Categories
ಶರಣರು / Sharanaru

ಗುರುಸಿದ್ಧ ದೇವ

ಅಂಕಿತ: ಸಂಗನಬಸವೇಶ್ವರ
ಕಾಯಕ: ಗುರು, ಸಿಂಹಾಸನದ ಅಧಿಪತಿಯಾಗಿದ್ದ

೭೦೩
ಅಂಗದಮೇಲೆ ಲಿಂಗವ ಧರಿಸಿ,
ಶಿವಭಕ್ತರೆಂದು ಹೇಳಿ, ಶಿವಾಚಾರಮಾರ್ಗವ ಬಿಟ್ಟು,
ಭವಿಶೈವದೈವಗಳಿಗೆ ಲಿಂಗವಡಿಯಾಗಿ ಅಡ್ಡಬಿದ್ದು
ಶರಣೆಂಬ ಹೊಲೆಯರಿಗೆ ಶಿವಭಕ್ತಜನ್ಮ ತೀರಿ,
ಚಂದ್ರಸೂರ್ಯರುಳ್ಳನ್ನಕ್ಕರೆ ಇಪ್ಪತ್ತೆಂಟುಕೋಟಿ ನರಕ ತಪ್ಪದು.
ಆ ನರಕ ತೀರಿದ ಬಳಿಕ ಶ್ವಾನ ಸೂಕರಜನ್ಮ ತಪ್ಪದು.
ಆ ಜನ್ಮ ತೀರಿದ ಬಳಿಕ ರುದ್ರಪ್ರಳಯ ತಪ್ಪದೆಂದ ಕಾಣಾ
ಸಂಗನಬಸವೇಶ್ವರ.

‘ಚಿದೈಶ್ವರ್ಯ ಚಿದಾಭರಣ’ ಎಂಬ ವಚನ ಸಂಕಲನ ಕೃತಿಯ ಕರ್ತೃವಾದ ಈತ ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಶಾಂತಮಲ್ಲ ಸ್ವಾಮಿಯ ಶಿಷ್ಯ; ಬಸವಲಿಂಗದೇವನ ಗುರು. ಶ್ರೀಶೈಲದ ಹತ್ತಿರದ ನಾಗರಗವಿ ಈತನ ಸ್ಮಳ. ಅಲ್ಲಿನ ಸಿಂಹಾಸನದ ಅಧಿಪತಿಯಾಗಿದ್ದ. ಕಾಲ=ಸು. ೧೭ನೇಯ ಶತಮಾನ. ‘ಚಿದೈಶ್ವರ್ಯ ಚಿದಾಭರಣ’ ಸಂಕಲನದಲ್ಲಿ ಇತರ ಶರಣರ ವಚನಗಳ ಜೊತೆಗೆ ಸ್ವತಃ ಗುರುಸಿದ್ಧದೇವ ತಾನೂ ಬರೆದ ೧೦೧ ವಚನಗಳನ್ನೂ ಅಳವಡಿಸಿದ್ದಾನೆ. ‘ಸಂಗನಬಸವೇಶ್ವರ’ ಎಂಬುದು ಇವುಗಳ ಅಂಕಿತ. ತತ್ವ ನಿರೂಪಣೆಯೇ ಮುಖ್ಯವಾಗಿರುವ ಇವುಗಳನ್ನು ಶಿಷ್ಯನಿಗೆ ಭೋಧಿಸಲಾಗಿದೆ.

೭೧೭
ಅಯ್ಯ ಬಸವ ಮೊದಲಾದ ಪ್ರಮಥಗಣಾರಾಧ್ಯರ
ಸನ್ಮಾರ್ಗಾಚಾರಕ್ಕೆ ದೃಢಚಿತ್ತದಿಂದ ನಿಂದು,
ನೀರಾಭಾರಿವೀರಶೈವ ಷಚಟ್ಸ್ಥಲಮಾರ್ಗದಲ್ಲಿ ಆಚರಿಸುವ
ಶರಣಗಣಂಗಳಲ್ಲಿ ಪಂಷಸೂತಕಂಗಳ ಕಲ್ಪಿಸಿದೆ,
ಭೃತ್ಯಾಚಾರ ಮುಂದುಗೊಂಡು, ಅವರೊಕ್ಕುಮಿಕ್ಕುದ ಹಾರೈಸಿ,
ನಿಜಭಕ್ತಿಯಲ್ಲಿ ನಿಂದು, ದೃಢಚಿತ್ತನಾಗಿ,
ಸನ್ಮಾರ್ಗಾಚಾರಕ್ಕೆ ಬಾರದಂಥ ಗುರು-ಚರ-ಪರ-ಭಕ್ತ-ಗಣ
ಬಂಧು-ಬಳಗ, ತಂದೆ-ತಾಯಿ, ಪಯತ್ರ, ಮಿತ್ರ, ಕಳತ್ರ, ಶಿಷ್ಯ ಮೊದಲಾಗಿ,
ತೃಣಕ್ಕೆ ಸಮಮಾಡಿ ತ್ಯಜಿಸಿ, ಮನದ ಮಧ್ಯದಲ್ಲಿ ಹುಟ್ಟಿದ
ಕಾಮ, ಕ್ರೋಧ, [ಲೋಭ] ಮೋಹ, ಮದ, ಮತ್ಸರಂಗಳ ಬಲೆಗೆ ಸಿಲ್ಕದೆ,
ತ್ರಿಕರಣದ ಪವಿತ್ರತೆಯಿಂದ ಅಷ್ಟಾವರಣದ ಸ್ತೋತ್ರವ
ಮಾಡುವಂಥಾದೆ ಸಮಯದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ನಿರಾಲಂಬ ಚೆನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು
ನೋಡ ಸಂಗನಬಸವೇಶ್ವರ.

೬೯೯
ಅಯ್ಯ, ಸದ್ಗುರು ಬಸವಣ್ಣನೆ ಜಗತ್ಪಾವನ ನಿಮಿತ್ಯಾರ್ಥವಾಗಿ
ಮಾದಲಾಂಬಿಕೆಯ ಹೃನ್ಮಂದಿರದಲ್ಲಿ ನೆಲಸಿರುವ
ನಿಷ್ಕಲ ಕೂಡಲಸಂಗಮೇಶ್ವರಲಿಂಗದ ಚಿದ್ಗರ್ಭದಿಂದ
ಸ್ವಾನುಭಾವ ಸದ್ವಾಸನೆಯನೆ ಬೀರುತ್ತ
ದವನದ ವೃಕ್ಷದೋಪಾದಿಯಲ್ಲಿ
ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ.
ಅಯ್ಯ, ಚೆನ್ನಬಸವರಾಜದೇವನೆ ಪ್ರಮಥಗಣನಿಮಿತ್ಯಾರ್ಥವಾಗಿ
ಅಕ್ಕನಾಗಲೆದೇವಿಯ ಚಿದಾಕಾಶದ ವರಚೌಕಮಧ್ಯದಲ್ಲಿ ನೆಲಸಿರ್ಪ
ನಿಶ್ಶೂನ್ಯ ಕೂಡಲಚೆನ್ನಸಂಗನ ಚಿದ್ಗರ್ಭದಿಂದ
ಸ್ವಾನುಭಾವಸದ್ವಾಸನೆಯನೆ ಬೀರುತ್ತ
ಮರುಗದ ವೃಕ್ಷದೋಪಾದಿಯಲ್ಲಿ
ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ.
ಅಯ್ಯ, ಪ್ರಭುಸ್ವಾಮಿಗಳೆ ಇವರಿಬ್ಬರ ಪರಿಣಾಮಕ್ಕೋಸ್ಕರವಾಗಿ
ಕರವೂರ ಸುಜ್ಞಾನಿಗಳ ಪಶ್ಚಿಮಸ್ಥಾನದಲ್ಲಿ ನೆಲಸಿರುವ
ನಿರಂಜನ ಗುರುಗುಹೇಶ್ವರನ ಚಿದ್ಗರ್ಭದಿಂದ
ಸ್ವಾನುಭಾವ ಸದ್ವಾಸನೆಯನೆ ಬೀರುತ್ತ
ಪಚ್ಚೇದ ವೃಕ್ಷದೋಪಾದಿಯಲ್ಲಿ
ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ.
ಅಯ್ಯ, ನೀಲಲೋಚನೆ, ಮುಕ್ತಾಯಕ್ಕಗಳು,
ಮಹಾದೇವಿಯಕ್ಕಗಳು ಮತ್ರ್ಯಲೋಕದ ಮಹಾಗಣಂಗಳಿಗೆ
ಭಕ್ತಿಜ್ಞಾನವೈರಾಗ್ಯ ಸತ್ಕ್ರಿಯಾ ಸದಾಚಾರದ
ಪರಿವರ್ತನೆಯ ತೋರಬೇಕೆಂದು ಪರಶಿವಲಿಂಗದ ಚಿದ್ಗರ್ಭದಿಂದ
ಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ
ಸ್ವಾನುಭಾವ ಸದ್ವಾಸನೆಯನೆ ಬೀರುತ್ತ
ಕಸ್ತೂರಿ ವೃಕ್ಷದೋಪಾದಿಯಲ್ಲಿ
ಬಾಲಬ್ರಹ್ಮದ ಲೀಲೆಯಿಂದ ಮತ್ರ್ಯಕ್ಕವತರಿಸಿದರು ನೋಡಾ.
ಅಯ್ಯ, ಸಿದ್ಭರಾಮೇಶ್ವರ, ಘಟ್ಟಿವಾಳ ಶರಣ,
ಮೋಳಿಗೆಮಾರಯ್ಯ ಶರಣ ಮೊದಲಾದ
ಸಮಸ್ತ ಪ್ರಮಥಗಣಂಗಳೂ ಜಗತ್ಪಾವನಾರ್ಥ
ಮಹಿಮಾ ಷಟ್ಸ್ಥಲಮಾರ್ಗ ನಿಮಿತ್ಯಾರ್ಥವಾಗಿ,
ಬಸವೇಶ್ವರಸ್ವಾಮಿಗಳ ಆಜ್ಞಾಮಂಟಪ
ತ್ರಿಕೂಟಸಂಗಮ ಸಿಂಹಾಸನದ ಮಧ್ಯದಲ್ಲಿ ನೆಲಸಿರ್ದ
ಚಿದ್ಘನಮಹಾಲಿಂಗದ ಚಿದ್ಬೆಳಗಿನೊಳಗೆ
ಅನಂತಕೋಟಿ ಬರಸಿಡಿಲೊಗೆದೋಪಾದಿಯಲ್ಲಿ
ಸ್ವಾನುಭಾವ ಸದ್ವಾಸನೆಯ ಪ್ರಕಾಶದಿಂದ
ಸಂಪಿಗೆ, ಮೊಲ್ಲೆ, ಮಲ್ಲಿಗೆ, ಜಾಜಿ, ಬಕುಳ,
ಕರವೀರ, ಸುರಹೊನ್ನೆ, ಪಾರಿಜಾತ, ತಾವರೆ, ನೈದಿಲು
ಮೊದಲಾದ ಸಮಸ್ತ ಪುಷ್ಪಂಗಳುದಯದಂತೆ, ಬಳಸಿ ಬ್ರಹ್ಮವಾಗಿ
ಪರಶಿವನಪ್ಪಣೆವಿಡಿದು ಮತ್ರ್ಯಲೋಕಕ್ಕವತರಿಸಿದರು ನೋಡ.
ಅಯ್ಯ, ವರಕುಮಾರದೇಶಿಕೇಂದ್ರನೆ, ಗುರುಬಸವೇಶ್ವರಸ್ವಾಮಿಗಳೆ
ನಿಮ್ಮ ಕರಸ್ಥಲದಲ್ಲಿ ಇಷ್ಟಲಿಂಗ ವಾಗಿ ಚುಳಕದಿಂದ ನೆಲಸಿರ್ಪರು ನೋಡ.
ಅಯ್ಯ, ಚೆನ್ನಬಸವಸ್ವಾಮಿಗಳೆ ನಿಮ್ಮ ಮನಸ್ಥಲದಲ್ಲಿ
ಪ್ರಾಣಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ.
ಅಯ್ಯ, ಅಲ್ಲಮಪ್ರಭುವೆ ನಿಮ್ಮ ಭಾವಸ್ಥಲದಲ್ಲಿ
ಭಾವಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ.
ಅಯ್ಯ, ನೀಲಾಂಬಿಕೆ-ಮುಕ್ತಾಯಕ್ಕ-ಮಹಾದೇವಿಯಕ್ಕಗಳೆ
ನಿಮ್ಮ ತ್ರಿವಿಧಚಕ್ಷುವಿನಲ್ಲಿ ಕರುಣಾಜಲ-ವಿನಯಜಲ-ಸಮತಾಜಲ
ಮೊದಲಾದ ಹತ್ತುತೆರದಿಂದ ಪರಮಗಂಗಾತೀರ್ಥವಾಗಿ
ಚುಳಕದಿಂದ ನೆಲಸಿರ್ಪರು ನೋಡ.
ಅಯ್ಯ, ಸಿದ್ಭರಾಮೇಶ್ವರ, ಘಟ್ಟಿವಾಳಯ್ಯ, ಶರಣ ಮೋಳಿಗಪ್ಪ
ಮೊದಲಾದ ಸಮಸ್ತ ಪ್ರಮಥಗಣಂಗಳೆಲ್ಲ
ನಿನ್ನ ಹೃದಯಕಮಲ ಮಧ್ಯದಲ್ಲಿ ಶುದ್ಧ-ಸಿದ್ಧ-ಪ್ರಸಿದ್ಧ
ಮೊದಲಾದ ಹನ್ನೊಂದು ತೆರದಿಂದ ಮಹಾಚಿದ್ಘನ ಪ್ರಸಾದವಾಗಿ
ಚುಳಕಮಾತ್ರದಿಂದ ನೆಲಪಿರ್ಪರು ನೋಡ
ಸಂಗನಬಸವೇಶ್ವರ.