಕದೆಂತೆನಲೂ
ತನುವ ವೃದ್ಧರ ಬಿಡದೆ ನೂತನ
ತನುವ ಬಿಡುವವ ನಾಗಿರುವವನೆ
ತನುವ ವೃದ್ಧರ ಬಿಡುವ ನೂತನ ತನುವಿನೋಳಿರುವಾ || 287 ||
ಜೀರ್ಣ ಘಟಗಳ ಬಿಡುತ ನೂತನ
ಜೀರ್ಣವಾಗದ ಘಟವ ಬಿಡದಿರೆ
ಜಾಣರರುಪಿದ ವಾಕ್ಯದಲಿ ಮನಧ್ಯಾನವಿಡಬಹುದೈ
ಧ್ಯಾನ ಮನ ವಿಡಿದಾಡಿ ನೋಡಲು
ನಾನ ಜನನವು ಜನನ ಮರಣವು
ಕೂನ ಕಾರಣಕೆ ಸಿಗದೆ ಹೋಯ್ತೆಲೈ ಜೀವಾತ್ಮಾ || 288 ||
ಹುಟ್ಟಿ ಬರುವರು ಎಂಬ ಭಾವ
ಶ್ರಿಷ್ಟಿಯೋಳ್ ಬಂದಿಹರೊ ಬರುವರೊ
ಶ್ರಿಷ್ಟಿಯೋಳ್ ಬಂದಿಹರು ಎನ್ನಲು ತೋರಿ ಕೊಡಬಹುದೈ
ನಷ್ಟಪಟ್ಟವ ಬಾರದೀಗ
ಪ್ರತಿಷ್ಟೆ ಹೊಸದೆಂಬನುಭವೀ ದಿನ
ದಿಟ್ಟರಹುದೆನಿಸುವರು ಕೇಳೆಂದ್ಹೇಳೆಲೈ ಜೀವಾತ್ಮಾ || 289 ||
ಹೋದವನು ಮತ್ತಿಲ್ಲಿ ಬಾರದ
ಬಾರದವ ಬಂದಿರುವನೆಂಬುವ
ಬೋಧದಯ ಮಾಡುವರು ಹಿರಿಯರು ಪ್ರತಿ ವಚನವ್ಯಾಕೇ
ಹೋದವರ ನಿಹದಲ್ಲಿ ತೋರಲು
ಪಾದಸೇವಕರಾಗಬಹುದೈ
ಗಾದೆಯಾಯ್ತೈ ನರಕ ಪಾಪಿಯ ಬಿಟ್ಟಿತೈ ಜೀವಾ || 290 ||
ಪಾಪಿಯೇ ಜನನಕ್ಕೆ ಕಾರಣ
ಪಾಪವಿಲ್ಲೆಂದೆನಲಿಕ್ಕಾಗದು
ಭೂಪನಾಗಲಿ ಭೂ ಪ್ರದೇಶದಿ ಪುನರಪಿಯು ಬರುವಾ
ಈ ಪರಿಯ ಗೀತಾದಿ ಗ್ರಂಥದಿ
ಲೇಪಿಸಿರುವರು ಎನ್ನುತಿರುವರು
ಪಾಪ ಪರಿಹರಮಾಳ್ಪ ಗುರುವರ ದಾರಿ ತೋರಿಕೊಡೈ || 291 ||
ಪುಣ್ಯವಂತನೇ ಕೇಳು ಜೀವನೆ
ಪುಣ್ಯನಿಹನೀ ಧನಿಕ ಲೋಕದಿ
ಪುಣ್ಯ ಜನನವದಲ್ಲವೆನಲವ ಕೇಳುವನು ಹೇಳೂ
ಇನ್ನು ಇಂತಾ ಜನನ ಎನಗಿರ
ಲೆನ್ನುವನು ಭಯಪಡುವನು ಎಂದಿಗೆ
ಪುಣ್ಯಹೀನರ ಜನನ ರಹಿತರ ಜರಿವನೆಲೋ ಜೀವಾ || 292 ||
ಯಾತಕೀ ಪರಿ ಎನ್ನುವನು ಕೇಳ್
ದೂತ ಯಮನರ ಭಯವು ಇಲ್ಲವು
ಭೂತಟದಿ ಪುಟ್ಟುವದೆಯಲ್ಲವೆ ಪುಟ್ಟಬಹುದೆನುವಾ
ನಾಥ ನಾತರ ವಿವರವಿಲ್ಲಾ
ಧಾತ ಗುರು ದರಿಶನಕೆ ದೂರಾ
ಮಾತಾಯಿತೀ ದಾರಿ ಕೆಟ್ಟಿತು ಮುಕ್ತನೆಂತಹನೋ || 293 ||
ಎರಡು ದಶ ಮ್ಯಾಲೆಂಟು ಕೋಟಿಯ
ನರಕಿಗಳ ಸಾನಂದ ಗಣವರ
ಬೆರಸಿದನು ವಹಪರಮ ಸಂಪದ ಪುಟ್ಟಲಿಲ್ಯಾಕೆ
ದಂತಟಾಕದಿ ದುರುಳ ದುರ್ಯೋಧನ
ನರಕ ನಾಟಕದಿ ಸ್ವಂತದಿ
ಇರುವ ಬಂದಿಹನೆಂದು ಶಾಸ್ತ್ರವು ಬರಿಯಲಿಲ್ಯಾಕೇ || 294 ||
ಇಲ್ಲಿ ಈ ಪುನರ್ಜನ್ಮ ಇರತೆಂ
ಬಲ್ಲಿ ಹ್ಯಾಗಾಯ್ತಾ ಪರಾಭವ
ಇಲ್ಲಿಯೇ ಎಂದೊಡಂ ಬಡಲವರೆಲ್ಲ ಬರಬೇಕೈ
ಇಲ್ಲಿ ಬರುವಾ ನ್ಯಾಯ ವರ್ದೋ
ಡಲ್ಯಾಕೆ ತೀರ್ಪಡಿಪರಾರ್ಯರು
ಸೊಲ್ಲಿದನು ನೀ ಲಾಲಿಸಿ ನೋಡೈ ಸುಖಾತ್ಮಕನೇ || 295 ||
ಪುಟ್ಟುವುದು ಮುಂದಬದ್ದಾದರೆ
ಕೊಟ್ಟ ಸಾಲಕೆ ಭಯವದ್ಯಾತಕೆ
ಕೊಟ್ಟದೆಲ್ಲಾ ನುಂಗಿ ಜೀರ್ಣಿಸಬಹುದು ಇನ್ನೇನೊ
ಶ್ರಿಷ್ಟಿಜನರಿದ ತೋರಿ ಕೊಡುವರು
ಕೊಟ್ಟು ದಾರಿಯ ನಷ್ಟಪಡಿಸೈ
ನೆಟ್ಟನಾ ಪರದಾರಿ ಗಧಿಪತಿ ಶ್ರೇಷ್ಠ ಗುರುರಾಯ || 296 ||
ಸಾಲ ಕೊಟ್ಟವ ಸಾಲ ತೆಗೆದವ
ಕಾಲ ಕಾರಣ ಬಂದು ಸತ್ತಾ
ಸಾಲದೀರ್ಪಡಿ ಪದಕೆ ಸತ್ತು ಹುಟ್ಟುವನು ಎಂದೂ
ಜಾಲ ಲೋಕದ ಜನರು ಪೇಳುವ
ಮೂಲ ನಿಜವೇ ಮೂರ್ತಿ ಶ್ರೀಗುರು
ಶೀಲನೇ ವಂದಿದನು ಎನಗೇ ಪೇಳ್ವುದೈ ತಂದೇ || 297 ||
ಕೊಟ್ಟಾತನೇ ಪ್ರಥಮದಲಿ ತಾ
ನಷ್ಟಪಟ್ಟರೆ ಸಾಲ ಕೊಂಡವ
ಕೊಟ್ಟ ನಾರಿಗೆ ದಾರಿಯಿಲ್ಲೆನೆ ದಾರಿ ತೋರುವರೂ
ಜೇಷ್ಟಪುತ್ರನೆ ಧಾತದ್ರವ್ಯಕೆ
ಇಷ್ಟಪಟ್ಟಾಡೂವ ವಾಕ್ಯವ
ಶ್ರೇಷ್ಠನಾಯಕ್ಕತಿ ವಿರುದ್ಧವು ಪೇಳ್ವೆ ಕೇಳ್ಜೀವಾ || 298 ||
ತಂದೆ ದ್ರವ್ಯಕ್ಕಧಿಪನಾದಡೆ
ತಂದೆ ರಿಣ ತೀರಿಸುವ ಕಾರಣ
ಒಂದು ವದನಕೇ ಮಡಿದು ಜನಿಸುವದುಂಟೆನೈ ನ್ಯಾಯಾ
ಎಂದಿಗಾದರೂ ಇಲ್ಲ ಈತನ
ತಂದೆ ಪುಟ್ಟುವುದಿಲ್ಲ ನಾಥನ
ಮುಂದಿನಂತೀ ಭೂಗತಕ್ಕೇ ಒರಗುವದೋ ಜೀವಾ || 299 ||
ಕೊಂಡಾತ ಕೊಟ್ಟಾತ ಉಭಯರ
ಕಂಡಿತವು ಕೇಳೈ ಬರೇ ಕೈ
ರಂಡೆಯರ ಮೈ ಸಾರ ಕರಗೀ ಹೋದ ಪರಿಯಂತೇ
ಮಂಡಲದ ಸುಖ ಮೆಚ್ಚಿ ಮುಂದಿನ
ಗುರು ಮಂಡಲಕೆ ದೂರವಾದಡೆ
ಗುಂಡ ಯಮನಾ ಕೆಂಡ ಸ್ಥಲದೋಳ್ ಕೆಡಹುವನೋ ಜೀವಾ || 300 ||
ನೀನ್ಕುಡಿದ ಪಾಲ್ ಸಪ್ತ ಶರಧಿಯೋ
ನೀನ್ತುಳಿದ ನವಖಂಡ ಪೃಥ್ವಿಯೋ
ನೀನ್ತನುವ ಶಲ್ಯಗಳು ಮೇರು ಪರ್ವತಗಳೆನಲೂ
ನೀನ್ಕಂಡದ್ಯಾಗೆನ್ನ ಭವಭವ
ನೀನ್ತಿರುಗುತ್ತಿರ್ದೇನು ಪೇಳೈ
ನೀನ್ತಿಳಧ್ಯಾನಾ ತಿಳಿಯದಿರುವದು ಒಂದೆನುವ ಪಾಪಿ || 301 ||
ಕಂಡಿಲ್ಲ ನಾವೀಗ ಇಂದಿನ
ಕಂಡನಗಳೇ ಕೇಳಿ ಬರದಿಹ
ಕಂಡಿತಾ ಮಾತಾಡುತಿರುವರು ಕೇಳಿರೈ ಗುರುವೇ
ಪಂಡಿತಾರೆಲ್ಲಾರಲೋಚನೆ
ಶಾಸ್ತ್ರ ಭಾವನೆ ಸಾಕ್ಷಿ ಶೋಧನೆ
ಕಂಡಿರ್ದಡಾ ನಿಜ ವಿಲಾಸವು ಕಳಿಯುವವರಲ್ಲಾ || 302 ||
ಕೇಳಿ ಹೇಳಿದ ಸಾಕ್ಷಿಯಿಂ
ಜಗವಾಳುವಾ ದೊರೆ ಶಾಂತನಾಗಿ
ಹೇಳಿರೀ ವಿಧ ಸಮ್ಮತೆನ್ನಗೆ ಎನ್ನೊದುಂಟೇನೋ
ಕೇಳಿ ಹೇಳುವಿರಿ ಜನಾವಳಿ
ಕಂಡು ಕಲತವ ಹ್ಯಾಗೆ ನಂಬುವ
ಕೇಳಿ ನಂಬಿದ ಬುತ್ತಿಯಿಂ ಕ್ಷುದ್ಭಾಧ ಪೋಗುವದೇ || 303 ||
ಕಂಡು ಕಲಿಯದೆ ಕೇಳಿ ಹೇಳಿದ
ಭಂಡಾಟಕೇತಕಿಯ ಕುಸುಮವು
ಮಂಡಲದಿ ಪೂಜ್ಯತ್ವವಿಲ್ಲದೆ ಹೋಗಿರುವದಲ್ಲಾ
ಪಿಂಡವಿದು ಪುನರ್ಜನನ ಮರಣವು
ಕಂಡರರುವಿಲಿ ಕಲತರನುಭವ
ಕಂಡ ಹಿರಿಯರ ಕೇಳುವದು ಘನಗಾಶೆ ತಪ್ಪಿಪರೈ || 304 ||

ಜನನ ಮರಣ ಸಂಶಯ ಛೇದನ ವಿಚಾರ
ಯಾತಕೀ ಪರಿ ಇಂದಿನವರತಿ
ನೂತನದಿ ಬರದಿರುವ ಬಗೆಗಳ
ಪ್ರೀತಿಯಲಿ ಲೋಕೋಪಕಾರವ ಕಾರಣೇನ್ ಗುರುವೇ
ಭೂತದಯ ತಮ್ಮಂತೆ ಕಾಣುವ
ರ್ಯಾತಕನುಚಿತ ಬರವರಲ್ಲಾ
ಮಾತದೊಂದದು ಕಾಣುತಿಹುದದ ರಾಂತರ್ಯ ತಿಳಿಸೈ || 305 ||
ಒಂದು ಜನನಕನೇಕ ಬಾಧೆಯು
ಒಂದು ಘಟಿಪವು ಮತ್ತಿದಲ್ಲದೆ
ಒಂದಲ್ಲ ಶತ ಜನನವೆನಲಾ ಬಾಧಗಣಿತಾಯ್ತೇ
ಎಂದು ಭಯದುತ್ಪಾತ ಪುಟ್ಟಿಸಿ
ತಂದು ಗುರುವಿನ ಗೃಹಕೆ ಹೊಂದಿಸಿ
ಮುಂದೆ ಪರಮಾ ಮುಕುತಿ ಮಾರ್ಗವ ಬರದರೈ ಜೀವಾ || 306 ||
ಕಾಡೋ ಮಕ್ಕಳ ನಿದ್ರಾನಂದವ
ಮಾಡುವದಕಾತಾಯಲೋಚಿಸಿ
ನೋಡು ಭೂತನು ಬಂದ ಬಡಿವನು ಭಯಂಗಳ ತೋರಿ
ಗಾಢ ನಿದ್ರದಿ ಕೆಡಹಿದಂದದಿ
ನೋಡು ಗುರುವಿನ ಗೃಹದಿ ಕೆಡಹಲಿ
ಕಾಡಿ ಬರದರು ಮುಕುತಿ ಮಾಗ್ವ ಮಾತಿಹುದೋ ಜೀವಾ || 307 ||
ಪರಮನೋಳ್ ವಿಶ್ವಾಸ ಭಾವನೆ
ಪರಿಪರಿಯ ಪುಟ್ಟಲ್ಕೆ ಲೋಕದಿ
ಗಿರಿ ಸಮಾನದ ಗುಡಿಗೋಪುರವು ನಿರ್ಮಿಸಿದ ತೆರದೀ
ಗುರು ಮನಿಯ ಸೇರಲ್ಕೆ ನರಜನ
ಹಿರಿಯರಾಪರಿ ಜನನ ತೋರಿಕೆ
ಬರಹ ನಿರ್ಮತವಲ್ಲದೇ ಬ್ಯಾರಿಲ್ಲೋ ಜೀವಾತ್ಮಾ || 308 ||
ಶಬರ ಕನ್ನಯ್ಯಾ ಶಿವಾರ್ಚನೆ
ಶುಭ ಮನದಿ ಪೂಜಿಸುವ ಸಮಯದಿ
ಜೇಳ್ತನುವ ತುಂಡಿಸಿದ ತೆರದಲಿ
ನಾಳ್ತನುತ್ರಯ ಕೆಡಿಪದಯ ತಾಕೀಳ್ತಿವನು
ನಭ ಮುರಿದು ಬಿದ್ದಂತೆ ಶಂಕರ ಮಾಡಿದದನ್ಯಾಕೆ
ಶಬರ ತಂನ್ಬಿಡದಿರಲಿದೆಂದಾ
ನಭಯಂಕರ ತೋರಿದಾ ಪರಿ
ಗಭಯ ಪಾಲಿಪ ಗುರುಕರವ ಪಿಡಿಯಲ್ಕೆ ಬರದಿಹರೈ || 309 ||
ಇರಬಹುದು ಗುರುವರಾರ್ಯಧಿಕ
ಇರಲಿದಿಲ್ಲಿನ್ನೊಂದು ಪ್ರಶ್ನವ
ಚರಣ ಸನ್ನಿಧಿಯಲ್ಲಿ ಬಿನ್ನಪ ಮಾಡಿಕೊಂಬುವೆನೈ
ನರನು ಪಶು ಜನ್ಮದಲಿ ಪ್ರತ್ಯ
ಕ್ಷಿರುವದನು ಬರದಿರುವರಲ್ಲಾ
ಬರಹ ಭಾವಿಸಬೇಕೇ ಭಿನ್ನಿಸಬೇಕೇಳೈ ದೇವಾ || 310 ||
ಭಿನ್ನಿಸುವದದನ್ಯಾಕೆ ಭಾವಿಪು
ದಿನ್ನು ಪೇಳುವೆ ಕೇಳು ಜೀವನೆ
ತನ್ನ ತಂದಿಯ ಸುರತ ಜಾಗಕೆ ತಾ ಹೋಗುತಿಹರೋ
ತನ್ನ ತಾಯ್ಗಳ ತನ್ನ ಸುತೆಯಳ
ತನ್ನಗ್ರಜ ಮಹಾಸತಿಯಳ
ಭಾವನದಂ ಕೆಡಿಸಿ ಚೆರಿಪರು ಪಶುಜನವಲ್ಲೇ || 311 ||
ಮನನವಾಯಿತು ಗುರು ಮಹೇಶ್ವರ
ಪುನರಪಿಯು ಬಿನ್ನಪವದೊಂದದೆ
ಎನಗಿಹುದು ಸಂದೇಹ ನಿಸ್ಸಂದೇಹ ಮಾಡಿಕೊಡಿ
ಜನನ ಮರಣವು ಮರಣ ಜನನವು
ವಿನಯರಾಡಿರುತಿರುವರಲ್ಲಾ
ಮನುಜನಾದವಗಿದರೊಳನುಭವದರುವ ತೋರಿ ಕೊಡೀ || 312 ||
ಪರಮನಾದಿ ಪ್ರಕಾಶ ಸಪ್ತವು
ಗುರುವು ಉಪದೇಶಿಸಲು ತಕ್ಷಣ
ಮರಣವಲ್ಲದೆ ಮತ್ತದಕೆ ಬ್ಯಾರರಮರಿಕೆಯುಂಟೇ
ಪರಮ ರೂಪದ ಸಪ್ತಸ್ಥಲಗಳು
ಸ್ಮರಿಶವಾಗಲು ನರನ ಜನನವೆ
ನಿರುತರುವಿನೊಳು ಜನನ ಮರಣಿದೆ ನಿಜ ನೋಡೈ ಜೀವಾ || 313 ||
ನೋಡಿದೆನು ನುಡಿದಂತೆ ತೋರಿದೆ
ರೂಢಿಯೋಳ್ ನುಡಿದಂತೆ ತೋರರು
ಪಾಡುವರು ಪರ ಬ್ರಹ್ಮಾಖಂಡವ ನುಡಿ ಡಂಬವಂದೇ
ಮಾಡು ಸಾಧನೆ ಲಕ್ಷ ಕೊಟ್ಟಿಡಿ
ದಾಡು ಘಟವನು ಮ್ಯಾಲಕೆಬ್ಬಿಸಿ
ನೋಡೆಂದು ಎಲ್ಲರನು ನರರನು ಕೆಡಿಸಿ ಬಿಡುತಿಹರೈ || 314 ||
ಇಹಕೆ ಬಾರದ ಮೊದಲು ಇದ್ದದ
ವಿವರದೋಳರುವಿನೋಳ್ ತೋರಿದೆ
ಇಹದಿಂದ ಬಿಟ್ಟೋಗಿ ಇರುವದ ಸ್ಥಿರಪಡಿಸಿ ಕೊಟ್ಟೇ
ಸಹಜದಿಂ ನುಡಿದಂತೆ ತೋರಿದೆ
ಮಹಮೂರ್ತಿ ಮತ್ತ್ಯಾರ ಕಾಣೆನು
ರಹಸ್ಯ ಭಾವದಿ ನೀನಹುದು ಮಹಗುರು ಸದಾತ್ಮಕನೇ || 315 ||
ನಿನ್ನ ಸೋಂಕಿದ ದೇಹಾತ್ಮಗಳು
ಚಿನ್ನ ಜೀವಾತ್ಮಾಗಿ ಮೆರವವು
ನಿನ್ನ ಸೋಂಕಿದ ಜೀವಾತ್ಮಗಳು ಮಣ್ಣಾಗೋದುಂಟೇ
ನಿನ್ನ ಸೋಂಕದ ದೇಹಾತ್ಮಗಳು
ಚಿನ್ನ ಜೀವಾತ್ಮಗಳ ಕೆಡಿಪವು
ನಿನ್ನನೇ ಕಂಡಾಡಿ ಕಾಲವ ಕಳವದದು ಲೇಸೈ || 316 ||
ನಿನ್ನ ದರ್ಶನ ಪುಣ್ಯ ಕಾರಣ
ನಿನ್ನ ದರ್ಶನ ಪಾಪ ನಾಶನ
ನಿನ್ನ ವಾಗ್ದನುಭವದ ಕೋಟೀ ತಪಜಪಕ್ಕೆ ಘನಾ
ನಿನ್ನ ಬೆರಿಯಲು ನನ್ನ ನಾಶನ
ನಿನ್ನ ಬೆರದನುಭವಪದ ಫಲಸರಿ
ಕನ್ಯ ಗೋದಾನಗಳು ಬಾರವು ಕಲಿ ಜನಾವಳಿಗೆ || 317 ||
ದರ್ಶನಕೆ ಸ್ಮರಿಶನಕೆ ಸಮರಸ
ಸರಸವಾಗುವದಕ್ಕೆ ಇಂದಿನ
ದೊರೆಗಳರಮನೆ ಬಿಟ್ಟು ಗುರುಮನೆ ಸೇರಬಂದಿಹರೇ
ನರರಾಲಯಕೆ ಗುರುವೆ ಗಮಿಸಿರೆ
ನರರ ಸುಕೃತಕೆ ಸರಿಯ ಕಾಣೆನು
ಪರಮಾನ್ನ ಕಂಡುಣ್ಣಲೊಲ್ಲದಿರೆಂತ ದುಷ್ಕೃತವೋ || 318 ||
ರೋಗಿ ಗೃಹದೊಳು ಮಹಾಸಂಪದ
ಭೋಗ ತುಂಬಿರೆ ಕಂಡು ತಿನ್ನುವ
ನಾಗದೇ ಕೊರಕೊರಗಿ ಕಡಿಗೇ ಮರಣವಾದಂತೇ
ಹೋಗಿ ಉಣ್ಣಿಯ ಕೆಚ್ಚಲದ ಮೊಲೆ
ಮೂಗಿನಲ್ಲಿಹ ಕ್ಷೀರ ಕಾಣದೆ
ನೀಗಿದಂದದಿ ನಿನ್ನ ಬೆರಿಯದೆ ನರರು ಕೆಡುತಿಹರೈ || 319 ||
ಕೆಡುವ ಬಗೆಗಳವೇನು ಕಾರಣ
ಕೊಡುವ ಕೊಂಬುವ ಧನವ ಕೇಳಿತೆ
ನಡವದಾಕಾಶೀ ಪ್ರದೇಶವದಾಜ್ಞೆ ಮಾಡಿತ್ತೇ
ಬಿಡುವದೀ ಮಡದಿಯಳ ಸುತೆಯರ
ಅಡವಿಯೋಳ್ ತರು ಪತ್ರ ತಿನ್ನುತೆ
ಒಡಲ ಬಾಧೆಯ ಕಳದು ಬಾರೆಂದೇಳಿದನೆ ಗುರುವಾ || 320 ||
ಘ್ರಾಣ ರಂಧ್ರವ ಮುಚ್ಚಿ ಪವನನ
ಬಾಣದಂದದಿ ಬ್ರಹ್ಮಸ್ಥಾನಕೆ
ಗೋಣು ಮೇಲ್ಮಾಡಾಡಿ ಘಟವನು ಮ್ಯಾಲಕೆಬ್ಬಿಸುತೇ
ಗೇಣು ಮೊಳ ಯೋಜನ ಪ್ರಮಾಣದ
ಕೋಣ ಕರಿ ತುರಗಾ ಪಕ್ಷಿಗಳು
ಹೀನಪಶು ಕಷ್ಟಗಳ ಮಾಡೆಂದೇಳಿದನೇ ಗುರುವಾ || 321 ||
ಅಂಬರಾಭರಣಗಳ ಬಿಡಿಸಿ
ದಿಗಂಬರತ್ವವ ಧರಿಸಿ ಲೋಕದಿ
ಡೊಂಬಿಗನ ತೆರನಂತೆ ತಿರಗುವದುಂಟೇನೋ ಜೀವಾ
ನಂಬಿ ಬಂದರೆ ಜಾತಿಭ್ರಷ್ಟರ
ತಿಂಬೂವವದನೆಲ್ಲ ತಿನ್ನಿಸಿ
ಗಂಭೀರತ್ವವ ಕೆಡಿಪ ಕಾರ್ಯವ ಮಾಳ್ಪನೇ ಗುರುವಾ || 322 ||
ಮಾಳ್ಪದೊಂದದೆ ಕೇಳು ಜೀವನೆ
ಬಾಳ್ಪರಿಯ ಬಹು ಕೆಟ್ಟಿದೆಂಬದು
ನೋಳ್ಪ ಸುಜನರ್ಗಿಲ್ಲದಿರುವದು ನಾನೆನ್ನುತಿಹುದೂ
ಚೇಳ್ಪರಿಯ ಮೊನೆಮುಳ್ಳು ತುದಿಯದು
ಚೇಳ್ತನುವ ತುಂಡಿಸಿದ ತೆರದಲಿ
ನಾಳ್ತನುತ್ರಯ ಕೆಡಿಪದದು ತಾ ಕೀಳ್ತಿಹನು ಗುರುವಾ || 323 ||
ಅಣುವದಗ್ನಿಯು ಮೇರು ಸಮವಾ
ಬಣವಿಗಳ ಭಸ್ಮವನೆ ಮಾಳ್ಪದು
ಅಣುವಿರುವದದು ಇಲ್ಲ ಪರಸುಖ ಬಣವೆ ಸುಡುತಿಹದೂ
ದಣಿವರಾಪದದಿಂದ ಮಾನವ
ಗಣ ಸಮೋಹವು ಎಂದು ತನ್ನಯ
ತ್ರಿಣಿನೇತ್ರದಿಂ ತೃಣವದಗ್ನಿಯ ತೆಗಿವನೈ ಗುರುವಾ || 324 ||
ಹೋಗುವರು ನಾವು ಮೊದಲೆ ಹೋಗಿಪ
ನೀಗುವರು ನಾವು ಮೊದಲೆ ನೀಗಿಪ
ಸಾಗರಂಗಳ ತನಕ ಇರುವನ ದರ್ಶನವ ಮಾಳ್ಪ
ಹೋಗಿ ಇರುವದ ಬ್ಯಾಗೆ ತೋರಿಪ
ನೀಗಿದವನನು ಸ್ಥಿರದಿ ನಿಲ್ಲಿಪ
ಈಗಳಿದನೇ ಮಾಳ್ಪನೈ ನಿಜಬೋಧ ಗುರುವರನೂ || 325 ||
ದೇವದೈತ್ಯ ಸಮಸ್ತ ನವಗ್ರಹ
ಜೀವ ಖಗಮೃಗ ಜಂತುಜಾಲದ
ಗೋವ ಗಾರ್ಧಪ ಕರಿ ತುರಗ ಶ್ರಿಷ್ಟಿಸಿದ ದೈವಕ್ಕೆ
ಭಾವದಲಿ ನೋಡಲ್ಕೆ ಇವರಿಗೆ
ಬಾರದಿರುವದು ವಿದ್ಯದೊಂದದೆ
ದೇವಗುರುವರ ದಾಸಜನರಿಗೆ ಧಾರೆರಿವ ಜೀವಾ || 326 ||
ಇಂತ ಗುರುವಿನ ರಾಜ್ಯ ಕೊಡಬಹು
ದಿಂತ ಗುರುವಿಗೆ ದೇಶ ಕೊಡಬಹು
ದಿಂತ ಗುರುವಿಗೆ ತನು ಮನ ಧನಂಗಳನು ಕೊಡಬಹುದೂ
ಇಂತದಲ್ಲದೆ ಉದರ ಪೋಷಣ
ಭ್ರಾಂತರಿಗೆ ಕೊಡೆ ಕರ್ಮಖಾಂಡವೆ
ಶ್ರೀಮಂತ ದೊರೆ ದಾನ ಕೊಟ್ಟಲ್ಲನಿಸಿ ಕೊಂಡಂತೆ || 327 ||

ದೊರೆ ದಾನ ಕೊಟ್ಟು ಹೀನನಾದ ವಿಚಾರ
ಹ್ಯಾಗೆನಲು ಸಾಧಕನು ಒಬ್ಬವ ಹೋಗಿ
ದೊರೆ ದರ್ಶನದಿ ತನ್ನಯ ಭೋಗ
ವಿದ್ಯೋಂದಾಯುಧಂಗಳ ಮ್ಯಾಲೆ ತೋರಿದನೂ
ಬ್ಯಾಗವಗೆ ಗ್ರಾಮೆರಡು ಕೊಡುತಲಿ
ಈಗ ನಾ ಕೊಟ್ಟದಕೆ ಪಟ್ಣದಿ
ಹ್ಯಾಗೆನ್ನುವರು ಕೇಳ್ವದೆಂದಪ ರಾತ್ರಿ ಹೊರಹೊಂಟಾ || 338 ||
ಬುರುಕಾಲದಿ ಗುರುವ ಸುತೆಯರು
ಇರುವರಾ ಮುವ್ವರನುತಿರುವರು
ಪುರವ ನಾಳುವ ದೊರೆ ಹುಚ್ಚುತನ ನೋಡಿದಕ್ಕಯ್ಯಾ
ನರರು ತಮ್ಮಯ ಜಾತಿ ಧರ್ಮದಿ
ಇರವರತಿ ಚಾತೂರ್ಯ ಭಾವದೊ
ಳರಿಯದೇ ದೊರೆ ಕೊಟ್ಟ ದಾನದು ಮೂರ್ಖತನವಾಯ್ತೇ || 329 ||
ಇಂತು ಪೇಳುತ ತಮ್ಮ ಮನೆ ಒಳ
ಪ್ರಾಂತ ಸೇರಿರೆ ದೊರೆಯು ಕೇಳುತ
ಚಿಂತ ತಾಪದಿ ಬಂತೆಲಾ ಮಹದಾಕ್ಷೇಪಣೆನಗೆ
ಎಂತು ಮಾಡಲಿಗಿವರ ನೆನುತಲಿ
ಕುಂತು ಕಂಟಕವಾಟ ಕೂನವ
ಉದಯಾಂತ ರಿವರಿಡ ತರಿಪೆ ನೆಂದೊರಟನರಮನಿಗೇ || 330 ||
ಅರಮನಿ ಯೋಳಾಸಿಗೆಗಳವನಿಗೆ
ಎರದ ಬೇಲಿಯ ಪರಿಯ ಕಂಡವು
ಕರಕರಗಿ ಚಿಂತಾ ಲತಾಂಗಿಯ ಬೆರದಾಡುತಿರುವಾ
ತರುಣ ನುದಯವವಾದ ತಕ್ಷಣ
ತರುಣಿಯರಯಿಡ ತರಿಸಿ ಪರೀಕ್ಷಿಪೆ
ಸರಿಯ ಹೋಗದಿರವ ಚರ್ಮವ ಸೀಳಿ ಪೆನುತಿಹನೇ || 331 ||
ಎಂದಲೋಚನೆ ಮಾಡುತಿರುವನು
ಬಂದ ಭಾಸ್ಕರ ಬ್ಯಾಗ ತನ್ನಯ
ಸಂಧ್ಯಾದಿ ಕರ್ಮನುಷ್ಟಾನವ ತೀರ್ಪಡಿಸಿಕೊಂಡಾ
ವಂದಿಸಿಂಹಾಸನದೊಳರಸಾ
ಸಂದಿನೊಳು ತ್ರಿವಿದಿಂದು ಮುಖಿಯರು
ಹೊಂದಿರುವರೆಲೊಚರರೆ ಬ್ಯಾಗದಿ ಕರ ತನ್ನಿರೆಂದಾ || 332 ||
ತಕ್ಷಣದಿ ಚರರ‍್ಹೋಗಿ ತಾಯ್ಗಳೆ
ದಕ್ಷನಾದಂತರಸು ನಿಮ್ಮನು
ಈ ಕ್ಷಣವೆ ಕರತನ್ನಿ ಕಳುಪಿದ ಬರಬೇಕು ಎನಲೂ
ಸಾಕ್ಷಿ ರಾತ್ರಿಯೊಳಾಡಿ ಕೊಂಡ
ಪರೀಕ್ಷೆ ತಂಗಿದು ಸ್ವಂತ ಕೇಳ್ದನೊ
ಈ ಕ್ಷಿತೀಜನ ಹೇಳಿತೆಂಬದು ತಿಳಿಯದಾಯ್ತಲ್ಲಾ || 333 ||
ಆದಡೇನಾಯ್ತ ಹಗುರೇಶ್ವರ
ಈದಿನೆಮ್ಮಗೆ ಬಂದ ಕಂಟಕ
ನೀ ದಯಾಂಬುದಿಯಿಂದ ಪರಿಹರ ಮಾಡಬೇಕಲ್ಲಾ
ಆದಿನಾಥರನಾಥರಕ್ಷಿಪ
ವೇದ ನುಡಿಗಳು ವೈದಾಡುವಂ
ತಾಧಾರ ನಮಗಿರಲು ಹೋಗುತ್ತಾಡಿದರೀ ವಚನಾ || 334 ||
ಚರರು ತಂದೀವೆಂದು ಪೇಳಲು
ಬರಹೇಳಿ ಒಳಭಾಗಕೆಂದನು
ಪರಿವಾರ ಹೊರಗಾಗಬೇಕೆಂದು ಅಪ್ಪಣೆಯ ಕೊಟ್ಟಾ
ತರುಳೆಯರ ತನ್ನತ್ತಿರಕೆ ಕರ
ದಿರುಳೆ ನಿನ್ನಿನ ದಿನದಿ ಪೇಳಿದ
ಖರಿಯ ಮಾತದು ಪೇಳೀರಿ ಕೇಳಬೇಕೆಂದಾ || 335 ||
ಬುದ್ಧಿ ಹೇಳಿದಾ ವಾಕ್ಯ
ನಿಜ ಭೂಮಧ್ಯ ತಮ್ಮಯ ವರ್ಣಾಶ್ರಮದ
ವಿದ್ಯಘನ ಒಬ್ಬೊಬ್ಬಗಿರುವದು ತಿಳಿದು ಹೇಳಿದೆ ವೈ
ಸದ್ಯಕೀಗಿನ ಮಾತಿದಲ್ಲವು
ಸುದ್ದಿ ಕೇಳಲನೇಕ ಬರುವರು
ಇದ್ದ ದೇಶವ ಕೊಡಲಿದನುಚಿತ ಹೇಳಿದ್ದು ಖರಿಯಾ || 336 ||
ಬರುವ ರಿಂದಾರಿರುವರೀ ದಿನ
ಬರಹೇಳಿಸಿದೆ ನಿಮ್ಮ ಮುವ್ವರ
ತ್ವರಿತ ತೋರಲಿಬೇಕು ನಿಮ್ಮಯ ವಿದ್ಯ ಬಹಿರಂಗಾ
ಸರಿಯ ಕಂಡರೆ ನಿಮ್ಮ ಬಿಡುವೆನು
ಸರಿ ಕಾಣ್ದಿರೆ ಶಿರವ ತೆಗಿಪೆನು
ತ್ವರಿತ ತೋರಿರಿ ತೂರ್ಯ ಕಾರ್ಯೆಂದಾಜ್ಞೆ ನೇಮಿಸಿದಾ || 337 ||
ಚತುರ ಚರ್ಮದ ಭಾಂಡವದರೊಳು
ದ್ವಿತೀಯ ಭಾಂಡದಿ ತೈಲ ತುಂಬುತೆ
ಮತಿವಂತೆ ದೊರೆ ಮೇಲ್ವಾಡದೋಳ್ ಮ್ಯಾಲಕೇರುತ್ತೇ
ದ್ವಿತೀಯ ಭಾಂಡವು ಬರೇದದರೊಳು
ಜಗಪತಿಯ ನೆನವುತ್ತ ತೈಲವು
ಕ್ಷಿತಿಗೆ ಎಳ್ಳಿನ ಮಾತ್ರ ಬೀಳದೆ ತುಂಬಿ ತೋರಿದಳೂ || 338 ||
ನೋಡಿದನು ಮನದೊಳಗೆ ತಲೆತೂ
ಗ್ಯಾಡಿದನು ಇನ್ನುಳಿದ ಉಭಯರ
ನೋಡಬೇಕಿವರಲ್ಲಿರುವ ವಿದ್ಯಾವಲಂಬನವಾ
ಗಾಡತೋರಲಿ ಬೇಕು ಕಾರಣ
ನೋಡಬೇಕಾಲಶ್ಯ ವ್ಯಾಕೆಂ
ದಾಡಿದಾಗಳೆ ಸೂಜಿ ಕೇಳಲು ಕೊಟ್ಟನಾ ದೊರೆಯೂ || 339 ||
ಕೊಟ್ಟ ಸೂಜಿಯ ಮ್ಯಾಲಕಾಗಳೆ
ತಟ್ಟನೇ ಒಗದಾಡಿ ಬರುವದ
ಕಿಟ್ಟಳೂ ಗುರಿ ಮಾಡಿ ದ್ವಾರಕೆ ಯಕಿಯ ಏರಿಸುತಾ
ಶ್ರಿಷ್ಟಿಗೊಡಿಯನ ಕೈಗೆ ಕೊಡಲಾ
ಮುಟ್ಟಿ ನೋಡಿದ ಮೂಗಿನಲಿ ಬೆರ
ಳಿಟ್ಟು ಮೂರನೆ ತಾಯಿ ನಿನ್ನಯ ವಿದ್ಯ ತೋರೆಂದಾ || 340 ||
ತರಿಸಿದಳು ಗೋಮಹಿಷ ಕಿಟ್ಟವ
ಪರಿಪೂರ್ಣವಾದೊಂದು ಭಂಡಿಯ
ಕರದಿ ತೂಕದಿ ಮುದ್ದೆ ಮಾಡುತೆ ಮಾಡಿದಾಮ್ಯಾಲೇ
ತ್ವರಿತ ತ್ರಾಸನು ಸರಿಸಿ ಉಂಡೆಯ
ಸರಿಯಾದ ತೂಕವನೆ ತೋರಿದ
ಳರಸ ನೋಡಿದ ಚೋದ್ಯ ಬಡುತಾಗಾನಂದ ವಾದಾ || 341 ||
ಆನಂದ ಬಡುತಿರುವ ರಾಜನ
ಮಾನವತಿಯರ ಕಂಡು ನುಡಿದರು
ದಾನ ಕೊಡು ನಮಗೆಂದು ಕೇಳ್ದರು ಕೊಡಲು ನಿನಗುಳಿದು
ದೇನದೇನೇಳಯ್ಯ ರಾಜನೆ
ನೀನರಿಯದೇ ಕೊಟ್ಟ ಮಾರ್ಗಕೆ
ಕೂನರಿತು ನಾವು ನುಡಿದೆವೆನಲಾಗಾನಂದ ವಾದಾ || 342 ||
ಆನಂದ ಬಡುತಾಗ ಕರುಣಾ
ಪ್ರಾಣ ನಾಗುತ ಉಡಗರಿಗಳನು
ನಾನ ವಿಧ ದಿವ್ಯಾಂಬರಂಗಳ ಕೊಟ್ಟು ತಾನೆಂದಾ
ಮಾನವತಿಯರೆ ಮಹಾಶೀಲರೆ
ನಾನು ದಾನವ ಕೊಡುವ ಮುಂದೆ
ವಿಧಾನ ಮಾರ್ಗವ ಹೇಳಿರದು ನಿಮ್ಮಂತರ್ಯ ಹ್ಯಾಗೇ || 343 ||
ಹರಿಹರೇಶ್ವರ ಸರಸಿಜೋದ್ಭವ
ಸುರಗರುಡ ಗಂಧರ್ವ ಕಿನ್ನರ
ರರಿಯದಂತಿಹ ವಿದ್ಯದೊಂದದೆ ಗುರುವೆ ತಾ ಬಲ್ಲಾ
ಅರಿಯೆ ನೀನದನರಿತ ನಂತರ
ಪುರವ ಗ್ರಾಮವ ಕೊಡು ಹಿರಿಯರಿಗೆ
ಸಿರಿಯು ಇಹಪರದಲ್ಲಿ ತುಂಬಿರುತಿಹುದೈಯ್ಯ ದೊರಿಯೇ || 344 ||
ಇಂತವರಿಗೆಲ್ಲರಿಗೆ ಬಾರದ
ದೆಂತ ವಿದ್ಯದು ಎನಗೆ ಬಾರದು
ಎಂತದನು ಪರಿಕ್ಷಿಪೆನು ಎನಗದರನುಭವಿಲ್ಲಲ್ಲಾ
ಎಂತಾದರದು ಎನಗೆ ಬರುವದು
ಎಂತು ನಿಮಗೆ ತಿಳಿಯಬಂತದು
ಶಾಂತ ಹೃದಯ ಗ್ರಂಧಿತಾಯ್ಗಳೆ ಪೇಳಿರನಗೆಂದಾ || 345 ||
ದೊರಿಯೆ ಕೇಳ್ ಮೊದಲಲ್ಲೆ ತಿಳಿಸಿದೆ
ಗುರುವೆ ಬಲ್ಲೆಲ್ಲರಿಗೆ ಸಾಧ್ಯದು
ಮರಿಯದೇ ಈಗುಡುಕಬೇಕಾ ತನ ಪದಾಂಭುಜವಾ
ಮರತ ದೊರೆ ಸ್ವಪ್ನವನು ಗುರುವರ
ಅರುವೆ ನೋಳಹುದೆನಿಸಿ ತನ್ನಯ
ಚರಣ ಸೇವಕ ಭಕ್ತರಕ್ಷಕ ನಾದನೈ ತಂದೇ || 346 ||

ಗುರು ಸುತೆಯರು ರಾಜಗೆ ಸ್ವಪ್ನ ಪೇಳಿದ ವಿಚಾರ
ಈಗದರ ವೃತ್ತಾಂತವೆಲ್ಲವ
ಬ್ಯಾಗೆನಗೆ ಪೇಳುವುದು ಸ್ವಪ್ನವ
ಹ್ಯಾಗೆ ದೊರೆ ಮರತದನು ಗುರುವರ ಹ್ಯಾಗೆ ತೋರಿದನೋ
ಆಗಳರಸನು ಬಿಟ್ಟ ಕಾರಣ
ವಾಗಲರ ಸೇನಾಜೆ ಮಾಡಿ
ದ್ದಾಗ ಪರಿಹರ ಪ್ರಾಪ್ತವೆಲ್ಲವ ಬಹಿರಂಗ ಬರಲೀ || 347 ||
ರಾಜಧಾನಿಯು ರಾತ್ರಿ ವ್ಯಾಳ್ಯದಿ
ಭೋಜನವು ಬ್ಯಾಗಾದ ನಂತರ
ಜಾಜಿಮಲ್ಲಿಗೆ ಲೇಪವಾದಂತಾಸಿಗೆಯ ಮ್ಯಾಲೇ
ಭೋಜನದ ತಾಮಸದಿ ಮಲಗಿರೆ
ಸೋಜಿಗದ ಶೃಂಗಾರ ಸ್ವಪ್ನವ
ರಾಜ ಕಂಡದು ಮರತ ಜ್ಞಾಪಕ ಬಾರದೈ ದೊರಿಯೇ || 348 ||
ಬಾರದಕೆ ಪಂಡಿತರ ಕರಸಿದ
ಪಾರವಾರಾ ರಾಜಸ್ಥಾನವು
ಪೂರವಾಗಿ ತುಂಬಿ ಕುಂತಿತು ಕುಂತ ನಂತರವೇ
ಮೋರೆ ನೋಡುತ್ತರಸ ನುಡಿದನು
ಮೇರು ಸಮವಾದಂತ ಪಂಡಿತ
ಸಾರ ಬಲ್ಲವರೀಗಳೆನ್ನಯ ಪ್ರಶ್ನ ಕೇಳುವದೂ || 349 ||
ಕನಸು ಕಂಡೆನು ರಾತ್ರಿಯಲಿ ನಾ
ಕನಸು ಮರತೆನದೇನು ಕಂಡೆನು
ಎನಗೆ ಸಂಶಯ ವೇಧಿಸುವದದು ಹೇಳುವದು ಬ್ಯಾಗಾ
ಮನನವದು ನೀವು ಮಾಡಿ ಕೊಡ
ದೀರೆನ ದೇಶದೋಳಿದ್ದು ಫಲವೇ
ನೆನುತ ಕುಂತಾ ರಾಜನ್ವಾಕ್ಯಕೆ ಸಭಾ ಬೆರಗಾಯ್ತೆ || 350 ||
ಬೆರಗಾಗು ತೊಬ್ಬಬ್ಬರಾಜನ
ಬಿರಬಿರನೆ ಕಂಣ್ಬಿಟ್ಟು ನೋಡು
ತ್ತರಸಗೇನುತ್ತರವ ಕೊಡಲಿಕೆ ಮಾರ್ಗವೇ ಇಲ್ಲಾ
ಹೊರಗೆ ಹೊರಡುವದಕ್ಕುಪಾಯವು
ವರತ ಬಿಟ್ಟಿನ್ನೊಂದದಿಲ್ಲೆಂ
ದರಿತು ತಿಂಗಳು ವಾಯ್ದೆ ಕೊಡಬೇಕೆಂದು ಕೇಳಿದರೂ || 351 ||
ತಿಂಗಳೋಯಿದೆ ಕೊಟ್ಟೆನೆನ್ನಯ
ಕಂಗಳಿಗೆ ಪ್ರತ್ಯಕ್ಷ ಕಾಣುವ
ಶೃಂಗಾರವದು ತೋರಬೇಕದು ತೋರದಿರ್ದಲ್ಲೀ
ಭಂಗ ನಿಮ್ಮಯ ಶಿರಃಛೇದನ
ಸಂಗವಿದು ನಿಜವೆಂದು ತಿಳಿಬೇ
ಕಂಗವಸ್ತ್ರದಿ ಗಂಟು ವಡದಂತಾಜ್ಞೆ ನೇಮಿಸಿದಾ || 352 ||
ಸ್ವಪ್ನ ಪೇಳಲು ಶುಭಾಶುಭಗಳು
ರತ್ನ ಲಾಭವೋ ರಾಜ್ಯಲಯವಂ
ಬೆತ್ನವಾಲೋಚನೆಯ ಮಾಡಿವಗ್ಹೇಳಬಹುದಲ್ಲಾ
ಸ್ವಪ್ನವೇ ಮೊದಲಲ್ಲೆ ಮರದಿಹ
ಸ್ವಪ್ನವೇನದು ಕೇಳ್ಯನಿವನಿಗೆ
ಸ್ವಪ್ನದಂತೇ ಇಲ್ಲದ್ಹೋಗುವ ಸಮಯ ನಮಗೆನುತೆ || 353 ||
ತಮ್ಮ ತಮ್ಮಯ ಚಿಂತ ತಾಪದಿ
ತಮ್ಮ ತಮ್ಮಯ ಬಂಧು ವರ್ಗಾ
ತಮ್ಮಗಾಪ್ತರೊಳಾಲೋಚನೆಯ ಕಾಲವಪ್ಪರೊಳೂ
ಸುಮ್ಮನೇ ಚಂದ್ರಾರ್ಕರಿರುವರೆ
ದಿಮ್ಮುದಿರಗಲು ದಿನಗಳಾಗಲು
ತಮ್ಮ ಪ್ರಳಯಕೆ ದೈವ ಧ್ಯಾನದಿ ಬಿದ್ದಿಹರೋ ದೊರಿಯೇ || 354 ||
ಒಂದೆ ದೈವದ ಧ್ಯಾನದಲಿ ತಾವು
ವಂದಿ ದುಃಖದಿ ಧಾತ್ರಿ ಗೊರಗಿರೆ
ಬಂದ ಗುರುವರ ದೇವರಾಲಯದಲ್ಲಿ ಕುಂತಿರ್ದಾ
ಮುಂದೆ ದೇವಾಲಯ ಸಮೀದೊ
ಳೊಂದು ಗೃಹದೊಳು ದೊಡ್ಡ ಪಂಡಿತ
ಬಂದವಳಗಿಂದೊರಗೆ ಕಂಡನು ಕರದ ಗುರುರಾಯಾ || 355 ||
ಕರದು ಕೇಳಿದ ದ್ಯಾತಕೈ ನಿಮ್ಮರ
ಮನಿಯೊಳನ್ನಾಮೃತ ಭೋಜನ
ಪರಿಯ ಕಾಣದೆ ಇರುವದೇ ಮುಖಕಿನ್ನ ನ್ಯಾತಕ್ಕೇ
ದುರುಳರೇ ನಿಮ್ಮನಿಯೊಳಿಲ್ಲವು
ತರುಣರೊಬ್ಬರು ಕಾಣಲಿಲ್ಲವು
ಇರುಳಾಗಲಿಕೆ ಸಮಯ ಒದಗಿತು ಏನದ್ಹೇಳೆಂದಾ || 356 ||
ಅನ್ನ ಶಾಖಾದಿಗಳು ಮಾಡಲು
ಮುನ್ನವೇ ನಾ ಕಳುಪೆ ನಿಮ್ಮಗೆ
ಅನ್ನದನುಭವ ನಾಳಿನುದಯಕೆ ತೀರಿತೈ ಗುರುವೇ
ಇನ್ನೇನು ನಮ್ಮನ್ನು ವಿವರಿಪ
ಪುಣ್ಯರೇ ಭೂ ಮಧ್ಯದಿಲ್ಲವು
ಧನ್ಯರೇ ಲಯ ನಾಳೆಂದು ಪಾದಕ್ಕೆ ಬಿದ್ದಿಹನೇ || 357 ||
ಕುಮುದ ವೈರಿಯು ನಾಳೆ ನಮ್ಮಯ
ಸಮುದಾಯ ಸಂಹಾರ ಕುದಯಿಪ
ತಮ ನಾಶನಕ್ಕಾಗಿ ಬರುವವನಲ್ಲವೈ ತಂದೇ
ನಿಮಗರುಪುವೆನು ಕರುಣ ಸಾಗರ
ನಮಗ್ಯಾರು ದಿಕ್ಕಿಲ್ಲದಾಯಿತು
ಮಮ ಪಾವನನ್ನವಂ ನಿಮ್ಮಗೆ ಕಳುಹಲಿಲ್ಲೆಂದಾ || 358 ||
ಎಮ್ಮಗನ್ನವ ಬೇಕಾಗಿ
ನಿಮ್ಮನ್ನು ಕೇಳಿದ್ದಲ್ಲ ಮಾತದು
ಸುಮ್ಮನೇ ನೀವನ್ನವಿಲ್ಲದೆ ಇರುವದೇನು ಬಗೆ
ನಿಮ್ಮಗ್ಯಾತಕೆ ಮರಣ ನಾಳಿಗೆ
ನಮ್ಮಗದನೇ ತಿಳಿಯ ಪೇಳಿರಿ
ರಮ್ಯ ತಿಳಿದಾಮ್ಯಾಲೆ ಯೋಚನೆ ಮಾಡಬಹುದೆಂದಾ || 359 ||
ಪೇಳಿದನು ವೃತ್ತಾಂತವೆಲ್ಲವ
ಕೇಳುತಲೆ ದಯಪುಟ್ಟಿ ನಿಮ್ಮಗೆ
ಬಹಳ ಕಂಟಕ ಬಂದು ನಿಂತದೆ ಪರಿಹರಕ್ಕಾಗೀ
ಹೇಳುವೆನು ಬರದೊಂದು ಕೊಡುವೆನು
ನಾಳೆ ದೊರೆ ಕರಸುತ್ತ ಬರದದ
ಕೀಳು ನೋಡಂದವನ ಕೈಯೋಳ್ ಕೊಟ್ಟು ನಿಲ್ಲೆಂದಾ || 360 ||
ಬರಿಯಲಿಕೆ ಸನ್ನಾಹ ತರಿಸಿದ
ನರಿಯಲಿಕೆ ಜ್ಞಾನಾಂಜನದರಿಂ
ತರಿಯಲಿಕೆ ದೊರೆ ಮರವಿಯೆಂದೆಂಬತಿ ವಿನೋದಕರಾ
ಸುರಿಯಲಿಕೆ ಶೃಂಗಾರ ಚಿತ್ರವು
ಬೆರಿಯಲಿಕೆ ದೇವಾಲಯಯೊಂದದು
ಬರದು ಮುದ್ರೆಯ ಮಾಡಿಕೊಟ್ಟರು ಪಂಡಿತನ ಕೈಗೇ || 361 ||
ಉದಯಕೆಲ್ಲರ ರಾಜ ಕರಿಸಿದ
ಹೆದರಿಕೊಂಡರು ಎಲ್ಲರೀದಿನ
ಒದಗಿ ಬಂದಿತು ಕಾಲ ಮರಣವು ಕಾಯ್ವರ‍್ಯಾರಿನ್ನು
ಒದಗಲೇಬೇಕಾಯ್ತು ಕರಸಿಹ
ಹೆದರಿಕೊಂಡರೆ ಬಿಡುವನಲ್ಲೆಂ
ದೊದನ ಬಾಗಿಸಿಕೊಂಡು ಹೊರಟರು ರಾಜನರಮನಿಗೇ || 362 ||
ನಿರಾಧಾರಿಗಳಾಗಿ ಹೊರಟರು
ನಿರಾಪೇಕ್ಷಿಸಿ ಗೃಹವ ಸಂಪದ
ನಿರಾಮಯನೇ ನಮ್ಮಗಧಿಪತಿ ಬಿಟ್ಟರಿಲ್ಲ ಗತೀ
ನಿರಾಧಾರಕರಾದನಾಥರ
ಶಿರಾಭಾರಗಳಾಪದಂಗಳ
ಪರಾಭವ ಮಾಡೂವನೆನ್ನುತ ನಡದರರ ಮನಿಗೇ || 363 ||
ಸಾಲಗ್ರಾಮಗಳಿಲ್ಲವಾದವು
ಸಾಲಿಡದು ಎಮ್ಮಿಡದು ಕೊಟ್ಟವು
ಸಾಲಗ್ರಾಮದ ಮಾತಿನರ್ಥವು ಸಾಲ ಮಾಡಿಪವೂ
ಶೂಲಕೀ ದಿನ ಸೇರ್ವ ಕಾಲದಿ
ಮೂಲೆ ಮನಿಯಲಿ ಸೇರಿಕೊಂಡವು
ಶೀಲ ಮೂರುತಿ ದೈವವಧಿಪತಿ ಬಿಟ್ಟರಿಲ್ಲಗತೀ || 364 ||
ಹನುಮ ಶರಭನು ನರಸ ನಾಗನು
ದಿನವು ನೈವೇದ್ಯಾಭಿಷೇಕದೋಳ್
ಳನುಕೂಲರೇ ನಮ್ಮಾಪದಕೆ ಪ್ರತಿಕೂಲರಾಯ್ತೇ
ಮನವು ಮಾಸದಿ ಮೂರ್ತಿಧ್ಯಾನದಿ
ದಣಿದೆವೈ ಒಬ್ಬಾದರಿಲ್ಲವು
ಘನ ಮಹೇಶ ನೀನಿರುವ ಮೂರುತಿ ಬಿಟ್ಟರಿಲ್ಲ ಗತೀ || 365 ||
ನಮ್ಮ ಕೈಯಿಂದಾದ ಮೂರ್ತಿಗ
ಳೆಮ್ಮನೇನವು ಕಾಯಬಲ್ಲವು
ನಮ್ಮಿಂದ ಪರಿಶುದ್ಧವಾಗುವ ವನೃತ ನಾಟಕವೂ
ನಮ್ಮ ಕೈ ಸೆರೆಯಲ್ಲಿ ಬಿದ್ದಿಹ
ಸುಮ್ಮನಿರುವವ ಬೇಡಲನುಚಿತ
ವಹಂಬ್ರಹ್ಮ ಇರುವ ಮೂರುತಿ ಬಿಟ್ಟರಿಲ್ಲ ಗತೀ || 366 ||
ನುಡಿಸತ್ಯದಿಂ ನಡದ ರಾಜನ
ಕಡೆಯ ಭಾಗದಿ ಕರದಿ ಪಿಡದಿಹ
ಬಡವರಿಗೆ ಭಾಗ್ಯವನು ಕಂಡಂತಾಯ್ತು ಕೇಳಿದರೂ
ನಡವ ಸಮುದಾಯದೊಳಗೊಬ್ಬರು
ಹಿಡದಿಲ್ಲ ನೀವು ಪಿಡಿದುದೇನೆಂ
ದಡಿಗಡಿಗೆ ಪಂಡಿತನ ಕೇಳಲು ಪೇಳ ಸಂಗತಿಯಾ || 367 ||
ರಾಜ ಕೇಳಲು ಕೊಡಲಿಬೇಕಿದ
ರಾಜ ಸಮ್ಮತ ಬಟ್ಟರೆಮ್ಮಗೆ
ಈ ಜಗದಿ ಸಂಚಾರ ಕೆಲದಿನ ಮಾಡಲಿಕೆ ಮಾರ್ಗಾ
ಮೂಜಗಂಗಳಿಗೊಡಿಯ ದೈವಾ
ದಾಧೀನ ನಮ್ಮನುಭವೀ ದಿನ
ಮಾಜದೇ ಗುರುವರನ ಭಜನೆಯ ಮಾಡಿರೈ ಎಂದಾ || 368 ||
ಹೋಗಿ ನಿಂತಿತು ಪಂಡಿತರ ಸಭೆ
ಬ್ಯಾಗ ಕೇಳಿದ ನಾನು ಕಂಡ
ದ್ದಾಗ ಮರತದ ಪ್ರಶ್ನಗುತ್ತರ ತಂದಿರಾ ತನ್ನಿ
ಈ ಗಮನ ವೇಧಿಸುವದಾ ದಿನ
ಹೋಗದೆಂದರು ಮರುವು ಬಾರದು
ನಾಗರೀಕರೆ ಪಂಡಿತಾರ್ಯರೆ ತೋರಿರೆನಗೆಂದಾ || 369 ||
ಭಿನ್ನಪವ ಚಿತ್ತೈಸುಮಮಪಾ
ವನ್ನ ರಾಜಶಿಖಾ ಶಿರೋಮಣಿ
ಉನ್ನತದ ಪತ್ರಿಕೆಯ ಮುದ್ರೆಯ ತೆಕ್ಕೊಳ್ಳಿ ತಾವೂ
ಭಿನ್ನಿಸಿದನೇ ನೋಡಿ ತಮ್ಮಗೆ
ಚನ್ನಾಗಿ ಕಂಡಲ್ಲಿ ನಮ್ಮನು
ಧನ್ಯರಂಮಾಡೆಮ್ಮ ಸಲಹೈ ಎಂದ ಪಂಡಿತನು || 370 ||
ಸರ್ರನೇ ಸೀಳಿದನು ಮುದ್ರೆಯ
ಬಿರ್ರನೇ ಕಣ್ಬಿಟ್ಟು ನೋಡಿದ
ಇರ್ರನೇ ತನ್ನೊಳಗೆ ಹಿಗ್ಗುತ ಎಚ್ಚತ್ತನಾಗಾ
ಕರ್ರನಾಗಿತ್ತಾ ಮುಖಾಂಬುಜ
ಕಳಕಳನೆ ಉಕ್ಕೇರಿತಾಗಳೆ
ಕರ್ರನಾಗುವ ಕಾರಣಾ ಕನಸೀನ ಚಿಂತರಸೇ || 371 ||
ಇದನೆ ನಾ ನೋಡಿದ್ದು ಮರ
ತದ್ದಿದನೆ ನಾ ನಿಮ್ಮನ್ನು ಕೇಳಿದ್ವಿ
ದನೆ ಈದಿನ ತೋರಿ ಕೊಟ್ಟಿರಿ ಸುಖಿಗಳೈ ನೀವೂ
ಇದನು ನೀವು ತಿಳಕೊಂಡದ್ಹ್ಯಾಗದು
ಹೆದರದ್ಹೇಳಿರಿ ಭಯ ನಿವಾರಣೆ
ಸದಮಲಾತ್ಮರೆ ಸತಿಸುತರುಗಳ ಸುಖಿಸಿ ರೈ ಎಂದಾ || 372 ||
ನವ ನೂತನದ ಚಿತ್ರ ತರಗತಿ
ಭವ ರಹಿತ ದೈವಖಂಡದರೋಳ್
ವಿವರಿಸುವ ಹಿರಿಯೆರಾದಾಧ್ಯರಿಗಹುದಾದರೀತೇ
ಭುವನದೋಳ್ ದೇವಾಲಯದರೋಳ್
ನವ ನಾಯಕಾ ದೇವ ದಾನವ
ತವಕ ನಿರ್ಮಿತ ಚಿತ್ರಪಟ ಬರದಿದ್ದ ಗುರುರಾಯ || 373 ||
ನಾವು ತಿಳಿಯಲಿಕಾಗಲಿಲ್ಲ
ವು ನಾವು ಚಿಂತಾ ತಾಪದೊಳಗಿರೆ
ದೇವ ಗುರುವರ ಬಂದು ತಿಳುಪಿದ ನಿಮ್ಮಂತರಂಗಾ
ನೀವು ಜೀವಾನಂದವಾದಿರಿ
ನೀವು ಮರತದ ನಿಮ್ಮಗರುಪಿದ
ಕೇವಲಾಪ್ತಾ ಬಂಧುವವರನು ಕೇಳಿರೈ ದೊರಿಯೇ || 374 ||
ಕೇಳಬೇಕಹುದೆಂದು ರಾಜನು
ಬಹಳ ಚೋದ್ಯದು ಬಾರದ್ಯಾರಿಗೆ
ಹೇಳಿರೆಲ್ಲರು ಹೋಗಲೇಬೇಕೆಂದು ಹೊರಹೊಂಟಾ
ತಾಳಿದನು ಮನದೊಳಗೆ ಬಹು ವಿಧ
ಕೇಳಲ್ಕೆ ಎನ್ನೇನು ಕೇಳ್ವನೋ
ಹೇಳ್ವ ಕೇಳ್ವದು ತಿಳಿಯ ಬರುತದೆ ಬೆರತ ಬಳಿಕಲ್ಲೇ || 375 ||
ಎಂದೆನುತ ಮನದೊಳಗೆ ನಡದನು
ಮುಂದೆ ಕಂಡಿತು ದೇವರಾಲಯ
ಹಿಂದೆ ಬರುತಿಹ ಪಂಡಿತನು ತಾ ಮುಂದಾಗಿ ನಡದಾ
ಸಿಂಧು ದಯ ಸಮವಾದ ಮೂರುತಿ
ನಿಂದಿಹನು ನೋಡೆಂದು ತೋರಲು
ದ್ವಂದಕರಗಳ ಮುಗಿದು ಗುರುವಿಗೆ ನಿಂತನೈ ದೊರಿಯೇ || 376 |
ದೊರೆಯು ಕರಗಳ ಮುಗಿಯಲಾಕ್ಷಣ
ಪರಿವಾರ ಸಾಷ್ಟಾಂಗ ಮಾಡಿತು
ಪರಿಯ ಕಂಡನು ಗುರುವವರ ಶಿರಗಳನು ನ್ಯಾವರಿಸಿ
ದೊರೆಯೆ ನೀ ದೇಶಾಧಿನಾಥನು
ತಿರಿವನಾಥರ ನಮ್ಮ ಬಳಿಯಲಿ
ಬರುವ ಕಾರಣವೇನು ನಿಮ್ಮಯ ಪರಿವಾರವೆಂದಾ || 377 ||
ಮರವೆ ಎಂದೆಂಬಂಧಕಾರವ
ತರುಣನುದಯದ ಕಿರಣ ರಶಿಮೆಯ
ಪರಿಹರಿಸಿದಾ ಪರಿಯಸರ ನಮ್ಮಯ ಮಹಾಮರವೇ
ತರಿದು ಬಿಟ್ಟಿರಿ ಮನದ ವೇದನೆ
ಮರವಿ ಎನಗೇನುಳಿಯಲಿಲ್ಲವು
ದೊರೆಯು ಈಪರಿ ನುಡಿಯೆ ನುಡಿದನು ನಗುತ ಗುರುರಾಯ || 378 ||
ನಿನ್ನ ಮರವಿಯು ಮೇರು ಪರ್ವತ
ಉನ್ನತಕೆ ಹೆಚ್ಚಾಗಿ ಕಾಣ್ವದು
ನಿನ್ನ ಮರವು ನಿರಂತರದಿ ವಿಶ್ವಾಸ ತುಂಬಿಹದೂ
ನಿನ್ನುರುಳೆ ಮರೆತದ್ದು ತೃಣವದು
ನಿನ್ನ ಘಾಶಿಯ ಮಾಡಲಾರದು
ನಿನ್ನ ಘಾಶಿಪ ಮರವೆಯೊಂದದೆ ಮರತಿ ನೋಡೆಂದಾ || 379 ||
ತೃಣವೆಮರವಿಯು ತಿಂಗಳಿಂದಲಿ
ಎನಗೆ ಘಾಶಿಯ ಮಾಡಿತಾ ಹಾ
ಘನಮೇರುವಿನ ಸಮವು ಮರವಿನ್ನೆಷ್ಟು ಘಾಶಿಪುದೋ
ತೃಣವೆ ತೆಗದಾನಂದಪಡಿಸಿದೆ
ಘನವು ತೆಗೆದಾಘಾಶೆ ತಪ್ಪಿಪ
ವಿನಯ ಶ್ರೀಗುರು ಧನ್ಯಯನ್ನಂ ಮಾಡಬೇಕೆಂದಾ || 380 ||
ದೇಶನಾಥನನಾಥ ತತ್ವದಿ
ಈಸು ಜನದೋಳ್ ದೈನ್ಯೋಕ್ತಿಯೋಳ್
ಲೇಶವಿಲ್ಲದೆ ಮಾನಲಕ್ಷೆಯ ಬಿಟ್ಟುತಾ ಕೇಳ್ವಾ
ಘಾಶೆ ಮಾಡಲಿ ಬಾರದಿವನಂ
ಲೇಸದ ಮಾರ್ಘವನೆ ತೋರಿಸಿ
ನಾಶನಾನೆಂಬದನು ಛೇದಿಸಿ ಉಳಹಬೇಕೆಂದಾ || 381 ||

ಗುರುವು ರಾಜಗೆ ಉಪದೇಶ ಮಾಡಿದ ವಿಚಾರ
ಆಗಲೇಳೈ ಎಂದ ಗುರುವರ
ಬ್ಯಾಗ ತರಿಸಿದ ಛತ್ರ ಚಾಮರ
ಶ್ರೀಗುರಾರ್ಯನ ಕರದು ಒಯ್ದನು ತನ್ನಯರಮನಿಗೇ
ಹೋಗುತಲೆ ಸ್ನಾನಾದಿ ಭೋಜನ
ಭೋಗ ತೀರಿತು ತನ್ನ ಸಹಿತೆಂ
ದಾಗಳೇ ಪಂಡಿತರೆ ನೀವು ಸಹ ಬರಬೇಕು ಎಂದಾ || 382 ||
ಬಿಟ್ಟೆ ವ್ಯಾತಕ್ಕರಸೆ ನಮ್ಮಯ
ಕಷ್ಟಗಳ ಕಳದುಳಿಸಿದಂತತಿ
ಶ್ರೇಷ್ಠ ಮೂರುತಿ ಪಾದಸೋಂಕದ ಜನ್ಮವ್ಯಾತಕ್ಕೇ
ಎಷ್ಟು ಕಷ್ಟಗಳಿನ್ನು ಮುಂದವೊ
ದಿಟ್ಟರ‍್ಯಾರಿಹರೈಯ್ಯ ಕಾಯ್ವರು
ಕೊಟ್ಟೆವೀತಗೆ ತನುಮನಧನಂಗಳನು ಕೊರಕೊರದೂ || 383 ||
ಎಲ್ಲರಂತರ್ಭಾವ ತಿಳಿದವ
ರೆಲ್ಲರನು ದೈನ್ಯಾಸನಾರ್ಜಿಸಿ
ಎಲ್ಲರಿಗೆ ಉಪದೇಶ ಮಾಡಿದ ಮರತದೆಲ್ಲವನೂ
ಎಲ್ಲನೀವಾ ಪೂರ್ವಖಂಡ
ದೊಳಲ್ಲಿ ಇರುವದು ಮರದಿರಿದು ನೋ
ಡೆಲ್ಲ ತಾನಹ ಇಲ್ಲದಾಗಿಲ್ಲಿದು ನೋಡಿರೆಂದಾ || 384 ||
ಮಧ್ಯವರ್ತಿಯು ಹ್ಯಾಗಿರುವ ಬಹು
ಚೋದ್ಯವಿದು ನೀವೆಲ್ಲರಂತಿಳಿ
ರಿದ್ದವನು ಇಲ್ಲದವನಾಗದೆ ಇರುವ ತಾಮೆರವಾ
ಬುದ್ಧಿಯಿಂ ಶತ ವರುಷ ಯೋಚಿಸೆ
ಸಾಧ್ಯವಾಗದು ಗುರು ಕೃಪಾಗದೆ
ಎದ್ದು ಮಲಗಿದರೆಡೆ ಬಿಡದು ಇದು ಸಿದ್ದ ನೋಡೆಂದಾ || 385 ||
ಇಲ್ಲದವ ಇದ್ದವನ ಸರಿಯಾ
ಗೆಲ್ಲಭಾವದಿ ಭಾಗಸ್ತ ನಾ
ಗೆಲ್ಲರೊಳು ನೀ ಬೆರದಿರುವೆನಾ ಬೆರವನಲ್ಲೆಂಬಾ
ಬಲ್ಲತನದಿಂ ನೋಡಲೀ ವಿಧ
ಬಾಹ್ಯದಂತರ ಮರತು ಕುಂತೀ
ರೆಲ್ಲರೀ ನ್ಯಾಯವನು ನೋಡೆಂದರುಪಿದನು ಗುರುವಾ || 386 ||
ಜೀವಾತ್ಮ ಪರಮಾತ್ಮ ಪೀಠವ
ಜೀವಪರಮರ ಮಧ್ಯ ಪೀಠವ
ಭಾವದಾತ್ಮತ್ರಯವು ಮರದಿರಿ ಎಚ್ಚೆತ್ತು ನೋಡಿ
ದಾವನಿರವನು ಇಲ್ಲದಿರುವನು
ದಾವನೋ ಕಾಣುವನು ನೋಡೆಂ
ದಾವ ಭಾವದೊಳಿರಲಿ ದನುಭವ ಕೊಟ್ಟ ಶಿಷ್ಯರಿಗೆ || 387 ||
ಏಳು ಜ್ಯೋತಿ ನಿಮ್ಮೊಳಿವು ನೋ
ಡೇಳಲಾರದನಾಥ ನೆಬ್ಬಿಪ
ಏಳೇಳಿವದಿ ನಾಲ್ಕು ಮರದಿರಿ ಹೇಳಿದೆನು ತಿಳಿರೈ
ಏಳೇಳಿವದಿ ನಾಲ್ಕನಾಥನ
ಏಳು ಮನಿಯೊಳು ಏಕ ಸಮರಸ
ಹೇಳಿತಿದು ಮರತಿದ್ದಿರಿದು ಕೇಳೆಂದ ಗುರುರಾಯಾ || 388 ||
ಹೋಗಿ ಬರುತೀವೆಂಬ ಮಾತದು
ಹೋಗಿರುತಿವೆಂಬರ್ಥ ಮರದಿರಿ
ಹೋಗಬೇಕೀ ಬಲದಿಂದಲಿರಬೇಕು ಎಡದಿಂದಾ
ಈಗಳಿದು ಬಹಿರಂಗ ತೋರಿದ
ಹಾಗೆ ದೈವದ ಸಂಗದಿಂ ನೀವು
ಹೋಗಿ ಇರುವುದು ನಿಜವಿದೆಂದರುಪಿದನು ಶ್ರೀಗುರುವಾ || 389 ||
ಕನಸು ಕಂಡೆಲೊ ಚಿತ್ರ ನಿನ್ನಯ
ದಿನಸೀಗ ಹೋಗುವದು ಬರುವದು
ಮನಸಿನಿಂತಿಳೀ ಶ್ವಾಸದಾರದಿ ಬಿಡುವ ದೈಯ್ವೆಳಿವಾ
ತನ ಪ್ರಕಾಶಗಳಿಂದ ದಾಡಿಪ
ಘನ ಸ್ವರೂಪದ ಸ್ಥಲವು ಬೆರಸಿ
ರ್ಪನುದಿನವು ನಿನಗನುಭವಾ ಮರತಿದೆಂದ ಗುರುವಾ || 390 ||
ಇಂತ ಮರವಿ ಗಳಿನ್ನನೇಕವ
ರಂತರಂಗಕ್ಕಹುದು ಮಾಡಿದ
ಭ್ರಾಂತ ಸ್ವಪ್ನದ ಮರುವು ಈ ಮರವಿನೊಳು ತೃಣವೆನಿಸೀ
ಚಿಂತ ರಹಿತರನು ಮಾಡಿ ನಿಜ
ನಿಶ್ಚಿಂತರರುವಿನೊಳಿರುವ ಮರ್ಮದ
ಪ್ರಾಂತ ಮುಕ್ತಿಗೆ ಪಾತ್ರರೆನಿಸಿದನಲ್ಲೆ ಲೈ ದೊರಿಯೇ || 391 ||
ಈ ಪರಿಯ ಗುರು ಸುತೆಯರರಸಂ
ಗಾಪರಿಯ ವೃತ್ತಾಂತ ಪೇಳಲು
ಆ ಪರಮ ಗುರುವರನ ಕಾಂಬುದಕೆಲ್ಲಿಹನು ಪೇಳೀ
ತಾಪವೇ ಮರವೆಂಬ ಕತ್ತಲೂ
ಲೇಪಮಾಗಿಹುದದನು ಛೇದಿಪ
ನಾ ಪುಣ್ಯನಿಂದಾಗುತಿಹುದೆಂದೇಳುವಿರಿ ಎಂದಾ || 392 ||
ಇಲ್ಲಿ ನಮ್ಮನೆಯಲ್ಲಿ ಎಲ್ಲಾ
ರಲ್ಲಿ ಇರುವವನಲ್ಲಿ ಪೋಗಲು
ಬಲ್ಲತನವಿತ್ತಿಲ್ಲಿ ನಮ್ಮನದಲ್ಲಿ ತುಂಬುವನೂ
ಎಲ್ಲಿ ಪೋಗುವದ್ಯಾಕೆ ತನಕೈ
ಯಲ್ಲಿ ಪರಮನ್ನಿಲ್ಲಿರುತ್ತಿರೆ
ನಿಲ್ಲಲಾಲಸ್ಯಮೃತ ವಿಷವಹುದಯ್ಯ ನಡಿ ದೊರಿಯೇ || 393 ||

ಗುರುಸುತೆಯರು ರಾಜಗೆ ಉಪದೇಶ ಮಾಡಿಸಿದ ವಿಚಾರ
ಅರಸನನು ಕರೆತಂದು ಗುರುವಿನ
ಚರಣ ಕಮಲದ ಮ್ಯಾಲೆ ಬೀಳ್ಕೊ
ಟ್ಟರುಪಿದರು ಈ ಹೆಣ್ಣು ಮಕ್ಕಳು ಈ ನರಾಧಿಪನೂ
ತರುಳ ನಿಮ್ಮಗೆ ಸೇವಕತ್ವದಿ
ಶರೀರ ಭವಗಳ ಕಳದುಕೊಳಲಿಕೆ
ಪರಮ ಸಂಪದ ಪಡಿಯುವದಕೇ ಬಂದಿರುವನೆನಲೂ || 394 ||
ಮರವಿನೋಳ್ ಮಹಾಸ್ವಾಮಿ ಬೆರವಂ
ತರುವಿನೋಳ್ ನಿಮ್ಮನುಭವಂಗಳ
ಪರಿಪರಿಯ ವಿವರಿಸುವ ಮಕ್ಕಳೆ ಈ ದೊರಿಯು ನಮ್ಮಾ
ಚರಣ ದಡಿಯೋಳ್ ಸಾಷ್ಟಾಂಗ ನೀ
ವರಗಿಸಿದು ಸರಿಯೆನೆ ತಾಯ್ಗಳೆ
ಕರಗಳು ಭಯವ ಪಿಡಿದು ಶರಣಾರ್ತೆನಿಸ ಬೇಕೆಂದಾ || 395 ||
ಹತ್ತು ಜನಗಳಿಗೊಬ್ಬ ಸಾಷ್ಟಾಂ
ಗುತ್ತರೋತ್ತರ ಮೂಡಬಹುದಾ
ಹತ್ತರಿಂ ಸಾಷ್ಟಾಂಗ ಒಬ್ಬಗೆ ಕುತ್ತಿಗುಬ್ಬಸವೂ
ಗೊತ್ತು ಮರಿಯದೆ ಎಲ್ಲರಿಂಪಿಡಿ
ದೊತ್ತಬಹುದಾ ತಪ್ತ ಲೋಹವ
ಒತ್ತುವನೆ ತನಗೊತ್ತಿಕೊಳ್ಳು ಕಿತ್ತುವುದು ಚರ್ಮಾ || 396 ||
ಗುರುವೆ ನಿಮ್ಮಯ ಪಾದ ಕಮಲವ
ಹರಿಹರಾ ನರಸಮೋಹಂಗಳು
ಶಿರವು ಸೋಂಕದೇ ಇರಲು ದೊರಿಯದು ಪರಮ ದಾರಿಯದೂ
ಅರುವಿನೋಳಹುದೆಸಿ ತಾವೀ
ಪರಿಯ ಕೇಳಲು ಪೇಳಲಸದಳ
ಕರುಣಸಾಗರ ತಾವೆ ಇದನಂ ತಿಳಿಪಡಿಸಿರೆನಲೂ || 397 ||
ಇದ್ದವಗೆ ಮಾಡಿರುವ ಇಲ್ಲದೆ
ಇದ್ದವನು ಸಾಷ್ಟಾಂಗವೆಂಬುದು
ಇದ್ದವಗೆ ಮುಟ್ಟಿರುವದೆರಡನೆ ಸುದ್ದಿಲ್ಲವೆಂಬಾ
ಸಿದ್ಧವಾಗೀಯನುಭವಂಗಳು
ಬುದ್ಧಿವಂತರು ಬೆರದು ಮಾಳ್ಪರು
ಬುದ್ಧಿಹೀನರು ನಾನತ್ವದೋಳ್ ನರಕಿಗಳು ಎಂದಾ || 398 ||
ಇದನೆ ಕಲಿಯುವದಕ್ಕೆ ನಿಮ್ಮಯ
ಸದನ ಸನ್ನಿಧಿಯಲ್ಲಿ ಈದೊರೆ
ವದನ ಬಾಗಿಸಿ ಬಂದಿರುವನೈ ವಾಸ್ತವ್ಯ ಚರಿತಾ
ಪದವಿಯಾ ನಾಲ್ಕಕ್ಕೆ ಮಿಕ್ಕಿರು
ವಧಮನಾಥಾ ವಾದಿನಾಥನ
ಸದನದೋಳ್ ಬೆರಸೆನಲು ಬ್ಯಾಗದಿ ಗುರು ನಿರೂಪಿಸಿದಾ || 399 ||
ರಾಜರಿಗೆ ಗುರುಸೇವೆ ಬಂದಿತೆ
ಸೋಜಿಗದ ಮಾತಮ್ಮ ತಾಯ್ಗಳೆ
ಭೂಜನದ ಸಾಮಾನ್ಯ ಜನರೇ ಭಯಪಡುವರಲ್ಲಾ
ಮಾಜಲ್ಯಾತಕೆ ಗುರುವರಾರ್ಯನ
ಪೂಜಿಪದರೊಳು ಸ್ವಲ್ಪ ಭೇದವ
ಸೂಜಿಮೊನೆ ಯೊಷ್ಟಲ್ಲಿ ಕಂಡರೆ ದ್ರೋಹ ಕೇಳೆಂದಾ || 400 ||
ಬತ್ತ ಮನೆಯೊಳಗಿಲ್ಲದವ ತನ
ಮಸ್ತಕವ ಗುರುಪಾದಕಿಡಲಿಕೆ
ಸುತ್ತ ಮುತ್ತಿತ್ತತ್ತ ನೋಡುತ ಶಿರ ಬಾಗಿಸುವನೂ
ಮತ್ತರಿವರೀ ದೇಶಧೀಶರ
ಮಸ್ತಕವ ಗುರುಪಾದಕಿಡಲಿಕೆ
ಚಿತ್ತ ಚಂಚಲವಾಗುವುದು ಸುಖದೂರಮ್ಮಗಳಿರಾ || 401 ||
ಗುರುಭಕ್ತಿ ದೂರಾಗಲಕ್ಷಣ
ಪರಮ ಸುಜ್ಞಾನದುವೆ ದೂರವು
ಗುರುಭಕ್ತಿ ದೂರಾಗಲ ಪರಮಾತ್ಮ ತಾ ದೂರಾ
ಗುರುಭಕ್ತಿ ತಾತ್ಸಾರವಾಗಲು
ದುರಿತಗಳು ಬಹು ಬಂದುದಣಿಪವು
ಗುರುಭಕ್ತಿ ತೊರತವಗೆ ಮರಣದೊಳರು ಹುಟ್ಟದೆಂದಾ || 402 ||
ಈ ಪರಿಯ ಗುರುರಾಯ ನುಡಿಯಲು
ಭೂಪತಿಯು ಕರಗಳನೆ ಜೋಡಿಸಿ
ಪಾವಿಗಳ ರಕ್ಷಿಪನೆ ನಿಮ್ಮಯ ಪೂರ್ಣದಾಜ್ಞೆಯಲೀ
ಈ ಪ್ರಭಾಕರ ಶಶಿಯು ಉಭಯರುಗ
ಳಾ ಪರಾತ್ಪರ ದೈವದಾಜ್ಞೆಯೋಳ್
ಜ್ಞಾಪಕದಿ ನಟಿಸುವ ವಿಧಾನದಿ ನಡಕೊಂಬೆನೆಂದಾ || 403 ||
ಗುರು ಮಾರ್ಗ ಘನವೆಂದು ಬಂದವ
ಗೊರಗುವರು ಸತಿಸುತರು ಎಂಬುವ
ದರುವಿನಿಂ ನೋಡಲ್ಕೆ ಬಾರದಲಿದ್ದರೊರಗುವರೂ
ಗುರುವೆ ತಾವೀಪರಿಯ ಪೇಳಲು
ನರರು ಪೇಳದೆ ಪಲಾಯನವೇ
ಪರಮಸುಖ ಬಹುದೂರ ವಾಯ್ತೈ ನರಕ ನಿಜವಾಯ್ತೈ || 404 ||
ಶೂರನಾ ಫಲ್ಗುಣನು ತಮ್ಮಯ
ಧರುಣಿಯ ಸುಖಕಾಗಿ ವಂಶವ
ಘೋರ ಯುದ್ಧದಿ ಕೆಡಹಿ ಬಿಟ್ಟಿಹನೆಂದು ಪೇಳುವರೂ
ಸಾರವಾದಾ ಪರಮಸುಖಕೆ
ಲ್ಲಾರು ಸತ್ತರು ಸಾಯಬಹುದೈ
ದೂರ ಮಾಡದೆ ಎನ್ನನುಗ್ರವ ದಯಮಾಡಿರೆಂದಾ || 405 ||
ಇಂತ ಧೃಢ ಚಿತ್ತವನು ರಾಜ
ನೊಳಂತರಂಗವ ತಿಳಿದು ಗುರುವರ
ಶಾಂತ ಮೂರುತಿ ಪೇಳ್ದ ತಾಯ್ಗಳೆ ನೀವೇ ಸಾಕ್ಷೆದಕೇ
ಬಂತು ರಾಜನ ಕರ್ಮ ಪಾಕವ
ಎಂತ ಭಯಪೇಳಿದರು ಬಿಡದಲೆ
ನಿಂತಿಹನು ಜಳಕವನು ಮಾಡಿಸಿ ಕರತನ್ನಿರೆಂದಾ || 406 ||
ಜಳಕವಾಗುತೆ ಭೋಜನಾ ಭೂ
ತಳಗೊಡಿಯನಿಗೆ ತೃಪ್ತಿ ಮಾಡಿಸಿ
ನಳಿನಾಕ್ಷಿಯರು ರಾಜನಂ ತಮ್ಮಿಂದೆ ಕರತಂದೂ
ಬಳಿಯ ನಿಲ್ಲಿಸಿ ಬಾರೆಂದು ದಯ
ಭರಿತನಾಗಿ ದೈನ್ಯಾಸನದಿ
ಕುಳಿತುಕೋ ಕೇಳೆಂದು ಗುರು ಮರ್ಮವನೆ ಬೋಧಿಸಿದಾ || 407 ||
ವೇದ ಘೋಷಣೆ ಕೇಳು ಜಗಕೆಲ್ಲಾ
ಧಾರಾ ದಯ್ಯಾ ಪರಾತ್ಪರ
ಸಾಧು ಹೃದಯದಿ ತುಂಬಿ ತುಳುಕುವ ನಿಜ ನಿರಾಕಾರಾ
ಕ್ರೋಧ ಕ್ರೂರರನೇಕ ಜನರಾ
ಬಾಧೆ ಉಂಟಾಗಿಲ್ಲದಿರಬೇಕೀ
ಬೋಧ ನೋಡೆಂದು ಗುರುವರ ಬೋಧಿಸಿದ ದೊರಿಗೇ || 408 ||
ಕ್ರೂರನೆಂಬುವ ಪೂರ್ತಿ ಇಲ್ಲವ
ತೋರಡಗುವವ ನಿಲ್ಲದಿರುವವ
ತೋರಡಗುವವನಿಂದೆ ಪ್ರತಿಬಿಂಬಾಗಿ ನಿಂತಿರುವಾ
ಕ್ರೂರ ಲಯವಾಗುವದಕಿಲ್ಲದೇ
ಇರುವ ಪೋಗಲು ತಾನೇ ಪೋಗುವ
ಮ್ಯಾರೆ ಮಿತಿಮಿಕ್ಕಿರುವ ಕಾಣುವರುಭಯರಿಹರೆಂದಾ || 409 ||
ಇರುವನೋಳಿಲ್ಲದಿರುವ ಬೆರದಾ
ಗಿರದೆ ಪೋಧಾಂಕಾರ ರೂಪನು
ಬೆರದುಕೊಂಡವ ನೋಡಲ್ಲಿ ಬ್ರಹ್ಮ ಸ್ವರೂಪದಲೀ
ಮರವು ಬಾರದೆ ಇದಕೆ ಉಪಮಾ
ನರುಹುವೆನು ಕರದಲ್ಲಿ ಕನ್ನಡಿ
ಇರದೆ ಹೋದಲ್ಲಿ ತರಬಿಂಬ ಸ್ವಬಿಂಬ ನೋಡೆಂದಾ || 410 ||
ಪಾಪಕಧಿಪತಿ ಇತರ ರೂಪವ
ಪುಣ್ಯಕಧಿಪತಿ ತರಾರೂಪವ
ಪಾಪಿಗಳ ಧನ್ಯರನಮಾಳ್ಪ ಸ್ವರೂಪ ಸದ್ಗುರವಾ
ಆಪದ್ಬಾಂಧವ ನಿರಾಕಾರವ
ಲೇಪಮಾಗಿರುವಂತ ದೈವವ
ನೀಪರಿಯತಿಳಿ ನಾನತ್ವಕಳಿ ಧನ್ಯ ನೀನೆಂದಾ || 411 ||
ಇತರ ರೂಪಗೆ ಪಾಪವೆಂಬದು
ಜತೆಯಾಗುವದ ಕಾರಣೇನದು
ಸತತ ಇಲ್ಲದ ತರಾನರನಿಗೆ ಪುಣ್ಯ ಪ್ರಾಪ್ತವದೇ
ಸುತನ ಮ್ಯಾಲತಿ ಕರುಣದಿಂದಲಿ
ಮಥನ ಮಾಡಿ ಕೊಡೀಗ ಗುರುವರ
ಇತರನಂ ಧನ್ಯನಂ ಮಾಳ್ಪ ಸ್ವರೂಪ ಕಾರಣದೇ || 412 ||
ಏಳು ಜ್ಯೋತಿಯ ಮಹಾಮಹಿಮೆಯೋ
ಳೇಳುವನು ಬಾಳುವನು ಇತರನು
ಏಳು ಜ್ಯೋತಿಯ ಮರದು ಕರ್ಮಕೆ ಕಾರಣಾಗಿಹನೂ
ಏಳು ಜ್ಯೋತಿಯ ಹೆಚ್ಚರಾಗುತೆ
ತರಾ ನರನಾನಧಮನೆನುವನು
ಹೇಳಲಸದಳ ಪುಣ್ಯಕಧಿಪತಿಯಾಗಿಹನೊ ದೊರಿಯೇ || 413 ||
ಮಧ್ಯ ರೂಪದ ಕಾರಣವ ಕೇಳ್
ಬುದ್ಧಿಯಿಲ್ಲದ ಇತರ ರೂಪಕೆ
ಸಿದ್ಧವಾದುಪದೇಶ ಮಾಡುತ ಪಾಪ ಕಳಿಯುವನೂ
ಇದ್ದು ಇಲ್ಲದ ಚಿತ್ರದಿಂದಲಿ
ಇತರ ನೀ ಪ್ರತಿಬಿಂಬವಲ್ಲದೆ
ಇದ್ದವನ ರೂಪಾಂಶವೆಂದೆಂಬರುವ ಬೆರಸುವನೋ || 414 ||
ರೂಪವಿಲ್ಲದ ದೈವ ತಾ
ನಾಪತ್ತು ಬಾಂಧವ ಕಾರಣವಾವವು
ರೂಪದಿಂ ಸಾಕ್ಷಿ ಸ್ವರೂಪನೆ ದೈವ ಸಮರಸನೇ
ಪಾಪ ಪುಣ್ಯರ ಉಭಯರನುಭವ
ಬಾಹ್ಯದಂತರವಕಹುದು ಮಾಡಿದೆ
ಈ ಪರಿಯ ವಂದದನು ಪೇಳುವದೆಂದು ಬೇಡುವೆನೈ || 415 ||
ವೇದ ನಾಲ್ಕರ ನಮ್ಮ ಮ್ಯಾಲಾ
ವೇದವಾಕ್ಯವು ಪಕ್ವ ಮಾಡುವ
ದಾರಿ ತೋರುವ ಗುರು ಹಿರಿಯರನು ಕಳುಪಿಹನು ದೈವಾ
ವೇದಗೃಹ ತಾನಾಗಿ
ತನ್ಬಿಟ್ಟೋದವರುತನ್ಮತ್ತು ಕಲಿಯಲಿ
ಸಾಧು ಸಜ್ಜನನಾತ ಬಂಧುವ ಕಾರಣಿವು ಎಂದಾ || 416 ||
ಏಳು ಜ್ಯೋತಿವು ದೈವ ಮಹಿಮವು
ಬಾಳದಿನದಿಂ ಮರತುಕುಂತೀ
ದ್ಹೇಳು ದ್ವೀಪದನರಾಧಮರಿಗೆ ನಾಟಕಾಗಿಹವೂ
ಹೇಳಿದೆನು ನೀ ಕೇಳೀಗ
ಕಲಿ ಹೇಳು ನಿನ್ನಧಿಕತ್ವವೇನುಂ
ಟಾಳ್ಯಾರು ಅರಸ್ಯಾರಿಗಾದರು ಮರತಿ ಕೇಳೆಂದಾ || 417 ||
ಆಳಿಗರಸನ ಮಾಡಿ ನೀ ಜಗ
ವಾಳಿದದು ಮಹಪಾಪ ವಿತ್ತವಿ
ಗ್ಹಾಳಾಯ್ತೆ ದಿನ ಗುರು ಕರುಣದಿಂ ಪಣ್ಯಧಿಕವಾಯ್ತೈ
ಹೇಳಿತೀದೈವ ಜಗದರಸವ
ಇಲ್ಲದಿರುವವ ನಿನ್ನ ತರಹವ
ಕಾಳಕತ್ತಲು ಕಳದು ಬಿಟ್ಟಿತು ಗೆದ್ದೆ ನೀನೆಂದಾ || 418 ||
ಅರಸನೇ ದೈವಾದರನುಭವ
ನರನಾಥಗೆ ಕೊಟ್ಟಿರುವ ನೋ
ಡರಸಗೇನೇನಿಲ್ಲ ಲಯಭಯ ಲಾಭ ಲುಕ್ಸಾನಾ
ಪರಮನೇ ಸರ್ವವಾಗಿರುವನೂ
ನರನವಯವಂದಾಗದಿರುವವ
ನರುಪಿ ತೋರಿಹದಮರಿಕೆ ಮುಂದಿಲ್ಲ ಕೇಳೆಂದಾ || 419 ||
ಇಂತ ಗುರುವರ ನೀನತಹುದು
ಎನ್ನಂರಂಗಿಹದೊಂದು ತಿಳಿಪುವೆ
ಬಂತು ಬಹಿರಂಗಿದನು ಎನ್ನಯ ಪ್ರಶ್ನ ಕೇಳುವದೂ
ಚಿಂತೆಯಲಿ ಬೆರವಂತ ಪಾಪಿಗ
ಳಂತರಂಗಕ್ಕಹುದು ಮಾಡುವ
ಶಾಂತ ಮೂರುತಿ ಸದಾ ಕಾಲದಿ ಸಾರ್ವದಿದು ಮನದೀ || 420 ||

ಯೋಗ ತಪ ಜಪ ಮತ ಪಾತಕ ಪಂಚ ಪ್ರಶ್ನ ವಿಚಾರ
ಯೋಗ ತಪ ಜಪ ಮತ ಪಾತಕವು
ಈಗ ಎನಗಾತ್ಮದಲಿದನುಭವ
ಬ್ಯಾಗ ತೋರಿಸಿ ಕೊಡಬೇಕು ಎನ್ನ ಗುರುಮಹಪರಾಕೂ
ಯೋಗದೆಂಟರ ಸಾಧಿಸುವನವ
ಯೋಗಿಯಲ್ಲವು ಪುಸಿಯು ಎಂದದ
ಕಾಗಿ ಬಿನ್ನಪ ಮಾಡಿಹೆನು ದಯಮೂರ್ತಿ ಹೇಳೆಂದಾ || 421 ||
ಹಗಲಿರುಳು ಜೀವಾತ್ಮನಲ್ಲಿಯು
ಯುಗಯುಗದಿ ಪರಮಾತ್ಮವಾಸವ
ಬಗೆಯ ಬಲ್ಲವರಾರೋ ಇರುವರೊ ಘನ ಯೋಗದವರೂ
ಗಗನ ಈ ಭೂಭಾಗಕೆಲ್ಲಕೆ
ಘನವಿಹರು ಎಂಬನುಭವಾದಿಯು
ಮಗನೆ ನಿನಗದು ಸಿಕ್ಕಿತೈ ಮತ್ತಿದನು ಕೇಳೆಂದಾ || 422 ||
ತಪವ ಮಾಡುವ ರಾವನಾಶ್ರಮ
ವಿಪರೀತ ಬಾಧೆಗಳು ಬಡುತಲಿ
ಚಪಲತ್ವ ನಾನತ್ವ ಹೋಗದು ಸೇರಿಕೊಂಡಿಹದೂ
ತಪವದುವೆ ನಾನತ್ವ ತಂದುವೆ
ತಪಕೆ ಸರಿ ಸುಫಲಿಲ್ಲವಂತದು
ವಿಪಿನದಲಿ ನಿನಗನುಭವ ಉಂಟಾಯ್ತಿದನು ಕೇಳೆಂದಾ || 423 ||
ಜಾಣ ಕೇಳ್ ಜಪವಿಹುದು ನಿನ ನಿ
ರ್ಮಾಣ ಜಾತಕ ಶಾಸ್ತ್ರದನುಭವ
ಪೂರ್ಣಪರಮನ ಪೂರ್ವಖಂಡದಿ ಕಂಡೆ ನೀನದನೂ
ಕಾಣದೇ ಕಲಿಯೊಳಗೆ ಕಲಿಜನ
ಗೇಣು ಮೊಳ ಜಪ ಮಾಲ ಮಣಿಗಳು
ಕೋಣೆಯೊಳು ಕುಂತಾಡಿ ನೋಡಲು ಫಲವಿಲ್ಲವೆಂದಾ || 424 ||
ಮತದ ಮರ್ಮದ ಮಾತಿನನ್ಮಯ
ಹತವೆಂಬದರುವಾಯ್ತು ನಿನ್ನಗೆ
ಸತತ ಸ್ಥಿರಪದ ಸಿಕ್ಕಿತಾದೊಡೆ ಸೇರಿದೈ ಪರಕೇ
ರತನವಾದೀ ಲೋಕದೊಳು ಷ
ಣ್ಮತಕೆ ಸಿಲುಕದೆ ಹೀನನಾಗದೆ
ವ್ಯಥೆಗಳೊಳು ಸಿಗದಂತ ಮಾರ್ಗವು ಒಂದಿದೈ ಎಂದಾ || 425 ||
ಪಾತಕದ ತಾತ್ಪರ್ಯ ಕೇಳಿದೆ
ಪಾತಕಿದು ನೋಡಲೈ ಧನ್ಯನೆ
ನಾಥನಾಥನೋಳ್ ಭರಿತರಿಯದಿತರುಳಿಸಿಹುದೆ ಪಾಪಾ
ಭೂತಳದ ಸ್ತ್ರೀ ಕಡಿಯ ಪಾಪಿದು
ನಾಥನೊಲ್ಲದೆ ಇತರ ಪುರುಷನ
ಮಾತಿನಲಿ ಬೆರದಾಡುತಿಹುದೆ ಘನಪಾತಕೆಂದಾ || 426 ||
ಅಹುದಯ್ಯಾ ಗುರುರಾಯ ನಿಮ ವಾ
ಕ್ಯಹುದು ಪಂಚಾ ಪ್ರಶ್ನೆಗುತ್ತರ
ವಹುದು ಮತ್ಯರ ಭವಾಂಬುದಿ ಪರಿಹರಿಪೆ ನೀನಹುದೂ
ಇಹುದು ಇಲ್ಲಿನ್ನೊಂದು ಪ್ರಶ್ನೆಂ
ತಹುದೊ ತವ ಚರಣಾರವಿಂದದಿ
ತಹೆನು ಈಷಣತ್ರಯವೊ ಚತುರೀಷಣವೊ ಹೇಳೆಂದಾ || 427 ||
ಈ ಷಣತ್ರಯಗಳಿಗೆ ತನುವು ವಿ
ಶೇಷ ಕಾರಣವಾಗಿ ನಿಂತಿಹ
ಭಾಷ ಚತುರೀಷಣವು ಪೇಳಲಿ ಬೇಕು ಬ್ಯಾಗದಲಿ
ಲೇಶವಾದರು ಮನದೊಳಗೆದಾವ ಪು
ರುಷಗಾದರು ಸಂಶಯಿಲ್ಲವು
ಸಾವಿರೊರುಷವು ತನುವಿದ್ದರಿನ್ನರಿಲಿ ಬೇಕೆನುವಾ || 428 ||
ತನುವದೀಷಣ ಧನವದೀಷಣ
ವನುತೆಯಳ ಸುತರುಗಳ ಮೋಹನ
ಎನಗೆ ಬಿಡಿಸೈ ನಿರಾಯಾಸದಿ ನಿಜವಾದ ಗುರುವೇ
ನಿನಗೆ ಶರಣಾಗುವೆನೊ ದೇವನೆ
ಮನನ ಮಾಡಿ ಕೊಡೀಗ ಮನಸಿಗೆ
ಮನುಜೇಶ ನಿನಮೊರೆಯವಗದಿರೆ ಶುಭವು ಸಿಗದೆಂದಾ || 429 ||
ನಿನದು ಶಿಷ್ಯನೆ ಚಿತ್ರವದುತಾ
ಘನ ನಿರಂಜನ ನಿಂದದಿರುವದು
ತನುವನಂತಗಳಳಿಯೆ ಹೋಗದು ಸ್ಥಿರದಿ ನಿಂತಿಹದೂ
ಅನುದಿನದಿ ಮಹ ಸುಖ ಪ್ರದೇಶದಿ
ದಿನವುವಾಯ್ದು ಗಳಿಲ್ಲದಿರುವದು
ತನುವು ಹೋಗಲಿ ಇರಲಿ ನಿನಗಿನ್ನೆನು ಭಯವೆಂದಾ || 430 ||
ಅರ್ಥಕಿಂತಧಿಕಾದ್ದು ಎನಗದ
ರರ್ಥ ತಿಳಿಸಿಕೊಡಯ್ಯ ಗುರುವರ
ಅರ್ಥ ದಶಕೋಟಿರಲು ಇನ್ನಿರಬೇಕು ಎನುತಿಹದೂ
ವ್ಯರ್ಥದಿಂ ಇದರಾಸೆಯಿಂದಲಿ
ಮರ್ತ್ಯದಲಿ ಮರಣಾಗಿ ಪೋಗಲು
ಕರ್ತಧಿಕ ಪರಮಾತ್ಮ ಎಮಗೇನಾಜ್ಞೆ ಮಾಡುವನೋ || 431 ||
ಪರಮನೆಂಬ ಪದಾರ್ಥ ಸಿಕ್ಕಿತು
ಪರವೆ ಏನದೇನವಿರಲಿ ಹೋಗಲಿ
ಪರಮನೇ ಕೊಡುವದಕೆ ಕರ್ತ ತೆಗಿಯಬಲ್ಲಾತಾ
ಸರಿಯಹರೆ ಧನಕೋಟಿಗಳು ನಿನ
ಗರುಪಿತೈ ಘಾಶ್ಯಾತಕಿನ್ನಾ
ಪರಮ ರಾಜ್ಯಕೆ ಪಾತ್ರ ನೀನೆಂದರುಪಿದನು ಗುರುವಾ || 432 ||
ಸತಿಯ ಸುತರುಗಳಲಿ ಮೋಹನ
ಮತಿಯು ತಾಕುವುದ್ಯಾಗೆ ಬಿಡದದು
ಸ್ಥಿತಿಯದಯ ಮಾಡೈ ಪರನಂದ ಪರಮ ಗುರುವೇ
ಸತಿಯ ಬಿಡಬೇಕೆಂಬ ಶಾಸ್ತ್ರವು
ಸತಿಯ ಬಿಡಬೇಕೆಂಬ ವೇದವು
ಕ್ಷಿತಿಗೆ ಬಂದಿಹುದೇನು ತಿಳಿಸೈ ಎಂದನಾ ಶಿಷ್ಯಾ || 433 ||
ವೇದಶಾಸ್ತ್ರವು ಬರಲು ಇಲ್ಲವು
ಬೋಧ ಮಾಡುವ ಗುರುವು ಬೇಕಿ
ಲ್ಲಾದಾರಿ ತನು ಮೋಹ ಸರಿಯಲು ಸತಿಯು ಬೇಕಿಲ್ಲಾ
ಹೋದ ಸತಿಯದರಾಗಿ ಬಂದರು
ಹೋದಿಯಲ್ಲೀಗೆಲ್ಲಿ ಪೋಗುವೆ
ಬಾಧೆ ಮೊದಲಿರುವಂತಾ ಭಾವವು ಇಲ್ಲೆಂದ ಗುರುವಾ || 434 ||
ದುಷ್ಟನಾಗಲು ಸುತನುಪಿದ ಇವ
ಭ್ರಷ್ಟನೆಂದವನಲ್ಲಿ ಮೋಹನ
ನಷ್ಟವೇ ತನ್ನಿಂದ ತಾನೇ ಗುರುವೆ ಬೇಕಿಲ್ಲಾ
ದಿಟ್ಟಗುರು ಬೇಕದಕೆ ತನು ಧನ
ಇಷ್ಟವನು ದೊರೆನಿಪಪಮನಸಿನ
ಕಷ್ಟ ಕೊಡುವನು ಮಹಾಮಾರ್ಗದು ಕೇಳೆಂದ ಗುರುವಾ || 435 ||
ಮನೋ ಮಾರ್ಗದ ಫಲವು ಕೃಷ್ಣಾ
ರ್ಜುನಾ ನೋಡೆಂದರುಪ ಭೀಮನ
ಮನೋಫಲವನು ಕಂಡನರ್ಜುನ ತಾ ನಾಚಿಕೊಂಡಾ
ಮನೋಫಲಿತಾರ್ಥವನು ನೀನೀ
ದಿನಾ ಪ್ರತಿದಿನ ಪಡದು ತನುವಿನ
ತೃಣೋತ್ಸವ ನಿನಗರುವಾಯ್ತು ಭಯವಿಲ್ಲೆಂದ ಗುರುರಾಯಾ || 436 ||
ತನುವು ದಂಡನೆಗಿಂತ ಕೇಳೈ
ಮನವು ವಿವರವು ಮಹಾ ಲೇಸದು
ತನುವು ದಂಡಿಸೆದರಿದ್ರಾಂಶವು ಹೋಗದದು ನಿಜವು
ಮನವು ಮಾರ್ಗವು ವೇದಸಾರವು
ನಿನಗೆ ಲಭಿಸಿತು ನಾನತ್ವ ಲಯ
ದನುಭವಾಮೃತ ಕಂಡೆವು ಉಂಡೆ ನೀ ಘನವಾದೆ ಎಂದಾ || 437 ||
ಲಯದ ಸ್ಥಿತಿ ಎಂಬುವದು ಮನದಾ
ಲಯದ ಒಳ ಭಾಗದಲಿ ನಿಂತಿತು
ಲಯದ ಸ್ಥಿತಿಗೆಂತಾಗುವದು ಮುರಿವರಿವ ಸಂಪದವಾ
ಜಯ ಶುಭಾಕರ ಪೇಳು ಗುರುವರ
ಜಯದೇಶ ಲಯದೇಶ ಬೋಧಿಸಿ
ಭಯ ನಿವಾರಣೆ ಮಾಳ್ಪ ಬಿರಿದುಳ್ಳಾದಿ ರೂಪಕನೇ || 438 ||
ಭಾಪುರೇ ನೀ ಕೇಳ್ವ ಪ್ರಶ್ನಿದು
ಭೂ ಪ್ರದೇಶದಿ ಕೇಳಲಿಲ್ಲವು
ಯಾವ ಪರಿಯ ನಿನಗಹುದು ಮಾಡಿ ಕೊಡಬೇಕೋ ಮಗನೇ
ಭೂಪರೈ ಜಗದೊಳಗೆ ಪರಮ ಪ್ರ
ತಾಪರೈ ಗುರುಶಿಷ್ಯರೆಂಬುವ
ರೀ ಪರಿಯ ಜೀವಾತ್ಮದನುಭವ ವಿವರಿಸಲಿ ಬೇಕೈ || 439 ||
ಅಂತರಂಗದ ಕೌಪ್ಯ ಕಾಲಣ
ಕೆಂತು ಬಹಿರಂಗದರ ಗುರುತಿಗೆ
ಬಂತದನುಭವ ಪರಿಯ ಲಯಸ್ಥಿತಿಗೊಂದುವದು ನ್ಯಾಯಾ
ಎಂತು ನೋಡಲು ಲಯದ ಗುರು
ತಾದ್ಯಾಂತ ಬಹಿರಂಗನಂತಿರುತಿಹ
ಕುಂತು ನೋಡೈ ಇಲ್ಲದಿರುವನಿಗನುಭವಿಹುದೆಂದಾ || 440 ||
ಏನಿದಾಹಾ ಶ್ರೀಗುರಾರ್ಯನೆ
ನಾನೆನುವದೇನಾಯಿತೀ ದಿನ
ನಾನೆನುವ ನಾಶತ್ವ ಶಾಶ್ವತವಾಗಿ ನಿಂತಿರುವಾ
ಭಾನು ಈ ಭೂಭಾರದಲ್ಲಿಹ
ಬಹುಜನ ಸುರಾದೇವ ದೈವಕೆ
ನಾನತ್ವ ಕಳದುಳಿವದನುಭವ ಬಾರದ್ಯಾರಿಗಿದೂ || 441 ||

ಹೆಣ್ಣುಮಕ್ಕಳು ಬಹಿರಂಗ ತೋರಿದ ವಿದ್ಯಕ್ಕೆ ಗುರುವು ಅತ್ಮಸಾಕ್ಷಿ ಮಾಡಿದ ವಿಚಾರ
ನಿಮ್ಮ ಸುತೆಯರು ಹೇಳಿದೋಚವು
ನಮ್ಮ ಗುರು ತಂದೆಯಲಿ ವಿದ್ಯವು
ಧರ್ಮವಾಗಿಹುದೆಂದು ಪೇಳಿದ ವಾಕ್ಯ ನಿಜವಾಯ್ತೈ
ತಮ್ಮ ಕೇಳುವ ಭಿನ್ನ ಪೊಂದದೆ
ಗಮ್ಮನೇ ತೈಲೆರಡು ಬಾಂದದಿ
ಇಮ್ಮಹಿಗೆ ಬೀಳ್ದಂತೆ ತುಂಬಿದದಾತ್ಮದೊಳು ತೋರೈ || 442 ||
ಇದ್ದವನೆ ನೋಡಿಲ್ಲದಿಹನೋಳ್
ಸಿದ್ಧವಾಗಿ ಪೂರ್ಣ ತುಂಬಿದ
ಬುದ್ಧಿ ಇಲ್ಲದ ಇತರ ರೂಪದಿ ಸ್ವ ಸ್ವರೂಪವದೂ
ಮಧ್ಯ ರೂಪನು ತುಂಬಿದೆನು ಕೇಳ್
ಪದ್ದತಿಯು ತಿಳಿದಾತ್ಮದನುಭವ
ಬುದ್ಧಿಬಂತನೆ ಇರುವ ಕಾಣುವ ತುಂಬಿಹರೋ ಮಗನೇ || 443 ||
ಸೂಜಿವಗದರೊಳಗೆ ದಾರವ
ಸೋಜಿಗದ ನಿನ್ನೇನು ಪೇಳಲಿ
ಸೂಜಿದ್ವಾರದೊಳೇರಿಸಿ ತೋರಿದಳು ಎದಗಾಗಾ
ಈ ಜಗದೊಳೆಲ್ಲರದು ನೋಡಿದ
ರೀಗಾತ್ಮದಂತರ್ಯದನುಭವ
ದೀ ಜೀವಗಾನಂದ ಪಡಿಸೈ ಎಂದನಾ ರಾಜಾ || 444 ||
ದಾರವೆಂಬುದು ತರಹ ಜಗವಿದು
ತೋರುತಿಹ ಬ್ರಹ್ಮ ಸ್ವರೂಪದಿ
ದಾರದೋಲಿಕೆ ಜಗವದರೊಳಗೆ ಸೇರಿಹವು ನೋಡೈ
ದ್ವಾರದ್ವಿತಿ ರೂಪದಕೆ ಬೆಳಕಾಕಾರ
ವಂದಕಾರ ಮಧ್ಯಕಾರ ವಾಗೀ
ಪರಮನರನನು ತೋರ್ವದೈ ಎಂದಾ || 445 ||
ಚಿತ್ರ ಸೂರ್ಯನ ಮಧ್ಯ ಚರ್ಮ ವಿ
ಚಿತ್ರ ನಾಮಗಳೆಲ್ಲ ತೋರ್ವದು
ನೇತ್ರಕಾ ನರ ಪರಮರಿರುವರು
ಧಾತ್ರಿಯೋಳ್ ನಿಜಗುರುವ ಶಿಷ್ಯರಿಗನುಭವಿದು ಎಂದಾ || 446 ||
ಗೋ ಮಹಿಷ ಕಿಟ್ಟವನು ತರಿಸಿದ
ಳೀ ಮಹಾ ತಾಯದನು ಎನ್ನಗೆ
ಪ್ರೇಮ ಮಾಡಿಸುವದಕೆ ತಾನದನುಂಡೆಗಳ ಬಡಿದೂ
ಹೇಮ ದೋಪಾದಿಯಲಿ ತೂಕದಿ
ತಾ ಮನದಿ ಮಾಡಿಟ್ಟ ಮಾರ್ಗಕೆ
ಶ್ರೀಮಹಾ ಪರಮಾರ್ಗಕನುಭವ ತೋರೆಂದ ರಾಜಾ || 447 ||
ಪಾರಮಾರ್ಥ ಪ್ರಪಂಚ ಉಭಯವು
ತೋರುವವು ಸರಿತೂಕವದಕಿದು
ಸಾರವಂದಿಹುದದರೊಳಗೆ ನಿಸ್ಸಾರವಂದಿಹುದು
ಸಾರವಾದ ಸುಶಕ್ತಿ ಫಲವದು
ಸಾರವಿಲ್ಲದ ಶಕ್ತಿಗನುಭವ
ದಾರಿಹುದು ಕರಕೊಡಲಿ ಸರಿಯಾಗರದಾಡಿದಂತೇ || 448 ||
ಚೀಣ ಸಕ್ಕರೆ ಸರಿಯಾಗಿ ಪಾ
ಷಾಣ ತೂಕದಿ ತೋರಿದಂದದಿ
ಕಾಣುತಿಹುದೈ ಕಲಿಯು ಪರಮನ ತ್ರಾಣವನು ಸರಿಸಿ
ಜಾಣೆ ನಮ್ಮಯ ಸುತೆಯು ತೋರಿದ
ಕೂನವದು ನಿನ್ನಾತ್ಮದಲಿ ತಿಳಿ
ಪ್ರಾಣನಂದವ ಪೂರ್ಣ ತುಂಬುವದೆಂದ ಗುರುರಾಯಾ || 449 ||
ಪರಿಪೂರ್ಣವಾನಂದ ಮಾಡಿದಿ
ರರಿಯ ಬೇಕಿನ್ನೊಂದು ಪರಿಯವ
ಪರಮ ಪುರುಷನ ಪ್ರಪಂಚಾರ್ಥದೊಳಿರುವ ಪರಿಹ್ಯಾಗೇ
ಪರಮ ಪುರುಷನ ಬೆರಿಯುವಂತಾ
ಮರವೆ ಪುರುಷರ ತೋರಿ ಕೊಡಬೇ
ಕರಿತನಲ್ಲಿವ ತರುಳ ನಿನ್ನವ ಗೆರಿಯ ಬೇಕೆಂದಾ || 450 ||
ಸುತನೆ ನಿನ್ನಯ ಪ್ರಶ್ನೆಗುತ್ತರ
ಮಥನ ಮಾಡುವ ಮಾರ್ಗ ಬಂತೈ
ಚತುರ ಪುರುಷರು ಉಂಡದರೊಳಗೆ ವಿತರಣಿಲ್ಲದಿಹರೂ
ತ್ರಿತಯ ಪುರುಷಾ ನಿರ್ಮಲೊಬ್ಬವ
ವ್ಯಥೆಯಿಲ್ಲ ನಿಶ್ಚಿಂತನೊಬ್ಬವ
ಸತತ ಸುಖ ಪುರುಷಾರ್ಥ ವಿವರವ ತಿಳಿಸಿದನು ಗುರುವಾ || 451 ||
ನಿರ್ಮಲಾ ಪುರುಷಿವನು ನೋಡೈ
ಚರ್ಮ ಶರೀರವ ಚರಿಯ ಶೈನಾ
ಪೇರ್ಮಿಯಿಂ ನಿದ್ರಾವಲಂಬನ ಲೋಲನಾಗುವನೂ
ಮರ್ಮವೆಂಬಾಲೋಚನಿಲ್ಲದೆ
ಮರ್ತ್ಯದಲ್ಲಿ ನಾಟಕವ ನಡಸುವ
ಕರ್ಮರಹಿತಾ ಪರಮ ಪುರುಷವ ನಕ್ಷೇಪಿಸುವನೂ || 452 ||
ಅನ್ನವಾನಂದಾಗ ಲಾಮ
ತ್ತನ್ನದೆತ್ನವ ಮರತು ತಿರುಗುವ
ನನ್ಯರಿಗೆ ನೀಡುವದೆ ಇಲ್ಲಾತನಗೆ ಮೊದಲಿಲ್ಲಾ
ಅನ್ನ ಬೇಕವನನ್ನು ನಿಶ್ಚಿಂತನ್ಯ
ಯಥಾಪೇಕ್ಷಿಪನು ಎಂಬುವ
ನು ಪರಮಾ ಪುರುಷ
ನವನಂ ಒಪ್ಪನೈ ದೊರಿಯೇ || 453 ||
ಸುಖಪುರುಷ ನೋಡಿವನು ಭವನದಿ
ವಿಕಸಿತಾದಂತಾ ಪದಾರ್ಥವ
ಸಕಲವನು ಭುಂಜಿಸೀ ಜೀರ್ಣಿಪನವನೆ ನಲಿಬಹುದೂ
ಬಕನಿವನು ರಕ್ಕಸನು ಪರಮಾ
ಸುಖ ಚಿತ್ರವರಿಯದೇ ಒರಗುವ
ನಕಟಬಾಧಿಗೆ ಸಿಗುವನೆಂಬಾ ಪರಮ ಪುಣ್ಯಾತ್ಮಾ || 454 ||
ನಿರ್ಮಲನು ನಿಶ್ಚಂತ ಸುಖತನು
ಚರ್ಮ ನೇತ್ರದಿ ಪುರುಷರಿವರಿಗೆ
ಮರ್ಮ ನೇತ್ರವ ಕೊಡುವ ಪುರುಷನ ಮೊರೆಯ ಹೋಗಬೇಕೈ
ಧರ್ಮವಾದುಪದೇಶ ಮಾರ್ಗದಿ
ದಾಂಟಿಪನು ತನುಸಾಧನಿಲ್ಲದೆ
ಕರ್ಮಜನರೋಳ್ ಕಳಿತು ಕಲಿಯದೆ ಇರುವನೀ ಪರಿಯಾ || 455 ||
ತಾಳ ತಂಬುರಿ ಗೆಜ್ಜಿ ನುಡಿಸುವ
ಏಳು ಕುಂಭದೊಳೆಚ್ಚರಿರುವವ
ಬಾಳ ಜನರೋಳ್ ಬೆರದು ಪಾಡುವನಂತೆ ತಿಳದಿರುವಾ
ಏಳು ಮೂರೇಳಿಲ್ಲಿ ತೋರುವ
ಹೇಳಿದನೇ ಪರಮ ಪುರುಷವ
ಕೇಳಿದವಗಾನಂದ ಕೊಡುವವನೆಂದ ನಾ ಗುರುವಾ || 456 ||
ಬಾಹ್ಯದನುಭವ ತಾಳ ತೂಕವ
ರಮ್ಯ ತಂಬುರಿ ಚಿತ್ರ ತರಹವ
ಇಮ್ಮಹೀಸತಿದಾರ ಸುತರಾ ಗೆಜ್ಜೆ ಕಟ್ಟಿರುವಾ
ಮೃಣ್ಮಯಂ ತನು ಸಮೇತೇಳಿರು
ವನ್ಮಯಂ ಕುಂಭಗಳಿಟ್ಟಿಹ
ತನ್ಮಯವ ಕೊಡುವವನ ತೋರಿದ ರಾಜಗಂತರ್ಯಾ || 457 ||
ಬಾಹ್ಯ ವಿದ್ಯವದಂತರಂಗಕೆ
ಬ್ರಹ್ಮದನುಭವ ಕೊಟ್ಟ ಮಾರ್ಗಕೆ
ಸುಮ್ಮನದಿ ದೊರೆಮಗನು ಬಹು ಸಂತೋಷ ತಾ ಬಟ್ಟೂ
ನಮ್ಮ ಜನ್ಮವ ಪಾವನತ್ವವ
ಇಮ್ಮನಹ ಗುರುರಾಯ ಮಾಡಿದ
ರಮ್ಯದಿಂ ಮೆರಸುತ್ತ ನಗರಿಗೆ ಒಯ್ಯಬೇಕೆಂದಾ || 458 ||
ಒಯ್ಯಲೇಬೇಕೆಂದು ತನ್ನಯ
ಕೈಯ ಮುಗಿದೂ ಕೇಳಿಕೊಂಡನು
ಜೀಯ ನಾದಾ ದೈವದಾಂತರ್ಯಾಗಿರು ಪೇಳೀ
ಕೈಯ ಕಾಲುಗಳಿಲ್ಲದಾ ಮಹ
ಕಾರಣಾ ನರರಿಂದ ಹ್ಯಾಗಿಹ
ಪ್ರೀಯವಿಟ್ಟು ಸೇವಕನಿಗೆ ಪೇಳಬೇಕೆಂದಾ || 459 ||
ಸುತನೆ ಕೇಳೈ ಅಂತರಂಗದಿ
ಇತರನಿಲ್ಲದೆ ಇರುವದಯ್ಯಾ
ಸತತ ತಾನೇ ಬಾಹ್ಯದೆಂತವರಂತೆ ಬೆರದಿರುವಾ
ಮತಿಗೆ ಬೇಕಾಗಿದನು ಹುಡಕಲಿಬೇಕು
ಮರಿಯದೆ ನಾಳಿಗೆನ್ನದೆ
ಗತಕಾಲದಿನ ಕಲತು ಬರುವದು ಘಾಶೆ ಮುಂದೆಂದಾ || 460 ||
ಅಂತರಂಗದಿ ಬಹಿರ್ಭಾವದೊ
ಲೆಂತು ಇರುವನು ನರನು ಎನಗದ
ರಂತು ವಿವರಿಸಿ ತಿಳಿಪಡಿಸಿರೈ ವನಜಮುಖ ಮೂರ್ತಿ
ಕುಂತರೆದ್ದರು ಕಾಣಬೇಕಾ
ನಂತ ಸಂಶಯ ಛೇದಿಪಾ ಗುರು
ಶಾಂತ ರೂಪನೆ ದಯಾಭರಿತನೆ ದಯಮಾಡಿರೆಂದಾ || 461 ||
ಶೂನ್ಯನಾಗಿಹ ಸೂಕ್ಷ್ಮಾಂತರದಿ
ಮಾನವನ ಬೆರದಿಲ್ಲ ಬಾಹ್ಯದಿ
ದಾನವಾ ದೇವಾದಿಗಳಿಗೆಲ್ಲಧಿಕ ನೀ ತೆರದಿ
ಧನ್ಯನಾದಾ ದಾರಿ ನಿನಗೀ
ಧಾತ್ರಿಯಲ್ಲಿ ಸಿಕ್ಕಿತಾದೊಡೆ
ಪುಣ್ಯರಿಹರೀಗೆಮ್ಮ ಸುತೆಯರ ಬಿಡಬ್ಯಾಡವೆಂದಾ || 462 ||
ಮಧ್ಯರೂಪನು ಹ್ಯಾಗಿರುವನಾ
ಮಧ್ಯರಂಗಾ ಬಹಿರಂಗವಾ
ಸುದ್ದಿ ಎನಗಾಲಸ್ಯ ಮಾಡದೆ ಸಾರ್ವದೈ ಗುರುವೇ
ಮಧ್ಯವರ್ತಿಯ ವಿಚಾರಿಲ್ಲಿದ
ಸಿದ್ಧಪುರುಷಾದಾಗ್ಯು ದೋಷವೆ
ಬುದ್ದಿಗೀಗದು ಗ್ರಹಿಕೆ ಮಾಡೀ ಕೊಡಬೇಕು ಎಂದಾ || 463 ||
ಕಾಣುತಿಹ ಬಹಿರಂಗದೊಳಗಾ
ತ್ರಾಣಿ ನಿತ್ರಾಣಿಗಳ ಮಧ್ಯಾ
ಜಾಣನೀಪರಿ ನೆರಳಿಲ್ಲ ಜಾಡಿಲ್ಲವಂತರ್ಯಾ
ಪ್ರಾಣಪಿತನೆಂದಾತ ನಂಬಹು
ಪರಿಪರಿಯ ಪ್ರಾರ್ಥಿಪರು ಹಿರಿಯರು
ಪೂರ್ಣದನುಭವ ನಿನಗೆ ಲಭಿಸಿತು ಪುಣ್ಯ ನೀನೆಂದಾ || 464 ||

ಒಬ್ಬ ವೃದ್ಧನು ತನ್ನದೆಂಬದು ಮರಿಯದೇ ಧನ್ಯನಾದ ವಿಚಾರ
ಪುಣ್ಯಶಿಷ್ಯ ಶಿಖಾಮಣಿಯ ಕೇಳ್
ನಿನ್ನನಾನಿದ ಕೇಳ್ವೆ ಪೇಳ್ವದು
ಶೂನ್ಯನಿಹನೀ ಚಿತ್ರದೇರ್ಪಾಟೆಲ್ಲಿ ಕಾಂಬುವದೂ
ನಿನ್ನ ನೀ ತಿಳಿಕೊಂಬದೀಪರಿ
ಗನ್ಯರೂಡವಿಗಳೆನ್ನ ದೆನ್ನದೆ
ಧನ್ಯನಾದವನೊಬ್ಬ ವೃದ್ಧವ ನಿದ್ದೆದಂ ಕೇಳೈ || 465 ||
ಕೈಯೊಳಾಯುಧ ಕೊಡಲಿಯಿಂದಲಿ
ಕತ್ತರಿಸಿ ಕಾಷ್ಠಗಳ ತಂದೂ
ಪ್ರೀಯಳಾದಾ ಸತಿ ಸುತರುಗಳು ಜೀವಿಪರು ಹೀಗೇ
ಒಯ್ಯುತಿರಲಾ ಒಂದು ದಿನ ವಾ
ಕೈಯ ಕೊಡಲಿಯು ಸರಿದು ಭಾವಿಯ
ತೊಯ್ಯದೋಳ್ ಗತವಾಗಿ ಪೋಗಲು ದುಃಖಪಡುತಿರುವಾ || 466 ||
ದುಃಖಪಡುತಿರಲಾಗ ವೇಗದಿ
ಮಕ್ಕಳಾಮ್ಯಾಲ್ಮಾತೆ ಮೋಹದಿ
ಗಕ್ಕನೆ ಬಂದಂತೆ ಮಹನ್ಯನು ಬಂದು ಕೇಳಿದನೂ
ಕಕ್ಕಸಾಯಾಸದಲಿ ನಿನ್ನಯ
ಕಣ್ಣೀರು ತೆಗಿಪ್ಯಾಕೆ ಪೇಳೆನೆ
ಮಕ್ಕಳನ್ನಾಹಾರ ಕೆಟ್ಟಿತು ಕೊಡಲಿ ಹೋಯ್ತೆಂದಾ || 467 ||
ತಂದು ಕೊಡುವೆನು ನಿನ್ನ ಕೊಡಲಿಯು
ನೊಂದುಕೋಬ್ಯಾಡೆಂದು ಭಾವಿಯ
ಮಂದಿರೊಳು ಪೊಕ್ಕಾಗ ತಂದನು ಹೇಮದಾಯುಧವಾ
ಮುಂದಿಟ್ಟು ತೆಕ್ಕೊಂಡು ಪೋಗೆನೆ
ನಂದಿದಲ್ಲಿದು ದೈವದಾಣೆಯು
ನಂದಾದ್ದು ನಾ ತೆಗೆದು ಕೊಂಬುವೆ ನಾನಿದೊಲ್ಲೆಂದ || 468 ||
ಒಳ್ಳೇಯವನೆಂದಂತರಂಗದಿ
ಬಳ್ಳುವನು ಬಿಡಬಾರದೆನ್ನುತ
ಗಳ್ಳವಾಗಲಿ ಗಂಬುಧೀ ಇದ್ದರೂ ಇರಲೆಂದಾ
ಮುಳ್ಳನದೇ ಮೋಸಕ್ಕೆ ಬೆದರದೆ
ಹೊಳ್ಳಿದನು ಜಲದೊಳಗೆ ವರ್ಚ
ಸುಳ್ಳಬೆಳ್ಳಿಯ ಕೊಡಲಿ ತಂದಿದ ತೆಗದುಕೋ ಎಂದಾ || 469 ||
ನನ್ನದಲ್ಲಿದು ನಾನಿದೊಲ್ಲಿದು
ನನ್ನಾಣೆ ನಿನ್ನಾಣೆ ಹಿರಿಯರೆ
ನನ್ನದೆಂಬದು ನನಗನುಭವದು ನಾ ಹ್ಯಾಗೆ ಬಿಡಲೀ
ಚಿನ್ನವಾಗಲಿ ಚಿತ್ರವಾಗಲಿ
ನನ್ನ ಕೊಡಲಿ ಸಮಾನವಲ್ಲವ
ನೆನ್ನಲು ಕಪ್ಪುಳ್ಳ ಲೋಹದ ಕೊಡಲಿ ಕೊಟ್ಟವಗೇ || 470 ||
ಇದೇ ನನ್ನದು ಇದೇ ಹೋಗಿದ್ದದೇ
ದಯಮಾಡಿದಿರಿ ಧನ್ಯರೇ
ಸದಾ ನಿಮ್ಮನು ನೆನಸಿಕೊಂಬುವೆ ಮರಿಯದಶಯಂದಾ
ನಿಧಾನಿಸಿ ನೋಡೀ ಮಹಾತ್ಮನು
ಮದಾಧಾಂಕಾರಿಲ್ಲ ಇವಗಾ
ಪದಾರ್ಥ ಹೇಮ ಕೌಪ್ಯಂಗಳ ಕೊಟ್ಟು ಕಳುಹಿದನೂ || 471 ||
ಹೆಚ್ಚಿತೈ ಸಂಪತ್ತು ಹಿರಿಯರು
ಮೆಚ್ಚಿಗಾಶೀರ್ವಾದ ಮಾಡಲು
ಗಚ್ಚಿನಾಮೇಲ್ಮಾಡಿ ಗಾಡಿಯು ಘನವಿರಲು ಕಂಡೂ
ತುಚ್ಛ ಇನ್ನೊಬ್ಬವನ ಸ್ನೇಹಿತ
ಸಚ್ಚರಿತ್ರವ ಕೇಳಿ ಕೈಕೊಡ
ಲುಜ್ಜಿ ಬಾವಿಯೊಳೊಗದು ಬಹು ವೈಯ್ಯಾರ ಮಾಡಳುವಾ || 472 ||
ನಾಶಿಕಾ ಮಲವಿಲ್ಲ ಕಣ್ಣೊಳು
ಸೂಸುವಾ ಜಲವಿಲ್ಲ ನೋಡಲು
ಮೋಸಗಾರಿವನೆಂದು ಮಹನ್ಯನು ಮಾತಾಡಿಸಿದನೂ
ಏಸು ದಿನದಿಂದಳುವೆ ನಿನಗೀ
ಗಾಸೆ ಯಾತಕೆ ಪೇಳೆನಲ್ಕವ
ಮಾಸವಾಯಿತು ಕೊಡಲಿ ಭಾವೀ ವಳಗಾಯಿತೆಂದಾ || 473 ||
ಪ್ರೇಮವಾಯಿತು ನಿನ್ನ ವಾಕ್ಯವು
ನಾ ಮನದಿ ತಿಳಿದಾದೊಡೊಳ್ಳೆದು
ಸ್ವಾಮಿಹನು ಎಂದೆನುತ ಭಾವಿಯ ಹೊಕ್ಕುತಾ ತಂದಾ
ಹೇಮ ಕೊಡಲಿಯು ತಗೋ ಎನಲವ
ತಾಮಸವ ಮಾಡದಲೆ ತಾರೆನೆ
ಆ ಮಹಾಮಾನ್ಯ ನೀ ತುಚ್ಛೆಂದದನು ಕೊಡದ್ಹೋದಾ || 474 ||
ನನ್ನದೆಂದವ ಧನ್ಯನಾದವ
ತನ್ನದಲ್ಲದ ನನ್ನದೆಂದಿವ
ಮಾನ್ಯನಿವನಂ ಛೀಛೀ ಎಂದೂ ಮೆಚ್ಚದಲೆ ಪೋದಾ
ನಿನ್ನದೇನದು ದೈವ ಮಹಿಮೆಯೋ
ಳೆನ್ನಗೀದಿನ ಪೇಳಲೈ ದೊರೆ
ಚನ್ನವಾಗೀ ಹಂಸಕ್ಷೀರವ ತೆಗೆದಂತೆ ತೆಗಿಯೈ || 475 ||
ಜಿಹ್ಮದಾ ಮ್ಯಾಗಿರುವ ಜ್ಯೋತಿಯು
ರಮ್ಯದೋಳ್ ಬೆರದಿದ್ದು ಬೆರಿಯದ
ತಮ್ಮನುಗ್ರದಿ ನನ್ನದೆಂಬದು ಸಿಕ್ಕಿತೈ ಗುರುವೇ
ಬ್ರಹ್ಮವನು ಎಡೆಬಿಡದೆ ಇರುವದು
ಬಾಹ್ಯದನುಭವ ಪಾತ್ರನಾಗೀ
ಧರ್ಮವನು ದಯಮಾಡಿದಾಪ್ತನೆ ದಾಸ ರಕ್ಷಕನೇ || 476 ||
ಈ ಪರಿಯ ಜಗದೀಶನೊಂದಿದ
ಪಾಪ ರಹಿತಾದಂತ ಮಾರ್ಗವ
ಭೂಪತಿಯೆ ನಿನಗನುಭವಾಯಿತು ಘನವು ನಿನ್ನಸರೀ
ಭೂಪರಿಲ್ಲೈ ಭೂ ಪ್ರದೇಶದಿ
ಭೂಭಾರ ಜನರೆಲ್ಲ ಭಾರವು
ವ್ಯಾಪಕಾಗೀ ಕೆಡುವರೈ ಗುರುನಿಂದಕರು ಎಂದಾ || 477 ||
ಗುರುವು ಕಾಂಬುವದವ ಸ್ಥಲಕಾ
ನರಪರಮರಾವಲ್ಲಿ ಕಾಂಬುವ
ನರಪರಮ ಬ್ಯಾರಾಗಿ ಕಾಂಬುವ ದಾವ ಮುಖದಿಂದಾ
ನರನ ನಾಮಕೆ ವಿವರವೇನದು
ಪರಮನಾ ನಾಮಕ್ಕೆ ವಿವರಿಸು
ಬರಿದೆ ಬಾಯಿಂದಾಡಿ ಬಿಡುವರು ಬಿಡಬಾರದೆಂದಾ || 478 ||
ತರುಳಗೀ ಮಹಮ್ಮೇರು ಸಮವಾ
ಗಿರುವ ಮರ್ಮವು ಕೇಳಲಸದಳ
ಪರಿಯ ಪೇಳೀ ಕೇಳುತಿರುವಿರಿ ಪೇಳಬೇಕಿದನೂ
ತರುಳ ತಪ್ಪಲು ತಿದ್ದುವಾ ದಯ
ಭರಿತರಾಗಿರೆ ಭಯವದ್ಯಾತಕೆ
ಪರಮ ಕಾಂಬುವ ಮಹತ್ತಾದಾ ತ್ರಿವಿಧ ನೇತ್ರಕೇ || 479 ||
ಧರ್ಮ ನಿಜಗುರುವಾದಿರುಪನೆ
ಕರ್ಮನರನಿವ ಕಾಣ್ವಸ್ಥಲವೀ
ಚರ್ಮ ನೇತ್ರಕ್ಕಹುದು ದಗ್ದಾಪಟಲ ಪರಿಯಂತೇ
ಮರ್ಮರೂಪನು ಕಾಣ್ವ ಉಭಯಕ್ಕಾ
ಮಾರ್ಗ ಸತ್ಮಾರ್ಗ ಸಹಜಾ
ಕರ್ಮ ನರಪರಮನಿಹ ದ್ವಂದಾ ಮಧ್ಯವರ್ತಿಂದಾ || 480 ||
ಇದಕೆ ತಕ್ಕುಪಮಾನ ಶಿಷ್ಯನೆ
ಹೃದಯದಿಂ ಬಹಿರಂಗ ತೋರೈ
ಅದನು ಕಂಡೀಗ್ಹರುಷ ಪಡುವರು ಹಿರಿಯರಾದವರೂ
ಹದವಾಗ್ಯದೀ ದಂತರಂಗದೊ
ಳದರಂತೆ ಬಹಿರಂಗ ತೋರಲ್
ಮುದದಿ ತಮ್ಮಯ ಸಭಾ ಸ್ಥಾನದಿ ಮೆಚ್ಚುವರೈ ಎಂದಾ || 481 ||
ಕರದಿಂದ ಕತ್ತಲೂ ಬೆಳಕೆಂ
ಬೆರಡು ಕಾಣುವವಯ್ಯ ನಿಮ್ಮಯ
ಕರುಣದಿಂ ಮನೋ ನಿಶ್ಚಯಂಬದು ಕಾಣ್ವದುಪಮಾನಾ
ಕರವದಿಲ್ಲದೆ ಕತ್ತಲೂ ಬೆಳ
ಕೆರಡಿದೆಂಬದು ಕುರುಹು ದೋರದು
ಪರಮ ರೂಪದಿ ನರನ ರೂಪವರೂಪ ನಿಜವೆಂದಾ || 482 ||
ಕತ್ತಲೆನ್ನುವದೀಗ ಕಾಣುವ
ಹಸ್ತದೆನಬೇಕೇನದಲ್ಲದೆ
ಮುತ್ತಿನಂತಿಹ ಜ್ಯೋತಿಮುಖದಿಂ ಕತ್ತಲೆನಬೇಕೇ
ಚಿತ್ತ ಚಂಚಲ ಮಾಡಿಕೊಳ್ಳದೆ
ಶಿಷ್ಯನೇ ನೀನಿದನು ವಿವರಿಸು
ಸತ್ತು ಚಿತ್ತಾನಂದ ತ್ರಿವಿಧವು ಸಿಗುವದೈ ಎಂದಾ || 483 ||
ಸತ್ತು ಚಿತ್ತಾನಂದ ವಾಕ್ಯವ
ದೆತ್ತಿಕೊಟ್ಟರಿ ತ್ರಿವಿಧ ವಿದರೋಳ್
ಚಿತ್ತು ಇಲ್ಲದಕಿರಲಿಬಹುದಾ ಕತ್ತಲೆನ್ನುವದೂ
ಸತ್ತು ಎನುವದಕ್ಕೆ ಕತ್ತಲು
ಕಷ್ಟ ತನು ಬಾಧೆಗಳು ಇಲ್ಲವು
ಪ್ರತ್ಯಕ್ಷ ತೋರಿರವೆ ನೀನೇ ಸತ್ಯ ಗುರುವರನೇ || 484 ||

ಅರುವೇ ಗುರುವೆಂಬ ಮಾತಲ್ಲೆನಿಸುವೆ ವಿಚಾರ
ಪರಮ ರೂಪದಿ ನರನ ರೂಪವು
ಬೆರದಿರುವದದು ಬ್ಯಾರೆ ಈಗಳೇ
ತ್ವರಿತ ತೋರಲಿಬೇಕು ಬಹಿರಂಗೊಂದು ಸಾಕ್ಷಿಯಲೀ
ಅರುಪಿರುವೆ ನಿನಗದನು ಮುನ್ನವೆ
ಬೆರತಿರಲಿಬಹುದ ಏಳುಶಿಷ್ಯನೆ
ಮರತದಿಲ್ಲವು ಮಗನೆ ನಿನಸರಿ ದೊರೆಗಳಿಲ್ಲೆಂದಾ || 485 ||
ಜ್ಞಾನನೇತ್ರದ ಸ್ಥಲದಿ ಇಲ್ಲದ
ಮಾನವನ ರೂಪಲ್ಲಿ ಕಾಣ್ತಿಹ
ತಾನಿರುವ ಬ್ರಹ್ಮಸ್ವರೂಪವ ಬಹಿರಂಗ ಕಾಣ್ವಾ
ಕೂನವಿದು ಕಾಣಲ್ಕೆ ಕನ್ನಡಿ
ಕರಪಿಡಿದು ಕಲಿದಿನಸು ನೋಡಲು
ಮಾನವನ ತರಹ ರೂಪದರೋಳ್ ಕಾಣ್ವದೈ ಗುರುವೇ || 486 ||
ಇಂತಗಣಿತಾತ್ಮನುಭವಂಗಳ
ಗೆಂತ ಗುರುವರಬೇಕು ಮನಸಿನ
ಭ್ರಾಂತ ಬ್ರಹ್ಮಿರುವ ಕಾಣುವನಾಥಗನುಭವವೂ
ಕುಂತರೆದ್ದರು ಬಿಡದೆ ತೋರುವ
ಚಿಂತ ಸಂಶಯ ಛೇದಿಸುತ್ತಿಹ
ಇಂತ ಗುರುವಿನ ನರನು ಗುರುವಲ್ಲರುವೆನುವರಣ್ಣಾ || 487 ||
ಅರುವಿನಿಂದೇನಾಗುವದು ಕೇಳ್
ಮರುವು ತಾಕಲು ಮರಣಪಡುವದು
ಅರುವೆ ಗುರುವೆನೆ ತುರುಬು ಇಲ್ಲದ ಸಿರದ ಪರಿಯಾಯ್ತೈ
ಕರುಣ ಕೊಡುವವ ಗುರುವದಿಲ್ಲದೆ
ದೊರಿಯದೀಗಾ ಪರಮ ಮಾರ್ಗವ
ಪುರವ ಪೋಪದಕೊಬ್ಬ ಕಾರಣ ಪುರುಷ ಬೇಕಣ್ಣಾ || 488 ||
ಅರುವು ಬಂದಿಹುದಖಂಡೇಶನ
ಕುರುಹು ಕಾಂಬುದಕ್ಕಳಿಸಿ ಕೊಟ್ಟಿಹ
ನರಿಯದೇ ಬಂದವನ ದೊರಿಯನೆ ದೊರಿಯೇ ಇದು ಸರಿಯೇ
ನರರಮರ ವಿನ್ನೆಷ್ಟು ಪೇಳಲಿ
ಪರಿಪರಿಯ ದುಃಖದಲಿ ಸಿಗುವಾ
ಪರಿಯ ಕಾಣದೆ ಬಳಸುತಿರುವರು ಬಾಯ್ಗೆಬಂದಂತೇ || 489 ||
ಕುರುಡರಾನೆಯ ಕಂಡೆವಂದದಿ
ಹರುಷಪಡುವಾ ಸಮಯ ಕೊಬ್ಬುವ
ಕುರುಡರಾನೆಯ ಹ್ಯಾಗೆ ಕಂಡಿರಬಹುದು ಎಂದೆನುತಾ
ಬರುವನವನಾಗಲ್ಲಿ ನಿಂತಾ
ಕುರುಡರೇ ಹ್ಯಾಗಿತ್ತದಾನೆನೆ
ಚರಣ ಪಿಡಿದವ ಸ್ತಂಭವಂತವ ಪಿಡಿದವನಿಕೆಂದಾ || 490 ||
ಅರುವೆಂಬದೊಂದನು ಪಿಡಿದಾ
ಗುರುವೆಂದ ಮಾತಂಧಕರ ಸರಿ
ನಿರುತಿರುವನೋಳ್ ಒಂದು ಗುರುತದು ಭರಿತ ಬ್ಯಾರಿಹುದೂ
ಗುರುತಲ್ಲ ನಾನತ್ವ ಲಯವಾ
ದರಿತಂಗೆ ಸರ್ವಾಂಗನ ತುಂಬಿಹ
ದರಿಯದೇ ಪೇಳಲ್ಕೆ ನಗುವರು ಕೇಳೆಂದ ಗುರುವಾ || 491 ||
ಚೋರತನವಾಗುವದದರುವಲಿ
ಜಾರತನ ಚೆರಿಸುವದದರುವಿಲಿ
ಪೂರೈಸಿ ಪೂರ್ಣಾಗೊ ತನಕಾ ಪ್ರೀತಿ ಪಡಬಹುದೈ
ಚೋರನಿಗೆ ಸೆರೆಯಾಕೆ ತನಸುತೆ
ಜಾರೆ ದಂಡಿಪದ್ಯಾಕೆ ಬಿಟ್ಟರೆ
ಪೋರಿ ಕೆಟ್ಟಾಳಾಗಿ ಪೋಪುವಳರುವು ಗುರುವಿಂದಾ || 492 ||
ಕೆಟ್ಟು ಪೋಪಳು ಎಂದು ವಡಿಯಲು
ಎಷ್ಟು ದೋಷವು ಬಂದಿತಿದು ಕೇಳ್
ಶ್ರೇಷ್ಠ ಗುರುವರು ವಿಂದ ನಡವದು ನಷ್ಟ ಮಾಡಿದಡೇ
ದಿಟ್ಟರೀಪರಿ ಸತ್ಯವಂತರು
ಶ್ರಿಷ್ಟಿಯೋಳ್ ಕೇಳ್ಯಾರು ಬಿಡದೆಂ
ದಿಷ್ಟ ಬಂದಂತಾಡಿ ಪಾಡಲು ಕಷ್ಟ ಕೇಳೆಂದಾ || 493 ||
ಅನ್ನೋದಕವ ತಿನ್ನುವನ ಗುರು
ವೆನ್ನಬಹುದೇನೆಂದು ಕೇಳುವ
ರಿನ್ನನೇಕ ಜನಾವಳೀ ಉಂಟಿದಕೇನು ಪೇಳೀ
ತಿನ್ನಬಾರದು ಅನ್ನ ಬಿಟ್ಟರು
ವನ್ನನಾದಡೆ ಧನ್ಯನೆಂದಾ
ಪುಣ್ಯನೇ ಗುರುವೆಂದು ಭಾವಿಪೆವೆನ್ನುವರು ದೊರೆಯೇ || 494 ||
ಎನ್ನಲೀಜನ ಗುರುವೆ ನಾನೀ
ಬಿನ್ನಪವ ನಿಮ್ಮಲ್ಲಿ ಪೇಳುವೆ
ಎನ್ನುತಿರುವರು ಗುರುವೆ ಎಂದೂ ಶಿಷ್ಯಗಹುದಲ್ಲೆ
ಅನ್ನ ತಿನ್ನುವ ಶಿಷ್ಯನಾಗಿರು
ವನ್ನ ತಿನ್ನದ ಗುರುವಾದಡೀ
ಉನ್ನತದ ಉಭಯಾ ಪ್ರಸಂಗವು ಹೊಂದುವದು ಹ್ಯಾಗೇ || 495 ||
ಪಾಷಾಣಗಳಿಗನ್ನವಿಲ್ಲಾ
ರೋಷಾದಿಗಳು ಮೊದಲೆ ಇಲ್ಲಾ
ಲೇಸಾದ ನೇತ್ರಾ ಶ್ರವಣವಾ ನುಡಿಗಳೇ ಇಲ್ಲಾ
ಪಾಷಾಣವೆ ಗುರುವು ಶಿಷ್ಯರು
ಏಸುಜನರೊಡದಗ್ನಿಯಿಂದಲಿ
ನಾಶ ಮಾಡಲು ಸುಮ್ಮನಿರಲಿಕೆ ಹೀನಜನನಲ್ಲಾ || 496 ||
ಲೇಸಾದ ವ್ಯಾಸಾ ವಸಿಷ್ಠರು
ಪ್ರಾಸಾದ ಬಿಟ್ಟಿರ್ದರೆಂಬಾ
ಭಾಷಾಂತ್ರ ಘನ ಕಥಾರ್ತಂಗಳು ಬರಹವೇ ಇಲ್ಲಾ
ಮೋಸ ಜನರಾಡುವ ಮಾತಿದು
ಮೂರ್ಖ ಭಾವನೆ ಬ್ಯಾರೆನಿಲ್ಲವು
ನಾಶ್ಯಾಗಿ ಇರುವರಾಯ ಮನಾ ಘಾಶೆಯೋಳ್ ಗುರುವೇ || 497 ||
ಗುರುವು ಶಿಷ್ಯರವನ್ನದನುಭವ
ಪರಿಯಂಬರಾಭರಣವರಿಯದೆ
ಮರವಿನಿಂದಾಡೂವ ಮಾನವನರಿತೇನೋ ದೊರಿಯೇ
ಇರುವದು ಭಯವು ನಿನಗ ಮಾರ್ಗವ
ದರುವು ಮರವಿಗಳೆಂಬದದನಂ
ವರಿತು ಕೇಳಿದೆವಯ್ಯ ನಿನ್ನಯ ಪರಿಯ ಪೇಳೆಂದಾ || 498 ||
ಪೇಳುವೆನು ಕೇಳೈ ಗುರಾರ್ಯನೆ
ಕೇಳಿದೆನು ಘನ ನಿಮ್ಮ ವಾಕ್ಯವ
ತಾಳಿದೆನು ಮನದಲ್ಲಿ ಸಂಶಯ ತಮ್ಮ ಪ್ರಶ್ನಕ್ಕೇ
ಬಾಳಜನರನ್ನಂಬರಾ ಬರ
ಳ್ಹೇಳುವರು ಇವೆಯಲ್ಲದಲ್ಲದೆ
ಪೇಳಿದೈಯಾಂತರ್ಯ ತಿಳಿಸೈ ಎಂದನಾ ಶಿಷ್ಯಾ || 499 ||
ಪ್ರಾಣದಾಹಾರಿರುವ ರೂಪವು
ಪೂರ್ಣವಂಬರ ಜಮಾ ರೂಪವು
ತ್ರಾಣ ಸಪ್ತಾಭರಣ ಚೆರಿಯಾ ಬ್ರಹ್ಮಸೂತ್ರಗಳೂ
ಕ್ಷೋಣಿಯೋಳ್ ಬೆರಿಯದದು ನಿನ್ನಯ
ಶೂನ್ಯಗೊಂಬಿಯ ಬೆರಸಿದನುಭವ
ಕಾಣದಿದ್ದೆದು ಕಂಡೆ ನಿನ್ನ ಸಮಾನರಿಲ್ಲೆಂದಾ || 500 ||
ಬಾಹ್ಯದನ್ನವದಂತರಂಗಕೆ
ಬ್ರಹ್ಮದನುಭವ ಕೊಟ್ಟ ಮಾರ್ಗಕೆ
ಸುಮ್ಮನದಿ ದೊರೆ ಮಗನು ಬಹುಸಂತೋಷ ತಾ ಬಟ್ಟೂ
ನಮ್ಮ ಜನ್ಮವ ಪಾವನತ್ವವ
ಇಮ್ಮಹಾ ಗುರುರಾಯ ಮಾಡಿದ
ರಮ್ಯದಿಂ ಮೆರಸುತ್ತ ನಗರಿಗೆ ಒಯ್ಯಬೇಕೆಂದಾ || 501 ||
ಕರಸಿದನು ಮಹಮಂತ್ರಿ ಮಾನ್ಯರ
ತರಸಿದನು ಮಹಛತ್ರ ಚಾಮರ
ಕರಿತುರುಗ ರಥ ಪಲ್ಲಕ್ಕಿಗಳು ಎಲ್ಲ ಬರಲೆಂದಾ
ಮೆರಸಿದನು ಪಲ್ಲಕ್ಕಿಯೋಳ್ ಕು
ಳ್ಳಿರಿಸಿದನು ಗುರುರಾಯನನು ತ
ನ್ನರಮನೆಯತನ ಕೋಲಗವ ಮಾಡಿಸುತ ಕರದೊಯ್ದಾ || 502 ||
ಅರುವು ಸಿಂಹಾಸನದಿ ಮಹ
ಗುರುವರನು ಕುಳ್ಳಿರಿಸಿದನು ಪ್ರತಿದಿನ
ಪರುವು ಮಹಪ್ರಸ್ತಗಳು ಭೋಜನ ಮಾಡಿಸುನಾಗೀ
ಅರಸಿಯಳ ಇನ್ನುಳಿದ ಜನಗಳ
ಗುರುಚರಣದಲಿ ಮುಕ್ತರೆನಿಸಿದ
ಪರಿಪರಿಯ ಪುಷ್ಪ ಸುಗಂಧದಿ ಪೂಜಿಸುವನಾದಾ || 503 ||

ಗುರುವು ಜೀವಾತ್ಮ ಪರಮಾತ್ಮರಲ್ಲಿ ಪುಸಿತೋರಿದಾ ವಿಚಾರ
ಪೂಜಿಸುತ ಕೇಳಿದನು ಗುರುವಿನ
ಸೋಜಿಗವು ಮನದಲ್ಲಿದುಸಿತು
ಮಾಜಲ್ಯಾತಕೆ ತಮ್ಮಲ್ಲಿ ನಾ ಮನವೆ ಮಾಡುವೆನೂ
ಭೂಜನದಲಿಹ ತಿಳಿದ ಹಿರಿಯರು
ಮೂಜಗಂಗಳು ನಾನತ್ವ ಪುಶಿ
ಗಾಜಿನಂದದಿ ದರಿಯಂದರೈ ದಾವಾತ್ಮ ಗುರುವೇ || 504 ||
ಜೀವಾತ್ಮವಾಗುವುದು ಪುಸಿಯದು
ಯಾವ ಕಾಲದೊಳಿಲ್ಲದಿರುವದು
ದೇಹಾತ್ಮಕಾ ವಾಕ್ಯವಾಗದು ಜಡವಿರುತ್ತಿಹುದು
ಭಾವದಲಿ ಬಹಿರಂಗ ನಾಲ್ವರು
ಜಾವಕಲತಲ್ಲಿಂದ ಭಿನ್ನಿಸೆ
ತಾವಿರುವ ಸ್ಥಲದಲ್ಲಿ ಇದತಾ ಪರಿಹರೆಂದಾ || 505 ||
ಪುಸಿಯು ಜೀವಾತ್ಮಾದರಾಗಳೇ
ಪುಸಿಯು ಪರಮಾತ್ಮಹುದೆನುವೆನೈ
ರಸಿಕದ್ವಯಾದನುಭವೆನ್ನಗೆ ರಂಜನೆಯ ತೋರೈ
ಶಶಿಯ ತಾನಾಸಖ ಕುಮುದ ಗಳಿ
ಗೆಸವ ಭಾವದ ಮನೋಪುಷ್ಪವ
ಮುಸಿಮುಸಿಯು ನಗುವಂತೆ ಮಾಳ್ಪೆ ನೀನೆಂದನಾ ಶಿಷ್ಯಾ || 506 ||
ಅಹುದೆನಲು ನಿನ ವಾಕ್ಯಲೋಕ
ಕ್ಕಹುದಾಗದಿದಕೇನು ಪೇಳಲಿ
ಗಹುದು ನಿನಗಂತರ್ಯ ಬಹಿರಂಗಹುದಿರಲಿ ಬೇಕೋ
ಅಹುದು ಪರಮನಿಗಾಕಾರ ಪುಸಿ
ಗಹುದು ಜೀವಾತ್ಮಧಿಕಾರ ಪುಸಿ
ಗಹುದೆ ನಲುರಾಜಾ ನಂದದಿಂದಹುದಿದು ನುಡಿದಾ || 507 ||
ಮಾಡಿಸುತ ಕೇಳಿದನು ಸತ್ಯಾ
ವಾಡಿದಿರಿ ಗುರುರಾಯದನುಭವ
ನೋಡಿದೆನು ಮತ್ತೊಂದು ಸಂಶಯ ಮಾಡಿಕೊಂಡಿಹೆನೂ
ರೂಢಿಯಲಿ ಪುಸಿಪೂರ್ತಿದಾವದ
ದಾಡಿ ದಂತೀಗಹುದು ಮಾಡೀ
ಗಾಡಿಕಾರನ ತೆರನ ತೋರುವನೆಂದು ಪೇಳುವರೂ || 508 ||
ಪ್ರತ್ಯಗಾತ್ಮನು ಪುಸಿಯು ನಾನಾ
ಸತ್ಯ ಗಾರುಡಿ ಚರ್ಮಕಂಗಳಿ
ಗತ್ಯರುಷ ತೋರುತ್ತ ತೋರದಲದ್ರಶ್ಯವಿಹನೂ
ಕೃತ್ಯದಿಂ ಲೋಕಾ ಜನಾವಳಿ
ಗತ್ಯಧಿಕ ದುಃಖಾ ಕಟಾಹದಿ
ನಿತ್ಯ ಕೆಡುಹುವ ನೆನಲು ಗುರು ವಾಕ್ಯಹುದಿದಂ ನುಡಿದಾ || 509 ||

ಕನಿಷ್ಟ ಶಿಷ್ಯರ ವಿಚಾರ
ಲಾಲಿಸೈ ಗುರು ಸೇವಕನ ನುಡಿ
ಪಾಲಿಸೈ ಭಾವಾರ್ತದನುಭವ
ಶೀಲ ಮೂರುತಿ ತಾವೀ ಸ್ಥಲದಲಿ ಸ್ಥಿರವಿರಲಿ ಬೇಕೈ
ಲೀಲ ಗುರುವಾಕ್ಯನು ದಿನವು ಪರ
ಲೀಲಸೇರುವ ತನಕ ಶ್ರವಣಾ
ಲೋಲನಾಗುವೆನಯ್ಯ ನಿಮ್ಮನು ಬಿಡನೆಂವ ರಾಜಾ || 510 ||
ಎಂದ ಮಾತಿಗೆ ನುಡಿದ ಗುರುವರ
ಕಂದನೇ ನೀಕೇಳು ಇಂತಾ
ಬಂಧನದ ಭಾವ್ಯಾಕೆ ನಿನಸರಿ ಶಿಷ್ಯರಿಹರಲ್ಲಾ
ವಂದಿಕೆಗಳವರಲ್ಲಿ ಇರುವಂ
ತಂದವನು ನೀತಿಳಿಯದೀಪರಿ
ದ್ವಂದವಳಿದೇಕೈಕ್ಯ ದೃಢವನು ವಂದಿದ್ಯಾಕೆಂದಾ || 511 ||
ಎಂತ ಹೊಂದಿಕೆ ಎನಲು ರಾಜನು
ಶಾಂತ ಮೂರುತಿ ಪೇಳ್ದ ರಾಜಗೆ
ಕಾಂತೇಯಳು ಪೇಳುವಳು ಒಳಗಾ ಏಕಾಂತದಲ್ಲೀ
ಒಂತು ನಮ್ಮದು ಒಬ್ಬರೇ
ನಿಮ್ಮಂತೆ ಇನ್ನುಳಿದವರು ಇರಲವ
ರಂತೆ ಸುಮ್ಮನೆ ನೀನಿರು ಗುರು ತಾನೆ ತೆರಳುವನೂ || 512 ||
ತೆರಳುವಾ ಗಜವಳ್ವರಥವನು
ಇರಬೇಕಲ್ಲವೆ ಯಾಕೆ ಗ್ರಾಮಿದು
ಗುರುತಿಕೋ ಸುಲಭವಾಗಲ್ಲಿಗೆ ಹೋಗಬಹುದೆನುತಾ
ಹೊರಡಿಪರು ಮುಂದಾಡಿ ಮಾಡರು
ಕಿರಿಕೂಳರು ಈಪರಿಯಲಿರುತಿರೆ
ದೊರಿಯೆ ನೀನವರಂತೆ ನಡಿಯದೆ ದೃಢವಿದ್ಯಾಕೆಂದ || 513 ||
ನಿಶ್ಚಲದ ಬ್ರಹ್ಮದಯ ನ್ಯಾಯವ
ದುಶ್ಚಲದ ದುರ‍್ಮಾರ್ಗ ನರನಿಗೆ
ನಿಶ್ಚಯವ ಮಾಡವಗೆ ಸಮ್ಮತ ಪಡಿ ಪಯಾಸವದೂ
ಚೊಚ್ಚಲದ ಶಿಶುಮಗನ ಪಡವಾ
ಗ್ಹೆಚ್ಚಿನಾಯಾಸ ಮಹತ್ತದಾ
ಯಾಶ್ಚರ್ಯ ಉಂಟಾಗುವಾಪರಿ ಗುರುವು ಪಡುತಿಹನೈ || 514 ||
ಇಂತ ಗುರುವಿನ ರಿಣವು ಶಿಷ್ಯಂ
ಗೆಂತು ತಪ್ಪುವದಯ್ಯ ರಾಜನೆ
ಇಂತ ಗುರುವಲ್ಲಾತ ಮಂತ್ರಾ ಮುದ್ರ ಪೇಳುವಗೆ
ಎಂತಶಿಷ್ಯನು ನುಡಿದಂತೆ ನಡ
ದಂತರಂಗಕ್ಕಾನಂದಪಡಿ
ಪಂತ ಶಿಷ್ಯನ ರಿಣ ಬಾಧೆ ಗುರುಮ್ಯಾಲಿರುವದೆಂದಾ || 515 ||
ಎನಲು ಗುರುವಾನ್ಯಾಯ ಪೇಳಲು
ಮನದೊಳಾಲೋಚಿಸಿದ ರಾಜನು
ತನಗೆ ತಾಕಿತಿ ವಾಕ್ಯವೆಂದು ತಾನಾಗ ನುಡಿದಾ
ಮನವು ಭಾಸ್ಕರ ನಿಮ್ಮ ರಿಣಕೀ
ತನು ನಿವಾಳಿಸಿ ಮ್ಯಾಲೆ ನಿಮ್ಮಗೆ
ಘನ ಸಮಾಧಿ ಸ್ಥಲದಿ ನಿರ್ಮಿಸಿ ಪೂಜಿಸುವೆನೆಂದಾ || 516 ||
ಗುರುವು ಉಪದೇಶಿಸುವ ಸಮಯದಿ
ಗುರುವಿನ ರಿಣ ತೀರಲರಿಯದು
ಗುರುವೆ ಪರಿಪರಿ ಉಪಮಾನದಿಂದ ಹರುಷ ಪಡಿಸುವನೂ
ಗುರುವು ನಿಶ್ಯಬ್ದಾದ ಮ್ಯಾಲಾ
ಗುರು ಸಮಾಧಿಯ ಪೂಜಿಸುವ ಮಹ
ಪರಮ ಪುಣ್ಯರ ರಿಣವು ತೀರುವುದೆಂದು ಮಾಡಿಸಿದಾ || 517 ||
ವನಮಠವು ಶೃಂಗಾರ ಸಾಹಿ
ತ್ಯನುದಿನವು ಮಾಡಿಸುತ ತನಗಿಹ
ದನುಭವಾ ಬ್ರಹ್ಮಾಧಾರವನು ಬಾಹಳ ವಿಧವಿಧದೀ
ಮನನ ಮಾಡಿದ ಗುರುಮಹೇಶಗೆ
ಮನವು ಉಲ್ಲಾಸದೊಳು ವಳ್ಳಿಸಿ
ಘನವಾದ ಜಯಮಂಗಳಾರುತಿ ಪಾಡುತ್ತಾ ಬೆರದಾ || 518 ||