ಬರೆದೋದಿ ಪಠಿಸಿ
ಬರೆದೋದಿ ಪಠಿಸಿ ಬಸವಣ್ಣ ಮೊದಲಾದ ಶಿವ
ಶರಣರುಸುರಿದ ವಚನಗೀತಂಗಳ ||ಪಲ್ಲ||
ಶ್ರುತದೃಷ್ಟವನುಮಾನದಿಂದಿತರ ಸಮಯಗಳ
ಗತಿಗೆಡಿಸಿ ದ್ವೈತವದ್ವೈತಗಳನು
ಕೃತನಿಶ್ಚಯದೊಳಿನಿತು ಸಿತಗಳನ ಶರಣರ
ಪ್ರತಿಮರಿಳೆಯೊಳಗಾಡಿದಾಟವನು ||1||
ಗಣನೇಮ ಸಂಧಿ ಸಮಾಸ ಛಂದಶ್ಯಬ್ದ
ಮಣಿದರ್ಪಣದೊಳೆಲ್ಲ ಹುಡುಕಿ ನೋಡಿ
ಬಣ್ಣಿಸಿ ಹೇಳುವ ಕವಿ ಮಾತಲ್ಲ ಶರಣ
ಸನ್ಮತ4 [ದು] ಸಿರ್ದ ವಚನಂಗಳೆಲ್ಲವ ||2||
ಅಂಗಲಿಂಗವು ಲಿಂಗಸಂಗ ಷಟ್ಸ್ಥಲ ಕುಳಗ-
ಳಿಂಗಿತಗಳರಿದು ಆಚರಿಸಿ ಭವದ
ಭಂಗವನು ಪರಿವ ಪ್ರಸಂಗದಂಗವನು ಹೆರ
ಹಿಂಗದಿರೆ ಸಿದ್ಧಲಿಂಗನೊಲಿವ ||3||
ಕೊಡುಕೊಡುದೇವ
ಕೊಡುಕೊಡು ದೇವ ನೀ ದೃಡವುಳ್ಳ ಭಕ್ತಿಯ
ಮೃಡನಲ್ಲದನ್ಯವನರಿಯದ ಸುಖವ ||ಪಲ್ಲ||
ಗುರುವೆ ನಿಮ್ಮಯ ನಿಜನಿಲವರಿಯದೆ ನಾ
ದುರುಳತನದಿ ಮನ ಹರವರಿಯೊಳಗೆ
ಮರುತನಿದಿರ ದೀಪದಂತಿಹ ದೇಹವ
ಹೊರೆಯದೆ ಗುರುಸೇವೆಗಲಸದ ಸುಖವ ||1||
ಅಂಗದಿಚ್ಛೆಗೆ ಮನ ಭಂಗಬಡದೆ ನಿಜ
ಲಿಂಗವನಂಗದಿ ಕಂಗಳು ತುಂಬಿ
ಮಂಗಳಮಯನಾಗಿ ನೋಡುತ ನಲಿವುತ
ಲಿಂಗಪೂಜೆಗೆ ಮನವಲಸದ ಸುಖವ ||2||
ಕರಣಂಗಳ ಕಾತುರಕಾಗಿ ಅನ್ಯರ ಯುವತಿ
ಪರದ್ರವ್ಯ ಪರನಿಂದೆಗಳಿಗೆ
ಮರುಳಾಗದೆ ಸ್ಮರಹರನವತಾರದ
ಚರಲಿಂಗಭಕ್ತಿಗಾನಲಸದ ಸುಖವ ||3||
ಮತ್ತತನದಿ ಮಮಕರಿಸಿ ಲೋಕದೊಳಿಹ
ವರ್ತನೆಗಳಿಗೊಳಗಾಗದೆ ನಿಮ್ಮ
ಸತ್ತುಚಿತ್ತಾನಂದ ಭಕ್ತಿವಿಶ್ವಾಸದಿಂ
ನಿತ್ಯಪ್ರಸಾದವ ಸೇವಿಪ ಸುಖವ ||4||
ಗರಳವು ವಿಷಯರಸವ ಸೇವಿಸದಿಹ
ಪರಕೆ ಸಾದನವಹ ಗುರುವಿನ ಪಾದ
ಪರಮಾನಂದ ಪರಾಪರ ತಾ ಪರಿಪೂ
ರ್ಣ ಪಾದೋದಕಕ್ಕಲಸದ ಸುಖವ ||5||
ಪರಿಣಾಮಿಸಿ ಪರಿಪರಿಯುಪಚಾರದ
ನೆರವಿಯ ನಂಬದೆ ಮೃಡನ ಶರಣರೊ
ಳೆರವಳಿದಿಹ ನಿಜಶರಣರ ಸಂಗದೊಳ
ನುಭವ ತೃಪ್ತಿಯೊಳಾಡುವ ಸುಖವ ||6||
ಭಕ್ತಿ ಬಾವನೆಯ ವಿರಕ್ತಿಯು ಎನಗಿಲ್ಲ
ನಿತ್ಯ ನಿಮ್ಮಯ ಪಾದರಕ್ಷೆಯ ಹೊರುವ
ಭೃತ್ಯನಾಗಿ ನಾ ಮತ್ತೊಂದನರಿಯೆನು
ಕರ್ತೃ ನೀ ರಕ್ಷಿಸೊ ಗುರು ಸಿದ್ಧಲಿಂಗ ||7||
ಬಲ್ಲ ಸತ್ಪುರುಷರು
ಬಲ್ಲ ಸತ್ಪುರುಷರನರಿವ ಸುಜ್ಞಾನಿ
ಯಿಲ್ಲದ ದ್ವೈತದ ನುಡಿ ಬಲು ಹಾನಿ ||ಪಲ್ಲ||
ಸುಟ್ಟ ಮರದೊಳುಂಟೆ ಮುನ್ನಿರ್ದ ಶಾಖೆ
ಬಿಟ್ಟಿರ್ದ ತ್ರಿವಿದವ ಮುಟ್ಟಲೋಕರಿಕೆ
ಕಟ್ಟಿರ್ದ ಕೌಪಿನೊಳವದಾನ ಜೋಕೆ
ಇಷ್ಟಳವಟ್ಟಿರ್ದಗಾರಣ್ಯವೇಕೆ ||1||
ಜ್ಞಾನಶಕ್ತಿಯ ಕೂಟದಾಟ ಸುಸಂಗ
ದ್ಯಾನದಾರಣದನುಬಾವ ಪ್ರಸಂಗ
ತಾನುತಾನಾದ ಶರಣ ನಿಜಲಿಂಗ
ಕೀನಾಶನ ಹಂಗನಳಿದನಭಂಗ ||2||
ಕಷ್ಟಕಾಮನ ಸುಟ್ಟು ಬಿಟ್ಟ ವಿರತಗೆ
ಬಿಟ್ಟು ಹಿಮ್ಮೆಟ್ಟಿ ತೊಲಗಜ್ಞೆಯೊಳಗೆ
ಅಷ್ಟಮದಂಗಳ ಸುಟ್ಟು ಹರಿದಂಗೆ
ಬಟ್ಟಬಯಲು ಹುಟ್ಟು ಹೊಂದೆಂಬುವವಗೆ ||3||
ಇಂದುವದನೆಗಾಗಿ ಬಿಂದುವ ನೀಗ
ವಂದನೆಗುಬ್ಬಿ ನಿಂದನೆಗೋಡಿಹೋಗ
ಬಂದುದಾನಂದಿಪ ಸುಖ ಲಿಂಗಬೋಗ
ದ್ವಂದ್ವವನಳಿದು ನಿಂದುದುಶಿವಯೋಗ ||4||
ಹುರಿದ ಬೀಜವ ಬಿತ್ತಿದಡೆ ಪಲವಿಲ್ಲ
ಹರಶರಣರು ನರರೊಳಗೊಬ್ಬರಲ್ಲ
ಪರರಾಗುಚೇಗೆಗೆ ಗುರಿಯಹರಲ್ಲ
ಗುರು ಸಿದ್ಧಲಿಂಗವ ನೆರೆ ನಂಬಿರೆಲ್ಲ ||5||
ಭಕ್ತಿ ವಿಶ್ವಾಸಕೋವಿದನೈಮೊಗ
ಭಕ್ತಿವಿಶ್ವಾಸಕೋವಿದನೈಮೊಗ ಬೇರೆ
ತತ್ವವ ತಿಳಿದಹಂಕಾರಿಗೊಲಿಯ ನಹೋ ||ಪ||
ಡೊಂಬಿತಿಯೊಡನುಂಡ ಗುರುವಿನ ಶೇಷವ-
ನುಂಬವರಾರು ವಿಶ್ವಾಸದಿ ನಂಬಿ
ಕುಂಭಕುಚವೆ ಶಂಭುವೆಂದೋದಿ ಪಡಿಹೊನ್ನ
ಕೊಂಬುದು ಚೋದ್ಯವಲ್ಲವೆ ನೆರೆನಂಬಿ ||1||
ಗೂಗೆ ಶ್ರೀಗುರುವೆಂದು ನಂಬಿದವಗೆ ಭವ
ರೋಗವೈದ್ಯನು ತನ್ನ ನಿಜರೂಪುದೋರಿ
ರಾಗರಚನೆಯಿಂದ ಹಾಡಿಯರ್ಚಿಸಿದರ್ಗೆ
ಬೋಗಭುಕ್ತಿಯ ತೋರಿ ಜಾರುವನು ||2||
ವಾದಿಸಿ ದಾಯಾದ್ಯ ಬೋಧಿಸಲ್ಗುರುವಾಗಿ
ಬೇದಿಸಿ ಖಂಡ ಲಗಿನೊಳಿರಿಯಲ್ಕೆ
ಮೂದೇವರೊಡೆಯನೆಂದೆಂಬ ವಿಶ್ವಾಸ ಕೈ
ಗೂಡಿ ಮೆರೆ ದ ಸೇದಿರಾಜನೆಮ್ಮಯ್ಯ ||3||
ಆಡಿನ ಹಿಕ್ಕೆ ಮಳಲು ಬಳ್ಳ ಲಿಂಗವ
ಮಾಡಿ ಮೆರೆದ ಭಕ್ತರಾಡಿಸಿದಂತೆ
ಆಡುತ ರೂಢೀಶ ಪದವಿತ್ತು ನಂಬಿಗೆ ಹೀನ
ಮಾಡಿದ ಭಕ್ತಿ ಡಂಭಕರಿಗೊಲಿಯ ||4||
ಗುರುಚರಲಿಂಗ ಮಾನವನ ರಶಿಲೆ ಯೆಂದು
ತರಣಿಯಣುಗನ ಪುರವ ಸಾರದೆ ನೀ
ಗುರು ಸಿದ್ಧಲಿಂಗವ ಬೆರಸಿದ ಶರಣರ
ಚರಣವಿಡಿದು ಭವಶರಧಿಯ ದಾಂಟು ||5||
ಹೇಳಬಾರದು ಹೇಳದಿರಬಾರದು !
ಹೇಳಬಾರದು ಹೇಳದಿರಬಾರದು
ಬರಿ ಡಾಳಕರನು ಶರಣೆನೆ ನುಡಿದುಸುರಿ ||ಪ||
ಕಟ್ಟಿಕೊಂಡು ಮೇಲನರಿಯದೆ ಶೀಲವ
ಸಿಟ್ಟಾಟ ಸಿಡಿಮಿಡಿಗೊಂಡಾಡಲದು ತಾ
ಬಿಟ್ಟೂಬಿಡದು ಹೊಳೆಯ ಬಿದ್ದ ಕರಡಿಯ
ಮುಟ್ಟಲು ತೊಡರಿಕೊಂಡಂತಾಯಿತಯ್ಯಾ ||1||
ಅಂತರಂಗದ ಭವಿ ಯಾರು ತಮ್ಮೊಳಗವು
ಸಂತತವಿರುತಿರೆ ಶೀಲವ್ರತಗಳು
ಎಂತಳವಡುವದೊ ನಿರ್ದೇಹಿಗಲ್ಲದೆ
ಕಂತುಹರನ ಮೇಲೆ ಭಕ್ತಿನಿಷ್ಠೆಗಳು ||2||
ಭಕ್ತಿ ಜ್ಞಾನವೈರಾಗ್ಯ ಸತ್ಕ್ರೀಗಳ
ನಿತ್ಯನೇಮ ಕೃತ್ಯವಾಗಿ ನಡೆಸದೆ
ಮಿಥ್ಯ ರಾಗದ್ವೇಷ ಬಿಡದೆ ವ್ರತವು ನಿಮ-
ಗೆತ್ತಣ ಮೂದೇವಿ ಬಂದು ಕಲಕಿತೋ ||3||
ಹಾದಿಗೊಂಡು ಹೋಹ ಭೂತವ ಮನೆಯ
ಹೊಕ್ಕು ಹೋಗೆಂಬ ಗಾದೆಯ ಕಥೆ ನಿಮಗಾಯಿತು
ಪಾದವಿಡಿದು ಗುರುವೆಂದಾರಾಧಿಸಿ
ವಾದಿಸದೋಗತಿಗಿಳಿವರ ಕಂಡು ||4||
ಗಮಕದ ಗರ್ವಹಂಕಾರವ ಛೇದಿಸಿ
ಕ್ಷಮೆದಮೆ ಸೈರಣೆಯನು ನೆಲೆಗೊಳಿಸಿ
ಕ್ರಮವರಿದಾಚರಿಸುವ ಸದ್ಭಾವಿಗೆ
ನಮೋಯೆಂದೆದ್ದೆರಗುವೆ ಗುರು ಸಿದ್ಧಲಿಂಗ ||5||
ದೃಡಭಕ್ತರ್ಗಿದು ಬೋದೆ
ದೃಡಭಕ್ತರ್ಗಿದು ಬೋದೆ
ತಮವಡರಿದಗೀ ನುಡಿ ಗಾದೆ ||ಪ||
ಬಿಂಗದ ಹೊರೆಹೊರೆಯಂತೆ | ಲಿಂಗ
ಜಂಗಮದೊಳಗೆಲೆ ಬ್ರಾಂತೆ
ಸಂಗಿಸದಿರಲು ಚಿತ್ಕಾಂತೆ | ನಿನ
ಗಂಗವಾಗದೆ ಪೋಪಳಂತೆ ||1||
ಹಿಡಿದುದು ಶೀಲವ್ರತಗಳು | ಬಲು
ಸೆಡಕಿನೊಳಹಂಕಾರಿಗಳು
ಕೆಡುಕರೆಂದವರೆಡೆಗಳೊಳು | ದುಮ್ಮು
ದುಡುಕೆನುತಿದೆ ಹೃದಯದೊಳು ||2||
ಕೊಂಬುದು ತೀರ್ಥಪ್ರಸಾದ | ಬರಿ
ಡಂಬಕದಿಂದ ಹಸಾದ
ಯೆಂಬುದು ವರ್ತಕ ಬೇದ | ಗುರು
ನಂಬುಗೆ ಹೀನ ಹೀಗಾದ ||3||
ಸೊಡರುಲಿಗೆ ಮರುತನು ಹೊಲ್ಲ | ನಾಡ
ನುಡಿ ಬಡವಗೆ ತರವಲ್ಲ
ದೃಡಹೀನ ವ್ರತಕವ ಸಲ್ಲ | ಅವ
ನೊಡನಾಡಲು ಹುರುಳಿಲ್ಲ ||4||
ಹಾವುಮೆಕ್ಕೆಯ ಹಣ್ಣು ನುಂಪು | ಅಗ
ಡಾವಿನ ಮೊಲೆ ಮೈ ಸೊಂಪು
ಹಾವಿನ ಹೆಡೆಯಡಿ ತಂಪು | ಜಡ
ಬಾವಿ ತಾನಡರಿನ ಜಂಪು ||5||
ಕಾರ್ಯವ ಕುರಿತು ಹಿರಿಯರು | ಬಂದು
ಸೇರಿ ಭಕ್ತಿಯ ಮಾಡುವರ
ಚೋರರೆಂದರಿದು ನಾನವರ | ಕೆಲ
ಸಾರಿ ತೊಲಗಿದೆ ಹೂಸಕರ ||6||
ಇರ್ದ ಗುಣವನಾಡಿದರ | ಬಲು
ದುರ್ಜನರೆಂದು ದೂರುವರ
ನಿರ್ದಯವೆ ಒಡಲಹಾರ | ಗುರು
ಸಿದ್ಧಲಿಂಗನೊಲ್ಲನವರ ||7||
ನೋಡಿದಡೊಂದು ಪಾತಕ
ನೋಡಿದಡೊಂದು ಪಾತಕ ರತಿಗೆಳಸಿ ಮಾ-
ತಾಡಿದಡೈದು ಪಾತಕ ಪರಸತಿಯಾ ||ಪ||
ಸಂದಣಿ ಸಡಗರದಿಂದ ಬಳಗ ತಾಯಿ
ತಂದೆಗಳೊಪ್ಪಿ ಕೊಟ್ಟವನಿಗೆ ತಾನು
ನಿಂದ ಸಬೆಯ ಮುಂದೆ ಬಲಗೈಯ ಕೊಟ್ಟೆನು
ಸೌಂದರವುಳ್ಳಗೆ ಮನಸುಗುಂದುವಳ ||1||
ಸಾಲುಗಂಬಗಳೆರಡಾರು ಚಪ್ಪರ ಮಿಗೆ
ಕೇಲೈರಣೆ ಸಾಕ್ಷಿಯಾಗಿ ಭೂಮದೊಳು
ಹಾಲು ಪ್ರಸಾದವನೊಡನುಂಡು ಗಂಡಗೆ
ಸೋಲದೆ ಹಲಬರಿಗೆಳಸಿ ಹೋಗುವಳ ||2||
ಹಸೆ ನಿಂದ ಪುರುಷನ ಗಸಣಿಗೊಳ್ಳದೆ ತನ್ನ
ವ್ಯಸನಕೆ ರಸಿಕರ ಕಣುತುಂಬಿ ನೋಡಿ ನಸುನಕ್ಕು
ದೆಸೆಯನಾಲಿಸಿ ನೋಡಿ ಸವಿಮಾತಿ-
ನೆಸಕದಿಂದವಗೆ ಮೋಹಿಸಿ ಕರಗುವಳ ||3||
ಬಣ್ಣ ಬಂಗಾರವನಿಕ್ಕಿ ಕೈವಿಡಿದನ
ಕಣ್ಣಿಲಿ ನೋಡಿ ಕೂಡದೆ ಪ್ರೀತಿಯೊಳು
ಬಣ್ಣಿಸಿ ನುಡಿದು ಲಾವಣ್ಯದ ಚೆಲುವನ
ಕಣ್ಣು ಕೈಸನ್ನೆಯ ಮಾಡಿ ಕರೆವಳ ||4||
ಪುರಜನ ಮೆಚ್ಚದೆ ದರೆಯೊಳಕೊಳ್ಳದೆ
ಹರಶರಣರ ಸಂಗವತಿದೂರವಾಗಿ
ಗುರುಸಿದ್ಧಲಿಂಗದ ಕರುಣವ ತಪ್ಪಿಸಿ
ನರಕದ ಕುಳಿಯೊಳು ನೂಕಿ ಬಿಡುವಳ ||5||
ಎಚ್ಚರಿಕೆಗುಂದದಿರು
ಎಚ್ಚರಿಕೆಗುಂದದಿರು ಎಲೆ ಮನವೇ
ಲಿಂಗದೋಳ್ಬೆಚ್ಚು ಬೆರಕಿಲ್ಲದಿಪ್ಪ
ಭಕ್ತರಿಗೆ ಮೆಚ್ಚಿಯೊಡನೊಡನೆ ಬಪ್ಪ
ಅವರವರ ಇಚ್ಛೆಯನು ಸಲಿಸುತಿರ್ಪ
ನಂಬದಿಹ ಕುತ್ಸಿತರ ನಡೆ ಯನೊಪ್ಪ | ಮೃಡನು ||ಪ||
ಮುನ್ನಿನ ಪುರಾತರಾಚರಣೆ ಯಾರಿಗೆ
ಸಾದ್ಯವೆನ್ನುತೆಳತಟವ ಮಾಡಿ
ಕೆಡಬೇಡ ಸನ್ನುತದೊಳವರ ಹಾಡಿ
ಹೊಗಳುತಿಹ ಮಾನ್ಯರಿದ್ದಿರವ ನೋಡಿ
ಜ್ಞಾನಸಂಪನ್ನರಿಗೆ ಶರಣು ಮಾಡಿ
ದೈನ್ಯದಿಂದವರನುಪಚರಿಸಿ ಸ-
ನ್ಮಾನದಿಂ ಮನ್ನಣೆಯ ಮಾಡಿ ಕೂಡಿ
ಘನಕಿರಿದೆನ್ನದೆಲ್ಲರಿಗೆ ನೀಡಿ
ಮಿಕ್ಕ ಶೇಷಾನ್ನ ಸೇವನೆಯ ಮಾಡಿ
ಪರಮಪ್ರಸನ್ನ ಚಿತ್ಸುಖದೊಳಾಡಿ | ಇಂತು ||1||
ತ್ರಿಕಾಲ ಲಿಂಗಪೂಜೆಯು ತ್ರಿವಿದ ಭಕ್ತಿ
ಶಿವದ್ಯಾನ ನುತಶರಣ ಗುಣಸಂಗ
ಅದು ಲೇಸುಯೇಕಾಂತ ನೆನಹು ಲಿಂಗ
ಕರಿಗೊಂಬ ಜೋಕೆ ಭಕ್ತರಿಗಿದಂಗ
ಈ ಮಾರ್ಗ ಲೋಕದವರಿಗೆನ್ನಂಗ
ವ್ಯಾಕುಲದ ದುರ್ವರ್ತಕರ ಕಂಡು
ಭೂತಹಿತ ಸಾಕವರ ಸಂಗಭಂಗ
ದುರ್ಜನರ ವಾಕು ವಿಷವದು ಕಳಿಂಗ
ಅಂತವರೊಳೇಕವಾಗಿಹುದಸಂಗ
ಅದರಿಂದ ಬೇಕು ಜ್ಞಾನಪ್ರಸಂಗ | ನಿನಗೆ ||2||
ಆಗದಾಗದು ಭಕ್ತಿಯೆಮಗೆಂದು ಸಂ-
ಸಾರ ಬೋಗಕ್ಕೆ ಮನವು ಸೋಲ್ತು
ಮರೆಯದಿರು ಆಗಾಗಿ ನಿನ್ನ ಕೂರ್ತು
ಕರದೊಳದೆ ಬೇಗ ಕ್ರೀಪೂಜೆವೆತ್ತು
ಸಕಲ ಸುಖಬೋಗವಂ ಲಿಂಗಕಿತ್ತು
ಶ್ರೀಗುರುಲಿಂಗಜಂಗಮದೊಳತಿ
ಪ್ರೇಮಿಗಳ ಪಾದರಕ್ಷೆಗಳ ಹೊತ್ತು
ಕುಣಿದು ಭವರೋಗ ಬೇರುವನೆ ಕಿತ್ತು
ಗುರುಸಿದ್ಧಲಿಂಗಗಾತ್ಮಾನ್ನವಿತ್ತು
ಸುಖಿಯಾಗಲಿನ್ನಿಲ್ಲ ಕಾಲಮೃತ್ಯು | ನಿನಗೆ ||3||
ಸಂಗವಸಂಗದ ಬೇದ
ಸಂಗವಸಂಗದ ಬೇದವ ತಿಳಿದು ಪ್ರ-
ಸಂಗಿಸಬೇಕವರಿಂಗಿತವರಿದು ||ಪ||
ಸದ್ಭಾವರ ಸಂಬಾಷಣೆ ಕೀಸಿದ
ಕಬ್ಬನು ಸವಿದದ ಮೆಲುವಂತೆ
ದುರ್ಬಾವಿಗಳಿರ್ದೆಡೆಯೊಳು ನಿಂದಡೆ
ಹೆಬ್ಬಿದಿರೊಬ್ಬೆಯ ಸಿಗುರಂತೆ ||1||
ಒಳ್ಪಿನ ನುಡಿಗಳ ಬಲ್ಲವರಿಂಗಿತ
ಕರ್ಪೂರದ ಕರಡಿಗೆಯಂತೆ
ತಪ್ಪಿ ನುಡಿವ ಬೆಪ್ಪರ ಸಂಬಾಷಣೆ
ತಿಪ್ಪೆಯ ಕೆದರಿದ ತೆರನಂತೆ ||2||
ಕ್ಷಮೆದಮೆಯುತ ಸತ್ಪುರುಷರ ನಗೆ ಮಿಗೆ
ಕುಮುದಂಗಳು ಬಿರಿದರಳ್ದಂತೆ
ಕ್ರಮವರುಹಿದ ಗುರುವಿಮುಖರ ನಗೆಹೊಗೆ
ತಿಮಿರದ ನಯನವು ಕೆರಳ್ದಂತೆ ||3||
ಪಕ್ವ ಹೃದಯರೊಳು ತರ್ಕಿಸಿ ನುಡಿದಡೆ
ಸಕ್ಕರೆ ಜೇನುವ ಸವಿದಂತೆ
ವೆಕ್ಕಾಸಿ ಯೊಳಕ್ಕರು ಮಿಗೆ ನುಡಿದಡೆ
ಸೊಕ್ಕಡಿಕೆಯನೆ ಸವಿದಂತೆ ||4||
ಶ್ರದ್ಧೆಯೊಳಿಹ ಸಾತ್ವಿಕರ ಮೃದುನುಡಿ
ಕರ್ಜೂರದ ಸವಿರುಚಿಯಂತೆ
ನಿರ್ದಯ ನಿಷ್ಠೂರಿಯ ನುಡಿ ನೊಣ
ಬಿದ್ದಗಲುಂಡೋಕರಿಪಂತೆ ||5||
ಆವೆಡೆಯೊಳು ಸುಜ್ಞಾನಿಯ ನುಡಿ ಸಿಹಿ-
ಮಾವಿನ ಹಣ್ಣಿನ ರುಚಿಯಂತೆ
ಬಯಿಬಡುಕರೊಳು ನುಡಿದಡೆ ಕಹಿಸೋರೆ
ಬೇವನು ನಾಲಗೆ ಸವಿದಂತೆ ||6||
ಕಾಲೋಚಿತಗಳ ಬಲ್ಲರ ನಡೆನುಡಿ
ಹಾಲಕೆನೆಯ ಚಪ್ಪಿರಿದಂತೆ
ನೂಲಮಾಲೆಯ ಪೋಲರ ನುಡಿಗಳ ಲಾಲಿಸಿ
ಪಾಲಿಸಾ ಗುರು ಸಿದ್ಧಲಿಂಗ ||7||
ಸದರವೆ ವೀರಶೈವ
ಸದರವೆ ವೀರಶೈವದಿ ನಿಂದು
ಮದನಾರಿಯೊಡ್ಡಿದ ಮಾಯೆಯ ಗೆಲುವುದು ||ಪ||
ಜಾತಿಯಳಿದ ಸದ್ಭಕ್ತರ ನಡೆನುಡಿ
ಕೌತುಕವಾಗಿಹುದೀ ಜಗಕೆ
ಸೂತಕದೋರದ ಮದುವರಸಯ್ಯನ
ರೀತಿಯನರಿದಾಚರಿಸುವಗಲ್ಲದೆ ||1||
ಆದಿವ್ಯಾಧಿ ಸ್ತುತಿನಿಂದೆಯ ಗೆಲಿದು
ವಾದವೈಸ್ಯ ಷಡ್ಭ್ರಮೆಗಳ ಹಳಿದು
ಮಾದಾರಚೆನ್ನ ಚೋಳಿಯಕ್ಕನೊಕ್ಕುದನುಂಡ
ಮೂದೇಚರೊಡೆಯನ ಬೆರಸಿ ಕೂಡುವುದು ||2||
ಹಮ್ಮುಬಿಮ್ಮುಗಳವು ಶಿವಭಕ್ತರ
ಸೊಮ್ಮುಗಳಲ್ಲವೆಂದವ ನೇತಿಗಳೆದು
ಪೆರ್ಮೆಯಿಂ ಪರಬ್ರಹ್ಮವೆ ಶಿಶುವಾ
ದಮ್ಮವ್ವೆಯ ದೃಡಭಕ್ತಿಯೊಳಿಪ್ಪುದು ||3||
ಅಂಬಿಕಾಪತಿಗಡಿಗೆಯ ಮಾಡಿದು-
ದುಂಬ ಮಗನ ಕೊಂದೆಳೆದತ್ತಲಿರಿಸಿ
ಶಂಭುಶಿವನನೊಲಿಸಿದ ನಿಂಬ್ಯಕ್ಕನ
ನಂಬುಗೆವಿಡಿದಾಚರಿಸುವಗಲ್ಲದೆ ||4||
ತುಂಬು ಜವ್ವನೆ ರೂಪು ಲಾವಣ್ಯ ನಿ-
ತಂಬಿನಿ ರಜಶೀಲೆಯಾಗಿ ತಾನು
ತ್ರಿಯಂಬಕ ಗುರುಸಿದ್ಧಲಿಂಗವ ಬೆರೆಸಿದ
ನಿಂಬ್ಯಕ್ಕನ ನಿಜಭಕ್ತಿಯೊಳಿಪ್ಪುದು ||5||
ಆಗದಾಗದು ಅಲಗಿನ ಮೊನೆ
ಆಗದಾಗದು ಅಲಗಿನ ಮೊನೆ ಮಿಗೆ
ಶ್ರೀಗುರು ಲಿಂಗ ಜಂಗಮ ಭಕ್ತಿಯೆಂಬುದು ||ಪ||
ಸಲೆ ಶಿವಭಕ್ತರೆಲ್ಲರ ಮಾಡಿ ಭವಿಗಳ
ಸುಳುಹಿಲ್ಲದಲ್ಲಿಗೆ ಭವಿಯಾಗಿ ಬರಲು
ಮಲಹರನಾ ನೆನೆ ಬಿಡದೆ ದೀಕ್ಷೆಯ ಮಾಳ್ಪ
ಕಲಿಗಣನಾಥನ ಚಲ ಘಟಿಸುವುದು ||1||
ಮಂಡಲಪತಿಯೋರುಗಲ್ಲ ರಾಯನ ಕಾಲ
ಪೆಂಡೆಯ ಹಾರ ಹೀರಾವಳಿಯ
ಕೊಂಡೋಡಿ ಬಂದು ಕಳ್ಳರು ಮರೆಹೊಗಲು
ದಂಡಿಸಿ ಕೊಡದಿಹ ಗುಂಡಬ್ರಹ್ಮರ ಛಲ ||2||
ಅಣ್ಣಂಗೆ ತಂಗಿಯ ಮದುವೆಯ ಮಾಡಿ
ಸಣ್ಣ ವಸ್ತ್ರವ ಶಿವಗುಡಲಿತ್ತು
ಬಣ್ಣಿಸಿ ನುಡಿದು ಮುಕ್ಕಣ್ಣನ ನಗಿಸಿ ಕಾ-
ರುಣ್ಯವ ಪಡೆದಗ್ರಗಣ್ಯರ ನಡೆನುಡಿ ||3||
ಚಿಣ್ಣನ ಬಯಸಿ ಬೇಡಲು ಹಿಮ್ಮೆಟ್ಟದೆ
ಭಣ್ಣಿಸಿ ಬಾಣಸ ಮಾಡುಣಲಿತ್ತು
ಕಣ್ಣ ಕಳೆದು ಹರಗರ್ಪಿಸಿ ಮೆರೆದರು
ಕಣ್ಣಪ್ಪ ಶಿರಿಯಾಳ ಚಂಗಳವ್ವೆಯ ದೃಡ ||4||
ಇಷ್ಟಲಿಂಗವಲ್ಲದನ್ಯ ದೈವಂಗಳ
ದೃಷ್ಟಿಸಿ ನೋಡದೆ ಬಾವೆಯ ನರಿದು
ಖಟ್ಟಾಂಗದರ ಭಿಕ್ಷಕೆ ಬಂದು ಹರಿಯನೆ
ಹುಟ್ಟಿಲಿರಿದ ಸತ್ಯಕ್ಕನ ನಿಷ್ಠೆಯು ||5||
ಹೇಳಿ ಹೋದ ತಾಯಿತಂದೆಯ ನುಡಿಗಳ
ಲಾಲಿಸಿ ಕೇಳಿ ಕ್ಷೀರವ ಕಾಸಿ ತಂದು
ಬಾಳಲೋಚನನಿಗೆ ಹಾಲ ಸಲಿಸಿದ
ಕೋಳೂರ ಕೊಡಗೂಸಿನ ನಿಜಭಕ್ತಿಯು ||6||
ಬಣ್ಣಿಸಿ ಮದುವೆಯ ಮಾಡಿ ಜೈನನ ಕೂಡೆ
ಕನ್ನೆಯ ಕಳುಹಲು ದಾರಿಯೊಳು
ಪನ್ನಗದರನ ವಾಲ್ಯವ ಪೊಕ್ಕು ಕೊಂಡಾಡಿ
ಹೆಣ್ಣು ಗಂಡಾದ ಹೇರೂರ ಹೆಣ್ಣಿನ ಛಲ ||7||
ಶಿಕ್ಕು ತೊಡಕ ನೋಡಿ ಕಂಡಿರೆ ಮನೆಯೊಳು
ಪೊಕ್ಕ ಜಂಗಮವನು ಬಿಡೆನೆಂಬ ಬಾಷೆ
ಮಿಕ್ಕುವಿೂರಿ ಹೊಗಲು ಕಾಣುತಿರಿವುದು
ರಕ್ಕಸಬ್ರಹ್ಮನ ಭಕ್ತಿಯಬೇದ್ಯವು ||8||
ಸಂದು ಸಂಕೆಗಳಳಿದಾಡಿನ ಹಿಕ್ಕೆಯ
ತಂದು ಪೂಜಿಸಿ ಪುರಹರನೆಂದು ಬಾವಿಪ
ಕಂದನ ಮುಂದೆ ನಿಂದಿಸಿ ನುಡಿಯಲು ತಮ್ಮ
ತಂದೆಯ ತಲೆಯನೆ ತರಿದ ಗೊಲ್ಲಾಳನಾಟ ||9||
ಅಗಣಿತ ರಾಯಮನ್ನೆಯರೋಲಗದೊಳು
ಹಗೆ ಪರವಾದಿ ಬಿಜ್ಜಳನ ತಾವಿರಿದು
ಜಗದೊಳು ವೀರಾವತಾರದಿ ಮೆರೆದರು
ಜಗದೇವ ಮೊಲ್ಲೆಯ ಬೊಮ್ಮನವರ ಛಲ ||10||
ಬಗೆಬಗೆ ಭಕ್ತಿಯ ಮಾಡಿ ಕೂಡಿ ಮಿಗೆ-
ಯಗಜೆಯ ರಮಣನ ಪಾದಯುಗಂಗಳ
ಹೊಗಳುವ ಶರಣರ ಸಂಗವನಗಲದೆ
ಗುರು ಸಿದ್ಧಲಿಂಗವ ಬೆರೆದವಗಲ್ಲದೆ ||11||
ಕೇಳಿರೊ ಸಚ್ಚರಿತವನು
ಕೇಳಿರೊ ಸಚ್ಚರಿತವನು
ಗುರು ಪೇಳಿದ ಸದ್ಬೋದೆಯನು
ಮೇಳೈಸಾಚರಿಸುವನು
ಭವ ದಾಳಿಯ ಸುಟ್ಟುರುಹಿದನು ||ಪ||
ಮಾತಾಪಿತರಿಂದಾದ
ಶುಕ್ಲ ದಾತು ಶರೀರವು ಬಲಿದ
ಭೂತಗುಣವನತಿಗಳೆದ
ಗುರುಜಾತನು ಲಿಂಗವ ಪಡೆದ ||1||
ಪಡೆದಿಹ ಶಿಷ್ಯನ
ಹಸ್ತದೊಳು ಮೃಡ ನೆಲೆಸಿರೆ ಚಿತ್ತ
ದೃಡ ಘಟಿಸಲು ಮನ
ಸ್ವಸ್ಥಾದಿಂದೆಡವಿಡದರ್ಚಿಪ ಭಕ್ತ ||2||
ಭಕ್ತಗೆ ಪೂಜೆ ತ್ರಿಕಾಲಾ
ಚರತೃಪ್ತಿಯೆ ತನಗದು ಮೂಲ
ತೀರ್ಥಪ್ರಸಾದದಿ ಲೋಲ
ಭಯಭಕ್ತಿಯೊಳಿಪ್ಪುದೆ ಶೀಲ ||3||
ಶೀಲವ್ರತದಿ ನಡೆ ಶುದ್ಧ
ಭವಮಾಲೆಯನೆಲ್ಲವನೊದ್ದ
ಶೂಲಿಯ ನೆನಹು ಸಮೃದ್ದ
ನವಕಾಲನ ಬಾದೆಯ ಗೆದ್ದ ||4||
ಗೆದ್ದು ಜಯಸಿ ಸದ್ಭಾವ
ಮಿಗೆಯಾದ್ಯರ ವಚನನುಬಾವ
ಸಾದ್ಯವಾಗಲು ಮಹಾದೇವ
ಗುರು ಸಿದ್ಧ ಲಿಂಗನೊಲಿದೀವ ||5||
ತನ್ನ ಗುಣ
ತನ್ನಗುಣ ತನ್ನನಹುದಲ್ಲವೆಂದೆನಿಸುವದ
ಕಿನ್ನೋಕಿರ್ವರಿಲ್ಲನ್ಯವಾಗಿ ತನಗೆ ||ಪ||
ಜಿಹ್ವೆಯಿಂದಲಿ ಪರರು ತನ್ನವರದಾಗುವರು
ಜಿಹ್ವೆಯಿಂದಲಿಯು ತನ್ನವರೆ ತನಗೆ
ಅನ್ಯರಾಗುತ್ತಿಹರದೇನು ಕಾರಣ ತನ್ನ
ಜಿಹ್ವೆಯೊಳು ಶುಭವ ನುಡಿಯದ ಕಾರಣ ||1||
ಜಿಹ್ವೆಯಿಂದಲಿ ದುಃಖ ಜಿಹ್ವೆಯಿಂದಲಿ ಸುಖವು
ಜಿಹ್ವೆಯಿಂದಲಿ ಸರ್ವಸಾದ್ಯ ತನಗೆ
ಜಿಹ್ವೆಯಿಂದಲಿ ಸಕಲ ಸಾದನವದಹುದೆಂದು
ಜಿಹ್ವೆಯೊಳ್ ಶುಭವ ನುಡಿವವನುತ್ತಮ ||2||
ಜಿಹ್ವೆಯಿಂದಲಿ ಬಂದ ಜಿಹ್ವೆಯಿಂದಲಿ ಮೋಕ್ಷ
ಜಿಹ್ವೆಯಿಂದಲೆಲ್ಲ ಹಗೆ ಕೆಳೆಯು ತನಗೆ
ಜಿಹ್ವೆಯಿಂದಿಷ್ಟಗುಣವೆಂದರಿದು ಜಿಹ್ವೆಯೊಳ-
ಗನ್ಯರನು ಕೆಡೆನುಡಿಯದವನುತ್ತಮ ||3||
ಜಿಹ್ವೆಯಿಂದಲಿ ಕೋಪ ಜಿಹ್ವೆಯಿಂದಲಿ ಪಾಪ
ಜಿಹ್ವೆಯಿಂದಲಿ ಪುಣ್ಯ ಲೋಪವಹುದು
ಜಿಹ್ವೆಯಿಂ ತನಗೆ ಬಲು ತಪವೆಂದರಿದಿನ್ನು
ಜಿಹ್ವೆಯೊಳು ಲೇಸ ನುಡಿವವನುತ್ತಮ ||4||
ಜಿಹ್ವೆಯಿಂದಲಿ ಶುದ್ಧ ಜಿಹ್ವೆಯಿಂದಲಿ ಪೂಜ್ಯ
ಜಿಹ್ವೆಯಿಂದಲಿ ಪರಮಸಿದ್ಧಿ ತನಗೆ
ಜಿಹ್ವೆಯಿಂ ಪ್ರಣವ ಪಂಚಾಕ್ಷರಿಯ ಬಿಡದೆ ಆ
ಜಿಹ್ವೆಯೊಳ್ ಗುರು ಸಿದ್ಧಲಿಂಗವ ಸ್ಮರಿಸಿರೊ ||5||
ವಂದಿಸಿದಡುಬ್ಬಿ ನಿಂದಿಸಿದರೆಂದೆದೆಗೆಡುವ
ವಂದಿಸಿದಡುಬ್ಬಿ ನಿಂದಿಸಿದರೆಂದೆದೆಗೆಡುವ
ಹಂದೆ ಮನವೆ ದೈರ್ಯಗುಂದದಿರು ನೀ ||ಪ||
ನಗೆಹಾಸ್ಯರಸ ಕಟಕಿ ಪಗುಡಿ ಪರಿಹಾಸಕರು
ಜಗದೊಳಗಗಣಿತವುಂಟು ನೀನವರನು
ಬಗೆಗೊಳ್ಳದನುದಿನದೊಳಗಜೆಯರಸನ ಪಾದ
ಯುಗಳವನೆ ಬಿಡದೆ ಪೊಗಳೆಲೆ ಮನವೆ ||1||
ಚಿತ್ತಶುದ್ಧದಿ ಶರಣ ವರ್ತಿಸುವ ವರ್ತನೆಯ
ಸತ್ಯ ಸದುಹೃದಯರಲ್ಲದೆ ಮಿಕ್ಕಿನ
ಮಿಥ್ಯರಾಗದ್ವೇಷ ಬಿಡದೆ ನುಡಿವವರಿಗಿದಿ
ರುತ್ತರವ ಕೊಡದೆ ಸತ್ತಂತಿರುತಿರು ||2||
ಅಪವಾದದಿಂದಲತಿ ವಿಪರೀತದ ದುಃಖಗಳ
ತ್ರಿಪುರಾರಿ ತಂದೊಡ್ಡಲದ ಗೆಲುವಡೆ
ಸುಪಥ ಸುಜ್ಞಾನ ಸತ್ಪ್ರಣಮಪಂಚಾಕ್ಷರ
ಜಪದ್ಯಾನಮೌನಿಯಾಗಿರು ಸಾರಿದೆ ||3||
ಲಿಂಗಮಧ್ಯದಿ ಜಗವು ಜಗದ ಮಧ್ಯದಿ ಶರಣ
ಲಿಂಗಾಂಗಸಂಗಸುಖಿಯಾಗಿರುತಿಹ
ಇಂಗಿತವನರಿಯದಜ್ಞಾನದಿಂ ನುಡಿವ ಜಡ
ಜಂಗುಳಿಗಳೊಡನೆ ಪ್ರಸಂಗಿಸದಿರು ||4||
ಮತ್ತಮದಕರಿಗಂಜುವದೆ ಸಿಂಹ ಹಾವುಗಳ
ಮೊತ್ತಕಂಜದು ಗರುಡ ಮೂಜಗಕ್ಕೆ
ಕರ್ತ ಗುರುಸಿದ್ಧಲಿಂಗನ ಭಕ್ತಮುಕ್ತಗಿ
ನ್ನೆತ್ತಣದು ಭಯಭೀತಿ ಶಂಕಿಸದಿರು ||5||
ತಥ್ಯವ ನುಡಿ
ತಥ್ಯವ ನುಡಿದೊಡೆ ಮಿಥ್ಯಬಿಡದು
ಪರಮೂರ್ತಿಗಳಲ್ಲದಭಕ್ತಿರಿಗೆ ||ಪ||
ಹಿಡಿದುದ ಬಿಡಲಾರದ ತೊಡಕು
ಬಿಡದಾಚರಿಸುವ ಮನವೊಡಕು
ಒಡೆಯರ ಕಂಡಡೆ ಸಿಡಿಮಿಡಿಗೊಳ್ಳುತ-
ಲಡಿಗೆರಗಗಡಾವಿನ ಹೆಡಕು |1||
ಕಾಲೋಚಿತಕೊಡೆಯನ ಕರೆದು
ಆಲಸ್ಯದೊಳಡಿಗಳ ತೊಳೆದು
ಪಾಲಿಸಿ ತೀರ್ಥವನೆಂದಾ ಒಡೆಯರ
ಪಾದವ ಸೆಳೆವುದದೇತರದು ||2||
ತೀರ್ಥಪ್ರಸಾದವ ಕೊಂಡವರ
ಭೃತ್ಯರಾಗಿ ಮೈಮರೆದು ಪರ
ತತ್ವವೆ ಗುರುಚರವೆನ್ನದವರಿಗಿ-
ನ್ನೆತ್ತಣ ಮುಕ್ತಿಯೊ ವ್ಯರ್ಥರಿರ ||3||
ಸಹಬೋಜನ ಮನೆಮನೆಗೆಲ್ಲ
ವಿವಿರಿಸಿ ನೋಡಲು ನಡೆ ಹೊಲ್ಲ
ಭುವನದಿ ದುರ್ವರ್ತಕ ಬಿಡದವರೊಳು
ಭವಹರ ಶಿವಸವಿದುಣಲೊಲ್ಲ ||4||
ಲಿಂಗದ ಚೇತನ ಜಂಗಮವೆಂದು
ಹಿಂಗದೆ ಸಾರಿದ ಗುರುವಿಂತೆಂದು
ಭಂಗಬಡದೆ ಭಜಿಸಾ ಗುರುಸಿದ್ಧ-
ಲಿಂಗನೊಳವಿರಳದಿಂ ಸಲೆಸಂದು ||5||
ಅರಿಗಳಾರು
ಅರಿಗಳಾರಂತರಂಗದೊಳಡರಿ ಹರಿವುತಿವೆ
ಪರಿಹರಿಸಿ ನಿಲಿಸೊ ಶ್ರೀಗುರುಲಿಂಗವೆ ||ಪ||
ಕಾಮವೆಂಬುನ್ನತದ ಗಜ ಹಸಿದು ಡಾವರಿಸಿ
ಹೇಮಭೂಮಿಯು ಕಾಮಿನಿಯ ಗ್ರಾಸವ
ತಾ ಮಹಾ ಕೊಂಡು ತೃಷೆಯಡಸಿ ವಿಷಯದ ಜಲವ
ಪ್ರೇಮದಿಂ ಕುಡಿದು ಮದವೇರಿ ತಲೆಗೆ ||1||
ಕ್ರೋದವೆಂದೆಂಬ ಹುಲಿಯಾಕಳಿಸಿ ಬಾಯಿಬಿಡುತ
ವೇದಶ್ರುತಿವಚನ ಬಹುಪಾಠದಿಂದ
ಓದಿಯರ್ಥೈಸಿಯನುವರಿದಂತರಂಗದೊಳು
ವೇದಿಸುವ ಹಾದಿಯೊಳಗಡ್ಡಲಾಗಿ ||2||
ಲೋಭವೆಂಬುರಗ ಕಡಿದಾವರಿಸಿ ವಿಷವೇರೆ
ಕಾಬುದಿನ್ನೇನಭವ ಸಹಜಭಕ್ತಿ
ಶೋಭಿಸದೆ ಕರ್ಣದೊಳಗಿಬಗೆಯೆ ತಾಮಸದಿ
ಲಾಭವಿಲ್ಲದೆ ದರ್ಮಲೋಭವಾಯಿತ್ತು ||3||
ಮೋಹವೆಂಬತಿ ಸಿಂಹ ದೇಹವೆಂಬಡವಿಯೊಳು
ಜೀವಬಾವದೊಳಷ್ಟ ಮದಗಳೆಂಬ
ಆಹುತಿಯ ಮೇಹಿನೊಳು ಮೈಮರೆದು ಸತ್ಪಥದ
ತೋಹ ಕಾಣದೆ ತೊಳಲಿ ಬಳಲತಿದೇಕೋ ||4||
ಮದವೆಂಬ ಮರೆ ಶುಷ್ಕಪರ್ಣ ಪ್ರಪಂಚೆಂಬ
ಹುದೀಯ ಕರಿಕೆಯ ಮೇದು ಸತ್ಯವರತ
ಹೃದಯದೊಳು ಮೆಲುಕಿರಿವು
ತಿದಿರುಗಾಣದೆ ನಿಗುರು ನಿಂದಿರುತಿದೆ ||5||
ಮಚ್ಚರವದೆಂದೆಂಬ ಹುಚ್ಚುಗೊಂಡಿಹ ಕರಡಿ
ಹೆಚ್ಚು ಕುಂದಿಗೆ ಹೋರಿ ತೊಡರಿ ಬಿಡದೆ
ದುಶ್ಚರಿತವೆಂಬ ಕೈಕಾಲುಗುರಿನೊಳ್ಗೀರಿ
ಕೆಚ್ಚೆದೆಯ ಬಲುಗಲ್ಲ ಮೊರಡಿಯೊಳಗೆ ||6||
ಇಂತೆಸೆವ ಮೃಗವಾರ ಸಂತವಿಡಲಾರೆ | ಎನ
ಗೆಂತಯ್ಯ ಗುರುಸಿದ್ಧಲಿಂಗ ನಿಮ್ಮ
ಚಿಂತಿಸುವದೊಂದು ಸುಜ್ಞಾನವಿತ್ತುಳುಹಿ | ನಿ
ಬ್ರಾಂತನೆಂದೆನಿಸವರ ಬ್ರಾಂತಳಿವುದು ||7||
ಮೈಮರೆಯದಿರು
ಮೈಮರೆಯದಿರು ಬಂದ ಬವಣೆಯಂ ನಿನ್ನ ನೀ
ವಿವರಿಸಿಯೆ ತಿಳಿದು ನೋಡೆಚ್ಚರಣ್ಣ ||ಪ||
ತಾಯಗರ್ಭದೊಳು ಬಲಿವನ್ನಬರ ನವಮಾಸ
ಕೀವು ನೆಣ ಮಾಂಸ ನೆತ್ತರ ಕ್ರಿಮಿಗಳ
ಹೇಯದಿಂದತಿನೊಂದು ಪೊರಮಟ್ಟು ಭವರೋಗ
ಜೀವಂಗೆ ಗುರುಕರುಣ ವೈದ್ಯವಣ್ಣ ||1||
ಬಾಲನಾಗಿರ್ದು ಮೊಲೆವಾಲನುಂಡೆಲೆಲೆ ನೀ
ಪಾಲ್ಗುಡಿದು ಮೇಲನ್ನಪಾನದಿಂದ
ಬಾಲತ್ವ ಬಲಿದು ಯೌವನ ಕೊಬ್ಬಿಯುಬ್ಬಿನಿಂ
ಕಾಲಂಗೆ ಗುರಿಯಾಗಿ ಕೆಡದಿರೆಲವೋ ||2||
ರೋಗರುಜೆ ಬಡತನಗಳವು ಕೆಲವು ಕಾಲದಿಂ
ಹೋಗಿ ಸಿರಿಸಂಪತ್ತು ಸೌಬಾಗ್ಯದಿಂ
ಆಗಾದ ಕಾಲದೊಳು ಗುರುಲಿಂಗಜಂಗಮಕೆ |
ಬಾಗಿ ಭಕ್ತಿಯ ಬೇಗ ಮಾಳ್ಪುದಣ್ಣ ||3||
ನರೆತೆರೆಗಳಿಡಿದಡಸಿ ಶಿರಬೆನ್ನು ಬರಿ ಬಗ್ಗಿ |
ಕರೆದೊಡೊಂಭತ್ತು ನುಡಿಗೋ ಎನುತಿಹ
ಇವರ ಕಂಡೆಲ್ಲ ಗಹಗಹಿಸುವರು ನಗದ ಮು |
ನ್ನರಿದು ಸಚ್ಚರಿಯದಿಂ ನಡೆವುದಣ್ಣ ||4||
ಬಾಲಲೀಲೆಯೊಳಾಡಿ ಕೆಲೆದುಲಿದೆ ಪ್ರಾಯದಿಂ |
ಮೇಲೆ ಮುಪ್ಪಿನೊಳಾದಡೆಚ್ಚತ್ತಿರು
ಆಲಸ್ಯವೇಕೆ ಸಲೆ ಗುರುಸಿದ್ಧಲಿಂಗವನು |
ಪೂಜಿಸಲು ಭವಮಾಲೆ ಪರಿವುದಣ್ಣ ||5||
ಬಯಸಿದಡೆ ಬಯಕೆ ಘನ
ಬಯಸಿದಡೆ ಬಯಕೆ ಘನ ಬಯಸದಿರು ಬಾರದುದ
ಬಯಸಿದಡೆ ಬಯಸಾತ್ಮ ಶಿವಸುಖವ ನೀ ||ಪ||
ಉಂಡುಟ್ಟು ದಣಿವಾಯಿತೆಂಬುದೆಳ್ಳನಿಸಿಲ್ಲ
ಕಂಡುದನೆ ಬಯಸಿ ಬಾಯಾರುತಿರ್ಪ
ಭಂಡಮನವದಕೆಯದು ಸಹಜವೆಂದರೆ ಮರುಳು-
ಗೊಂಡು ಹರಿದಾಡದಿರು ಮನದಿಚ್ಛೆಗೆ ||1||
ಅಂಬರಾಭರಣವನುಲೇಪನಂ ಷಡುರುಚಿಯು
ತಾಂಬೂಲ ಮಜ್ಜನಾದಿಗಳೆಲ್ಲವ
ಮುಂಬರಿದು ನೆನೆನೆನೆದು ಬಯಕೆ ತೀರದ ಮನದ
ಬೆಂಬಳಿಯೊಳಾಡುವಗೆ ಬಹು ದುಃಖವ ||2||
ಉಂಬುದಂಬಲಿ ಹೊದೆವಡಂಬರವು ಕಂಬಳಿಯು
ಕುಂಭಿನಿಯನಾಳ್ವರಸುತನವ ಬಯಸಿ
ಹಂಬಲಿಸಿ ನೆನೆವ ಮನಕಣುಮಾತ್ರ ನಾಸಿಕ
ವೆಂಬುದೇತಕೆ ಪುಟ್ಟದೊ ಶಿವಶಿವಾ ||3||
ಆಸೆಯಿಂ ಗಾಸಿಯಾಗದರಾರು ದೇಶದೊಳು
ಈಶನಾರೋಪಿಸಿತ್ತದಕೆ ಮಿಗಿಲು
ಆಸೆಗೆಯ್ದಡೆ ಬಯಲ ಭ್ರಮೆಯ ಈಸಿ ಕೈಸಾರ
ದಾಸೆಯಿಂ ಭವಪಾಶವೆಲೆಯಾತ್ಮನೇ ||4||
ಬಂಗಾರಬಣ್ಣ ಮಿಗೆ ಶೃಂಗರಿಸಿ ನಡೆವನ್ಯ-
ರಂಗನೆಯರಂ ಬಯಸಿ ಕಣ್ಗಾಣದೆ
ಅಂಗಜನ ಬಲೆಯೊಳಗೆ ಬಿದ್ದು ಹೊರಳುವ ತಾಪಂ
ಹಿಂಗಿ ಸಲೆ ಗುರುಸಿದ್ಧ ಲಿಂಗನೊಲಿವ ||5||
ಭಕ್ತಿ ವಿರಕ್ತಿಸ್ಥಲ
ಭಕ್ತಿ ವಿರಕ್ತಿಸ್ಥಳವ ಮೃಡ
ವಿಸ್ತರಿಸೊರೆದ ಪಾರ್ವತಿಗತಿಹಿತವ ||ಪ||
ರತಿಯಳಿದವನೆ ವಿರಕ್ತಾ ಶಿವ
ರತಿಯೊಳಗರ್ಥವ ಸವೆದ ಸದ್ಭಕ್ತ
ಸ್ತುತಿನಿಂದೆಗಳುಕ ವಿರಕ್ತಾ ತ
ನ್ನತಿಶಯವನು ತೋರಿ ರೆಯ ಸದ್ಭಕ್ತ ||1||
ನಿರಾಸಕ ಪರಮವಿರಕ್ತಾ ವಿಶ್ವಾಸ
ಹರಿಸಿ ಮಾಳ್ಪ ಜಂಗಮಕೆ ಸದ್ಭಕ್ತ
ಹಾರೈಸನಾರ ವಿರಕ್ತಾ ಗುರುಚರ
ಶೇಷಪ್ರಸಾದದೊಳಗೆ ತೃಪ್ತ ಭಕ್ತ ||2||
ಸವಿಸಪ್ಪೆಗೆಳಸ ವಿರಕ್ತಾ ಪರ
ಯುವತಿಯ ರತಿಗಾಸೆ ಮಾಡ ಸದ್ಭಕ್ತ
ಶಿವದ್ಯಾನ ಘಟಿಸಲ್ವಿರಕ್ತಾ ಸಟೆ
ಕುಹಕ ಪ್ರಪಂಚಿಲ್ಲದವನೆ ಸದ್ಭಕ್ತ ||3||
ಶಾಸ್ತ್ರಕತೀಕ ವಿರಕ್ತ
ಜಾತಿಸೂತಕವಳಿದು ನಿಂದವನೆ ಸದ್ಭಕ್ತ
ಭೀತಿಯಳಿದವನೆ ವಿರಕ್ತ
ಕೀರ್ತಿವಾರ್ತೆಯ ಹೊಗದೆ ಮಾಡುವನೆ ಸದ್ಭಕ್ತ ||4||
ಶ್ರದ್ಧೆ ಸಮೃದ್ಧ ವಿರಕ್ತಾ ತನ್ನೊಳಿರ್ದುದ
ವಂಚಿಸದವನೆ ಸದ್ಭಕ್ತ
ಅದ್ವಯ ಶುದ್ಧ ವಿರಕ್ತಾ ಗುರು
ಸಿದ್ಧಲಿಂಗನೊಲಿದವನೆ ಸದ್ಭಕ್ತ ||5||
ಸದ್ಗುರು ಪೇಳಿದ ಮಾರ್ಗ
ಸದ್ಗುರು ಪೇಳಿದ ಮಾರ್ಗವ ಬಿಡದೆ
ಭರ್ಗನೊಳಗೆ ಮನಮಗ್ನವಾಗಿರು ನೀ ||ಪ||
ಭಸಿತ ರುದ್ರಾಕ್ಷಿಯ ನೊಸಲೊಳಿಟ್ಟು ತೊಟ್ಟು
ಅಸಮಾಕ್ಷಲಿಂಗದೊಳಗೆ ದೃಷ್ಟಿ ನಟ್ಟು
ಸಟೆಯಟಮಟ ಕುಟಿಲವ ಸುಟ್ಟುಬಿಟ್ಟು
ಪಶುಪತಿ ಸಾಮ್ರಾಜ್ಯವ ಪಟ್ಟಗಟ್ಟು ||1||
ಏಕತ್ರಿತಯವೇಕವೆಂಬುದನರಿದು
ಜೋಕೆಗೆಡದೆ ತನುಮನದನವ ಸವೆದು
ಲೋಕವೆ ಲೌಕಿಕವರ್ತನವಳಿದು
ಶ್ರೀಕಂಠನನರ್ಚಿಸು ಮನ ನಲಿದು ||2||
ತಿಲಾಭದ ಪೂಜೆ ದ್ರವ್ಯದ ಕೇಡು
ಪಾತ್ರಾಪಾತ್ರವನರಿದು ನೀ ಮಾಡು
ತೀರ್ಥಪ್ರಸಾದದೊಳಗೆ ಓಲಾಡು
ಪ್ರೀತಿಯೊಳ್ಗುರು ಸಿದ್ಧಲಿಂಗನ ಕೂಡು ||3||
ತ್ರಿವಿದಕೆ ತ್ರಿವಿದವ ಸವೆ
ತ್ರಿವಿದಕೆ ತ್ರಿವಿದವ ಸವೆಸುವ ಭಕ್ತರ
ತ್ರಿವಿದಪ್ರಸಾದ ಹಾರಿ ನಾ ಬಂದೆ ||ಪ||
ನುಡಿದಂತೆ ನಡೆ ನಡೆಯೊಳು ನುಡಿ ಪೂರಿಸಿ
ಮೃಡಶರಣರ್ಗತಿ ಮೋಹದೊಳು
ಅಡಿಗೆರಗುತ ನಿಜ ದೃಡವುಳ್ಳ ಭಕ್ತ
ಬೇಡಿಯಾತುರದಿಂದ ನಾ ಬಂದೆ ||1||
ನಿತ್ಯ ತ್ರಿಕಾಲದಿ ಲಿಂಗವನರ್ಚಿಸಿ
ಭೃತ್ಯತ್ವದೊಳತಿ ಜಂಗಮಕೆ
ತೃಪ್ತಿವಡಿಸುತ್ತಿಹ ಭಕ್ತರಂಗಳದೊಳು
ಚಿತ್ತ ನಲಿದು ಕುಣಿದಾಡುತ ಬಂದೆ ||2||
ಪಂಕ್ತಿಭೇದ ಪಾಕಬೇದವ ಮಾಡದೆ
ಕಂತುಮರ್ದನ ಶಿವರೂಪನೆ ಕಂಡು
ಸಂತೋಷದಿಂ ಮಾಡಿ ನೀಡುವ ಭಕ್ತರ
ಸಂತತ ಹಾಡುತ ಹೊಗಳುತ ಬಂದೆ ||3||
ಕಾಯಗುಣಗಳಳಿದಾವಗ ಗುರುಚರ
ಸೇವೆಗೆ ತನುಮನವಲಸದಿಹ
ಪಾವನ ಶರಣರ ದರುಶನದಿಂ ಭವ-
ರೋಗದ ಮಾಯೆಯ ನೀಗಲು ಬಂದೆ ||4||
ಅಂಗಲಿಂಗ ಲಿಂಗವಂಗದೊಳನುಭವ
ಸಂಗಿಸಿ ಗುರುಸಿದ್ಧ ಲಿಂಗವನು
ಹಿಂಗದಾಲಿಂಗಿಪ ಶರಣರೆ ಶಿವನೆಂದು
ಡಂಗುರವನು ಹೊಯಿದು ಸಾರ ನಾ ಬಂದೆ ||5||
ಅನ್ಯವಿನ್ನಲ್ಲ
ಅನ್ನವಿನ್ನಲ್ಲ ಭಿನ್ನಬಾವಿಯು ತಾನಲ್ಲ
ಪನ್ನಗದರನೊಳಗನನ್ಯವಾಗಿಹ ಭಕ್ತ ||ಪ||
ವಂಚಿಸದೆ ತನುಮನದನ ತ್ರಿವಿದವ
ಪಂಚಮುಖನ ಶರಣರ್ಗಿತ್ತು ಮಿಕ್ಕ
ಸಂಚಿತ ಶೇಷವ ಸೇವಿಪ ಭಕ್ತ ನಿ-
ರ್ವಂಚಕನೆನಗವ ಪ್ರಾಣಚೇತನನು ||1||
ಸ್ತುತಿನಿಂದೆಗಳುಕದೆ ಸತತ ದಾಸೋಹದೊ-
ಳತಿ ನಿಷ್ಠೆ ಬಲಿದಾಧಿವ್ಯಾಧಿ ಬಂದೆಡೆಯು
ಗತಿಗೆಟ್ಟು ಮತಿಗುಂದಿ ಮೈಮರೆಯದ ಸ
ದ್ವ್ರತ ಛಲಬಿಡದಚಲಿತ ನಿತ್ಯಮುಕ್ತ ||2||
ಅತಿಶಯವನು ತೋರಿ ಇತರನು ಮೆಚ್ಚಿಸ
ದೃತಿಗೆಡೆದೊರಕದಂತಿಹ ಪರಿಣಾಮಿ
ರತಿಯಿಂದ ಗುರುಸಿದ್ಧಲಿಂಗನ ಬೆರೆಸಿ-
ದಪ್ರತಿಮ ಶರಣಸಂತತಿಗತಿಹಿತನು ||3||
ಮಾಡು ಮಾಡು ನೀ ಮಾಡು
ಮಾಡು ಮಾಡು ನೀ ಮಾಡು ಸತ್ಪಾತ್ರಕೆ
ಮಾಡಿದ ಪಲ ಕೈಗೂಡುವದಣ್ಣ ||ಪ||
ಅಶ್ವಗೋದಾನ ಭೂಮಿಯು ಕರ್ಣಿಕೆ ಮಿಗೆ
ವಿಶ್ವಾಸದಿಂ ಶರಣರ್ಗಿತ್ತ ಪಲವು
ಶಾಶ್ವತ ಸಿರಿಯನು ಬೋಗಿಪ ಸುಖಿಗಳ
ಸಾಕ್ಷಿದೋರಿ ಸಾರುವ ಶ್ರುತಿಗೇಳಿ ||1||
ಒಂದೊಸ್ತ್ರವ ಶಿವಶರಣರ್ಗೀಯಲ್
ಚಂದ್ರದರನ ಸನ್ನಿಧಿಯೊಳು ತಾನು
ಒಂದೊಂದೆಳೆಗೊಂದು ಸಾವಿರ ವರುಷವು
ಕುಂದದೆಯಿಹನೆಂದೆಂಬೀ ಶ್ರುತಿಗೇಳಿ ||2||
ಅನ್ನವ ನೀಡದೆ ಹೊನ್ನ ದಾನವ ಮಾಡಿ
ಕರ್ಣ ಸುವರ್ಣಗಿರಿಗೆ ಗುರಿಯಾದ
ಉಣ್ಣದುಡದೆ ಮತ್ತಲ್ಲಿರೆ ಪಲವಿ
ಲ್ಲನ್ನದಾನ ಮಿಗಿಲೆಂಬೀ ಶ್ರುತಿಗೇಳಿ ||3||
ಹಿಂದೆ ಮಾಡಿದ ದಾನದರ್ಮದ ಪಲವದ
ರಿಂದವನಿಯನಾಳ್ವರಸಾಗಿ ಕರಿತುರ
ಗಂದಣ ಛತ್ರದ ಮಂದಿಯ ಸಂದಣಿ
ಮುಂದುಗ್ಘಡಣೆಯನರಿದು ||4||
ಅಂಗ ಪ್ರತ್ಯಂಗದೊಳಲಸಿಕೆ ತೋರದೆ
ಸಾಂಗದೊಳಷ್ಟವಿದಾರ್ಚನೆಯ
ಹಿಂಗದೆ ಮಾಡಲ್ಗುರು ಸಿದ್ಧಲಿಂಗ ಬೋ-
ಗಂಗಳ ಕೊಡುವನೆಂಬೀ ಶ್ರುತಿಗೇಳಿ ||5||
ಉತ್ತಮಾದಮರ ನಡೆ
ಉತ್ತಮಾದಮರ ನಡೆ ವರ್ತನೆಯ ಪೇಳ್ವೆ
ಸಮಚಿತ್ತದಿಂ ಕೇಳಿ ಸಾತ್ವಿಕರೆಲ್ಲರು ||ಪ||
ಹಿತವ ಮಾಳ್ಪವರಿಗತಿ ಹಿತವಂತನುತ್ತಮನು
ಪಿತಮಾತೆಯರ ಬೈವ ಸುತನದಮನು
ಅತಿ ಹಸಿದು ಬಂದವರ ಸತ್ಕರಿಸಲುತ್ತಮನು
ಮತಿಗೆಟ್ಟು ಪರಸತಿಗೆಳಸುವನದಮ ||1||
ಆಡಿಯಳುಪದೆ ನುಡಿದು ತಪ್ಪದವನುತ್ತಮನು
ಮಾಡಿ ದರ್ಮವನಾಡಿಕೊಳಲದಮನು
ಬೇಡಿದರ್ಗಣು ಮಾತ್ರ ನೀಡುವವನುತ್ತಮನು
ರೂಢಿಯೊಳು ಶಿವನ ಕೊಂಡಾಡದವನದಮ ||2||
ಬಲ್ಲವರ ಸೊಲ್ಲನಲ್ಲೆನ್ನದವನುತ್ತಮನು
ಸಲ್ಲದಾ ಮಾತ ಸಲಿಸುವನದಮನು
ಎಲ್ಲರೊಳು ಬಿರುನುಡಿಗಳಿಲ್ಲದವನುತ್ತಮನು
ಕಲ್ಲೆದೆಯ ಕಲಕೇತನೆಲ್ಲರಿಂದದಮ ||3||
ಹಿಡಿದ ನೇಮವ ಕಡೆಗೆ ನಡೆಸುವವನುತ್ತಮನು
ಮೃಡಶರಣರಡಿಗೆರಗದವನದಮನು
ಪಡೆದೊಡವೆ ಸತ್ಪಾತ್ರಕಿತ್ತಡವನುತ್ತಮನು
ಕಡು ಲೋಭಿ ಜಡನ ಬೇಡುವನದಮನು ||4||
ಏಕಾಂತ ಪಾತಕವ ನೂಕುವವನುತ್ತಮನು
ಕಾಕುಬುದ್ಧಿಯ ಬಿಡದೆ ಹೋಕನದಮನು
ಲೋಕದೊಳು ಗುರುಸಿದ್ಧಲಿಂಗಹಿತನುತ್ತಮನು
ವಾಕಿನಿಂ ಸಜ್ಜನರ ನೀಕರಿಸಲದಮನು ||5||
ನಂಬು ನಂಬು ನೀ ನಂಬು
ನಂಬು ನಂಬು ನೀ ನಂಬು ತ್ರಿಯಂಬಕ
ನಂಬಿದ ಭಕ್ತರ ಬೆಂಬಿಡನಯ್ಯ ||ಪ||
ನಂಬಿದ ನಂಬಿಗೆ ಹಡಪಿಗನಾದ
ನಂಬಿದ ಕುಂಬಾರನ ಮುಂದೆ ಕುಣಿದ
ಡೊಂಬಿತಿಗೊಲಿದೊಡನುಂಡ ಗುರುವ ನೆರೆ
ನಂಬಿದ ಭಿಲ್ಲಮರಾಯನಿಗೊಲಿದ ||1||
ಅಂಬರವನು ನೆಯ್ದಿತ್ತಗೊಲಿದು ಭವಾಂಬುಧಿ
ಯೆಂಬ ಹೊಳೆಯ ದಾಂಟಿಸುವ
ಅಂಬಿಗ ಚೌಡಗೊಲಿದು ಮಾದಾರನೊ
ಳಂಬಲಿಯುಂಡಭವನ ಪಾದವನು ||2||
ತುಂಬು ಜವ್ವನೆ ನಿಂಬಿಗೊಲಿದು ಮಲುಹಣಿಯ
ಹಂಬಲಿಸುವ ಮಲುಹಣನ ವಿರಹವ
ತುಂಬಿಸಿ ಪರಮಾನಂದಾಂಬುಧಿಯೊಳು
ಶಂಭು ಮೆರೆದ ವರ ಗುರುಸಿದ್ಧಲಿಂಗ ||3||
ಅರಿದರಿದು ಭಕ್ತಿ
ಅರಿದರಿದು ಭಕ್ತಿ ಮೃಡನೊಲಿದವಂಗಲ್ಲದೆ
ದೊರೆಕೊಳ್ಳದು ಬರಿ ಬಾಯ ಭುಂಜಕರಿಗೆ ||ಪ||
ಶಾಸ್ತ್ರಶಬ್ದವ ಕಲಿತು ಮಾತ ಬಣ್ಣಿಸಬಹುದು
ನೀತಿಮಾರ್ಗವ ನುಡಿದು ಹೇಳಬಹುದು
ಗೋತ್ರಬಂದುಗಳು ಬರೆ ಓತು ಮಾಡಲ್ಬಹುದು
ಪ್ರೀತಿಯೊಳ್ ಜಂಗಮಕೆ ಮಾಳ್ಪುದರಿದು ||1||
ಆದಿಯ ಪುರಾತರೋದಿದ ವಚನಗೀತವ
ನ್ನಾದರಿಸಿ ಕೇಳಿ ತಲೆದೂಗಬಹುದು
ಬೇದದೋರದೆ ಜಂಗಮವ ಕಾಣುತಿದಿರೆದ್ದು
ಪಾದಕೆರಗುವ ಭಕ್ತಿನಿಷ್ಠೆಯರಿದು ||2||
ಭಸಿತರುದ್ರಾಕ್ಷಿಗಳ ದರಿಸಿ ಮೃದುವಾಕಿನಿಂ
ಬಸವನಾಮದ ಭಕ್ತನೆನಿಸಬಹುದು
ಹಸಿದು ಜಂಗಮಲಿಂಗ ಬರಲವರ ಸತ್ಕರಿಸಿ
ಗುರು ಸಿದ್ಧಲಿಂಗವೆಂದೆಂಬುವರಿದು ||3||
ಎಚ್ಚತ್ತಿರೆಚ್ಚತ್ತಿರು
ಎಚ್ಚತ್ತಿರೆಚ್ಚತ್ತಿರು ಮನವೆ ನೀನೆಚ್ಚತ್ತಿರೆಚ್ಚತ್ತಿರು
ಮಚ್ಚಿ ಮೈಮರೆಯದೆ ಸತಿಯರಂಗವನರಿ ದರಿದೆ ||ಪ||
ಕ್ಷಣದೊಳಗತಿ ಮುನಿಸು ನಸುನಗೆ
ಕ್ಷಣದೊಳು ಸ್ನೇಹಮೋಹ
ಗುಣಯುತೆಯಂತೆ ಬಣ್ಣಿಸಿ ಪುರುಷನ ಬಾಯ
ಟೊಣೆದಣವುತ್ತಿಹಳು ||1||
ಪ್ರೀತಿಯ ಮಾಡುವಳು ಒಲಿದಂತೆ
ಕಾತರವನು ಪುಟ್ಟಿಸಿ
ದಾತನರಿದು ಸವಿಮಾತಿನ ಸೊಗಸಿಂದ
ನೀತಿಯ ಕೆಡಿಸುವಳು ||2||
ಪುರುಷನೊಲವನರಿದು ಪ್ರಸಂಗಿಸಿ
ಸರಸ ಸಮೇಳದಿಂದ
ಹರುಷವ ತೋರಿ ಜಾರುವಳಾತನ ಪ್ರಾಣ
ಹರಣಕೆ ಹಗೆಯಹಳು ||3||
ನುಡಿಯೊಳಗತಿಹಿತವೆ ತನ್ನ
ಒಡಲೊಳು ದುರ್ಮದವೆ
ಕಡುಗೋಪತನದಿಂದ ಕರಗಿಸಿ ಚಿತ್ತವ
ದೃಡಗೆಡಿಸುತ್ತಿಹಳು ||4||
ಇಂತೆಸಕದ ಕಪಟ ಹೆಂಗಳಿಗೊಲಿ-
ದಂತಕನೊಶನಾಗದೆ
ಸಂತತ ಗುರು ಸಿದ್ಧಲಿಂಗನ ನೆನೆದು ನಿ-
ಶ್ಚಿಂತನಾಗಿರು ಸಾರಿದೆ ||5||
ಮನವೆ ಸರಸವಾಡದಿರು
ನೋಡಿ ಕಾಮಿಸಿ ಸರಸವಾಡದಿರು ಪರಸತಿಯ
ಕೂಡೆ ಮೈಮರೆದೊಮ್ಮೆ ನಿನಗೆ ಮನವೆ
ಕೇಡೆಂಬುದರಿದು ಸುಜ್ಞಾನರೊಡನಾಡಿ
ಭವಬಾದೆಯನು ಪರಿಯೆಲೆಲೆ ಮನವೆ ಮನವೆ ||ಪ||
ದೃಷ್ಟಿಯಿಂ ನೋಡಿ ಮತಿಗೆಟ್ಟು ಪರಸತಿಗಳುಪಿ
ಕೆಟ್ಟವರನರಿ ಜ್ಞಾನ ಹುಟ್ಟಿ ಮನವೆ
ದಿಟ್ಟ ಕೀಚಕನು ಕಣ್ಣಿಟ್ಟು ದ್ರೌಪತಿಗಾಗಿ
ಕಟ್ಟುವಡೆಯಲು ಭೀಮನವನ ಮನವೆ
ಮುಟ್ಟಿ ಹಿಡಿದೊತ್ತಿ ಕೆಡಹಲ್ಕವನ ದೈರ್ಯಂ
ಗೆಟ್ಟು ಸತ್ತುದನರಿದು ನೀನು ಮನವೆ
ಬಿಟ್ಟು ಪರಸತಿಯರೆಂಬವರೆಲ್ಲ ನಿನಗೆ ಒಡ
ಹುಟ್ಟೆಂದು ಬಾವಿಸಲೆ ಮನವೆ ಮನವೆ ||1||
ಸೊಕ್ಕುಜವ್ವನ ಚೆಲುವೆ ರಂಬೆಯೋರ್ವಸಿಗಧಿಕ
ಲಕ್ಷ ಶತಸಹಸ್ರ ಪೆಣ್ಣಿರಲು ಮನವೆ
ಕುಕ್ಕುಟನು ತಾನಾಗಿ ಕೂಗಿ ಮುನಿಪನ ಸತಿಗೆ
ಸಿಕ್ಕಿ ಮೈ ಭಗವಾದ ಸುರನು ಮನವೆ
ಲೆಕ್ಕಿಪಡೆ ನಾಲ್ಕೆರಡು ಕೋಟಿ ಲಾವಣ್ಯದಿಂ
ಕರ್ಕಶ ಕುಚೆಯರಿರುತಿರಲು ಮನವೆ
ಸೊಕ್ಕಿ ರಾವಳ ಸೀತೆಗಳುಪಿ ಕೆಟ್ಟನು ಮನವ
ನಿಕ್ಕದಿರು ಪರಸತಿಯ ರತಿಗೆ ಮನವೆ ||2||
ಹರ ನಿರೂಪಿಸಿಕೊಟ್ಟ ಮಣಿಹದಿಂದೆಮರಾಜ
ಹರಿವಿರಿಂಚಿಗಳಾಗಲವರು ಮನವೆ
ಪರನಾರಿಗೆಳಸಿದರನಿರಿದಿರಿದು ಸುಡುವನೆಂ
ದದನರಿದು ನೀನನ್ಯ ವದುವ ಮನವೆ
ಗುರುಪತ್ನಿಯೆಂಬ ಬಾವವು ಮನಸುಕಾಯವಾ
ಕಿನೊಳಿರಲು ಮೋಕ್ಷವಹುದಿನ್ನು ಮನವೆ
ಸ್ಥಿರಚಿತ್ತದಿಂ ಬೇಗ ಗುರುಸಿದ್ಧ ಲಿಂಗನಂಘ್ರಿಯ
ಸ್ಮರಿಸು ನೀನೆ ಸುಖಿ ಮನವೆ ||3||
ಗುರುಪಾದವಿಡಿದು
ಗುರುಪಾದವಿಡಿದು ಗುರುಪೇಳಿದಂತಿರದೊಡದು
ಕುರುಡ ಕನ್ನಡಿಯ ಪಿಡಿದಂತಾಯಿತು ||ಪ||
ಪರಮಗುರುವಿಲ್ಲದುಪದೇಶವಿನ್ನೇನಾಯಿತು ?
ಹರಣವಿಲ್ಲದ ಶರೀರದಂತಾಯಿತು.
ಚರಲಿಂಗ ತೀರ್ಥಪ್ರಸಾದವಿರಹಿತ ಲಿಂಗ
ಮರದೊಳೊತ್ತಿದ ಲಿಂಗಮುದ್ರೆಯಾಯಿತು ||1||
ಹಸ್ತಮಸ್ತಕವೆಂಬ ವರ್ತಕವದೇನಾಯಿತು?
ಹುತ್ತದೊಳು ಹಸ್ತವಿಟ್ಟಂತಾಯಿತು.
ಭಕ್ತನಾದವ ಭವಿಯ ಬೆರೆದದಮದೈವವಿ-
ನ್ನೆತ್ತ ದೀಕ್ಷೆಯ ಮಾಡಲಿಂತಾಯಿತು. ||2||
ಬಾಷೆಹೀನಗೆ ಮಂತ್ರದುಪದೇಶವೇನಾಯಿತು ?
ಹೂಸ ಹುಂಡನ ಮಾಡಿದಂತಾಯಿತು
ಈಶ ಕರದೊಳಗಿರಲು ಹೇಸಿದೈವವ ನೋನೆ
ವಿೂಸಲನು ಶುನಿ ಮೂಸಿದಂತಾಯಿತು. ||3||
ಪಿಸುಣಂಗೆ ಕ್ರಿಯೆವಿಡಿದುಪದೇಶವೇನಾಯಿತು ?
ಹಿಸುಕಿಮಾಡಿದ ಹಣ್ಣಿನಂತಾಯಿತು.
ಅಸಮಾಕ್ಷಲಿಂಗವನು ದರಿಸಿ ಅಸುಗುಣವಿರಲು
ಪಶುವಿಗೊತ್ತಿದ ಮುದ್ರೆಯಂತಾಯಿತು. ||4||
ನಿಷ್ಠೆಯಿಲ್ಲದೆ ಭಸಿತವಿಟ್ಟಡಿನ್ನೇನಾಯಿತು ?
ಬೆಟ್ಟ ಬೇಗೆಯ ಬೆಳಗಿನಂತಾಯಿತು.
ಕೆಟ್ಟು ನಡೆವನಿಗಿಷ್ಟಲಿಂಗವಂ ಕಟ್ಟಲದು
ಬಿಟ್ಟವನ ನಿಷ್ಠುರನ ಮರೆಹೊಕ್ಕಿತು. ||5||
ಮತ್ತನಿಗೆ ತತ್ವಬೋದೆಯ ಬಿತ್ತಲೇನಾಯಿತು ?
ಮುತ್ತಿನೊಳು ಕರಡು ಬೆರದಂತಾಯಿತು.
ಚಿತ್ತಶುದ್ಧದಿ ಗುರುವ ಹರನೆನ್ನದವ
ಶಾಸ್ತ್ರವಿತ್ತಾದಡೆತ್ತು ಕಲಿತಂತಾಯಿತು. ||6||
ಕಡುಮೂರ್ಖ ಶಿಷ್ಯಗುಪದೇಶಿಸಿದಡೇನಾಯಿತು ?
ಒಡೆದ ಮಡಕೆಯೊಳುದಕದಂತಾಯಿತು.
ದೃಡಚಿತ್ತವಿಲ್ಲದವ ಹಿಡಿದಿರ್ದ ಲಿಂಗವದು
ನಡುಗಿ ಗುರುಸಿದ್ಧಲಿಂಗನೊಳಡಗಿತು. ||7||
ನರಜನ್ಮ ದೊರಕಿದಾಗಳೆ
ನರಜನ್ಮ ದೊರಕಿದಾಗಳೆ ಹರನ ಭಜಿಸಿನ್ನು
ಶರೀರವಳಿಯದ ಮುನ್ನ ಮರುಳು ಮನವೆ ||ಪ||
ಅಷ್ಟ ತನುಗಳ ಶಿವನು ಸೃಷ್ಟಿಮಾಡಲ್ಕಂದು
ಬಿಟ್ಟಗಲಿ ನಿಜವ ಮರೆದಂದಿಂದಲಿ
ಕಷ್ಟ ನಾನಾ ಜಾತಿಯೊಳ್ಪುಟ್ಟಿ ನರಜನ್ಮ
ಕಟ್ಟ ಕಡೆಯಾಟ ಹಿಮ್ಮೆಟ್ಟದಿರು ನೀ ||1||
ಹೊಟ್ಟೆಯಿಂದುಬ್ಬಸದಿ ಪೊರಮಟ್ಟ ದುಃಖವದ
ಬಿಟ್ಟು ಸುಖದೊಳಗಿಪ್ಪ ಠಾವದಕ್ಕೆ
ಹುಟ್ಟಿ ಸುಜ್ಞಾನ ಹೃದಯದೊಳಷ್ಟದಳ ಜೀವ
ನಷ್ಟವಾಗಲು ಭವದ ಬಟ್ಟೆಯಿಲ್ಲ ||2||
ಧರಿಸು ಭಸಿತವ ದುರಿತ ಹರಿದು ಪೋಪುದು ಬೇಗ
ಧರಿಸು ತ್ರಿಯಕ್ಷನಕ್ಷಯಮಾಲೆಯ
ಸ್ಮರಿಸು ಪಂಚಾಕ್ಷರಿಯ ವಾಙ್ಮನದೊಳೆಡವಿಡದೆ
ಗುರುಚರಣಕೆರಗಿ ಕರುಣವನು ಪಡೆಯ ||3||
ಶ್ರೀಗುರುವಿನುಪದೇಶದಾಗುದೋರಿದ ಬಳಿಕ
ಬೇಗ ಲಿಂಗದೊಳಷ್ಟಚಿದಪೂಜೆಯ
ಚಾಗು ಬಲ ಜಯತು ಭವರೋಗವೈದ್ಯನೆಯೆಂದು
ರಾಗದಿಂ ಪಾಡಿ ನೋಡೆಲೆಲೆ ಮನವೆ ||4||
ಲಿಂಗಕ್ಕೆ ಕಳೆಪ್ರಾಣ ಜಂಗಮದವದನದಿಂ
ಲಿಂಗಸಂತೃಪ್ತಿಯೆಂದರಿದರ್ಪಿಸಿ
ಜಂಗಮದ ಶೇಷಪ್ರಸಾದ ಪಾದೋದಕವ
ಹಿಂಗದಿರು ಗುರುಸಿದ್ಧಲಿಂಗನೊಲಿವ ||5||
ಒಂದೇ ದಿನ ಸಾಲದೆ
ಒಂದೇ ದಿನ ಸಾಲದೆ ಶಿವಸುಖವೊಂದೇ ದಿನ ಸಾಲದೆ
ದಂದುಗದೊಳು ಶತವರುಷ ಬಾಳ್ಪುದರಿಂದ ||ಪ||
ಭಿಕ್ಷದಾನ್ಯಗಳೀಯದೆ ಶಿವಸಮಯದಿ
ಪಕ್ಷವಿಲ್ಲದೆ ಲಕ್ಷವರುಷ ಬಾಳ್ಪುದರಿಂದ ||1||
ಗುರುಭಕ್ತಿಯೊಳವಿರಳ ವಿಶ್ವಾಸದಿ ಶಿವ
ಶರಣರಿಗೊಸ್ತ್ರಾನ್ನವ ಸವೆಸುವ ||2||
ಭಸಿತ ರುದ್ರಾಕ್ಷೆಯ ದರಿಸಿ ಲಿಂಗವ ಬಿಡ-
ದಸಮ ಪಂಚಾಕ್ಷರ ಸ್ಮರಣೆಯೊಳಿರುತಿಹ ||3||
ಭಕ್ತಿಯೊಳತಿ ಭೃತ್ಯತ್ವದಿ ಜಂಗಮ
ಕರ್ಪಿಸಿ ತೀರ್ಥಪ್ರಸಾದವ ಸೇವಿಸುವ ||4||
ನಿರ್ದರದೊಳಗಷ್ಟಾವರಣವು ಗುರು
ಸಿದ್ಧಲಿಂಗೇಶನೆಂದರಿದಾಚರಿಸುವ ||5||
ಸೊಗಸದು ಮಿಗೆ ತಥ್ಯದ ನುಡಿ
ಸೊಗಸದು ಮಿಗೆ ತಥ್ಯದ ನುಡಿ ಕೆಲರಿಗೆ
ಅಘ[ಹರ]ಶರಣರ ಗೀತಗಳು ||ಪ||
ಗುರುವಿಗೆ ತನು ಹರನಿಗೆ ಮನ ದನವನು
ಚರಕರ್ಪಿಸಿ ಚರಣಾಂಬುವನು
ಪರಮಪ್ರಸಾದವ ಸೇವಿಪ ಸುಖವದ
ನೊರೆದುಸುರುವ ವಚನಾಗಮವು ||1||
ಭವಿಸಂಗವ ಮಾಡುವ ನಿಂದಕರಿಗೆ
ಪರದನವನು ಪರಯುವತಿಯರ
ಬಯಸಿ ನೆರೆವರಿಗೆ ಶರಣರ ವಚನವು
ಕಿವಿಗೇಳಲು ಸರಳಂಬುಗಳು ||2||
ಉಂಡಮನೆಯ ದೂರುವರಿಗೆ ಹಿರಿಯರ
ಕಂಡಡಿಗೆರಗದೆ ನುಡಿನುಡಿಗ
ಬಂಡುಗೆಡೆದು ಬಾಷ್ಕಳಗೆಡೆವವರಿಗೆ
ಜೊಂಡದು ಪರಮಾರ್ಥದ ನುಡಿಯು ||3||
ಸತಿಸುತಮಾತೆಪಿತರೊಳತಿ ಪ್ರೀತಗೆ
ವ್ರತಗೇಡಿಗೆ ಮತಿಹೀನರಿಗೆ
ಕೃತಕವ ಮಾಡಿ ಕುತರ್ಕವ ಹಣ್ಣುವ
ಗತಿಗೇಡಿಯ ಶ್ರೋತ್ರಕೆ ವಚನ ||4||
ಪಾಪಕೆ ಹೇಸದ ಕೋಪಿಗೆ ಕರ್ಮದ
ಕೂಪದೊಳೋಲಾಡುತಿಹಗೆ
ಲೋಪವು ಶಿವವಚನವು ಗುರುಸಿದ್ಧಲಿಂಗನ
ವ್ಯಾಪಿಸಿ ಹೃದಯದಿ ನೆನೆಯದಗೆ ||5||
ಇರ್ದು ಪಲವೇನು?
ಇರ್ದು ಪಲವೇನು
ಇರ್ದು ಪಲವೇನು ಶರಿರದೊಳವೆಯವು ||ಪ||
ಭವಿಸಂಗ ಭವವೆಂದು ವಿವರಿಸಿ ಪೇಳುವ
ಶಿವರಹಸ್ಯಂಗಳನರಿಯದೆ
ಭುವನದೊಳನ್ಯಮತವನಾಲಿಸಿ ಕೇಳ್ವ
ಕಿವಿಯದು ವ್ಯಾಘ್ರಂಗಳಿಹ ಗವಿ ||1||
ಮುಕ್ಕಣ್ಣನಕ್ಷಿರೂಪಾಗಿಹ ಮಣಿಭಸ್ಮ-
ವಿಕ್ಕಿ ದರಿಸಿ ಶಿವಶರಣರ್ಗೆ
ಅಕ್ಕರಿಂದಡಿಗೆರಗದೆಯಾಭರಣವ
ನಿಕ್ಕಿ ಮೆರೆವ ತ್ವಕ್ಕು ಶ್ರವವಕ್ಕು ||2||
ಪುಣ್ಯವೆ ರೂಪಾದ ಕರಕಮಲದೊಳಗ್ರ
ಗಣ್ಯ ಮೂರುತಿ ಶಿವಲಿಂಗವ
ಬಣ್ಣಿಸಿ ಪಾಡಿ ಪೊಗಳಿ ನೋಡದೆ ಪರ
ವೆಣ್ಣ ನೋಡುವ ಕಣ್ಣೊಡೆದ ಹುಣ್ಣು ||3||
ಯೌವನ ರೂಪಲಾವಣ್ಯಾದಿ ಮೈಮರೆದ-
ಭವಗರ್ಪಿಸದೊಂದನ
ಒಯ್ಯನೆ ಷಡುರುಚಿದ್ರವ್ಯವ ಭುಂಜಿಪ
ಜಿಹ್ವೆಲಂಪಟರಿಗನ್ನವೇವೇಳ್ವೆ ||4||
ಸೂಸುವ ಮರುತನ ಪಾಶವ ಪರಿದು ದು-
ರ್ವಾಸನೆಯಳಿದು ಸುವಾಸನೆಯ
ಈಶನಿಗರ್ಪಿಸಿ ಶೇಷವ ಸುಖಿಸದ
ನಾಸಿಕವದು ತಾನೆ ಮೂಷಕ ||5||
ಸದಮಲಜ್ಞಾನ ಸುದಾಮೃತ ಪರಿಪೂರ್ಣ
ತುದಿಮೊದಲಿಲ್ಲದೆ ಶರೀರದಿ
ಪುದುಗಿರ್ದ ನಿಜವನು ಮುದದಿಂದ ನೆನೆಯದ
ಹೃದಯ ತಾ ಮದನನಿರುವ ಸದನ ||6||
ಶ್ರೋತ್ರನಾಸಿಕಜಿಹ್ವೆನೇತ್ರತ್ವಕ್ಕುಹೃದಯವು
ವಕ್ತ್ರವೆಂದಿವು ಗುರುಸಿದ್ಧಲಿಂಗನ
ಬೇತ್ರವನರಿದಾಚರಿಸುವ ಶರಣರ
ಸ್ತೋತ್ರಕಲಸುವನಪಾತ್ರನು ||7||
ಸಂಗವಲ್ಲದವರ ಸಂಗಭಂಗ
ಸಂಗವಲ್ಲದವರ ಸಂಗಭಂಗವೆಂದು ಹಿಂಗು ನೀನು
ಹಿಂಗದಿರಲು ಭಂಗಬಿಡದು ಸಂಗದಿಂದಲಿ ||ಪ||
ಕಲ್ಲಿನೊಳಗೆ ಕಠಿಣ ಖುಲ್ಲರೊಳಗೆ ಗುಣವನರಸುವ
ಬಲ್ಲವನ ಬಲ್ಲತನವು ಹುಲ್ಲಿಗಿಂತ ಕಷ್ಟವು ||1||
ಮಸಿಗೆ ಕಪ್ಪು ಸಹಜವೆಂದು ಶಿಶುಗಳೆಲ್ಲ ಬಲ್ಲವು
ಪಿಸುಣ ಹುಸಿಕ ದೆಸಕದವರ ಗಸಣಿಸಂಗ ಬೇಡವು ||2||
ಬಚ್ಚಲುದಕ ತಿಳಿಯಲದರ ಕೊಚ್ಚಿ ನಾತ ಹೋಹುದೆ
ಕುಶ್ಚಿತರ ಸಂಗದಿಂದ ರಚ್ಚೆ ನಿನಗೆ ಬಿಡುವದೆ ||3||
ಬೇವಿನೊಳಗೆ ಮದುರ ಜೀವರಲ್ಲಿ ಪರಮಾರ್ಥ ಜಗದ
ಬಯಿಬಡುಕರೊಳಗೆ ನುಡಿಯ ಸಾವದಾನದೆಚ್ಚರುಂಟೆ ||4||
ಜ್ಞಾನಹೀನರೇನ ನುಡಿಯೆ ಮೌನ ಲೇಸು ಜ್ಞಾನಿಗೆ
ಹಾನಿಯಿಲ್ಲ ಗುರುವೆ ಸಿದ್ಧಲಿಂಗ ನಿಮ್ಮ ನೆನೆವಗೆ ||5||
ಸಂಗ ಬೇಡ ಸಂಗ ಬೇಡ
ಸಂಗ ಬೇಡ ಸಂಗ ಬೇಡ
ಲಿಂಗದ ಪ್ರಾಣದ ಜಂಗಮದ್ವೇಷಿಯ ||ಪ||
ಗುರುಕೊಟ್ಟ ಲಿಂಗವಿರೆ ಮಾರಿಗೆ ಹರಸಿ ಹಣವ ತೆಗೆವ
ದುರುಳ ದುರ್ಮಾರ್ಗ ದುಃಕ್ರೂರ ನರಕಿ ನಾಯ ||1||
ಹೃದಯದೊಳಗೆ ಕತ್ತರಿ ಜಿಹ್ವೆಯ ತುದಿಯೊಳು
ಮೃದುವಚನ ಸದಮಲ ಶರಣರ ಕಕ್ಕಸ ನಾಯ ||2||
ದರೆದನವನಿತೆಯರು ಸ್ಥಿರವೆಂದು ಗುರುಲಿಂಗಜಂಗಮದ
ಇರವನರಿಯದೊಂದ ಗಳಹಿ ಕೆಡುವ ನಾಯ ||3||
ಸಾಕಿದವರ ಮರೆದು ಮರುಗುವ ಸೂಕರ ಶುನಕನಂತೆ
ಬೇಕಾದ ಹಿತವರ ನೀಕರಿಸುವ ನಾಯ ||4||
ಹರಶರಣದ್ವೇಷಿಯ ಕಂಡಡೆ ಗುರುಸಿದ್ಧಲಿಂಗೇಶ
ನರಕಜೀವಿಯ ಮಾಳ್ಪ ಪರಿಗಳುಕದ ನಾಯ ||5||
ಗರ್ವವೇತಕೋ ಬರಿದೆ
ಗರ್ವವೇತಕೋ ಬರಿದೆ ಗರ್ವವೇತಕೋ
ಉರ್ವಿಯೊಳಗೆ ಮೆರೆವೆ ಬೆರೆವೆ ಗರ್ವ ಸಲ್ಲದುಜವನ ಗೆಲ್ಲದೆ||ಪ||
ಗರ್ವ ಬೇಡ ಬೇಡ ನಿನ್ನ
ಪೂರ್ವವನ್ನು ತಿಳಿಯೊ ಮುನ್ನ
ಸರ್ವಜೀವರ ಬಸುರುಬೆನ್ನ
ಪರ್ವಿ ಕಡೆಯ ಜನ್ಮ ನಿನ್ನ ||1||
ಹುಟ್ಟಿ ಬೆಳೆಯುತೆದೆಯು ಹಳಿಲು
ಉಟ್ಟು ತೊಟ್ಟು ನಾಲ್ಕು ಹಗಲು
ಇಷ್ಟ ಪೂಜೆಯಿಲ್ಲದಿರಲು
ಅಟ್ಟಿ ಬಂದಿತೆ ಮನದ ಹೊಯಿಲು ||2||
ಹಾವಿನಣಲ ಕಪ್ಪೆ ಹಸಿದು
ಸಾವಸಂಕಟವನು ಮರೆದು
ಬಾಯಬಿಟ್ಟು ನೊಣಕೆ ಪರಿದು
ಜೀವಿಸುವದದೆಂತೊ ಸವಿದು ||3||
ಕಿಚ್ಚಿನೊಳಗೆ ಬಿದ್ದು ಸಾವ
ಅಚ್ಚುಗವನು ಮರೆದು ಜೀವ
ಬೆಚ್ಚದೆಲ್ಲರೊಳಗೆ ಮೆರೆವ
ತುಚ್ಛಬೋಗ ಸಿರಿಯದಾವ ||4||
ಶ್ರದ್ಧೆ ಸತ್ಯಶುದ್ಧವಿನಯ
ನಿರ್ದರದೊಳು ನಿಂದು ಭ್ರಮೆಯ
ಗೆದ್ದು ನಿನ್ನ ಪ್ರಾಣದೊಡೆಯ
ಸಿದ್ಧಲಿಂಗವನ್ನು ನೆನೆಯ ||5||
ಬೇಡ ಕೆಡಬೇಡ
ಬೇಡ ಬೇಡ ಕೆಡಬೇಡ ಸಾರಿದೆ ದೇಹ
ಮೋಡವೆಂದರಿಯದೆ ಬೆರೆವರೆ ||ಪ||
ರೂಢಿಯೊಳಗೆ ರಾಜರಾಳಿ ಪೋದವರ ನೀ
ನೋಡಿ ಮತ್ತಿನ್ನೇಕೆ ಮರೆವರೆ
ಮಾಡು ಸತ್ಪಾತ್ರಕೆ ನೀಡನ್ನವನು ನಿನ
ಗೀಡು ಮುಂದಕೆ ಸತ್ಯಸಂಬಳವಣ್ಣ ||1||
ಅಂದಳ ಛತ್ರಗಳಿಂದ ಪಾಟಕ ಭಟರೊಂ
ದೊಂದು ಪರಿಪರಿದೂಳಿಗದ
ನಿಂದು ಬಿನ್ನೈಸುವ ಗೊಂದಣ ಮಂದಿಯ
ಸಂದಣಿ ಯಾರಿಂದಲಾಯಿತಣ್ಣ ||2||
ಈ ಸಿರಿಸಂಪತ್ತು ಈ ಶೌರ್ಯ ಲಾವಣ್ಯ
ಈಶನ ಪೂಜೆ ಲೇಸಯಿತು
ಮೋಸ ಹೋಗದೆ ಕಾಯ ನಾಶವಾಗದ ಮುನ್ನ
ಲೇಸು ಗುರುಸಿದ್ಧ ಲಿಂಗನ ಭಜಿಸಣ್ಣ ||3||
ಪರಮಾರ್ಥದೊಳು ಪರಿಣಾಮಿ
ಪರಮಾರ್ಥದೊಳು ಪರಿಣಾಮಿಯಾದವಗೆ
ನರರ ಬಾವಿಸಿ ಮನ ಕರಗಲದೇನೊ ||ಪ|
ಲಕ್ಷವೆಂಬತ್ತನಾಲ್ಕನೆ ಜೀವರಾಶಿಯ
ರಕ್ಷಿಸುವಭವನ ಮರೆದೊಂದ ಬಯಸಿ
ಪಕ್ಷಪಾತವನಾಡಿ ಜಗವ ಮಚ್ಚಿಸಿ ನಿನ್ನ
ಕುಕ್ಷಿಯ ಹೊರೆಯಲದೇತಕೊ ಮನವೆ ||1||
ಕೊಟ್ಟ ಬೋಗಂಗಳು ತಪ್ಪವೆಂದವು ಶ್ರುತಿ
ಎಷ್ಟು ಸಾರಿದಡೇನು ಮುಟ್ಟದೆ ಮನವು
ಕಷ್ಟಜನರನಾಸೆಗೆಯಿದು ಮೃಷ್ಟಾನ್ನಕೆ
ತಿಟ್ಟನೆ ತಿರುಗಲದೇಕೆಲೊ ಮನವೆ ||2||
ಆಸೆಯ ಬಿಟ್ಟು ನಿರಾಸೆಯೊಳಿರು ದೇಹ
ಸಾಸಿರವರುಷವಿರದು ಸ್ಥಿರವಲ್ಲ
ಶಾಸ್ವತ ಗುರುಸಿದ್ಧಲಿಂಗವನರ್ಚಿಸಿ
ನೀ ಸುಖಿಯಾಗಿರೆ ಸ್ಥಿರ ಕಂಡ್ಯ ಮನವೆ ||3||
ಜಯಿಸುವದರಿದರಿದು
ಜಯಿಸುವದರಿದಾವಂಗಸದಳ
ಭವಹರ ಶಿವನೊಳ್ಬೆರೆದಂಗಲ್ಲದೆ ||ಪ||
ಹಾವಿನ ವಿಷ ನಿರ್ವಿಷದಿಂದಿಳಿವುದು
ಆಯುಷ್ಯವ ಪಡೆದವರ್ಗೆ
ಬಾವಕಿಯರ ನಯ ಸವಿನುಡಿ ವಿಷ ಬಲು
ಹಾವಿನ ವಿಷದಿಂ ಮೂವಡಿ ವಿಷವದು ||1||
ಕೂಡಿದ ವಿಷವನು ಕುಡಿದವರಿಗೆಯದು
ಕೇಡವು ಕುಡಿಯದವರ್ಗಿಲ್ಲಾ
ಕೂಡದೆ ಕುಡಿಯದೆ ನೋಡಿದ ಪುರುಷರ
ಹೇಡಿಗೊಳಿಸಿ ಕೆಡಹುವ ವಿಷ ಸತಿಯರ ||2||
ಅರಿಗಳ ಗೆಲಬಹುದೊಮ್ಮೆಗೆ ಪಾವಕ
ನುರಿ ಬರಲದ ನಂದಿಸಬಹುದು
ದರೆಯೊಳು ಚೋರರ ತಪ್ಪಿಸಬಹುದೀ
ತರುಣಿಯರತಿ ಚದುರಿನ ಕೌಶಲವ ||3||
ಹುಲಿ ಕಾಡ್ಕೋಣಾನೆಯ ಭಲ್ಲುಕ ಉರೆ
ಹಲವಿದ ಕ್ರೂರಮೃಗವನೆಲ್ಲ
ಬಲೆಯೊಳು ಹಿಡಿತಹ ಮನುಜನ ತನ್ನಯ
ಬಲೆಯೊಳು ಕೆಡಹುವ ಲಲನೆಯ ಬಲುಹನು ||4||
ಕಂಗಳ ದೃಷ್ಟಿಯು ಕರದೊಳು ನೆನಹಿನ
ಲಿಂಗದೊಳಗೆ ಮನ ಮಂತ್ರ
ಸಂಗಿಸಿ ಪ್ರಾಣವು ಗುರುಸಿದ್ಧಲಿಂಗವ
ಹಿಂಗದೆ ನಿಂದ ನಿರಂಗನಿಗಲ್ಲದೆ ||5||
ಎಚ್ಚರಗುಂದದಿರು
ಎಚ್ಚರಗುಂದದಿರು ಲಿಂಗದೊಳೆಚ್ಚರಗುಂದದಿರು
ಮಚ್ಚಿಸಿ ಮೋಹದಿ ಕೆಡಹುವ ಸತಿಯರಿಂದೆಚ್ಚರಗುಂದದಿರು||ಪ||
ನಗೆಯೆಂಬ ಸರಳಿನೊಳು ಮಾತಿನ ಸೊಗಸೆಂಬ ಬಿಲ್ಲಿನೊಳು
ಹಗೆಯಾಗಿ ಪುರುಷನೆಂಬಾ ಮೃಗವನು ತೆಗೆದೆಚ್ಚು ಕೊಲುತಿಹರು ||1||
ಹುಸಿಯೆಂಬ ಕಾಲುಕಣ್ಣಿ ಹದುರಿನ ಎಸಕದ ಬೀಸುವಲೆ
ಹಸನಾಗಿ ನಲ್ಲನೆಂಬಾ ಪಶುವನು ಎಸೆದೆಚ್ಚು ಕೊಲುತಿಹರು||2||
ಕೇಸರಿ ಕರಿಗಳೊಳು ಸ್ನೇಹವು ಲೇಸುಂಟೆ ಎಲೆ ಮರುಳೆ
ಸೂಸಲ ಕಂಪಿಗೆ ಮೂಷಕ ಬಿದ್ದು ತಾ ಗಾಸಿಯಾಗುವ ತೆರದಿ ||3||
ದೀಪದ ರೂಪವ ಕಂಡು ಬಿಳುವ ಆ ಪತಂಗನ ತೆರದಿ
ಪಾಪದ ಪುಂಜವೆ ರೂಪಾದ ಸತಿಯರು ತಾಪದಿ ಕೊಲುತಿಹರು ||4||
ಹುಲ್ಲೆ ಹುಲಿಯ ಸರಸವೆಂದರಿಯದೆ ಬಲ್ಲಡೆ ನಾರಿಯರಾ
ಲಲ್ಲೆಗೆ ಸಿಲುಕದೆ ಗುರುಸಿದ್ಧಲಿಂಗನ ಮೆಲ್ಲಡಿ ದ್ಯಾನದೊಳು ||5||
ಹಾಡಿದಡೇನು ಕೇಳಿದಡೇನು ?
ಓದಿದಡೇನು ಕೇಳಿದಡೇನು ಬಿಡದೆ
ನೋಡಿ ಲಿಂಗದಿ ಮನ ಮೂಡಿ ಮುಳುಗದೆ ||ಪ||
ಇದಿರ ಜರೆದು ತನ್ನ ಮೆರೆವುದೋದುಗಳಲ್ಲ
ಹದಿರು ಚದಿರು ಸದಮದ ಬಿಡದಾ
ಹದನನರಿಯದಿಹುದದು ಓದು ತಾನಲ್ಲ
ಪುದಿದು ಲಿಂಗದಿ ಪ್ರಾಣವೆರೆದುದು ಓದು ||1||
ನುಡಿದಂತೆ ನಡೆ ನಡೆಯೊಳು ನುಡಿದುದೆ ಓದು
ಷಡುವರ್ಗಕರಣವ ಸುಡುವುದೋದು
ಬಿಡದೆ ಲಿಂಗದಿ ಮನವೊಡವೆರೆದುದೆ ಓದು
ದೃಡಚಿತ್ತವಿಲ್ಲದುದೇತರ ಓದು ||2||
ವಚನವ ಹಾಡಿ ತಾ ರಚನೆಯ ನುಡಿದೊಂದ
ಯಾಚಿಸಿ ಬೇಡದೆ ಇಹುದದು ಓದು
ಅಚಲದಿ ಮನಬಾವ ಗುರುಸಿದ್ಧಲಿಂಗನ
ವಚನವರಿದಾಚರಿಸುವುದೆ ಓದು ||3||
ಆಸೆಯ ಬಿಡಿಸಯ್ಯ
ಆಸೆಯ ಬಿಡಿಸಯ್ಯ ಲಿಂಗವೆ | ಎನ್ನ
ವೇಷಕದು ಲೇಸಲ್ಲ ಲಿಂಗವೆ
ಏಸುದಿನವು ಕಾಡಿಬೇಡುವೆ | ನಾ
ಬೇಸತ್ತೆನಲಸಿದೆ ಲಿಂಗವೆ ||ಪ||
ಕರ್ತೃವೇಷವ ಧರೆಸಿಯು | ಎನ್ನ
ಮತ್ರ್ಯರ ಸ್ತುತಿಸಿ ಬಾವಿಸಿ ಬೇಡಿ
ಭಕ್ತಿಯ ಮಾಡಿದೊಡೆ ಸುಯ್ವುದು | ಎನ್ನ
ಕರ್ತುತನಕೆ ಹಾನಿ ಲಿಂಗವೆ ||1||
ವೇಷವ ತಾಳಿ ನಾನೊಬ್ಬರ | ಅಭಿ
ಲಾಷೆಗೆಯ್ಯಲು ಈಯದೊಡೆ ಮತ್ತೆ
ರೋಷದಿಂದ ಮನನೊಂದು ಮರುಗಲು | ಎನ್ನ
ವೇಷಕದು ಹೇಸಿಕೆ ಲಿಂಗವೆ ||2||
ಗೋಸುಂಬೆಯಂತೆನ್ನ ಮನ ಬಲು | ಬರಿ
ವೇಷವ ತೊಟ್ಟು ಮೆರೆವುದೈಸೆ
ಆಸೆಯ ಬಿಟ್ಟು ನಿರಾಸೆಯೊ | ಳಿಹ
ಲೇಸೊಂದ ನೆನೆಯದು ಲಿಂಗವೆ ||3||
ಹರಿ ಸುರ ಸರಸಿಜೋದ್ಭವರೆಲ್ಲ | ನಿಮ್ಮ
ಸ್ಮರಿಸಿ ಪಡೆದರತಿ ಪದಗಳ
ಹರ ನೀನು ಕರಕಮಲದೊಳಿರೆ | ನಾ
ನರರ ಹಾರುವದೇನು ಲಿಂಗವೆ ||4||
ನಿರ್ದರ ನಿಷ್ಠೆಗಳಿಲ್ಲದೆ ನಾನಿ | ರ್ದಲ್ಲಿ
ಪಲವೇನು ಶಿವ ನಿಮ್ಮ
ಹೊದ್ದಲೀಯದು ಬದ್ಧದಾಸೆಯು | ನೀ
ನೊದ್ದು ಸಲಹೈ ಗುರುಸಿದ್ಧಲಿಂಗವೆ ||5||
ದೂಷಣೆ ಬೇಡ
ದೂಷಣೆ ಬೇಡವೊ ನುಡಿಯದಿರಿ
ಈಶನ ಶರಣರ ಕಂಡನುದಿನದಿ ||ಪ||
ಮರ್ತ್ಯದ ಬಳಕೆಯ ಬಳಸದೆ ಶಿವನೊಳು
ಭಕ್ತಿಯೊಳೆರವಳಿದಿಹ ಶರಣ
ಸತ್ಯರ ಸನ್ಮಾರ್ಗರ ಸದುಹೃದಯರ
ಚಿತ್ತವ ಕಲಕುವ ಕತ್ತೆಯು ತಾನೆ ||1||
ಲೋಕದ ವರ್ತನೆಯಳಿದತಿ ಲಿಂಗದೊ
ಳೇಕೀಕರಿಸಿದ ಶರಣರನು
ಶ್ರೀಕಂಠನು ತಾನವರೆಂದೆನ್ನದೆ
ನೀಕರಿಸುವನವ ಸೂಕರ ತಾನೆ ||2||
ಆಸೆಯ ಬಿಟ್ಟು ನಿರಾಸೆಯೊಳಿಹ ಶಿವ
ವೇಷವ ತೊಟ್ಟಿಹ ಶರಣರನು
ದೂಷಣೆ ಮಾಡುತ ನಿಂದಿಸಿ ನುಡಿವವ
ಹೇಸನು ನರಕಕೆ ಶುನಿಯವ ತಾನೆ ||3||
ಬರಡಿಯು ತಾ ಬೇನೆಯನರಿಯಳು ಶಿವ
ಶರಣರ ದೂಷಕನರಿದಪನೆ
ಗುರುಚರಣವ ಪಿಡಿದಭವನ ದ್ಯಾನಿ
ಪರಡಿಗೆರಗದವ ಕರಡಿಯು ತಾನೆ ||4||
ಇರಿಯದ ವೀರನ ಇಲ್ಲದ ಸೊಬಗನು
ಮೆರೆವುತ ಬೆರೆವುತ ಹರವುತಲಿ
ಕರಿಗೊರಳನೊಳೆರವಳಿದಿಹ ಶರಣರ
ತೆರನನರಿಯದವ ಕುರಿಯವ ತಾನೆ ||5||
ಚಪಳತ್ವದೊಳತಿ ನಿಪುಣ ತಾನೆಂ
ದುಪಮೆಗತೀತನ ಶರಣರನು
ಕಪಟದಿ ಹಳಿವುತ ಮುಳಿವುತಿಹನವ
ಸುಪಥವನರಿಯದ ಕಪಿಯವ ತಾನೆ ||6||
ಶೀಘ್ರದೊಳತಿ ಗುರುಸಿದ್ದೇಶ್ವರನ ಅ
ನುಗ್ರಹದಿಂದಾಚರಿಸುವರ
ಉಗ್ರದೊಳತಿಗರ್ವದಿ ಕೆಡೆನುಡಿವವ
ದುರ್ಗುಣ ದುರ್ಜನ ವ್ಯಾಘ್ರನು ತಾನೆ ||7||
ನಡೆನುಡಿ ನಿಮ ನಮಗೊಂದೆ
ನಡೆನುಡಿ ನಿಮ ನಮಗೊಂದೆಂಬ | ಬಾಯಿ
ಬಡುಕರ ನುಡಿಗೆ ಹೇಳುವೆನಿಂಬ ||ಪ||
ಇಂದುದರನ ಪೂಜೆಗಳೆಮಗೆ | ಮನೆ
ಮಂದಿಗೆ ಕುದಿವ ಗೊಜಡು ನಿಮಗೆ
ಹಿಂದುಮುಂದೆಣಿಸದೋಜೆಯು ನಮಗೆ | ಮನ
ಸಿಂದ ಹರಿವ ತೇಜಿಯು ನಿಮಗೆ ||1||
ಗುರುವಚನದಿ ನಡೆವುದು ನಮಗೆ | ಮುಖ
ಸರಸಿಜಕುಚೆಯ ಗಾಡಿಯು ನಿಮಗೆ
ಹರಶೇಷರುಚಿಯ ಮೋಡಿಯು ನಮಗೆ | ಸಿರಿ
ಗರ ಮದುರಚನೆಯಡಗು ನಿಮಗೆ||2||
ಭಸಿತರುದ್ರಾಕ್ಷಿಮಂತ್ರಗಳೆಮಗೆ | ಭೂತ
ಮುಸುಕಿದುಪದ್ರ ಯಂತ್ರವು ನಿಮಗೆ
ಶಶಿದರ ಮುದ್ರೆ ತಂತ್ರವು ನಮಗೆ | ಮೋಹ
ವ್ಯಸನ ನಿದ್ರೆಯ ಜಂತ್ರವು ನಿಮಗೆ ||3||
ಅಜಾತರ ಮನೆಯೂಟವು ನಮಗೆ | ಹರಿ
ಜಾತರೊಳಾಟಕೂಟವು ನಿಮಗೆ
ಜ್ಯೋತಿರ್ಲಿಂಗ ಬೇಟವು ನಮಗೆ | ವಿಪ್ರ
ಜಾತಿಗೆಟ್ಟಾಟುವ ದೈವವು ನಿಮಗೆ ||4||
ರುದ್ರನ ಮರೆದು ವಿಷ್ಣುವೆ ನಿಮಗೆ
ಚಿದ್ರೂಪ ಶರಣಗೋಷ್ಠಿಯು ನಮಗೆ
ಬದ್ಧದೈವದ ನಿಷ್ಠೆಯು ನಿಮಗೆ | ಗುರು
ಸಿದ್ಭಲಿಂಗನ ಶ್ರೇಷ್ಠವು ನಮಗೆ ||5||
ತನುಮನವ್ಯಾಪ್ತಿ
ತನುಮನವ್ಯಾಪ್ತಿಯ ಪ್ರಾಣನ ಸಂಚಲ
ದನುವಿನ ಬೇದವನರುಹೆನ್ನ ಗುರುವೆ ||ಪ||
ಜಾಗ್ರಾವಸ್ಥೆಯ ವ್ಯಾಪ್ತಿಯ ಗುರುವಿನ
ನುಗ್ರಹದಿಂದಿಷ್ಟದ ಕ್ರಿಯೆ
ಶೀಘ್ರದಿ ಮಾಡಲು ತನು ಗುರುವೆಂದದ
ನಿಗ್ರಹಿಸುತ್ತಿರುತಿಹುದು ತನುವೆ ||1||
ಸ್ವಪ್ನಾವಸ್ಥೆಯದೆಂತೆನೆ ಮನಸಿನ
ವ್ಯಾಪ್ತಿಯ ವಾಸನೆಯದು ತಾನೆ
ಇಪ್ಪುದನರಿದಾವಾಗಲಿ ಮಂತ್ರದ
ರೌಪ್ಯದ ಜಪಸ್ಮರಣೆಯೆ ಮನಲಿಂಗವು ||2||
ಒಂದೆರಡವಸ್ಥೆಯೊಳೊಂದಿ ಸುಷುಪ್ತಿಯ
ದಂದುಗವಳಿವುದೇತರೊಳು
ಕುಂದದೆ ತನುಮನ ಇಷ್ಟಪ್ರಾಣದ
ಅಂದವು ತಾನೆ ದನಜಂಗಮವು ||3||
ಮೂರವಸ್ಥೆಯ ವಿೂರಿದ ತುರಿಯದ
ತೆರನಾವುದು ಎನಗರಿವಂತದನು
ತೋರಿದ ಗುರು ಮೂರೊಂದಾದುದ ನೀ
ಬೇರೆಡದರಿವುದದೇಕಪ್ರಸಾದವು ||4||
ನಾಲ್ಕವಸ್ಥೆಯ ವಿೂರುವದು ಅದೊಂದೆ
ಏಕಪ್ರಸಾದವು ಪರಿಪೂರ್ಣ
ಏಕೀಕರಿಸಿದ ತುರಿಯಾತೀತ ಸುದಾ
ಕಳೆಯದು ತಾ ಗುರುಸಿದ್ಧಲಿಂಗ ||5||
ನೋಯಲೇತಕೆ ?
ನೋಯಲೇತಕೆ ತನ್ನ ಜರೆದರೆಂದವರೊಳು
ಮಾಯಾಪ್ರಪಂಚವ ಹಳಿವಜ್ಞಾನಿಗಳೊಳು ||ಪ||
ತಾಯಿ ಶಿಶುವಿಗೆ ಹಾಲೆರೆವಾಗ ಮಯಿಮುರಿದೇ
ಳುವ ಶಿಶುವಿನ ಬಾಯನು ತಾ
ಹೊಯಿದು ಸಲಹುತಿಹ ತಾಯ ಕಂಡಡೆ ಶಿಶು ನೋಯದೆ
ತಾಯ ಮೋಹದೊಳಿರುವಂತಿರು ||1||
ಅಕ್ಕರ ಲೆಕ್ಕವು ಕಲಿಯಬೇಕೆಂದೋದ
ಲಿಕ್ಕಿದ ತಂದೆಯು ಮಕ್ಕಳ
ಅಕ್ಷರ ಲೆಕ್ಕವು ಬರಲೆಂದು ಬೈದರೆ ತಂದೆ
ಮಕ್ಕಳೋಳಕ್ಕರಂತಿರು ನೀ ||2||
ಬೆಳೆಗೆ ಕಂಟಕವೆಂದು ಕಳೆಗೆ ಮುಳಿಯೆ ಬೆಳೆ
ಸುಳಿಗಳು ನೂಂಕದೆ ಒಳಗಿಹವೆ
ತಿಳಿದವನಿಯೊಳು ಬೋಗಕೆ ಎಳಸಲು ಹಳಿದು
ಹೇಳುವ ಬೆನ್ನ ಬಳಿಯಲ್ಲವೆ ||3||
ಮುಗ್ಗಿದ ಬಂಟನ ಬಗ್ಗಿ ಕೈವಿಡಿದೆತ್ತಿ
ಸಿಗ್ಗು ಮಾಡುವನೇನೊ ರಣದೊಳಗೆ
ಸದ್ಗುಣಿಗವಗುಣ ವೆಗ್ಗಳಮಾಗಿರೆ
ಮಾರ್ಗವ ಪೇಳುವ ದುರ್ಗುಣಿಯೆ ||4||
ವರ್ಮಬೋದೆಯ ಕೇಳಿ ನಿರ್ಮಳನಾಗದೆ
ದುಮ್ಮಾನ ಬಿಡದಿದೆ ನಿನ್ನೊಳು
ಹಮ್ಮು ಬಿಮ್ಮೇಕೆ ಗುರುಸಿದ್ಧಲಿಂಗವ ನೆಮ್ಮು
ನೀ ನಮ್ಮವನೆಂದೆ ಶರಣರೊಳು ||5||
ಕ್ಷಣಿಕರ ಗುಣ
ಕ್ಷಣಿಕರ ಗುಣಗಳನೆಣಿಕೆಗೆ ತಾರದೆ
ತ್ರಿಣಯನ ಪೂಜಿಸು ದಣಿಯದೆ ನೀ ಮನವೆ ||ಪ||
ಬೇಲ ಬೊಬ್ಬುಲಿ ಮರದಡಿಗಳೊಳಗೆ ಬರಿ
ಗಾಲಿಂದವೆಯಡಿಯಿಡಲು
ಕೀಲಿಸಿ ಮುಳ್ಳು ಮುರಿಯದಿಹವೆ ಬಲು
ಖೂಳರಿಗಂಜಿ ತೊಲಗಿ ಗೆಲು ಮನವೆ ||1||
ಈದ ಹುಲಿಯ ಮೆಳೆಯ ಹೊದರೊಳು ಹುಲ್ಲಿರೆ
ಮೇದು ಜೀವಿಸಿದೆರಳೆಗಳುಂಟೆ ತಾ
ಮೇದಿನಿಯೊಳು ದುರ್ಗುಣಿಗಳ ನುಡಿ ಸಂ
ಪಾದನೆಯೆಂಬುದ ಬಿಡು ಮನವೆ ||2||
ಕಡಜನಿರುವ ಗೂಡನು ಸೋಂಕಿದಡವು
ಕಡಿಯದೆ ಬಿಡವೆಂದರಿದಿನ್ನು
ಕೆಡುಕರ ನಗೆ ಸರಸದ ನುಡಿ ರಚ್ಛೆಗೆ
ತಡವಿಲ್ಲದರಿಂದರಿದಿರು ಮನವೆ ||3||
ವೈರಿವೈರಿಗಳಿದಿರಾಗಿಹ ರಣದೊಳು
ಸಾರಿ ನೋಡಲು ಪರುಸೆಯ ಜನವೆ
ಹೋರುವ ಹೋರಟೆಗಳ ನುಡಿ ಬಿರುಬರು
ಮಾರಿ ತಾ ಬೇರಿಲ್ಲೆಂದರಿ ಮನವೆ ||4||
ಕುಜನರ ಸಂಗವ ತ್ಯಜಿಸಿ ನಿರಂತರ
ತ್ರಿಜಗದೊಡೆಯ ಗುರುಸಿದ್ಧೇಶ್ವರನ
ಯಜಿಸಿ ಭಜಿಸುತಿಹ ಶರಣರ ಪಾದದ
ರಜ ನೀನೆಂಬುದ ನಿಜವಿಡಿ ಮನವೆ ||5||
ನೋಡಿ ಕಂಡಿರು
ನೋಡಿ ಕಂಡಿರು ಮನಸೋಲದೆ ಸತಿಯರು
ಮಾಡುವ ಕೃತಕವ ರೂಢಿಯೊಳು ||ಪ||
ಬೆಚ್ಚಂತೆ ಪುರುಷನ ಇಚ್ಛೆಯೊಳಿರುವಳು
ಕುಶ್ಚಿತ ಕುಹಕವನರುಹಿಸದೆ
ಮಚ್ಚಿ ಮತ್ತೊಬ್ಬಗೆ ಬೇಟವ ಮಾಡುವ
ಕೆಚ್ಚೆದೆಯಳ ಕಂಡು ನಚ್ಚದಿರು ||1||
ಅಪ್ಪನೆಂದೆಂಬುದೊಂದೊಳ್ಪಿನ ನುಡಿಯೊಳ-
ಗಪ್ಪ ಬಾರೇಕೆನ್ನ ಮನೆಯೊಳಗೆ
ಇಪ್ಪುವನಳಿಯನಿಲ್ಲದೊಡೆರವೇತಕೆ
ನ್ನಪ್ಪ ಬಾರೆಂಬವಳೊಪ್ಪವನು ||2||
ಹಬ್ಬ ಬಂದಡೆ ಹಗಲು ಬಂದಿ ಚಿಂತಾಕದಿ
ಸಿಬ್ಬುದಿಯಾಯಿತು ಮುತ್ತಿಲ್ಲದೆ
ಹಬ್ಬದೊಳಗೆ ಮುತ್ತ ಕೊಡುವೆ ಬೇಗ ಬಾ
ರುಬ್ಬಿಲಿ ಬಾರೆಂಬಳೊಬ್ಬನನು ||3||
ತಂದೆ ನೀ ಎನಗೆನ್ನ ಗಂಡಗೆ ಕುಂದನು
ದ್ವಂದ್ವವಾಗಿರದೆನ್ನ ಬಯಕೆಯನು
ಬಂದುಪಚರಿಸಿ ನೋಡದೆ ನುಡಿದೊಡಾನು
ಕಂದಿದೆನೆಂಬವಳಂದವನು ||4||
ಅಂಗದ ರತಿಯೊಳು ಹಿಂಗದೆ ಮುಳು
ಅಂಗನೆಯರ ಸಂಗ ಭಂಗವೆಂದು
ಸಂಗಿಸಿ ಗುರುಸಿದ್ಧಲಿಂಗನ ಶರಣರಿ
ಗಂಜುವೆನಂಜುವೆನೆಲೆಲೆ ಮನವೇ ||5||
ಸತಿಸುತಯುತಾತ್ಮರಿಗೆ
ಸತಿಸುತಯುತಾತ್ಮರಿಗೆ ಯತಿಗಳೆಂದೆಂಬ ನುಡಿ
ಹಿತವಲ್ಲ ಜ್ಞಾನ ಸನ್ಮತವೆಲ್ಲಕೆ ||ಪ||
ಸತಿಸಂಗವೆಮಗಿಲ್ಲವೆಂಬ ಯತಿಗಳು ನೀವು
ಸತಿಯದಾವಳುಯೆಂಬುದರಿಯಿರಲ್ಲ
ಇತರೇತವರಿಯದುಂಡುಂಡೊಂದ ಬಯಸುತಿಹ
ಸತಿ ಕಾಮವೆಂಬುವದನರಿಯಿರಣ್ಣ ||1||
ಸತಿಕಾಯವದಕಿನ್ನು ಪತಿಯಾತ್ಮರಿಬ್ಬರಿಗೆ
ಸುತರಾರುಯೆಂಬುವದನರಿಯಿರಣ್ಣ
ಗತಿಗೆಡಿಸಿ ಕಾಡುತಿಹ ಕರಣಂಗಳಿರುತಿರಲು
ಸುತರೆಮಗೆಯಿಲ್ಲವೆಂದೆಂಬಿರಣ್ಣ ||2||
ತನ್ನೊಳಗೆ ಸತಿಸುತರು ಬೆನ್ನ ಬಿಡದಿರುತಿರಲು
ಇನ್ನಾವ ಸತಿಸುತರು ಹೇಳಿರಣ್ಣ
ಮುನ್ನಮುನ್ನವೆ ತನಗೆ ಅನ್ಯವಹ ಸತಿಸುತರು
ಭಿನ್ನವೆಂಬುದ ನೀವು ತಿಳಿಯಿರಣ್ಣ ||3||
ಗುರುಕರುಣದಿಂದಿಷ್ಟಕರವ ಸಾರಿದ ಬಳಿಕ
ಶರೀರಬಾವನಳಿದು ನೆನಹು ಲಿಂಗ
ದಿರವನರಿದಾವಾಗ ಮಂತ್ರದೊಳು ಕರಿಗೊಂಡು
ಶರಣನವ ಯತಿಯೆಂಬುದರಿಯಿರಣ್ಣ ||4||
ಅಂಗತತ್ವದಂ ಲಿಂಗತ್ವವದುಭಯ
ಸಂಗವು ಶಿವಪದವೆಂಬ ಬೇದವರುಹಿ
ಕಂಗೆಡಿಸುತಿಹ ಕಾಯಕರಣ ಜೀವನುಗ್ರವ
ಹಿಂಗಿಸಿದ ಗುರುಸಿದ್ಧ ಲಿಂಗವಣ್ಣ ||5||
ಸಂಗವಲ್ಲದ ದುಸ್ಸಂಗ
ಸಂಗವಲ್ಲದ ದುಸ್ಸಂಗರ ಸಂಗ ಸು
ಸಂಗಿಗಳಿಗೆಯನು ಸಿಂಗಿಯ ವಿಷವೊ ||ಪ||
ಒಲೆವುತ ಮಲೆವುತ ಉಲಿವುತ ಮಾತನು
ಕೆಲೆವುತ ಸೆಲೆವುತ ಕಲಹವನೆ
ಬಲಿವುತ ಎಲುವಿಲ್ಲದ ನಾಲಗೆಯೊಳು
ಹಲುಬುವ ಗಲಬರ ತೊಲಗಿರುತಿರು ನೀ ||1||
ಹೆಚ್ಚುತ ಹಿಗ್ಗುತ ತುಶ್ಚರ ಕಂಡಡೆ
ಮುಚ್ಚುತ ಮಾನ್ಯರನರಿಯದಿಹ
ಹುಚ್ಚರ ಹೃದಯವು ಕೆಚ್ಚೆಂದವರೊಳ
ಗಿಚ್ಛೆಯ ನುಡಿಯದೆ ನಿಚ್ಚಟದೊಳಗಿರು ||2||
ಪ್ರೀತಿಗಳಿಲ್ಲದ ಮಾತಿನ ಬನ್ನಣೆ
ಹೂತೆಲವದ ಮರನದು ತಾನು
ಜೋತೊರಗಿದಡಿನ್ನೇತಕೆ ಹಿರಿಯರ
ರೀತಿಯನರಿಯದಿರೇತಕೆ ಬಾತೆಯೊ ||3||
ವಿರಸವ ಬಿಡು ಹರುಷದೊಳಿರು ಹಿರಿಯರ
ಸರಸವ ಬಿಡು ಪರನಾರಿಯರ
ಕರ ಸಿತವೆಂದಿರು ಹರನೊಳು ಚಿತ್ತವು
ಬೆರೆದಿಹ ಶರಣರ ಚರಣವ ಬಿಡದಿರು ||4||
ಮೃಡನ ಶರಣರೊಳು ಗಡಣದ ಗರ್ವದ
ಬೆಡಗಿನೊಳಿರದಿರು ಭವವೆಂಬ
ಅಡವಿಯ ಕಡಿದೀಡಾಡಿ ಬಿಸಾಡುವ
ಒಡೆಯನು ಗುರುಸಿದ್ಧನೊಳೆಡೆವಿಡದಿರು ||5||
ಸಂಗವಾಗದು ಶರಣಸಂಗವಲ್ಲದೆ
ಸಂಗವಾಗದು ಶರಣಸಂಗವಲ್ಲದೆ ತ್ರಿವಿದ
ಲಿಂಗದೊಳ್ಬೆರಸಿ ಸಂಗಿಸಲರಿಯದ ಜಡರ ||ಪ||
ಮೋಳೆಯಿಂದೇರಿಗಬ್ಬಸ ಜಾಳುಮಾತುಗಳ
ನಾಡವರ ಮೇಳದೊಳಗಿರಲು ಜ್ಞಾನ
ಬೀಳಹುದು ಗಾಳಿಗಿದಿರಾದ ಸೊಡರದಕಿನ್ನು
ಡಾಳವುಂಟೆ ಕಳೆಗೆ ಸಸಿ ಬೆಳೆವುದೆ ||1||
ಅಸುವಿಲ್ಲದಂಗಕ್ಕೆ ಉಸಿರುಂಟೆ ಹಾವಿಂಗೆ
ವಿಷವಲ್ಲದಮೃತವುಂಟೆ ವ್ಯಸನಿಗೆ
ವಿಷಯವಲ್ಲದೆ ಮತ್ತೆ ಪಶುಪತಿಯ ಶರಣ ಸಮ
ರಸವುಂಟೆ ಹಮ್ಮುಬಿಮ್ಮಳಿಯದವರ ||2||
ಮಸಿ ಕ್ಷೀರದೊಳಗಿರಲು ಹಸನಾಗಬಲ್ಲುದೆ
ಪಿಸುಣಂಗೆ ಜ್ಞಾನಮಾರ್ಗವನುಸುರಲು
ವಿಷಮವಲ್ಲದೆ ಮನಕೆ ಸೊಗಸಲ್ಲ ದ್ವೇಷಿಯ
ಗಸಣಿ ಸಂಗವದೇಕೆ ಬಿಡು ಮೂಡನ ||3||
ಹೆತ್ತ ತಾಯನು ಮಾರಿ ತೊತ್ತ ಕೊಂಡವಳೊಡನೆ
ಹೆತ್ತತಾಯಾಣೆಯಿಡುವನ ತೆರನೊಳು
ಸತ್ಯಶರಣರ ಜರೆದು ಕರ್ತ ಅವರೆನಗೆಂಬ
ಹೊತ್ತು ಹೋಕಿನ ಮತ್ತಮತಿಗಳೊನೆ ||4||
ಉಣ್ಣೆ ಕೆಚ್ಚಲ ಕಚ್ಚಿ ಅಣ್ಣೆವಾಲ್ಸವಿಯದಂ
ತಣ್ಣಗಳು ಗುರುಲಿಂಗಜಂಗಮವನು
ಭಿನ್ನವಿಟ್ಟೇಸು ದಿನ ಪೂಜಿಸುತ್ತಿರಲಗ್ರ
ಗಣ್ಯ ಗುರುಸಿದ್ಧಲಿಂಗನ ಬೆರಸರು ಅವರ ||5||
ಹುಸಿಕೊಲೆಕಳವು ಬೇರಿಲ್ಲ
ಹುಸಿಕೊಲೆಕಳವು ಪಾರಕಾಂಕ್ಷೆ ಬೇರಿಲ್ಲ
ಎಸೆವ ಸದ್ಗುರು ಶಿಷ್ಯಗುಸುರಿದ ಪಥದೊಳು ||ಪ||
ಗುರುಕರಕಮಲಕೆ ಶಿರದ ಚಿತ್ಕಲೆಯನು
ಚರಲಿಂಗ ತೀರ್ಥದಿ ನೆಲೆಗೊಳಿಸಿ
ಪರತತ್ವವಿದರಿಂದ ಪರವಿಲ್ಲವೆಂದುದ
ಮರೆದನ್ಯಕೆರಗೆ ಪುಸಿವುದಲ್ಲವೆ ||1||
ತಪವ್ರತನೇಮದಿಂದುಪವಾಸ ತನಗೆಂದು
ಕಪಿಮನದಿಚ್ಛೆಗೆ ಪರಿಪರಿದು
ಅಪರಮಿತದ್ವಯ ಲಿಂಗ ಸುಪಥಕ್ರೀಯ
ನಪಹರಿಸಲ್ಕದು ಕೊಲೆಯಲ್ಲವೆ ||2||
ಲಿಂಗದ ಚಿತ್ಕಳೆ ಜಂಗಮಭಕ್ತಿಯ
ಹಿಂಗದೆ ಮಾಡೆಲೆ ಮಗನೆಂದು
ಮಂಗಳಗುರು ಪೇಳಿದಂಗವಿದೇನೆಂದು
ಜಂಗಮಕೊಂಚಿಸೆ ಕಳವಲ್ಲವೆ ||3||
ಪರವದು ಮನೆಯೊಳಗನುದಿನವಿರುತಿರ
ಲ್ಗುರು ಚರಲಿಂಗಕೀಯದೆ ಎಮಗೆ
ಪರವದುವಿಲ್ಲೆಂಬ ಮರುಳರೆಲ್ಲರ್ ಕೇಳಿ
ಹರಿಯ ನಾರಿಯು ಪರವದುವಲ್ಲವೆ ||4||
ಧೃತಿಗೆಡದನ್ಯರ ಸ್ತುತಿಸದೆ ಬಂದುದ
ಸಿತಿಕಂಠನಿತ್ತ ಬಾಗ್ಯಗಳೆನ್ನದೆ
ಮತಿಗೆಟ್ಟು ಪರರ ಸಿರಿಯ ನೋಡಿ ಬಯಸುವ
ದತಿಕಾಂಕ್ಷೆಯೆಂಬುದು ತಾನಲ್ಲವೆ ||5||
ಪಂಚಮಹಾಪಾತಕದೊಳು ವರ್ತಿಸಿ
ಪಂಚಾಚಾರದೊಳಧಿಕರೆಂದು
ವಂಚನೆಯಿಂದ ನುಡಿವ ನುಡಿ ಕರ್ಮದ
ಗೊಂಚಲಿದಕೆ ಬೇರೆ ಸಂಚಿಲ್ಲವೊ ||6||
ಗುರುಕರುಣವ ಪಡೆದವರ್ಗಿದು ಮತವಲ್ಲ
ಕರಣದಿಚ್ಛೆಗೆ ಪರಿಯದೆ ಮನವೆ
ಸ್ಥಿರವಾಗಿ ನೆಲೆವಿಡಿ ಶರಣಸತ್ಪಥವ ನೀ
ಗುರುಸಿದ್ಧಲಿಂಗನಂಘ್ರಿಯ ಬಿಡದೆ ||7||
ಲೋಕನುಡಿಯೇಕೆ ಮನವೆ
ಲೋಕನುಡಿಯೇಕೆ ಮನವೆ ಸಾಕು
ಸಂಸಾರವಿನ್ನೇಕೆಂದೆ ಮತ್ತೆ ||ಪ||
ಕಂಡು ಸಂಸಾರ ರಾಜ್ಯೆಂದೆಂದು ಬಿಟ್ಟು
ಕಂಡವರ ನುಡಿ ಮತ್ತೆ ಜಂಜಾಟವಲ್ಲವೆ ||1||
ಚಿದ್ರೂಪಲಿಂಗ ನಿರ್ದರದಿ ನೆಲೆಗೊಳದೆ
ಬದ್ಧವರು ಬದ್ಧರಿನ್ನಿರ್ದ ಮಾತೇಕೊ ||2||
ಹಸ್ತದ ಲಿಂಗ ಚಿತ್ತದೊಳು ನೆಲೆಗೊಂಡು
ತತ್ವವನು ತಿಳಿದು ಮನ ಸ್ವಸ್ತವಾಗಿರದೆ ||3||
ಮಾಡು ನೀ ಜಪವ ಹಾಡು ಗೀತವನು
ನಾಡ ಜಡನುಡಿ ನಿನಗೆ ಬೇಡ ಬಿಡು ಸಾಕು ||4||
ದೇಶದ ಮಾತು ಕಾಸಿನಿತು ಹುರುಳಿಲ್ಲ
ಬೇಸರದೆ ಗುರುಸಿದ್ಧಲಿಂಗವ ನೆನೆಯ ||5||
ನಡೆನುಡಿ ಶುದ್ಧವೆ
ನಡೆನುಡಿ ಶುದ್ಧವೆ ಶರಣಮತ
ನಡೆಯಿಲ್ಲದ ನುಡಿ ಹರಣ ಹತ ||ಪ||
ಬಿಟ್ಟವನಿಗೆ ಮೂತ್ರದ ಬಿಲವೆಂಬುದು
ವಿಷ್ಟಿಸುತಿಹ ಕುಳಿಯೆಂದದನು
ಬಿಟ್ಟು ಮರಳಿ ನೋಡಿದಡೆ ಮನವೆಯದು
ವಿಷ್ಟಿಸಿ ಮುಟ್ಟಿದ ತೆರನಂತೆ ||1||
ಜ್ಞಾನಿಗಳೊಳಗನುಭವ ಸಂಬಾಷಣೆ
ದ್ಯಾನಕೆ ನಯನವ ಬಾಸಣಿಸಿ
ಮಾನಿನಿಯರ ರತಿಗೆಳಸಲು ಚಿತ್ತವು
ಶ್ವಾನಗೆ ನಿದ್ರೆಯು ತಿಳಿದಂತೆ ||2||
ಪಿಂಡಾದಿಯ ಬ್ರಹ್ಮಾಂಡದ ಸೃಷ್ಟಿಯ
ಕಂಡವರೊಳಗಲ್ಲಲ್ಲುಸುರಿ
ಉಂಡುಂಡುದರವ ಹೊರೆವುತಿಹನವ
ಕಂಡುದು ಹುಸಿಯದು ಶಿವಸುಖವ ||3||
ಒಡವೆಯ ಕಂಡವ ಪೊಡವಿಯ ಜನರೊಳು
ಬಡತನವನು ತೋರುವ ತೆರದಿ
ಮೃಡನೊಳು ಚಿತ್ತವು ದೃಡ ಘಟಿಸದವ
ಗಡಣವಳಿದು ನುಡಿಯಡಗಿಹನು ||4||
ಗಣನೇಮದ ಛಂದಸ್ಸುಗಳೊಳಗಣ
ಬಣಿತೆಯ ನುಡಿಯಲ್ಲಲ್ಲಿದರ
ಬಣಿತೆಯ ದಣಿಯುಂಡ ಶಿವಸುಖಿ ಬಲ್ಲನು
ತ್ರಿಣಯನು ಗುರುಸಿದ್ಧಲಿಂಗನೊಳು ||5||
ನಂಬುಗೆಹೀನರ ಡಂಭಿನ ಭಕ್ತಿ
ನಂಬುಗೆಹೀನರ ಡಂಭಿನ ಭಕ್ತಿ
ಶಂಭು ಶಿವನ ಕೃಪೆಯಿಲ್ಲಿಲ್ಲವರಿಗೆ ||ಪ||
ನಗುರೋರಧಿಕಂ ಬಗುರೋರಧಿಕಂ
ಮಿಗೆ ಹೊಗಳುವ ಶ್ರುತಿಮತಗಳನು
ಬಗೆಗೊಳ್ಳದೆ ಗುರುವನು ನರರೆಂಬವ
ಗಘಹರಲಿಂಗದ ಪೂಜೆಯದೇಕೊ |1||
ಜೀವನ ದೃಕ್ಕಿಲಿ ಕೇವಲ ಲಿಂಗವ
ಬಾವಿಸಿ ನೋಡುತ ಶಿಲೆಯೆಂಬ
ಗಾವಿಲ ಮನುಜರು ತಾವದ ಪೂಜಿಸಿ
ಮೂವಿಧಿ ಭವದೊಳು ಬರಲಲದೇಕೊ ||2||
ಬಾವದಿ ಜಂಗಮ ಪರಶಿವನೆಂದು ಸು
ಬಾವದಿ ಪೂಜೆಯ ಮಾಡುವರು
ವಾಯಕೆ ಪೂಜಿಸಿ ಸೇವಿಸಿ ಶೇಷವ
ದೇವನವನಿವನೆಂದೆನಲೇಕೊ ||3||
ಇರಿದು ಪವಾಡದಿ ಕೆಡಹಿದ ಹೆಣನಿಗೆ
ಎರೆದು ಪಾದೋದಕದಿಂದದನು
ಮರೆದೊರಗಿದವರನೆಬ್ಬಿಸಿದಂದವ
ನರಿಯದೆ ತೀರ್ಥವ ನಂಬರದೇಕೊ ||4||
ಪಂಚಾಚಾರದ ನೆಮ್ಮುಗೆಯಿಂದಲಿ
ಪಂಚಾಕ್ಷರಿಯನು ಮನದೊಳಗೆ
ಸಂಚಲವಿಲ್ಲದೆ ಜಪಿಸುವ ಶರಣ ಪ್ರ
ಪಂಚವ ಹೊದ್ದನು ಗುರುಸಿದ್ಧಲಿಂಗ ||5||
ಕೆಟ್ಟರು ಇಷ್ಟಲಿಂಗವ ಪೂಜಿಸದೆ
ಕೆಟ್ಟರು ಗುರುಕೊಟ್ಟ ಇಷ್ಟಲಿಂಗವ ಮನ
ಮುಟ್ಟಿ ಪೂಜಿಸದನ್ಯ ದೈವಭಜನೆಯಿಂದ ||ಪ||
ಹುಟ್ಟಿಸುವವನಜ ಸೃಷ್ಟಿಯಸ್ಥಿತಿಗತಿ
ವಿಷ್ಣುವೆಂದೆಂಬರು ಜಗವೆಲ್ಲಕೆ
ಕಟ್ಟೊಡೆಯನು ಮೃಡ ಕೊಟ್ಟ ಮಣಿಹವನು
ಮುಟ್ಟಿಮಾಡುವರೆಲ್ಲ ದೈವವೆಂದು ||1||
ರೋಗರುಜೆಗಳವು ನಾಗಭೂಷಣನಾಜ್ಞೆ
ಹೋಗುತ ಬರುತಿಹವೆಂದೆನ್ನದೆ
ಲೋಗರ ದೈವಕೆ ಹರಸಿ ಹಣವ ತೆಗೆ
ದಾಗಳೆ ಕಾಲಗೆ ಗುರಿಯಾದರು ||2||
ಮಟ್ಟೆಯ ಬಡಿವ ವಿಪ್ರರ ನುಡಿಗಳ
ಮುಟ್ಟಿ ಗ್ರಹಿಸುತಿಹುದೀ ಜಗದಿ
ಶ್ರೇಷ್ಠವೆನಿಪ ಗುರುನಿಷ್ಠೆಯೊಳಿರದೆ
ಕೆಟ್ಟರಲಾ ಜಡದೇಹಿಗಳು ||3||
ಬಿಡುವೆಣ್ಣು ನಾಡೊಳು ಹಡೆದುಂಬಳಲ್ಲದೆ
ಒಡಗೊಂಡು ಪುರುಷನ ಕೈವಿಡಿದ
ಮಡದಿ ಮತ್ತೊಬ್ಬನೊಳೊಡಗೂಡುವ ತೆರ
ಮೃಡನಲ್ಲದನ್ಯದೈವ ಪೂಜಿಪರು ||4||
ಸೇವಕ ದೈವವ ದೇವರೆಂದರ್ಚಿಪ
ಗಾವಿಲ ಮನುಜರನೇನೆಂಬೆನು
ದೇವರ ದೇವಗಿನ್ನಾವ ದೈವಗಳೆಣೆ
ಪಾವನ ಗುರುಸಿದ್ಧದೇವನಿರೆ ||5||
ಕಂಡೆನಚ್ಚರಿಯ !
ಕಂಡೆನಚ್ಚರಿಯ ಭೂಮಂಡಲದೊಳಗೆಲ್ಲ
ಕೊಂಡಾಡಿ ಕರಿಗುಂದಿ ಬೇಡುವವರ ನೋಡಿ ||ಪ||
ಬೇಡುವ ಯಾಚಕ ಬರುತಿರೆ ಕಂಡವನೇನ
ಬೇಡುವನೆಂದು ಮನದೊಳಗೆ
ಹೇಡಿಗೊಳುತಲವ ಬೇಡದ ಮುನ್ನವೆ
ಬಾಡುತ ಬಳಲುತ ಸುಯಿವುದನು ||1||
ಬೇಡುವದತಿ ಕಷ್ಟ ಬೇಡಿದರಣುಮಾತ್ರ
ನೀಡದೆಯಿರಲದೆ ಕರಕಷ್ಟವೊ
ಬೇಡಿಸಿ ಬೇಡುವರಿಬ್ಬರ ದುಗುಡವ
ನೋಡಿರೆ ಕೊಡದನ ಬೇಡುವದ ||2||
ಗಡಣದ ನುಡಿಯಿಂದ ಕೊಡುವವನೆಡೆಯೊಳು
ಸಡಗರದಿಂದಿತ್ತು ಪೊಡವಿಯೊಳು
ಕೊಡುಗಯ್ಯ ನೀನೆಂದು ಒಡಲಡಿ ಮುಡಿಗಳ
ನುಡಿಗಿ ಪಲ್ಗಿರಿದೊಂದು ಬೇಡುವ ದೈನ್ಯವ ||3||
ವೇದಶ್ರುತಿಗಳಲಿ ಗಾದೆಯ ಕಥೆಗಳ
ನೋಡುತ ಬೇಡುತಲಡಿಗಡಿಗೆ
ಮೇದಿನಿಯೊಳಗಿವ ಪುಣ್ಯಾಧಿಕನೆಂದು
ಹೋದ ಠಾವಿಗೆ ಹೋಗಿ ಕಾಡುವದ ||4||
ಶುದ್ಧರು ಕೇಳುವ ಆದ್ಯರ ವಚನವ
ಬದ್ಧಭವಿಗಳವರಿದ್ದೆಡೆಯ
ಹೊದ್ದಿ ಗೀತವ ಹಾಡಿ ಬೇಡುವ ಯಾಚಕ
ಸಿದ್ಧಲಿಂಗನಿಗೆ ವಿರುದ್ಧನವ ||5||
ಇರುವರಾಶ್ರಯವೆನಗುಂಟು
ಇರುವರಾಶ್ರಯವೆನಗುಂಟೆಮರಾಜನ
ಇರಲಮ್ಮೆ ಶರಣರಂತುವನರಿದು ||ಪ||
ಮಾಯೆ ನೀನಾವ ಠಾವಿನೊಳಿಹೆ ಪೇಳೆಂದು
ಜೀವಿತೇಶ್ವರ ಬೆಸಗೊಳಲವಳು
ಭೂವಳಯದ ಜನ ಗಾವಿಲ ಮನುಜರ
ಕಾಯದೊಳನುದಿನ ನೆಲಸಿಹೆನು ||1||
ಇರುತಿಹೆ ಕಳವು ಪರದ್ರವ್ಯ ಪರನಿಂದೆ
ಪರನಾರಿಗೆಳಸಿ ಪುಸಿವವರೊಳಗೆ
ಸ್ಥಿರಪಟ್ಟ ನಿನಗೆಂದು ಸ್ಮರಹರ ಬೆಸಸಿದ
ಪರಿಯನೊರೆದಳೆಮನಿಗೆ ಮಾಯ ||2||
ಅಪ್ಪಣೆಯಾಯಿತೆನಗೆ ಕರಕಮಲದೊ
ಳೊಪ್ಪುವ ಲಿಂಗದ ನಿಷ್ಠೆಯನು
ತಪ್ಪಿ ಬಿನುಗು ಮಾರಿಮಸಣಿ ದೈವಂಗಳ
ಮಾಳೃವರೊಳಗಾನಿರುತಿಹೆನು ||3||
ಆಸಕರೊಳಗಿರುವೆನು ಪದಬೋಗ ನಿ
ರಾಸಕರೊಳಗಿರಲಂಜುವೆನು
ದೇಶದ ನಡೆನುಡಿ ವರ್ತನೆಗಳೊಳಿಹೆ
ಈಶಭಕ್ತರ ಹೆರಸಾರಿಹೆನು ||4||
ಹಮ್ಮುಬಿಮ್ಮಿನ ಬರು ಹೆಮ್ಮೆಯೊಳಾತ್ಮನ
ಬೊಮ್ಮವೆಂಬವರೊಳಗಿರುತಿಹನು
ನಿರ್ಮಳ ಲಿಂಗದ ವರ್ಮವನರಿದ ಸು
ದರ್ಮಿಗಳೊಳಗಿರಲಂಜುವೆನು ||5||
ಆವಾವ ಮುಖಮುಖದೊಳು ಬರಲೆನ್ನನು
ಹೇವವ ಮಾಡಿ ಹೀಯಾಳಿಸುವ
ಪಾವನ ಶರಣರ ಹೊದ್ದಲಮ್ಮೆನು ದೇಹ
ಮೋಹಿಗಳೊಳಗಾವಗಿರುತಿಹೆನು ||6||
ಇರಲಮ್ಮೆ ಗುರುಭಕ್ತಿ ಲಿಂಗಪೂಜ
ಕರಲ್ಲಿ ಚರಲಿಂಗ ಸೇವೆ ದಾಸೋಹಿಗಳ
ಚರಣಕೆರಗುವರೊಳಿರದಿರು ನೀನೆಂದು
ಗುರುಸಿದ್ಧ ಲಿಂಗನಪ್ಪಣೆಯೆನಗೆ ||7||
ಮಾಡಿರೋ ಮೃಡನ ಪೂಜೆಯ
ನೋಡಿ ಮಾಡಿರೋ ಮೃಡನ ಪೂಜೆಯ
ನೆರೆ ನೋಡಿ ಮಾಡಿರೋ ||ಪ||
ದಿನಮಾಸಗಳರಸಿಗೆಯಾಳಿಗೆ ಸರಿ
ಜನನಮರಣಸ್ಥಿತಿ ಸರಿಯರಸ
ಅನುವರಿದನುದಿನ ಓಲೈಸುವದಿ
ದನರಿದು ಮಾಡಿರೊ ಲಿಂಗಪೂಜೆಯ ||1||
ಮಂಡಲಪತಿಯಾಗಿ ದಂಡಿಗೆಯೊಳು ನೆರೆ
ಮಂಡಿಸಿ ಮಲೆದೊಲೆವುತಿಹನ
ಡೆಂಡಣಿಸುತ್ತಡಿಯಿಡುತಂ ಹೊರುವದ
ಕಂಡು ಪೂಜಿಸಿ ಲಿಂಗದೇವನ ||2||
ತುರಗವನೇರಿಹ ರಾಜಗೆ ಚವರವ
ಭರದಿಂದ ಡಾಳಿಸಿ ಛತ್ರವನು
ಉರಿವ ಬೇಸಿಗೆಯೊಳ್ವಿಡಿದಡಿಯಿಡುತಿಹು
ದೆರಡರ ಸುಕೃತ ದುಃಕೃತಗಳ ||3||
ಸವಿ ರುಚಿಗಳನರಿಯದರಾರಿನ್ನೀ
ಭುವನದೊಳ್ ಜನಿಸಿದ ನರರೊಳು
ಶಿವಶರಣರ್ಗತಿ ಮೋಹದೊಳುಣಿಸಿದ
ಸವಿದ ರುಚಿಯನೀಯದವರ್ಗಿಲ್ಲ ||4||
ವಸ್ತ್ರಾಭರಣ ಸುಪುತ್ರ ವಸ್ತುಗಳೆಲ್ಲ
ಉತ್ತಮ ಲಾವಣ್ಯದ ಸ್ತ್ರೀಯ
ಮೊತ್ತದ ಸಿರಿಸಂಪತ್ತಿನ ಸುಖವಹು
ದರ್ಚಿಸಿ ಗುರುಸಿದ್ದಲಿಂಗವ ||5||
ನಿನಗಿನ್ನಂತಕ ಭಯವಿಲ್ಲ
ಗುಣವಿಲ್ಲದವಗುಣಿಗಳ ಗುಣವದು
ಘಣಿವಿಷಕೆಣೆಯೆಂದರಿಯವರೊಡನೆ ||ಪ||
ಮೋಸಕೆ ಎಚ್ಚರು ರೋಷಿಗೆ ಶಾಂತಿಯು
ವೇಶಿಗೆ ಸಜ್ಜನತನವುಂಟೆ
ದೂಷಕನಾದವ ಹೇಸನು ನರಕಕೆ
ವಿೂಸಲ ಬಲ್ಲುದೆಯಾ ಶುನಿಯು ||1||
ಅರ್ಕನನುದಯವ ಕುಕ್ಕುಟನಲ್ಲದೆ
ಕೊಕ್ಕರನದು ಬಲ್ಲುದೆ ಹೇಳ
ಕರ್ಕಶ ಗೆಲದತಿ ಸೊಕ್ಕುವ ಬಲ್ಲನೆ
ಮುಕ್ಕಣ್ಣನ ಶರಣರ ನಿಲವ ||2||
ಗಿಡಿಬಿಡಿ ತಂಬಟ ಹೊಡೆದಡೆ ಶಬ್ದವು
ಬಿಡಲವು ನಾದಗಳುಡುಗುವವು
ಬಿಡುನುಡಿ ಬಿಂಕದ ನುಡಿ ನಾಲಗೆಯೊಳ
ಗೆಡವಿಡವಿಲ್ಲವು ದೂಷಕಗೆ ||3||
ವೃಷ್ಟಿಪ ಪೃಷ್ಟವು ಕಟ್ಟಿಗೆ ನಿಲುವದೆ
ಕೆಟ್ಟೊಬ್ಬರ ನಿಂದಿಪ ಜಿಹ್ವೆ
ಪೃಷ್ಟಕೆ ಸರಿಯದು ಕಟ್ಟಳೆಗೆಯಿದದು
ಭ್ರಷ್ಟರ ನುಡಿ ತಟ್ಟವು ಶಿವನ ||4||
ಬ್ರಾಂತರ ನುಡಿಗಳನಂತಿಂತೆನ್ನದೆ
ಸಂತತ ಗುರುಸಿದ್ಧೇಶ್ವರನ
ಚಿಂತಿಸಿ ನೆನೆದು ಸಮರ್ಚಿಸು ನಿನಗಿ
ನ್ನಂತಕ ಭಯವಿಲ್ಲೆಲೆ ಮರುಳೆ ||5||
ತಾಮಸಗಳಿಲ್ಲ ಭಕ್ತರ್ಗೆ
ತಾಮಸಗಳಿಲ್ಲ ಭಕ್ತರ್ಗೆಯಣುಮಾತ್ರ
ಪ್ರೇಮದಿಂ ನೆನೆವವರೊಳಿಹ ಬಾಳನೇತ್ರ ||ಪ||
ಅಂಬರಾಭರಣವನು ಲೇಪನ ದರಿಸಿ
ಕುಂಭಿನಿಯೊಳತಿಚೆಲ್ವ ಪ್ರೌಡ ತಾನೆನಿಸಿ
ಅಂಬುಜಾನನೆಯರರ್ತಿಯನು ಮಿಗೆ ಸಲಿಸಿ
ನಂಬಿ ಶಿವಗರ್ಪಿಸಿದ ಸುಖದೊಳೊಡವೆರಸಿ ||1||
ದನದಾನ್ಯದೊಳಗೆ ಸಂಪನ್ನ ಸಿರಿಯಾಳ
ವನಿತೆಚಂಗಳೆಗೂರ್ವ ಸುತನು ಚಿಲ್ಲಾಳ
ಅನಿತು ಶಿಶುವನು ಬೇಡೆ ಶಿವ ಹಸಿವ ತಾಳ
ಎನುತ ಹರಗರ್ಪಿಸಿದರಿನ್ನಾರು ಹೇಳ ||2||
ಅತಿಚೆಲ್ವ ಪಟ್ಟದರಸಿಯ ಬಂದು ಬೇಡೆ
ಸಿತಗಳಗೆ ಬಲ್ಲಾಳನಿತ್ತನವ ಕೂಡೆ
ಸುತನಾಗಿ ಮೊಲೆಯುಣ್ಣಲಾ ಶಿಶುವಿಗೂಡೆ
ಜಿತಕಾಮ ಗುರುಸಿದ್ಧಲಿಂಗ ಕೊಂಡಾಡೆ ||3||
ಏವೆನಯ್ಯ ಕಾಯಜೀವಬಾವದಿ
ಏವೆನಯ್ಯ ಕಾಯಜೀವಬಾವದಿಂದಲಿ ಶಿವನ
ಸೇವೆಗಲಸಿ ಪ್ರಯ ದಿನ ವೃಥಾಯ ಹೋಯಿತು | ಎನಗೆ||ಪ||
ತಾಯ ಗರ್ಭದೊಳಗೆ ಕೀವು ಜಲಮಲಂಗಳ | ಕ್ರಿಮಿಯ
ಹೇಹದೊಳಗೆ ಬಲಿದು ಜನನವಾಗಿ ಬಾಲ್ಯದಿ
ಹಾವು ಚೇಳು ಹವಿಯ ಹೊಯ್ವ ಗೋವ ತಪ್ಪಿಸಿ | ದೇಹ
ಮೋಹದಿಂದ ಬೆಳೆದು ಹೊಳೆದು ತೀವಿತವ್ವ | ಎನಗೆ ||1||
ಹೇಮಭೂಮಿಕಾಮಿನಿಯರ ಸ್ತೋಮ ಸಿರಿಯೊಳು | ಹರನ
ನಾಮವನ್ನು ಪ್ರೇಮದಿಂದ ಸ್ಮರಿಸಲೊಲ್ಲದೆ
ಕಾಮಬಾಣ ತಾಗಿ ಹಲವು ತಾಮಸಂಗಳಿಂ | ಬಿಡದೆ
ಸೋಮದರನ ನೆನೆಯದ ಮನಸ್ಸು ಮಾರಿಯು | ಎನಗೆ ||2||
ಹೀನಸತ್ವಗೆಟ್ಟು ತನು ವಿನಾಶವಾಗ | ಲಾಗ
ದಾನದರ್ಮಶ್ರದ್ಧೆ ಸನ್ಮಾನದಿಂದಲಿ
ಜ್ಞಾನಕ್ರೀಯೊಳಿನಿತು ಲಿಂಗನಿಷ್ಠೆಯೊಳ್ನೆರೆ | ನಿಮ್ಮ
ದ್ಯಾನವೊಂದ ಕರುಣಿಸಭವ ಸಿದ್ಧಲಿಂಗ | ಎನಗೆ ||3||
ಕೆಡದಿರು ಭ್ರಮಿಸಿ ಪರಸತಿಯರ
ನೋಡಿದಡೆ ನೋಡು ಮಾತಾಡು ತಾಯಿಗಳೆಂದು
ನೋಡಿ ಕೆಡದಿರು ಭ್ರಮಿಸಿ ಪರಸತಿಯರ ||ಪ||
ಹಸಿದಡೆಕ್ಕೆಯ ಕಾಯಿ ನಸುಗುನ್ನಿ ತುರುಚೆಯನು
ತುಷವ ಮೆಲುವರೆ ತೃಷೆಗಳಡಸಿತೆಂದು
ವಿಷವ ಕುಡಿದರೆ ವ್ಯಸನ ವಿಷಯ ತೋರಿದಡೆ ಪ
ರಸತಿಯ ರತಿಗೆಳಸುವರೆ ಮರುಳು ಮನವೆ ||1||
ದಾರಿಯೊಳು ಭಯವೆಂದು ಚೋರನೊಳು ಹೊಗುವರೆ
ಗೇರಹರಳಿನ ರಸವ ಲೇಪಿಸುವರೆ
ಹೇರಡವಿಯೊಳು ಕ್ರೂರಮೃಗವಿರಲು ತುರಗವೆಂ
ದೇರುವಂಥದು ಪರರ ನಾರಿ ಮನವೆ ||2||
ಹಾವಿನೊಡತಣ ಸಂಗವಾವಾಗ ವಿಘ್ನವದು
ಪಾವಕನ ಸೋಂಕಿದವ ಬೇವನೋವ
ಭವದೊಳು ಭ್ರಮಿಸಿ ಪರಯುವತಿಯರಿಗಳುಪಿದರ
ಮೂವಿಧಿಯ ನೋಡಿನ್ನು ಬಯಸುವರೆ ಮನವೆ ||3||
ಭೀತಿಯಿಲ್ಲದೆ ಮುನಿಯ ಸತಿಗಾಗಿ ಇಂದ್ರನತಿ
ಕಾತುರವ ಮಾಡಿ ಮೈತೂತಾದನು
ಸೀತೆಗಳುಪಿಯೆ ಕೆಟ್ಟ ರಾವಳನು ದ್ರೌಪತಿಗೆ
ಸೋತು ಹತನಾದ ಕೀಚಕ ನೀಚಮನವೆ ||4||
ಕೆಟ್ಟವರ ದೃಷ್ಟವದನೆಷ್ಟು ಹೇಳಿದಡೇನು
ಕಷ್ಟಮನ ಮಾರಿಯಾಗಿದೆ ಎನ್ನಯ
ಕಟ್ಟಿನೊಳು ನಿಲ್ಲು ದುಃಕೃಷ್ಠವಾಗಿದೆ ಇದನು
ಸುಟ್ಟು ಸಲಹೆನ್ನ ಗುರುಸಿದ್ಧಲಿಂಗ ||5||
ನೋಡುತಿಹುದತಿ ಲೇಸು
ನೋಡುತಿಹುದತಿ ಲೇಸು ಬೇಡಬೇಕೆನಬೇಡ
ನಾಡ ನಡೆವಳಿಯ ಕಂಡು ಜ್ಞಾನಿಗಳು ||ಪ||
ಎಡರುಬಂದರೆ ಹರಸಿ ಒಡೆಯರೆಂದುಣಲಿಕ್ಕಿ
ಎಡರು ಪರಿಹರವಾಗಲಾ ಒಡೆಯರ
ಗಡಣದಿಂದತಿ ಸಿರಿಯೊಳೆಡಹಿ ಕಾಣದ ಜಡರ
ನಡೆವಳಿಯ ನೋಡಿ ಕಂಡು ಜ್ಞಾನಿಗಳು ||1||
ಹಬ್ಬಸ್ಥಿತಿಗಳ ಕುರಿತು ಹರಸಿ ಸೋಮಾರದೊಳ
ಗೊಚ್ಬೊಡೆಯರನು ಕರೆದು ತಂದು ನೀಡಿ
ಸದ್ಭಕ್ತರಾವೆಂದು ಉಬ್ಬಿ ಭಕ್ತರ ಹಳಿವ
ದುರ್ಭವಿಗಳನು ಕಂಡು ಜ್ಞಾನಿಗಳು ||2||
ಗುರು ಕೊಟ್ಟ ಲಿಂಗವದು ಕಿರಿದೆಂದು ದೇಗುಲದ
ಹಿರಿದುದ್ದ ತೋರವಾಗಿಹ ಲಿಂಗಕೆ
ಹರಿದು ಭಕ್ತಿಯ ಮಾಡಿ ಶರಣರನುಬಾವಕಿನ್ನು
ಹಿರಿದು ಹೋರುವರ ಕಂಡು ಜ್ಞಾನಿಗಳು ||3||
ಭಕ್ತರೊಡೆಯರ ನಡುವೆ ಕರ್ತುತೇಜವ ಹೊತ್ತು
ಹತ್ತಿರೊಳು ಸಹಪಂಕ್ತಿಯೊಳಗನ್ನವ
ಮತ್ತೊಂದು ಪರಿಪಾಕ ಪಂಕ್ತಿ ಬೇದದೊಳುಂಬ
ವರ್ತನೆಯ ನೋಡಿ ಕಂಡೂ ಜ್ಞಾನಿಗಳು ||4||
ಇದ್ದ ಗುಣವಾಡಲಿವರುದ್ರೇಕಿಗಳು ಇವರ
ಸುದ್ದಿ ನಮಗೇಕೆಂದು ಹೊದ್ದದವರ
ತಿದ್ದಿ ತಿಳುಹಲ್ಬೇಡ ಗುರುಸಿದ್ಧಲಿಂಗನೊಳ್
ಶುದ್ಧ ತಾವಾಗಿರುತಿಹಜ್ಞಾನಿಗಳು ||5||
ಮಾಯೆ ಬೇರಿಲ್ಲ
ಮಾಯೆ ಬೇರಿಲ್ಲ ಮಾಯೆ ಬೇರಿಲ್ಲ ಮಾಯೆ ಬೇರಿಲ್ಲವೊ
ಕಾಯದಿಚ್ಛೆಗೆ ಪರಿದಾಯಸಗೊಳಿಸುವ ||ಪ||
ನಿಂದಲ್ಲಿ ನಿಲಲೀಯದೆ ಸಂಸಾರ
ದಂದುಗ ದಾಳಿಯೊಳು
ಮುಂದಗೆಡಿಸಿ ನಿಮ್ಮ ನೆನೆಯದ
ಬೆಂದ ಕುಹಕ ಮನವೆ ಮಾಯೆ ||1||
ಇಲ್ಲದುದನೆ ಬಯಸಿ ಬೋಗವ
ತಲ್ಲಣಗೊಳಿಸಿ ಮನ
ನಿಲ್ಲದು ಸುಮನದೊಳು ಲಿಂಗದಿ
ಕುಲ್ಲಕುಹಕ ಮನವೆ ಮಾಯೆ ||2||
ನಿತ್ಯವನೆ ಮರಸಿ ಕೆಡುವ
ಅನಿತ್ಯವ ನೆಲೆವಿಡಿಸಿ
ಸತ್ತು ಹುಟ್ಟುವ ಭವಕೆ ಬರಿಸುವ
ಮೃತ್ಯು ಕುಹಕ ಮನವೆ ಮಾಯೆ ||3||
ವ್ಯಾಪಾರಗಳಳಿದು ಮನದೊಳು
ಕಾಪಾಲಿಯ ನೆನಹು
ವ್ಯಾಪಿಸಿ ಹೃದಯದೊಳು ನಿಲ್ಲದ
ಪಾಪಿ ಕುಹಕ ಮನವೆ ಮಾಯೆ ||4||
ಯಮನಿಗೆ ಹಿತಮಾಯೆ ಮಾಯೆಗೆ
ಯಮನತಿ ಹಿತ ತಾನೆ
ನಮೋನಮೋ ಗುರುಸಿದ್ಧಲಿಂಗವೆ
ಕುಮನವ ಕೆಡಿಸೆನ್ನ ||5||
ಸಲ್ಲದು ಸಹಬೋಜನವೆಲ್ಲರಿಗೆ
ಸಲ್ಲದು ಸಹಬೋಜನವೆಲ್ಲರಿಗದು
ತಲ್ಲೀಯದಿ ಮನ ನಿಲ್ಲದೆ ಲಿಂಗದಿ ||ಪ||
ಇಷ್ಟದೊಳಗರ್ಪಿತವಾಗಿಹ ಷಡುರುಚಿ
ಮುಟ್ಟಲು ಜಿಹ್ವೆ ಪ್ರಸಾದವದು
ಶ್ರೇಷ್ಠವೆಂದರಿದೊಂದು ಬಂದ ಪದಾರ್ಥವ
ಕೊಟ್ಟು ಸೇವಿಪ ಗುರುನಿಷ್ಠರಿಗಲ್ಲದೆ ||1||
ದಾಸಿವೇಶಿಯ ಸಂಗಕೆ ಎಳಸುವ ಭವಿ
ಯಾಶ್ರಯದೊಳಗನ್ನವ ಸವಿವ
ದೋಷಿಗೆ ಲಿಂಗದೊಡನೆ ಸಹಬೋಜನ
ಹೇಸಿಕೆಯವನೊಳಗೀಶನಿರ ||2||
ಹಸ್ತದೊಳಗೆ ಪಿಡಿದಿಹ ಶಿವಲಿಂಗಕೆ
ತುತ್ತನು ಸವಿದರ್ಪಿಸುವದದು
ಸತ್ಯಗೆ ಸನ್ಮಾರ್ಗದಿ ಗುರು ಪೇಳಿದ
ವರ್ತನೆ ಶುದ್ಧದಿ ನಡೆವಂಗಲ್ಲದೆ ||3||
ಪರದನ ಪರಸತಿಗಳಪುವ ಹಿಂಸಕ
ಪರನಿಂದೆಯು ಪರದೈವಗಳ
ಹರುಷದೊಳರ್ಚಿಸಿ ವರಗಳ ಬೇಡುವ
ಮರುಳರು ಹರನೊಡನುಂಬುದದು ||4||
ನಿಷ್ಠೆ ಬಲಿದು ಸದ್ಭಕ್ತರ ಹೃದಯವ
ಬಿಟ್ಟಗಲದೆ ಮೃಡ ನೆಲೆಸಿಹುದು
ನೆಟ್ಟನೆ ಮರೆದಾ ಗುರುಸಿದ್ಧಲಿಂಗನೊಳು
ದೃಷ್ಟಿ ನಟ್ಟ ಸಂತೃಷ್ಟಂಗಲ್ಲದೆ ||5||
ಶರಣಪದ್ಧತಿ
ಶರಣಪದ್ಧತಿಗಿನ್ನು ಸರಿಮಿಗಿಲುಂಟೆ
ಪರತತ್ವಪರಿಣಾಮಿಗೆ ದುಃಖವುಂಟೆ ||ಪ||
ಸದಮಲಜ್ಞಾನಿಗೆ ಕದನ ಕರ್ಕಶವುಂಟೆ
ಹೃದಯಶುದ್ಧಗೆ ಚಿತ್ತ ಕದಡಿದುದುಂಟೆ
ಮೃದುವಚನಗಳಿಂದಧಿಕ ಹಿತವುಂಟೆ
ಹದುಳಿಗನೊಳು ಸದಮದವೆಂಬುದುಂಟೆ ||1||
ವಾಕುದುರ್ಜನದಿಂದಧಿಕ ಹಗೆಯುಂಟೆ
ಸಾಕೆಂದ ಬಳಿಕ ಮತ್ತೇಕಾಂತವುಂಟೆ
ಬೇಕು ಬೇಡೆನ್ನದವಗೆ ಶೋಕಮೋಹಗಳುಂಟೆ
ಲೋಕಾರ್ಥ ಪರಮಾರ್ಥಕೇಕಾರ್ಥವುಂಟೆ ||2||
ಸಟೆಹೂಸಕನ ಭಕ್ತಿ ದಿಟವೆನಲುಂಟೆ
ಕಟಕಿಗೆ ಶಿವದ್ಯಾನ ಘಟಿಸಿದುದುಂಟೆ
ಅಟಮಟ ಬಿಡದೆ ದೂರ್ಜಟಿಯ ದ್ಯಾನವದುಂಟೆ
ಕುಟಿಲಂಗೆ ನಿಟಿಲಾಕ್ಷ ಕೃಪೆಯಾದುದುಂಟೆ ||3||
ಆಸೆಯುಳ್ಳವಗೆ ನಿರಾಸಕತನವುಂಟೆ
ಬೀಸುವ ಮಾರುತಗೊಂದಾಶ್ರಯವುಂಟೆ
ಈಶನ ಶರಣರ್ಗೆ ರೋಷಪಾಶಗಳುಂಟೆ
ಭಾಷೆಹೀನನ ಸಂಗ ಲೇಸಾದುದುಂಟೆ ||4||
ಅರುಣನುದಯಕೆಯಿನ್ನು ಹರಿಯದ ಮಂಜುಂಟೆ
ತರುಣಿಯ ರತಿಯಿಚ್ಛೆ ವಿರತನಿಗುಂಟೆ
ಹರಭಕ್ತಜ್ಞಾನಿಗಳಿಗೆ ಪರಿಭವವುಂಟೆ
ಗುರುಸಿದ್ಧಲಿಂಗನಿಂದಧಿಕರಿನ್ನುಂಟೆ ||5||
ದೃಷ್ಟವಿದ ನೋಡಿಕೊಳ್ಳಿ
ದೃಷ್ಟವಿದ ನೋಡಿಕೊಳ್ಳಿ ಶಿವಲಿಂಗ
ನಿಷ್ಠೆಯೊಳಗಿಹರೆಲ್ಲರು ತಿಳಿದು ||ಪ||
ವೇಶಿಯೆಂದರಿಯದವಳು
ನಿಂದಿರ್ದ ವಾಸಕೈತಂದೊಬ್ಬನು ಬಂದು
ಆ ಸಮಯ ಪತಿಯ ಹೆಸರ
ಬೆಸಗೊಳಲು ಹಾಸ್ಯವಾಯಿತೆಲ್ಲಕೆ ಜಗದಿ ||1||
ಲಿಂಗವಂಗದೊಳಿಲ್ಲದ
ಬರಿ ಕಾಯರಿಂಗಲ್ಲದನ್ಯ ದೈವ ಶಿವನ
ಅಂಗದೊಳು ಹೆರೆಹಿಂಗದೆ
ದರಿಸಿರ್ಪವಂಗನ್ಯ ದೈವವುಂಟೆ ಬಳಿಕ ||2||
ಕೈವಿಡಿದ ಸತಿ ತನ್ನಯ
ಪತಿಯಿರಲು ದುರ್ವಿಕಾರದೊಳೊರ್ವನ
ಬಯಸಿ ಕೈಸನ್ನೆ ಮಾಡಿ ಕರೆಯೆ
ಪತಿ ಕಂಡು ಒಯ್ಯ ನಿರಿ ಯದೆ ಮಾಣ್ಬನೆಯವಳ ||3||
ಪುರುಷರೂಪೆಲ್ಲವೊಂದೆಯೆಂದು
ಪರಪುರುಷರೊಡಗೂಡಬಹುದೆ ಕರಕೆ
ಗುರುವಿತ್ತ ಲಿಂಗಕಿನ್ನು
ಪರದೈವ ಸರಿಯೆಂದು ಭಜಿಸಬಹುದೆಯದನು ||4||
ಪತಿವ್ರತಾಂಗನೆಯಂತೆ ಈ
ಶಿವಲಿಂಗ ವ್ರತವನಾಚರಿಪ ಭಕ್ತ
ಮರಳಿ ಅತಿಶಯವ ಕಂಡನ್ಯಕೆ
ನಮಿಸನವ ಸ್ತುತಿಸಿ ಗುರುಸಿದ್ಧಲಿಂಗನಿರಲು ||5||
ಶರಣುಹೊಕ್ಕರ ರಕ್ಷಿಪ
ಜ್ಞಾನಿಗಳಿಗಿದಿರ ಹೋರಟೆಯಿಲ್ಲಿ ಸಲೆ ಶಿವ
ದ್ಯಾನವಲ್ಲದೆ ಪೆರತನರಿಯರವರು ||ಪ||
ನಿರುಪಾಧಿಕರು ಭೋಗಕೆಳಸಿ ಬಯಸುವರಲ್ಲ
ದರಣಿಯೊಳು ಹರನನರ್ಚಿಪ ಭಕ್ತರು
ಇರುತಿರ್ಪ ಗೃಹದೊಳಗೆ ಭಕ್ತಿ ಭಿಕ್ಷವನುಂಡ
ಪರಮಪ್ರಸಾದದೊಳು ತೃಪ್ತರಾದ ||1||
ಶಯನಕ್ಕೆ ಗವಿದೇಗುಲಗಳುಂಟು ಮಾತಿಂಗೆ
ಶಿವಮಂತ್ರವುಂಟು ತತ್ಸಂಗಕಿನ್ನು
ಅವಿರಳಧ್ಯಾತ್ಮಲಿಂಗದ ಸಂಗವುಂಟೆಂದುದು
ವಿವರಿಸಿದ ಜ್ಞಾನಬೋಧೆಯೊಳಿರುತಿಹರು ||2||
ಭಕ್ತಿಯಿಂ ಬಂದಡೊಂದಂಬರವು ಶೀತಕ್ಕೆ
ಮತ್ರ್ಯದೊಳು ಶರಣುಹೊಕ್ಕರ ರಕ್ಷಿಪ
ಕರ್ತಗುರುಸಿದ್ಧ ಲಿಂಗವ ಸ್ಮರಿಸಿ ತಾಮಸವ
ನೊತ್ತರಿಸಿ ವಿರತಿಯೊಳು ಸ್ವಸ್ಥರಾದ ||3||
ಶಿವನ ನೆನೆಯಿರೋ
ಶಿವನ ನೆನೆಯಿರೊ ಬಿಡದೆ
ಶಿವನ ನೆನೆಯಿರೋ
ಕವಿವ ಕಾರ್ಮುಗಿಲಿನಂತೆ
ಜವನ ದಾಳಿ ಬರುತಲಿದೆಕೊ ||ಪ||
ಗುಡುಗುಡೆಂದು ಗರ್ಜಿಸುತ್ತ
ಸಿಡಿಲಿನಾರ್ಭಟೆಯ ಭಟರು
ಪಿಡಿದ ಖಡ್ಗದಿಂದ ಹೊಡೆದು
ಕೆಡಹುತಿರ್ಪರರಿ ಚಲರಿತ ? ||1||
ಕಡುಗಲಿಗಳು ಯಮನ ಭಟರು
ಕರಿಯ ಮೊರಡಿಯಂತೆ ಬಂದು
ಬಡವರೊಡೆಯ ರಾಜರೆಂಬ ಹಿರಿದು
ಕಿರಿದು ನೋಡರವರು ||2||
ಪ್ರಾಯದೊಳಗೆ ಸಾಯೆನೆಂ
ಬುಪಾಯ ನಿಮ್ಮ ದಾಯವರಿದು
ಪ್ರಯ ಮುಪ್ಪು ಬಾಲರೆನ್ನದೆಳೆವ
ರಾಯು ತೀರಲವರು ||3||
ಸತ್ತಬಳಿಕ ಜೀವತಾನೆ
ಎತ್ತ ಬಲ್ಲುದೆಂದು ನುಡಿವ
ಕತ್ತೆ ಮನುಜರಾಡಲದನು
ತಥ್ಯವೆಂಬುದುಚಿತವಲ್ಲ ||4||
ಮಾತೆಪಿತರು ಸತಿಯು ಸುತರು
ಪ್ರೀತಿಯಿಂದ ಕಾಯ್ವರಸುವ
ಪ್ರೇತಪತಿಯದೂತರೆಳೆವ
ರೀತಿ ಕಾಣಬಾರದವಗೆ ||5||
ಬೆಕ್ಕು ಬಂದು ಇಲಿಯ ಹಿಡಿವ
ಲೆಕ್ಕದಂತೆ ಯಮನ ಭಟರು
ಚಕ್ಕನೆತ್ತಿಯಸುವ ಹುರಿದು
ಮುಕ್ಕುತಿರ್ಪರಣ್ಣಗಳಿರ ||6||
ಗಿಡುಗನಡರಿ ಹಿಡಿದ ಪಕ್ಷಿ
ಬಿಡಿಸಿಕೊಂಬುದೇನೊ ನಿಮ್ಮ
ಒಡಲನುಳುಹಿ ಹರಣವನ್ನು
ಬಿಡದೆ ಪಿಡಿವ ಯಮನ ಭಟರು ||7||
ಎರಳೆಯಿರ್ದ ಠಾವಿಗೆಯಿದಿ
ಹರಿದು ವ್ಯಾಘ್ರನಡರುವಂತೆ
ದುರುಳ ಕಾಲನಾಳ್ಗಳಿಂದ
ಪಿರಿದು ದುಃಖಬಡದೆ ನೀವು ||8||
ಸ್ಥಿರವಿದಲ್ಲ ದೇಹ ನಿಮ್ಮ
ಹರಣದೊಡೆಯ ಸಿದ್ಧಲಿಂಗ
ಸ್ಮರಣೆಯಿಂದ ಜಯಿಸಿ ಕಾಲ
ಭಯವ ನೀಗಿ ಬೇಗಬೇಗ ||9||
ನೆನವ ಭಕ್ತರ ಹೃದಯದೊಳಗೆ
ನಟಿಸಿ ನಟನಾಟಕದ ಪರಿಯ ನೋಡುತ
ನಿಟಲಾಕ್ಷ ಜಗವ ಹುಟ್ಟಿಸಿ ವಿನೋದಿಸುತ್ತ ||ಪ||
ಜವ್ವನದ ಹೆಣ್ಣ ಯವ್ವನ ವಿೂರಿದವಗೆ
ಕೈವಿಡಿಸೆ ತಾಯಿತಂದೆಯ ಬಯ್ದು ಹಣೆಗೆ
ಕೈವೆರಳನಿಟ್ಟು ವಿದಿಬರಹವಿಂತೆನಗೆ
ಅಯ್ಯೋ ಎಂದವಳು ಸುಯಿವಳು ಮನಸಿನೊಳಗೆ ||1||
ತುಂಬಿಜವ್ವನದ ಸೊಬಗಿನ ಚೆಲ್ವೆ ತಾನು
ಅಂಬರಾಭರಣ ತೊಟ್ಟುಟ್ಟಡೇನು
ಲಂಬತನು ದಿನಹೋದ ಪುರುಷ ದೊರಕಿದನು
ಎಂಬ ಹೆಣ್ಣಿನ ಮನಸಿಗಿಂಬಿಲ್ಲವವನು ||2||
ಪುರುಷನಿರವನು ಕಂಡು ಶಿರವನಲುಗುತ್ತ
ನರೆತೆರೆಯ ನೋಡಿ ನಗುತಿಹಳವನ ಚಿತ್ತ
ಹರುಷದಿಂದವಳನಡಿಗಡಿಗೆ ನೋಡುತ್ತ
ಇರೆ ನಾರಿಪುರುಷರಿಬ್ಬರಿಗಸ್ತವ್ಯಸ್ತ ||3||
ಗುಣವುಳ್ಳ ಸತಿಗೆ ಕೈವಿಡಿದವನೆ ಪ್ರಾಣ
ಗುಣಹೀನಸತಿ ಮುಪ್ಪನಣಕಿಸದೆ ಮಾಣ
ಹಣದಾಸೆಗಾಗಿ ಮಾರುವದು ಬಲುಕ್ಷೀಣ
ಎಣೆಯರಿದು ಹೆಣ್ಣುಗಂಡಿಗೆ ಕೊಡುವ ಜಾಣ ||4||
ಕೆಲರನಗಿಸುತ ಕೆಲರನಳಿಸಿ ಜಗದೊಳಗೆ
ಬಲು ವಿನೋದವ ಮಾಡಿ ನೋಡುತಡಿಗಡಿಗೆ
ಸಲೆ ತನ್ನ ನೆನೆವ ಭಕ್ತರ ಹೃದಯದೊಳಗೆ
ನೆಲೆಸಿ ಗುರುಸಿದ್ಧಲಿಂಗನ ಲೀಲೆ ಹೀಗೆ ||5||
ಪರಬ್ರಹ್ಮವೆ ಸಾಕಾರ ಶರಣ
ಗಳಹದಿರೆಲೋ ಶಿವಶರಣರೆಂದರಿಯದೆ
ಮರುಳಮಾನವ ಮೈಮರೆದೊಂದನು ||ಪ||
ಮಾಯಾಕೋಳಾಹಳನೆಂಬ ಬಿರಿದು ಪ್ರಭು
ರಾಯನಿರ್ಮಾಯನೆಂದರಿಯದೆ
ಮಾಯೆಗೆ ಮನಸೋತನೆಂಬ ದ್ರೋಹಿಯ
ಬಾಯತಿವಿದಮೇದ್ಯ ವೃಷ್ಟಿಪ ಕುಳಿಯು ||1||
ಜಗವ ರಕ್ಷಿಸಬಂದನಗಣಿತ ಮಹಿಮಗೆ
ವಿಗಡ ಮಾಯೆಯ ಸಂಗವುಂಟೆಂದೆಂಬ
ಬಗುಳುಗುನ್ನಿಯೆ ಕೇಳು ಜಗಳಬೇಡೀನುಡಿ
ಸೊಗಸಲ್ಲ ಶರಣಸಂಕುಳವೆಲ್ಲಕೆ ||2||
ರೂಪನಿರೂಪಲ್ಲದ ಪರಬ್ರಹ್ಮವೆ ಸಾಕಾರ
ಶರಣನೆಂದರಿಯದ ಜಡರು
ಪಾಪಿಗಳಿಗೆ ಪುಣ್ಯಲೋಪವೆಂದುಸುರ್ದ ಚಿ
ದ್ರೂಪ ಗುರುಸಿದ್ಧಲಿಂಗೇಶ್ವರನು ||3||
ಶಿವಭಕ್ತರ್ಗೆ ಸಲ್ಲದು ನಿಂದೆ
ಸಮಯಾದಿ ಗಳಿಗದಲ್ಲದೆ ನಿಂದೆಯೆಂಬುದದು
ಅಮಮ ಶಿವಭಕ್ತರ್ಗೆ ಸಲ್ಲದೆಲವೊ ||ಪ||
ಗುರುಕರುಣಿಸಿದ ಲಿಂಗ ಕರದೊಳಿಹುದದರ
ಹರಣ ಚರಲಿಂಗವೆಂಬುದನರಿಯದೆ
ಬರಿದೆ ಬಾಷ್ಕಳಗೆಡೆದು ನಿಂದಿಸುತ್ತಿರೆ ನರಕ
ದರೆ ಚಂದ್ರರುಳ್ಳನಕ ಸವೆಯದೆಲವೊ ||1||
ಶೀಲವ್ರತನಿಷ್ಠೆ ಬಲಿದೀ ಲಿಂಗಸಂಗದೊಳು
ಲೋಲುಪ್ತನಾಗೆಂದು ಗುರು ಪೇಳಿದ
ಮೂಲಮಂತ್ರವ ಮರೆದು ನಾಲಗೆಯೊಳತಿ
ಗಳಹಿ ಕಾಲಂಗೆ ಗುರಿಯಾಗಿ ಕೆಡದಿರಲೊ ||2||
ಎಂಜಲುಂಡವ ಹಳೆಯನೆಂದಂಜಿ ತನಗೊಡೆಯ
ನೆಂಬ ವಿಶ್ವಾಸಬಾವವ ಬಲಿದಿಹ
ನಂಜುಗೊರಳಭವ ಜಂಗಮದ ಪ್ರಸಾದವನು
ಭುಂಜಿಸಿದ ಬಳಿಕಂಜದೇಕುಲಿವೆಯೊ ||3||
ಒಂದೊಂದರೊಳು ತ್ರಿವಿಧ ದ್ವಂದ್ವವಾಗಿರುತರ್ಪ
ಸಂದಿಲ್ಲದಿಹ ಶಿವನ ಸಾಕಾರವ
ಇಂದುಧರನೆಂದು ವಂದಿಸಿ ಹಿಂದೆ ನಿಂದಿಸುವ
ಮಂದಮತಿ ಹಂದಿಯೊಡಲೊಳು ಜನಿಸುವ ||4||
ಆಚಾರವನು ಜರೆದು ನೀಚ ನೀನಾಗೆಂದು
ಸೂಚಿಸಿದುದುಂಟೆ ಗುರು ದುರ್ಬೋದೆಯ
ಪೇಚದಿರು ಪೇಚದಿರ್ದಡೆ ಮುಕ್ತಿಯಿಲ್ಲಣು ಮಾತ್ರ
ಗೋಚರಿಸ ಗುರುಸಿದ್ಧಲಿಂಗನೆಲವೊ ||5||
ಕರುಬದಿರು ಬಾಳುವರ ನೋಡಿ
ಕರುಬದಿರು ಬಾಳುವರ ನೋಡಿದೆ ಬರಿ
ಕರುಬಿ ಮರುಗಿದಡಿಲ್ಲ ಪಡೆಯದೊಂದುವನು ||ಪ||
ಮುನ್ನ ಧನಧಾನ್ಯ ವಸ್ತ್ರಾಭರಣ ಷಡುರಸವ
ಪನ್ನಗಧರನ ಶರಣರ್ಗಿತ್ತು ಸಂಪದವ
ಸನ್ನಹಿತ ಸತಿಸಹೋದರ ಪುತ್ರರುತ್ಸಹವ
ಚೆನ್ನಗಿ ಪಡೆದು ಬಾಳುವರ ನೋಡಿಯಿನ್ನು
ಬಯಸಿದರುಂಟೆ ಸುಖದೊಳುನ್ನತಿಯ ||1||
ಮಂಚ ಸುಪ್ಪತ್ತಿಯೊಳೊರಗಿ ಸೇವಕರಿಂದ
ಕುಂಚಕುಡಿ ನೀರಗಿಂಡಿಯ ಪಿಡಿಸಿ ಪದಪಿಂದ
ಮಿಂಚುವಾಭರಣ ತೊಡಿಗೆಯ ಚೆಲ್ವ ಸೊಗಸಿಂದ
ಹಿಂಚಿಲ್ಲದಿಷ್ಟು ವೈಭವವು ಮೊದಲು ಪಂಚಮುಖ
ನಂ ಪೂಜೆಯಮಾಡಿ ಪಡೆದಿಹರ ||2||
ಹಲವು ದೈವದ ಗಂಡ ಬಲುಗಯ್ಯನಂ ನೋಡಿ
ಅಲಸದಾವಾಗಷ್ಟ ವಿದಪೂಜೆಯಂ ಮಾಡಿ
ಸಲೆ ಸದಾ ಗುರುಸಿದ್ಧಲಿಂಗೇಶನಂ ಪಾಡಿ
ಒಲಿಸಲರಿಯದೆ ಹಲುಬಿ ನೀವು ಬರಿದೆ ಸುಲಭದಿಂ
ಬಾಳುವರ ಕಂಡು ಕರಿಗಂದಿ ||3||
ಬದುಕುವದರಿದರಿದು
ಬದುಕುವದರಿದರಿದು ದರೆಯೊಳು ಬದುಕುವದರಿದರಿದು
ಕದನ ಕರ್ಕಶ ಕಪಟಿಗಳಿರ್ದೆಡೆಯೊಳು ||ಪ||
ಸತ್ಯದ ನುಡಿಗಲಸುವರೀ ಮತ್ರ್ಯದ
ವರ್ತನೆಗುಬ್ಬುವೀ ಭಕ್ತನಿರ್ದೆಡೆಯೊಳು ||1||
ಕೊಂಡೆಯ ಕುಹಕರ್ ದಿಂಡೆಯ ದೂರ್ತಪ್ರ
ಚಂಡರು ಪರಿಹಾಸಕರಿರ್ದೆಡೆಯೊಳು ||2||
ಕಲಹಕ್ಕೊಮ್ಮೊಳ ನಾಲಗೆ ನಿಗುರುತ್ತುಲಿ
ತುಲಿದೊಲಿದಾಡುವರಿರ್ದೆಡೆಯೊಳು ||3||
ಬಿರುನುಡಿ ಮೂಗಿನ ಟೆವೆಗಳೊಳೊದರು
ತ್ತುರಿದರೀ ಅರೆಮರುಳರಿರ್ದೆಡೆಯೊಳು ||4||
ಹಿತವಿದಹಿತವಿದೆಂದುಸುರಿದ ಮಾತಿಗೆ
ಕತೆಮಾಡುವ ಕೃತಕಿಗಳಿರ್ದೆಡೆಯೊಳು ||5||
ಕಿರುನಗೆ ಹಾಸ್ಯದಿ ಜರಿದೆಲ್ಲರ ತಾ
ಮರೆದು ಬೆರೆದು ಬೀಗುವರಿರ್ದೆಡೆಯೊಳು ||6||
ಸಲ್ಲದ ಮಾತ ಸಲಿಸುವದಟಿನೊಳು
ಗೆಲ್ಲ ಸೋಲಕೆ ಹೋರುವರಿರ್ದೆಡೆಯೊಳು ||7||
ಒಂದು ನುಡಿಯ ನುಡಿಗಳಿಗೊಂಬತ್ತನು
ಸಂದಿಕ್ಕುವ ನಿಂದಕರಿರ್ದೆಡೆಯೊಳು ||8||
ಶ್ರದ್ಧೆಯೊಳಿಹ ಸಾತ್ವಿಕರ ಕೆಡೆನುಡಿ
ದುದ್ರೇಕಿಗಳವರೆಲ್ಲಿರ್ದೆಡೆಯೊಳು ||9||
ಗುರುಪೇಳ್ದ ಶ್ರೀಪೂಜಾವಿದದೊಳ್ ನಡೆಯದ
ದುರ್ವರ್ತಕರಿರ್ದೆಡೆಯೊಳು ||10||
ಕ್ಷಣದೊಳಗಳಿವ ತನುವ ನಚ್ಚಿಯಾತ
ತ್ರಿಣಯನು ಗುರುಸಿದ್ಧನ ಮರೆದವರೊಳು ||11||
ಬಲ್ಲವ ತಾನಾದಡೆ
ಬಲ್ಲವ ತಾನಾದಡೆ ಬರಿಮಾತಿನ
ಗೆಲ್ಲಸೋಲಕೆ ಹೋರಲದೇಕೊ ||ಪ||
ಅಗಳುದಕವ ಮೊಗೆವರ ಶುಚಿಗಳು ಮಿಗೆ
ಬಗುಳುವ ಶುನಕನ ಕೆಣಕುವರೆ
ಜಗದೊಳಗವಗುಣಿಗಳ ದುರ್ವಾಕ್ಯವ
ಬಗೆಗೊಂಬರೆ ಸುಜ್ಞಾನಿಗಳು ||1||
ತುರುಚನ ನಸುಗುನ್ನಿಯ ಸೋಂಕುವನವ
ಕುರಿಯಲ್ಲದೆ ನೆರೆಬಲ್ಲವರೇ
ಮುರುಕದಿ ಬೆರೆದತಿ ತರಚೆಯ ಮಾಡುವ
ಚಿರುಕರ ಸಂಗವೇಕರಿವುಳ್ಳವಗೆ ||2||
ಮದುಪಾನೀಯ ಮದಹತ್ತಿದಾನೆಯ
ಕೆದಕುವನವ ಬಲು ಹುಚ್ಚನಲ
ಕದನವ ಮಾಡುವ ಕರ್ಕಶ ಕ್ರೋಧಿಗ
ಳಿದಿರೊಳಗಿರಲೆದೆ ದಲ್ಲಣವ ||3||
ನುಗ್ಗೆಯ ಮರದೊಳು ಕೆಚ್ಚುಂಟೆ ಮದ
ವೆಗ್ಗಳ ದುರ್ಗುಣಿಗರಿವುಂಟೆ
ಭರ್ಗನ ಶರಣರನೆಗ್ಗನೆ ನುಡಿವಗೆ
ದುರ್ಗತಿಯಲ್ಲದೆ ಸದ್ಗತಿವುಂಟೆ ||4||
ಅಂಗಕ್ಕಾಚಾರಗಳಿಲ್ಲದೆ ಮಹಾ
ಲಿಂಗವ ಧರಿಸಿಯು ಗುರುಸಿದ್ಧ
ಲಿಂಗನ ಶರಣರರಿಯದ ಜಡ ದು
ಸ್ಸಂಗಿಗಳೊಳು ಹೆರೆ ಹಿಂಗಿಹುದು ||5||
ಸರಿಸಮವೆಂಬರು ಬರಿದೆ
ಸರಿಸಮವೆಂಬರು ಬರಿದೆ ಬೆರೆದತಿ
ಹರಶರಣರ ಪರಿಯರಿಯದೆ ತಾವು ||ಪ||
ಡೊಂಬನು ಮೇಲುಗುಲಾವಿಯನಿಕ್ಕಲು
ಕುಂಭಿನಿಯಾಳ್ವಡೆಯರಸಹನೆ
ಡಂಭಕ ಬರಿವೇಷವ ಹಲ್ಲಣಿಸಿ ತ್ರಿ
ಯಂಬಕ ಶರಣರ ಸರಿಯಹನೆ ||1||
ಪಣ್ಯಾಂಗನೆ ಎಷ್ಟೊಳ್ಳೆವಳಾದಡೆ
ಪುಣ್ಯಾಂಗನೆಗವಳ್ಸರಿಯಹಳೆ
ಬಣ್ಣಿಸಿ ಬಿರುನುಡಿಗಳ ನುಡಿವವ ಮು
ಕ್ಕಣ್ಣನ ಶರಣಂಗೆಣೆಯಹನೆ ||2||
ನಾನಾ ಶಬ್ದವ ನೋಡಿ ಹೇಳುವ ಕವಿ
ಸ್ವಾನುಭಾವಿಗಳಿಗೆ ಸರಿಯಹನೆ
ಜ್ಞಾನಹೀನ ಶಾಸ್ತ್ರವ ಪಠಿಸಲು
ಜ್ಞಾನರೂಡಗೆ ಸರಿಯಹನೆ ||3||
ಕೋಗಿಲದ್ವನಿ ಚೆನ್ನಾದಡೆ ಹಾಡುವ
ರಾಗವ ಬಲ್ಲುದೆ ಅದು ತಾನು
ಆಗಮವರಿಯದೆ ದೂಷಣೆ ಮಾಡುವ
ಹೇಗನು ಶಿವಯೋಗಿಗೆ ಸರಿಯೆ ||4||
ಬಿಂಗಾರವು ಬಂಗಾರಕೆ ಸರಿಯೆ
ಹೊಂಗೆಯ ಮರನದು ತೆಂಗಿಗೆ ಸರಿಯೆ
ಅಂಗದ ಮಲಭಾಂಡೆಯು ಗುರಸಿದ್ಧ
ಲಿಂಗನ ಶರಣರ ಸರಿಯಹನೆ ||5||
ಲಿಂಗಸುಖಸುಖಿ ಶರಣ
ಲಿಂಗಸುಖಸುಖಿ ಶರಣ ಬೋಗಿಯಲ್ಲದೆ
ಜಗದೊಳಂಗಸುಖಿಗಳ ಬೋಗ ರೋಗವಣ್ಣ ||ಪ||
ಸತಿರತಿಯ ಸಂಗಸುಖ ಹಿತವಹುದು ಪುರುಷಂಗೆ
ಸುತರಾಗಿ ದಾರಿದ್ರ್ಯ ವೆಡೆಗೊಳಲು
ಅತಿ ಕಲಹಗೊಂಡು ಸತಿಸುತರೊಳಗೆ ಹೋರುತಿಹ
ಮತಿಹೀನ ಮಾನವರ ಬೋಗ ಬೇಗೆ ||1||
ದನಕನಕವಸ್ತ್ರವಾಭರಣವನುಲೇಪನಂ
ಘನಯೌವನದ ಕೊಬ್ಬಿನುಬ್ಬಿನೊಳಗೆ
ವನಿತೆ ಸುತರೊಳು ಮೋಹ ಸಿರಿ ತೋರಲವರೊಳಗೆ
ಜಿನುಗಿ ತಲೆದೂಗುವನ ಬೋಗ ಹೀಗೆ ||2||
ಕ್ಷಾಮಡಾಮರವಡಸಿದೆಡೆಯೊಳಗೆ ಸತಿಸುತರ
ಪ್ರೇಮವೆಲ್ಲಡಗಿತೊ ಬೋಗಸುಖಿಯ
ನಾಮವೆಲ್ಲವು ನಷ್ಟ ಸ್ತೋಮ ಸಿರಿಬಯಲು ನಿ
ಸ್ಸೀಮ ಗುರುಸಿದ್ಧಲಿಂಗವ ಸ್ಮರಿಸಿರೊ ||3||
ನಿನ್ನವರು ನನ್ನವರು
ಮಾಯೆ ನಿನ್ನವರಿಗೆನ್ನವರುನ್ನತರಲ್ಲೆ
ಮಾಯೆ ನನ್ನವರ ಸಂಗ ನಿನಗಸವಲ್ಲ ನಿಲ್ಲೆ ||ಪ||
ಭೂತಜೀವಬಾವಿಗಳೆಲ್ಲ ನಿನ್ನವರು | ಗುರು
ಜಾತ ಸದ್ಯನ್ಮುಕ್ತರೆಲ್ಲ ನನ್ನವರು
ಕಾತುರದತಿ ಕಾಮಿಗಳೆಲ್ಲ ನಿನ್ನವರು | ಪರಸತಿ
ಮಾತೆಯೆಂದೆಂಬಾತಗಳೆಲ್ಲ ನನ್ನವರು ||1||
ಕುಲ್ಲಕುಹಕಿಗಳೆಲ್ಲ ನಿನ್ನವರು | ನೆರೆ
ಬಲ್ಲ ಸುಜ್ಞಾನಿಗಳೆಲ್ಲ ನನ್ನವರು
ಕಲ್ಲೆದೆ ಕಲಕೇತರೆಲ್ಲ ನಿನ್ನವರು | ಪುಸಿ
ಯಿಲ್ಲದ ಪರಮೂರ್ತಿಗಳೆಲ್ಲ ನನ್ನವರು ||2||
ಮಿಥ್ಯರಾಗದ್ವೇಷಿಗಳೆಲ್ಲ ನಿನ್ನವರು | ಶಿವ
ತತ್ವಾನುಬಾವಿಗಳೆಲ್ಲ ನನ್ನವರು
ಮತ್ತರಾದಜ್ಞಾನಿಗಳೆಲ್ಲ ನಿನ್ನವರು | ನಿತ್ಯ
ಕೃತ್ಯಶೀಲವ್ರತಿಗಳೆಲ್ಲ ನನ್ನವರು ||3||
ಅಂಗವಿಕಾರಿಗಳೆಲ್ಲ ನಿನ್ನವರು | ಲಿಂಗ
ಸಂಗಿಗಳಾದವರೆಲ್ಲ ನನ್ನವರು
ಜಂಗಮವಿರೋಧಿಗಳೆಲ್ಲ ನಿನ್ನವರು | ನಿರಂಗ
ನಿರಾಬಾರಿಗಳೆಲ್ಲ ನನ್ನವರು ||4||
ದುಷ್ಟ ದುರ್ಮಾರ್ಗಿಗಳೆಲ್ಲ ನಿನ್ನವರು | ಲಿಂಗ
ನಿಷ್ಠೆಯ ದಯಾಳ್ದರೆಲ್ಲ ನನ್ನವರು
ಭ್ರಷ್ಟವ್ರತಹೀನರೆಲ್ಲ ನಿನ್ನವರು | ಮನ
ಮುಟ್ಟಿ ಕ್ರೀಯಮಾಡುವರೆಲ್ಲ ನನ್ನವರು ||5||
ಕಾಯ ಮಾಯ ಮೋಹಿಗಳೆಲ್ಲ ನಿನ್ನವರು | ನಿರ್
ಮೋಹಿ ನಿರ್ವಿಕಾರಿಗಳೆಲ್ಲ ನನ್ನವರು
ಬಾಯಬಡುಕ ನಿಂದಕರೆಲ್ಲ ನಿನ್ನವರು | ಶಿವ
ಸೇವೆಯ ಸುಪ್ರೇಮಿಗಳೆಲ್ಲ ನನ್ನವರು ||6||
ಮಸಿಮಣ್ಣ ಹೂಸಿದವರೆಲ್ಲ ನಿನ್ನವರು | ನೊಸಲೊ
ಳೆಸೆವ ಭಸಿತದೂಳಿತರೆಲ್ಲ ನನ್ನವರು
ಪಿಸುಣ ಹುಸಿಕದೆಸಕರೆಲ್ಲ ನಿನ್ನವರು | ಶಿವ
ಬಸವನೆಂದು ಸ್ಮರಿಸುವರೆಲ್ಲ ನನ್ನವರು ||7||
ಅದ್ವೈತ ಹೊಂದಿರ್ದವರೆಲ್ಲ ನಿನ್ನವರು | ಅಸಮ
ರುದ್ರಾಕ್ಷಿಯ ದರಿಸಿರ್ದವರೆಲ್ಲ ನನ್ನವರು
ಕ್ಷುದ್ರ ಕುಟಿಲ ಸಿದ್ಧರೆಲ್ಲ ನಿನ್ನವರು | ಶಾಂತಿ
ಶ್ರದ್ಧೆ ಹೃದಯಶುದ್ಧರೆಲ್ಲ ನನ್ನವರು ||8||
ಸೂತಕದದ್ವೈತಿಗಳೆಲ್ಲ ನಿನ್ನವರು | ಸಪ್ತ
ದಾತು ಮಂತ್ರಶರೀರಿಗಳೆಲ್ಲ ನನ್ನವರು
ಜಾತಿವರ್ಣಾಶ್ರಮಿಗಳೆಲ್ಲ ನಿನ್ನವರು | ಅ
ಜಾತ ವೀರಶೈವರೆಲ್ಲ ನನ್ನವರು ||9||
ಭವಿಸಂಗ ದುಸ್ಸಂಗಿಗಳೆಲ್ಲ ನಿನ್ನವರು | ಭಂಗ
ಭವಿಯ ಹಿಂಗಿ ನಿಂದವರೆಲ್ಲ ನನ್ನವರು
ಶಿವಪುರಾಣದ ದೂಷಕರೆಲ್ಲ ನಿನ್ನವರು | ಗುರು
ಶಿವನೆಂಬ ಸದ್ಭಾವಿಗಳೆಲ್ಲ ನನ್ನವರು ||10||
ಪಾಪಕಂಜದ ಕೋಪಿಗಳೆಲ್ಲ ನಿನ್ನವರು | ಶಿವನ
ರೂಪು ಕಂಡೆದ್ದೆರಗುವರೆಲ್ಲ ನನ್ನವರು
ಕೂಪರಾಪ್ತರ ಮರೆದವರೆಲ್ಲ ನಿನ್ನವರು | ಚಿದ್
ರೂಪರೂಪರಾಪ್ತರೆಲ್ಲ ನನ್ನವರು ||11||
ತರ್ಕಕರ್ಕಶದುಃಖಿಗಳೆಲ್ಲ ನಿನ್ನವರು | ಜ್ಞಾನ
ಪಕ್ಷದ ಬೋದರ್ಕಗಳೆಲ್ಲ ನನ್ನವರು
ಸೊಕ್ಕಿನ ವೆಕ್ಕಾಸಿಗಳೆಲ್ಲ ನಿನ್ನವರು | ಮದ
ಹರ್ಕರೊಳ್ಮನ ಸಿಕ್ಕಿದರೆಲ್ಲ ನನ್ನವರು ||12||
ಶಂಕೆಯ ಸಂಕಲ್ಪಿಗಳೆಲ್ಲ ನಿನ್ನವರು | ನಿರ
ಹಂಕಾರ ನಿಶ್ಯಂಕರೆಲ್ಲ ನನ್ನವರು
ಬಿಂಕದ ಕಳಂಕಿಗಳೆಲ್ಲ ನಿನ್ನವರು | ಭಕ್ತಿ
ಕಿಂಕುರ್ವಾಣದ ಲೆಂಕರೆಲ್ಲ ನನ್ನವರು ||13||
ಆಶಾಪಾಶದ ಹೂಸಕರೆಲ್ಲ ನಿನ್ನವರು | ಮಂತ್ರ
ಸೂಸದ ನಾಸಾದ್ರಿಗಳೆಲ್ಲ ನನ್ನವರು
ದಾಸಿವೇಶಿಯ ಲೇಸಿಗರೆಲ್ಲ ನಿನ್ನವರು | ತೀರ್ಥ
ಶೇಷಪ್ರಸಾದಿಗಳೆಲ್ಲ ನನ್ನರು ||14||
ಚಿತ್ತವಿಭ್ರಮ ದೂರ್ತರೆಲ್ಲ ನಿನ್ನವರು | ನಿಜ
ಭಕ್ತರಾದ ವಿರಕ್ತರೆಲ್ಲ ನನ್ನವರು
ಗುಪ್ತಪಾತಕವರ್ತಕರೆಲ್ಲ ನಿನ್ನವರು | ಶಾಸ್ತ್ರ
ದುತ್ತರಾಗಮೋಕ್ತರೆಲ್ಲ ನನ್ನವರು ||15||
ದುರ್ಗುಣದಗ್ಗಳೆಯರೆಲ್ಲ ನಿನ್ನವರು | ಗುರು
ಮಾರ್ಗದ ಸದ್ಗುಣಿಗಳೆಲ್ಲ ನನ್ನವರು
ನುಗ್ಗು ದೈವಕೆ ಮುಗ್ಗುವರೆಲ್ಲ ನಿನ್ನವರು | ತ್ರಿವಿದವ
ಭರ್ಗನವರ್ಗೀವವರೆಲ್ಲ ನನ್ನವರು ||16||
ಲುಬ್ಧಲೋಭಿಬದ್ಧಕರೆಲ್ಲ ನಿನ್ನವರು | ಆಚಾ
ರೋದ್ಧಾರ ನಿರ್ದಾರಕರೆಲ್ಲ ನನ್ನವರು |
ವೃದ್ಧಾಚರಣೆಯ ಮುಗ್ಧರೆಲ್ಲ ನಿನ್ನವರು | ಗುರು
ಸಿದ್ಧಲಿಂಗನೋಳ್ಸನ್ನರ್ದರೆ ನನ್ನವರು ||17||
ನುಡಿಯದಿಹುದೊಳ್ಳಿತು
ನುಡಿಯದಿಹುದೊಳ್ಳಿತು ನುಡಿದಡೆ ದುಃಖದುರ್ಜನರ
ನುಡಿಯ ಸಂಪಾದಿಸದಿರಾವೆಡೆಯೊಳು ||ಪ||
ಯೆಟ್ಟಿಭೂಮಿಯಲಿ ಬೀಜವ ಬಿತ್ತಿ ಬೆಳಸೆಲ್ಲ
ಕೆಟ್ಟಿತೆಂದೇಕೆ ಮರುಗುವೆ ಲಿಂಗವ
ಕಟ್ಟಿ ಬೋಧಿಸಿದ ಸದ್ಗುರುವರನೊಳಗುತ್ತರವ
ಕೊಟ್ಟು ವಾದಿಪ ಕಷ್ಟಭ್ರಷ್ಟರೊಳಗೆ ||1||
ಕಡಬಡ್ಡಿ ತೆಗೆವಾಗ ನುಡಿನುಡಿಗೆ ಪಲ್ಗಿರಿದು
ಕೊಡುವಾಗ ಸಿಡುಕುಸಿಡಿಮಿಡಿಗೊಳುವ
ಜಡರಂತೆಯಡಿಗೆರಗಿ ಮೃಡನೆಂದು ಜಂಗಮವ
ಕೆಡೆನುಡಿವ ಬಿಡುಬಾಯಿಬಡುಕರೊಳಗೆ ||2||
ಕೊಲ್ಲ್ಯಾವ ಕಾಲ್ಗಟ್ಟಿ ಹುಲ್ಲ ಮೇಯಿಸಿ ಕರೆಯೆ
ತಲ್ಲಣವು ಗುರುಸಿದ್ಧಲಿಂಗೇಶನ
ಮೆಲ್ಲಡಿಯನರಿಯದವರಲ್ಲಿ ಪರಮಾರ್ಥವನು
ಸೊಲ್ಲಿದರೆ ಹುರುಳಿಲ್ಲ ಖುಲ್ಲರೊಳಗೆ ||3||
ನುಡಿಯದಿರು
ನುಡಿಯದಿರು ನುಡಿಯದಿರು ನೀ ಬಲ್ಲೆನೆಂದಿದಿರ
ನುಡಿನುಡಿದು ಬಳಲ ಬೇಡಲೆ ಮದಡು ಮನವೆ ||ಪ||
ಪಂಚಾದಿ ದೈವಪ್ರಪಂಚು ಜೀವರ ಸೃಜಿಸಿ
ಪಂಚಕೃತ್ಯವ ಮಾಳ್ಪೂದೆಂದು ಬೆಸಸಿ
ಹಿಂಚಿಲ್ಲದವರು ಮಾಳ್ಪೂಳಿಗದ ಮಣಿಹಗಳು
ಪಂಚಮುಖನಾಜ್ಞೆಯೆಂದರಿದು ನೀನು ||1||
ಸಲ್ಲದಾಟವನಾಡಿದವರ ಗಲ್ಲವ ಹಿಡಿದು
ಪಲ್ಗಳೆವರುಂಟೆಂಬುದರಿದು ನೀನು
ಗೆಲ್ಲ ಸೋಲದ ಮತಿಗಲ್ಲವಹುದೆಂದೆಂಬ
ತಲ್ಲಣವದೇಕುಮಾವಲ್ಲಭನ ನೆನೆಯ ||2||
ಕಷ್ಟದುರ್ಮಾರ್ಗದಲಿ ಕೆಟ್ಟು ವರ್ತಿಸುತಿರ್ಪ
ಗಟ್ಟುವರ ಗಟ್ಟಿಸುವ ದಿಟ್ಟರುಂಟು
ಬಿಟ್ಟು ಬಿಡು ಸಾಕು ಸಾಕಿದರ ಸುಪಾದನೆಯು
ನಷ್ಟವದರಿಂದರಿವು ಬಟ್ಟ ಬಯಲು ||3||
ಕಾಲನಿಗೆ ಸೇನಬೋವರು ನಾಲ್ವರುಂಟವರು
ಮೂಲೋಕದವರ ದುಃಕೃತ ಸುಕೃತವ
ಕಾಲಕಾಲಕೆ ತಪ್ಪದಂತೆ ಬರೆದೋದು ವಿ
ಶಾಲಮತಿಯುಂಟೆಲೆಲೆ ಹೊಲೆಮನವೆ ||4||
ತಪ್ಪಿ ನಡೆದವರ ಹೊಯಿದಪ್ಪಳಿಸುವವರುಂಟು
ಸತ್ಪುರುಷರಡಿಗೆರಗುತಿಪ್ಪರುಂಟು
ಅಪ್ರತಿಮ ಗುರುಸಿದ್ಧಲಿಂಗನಂಘ್ರಿಯ ಜಾಗ್ರ
ಸ್ವಪ್ನದೊಳು ಜಪಿಸು ನೀ ಬೆಪ್ಪು ಮನವೆ ||5||
ಬಲ್ಲವರೆ ಸುಕೃತಿಗಳು
ಬಲ್ಲವರೆ ಸುಕೃತಿಗಳು ಜಗದಲ್ಲಿ
ಶರಣ ಸುಳಿಯಲು ಪರಶಿವನೆಂದು ||ಪ||
ಬೀಸುವ ವಾಯು ಬೆಂಬಳಿಯ ಗಂದ
ನಾಸಿಕದೊಳಗೆ ಸುವಾಸನೆದೋರಿ
ಲೇಸನೀವಂತತಿ ಶರಣ ಭಕ್ತ
ರಾಶ್ರಯದೊಳು ಸುಳಿವುದು ಹಿತವೆಂದು ||1||
ಬೆಲ್ಲವ ಮೆದ್ದಡೆ ಮದುರವೆಂಬು
ದೆಲ್ಲರರಿದು ಸವಿವರು ಬೆಲ್ಲ ತನ್ನ
ಮೆಲ್ಲಬಾರೆಂದು ಕರೆವುದೆ ತನ್ನ
ಬಲ್ಲ ಭಕ್ತರ ಭಕ್ತಿವತ್ಸನೆಂದು ||2||
ಅಂಗದಾಪ್ಯಾಯನವೀ ಮಿಥ್ಯಾಜೀವ
ರಂಗಳವನು ಹೊಗನೈ ಗುರುಸಿದ್ಧ
ಲಿಂಗದಾಪ್ಯಾಯನ ಮುಂತಾಗಿ ಭಕ್ತ
ರಂಗಳದೊಳು ನಿಲುವುದು ಕೃಪೆಯೆಂದು ||3||
ಎಂತಿರ್ದನೆಂತೆಂಬುದ
ಎಂತಿರ್ದನೆಂತೆಂಬುದಂತರಾಮಿಯೆ ಬಲ್ಲ
ಭ್ರಾಂತರಿರ ನುಡಿಯದಿರಿ ನಿಶ್ಚಿಂತನ ||ಪ||
ಬಾಲನಂತಾರಾರ ಮಾತಾಡಿದುಪಚಾರದೊಳು
ಲೋಲುಪ್ತನಂತೆ ತೋರುವ ತರುಣನು
ಮೆಲನರಿಯದೆ ವಾಕುದೋಷದಿಂ ನುಡಿದು ಭವ
ಮಾಲೆಗೊಳಗಾಗುವದಕ್ರಮವಲ್ಲವೊ ||1||
ವಿಟನಂತೆ ಜಗದೊಳಗೆ ನಟಿಸಿ ತೋರುವ ತಾನು
ನಿಟಿಲಾಕ್ಷನೊಳಗೆ ಸಮರಸವನೈದಿ
ಸಟೆಗೆ ಸಟೆಯನೆ ಬಳಸಿ ದಿಟವ ಘಟಿಸಿಹ ಶರಣ
ಕುಟಿಲನೆಂದೇಕೆ ಭಾವಿಸಿ ಕೆಡುವರು ||2||
ತುಚ್ಛ ಭೋಗವ ಕಚ್ಚಿ ಮಚ್ಚಿದವರಿಗೆ ಶರಣ
ಹುಚ್ಚರಂತವರ ಕಣ್ಗಳಿಗೆ ತೋರ್ಪ
ಸಚ್ಚಿದಾನಂದ ಗುರುಸಿದ್ಧಲಿಂಗದಿ ಮನವ
ಬೆಚ್ಚು ಬೇರಿಲ್ಲದಿರ್ಪ ತನ್ನಿರವ ||3||
ಬರಿದೆ ಸಂಶಯವೇತಕೆ
ಬರಿದೆ ಸಂಶಯವೆತಕೆ ಶ್ರೀಗುರು
ಹರಿದ ಮಲವ ಮರೆದುಂಟೇನ ಸಲ್ಲ ||ಪ||
ಮಲಮಾಯಕರ್ಮಂಗಳನೆಲ್ಲವ
ತೊಲಗಿಸಿ ಲಿಂಗವ ಕರದೊಳಗೆ
ನೆಲೆಗೊಳಿಸಿದ ಶ್ರೀ ಗುರು ಉಪದೇಶದ
ಹೊಲಬರಿಯದ ಬಲು ಮೂಡನಲ ||1||
ಧಾತುಶರೀರವ ನೇತಿಗಳೆದು ಗುರು
ಜಾತನು ತಾನಾಗಿಯು ಮರಳಿ
ಸೂತಕ ಸಂಕಲ್ಪದ ಶಾಸ್ತ್ರಗಳ
ಮಾತಿನ ಮಾಲೆಯದೇತಕೆ ಬಾತೆಯೋ ||2||
ಮಂತ್ರಶರೀರವದಲ್ಲದೆ ಲಿಂಗವ
ನೆಂತಂಗದಿ ದರಿಸುವೆಯಿದರ
ಅಂತುವನಾದಿಯನರಿಯದ ಜೀವ
ಭ್ರಾಂತರ ಮಾತುಗಳಂತಿರಲಿ ||3||
ಸತಿಪತಿಕೂಟದ ರತಿಯೊಳು ಸರಸವು
ಹಿತವಹುದಲ್ಲದಹಿತವಹುದೆ
ಅತಿಶಯ ಲಿಂಗಾಂಗದ ಸಂಬಂದಕೆ
ಪ್ರತಿಯಿನ್ನಾವುದೊ ಮತಿಹೀನ ||4||
ಭಾವದ ಭ್ರಮೆಯಿಂ ನಾನಾ ಜನ್ಮದ
ಬೇವಸಬಡದಿರು ಗುರುಸಿದ್ಧ
ದೇವರ ದೇವನೊಳವಿರಳ
ಭವದೊಳಾವಾಗೇರವಳಿದಿರು ನೀನು ||5||
ಬರಿದೆ ಸಂಶಯವೆತಕೆ ಶ್ರೀಗುರು
ಹರಿದ ಮಲವ ಮರೆದುಂಟೇನ ಸಲ್ಲ ||ಪ||
ಮಲಮಾಯಕರ್ಮಂಗಳನೆಲ್ಲವ
ತೊಲಗಿಸಿ ಲಿಂಗವ ಕರದೊಳಗೆ
ನೆಲೆಗೊಳಿಸಿದ ಶ್ರೀ ಗುರು ಉಪದೇಶದ
ಹೊಲಬರಿಯದ ಬಲು ಮೂಡನಲ ||1||
ಧಾತುಶರೀರವ ನೇತಿಗಳೆದು ಗುರು
ಜಾತನು ತಾನಾಗಿಯು ಮರಳಿ
ಸೂತಕ ಸಂಕಲ್ಪದ ಶಾಸ್ತ್ರಗಳ
ಮಾತಿನ ಮಾಲೆಯದೇತಕೆ ಬಾತೆಯೋ ||2||
ಮಂತ್ರಶರೀರವದಲ್ಲದೆ ಲಿಂಗವ
ನೆಂತಂಗದಿ ದರಿಸುವೆಯಿದರ
ಅಂತುವನಾದಿಯನರಿಯದ ಜೀವ
ಭ್ರಾಂತರ ಮಾತುಗಳಂತಿರಲಿ ||3||
ಸತಿಪತಿಕೂಟದ ರತಿಯೊಳು ಸರಸವು
ಹಿತವಹುದಲ್ಲದಹಿತವಹುದೆ
ಅತಿಶಯ ಲಿಂಗಾಂಗದ ಸಂಬಂದಕೆ
ಪ್ರತಿಯಿನ್ನಾವುದೊ ಮತಿಹೀನ ||4||
ಭಾವದ ಭ್ರಮೆಯಿಂ ನಾನಾ ಜನ್ಮದ
ಬೇವಸಬಡದಿರು ಗುರುಸಿದ್ಧ
ದೇವರ ದೇವನೊಳವಿರಳ
ಭವದೊಳಾವಾಗೇರವಳಿದಿರು ನೀನು ||5||
ಭಕ್ತ ಜಂಗಮ
ಭಕ್ತ ಜಂಗಮವೆರಡೂ
ಅಲ್ಲದ ವ್ಯರ್ಥರು ಬೆಬ್ಬನೆ ಬೆರೆವರದೇಕೊ ||ಪ||
ಪರಮಶ್ರೀಗುರು ವಿರಹಿತ ಲಿಂಗವ
ಕರದೊಳಗರ್ಚಿಸಿ ಪೂಜಿಸುವ
ಮರುಳರು ಶಿವಶರಣರೊಳತಿವಾದಿಸಿ
ಪರಿಭವಭವದೊಳು ಬರುವರದೇಕೊ ||1||
ಭೃತ್ಯನಾಗಿ ಭಕ್ತಿಯ ಮಾಡದೆ ತಾ
ಕರ್ತುವಾಗಿ ಗುರುಚರವಾಗದೆ ಬರಿ
ಮತ್ರ್ಯದ ಬಳಕೆಯ ಬಳಸುತ ಪರಮ ವಿ
ರಕ್ತರ ಕಂಡಹಂಕರಿಸುವರೇಕೊ ||2||
ಲಿಂಗದ ಚಿತ್ಕಲೆ ಜಂಗಮವೆನ್ನದೆ
ಜಂಗಮವಿರಹಿತ ಲಿಂಗವನು
ಅಂಗದಿ ದರಿಸಲು ಗುರುಸಿದ್ಧ
ಲಿಂಗವು ಭಂಗಬಡಿಸುವನೆಂದಂಜರದೇಕೊ ||3||
ಪೊರೆಯನೆ ಗುರುಸಿದ್ಧಲಿಂಗ
ಎರವಾದೀತು ನಿನ್ನ ಗೆಳೆತನ ದೂತೆ
ಬರುವುದು ನಾಳೆನ್ನ ಪ್ರಾಣಕ್ಕೆ ಘಾತೆ ||ಪಲ್ಲ||
ಚಂದ್ರನ ಕಿರಣ ಸೇವಿಸುವ ಚಕೋರ
ಸಾಂದ್ರ ಪಂಕವ ಕಂಡು ಪದುಕುವ ಪಾರ ||1||
ಮುನ್ನ ನಾ ಮಾಡಿದ ಪಾಪವೇನುಂಟು
ತನ್ನಿಮಿತ್ಯದಿ ದನುಜನಿಗಾಯ್ತು ನಂಟು ||2||
ಕೆನೆವಾಲು ಸಕ್ಕರೆ ಸವಿದಂಥ ಬಾಯಿ
ತಿನಲೆಂತು ಮೃತ್ತಿಕೆಯನು ಪೇಳಿ ತಾಯಿ ||3||
ವಿಷವನು ಕುಡಿದೆನ್ನ ಪ್ರಾಣವ ಬಿಡುವ
ಅಸುರನ ಕೂಡಲಾರೆ ಬೀಳ್ವೆ ಮಡುವ ||4||
ಎನ್ನನ್ಯಾತಕೆ ಪುಟ್ಟಿಸಿದ ತಾನಾ ಕಾಂತ
ಮನ್ನಿಸಿ ಪೊರೆಯನೆ ಗುರುಸಿದ್ಧಲಿಂಗ ||5||
ಫಲವೇನು ಛಲವೇನು
ಆದ್ಯರ ವಚನ ಪ್ರಮಾಣವನರಿಯದೆ ಅಲ್ಪ
ಬುದ್ಧಿಗಳಿದ್ದು ಫಲವೇನು ಛಲವೇನು ||ಪ||
ಪಿತಮಾತೆಗತಿಹಿತನಲ್ಲದ ಸುತನವ
ಮತಿವಂತನಾಗಿರ್ದು ಫಲವೇನು
ಸಿತಕಂಠನಂಘ್ರಿಯ ಪೂಜಿಸದವ ಬಲು
ಶ್ರುತಿಪಾಠಕನಾಗಿ ಫಲವೇನು ಛಲವೇನು ||1||
ಪಟ್ಟಣದೊಳು ಕಣ್ಣು ಹೋಗಿಯು ತಳವಾರ
ತಿಟ್ಟನೆ ತಿರುಗ್ಯಾಡಿ ಫಲವೇನು
ಅಟ್ಟಿಯಲೆವ ಕರಣಂಗಳ ಬಾದೆಯನು
ಸುಟ್ಟುರುಹದ ಯೋಗ ಫಲವೇನು ಛಲವೇನು ||2||
ಕೆಟ್ಟಕಾರ್ಯವನುಂಟುಮಾಡದ ಮಂತ್ರಿಯು
ಕಟ್ಟರಸಿನೊಳಿರ್ದು ಫಲವೇನು
ಮುಟ್ಟಿ ಬಂದಡಸಿದ ಶಿವಸಮಯದ ಭಕ್ತಿ
ನಿಷ್ಠೆಹೀನರಿದ್ದಲ್ಲಿ ಫಲವೇನು ಛಲವೇನು ||3||
ಮನ್ನಣೆಯಿಲ್ಲದ ಠಾವಿಲಿ ಷಡುರಸ
ದನ್ನವ ಸವಿದುಂಡು ಫಲವೇನು
ತನ್ನ ನಿಜವನು ತಾನರಿಯದೆ ತಿಳಿಯದೆ
ಭಿನ್ನ ಭವಿಗಳಿರ್ದು ಫಲವೇನು ಛಲವೇನು ||4||
ಕೃತಕದ ಸತಿಯತಿಚೆಲುವಿಯಾದಡೆ ತನ್ನ
ಪತಿಗಲ್ಲದವಳಿರ್ದು ಫಲವೇನು
ಧೃತಿಯಿಂದ ತ್ರಿವಿಧಾದಿ ದಾಸೋಹಿಯಲ್ಲದೆ
ವ್ರತನೇಮ ಶೀಲವು ಫಲವೇನು ಛಲವೇನು ||5||
ಪುಣ್ಯವ ಮಾಡದ ಕರ್ಮಿಯ ಕೈಯಲಿ
ಹೊನ್ನು ಬಹಳವಿರ್ದು ಫಲವೇನು
ಬಣ್ಣಿಸಿ ಪಾಡಿ ಮುಕ್ಕಣ್ಣನ ಸ್ಮರಿಸದೆ
ಡೊಣ್ಣಿಗರಿರ್ದಲ್ಲಿ ಫಲವೇನು ಛಲವೇನು ||6||
ತಾಳದ ಹರತೆಯ ಮೇಳವನರಿಯದೆ
ಗೀಳಿಟ್ಟು ಕೂಗ್ಯಾಡಿ ಫಲವೇನು
ಬಾಳುವಾಗ ಧರ್ಮವ ಮಾಡದೆ ಸತ್ತು
ಹೂಳುವಾಗ ಮಾಡಿ ಫಲವೇನು ಛಲವೇನು ||7||
ಗತಿಗೆಟ್ಟು ರಣದೊಳು ಮುರಿದ ಸುಭಟ ತ
ನ್ನತಿಶಯವನು ಹೇಳಿ ಫಲವೇನು
ಅತಿ ಹಸಿದವರಿಗೆ ಉಣಬಡಿಸದೆ ವಾರ
ತಿಥಿಯೊಳು ಹಾಕಿಸಿ ಫಲವೇನು ಛಲವೇನು ||8||
ಶೃಂಗಾರವುಳ್ಳ ಪ್ರಕಾಶದ ಕನ್ನಡಿ
ಕಂಗಳು ಹಿಡಿದಿರ್ದು ಫಲವೇನು
ಹಿಂಗದೆ ನೆನೆಯದೆ ರಂಗಾದಿ ಗುರುಸಿದ್ಧ
ಲಿಂಗಾಂಕಿತಮಿರ್ದು ಫಲವೇನು ಛಲವೇನು ||9||
ಮಂದಗಮನೆ
ಮಂದಗಮನೆ ತನ್ನ ಗಂಡ ಹೇಗೆ ||ಪ||
ಮಾರನ ರೂಪನು ಬಾರದೆ ನಿಂತನು
ನೀರದಿ ಕರೆ ತಾರೆ ||1||
ಅರೆನಿಮಿಷವು ಯುಗ ಪರಿಮಿತವಾಗಿದೆ
ಮರೆದಿರಲಾರೆನೆ ||2||
ತನುವನು ಒಪ್ಪಿಸಿ ವನಿತೆಯ ಬಿಡುವದು
ಘನವೇನೆ ತನಗಿದು ||3||
ಛಲವೇನೆ ಎನ್ನೊಳು ಸಲಹುದೆ ತನ್ನದು
ಪಲವಿದರಿದವೇನೆ ||4||
ಗುರು ಸಿದ್ಧಲಿಂಗನ ಚರಣ ಸರೋಜಕೆ
ಎರಗಿ ಕರೆದು ತಾರೆ ||5||
ಬೆಳಗಬಾರಮ್ಮ ಸುಂದರಿ
ಬೆಳಗಬಾರಮ್ಮ ಸುಂದರಿ
ನಳಿನಾಂಬರ ಗೌರಿ ಗೌರಿ ||ಪ||
ವೃತ್ತಕುಚದ ನೀರೆ
ಚಿತ್ತಜಾಂತಕಗುರೆ
ಮುತ್ತಿನಾರತಿಗಳ ಸೂಡಿ
ಪ್ರಸಾದವ ನೀಡಿ
ಪರಶಿವನ ಕೊಂಡಾಡಿ ||1||
ಚಂದಿರಮುಖಿ ಕೇಳು
ಇಂದಿನಿರುಳಿನೊಳು
ಚಂದಚಂದದ ಕುಂಚಕೆ ತೋರಿ
ಆಭರಣವನ್ನಿಟ್ಟು ಆರತಿ ಅಳವಟ್ಟು ||2||
ವರ ಷಟ್ಸ್ಥಲ ನೆಲೆ
ಗುರುಸಿದ್ಧಲಿಂಗನ ನೆರೆ
ಚರಣಕಮಲವ ಕಂಡೆ
ಚಾಚುತ ಮಂಡೆ
ವರಗಳ ಪಡಕೊಂಡೆ ||3||
ಸುಳ್ಳಲ್ಲ ಈ ಮಾತು
ಸುಳ್ಳಲ್ಲ ಈ ಮಾತು ಶೂಲದರನಾಣೆ ಒಂ
ದೆಳ್ಳು ಗಿಡದಡಿಯ ಏಳ್ನೂರೊಂದು ಎತ್ತು ||ಪ||
ಒಂದೆಳ್ಳು ಒಡೆಯಲು ಒಂಬತ್ತು ಪಾವೆಣ್ಣೆ
ಅದನು ತಂದಳೆಯಲು ಮೂರು ಮಣವಾಯ್ತು
ತಂದು ತುಂಬಿರಲು ಆರು ಬುರುಡೆ ವರೆ ಚೆಲ್ಲಿದವು
ತಂದಾತ ಬಳಸಲು ನೂರೊಂದು ಮಣವಾಯ್ತು ||1||
ಎರಡುತಿಂಗಳ ಹೆಣ್ಣಿಗೊಂದು ದಿವಸದ ಗಂಡು
ಋತುವಾದಳೈದು ತಿಂಗಳು ಬಲಿಯಲು
ಬರೆ ಯೆರೆಯಾದಳೆಮ್ಮ ಸಂದು ಸಂದುಗಳೊಳಗೆ
ಮರಿ ಹುಟ್ಟಿತಯ್ಯ ನವಮಾಸ ಬಲಿದುದು ||2||
ಕರ ನಾಲ್ಕು ಕಿವಿ ಆರು ಕಣ್ಣಾರು ಮೂಗೆರಡು
ಬಾಯಾರು ಬಹುವಿದದ ದೇಹವದಕೆ
ಮೂರು ಬೀದಿಯನಳಿದು ಮೂವತ್ತಾರನೆ ಅರಿದು
ಮೇಲು ಶಿಖರವ ಹತ್ತಿ ಗುರುಸಿದ್ಧಲಿಂಗವಾಯ್ತು ||3||
ಸರಸಿಜಮುಖಿಯೆ
ಸರಸಿಜಮುಖಿಯೆನ್ನರಸ ಸಿದ್ಧೇಶನ
ಕರೆಯದೆ ನೆರೆದು ಬಂದೆ
ವರಬಿಂಬಾಧರೆ ಚಂದ್ರಮುಖಿ ನಾರಿರತ್ನವೆ
ಅರುಹಬೇಡವೆ ಪುಸಿಯೆ ||ಪ||
ಸಿರಿವರನೋವಿಯಗ್ರಜನ ಪುರದ ಪೆಸ
ರರಿತಿರ್ಪ ಮದನಾಸ್ತ್ರವು
ತ್ವರಿತದಿಂ ಚಂದ್ರನೊಳ್ ಎರಗಿ ಪೊರಳುತಿಹ
ಪರಿಯ ಪೇಳಲೆ ಮಾಜದೆ ||1||
ಗುರುಪಯೋದರೆ ಪುರಹರನ ಕರೆಯಲೆಂದು
ಬರದಿಂದ ಪೋಗುತಿರೆ
ಹರುಷದಿಂದಾರಡಿಗಳು ಸುಮಗಂದಕೆ
ಎರಗಿದ ಪರಿಯ ಕಾಣೆ ||2||
ಕಾಲಕಾಲನು ಶಿರಮೂಲದೊಳ್ ದರಿಸಿದ
ಬಾಲಚಂದ್ರನ ಸವಿನೋಟ
ಕಾಲ ಮೋಕ್ಷಗಳರಸನ ತಮ್ಮನಣುಗನೊಳ್
ಲೋಲದಿಂದಲಿ ನಗುವನೆ ||3||
ಕೋಲಾಹಲದಿರ್ಪ ಹಾಲಹಲವನುಂಡು
ಕಾಲಮೃತ್ಯುವಿನಂತಿಹ
ಮೂಲಬ್ರಹ್ಮನ ಕಂಡು ಎರಗಿ ಬಂದೆನು ಇಂದು
ಲೋಲ ಕುಮುದ ಸಾರ್ದನೆ ||4||
ವರಪುಣ್ಯಮಯರಾಗಿ ಮೆರೆಯುವ ಸುರರಿಗೆ
ನಿರುತ ಜೀವನದೊಳಗೆ
ಸರಸಿಜವಾಗಳ ಕುವರನುದ್ಭವಿಸಿ
ಕುರುಹ ಪೇಳೆಲೆ ಮಾಜದೆ ||5||
ಹರನಾಗ್ನಿ ನೇತ್ರದುರಿಯು ತಾಳಲಾರದೆ
ವರಸುದೆಯುಣ್ಣಲೆಂದು
ಭರದಿ ಬಂದೆನ್ನಯದರ ಸುದೆಯುಂಡು ತಾ
ಪರವಶದೊಳು ನಿಂದನೆ ||6||
ಮುತ್ತುಗಳನ್ನು ಬೀರುವ ನಕ್ಷತ್ರಕ್ಕೆ
ಕರ್ತನಾಗಿಹ ರಾಜನು
ರತ್ನ ಬಣ್ಣವ ಪಡುಗಿರಿಳೊಳಗೆ ಮುದ
ವೆತ್ತು ರಾಜಿಸುವನೆನೆ ||7||
ಕಸ್ತೂರಿ ಗಂದವ ಸಮನಗೆ ಶಯ್ಯೊಳಾ
ದಿತ್ಯನ ಬರವ ಕಂಡು
ಮತ್ತೆಲ್ಲಿ ನಿಲ್ಲದೆ ಭಯಗೊಂಡು ಬಂದೆನು
ವೃತ್ತಗಿರಿಯೊಳು ನಿಂದನೆ ||8||
ಕರಿಮುಖ ವಾಕ್ಯಮಂ ಮರೆಗೊಂಡು ಪುರುಷನೊಳ್
ನೆರೆದು ಬರುವರೇನೆ ನೀನು
ವರ ಕಂಗಳಾಣೆ ಎನ್ನೊಳು ಮಾತ ಪುಸಿಯನು
ಒರೆಯಬೇಡಲೆ ಬಾವಕಿ ||9||
ಹರಿಯಜರಿಂದ್ರರಿಂ ಸ್ಮರಿಸಿಕೊಳುವ ಪುರ
ಹರನೆಲೆ ಮಲೆವಾಗ
ಗುರುಸಿದ್ಧಲಿಂಗನು ಎನ್ನೊಳು ಸರಸದಿ
ನೆರೆದು ನಿಶ್ಚಯವು ಕಾಣೆ ||10||