Categories
ವಚನಗಳು / Vachanagalu

ನಿಜಗುಣಯೋಗಿ ವಚನಗಳು

ಅಗ ಲಿಂಗವೆಂಬನ್ನಕ್ಕ
ಯೋಗಪೂಜೆ ಪುಂಣ್ಯಕ್ಕೆ ಬೀಜ.
ಆತ್ಮನನರಿದೆಹೆನೆಂಬನ್ನಕ್ಕ ಉಭಯದೊಡಲಾಯಿತ್ತು.
ಉಭಯದ ಗಿಡಬಜೆಯಲ್ಲಿ ಸಿಲುಕದೆ ನಿಂದ
ನಿಜಗುಣಯೋಗಿ. || /1
ಅರಿಬಿರಿದಿನಾಲಯದೊಳಗೆ ದೊರೆ (ಯದೆ)
ತಿರಿತಿರಿಗಿ ಬರುವ ದುರದಿಕ್ಕಿಗಳನೊಲ್ಲ.
ಕರುಕರತ ತಾಳತೋರಿ ಎನ್ನನಿಂಬುಗೊಂಡೆಯಲ್ಲಾ
ನಿಜಗುಣಯೋಗಿ./2
ಆನು ನೀನೆಂಬ ಸಂದೇಹ ಗಗನಕ್ಕೆ ಕೈಯನಿಟ್ಟಂತೆ!
ಕೈ ಗಗನವ ನುಂಗಿತ್ತೊ, ಗಗನ ಕೈಯ ನುಂಗಿತ್ತೊ ಎಂಬುದ
ನಿನ್ನ ನೀ ತಿಳಿದು ತಿಳಿವಿನ ಕಣ್ಣಿಂದ ನೋಡಯ್ಯಾ.
ನಿಜಗುಣವೆಂಬ ಆನಂದರತ್ನವ
ನುಂಗಿದ ರುಚಿಯನು ಏನೆಂದು ಉಪಮಿಸುವೆ?/3
ಆನುಳ್ಳನ್ನಕ್ಕ ನೀನುಂಟೆಲೆ ಮಾಯೆ
ಆನಿಲ್ಲದಿರ್ದಡೆ ನೀನಿಲ್ಲ.
ಆನು ನೀನೆಂಬುಭಯವಳಿಯಲು
ಆನಂದ ನಿಜಗುಣಯೋಗ./4
ಆರರ ಅಂತ್ಯವು ಮೂರರ ಅಂತ್ಯವು ಒಂದೆ,
ಭಾವ ಅವು ಆವಾವವಯ್ಯ ಎಂದಡೆ;
ಕಕ್ಷೆ, ಕಂಠ, ಕರಸ್ಥಲ, ಉರಸಜ್ಜೆ, ಉತ್ತಮಾಂಗ, ಅಮಳೋಕ್ಯ
ಇಂತೀ ಆರು ಸ್ಥನ ಬಾಹ್ಯವೆಂಬೆ.
ನಾಸಿಕಾಗ್ರ, ಭೂಮಧ್ಯ, ಬ್ರಹ್ಮರಂಧ್ರ
ಇಂತೀ ಮೂರರ ತೂಯ ಚೌಕಮಧ್ಯವೆನಿಸುವದು.
ಅದರ ಕ್ರಮವೆಂತೆಂದಡೆ: ಇಂತೀ ಮೂರು ಸ್ಥಾನದ ಮೇಲಣ
ಸಹಸ್ರದಳಕಮಲದೊಳಗೆ ತೋರುವ
ನಾಲ್ಕು ಕೋಣೆಯ ಚೌಕಮಧ್ಯ
ಅದರೊಳಗಿಪ್ಪ ಅಮೃತಮಯಲಿಂಗವ ಕಂಡು
ನೋಡುತ್ತ ನೋಡುತ್ತ ನಿಬ್ಬೆರಗಾದ ನಿಜಗುಣಾ./5
ಕಕ್ಷೆ ಮೊದಲಾಗಿ ಅಮಳೋಕ್ಯ ಕಡೆಯಾಗಿ
ಆರು ಸ್ಥಾನ ಬಾಹ್ಯವೆಂಬೆ.
ನಾಸಿಕಾಗ್ರ ಭ್ರೂಮಧ್ಯ ಬ್ರಹ್ಮರಂಧ್ರ ಚೌಕಮಧ್ಯವೆಂದು
ಈ ನಾಲ್ಕು ಸ್ಥಾನಗಳು ಅಭ್ಯಂತವಾಗಿಹವು.
ನಾಸಿಕಾಗ್ರದ ಗುರು ಭ್ರೂಮಧ್ಯವನೆಯ್ದಿದಡೆ
ಭ್ರೂಮಧ್ಯಕ್ಕೆ ಲಿಂಗವಾಯಿತ್ತು.
ಭ್ರೂಮಧ್ಯದ ಲಿಂಗವನರಿತಡೆ
ಬ್ರಹ್ಮರಂಧ್ರಕ್ಕೆ ಜಂಗಮವಾಯಿತ್ತು.
ಇಂತೀ ತ್ರಿವಿಧದರಿವೆ ಗದ್ಗುಗೆ.
ಅದಕ್ಕೆ ಶ್ರುತಿ: “ಗುರುಲಿಂಗ ಜಂಗಮಾಖ್ಯಾತ್ಯಂ ಮಹಾಲಿಂಗ ಚತುವರ್ಿಧಂ
ಯಥಾ ಚತುವರ್ಿಧಂ ಪೀಠಂ ಚಿತ್ಕಲಾ ಪರಿಪೂಜಿತಂ||’
ಇಂತೆಂಬ ಚೌಕಮಧ್ಯದಲ್ಲಿ ಮಹಾಘನವ ನೋಡುತ್ತ
ನಿಬ್ಬೆರಗಾದ ನಿಜಗುಣಾ./6
ಕಲ್ಲಿನ ಹುಳ್ಳಿಯ ನೀರಲ್ಲಿ ಹುಟ್ಟಿದ ಕಿಚ್ಚು
ತ್ರಿವಿಧಕ್ಕೂ ಅಲ್ಲಲ್ಲಿಯ ಗುಣವಲ್ಲಿಯದೆ,
ಬೇರೊಂದಕ್ಕೆಲ್ಲಿಯೂ ತೆರಪಿಲ್ಲ.
ಕಾಯಗುಣದಿಂದ ಕಲ್ಪಿತಕ್ಕೊಳಗಾಗಿ
ಜೀವಗುಣದಿಂದ ಭವಕ್ಕೆ ಬೀಜವಾಗಿ
ಅರಿದಿಹೆ ಗುಣದಿಂದ ಮರವೆಗೆ ಒಳಾಗಾಗಿ.
ಅರಿದಿಹೆನೆಂಬ ಅರಿವು ಕುರುಹುಗೊಳ್ಳದೆ ನಿಂದುದು
ನಿಜಗುಣ ಯೋಗಿಯ ಯೋಗಕ್ಕೆ
ಭಾವವಿಲ್ಲದ ಸೂತ್ರದ ಬಿಂಬ./7
ಜಡ ಅಜಡವೆಂಬುಭಯ ಕೂಟ ಉಳ್ಳನ್ನಕ್ಕ
ನಾನೆಂಬುದದೇನು? ವಿಚಾರಕ್ಕೆ ನೀನೆಂಬುದದೇನು?
ಗೆಲ್ಲ ಸೋಲಕ್ಕೆ ಹೋರಿ ಒಳ್ಳಿದನಾದನೆಂಬಲ್ಲಿಯೆ
ಕಳ್ಳ ಕದ್ದ ಗಜವಲ್ಲಿ ಅಡಗಿ ಮಾರೂದು ಹೇಳಾ.
ಬಲ್ಲವನಾದೆನೆಂಬಲ್ಲಿಯೆ ಉಳಿಯಿತ್ತು
ನಿಜಗುಣಯೋಗಿಯ ಯೋಗಕ್ಕೆ ಸಲ್ಲದ ಗುಣ./8
ದೊರೆಯವನ… ವನ್ನ ಬರವ,
ದೊರೆಯವೆ ಇರಲಿಕೆ ಕಾಯ ಬವರಕ್ಕೆ ಗುರಿಯಹುದು.
ಕುರುಹಿಗೆ ಬಾರದೆ ಆಲಿನಿಂದ ಠಾವಿನಲ್ಲಿ
ನಿಜಗುಣನಿಹನು./9
ನಿಜ ಹೃದಯಾಂಬುಜದಲ್ಲಿ
ನಿರಾಳ ಪ್ರಣಮ ಪೀಠವಾಗಿರ್ಪನೊರ್ವ
ಆಗೋಚರ ಶಿವಯೋಗಿಯು.
ಆತನೆರಡು ಗುಂಡು ಹೊಸೆದಡೆ
ಗೋಚರನಪ್ಪ ಕಾಣಾ,
ನಿಜಗುಣಲಿಂಗ ಸಾಕ್ಷಿಯಾಗಿ, ಸಿದ್ಧರಾಮಯ್ಯ./10
ಪಥದೊಳಗಣ ಪ್ರತಿಷ್ಠೆಯ ಪೂಜಿಸಿ
ಸ್ವಯಂಭುವನರಿದುದಿಲ್ಲ,
ಅದನರಿಸಿ ಕಂಡುದುದಿಲ್ಲ;
ಸ್ವಯಕ್ಕೂ ವಚನಕ್ಕೂ ವಿರೋಧವಿಲ್ಲದೆ
ಉಭಯವಳಿದು ನಿಂದ
ನಿಜಗುಣಯೊಗಿಯ ಯೋಗವೆಂಬುದಿಲ್ಲ./11
ಬಂದಲ್ಲಿ ನಿಂದು ಕಂಡು ಸಂದೇಹವಳಿದೆ ಮತ್ತೆ
ಬೇರಂದವ ಕೇಳುವುದಕ್ಕೆ ಕಂಗಳ ಸೂತಕಕ್ಕೆ ಇಂಬಿಲ್ಲ
ಆ ಉಭಯದಂಗದ ಸಂಗವ ಮರದಲ್ಲಿ
ನಿಜಗುಣಯೋಗಿಯ ಯೋಗ./12
ಭಕ್ತನಾದಡೆ ಜಂಗಮದಡಕದಲ್ಲಿ ಸಂದಿರಬೇಕು.
ಜಂಗಮವಾದಡೆ ಭಕ್ತನ ಕೈಯ ತತ್ತಲಗೂಸಿನಂತಿರಬೇಕು.ಇದಲ್ಲದೆ,
ಭಕ್ತನೂ ನಾ (ನಾ ಜಂಗ) ಮವೂ ನಾನೆ ಎಂದಡಾ
ಇಬ್ಬರಿಗೂ ದಾರಿಯ ಕೊಡಲೊಲ್ಲೆ ಕಾಣಾ,
ಆನಂದ ನಿಜಗುಣಯೋಗಿ./13
ಮಿಂಚಿನ ಸಂಚಾರದಂತೆ
ಬಹುವರ್ಣದ ಬಣ್ಣದ ಗನ್ನದಂತೆ,
ರಂಜನೆಯಲ್ಲಿ ರಂಜಿಸಿ ತೋರಿ ಅಡಗುವ ಪ್ರತಿಬಿಂಬದಂತೆ,
ಅಂಗವಿದ್ದಳಿದು ತೋರುವ ಜಲಮಣಿಯೊಳಗಿನಂತೆ
ನಿರಂಗದ ಸಂಗಕ್ಕೆ ಹೊರಗು
ನಿಜಗುಣಯೋಗಿಯ ಯೋಗ./14
ವಾರಿಗಿದಿರಾದ ಕಾಷ್ಟ.
ಬವರಕ್ಕಿದಿರಾದ ಬಂಟ,
ಅರಿದೊರೆಗೆ ಇದಿರಾದ ದೊರೆ
ಮರಳುವದಕ್ಕೆ ನೆರೆ ಸ್ವಪ್ನ.
ಕಾಯ ಜೀವಕ್ಕಿದಿರಾದ ಅರಿವು
ಭಾವಕ್ಕೆ ಕುರುಹುಗೊಡಲಿಲ್ಲ.
ಉಭಯವಳಿದಲ್ಲದೆ ನಿಜಗುಣಯೋಗಿಯ ಯೋಗಕ್ಕೆಹೊರಗಲ್ಲ./15
ಸರ್ವಮಯ ಆತ್ಮನೆಂದಲ್ಲಿ
ರಕ್ಷಿಸಿ ಶಿಕ್ಷಿಸಿಹೆನೆಂಬುದೇನೊ?
`ಅಣೋರಣೀಯಾನ್ಮಹತೋಮಹೀಯಾನ್’ ಎಂಬಲ್ಲಿ
ಬೇರೊಂದರಿತು ಕುರಿತು ಕಾಬುದೇನು?
ಇದಿರಿಗೆ ತಾನಿಲ್ಲ, ತನಗೆ ಇದಿರಿಲ್ಲ ಎಂದಲ್ಲಿ
ಗಜಬಜೆಯಲ್ಲಿ ಕುಜನವೇತಕ್ಕೆ?
ಬೇರಿಗೆ ನೀರನೆರೆದಲ್ಲಿ ಶಾಖೆಗೆ ಸಂದುಂಟೆ?
ಅಂಗ ಪ್ರಾಣಲಿಂಗ ಒಂದೆಂದಲ್ಲಿ
ಅರ್ಪಿತಕ್ಕೆ ಹಿಂದು ಮುಂದಿಲ್ಲ.
ನಿಜಗುಣಯೋಗಿಯ ಯೋಗಕ್ಕೆ ಮುನ್ನವೆ ಇಲ್ಲ./16