Categories
ವಚನಗಳು / Vachanagalu

ನೀಲಗಂಗಾಂಬಿಕೆ/ ನೀಲಾಂಬಿಕೆ (ನೀಲಮ್ಮ) ವಚನಗಳು

ಅಂಗದ ಸಂಗವ ಹಿಂಗಿ ಅಂಗವನಳಿದೆನಯ್ಯ.
ಆ ಅಂಗವನಳಿದ ಬಳಿಕ
ಅಣೋರಣೀಯಾನ್ ಮಹತೋಮಹೀಯಾನ್ಬ್ಯೆಂಬ
ಶಬ್ದವಡಗಿತ್ತು.
ಮನವನರಿದು, ಆ ಮನ ಘನವ ತಿಳಿದು,
ಆನು ಬದುಕಿದೆನಯ್ಯದ
ಆನು ಸುಖಿಯಾದೆನಯ್ಯ.
ಆನು ಇಹಪರದ ಹಂಗಹರಿದು,
ಸುಖ ವಿಸುಖ ಪ್ರಸನ್ನರೂಪಾಯಿತ್ತಯ್ಯ ಸಂಗಯ್ಯ./1
ಅಂಗದ ಸಂಗಿಗನಲ್ಲ ನಮ್ಮ ಬಸವಯ್ಯನು.
ಪ್ರಾಣದ ಭ್ರಮೆಯವನಲ್ಲ ನಮ್ಮ ಬಸವಯ್ಯನು.
ಉಭಯದ ಹಂಗಹರಿದು ಉಪಮಾತೀತನಾದ ನಮ್ಮ ಬಸವಯ್ಯನು.
ಸಂಗಯ್ಯನಲ್ಲಿ ಕೂಡಿ
ನಿರಾಳ ಪ್ರಸನ್ನಮೂರ್ತಿಯಾದ ನಮ್ಮ ಬಸವಯ್ಯನು./2
ಅಂಗನೆಯ ಸಂಗವ ಮಾಡಿಹೆನು ನಾನು,
ಆನುವಂಗನೆಯಲ್ಲ.
ಆ ಅಂಗನೆಯ ಅಂಗಸಂಗವ ಕಂಡು ನಿಂದವಳಯ್ಯ.
ನಿಲವನರಿದು, ನೆಲೆಯ ತಿಳಿದು,
ಆನು ಬದುಕಿದೆನಯ್ಯ ಸಂಗಯ್ಯ./3
ಅಂಗವಡಗಿ ನಿರಂಗಿಯಾನಾದೆನು.
ನಿರಂಗಸಂಗ ಮಂತ್ರದ ಮಂತ್ರದಿಂದ
ಮನೋವಿಲಾಸವ ಕಂಡು ಮೂರ್ತಿಯನರಿದು
ಆ ಮೂರ್ತಿ ಸಂಗ ಹಿಂಗಿ,
ನಾನು ಪ್ರಸನ್ನಮೂರ್ತಿಯ ಇರವನರಿದು
ಪರವ ನಂಬಿ, ಬಹುವಿಕಾರವ ಕಳದು
ವಿಶುದ್ಭದಾಯಕಳು ನಾನಾದೆನಯ್ಯ ಸಂಗಯ್ಯ./4
ಅಂಗವನರಿದು ಹಿಂಗಿದೆ ಪ್ರಾಣವ,
ಅಂಗ ಲಿಂಗವನುಂಡು ಪರಮ ಪರಿಣಾಮದೊಳೋಲಾಡುತಿರ್ದೆನಯ್ಯ.
ದಿನಮಣಿ ದಿನಪ್ರಕಾಶ ಸಾಧ್ಯವಾಯಿತ್ತಯ್ಯ.
ದಿನಮಣಿ ದಿನಪ್ರಕಾಶದ ಕೂಟದಿಂದ
ಆನು ಬದುಕಿದೆನಯ್ಯ ಸಂಗಯ್ಯ./5
ಅಂಗವಿಲ್ಲವೆನಗೆ ಲಿಂಗವಿಲ್ಲವೆನಗೆ
ಜಂಗಮವಿಲ್ಲವೆನಗೆ ಪ್ರಸಾದವಿಲ್ಲವೆನಗೆ
ಪ್ರಾಣವಿಲ್ಲವೆನಗೆ ಪರಿಣಾಮವಿಲ್ಲವೆನಗೆ
ಆವ ಸುಖವೂ ಇಲ್ಲದ ಆ ಸುಖವಿಲ್ಲದ ಕಾರಣ
ಪ್ರಸಾದವೆನಗೆ ಸಾಧ್ಯವಯ್ಯ ಸಂಗಯ್ಯ./6
ಅಂಡಜವ ಕಲ್ಪಿಸಲು ಆ ಅಂಡಜದ ರೂಪೆನ್ನಲಿಲ್ಲದ ಕಾರಣ
ಸಂಗಯ್ಯಾ, ಗುರುಬಸವನೆನ್ನ ಕಾಯದಲ್ಲಿ ಕಯ್ಯಲಗಿನಂತಿದ್ದನು./7
ಅಂಡಜವಳಿದ ಬಸವಾ; ಪಿಂಡಜವಳಿದ ಬಸವಾ;
ಆಕಾರವಳಿದ ಬಸವಾದ ನಿರಾಕಾರವಳಿದ ಬಸವಾ;
ಸಂಗವಳಿದ ಬಸವಾದ ನಿಸ್ಸಂಗವಳಿದ ಬಸವಾ;
ಸಂಗಯ್ಯನಲ್ಲಿ ಸ್ವಯಲಿಂಗವಾದ ಬಸವಾ./8
ಅಂಡದಲ್ಲಿಯೊಂದು ಆಕಾರದ ರೂಪು ಹುಟ್ಟಿತ್ತು.
ಆ ಆಕಾರದ ರೂಪಿನಲ್ಲಿ ಅನುವಿನ ಮೂರ್ತಿಯ ಭಕ್ತಿ ಹುಟ್ಟಿತ್ತು.
ಆ ಭಕ್ತಿಯ ಸುಖ ವಿಸುಖವಾಗಿ ತೋರಿತ್ತು.
ವಿಸುಖ ವಿತೃಪ್ತಿಯ ಕಂಡು ತಲೆದೋರಿತ್ತು.
ಮೂರ್ತಿಯಮೂರ್ತಿಯ ಮುಖವರಳಿ ಸುಖದಲ್ಲಿ
ನಿರ್ವಯಲಾಯಿತ್ತಯ್ಯ ಸಂಗಯ್ಯ./9
ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ.
ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ.
ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ.
ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ.
ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ ?/10
ಅಡಲಿಲ್ಲದ ಊಟವನುಣಹೋದಡೆ,
ಆ ಊಟವೆನಗೆ ವಿಷವಾಯಿತ್ತಯ್ಯ ಸಂಗಯ್ಯ./11
ಅಡವಿಯ ಹುಯ್ಯಲು ಎನ್ನ ಮೇಲುವರಿಯಿತ್ತು.
ಎನ್ನ ಮೇಲುವರಿವ ಹುಯ್ಯಲಬೆಳಸಿ ನಾನು
ನಿಜಪ್ರಸಂಗಿಯಾದೆನಯ್ಯ.
ನಿತ್ಯವ ಹಡದು ನಿಃಶೂನ್ಯದ ಮಂಟಪದಲ್ಲಿ
ನಿರಾಲಂಬಿಯಾನಾದೆನಯ್ಯ ಸಂಗಯ್ಯ./12
ಅಡವಿಯಲ್ಲಿ ಕಣ್ಣುಗೆಟ್ಟ ಪಶುವಿನಂತೆ ನಾನು ಪ್ರಳಾಪಿಸುತ್ತಿದ್ದೆನಯ್ಯಾ.
ಕಡುದುಃಖದಿಂದ ಮರುಗಲು, ಶರಣ ಚೆನ್ನಣ್ಣನರಿದು
ಶಿವಶಿವಾ ಎಂಬ ಮಂತ್ರವನರುಹಿ
ಅಳಲುವ ಬಳಲಿಕೆಯ ಕಳೆದನಯ್ಯಾ.
ಸಂಗಯ್ಯನಲ್ಲಿ ಚೆನ್ನಬಸವಣ್ಣಂಗೆ ನಮೋ ನಮೋ ಎನುತಿದ್ದೆನು./13
ಅಡಿಯಿಡಲಿಲ್ಲ, ನುಡಿಯನೇನೆನಲಿಲ್ಲ,ಸರಸವೆನಲಿಲ್ಲ,
ಆ ಸರಸ ವಿರೂಪಾದ ಬಳಿಕ ಪ್ರಸಾದವೆನಲಿಲ್ಲ.
ಆ ಪ್ರಸಾದ ಪರಿಣಾಮದಲ್ಲಿಯಡಗಿತ್ತಯ್ಯ ಸಂಗಯ್ಯ./14
ಅಣ್ಣೆವಾಲ ಕರೆದು, ಪುಣ್ಯದ ಕಡೆಗೋಲಿನಲ್ಲಿ ಕಡೆದು,
ಕಂಪಿಲ್ಲದ ತುಪ್ಪವನು ಅನಂತ ಹಿರಿಯರಿಗೆಡೆಮಾಡಿ
ಉಣಬಡಿಸಲೊಡನೆ, ಊಟ ನಿರಾಕುಳವಾಗಿ ನಿಂದಿತ್ತುದ
ಪ್ರಾಣವಿಲ್ಲದೆ ಪರಿಣಾಮಿಗಳಾದರು ಅನಂತಕೋಟಿ ಹಿರಿಯರು.
ಅವರುಂಡ ಪ್ರಸಾದವನುಣಹೋದಡೆ ಎನಗವದಿಯಾಯಿತಯ್ಯಾ.
ಹಿರಿಯತನದುಪಕಾರವ ನೋಡದೆ,
ಅವರ ಕಡಿದು ಆನಡಿಯಿಟ್ಟೆನಯ್ಯಾ ಸಂಗಯ್ಯನಲ್ಲಿಗೆ./15
ಅತೀತವಡಗಿ, ನಿರಾಲಂಬದ ಮನದ ಮೂರ್ತಿಯಂ ತಿಳಿದು,
ಮನೋವ್ಯಾದಿಯಂ ಪರಿಹರಿಸಿಕೊಂಡು,
ಭಾವದ ಸೂತಕವಳಿದು ಬ್ರಹ್ಮದ ನೆಮ್ಮುಗೆಯಂ ತಿಳಿದು,
ಮನ ವಿಶ್ರಾಂತಿಯನೆಯ್ದಿ, ವಿಚಾರದನುಭವವನರಿದು,
ವಿವೇಕದಿಂದಾನು ವಿಶೇಷಸುಖವ ಕಂಡೆನಯ್ಯಾ
ಸಂಗಯ್ಯಾ, ಬಸವನಿಂದಲಿ !/16
ಅಧಿಕ ತೇಜೋನ್ಮಯ ಬಸವಾ.
ಅನಾದಿತತ್ವಮೂರ್ತಿ ನೀನೆ ಅಯ್ಯಾ ಬಸವಾ.
ಎಲೆ ಅಯ್ಯಾ ಸಮರಸದಲ್ಲಿ ಹುಟ್ಟಿದ
ಪ್ರಣವಮೂರ್ತಿಯಯ್ಯಾ ಬಸವಯ್ಯನು.
ಆ ಬಸವನಡಗಿದ ಬಳಿಕ ಆನು ಬದುಕಿದೆನಯ್ಯಾ ಸಂಗಯ್ಯಾ./17
ಅನಾದಿಯ ಸ್ಥೂಲ, ಆದಿಯ ನಿಃಕಲ,
ಆದಿಯನಾದಿಯೆಂಬ ಕುಳವಳಿದು ಕುಳಸ್ಥಳವಳಿದೆನಯ್ಯ.
ಆ ಕುಳಸ್ಥಳದ ಮೂರ್ತಿಯನರಿದು ಆನು ಬದುಕಿದೆನಯ್ಯ.
ಸಂಗಯ್ಯನಲ್ಲಿ ನಾನು ಬಸವನ ಸ್ವರೂಪಿಯಾದೆನಯ್ಯ./18
ಅನುಭಾವದ ಸಾರವೆ ನಿಜಸಾರವಾಗಿ ನಿಂದನೆಮ್ಮ ಬಸವಯ್ಯನು.
ವಿವೇಕದ ಸಂಗವೆ ನಿಜಸಂಗವಾಗಿ ನಿಂದನೆಮ್ಮ ಬಸವಯ್ಯನು.
ಭಾವದ ಬಯಲಿಂಗೆ ಬಣ್ಣವಿಟ್ಟನೆಮ್ಮ ಬಸವಯ್ಯನು.
ಇತರೇತರ ಮಾರ್ಗವಳಿದು, ಗಮನನಾಸ್ತಿಯಾದನೆಮ್ಮ ಬಸವಯ್ಯನು.
ಸಂಗಯ್ಯನಲ್ಲಿ ಉಭಯಕುಳ ನಾಸ್ತಿಯಾದನೆಮ್ಮ ಬಸವಯ್ಯನು./19
ಅಪ್ರಮಾಣದ ತಾಣದಲ್ಲಿ
ಅಫ್ಸೊರವಕ್ತ್ರ ಸಂಭಾಷಣೆಯ ಮಾಡಲು
ಬಸವಯ್ಯನ ರೂಪು ಎನುತಿದ್ದೆನು.
ಸಂಗಯ್ಯನಲ್ಲಿ ಪ್ರಭೆಯಳಿಯಿತ್ತು ಬಸವಾ./20
ಅಫ್ಸೊರವಕ್ತ್ರ, ಅಜಾತವಕ್ತ್ರ, ಸಾಧ್ಯವಿಲ್ಲದ
ಸಮಯಾಚಾರವಕ್ತ್ರ ಸಂಭ್ರಮದ ವಿವೇಕವ ತಿಳಿದು,
ಸದ್ಯೋನ್ಮುಕ್ತಿಯ ಪಡೆಯಲು,
ಪ್ರಸಾದ ಇರಪರಕ್ಕೆ ಸಾಲದೆ ಹೋಯಿತ್ತು.
ಎನಗೆ ಕಾಯದ ಹಂಗಿಲ್ಲ, ಕರ್ಮದ ಹಂಗಿಲ್ಲ ಸಂಗಯ್ಯ./21
ಅಮೃತಡೊವಿಗೆಯೊಳಗೆ ಅಮೃತಡೊವಿಗೆ,
ಪ್ರಸಾದದ ಕುರುಹಿಲ್ಲ ಬಸವಗೆ.
ಆ ಪ್ರಸಾದಕ್ಕೆ ರೂಹಿಲ್ಲದ ಮೂರ್ತಿಯ ಕಂಡು
ಸಂಗಯ್ಯನಲ್ಲಿ ನಿಜಸುಖಿಯಾದ ಬಸವ./22
ಅರಸರಸಲು ನಾನು
ಅರಸುವ ವಸ್ತು ಎನ್ನ ಕಣ್ಣಿಂಗೆ ಕಾಣಲಾಯಿತ್ತು.
ಬಯಕೆಯ ಬಯಸಲು ನಾನು
ಬಯಸುವ ವಸ್ತು ಕೈಗೂಡಿತ್ತು.
ನಾನೆಂತಹ ಪುಣ್ಯವುಳ್ಳವಳೋ !
ನಾನೆಂತಹ ಮುಕ್ತಿಯುಳ್ಳವಳೋ !
ನಾನುಭಯದ ಸಂಗವ ಹರಿದು ನಿಸ್ಸಂಗಿಯಾದೆನು
ಸಂಗಯ್ಯನಲ್ಲಿ ದ್ವಂದ್ವಕರ್ಮರಹಿತಳು./23
ಅರಿಯದ ಶಬ್ದವ ಕುರುಹಿಂಗೆ ತಂದ ಬಸವಯ್ಯನು.
ಆ ಕುರುಹನೆರಡಮಾಡಿದ ಬಸವಯ್ಯನು.
ಅವೆರಡ ಒಂದರಲ್ಲಿ ವೇಧಿಸಿ ಸಂಗಯ್ಯನಲ್ಲಿ
ಸ್ವಯಲಿಂಗಿಯಾದನಯ್ಯ ಬಸವಯ್ಯನು./24
ಅರಿಯೆನರಿಯೆ ನಾನು, ಏನುವನರಿಯೆನಯ್ಯ;
ಎಲ್ಲವ ಮರದೆನಯ್ಯ,
ಎಲ್ಲಾ ಪುರಾತರ ಹಂಗ ಹರಿದು ನಾನು
ಸಂಗ ನಿಸ್ಸಂಗಿಯಾದೆನು.
ಗುಣಕ ಥನದ ಮಾತ ಹರಿದು
ಬಸವ ಬಸವಾಯೆಂಬ ಮಾತಿನ ಭ್ರಮೆಯ ಕಳೆದುಳಿದೆನಯ್ಯ./25
ಅರಿಯೆನರಿಯೆನಿಂತಹ ಮೂರ್ತಿಯ, ಅರಿಯದವನಲ್ಲ.
ನಾನು ಬೆರಸಿರಲು ಸುಖದಿಂದ ಪ್ರಣವಾಕ್ಷರವಾಯಿತ್ತಯ್ಯ.
ಆ ಪ್ರಣವಾಕ್ಷರವೆ ಪ್ರಸಾದವಾಯಿತ್ತು.
ಆ ಪ್ರಸಾದದ ನೆ?ೆಯಿಂದ ಮನ ವಿಶೇಷವಾಯಿತ್ತು.
ವಿಶೇಷವಿಚಾರದಿಂದ ವಿನಯಾರ್ತ ಪ್ರಸಾದಿಯಾನಾದೆನಯ್ಯ.
ಪ್ರಸಾದಸುಖದಿಂದ ಮುಖ ವಿಶೇಷವಾಯಿತ್ತು.
ಸಂಗಯ್ಯ, ನಿಮ್ಮ ಬಸವನಿಂದ?ನಾನು ಪರಿಣಾಮಿಯಾದೆನು./26
ಅರಿವಡೆ ನಾನು ಅರಿವುಳ್ಳ ಹೆಣ್ಣಲ್ಲ
ಮರವಡೆ ನಾನು ಮರೆಯಿಲ್ಲದ ಕಾಮಿನಿಯಲ್ಲ.
ಏನೂ ರೂಪಿಲ್ಲವೆನಗೆ,
ಏನೂ ನೆಲೆಯಿಲ್ಲವೆನಗಯ್ಯ ಸಂಗಯ್ಯ./27
ಅರಿವನರಸಿ, ಅರಿವ ಕುರುಹಿನಲ್ಲಿ ಕಂಡು,
ಆ ಕುರುಹ ಮರದು, ಮನ ಮಹಾಲಿಂಗದಲ್ಲಿ
ಒಚ್ಚತಗೊಟ್ಟು, ಉಭಯಪ್ರಸಾದವನುಂಡು,
ಉಣಲಿಲ್ಲದೆ ಉಭಯಗೆಟ್ಟೆನಯ್ಯ ಸಂಗಯ್ಯ./28
ಅರುವೆರಳುದ್ದದೇಹವ ಮಾಡಿದೆ ಕರುಣಿ ಬಸವಾ.
ಬೆರಸಿ ಬೇರಿಲ್ಲದೆ ಇದ್ದೆ ಬಸವಾ.
ನೆರೆನಂಬಿದೆ ನಿಮ್ಮುವ ಬಸವಾ.
ಬರುಕಾಯದ ಭ್ರಮೆಯ ಬಿಡಿಸಿದೆಯಲ್ಲಾ ಬಸವಾ.
ನೀನು ತೃಪ್ತನಾಗಿ ನಾನು ತೃಪ್ತಳಲ್ಲ ಬಸವಾ.
ಸಂಗನಬಸವಾ ಮೂಲಕರ್ತೃ ನಾನು ನಿನಗೆ./29
ಅರುಹನರಿಯಲು ಕುರುಹ ಮರೆಯಲೇಬೇಕು.
ಅರುಹನನುಗೊಳಿಸಲು
ಆನು ಪ್ರಸನ್ನಮೂರ್ತಿಯ ಪಡೆದೆನಯ್ಯ.
ಆನು ಉಭಯವಳಿದು ನಿರಾಭಾರಿಯಾದೆನಯ್ಯ.
ನಿರ್ಮಲ ನಿಜವ ಕಂಡು
ಮುಕ್ತಿಪದವ ಪಡದೆನಯ್ಯ ಸಂಗಯ್ಯ./30
ಅಲ್ಲಮನ ವಂಶದವಳು ನಾನು.
ಆಜಾತ ಶರಣರ ವಂಶದವಳು ನಾನು.
ಅಪ್ರತಿಮ ಶರಣರ ವಂಶದವಳು ನಾನು.
ಆಗಮಾನಂದಿಗಳ ವಂಶದವಳಾನು.
ನಾನು ಆವ ದೇಶದಲ್ಲಿಯಿದ್ದಡೇನು ?
ನಾನು ಆವಸ್ಥಾನದಲ್ಲಿಯಿದ್ದಡೇನು ?
ಸಂಗಯ್ಯನಲ್ಲಿ ಬಸವ ಸ್ವಯಲಿಂಗಿಯಾದನು./31
ಅಲ್ಲಮನ ಸಂಗ, ಅಜಗಣ್ಣನ ಸಂಗ,
ಕಕ್ಕಯ್ಯನ ಸಂಗ, ಚಿಕ್ಕಯ್ಯನ ಸಂಗ,
ಎಲ್ಲರ ಸಂಗ, ಯತಿಗಳ ಸಂಗ, ಜತಿಗಳ ಸಂಗ,
ಮಾನ್ಯರ ಸಂಗ, ಮುಖ್ಯರ ಸಂಗ.
ಸಂಗಯ್ಯಾ, ಎನ್ನ ಸಂಗ, ಎನ್ನ ಬಸವಯ್ಯನ ಸಂಗ./32
ಅಲ್ಲಲ್ಲಿಯ ಶರಣರು ಅಲ್ಲಲ್ಲಿಯೇ ನಿಲಲು,
ಅಲ್ಲಲ್ಲಿಯ ಭಕ್ತಿ ಅಲ್ಲಲ್ಲಿಯೆ ಅಡಗಿತ್ತು.
ಅಲ್ಲಲ್ಲಿಯ ಕಾಯವಲ್ಲಲ್ಲಿಯೆ ಸಂದು ನಾನು
ಅಲ್ಲಲ್ಲಿಯೆ ಅಡಗಿಯಾನು ಅನುಮಿಷ ದೃಷ್ಟಿಯುಳ್ಳವಳಾದೆನು.
ಅಲ್ಲಲ್ಲಿಯೇ ಭ್ರಮಿಸಲು ಭ್ರಮೆಯಡಗಿ
ಸಂಗಯ್ಯನಲ್ಲಿ ಮುಖವರಿತೆನಯ್ಯ ಬಸವಪ್ರಭುವೆ./33
ಅಲ್ಲಲ್ಲಿಯ ಸುಖಂ ಭೋ ಎನ್ನಲಿಲ್ಲ.
ಅಲ್ಲಲ್ಲಿಯ ಪಶುತ್ವವಿಲ್ಲಂ ಭೋ.
ಆ ಪಶು ಕಾಯವಂ ಕಳದು ಆನು ಪರಿಣಾಮವಡಗಿದವಳಯ್ಯಾ.
ಪರಿಣಾಮದ ವಿವರದಿಂದ ಪರವಸ್ತುವಿನ ನೆ?ೆಯ ತಿಳಿದು,
ಪರಮಪ್ರಸಾದಿಯಾದೆನು.
ಪ್ರಾಣಯೋಗ ಪ್ರಸಾದಮೂರ್ತಿಯುಳ್ಳವಳಾದ ಕಾರಣ,
ಆನು ಬಸವಾ ಬಸವಾ ಬಸವಾ ಎನುತಿರ್ದೆನಯ್ಯಾ ಸಂಗಯ್ಯಾ./34
ಆಗಿಂಗೆ ಮುಯ್ಯಾನದಿರು, ಚೇಗಿಂಗೆ ಬೆಂಬೀಳದಿರು,
ಆಹಾ ಮನವೆ, ಸಂತೈಸಿಕೊ ನಿನ್ನ ನೀನೆ.
ಆಗೆಂದಡೆ ನಿನ್ನ ವಶವಲ್ಲ, ಹೋಗೆಂದಡೆ ನಿನ್ನಿಚ್ಫೆಯಲ್ಲ,
ಭೋಗಾದಿಭೋಗಂಗಳೆಲ್ಲವು ಸಂಗಯ್ಯನದಿನವಾಗಿ./35
ಆಟವಳಿದು ನಿರಾಕುಳವಾಯಿತ್ತು;
ನಿರಾಕುಳ ಸಂಬಂಧದಿಂದ ನಿಜವನರಿದು ಬದುಕಿದೆನಯ್ಯ.
ಮುಕ್ತಿಯನರಿದು
ಆನು ಬದುಕಿದೆನಯ್ಯ ಸಂಗಯ್ಯ./36
ಆಡದ ನುಡಿಯ ನುಡಿದೆನನ್ನ ಮನ ತುಂಬಿ.
ಮದದ ಹಂಗು ಹರಿದು, ಮಾತನಳಿದು,
ಉಳಿದ ಪ್ರಸಂಗ ಪ್ರಸನ್ನವನರಿದು,
ಅರಿಯದ ಮುಕ್ತಿಯ ಮರದು, ಕುರುಹನಳಿದು,
ನಾನು ನಿಂದೆನಯ್ಯ ಸಂಗಯ್ಯ./37
ಆಡದ ಭಾಷೆಯ ನುಡಿವಳಲ್ಲ ನಾನು ಬಸವಾ,
ಆ ನುಡಿಯ ಭಾಷೆಯ ಕೇಳುವಳಲ್ಲ ನಾನು ಬಸವಾ,
ರೂಪಳಿದ ನಿರೂಪಿಯಾನು ಬಸವಾ,
ಅಂಗವಳಿದ ನಿರಂಗಿಯಾನು ಬಸವಾ,
ದ್ವಯವಳಿದ ಪ್ರಸಾದಿಯಾನು ಬಸವಾ,
ಪರಿಣಾಮವರತ ಹೆಣ್ಣೆಂದು ಎಮ್ಮವರೆನ್ನ ಹೆಸರಿಡಲು,
ನಾನು ಬಸವನ ಪಾದದಲ್ಲಿ ತಲ್ಲೀಯವಾದೆನಯ್ಯಾ ಸಂಗಯ್ಯಾ./38
ಆಡದ ಮುನ್ನವಚ್ಚನೆ ಛಂದವಾಯಿತ್ತೆನಗಯ್ಯ.
ಅಚ್ಚನೆಯಳಿದು ನಿರೂಢವಾಯಿತ್ತು ಪ್ರಸಂಗ.
ಸಂಗ ಸ್ವಯಕೂಟವನ್ನೈದಲು,
ಅಪ್ರತಿಮ ಮೂರ್ತಿಯ ಇರವನರಿದೆ ನಾನು.
ಇಪ್ಪತ್ತೈದು ತತ್ತ್ವವ ಸರಗೊಳಿಸಿ ಸುಖಿಯಾದೆನಯ್ಯ
ಸಂಗಯ್ಯ, ಬಸವನಳಿದು ನಿರಾಭಾರಿಯಾದ ಬಳಿಕ./39
ಆಡಲಿಲ್ಲ ಹಾಡಲಿಲ್ಲ ನುಡಿಯಲಿಲ್ಲ ನಡೆಯಲಿಲ್ಲ
ಪ್ರಾಣವಿಲ್ಲ ಪ್ರಸಾದವಿಲ್ಲ ಪರಿಣಾಮವಿಲ್ಲ
ಇರದಂಗ ಸಂಗ ಸುಖವಿಲ್ಲ
ಎವೆಯಿಕ್ಕಲಿಲ್ಲ ಎವೆಗಳೆಯಲಿಲ್ಲ
ಜವೆಯರಿದು ಸವಿಗೂಟವನನುಭವ ಸುಖವ ಕಂಡೆನಯ್ಯ ಸಂಗಯ್ಯ./40
ಆಡಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ
ನುಡಿಯಲಿಲ್ಲವಯ್ಯಾ ನಾನು ಹೆಣ್ಣುರೂಪ ಧರಿಸಿ
ನಾನು ಹೆಣ್ಣಲ್ಲದ ಕಾರಣ, ನಾನು ಇರಪರ ನಾಸ್ತಿಯಾದವಳಯ್ಯಾ.
ನಾನು ಉಭಯದ ಸಂಗವ ಕಂಡು ಕಾಣದಂತಿದ್ದೆನಯ್ಯಾ
ಸಂಗಯ್ಯಾ, ಬಸವ ಬಯಲ ಕಂಡ ಕಾರಣ./41
ಆದಿ ಅನಾದಿ ತತ್ವವ ಭೇದಿಸಿಕೊಟ್ಟ ಗುರುವೆ,
ಅಪ್ರಮಾಣದ ಬೆಳಗ ಭೇದಿಸಿಕೊಟ್ಟ ಗುರುವೆ,
ಅಕಾರ ಉಕಾರ ಮಕಾರ ಕಳೆಯನರುಹಿಸಿಕೊಟ್ಟ ಗುರುವೆ,
ಇಷ್ಟ ಪ್ರಾಣ ಭಾವವಿದೆಂದು ತೋರಿದ ಗುರುವೆ,
ನಿಜದರಿವನರುಹಿಸಿಕೊಟ್ಟ ಗುರುವೆ,
ನಿರ್ಮಳಪ್ರಭೆಯ ತೋರಿದ ಗುರುವೆ,
ನಿಜವನನುಭವಕ್ಕೆ ತಂದ ಗುರುವೆ
ನಿಮ್ಮ ಘನವ ಕಾಬ ಕಣ್ಣು ಕ್ರಮಗೆಟ್ಟಿತ್ತು ಸಂಗಯ್ಯಾ,
ಬಸವನ ಪ್ರಭೆ ಎಲ್ಲಿ ಅಡಗಿತ್ತೊ/42
ಆದಿ ನಾದದ ಬಿಂದುವನರಿದು ಭಕ್ತಿಸಂಭಾಷಣೆಯ ಮಾಡಿದ ಬಸವಾ,
ಪ್ರಣವದಲ್ಲಿ ನಿಜವ ಕಂಡು ತೋರಿದ ಬಸವಾ.
ಆ ಪ್ರಣವದ ಘನವ ಕಂಡ ಬಸವಾ.
ಇತರ ತೃಪ್ತಿಯನನುಭವಿಸಬಲ್ಲ ಬಸವಾ
ನೀನೆನ್ನಲ್ಲಿ ಅಡಗಿ, ನಾ ನಿನ್ನಲ್ಲಿ ಅಡಗಿ,
ನಾ ನಿನ್ನ ಮನದ ಅರಿವನರಿದು ಉಭಯವಿಲ್ಲವೆಂದೆನೆಂದೆ ಬಸವಾ.
ಸುಖದ ಸಮಯಾಚಾರವ ಕಂಡು ನಿಜದಲ್ಲಿ ನಿಂದವಳಾನು ನಾನಯ್ಯ ಬಸವಾ.
ಸಂಗಯ್ಯನಲ್ಲಿ ನಿಜವಿಡಿದ ಹೆಣ್ಣು ನಾನೇ ಅಹುದೆಂದು
ನುಡಿದೆನಯ್ಯಾ ಅಪ್ಪಣ್ಣಾ./43
ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು,
ಕಾಮನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು,
ಯುಗಜುಗವಿಲ್ಲದಂದು, ಪಿಂಡಾಂಡ ಬ್ರಹ್ಮಾಂಡವಿಲ್ಲದಂದು,
ಏನೂ ಏನೂ ಇಲ್ಲದಂದು, ಎಲ್ಲಾ ಮೂರ್ತಿಗಳು ನೆಲೆಗೊಳ್ಳದಂದು,
ಅಂದು ಏನೆಂದು ಅರಿಯದಿರ್ಪ ನಮ್ಮ ಬಸವಯ್ಯನು.
ಒಂದು ಗುಣವನೊಂದು ಅಕ್ಷರಕ್ಕೆ ತಂದಾತ ನಮ್ಮ ಬಸವಯ್ಯನು.
ಆ ಅಕ್ಷರವ ರೂಪಮಾಡಿ,
ತ್ರಯಾಕ್ಷರದಲ್ಲಿ ಕಳೆಯ ಸಂಬಂಧಿಸಿದಾತ ನಮ್ಮ ಬಸವಯ್ಯನು.
ಆ ಕಳೆಯ ಮೂರು ತೆರನ ಮಾಡಿ,
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಎಂಬ ಪಂಚತತ್ವವೆ ಪಂಚವದನವಾಗಿ,
ಆ ಪಂಚವದನವೇ ಪಂಚೀಕೃತವನೆಯ್ದಿ,
ಜಗದಾದಿ ಸೃಷ್ಟಿಯನನುಮಾಡುವುದಕ್ಕೆ ಕರ್ತನಾದ ನಮ್ಮ ಬಸವಯ್ಯನು.
ಆ ಸೃಷ್ಟಿಯ ಮುಖವ ಕಂಡು ಸೃಜಿಸಲು ಪುಟ್ಟಿದರು ಪಂಚಶಕ್ತಿಯರು.
ಆ ಪಂಚಶಕ್ತಿಯರಿಗೆ ಪಂಚಮೂರ್ತಿಯರ
ಕೈಗೊಳಿಸಿದಾತ ನಮ್ಮ ಬಸವಯ್ಯನು.
ಆ ಪಂಚಮೂರ್ತಿಗಳಿಂದುತ್ಪತ್ಯವಾದ ಲೋಕವ ನೋಡಲೆಂದು,
ಕೈಲಾಸವನೆ ಕಲ್ಯಾಣವ ಮಾಡಿದಾತ ನಮ್ಮ ಬಸವಯ್ಯನು.
ಆ ಕೈಲಾಸವೇ ಕಲ್ಯಾಣವಾಗಲಾ ಕಲ್ಯಾಣಕ್ಕೆ-
ಪ್ರಮ ಥಗಣಂಗಳ, ರುದ್ರಗಣಂಗಳ, ಅಮರಗಣಂಗಳ,
ಪುರಾತನಗಣಂಗಳ, ಪುಣ್ಯಗಣಂಗಳ, ಮಹಾಗಣಂಗಳ,
ಮುಖ್ಯಗಣಂಗಳ, ಮಹಾಲಿಂಗೈಕ್ಯಸಂಪನ್ನರಂ,
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆಂಬ
ಆಚಾರಾದಿ ಮಹಾಲಿಂಗಸಂಪನ್ನರಂ,
ಷಟ್ಸ್ಥಲಪ್ರಸಾದಪ್ರಸನ್ನರೂಪರಂ,
ಆದಿಮುಕ್ತರಂ, ಅನಾದಿಮುಕ್ತರಂ, ಅಜಾತರಂ, ಅಪ್ರಮಾಣರಂ,
ಅನಿಮಿಷಲಿಂಗನಿರೀಕ್ಷಣರಂ, ತ್ರಿವಿಧವಿದೂರರಂ,
ತ್ರಿವಿಧಲಿಂಗಾಂಗಮೂರ್ತಿಗಳಂ, ಅರ್ಪಿತಸಂಯೋಗರಂ,
ಆಗಮವಿದರಂ, ಅನಾದಿಪರಶಿವಮೂರ್ತಿಗಳಂ,
ಏಕಲಿಂಗನಿಷ್ಠಾಪರರುಮಪ್ಪ ಮಹಾಪ್ರಮ ಥಗಣಂಗಳಂ
ತಂದು ನೆರಹಿದಾತ ನಮ್ಮ ಬಸವಯ್ಯನು.
ಮರ್ತ್ಯಲೋಕವನೆ ಮಹಾಪ್ರಮಥರ ಬಿಡಾರವ
ಮಾಡಿದಾತ ನಮ್ಮ ಬಸವಯ್ಯನು.
ಆದಿಯಸೃಷ್ಟಿಯನನಾದಿಯಸೃಷ್ಟಿಗೆ ತಂದು,
ಅನಾದಿಸೃಷ್ಟಿಯನಾದಿಸೃಷ್ಟಿಗೆ ತಂದು,
ಅಜಾತನಬೀಡನಂಗದಲ್ಲಿ ನೆರಹಿದಾತ ನಮ್ಮ ಬಸವಯ್ಯನು.
ಭಾವವಿಲ್ಲದ ಭ್ರಮೆಯ ಭ್ರಮೆಗೊಳಿಸಿ
ಭಾವಕ್ಕೆ ತಂದಾತ ನಮ್ಮ ಬಸವಯ್ಯನು.
ಬಯಲನೊಂದು ರೂಪಮಾಡಿ ಬಣ್ಣಕ್ಕೆ ತಂದು,
ಆ ಬಣ್ಣವ ನಿಜದಲ್ಲಿ ನಿಲಿಸಿದಾತ ನಮ್ಮ ಬಸವಯ್ಯನು.
ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
ಇಚ್ಫೆಯನರಿದು ಅರ್ಪಿತವ ಮಾಡಿದಾತ ನಮ್ಮ ಬಸವಯ್ಯನು.
ಅಂಗಸಂಗಿಗಳನಂತರಿಗೆ
ಅಂಗನೆಯರ ಅನುಭವವ ನಡಸಿದಾತ ನಮ್ಮ ಬಸವಯ್ಯನು.
ಮೂವತ್ತಾರುಸಾವಿರ ಮಾಹೇಶ್ವರರಿಗೆ ಮುಖಮೂರ್ತಿಯಾಗಿ,
ಅರ್ಪಿತಪ್ರಸಾದವನನುಭವಿಸಿದಾತ ನಮ್ಮ ಬಸವಯ್ಯನು.
ಹನ್ನೆರಡುಸಾವಿರ ರಾಣಿಯರ
ಅಂಗವನರ್ಪಿತಪ್ರಸಾದಿಗಳ ಮಾಡಿದಾತ ನಮ್ಮ ಬಸವಯ್ಯನು.
ಎಂಬತ್ತೆಂಟುಪವಾಡಮಂ ಗೆದ್ದು
ಮುನ್ನೂರರುವತ್ತು ಸತ್ತ ಪ್ರಾಣವನೆತ್ತಿ ಮೆರೆದು
ಪರಸಮಯವನಳಿದಾತ ನಮ್ಮ ಬಸವಯ್ಯನು.
ಇಪ್ಪತ್ತೈದುಸಾವಿರ ಚಾರ್ವಾಕರಂ ನೆಗ್ಗಿಲೊತ್ತಿ,
ಅಪ್ರತಿಮ ಶಿವಗಣಂಗಳ ಮಹಾತ್ಮೆಯಂ
ಮೆರೆದಾತ ನಮ್ಮ ಬಸವಯ್ಯನು.
ಪ್ರಣವದ ಬೀಜವ ಬಿತ್ತಿ, ಪಂಚಾಕ್ಷರಿಯಬೆಳೆಯ ಬೆಳೆದು,
ಪರಮಪ್ರಸಾದವನೊಂದು ರೂಪಮಾಡಿ ಮೆರೆದು,
ಭಕ್ತಿಫಲವನುಂಡಾತ ನಮ್ಮ ಬಸವಯ್ಯನು.
ಚೆನ್ನಬಸವನೆಂಬ ಪ್ರಸಾದಿಯ ಪಡೆದು,
ಅನುಭವಮಂಟಪವನನುಮಾಡಿ,
ಅನುಭವಮೂರ್ತಿಯಾದ ನಮ್ಮ ಬಸವಯ್ಯನು.
ಅರಿವ ಸಂಪಾದಿಸಿ ಆಚಾರವನಂಗಂಗೊಳಿಸಿ,
ಏಳುನೂರೆಪ್ಪತ್ತು ಅಮರಗಣಂಗಳ
ಅನುಭವಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು.
ಆ ಅನುಭವದಲ್ಲಿ ಐಕ್ಯಪ್ರಸಾದವನಂಗಂಗೊಂಡು,
ಮಂತ್ರ ನಿರ್ಮಂತ್ರವಾದಾತ ನಮ್ಮ ಬಸವಯ್ಯನು.
ಭಕ್ತಿಸ್ಥಲವನಳಿದು ಭಾವವಡಗಿ ಬಟ್ಟಬಯಲ ಕೂಡಿ,
ಸಂಗಯ್ಯನಲ್ಲಿ ಸ್ವಯಲಿಂಗಿಯಾದ ನಮ್ಮ ಬಸವಯ್ಯನು./44
ಆನಳಿದೆನು ನೀನಳಿದೆನೆಂಬ ಶಬ್ದವಡಗಿ ನಿಃಶಬ್ದವಾಗಿ,
ನಿಃಶೂನ್ಯಮಂಟಪದಲ್ಲಿ ನಿಂದು
ನಾನು ಉರಿಯುಂಡ ಕರ್ಪೂರದಂತಾದೆನಯ್ಯ.
ಕರ್ಪೂರ ಉರಿಯುಂಡು ಕರವಳಿದು ಸುಖವ ಉಡುಗಿದೆನಯ್ಯ.
ಸುಖವಡಗಿ ದುಃಖ ನಿದ್ರ್ವಂದ್ವವಾಗಿ
ನಿರೂಪು ಸ್ವರೂಪುವಾಯಿತ್ತಯ್ಯ ಸಂಗಯ್ಯ./45
ಆನು ನಿಷ್ಠೆಯುಳ್ಳವಳೆ ಅಲ್ಲವಯ್ಯ.
ಆನು ನಿಷ್ಠೆಯಿಲ್ಲದ ಕರ್ಮಿಯಾದ ಕಾರಣವೆನಗೆ
ಸುಖದ ತೃಪ್ತಿ ನೆಲೆಗೊಳ್ಳಲಿಲ್ಲವಯ್ಯ.
ಎನಗೆ ಪತಿನಾಮದರುಹು ಸಾಧ್ಯವಲ್ಲದ ಕಾರಣ
ಸಂಗಯ್ಯನಲ್ಲಿ ಬಸವನ ನೆನೆದು ಬದುಕಿದೆನಯ್ಯ./46
ಆನು ಭಕ್ತೆಯಲ್ಲ, ಆನು ವಿರಕ್ತೆಯಲ್ಲ,
ಆನು ನಿಜ ಸುಖಿಯಲ್ಲ.
ಆನು ಬಸವನ ಮೂರ್ತಿಯ ಕಂಡು ಬದುಕಿದೆನಯ್ಯ ಸಂಗಯ್ಯ/47
ಆನೆತ್ತಲೀ ಸಂಸಾರವೆತ್ತ ! ಆನೆತ್ತಲೀ ಕಾಯವೆತ್ತ !
ಆನೆತ್ತಲೀ ನಿಜಮಹತ್ವವೆತ್ತ !
ಸಂಗಯ್ಯನೆತ್ತ, ಬಸವನೆತ್ತ, ಆನೆತ್ತ !/48
ಆರಸಂಗವೂ ಸ್ವಯವಲ್ಲವೆನಗೆ,
ಆರ ಹಂಗೂ ಸ್ವಯವಲ್ಲವೆನಗೆ,
ಆರ ಸಂಗವ ಮಾಡಿ ನಾನು ಎಷ್ಟೆಷ್ಟು ಕಾಲ ಬಳಲ್ವೆನಯ್ಯ ?
ಎನ್ನ ಸಂಗವಿಹಪರದ ಹಂಗಿನ ಸಂಗವಲ್ಲಯ್ಯ.
ಎನ್ನ ಸಂಗ ಸ್ವಯಲಿಂಗ ಸಂಬಂಧವಯ್ಯ ಸಂಗಯ್ಯ./49
ಆರಾಧ್ಯರಿಲ್ಲದಂದು ಹುಟ್ಟಿದ ಗಂಡನೆನ್ನ ಗಂಡ;
ಹಿರಿಯರಿಲ್ಲದಂದು ಹುಟ್ಟಿದ ಗಂಡನಾತ ನಮ್ಮಯ್ಯ.
ಮಾನುಷರಿಲ್ಲದುದನರಿದು
ಆ ಮಾನುಷರ ಇರವೆ ಪ್ರಸಾದವಾಯಿತ್ತು.
ಆ ಪ್ರಸಾದವ ತಿಳಿಯದ ಮುನ್ನ,
ಹೆಣ್ಣುತನದ ರೂಪಳಿಯಿತ್ತೆನಗೆ.
ಆ ಹೆಣ್ಣುತನದ ರೂಪನಳಿದು
ನಿರೂಪಿಯಾದೆನಯ್ಯ ಸಂಗಯ್ಯ/50
ಆರೆಸಳೆಂಬರು ಮೂರೆಸಳೆಂಬರು;
ಆರು ಮೂರು ಎಸಳ ಕಲೆಯ ನುಡಿವರು.
ನುಡಿವ ಪ್ರಸಾದವ ಪ್ರಸಾದವೆಂದು ನುಡಿವರು.
ಆ ನುಡಿಯ ನಾ ನುಡಿಯಲರಿಯದೆ
ಬಯಲ ಪದವ ಕಂಡು ಬದುಕಿದೆನಯ್ಯ ಸಂಗಯ್ಯ./51
ಆವಾವ ಕಾಲದಲ್ಲಿಯೂ ಎನಗೆ ಎಮ್ಮವರೆ ಗತಿಮತಿಗಳಯ್ಯ.
ಆವಾವ ಕಾಲದಲ್ಲಿಯೂ ಎನಗೆ ಪ್ರಾಣಲಿಂಗಿಗಳ ಸಂಗವಲ್ಲದೆ
ಮತ್ತೊಂದನೊಲ್ಲೊನಯ್ಯ.
ಇರಪರದ ಹಂಗಿಲ್ಲದವಳಿಗೆ
ಕಾಯಕ ಕಪಟನಾಟಕವುಂಟೆ ಸಂಗಯ್ಯ ?/52
ಇಪ್ಪೆಯ ಹೂವನನುಗೊಳಿಸಲು ಇಪ್ಪೆ ಹಿಪ್ಪೆಯಾಯಿತ್ತು.
ಸರ್ಪನ ಶಿರ ಕಂಠದಲ್ಲಿ ಮೂಗುತಿಯ ಸರಗೊಳಿಸಿದೆನಯ್ಯಾ.
ನಾವಲ್ಲಿದ್ದಡೇನು, ನಾವಿಲ್ಲಿದ್ದಡೇನು ?
ನಮ್ಮ ನಮ್ಮ ಸಂಸರ್ಗದಲ್ಲಿ ನಿರುಪಮಾಕಾರಮೂರ್ತಿಗಳಾಗಿ
ನಿರವಯವನೈದಿ ನಿಜಸುಖಿಗಳಾದೆವು.
ಬಸವನಲ್ಲಿ ಎಮಗೆ ತೆರಪಿಲ್ಲವಯ್ಯಾ, ಅಪ್ಪಣ್ಣಾ,
ಭಾವಶೂನ್ಯಳು ನಾನು ಸಂಗಯ್ಯಾ./53
ಇಬ್ಬರು ನಾವು ಒಂದೆಡೆಯನುಂಡೆವು.
ಉಂಬ ಊಟದಲ್ಲಿ ತೃಪ್ತಿಯ ತಳದು
ತನು ಸೋಜಿಗವಾಯಿತ್ತಯ್ಯ.
ಮನ ಮಗ್ನವನೈದಿ ಮಹಾಲಿಂಗದತ್ತ
ಶುದ್ಭಿ ನಿಃಶುದ್ಧಿಯಾಯಿತ್ತಯ್ಯ.
ಅಡಗಿದೆನಡಗಿದೆನತ್ತತ್ತಲೆ ನಾನು.
ಉಡುಗಿದೆನೀ ಕಾಯವ.
ಉಭಯದ ಸಂಗವ ಹರಿದು
ಉಲುಹಡಗಿದ ವೃಕ್ಷವಾದೆನಯ್ಯ ಸಂಗಯ್ಯ./54
ಇರವರಿದು ಪರವ ಮರದೆ.
ಆ ಪರವನರಿದು ಪರಬ್ರಹ್ಮವ ಕಂಡೆನಯ್ಯ.
ಆ ಪರಬ್ರಹ್ಮವ ಸುಯಿದಾನವ ಮಾಡಿ
ಸುಖವ ಪಡೆದೆನಯ್ಯ ಸಂಗಯ್ಯ./55
ಇರವಿಲ್ಲದ ವಸ್ತುವ ಕಂಡು ಪರವಶದ ಮೂರ್ತಿಯನರಿದೆನಯ್ಯ.
ಪರಬ್ರಹ್ಮದ ಕಲ್ಯಾಣದಲ್ಲಿ ಪರಮಶಿವತತ್ತ್ವವ ಕಂಡೆನಯ್ಯ.
ಪರಕಾಯ ಪ್ರವೇಶಿಯಾಗಿ ಪರತರಸುಖವನರಿದು
ಬದುಕಿದೆನಯ್ಯ ಸಂಗಯ್ಯ./56
ಇಷ್ಟದ ಹಂಗಿಲ್ಲವೆನಗೆ ಶಿವಬಸವ ಶಿವಬಸವ.
ಪ್ರಾಣನಾಸ್ತಿ ಪ್ರಸಾದನಾಸ್ತಿ, ಶಿವಬಸವ ಶಿವಬಸವ.
ಪರಶಿವತತ್ವನಾಸ್ತಿ ಸಂಗಯ್ಯಾ./57
ಇಷ್ಟವನು ಅಷ್ಟಮದಲ್ಲಿ ಕಂಡು,
ಕಾಮದ ಕಣ್ಣ ಕಿತ್ತು, ಕರ್ಮದ ಕಾಲ ಮುರಿದು,
ಬಯಕೆಯ ಮುದ್ರಿಸಿ, ಸಂಗಯ್ಯನಲ್ಲಿ
ಇಷ್ಟವನು ಅಷ್ಟಮದಲ್ಲಿಯೇ ನಿಲಿಸಿದಾತ ಬಸವಯ್ಯನು./58
ಊಟಕ್ಕಿಕ್ಕದವರ ಕಂಡು ಎನಗೆ ತೃಪ್ತಿಯಾಯಿತ್ತು.
ಕೂಟವಿಲ್ಲದ ಪುರುಷನ ಕಂಡು ಕಾಮದ ಆತುರಹಿಂಗಿತ್ತೆನಗೆ.
ಏನೆಂದೆನ್ನದ ಮುನ್ನ ತಾನೆಯಾಯಿತ್ತುದ
ಸಂಗಯ್ಯನಲ್ಲಿ ಶಬ್ದಮುಗ್ಧವಾಯಿತ್ತು./59
ಎಂಟೆಸಳ ಹೂವೆಂಬರು; ಆ ಹೂವಿಂಗೆ ರೂಪಿಲ್ಲ,
ಆ ರೂಪಿಂಗೆ ಕಾಯವಿಲ್ಲ.
ಆ ಕಾಯವಿಲ್ಲದ ಹೂವನುಂಬಶಕ್ತಿ ಬಯಲಾದನಯ್ಯ ಸಂಗಯ್ಯ/60
ಎಡದೆರಹಿಲ್ಲದ ಪ್ರತಿರೂಪ ಕಂಡೆ.
ಎಡದೆರಹಿಲ್ಲದ ಪ್ರತಿರೂಪನೆ ಅರಿದು,
ಪ್ರಸನ್ನ ಪ್ರಸನ್ನ ಪ್ರಸಾದವ ಕಂಡು
ಪ್ರಸಾದಿಯಾನಾದೆನಯ್ಯ.
ಪ್ರಸಾದ ಸಂಬಂಧದಲ್ಲಿ
ಪ್ರಸಾದಮೂರ್ತಿಯಾನಾದೆನಯ್ಯ ಸಂಗಯ್ಯ./61
ಎಡಬಲನ ಕಾಯವ ತಿಳಿದು, ಎಡಬಲನ ಅರಿವನರಿದು
ಏಕತತ್ತ್ವ ಸಂಬಂಧವಯ್ಯ.
ಸಂಗಯ್ಯ, ಸರ್ವಜೀವ ದಯಾಪರವನರಿದು ನಾನು ಬದುಕಿದೆನಯ್ಯ/62
ಎಡೆಯ ಮಾಡಿದ ಎಡೆ ಏಕವಾರಕ್ಕೆ ಮುನ್ನವೇ ತೀದಿರಿತ್ತು.
ತೀರಿದ ಪ್ರಸಾದವನುಣಹೋದರೆ ಉಂಡವರೆಲ್ಲಾ ನನ್ನ ಗಂಡರಾದರು.
ಅವರ ಕಂಡು ನಾನು ಮರುಳುಗೊಂಡರೆ
ಮಹದನುಭವದಲ್ಲಿ ಕೂಟವಾಯಿತ್ತಯ್ಯ ಸಂಗಯ್ಯ./63
ಎಡೆಯಲ್ಲಿ ಹುಟ್ಟಿದ ಭಕ್ತಿ ಎಡೆಯಲ್ಲಿಯೆ ಅಡಗಿತ್ತು.
ಕಡೆಮುಟ್ಟಿ ನಡೆಯಲು ಆ ಕಡೆಯಳ ಸುಖವನರಿದು
ಅರಿವನರಿದೆನಯ್ಯ.
ಆವಾವ ಕಾಲವೂ ಆವಾವ ವಸ್ತುವೆನಗೆ ಹೃದಯವೆ ಕಂಡು
ಮೂರ್ತಿ ಅನಿಮಿಷವಾಯಿತ್ತಯ್ಯ ಸಂಗಯ್ಯ./64
ಎಡೆಯಿಲ್ಲ ಕಡೆಯಿಲ್ಲ ಎನಗೆ ಎಲೆ ಅಯ್ಯ.
ಪ್ರಾಣಲಿಂಗದ ಸಂಬಂಧದ ನೆಲೆಯ ಕಂಡಿಹೆನೆಂದರೆ,
ಆ ಪ್ರಾಣಲಿಂಗ ಸಂಬಂಧ ಸಮರಸದಿರವ ನಾನೆತ್ತ ಬಲ್ಲೆನಯ್ಯ ?
ಮರುಳು ಹೆಣ್ಣು ಪ್ರಣವ ಪ್ರಕಾಶದಿರವನರಿದು
ಪರಮಸುಖಮೂರ್ತಿಯಾದೆನಯ್ಯ ಸಂಗಯ್ಯ./65
ಎಡೆಯಿಲ್ಲದ ಭಕ್ತಿಯ ಮಾಡಹೋದರೆ
ಆ ಭಕ್ತಿ ನಿಷ್ಫಲವಾಯಿತ್ತಯ್ಯ.
ಭಕ್ತಿ ನಿಷ್ಫಲವನೈದಲು
ಪ್ರಸಾದ ಸೂತಕವ ಕಾಣದೆ ಹೋದೆನಯ್ಯ.
ಎಡೆಯಿಲ್ಲದ ಕಡೆಯಿಲ್ಲದ ಮೂರ್ತಿಯನರಸಲು
ಏಕಪ್ರಸನ್ನ ವದನವಾಯಿತ್ತಯ್ಯ.
ಹಿಪ್ಪೆಯನಳಿದು ಸಪ್ಪೆಯನುಂಡು ನಾನು
ಪ್ರಸಾದಿಯಾದೆನಯ್ಯ ಸಂಗಯ್ಯ./66
ಎಡೆಯಿಲ್ಲದೂಟವನುಂಡು ತಡವಳಿದು
ತನು ಮನ ಧನಂಗಳನಳಿದು
ನಾನು ನಿಃಪ್ರಪಂಚಿಯಾದೆನಯ್ಯ.
ನಿರಂಗ ಸಂಗವಾಗಿ
ನಿಯಮನಳಿದುಳಿದೆನಯ್ಯ ಸಂಗಯ್ಯ./67
ಎತ್ತಳ ಸುಖ ಬಂದು ಎತ್ತಲಡಗಿತ್ತು
ಎತ್ತಳ ಪ್ರಸಾದ ಬಂದು ಎತ್ತಲಡಗಿತ್ತು
ಎತ್ತಳ ಮನವನತ್ತತ್ತಲಡಗಿಸಿದೆ ಬಸವಾ.
ನೀನತ್ತಲಡಗಿದರೇನು,
ನಾನತ್ತಲಡಗಿದಳೆಂಬ ಸಂಶಯವೆನಗಿಲ್ಲವಯ್ಯ.
ಸಂಶಯ ಸಂಬಂಧವ ತಿಳಿದು
ಸದಾಚಾರವನರಿದು ಬದುಕಿದೆನು.
ನಿಮ್ಮರಿವಿನಲ್ಲಿ ಸಂಗಯ್ಯ./68
ಎತ್ತಿದ ಪ್ರಸಾದ ನಿತ್ಯದ ಮುಖವ ಕಂಡು
ಅತ್ಯಂತ ಶುದ್ಧಿಯನನುಭವಿಸಿ
ಆನು ಮುಕ್ತಿಯ ಮುಖವ ಕಂಡು ನಿರಾಲಂಬಿಯಾದೆನು.
ನಿರಾಲಂಬದ ಹಂಗಹರಿದು
ನಿಗೂಢ ರೂಢವಳಿದು
ನಿಯಮಾಕಾರಳಾದೆನಯ್ಯ ಸಂಗಯ್ಯ./69
ಎದೆಬಿರಿವನ್ನಕ್ಕರ, ಮನದಣಿವನ್ನಕ್ಕರ,
ನಾಲಗೆ ನಲಿನಲಿದೋಲಾಡುವನ್ನಕ್ಕರ,
ನಿಮ್ಮ ನಾಮಾಮೃತವ ತಂದೆರೆಸು ಕಂಡಯ್ಯಾ.
ಶಿವನಾಮಾಮೃತವ ತಂದೆರೆಸು ಕಂಡಯ್ಯಾ.
ಶಿವನಾಮಾಮೃತವ ತಂದೆರೆಸು ಕಂಡೆಲೆ ಹರನೆ.
ಬಿರಿಮುಗುಳಂದದ ಶರೀರ
ನಿಮ್ಮ ಚರಣದಮೇಲೆ ಬಿದ್ದುರುಳುಗೆ ಸಂಗಯ್ಯ./70
ಎನಗಿನ್ನಾರು ಗತಿಯಿಲ್ಲವಯ್ಯ
ಎನಗಿನ್ನಾರು ಪ್ರತಿಯಿಲ್ಲವಯ್ಯ.
ಎನ್ನಯ್ಯನ ಪ್ರಾಣವೇ ನಾನಾದ ಕಾರಣ
ಎನಗಿನ್ನಾರು ಸರಿಯ ಕಾಣೆನಯ್ಯ.
ಎನಗೆ ಮುಖವನರಿಯದಿರಲು
ಮುಖಸ್ವರೂಪಿಯಾದೆನಯ್ಯ ಸಂಗಯ್ಯ./71
ಎನಗಿನ್ನೇನು ಎಮ್ಮಯ್ಯನೈಕ್ಯವನೈದಿದ ಬಳಿಕ,
ಎನಗೆ ಕಾಯವಿಲ್ಲದ ಎನಗೆ ಪ್ರಾಣವಿಲ್ಲ.
ಎನಗೆ ಹೃದಯದ ಹಂಗು ಹರಿದು
ಪರಿಣಾಮಪ್ರಸಾದಿಯಾದೆನಯ್ಯಾ ಸಂಗಯ್ಯಾ./72
ಎನಗೆ ಇಲ್ಲಿ ಏನು ಬಸವ ಬಸವಾ ?
ಎನಗೆ ಅದರ ಕುರುಹೇನು ಬಸವಾ ?
ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು,
ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು,
ನಾನು ಬಸವನ ಶ್ರೀಪಾದದಲ್ಲಿ
ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ ?/73
ಎನಗೆ ಈ ಪ್ರಾಣದ ಕುರುಹಿಲ್ಲವಯ್ಯ.
ಎನಗೆ ಪ್ರಾಣಪ್ರಸಾದದ ಕುರುಹಿಲ್ಲವಯ್ಯ.
ಎನಗೆ ಅಂಗ ನಿರಂಗದ ಕುರುಹಿಲ್ಲವಯ್ಯ.
ಎನಗೆ ವಿಶೇಷದಾಯತವಿಲ್ಲವಯ್ಯ.
ಎನಗೆ ಪ್ರಾಣಪರಿಣಾಮದನುಕೂಲವಿಲ್ಲವಯ್ಯ ಸಂಗಯ್ಯ./74
ಎನಗೆ ಎಲ್ಲಿಯೂ ಕಾಣಿಸದು ಇರಪರದ ಸಿದ್ಧಿಯು.
ಎನಗೆ ಏನೂ ತೋರದು ಮೂರ್ತಿಯ ಹಂಗು.
ಎನಗೇನೂ ಅರುಹಿಸದು ಇಷ್ಟದ ಪ್ರಸಾದ.
ಇಹಲೋಕ ಸಂಬಂಧ ನಿರ್ಮಲಾಕಾರವಾಯಿತ್ತಯ್ಯ ಸಂಗಯ್ಯ./75
ಎನಗೆ ಲಿಂಗವು ನೀವೆ ಬಸವಯ್ಯಾ,
ಎನಗೆ ಸಂಗವು ನೀವೆ ಬಸವಯ್ಯಾ,
ಎನಗೆ ಪ್ರಾಣವು ನೀವೆ ಬಸವಯ್ಯಾ,
ಎನಗೆ ಪ್ರಸಾದವು ನೀವೆ ಬಸವಯ್ಯಾ,
ಎನಗೆ ಪ್ರಭೆಯಮೂರ್ತಿಯು ನೀವೆ ಬಸವಯ್ಯಾ.
ಎನಗೆ ಸಂಗಯ್ಯನು ನೀವೆ ಬಸವಯ್ಯಾ./76
ಎನಗೆ ಸಂಸಾರ ಬಂಧ ಕಾರಣವೇನೆಂದು ಕೇಳಲು
ಎನಗೆ ಸಂಸಾರವಿಲ್ಲವಂದೆ ಹೋಯಿತ್ತು ಇಲ್ಲವೆಂದೇ ಹೇಳಿತ್ತು.
ಆವ ರೂಪನೂ ನಂಬುವಳಲ್ಲ ನಾನು;
ಆವ ಮಾತನೂ ನಂಬುವಳಲ್ಲ ನಾನು;
ಆವಲ್ಲಿ ಹೊಂದುವಳಲ್ಲ ನಾನು.
ಆವ ಕಾಲದಲ್ಲಿ ಐಕ್ಯವ ಕಂಡು ಬದುಕಿದೆನಲ್ಲಯ್ಯ ಸಂಗಯ್ಯ./77
ಎನಗೆ ಹಾಲೂಟವನಿಕ್ಕುವ ತಾಯೆ,
ಎನಗೆ ಪರಿಣಾಮವ ತೋರುವ ತಾಯೆ,
ಪರಮಸುಖದೊಳಗಿಪ್ಪ ತಾಯೆ, ಪರವಸ್ತುವ ನಂಬಿದ ತಾಯೆ,
ಬಸವನ ಗುರುತಾಯೆ,
ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಾ, ಅಕ್ಕನಾಗಮ್ಮ ತಾಯೆ !/78
ಎನಗೆ ಹಿತಕಾರಿಗಳಾಗಿ ಇದ್ದವರೀ ಶರಣರು,
ಎನಗೆ ಪ್ರಭೆದೋರಿ ಇದ್ದವರೀ ಶರಣರು,
ಎನಗೆ ಸಂಗ ನಿಸ್ಸಂಗ ಕೊಟ್ಟವರೀ ಶರಣರು.
ಆ ಶರಣಪಥವ ನೋಡ ಹೋದರೆ,
ಆನು ನೋಡದ ಬಲವು ಬಲವೆ ಆಯಿತಯ್ಯ ಸಂಗಯ್ಯ ಸಂಗಯ್ಯ/79
ಎನಗೆ ಹುಟ್ಟುವ ಮುನ್ನವೆ ಇಲ್ಲಿ
ಮುನ್ನ ಮುನ್ನ ತನುವ ನೀಗಿ,
ಮೂರ್ತಿಯ ಅನುಭವವನರಿದೆ.
ಆನು ಭಾವವಡಗಿ ನಿಂದೆನಯ್ಯ ಸಂಗಯ್ಯ./80
ಎನಗೇನೂ ತೋರದಂದು ನಮ್ಮವ್ವೆಯ ಮಗನಾಗಿದ್ದ ನಮ್ಮ ಬಸವಯ್ಯನು.
ಎನಗೇನೂ ಕಾಣಿಸದಂದು ಹುಟ್ಟಿಸುವ ಕರ್ತನಾಗಿದ್ದ ನಮ್ಮ ಬಸವಯ್ಯನು.
ಸಂಗ ನಿಸ್ಸಂಗವಿಲ್ಲದಂದು ಸಮಯಾಚಾರಿಯಾಗಿದ್ದ ನಮ್ಮ ಬಸವಯ್ಯನು.
ತನುಮನಧನವಿಲ್ಲದಂದು ನಿರೂಪ ರೂಪಮಾಡಿದನಯ್ಯಾ
ಸಂಗಯ್ಯಾ, ನಿಮ್ಮ ಬಸವಯ್ಯನು./81
ಎನಗೇನೆಂಬೆನೆಂಬ ಸಂದೇಹ ಹರಿಯಿತ್ತು.
ಆ ಸಂದೇಹ ಹರಿದು
ಅಪ್ರಮಾಣದೊಳಗೆ ಐಕ್ಯವಾದೆನಯ್ಯ ನಾನು.
ಆನು ಅನುಭವಸುಖಿಯಾಗಿ
ಆ ಸುಖ ತೃಪ್ತಿಯ ಕಂಡು
ಬಯಲ ಸುಖವನುಂಡೆನಯ್ಯ ಬಸವಯ್ಯ.
ಸಂಗಯ್ಯ ನಾನು ಮುಕ್ತಂಗನೆಯಾದೆನು./82
ಎನ್ನ ಕೈಯಳ ಮಾತುವೆನ್ನಕೈಯಲಡಗಿತ್ತು.
ಎನ್ನ ವಿಧಾನದ ಜ್ಯೋತಿ ವಿವೇಕದಲ್ಲಿಯಡಗಿತ್ತು.
ವಿನೇಯದ ಸುಖವ ಕಂಡು ನಾನು ನಿರ್ಮಲಾಂಗಿಯಾದೆನು.
ಭ್ರಮೆಯಳಿದು ಭಕ್ತಿಯಳಿದು ಭಾವ ನಿರ್ಭಾವವಾಗಿ,
ತನುಸೂತಕ ಮನಸೂತಕವ ಕಳೆದು ನಾನು
ಬ್ರಹ್ಮದ ನೆಮ್ಮುಗೆಯಲ್ಲಿ ಸುಮ್ಮನಿದ್ದೆನು
ಸುಖ ದುಃಖಗಳಡಗಿ ನಿರಾಲಂಬಿಯಾದೆನಯ್ಯ
ಸಂಗಯ್ಯ ಬಸವನೆನ್ನಲ್ಲಿಯಡಗಲು./83
ಎನ್ನಗಿನ್ನೇನು ಎನಗಿನ್ನೇನು ಎನಗಿನ್ನೇನು
ಎನಲೇನು ಕಾರಣ ಬಸವಾ ?
ಎನಗಿನ್ನಾವುದು ಪರಿಣಾಮದ ನೆಲೆಯಿಲ್ಲ ಬಸವಾ.
ಎನಗೆ ನಿನ್ನ ರೂಪು ನಿರೂಪಾದ ಬಳಿಕ
ಭಕ್ತಿಸಾರಾಯದ ಪಥವನೊಲ್ಲೆನಯ್ಯಾ ಸಂಗಯ್ಯನ ಗುರುಬಸವಾ./84
ಎನ್ನಯ್ಯನೆನ್ನಲ್ಲಿಯಡಗಿದನೆಂದು ನಾ ನಂಬಿರಲು,
ಎನ್ನಯ್ಯನೆನ್ನಲ್ಲಿಯಡಗದೆ ಬಯಲನೈದಿದನು.
ಬಯಲಾಕಾರವಾದ ಪುತ್ಥಳಿಯೆಂದು ಭ್ರಮೆಗೊಳಿಸಲು
ಸುಖಾಕಾರಮೂರ್ತಿಯಲ್ಲಿ
ಸುಯಿದಾನ ರೂಪನಾದೆನಯ್ಯ ಸಂಗಯ್ಯ./85
ಎಪ್ಪತ್ತೈದು ಸಾವಿರದಲ್ಲಿ ಇಪ್ಪತ್ತೊಂದು ಪ್ರಾಣ
ಆ ಪ್ರಾಣದ ಮಧ್ಯದಲ್ಲಿ ಮನೋಹರಮೂರ್ತಿ ಇರವಿರಲು,
ಆ ಇರದ ಸುಖವ ನೋಡ ಹೋದರೆ
ನೋಡ ನೋಡಲು ಬಯಲಾಯಿತ್ತು ಸಂಗಯ್ಯ ಆ ರೂಪು./86
ಎಯ್ದದು ಎಯ್ದದು ಈ ಮನ ಬಸವನಲ್ಲಿ.
ಎಯ್ದದು ಎಯ್ದದು ಈ ಪ್ರಾಣ ಬಸವನಲ್ಲಿ.
ಎಯ್ದದು ಎಯ್ದದು ಈ ಸುಖ ಬಸವನಲ್ಲಿ.
ಎಲ್ಲವನೆಯ್ದಿದ ಬಸವನಲ್ಲಿ ನಿರ್ಲೆಪಿ ನಾನಾದೆನು.
ನಾನು ನಿರ್ಲೆಪಿಯಾಗಿ ಕುಳವ ಹರಿದೆನಯ್ಯಾ.
ಕುಳವಳಿದು ಸಂಗಯ್ಯಾ, ಬಸವ ನಾನಾದೆನು./87
ಎರಡಿಲ್ಲದ ಅಂಗಕ್ಕೆ ಒಂದೆ ಕುರುಹಿಲ್ಲದ ಸ್ಥಲವಾಯಿತ್ತು.
ಸಂದು ಸಂಶಯ ಭೇದವಳಿದು
ಸಮಾಧಾನ ನೆಲೆಗೊಂಡಿತ್ತಯ್ಯ ಸಂಗಯ್ಯ./88
ಎರಡಿಲ್ಲದ ವಸ್ತುವೆ ನೀನೆರಡಾದೆಯಲ್ಲ ಬಸವಯ್ಯ.
ಎರಡನೇಕೀಕರಿಸಿ ಭ್ರಮೆಯ ಬಿಡಿಸಿದೆಯಲ್ಲ ಬಸವಯ್ಯ.
ಭ್ರಮೆಯನಳಿದು ಪರಿಣಾಮದ ಸಂಗವ ಮಾಡಿದೆಯಲ್ಲ ಬಸವಯ್ಯ.
ತೆರಹಿಲ್ಲದ ವಸ್ತುವಾದೆಯಲ್ಲಾ ಬಸವಯ್ಯ ಗುರುವೆ.
ಸಂಗಯ್ಯನಲ್ಲಿ ಸದುಹೃದಯನಾದೆಯಲ್ಲ ಬಸವಯ್ಯ./89
ಎಲೆ ಅಯ್ಯಗಳಿರಾ, ಎಲೆಗಳೆದ ವೃಕ್ಷವ ಕಂಡಿರೆ ಬಸವನ ?
ಎಲೆ ಅಯ್ಯಗಳಿರಾ, ರೂಹಿಲ್ಲದ ಚೋಹವ ಕಂಡಿರೆ ಬಸವನ ?
ಎಲೆ ಸ್ವಾಮಿಗಳಿರಾ, ನಿಮ್ಮ ನಿಲವಿನ ದರ್ಪಣವ ಕಂಡಿರೆ ಬಸವನ ?
ಸಂಗಯ್ಯನಲ್ಲಿ ಸ್ವಯವಳಿದ ಬಸವನ ಕುರುಹ ಕಂಡಿರೆ ?/90
ಎಲೆ ಅಯ್ಯಾ ಎಲೆ ಅಯ್ಯಾ ಏಕಾಕ್ಷರ ರೂಪ ಬಸವಾ,
ಎಲೆ ಅಯ್ಯಾ ಎಲೆ ಅಯ್ಯಾ ನಿರಕ್ಷರರೂಪ ಬಸವಾ,
ಎಲೆ ಅಯ್ಯಾ ಎಲೆ ಅಯ್ಯಾ ಮುನಿಮಾರ್ಗಶೀಲ ಬಸವಾ,
ಸಂಗಯ್ಯಾ, ಎಲೆಯಿಲ್ಲದ ವೃಕ್ಷವಾದ ಬಸವಯ್ಯನು./91
ಎಲೆ ಅಯ್ಯಾ ಬಸವಾ, ಕರಸ್ಥಲ ಬಯಲಾಯಿತ್ತೆನಗೆ,
ಕರಸ್ಥಲ ಮನಸ್ಥಲವಾಯಿತ್ತು ಬಸವಾ.
ಸಂಗಯ್ಯಾ, ಬಸವ ಹೋದನತ್ತ
ನಾನಡಗಿದೆನಯ್ಯಾ ನಿಮ್ಮಲಿತ್ತ./92
ಎಲೆ ಅಯ್ಯಾ ಬಸವಾ
ಎಲೆ ಪ್ರಣವ ಬಸವಾ
ಏನಯ್ಯಾ ಸಂಗಯ್ಯಾ, ಬಸವಾ./93
ಎಲೆ ಲಿಂಗವೆ,
ಹೆಸರಿಲ್ಲದ ರೂಪದೋರಿ ಬಯಲಿಂಗೆ ಬಯಲನೆ ಕೂಡಿದೆಯಲ್ಲಾ.
ಭಾವವಿಲ್ಲದ ವಸ್ತುವಾಗಿ ಬಯಲಿಂಗೆ ಬಯಲನೆ ಕೂಡಿದೆಯಲ್ಲಾ.
ಮುನ್ನಲೊಂದು ರೂಪು ಮಾಡಿದೆ ಎನ್ನ ನೀನು.
ಈಗಲೊಂದು ರೂಪು ಮಾಡಿದೆ ಎಲೆ ಲಿಂಗವೆ.
ಬಸವನರಸಲು ನಾನು ಬಯಲ ನೆಮ್ಮಿ
ಮನೋಹರಮೂರ್ತಿಯಾದೆನಯ್ಯ ಸಂಗಯ್ಯ./94
ಎಲೆ ಶರಣರಿರಾ, ಎಲೆ ಭಕ್ತರಿರಾ,
ಭಕ್ತಿಕಾಂಡದ ಮೂಲಿಗನ ಕಾಣಿರೆ ಬಸವನ ?
ಆ ಭಕ್ತಿಯಸಂಗದ ಶಿವೈಕ್ಯನ ಕಾಣಿರೆ ಬಸವನ ?
ಭಕ್ತಿಯ ನಿಜಸಮಾದಿಯಸುಖವ ಕರುಣಿಸುವ ಅಯ್ಯ ಬಸವನ,
ಸಂಗಯ್ಯನ ಪ್ರಸಾದಿಯಾದ ಬಸವನ ಕಾಣಿರೆ ಭಕ್ತರು ?/95
ಎಲೆಗಳೆದ ಮರದಲ್ಲಿ ನೆಳಲನರಸಲಿಲ್ಲ.
ಕಳೆಯರತ ದೀಪದಲ್ಲಿ ಬೆಳಗನರಸಲಿಲ್ಲ.
ಕುರುಹಳಿದ ಮೂರ್ತಿಯಲ್ಲಿ ರೂಪನರಸಲಿಲ್ಲ.
ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವನರಸಲಿಲ್ಲ.
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು./96
ಎಲೆಯಿಲ್ಲದೆ ಮರ ಕಾಯಾಯಿತ್ತು,
ಆ ಮರ ಫಲವಾಯಿತ್ತು, ಆ ಫಲ ನಿಃಫಲವಾಯಿತ್ತು
ಆ ನಿಃಫಲವನುಂಡೀಗ ನನಗೆ
ಸುಖಸಂಯೋಗವಾಯಿತ್ತಯ್ಯ ಸಂಗಯ್ಯ./97
ಎಲ್ಲರ ಸಂಗವಲ್ಲಲ್ಲಿಯೆ;
ಆ ಎಲ್ಲರೂ ನಿರ್ಲೆಪ ಪ್ರಾಣಿಗಳಾದರಯ್ಯ.
ಆ ಎಲ್ಲರ ಮೂರ್ತಿಯ ಅನುವ ಕಂಡು
ನಿರ್ಲೆಪ ಪ್ರಸಾದಿಯಾದೆನಯ್ಯ ಸಂಗಯ್ಯ./98
ಎಲ್ಲವನರಿಯಬಹುದೆ ಎಂದು ನಾನು ತಿಳಿಯಲು
ಎಲ್ಲವನರಿಯದೆ ನಿರ್ಲೆಪಿಯಾನಾದೆನಯ್ಯ ಸಂಗಯ್ಯ./99
ಎಲ್ಲವನರಿಯೆನೆಂದರೆ ಎನಗೆ
ಎಲ್ಲರಲ್ಲಿಯ ಪರಿಣಾಮ ಕಾಣಿಸಿತ್ತಯ್ಯ.
ಪರಿಣಾಮವಡಂಗಿ ಪರಂಜ್ಯೋತಿಲರ್ಿಂಗವ ಕಂಡು
ನಾನು ಸುಖಿಯಾದೆನಯ್ಯ ಸಂಗಯ್ಯ./100
ಎಸಳ ಕಂಡು ಹೂವಿನ ಮೂಲವ ನೋಡಲು
ಆ ಮೂಲ ಎಸಳು ಎರಡೂ ಗಮನಗೆಟ್ಟವು.
ಪ್ರಾಣ ಮರುಗಿ ಬಳಲಲು
ಸಂಗಯ್ಯ, ಪುಷ್ಪ ಉಂಟೆಂದ ಬಸವನಲ್ಲಿ./101
ಎಸಳ ಕರಣವ ಕಂಡು,
ಆ ಎಸಳೆಂದು ಹೆಸರುವಿಡಿಯಲು
ಎಸಳೆಸಳಿಂಗೆ ಎನಗೆ ಚೋದ್ಯವಾಯಿತ್ತಯ್ಯ.
ಆ ಎಸಳಕ್ಷರವ ಕಂಡು
ವಿಶುದ್ಧಿದಳವ ಮುಟ್ಟಿದೆನಯ್ಯ ಸಂಗಯ್ಯ./102
ಎಸಳ ಪಂಜರದ ಪಕ್ಷಿಯೆ ನೀನೆಲ್ಲಿ ತೋರಿ ಎಲ್ಲಿಯಡಗಿದೆ ?
ಎತ್ತಳ ಭ್ರಮೆ ಎತ್ತಳನುಕೂಲತೆ,
ಎನಗೆತ್ತಳ ಮಾಯದ ಸಂಗವಯ್ಯ ?
ನಾನೆತ್ತಲಿ ? ಬಸವನೆತ್ತ ?
ಮನವೆತ್ತ ?ತನುವೆತ್ತ ?
ಸಂಗಯ್ಯನೆತ್ತ ಹೋಗತ್ತ./103
ಎಸಳಕ್ಷರವ ಕಂಡು ಎಸಳ ಬಗೆಯ ತಿಳಿದು
ನಿಜಸುಖಿಯಾದೆನಯ್ಯ ನಾನು.
ಇಷ್ಟ ಪ್ರಾಣ ಭಾವದಲ್ಲಿ
ಪ್ರಸನ್ನ ಮೂರುತಿಯ ನೆಲೆಯ ಕಂಡೆನಯ್ಯ ಸಂಗಯ್ಯ./104
ಎಸಳದಳವನಳಿದು ನಿಂದ ಬಸವಾ,
ದಳರೂಪಿತದಲ್ಲಿ ಕುರುಹಡಗಿದ ಬಸವಾ,
ಕುರುಹಿನ ರೂಪ ಕಂಡು ದೃಢ ಸ್ವರೂಪನರಿದು
ಅನುಭಾವಿಯಾಗಿ ಅನುಭಾವದಿಂದ ಮುಕ್ತಿಯ ಕಂಡು
ಮುಖವಿಕಸಿತವನೆಯ್ದಿ ನಿಂದನಯ್ಯ ಸಂಗಯ್ಯನಲ್ಲಿ ಬಸವಯ್ಯನು/105
ಎಸಳು ಬಿಳಿದು ಆ ಎಸಳ ಕಂಪಿನ ವರ್ಣದ ಮುಂದೆ
ಕಂಪಿನ ಕುಸುಮವ ನೋಡ ನೋ[ಡ] ಹೋದರೆ
ಆ ಎಸಳೆಸಳಿಗೆ ಒಂದು ತುಂಬಿಗಳ ಬಳಗವ ಮೂರುತಿಗೂಡಿದರು.
ಆ ಮೂರುತಿಯ ಇರವನರಿದು
ಆನು ಬದುಕಿದೆನಯ್ಯ ಸಂಗಯ್ಯ./106
ಎಸಳೆಸಳ ಮಾಡಿಸಲು
ಎಸಳೆಸಳಿಂಗೆ ಇರವ ಕಂಡು ಬದುಕಿದೆನಯ್ಯ.
ಬಯಲ ಪರಿಣಾಮವ ಕಂಡು ಬಯಲನೈದಿದೆನು.
ಆ ಬಯಲಿಂಗೆ ಈ ಬಯಲ ಸುಖವ ಕೂಡಿಸಿ
ಸುಖಪರಿಣಾಮಿಯಾದೆನಯ್ಯ ಸಂಗಯ್ಯ./107
ಎಸಳೆಸಳಹೊಸದು ನೋಡುವ ಯೋಗಿಗಳು
ಬಸವನೈಕ್ಯವನು ಕಾಣದಾದರು.
ರೂಪ ನಿರೀಕ್ಷಿಸುವ ಯೋಗಿಗಳು
ಬಸವನೈಕ್ಯವ ಕಾಣದಾದರು.
ಸಂಗಯ್ಯಾ, ನಿಮ್ಮ ಬಸವನೈಕ್ಯವ ಬಲ್ಲಾತ
ಚೆನ್ನಬಸವಣ್ಣನು./108
ಎಸೆವ ಅನಂಗನ ಸಂಗವ ಹರಿದು,
ಏಕತ್ರಯಬ್ರಹ್ಮಮೂರ್ತಿಯಾದೆನಯ್ಯಾ ಬಸವಾ.
ಆ ಮೂರ್ತಿಯ ಸಂಗವ ಮಾಡುವ ಬಸವನ
ಇರವನರಿದು ಬದುಕಿದೆನಯ್ಯಾ ಸಂಗಯ್ಯಾ./109
ಎಸೆವಕ್ಷರಕ್ಕೆ ಹೆಸರಿಲ್ಲ, ಆ ಹೆಸರಿಂಗೆ ರೂಹಿಲ್ಲ;
ರೂಪಿಂಗೆ ನಿರೂಪಿಲ್ಲ.
ನಿರೂಪಳಿದು ನಿರಾಕುಳವಾಗಿ
ನೀರಸಂಗಕ್ಕೆ ಹೋದರೆ, ಆ ನೀರು ಬಯಲಾಳವ ತೋರಿತ್ತಯ್ಯ ಸಂಗಯ್ಯ./110
ಎಸೆವಾಕ್ಷರದ ಕುರುಹ ಕಂಡು
ಆನು ಬಸವಾ ಬಸವಾ ಬಸವಾ ಎನುತಿರ್ದೆನಯ್ಯಾ.
ಬ್ರಹ್ಮವನಎದು ಮೂರ್ತಿಯ ಇರವನರಿದೆನಯ್ಯಾ. ಸಂಗಯ್ಯನಲ್ಲಿ ಕುರುಹನಳಿದೆನು./111
ಏಕ ಸಂಗ ನಿಸ್ಸಂಗವಾಗಿ ಪ್ರಸಾದದ ಹಂಗಿಗಳಲ್ಲ.
ಪ್ರಣವದ ಅಕ್ಷರರೂಪಡಗಿ ನಿಂದು ಏಕೋದೇಹವಾಯಿತ್ತೆನಗೆ ಸಂಗಯ್ಯ./112
ಏಕಮೂರ್ತಿ ತ್ರಿಮೂರ್ತಿ ದ್ವಿಮೂರ್ತಿಯಾಗಿ ತೋರಿ
ಬೇರೆ ಅರಿಯ ಬಂದಿತ್ತಯ್ಯ.
ಅರಿಯಲು,
ಪ್ರಭೆ ಪರಿಪೂರಿತವಂತಃಕ್ಕರುಣಮೂರ್ತಿಯುಳ್ಳವಳಾದೆನಯ್ಯ ಸಂಗಯ್ಯ./113
ಏಕಯೇವ ದೇವನೊಬ್ಬನೆ ಶರಣ ಬಸವಯ್ಯ.
ಆ ಶರಣ ಬಸವಯ್ಯನಿರವೆ ಪರಮಪ್ರಸಾದರೂಪವಾಯಿತ್ತು.
ಆ ಪರಮಪ್ರಸಾದರೂಪಮೂರ್ತಿ ನಮ್ಮ ಸಂಗಯ್ಯನಲ್ಲಿ ಸದ್ಗುರು ಬಸವಯ್ಯನು./114
ಏಕಯೇವದೇವ ಬಸವಾ,
ಏಕಲಿಂಗಾಂಗಿ ಬಸವಾ,
ಪ್ರಸಾದಪರಿಪೂರ್ಣಮೂರ್ತಿ ಬಸವಾ,
ಪರಿಣಾಮವಡಗಿ ಪ್ರಸನ್ನನಾದ ಬಸವಾ
ಕಾಯವಿಲ್ಲದ ಗಮನಿ ಬಸವಾ,
ಕಲೆಯಳಿದುಳಿದೆ ಬಸವಾ,
ಪ್ರಭಾವವಡಗಿ ಸಂಗಯ್ಯನಲ್ಲಿ ನಿಸ್ಸಂಗಿಯಾದೆಯಾ ಬಸವಾ./115
ಏಕಲಿಂಗದಲ್ಲಿ ಏಕತ್ವವಲ್ಲ ಮೂರ್ತಿಗಳಲ್ಲ
ಆ ಮೂರ್ತಿಗಳಲ್ಲಿ ಶರಣ ಸಂಗ ಪರಿಣಾಮ ಸಂಗಪ್ರಭೆಯ ಪೂರೈಸಿದ ಸಂಗವಯ್ಯ ಸಂಗಯ್ಯ./116
ಏಕಲಿಂಗನಿಷ್ಠಾಪಾರಿಗಳೆಂದೆಂಬರಯ್ಯ;
ತಾವು ಏಕಲಿಂಗ ಸಂಬಂದಿಗಳಾದ ಕಾರಣವೇನಯ್ಯ ?
ತಾವು ಹಿತವಿಲ್ಲದ ವಸ್ತುವ ಕಂಡು
ಸ್ವಯ ಸಂಬಂದಿಗಳಾದರು. ಪರಿಣಾಮದ ನೆಲೆಯನರಿವ ಪರಿಯೆಂತಯ್ಯ ಸಂಗಯ್ಯ ?/117
ಏಕಾಂಗವೆನಗೆ ಅನೇಕ ಬಸವಾ,
ಪ್ರಾಣಪ್ರಸನ್ನವದನೆಯಾದೆನು ಬಸವಾ,
ಎನಗೆ ಏತರಲ್ಲಿಯೂ ಹಂಗಿಲ್ಲ ಬಸವಾ,
ಇಷ್ಟದ ಸಂಗದ ಕುಳವಳಿದ ಬಳಿಕ
ಪ್ರಾಣಯೋಗವಾಯಿತ್ತು ಬಸವಾ,
ಸಂಗಯ್ಯಾ, ನಿಮ್ಮ ಬಸವನ ರೂಪು ಹೆಸರಿಲ್ಲದೆ ಹೋದ ಬಳಿಕ./118
ಏಕಾಕಾರ ನಿರಾಕಾರವಾಯಿತ್ತಯ್ಯ,
ಏಕಾಕಾರ ಶಿವಸುಖವಾಯಿತ್ತಯ್ಯ,
ಅಧಿಕದ ತನುವನರಿದು ಆನು ಬದುಕಿದೆನಯ್ಯ ಸಂಗಯ್ಯ./119
ಏಕೆನ್ನ ಪುಟ್ಟಿಸಿದೆಯಯ್ಯಾ ಹೆಣ್ಣು ಜನ್ಮದಲ್ಲಿ
ಪುಣ್ಯವಿಲ್ಲದ ಪಾಪಿಯ ?
ನಾನು ಇರಪರಕ್ಕೆ ದೂರಳಯ್ಯಾ.
ಎನ್ನ ನಾಮ ಹೆಣ್ಣು ನಾಮವಲ್ಲಯ್ಯಾ.
ನಾನು ಸಿರಿಯಿದ್ದ ವಸ್ತುವಿನ ವಧುವಾದ ಕಾರಣ,
ಸಂಗಯ್ಯನಲ್ಲಿ ಬಸವನ ವಧುವಾದ ಕಾರಣ ಎನಗೆ ಹೆಣ್ಣುನಾಮವಿಲ್ಲವಯ್ಯಾ./120
ಏಣನಗರ, ಎಸಳಗಂಗಳ ಸಾರಂಗ, ಪ್ರಭೆಯನೊಳಕೊಂಡ ಮೊಲ,
ಈ ಮೂರು ಮೃಗವನೆಚ್ಚು ಬಾಣಸವ ಮಾಡಿ,
ಸಂಗಯ್ಯಂಗಿತ್ತು ಸುಖಿಯಾದನಯ್ಯಾ. ಬಸವನಗಣಿತಮೂರ್ತಿಯಯ್ಯಾ, ಇರಪರ ನಾಯಕನು./121
ಏತರಮಾರ್ಗವಡಗದ ಸಂಗ,
ಭ್ರಮೆಯಳಿಯದ ಸಂಗ.
ಇಂತೀ ಉಭಯಸಂಗ ಸಾಧ್ಯವಾಯಿತ್ತೆನಗೆ.
ಮನವನಳಿದು ತನುವಿನ ಹಂಗು ಹರಿದು
ಪರಮಪ್ರಸಾದಿಯಾಗಿ ಆನು ಬದುಕಿದೆನಯ್ಯ ಸಂಗಯ್ಯ./122
ಏತರಲ್ಲಿಯೂ ತೆರಹಿಲ್ಲವೆನಗೆ
ಏತರಲ್ಲಿಯೂ ಕುರುಹಿಲ್ಲವೆನಗೆದ
ಏತರಲ್ಲಿಯೂ ಮೂರ್ತಿಯ ಮುಖ ಕಾಣಿಸದೆನಗೆ,
ಸಂಗಯ್ಯನಲ್ಲಿ ಬಸವ ಪ್ರಸಾದಿಯಾದಬಳಿಕ./123
ಏತರಲ್ಲಿಯೂ ತೆರಹಿಲ್ಲವೆನಗೆ
ಸುಖ ಎನಗೆದ ಸುಖದಿಂದ ವಿಪತ್ತನಳಿದೆನಯ್ಯಾ. ವಿಚಾರವ ತಿಳಿದು ನಿಃಪತಿಯಾದೆನಯ್ಯ ಸಂಗಯ್ಯ./124
ಏತರಲ್ಲಿಯೂ ಪರಿಣಾಮವಿಲ್ಲವೇತರಲ್ಲಿಯೂ ಗಮನವಿಲ್ಲ
ವೇತರಲ್ಲಿಯೂ ವಿವೇಕದನುಭವವಿಲ್ಲ
ವಪ್ರತಿಮನ ಸುಖವ ಕಂಡು,
ಆನು ವಿವೇಕ ವಿವರವ ತಿಳಿದೆನಯ್ಯ.
ತಿಳಿದು ಮನೋಹರ ಪ್ರಸನ್ನ ಮೂರುತಿಯ ವಿವರವ ಕಂಡೆನಯ್ಯ ಸಂಗಯ್ಯ./125
ಏತರಲ್ಲಿಯೂ ಹೆಸರಿಲ್ಲದ ಕುರುಹು ಈ ವಸ್ತು ಬಸವಯ್ಯನು.
ಏತರಲ್ಲಿಯೂ ನೆಲೆಯಿಲ್ಲದ ಮೂರ್ತಿ ಈ ವಸ್ತು ಬಸವಯ್ಯನು.
ಏತರಲ್ಲಿಯೂ ತೆರಹಿಲ್ಲದೆ ಪರಿಪೂರ್ಣವಾಗಿರಲು ಬಸವಯ್ಯನು,
ಪ್ರಭೆ ಬೆಳಗಿತ್ತು ಬಸವಂಗೆ, ಪ್ರಕಾಶವಡಗಿತ್ತು ಬಸವಂಗೆ,
ಪರಿಣಾಮ ಉಡುಗಿತ್ತು ಬಸವಂಗೆ, ಮನವಳಿಯಿತ್ತು ಬಸವಂಗೆ, ಸಂಗಯ್ಯನಲ್ಲಿ ಬಸವ ಸ್ವಯಲಿಂಗಿಯಾದ ಬಳಿಕ./126
ಏನೂ ಏನೂ ಎನಲಿಲ್ಲ
ಎನ್ನ ಭಕ್ತಿಯಳಿದ ಭಾವಕ್ಕೆ ಇನ್ನೇನೂ ಏನೂ ಎನಲಿಲ್ಲ.
ಎನ್ನ ಪ್ರಾಣದ ಹಂಗಹರಿದಬಳಿಕ ಇನ್ನೇನೂ ಏನೂ ಎನಲಿಲ್ಲ.
ಎನ್ನೈಕ್ಯದ ಸಮರಸ ಕೈಗೂಡಿದಬಳಿಕ ಇನ್ನೇನೂ ಏನೂ ಎನಲಿಲ್ಲ.
ಎನ್ನಬಿಮಾನದ ಕರ್ತು ನಿರಾಳದಲ್ಲಿ ನಿಂದ ಬಳಿಕ, ಸಯದಾನ ಸುಯಿದಾನವಾಯಿತ್ತಯ್ಯಾ, ಸಂಗಯ್ಯಾ./127
ಏನೆಂದೆನ್ನಬಹುದಯ್ಯ ?ಎಂತೆಂದೆನ್ನಬಹುದಯ್ಯ ?
ಈ ಘನದ ವಿಚಾರವ ?
ಈ ಘನದಲ್ಲಿ
ಇಹಪರದ ಸುಖವ ಕಂಡು ಕೊಡುವೆನೆಂದು ಹೋದರೆ
ಆ ಲಿಂಗವೆನ್ನ ಕರದೊಳಗೆ ತಾನೆಯಡಗಿತ್ತು.
ನಾನಡಗಿ ನನ್ನ ವಿಚಾರವ ತಿಳಿಯಲು ನಾನು ಬದುಕಿದೆನಯ್ಯ ಸಂಗಯ್ಯ./128
ಏಹೆ ಎಲೆ ಅಭವ ಬಸವಾ,
ಏಹೆ ಎಲೆ ಪರಿಣಾಮಿ ಬಸವಾ,
ಏಹೆ ವಿಚಾರಿ ಬಸವಾ,
ವಿಚಾರ ಸಂಗನನರಿದು ಹೇಳಲಿಲ್ಲವೆನಗೆ ಬಸವಾ.
ಹೇ ಹೇ ಎನಲೊಂದೆ ಸಂಗ ಸಂಗ, ನಿರಂಗ ನಿರಂಗ ಬಸವ ಬಸವ ಎಲೆ ಬಯಲು ?/129
ಐಕ್ಯವ ತೋರಿ ಅಜಾತನಲ್ಲಡಗಿದ ಬಸವಾ.
ಅರ್ಪಿತದಲ್ಲಿ ನಿರಾಭಾರಿಯಾದ ಬಸವಾ,
ಆನು ಸುಖಸಂಯೋಗಿಯಾದೆ ನಿಮ್ಮಲ್ಲಿ ಬಸವಾ.
ಎನಗೆ ಹೆಸರಳಿಯಿತ್ತು ಕುರುಹಳಿಯಿತ್ತು ಬಸವಾ. ಸಂಗಯ್ಯ ನಿನ್ನೊಳಡಗಿ ನೀನೆನ್ನೊಳಡಗಲು./130
ಐದದು ಎನಗೆ ಕಡೆಮುಟ್ಟದ ಪ್ರಸಾದ
ಐದದು ಎನಗೆ ಕಡೆಮುಟ್ಟದ ಹರನ ಕರುಣ
ಐದದು ಎನಗೆ ಕಡೆಮುಟ್ಟದ ಸ್ವಯಲಿಂಗ ಸಂಬಂಧದ
ಐದದು ಎನಗೆ ಪರವಸವು ಕಡೆಮುಟ್ಟಲಯ್ಯ. ಸಂಗಯ್ಯ, ಐದದು ಎನಗೆ ಕಡೆಮುಟ್ಟ ಬಸವನಭಕ್ತಿ./131
ಒಡಲಗುಣವ ಕಳದ ಬಳಿಕ ಹೆಣ್ಣಿಂಗೆ,
ಓಂ ನಮಃಶಿವಾಯಯೆಂಬ ಸುಕೃತವನರುಹಿದ ಮೇಲೆ,
ಪರವಸ ವಸ್ತುವನರಿದು ಪರಬ್ರಹ್ಮವ ಕಂಡು
ಬದುಕಿದೆನಯ್ಯ ಸಂಗಯ್ಯ./132
ಒಡಲಳಿದ ಕಾರಣ ಒಡಲಿಲ್ಲದ ಹೆಣ್ಣು ನಾನಾದೆನಯ್ಯಾ ಬಸವಾ,
ಪ್ರಾಣವಿಲ್ಲದ ಪಂಚಾಕ್ಷರಿಯ ತಿಳಿಯಲು.
ಆ ಪಂಚಾಕ್ಷರಿಯನರಿದು ಆನು ಬದುಕಿದೆನಯ್ಯಾ ಬಸವಾ.
ಗಮನ ನಿರ್ಗಮನ ಸೂಚನೆಯಾಯಿತ್ತು.
ಸಂಗಯ್ಯನಲ್ಲಿ ಹೃದಯದ ಕತ್ತಲೆಯಳಿದು ಹೃದಯಪ್ರಸನ್ನೆಯಾದೆನಯ್ಯಾ ಬಸವಯ್ಯಾ./133
ಕರಣಂಗಳ ಹಂಗ ಹರಿದು
ಕಾಮದ ಸೀಮೆಯ ಹರಿದು
ಕಾಮದ ಪ್ರಪಂಚನ್ನಳಿದು ನಾನು ಪ್ರಸನ್ನವದನೆಯಾದೆನಯ್ಯ ಸಂಗಯ್ಯ./134
ಕರಣಂಗಳ ಹಂಗಹರಿದು, ಕರಣಂಗಳ ಮುಖವನಳಿದು,
ಶರಣರ ಪರಿಣಾಮದಲ್ಲಿ ಮುಕ್ತಿಯನರಿದೆನಯ್ಯಾ.
ಬಸವನ ಕುರುಹ ಕಂಡು ಪ್ರಸನ್ನೆಯಾದೆನಯ್ಯಾ.
ಪ್ರಸನ್ನಪರಿಣಾಮವಿಡಿದು ಆನು ಬದುಕಿದೆನಯ್ಯಾ ಸಂಗಯ್ಯಾ./135
ಕಲಿಯುಗದಲ್ಲಿ ಹುಟ್ಟಿ ಆ ಕಲಿಯುಗದಲ್ಲಿ ಬೆಳೆದೆನಯ್ಯ.
ಕೃತಯುಗದಲ್ಲಿ ಹುಟ್ಟಿ ಆ ಕೃತಯುಗದಲ್ಲಿ ಬೆಳೆದೆನಯ್ಯ.
ದ್ವಾಪರದಲ್ಲಿ ಹುಟ್ಟಿ ಆ ದ್ವಾಪರದಲ್ಲಿಯೆ ಬೆಳೆದೆನಯ್ಯ.
ತ್ರೇತಾಯುಗದಲ್ಲಿ ಹುಟ್ಟಿ ಆ ತ್ರೇತಾಯುಗದಲ್ಲಿಯೆ ಬೆಳೆದೆನಯ್ಯ.
ಎನಗೆ ಪ್ರಾಣವಿಲ್ಲ ಎನಗೆ ಕಾಯವಿಲ್ಲ.
ನಾನೇತರಲ್ಲಿಯೂ ಹೊಂದಿದವಳಲ್ಲ.
ಅಜಾತನ ಕಲ್ಪಿತ ಸಂಬಂಧವಾಗಲು
ಆನು ನಿಮ್ಮೈಕ್ಯದಲ್ಲಿ ನಿಂದೆನಯ್ಯ ಸಂಗಯ್ಯ./136
ಕಲ್ಯಾಣವಿಲ್ಲ ಕೈಲಾಸವಿಲ್ಲ, ಬಸವಾ.
ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ, ಬಸವಾ.
ಆ ಕಲ್ಯಾಣ ಕೈಲಾಸವಾಯಿತ್ತು ಬಸವಾ.
ಆ ಕಲ್ಯಾಣವಳಿದು ಕೈಲಾಸವಾದ ಬಳಿಕ, ಬಸವನ ಮೂರ್ತಿಯಿಲ್ಲ.
ಬಸವನ ಮೂರ್ತಿಯನರಿಯದ ಕಾರಣ ಕೈಲಾಸವಿಲ್ಲ ಕಲ್ಯಾಣವಿಲ್ಲವಯ್ಯಾ, ಸಂಗಯ್ಯಾ./137
ಕಲ್ಲಮಾಲೆಯ ಕಡಿದಾತ ಬಸವಯ್ಯನು.
ಕಾಲನ ಗೆಲಿದಾತ ಬಸವಯ್ಯನು.
ಎಲ್ಲವ ಮರೆದಾತ ಬಸವಯ್ಯನು.
ಜ್ಞಾನವನರಿದಾತ ಬಸವಯ್ಯನು.
ಸಂಗಯ್ಯನಲ್ಲಿ ಬೆರೆದು ನಿಃಪತಿಯಾದಾತ ನಮ್ಮ ಬಸವಯ್ಯನು/138
ಕಾಮದ ಹಂಗಿಗನಲ್ಲ ಶರಣ
ಮೋಹದ ಇಚ್ಫೆಯವನಲ್ಲ ಶರಣ
ಉಭಯದ ಸಂಗದವನಲ್ಲ ಶರಣ
ಪ್ರಾಣದ ಕುರುಹಿಲ್ಲದ ಶರಣಂಗೆ ಪ್ರಸಾದದ ನೆಲೆಯಿಲ್ಲವಯ್ಯ.
ಎನಗೇನೂ ತಲೆದೋರದೆ ಮುಸುಕಿಟ್ಟು ಬಸವಳಿದೆನಯ್ಯಾ ಸಂಗಯ್ಯ ನಿಮ್ಮಲ್ಲಿ./139
ಕಾಮವನಳಿದ ಹೆಣ್ಣಲ್ಲ ನಾನು, ಕಾಮ ಉಂಟೆನಗೆ.
ಕಾಯ ಸಂಸಾರವಳಿಯಿತ್ತೆಂಬ
ಕಾಮ ಸೀಮೆ ನಿಸ್ಸೀಮೆಯಳಿದು ಕಲ್ಪಿತವ ಕಂಡುಳಿದು ಬದುಕಿದೆನಯ್ಯ ಸಂಗಯ್ಯ./140
ಕಾಮಿತಸುಖವ ಕಂಗೊಳಿಸಿದ ಗುರುವೆ,
ಕಲ್ಪಿತವ ನಷ್ಟವ ಮಾಡಿದ ಗುರುವೆ,
ಎನಲಿಲ್ಲದ ಮೂರ್ತಿಯೆ ಎತ್ತಲಡಗಿದೆಯಯ್ಯಾ ಗುರುವೆ ?
ಸುಖದುಃಖವನೊಂದು ರೂಪಮಾಡಿದ ಗುರುವೆ,
ಎತ್ತಲಡಗಿದೆಯಯ್ಯಾ, ಸಂಗಯ್ಯನ ಗುರುಬಸವಾ ?/141
ಕಾಮಿಯಾನಾಗಿ ಕಾಮದ ಹಂಗಹರಿದೆನು ಬಸವಾ.
ಕಾಮ ನಿಃಕಾಮವಾಗಿ ಬಸವನ ಹೆಸರಲ್ಲಿ ಬಲವಂತರ ಕಂಡೆ.
ಬಲವಂತರ ಬಲುಹ ಕಂಡು ಬಲುಹನಳಿದು,
ಬಸವನಲ್ಲಿ ನಿರಾಲಂಬಿಯಾದೆ ನಾನು.
ನಿರಾಕುಳದ ಹಂಗ ಹರಿದು ನಾನು ಸುಖಿಯಾದೆನಯ್ಯಾ, ಸಂಗಯ್ಯಾ, ಬಸವನಲ್ಲಿ./142
ಕಾಯದ ಹಂಗ ಹರಿದು, ಕಲ್ಪಿತದ ಗುಣವ ನಷ್ಟವಮಾಡಿ,
ಮನವಿಲ್ಲದೆ ಆ ಮನಕ್ಕೆ ವಿವೇಕತೃಪ್ತಿಯನರಿಯಲು
ವಿಶಿಷ್ಟದನುಜ್ಞೆಯಾಯಿತ್ತಯ್ಯಾ.
ಸಂಗಯ್ಯನಲ್ಲಿ ಬಸವನಡಗಲು ರಿನ್ನ ಕಾಯವೆ ತೃಣರೂಪವಯ್ಯಾ./143
ಕಾಯವಿಲ್ಲದೆ ಕಾಯಕ್ಕೆ ಕಲ್ಪಿತದ ಸಯದಾನವ ಕೂಡಲಿಕ್ಕಲು
ಆಯದ ಖಂಡವಯ್ಯ,
ಕಾಯವಿಲ್ಲದೆ ಹೋದ ಬಯಲನುಂಬ ಪ್ರಾಣಿಗೆ
ಬಸವನ ಹಂಗೆನಗುಂಟೆಯಯ್ಯ ?
ಏತರಲ್ಲಿಯೂ ರೂಪಿಲ್ಲದ ಕಾರಣ ಸಂಗಯ್ಯ, ನಾನು ನಿಮ್ಮ ಹೆಸರಿಲ್ಲದ ಮಗಳು./144
ಕಾಯವಿಲ್ಲದೆ ಪುಷ್ಪಕವ ಕಂಡ ನಮ್ಮ ಬಸವಯ್ಯನು.
ನಮ್ಮ ಬಸವಯ್ಯನ ನೆಲೆಮಾಡ ಕರುಮಾಡವಾಯಿತ್ತು.
ನಮ್ಮ ಬಸವಯ್ಯ ಹೂವಿನರ ಥವೇರಿದ.
ನಮ್ಮ ಬಸವಯ್ಯ ಸಂಗಯ್ಯನಾದ. ಬಸವನ ರೂಪು ತದ್ರೂಪವಾಯಿತ್ತು./145
ಕಾಯವಿಲ್ಲದೆ ಪ್ರಾಣವಿರದು, ಪ್ರಾಣವಿಲ್ಲದೆ ಕಾಯವಿರದು.
ಆ ಕಾಯ ಪ್ರಾಣಕ್ಕೆ ಮೂಲಿಗನಾದ ಬಸವ.
ಬಸವನಿಲ್ಲದೆ ಭಾವ ನೆಲೆಗೊಳ್ಳದು.
ಭಕ್ತಿ ಸಂಗಸಂಯೋಗವಾದರೆ
ಬಸವನಲ್ಲಿ ಬಯಲನವಲಂಬಿಸಿದೆ ನಾನು.
ಸಂಗಯ್ಯಾ, ರೂಪಿಲ್ಲದ ಬಹುರೂಪನಾದ ಬಸವಯ್ಯನು./146
ಕಾಲವ ಕಂಡ ಬಸವಾ, ಕಲ್ಪಿತವ ಕಂಡ ಬಸವಾ,
ಕಾಲಕಲ್ಪಿತವರ್ಜಿತವಾದೆ ಬಸವಾ.
ನಯನುಡಿಯಿಲ್ಲದ ಬಸವಾ. ನೀ ನಿಃಪತಿಯಾದೆಯಾ ಸಂಗಯ್ಯನ ಗುರುಬಸವಾ./147
ಕಾವಲಕಾದಿದ್ದವರು ಕಾವಲಮೀರಿ
ಎನ್ನ ಸಂಗವನೆ ಮಾಡಿದರು ಬಸವಯ್ಯಾ.
ಎನ್ನ ಸಂಗವ ಮಾಡಿದವರ ಎನ್ನಯ್ಯ ಬಸವಯ್ಯ ಕಂಡು,
ಎನ್ನ ತನುವಿನಲ್ಲಿಯೆ ಅಡಗಿದನಯ್ಯಾ. ಸಂಗಯ್ಯಾ, ಸ್ವಯಲಿಂಗಿಯಾನಾದೆನಯ್ಯಾ./148
ಕುಲವಳಿದ ಹೆಣ್ಣ ಕಣ್ಣ ಬಯಲ ಕಂಡು
ಕುಲವಡಗಿ ಸಂಗಸ್ವಯರೂಪಾಯಿತ್ತಯ್ಯ.
ಪ್ರಭೆಯರಿದು ಪ್ರಸನ್ನರೂಪವ ಕಂಡು
ಪ್ರಕಾಶಮೂರ್ತಿಯಾದನಯ್ಯ.
ಪ್ರಣಮಾಕ್ಷರ ಕಾಯರೂಪು ನಿರೂಪಾಯಿತ್ತಯ್ಯಾ.
ಅಪ್ರಮಾಣವದಿಕಸ್ಥಲ ಸಂಬಂಧವಯ್ಯ ಸಂಗಯ್ಯ./149
ಕೋಪದ ತಾಪದ ಸಂಗವ ಕಳೆದು
ವಿರೂಪ ನಿರೂಪವಾಯಿತ್ತಯ್ಯಾ.
ನಿರಾಲಂಬ ನಿರಾಭಾರಿಯಾಗಿರಲು ಆನು ಅನುವರಿದು
ಹೆಣ್ಣೆಂಬ ನಾಮವ ಕಳೆದು ಸುಖ ವಿಶ್ರಾಂತಿಯನೆಯ್ದುವೆನಯ್ಯಾ.
ಸಂಗಯ್ಯಾ, ಬಸವನರೂಪವಡಗಿತೆನ್ನಲ್ಲಿ./150
ಕ್ರಮವನರಿಯದೆ ಪೂಜೆಯ ಮಾಡಹೋದರೆ,
ಕ್ರಮದಲ್ಲಿಯೆ ಸಂದಿತ್ತು ಶಿವಲಿಂಗದಲ್ಲಿಯೆ ಸಂದಿತ್ತು.
ಆ ಪೂಜೆಯ ಕ್ರಮವನಳಿದೆನಯ್ಯ ಸಂಗಯ್ಯ./151
ಗಮನದ ಸುಖವಡಗಿ ನಿರ್ಗಮನವಾಯಿತ್ತು ಬಸವಾ.
ನಿರ್ಗಮನದ ಸುಖಸುಯಿದಾನವಾಯಿತ್ತು ಬಸವಾ,
ನೋಡುವ ವಸ್ತು ಕೂಡೆ ಬಯಲಾಯಿತ್ತು ಬಸವಾ.
ಎನಗಿನ್ನೇತರಭಕ್ತಿ ಬಸವಾ ? ಎನಗಿನ್ನೇತರ ಮುಕ್ತಿ ಬಸವಾ.
ಎನಗಿನ್ನು ಶಬ್ದ ನಿಶ್ಶಬ್ದಸೂಚನೆಯಾಯಿತ್ತಯ್ಯಾ ಬಸವಾ,
ಸಂಗಯ್ಯಾ, ಬಸವನ ಗಮನದರಿವು ಎನಗೆಲ್ಲಿಯದು ?/152
ಜನನ ಮರಣವಳಿದು, ಜಲ್ಮದೊಪ್ಪವ ಕಳೆದು,
ಪ್ರಸನ್ನಮೂರ್ತಿಯ ಕಂಡು ಪ್ರಭಾಪೂರಿತ ಸ್ವರೂಪವಾಗಿ,
ಮನೋವಿಲಾಸದ ಹಂಗ ಹರಿದು,
ಅಂಗ ಲಿಂಗ ನಿಜವು ಮೂರ್ತಿಯಾಗಿ ಹೊಳೆಯಲು ಸಂಗ ಸಂಬಂಧ ಶಿವಾನುಕೂಲತೆಯಾಯಿತ್ತಿಂದು ಸಂಗಯ್ಯ./153
ಜಯ ಸುಖ ವಿಸುಖವಿಲ್ಲ.
ಜಯ ವಿಜಯವಾಯಿತ್ತು.
ಅಪ್ರತಿಮನ ಅರುಹ ತಿಳಿದು,
ಆ ಅಪ್ರತಿಮನ ಇರವ ತಿಳಿದು,
ಅಲ್ಲದ ಅನುಭಾವಕ್ಕೆ ಅಲ್ಲದ ವಿವರವ ಕಂಡು ಆನು ಬದುಕಿದೆನಯ್ಯ ಸಂಗಯ್ಯ./154
ಜ್ಞಾನವಿಲ್ಲದ ಕ್ರೀಯ ಮಾಡಿದಲ್ಲಿ ಫಲವೇನಯ್ಯ ?
ಆ ಜ್ಞಾನವು ಕ್ರೀಯನು ಸಂಬಂದಿಸಲು
ಸಂಬಂಧ ಸ್ವಯವಾಯಿತ್ತಯ್ಯ.
ಅಪ್ರಮಾಣದ ಪ್ರಕಾಶವ ಕಂಡು ಅರುವನರಿದು ತಿಳಿಯಲು ಸಂಗಯ್ಯನಲ್ಲಿ ಪ್ರಸಾದಿಯಾದೆನಯ್ಯ. /155
ಠಾವಿಲ್ಲ, ಆ ಠಾವಿಂಗೆ ಆ ಠಾವೆ ಮೂಲವಾಯಿತ್ತು.
ಮೂಲವಡಗಿದ ರೂಪಿಂಗೆ ಮುಕ್ತಳಾದೆನು.
ಮುನ್ನಲೊಂದು ಸುಖವ ಕಂಡು
ಮೂಲಾಧಾರ ರೂಪವರಿ.
ಎನಗೆ ಪ್ರಣವ ಸ್ವರೂಪೇ ಸಾಧ್ಯವಾಯಿತ್ತು. ನಾನು ಹೆಣ್ಣು ರೂಪವಳಿದು ಮುಕ್ತ್ಯಂಗನೆಯಾದೆನಯ್ಯ ಸಂಗಯ್ಯ./156
ತತ್ವದ ಮನ ತಾಯಿಗಳ ಬಿಡಾರವೆಂದೆನಿಸುವುದು ಬಸವಾ.
ಮೂವತ್ತಾರು, ಇನ್ನೂರ ಹದಿನಾರು ಬಿಡಾರದಲ್ಲಿ ನಿಂದು,
ಬಯಲೊಂದುಗೂಡಲು ಬಸವಯ್ಯಾ,
ಭಕ್ತಿಸ್ಥಲ ಶುಭಸೂಚನೆಯಾಯಿತ್ತು ಬಸವನಲ್ಲಿ ಎನಗೆ.
ಸಂಗಯ್ಯನಲ್ಲಿ ಬಸವನಂಗ ನಿರಂಗವಾದ ಬಳಿಕ
ಆನೆಂಬುದಿಲ್ಲವಯ್ಯಾ ಬಸವಯ್ಯಾ ನಿಮ್ಮಲ್ಲಿ./157
ತತ್ವದ ಹಂಗೇನೋ ಶರಣ ಬಸವಂಗೆ ?
ಭಕ್ತಿಯ ಹಂಗೇನೋ ಶರಣ ಬಸವಂಗೆ ?
ಮುಕ್ತಿಯ ಹಂಗೇನೋ ಶರಣ ಬಸವಂಗೆ ?
ಇಹಪರ ಸಂಸಿದ್ಭಿಯಿಲ್ಲವಯ್ಯಾ ಸಂಗಯ್ಯಾ, ನಿಮ್ಮ ಶರಣಬಸವ ನಿರಾಭಾರಿಯಾದ ಬಳಿಕ./158
ತನುವಾವುದಯ್ಯಾ ಬಸವಾ ?
ಮನವಾವುದಯ್ಯಾ ಬಸವಾ ?
ನೆನಹಿನ ಪರಿಣಾಮವಾವುದಯ್ಯಾ ಬಸವಾ ?
ಉಭಯದಗುಣ ನಷ್ಟವಾದ ಬಳಿಕ,
ಪ್ರಸನ್ನಸುಖಭಾವವುಂಟೆ ಸಂಗಯ್ಯನ ಗುರುಬಸವಾ ?/159
ತನುವಿಲ್ಲ ಬಸವಯ್ಯಂಗೆ, ಮನವಿಲ್ಲ ಬಸವಯ್ಯಂಗೆ,
ನೆನಹಿನ ತನುಮನ ನಷ್ಟವಾದ ಬಳಿಕ,
ಸಂಗಯ್ಯನಲ್ಲಿ ಬಸವಯ್ಯನ ರೂಪು ನಿರೂಪವಾದ ಬಳಿಕ./160
ತಾಯಿಲ್ಲವೆನಗೆ ಬಸವ ಬಸವಾ.
ಭಕ್ತಿಯಿಲ್ಲವೆನಗೆ ಸಂಗ ಸಂಗಾ,
ಪ್ರತಿರೂಪು ನಿಜರೂಪವಯ್ಯಾ ಸಂಗಯ್ಯಾ./161
ತಿಳುವಿನ ಸಂಗವಿನ್ನೇತಕಯ್ಯ ಎನಗೆ.
ಆ ತಿಳುಹಿನ ಪ್ರಾಣ ನಿರಾಧಾರದಲ್ಲಿ ನಿಂದ ಬಳಿಕ,
ಕಳೆಯಿಲ್ಲವೆನಗೆ ತಿಳುಹಿಲ್ಲವೆನಗೆ,
ಅಂಗದ ಸಂಗಿಗಳಲ್ಲಿ ಆಚಾರದ ಕುರುಹಿನವಳಲ್ಲ.
ಅಕ್ಷಯದ ಸಮಾಧಾನದಲ್ಲಿ ನಿಂದ ಬಳಿಕ ಪರಿಣಾಮಿಯಾನಯ್ಯ ಸಂಗಯ್ಯ./162
ತ್ರಿವಿಧ ಪ್ರಸಾದವಿಲ್ಲ, ತ್ರಿವಿಧಾಕಾರವಿಲ್ಲ,
ತ್ರಿವಿಧ ನಲವಿಲ್ಲ, ತ್ರಿಕಾರುಣ ರೂಪಿನಲ್ಲಿ
ಪರಿಣಾಮವನಯಿದಲು ಸಂಗ ನಿಸ್ಸಂಗವಾಯಿತ್ತಯ್ಯ ಸಂಗಯ್ಯ./163
ತ್ರಿವಿಧದ ಮಾಟವಿಲ್ಲವೆನಗೆ ಬಸವಾ.
ತ್ರಿವಿಧದ ಪ್ರಸಾದವಿಲ್ಲವೆನಗೆ ಬಸವಾ.
ತ್ರಿವಿಧದ ಕುರುಹಿಲ್ಲವೆನಗೆ ಬಸವಾ.
ತ್ರಿವಿಧದ ಗೊತ್ತಿಲ್ಲವೆನಗೆ ಬಸವಾ. ಸಂಗಯ್ಯನಲ್ಲಿ ಬಸವ ಬಯಲಾದಬಳಿಕ./164
ದಾಯದಲ್ಲಿ ಹುಟ್ಟಿದ ಧ್ವನಿ ಆ ದಾಯದಲ್ಲಿ ಹೋಯಿತ್ತು.
ಆ ದಾಯ ನಿರಾಕಾರವಾಗಿ ಸಂಗ ಸಂಯೋಗವಾಯಿತ್ತಯ್ಯ ಸಂಗಯ್ಯ./165
ದೃಢವಿಡಿದ ಭಕ್ತಿಗೆ ಸಮಯಾಚಾರವೇತಕ್ಕಯ್ಯಾ ?
ಆ ದೃಢದ ಭಕ್ತಿಯನರಿಯಲು ಆ ದೃಢದ ಮೂರುತಿಯಾಯಿತ್ತಯ್ಯ ಸಂಗಯ್ಯ./166
ದ್ವಯಲಿಂಗವೆಂಬರುದ
ದ್ವಯಲಿಂಗವಿಲ್ಲದವಳೆಂದರಿಯರು.
ಪ್ರಸಾದಿಯೆಂದೆಂಬರೆನ್ನದ
ಪ್ರಸಾದದ ಹಂಗಿಲ್ಲದವಳೆಂದರಿಯರೆನ್ನ.
ಗುರುವಚನ ರಚನೆಯನರಿದು ನಿಃಪ್ರಪಂಚಿಯಾನಾದೆನಯ್ಯ ಸಂಗಯ್ಯ./167
ಧ್ವನಿಯ ತೋರಲು, ಆ ಧ್ವನಿಯ ಮರೆಯಲ್ಲಿ ಹುಟ್ಟಿದ
ಮದ್ಗುರು ಬಸವಣ್ಣಂಗೆ ಶಿವಸುಖವಾಯಿತ್ತು ಬಸವಾ.
ಆ ಧ್ವನಿಯಡಗಿ ಅಪ್ರತಿಮಸಂಗ ನಿರ್ಮಲಾಕಾರವಾಯಿತ್ತಯ್ಯಾ ಎನಗೆ.
ಪ್ರಣವಸ್ವರೂಪ ಬಸವನ ಕಂಡಬಳಿಕ ಆನು ಬಸವನ ಶಿಶುವಾದೆನಯ್ಯಾ ಸಂಗಯ್ಯಾ./168
ನಡವ ಕಾಲಿಂಗೆ ಶಕ್ತಿ ನಿಃಶಕ್ತಿಯಾಯಿತ್ತು.
ನುಡಿವ ನಾಲಗೆಗೆ ವಚನ ನಿರ್ವಚನವಾಯಿತ್ತು.
ಶಬ್ದ ನಿಃಶಬ್ದವಾಗಿ ಪ್ರಾಣ ಪರಿಣಾಮವಾಗಿ
ಕಾಯದ ಕುರುಹನಳಿದು ಶಬ್ದನಂದಿಯಾನಾದೆನಯ್ಯ ಸಂಗಯ್ಯ./169
ನಡೆನೋಟವಿಲ್ಲವೆ ತೃಪ್ತಿಯ ಕೂಡಲು ?
ಆ ನಡೆನೋಟ ತೃಪ್ತಿಯಲ್ಲಿ ಸುಯಿದಾನವಾಯಿತ್ತು.
ಆ ಸುಯಿದಾನ ಸುಖದಲ್ಲಿ ನೆಲೆಗೊಳ್ಳಲು
ನಡವ ಗಮನ ಉಡುಗಿತ್ತು. ಸಂಗ ನಿಸ್ಸಂಗವಾಯಿತ್ತು ಸಂಗಯ್ಯ./170
ನಡೆಯಲಿಲ್ಲ ನುಡಿಯಲಿಲ್ಲ
ಕಾಣಲಿಲ್ಲ ಕೇಳಲಿಲ್ಲ
ಪ್ರಾಣವಿಲ್ಲ ಪ್ರಸಾದವಿಲ್ಲ ಪರಿಣಾಮವಿಲ್ಲ ಏನೂ ಇಲ್ಲ ಏನೆಂದೆನಲಿಲ್ಲ ಸಂಗಯ್ಯ./171
ನನಗೊಂದು ತಾಣವಾಗಿಯದೆ ನಾನತ್ತಲಡಗಲೇಬೇಕು.
ನಾನು ನಿರಾಳ ಸಂಬಂದಿಯಾಗಿರಲು
ಪ್ರತಿಯಿಲ್ಲದ ರೂಪನರುಹು ಕುರುಹ ಮಾಡಲು
ಒಡಲಿಲ್ಲದ ಹುಯ್ಯಲ ಕಂಡೆ ನಾನು. ಸಂಗಯ್ಯನಲ್ಲಿ ಇರಪರವಳಿದು ಪ್ರಸಾದಿಯಾದೆನು./172
ನನ್ನನಾರೂವರಿಯರು,
ನಾನು ಸ್ವಗರ್ಿಯಲ್ಲ ಅಪವಗರ್ಿಯಲ್ಲದ
ನನ್ನನಾರೂವರಿಯರು,
ನಾನು ಮುಕ್ತಳಲ್ಲ ಅಮುಕ್ತಳಲ್ಲ.
ನನ್ನನಾರೂ ಅರಿಯರು, ಸಂಗಯ್ಯನಲ್ಲಿ ರೂಪಿಲ್ಲದ ಹೆಣ್ಣಾದ ಕಾರಣ ನನ್ನನಾರೂ ಅರಿಯರು. /173
ನಮಗಾರ ಸಂಗವಿಲ್ಲ, ನಮಗಾರ ಸಂಗವಿಲ್ಲ
ನಮಗಾರ ಪರವಶವಿಲ್ಲ, ನಮಗಾರ ಇರಪರವಿಲ್ಲ
ನಮಗಾರ ಪರವಿಲ್ಲ, ನಮಗೆ ಹೃದಯದ ಹಂಗಿಲ್ಲವಯ್ಯಾ.
ನಮಗೆ ನಿಮ್ಮ ಹಂಗಿಲ್ಲ, ಸಂಗಯ್ಯನಲ್ಲಿ ಬಸವಸ್ವಯಲಿಂಗಿಯಾದಬಳಿಕ./174
ನಮ್ಮ ಹಂಗಿಗನಲ್ಲ ಬಸವಯ್ಯನು.
ನಮ್ಮ ಸಂಗಿಗನಲ್ಲ ಬಸವಯ್ಯನು.
ನಮ್ಮ ಇರದವನಲ್ಲ ಬಸವಯ್ಯನು.
ನಮ್ಮ ಪರದವನಲ್ಲ ಬಸವಯ್ಯನು.
ಪ್ರಸಾದವೇದ್ಯಶರಣ ಬಸವಯ್ಯನು.
ಪ್ರಸನ್ನಕಾಯವಾದನಯ್ಯ ಸಂಗಯ್ಯಾ./175
ನವಕಲ್ಪಿತದ ರೂಪನರಿದು,
ನವಯೌವನದ ಸ್ವರೂಪವ ಕಂಡು,
ನವಪ್ರಣವವಾಯಿತ್ತಯ್ಯಾ.
ನವಮಾಸವಳಿದು ನವಯೌವನ ಉದಯವಾಯಿತ್ತಯ್ಯಾ,
ಸಂಗಯ್ಯಾ, ಬಸವಯ್ಯ ನಿಮ್ಮ ತದ್ರೂಪವಾದಬಳಿಕ. || /176
ನಾಡನಾಳಹೋದರೆ,
ಆ ನಾಡು ಆಳುವ ಒಡೆಯಂಗೆ ನಾಡೆ ಹಗೆಯಾಯಿತ್ತು.
ಹಗೆಯಳಿದು ನಿಸ್ಸಂಗವಾಯಿತ್ತು.
ನಿಸ್ಸಂಗ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ನಾನು./177
ನಾಡಿನ ಹೆಣ್ಣುಗಳೆಲ್ಲಾ ಬನ್ನಿರೆ ಅಕ್ಕಗಳಿರಾ,
ಅಕ್ಕನರಸ ಬಸವಯ್ಯನು ಬಯಲ ಕಂಡು ಬಟ್ಟಬಯಲಾದನು.
ಅಕ್ಕನರಸನಿಲ್ಲದೆ ನಿರಕ್ಕರನಾದನು ಬಸವಯ್ಯನು. ನಮ್ಮ ಸಂಗಯ್ಯನಲ್ಲಿ ಬಸವಯ್ಯನೈಕ್ಯ ಬಯಲಿಲ್ಲದ ಬಯಲು./178
ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ ?
ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ ಬಸವಾ ?
ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ ಬಸವಾ ?
ಪರಿಣಾಮಮೂರ್ತಿ ಬಸವನರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ ಸಂಗಯ್ಯನ ಹಂಗು ನಮಗೇತಕ್ಕಯ್ಯಾ ಬಸವಾ ?/179
ನಾನಾರ ಹೆಸರ ಕುರುಹಿಡಲಯ್ಯಾ ಬಸವಾ ?
ನಾನಾರ ರೂಪ ನಿಜವಿಡಲಯ್ಯಾ ಬಸವಾ ?
ನಾನಾರ ಮಾತ ನೆಲೆಗೊಳಿಸಲಯ್ಯಾ ಬಸವಾ ?
ನಾನಾರ ಮನವನಂಗೈಸಲಯ್ಯಾ ಬಸವಾ ?
ಎನ್ನ ಸುಖಾಕಾರಮೂರ್ತಿ ಬಸವನಡಗಿದಬಳಿಕ ಎನಗೆ ಹೆಸರಿಲ್ಲ.
ರೂಪು ನಿರೂಪವಾಯಿತ್ತಯ್ಯಾ ಸಂಗಯ್ಯಾ, ಬಸವನಡಗಿದಬಳಿಕ/180
ನಾನಾವ ಗಮನವ ಕಂಡೆನಯ್ಯ ?
ನಾನಾವ ಬ್ರಹ್ಮವನರಿದೆನಯ್ಯ ?
ನಾನಾವ ತೃಪ್ತಿಯನರಿದೆನಯ್ಯ ?
ಇಷ್ಟದಂಗಸುಖವ ಕಂಡು ಸುಖಿಯಾದೆನಯ್ಯ.
ಮನವಿಲ್ಲ ತನುವಿಲ್ಲ ಆಧಾರಾದಿ ಸುಖವಿಲ್ಲ
ಶುದ್ಧ ನಿಃಕಲ ತತ್ವವಿಲ್ಲವಯ್ಯ.
ಸಂಗಯ್ಯ, ಆತ್ಮಸುಖ ಸಂಭಾಷಣೆಯಂತಯ್ಯ ಸಂಗಯ್ಯನ ಗುರುಬಸವ./181
ನಾನು ನಿಮ್ಮವಳಲ್ಲವಯ್ಯಾ, ನಾನು ಅನಿಮಿಷನವರವಳು.
ನಾನು ನಿಮ್ಮವಳಲ್ಲವಯ್ಯಾ, ನಾನು ಅಜಗಣ್ಣನವರವಳು.
ನಾನು ನಿಮ್ಮವಳಲ್ಲವಯ್ಯಾ, ನಾನು ಪ್ರಭುವಿನಸಂತತಿಯವಳು.
ನಾನು ನಿಮ್ಮವಳಲ್ಲವಯ್ಯಾ, ನಾನು ಮಾದಾರಚೆನ್ನಯ್ಯನ ಮೊಮ್ಮಗಳು.
ನಾನು ನಿಮ್ಮವಳಲ್ಲವಯ್ಯಾ, ನಾನು ಪ್ರಸಾದಿಗಳ ಮನೆಯ ಕೀಳುದೊತ್ತು.
ನಾನು ನಿಮ್ಮವಳಲ್ಲವಯ್ಯಾ, ಸಂಗಯ್ಯ, ನಾನು ಬಸವಯ್ಯನ ಮನೆಯ ತೊತ್ತಿನಮಗಳು./182
ನಾವು ನಮ್ಮ ವಶವಲ್ಲದವರ ಸಂಗವ ಮಾಡಲಿಲ್ಲ
ನಾವು ನಮ್ಮ ಪ್ರತಿಯಿಲ್ಲದ ಮೂರ್ತಿಯ ಕಂಡು
ಕಲಿಯುಗಸಂಪನ್ನೆಯಾದೆನಯ್ಯ.
ಸರ್ವಸಮಯಾಚಾರವ ಕಂಡು ಸರ್ವಶೀಲವ ತಿಳಿದೆನಯ್ಯ ಸಂಗಯ್ಯ./183
ನಿಮರ್ೂಲವಾಯಿತ್ತಾಹಾ ನಿರಾಲಂಬವಾಯಿತ್ತಾಹಾ !
ನಿರಾಕುಳವಾಯಿತ್ತಾಹಾ !
ಪುಣ್ಯದಫಲ ತೋರಿ ಬಯಲನೆ ಕೂಡಿತ್ತು.
ಆ ಬಯಲು ನಿರ್ವಯಲಾಯಿತ್ತು.
ಆ ನಿರ್ವಲಯನುಡುಗಿ ನಿಜಸುಖಿಯಾದೆನಯ್ಯಾ ನಾನು.
ಸಂಗಯ್ಯನಲ್ಲಿ ನಿಶ್ಶೂನ್ಯವಾಯಿತ್ತಯ್ಯಾ./184
ನಿರೂಪ ರೂಪಿನಲ್ಲಿ ಅಡಗಿ,
ನಿರಾಲಂಬವಾಯಿತ್ತು ಬಸವನಲ್ಲಿ.
ನಿರಾಲಂಬಮೂರ್ತಿಯಲ್ಲಿ
ನಿರ್ಮಲಸುಧೆಯನನುಭವಿಸಿದೆನಯ್ಯಾ ನಾನು ಬಸವಾ.
ಅನುಭವಿಸಿ ಬಸವ ಕುಳವಳಿದು ಭ್ರಮೆಯಳಿದೆನಯ್ಯಾ ಸಂಗಯ್ಯಾ./185
ನಿರೋಧವಳಿದು ನಿರಾಕಾರವಾಯಿತ್ತು ಬಸವಾ,
ನಿರಾಕುಳದ ಭಕ್ತಿ ನಿರ್ವಯಲಾಯಿತ್ತು ಬಸವಾ.
ನಿಃಪ್ರಪಂಚಿಕನಾದೆ ಬಸವಾ, ನಿಃಪರಿಣಾಮಿಯಾದೆ ಬಸವಾ,
ರೂಪು ನಿರೂಪುವಿಡಿದ ಬಸವಾ.
ಸಂಗಯ್ಯನ ಮನಃಪ್ರೀತಿಯ ಬಸವಾ ಭರಿತ ನಿರ್ಭರಿತವಾಯಿತು./186
ನಿಷ್ಠೆಯೆಂಬುದನೊಂದ ತೋರಿ
ಇಷ್ಟಪ್ರಾಣಭಾವದಲ್ಲಿ ಕಷ್ಟವನಳಿದೆನಯ್ಯ.
ಕಾಯದ ಸಂಗವಳಿದು ಕಾಮನಿಃಕಾಮವಾಗಿ ನಿಂದೆನಯ್ಯ.
ಅನುಭವಸುಖವಳಿದು ಅಪ್ರತಿಮ ಇರವ ಕಂಡು ಬದುಕಿದೆನಯ್ಯ,
ಸಂಗಯ್ಯ ಬಸವನಡಗಿದ ಕಾರಣ ಕಾಯವ ನಾನಳಿದೆನು./187
ನೀರುಂಡ ಸಾರ ನಿಸ್ಸಾರವಾಯಿತ್ತಯ್ಯ.
ನಿರಾಳದಪದ ನಿಃಪ್ರಪಂಚಿನಲ್ಲಿ ಅಡಗಿತ್ತಯ್ಯ.
ಅಂಗದ ಸಂಗವ ಹರಿದು ನಿರಂಗಿಯಾದೆ ನಾನು.
ಉಲುಹಡಗಿದೆ ನಾನು ಸಂಗಯ್ಯನಲ್ಲಿ ಪ್ರಸನ್ನ ಮೂರುತಿಯುಳ್ಳವಳಾದೆನಯ್ಯ./188
ನೆನಹು ನಷ್ಟವಾಯಿತ್ತು ಬಸವಾ, ಲೀಯವಾಗಲು.
ಇತರೇತರ ಮಾರ್ಗವನರಿಯದೆ ಇದ್ದೆನಯ್ಯಾ ಬಸವಾ,
ಸಂಗಯ್ಯನಲ್ಲಿ ಲೀಯವನೆಯ್ದಲು./189
ನೆನೆಯಲಾಗದು ಎನ್ನ ಹೆಣ್ಣೆಂದು ನೀವು ಭಕ್ತರು.
ನೆನೆಯಲಾಗದು ಎನ್ನ ಭಕ್ತೆಯೆಂದು ನೀವು ಶರಣರು.
ನೆನೆಯಲಾಗದು ಎನ್ನ ಮುಕ್ತೆಯೆಂದು ನೀವು ಶರಣರು.
ನೆನೆಯಲಾಗದು ಎನ್ನ ರೂಪು ನಿರೂಪಿಯಾದವಳೆಂದು ನೀವು
ನೆನದಹನೆಂಬ ನೆನಹು ನೀವೆ ನೀವೆಯಾದ ಕಾರಣ
ಸಂಗಯ್ಯನಲ್ಲಿ ಪುಣ್ಯವಿಲ್ಲದ ಹೆಣ್ಣ ನೀವೇತಕ್ಕೆ ನೆನವಿರಿ ?/190
ನೆಲೆಯಿಲ್ಲದ ಜಲವ ಹೊಕ್ಕಡೆ
ಆ ಜಲದ ನೆಲೆಯೆ ಕಾಣಬಂದಿತ್ತು ಎನಗೆ.
ಪಕ್ಷಿಯ ರೆಕ್ಕೆಯ ಕಂಡು ಅಕ್ಕಜಂ ಭೋ ಎನಲೊಡನೆ,
ಆ ನೀರೊಳಗೆ ಉದಾರತೆಯಾದೆನಯ್ಯಾ ನಾನು.
ಸಂಗಯ್ಯನಲ್ಲಿ ಬಸವಯ್ಯ ಕುರುಹಳಿದಮೂರ್ತಿಯಾದನು./191
ನೋಡುವಡೆ ಎನ್ನ ಕಣ್ಣಿಂಗೆ ಗೋಚರವಲ್ಲ
ಆ ಕಾಯ ಕಲ್ಯಾಣ.
ಆ ಕಾಯ ಕಲ್ಯಾಣದೊಳಗೆ
ಸರೋವರದಷ್ಟದಳಂಗಳ ಮಧ್ಯದಲ್ಲಿ ಹೆಟ್ಟಿಗೆಯಿರಲು
ಆ ಹೆಟ್ಟಿಗೆಯ ಕುರುಹ ಕಂಡು ನಿಷ್ಠೆಯ ಇರವನರಿದೆನಯ್ಯ ಸಂಗಯ್ಯ./192
ಪಯಣವಿಲ್ಲದೆ ಗಮನವ ಕಂಡವರುಂಟೆ ?
ಗತಿಯಿಲ್ಲದೆ ಪೂಜೆಯ ಮಾಡಿದವರುಂಟೆ ?
ಹೊಲನಿಲ್ಲದೆ ಫಲವನುಂಡವರುಂಟೆ ?
ಮೃಗವಿಲ್ಲದೆ ಬೇಂಟೆಯನಾಡಿದವರುಂಟೆ ?
ಅರಸಿಯಿಲ್ಲದೆ ಅರಸಾದವರುಂಟೆ ? ಸಂಗಯ್ಯ, ಮುಖವಿಲ್ಲದ ಪ್ರಸಾದವನುಂಡವರುಂಟೆ ?/193
ಪರಮನ ಹಂಗು, ಪ್ರಾಣದ ಸಂಗ ಉಂಟೆಂದೆನಲಿಲ್ಲ ಬಸವಾ.
ಪರಶಿವನ ವಿಲಾಸದಲ್ಲಿರಲೊಂದುದಿನ
ಬಸವಾ ಎಂಬ ಮೂರಕ್ಷರವ ಕಂಡೆ.
ಬಸವಾ ಎಂಬ ಮೂರಕ್ಷರವ ಕಂಡು,
ಪ್ರಾಣಲಿಂಗಸಂಬಂದಿಯಾದೆನು ನಾನು ಬಸವಾ.
ಆ ಪ್ರಣವದ ಹೊಳಹನಎಯಹೋದಡೆ,
ಆ ಬೆಳಗು ಅಲ್ಲಿ ಕಾಣಬಂದಿತ್ತಯ್ಯಾ ಬಸವಾ. ಸಂಗಯ್ಯಾ, ಸ್ವಯಲಿಂಗಸಂಬಂದಿಯಾನಾದೆನು./194
ಪಾರ್ವತಿಯ ರೂಪಕಂಡು ಪರಶಿವನಸಂಗ ನಿಸ್ಸಂಗವಾಗಿ,
ತಾಯಿಮಗನಂಗದಿಂದ ತನುವಳಿದು ನಿರಾಭಾರರೂಪವನೆಯ್ದಿ,
ಬಸವನ ಅನುಭವದಿಂದ ವಿವರವ ಕಂಡು ವಿಚಾರಪತ್ನಿಯಾದೆನಯ್ಯಾ ಸಂಗಯ್ಯಾ./195
ಪ್ರಣವದ ಹೆಸರಿಲ್ಲ ಬಸವಂಗೆ.
ಪ್ರಣವದ ಕುರುಹಿಲ್ಲ ಬಸವಂಗೆ.
ಪ್ರಣವದ ನೆಲೆಯಿಲ್ಲ ಬಸವಂಗೆ.
ಪ್ರಣವದ ರೂಪಿಲ್ಲ ಬಸವಂಗೆ.
ಪ್ರಣವವನೋದಿ ಮೊದಲಿಲ್ಲ ಬಸವಂಗೆ ಪ್ರಣವಕ್ಕೆ ಅಪ್ರಮಾಣನಾದ ನಮ್ಮ ಬಸವನು ಸಂಗಯ್ಯಾ./196
ಪ್ರಣವಾಕ್ಷರವ ಕಂಡು ಪ್ರಣವರೂಪನರಿದೆನಯ್ಯ
ಪ್ರಣವದ ಆಯತವ ತಿಳಿದು ಹೊರೆಯಳಿದುಳಿದೆನಯ್ಯ ಸಂಗಯ್ಯ./197
ಪ್ರಸಾದಿಗಳು ಪ್ರಸಾದಿಗಳೆಂದೆಂಬರಯ್ಯ,
ತಾವು ಪ್ರಸಾದಿಗಳಾದ ಪರಿಯೆಂತಯ್ಯ ?
ಪರಿಪೂರ್ಣದ ನೆಲೆಯ ತಿಳಿದು
ಪರಂಜ್ಯೋತಿಯ ಅನುಭವವನರಿಯದನ್ನಕ್ಕ
ತಾವು ಪ್ರಸಾದಿಗಳಾದ ಪರಿಯೆಂತಯ್ಯ ?
ಪರಮಸುಖದ ಅನುಭವವನರಿದು
ಇತರೇತರ ಮಾರ್ಗವ ಕಾಣದೆ
ಬಯಲಕೂಡಿದಾತ ನಮ್ಮ ಬಸವನೆ ಪ್ರಸಾದಿಯಲ್ಲದೆ ಮತ್ತಾರಿಗೂ ಪ್ರಸಾದಿಸ್ಥಲ ಸಾಧ್ಯವಾಗದಯ್ಯ ಸಂಗಯ್ಯ/198
ಪ್ರಾಣದ ಹಂಗೆಮಗಿಲ್ಲ,
ಪ್ರಸಾದದ ಹಂಗೆಮಗಿಲ್ಲ,
ಪರಿಣಾಮದ ಹಂಗೆಮಗಿಲ್ಲ,
ಈ ಕಾಯದ ಹಂಗೆಮಗೆ ಮುನ್ನವೆಯಿಲ್ಲ.
ಇಹಪದಿರದ ಹಂಗು ಎಮಗೆ ಮುನ್ನವೆಯಿಲ್ಲ. ಸಂಗಯ್ಯ, ನೀನಿಲ್ಲದ ಕಾರಣ ನಾ ಮುನ್ನವೆಯಿಲ್ಲ./199
ಪ್ರಾಣಯೋಗವ ಕಂಡು ಮನಯೋಗ ಬಳಲಿತ್ತು.
ಮನಯೋಗವ ಕಂಡು ತನುಯೋಗ ಬಳಲಿತ್ತು.
ಈ ತ್ರಿವಿಧವೂ ಬಳಲಿದ ಬಳಲಿಕೆಯನರಿಯದೆ
ಮರಹು ನಷ್ಟವಾಯಿತ್ತಯ್ಯ, ಸಂಗಯ್ಯನ ಗುರುಬಸವ ನೀನಡಗಿದ ಬಳಿಕ./200
ಪ್ರಾಣವಿಲ್ಲ ಪ್ರಸಾದವಿಲ್ಲ
ಪರಿಣಾಮದರುಹು ಮುನ್ನವೆಯಿಲ್ಲ.
ಪರವಶದನುಭಾವವ ಕಂಡು
ಅನುಭವಸುಖಿಯಾದೆನಯ್ಯ, ಆನು ಅನುಭವಪರಿಣಾಮಿಯಾದೆನಯ್ಯ ಸಂಗಯ್ಯ./201
ಪ್ರಾಣವಿಲ್ಲದ ಹೆಣ್ಣು ನಾನಾಗಿರಲು,
ಆ ಪ್ರಣವಿಲ್ಲದ ಕಾಯಕ್ಕೆ ಪ್ರಾಣ ಪ್ರಸನ್ನರೂಪಾಯಿತ್ತು.
ಎಲ್ಲವನಳಿದು ಎಲ್ಲವ ತಿಳಿದು ಎಲ್ಲಾ ವಸ್ತುವ ಕಂಡು ನಿರ್ಲೆಪಿಯಾದೆನಯ್ಯ ಸಂಗಯ್ಯ./202
ಬಣ್ಣದ ಪುತ್ಥಳಿಯ ಮಾಡಿ ಸಲಹಿದರೆನ್ನ ನಮ್ಮಯ್ಯನವರು.
ಕಾಯವನಳಿದವಳೆಂದು ಹೆಸರಿಟ್ಟರೆನಗೆ ಎಮ್ಮಯ್ಯನವರು.
ವ್ರತವಳಿದ ಪ್ರಪಂಚಿ ಎಂದರೆನ್ನ ಎಮ್ಮಯ್ಯನವರು.
ಸಂಸಾರ ಬಂಧವ ಹರಿದು ನಿಃಸಂಸಾರಿಯಾದೆನಯ್ಯ.
ಸಂಗಯ್ಯ, ಎಮ್ಮಯ್ಯನವರ ಕರುಣದಿಂದ ಆನು ಪರಮ ಪ್ರಸಾದಿಯಾದೆನಯ್ಯ./203
ಬಸವಣ್ಣನೆ ಗುರುವೆಂದು ಭಾವಿಸಲಾಗಿ,
ಎನಗೆ ಬಸವಣ್ಣನೆ ಗುರುವಾದನಯ್ಯಾ.
ಚೆನ್ನಬಸವಣ್ಣನೆ ಲಿಂಗವೆಂದು ಭಾವಿಸಲಾಗಿ,
ಎನಗೆ ಚೆನ್ನಬಸವಣ್ಣನೆ ಲಿಂಗವಾದನಯ್ಯಾ.
ಪ್ರಭುದೇವರೆ ಜಂಗಮವೆಂದು ಭಾವಿಸಲಾಗಿ,
ಎನಗೆ ಪ್ರಭುದೇವರೆ ಜಂಗಮವಾದನಯ್ಯಾ.
ಚಿಲ್ಲಾಳದೇವನೆ ದೇಹವೆಂದು ಭಾವಿಸಲಾಗಿ,
ಎನಗೆ ಚಿಲ್ಲಾಳದೇವನೆ ದೇಹವಾದನಯ್ಯಾ.
ಇಹಃಪಗೆಯಾಂಡರೆ ಧನವೆಂದು ಭಾವಿಸಲಾಗಿ,
ಇಹಃಪಗೆಯಾಂಡರೆ ಧನವಾದನಯ್ಯಾ.
ಇಂತೀ ಐವರ ಕಾರುಣ್ಯಪ್ರಸಾದವನುಂಡು ಮಹಾಮನೆಯಲ್ಲಿ ಸುಖಿಯಾದೆ, ಸಂಗಯ್ಯಾ./204
ಬಸವನ ಹೆಸರಳಿಯಿತ್ತು, ಬಸವನ ಕುರುಹಳಿಯಿತ್ತು,
ಬಸವನ ಭಾವವಳಿಯಿತ್ತು, ಬಸವನಮೂರ್ತಿಯ ಕರ್ಮವ ಹರಿದು
ಆನು ನಿಃಕರ್ಮಿಯಾದೆನಯ್ಯಾ.
ನಿಃಕರ್ಮಿಯಾದ ಕಾರಣ ಅರಿವನರಿದು
ಪ್ರಣವಮೂರ್ತಿಯ ತಿಳಿದು ಆನು ಬದುಕಿದೆನಯ್ಯಾ ಸಂಗಯ್ಯಾ./205
ಬಸವನರಿವು ನಿರಾಧಾರವಾಯಿತ್ತು.
ಬಸವನ ಮಾಟ ನಿರ್ಮಾಟವಾಯಿತ್ತು.
ಬಸವನಭಕ್ತಿ ಬಯಲನೆ ಕೂಡಿ ನಿರ್ವಯಲಾಯಿತ್ತು.
ಬಸವಾ ಬಸವಾ ಬಸವಾ ಎಂಬ ಶಬ್ದವಡಗಿ ನಿಶ್ಶಬ್ದವಾಯಿತ್ತಯ್ಯಾ ಸಂಗಯ್ಯಾ./206
ಬಸವಯ್ಯಾ ಬಸವಯ್ಯಾ ಹುಯ್ಯಲಿಲ್ಲದ ಹುಲ್ಲೆಯಾದೆಯಾ ?
ಬಸವಯ್ಯಾ ಬಸವಯ್ಯಾ ಕಾಯವಿಲ್ಲದ ದೇಹಿಯಾದೆಯಾ ?
ಬಸವಯ್ಯಾ ಬಸವಯ್ಯಾ ಕರ್ಮವಿರಹಿತನಾದೆಯಾ ? ಸಂಗಯ್ಯನಲ್ಲಿ ನಿರ್ಮಳಮೂರ್ತಿ ಬಸವಯ್ಯಾ./207
ಬಸವಾ ಬಸವಾ ಎಂಬ ಶಬ್ದವಡಗಿತ್ತು.
ಬಸವ ಬಸವಾಯೆಂಬ ರೂಪು ನಿರೂಪಾಯಿತ್ತು.
ಬಸವನ ಕಾಯವಳಿದು ನಿರಾಕುಳವಾಗಲು
ಆನು ಬಸವಾ ಬಸವಾ ಬಸವಾಯೆಂದು ಬಯಲಾದೆನಯ್ಯಾ./208
ಬಸವಾ, ಹಂಗನಳಿದೆ ನಾ ನಿಮ್ಮ ಬಸವಾ.
ನಿಸ್ಸಂಗಿಯಾನಾದೆನಯ್ಯಾ ಬಸವಾ.
ಮುಖ ವಿಮುಖವಾಯಿತ್ತು.
ಬಸವನಿರವನರಿದು ಬಯಲಾನುಭಾವದಿಂದ ಮಾತಿನ ಮುಖವನರಿದು,
ಬಸವನ ಬಯಲವಿಚಾರವ ತಿಳಿದು ಭ್ರಮೆಯನಳಿದು ಆನು ಬದುಕಿದೆನಯ್ಯಾ ಸಂಗಯ್ಯಾ./209
ಬಹಿರಂಗದಾರೋಗಣೆಯ ರುಚಿಯನರಿಯಬಾರದು
ಏನು ಕಾರಣವೋ ಲಿಂಗಯ್ಯ ?
ಅಂತರಂಗದಾರೋಹಣೆಯ ಮಹಂತನೇ ಬಲ್ಲನೋ ಲಿಂಗಯ್ಯ.
ಅರಿದು ಮರದವಂ ವಿರೋಧನೆ ?
ಸಜ್ಜನಕ್ಕೆ ಉಪಸಾಕ್ಷಿಯುಂಟೇ ಲಿಂಗಯ್ಯಾ ?
ಅರುಹು ಸೋಂಕಿದ ಬಳಿಕ ನೋಡಲಿಲ್ಲ ಕೂಡಲಿಲ್ಲ ಸಂಗಯ್ಯನ./210
ಬುದ್ಧಿಯನಳಿದು ನಿರ್ಬುದ್ಧಿವಂತಳಸಂಗದಿಂದ
ನಾನು ಸುಖವ ಕಂಡೆನೆಂದು ನುಡಿದನೆಂದೆ ಬಸವಾ.
ಬಸವನ ಹಂಗುಹರಿದು ಆನು ಸಂಗಯ್ಯನಲ್ಲಿ ಸುಖಿಯಾದೆನಯ್ಯಾ ಸಂಗಯ್ಯಾ./211
ಬೆಳಗಿನಪ್ರಭೆ ಥಳಥಳಿಸಿ ಹೊಳೆಯಲು,
ಆ ಬೆಳಗಿನೊಳಗೆ ಬೆಳೆದ ಶಿಶುವಾನಯ್ಯಾ.
ಕಳೆಯರಿಯದೆ ಬೆಳೆದೆನು, ತಿಳುಹಿಲ್ಲದೆ ನಿಂದೆನು.
ಸಂಗಯ್ಯನಲ್ಲಿ ಬಸವಾ ಬಸವಾ ಬಸವಾ ಎನುತಿರ್ದೆನು./212
ಬ್ರಹ್ಮದ ನೆಮ್ಮುಗೆಯನಳಿದೆ
ಭಾವದ ಸೂತಕವ ಕಳೆದೆ
ಎನಗೆ ಹಿತವರಿಲ್ಲದೆ ನಾನಳಿದೆ.
ಏನಯ್ಯ ಏನಯ್ಯವೆಂಬ ಶಬ್ದವಿಂದಿಂಗೆ
ಬಯಲೆ ಪರಿಣಾಮದ ಸುಖಬ್ರಹ್ಮದಲ್ಲಿಯಡಕವೆ ಎನಗೆ ?
ಹುಟ್ಟಿಲ್ಲ ಹೊಂದಿಲ್ಲದ ಮೂರ್ತಿಯಾದೆನೆ. ಸಂಗಯ್ಯ, ಬಸವನ ಕೂಡಿ ಎನ್ನ ಕಾಯವ ನಾನಳಿದೆನೆ./213
ಬ್ರಹ್ಮದ ಮುಂದೆ ಒಂದು ಬ್ರಹ್ಮದ ಕುರುಹ ಕಂಡೆ
ಆ ಬ್ರಹ್ಮಕ್ಕೆ ನೆಲೆಯ ಸುಕೃತವ ಕಂಡೆ ನೆಲೆಯನರಿದು ನಿರುಪಮಾಕಾರಳಾದೆ ನಾನು ಸಂಗಯ್ಯ/214
ಬ್ರಹ್ಮವ ಕೂಡಲು ಆ ಬ್ರಹ್ಮವನರಿದು
ಸುಯ್ಯನೆ ಕಂಡು ಸುಖವನರಿಯಲು
ಹೇಳಲಿಲ್ಲ ಕೇಳಲಿಲ್ಲ.
ಎರಡರ ಸಂಗ ಪರಿಪೂರ್ಣವಾಗಿ ನಾನು ಬದುಕಿದೆನಯ್ಯ ಸಂಗಯ್ಯ./215
ಭಕ್ತಿಪ್ರಸಾದ, ಮುಕ್ತಿಪ್ರಸಾದ,
ಇರಪರಪ್ರಸಾದದ ನೆಲೆಯ ಕಂಡು ಸುಖಿಸಿದೆವೆಂಬರು.
ತಾವರಿಯದ ವಿವರ ತಮಗೆಲ್ಲಿಯದೊ ?
ಸಂಗಯ್ಯನಲ್ಲಿ ಬಸವ ಕಾಯರಹಿತನಲ್ಲದೆ ಮತ್ತಾರನೂ ಕಾಣೆನಯ್ಯಾ./216
ಭಕ್ತಿಯಿಲ್ಲದ ಕಿಂಕುರ್ವಾಣವ ಮಾಡಹೋದರೆ
ಆ ಭಕ್ತಿ ಗಹಗಹಿಸಿ ನಕ್ಕಿತ್ತು.
ಕಿಂಕುರ್ವಾಣವಿಲ್ಲದಿದ್ದರೆ ಜ್ಞಾನವಿಲ್ಲದಾಯಿತ್ತು.
ಆ ಜ್ಞಾನ ಜ್ಞಾನಕ್ಕೆ ಸುಯಿದಾನವೈದಲು ಭಕ್ತಿನೆಲೆಯಾಯಿತ್ತಯ್ಯ ಸಂಗಯ್ಯ./217
ಭಾವವಿಲ್ಲದ ರೂಪೆ ರೂಪಿಲ್ಲದೆ ಅಡಗಿದೆ.
ನಿಯಮವಿಲ್ಲದ ಕಳೆಯೆ ಕಳೆಯಿಲ್ಲದೆ ಅಡಗಿದೆ.
ಕಾಯವಿಲ್ಲದ ಸುಖವೆ ಸುಖವಿಲ್ಲದೆ ಅಡಗಿದೆ.
ಕರಣಂಗಳ ಸಂಗವನಳಿದು ಕರ್ಮದ ಮಾಟಕೂಟವ ಕಳೆದು
ಕಲ್ಪಿತನಷ್ಟವಾಗಿ ಬಸವಾ ಬಸವಾ ಬಸವಾ ಎಂಬ ಶಬ್ದ
ನಿಶ್ಶಬ್ದವಾಯಿತ್ತಯ್ಯಾ ಸಂಗಯ್ಯಾ./218
ಭೃತ್ಯಾಚಾರವಳಿಯ ಭೃತ್ಯವನನುಭವಿಸಿದೆನು.
ಅಪ್ರತಿಮಲಿಂಗ ನಿಜಾನಂದ ಸುಖವ ಕಂಡು ಸುಯಿದಾನಿಯಾನಾದೆನಯ್ಯ,
ಎಲೆಯಯ್ಯ ಏನೆಂದೆನ್ನೆ ನಿಮ್ಮ ಮಹದ ಆಯತವ ? ಮಹದನುಭವವ ಕಂಡು ಸುಖಿಯಾದೆನಯ್ಯ ಸಂಗಯ್ಯ./219
ಮಂಗಳಸೂತ್ರವ ಕಟ್ಟಲು
ಆ ಮಂಗಳಸೂತ್ರಕ್ಕೆ ಮಣಿಯ ಪವಣಿಸಲು
ಆ ಮಣಿಯ ದ್ವಯದ್ವಾರದಲ್ಲಿ ದಾರವಿದಾರವಾಯಿತ್ತು.
ಆ ದ್ವಾರದ ಮಧ್ಯದಲ್ಲಿ ಬೆಳಗುದೋರಿತ್ತಯ್ಯ ಸಂಗಯ್ಯನಲ್ಲಿ ಹಿಂಗದ ಸುಖವ ಕಂಡೆನು./220
ಮಂಡೆಯಿಲ್ಲದೆ ಪುಷ್ಪವ ಮುಡಿಯಲು
ಆ ಮುಡಿವ ಪುಷ್ಪ ಕಂಪಿಲ್ಲದೆಯಡಗಿತ್ತು.
ಕಡಲೇಳು ತುಂಬಿದ ಹೂವತಂದು ಮುಡಿಯಲು
ರೂಪಾಕಾರವಾಯಿತ್ತು. ತದ್ರೂಪವಡದು ಸಂಗಯ್ಯನಲ್ಲಿ ಪುಷ್ಪಪರಿಮಳಿಸಿತ್ತಯ್ಯ./221
ಮಂತ್ರಾಕ್ಷತೆಯನರಿದು ಮಂತ್ರಸರವ ಪರಿಗೊಳಿಸಲು
ಆ ಪರಿಯಯಿರವನರಿದು ಪರವಶಳಾದೆನು. ಆ ಪರವಶದ ಸುಖವ ಕಂಡು ಪರಿಣಾಮಿಯಾದೆನಯ್ಯ ಸಂಗಯ್ಯ/222
ಮಡದಿ ಎಂಬ ಶಬ್ದ ನಿಶ್ಶಬ್ದವಾದಡೆ ನಾನೀಗ ನಿಜಸುಖಿ ಬಸವಾ.
ಬಸವನಂಗವ ಕಂಡಡೆ ನಾನು ಪರಿಣಾಮಿ,
ಬಸವನ ಹರುಷವ ಕಂಡರಿದಡೆ ನಾನೈಕ್ಯಸಂಪನ್ನೆಯಯ್ಯಾ ಸಂಗಯ್ಯಾ./223
ಮಡದಿ ಎನಲಾಗದು ಬಸವಂಗೆ ಎನ್ನನು.
ಪುರುಷನೆನಲಾಗದು ಬಸವನ ಎನಗೆ.
ಉಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು,
ಬಸವನೆನ್ನ ಶಿಶುವಾದನು.
ಪ್ರಮ ಥರು ಪುರಾತರು ಸಾಕ್ಷಿಯಾಗಿ ಸಂಗಯ್ಯನಿಕ್ಕಿದ ದಿಬ್ಯವ ಮೀರದೆ ಬಸವನೊಳಗಾನಡಗಿದೆ./224
ಮಧ್ಯಕಲ್ಪ ನಾಸ್ತಿಯಾಯಿತ್ತೆ ಬಸವಾ ?
ಪ್ರಾಣ ಪ್ರಸಾದದಲ್ಲಿ ಅಡಗಿತ್ತೆ ಬಸವಾ ?
ಭಕ್ತಿ ಬಯಲಾಯಿತ್ತೆ ಬಸವಾ ?
ಭಾವ ನಿರ್ಭಾವವಾಯಿತ್ತೆ ಬಸವಾ ?
ಕಲ್ಪಿತಗುಣ ನಾಸ್ತಿಯಾಯಿತ್ತೆ ಬಸವಾ ? ಮನೋಮುಕ್ತವಾಯಿತ್ತೆ ಸಂಗಯ್ಯನ ಗುರುಬಸವಾ ?/225
ಮನದ ಮಧ್ಯದಮೂರ್ತಿಯನರಿದು
ಆ ಮೂರ್ತಿಯ ಇರವನರಿದು
ಶಿವಸೂತ್ರಿಯಾದೆನಯ್ಯ.
ಶಿವಸುಖಸಂಪದವ ಕಂಡು ಪ್ರಣವಾಕಾರವ ನಿರವಯವ ಮಾಡಿಯಾನು ಬದುಕಿದೆನಯ್ಯ ಸಂಗಯ್ಯ./226
ಮನದ ಹಂದೆ ಏತಕ್ಕೆ ? ನೀ ದಿರನೆಂಬೆ.
ನಿನ್ನ ದಿರವ ನಾ ಕಂಡೆ; ನಾನು ದಿರಳೆಂಬುದ ನೀನೇ ಬಲ್ಲೆಯಯ್ಯ ಸಂಗಯ್ಯ./227
ಮನವಿಲ್ಲ ಬಸವಯ್ಯಂಗೆ, ತನುವಿಲ್ಲ ಬಸವಯ್ಯಂಗೆ,
ನೆನಹಿನ ತನುಮನ ನಷ್ಟವಾದಬಳಿಕ, ಸಂಗಯ್ಯನಲ್ಲಿ ಬಸವಯ್ಯನ ರೂಪು ನಿರೂಪಾದಬಳಿಕ./228
ಮನವಿಲ್ಲದ ಮಾತನಾಡಹೋದರೆ
ಆ ಮಾತು ಸೊಗಸದೆಮ್ಮಯ್ಯಂಗೆ,
ಮನ ಘನವಾಯಿತ್ತೆಂದರೆ
ಆ ಮಾತು ಸೊಗಸದೆಮ್ಮಯ್ಯಂಗೆ,
ಹೆಸರಿಲ್ಲ ರೂಪೆಂದರೆ
ಆ ಮಾತು ಸೊಗಸದೆಮ್ಮಯ್ಯಂಗೆ,
ಸಂಗಯ್ಯ ಬಸವನೆಂದರೆ[ರೆ]
[ಆ ಮಾತು] ಸೊಗಸದೆಮ್ಮಯ್ಯಂಗೆ./229
ಮನವಿಲ್ಲದೆ ತನುವ ಕುಡಹೋದರೆ
ಆ ತನು ಮನದಲ್ಲಿ ನಿಂದಿತ್ತು,
ಮನತನುವಿನ ಸಂಗವಡಗಲು
ಉಭಯ ಸಮಾದಿ ಸಾಧ್ಯವಾಯಿತ್ತಯ್ಯ.
ಹಿರಿಯತನದ ರೂಪ ಕಾಣಲು
ಪರಿಪರಿಯ ಭ್ರಮೆಯಡಗಿತ್ತಯ್ಯ.
ಇಷ್ಟ ಪ್ರಾಣದ ಭಾವದ ಸೂತಕ ಹಿಂಗಲು ಆನು ಸಂಗಯ್ಯನಲ್ಲಿ ಬಸವನನುಭವಿಯಾದೆನಯ್ಯ./230
ಮನವೊಂದು ರೂಪಾಗಿ ಧನವೊಂದು ರೂಪಾಗಿ
ಅಡಗಿದವು ಅಲ್ಲಲ್ಲಿ.
ಕನಕದ ಬಾಗಿಲ ಕಂಡು
ಆ ಬಾಗಿಲು ಬಯಲನನುಕರಿಸುವ ಸುಖವ ಕಂಡು ಬದುಕಿದೆನಯ್ಯ ಸಂಗಯ್ಯ./231
ಮಲ ಮೂತ್ರ ವಿಸರ್ಜನೆಯಿಲ್ಲದೆ
ಆ ಮಲ ಮೂತ್ರ ವಿಸರ್ಜನೆಯ ಮಾಡಿದ ಶರಣ
ಮಲ ಮಾಯವ ಹೊದ್ದದೆ
ಆ ಮಲ ನಿರ್ಮಲಾಕಾರನಾದ ಶರಣ ಸಂಗಯ್ಯನಲ್ಲಿ ಬಸವ ಪ್ರಸಾದಿ ಪರಿಣಾಮಿಯಾದೆನು./232
ಮಾಟಕೂಟ ಸಮಯಾಚಾರ ಸದ್ಭಕ್ತಿಯ ನೆಲೆಯ
ನಮ್ಮ ಬಸವಯ್ಯನಲ್ಲದೆ ಮತ್ತಾರೂ ಅರಿಯರು.
ಅರಿವಿನ ಕುರುಹನಾತ್ಮದಲ್ಲಿ ನಿಲಿಸಿ,
ಶಿವಕೂಟಸಮಾದಿಯ ಕಂಡು ಆನು ಬದುಕಿದೆನಯ್ಯಾ ಸಂಗಯ್ಯಾ./233
ಮಾಟವಿಲ್ಲದ ಸಮಯಾಚಾರವ ಮಾಡಹೋದೆ ಬಸವಾ.
ಆ ಸಮಯಾಚಾರವನರಿದು ಕೂಡಿದೆ ಬಸವಾ.
ಆ ಮಾಟ ಸುಯಿದಾನವಾಯಿತ್ತಯ್ಯಾ ಬಸವಾ.
ಆ ಸುಯಿದಾನದಸುಖವನರಿಯಲು ಸಂಗಯ್ಯನಲ್ಲಿ ಬಸವನೊಂದೆ ರೂಪಾದ/234
ಮಾತನಳಿದು ಮನವಳಿದು
ಬಿತಿಯ ಕಳದು ಪ್ರಸಂಗವ ಕಳದು
ಪ್ರಸಾದವನಳಿದು ಪ್ರಸನ್ನ ಹಿಂಗಿ ಪ್ರಭೆಯ ಕಂಡು
ಗಮನ ನಿರ್ಗಮನವಾಯಿತ್ತಯ್ಯ. ಸಂಗಯ್ಯ, ನಿಮ್ಮ ಬಸವನ ಹಂಗ ಕಳದೆ ನಾನು./235
ಮಾತಿನ ಹಂಗಿಲ್ಲದವಳಾದೆ ನಾನು.
ಅಜಾತನ ಒಲುಮೆಯಿಲ್ಲದವಳಾದೆ ನಾನು.
ಪ್ರಣವದ ಹಂಗಿಲ್ಲದವಳಾದೆ ನಾನು.
ಪ್ರಸಾದದ ಕುರುಹಿಲ್ಲದವಳಾದೆ ನಾನು.
ಪ್ರಯಾಣದ ಗತಿಯನಳಿದು
ಪರಂಜ್ಯೋತಿ ವಸ್ತುವ ಕಂಡು ನಾನು ಬದುಕಿದೆನಯ್ಯ ಸಂಗಯ್ಯ./236
ಮಾತಿನ ಹಂಗೇತಕ್ಕೆ, ಮನವೇಕಾಂತದಲ್ಲಿ ನಿಂದ ಬಳಿಕ, ಬಸವಯ್ಯಾ ?
ಅಜಾತನ ಒಲುಮೆ ಏತಕ್ಕೆ, ಅರ್ಪಿತದ ಹಂಗಹರಿದಬಳಿಕ, ಬಸವಯ್ಯಾ ?
ರಿನಗೆ ಸಮಯಾಚಾರವಿನ್ನೇಕೆ, ಭಕ್ತಿಭಾವ ನಷ್ಟವಾದಬಳಿಕ, ಬಸವಯ್ಯಾ ?
ಮಾತಿನ ಸೂತಕ ಹಿಂಗಿ ಮನೋಲೀಯವಾಯಿತ್ತಯ್ಯಾ, ಸಂಗಯ್ಯಾ, ಬಸವ ಕುರುಹಿಲ್ಲದಮೂರ್ತಿಯಾದ ಕಾರಣ./237
ಮಾತಿಲ್ಲದ ಮಥನವ ಮಾಡಿ ಮೆರದೆ ಬಸವಾ.
ನೀತಿಯಿಲ್ಲದೆ ನಿಜವ ತೋರಿ ಮೆರದೆ ಬಸವಾ.
ಅನಿತನಿತು ತೃಪ್ತಿಯಮಾಡಿ ತೋರಿದೆಯಯ್ಯಾ.
ನಿಮ್ಮಂಗ ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಲ್ಲಾ ಬಸವಾ./238
ಮಾತಿಲ್ಲದವನ ಕೂಡೆ ಮಾತನಾಡಹೋದಡೆ,
ರಿನ್ನ ಮಾತಿನ ಪ್ರಸಂಗವ ನುಡಿಯಲೊಲ್ಲ ಬಸವಯ್ಯನು.
ಮಾತಿನ ಹಂಗ ಹರಿದು, ಆ ಪ್ರಸಂಗದ ಸಂಗವ ಕೆಡಿಸಿ,
ಪರವಶನಾಗಿ ನಿಲಲು ಬಸವಯ್ಯನು, ಸಂಗಯ್ಯನಲ್ಲಿ ಹೆಸರಿಲ್ಲದ ವೃಕ್ಷವನರಿದ ಬಸವಯ್ಯನು./239
ಮಾತಿಲ್ಲವೆನಗೆದ ಆ ಮಾತು ನುಡಿಯಲಿಲ್ಲವೆನಗೆ.
ನೇಮವಳಿದು, ಸೀಮೆಯಕಳೆದು, ಉಭಯತನು ನಷ್ಟವಾಗಿ,
ಬಣ್ಣದ ಭ್ರಮೆಯಳಿದು, ಮೂರ್ತಿಯ ಕುರುಹ ನಷ್ಟವ ಮಾಡಿ,
ಸಂಗಯ್ಯನಲ್ಲಿ ಬಸವಭಾವವಿಲ್ಲದೆ ಬಯಲಾದೆನು./240
ಮಾಯದ ಮನದ ಕರ್ಮದ ಹಂಗಹರಿದು
ಅನುಭವವ ನನ್ನಲ್ಲಿಯಡಗಿಸಿ,
ನಾನು ನಮ್ಮಯ್ಯನಲ್ಲಿ ನಮಸ್ಕಾರವನಳಿದೆನಯ್ಯ.
ನಮಸ್ಕಾರವನಳಿದು ನಮೋ ವಿಶ್ವರೂಪಳಾದೆನಯ್ಯ ಸಂಗಯ್ಯ./241
ಮಾಹೇಶ್ವರರ ಸಂಗವಳಿದು ಮಹಾಲಿಂಗವ ಕಂಡೆನಯ್ಯ.
ಮಾಹೇಶ್ವರರಪ್ರತಿಮ ಪರಮಯೋಗಿಯರ
ಅನುವನರಿಯದೆ ಆನು ಮರದಿರ್ದ ಮರಹು
ವಿವೇಕಕಾಯವನಳಿದು
ವಿವಿಧಾಚಾರವನರಿದು ಆನು ಬದುಕಿದೆನಯ್ಯ ಸಂಗಯ್ಯ./242
ಮುಕ್ತಿಯನಳಿದು ನಿರ್ಮುಕ್ತಳಾದ ಕಾರಣ
ಮುಕ್ತಿಯಿಲ್ಲವಯ್ಯಾ ಬಸವಯ್ಯಾ ರಿನಗೆ.
ಸಂಗ ನಿಸ್ಸಂಗದವಳಾದ ಕಾರಣ
ರಿನಗೆ ಸಂಗದ ಸಂಗವಿಲ್ಲವಯ್ಯಾ ಬಸವಯ್ಯಾ.
ನನಗೇತರ ಪರಿಣಾಮದ ಕೂಟಪ್ರಭೆ ?
ವಿರೂಪಾಕ್ಷಸಂಗವನನುಭವಿಸಿದೆನಯ್ಯಾ ಬಸವಯ್ಯಾ. ಸಂಗಯ್ಯಾ, ಬಸವ ವರಪ್ರಣವಸ್ವರೂಪನಾಯಿತ್ತು./243
ಮುಖದಂತರದ ಬಾಗಿಲ ಮುಂದೆ
ಸುಖ ತೃಪ್ತಿಯ ನಿಜದವತಾರವನರಿದು
ನಿರ್ಮಲಾಕಾರವ ತಿಳಿದೆನಯ್ಯ.
ತಿಳುಹಿನ ತಿಳುಹ ತಿಳಿದು ಬೆಳವಿಗೆಯ ಸುಖವನರಿದು ಬದುಕಿದೆನಯ್ಯ ಸಂಗಯ್ಯ./244
ಮುಖವಿಲ್ಲದ ಕನ್ನಡಿಯ ನೋಡಲು,
ಆ ಕನ್ನಡಿಯ ರೂಪಿನೊಳಗೆ ಸಂಗಯ್ಯನ ರೂಪು ಕಾಣಬಂದಿತ್ತು.
ಆ ರೂಪನರಿದು ಪರಿಣಾಮವಕಂಡು ಬದುಕಿದೆನಯ್ಯಾ.
ಪ್ರಸನ್ನದವಳಾಗಿ ಪ್ರಭಾಪರಿಣಾಮಿಯಾದೆನು. ಗಮನದಸಂಗ ನಿಸ್ಸಂಗವಾಗಿ ರಿನಗಿರಪರವಿಲ್ಲವಯ್ಯಾ ಸಂಗಯ್ಯಾ/245
ಮುಗಿಸಿದೆ ಮುಗಿಸಿದೆ ಮನದಲ್ಲಿ ನಾನು ಬಸವಾ.
ಘನವ ಕಂಡೆ ಕಂಡೆ ಮನದಲ್ಲಿ ನಾನು ಬಸವಾ.
ತನುವಿಲ್ಲವೆನಗೆ ಬಸವಾ, ಸಂಗಯ್ಯಾ, ಬಸವನಳಿದಬಳಿಕ./246
ಮುನ್ನಲೊಂದು ಕಾಯವಿಡಿದು ನಾನು ಹುಟ್ಟಿ
ಆ ಹುಟ್ಟಿದ ಕಾಯಕ್ಕೆ ನಿಜದಮೂರ್ತಿಯ ಅನುವ ತಿಳಿದು
ವಿನಯಪರಳಾದೆನು
ವೀರತ್ವದ ಸಂಗದಮೂರ್ತಿಯನರಿದು ನಾನು ಬದುಕಿದೆನಯ್ಯ ಸಂಗಯ್ಯ./247
ಮುನ್ನಲೊಂದು ಶಿಶು ಹುಟ್ಟಿತ್ತು.
ಆ ಶಿಶುವಿನ ಕೈಯಲೊಂದು ಮಾಣಿಕ್ಯವ ಕೊಡಲು,
ಆ ಮಾಣಿಕ್ಯ ಹಲವು ವರ್ಣವನೆ ತೋರಿ ಬಯಲನೆ ನೆಮ್ಮಿತ್ತು.
ಮಾಣಿಕ್ಯದ ಕುರುಹಿಲ್ಲ, ಬಯಲಿಂಗೆ ಬಣ್ಣವಿಲ್ಲ, ಸಂಗಯ್ಯನಲ್ಲಿ ಹೆಸರಳಿದ ಬಸವಂಗೆ./248
ಮುನ್ನವೆ ಮುನ್ನವೆ ಹುಟ್ಟಿದೆ ನಾನು.
ಆ ಮುನ್ನವೆ ಮುನ್ನ ಆನು ಪ್ರಸನ್ನ ಮುಂಕೊಂಡ ಶಕ್ತಿಯಾದೆ.
ಶಕ್ತಿಸಂಗವಳಿದು ಸಮಯಾಚಾರವಳವಡಲು ಪ್ರಭಾಪೂರಿತಳಾಗಿ ಬದುಕಿದೆನಯ್ಯ ಸಂಗಯ್ಯ./249
ಮುನ್ನಳ ದೋಷವೆನ್ನ ಬೆನ್ನಬಿಡದಯ್ಯ,
ಮುನ್ನಳ ಪಾಪವೆನ್ನ ಹಿಂದುವಿಡಿದು ಮುಂದೆ ನಡೆಯಲೀಯದು.
ಕಾಮಿತ ನಿಃಕಾಮಿತವ ಕಂಡು
ಬಸವನನರಿಯದೆ ಕೆಟ್ಟ ಪಾಪಿಯಾನು.
ಶಬ್ದದ ಹಂಗಿಗಳಲ್ಲಯ್ಯ ನಾನು ಸಂಗಯ್ಯನಲ್ಲಿ ಸ್ವಯಲಿಂಗಸಂಬಂಧವೆನಗೆಂತಯ್ಯ ?/250
ಮುಯ್ಯೂರ ಮನೆಯೊಳಗೆ ನಾನು ಸಂಸಾರವ ಮಾಡುತ್ತಿರಲು,
ಮೂವರು ದಿಬ್ಬಣಿಗರು ಬಂದು
ಮುಖಕನ್ನಡಿಯ ತೋರಿ ಮುದ್ದುಗೈಯಲು
ಆನು ಮೂಲಪ್ರಣವಸ್ವರೂಪಳಾದೆನು.
ಹಿತಪತಿಸುತನ್ಯಾಯದಂತೆ
ಅಪ್ರತಿಮನ ಸುಖಕ್ಕೆ ಮನವನಿಂಬುಗೊಟ್ಟು
ಆನು ಉರಿಯುಂಡ ಕರ್ಪೂರದಂತೆ
ತೆರಹಿಲ್ಲದಿರ್ದೆನಯ್ಯಾ ಸಂಗಯ್ಯ ನಿಮ್ಮಲ್ಲಿ, ಬಸವಯ್ಯನೆನ್ನಲ್ಲಿ ಅಡಗಲು./251
ಮೂನೂಲನಳಿದೆ ಮುಖವ ಕಳದೆ
ಆ ಮುಖ ವಿಮುಖವಾಗಿ ವಿಚಾರವ ತಿಳಿದು
ವಿನೇಯಪರತತ್ತ್ವವನಳಿದು ನಿಃಶೂನ್ಯ ಶಬ್ದವಾಗಿ
ಉರಿಯುಂಡ ಕರ್ಪೂರದಂತೆ ತೆರಹಿಲ್ಲದೆ ನಿಂದೆನಯ್ಯ.
ನಿಂದು ನಿರ್ವಯಲಾಗಿ ಲಿಂಗ ಲಿಂಗಾಂಗಿಯಾನಾಗಿ
ನೀರೊಳಗೆ ನೀರು ಬೆರದಂತಾನಾದೆನಯ್ಯ ಸಂಗಯ್ಯ ಸಂಗಯ್ಯ ಶಿವಸೂತ್ರಧಾರಿಯಾನಾದೆನು./252
ಮೂರ್ತಿಯ ಸಂಗ ಮೂರಡಿಗೊಂಡಿತ್ತು.
ಆ ಮೂರ್ತಿಯ ಸಂಗ ನಿಸ್ಸಂಗವಾಯಿತ್ತು.
ಹೇಳಬಾರದ ಘನವ
ಆರಿಗೂ ಹೇಳದ ವಸ್ತುವ ಕಂಡು
ಹೆಸರಿಲ್ಲದೆ ನಿಂದೆ ನಾನು.
ಪ್ರಣವಾಕ್ಷರದ ಕುರುಹ ಕಂಡು ಪರವಶಳಾದೆನಯ್ಯ. ಏಕಾಕ್ಷರದ ಸಂಗ ನಿಸ್ಸಂಗವಾಯಿತ್ತಯ್ಯ ಸಂಗಯ್ಯ./253
ಮೂರ್ತಿಯನರಿದು ಮುಖ ವಿಕಸಿತವಾಯಿತ್ತಯ್ಯಾ.
ಬಸವಮೂರ್ತಿಯ ತನುವ ಕಂಡು ಬಸವನಲ್ಲಿ ಸ್ವಯಲಿಂಗಿಯಾದೆನಯ್ಯಾ ಸಂಗಯ್ಯಾ./254
ಮೂಲ ಪ್ರಣವ
ಆ ಮೂಲ ಪ್ರಣವದ ಮೂರುತಿ ಅನಾದಿ ಪ್ರಣವದ
ಆ ಪ್ರಣವದ ಸುಖವನರಿದು ಆನು ಬದುಕಿದೆನಯ್ಯ ಸಂಗಯ್ಯ./255
ಮೂಲಾಧಾರದ ಬಾಗಿಲ ಕಾಯಲು
ಆ ಮೂಲಾಧಾರದ ಬಾಗಿಲಲ್ಲಿ ಉರಿಹತ್ತಿಯುರಿಯಲು
ಕರಸಮಯ ವಿರಸವಾಯಿತ್ತು.
ನಿರುಪಮ ನಿರಾಕಾರಮೂರ್ತಿಯ ಕಂಡು ಆನು ಬದುಕಿದೆನಯ್ಯ ಸಂಗಯ್ಯ./256
ಮೂಲಾಧಾರದ ಮಂಟಪದ ಮನೆಯಮೇಲೆ
ಲೀಲಾವಿಚಾರಮೂರ್ತಿಯ ಅನುವ ಕಂಡೆನು.
ಆ ಅನುವನರಿದು ಮುಖರಸವನರಿದು ನಾನು ಬದುಕಿದೆನಯ್ಯ ಸಂಗಯ್ಯ./257
ಮೂವರಳಿದು, ಮೂರ್ತಿಯ ಕಳದು,
ಅನಿಮಿಷಯೋಗ ವಿಚಾರವನನುಭವಿಸಿ,
ವಿಚಾರವನಂಗವನಂಗೈಸಿದಂಗವನಂಗದಲ್ಲಿಯೆ ಅಡಗಿ ನಿಂದೆನಯ್ಯ ಸಂಗಯ್ಯ./258
ಮೃತವಳಿದು ಕಾಯವುಳ್ಳವಳಾದೆ.
ಅಮೃತವಿಲ್ಲದ ರಸವನುಂಡು ಅಮೃತಕಾಯಳಾದೆ.
ವಿಭ್ರಮದ ಸೂಚನೆಯ ಹಂಗಿಲ್ಲದೆ ಪ್ರಣವಕಾಯಿಯಾನಾದೆನಯ್ಯ ಸಂಗಯ್ಯ./259
ಮೌಕ್ತಿಕದ ಮಂಟಪ ಕಟ್ಟಿ
ಮನೆಯೊಳಗೆ ತೋರಣಗಟ್ಟಿದವು.
ಮಾಣಿಕ್ಯದ ವರ್ಣದ ತೋರಣವು.
ಆ ಮಾಣಿಕ್ಯದ ವರ್ಣದ ತೋರಣವ ಕಂಡು,
ಆ ತೋರಣವ ಸರಗೊಳಿಸಿ
ಸರದ ಮುಂದೆ ಮಧ್ಯಸ್ವರೂಪವಾಗಿ ಆನು ನಿಜ ಪರಿಣಾಮಿಯಾದೆನಯ್ಯ ಸಂಗಯ್ಯ./260
ಯತಿಯರ ಮನವನತಿ ವಿರತಾಕಾರವ ಮಾಡಿ ಕಂಡೆನಯ್ಯ.
ಆ ಯತಿಗಳು ಅತಿ ವೀರ ಸಂಬಂದಿಗಳಾಗಿರಲು
ವೀರತತ್ವದ ನೆಲೆಯೊಂದೊಂದು ಸಂಗವನೈದಿ
ಮುಖವಿಕಸಿತವಾಯಿತ್ತು.
ಅಪ್ಪಣ್ಣ ತಂದ ಅಪ್ರತಿಮ ಶಿವಾಚಾರ ನೆಲೆಯಾಗಿರಲು
ಆನು ಶಿವ ಶುಭವಂತಳಾದೆನಯ್ಯಾ. ಸಂಗಯ್ಯನಲ್ಲಿ ಬಸವನ ಭ್ರಮೆ ನಮಗೇಕಯ್ಯಾ./261
ಯುಗವಿಲ್ಲ ಜುಗವಿಲ್ಲ ಕಾಲವಿಲ್ಲ ಕಲ್ಪಿತವಿಲ್ಲ
ಅರುಹಿಲ್ಲ ಮರಹಿಲ್ಲ ಆಚಾರವಿಲ್ಲ ವಿಚಾರವಿಲ್ಲ ಸಂಗ ನಿಸ್ಸಂಗವಿಲ್ಲವಯ್ಯ, ಸಂಗಯ್ಯ ನಿಮ್ಮ ಧರ್ಮದಿಂದ./262
ರೂಪಿಲ್ಲದ ವಸ್ತುವೆ ರೂಪಾದೆಯಾ ಬಸವಯ್ಯಾ ?
ನಿರೂಪಿಲ್ಲದ ವಸ್ತುವೆ ನಿರೂಪಾದೆಯಾ ಬಸವಯ್ಯಾ ?
ರೂಪು ನಿರೂಪು ಸಂಗಷ್ಟವಾಯಿತ್ತಯ್ಯಾ ಸಂಗಯ್ಯನ ಗುರುಬಸವಾ./263
ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
ಮಾಡುವ ಮಾಟವಳಿಯಿತ್ತು ಬಸವಾದ
ಇಂದಿಗೆ ಊಟವಳಿಯಿತ್ತು ಬಸವಾ.
ಇಂದಿಂಗೆ ಅವರ ಸಂಗವಳಿದು
ನಿರಾಲಂಬಮೂರ್ತಿಯ ಇರವು ಕಾಣಿಸಿತಯ್ಯಾ ಬಸವಾ, ಸಂಗಯ್ಯಾ, ಬಸವನ ರೂಪು ರಿನ್ನಲ್ಲಿ ಅಡಗಲು./264
ಲಿಂಗ ಸಂಗದಲ್ಲಿ ಹುಟ್ಟಿ
ಜಂಗಮದ ಸಂಗದಲ್ಲಿ ಬೆಳದು
ಭೇದವಡಗಿ ಬೆಳಗು ನಿರ್ವಯಲಾಗಲು ಆನು ಸುಖಿಯಾದೆನಯ್ಯಾ ಸಂಗಯ್ಯಾ./265
ಲಿಂಗದ ಹಂಗಿಗಳಲ್ಲ ನಾನು ಬಸವಾ.
ಜಂಗಮದ ಹಂಗಿಗಳಲ್ಲ ನಾನು ಬಸವಾ.
ಪ್ರಸಾದದ ಹಂಗಿಗಳಲ್ಲ ನಾನು ಬಸವಾ.
ಉಭಯಸುಖದ ಪರಿಣಾಮವಿಡಿದು ನಿಂದವಳಲ್ಲ ನಾನು ಬಸವಾ.
ಏನುವನರಿತವಳಲ್ಲ ನಾನು ಬಸವಾ.
ರಿಲ್ಲವ ನನ್ನಲ್ಲಿ ನೆಲೆಗೊಳಿಸಿದ ಬಸವ.
ಪ್ರಸನ್ನಮೂರ್ತಿಯಲಡಗಿದ ಬಸವನ ಇರವ ಕಂಡು ಬದುಕಿದೆನಯ್ಯಾ ಸಂಗಯ್ಯಾ./266
ಲಿಂಗವಿದ್ದರೇನು ?
ಆ ಲಿಂಗಕ್ಕೆ ಶಿವಸೂತ್ರದನುಭಾವ ನೆಲೆಗೊಳ್ಳದನ್ನಕ್ಕ ?
ಆ ಲಿಂಗಕ್ಕೆ ಶಿವಸೂತ್ರ ಸಂಬಂಧದಿಂದ ಸಂಗಯ್ಯನಲ್ಲಿಯಾನುಪ್ರಸಾದಿಯಾದೆನಯ್ಯ./267
ಶಿರ ಭಾಳ ಕರ್ಣಂಗಳ ಗುಣವಿಲ್ಲ.
ಶಿರ ಸುವರ್ಣದ ಕಳಸ,
ಭಾಳ ಭಾಳಾಕ್ಷನರಮನೆ,
ಕರ್ಣ ಕರುಣಾಳುವಿನ ಲೇಖನ.
ಕಾಯವಳಿದ ಬಳಿಕ ಭ್ರಮೆಯಿಲ್ಲ.
ಪರಶಿವನಲ್ಲಿ ಸೂತ್ರಧಾರಿಯಾದೆನಯ್ಯ ನಾನು
ಎಲ್ಲವನರಿದು
ಭಕ್ತಿಪದಾ ರ್ಥವನುಂಡು ಬದುಕಿದೆನಯ್ಯ ಸಂಗಯ್ಯ, ಬಸವ ಬಯಲಾಗಲು./268
ಶಿವತತ್ವವ ಕಾಣದ ಮುನ್ನ
ಅನುಭವತತ್ವವ ಕಾಣಲಾಯಿತ್ತಯ್ಯಾ ಬಸವಾ.
ಆನು ಅನುಭವಶೀಲವನರಿದು
ಮಕ್ತ್ಯಂಗನೆಯಾದೆನಯ್ಯಾ ಬಸವಾ.
ಆನು ಮುಕ್ತ್ಯಂಗನೆಯಾಗಿ ನಿಜದಲ್ಲಿ ನಿಲಲು,
ಬಸವನ ಕುರುಹು ಕಾಣಬಂದಿತ್ತು.
ಆ ಬಸವನ ಕುರುಹ ತಿಳಿದು ಇಷ್ಟಮೂರ್ತಿಯ ನಿಷ್ಠೆಯನರಿವೆನಯ್ಯಾ ಸಂಗಯ್ಯಾ./269
ಸಂಗ ನಿಸ್ಸಂಗವಾಯಿತ್ತೆನಗೆ
ನಿಸ್ಸಂಗ ಸಂಗವಾಯಿತ್ತೆನಗೆ
ಸಂಗ ನಿಸ್ಸಂಗದಲ್ಲಿ ನಿಂದು ನಿರೂಢ ರೂಡಿಸಲು ವಸ್ತು ಸಂಚಲವನಳಿದೆನಯ್ಯ ಸಂಗಯ್ಯ./270
ಸಂಗನಕೂಟಕ್ಕೆ ತೆರಹಿಲ್ಲ.
ಆ ಸಂಗನಕೂಟಕ್ಕೆ ತೆರಹಿಲ್ಲದ ಕಾರಣ
ಬಸವನಭಕ್ತಿಗೆ ನೆಲೆಯಿಲ್ಲವಯ್ಯಾ.
ಆನಂದಪ್ರಸಾದ ಅನಿಮಿಷಪ್ರಸಾದವನುಂಡು ಬದುಕಿದೆನಯ್ಯಾ ಸಂಗಯ್ಯಾ./271
ಸಂಗಯ್ಯ ಸಂಗಯ್ಯ ನಿರಾಕಾರವೇನಯ್ಯ ?
ಲಿಂಗಾಕಾರ ನಿರಾಕಾರ ಒಡಲು
ಅಂಗ ಲಿಂಗ ಸುಯಿದಾನವಾಯಿತ್ತಯ್ಯ. ರಿನ್ನ ಸುಯಿದಾನ ನಿರವಯವಯ್ಯ ಸಂಗಯ್ಯ./272
ಸಂಗವಪ್ಪ ಬಸವಾ,
ನಿಸ್ಸಂಗ ನಿರಾಲಂಬಿಯಾದೆಯಾ ಬಸವಾ.
ಅಪ್ರತಿಮ ಅನುಪಮ ಬಸವಾ,
ಅನಾದಿಸ್ವಭಾವವಾದನಯ್ಯಾ. ಸಂಗಯ್ಯಾ, ನಿಮ್ಮ ಬಸವ ರಿನ್ನಲ್ಲಿ ಅಡಗಿದನು./273
ಸಮಯಾಚಾರವಡಗಿದ ಬಸವಾ,
ಸಂಗ ನಿಸ್ಸಂಗವಾದ ಬಸವಾ,
ಶಬ್ದವಡಗಿದ ಬಸವಾ, ಶೂನ್ಯವಳಿದ ಬಸವಾ,
ಪ್ರಸಾದ ಹಿಂಗಿದ ಬಸವಾ,
ಪ್ರಸನ್ನಮೂರ್ತಿಯ ಕಂಡ ಬಸವಾ.
ಪ್ರಭೆಯಳಿದ ಬಸವಾ, ಪ್ರಸನ್ನರೂಪ ಬಸವಾ, ಕಾಯವನಳಿದನಯ್ಯಾ ಸಂಗಯ್ಯನ ಗುರುಬಸವ./274
ಸಯದಾನವರತ ಬಸವಾ.
ಸಂಭ್ರಮಮೂರ್ತಿ ಬಸವಾ.
ಸಂಗ ನಿಸ್ಸಂಗ ಬಸವಾ,
ರಿಲೆ ಅಯ್ಯನ ಅಯ್ಯ ಬಸವಾ,
ಏಕರೂಪ ನಿರೂಪಾದೆಯಾ ಬಸವಾ ?
ನಿಸ್ಸಂಗ ರಿನ್ನಲ್ಲಿ ರೂಪಾಯಿತ್ತು ಬಸವಾ.
ಬಸವ ಬಯಲನೆಯ್ದಿ ಆನು ಬಯಲನೆ ಕೂಡಿದೆನಯ್ಯಾ ಸಂಗಯ್ಯಾ/275
ಸರ್ವಾಂಗಶುದ್ಭವಾಗಿ ಲಿಂಗದೇಹಿಯಾನಾದೆನು.
ಸರ್ವ ಪ್ರಪಂಚವನಳಿದು ಸಮಯಾಚಾರಮೂರ್ತಿಯ ಪಡದೆನು.
ಸರ್ವಾಂಗಶುದ್ಧವಾಗಿ ವಿವರವನರಿದೆನಯ್ಯ ಸಂಗಯ್ಯ./276
ಸುವೀರವಾದಡಾಗಲಿ ಸಮಯಾಚಾರವಾದಡಾಗಲಿ ಸಂಗಪ್ರಸಾದ
ನಿಸ್ಸಂಗವಾಗಿ ಸಮಯಾನಂದದೊಳಗೆ ನಿಂದು
ಪರಿಣಾಮಿಯಾನಾದೆನು.
ಪರಿಣಾಮವಡಗಿ ಪ್ರಭೆಯನಳಿದು
ಮುಕ್ತಿಯಕಂಡು ಮುಖವಡಗಿ ನಾನು ಭಸಿತ ವಿಶುದ್ಧವಡಗಿದೆನಯ್ಯ ಸಂಗಯ್ಯ./277
ಸ್ಥಾನಮಾನವಿಲ್ಲದೆ ಶರಣರ ಹಂಗ ಹರಿದೆ.
ಶರಣರ ಹಂಗ ಹರಿದು ಶಿವಸೂತ್ರಿಕಳಾದೆ ನಾನು.
ಶಿವಸೂತ್ರಿಕಳಾಗಿ ಮುಖ ವಿನೆಯಾಪರತತ್ವವನೈದಿ ನಾನು ಅನುಭಾವಿಯಾದೆನಯ್ಯ ಸಂಗಯ್ಯ./278
ಸ್ವಯಸಮರಸದ ಇರವನಂಗವಿಸಿ
ತತ್ತ್ವವಡಗಿ ನಿಃಶೂನ್ಯವ ತಿಳಿದು
ನಿಃಶೂನ್ಯ ಶಬ್ದವ ಕಂಡು ನಿಃಶಬ್ದ ಶಬ್ದವಾಗಿ
ಶಬುದಾಚಾರವನರಿದೆನಯ್ಯ
ಅರಿವ ಮರದು ಕುರುಹಳಿದು
ವಿಚಾರ ಮನನಷ್ಟವ ಮಾಡಿದೆನಯ್ಯ.
ನಷ್ಟದ ಮಾತನೊಂದು ರೂಪಮಾಡಿ ಆ ರೂಪು ಉರಿಯುಂಡಿತ್ತಯ್ಯ ಸಂಗಯ್ಯ./279
ಹಂದೆಯಲ್ಲ ನಾನು,
ಹರುಷದ ಧೈರ್ಯವುಳ್ಳ ಹೆಣ್ಣು ನಾನು.
ಕಾಮವನಳಿದವಳಾನಾದ ಕಾರಣ
ಬಸವನ ಹಂಗೆನಗಿಲ್ಲವಯ್ಯ.
ಭ್ರಮೆಯಡಗಿ ಕಲೆನಷ್ಟವಾಗಿ ಮುಖವರತು ಮನವಿಚಾರವ ಕಂಡೆನಯ್ಯ ಸಂಗಯ್ಯ./280
ಹಿರಿಯತನಕ್ಕೆ ಹೆಣ್ಣೆಂದು ಕರೆದರೆ
ಆ ಹೆಣ್ಣುರೂಪಾದ ನಾಮವು ನಿರ್ನಾಮವಯ್ಯ.
ಅರಿವನರಿದು ಅಪ್ರತಿಮ ಘನವ ಕಂಡುಳಿದು
ಹೆಣ್ಣುತನದ ಮಾತನಳಿದು
ಏಕೋದೇವನ ಕೃಪೆಯನು ಕಂಡು ಬದುಕಿದೆನಯ್ಯ ಸಂಗಯ್ಯ./281
ಹುಟ್ಟಿಲ್ಲದ ಭೂಮಿಯಲ್ಲಿ ಹುಟ್ಟಿದೆ ನಾನು.
ನಾ ಹುಟ್ಟಿ ಕಾಯವಸ್ಥಿರವಾಗಿ
ಅಸ್ಥಿರ ಸುಸ್ಥಿರವಾಗಿ ಆನು ಅನುಭವದಾಯಕಳಾದೆನು.
ಆನು ಸುಖದುಃಖವ ಕಳದು ಅನುಭವಿಯಾದೆನಯ್ಯ ಸಂಗಯ್ಯ./282
ಹುಟ್ಟುಗೆಟ್ಟೆ ನಾನು, ತೊಟ್ಟ ಬಿಟ್ಟ ನಾನು,
ಕಟ್ಟಕ್ಕರಿನ ಸುಖವನಂಗವಿಸಿ ನಿರಂಗಿಯಾದೆ ನಾನು.
ನಿನ್ನ ಬಯಲುಹನಳಿದೆ ನಾನುದ
ನನ್ನ ಕುರುಹ ಕಳದೆ ನಾನು.
ರಿಸವ ಬಸವನ ಬೆಸುಗೆಯ ಬಿಟ್ಟೆ ಸಂಗಯ್ಯನಲ್ಲಿ ರೂಪವಳಿದ ಹೆಣ್ಣು ನಾನು./283
ಹೃದಯಮಧ್ಯದಲೊಂದು ಜ್ಯೋತಿಯಮನೆ ಹುಟ್ಟಿತ್ತು.
ಆ ಜ್ಯೋತಿಯ ಮಧ್ಯದಲ್ಲಿ ಸ್ಫಟಿಕದ ತನು ಬೆಳಗಿತ್ತು.
ಆ ಬೆಳಗಿನ ತನುಮಧ್ಯದಲ್ಲಿ ಮರುಜವಣಿಯ ಕುಡಿ.
ಹೆಸರಿಲ್ಲದ ರೂಪಾಯಿತ್ತು ಬಸವಂಗೆ, ಸಂಗಯ್ಯಾ ನಿಮ್ಮಲ್ಲಿ./284
ಹೆಚ್ಚನರಿದು ಪ್ರಣವವ ಕೂಡಲು
ಅಚ್ಚುಗ ಸಿದ್ಧಿಯಾಯಿತ್ತೆನಗೆ.
ಸಂಗಯ್ಯನಲ್ಲಿ ಬಸವನಳಿದು ಬಯಲಾಗಲು ಆನು ಪರಮಪ್ರಸಾದಿಯಾದೆನಯ್ಯಾ./285
ಹೆಸರಳಿಯಿತ್ತು ಬಸವಾ, ಇಂದಿಂಗೆ ಭಕ್ತಿಯಿಲ್ಲದ ಕಾರಣ.
ಕುರುಹಳಿಯಿತ್ತು ಬಸವಾ,
ಇಂದಿಂಗೆ ಬಸವನ ರೂಪು ನಿರೂಪಾಯಿತ್ತಯ್ಯಾ.
ಭ್ರಮೆಯಳಿದು ಭ್ರಮರಕೀಟನ್ಯಾಯದಂತಾದೆನಯ್ಯಾ ಸಂಗಯಾ/286
ಹೆಸರಿಲ್ಲದ ರೂಪ ಕಂಡು
ಹೆಸರಳಿದು ಹೆಣ್ಣು ರೂಪ ತಾಳಿದೆ ನಾನು.
ಕುರುಹಿಲ್ಲದ ಮೂರ್ತಿಯ ಕಂಡು
ಅದ್ವೈತಾನಂದಿಯಾದೆ ನಾನು.
ಪ್ರಣವ ಜ್ಯೋತಿಷ್ಟವರ್ಣವ ತಿಳಿದು ಪರಂಜ್ಯೋತಿಲಿಂಗವಾದೆನಯ್ಯ ಸಂಗಯ್ಯ./287
ಹೊಲಬರಿಯೆ ನಾನು,
ಆ ಹೊಲಬರಿಯದಿರುತಿರಲು,
ನಾನು ಹೊಲಬಿಗಳಲ್ಲವೆಂದು
ಬಸವಯ್ಯ ಹೊಲಬನರಿದು
ನಿಜಪದಸಂಬಂದಿಯಾದನಯ್ಯಾ ಸಂಗಯ್ಯನಲ್ಲಿ ನಮ್ಮ ಬಸವಯ್ಯನು./288