ಕೃತಿ:ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ), ಕನ್ನಡ, ಕಲೆ, ನೃತ್ಯ, ಪುಸ್ತಕಗಳಿಂದ, ವ್ಯಕ್ತಿ ಪರಿಚಯ
ಲೇಖಕರು: ಡಾ. ಉಷಾಕಿರಣ್
ಕೃತಿಯನ್ನು ಓದಿ
Category: ಅಕಾಡೆಮಿ ಪ್ರಶಸ್ತಿ ಪುರಸ್ಕೃತರು (೧೯೫೯ – ೬೦ ರಿಂದ ೨೦೦೭-೦೮ವರೆಗೆ)
ಕರ್ನಾಟಕದ ನೃತ್ಯ ರಂಗವನ್ನು ದೇಶ ವಿದೇಶಗಳಲ್ಲಿ ಮೆರೆಸಿದ ಹಿರಿಮೆ ಲಲಿತಾ ಶ್ರೀನಿವಾಸನ್ ಅವರದು. ಸ್ವತಃ ನರ್ತಕಿಯಾಗಿ, ನೃತ್ಯ ಸಂಯೋಜಕಿಯಾಗಿ, ನೃತ್ಯ ಶಿಕ್ಷಕಿಯಾಗಿ ನಾಡಿನ ನೃತ್ಯ ರಂಗದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಗಳಿಸಿಕೊಂಡಿರುವ ತನ್ನ ಪ್ರಾರಂಭಿಕ ನೃತ್ಯ ಶಿಕ್ಷಣವನ್ನು ಗುರು ಹೆಚ್. ಆರ್.ಕೇಶವಮೂರ್ತಿಯವರಿಂದ ಪಡೆದರು. ನಂತರ ಅಭಿನಯ ವಿಶಾರದೆ ಡಾ|| ಕೆ. ವೆಂಕಟಲಕ್ಷ್ಮಮ್ಮ. ಮೂಗೂರು ಜೇಜಮ್ಮ, ಗುರು ನರ್ಮದಾ ಮುಂತಾದವರಿಂದ ಹೆಚ್ಚಿನ ಶಿಕ್ಷಣ ಪಡೆದು ನೃತ್ಯದ ವಿದ್ಯುತ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಪಡೆದ ಈ ಕಲಾವಿದೆ ೧೯೬೦ರಲ್ಲಿ ರಂಗ ಪ್ರವೇಶ ಮಾಡಿದರು. ಅಲ್ಲಿಂದ ಮುಂದೆ ಭಾರತದ ಬಹುತೇಕ ಎಲ್ಲ ಪ್ರತಿಷ್ಠಿತ ಸಾಂಸ್ಕೃತಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಲಲಿತ ಶ್ರೀನಿವಾಸನ್ ಅವರ ನೃತ್ಯ ಶಾಲೆ. “ನೂಪುರ” ಅನೇಕ ಒಳ್ಳೆಯ ನೃತ್ಯ ಕಲಾವಿದರನ್ನು ತಯಾರು ಮಾಡಿದೆ. “ನೂಪುರ” ದ ವಾರ್ಷಿಕ “ನಿತ್ಯ ನೃತ್ಯ” ಮಹೋತ್ಸವ ನಾಡಿನ ನೃತ್ಯ ರಂಗದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. “ಶೃಂಗಾರ ನಾಯಿಕಾ”, “ಶೃಂಗಾರನಾಯಿಕಾ”, “ಕೃಷ್ಣ ಪಾರಿಜಾತ”, “ಕೌಶಿಕ ಸುಕೃತಂ”, “ಬೀಬಿ ನಾಚಿಯಾರ್”, “ನೌಕಾ ಚರಿತ್ರೆ” ಲಾಸ್ಯೋತ್ಸವ ಮುಂತಾದ ಅನೇಕ ನೃತ್ಯ ರೂಪಕಗಳು ಈ ಕಲಾವಿದೆಯ ಮಹತ್ವದ ಕೊಡುಗೆ. ಹಾಗೆಯೇ ’ಸುಳಾದಿ ನೃತ್ಯ’ಗಳನ್ನು ಪುನರುತ್ಥಾನ ಮಾಡಿದ ಹಿರಿಮೆ ಇವರದು. ಅಮೇರಿಕೆಯಲ್ಲಿ ನೃತ್ಯ ಕಲೆಯ ಬಗ್ಗೆ ಹೆಚ್ಚಿನ ಅಭ್ಯಾಸ ಮಾಡಿದ ಕೀರ್ತಿ ಇವರದು.
ಬಹುಮುಖ ಪ್ರತಿಭೆಯ ಈ ನೃತ್ಯ ಕಲಾವಿದೆಗೆ ಕೇಂದ್ರ ಸರ್ಕಾರದ ಮಾವನ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಫೆಲೋಶಿಪ್ ದೊರೆತಿವೆ. ಲಲಿತಾ ಅವರು ಕರ್ನಾಟಕ ನೃತ್ಯ ಶಿಲ್ಪಗಳು ಹಾಗೂ ಮೈಸೂರು ಅರಮನೆಯಲ್ಲಿ ನೃತ್ಯದ ವಿಷಯವಾಗಿ ಸಂಶೋಧನೆ ನಡೆಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ. ಪದವಿ ಹಾಗೂ ಸಂಸ್ಕೃತದಲ್ಲಿ “ಕೋವಿದ” ಪದವಿ ಇವರಿಗೆ ಲಭ್ಯವಾಗಿವೆ.
ರಾಷ್ಟ್ರಪತಿಗಳಿಂದ “ಶಿರೋಮಣಿ ಪ್ರಶಸ್ತಿ” ಹಾಗೂ ಮಾನವ ಸಂಪನ್ಮೂಲ ಮಂತ್ರಿಗಳಿಂದ “ಪ್ರಿಯದರ್ಶಿನಿ” ಅಲ್ಲದೇ ಲಲಿತಾರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೮೯-೯೦ನೇ ಸಾಲಿನ ಗೌರವ ಪ್ರಶಸ್ತಿಯನ್ನು ’ಕರ್ನಾಟಕ ಕಲಾ ತಿಲಕ’ ಬಿರುದಿನೊಂದಿಗೆ ಲಲಿತಾ ಶ್ರೀನಿವಾಸನ್ ಅವರಿಗೆ ನೀಡಿ ಗೌರವಿಸಿದೆ.
ಮಂಗಳೂರಿನ ಕೋಟೆಕಾರ್ನಲ್ಲಿ ೧೯೩೩ರಲ್ಲಿ ಜನಿಸಿದ ಶ್ರೀ ಮೋಹನಕುಮಾರರು ಪ್ರಾರಂಭದಲ್ಲಿ ವಿಠಲ್ ಮಾಸ್ಟರ್ ಮತ್ತು ರಾಜನ್ ಅಯ್ಯರ್ ಅವರುಗಳಲ್ಲಿ ನೃತ್ಯ ಶಿಕ್ಷಣ ಪಡೆದು, ಮುಂದೆ ಸೇಲಂ ರಾಜರತ್ನಂ ಪಿಳ್ಳೆ ಅವರಲ್ಲಿ ಪ್ರೌಢ ವ್ಯಾಸಂಗ ಮಾಡಿ ಭರತನಾಟ್ಯ ಸಾಧನೆ ಮಾಡಿದ್ದಾರೆ. “ನಾಟ್ಯ ನಿಕೇತನ”ದ ಭೋದಕರಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೃತ್ಯ ಪ್ರಸಾರ -ಪ್ರಚಾರಕರಾಗಿ ದುಡಿಯುತ್ತಿದ್ದಾರೆ. ಇವರ ಶಿಷ್ಯರು ರಾಜ್ಯದಲ್ಲೂ ವಿದೇಶಗಳಲ್ಲೂ ಕಲಾ ಸೇವೆಯಲ್ಲಿ ತೊಡಗಿದ್ದಾರೆ. ರಾಜ್ಯ ಮಟ್ಟದ ನೃತ್ಯ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ತಮ್ಮ ಪಾಂಡಿತ್ಯವನ್ನು ಬಳಸಿದ್ದಾರೆ. ಕಾಮದಹನ, ಶ್ರೀ ಕೃಷ್ಣ ಪಾರಿಜಾತ, ಪರಶುರಾಮ, ಶ್ರೀ ಕೃಷ್ಣಲೀಲೆ, ಪಳನಿ ಮಹಾತ್ಮೆ, ದಶಾವತಾರ ಮುಂತಾದ ನೃತ್ಯ ರೂಪಕಗಳನ್ನು ನಿರ್ದೇಶಿಸಿದ್ದಾರೆ. ತುಳುವಿನಲ್ಲೂ ನೃತ್ಯ ರೂಪಕವನ್ನು ಸಂಯೋಜಿಸಿರುವುದೊಂದು ವಿಶೇಷ. ಕೆಲ ಸಾಕ್ಷ್ಯಚಿತ್ರಗಳಿಗೂ ನಾಟ್ಯ ಸಂಯೋಜನೆ ಮಾಡಿರುವ ಶ್ರೀಯುತರಿಗೆ ಈ ಹಿಂದೆ ಅಕಾಡೆಮಿಯ ಪುರಸ್ಕಾರವೂ, ತಮ್ಮ ಹುಟ್ಟೂರಿನಲ್ಲಿ “ನಾಟ್ಯ ಮೋಹನ” ಎಂಬ ಅಭಿನಂದನಾ ಗ್ರಂಥವೂ ಸಮರ್ಪಣೆಯಾಗಿದೆ. ಈ ನಾಟ್ಯಾಚಾರ್ಯರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೧೯೯೧-೯೨ರ ಪ್ರಶಸ್ತಿ ಹಾಗೂ “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.
ಶ್ರೀಮತಿ ವಸುಂಧರ ದೊರೆಸ್ವಾಮಿಯವರು ದಿವಂಗತ ಕೆ. ರಾಜರತ್ನಂ ಪಿಳ್ಳೆಯವರಲ್ಲಿ ಶಿಕ್ಷಣ ಪಡೆದು, ವಿದ್ವತ್ನಲ್ಲಿ ಪ್ರಥಮ ಶ್ರೇಣಿ ಪಡೆದಿರುವರಲ್ಲದೆ, ಪಂಡನಲ್ಲೂರು ಶೈಲಿಯ ಇಂದಿನ ಪ್ರಮುಖ ನರ್ತಕರಲ್ಲಿ ಒಬ್ಬರಾಗಿದ್ದಾರೆ. ರಾಜ್ಯ, ರಾಷ್ಟ್ರದ ಪ್ರಮುಖ ಸಭೆ-ಸಮ್ಮೇಳನಗಳಲ್ಲಿ ನರ್ತಿಸಿರುವ ಶ್ರೀಮತಿಯವರು ಸಿಂಗಾಪುರ್ನಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ದೂರದರ್ಶನದ ರಾಷ್ಟ್ರೀಯ ಜಾಲದಲ್ಲೂ ಇವರ ನೃತ್ಯ ಬಿತ್ತರಗೊಂಡಿದೆ. “ಯೋಗ ಮತ್ತು ಭರತನಾಟ್ಯ” ಕುರಿತು ಕೌಲನಿಕ ಅಧ್ಯಯನ ಮಾಡಿರುವ ಈಕೆ ಹಲವಾರು ನೃತ್ಯ ರೂಪಕಗಳನ್ನು ನಿರ್ದೇಶಿಸಿದ್ದಾರೆ. ಮೈಸೂರಿನ “ವಸುಂಧರಾ ಫರ್ಫಾರ್ಮಿಂಗ್ ಆಟ್ಸ್! ಸೆಂಟರ್” ಮೂಲಕ ಕಿರಿಯರಿಗೆ ನೃತ್ಯ ಶಿಕ್ಷಣವನ್ನೂ ನೀಡುತ್ತಿದ್ದಾರೆ. ಎರಡು ಅವಧಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆಯೂ ಆಗಿದ್ದ ವಸುಂಧರಾ ಅವರಿಗೆ ಸುರ ಸಿಂಗಾರ ಸಂಸದ್ನ ’ಶಿಂಗಾರ ಮಣಿ’ ಬಿರುದೂ ಸಂದಿದೆ. ಕ್ರಿಯಾಶೀಲ ನರ್ತಕಿ ಶ್ರೀಮತಿ ವಸುಂಧರ ದೊರೆಸ್ವಾಮಿ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೧೯೯೦-೯೧ರ ಪ್ರಶಸ್ತಿಯನ್ನು “ಕರ್ನಾಟಕ ಕಲಾ ತಿಲಕ” ಬಿರುದಿನೊಂದಿಗೆ ನೀಡಿ ಗೌರವಿಸಿದೆ.
ತನ್ನ ರಜತ ಮಹೋತ್ಸವ ವರ್ಷಕ್ಕೆ ಕಾಲಿಡುತ್ತಿರುವ ಬೆಂಗಳೂರಿನ ವೆಂಕಟೇಶ ನಾಟ್ಯ ಮಂದಿರದ ನಿರ್ದೇಶಕಿ ರಾಧಾ ಶ್ರೀಧರ್ ನಾಡಿನ ನೃತ್ಯ ಕ್ಷೇತ್ರದಲ್ಲಿ ಚಿರಪರಿಚಿತ ವ್ಯಕ್ತಿ ಬಿ.ಎ., ಬಿ.ಎಡ್ ಪದವೀಧರೆಯಾದ ಇವರು ತಮ್ಮ ಭರತನಾಟ್ಯ ಶಿಕ್ಷಣವನ್ನು ಹೆಚ್. ಆರ್. ಕೇಶವಮೂರ್ತಿಯವರಲ್ಲಿ ಪ್ರಾರಂಭಿಸಿ, ಪ್ರೊ. ಕೃಷ್ಣರಾವ್-ಚಂದ್ರಭಾಗಾದೇವಿ, ಮುತ್ತಯ್ಯ ಪಿಳ್ಳೆ ಮತ್ತು ಡಾ. ಕೆ. ವೆಂಕಟಲಕ್ಷ್ಮಮ್ಮನವರುಗಳಲ್ಲಿ ಮುಂದುವರಿಸಿ, ನೃತ್ಯ ಕಲೆಯ ವಿವಿಧ ಅಂಗಗಳಲ್ಲಿ ಪರಿಣತಿ ಸಂಪಾದಿಸಿಕೊಂಡರು.
ನೃತ್ಯ ಪ್ರದರ್ಶನಕ್ಕಿಂತ ನೃತ್ಯ ಶಿಕ್ಷಣಕ್ಕೇ ತಮ್ಮನ್ನು ತೊಡಗಿಸಿಕೊಂಡ ರಾಧಾ ೧೯೬೯ ರ ಸುಮಾರಿನಲ್ಲಿ ತಮ್ಮ ನೃತ್ಯ ಶಾಲೆಯನ್ನು ಪ್ರಾರಂಭಿಸಿ, ತನ್ಮೂಲಕ ಅನೇಕ ಶಿಷ್ಯರನ್ನು ತಯಾರು ಮಾಡಿದ್ದಾರೆ. ಅವರುಗಳಲ್ಲಿ ಅವರ ಪುತ್ರಿ ಇಂದ್ರಾಣಿ ಪಾರ್ಥಸಾರಥಿ, ಪೂರ್ಣಿಮಾ ಅಶೋಕ್, ರಾಮು, ರೂಪಾ ಶಾಂಸುಂದರ್, ಸವಿತಾ ಶೇಖರ್ರಂಥವರು, ತಮಗೆ ತಮ್ಮ ಗುರುಗಳಿಗೆ ಒಳ್ಳೆಯ ಹೆಸರನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಧಾ ವಿಶ್ವವಿದ್ಯಾಲಯ ಮಟ್ಟದ ಹಾಗೂ ವಿದ್ಯಾ ಇಲಾಖೆ ನಡೆಸುವ ಪರೀಕ್ಷೆಗಳಿಗೆ ಪರೀಕ್ಷೆಗಳಿಗೆ ಪರೀಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. ತಮ್ಮ ಶಾಲೆಯ ಮುಖಾಂತರ ಇವರು ನಡೆಸಿರುವ ನೃತ್ಯ ಕಾರ್ಯಗಾರಗಳು ಉಪಯುಕ್ತವಾಗಿ ಪರಿಣಮಿಸಿವೆ. ರಾಧಾ ನೃತ್ಯ ಸಂಯೋಜನೆಯಲ್ಲಿ ಪಳಗಿದ ಕೈ, ಹತ್ತಕ್ಕೂ ಮೀರಿ ನಿರ್ಮಾಣಗೊಂಡಿರುವ ಇವರ ನೃತ್ಯ-ನಾಟಕಗಳಲ್ಲಿ ಹಲವು ಒಂದಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ. ಅವುಗಳಲ್ಲಿ “ಗೀತ ಗೋವಿಂದ”, “ಕೋಡೂರು ಕೊಡಗೂಸು”, “ಶ್ರೀನಿವಾಸ ಕಲ್ಯಾಣ” ಹೆಚ್ಚು ಜನಪ್ರಿಯವಾದುವುಗಳು. ರಾಧಾರಿಗೆ ಸನ್ಮಾನಗಳೂ ಕಡಿಮೆ ಇಲ್ಲ. ಅವುಗಳಲ್ಲಿ ಗಾಯನ ಸಮಾಜದ. ವಿಶ್ವ ಹಿಂದೂ ಪರಿಷತ್ತಿನ ಪ್ರಶಸ್ತಿಗಳು, ಮೀನಾಕ್ಷಿ ಸುಂದರಂ ಸಾಂಸ್ಕೃತಿಕ ಕೇಂದ್ರದ, ಶೇಷಾದ್ರಿಪುರಂ ಸ್ತ್ರೀ ಸಮಾಜದ, “ಮಹಾ ಮಾಯ” ದ ಸನ್ಮಾನಗಳು ಸೇರಿದೆ. ಇವರಿಗೆ ನಮ್ಮ ಅಕಾಡೆಮಿ ತನ್ನ ೧೯೯೨-೯೩ರ ಪ್ರಶಸ್ತಿ ಹಾಗೂ “ಕರ್ನಾಟಕ ಕಲಾ ತಿಲಕ” ಬಿರುದನ್ನು ನೀಡಿ ಗೌರವಿಸಿದೆ.