Categories
ವಚನಗಳು / Vachanagalu

ಅಂಬಿಗರ ಚೌಡಯ್ಯನವರ ವಚನಗಳು

ಅಂಗದ ಗುಣವನರತು ಲಿಂಗವನರಿಯಬೇಕೆಂಬರು
ಅಂಗವರತ ಮತ್ತೆ ಲಿಂಗಕ್ಕೆ ಕುರುಹುಂಟೆ ?
ಅಂಗವೆ ಲಿಂಗ, ನಿರಂಗವೆ ಸಂಗ.
ಭಾವದ ಅಂಗವನರಿಯಬೇಕೆಂದನಂಬಿಗ ಚೌಡಯ್ಯ./1
ಅಂಗದೊಳಗಿಪ್ಪುದು ಲಿಂಗವಲ್ಲ, ಅಂಗದ ಹೊರಗಿಪ್ಪುದು ಲಿಂಗವಲ್ಲ.
ಎಲ್ಲ ಅಂಗಂಗಳನೊಳಕೊಂಡಿಪ್ಪ ಲಿಂಗ, ಹೋಗುತ್ತ ಬರುತ್ತ ಇಪ್ಪುದಲ್ಲ!
ಚಲನೆಯಿಲ್ಲದ ಅಚಲವಪ್ಪ ಲಿಂಗಕ್ಕೆ, ಹೋಯಿತ್ತು ಎಂಬ ಸಂದೇಹವಿಲ್ಲವೆಂದನಂಬಿಗ ಚೌಡಯ್ಯ./2
ಅಂಗವ ಅಂದ ಮಾಡಿಕೊಂಡು ತಿರುಗುವ
ಭಂಗಗೇಡಿಗಳು ನೀವು ಕೇಳಿರೋ.
ಅಂಗಕ್ಕೆ ಅಂದವಾವುದೆಂದರೆ: ಗುರುವಿಗೆ ತನುವ ಕೊಟ್ಟಿರುವುದೆ ಚೆಂದ,
ಲಿಂಗಕ್ಕೆ ಮನವ ಕೊಟ್ಟಿರುವುದೆ ಚೆಂದ,
ಜಂಗಮಕ್ಕೆ ಧನವ ಕೊಟ್ಟಿರುವುದೆ ಚೆಂದ.
ಅಷ್ಟಾವರಣದಲ್ಲಿ ನಿಬ್ಬೆರಗಿನಿಂದ ಕೂಡಿ
ಭಕ್ತಿಯೆಂಬ ಸಮುದ್ರದಲ್ಲಿ ಈಸಾಡುವುದೆ ಚೆಂದ.
ಶಿವನ ಪಾದವ ಹೊಂದುವುದೆ ಚೆಂದ.
ಈ ಮಾರ್ಗವ ಬಿಟ್ಟು, ಸಂಸಾರವೇ ಅಧಿಕವೆಂದು
ತನ್ನ ಹೆಂಡಿರು ಮಕ್ಕಳು ಸಂಪತ್ತು ಇವು [ತ]ನಗೆ ಶಾಶ್ವತವೆಂದು ತಿಳಿದು,
ಒಂದು ಕಾಸನಾದರೂ ಪರರಿಗೆ ಕೊಡದೆ,
ತಾನೇ ತಿಂದು, ನೆಲದಲ್ಲಿ ಮಡಗಿ,
ಕಡೆಗೆ ಯಮನ ಕೈಯಲಿ ಸಿಲ್ಕಿ
ನರಕ ಕೊಂಡದಲ್ಲಿ ಮುಳುಗೇಳುವುದೇ ನಿಶ್ಚಯ.
ಇಂತಹ ಅಂದಗೇಡಿಗಳ ಮುಖವ ನೋಡಲಾಗದೆಂದಾತ,
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು./3
ಅಂತರಂಗವ ಬಿಟ್ಟು ಮಂಡೆ ಬೋಳಾದ ಮೇಲೆ
ಅಂಗಕೆ ಚೆಂದವುಂಟೆ ಚೆಂದ ಅಲಂಕಾರವುಂಟೆ
ತಮ್ಮಂಗದ ಸಂಗವನರಿಯದೆ ಭಂಡರನೇನೆಂಬೆನೆಂದಾತ
ನಮ್ಮ ದಿಟ್ಟ ವೀರಾಧಿವೀರ
ನಿಜ ಭಕ್ತ ಅಂಬಿಗರ ಚವುಡಯ್ಯನು/4
ಅಂದ ಛಂದವ ಬಿಟ್ಟು, ಮಂಡೆ ಬೋಳಾದ ಮತ್ತೆ
ಅಂಗಕ್ಕೆ ಛಂದ ಅಲಂಕಾರವುಂಟೆ ? ತಮ್ಮಂಗದ ಸಂಗವನರಿಯದೆ ಲಿಂಗಸಂಗಿ ಎಂಬ
ಭಂಡರನೇನೆಂಬೆನೆಂದನಂಬಿಗ ಚೌಡಯ್ಯ./5
ಅಂದಾದಿಬಿಂದುವಿನೊಳೊಂದಿದ ಹುಟ್ಟು,
ಆ ಹುಟ್ಟನೆ ಹಿಡಿದು ಅಂದ ಚೆಂದದಲ್ಲಿ ತೊಳಸಿ ಆಡುತ್ತೈದಾರೆ ಜಗವೆಲ್ಲಾ!
ಅಂದಗೆಟ್ಟವರೆಲ್ಲಾ ಬಂದೇರಿ ಹರುಗೋಲ,
ಒಂದೆ ಹುಟ್ಟಿನಲ್ಲಿಳುಹುವೆನೆಂದಾತನಂಬಿಗ ಚೌಡಯ್ಯ./6
ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು,
ನಂಬಿದರೆ ಒಂದೆ ಹುಟ್ಟಲಿ ಕಡೆಯ ಹಾಯಿಸುವನಂಬಿಗರ ಚೌಡಯ್ಯ./7
ಅಂಬಿಗನು ಜಗದೊಳಗೆ ಇಂಬಿಲೋಲಾಡುವನು;
ತುಂಬಿದ ಸಾಗರದೊಳಗೆ ನೋಡಯ್ಯ.
ನಿಂದ ದೋಣಿಯನೇರಿದಂದಿನ ಹುಟ್ಟ
ಕಂಡವರಂದವನರಿದಾತ ತೊಳಸುತ್ತಿದ್ದನು.
ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು
ಶಿವನೊಂದೆ ಠಾವಿಗೊಯ್ದಿಳುಹುವೆನೆಂದನಂಬಿಗ ಚೌಡಯ್ಯ./8
ಅಂಬಿನ ಹಿಳಿಕಿನಲ್ಲಿ ಕಟ್ಟಿದ ವಿಹಂಗನ ಗರಿಯಂತೆ,
ತಾಗುವ ಮೊನೆಗಾಧಾರವಾಗಿ ದೂರ ಎಯಿದುವುದಕೆ ಸಾಗಿಸುವ ಗುಣ ತಾನಾಗಿ
ಕ್ರೀ ಅರಿವಿನ ಭೇದದ ನೆರಿಗೆಯ ಕಾಬನ್ನಕ್ಕ, ಅರಿವು ಕುರುಹು ಎರಡು ಬೇಕೆಂದನಂಬಿಗ ಚೌಡಯ್ಯ./9
ಅಖಂಡಪರಿಪೂರ್ಣ ನುಡಿಗೆಡೆಯಿಲ್ಲದ, ಎಡೆಗೆ ಕಡೆಯಿಲ್ಲದ,
ಏಕೋಭರಿತ ಲಿಂಗವು ತಾನಾಗಿದ್ದ ಬಳಿಕ,
ಮತ್ತೆ ಲಿಂಗವು ಹೋಯಿತ್ತು, ಇದ್ದಿತ್ತೆಂದಾಡಿಕೊಂಡ
ಸೂತಕದ ಯೋಗಿಭ್ರಮಿತರ ಮಾತ ಕೇಳಲಾಗದು,
ಅ[ದ]ಂತಿರಲಿ, ಅದು ಎಂತಿದ್ದುದಂತೆ.
ಅದಕ್ಕೆ ಕ್ರೀಯಿಲ್ಲ, ನಿಃಕ್ರಿಯೆ ಒಡಲು ಆಯಿತ್ತಾಗಿ.
ಅದನಂತಿಂತೆಂದು ದೂಷಿಸಿ ನುಡಿವ ಅನಾಚಾರಿಗಳಿಗೆ
ಲಿಂಗವೆಲ್ಲಿಯದೊ ? ನಿಜವೆಲ್ಲಿಯದೊ ?
ಅವರು ಲಿಂಗಕ್ಕೆ ದೂರ, ಅವರು ತಮ್ಮ ತಾವರಿಯದೆ ಕೆಟ್ಟರೆಂದಾತನಂಬಿಗ ಚೌಡಯ್ಯ./10
ಅಗ್ನಿ ದಿಟವೆಂದಡೆ ತಾ ಹುಸಿ, ಕಾಷ್ಠವಿಲ್ಲದೆ.
ಕಾಷ್ಠದಲ್ಲಿ ಅಡಗಿ ಸುಡದಿಪ್ಪ ಭೇದವನರಿತಡೆ,
ಪ್ರಾಣಲಿಂಗಿಯೆಂದೆಂಬೆನೆಂದನಂಬಿಗ ಚೌಡಯ್ಯ./11
ಅಜಾತನನೊಲಿಸದೊಡೆ ಅದೇತರ ಮಂತ್ರ, ಅದೇತರ ಆಗಮ ಹೇಳಿರೋ,
ಆಚಾರ್ಯ ಕೊಟ್ಟ ಸಲಾಕಿ ಯಾತರಲ್ಲಿ ನಚ್ಚುವಿರಿ?
ಅದಾವ ಮುಖದಲ್ಲಿ, ಲಿಂಗ ಬಂದಿಪ್ಪುದು ?
ರೂಪಿಲ್ಲದಾತ ನಿಮ್ಮ ಮಾತಿಂಗೆ ಬಂದಡೆ,
ಅದೇತರ ಮಾತೆಂದನಂಬಿಗ ಚೌಡಯ್ಯ./12
ಅಡವಿಯ ತೊಪ್ಪಲ ತರತರ ತಂದು ತಿಂದು
ಒಡಲ ದಂಡಿಸಿಕೊಂಡು,
ಪಡೆ, ಗವಿಯೊಳಗೆ ತಪಸ್ಸಿದ್ದೇವೆಯೆಂದು
ಕಡು ಹೆಮ್ಮೆಯಲ್ಲಿ ನುಡಿವ ಅಣ್ಣಗಳು ನೀವು ಕೇಳಿರೋ.
ಷಡುರಸಂಗಳು ಹುಟ್ಟಿದವು ಶಿವನ ಕರುಣರಸದಲ್ಲಿ,
ಆ ರುಚಿಗಳ ಸುಖಮಂ ಪಡೆದವುದಕ್ಕೆ
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಪದಾರ್ಥವ ಹಿಡಿದ ಭಕ್ತನ ಮನೆಯಲ್ಲಿ
ಗುರುಲಿಂಗಜಂಗಮಕ್ಕೆ ನೀಡಿ ಮಾಡುವ
ಭಕ್ತಿಪದಾರ್ಥವಾದ ಷಡುರುಚಿಯ ಕೊಂಬುದಕ್ಕೆ
ನಿಮ್ಮಲ್ಲಿಯೆ ಷಡ್ವಿಧಲಿಂಗಂಗಳುಂಟು.
ಅವ ನೋಡಿ ಎಚ್ಚತ್ತು ಸವಿಸವಿದರ್ಪಿಸಬಲ್ಲಡೆ ಮಹಾಮಹಿಮ,
ತಾನೇನ ಮಾಡಲು ಜಡನಲ್ಲ, ಅಜಡನು ತಾನೆಂದಾತನಂಬಿಗರ ಚೌಡಯ್ಯ./13
ಅಡವಿಯ ಹೊಗಿಸಿತ್ತು, ಹುಡುಕುನೀರಲದ್ದಿತ್ತು,
ಜಡೆಗಟ್ಟಿ ಭಸ್ಮವ ತೊಡೆಸಿತ್ತು, ಉಡೆವುಚ್ಚುಗೊಳಿಸಿತ್ತು,
ಹಿಡಿದೊತ್ತಿ ಕೇಶವ ಕೀಳಿಸಿತ್ತು, ಪಡಿಪುಚ್ಚಗೊಳಿಸಿತ್ತು ಊರೊಳಗೆಲ್ಲ.
ಈ ಬೆಡಗಿನ ಮಾಯೆಯ
ಬಡಿಹಾರಿ ಸಮಯಿಗಳ ನುಡಿಗೆ
ನಾಚುವೆನೆಂದನಂಬಿಗ ಚೌಡಯ್ಯ./14
ಅಡವಿಯೊಳಗರಸುವಡೆ ಸಿಡಿಗಂಟಿ ತಾನಲ್ಲ.
ಮಡುವಿನೊಳಗರಸುವಡೆ ಮತ್ಸ್ಯಮಂಡೂಕನಲ್ಲ.
ತಪಂಬಡುವಡೆ ವೇಷಕ್ಕೆ ವೇಳೆಯಲ್ಲ.
ಒಡಲ ದಂಡಿಸುವಡೆ ಕೊಡುವ ಸಾಲಿಗನಲ್ಲ.
ಅಷ್ಟತನುವಿನೊಳಗೆ ಹುದುಗಿದ್ದ ಲಿಂಗವ
ನಿಲುಕಿ ನೋಡಿಯೆ ಕಂಡನಂಬಿಗ ಚೌಡಯ್ಯ./15
ಅಡ್ಡಬಿದ್ದು ಶಿಷ್ಯನ ಮಾಡಿಕೊಂಬ ದಡ್ಡ ಪ್ರಾಣಿಗಳನೇನೆಂಬೆನಯ್ಯ.
ಏನೇನೂ ಅರಿಯದ ಎಡ್ಡ ಮಾನವರಿಗೆ ಉಪದೇಶವ ಮಾಡುವ
ಗೊಡ್ಡ ಮಾನವನ ಮುಖವ ತೋರದಿರಯ್ಯಾ.
ಅದೇನು ಕಾರಣವೆಂದಡೆ: ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ.
ಅವನ ಪಂಚೇಂದ್ರಿಯಂಗಳು, ಸಪ್ತವ್ಯಸನಂಗಳು, ಅಷ್ಟಮದಂಗಳೆಂಬ
ಖೊಟ್ಟಿ ಗುಣಂಗಳ ಬಿಡಿಸಲಿಲ್ಲ.
ಸೂತಕ ಪಾತಕಂಗಳ ಕೆಡಿಸಿ, ಮೂರು ಮಲಂಗಳ ಬಿಡಿಸಿ
ಮುಕ್ತಿಪಥವನರುಹಲಿಲ್ಲ.
ಮಹಾಶೂನ್ಯ ನಿರಾಳ ನಿರಂಜನಲಿಂಗವ
ಕರ-ಮನ-ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ.
ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆ ಪ್ರಮಥರು ಮೆಚ್ಚುವರೆ ?
ಇಂತಪ್ಪ ಗುರು ಶಿಷ್ಯರೀರ್ವರು ಅಜ್ಞಾನಿಗಳು.
ಅವರು ಇಹಲೋಕ ಪರಲೋಕಕ್ಕೆ ಹೊರಗೆಂದಾತನಂಬಿಗ ಚೌಡಯ್ಯ./16
ಅತ್ಯಾಹಾರವನುಂಡು ಹೊತ್ತುಗಳೆದು
ಹೋಕಿನ ಮಾತನಾಡುತ್ತ
ಚಿತ್ತ ಬಂದ ಪರಿಯಲ್ಲಿ ವ್ಯವಹರಿಸಿಕೊಳ್ಳುತ್ತ,
ಮತ್ತೆ ಶಿವನ ನೆನೆದೆನೆಂದಡೆ ಶಿವನ ವರ ಎತ್ತಲೆಂದರಿಯದೆಂದಾತ,
ನಮ್ಮಂಬಿಗರ ಚೌಡಯ್ಯ./17
ಅದ್ವೈತವ ನುಡಿದು
ಅಬದ್ಧ ಅಂಗಕ್ಕಾಗಿ ಬದ್ಧರ ಬಾಗಿಲಲ್ಲಿ ಹೊದ್ದುಕೊಂಬನರಫಲ್ಲಾ ಎಂದು
ಮತ್ತೆ ಅದ್ವೈತಕ್ಕೆ ಕದ್ದೆಹತನವೆ ?
ಇಂತೀ ಅಬದ್ಧರ ಕಂಡು ಮುನ್ನವೆ ಹೊದ್ದಬೇಡ, ಎಂದನಂಬಿಗ ಚೌಡಯ್ಯ/18
ಅನಾದಿಪರಶಿವನಿಂದ ಸಾಕಾರಲೀಲೆಯ ಧರಿಸಿ, ಮರ್ತ್ಯಕ್ಕವತರಿಸಿ,
ಶ್ರೀಗುರುಲಿಂಗಜಂಗಮದಿಂದ ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಪಡೆದು,
ಲಿಂಗಾಂಗಸಮರಸಾನಂದವನರಿದು,
ತನ್ನ ಸ್ವಸ್ವರೂಪು ನಿಲುಕಡೆಯ ತಿಳಿದು,
ಸತ್ಯ-ಸದಾಚಾರ-ಸನ್ಮಾರ್ಗದ ಗೊತ್ತನರಿದು,
ಪಂಚಸೂತಕಪಾತಕ, ಅರುವೈರಿ, ಅಷ್ಟಮದಂಗಳಡಿಮೆಟ್ಟಿ,
ಆಚರಿಸುವ ಭಕ್ತಗಣಂಗಳು
ಇಂತಿಷ್ಟು ಸತ್ತುಚಿತ್ತಾನಂದನಿತ್ಯಪರಿಪೂರ್ಣ ಅವಿರಳಾನಂದ
ನಿಜಾಚರಣೆಯನರಿಯದ
ಗುರುವಾಗಲಿ, ಲಿಂಗವಾಗಲಿ, ಜಂಗಮವಾಗಲಿ,
ಶರಣನಾಗಲಿ, ಭಕ್ತನಾಗಲಿ, ಪ್ರಸಾದಿಯಾಗಲಿ,
ಅವರಿಂದ ಪಾದೋದಕಪ್ರಸಾದವ ಕೊಂಡರೆ
ಯಮದಂಡಣೆಗೊಳಗು ನೋಡಾ,
ಅಂತ್ಯದಲ್ಲಿ ಠೌರವ, ಎಂದಾತನಂಬಿಗರ ಚೌಡಯ್ಯ./19
ಅಯ್ಯ! ಅಂಗಾಚಾರವುಳ್ಳ ಶಕ್ತಿ-ಭಕ್ತ-ಜಂಗಮದ ಗೃಹದಲ್ಲಿ
ಲಿಂಗಾಚಾರವುಳ್ಳ ಶಿವಭಕ್ತಿ-ಶಿವಭಕ್ತ-ಶಿವಜಂಗಮವು ಜಿಹ್ವಾಲಂಪಟಕಿಚ್ಛೈಸಿ
ಅವರ ಗೃಹದಲ್ಲಿ ಲಿಂಗಾರ್ಚನೆ-ಲಿಂಗಾರ್ಪಣವ ಮಾಡಲಾಗದು.
ಇದ ಮೀರಿ ಅಂಗಭೋಗಿಗಳ ಸಮಪಾಕ, ಸಮಭಾಜನ, ಸಮಪಂಕ್ತಿ,
ಶಿವಮಂತ್ರ, ಶಿವಪ್ರಸಾದ, ಶಿವಾನುಭಾವಗೋಷ್ಠಿಯ ಮಾಡಿದಡೆ
ಬಸವ ಮೊದಲಾದ ಸಮಸ್ತಗಣಸಾಕ್ಷಿಯಾಗಿ
ಶಿವಲೋಕ, ಶಾಂಭವಲೋಕ, ರುದ್ರಲೋಕ, ದೇವಲೋಕ, ಮತ್ರ್ಯಲೋಕ
ಮೊದಲಾದ ಸಮಸ್ತಲೋಕಪಾವನಾರ್ಥ ಮಹಾಗಣಂಗಳ ಸಮಯಾಚಾರಕ್ಕೆ
ಹೊರಗೆಂದಾತನಂಬಿಗರ ಚೌಡಯ್ಯನು./20
ಅಯ್ಯ! ಅಚ್ಚಪ್ರಸಾದಿ, ನಿಚ್ಚಪ್ರಸಾದಿ,
ಸಮಯಪ್ರಸಾದಿಗಳೆಂದು ಒಪ್ಪವಿಟ್ಟು ನಿಚ್ಚ ನಿಚ್ಚ ನುಡಿವ ಅಣ್ಣಗಳಿರ!
ನೀವು ಅಚ್ಚಪ್ರಸಾದ, ನಿಚ್ಚಪ್ರಸಾದ, ಸಮಯಪ್ರಸಾದವಾದ ವಿಚಾರವ ಹೇಳಿರಣ್ಣ! ಅರಿಯದಿರ್ದಡೆ ಕೇಳಿರಣ್ಣ!
ಸಮಸ್ತಪದಾರ್ಥವ ಗುರುಲಿಂಗಜಂಗಮದಿಂದ ಪವಿತ್ರವ ಮಾಡಿ
ಅವರವರ ಪದಾರ್ಥವ ಅವರವರಿಗೆ ವಂಚಿಸದೆ
ನಿರ್ವಂಚಕತ್ವದಿಂದ ಸಮರ್ಪಿಸುವದೆ ತ್ರಿವಿಧಪ್ರಸಾದಸ್ವರೂಪು ನೋಡ!
ಕ್ರಿಯಾಮುಖದಲ್ಲಿ ಇಷ್ಟಲಿಂಗಕ್ಕೆ ಸಮರ್ಪಿಸುವ
ಪೃಥ್ವಿಸಂಬಂಧವಾದ, ಅಷ್ಟತನುಗಳಿಂದುದಯವಾದ,
ಗಂಧರಸರೂಪುಸ್ಪರ್ಶನಶಬ್ದ ಮೊದಲಾದ ಸಮಸ್ತಪದಾರ್ಥಂಗಳ
ಆ ಕ್ರಿಯಾಗುರುಲಿಂಗಜಂಗಮಕ್ಕೆ ಸಮರ್ಪಿಸಿ,
ಅವರೊಕ್ಕುಮಿಕ್ಕ ರೂಪುರುಚಿತೃಪ್ತಿಪ್ರಸಾದವ ಭೋಗಿಸುವಾತನೆ
ತ್ರಿವಿಧಪ್ರಸಾದಿ ನೋಡ!
ಜ್ಞಾನಮುಖದಲ್ಲಿ ಪ್ರಾಣಲಿಂಗಕ್ಕೆ ಸಮರ್ಪಿಸುವ ಮನಸಂಬಂಧವಾದ ಸ್ತ್ರೀಯಳೆಂಬ
ರೂಪುರುಚಿತೃಪ್ತಿ ಮೊದಲಾದ ಪದಾರ್ಥಂಗಳ
ಸತ್ಕ್ರೀಯಾಗುರುಲಿಂಗಜಂಗಮವನೆ ಜ್ಞಾನಗುರುಲಿಂಗಜಂಗಮವೆಂದು ಭಾವಿಸಿ
ತನ್ನ ವಿವಾಹಸಮಯದಲ್ಲಿ ಗುರುಲಿಂಗಜಂಗಮಕ್ಕೆ ಭಕ್ತಗಣಸಾಕ್ಷಿಯಾಗಿ
ತನ್ನ ಕೂಟದ ಶಕ್ತಿಯ ಗುರುಲಿಂಗಜಂಗಮಕ್ಕೆ ಕೊಡುವ ಭಕ್ತಿ ಮೊದಲಾಗಿ,
ಆ ಶಕ್ತಿಯರ ಅಂತರಂಗದಲ್ಲಿ ಬೆಳಗುವ ಪರಂಜ್ಯೋತಿರ್ಲಿಂಗವ ಬಹಿಷ್ಕರಿಸಿ
ಸದ್ಗುರುಮುಖದಿಂ ಹಸ್ತಮಸ್ತಕಸಂಯೋಗವ ಮಾಡಿಸಿ,
ಆ ಲಿಂಗಾಂಗಕ್ಕೆ ಪಾಣಿಗ್ರಹಣವ ಮಾಡಿಸಿ, ಮಂತ್ರದೀಕ್ಷೆಯ ಬೋಧಿಸಿ,
ಪಾದೋದಕಪ್ರಸಾದವ ಕೊಡಿಸಿ,
ಸದಾಚಾರ-ಸದ್ಭಕ್ತಿ-ಸತ್ಕ್ರೀಯಾ-ಸಮ್ಯಜ್ಞಾನವ ಬೋದಿಸಿ,
ಶಕ್ತಿಭಾರವಳಿದು ಕ್ರಿಯಾಶಕ್ತಿಯರೆಂದು ಭಾವಿಸಿ,
ಪ್ರಥಮದಲ್ಲಿ ಗುರುಲಿಂಗಜಂಗಮಕ್ಕೆ ಆ ಕ್ರಿಯಾಶಕ್ತಿಯ ಭಕ್ತಗಣಸಾಕ್ಷಿಯಾಗಿ
ಪ್ರಮಾಣದಿಂದ ಕಂಕಣವ ಕಟ್ಟಿ,
ಶರಣಾರ್ಥಿಯೆಂದು ಒಪ್ಪದಿಂದ ಒಪ್ಪಿಸಿ,
ಅದರಿಂ ಮೇಲೆ, ಆ ಗುರುಲಿಂಗಜಂಗಮದ ಕರುಣವ ಹಡೆದು,
ಆ ಕ್ರಿಯಾಶಕ್ತಿಯ ಭಕ್ತಗಣಮಧ್ಯದಲ್ಲಿ ಕೂಡಿ, ಸೆರಗ ಹಿಡಿದು
ಗಣಪದಕ್ಕೆ ಶರಣೆಂದು ವಂದಿಸಿ
ಅವರ ಕರುಣವ ಹಾರೈಸಿ ನಿಜಭಕ್ತಿಜ್ಞಾನವೈರಾಗ್ಯವ ಬೆಸಗೊಂಡು
ಸಚ್ಚಿದಾನಂದಲಿಂಗನಿಷ್ಠಾಪರತ್ವದಿಂದ ಗುರುಲಿಂಗಜಂಗಮಶಕ್ತಿ ಮೊದಲಾಗಿ
ಗುರುಭಕ್ತಿಯಿಂದ ಆಚರಿಸುವರೆ ತ್ರಿವಿಧಪ್ರಸಾದಿಗಳು ನೋಡ!
ಮಹಾಜ್ಞಾನಮುಖದಲ್ಲಿ ಭಾವಲಿಂಗಕ್ಕೆ ಸಮರ್ಪಿಸುವ
ಧನಸಂಬಂಧವಾದ ದ್ರವ್ಯವನ್ನು
ಆ ಕ್ರಿಯಾಜ್ಞಾನಯುಕ್ತವಾದ ಗುರುಲಿಂಗಜಂಗಮವನೆ
ಮಹಾಜ್ಞಾನಗುರುಲಿಂಗಜಂಗಮವೆಂದು ಭಾವಿಸಿ,
ತಾ ಧರಿಸುವಂಥ ವಸ್ತ್ರಾಭರಣರಕ್ಷೆ ಮೊದಲಾಗಿ ಪ್ರತಿಪದಾರ್ಥವ
ವಿಚಾರಮುಖದಲ್ಲಿ ಪಾತ್ರಾಪಾತ್ರವ ತಿಳಿದು ಸಮರ್ಪಿಸಿ, ನಿಜನೈಷ್ಠೆಯಿಂದ,
ಪರದ್ರವ್ಯವ ತಂದು ಗುರುಲಿಂಗಜಂಗಮವ ಒಡಗೂಡಿ ಋಣಭಾರಕ್ಕೊಳಗಾಗದೆ ನಡೆ ನುಡಿ ಒಂದಾಗಿ ಆಚರಿಸುವರೆ ತ್ರಿವಿಧಪ್ರಸಾದಿಗಳು ನೋಡ!
ಈ ವಿಚಾರವ ಸದ್ಗುರುಮುಖದಿಂದ ಬೆಸಗೊಂಡು ಆಚರಿಸುವರೆ
ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ ನೋಡ!
ಈ ವಿಚಾರವನರಿಯದೆ, ಶ್ರುತಿ-ಗುರು-ಸ್ವಾನುಭಾವವ ತಿಳಿಯದೆ,
ವಾಚಾಳಕತ್ವದಿಂದ ನುಡಿದು, [ತಾವು] ಗುರುಲಿಂಗಜಂಗಮಪ್ರಸಾದಿಗಳೆಂಬ
ಮೂಳರ ಬಾಯ ಮೇಲೆ ಗಣಂಗಳು ಮೆಟ್ಟಿದ ಚಮ್ಮಾವಿಗೆಯ ತೆಗೆದುಕೊಂಡು ಪಟಪಟನೆ ಹೊಡೆಯೆಂದಾತನಂಬಿಗರ ಚೌಡಯ್ಯನು
ನೋಡ, ಸಂಗನ ಬಸವೇಶ್ವರ./21
ಅಯ್ಯ! ಪಾಷಾಣಕ್ಕೆ ಗಿರಿ ಸವೆದವು.
ಪತ್ರೆಗೆ ತರು ಸವೆದವು.
ಸಪ್ತಸಾಗರಂಗಳು ಮಜ್ಜನಕ್ಕೆ ಸವೆದವು.
ಅಗ್ನಿ ಧೂಪಕ್ಕೆ ಸವೆಯಿತ್ತು.
ವಾಯು ಕಂಪಿತಕ್ಕೆ ಸವೆಯಿತ್ತು
ಉಘೆ! ಚಾಂಗು ಭಲಾ! ಎಂಬ ಶಬ್ದ ಸವೆಯಿತ್ತು. ಎನ್ನಗಿನ್ನೆಂತೊ,
ಉಮೇಶನ ಶರಣರು ಮಹಮನೆಯಲ್ಲಿ ಶಿವಲಿಂಗಾರ್ಚನೆಗೆ ಕುಳ್ಳಿದ್ದಡೆ, ನಾನವರ ಪಾದರಕ್ಷೆಯ ಕಾಯ್ದಕೊಂಡಿದ್ದೇನೆಂದನಂಬಿಗ ಚೌಡಯ್ಯ./22
ಅಯ್ಯ! ಶ್ರೀಗುರುಲಿಂಗಜಂಗಮದ ವೇಧಾಮಂತ್ರಕ್ರಿಯಾದೀಕ್ಷೆಗೆ ಹೊರಗಾದ
ಭುವನದ ಶೈವದೈವದಾರ್ಚನೆ ಪೂಜೆಯ ಮಾಡಿ,
ಅದರುಚ್ಛಿಷ್ಟವ ಭುಂಜಿಸುವದಂಗಾಚಾರ.
ಅದನುಳಿದು ಶುದ್ಧಸಿದ್ಧಪ್ರಸಿದ್ಧಪ್ರಸಾದಸ್ವರೂಪವಾದ
ಅನಾದಿಗುರುಲಿಂಗಜಂಗಮದ ಅರ್ಚನೆ ಪೂಜೆಯ ಮಾಡಿ
ಕಿಂಕರ್ವಾಣದಿಂದ ಅವರ ಒಕ್ಕುಮಿಕ್ಕ ಪ್ರಸಾದವ ಹಾರೈಸುವುದೆ ಲಿಂಗಾಚಾರ.
ಈ ಭೇದವ ತಿಳಿದು ಪಂಚಾಚಾರ ಆಚರಣೆಗೆ ತಂದು,
ಸಪ್ತಾಚಾರವ ಸಂಬಂಧವಿಟ್ಟು,
ಅಷ್ಟಾವರಣದ ಕಲೆನೆಲೆಗಳ ಒಳಗು-ಹೊರಗು ಎನ್ನದೆ,
ಸದ್ಗುರುಮುಖದಿಂದ ಆಚರಣೆ-ಸಂಬಂಧವ ತಿಳಿದು,
ಸದ್ಭಕ್ತಿ-ಸಮ್ಯಜ್ಞಾನ-ವೈರಾಗ್ಯ-ಷಟ್ಸ್ಥಲಮಾರ್ಗವ ಹಿಡಿದು,
ನಿಜಾಚರಣೆಯಲ್ಲಿ ಆಚರಿಸುವರೆ ಶಿವಶಕ್ತಿ, ಶಿವಭಕ್ತ, ಶಿವಜಂಗಮವಲ್ಲದೆ,
ಉಳಿದ ವೇಷಧಾರಿಗಳೆಲ್ಲ ಎನ್ನೊಡೆಯ ಪ್ರಮಥಗಣಾಚಾರಕ್ಕೆ
ಹೊರಗೆಂದಾತನಂಬಿಗರ ಚೌಡಯ್ಯನು./23
ಅಯ್ಯಾ ಆಚಾರವುಳ್ಳಕಾಂಚೀಪಟ್ಟಣದಲ್ಲಿ
ಒಂದು ಗಂಡುಕತ್ತೆಯು ಸತ್ತುಬಿದ್ದಿರಲು,
ಕತ್ತೆಯಂ ಕೈಲಾಸದ ಪಾಲುಮಾಡಬೇಕೆಂದಿದ್ದರಯ್ಯಾ,
ಯಾರ್ಯಾರು ಎಂದರೆ: ಶೆಟ್ಟಿಗಾದರಿ, ಪೃಥ್ವಿಶೆಟ್ಟಿ, ಕೋರಿಶೆಟ್ಟಿ, ಬಳೇಶೆಟ್ಟಿ,
ನಾಡನಾಲಗೆ, [ಮಿಂಡ]ಗುದ್ದಲಿ, ಬಡವ, ಬೋವಿಯಂತಪ್ಪ
ಎಂಟು ಕಟ್ಟೆಯವರು ಕೂಡಿಕೊಂಡು
ಆ ಕತ್ತೆಯಂ ಮಂಚದ ಮೇಲೆ ಇಟ್ಟುಕೊಂಡು
ಕಮ್ಮೆಣ್ಣೆ, ಕಸ್ತೂರಿ, ಗಂಧ, ಪುನುಗು, ಜವ್ವಾಜಿ,
ಬುಕ್ಕಹಿಟ್ಟು, ಊದಿನಕಡ್ಡಿ – ಇಂತಪ್ಪ ಅಷ್ಟಗಂಧದಿಂದ
ಮೇಳ ಭಜಂತ್ರಿಯಿಂದ ಒಯ್ದು,
ನರಿ ಪಾಲು ಮಾಡಿ ಬಂದರಯ್ಯಾ.
ಛೇ, ಛೇ ಎಂದು ಕಣ್ಣಯ್ಯಗಳ ಎಡದ ಪಾದರಕ್ಷೆಯಂ ತೆಗೆದುಕೊಂಡು
ಅವರ ಮುದ್ದುಮುಖದ ಮೇಲೆ ಕುಟ್ಟಿದಾತನೆ ನಮ್ಮ ಅಂಬಿಗರ ಚೌಡಯ್ಯನೆಂಬೊ ಶಿವಶರಣನು./24
ಅಯ್ಯಾ, ನಾವು ಪರಮವಿರಕ್ತರು,
ಪಟ್ಟದ ಅಯ್ಯನವರು, ಚರಮೂರ್ತಿಗಳು, ಪರದೇಶಿಗಳು ಎಂದು
ಶಂಖ ಗಿಳಿಲು ದಂಡಾಗ್ರ ಎಂಬ ಬಿರುದು ಪಿಡಿದು,
ಕಾವಿ ಕಾಷಾಯಾಂಬರವ ಹೊತ್ತು,
ಸರ್ವಕಾರ್ಯದಲ್ಲಿ ಶ್ರೇಷ್ಠರೆಂದು ಗರ್ವದಲ್ಲಿ ಕೊಬ್ಬಿ,
ಕಾಮನಾಟದಲ್ಲಿ ಕಲಕಿ, ಮನಸ್ಸಿನಲ್ಲಿ ದುರ್ಗುಣವನ್ನಿಟ್ಟುಕೊಂಡು
ಮಾತಿನಲ್ಲಿ ನೀತಿಯ ಸೇರಿಸುತ್ತ ಕಪಟದಲ್ಲಿ ಚರಿಸುವಂತಹ
ತೊನ್ನ ಹೊಲೆಮಾದಿಗರ ಸಂಗಮಾಡಲಾಗದು,
ಅವರ ಪ್ರಸಂಗವ ಕೇಳಲಾಗದು.
ಅದೇನು ಕಾರಣವೆಂದಡೆ: ಗುರುಲಿಂಗಜಂಗಮವಾದ ಬಳಿಕ
ಅಷ್ಟಾವರಣದಲ್ಲಿ ನಿಷ್ಠಾಪರವಾಗಿರಬೇಕು.
ಪರಧನ ಪರಸತಿಯರ ಹಿಡಿಯೆನೆಂಬ ನೇಮದಲ್ಲಿ ಬಲ್ಲಿದರಾಗಿರಬೇಕು.
ಶಿವಭಕ್ತರಾದವರ ಭವವ ಗೆಲಿಸಿ ಮೋಕ್ಷವ ಹೊಂದಿಸಬೇಕು.
ಶಿವಲಾಂಛನವ ಹೊತ್ತ ಬಳಿಕ ಶಿವನಂತಿರಬೇಕು
ಬರಿದೆ, ನಾನು ಮಾಹೇಶ್ವರನೆಂದು, ನಾನು ಶಿವಭಕ್ತನೆಂದು
ತನ್ನ ಹೃನ್ಮಂದಿರದಲ್ಲಿ ನೆಲಸಿದ ಚಿನ್ಮಯಜಂಗಮಲಿಂಗಕ್ಕೆ
ತನು-ಮನ-ಧನವೆಂಬ ತ್ರಿವಿಧಪದಾರ್ಥವನರ್ಪಿಸಿ,
ತ್ರಿವಿಧಪ್ರಸಾದವ ಗರ್ಭೀಕರಿಸಿಕೊಂಡು, ಪ್ರಸನ್ನಪ್ರಸಾದವ ಸ್ವೀಕರಿಸಿ
ಪರತತ್ವಪ್ರಸಾದದಲ್ಲಿ ತಾನು ತಾನಾಗಲರಿಯದೆ
ಉಚ್ಚಂಗಿದುರ್ಗಿಗೆ ಬಿಟ್ಟ ಪೋತರಾಜನಂತೆ
ಮೂರು ಮೂರು ಜಡೆಗಳ ಬಿಟ್ಟು,
ಆಡಿನೊಳಗಿರುವ ಹಿರಿಯ ಹೋತಿನಂತೆ
ಮೊಳ ಮೊಳ ಗಡ್ಡವ ಬಿಟ್ಟು,
[ಡಂ]ಬ ಜಾತಿಗಾರನಂತೆ ವೇಷವ ತೊಟ್ಟು,
ಮೀಸೆಯ ಬೋಳಿಸಿಕೊಂಡು, ಕೈಪವ ಧರಿಸಿ,
ಸಂಸ್ಕೃತ ಗೀರ್ವಾಣಭಾಷೆಯ ಕಲಿತು,
ಕಾಕ ಕುಟಿಲ ಕುಹಕದ ಗಾಳಿಪೂಜೆಯಿಂದ ಬಂದ
ಸುಡಗಾಡು ಸಿದ್ಧಯ್ಯಗಳಂತೆ,
ಗಿಡಮೂಲಿಕೆಗಳು ತಂತ್ರ ಮಂತ್ರ ಯಂತ್ರದ ಭಾಷೆಗಳ ಕಲಿತುಕೊಂಡು
ಪುರಜನರ ಮೆಚ್ಚಿಸಬೇಕೆಂದು
ಅಯ್ಯಾ, ನಾವು ಕೆರೆ ಭಾವಿಯನಗೆಸಬೇಕೆಂದು,
ಮಠ ಗುಡಿಯ ಕಟ್ಟಿಸಬೇಕೆಂದು,
ಮಾನ್ಯದಲಿ ಬಿಲ್ವಗಿಡಗಳ ಹಚ್ಚಬೇಕೆಂದು,
ಮದುವೆ ಅಯ್ಯಾಚಾರವ ಮಾಡಬೇಕೆಂದು,
ಅನ್ನಕ್ಷೇತ್ರ ಅರವಟ್ಟಿಗೆಯ ಇಡಿಸಬೇಕೆಂದು,
ಪುರಾಣಗಳ ಹಚ್ಚಿಸಬೇಕೆಂದು,
ಇಂತಪ್ಪ ದುರಾಸೆಯ ಮುಂದುಗೊಂಡು ನಾನಾ ದೇಶವ ತಿರುಗಿ,
ಅರಸರ ಮದದಂತೆ ಗರ್ವದಿಂದ ಹೆಚ್ಚಿ,
ಹೇಸಿ ಹೊಲೆ ಮಾದಿಗರ ಕಾಡಿ ಬೇಡಿ,
ಹುಸಿಯನೆ ಬೊಗಳಿ ಒಬ್ಬನ ಒಲವ ಮಾಡಿ[ಕೊಂ]ಡು,
ವ್ಯಾಪಾರ ಮರ್ಯಾದೆಯಲ್ಲಿ ಪೇಟೆಯಲ್ಲಿ ಕುಳಿತು
ಅನಂತ ಮಾತುಗಳನಾಡುತ್ತ,
ಸೆಟ್ಟಿ ಮುಂತಾದ ಅನಂತ ಕಳ್ಳ ಹಾದರಗಿತ್ತಿಯ ಮಕ್ಕಳ ಮಾತಿನಿಂದೊಲಿಸಿ,
ಅವರು ಕೊಟ್ಟಡೆ ಹೊಗಳಿ, ಕೊಡದಿರ್ದಡೆ ಬೊಗಳಿ,
ಆ ಭ್ರಷ್ಟ ಹೊಲೆಮಾದಿಗರು ಕೊಟ್ಟ ದ್ರವ್ಯಗಳ ತೆಗೆದುಕೊಂಡು ಬಂದು
ಕಡೆಗೆ ಚೋರರು ಒಯ್ದರೆಂದು ಮಠದೊಳಗೆ ಮಡಗಿಕೊಂಡು
ಪರಸ್ತ್ರೀಯರ ಹಡಕಿ ಯೋನಿಯೊಳಗೆ ಇಂದ್ರಿಯ ಬಿಟ್ಟು,
ಕಾಮಕ್ರೋಧದಲ್ಲಿ ಮುಳುಗಿ ಮತಿಗೆಟ್ಟು,
ಶಿವಪಥಕ್ಕೆ ದೂರಾಗಿ, ದುರಾಚಾರವ ಆಚರಿಸಿ,
ನಡೆನುಡಿಗಳ ಹೊರತಾಗಿ, ವ್ಯರ್ಥ ಹೊತ್ತುಗಳೆದು,
ಸತ್ತುಹೋಗುವ ಜಡದೇಹಿ ಕಡುಪಾತಕ ಕತ್ತೆ ಹಡಿಕರಿಗೆ
ಪರಮ ನಿರಂಜನ ಜಂಗಮಲಿಂಗದೇವರೆಂದು ಕರೆತಂದು,
ಪಾದತೀರ್ಥ ಪ್ರಸಾದವ ತೆಗೆದುಕೊಂಬುವರಿಗೆ
ಇಪ್ಪತ್ತೊಂದು ಯುಗಪರಿಯಂತರ ನರಕಕೊಂಡದಲ್ಲಿಕ್ಕುವ.
ಇಂತಪ್ಪ ಜಂಗಮವನು ಪೂಜೆ ಮಾಡುವಂತಹ ಶಿವಭಕ್ತನ
ಉಭಯತರ ಮೂಗ ಸೀಳಿ ಮೆಣಸಿನ ಹಿಟ್ಟು ತುಪ್ಪವ ತುಂಬಿ,
ಪಡಿಹಾರಿ [ಉತ್ತಣ]ಗಳೆಡದ ಪಾದುಕೆಯಿಂದ
ಪಡಪಡನೆ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು./25
ಅರಳೆಯ ಮರನು ವಿಷ್ಣುಕಾಂತಿ ಬನ್ನಿ ಮುತ್ತಕ ತೊಳಚಿ
ಹರಿ ಹರಿಯೆಂದು ಹೊಡ[ವ]ಡುವಿರಿ.
ಎಲ್ಲಿ ಭೋ! ಎಲ್ಲಿ ಭೋ!
ನಿಮ್ಮ ನಿಮ್ಮ ಹೊಡವಡುವ ದೈವಗಳೆಲ್ಲಾ ಗಿಡುಮರನಾಗಿ ಹೋದವಲ್ಲಾ!
ನಿಮ್ಮ ನಡೆಯೆಲ್ಲಾ ಅನಾಚಾರ, ನುಡಿಯೆಲ್ಲಾ ಶಿವದ್ರೋಹ! ಇವದಿರ ಗಡಣ ಬೇಡೆಂದನಂಬಿಗ ಚೌಡಯ್ಯ./26
ಅರಿದೆಹೆನೆಂಬನ್ನಬರ ಅಸಗೆ ನೀರಡಿಸಿ ಸತ್ತಂತಾಯಿತ್ತು.
ಕಟ್ಟೋಗರವ ಹೊತ್ತು ಉಂಡೆಹೆ ಉಂಡೆಹೆನೆಂದು
ಆಪ್ಯಾಯನವಡಸಿ ಸತ್ತಂತಾಯಿತ್ತು.
ಅರಿದೆಹೆನೆಂದು ಕೇಳಿಹೇಳಿಹೆನೆಂಬನ್ನಬರ
ಆತನು ಶಿಲೆಯ ರೇಖೆಯೆ ? ಬಯಲ ಬ್ರಹ್ಮವೆ ?
ತಾನಳಿವುದಕ್ಕೆ ಮುನ್ನವೆ ಅರಿದು ಕೂಡಬೇಕೆಂದನಂಬಿಗ ಚಾಡಯ್ಯ./27
ಅರಿಯದ ಗುರು ಅರಿಯದ ಶಿಷ್ಯಂಗೆ
ಅಂಧಕನ ಕೈಯನಂಧಕ ಹಿಡಿದಡೆ ಮುಂದನಾರು ಕಾಬರು ಹೇಳಲೆ ಮರುಳೆ.
ತೊರೆಯಲದ್ದವನನೀಸಲರಿಯದವ
ತೆಗೆವ ತೆರನಂತೆಂದನಂಬಿಗ ಚೌಡಯ್ಯ./28
ಅರಿವನರಿದಲ್ಲಿ ತಾನೆನ್ನದೆ ಇದಿರೆನ್ನದೆ,
ಪಥವನರಿಯದಿರ್ದಡೆ,
ಮುಂದೆ ಹೆರರಿಗೆ ದೀಕ್ಷೆಯ ಮಾಡಲೇಕೆ ?
ತೊರೆಯಲದ್ದವನನೀಸಲರಿಯದವ ತೆಗೆಯ ಹೋದಂತಾಯಿತ್ತೆಂದನಂಬಿಗ ಚೌಡಯ್ಯ./29
ಅರಿವಿನ ಪಥವನರಿಯದಿರ್ದಡೆ,
ಮುಂದೆ ಹೆರರಿಗೆ ದೀಕ್ಷೆಯ ಮಾಡಲೇಕೆ?
ತೊರೆಯಲದ್ದವನಸೀಲರಿಯದವ
ತೆಗೆಯ ಹೋದಂತಾಯಿತ್ತರಂದನಂಬಿಗ ಚೌಡಯ್ಯ./30
ಅರಿವುದೊಂದು ವಾಯು, ಮರೆವುದೊಂದು ವಾಯು.
ಉಭಯದಿಂ ತೋರುವ ವಾಯು ಒಂದೆಯಾಗಿ,
ವಾಳುಕದ ಒಳ ಹೊರಗಿನ ನೀರಿನಂತೆ
ವೆಗ್ಗಳಿಸಿದಡೆ ನಿಂದು ತೆಗೆದಡೆ ಅಲ್ಲಿಯ ಅಡಗುವಂತೆ,
ಅರಿದು ನುಡಿದು ನಡೆದಡೆ ಜ್ಞಾನಿ,
ನುಡಿದ ನುಡಿಗೆ ನಡೆಯಡಗೆ ಆತನೆ ಜೀವಭಾವಿ
ಎಂದನಂಬಿಗ ಚೌಡಯ್ಯ./31
ಅರುಹಿಯರ ದೈವ ಅಗಲ [ತೈಲವಿ]ಲ್ಲಾ ಎಂದಡೆ
ಹೊಲೆಯರ ಬೊ[ಮ್ಮು]ಗ ತೋಯೆ ತುಪ್ಪವ ಬೇಡುವಂತೆ
ಬ್ರಹ್ಮವಿಷ್ಣುಗಳೆಂಬರಿನ್ನು ಕಾಣರು,
ವೇದಂಗಳು ನಾಚದೆ ನುಡಿವ ಪರಿಯ ನೋಡಾ!
ಗಂಗೆವಾಳುಕಸಮರುದ್ರುರು ಲಿಂಗವ ಕಂಡರೈಸೆ,
ಸ್ವಯಂಭುವ ಕಾಣರೆಂದನಂಬಿಗ ಚೌಡಯ್ಯ./32
ಅರ್ಚನೆಯ ಮಾಡುವಲ್ಲಿ ಆವೇಶ ಅರತಿರಬೇಕು.
ಪೂಜೆಯ ಮಾಡುವಲ್ಲಿ ಪುಣ್ಯಮೂರ್ತಿಯಾಗಿರಬೇಕು.
ಕೊಡುವ ಕೊಂಬಲ್ಲಿ ಸರ್ವಭೂತಹಿತನಾಗಿರಬೇಕು.
ಇಂತೀ ಸಡಗರಿಸಿಕೊಂಡಿಪ್ಪಾತನ ಅಡಿಗೆರಗುವೆನೆಂದನಂಬಿಗ ಚೌಡಯ್ಯ./33
ಅರ್ಚನೆಯ ಮಾಡುವಲ್ಲಿ ಆವೇಶ ಅರತಿರಬೇಕು.
ಪೂಜೆಯ ಮಾಡುವಲ್ಲಿ ಪುಣ್ಯಮೂರ್ತಿಯಾಗಿರಬೇಕು.
ಕೊಡುವ ಕೊಂಬಲ್ಲಿ ಸರ್ವಭೂತಹಿತನಾಗಿರಬೇಕು.
ಇಂತೀ ಸಡಗರಿಸಿಕೊಂಡಿಪ್ಪಾತನ ಅಡಿಗೆರಗುವೆನೆಂದನಂಬಿಗ ಚೌಡಯ್ಯ./34
ಅಲ್ಲಲ್ಲಿಗೆ ತಕ್ಕ ಹಾಗೆ ಎಲ್ಲರಿಗೂ ಬೋಧಿಸಲಾಗದು.
ಬಲ್ಲವರಲ್ಲಿ ನುಡಿದು, ಅರಿಯದವರಲ್ಲಿ ಗೆಲ್ಲ ಸೋಲಕ್ಕೆ ನುಡಿದಡೆ,
ಅವರು ಕಲ್ಲೆದೆಯವನೆಂಬರು.
ಒಳ್ಳಿತು ಹೊಲ್ಲವೆನಬೇಡ ಆರಿಗೂ.
ತನ್ನಲ್ಲಿಯೆ ಅರಿಕೆಯೆಂದನಂಬಿಗ ಚೌಡಯ್ಯ./35
ಅಷ್ಟಮದಂಗಳ ಘಟ್ಟಿಯನೆ ಕರಗಿಸಿ,
ಸತ್ವ ರಜ ತಮಂಗಳ ಬಿಟ್ಟು ಕಳೆದು,
ಸುತ್ತುವ ಮನದ ಸುಳಿಯ ತಪ್ಪಿಸಿ
ಮುಂದೆ ಹುಟ್ಟದೆ ಹೋಗೆಂದನಂಬಿಗ ಚೌಡಯ್ಯ./36
ಅಸುರರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ,
ಬ್ರಹ್ಮಕಪಾಲವಿಲ್ಲ, ಭಸ್ಮಭೂಷಣನಲ್ಲ,
ವೃಷಭವಾಹನನಲ್ಲ, ಋಷಿಯರುಗಳೊಡನಿದ್ದಾತನಲ್ಲ.
ಎಸಗುವ ಸಂಸಾರದ ಕುರುಹಿಲ್ಲದಾಂತಗೆ
ಹೆಸರಾವುದಿಲ್ಲೆಂದನಂಬಿಗರ ಚೌಡಯ್ಯ./37
ಅಳುಪೆಂಬ ನಾಯ ಕಳವಳದರ್ಥವ
ಇದ ಬಿಡೈ, ನಿನಗೆ ಸಂಗಡವಲ್ಲ.
ಬಂದ ಹೊಲೆಯನ, ನಿಂದ ಹಾರುವನ
ಇವರಿಬ್ಬರ ಕೂಡಿಕೊಂಡು ನಿನಗೆ ದೇಹಾರವಾಗದಣ್ಣಾ.
ಇವರ ಹಿಂಗಿಸಿ ನಿಜವರಿದು, ನಿಂದಲ್ಲಿ ನೆನದಡೆ
ಅಂದಿಂಗಲ್ಲದೆ ಶಿವನಿರನೆಂದಾತನಂಬಿಗ ಚೌಡಯ್ಯ./38
ಆತ್ಮಂಗೆ ದಶವಾಯು ಉಂಟೆಂಬರು.
ಊಧ್ರ್ವನಾಳವೈದು, ಅಧೋನಾಳವೊಂದು,
ವಾಯುವೊಂದು ಭೇದ, ಆತ್ಮವೊಂದರಲ್ಲಿ ಒಡೆಯದಿದೆ,
ಇದೇ ನಿರಂತರ ಸುಖ, ಎಚ್ಚರಿಕೆಯ ಕೂಟ.
ಮಿಕ್ಕಾದ ನಾಲ್ಕರಲ್ಲಿ ತಿರುಗಿ ಜೀವರುಗಳ ವಾಯು ನಾಲ್ಕು ಮುಚ್ಚಿ
ಅಧೋಮುಖಕ್ಕಿಳಿದಲ್ಲಿ ಕೀಳುಜೀವವೆಂದನಂಬಿಗ ಚೌಡಯ್ಯ./39
ಆದಿ ಅನಾದಿಯಿಂದತ್ತಣ
ಶರಣನ ಷಡಾಧಾರಚಕ್ರದೊಳಗೆ
ಷಡುಲಿಂಗವು, ಷಡುಮಂತ್ರವು,
ಷಡುಭಕ್ತರು, ಷಡುಶಕ್ತಿಗಳು ಇದ್ದುವಯ್ಯ.
ಆ ಶರಣನ ಜ್ಞಾನಕ್ರೀ ಅರವತ್ತುನಾಲ್ಕು ಭೇದವಾಯಿತ್ತಯ್ಯ,
ಒಬ್ಬ ಶರಣನು ಅನಂತ ಶರಣರಾದುದ ಕಂಡೆನೆಂದಾತ ನಮ್ಮ ಅಂಬಿಗರ ಚೌಡಯ್ಯ./40
ಆದಿಶಕ್ತಿವಿಡಿದಾಡುವರೆಲ್ಲರು ಜಂಗಮವಲ್ಲ,
ಅನಾದಿಶಕ್ತಿವಿಡಿದಾಡುವರೆಲ್ಲರು ಜ್ಞಾನಿಗಳಲ್ಲ,
ಆದಿ ಅನಾದಿಯೆಂಬೀ ಎರಡ ಭೇದಿಸಿ ದಾಂಟಿ,
ಇಚ್ಛಾಶಕ್ತಿಯ ಇಚ್ಛೆಯ ಮರೆದು,
ಕ್ರಿಯಾಶಕ್ತಿಯ ಭಾವವ ಬಿಟ್ಟು,
ಜ್ಞಾನಶಕ್ತಿಯ ಠಾವವನೊಲ್ಲದೆ,
ತಾನು ತಾನಾದವಂಗೆ ಏನೂ ಇದಿರಿಲ್ಲಾ,
ಎಂದನಂಬಿಗ ಚೌಡಯ್ಯ./41
ಆನೆಂಬುದೇನುರಿ ಇದಿರಿಟ್ಟು ತೋರೂದಿದೇನು ?
ಇದೆಲ್ಲಿಂದಲೊದಗಿತ್ತು ?
ಇದರ ಲಯವು ತಾನೆಲ್ಲಿ ಎಂದು ಅನುಮಾನಿಸಿ,
ಶ್ರೀಗುರುಚರಣವಂ ನಂಬಿ,
ಅಂತರ್ಮುಖದಲ್ಲಿ ವಿಚಾರಿಸಿ, ಅಲ್ಲೊಂದು ಮಾರ್ಗವ ಕಂಡು,
ಆ ಮಾರ್ಗವ ಬಳಿವಿಡಿದು ತಲೆ ಹೊಲಕ್ಕೆ ಹೋಗಿ
ಹಿಂದು ಮುಂದ ಮರದು, ಮಹಾಬೆಳಗಿನ ಬೆಳಗಿನಲ್ಲಿ ನಿಂದು,
ಪರಮಾನಂದಸಾಗರದೊಳಗೆ ಸಮರಸನಾದವಂಗೆ
ಇಹಪರವಿಲ್ಲೆಂದಾತನಂಬಿಗ ಚೌಡಯ್ಯ./42
ಆಯತಲಿಂಗದಲ್ಲಿ ಅನುಭಾವ ಸಾಹಿತ್ಯವಾಗದು,
ಸ್ವಾಯತಲಿಂಗದಲ್ಲಿ ನಿರ್ಗಮನ ಸಾಹಿತ್ಯವಾಗದು,
ಇದೆಂತಯ್ಯಾ ಆಯತವುರಿ ಇದೆಂತಯ್ಯಾ ಸ್ವಾಯತವುರಿ
ಆಯತ ಸ್ವಾಯತವೆಂಬ ಉಭಯ ಕುಳಸ್ಥಳವರಿಯದಿದ್ದಡೆ
ಅನಾಯತವಾಗಿ ಹೋರಿತ್ತೆಂದನಂಬಿಗ ಚೌಡಯ್ಯ./43
ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು,
ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು,
ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ,
ಪೂಜಿಸಿದ ಪುಣ್ಯ ಹೂವಿಗೋ ? ನೀರಿಗೋ?
ನಾಡೆಲ್ಲಕ್ಕೊರಿ ಪೂಜಿಸಿದಾತಗೊ?
ಇದ ನಾನರಿಯೆ, ನೀ ಹೇಳೆಂದನಂಬಿಗ ಚೌಡಯ್ಯ./44
ಆರು ಲಿಂಗ ಮೂರು ಲಿಂಗವೆಂಬರು,
ನಮಗುಳ್ಳುದೊಂದೆ ಲಿಂಗ,
ಒಂದು ಲಿಂಗದಲ್ಲಿ ಒಂದು ಮನ ಸಿಕ್ಕಿದಡೆ ಮರಳಿ
ಒಂದು ಲಿಂಗವ ನೆನೆಯಲಿಲ್ಲವೆಂದಾತನಂಬಿಗ ಚೌಡಯ್ಯ./45
ಆರೂ ಇಲ್ಲದಂದು ತಾನಹ ದೆವಸ,
ತನಗೆ [ಆ]ನಾಧಾರವಾದೆ ನೋಡಾ.
ಭೂಮಿಯಾಕಾಶ ಐದನೆಯ ಭೂತ ಒಳಗಾಗಿ
[ಆಂ] ಬೇರೆ ತಾ ಬೇರೆ ಬಳಿಕಾದ ದೆವಸ,
ತಾ ತೋರಿದಂದಹ ಆ ನೂಲ ಹಿಡಿದೆನು.
ತೀವಿದ ಒಂಬತ್ತು ದ್ವೀಪಕ್ಕೆ ಭಾವವಿರಹಿತನಾಗಿ ತಾ ಹೊರಗಾದಡೆ
[ಅಂ] ಹಿಡಿದೊಳಗುಮಾಡಿದನೆಂದನಂಬಿಗ ಚೌಡಯ್ಯ./46
ಆರೂಢಜ್ಞಾನಿಯಾದವಂಗೆ ಅನುಭಾವವೇಕಯ್ಯಾ ?
ಮೀರಿದ ಸ್ಥಲದಲ್ಲಿ ನಿಂದವಂಗೆ ನೀರೇನು, ನೆಲವೇನು?
ಎಂದಾತನಂಬಿಗ ಚೌಡಯ್ಯ./47
ಆವ ಪದಾರ್ಥವ ಮೋಹಿಸಿ ಲವಲವಿಸಬೇಡ.
ಬಪ್ಪುದು ಬಪ್ಪುದಲ್ಲದೆ ಬಾರದ್ದು ಬಪ್ಪುದೆರಿ
ಬಪ್ಪುದು ತಪ್ಪದು, ಬಾರದುದು ಬಾರದು,
ಅಹದಹದಾಗದ್ದಾಗದು.
ಬಹುದುಃಖಂಗೊಳಲೇಕೆರಿ ಬಪ್ಪುದು ತಪ್ಪದು, ಸಹಜವೆಂತಾಗುವದಲ್ಲದೆ.
ವಿಹಿತವ ತಾ ಬರವುತಿಹನು ಪಣೆಯೊಳು ಶಿವನು.
ಇಂತಿದು ನಿನ್ನ ಭೋಗವೆಲ್ಲಿದ್ದಡೂ ಬಿಡದೆಂದಾತ
ನಮ್ಮಂಬಿಗರ ಚೌಡಯ್ಯ./48
ಆವಾವ ತ್ರಿಗುಣಭೇದದಲ್ಲಿವಿಶ್ವಾಸವ ಮಾಡಿದಡೂ ಭಾವಶುದ್ಧವಾಗಿರಬೇಕು.
ಯೋಗಿಯಾದಲ್ಲಿ ದೇಹಧರ್ಮವ ಮರೆದು, ಭೋಗಿಯಾದಲ್ಲಿ ಸಂಚಿತವ ಮರೆದು,
ತ್ಯಾಗಿಯಾದಲ್ಲಿ ನೆನಹು ಹಿಂಚು ಕೊಡುವುದು ಮುಂಚಾಗಿರಬೇಕು.
ಇಂತೀ ಯೋಗಿ ಭೋಗಿ ತ್ಯಾಗಿ,
ಇಂತೀ ತ್ರಿವಿಧವನೊಳಕೊಂಡು ವಿರಕ್ತನಾದಲ್ಲಿ
ಆತನ ಅಡಿಗೆರಗುವೆನೆಂದನಂಬಿಗ ಚೌಡಯ್ಯ./49
ಆಶೆಯಲಿದ್ದವನ ತಲೆಯನರಿದು,
ಆಶೆಯ ಹರಿಯಲೊದ್ದವನನೊಂದೆ ಹುಟ್ಟಿನಲ್ಲಿ ಒಯ್ದು
ಕೈಲಾಸಕ್ಕೆ ಹೋದಾತ
ಅಂಬಿಗ ಚಾಡಯ್ಯ./50
ಆಶೆಯುಳ್ಳಾತನೊಬ್ಬರಾಧೀನದಲ್ಲಿಪ್ಪನು.
ಆಶೆಯ ಮನದ ಕೊನೆಯನರಿದಾತ
ಕೈಲಾಸದಾಚೆಯಲ್ಲಿಪ್ಪನೆಂದಾತ
ನಮ್ಮ ಅಂಬಿಗ ಚೌಡಯ್ಯ!/51
ಆಳಾಪದ ಸೊಬಗು, ಘಂಟೆ ವಾದ್ಯದ ಕೂಗಿನ ಕೊರಚು,
ಪರಿಚಾರಕರ ಎಡೆಯಾಟದಿಂದ ಸೊಬಗು ಮೆರೆದಿತ್ತು.
ಎನಗೆ ಇನ್ನಾವುದು ಇಲ್ಲ, ಇನ್ನೇವೆನೆಂದನಂಬಿಗ ಚೌಡಯ್ಯ./52
ಈರೇಳು ಭುವನವನೊಳಕೊಂಡ ಮಹಾಘನಲಿಂಗವು
ಶಿವಭಕ್ತನ ಕರಸ್ಥಲದಾಲಯಕ್ಕೆ ಬಂದು, ಪೂಜೆಗೊಂಬ ಪರಿಯ ನೋಡ!
ಅಪ್ರಮಾಣ-ಅಗೋಚರವಾದ ಲಿಂಗದಲ್ಲಿ ಸಂಗವ ಬಲ್ಲಾತನೆ
ಸದಾಚಾರಸದ್ಭಕ್ತನು!
ಹೀಂಗಲ್ಲದೆ ಹಣವಿನಾಸೆಗೆ ಹಂಗಿಗನಾಗಿ,
ಜಿಹ್ವಾಲಂಪಟಕ್ಕೆ ಅನಾಚಾರದಲ್ಲಿ ಉದರವ ಹೊರದು ಬದುಕುವಂಥ
ಭಂಡರು ಭಕ್ತರಾದವರುಂಟೆ ? ಹೇಳ!
ಅಂಥ ಅನಾಚಾರಿ ಶಿವದ್ರೋಹಿಗಳ ಮುಖವ ನೋಡಲಾಗದು! ಅದೆಂತೆಂದಡೆ: ಕತ್ತೆ ಭಕ್ತನಾದಡೆ ಕಿಸುಕಳವ ತಿಂಬುದ ಮಾಣ್ಬುದೆ ?
ಹಂದಿ ಭಕ್ತನಾದಡೆ ಹಡಿಕೆಯ ತಿಂಬುದ ಮಾಣ್ಬುದೆ ?
ಬೆಕ್ಕು ಭಕ್ತನಾದಡೆ ಇಲಿಯ ತಿಂಬುದ ಮಾಣ್ಬುದೆ ?
ಸುನಕಗೆ ಪಂಚಾಮೃತವ ನೀಡಲು ಅಡಗ ತಿಂಬುದ ಮಾಣ್ಬುದೆ ?
ಇಂತೀ ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಮರಳಿ ತನ್ನ ಜಾತಿಯ ಕೂಡಿದಡೆ
ಆ ಕತ್ತೆ-ಹಂದಿ-ಬೆಕ್ಕು-ಸುನಕಗಿಂದತ್ತತ್ತ ಕಡೆ ಕಾಣಿರೊ!
ಹೊನ್ನಬೆಟ್ಟವನೇರಿ ಕಣ್ಣುಕಾಣದಿಪ್ಪಂತೆ,
ಗಣಿಯನೇರಿದ ಡೊಂಬ ಮೈಮರದಿಪ್ಪಂತೆ,
ಅಂಕವನೇರಿದ ಬಂಟ ಕೈಮರದಿಪ್ಪಂತೆ! ಇಂತಿವರು ಮಾಡುವ ಭಕ್ತಿಯೆಲ್ಲವು
ನಡುನೀರೊಳು ಹೋಗುವ ಹರುಗೋಲು ಹೊಡಗೆಡದಂತಾಯಿತ್ತೆಂದಾತನಂಬಿಗರ ಚೌಡಯ್ಯನು!/53
ಈಶಲಾಂಛನವ ತೊಟ್ಟು ಮನ್ಮಥವೇಷಲಾಂಛನವ ತೊಡಲೇತಕ್ಕೆ ?
ಇದು ನಿಮ್ಮ ನುಡಿ ನಡೆಗೆ ನಾಚಿಕೆಯಲ್ಲವೆ ?
ಅಂದಳ ಛತ್ರ, ಆಭರಣ, ಕರಿತುರಗಂಗಳ ಗೊಂದಣವೇತಕ್ಕೆ ?
ಅದು ಘನಲಿಂಗದ ಮೆಚ್ಚಲ್ಲ, ಎಂದನಂಬಿಗ ಚೌಡಯ್ಯ /54
ಈಶ್ವರನ ಕಾಬುದೊಂದಾಸೆಯುಳ್ಳೊಡೆ ಪರದೇಶಕ್ಕೆ ಹೋಗಿ ಬಳಲದಿರು,
ಕಾಶಿಯಲ್ಲಿ ಕಾಯವ ವಿನಾಶವ ಮಾಡಲುಬೇಡ.
ನಿನ್ನಲ್ಲಿ ನೀ ತಿಳಿದು ನೋಡಾ,
ಸವರ್ೆಶ ಮುಳ್ಳಗುತ್ತ ತೆರಹಿಲ್ಲೆಂದಡೆ, ಒಂದು ಗೋಂಟ ಸಾರಿರ್ದನೆ ?
ಎಂದನಂಬಿಗ ಚೌಡಯ್ಯ. /55
ಉಂಡರೆ ಭೂತನೆಂಬರು,
ಉಣದಿದ್ದರೆ [ಚಾತಕ]ನೆಂಬರು.
ಭೋಗಿಸಿದರೆ ಕಾಮಿಯೆಂಬರು,
ಭೋಗಿಸದಿದ್ದರೆ ಮುನ್ನ ಮಾಡಿದ ಕರ್ಮಿ ಎಂಬರು.
ಊರೊಳಗಿದ್ದರೆ ಸಂಸಾರಿ ಎಂಬರು,
ಅಡವಿಯೊಳಗಿದ್ದರೆ ಮೃಗಜಾತಿ ಎಂಬರು.
ನಿದ್ರೆಗೈದರೆ ಜಡದೇಹಿ ಎಂಬರು,
ಎದ್ದಿದ್ದರೆ ಚಕೋರನೆಂಬರು.
ಇಂತೀ ಜನಮೆಚ್ಚಿ ನಡೆದವರ
ಎಡದ ಪಾದ ಕಿರಿ ಕಿರುಗುಣಿಯಲ್ಲಿ ಮನೆ ಮಾಡು,
ಮನೆ ಮಾಡು ಎಂದಾತ ನಮ್ಮ ಅಂಬಿಗರ ಚೌಡಯ್ಯ. /56
ಉಡುವಿನ ಕಣ್ಣು, ಪಡಿಯ ಅಡಿ, ಕೀಟಕನ ಮುಟ್ಟು,
ಘಾತಕನ ಸ್ನೇಹ, ವೇಸಿಯ ಮೋಹದ ಆಸೆ,
ಸುಜಾತಿಯಲ್ಲದವನ ಕೊಳುಕೊಡೆ,
ನಿರಾಸೆಯಿಲ್ಲದವನ ಮಾತಿನ ಮಾಲೆ ಅದೇತಕ್ಕೆ ಬಾ[ತೆ]ಯೆಂದನಂಬಿಗ ಚೌಡಯ್ಯ. /57
ಉಪ್ಪಿಲ್ಲದ ಮೇಲೋಗರ ತುಪ್ಪದಲ್ಲಿ ಬೆಂದಡೆ,
ತುಪ್ಪ ಲೇಸೆಂದಡೆ ಸಪ್ಪೆಯಾಗಿ ತೋರಿತ್ತು.
ಅರಿವು ಶುದ್ಧವುಳ್ಳವನೆಂದಡೆ,
ಕುರುಹಿನ ಬೆಂಬಳಿಯಲ್ಲಿ ಅಡಗಿದಡೆ ಅರಿವಿಗೆ ದೂರವೆ ?
ಅರಿವು ಕುರುಹು ನಿಃಪತಿಯಹನ್ನಕ್ಕ
ಆರನೂ ಕೆಡೆನುಡಿಯಬೇಡೆಂದನಂಬಿಗ ಚೌಡಯ್ಯ./58
ಊರ ಸುತ್ತಿ ಬಂದ[ಡೇ]ನಯ್ಯ, ಸೇರಬೇಕು ಹೆಬ್ಬಾಗಿಲಲ್ಲಿ.
ಹೊರಬೇಕು, ಗುರುಲಿಂಗಜಂಗಮದ ಪಾದವ.
ಶ್ವಾನಜ್ಞಾನದ ಮಾತ ಕಲಿತು
ಅರಿಕೆಯ ಮಾತಿಗೆ ಹೋರಾಟಕ್ಕೆ ಹೋದರೆ,
ಸೇರಿದ್ದ ಲಿಂಗ ದೂರವಾಯಿತು, ಎಂದ ನಮ್ಮ ಅಂಬಿಗರ ಚೌಡಯ್ಯ. /59
ಊರೆಲ್ಲಾ ಏರಿದ ಹರಗುಲವ,
ನೀರಿನಲ್ಲಿ ದಾರಿಯ ಕೊಂಡು ಹೋಹವನ ಆರೈಕೆಯಲ್ಲದೆ
ಏರಿದವರೆಲ್ಲಕ್ಕೂ ಆರೈಕೆವುಂಟೆ ?
ಹೇಳುವಾತನ ವಿರಕ್ತಿ, ಕೇಳುವಾತನ ಸದ್ಭಕ್ತಿ ಉಭಯದ ನೆಲೆಯ ಆರಿಂದ ಅರಿಯಬೇಕೆಂದನಂಬಿಗ ಚೌಡಯ್ಯ./60
ಎತ್ತ ಸುತ್ತಿ ಬಂದಡೂ ಊರಿಗೆ ಬಪ್ಪುದು ತಪ್ಪದು.
ಹಲವು ಮಾತನಾಡಿದಡೇನು? ಮೂರು ಮಲವ ಮರೆದಿರಬೇಕು.
ಹೊಲಬುದಪ್ಪಿದ ಮೃಗ ಬಲೆಯೊಳಗೆ ಬಿದ್ದಂತಾಗಬೇಡ.
ಇದನರಿತು ಬದುಕೆಂದನಂಬಿಗ ಚೌಡಯ್ಯ./61
ಎರಡು ಗ್ರಾಮದ ನಡುವೆ ಕಡದ ಸೀಮೆಯ ಕಲ್ಲು.
ಅದ ಕಟ್ಟಿದಾತ ಗುರುವಲ್ಲ, ಕಟ್ಟಿಸಿಕೊಂಡಾತ ಶಿಷ್ಯನಲ್ಲ.
ಆದಿಯನರಿಯದ ಗುರುವು, ಭೇದಿಸಲರಿಯದ ಶಿಷ್ಯ,
ಇವರಿಬ್ಬರೂ ಉಭಯಭ್ರಷ್ಟರೆಂದಾತನಂಬಿಗ ಚೌಡಯ್ಯ./62
ಎಲುವೆಂಬ ಹಂಜರ ಥಟ್ಟಾಗಿ,
ಉಭಯವ ಘಟಿಸಿದ ತೊಗಲು
ಬ್ರಹ್ಮವೆಂಬ ಅಳಿಲೆಯ ಕಾಯಲ್ಲಿ
ವಿಷ್ಣುವೆಂಬ ನೀರ ಹೊಯಿದು,
ರುದ್ರನೆಂಬ ಚೂರ್ಣದಲ್ಲಿ ಖಾರಕ್ಕೆ ಮೆಟ್ಟಲಾಗಿ,
ತೊಗಲ ಹೊಲಸು ಕೆಟ್ಟಿತ್ತು, ಹರುಗುಲ ಹುದಿಗಿತ್ತು.
ವರ್ತನವೆಂಬ ಹುಟ್ಟ ಹಿಡಿದು,
ಮಾಟಕೂಟವೆಂಬ ಹೊಳೆಯಲ್ಲಿ ಕೂಟದವರು ದಾಟುತ್ತಿದ್ದಾರೆ, ಎಂದನಂಬಿಗ ಚೌಡಯ್ಯ. /63
ಎಲೋ ಮಾನವ ಕೇಳೆಲೊ,
ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೊ: ಹಣ್ಣುಗಳು ಸಣ್ಣ ಜಾತಿಯ ಎಂಜಲು,
ಹಾಲು ಕರುವಿನ ಎಂಜಲು,
ಮೊಸರು ಗೊಲ್ಲತಿಯ ಎಂಜಲು,
ಅಕ್ಕಿ, ಗೋದಿ, ಬೇಳೆ, ಬೆಲ್ಲಗಳು ನೊಣದ ಎಂಜಲು,
ನೀರು ಮೀನು ಕಪ್ಪೆಗಳ ಎಂಜಲು,
ಉಪ್ಪು ಉಪ್ಪಾರನ ಎಂಜಲು,
ಎಣ್ಣೆ ಸರ್ವಮಾನವರ ಎಂಜಲು,
ಸಕಲಪದಾರ್ಥವು ಅನಂತ ಹುಳುಗಳ ಎಂಜಲು.
ಇಂತಹ ಎಂಜಲವು ಎಂದು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ,
ಮಾಡುವ ದುರಾಚಾರವ ಆರು ಬಣ್ಣಿಸಬಹುದುರಿ
ಅರಿವು ಇಲ್ಲದವರು ಅರಮನೆಗೆ ಮಾಡಿದರು,
ಭಕ್ತಿಯಿಲ್ಲದವರು ತಮ್ಮ ಗುರುಲಿಂಗಜಂಗಮಕ್ಕೆ ಮಾಡಿದರು.
ಇಂತಪ್ಪ ಸರ್ವರ ಎಂಜಲು ತಿಂದು
ಶಿವಲಿಂಗವ ಧರಿಸಿಕೊಂಡು, ಶಿವಭಕ್ತರೆಂದು ಹೇಳಿಸಿ,
ಕಾಲಿಗೆ ಬಂದಂತೆ ಕುಣಿದು,
ಬಾಯಿಗೆ ಬಂದಂತೆ ಅಂದು,
ಮನಬಂದಂತೆ ಸ್ತ್ರೀಸಂಗದಲ್ಲಿ ಆಚರಿಸುವ
ಭ್ರಷ್ಟ ಹೊಲೆಮಾದಿಗರಿಗೆ ಶೀಲವು ಎಲ್ಲಿಹುದು?
ಆಚರಣೆ ಎಲ್ಲಿಹುದುರಿ ಕುಲವೆಲ್ಲಿಹುದು?
ಇಂತಪ್ಪ ಮೂಳಹೊಲೆಯರ ಮೂಗ ಕೊಯ್ದು
ಪಡಿಹಾರಿ ಉತ್ತಣ್ಣಗಳ ಪಾದುಕದಿ ಹೊಡೆ ಎಂದಾತ ನಮ್ಮ ಅಂಬಿಗ ಚೌಡಯ್ಯ./64
ಎಲ್ಲರೊಳಗೆ ಗೆಲ್ಲ ಸೋಲಕ್ಕೆ ಹೋರಬಂದೆನೆ ?
ಬೆಲ್ಲವ ಮೆದ್ದಡೆ ತಮ್ಮ ತಮ್ಮ ಬಾಯಲ್ಲಿಗೆಲ್ಲ ಸಿಹಿ.
ಬಲ್ಲವನಾದ ಮತ್ತೆ ನಾಡೆಲ್ಲರೂ ಕೂಡಿ ಬಾಳದ ಹೆಣ್ಣಿಗೆ ನ್ಯಾಯವನಾಡುವಂತೆ,
ಅರಿದ ಅರಿವಿಂಗೆ ಮರೆದ ಮರವೆಗೆ ತನ್ನಲ್ಲಿದ್ದು ಕರಿಗೊಂಡವನೆ ಸಾಕ್ಷಿಯೆಂದನಂಬಿಗ ಚೌಡಯ್ಯ. /65
ಎಲ್ಲವ ಕಳಿದುಳಿದ ಹೂವ ತಂದು,
ಗೆಲ್ಲ ಸೋಲಕ್ಕೊಳಗಾಗದ ನೀರ ತುಂಬಿ,
ಕರಣಂಗಳೆಲ್ಲವು ಕಂಗಳ ತುಂಬಿ ನಿಂದು ನೋಡಿ,
ಎಂದೂ ತನ್ನಂಗದಿಚ್ಛೆಯ ಮರೆದು, ಲಿಂಗವ ಪೂಜಿಸಬೇಕೆಂದನಂಬಿಗ ಚೌಡಯ್ಯ. /66
ಎಲ್ಲಾ ದೇವರಿಗೆ ಮಸ್ತಕದ ಪೂಜೆ,
ನಮ್ಮ ಗುರುಲಿಂಗಜಂಗಮದೇವರಿಗೆ ಪಾದಾಂಗುಷ್ಟದ ಪೂಜೆಯೆಂಬುದು
ಸಕಲ ವೇದಶಾಸ್ತ್ರಪುರಾಣಾಗಮಂಗಳು, ಶ್ರುತಿಸ್ಮೃತಿಗಳು ಸಾರುತ್ತಿರಲು,
ಅದನರಿತು ಓದುತ್ತ ಓದುತ್ತ ಹಾಡುತ್ತ ಹಾಡುತ್ತ
ಅದಕ್ಕೆ ಅಪಖ್ಯಾತಿಯ ತರುವವನೆಂತು ಜಂಗಮವೊ ?
ಅವನೆಂತು ಭಕ್ತನೊ ?
ತಾನೊಡೆಯ[ನ]ಂತೆ, ತಾ ಭಕ್ತನಂತೆ,
ತನ್ನೆಡೆಯ ಗುಡಿಯ ಲಿಂಗದ ಮುಂದಿಟ್ಟು
ತನ್ನಿಷ್ಟಲಿಂಗಕ್ಕೆ ಕೊಟ್ಟುಕೊಂಬ
ತುಡುಗುಣಿ ನಾಯ ಮೂಳಹೊಲೆಯರ ಕಂಡಡೆ
ನಡುವಿನ ಮೇಲೆ ಒದೆಯೆಂದಾತ ನಮ್ಮ ಅಂಬಿಗರ ಚೌಡಯ್ಯ. /67
ಎಸವಿನ ಗುರು ಹೋಗಿ ಶಿಶುವಧೆಯ ಮಾಡಿದ.
ಶಿಶು ಹೋಗಿ ಮರಳಿ ಗುರುವ ಕೊಂದಡೆಯು,
ಹೆಸರುಗೊಂಬ ಅಣ್ಣಗಳು ನೀವು ಕೇಳಿರೋ: ವರಿಬ್ಬರೂ ಸತ್ತಠಾವನೊಬ್ಬರೂ ಅರಿಯರು,
ನಿರ್ವಯಲೆಂದಾತನಂಬಿಗ ಚೌಡಯ್ಯ./68
ಏಕಾದಶ ರುದ್ರರು ಹೊರಗಾದ,
ಈರೇಳು ಲೋಕ ಹದಿನಾಲ್ಕು ಭುವನ ಯುಗಜುಗಂಗಳಲ್ಲಿ ಒಳಗಾಗಿ
ತಿರುಗುವುದೊಂದು ಶಕ್ತಿಯ ಭೇದ.
ದಶಾವತಾರವಾಗಿ ಕಾಲಕರ್ಮಂಗಳಲ್ಲಿ ಓಲಾಡುತ್ತಿಪ್ಪುದು
ಒಂದು ಶಕ್ತಿಯ ಭೇದ.
ಉಂಟು ಇಲ್ಲಾ ಎಂದು ನಿಶ್ಚಿಂತಕ್ಕೆ ಹೋರುವುದೊಂದು ಶಕ್ತಿಯ ಭೇದ.
ಇಂತೀ ತ್ರಿವಿಧಶಕ್ತಿಯ ಆದಿ ಆಧಾರವನರಿದು
ಕರ್ಮವ ಕರ್ಮದಿಂದ ಕಂಡು, ಧರ್ಮವ ಧರ್ಮದಿಂದ ಅರಿದು,
ಜ್ಞಾನವ ಜ್ಞಾನದಿಂದ ವಿಚಾರಿಸಿ, ಇಂತೀ ತ್ರಿಗುಣದಲ್ಲಿ ತ್ರಿಗುಣಾತ್ಮಕನಾಗಿ,
ದರ್ಪಣದಿಂದ ಒಪ್ಪಂಗಳನರಿವಂತೆ
ಅರಿವು ಕುರುಹಿನಲ್ಲಿ ನಿಂದು, ಕುರುಹು ಅರಿವನವಗವಿಸಿದಲ್ಲಿ
ತ್ತೃಮೂರ್ತಿ ನಷ್ಟವೆಂದನಂಬಿಗ ಚೌಡಯ್ಯ. /69
ಐಶ್ವರ್ಯ ದುಃಖದಲ್ಲಿ ಬೇಯುವ
ಹೊಲೆ ಸಂಸಾರವನೆ ಕಚ್ಚಿ ಕೊಲೆಗೀಡಾಗದೆ,
ಸಲೆ ಸತ್ಯ ಸದಾಚಾರದಲ್ಲಿ ನಡೆ.
ಸಟೆಯನು ಬಿಡು, ದಿಟವನೆ ಹಿಡಿ.
ಈ ಘಟವುಳ್ಳನಕ ಕಾಲದಲ್ಲಿ ಶಿವಭಕ್ತಿಯ ನಟಿಸಿ
ನಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ. /70
ಒಂದ ಬಿಟ್ಟು ಒಂದನರಿದೆಹೆನೆಂಬನ್ನಕ್ಕ ಮರದ ಸಂದಿನ ಬೊಂಬೆಯೆ?
ಅರಿವುದು ಕುರುಹೊ ಅರಿವೊರಿ ಸುಡುವುದು ಮರನೊ ಬೆಂಕಿಯೊರಿ
ಎರಡರ ಹೆಚ್ಚು ಕುಂದ ತಿಳಿದು ಹೇಳೆಂದನಂಬಿಗ ಚಾಡಯ್ಯ. /71
ಒಂದನರಿದು ಒಂದ ಮರೆದೆಹೆನೆಂಬ ಸಂದೇಹದವನಲ್ಲ.
ಸರ್ವರ ಕೂಡಿಕೊಂಡು ಅರಿದೆಹೆನೆಂಬ ಬಂಧಮೋಕ್ಷದವನಲ್ಲ.
ಆಗಿಗೆ ಮುಯ್ಯಾಂತು, ಚೇಗೆಗೆ ಮನಗುಂದುವನಲ್ಲ.
ಸುಖದುಃಖವೆಂಬ ಉಭಯವ ಸರಿಗಾಬವನಲ್ಲ.
ನಿಂದ ನಿಜವೆ ತಾನಾಗಿದ್ದವಂಗೆ ಬೇರೆ ಬಂಧವೊಂದೂಯಿಲ್ಲ. ಎಂಬನಬಿಂಗ ಚೌಡಯ್ಯ/72
ಒಡಲಿಂಗಾರು ಬಾಯಿ, ನಡುವೆ ಮೂರು ದೇಹ,
ಹಿಡಿದ ಪ್ರಾಣತೆ ಹದಿನಾರು.
ಆ ಸೊಡರಿಂಗೆರೆದೆಣ್ಣೆ ಬಯಲೆಣ್ಣೆ
ಆ ಸೊಡರೊಳಲಗಳ ಬೆಳಗ ದೃಢವಾಗಿ ಹಿಡಿದು ಕಡೆಗಾಣಿಸೆಂದಂಬಿಗ ಚೌಡಯ್ಯ. /73
ಒಬ್ಬ ತಂದೆಯ ಬಸಿರಿನಲ್ಲಿ ಒಂಬತ್ತು ಮಕ್ಕಳು ಹುಟ್ಟಿದಡೇನಯ್ಯ ?
ಅವರೊಳಗೊಬ್ಬಾತಂಗೆ ಸೆರಗ ಕಟ್ಟಿ ಮದುವೆಯ ಮಾಡಿದ ಬಳಿಕ,
ಆತಂಗೆ ತನ್ನಂಗದ ಸುಖವನೊಪ್ಪಿಸಬೇಕಲ್ಲದೆ,
ಉಳಿದಿರ್ದವರೆಲ್ಲ ತನ್ನ ಮಾವನ ಮಕ್ಕಳೆಂದು
ಅವರಿಗೆ ಸೆರಗು ಹಾಸುವವಳನು ಒಪ್ಪುವರೆ ಲೋಕದೊಳು ?
ಪರಮಾತ್ಮನೆಂಬ ಶಿವನಿಗೆ ಆಶ್ರಯವಾಗಿ ಹುಟ್ಟಿತ್ತು ಲಿಂಗ,
ಆತಂಗೆ ವಾಹನವಾಗಿ ಹುಟ್ಟಿದಾತ ವೃಷಭ,
ಆತಂಗೆ ಯೋಗವಾಗಿ ಹುಟ್ಟಿದಾತ ವಿನಾಯಕ,
ಆತಂಗೆ ಯುದ್ಧಕ್ಕೆ ಸರಿಯಾಗಿ ಹುಟ್ಟಿದಾತ ವೀರಭದ್ರ.
ಇಂತಿವರೆಲ್ಲ ಶಿವನ ಮಕ್ಕಳಾದರೆ,
ತನಗೊಂದು ಪ್ರಾಣಲಿಂಗವೆಂದು ಕಂಕಣ ಕಟ್ಟಿ,
ಕರಸ್ಥಲಕ್ಕೆ ಬಂದ ಬಳಿಕ ಅದನು ನಂಬಲರಿಯದೆ
ಮತ್ತನ್ಯದೈವಕ್ಕೆರಗಿದಡೆ ನಾಯಕನರಕವೆಂದಾತ ನಮ್ಮ ಅಂಬಿಗ ಚೌಡಯ್ಯ. /74
ಓಂಕಾರವೆಂಬಾಕಾರದಲ್ಲಿ ನಾಲ್ಕು ವೇದ,
ನಾಲ್ಕು ವೇದದಲ್ಲಿ ಇಪ್ಪತ್ತೆಂಟಾಗಮ,
ಇಪ್ಪತ್ತೆಂಟಾಗಮದಲ್ಲಿ ಹದಿನೆಂಟು ಪುರಾಣ,
ಹದಿನೆಂಟು ಪುರಾಣದಲ್ಲಿ ಹದಿನಾರು ಶಾಸ್ತ್ರವಡಗಿದವು.
ಆ ಶಾಸ್ತ್ರದ ಕೊನೆಯ ಮೊನೆಯ ಮೇಲಿಪ್ಪ
ಷಡ್ದರ್ಶನದ ಕಹಿಯ ಬೇರ ಹಿಡಿದು,
ವೀರಶೈವನೆಂಬ ಸಿದ್ಧನು ಕೀಳುವಾಗ,
ಕಾಯಯ್ಯ ಎಂದು ಬಾಯ ಬಿಟ್ಟವು. ಅವಕ್ಕೆ ಕರುಣಿಸಿ ಬಿಟ್ಟಾತನಂಬಿಗ ಚೌಡಯ್ಯ./75
ಓದಿ ಬೋಧಿಸಿ ಇದಿರಿಗೆ ಹೇಳುವನ್ನಬರ ಚದುರತೆಯಲ್ಲವೆ ?
ತಾ ತನ್ನನರಿದಲ್ಲಿ, ಆ ಅರಿಕೆ ಇದಿರಿಗೆ ತೋರಿದಲ್ಲಿ ಅದೆ ದೇವತ್ವವೆಂದನಂಬಿಗ ಚೌಡಯ್ಯ. /76
ಓದಿಹೆನೆಂಬ ಒಡಲು, ಕಂಡೆಹೆನೆಂಬ ಭ್ರಾಂತು,
ಸರ್ವರಿಗೆ ಹೇಳಿಹೆನೆಂಬ ತೇಜಸ್ಸು,
ಇಂತಿವೆಲ್ಲವು ಇದಿರಿಗೆ ಹೇ[ಳೆ]
ತನ್ನ ಉದರದ ಕಕ್ಕುಲತೆಯಲ್ಲದೆ ಆತ ಅರಿವಿಂಗೆ ಒಡಲಲ್ಲಾ ಎಂದನಂಬಿಗ ಚೌಡಯ್ಯ. /77
ಕಂಗಳ ನಾಮ ಹರುಗುಲವಾಗಿ, ನೋಡುವ ದೃಷ್ಟಿ ಅಂಬಿಗನಾಗಿ,
ಕರಣೇಂದ್ರಿಯವೆಂಬ ಬಹುಜನಂಗಳ ಕೂಡಿ,
ಆಸೆಯೆಂಬ ಹೊಳೆಯ ದಾಟುವುದಕ್ಕೆ ಹುಟ್ಟ ಕಾಣದೆ ಹರುಗುಲು ಈಚೆ ಉಳಿಯಿತ್ತೆಂದನಂಬಿಗ ಚೌಡಯ್ಯ. /78
ಕಂಡು ಕೊಟ್ಟೆಹೆನೆಂಬುದು ಖಂಡಿತಂಗಲ್ಲದೆ ಪರಿಪೂರ್ಣಂಗುಂಟೆ ?
ಉಂಡು ತೇಗಿಹೆನೆಂಬುದು ನಿತ್ಯತೃಪ್ತಂಗುಂಟೆ ?
ಒಂದನರಿದು ಒಂದ ಮರೆದೆನೆಂದು ಸಂದೇಹಕ್ಕೊಳಗಾದವಂಗೆ`
ಲಿಂಗವಿಲ್ಲ, ಎಂದನಂಬಿಗ ಚೌಡಯ್ಯ. /79
ಕಂಥೆ ತೊಟ್ಟವ ಗುರುವಲ್ಲ,
ಕಾವಿ ಹೊತ್ತವ ಜಂಗಮವಲ್ಲ,
ಶೀಲ ಕಟ್ಟಿದವ ಶಿವಭಕ್ತನಲ್ಲ,
ನೀರು ತೀರ್ಥವಲ್ಲ,
ಕೂಳು ಪ್ರಸಾದವಲ್ಲ.
ಹೌದೆಂಬವನ ಬಾಯ ಮೇಲೆ
ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ. /80
ಕಟ್ಟಿ ಕಳೆ ಪಾಪವ, ಬಿಟ್ಟು ಕಳೆ ಪುಣ್ಯವ.
ಒತ್ತು ರೋಷವ, ಸಮತೆಯ ಪಸರಿಸಾ.
ಎತ್ತಿದರ್ಥವನು ಬೈಚಿಟ್ಟು,
ಮನದಲ್ಲಿ ಚಕ್ಕನೆ ತೀವು ಪರಿಣಾಮವನು, ಇದು ಬಟ್ಟೆ,
ದೇವತತ್ವದ ಮುಟ್ಟಲುಪದೇಶವ ಕೊಟ್ಟನಂಬಿಗ ಚೌಡ ತನ್ನನೊಲಿವರಿಗೆ./81
ಕಟ್ಟಿಗೆಯ ಹೊರೆಯ ಹೊತ್ತು
ಬಟ್ಟೆಯಲ್ಲಿ ಬಳಲಿ ಬರುವ ಮನುಜನಂ ಕಟ್ಟದಿರಿನಲ್ಲಿ ಕಂಡು,
ಆ ಹೊರೆಗೆ ತಲೆಗೊಟ್ಟವರಿಗೆ ಪುಣ್ಯವುಂಟು.
ಇದ್ದ…ಭಕ್ತ ವಿರಕ್ತರಿಗೆ ಮುಟ್ಟಾಳಾಗಿ,
ಅವರ ಅನುವರಿತು ತಾ ನಡೆಯಬೇಕು.
ನಡೆಯದಿರ್ದಡೆ ಹೋಗಲಿ
ಅರ…… ಯಿಷ್ಟ ಇಲ್ಲದೆ,
ಇದ ತನ್ನ ಕಟ್ಟುಮಾಡಿಕೊಳ್ಳ ಹೇಳಿದವರಾರೋ ಎಂದು,
ತನ್ನ ನಷ್ಟಕ್ಕೆ ತಾನೇ ಎಯ್ದಿದ್ದಾನೆಂ[ಬ]ವಿಶ್ವಾಸಹೀನನ ಕೊರಳಲ್ಲಿ
ಶಿವಲಿಂಗವು ಕಟ್ಟಿರ್ದಡೇನಯ್ಯಾರಿ
ಪಡುವಲದ ಕಾಯಿಗೆ ಕ[ಲ್ಲ] ಕಟ್ಟಿ ಇಳಿಯ ಬಿಟ್ಟಂತೆ.
ಮೈತುಂಬ ವಿಭೂತಿಯನಿಟ್ಟುಕೊಂಡಿರ್ದಡೇನಯ್ಯಾ ?
ಕೊಟ್ಟಿಗೆಯ ಮೇಗಣ ಕಗ್ಗುಂಬಳ ಕಾಯಂತೆ…ವೇನಯ್ಯಾ?
ಹುತ್ತದೊಳಗಣ ನಿಧಾನದಂತೆ.
ಈ ಕೆಟ್ಟತನವುಳ್ಳ ಭಂಡರ ಕಂಡು ಹೊಟ್ಟೆಯ ಹೊಯ್ದುಕೊಂಡು ನಗುತಿರ್ದ ಅಂಬಿಗ ಚೌಡಯ್ಯ. /82
ಕಟ್ಟಿದ ಲಿಂಗವ ಕಿರಿದು ಮಾಡಿ,
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!
ಇಂತಪ್ಪ ಲೊಟ್ಟಿಮೂಳರ ಕಂಡರೆ
ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ. /83
ಕಟ್ಟಿಹೆ ಬಿಟ್ಟಿಹೆನೆಂಬ ದಂದುಗ
ನಿಮಗೇಕೆ ?
ತೆರನನರಿಯದೆ ಹಲವು ತಪ್ಪಲ ತರಿ ತಂದು
ಮೇಲೊಟ್ಟಲೇಕೆ ?
ಜಂಗಮ ಬಂದರೆ ತೆರನರಿತು ಅರ್ಪಿಸಬಲ್ಲಡಲ್ಲಿ
ತಾನೆ ಶಿವನು ತೆರಹಿಲ್ಲದಿಪ್ಪನೆಂದಾತ ನಮ್ಮಂಬಿಗ ಚೌಡಯ್ಯ. /84
ಕತ್ತೆಯ ಮೇಲೆ ತಿತ್ತಿಯ ಮಾಡಿ ಕಳ್ಳು ಹೇರುವರು,
ಅದಕ್ಕದು ಸತ್ಯವಯ್ಯ.
ಎತ್ತಿನ ಮೇಲೆ ತಿತ್ತಿಯ ಮಾಡಿ ತೈಲ ತುಪ್ಪವ ಹೇರುವರು,
ಅದಕ್ಕದು ಸತ್ಯವಯ್ಯ.
ಆ ತಿತ್ತಿಯ ಒಳಗಣ ತೈಲ ತುಪ್ಪವ ತಂದು,
ನಿತ್ಯ ಗುರು-ಲಿಂಗ-ಜಂಗಮಕ್ಕೆ ನೀಡುವ
ಭಕ್ತನ ಭಕ್ತಿ ಎಂತಾಯಿತ್ತೆಂದಡೆ: ಆ ಕತ್ತೆಯ ಮೇಲೆ ಹೇರುವ ಕಳ್ಳುಗುಂಡಿಗಿಂದ ಕಡೆಯೆಂದಾತ ನಮ್ಮ ಅಂಬಿಗ ಚೌಡಯ್ಯ. /85
ಕರದಲ್ಲಿ ಲಿಂಗವ ಪಿಡಿದುಕೊಂಡು,
ಕಣ್ಣುಮುಚ್ಚಿ ಸರಜಪಮಾಲೆಯ
ಬೆರಳಿಂದ ಎಳೆದೆಳೆದು ಎಣಿಸುತ್ತ,
ಗುರುಮೂರ್ತಿಯ ಧ್ಯಾನಿಸುತ್ತ ಕಂಡೆನೆಂಬುತ್ತ
ಇರುವರೆ ಮೂಳರಿರಾ ?
ನಿಮಗೆಲ್ಲಿಯದೊ ಗುರುಧ್ಯಾನ ?
ವರ ಪರವಸ್ತುವಿಂಗೆ ಸರಿ ಎನಿಸಿಕೊಂಬ ಗುರುಸ್ವಾಮಿ
ನಿಮ್ಮ ನೆರೆಹೊರೆಯ ಸರಿಸಮೀಪ ಗ್ರಾಮದಲ್ಲಿರಲು
ಅವರನ್ನು ಲೆಕ್ಕಿಸದೆ, ಉದಾಸೀನವ ಮಾಡಿ ಕಂಡು
ನಿನ್ನ ಉಂಬ ಉಡುವ ಸಿರಿ ಸಂಪತ್ತಿನೊಳು ಅವರನು ಸತ್ಕರಿಸದೆ,
ಕರದಲ್ಲಿ ನೋಡಿ ಕಂಡಿಹೆನೆಂದು
ಶಿರವಂ ಬಿಗಿದು, ಕಣ್ಣನೆ ತೆರೆಯದೆ,
ಸ್ವರದಲಾಗ ಪಿಟಿಪಿಟಿ ಎನ್ನುತ್ತ ಅರಿದೆವೆಂಬ ಅರಿವಿಂಗೆ ಶಿರದೂಗಿ ಬೆರಗಾಗಿ ನಗುತಿರ್ದ ನಮ್ಮ ಅಂಬಿಗರ ಚೌಡಯ್ಯ. /86
ಕರ್ಮೆಂದ್ರಿಯ ಕಾಯವ ಕೂಡಿಪ್ಪುದು,
ಭಾವೇಂದ್ರಿಯ ಜೀವವ ಕೂಡಿಪ್ಪುದು,
ಜ್ಞಾನೇಂದ್ರಿಯ ಪರಮನ ಕೂಡಿಪ್ಪುದು.
ಕಾಯ ಜೀವ ಪರಮನ ಕೂಡುವ ಠಾವನರಿಯಬೇಕೆಂದನಂಬಿಗ ಚೌಡಯ್ಯ. /87
ಕರ್ಮೇಂದ್ರಿಯವಯಿದು,
ಭಾವೇಂದ್ರಿಯವಾರು,
ಜ್ಞಾನೇಂದ್ರಿಯ ಮೂರು.
ಅಯಿದು ಆರು ಮೂರನೊಂದು ಮಾಡಿ
ಬೇರೊಂದ ತಿಳಿಯಬೇಕೆಂದನಂಬಿಗ ಚೌಡಯ್ಯ. /88
ಕಲಿತು ಹೇಳಿಹೆನೆಂಬ ಕರ್ಕಶ ಬೇಡ,
ಅರಿಕೆಯಾದೆನೆಂಬ ಅರಿಹಿರಿಯತನ ಬೇಡ,
ಅರಿದು ಮರದೆನೆಂಬ ಸಂದೇಹ ಬೇಡ.
ದರ್ಪಣದಲ್ಲಿ ತೋರುವ ತನ್ನ ಒನಪ್ಪಾಫದ ಬಿಂಬದಂತೆ,
ಅದ ನಿಶ್ಚಯವಾಗಿ ನಿಶ್ಚಯಿಸಿದಲ್ಲಿ ಬೇರೊಂದಿಪ್ಪುದಿಲ್ಲ, ಎಂದನಂಬಿಗ ಚೌಡಯ್ಯ. /89
ಕಲ್ಲದೇವರ ಪೂಜೆಯ ಮಾಡಿ,
ಕಲಿಯುಗದ ಕತ್ತೆಗಳಾಗಿ ಹುಟ್ಟಿದರು.
ಮಣ್ಣದೇವರ ಪೂಜಿಸಿ ಮಾನಹೀನರಾದರು.
ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು.
ದೇವರ ಪೂಜಿಸಿ ಸ್ವರ್ಗಕ್ಕೇರದೆ ಹೋದರು!
ಜಗದ್ಭರಿತವಾದ ಪರಶಿವನೊಳಗೆ ಕಿಂಕರನಾದ ಶಿವಭಕ್ತನೆ ಶ್ರೇಷ್ಠನೆಂದಾತ ನಮ್ಮ ಅಂಬಿಗರ ಚೌಡಯ್ಯ./90
ಕಲ್ಲಿನಲ್ಲಿ ಕಠಿಣ, ಖುಲ್ಲರಲ್ಲಿ ದುರ್ಗುಣ,
ಬಲ್ಲವರಲ್ಲಿ ಸುಗುಣ ಉಂಟೆಂದೆಲ್ಲರೂ ಬಲ್ಲರು.
ಇಂತೀ ಇವು ಎಲ್ಲರ ಗುಣ.
ಅಲ್ಲಿಗಲ್ಲಿಗೆ ಸರಿಯೆಂದು ಗೆಲ್ಲ ಸೋಲಕ್ಕೆ ಹೋರದೆ ನಿಜವೆಲ್ಲಿತ್ತು
ಅಲ್ಲಿಯೆ ಸುಖವೆಂದನಂಬಿಗ ಚೌಡಯ್ಯ. /91
ಕಷ್ಟಜೀವನ ಮನುಜರಿರಾ,
ನೀವು ಹುಟ್ಟಿದ ಮೊದಲು,
ಎಷ್ಟು ಮಂದಿ ನಿಮ್ಮ ಕಣ್ಣ ಮುಂದೆ
ನಷ್ಟವಾಗಿ ಹೋದುದ ಕಂಡು ಕಂಡೂ
ಹೆಂಡಿರು ತನ್ನವರೆಂಬೆನೆ?
ಮಿಂಡಿಯಾಗಿ ಹಲವರ ಬಯಸುವವಳ
ಮಕ್ಕಳ ತನ್ನವರೆಂಬೆನೆ?
ಕೂಡುವಾಗ ದುಃಖ,
ಕೂಡಿದ ಒಡವೆಯ ಮಡಗುವಾಗ ದುಃಖ,
ಮಡಗಿದ ಒಡವೆಯ ತೆಗೆವಾಗ ದುಃಖ,
ಪ್ರಾಣವ ಬಿಡುವಾಗ ದುಃಖ,
ಹೊಲೆ ಸಂಸಾರವ ನಚ್ಚಿ ಕಾಲನ ಬಲೆಗೆ ಈಡಾ[ಗ]ದಿರೊ,
ಪತಿಭಕ್ತಿ, ಮುಕ್ತಿಯೆಂಬುದ ಗಳಿಸಿಕೊಳ್ಳಿರೊ,
ಸಟೆಯಂ ಬಿಡಿ, ದಿಟವಂ ಹಿಡಿ,
ಘಟವುಳ್ಳ ಕಾಲದಲ್ಲಿ ಶಿವಭಕ್ತಿಯ ನಟಿಸಿ ನಡೆ, ಎಂದಾತ ನಮ್ಮ ಅಂಬಿಗ ಚೌಡಯ್ಯ. /92
ಕಷ್ಟನ ಮನೆಯಲ್ಲಿ ಸೃಷ್ಟಿಗೀಶ್ವರನುಂಬಾಗ
ಎತ್ತ ಹೋದವು ನಿಮ್ಮ ಶಾಸ್ತ್ರಂಗಳು?
ಕೆತ್ತ ಮುಚ್ಚುಳು [ಬೆ]ಡಗಚ್ಚರಿದೆರೆವಾಗ
ಇಕ್ಕಿದ ಜನ್ನಿವಾರ ಭಿನ್ನವಾದವು.
ಮುಕ್ಕುಳಿಸಿದುದಕವ ತಂದೆರೆದಡೆ
ಎತ್ತಲಿದ್ದವು ನಿಮ್ಮ ವೇದಂಗಳು? ನಿಮ್ಮ ವೇದದ ದುಃಖ ಬೇಡೆಂದಾತನಂಬಿಗ ಚೌಡಯ್ಯ./93
ಕಳವು ಪಾರದ್ವಾರಕ್ಕೆ ಪರಾಕುಂಟೆರಿ ಅದು ತನ್ನ ಒಡಲಳಿವ ಇರವು.
ವರ್ಮ, ಧರ್ಮ, ವಚನಾನುಭವಂಗಳ ಮಾಡುವಲ್ಲಿ
ಪರಚಿಂತೆ ಪರಾಕು ಪರಿಭ್ರಮಣ- ಈ ಗುಣ ತನ್ನರಿವಿಂಗೆ ಕೇಡೆಂದನಂಬಿಗ ಚೌಡಯ್ಯ. /94
ಕಳ್ಳ, ಹಾದರಿಗ, ಸೂಳೆಗಾರ, ತಳವಾರನಲ್ಲಿ ಮಿಥ್ಯವಿಲ್ಲದಿರಬೇಕು.
ಸತ್ಯಸದಾಚಾರಿಗಳಲ್ಲಿ ಸದ್ಭಕ್ತ ಮಿಥ್ಯತಥ್ಯವಿಲ್ಲದಿರಬೇಕು. ಈ ಗುಣ ನಿತ್ಯ ನಿಜೈಕ್ಯನ ಯುಕ್ತಿಯೆಂದನಂಬಿಗ ಚೌಡಯ್ಯ./95
ಕಾಮವ ಕಳೆದು, ಕ್ರೋಧವ ದಾಂಟಿ,
ಲೋಭವ ಹಿಂಗಿ, ಮೋಹಾದಿಗಳಲ್ಲಿ ಮನವಿಕ್ಕದೆ,
ಆ ಕಾಮವ ಲಿಂಗದಲ್ಲಿ ಮರೆದು,
ಕ್ರೋಧವ ಕರಣಂಗಳಲ್ಲಿ ಬೈಚಿಟ್ಟು,
ಲೋಭವ ಸವರ್ೇಂದ್ರಿಯಂಗಳಲ್ಲಿ ಸಂಬಂಧಿಸಿ,
ಮೋಹಾದಿ ಗುಣಂಗಳ ಸ್ವಯಚರಪರದಲ್ಲಿ ಗಭರ್ಿಕರಿಸಿ,
ನಿಜವಾಸಿಯಾಗಿ ನಿಂದಾತನ ಅಡಿಗೆರಗುವೆನೆಂದನಂಬಿಗ ಚೌಡಯ್ಯ./96
ಕಾಯ ಜೀವವೆಂಬ ಹೆಚ್ಚು ಕುಂದನರಿಯದೆ
ಕ್ರೀ ಜ್ಞಾನ….ನಾನೀನೆಂಬ ಭಾವದ ಭ್ರಮೆಯು ಆರಿಗೆಂದನಂಬಿಗ ಚೌಡಯ್ಯ./97
ಕಾಯದ ಶೃಂಗಾರ ಕಾಮಿನಿಯರ ಕೂಟಕ್ಕೊಳಗು,
ಜೀವನ ಬಾಳುವೆ ಸಕಲಜೀವಂಗಳಲ್ಲಿ ಸಾಧನ.
ಕಾಯದ ಶೃಂಗಾರ, ಜೀವನ ಭವ-
ಎರಡರ ಠಾವನರಿಯಬೇಕೆಂದನಂಬಿಗ ಚೌಡಯ್ಯ. /98
ಕಾಯದಿಂದ ಕಂಡೆಹೆನೆಂದಡೆ ಬ್ರಹ್ಮನ ಹಂಗು,
ಜೀವದಿಂದ ಕಂಡೆಹೆನೆಂದಡೆ ವಿಷ್ಣುವಿನ ಹಂಗು,
ಅರಿವಿನಿಂದ ಕಂಡೆಹೆನೆಂದಡೆ ರುದ್ರನ ಹಂಗು,
ಕಾಬ ಕಾಬಲ್ಲಿ ಕಂಡೆಹೆನೆಂದಡೆ ನಾಡೆಲ್ಲರ ಹಂಗು.
ಇವನೆಲ್ಲವನಲ್ಲಾ ಎಂದು ನಿಲಿಕಿ ನೋಡಿ ಕಂಡ
ಅಂಬಿಗ ಚಾಡಯ್ಯ. /99
ಕಾಲ ವೇಳೆಯನರಿತು ಕೂಗಿದ ಕೋಳಿಯ ಕಂಡು
ಊರೆಲ್ಲರು ಬೆಳಗಾಯಿತ್ತೆಂದು ಏಳುವರಿಂದ ಕಡೆಯೆ ?
ಹೇಳುವ ಕೇಳುವ ಮಾತ ಕೇಳಿ ಆರ ಮರೆದು ಮೂರನರಿದು
ಈರೈದು ಕಂಡು ಬೇರೈದರಲ್ಲಿ ಗಾರಾಗದೆ, ಸಾರಿದೆ, ಕೆಡಬೇಡೆಂದನಂಬಿಗ ಚೌಡಯ್ಯ./100
ಕಾಶಿಯಾತ್ರೆಗೆ ಹೋದೆನೆಂಬ
ಹೇಸಿಮೂಳರ ಮಾತ ಕೇಳಲಾಗದು!
ಕೇತಾರಕ್ಕೆ ಹೋದೆನೆಂಬ
ಹೇಸಿಹೀನರ ನುಡಿಯ ಲಾಲಿಸಲಾಗದು!
ಸೇತುಬಂಧ ರಾಮೇಶ್ವರಕ್ಕೆ ಹೋದೆನೆಂಬ
ಸರ್ವಹೀನರ ಮುಖವ ನೋಡಲಾಗದು!
ಪರ್ವತಕ್ಕೆ ಹೋದೆನೆಂಬ
ಪಂಚಮಹಾಪಾತಕರ ಮುಖವ ನೋಡಲಾಗದು!
ಅದೆಂತೆಂದಡೆ: ಕಾಯವೆ ಕಾಶಿ, ಒಡಲೆ ಕೇತಾರ,
ಮಾಡಿನೀಡುವ ಹಸ್ತವೆ ಸೇತುಬಂಧರಾಮೇಶ್ವರ,
ಮಹಾಲಿಂಗವ ಹೊತ್ತಿರುವ ಶಿರಸ್ಸೆ ಶ್ರೀಶೈಲಪರ್ವತ ನೋಡಾ.
ಇಂತಿವನರಿಯದೆ ಪರ್ವತಕ್ಕೆ ಹೋಗಿ, ಪಾತಾಳಗಂಗೆಯ ಮುಳುಗಿ,
ತಲೆಯ ಬೋಳಿಸಿಕೊಂಡು, ಗಡ್ಡವ ಕೆರೆಸಿಕೊಂಡು, ಮೀಸೆಯ ತರಿಸಿಕೊಂಡು,
ಗಂಗೆಯೊಳು ಕೋಣನ ಹಾಂಗೆ ಮೈಗೆಟ್ಟು ಫಕ್ಕನೆ ಮುಳುಗಿ,
ಅಲ್ಲಿಂದ ಬಂದು ಅನ್ನವಸ್ತ್ರವಂ ಕಾಸುವೀಸವಂ ಕೊಟ್ಟು,
ಪಾಪ ಹೋಯಿತ್ತೆಂದು
ಅಲ್ಲಿಂದ ಬಂದು ಲಿಂಗವಡಿಗಡಿಗೆ ಹಾಯ್ದು,
ಬಾರದ ಪಾಪವ ತಾವಾಗ ಬರಸಿಕೊಂಡು, ತಗರ ಜನ್ಮದಲ್ಲಿ ಹುಟ್ಟುವರಯ್ಯ.
ಕೋಲು ಪುಟ್ಟಿಯಂ ಕೊಟ್ಟು ಅಟ್ಟಿಸಿ ಬಿಟ್ಟ ಬಳಿಕ,
ಅಲ್ಲಿಂದ ಬಂದವರಿಗೆ ಇಲ್ಲಿದ್ದವರು ಹೋಗಿ,
ಇದಿರುಗೊಂಡು ಕರತರುವುದಕ್ಕೆ!
ಕತ್ತೆ ಮೂಳಹೊಲೆಯರಿರ, ನೀವು ಕೇಳಿರೋ, ಅದಂತೆಂದಡೆ: ಶ್ರೀಮಹಾಪರ್ವತಕ್ಕೆ ಹೋದವರು ತಿರಿಗಿಬಪ್ಪರೆ ?
ಶ್ರೀಮಹಾಮೇರುವಿಗೆ ಹೋದವರು ಮರಳಿಬಪ್ಪರೆ ?
ಛೀ! ಛೀ! ನೀಚ ಮೂಳ ದಿಂಡೆಯ ನೀಳಹೊಲೆಯರೆಂದಾತ ನಮ್ಮ ದಿಟ್ಟ ವೀರಾಧಿವೀರನಂಬಿಗರ ಚೌಡಯ್ಯನು./101
ಕಾಷ್ಠದಲ್ಲಿ ನಿಂದಗ್ನಿಮಥನ
ಘಟವಾರಿಯಿಂದ ಅಡಗಿ ಸುಡುವುದು, ಅದರ ಭೇದ
ಇಂತಿ ಚತುಷ್ಟಯವನರಿದು ಕಂಡಲ್ಲಿ ಪ್ರಾಣಲಿಂಗಿಯೆಂದನಂಬಿಗ ಚೌಡಯ್ಯ./102
ಕಾಸಿನ ಕಲ್ಲ ಕೈಯಲ್ಲಿ ಕೊಟ್ಟು ಹೇಸದೆ ಕೊಂದ
ಗುರುವೆಂಬ ದ್ರೋಹಿ.
ಬಿಟ್ಟಡೆ ಸಮಯವಿರುದ್ಧ,
ಹಿಡಿದಡೆ ಜ್ಞಾನವಿರುದ್ಧ. ಇದ್ದಂತೆಂಬೆನಯ್ಯ ಅಂಬಿಗರ ಚಾಡಯ್ಯ./103
ಕಾಳೆಗದಲ್ಲಿ ಹೋಗದಿರಯ್ಯ,
ಕೋಲು ಬಂದು ನಿಮ್ಮ ತಾಗುಗು.
ಆರು ದರುಶನಕ್ಕೆ ತೋರದಿರಿ,
ಸೂರೆಗೊಂಡಹವು ನಿಮ್ಮುವ.
ನಾಲ್ಕು ವೇದ ಹದಿನಾರು ಶಾಸ್ತ್ರವೆಂಬರ ಬೆನ್ನುಹತ್ತದಿರು,
ಬೇರೆ ತೀರ್ಥ ಜಾತ್ರೆಯೆಂಬವರ ಕೊಂ[ಡು]ಅರಡಿತನ ಬೇಡ,
ಪುಣ್ಯಪಾಪವೆಂಬೆರಡು ಭಂಡವ ಬೆನ್ನಿಲಿಕ್ಕಿಕೊಂಡು ಬಾರದಿರು.
ನಿನ್ನಾತ್ಮನ ನೀ ತಿಳಿ, ಜಗ ನಿನ್ನೊಳಗೆಂದನಂಬಿಗ ಚೌಡಯ್ಯ./104
ಕುಡಿವ ನೀರೆನ್ನಬಹುದೆ, ಹುಡುಕುನೀರಲದ್ದುವಾಗ ?
ಅಡುವ ಕಿಚ್ಚೆನ್ನಬಹುದೆ, ಮನೆಯ ಸುಡುವಾಗ ?
ಒಡಲು ತನ್ನದೆನ್ನಬಹುದೆ, ಪುಣ್ಯ-ಪಾಪವನುಂಬಾಗ ?
ಒಡಲಜೀವವೆನ್ನಬಹುದೆ, ಇಕ್ಕಿ ಹೋಹಾಗ ?
ಇವನೊಡೆಬಡಿದು ಕಳೆಯೆಂದಾತನಂಬಿಗ ಚೌಡಯ್ಯ./105
ಕುರಿಕೋಳಿ ಕಿರುಮೀನ ತಿಂಬವರ
ಊರೊಳಗೆ ಇರು ಎಂಬರು.
ಅಮೃತಾನ್ನವ ಕರೆವ ಗೋವ ತಿಂಬವರ
ಊರಿಂದ ಹೊರಗಿರು ಎಂಬರು.
ಆ ತನು ಹರಿಗೋಲಾಯಿತ್ತು,
ಬೊಕ್ಕಣ, ಸಿದಿಕೆ, ಬಾರುಕೋಲು, ಪಾದರಕ್ಷೆ
ದೇವರ ಮುಂದೆ ಬಾರಿಸುವುದಕ್ಕೆ ಮದ್ದಳೆಯಾಯಿತ್ತು.
ಈ ಬುದ್ಧಲಿಕೆಯೊಳಗಣ ತುಪ್ಪವ ಶುದ್ಧಮಾಡಿ
ತಿಂಬ ಗುಜ್ಜ ಹೊಲೆಯರ ಕಂಡಡೆ
ಉದ್ದನ ಚಮ್ಮಾಳಿಗೆಯ ತೆಕ್ಕೊಂಡು ಬಾಯ ಕೊ[ಯ್ಯು]ವೆನು ಎಂದಾತ ನಮ್ಮ ಅಂಬಿಗರ ಚೌಡಯ್ಯ./106
ಕುರುಹೆಂಬೆನೆ ಕಲ್ಲಿನಲ್ಲಿ ಹತ್ತಿದ ಹಾವಸೆ,
ಅರಿವೆಂಬೆನೆ ಕಾಣಬಾರದ ಬಯಲು,
ಒಂದನಹುದು ಒಂದನಲ್ಲಾಯೆಂದು ಬಿಡಬಾರದು.
ಬಿಟ್ಟಡೆ ಸಮಯವಿಲ್ಲ, ಜಿಡ್ಡ ಹಿಡಿದಡೆ ಜ್ಞಾನವಿಲ್ಲ,
ಉಭಯದ ಗುಟ್ಟಿನಲ್ಲಿ ಕೊಳೆವುತ್ತಿದೇನೆ ಎಂದನಂಬಿಗ ಚೌಡಯ್ಯ./107
ಕುಲ ಹಲವಾದಡೇನು ? ಉತ್ಪತ್ಯ ಸ್ಥಿತಿ ಲಯ ಒಂದೆ ಭೇದ.
ಮಾತಿನ ರಚನೆಯ ಬೇಕಾದಂತೆ ನುಡಿದಡೇನು ? ಬಿಡುಮುಡಿಯಲ್ಲಿ ಎರಡನರಿಯಬೇಕೆಂದನಂಬಿಗ ಚೌಡಯ್ಯ. /108
ಕುಲವಾದ ಛಲವಾದ ವಾಗ್ವಾದಂಗಳಲ್ಲಿ ಹೋರುವನ್ನಬರ ಅರುಹಿರಿಯಪ್ಪರೆ ?
ಹಸುಳೆಯ ಕನಸಿನಂತೆ, ಹುಸಿಮಾತಿನ ಮಂತ್ರದಂತೆ, ಎಸಕವಿಲ್ಲದ ಅರಿಕೆಯಂತಿರಬೇಕೆಂದನಂಬಿಗ ಚೌಡಯ್ಯ. /109
ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ,
ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು
ಅಕ್ಕಿ ಕಣಕವ ಕೊಂಡುಹೋಗುವ ಗುರುವಿನ ಕಂಡರೆ,
ಕೆಡವಿ ಹಾಕಿ ಮೂಗನೆ ಕೊಯ್ಧು
ಇಟ್ಟಂಗಿಯ ಕಲ್ಲಿಲೆ ತಿಕ್ಕಿ
ಸಾಸಿವೆಯ ಹಿಟ್ಟನೆ ತಳಿದು
ಮೇಲೆ ಲಿಂಬಿಯ ಹುಳಿಯನೆ ಹಿಂಡಿ ಪಡುವ ಗಾಳಿಗೆ ಹಿಡಿಯೆಂದಾತ ನಮ್ಮ ಅಂಬಿಗರ ಚೌಡಯ್ಯ./110
ಕೂಡಿದ ಧನವೆಲ್ಲವನು ಗುರುಲಿಂಗಜಂಗಮಕ್ಕೆ
ವಂಚನೆಯ ಮಾಡಿ ಒಳಗಿಟ್ಟುಕೊಂಡು,
ನೆಲನ ತೋಡಿ ಬಚ್ಚಿಟ್ಟುಕೊಂಡು.
ಹಲವು ತೆರದ ಆಭರಣಂಗಳ ಮಾಡಿಸಿ,
ಕರ ಚರಣ ಉರ ಕರ್ಣಂಗಳೊಳಗಿಟ್ಟುಕೊಂಡು,
ಮತ್ತಿಷ್ಟು ಬದುಕಾಗಲೆಂದು ತನ್ನ ಕೈಯೊಳಗಿನ ಇಷ್ಟಲಿಂಗಕ್ಕೆ
ಅಷ್ಟವಿಧಾರ್ಚನೆಯಂ ಮಾಡುವ ಲಿಂಗಪೂಜಕನ ಪರಿ ಎಂತೆಂದೊಡೆ;
ಆ ಭಕ್ತನು ಪಂಚಾಭಿಷೇಕದಿಂದ ಲಿಂಗಕ್ಕೆ ಮಜ್ಜನವ ನೀಡಿದಡೆ
ಲಿಂಗದ ಚಿತ್ತದಲ್ಲಿ ಸುಣ್ಣ ನೀರನೆತ್ತಿ ಬಾಜಿಸಿದಂತಾಯಿತ್ತಯ್ಯಾ !
ಆ ಭಕ್ತನು ವಿಭೂತಿಯ ಧರಿಸಿದಡೆ
ಲಿಂಗದ ಚಿತ್ತದಲ್ಲಿ ಬೂದಿಯ ಬೊಕ್ಕಣವ ಕಟ್ಟಿ ಬಾಜಿಸಿದಂತಾಯಿತ್ತಯ್ಯಾ !
ಆ ಭಕ್ತನು ಗಂಧವ ಧರಿಸಿದರೆ
ಲಿಂಗದ ಚಿತ್ತದಲ್ಲಿ ಚಂಡಿಟ್ಟು ಬಾಜಿಸಿದಂತಾಯಿತ್ತಯ್ಯಾ !
ಆ ಭಕ್ತನು ಅಕ್ಷತೆಯನೇರಿಸಿದರೆ
ಲಿಂಗದ ಚಿತ್ತದಲ್ಲಿ ಕಲ್ಲು ಹೊರಿಸಿ ಬಾಧಿಸಿದಂತಾಯಿತ್ತಯ್ಯಾ !
ಆ ಭಕ್ತನು ಪುಷ್ಪವ ಧರಿಸಿದರೆ
ಲಿಂಗದ ಚಿತ್ತದಲ್ಲಿ ಬೆನ್ನ ಮೇಲೆ ಹೇರು ಹೊರಿಸಿದಂತಾಯಿತ್ತಯ್ಯಾ !
ಆ ಭಕ್ತನು ಧೂಪವ ಬೀಸಿದರೆ
ಲಿಂಗದ ಚಿತ್ತದಲ್ಲಿ ಅರವನಿಕ್ಕಿ ಬಾಧಿಸಿದಂತಾಯಿತ್ತಯ್ಯಾ !
ಆ ಭಕ್ತನು ದೀಪಾರತಿಯನೆತ್ತಿದರೆ
ಲಿಂಗದ ಚಿತ್ತದಲ್ಲಿ ಪಂಜುಗಳ್ಳರು ಬಂದು ಮೋರೆಯ ಸುಟ್ಟು
ಬಾ[ಧಿ]ಸಿದಂತಾಯಿತ್ತಯ್ಯಾ !
ಆ ಭಕ್ತನು ಸ್ತೋತ್ರಮಂತ್ರವ ನುಡಿದರೆ
ಲಿಂಗದ ಚಿತ್ತದಲ್ಲಿ ಕರ್ಣದೊಳಗೆ ತೊಣಚಿ ಹೊಕ್ಕು ಗೋಳಿಟ್ಟು
ಬಾಧಿಸಿದಂತಾಯಿತ್ತಯ್ಯಾ !
ಇಂತಪ್ಪ ಲಿಂಗಬಾಧಕರನು ಲಿಂಗಪೂಜಕರೆನಬಹುದೆ ?
ಆತನ ಅಂಗಳವ ಮೆಟ್ಟಬಹುದೆ ?
ಇದರ ಇಂಗಿತವ ನಿಜಭಾವವುಳ್ಳ ಶರಣರು ನೀವೇ ತಿಳಿದು ನೋಡಿರೆಂದಾತ ನಮ್ಮ ಅಂಬಿಗರ ಚೌಡಯ್ಯ./111
ಕೂರ್ಮನ ಭಾವ ನಿಂದಲ್ಲಿ, ಮೋಹವಾಗಿಪ್ಪುದು.
ಮರ್ಕಟಭಾವ ನಿಂದಲ್ಲಿ, ಹೆಚ್ಚುಗೆ ತಗ್ಗನರಸುತ್ತಿಪ್ಪುದು.
ವಿಹಂಗಜ್ಞಾನ ನಿಂದಲ್ಲಿ, ಅಡಿ ಆಕಾಶ ಉಭಯವನರಸುತ್ತಿಪ್ಪುದು.
ಪಿಪೀಲಿಕಭಾವ ನಿಂದಲ್ಲಿ, ಮೂರ್ತಿಧ್ಯಾನವಾಗಿಪ್ಪುದು.
ಧ್ಯಾನ ನಿಷ್ಪತ್ತಿಯಾಗಬೇಕೆಂದನಂಬಿಗ ಚೌಡಯ್ಯ./112
ಕೇಳಿದೇನೆಲೆ ಮಾನವ,
ಪಂಚಮಹಾಪಾತಕ ದೋಷಾದಿಗಳನ್ನು ಮಾಡಿ
ಬಾಯಿಲೆ `ಶಿವ ಶಿವ ಎಂದು ಶಿವನ ನೆನೆದರೆ
ಭವ ಹರಿಯಿತೆಂಬ ವಿಚಾರಗೇಡಿಗಳ ಮಾತು ಕೇಳಲಾಗದು.
ಜ್ಯೋತಿಯ ನೆನೆದರೆ ಕತ್ತಲೆ ಹಿಂಗುವುದೇ ?
ರಂಭೆಯ ನೆನೆದರೆ ಕಾಮದ ಕಳವಳ ಹೋಗುವುದೇ ?
ಮೃಷ್ಟಾನ್ನವ ನೆನೆದರೆ ಹೊಟ್ಟೆ ತುಂಬುವುದೆ ?
ಮಾಡಿದಂತಹ ದೋಷವು ಹೋಗಲಾರದು.
ಇಂತಪ್ಪ ದುರಾಚಾರಿಗಳ
ಪಡಿಹಾರಿ ಉತ್ತಣ್ಣಗಳ ಪಾದುಕೆಯಿಂದ
ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು./113
ಕೇಳಿರಯ್ಯಾ ಮಾನವರೆ,
ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ
ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ.
ಗಂಡ ಹೆಂಡಿರ ಮನಸ್ಸು ಬೇರಾದರೆ
ಗಂಜಳದೊಳಗೆ ಹಂದಿ ಹೊರಳಾಡಿ
ಒಂದರ ಮೇಲೆ ಒಂದು ಬಂದು ಮೂಸಿದ ಹಾಗೆ.
ಛೇ, ಛೇ, ಇದು ಭಕ್ತಿಯಲ್ಲಣ್ಣ.
ಅದೇನು ಕಾರಣವೆಂದೊಡೆ,
ಕಾಶಿಗೆ ಹೋದೆನೆಂಬವರು ಹೇಸಿ ತೊತ್ತಿನ ಮಕ್ಕಳಯ್ಯ.
ಮೈಲಾರಕ್ಕೆ ಹೋದೆನೆಂಬವರು ಮಾದಗಿತ್ತಿಯ ಮಕ್ಕಳಯ್ಯ.
ಪರ್ವತಕ್ಕೆ ಹೋದೆನೆಂಬವರು ಹಾದರಗಿತ್ತಿಯ ಮಕ್ಕಳಯ್ಯ.
ರಾಚೋಟಿಗೆ ಹೋದೆನೆಂಬವರು ಲಜ್ಜೆಮಾರಿ ತೊತ್ತಿನ ಮಕ್ಕಳಯ್ಯ.
ಛೇ, ಛೇ, ಇದು ಭಕ್ತಿಯಲ್ಲವಯ್ಯ.
ಅದೆಂತೆಂದೊಡೆ;
ಪರಬ್ರಹ್ಮ ಮೂರುತಿಯಾದ ಪರಶಿವನೆ ಗುರುನಾಮದಿಂ ಬಂದು
ಇಷ್ಟಲಿಂಗವ ಧರಿಸಿ, ಪಂಚಾಕ್ಷರಿಯ ಬೋಧಿಸಿದ ಮೇಲೆ
ಆ ಭಕ್ತನ ಕಾಯವೇ ಕೈಲಾಸ.
ಅವನ ಒಡಲೆ ಸೇತುಬಂಧ ರಾಮೇಶ್ವರ.
ಅವನ ಶಿರವೆ ಶ್ರೀಶೈಲ.
ಆತ ಮಾಡುವ ಆಚಾರವೆ ಪಂಚಪರುಷ.
ಇದು ತಿಳಿಯದೆ ಶಾಸ್ತ್ರದಿಂದ ಕೇಳಿ, ಅರಿಯದೆ
ಮಂದಬುದ್ಧಿಯಿಂದ ಪರ್ವತಕ್ಕೆ ಹೋಗಿ
ಪಾತಾಳಗಂಗೆಯಲ್ಲಿ ಮುಳುಮುಳುಗೆದ್ದರೆ,
ಛೇ, ಛೇ, ನಿನ್ನ ದೇಹದ ಮೇಲಣ ಮಣ್ಣು ಹೋಯಿತಲ್ಲದೆ,
ನಿನ್ನ ಪಾಪವು ಹೋಗಲಿಲ್ಲವು.
ಅಲ್ಲಿಂದ ಕಡೆಗೆ ಬಂದು, ಕೆಟ್ಟ ಕತ್ತಿಯ ಕೊಂಡು
ಕೆರವಿನಟ್ಟೆಯ ಮೇಲೆ ಮಸೆದು
ಮಸ್ತಕವ ತೋಯಿಸಿ ತಲೆಯ ಬೋಳಿಸಿಕೊಂಡರೆ,
ನಿನ್ನ ತಲೆಯ ತಿಂಡಿ ಹೋಯಿತಲ್ಲದೆ ನಿನ್ನ ಪಾಪವು ಬಿಡಲಿಲ್ಲವಯ್ಯ !
ಅಲ್ಲಿಂದ ಕೋಲು ಬುಟ್ಟಿಯ ತೆಗೆದುಕೊಂಡು ಬರುವಂತಹ
ದಿಂಡೆತೊತ್ತಿನ ಮಕ್ಕಳ ಕಣ್ಣಲಿ ಕಂಡು,
ಪಡಿಹಾರಿ ಉತ್ತಣ್ಣನ ಎಡದ ಪಾದ ಎಕ್ಕಡದಿಂದೆ
ಪಟಪಟನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು./114
ಕೇಳು ನೀನೆಲೊ ಮಾನವಾ,
ಸೋಮವಾರ ಅಮಾವಾಸ್ಯೆ ಹುಣ್ಣಿಮೆ ಎಂಬ
ದೊಡ್ಡ ಹಬ್ಬಗಳು ಬಂದಿಹವೆಂದು
ಮನೆಯ ಸಾರಿಸಿ, ರಂಗವೋಲೆಯನಿಕ್ಕಿ, ಆಸನವ ಬಲಿದು,
ಪತ್ರೆ ಪುಷ್ಪ ಮೊದಲಾದ ಅನಂತ ಸಾರಂಭವ ಸವರಿಸಿ
ವಿರಕ್ತನ ಕರೆತಂದು ಪೂಜೆಯ ಮಾಡುವುದಕ್ಕಿಂತಲೂ
ಹೊರೆಯಲ್ಲಿ ಚರಿಸಾಡುವ ಕಾಳ ಶುನಕನ ತಂದು
ಆ ಗದ್ದುಗೆಯಲ್ಲಿ ಪೂಜೆ ಮಾಡುವುದು ಮಹಾ ಲೇಸಯ್ಯಾ.
ಅದೇನು ಕಾರಣವೆಂದರೆ,
ಆಣವಮಲ ಮಾಯಾಮಲ ಕಾರ್ಮಿಕಮಲಕ್ಕೆ ಹೊರತೆಂದು,
ಅಷ್ಟಮದ ವಿರಹಿತನೆಂದು, ಷಡ್ಗುಣವ ಸಂಹರಿಸಿದವನೆಂದು,
ಶಾಸ್ತ್ರದಲ್ಲಿ ಸಂಪನ್ನನೆಂದು,
ಕ್ರಿಯೆಯಲ್ಲಿ ವೀರಶೈವನೆಂದು, ನಿರಾಭಾರಿಯೆಂದು,
ಬಾಯಿಲೆ ಬೊಗಳಿ ಲೌಕಿಕದಲ್ಲಿ ಮಠವ ಮಾಡಿಕೊಂಡು,
ಮಾನ್ಯವ ಸಂಪಾದಿಸಿಕೊಂಡು,
ಅಶನಕ್ಕಾಶ್ರಯನಾಗಿ, ವ್ಯಸನಕ್ಕೆ ಹರಿದಾಡಿ, ವಿಷಯದಲ್ಲಿ ಕೂಡಿ,
ಸರ್ವವು ಎನಗೆ ಬೇಕೆಂದು ತಮೋಗುಣದಿಂದ ದ್ರವ್ಯವ ಕೂಡಿಸಿ
ವಿರತಿಸ್ಥಲವು ಹೆಚ್ಚೆಂದು ಕಾವಿಯ ಹೊದೆದು, ಕಾಪೀನವ ಕಟ್ಟಿ,
ವೇಷ ಡಂಭಕದಿಂದ ತಿರುಗುವ ಭ್ರಷ್ಟರ ಮುಖವ ನೋಡಲಾಗದು.
ಇಂತಪ್ಪ ವಿರತರ ಪೂಜೆಯ ಮಾಡುವುದಕ್ಕಿಂತಲೂ
ಕರೇನಾಯಿಯ ತಂದು ಪೂಜೆಯ ಮಾಡುವುದು
ಮಹ ಲೇಸು ಕಂಡಯ್ಯ.
ಪಂಚಾಮೃತವ ಮುಂದಿಟ್ಟರೆ ಕಣ್ಣು ನೋಡುವುದು,
ದ್ರವ್ಯ ಮುಂದಿಟ್ಟರೆ ಕೈಯು ಮುಟ್ಟುವುದು,
ಎಂದು ಪೇಳುವ ವಿರತರ ನಾಲಗೆಯು
ಆ ನಾಯ ಬಾಲಕ್ಕಿಂತಲು ಕರ ಕಷ್ಟವು.
ಇಂತಹ ವಿರತರ ಪೂಜೆಯ ಮಾಡುವಾತನು, ಆ ಜಂಗಮವು
ಉಭಯತರ ಮೂಗು ಸವರಿ ಕತ್ತೆಯನೇರಿಸಿ
ಪಡಿಹಾರಿಕೆಗಳ ಪಾದುಕೆಯಿಂದ ಪಡಪಡ ಹೊಡಿ ಎಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು./115
ಕೈ ಮುಟ್ಟುವಲ್ಲಿ, ಕಿವಿ ಕೇಳುವಲ್ಲಿ, ಬಾಯಿ ಕೊಂಬಲ್ಲಿ,
ಮೂಗು ವಾಸಿಸುವಲ್ಲಿ, ಕಣ್ಣು ನೋಡುವಲ್ಲಿ-
ಇಂತೀ ಅಯಿದರ ಗುಣ ಎಡೆಯಾಟ ಅದಾರಿಂದ ಎಂಬುದ ತಾ ವಿಚಾರಿಸಿದಲ್ಲಿ,
ಪಂಚಕ್ರೀಯಲ್ಲಿ ಸಂಚಿತ ಪ್ರಾರಬ್ಧ ಆಗಾಮಿಯೆಂಬ ಹಿಂಚುಮುಂಚಿಗೆ ಸಿಕ್ಕದೆ,
ಕುಡಿವೆಳಗಿನ ಮಿಂಚಿನ ಸಂಚದಂತಿರಬೇಕೆಂದನಂಬಿಗ ಚೌಡಯ್ಯ./116
ಕ್ರೀ ಜ್ಞಾನವೆಂಬ ಉಭಯವ ತಾವರಿಯದೆ,
ಕಾಯಜೀವವೆಂಬ ಹೆಚ್ಚು ಕುಂದನರಿಯದೆ, ನಾನೀನೆಂಬ ಭಾವದ ಭ್ರಮೆ ಆರಿಗೆಂದನಂಬಿಗ ಚೌಡಯ್ಯ./117
ಕ್ರೀಯನರಿದವಂಗೆ ಗುರುವಿಲ್ಲ, ಆಚಾರವನರಿದವಂಗೆ ಲಿಂಗವಿಲ್ಲ,
ಉತ್ಪತ್ತಿ ಸ್ಥಿತಿ ಲಯವನರಿದವಂಗೆ ಜಂಗಮವಿಲ್ಲ,
ಪರಬ್ರಹ್ಮವನರಿದವಂಗೆ ಸವರ್ೆಂದ್ರಿಯವಿಲ್ಲ,
ತನ್ನನರಿದವಂಗೆ ಹಿಂದೆ ಮುಂದೆ ಎಂಬುದೊಂದೂಯಿಲ್ಲ, ಎಂದನಂಬಿಗ ಚೌಡಯ್ಯ./118
ಕ್ಷೀರದಿಂದಾದ ತುಪ್ಪ ಕ್ಷೀರವಪ್ಪುದೇ ?
ನೀರಿನಿಂದಾದ ಮುತ್ತು ನೀರಪ್ಪುದೇ ?
ವಿೂರಿ ಪೂರ್ವಕರ್ಮವನು ಹರಿದ ಭಕ್ತಗೆ
ಬೇರೆ ಮತ್ತೆ ಜನ್ಮವುಂಟೆ ಲಿಂಗವಲ್ಲದೆ ?
ಕಟ್ಟಿಹೆ ಬಿಟ್ಟಿಹೆವೆಂಬ ದಂದುಗ ನಿಮಗೇಕೆ ?
ತೆರನನರಿಯದೆ ಹಲವು ತೊಪ್ಪಲ ತರಿತಂದು ಮೇಲೊಟ್ಟಲೇಕೊ ?
ಜಂಗಮ ಬಂದರೆ ತೆರನರಿತು ಅರ್ಪಿಸಬಲ್ಲಡಲ್ಲಿ ಶಿವ ತೆರಹಿಲ್ಲದಿಪ್ಪನೆಂದಾತನಂಬಿಗರ ಚೌಡಯ್ಯ./119
ಗಂಡನೆಂಜಲಿಗೆ ಹೇಸುವಳು ಮಿಂಡನ ತಂಬುಲವ ತಿಂಬುವ ತೆರನಂತೆ,
ಗುರುವಿನುಪದೇಶವ ಕೊಂಡು,
ಅನೀತಿ ದೇವರುಗಳ ಎಡೆಯ ತಿನ್ನುವಂತಹ ಮಾದಿಗರು
ನೀವು ಕೇಳಿರೊ.
ಅಂಡಜ ಉತ್ಪತ್ತಿ ಎಲ್ಲ ದೇವರಿಂದಾಯಿತ್ತು.
ಮೈಲಾರ, ಬೀರ, ಭೈರವ, ಧೂಳ, ಕೇತನೆಂಬ
ಕಿರಿ ದೈವಕ್ಕೆರಗಿ, ಭಕ್ತರೆನಿಸಿಕೊಂಬುವ
ಚಂಡಿನಾಯಿಗಳ ಕಂಡು ಮನ ಹೇಸಿತ್ತೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. /120
ಗಂಧವ ವಾಯು ಕೊಂಬಾಗ ಅದ ತಂದು ಕೂಡಿದವರಾರು ?
ನಿಂದ ಮರಕ್ಕೆ ಸುಗಂಧ ಹುಟ್ಟುವಾಗ ಅದ ಬಂಧಿಸಿ ತಂದು ಇರಿಸಿದವರಾರು ?
ಅವು ತಮ್ಮ ಅಂಗದ ಸ್ವಭಾವದಂತೆ.
ನಿಂದ ನಿಜವೆ ತಾನಾಗಿ ಅಲ್ಲಿ ಬೇರೊಂದು
ಸಂದೇಹವ ಸಂಧಿಸಲಿಲ್ಲ
ಎಂದನಂಬಿಗ ಚೌಡಯ್ಯ./121
ಗಾಳಿಯ ಹಡೆದಲ್ಲಿ ತೂರಿಕೊಳ್ಳಯ್ಯಾ,
ಗಾಳಿ ನಿನ್ನಾಧೀನವಲ್ಲಯ್ಯಾ.
ನಾಳೆ ತೂರಿಹೆನೆಂದಡೆ ಇಲ್ಲಯ್ಯಾ.
ಶಿವಶರಣೆಂಬುದೊಂದು ಗಾಳಿಯ ಹಡೆದಲ್ಲಿ,
ಬೇಗ ತೂರೆಂದನಂಬಿಗ ಚೌಡಯ್ಯ. /122
ಗಿಡುವಿನ ಪುಷ್ಪವ ಕೊಯ್ಯೆನು,
ಮಡುವಿನಗ್ಘವಣಿಯ ತುಳುಕೆನು,
ಸ್ಥಾವರಂಗಳ ಪೂಜಿಸೆನು.
ಕೇಳು ಕೇಳು ನಮ್ಮಯ್ಯಾ;
ಮನದಲ್ಲಿ ನೆನೆಯೆ, ವಚನಕ್ಕೆ ತಾರೆ,
ಹೊಡವಂಟು ಬೇರು ಮಾಡುವವನಲ್ಲ.
ಬಸುರೊಳಗಿರ್ದು ಕಾಲನಿಡುವ ಬುದ್ಧಿ ಕೂಡದೆಂದನಂಬಿಗ ಚೌಡಯ್ಯ./123
ಗಿಣಿಯಿಲ್ಲದ ಪಂಜರ ಹಲವು ಮಾತನಾಡಬಲ್ಲುದೆ ?
ದೇವರಿಲ್ಲದ ದೇಗುಲಕ್ಕೆ ಮಂತ್ರ, ಅಭಿಷೇಕವುಂಟೆ ?
ಅರಿವು ನಷ್ಟವಾಗಿ ಕುರುಹಿನ ಹಾವಚೆಯ
ನಾನರಿಯೆನೆಂದನಂಬಿಗ ಚಾಡಯ್ಯ./124
ಗುರುಲಿಂಗಜಂಗಮಕ್ಕೆ ಆಧಾರ ಬಸವಣ್ಣ,
ಪಾದೋದಕ ಪ್ರಸಾದಕ್ಕೆ ಆಧಾರ ಬಸವಣ್ಣ,
ಸರ್ವಾಪತ್ತಿಗಾಧಾರ ಬಸವಣ್ಣ,
(ಸ್ವರ್ಗ) ಮತ್ರ್ಯ ಪಾತಾಳಕ್ಕೆ ಬಸವಣ್ಣನ ಚೈತನ್ಯವಲ್ಲದಿಲ್ಲ.
ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ
ಎನುತಿದರ್ಾತನಂಬಿನ (ಗ) ಚೌಡಯ್ಯ. /125
ಗುರು-ಲಿಂಗ-ಜಂಗಮವೆಂದರಿಯದ ಗೊಡ್ಡುಗಳ
ಶಿಷ್ಯನ ಮಾಡಿಕೊಂಬುವ ಹೆಡ್ಡಜಡಜೀವಿಗಳನೇನೆಂಬೆನಯ್ಯ !
ಆಚಾರ-ಅನಾಚಾರದ ಭೇದವನರಿಯದ ಹೆಡ್ಡ ಮಾನವರಿಗೆ
ಉಪದೇಶವ ಕೊಡುವ ಮತಿಭ್ರಷ್ಟರನೇನೆಂಬೆನಯ್ಯ !
ಅವನ ಅಜ್ಞಾನವನಳಿಯದೆ, ಅವನ ನಡೆನುಡಿಯ ಹಸ ಮಾಡದೆ,
ಅವನ ಆದಿ-ಅಂತ್ಯವ ತಿಳಿಯದೆ,
ಧನಧಾನ್ಯದ್ರವ್ಯದಾಸೆಗೆ ಶಿವದೀಕ್ಷೆಯ ಮಾಡುವನೊಬ್ಬ ಗುರುವ
ಹುಟ್ಟಂಧಕನೆಂಬೆನಯ್ಯ !
ತನ್ನ ಗುರುತ್ವವನರಿಯದ ಗುರುವಿಂದ
ಉಪದೇಶವ ಪಡವನೊಬ್ಬ ಶಿಷ್ಯನ ಕೆಟ್ಟಗಣ್ಣವನೆಂಬೆನಯ್ಯ !
ಇಂತಿವರ ಗುರು-ಶಿಷ್ಯರೆಂದಡೆ ನಮ್ಮ ಪ್ರಮಥರು ಮಚ್ಚರಯ್ಯ !
ನಮ್ಮ ಪ್ರಮಥರು ಮಚ್ಚದಲ್ಲಿ ಇಂತಪ್ಪ ಗುರುಶಿಷ್ಯರಿಬ್ಬರಿಗೆಯೂ
ಯಮದಂಡಣೆ ತಪ್ಪದೆಂದಾತನಂಬಿಗರ ಚೌಡಯ್ಯನು./126
ಗುರುವಿನೊಳಡಗಿದ ಭಕ್ತ ಪರವ ಕಂಡುದಿಲ್ಲ,
ಲಿಂಗದೊಳಡಗಿದ ಭಕ್ತ ಜಂಗಮವ ಕಂಡುದಿಲ್ಲ.
ಇವರಿಬ್ಬರ ಭಕ್ತಿಯೂ ಹುರಿಗೂಡದ ಹಗ್ಗದಂತಾಯಿತ್ತು ನೋಡಯ್ಯ.
ಅರಿವು ಆಚಾರವಿಡಿದು ಆಚರಿಸಿದ ಸದ್ಭಕ್ತನು.
ಗುರು ಲಿಂಗ ಜಂಗಮವ ನೆರೆ ಕಂಡು ಸನ್ಮತನಾಗಿ
ಇ[ಹ] ಪರವೆಂಬುಭಯ ಸಂಕಲ್ಪವರತದಲ್ಲದಿಲ್ಲವೆಂದಾತ
ನಮ್ಮ ಅಂಬಿಗ ಚೌಡಯ್ಯ. /127
ಗುರುವೆಂಬ ಭಾವ ಬ್ರಹ್ಮಮೂರ್ತಿ, ಲಿಂಗವೆಂಬ ಭಾವ ವಿಷ್ಣುಮೂರ್ತಿ,
ಜಂಗಮವೆಂಬ ಭಾವ ರುದ್ರಮೂರ್ತಿ.
ಅದೆಂತೆಂದಡೆ;
ಅನಾದಿವಸ್ತು ರೂಪಾಗಬೇಕಾದ ಕಾರಣ,
ಅಹಂ ಬ್ರಹ್ಮವೆಂಬ ಆಕಾರವಿಡಿದು ಬ್ರಹ್ಮಮೂರ್ತಿಯಾದ,
ಜ್ಞಾನರುದ್ರ ಪೀಠಸಂಬಂಧಿಯಾದ ಕಾರಣ ವಿಷ್ಣುಮೂರ್ತಿಯಾದ,
ಚಿದ್ಘನರುದ್ರ ಚತುರ್ವಿಧಫಲಂಗಳೊಳಗಾದ ಕಾರಣ
ಸಂಹಾರರುದ್ರನಾದ.
ಸಂಹಾರ ಅಡಗಿ ನಿಂದು, ಉಮಾಪತಿತತ್ವವ ಬಿಟ್ಟು ಸ್ವಯಂಭುಲಿಂಗವಾದ.
ಆ ಸ್ವಯಂಭು ಜಂಗಮವೆಂಬಲ್ಲಿ ನಿಂದು ನಿಜವ ಕಂಡಲ್ಲಿ ಲಿಂಗವಾದ.
ಲೀಯವಾಗಿ ಕಾಣಲ್ಪಟ್ಟುದ ನಿಲಿಸಿ
ಭಾವರಹಿತನಾಗಬೇಕೆಂದನಂಬಿಗ ಚೌಡಯ್ಯ. /128
ಗುರುವೆಂಬೆನೆ ಹಲಬರ ಮಗ,
ಲಿಂಗವೆಂಬೆನೆ ಕಲುಕುಟಿಕನ ಮಗ,
ಪ್ರಸಾದವೆಂಬೆನೆ ಒಕ್ಕಲಿಗನ ಮಗ,
ಪಾದೋದಕವೆಂಬೆನೆ ದೇವೇಂದ್ರನ ಮಗ
ಈಸುವ ಹಿಡಿಯಲೂ ಇಲ್ಲ, ಬಿಡಲೂ ಇಲ್ಲ.
ತನ್ನೊಳಗ ನೋಡೆಂದನಂಬಿಗ ಚೌಡಯ್ಯ./129
ಘಟದ ಮಧ್ಯದಲ್ಲಿ ನಿಂದವನ, ಆತ್ಮನ ಚಿತ್ತದಲ್ಲಿ ಅರಿದವನ,
ಅಲ್ಲ ಆಹುದೆಂದು ಗೆಲ್ಲ ಸೋಲಕ್ಕೆ ಹೋರದವನ,
ಎಲ್ಲಾ ಜೀವಂಗಳಲ್ಲಿ ದಯವುಳ್ಳವನ,
ಆತನೆಲ್ಲಿಯೂ ಸುಖಿಯೆಂದನಂಬಿಗ ಚೌಡಯ್ಯ. /130
ಚಿತ್ರವ ಬರೆವ ಲೆಕ್ಕಣಿಕೆಯ ಕಟ್ಟಿಗೆಯಂತೆ
ನೋಡಿದಡೆ ರೋಮಹಲವಾಗಿ,
ಬರೆವಡೆ ಕೂಡಿಹ ದಾರಿ ಒಂದೆಯಾಗಿ ತೋರುವೊಲು,
ತನ್ನಿಚ್ಛೆಗೆ ಪ್ರಕೃತಿ ಹಲವಾಗಿ ವಸ್ತುವ ಮುಟ್ಟುವಲ್ಲಿ
ಏಕಚಿತ್ತವಾಗಿರಬೇಕೆಂದನಂಬಿಗ ಚೌಡಯ್ಯ./131
ಜಂಗಮದ ಪಾದತೀರ್ಥ ಎನ್ನಂಗದೋಷವ ಕಳೆಯಿತ್ತಯ್ಯ,
ಜಂಗಮದ ಪಾದತೀರ್ಥ ಎನ್ನ ಲಿಂಗಕೆ ಪ್ರಾಣಪ್ರತಿಷ್ಠೆಯಾಯಿತ್ತಯ್ಯ,
ಜಂಗಮದ ಪಾದತೀರ್ಥ ಸಂಗನ ಶರಣರಿಗೆ ಮುಕ್ತಿಯ ಪಥವ ತೋರಿತ್ತಯ್ಯ.
ಇಂತಪ್ಪ ಜಂಗಮದ ಪಾದತೀರ್ಥಕ್ಕೆ
ಎಂತಪ್ಪ ಹಿರಿಯರಾದರು ತಮ್ಮ ಗರುವಿಕೆಯ ಬಿಟ್ಟು,
ದೀರ್ಘದಂಡಪ್ರಣಾಮಂಗೆಯ್ದು ನಮಸ್ಕರಿಸಿ,
ಸಾಕ್ಷಿ-
ಉತ್ತಮಂ ದೀರ್ಘದಂಡಂ ಚ ಮಧ್ಯಮಂ ಶಿರೋ ವಂದನಂ
ಕನಿಷ್ಟಂ ಕರ [ಮೇಲನಂ] ವಾಗ್ವಂದನಂ ಮಹಾ [ಧಮಂ]
ಎಂಬುದಾಗಿ
ಜಂಘೆಯಿಕ್ಕಿ ನಡದುಬಂದು ಕೊಂಡಡೆ ಕಂಗಳ ಮೂರುಳ್ಳ ದೇವನೆಂಬೆ,
ಹಿರಿಯ ಮಹೇಶ್ವರನೆಂಬೆ.
ಹಾಂಗಲ್ಲದೆ ಕಂಗಳು ಹೋದ ಅಂಧಕನಂತೆ, ಕಾಲಿಲ್ಲದ ಪಂಗುಳನಂತೆ,
ತಾನಿದ್ದಲ್ಲಿಯೇ ಇದ್ದು
ಅಯ್ಯಾ ಶರಣಾರ್ಥಿಯೆಂದು ಇದ್ದೆಡೆಗೆ ತರಿಸಿಕೊಂಡು,
ಅಂಗಯ್ಯಾಂತುಕೊಂಬ ಚೆಂಗಿಮೂಳ ಹೊಲೆಯರ ಕಂಡಡೆ
ನೆತ್ತಿಯ ಮೇಲೆ ಚೊಂಗ ಚೊಂಗನೆ ಹೊಡಿ,
ಒದ್ದೊದ್ದು ತುಳಿಯೆಂದು [ಹೇಳಿ] ದಾತನಂಬಿಗ ಚೌಡಯ್ಯ./132
ಜಂಗಮವ ಕರತಂದು ಮನೆಯಲ್ಲಿ ಕುಳ್ಳಿರಿಸಿ,
ಅಂಗದ ಮೇಲಣ ಜಪವನೆಣಿಸುವ ಭಕ್ತನ ಜಪದ ಬಾಯಲ್ಲಿ ಕೆರಹನಿಕ್ಕಲಿ!
ಅವನ ಲಿಂಗಾರ್ಚನೆಯ ಬಾಯಲ್ಲಿ ಹುಡಿಯ ಹೊಯ್ಯಲಿ!
ಜಂಗಮದ ತೃಪ್ತಿಯನರಿಯದೆ ಲಿಂಗವಂತನೆಂತಾದನೊ ? ಮರುಳೆ!
ಅವ ಪಿಸುಣ, ಹೊಲೆಯನೆಂದಾತನಂಬಿಗರ ಚೌಡಯ್ಯ./133
ಜಂಗಮವೆಂದಡೆ ನಡೆನುಡಿ ಸಿದ್ಧಿಯಾಗಿರಬೇಕು.
ಮೂರು ಮಲಕ್ಕೆ ಸಿಕ್ಕದೆ, ಆರರಡಿಗೆ ಅ[ಡಿ]ಮೆಯಾಗದೆ,
ಆ ಗುಣ ತೋರುವುದಕ್ಕೆ ಮೊದಲೆ
ಮೀರಿ ಇರಬೇಕೆಂದನಂಬಿಗ ಚೌಡಯ್ಯ. /134
ಜನನ ಸೂತಕ ಮರಣ ಸೂತಕಂಗಳ ಕಳೆದು
ಶುದ್ಧವಾದೆನೆಂಬ ಅಜ್ಞಾನಿ ಜಡಜೀವಿಗಳು ನೀವು ಕೇಳಿರೋ!
ಪೃಥ್ವಿ ಶುದ್ಧವೆಂಬಿರಿ,
ಇಪ್ಪತ್ತೊಂದು ಲಕ್ಷ ಜೀವರಾಶಿಗಳು
ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಅಪ್ಪು ಶುದ್ಧವಲ್ಲ.
ಅಗ್ನಿ ಶುದ್ಧವೆಂಬಿರಿ,
ಇಪ್ಪತ್ತೊಂದು ಲಕ್ಷ ಜೀವರಾಶಿಗಳು
ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಅಗ್ನಿ ಶುದ್ಧವಲ್ಲ.
ಅಪ್ಪು ಶುದ್ಧವೆಂಬಿರಿ,
ಇಪ್ಪತ್ತೊಂದು ಲಕ್ಷ ಜೀವರಾಶಿಗಳು
ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಪೃಥ್ವಿ ಶುದ್ಧವಲ್ಲ.
ಅಪ್ಪು ಶುದ್ಧವೆಂಬರಿ,
ಇಪ್ಪತ್ತೊಂದು ಲಕ್ಷ ಜೀವರಾಶಿಗಳು
ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ವಾಯು ಶುದ್ಧವಲ್ಲ.
ಆಕಾಶ ಶುದ್ಧವೆಂಬಿರಿ,
ಈ ಚತುರ್ವಿಧ ತತ್ವಂಗಳ ಒಳಗಿಟ್ಟುಕೊಂಡು
ಈ ಪ್ರಕಾರವಾದ ಕಾರಣ ಆಕಾಶ ಶುದ್ಧವಲ್ಲ.
ಇವು ಶುದ್ಧವಹ ಪರಿ ಎಂತೆಂದೊಡೆ: ಈ ಪಂಚತತ್ವಂಗಳು ಹುಟ್ಟಿದವು
ನಮ್ಮ ಸದಾಶಿವನ ಸಿರಿಯಪ್ಪದೊಂದು ಇಷ್ಟಲಿಂಗದಲ್ಲಿ.
ಆ ಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡಿ ಸರ್ವ ರುಚಿಪದಾರ್ಥವನು ತಂದು
ಆ ಲಿಂಗಕ್ಕೆ ಕೊಟ್ಟಲ್ಲಿ,
ಲಿಂಗಪ್ರಸಾದವದು ಅಂಗಕ್ಕೆ ಲೇಸಾಗಲೆಂದು,
ಕೊಂಬಾತನ ಸರ್ವಾಂಗವೆಲ್ಲ ಶುದ್ಧವಯ್ಯಾ.
ಆತನಿಪ್ಪ ಗೃಹವೇ ಪುಣ್ಯಕ್ಷೇತ್ರವು,
ಅಂತಹವರ ಪಾದಕ್ಕೆ ಶರಣಾರ್ಥಿ.
ಈ ವಿವರವನರಿಯದೆ ತನ್ನ ಕರದ ಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡದೆ,
ಭೋಜನ ಪದಾರ್ಥ ನೀರು ರೊಟ್ಟಿ ಮುಟ್ಟಿಗೆ ಗುಗ್ಗರಿ
ಸೀತೆನಿ ಬೆಳಸಿ ಕಾಯಿ ಕಸಿಕು ಹಣ್ಣು ಹಂಪಲ
ಹಾಲು ಮೊಸರು ಮಜ್ಜಿಗೆ ತುಪ್ಪ ಸಕ್ಕರೆ ಹೋಳು ವೀಳೆಯ
-ಇವನೆಲ್ಲವನು ತನ್ನ ಲಿಂಗಕ್ಕೆ ಕೊಡದೆ,
ಅಂಗಕ್ಕೆ ಲೇಸಾಗಲೆಂದು ತಿಂಬುವನು
ಅವನೀಗ ತಾನೇ ಶುದ್ಧ ಹೊಲೆಯನೆಂದಾತ ನಮ್ಮ ಅಂಬಿಗರ ಚೌಡಯ್ಯ. /135
ಜಾತಿಭ್ರಮೆ, ನೀತಿಭ್ರಮೆ ಎಂಬ ಕರ್ಮಂಗಳನು
ಘಾತಿಸಿ ಕಳೆಯಬಲ್ಲಡಾತ ಯೋಗಿ.
ಕ್ಷೇತ್ರಮೆ, ತೀರ್ಥಭ್ರಮೆ, ಪಾಷಾಣಭ್ರಮೆ ಎಂಬ ಕರ್ಮಂಗಳನು
ನೀಕರಿಸಿ ಕಳೆಯಬಲ್ಲಡಾತ ಯೋಗಿ.
ಲೋಕಕ್ಕಂಜಿ ಲೌಕಿಕವ ಮರೆಗೊಂಡು ನಡೆವಾತ ತೂತಯೋಗಿ ಎಂದಾತನಂಬಿಗ ಚೌಡಯ್ಯ. /136
ಜಾತಿವಿಚಾರ, ನೀತಿವಿಚಾರ,
ಸಮಯವಿಚಾರವೆಂಬ ತ್ರಿವಿಧವ ಹಿಡಿದು, ಬಿಡದೆ
ಉತ್ತಮ ಮಧ್ಯಮ ಕನಿಷ್ಠವೆಂಬವ ಕಾಲಿಗೆ
ಮಾವವ ಕಟ್ಟಿ ಸಿಕ್ಕಿಸಿ,
ಸರ್ವಸೂತಕದೊಳಗಿರ್ದಜಾತನಾದೆ
ಕ….ಗವನೆಂದಡಾತ
ಸಾಧ್ಯವಾದಾತನೆ ?
ಸಿಕ್ಕನೆಂದ ಅಂಬಿಗ ಚೌಡಯ್ಯ. /137
ಜೇಡಂಗೆ ಬೇಡಂಗೆ ಡೋಹಾರಂಗೆ ಹೊಲೆಯಂಗೆ
ರೂಢಿಗೀಶ್ವರನೊಲಿದ ಪರಿಯ ನೋಡಾ ಅಯ್ಯಾ!
ಲೋಕದ ಮನುಜರು ಮಾಡುವ ಸಮಯಂಗಳ ಮಾಡಲೇಕೆ?
ಅವರು ಸ್ವತಂತ್ರರು, ಇವರು ಹೋದಠಾವಿನಲ್ಲಿ ಕಲ್ಲು ಮುಳ್ಳು ಮೂಡವು.
ಇವರ ಕೂಡ ಕೂರದಾತನಂಬಿಗ ಚಾಡಯ್ಯ. /138
ಜ್ಞಾನಾಜ್ಞಾನವೆಂಬ ಉಭಯವ ನಾನರಿಯದೆ,
ಕಾಯ ಜೀವವೆಂಬ ಹೆಚ್ಚು ಕುಂದರಿಯದೆ,
ನಾನು ನೀನು ಎಂದೆಂಬ ಭ್ರಮೆ ಇನ್ನಾರಿಗೆ ? ಹೇಳೆಂದಾತ ನಮ್ಮಂಬಿಗ ಚೌಡಯ್ಯ. /139
ಜ್ಞಾನಿಯಾದಲ್ಲಿ ಧ್ಯಾನ ಮೋನಂಗಳಲ್ಲಿರಲೇತಕ್ಕೆ?
ಅರಿವು ಕರಿಗೊಂಡಲ್ಲಿ ಸುರುಳಿ ಸುರುಳಿ ಬಿಡಲೇತಕ್ಕೆ?
“ತಲೆಯೊಡೆಯಂಗೆ ಕಣ್ಣು ಹೊರತೆ ಎಂಬ ತುಡುಗುಣಿತನವೆ? ಆ ಗುಣ ಬಿಡುಮುಡಿಯಲ್ಲ ಎಂದನಂಬಿಗ ಚೌಡಯ್ಯ. /140
ಜ್ಯೋತಿ ನಾಲ್ಕರೊಳಗೆ ಆತ್ಮನೈದಾನೆ.
ಆತ್ಮನೊಳಗೆ ಸಾಕಾರನೈದಾನೆ.
ಸಾಕಾರನೊಳಗೆ ಸೂಕ್ಷ್ಮನೈದಾನೆ. ಈಸುವನರಿದಾತಂಗೆ ಆ ಕಾಯ ಕೆಡದೆಂದನಂಬಿಗ ಚೌಡಯ್ಯ. /141
ತಟಾಕ ಒಡೆದಡೆ ಕಟ್ಟುವಡೆವುದಲ್ಲದೆ.
ಅಂಬುಧಿ ತುಂಬಿ ಮೇರೆದಪ್ಪಿದಲ್ಲಿ ಕಟ್ಟಿಂಗೆ ಹಿಂಗಿ ನಿಂದುದುಂಟೆ?
ಅರಿಯದವಂಗೆ ಅರಿಕೆಯ ಹೇಳಿದಡೆ ಅರಿವನಲ್ಲದೆ
ಅರಿದು ಮರೆದವಂಗೆ ಬೇರೊಂದೆಡೆಯ ಹೇಳಿಹೆನೆಂದಡೆ, ಕಡೆ ನಡು ಮೊದಲಿಲ್ಲಾ ಎಂದನಂಬಿಗ ಚೌಡಯ್ಯ. /142
ತಟ್ಟು ಗೋಣಿಸೊಪ್ಪು ಸಕಲಾತಿ ಅಲ್ಲ[ವು],
ತೊತ್ತಿನ ಮಗ ಭಕ್ತನಲ್ಲವಯ್ಯಾ,
ಹಿರಿಯ ದೇವತೆಗೆ ಬಿಟ್ಟ ಕೋಣ ಗೂಳಿಯಲ್ಲವಯ್ಯಾ.
ಕಂಡ ತೊತ್ತಿಗೆ ಹುಟ್ಟಿದವ ಜಂಗಮವಲ್ಲವಯ್ಯಾ.
ಹಣತಿ ನೆಕ್ಕುವ ಮಠಪತಿ ಪಂಚಮಠಕ್ಕೆ ಸಲ್ಲ.
ಈ ಮೂ[ಳ]ರಿಗೆ ಆದಿಯಲ್ಲಿ ಗುರುಉಪದೇಶ[ವ] ತುಂಬಿಲ್ಲ.
ಈ ಮೂ[ಳ]ರ ಮೂಗು ಕೊಯ್ದು ಉಪ್ಪು ಸಾರು ತುಂಬಿ,
ನೆತ್ತಿಯ ಬೋಳಿಸಿ ಕತ್ತೆಯನೇರಿಸಿ,
ಮೇಲೆ ನಿಂಬೆಯ ಹುಳಿಯ ಬಿಟ್ಟು, ಪಡುವ ದಾರಿಗೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ/143
ತಡಿ ನೆಲೆ ಇಲ್ಲದ ಮಹಾನದಿಯಲ್ಲಿ
ಒಡಲಿಲ್ಲದಂಬಿಗ ಬಂದೈದಾನೆ.
ಹಿಡಿವ ಬಿಡುವ ಮನದ ಬೆಲೆಗೊಟ್ಟಡೆ
ಗಡಣವಿಲ್ಲದೆ ಹಾಯಿಸುವೆ ಹೊಳೆಯ, ನುಡಿಯಿಲ್ಲದ ನಿಸ್ಸೀಮ ಗ್ರಾಮದಲಿರಿಸುವೆನೆಂದಾತನಂಬಿಗ ಚೌಡಯ್ಯ/144
ತನ್ನ ತನ್ನಿಚ್ಛೆಗೆ ಬಹಲ್ಲಿ ಪಿನಾಕಿ ಬೋಸರಗಿತ್ತಿಯ ಹಾಸೆ?
ಮನವ ಕಟ್ಟಿ, ಐದನೆಯ ಭೂತವ ಸುಟ್ಟಡೆ. ಎನ್ನ ದೇವನುಂಟಿಲ್ಲೆನ್ನಬೇಡ.
ಮನಗಾಯಲಾರದೆ ತನುಗಾಯಹೋದಡೆ, ಎನ್ನ ದೇವ ಸೆರೆಯಲ್ಲೆಂದಾತನಂಬಿಗ ಚೌಡಯ್ಯ. /145
ತನ್ನ ಬುದ್ಧಿ ತನ್ನ ಚಿತ್ತದಲ್ಲಿ ಅಡಗಿದ ಮತ್ತೆ
ನಾಡೆಲ್ಲರ ಕೂಡಿ ಓದಿ ಹಾಡಿ ಹೇಳಲೇತಕ್ಕೆ?
ತನ್ನ ತಾನರಿದಲ್ಲಿ ಕಾಬ ಇದಿರು
ತನಗೆ ಅನ್ಯಭಿನ್ನವಿಲ್ಲಾ ಎಂದನಂಬಿಗ ಚೌಡಯ್ಯ. /146
ತನ್ನುವ ಮರೆದು ದೇವರ ಕಂಡೇನೆಂಬ ಕಾರಣ,
ಹರಿ ಸುರ ಬ್ರಹ್ಮಾದಿಗಳೆಲ್ಲರು ತಲೆ ಕೆಳಗಾಗಿ ಹೋದರು!
ಆ ದೇವರ ಮರೆದು ತನ್ನುವನರಿದುದುಂಟಾದರೆ, ತಾನೆ ದಿಟವೆಂದನಂಬಿಗ ಚೌಡಯ್ಯ. /147
ತನ್ನುವ ಹುಸಿ ಮಾಡಿ, ಇನ್ನೊಂದು ದಿಟಮಾಡುವ ಅಣ್ಣಂಗೆ
ನಂಬುಗೆ ಇನ್ನಾವುದಯಾಭ?
ತನ್ನೊಳಗಿರ್ದ ಘನವ ತಾ ತಿಳಿಯಲರಿಯದೆ,
ಪರಬ್ರಹ್ಮಕ್ಕೆ ತಲೆಯಿಕ್ಕಿ ತೆಗೆದೆನೆಂಬ ಅಣ್ಣ ಗಾವಿಲನೆಂದನಂಬಿಗ ಚೌಡಯ್ಯ./148
ತರು, ನೀರು, ಕಲ್ಲಿನ ಘಟದ ಮಧ್ಯದಲ್ಲಿ ತೋರುವ ಅಗ್ನಿ
ಕೆಡದೆ ಉರಿಯದೆ
ಅಡಗಿಪ್ಪ ಭೇದವನರಿತಡೆ ಪ್ರಸಾದಲಿಂಗಿಯೆಂದನಂಬಿಗ ಚೌಡಯ್ಯ. /149
ತಾನು ಮಾಡುವ ಭಕ್ತಿ ಲಿಂಗದ ಉಪದೇಶವನರಿಯದ ಕಾರಣ
ಕಂಡ ಕಂಡ ದೈವಕ್ಕೆ ಹೋಗಿ,
ಮಂಡೆ ಮುಂದಲೆಯ ಕೊಟ್ಟನಾದಡೆ ಆತ ಭಕ್ತನಲ್ಲ,
ಆತನ ಸಂಗಡ ಹೋಗಿ ಉಪದೇಶವ ಮಾಡಿದಾತನು ಗುರುವಲ್ಲ,
ಅಂಥವರ ಮನೆಯಲ್ಲಿ ಹೊಕ್ಕು ಉಂಬಾತ ಜಂಗಮವಲ್ಲ.
ಈ ಭಕ್ತ ಜಂಗಮದ ಭೇದವೆಂತೆಂ[ದ]ಡೆ: ಒಡಲ ಕಿಚ್ಚಿಗೆ ಹೋಗಿ ತುಡುಗುಣಿನಾಯಿ ಹೊಕ್ಕು,
ತನ್ನ ಒಡಲ ಹೊರೆದಂತಾಯಿತಯ್ಯ [ಎಂದು]
ಪೊಡವಿಯೊಳಗೆ ಡಂಗುರವನಿಕ್ಕಿ ಸಾರಿದಾತ ನಮ್ಮ ಅಂಬಿಗ ಚೌಡಯ್ಯ. /150
ತಿಂಬ ಜಾತಿಗೆ ಮೇವ ಹಾಕಿ
ಹೇರಳ ಖಂಡವ ಕೊಯಿದು ತಿಂಬವನಂತೆ,
ದಾತನಿಗೆ ಛಂದದ ಮಾತನಾಡಿ
ಮೂರು ಮಲದಂದವ ಸಂಧಿಸಿಕೊಂಬವಂಗೆ, ಲಿಂಗವಿಲ್ಲಾ ಎಂದನಂಬಿಗ ಚೌಡಯ್ಯ. /151
ತಿರುಳು ಒಡೆದ ಬಿತ್ತು ಮರಳಿ ಪೈರಪ್ಪುದೆ?
ತ್ರಿವಿಧಕ್ಕೆ ಮನವೊಡ್ಡದೆ ತೆರಳಿ ತೀರ್ಚಿದವಂಗೆ ಮರಳಿ ಮುಟ್ಟಿದಡೆ, ಆಚಾರಕ್ಕೆ ಹುರುಳಿಲ್ಲ ಎಂದನಂಬಿಗ ಚೌಡಯ್ಯ. /152
ತುತ್ತಿನಾಸೆಗೆ ಲಿಂಗವ ಕೊಟ್ಟುಹೋಹ ವ್ಯರ್ಥ ಮೂಳ
ನಿಮಗೆ ಗುರುವಾದನೈಸೆ?
ಸತ್ಯಸದಾಚಾರವ ಬಲ್ಲಡೆ
ತತ್ವಜ್ಞಾನವ ಬೋಧಿಸಿ,
ಆ ಮಹಾಲಿಂಗಕ್ಕೂ ನಿಮಗೂ ಸಂಬಂಧವ ಮಾಡದಿಹ
ಕತ್ತೆ ಗುರುವಿನ ಪಾದವ ಹಿಡಿದು ಕೆಟ್ಟಿರಲ್ಲಾ!
ಹತ್ತಿಲಿದ್ದ ಲಿಂಗವ ಕಿರಿದು ಮಾಡಿ,
ಕ್ಷೇತ್ರದ ಲಿಂಗವ ಹಿರಿದು ಮಾಡಿ;
[ಕಂಕುಳ ಹತ್ತಿದ]ಲಿಂಗವ ಕಿರಿದು ಮಾಡಿ,
ಕೊಂಕಣ ಹತ್ತಿ ಲಿಂಗವ ಹಿರಿದು ಮಾಡಿ;
ಎಂತುಟೋ ನಿನ್ನ ಲಿಂಗವ ಕೊಡಲಾರದಿದ್ದಡೆ!
ಹರುಗೋಲು ಹೊರಲಾರ, ಭೋಂಕನೆ ಮುಳುಗುವನೆಂದಾತ ನಮ್ಮ ಅಂಬಿಗರ ಚೌಡಯ್ಯ./153
ತೋಯವಿಲ್ಲದ ಕುಂಭ, ಜ್ಞಾನವಿಲ್ಲದ ಘಟ, ದೇವರಿಲ್ಲದ ಗುಡಿ
ಇವು ಹಾಳು ದೇಗುಲ ಸಮವು.
ಎಲೆ ಪರವಾದಿಗಳಿರಾ: ಗುರುವು ಎಂಬ ನಾಮವು ಪರಶಿವನು,
ಪರಶಿವನೆ ಇಷ್ಟಲಿಂಗವು.
ಆ ಇಷ್ಟಲಿಂಗದ ಪೂಜೆಯಲ್ಲಿ ಲೋಲುಪ್ತನಾಗಿರಬೇಕು,
ಆ ಗುರುಮಂತ್ರದಲ್ಲಿ ಮಗ್ನನಾಗಿರಬೇಕು,
ಚರಭಕ್ತಿಯಲ್ಲಿ ಯುಕ್ತನಾಗಿರಬೇಕು.
ಈ ತ್ರಿವಿಧವ ಬಿಟ್ಟು, ಮಲತ್ರಯಕ್ಕೆ ಒಳಗಾಗಿ
ಬಂಧನಕ್ಕೆ ಹೋಗುವರ ನೋಡಿ ಮನ ನಾಚಿತ್ತೆಂದ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. /154
ದೃಷ್ಟವ ಕಂಡುದಕ್ಕೆ ಮತ್ತೆ ಮೂದಲೆ ಉಂಟೆ?
ವ್ರತಗೆಟ್ಟವಂಗೆ ಆಚಾರಭ್ರಷ್ಟಂಗೆ ಪರಸತಿ ಪರಧನ ದುರ್ಭಿಕ್ಷಂಗೆ
ಪರ ಅಪರವನರಿಯದ ಪಾತಕಂಗೆ ಅಘೋರ ನರಕಕ್ಕೆಡೆಯಿಲ್ಲ ಎಂದನಂಬಿಗ ಚೌಡಯ್ಯ. /155
ದೇಹಾರವ ಮಾಡುವಣ್ಣಗಳಿರಾ, ಒಂದು ತುತ್ತು ಆಹಾರವನಿಕ್ಕಿರೆ.
ದೇಹಾರಕ್ಕೆ ಆಹಾರವೆ ನಿಚ್ಚಣಿಗೆ.
ದೇಹಾರವ ಮಾಡುತ್ತ ಆಹಾರವನಿಕ್ಕದಿರ್ದಡೆ, ಆ ಹರನಿಲ್ಲೆಂದನಂಬಿಗ ಚೌಡಯ್ಯ. /156
ದೊಡ್ಡ ದೊಡ್ಡ ಶೆಟ್ಟಿಗಳ ಕಂಡು
ಅಡ್ಡಗಟ್ಟಿ ಹೋಗಿ, ಶರಣಾರ್ಥಿ ಎಂಬ
ಎಡ್ಡುಗಳ್ಳತನಕ್ಕೆ ತಮ್ಮ ಮಠಕ್ಕೆ ಬನ್ನಿ ಹಿರಿಯರೇ ಎಂಬರು.
ಹೋಗಿ ಶರಣಾರ್ಥಿ ಭಕ್ತನೆಂದೊಡೆ ಕೇಳದ ಹಾಗೆ
ಅಡ್ಡ ಮೋರೆಯನಿಕ್ಕಿಕೊಂಡು ಸುಮ್ಮನೆ ಹೋಗುವ
ಹೆಡ್ಡ ಮೂಳರಿಗೆ ದುಡ್ಡೇ ಪ್ರಾಣವಾಯಿತ್ತು.
ದುಡ್ಡಿಸ್ತರ ಕುರುಹನರಿಯದೆ ಮೊಳಪಾದದ ಮೇಲೆ ಹೊಡಹೊಡಕೊಂಡು ನಗುತಿರ್ದಾತ ನಮ್ಮ ಅಂಬಿಗರ ಚೌಡಯ್ಯ./157
ನಂಬಿಯಣ್ಣ ಮಾಡುವ ಭಕ್ತಿ ನಾಡೆಲ್ಲ ಮಾಡಬಹುದಯ್ಯಾ,
ಕುಂಬಾರ ಗುಂಡಯ್ಯ ಮಾಡುವ ಭಕ್ತಿ ಊರೆಲ್ಲ ಮಾಡಬಹುದಯ್ಯಾ,
ಬಸವಣ್ಣ ಮಾಡುವ ಭಕ್ತಿ ಶಿಶುವೆಲ್ಲ ಮಾಡಬಹುದಯ್ಯಾ,
ಇದೇನು ದೊಡ್ಡಿತ್ತೆಂಬರು.
ಸರ್ವರಿಗೆ ವಶವಾಗದ ಭಕ್ತಿ ಅವರ ಮನ-ಜ್ಞಾನದಂತೆ ಇರಲಿ ಶರಣಾರ್ಥಿ.
ಈ ಸುಧೆಯೊಳಗೆ ಶುದ್ಧಭಕ್ತಿಯನರಿತು
ನಡೆದುದು ಬಟ್ಟೆಯಾಗದೆ? ನುಡಿದುದು ಸಿದ್ಧಿಯಾಗದೆ?
ದೇಹಕ್ಕೆ ಕಷ್ಟ-ನಷ್ಟ, ರೋಗ-ರುಜೆಗಳು ಬಂದು ಅಟ್ಟಿ ಮುಟ್ಟಿದವಾಗಿ,
ದೃಢವಾಗಿದ್ದು ಶರಣನ ಮನವು ನಿಶ್ಚಯಿಸಿ,
ದೃಢಶೀಲಂಗಳಂ ಬಿಡದೆ ನಡೆವಾತ ದೊಡ್ಡ ಭಕ್ತನೆಂದಾತ ನಮ್ಮ ಅಂಬಿಗರ ಚೌಡಯ್ಯ. /158
ನಮಗೊಬ್ಬರೆಂಜಲು ಸೇರದೆಂದು,
ಶುಚಿತನದಲ್ಲಿ ಬದುಕುತ್ತೈ[ದೇ]ನೆ
ಎಂದುಯೆಂಬ ಬರಿಯ ಮಾತಿನ ರಂಜಕರು
ನೀವು ಕೇಳಿರೋ ಅಣ್ಣಗಳಿರಾ: ನೀವು ತಂದು ಕುಡಿವ ನೀರು ಜಲಚರದೆಂಜಲು,
ಮೃಗಪಶುಪಕ್ಷಿಯ ಎಂಜಲು.
ಭಾವಿಗೆ ಹೋಗಿ ಕೈಕಾಲು ತೊಳೆದು
ಬಾಯಿ ಮುಕ್ಕಳಿಸುವಲ್ಲಿ ಮಾನವರೆಂಜಲು.
ಇಂತೀ ಹಲವೆಂಜಲ ಬೆರಸಿದ ಆ ಎಂಜಲ ತಿಂದು ಬೆಳೆದು, ಬೆ[ಳೆ]ಸಿದ
ಆ ಎಂಜಲಿಂದ ಬೆಳೆವ ಪದಾರ್ಥಂಗಳು, ಆ ಎಂಜಲಿಂದಾದ ಪಾಕವನು,
ನಲಿನಲಿದುಂಡು ಕುಡಿವಲ್ಲಿ ಎಂಜಲು ಹಿಂಗಿದಠಾವ ತೋರಿರಣ್ಣಾ!
ಇದ ಬಲ್ಲ ಭಕ್ತರು ಸರ್ವಪದಾರ್ಥಂಗಳನು
ಶಿವಮಂತ್ರದಲೆ ಹಸ್ತಸ್ಪರ್ಶನವ ಮಾಡಿ, ವಿಭೂತಿಯಿಂದ ಶುದ್ಧಮಾಡಿ,
ಲಿಂಗಕ್ಕೆ ಕೊಟ್ಟು ಕೊಂಬಲ್ಲಿ ಗುರುಪ್ರಸಾದವಾಯಿತ್ತು.
ಇಂತೀ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವ ಕೊಂಬಲ್ಲಿ
ಸರ್ವ ಎಂಜಲ ಹೊಲೆಯುವ ನೀಗಿದ.
ಇದನರಿಯದಿರ್ದಡೆ ಮಿಕ್ಕಿನವರೆಲ್ಲರು
ಹಲವರೆಂಜಲ ಹೊಲೆಯೊಳಗೆ ಮುಳುಗಿ ಉಂಡರೆಂದಾತ ನಮ್ಮ ಅಂಬಿಗರ ಚೌಡಯ್ಯ/159
ನವನಾಳಪದ್ಮದ ಅಷ್ಟದಳದೊಳಗೆ
ಎಪ್ಪತ್ತುಮೂರು ನಾಳ ನೋಡಾ.
ಸುಳಿದು ಬೀಸುವ ವಾಯು,
ಒಳಗೆ ಆತ್ಮಜ್ಯೋತಿ,
ಅಲ್ಲಿಂದೊಳಗಿಪ್ಪ ಹಂಸನ ಗೃಹವ ನೋಡಾ.
ಹಿರಿದೊಂದು ಭೂತನು ಹುದುಗಿಪ್ಪ ಭೇದವ
ನಿಲುಕಿ ನೋಡಿಯೆ ಕಂಡನಂಬಿಗರ ಚೌಡಯ್ಯ. /160
ನಾದ ಬಿಂದುವಿನಲ್ಲಿ ಸಾಧಿಸಿದ ಹದಿನಾರು[ದಳ] ಕಳೆಯ ಸುಳಿಯೊಳಗೆ
ತಾವರೆಯ ಪದ್ಮದ ಜ್ಞಾನಮೇಲುದ ಹಾಸಿ,
ದೇವನಾತ್ಮನಲ್ಲಿ ಕುಳ್ಳಿರ್ದ
ಭಾವ ಮುಂದಟ್ಟಿ, ಕಾಯವ ನಿಲಿಸಿ ದೇವನೋಲಗದೊಳಗಿರ್ದನಂಬಿಗ ಚೌಡಯ್ಯ. /161
ನಾದದ ಬಲದಿಂದ ವೇದಂಗಳಾದವಲ್ಲದೆ, ವೇದ ಸ್ವಯಂಭುವಲ್ಲ.
ಮಾತಿನ ಬಲದಿಂದ ಶಾಸ್ತ್ರಂಗಳಾದವಲ್ಲದೆ, ಶಾಸ್ತ್ರ ಸ್ವಯಂಭುವಲ್ಲ ನಿಲ್ಲು.
ಪಾಷಾಣದ ಬಲದಿಂದ ಸಮಯಂಗಳಾದವಲ್ಲದೆ ಸಮಯ ಸ್ವಯಂಭುವಲ್ಲ ನಿಲ್ಲು.
ಇಂತೀ ಮಾತಿನ ಬಣಬೆಯ ಮುಂದಿಟ್ಟುಕೊಂಡು ಆತನ ಕಂಡೆಹೆನೆಂದಡೆ,
ಆತನತ್ಯತಿಷ್ಟದ್ದಶಾಂಗುಲ, ಆತನೆಂತು ಸಿಲುಕುವನೆಂದಾತನಂಬಿಗ ಚೌಡಯ್ಯ. /162
ನಾಯಿ ಬಲ್ಲುದೆ ದೇವರ ಬೋನವ?
ದ್ರೋಹಿ ಬಲ್ಲನೆ ಗುರು-ಲಿಂಗ-ಜಂಗಮದ ನೆಲೆಯ?
ಅಜ್ಞಾನಿ ಬಲ್ಲನೆ ಸುಜ್ಞಾನಿಯ ನೆಲೆಯ?
ಕುಕ್ಕುರ ಬಲ್ಲುದೆ ಸುಭಿಕ್ಷದ ಸವಿಯ?
ಇಂತಪ್ಪ ಆಚಾರಭ್ರಷ್ಟರ
ಕಡೆಗೆ ನೋಡೆ[ನೆಂ]ದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು./163
ನಾರಿವಾಳವ ತಂದು ನಾಯಮುಂದೆ ಹಾಕಿದಡೆ,
ಒಡೆಯಲರಿಯದು, ತಿನಲರಿಯದು.
ಅದರವೊಲು ಜಂಗಮದೊಳಗೆ ಲಿಂಗವನರಿ[ಯ]ದವ ಭಂಗಿಯ ತಿಂದಂತೆ.
ತನ್ನ ಹೊದ್ದಿದ್ದ ತನ್ನ, ತಾ ತಿಳಿಯಲರಿಯದಿದ್ದಡೆ ತೆಂಗ ತಿನಲರಿಯದ ನಾಯಂತೆ ಎಂದನಂಬಿಗ ಚೌಡಯ್ಯ. /164
ನಾಲ್ಕು ವೇದವನೋದಿದನಂತರ ಮನೆಯ ಬೋನವ
ಶಿವಭಕ್ತರ ಮನೆಯಲ್ಲಿರುವ ನಾಯಿ ಮೂಸಿ ನೋಡಲಾಗದು.
ಸಾಮವೇದಿ ಹೋಗುತ್ತಿರಲು
ಶ್ವಪಚಯ್ಯಗಳು ತಮ್ಮ ಪಾದುಕದಿಂದ ಪಾಕವ ಮುಚ್ಚಿದರು.
“ಶ್ವಾನೋ ಶ್ರೇಷ್ಠವೆಂದು ಇಕ್ಕಿದೆನು ಮುಂಡಿಗೆಯ.
ಎತ್ತಿರೋ ಜಗದ ಸಂತೆಯ ಸೂಳೆಯ ಮಕ್ಕಳು.
ಜಗಕ್ಕೆ ಪಿತನೊಬ್ಬನಲ್ಲದೆ ಇಬ್ಬರೆಂದು ಬೊಗಳುವರ ಮೋರೆಯ ಮೇಲೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು./165
ನಾಲ್ಕೈದು ಹದಿನೆಂಟು ಪುರಾಣ
ಇಪ್ಪತ್ತೆಂಟು ದೇವತಾಗಮಂಗಳು
ಚಾಷಷ್ಟಿ ಅಖಿಳ ವಿದ್ಯಂಗಳ ಸಾಧಿಸಿ
ನನಗಾರು ಸರಿ ಎಂಬ ಹೊಲೆಮಾದಿಗರ ಎನಗೊಮ್ಮೆ ತೋರದಿರಯ್ಯಾ.
ಅದೇನು ಕಾರಣವೆಂದಡೆ: ಸಕಲಶಾಸ್ತ್ರಂಗಳಿಗೆ ಚಾಷಷ್ಟಿ ಕಳಾವಿದ್ಯಕ್ಕೆ ನಿಲುಕದ ಪರಶಿವನ
ಕಾಯ ಜೀವ ಪ್ರಸಾದದಲ್ಲಿ ನೆಲೆಗೊಳಿಸಲರಿಯದೆ
ಒಡಲ ಹೊರೆವ ಹೊಲೆ ಮಾದಿಗರಾದಂತಾಯಿತ್ತೆಂದಡೆ
ಶುಕನುಡಿದಂತಾಯಿತ್ತೆಂದಾತ ನಮ್ಮ ಅಂಬಿಗರ ಚೌಡಯ್ಯ. /166
ನಿಜಗಂಡನ ಸಂಗವನೊಲ್ಲದೆ ಬೊಜಗರ ಸಂಗ ಮಾಡುವ
[ಬೋಸ] ರಿತೊತ್ತಿಗೆಲ್ಲಿಯದೊ ನಿಜಮುತ್ತೈದೆತನ?
ತ್ರಿಜಗವಂದಿತ ಲಿಂಗವ ಕರಕಮಲದಲ್ಲಿ ಹಿಡಿದುಕೊಂಡಿರ್ದ ಬಳಿಕ
ಅಲ್ಲಿ ನಂಬಿ ಪೂಜಿಸಿ ಮುಕ್ತಿಯ ಪಡೆಯಲರಿಯದೆ
ಲೋಕದ ಗಜಿಬಿಜಿ ದೈವಂಗಳಿಗೆರಗುವ
ಕುನ್ನಿ ಮಾನವರ ಕಂಡರೆ ಯಮನು ಜಿಗಿದೆಳೆದೊಯ್ದು ಕೊಲ್ಲದಿಪ್ಪನೆ? ಹಾಗೆ ಸಾಯಲೆಂದಾತ ನಮ್ಮ ಅಂಬಿಗರ ಚೌಡಯ್ಯ./167
ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋರಗನ,
ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು,
ನಿಲ್ಲಿಸಬಹುದಯ್ಯ ಒಂದೇ ಮಂತ್ರದಲಿ ಹೆಬ್ಬುಲಿಯ,
ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ,
ನಿಲ್ಲಿಸಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವ.
ಇಂತಿವೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು,
ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ ನಿಲ್ಲಿಸಲಾಗದು.
ಈ ಲೋಭಕ್ಕೆ ದಾರಿದ್ರ್ಯವೇ ಔಷಧವು.
ಹೇಳಿದರೆ ಕೇಳರು, ತಾವು ತಿಳಿಯರು,
ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು.
ಇಂತಹ ಗೊಡ್ಡು ಮೂಳ ಹೊಲೆಯರಿಗೆ
ಕರ್ಮವೆಂಬ ಶರಧಿಯಲ್ಲಿ ಬಿದ್ದು ಉರುಳಾಡುವುದೆ ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು./168
ನೀರೊಳಗಣ ನೆಯಿದಲು ತಾವರೆಯಂತೆ,
ಅದಾರಿಗೆ ಸುಖ ಅದಾರಿಗೆ ದುಃಖವೆಂಬುದ ಆರೈದಲ್ಲಿ, ಆ ಉಭಯವು ನೀರಿನ ಆರೈಕೆಯಿಂದ ಲೇಸೆಂದನಂಬಿಗ ಚೌಡಯ್ಯ./169
ನೀರೊಳಗಿಕ್ಕಿದ ಕೋಲಿನಂತೆ ಭೇದವನೊಳಗೊಂಡ ವಾದ್ಯದಂತೆ,
ನಾದದಲ್ಲಿ ಸೋಂಕಿದ ಶೂನ್ಯದಂತೆ,
ಭೇದಾಭೇದಂಗಳಲ್ಲಿ ಅಭೇ
ದ್ಯವ ಭೇದಿಸಬಲ್ಲಡೆ, ನಾದ ಬಿಂದು ಕಳೆಗೆ ಅತೀತವೆಂದನಂಬಿಗ ಚೌಡಯ್ಯ. /170
ನುಡಿವ ಶಬ್ದವೆ ಕಾಯದ ಕಳವಳ,
ಒಡಲುಗೊಂಡವರೆಲ್ಲಾ ಕೇಳಿರಯ್ಯಾ.
ಸಂಜೆ ನೇಮ ನಿತ್ಯ ಜಪ ತಪ ಸಮಾಧಿ
ಏನೆಂದಳೇನೆಂದು ಬರೆವಂತೆ ಬರೆವ ನುಡಿಯೊಳಗಿರ್ದು,
ನುಡಿ ತಪ್ಪಿದೆನೆಂಬ ಈ ನುಡಿಗೆ ನಾಚುವೆನೆಂದನಂಬಿಗ ಚೌಡಯ್ಯ./171
ನೆನೆವೆನೆರಿ ಮರೆದವನಲ್ಲ.
ನೆನೆಯನೆರಿ ಉದಾಸೀನಿಯಲ್ಲ.
ಕುರುಹೆಂಬೆನೆರಿ ತೆರಹಿಲ್ಲವಾಗಿ.
ಅರಿಯೆನಿನ್ನಾವ ಭಾವಂಗಳೆಂಬವನು.
ಎರಡಳಿದು ಒಂದುಳಿದ ಕಾರಣ ನೆನೆಯಲಿಲ್ಲೆಂದನಂಬಿಗ ಚೌಡಯ್ಯ. /172
ನೇಮಸ್ಥನೆಂಬವ ಕ್ರೂರಕರ್ಮಿ, ಶೀಲವಂತನೆಂಬವ ಸಂದೇಹಧಾರಿ.
ಭಾಷೆವಂತನೆಂಬವ ಬ್ರಹ್ಮೇತಿಕಾರ.
ಇವರು ಮೂವರು ಕುಳ್ಳಿರ್ದಲ್ಲಿ ಕುಳ್ಳಿರಲಾಗದು.
ಇವರು ಹೋದ ಬಟ್ಟೆಯ ಹೊಗಲಾಗದು. ಇವರು ಮೂವರಿಗೂ ಗುರುವಿಲ್ಲ, ಲಿಂಗವಿಲ್ಲೆಂದಾತನಂಬಿಗ ಚೌಡಯ್ಯ./173
ನೇಮಸ್ಥನೇನು ಬಲ್ಲನಯ್ಯ ಲಿಂಗದ ಕುರುಹ ?
ಸೂಳೆಯ ಮಗನೇನು ಬಲ್ಲನಯ್ಯ ತಂದೆಯ ಕುರುಹ ?
ಜಂಗಮದ ಅನುವ ತೊತ್ತಿನ ಮಗನೇನು ಬಲ್ಲನಯ್ಯ ?
ಇಂತಪ್ಪ ಅಂಗವೇ ಲಿಂಗ, ಲಿಂಗವೇ ಅಂಗ,
ಲಿಂಗವೇ ಜಂಗಮವು, ಜಂಗಮವೇ ಲಿಂಗವೆಂದರಿಯದವನ
ಭಕ್ತರೆಂದರೆ ಅಘೋರನರಕವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. /174
ಪನ್ನಗಂಗೆ ನನ್ನಿಯ ಗಾರುಡವಲ್ಲದೆ ಮಿಕ್ಕಾದ ದ್ವಯಜಿ[ಹ್ವಿ]ಗಳಿಗುಂಟೆ ?
ತಿಳಿದ ಸದೈವಂಗೆ ಸದ್ಭಕ್ತಿ ಸದಾಚಾರವಲ್ಲದೆ,
ವಿಶ್ವಾಸಘಾತಕಂಗೆ ಅಪ್ರಮಾಣಂಗೆ ಮುಕ್ತಿ ವಿರಕ್ತಿಯಿಲ್ಲ,
ಎಂದನಂಬಿಗ ಚೌಡಯ್ಯ. /175
ಪರಧನ-ಪರಸತಿ-ಪರನಿಂದೆಗಳಿರೆ
ಮುಂದೆ ನರಕವು ಎಂದು ಗುರುವಾಕ್ಯ ಸಾರುತ್ತಿದೆ.
ಪರಧನ-ಪರಸತಿ-ಪರಭೂಮಿಗಳುಪಿ
ಹತವಾಗಿ ಹೋದ ದುರ್ಯೊಧನ.
ಹರಿವ ನದಿಯ ಮಿಂದು ಗೋದಾನ ಮಾಡುವ
ನರಕಿಗಳ ನುಡಿಯ ಕೇಳಲಾಗದು.
ಹದಿನಾಲ್ಕು ಲೋಕಕ್ಕೆ ಕರ್ತೃ ಶಿವನೊಬ್ಬನೇ
ಎಂದು ಶ್ರುತಿಗಳು ಪೊಗಳುತ್ತಿಹವು.
ಅರತ ದೇವರ ಪೂಜೆಯ ಮಾಡಿ, ಇಷ್ಟಲಿಂಗವ ಮರೆವ
ಮೂಳ ಹೊಲೆಯರಿಗೆ ಮುಕ್ತಿ ಆಗದೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. /176
ಪರಪುರುಷಾರ್ಥವನರಿಯದೆ ಕೆಟ್ಟ ನರಗುರಿಗಳು ನೀವು ಕೇಳಿರೋ:
ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು.
ಮರಳಿ ಕೊಟ್ಟದ್ದಕ್ಕೆ ಕೀರ್ತಿದೇಹವ ಪಡೆದವರ
ಪರಿಯ ಕೇಳು ಎಲೇ ಮನವೇ: ಪರಪುರುಷಾರ್ಥಿಯಾದರೆ, ವೀರವಿಕ್ರಮನಂತಾಗಬೇಕು,
ಪರಪುರುಷಾರ್ಥಿಯಾದರೆ, ಬಸವಕುಮಾರನಂತಾಗಬೇಕು,
ಪರಪುರುಷಾರ್ಥಿಯಾದರೆ, ಕಪೋತಪಕ್ಷಿಯಂತಾಗಬೇಕು,
ಇಂತೀ ಪರಪುರುಷಾರ್ಥಕ್ಕೆ ಪ್ರಾಣವ ಕೊಟ್ಟವರುಂಟು.
ಹಣವೇನು ದೊಡ್ಡಿತ್ತುರಿ ಹೆಣ್ಣೇನು ದೊಡ್ಡಿತ್ತುರಿ
ಮಣ್ಣೇನು ದೊಡ್ಡಿತ್ತುರಿ ಅನ್ನವೇನು ದೊಡ್ಡಿತ್ತುರಿ
ಇಂತಿವುಗಳೊಳು ಒಂದನಾದರೂ
ಪರಪುರುಷಾರ್ಥಕ್ಕೆ ನೀಡದೆ ಮಾಡದೆ,
ತನ್ನ ಶರೀರವ ಹೊರೆದುಕೊಂಡು ಬದುಕುವೆನೆಂಬ
ಹೊಲೆ ಮಾದಿಗರುಗಳಿಗೆ ಇಹ-ಪರ ನಾಸ್ತಿ
ಎಂದಾತ ನಮ್ಮ ಅಂಬಿಗರ ಚೌಡಯ್ಯ. /177
ಪಿಸಿತ ನಡುವೆ ಇದ್ದ ಕಿರಾತಂಗೆ ಹೊಸ ವಾಸನೆಯ ಬಲ್ಲನೆ?
ಸಕಲವ್ಯಾಪಾರದಲ್ಲಿ ಮೂಡಿ ಮುಳುಗುವವ ಸುಖದ ತದ್ರೂಪರ ಬಲ್ಲನೆ?
ವಿಕಳತೆಗೊಂಡು ಅಖಿಳರ ಕೂಡಿ ಸುಖದುಃಖದಲ್ಲಿ ಬೇವವಂಗೆ
ಅಕಳಂಕತನವುಂಟೆ? ಎಂದನಂಬಿಗ ಚೌಡಯ್ಯ. /178
ಪುಣ್ಯಪಾಪವಿರಹಿತ ಕಂಡಾ, ಕ್ರೀಯೇಕೆ?
ಒಬ್ಬನೇ ಕಂಡಾ, ಆರು ದರ್ಶನವೇಕೆ?
ಮಾಟವೆಂಬುದೆಲ್ಲವು ಕೋಟಲೆ ಎಂದು ಕಳದು
ದೂಟಿಸಿ ನುಡಿದಾತನಂಬಿಗ ಚೌಡಯ್ಯ. /179
ಪುಷ್ಪವ ಕಂಡುದಕ್ಕೆ ಮತ್ತೆ ಮೂದಲೆ ಉಂಟೆ?
ವ್ರತಗೆಟ್ಟವಂಗೆ, ಆಚಾರಭ್ರಷ್ಟಂಗೆ, ಪರಸತಿ ಪರಧನ ದುರ್ಭಿಕ್ಷಂಗೆ,
ಪರ ಅಪರವನರಿಯದ ಪಾತಕಂಗೆ
ಅಘೋರನರಕಕ್ಕೆಡೆಯಿಲ್ಲ ಎಂದನಂಬಿಗ ಚೌಡಯ್ಯ./180
ಪೃಥ್ವಿ ಶುದ್ಧವೆಂಬೆನೆ? ಪೃಥ್ವಿ ಶುದ್ಧವಲ್ಲ.
ಜಲ ಶುದ್ಧವೆಂಬೆನೆ? ಜಲ ಶುದ್ಧವಲ್ಲ.
ಅಗ್ನಿ ಶುದ್ಧವೆಂಬೆನೆ? ಅಗ್ನಿ ಶುದ್ಧವಲ್ಲ.
ವಾಯು ಶುದ್ಧವೆಂಬೆನೆ? ವಾಯು ಶುದ್ಧವಲ್ಲ.
ಆಕಾಶ ಶುದ್ಧವೆಂಬೆನೆ? ಆಕಾಶ ಶುದ್ಧವಲ್ಲ.
ಗುರುವೆ ನೀ ಕೇಳಯ್ಯ,
ಹುಸಿ ನುಸುಳ ಕಳೆದು ಜ್ಞಾನವೆಂಬ ಬೆಳಗ ಸಾಧಿಸಬಲ್ಲಡೆ ಇದೊಂದೆ ಶುದ್ಧವೆಂದನಂಬಿಗ ಚೌಡಯ್ಯ. /181
ಪೃಥ್ವಿಯನೆತ್ತಿತ್ತು ಬಿಂದು,
ಬಿಂದುವನೆತ್ತಿತ್ತು ಶಬ್ದ.
ಶಬ್ದವನೆತ್ತಿತ್ತು ರೇಚಕ ಪೂರಕ ಕುಂಭಕ.
ಈ ರೇಚಕ ಪೂರಕ ಕುಂಭಕ, ಈಡ ಪಿಂಗಳ ಸುಷುಮ್ನವನೆತ್ತಿತ್ತು.
ಈ ಈಡ ಪಿಂಗಳ ಸುಷುಮ್ನಯನೆತ್ತಿತ್ತು ರಜ್ಜು.
ರಜ್ಜುವನೆತ್ತಿತ್ತು ರೇಣು.
ಸಾಕಾರ ನಿರಾಕಾರ ಮೂರು ಲೋಕವ ನಿಲಿಸಿ ನೋಡೆ,
ಕಂಡೆನೆಂದಾತನಂಬಿಗರ ಚೌಡಯ್ಯ. /182
ಪೊಡವಿಗೀಶ್ವರ ಗೌರಿಯೊ[ಡನೆ] ಮದುವೆಯಾದಂದು,
ಒಡನಾಡಿದ ಮಾಧವ ಗೋವನಾದ,
ಮಿಗೆ ಓದಿದ ಬ್ರಹ್ಮ ಹೋತನ ತಿಂದ,
ಎಡೆಯಲಾದ ಜಿನ್ನ ಉಟ್ಟುದ ತೊರೆದ.
ಇವರ ಪೊಡಮಟ್ಟು ಪೊಡಮಟ್ಟು ಧಾತುಗೆಟ್ಟವರ ಕೇಡಿಂಗೆ ಕಡೆಯಿಲ್ಲೆಂದನಂಬಿಗ ಚೌಡಯ್ಯ. /183
ಪ್ರಸಾದವ ನಂಬಿದಡೆ ಭಿಲ್ಲಮರಾಯನಂತೆ ನಂಬಬೇಕಯ್ಯಾ,
ಪ್ರಸಾದವ ನಂಬಿದಡೆ ಬಿಬ್ಬಬಾಚಯ್ಯಗಳಂತೆ ನಂಬಬೇಕಯ್ಯಾ,
ಪ್ರಸಾದವ ನಂಬಿದಡೆ ವಾಮನಮುನೀಶ್ವರನ ಶಿಷ್ಯನಂತೆ ನಂಬಬೇಕಯ್ಯಾ,
ಪ್ರಸಾದವ ನಂಬಿದಡೆ ಮರುಳುಶಂಕರದೇವರಂತೆ ನಂಬಬೇಕಯ್ಯಾ.
ಇಂತು ನಂಬಿ ಕೊಂಡಡೆ ಮಹಾಪ್ರಸಾದ!
ನಂಬದೆ ಸಮಯದಾಕ್ಷಿಣ್ಯಕ್ಕೆ ಮನದಳುಕಿನಿಂ ಕೊಂಡಡೆ ಅದು ತನಗೆ ಸಿಂಗಿಯ ಕಾಳಕೂಟವಿಷವೆಂದಾತನಂಬಿಗ ಚೌಡಯ್ಯ./184
ಪ್ರಾಣ ಪ್ರಣವವೆಂಬರು, ಪ್ರಾಣಕ್ಕೂ ಪ್ರಣವಕ್ಕೂ ಏನು ಸಂಬಂಧ?
ಪ್ರಾಣವೆ ಪ್ರಳಯಕ್ಕೊಳಗಾಗಿ ತಿರುತಿರುಗಿ ಬಪ್ಪುದಕ್ಕೆ ಒಡಲಾಯಿತ್ತು. ಪ್ರಣವವೆ ಪ್ರಸನ್ನವಾಗಿಪ್ಪುದೆಂದನಂಬಿಗ ಚೌಡಯ್ಯ. /185
ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ,
ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು.
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ ನಮ್ಮ ಅಂಬಿಗರ ಚೌಡಯ್ಯ [ನಿಜ]ಶರಣನು. /186
ಬಯಲ ಉದಕವ ಹಿಡಿದು ಮಜ್ಜನಕ್ಕೆರೆವೆನಯ್ಯ.
ಸಕಲವನುಳಿದೊಂದು ಪುಷ್ಪದ ಪೂಜೆಯ ಮಾಡುವೆನಯ್ಯ.
ಸುಗಂಧ ದುರ್ಗಂಧವ ಕಳೆದು ಧೂಪಾರತಿಯ ಮಾಡುವೆನಯ್ಯಾ.
ಪರಬ್ರಹ್ಮವ ಹಿಡಿದು ನಿವಾಳಿಯನೆತ್ತುವೆನಯ್ಯಾ.
ಪುಣ್ಯಪಾಪವ ಕಳೆದು ಓಗರವನಿಕ್ಕುವೆನಯ್ಯಾ.
ಹದಿನಾಲ್ಕು ಭುವನವನೊಳಗುಮಾಡಿ ಹೊರಗೆ ನಿಂದು
ಸದಾಶಿವನ ಪೂಜಿಸಿದಾತನಂಬಿಗ ಚೌಡಯ್ಯ. /187
ಬರೆದು ಓದಿಸುವ ಅಕರಿಗಳೆಲ್ಲ ನೀವು ಕೇಳಿರೋ:
ತರ್ಕ ವ್ಯಾಕರಣ ಛಂದಸ್ಸು ನಿಘಂಟು ವೇದಶಾಸ್ತ್ರವನೋದಿ ಕೇಳಿ
ಗಂಗೆಗೆ ಹರಿವವರನೇನೆಂಬೆ?
ಪರವಧುವೆಂಬುದನರಿಯಿರಲ್ಲಾ!
ನೆರೆದಿರ್ದ ಪಾಪವ ಹೊನಲಿನಲ್ಲಿ ಕಳೆದೆನೆಂಬ
ಅಣ್ಣಗಳ ಬೆಡಗು ಬೇಡೆಂದಾತನಂಬಿಗ ಚೌಡಯ್ಯ. /188
ಬೀಜ ಮೊಳೆವುದಲ್ಲದೆ ಮೊಳೆ ಮೊಳೆತುದುಂಟೆ?
ಕ್ರೀಗೆ ಅರಿವಿಲ್ಲದೆ ಅರಿವಿಗೆ ಅರಿವುಂಟೆ?
ಮೊಳೆ ಮೊಳೆತು ಪುನರಪಿ ಬೀಜವಾದಂತೆ,
ಅರಿವು ಕ್ರೀಯಲ್ಲಿ ನಿಂದು ಉಭಯವು ತಾನಾದ ತೆರದಂತೆ,
ಆ ಎರಡರಲ್ಲಿ ಕೂಡಿದ ಉಳುಮೆಯನರಿಯಬೇಕೆಂದನಂಬಿಗ ಚೌಡಯ್ಯ./189
ಬೆಟ್ಟದ ಲಿಂಗವ ಹಿರಿದು ಮಾಡಿ[ಕೊಂ]ಡು ಪರಿವ ಕೊಟ್ಟಿ ಮೂಳರಿರಾ,
ಬಿಟ್ಟುಕೊಡಿ ನಿಮ್ಮ ಇಷ್ಟಲಿಂಗವ.
ನಮ್ಮ ಕೈಗೆ ಕೊಡದಿದ್ದಡೆ, ನಟ್ಟನಡುನೀರೊಳಗೊಯ್ದಿ,
ಕಟ್ಟಿ ಮುಳುಗಿಸಿ
ನಿಮ್ಮನು ಲಿಂಗೈಕ್ಯರ ಮಾಡುವೆನೆಂದಾತ ನಮ್ಮಂಬಿಗ ಚೌಡಯ್ಯ. /190
ಬೆಟ್ಟದ ಲಿಂಗವ ಹಿರಿದುಮಾಡಿ,
ತನ್ನ ಇಷ್ಟಲಿಂಗವ ಕಿರಿದುಮಾಡುವ ಮೂಳಹೊಲೆಯರಿರಾ,
ಅಣುರೇಣುತೃಣಕಾಷ್ಠ ಮೊದಲಾದ
ಬ್ರಹ್ಮಾಂಡ ಪರಿಪೂರ್ಣವಾದ
ಮಹಾಲಿಂಗವೆ ಅಂಗಕ್ಕೆ ಗುರುವು ಎಂದು ಸಂಬಂಧಿಸಿ
ಸರ್ವಸಂ[ಕು]ಲವ ತೋರಿದ ಬಳಿಕ,
ಇಂತಪ್ಪ ಮೋಕ್ಷಕ್ಕೆ ಕಾರಣವಾದ ಲಿಂಗವನು ಅಡಿಮಾಡಿ
ನಟ್ಟ ಕಲ್ಲಿಂಗೆ ಅಡ್ಡಬೀಳುವ
ಹೊಲೆಯರಿಗೆ ಲಿಂಗ ಕಟ್ಟುವುದು ಕಿರಿದು,
ಗೊಡ್ಡೆಮ್ಮೆಗೆ ಲಿಂಗವದು ಕರ ಲೇಸು.
ಇಂಥ ಮೂಳ ಹೊಲೆಯರು ಶಿವಭಕ್ತರೆಂದು ನುಡಿವ ಭ್ರಷ್ಟರನು
ಕತ್ತೆಯನೇರಿಸಿ ಕೆರಹಿನಟ್ಟೆಯಲಿ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯನೆಂಬ ನಿಜಶರಣನು. /191
ಬೆಲ್ಲಕ್ಕೆ ಚದುರಸವಲ್ಲದೆ ಸಿಹಿಗೆ ಚದುರಸವುಂಟೆ?
ಕುರುಹಿಂಗೆ ಪೂಜೆಯಲ್ಲದೆ ಅರಿವಿಂಗೆ ಪೂಜೆ ಉಂಟೆ?
ಅರಿವು ಕರಿಗೊಂಡಲ್ಲಿ ಕೈಯ ಕುರುಹು ಅಲ್ಲಿಯೆ ಲೋಪವೆಂದನಂಬಿಗ ಚೌಡಯ್ಯ./192
ಬೆಲ್ಲದ ಹೊಗೆಯನಿಕ್ಕಿ,
ಭರಣಿಯ ಹೊರವಂತೆ ಇರಬೇಡವೆ ಗುರುವಿನುಪದೇಶ?
ದಾರಿಯ ಹಸಮಾಡಿ ನೀರ ತಿದ್ದುವಂತೆ ಇರಬೇಡವೆ ಗುರುವಿನುಪದೇಶ?
ಹಾಲುಂಬ ಹಸುಳೆಗೆ ಕೂಳು ಮೈಯಕ್ಕುವುದೆ?
ಬುದ್ಧಿಹೀನರು ಬಲ್ಲರೆ ಪರಬ್ರಹ್ಮದ ಸುಖವ?
ಈ ಭೇದವನರಿಯದ ಗುರುಶಿಷ್ಯರಿಬ್ಬರೂ ಇದ್ದ ಊರೊಳಗಿರೆನೆಂದನಂಬಿಗ ಚೌಡಯ್ಯ. /193
ಬೇಗ ಬೇಗನೆ ಗತಿಪಥದ ಜ್ಞಾನವ ಮಾಡಿಕೊಂಡು
ನೀಗಿರೊ ನಿಮ್ಮ ಭವಬಂಧನದ ಸಾಗರವನು.
ಪ್ರಾಣತ್ಯಾಗವು ಈಗಲೋ ಆಗಲೋ ಯಾವಾಗಲೋ
ಎಂದರಿಯಬಾರದು.
ರೋಗ ರುಜೆಗಳಿಗೆ ಅಗರವು ನಿಮ್ಮ ಒಡಲು.
ತನು-ಮನ-ಪ್ರಾಣವ ನೆಚ್ಚದಿರು,
ನಾಗಭೂಷಣನ ಪಾದಪೂಜೆಯ ಮಾಡಿ,
ಶಿವಯೋಗದಲಿ ಲಿಂಗವನೊಡಗೂಡಿ ಸಾಗಿ ಹೋಗುವವರನು ಭವಗೇಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ./194
ಬ್ರಹ್ಮ ಕುಮಾರ, ವಿಷ್ಣು ಅಬಳ,
ಲೆಕ್ಕವಿಲ್ಲದ ರುದ್ರರು ನೋಡಾ.
ದೇವರ್ಕಳೆಲ್ಲಾ ಗರ್ವದಲೈದಾರೆ,
ಅವರೆತ್ತಬಲ್ಲರು ಶಿವನಾದಿಯಂತುವ?
ಶಾಶ್ವತಪದಕ್ಕೆ ಸಲ್ಲದ ಕಾರಣ, ಇವರು ವೇಷಧಾರಿಗಳೆಂದಾತನಂಬಿಗ ಚೌಡಯ್ಯ. /195
ಬ್ರಹ್ಮ ನಿಮ್ಮ ಬಲ್ಲಡೆ ನಿರ್ಮಾಲ್ಯವಹನೆ?
ವಿಷ್ಣು ನಿಮ್ಮ ಬಲ್ಲಡೆ ಗೋಪಾಲನಹನೆ?
ರುದ್ರ ನಿಮ್ಮ ಬಲ್ಲಡೆ ಜಡೆಯ ಕಟ್ಟುವನೆ?
ಪಶುಪತಿ ನಿಮ್ಮ ಬಲ್ಲಡೆ ವೇಷವ ಹೊತ್ತು ತೊಳಲುವನೆ?
ಗಂಗೆವಾಳುಕರು ನಿಮ್ಮ ಬಲ್ಲಡೆ ಲಿಂಗವ ಪೂಜಿಸುವರೆ?
ತಮ್ಮ ಬಲ್ಲಡೆ, ನಿಮ್ಮ ಬಲ್ಲರು.
ಅನ್ನಕ ತಡವೆಂದಾತ ನಮ್ಮಂಬಿಗ ಚೌಡಯ್ಯ./196
ಬ್ರಹ್ಮ ಮೊದಲನರಿಯ,
ವಿಷ್ಣು ತುದಿಯನರಿಯ,
ಎಡೆಯಣ ಮಾನವರೆತ್ತ ಬಲ್ಲರೊ ಮೃಡನಂತುವ?
ಇತ್ತಣ ಮನ[ದ]ವರಿತ್ತಿತ್ತ ಕೇಳಿ
ಅತ್ತಣ ಸುದ್ದಿ ನಿಮಗೇತಕ್ಕೆ
ನಿಸ್ಸಂಗಿ ನಿರೂಪದ ಮಹಾತ್ಮರೆ ಬಲ್ಲರೆಂದನಂಬಿಗ ಚೌಡಯ್ಯ./197
ಬ್ರಹ್ಮಕ್ಕೆ ಬಾಯಿ ತೆರೆದು ಮಾತನಾಡಿ,
ಪರಬೊಮ್ಮದ ವಶ್ಯವ ನುಡಿದು,
ಒಮ್ಮನ ಅಂಬಲಿಯನಿಕ್ಕೆಂದು ಹಲುಬುವ ಹೊಲಬುಗೆಟ್ಟವರ ಕಂಡು ಅವರಿಗೆ ಒಲವರವಿಲ್ಲಾ ಎಂದನಂಬಿಗ ಚೌಡಯ್ಯ. /198
ಬ್ರಹ್ಮದ ಮಾತನಾಡಿ,
ಕನ್ನೆಯರ ಕಾಲದೆಸೆಯಲ್ಲಿ ಕುಳಿತಡೆ ಪರಬೊಮ್ಮದ ಮಾತು ಅಲ್ಲಿಯೆ ನಿಂದಿತ್ತೆಂದನಂಬಿಗ ಚೌಡಯ್ಯ./199
ಬ್ರಹ್ಮನ ಘನವೆಂತೆಂಬಿರಯ್ಯ, ಬ್ರಹ್ಮನು ಘನವಲ್ಲ,
ಬ್ರಹ್ಮನು ಕಮಲದಲ್ಲಿ ಹುಟ್ಟಿದ.
ಆ ಕಮಲವು ಘನವೆಂತೆಂಬಿರಯ್ಯ, ಕಮಲವು ಘನವಲ್ಲ,
ಕಮಲ ಕೆಸರಿನಲ್ಲಿ ಹುಟ್ಟಿತು.
ಕೆಸರು ಘನವೆಂತೆಂಬಿರಯ್ಯಾ, ಕೆಸರು ಘನವಲ್ಲ,
ಕೆಸರು ನೀರಿನಲ್ಲಿ ಹುಟ್ಟಿತು.
ನೀರು ಘನವೆಂತೆಂಬಿರಯ್ಯ, ನೀರು ಘನವಲ್ಲ,
ನೀರು ಸಮುದ್ರದಲ್ಲಿ ಹುಟ್ಟಿತು.
ಸಮುದ್ರವು ಘನವೆಂತೆಂಬಿರಯ್ಯ, ಸಮುದ್ರವು ಘನವಲ್ಲ,
ಸಮುದ್ರವು ಅಗಸ್ತ್ಯಮುನಿಯ ಕುಡಿತೆಗೆ ಸಾಲದಾಗಿ ಹೋಯಿತ್ತು.
ಅಗಸ್ತ್ಯನು ಘನವೆಂತೆಂಬಿರಯ್ಯ, ಅಗಸ್ತ್ಯನು ಘನವಲ್ಲ,
ಅಗಸ್ತ್ಯನು ಕು-ಂಭದಲ್ಲಿ ಹುಟ್ಟಿದ.
ಕುಂಭವು ಘನವೆಂತೆಂಬಿರಯ್ಯ, ಕುಂಭವು ಘನವಲ್ಲ,
ಕುಂಭವು ಭೂಮಿಯಲ್ಲಿ ಹುಟ್ಟಿತು.
ಭೂಮಿಯು ಘನವೆಂತೆಂಬಿರಯ್ಯ, ಭೂಮಿಯು ಘನವಲ್ಲ,
ಭೂಮಿಯು ಆದಿಶೇಷನ ತಲೆಗೆ ಸಾಲದಾಗಿ ಹೋಯಿತ್ತು.
ಆದಿಶೇಷನು ಘನವೆಂತೆಂಬಿರಯ್ಯ, ಆದಿಶೇಷ ಘನವಲ್ಲ,
ಆದಿಶೇಷನು ಪಾರ್ವತಿದೇವಿಯ
ಕಿರುಬೆರಳಿನುಂಗುರಕೆ ಸಾಲದಾಗಿ ಹೋಗಿದ್ದ.
ಪಾರ್ವತಿದೇವಿಯು ಘನವೆಂತೆಂಬಿರಯ್ಯ, ಪಾರ್ವತಿದೇವಿ ಘನವಲ್ಲ,
ಪಾರ್ವತಿದೇವಿಯು ಪರಮೇಶ್ವರನ ಎಡಗಡೆಯ ತೊಡೆಯ ಬಿಟ್ಟು
ಬಲಗಡೆಯ ತೊಡೆಯನರಿಯಳು,
ಪರಮೇಶ್ವರನು ಘನವೆಂತೆಂಬಿರಯ್ಯ, ಪರಮೇಶ್ವರನು ಘನವಲ್ಲ,
ನಮ್ಮ ಪರಮೇಶ್ವರನು ಭಕ್ತನಾದ ಬಸವಣ್ಣನ ಎದೆಯೊಳಗೆ
ಅಡಗಿರ್ದನೆಂದು ವೇದಗಳು ಸಾರುವವು ಎಂದಾತ ನಮ್ಮ ಅಂಬಿಗರ ಚೌಡಯ್ಯ. /200
ಬ್ರಹ್ಮನ ನಾವು ಬಲ್ಲೆವು, ವಿಷ್ಣುವ ನಾವು ಬಲ್ಲೆವು,
ತೆತ್ತೀಸಕೋಟಿ ದೇವತೆಗಳ ನಾವು ಬಲ್ಲೆವು.
ಅದೇನು ಕಾರಣವೆಂದಡೆ: ಇವರು ಹಲವು ಕಾಲ ನಮ್ಮ ನೆರೆಮನೆಯಲ್ಲಿದ್ದರಾಗಿ.
ಇವರು ದೇವರೆಂಬುದ ನಾ ಬಲ್ಲೆನಾಗಿ,
ಒಲ್ಲೆನೆಂದಾತನಂಬಿಗ ಚೌಡಯ್ಯ. /201
ಭಕ್ತ ಜಂಗಮದ ಪರಿಯ ಹೇಳಿಹೆನು ಕೇಳಿರಣ್ಣಾ:
ಭಕ್ತರು ಜಂಗಮವಿದ್ದೆಡೆಗೆ ಹೋಗಿ, ದೀರ್ಘದಂಡ ನಮಸ್ಕಾರವಂ ಮಾಡಿ,
ವಿಭೂತಿಯಂ ಕೊಟ್ಟು,
ಎಲೆ ದೇವ. ನಿಮ್ಮ ತೊತ್ತು ಭೃತ್ಯನೆಂದು
ಕಿಂಕುರ್ವಾಣತೆಯಂ ನುಡಿದು,
ತೀರ್ಥಪ್ರಸಾದವನಿತ್ತು, ರಕ್ಷಿಸಬೇಕೆಂದು ಬಿನ್ನಪವನಿತ್ತು,
ಕೊಂಡು ತನ್ನ ಗೃಹಕ್ಕೆ ಹೋಗಿ
ಸಕಲಪದಾರ್ಥಂಗಳು ಆಯಿತ್ತಾದ ಬಳಿಕ
ಬಂದು ನಮಸ್ಕಾರವಂ ಮಾಡಿ,
ದೇವರಾಯವಾಯಿತ್ತು ಚಿತ್ತೈಸಿಯೆನೆ,
ಒಳಿತೆಂದು ಆ ಜಂಗಮವು ಆ ಭಕ್ತನೊಡಗೂಡಿ ಗೃಹಕ್ಕೆ ಬಂದು
ಉಲ್ಲಾಸದಿಂ ಆ ಭಕ್ತನು ಪಾದಾರ್ಚನೆಯ ಮಾಡಿ
ಅಗ್ರ ಗದ್ದಿಗೆಯನಿಕ್ಕಿ ಮೂರ್ತಮಾಡಿಸಿ
ಮರಳಿ ದೀರ್ಘದಂಡನಮಸ್ಕಾರಮಂ ಮಾಡಿ
ತೀರ್ಥಪ್ರಸಾದಕ್ಕೆ ನಿರೂಪವೆ ಅಯ್ಯರಿ ಎಂದು ಎದ್ದು ಬಂದು
ಆ ಜಂಗಮಕ್ಕೆ ನಮಸ್ಕರಿಸಿ ದಿವ್ಯಪಾದಮಂ ಪಿಡಿದು,
ಸಾಕ್ಷಿ: ದೇಶಿಕಂ ಚರಣಾಂಗುಷ್ಠಂ[ಭಸಿ]ತಂ ಪ್ರಣಾಮಸ್ತಥಾ
ಪಾದಪೂಜಾಮಿಮಾಂ ಕುರ್ಯಾತ್ ಗೋಪ್ಯಂ ಗೋಪ್ಯಂ ವರಾನನೇ
ಎಂದು ವಿಭೂತಿಯಂ ಧರಿಸಿ, ಪತ್ರಿಪುಷ್ಪಗಳಿಂದ ಪೂಜೆಯಂ ಮಾಡಿ
ತಾಂಬೂಲ ನೆನೆಗಡಲಿ ಮುಖ್ಯವಾದ
ಫಲಾಹಾರಂಗಳನರ್ಪಿಸಿ
ಪ್ರದಕ್ಷಿಣವಂ ಮಾಡಿ, ಸ್ತುತಿಸಿ, ನಮಸ್ಕರಿಸಿ
ಹಸ್ತಪರುಶಮಂ ಮಾಡಿಕೊಂಡು, ಸಕಲಪದಾರ್ಥಂಗ[ಳ] ನೀಡಿ,
ವಿಭೂತಿಯಂ ಮುಂದಿಟ್ಟು ನಮಸ್ಕರಿಸಿ
ಕರವಂ ಮುಗಿದು ನಿಲ್ಲುವುದು ಭಕ್ತನಿಗೆ ಕರ್ತವ್ಯ.
ಇನ್ನು ಜಂಗಮದ ಪರಿಯ ಹೇಳಿಹೆನು ಕೇಳಿರಣ್ಣಾ: ಜಂಗಮವೆ ಪರಾತ್ಪರ, ಜಂಗಮವೆ ಪರವಸ್ತು,
ಇಂತಪ್ಪ ಜಂಗಮ ಭಕ್ತನ ಮೇಲಣ ಕರುಣದಿಂ
ತೀರ್ಥವನಿತ್ತ ಬಳಿಕ
ತಮ್ಮಿಷ್ಟಲಿಂಗ[ಕ್ಕೆ] ಕೊಟ್ಟುಕೊಂಬುದೆ ಜಂಗಮಕ್ಕೆ ಕರ್ತವ್ಯ.
ಸಾಕ್ಷಿ: ಜಂಗಮಂ ಪರಾತ್ಪರಂ ಪಾದಾಂಗುಷ್ಠ ತೀರ್ಥಂ ತಥಾ
ಸ್ವಯಂ ಲಿಂಗಾರ್ಪಿತ ಪೀತ್ವಾ ಜಂಗಮಃ ಪರಮೇಶ್ವರಃ
ಮತ್ತಂ
ಸ್ವಪಾದೋದಕ ತೀರ್ಥಾಂ ಚ ಸ್ವಲಿಂಗಸ್ಯ ಸಮರ್ಪ[ಣಂ]
ಕೃತ್ವ್ಯಾ ವಿಭೇದವದ್ಭಕ್ತ್ಯಾ ಅರ್ಪಣೀಯಮನಂತರಂ
ಇಂತೆಂಬ ಶ್ರುತ್ತ್ಯರ್ಥವನರಿಯದೆ ಬೇರೆ ತನಗೊಂದೆಡೆಯೆಂದು
ಗೊಣಸೆ ತೆಗೆದುಕೊಂಡು ಎಡೆಮಾಡು ಭಕ್ತಾ
ಎಂಬುದು ಜಂಗಮಕ್ಕೆ ಕ್ರಮವೆ? ಅಲ್ಲ.
ಅದು ಗಣಸಮೇಳಕ್ಕೆ ಅಲ್ಲದ ಮಾತು.
ಆತನ ಮಾತ ಕೇಳಿ ಎಡೆಮಾಡುವಾತ ಭಕ್ತನೆ? ಅಲ್ಲ.
ಇವರಿಬ್ಬರ ಮುಖವ ನೋಡಲಾಗದೆಂದನಂಬಿಗ ಚೌಡಯ್ಯ./202
ಭಕ್ತ ನಂಬಿದರೆ ಕೊಪ್ಪದ ರಾಮಯ್ಯನಂತೆ ನಂಬಬೇಕಯ್ಯಾ,
ಭಕ್ತ ನಂಬಿದರೆ ಕೆಂಭಾವಿ ಭೋಗಣ್ಣನಂತೆ ನಂಭೀಕಯ್ಯಾ,
ಭಕ್ತ ನಂಬಿದರೆ ಚೇದಿರಾಜಯ್ಯನಂತೆ ನಂಬಬೇಕಯ್ಯಾ,
ಭಕ್ತ ನಂಬಿದರೆ ಏಣಾದಿನಾಥನಂತೆ ನಂಬಬೇಕಯ್ಯಾ.
ಇಂತಪ್ಪ ನಂಬಿಗೆಗೆ ತಾನು ಸರಿಯೆಂದು,
ಬೀದಿಯ ಪೋರನಂತೆ
ತನ್ನಯ ಮನದೊಳಗೊಂದು ಮಾತು, ಹೊರಗೊಂದು ಮಾತು,
ತುದಿನಾಲಗೆಯಲ್ಲಿ ಭಕ್ತರ ನಂಬಿದೆನೆಂದು ಗಳಹುವ
ಗೊಡ್ಡ ಹೊಲೆಯನ ಕಂಡೊಡೆ
ಎದೆ ಎದೆಯನು ಒದ್ದೊದ್ದು ತುಳಿಯೆಂದಾತ
ನಮ್ಮ ಅಂಬಿಗರ ಚಾಡಯ್ಯ. /203
ಭಟಂಗೆ ಭೀತಿ ಉಳ್ಳನ್ನಕ್ಕ ರಣವ ಹೊಗಬಲ್ಲನೆ?
ಬಲ್ಲವ ಅರಿಯದವರಲ್ಲಿ ಗೆಲ್ಲ ಸೋಲಕ್ಕೆ ಹೋರುವನ್ನಬರ ಬಲ್ಲವನಹನೆ?
ಅರಿದು ನುಡಿಯಲಿಲ್ಲ, ಮರೆದು ಸುಮ್ಮನಿರಲಿಲ್ಲ.
ಆರು ಎಂದಂತೆ ಎನಲಿಲ್ಲ ಎಂದನಂಬಿಗ ಚೌಡಯ್ಯ. /204
ಭವವಿರಹಿತಂಗೆ ಕರ್ಮಂಗಳ ಕೇಳಲೇತಕ್ಕೆ?
ಕ್ರೀ ನಷ್ಟವಾದವಂಗೆ ಕೊಡುವ ಕೊಂಬುದನರಸಲೇತಕ್ಕೆ?
ನೋಡಿದಲ್ಲಿಯೆ ಸಂದಗುಣ,
ಮುಟ್ಟಿದಲ್ಲಿಯೇ ಅರ್ಪಿತವೆಂದನಂಬಿಗ ಚೌಡಯ್ಯ. /205
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
ಕೊರಳಿಗೆ ಕವಡೆಯ ಕಟ್ಟಿ ನಾಯಾಗಿ ಬೊಗಳುವರು!
ಅದಾವ ವಿಚಾರವಯ್ಯ?
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
ಬೇವಿನುಡಿಗೆಯನುಟ್ಟು ಹಡಲಿಗೆಯ ಹೊತ್ತು `ಉಧೋ ಉಧೋ ಎಂಬರು!
ಅದಾವ ವಿಚಾರವಯ್ಯ?
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
ಹಗ್ಗಹುರಿ-ಬೆನ್ನಸಿಡಿ-ಬಾಯಬೀಗದಲ್ಲಿ ಹೋಗುವರು!
ಅದಾವ ವಿಚಾರವಯ್ಯ?
ಇಂಥ ಭವಿಮಾರ್ಗದಲ್ಲಿ ಚರಿಸುವ
ಶಿವದ್ರೋಹಿಗಳಿಗೆ ಲಿಂಗಧಾರಣವ ಮಾಡುವನೊಬ್ಬ ಗುರುದ್ರೋಹಿ,
ಅವರಿಗೆ ಚರಣೋದಕವ, ತಾ ಧರಿಸುವ ವಿಭೂತಿ-ರುದ್ರಾಕ್ಷಿಯ
ಕೊಡುವನೊಬ್ಬ ಲಿಂಗದ್ರೋಹಿ!
ಅವನು ಭಕ್ತನೆಂದು
ಅವನ ಮನೆಯ ಹೊಕ್ಕು, ಮಂತ್ರವ ಹೇಳಿ,
ಅನ್ನವ ತಿಂದವನೊಬ್ಬ ಜಂಗಮದ್ರೋಹಿ!
ಇಂತೀ ನಾಲ್ವರಿಗೆ ಸೂರ್ಯಚಂದ್ರರುಳ್ಳನ್ನಕ್ಕ
ಎಕ್ಕಲಕೊಂಡದಲ್ಲಿಕ್ಕದೆ ಮಾಣ್ಬನೆ ಅಂಬಿಗರ ಚೌಡಯ್ಯನು?/206
ಭೂತ ಭೂತ ಹೊಡಯಿತೆಂದು
ಬಾಯಿಗೆ ಬಂದ ಹಾಗೆ ಕೆಲದಾಡಿ
ಹಲಬರು ಮಂತ್ರಿಸಿ ಥೂಥೂ ಎಂದು ಉಗುಳಿ,
ಛೀ ಛೀ ಎಂದು ಉಗುಳಿ,
ಜರಿದು ಝಂಕಿಸಿ ಲಜ್ಜೆಗೆಡಿಸಿಕೊಂಬ
ಪಾತಕ ಕರ್ಮಿಗಳಿಗ್ಯಾಕೊ ಶಿವಸ್ತೋತ್ರ, ಶಿವಭಕ್ತಿ?
………………………………………….ಬೆಂದು ನಾರು ಬೇರು……………………………………………………………………./207
ಭೇದವ ಭೇದಿಸುವ ಚಿತ್ತವ,
ನಾದಬಿಂದು ಕಳೆಗೆ ಅತೀತವಪ್ಪ ಆತ್ಮನ,
ಅಡಗಿ ರಂಜಿಸುವ ಠಾವ ಕುರುಹುಗೊಂಡವನ
ಯೋಗಿಯೆಂದನಂಬಿಗ ಚೌಡಯ್ಯ. /208
ಭೋಗಕ್ಕೆ ಸಾಧನದ್ರವ್ಯ ಬಂದರೆ ಬೇಗ ಬೇಗ ಸಂಭ್ರಮಿಸುವರು,
ಬಾರದಿರ್ದರೆ ಕಂದುವರು ಕುಂದುವರು.
ಈ [ಉ]ಭಯದ ಸಂದಿನಲ್ಲಿ ಸಿಕ್ಕಿ ದಂದುಗಕ್ಕೊಳಗಾಗಿ
ಸಂದ[ಣಿ]ಗೊಂಬಾತಗೆಂದೆಂದಿಗೂ ಸಂಸಾರ ಬಿಡದು.
ಬೆಂದೊಡಲಿಗೇಕೆ ಈಸು ಸಡಗರವೆಂದಾತ ನಮ್ಮಂಬಿಗರ ಚಾಡಯ್ಯ./209
ಮಕ್ಕಳು ಮರಿಗಳು ಸತ್ತು ನಷ್ಟವಾಗಿ,
ಕಷ್ಟ ದುಃಖ ನೆಲೆಗೊಂಡಿತ್ತೆಂದು
ತನ್ನಿಷ್ಟಲಿಂಗಪೂಜೆಯನಗಲಿಸಿ,
ಬಿಟ್ಟಿಯ ಮಾಡಬಹುದೇನಯ್ಯಾ?
ಜಂಗಮವು ಬಂದು ತನ್ನ ವ್ರತ ನೇಮಕ್ಕೆ ಬೇಡಿದಡೆ
ನಿಮ್ಮ ಉಪದ್ರವೇನೆಂದು ಭಕ್ತಿಯ ಮಾಡಬಹುದೇನಯ್ಯಾ?
ಸಕಲದುಃಖಂಗಳು ತಮ್ಮಿಂದ ತಾವೇ ಬರಲರಿಯವು.
ಭಕ್ತಿಯನ್ನು ಮರೆದು, ಮರವೆಯಲ್ಲಿ ಬೆರೆದು,
ಭವಭವದಲ್ಲಿ ಬರುವುದು ಅದೇ ದುಃಖವು, ನಿಶ್ಚಯವೆಂದಾತ ನಮ್ಮ ಅಂಬಿಗರ ಚೌಡಯ್ಯ./210
ಮಡುವಿನಲ್ಲಿ ಮೊಗೆತಹೆನೆ? ಅಗ್ಗವಣಿ ಶುದ್ಧವಲ್ಲ.
ಗಿಡುವಿನ ಪುಷ್ಪವ ತಹೆನೆ? ಹೂ ನಿರ್ಮಾಲ್ಯ.
ಅಟ್ಟ ಆಡಿಗೆಯನಾದಡೆ ಮನ ಮುನ್ನವೆ ಉಂಡಿತ್ತು.
ನುಡಿವ ಶಬ್ದ ಎಂಜಲಾಯಿತ್ತು.
ಹಿಡಿಯೊಳಯಿಂಕೆ ಒಂದ ಕೊಂಡುಬಂದು
ಲಿಂಗವೆಂದು ಸಂಕಲ್ಪವ ಮಾಡಿದಡೆ ಅದಕ್ಕೆ ಬೋನವ ಕೊಡಲೊಲ್ಲೆನೆಂದನಂಬಿಗ ಚೌಡಯ್ಯ. /211
ಮದ್ದ ತಿನ್ನಬೇಕಾದರೆ ವೈದ್ಯನಿದ್ದೆಡೆಗೆ ಹೋಗಿ,
ಹಣ ಹೊನ್ನು ಕೊಟ್ಟು, ದೈನ್ಯಂಬಟ್ಟು,
ಮದ್ದ ತಿಂಬರು ನೋಡಯ್ಯ.
ಇದು ಶುದ್ಧಸಿದ್ಧಪ್ರಸಿದ್ಧಪ್ರಸಾದಕ್ಕೆ ಎಂದು
ಬಿನ್ನಹವ ಮಾಡದೆ,
ಅಹಂಕಾರದಲ್ಲಿ ತರಿಸಿಕೊಂಡುಂಬ ಗೊಡ್ಡಮೂಳನ ಕಂಡಡೆ
ಒದ್ದೊದ್ದು ಕೊಲ್ಲೆಂದಾತ ನಮ್ಮ ಅಂಬಿಗರ ಚೌಡಯ್ಯ. /212
ಮನ ಮಗ್ನವಾಗಿ, ಅರಿವನು ಘನಪ್ರಾಣಲಿಂಗದಲ್ಲಿ ಸವೆದು,
ತನುವನು ಕ್ರಿಯಾಚಾರವಿಡಿದು, ಇಷ್ಟಲಿಂಗದಲ್ಲಿ ಸವೆದು,
ಮಹಾನುಭಾವವನರಿತಂತಹ ವೀರಶೈವಸಂಪನ್ನರಾದ
ಶಿವಶರಣರಿಗೆ ಸಂಸಾರಿಗಳೆನ್ನಬಹುದೆ ಅಯ್ಯ?
ಹೊನ್ನು-ಹೆಣ್ಣು-ಮಣ್ಣೆಂಬ ತ್ರಿವಿಧಪದಾರ್ಥಂಗಳ ವಿವರಿಸಿ,
ಇಷ್ಟ-ಪ್ರಾಣ-ಭಾವವೆಂಬ ಮೂರು ಲಿಂಗದ ಮುಖವನರಿದರ್ಪಿಸಿ,
ಆರು ಲಿಂಗದನುವಿನಲ್ಲಿ ಕೈಕೊಂಡು,
ಬಂದ ಬಂದ ಸಕಲಪದಾರ್ಥವನು ಅದರ ಪೂರ್ವಾಶ್ರಯವಳಿದು,
ಶಿವಪ್ರಸಾದವೆಂದು ಅನುಭವಿಸುತಿರ್ಪರು.
ಅಂತಪ್ಪ ನಿರುಪಮ, ನಿರ್ಭೇದ್ಯ,
ನಿರಾಳ, ನಿಃಶೂನ್ಯ ಪರಮಪ್ರಸಾದಿಗಳಿಗೆ
ಸಂಸಾರಿಗಳೆಂದು ನುಡಿವ ಅಜ್ಞಾನಿಸಂದೇಹಿಗಳು ಅಘೋರನರಕದಲ್ಲಿ ಮುಳುಗುವರೆಂದಾತನಂಬಿಗರ ಚೌಡಯ್ಯ./213
ಮರ ಬೇರು ಸಾರದಿಂದ ನಾನಾ ಶಾಖೆಗಳು ಪ[ಲ್ಲವಿ]ಸುವ ತೆರನಂತೆ,
ಜೀವಭಾವಮೂಲದಿಂದ ಸಕಲೇಂದ್ರಿಯ ಹೆಚ್ಚುಗೆ ಅಹಂತೆ,
ಮರಕ್ಕೆ ಬೇರು ನಷ್ಟದಿಂದ ಶಾಖೆ ನಷ್ಟ,
ಜೀವಕ್ಕೆ ಪ್ರಕೃತಿ ನಷ್ಟದಿಂದ ಇಂದ್ರಿಯ ನಷ್ಟ ಎಂದನಂಬಿಗ ಚೌಡಯ್ಯ. /214
ಮರುಳ ಕಂಡ ಕನಸಿನಂತೆ, ಆಕಾಶದಲ್ಲಿ ತೋರುವ ಲಿಪಿಯಂತೆ,
ಕಂಡುದಕ್ಕೆ ರೂಪಾಗಿ, ಹಿಡಿವುದಕ್ಕೆ ಒಡಲಿಲ್ಲದೆ ನಿಂದ ಭಾವ ನಿರಂತರ ಸುಖಿಯೆಂದನಂಬಿಗ ಚೌಡಯ್ಯ. /215
ಮಸ್ತಕದಲ್ಲಿ ರುದ್ರಾಕ್ಷಿಯಂ ಧರಿಸಿ
ಅನ್ಯದೈವದ ಗುಡಿಯ ಹೊಗಲಾಗದು ಶರಣ.
ಕರಣಂಗಗಳಲ್ಲಿ ರುದ್ರಾಕ್ಷಿಯಂ ಧರಿಸಿ
ಹರನಿಂದೆ ಗುರುನಿಂದೆಯ ಕೇಳಲಾಗದು ಶರಣ.
ತೋಳುಗಳಲ್ಲಿ ರುದ್ರಾಕ್ಷಿಯಂ ಧರಿಸಿ
ಪರಸತಿಯನಪ್ಪಲಾಗದು ಶರಣ.
ಮುಂಗೈಯಲ್ಲಿ ರುದ್ರಾಕ್ಷಿಯಂ ಧರಿಸಿ
ಅನ್ಯರಿಗೆ ಕೈಮುಗಿಯಲಾಗದು ಶರಣ.
ಇದನರಿದು ಧರಿಸಿದಡೆ ಶ್ರೀರುದ್ರಾಕ್ಷಿಯಹುದು.
ಅಂತಲ್ಲದಿರ್ದಡೆ, [ಡಂ]ಬ ಹಗರಣವ ಹೊತ್ತು ಬಂದಂತೆ ಎಂದಾತನಂಬಿಗರ ಚೌಡಯ್ಯ. /216
ಮಹಾಘನಲಿಂಗದ ನಿಜಘನವೆಂಬ ಚಿದ್ಘನಾತ್ಮಕ ಶರಣನ ಲೀಲೆಯಿಂದ
ಮಹಾಜ್ಯೋತಿ ಹುಟ್ಟಿತ್ತು,
ಆ ಜ್ಯೋತಿಯ ಬೆಳಗಿನಲ್ಲಿ
ಅರಿವು ಮರವೆಂಬ ಭೂತಾತ್ಮ ಮಹಾತ್ಮಂಗಳು ಹುಟ್ಟಿದವು.
ಆತ್ಮಂಗಳಿಂದ ಜ್ಞಾನಾತ್ಮಕ, ಶುದ್ಧಾತ್ಮಕ, ನಿರ್ಮಲಾತ್ಮಕ,
ಪರಮಾತ್ಮ, ಅಂತರಾತ್ಮ, ಜೀವಾತ್ಮಂಗಳು ಹುಟ್ಟಿದವು.
ಆ ಜ್ಞಾನಾತ್ಮಕನಲ್ಲಿ ಮಹಾನುಭಾವಜ್ಞಾನಂಗಳು ಹುಟ್ಟಿ ತ್ರಿಯಕ್ಷರಾದವು.
ಆ ತ್ರಿಯಕ್ಷರಂಗಳಲ್ಲಿ ಓಂಕಾರ ಹುಟ್ಟಿತ್ತು.
ಆ ಓಂಕಾರದಲ್ಲಿ ಪಂಚಾಕ್ಷರಂಗಳು ಹುಟ್ಟಿದವು.
ಆ ಪಂಚಾಕ್ಷರಂಗಳಲ್ಲಿ ಅಯಿವತ್ತೆರಡು ಅಕ್ಷರಂಗಳು ಹುಟ್ಟಿದವು.
ಇಂತೀ ಅಕ್ಷರಂಗಳೆಲ್ಲವನು ಷಡಾತ್ಮಕರ ಪ್ರಾಣವೆಂದಾತ ನಮ್ಮ ಅಂಬಿಗರ ಚೌಡಯ್ಯ./217
ಮಳಲ ಮರೆಯ ನೀರ ಒಲವರವಿಲ್ಲದೆ ತೋಡಿ,
ಚಿಲುಮೆಯ ಶೀಲವಂತರೆಂದು ಹಲುಬುತ್ತಿರಲೇತಕ್ಕೆ ?
ಸಲೆ ವಸ್ತುವನರಿತು ತ್ರಿವಿಧದ ಹೊಲಬಿನಾಸೆಯ ಬಿಟ್ಟು ಸಲೆ ಗೆದ್ದಡೆ, ಬೇರೊಂದು ಹೊಲಬ ತೋರಿಹೆನೆಂದನಂಬಿಗ ಚವಡಯ್ಯ./218
ಮಾಡುವ ಭಕ್ತಂಗೆ ಮನವೆ ಸಾಕ್ಷಿ, ಹೊರಹೊಮ್ಮಿ ಬಯಲ ಹರಹಲೇನು?
ಹಮ್ಮಿಲ್ಲದೆ ಮಾಡಿ, ಮನದಲ್ಲಿ ಮರುಗದಿದ್ದಡೆ, ಅಲ್ಲಿ ತಾ ತೆರಹಿಲ್ಲದಿಪ್ಪನಂಬಿಗ ಚೌಡಯ್ಯ./219
ಮಾತಿನ ವೇದ, ನೀತಿಯ ಶಾಸ್ತ್ರ, ಘಾತಕದ ಕಥೆ
ಕಲಿವುದಕ್ಕೆ ಎಷ್ಟಾದಡೂ ಉಂಟು.
ಅಜಾತನ ಒಲುಮೆ, ನಿಶ್ಚಯವಾದ ವಾಸನೆಯ ಬುದ್ಧಿ,
ತ್ರಿವಿಧದ ಆಸೆಯಿಲ್ಲದ ಚಿತ್ತ, ಸರ್ವರಿಗೆ ಹೇಸಿಕೆಯಿಲ್ಲದ ನಡೆನುಡಿ ಇಷ್ಟಿರಬೇಕೆಂದನಂಬಿಗ ಚೌಡಯ್ಯ. /220
ಮಾತುಗಂಟಿತನದಿಂದ ಎಷ್ಟು ಮಾತನಾಡಿದಡೇನು ?
ಕಾಮಿನಿಯರ ಕಾಲದೆಸೆ ಸಿಕ್ಕಿ, ಕ್ರೋಧದ ದಳ್ಳುರಿಯಲ್ಲಿ ಬೆಂದು,
ಆಸೆಯೆಂಬ ಪಾಶ ಕೊರಳಲ್ಲಿ ಸುತ್ತಿ
ಅದೇಕೊ, ಅದೇತರ ಮಾತೆಂದನಂಬಿಗ ಚೌಡಯ್ಯ. /221
ಮಾತೆ ಸೂತಕವಾಗಿ ಸಂದೇಹವ ಮಾಡುವಲ್ಲಿ
ಅದೇತರಿಂದ ಒದಗಿದ ಕುರುಹು ?
ಶಿಲೆಯ ಪ್ರತಿಷ್ಠೆಯ ಮಾಡಿ
ತನ್ನ ಒಲವರ ವಿಶ್ವಾಸದಿಂದ ಬಲಿಕೆಯನರಿವುದು
ಶಿಲೆಯೊರಿ ಮನವೊರಿ ಎಂದನಂಬಿಗ ಚೌಡಯ್ಯ. /222
ಮಾಯೆಯ ಬಸುರಲ್ಲಿ ಬಂದಾತ ಮಹೇಶ,
ದೇವಕಿಯ ಬಸುರಲ್ಲಿ ಬಂದಾತ ವಿಷ್ಣು,
ಹೂವಿನ ಬಸುರಲ್ಲಿ ಬಂದಾತ ಬ್ರಹ್ಮ,
ಮರುತದೇವಿಯ ಬಸುರಲ್ಲಿ ಬಂದಾತ ನಅರುಹಫ.
ಇವರು ದೇವರೆಂದು ನಂಬಿ ಪೂಜಿಸಿದಡೆ ಭವ ಅಳಿಯದು,
ಮುಕ್ತಿಯಾಗದೆಂದಾತನಂಬಿಗ ಚೌಡಯ್ಯ. /223
ಮೂರು ಸ್ಥಲದ ಮೂಲವನರಿಯರು,
ಪುಣ್ಯಪಾಪವೆಂಬ ವಿವರವನರಿಯರು.
ಇಹಪರವನರಿಯದೆ ಚರ್ಮದ ಬೊಂಬೆಯ ಮೆಚ್ಚಿ
ಉಚ್ಚೆಯ ಬಚ್ಚಲಲ್ಲಿ ಬಿದ್ದಿರ್ಪ
ಕರ್ಮದ ಸುನಿಗಳನೆಂತು ದೇವರೆಂಬೆನಯ್ಯಾ ?
ಹೊನ್ನು ವಸ್ತ್ರವ ಕೊಡುವವ[ನ] ಬಾಗಿಲ ಕಾಯ್ವ
ಪಶುಪ್ರಾಣಿಗಳಿಗೆ ದೇವರೆನ್ನಬಹುದೇನಯ್ಯಾ ?
ಜಗದ ಕರ್ತನಂತೆ ವೇಷವ ಧರಿಸಿಕೊಂಡು ಸರ್ವವನು ಬೇಡಲಿಕೆ
ಕೊಟ್ಟರೆ ಒಳ್ಳಿದನು, ಕೊಡದೆ ಇದ್ದರೆ
ಪಾಪಿ, ಚಾಂಡಾಲ, ಅನಾಚಾರಿ ಎಂದು ದೂಷಿಸಿ
ಒಳಹೊರಗೆಂದು ಬೊಗಳುವ ಮೂಳಮಾನವರಿಗೆ
ಮಹಾಂತಿನ ಆಚರಣೆ ಎಲ್ಲಿಯದೊ ?
ಇಲ್ಲವೆಂದಾತ ನಮ್ಮಂಬಿಗರ ಚೌಡಯ್ಯ. /224
ಮೂರುವ ಮುಟ್ಟಿದೆ, ನಾಲ್ಕುವನಂಟಿದೆ,
ಅಯ್ದವನೆಯ್ದಲುಬೇಡ ಕಂಡಾ.
ಆರುವ ಜಾಳಿಸಿ, ಏಳುವ ಹಿಡಿಯದೆ,
ಎಂಟುವ ಗಂಟಿಕ್ಕಬೇಡ ಕಂಡಾ.
ಒಂಬತ್ತು ಬಾಗಿಲ ಹಿಂದಿಕ್ಕಿ ಹೋದಡೆ
ಅಂಬಿಗ ಚೌಡಯ್ಯನ ಉಪದೇಶವಯ್ಯಾ. /225
ಮೃಡನನೊಲಿಸಿ[ಹೆ]ನೆಂದು ನುಡಿವ ನಾಲಗೆಯೆಡಹಿತೆಯಲ್ಲಿ ಕಲ್ಲು ಕೊರಡೆ?
ಒಡಲಿಂಗೆ ಹೆಣ್ಣು ಹೊನ್ನು ಮಣ್ಣು ಅಡ್ಡಬಿದ್ದು ಕೊಲುವಾಗ,
ನಡೆವ ಗಂಡರುಂಟೇ ಶಿವಪಥಕ್ಕೆ?
ತನ್ನೊಡಲೊಳಗಣನ್ನವು ಮರಳಿದೆಡೆಗೆ ಹೇಸುವಂತೆ ಹೇಸಿ ಬಿಟ್ಟಡೆ,
ನಡೆದು ಶಿವನ ಕೂಡು[ವ]ನೆಂದಾತನಂಬಿಗ ಚಾಡಯ್ಯ. /226
ಮೊಟ್ಟೆ ಮೊಟ್ಟೆ ಪತ್ರೆಯ ತಂದು ಒಟ್ಟಿ,
ಪೂಜಿಸಿದ[ಡೇ]ನು ಮನಶುದ್ಧವಿಲ್ಲದನ್ನಕ್ಕರ ?
ಮನಮಗ್ನವಾಗಿ ಶಿವಧ್ಯಾನದಲ್ಲಿ ಕೂಡಿ,
ಒಂದೇ ದಳವ ಧರಿಸಿದರೆ ಶಿವನು ಒಲಿಯನೆ?
ಇಂತು ಪೂಜೆಯ ಮಾಡುವುದಕ್ಕಿಂತಲು
ಅದೇ ತೊಪ್ಪಲನು ಕುದಿಸಿ ಪಾಕವ ಮಾಡಿದಲ್ಲಿ
ಆ ಲಿಂಗವು ತೃಪ್ತಿಯಾಯಿತ್ತು.
ಬರಿದೆ ಲಿಂಗವ ಪೂಜಿಸಿ ಜಂಗಮಕ್ಕೆ ಅನ್ನವ ಕೊಡದೆ,
ಲಿಂಗದ ಮುಖವು ಜಂಗಮವು ಎಂದು ತಿಳಿಯದೆ,
ತನು-ಮನ-ಧನವನು ಗುರು-ಲಿಂಗ-ಜಂಗಮಕ್ಕೆ ಸವೆಸದೆ,
ಬಾಗಿಲಿಗೆ ಕಾವಲಿಕ್ಕಿ, ಹೆಂಡಿರು ಮಕ್ಕಳು ಕೂಡಿಕೊಂಡು,
ತನ್ನ ತಾನೇ ತಿಂಬುವಂಥ ನೀಚ ಹೊಲೆಯರ ಮೂಗ ಸವರಿ
ಮೆಣಸಿನ ಹಿಟ್ಟು ತುಪ್ಪವ ತುಂಬಿ,
ಪಡಿಹಾರಿ ಉತ್ತಣ್ಣಗಳ ಪಾದುಕೆಯಿಂದ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. /227
ರತಿಯಿಂದ ರತ್ನ, ಗತಿಯಿಂದ ವಾದ್ಯ,
ಸದ್ಗತಿಯಿಂದ ಮುಕ್ತಿ, ನಿರ್ಗತಿಯಿಂದ ವಿರಕ್ತಿ. ಈ ನಾಲ್ಕರ ಮತಿಯ ತಿಳಿಯಬೇಕೆಂದನಂಬಿಗ ಚೌಡಯ್ಯ. /228
ರತಿಯೆಂಬುದೆ ಪ್ರಾಣ, ಘಟವೆಂಬುದೆ ಕಲ್ಲು.
ಪ್ರಾಣವಿಲ್ಲದ ಘಟ, ಜ್ಞಾನವಿಲ್ಲದ ಕ್ರೀ
ಈ ಉಭಯಕ್ಕೂ ನಾನಾರೆಂಬುದ ತಾನರಿಯಬೇಕೆಂದನಂಬಿಗ ಚೌಡಯ್ಯ. /229
ಲಿಂಗ ಬಿತ್ತು ಎತ್ತು ಎಂಬಿರಿ,
ಆ ಲಿಂಗ ಬಿದ್ದರೆ ಈ ಭೂಮಿ ತಾಳಬಲ್ಲುದೆ ?
ಲಿಂಗವಿರುವುದು ಹರಗುರು ಪಾರಾಯಣ,
ಲಿಂಗವಿರುವುದು ತೆಂಗಿನ ಮರದಲ್ಲಿ,
ಲಿಂಗವಿರುವುದು ಜಂಗಮನ ಅಂಗುಷ್ಠದಲ್ಲಿ,
ಲಿಂ ಗವಿರುವುದು ಊರ ಹಿರೇ ಬಾಗಿಲಲ್ಲಿ.
ಇಂತಿಪ್ಪ ಲಿಂಗ ಬಿಟ್ಟು, ಸಂತೆಗೆ ಹೋಗಿ
ಮೂರು ಪಾಕಿ ಲಿಂಗವ, ಆರು ಪಾಕಿ ವಸ್ತ್ರವ ತಂದುದೋದಕವಿಲ್ಲ,ಪ್ರಸಾದವಿಲ್ಲ,ಮಂತ್ರವಿಲ್ಲ,ವಿಭೂತಿಯಿಲ್ಲ,ರುದ್ರಾಕ್ಷಿಯಿಲ್ಲ.
ಇಂತಪ್ಪ ಲಿಂಗ ಕಟ್ಟಿದವನೊಬ್ಬ ಕಳ್ಳನಾಯಿ,
ಕಟ್ಟಿಸಿಕೊಂಡವನೊಬ್ಬ ಕಳ್ಳನಾಯಿ.
ಇಂತಪ್ಪ ನಾಯಿಗಳನು ಹಿಡಿತಂದು ಮೂಗನೆ ಕೊಯ್ದು,
ನಮ್ಮ ಕುಂಬಾರ ಗುಂಡಯ್ಯನ ಮನೆಯ
ಕರಿ ಕತ್ತೆಯನು ತಂದು ಊರಲ್ಲೆಲ್ಲ ಮೆರೆಯಿಸಿ
ನಮ್ಮ ಮಾದಾರ ಹರಳಯ್ಯನ ಮನೆಯ
ಹನ್ನೆರಡು ಜೋಡು ಹಳೆಯ ಪಾದರಕ್ಷೆಗಳನು ತಂದು
ಮುದ್ದುಮುಖದ ಮೇಲೆ ಶುದ್ಧವಾಗಿ ಹೊಡೆಯೆಂದಾತ
ನಮ್ಮ ಅಂಬಿಗರ ಚೌಡಯ್ಯ./230
ಲಿಂಗತನುವಿಂಗೆ ಶೃಂಗಾರವಪ್ಪ ತೆರನಾವುದೆಂದಡೆ:
ಕಾಮ ಕ್ರೋಧ ಲೋಭ ಮೋಹಾದಿಗಳಲ್ಲಿ
ತೆರಪುಗೊಡದಿಪ್ಪುದು.
ಲಿಂಗವೆ ಅಂಗವಾಗಿ,
ಧ್ಯಾನ ಧಾರಣ ನಿಜವಾಸನಿವಾಸವಾಗಿ,
ನಿಶ್ಚಯ ನಿಜತತ್ವವಾಗಿ ನಿಂದುದೆ ಆಭರಣವೆಂದನಂಬಿಗ ಚೌಡಯ್ಯ./231
ಲಿಂಗತನುವಿಗೆ ಆತ್ಮತೇಜದ ಅಹಂಕಾರವುಂಟೆ ?
ಸದ್ಭಕ್ತಂಗೆ ಹುಸಿ, ಕುಹಕ, ಕ್ಷಣಿಕತ್ವ ಅಸಿಘಾತಕದ ದೆಸೆವುಂಟೆ ? ಇಂತಿವರ ದೆಸೆಯ ಹೊದ್ದನೆಂದನಂಬಿಗ ಚೌಡಯ್ಯ. /232
ಲಿಂಗದೊಳಗೆ ಜಂಗಮ ಸಲೆ ಸಂದಿರಬೇಕು,
ಜಂಗಮದೊಳಗೆ ಲಿಂಗವು ಸಲೆ ಸಂದಿರಬೇಕು.
ಅಂಗ-ಪ್ರಾಣಂಗಳಲ್ಲಿ ಲಿಂಗವ ಹಿಂಗಿರ್ದ ಜಂಗಮವು ಮುಂದೆ ಚರ-ಪರವಲ್ಲ.
ಹಿಂದೆ ಗುರುಕರುಣಕ[ನ]ಲ್ಲವೆಂದನಂಬಿಗರ ಚೌಡಯ್ಯ./233
ಲಿಂಗವನರಿದೆಹೆನೆಂದಡೆ ಗುರುವಿಗೆ ಹಂಗು,
ಗುರುವನರಿದೆಹೆನೆಂದಡೆ ಲಿಂಗದ ಹಂಗು,
ಉಭಯವ ಮೀರಿ ಕಂಡೆಹೆನೆಂದಡೆ ಬೇರೊಂದೊಡಲುಂಟು.
ಒಡಲು ಒಡೆದಲ್ಲದೆ ಬೇರೊಂದೆಡೆಯಿಲ್ಲ
ಎಂದನಂಬಿಗ ಚಾಡಯ್ಯ. /234
ಲಿಂಗವೆಂಬುದು ಕಾಯದ ತೊಡಕು,
ಗುರುವೆಂಬುದು ಭಾವದ ತೊಡಕು,
ಜಂಗಮವೆಂಬುದು ಮೂರರ ತೊಡಕು,
ಜ್ಞಾನಮಯವೆಂಬುದು ಸರ್ವಮಯವೆಲ್ಲರ ತೊಡಕು.
ಒಂದ ಮೆಟ್ಟಿ, ಒಂದ ಕಂಡು, ಒಂದಕ್ಕೆ ಸಂದೇಹವಿಲ್ಲದೆ ನಿಂದುದು.
ಹಿಂದಳ ಮುಂದಳ ದುಂದುಗವಿಲ್ಲ ಎಂದನಂಬಿಗ ಚಾಡಯ್ಯ. /235
ಲೋಹ ಗುಂಡಾದಲ್ಲಿ ಇರಿಯಬಲ್ಲುದೆರಿ
ಮುದ್ರೆಯ ಪಶು ದಿಟ ಪ್ರಾಣಲಿಂಗಿಯಾಗಬಲ್ಲನೆರಿ
ಡಾಗಿನ ಪಶುಗಳೆಲ್ಲರೂ ಭೇದವನರಿಯಬಲ್ಲರೆರಿ
ಎಂದನಂಬಿಗ ಚಾಡಯ್ಯ./236
ವಚನಾರ್ಥವ ಕಂಡಹರೆಂದು
ರಚನೆಯ ಮರೆಮಾಡಿ ನುಡಿಯಲೇತಕ್ಕೆ?
ದಾರಿಯಲ್ಲಿ ಸರಕು ಮರೆಯಲ್ಲದೆ
ಮಾರುವಲ್ಲಿ ಮರೆ ಉಂಟೆ?
ತಾನರಿವಲ್ಲಿ ಮರೆಯಲ್ಲದೆ
ಬೋಧೆಗೆ ಮರೆಯಿಲ್ಲ, ಎಂದನಂಬಿಗ ಚೌಡಯ್ಯ./237
ವಸ್ತುವ ಕಾಬರೆಲ್ಲರು
ಆತ್ಮ ಹಲವು ಬಗೆ ಎಂದಡೆ, ಹಲವಾದುದುಂಟೆ?
ಒಂದು ಕುಂಭದ ನೀರು ಹಲವು ರಂಧ್ರಗಳಲ್ಲಿಳಿವುದು.
ಅದು ಕುಂಭದ ಭೇದವೋರಿ ಜಲದ ಭೇದವೋ?
ಈ ಉಭಯ ಭೇದವ ತಿಳಿದಲ್ಲಿ
ಆತ್ಮನೊಂದೆಯೆಂದನಂಬಿಗ ಚೌಡಯ್ಯ. /238
ವಿಹಂಗಂಗೆ ಗುರಿಯಾಸೆಯೆಂದಡೆ ಸಂಚಾರವಿಲ್ಲದೆ ಚರಿಸಬಹುದೆ?
ಅರಿವಿಂಗೆ ಕುರುಹಿನಾಸೆಯೆಂದಡೆ,
ಆ ಅರಿವು ಕುರುಹಿನೊಳಗಾದ ಮತ್ತೆ,
ಬೇರೊಂದು ಕುರುಹೆಂಬ ನಾಮವುಂಟೆ?
ಚಿತ್ರದ ಬೊಂಬೆಗಳಿದ್ದ ಮನೆ ಕಿಚ್ಚೆದ್ದು ಬೇವಲ್ಲಿ
ಬೊಂಬೆಯ ಹೊತ್ತಿದ ಕಿಚ್ಚು ಚಿತ್ರವಾಗಿ ಉರಿವುದೆ?
ನಿಶ್ಚಯವನರಿದ ನಿಜಾತ್ಮನು ಮತ್ತೆ ಕತ್ತಲೆಯ ಹೊಗನೆಂದನಂಬಿಗ ಚೌಡಯ್ಯ. /239
ವೀರಂಗೆ ರಣಾಗ್ರದ ಕದನ ಭೋರೆಂದು ಕಟ್ಟಿದಲ್ಲಿ
ದೂರದಲ್ಲಿರ್ದೆಸೆವನೊಂದಂಬಿನಲ್ಲಿ.
ಸೇರಿಬಂದರೆ ಹೊಯಿವ ಬಿಲ್ಲಿನಲ್ಲಿ.
ಅವು ಮೀರಿ ಬಂದಲಿ ಇರಿವ ಕಠಾರಿಯಲ್ಲಿ.
ಅದು ತಪ್ಪಿದಲ್ಲಿ ತೆಕ್ಕೆಯಲ್ಲಿ ಪಿಡಿವ, ಯುದ್ಧದಲ್ಲಿ ಬಿದ್ದಲ್ಲಿ ಕಡಿವ ಬಾಯಲ್ಲಿ.
ಇಂತಿ ಅವರ ಪ್ರಾಣಕ್ಕೆ ಬಂದಲ್ಲಿ ಅವ ತನ್ನ ಧೈರ್ಯ, ವ್ರತವರತುದಿಲ್ಲ.
ಹೀಂಗಿರಲಿಲ್ಲವೆ ಸದ್ಭಕ್ತನ ಗುಣ?
ಹೊನ್ನು ಹೆಣ್ಣು ಮಣ್ಣುಳ್ಳ ಕಾಲದಲ್ಲಿಯೇ
ಪನ್ನಗಧರನ ಶರಣರಿಗೆ
ಅನ್ನೋದಕ ವಸ್ತ್ರಂಗಳಿಂದುಪಚಾರವ ಮಾಡುವುದು.
ನೀಡಿ ಮಾಡುವ ಭಕ್ತರ ಮಠದ ಒಡಗೊಂಡು ಹೋಗಿ ತೋರುವುದು
ಅದಕ್ಕಾಗದಿರ್ದಡೆ ಹರಶರಣರ ಕಮಂಡಲ ಕೊಂಡುಹೋಗಿ
ಮಡುವಿನಲ್ಲಿ ಅಗ್ಘವಣಿಯ ತಂದು, ಪಾದವ ತೊಳುವುದು.
ಅದಕ್ಕಾಗದಿರ್ದಡೆ ಶಿವಶರಣ ಕಂಡು, ಇದಿರೆದ್ದು ನಮಸ್ಕರಿಸುವುದು.
ಇಷ್ಟರೊಳಗೊಂದು ಗುಣವಿಲ್ಲದಿರ್ದರೆ ಅವ ಭಕ್ತನಲ್ಲ, ಅವ ಹೊಲೆಯನೆಂದಾತ ನಮ್ಮ ಅಂಬಿಗರ ಚೌಡಯ್ಯ. /240
ವೇದಂಗಳೆಲ್ಲ ಬ್ರಹ್ಮನೆಂಜಲು,
ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು,
ಆಗಮಂಗಳೆಲ್ಲ ರುದ್ರನೆಂಜಲು,
ಪುರಾಣಂಗಳೆಲ್ಲ ವಿಷ್ಣುವಿನೆಂಜಲು,
ನಾದಬಿಂದುಕಳೆಗಳೆಂಬವು ಅಕ್ಷರತ್ರಯದೆಂಜಲು,
ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು.
ಇಂತಿವೆಲ್ಲವ ಹೇಳುವರು ಕೇಳುವರು
ಪುಣ್ಯಪಾಪಂಗಳೆಂಜಲೆಂದಾತನಂಬಿಗರ ಚೌಡಯ್ಯ./241
ವೇದದಲುಳ್ಳಡೆ ಪ್ರಾಣಿವಧೆಯಪ್ಪುದೆ ?
ಶಾಸ್ತ್ರದಲುಳ್ಳಡೆ ಸಮಯವಾದವಪ್ಪುದೆ ?
ಪರ್ವತದಲುಳ್ಳಡೆ ಹೋದವರು ಬಹರೆ ?
ನಿರ್ಬುದ್ಧಿ ಮಾನವರನೇನೆಂಬೆ!
ಮನ, ವಚನ, ಕಾಯಶುದ್ಧಿಯಾಗಿಪ್ಪಾತನ ಹೃದಯದಲಿ ನಿಮ್ಮ ಕಂಡೆನೆಂದನಂಬಿಗ ಚೌಡಯ್ಯ. /242
ವೇದವ ಪಠಸುವಲ್ಲಿ, ಶಾಸ್ತ್ರವನೋದುವಲ್ಲಿ,
ಆಗಮಂಗಳ ತಿಳಿವಲ್ಲಿ, ಶಿವಜ್ಞಾನ ಅನುಭಾವವ ಮಾಡುವಲ್ಲಿ,
ಪಗುಡಿ ಪರಿಹಾಸಕರ ಅರ್ತಿಕಾರರ
ಹೊತ್ತುಹೋಕರಿಗಾಗಿ ಸಂಘಟ್ಟುವರ ಕೂಡಲುಂಟೆ ?
ಇಂತಿವರಲ್ಲಿ ಚಚ್ಚಗೊಟ್ಟಿಯ ಮಾಡುವ ಮಿಟ್ಟೆಯ ಭಂಡರನೊಪ್ಪನೆಂದನಂಬಿಗ ಚೌಡಯ್ಯ./243
ವೇದವನೋದಿದವರು ವಿಧಿಗೊಳಗಾದರಲ್ಲದೆ
ದೇವರಿಹರವಾವನರಿದಿಪ್ಪುದಿಲ್ಲ.
ಶಾಸ್ತ್ರವನೋದಿದವರು ಸಂಶಯಕ್ಕೊಳಗಾದವರಲ್ಲದೆ
ಸದ್ಗುರುವನರಿದುದಿಲ್ಲ.
ಆಗಮವನೋದಿದವರೆಲ್ಲರು ಆಗುಚೇಗಿಗೆ ಒಳಗಾದರಲ್ಲದೆ
ಆದಿ ಅನಾದಿಯಿಂದತ್ತಣ ಶರಣ-ಲಿಂಗ ಸಂಬಂಧವನರಿದುದಿಲ್ಲ.
ಪುರಾಣವನೋದಿದವರೆಲ್ಲರು ಪೂರ್ವದ ಬಟ್ಟೆಗೊಳಗಾದವರಲ್ಲದೆ
ಪೂರ್ವದ ಕರ್ಮವ ಹರಿದು ಪುರಾತನರನರಿದುದಿಲ್ಲ.
ಇಂತಿವರೆಲ್ಲರು ಚರಶೇಷವ ಲಿಂಗಕ್ಕರ್ಪಿಸಲರಿಯರಾಗಿ ಇವರಿಗೆ ಲಿಂಗವು ಕಾಣಿಸದೆಂದಾತ ನಮ್ಮ ಅಂಬಿಗರ ಚೌಡಯ್ಯ./244
ವೇದವೇದಾಂತರ, ಶಾಸ್ತ್ರಸಂಪದರ, ಆಗಮಕ್ಕತೀತರ,
ಪರಬ್ರಹ್ಮಸ್ವರೂಪರ, ಪರಮವಿರಕ್ತರ ಕೂಡಿಕೊಂಡು ತಾನರಿವಲ್ಲಿ,
ಅರಿವ ಕೇಳುವಲ್ಲಿ ಎಡೆದೆರಪಿಲ್ಲದೆ,
ಪದಪದಾರ್ಥಂಗಳಲ್ಲಿ, ಕ್ರೀಕ್ರಿಯಾರ್ಥದಿಂದ
ತತ್ವತತ್ವಾರ್ಥಂಗಳಲ್ಲಿ ಪದಚ್ಛೇದವ ಮಾಡುವ
ಪರಮಾರ್ಥಿಕರ ಪಾದವ ಪದವೆಂದನಂಬಿಗ ಚೌಡಯ್ಯ. /245
ಶರಣ ಸತಿ, ಲಿಂಗ ಪತಿ ಎಂಬರು.
ಶರಣ ಹೆಣ್ಣಾದ ಪರಿಯಿನ್ನೆಂತು ? ಲಿಂಗ ಗಂಡಾದ ಪರಿಯಿನ್ನೆಂತು ?
ನೀರು ನೀರು ಕೂಡಿ ಬೆರೆದಲ್ಲಿ, ಭೇದಿಸಿ ಬೇರೆ ಮಾಡಬಹುದೆ ?
ಗಂಡು ಹೆಣ್ಣು ಯೋಗವಾದಲ್ಲಿ ಆತುರ ಹಿಂಗೆ ಘಟ ಬೇರಾಯಿತ್ತು.
ಇದು ಕಾರಣ
ಶರಣ ಸತಿ, ಲಿಂಗ ಪತಿ ಎಂಬ ಮಾತು ಮೊದಲಿಂಗೆ
ಮೋಸ, ಲಾಭಕ್ಕಧೀನವುಂಟೆರಿ ಎಂದನಂಬಿಗ ಚೌಡಯ್ಯ. /246
ಶಿಖಿಯನೆ ಕಟ್ಟಿ, ಮಾಹೇಶ್ವರಿಕೆಯನೆ ಕೊಡುವರೆ,
ಆತನ ವೃತ್ತಿಗಳ ತಿಳಿಯಬೇಕಯ್ಯಾ.
ಜಾತಿಸೂತಕವ ನೇತಿಗಳೆಂದಾತಂಗೆ ದೀಕ್ಷೆಯ ಕೊಟ್ಟಡೆ,
ಸುಸರ ನೋಡಾ.
ಈಸುವನತಿಗಳೆಯದೆ ಉಪದೇಶವ ಮಾಡಿದ ಆಚಾರ್ಯಂಗೆ ಮಾರಿಯೆಂದಾತನಂಬಿಗ ಚೌಡಯ್ಯ. /247
ಶಿವಭಕ್ತನಾದ ಬಳಿಕ ಅನ್ಯಭಜನೆಯ ಮಾಡದಿರಬೇಕು.
ಶಿವಭಕ್ತನಾದ ಬಳಿಕ ಪರಸತಿ, ಪರನಿಂದೆ, ಪರಧನವ
ಹಿಡಿಯದಿರಬೇಕು.
ಶಿವಭಕ್ತನಾದ ಬಳಿಕ ಲಿಂಗಕ್ಕೆ ತೋರದೆ
ಪ್ರಸಾದವ ಮುಟ್ಟದಿರಬೇಕು.
ಅಂಗಲಿಂಗವು ಸಮರಸವಾಗಿರಬೇಕು.
ದಾರಿದ್ರ್ಯವು ಬಂದರೆ ಅಂಗವೇ ನಿನ್ನದೆಂದರಿಯಬೇಕು.
ಸಂಪತ್ತು ಬಂದರೆ ನಿನ್ನದೆಂದು ಭಾವಿಸಬೇಕು.
ಲಿಂಗಬಾಹ್ಯರಿಗೆ ನರಕ ತಪ್ಪದು.
ಇಷ್ಟಲಿಂಗಮವಿಶ್ವಸ್ಯ ಅನ್ಯಲಿಂಗಮುಪಾಸತೇ
ಶ್ವಾನಯೋನಿಶತಂ ಗತ್ವಾ ಚಂಡಾಲಗೃಹಮಾಚರೇತ್
ಇದು ಕಾರಣ, ಪ್ರಾಣಲಿಂಗದ ಭಕ್ತಿಯ ಮರೆದು
ಯಮಪಟ್ಟಣಕ್ಕೆ ಹೋಹರೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು./248
ಶಿವಭಕ್ತರ ಮನೆಗೆ ಹೋಗಿ ಒರಳಕ್ಕಿಯನಾಯ್ದು ತಂದು,
ಲಿಂಗಕ್ಕೆ ಬೋನವ ಮಾಡಿ, ಜಂಗಮಕ್ಕೆ ನೀಡಿ,
ಒಕ್ಕುದ ಕೊಂಡವ ಪೋಪನೈ ಕೈಲಾಸಕ್ಕೆ.
ಅವರಿಗೆ ಮುಕ್ಕಣ್ಣನಲ್ಲದೆ ಉಳಿದ ಭುವನತ್ರಯದವರು ಸರಿಯಲ್ಲೆಂದಾತನಂಬಿಗ ಚೌಡಯ್ಯ. /249
ಶಿವಭಕ್ತಿ ಶಿವಾಚಾರ ಬೇಕಾದ ಭಕ್ತನು
ತನ್ನ ಮಠಕ್ಕೆ ಬಂದ ಲಿಂಗಜಂಗಮದ
ಸಮಯಾಚಾರ ಸಮಯಭಕ್ತಿಯ ನಡೆಸಬೇಕಯ್ಯ.
ಬಂದ ಲಿಂಗಜಂಗಮದ ಸಮಯಭಕ್ತಿಯ ತಪ್ಪಿಸಿ
ಮುಂದೆ ಶಿವಪೂಜೆಯ ಮಾಡಿ ಫಲಪದವ ಪಡೆವೆನೆಂಬ
ಹಂದಿಗಳೆತ್ತ ಬಲ್ಲರಯ್ಯಾ ಸತ್ಯರ ನೆಲೆಯ.
ಮುಂದಿರ್ದ ನಿಧಾನವ ಕಾಣಲರಿಯದೆ
ಸಂದಿಗೊಂದಿಯ ಹೊಕ್ಕು ಅರಸಿ ಬಳಲುವ ಅಂಧಕನಂತೆ,
ಎಂದಾದರೂ ತನ್ನ ವ್ಯಸನವೆತ್ತಿದಾಗ
ಒಂದೊಂದು ಪರಿಯಲ್ಲಿ ಸಿದ್ಧಾನ್ನಂಗಳು ಮಾಡಿ
ಚೆಂದ ಚೆಂದದಲಿ ಬೋನ ಪದಾರ್ಥಂಗಳಂ ಮಾಡಿ
ತಮ್ಮ ಹಿಂದಣ ಮುಂದಣ ಹರಕೆಯನೊಡಗೂಡಿ
ಬಂಧುಬಳಗವ, ಮುಯ್ಯೂಟವ ಕೂಡಿ
ಆ ದಿನದಲ್ಲಿ ಚಂದ್ರಶೇಖರನ ಭಕ್ತರಿಗೆ ದಣಿ[ಯೆ] ಉಣಲಿಕ್ಕಿದೆನೆಂಬ
ಅಂಧಕ ಮೂಳಹೊಲೆಯರಿಗೆ ಎಂದೆಂದಿಗೂ ಮುಕ್ತಿಯಿಲ್ಲವೆಂದಾತ ನಮ್ಮ ಅಂಬಿಗರ ಚೌಡಯ್ಯ./250
ಶೀಲವಂತನೆಂಬವ ಶಿವದ್ರೋಹಿ,
ಭಾಷೆವಂತನೆಂಬವ ಬ್ರಹ್ಮೇತಿಕಾರ,
ನೇಮಸ್ತನೆಂಬವ ನೇಮಕ್ಕೆ ಗುರಿಯಾದ,
ಅಚ್ಚ ಪ್ರಸಾದಿ ನಿಚ್ಚಕುನ್ನಿ.
ಇವರು ನಾಲ್ವರು ಹೋದಲ್ಲಿ ಹೊಗಲಾಗದು, ಬಂದಲ್ಲಿ ಬರಲಾಗದು,
ನಿಂತಲ್ಲಿ ನಿಲಲಾಗದು, ಕುಳಿತಲ್ಲಿ ಕುಳ್ಳಿರಲಾಗದು.
ಈ ನಾಲ್ವರಿಗೂ ಲಿಂಗವಿಲ್ಲ, ಗುರುವಿಲ್ಲ, ಜಂಗಮವಿಲ್ಲ,
ಪಾದೋದಕ ಪ್ರಸಾದವಿಲ್ಲ, ನಾ ಮೊದಲೇ ಇಲ್ಲ.
ಅದೇನು ಕಾರಣವೆಂದಡೆ,
ನಿರಂತರ ಜಂಗಮ ಕೈ ಕಡ[ವಸ]ವಾಗಿ ಬರುತ್ತಿರಲು
ಅವರ ಕಪ್ಪರ ಬಟ್ಟಲು
ನಮ್ಮ ಭಾಜನ ಭಾಂಡವ ಮುಟ್ಟಬಾರದು ಎಂಬ
[ಮನದ]ಹೊಲೆಯರಿಗೆಲ್ಲಿಯ ಶೀಲವೋ ಅಂಬಿಗರ ಚೌಡಯ್ಯ! /251
ಶೀಲವಂತರು ಶೀಲವಂತರು ಎಂದು ಶೀಲದಲ್ಲಿ ಆಚರಿಸುವ ಅಣ್ಣಗ[ಳೇ]
ನಿಮ್ಮ ಶೀಲವಾವುದು ಹೇಳಿರೋ,
ಅರಿಯದಿದ್ದರೆ ಕೇಳಿರೋ: ಶಿರಸ್ಸಿನಲ್ಲಿ ಶಿವನಿಪ್ಪ,
ಕಟಿಯಲ್ಲಿ ವಿಷ್ಣುವಿಪ್ಪ,
ಆಧಾರದಲ್ಲಿ ಬ್ರಹ್ಮನಿಪ್ಪ,
ಲಲಾಟದಲ್ಲಿ ವಿಭೂತಿರುದ್ರಾಕ್ಷಿ,
ಜಿಹ್ವೆಯಲ್ಲಿ ಪಂಚಾಕ್ಷರಿಯು.
ಇಂತಪ್ಪ ಅಷ್ಟಾವರಣದಲ್ಲಿ ಸವೆಯದೆ,
ಸಂಸಾರವೆಂಬ ಶರಧಿಯಲ್ಲಿ ಮುಳುಗೇಳುವರು ಶೀಲವಂತರಲ್ಲ.
ಬರಿದೆ ನಾವು ಶೀಲವಂತರೆಂಬುವ ಮನುಜ ಕೇಳು: ಕಣ್ಣೇ ಕಂಚುಗಾರ, ಕರ್ಣವೇ ಬಣಜಿಗ, ಮೂಗೇ ಈಳಿಗ,
ಕೊರಳೇ ಕುಂಬಾರ, ತುಟಿಯೇ ಹೆಂಡಗಾರ, ಹಲ್ಲೆ ಕಲ್ಲುಕುಟಿಗ,
ತಲೆಯೇ ಮೋಪುಗಾರ, ಬೆನ್ನೇ ಜೇಡ, ಅಂಗೈಯೇ ಅಕ್ಕಸಾಲಿಗ,
ಮುಂಗೈಯೇ ಬಡಿಗ, ಕರವೇ ಕೋಮಟಿಗ,
ಕಣಕಾಲೇ ಕಾಳಿಂಗ, ಕುಂಡಿಯೇ ಕುಡುವೊಕ್ಕಲಿಗ,
ಒಳದೊಡೆಯೇ ಸಮಗಾರ, ಹೊರದೊಡೆಯೇ ಮಚ್ಚಿಗ,
ಮೇಗಾಡಿ ಹೊಲೆಯ, ಬುದ್ಧಿಯೇ ಬಯಲಗಂಬಾರ.
-ಇಂತಪ್ಪ ಕುಲ ಹದಿನೆಂಟು ಜಾತಿ
ಎಲು ಮಾಂಸವನು ತುಂಬಿಟ್ಟುಕೊಂಡು
ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ ಎಂದು
ಹೊಡೆದಾಡುವಂತಹ ಅಣ್ಣಗಳನ್ನು ಹಿಡಿತಂದು
ಮೂಗನೆ ಸವರಿ ಮೆಣಸಿನ ಹಿಟ್ಟು ತುಪ್ಪವ ತುಂಬಿ
ನಮ್ಮ ಪಡಿಹಾರಿ ಉತ್ತಣ್ಣನ ವಾಮಪಾದುಕೆಯಿಂದ
ಪಡಪಡನೆ ಹೊಡಿ ಎಂದಾತ,
ನಮ್ಮಅಂಬಿಗರ ಚೌಡಯ್ಯ ನಿಜಶರಣನು. /252
ಶುಕ್ಲಶೋಣಿತಪಿಂಡೈಕ್ಯನ ಚಿತ್ತವಾಯು ಆರು ದಳದ ಪದ್ಮದಲ್ಲಿಹುದು.
ಮೊಲೆ ಮುಡಿ ಬಂದರೆ ಆ ಪಿಂಡವನು ಹೆಣ್ಣೆಂಬರು.
ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು,
ಆ ಇಬ್ಬರ ನಡುವೆ ಸುಳಿದ ಆತ್ಮನು
ಹೆಣ್ಣು ಅಲ್ಲ, ಗಂಡು ಅಲ್ಲ ನೋಡಾ.
ಇದರಂತುವ ತಿಳಿದು ನೋಡಿಹೆನೆಂದರೆ ಶ್ರುತಿಗಳಿಗೋಚರೆಂದ ನಮ್ಮ ಅಂಬಿಗರ ಚೌಡಯ್ಯ. /253
ಶ್ರೀಗುರುಲಿಂಗಜಂಗಮದ ಲೀಲೆಯ ಧರಿಸಿ,
ಪರಸ್ತ್ರೀಯಳೆಂಬ ಹಡಿಕೆಯ ಯೋನಿದ್ವಾರದಲ್ಲಿ ತೊಳಲುವ
ಜಡಜೀವಿಡಂಬಕನಲ್ಲಿ ಸಮಯಾಚಾರವ ಮಾಡುವಾತಂಗೆ
ಭವಿಜನ್ಮ ತಪ್ಪದು ನೋಡ!
ತಾನಿದ್ದಲ್ಲಿಗೆ ಪ್ರಸಾದಪುಷ್ಪತೀರ್ಥದೆಡೆ ಪ್ರಸಾದವ ತರಿಸಿಕೊಂಡಾತಂಗೆ
ಶುನಿಸೂಕರಜನ್ಮ ತಪ್ಪದು ನೋಡ!
ಸಮಪಂಕ್ತಿಯಲ್ಲಿ ವಾಮನವಾದ ಉಕ್ಕಳವ ಕೊಟ್ಟುಕೊಂಡಾತಂ-
ದೀಕ್ಷಾಹೀನ, ಆಚಾರಭ್ರಷ್ಟ!
ತನ್ನ ಪವಿತ್ರಕರ್ತುವಾದ ಗುರುವಿನಾಜ್ಞೆಯ ಮೀರಿ
ಗುರುನಿಂದ್ಯವ ಮಾಡುವ ಗುರುದ್ರೋಹಿ,
ಪರದೈವ-ಪರದ್ರವ್ಯಾಪಹಾರಕನ ಕೂಡೆ ಪಾದೋದಕ-ಪ್ರಸಾದವ ಏಕಭಾಜನವ ಮಾಡಿದಾತಂಗ ಶತಸಹಸ್ರಜನ್ಮಾಂತರದಲ್ಲಿ ಕ್ರಿಮಿಕೀಟಕಜನ್ಮ ತಪ್ಪದು ನೋಡ!
ಸತ್ಯಸದಾಚಾರದ ವರ್ಮಾವರ್ಮವ ಭೇದಿಸಿ,
ಹರಗುರುವಚನೋಕ್ತಿಯಿಂದ ಪ್ರಮಾಣಿಸಿ, ಬುದ್ಧಿಯ ಹೇಳುವಾತನೆ
ಮಹಾಪ್ರಭುವೆಂದು ಭಾವಿಸುವಾತನೆ ಸದಾಚಾರಿ ಸನ್ಮಾರ್ಗಿ ನೋಡ!
ಇದ ಮೀರಿ ಆಜ್ಞೋಪದೇಶವ ಕೇಳದೆ ತನ್ನ ಮನಬಂದಂತೆ ಚರಿಸುವ
ಭ್ರಷ್ಟನ ಮೋರೆಯ ಮೇಲೆ ಶರಣಗಣಂಗಳ ರಕ್ಷೆಯಿಂದ ಹೊಡದು,
ಆ ಮೇಲೆ ಗಾರ್ದ[ಭ]ಜನ್ಮದಲ್ಲಿ ಜನಿಸೆಂದಾತನಂಬಿಗರ ಚೌಡಯ್ಯನು. ನೋಡ, ಸಂಗನ ಬಸವೇಶ್ವರ. /254
ಸಂದೇಹ ಮಾಡುವಲ್ಲಿ ಮಾತೇ ಸೂತಕವಾಗಿ
ಅದೇತರಿಂದೊದಗಿದ ಶಿಲೆಯ ಪ್ರತಿಷ್ಠೆಯ ಮಾಡಿ,
ತನ್ನ ಒಲವರ ವಿಶ್ವಾಸದಿಂದ ಕುÙರುಹ ಅÙರವುದು ಶಿಲೆಯೊರಿ ಮನವೊರಿ ಎಂದನಂಬಿಗ ಚೌಡಯ್ಯ. /255
ಸಕಲಭೋಗ ವಿಲಾಸಿತ ಲಿಂಗಕ್ಕೆಂದಲ್ಲಿ ತನ್ನಂಗಕ್ಕೆ ಶೃಂಗಾರವುಂಟೆ ?
ಶ್ರೀರುದ್ರಾಕ್ಷಿ ವಿಭೂತಿಯ ಸ್ವಸ್ಥಾನದಲ್ಲಿ
ತನ್ನಂಗಕ್ಕೆ ಶೃಂಗಾರವೆಂದು ಮಾಡಿದಡೆ,
ಆ ನಿಜಪದದಂಗವೊಂದು ಇಲ್ಲ ಎಂದನಂಬಿಗ ಚೌಡಯ್ಯ./256
ಸತ್ತಡೆ ಸಂಗಡ ಹೊಳಿಸಿಕೊಂಬ ಲಿಂಗವು
ತನ್ನ ಕೊರಳಲ್ಲಿ ಹತ್ತೆಯಾಗಿ ಕಟ್ಟಿರಲು,
ನಾನು ಸತ್ಯಶುದ್ಧಶಿವಭಕ್ತನೆಂದರಿಯದೆ
ಮತ್ತೆ ಅನ್ಯದೈವಕ್ಕೆರಗುವ ಕತ್ತೆಮೂಳರು ನೀವು ಕೇಳಿರೊ!
ಗಂಡನ ಕೂಡೆ ಸಮಾಧಿಯ ಕೊಂಬ ಹೆಂಡತಿ ಅಪೂರ್ವ!
ಹೆಂಡಿರ ಕೂಡೆ ಸಮಾಧಿಯ ಕೊಂಬ ಗಂಡರುಂಟೆ ಲೋಕದೊಳು ?
ಛೀ ಛೀ ಹಂದಿಮೂಳರಿರ! ಈ ದೃಷ್ಟವ ಕಂಡಾದರೂ ನಾಚಲಿಲ್ಲವೆ ?
ಭವಬಂಧನಂಗಳನಳಿಯಬೇಕೆಂದು ಬಹುದೈವಕ್ಕೆರಗಿದಡೆ,
ಅವು ನಿಮ್ಮ ಸಂಗಡ ಒಂದಾದಡೂ ಹೂಳಿಸಿಕೊಂಬವೆ ?
ನೀವು ಗಳಿಸಿದ ಅರ್ಥವನುಂಡುಂಡು, ನಿಮ್ಮ ಭವದೊಳಗೆ ನೂಂಕಿದ
ಪಿಶಾಚಿಗಳ ನೋಡಿಕೊಂಡು ಪ್ರಮಾಣಿಸಿ,
ಮರಳಿ ಲಿಂಗಭಕ್ತಿಯನರಿಯದೆ,
ಬರಿದೆ ಶಿವಭಕ್ತರೆಂದು ಬೊಗಳುವ ಕುನ್ನಿಗಳು ಪರಿಭವಕ್ಕೆ ಒಳಗಾಗುವರೆಂದಾತನಂಬಿಗರ ಚೌಡಯ್ಯನು. /257
ಸತ್ತರೆ ಸಂಗಾತ ಹೂಳಿಸಿಕೊಂಬ ಇಷ್ಟಲಿಂಗವ ಸಟೆಮಾಡಿ,
ಮತ್ತೆ ಅನ್ಯದೈವಕ್ಕೆರಗುವ ಕತ್ತೆ ಹೊಲೆಯರು ನೀವು ಕೇಳಿರೊ,
ತನ್ನ ಪುರುಷನಿರಲು ಅನ್ಯಪುರುಷನ ಕೂಡಿಹ ಸ್ತ್ರೀಗೆ ನರಕವಲ್ಲವೆ ?
ಮೋಕ್ಷಾ[ರ್ಥ] ಎಂದು ಗುರುವು ಕೊಟ್ಟ ಇಷ್ಟಲಿಂಗವು
ಅಂಗಕ್ಕೆ ಸಂಬಂಧಿಸಿದ ಬಳಿಕ
ಹಲವು ದೇವರೆಂದು ಭಾವಿಸಿ ಪೂಜೆಯ ಮಾಡುವ ಭ್ರಷ್ಟರು ನೀವು ಕೇಳಿರೊ.
ನೀವು ಮಾಡಿದ ಪೂಜೆಯು ಹಾದರಿಯ ಸ್ತ್ರೀಯಳಂತೆ ಕಾಣಿರೊ.
ಕಡೆಗೆ ಅದೇ ಲಿಂಗವೆ ಮುಂದೆ ಮಾರಿಯಾಗಿ
ಮೋಕ್ಷಕ್ಕೆ ದೂರಮಾಡುವದೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು./258
ಸಪ್ತಸಾಗರಗಳ ನಿಲ್ಲೆಂದು ನಿಲ್ಲಿಸಿ
ಭೂಮಿಗೆ ಕೆಸರುಗಲ್ಲನಿಕ್ಕುವ ದೆವಸ,
ಏಳು ಭೂಮಂಡಲವ ಜೋಳಿಗೆಗೊಳಿಸಿ
ಗಾಳಿಯನಾಹಾರಗೊಂಬ ದೆವಸ,
ಒಂಭತ್ತು ದ್ವೀಪಕ್ಕೆ ನೂಲ ಹಿಡಿದಂದು, ಅಂಬಿಗ ಚೌಡಯ್ಯನ ಕೆಳೆಗೊಂಡನುಮೇಶ್ವರ./259
ಸಮಯವ ಮಾಡಿ ಹಣವ ತೆಗೆಯಲೇತಕ್ಕೆ ?
ಆಚಾರಕ್ಕೂ ಹಣದಾಸೆಗೂ ಸರಿಯೆ ? ಎಂದನಂಬಿಗ ಚೌಡಯ್ಯ. /260
ಸರ್ವಾಂಗಲಿಂಗವಾದ ಶರಣನ ಕಾಯ
ಆವ ದೇಶದಲ್ಲಿ ಆಳಿದಡೇನು?
ಎಲ್ಲಿ ಆಳಿದಡೇನುರಿ ಉಳಿದಡೇನು?
ಕಾಯ ಉಳಿಯದೆ ಬಯಲಾದಡೇನು?
ಅದೇತರಲ್ಲಿ ಹೋದಡು ಲಿಂಗೈಕ್ಯಪದಕ್ಕೆ
[ಕುತ್ತ] ಕೊಡಲಿಲ್ಲವೆಂದನಂಬಿಗ ಚೌಡಯ್ಯ. /261
ಸಸಿಗೆ ನೀರೆರೆದಡೆ ಹಸುರಾದಂತೆ,
ಬೇರಿನ ಬಾಯಿ ತುಂಬಿ, ಸಸಿಯ ಒಡಲು ತುಂಬಿ,
ಆ ಎಸಕದ ತೆರದಂತೆ
ಇಷ್ಟಪ್ರಾಣಯೋಗವೆಂದನಂಬಿಗ ಚೌಡಯ್ಯ. /262
ಸಹಜವಯ್ಯ ಶಿವಗಣಂಗಳ ನುಡಿ ಸತ್ಯವು.
ಪಾಷಂಡಿ ಪ್ರಪಂಚಿಗಳ, ದಾಸಿ, ವೇಶಿಯರ,
ಕಾಸಿಗಾಸೆಮಾಡುವ ಮೂಷಕರ,
ಪಶುಭಕ್ಷಕರನೆಂತು ಮಹಂತಿನ ದೇವರೆನಬಹುದಯ್ಯ ?
ವೇಶಿಯಂತೆ ವೇಷವ ಹಲ್ಲಣಿಸಿಕೊಂಡು,
ಸರ್ವರಿಗೆ ಸುಮತ ಸುವಚನವ ನುಡಿದು,
ಶಿವಭಕ್ತರ[ನ]ಣ್ಣಿಸಿ ಬಣ್ಣಿಸಿ,
ಕಾಸುವೀಸಗಳನಿಸಿದುಕೊಂಡು ಪಾಶಬದ್ಧರಾಗಿ
ಹೇಸಿಕೆಯ ಕಿಸುಕುಳದ ಮೂತ್ರದ ಕುಳಿಯಲ್ಲಿ ಹೊರಳುವ
ಧೂರ್ತ ಲಾಂಛನಿಗಳು ಯಮಪುರದಲ್ಲಿ ಲೋಲರಾಗಿಪ್ಪರೆಂದಾತನಂಬಿಗ ಚೌಡಯ್ಯ./263
ಸೃಷ್ಟಿಯ ಕಲ್ಪಿಸುವ ಕರ್ತ ಬ್ರಹ್ಮಂಗೆ ಶತಾಯುಗನೆಂಬ ಗಣಿತವಿದೇನು?
ಸಕಲಜೀವಿಗಳ ರಕ್ಷಿಸುವ ವಿಷ್ಣುವಿಂಗೆ ದಶಾವತಾರವೆಂಬ ಗಣಿತವಿದೇನು?
ಕೋಪಾಗ್ನಿರುದ್ರನೆಂಬ ಜಮದಗ್ನಿಯ ತಲೆಯನರಿದವರಾರುರಿ
ಮೂವತ್ತುಮೂರು ಕೋಟಿ ದೇವರ್ಕಳನಾಳಿದ ರಾವಣಂಗೆ ಅಳಿವೆಂಬುದೇನುರಿ
ಹರಸಿ ಲಕ್ಷವಿಪ್ರರು ನಿಚ್ಚ ಮಂತ್ರಾಕ್ಷತೆಯನಿಡುತ್ತಿರಲು
ದುರ್ಯೋಧನಂಗೆ ಸಾವೆಂಬುದೇನು ?
ಹರನೆ ನೀ ಹರಸಿ ಪಟ್ಟವ ಕಟ್ಟಿಕೊಟ್ಟಂತಲ್ಲದೆ ಇಲ್ಲ.
ಎಲ್ಲರಿಗೆಯೂ ಮೂರು ಲೋಕದೊಳಗೆ
ನೀನೊಬ್ಬನೆ ಒಡೆಯನೆಂದನಂಬಿಗ ಚೌಡಯ್ಯ./264
ಸೋಮವಾರ, ಹುಣ್ಣಿಮೆ, ಅಮವಾಸ್ಯೆ ಎಂದು ಉಪವಾಸವಿರ್ದು
ಶಿವನಿಗೆ ಅರ್ಪಿತ ಎಂದು ನುಡಿವರು.
ಕಾಮ ಕ್ರೋಧ [ಲೋಭ] ಮೋಹ ಮದ ಮತ್ಸರವನಳಿಯರು.
ಶಿವನ ನೆಲೆಯನರಿಯದೆ,
ಎನಗೆ ಗತಿಕೊಡುವ ಲಿಂಗವಿದೇ ಎಂದು ತಿಳಿಯದೆ,
ಗ್ರಾಮದ ಹೊರತಾಯದಲ್ಲಿರುವ ದೇವರುಗಳು ಅಧಿಕವೆಂದು ಪೂಜಿಸಿ,
ಅವಕಿಕ್ಕಿದ ಕೂಳ ತಾ ತಿಂಬುವನು.
ಇನ್ನು ಸೋಮಧರಗರ್ಪಿತವೆಂದು ಭುಂಜಿಸುವವರ ತೆರನಂತೆ
ದೊಡ್ಡ ಗ್ರಾಮದ ಸೂಕರನು ಗಂಗೆಯಲ್ಲಿ ಮಿಂದು ಬಂದು
ಅಮೇಧ್ಯವ ಭುಂಜಿಸಿದ ತೆರನಾಯಿತೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು. /265
ಸ್ಥಲಂಗಳ ನೋಡಿ ಕಂಡೆಹೆನೆಂದಡೆ, ಅಡಗಿದ ಮಡಕೆಯಲ್ಲ
ಆಚಾರದಲ್ಲಿ ನೋಡಿ ಕಂಡೆಹೆನೆಂದಡೆ, ಸಂಕಲ್ಪದೇಹಿಯಲ್ಲ.
ಸಕಲ ಆಗಮಂಗಳಲ್ಲಿ ನೋಡಿ ಕಂಡೆಹೆನೆಂದಡೆ, ಮಾತಿನ ಮಾಲೆಯವನಲ್ಲ.
ತನುವ ದಂಡಿಸಿ ಕಂಡೆಹೆನೆಂದಡೆ ಬಂಧನದವನಲ್ಲ.
ಏತರಲ್ಲಿಯೂ ತೊಡಕಿಲ್ಲದೆ
ಸರ್ವವ ನೇತಿಗಳೆಯದೆ ಅಜಾತನಾಗಿ ನಿಂದವಂಗೆ
ಆತನೇತರಲ್ಲಿಯೂ ಸುಖಿಯೆಂದನಂಬಿಗ ಚೌಡಯ್ಯ./266
ಸ್ವಲ್ಪ ಅಮೃತಾನ್ನವನೊಯ್ದು ಹುತ್ತವೆಂದು
ಬಿಲದ್ವಾರದಲ್ಲಿ ಹೊಯ್ವ ತೊತ್ತಿಂಗೆಲ್ಲಿಯದೊ ಶಿವಾಚಾರ!
ಅದೆಂತೆಂದಡೆ-
ಕಲ್ಲನಾಗರ ಕಂಡಡೆ ಹಾಲು ಹೊಯ್ಯೆಂಬಳು,
ಬದುಕಿದ ನಾಗರ ಕಂಡಡೆ ಕೊಲ್ಲು ಕೊಲ್ಲೆಂಬಳು.
ಉಂಬ ದೇವರು ಬಂದಡೆ ಇಲ್ಲವೆಂದಟ್ಟುವಳು,
ಉಣ್ಣದ ಕಲ್ಲುಪ್ರತಿಮೆಯ ಮುಂದಿಟ್ಟು ಉಣ್ಣೆಂಬಳು.
ಇಂತಹ ವೇಷದ [ಡ]ಂಬ ತೊತ್ತಿಂಗೆ
ವಿಚಾರಿಸದೆ ಲಿಂಗವ ಕೊಡಲಾಗದೆಂದಾತನಂಬಿಗ ಚೌಡಯ್ಯ. /267
ಹರತೇರು ಬಿತ್ತಿದ ಗಿಡವಿನ ಹೂವ್ವ ಕೊಯ್ದು
ಊರೆಲ್ಲ ಕಟ್ಟಿದ ಕೆರೆ ನೀರ ತಂದು
ನಾಡೆಲ್ಲ ನೋಡಿರಿಯೆಂದು ಪೂಜಿಸುವ ಪುಣ್ಯ
ನೀರಿಗೊ ಹುವ್ವಿಗೊ ನಾಡೆಲ್ಲಕ್ಕೊ ಪೂಜಿಸಿದಾತಗೊ
ಇದ ನಾನರಿಯೆ ನೀ ಹೇಳೆಂದಾತ
ನಮ್ಮ ದಿಟ್ಟ ವೀರಾಧಿವೀರ
ನಿಜ ಭಕ್ತ ಅಂಬಿಗರ ಚವುಡಯ್ಯನು /268
ಹರಿಗೆ ಚಕ್ರ ಡಾಣೆ, ಬ್ರಹ್ಮಂಗೆ ವೇದ ಪಾಶ,
ಹಿರಿಯ ರುದ್ರಂಗೆ ಜಡೆ ಜಪಮಣಿ ನೋಡಾ.
ಧರೆಯವರೆಲ್ಲಾ ನೆರೆದು ಇವರ ದೇವರೆಂಬರು.
ಪರದೈವ ಬೇರೆಂದಾತನಂಬಿಗ ಚೌಡಯ್ಯ. /269
ಹಸಿಯ ಸೊಪ್ಪು ಮುರಿದು ತರುವಾಗ
ನೀವೇನು ಆಡಿನ ಮಕ್ಕಳೆ?
ಹಸಿಯ ಸೊಪ್ಪು ತಂದು ಬಿಸಿ ಮಾಡಿ
ಶಶಿಧರನೆಂಬ ಜಂಗಮಕ್ಕೆ ನೀಡಲು,
ಆ ಲಿಂಗದ ಹಸಿವು ಹೋಯಿತ್ತೆಂದಾತ
ನಮ್ಮಂಬಿಗ ಚೌಡಯ್ಯ. /270
ಹಾಡಿ ಹಾಡುವ ಹರಕೆಯ ಕೇಡು,
ಕೂಡಿ ಮಾಡುವ ಕೂಡಿಕೆಯ ಕೇಡು,
ಹಾಡಿ ಮಾಡಿ, ಕೂಡಿ ಮಾಡಿ
ಬದುಕಿಗೆ ಕೇಡು ತಂದುಕೊಳ್ಳಲೇತಕೊ?
ತನ್ನ ಬೇಡಲಿಕ್ಕೆ ಬಂದ ಜಂಗಮದ ಇರವನರಿತು,
ನೀಡ ಕಲಿತರೆ ರೂಢಿಯೊಳಗೆ ಆತನೆ ಜಾಣನೆಂದಾತ
ನಮ್ಮ ಅಂಬಿಗರ ಚೌಡಯ್ಯ. /271
ಹಿಂದಣ ಜನ್ಮದಲ್ಲಿ ಹಲು ಸುಕೃತಂಗಳಂ ಮಾಡಿಕೊಂಡ ದೆಸೆಯಿಂದ
ನೀವು ಹುಟ್ಟಿದಿರಯ್ಯ.
ನೀವು ಮುಂದಕ್ಕೆ ಶಿವಭಕ್ತಿ ದೊಡ್ಡಿತ್ತೆಂದು ನಂಬಲರಿಯದೆ ಭ್ರಮಿತರಾಗಿ
ಘನತರಸುಖವಂ ನೀಗಿ ಭಕ್ತಿಪಾಶದೆಶೆಯೊಳು ಇರಲೊಲ್ಲದೆ
ಹಿಂದಣ ಅರಿಕೆಯಂ ಮರೆದು
ಮುಂದಣ ಅರಿಕೆಯಂ ತೊರೆದು
ಕಂಡ ಕಂಡ ಹಂದಿಯೊಳಾಡಿ ನರಕವ ತಿಂಬಂತೆ
ಬೆಂದ ಸಂಸಾರವೆಂಬ ಹೃದಯಕೂಪದೊಳು
ಮುಳುಗಾಡುವ ಲೋಕದ ಮಂದಿಯಂತೆ
ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದೆಂಬ
ಭಿನ್ನಭಾವದೊಳು ಮನಸಂದು,
ಹೆಂಡರಿಗಾಗಬೇಕು ಮಕ್ಕಳಿಗಾಗಬೇಕೆಂಬ
ಭಂಡ ಮೂಕೊರೆಯ ಮೂಳಹೊಲೆಯರಿರಾ, ನೀವು ಕೇಳಿರೋ.
ನೀವು ಶಿವಭಕ್ತರ ಬಸುರಲ್ಲಿ ಹುಟ್ಟಿ ಫಲವೇನು?
ಮಾತಿಂಗೆ ಲಿಂಗವ ಕಟ್ಟಿದಿರಿ, ವರ್ತನೆಗೊಬ್ಬ ಗುರುವೆಂಬಿರಿ.
ಆ ಗುರು ತೋರಿದ ಚರಲಿಂಗಕ್ಕೆ ಬೋನವಿಲ್ಲ, ಆಚಾರವಿಲ್ಲ.
ಕೀಳು ದೈವದ ಬೆನ್ನೊಳು ಹರಿದಾಡುವ ನರಕಿಯ
ಯಮನವರು ಕೊಂಡೊಯ್ದು
ನಡುವಿಂಗೆ ಗಿರಿಕಿಯನಿಕ್ಕಿ ಮೆಟ್ಟಿ ಮೆಟ್ಟಿ ಬಿಗುವಾಗ
ಹಲುಗಿರಿಕೊಂಡು ಹೋಗುವ ಮಾನವರು
ಜಗದರಿಕೆಯಲ್ಲಿ, ನರಕದಲ್ಲಿ ಬೀಳುವದ ಕಂಡು
ನಗುತಿರ್ದ ಎನ್ನೊಡೆಯನಂಬಿಗರ ಚೌಡಯ್ಯನು. /272
ಹಿಡಿ ಪುಣ್ಯವ, ಬಿಡು ಪಾಪವ,
ಸತ್ವ ರಜ ತಮ, ಒಡಲೈದು ಇಂದ್ರಿಯವ, ಏಳನೆಯ ಧಾತುವ,
ಒಡಲಷ್ಟ ತನುವನು ಕೆಡೆ ಮೆಟ್ಟಿ ಶಿಖರದ ತುದಿಯ ಮೇಲೆರಿಸು,
ಮತ್ತೆರಡಿಲ್ಲದೆ ನಡೆ,
ಅಲ್ಲಿಂದ ಹಿಡಿದು ಲಂಘನೆ ಮಾಡೆ
ಹಡೆವೆ ಮೋಕ್ಷವನೆಂದನಂಬಿಗ ಚೌಡಯ್ಯ. /273
ಹಿತ್ತಿಲ ಸೊಪ್ಪಿಂಗೆ ನೀರ ಹೊಯಿದು,
ಮತ್ತೆ ಪುನರಪಿಯಾಗಿ ಕೊಯಿವವನಂತೆ,
ಭಕ್ತರಿಗೆ ಬೋಧೆಯ ಹೇಳಿ ಚಿತ್ತವೃತ್ತಿಯನರಿದು ಬೇಡುವಂಗೆ ಇನ್ನೆತ್ತಣ ಮುಕ್ತಿಯೆಂದನಂಬಿಗ ಚೌಡಯ್ಯ./274
ಹೂವ ಕೊಯ್ವ ಕುಕ್ಕೆ ಹರಿದು, ನೀರ ಹೊಯಿವ ಕುಡಿಕೆ ಒಡೆದು,
ನೋಡುವ ಕಣ್ಣು ತೆರೆ ಗಟ್ಟಿ, ರಜ ತಾಗಿ ಸೈವೆರಗಾಗಿ
ಲಿಂಗವನಾರೂ ಕಂಡುದಿಲ್ಲ ಎಂದನಂಬಿಗ ಚೌಡಯ್ಯ. /275
ಹೇಳುವ ಕೇಳುವ ಮಾತ ಕೇಳಿ,
ನಾನಯ್ಯನಾದೆನೆಂದು ಬೇಳುಗರೆಯಲೇತಕ್ಕೆ ?
ವೇಣು ಚಂದನದ ಯೋಗದಲ್ಲಿದ್ದಡೆ
ಗಂಧ ತಾನಾಗಬಲ್ಲುದೆ ? ಎಂದನಂಬಿಗ ಚೌಡಯ್ಯ./276
ಹೊಡವಡಲೇಕೆ, ಹಿಡಿದು ಪೂಜಿಸಲೇಕೆ,
ಎಡೆಯಾಡಲೇಕೆ ದೇಗುಲಕ್ಕಯ್ಯಾ ?
ಬಡವರಂಧಕರಿಂಗೆ ಒಡಲಿಗನ್ನವನಿಕ್ಕಿದಡೆ,
ಹೊಡವಂಟನಾದ ಮೂರು ಲೋಕಕ್ಕೆ[ಯಿದೆ].
ಬಡವರಂಧಕರಿಗೆ ಒಡಲಿಗನ್ನವನಿಕ್ಕದಿದ್ದರೆ,
ಹೊಡೆವಡಲಿಕೆ ಹುರುಳಿಲ್ಲವೆಂದನಂಬಿಗ ಚೌಡಯ್ಯ. /277
ಹೊಡವುಂಟು ದೇವರ ತಲೆಯ ತಾಟಿಸಿಕೊಂಬರು
ನೆಲಕೆಯೂ ತಲೆಗೆಯೂ ನಂಟೊಳವೆ ?
ಕೊಲಬೇಡ ಪ್ರಾಣಿಯ, ಗೆಲಬೇಡ ನಂಬಿದರ,
ಛಲವ ಸಾಧಿಸಬೇಡ ಗೋತ್ರದಲ್ಲಿ.
ಕೊಲುವವ ಗೆಲುವವ ಛಲವ ಸಾಧಿಸುವವ
ಹೊಲೆಯ[ರು] ಮಾದಿಗರೆಂದನಂಬಿಗ ಚೌಡಯ್ಯ./278
ಹೊಲೆಯ ಹೊಲೆಯ ಎಂದಡೆ ಹೊಲೆಯರೆಂತಪ್ಪರಯ್ಯಾ?
ಹೊಲೆಯ ಹೊರಕೇರಿಯಲ್ಲಿರುವನು,
ಊರೊಳಗಿಲ್ಲವೆ ಅಯ್ಯಾ, ಹೊಲೆಯರು?
ತಾಯಿಗೆ ಬೈದವನೇ ಹೊಲೆಯ,
ತಂದೆಗೆ ಉತ್ತರ ಕೊಟ್ಟವನೆ ಹೊಲೆಯ,
ತಂದೆಗೆ ಬೈದವನೇ ಹೊಲೆಯ,
ಕೊಡುವ ದಾನಕ್ಕೆ ಅಡ್ಡ ಬಂದವನೆ ಹೊಲೆಯ,
ನಡೆವ ದಾರಿಗೆ ಮುಳ್ಳ ಹಚ್ಚಿದವನೇ ಹೊಲೆಯ,
ಬ್ರಾಹ್ಮಣನ ಕುತ್ತಿಗೆಯ ಕೊಯ್ದವನೇ ಹೊಲೆಯ,
ಹತ್ತು ಆಡಿದರೆ ಒಂದು ನಿಜವಿಲ್ಲದವನೇ ಹೊಲೆಯ,
ಚಿತ್ತದಲ್ಲಿ ಪರಸತಿಯ ಬಯಸಿದವನೇ ಹೊಲೆಯ,
ಲಿಂಗಮುದ್ರೆಯ ಕಿತ್ತಿದವನೇ ಹೊಲೆಯ,
ಲಿಂಗವ ಬಿಟ್ಟು ತಿರುಗುವವನೇ ಹೊಲೆಯ,
ಧರ್ಮವ ಮಾಡದವನೇ ಹೊಲೆಯ,
ಬಸವನ ಕೊಂದವನೇ ಹೊಲೆಯ,
ಬಸವನ ಇರಿದವನೇ ಹೊಲೆಯ,
ಲಿಂಗಪೂಜೆಯ ಮಾಡದವನೇ ಹೊಲೆಯ.
ಇಂತಪ್ಪ ಹೊಲೆಯರು ಊರ ತುಂಬ ಇರಲಾಗಿ
ಹೊರಕೇರಿಯವರಿಗೆ ಹೊಲೆಯರೆನಬಹುದೆರಿ
ಹೊಲೆ ಹುಟ್ಟಿದ ಮೂರು ದಿನಕ್ಕೆ ಪಿಂಡಕ್ಕೆ ನೆಲೆಯಾಯಿತ್ತು,
ಹಿಪ್ಪೆಯನುಂಡ ತೊಗಲು ಹರಿಗೋಲವಾಯಿತ್ತು.
ಗುರುಗಳಿಗೆ ಚಮ್ಮಾವುಗೆಯಾಯಿತ್ತು
ಹೂಡಲಿಕ್ಕೆ ಮಿಣಿಯಾಯಿತ್ತು.
ಹೊಡೆಯಲಿಕ್ಕೆ ಬಾರುಕೋಲವಾಯಿತ್ತು.
ಬಂಡಿಗೆ ಮಿಣಿಯಾಯಿತ್ತು.
ಅರಸರಿಗೆ ಮೃದಂಗವಾಯಿತ್ತು.
ತೋಲು ನಗಾರಿಯಾಯಿತ್ತು.
ತುಪ್ಪ ತುಂಬಲಿಕ್ಕೆ ಸಿದ್ದಲಿಕೆ, ಎಣ್ಣೆ ತುಂಬಲಿಕೆ ಬುದ್ದಲಿಕೆನಯಾಯಿತ್ತುಫ.
ಸಿದ್ದಲಿಕೇನ ತುಪ್ಪ, ಬುದ್ದಲಿಕೇನ ಎಣ್ಣೆ
ಕಲ್ಲಿಶೆಟ್ಟಿ ಮಲ್ಲಿಶೆಟ್ಟಿಗಳು ಕೂಡಿ
ನಾ ಶೀಲವಂತ ತಾ ಶೀಲವಂತ ಎಂದು ಶುದ್ದೈಸಿಕೊಂಡು ತಿಂದು ಬಂದು,
ಜಗಳ ಬಂದಾಗ ನನ್ನ ಕುಲ ಹೆಚ್ಚು, ನಿನ್ನ ಕುಲ ಹೆಚ್ಚು ಕಡಿಮೆ
ಎಂದು ಬಡಿದಾಡುವ ಕುನ್ನಿ ನಾಯಿಗಳ ಮೋರೆ ಮೋರೆಯ ಮೇಲೆ
ನಮ್ಮ ಪಡಿಹಾರಿ ಉತ್ತಣ್ಣಗಳ ವಾಮಪಾದುಕೆಯ ಕೊಂಡು
ಅವರ ಅಂಗುಳ ಮೆಟ್ಟಿ ಫಡಫಡನೆ ಹೊಡಿ ಎಂದಾತ
ನಮ್ಮ ದಿಟ್ಟ ಅಂಬಿಗರ ಚಾಡಯ್ಯ ನಿಜಶರಣನು. /279