Loading Events

« All Events

  • This event has passed.

ಡಾ. ಮಳಲಿ ವಸಂತ ಕುಮಾರ್

August 10, 2023

೧೦.೦೮.೧೯೪೫ ತಮ್ಮ ಅಧ್ಯಯನ ಹಾಗೂ ಗ್ರಂಥ ರಚನೆಗಳಿಂದ ಜಾನಪದ ಕ್ಷೇತ್ರದಲ್ಲಿ ಪ್ರಖ್ಯಾತರಾಗಿರುವ ವಸಂತ ಕುಮಾರ್‌ರವರು ಹುಟ್ಟಿದ್ದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಳಲಿ ಎಂಬಲ್ಲಿ. ತಂದೆ ಪಟೇಲ್ ಚಿಕ್ಕೇಗೌಡರು, ತಾಯಿ ದೇವಮ್ಮ. ಪ್ರೌಢಶಾಲೆಯವರೆಗೆ ಓದಿದ್ದು ಮಳಲಿಯಲ್ಲಿ ತಂದೆಯ ಮಾರ್ಗದರ್ಶನದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ನಂತರ ಮಂಗಳೂರಿನ ಸ್ನಾತಕೋತ್ತರ ಕೇಂದ್ರದಿಂದ ಪಡೆದ ಎಂ.ಎ ಪದವಿ. ಮದರಾಸು ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿಯ ನಂತರ ‘ಕುವೆಂಪು ಅವರ ನಾಟಕಗಳು’ ಎಂಬ ವಿಷಯದಮೇಲೆ ಡಾ.ಎಚ್. ತಿಪ್ಪೇರುದ್ರಸ್ವಾಮಿಯವರ ಮಾರ್ಗದರ್ಶನದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿದ ಕೆಲಕಾಲಾನಂತರ ಯುವರಾಜ ಕಾಲೇಜಿನಲ್ಲಿ ಉಪಪ್ರಾಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಾದ ಹೇಮಗಂಗೋತ್ರಿ ಮಂಡ್ಯ ಸ್ನಾತಕೋತ್ತರ ಕೇಂದ್ರಗಳಲ್ಲಿ ಪ್ರಾಧ್ಯಾಪಕರಾಗಿ ನಿರ್ವಹಿಸಿದ ಕಾರ‍್ಯಗಳು. ಇವರ ಮಾರ್ಗದರ್ಶನದಲ್ಲಿ ಹತ್ತು ವಿದ್ಯಾರ್ಥಿಗಳು ಡಾಕ್ಟರೇಟ್ ಪಡೆದಿದ್ದರೆ, ಹಲವಾರು ಮಂದಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುತ್ತಾ ಬಂದಿದ್ದರೂ ಹೆಚ್ಚಿನ ಒಲವು ತೋರಿದ್ದು ಜನಪದ ಸಾಹಿತ್ಯದತ್ತ. ಹಾಸನ ಜಿಲ್ಲೆಯ ಸಮೃದ್ಧ ಜನಪದ ಸಾಹಿತ್ಯವನ್ನು ಪೋಷಿಸಿಕೊಂಡು ಬಂದಿರುವ ಗೊರೂರು, ಮತಿಘಟ್ಟ ಕೃಷ್ಣಮೂರ್ತಿ, ಎಸ್.ವಿ. ರಂಗಣ್ಣ, ಎಲ್. ಗುಂಡಪ್ಪ, ಎಸ್.ಕೆ. ಕರೀಂಖಾನ್, ಎಚ್.ಜೆ. ಲಕ್ಕಪ್ಪಗೌಡ ಇವರುಗಳ ಪ್ರೇರಣೆ. ವಿದ್ಯಾರ್ಥಿದೆಸೆಯಲ್ಲಿಯೇ ಜಾನಪದ ಸಂಗ್ರಹ, ಜಾನಪದ ಶಾಸ್ತ್ರೀಯ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದು ಗ್ರಾಮದೇವತೆಯನ್ನು ಕುರಿತು ರಚಿಸಿದ ಮೊಟ್ಟ ಮೊದಲ ಕೃತಿ ‘ಮಳಲಿ ಗಿಡ್ಡಮ್ಮ’. ಗ್ರಾಮೀಣ ಪ್ರದೇಶದ ಸಂಸ್ಕೃತಿಯನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿದ ಈ ಕೃತಿಯಲ್ಲಿ ದೇವಿಯನ್ನು ಕುರಿತು ಜನಪದದಲ್ಲಿರುವ ನಂಬಿಕೆ, ಪ್ರಾರ್ಥನೆ, ಗೀತೆಗಳು, ಹರೆಕಗಳ ವೈಶಿಷ್ಟ್ಯ ಮುಂತಾದವುಗಳನ್ನು ಹತ್ತು ಅಧ್ಯಾಗಳಲ್ಲಿ ಚರ್ಚಿಸಿದ್ದಾರೆ. ಮಳಲಿಯವರ ಮತ್ತೊಂದು ಜನಪದ ಕೃತಿ ಎಂದರೆ ‘ಕೋಲು ಪದಗಳು’. ಈ ಕೃತಿಯಲ್ಲಿ ಐವತ್ತೆಂಟು ವಿವಿಧ ರೀತಿಯ ಕೋಲಾಟದ ಹಾಡುಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಗ್ರಂಥದ ಪ್ರಸ್ತಾವನೆಯಲ್ಲಿ ಹಾಸನ ಜಿಲ್ಲೆಯಿಂದ ಹಿಡಿದು ಕರ್ನಾಟಕದ, ಭಾರತದ ಕೋಲಾಟದ ಬಗೆಗಳ ಬಗ್ಗೆ ವಿಸ್ತೃತವಾದ ವಿವರಣೆಯನ್ನು ನೀಡಿದ್ದಾರೆ. ಮಳಲಿಯವರೇ ಸ್ವತ: ಕೋಲಾಟದ ಕಲಾವಿದರಾಗಿರುವುದರಿಂದ ಕೋಲಾಟದ ಪದಗಳಲ್ಲಿ ಕಂಡುಬರುವ ಸಾಹಿತ್ಯ ಗುಣಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಶಾಸ್ತ್ರೀಯ ವಾಗಿ ಸಂಪಾದಿಸಿದ್ದಾರೆ. ಮತ್ತೊಂದು ಇವರ ಗ್ರಂಥವೆಂದರೆ  ‘ಜಡೆ ಕೋಲು’.ಇದರಲ್ಲಿ ಐವತ್ತೆರಡು ಪದ್ಯಗಳನ್ನು ಸಂಗ್ರಹಿಸಿದ್ದಾರೆ. ಕೇಂದ್ರ ಬಿಂದುವಿನಲ್ಲಿ ಜಡೆಯ ಗಂಟನ್ನು ಕಟ್ಟಿ, ತುದಿಯಲ್ಲಿರುವ ಎಳೆಗಳನ್ನು ಸೊಂಟಕ್ಕೆ ಕಟ್ಟಿಕೊಂಡ ಕಲಾವಿದರು ಕೋಲಾಟವಾಡುತ್ತಾ ಪರಿಧಿಯಲ್ಲಿ ಸುತ್ತುತ್ತಾ ಬಂದರೂ ಗೋಜಲಾಗದೆ ಒಂದೇ ನಿರ್ದಿಷ್ಟ ರೂಪದಲ್ಲಿ ಜಡೆಯಂತೆ ಹೆಣೆದುಕೊಳ್ಳುವುದಷ್ಡೇ ಅಲ್ಲದೆ ಪುನ: ಬಿಚ್ಚುವಲ್ಲಿಯೂ ಸಿಕ್ಕಾಗದೆ ಅದೇ ರೀತಿ ಮೂಲರೂಪಕ್ಕೆ ತರವುದೇ ಈ ಜಡೆಕೋಲಿನ ವೈಶಿಷ್ಟ್ಯ. ಜನಪದ ಸಾಹಿತ್ಯದಲ್ಲಿನ ಮನರಂಜನ ಪ್ರಕಾರಗಳನಷ್ಟೇ ತಮ್ಮ ಸಂಶೋಧನೆಯ ಚೌಕಟ್ಟಿಗೆ ಹಾಕಿಕೊಳ್ಳದೆ ಜನಪದ ವೈದ್ಯ ಪದ್ಧತಿಯ ಬಗ್ಗೆಯೂ ವಿಶೇಷ ಆಸಕ್ತಿಯಿಂದ ಮಾಹಿತಿ ಸಂಗ್ರಹಿಸಿ ರಚಿಸಿದ ಗ್ರಂಥ ‘ಕರ್ನಾಟಕ ಜನಪದ ವೈದ್ಯ’ ಕೃತಿ. ಶಾಸ್ತ್ರೀಯವಾಗಿ ಅಭ್ಯಾಸಮಾಡಿ ಪದವಿ ಪಡೆದ ವೈದ್ಯರುಗಳು ಹಳ್ಳಿಗಳಲ್ಲಿ ದೊರೆಯುತ್ತಿಲ್ಲದ ಸಂದರ್ಭದಲ್ಲಿ ನಾಟಿ ಔಷಧ, ಹಳ್ಳಿ ಔಷಧ, ಮನೆ ಮದ್ದು ಮುಂತಾದವುಗಳನ್ನು ತಿಳಿದಿದ್ದ ವೈದ್ಯವೃತ್ತಿಯ ಪಂಡಿತರುಗಳೇ ಔಷಧಿ ಸಸ್ಯಗಳನ್ನು ಪತ್ತೆಹಚ್ಚಿ ತಂದು ಅದನ್ನು ಸೂಕ್ತರೀತಿಯಲ್ಲಿ ಪರಿಷ್ಕರಿಸಿ, ಪುಡಿಮಾಡಿ ಪ್ರಮಾಣ ಬದ್ಧವಾಗಿ ಮಿಶ್ರಣಮಾಡಿ, ಮದ್ದನ್ನು ಸರಿಯಾದ ಪ್ರಮಾಣದಲ್ಲಿ ಹೇಗೆ ಉಪಯೋಗಿಸಬೇಕೆನ್ನುವುದರ ಕುರಿತ ಸಮಸ್ತ ಮಾಹಿತಿಯನ್ನೊದಗಿಸುವ ಕೃತಿ ಇದಾಗಿದೆ. ಇವರ ಮತ್ತೊಂದು ಪ್ರಮುಖವಾದ ಜನಪದ ಕೃತಿಯೆಂದರೆ ‘ಜನಪದ ನಂಬಿಕೆಗಳು’. ಮನುಷ್ಯನ ಬದುಕಿನಲ್ಲಿ ನಂಬಿಕೆಯೇ ಪ್ರತಿಯೊಂದಕ್ಕೂ ತಳಹದಿ. ನಂಬಿಕೆ ಇಲ್ಲದೆ ಬಾಳುವೆ ಸಾಧ್ಯವೇ ಇಲ್ಲ. ಆದರೆ ಕೆಲವೊಂದು ವೇಳೆ ಅವಿದ್ಯಾವಂತ ಸಮುದಾಯದಲ್ಲಿ ವಿವೇಚನಾರಹಿತವಾಗಿ ನಂಬಿದಾಗ ಕೆಡುಕಿಗೆ ದಾರಿಯಾಗುವುದೂ ಉಂಟು. ಈ ರೀತಿ ನಂಬಿಕೆಗಳ ಒಳಿತು – ಕೆಡಕು, ಸಾಧಕ – ಬಾಧಕಗಳ ವೈಜ್ಞಾನಿಕ ವಿವರಣೆಗಳಿಂದ ಕೂಡಿರುವ ಕೃತಿ. ವಸಂತಕುಮಾರ್‌ರವರು ಬರೇ ಜನಪದ ಸಾಹಿತಿಯಾಗಿ ಸಂಶೋಧನಾ ಕೃತಿಗಳನ್ನು ಪ್ರಕಟಿಸಿದಷ್ಟೇ ಅಲ್ಲದೆ ಹಲವಾರು ಸೃಜನಶೀಲ ಕೃತಿಗಳನ್ನೂ ರಚಿಸಿದ್ದಾರೆ. ಇವರು ಬರೆದ ಹಲವಾರು ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಹೊರತಂದ ಮೊದಲ ಕವನ ಸಂಕಲನ ‘ಹೃದಯ ಗಂಗೆ’ (೧೯೬೮). ಈ ಕವನ ಸಂಕಲನದ ನಂತರ ಪ್ರಕಟವಾದ ಕವನ ಸಂಕಲನ ‘ಕರಾವು’ (೧೯೮೪). ಇದರಲ್ಲಿ ಬಿ.ಎಂ.ಶ್ರೀ, ಕುವೆಂಪು, ಪು.ತಿ.ನ, ಗಾಂಧಿ, ಬೋಸ್, ಮುಂತಾದವರುಗಳ ಬಗ್ಗೆ ಬರೆದ ವ್ಯಕ್ತಿ ಚಿತ್ರ ಕವಿತೆಗಳಿವೆ. ಮತ್ತೊಂದು ಚುಟುಕುಗಳ ಸಂಕಲನ ‘ಕಡಲ ಕವಿತೆಗಳು’, ಇದರಲ್ಲಿ ೪೪ ಚುಟುಕ ಪದ್ಯಗಳಿವೆ. ಕವನ ಸಂಕಲನಗಳನ್ನು ಹೊರತಂದಂತೆ ಎರಡು ನಾಟಕಗಳನ್ನ ರಚಿಸಿದ್ದು, ಅವು ಯಮಧರ್ಮ ಮತ್ತು ಲಂಕೇಶ್ವರ. ಭಾರತೀಯ ಪುರಾಣ ಪ್ರಪಂಚದ ಪಾತ್ರಗಳನ್ನು ಆಧುನಿಕ ದೃಷ್ಟಿಕೋನದಿಂದ ರಚಿಸಿರುವ ನಾಟಕಗಳು. ಸಾಂದರ್ಭಿಕವಾಗಿ ಹಲವಾರು ಕಥೆಗಳನ್ನು ರಚಿಸಿದ್ದು  ಅವು ‘ಕಾಡು’ ಎಂಬ ಸಂಕಲನದಲ್ಲಿ ಸೇರಿವೆ.  ಗ್ರಾಮೀಣ ಬದುಕಿನ ಮೌಲ್ಯ, ಸಂಘರ್ಷ, ಮೂಢನಂಬಿಕೆ, ಹೆಣ್ಣಿನ ಶೋಷಣೆ ಮುಂತಾದ ವಸ್ತುವಿನಿಂದ ಕೂಡಿವೆ. ‘ಕದಂಬ’ ಹಾಗೂ ‘ವಿವಕ್ಷೆ’ ಇವರ ಪ್ರಮುಖ ವಿಮರ್ಶಾ ಕೃತಿಗಳಲ್ಲದೆ, ಕವಿಗಳು ಕಂಡ ಕುವೆಂಪು, ಕುವೆಂಪು ನಾಟಕ ಸಮೀಕ್ಷೆ, ಚಿತ್ರಾಂಗದ ಸಮೀಕ್ಷೆ, ಚಂದ್ರಹಾಸ ನಾಟಕ ಸಮೀಕ್ಷೆ,  ಕುವೆಂಪು ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ, ಯದುಗಿರಿಯ ವೀಣೆ, ಗ್ರಂಥಾಮೃತ, ಸಂಸ್ಕೃತಿ ದೀಪಮಾಲೆ, ನಮ್ಮ ಕನ್ನಡ, ವಜ್ರ ಕಿರಣ, ಹೊಯ್ಸಳ ಸಂಪದ, ಯುಗದ ಕವಿಗೆ, ಸರಸತಿಯ ವರಪುತ್ರ, ಕನ್ನಡ ದೀಪ – ಹೀಗೆ ಹಲವಾರು ಗ್ರಂಥಗಳನ್ನು ಸಂಪಾದಿಸಿರುವ ಮಳಲಿಯವರಿಗೆ ೧೯೯೦ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ,  ಹೊಯ್ಸಳ ಪ್ರಶಸ್ತಿ,  ಸಾಹಿತ್ಯರತ್ನ ಪ್ರಶಸ್ತಿ, ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವುಗಳು ದೊರೆತಿವೆ.

Details

Date:
August 10, 2023
Event Category: