Categories
ಕುವೆಂಪು ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಕುವೆಂಪು

ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಕಾವ್ಯನಾಮ “ಕುವೆಂಪು”.

ಜನನ: ಕುವೆಂಪುರವರು ೧೯೦೪ ರ ಡಿಸೆಂಬರ್ ೨೯ ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ ೧೯೨೯ ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, ೧೯೫೫ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು. ಇವರು ಮೈಸೂರಿನ ಒಂಟಿಕೊಪ್ಪಲುವಿನಲ್ಲಿರುವ “ಉದಯರವಿ”ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು (ಪೂರ್ಣಚಂದ್ರ ತೇಜಸ್ವಿ, ಕೋಕೀಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).

ಮೊದಲ ಹಂತ: ಎಸ್.ಎಸ್.ಎಲ್.ಸಿ ಓದುವಾಗಲೇ ಕುವೆಂಪುರವರು ಬರೆದಿದ್ದ “ಬಿಗಿನರ್ಸ್ ನ್ಯೂಸ್” ಎಂಬ ಇಂಗ್ಲೀಷ್ ಕವನಸಂಕಲನ ಭಾರತ ಭೇಟಿಗೆ ಬಂದಿದ್ದ ಐರಿಶ್ ಕವಿ ಜೆ.ಎಚ್.ಕಸಿನ್ಸ್ ರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಅವರ ಸಲಹೆಯಂತೆ ಕನ್ನಡದಲ್ಲಿ ಬರೆಯಲಾರಂಭಿಸಿದ ಕುವೆಂಪು ರವರು ಬರೆದ ಮೊದಲ ಕನ್ನಡ ಕವನ ಸಂಕಲನ “ಅಮಲನಕಥೆ”. ಚಿಕ್ಕಂದಿನಿಂದಲೇ ಮಲೆನಾಡಿನ ಪರಿಸರದಲ್ಲಿ ಬೆಳೆದ ಕುವೆಂಪುರವರಿಗೆ ಅಪಾರವಾದ ಪರಿಸರ ಪ್ರೇಮ. ಅವರ ಪರಿಸರ ಪ್ರೀತಿಯೇ ಅವರ ಕಾವ್ಯದಲ್ಲಿ ಜೀವಂತವಾಗಿ ಮೇಳೈಸಿದೆ. ಜತೆಗೆ ನಾಡು ಕಂಡ ಧೀಮಂತರಾದ ಶ್ರೀ ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ.ಶ್ರೀ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿ ಯವರ ಒಡನಾಟ, ಮಾರ್ಗದರ್ಶನಗಳು ಅವರ ಸಾಹಿತ್ಯವನ್ನು ಶ್ರೀಮಂತಗೊಳಿಸಿದವು. ೧೯೨೫ ರಲ್ಲಿ ಪ್ರಕಟವಾದ ಕುವೆಂಪುರವರ “ಬೊಮ್ಮನಹಳ್ಳಿ ಕಿಂದರಿಜೋಗಿ” ನಾಡಿನಾದ್ಯಂತ ಮಕ್ಕಳ ಬಾಯಲ್ಲಿ ನಲಿದಾಡಿತು. ಸೆಂಟ್ರಲ್ ಕಾಲೇಜು ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷ ಪದವಿಯೂ ಇವರನ್ನು ಅರಸಿ ಬಂತು.

ಬೆಳವಣಿಗೆ: ಕುವೆಂಪು ಅವರು ಬರೆದ ಎರಡು ಕಾದಂಬರಿಗಳಾದ “ಕಾನೂರು ಸುಬ್ಬಮ್ಮ ಹೆಗ್ಗಡತಿ” ಮತ್ತು “ಮಲೆಗಳಲ್ಲಿ ಮದುಮಗಳು” ಭಾರತೀಯ ಸಾಹಿತ್ಯ ಪ್ರಪಂಚದಲ್ಲೇ ಶ್ರೇಷ್ಠ ಕೃತಿಗಳೆಂಬ ಪ್ರಶಂಸೆಗೆ ಪಾತ್ರವಾಗಿವೆ. ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೂಟ್ಟ ಹಿರಿಮೆಯನ್ನು ಹೊಂದಿದ ಇವರ ” ಶ್ರೀ ರಾಮಾಯಣದರ್ಶನಂ” ಮಹಾಕಾವ್ಯ ಸಂಸ್ಕೃತ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿದೆ. ಇವರು “ಬೆರಳ್ಗೆ ಕೊರಳ್”,”ಶೂದ್ರ ತಪಸ್ವಿ”,”ಸ್ಮಶಾನ ಕುರುಕ್ಷೇತ್ರಂ”, “ರಕ್ತಾಕ್ಷಿ”,”ಜಲಗಾರ” ಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಜೊತೆಗೆ” ಕೊಳಲು”,”ಅಗ್ನಿಹಂಸ”,”ಅನಿಕೇತನ”,”ಅನುತ್ತರಾ”, “ಇಕ್ಷು ಗಂಗೋತ್ರಿ”, “ಕಥನ ಕವನಗಳು”,” ಕಲಾಸುಂದರಿ”, “ಕಿಂಕಿಣಿ”, “ಕೃತ್ತಿಕೆ”, “ಜೇನಾಗುವ”, “ನವಿಲು”, “ಪಕ್ಷಿಕಾಶಿ”, “ಚಿತ್ರಾಂಗದಾ” ಮೊದಲಾದ ಕವನಸಂಕಲನಗಳು, “ರಾಮಕೃಷ್ಣ ಪರಮಹಂಸ”, “ಸ್ವಾಮಿ ವಿವೇಕಾನಂದ” ಜೀವನಚರಿತ್ರೆಗಳನ್ನೂ ಇವರು ಬರೆದಿದ್ದಾರೆ.
“ನೆನಪಿನ ದೋಣಿಯಲ್ಲಿ” ಕುವೆಂಪುರವರ ಆತ್ಮಕಥೆ.

ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೫೮ ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೫೮ ರಲ್ಲಿ ಪದ್ಮಭೂಷಣ
೧೯೬೪ ಕರ್ನಾಟಕ ಸರ್ಕಾರದಿಂದ ರಾಷ್ಟ್ರಕವಿ
೧೯೬೮ ರಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಭಾರತೀಯ ಜ್ಞಾನಪೀಠ ಪ್ರಶಸ್ತಿ

ಮೂರು(೩) ವಿಶ್ವವಿದ್ಯಾನಿಲಯಗಳ ಗೌರವ ಡಿ.ಲಿಟ್ ಪ್ರಶಸ್ತಿ
೧೯೮೭ ರಲ್ಲಿ ಪಂಪ ಪ್ರಶಸ್ತಿ
೧೯೮೯ರಲ್ಲಿ ಪದ್ಮವಿಭೂಷಣ
೧೯೯೨ ಕರ್ನಾಟಕ ರತ್ನ ಪ್ರಶಸ್ತಿ
ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ೧೯೫೭ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು ‘ಜೈ ಭಾರತ ಜನನಿಯ ತನುಜಾತೆ…’ ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರು ಕವಿ. “ಅಭಿನವ ವಾಲ್ಮೀಕಿ” ಎಂದೇ ಜನಮಾನಸದಲ್ಲಿ ಪ್ರಸಿದ್ಧರಾದ ಕುವೆಂಪುರವರು ೧೯೯೪ ನವೆಂಬರ್ ೧೧ರಂದು ಮೈಸೂರಿನ ತಮ್ಮ ನಿವಾಸ ಉದಯರವಿಯಲ್ಲಿ ನಿಧನರಾದರು.

ಕುವೆಂಪು ಕನ್ನಡ ಅಧ್ಯಯನ ಕೇಂದ್ರ(ಮೈಸೂರು ವಿಶ್ವ ವಿದ್ಯಾನಿಲಯ),ಕುವೆಂಪು ವಿಶ್ವವಿದ್ಯಾಲಯಗಳು ಕುವೆಂಪು ಅವರ ನೆನಪನ್ನು ಉಳಿಸಿವೆ.

ಕೃತಿಗಳು

ಮಹಾಕಾವ್ಯ

ಖಂಡಕಾವ್ಯಗಳು

ಕವನ ಸಂಕಲನಗಳು

ಕಥಾ ಸಂಕಲನ

ಕಾದಂಬರಿಗಳು

ನಾಟಕಗಳು

ಪ್ರಬಂಧ

ವಿಮರ್ಶೆ

ಆತ್ಮಕಥೆ

ಜೀವನ ಚರಿತ್ರೆಗಳು

ಅನುವಾದ

  • ಗುರುವಿನೊಡನೆ ದೇವರಡಿಗೆ (ಭಾಗ 1, 2) (1954)
  • ಕೊಲಂಬೋ ಇಂದ ಆಲ್ಮೋರಕೆ

ಭಾಷಣ-ಲೇಖನ

ಶಿಶು ಸಾಹಿತ್ಯ

ಇತರೆ

ಆಯ್ದ ಸಂಕಲನಗಳು

  • ಕನ್ನಡ ಡಿಂಡಿಮ (1968)
  • ಕಬ್ಬಿಗನ ಕೈಬುಟ್ಟಿ (1973)
  • ಪ್ರಾರ್ಥನಾ ಗೀತಾಂಜಲಿ (1972)

 

ಮಂತ್ರ ಮಾಂಗಲ್ಯ : ವಿವಾಹ ಸಂಹಿತೆ

Categories
ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಯಾಮುನಾಚಾರ್ಯರು

ಕೃತಿ:ವ್ಯಕ್ತಿ ಪರಿಚಯ
ಲೇಖಕರು:
ವ್ಯಕ್ತಿ ಪರಿಚಯ

ಕೃತಿಯನ್ನು ಓದಿ

Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ವ್ಯಾಸರಾಯ ಬಲ್ಲಾಳ

ನಿಡಂಬೂರು ವ್ಯಾಸರಾಯ ಬಲ್ಲಾಳರು ಇಂದಿನ ಪೀಳಿಗೆಯ ಸಮರ್ಥ ಕಥೆಗಾರರಲ್ಲಿ ಹಾಗೂ ಕಾದಂಬರಿ ಕಾರರಲ್ಲಿ ಪ್ರಮುಖರು. ಇವರು ಪ್ರಸಿದ್ದ ಕಥೆಗಾರರಾಗಿ ಹಾಗೂ ಶ್ರೇಷ್ಟ ಕಾದಂಬರಿಕಾರರಾಗಿ ಹೆಸರು ಮಾಡಿದ್ದಾರೆ. ಇವರು ೧೯೨೩ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಜನಿಸಿದರು. ಚಿಕ್ಕಂದಿನಿಂದ ಮುಂಬಯಿಯಲ್ಲೇ ನೆಲಸಿ ಮುಂಬಯಿಯ ತೈಲ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು ಸಾಹಿತ್ಯ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸ್ಥೆವಹಿಸಿರುವ ಇವರು ಕರ್ನಾಟಕ ಸಂಘ, ಸಾಹಿತ್ಯ ಕೂಟ, ಕನ್ನಡ ಕಲಾಕೂಟ, ಕನ್ನಡ ಕಲಾಕೇಂದ್ರಗಳ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ. ಮುಂಬೈ ಜೀವನ ಇವರ ಕಥೆ ಕಾದಂಬರಿಗಳಲ್ಲಿ ಕಲಾತ್ಮಕವಾಗಿ ಮೂಡಿಬಂದಿದೆ. ಸುಮಾರು ೪೦ ವರ್ಷಗಳ ಹಿಂದೆ ‘ಅಂಕಣ, ಕಾರರಾಗಿ ಇವರು ಮುಂಬಯಿಯಲ್ಲಿ ಹೆಸರು ಮಾಡಿದ್ದಾರೆ. ಬಲ್ಲಾಳರು ಕಥೆ, ಕಾದಂಬರಿ, ನಾಟಕ, ಪ್ರವಾಸ ಕಥನ, ಈ ಸಾಹಿತ್ಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.

Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಯಶವಂತ ಚಿತ್ತಾಲ

ಯಶವಂತ ಚಿತ್ತಾಲರು ಜನಿಸಿದ್ದು ೩ ಆಗಸ್ಟ್ ೧೯೨೮ ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣತಾಲ್ಲೂಕಿನ ಹನೇಹಳ್ಳಿಯಲ್ಲಿ. ಹುಟ್ಟೂರು, ಕುಮಟಾ, ಧಾರವಾಡ ಮತ್ತು ಮುಂಬಯಿಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಇವರ ಕೃತಿಗಳ ಮೇಲೆ ಗಂಗಾಧರ ಚಿತ್ತಾಲ, ಗೌರೀಶ ಕಾಯುಣಿ, ಶಾಂತಿನಾತದೇಸಾಯಿಯವರ ದಟ್ಟವಾದ ಪ್ರಭಾವವನ್ನು ಕಾಣಬಹುದು. ಅಧುನಿಕ ಕನ್ನಡ ನವ್ಯಸಾಹಿತ್ಯದ ಪ್ರಮುಖರಾದ ಯಶವಂತ ಚಿತ್ತಾಲರ ಕೃತಿಗಳಲ್ಲಿ ಮುಂಬಯಿಯ ಯಾಂತ್ರೀಕೃತ ಬದುಕು, ಒಂಟಿತನ, ಹಣದಾಹ, ಅಂತರ್ಮುಖತೆ, ಅನಾಥಪ್ರಜ್ಞೆಗಳು ಎದ್ದು ಕಾಣುವ ಅಂಶಗಳು. ಅವರಿಗಿರುವ ವೈಚಾರಿಕ ಪರಿಣತಿ ಮತ್ತು ಮಾಧ್ಯಮ ನಿಷ್ಟೆಗಳ ನಡುವಿನ ಕರ್ಷಣವೇ ಅವರ ಬರವಣಿಗೆಯ ಜೀವಂತಿಕೆ ಕಾರಣವಾಗಿದೆ. ಯಶವಂತ ಚಿತ್ತಾಲರ ಕಥಾಸಂಕಲನಗಳು-ಸಂದರ್ಶನ (೧೯೫೭), ಆಟ(೧೯೬೯), ಕಥೆಯಾದಳು ಹುಡುಗಿ(೧೯೮೦), ಬೇನ್ಯಾ(೧೯೮೩), ಈ ಸಂಕಲನಗಳ ಕಥೆಗಳಾದ ಪೀಜೀ, ಸಂದರ್ಶನ, ಅಡ್ಡಬಿದ್ದಮರ, ಖಾಲೀ ಕೋಣೆ, ಯಂತಹ ಕಥೆಗಳಲ್ಲಿ ಕಥನದ ಕೇಂದ್ರ ನಗರಕ್ಕೆ ಚಲಿಸುತ್ತದೆ.

Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಹಾ.ಮಾ.ನಾಯಕ

ಹುಟ್ಟಿದ್ದು ೫ ಪ್ರೆಬ್ರವರಿ ೧೯೩೧ ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆ ಎಂಬ ಹಳ್ಳಿಯಲ್ಲಿ. ಪೂರ್ಣಹೆಸರು ಹಾರೋಗದ್ದೆ ಮಾನಪ್ಪ ನಾಯಕ, ಹಾ.ಮಾ.ನಾ ಎಂಬುದು ಅವರ ಕಾವ್ಯನಾಮ. ತಂದೆ ಶ್ರೀನಿವಾಸನಾಯಕ, ತಾಯಿ ರುಕ್ಮಿಣಿಯಮ್ಮ. ಆಗುಂಬೆ ಹತ್ತಿರದ ನಲ್ಲೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪ್ರಾರಂಬಿಸಿದ ಇವರು ಮೈಸೂರು ಮತ್ತು ಕಲ್ಕತ್ತ ವಿಶ್ವವಿದ್ಯಾಲಯಗಳಿಂದ ಎಂ.ಎ ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಬಿಸಿದ ಹಾ.ಮಾ.ನಾಯಕರು ಫುಲ್‌ಬ್ರೈಟ್ ವಿದ್ಯಾರ್ಥಿವೇತನ ಪಡೆದು ಅಮೆರಿಕದ ಇಂಡಿಯಾನ ವಿಶ್ವ ವಿದ್ಯಾಲಯದಿಂದ ‘ಕನ್ನಡ: ಸಾಹಿತ್ಯಕ ಮತ್ತು ಆಡುಭಾಷೆ ಎಂಬ ವಿಷಯ ಕುರಿತು ಮಂಡಿಸಿದ ಪ್ರಬಂಧ ಡಾಕ್ಟರೇಟ್ ಪದವಿಯನ್ನು ತಂದುಕೊಟ್ಟಿತು. ನಾಯಕರು ಬಾಲ್ಯದಲ್ಲಿಯೇ ‘ಮಕ್ಕಳ ಪುಸ್ತಕ ಎಂಬ ಪತ್ರಿಕೆಯ ಮೂಲಕ ಬರವಣಿಗೆ ಪ್ರಾರಂಬಿಸಿ ಪ್ರೌಡಶಾಲೆಯಲ್ಲಿರುವಾಗಲೇ ಪ್ರಥಮ ಕೃತಿ ಬಾಳ್ನೋಟಗಳು (೧೯೫೦) ಪ್ರಕಟಿಸಿದರು. ಇವರು ಜಾನಪದ ವಿದ್ವಾಂಸರಾಗಿದ್ದರು. ಇದರ ಫಲವಾಗಿ ‘ಜಾನಪದ ಸ್ವರೂಪ ಎಂಬ ಕೃತಿಯನ್ನು ಪ್ರಕಟಿಸಿದರು.

Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಕೆ.ಪಿ.ಪೂರ್ಣಚಂದ್ರತೇಜಸ್ವಿಯವರು ನವೋದಯದ ನಂತರ ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಚಿಂತನಶೀಲ, ವಿಚಾರವಂತ, ವೈಜ್ಞಾನಿಕ ಬರಹಗಾರರೆಂದು ಗುರುತಿಸಲ್ಪಟ್ಟವರು. ಇವರು ೮.೯.೧೯೩೮ ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ-ಕೆ.ವಿ.ಪುಟ್ಟಪ್ಪ ತಾಯಿ-ಹೇಮಾವತಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಇವರು ಕೃಷಿಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಕೆ.ಪಿ.ಪೂರ್ಣಚಂದ್ರತೇಜಸ್ವಿಯವರನ್ನು ನವ್ಯ ಘಟ್ಟದ ತಾತ್ವಿಕ ಸಿದ್ದಾಂತದೊಂದಿಗೆ ಸಮೀಕರಿಸಲಾಗಿದೆ. ಇವರ ಕೃತಿಗಳಲ್ಲಿ ಆಳ ಮತ್ತು ಸಂಕೀರ್ಣತೆಯನ್ನು ಕಾಣಬಹುದು.

Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಕೆ.ಎಸ್.ನರಸಿಂಹಸ್ವಾಮಿ

ಇಪ್ಪತ್ತನೆಯ ಶತಮಾನದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಕೆ.ಎಸ್.ನರಸಿಂಹಸ್ವಾಮಿಯವರು ಜನಿಸಿದ್ದು ೨೬. ಜನವರಿ ೧೯೧೫ ರಲ್ಲಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ. ತಂದೆ ಸುಬ್ಬರಾಯರು ತಾಯಿ ನಾಗಮ್ಮ. ವರ್ಡ್ಸ್‌ವರ್ತ್, ರಾಬರ್ಟ್‌ಬರ್ನ್ಸ್ ರಂಥವರಿಂದ ಪ್ರಭಾವಿತರಾಗಿದ್ದ ಇವರು ತಾವು ವಿದ್ಯಾರ್ಥಿಗಳಾಗಿದ್ದಾಗಲೇ ಕವನಗಳನ್ನು ರಚಿಸತೊಡಗಿದ್ದರು. ಅವರ ಕಬ್ಬಿಗನ ಕೂಗು ಎಂಬ ಮೊದಲ ಕವನ ೧೪-೧-೧೯೩೩ ರ ಪ್ರಬುದ್ದಕರ್ನಾಟಕ ದಲ್ಲಿ ಪ್ರಕಟವಾಯಿತು. ಇವರು ಅದಿಕೃತವಾಗಿ ಕಾವ್ಯಜಗತ್ತನ್ನು ಪ್ರವೇಶಿಸಿದ್ದು ಮೈಸೂರುಮಲ್ಲಿಗೆ (೧೯೪೯) ರ ಕವನ ಸಂಕಲನದೊಂದಿಗೆ ಅಂದಿನಿಂದ ಅವರು ಹಲವು ಸಂಕಲನಗಳನ್ನು ಹೊರತಂದಿದ್ದಾರೆ.

Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಕಯ್ಯಾರ ಕಿಙ್ಞಣ್ಣ ರೈ

ಕಯ್ಯಾರ ಕಿಙ್ಞಣ್ಣ ರೈ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಸ್ವಾತಂತ್ರ್ಯ ಹೋರಾಟಗಾರರಾಗಿ ಗಡಿಯ ಹೋರಾಟಗಾರರಾಗಿ, ಕವಿಯಾಗಿ ಕಯ್ಯಾರರು ತಮ್ಮ ದಾರಿಯಲ್ಲಿ ಮಾಸದ ಹೆಜ್ಜೆ ಮೂಡಿಸಿದ್ದಾರೆ. ಕನ್ನಡದ ಕಟ್ಟಾಬಿಮಾನಿ, ಸತ್ಯಶೋಧಕ ದೃಷ್ಟಿ, ನೇರನುಡಿಗೆ ಹೆಸರಾದ ಕಯ್ಯಾರ ಕಿಙ್ಞಣ್ಣ ರೈ. ಇವರು ಜೂನ್ ೮, ೧೯೧೮ ರಲ್ಲಿ ಕಾಸರಗೋಡಿನ ಪೆರಡಾಲ ಗ್ರಾಮದಲ್ಲಿ ಜನಿಸಿದರು. ಇವರು ವಿದ್ವಾನ್ ಮತ್ತು ಎಂ.ಎ. ಪದವಿದರರಾಗಿದ್ದು ಪೆರಡಾಲ ಪ್ರೌಡಶಾಲೆಯಲ್ಲಿ ಅಧ್ಯಾಪಕರಾಗಿ ನಿವೃತ್ತರಾದವರು.

Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಡಾ|| ಜಿ.ಎಸ್.ಶಿವರುದ್ರಪ್ಪ

ಆಧುನಿಕ ಕನ್ನಡದ ಪ್ರಸಿದ್ಧ ಕವಿ, ವಿಮರ್ಶಕರಾದ ಜಿ.ಎಸ್.ಶಿವರುದ್ರಪ್ಪನವರು ಹುಟ್ಟಿದ್ದು ೧೯೨೬ ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದ ಇವರು ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದರು ಅನಂತರದಲ್ಲಿ (೧೯೬೬) ಬೆಂಗಳೂರು ವಿಶ್ವವಿದ್ಯಾಲಯ ಸೇರಿ, ೧೯೭೦ ರಿಂದ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದರು ಎದೆ ತುಂಬಿ ಹಾಡಿದೆನು ಅಂದು ನಾನು,ಮನವಿಟ್ಟು ಕೇಳಿದಿರಿ ಅಲ್ಲಿ ನೀವು. ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನುಎಂದು ಹಾಡಿದ ಜಿ.ಎಸ್.ಎಸ್ ಮೊದಲಿಗೆ ಕವಿಯಾಗಿ ಪ್ರಸಿದ್ಧರಾದರು. ೧೨ ಕ್ಕೂ ಹೆಚ್ಚು ಕವನ ಸಂಕಲನಗಳು ಪ್ರಕಟಗೊಂಡಿವೆ, ಸಾಮಗಾನ, ಚೆಲುವು-ಒಲವು, ಕಾರ್ತಿಕ, ದೇವರಶಿಲ್ಪ, ದೀಪದ ಹೆಜ್ಜೆ, ಅನಾವರಣ, ಪ್ರೀತಿ ಇಲ್ಲದ ಮೇಲೆ, ತೀರ್ಥವಾಣಿ-ಕೆಲವು ಪ್ರಮುಖ ಸಂಕಲನಗಳು. ಜಿ.ಎಸ್.ಎಸ್ ಸುಮಾರು ೫೦ ವರ್ಷಗಳಿಂದ ಬರೆಯುತ್ತಿರುವ ಕವಿ (ಮೊದಲ ಕವನ ಸಂಕಲನ ಸಾಮಗಾನ ಪ್ರಕಟವಾದದ್ದು ೧೯೫೧ ರಲ್ಲಿ). ಇವರ ಕಾವ್ಯವನ್ನು ನವೋದಯ, ನವ್ಯ, ಬಂಡಾಯ-ದಲಿತ ಮಾರ್ಗಗಳು ಪ್ರಭಾವಿಸಿವೆ. ನವೋದಯ ಮತ್ತು ನವ್ಯ ಮಾರ್ಗಗಳ ಲಕ್ಷಣಗಳನ್ನು ಒಗ್ಗೂಡಿಸಲು ಯತ್ನಿಸಿದರು ಎಂಬ ಸರಳ ಅರ್ಥದಲ್ಲಿ ವಿಮರ್ಶಕರು ಇವರನ್ನು ಸಮನ್ವಯ ಕವಿ ಎಂದು ಕರೆದಿರುವುದಿದೆ. ಆದರೂ ಇವರದು ನಂಬುಗೆಯ ಹಾದಿ ಎಲ್ಲ ಪಂಥಗಳಿಂದಲೂ ದೂರವನ್ನು ಕಾಯುಟ್ಟುಕೊಂಡು ಬರೆದರು. ಬರೆಯುತ್ತಲೇ ಇದ್ದಾರೆ. ಕನ್ನಡ ಅಧ್ಯಯನ ಕೇಂದ್ರ(ಬೆಂಗಳೂರು ವಿಶ್ವವಿದ್ಯಾಲಯ) ದಲ್ಲಿ ಎರಡು ದಶಕಗಳ ಕಾಲ ಜಿ.ಎಸ್.ಎಸ್ ಪಾಠ ಹೇಳಿದರು. ಹಲವು ವಿಮರ್ಶಾ ಲೇಖನಗಳ ಚೌಕಟ್ಟುಗಳು ಆಕಾರ ಪಡೆದದ್ದು ಈ ತರಗತಿಗಳಲ್ಲಿಯೆ. ಪರಿಶೀಲನ, ಗತಿಬಿಂಬ, ನವೋದಯ, ಅನುರಣನ, ಪ್ರತಿಕ್ರಿಯೆ, ಬೆಡಗು- ಇವರ ವಿಮರ್ಶಾಗ್ರಂಥಗಳು. ಪ್ರಾಚೀನ, ಮಧ್ಯಕಾಲೀನ, ಹಾಗೂ ಆಧುನಿಕ ಸಾಹಿತ್ಯ ಕೃತಿಗಳ ಬಗೆಗೆ ಸಮರ್ಥ ಒಳನೋಟಗಳನ್ನು ನೀಡುತ್ತವೆ. ಸೌಂದರ್ಯ ಸಮೀಕ್ಷೆ, ಪಿ.ಎಚ್.ಡಿ ಪದವಿಗಾಗಿ ಬರೆದ ಮಹಾಪ್ರಬಂಧ. ತಾತ್ವಿಕವಾಗಿ ಕನ್ನಡ ಕಾವ್ಯವನ್ನು ವ್ಯಾಖ್ಯಾನಿಸುವ ಇವರ ಇನ್ನೆರಡು ಕೃತಿಗಳು ಕನ್ನಡ ಸಾಹಿತ್ಯ ಸಮೀಕ್ಷೆ, ಮತ್ತು ಕನ್ನಡ ಕವಿಗಳ ಕಾವ್ಯ ಕಲ್ಪನೆ. ಸಾಹಿತ್ಯ ಮೀಮಾಂಸೆಯ ಕ್ಷೇತ್ರದಲ್ಲಿ ಜಿ.ಎಸ್.ಎಸ್ ತೌಲನಿಕ ಅಧ್ಯಯನದ ಮಾದರಿಗಳನ್ನು ಬಳಸಿದರು. ಮಹಾಕಾವ್ಯ ಸಮೀಕ್ಷೆ, ವಿಮರ್ಶೆಯ ಪೂರ್ವ-ಪಶ್ಚಿಮ, ಕಾವ್ಯಾರ್ಥ ಚಿಂತನ, ಈ ಬಗೆಯ ಕೃತಿಗಳಾಗಿವೆ. ಕಾವ್ಯಾರ್ಥ ಚಿಂತನ ವು ಜಿ.ಎಸ್.ಎಸ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ.

Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ

ಜಿ.ಎಸ್.ಸಿದ್ದಲಿಂಗಯ್ಯನವರು ಹುಟ್ಟಿದ್ದು ಫೆಬ್ರವರಿ ೧೯೩೧ ರಲ್ಲಿ. ತುಮಕೂರು ಜಿಲ್ಲೆಯ ಬೆಳ್ಳಾವೆ ಗ್ರಾಮ ಅವರ ಹುಟ್ಟೂರು. ವಿದ್ಯಾಭ್ಯಾಸ ತುಮಕೂರು ಮತ್ತು ಮೈಸೂರುಗಳಲ್ಲಾಯಿತು. ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಬಿಸಿದ ಇವರು ಪ್ರಾಧ್ಯಾಪಕರಾಗಿ ಪ್ರಾಂಶುಪಾಲರಾಗಿ ಕೊನೆಗೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರಾಗಿ ನಿವೃತ್ತರಾದರು. ವಿದ್ವಾಂಸರಾದ ಸಿದ್ದಲಿಂಗಯ್ಯನವರು ಬೆಂಗಳೂರು ಮೈಸೂರು, ಕರ್ನಾಟಕ, ಮಂಗಳೂರು, ಮುಂಬೈವಿಶ್ವವಿದ್ಯಾಲಯಗಳ ವಿಚಾರ ಸಂಕೀರ್ಣಗಳಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕವಿಗೋಷ್ಟಿ ಹಾಗೂ ವಿದ್ವತ್ ಗೋಷ್ಟಿಗಳ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ಮಹಾನುಭಾವ ಬುದ್ಧ, ಬಸವಣ್ಣ, ವಿರತಿಯಸಿರಿ ಸಣ್ಣಪ್ಪನವರು, ಡಾ.ಸಿದ್ದಯ್ಯ ಪುರಾಣಿಕ- ಇವು ಇವರು ರಚಿಸಿರುವ ಜೀವನ ಚರಿತ್ರೆಗಳು.

Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಚೆನ್ನವೀರಕಣವಿ

ಜನನ ಧಾರವಾಡ ಜಿಲ್ಲೆಯ ಹೊಂಬಳ್ಳಿ ಗ್ರಾಮದಲ್ಲಿ ಜೂನ್ ೧೯೨೮ ರಲ್ಲಿ ಹುಟ್ಟಿದರು. ತಂದೆ-ಸಕ್ಕರೆಪ್ಪ(ಪ್ರಾಥಮಿಕ ಶಾಲಾ ಶಿಕ್ಷಕ) ತಾಯಿ ಪಾರ್ವತೆವ್ವ. ಧಾರವಾಡದಲ್ಲಿ ವಿದ್ಯಾಭ್ಯಾಸ ಪ್ರಾರಂಬಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. ಅದೇ ವಿಶ್ವವಿದ್ಯಾಲಯ ಪ್ರಸಾರಾಂಗದ ಪ್ರಕಟಣಾ ವಿಭಾಗದ ನಿರ್ದೇಶಕರಾಗಿದ್ದರು. ಕಣವಿಯವರು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುತ್ತಿದ್ದ ವೇಳೆಗಾಗಲೇ ನವೋದಯ ಮಧ್ಯಂತರ ಸ್ಥಿತಿ ತಲುಪಿತ್ತು. ಬೇಂದ್ರೆ, ಕುವೆಂಪು, ಪು.ತಿ.ನ, ಮತ್ತು ಮಧುರಚನ್ನರಂತಹ ನವೋದಯ ಕವಿಗಳ ಕಾವ್ಯ ಹೊಸದಾಗಿ ಕಾವ್ಯರಚನೆಗೆ ತೊಡಗುವವರನ್ನು ಗಾಡವಾಗಿ ಪ್ರಭಾವಿಸುತ್ತಿದ್ದ ಕಾಲವದು. ಇದಕ್ಕೆ ಕಣವಿಯವರು ಹೊರತಾಗಿರಲಿಲ್ಲ. ಅವರ ಸಾಹಿತ್ಯ ಪ್ರಕಾರಗಳು ಪ್ರಭಾವ ಬೀರಿದವು.

Categories
ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಯಾಜ್ಞವಲ್ಕ್ಯ

ಕೃತಿ: ವ್ಯಕ್ತಿ ಪರಿಚಯ ಭಾಗ-2
ಲೇಖಕರು: ವ್ಯಕ್ತಿ ಪರಿಚಯ
ಕೃತಿಯನ್ನು ಓದಿ

Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಲೀಲಾ ರಾಮನಾಥನ್

ಕೃತಿ:ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ), ಕನ್ನಡ, ಕಲೆ, ನೃತ್ಯ, ಪುಸ್ತಕಗಳಿಂದ, ವ್ಯಕ್ತಿ ಪರಿಚಯ
ಲೇಖಕರು: ಡಾ. ಉಷಾಕಿರಣ್
ಕೃತಿಯನ್ನು ಓದಿ

Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಲಲಿತಾ ಶ್ರೀನಿವಾಸನ್

ಕರ್ನಾಟಕದ ನೃತ್ಯ ರಂಗವನ್ನು ದೇಶ ವಿದೇಶಗಳಲ್ಲಿ ಮೆರೆಸಿದ ಹಿರಿಮೆ ಲಲಿತಾ ಶ್ರೀನಿವಾಸನ್ ಅವರದು. ಸ್ವತಃ ನರ್ತಕಿಯಾಗಿ, ನೃತ್ಯ ಸಂಯೋಜಕಿಯಾಗಿ, ನೃತ್ಯ ಶಿಕ್ಷಕಿಯಾಗಿ ನಾಡಿನ ನೃತ್ಯ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಗಳಿಸಿಕೊಂಡಿರುವ ತನ್ನ ಪ್ರಾರಂಭಿಕ ನೃತ್ಯ ಶಿಕ್ಷಣವನ್ನು ಗುರು ಹೆಚ್. ಆರ್.ಕೇಶವಮೂರ್ತಿಯವರಿಂದ ಪಡೆದರು. ನಂತರ ಅಭಿನಯ ವಿಶಾರದೆ ಡಾ|| ಕೆ. ವೆಂಕಟಲಕ್ಷ್ಮಮ್ಮ. ಮೂಗೂರು ಜೇಜಮ್ಮ, ಗುರು ನರ್ಮದಾ ಮುಂತಾದವರಿಂದ ಹೆಚ್ಚಿನ ಶಿಕ್ಷಣ ಪಡೆದು ನೃತ್ಯದ ವಿದ್ಯುತ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಪಡೆದ ಈ ಕಲಾವಿದೆ ೧೯೬೦ರಲ್ಲಿ ರಂಗ ಪ್ರವೇಶ ಮಾಡಿದರು. ಅಲ್ಲಿಂದ ಮುಂದೆ ಭಾರತದ ಬಹುತೇಕ ಎಲ್ಲ ಪ್ರತಿಷ್ಠಿತ ಸಾಂಸ್ಕೃತಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಲಲಿತ ಶ್ರೀನಿವಾಸನ್ ಅವರ ನೃತ್ಯ ಶಾಲೆ. “ನೂಪುರ” ಅನೇಕ ಒಳ್ಳೆಯ ನೃತ್ಯ ಕಲಾವಿದರನ್ನು ತಯಾರು ಮಾಡಿದೆ. “ನೂಪುರ” ದ ವಾರ್ಷಿಕ “ನಿತ್ಯ ನೃತ್ಯ” ಮಹೋತ್ಸವ ನಾಡಿನ ನೃತ್ಯ ರಂಗದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. “ಶೃಂಗಾರ ನಾಯಿಕಾ”, “ಶೃಂಗಾರನಾಯಿಕಾ”, “ಕೃಷ್ಣ ಪಾರಿಜಾತ”, “ಕೌಶಿಕ ಸುಕೃತಂ”, “ಬೀಬಿ ನಾಚಿಯಾರ್”, “ನೌಕಾ ಚರಿತ್ರೆ” ಲಾಸ್ಯೋತ್ಸವ ಮುಂತಾದ ಅನೇಕ ನೃತ್ಯ ರೂಪಕಗಳು ಈ ಕಲಾವಿದೆಯ ಮಹತ್ವದ ಕೊಡುಗೆ. ಹಾಗೆಯೇ ’ಸುಳಾದಿ ನೃತ್ಯ’ಗಳನ್ನು ಪುನರುತ್ಥಾನ ಮಾಡಿದ ಹಿರಿಮೆ ಇವರದು. ಅಮೇರಿಕೆಯಲ್ಲಿ ನೃತ್ಯ ಕಲೆಯ ಬಗ್ಗೆ ಹೆಚ್ಚಿನ ಅಭ್ಯಾಸ ಮಾಡಿದ ಕೀರ್ತಿ ಇವರದು.

ಬಹುಮುಖ ಪ್ರತಿಭೆಯ ಈ ನೃತ್ಯ ಕಲಾವಿದೆಗೆ ಕೇಂದ್ರ ಸರ್ಕಾರದ ಮಾವನ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಫೆಲೋಶಿಪ್ ದೊರೆತಿವೆ. ಲಲಿತಾ ಅವರು ಕರ್ನಾಟಕ ನೃತ್ಯ ಶಿಲ್ಪಗಳು ಹಾಗೂ ಮೈಸೂರು ಅರಮನೆಯಲ್ಲಿ ನೃತ್ಯದ ವಿಷಯವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ. ಪದವಿ ಹಾಗೂ ಸಂಸ್ಕೃತದಲ್ಲಿ “ಕೋವಿದ” ಪದವಿ ಇವರಿಗೆ ಲಭ್ಯವಾಗಿವೆ.

ರಾಷ್ಟ್ರಪತಿಗಳಿಂದ “ಶಿರೋಮಣಿ ಪ್ರಶಸ್ತಿ” ಹಾಗೂ ಮಾನವ ಸಂಪನ್ಮೂಲ ಮಂತ್ರಿಗಳಿಂದ “ಪ್ರಿಯದರ್ಶಿನಿ” ಅಲ್ಲದೇ ಲಲಿತಾರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೮೯-೯೦ನೇ ಸಾಲಿನ ಗೌರವ ಪ್ರಶಸ್ತಿಯನ್ನು ’ಕರ್ನಾಟಕ ಕಲಾ ತಿಲಕ’ ಬಿರುದಿನೊಂದಿಗೆ ಲಲಿತಾ ಶ್ರೀನಿವಾಸನ್ ಅವರಿಗೆ ನೀಡಿ ಗೌರವಿಸಿದೆ.

 

 

Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಮೋಹನಕುಮಾರ್ ಉಳ್ಳಾಲ

 

 

 

 

 

 

ಮಂಗಳೂರಿನ ಕೋಟೆಕಾರ್‌ನಲ್ಲಿ ೧೯೩೩ರಲ್ಲಿ ಜನಿಸಿದ ಶ್ರೀ ಮೋಹನಕುಮಾರರು ಪ್ರಾರಂಭದಲ್ಲಿ ವಿಠಲ್ ಮಾಸ್ಟರ್ ಮತ್ತು ರಾಜನ್ ಅಯ್ಯರ್ ಅವರುಗಳಲ್ಲಿ ನೃತ್ಯ ಶಿಕ್ಷಣ ಪಡೆದು, ಮುಂದೆ ಸೇಲಂ ರಾಜರತ್ನಂ ಪಿಳ್ಳೆ ಅವರಲ್ಲಿ ಪ್ರೌಢ ವ್ಯಾಸಂಗ ಮಾಡಿ ಭರತನಾಟ್ಯ ಸಾಧನೆ ಮಾಡಿದ್ದಾರೆ. “ನಾಟ್ಯ ನಿಕೇತನ”ದ ಭೋದಕರಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೃತ್ಯ ಪ್ರಸಾರ -ಪ್ರಚಾರಕರಾಗಿ ದುಡಿಯುತ್ತಿದ್ದಾರೆ. ಇವರ ಶಿಷ್ಯರು ರಾಜ್ಯದಲ್ಲೂ ವಿದೇಶಗಳಲ್ಲೂ ಕಲಾ ಸೇವೆಯಲ್ಲಿ ತೊಡಗಿದ್ದಾರೆ. ರಾಜ್ಯ ಮಟ್ಟದ ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ತಮ್ಮ ಪಾಂಡಿತ್ಯವನ್ನು ಬಳಸಿದ್ದಾರೆ. ಕಾಮದಹನ, ಶ್ರೀ ಕೃಷ್ಣ ಪಾರಿಜಾತ, ಪರಶುರಾಮ, ಶ್ರೀ ಕೃಷ್ಣಲೀಲೆ, ಪಳನಿ ಮಹಾತ್ಮೆ, ದಶಾವತಾರ ಮುಂತಾದ ನೃತ್ಯ ರೂಪಕಗಳನ್ನು ನಿರ್ದೇಶಿಸಿದ್ದಾರೆ. ತುಳುವಿನಲ್ಲೂ ನೃತ್ಯ ರೂಪಕವನ್ನು ಸಂಯೋಜಿಸಿರುವುದೊಂದು ವಿಶೇಷ. ಕೆಲ ಸಾಕ್ಷ್ಯಚಿತ್ರಗಳಿಗೂ ನಾಟ್ಯ ಸಂಯೋಜನೆ ಮಾಡಿರುವ ಶ್ರೀಯುತರಿಗೆ ಈ ಹಿಂದೆ ಅಕಾಡೆಮಿಯ ಪುರಸ್ಕಾರವೂ, ತಮ್ಮ ಹುಟ್ಟೂರಿನಲ್ಲಿ “ನಾಟ್ಯ ಮೋಹನ” ಎಂಬ ಅಭಿನಂದನಾ ಗ್ರಂಥವೂ ಸಮರ್ಪಣೆಯಾಗಿದೆ. ಈ ನಾಟ್ಯಾಚಾರ್ಯರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೧೯೯೧-೯೨ರ ಪ್ರಶಸ್ತಿ ಹಾಗೂ “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.

Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ವಸುಂಧರ ದೊರೆಸ್ವಾಮಿ

ಶ್ರೀಮತಿ ವಸುಂಧರ ದೊರೆಸ್ವಾಮಿಯವರು ದಿವಂಗತ ಕೆ. ರಾಜರತ್ನಂ ಪಿಳ್ಳೆಯವರಲ್ಲಿ ಶಿಕ್ಷಣ ಪಡೆದು, ವಿದ್ವತ್‌ನಲ್ಲಿ ಪ್ರಥಮ ಶ್ರೇಣಿ  ಪಡೆದಿರುವರಲ್ಲದೆ, ಪಂಡನಲ್ಲೂರು ಶೈಲಿಯ ಇಂದಿನ ಪ್ರಮುಖ ನರ್ತಕರಲ್ಲಿ ಒಬ್ಬರಾಗಿದ್ದಾರೆ. ರಾಜ್ಯ, ರಾಷ್ಟ್ರದ ಪ್ರಮುಖ ಸಭೆ-ಸಮ್ಮೇಳನಗಳಲ್ಲಿ ನರ್ತಿಸಿರುವ ಶ್ರೀಮತಿಯವರು ಸಿಂಗಾಪುರ್‌ನಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ದೂರದರ್ಶನದ ರಾಷ್ಟ್ರೀಯ ಜಾಲದಲ್ಲೂ ಇವರ ನೃತ್ಯ ಬಿತ್ತರಗೊಂಡಿದೆ. “ಯೋಗ ಮತ್ತು ಭರತನಾಟ್ಯ” ಕುರಿತು ಕೌಲನಿಕ ಅಧ್ಯಯನ ಮಾಡಿರುವ ಈಕೆ ಹಲವಾರು ನೃತ್ಯ ರೂಪಕಗಳನ್ನು ನಿರ್ದೇಶಿಸಿದ್ದಾರೆ. ಮೈಸೂರಿನ “ವಸುಂಧರಾ ಫರ್‌ಫಾರ್ಮಿಂಗ್ ಆಟ್ಸ್‌! ಸೆಂಟರ್” ಮೂಲಕ ಕಿರಿಯರಿಗೆ ನೃತ್ಯ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಎರಡು ಅವಧಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆಯೂ ಆಗಿದ್ದ ವಸುಂಧರಾ ಅವರಿಗೆ ಸುರ ಸಿಂಗಾರ ಸಂಸದ್‌ನ ’ಶಿಂಗಾರ ಮಣಿ’ ಬಿರುದೂ ಸಂದಿದೆ. ಕ್ರಿಯಾಶೀಲ ನರ್ತಕಿ ಶ್ರೀಮತಿ ವಸುಂಧರ ದೊರೆಸ್ವಾಮಿ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೧೯೯೦-೯೧ರ ಪ್ರಶಸ್ತಿಯನ್ನು “ಕರ್ನಾಟಕ ಕಲಾ ತಿಲಕ” ಬಿರುದಿನೊಂದಿಗೆ ನೀಡಿ ಗೌರವಿಸಿದೆ.

 

Categories
ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ) ಕನ್ನಡ ಕಲೆ ನೃತ್ಯ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ರಾಧಾ ಶ್ರೀಧರ್

ತನ್ನ ರಜತ ಮಹೋತ್ಸವ ವರ್ಷಕ್ಕೆ ಕಾಲಿಡುತ್ತಿರುವ ಬೆಂಗಳೂರಿನ ವೆಂಕಟೇಶ ನಾಟ್ಯ ಮಂದಿರದ ನಿರ್ದೇಶಕಿ ರಾಧಾ ಶ್ರೀಧರ್ ನಾಡಿನ ನೃತ್ಯ ಕ್ಷೇತ್ರದಲ್ಲಿ ಚಿರಪರಿಚಿತ ವ್ಯಕ್ತಿ ಬಿ.ಎ., ಬಿ.ಎಡ್ ಪದವೀಧರೆಯಾದ ಇವರು ತಮ್ಮ ಭರತನಾಟ್ಯ ಶಿಕ್ಷಣವನ್ನು ಹೆಚ್. ಆರ್. ಕೇಶವಮೂರ್ತಿಯವರಲ್ಲಿ ಪ್ರಾರಂಭಿಸಿ, ಪ್ರೊ. ಕೃಷ್ಣರಾವ್-ಚಂದ್ರಭಾಗಾದೇವಿ, ಮುತ್ತಯ್ಯ ಪಿಳ್ಳೆ ಮತ್ತು ಡಾ. ಕೆ. ವೆಂಕಟಲಕ್ಷ್ಮಮ್ಮನವರುಗಳಲ್ಲಿ ಮುಂದುವರಿಸಿ, ನೃತ್ಯ ಕಲೆಯ ವಿವಿಧ ಅಂಗಗಳಲ್ಲಿ ಪರಿಣತಿ ಸಂಪಾದಿಸಿಕೊಂಡರು.

ನೃತ್ಯ ಪ್ರದರ್ಶನಕ್ಕಿಂತ ನೃತ್ಯ ಶಿಕ್ಷಣಕ್ಕೇ ತಮ್ಮನ್ನು ತೊಡಗಿಸಿಕೊಂಡ ರಾಧಾ ೧೯೬೯ ರ ಸುಮಾರಿನಲ್ಲಿ ತಮ್ಮ ನೃತ್ಯ ಶಾಲೆಯನ್ನು ಪ್ರಾರಂಭಿಸಿ, ತನ್ಮೂಲಕ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ. ಅವರುಗಳಲ್ಲಿ ಅವರ ಪುತ್ರಿ ಇಂದ್ರಾಣಿ ಪಾರ್ಥಸಾರಥಿ, ಪೂರ್ಣಿಮಾ ಅಶೋಕ್, ರಾಮು, ರೂಪಾ ಶಾಂಸುಂದರ್, ಸವಿತಾ ಶೇಖರ್‌ರಂಥವರು, ತಮಗೆ ತಮ್ಮ ಗುರುಗಳಿಗೆ ಒಳ್ಳೆಯ ಹೆಸರನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಧಾ ವಿಶ್ವವಿದ್ಯಾಲಯ ಮಟ್ಟದ ಹಾಗೂ ವಿದ್ಯಾ ಇಲಾಖೆ ನಡೆಸುವ ಪರೀಕ್ಷೆಗಳಿಗೆ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಶಾಲೆಯ ಮುಖಾಂತರ ಇವರು ನಡೆಸಿರುವ ನೃತ್ಯ ಕಾರ್ಯಗಾರಗಳು ಉಪಯುಕ್ತವಾಗಿ ಪರಿಣಮಿಸಿವೆ. ರಾಧಾ ನೃತ್ಯ ಸಂಯೋಜನೆಯಲ್ಲಿ ಪಳಗಿದ ಕೈ, ಹತ್ತಕ್ಕೂ ಮೀರಿ ನಿರ್ಮಾಣಗೊಂಡಿರುವ ಇವರ ನೃತ್ಯ-ನಾಟಕಗಳಲ್ಲಿ ಹಲವು ಒಂದಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ. ಅವುಗಳಲ್ಲಿ “ಗೀತ ಗೋವಿಂದ”, “ಕೋಡೂರು ಕೊಡಗೂಸು”, “ಶ್ರೀನಿವಾಸ ಕಲ್ಯಾಣ” ಹೆಚ್ಚು ಜನಪ್ರಿಯವಾದುವುಗಳು. ರಾಧಾರಿಗೆ ಸನ್ಮಾನಗಳೂ ಕಡಿಮೆ ಇಲ್ಲ. ಅವುಗಳಲ್ಲಿ ಗಾಯನ ಸಮಾಜದ. ವಿಶ್ವ ಹಿಂದೂ ಪರಿಷತ್ತಿನ ಪ್ರಶಸ್ತಿಗಳು, ಮೀನಾಕ್ಷಿ ಸುಂದರಂ ಸಾಂಸ್ಕೃತಿಕ ಕೇಂದ್ರದ, ಶೇಷಾದ್ರಿಪುರಂ ಸ್ತ್ರೀ ಸಮಾಜದ, “ಮಹಾ ಮಾಯ” ದ ಸನ್ಮಾನಗಳು ಸೇರಿದೆ. ಇವರಿಗೆ ನಮ್ಮ ಅಕಾಡೆಮಿ ತನ್ನ ೧೯೯೨-೯೩ರ ಪ್ರಶಸ್ತಿ ಹಾಗೂ “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.

Categories
ಕನ್ನಡ ಕರ್ನಾಟಕ ಸಂಗೀತ ಕಲೆ ವ್ಯಕ್ತಿ ಪರಿಚಯ ಸಂಗೀತ

ವ್ಯಕ್ತಿ ಪರಿಚಯ – ಇ.ಪಿ. ಅಲಮೇಲು

೬-೪-೧೯೩೬ ರಂದು ಮದ್ರಾಸಿನಲ್ಲಿ ಜನಿಸಿದ ಅಲಮೇಲು ಅವರು ಬೆಂಗಳೂರಿನ ‘ಗಾನ ಮಂದಿರಂ’ ಸಂಗೀತಾಲಯದಲ್ಲಿ ಜಿ. ಚೆನ್ನಮ್ಮನವರಿಂದಲೂ ಮುಂದೆ ಆರ್.ಕೆ. ಶ್ರೀನಿವಾಸಮೂರ್ತಿಯವರಲ್ಲೂ ವೀಣಾ ವಾದನವನ್ನು ಅಭ್ಯಾಸ ಮಾಡಿದರು. ವಿದ್ವತ್‌ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದರು. ಗಾನ ಮಂದಿರಂನಲ್ಲಿ ಉಪಾಧ್ಯಾಯರಾಗಿ, ಪ್ರಾಂಶುಪಾಲರಾಗಿ ಅನೇಕಾನೇಕ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ. ಆಕಾಶವಾಣಿ, ದೂರದರ್ಶನ ಕೇಂದ್ರಗಳಿಂದ ಇವರ ವೀಣಾ ವಾದನ ಪ್ರಸಾರವಾಗುತ್ತಿರುತ್ತದೆ. ‘ಸಂಸ್ಕೃತ ಸೌರಭ’ಕ್ಕಾಗಿ ಕೆಲವು ರೂಪಕಗಳನ್ನೂ ನೀಡಿದ್ದಾರೆ.

ರಮಣಾಂಜಲಿ ತಂಡದೊಡನೆ ಅಮೆರಿಕಾ, ಇಂಗ್ಲೆಂಡ್‌, ಸಿಂಗಾಪುರ್, ಯೂರೋಪ್‌, ಫಿಲಿಫೈನ್ಸ್‌, ಮಲೇಷಿಯಾ, ಹಾಂಗ್‌ಕಾಂಗ್‌, ಸಿಲೋನ್‌ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿರುವ ಅನುಭವಿ ಕಲಾವಿದರು. ಇವರ ತನಿ ವಾದನದ ‘ದಿ ಎಕ್ಸ್ಟೆಸಿ ಆಫ್‌ ಸಿಕಾಡೆಸ್‌’ ಧ್ವನಿಸುರುಳಿ ಯೂರೋಪ್‌ನಲ್ಲಿ ಬಿಡುಗಡೆ ಕಂಡಿದೆ. ಹಲವಾರು ಧ್ವನಿಸುರುಳಿಗಳಿಗೆ ವೀಣೆಯಲ್ಲಿ ಸಹಕಾರ ನೀಡಿರುತ್ತಾರೆ.

ಗಾಯನ ಸಮಾಜದ ಸಮಿತಿಯ ಸದಸ್ಯೆಯಾಗಿ, ಗಾಯನ ಸಾಮ್ರಾಜ್ಯದ ಸಂಪಾದಕಿಯಾಗಿ, ರಾಜ್ಯ ಪರೀಕ್ಷಾ ಮಂಡಲಿಯಲ್ಲಿ ಪರೀಕ್ಷಕರಾಗಿ, ಪಠ್ಯಪುಸ್ತಕ ಸಮಿತಿಯ ಸದಸ್ಯೆಯಾಗಿ ಹಲವಾರು ರೀತಿಯಲ್ಲಿ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿಯವರಿಗೆ ‘ಸಂಗೀತ ಕಲಾರವಿಂದ’, ‘ಸೇವಾ ರತ್ನ’, ‘ವೀಣಾ ಪಾಣಿ’, ‘ಕರ್ನಾಟಕ ಕಲಾಶ್ರೀ’ ಮುಂತಾದ ಹಲವು ಸನ್ಮಾನಗಳೂ, ಪ್ರಶಸ್ತಿಗಳೂ ದೊರಕಿವೆ.

ಗುರುರಾಜ ಮಹಿಮೆ, ಶ್ರೀನಿವಾಸ ಕಲ್ಯಾಣ, ಬನಶಂಕರಿ ಮಹಾತ್ಮೆ, ಗಣೇಶ ಪುರಾಣ, ಹನುಮದ್ವಿಲಾಸ – ಸಂಗೀತ ರೂಪಕಗಳನ್ನು ರಾಘವೇಂದ್ರ ಸ್ವಾಮಿಗಳ ರಚನೆಗಳನ್ನು ರಾಗ ತಾಳ ಪ್ರಸಾರದೊಡನೆಯೂ ಪ್ರಕಟಿಸಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳೂ ಮುದ್ರಿತವಾಗಿರುತ್ತವೆ.


Categories
ಕನ್ನಡ ಕನ್ನಡ ಸಾಹಿತ್ಯ ಜಾನಪದ ಸಾಹಿತ್ಯ ವ್ಯಕ್ತಿ ಪರಿಚಯ

ಕನ್ನಡ ಜಾನಪದ ಗೀತೆಗಳು

ಕೃತಿ:ಕೃತಿಗಳು
ಲೇಖಕರು: ಕನ್ನಡ, ಜಾನಪದ ಸಾಹಿತ್ಯ, ಸಂಸ್ಕೃತಿ ವ್ಯಕ್ತಿ ಪರಿಚಯ
ಕೃತಿಯನ್ನು ಓದಿ

Categories
ಕನ್ನಡ ಕನ್ನಡ ಸಾಹಿತ್ಯ ಜಾನಪದ ಸಾಹಿತ್ಯ ವ್ಯಕ್ತಿ ಪರಿಚಯ

ವ್ಯಕ್ತಿಚಿತ್ರ – ಡಾ. ಗದ್ದಗಿಮಠ

ಕೃತಿ : ವ್ಯಕ್ತಿಚಿತ್ರ – ಡಾ. ಗದ್ದಗಿಮಠ

ಲೇಖಕರು: ಕರ್ನಾಟಕ ವಿಶ್ವವಿದ್ಯಾಲಯ

ಕೃತಿಯನ್ನು ಓದಿ     |     Download

Categories
ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಗಳಗನಾಥ

ಕೃತಿ: ವ್ಯಕ್ತಿ ಪರಿಚಯ ಭಾಗ-3
ಲೇಖಕರು:ವ್ಯಕ್ತಿ ಪರಿಚಯ ಭಾಗ-3
ಕೃತಿಯನ್ನು ಓದಿ

Categories
ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ರಾಮ ಮನೋಹರ ಲೋಹಿಯಾ

ಈ ಶತಮಾನದ ಮೂರನೆಯ ದಶಕದ ಕೊನೆ. ಜಿನೀವಾ ನಗರದಲ್ಲಿ ‘ಲೀಗ್‌ ಆಫ್‌ ನೇಷನ್ಸ್‌’ (ಆಗಿನ ಪ್ರಪಂಚ ರಾಷ್ಟ್ರಸಂಸ್ಥೆ) ಸಭೆ. ಅಲ್ಲೊಂದು ಮೋಜಿನ ಘಟನೆ ನಡೆಯಿತು. ಒಬ್ಬ ಮಹಾರಾಜ ಭಾರತದ ಪ್ರತಿನಿಧಿಯಾಗಿ ಮಾತನಾಡುತ್ತಿದ್ದ. ಪ್ರೇಕ್ಷಕರ ಗ್ಯಾಲರಿಯಲ್ಲಿ ಇಪ್ಪತ್ತರ ಹರೆಯದ ಒಬ್ಬ ಗಿಡ್ಡ ಹುಡುಗ ಕುಳಿತಿದ್ದ. ಕನ್ನಡಕ ಧರಿಸಿದ್ದ. ಮಹಾರಾಜ ಮಾತನಾಡಲೆದ್ದ ಕೂಡಲೇ ಈತ ಸಿಳ್ಳು ಹೊಡೆಯಲಾರಂಭಿಸಿದ. ಸಿಳ್ಳು ಒಂದೇ ಸಮನೆ ನಡೆಯಿತು. ಅಲ್ಲಿಂದ ಆ ತರುಣನನ್ನು ಹೊರದೂಡಿದರು. ಈ ವಿಚಿತ್ರ ಪ್ರತಿಭಟನೆ ತೋರಿದ ವ್ಯಕ್ತಿ ಮತ್ತಾರೂ ಅಲ್ಲ. ಭಾರತದ ರಾಜಕಾರಣದ ‘ಸಿಡಿಲಮರಿ’ ಎಂದು ಹೆಸರಾದ ಡಾಕ್ಟರ್ ರಾಮ ಮನೋಹರ ಲೋಹಿಯಾ.

Categories
ಕನ್ನಡ ಕನ್ನಡ ಸಾಹಿತ್ಯ ವ್ಯಕ್ತಿ ಪರಿಚಯ

ಸಂದರ್ಭ ಸಾಹಿತ್ಯ

ಕೃತಿ: , ಕನ್ನಡ ಸಾಹಿತ್ಯ ವ್ಯಕ್ತಿ ಪರಿಚಯ
ಲೇಖಕರು ಕನ್ನಡ ಸಾಹಿತ್ಯ,, ವ್ಯಕ್ತಿ ಪರಿಚಯ
ಕೃತಿಯನ್ನು ಓದಿ

Categories
ವ್ಯಕ್ತಿ ಪರಿಚಯ ವ್ಯಕ್ತಿಚಿತ್ರ ವ್ಯಕ್ತಿಚಿತ್ರ

ವ್ಯಕ್ತಿಚಿತ್ರ – ಸ್ವಾಮಿ ಶಿವಾನಂದ

ಕೃತಿ: ಸ್ವಾಮಿ ಶಿವಾನಂದ

ಕೃತಿಯನ್ನು ಓದಿ     |     Download

Categories
ಕಥಾ ಕೀರ್ತನೆ ಕಲೆ ಪುಸ್ತಕಗಳಿಂದ ವ್ಯಕ್ತಿ ಪರಿಚಯ ಸಂಗೀತ

ವ್ಯಕ್ತಿ ಪರಿಚಯ – ಬೇಲೂರು ಕೇಶವದಾಸರು

ಕೃತಿ: ಕಥಾ ಕೀರ್ತನೆ, ಕಲೆ, ಪುಸ್ತಕಗಳಿಂದ, ವ್ಯಕ್ತಿ ಪರಿಚಯ
ಲೇಖಕರು: ಕಥಾ ಕೀರ್ತನೆ, ಕಲೆ, ಪುಸ್ತಕಗಳಿಂದ, ವ್ಯಕ್ತಿ ಪರಿಚಯ, ಸಂಗೀತ
ಕೃತಿಯನ್ನು ಓದಿ

Categories
ಕಲೆ ನೃತ್ಯ ಭರತನಾಟ್ಯ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಎಚ್‌.ಆರ್. ಕೇಶವಮೂರ್ತಿ

ಚಿಕ್ಕಮಗಳೂರು ತಾಲೂಕಿನ ಹೋಚಿಹಳ್ಳಿ ಗ್ರಾಮದಲ್ಲಿ ೧೯೧೯ರಲ್ಲಿ ಶ್ರೀ ಬಿ. ರಾಮಸ್ವಾಮಿ ಮತ್ತು ಶ್ರೀಮತಿ ಸೀತಮ್ಮನವರ ಪುತ್ರರಾಗಿ ಕೇಶವಮೂರ್ತಿಯವರು ಜನಿಸಿದರು. ಬಡತನದ ದೆಸೆಯಿಂದ ಪ್ರಾಥಮಿಕ ಹಂತದಲ್ಲೇ ವಿದ್ಯಾಭ್ಯಾಸಕ್ಕೆ ಸಂಚಕಾರ ಬಂದರೂ ಧೃತಿಗೆಡದೆ ತುಮಕೂರಿನಲ್ಲಿ ಚಿಕ್ಕಪ್ಪ ಮೊಸಳೆ ನರಸಿಂಹಯ್ಯನವರ ಮನೆಯಲ್ಲಿ ದೈನಂದಿನ ವೆಚ್ಚದ ಸಲುವಾಗಿ ಶ್ರಮಜೀವನ ನಡೆಸುತ್ತಾ ಎಸ್‌.ಎಸ್‌.ಎಲ್‌.ಸಿ. ಮುಗಿಸಿದರು. ಜತೆಗೆ ಚಿಕ್ಕಪ್ಪ ನರಸಿಂಹಯ್ಯನವರಿಂದ ಅಲ್ಪ ಸ್ವಲ್ಪ ಸಂಸ್ಕೃತ ಪಾಠವೂ ಆಯಿತು. ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಣದ ಮುಗ್ಗಟ್ಟು  ಬಹಳವಾಗಿ ತಲೆದೋರಿದ್ದರಿಂದ ಓದಿಗೆ ತಿಲಾಂಜಲಿಯಿತ್ತು ಸಂಪಾದನೆಗಾಗಿ ಬೇರೆ ದಾರಿ ಹುಡುಕುವುದು ಅನಿವಾರ್ಯವಾಯಿತು.

ತಮ್ಮ ಸ್ನೇಹಿತರ ಜೊತೆಗೂಡಿ ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದ ಸಿ.ಎಸ್‌. ಶ್ರೀನಿವಾಸಮೂರ್ತಿ ಅವರಲ್ಲಿ ಕೊಳಲು ವಾದನ ಕಲಿಯಲು ಪ್ರಾರಂಭಿಸಿದರು. ತುಮಕೂರಿನ ನಾಟಕ ಸಂಘಗಳ ಸಂಪರ್ಕ ಹಾಗೂ ಸಂಗೀತದ ಪಾಠ ಕೇಶವಮೂರ್ತಿಯವರಲ್ಲಿ ನೃತ್ಯದ ಗೀಳನ್ನೂ ಹುಟ್ಟು ಹಾಕಿರಬಹುದು. ಹೀಗಾಗಿ ೧೯೪೩ರಲ್ಲಿ ನೃತ್ಯಾಸಕ್ತರಾಗಿ ಬೆಂಗಳೂರಿಗೆ ವಲಸೆ ಬಂದರು. ಈ ಹೊತ್ತಿಗೆ ಅವರಿಗೆ ಮದುವೆಯೂ ಆಗಿತ್ತು. ಪತ್ನಿ ಶಾರದಮ್ಮನವರ ಜೊತೆಗೂಡಿ ಬೆಂಗಳೂರಿನಲ್ಲಿ ವಾಸಿಸುತ್ತಾ ಸಂಸಾರ ನಿರ್ವಹಣೆಗಾಗಿ ಶಾಲೆಯೊಂದರಲ್ಲಿ ಅಧ್ಯಾಪಕ ಗಳಿಸಿದರು.

ಮೊದಲಿಗೆ ಉತ್ತರದ ಸುಪ್ರಸಿದ್ಧ ಕಥಕ್‌ನೃತ್ಯ ಕಲಾವಿದ ಸೋಹನ್‌ಲಾಲ್‌ರವರಿಂದ ಕಥಕ್‌ಕಲಿತರು. ಮುಂದೆ ಭರತನಾಟ್ಯದ ವೈವಿಧ್ಯತೆಗೆ ಮಾರುಹೋಗಿ ನಟುವನಾರ್ ಗುಂಡಪ್ಪನವರ ಶಿಷ್ಯರಾಗಿ ಅವರಿಂದ ಭರತನಾಟ್ಯ ಕಲೆಯಲ್ಲೂ ಸಾಕಷ್ಟು ಪಾಂಡಿತ್ಯ ಗಳಿಸಿದರು.

ಕೇಶವಮೂರ್ತಿಯವರು ೧೯೪೯ರಲ್ಲಿ ತಮ್ಮದೇ ಆದ ಕೇಶವ ನೃತ್ಯಶಾಲೆಯನ್ನು ಪ್ರಾರಂಭಿಸಿದರು. ತನ್ಮೂಲಕ ಅನೇಕ ವಿದ್ಯಾರ್ಥಿನಿಯರನ್ನು ನಾಟ್ಯಕಲೆಯಲ್ಲಿ ತಯಾರು ಮಾಡಿ ನಾಟ್ಯಾಚಾರ್ಯರೆನಿಸಿದರು. ಮಕ್ಕಳಾದ ವಸಂತಲಕ್ಷ್ಮಿ, ಸುಮಿತ್ರಾ, ಶ್ಯಾಂಪ್ರಕಾಶ್‌, ಹಾಗೂ ರಾಮ್ ಕುಮಾರ್ ಅವರುಗಳೂ ಸಹ ನೃತ್ಯಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಪ್ರತಿವರ್ಷವೂ ತಪ್ಪದೆ ವಾರ್ಷಿಕೋತ್ಸವವನ್ನು ನಡೆಸುತ್ತಾ ವಿದ್ಯಾರ್ಥಿಗಳಿಂದ ನಾಟ್ಯ ಮಾಡಿಸಿ ಹುರಿದುಂಬಿಸುತ್ತಿದ್ದಾರೆ. ಕರ್ನಾಟಕ ಸೆಕೆಂಡರಿ ಎಜುಕೇಷನ್‌ಬೋರ್ಡ್ ನಡೆಸುವ ನೃತ್ಯ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವುದೇ ಅಲ್ಲದೆ ತಮ್ಮ ಶಾಲೆಯ ವತಿಯಿಂದ ಸರ್ಟಿಫಿಕೇಟ್‌ಕೋರ್ಸ್, ಡಿಪ್ಲೊಮಾ ಕೋರ್ಸ್ ಮತ್ತು ಡಿಗ್ರಿ ಕೋರ್ಸ್‌ಗಳನ್ನೂ ನೀಡಲು ಪ್ರಾರಂಭಿಸಿದರು.

ರಾಜ್ಯಾದ್ಯಂತ-ರಾಷ್ಟ್ರಾದ್ಯಂತ ಅನೇಕ ಸಂಘ ಸಂಸ್ಥೆಗಳ ಆಹ್ವಾನದ ಮೇರೆಗೆ ಕೇಶವ ನೃತ್ಯ ಶಾಲೆಯು ನೂರಾರು ಕಾರ್ಯಕ್ರಮಗಳು ನಡೆಯುತ್ತಾ ಬಂದವು. ಕೇಶವ ನೃತ್ಯ ಶಾಲೆಯ ವಿಭಿನ್ನತೆ ಇರುವುದೇ ನೃತ್ಯನಾಟಕಗಳಲ್ಲಿ ಒಂದಕ್ಕಿಂತ ಒಂದು ಅಮೋಘವಾದ ನೃತ್ಯ ನಾಟಕಗಳು ಸಭಿಕರನ್ನು ಕೈಬೀಸಿ ಕರೆದು ರಸದೌತಣ ನೀಡುವಲ್ಲಿ ಯಶಸ್ವಿಯಾದವು. ಇಂತಹ ನೃತ್ಯನಾಟಕಗಳ ಪ್ರದರ್ಶನಕ್ಕೆ, ಸಂಯೋಜನೆಗೆ ಕೇಶವಮೂರ್ತಿಯವರು ವಹಿಸಿದ ಶ್ರಮ ಅಪಾರ. ಸುಮಾರು ೩೬ ಕ್ಕೂ ಹೆಚ್ಚು ಪೌರಾಣಿಕ, ಸಾಮಾಜಿಕ, ಚಾರಿತ್ರಿಕ, ಜಾನಪದ ವಸ್ತು ವಿಶೇಷವುಳ್ಳ ನೃತ್ಯನಾಟಕಗಳು ಹಲವಾರು ಬಾರಿ ಪ್ರದರ್ಶನಗೊಂಡಿರುವುದು ಗಮನಾರ್ಹ. ಇವೆಲ್ಲಕ್ಕೂ ಕಲಶಪ್ರಾಯದಂತೆ ಕಳೆದ ಹತ್ತುವರ್ಷಗಳಿಂದ ಕನ್ನಡ ಕವಿ ಕಾವ್ಯ ಪರಂಪರೆ ಮಾಲಿಕೆಯ ಅಡಿಯಲ್ಲಿ ಆದಿಕವಿ ಪಂಪನಿಂದ ಹಿಡಿದು ಹೆಸರಾಂತ ಕವಿಗಳ ಕಾವ್ಯವನ್ನು ರಂಗದ ಮೇಲೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ.

ಸುವರ್ಣವರ್ಷ ಮಹೋತ್ಸವ: ೧೯೪೯ರಲ್ಲಿ ಪ್ರಾರಂಭವಾದ ಕೇಶವ ನೃತ್ಯಶಾಲೆ ೧೯೯೯ರಲ್‌ಇ ೫೦ ವರ್ಷಗಳನ್ನು ಪೂರೈಸಿದ ಮಹತ್ತರ ಸಾಧನೀಯ ವರ್ಷ. ಏನೇ ಅಡಚಣೆ, ಎಡರು ತೊಡರುಗಳ ನಡುವೆಯೂ ನಿರಂತರವಾಗಿ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವತ್ತ ಮತ್ತು ನೃತ್ಯ ಪ್ರದರ್ಶನಗಳತ್ತ ಸತತವಾಗಿ ಶ್ರಮಿಸಿದ ಹಾದಿ ಅನುಕರಣೀಯ.

ಸುವರ್ಣವರ್ಷದ ಆಚರಣೆ ಅದ್ವಿತೀಯವಾಗಿ ಪ್ರಾರಂಭವಾಯಿತು. ಸುಮಾರು ೫೦೦ಕ್ಕೂ ಹೆಚ್ಚು ನರ್ತಕ ನರ್ತಕಿಯವರು ಪಾಲ್ಗೊಂಡು, ೫೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ಸಾದರ ಪಡಿಸಿದರು. ಏಕ ವ್ಯಕ್ತಿ ನೃತ್ಯ ಪ್ರದರ್ಶನ, ದ್ವಂದ್ವ ನೃತ್ಯ ಪ್ರದರ್ಶನ, ನೃತ್ಯನಾಟಕಗಳು ಪ್ರದರ್ಶಿತಗೊಂಡವು . ಪ್ರತಿತಿಂಗಳೂ ನೃತ್ಯ ಕಾರ್ಯಾಗಾರಗಳು ನಡೆದು ಸುವರ್ಣ ಮಹೋತ್ಸವವನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗುವಂತೆ ಮಾಡಿದವು.

ಸಮಾರೋಪ ಸಮಾರಂಭದ ದಿನ ನೃತ್ಯಕ್ಷೇತ್ರದಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡ ಅನೇಕ ಮಹನೀಯರಿಗೆ ಸನ್ಮಾನ ಮಾಡಿ ಆ ಮೂಲಕ ಕೇಶವ ನೃತ್ಯಶಾಲೆ ತನ್ನ ಘನತೆಯನ್ನೂ ಹೆಚ್ಚಿಸಿಕೊಂಡಿತು.

ಕನ್ನಡ ಕವಿಕಾವ್ಯ ಪರಂಪರೆ: ಆದಿಕವಿ ಪಂಪನಿಂದ ಪ್ರಾರಂಭವಾಗಿ ನವೋದಯದವರೆಗೂ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತಮ್ಮ ಕಾವ್ಯ ಕೃತಿಗಳ ಮೂಲಕ ಅಪಾರವಾದ ಹೆಸರು ಮಾಡಿರುವ ಸುಮಾರು ಇಪ್ಪತ್ತು ಕವಿವರ್ಯರ ಕೃತಿಗಳನ್ನು ನೃತ್ಯದ ಮೂಲಕ ರಂಗಕ್ಕೆ ತರಬೇಕೆಂಬ ಆ ಯೋಜನೆ ೧೯೫ರಲ್ಲಿ ಪ್ರಾರಂಭವಾಯಿತು. ಈ ಮಾಲಿಕೆಯ ಅಡಿಯಲ್ಲಿ ಈಗಾಗಲೇ ಹನ್ನೊಂದು ಕವಿಗಳ ಕಾವ್ಯಗಳನ್ನು ರಂಗದ ಮೇಲೆ ತಂದಿದ್ದು ಇನ್ನೂ ಆರು ಕವಿಗಳ ಕಾವ್ಯಗಳನ್ನು ಪ್ರದರ್ಶನಕ್ಕೆ ಸಿದ್ಧಪಡಿಸುತ್ತಿದ್ದಾರೆ.

ಮುಖ್ಯವಾಗಿ ಆದಿಕವಿ ಪಂಪನ ಭರತ ಬಾಹುಬಲಿ, ರನ್ನನ, ಗದಾಯುದ್ಧ, ನಾಗವರ್ಮನ ಕಾದಂಬರಿ, ಜನ್ನನ ಯಶೋಧರ ಚರಿತೆ, ನಾಗಚಂದ್ರನ ರಾಮಚಂದ್ರ ಚರಿತ ಪುರಾಣ, ನೇವಿ ಚಂದ್ರನ ಲೀಲಾವತಿ ಪ್ರಬಂಧ, ಹರಿಹರನ ಗಿರಿಜಾ ಕಲ್ಯಾಣ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಚಾಮರಸನ ಪ್ರಭುಲಿಂಗಲೀಲೆ, ನಾರಣಪ್ಪನ ಕುಮಾರವ್ಯಾಸ ಭಾರತ ಮುಂತಾದ ನೃತ್ಯ ನಾಟಕಗಳು ಜನಮನ್ನಣೆಗೆ ಪಾತ್ರವಗಿವೆ. ಹಾಗೆಯೇ ಕನ್ನಡ ಮತ್ತು ಸಂಸ್ಕೃತ ಭಾಷೆಯ ಸಾಹಿತ್ಯ ಉಳ್ಳ ೩೦ಕ್ಕೂ ಹೆಚ್ಚು ನೃತ್ಯ ನಾಟಕಗಳನ್ನು ಸಂಯೋಜಿಸಿ ಪ್ರದರ್ಶಿಸಿದ ಹೆಗ್ಗಳಿಕೆಯೂ ಕೇಶವಮೂರ್ತಿ ಅವರದ್ದಾಗಿದೆ. ಶ್ರೀ ಎಚ್‌.ಆರ್. ಕೇಶವಮೂರ್ತಿ ಅವರ ಪತ್ನಿ ಶಾರದಮ್ಮ, ಕೆಲಮಟ್ಟಿಗೆ ವೀಣಾ ವಾದನದಲ್ಲಿ ಪರಿಶ್ರಮ ಉಳ್ಳವರಾಗಿದ್ದಾರೆ. ಪುತ್ರಿ ವಸಂತ ಲಕ್ಷ್ಮಿ ತಮ್ಮದೇ ಆದ ವಿಶ್ರುತ ನೃತ್ಯ ಶಾಲೆ ನಡೆಸುತ್ತಿದ್ದು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೃತ್ಯ ಪ್ರಾಧ್ಯಾಪಕಿ ಆಗಿದ್ದಾರೆ, ಮತ್ತೊಬ್ಬ ಪುತ್ರಿ ಸುಮಿತ್ರಾ ದೇವಿ ಕೇಶವಮೂರ್ತಿ ಅವರೇ ನಡೆಸುತ್ತಿರುವ ವೆಂಕಟೇಶ ವಿದ್ಯಾಲಯದಲ್ಲಿ ಮುಖ್ಯೋಪಾಧ್ಯಾಯಿನಿ, ಹಿರಿಯ ಪುತ್ರ ಬಿ.ಕೆ. ಶ್ಯಾಂಪ್ರಕಾಶ್‌ಆಕಾಶವಾಣಿ ನಿಲಯದ ವೀಣಾ ಕಲಾವಿದೆ. ಮತ್ತಿಬ್ಬರು ಪುತ್ರರಾದ ರಾಮ್‌ಕುಮರ ಮತ್ತು ರವಿಶಂಕರ ರೂಪಾ ಉತ್ತಮ ನೃತ್ಯ ಪಟುವಾಗಿದ್ದಾರೆ.

ಸಾಂಘಿಕ-ಚಟುವಟಿಕೆಗಳು: ತಮ್ಮ ಐವತ್ತೈದು ವರ್ಷದ ಕಲಾಜೀವನದಲ್ಲಿ ಗುರು-ಶ್ರೀ ಕೇಶವಮೂರ್ತಿಯವರು ತಮ್ಮ ನೃತ್ಯಶಾಲೆ ಮಾತ್ರವಲ್ಲದೆ ನೃತ್ಯಕ್ಕೆ ಸಂಬಂಧ ಪಟ್ಟ ಹಲವಾರು ಸಂಘ ಸಂಸ್ಥೆಗಳಲ್ಲೂ ಪಾತ್ರ ವಹಿಸಿದ್ದಾರೆ. ನೃತ್ಯ ಕಲಾವಿದರ ಏಳಿಗೆಗಾಗಿ ಕರ್ನಾಟಕ ನೃತ್ಯ ಕಲಾ ಪರಿಷತ್ತನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸೆಕೆಂಡರಿ ಬೋರ್ಡ್ ನಡೆಸುವ ನೃತ್ಯ ಪರೀಕ್ಷೆಗಳ ಪಠ್ಯವಸ್ತು ಸಮಿತಿಗೆ ಅಧ್ಯಕ್ಷರಾಗಿ ನೃತ್ಯಕ್ಕೆ ಸಂಬಂಧಿಸಿದಂತೆ ಪಠ್ಯವನ್ನು ನಿರ್ದಿಷ್ಟಗೊಳಿಸಿದ್ದಾರೆ. ಭರತನಾಟ್ಯದ ಮಾಧ್ಯಮಿಕ ದರ್ಜೆ ಪಠ್ಯ ಪುಸ್ತಕ ಸಮಿತಿಗೆ ಅಧ್ಯಕ್ಷರಾಗಿದ್ದು ಪುಸ್ತಕ ಹೊರತಂದಿದ್ದಾರೆ. ಹಲವಾರು ವರ್ಷ ನೃತ್ಯ ಪರೀಕ್ಷೆಗಳ ಮೌಲ್ಯ ಮಾಪನದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ನೃತ್ಯದ ಬಗ್ಗೆ ಹಲವಾರು ಸೋದಾಹರಣ ಭಾಷಣಗಳನ್ನೂ,ಪ್ರಾತ್ಯ ಕ್ಷಿಕೆಗಳನ್ನೂ ನಡೆಸಿಕೊಟ್ಟಿರುವ ಶ್ರೀಯುತರು ನಾಟ್ಯವಿಚಾರ ಸಂಗ್ರಹ ಎಂಬ ಪುಸ್ತಕದಲ್ಲಿ ತಮ್ಮ ಅನೇಕ-ಚಿಂತನೆಗಳನ್ನು, ಭಾಷಣಗಳನ್ನು ಉದಾಹರಿಸಿದ್ದಾರೆ.

ಭರತನಾಟ್ಯಕ್ಕೆ ಬೇಕಾದ ಜತಿಸ್ವರ, ಶೃಂಗಾರ ಪದಗಳು, ಶಬ್ದ, ವರ್ಣ, ತಿಲ್ಲಾನ, ನವರಸ ರಾಮಾಯಣಗಳನ್ನು ರಚಿಸಿರುವುದಲ್ಲದೆ ಹಲವಾರು ನೃತ್ಯನಾಟಕಗಳಿಗೆ ತಮ್ಮ ಸಾಹಿತ್ಯವನ್ನು ಅಳವಡಿಸಿದ್ದಾರೆ.

ಇವರಿಗೆ ೧೯೮೧ರಲ್ಲಿ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ ಪ್ರಶಸ್ತಿ, ೧೯೯೦ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೪ರಲ್ಲಿ ಬೆಂಗಳೂರು ಗಾಯನ ಸಮಾಜದಿಂದ ವರ್ಷದ ಕಲಾವಿದ ಪ್ರಶಸ್ತಿ, ೧೯೯೮ರಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಶಾಂತಲಾ ಪ್ರಶಸ್ತಿ, ೨೦೦೦ದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರಗಳಲ್ಲದೆ ೧೯೯೦ರಲ್ಲಿ ಕರ್ನಾ ಟಕ ನೃತ್ಯ ಕಲಾಪರಿಷತ್ತಿನ ನೃತ್ಯ ಕಲಾಶಿರೋಮಣಿ ಪ್ರಶಸ್ತಿ, ೧೯೯೩ರಲ್ಲಿ ಕರ್ನಾಟಕ ನವೋದಯದ ಅಚಲ ಪ್ರಶಸ್ತಿ ಹಾಗೂ ಇನ್ನೂ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.

Categories
ಕೃಷಿ ಅನುಭವ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ದ೦ತಕತೆಯಾದ ನನ್ನ ದೊಡ್ಡಣ್ಣ : ಡಾ: ಅಡ್ಡೂರು ತಿಮ್ಮಪ್ಪಯ್ಯ

ಕೃತಿ: ಕೃಷಿ ಅನುಭವಪುಸ್ತಕಗಳಿಂದ, ವ್ಯಕ್ತಿ ಪರಿಚಯ
ಲೇಖಕರು: ಕೃಷಿ ಅನುಭವ,ಪುಸ್ತಕಗಳಿಂದ, ವ್ಯಕ್ತಿ ಪರಿಚಯ
ಕೃತಿಯನ್ನು ಓದಿ

Categories
ನಾಡಿಗೆ ನಮಸ್ಕಾರ ಪುಸ್ತಕ ಸರಣಿ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಕೊಡಗನ್ನು ಉಳಿಸಿದ ಕಲಾವಿದ ಎನ್.ಎಸ್. ದೇವಿಪ್ರಸಾದ್ ಸಂಪಾಜೆ

ಕೃತಿ:ಕೊಡಗನ್ನು ಉಳಿಸಿದ ಕಲಾವಿದ ಎನ್.ಎಸ್. ದೇವಿಪ್ರಸಾದ್ ಸಂಪಾಜೆ
ಲೇಖಕರು:
ಕೃತಿಯನ್ನು ಓದಿ

Categories
ನಾಡಿಗೆ ನಮಸ್ಕಾರ ಪುಸ್ತಕ ಸರಣಿ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಕನ್ನಡ ಸೇನಾನಿ ಪಿ.ಕೆ. ನಾರಾಯಣ

ಕೃತಿ:ಕನ್ನಡ ಸೇನಾನಿ ಪಿ.ಕೆ. ನಾರಾಯಣ
ಲೇಖಕರು: ನಾಡಿಗೆ ನಮಸ್ಕಾರ ಪುಸ್ತಕ ಸರಣಿ, ಪುಸ್ತಕಗಳಿಂದ, ವ್ಯಕ್ತಿ ಪರಿಚಯ ಸಂಶೋಧಕ ಪಿ.ಕೆ
ಕೃತಿಯನ್ನು ಓದಿ

Categories
ನಾಡಿಗೆ ನಮಸ್ಕಾರ ಪುಸ್ತಕ ಸರಣಿ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ದೂರಸಂಪರ್ಕವನ್ನು ಸಮೀಪವಾಗಿಸಿದ ಅಧಿಕಾರಿ ಕಜಂಪಾಡಿ ರಾಮ

ಕೃತಿ:ದೂರಸಂಪರ್ಕವನ್ನು ಸಮೀಪವಾಗಿಸಿದ ಅಧಿಕಾರಿ ಕಜಂಪಾಡಿ ರಾಮ
ಲೇಖಕರು: ನಾಡಿಗೆ ನಮಸ್ಕಾರ ಪುಸ್ತಕ ಸರಣಿ, ಪುಸ್ತಕಗಳಿಂದ, ವ್ಯಕ್ತಿ ಪರಿಚಯ
ಕೃತಿಯನ್ನು ಓದಿ

Categories
ನಾಡಿಗೆ ನಮಸ್ಕಾರ ಪುಸ್ತಕ ಸರಣಿ ಪುಸ್ತಕಗಳಿಂದ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಸಮಾಜಮುಖಿ ಯೋಜಕ – ಕೆ. ಕೆ. ಪೈ

“ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷತೆಯಿದೆ. ಜತೆಗೆ ವಾಣಿಜ್ಯ, ವಿದ್ಯೆ ಮುಂತಾದ ಅಭಿವೃದ್ಧಿ ಪೂರಕ ವಿಭಾಗಗಳಲ್ಲಿ ಈ ಪ್ರದೇಶ ಅಳಿಸಲಾಗದ ಹೆಜ್ಜೆಗಳನ್ನು ಮೂಡಿಸಿ ಭಾರತದ ಇತಿಹಾಸದಲ್ಲಿ ಗಣನೀಯ ಸ್ಥಾನ ಹೊಂದಿರುವುದು ಹೆಮ್ಮೆಯ ವಿಷಯ. ಪರಸ್ಪರ ಸಾಮರಸ್ಯ ಹಾಗೂ ವಿವಿಧ ಭಾಷೆಗಳ ಬಗ್ಗೆ ಒಲವು ಈ ಪ್ರದೇಶದ ಹೆಗ್ಗಳಿಕೆ. ಈ ಎಲ್ಲ ಸಿದ್ಧಿ ಸಾಧನೆಗಳ ಪರಿಚಯ ನಾಡಿನ ಜನತೆಗೆ ಈ ಸಮ್ಮೇಳನ ಮೂಲಕ ಆಗಬೇಕೆಂದು ನನ್ನ ಬಯಕೆ. 2007ರ ದಶಂಬರ ತಿಂಗಳ ಮಧ್ಯ ಭಾಗದಲ್ಲಿ ಉಡುಪಿಯಲ್ಲಿ ಜರಗಿದ ಅಖಿಲಭಾರತ ಕನ್ನಡ ಸಮ್ಮೇಳನದ ಕುರಿತು ಸ್ವಾಗತ ಸಮಿತಿಯ ಅಧ್ಯಕ್ಷ ಶ್ರೀ ಕೆ.ಕೆ. ಪೈಗಳು ಸಮ್ಮೇಳನದ ಸ್ಮರಣ ಸಂಚಿಕೆ ‘ಮೋಹನ ಮುರಳಿಯಲ್ಲಿ ವ್ಯಕ್ತಪಡಿಸಿದ ಅವರ ಅಂತರಾಳದಿಂದ ಮೂಡಿಬಂದ ಈ ಮಾತುಗಳು ಇವರ ಒಟ್ಟಾರೆ ಕಾಳಜಿಗೆ ಕನ್ನಡಿ ಹಿಡಿಯುತ್ತವೆ.

Categories
ಕನ್ನಡ ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ವ್ಯಕ್ತಿ ಪರಿಚಯ ಸಾಹಿತ್ಯ

ವ್ಯಕ್ತಿ ಪರಿಚಯ – ಮಾಸ್ತಿ ವೆಂಕಟೇಶ ಅಯ್ಯಂಗಾರ್

“ಕನ್ನಡ ಸಣ್ಣಕತೆಗಳ ಪಿತಾಮಹ”,”ಕನ್ನಡದ ಆಸ್ತಿ” ಎಂದೇ ಪ್ರಸಿದ್ಧರಾದ ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರರು ಸಾಹಿತ್ಯದ ಸರ್ವಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಸಾಧಕ. ತಮ್ಮ ಉನ್ನತ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ಕನ್ನಡನಾಡು ನುಡಿಯ ಉತ್ಕರ್ಷಕ್ಕೇ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಜ್ಞಾನಪೀಠ ಪ್ರಶಸ್ತಿ ವಿಜೇತರು.ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದ್ದರು.

ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ಜೂನ್ ೬ ೧೮೯೧ ರಲ್ಲಿ ಜನಿಸಿದರು. ಮೆಟ್ರಿಕ್ಯುಲೇಷನ್(೧೯೦೭), ಎಫ್ ಎ (೧೯೦೯), ಬಿ ಎ (ಮದರಾಸು ವಿಶ್ವವಿದ್ಯಾಲಯ ೧೯೧೨), ಮೈಸೂರು ಸಿವಿಲ್ ಸರ್ವಿಸ್ (೧೯೧೩), ಎಂ.ಎ (ಮದರಾಸು ವಿಶ್ವವಿದ್ಯಾಲಯ ೧೯೧೪) ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ, ೧೯೧೪ ರಲ್ಲಿ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮಿಷನರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ೧೯೧೪ ರಿಂದ ೧೯೪೩ ರವವರೆಗೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದರು. ೧೯೨೦ ರಲ್ಲಿ ಅವರ ಮೊದಲ ಪುಸ್ತಕ ಕೆಲವು ಸಣ್ಣ ಕಥೆಗಳು ಪ್ರಕಟಗೊಂಡಿತು. ಸಣ್ಣ ಕತೆ, ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಅನುವಾದ – ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ೧೯೮೩ ರಲ್ಲಿ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಮಾಸ್ತಿಯವರು ಕನ್ನಡಕ್ಕೆ ನಾಲ್ಕನೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು. ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಜೂನ್ ೬ ೧೯೮೬ ರಂದು ನಿಧನ ಹೊಂದಿದರು.

ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಮಾಸ್ತಿ ವೆಂಕಟೇಶ ಅಯ್ಯಂಗಾರ್ “ಪೆರಿಯಾತ್” ಎಂದರೆ ದೊಡ್ಡ ಮನೆಯವರು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು. ಅವರ ಹಿರಿಯರು ಬಹು ಜನಕ್ಕೆ ಅನ್ನ ಹಾಕಿ ಹೆಸರು ಗಳಿಸಿದ್ದರಾದರೂ ಅವರು ವಾರದ ಮನೆಗಳಲ್ಲಿ ಊಟಮಾಡಿ ವಿದ್ಯಾಭ್ಯಾಸ ಮಾಡಬೇಕಾಯಿತು. ಹೊಂಗೇನಳ್ಳಿ, ಯಲಂದೂರು, ಶಿವಾರಪಟ್ಟಣ, ಮಳವಳ್ಳಿ, ಮೈಸೂರು, ಕಡೆಗೆ ಮದರಾಸು ಹೀಗೆ ನಾನಾ ಕಡೆಗಳಲ್ಲಿ ತಮ್ಮ ಬಂಧುಗಳ ನೆರವಿನಿಂದ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿ ಗಳಿಸಿದರು. ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಾಸ್ತಿ ಯಾವ ಪರೀಕ್ಷೆಯಲ್ಲೂ ಪ್ರಥಮ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ. ಮದ್ರಾಸಿನಲ್ಲಿ ಇಂಗ್ಲೀಷ್ ಎಂ.ಎ. ಮಾಡಿಕೊಂಡು ಚಿನ್ನದ ಪದಕ ಗಳಿಸಿದ ಮಾಸ್ತಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮರಾಗಿ ತೇರ್ಗಡೆಯಾದರು. ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಶನರಾಗಿ ಕೆಲಸಕ್ಕೆ ಸೇರಿ ಸಮರ್ಪಕವಾಗಿ ಕೆಲಸ ನಿರ್ವಹಿಸಿದರು. ಸಾಹಿತ್ಯ ರಚನೆ ಅವರ ಪ್ರವೃತ್ತಿಯಾಗಿ ಬೆಳೆಯಿತು.

೧೯೧೦ ರಲ್ಲಿ ಬರೆದ ರಂಗನ ಮದುವೆ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ ‘ಮಾತುಗಾರ ರಾಮಣ್ಣ’ ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩. ಇದರಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, “ಜೀವನ” ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ. ಕನ್ನಡ ಸಣ್ಣಕಥೆಗಳ ಪಿತಾಮಹ ಎನಿಸಿರುವ ಮಾಸ್ತಿಯವರು “ಮೊಸರಿನ ಮಂಗಮ್ಮ “,”ವೆಂಕಟಿಗನಹೆಂಡತಿ”,”ರಂಗಪ್ಪನದೀಪಾವಳಿ”, “ಸುಬ್ಬಣ್ಣ”,”ವೆಂಕಟಸಾಮಿಯ ಪ್ರಣಯ” ಮೊದಲಾದ ೭೦ಕ್ಕೂ ಅಧಿಕಕಥೆಗಳನ್ನು ಬರೆದಿದ್ದಾರೆ. ಜತೆಗೆ “ರಾಮನವಮಿ”,”ಗೌಡರಮಲ್ಲಿ”,”ನವರಾತ್ರಿ” ಮುಂತಾದ ಕಥನಕವನಗಳು, ಬಿನ್ನಹ,ಅರುಣ,ತಾವರೆ,ಮಲಾರ,ಮನವಿ,ಚೆಲವು.ಮುಂತಾದ ಕವನ ಸಂಕಲನಗಳು, ಶಾಂತಾ, ತಿರುಪಾವಿ, ಕನಕಣ್ಣ, ಶಿವಛತ್ರಪತಿ, ಯಶೋಧರ, ಮಾಸತಿ, ಅನಾರ್ಕಳಿ, ಪುರಂದರದಾಸ, ಕಾಕನಕೋಟೆ ಮುಂತಾದ ನಾಟಕಗಳು, ಭಾರತತೀರ್ಥ,ಆದಿಕವಿವಾಲ್ಮೀಕಿ ಮುಂತಾದ ಪ್ರಬಂಧ ಗಳನ್ನು ಬರೆದಿದ್ದಾರೆ. ಷೇಕ್ಸ್ ಪೀಯರನ ನಾಟಕಗಳಾದ ಕಿಂಗ್ ಲಿಯರ್,ದಿ,ಟೆಂಪೆಸ್ಟ್,ಟ್ವೆಲ್ ಫತ್ ನೈಟ್,ಹ್ಯಾಮ್ಲೆಟ್ ಗಳನ್ನು ಕನ್ನಡಕ್ಕೆ ತಂದ ಕೀರ್ತಿ ಮಾಸ್ತಿಯವರಿಗೆ ಸಲ್ಲುತ್ತದೆ.ಇತರ ಕೃತಿಗಳು-ಚಿತ್ರಾಂಗದಾ(ಠಾಕೂರರ ಕೃತಿ), ಬಿಜ್ಜಳರಾಯ ಚರಿತ್ರೆ(ಧರಣಿ ಪಂಡಿತನ ಕೃತಿ)ಬಸವಣ್ಣನ ವಚನಗಳನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದ್ದಾರೆ.

೨೦ನೆಯ ಶತಮಾನದ ಆರಂಭದ ಕಾಲ. ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಮಾಸ್ತಿ ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು. ಸಣ್ಣ ಕತೆಗಳ ರಚನೆ ಅವರು ಪ್ರಧಾನವಾಗಿ ಆರಿಸಿಕೊಂಡ ಸಾಹಿತ್ಯ ಪ್ರಕಾರ. ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಮಾಸ್ತಿ ನೂರಾರು ಸಣ್ಣ ಕತೆಗಳನ್ನು ಬರೆದರು. ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದರು. ಅವರ ಒಂದು ಸಣ್ಣ ಕಥೆಯನ್ನು ರಾಜಾಜಿಯವರು ತಮಿಳಿಗೆ ಅನುವಾದಿಸಿದರು. ಇಂಗ್ಲೀಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಮಾಸ್ತಿ ಅವರ ಸಣ್ಣ ಕತೆಗಳು ಅನುವಾದಗೊಂಡಿವೆ. ದೂರದರ್ಶನದಲ್ಲಿ ಕೆಲವು ಕತೆಗಳು ಅಭಿನಯಿಸಲ್ಪಟ್ಟು ಪ್ರಸಾರವಾಗಿವೆ. ಕಥೆ ಹೇಳುವುದರಲ್ಲಿ ಮಾಸ್ತಿ ಎತ್ತಿದ ಕೈ. ಅವರ ಕಥೆಗಳನ್ನು ಓದುತ್ತಿದ್ದರೆ ಅವು ಕಣ್ಣಿಗೆ ಕಟ್ಟಿದಂತಿರುತ್ತವೆ. “ಸುಬ್ಬಣ್ಣ” ಅವರ ಒಂದು ಖ್ಯಾತ ನೀಳ್ಗತೆ. ಅಪಾರ ಮಾನವೀಯ ಅಂತಃಕರಣವನ್ನು ಕತೆಯಲ್ಲಿ ತುಳುಕಿಸಿದ ಅವರು ಕಥೆಗಳ ರಚನೆಗೆ ಬಳಸಿದ ತಂತ್ರ ಅಪರೂಪದ್ದಾಗಿದೆ. ಸಣ್ಣ ಕಥೆಗಳ ಜನಕರೆಂದೇ ಅವರಿಗೆ ಕರೆಯುತ್ತಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಅವರ ಕಥೆಗಳ ಸಂಕಲನಗಳಿಗೆ ಲಭಿಸಿತು. ಕಥೆ ಹೇಳುವುದು ಒಂದು ಪುಣ್ಯದ ಕೆಲಸವೆಂದು ಅವರು ಭಾವಿಸಿದ್ದರು.

ಮಾಸ್ತಿ ಕಥೆಗಳನ್ನು ಬರೆದಂತೆಯೇ ಕಾದಂಬರಿ, ಕವಿತೆ, ಪ್ರಬಂಧ ಇವುಗಳನ್ನೂ ಬರೆದರು, ನಾಟಕಗಳನ್ನೂ ರಚಿಸಿದರು. ಅವರ ಎಲ್ಲ ಕೃತಿಗಳಲ್ಲೂ ಕುಶಲತೆ, ಸೌಮ್ಯತೆ, ಜೀವನ ದರ್ಶನಗಳನ್ನು ಸ್ಪಷ್ಟವಾಗಿ ಕಾಣಬಹುದು. “ಭಾರತತೀರ್ಥ”, “ಆದಿಕವಿ ವಾಲ್ಮೀಕಿ” ಇವು ಭಾರತ ರಾಮಾಯಣಗಳನ್ನು ಕುರಿತು ಬರೆದಿರುವ ಗ್ರಂಥಗಳಾದರೆ “ಶ್ರೀರಾಮ ಪಟ್ಟಾಭಿಷೇಕ” ಅವರ ಒಂದು ಕಾವ್ಯ. ರವೀಂದ್ರನಾಥ ಠಾಕೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ, ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ, ಶಿವಾಜಿ ಮೊದಲಾದ ನಾಟಕಗಳನ್ನೂ, ಷೇಕ್ಸ್‌ಪಿಯರನ ನಾಟಕಗಳ ಅನುವಾದಗಳನ್ನೂ ಮಾಸ್ತಿ ಪ್ರಕಟಿಸಿದ್ದಾರೆ.

ಮಾಸ್ತಿ ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ – ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು “ಚನ್ನಬಸವನಾಯಕ”.”ಭಾವ” – ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥ.

ಮಾಸ್ತಿಯವರು ಪತ್ರಿಕೋದ್ಯಮದಲ್ಲೂ ಕೆಲಸ ಮಾಡಿದರು. “ಜೀವನ” ಎಂಬ ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಯನ್ನು ಆರಂಭಿಸಿ ಸುಮಾರು ೩೦ ವರ್ಷಗಳ ಕಾಲ ಅದರ ಸಂಪಾದಕರ‍ಾಗಿ ಕಾರ್ಯನಿರ್ವಹಿಸಿದರು. ಇದೇ “ಜೀವನ” ಪತ್ರಿಕೆಯಲ್ಲಿ ಅವರು ಬರೆದ ಲೇಖನಗಳು ” ಸಂಪಾದಕೀಯ” ಎಂಬ ಹೆಸರಿನಲ್ಲಿ ಐದು ಭಾಗಗಳಾಗಿ ಪ್ರಕಟವಾಗಿವೆ.

ಮಾಸ್ತಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳು ಅಪಾರ. “ಮಾಸ್ತಿ ಕನ್ನಡದ ಆಸ್ತಿ” ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ. ಎಲ್ಲ ಸಾಹಿತಿಗಳಿಗೂ ಅವರು “ಅಣ್ಣ ಮಾಸ್ತಿ”ಯಾಗಿದ್ದರು. ವರಕವಿ ದ ರಾ ಬೇಂದ್ರೆ ಮಾಸ್ತಿಯವರನ್ನು ಹಿರಿಯಣ್ಣ ಎಂದು ಗೌರವಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಸ್ತಿ ಸೇವೆ ಸಲ್ಲಿಸಿದರು. ೧೯೨೯ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಮೈಸೂರು ಮಹಾರಾಜರು “ರಾಜಸೇವಾ ಪ್ರಸಕ್ತ” ಎಂದು ಗೌರವಿಸಿದ್ದರು. ೧೯೭೨ರಲ್ಲಿ “ಶ್ರೀನಿವಾಸ” ಎಂಬ ಅವರ ಅಭಿನಂದನಾ ಗ್ರಂಥ ಪ್ರಕಟವಾಯಿತು.

ಪ್ರಶಸ್ತಿ, ಪುರಸ್ಕಾರ, ಬಿರುದು:

೧೯೨೯ರಲ್ಲಿ ನಡೆದ ೧೫ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೪೨ರಲ್ಲಿ ಹೈದರಾಬಾದಿನಲ್ಲಿ ನಡೆದ ಅಖಿಲಭಾರತ ಪ್ರಾಚ್ಯ ಸಮ್ಮೇಳನದ ೧೧ನೇಯ ಅಧಿವೇಶನದ ಕನ್ನಡ ವಿಭಾಗದ ಅಧ್ಯಕ್ಷತೆ.
೧೯೪೬ರಲ್ಲಿ ಮದರಾಸಿನಲ್ಲಿ ನಡೆದ ಅಖಿಲ ಭಾರತ ಬರಹಗಾರರಸಮ್ಮೇಳನದ ಅಧ್ಯಕ್ಷತೆ.
೧೯೬೪ರಲ್ಲಿ P.E.O(Poets,Essasies,Opinion) ಸಂಸ್ಥೆಯ ಉಪಾಧ್ಯಕ್ಷರಾಗಿ ನಂತರ ೧೯೭೬ರಲ್ಲಿ ಅಧ್ಯಕ್ಷರೂ ಆದರು.
ಮಾಸ್ತಿಯವರು ‘ಜೀವನ’ ಎಂಬ ಮಾಸಪರಿಕೆಯನ್ನು ಸುಮಾರು ಎರಡು ದಶಕಗಳ ಕಾಲ ನಡೆಸಿದರು.
೧೯೭೪ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು.
೧೯೬೮ರಲ್ಲಿ ಮಾಸ್ತಿಯವರಸಣ್ಣಕಥೆಗಳು ಪುಸ್ತಕಕ್ಕೆ ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿದೆ.
ಕರ್ನಾಟಕ ಹಾಗೂ ಮೈಸೂರು ವಿಶ್ವವಿದ್ಯಾಲಯಗಳ ಗೌರವ ಡಿ.ಲಿಟ್ ಪ್ರಶಸ್ತಿ ಪಡೆದಿದ್ದಾರೆ.
೧೯೮೩ರಲ್ಲಿ ಚಿಕ್ಕವೀರ ರಾಜೇಂದ್ರಕೃತಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಪಡೆದರು.

ಕೃತಿಗಳು

ಸಣ್ಣ ಕಥೆ ಸಂಗ್ರಹ

  • ಸಣ್ಣಕತೆಗಳು(೫ ಪುಟಗಳು)
  • ರಂಗನ ಮದುವೆ
  • ಮಾತುಗಾರ ರಾಮ

ನೀಳ್ಗತೆ

  • ಸುಬ್ಬಣ್ಣ (೧೯೨೮)
  • ಶೇಷಮ್ಮ(೧೯೭೬)

ಕಾವ್ಯ ಸಂಕಲನಗಳು

  • ಬಿನ್ನಹ, ಮನವಿ(೧೯೨೨)
  • ಅರುಣ(೧೯೨೪)
  • ತಾವರೆ(೧೯೩೦)
  • ಸಂಕ್ರಾಂತಿ(೧೯೬೯)
  • ನವರಾತ್ರಿ(೫ ಭಾಗ ೧೯೪೪-೧೯೫೩)
  • ಚೆಲುವು, ಸುನೀತ
  • ಮಲಾರ
  • ಶ್ರೀರಾಮ ಪಟ್ಟಾಭಿಷೇಕ (ಖಂಡಕಾವ್ಯ)

ಜೀವನ ಚರಿತ್ರೆ

  • ರವೀಂದ್ರನಾಥ ಠಾಕೂರ್(೧೯೩೫)
  • ಶ್ರೀ ರಾಮಕೃಷ್ಣ(೧೯೩೬)

ಪ್ರಬಂಧ

  • ಕನ್ನಡದ ಸೇವೆ(೧೯೩೦)
  • ವಿಮರ್ಶೆ (೪ ಸಂಪುಟ ೧೯೨೮-೧೯೩೯)
  • ಜನತೆಯ ಸಂಸ್ಕೃತಿ(೧೯೩೧)
  • ಜನಪದ ಸಾಹಿತ್ಯ(೧೯೩೭)
  • ಆರಂಭದ ಆಂಗ್ಲ ಸಾಹಿತ್ಯ(೧೯೭೯)

ನಾಟಕ

  • ಶಾಂತಾ, ಸಾವಿತ್ರಿ, ಉಷಾ (೧೯೨೩)
  • ತಾಳೀಕೋಟೆ(೧೯೨೯)
  • ಶಿವಛತ್ರಪತಿ(೧೯೩೨)
  • ಯಶೋಧರಾ(೧೯೩೩)
  • ಕಾಕನಕೋಟೆ(೧೯೩೮)
  • ಲಿಯರ್ ಮಾಹಾರಾಜ
  • ಚಂಡಮಾರುತ, ದ್ವಾದಶರಾತ್ರಿ
  • ಹ್ಯಾಮ್ಲೆಟ್
  • ಶೇಕ್ಸ್ ಪಿಯರ್ ದೃಶ್ಯಗಳು ೧,೨,೩
  • ಪುರಂದರದಾಸ
  • ಕನಕಣ್ಣ
  • ಕಾಳಿದಾಸ
  • ಅಜ್ಜನದಾರಿ, ಭಟ್ಟರಮಗಳು, ವಿಮಲಾ ಮರಿಯಾನ್
  • ಬಾನುಲಿ ದೃಶ್ಯಗಳು

ಕಾದಂಬರಿ

  • ಚೆನ್ನಬಸವ ನಾಯಕ(೧೯೫೦)
  • ಚಿಕವೀರ ರಾಜೇಂದ್ರ(೧೯೫೬)
Categories
ಕನ್ನಡ ವ್ಯಕ್ತಿ ಪರಿಚಯ ಸಾಹಿತ್ಯ

ವ್ಯಕ್ತಿ ಪರಿಚಯ – ಶಿವರಾಮ ಕಾರಂತ

ಡಾ|| ಶಿವರಾಮ ಕಾರಂತರು ಇಪ್ಪತ್ತನೆಯ ಶತಮಾನ ಕಂಡ ಬಹುಮುಖದ ವ್ಯಕ್ತಿತ್ವ-ಕಾದಂಬರಿಕಾರ, ಯಕ್ಷಗಾನ ಪ್ರಯೋಗಶೀಲ,ಪರಿಸರ ತಜ್ಞ.

ಜನನ: ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨, ಅಕ್ಟೋಬರ್ ೧೦ರಂದು.ಕಾರಂತರ ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ ಯವರೆಗೆ ನಡೆದು ೧೯೨೦ರಲ್ಲಿ ಕೊನೆ ಆಯಿತು.ತಮ್ಮ ವಿದ್ಯಾರ್ಥಿ ದೆಸೆಯಲ್ಲೆ ಮಹಾತ್ಮಾ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾದ ಕಾರಂತರು ತಮ್ಮ ಓದನ್ನು ಅಷ್ಟಕ್ಕೇ ನಿಲ್ಲಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಏಳು ದಶಕಗಳಲ್ಲಿ ಅಭಿವ್ಯಕ್ತಗೊಂಡ ಅವರ ಬದುಕು ಸಾಹಿತ್ಯ, ಸಾಮಾಜಿಕ ಜಾಗೃತಿ, ರಾಜಕೀಯ ಹೋರಾಟ, ಪರಿಸರ ಸಂರಕ್ಷಣೆ ಮುಂತಾದ ಹತ್ತು ಹಲವು ದಿಕ್ಕುಗಳಲ್ಲಿ ಪಸರಿಸಿದೆ.

ಮೊದಲ ಹಂತ: ೧೯೨೫ ರಲ್ಲಿ ‘ವಸಂತ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದ ಕಾರಂತರು ಅದರ ಸಂಪಾದಕರಾಗಿ ಸುಮಾರು ಐದು ವರ್ಷಗಳ ಕಾಲ ದುಡಿದರು. ಕಾರಂತರ ಮೊದಲ ಕಾದಂಬರಿ “ವಿಚಿತ್ರ ಕೂಟ” ವು ಇದೇ ಪತ್ರಿಕೆಯ ಮೂಲಕ ಬೆಳಕು ಕಂಡಿತು. ನಂತರ ಕಾರಣಾಂತರಗಳಿಂದ ೧೯೩೦ ರಲ್ಲಿ ಈ ಪತ್ರಿಕೆಯು ನಿಂತು ಹೋಯಿತು. ೧೯೫೦ ರಲ್ಲಿ ಅವರು “ವಿಚಾರಮಣಿ” ಎಂಬ ಮತ್ತೊಂದು ಪತ್ರಿಕೆಯನ್ನು ಆರಂಭಿಸಿದರಾದರೂ ಅದು ಬಹು ಕಾಲ ಉಳಿಯಲಿಲ್ಲ. ಮಕ್ಕಳ ಶಿಕ್ಷಣದಲ್ಲಿ ಕಾರಂತರಿಗೆ ತುಂಬಾ ಆಸಕ್ತಿ. ಮಕ್ಕಳಿಗಾಗಿ ಸಾಹಿತ್ಯರಚನೆ ಮಾಡಿದ ಅವರು ಮಕ್ಕಳ ಪ್ರೀತಿಯ “ಕಾರಂತಜ್ಜ” ಎಂದೇ ಖ್ಯಾತರಾದರು. ವಿಜ್ನಾನದ ಅನೇಕ ಮುಖಗಳನ್ನು ಮಕ್ಕಳಿಗೆ ಪರಿಚಯಿಸಲು ಅವರು ಬರೆದ “ಅದ್ಭುತ ಜಗತ್ತು”, “ಬಾಲ ಪ್ರಪಂಚ” ಕನ್ನಡದ ಮಟ್ಟಿಗೆ ಅದ್ಭುತ ಏಕವ್ಯಕ್ತಿ ಜ್ಞಾನಕೋಶ.

ಯಕ್ಷಗಾನ ಕಲೆ ಕಾರಂತರ ಮತ್ತೊಂದು ಆಸಕ್ತಿಯ ಕ್ಷೇತ್ರ. ಅವರ “ಯಕ್ಷಗಾನ ಬಯಲಾಟ” ಕೃತಿಗೆ ೧೯೫೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ಕಾರಂತರ ಆಸಕ್ತಿ ಚಲನಚಿತ್ರ ಕ್ಷೇತ್ರದ ಕಡೆಯೂ ತಿರುಗಿತು. “ಭೂತರಾಜ್ಯ”,” ಡೊಮಿಂಗೋ” ಎಂಬ ಮೂಕಿ ಚಿತ್ರಗಳನ್ನು ಅವರು ನಿರ್ದೇಶಿಸಿದರು. ನಟ, ನಿರ್ದೇಶಕ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಅಪಾರ ಆನುಭವವನ್ನೂ ಅವರು ಪಡೆದಿದ್ದಾರೆ.

ಬೆಳವಣಿಗೆ:ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಕವನ, ನಾಟಕ, ಕಾದಂಬರಿ, ಕಥೆ, ಪ್ರವಾಸ ಸಾಹಿತ್ಯ, ಹರಟೆ, ಮಕ್ಕಳ ವಿಶ್ವಕೋಶ, ವಿಜ್ನಾನ ವಿಶ್ವಕೋಶ, ಜೀವನ ಚರಿತ್ರೆ, ಯಕ್ಷಗಾನ, ಜಾನಪದ, ಚಲನಚಿತ್ರ, ಅನುವಾದ, ಅರ್ಥಕೋಶ, ಪ್ರಾಣಿ ಪಕ್ಷಿ ಪರಿಸರ ಹೀಗೆ ಹಲವಾರು ವೈವಿಧ್ಯಮಯ ವಿಷಯಗಳಲ್ಲಿ ಕೃತಿರಚನೆ ಮಾಡಿದ್ದಾರೆ.”ಮರಳಿ ಮಣ್ಣಿಗೆ”, “ಮೂಕಜ್ಜಿಯ ಕನಸುಗಳು”, “ಬೆಟ್ಟದ ಜೀವ”, “ಚೋಮನ ದುಡಿ”, “ಸರಸಮ್ಮನ ಸಮಾಧಿ”, “ಮೈ ಮನಗಳ ಸುಳಿಯಲಿ”, “ಬತ್ತದ ಹೊರೆ”, “ಗೆದ್ದವರ ದೊಡ್ಡಸ್ತಿಕೆ”, “ಸ್ವಪ್ನದ ಹೊಳೆ”, “ಒಂಟಿ ದನಿ”, “ಅಳಿದ ಮೇಲೆ”, “ಗೊಂಡಾರಣ್ಯ” ಕಾರಂತರ ಪ್ರಮುಖ ಕಾದಂಬರಿಗಳು. ಅವರು ಬರೆದ “ಮೂಕಜ್ಜಿಯ ಕನಸುಗಳು” ಕಾದಂಬರಿಗೆ ೧೯೭೮ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಕಾರಂತರು ೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ “ಕಾರಂತಜ್ಜ” ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.

“ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಡಾ|| ಶಿವರಾಮ ಕಾರಂತರು ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ,ಕಾದಂಬರಿಕಾರ.ಕನ್ನಡ ವೈಚಾರಿಕತೆಯ ಧೀಮಂತ ಪ್ರತಿನಿಧಿಯಂತಿದ್ದ ಕಾರಂತರ ಬಾಳ್ವೆಯೇ ಒಂದು ಪ್ರಯೋಗಶಾಲೆಯಂತಿತ್ತು. ಆಧುನಿಕ ಮನುಷ್ಯ ಏನೆಲ್ಲ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದೋ ಸರಿ ಸುಮಾರು ಆ ಎಲ್ಲ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಹಜವಾಗಿಯೇ ತಮ್ಮ ಸಾಹಿತ್ಯ ಸಾಧನೆಗಾಗಿ – ವಿಶೇಷವಾಗಿ ಕಾದಂಬರಿಕಾರರಾಗಿ- ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಕಾರಂತರು, ಕನ್ನಡಿಗರಿಗೆ ಕನ್ನಡದ ಒಂದು ವಿಶಿಷ್ಟ ಬದುಕಿನ ಮಾದರಿಯಾಗಿ ಬಹುಕಾಲ ನೆನಪಿನಲ್ಲಿ ಉಳಿಯುವರು.
ಹೀಗೆ ನಡೆದಾಡುವ ವಿಶ್ವಕೋಶವೇ ಆಗಿದ್ದ , ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿ ಬಾಳಿ, ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮ ಕಾರಂತರು ೧೯೯೭, ಡಿಸೆಂಬರ್ ೦೯ ರಂದು ನಿಧನ ಹೊಂದಿದರು.

ಕಾರಂತರ ಪ್ರಮುಖ ಸಾಹಿತ್ಯಕೃತಿಗಳು :

ಸಣ್ಣಕಥೆಗಳು: ತೆರೆಯ ಮರೆಯಲ್ಲಿ, ಹಸಿವು ಮತ್ತು ಹಾವು.
ಕಥನಕವನಗಳು: ಅದ್ಭುತ ಜಗತ್ತು, ಸಿರಿಗನ್ನಡ ಶಬ್ದಕೋಶ, ಕಿರಿಯರ ವಿಶ್ವಕೋಶ, ವಿಜ್ಞಾನ ಪ್ರಪಂಚ ೪ ಸಂಪುಟಗಳು, ಬಾಲಪ್ರಪಂಚ, ಯಕ್ಷಗಾನ ಬಯಲಾಟ.
ಕಾದಂಬರಿಗಳು: “ವಿಚಿತ್ರ ಕೂಟ” “ಮರಳಿ ಮಣ್ಣಿಗೆ”, “ಮೂಕಜ್ಜಿಯ ಕನಸುಗಳು”, “ಬೆಟ್ಟದ ಜೀವ”, “ಚೋಮನ ದುಡಿ”, “ಸರಸಮ್ಮನ ಸಮಾಧಿ”, “ಮೈ ಮನಗಳ ಸುಳಿಯಲಿ”, “ಬತ್ತದ ಹೊರೆ”, “ಗೆದ್ದವರ ದೊಡ್ಡಸ್ತಿಕೆ”, “ಸ್ವಪ್ನದ ಹೊಳೆ”, “ಒಂಟಿ ದನಿ”, “ಅಳಿದ ಮೇಲೆ”, “ಗೊಂಡಾರಣ್ಯ”
ಕವನ ಸಂಕಲನಗಳು: ರಾಷ್ಟ್ರಗೀತ ಸುಧಾಕರ ಇವರ ಮೊದಲ ಸಂಕಲನ.ಸೀಳ್ಗವನಗಳು
ನಾಟಕಗಳು: ಕಿಸಾಗೋತಾಮೀ, ಸೋಮಿಯ ಸೌಭಾಗ್ಯ, ಸಾವಿತ್ರಿ-ಸತ್ಯವಾನ-ಗೀತ ನಾಟಕ.ಗರ್ಭಗುಡಿ, ನಿಮ್ಮಓಟು ಯಾರಿಗೆ, ಕಟ್ಟೆಪುರಾಣ, ಗೆದ್ದವರ ಸಂಖ್ಯೆ.
ಪ್ರವಾಸ ಕಥನ: ಅಬೂವಿನಿಂದ ಬರ್ಮಾಕ್ಕೆ, ಅಪೂರ್ವ ಪಶ್ಚಿಮ, ಪಾತಾಲಕ್ಕೆ ಪಯಣ, ದಕ್ಷಿಣ ಹಿಂದೂಸ್ಥಾನ
ಆತ್ಮಚರಿತ್ರೆ: ಹುಚ್ಚುಮನಸ್ಸಿನ ಹತ್ತು ಮುಖಗಳು.
ಪ್ರಬಂಧ: ಮೈಗಳ್ಳತನ ದಿನಚರಿಯಿಂದ, ಮೈಲಿಗಲ್ಲಿನೊಡನೆ ಮಾತುಕತೆ.

ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೫೫ ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೫೮ ಸ್ವೀಡನ್ ನ “ಲಾ ಅರ್ಕೈವ್ ಇಂಟರ್ ನ್ಯಾಷನಲ್” ಸಂಸ್ಠೆಯು ಕಾರಂತರು ಯಕ್ಷಗಾನಕ್ಕಾಗಿ ಮಾಡಿದ ಸೇವೆಗಾಗಿ ಕಂಚಿನ ಪದಕ ನೀಡಿ ಗೌರವ
೧೯೫೯ರಲ್ಲಿ ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೭೫ ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ
೧೯೭೮ರಲ್ಲಿ ಮೂಕಜ್ಜಿಯ ಕನಸುಗಳು ಕೃತಿಗೆ ಜ್ಞಾನಪೀಠ ಪ್ರಶಸ್ತಿ
೧೯೮೯ರಲ್ಲಿ ಮೈ ಮನಗಳ ಸುಳಿಯಲ್ಲಿ ಕಾದಂಬರಿಗೆ ಪಂಪ ಪ್ರಶಸ್ತಿ
ಕರ್ನಾಟಕ, ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ.

೧೯೭೫ ರಲ್ಲಿ ಭಾರತ ಸರ್ಕಾರವು ಕಾರಂತರಿಗೆ “ಪದ್ಮಭೂಷಣ” ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಆದರೆ ಸರ್ಕಾರ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ ಅದನ್ನು ಕಾರಂತರು ವಿರೋಧಿಸಿ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸಿ ಪ್ರತಿಭಟಿಸಿದರು.

ಕೃತಿಗಳು

ಕವನ ಸಂಕಲನಗಳು

  • ರಾಷ್ಟ್ರಗೀತ ಸುಧಾಕರ
  • ಸೀಳ್ಗವನಗಳು

ಕಾದಂಬರಿಗಳು

  • ಅದೇ ಊರು, ಅದೆ ಮರ
  • ಅಳಿದ ಮೇಲೆ
  • ಅಂಟಿದ ಅಪರಂಜಿ
  • ಆಳ, ನಿರಾಳ
  • ಇದ್ದರೂ ಚಿಂತೆ
  • ಇನ್ನೊಂದೇ ದಾರಿ
  • ಇಳೆಯೆಂಬ
  • ಉಕ್ಕಿದ ನೊರೆ
  • ಒಡಹುಟ್ಟಿದವರು
  • ಒಂಟಿ ದನಿ
  • ಔದಾರ್ಯದ ಉರುಳಲ್ಲಿ
  • ಕಣ್ಣಿದ್ದೂ ಕಾಣರು
  • ಕನ್ನಡಿಯಲ್ಲಿ ಕಂಡಾತ
  • ಕನ್ಯಾಬಲಿ
  • ಕರುಳಿನ ಕರೆ
  • ಕೇವಲ ಮನುಷ್ಯರು
  • ಗೆದ್ದ ದೊಡ್ಡಸ್ತಿಕೆ
  • ಗೊಂಡಾರಣ್ಯ
  • ಜಗದೋದ್ಧಾರ ನಾ
  • ಜಾರುವ ದಾರಿಯಲ್ಲಿ
  • ದೇವದೂತರು
  • ಧರ್ಮರಾಯನ ಸಂಸಾರ
  • ನಷ್ಟ ದಿಗ್ಗಜಗಳು
  • ನಂಬಿದವರ ನಾಕ, ನರಕ
  • ನಾವು ಕಟ್ಟಿದ ಸ್ವರ್ಗ
  • ನಿರ್ಭಾಗ್ಯ ಜನ್ಮ
  • ಬತ್ತದ ತೊರೆ
  • ಭೂತ
  • ಮರಳಿ ಮಣ್ಣಿಗೆ
  • ಮುಗಿದ ಯುದ್ಧ
  • ಮೂಜನ್ಮ
  • ಮೈ ಮನಗಳ ಸುಳಿಯಲ್ಲಿ
  • ಮೊಗ ಪಡೆದ ಮನ
  • ವಿಚಿತ್ರ ಕೂಟ
  • ಶನೀಶ್ವರನ ನೆರಳಿನಲ್ಲಿ
  • ಸನ್ಯಾಸಿಯ ಬದುಕು
  • ಸಮೀಕ್ಷೆ
  • ಸರಸಮ್ಮನ ಸಮಾಧಿ
  • ಸ್ವಪ್ನದ ಹೊಳೆ
  • ಹೆತ್ತಳಾ ತಾಯಿ

ಚಲನಚಿತ್ರವಾಗಿರುವ ಕಾದಂಬರಿಗಳು

  • ಕುಡಿಯರ ಕೂಸು (ಚಲನಚಿತ್ರವಾಗಿದೆ)
  • ಚಿಗುರಿದ ಕನಸು(ಚಲನಚಿತ್ರವಾಗಿದೆ)
  • ಚೋಮನ ದುಡಿ(ಚಲನಚಿತ್ರವಾಗಿದೆ)
  • ಬೆಟ್ಟದ ಜೀವ(ಚಲನಚಿತ್ರವಾಗಿದೆ)
  • ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

ನಾಟಕ

  • ಅವಳಿ ನಾಟಕಗಳು
  • ಏಕಾಂಕ ನಾಟಕಗಳು
  • ಐದು ನಾಟಕಗಳು
  • ಕಟ್ಟೆ ಪುರಾಣ
  • ಕಠಾರಿ ಭೈರವ
  • ಕರ್ಣಾರ್ಜುನ
  • ಕೀಚಕ ಸೈರಂಧ್ರಿ
  • ಗರ್ಭಗುಡಿ
  • ಗೀತ ನಾಟಕಗಳು
  • ಜಂಬದ ಜಾನಕಿ
  • ಜ್ಯೂಲಿಯಸ್ ಸೀಸರ್
  • ಡುಮಿಂಗೊ
  • ದೃಷ್ಟಿ ಸಂಗಮ
  • ನವೀನ ನಾಟಕಗಳು
  • ನಾರದ ಗರ್ವಭಂಗ
  • ಬಿತ್ತಿದ ಬೆಳೆ
  • ಬೆವರಿಗೆ ಜಯವಾಗಲಿ
  • ಬೌದ್ಧ ಯಾತ್ರಾ
  • ಮಂಗಳಾರತಿ
  • ಮುಕ್ತದ್ವಾರ
  • ಯಾರೊ ಅಂದರು
  • ವಿಜಯ
  • ವಿಜಯ ದಶಮಿ
  • ಸರಳ ವಿರಳ ನಾಟಕಗಳು
  • ಸಾವಿರ ಮಿಲಿಯ
  • ಹಣೆ ಬರಹ
  • ಹಿರಿಯಕ್ಕನ ಚಾಳಿ
  • ಹೇಗಾದರೇನು?
  • ಹೇಮಂತ

ಸಣ್ಣ ಕತೆ

  • ಕವಿಕರ್ಮ
  • ತೆರೆಯ ಮರೆಯಲ್ಲಿ
  • ಹಸಿವು
  • ಹಾವು

ಹರಟೆ/ವಿಡಂಬನೆ

  • ಗ್ನಾನ
  • ಚಿಕ್ಕ ದೊಡ್ಡವರು
  • ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು
  • ಮೈಗಳ್ಳನ ದಿನಚರಿಯಿಂದ
  • ಮೈಲಿಕಲ್ಲಿನೊಡನೆ ಮಾತುಕತೆಗಳು
  • ಹಳ್ಳಿಯ ಹತ್ತು ಸಮಸ್ತರು

ಪ್ರವಾಸ ಕಥನ

  • ಅಪೂರ್ವ ಪಶ್ಚಿಮ
  • ಅರಸಿಕರಲ್ಲ
  • ಅಬೂವಿನಿಂದ ಬರಾಮಕ್ಕೆ
  • ಪಾತಾಳಕ್ಕೆ ಪಯಣ
  • ಪೂರ್ವದಿಂದ ಅತ್ಯಪೂರ್ವಕ್ಕೆ
  • ಯಕ್ಷರಂಗಕ್ಕಾಗಿ ಪ್ರವಾಸ

ಆತ್ಮಕಥನ

  • ಸ್ಮೃತಿಪಟಲದಿಂದ (೧,೨,೩)
  • ಹುಚ್ಚು ಮನಸ್ಸಿನ ಹತ್ತು ಮುಖಗಳು

ಜೀವನ ಚರಿತ್ರೆ

  • ಕಲಾವಿದ ಕೃಷ್ಣ ಹೆಬ್ಬಾರರು

ಕಲಾಪ್ರಬಂಧ

  • ಕಲೆಯ ದರ್ಶನ
  • ಕರ್ನಾಟಕದಲ್ಲಿ ಚಿತ್ರಕಲೆ
  • ಚಾಲುಕ್ಯ ವಾಸ್ತು ಮತ್ತು ಶಿಲ್ಪ
  • ಚಿತ್ರಶಿಲ್ಪ, ವಾಸ್ತುಕಲೆಗಳು
  • ಜಾನಪದ ಗೀತೆಗಳು
  • ಭಾರತೀಯ ಚಿತ್ರಕಲೆ
  • ಭಾರತೀಯ ಶಿಲ್ಪ
  • ಯಕ್ಷಗಾನ ಬಯಲಾಟ
  • ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು

ವೈಜ್ಞಾನಿಕ

  • ಅದ್ಭುತ ಜಗತ್ತು (೧. ವಿಚಿತ್ರ ಖಗೋಲ, ೨. ನಮ್ಮ ಭೂಖಂಡಗಳು)
  • ಉಷ್ಣವಲಯದ ಆಗ್ನೇಸ್ಯ
  • ಪ್ರಾಣಿ ಪ್ರಪಂಚದ ವಿಸ್ಮಯಗಳು
  • ಮಂಗನ ಕಾಯಿಲೆ
  • ವಿಜ್ಞಾನ ಮತ್ತು ಅಂಧಶೃದ್ಧೆ
  • ವಿಶಾಲ ಸಾಗರಗಳು
  • ಹಿರಿಯ ಕಿರಿಯ ಹಕ್ಕಿಗಳು

ಇತರ

  • ಪ್ರಜಾಪ್ರಭುತ್ವವನ್ನು ಕುರಿತು
  • ಬಾಳ್ವೆಯೇ ಬೆಳಕು
  • ಬಾಳ್ವೆಯೇ ಬೆಳಕು ಅಥವಾ ಜೀವನ ಧರ್ಮ
  • ಮನೋದೇಹಿಯಾದ ಮಾನವ
  • ವಿಚಾರಶೀಲತೆ
  • ವಿಚಾರ ಸಾಹಿತ್ಯ ನಿರ್ಮಾಣ
  • ಸ್ವಾರ್ಥಿ ಮಾನವ

ಸಂಪಾದನೆ

  • ಐರೋಡಿ ಶಿವರಾಮಯ್ಯ ಬದುಕು, ಬರಹ
  • ಕೌಶಿಕ ರಾಮಾಯಣ
  • ಪಂಜೆಯವರ ನೆನಪಿಗಾಗಿ

ವಿಶ್ವಕೋಶ

  • ಕಲಾ ಪ್ರಪಂಚ
  • ಪ್ರಾಣಿ ಪ್ರಪಂಚ
  • ಬಾಲ ಪ್ರಪಂಚ (೧,೨,೩)
  • ವಿಜ್ಞಾನ ಪ್ರಪಂಚ (೧,೨,೩,೪)

ನಿಘಂಟು

  • ಸಿರಿಗನ್ನಡ ಅರ್ಥಕೋಶ

ಮಕ್ಕಳ ಪುಸ್ತಕಗಳು

  • ಅನಾದಿ ಕಾಲದ ಮನುಷ್ಯ
  • ಒಂದೇ ರಾತ್ರಿ ಒಂದೇ ಹಗಲು
  • ಗಜರಾಜ
  • ಗೆದ್ದವರ ಸತ್ಯ
  • ಢಂ ಢಂ ಢೋಲು
  • ನರನೋ ವಾನರನೋ
  • ಮರಿಯಪ್ಪನ ಸಾಹಸಗಳು
  • ಮಂಗನ ಮದುವೆ
  • ಸೂರ್ಯ ಚಂದ್ರ
  • ಹುಲಿರಾಯ
  • ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆಗೆ ಸಂಬಂಧಿಸಿದ ೧೦ ಪುಸ್ತಕಗಳು
  • ಐಬಿಎಚ್, ಮೂಲವಿಜ್ಞಾನ ಪಾಠಮಾಲೆ ಹಾಗು ‘ಇಕೊ’ ದವರಿಗಾಗಿ ಮಾಡಿದ ಅನುವಾದಗಳು : ಸುಮಾರು ೧೩೩
  • ‘ಇಕೊ’ ದವರಿಗಾಗಿ ಮಾಡಿದ ಸಂಪಾದಿತ ಪುಸ್ತಕಗಳು : ೪೨

 

ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃತಿಗಳು

  • Folk Art of Karnataka
  • Karnataka Paintings
  • My Concern for Life, Literature and Art
  • Picturesque South Kanara
  • Yakshagana

ಶೈಕ್ಷಣಿಕ ಕೃತಿಗಳು

ಮಕ್ಕಳ ಶಿಕ್ಷಣ

  • ಓದುವ ಆಟ
  • ಗೃಹ ವಿಜ್ಞಾನ (೧,೨,೩)
  • ಚಿತ್ರಮಯ ದಕ್ಷಿಣ ಕನ್ನಡ
  • ಚಿತ್ರಮಯ ದಕ್ಷಿಣ ಕನ್ನಡ – ಅಂದು, ಇಂದು
  • ಚಿತ್ರಮಯ ದಕ್ಷಿಣ ಹಿಂದುಸ್ತಾನ
  • ನಾಗರಿಕತೆಯ ಹೊಸ್ತಿಲಲ್ಲಿ
  • ರಮಣ ತಾತ
  • ಸ್ನೀತಿ (೧,೨,೩)
  • ಸಾಮಾನ್ಯ ವಿಜ್ಞಾನ (೧,೨,೩)
  • ಸಿರಿಗನ್ನಡ ಪಾಠಮಾಲೆ (೧,೨,೩,೪,೫,೬,೭)
  • ಹೂಗನ್ನಡ ಪಾಠಮಾಲೆ (೧,೨,೩,೪,೫,೬,೭,೮)

ವಯಸ್ಕರ ಶಿಕ್ಷಣ

  • ಅಳಿಲ ಭಕ್ತಿ ಮಳಲ ಸೇವೆ
  • ಕರ್ನಾಟಕದ ಜಾನಪದ ಕಲೆಗಳು
  • ಕೋಳಿ ಸಾಕಣೆ
  • ಜೋಗಿ ಕಂಡ ಊರು
  • ದಕ್ಷಿಣ ಹಿಂದುಸ್ತಾನದ ನದಿಗಳು
  • ದೇವ ಒಲಿದ ಊರು
  • ಬೇರೆಯವರೂ ಸರಿ ಇರಬಹುದು
  • ಹುಟ್ಟು ಸಾವು ಒಟ್ಟು ಒಟ್ಟು
Categories
ಕನ್ನಡ ದ-ರಾ-ಬೇಂದ್ರೆ ವ್ಯಕ್ತಿ ಪರಿಚಯ ಸಾಹಿತ್ಯ

ವ್ಯಕ್ತಿ ಪರಿಚಯ – ದ.ರಾ.ಬೇಂದ್ರೆ

ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ.
ಜನನ: ದ.ರಾ.ಬೇಂದ್ರೆಯವರು ೧೮೯೬ನೆಯ ಇಸವಿ ಜನವರಿ ೩೧ ರಂದು ಧಾರವಾಡದಲ್ಲಿ ಜನಿಸಿದರು. ತಂದೆ ರಾಮಚಂದ್ರ , ತಾಯಿ ಅಂಬವ್ವ. ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ದ.ರಾ.ಬೇಂದ್ರೆ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ತೀರಿಕೊಂಡರು. ೧೯೧೩ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬಳಿಕ ಬೇಂದ್ರೆ ಪುಣೆಯ ಕಾಲೇಜಿನಲ್ಲಿ ಓದಿ ೧೯೧೮ರಲ್ಲಿ ಬಿ.ಎ. ಮಾಡಿಕೊಂಡರು. ಹಿಡಿದದ್ದು ಅಧ್ಯಾಪಕ ವೃತ್ತಿ. ೧೯೩೫ರಲ್ಲಿ ಎಮ್.ಎ. ಮಾಡಿಕೊಂಡು ಕೆಲಕಾಲ (೧೯೪೪ – ೧೯೫೬) ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು.
ಬೆಳವಣಿಗೆ: ಸಾಹಿತ್ಯ ರಚನೆ ಅವರ ಮೊದಲ ಒಲವು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಕವಿತೆಗಳನ್ನು ಕಟ್ಟಿದರು. ೧೯೧೮ರಲ್ಲಿ ಅವರ ಮೊದಲ ಕವನ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ೧೯೨೫ ರಲ್ಲಿ ಪ್ರಕಟವಾದ “ಕೃಷ್ಣಕುಮಾರಿ” ಇವರ ಮೊದಲ ಕವನಸಂಕಲನ. ಅಲ್ಲಿಂದಾಚೆಗೆ ಅವರು ಸತತವಾಗಿ ಕಾವ್ಯ ರಚನೆ ಮಾಡುತ್ತಲೇ ಬ೦ದರು.
ಬೇಂದ್ರೆಯವರು ೧೯೧೯ರಂದು ಹುಬ್ಬಳ್ಳಿಯಲ್ಲಿ ಲಕ್ಷ್ಮೀಬಾಯಿಯವರನ್ನು ವಿವಾಹವಾದರು; ಅವರ ಪ್ರಥಮ ಕಾವ್ಯ ಸಂಕಲನ “ಕೃಷ್ಣ ಕುಮಾರಿ”ಯು ಆಗಲೇ ಪ್ರಕಟವಾಗಿತ್ತು. ಧಾರವಾಡ ಆಕಾಶವಾಣಿ ಕೇಂದ್ರದ ಸಾಹಿತ್ಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದರು.
`ಅಂಬಿಕಾತನಯದತ್ತ’ನಾಗಿ ಕನ್ನಡ ಕಾವ್ಯಕ್ಕೊಂದು ಹೊಸ ಶೋಭೆ ತಂದುಕೊಟ್ಟ ಶಬ್ದ ಗಾರುಡಿಗ, ಸಹಜ ಕವಿ. “ಕುಣಿಯೋಣು ಬಾರಾ ಕುಣಿಯೋಣು ಬಾ”, “ಇಳಿದು ಬಾ ತಾಯಿ ಇಳಿದು ಬಾ”, “ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು”, ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಜೀವನವನ್ನು ಕುರಿತು ಪರಿಣಾಮಕಾರಿಯಾಗಿ ಹೇಳಿದ ಧೀಮಂತ. “ಗರಿ”, “ಕಾಮಕಸ್ತೂರಿ”, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ”, “ಸಖೀಗೀತ”, “ಮೇಘದೂತ”, “ಶ್ರಾವಣ ಬಂತು” ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು. ಇವರ ನಾಕುತಂತಿ ಕವನಸಂಕಲನಕ್ಕೆ ೧೯೭೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು.ಬೇಂದ್ರೆಯವರು ಕವಿತೆಗಳನ್ನಲ್ಲದೆ ಒಂಭತ್ತು ವಿಮರ್ಶಾ ಗ್ರಂಥಗಳನ್ನು, ಹದಿನಾಲ್ಕು ನಾಟಕಗಳನ್ನು, ಏಳು ಅನುವಾದ ಕೃತಿಗಳನ್ನು, ಐದು ಮರಾಠಿ ಹಾಗೂ ಒಂದು ಇಂಗ್ಲಿಷ್ ಕೃತಿಗಳನ್ನು ರಚಿಸಿದ್ದಾರೆ. ೧೯೨೧ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ “ಗೆಳೆಯರ ಗುಂಪು” ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇಂಬು ನೀಡಿತು. ಆಗಿನ್ನೂ ಸ್ವಾತಂತ್ರ್ಯ ಚಳುವಳಿ ಬಿಸಿ ಮುಟ್ಟಿದ್ದ ಸಮಯ. ಬೇಂದ್ರೆ ಯವರ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಎಂಬ ಕವನವು ಆಗಿನ ಬ್ರಿಟಿಷ್ ಸರ್ಕಾರದ ಕೋಪಕ್ಕೆ ಕಾರಣವಾಯಿತು. ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳುವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದರು.

ಅಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದರು. ಶ್ರೀ ಅರವಿಂದರ ವಿಚಾರಗಳಲ್ಲಿ ಆಸಕ್ತಿ ತೋರಿದ ಅವರು ಅರವಿಂದರ ಕೃತಿಯನ್ನು ಇಂಗ್ಲೀಷಿನಿಂದ ಭಾಷಾಂತರ ಮಾಡಿಕೊಟ್ಟರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳ ನಾದಮಾಧುರ್ಯ ಅಪಾರ. ಇವರು ಬರೆದ “ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ”,”ಇಳಿದು ಬಾ ತಾಯಿ”,”ಹಿಂದ ನೋಡದ ಗೆಳತಿ” ಇಂದಿಗೂ ಅನೇಕರಿಗೆ ಅತ್ಯಂತ ಪ್ರೀತಿಪಾತ್ರ ಕವನಗಳಾಗಿವೆ.

ಗಿರೀಶ್ ಕಾರ್ನಾಡರು ನಿರ್ದೇಶಿಸಿರುವ ಬೇಂದ್ರೆ ಡಾಕ್ಯುಮೆಂಟರಿ ದೃಶ್ಯಮಾಧ್ಯಮದ ಒಂದು ಅನನ್ಯ ಕಲಾಕೃತಿ.

ಕ್ರೈಸ್ಟ್ ವಿಶ್ವವಿದ್ಯಾಲಯದ(ಮೊದಲು ಕ್ರೈಸ್ಟ್ ಕಾಲೇಜು) ಕನ್ನಡ ಸಂಘ ಪ್ರತಿವರ್ಷ ದ.ರಾ.ಬೇಂದ್ರೆ ಅಂತರಕಾಲೇಜು ಕವನ ಸ್ಪರ್ಧೆಯನ್ನು,ಅ.ನ.ಕೃ.ಲೇಖನ ಸ್ಪರ್ಧೆಯನ್ನು ನಡೆಸುಕೊಂಡು ಬರುತ್ತಿದೆ.

ಪ್ರಶಸ್ತಿ, ಪುರಸ್ಕಾರ, ಬಿರುದು:

೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೫೮ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೬೪ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ
೧೯೬೫ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ
೧೯೬೮ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು
೧೯೭೩ರಲ್ಲಿ ‘ನಾಕುತಂತಿ’ ಕೃತಿಗೆ ಜ್ಞಾನಪೀಠಪ್ರಶಸ್ತಿ
ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು

೧೯೮೧ರ ಅಕ್ಟೋಬರಿನಲ್ಲಿ ತೀರಿಕೊಂಡ ಬೇಂದ್ರೆ ಇಂದಿಗೂ ಹಲವು ಕವಿ -ಸಾಹಿತಿಗಳಿಗೆ ಸಾಮಾನ್ಯ ಜನರಿಗೆ ಸ್ಫೂರ್ತಿಯ ಸೆಲೆ.

ಕೃತಿಗಳು

ಕವನ ಸಂಕಲನ
(ಪ್ರಥಮ ಆವೃತ್ತಿಯ ವರ್ಷದೊಂದಿಗೆ) ಅಂಬಿಕಾತನಯದತ್ತರ ಸಮಗ್ರ ಕಾವ್ಯ ೬ ಸಂಪುಟಗಳು

  • ೧೯೨೨: ಕೃಷ್ಣಾಕುಮಾರಿ;
  • ೧೯೩೨: ಗರಿ;
  • ೧೯೩೪: ಮೂರ್ತಿ ಮತ್ತು ಕಾಮಕಸ್ತೂರಿ;
  • ೧೯೩೭: ಸಖೀಗೀತ;
  • ೧೯೩೮: ಉಯ್ಯಾಲೆ;
  • ೧೯೩೮: ನಾದಲೀಲೆ;
  • ೧೯೪೩: ಮೇಘದೂತ (ಕಾಳಿದಾಸನ ಸಂಸ್ಕೃತ ಮೇಘದೂತದ ಕನ್ನಡ ಅವತರಣಿಕೆ)
  • ೧೯೪೬: ಹಾಡುಪಾಡು;
  • ೧೯೫೧: ಗಂಗಾವತರಣ;
  • ೧೯೫೬: ಸೂರ್ಯಪಾನ;
  • ೧೯೫೬: ಹೃದಯಸಮುದ್ರ;
  • ೧೯೫೬: ಮುಕ್ತಕಂಠ;
  • ೧೯೫೭: ಚೈತ್ಯಾಲಯ;
  • ೧೯೫೭: ಜೀವಲಹರಿ;
  • ೧೯೫೭: ಅರಳು ಮರಳು;
  • ೧೯೫೮: ನಮನ;
  • ೧೯೫೯: ಸಂಚಯ;
  • ೧೯೬೦: ಉತ್ತರಾಯಣ;
  • ೧೯೬೧: ಮುಗಿಲಮಲ್ಲಿಗೆ;
  • ೧೯೬೨: ಯಕ್ಷ ಯಕ್ಷಿ;
  • ೧೯೬೪: ನಾಕುತಂತಿ;
  • ೧೯೬೬: ಮರ್ಯಾದೆ;
  • ೧೯೬೮: ಶ್ರೀಮಾತಾ;
  • ೧೯೬೯: ಬಾ ಹತ್ತರ;
  • ೧೯೭೦: ಇದು ನಭೋವಾಣಿ;
  • ೧೯೭೨: ವಿನಯ;
  • ೧೯೭೩: ಮತ್ತೆ ಶ್ರಾವಣಾ ಬಂತು;
  • ೧೯೭೭: ಒಲವೇ ನಮ್ಮ ಬದುಕು;
  • ೧೯೭೮: ಚತುರೋಕ್ತಿ ಮತ್ತು ಇತರ ಕವಿತೆಗಳು;
  • ೧೯೮೨: ಪರಾಕಿ;
  • ೧೯೮೨: ಕಾವ್ಯವೈಖರಿ;
  • ೧೯೮೩: ತಾ ಲೆಕ್ಕಣಕಿ ತಾ ದೌತಿ;
  • ೧೯೮೩: ಬಾಲಬೋಧೆ;
  • ೧೯೮೬: ಚೈತನ್ಯದ ಪೂಜೆ;
  • ೧೯೮೭: ಪ್ರತಿಬಿಂಬಗಳು;

ವಿಮರ್ಶೆ

  • ೧೯೪೦: ಸಾಹಿತ್ಯಸಂಶೋಧನೆ;
  • ೧೯೪೫: ವಿಚಾರ ಮಂಜರಿ;
  • ೧೯೫೪: ಕವಿ ಲಕ್ಷ್ಮೀಶನ ಜೈಮಿನಿಭಾರತಕ್ಕೆ ಮುನ್ನುಡಿ;
  • ೧೯೫೯: ಮಹಾರಾಷ್ಟ್ರ ಸಾಹಿತ್ಯ;
  • ಸಾಯೋ ಆಟ (ನಾಟಕ)
  • ೧೯೬೨: ಕಾವ್ಯೋದ್ಯೋಗ;
  • ೧೯೬೮: ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು;
  • ೧೯೭೪: ಸಾಹಿತ್ಯದ ವಿರಾಟ್ ಸ್ವರೂಪ;
  • ೧೯೭೬: ಕುಮಾರವ್ಯಾಸ ಪುಸ್ತಿಕೆ;
Categories
ಕನ್ನಡ ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ವ್ಯಕ್ತಿ ಪರಿಚಯ ಸಾಹಿತ್ಯ

ವ್ಯಕ್ತಿ ಪರಿಚಯ – ಯು.ಆರ್.ಅನಂತಮೂರ್ತಿ

ಶ್ರೇಷ್ಠ ಸೃಜನಶೀಲ ಚಿಂತಕರಾದ ಅನಂತಮೂರ್ತಿಯವರು ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ, ೧೯೩೨ ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಮತ್ತು ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದ ಇವರು ಹಲವು ಕಾಲೇಜುಗಳಲ್ಲಿ ಅಧ್ಯಾಪಕರಾಗಿದ್ದರು.

ಅನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೇರಳದ ಕೊಟ್ಟಾಯಂನ ಮಹಾತ್ಮಗಾಂದಿ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ಸೇವೆಸಲ್ಲಿಸಿದರು. ಅಮೆರಿಕದ ಅಯೋವಾ ವಿಶ್ವವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ, ಕೊಲಾಪುರದ ಶಿವಾಜಿ ವಿಶ್ವವಿದ್ಯಾಲಯ, ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ- ಮೊದಲಾದ ಕಡೆ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.

ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ಅನಂತಮೂರ್ತಿ ತಮ್ಮ ಗೆಳೆಯರೊಡನೆ ತರಂಗಿಣಿ ಎಂಬ ಕೈಬರಹದ ಪತ್ರಿಕೆಯನ್ನು ತರುತ್ತಿದ್ದರು. ಇವರ ಎಂದೆಂದೂ ಮುಗಿಯದ ಕಥೆ, ಪ್ರಕಟವಾದದ್ದು ೧೯೫೫ ರಲ್ಲಿ ಅದು ಹೊಸ ಸಂವೇದನೆಯ ಕಾಲ. ಮಾಸ್ತಿ ಸಂಪ್ರದಾಯ ಮತ್ತು ಪ್ರಗತಿಶೀಲ ಚಳುವಳಿ – ಇವೆರಡು ಮಾದರಿಗಳಿಗಿಂತ ಬಿನ್ನರೀತಿಯಲ್ಲಿ ಅನಂತಮೂರ್ತಿ ಬರೆಯಬೇಕಾಗಿತ್ತು. ಬರೆದರು. ಇವರ ಮೂಲಕ ಸಣ್ಣಸಾಹಿತ್ಯದಲ್ಲಿ ನವ್ಯತೆ ಮೊದಲಿಗೆ ಬಂದಿತು ತಮ್ಮ ಮೊದಲ ಕೃತಿಯಲ್ಲಿಯೇ ಅನಂತಮೂರ್ತಿಯವರು ಪ್ರಬುದ್ಧತೆಯನ್ನು ಮೆರೆದಿದ್ದರು. ಪ್ರಶ್ನೆ (೧೯೬೩), ಮೌನಿ (೧೯೭೨), ಆಕಾಶ ಮತ್ತು ಬೆಕ್ಕು (೧೯೮೧), ಮತ್ತು ಸೂರ್ಯನಕುದುರೆ (೧೯೯೫), ಇವರ ಅನಂತರದ ಕಥಾಸಂಕಲನಗಳು. ಇವರ ಆನಂತರದ ಕಥಾಸಂಕಲನಗಳು, ಸಮಗ್ರ ಕಥಾಸಂಕಲನವೂ (೧೯೯೩) ಪ್ರಕಟವಾಗಿದೆ. ತಂತ್ರ ಮತ್ತು ವಸ್ತುವಿನ ದೃಷ್ಟಿಯಿಂದ ಕಥಾಸಾಹಿತ್ಯದಲ್ಲಿ ಇವರು ಅನೇಕ ಪ್ರಯೋಗಗಳನ್ನು ಮಾಡಿದರು. ಜಿ.ಎಸ್.ಆಮೂರ ಕೇಳುವಂತೆ – ಸಣ್ಣಕಥೆಯು ಅನಂತಮೂರ್ತಿಯವರಿಗೆ ವಿಶೇಷತಃ ಒಗ್ಗಿದ ಸಾಹಿತ್ಯ ಪ್ರಕಾರ. ಇವರ ಘಟಶ್ರಾದ್ದ, ಸಣ್ಣಕಥೆಯನ್ನಾಧರಿಸಿದ ಕನ್ನಡ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ಲಬಿಸಿತು. ಇದೇ ಕಥೆಯನ್ನಾಧರಿಸಿದ ಹಿಂದಿ ಚಿತ್ರಕೂಡ ಪ್ರಶಸ್ತಿ ಪಡೆಯಿತು.

ಸಂಸ್ಕಾರ (೧೯೬೫) ಅನಂತಮೂರ್ತಿಯವರ ಮೊದಲ ಕಾದಂಬರಿ. ಬ್ರಾಹ್ಮಣ್ಯವು ಯಾವುದನ್ನು ಪಾವಿತ್ರ್ಯವೆಂದು ಪರಿಗಣಿಸಿತ್ತೋ ಅದನ್ನು ಅಪವಿತ್ರಗೊಳಿಸುವುದರ ಮೂಲಕ ಬ್ರಾಹ್ಮಣ್ಯವನ್ನು ದಿಕ್ಕರಿಸುವ, ಶವಸಂಸ್ಕಾರದ ಸಮಸ್ಯೆಯನ್ನು ಮುಂದಿಡುತ್ತ ವ್ಯಕ್ತಿತ್ವದ ಸಂಸ್ಕಾರವನ್ನು ಒತ್ತಾಯಿಸುವ ರೂಪಕ ಈ ಕಾದಂಬರಿ. ಬ್ರಾಹ್ಮಣ-ಶೂದ್ರ ಪ್ರಜ್ಞೆಗಳ ಪಾತಾಳಿಯ ಮೇಲೆ ಹೆಣೆದ ಸಂಸ್ಕಾರವು ಸಾಹಿತ್ಯ ಮತ್ತು ಸಮಾಜದಲ್ಲಿ ವೈಚಾರಿಕ ಕ್ರಾಂತಿಯನ್ನೆಬ್ಬಿಸಿತು. ಅನೇಕ ಭಾರತೀಯ ಭಾಷೆಗಳೇ ಅಲ್ಲದೆ ಇಂಗ್ಲಿಷ್, ರಷ್ಯನ್, ಫ್ರೆಂಚ್, ಹಂಗೇರಿಯನ್ ಭಾಷೆಗಳಿಗೆ ಅನುವಾದವಾಯಿತು. ಚಲನಚಿತ್ರವಾಗಿ (೧೯೭೦) ರಾಷ್ಟ್ರಪ್ರಶಸ್ತಿಯನ್ನು ಪಡೆದ ಈ ಕೃತಿ ಹೊಸ ಅಲೆಯ ಚಲನಚಿತ್ರ ಚಳುವಳಿಗೆ ಪ್ರೇರಣೆ ನೀಡಿತು.

ಅನಂತಮೂರ್ತಿಯವರು ಆನಂತರ ಬರೆದ ಕಾದಂರಿಗಳು; ಭಾರತೀಪುರ (೧೯೭೩), ಅವಸ್ಥೆ (೧೯೭೮), ಮತ್ತು ಭವ (೧೯೯೪), ಭಾರತೀಪುರ; ಒಬ್ಬ ಭಾರತೀಯ ಸೋಷಿಯಲಿಸ್ಟ್ ಸುಧಾರಕನ ಸಮಾಜ ಸುಧಾರಣೆಯ ಕಥೆ. ಆಧುನಿಕ ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದ ಇಂಡಿಯಾದ ತರುಣನೊಬ್ಬನ ತಲ್ಲಣಗಳ ಕಥೆ. ಸಮಾಜ ಸುಧಾರಣೆಯ ವಿಫಲತೆಯ ಕಥೆ. ಅವಸ್ಥೆ; ಹಿಂದುಳಿದ ಜಾತಿಗಳಿಂದ ಮೇಲೆದ್ದು ಬಂದ ಉತ್ಸಾಹಿ ಪ್ರಾಮಾಣಿಕ ರಾಜಕೀಯ ನಾಯಕನೊಬ್ಬನು ಭ್ರಷ್ಟ ರಾಜಕಾರಣದ ಬಲೆಯಲ್ಲಿ ಸಿಲುಕಿ ಸೋಲುವ ಕಥೆ. ರೈತಚಳುವಳಿಯ ರಾಜಕಾರಣದ ಸೋಲಿನ ಕಥೆ. ಭವ ಆಧುನಿಕ ಬದುಕಿನ ಸಮಸ್ಯೆಗಳನ್ನು ಅದರ ಆಯಸ್ಥಳಗಳಲ್ಲಿ ಮುಟ್ಟಿನೋಡಲು ಪ್ರಯತ್ನಿಸುವ, ಬದಿಕಿನ ಅನುರಕ್ತಿ – ವಿರಕ್ತಿಗಳ ಸ್ವರೂಪವನ್ನು ಶೋದಿಸ ಬಯಸುವ ಕಾದಂಬರಿಯಾಗಿದೆ.

ಅನಂತಮೂರ್ತಿಯವರ ಕಾದಂಬರಿಗಳಲ್ಲಿ ಪ್ರಧಾನವಾಗಿ ಚರ್ಚಿತವಾಗುವ ಸಂಗತಿಗಳು – ರಾಜಕೀಯ ಮೌಲ್ಯಗಳ ಶೋಧ, ಕ್ರಾಂತಿಯ ವೈಫಲ್ಯ, ರಾಜಕೀಯ ಹಾಗೂ ನೈತಿಕತೆಯ ಪ್ರಶ್ನೆ ಐಹಿಕಜೀವನ ಆಹ್ವಾನಗಳು. ಅನಂತಮೂರ್ತಿಯವರ ಈ ಕಾದಂಬರಿಗಳು – ಕೃತಿಗಳು ಲೇಖಕನಿಗೆ ವೈಚಾರಿಕ ಆಕೃತಿಗಳನ್ನು ಮಂಡಿಸುವುದಕ್ಕಿರುವ ಮಾಧ್ಯಮ ಎನ್ನುವ ರೀತಿಯಲ್ಲಿವೆ. ದಿವ್ಯ (೨೦೦೧) ಇತ್ತೀಚೆಗೆ ಪ್ರಕಟವಾದ ಇವರ ಐದನೆಯ ಕಾದಂಬರಿ. ಇದು ಮಲೆನಾಡಿನಲ್ಲಿ ೬೦ರ ದಶಕದ ಸುಮಾರಿನಲ್ಲಿ ನಡೆಯುವ ಕಥೆ. ಅಂತರ್ಜಾತೀಯ ಮತ್ತು ಅಂತರ್ಮತೀಯ ಸಂಘರ್ಷದ ಅಬಿವ್ಯಕ್ತಿಯಾಗಿದೆ. ಈ ಕೃತಿ ಇಂಗ್ಲಿಷಿಗೂ ಅನುವಾದಗೊಂಡಿದೆ.

೧೯೬೩ರಲ್ಲಿ ಪ್ರಕಟವಾದ ಬಾವಲಿ ಅನಂತಮೂರ್ತಿಯವರ ಮೊದಲ ಕವನ ಸಂಕಲನ ನಂತರ ಇದರಲ್ಲಿದ್ದ ಹತ್ತು ಕವಿತೆಗಳ ಜೊತೆಗೆ ಮತ್ತೈದು ಕವಿತೆಗಳನ್ನು ಸೇರಿಸಿ ೧೫ ಪದ್ಯಗಳು ಎಂಬ ಕವನ ಸಂಕಲನವನ್ನು ೧೯೭೦ರಲ್ಲಿ ಪ್ರಕಟಿಸಿದರು. ಅಜ್ಜನ ಹೆಗಲ ಸುಕ್ಕುಗಳು (೧೯೮೯) ಮತ್ತು ಮಿಥುನ (೧೯೯೨) ಈಚಿನವು. ಇವರು ಬರೆದಿರುವ ಏಕೈಕ ನಾಟಕ ಆವಾಹನೆ (೧೯೭೧) ಅಗೆದಷ್ಟೂ ಕೆಸರು ಮುಚ್ಚಿಕೊಳ್ಳುವಂತಹ ವಠಾರದ ಜಗತ್ತಿನೊಡನೆ ಯುವಕನೊಬ್ಬನ ಸೆಣಸಾಟ ಈ ನಾಟಕದ ವಸ್ತು, ಆತ್ಮನಿಷ್ಟೆ ಮತ್ತು ಸಂಪ್ರದಾಯಗಳ ನಿರಂತರ ಹೋರಾಟವನ್ನು ಚಿತ್ರಿಸುವುದಾಗಿದೆ.

ಅನಂತಮೂರ್ತಿಯವರು ಮುಖ್ಯವಾಗಿ ವೈಚಾರಿಕ, ಬೌದ್ಧಿಕಚಿಂತಕರು. ಅವರ ಕಾದಂಬರಿಗಳು ಕಥನ ಮಾದರಿಗಳಾಗಿರದೆ, ಥೀಸೀಸ್ ಮಾದರಿಯವಾಗಿರುವುದು ಈ ಕಾರಣಕ್ಕಾಗಿಯೇ. ಇವರು ಬರೆದ ವಿಮರ್ಶಾ, ವೈಚಾರಿಕ ಲೇಖನಗಳು ಕನ್ನಡ ವಿಮರ್ಶೆಗೆ ಹೊಸ ಆಯಾಮಗಳನ್ನು ತಂದುಕೊಟ್ಟವು. ಪ್ರಜ್ಞೆ ಮತ್ತು ಪರಿಸರ (೧೯೭೧) ಸನ್ನಿವೇಶ (೧೯೭೪) ಸಮಕ್ಷಮ (೧೯೮೦) ಪೂರ್ವಾಪರ (೧೯೯೦) ಸಂಸ್ಕೃತಿ ಮತ್ತು ಅಡಿಗ (೧೯೯೬) ಬೆತ್ತಲೆ ಪೂಜೆ ಯಾಕೆ ಕೂಡದು (೧೯೯೬) ನವ್ಯಾಲೋಕ (೧೯೯೭)- ಇವರ ಪ್ರಮುಖ ಸಾಹಿತ್ಯವಿಮರ್ಶೆ ಮತ್ತು ಸಂಸ್ಕೃತಿ ಚಿಂತನೆಯ ಕೃತಿಗಳಾಗಿವೆ. ಪ್ರಜ್ಞೆ ಮತ್ತು ಪರಿಸರದಲ್ಲಿನ ಪಾಶ್ಚಾತ್ಯ ಪ್ರೇರಣೆಗಳಿಗೆ, ಸಂವೇದನೆಗಳಿಗೆ ತೆರೆದುಕೊಂಡು ಉತ್ತಮಾಂಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬ ನಿಲುವಿನ ಅನಂತಮೂರ್ತಿಯವರು ಪೂರ್ವಾಪರ ಮತ್ತು ನಂತರದ ಕೃತಿಗಳಲ್ಲಿ ಅಂಥ ಹೊರಗಿನ ಪ್ರಭಾವಗಳಿಂದ ಬಿಡುಗಡೆ ಪಡೆಯುವ ರಹದಾರಿಗಳನ್ನು ಹುಡುಕುವತ್ತ ಚಿಂತಿಸುವುದನ್ನು ಕಾಣಬಹುದು. ೮೦ರ ದಶಕದಿಂದ ಇವರ ಸಂಪಾದಕತ್ವದಲ್ಲಿಬಂದ ರುಜುವಾತು ಸಾಹಿತ್ಯಕ ನಿಯತಕಾಲಿಕೆ ಈ ನಿಟ್ಟಿನಲ್ಲಿ ಮಹತ್ತರ ಕೆಲಸ ಮಾಡಿತು. ’Politics and Fiction in the 1930’ ಅನಂತಮೂರ್ತಿಯವರ ಪಿ.ಎಚ್.ಡಿ ಪದವಿ ಪಡೆದ (೧೯೬೬) ಪ್ರೌಡ ಪ್ರಬಂಧ. ದಾವ್‌ದ ಜಿಂಗ್ (೧೯೯೩) ಚೀನೀಯ ತಾತ್ವಿಕ ದರ್ಶನವನ್ನು ಮುಂದಿಡುವ ಇವರು ಅನುವಾದಿಸಿದ ಕೃತಿ ಅನೇಕ ಇಂಗ್ಲಿಷ್ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕನ್ನಡ ಸಾಹಿತ್ಯ ಸಂಸ್ಕೃತಿಗೆ ಇಂಥ ಮಹತ್ವದ ಕೃತಿಗಳನ್ನು ನೀಡಿರುವ ಅನಂತಮೂರ್ತಿ ಅಂತರರಾಷ್ಟ್ರೀಯ ಮಟ್ಟದ ಬರಹಗಾರ. ದೇಶ ದೇಶಗಳ ಅನೇಕ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ನ್ಯಾಷನಲ್‌ ಬುಕ್‌ ಟ್ರಸ್ಟ್ ನ ಅಧ್ಯಕ್ಷರು, ಕೇಂದ್ರಸಾಹಿತ್ಯ ಅಕಾಡಮಿಯ ಅಧ್ಯಕ್ಷರು ಆಗಿದ್ದ ಇವರು ಕರ್ನಾಟಕದ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೮೪) ಮಾಸ್ತಿಪ್ರಶಸ್ತಿ (೧೯೯೪) ಮತ್ತು ದೇಶದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿ (೧೯೯೪)ಯನ್ನು ಪಡೆದಿದ್ದಾರೆ.

ವಿಜಯೇಂದ್ರ

ಕೃತಿಗಳು

ಕಥಾ ಸಂಕಲನ

ಕಾದಂಬರಿಗಳು

  • ಸಂಸ್ಕಾರ (೧೯೬೫)
  • ಭಾರತೀಪುರ (೧೯೭೩)
  • ಅವಸ್ಥೆ (೧೯೭೮)
  • ಭವ (೧೯೯೪)
  • ದಿವ್ಯ (೨೦೦೧)
  • ಪ್ರೀತಿ ಮೃತ್ಯು ಮತ್ತು ಭಯ (೨೦೧೨)

ವಿಮರ್ಶೆ ಮತ್ತು ಪ್ರಬಂಧ ಸಂಕಲನ

  • ಪ್ರಜ್ಞೆ ಮತ್ತು ಪರಿಸರ (೧೯೭1)
  • ಪೂರ್ವಾಪರ (೧೯೮೦)
  • ಸಮಕ್ಷಮ (೧೯೮೦)
  • ಸನ್ನಿವೇಶ (೧೯೭೪)
  • ಯುಗಪಲ್ಲಟ (೨೦೦೧)
  • ವಾಲ್ಮೀಕಿಯ ನೆವದಲ್ಲಿ (೨೦೦೬)
  • ಮಾತು ಸೋತ ಭಾರತ (೨೦೦೭)
  • ಸದ್ಯ ಮತ್ತು ಶಾಶ್ವತ (೨೦೦೮)
  • ಸಂಸ್ಕೃತಿ ಮತ್ತು ಅಡಿಗ (೧೯೯೬)
  • ಬೆತ್ತಲೆ ಪೂಜೆ ಏಕೆ ಕೂಡದು (೧೯೯೯)
  • ಋಜುವಾತು (೨೦೦೭)
  • ಶತಮಾನದ ಕವಿ ಯೇಟ್ಸ್ (೨೦೦೮)
  • ಕಾಲಮಾನ (೨೦೦೯)
  • ಮತ್ತೆ ಮತ್ತೆ ಬ್ರೆಕ್ಟ್ (೨೦೦೯)
  • ಶತಮಾನದ ಕವಿ ವರ್ಡ್ಸ್ ವರ್ತ್ (೨೦೦೯)
  • ಶತಮಾನದ ಕವಿ ರಿಲ್ಕೆ (೨೦೦೯)
  • ರುಚಿಕರ ಕಹಿಸತ್ಯಗಳ ಕಾಲ (೨೦೧೧)
  • ಆಚೀಚೆ (೨೦೧೧)

ನಾಟಕ

  • ಆವಾಹನೆ (೧೯೬೮)

ಕವನ ಸಂಕಲನ

  • ಹದಿನೈದು ಪದ್ಯಗಳು (೧೯೬೭)
  • ಮಿಥುನ (೧೯೯೨)
  • ಅಜ್ಜನ ಹೆಗಲ ಸುಕ್ಕುಗಳು (೧೯೮೯)
  • ಅಭಾವ (೨೦೦೯)
  • ಸಮಸ್ತ ಕಾವ್ಯ (೨೦೧೨)

ಆತ್ಮಕತೆ

  • ಸುರಗಿ (೨೦೧೨)
  • ಮೊಳಕೆ (ಅಮಿತನ ಆತ್ಮಚರಿತ್ರೆ)

ಚಲನಚಿತ್ರವಾದ ಕೃತಿಗಳು

  • ಘಟಶ್ರಾದ್ಧ
  • ಸಂಸ್ಕಾರ
  • ಬರ
  • ಅವಸ್ಥೆ
  • ಮೌನಿ (ಸಣ್ಣಕಥೆ)
  • ದೀಕ್ಷಾ (ಹಿಂದಿ ಚಿತ್ರ)
  • ಪ್ರಕೃತಿ (ಸಣ್ಣಕಥೆ)

ಪ್ರಮುಖ ಉಪನ್ಯಾಸಗಳು

  • ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ, ತುಮಕೂರು, 2002
  • ಫ್ರೆಂಚ್ ಸಾಹಿತ್ಯ ಉತ್ಸವ, 2002
  • ಬರ್ಲಿನ್ ಸಾಹಿತ್ಯ ಉತ್ಸವ, 2002
  • ಕರ್ನಾಟಕವನ್ನು ಕುರಿತ ವಿಚಾರ ಸಂಕಿರಣ, ಅಯೋವಾ ವಿವಿ, 1997
  • ಭಾರತವನ್ನು ಕುರಿತ ವಿಚಾರ ಸಂಕಿರಣ, ಬರ್ಲಿನ್, ಜರ್ಮನಿ, 1997
  • ‘ದಿ ವರ್ಡ್ ಆ್ಯಸ್ ಮಂತ್ರ: ಎ ಸೆಲೆಬ್ರೇಷನ್ ಆಫ್ ರಾಜಾರಾವ್’ ವಿಚಾರ ಸಂಕಿರಣ, ಟೆಕ್ಸಾಸ್ ವಿವಿ, 1997
  • ‘ಟ್ರಾನ್ಸ್‌ಲೇಟಿಂಗ್ ಸೌತ್ ಏಷ್ಯನ್ ಲಿಟರೇಚರ್’ ವಿಚಾರ ಸಂಕಿರಣ, ಲಂಡನ್, 1993
  • ಭಾರತೀಯ ಲೇಖಕರ ನಿಯೋಗದ ಮುಖ್ಯಸ್ಥ, ಚೀನಾ, 1993
  • ಗಾಂಧಿ ಸ್ಮಾರಕ ಉಪನ್ಯಾಸ, ರಾಜಘಾಟ್, ವಾರಣಾಸಿ, 1989
  • ‘ಮಾರ್ಕ್ಸಿಸಂ ಅಂಡ್ ಲಿಟರೇಚರ್’, ಅಂಗನ್‌ಗಲ್ ಸ್ಮಾರಕ ಉಪನ್ಯಾಸ, ಮಣಿಪುರ, 1976.
Categories
ಕನ್ನಡ ಜ್ಞಾನಪೀಠ ಪುರಸ್ಕೃತರ ಕೃತಿ ಸಂಚಯ ವ್ಯಕ್ತಿ ಪರಿಚಯ ಸಾಹಿತ್ಯ

ವ್ಯಕ್ತಿ ಪರಿಚಯ – ಗಿರೀಶ್ ಕಾರ್ನಾಡ್

ಕನ್ನಡಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕನ್ನಡ ಸಾಹಿತ್ಯ ಹಾಗೂ ನಾಟಕ ಕ್ಷೇತ್ರದ ಮೇರು ದಿಗ್ಗಜ ಗಿರೀಶ್ ಕಾರ್ನಾಡ್. ಭಾರತದಲ್ಲೇ ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕಾರ್ನಾಡ್ ಮೊದಲಿಗರು.

ಗಿರೀಶ ಕಾರ್ನಾಡ್‌ರು ೧೯೩೮ ಮೇ ೧೯ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ| ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾಬಾಯಿ. ಪ್ರಗತಿಶೀಲ ಮನೋಭಾವದ ಡಾ| ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊ೦ಡರು. ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಮುಂದೆ ಕಾರ್ನಾಡರಿಗೆ ಇಂಥ ಪ್ರಗತಿಪರ ವಾತಾವರಣವೇ ಬೆಳವಣಿಗೆಯಲ್ಲಿ ಸಹಾಯವಾಯಿತು. ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗು ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು.ಆ ಬಳಿಕ Rhodes scholorship ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಶಿಯನ್ ಆಗಿದ್ದಾರೆ.ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು. ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು. ಬಹುಶಃ ಕನ್ನಡದ ಒಬ್ಬ ನಾಟಕಕಾರ ಇಷ್ಟೊಂದು ಭಾಷೆಗೆ ಪರಿಚಯವಾದದ್ದು ಪ್ರಥಮ. ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ನೌಕರಿಯಲ್ಲಿದ್ದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.

ಇಂಗ್ಲಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯಕೃತಿ “ಯಯಾತಿ” ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲಂಡಿನಿಂದ ಮರಳಿದ ಬಳಿಕ “ತುಘಲಕ” ಹಾಗೂ “ಹಯವದನ” ಪ್ರಕಟವಾದವು. ನಂತರ “ಅಂಜುಮಲ್ಲಿಗೆ”, “ನಾಗಮಂಡಲ”, “ತಲೆದಂಡ” ಹಾಗು “ಅಗ್ನಿ ಮತ್ತು ಮಳೆ” ಮುಂತಾದ ನಾಟಕಗಳನ್ನು ಬರೆದು ಉತ್ತಮ ನಾಟಕಕಾರರೆಂದು ಪ್ರಸಿದ್ಧರಾದರು. ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ ಇವರಿಗಾಗಿ ಬರೆದುಕೊಟ್ಟ ನಾಟಕ:”ಟಿಪ್ಪುವಿನ ಕನಸುಗಳು”.

ಚಿತ್ರರಂಗದಲ್ಲೂ ಕಾರ್ನಾಡ್ ರ ಪಾತ್ರ ಗಣನೀಯವಾದದ್ದು. ಯು,ಆರ್. ಅನಂತಮೂರ್ತಿ ಯವರ ವಿವಾದತ್ಮಕ ಕಾದಂಬರಿ “ಸಂಸ್ಕಾರ” ವನ್ನು ಚಲನಚಿತ್ರವನ್ನಾಗಿ ಮಾಡಿದ್ದಲ್ಲದೇ, ಆ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು., ಈ ಈ ಚಿತ್ರ ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ತಂದು ಕೊಟ್ಟಿತು. ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು. ಮುಂದೆ “ತಬ್ಬಲಿಯು ನೀನಾದೆ ಮಗನೆ”, “ಕಾಡು”, “ಒಂದಾನೊಂದು ಕಾಲದಲ್ಲಿ” ಚಿತ್ರಗಳನ್ನು ನಿರ್ದೇಶಿಸಿದರು. “ಕಾಡು” ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು. ನಂತರ “ಉತ್ಸವ”, “ಗೋಧೂಳಿ” ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು. ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ “ಕಾನೂರು ಹೆಗ್ಗಡಿತಿ” ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು. ಇದಲ್ಲದೆ”ಕನಕ ಪುರಂದರ”,”ದ.ರಾ.ಬೇಂದ್ರೆ” ಹಾಗು “ಸೂಫಿ ಪಂಥ” ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು. ಪರಿಸರ ವಿನಾಶ ಕುರಿತು “ಚೆಲುವಿ” ಕಿರಚಿತ್ರವನ್ನು ನಿರ್ದೇಶಿಸಿದರು. ೨೦೦೭ ರಲ್ಲಿ ತೆರೆ ಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ. ರಂಗಭೂಮಿ, ಚಲನಚಿತ್ರ ಕ್ಷೇತ್ರದಂತೆ ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ವೋ ಘರ್’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮೃಣಾಲ್ ಸೇನ್, ಸತ್ಯಜಿತ್ ರೇ, ಶ್ಯಾಮ್ ಬೆನೆಗಲ್ ಮುಂತಾದ ಪ್ರತಿಭಾವಂತ ನಿರ್ದೇಶಕರ ನಿರ್ದೇಶನದಲ್ಲಿ ಹಲವಾರು ಚಲನಚಿತ್ರಗಳಲ್ಲಿ, ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ೧೯೭೭ ರಲ್ಲಿ ನವದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮೌಲ್ಯ ನಿರ್ಣಾಯಕರಲ್ಲಿ ಒಬ್ಬರಾಗಿದ್ದರು. ಲಂಡನ್ನಿನಲ್ಲಿ ನಡೆದ ಭಾರತ ಉತ್ಸವ(ಫೆಸ್ಟಿವಲ್ ಆಫ್ ಇಂಡಿಯಾ, ೧೯೮೨) ಹಾಗೂ ಮಾಂಟ್ರಿಯಲ್ ಚಲನಚಿತ್ರೋತ್ಸವಗಳಲ್ಲಿ ಭಾರತದ ಅಧಿಕೃತ ಪ್ರತಿನಿಧಿಯಾಗಿ ಭಾಗವಹಿಸಿದರು. ವಿಜ್ಞಾನ-ತಂತ್ರಜ್ಞಾನದ ಮುನ್ನಡೆಯನ್ನು ಬಿಂಬಿಸುವ, ವಿಜ್ಞಾನಿ ಯಶ್‌ಪಾಲ್ ಮಾರ್ಗದರ್ಶನದ ‘ದಿ ಟರ್ನಿಂಗ್ ಪಾಯಿಂಟ್’ ಎನ್ನುವ ದೂರದರ್ಶನದ ಧಾರವಾಹಿಯಲ್ಲಿ ಮುಖ್ಯ ನಿರೂಪಕರಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದರು.

ಕರ್ನಾಟಕ ವಿಶ್ವವಿದ್ಯಾಲಯ ಕಾರ್ನಾಡರ ಸಾಹಿತ್ಯ-ಸಿನಿಮಾ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. “ಕಾರ್ನಾಡರು ವಸ್ತುವನ್ನು ಗ್ರಹಿಸುವ ಕ್ರಮದಲ್ಲೇ ಅವರ ಅನನ್ಯತೆ ಇದೆ. ಈ ಗ್ರಹಿಕೆಗೆ ಪೂರಕವಾದ ರಚನಾಕ್ರಮವನ್ನು ಅವರು ಕಂಡುಕೊಂಡಿದ್ದಾರೆ. ಒಂದು ಸಮಸ್ಯೆಯನ್ನು ನಾಟಕ ರೂಪಕ್ಕೆ ಒಗ್ಗಿಸಿಕೊಂಡು ಅದಕ್ಕೊಂದು structure ಕೊಟ್ಟು ಜನರ ಮುಂದಿಡುವುದರಲ್ಲೇ ನಾಟಕಕಾರನ ಯಶಸ್ಸು, ಸೋಲು ಎರಡೂ ಅಡಗಿದೆ.” ಎಂದು ಕಾರ್ನಾಡರ ನಾಟಕಗಳ ವಸ್ತು, ಗ್ರಹಿಕೆ ಬಗ್ಗೆ ಭಾರತೀಯ ರಂಗಭೂಮಿಯ ಹಿರಿಯ ನಿರ್ದೇಶಕ ಬಿ. ವಿ. ಕಾರಂತರು ದಾಖಲಿಸುತ್ತಾರೆ.

ಕಾರ್ನಾಡರಿಗೆ ಹಲವಾರು ಹುದ್ದೆಗಳು, ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿಗಳ ಗೌರವ ದೊರೆಕಿದೆ. ಕಾರ್ನಾಡ್ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನೆಹರು ಸೆಂಟರ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಶಸ್ತಿ, ಪುರಸ್ಕಾರ, ಬಿರುದು:

೯೬೨: ಯಯಾತಿ ನಾಟಕಕ್ಕೆ ರಾಜ್ಯಪ್ರಶಸ್ತಿ.
೧೯೭೦: ರಾಜ್ಯೋತ್ಸವ ಪ್ರಶಸ್ತಿ.
೧೯೭೦-೭೨: ಹೋಮಿಭಾಭಾ ಫೆಲೋಶಿಪ್-ಜನಪದ ರಂಗಭೂಮಿಯಲ್ಲಿನ ಸೃಜನಶೀಲ ಕಾರ್ಯಕ್ಕಾಗಿ.
೧೯೭೨: ನಾಟಕ ರಚನೆಗಾಗಿ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ;ವರ್ಷದ ಅತ್ಯುತ್ತಮ ನಾಟಕಕ್ಕಾಗಿ ಭಾರತೀಯ ನಾಟ್ಯ ಸಂಘದ ಕಮಲಾ ದೇವಿ ಪ್ರಶಸ್ತಿ(ಹಯವದನ ನಾಟಕಕ್ಕಾಗಿ)
೧೯೭೪: ಭಾರತ ಸರ್ಕಾರದಿಂದ’ಪದ್ಮಶ್ರೀ’ ಪ್ರಶಸ್ತಿ
೧೯೮೪: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ.
೧೯೮೯: ಕೊಲ್ಕತ್ತಾದ ನಂದೀಕರ್ ಪ್ರಶಸ್ತಿ
೧೯೯೦: ‘ಗ್ರಂಥಲೋಕ’ ದ ವರ್ಷದ ಲೇಖಕ ಪ್ರಶಸ್ತಿ.
೧೯೯೨: ‘ಪದ್ಮಭೂಷಣ’ ಪ್ರಶಸ್ತಿ-ಭಾರತ ಸರ್ಕಾರದಿಂದ;ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ-ಅತ್ಯುತ್ತಮ ನಾಟಕಕ್ಕಾಗಿ(ತಲೆದಂಡ)
ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ-ಅತ್ಯುತ್ತಮ ಸೃಜನಶೀಲ ನಾಟಕಕ್ಕಾಗಿ(ನಾಗಮಂಡಲ).
ದಕ್ಷಿಣ ಭಾರತ ಪುಸ್ತಕ ಮಾರಾಟಗಾರರ ಮತ್ತು ಪ್ರಕಾಶಕರ ಸಂಘದ ಪ್ರಶಸ್ತಿ;ಬಿ.ಎಚ್.ಶ್ರೀಧರ್ ಪ್ರಶಸ್ತಿ.
೧೯೯೩: ತಲೆದಂಡ ನಾಟಕಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ
೧೯೯೪:ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಶೇಷ ಪುರಸ್ಕಾರ;ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ-ತಲೆದಂಡಕ್ಕಾಗಿ.
೧೯೯೭: ಗುಬ್ಬಿ ವೀರಣ್ಣ ಪ್ರಶಸ್ತಿ.
೧೯೯೮: ಕಾಳಿದಾಸ್ ಸಮ್ಮಾನ್.
೧೯೯೯: ಭಾರತೀಯ ಜ್ಞಾನಪೀಠ ಪ್ರಶಸ್ತಿ.

ನಾಟಕ ರಚನೆ

ನಾಟಕಗಳು

  1. ಮಾ ನಿಷಾಧ – ಏಕಾಂಕ ನಾಟಕ
  2. ಯಯಾತಿ – ೧೯೬೧
  3. ತುಘಲಕ್ – ೧೯೬೪
  4. ಹಯವದನ – ೧೯೭೨(ನಾಟ್ಯರಂಗ ಪ್ರಶಸ್ತಿ )
  5. ಅಂಜುಮಲ್ಲಿಗೆ – ೧೯೭೭
  6. ಹಿಟ್ಟಿನ ಹುಂಜ ಅಥವಾ ಬಲಿ – ೧೯೮೦
  7. ನಾಗಮಂಡಲ – ೧೯೯೦
  8. ತಲೆದಂಡ – ೧೯೯3
  9. ಅಗ್ನಿ ಮತ್ತು ಮಳೆ – ೧೯೯೫
  10. ಟಿಪ್ಪುವಿನ ಕನಸುಗಳು – ೧೯೯೭
  11. ಒಡಕಲು ಬಿಂಬ – ೨೦೦೫
  12. ಮದುವೆ ಅಲ್ಬಮ್
  13. ಫ್ಲಾವರ್ಸ – ೨೦೧೨
  14. ಬೆಂದ ಕಾಳು ಆನ್ ಟೋಸ್ಟ- ೨೦೧೨

ಆತ್ಮ ಚರಿತ್ರೆ

ಆಡಾಡತ ಆಯುಷ್ಯ (೨೦೧೧)

ಚಿತ್ರರಂಗ

  • ‘ಸಂಸ್ಕಾರ'(೧೯೭೦) ಚಲನಚಿತ್ರವು ಕನ್ನಡದ ಪ್ರಥಮ ಕಲಾತ್ಮಕ ಚಲನಚಿತ್ರ. ಯು.ಆರ್.ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಗಿರೀಶ ಕಾರ್ನಾಡರದು ಪ್ರಮುಖ ಪಾತ್ರ-ಪ್ರಾಣೇಶಾಚಾರ್ಯರದು. ಪಿ.ಲಂಕೇಶ ಅವರದು ವಿರುದ್ಧ ವ್ಯಕ್ತಿತ್ವದ ಪಾತ್ರ-ನಾರಣಪ್ಪನದು. ಈ ಚಿತ್ರದ ನಿರ್ದೇಶಕರು ಪಟ್ಟಾಭಿರಾಮರೆಡ್ಡಿ ಅವರು ಮತ್ತು ಚಿತ್ರಕಥೆ ಗಿರೀಶ ಕಾರ್ನಾಡರದ್ದು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲವನ್ನು ತಂದು ಕೊಟ್ಟ ಚಿತ್ರ.
  • ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ(೧೯೭೨) ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು. ನಿರ್ಮಾಣ: ಜಿ.ವಿ.ಅಯ್ಯರ್.
  • ಮುಂದೆ ‘ತಬ್ಬಲಿಯು ನೀನಾದೆ ಮಗನೆ'(೧೯೭೭), ‘ಕಾಡು'(೧೯೭೪), ‘ಒಂದಾನೊಂದು ಕಾಲದಲ್ಲಿ'(೧೯೭೮) ಚಿತ್ರಗಳನ್ನು ನಿರ್ದೇಶಿಸಿದರು. ‘ಕಾಡು’ ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು.
  • ನಂತರ ಉತ್ಸವ್ಗೋಧೂಳಿ ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು.
  • ಬಳಿಕ ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ “ಕಾನೂರು ಹೆಗ್ಗಡಿತಿ”(೧೯೯೯) ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು.
  • ಇದಲ್ಲದೆ ಕನಕ ಪುರಂದರದ.ರಾ.ಬೇಂದ್ರೆ ಹಾಗು ಸೂಫಿ ಪಂಥ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು.
  • ಪರಿಸರ ವಿನಾಶ ಕುರಿತು ಚೆಲುವಿ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು.
  • ೨೦೦೭ರಲ್ಲಿ ತೆರೆಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶ್ರೀಧರ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ.