- This event has passed.
ಎಂ.ಎಚ್. ಕೃಷ್ಣ
August 19, 2023
೧೯-೮-೧೮೯೨ ೨೩-೧೨-೧೯೪೭ ಸುಪ್ರಸಿದ್ಧ ಪುರಾತತ್ತ್ವಜ್ಞರಾದ ಹಟ್ಟಿ ಮೈಸೂರು ಕೃಷ್ಣಯ್ಯಂಗಾರ್ಯರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ರಂಗ ಅಯ್ಯಂಗಾರ್, ತಾಯಿ ಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲು. ಪ್ರೌಢಶಿಕ್ಷಣ ಮಹಾರಾಜ ಕಾಲೇಜು, ಉದ್ಯೋಗ ಪ್ರಾರಂಭಿಸಿದ್ದು ಮಹಾರಾಜ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ನಂತರ ಮದರಾಸು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ವ್ಯಾಸಂಗ ವೇತನ ದೊರೆತು ಲಂಡನ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್ ಮ್ಯೂಸಿಯಂನಲ್ಲಿ ಎರಡು ವರ್ಷ ಉನ್ನತ ವ್ಯಾಸಂಗ. ಪ್ರಸಿದ್ಧ ಪುರಾತತ್ತ್ವಜ್ಞರಾದ ಸರ್ ಫ್ಲಿಂಡರ್ಸ್ಫೇಟ್ರಿ, ಇ.ವಿ. ಗಾರ್ಡ್ನರ್, ಎಚ್.ಡಿ. ಬಾರ್ನೆಟ್, ಎಫ್.ಡಿ. ಥಾಮಸ್, ಜಿ. ಅಲನ್ ಮುಂತಾದವರ ಮಾರ್ಗದರ್ಶನದಲ್ಲಿ ದಕ್ಷಿಣ ಭಾರತದ ನಾಣ್ಯಗಳನ್ನು ಪೂರ್ಣ ಅಭ್ಯಾಸ ಮಾಡಿ, ಪ್ರೌಢ ಪ್ರಬಂಧ ಮಂಡಿಸಿ ಪಡೆದ ಡಿ.ಲಿಟ್ ಪದವಿ. ಈಜಿಪ್ಟ್ನಲ್ಲಿ ಉತ್ಖನನದ ಬಗ್ಗೆ ಪಡೆದ ವಿಶೇಷ ಅನುಭವ. ಇಂಗ್ಲೆಂಡ್ನಿಂದ ಹಿಂದಿರುಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಉಪ ಪ್ರಾಧ್ಯಾಪಕ ವೃತ್ತಿ. ಪ್ರಾಧ್ಯಾಪಕರ ಹುದ್ದೆಗೆ ಬಡ್ತಿ. ಈ ಹುದ್ದೆಯೊಂದಿಗೆ ಪುರಾತತ್ತ್ವ ಇಲಾಖೆಯ ನಿರ್ದೇಶಕರ ಜವಾಬ್ದಾರಿ. ಎರಡು ಹುದ್ದೆಗಳಲ್ಲೂ ತೋರಿಸಿದ ಅಸಾಧಾರಣ ಪ್ರತಿಭೆ. ವಿದ್ಯಾರ್ಥಿಗಳಿಗೆ ನೆಚ್ಚಿನ ಪ್ರಾಧ್ಯಾಪಕರೆನಿಸಿದರೆ, ಪುರಾತತ್ತ್ವ ಇಲಾಖೆಯ ದಕ್ಷ ಅಕಾರಿ ಎಂಬ ಪ್ರಶಂಸೆ. ಮೈಸೂರು ಪುರಾತತ್ತ್ವ ಇಲಾಖೆಗಾಗಿ ನಡೆಸಿದ ಸಂಶೋಧನೆಗಳು. ಕರ್ನಾಟಕದ ಚಂದ್ರವಳ್ಳಿ ಮತ್ತು ಬ್ರಹ್ಮಗಿರಿಯಲ್ಲಿ ನಡೆಸಿದ ವೈಜ್ಞಾನಿಕ ಭೂ ಶೋಧನೆಗಳು. ಚಂದ್ರವಳ್ಳಿ ಶಾಸನ, ಹಲ್ಮಡಿ ಶಾಸನ ಇವರ ಕಾಲದ ಮುಖ್ಯ ಶಾಸನ ಶೋಧನೆ. ವಾಸ್ತುಕಲೆ, ಶಿಲ್ಪಕಲೆ, ದೇವಾಲಯ ಮತ್ತು ಶಿಲ್ಪಗಳ ಆಳವಾದ ಅಭ್ಯಾಸ. ವಾರ್ಷಿಕ ವರದಿಗಳಲ್ಲಿ ಪ್ರಕಟಣೆ. ದಕ್ಷಿಣ ಭಾರತದ ಅನೇಕ ರಾಜರು ಟಂಕಿಸಿದ ನಾಣ್ಯಗಳ ಇತಿಹಾಸ ಅಧ್ಯಯನ, ವರದಿ ಪ್ರಕಟಣೆ. ಮೈಸೂರು ಮತ್ತು ಹಾಸನ ಜಿಲ್ಲೆಗಳ ಎಪಿಗ್ರಾಫಿಯ ಕರ್ನಾಟಕ ಗ್ರಂಥ. ಪ್ರವಾಸಿ ಕ್ಷೇತ್ರಗಳಾದ ಬೇಲೂರು, ಹಳೆಯಬೀಡು, ಶ್ರವಣಬೆಳಗೊಳ, ತಲಕಾಡು, ನಂದಿ ಬೆಟ್ಟಗಳ ಕೈಪಿಡಿ ಪ್ರಕಟಣೆ. ಹಿಂದೂ ದೇಶದ ಚರಿತ್ರಸಾರ (೧೩ ಮುದ್ರಣಗಳು) ಕನ್ನಡ ನಾಡಿನ ಚರಿತ್ರೆ (ಆರು ಮುದ್ರಣ) ಅಜಂತ, ಎಲ್ಲೋರ ಸೇರಿ ೨೫ಕ್ಕೂ ಹೆಚ್ಚು ಕೃತಿಗಳು. ಸಂಶೋಧನ ಪತ್ರಿಕೆಗೆ ಬರೆದ ಲೇಖನಗಳು. “ದಖ್ಖನ್ನಿನ ನಾಣ್ಯಗಳು” ಪಿಎಚ್.ಡಿ. ಪ್ರಬಂಧ. ೧೯೩೪ರಲ್ಲಿ ಮೈಸೂರಿನಲ್ಲಿ ನಡೆದ ಪ್ರಾಚ್ಯ ಸಮ್ಮೇಳನದ ಕಾರ್ಯದರ್ಶಿಯಾಗಿ, ೧೯೪೨ರಲ್ಲಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ನ ಮಾನವ ಶಾಸ್ತ್ರ ವಿಭಾಗದ ಅಧ್ಯಕ್ಷರಾಗಿ ಕಾರ್ಯ ಗೌರವ. ಪುರಾತತ್ತ್ವ ಇಲಾಖೆಯಲ್ಲಿದ್ದಾಗಲೇ ೨೩.೧೨.೧೯೪೭ರಲ್ಲಿ ನಿಧನ. ಇದೇ ದಿನ ಹುಟ್ಟಿದ ಸಾಹಿತಿ : ಸುಧಾ ಮೂರ್ತಿ – ೧೯೫೦