Categories
ರಚನೆಗಳು

ಹೆಳವನಕಟ್ಟೆ ಗಿರಿಯಮ್ಮ

೨೫
ಆಡುತ್ತಾ ಬಾರಮ್ಮಾ
ನಲಿದಾಡತ್ತಾ ಬಾರಂಮಾ ಆಡುತ್ತವರಗಳಾ ನೀಡುತ್ತಾ ಕರುಣಾದಿ
ನೋಡುತ್ತಾ ದಯದಿಂದಾ
ಲಕ್ಷ್ಮಿ ಆಡುತ್ತಾಬಾರಮ್ಮಾ ಪ.
ಬೇಸರವು ಬೇಡಮ್ಮಾ ದಾಸರ ದಾಸಿಯು ನಾನಿಂವು
ವಾಸನಪೂರಿತೆ ವನರೂಹ ನೇತ್ರೆ
ಸಾಸಿರನಾಮದ ವಾಸುದೇವನ
ಸತಿ ಆಡುತ್ತಾಬಾರಮ್ಮಾ ನಲಿದಾಡುತ್ತಾ ಬಾರಮ್ಮಾ ೧
ಕರದಾರವೊಯೆಂದು ತಾಯೆಯಂನಾ
ಮೊರೆಯಲಾಲಿಸೆ ನೀ ಬಂದು
ದುರಿತಗಳಾನೆಲ್ಲಾ ಪರಿಹರಿಸುವ ನಿಂಮ
ಕರುಣಾಮೃತವನು ಸ್ಮರಿಸುವೆ ಅನುದಿನ ಆಡುತ್ತಾ ಬಾರಮ್ಮಾ೨
ಧರಣಿಯೊಳುನ್ನತವಾದ ಹೆಳವನಾಕಟ್ಟೆ
ಗಿರಿಯೊಳು ನೆಲಸಿದ
ಪರಮ ಪವಿತ್ರಳ ಕರುಣಾ ಸಿಂಧುವೆ
ವರವನು ಕೊಡುತ್ತಾ ಬೇಗಾದಿಂದಲಿ ಆಡುತ್ತಾ ಬಾರಮ್ಮಾ೩

 

ಪೊಡವಿಭಾರವ ಪೊತ್ತು
೪೭
*ಆರಿಗಾದರು ಪೂರ್ವದ ಕಟ್ಟಳಿಯು ತಪ್ಪುದು ವಿಧಿಬರಹವು ಪ.
ಪೊಡವಿಭಾರವ ಪೊತ್ತು ಮೃಡಗೆ ಭೂಷಣನಾಗಿ
ಹೆಡೆಯಲ್ಲಿ ಮಾಣಿಕವಯಿಟ್ಟುಕೊಂಡು
ಬಿಡದೆ ಶ್ರೀಹರಿಗೆ ಹಾಸಿಗೆ ಆದ ಫಣಿಪಂಗೆ
ಅಡವಿಯೊಳಗಣ ಹುತ್ತ ಮನಿಯಾಯಿತೈಯ್ಯಾ ೧
ಸುರಪತಿಯಗೆದ್ದು ಸುಧೆಯನೆ ತಂದು ಮತ್ತೆ ಮಾತೆಯ
ಸೆರೆಯ ಪರಿಹರಿಸಿ ಬಹುಶಕ್ತನೆನಿಸಿಕೊಂಡ
ಹದಿನಾಲ್ಕು ಲೋಕನಾಳುವವನ ಹೊತ್ತು
ಇರುವವಗಾಯಿತು ಮನೆಯು ಮರದ ಮೇಲೆ ೨
ರಾಮಚಂದ್ರನ ಸೇವೆಮಾಡಿ ಮೆಚ್ಚಿಸಿಕೊಂಡು
ರಾವಣನ ಗರ್ವಮುರಿದು ಬಂದೂ
ರೋಮರೋಮಕೆ ಕೋಟಿಲಿಂಗಧರಿಸಿದ
ಹನುಮಂತಗೆ ಗ್ರಾಮಗಳ ಕಾಯ್ವದಾಯಿತೈಯ್ಯಾ ೩
ಮೂರ್ಲೋಕಕಾಧೀಶ ಮುಕ್ಕಣ್ಣ ಶಿವನೆಂದು
ಸಾರುತಿದೆ ವೇದ ಸಟೆಯಲ್ಲವಿದು
ಪಾರ್ವತಿಗೆ ಪತಿಯಾದ ಕೈಲಾಸವಾಸನಿಗೆ
ಊರಹೊರಗಣ ಕಾಡ ಕಾಯ್ವದಾಯಿತೈಯ್ಯಾ ೪
ಮೀರಲಳವಲ್ಲಾ ಮುನ್ನಿನಾ ಕರ್ಮವನು
ಕಾರಣಕರ್ತನಿಗಲ್ಲದೆ
ಮಾರಪಿತ ಹೆಳವನಾಕಟ್ಟೆರಂಗೈಯ್ಯನ
ಸೇರದ ಕಾಲವ್ಯರ್ಥವ್ಯಾದಿತೈಯ್ಯಾ ೫

 

(೧) ಮತ್ಸ್ಯ
ಭಗವಂತನ ಸಂಕೀರ್ತನೆ

ಇಂಥಾವಗ್ಹ್ಯಾಂಗೆ ಮನಸೋತೆ ಬಲು
ಪಂಥವಾಡಿದ ಜಗನ್ಮಾತೆ ಪ.
ಆವಾಗ ನಾರುವ ಮೈಯ್ಯ ಬಿಚ್ಚಿ
ತೋರಿ ನಲಿಯುವ ಕಾಲು ಕೈಯ್ಯ
ಕೋರೆಯ ಮಸೆಯುತ ಕೊಸರಿಕೊಂಡಸುರನ
ಕರುಳನು ಬಗೆದಂಥ ಅದ್ಭುತ ಮಹಿಮಗೆ ೧
ಬಡಬ್ರಾಹ್ಮಣನಾಗಿ ತಿರಿದ ತನ್ನ
ಹಡೆದ ತಾಯಿಯ ಶಿರವರಿದ
ಮಡದಿಗಾಗಿ ದೊಡ್ಡಡವಿಯೊಳ್ಮನೆ ಕಟ್ಟಿ
ಬಿಡದೆ ಸ್ತ್ರೀಯರ ಗೋಕುಲದಲ್ಲಿ ಮೆರೆದ ೨
ಬತ್ತಲೆ ನಿಂತಿದ್ದನೀಗ ತೇಜಿ
ಹತ್ತಿ ಮೆರೆವದೊಂದು ಯೋಗ
ಉತ್ತಮ ಹೆಳವನಕಟ್ಟೆ ಶ್ರೀರಂಗ
ಭಕ್ತವತ್ಸಲ ಸ್ವಾಮಿ ದೇವಕೃಪಾಂಗ ೩

 


ಇಂದು ನೀ ಕರೆದು ತಾರೆ ಬೇಗನೆ ಪೋಗಿ
ಚನ್ನವೆಂಕಟರಾಯನ
ಮೊನ್ನೆ ಆಡಿದ ಮಾತು ಒಂದೂ ನಿಜವಲ್ಲಾ
ರನ್ನೆ ಈಗಲೆಪೋಗಿ ಸ್ಸ್ಸ್ಸ್ಸ್ಸ್ಸನ್ನೆ ಮಾಡಿಬಾರೆ ಪ.
ಅಂಗಜನಯ್ಯನ ಕಾಣದೆ ನಾನು ಹಿಂಗಿರಲಾರೆ ನಮ್ಮಾ
ಕಂಬುಕುಚದ ಬಾಲೆ
ರಂಗನಾ ಕರತಾರೆ
ರಂಗು ಮಾಣಿಕದಹರಳುಂಗುರ ಕೊಡುವೆನು ೧
ಕಾಲಿಗೆ ಎರಗುವೆನೆ
ಕೋಮಲಮುಖಿ ಆಲಸ್ಯ ಮಾಡದೆಲೆ
ನೀಲಕುಂತಳನೀರೆ | ಲೋಲನ ಕರತಾರೆ
ವಾಲೆಮೂಗುತಿ ಕಂಠಮಾಲೆಯ ಕೊಡುವೆನು ೨
ಮರದಿರಲಾರೆನಮ್ಮಾ
ಬೇಗನೆಪೋಗಿ ನೆರವಂತೆ ಮಾಡು ನೀನು
ಯರವುತನವುಬ್ಯಾಡಾಮರೆಯಲಾರೆನೆ ನಿಮ್ಮಕರವಪಿಡಿವೆ ಹೆಳವನ ಕಟ್ಟೆರಂಗೈಯ್ಯನ ೩

 

ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನು
೨೬
ಈತ ಅಂಜನೆಸುತನು ಭೀಮರಾಯನು ಪ.
ಈತ ರಾಮರ ಬಂಟನು
ಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನು
ಈತ ಲೋಕ ಪ್ರಖ್ಯಾತನು ಭೀಮರಾಯನು ಅ.ಪ.
ಪುಟ್ಟಿದಾಗಲೆ ಗಗನಮಂಡಲವನ್ನು ಮುಟ್ಟಿ ರವಿಯನು ತುಡುಕಿ
ಇಟ್ಟ ಕೈಪ ಕುಂಡಲವನ್ನು ತೊಟ್ಟು ಮೆರೆವಂಥ ದಿಟ್ಟ
ಹನುಮರಾಯನು ೧
ಮುಂಚೆ ಸ್ವಾಮಿಯ ಕಂಡು ಅಂದು ಸೇವೆಯ
ವಂಚನಿಲ್ಲದೆ ಮಾಡಿದ
ಅಂಚೆಗಮನೆ ಸೀತಾದೇವಿಗುಂಗುರವಿತ್ತು ಮಿಂಚುಳ್ಳ
ವನವ ಕಿತ್ತನು ಭೀಮರಾಯನು ೨
ಲಂಕಿಣಿಯನೆ ತುಡುಕಿ ಮಾಯಾಜಾಲವ ಶಂಕೆಯಿಲ್ಲದೆ ಗೆಲಿದ
ಲಂಕಾಪಟ್ಟಣವ ಸುಟ್ಟು ರಾವಣೇಶ್ವರನ ಅಹಂಕಾರವಳಿದ ಧೀರ
ಭೀಮರಾಯನು ೩
ತಂತ್ರದರಸ ಶೂರನು ಸಂಗ್ರಾಮದಿ ಮಾರಾಂತ
ವೀರರ ಗೆಲಿದ
ಪಂಥದಿ ಸಂಜೀವನವ ತಂದು ಲಕ್ಷ್ಮಣನ ಅಂತರವಳಿದ
ಶೂರನು ಭೀಮರಾಯನು ೪
ಲೆಕ್ಕವಿಲ್ಲದೆ ಖಳರ ಗೆಲಿದು ಬಂದು ಕೊಕ್ಕನೂರೊಳುನಿಂತನು
ರಕ್ಕಸಾಂತಕ ಹೆಳವನಕಟ್ಟೆ ರಂಗಯ್ಯನ ಅಕ್ಕರುಳ್ಳತಿದಾಸನು
ಭೀಮರಾಯನು ೫

 

ಹರಿಹರರಿಬ್ಬರನ್ನು ಸಮಭಾವದಿಂದ ಸ್ತುತಿಸಿದ
೫೧
ಈತ ರಂಗನಾದ ಹರಿಯು
ಆತ ಲಿಂಗನಾದ ಹರನು ಪ.
ಗಿರಿಜಾಪತಿಯಾದನಾತ
ಗಿರಿಯ ಬೆನ್ನಲಿ ತಾಳಿದನೀತ
ಸ್ಮರನ ಮಡುಹಿದಾತನಾತ
ಸ್ಮರನ ಜನಕನಾದನೀತ ೧
ಶೇಷಭೂಷಣನಾದನಾತ
ಶೇಷಶಾಯಿಯಾದನೀತ
ಪೋಷಿಪ ಭಕ್ತರನಾತ
ದೋಷದೂರನಾದನೀತ ೨
ಕಂಗಳು ಮೂರುಳ್ಳವನಾತ
ಮಂಗಳ ದೇವೇಶನೀತ
ತುಂಗ ಹೆಳವನಕಟ್ಟೆ
ರಂಗನೀತ ಲಿಂಗನಾತ ೩

 

ವ್ಯಾಧನಾಗಿ ಒಲಿದ ನೀತ
೫೨
ಈತ ಲಿಂಗದೇವ ಶಿವನು
ಆತ ರಂಗಧಾಮ ವಿಷ್ಣು
ಮಾತ ಕೇಳೊ ಮಂಕು ಮನುಜ
ಮನದ ಅಹಂಕಾರ ಬಿಟ್ಟು ಪ.
ವೇದಕ್ಕೆ ಸಿಕ್ಕಿದನೀತ
ವೇದನಾಲ್ಕು ತಂದನಾತ
ಬೂದಿ ಮೈಯೊಳು ಧರಿಸಿದನೀತ
ಪೋದಗಿರಿಯ ಪೊತ್ತನಾತ ೧
ವ್ಯಾಧನಾಗಿ ಒಲಿದನೀತ
ಮಾಧವ ಮಧುಸೂದನನಾತ
ಮದನನ್ನ ಉರಿಹಿದನೀತ
ಮದನನಪಡೆದಾತನಾತ ೨
ಗಂಗೆಯ ಪೊತ್ತವನೀತ
ಗಂಗೆ ಪದದಿ ಪಡೆದನಾತ
ತುಂಗ ಹೆಳವನಕಟ್ಟೆ
ಲಿಂಗ ಅಂತರಂಗ ರಂಗನಾಥ ೩

 

ಗಂಗಾಜನಕ : (ನು ೧)
೩೩
ಎಂದು ಕಾಹು(ಣು?)ವೆ ಎನ್ನ ಮನೋಹರ
ಎಂದಿ[ಗೆಕಾ] ಹುದಿನ್ನೆಂದಿಗೆ
ಬಂದೆ ಭವಭವಭವವೀ ದುಃಖದಿ
ನೊಂದೆನೊ ರಂಗನಂಘ್ರಿ ಚರಣವ ಪ.
ಮಂಗಳಾಂಗನ ಮಾಧವನ ಕೋಟಿ
ಅಂಗಜಜನಕವಿಲಾಸನ
ಗಂಗಾಜನಕನ ಗರುಡವಾಹನ
ತುಂಗವಿಕ್ರಮನಂಘ್ರಿ ಚರಣವ ೧
ಕಂತುಜನಕನ ಕಮಲನಾಭನ
ಸಂತತದ ಸರ್ವೇಶನ
ಯಂತ್ರವಾಹಕ ಎನ್ನ ಒಡೆಯನ
ಚಿಂತಾಯ[ಕ]ನ ಶ್ರೀ ಚೆಲುವಚರಣವ ೨
ಪರಮಪುರುಷನ ಪುಣ್ಯನಾಮನ
ಶರಣುಜನಸರ್ವೇಶನ
ಕರುಣಿ ಹೆಳವನಕಟ್ಟೆರಂಗನ
ಚರಣ[ವ]———- ೩

 

ದಶಾವತಾರದ ವಿವರಗಳು

ಏನ ಹೇಳಲಿ ಈತನಿರವ ಭಕ್ತರ ಮನಾ-
ಧೀನ ಹೆಳವನಕಟ್ಟೆ ರಂಗ ದೇವೋತ್ತುಂಗನ ಪ.
ಹೊಳೆವ ಮೈಯ್ಯವ ಕಲ್ಲಹೊರುವ ಕಡಲೊಳಾಡುವ
ತಿಳಿಯ ಎರಡಂಗನೆ ತಿರಿವ ಪರುಶುವಿಡಿವ ಕೋಡಗ
ಕುಲವನಾಳುವ ಗೋವಕಾಯ್ವ ಕಾಂತೆಯರ ವ್ರತವ-
ನಳಿವ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ
ಜಲವಪೊಕ್ಕು ದೈತ್ಯನ ಸಂಹರಿಸಿ
ಕಲಕಿ ಸಮುದ್ರವ ಕಾರಣಕಾಗಿ
ನೆಲಗಳ್ಳನ ಮರ್ದಿಸಿ ಹಿರಣ್ಯಾಕ್ಷನ
ಚಲುವ ಚೆಳ್ಳುಗುರಿಂದೊಡಲನೆ ಬಗಿದು
ಸುಲಭನಾಗಿ ಶುಕ್ರನ ಕಣ್ಣಿರಿದು
ಬಲುಸಾಹಸದಿ ಕ್ಷತ್ರಿಯರನು ಗೆಲಿದು
ಶಿಲೆಯನೊದ್ದು ನಿಜಸತಿಯಳ ಮಾಡಿ
ಗೆಲವ ತೋರಿ ಗೋಪಿಗೆ ಸುತನಾಗಿ
ನಿಲುವ ದಿಗಂಬರಧರ ರಾವುತನಾಗಿ
ಇಳೆಯೊಳು ಚರಿಸುವ ಈತ ಕಾಣೆ ಅಮ್ಮಯ್ಯ ೧
ನಿಲ್ಲದಾಡುವ ನಗವ ಪೊರುವ ಮಣ್ಣಬಗೆವ
ಕಲ್ಲ ಕಂಬವನೊಡೆವ ಇಳೆಯನಳೆವ ಭಾರ್ಗವ
ವಲ್ಲಭನವರಗೆಲುವ ಲಜ್ಜೆನಾಚಿಕೆ-
ಯಿಲ್ಲದೆ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ
ಎಲ್ಲ ವೇದವನುದ್ಧರಿಸ್ಯಂಬುದಿಯ
ಜಲ್ಲಿಸಿ ಧಾರುಣಿಯನು ತಂದಿರುಹಿ
ತಲ್ಲಣಿಸುವ ಪ್ರಹಲ್ಲಾದನ ಪೊರೆದು
ಬಲ್ಲಿದ ಬಲಿಯ ಬಂಧಿಸಿ ಪಿತನಾಜ್ಞೆಯ
ಸಲ್ಲಿಸಿ ಮಾತೆಯ ಶಿರವ ಚೆಂಡಾಡಿ
ಬಿಲ್ಲನ್ನೆತ್ತಿ ಭೂಮಿಜೆಯೊಡಗೂಡಿ
ಮಲ್ಲರ ಮಡುಹಿ ಮುಪ್ಪುರದ ಬಾಲೆಯರ
ಜಳ್ಳು ಮಾಡಿ ಧರ್ಮವ ಹೋಗ್ಯಾಡಿ
ಹಲ್ಲಣಿಸುವ ತೇಜಿಯನೇರಿದ ಶಿರಿ
ವಲ್ಲಭ ಈತ ವಾಸುದೇವ ಕಾಣೆ ಅಮ್ಮಯ್ಯ ೨
ಎವೆ ಇಕ್ಕ ಬೆನ್ನಲ್ಹೊತ್ತು ಗಿರಿಯಕೊ-
ನೆವಲ್ಲ ಮಸೆವ ಸಮಯದಿ ಬಹವಿಪ್ರ ಮುನಿ
ಭವ ಶ್ರೀರಾಘವ ನವನೀತಚೋರ ನಾರಿಯರ ಮೋಹಿಸಿ
ತವಕದಿ ತುರಗವನೇರಿ ಮೆರೆವನ್ಯಾರೆ ಪೇಳಮ್ಮಯ್ಯ
ತಮನ ಮರ್ದಿಸಿ ಸಾಮವನಜಗಿತ್ತು
ಸುಮನಸರಿಗೆ ಸುಧೆಯನು ತಂದೆರದು
ಅವನಿಗಳೆದ ಅಸುರನ ಸಂಹರಿಸಿ
ಮಮತೆಯಿಂದ ಪುಟ್ಟ ಮಗುವನೆ ಸಲಹಿ
ಗಮಕದೊಳಗಿದ್ದ ಬಲಿಯನು ಕೆಡಮೆಟ್ಟಿ
ಸಮರಂಗದಿ ಸುರಧೇನುವ ತಂದು
ದಿನಕರ ವಂಶೋದ್ಧಾರಕನಾಗಿ ಕಂಸ-
ನ ಮಡುಹಿ ಮುಪ್ಪುರದ ಬಾಲೆಯರು
ಭ್ರಮಿಸುವಂತೆ ಬೌದ್ಧಾವತಾರನಾದ
ಕಲ್ಕಿ ಹೆಳವನಕಟ್ಟೆರಂಗ ದೇವೋತ್ತುಂಗನ ೩

 


ಏನ ಹೇಳಲಿ ಕೃಷ್ಣನಗುಣವ
ನೋಡೆ ಸಖಿಯೆ ಪ.
ಜಾರತನದಿ ಶೀರೆಯ ಶಳಕೊಂಡು
ಮಾರನಾಟಕೆ ಎನ್ನ ಮರುಳು ಮಾಡಿದನಮ್ಮ ೧
ಚಂಡು ತಾರೆನುತಲಿ ದುಂಡು ಕುಚವಪಿಡಿದು
ಕಂಡು ಕಂಡಲ್ಲಿ ಎನ್ನ ಬಹು ಭಂಡು ಮಾಡುತಲಿಹನಮ್ಮ ೨
ತಂದೆ ಹೆಳವನಕಟ್ಟೆ ರಂಗನ ಕೃಪೆಯಿರಲು
ಬಂದ ದುರಿತಗಳು ನಂದಿ ಪೋಗುವವು ೩

 

೩೪
ಏನಿದು ಬಯಲ ಪಾಶ ನೋಡಿದರಿಲ್ಲಿ
ಏನು ಹುರುಡುಗಾಣೆನೊ
ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನ
ಧ್ಯಾನವ ಕೊಡೊ ಅಭಿಮಾನದೊಡೆಯ ರಂಗ ಪ.
ನೀರಬೊಬ್ಬುಳಿಯಂದದ ದೇಹವ ನೆಚ್ಚಿ
ದೂರ ಹೊತ್ತೆನು ಹರಿಯೆ ಯಾರು ಎನಗೆ ಸರಿಯಿಲ್ಲೆಂಬಹಂ-
ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ
ಹರಿ ನಿಮ್ಮ ನಾಮವ ನೆನೆಯದೆ ಎಂದೆಂದಿಗೆನಗಿತ್ತು
ಸದ್ಗತಿ ತೋರೊ ೧
ಬಡವರಾಧಾರಿ ಕೇಳೊ ಸಂಸಾರದ
ಮಡುವಿನೊಳಗೆ ಧುಮುಕಿ
ಕಡೆಹಾಯಿಸೊ ಕೈಪಿಡಿದು ಕೃಪೆಯೊಳೆನ್ನ
ದಡವ ಸೆÉೀರಿಸೊ ಜಗದೊಡೆಯ ಶ್ರಿರಂಗಯ್ಯ ೨
ಸುತ್ತೆಲ್ಲ ಬಂಧು ಬಳಗ ನವಮಾಸದಿ
ಹೊತ್ತು ಪಡೆದ ಜನನಿ
ಪುತ್ರ ಸಹೋದರರ ಘಳಿಗ್ಯಗಲಲಾರದೆ
ಮತ್ತೆ ಯಮನವರೊಯ್ವಾಗ ಯಾರು ಸಂಗಡ ಇಲ್ಲ ೩
ಆಸೆಯೆಂಬುದು ಬಿಡದು ಈ ಭುವನದೊಳ್
ಲೇಸುಗಾಣೆನು ಹರಿಯೆ
ಭಾಷೆಯ ಕೊಡು ಮುಂದೆ ಜನುಮಬಾರದ ಹಾಗೆ
ಈಶಸನ್ನುತ ಹೆಳವನಕಟ್ಟೆರಂಗಯ್ಯ ೪

 

ಕೌಸ್ತುಭಹಾರ (ನುಡಿ-೧)

ಕಂಡೆನೀಗ ರಂಗನಾಥನ ಕಾರುಣ್ಯನಿಧಿಯ ಪ.
ಕಂಡೆನೀಗ ರಂಗಾಥನ ಭೂ-
ಮಂಡಲದೊಳುದ್ದಂಡ ಮೂರುತಿ
ಹಿಂಡು ದೈತ್ಯರ ತಂಡ ತಂಡದಿ
ತುಂಡು ತುಂಡು ಮಾಡಿದ ಸ್ವಾಮಿಯ ಅ.ಪ.
ಕಾಮಪಿತನ ಕೌಸ್ತುಭ ಹಾರನ ಕಸ್ತೂರಿ
ನಾಮವ ನೇಮದಿಂದ ಧರಿಸಿದಾತನ
ವಾಮಭಾಗಲಕ್ಷ್ಮಿ ಸಹಿತ ಹೇಮ ಮಂಟಪದೊಳಗೆ ಕುಳಿತು
ಕಾಮಿಸಿದ ಭಕ್ತರಿಗೆ ಕಾಮಿತಾರ್ಥ ಕೊಡುವ ಸ್ವಾಮಿಯ ೧
ಗರುಡವಾಹನವೇರಿ ಗಗನದಿ ಚರಿಸುತ್ತ ಬಂದು
ಸರಸಿಯೊಳು ಕರಿಯ ಸಲಹಿದೆ
ಪರಮಭಕ್ತರ ಕಾವದೇವ ಕರುಣವಾರಿಧಿ ಕಮಲನಯನ
ಉರಗಶಯನ ಉದ್ಧಾರಿ ನಿನ್ನ ಮರೆಯಹೊಕ್ಕೆ ಕಾಯೊ ಎನ್ನ೨
ಇಂದುಧರನ ಸಖನೆ ಕೇಳಯ್ಯ ಬಂದಂಥ ದುರಿತ
ಹಿಂದು ಮಾಡಿ ಮುಂದೆ ಸಲಹಯ್ಯ
ತಂದೆ ಅಡಿಯ ಹೊಂದಿದೆನು ಇಂದು ಹೆಳವನಕಟ್ಟೆ ರಂಗ ಆ-ನಂದ ಪಡಿಸೊ ರಾಮಲಿಂಗ ಹೊಂದಿದೆನು ನಿನ್ನ ಚರಣ ೩

 

ಅಜಾಮಿಳನ ಉದ್ದರಿಸಿದೆ
೩೫
ಕಡೆಗಣ್ಣಲಿ ನೀ ನೋಡದಿರೆನ್ನಯ್ಯ ಬಿಡಬೇಡವೊ ಕೈಯ್ಯ
ಬಡವರ ಬಂಧು ಬಹುಕೃಪಾಸಿಂಧು
ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ ಪ.
ಶತ ಅಪರಾಧವ ಮಾಡಿದೆನಯ್ಯ ಸೇರಿದೆ ನಾ ನಿನ್ನ ಬೆನ್ನ
ಅತಿಪಾತಕಿ ಅಜಾಮಿಳನ ಉದ್ಧರಿಸಿದೆ
ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ ೧
ನೆಲೆಗಾಣದೆ ನಾನಾಪರಿ ಚಿಂತೆಗೆ ಒಳಗಾದೆನೊ ನಾಹೀಗೆ
ಬಳಲಿಸಬ್ಯಾಡವೊ ಭಕ್ತಕುಟುಂಬಿ
ನಳಿನದಳಾಂಬಕ ನೀ ಸಲಹೆನ್ನನು ೨
ಸಾರಿ ಹೇಳುವೆ ಎನ್ನ ಬಳಗದ ಅರಭಾರವು ನಿನ್ನದು
ಹೇರೊಪ್ಪಿಸಿದ ಮೇಲ್ಯಾತರ ಸುಂಕವು
ಕಾರುಣ್ಯನಿಧಿ ಹೆಳವನಕಟ್ಟೆ ರಂಗಯ್ಯ ೩

 


ಕರೆದಳು ತನ್ನ ಮಗನ ಯಶೋದೆ
ಕರೆದಳು ತನ್ನ ಮಗನ ಪ.
ಪರಮಪುರುಷ ಹರಿ ಶರಣರ ಸುರತರು
ತುರು ತುರುಯೆಂಬ ಕೊಳಲನೂದುತ ಬಾರೆಂದು ಅ.ಪ.
ಅಂದುಗೆ ಕಿರುಗೆಜ್ಜೆ ಘಲುಘಲುಕೆನುತಲಿ
ಚಂದದಿ ಕುಣಿವ ಮುಕುಂದನೆ ಬಾರೆಂದು ೧
ಹೊನ್ನುಂಗುರುಡಿದಾರ ರನ್ನ ಕಾಂಚಿಯದಾಮ
ಚೆನ್ನಾಗಿ ಹೊಳೆವ ಮೋಹನನೆ ಬಾರೆಂದು ೨
ಸಾಮಗಾನವಿಲೋಲ ಜಾಲವ ಮಾಡದೆ
ಸ್ವಾಮಿ ಹೆಳವನಕಟ್ಟೆ ರಂಗ ನೀ ಬಾರೆಂದು ೩

 

ತರುಳ ಕರಿಯಲು
೩೬
ಕಾಯೊ ಕರುಣಾಕರನೆ ನೀಯನ್ನಾ
ಕಾಯೋ ಆನಾಥರಕ್ಷಕ ದಯಾಸಿಂಧೂ ಪ.
ಕಾಯೊಯನ್ನನು ಕರವಿಡಿದು ಕೃಪೆಯಿಂದ ನೀಯನ್ನಾ
ಕಾಯೊದೇವರದೇವ ಶ್ರೀ ವೆಂಕಟೇಶ್ವರನೆ ಕಾಯೊ ಅ.ಪ.
ನೀನಲ್ಲದೆ ಅನ್ಯತ್ರ ತಾಯಿ ತಂದೆಗಳಿಲ್ಲಾ
ನೀನಲ್ಲದೆ ಬಂಧುಬಳಗವೆನಗಿಲ್ಲಾ ನೀ
ಯನ್ನ ಕಾಯೊ ಶ್ರೀ ವೆಂಕಟೇಶ್ವರನೆ ೧
ತರುಳ ಕರಿಯಲು ಕಂಭದಿ ಬಂದು
ಹಿರಣ್ಯಾಕ್ಷಕನ ಕರುಳ ತೆಗದು ವನಮಾಲೆ ಹಾಕಿ ನಿಂದೀ
ನರಮೃಗರೂಪಿನಲಿ ಪ್ರಹ್ಲಾದಗೆ
ವರವಿತ್ತೆ ನೀಯನ್ನ ಕಾಯೊ ಶ್ರೀ ವೆಂಕಟೇಶ್ವರನೆ ೨
ಜಲದೊಳಗೆ ನೆಗಳೆಯು ಹಿಡಿದು
ಎಳೆಯುತ್ತಿರೆ ಬಹುಬಾಧೆಬಡಿಸೆ ನಿಮ್ಮ ನೆನೆಯಲು
ನಿಲ್ಲದೆ ಬಂದೊದಗಿನೆಗಳೆಯನು
ಶೀಳ್ದು ಕರಿರಾಜಗೊಲಿದು ರಕ್ಷಿಸಿದೊ ಶ್ರೀ ವೆಂಕಟೇಶ್ವರನೆ ೩
ದುರುಳದುಶ್ಯಾಸ ದ್ರೌಪತಿ ಸೀರೆಯನು ಸೆಳೆಯೆ
ಹರಿಣಾಕ್ಷಿ ಸಭೆಯೊಳಗೆ ಕೃಷ್ಣಾಯೆಂದುವದರೆ
ಪರಿಪರಿ ವಸ್ತ್ರವನು ಕೊಟ್ಟೆ ಅಭಿಮಾನವನು ಕಾಯ್ದೊ
ದೇವರದೇವ ಶ್ರೀ ವೆಂಕಟೇಶ್ವರನೆ ೪
ಶಂಖಚಕ್ರಧರ ನಿನ್ನ ಚರಣವನು ನಂಬಿದೆ
ಪಕ್ಷಿವಾಹನಸ್ವಾಮಿ ಕರುಣಾನಿಧೆ
ಹೆಳವನಕಟ್ಟೆಯೊಳು ನಿಂದು
ಭಕ್ತರನ್ನೆಲ್ಲಾ ಕಾಯ್ದ ದೇವರದೇವ ಶ್ರೀ ವೆಂಕಟೇಶ್ವರನೆ ೫

 

ಉದ್ದಾಳಿಕನ ಕಥೆ
ಕಿರುಡೊಳ್ಳಿಗೆ ಉರಗನ ಸುತ್ತಿದಾತನೆ ಮೆರೆವ
ಪಾಶಾಂಕುಶ ಧರನೆ
ಗಿರಿಜೆಯ ವರಪುತ್ರ ಕರಿಮುಖಗೊಂದಿ[ಪೆ] ಧೃಢವಾಗಿ
ಕರಿಣಿಸೊ ಮತಿಯ ೧
ವಾಣಿ ಬ್ರಹ್ಮನ ರಾಣಿ ವೀಣೆ ಪುಸ್ತಕಪಾಣಿ
ಮಾನಿನಿಕುಲಕೆ ಕಟ್ಟಾಣಿ
ಮಾಣದೆ ಭಕ್ತರ ಪೊರೆವ ಶೃಂಗೇರಿಯ ಶಾರದೆ
ಕರುಣಿಸೆ ಮತಿಯ೨
ಮಂಗಳಾಂಗನೆ ಮಲ್ಲಸುರರ ಮರ್ದಿಸಿದನೆ ಗಂಗೆ [ಮೌಳಿ]
ಮನೋಹರನೆ
ಹಿಂಗದೆ ಭಕ್ತರ ಪೊರೆವ ನೀಲಾಬ್ಧಿಯ ಲಿಂಗ ಕರುಣಿಸು
ನಿಜಮತಿಯ ೩
ಭೂಮಿ ಅಂಬರ ರವಿ ತಾರೆ ಚಂದ್ರಾವಳಿ
ಮೇಲಾದಷ್ಟದಿಕ್ಪಾಲಕರು
ಸಾಧು ಸಜ್ಜನ ಗುರುಹಿರಿಯರಿಗೊಂದಿಸಿ ಹೇಳುವೆ ಈ
ಪುಣ್ಯಕಥೆಯ ೪
ಓಣ್ಯೊಳು ಚೆಲ್ಲಿದ ಅಣಿ ಮುತ್ತಾರಿಸಿ ನೂಲಿಗೆ ಪೋಣಿಸಿದಂತೆ
ಯೋಗಿಗಳರಸುದ್ದಾಳಿಕನ ಕಥೆಯನು ಹೇಳುವೆ ಚರಿತೆಯ ಮಾಡಿ೫
ಭೂವಳಿಯೊಳಗೆ ಉತ್ತಮನೆಂಬೂ ಭೂಸುರ
ವೇದವೇದಾಂತ ಪಾರಗನು
ಸಾಧು ಸಜ್ಜನ ಸತಿಯರ ಕುಲರತ್ನವು ಅನುಕೂಲ್ಯಾತನ
ಧರ್ಮ ಪತ್ನಿ ೬
ಸತಿ ಪುರುಷರು ಸಂತೋಷದಲಿರುತಿರೆ
ಸುತಜನಿಸಿದ ಉದ್ದಾಳಿಕ
ಅತಿ ಹರುಷದಿ ಜಾತಕರ್ಮ ನಾಮಕರಣ ಸುತಗೆ
ಮಾಡಿದ ಕ್ರಮದಿಂದ ೭
ಅನ್ನಪ್ರಾಶನ, ಚೌಲಕರ್ಮಂಗಳ ಮಾಡಿ ಚಿಣ್ಣಗೆ
ಮೌಂಜಿಯ ಕಟ್ಟಿ
ಬ್ರಹ್ಮಚರ್ಯಾಶ್ರಮ ನಡೆಸಿ ತಾಯಿ ತಂದೆ ಮುನ್ನೆ
ನಡೆದರು ಪರಗತಿಗೆ ೮
ಗುರುಕುಲವಾಸವ ಮಾಡಿ ಉದ್ದಾಳಿಕ ಕಲಿತನೆ
ನಾಲ್ಕು ವೇದಗಳ
ಅಜ ಹರಹರಿಯ ಮೆಚ್ಚಿಸುವೆ [ಎಂ]ದೆನುತಲೆ
ಘನತಪವನಕಾಗಿ ನಡೆದ ೯
ಮಿಂದು ಮಡಿಯನ್ನುಟ್ಟು ಸಂದೇಹವ ಬಿಟ್ಟು
ನಿಂದು ಬೆಳಗುವ ಜ್ಯೋತಿಯಂತೆ
ಒಂದೇಮನದಲಿ ಮಾಡಿದ ತಪವನು [ವರುಷ]
ಸಂದವರುವತ್ತು ಸಾವಿರವು ೧೦
ಧರೆಯೊಳಗುತ್ತಮ ಕೌಸಲ್ಯದೇಶದಿ ಆಯೋಧ್ಯವೆಂಬ
ಪಟ್ಟಣದಿ
ರಘುಕುಲದಲ್ಲಿ ಉತ್ಪನ್ನನು ರಘುರಾಮ ಸ್ಥಿರವಾಗಿ
ರಾಜ್ಯವಾಳುವನು ೧೧
ಎಲ್ಲೆಲ್ಲಿ ನೋಡಿದರು ಕೆರೆಬಾವಿ ದೇವಾಲಯ
ಕನ್ಯಾದಾನವು ಭೂದಾನ
ಅನ್ನಛತ್ರವು ಅರವಟ್ಟಿಗೆಯನಿಕ್ಕಿಸಿ ಮನ್ನಿಸಿ
ರಾಜ್ಯವಾಳುವನು ೧೨
ಹೆತ್ತ ತಾಯಿ ಮಕ್ಕಳಗಲರೆಂದೆದಿಗು ಬತ್ತದೆ ಕರೆವ ಧೇನುಗಳು
ಸತ್ಯವಲ್ಲದೆ ಅಸತ್ಯವ ನುಡಿಯರು ಉತ್ತಮರಾ
ದೇಶದೊಳಗೆ ೧೩
ಧರ್ಮವಲ್ಲದೆ ಅನ್ಯಾಯವ ಮಾಡರು
ಪುಣ್ಯಸಾಧನರು ಸಜ್ಜನರು
ಉನ್ನಂತ ಹರಿಯ ಭಕ್ತಿಯಲಿ ಕೊಂಡಾಡುವ
ಧರ್ಮಗಳಾ ದೇಶದೊಳಗೆ ೧೪
ಕೊಡುವವರುಂಟು ಕೊಂಬವರಿಲ್ಲ ಧರೆಮೇಲೆ
ಬಡವರಿಲ್ಲಿ ಚಾರರುಂಟು
ಕಡುಧೀರರುಂಟು ಹಗೆಗಳಿಲ್ಲ ಪಿಸುಣರಗೊಡುವೆಯಿಲ್ಲಾ
ದೇಶದೊಳಗೆ ೧೫
ಸುತ್ತಣರಾಯರ ಗೆಲಿದು ಕಪ್ಪವಕೊಂಡು ಕ್ಷತ್ರಿಯ
ಧರ್ಮವ ನಡೆಸಿ
ಭಕ್ತಿಯಿಂದ ದೇವ ಬ್ರಾಹ್ಮರ ಮನ್ನಿಸುತಲೆ ಸತ್ಯದಿ
ರಾಜ್ಯವಾಳುವನು ೧೬
ಕೊಟ್ಟ ವಾಕ್ಯಂಗಳ ತಪ್ಪನು ಭೂಪಾಲ ಮಸ್ತಕ
ಮಕುಟವೆಂದೆನಿಸಿ
ಪಟ್ಟದರಸಿಯಲ್ಲದನ್ಯತ್ರ ನೋಡೇಕ ಪತ್ನಿಯ ವ್ರತವ ನಡೆಸಿದನು೧೭
ಪಟ್ಟದರಸಿಯೊಳ್ ಕುಮಾರನು ಅಜಭೂಪ ಹುಟ್ಟಿ
ಸಂತೋಷದೋರಲು
ಚಿಪ್ಪಿನೊಳಗೆ ಮುತ್ತುಮಾಡುವ ತೆರನಂತೆ ಪುತ್ರಿ
ಹುಟ್ಟಿದಳ್ ಚಂದ್ರಾವತಿಯು ೧೮
ಹೊನ್ನಿನ ರಾಸಿ ಸುವರ್ಣದ ಬೆಟ್ಟವು ಕನ್ಯಾದಾನದ ಹೆಬ್ಬೆಳಸು
ಪುಣ್ಯದ ಪುಂಜ ಪೂರ್ಣವಿತ್ತೆಯೆನಗೊಂದು ಹೆಣ್ಣು
ಮಾಣಿಕವೆ ಸಂತಾನ ೧೯
ಹೊಡೆ ಮಗ್ಗುಲಿಕ್ಕೋಳು ಇಡವಳಂಬೆಗಾಲ
ನಡೆಯೋಳು ದಟ್ಟಡಿಯಿಡುತ
ನುಡಿವೋಳು ತೊದಲ್ನುಡಿಯಲಿ ಅರಗಿಣಿಯಂತೆ
ಕಡುಲಾಲಿಕೆ ಬಾಲಲೀಲೆ ೨೦
ನಡೆದರೆ ದಿಟ್ಟ ತಾಕೀತೆಂದು ಕುಮಾರಿಗೆ ನುಡಿದರೆ
ಬಡವಾದಾಳೆಂದು
ಮುಡಿಯ ಭಾರಕೆ ಸೆಳೆನಡುವು ನೊಂದೀತೆಂದು
ಕಡುಹರುಷದಲಿ ಹಿಗ್ಗಿದರು ೨೧
ಅಕ್ಷರಾಭ್ಯಾಸವ ಮಾಡಿಸಿ ಕುಮಾರಿಗೆ ನರ್ತನ ಗೀತವ ಕಲಿಸಿ
ಉತ್ತಮವಾದ ನಾಟಕ ಕವಿಶಾಸ್ತ್ರವ
ಪುತ್ರಿಗಭ್ಯಾಸ ಮಾಡಿಸಿದ ೨೨
ಬಾಲತ್ವದಿಂದ ಕಳೆದವು ಕುಮಾರಿಗೆ ಮೇಲೆ
ಯೌವನವು ತೋರಿದವು
ನೀಲಮಾಣಿಕ ನವರತ್ನ ಮುತ್ತಡಚಿದ
ಆಲಯವನೆ ಕಟ್ಟಿಸಿದ ೨೩
ಪುತ್ರಿಯ ಸೇವೆಗೆ ಇಟ್ಟನೆ ಭೂಪಾಲ ಹತ್ತುಸಾವಿರ ಕೆಳದಿಯರ
ಸುತ್ತಲು ಪ್ರಾಕಾರ ಎಸೆದವು ರಕ್ಷೆಗೆ ಇಟ್ಟನೆ ದ್ವಾರಪಾಲಕರ೨೪
ಇತ್ತ[ಲೀ] ರಾಯ ಸಂಪತ್ತಿನೊಳಿರುತಿರೆ ಅತ್ತ[ಲಾ]
ಮುನಿಕೌಶಿಕನು
ಪೃಥವಿಯನ್ನೆಲ್ಲಾ ಸುತ್ತಲು ಬಂದ[ನು] ಸಪ್ತದ್ವೀಪಗಳ
ನೋಡುತಲಿ ೨೫
ಸತ್ಯಲೋಕ ತಪೋಲೋಕವ ಚರಿಸುತ್ತ ಹೊಕ್ಕ[ನೆ]
ಯಮ ಲೋಕವನು
ಬೆಕ್ಕಿನಬಾಯ ಮೂಷಕದಂತೆ ಮಿಡುಕು[ತ]ಲಿಪ್ಪ
ಜೀವಿಗಳ ತಾಕಂಡ ೨೬
ತೃಣದ ಮೂಲಾಗ್ರದಿ ನಡುಗುತಿಪ್ಪರ ಕಂಡು ಬ[ಳಿ]
ಯಲ್ಲಿ ನಿಂತು ಮಾತಾಡಿ
ನಿಮಗೆ ಈ ಲೋಕ ಪ್ರಾಪ್ತಿಯಾಕೆ ಆಯಿತು
ತಿಳಿದು ಹೇಳುವುದು ಎನ್ನೊಡನೆ ೨೭
ಸುತರಿಲ್ಲದೆ ಸದ್ಗತಿಯಿಲ್ಲವೆನುತಲೆ ಶೃತಿ ಸಾರುತಿದೆ
ಜಗದೊಳಗೆ ಎಮಗೆ
ಸಂತತಿಯಿಲ್ಲ ಉತ್ತಮ ಗತಿಯ ಕಾಣಿಸುವೊರೆ
ಪತನಕ್ಕೆ ಬಿದ್ದೆವೆಂದೆನಲು ೨೮
ಪುತ್ರಪೌತ್ರರಿಲ್ಲವೆ ನಿಮ್ಮ ವಂಶದಿ ಉತ್ತಮಗತಿಯ
ಕಾಣಿಸುವ ದೌಹಿತ್ರರು
ಧರ್ಮ ಸಂತಾನಿಗಳಿಲ್ಲವೆ[ಎಂ]ದು ಮತ್ತಾಗ
ಮುನಿಯು ಕೇಳಿದನು ೨೯
ಹೆಣ್ಣನೊಲ್ಲದೆ ಅರಣ್ಯವ ಚರಿಸುವ ಉನ್ನಂತ ತಪಸೀಲಿದ್ದ
ನಮ್ಮ ಸಂತತಿ ಉದ್ದಾಳಿಕನೊಬ್ಬನಿರುವನು ಮನ್ನಿಸಿ
ತಿಳಿದು ಹೇಳುವುದು ೩೦
ಉತ್ತಮಳಾಗಿರ್ಪ ಸತಿಯನೊಳಗೊಂಡು
ಪುತ್ರಸಂತಾನವ ಪಡೆದು
ಹೆತ್ತವರಿಗೆ ಸದ್ಗತಿಯ ಕಾಣಿಸುವುದೆಂದು
ವಿಸ್ತಾರವಾಗಿ ಹೇಳುವುದು ೩೧
ಭೋರನಲ್ಲಿಂದ ತೆರಳಿದನಾಗಲೆ ಮುನಿ ಅರಣ್ಯವ ಚರಿಸುತಲೆ
ದೂರದಿಂದಲೆ ಕಂಡನು ಉದ್ದಾಳಿಕನ ಸಾರಿದನಾ
ತಪೋವನವ ೩೨
ಇದಿರೆದ್ದು ಉದ್ದಾಳಿಕನು ಕಂಡು ಮುನಿಪನ
ಕರವಿಡಿದು ಕರೆ ತಂದನಾಗ
ತೃಣದಾಸನವಿತ್ತು ಅತಿಥಿ ಪೂಜೆಯ ಮಾಡಿ
ಬರವೇನೆಂದು ಕೇಳಿದನು ೩೩
ಸತ್ಯಲೋಕ ತಪೋ ಲೋಕವ ಚರಿಸುತ್ತ ಹೊಕ್ಕೆನು
ಯಮ ಲೋಕವನು
ನಿಮ್ಹೆತ್ತ ತಾಯಿ ತಂದೆ ಪಿತೃಪಿತಾಮಹರು
ಅತ್ಯಂತ ನರಕಕೈದುವರು ೩೪
ಆಲಸ್ಯವಿಲ್ಲದೆ ಬೀಳ್ಪರು ಪತನಕ್ಕೆ

 

ಶಂಕರ ಗಂಡನ ಹಾಡು
ಗಿರಿಜೆಯ ವರಸುತ ಕರಿಮುಖಗೊಂದಿಸಿ
ಸರಸ್ವತಿಗಭಿವಂದಿಸುವೆ
ಪರಮದಯಾಳು ಹೆಳವನಕಟ್ಟೆರಂಗಯ್ಯ
ಒಡೆಯನು ಎನ್ನ ಮನದೊಡೆಯ ೧
ತಾನಾಗಿ ಶಿವ ಶಂಕರಗಂಡ ತಂಗಿಗೆ ವಿವಾಹಮಾಡೋ
ಸಂಭ್ರಮ[ದಾ]
ಭಾವ ಮೈದುನರ ಕಥೆಯ ನಾಪೇಳುವೆ ನೀವೆಲ್ಲ
ಕೇಳಿ ಸಜ್ಜನರು ೨
ದ್ವಾರಾವತಿಯ ಸೀಮೆಯಲ್ಲಿ ರಂಜಿಸುವೊ
ವಿಶಾಲ ವಿಲಾಸ ಪಟ್ಟಣದಿ
ನಾರಾಯಣ ಕುಮಾರ ಒಪ್ಪಿದನೊಂದು ಚಾರುಮಣಿ
ಖಚಿತ ಮಂದಿರದಿ ೩
ಚಂದ್ರಸೂರ್ಯರು ಎಡಬಲದಿ ಒಪ್ಪಿರಲು
ಮಂದಮಾರುತ ತಂಪೆಸೆಯೆ
ಗಂಧ ಕಸ್ತೂರಿ ಕದಂಬವನೇರಿಸಿ ಆನಂದವಾಗಿದ್ದ ಮನ್ಮಥನು೪
ಗಿಳಿವಿಂಡು ನವಿಲು ಹಂಸವು ರಂಜಿಸುವಂಥ ನವಿಲ
ಮಯೂರ ಪಕ್ಷಿಗಳು
ಅಳಿಗಳು ಝೇಂಕರಿಸುತಲಿ ಹಾಡುತಲಿರೆ ನಳಿನ
ನಾಭನ ಓಲಗವು ೫
ಕೈಲಾಸಪುರದ ರಾಜ್ಯದೊಳಗೊಪ್ಪುವ
ನಿರ್ಭಯದಲಿನಲ್ಕಾವತಿಯು
ತ್ರೈಲೋಕ್ಯವಂದ್ಯ ಶಂಕರಗಂಡನಿಹ ಒಮ್ಮನದಿಂದನುಜೆಯ
ಪಾಲಿಸುತ್ತ ೬
ಅರಗಿಳಿಯಾಡಿಸುವಳು ಕೆಂಧೂಳಿಯಲಿ
ಮರಿಹಾವುಗಳ ನೆರೆಹುವಳು
ತರಳಾಕ್ಷಿತನ್ನ ಸಂಪತ್ತುಗಳೆಲ್ಲವ ಬಿಟ್ಟು
ಗೊಂಬೆಯಾಟವನೆ ಆಡುವಳು ೭
ಆಡೋಳು ಪಂಚ ಪಗಡಿ ಚಿನ್ನದಮಣೆಯೊಳು
ಕೂಡಿದ್ದ ಗೆಳತಿಯರ ಒಡನೆ
ಪಾಡೋಳು ಮರಿಕೋಗಿಲೆಯಂತೆ ತಂಗಿಯ
ನೋಡಿದ ನವಯೌವನೆಯನು ೮
ನಿತ್ಯ ನಿತ್ಯದಿ ಯೌವನವು ಹೆಗ್ಗಳಿಸಲು ಬಟ್ಟ
ಕುಚವು ತೋರಿದವು
ಮಿತ್ರೆ ತಂಗಿಗೆ ವರವದಾವುದೆನುತಲಿ
ಚಿತ್ತದೊಳಗೆ ಚಿಂತಿಸುತ್ತಿದ್ದ ೯
ಪುಷ್ಪಬಾಣನು ತಂಗಿಗೆ ತಕ್ಕ ವರನೆಂದು ಚದುರ
ಚೆನ್ನಿಗನು ಮನ್ಮಥನು
ತವಕದಿ ಬುದ್ಧಿವಂತರ ಕಳುಹಿಸಿ ನಾಳೆ
ಉದಯಕ್ಕೆ ಕರೆತನ್ನಿರೆಂದ ೧೦
ಬಂದು ವಿಲಾಸ ಪಟ್ಟಣದೊಳು ಮದನಗೆ ಪ್ರೀತಿಲಿ
ನಿಂದು ಕೈ ಮುಗಿದರು ಹೋ
ಗ್ಯೆಂದು ಶಂಕರಗಂಡ ಕಳುಹಿದ ನಿಮ್ಮನೆಗೈತಂದೆವೆನಲು ೧೧
ಬಂದ ಬಿಡಾರವ ತಂಡ ತಂಡದಲಿಳಿಸಿ ವಂದಿಸಿ
ಮಾತಾಡಿ ನಗುತ ಭೂ
ಮಂಡಲದೊಳು ಕ್ಷೇಮವೆ ಎನುತ ಶಂಕರಗಂಡ
ಕೇಳಿದ ಮನ್ಮಥನ ೧೨
ನಿಮ್ಮ ಕಾರುಣ್ಯ ಕೃಪೆಯಿಂದ [ಸ್ತುತ್ಯ]ವು ನಮ್ಮ
ರಾಜ್ಯವು ಕ್ಷೇಮವೆನ್ನಲು
ಸನ್ಮಾನದಿಂದ ಉಪಾಚಾರ[ಮಾ]ಡುತ್ತ
ಬ್ರಹ್ಮಾನಂದದಲಿದ್ದ ಶಂಕರಗಂಡನು ೧೩
ರುಕ್ಷ್ಮಿಣೀ ತನುಜಗೆ ಎಮ್ಮನುಜೆಯ ಕೊಟ್ಟು
ವಿವಾಹ ಮಾಡಲಿಚ್ಛಿಸುವೆ
ಲಕ್ಷಣವಂತೆಯು ಕೈಪಿಡಿಯೆ ನಿಮ್ಮನಪೇಕ್ಷ್ಷಿಸಿದಳು
ಚಂದ್ರಮುಖಿಯು ೧೪
ತಂದು ಗದ್ದುಗೆಯ ಚಾವಡಿಯಲ್ಲಿ ಹಾ[ಕಲು]
ಸಂಭ್ರಮದಿಂದ ಕುಳಿತರು
ಹೊಂಬಣ್ಣದ್ಹರಿವಾಣದೊಳಗೆ ತಾಂಬೂಲವ
ತಂದಿಡುವರು ಮನ್ಮಥಗೆ ೧೫
ಅಂಗಜ ಅತಿ ದೈನ್ಯ ಉಕ್ತಿಯಿಂದಲಿ ಬಹು
ಮಂಗಳ ಮೃದು ವಾಕ್ಯವನ್ನು ಪ್ರ
ಸಂಗ ಮಾಡುವನು ಶಂಕರಗಂಡ ನಿಮ್ಮ
ತಂಗಿಯನೆನಗೀಹುದೆಂದ ೧೬
ಬಲ್ಲಿದರು ನೀವು ಬಹು ಪರಾಕ್ರಮಿಗಳು
ಮಲ್ಲಿಗಿಸರ ಕಬ್ಬು ಬಿಲ್ಲು
ಸಲ್ಲದು ನಿಮ್ಮೊಳು ಸಲಿಗಿ ನಮಗೆಂದು ಬಲ್ಲ
ಹಿರಿಯರು ಹೇಳುವರು ೧೭
ಸರ್ವ ಲಕ್ಷಣವುಳ್ಳ ಸರಸಿಜನೇತ್ರೆಯು
ಒಬ್ಬಳೇ ರತಿ ನಮ್ಮ ತಂಗಿ
ಹಬ್ಬ ಹುಣ್ಣಿಮೆಗೆ ಕಳಿಸದೆ ನಮ್ಮನೆಗೆ ನಿರ್ಬಂಧ ಮಾಡುವಿರೆಂದ ೧೮
ನಡೆದರೆ ಬಡವಾಹಳು ನಮ್ಮ ತಂಗಿಯು
ಕಡುಮೋಹದಿಂದ ಸಾಕಿದೆನು
ಬಡಿವಾರ ನಿಮ್ಮೊಳು ಭರವಸೆ ನಮಗೇನು
ಕೊಡಲಾರೆ ತಂಗಿಯನೆಂದ ೧೯
ಅನುಮಾನ ಮಾಡುವುದೇಕೊ ನೀ ಇಷ್ಟೊಂದು
ಅವಳಿಗೆ ಸ್ವತಂತ್ರವಿಲ್ಲೇನು
ನೆನೆದಾಗ [ಕಳುಹುವೆ ನಿಮ್ಮ ಮನೆಗೆಂದು] ಮನಸಿಜ
ನುಡಿದ ದೈನ್ಯದಲಿ ೨೦
ಹಾಗಾದರಾಗಲಿ ಎನುತ ರಾಶಿಕೂಟ
ಭಾಗ್ಯದಿಂದಲಿ ನೋಡಿದರು
ಭಾಗೀರಥಿ ಮದನ ರತಿದೇವಿಗೆ ಆಗಲೆ
ನೇಮವನೆ ಮಾಡಿದರು ೨೧
ನಲ್ಕಾವತಿಯ ಶೃಂಗಾರ ಮಾಡಿದರು ದಿನಕರ
ಪ್ರತಿಬಿಂಬ[ದಂದ]ದಲಿ
ಕನಕ ತೋರಣಗಳನ್ನು ಕಟ್ಟಿ ತಾ ಕರೆಸಿದ
ಎಣಿಕೆಯಿಲ್ಲದ ಬಂಧು ಜನರ ೨೨
ಬಲ್ಲಿದ ಶುಭಲಗ್ನವ ನೋಡಿ ಬುಧಜನರು
ಎಲ್ಲರು ನೆರೆದು ಸಂಭ್ರಮದಿ
ಮಲ್ಲಿಗೆ ಸರದಿ ಮದನರತಿದೇವಿಗೆ ಕಲ್ಯಾಣವನೆ ಮಾಡಿದರು ೨೩
ಸೆಳೆಮಂಚ ಸುಪ್ಪತ್ತಿಗೆ ಸುವರ್ಣದ ತಳಿಗೆ
ಬಟ್ಟಲು ಗಿಂಡಿಗಳನ್ನು
ಬಳುವಳಿ ಮಾಡಿದ ಸ್ತುತಿಸುವೊ ಎಳೆದೇರ
ಬಳುವಳಿ ತಂಗಿಗೆ ಇತ್ತ ೨೪
ಸಾಸಿರ ಗೋವು ಗಜವು ತುರಗವು ಬ್ಯಾಸರಿಯದೆ ತಂಗಿಗಿತ್ತ
ಲೇಸಾದ ಊರು ಉಂಬಳಿಯ ಕೊಟ್ಟುರತಿಯ
ವಿಲಾಸಪಟ್ಟಣಕೆ ಕಳಿಸಿದ ೨೫
ಮನ್ಮಥ ರತಿದೇವಿ ವಿಲಾಸ ಪಟ್ಟಣದೊಳು ಉನ್ನಂತ
ದಿನ ಬಾಳುತಿರಲು
ಇನ್ನೊಮ್ಮೆ ನೋಡಬೇಕೆನುತ ಶಂಕರ ಗಂಡ ತನ್ನೊಳು
ತಾನೇ ಯೋಚಿಸಿದ ೨೬
ಬಿಗಿದು ಸುತ್ತಿದ ದೊಡ್ಡ[ಚೆಂ]ಡಿಯ ಬೆನ್ನಿಗೆ
ಬಿಗಿದ ನಾಡಗಂಬಳಿಯ
ಹೆಗಲ ಮೇಲಿನ ಬಾರಿಕೋಲು ಮನ್ಮಥರಾಯ
ನಗುವಂತೆ ಮಾಡಿ ರೂಪವನು ೨೭
ಹೆಗ್ಗಾಲು ಮರೆಯ ಮೆಟ್ಟಿದ್ದ ಕೈಯಲ್ಲಿ ದೊಡ್ಡ
ಕುಡಗೋಲು ಕವಣೆಯ ಪಿಡಿದು
ಶೀಘ್ರದಿ ತೆರಳಿ ಅಂಗಜನಹಂಕಾರವ ನಿಗ್ರಹ
ಮಾಡುವೆನೆನುತ ೨೮
ನೋಡೆಲೆ ರತಿ ನಿನ್ನ ಒಡಹುಟ್ಟಿದಣ್ಣನು
ರೂಢಿಯೊಳಗೆ ಅತಿಚೆಲುವ
ಗಂಡು ಕೆರವ ಮೆಟ್ಟಿ ಗಮಕದಿಬರತಾನ ನೋಡೆಂದು
ಸತಿಗೆ ತೋರಿದನು ೨೯
ಬಡವನಲ್ಲವೋ ಆತ ಬಹು ಪರಾಕ್ರಮಿ
ಒಡಹುಟ್ಟಿದಣ್ಣ ತಾ ಮುನಿಯೆ
ಕೆಡುವುದೋ ನಮ್ಮ ಐಶ್ವರ್ಯ ಆತನಗೊಡವೆ
ನಮಗೆ ಬೇಡವೆಂದ್ಲು ೩೦
ಕಾಂತೆಯ ಮಾತನು ಕೇಳಿ ಅಂಗಜನು ದಾವ
ಕಾರಣವ ಹೇಳದಂತೆ ದಿನಕರ
ನಂತೆ ಹೊಳೆಯುತ ಸಭೆಯಲಿತವಕದಿಂದಲಿ ಬಂದು ಕುಳಿತು೩೧
ತಲೆಯೆತ್ತಿ ನೋಡಲಿಲ್ಲವು ಆತನ ಕೂಡೆ
ಗೆಲುವಿನಿಂದ ಮಾತಾಡಲಿಲ್ಲ
ಎಲೆ ಕಾಮದೇವ ಎನ್ನನುಜೆಯ ಕಳಿಸೆಂದು
ಜುಲ್ಮಿಂದ ತಾನೆ ಕೇಳಿದನು ೩೨
ಹೂವಿನ ಮಂಚ ಪಂಚಭಕ್ಷ್ಯ ಪರಮಾನ್ನವುದಾವಾಗ
ನಮ್ಮನೆಯಲಿ
ಉಣ್ಣಲಾರಳು ಜೋಳದನ್ನವ ನಮ್ಮಾಕೆ
ನಾವೀಗ ಕಳಿಸುವೋರಲ್ಲ ೩೩
ಲಕ್ಷ್ಮಿದೇವಿ ಭಾರತಿದೇವಿ ಗೌರಿಯರು
ತೌರುಮನೆಯ ಹಾರೈಸುವರು
ನಮ್ಮ ಮನೆಯಲ್ಲಿದ್ದ ಅಂಬಲಿಯನ್ನೇ
ಉಂಡು ಸಂಭ್ರಮದಿಂದ ಬಾಹೋಳೆಂದ ೩೪
ಸಿರಿ ಮುಡಿಯ ಮೇಲೆ ಹುಲ್ಲು ಹೊರಿಸುವೆನು
ಕರುವ ಕಾಯಿ ನಮ್ಮ ಮನೆಯ
ಅರಿವೆ ಉಡಿಸಿ ಮೂರು ಬೊಗಸೆ ಅಂಬಲಿಯನ್ನು
ಮರೆಯದೆ ಹೊಯ್ಸುವೆಂನೆಂದ ೩೫
ಬಹಳ ಮಾತಾಡೋದು ಯಾಕೋ ನೀ ಇಷ್ಟೊಂದು
ಜೋಳವ ಕೊಂಡು ಹೋಗೆನಲು
ಬೇಡೆಲವೊ ಕಾಮ ನಿನ್ನ ಐಶ್ವರ್ಯವ ಹಾಳು
ಮಾಡುವೆನೊಂದು ಗಳಿಗೆಯಲಿ ೩೬
ಸಮರ್ಥ ನೀ ಹೌದು ಸಲಹುವ ಜೋಳವ
ಗಮಕದಿಂದಲಿ ಬೆಳೆವೆನೆಂದು
ಅಮೃತದ ಕಲಶವ ತಂಗಿ ಕೈಯೊಳಗಿಟ್ಟು
ಚಮತ್ಕಾರದಿಂದ ಮಾಯವಾದ ೩೭
ಹೊಟ್ಟೆ ಹಸಿದಿತು ಭೋಜನ ಮಾಡುವೆನೆಂದರೆ
ಅಟ್ಟ ಅಡಿಗೆ ಮನೆಂಇ

 


ತಾರಮ್ಮ ಶ್ರೀ ರಂಗಧಾಮನ ತಂದು
ತೋರಮ್ಮ ಎನ್ನಯ ಪ್ರೇಮನ
ವಾರಿಜಸಖಶತಕೋಟಿತೇಜನ ಹೊಂತ-
ಕಾರಿಯ ನೀ ಕರತಾರೆ ಸೈರಿಸಲಾರೆ ಪ.
ವೃಂದಾವನದೊಳಗಾಡುವ ಶ್ರೀ-
ಗಂಧವ ಮೈಯೊಳು ತೀಡುವ
ಚಂದದಿ ಕೊಳಲೂದಿ ಪಾಡುವ ನಮ್ಮ
ಕಂದರ್ಪ ಜಲಕ್ರೀಡೆಯಾಡುವ
ನಂದ ನಂದನ ಗೋವಿಂದನ ಕಾಣದೆ
ಒಂದು ನಿಮಿಷ ಯುಗವಾಗಿ ತೋರುತಲಿದೆ ೧
ಉಡುವ ಸೀರೆಯ ಸೆಳೆದೋಡುವ ದೊಡ್ಡ
ಕಡಹದ ಮರವೇರಿ ನೋಡುವ
ಕೊಡಲೊಲ್ಲದೆ ಬಹುಕಾಡುವ ಲಜ್ಜೆ-
ಗೆಡಿಸಿ ಮಾನಿನಿಯರ ಕೂಡುವ
ತಡವ್ಯಾತಕ್ಕೆ ಸಖಿ ತವಕದಿಂದಲಿ ಪೋಗಿ ಎ-
ನ್ನೊಡೆಯನ ಕರತಾರೆ ಅಡಿಗೆರಗುವೆ ನಾ ೨
ನೀಲವರ್ಣನ ನಿಜರೂಪನ ಶ್ರೀ-
ಲೋಲ ಹೆಳವನಕಟ್ಟೆವಾಸನ
ಜಾಲಿ ಹಾಳ ವೆಂಕಟೇಶನ ಭಕ್ತ-
ಪಾಲಕ ಪರಮವಿಪೋಷನ
ಆಲಸ್ಯವ್ಯಾಕೆನ್ನ ಇನಿಯನ ಕರೆತಾರೆ
ಬಾಲೆ ನಿನಗೆ ಕಂಠಮಾಲೆಯ ಕೊಡುವೆ. ೩

 

ನೀರೊಳಗೆ ಮನೆ

ತಿಳಿಯದೊ ನಿನ್ನಾಟ ತಿರುಪತಿಯ ವೆಂಕಟ ಪ.
ನೀರೊಳು ಯಳವ ಮೋರೆಯ ನೆಳಲ ನೋಡುವಿ
ಸುಳಿವರಂಬುಧಿ ಇಳೆಯನಾಳುವ ಭಳಿರೆ ಭಾರ್ಗವ
ಖಳನ ಛೇದಿಸಿ ಕೊಳಲ ದನಿಯನು
ನಳಿನಮುಖಿಯರಿಗೆ ನಾಚಿಸುವದಿದೊಳಿತೆಯೇಳು ಹವಣಗಾರನೆ ೧
ಆರುಬಲ್ಲರು ನಿನ್ನ ಶ್ರೀ ಲಕ್ಷ್ಮಿಯ ಮನಸಿಗೆ
ತೋರದಿಹ ಪರಬ್ರಹ್ಮ ಉಳಿದವರು ಬಲ್ಲರೆ
ನೀರಜಾಸನ ಬೊಮ್ಮಾ ಇದು ನಿಮ್ಮ ವರ್ತಿ
ನೀರೊಳಗೆ ಮನೆ ಭಾರ ಬೆನ್ನಲಿ ೨
ಕೋರೆದಾಡೆಯ ನಾರಸಿಂಹನೆ ಭೂರಿ ಬೇಡಿದಿ
ಧೀರ ಹರುಷದಿ ವಾರಿ ಬಂಧಿಸಿ ಮಾರ ಜನಕನೆ
ನಾರಿಯರ ವ್ರತಭಂಗ ಕುದುರೆಯನೇರಿ
ಮೆರಿವೆ ಕೋಮಲಾಂಗನೆ ೩
ಸಕಲ ಮಾಯವಿದೇನೊ ತ್ರಿವಿಕ್ರಮನ ಪಾಲಿಸಿ
ಸಕಲನುಳಿಹಿದೆ ನೀನು ಭಕುತಿಯಿಂದಲಿ
ಸ್ತುತಿಪರಿಗೆ ಸುರಧೇನು ಸುಮನಸರ ಭಾನೂ
ಅಖಿಳವೇದೋದ್ಧಾರ ಗಿರಿಧರ ೪
ನಿಖಿಳ ಭೂಮಿಯ ತಂದ ನರಹರಿ ಯುಕುತಿಯಲಿ ಆಳಿದೆ
ಭಕ್ತವೃಂದಕೆ ಸುಖವ ತೋರುವ ವೇಣು ಗೋಪಾಲನೆ
ರುಕುಮನನುಜೆಯ ರಮಣ ಬೌದ್ಧನೆ
ಲಕ್ಷುಮಿಯರಸನೆ ಕಲ್ಕಿ ರೂಪನೆ ೫
ನಿನ್ನ ರೂಪವಿದೆಲ್ಲಾ ನೋಡುವರಿಗೆ
ಕಣ್ಣು ಸಾಸಿರವಿಲ್ಲಾ ಪಾಡಿ ಪೊಗಳಲು
ರಂನ್ನಘಾತಿದೆನಲ್ಲಾ ಕಂಣಮುಚ್ಚದೆ
ಬೆಂನ್ನ ತೋರುವೆ ಮಂಣ ಕೆÉದಿರದಿ ೬
ಚಿಂಣಗೊಲಿದನೆ ಸಂಣವಾಮನ ಪುಣ್ಯಪುತ್ರನೆ
ಹಂಣುಸವಿದನೆ ಬೆಂಣೆಗಳ್ಳನೆ
ಹೆಂಣುಗಳ ವ್ರತಗಳೆವ ಹೆಳವನಂದು
ಗೆಲಿಸಿದ ರಂಗ ದೇವೋತ್ತುಂಗನೆ ೭

 

ಪುಂಗನೂರಿನ ರಾಜಕುಮಾರನಿಗೆ ಕಣ್ಣು

ತೋರಬಾರದೆ ನಿಮ್ಮ ಚರಿತೆಯನು
ನರರೊಳು ನಗೆಗೀಡು ಮಾಡದ ಹಾಗೆ ಪ.
ಕಲ್ಲೊಳು ಕಾಂತೆಯ ಮಾಡಿದವನೆಂ-
ದೆಲ್ಲರು ಜಗದೊಳು ಪೇಳುವರು
ಅಲ್ಲಿ ಮಾಡಿದ ಹಾಗೆ ಇಲ್ಲಿ ತೋರಿಸಿದರೆ
ಬಲ್ಲಿದನೆನ್ನೊಡೆಯ ದೊಡ್ಡವನೆಂದು ಸಾರುವೆ ೧
ಅಹಹ ಕುಬುಜೆಯಳ ತನುವನ್ನೆತ್ತಿ
ಮಹಿಯೊಳು ಯುವತಿಯ ಮಾಡಿದೆಯೆಂಬರು
ಬಹು ಪರಾಕ್ರಮವನ್ನು ಈಗ ತೋರಿಸಿದರೆ
ಅಹುದೋ ಎನ್ನೊಡೆಯ ದೊಡ್ಡವನೆಂದು ಸಾರುವೆ ೨
ನೀನೆ ಗತಿಯೆಂದು ಬಂದ ಭಕ್ತನ ಕ-
ಣ್ಣುನವ ತಿದ್ದಿ ನಿಜವ ತೋರಿಸಯ್ಯ
ದೀನದಯಾಳು ಹೆಳವನಕಟ್ಟೆ ರಂಗಯ್ಯ
ದಾನಿ ಎನ್ನೊಡೆಯ ದೊಡ್ಡವನೆಂದು ಹೊಗಳುವೆ ೩

 

ಮುರಹರ (ನು-೨):
೩೭
ದಯಾಪೂರ್ಣ ಗುಣನಿಧಿಯೆ ದೀನರಕ್ಷಕನೆಂದು ಭಯದಿಂದ
ನಂಬಿದೆನೊ ರಂಗ
ಕೈವಿಡಿದು ಕಾಯದಿಹುದು ನಿನಗುಚಿತವೆ ಭಯರಹಿತ
ಗೋವಿಂದ ರಂಗ ಪ.
ಇಳೆಸೃಷ್ಟಿಗಾಧಾರನೆಂಬ ಬಿರುದುಳ್ಳಡೆ ಜಗನ್ಮಯನೆ ಚಿನ್ಮಯರೂಪ ರಂಗ
ಪ್ರಿಯದಿಂದ ಭಜಿಸುವರ ಭಕ್ತವತ್ಸಲ ಏಕೋದೇವ
ನೀನಾದ್ಯಯ್ಯ ರಂಗ ೧
ಸುಜನಮಂದಾರ ಸರಸಿಜಭವಪಿತ ನಿನ್ನ ಪ್ರಜೆಗಳು ಪೊಗಳುತ್ತಿಹರೆ ರಂಗ
ನಿಜವಾಗಿ ನೆನೆವರ ಹೃದಯಹೃತ್ಕಮಲ ಮನಸಿಜ ಜನಕ
ಮುರಹರನೆ ರಂಗ ೨
ಸುಜನರೊಳಗೆನ್ನ ಕುಹಕವ ಮಾಡದೆ ನಿನ್ನ ಭಜಕನೆಂದಿರಲಾಗಿ ರಂಗ
ಗಜರಾಜವರದ ಗಂಗಾಜನಕ ಸಲಹೆನ್ನ
ಭುಜಗೇಂದ್ರಶಯನ ಶ್ರೀರಂಗ ೩
ಧಾತ್ರಿಗಾಧಾರ ಅನಾಥರಕ್ಷಕನೆ ದಯವ್ಯಾತಕೆನ್ನೊಳಿಲ್ಲ ರಂಗ
ವಿಹಿತವೆ ನಿನಗೆ ನಡುನೀರೊಳಗೆ ಕೈಬಿಡುವುದು ಶ್ರೀಕಾಂತ
ಕಡೆಹಾಯಿಸೊ ರಂಗ ೪
ನೋಡೆ ಶ್ರೀ ಹರಿಯೆ ನೀನಲ್ಲದನ್ಯತ್ರ ದಾತ್ರರಿಲ್ಲವೊ ರಂಗ
ನೀ ಪರಂಜ್ಯೋತಿಮೂರುತಿಯೆಂದು ನಂಬಿದೆನು ಅಪಾರ
ಮಹಿಮ ಶ್ರೀರಂಗ ೫
ಕೋಪವನು ಬಿಡು ಎನ್ನ ಕುಂದನೆಣಿಸದಿರಯ್ಯ ಆಪತ್ಬಂಧು ಶ್ರೀರಂಗ
ದ್ರೌಪದಿವರದ ಹೆಳವನಕಟ್ಟೆರಂಗಯ್ಯ ಲಕ್ಷ್ಮೀಪತಿ
ಸಲಹಯ್ಯ ರಂಗ ೬

 

ಪಾರಿಜಾತ
೪೯
ಶ್ಲೋಕ : ದ್ವಾರಾವತಿಯಲಿ ದನುಜದಲ್ಲಣ ಮುಕುಂದ
ಸಾರೆ ರುಕ್ಮಿಣಿಸಹಿತ ಆನಂದದಿಂದ
ವಾರಿಜಾಂಬಕ ವಾಲಗದೊಳು ಚಂದ
ನಾರಂದಮುನಿ ತಾ ಪಾರಿಜಾತವ ತಂದ ೧
ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದ ಪುಷ್ಪಯಾರಿಗೆ ಎಂದ
ವಲ್ಲಭೆರುಕ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ ನೀನು ಬಲ್ಲದೆ ಇಂತೆಂದ
ಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದು ಕೇಳಿದಳಾಕೆ ನಿಂದು
ತಲ್ಲಣಿಸುತ ಎದೆ ಧಿಗಿಲೆಂದು ಭುಗಿಭುಗಿಲೆಂದು
ಮನದಲ್ಲಿ ಅತಿನೊಂದು ೧
ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನು
ಮಂದಗಮನೆಯ ಮುಡಿಗೆ ತಾ ಮುಡಿಸಿದನು
ಎಂದು ಎನ್ನೊಳು ಎರವು ಇಲ್ಲವು ಕಾಣಿ
ಇಂದು ಮಾಡಿದ ಕುಹಕವ ಕೃಷ್ಣ ತಾನು ೨
ಪದ : ಹರಿಯು ಮಾಡಿದ ಮಾಟವನು ಕಂಡೆನು ನಾನು
ಇನ್ನಾರಿಗೆ ಪೇಳುವೆನು
ಪರಿಮಳದ ಪಾರಿಜಾತದ ಹೂವ ತಂದನು ಭಾಮೆ
ರುಕ್ಮಿಣಿ ತನ್ನ ಜೀವ
ಸರಿ ಬಂದ ಮಡದಿಗೆ ಮುಡಿಸಿದ ಶೃಂಗರಿಸಿದ
ಬಹುಪ್ರೀತಿ ಬಡಿಸಿದ
ಬರಿಯ ಮಾತಿನ ಬನ್ನಣೆಯಿಲ್ಲ ಸ್ನೇಹ ತನಗಲ್ಲಿ
ಠಕ್ಕುಠವಳಿಗಳಿಲ್ಲಿ ೨
ಶ್ಲೋಕ : ಮೆಚ್ಚಿ ಬಂದೆನೆ ಮೋಹಕ್ಕೆ ಮರುಳಾದೆನೆ
ಹಚ್ಚಿರೆ ಮಾತ ಹರಿಯು ತಾ ಕೇಳಿದನೆ
ನೆಚ್ಚಿ ಇದ್ದೆನೆ ಎನ್ನೊಳು ವಂಚಿಸಿದನೆ
ರಚ್ಚಿಗಿಕ್ಕಿದ ರಂಪು ಮಾಡಿದ ಕಾಣೆ ೩
ಪದ : ಮಾರನಟ್ಟುಳಿ ತಾಳಲಾರೆನೆ ಮುಖದೋರನೆ ಇನ್ನೇನು ತೆರನೆ
ತೋರಿಸೆ ಕೃಷ್ಣನ್ನ ಅಮ್ಮಯ್ಯ ಕೇಳು ದಮ್ಮಯ್ಯ
ಕಂತು ಕಮಲಜನಯ್ಯ
ಬಾರದಿದ್ದರೆ ಪ್ರಾಣ ಉಳಿಯದು ಮತ್ತೆ ಅಳಿವುದು
ಏನೆಂದು ತಿಳಿಯದು
ಸಾರಿದ ಸರಿಬಂದ ಸತಿಯ [ಳ] ಬಹುರತಿಯ[ಳ]
ಬಹು ಪ್ರೀತಿ ಇದ್ದವ[ಳ] ೩
ಶ್ಲೋಕ : ಮಳೆ ಇಲ್ಲದ ಮೇಘವಿದ್ಯಾತಕ್ಮಮ್ಮ
ಬೆಳೆ ಇಲ್ಲದ ಭೂಮಿ ಮತ್ಯಾತಕಮ್ಮ
ಗಿಳಿಇಲ್ಲದ ಗೂಡು ತಾನ್ಯಾತಕಮ್ಮ
ತಾಳಲಾರೆನೊ ಶ್ರೀ ಕೃಷ್ಣನಿಲ್ಲದೆ ಎಮ್ಮ ೪
ಪದ :ಯಾಕೆನ್ನ ಬ್ರಹ್ಮ ಪುಟ್ಟಿಸಿದನೊ ಸೃಷ್ಟಿಸಿದನೊ
ಮಾತೆನ್ನ್ಯಾಕ ಪಡೆದಳೊ
ಸಾಕಿನ್ನು ಹೆಣ್ಣು ಜನ್ಮದ ಬಾಳು ಯಾತಕೆ ಹೇಳು
ತಾಕಲೆನ್ನಯ ಗೋಳು
ಕುಹಕ ಪೇಳ್ದು ನಾರದ ಸಿದ್ಧ ಎಂಬುದು ಬದ್ಧ
ಮೂರುಲೋಕ ಪ್ರಸಿದ್ಧ
ಶ್ರೀಕೃಷ್ಣಂಗೆ ಎನಗೆ ಭೇದವ ಮಾಡಿ ಹೋದನು
ಓಡಿ ತನಗ್ಯಾಕಿದು ಬ್ಯಾಡಿ ೪
ಶ್ಲೋಕ : ಬಿಸಜಾಕ್ಷನ ಬಹಳ ನಂಬಿದ್ದೆ ನಾನು
ವಶವಾದನೆ ಒಲಿದು ರುಕ್ಮಿಣಿಗೆ ತಾನು
ಶಶಿಮುಖಿಯಳೆ ಸವತಿ ಅಟ್ಟುಳಿ ಇದೇನು
ಆಸೆಬಟ್ಟೆನೆ ಬಹಳ ವಸುದೇವ ಸುತಗೆ ೫
ಪದ : ಸಿಟ್ಟಿನಿಂದತಿ ಘುಡಘುಡಿಸುತ ಆರ್ಭಟಿಸುತ
ಎಲ್ಲರೊಡನೆ ಕೋಪಿಸುತ
ತೊಟ್ಟತೊಡಿಗೆ ಈಡಾಡುತ ಬಿಸಾಡುವ
ನನಗ್ಯಾಕಿದು ಎಂದು
ಪಟ್ಟೆ ಮಂಚದ ಮೇಲೆ ಒರುಗುತ ತಾ ಎರಗುತ
ಮನದೊಳು ಮರುಗುತ
ಇಷ್ಟು ಮಾಡುವುದಿದು ನೀತವೆ ಪ್ರಖ್ಯಾತವೆ
ಸುರಪಾರಿಜಾತವೆ ೫
ಶ್ಲೋಕ :ದೇವಲೋಕದ ಹೂವ ತನಗಿಲ್ಲವಲ್ಲ
ಭಾವೆ ಎನ್ನೊಳು ಮುನಿಯದೆ ಬಿಡುವಳಲ್ಲ
ಆವ ಪರಿಯಲಿ ತಿಳಿದು ಹೇಳುವೆನು ಸೊಲ್ಲ
ಜೀವದೊಲ್ಲಭೆಯೊಡನೆ ಪಂಥವು ಸಲ್ಲ ೬
ಪದ : ಮಂದಗಮನೆ ಮುನಿದಿಹಳೊ ಎನ್ನ ಪ್ರಿಯೆಳೊ
ಎನ್ನೊಡನೆ ನುಡಿಯಳೊ
ಇಂದು ಅಲ್ಲಿಗೆ ಹೋಗದಿದ್ದರೆ ಇಲ್ಲಿದ್ದರೆ
ಅಪ್ರಬುದ್ಧನಾದರೆ
ಕುಂದು ಎನ್ನ ಮ್ಯಾಲಿಡುವಳೋ ಸ್ನೇಹ ಬಿಡುವಳೊ
ಕೋಪವನು ತಾಳುವಳೊ ಇಂ
ತೆಂದು ನುಡಿದ ಮುಕುಂದ ನಿತ್ಯಾನಂದನು
ಬಾಗಿಲೊಳು ನಿಂದನು ೬
ಶ್ಲೋಕ :ಚಿತ್ತದೊಲ್ಲಭೆ ಚದುರೆ ಮೋಹನಾಕಾರೆ
ಮುತ್ತುರತ್ನವ ಮನೆಯೊಳಗೆಲ್ಲ ಬೀರಿ
ಎತ್ತ ಹೋದಳೊ ಎನ್ನ ಪ್ರಾಣದ ನಾರಿ
ಸತ್ಯಭಾಮೆಯ ಸುಳುಹು ಕಾಣೆನು ತೋರಿ ೭
ಪದ : ಕನ್ನಡಿ ಕದಪಿನ ಜಾಣೆಯ ಸುಪ್ರವೀಣೆಯ
ಕೋಕಿಲವಾಣಿಯ
ಇನ್ನೆಲ್ಲಿ ಹೋದಳು ತೋರಿಸೆ ಹತ್ರ ಸೇರಿಸೆ ಬಂದೆನು
ಹಾರೈಸಿ ನಿಂತವರು ಕಣ್ಣು
ಸನ್ನೆಯ ಮಾಡಿ ತೋರ್ವದು ನೋಡಿ ಮೆಲ್ಲಗೆ
ಮಾ[ತಾ]ಡಿ ೭
ಶ್ಲೋಕ :ಹಾಸಿ ಮಲಗಿದ್ದ ಸತಿಯ ಕಂಡು
ಬೀಸಣಿಕೆಯಲಿ ಬೀಸಿದ ಕೃಷ್ಣ ತಾನು
ಸೂಸು ಪರಿಮಳ[ದ] ಪಾರಿಜಾತದ ಹೂವ ಹಾ-
ರÉೈಸಿ ಕಂಗಳು ತೀರ[ವು] ನೋಡಿದಳು ಕಾಂತೆ ೮
ಪದ : ಕಂಡಳು ಕಾರುಣ್ಯಮೂರ್ತಿಯ ಸತ್ಕೀರ್ತಿಯ
ಫಲ್ಗುಣನ ಸಾರಥಿಯ
ಇಲ್ಲಿಗ್ಯಾತಕೆ ಬಂದೆ ಹೋಗೆಂದು ಅತ್ತ ಸಾಗೆಂದು
ಇದು ಏನು ಸೋಗೆಂದು
ಹಿಂಡು ಸ್ತ್ರೀಯರ ಶಿರೋರನ್ನಳೆ ಮೋಹನ್ನಳೆ
ಮುನಿಸ್ಯಾತಕೆನ್ನೊಡನೆ
ಕಂಡ ಕನಸು ಎಂದು ಭಾವಿಸೆ ಎನ್ನ ಜೀವಿಸೆ
ಅಪರಾಧವ ಕ್ಷಮಿಸೆ ೮
ಶ್ಲೋಕ :ಅಕ್ಕರಿಂದಲೆ ರುಕ್ಮಿಣಿಗೆ ಇತ್ತ ಹೂವ
ಮಿಕ್ಕ ಸತಿಯರಿಗ್ಯಾತಕೆಂಬ ಭಾವ
ಕಕ್ಕುಲಾತಿಯ ಕಂಡೆ ನಿನ್ನಲ್ಲಿ ಜೀವ
ಸೊಕ್ಕಬ್ಯಾಡವೊ ಸಾಕು ಹೋಗೆಲೊ ಗೋವ ೯
ಪದ : ಮಲಯಜಗಂಧಿ ಮರನ ತಂದು ನಿಲಿಸುವೆನಿಂದು
ಮನ್ನಿಸೆ ಕೃಪಾಸಿಂಧು
ಬಲರಾಮ ನಂದಗೋಪನಾಣೆ ತಪ್ಪೆನು ಕಾಣೆ
ಕೋಕಿಲಸ್ವರಗಾನೆ
ಛಲವ್ಯಾತಕೆಂದು ತಕ್ಕೈಸಿದ ಸಂತೈಸಿದ ತೊಡೆಯಲ್ಲಿ
ಕುಳ್ಳಿರಿಸಿದ
ಹೆಳವನಕಟ್ಟೆಯ ರಂಗನು ಕೃಪಾಂಗನು
ದೇವೋತ್ತುಂಗ ವಿಕ್ರಮನು ೯

 

೧೦
ಧರೆಯೊಳಗೆ ಹೆಳವನಕಟ್ಟೆಯಲಿ ನೆಲಸಿ
ಪರಿಪೂರ್ಣಕಳೆಯಿಂದ ಭಕುತರನು ಒಲಿಸಿ
ಸ್ಥಿರವಾಗಿ ಪೂಜೆಯನು ನೆಲಸಿ ನೀನಿಂದೆ
ಕರುಣ ದೃಷ್ಟಿಯಲಿ ಭಕ್ತರನು ಮನ್ನಿಸುವೆ ೧
ಹತ್ತು ಅವತಾರದಲಿ ಇದಿರಾಂತವರ ಗೆಲಿದು
ಮತ್ತೆ ಪದವಿಯ ಕೊಟ್ಟುರಕ್ಷಿಸಿ ಕಾಯ್ದೆ
ವಿಸ್ತರಿಸಿ ಪೂಜೆಯನು ಮಾಡಿಸಿಕೊಂಬೆ
ತೆತ್ತೀಸಕೋಟಿ ದೇವರ್ಕಳನು ರಕ್ಷಿಸಿದೆ ೨
ಉದಯ ಮದ್ಯಾಹ್ನ ಸಂಜೆಯಲಿ ಪೂಜೆಯನು
ವಿಧವರಿತು ಸೇವೆಯನು ಅನುಸರಿಸಿಕೊಂಬೆ ಸ-
ಹೃದಯ ಭಕ್ತರನು ಕಾಯ್ದು ಪಾಲಿಸುವೆ
ಮುದದಿಂದ ಹೆಳವನಕಟ್ಟೆಯಲಿ ನೆಲಸಿರುವೆ ೩

 

೩೮
ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನ
ನಂಬಿದ ಭಕ್ತರಿಗೆ ಬೆಂಬಲನಾಗಿರುವನೆ ಪ.
ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತ
ಪೊರೆದ ಮಹಾನುಭಾವ ಮುರಹರನೆ ನಿನ್ನ ೧
ಶಕ್ತನೆ ನಿನ್ನ ನಾ ಭಕ್ತಿಯಿಂ ಭಜಿಸುವೆ
ಭಕ್ತರಿಗೆಲ್ಲ ನೀನು ಮುಕ್ತಿಯ ಕೊಡುವನೆ ೨
ಧರೆಯೊಳು ರಾಜಿಪ ವರ ಹೆಳವನಕಟ್ಟೆ
ಗಿರಿಯೊಳು ನೆಲಸಿಹ ಪರಮಪುರುಷ ರಂಗ ೩

 

ಕೈಕಾಲಿಲ್ಲದೆ —
೧೧
ನಾರಾಯಣನಮ್ಮ ಈತ
ನಾರಿ ಒಳ್ಳೊಳ್ಳೆ[ಯ]ವರಿಗೆ ಮಾಡಿದ ಖ್ಯಾತ ಪ.
ನಾನಾ ಬಗೆಯಿಂದ ಪೊಗಳುವೆನೀತ-
ನ್ನಾನೆಂಬುವುದನ್ನು ಮುರಿದ ಪ್ರಖ್ಯಾತ ಅ.ಪ.
ಕೈಕಾಲಿಲ್ಲದೆ ಆಟ ಆಡಿದ
ಮೈಮ್ಯಾಲೆ ಹೊರೆಯ ಹೊತ್ತು ನೋಡಿದ
ಕೋರೆಯ ಮಸೆದು ಹದ ಮಾಡಿದ
ಕೋಯೆಂದು ಕೂಗಿ ಒದರುತೋಡಿದ
ಇವ ಭಕ್ತರನ್ನ ಪಾತಾಳಕ್ಕೆ ದೂಡಿದ
ಶಕ್ತಿ ಮಗನಾದ ಕ್ಷತ್ರಿಯರ ಕಾಡಿದ
ರಾವಣನಿಗೆ ಅಂಬು ತೆಗೆದು ಹೂಡಿದ
ರಾಧಾನ್ಮನೆ ಪೊಕ್ಕು ಮೋಜು ಮಾಡಿದ
ಇವ ದಿಗಂಬರನಾಗಿ ಅಶ್ವವೇರಿ ಓಡಿದ ೧
ಕಳ್ಳಗಿಂತ ಮಹಾಕಳ್ಳ
ಕಲ್ಲು ಮಾಡಿಕೊಂಡು ಇರುವನು ನೆಳ್ಳ
ಭೂಮಿ ನೆಗವಿ ಸುತ್ತಿ ಬಲ್ಲ
ಬುದ್ಧಿವಂತ ಪ್ರಹ್ಲಾದಗೊಲಿದನಲ್ಲ
ಇವ ಎರುಡುಪಾದ ಭೂಮಿ ದಾನ ಒಲ್ಲ
ಇವನ ಕೊಡಲಿಬಾಯಿಗ್ಯಾರು ಇದಿರಿಲ್ಲ
ಲಂಕೆಗೆ ಬೆಂಕಿಯನಲ್ಲ
ಕೊಂಕಿ ಕೊಳಲನೂದುವನು ಗೊಲ್ಲ
ಮೈಮೇಲೆ ಗೇಣು ಅರಿವ್ಯಿಲ್ಲ
ಇವ ಮಾಮೇರೆಂಬೊ (?) ತೇಜಿ ಏರ್ಯಾನಲ್ಲ ೨
[ಬಿಟ್ಟ ಕಣ್ಣ] ಕಂಡ ವೈರಿ ಕೊಂದ
ಕಾಮಾತ್ಮರಿ[ಗಾ]ಗೋದೇನು ಛಂದ
ದಾಡೆಯಿಂದ ದೂಡಿ ಭೂಮಿ ತಂದ
ದಾಡೆಯಿಂದ ಕಂಬ ಒಡೆದು ಬಂದ
ಇವ ಶುಕ್ರನ್ನ ಕಣ್ಣ ಮುರಿದೊಂದ
ತಂದೆ ಮಾತಿಗೆ ತಾಯಿ ಮರಣಂದ
ವನದ್ಹಿಂಡು ಕೂಡಿ ವನಕೆ ಕೇಡು ತಂದ
ಒಮ್ಮೆ ಮೀಸಲ್ಬೆಣ್ಣೆ ಮೆದ್ದೇನಂದ
ಇವ ಬತ್ತಲಾಗಿ ಹತ್ತು ಕುದುರಿದಂದ
ತಂದೆ ಹೆಳವನಕಟ್ಟೆರಂಗ ಬಂದ ೩

 

ಸಾಯುಜ್ಯ ಪದವಿ
೫೦
ನಾರಾಯಣಯೆಂಬೊ ನಾಮವನು ನೆನೆದರೆ
ಹಾರಿ ಹೋಹುದು ಜನ್ಮಜನ್ಮದ ಪಾಪಗಳು
ಶ್ರೀರಮಣ ನಿಮ್ಮ ನಾಮಸ್ಮರಣೆ ನಿತ್ಯೆನಗೆ ದೊರೆಕಿಸಿ
ಮುಕ್ತಿದೋರಿಸು ಮುರಾರಿ ಪ.
ಸಕಲವೇದ ಪುರಾಣ ಶಾಸ್ತ್ರಗಳ ತಿಳಿದೋದಿ
ಭಕ್ತಿಯಲಿ ತಾಯತಂದೆಯ ಚಿತ್ತವಿಡಿದವರ
ರಕ್ಷಣ್ಯವನು ಮಾಡಿ ಜಗದೊಳಗೆ ಖ್ಯಾತಿಯಲಿ
ಸುಕುಮಾರನೆನಿಸಿಕೊಂಡು
ಪ್ರಕೃತಿಯಲಿ ಹೋಮಕ್ಕೋಸ್ಕರ ಸಮಿದೆ ತರಹೋಗಿ
ದುಷ್ರ‍ಕತ್ಯದ ಫಲದಿಂದ ಅಂತ್ಯಜಳನು ಕಂಡು ಕಾ-
ಮುಕನಾಗಿ ಮೈಮರೆದು ಅಜಮಿಳ ತಾನು ಪಾತಕವೆಂದು
ಅರಿತರಿಯದೆ ೧
ನಿಲ್ಲು ನಿಲ್ಲೆಲೆ ಕಾಂತೆ ನಿನಗೊಲಿದೆ ನೀನಾರು
ಸೊಲ್ಲಿಸೆನ್ನೊಡನೆ ಸತಿಯರ ಕುಲಕೆ ಕಟ್ಟಾಣಿ
ಇಲ್ಲಿ ಬಾ ಅಂಜಬ್ಯಾಡೆಲೆ ಮುಗದವೆಂಗಳೆ
ಹುಲ್ಲೆನೋಟದ ಭಾವಕಿ
ಸಲ್ಲಿಲಿತ ಗಾತ್ರೆ ಸೊಕ್ಕಾನೆ ಮೆಲ್ಲಡಿಯವಳೆ
ಮಲ್ಲಿಗೆಗಂಧಿ ಮದನನ ಕೈಯ ಮಸೆದಲಗೆ
ಚೆಲ್ಲೆನ್ನಮ್ಯಾಲೆ ಕರುಣವನು ಕೋಮಲೆನಿಲ್ಲೆಂದು
ಸೆರಗ ಪಿಡಿದ ೨
ಎಲೊ ವಿಪ್ರ ಕೇಳು ನಾವು ಕುಲಹೀನರೆಮ್ಮನೆಯ
ಹೊಲಸಿನ ಮಾಂಸ ಗೋವಿನ ಚರ್ಮದ್ಹಾಸಿಕೆಯು
ಎಲ್ಲವುಗಳ ರಾಶಿ ಬೊಗಳುವ ಹಿಂಡು ನಾಯಿಗಳು
ಬಲು ಘೋರ ಎನಿಸಿಪ್ಪುದು
ಬಲೆಗೆ ಸಿಕ್ಕಿದ ಪಕ್ಷಿ ಬೇಂಟೆಯವಗಲ್ಲದೆ
ಕುಲವ ಕೂಡುವದೆ ಕಾಮಿನಿ ಕೇಳು ನಿನ್ನೊಡನೆ
ಸಲೆ ಬಾಳಿ ಬದುಕಿ ನಾ ಸುಖದಲ್ಲಿ ಇಹೆನೆಂಬ
ಛಲವೊಂದೆ ಎನಗೆ ಎಂದ೩
ವ್ಯರ್ಥ ಎನ್ನೊಡನೆ ಮಾತ್ಯಾಕೆಲೊ ವಿಪ್ರ
ಚಿತ್ತವೆನ್ನಲ್ಲಿ ಇದ್ದರೆ ಹೋಗಿ ನೀ ಎನ್ನ
ಹೆತ್ತ ತಂದೆಯ ಕೇಳು ಸಮ್ಮತವಾದರೆ ಮತ್ತೆ
ನಿನಗೊಲಿವೆನೆಂ[ದಳು]
ಅತ್ತ ಕಾಮಿನಿಯ ಒಡಗೂಡಿ ಆಕೆಯ ಪಿತನ
ಹತ್ತಿರಕೆ ಹೋಗಿ ಕೇಳಿದರಾತನಿಂತೆಂದ ಇಂಥ
ಉತ್ತಮದ ಕುಲವನೀಡಾಡಿ ನೀ ಪಾತಕದ
ಮೊತ್ತಕೊಳಗಾಗದಿರೊ ೪
ಆಗದಾಗದು ಎನ್ನ ಕುಲಬಂಧು ಬಳಗವನು
ನೀಗಿ ನಿಮ್ಮೊಡನೆ ಕೂಡುವೆನೆಂಬ ಮತವೆನಗೆ
ನಾಗಭೂಷಣನ ಪಣೆಗಣ್ಣಿಂದ [ಲುರಿದನ] ಬಾಣತಾಗಿತೆನ್ನೆದೆಯನೆಂದ
ಕೂಗಿ ಹೇಳಿದೆ ನಿನ್ನ ಕುಲವಳಿಯದಿರೆಂದು
ಹೋಗಿ ಕೂಡೊ ಹೆತ್ತ ತಾಯಿತಂದೆಗಳ ಅದು
ಆಗದಿದ್ದರೆ ಆಚೆ ಮನೆಯೊಳಗೆ ನೀವಿಬ್ಬರಲ್ಲಿರಿ ಹೋಗ್ಯೆಂದನು ೫
ಹಾಲಂತ ಕುಲವ ನೀರೊಳಗದ್ದಿಪೂರ್ವದ
ಶೀಲವನಳಿದು ಸತಿಯೊಡಗೂಡಿ ತಾನು ಚಾಂ-
ಡಾಲತಿಗೆ ಹತ್ತುಮಕ್ಕಳ ಪಡೆದು ತಾನವರ ಲೀಲೆಯನು ನೋಡಿ ಹಿಗ್ಗಿ
ಆಲಂಬನದಲಿ ಅಜಾಮಿಳನು ಇರುತಿರಲಾಗ
ಕಾಲ ಬಂದೊದಗಿ ಕರೆಯಿರೊ ಪಾತಕಿಯನೆಂದು
ಜೋಲುದುಟಿ ಡೊಂಕು ಮಾರಿಲಭ್ರದಿಂ
ಯಮನಾಳುಗಳು ಇಳಿದರಾಗ ೬
ಎಡೆಗೈಯ ಪಾಶಗಳು ಹಿಡಿದ ಚಮ್ಮಟಿಗಳು
ಒಡನೊಡನೆ ಚವುರಿಗಳು ವಜ್ರದ ಮೋತಿಯ [ಕಾಗಡಿ]
ತುಡುಕಿ ಹಿಡಿ ಕೆಡೆಹಿ ಕಟ್ಟಿರೊ ಪಾತಕನನೆಂದು
ಘುಡುಘುಡಿಸುತಲಿ ನಿಂತರು
ಕಡುಹಸುಳೆ ಕಂದನಿವನೆಷ್ಟು ಅಂಜುವನೆಂದು
ಗಡಗಡನೆ ನಡುಗಿ ಕಂಗೆಟ್ಟು ಅಜಾಮಿಳ ತಾನು
ಪಡೆದ ಮಗನ ನಾರಗನೆಂದು ಕರೆಯಲು ನುಡಿಯ
ಲಾಲಿಸಿದ ಸ್ವಾಮಿ ೭
ಮರಣಕಾಲದಿ ಶ್ರೀಹರಿಯೆಂಬ ನಾಮವನು
ಸ್ಮರಣೆಯನು ಮಾಡಲು ಅವನ ಕೋಟಿಜನ್ಮದ ಪಾಪ
ಹರಿವುದಾಕ್ಷಣದಲ್ಲಿ ಕರುಣದಿಂದಜಮಿಳನ ಕರೆತನ್ನಿರಿಲ್ಲಿಗೆಂದ
ಉರದೊಳೊಪ್ಪುವ ತುಳಸಿದಂಡೆ ಪೀತಾಂ-
ಬರವು ಗದೆ ಶಂಖ ಚಕ್ರ ದ್ವಾದಶನಾಮವನು
ಧರಿಸಿ ಕರವೆತ್ತಿ ಅಂಜ ಬ್ಯಾಡೆಲೊ ಎಂದು ಹರಿದಾಸರೈ ತಂದರು ೮
ಪುಂಡರೀಕಾಕ್ಷನ ಭೃತ್ಯನ ಭಾಧಿಸುವ
ಲಂಡರಿವರ್ಯಾರು ನೂಕಿ ನೂಕಿರೊ ಎಂದು ಯಮನ
ದಂಡವನು ಮುರಿದು ಬಿಸಾಡಿ ನಿಮ್ಮಸುವ ಹಿಂಡುವೆವು ಎಂದರಾಗ
ಕಂಡ ಹರಿದೂತರಿಗೆ ಯಮನಾಳುಗಳೆರಗಿ ಭೂ-
ಮಂಡಲದೊಳಗೆ ಎಮ್ಮೊಡೆಯ ಯಮಧರ್ಮನ
ದಂಡವ ಮುರಿದವರನು ನಾ ಕಾಣೆ ನೀವೆ
ಉದ್ದಂಡರಹುದೆಂದರಾಗ ೯
ತಂದೆ ಕೇಳೆಮ್ಮ ಬಿನ್ನಪವ ಲಾಲಿಸಿ ನೀವು
ಒಂದು ದಿನ ಹರಿಯೆಂಬ ಧ್ಯಾನವನರಿಯನು ನಾವು
ಬಂದೆಳೆಯಲಾತ್ಮಜನ ನಾರಗಾ ಎನಲು ಕುಂದಿತೆ ಇವನ ಪಾಪ
ಹಂದಿಕುರಿಗಳಿರ ನಿಮಗಿಷ್ಟು ಮಾತುಗಳ್ಯಾಕೆ
ನಿಂದಿರದೆ ಹೋಗ್ಯೆಂದು ನೂಕಿ ಯಮನಾಳ್ಗಳನು
ತಂದಪೆವು ದಿವ್ಯ ಪುಷ್ಪಕವನೆಂದೆನುತ ಬಂದರಾ ವೈಕುಂಠಕೆ ೧೦
ಎದ್ದು ಅಜಾಮಿಳನು ಮೂರ್ಛೆಯ ತಿಳಿದು ಎಚ್ಚೆತ್ತು
ಬಿದ್ದ ಕಾಯವನು ಭಾದಿಸಿದವರ್ಯಾರು ಉ-
ಪದ್ರವನು ಬಿಡಿಸಿದ ದಿವ್ಯ ಸ್ವರೂಪ[ದ] ಸುಧಾತ್ಮರಾರು ಎಂದ
ಮದ್ಯಪಾನವ ಮಾಳ್ಪ ಹೆಂಗಸಿನ ಒಡನಾಡಿ
ಅದ್ದಿದೆ ನೂರೊಂದು ಕುಲವ ನರಕದೊಳೆಂದು
ಹದ್ದಿನ ಬಾಯೊಳಗಿನುರಗನಂತಜಾಮಿಳನು ಇದ್ದ
ತಾನತಿ ಮರುಗುತ ೧೧
ವಿಪ್ರ ಕುಲದಲ್ಲಿ ಪುಟ್ಟಿ ವೇದಶಾಸ್ತ್ರವನೋದಿ
ಮುಪ್ಪಾದ ತಾಯಿ-ತಂದೆಯ ಬಿಟ್ಟು ಬುಧ ಜನರು
ಒಪ್ಪಿ ಧಾರೆಯ ನೆರೆದ ಕುಲಸ್ರ್ತೀಯಳ ಬಿಟ್ಟು ಮದನ
ಬಾಧೆಗೆ ಸಿಲುಕಿ ದುಷ್ಟ
ತಾಪವ ಪೊತ್ತೆ ಜನನಿಂದಕನಾದೆ
ಅಪ್ರತಿಮ ಅನಂತಪಾತಕಿ ಭುವನದಲಿ
ತಪ್ಪಲಿಲ್ಲವೆ ಪಣೆಯ ಬರದ ಬರಹಗಳು ಇನ್ನು ಭಾಪುರೆ
ವಿಧಿ ಎಂದನು ೧೨
ಇಷ್ಟು ದಿನ ಹರಿಯೆಂಬೊ ನಾಮವರಿಯೆನು ನಾನು
ದುಷ್ಟಯವುದೂತರನು ಕಂಡು ಚಂಡಾಲತಿಗೆ
ಪುಟ್ಟಿದ ಮಗನ ನಾರಗನೆಂದು ಕರೆದರೆ ಮುಟ್ಟಿದವೆ ನಿಮಗೆ ದೂರು
ಇಷ್ಟು ಅವಗುಣಗಳನು ಎಣಿಸಲಿಲ್ಲವೆ ಸ್ವಾಮಿ
ಎಷ್ಟು ಕರುಣಾಕರನೊ ಎಂದು ಸ್ನಾನವ ಮಾಡಿ
ಬಿಟ್ಟು ತಾಪತ್ರಯವ ಭಯ ನಿವಾರಣ ಹರಿಯ
ಗಟ್ಯಾಗಿ ಧ್ಯಾನಿಸಿದನು ೧೩
ತನ್ನ ನಾಮವ ನೆನೆವ ಭಕ್ತರಾದವರೆಲ್ಲ
ಧನ್ಯರಿವರಹುದೆಂದು ಜಗವರಿಯಬೇಕೆಂದು
ಉನ್ನತವಾದ ಪುಷ್ಪಕವ ತಾ ಕಳುಹಿದ ಪನ್ನಗಾರಿವಾಹನ
ಅನ್ಯಾಯ ಇವಗಿಲ್ಲ ಅವನಿಯೊಳಗುತ್ತಮನು
ಎನ್ನಯ್ಯ ಏಳೆಂದು ಕೈಲಾಗವನು ಕೊಡಲು
ಉನ್ನತವಾದ ಪುಷ್ಪಕವೇರಿ ಅಜಮಿಳನು ಹರಿಯ .
ಸನ್ನಿಧಿಗೆ ನಡೆದ ೧೪
ಜಲಜನಾಭನ ದಿವ್ಯನಾಮವನು ನೆನೆದರೆ
ಕುಲಕೋಟಿ ದೋಷಗಳಿಲ್ಲ ಕುಂದುಗಿಂದುಗಳಿಲ್ಲ
ಛಲವ ಮಾಡದೆ ನೀವು ಬನ್ನಿರೊ ನಮಗವರು
ಸಲುವರಲ್ಲೆಂದ ಯಮನು
ನಲವಿಂದ ಹೆಳವನಕಟ್ಟೆ ಶ್ರೀ ವೆಂಕಟನ
ನೆಲೆಯರಿತು ನೆನೆದವರ್ಗೆಮನ ಭಾದೆಗಳಿಲ್ಲ
ಸುಲಭನಹನು ಸ್ವಾಮಿ ಸಾಯುಜ್ಯ ಪದವೀವ ಬಲು ನಂಬಿ ಭಜಿಸಿ ಜನರು ೧೫

 

ಮೂರನೆಯ ಸಂಧಿ
ನಿದ್ರೆಗೈದಿಂದುಹಾಸನ ಕಂಚುಳಿಕೆಯಲ್ಲಿರ್ದ
ಪತ್ರವನೋದಿಕೊಂಡು
ತಿರ್ದಿ ತಾ ವಧುವಾದಳು ಮಂತ್ರಿತನುಜೆಯು
ಪದ್ಮನಾಭನ ಕಿಂಕರಗೆ
ಲೀಲೆಯಿಂದಲಿ ಚಂಪಕಮಾಲೆ ವಿಷಯೆ
ವಿಶಾಲದಿ ಸಖಿಯರು ಕೂಡಿ
ಆಲಯದಿಂದಲಿ ಹೊರಟರು ವಸಂತಕಾಲ ಬಂದಿರೆ ನಂದನಕೆ ೧
ವಚ್ಚೇರೆಗಂಗಳ ವಾರಿಜಮುಖಿಯರು ನಿಚ್ಚಳಾಂಗದ ನೀರೆಯರು
ಹೆಚ್ಚ ಹಿರಿಯ ಹೆಂಗಳ ರನ್ನೇರು ಬೆಚ್ಚದೆ ಬೆರೆದು ನಡೆದರು ೨
ಮಲ್ಲಿಗೆನನೆ ಮುದ್ದುಮುಖಮಾಲೆ ಗಂಧೇರು
ಚೆಲ್ಲೆಗಂಗಳ ಚೆಲ್ವೆಯರು
ಫುಲ್ಲಶರನ ಮದದಾನೆಯಂತೊಲೆವುತ
ಎಲ್ಲರೈದಿದರು ನಂದನಕೆ ೩
ಕಳಕೀರವಾಣಿಯರು ಕಾಳಾಹಿವೇಣಿಯರು
ಕಳಕಳಿಸುವ ವದನಯರು
ಕಳಸಕುಚದೋರು ಕಂಬುಕಂಧರೆಯರು ಕುಂತಳಕಾಗಿ ನಡೆದರು೪
ಕುಟಿಲಕುಂತಳೆಯರು ಕೋಮಲಾಂಗಿಯರು
ಚೆಂದುಟಿ ಚೆಲುವಿನ ಬಾಲೆಯರು
ಬಟ್ಟ ಪೊಂಬೊಗರಿಯ ಕುಚದ ಬಾಲಕಿಯರು
ನಟನೆಯಿಂದೆಲ್ಲ ನಡೆದರು ೫
ಒಬ್ಬರ ಹೆಗಲಲ್ಲಿ ಒಬ್ಬರ ನಳಿತೋಳಿಟ್ಟು
ತಬ್ಬುತ ತಾಗೊಲವುತಲಿ
ಕಬ್ಬುವಿಲ್ಲನ ಕೋಲಾಹಲ ಉಲ್ಲಸದಿ ತಬ್ಬಿ ನಡೆದರು ನಂದನಕೆ ೬
ಸೊಕ್ಕು ನುಡಿಯೋರು ಸೊಬಗು ಮತಿಯೋರು ಕಕ್ಕಸ
ಕುಚದ ಬಾಲೆಯರು
ನಕ್ಕುನಲಿದು ನಾನಾ ಚೇಷ್ಟೆಗಳಿಂದ ಹೊಕ್ಕರು ನಂದನವನವ೭
ಗಾಡಿಕಾರ್ತಿಯರೆಲ್ಲ ಗಮಕದಿಂದಲಿ ಒಡಗೂಡಿ
ಸರೋವರವಿಳಿದು
ಮಾಡಿದರ್ ಕೈಚಳಕವ ಜಲಕ್ರೀಡೆಯನಾಡಿದರತಿ ಹರುಷದಲಿ ೮
ಪೊಳಕುವ ಮೀನುಗಳ್ ನೀಲಕುಂತಳವು ಕಳಕಳಿಸುವ
ಕೆಂದಾವರೆ ಮೊಗ್ಗು
ಅರಳಿದಂಬುಜ ತಾರೆಗಳು ಕೋಮಲೆಯರ ನೀರಾಟವನೆ
ಕಂಡು ಹರುಷದಿ೯
ಕೋಮಲೆಯರ ನೀರಾಟದ ರಭಸಕ್ಕೆ ತಾವರೆಗಳು ಬೆರಗಾಗೆ
ಭಾವಕಿಯರ ಮುಖವನೆ ನೋಡಿ ಅಂಬುಜ
ಹೇವದಿ ತಲೆಯ ತಗ್ಗಿದವು೧೦
ನವರತ್ನದ ಸೋಪಾನವನೇರೋರು
ನವಯವ್ವನೆಯರ್ ಹರುಷದಲಿ
ಕಮಲಮುಖಿಯರ ಮೆಲ್ಲಡಿಗಳ ಭಾರಕ್ಕೆ
ಸಮನಾಗಿ ತೋರುತಲಿಹವು ೧೧
ತರುಣಿಯರುಟ್ಟ ತಂಗಲವಸ್ತ್ರ ಮೈಯೊಳು ಒರೆದು
ದಿವ್ಯಾಂಗ ತೋರುತಲಿ
ಗುರುಕುಚದ ಬಾಲೆಯರು ನಿಂತರು ಕಾಮನ
ಹೆರೆಯ ಕೂರಂಬಿನಂದದಲಿ೧೨
ಬಡನಡುವಿನ ದೇವಾಂಗವನರಿದುಟ್ಟು
ಸಡಿಲಿದಾಭರಣವನಿಟ್ಟು
ನಿಡುಗುರುಳಿಗೆ ಧೂಪದ ಹೊಗೆಯನು ಕೊಟ್ಟು
ಮುಡಿದರು ತುದಿವೆಣ್ಣೆಗಂಟು ೧೩
ಪಣೆಗೆ ಕಸ್ತೂರಿಯಿಟ್ಟು ಪೂಸಿ ಶ್ರೀಗಂಧವ
ಕಣ್ಣಿಗೆ ಅಂಜನ ಹಚ್ಚಿ
ಸಂಪಿಗೆ ಮಕರಂದ ಪತ್ರಿಕೆಯನಿಟ್ಟು ಲಲನೆಯರೆಲ್ಲ ಶೃಂಗಾರದಿ ೧೪
ಆನಂದಗಾತ್ರೆಯರು ಅತಿಹರುಷದಿ ಮಧುಪಾನವ
ಮಾಡಿ ಸಂಭ್ರಮದಿ
ಧೇನುವಾ ಕೋಮಲಶ್ರವಣನಾಲಿಸುವಂತೆ
ಮಾನಿನಿಯರು ತೆರಳಿದರು ೧೫
ದರ್ಪಣವನೆ ನೋಡಿ ರಮಣಿಯರೆಲ್ಲ
ಕಂದರ್ಪನ ಮದದಾನೆಯಂತೆ
ಕರ್ಪುರ ವೀಳ್ಯವ ಕರದಲ್ಲಿ ಪಿಡಿದು ಗುಪ್ಪವಡೆದರು ನಾರಿಯರು ೧೬
ವನಜಮುಖಿಯರು ವನಾಂತರವನು ಪೊಕ್ಕು
ಘನರಾಗದಿಂದ ಪಾಡುತಲಿ
ನಮಗೆ ತಮಗೆಯೆಂದು ಕೊಯ್ದರು ತಮ
ತಮ್ಮ ಮನಬಂದ ಫಲ ಪುಷ್ಪಂಗಳ ೧೭
ಮಿಂಡೆವೆಣ್ಣುಗಳೆಲ್ಲ ಮದವೆದ್ದು ತಮ್ಮೊಳು ಕಂಡಕಡೆಗೆ ಚೆಲ್ಲುವರಿದು
ಸೊಂಡಿಲು ಕದಳಿಯ ವನವ ಪೊಕ್ಕಂದದಿ
ಉದ್ದಂಡತನದಲಾಡುತಿಹರು ೧೮
ಅರಸನ ಮಗಳು ಚಂಪಕಮಾಲೆ ಸಖಿಯರು
ಬೆರಸಿಕೊಂಡಾಡುತಲಿಹರು
ಮರೆಸಿ ಮತ್ತೊಂದು ಕಡೆಗೆ ತಾನು ಬಂದಳು
ಹರುಷದಿಂದಲಿ ಮಂತ್ರಿ ತನುಜೆ ೧೯
ಚಿಕ್ಕ ಪ್ರಾಯದ ಕೋಮಲಾಂಗಿಯು ಹೆಮ್ಮಕ್ಕಳನಗಲಿ ತಾ ಚೂತ
ವೃಕ್ಷದ ನೆರಳಲ್ಲಿ ಮಲಗಿದ್ದಾತನ ಕಂಡು
ಬೆಕ್ಕಸ ಬೆರಗಾಗಿ ನಿಂದಳ್ ೨೦
ಅತಿಚೆಲುವ ಪುರುಷನ ಕಾಣುತ ಮೂರ್ಛೆಗತಳಾಗಿ
ತಿಳಿದು ಎಚ್ಚತ್ತು
ಪೃಥುವಿಯೊಳಗೆ ಇಂಥ ಚೆಲುವನಿಲ್ಲವೆಂದು
ಮತಿಭ್ರಮೆಯಿಂದ ನೋಡಿದಳು ೨೧
ಪಾರ್ವತಿಪತಿಯೆಂಬೆನೆ ಪಣೆಗಣ್ಣಿಲ್ಲ ವಾರಿಜೋದ್ಭವನಿವನಲ್ಲ
ನಾರಾಯಣನೆಂಬೆನೆ ಶಂಖಚಕ್ರವು ತೋರುವುದಿಲ್ಲ ಕೈಯೊಳಗೆ ೨೨
ಇಂದ್ರನೆಂಬೆನೆ ಬಿಳಿಯಾನೆ ಕೆಲದಲಿಲ್ಲ ಚಂದ್ರನೆಂಬೆನೆ ಮೃಗವಿಲ್ಲ
ಕುಂದದೆ ಲೋಕಲೋಕವ ತಿರುಗಿದ ರವಿ
ಬಂದಿಳಿದನೊ ಭೂತಳಕೆ ೨೩
ವಸುದೇವಸುತನಾತ್ಮಜ ತಾನೆಂಬೆನೆ ಕುಸುಮ
ಬಾಣವು ಕೈಯೊಳಿಲ್ಲ
ದಶದಿಕ್ಪಾಲನೊ ಯಕ್ಷಗಂಧರ್ವನೊ ಎಂದು
ವಿಸ್ಮಿತೆಯಾದಳು ವಿಷಯೆ ೨೪
ಸುತ್ತನೋಡುವಳಾರ ಸಂಚಾರವಿಲ್ಲೆನುತ
ಹತ್ತಿರೆ ಬಂದು ನಿಲ್ಲುವಳು
ಚಿತ್ತದೊಳೊಮ್ಮೊಮ್ಮೆ ನೆರೆಯ ನೇಮಿಸುವಳು
ಹೊತ್ತಲ್ಲವೆಂದು ಸಾರುವಳು ೨೫
ಇಟ್ಟ ಕಾಲಂದಿಗೆ ಅಲುಗದಂದದಿ ಬಂದು
ಮುಟ್ಟುವೆನೆಂದು ನಿಲ್ಲುವಳು
ದಿಟ್ಟ ಹೆಂಗಸು ಇವಳಾರೋ ಎಂಬುವನೆಂದು
ಥಟ್ಟನೆ ಕಡೆಗೆ ಸಾರುವಳು ೨೬
ಆದುದಾಗಲಿ ಇವನ ಅಗಲಲಾರೆನು
ಲಜ್ಜೆಹೋದರು ಹೋಗಲಿ ಎನುತ
ಪಾದದಿಂದಿಡಿದು ಮಸ್ತಕ ಪರಿಯಂತರ
ಭೇದಿಸಿ ನೋಡಿದಳವನ ೨೭
ಸೊಗಸಿಂದ ನಿದ್ರೆಗೈದಿಂದುಹಾಸನು ತೊಟ್ಟ
ಚೊಗೆಯ ಕುಪ್ಪಸದ ಕೊನೆಯಲ್ಲಿ
ಬಿಗಿದುಕಟ್ಟಿರ್ದ ಪತ್ರಿಕೆಯನ್ನುಮೆಲ್ಲನೆ ತೆಗೆದುಕೊಂಡಳು
ಮಂತ್ರಿ ತನುಜೆ ೨೮
ನಿದ್ರೆಯ ತಿಳಿದು ಎಚ್ಚೆತ್ತು ನೋಡುವನೆಂದು
ಹೊದ್ದಿದ್ದ ಲಜ್ಜೆ ಭಾವದಲಿ
ಸದ್ದು ಮಾಡದೆ ಸಂಪಿಗೆ ವೃಕ್ಷವನೆ
ಸಾರ್ದುಮುದ್ರೆಯೊಡೆದಳಂಬುಜಾಕ್ಷಿ ೨೯
ನೋಡಿದು ತಮ್ಮ ತಂದೆಯ ಸ್ವಹಸ್ತದ
ಮೋಡಿಯ ಬರೆದ ಬರಹನು
ರೂಢಿಯೊಳತಿ ಚೆಲುವ ಇವನೆಂದು ಕಳುಹಿದನಾ
ಮಾಡಿದ ಸುಕೃತದ ಫಲದಿ ೩೦
ಶ್ರೀಮತು ಮಂತ್ರಿ ದುಷ್ಟಬುದ್ಧಿ ಮದನಗೆ
ನೇಮಿಸಿ ಕಳುಹಿದ ಕಾರ್ಯ
ಸೀಮೆಗರಸು ಇವನಹನು ಕಾಣುತ ಶೀಘ್ರ
ವಿಷವ ಕೊಡುವುದುತ್ತಮವು ೩೧
ಒಂದು ಲಿಖಿತ ಸಹಸ್ರ ಲಿಖಿತವು ಎಂದು
ಭಾವಿಸಿ ನಿನ್ನ ಮನದಿ
ಸಂದೇಹವಿಲ್ಲದೆ ವಿಷವ ಕೊಡುವುದು
ಮುಂದಕ್ಕೆ ಲೇಸುಂಟು ನಮಗೆ ೩೨
ವಿಪ್ಪನ್ನವಾಗಿರ್ದ ವರನ ಕಾಣುತ
ನಮ್ಮಪ್ಪನವರು ಕಳುಹಿದರು
ತಪ್ಪುಂಟು ಇದರೊಳು ಕೆಡುವುದು ಕಾರ್ಯ
ಕೈತಪ್ಪೆಂದು ಮನದಲ್ಲಿ ತಿಳಿದು ೩೩
ವಾಕಾರವನೆ ಚೆಳ್ಳುಗುರಿಂದಲಿ ತಿದ್ದಿ ಯೇಕಾರವನೆ ಮಾಡಿದಳು
ಜೋಕೆಯಿಂದಲಿ ಎಂದಿನಂದದಿ ಕಟ್ಟಿ ವಿರಹಾಕಾತುರದಿಂದ
ಮರುಗಿದಳು ೩೪
ತೆಗೆದು ಚಾಪವ ಕಿವಿಗೇರಿಸಿ ಮನ್ಮಥ ಬಿಗಿದು
ಕಟ್ಟಿದ ಭರದಿಂದ
ತಗುಲಿತು ಎದೆಗೆ ಕೂರಂಬು ಬೆನ್ನಲಿ ತಟ್ಟುಗಿಯಿತು
ತಲೆಯನು ಎತ್ತಿ ೩೫
ಹಿಂದಕ್ಕೆ ಹೆಜ್ಜೆಯನಿಡುವರೆ ಕಾಲೇಳವು ನಿಂದು
ನಿಂದೊಮ್ಮೆ ನೋಡುವಳು
ಹೊಂದಿತು ಇಂದುಹಾಸನ ಮೇಲೆ ಚಿತ್ತವು
ಕಂದಿ ಕಾತರಿಸುತಲಿಹಳು ೩೬
ಮದನವಿಕಾರದಿಂದಲಿ ಮೋಹನಾಂಗಿಯು
ಬೆದರಿದ ಹುಲ್ಲೆಯಂದದಲಿ
ನದರುದಪ್ಪುವಳು ನಿಲ್ಲುವಳು ನಾಚುವಳೊಮ್ಮೆ
ಹೃದಯ ಸಂಚಲಿಸುತಲಿಹಳು ೩೭
ಮನವ ಬೇರಿಟ್ಟು ಮಾತಾಡಳೆಲ್ಲರ ಕೂಡೆ ವಿನಯದಿ
ಹುಸಿ ನುಡಿಗಳನು
ಮನ್ಮಥ ತಾಪದ ಬೆಮರ್ವನಿಗಳಿಂದ ನೆನೆದವು
ಉಟ್ಟ ದೇವಾಂಗ ೩೮
ಹೇಳದಿದ್ದರೆ ಹುಸಿವುದೆ ಈ ವಾರ್ತೆಯು ಗಾಳಿಗೆ
ಪರಿಮಳ ಮಾಜುವುದೆ

 

ಸುರಪತಿಯು —- ಕಾಯ್ದೆ
೩೯
ನಿನ್ನ ನಂಬಿದವರ ಕಾಯೊ ನಿಜವುಳ್ಳ ದೇವ
ಎನ್ನನು ಉದ್ಧರಿಸಿ ಕಾಯೊ ಕರುಣಿವೆಂಕಟ ಪ.
ಸುರಪತಿಯು ಮುನಿದು ಮಳೆಗರೆಯಲೇಳು ದಿನವೂ ಬಿಡದೆ
ತುರುಗಳೆಲ್ಲ ಸೊರಗಿ ಬಾಯ ಬಿಡುತಿರಲು
ಬೆರಳಿನಿಂದ ಗೋವರ್ಧನ ಗಿರಿಯನ್ನೆತ್ತಿ ಗೋವ್ಗಳನು
ದ್ಧರಿಸಿ ಕಾಯ್ದೆ ಕರುಣಾಸಿಂಧು ಕಮಲಲೋಚನ ೧
ಮಡುವಿನೊಳಗೆ ಮಲೆತನೀರ ಕುಡಿಯ ಬಂದಾಗಜವ ನೆಗಳು
ಪಿಡಿದು ಕಾಲಕಚ್ಚಿ ಭಂಗಬಡಿಸುತ್ತಿರಲು
ತಡೆಯಲಾರದೆ ಪ್ರಾಣ ಬಿಡುವ ಸಮಯದಲ್ಲಿ ಬಂದು
ಕೆಡಹಿ ಚಕ್ರದಿಂದ ನೆಗಳ ಕರಿಯ ಸಲಹಿದೆ೨
ಮತ್ತೆ ಮಂದ ಜ್ಞಾನದಿಂದ ಮೈ ಮರೆದು ಬರಲು ಸ್ತನವ
ತುತ್ತು ಮಾಡಿ ಪಿಡಿದು ಕುದುರೆ ಕ್ರೂರ ದಂತದಿ
ಕತ್ತರಿಸುವ ಸಮಯದಲ್ಲಿ ಕಡೆಮಾಡಿ ಕಾಯೆನ್ನ
ಕರ್ತು ಹೆಳವನಕಟ್ಟೆ ಕರುಣಿ ವೆಂಕಟ ೩

 

೧೨
* ನೆರದು ಗೋಪಿಯರೆಲ್ಲಾರು ಕೃಷ್ಣಯ್ಯನ ಶೆರಗಪಿಡಿದುಕೊಂಡು
ಭರದಿಂದ ಬಂದು ಯಶೋದೆಗೆ ಛಾಡಿಯ
ಅರುಹಿದರತಿ ಬೇಗದಿ ಪ.
ಬಲುಕಳ್ಳ ನಿನ್ನ ಮಗ ಗೋಪಮ್ಮ ಕೇಳೆ
ಹಾಲು ಕರವುತಿರಲು
ತೊಲೆಗೆ ನಿಚ್ಚಣಿಕೆಯ ಹಾಕದೆ ಸುರಿದಾನು
ನೆಲವಿನ ಪಾಲ್ಮೊಸರಾ ೧
ಅಂಮೈಯ್ಯಾ ಇಲ್ಲಾ ಕಾಣೆ ಇವಳು ಯಂನ್ನಾ
ಸುಂಮ್ಮಾನೆ ದೂರುವಳು
ಹುಂಮ್ಮಿಂದ ನಾನವಳ ಅಟ್ಟಕ್ಕೆ ನೆಗವೊರೆ
ಬೊಮ್ಮ ಜಟ್ಟಿಗನೆ ನಾನು ೨
ಮತ್ತೊರ್ವಳಿಂತೆಂದಳು ನಿಂನಮಗ
ಹತ್ತಿ ಗವಾಕ್ಷಿಯಿಂದಾ
ಬಚ್ಚಿಟ್ಟ ಬೆಣ್ಣೆಯನೆಲ್ಲಾವ
ಮೆದ್ದಾನು ಮಕ್ಕಳಿಗಿಲ್ಲದಂತೆ ೩
ಗಡಿಗೆ ಬೆಣ್ಣೆಯ ಮೆಲ್ವಾರೆ ಇವನ
ಹೊಟ್ಟೆ ಕೆರೆಭಾವಿಯೇನೆ ಅಮ್ಮಾ
ಹುಡುಗರಿಗೆ ಎಂದು ಬಚ್ಚಿಟ್ಟ ಬೆಣ್ಣೆಯನೆಲ್ಲಾ
ಹೊಡೆದರವರ ಮಕ್ಕಳು ೪
ಮಲಗೋಮಂಚದ ಮೇಲೆ ನಾ
ಮಲಗೀರೆ ಮೊರೆವ ಹಾವನು ಪಿಡಿದು
ಅರಿಯದಂತೆ ಬಂದು ಮುಸುಕಿ-
ನೊಳಗಿಟ್ಟು ಅರಿಯಾದೆ ಹೋದನಂಮಾ ೫
ಹರನಡುಗುವ ಹಾವನು ನಾ ಪಿಡಿವಾರೆ
ತರಳಾನು ತಡೆಕಾರನೆ
ಹರಕೆಯ ಹೊತ್ತುದವಪ್ಪಿಸದಿದ್ದರೆ
ಗುರುತು ತೋರಲು ಬಂತೇನೊ ೬
ಮಕ್ಕಳ ಪಡೆದವರುಯಿಲ್ಲದ ಕಳ
ವಿಕ್ಕಲಿ ಬಹುದೆ ಕೃಷ್ಣಗೆ
ಸಿಕ್ಕಿದ ತಪ್ಪು ಸಹಿತವೆ ತಂದರೆ ನಾನು
ತಕ್ಕ ಬುದ್ದಿಯ ಪೇಳುವೆ ೭
ಅಣುಮಯರೂಪ ಕಾಣೆ
ನಿಂನಯ ಮಗ ಚಿನುಮಯ ರೂಪ ಕಾಣೆ
ಚಿನುಮಯ ರೂಪ ಹೆಳ
ವನಕಟ್ಟೆ ಆದಿಕೇಶವ ರಂಗನೆ ೮

 

ಹೆಳವನಕಟ್ಟೆ ರಂಗನ ಜಾತ್ರೆಗೆ
೪೦
ಪದುಮನಾಭನೆ ನಿನ್ನ ಪಾದ ಕಿಂಕರ ನನ್ನ ಕೈಬಿಡು-
ವುದುಚಿತವೇ ರಂಗ ಪ.
ಮುದದಿಂದ ನಿನ್ನ ಪಾದಗೆರಗುವೆ ನಾನು ತ್ವರಿ-
ತದಿ ನೀ ಕಾಯೊ ಎನ್ನೊಡೆಯ ರಂಗ ಅ.ಪ.
ಅಜಗರಶಯನನೆ ಬುಧಜನ ನಮಿತನೆ
ತ್ರಿಜಗವಂದಿತಪಾದ ಪದುಮಜ ಜನಕನೆ ೧
ಶಿಶುವಾಗಿ ಗೋಕುಲದ ಪಶುಗಳ ಸಲಹಿದೆ
ಶಶಿಭೂಷಣಸಖ ಶಿಶುವ ಕಾಪಾಡೊ ೨
ಸಾಂದೀಪಗೊಲಿದೆ ಸಂದೇಹವಿಲ್ಲ
ತಂದೆ ಹೆಳವನಕಟ್ಟೆ ರಂಗ ಕೃಪಾಂಗ ೩

 

ಅರಷಿನೆಣ್ಣೆ (ನು ೧):
ಸೀತಾ ಕಲ್ಯಾಣ
ಪಾಕ ಶೇಷಾದ್ರಿ ಬ್ರಹ್ಮಕೆ ಶರಣು
ಲೋಕನಾಯಕ ಹೆಳವನಕಟ್ಟೆ ವೆಂಕಟ
ನೀ ಕರುಣಿಸಿ ಸಲಹುವುದೆನಗೆ ಜಯ ಜಯ ಪ.
ಮದುವೆಯ ನಾಲ್ಕು ದಿವಸದಲ್ಲಿ
ಮದುವಣಿಗನು ರಾಮ ಜಾನಕಿಗೆ
ಮುದದಿಂದ ಅರಿಷಿಣೆಣ್ಣೆಯ ಮಾಡೊ ಸಂಭ್ರಮ[ದ]
ಪದನ ಹೇಳುವೆ ಸುಜನರು ಕೇಳಿ ಜಯ ಜಯ ೧
ಚಿತ್ತಜಪಿತ ಶ್ರೀರಾಮರಿಗೆ
ಅರ್ತಿಯಿಂದರಿಷಿಣೆಣ್ಣೆಯ ಮಾಡ್ವ
ಮಿತ್ರೆ ಕೌಸಲ್ಯದೇವಿ ಕೇರಿ ಕೇರಿಯ ಗುಂಟ
ಮುತ್ತೈದೇರನು ಕರೆಸಿದಳು ಜಯ ಜಯ ೨
ಪೀತಾಂಬರದುಡುಗೆಯನುಟ್ಟು
ಜ್ಯೋತಿಯಂದದಿ ಥಳಥಳಿಸುತಲಿ
ಜಾತಿಮಾಣಿಕದಾಭರಣವಿಟ್ಟು ರಾಮರ
ಮಾತೆಯರೆಲ್ಲ ಶೃಂಗಾರವಾಗಿ ಜಯ ಜಯ ೩
ಚೀಣ ಚೀಣಾಂಬರಗಳನುಟ್ಟು
ವೇಣಿ ಕಸ್ತೂರಿಯ ಪಣೆಗಿಟ್ಟು
ಜಾಣೆಯರೆಲ್ಲ ಶೃಂಗಾರವಾಗಿ ಮಲ್ಲಿಗೆ
ಬಾಣನ ಪಟ್ಟದಾನೆಗಳಂತೆ ಜಯ ಜಯ ೪
ಪೊಂಬಣ್ಣದ ಹಳದಿಯ ಕಲೆಸಿ
ತುಂಬಿದ ಹರಿವಾಣದೊಳಗೆ
ಅಂಬುಜನಾಭಗೆ ಅರಿಷಿಣೆಣ್ಣೆಯ ಮಾಡ್ವ
ಸಂಭ್ರಮಕೆ ನಡೆತಂದರಾಗ ಜಯ ಜಯ ೫
ಗರುಡನ್ವಲ್ಲಭ ಸೌಂದರದೇವಿ
ವರುಣನ್ವಲ್ಲಭೆ ಕಾಳಕದೇವಿ
ಹರನ್ವಲ್ಲಭೆ ಪಾಪ[ನಾ] ಶಿಗಂಗೆ ಸಹಿತಲಿ
ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ ೬
ಬ್ರಹ್ಮವಲ್ಲಭೆ ಶಾರದಾದೇವಿ ವಾ-
ಯುರಮಣಿ ಅಂಜನಾದೇವಿ
ಹರುಷದಿ ಕೌಸಲ್ಯೆ ಕೈಕೆಸೌಮಿತ್ರೆಯರು
ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ೭
ಅಲ್ಲಲ್ಲಿ ನಡೆವ ನಾಟಕಶಾಲೆ
ಬಿಲ್ಲಾಳು ಬೆತ್ತ ಕಾಟನವರು
ಸೊಲ್ಲುಸೊಲ್ಲಿಗೆ ಹಿಡಿಹೊನ್ನನು ತ್ಯಾಗವ
ಚೆಲ್ಲುತ ದಶರಥ ನಡೆದನಾಗ ಜಯ ಜಯ ೮
ಹೊಡೆವ ತಂಬಟೆ ಭೇರಿ ನಿಸ್ಸಾಳೆ
ಬಿಡದೆ ಚೀರುವ ಹೆಗ್ಗಾಳೆಗಳು
ಸಿಡಿಲು ಗರ್ಜಿಸುವಂತೆ ಪಂಚಮವಾದ್ಯದಿ
ನಡೆದರು ಜನಕರಾಯನ ಮನೆಗೆ ಜಯ ಜಯ ೯
ಕುಸುಮಬಾಣನ ಮಾರ್ಬಲದಂತೆ
ಹಸುರು ಪಚ್ಚೆಯ ಪಲ್ಲಕ್ಕಿಗಳು
ಮುಸುಕಿದ ಪರಿಮಳದೊಳಪ[ಸಾ]ತಕೆ
ದಶರಥ ಬಂದನೆಂದರೆ ಜನರು ಜಯ ಜಯ ೧೦
ಭರದಿಂದಲೆದ್ದು ಜನಕರಾಯ
ತರಿಸಿ ನಿವಾಳಿಗಳನು ಹಾಕಿ
ಹರುಷದಿ ಕೈಲಾಗವ ಕೊಟ್ಟಯೋಧ್ಯದ
ಅರಸ[ನ] ಮನ್ನಿಸಿ ಒಡಗೊಂಡನಾಗ ಜಯ ಜಯ೧೧
ಬೇಗದಿ ಗದ್ದುಗೆಯನು ಹಾಸಿ
ಬೀಗನ ಉಪಚರಿಸಿದ ಜನಕ
ಭಾಗೀರಥಿ ಪಾರ್ವತಿ ಗಂಗೆ ಸಹಿತಲಿ
ನಾಗಭೂಷಣನು ಕುಳಿತನಾಗ ಜಯ ಜಯ ೧೨
ಸುತ್ತಣ ರಾಯರಾಯರಿಗೆಲ್ಲ
ರತ್ನಗಂಬಳಿಗಳ ಹರಹಿದರು
ಅರ್ತಿಯಿಂದಲಿ ಸುರರೆಲ್ಲರು ಕುಳಿತರು
ವಿಸ್ತರಿಸಿದ ಮಂಟಪದೊಳಗೆ ಜಯ ಜಯ ೧೩
ಮಣಿಮಂಟಪದೊಳು ಹಸೆಹಾಸಿ ಕನಕ
ಮಣಿಯ ತಂದಿಳುಹಿದರು
ದಿನಕರಕುಲರಾಮ ಹಸೆಗೇಳೆನುತಲಿ
ಗುಣಾವಳಿಗ[ಳ] ಕೊಂಡಾಡಿದರು ಜಯ ಜಯ ೧೪
ಪೊಕ್ಕಳೊಳಜನ ಪೆತ್ತವನೇಳು
ಅಕ್ರೂರಜನ ಪೆತ್ತವನೇಳು
ಮುಕ್ಕಣ್ಣನ ರಿಪುಬಲವ ಸಂಹರಿಸಿದ
ಭಕ್ತವತ್ಸಲ ಹಸೆಗೇಳೆಂದರು ಜಯ ಜಯ ೧೫
ದಶರಥರಾಜನಂದನನೇಳು
ಅಸುರಸಂಹಾರ ಕಾರಣನೇಳು
ವಸುಧೆಗೊಡೆಯ ರಾಮ ಹಸೆಗೇಳೆನುತಲಿ
ಋಷಿಗಳೆಲ್ಲರು ಶ್ರುತಿಗರೆದರಾಗ ಜಯ ಜಯ ೧೬
ಋಷಿವಾಲ್ಮೀಕಿ[ಯ]ರೆಲ್ಲರು ಕೂಡಿ
ಕುಶಲದ ಬಾಸಿಂಗವ ಪಿಡಿದು
ಅಸುರಾರಿಯ ಮಸ್ತಕಕಳವಡಿಸೋರು
ವಸುದೇವನಾಗೆಂದು ಹರಸುತಲಿ ಜಯ ಜಯ ೧೭
ತಂಡತಂಡದ ರತ್ನ ಅಡಸಿದಾಗ
ದುಂಡುಮುತ್ತಿನ ಮಣಿ ಬಿಗಿದಿದಾಗ
ತೊಂಡಿಲ ಮುತ್ತೈದೇರಳವಡಿಸೋರು ಕೋ-
ದಂಡ ಪಾಣಿಸತಿಜಾನಕಿಗೆ ಜಯ ಜಯ ೧೮
ಅರಳುಗಂಗಳಿಗೆ ಅಂಜನ ಹಚ್ಚಿ
ಬೆರಳಿಗೆ ಮುದ್ರೆ ಉಂಗುರವಿಟ್ಟು
ಕೊರಳಿಗೆ ಏಕಾವಳಿಯನೆ ಹಾಕೋರು
ತರಳಾಕ್ಷಿಯರಾ ಜಾನಕಿಗೆ ಜಯ ಜಯ ೧೯
ಬೊಂಬೆಯ ತೊಂಡಿಲ ಮುಡಿದಿರ್ದು
ಕುಂಭಿಣಿಸುತೆ ಕುಳ್ಳಿರಲಾಗಿ
ಅಂಬುಜಾಂಬಕ ರಘುರಾಮನ ಹರುಷದಿ
ರಂಭೆಯಿದ್ದೆಡೆಗೆ ಬಂದನೆ ನಗುತ [ಜಯ ಜಯ]೨೦
ಬಂದನೆ ಭಾಗ್ಯಲಕ್ಷ್ಮೀರಮಣ
ಬಂದನೆ ಭಕ್ತವತ್ಸಲ ಸ್ವಾಮಿ
ಬಂದನೆ ಜಾನಕಿಯಡೆ ರಾಮನು ತಾ
ಬಂದನೆ ಮಣಿಮಂಟಪದೆಸೆಗೆ [ಜಯ ಜಯ] ೨೧
ನಿರ್ಜರನರನಾಗಸ್ತೋತ್ರ ಬಂದ
ಸಜ್ಜನಸಂತಾಪದೂರ ಬಂದ
ಧೂರ್ಜಟಿ ಜಪಿಸುವ ನಾಮವಿಗ್ರಹ ಬಂದ
ವಜ್ರಮಾಣಿಕದ್ಹಸೆಯಿದ್ದೆಡೆಗೆ ಜಯ ಜಯ ೨೨
ಕೌಸಲ್ಯಸುತ ಕುಮಾರ ಬಂದ
ಹಂಸವಾಹನಪಿತ ರಾಮ ಬಂದ
ಕಂಸಾರಿ ದುಃಖವಿ [ನಾಶ] ರವಿಕುಲ
ವಂಶೋದ್ಧಾರಕ ಬಂದನಾಗ [ಜಯ ಜಯ] ೨೩
ಭಕ್ತವತ್ಸಲ ರಾಘವ ಬಂದ
ಮುಕ್ತಿದಾಯಕ ಶ್ರೀರಾಮ ಬಂದ
ಅರ್ಕನು ಶತಕೋಟಿತೇಜನು ಜಗಕತಿ-
ಶಕ್ತ ತಾ ಬಂದನೆಂದವೆ ಕಹಳೆ ಜಯ ಜಯ ೨೪
ಸಿಂಧುಬಂಧನ ರಾಘವ ಬಂದ ಪು-
ರಂದರವರದ ಶ್ರೀರಾಮ ಬಂದ
ಇಂದುವದನೆಪತಿ ರಾಮ ಬಂದನು ರಾಮ-
ಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ ೨೫
ಯಜ್ಞರಕ್ಷಕ ರಾಘವ ಬಂದ
ಯಜ್ಞಶಿಕ್ಷಾಮಿತ್ರ ರಾಮ ಬಂದ
ಸುಗ್ರೀವರಕ್ಷಕಾರಣ ಬಂದ ಲಕ್ಷ್ಮ-
ಣಾಗ್ರಜ ಬಂದನೆಂದವೆ ಕಹಳೆ ಜಯ ಜಯ ೨೬
ಯಂತ್ರವಾಹಕ ರಾಘವ ಬಂದ
ಮಂತ್ರಮೂರುತಿ ರಾಮ ಬಂದ
ಕಾಂತೆ ಶ್ರೀ ಜಾನಕಿರಮಣ ಬಂದನು ರಾಮ
ತಂತ್ರಿ ತಾ ಬಂದನೆಂದವೆ ಕಹಳೆ ಜಯ ಜಯ ೨೭
ದೂಷಕಹರಣ ಶ್ರೀರಾಮ ಬಂದ ವಿ-
ಭೀಷಣವರದ ರಾಘವ ಬಂದ
ಭಾಷೆ ಪಾಲಿಪ ರಾಮಚಂದ್ರ ಬಂದನು ಜಗ-
ದೀಶ ತಾ ಬಂದನೆಂದವೆ ಕಹಳೆ ಜಯ ಜಯ ೨೮
ತಾಟಕಪ್ರಾಣಾಪಹಾರ ಬಂದ
ಜಟಯುಮುಕ್ತಿಕಾರಣ ಬಂದ
[ತಾಟಂಕ] ಧರ ನಾರಾಯಣ ರವಿಕುಲ
ಕೋಟಿ ತಾ ಬಂದನೆಂದವೆ ಕಹಳೆ ಜಯ ಜಯ ೨೯
ವೀರ ವಿಕ್ರಮ ರಾಘವ ಬಂದ
ಮಾರೀಚಮರ್ದನ ರಾಮ ಬಂದ
ನಾರಿ ಶ್ರೀ ಜಾನಕಿರಮಣ ಬಂದನು
ಹರಿ ರಾಮ ತಾ ಬಂದನೆಂದವೆ ಕಹಳೆ ಜಯ ಜಯ ೩೦
ದೇವಕುಮಾರ ರಾಘವ ಬಂದ
ದೇವರ ದೇವನು ರಾಮ ಬಂದ
ಭಾವೆ ಶ್ರೀ ಜಾನಕಿರಮಣ ಬಂದನು
ರಾಮಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ ೩೧
ನಿರುಪಮಚರಿತ ರಾಘವ ಬಂದ
ದುರಿತದಲ್ಲಣ ರಾಮದೇವ ಬಂದ
ಭರತಶತ್ರುಘ್ನರ ಸಹೋದರಯೋಧ್ಯದ
ಸುರಪತಿ ಬಂದನೆಂದವೆ ಕಹಳೆ ಜಯ ಜಯ ೩೨
ಹೇಮಖಚಿತ ರತ್ನ ಪೀಠದಲಿ
ಭೂಮಿಜೆ ಸಹಿತ ಕುಳಿತ ರಾಮ
ವಾಮ ಭಾಗದಿ ಒಪ್ಪಿರ್ದಳು ಜಾನಕಿ
ಆ ಮಹಾಸಭೆಯನು ಬೆಳಗುತಲಿ ಜಯ ಜಯ ೩೩
ಕುಂದಣ ರತ್ನದಡ್ಡಿಕೆಯೊಳಗೆ
ಹೊಂದಿಸಿ ನವರತ್ನ ಇರುವಂತೆ
ಇಂದುವದನೆ ಜಾನಕಿ ಹರುಷದಿ ರಾಮ
ಚಂದ್ರನ ಮಧ್ಯದೊಳೊಪ್ಪಿದಳು ಜಯ ಜಯ ೩೪
ಹೇಮದ್ಹರಿವಾಣದೊಳಗ್ನಿಯನು
ಕಾಮಿನಿಯರು ತಂದಿಳುಹಿದರು
ರಾಮ ಮನ್ನಿಸಿ ಉಡುಗೊರೆಯಿತ್ತು ಅವರಿಗೆ
ಹೇಮಾರ್ಚನೆಗಳ ತೊಡಗಿದನು ಜಯ ಜಯ ೩೫
ಲಾಜತೊಂಡಿ[ತಂಡು?]ಲ ಆಹುತಿಗೊಟ್ಟು
ಪೂಜಿಸಿದನೆ ವಿಘ್ನೇಶ್ವರನ
ರಾಜವದನೆಯ ಒಡಗೊಂಡು ರಾಘವ
ಪೂಜಿಸಿದನೆ ಋಷಿಮುನಿವರರ ಜಯ ಜಯ ೩೬
ಇಂದ್ರಾದಿ ಮುನಿಗಳು ಕೈಹೊಡೆದು
ಚಂದ್ರ ಸೂರ್ಯರು ಉಘೇಉಘೇಯೆನಲು
ಮಂದಾರ ಮಲ್ಲಿಗೆ ಮಳೆಗಳ ಕರೆದರು
ಅಂದದಿ ಸುರಜನರೆಲ್ಲರಾಗ ಜಯ ಜಯ ೩೭
ಅರಳುವ ಕೆಂದಾವರೆ ಕುಸುಮ
ಪರಿಮಳ ಸುರಮ್ಯ ಕಣ್ಗೆಸೆಯೆ
ಎರಗುವ ಮರಿದುಂಬಿಗಳಂತೆ ರಾಘವ
ಕರಗಳ ಪಿಡಿದೆತ್ತಿದ ಸತಿಯ [ಜಯ ಜಯ] ೩೮
ಇಳೆಯ ಜಗಂಗಳನುದರದಲಿ
ಅಳವಡಿಸಿದ ಮಹಾತ್ಮಕನು
ಇಳೆಯ ಮಗಳನು ಎತ್ತಲಾರದೆ ರಾಮ
ಬಳಲಿದನೆಂದು ನಕ್ಕರು ಜನರು ಜಯ ಜಯ ೩೯
ಪಾದ ಎಚ್ಚರಿಕೆ ಪರಾಕು ಸ್ವಾಮಿ
ಪಾದ ಎಚ್ಚರಿಕೆ ಪರಾಕು ದೇವ
ಪಾದ ಎಚ್ಚರಿಕೆ ಸೀತಾಪತಿ ರಾಮನೆ

 

೪೧
ಪಾಪಿಯೊಳು ನಾ ಬಂದೆ ಪರದೇಶಿ ನಾನಾದೆ
ಕಾಪಾಡುವರ ಕಾಣೆ ಕೈಪಿಡಿ (ದು)
ಆಪತ್ತು ಬಂದ ಕಾಲಕ್ಕೆ ಆರಯ್ವರೊಬ್ಬರಿಲ್ಲ
ಶ್ರೀಪತಿಯೆ ಕಡೆಹಾಯಿಸೊ
ತಂದೆ ತಾಯೆಂಬುದನು ನಾ-
ನೊಂದು ಗುರತನರಿಯೆ ನಿಮ್ಮ ಕಂದ –
ಳೆಂದೆನಿಸಿ ಕಡೆಹಾಯಿಸೊ ಹೆಳವನಕಟ್ಟೆರಂಗ

 

ಮತ್ಸ್ಯರೂಪಿಲಿ
೧೩
ಪಾಹಿ ಪರಮಾನಂದ ಪಾಹಿ ಮುನಿಜನವಂದ್ಯ
ಪಾಹಿ ಖಳಜನ ಬಾಧ ಪಾಹಿ ಗೋವಿಂದ ಪ.
ಪಾಹಿ ಗೋಪಿಯನಾಥ ಪಾಹಿ ಮನ್ಮಥ ತಾತ
ಪಾಹಿ ಲಕ್ಷ್ಮೀಕಾಂತ ಪಾಹಿ ಭೂಕಾಂತ ಅ.ಪ.
ಮತ್ಸ್ಯರೂಪಿಲಿ ಬಂದು ಬಲಿದ ದೈತ್ಯನ ಕೊಂದೆ
ಬೆಚ್ಚರದೆ ಬಹುಗಿರಿಯ ಬೆನ್ನಲ್ಲಿ ತಾಳ್ದೆ
ಬಚ್ಚಿಟ್ಟ ಧರಣಿಯನ್ನು ಬಲುಮೆಯಿಂದಲಿ ತಂದೆ
ಅರ್ಚಿಸಿದ ಪ್ರಹ್ಲಾದಗೆ ಒಲಿದೆ ನರಸಿಂಹ ೧
ಕುಬ್ಜರೂಪಿಲಿ ನೆಲನ ಬೇಡಿ ಬಲಿಯನು ತುಳಿದೆ ಪಿತನಾಡಿದ
ಶಬ್ದವನ್ನು ಕೇಳಿ ಮಾತೆಯ ಶಿರವನಳಿದೆ
ಕೊಬ್ಬಿದ್ದ ರಾವಣನ್ನ ಕಂದರವ ಖಂಡಿಸಿದೆ
ಅಬ್ಜಮುಖಿ ಜಾನಕಿಯನಾಳಿದೆ ಶ್ರೀರಾಮ ೨
ತುರುಹಿಂಡ ಕಾಯ್ದು ತಪವಳಿದು ಪತಿವ್ರತೆಯರ
ಭರದಿ ವಾಜಿಯನೇರಿ ಚರಿಸುತ್ತ ಬಂದೆ
ಕರುಣಾಳು ಶ್ರೀ ಹೆಳವನಕಟ್ಟೆ ರಂಗಯ್ಯ ಪಿಳ್ಳಂ-
ಗಿರಿ ವಾಸ ಶ್ರೀ ವೆಂಕಟೇಶ ೩

 

೩೨
ಬಟ್ಟೆಯ ನೆವದಿಂದ ಬಂದು
ತಟ್ಟ ಕವನೆ ಕಂಡು ಕಣ್ಣ ತೆರೆದ ಕೃಷ್ಣವೇಣಿ ನಿಮ್ಮ ಕಂಡೆ
ದುಷ್ಟ ಮಾನವರ ಬಾಧೆಗೆ ಅಂಜಿ ಇತ್ತ ಬಂದೆ
ಕಷ್ಟ ದುರಿತಗಳ ಕಳೆಯೆ ತಾಯೆ ಪ.
ಭೋರಿಡುವ ಮಳೆಗೆ ಹಲ್ಲುಗಿಟಗರಿದು ಶೀತತಲೆ-
ಗೇರಿ ಕಂಪಿಸಿ ನಡುಗುತ್ತ
ಜಾರಿ ಕೆಸರೊಳು ಬಿದ್ದು ಮತ್ತೇಳುತಲಿ
ದಾರಿಯನು ಕೇಳಿಕೊಳ್ಳುತ
ಕ್ರೂರವಾಗಿದ್ದ ಜಾಲಿಯ ಮುಳ್ಳನೆ ತುಳಿದು
ಹರಿ ನಾರಾಯಣ ಎನ್ನುತ
ಹಾರೈಸಿ ನಿಮ್ಮ ದರುಶನಕ್ಕೆ ನಾ ಬಂದೆ
ಘೋರ ದುರಿತವನು ಕಳೆಯೆ ತಾಯೆ ೧
ನಿತ್ಯ ಕಲ್ಯಾಣಿ ನಿರ್ಜರಸ್ತೋತ್ರೆ ಶುಭಗಾತ್ರೆ
ಪ್ರತ್ಯಕ್ಷ ವಿಷ್ಣುಜಾತೆ ಮಾತೆ
ವಿಸ್ತರಿಸಲಾರೆ ಶ್ರೀ ವಿಷ್ಣು ಸಂಪ್ರೀತೆ
ಸತ್ಪಾತ್ರ ಸಂಪೂಜಿತೆ ಪ್ರೀತೆ
ಸತ್ತು ಹುಟ್ಟುವ ಜನ್ಮ ಕೋಟಲೆಯ ಖಂಡ್ರಿಸೆ
ಪತಿತ ಪಾವನ ಚರಿತೆ
ವ್ಯರ್ಥವಾಯಿತು ಜನ್ಮ ಸಾರ್ಥಕವ ಮಾಡಮ್ಮ
ಮುಕ್ತಿಸಾಧನದಾತೆ ಮಾತೆ ೨
ಸುರಗಂಗೆ ಕೃಷ್ಣಮಲಾಪಹಾರಿ ಮೂವರು ಕೂಡಿ
ಬೆರೆದಿದ್ದ ಸಂಗಮದಲ್ಲಿ
ಅರಿಸಿಣ ಅಕ್ಷತೆ ಗಂಧ ಕುಂಕುಮ ತಾಂಬೂಲಗಳ
ಹರುಷದಿಂದರ್ಪಿಸುತಲಿ
ಥರಥರದಿ ನೆರೆದ ಮುತ್ತೈದೆಯರೆಲ್ಲರು
ಮರದ ಬಾಗಿನವ ಕೊಡುತಲಿ
ಹರುಷದಿಂದಿಪ್ಪುದನು ಕಂಡೆ ಹೆಳವನಕಟ್ಟೆ
ಅರಸು ರಂಗನ ಕೃಪೆಯಲ್ಲಿ ತಾಯೆ ೩

 

ಮೂರು ನುಡಿಗಳಲ್ಲೂ
೧೪
ಬಹಳ ನಂಬಿದೆ ಭಕ್ತಪಾಲ ಶ್ರೀ ಲಕ್ಷೀಯ ಲೋಲ
ವೆಂಕಟರಾಯನ ಮೂರು ಲೋಕದೊಡೆಯನ
ಮುಕ್ತಿಯ ಕೊಡುವನ ಪಾಲಿಸಿ ಜಗವನುದ್ಧರಿಸಿದ ದೇವನ ಪ.
ಜಲದೊಳು ಪೊಕ್ಕು ವೇದವ ತಂದು ಅಜವನಿಗಿತ್ತು
ಬಲುಗಿರಿ ಕುಸಿಯಲು ಬೆನ್ನಿನಿಂದಲಿ ತಳೆದು
ನೆಲನ ಕದ್ದಸುರನ ಕೊಂದು ಕಂಬದಿ ನಿಂದು
ಬಲಿಯ ದಾನವ ಬೇಡಿ
ಜಲ ಪರುಷವ ನೀಡಿ ಮತ್ತೆ ಮಾತೆಯ ಕಡಿದು
ಛಲದಿ ರಾವಣನ ಸಂಹರಿಸಿ ಸೀತೆಯ ತರಿಸಿ
ಬಲುಸತಿಯರನಾಳಿ ಬವುದ್ಧ ರೂಪವ ತಾಳಿ
ಅಲ್ಲದಶ್ವವೇರಿದ ಅತಿ ಚೆಲುವ ದೇವನ ೧
ನಿಗಮ ಚೋರನ ಕೊಂದು ನೀರೊಳು ಮುಳುಗ್ಯಾಡಿ
ನಗವ ಬೆನ್ನಲಿ ಪೊತ್ತು ಸುರರಿಗಮೃತವಿತ್ತು
ಬಗೆದು ಧಾರುಣಿಯನ್ನು [ಚೀರಿ ಹರಹಿ] ಹಿರಣ್ಯಕನ
ಮಿಗಿಲಾದ ಬಲಿಯ ಮೆಟ್ಟಿ
ಸೊಗಸಿಂದ ಕಾಮಧೇನುವ ತಂದು ಕೌಸಲ್ಯಾ
ಮಗನಾಗಿ ಹುಟ್ಟಿ ರಕ್ಕಸರನ್ನು ತರಿದೊಟ್ಟಿ
ವಿಗಡ ಮಾವನ ಕೊಂದು ಮತ್ತೆ ತ್ರಿಪುರವ ಗೆಲಿದು
ಜಗದೊಳುದ್ದಂಡ ರಾವುತನಾದ ದೇವನ ೨
ಆದಿಪೊಳ[ಕು] ಕ್ಷೀರಾಂಬುಧಿ ಮಥಸ್ನವ
ಆಡಿ ಕೂರುಮನಾಗಿ ಮತ್ತ ಹಿರಣ್ಯಕನ
ದಾಡೆಯಿಂದಲಿ ಸೀಳಿ ಜೋಡು ರೂಪವ ತಾಳಿ
ಬೇಡಿ ಮೂರಡಿ ನೆಲವ
ತೀಡಿ ಕ್ಷತ್ರಿಯರ ಸಂಹರಿಸಿ ಕಾಡೊಳು ಚರಿಸಿ
ಗಾಡಿಗಾತಿಯರ ಮನೆಯೊಳುಳ್ಯಾಡಿ ಸತಿಯರ ವ್ರತ-
ಗೇಡಿ ಭಕ್ತರಿಗೆ ಅಭಯವ ನೀಡಿ ಹೆಳವನಕಟ್ಟೆ
ಕಾಡುಗಲ್ಲಲ್ಲಿ ನಿಂತ ಕಲಿ ವೆಂಕಟೇಶನ ೩

 

ನೀಲಕಂಠ (ನು-೨):
೨೯
ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ ಗಂಭೀರನ ಪ.
ಮೂರು ಲೋಕ ಸಂಚಾರ ಕರುಣಾಸಾಗರ
ತೇಜಿಯನೇರಿ ಮೆರೆವನ ಅ.ಪ.
ಕೋಮಲಾಂಗನ ಕಂತುದಹನನ ಸೋಮಾರ್ಕ ಶಿಖಿನೇತ್ರನ
ವಾಮದೇವನ ವನಜಭವಸಂಭವ ಮುನಿಸ್ತೋಮ ವಿನುತ
ಎನ್ನ ಪ್ರೇಮನ ೧
ನೀಲಕಂಠನ ನಿಗಮಸಾರನ ಬಾಲಶಶಿಧರ ಭರ್ಗನ
ಶೀಲಸದ್ಗುಣ ಫಾಲನೇತ್ರನ ಕಾಲಾಂತಕ ಎನ್ನ ಕಾಯ್ವನ ೨
ಮಂಗಳಾತ್ಮನ ಮಲ್ಲರಿಪುದಲ್ಲಣ ದೇವೋತ್ತುಂಗ ಹೆಳವನಕಟ್ಟೆ
ರಂಗಗತಿಸಖನಾದ ನೀಲಗಿರಿ ಲಿಂಗ ಮೂರುತಿಯ೩

 

ಬಾಲಗೆ ಪಟ್ಟಗಟ್ಟಿಸು ಪರಿವಾರವ ಬಾಳಿಸು ಮುನ್ನಿನಂದದಲಿ
ದೇವ ಬ್ರಾಹ್ಮರ ಮನ್ನಿಸುತಲೆ ರಾಜ್ಯವ ಆಳು ನೀ
ಸುತನ ಮುಂದಿಟ್ಟು ೧೫೧
ಇಕ್ಷ್ವಾಕುಕುಲತಿಲಕನೆ ನಿನ್ನ ರಾಜ್ಯವ ಒಪ್ಪಿಸಿಕೊಳಲೆನಗಳವೆ
ಪುತ್ರಗೆ ಪಟ್ಟವ ಕಟ್ಟುವುದೇನು ಕಾರಣ ವಿಸ್ತಾರವಾಗಿ ಹೇಳೆಂದ ೧೫೨
ಕೇಳಿದೆ ಕರ್ಣದಿ ಹೀನದ ವಾಕ್ಯವ ಜಾರತ್ವ ಬಂದಿತಾತ್ಮಜೆಗೆ
ನಾನು ಅಂಜಿ ಮಾನವರಪವಾದಕ್ಕೆ ದೇಹತ್ಯಾಗವನೆ
ಮಾಡುವೆನು ೧೫೩
ರಣದೊಳು ಬಿದ್ದರೆ ಜಗದೊಳು ಕೀರ್ತಿಯು
ಅಮರಲೋಕಕ್ಕೆ ವಶವಹರು
ಬರಿದು ಸಾಯುವರೆ ನಿನ್ನಂಥ ಪರಾಕ್ರಮಿ ಯಮನ
ಭಾಧೆಗೆ ಗುರಿಯಾಗಿ ೧೫೪
ಪೃಥುವೀಶರೊಳು ತಲೆ ತಗ್ಗಿಸಿದಂತಾಯಿತು
ವ್ಯರ್ಥವಾಯಿತು ಎನ್ನ ಬದುಕು
ಹೊತ್ತಿರಲಾರೆ ದೇಹವ ನೀಕ್ಷಣದಲಿ ಹತ್ಯೆ
ಮಾಡಿಕೊಂಬೆನೆಂದ ೧೫೫
ನಿಂದ್ಯಕೆ ಅಂಜಿ ನೀಗುವರೆ ಶರೀರವ ಹಿಂದಣ
ಕಥೆಯ ಕೇಳರಿಯಾ
ಇಂದ್ರಾದಿ ಮುನಿಗಳಿಗೆ ಬಂದಿತು ಅಪವಾದ
ಕುಂದನೊದ್ದವರಾರು ಜಗದಿ ೧೫೬
ತಾನೆ ಪುಟ್ಟಿಸಿದ ವಾಗ್ದೇವಿಯ ಕಮಲಜ
ಲಾವಣ್ಯ ಕಂಡು ಸೈರಿಸದೆ
ಮೂಜಗವರಿತು ಪಾಣಿಗ್ರಹಣ ಮಾಡಿದ
ಮೀರಿದರಾರೊ ಕಲ್ಪನೆಯ ೧೫೭
ಮುನಿಸತಿಯೆನದೆ ದೇವೇಂದ್ರ ತಾನಳುಕಿದ
ಸರ್ವಾಂಗದಿಂದ ಸುಂದರಿಯು
ಶಿಲೆಯಾಗಿ ಬಿದ್ದಳಾತನ ಸತಿ ಧರೆ ಮೇಲೆ ಮೃಗದ
ಲಾಂಛನೆಯ ತಾಳಿದನು ೧೫೮
ಗುರುಸತಿಯೆನದೆ ಅಂಬುಜಮಿತ್ರ ಅಳುಪಿದ
ಸೆರೆತಂದ ತಾರಾದೇವಿಯನು
ಮುನಿಗಳು ಅಮರರೊಡನೆ ಕಾದಿಗೆಲಿದರು ನರರ
ಪಾಡೇನು ಭೂಪಾಲ ೧೫೯
ಯಮನ ದಾಡೇಲಿಪ್ಪ ತೆರನಂತೆ ಕಾವಲು ನಿನ್ನ
ಕುಮಾರತಿಯ ಮಂದಿರಕೆ
ಮರುಳಗೊಂಡ್ಯೊ ಮಾನವೆಂದು ಈ ಸುದ್ದಿಯ
ಅರುಹಿದರಾರು ನಿನ್ನೊಡನೆ ೧೬೦
ಪರಿಪರಿ ದುಃಖದಿ ಹೊರಳುವ ರಾಯನ ಮನವ
ನಿಲ್ಲಿಸಿದ ಪ್ರಧಾನಿ
ತಿಳಿದು ಬಹೆನು ಕುಮಾರಿಯನೆಂದೆನುತಲೆ
ನಡೆತಂದ ಸೆಜ್ಜೆವಾಹರಿಗೆ ೧೬೧
ಉರಿ ಸೋಂಕಿದ ಕೆಂದಳಿರಂತೆ ಮುಖಬಾಡಿ
ಮಲಿನವನುಟ್ಟ ಮಾನಿನಿಯ
ಕಳೆಗುಂದಿ ನೆಲದಲ್ಲಿ ಬಿದ್ದ ಕುಮಾರಿಯ
ಸೆಳೆವಿಡಿದೆತ್ತಿದ ರಾಯ ೧೬೨
ಏಳವ್ವ ತಾಯಿ ಚಿಂತಿಸಲೇಕೆ ವರನ್ಯಾರು
ಮಾಜುವದೇಕೆ ಎನ್ನೊಡನೆ
ಧಾರೆಯನೆರೆದು ಕೊಡುವೆ ಕನ್ಯಾಚೋರಗೆ ದೇವ
ಬ್ರಾಹ್ಮರು ಮೆಚ್ಚುವಂತೆ ೧೬೩
ಮರೆತು ಮಲಗಿದ್ದಾಗ ಸುರರಡ್ಡಸುಳಿದರೊ
ಸುರರೊ ನರರೊ ಕಿನ್ನರರೊ
ಧರಣೀಶಗ್ಹೇಳಿ ಮಾಡುವೆ ನಿನ್ನ ಮದುವೆಯ
ಗಿರಿಜೇಶನಾಣೆ ಹೇಳೆಂದ ೧೬೪
ಎತ್ತಣ ಮದುವೆ ಮಾಡುವಿರೆನ್ನ ದೇಹವ
ಇತ್ತೆ ನಾ ಹವ್ಯವಾಹನಗೆ
ಮತ್ತೊಬ್ಬ ಪುರಷನ ಕೂಡಿ ಬಾಳುವಳಲ್ಲ
ವಿಶ್ವಲೋಚನನಂಘ್ರಿಯಾಣೆ ೧೬೫
ಹಗರಣವಾಯಿತು ಜಗಮೂರರೊಳಗೆಲ್ಲ ನಗುವರು
ಸರಿಯ ನಾರಿಯರು
ಸೊಗಸವು ನಿಮ್ಮ ವಾಕ್ಯವು ಎನ್ನ ಕರ್ಣಕ್ಕೆ ಹೊಗುವೆನು
ಉರಿವ ಪಾವಕನ ೧೬೬
ಶ್ವಾನ ಮುಟ್ಟಿದ ಭಾಂಡ ಬಾಹದೆ ನಿಳಯಕ್ಕೆ ದೇವ
ಬ್ರಾಹ್ಮರಿಗ್ಯೊಗ್ಯವಹುದೆ
ಮಾನಿನಿಯೆಂದು ಸ್ನೇಹದಲೆನ್ನನುಳುಹಲು ಹಾನಿ
ಬರುವುದು ನಿಮ್ಮ ಕುಲಕೆ ೧೬೭
ಪುತ್ರಿಯೆಂದು ಸ್ನೇಹದಲೆನ್ನ ಉಳುಹದೆ ಕೆಟ್ಟ
ಪಾತಕಿಯೆಂದು ತಿಳಿದು
ಎತ್ತಿ ಕೊಂಡ್ಹೋಗಿ ತುಂಬಿದ ನದಿಯೊಳಗೆ ಬಿಟ್ಟು
ಬರುವುದೆ ಉಚಿತವು ೧೬೮
ಮದುವೆಯ ಮಾಡಲಿಲ್ಲವೆಂದು ಎನ್ನೊಳು
ಮುನಿದು ಅರಣ್ಯಕ್ಹೋಗುವರೆ
ವರಿಸು ನಿನಗೆ ಉತ್ತುಮವುಳ್ಳ ಪುರಷಗೆ ಧಾರೆಯನೆರೆವೆನು ೧೬೯
ಪಕ್ವವಾಯಿತು ಎನ್ನ ಪಾತಕ ಇಂದಿಗೆ ಹೊತ್ತೆನು
ಬರಿದೆ ನಿಂದ್ಯವನು (ಅ)
ಸತ್ಯವಾಗದು ಎನ್ನ ಆಡಿದ ವಾಕ್ಯವು ಮೃತ್ಯು
ಬಂದೊದಗಿದ ಮೇಲೆ ೧೭೦
ದೃಷ್ಟಿಸಿ ನೋಡಲು ದೃಷ್ಟಿತಾಕೀತೆಂದು ಎತ್ತಿ
ತೂಪಿರಿದು ಮಂತರಿಸಿ
ಇಷ್ಟು ಪರಿಯಿಂದಲೆಸಲಹಿದ ಮಗಳನು ಇತ್ತೆ ನಾ
ಘೋರ ಕಾನನಕೆ ೧೭೧
ಕಾರುಣ್ಯದಿಂದಲೆ ಸಲಹಿದ ಮಗಳನು ಅರಣ್ಯಕೆ
ಗುರಿಮಾಡಿ ನಾರಿ
ನಿನ್ನನಗಲಿ ನಾನೆಂತು ಜೀವಿಪೆನೆಂದು ತಾಯಿ
ಕಂಬನಿದುಂಬಿದಳು ೧೭೨
ಮಿಸುನಿಯ ಅಲಗೆಂದು ಬಸಿರೊಳಗಿಡುವರೆ
ವಶವಲ್ಲದಂಥ ಮೂಗುತಿಯ
ಹಸನಾಯಿತೆಂದು ಇಟ್ಟರೆ ನಾಸಿಕ್ಹರಿವೋದು
ಬಿಸುಸುಯ್ವದೇತಕೆ ತಾಯೆ ೧೭೩
ಏಳುತ್ತಲೊಮ್ಮೆ ಬಿಮ್ಮನೆ ತಾ ಮರುಗಿದಳು
ಕುಮಾರಿಯ ಮೇಲೆ ಸ್ನೇಹದಲಿ
ಆಲೋಚನೆ ಮಾಡುವ ಹಿರಿಯರ ಕಾಣೆನು ಹಾ
ವಿಧಿಯೆಂದ್ಹೊರಳಿದಳು ೧೭೪
ಉಲುಹ ಕೇಳಿದರೆ ಎಚ್ಚರ ‘ವಹರು’ ಜನರೆಲ್ಲ
ಅಳುವುದೇತಕೆ ತಾಯೆ ನೀನು
ಅರುಣನ ಉದಯವಾಗದ ಮುನ್ನ ಕಳುಹಿಸು
ಕಲ್ಮಾಡು ನಿನ್ನ ದೇಹವನು ೧೭೫
ರಾಯನು ಕರೆಸಿದ ತನ್ನ ಊಳಿಗದವರನು
ಹೇಳಿದನೇಕಾಂತದಲಿ
ಬಾಲೆಯನೊಯ್ದು ಅರಣ್ಯದಿ ಶಿರವರಿದುನಾಳೆ
ಉದಯಕೆ ಬನ್ನಿರೆಂದ ೧೭೬
ಕರೆಸಿದನಾಗ ಕಿಂಕರರ ಪ್ರಧಾನಿಯು ತರಿಸಿದನೊಜ್ರದಂದಣವ
ಅರಸನ ಮಗಳನು ಅರಣ್ಯದೊಳಗಿಟ್ಟು ಮರೆಸಿ
ಬನ್ನಿರಿ ಶೀಘ್ರದಿಂದ ೧೭೭
ರಾಯನ ಮಗಳನು ಅರಣ್ಯದೊಳಗಿಟ್ಟು
ಮಾಡಿರಿಮನಕೆ ಬಂದುದನು
ಬಾಲೆಯ ಮುದ್ರೆಯುಂಗುರ ತನ್ನಿ ಗುರುತಿಗೆ
ನಾನಿಡುವೆ ರಾಯನ ಮುಂದೆ ೧೭೮
ಏರಿದಳೊಜ್ರದಂದಣವ ಕುಮಾರಿಯು
ಮೇಲೆ ಪನ್ನಂಗ ಕವಿದವು
ವ್ಯಾಘ್ರ ಬಂದು ಹರಿಣನ ಕಚ್ಚಿ ಒಯಿದಂತೆ
ಶೀಘ್ರದಿ ಪೊತ್ತು ನಡೆದರು ೧೭೯
ಶಶಿಮುಖಿ ಮನದಲಿ ನಸುಬೆದುರಿಡುತಲೆ
ಬಸವಳಿದಳು ಶ್ರೀ ಹರಿಯ
ಅರಸುಮರ್ದನ ಗೋವಿಂದನೆ ಸಲಹೆಂದು
ಸ್ತುತಿಸುತಿರ್ದಳೆ ತನ್ನ ಮನದಿ ೧೮೦
ನೋಡದೆ ಎನ್ನವಗುಣವ ಪಾತಕಿಯೆಂದು
ಕಾಲನ ವಶಕೆÉ ಒಪ್ಪಿಸದೆ
ಕ್ಷೀರಾಬ್ಧಿಶಯನ ನಾರಾಯಣ ಹರಿ ನಿಮ್ಮ
ಪಾದಾರವಿಂದೊಳಿರಿಸು ೧೮೧
ಭಾರವನ್ಹೊತ್ತು ಬಳಲಿ ಬಾಯಾರುತ್ತ ಏರುತ್ತ ಘಟ್ಟ ಬೆಟ್ಟಗಳ
ಹಾದಿ ತಪ್ಪಿ ಹಳ್ಳಕೊಳ್ಳ ಕಾನನದೊಳು
ಬಾಲೆಯ ತಂದಿಳುಹಿದರು ೧೮೨
ಅಂದಣ ಇಳುಹಿ ಕೆಂದಳಿರ್ಹಾಸಿದರಾಗ ತಂಗಿ
ಬಾ ಬಳಲಿದೆಯೆನುತ
ಕುಂದಣಗಿಂಡೀಲಿ ತುಂಬಿಟ್ಟರುದಕವ
ರಂಭೆಯನುಪಚರಿಸಿದರು ೧೮೩
ಪುಷ್ಪ ಸೋಕಿದರೆ ಬಾಡುವ ಕೋಮಲಾಂಗವ
ತೊಪ್ಪಲ ಮೇಲ್ಹರಹಿದರು
ಅಚ್ಯುತಾನಂತ ಶ್ರೀ ಕೃಷ್ಣನೆ ಗತಿಯೆಂದು
ಕತ್ತಿಗೆ ಮಯ್ಯನಿಕ್ಕಿದಳು ೧೮೪
ಕಂಬುಚಕ್ರಧಾರಿ ವೈಕುಂಠವಾಸಗೆ ವಂದಿಸಿದಳು ತನ್ನ ಮನದಿ
ಅಂಬುಜಮಿತ್ರ ಗೋವಿಂದನೆ ಗತಿಯೆಂದು ರಂಭೆ ತಾ
ಸ್ತುತಿಯ ಮಾಡಿದಳು ೧೮೫
ಅರಣ್ಯದಲ್ಲಿ ತನ್ನ ನೆನೆವ ಕುಮಾರಿಗೆ ಕಾರುಣ್ಯದಿಂದೊದಗಿದನು
ಪ್ರಹಲ್ಲಾದವರದ ಪಾಲಿಸಿದನು ಹಸುಳೆಗೆ ಮಾಯದ
ನಿದ್ರೆ ಕವಿದವು ೧೮೬
ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಭಕ್ತರಿಗೊಜ್ರಪಂಜರನೆ
ನಿತ್ಯ ನಿರ್ಮಳ ಅಚ್ಯುತಾನಂತ ನರಹರಿ ಪೊಕ್ಕನೆ
ದೂತರ ಮನವ ೧೮೭
ಎತ್ತಿದರು ಕೊಲೆಘಟಿಕರಾಯುಧವನ್ನು ಮತ್ತೆ
ಯೋಚಿಸಿ ತಮ್ಮ ಮನದಿ
ಪುತ್ರಿಯ ಕೊಂದ ಪಾತಕ ತಮಗೆನುತಲೆ
ಎತ್ತಿದಾಯುಧವನಿಳುಹಿದರು ೧೮೮
ಗರ್ಭಾಂಗಿಯ ಕೊಂದರೆ ಪಾಪ ತಮಗೆಂದು
ಒಬ್ಬರೊಬ್ಬರು ಮಾತನಾಡಿ
ಕೊಬ್ಬಿದ ಮೃಗವ ಕಡಿದು ಶೋಣಿತವನ್ನು
ಉರ್ವೀಶಗೊಯ್ದು ಒಪ್ಪಿಸುವ ೧೮೯
ವ್ಯಾಘ್ರ ಕಾಡು ಕೋಣ ಮೃಗವಿದ್ದಯಡೆಯಲ್ಲಿ
ವಾರಿಜಗಂಧಿಯ ಬಿಟ್ಟು
ಜೀವಗಳಳಿದು ಅಯೋಧ್ಯಕ್ಕೆ ಬಂದರು
ರಾಯಗೆ ಗುರುತ ತೋರಿದರು ೧೯೦
ಕಪ್ಪೋಡಲಿನ ಪುಳಿಂದರು ಬಂದರು
ತಪ್ಪದೆ ರಾಯನೋಲಗಕೆ
ಹತ್ಯಮಾಡಿ ಬಂದೆವು ನಿನ್ನ ಕುಮಾರಿಯ
ಚಿತ್ತೈಸು ಜೀಯವಧಾನ ೧೯೧
ಕೊಂದು ಬಂದೆವು ನಿನ್ನ ಆತ್ಮಸಂಭವೆಯನ್ನು
ತಂದೆವು ಮುದ್ರೆಯುಂಗುರವ
ಕೊಂಡಿಳುಹಿದರು ನೆತ್ತರು ಪೂಸಿದಲಗನು ಕಂಡು
ಮನದಲಿ ಮರುಗಿದನು ೧೯೨
ಕುಂ(ಜವ)ಗಿಣಿಯನು ಪಂಜರದೊಳಗಿಟ್ಟು
ಅಂಜೂರ ಕೊಯ್ದು ಕೊಟ್ಟಂತೆ
ಕುಂಜರಗಮನೆಯ ಕೈಯಿಂದ ಕೊಲಿಸಿದೆ
ಬೆಂದೊಡಲನೆಂತು ಪೊರೆಯಲಿ ೧೯೩
ತುಂಬೂರಗೊಳ್ಳಿಯ ಒಲೆಯೊಳಗಿಟ್ಟಂತೆ
ಕೆಂಡದೊಳಾಜ್ಯ ಬಿದ್ದಂತೆ
ತಂದೆ ತಾಯಿ ಪ್ರಧಾನಿಪರಿವಾರವು
ಬೆಂದರು ಶೋಕಾಗ್ನಿಯಿಂದ ೧೯೪
ಇತ್ತಲಾರಾಯ ಹಂಬಲಿಸಿ ತಾನಳುತಿರೆ ಪುತ್ರಿಯ
ಮೇಲೆ ಸ್ನೇಹದಲಿ
ಹಕ್ಕಿ ಪಕ್ಷಿಯು ನಲಿದವು ಮೂಡüರಾತ್ರೇಲಿ
ತಲೆಯೆತ್ತಿದವಬ್ಜ ಬಂಧುಗಳು ೧೯೫
ಎಚ್ಚೆತ್ತು ನೋಡಿದಳಾಗ ಚಂದ್ರಾವತಿ ಸುತ್ತಲ
ಮೃಗದ ಸಂಚರವ
ಬಿಟ್ಟುಹೋದರು ಪಾತಕರೆನ್ನ ಅಡವೀಲಿ ತುತ್ತಾದೆ
ಹಸಿದ ಹೆಬ್ಬುಲಿಗೆ ೧೯೬
ಘುಡುಘುಡಿಸುವ ಸಿಂಹನಾದಕ್ಕೆ ಅಂಜುವಳು
ಬೆದರುವಳು ವ್ಯಾಘ್ರದಟ್ಟುಳಿಗೆ
ಮೊರೆವ ಸರ್ಪವ ಕಂಡು ನಯನವ ಮುಚ್ಚುವಳು
ಮರಳಿ ಧೈರ್ಯವನೆ ಮಾಡುವಳು ೧೯೭
ನಾನ್ಯಾರೊ ತಾಯಿ ತಂದ್ಯಾರೊ ಭಾವಿಸಿದರೆ
ಮಾಯಪಾಶಕೆ ಗುರಿಮಾಡಿ
ಮಾರಜನಕ ದಾನವಾರಿಯ ನೆನೆದರೆ ಅಹುದು
ಮುಕ್ತಿ ಸಾಧನವು ೧೯೮
ಜಲವ ಪೊಕ್ಕು ದೈತ್ಯನ ಸಂಹರಿಸಿದೆ ಅಜಗೆ