ಅಗ ಲಿಂಗವೆಂಬನ್ನಕ್ಕ ಯೋಗಪೂಜೆ ಪುಂಣ್ಯಕ್ಕೆ ಬೀಜ. ಆತ್ಮನನರಿದೆಹೆನೆಂಬನ್ನಕ್ಕ ಉಭಯದೊಡಲಾಯಿತ್ತು. ಉಭಯದ ಗಿಡಬಜೆಯಲ್ಲಿ ಸಿಲುಕದೆ ನಿಂದ ನಿಜಗುಣಯೋಗಿ. || /1 |
ಅರಿಬಿರಿದಿನಾಲಯದೊಳಗೆ ದೊರೆ (ಯದೆ) ತಿರಿತಿರಿಗಿ ಬರುವ ದುರದಿಕ್ಕಿಗಳನೊಲ್ಲ. ಕರುಕರತ ತಾಳತೋರಿ ಎನ್ನನಿಂಬುಗೊಂಡೆಯಲ್ಲಾ ನಿಜಗುಣಯೋಗಿ./2 |
ಆನು ನೀನೆಂಬ ಸಂದೇಹ ಗಗನಕ್ಕೆ ಕೈಯನಿಟ್ಟಂತೆ! ಕೈ ಗಗನವ ನುಂಗಿತ್ತೊ, ಗಗನ ಕೈಯ ನುಂಗಿತ್ತೊ ಎಂಬುದ ನಿನ್ನ ನೀ ತಿಳಿದು ತಿಳಿವಿನ ಕಣ್ಣಿಂದ ನೋಡಯ್ಯಾ. ನಿಜಗುಣವೆಂಬ ಆನಂದರತ್ನವ ನುಂಗಿದ ರುಚಿಯನು ಏನೆಂದು ಉಪಮಿಸುವೆ?/3 |
ಆನುಳ್ಳನ್ನಕ್ಕ ನೀನುಂಟೆಲೆ ಮಾಯೆ ಆನಿಲ್ಲದಿರ್ದಡೆ ನೀನಿಲ್ಲ. ಆನು ನೀನೆಂಬುಭಯವಳಿಯಲು ಆನಂದ ನಿಜಗುಣಯೋಗ./4 |
ಆರರ ಅಂತ್ಯವು ಮೂರರ ಅಂತ್ಯವು ಒಂದೆ, ಭಾವ ಅವು ಆವಾವವಯ್ಯ ಎಂದಡೆ; ಕಕ್ಷೆ, ಕಂಠ, ಕರಸ್ಥಲ, ಉರಸಜ್ಜೆ, ಉತ್ತಮಾಂಗ, ಅಮಳೋಕ್ಯ ಇಂತೀ ಆರು ಸ್ಥನ ಬಾಹ್ಯವೆಂಬೆ. ನಾಸಿಕಾಗ್ರ, ಭೂಮಧ್ಯ, ಬ್ರಹ್ಮರಂಧ್ರ ಇಂತೀ ಮೂರರ ತೂಯ ಚೌಕಮಧ್ಯವೆನಿಸುವದು. ಅದರ ಕ್ರಮವೆಂತೆಂದಡೆ: ಇಂತೀ ಮೂರು ಸ್ಥಾನದ ಮೇಲಣ ಸಹಸ್ರದಳಕಮಲದೊಳಗೆ ತೋರುವ ನಾಲ್ಕು ಕೋಣೆಯ ಚೌಕಮಧ್ಯ ಅದರೊಳಗಿಪ್ಪ ಅಮೃತಮಯಲಿಂಗವ ಕಂಡು ನೋಡುತ್ತ ನೋಡುತ್ತ ನಿಬ್ಬೆರಗಾದ ನಿಜಗುಣಾ./5 |
ಕಕ್ಷೆ ಮೊದಲಾಗಿ ಅಮಳೋಕ್ಯ ಕಡೆಯಾಗಿ ಆರು ಸ್ಥಾನ ಬಾಹ್ಯವೆಂಬೆ. ನಾಸಿಕಾಗ್ರ ಭ್ರೂಮಧ್ಯ ಬ್ರಹ್ಮರಂಧ್ರ ಚೌಕಮಧ್ಯವೆಂದು ಈ ನಾಲ್ಕು ಸ್ಥಾನಗಳು ಅಭ್ಯಂತವಾಗಿಹವು. ನಾಸಿಕಾಗ್ರದ ಗುರು ಭ್ರೂಮಧ್ಯವನೆಯ್ದಿದಡೆ ಭ್ರೂಮಧ್ಯಕ್ಕೆ ಲಿಂಗವಾಯಿತ್ತು. ಭ್ರೂಮಧ್ಯದ ಲಿಂಗವನರಿತಡೆ ಬ್ರಹ್ಮರಂಧ್ರಕ್ಕೆ ಜಂಗಮವಾಯಿತ್ತು. ಇಂತೀ ತ್ರಿವಿಧದರಿವೆ ಗದ್ಗುಗೆ. ಅದಕ್ಕೆ ಶ್ರುತಿ: “ಗುರುಲಿಂಗ ಜಂಗಮಾಖ್ಯಾತ್ಯಂ ಮಹಾಲಿಂಗ ಚತುವರ್ಿಧಂ ಯಥಾ ಚತುವರ್ಿಧಂ ಪೀಠಂ ಚಿತ್ಕಲಾ ಪರಿಪೂಜಿತಂ||’ ಇಂತೆಂಬ ಚೌಕಮಧ್ಯದಲ್ಲಿ ಮಹಾಘನವ ನೋಡುತ್ತ ನಿಬ್ಬೆರಗಾದ ನಿಜಗುಣಾ./6 |
ಕಲ್ಲಿನ ಹುಳ್ಳಿಯ ನೀರಲ್ಲಿ ಹುಟ್ಟಿದ ಕಿಚ್ಚು ತ್ರಿವಿಧಕ್ಕೂ ಅಲ್ಲಲ್ಲಿಯ ಗುಣವಲ್ಲಿಯದೆ, ಬೇರೊಂದಕ್ಕೆಲ್ಲಿಯೂ ತೆರಪಿಲ್ಲ. ಕಾಯಗುಣದಿಂದ ಕಲ್ಪಿತಕ್ಕೊಳಗಾಗಿ ಜೀವಗುಣದಿಂದ ಭವಕ್ಕೆ ಬೀಜವಾಗಿ ಅರಿದಿಹೆ ಗುಣದಿಂದ ಮರವೆಗೆ ಒಳಾಗಾಗಿ. ಅರಿದಿಹೆನೆಂಬ ಅರಿವು ಕುರುಹುಗೊಳ್ಳದೆ ನಿಂದುದು ನಿಜಗುಣ ಯೋಗಿಯ ಯೋಗಕ್ಕೆ ಭಾವವಿಲ್ಲದ ಸೂತ್ರದ ಬಿಂಬ./7 |
ಜಡ ಅಜಡವೆಂಬುಭಯ ಕೂಟ ಉಳ್ಳನ್ನಕ್ಕ ನಾನೆಂಬುದದೇನು? ವಿಚಾರಕ್ಕೆ ನೀನೆಂಬುದದೇನು? ಗೆಲ್ಲ ಸೋಲಕ್ಕೆ ಹೋರಿ ಒಳ್ಳಿದನಾದನೆಂಬಲ್ಲಿಯೆ ಕಳ್ಳ ಕದ್ದ ಗಜವಲ್ಲಿ ಅಡಗಿ ಮಾರೂದು ಹೇಳಾ. ಬಲ್ಲವನಾದೆನೆಂಬಲ್ಲಿಯೆ ಉಳಿಯಿತ್ತು ನಿಜಗುಣಯೋಗಿಯ ಯೋಗಕ್ಕೆ ಸಲ್ಲದ ಗುಣ./8 |
ದೊರೆಯವನ… ವನ್ನ ಬರವ, ದೊರೆಯವೆ ಇರಲಿಕೆ ಕಾಯ ಬವರಕ್ಕೆ ಗುರಿಯಹುದು. ಕುರುಹಿಗೆ ಬಾರದೆ ಆಲಿನಿಂದ ಠಾವಿನಲ್ಲಿ ನಿಜಗುಣನಿಹನು./9 |
ನಿಜ ಹೃದಯಾಂಬುಜದಲ್ಲಿ ನಿರಾಳ ಪ್ರಣಮ ಪೀಠವಾಗಿರ್ಪನೊರ್ವ ಆಗೋಚರ ಶಿವಯೋಗಿಯು. ಆತನೆರಡು ಗುಂಡು ಹೊಸೆದಡೆ ಗೋಚರನಪ್ಪ ಕಾಣಾ, ನಿಜಗುಣಲಿಂಗ ಸಾಕ್ಷಿಯಾಗಿ, ಸಿದ್ಧರಾಮಯ್ಯ./10 |
ಪಥದೊಳಗಣ ಪ್ರತಿಷ್ಠೆಯ ಪೂಜಿಸಿ ಸ್ವಯಂಭುವನರಿದುದಿಲ್ಲ, ಅದನರಿಸಿ ಕಂಡುದುದಿಲ್ಲ; ಸ್ವಯಕ್ಕೂ ವಚನಕ್ಕೂ ವಿರೋಧವಿಲ್ಲದೆ ಉಭಯವಳಿದು ನಿಂದ ನಿಜಗುಣಯೊಗಿಯ ಯೋಗವೆಂಬುದಿಲ್ಲ./11 |
ಬಂದಲ್ಲಿ ನಿಂದು ಕಂಡು ಸಂದೇಹವಳಿದೆ ಮತ್ತೆ ಬೇರಂದವ ಕೇಳುವುದಕ್ಕೆ ಕಂಗಳ ಸೂತಕಕ್ಕೆ ಇಂಬಿಲ್ಲ ಆ ಉಭಯದಂಗದ ಸಂಗವ ಮರದಲ್ಲಿ ನಿಜಗುಣಯೋಗಿಯ ಯೋಗ./12 |
ಭಕ್ತನಾದಡೆ ಜಂಗಮದಡಕದಲ್ಲಿ ಸಂದಿರಬೇಕು. ಜಂಗಮವಾದಡೆ ಭಕ್ತನ ಕೈಯ ತತ್ತಲಗೂಸಿನಂತಿರಬೇಕು.ಇದಲ್ಲದೆ, ಭಕ್ತನೂ ನಾ (ನಾ ಜಂಗ) ಮವೂ ನಾನೆ ಎಂದಡಾ ಇಬ್ಬರಿಗೂ ದಾರಿಯ ಕೊಡಲೊಲ್ಲೆ ಕಾಣಾ, ಆನಂದ ನಿಜಗುಣಯೋಗಿ./13 |
ಮಿಂಚಿನ ಸಂಚಾರದಂತೆ ಬಹುವರ್ಣದ ಬಣ್ಣದ ಗನ್ನದಂತೆ, ರಂಜನೆಯಲ್ಲಿ ರಂಜಿಸಿ ತೋರಿ ಅಡಗುವ ಪ್ರತಿಬಿಂಬದಂತೆ, ಅಂಗವಿದ್ದಳಿದು ತೋರುವ ಜಲಮಣಿಯೊಳಗಿನಂತೆ ನಿರಂಗದ ಸಂಗಕ್ಕೆ ಹೊರಗು ನಿಜಗುಣಯೋಗಿಯ ಯೋಗ./14 |
ವಾರಿಗಿದಿರಾದ ಕಾಷ್ಟ. ಬವರಕ್ಕಿದಿರಾದ ಬಂಟ, ಅರಿದೊರೆಗೆ ಇದಿರಾದ ದೊರೆ ಮರಳುವದಕ್ಕೆ ನೆರೆ ಸ್ವಪ್ನ. ಕಾಯ ಜೀವಕ್ಕಿದಿರಾದ ಅರಿವು ಭಾವಕ್ಕೆ ಕುರುಹುಗೊಡಲಿಲ್ಲ. ಉಭಯವಳಿದಲ್ಲದೆ ನಿಜಗುಣಯೋಗಿಯ ಯೋಗಕ್ಕೆಹೊರಗಲ್ಲ./15 |
ಸರ್ವಮಯ ಆತ್ಮನೆಂದಲ್ಲಿ ರಕ್ಷಿಸಿ ಶಿಕ್ಷಿಸಿಹೆನೆಂಬುದೇನೊ? `ಅಣೋರಣೀಯಾನ್ಮಹತೋಮಹೀಯಾನ್’ ಎಂಬಲ್ಲಿ ಬೇರೊಂದರಿತು ಕುರಿತು ಕಾಬುದೇನು? ಇದಿರಿಗೆ ತಾನಿಲ್ಲ, ತನಗೆ ಇದಿರಿಲ್ಲ ಎಂದಲ್ಲಿ ಗಜಬಜೆಯಲ್ಲಿ ಕುಜನವೇತಕ್ಕೆ? ಬೇರಿಗೆ ನೀರನೆರೆದಲ್ಲಿ ಶಾಖೆಗೆ ಸಂದುಂಟೆ? ಅಂಗ ಪ್ರಾಣಲಿಂಗ ಒಂದೆಂದಲ್ಲಿ ಅರ್ಪಿತಕ್ಕೆ ಹಿಂದು ಮುಂದಿಲ್ಲ. ನಿಜಗುಣಯೋಗಿಯ ಯೋಗಕ್ಕೆ ಮುನ್ನವೆ ಇಲ್ಲ./16 |