Categories
ರಚನೆಗಳು

ರಘುರಾಮವಿಠಲದಾಸರು

ಶ್ರೀ ಹರಿಯು ಸರ್ವತ್ರ ವ್ಯಾಪ್ತನಾಗಿ

ಇಲ್ಲೇ ಹರಿ ಇರುವ ಪ
ಬಲ್ಲವರದ ನೋಡಲಲ್ಲೇ ತೋರುವ ಅ.ಪ
ಗಿಡದ ಬೇರು ಕಾಂಡ ಕೊಂಬೆ ರೆಂಬೆಗಳಲ್ಲಿ
ಅಡಗಿ ಎಲೆಯೊಳ್ಹೀಚು ಹೂವ್ಕಾಯ್ಗಳಲ್ಲಿ
ಮೃಡ ಸಖನಲ್ಲಲ್ಲೆ ವಿವಿಧ ರೂಪಗಳಿಂದ
ಅಡಗಿದ್ದು ಬೆಳೆಸುವ ಕಳೆಗೊಳಿಸುವನು೧
ವಸ್ತ್ರದ್ಹಾಸುಹೊಕ್ಕು ದಾರಗಳಂದದಿ
ವಿಸ್ತಾರಗೊಂಡ ಈ ಲೋಕದೊಳು
ಹಸ್ತಿವರದನಾದಿಮೂಲ ತಾ ನೆಲೆಗೊಂಡು
ಸ್ವಸ್ಥದಿ ಪೊರೆವನನಂತ ಪ್ರಾಣಿಗಳ ೨
ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ರೂಪ
ವನು ತಾಳಿ ನಾರಾಯಣ ವಾಸುದೇವನು
ಅನಿಮಿತ್ತಬಂಧು ಚರಾಚರ ಪೃಥ್ವಿಯ
ನನುದಿನ ಪೊರೆವ ರಘುರಾಮವಿಠಲನು ೩

 

ಷೋಡಶೋಪಚಾರಗಳನ್ನು ಉಲ್ಲೇಖಿಸಿ
ಆತ್ಮನಿವೇದನೆ
೧೦
ಎಂತು ಪೂಜಿಸಿದೆನೈ ನೀರಜಾಕ್ಷ ನಿನ್ನ
ನೆಂತು ಪೂಜಿಸಿದೆನೈ ನೀರಜಾಕ್ಷ ಪ
ಕಂತುಪಿತ ಎನ್ನ ನೀ ಕಾಯ್ವೆಯೆಂತೊ ಕಮಲಾಕ್ಷ ಅ.ಪ
ಗಂಗೆಯುದಕದಿ ಮಿಂದು ಸಿಂಗರದ ಮಡಿಯುಟ್ಟು
ಮಂಗಳದ ನಾಮ ಮುದ್ರೆಗಳ ಧರಿಸೀ
ಅಂಗಕರಣಗಳ ಶೋಧಿಸಿ ನ್ಯಾಸ ಮಂತ್ರದಿಂ ದಂತ
ರಂಗದಿ ಬಿಂಬಮೂರ್ತಿಯ ಚಿಂತಿಸಿದೆನೇ೧
ನಿರ್ಮಲೋದಕದಿಂದ ಅಭಿಷೇಚನವ ಗೈದು
ನಿರ್ಮಾಲ್ಯ ತೀರ್ಥವನು ಸೇವಿಸಿದೆನೇ
ಮರ್ಮವರಿತಾದಿಮೂರ್ತಿಯೆ ನಿನ್ನ ಬಿಂಬವನು
ನಿರ್ಮಲಾಂತಃಕರಣ ಪೀಠದಲಿ ನಿಲಿಸಿದೆನೇ ೨
ಶುಭ್ರವಸ್ತ್ರಗಳ ಪರಿಮಳ ಗಂಧ ಪುಷ್ಪಗಳ
ನಘ್ರ್ಯ ತುಳಸಿಗಳನರ್ಪಿಸಿ ನಲಿದೆನೇ
ಅರ್ಭಕನು ನಾ ಕನಕರತ್ನಾಭರಣಗಳನು
ಅಬ್ಧಿ ತನಯಳರಮಣ ನಿನಗೆ ಅರ್ಪಿಸಿದೆನೇ ೩
ಧೂಪದೀಪಗಳಿಂದ ವಾದ್ಯ ವೈಭವದಿಂದ
ಗೀತನರ್ತನಗಳಿಂ ಸೇವಿಸಿದೆನೇ
ಶ್ರೀಪತಿಯು ನೀ ಜಗದ ಜೀವಜಾಲಕೆ ಅಂತ
ರಾತ್ಮನೆಂದರಿತು ನೈವೇದ್ಯವರ್ಪಿಸಿದೆನೇ ೪
ವಿವಿಧ ಖಾದ್ಯಗಳಲ್ಲಿ ವಿವಿಧ ರಸ ರೂಪದಲಿ
ವಿವಿಧ ಸಾನ್ನಿಧ್ಯಗಳ ಧ್ಯಾನಿಸಿದೆನೇ
ಭವರೋಗಪೀಡಿತನು ನಾ ನಿನ್ನ ಹವಣರಿತು
ಸುವಿಹಿತ ವಿಧಿಯಂತೆ ಪೂಜಿಸುವ ಪರಿಯೆಂತೋ೫
ಸರ್ವಶಕ್ತನು ನೀನು ಸರ್ವಜ್ಞಪತಿ ನೀನು
ಸರ್ವದಾ ತೃಪ್ತನೋ ನಿಗಮವೇದ್ಯಾ
ಸರ್ವಭೂತಾಂತರ್ಗತನು ನಿನಗೆ ಉಣಬಡಿಸೆ
ಗರ್ವಿಶಠನಜ್ಞತಮನೆನಗೆ ವಶವೇ ೬
ವೇದಶಾಸ್ತ್ರಗಳ ಗಂಧವನರಿಯೆ ಹರಿಯೆ ನಿನ
ಗಾದಿಯಂತ್ಯಗಳ ಜ್ಞಾನದ ಮೂಲವರಿಯೆ | ನಮ್ಮ
ಮೇದಿನಿಯ ತನುಜೆಯಾ ಕೈಪಿಡಿದ ಪ್ರಭುವೆಂದು
ಸಾದರದಿ ನಮಿಪೆ ಪೊರೆ ರಘುರಾಮವಿಠಲ ೭

 

ರಾಮಾಯಣದ ಕೆಲವು ಪ್ರಸಂಗಗಳನ್ನು

ಎಂಥಾ ಪಾವನ ಪಾದವೋ ಶ್ರೀರಾಮನ
ದೆಂಥಾ ಚೆಲುವ ಪಾದವೋ ಪ
ಸಂತತವು ಸಜ್ಜನರ ಪಾಲಿಸೆ
ನಿಂತು ಧನುವನು ಧರಿಸಿ ಮೆರೆವ ಅ.ಪ
ಮುನಿಪತಿ ನುಡಿ ಮನ್ನಿಸಿ ತಪೋವನಕ್ಕನುಜನೊಡನೆ ಗಮಿಸೀ
ಮುನಿಯಾಜ್ಞೆಯಿಂ ಘೋರ ತಾಟಕಿಯನೆ ವಧಿಸಿ
ವಿನಯದಿ ಯಜ್ಞರಕ್ಷಣೆ ಮಾಡಿ ಮುದವಿತ್ತ ೧
ಮುನಿ ಗೌತಮನ ಪತ್ನಿಯ ಅಹಲ್ಯೆಯ
ಘನಶಾಪವನು ಕಳೆಯೆ
ಮುನಿಯಾಜ್ಞೆಯಿಂ ಘನಶಿಲೆಯ ಮೇಲಡಿಯಿಟ್ಟು
ಘನತರ ಮಾನಿನಿಯನು ನಿರ್ಮಿಸಿ ಮೆರೆದ ೨
ಗುಹನು ಗಂಗೆಯ ತಟದಿ ದೋಣಿಯ ತಂದು ಗಹನ
ಶಂಕೆಯೊಳಂದು
ಸಹಜಭಕ್ತಿಯಲಿ ನಿರ್ಮಲಗಂಗೆಯುದಕದಿಂ
ದಹಹ ಪಾದರಜವನು ತೊಳೆಯಲೊಪ್ಪಿದ ೩
ಹರಧನುವನು ಭಂಗಿಸಿ ಮಿಥಿಲೆಯಲಿ ವರ ವಿಕ್ರಮವ ಮೆರೆಸಿ
ತರುಣಿ ಜಾನಕಿಯಂದು ಶಿರದಿ ನಿನ್ನಡಿಗಳಿ
ಗೆರಗಲು ಘನ ಶಂಕೆಯಿಂ ಮಾಲೆಯರ್ಪಿಸಿದ ೪
ದುರುಳ ದಾನವ ತಂಡವ ಸಂಹರಿಸುತ ವರ
ಸಾಧುಗಳ ಪೊರೆಯೆ
ಚರಣ ಪಾದುಕೆಗಳ ಶರಣ ಭರತಗಿತ್ತು
ಬರಿಗಾಲಲಿ ನಡೆದ ರಘುರಾಮವಿಠಲನ ೫

 

ಪರಮಾತ್ಮನ ವ್ಯಾಪ್ತತ್ವವನ್ನು ತಿಳಿದು ಜೀವನು
ಲೋಕನೀತಿ
೧೨
ಎಲ್ಲಿಗೇತಕೆ ಪೋಗಿ ತಲ್ಲಣಿಸುವೆಯೊ ಮನವೆ
ಇಲ್ಲೆ ಶ್ರೀಹರಿಯಿಲ್ಲವೆ ಪ
ಬಲ್ಲವರ ಹೃದಯಗುಹೆಯಲ್ಲಿ ಪ್ರಕಟಿಸುತ ಜನ
ರೆಲ್ಲ ವಸ್ತುಗಳಲ್ಲಿ ತುಂಬಿ ಸೂಸುತಲಿರುವ ಅ.ಪ
ಕಾಶಿ ರಾಮೇಶ್ವರ ಬದರಿ ತಿರುಪತಿಯೆಂದು
ಘಾಸಿಗೂಳ್ಳುವೆ ಏತಕೋ
ವಾಸನೆಯ ನೀಗದವನಾಶೆಪಾಶಗಳಿಂದ
ಬೇಸತ್ತು ಚರಿಸಲೇಕೋ
ಈಶನಾವಾಸವೀಜಗವೆಲ್ಲವಿಲ್ಲಿಲ್ಲ
ವಲ್ಲಿರುವನೆಂಬುದೇಕೋ
ಶ್ರೀಶ ಶ್ರೀಹರಿಯ ನೀನಿರುವಲ್ಲೆ ಶೋಧಿಸುವ
ಆಸೆಯುದಯಿಸಲಿಲ್ಲವೇಕೋ ೧
ಅಣುಮಹತುಗಳಲ್ಲಿ ತೃಣಜೀವಕೋಟಿಯಲಿ
ಗುಣ ಮಹಿಮನರಿಯ ಬಯಸೋ
ಎಣಿಸಲಾಗದನಂತಗುಣನ ಪ್ರಾಣಿ ಸಮೂಹ
ಗಣಗಳೊಳು ಕಾಣಬಯಸೋ
ಅಣುವಿಗಣುವೆನಿಸಿ ಮಹತಿಗೆ ಮಹತ್ತಹನ
ಕಣ್ದಣಿಯೆ ಕಾಣುತ ಭಾವಿಸೊ
ಗುಣನಿಧಿಯು ನಿನ್ನ ಶ್ರದ್ಧಾಭಕ್ತಿಗಳಿಗೊಲಿದು
ಕ್ಷಣದಿ ಕಾಣಿಸುವನಿದನರಿತು ನೀ ಚರಿಸೋ ೨
ವ್ರತನಿಯಮಗಳ ಕಾಮ್ಯ ಫಲದಾಸೆಯಿಂ ಮಾಡೆ
ಫಲವೇನು ವ್ಯರ್ಥಶ್ರಮವೋ
ಸತತ ನಿನ್ನಯ ವ್ಯಾಪ್ತ ಮಹಿಮೆಯರಿಯದೆ ಪೂಜೆ
ಮಾಡಿದರು ವ್ಯರ್ಥಶ್ರಮವೋ
ಮತಿವಿಕಳ ಕೋಪ ತಾಪದ ದಾಸನವ ಮಾಳ್ಪ
ದಾನವದು ವ್ಯರ್ಥಶ್ರಮವೋ
ಅಕಳಂಕಮಹಿಮ ರಘುರಾಮವಿಠ್ಠಲನೆಂದು
ನಂಬಿ ನಡೆವುದೆ ಸಾರ್ಥಕವೋ ೩

 

ಸಕಲ ಚರಾಚರಗಳಲ್ಲಿ ವ್ಯಾಪ್ತನಾಗಿರು

ತೋರಿಸೋ ಶ್ರೀಹರಿ ನಿನ್ನ ತೋರಿಸೋ ಪ
ತೋರಿಸೋ ಹರಿ ವಿಶ್ವಮಯ ನಿನ್ನರೂಪವ
ತಾರಿಸೋ ಭವಸಾಗರದಿಂದಲೆನ್ನನು ಅ.ಪ
ಜಲ ಭೂ ಖೇಚರ ಪ್ರಾಣಿವರ್ಗಗಳೊಳು
ನೆಲಸಿ ಅವ್ಯಕ್ತನಾಗಿಹ ನಿನ್ನ ರೂಪವ ೧
ತೃಣ ಲತೆ ತರು ವನಸ್ಪತಿ ವರ್ಗಗಳೊಳು
ಅಣಗಿ ಅವ್ಯಕ್ತನಾಗಿಹ ನಿನ್ನ ಮೂರ್ತಿಯ೨
ಪಂಚಭೂತ ತನ್ಮಾತ್ರಂಗಳೊಳಡಗಿ ಪ್ರ
ಪಂಚಕವ್ಯಕ್ತನಾಗಿಹ ನಿನ್ನ ಮೂರ್ತಿಯ ೩
ಭೂತಜಾಲದ ಹೃತ್ಪೀಠದಿ ಮಂಡಿಸಿ
ರಥಿಕನಾಗಿ ದೇಹರಥವ ಚಾಲಿಪ ನಿನ್ನ ೪
ತಾರಾಗಣದಿ ಚಂದ್ರ ಸೂರ್ಯಾದಿಗ್ರಹ ಪರಿ
ವಾರದೊಳಡಗಿ ಜ್ಯೋತಿರ್ಮಯನಹ ನಿನ್ನ ೫
ತಳಿರೆಲೆ ಹೂ ಹೀಚು ಕಾಯಿ ಧಾನ್ಯಂಗಳ
ಬೆಳೆಸಿ ಶೋಭಿಪ ದಿವ್ಯ ವಿವಿಧರೂಪಂಗಳ ೬
ಅಂಗ ಪ್ರತ್ಯಂಗ ಕರಣಗಳೊಳಡಗಿಹ
ಮಂಗಳಮಯ ಚತುರ್ಮೂರ್ತಿಗಳಿರವನು ೭
ಅಜಭವ ಸುರಮುಖ್ಯ ದೇವಗಣದೊಳಿಪ್ಪ
ಸುಜನರಂತರ್ಯಾಮಿ ಚರಪ್ರತಿಮೆಗಳನ್ನು ೮
ಅಂಬುಜಾಂಬಕಿ ಜಗದಂಬೆ ಸಿತಾಪತಿ
ಬಿಂಬಮೂರುತಿ ರಘುರಾಮವಿಠಲ ನಿನ್ನ೯

 

ತಮ್ಮ ಜನನ-ಮರಣಗಳ ರಹಸ್ಯ ತಿಳಿಯದೆಂದು
೧೧
ನಾನ್ಯಾರೋ | ಶ್ರೀಹರಿ ಪೇಳೋ ನಾನ್ಯಾರೋ ಪ
ನಾನ್ಯಾರೆಂಬುದ ಪೇಳಿ ನೀನ್ಯಾರೆಂಬುದ ತಿಳುಹಿ
ಸಾನುರಾಗದಿ ಪೊರೆವ ಪ್ರಭು ನೀನೆ ಬೇರಿಲ್ಲಅ.ಪ.
ಎಲ್ಲಿಂದ ಬಂದೆ ನಾನಿಲ್ಲಿಗೆ ಮುಂದೆಲ್ಲಿಗೆ ಪಯಣ
ಇಲ್ಲಿಗೆ ಬಂದ ಕಾರಣವಾವುದಿಲ್ಲಿಂದ ಮುಂದಕೆ
ಕೊಂಡೊಯ್ಯುವುದೇನೆಂಬುದರಿಯೆ೧
ಜನನಕೆ ಮೊದಲು ಇದ್ದೆಡೆ ಯಾವುದೆನಗೇಕೆ
ಜನನಗೊಂಡು ಮಾನುಷ ದೇಹ ತಳೆದನಾ
ನೆನಗೆ ಹಿತವಹ ಕಾರ್ಯವನೇನನೆಸಗಿದೆ ೨
ದೇಹವೆ ಮನಸೆ ಬುದ್ಧಿಯೇ ನಾನೆಂಬುದನಾರೆಂದರಿಯೆ
ನೇಹದಿಂದಿರುವಂತರಾತ್ಮ ತೊಲಗಲು ಮುಂದೀ
ದೇಹವು ಕಸಕಿಂತ ಕಡೆಯೆನಿಪುದ ಬಲ್ಲೆ ೩
ಕರ್ಮವನೆಸಗಿ ನಾನೆ ಎಂದು ಮತ್ತದರನುಭವಕೆ
ಧರ್ಮಬದ್ಧನಾಗಿ ಸುಖ ದುಃಖ ಪಡುವಂಥ
ಕರ್ಮಿ ಜೀವನು ನೀ ಸಾಕ್ಷಿ ನಿರ್ಲಿಪ್ತನು ೪
ನೀನೆ ಗುರುವು ತಂದೆಯು ಬಂಧು ನೀನೇ ಸರ್ವಸ್ವ
ಏನರಿಯದಲ್ಪನ ಕೈಬಿಡದಿರು
ನೀನೆ ಗತಿ ರಘುರಾಮವಿಠಲ ತಂದೆ ೫

 

ನಾರಾಯಣನು ನೀರಿನಲ್ಲಿ

ನಾರಾಯಣನಲ್ಲದಿಲ್ಲ ಜಗದಿ ಪ
ನಾರಾಯಣನೆ ವಾರಿಶಾಯಿಯಾದ ಮೇಲೆ
ವಾರಿಸಂಪರ್ಕವಿಲ್ಲದ ವಸ್ತುವುಂಟೆಅ.ಪ
ತೃಣ ಲತೆ ತರು ವನಸ್ಪತಿ ಸಂತತಿಯೊಳೆಲ್ಲ
ಗಣನೆಯಿಲ್ಲದ ಪ್ರಾಣಿವರ್ಗದೊಳೆಲ್ಲ
ಅಣುಮಹತ್ತೆನಿಪ ಚರಾಚರಗಳೊಳೆಲ್ಲ
ಅಣಗಿ ಪೋಷಿಪ ರಸ ವಾರಿಯಾದ ಮೇಲೆ ೧
ಧರೆಯೊಳಗಡಗಿಹ ಧಾತುಜಾಲವ ಕರಗಿಸಿ
ನೆರೆ ವನಸ್ಪತಿವರ್ಗಕೆ ಉಣಿಸನಿತ್ತು
ಪರಿ ಪರಿ ಧಾನ್ಯ ಫಲಂಗಳ ರಚಿಸುತ್ತ
ಹರಹಿ ಲೋಕದೊಳೆಲ್ಲರನು ಪೋಷಿಪ ಪ್ರಭು ೨
ಒಂದೇ ಸ್ಥಳದಲಿ ಮೊಳೆತು ಬೆಳೆವ ಬೀಜಕ್ಕೆಲ್ಲ
ಒಂದೇ ವಾಸನೆ ಗುಣ ರುಚಿಗಳುಂಟೇ
ಸಂದೇಹ ಬೇಡ ನಿರ್ಲಿಪ್ತ ತಾನವುಗಳ
ಕುಂದಿಸದೆ ಗುಣ ಸ್ವಭಾವಗಳ ಪೋಷಿಸುವ ೩
ಸರ್ವವಸ್ತುಗಳಲ್ಲು ಅಂತರ್ಯಾಮಿಯಾಗಿ
ಸರ್ವ ಚರಾಚರಕೆ ನಿಯಾಮಕನಾಗಿ
ಸರ್ವರೊಳಡಗಿ ಪೋಷಿಪ ಘನಪ್ರಭುವಾಗಿ
ಸರ್ವರುತ್ಪತ್ತಿ ಸ್ಥಿತಿಗೆ ಕಾರಣನಹ ೪
ಪರಮಪುರುಷ ತನ್ನನಂತ ಮಹಿಮೆಯೊಳು
ಕಿರಿದೊಂದಂಶದಿ ವಾರಿರೂಪದೊಳಿಂತು
ಸರುವ ಚರಾಚರದಿರುತಂತರ್ಗತನಾಗಿಪೊರೆವ ಜನವ ರಘುರಾಮವಿಠಲ ಪ್ರಭು ೫

 

ಪರಮಾತ್ಮನ ಅನೇಕ

ಪರಮಪುರುಷ ನೀನೇ ಮಾಧವ ಪ
ಪರಮಪುರುಷ ನೀಪುರುಷೋತ್ತಮ ನೀ
ಸಿರಿ ಅಜ ಭವ ಸುರ ನರೋತ್ತಮಾರ್ಚಿತ ಅ.ಪ
ದೇವ ದೇವೋತ್ತಮ ದೇವ ಸಾರ್ವಭೌಮ
ಜೀವ ಜೀವಾಂರ್ತಗತ ಸರ್ವೋತ್ತಮ ೧
ಅಣುತೃಣಗಣ ಮಹತ್ತತ್ವಾದಿಗಳ
ಅನಂತರೂಪಗುಣಗಳಲಡಗಿ ಮೆರೆವ ಪ್ರಭು ೨
ಬ್ರಹ್ಮ ಸುರೇಂದ್ರಾರ್ಚಿತ ಪಾವನ ಪದ
ಚಿನ್ಮಯರೂಪ ಸುರಾಸುರ ವಂದ್ಯಾ ೩
ಗರುಡಗಮನ ಸಿರಿರಮಣ ಚರಣನಖ
ಕಿರಣ ಕೋಟಿರವಿತೇಜಪ್ರಕಾಶಕ೪
ಗಂಗಾಪಿತ ಅನಂಗಜನಕ ಹೇ
ಮಂಗಳಾಂಗ ರಘುರಾಮವಿಠಲ ಪ್ರಭು ೫

 

ಪರಮಾತ್ಮನ ನಾಮಸ್ಮರಣೆ, ಅನೇಕ ರೀತಿಯ
೧೩
ಪರಮಾನಂದದೊಳಿರುವ ಪರಿಯನರಿ
ಗರುವ ಬೇಡ ಹೇ ಮನಸಾ ಪ
ಸಿರಿವರ ನಾರಾಯಣ ನಾಮಾಮೃತ
ನರಘಳಿಗೆಯು ಮರೆಯದೆ ನೆನೆ ಮನಸಾಅ.ಪ
ಇಂದಿರೆಯರಸನ ಸುಂದರ ಚರಣಗ
ಳಂದದ ಶ್ರೀ ತುಳಸಿಯ ದಳದಿ
ಚಂದದೊಳರ್ಚಿಸಿ ಕುಂದದ ಭಕುತಿಯೊಳಾ
ನಂದದೊಳಿರು ಹೇ ಮನಸಾ ೧
ಸಿರಿ ರಾಮನ ಮಂಗಳ ಮೂರ್ತಿಯ ಘನ
ಕೊರಳೊಳು ಹಾರಗಳರ್ಪಿಸುತ
ಪರಿಪರಿ ಪರಿಮಳ ಪುಷ್ಪಗಳಿಂದಲಿ
ಕರುಣಾಕರನನರ್ಚಿಸು ಮನಸಾ೨
ಸರ್ವಾಂತರ್ಗತ ಜಗದುದರನ ನೀ
ನಿರ್ಮಲ ಪೀಠದಿ ಕುಳ್ಳಿರಿಸಿ
ಸರ್ವಷಡ್ರಸೋಪೇತ ಸುಭೋಜನ
ಸರ್ವಾತ್ಮನಿಗರ್ಪಿಸು ಮನಸಾ ೩
ಸುಫಲ ಕ್ಷೀರ ತಾಂಬೂಲಗಳರ್ಪಿಸಿ
ಸಫಲಗೊಳಿಸು ಜನ್ಮವ ಮನಸಾ
ಅಪಾರಮಹಿಮನ ಗುಣಗಳ ಕೀರ್ತಿಸಿ
ಕೃಪಾನಿಧಿಯ ನಮಿಸೆಲೊ ಮನಸಾ ೪
ಅಗಣಿತ ಮಹಿಮನಿಗಾರ್ತಿಗಳರ್ಪಿಸಿ
ಮಿಗೆ ಭಕ್ತಿಲಿ ನಮಿಸೆಲೊ ಮನಸಾ
ಸುಗುಣಮಣಿಯು ರಘುರಾಮವಿಠಲ ನಿ
ನ್ನಗಲದೆ ಹೃದಯದಲಿಹ ಮನಸಾ ೫

 

ಶ್ರೀ ವಾಯು ದೇವರ ಹನುಮ-ಭೀಮ
ವಾಯುದೇವರು

ಮಾರುತೀ ಮತ್ಪ್ರಾಣೇಶ ಮಾರುತೀ ಪ
ಮಾರುತಿ ನಮಿಪೆ ನಾ ನಿನ್ನಾ ಭವಭಾರವನಿಳಿಸು ನೀ ಯೆನ್ನ |
ಗತಿ ತೋರು ಸದ್ಗುಣ ಸಂಪನ್ನಾ | ಬೇರೆ ಯಾರಿಲ್ಲ ಪೊರೆವರು
ಯನ್ನಾ | ನಿನ್ನೀ ಚಾರುಚರಿತೆಯ ಪಾಡಿ ಕೊಂಡಾಡುವೆ |
ಸೇರೆ ರಾಮನ ಪದವಾರಿಜ ತೋರಿಸು ಅ.ಪ
ತ್ರೇತೆಯೊಳಗೆ ಸಂಜನಿಸೀ ರಾಮದೂತಶೇಖರನೆಂದೆನಿಸೀ
ಹರಿಜಾತನ ವಚನವ ಸಲಿಸಿ
ಕಪಿ, ಖ್ಯಾತರೊಂದಿಗೆ ಸಂಚರಿಸಿ
ಸುರನೇತರುಘೇಯೆನ್ನೆ
ಶೀತಳ ಜಲಧಿಯ ಪ್ರೀತಿಯೊಳ್ದಾಟಿ
ಲಂಕಾ ಪತಿಯನು ಕಂಡೆ ೧
ಪುರದಿ ಭೂಜಾತೆಯನರಸೀ ಕಾಣದರಿತು ವನವ, ತಲೆ
ಮರಸೀ ಕಂಡು ಮರುಗುತಾಕೆಯ
ದುಃಖ ವೆರೆಸೀ ಬಂದ
ದುರುಳ ರಾವಣನ ಪರಿಕಿಸಿ | ಆಹಾ | ಭರದಿ ಮುದ್ರಿಕೆಯಿತ್ತು |
ಪುರವನುರಿಸಿ | ರಘು | ವರನಡಿಗಳ
ಕಂಡ | ಧುರಧೀರರರಸನೇ ೨
ಕಡಲತಡಿಯನೈದೀ ಭರದೀ | ಜಗ |
ದೊಡೆಯನಿಗೆಡೆಗುಡೆ ಶರಧೀ | ಲಂಕೆ
ಯೆಡೆಯೊಳ್ರಕ್ಕಸರ ಸಮರದಿ | ಕೊಲ್ಲುತಡುವ ಭೂತಗಳುಣ್ಣೆ
ಮುದದೀ | ಬಲು | ಘುಡಿ ಘುಡಿ
ಶಾರ್ಭಟಿಸುತ ಖಳ ಪಡೆಯನು
ಅಡಿಯೊಂದಿಗೊರೆಸಿ ರಾಘವನ ಮೆಚ್ಚಿಸಿದ ೩
ದುರುಳರುದಿಸೆ ದ್ವಾಪರದಿ | ಪಾಂಡು |
ನರವರಗ್ಹ ಸ್ತಿನ ಪುರದೀ |
ಪುತ್ರ | ವರ ನೆನಿಸುವ ಸಂಭ್ರಮದೀ | ಯದು |
ವರನೊಡಗೂಡಿ ಕಾಳಗದೀ |
ಚಂದ | ಅರಿವೀರ ಭಟರ ಕಡಿದುರುಳಿಸಿ | ದುರುಳ ಕೌರವರ
ಬೇರೊರೆಸಿದ ಬಲಭೀಮ ||೪
ಕಲಿಯುಗದೊಳು ವಿಪ್ರಕುಲದೀ |
ಪುಟ್ಟಿ | ಬಲಿದರ ಶಾಸ್ತ್ರ ಬಲದೀ |
ನಿಂದು| ಗೆಲಿದು ಸತ್ವವಗೊಂಡು ಛಲದಿ | ದ್ವೈತ ಕುಲವ
ಸ್ಥಾಪಿಸಿ ನೀ ನಲಿದೀ | ಭಲ | ಭಳಿರೆ ರಜತಪುರಿಯರಸನ
ನರ್ಚಿಸಿ | ಕಳೆಗೊಂಡ ಯತಿವರ |
ರಘುರಾಮವಿಠಲ ದೂತ ೫

 

ರಾಮಾಯಣವನ್ನು

ರಾಮ ನಾಮಕೆ ಸಮ ನಾಮವುಂಟೆ ಜಗದೀ
ಪಾಮರರಘನಾಶಕೆ ಪ
ಕಾಮಾರಿಯು ತನ್ನ ಭಾಮೆಗೆ ಬೋಧಿಸಿದೀ
ನಾಮಕೆ ಸಮವುಂಟೇ ಅ.ಪ
ಕೌಸಲ್ಯಾದಶರಥರಿಂದವತರಿಸೀ
ಕೋಸಲಪತಿಯೆನಿಸೀ
ವಾಸವಾದಿ ದಿವಿಜರ ಪಾಲಿಸಲೆಳೆಸೀ
ಅಸುರೆಯ ಸಂಹರಿಸೀ
ಭಾಸುರಾಂಗ ಮುನಿಯಾಗದೊಳುಪಕರಿಸೀ
ದುರುಳರಪಹರಿಸೀ
ಶ್ರೀ ಸೀತಾಕರಪಲ್ಲವವನುಗ್ರಹಿಸೀ
ಮುನಿ ಸತಿಯನುದ್ಧರಿಸಿದ ೧
ಪಿತನ ಸತ್ಯವಾಕ್ಯವ ಪಾಲಿಸಲೆಳೆಸೀ
ಸತಿಯನುಜರ್ವೆರೆಸೀ
ಹಿತದಿಂ ಮುನಿ ವೇಷದೊಳಡವಿಗೆಗಮಿಸೀ
ದಿತಿಜರ ಕುಲವಳಿಸೀ
ಮತಿಮಾನ್ ವಾಯುಕುಮಾರನ ಸ್ವೀಕರಿಸಿ
ಸತಿಯಳ ನೆಲೆಯರಸೀ
ಕ್ಷಿತಿಧರ ಕುಲದಿಂ ಶರಧಿಯನುತ್ತರಿಸೀ
ದಿತಿಜಾಂತಕನೆನಿಸಿದ ೨
ರಾವಣ ಘಟಕರ್ಣಾದ್ಯರ ಸಂಹರಿಸೀ
ಶರಣನ ಪತಿಕರಿಸೀ
ಪಾವಕನೊಳು ಸತಿಶೀಲವನುದ್ಧರಿಸೀ
ನರನಾಟಕ ನಡೆಸೀ
ಪಾವಕನಿಂ ಭರತನ ಪ್ರಾಣವನುಳಿಸೀ
ಕರುಣಾನಿಧಿಯೆನಿಸೀ
ದೇವರದೇವ ರಘುರಾಮವಿಠಲನೆನಿಸೀ ಜನವನು ಪಾಲಿಸಿದಾ ೩

 

ದೋಷಯುಕ್ತರಾದ ಜನರನ್ನು ರಕ್ಷಿಸಲು
೧೪
ರಾಮ ಪಾದವೇ ಗತಿ ನೇಮನಿಷ್ಠೆಗಳರಿಯದ
ಪಾಮರ ಜನರಿಗೆಲ್ಲ ಪ
ತಾಮಸಾಹಂಕಾರ ಪಂಕದಿ |
ಕಾಮಮದ ಮತ್ಸರಗಳಿಂದಲಿ
ಹೇಮ ಕಾಮಿನಿಲಂಪಟದಿ ನಿ | ಸ್ಸೀಮರೆನಿಸುವ
ತಾಮಸೌಘಕೆಅ.ಪ
ಸ್ನಾನ ಮೌನ ಜಪತಪಗಳನರಿಯದೆ
ಸ್ವಾಮಿ ನಿನ್ನನು ಮುಟ್ಟಿ ಪೂಜಿಸದೆ
ಸೀಮೆಯರಿಯದ ಕಾಮಕರ್ಮದಿ
ನೇಮವಿಲ್ಲದ ಕ್ಷುದ್ರಸ್ವಾರ್ಥದಿ
ತಾಮಸರ ಸಂಸರ್ಗದಿಂದ ವಿ
ರಾಮವರಿಯದ ಜನರ ಪಾಲಿಗೆ ೧
ಜ್ಞಾನ ಭಕ್ತಿ ವೈರಾಗ್ಯಗಳರಿಯದೆ
ಜ್ಞಾನಿಜನರ ಸಂಗವ ಬಯಸದೆ
ಹೀನದುಷ್ಕರ್ಮಗಳ ಮಾಡುತ
ನಾನು ತಾನೆಂಬ ಕೊಬ್ಬಿಲಿ
ಜಾನಕೀಪತಿ ನಿನ್ನ ಮಹಿಮೆಯ
ಕಾಣದಿಹ ದುಷ್ಕರ್ಮಿಜನರಿಗೆ ೨
ಶ್ರೀನಿಧಿ ನೀ ಕರುಣಿಸಿ ರಕ್ಷಿಸದಿರೆ
ದೀನಜನರ ಪಾಲಿಪರಾರೋ
ಸಾನುರಾಗದಿ ಬೇಡಲರಿಯದ
ಜ್ಞಾನಹೀನರ ತಪ್ಪನೆಣಿಸದೆ
ನೀನೆ ಕೈಪಿಡಿದೆತ್ತಿ ರಕ್ಷಿಸು
ಮಾನನಿಧಿ ರಘುರಾಮವಿಠಲ ೩

 

ರಾಮಾಯಣದ ಅನೇಕ

ರಾಮಾ ನಿನ್ನ್ಹ್ಹೊರತನ್ಯರ ಕಾಣೆ
ಪೊರೆ ನೀನೆನ್ನಾಣೇ ಶ್ರೀರಾಮಾ ಪ
ಕಾಮಾಂತಕ ತನ್ನ ಭಾಮೆಗೊರೆದ ಶ್ರೀ
ರಾಮತಾರಕಮಂತ್ರವೆ ಗತಿ ಲೋಕಕೆ ರಾಮಾಅ.ಪ
ಮತಿವಂತ ದಶರಥ ಕೌಸಲ್ಯೆಯರ ಸುತನಾಗ್ಯವತರಿಸಿ
ಅತಿ ಬಾಲ್ಯದಿ ಮುನಿಯೊಡನಡವಿಗೆ ನಡೆದು ಕಡು
ದುರುಳೆಯಸದೆದು
ಮತಿಹೀನ ರಕ್ಕಸರುಪಟಳವಳಿದು ಮುನಿಪತಿ ಮಖ ಬೆಳೆದು
ಪತಿಸುತಸಖಹಿತ ಜನಪತಿ ಜೀವಿತ
ಪಥದಾದರ್ಶವ ಜಗತಿಗೆ ತೋರಿದೆ೧
ಮುನಿಗೌತಮಸತಿ ತಾ ಶಿಲೆಯಂತಿರಲು ಪದರಜದಿಂದುದ್ಧರಿಸಿ
ಘನ ಜಾಹ್ನವಿ ಚರಿತೆಯ ಕೇಳುತ ನಲಿದು ಅನುಜಾತನ ಬೆರೆದು
ಜನನಾಥನ ಜನಕನ ಮಿಥಿಲೆಗೆ ನಡೆದು ಹರಧನುವನುಪಡೆದು
ಅನುಪಮವೆನಿಪದ ನಡುವೊಳೆ ಖಂಡಿಸಿ
ಜನಕಸುತೆಯ ಕರಕಮಲವ ಪಿಡಿದೆ ೨
ಪರಶುಹಸ್ತರು ಮಾರ್ಗದಿ ಎದುರಾಗಿ ಅಂಜಿಸೆ ಬೆರಗಾಗಿ
ಕರದಲ್ಲಾಟಿಕೆಯೊಲು ಧನುವದಗ್ರಹಿಸಿ ಕ್ಷಣದಲ್ಲುಪಹರಿಸಿ
ಪರಮಾದರ ನೀಡಿದೆ ಬಾಂಧವ
ಜನಕೆ ಹಿರಿಯರಿಗೆ ದಶರಥನಿಗೆ
ಸುರನರರೆಲ್ಲರು ಪರಮಾನಂದದೊ
ಳಿರುತಿರೆ ವಸಿದೆ ಸುದತಿಯೊಡನೆ ರಘುರಾಮ೩
ಹಿಂದೆ ನಾ ಬಹುಜನ್ಮಗಳಲಿ ಬಂದು ನೊಂದೆನು ಈ ಭವದಿ
ಮುಂದೆ ಮಾರ್ಗವ ಕಾಣದೆ
ನಿನ್ನಲಿ ಬಂದು ನಿಂದೆ ಗತಿಯೆಂದು
ಸಂದೇಹವಿಲ್ಲ ನೀನೇ ಗುಣಸಿಂಧು ಜಗಕಾಪದ್ಬಂಧು
ತಂದೆ ನೀನಿಂದೆನ್ನ ಬಂಧನ ಬಿಡಿಸದೆ
ಕೊಂದೆಯಾದರೆ ಕುಂದದು ನಿನಗಪಯಶ ೪
ಆನಂದಮಯ ನೀನಾನಂದದಲ್ಲಿದ್ದೆ ಆಶ್ಚರ್ಯವದೇಳು
ಆನಂದವನಂದು ಕುಂದದಲಿತ್ತೆ ಜಗಕತಿಶಯವೇಳು
ಸಾನಂದದೊಳಿದ್ದರು ತವಸನ್ನಿಧಿಬಲದಿ ಅತಿಶಯಮತ್ತೇಳು
ನೊಂದಜನಕೆ ಇಂದಾನಂದವ ನೀ
ನ್ಹೊಂದಿಸಿ ಪೊರೆ ರಘುರಾಮವಿಠಲ ೫

 

ರಾಮಾಯಣದ ಅನೇಕ ಪ್ರಸಂಗಗಳನ್ನು

ರಾಮಾ ಮನ್ಮನೋಹಾರಕ ಸೀತಾರಾಮ ರಾಮ
ಮನ್ಮನೋಹಾರಕ ಪ
ರಾಮ ದಶರಥ ರಾಮ ಮಂಗಳನಾಮ ಶ್ರೀ ರಘುರಾಮ
ಗುಣಗಣಧಾಮ ಸಜ್ಜನಪ್ರೇಮ ಹೇ ಜಯ ರಾಮ
ಸೀತಾರಾಮ ರಘುವರ ಅ.ಪ
ಸುರಪತಿ ಮುನಿಸತಿಯ ಅಹಲ್ಯೆಯ ಮರೆಸಿ
ಕೂಡಲು ಕೋಪದಿ
ಗೌತಮಮುನಿ ತರಳೆಯ ಶಪಿಸಿರಲು ಕಲ್ಲಾಗಿ ಬಿದ್ದಿರೆ
ಹಿರಿದುಕಾಲಕೆ ಮುನಿಯೊಡನೆ ರಘುವರ ನೀ
ಪಾದಗಳ ರಜದಿಂ
ತರುಣಿಯಾಗಿಸಿ ಪೊರೆದೆಯೆಂಬೀ ವರ
ಸುವಾರ್ತೆಯ ಕೇಳಿ ಬಂದಿಹೆ ೧
ಕಡುವೃದ್ಧೆ ಬೇಡತಿಯು ಅಡವಿಯೊಳಂದು
ಗಿಡ ಮರವಲೆದು
ತಂದು ಫಲಮೂಲಗಳನು ಒಡೆಯ ನೀ ಬರುವೆಯೆಂದು
ಕೇಳುತ ತಾನು | ಬಡವರೊಡೆಯ ನೀನೆಂದರಿತು |
ಕಡುಹಿತದೊಳೆಂಜಲ ಫಲಗಳುಣಿಸಲು|
ಬಿಡದೆ ಶಬರಿಯನು ಕಾಯ್ದೆಯೆಂದೊರೆದ ವಾರ್ತೆಯ
ಕೇಳಿ ಬಂದಿಹೆ ೨
ಬಲದಿ ಕೊಬ್ಬಿದ ವಾಲಿಯು ಸುಗ್ರೀವನ
ಛಲದಲೋಡಿಸಿ ರಾಜ್ಯದಿ
ಬಲುಹಿಂದಲವನ ಲಲನೆಯನಪಹರಿಸಿ ಭೋಗಿಸುತಿರಲು
ಇಳೆಯರಸ ನೀನೆಂದು ನಂಬುತ
ಗೆಳೆಯ ಮಾರುತಿಯಿಂದಲರಿತು
ಮಿಳಿತು ವಾಲಿಯ ಕೊಲಿಸಿ ರಾಜ್ಯವ
ಗಳಿಸಿದ್ವಾರ್ತೆಯ ಕೇಳಿ ಬಂದಿಹೆ ೩
ಹಿರಿಯಣ್ಣ ದಶಮುಖನು ನಿನ್ನಯ ಸತಿ
ವರಪತಿವ್ರತೆ ಸೀತೆಯ
ಕದ್ದೊಯ್ದಿರೆ ಕಿರಿಯ ವಿಭೀಷಣನು
ಪರಿಪರಿಯಿಂದಲಿರದೆ
ಬೋಧಿಸಿ ಬೇಡಲು ದುರುಳ ರಾವಣನ ಭಂಗಿಸಿ
ಹೊರದೂಡಲವ
ನರಸಿ ನಿನ್ನಯ ಪರಮ ಪಾದಾಶ್ರಯವ ಬೇಡಲು ಪೊರೆದ
ವಾರ್ತೆಯ ಕೇಳಿ ಬಂದಿಹೆ೪
ಪರಮಪುರುಷ ನೀನೆಂದು ನಂಬಿದೆ
ಸಿರಿಯರಸ ಪ್ರಭುವು ನೀನೆಂದು
ಹರವಿರಂಚಾದಿಗಳೊಡೆಯ ನೀನೆಂದು
ಚರಾಚರ ಗುರುವು ಪ್ರಭುವು ನೀನೆಂದು
ನಂಬಿದೆನು ಇಂದು ತರಣಿ ಕುಲ ಮಣಿ
ಸಾರ್ವಭೌಮನೆ ಶರಣರಘ
ಕೋಟಿಗಳ ಕಳೆವನೆ ಶರಣ ಬಂದಿಹೆನೆನ್ನ ಪಾಲಿಸದಿರುವರೇ
ರಘುರಾಮ ವಿಠಲ ೫

 

ಪರಮಾತ್ಮನು ಸೃಷ್ಟಿಸಿರುವ ಬಗೆ, ಜೀವನು
೧೫
ಹಲವು ಸಂಭ್ರಮಗಳಿಂ ಮನೆ ಕಟ್ಟಿದೀ ದೇವ ಪ
ನೆಲೆಗೆಡಿಸಿ ಅದನಿಂದು ಕೆಡಹುತಿರುವೀ ಅ.ಪ
ಪ್ರಾರಬ್ಧಕರ್ಮವೆಂತೆಂಬ ಹಳ್ಳವ ತೋಡಿ
ಆರು ಜನ ಕೆಲಸಗಾರರನಲ್ಲಿ ಕೂಡಿ
ಮೀರಿ ಮಾಯೆಯ ಭಾರಿ ಕಲ್ಕೆಸರುಗಳ ಹೂಡಿ
ಭಾರಿನೆಲಗಟ್ಟು ರಚಿಸಿದರೊಂದುಗೂಡಿ ೧
ಎಲುವಿನ್ಹಂದರ ಹರಹಿ ಬಲಿದ ಮಾಂಸದ ಗೋಡೆಗಳ ಮೇಲೆ
ಚೆಲುವ ಚರ್ಮ ಹೊದ್ದಿಸಿ
ಜಲರಕ್ತ ಕಾಲ್ವೆಗಳ ಹರಿಸಿ | ಸ್ವಚ್ಛತೆಯಿರಿಸಿ
ಬಲುಉಸಿರುಬಲದಿಂದಲದ ಚಲನಗೊಳಿಸಿ ೨
ಐದು ಇಂದ್ರಿಯಗಳೇ ದ್ವಾರ ಕಿಟಕಿಗಳಾಗೆ
ಐದುಬಗೆ ವಿಷಯಗಳು ಆಹಾರವಾಗೆ
ವೈದು ಯಮಪುರಿಗೆ ತಲ್ಪಿಸಲುಣಿಸನಿದನುಂಡು
ಐದಿದುದು ನರಕಕೂಪಕೆ ಜೀವದಂಡು ೩
ಕ್ಷೇತ್ರಜ್ಞ ನೀನು ನಿನ್ನಯ ಕಣ್ಣಮುಂದಿಂತು
ಗಾತ್ರದಲಿ ವಾಸಿಪ ಜೀವನು ನಿನ್ನ ಮರೆತು
ಕ್ಷೇತ್ರಘಾತಕಕಾರ್ಯವೆಸಗುತಿರಲಂದಂದೆ
ನೇತ್ರ ಹಸ್ತಗಳ ಛೆೀದಿಸದೆ ಉಳುಹಿದೆಯೆಂತು ೪
ಸರ್ವಸ್ವತಂತ್ರನೀ ಜೀವ ಪರತಂತ್ರನವ
ಗರ್ವ ಅಜ್ಞಾನ ಅಂಧತೆಗಳಲಿ ಸಿಲುಕಿ
ಸರ್ವ ದುಷ್ಕರ್ಮಗಳ ನಡೆಸಿ ಕೆಡಸಿಹನಿದನು
ಸರ್ವದಾ ಕ್ಷಮಿಸಿ ಪೊರೆ ರಘುರಾಮವಿಠಲ ೫

 

ಎಲ್ಲಿಗೇತಕೆ ಹೋಗಿ
ಲೋಕನೀತಿ
೧೨
ಎಲ್ಲಿಗೇತಕೆ ಪೋಗಿ ತಲ್ಲಣಿಸುವೆಯೊ ಮನವೆ
ಇಲ್ಲೆ ಶ್ರೀಹರಿಯಿಲ್ಲವೆ ಪ
ಬಲ್ಲವರ ಹೃದಯಗುಹೆಯಲ್ಲಿ ಪ್ರಕಟಿಸುತ ಜನ
ರೆಲ್ಲ ವಸ್ತುಗಳಲ್ಲಿ ತುಂಬಿ ಸೂಸುತಲಿರುವ ಅ.ಪ
ಕಾಶಿ ರಾಮೇಶ್ವರ ಬದರಿ ತಿರುಪತಿಯೆಂದು
ಘಾಸಿಗೂಳ್ಳುವೆ ಏತಕೋ
ವಾಸನೆಯ ನೀಗದವನಾಶೆಪಾಶಗಳಿಂದ
ಬೇಸತ್ತು ಚರಿಸಲೇಕೋ
ಈಶನಾವಾಸವೀಜಗವೆಲ್ಲವಿಲ್ಲಿಲ್ಲ
ವಲ್ಲಿರುವನೆಂಬುದೇಕೋ
ಶ್ರೀಶ ಶ್ರೀಹರಿಯ ನೀನಿರುವಲ್ಲೆ ಶೋಧಿಸುವ
ಆಸೆಯುದಯಿಸಲಿಲ್ಲವೇಕೋ ೧
ಅಣುಮಹತುಗಳಲ್ಲಿ ತೃಣಜೀವಕೋಟಿಯಲಿ
ಗುಣ ಮಹಿಮನರಿಯ ಬಯಸೋ
ಎಣಿಸಲಾಗದನಂತಗುಣನ ಪ್ರಾಣಿ ಸಮೂಹ
ಗಣಗಳೊಳು ಕಾಣಬಯಸೋ
ಅಣುವಿಗಣುವೆನಿಸಿ ಮಹತಿಗೆ ಮಹತ್ತಹನ
ಕಣ್ದಣಿಯೆ ಕಾಣುತ ಭಾವಿಸೊ
ಗುಣನಿಧಿಯು ನಿನ್ನ ಶ್ರದ್ಧಾಭಕ್ತಿಗಳಿಗೊಲಿದು
ಕ್ಷಣದಿ ಕಾಣಿಸುವನಿದನರಿತು ನೀ ಚರಿಸೋ ೨
ವ್ರತನಿಯಮಗಳ ಕಾಮ್ಯ ಫಲದಾಸೆಯಿಂ ಮಾಡೆ
ಫಲವೇನು ವ್ಯರ್ಥಶ್ರಮವೋ
ಸತತ ನಿನ್ನಯ ವ್ಯಾಪ್ತ ಮಹಿಮೆಯರಿಯದೆ ಪೂಜೆ
ಮಾಡಿದರು ವ್ಯರ್ಥಶ್ರಮವೋ
ಮತಿವಿಕಳ ಕೋಪ ತಾಪದ ದಾಸನವ ಮಾಳ್ಪ
ದಾನವದು ವ್ಯರ್ಥಶ್ರಮವೋ
ಅಕಳಂಕಮಹಿಮ ರಘುರಾಮವಿಠ್ಠಲನೆಂದು
ನಂಬಿ ನಡೆವುದೆ ಸಾರ್ಥಕವೋ ೩

 

ಹಾಡಿನ ಹೆಸರು :ಎಲ್ಲಿಗೇತಕೆ ಹೋಗಿ
ಹಾಡಿದವರ ಹೆಸರು : ಶ್ರೀವರ್ಧಿನಿ
ರಾಗ :ಕಮಾಚ್
ತಾಳ : ಮಿಶ್ರ ಛಾಪು ತಾಳ
ಸಂಗೀತ ನಿರ್ದೇಶಕರು :ವಸಂತ ಮಾಧವಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಹಲವು ಸಂಭ್ರಮಗಳಿಂ ಮನೆ
೧೫
ಹಲವು ಸಂಭ್ರಮಗಳಿಂ ಮನೆ ಕಟ್ಟಿದೀ ದೇವ ಪ
ನೆಲೆಗೆಡಿಸಿ ಅದನಿಂದು ಕೆಡಹುತಿರುವೀ ಅ.ಪ
ಪ್ರಾರಬ್ಧಕರ್ಮವೆಂತೆಂಬ ಹಳ್ಳವ ತೋಡಿ
ಆರು ಜನ ಕೆಲಸಗಾರರನಲ್ಲಿ ಕೂಡಿ
ಮೀರಿ ಮಾಯೆಯ ಭಾರಿ ಕಲ್ಕೆಸರುಗಳ ಹೂಡಿ
ಭಾರಿನೆಲಗಟ್ಟು ರಚಿಸಿದರೊಂದುಗೂಡಿ ೧
ಎಲುವಿನ್ಹಂದರ ಹರಹಿ ಬಲಿದ ಮಾಂಸದ ಗೋಡೆಗಳ ಮೇಲೆ
ಚೆಲುವ ಚರ್ಮ ಹೊದ್ದಿಸಿ
ಜಲರಕ್ತ ಕಾಲ್ವೆಗಳ ಹರಿಸಿ | ಸ್ವಚ್ಛತೆಯಿರಿಸಿ
ಬಲುಉಸಿರುಬಲದಿಂದಲದ ಚಲನಗೊಳಿಸಿ ೨
ಐದು ಇಂದ್ರಿಯಗಳೇ ದ್ವಾರ ಕಿಟಕಿಗಳಾಗೆ
ಐದುಬಗೆ ವಿಷಯಗಳು ಆಹಾರವಾಗೆ
ವೈದು ಯಮಪುರಿಗೆ ತಲ್ಪಿಸಲುಣಿಸನಿದನುಂಡು
ಐದಿದುದು ನರಕಕೂಪಕೆ ಜೀವದಂಡು ೩
ಕ್ಷೇತ್ರಜ್ಞ ನೀನು ನಿನ್ನಯ ಕಣ್ಣಮುಂದಿಂತು
ಗಾತ್ರದಲಿ ವಾಸಿಪ ಜೀವನು ನಿನ್ನ ಮರೆತು
ಕ್ಷೇತ್ರಘಾತಕಕಾರ್ಯವೆಸಗುತಿರಲಂದಂದೆ
ನೇತ್ರ ಹಸ್ತಗಳ ಛೆೀದಿಸದೆ ಉಳುಹಿದೆಯೆಂತು ೪
ಸರ್ವಸ್ವತಂತ್ರನೀ ಜೀವ ಪರತಂತ್ರನವ
ಗರ್ವ ಅಜ್ಞಾನ ಅಂಧತೆಗಳಲಿ ಸಿಲುಕಿ
ಸರ್ವ ದುಷ್ಕರ್ಮಗಳ ನಡೆಸಿ ಕೆಡಸಿಹನಿದನು
ಸರ್ವದಾ ಕ್ಷಮಿಸಿ ಪೊರೆ ರಘುರಾಮವಿಠಲ ೫

ಹಾಡಿನ ಹೆಸರು :ಹಲವು ಸಂಭ್ರಮಗಳಿಂ ಮನೆ
ಹಾಡಿದವರ ಹೆಸರು :ರಮೇಶ್‍ಚಂದ್ರ
ರಾಗ :ಅಭೇರಿ
ತಾಳ :ಝಂಪೆ ತಾಳ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಬಿ. ವಿ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು
ನಿರ್ಗಮನ