- This event has passed.
ದಿಲ್ರೂಬಾ ನಾಗರಾಜಶಾಸ್ತ್ರಿ
November 18, 2023
೧೮.೧೧.೧೯೧೮ ಕರ್ನಾಟಕದ ಕಲೆ, ಸಂಸ್ಕೃತಿಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ ನಾಗರಾಜಶಾಸ್ತ್ರಿಗಳು ಹುಟ್ಟಿದ್ದು ಹಾಸನ. ತಂದೆ ಹೆಸರಾಂತ ಹರಿಕಥಾ ವಿದ್ವಾಂಸರು, ಕಾವ್ಯವಾಚನ ಪರಿಣತರೂ ಆಗಿದ್ದ ರಾಮಕೃಷ್ಣಶಾಸ್ತ್ರಿಗಳು. ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಭಾಗವಹಿಸಿ ಅಧ್ಯಾಪಕರಿಂದ ಪಡೆದ ಮೆಚ್ಚುಗೆ, ವಿದ್ವಾನ್ ಬಿ.ಎಸ್. ರಾಮ ಅಯ್ಯರ್ ಮತ್ತು ಎನ್. ಚೆನ್ನಕೇಶವಯ್ಯನವರಲ್ಲಿ ಶಾಸ್ತ್ರೀಯ ಸಂಗೀತದ ಶಿಕ್ಷಣ. ಹಾಡುಗಾರಿಕೆ ನಿಲ್ಲಿಸಿ ಕಲಿತಿದ್ದು ವಾದ್ಯ ಸಂಗೀತ. ಚಾಮುಂಡೇಶ್ವರಿ ನಾಟಕ ಕಂಪನಿಯ ಶಿವಪ್ಪನವರಲ್ಲಿ ಹಾರ್ಮೋನಿಯಂವಾದನ. ತಂದೆ ನಡೆಸುತ್ತಿದ್ದ ಹರಿಕಥಾ ಕಾರ್ಯಕ್ರಮಗಳಿಗೆ ಹಾರ್ಮೋನಿಯಂ ಸಹಾಯ, ದಿಲ್ರೂಬಾ ವಾದ್ಯ ಸಂಗೀತದಲ್ಲಿ ಪಡೆದ ಪ್ರಾವೀಣ್ಯತೆ. ಸುಗಮಸಂಗೀತ ಹಾಡುಗಾರ ಪಿ. ಕಾಳಿಂಗರಾವ್ರವರಲ್ಲಿ ಕಲಿತ ಹಿಂದೂಸ್ತಾನಿ ಸಂಗೀತ, ದಿಲ್ರೂಬಾ ವಾದ್ಯದಲ್ಲಿ ನಡೆಸಿಕೊಟ್ಟ ಕಚೇರಿಗಳು, ಮದರಾಸು ಆಕಾಶವಾಣಿಯಿಂದ ಪ್ರಸಾರಗೊಂಡ ಮೊಟ್ಟಮೊದಲ ಕಾರ್ಯಕ್ರಮ. ಮೈಸೂರು, ಹಾಸನ, ಧಾರವಾಡ ಜರ್ಮನಿಯಲ್ಲಿ ನೀಡಿದ ಕಾರ್ಯಕ್ರಮ, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ, ಬಸವರಾಜ ರಾಜಗುರು ಮುಂತಾದ ಸಂಗೀತಗಾರರಿಗೆ ನೀಡಿದ ವಾದನದ ಸಹಕಾರ. ಮೈಸೂರು ಆಕಾಶವಾಣಿಯಲ್ಲಿ ಕಟ್ಟಿದ ಉನ್ನತ ಮಟ್ಟದ ವಾದ್ಯಗೋಷ್ಠಿ, ನಾಟಕಗಳಿಗೆ ನೀಡಿದ ವಿಶಿಷ್ಟ ಸಂಗೀತ, ಹಿನ್ನೆಲೆಯಲ್ಲಿ ಸೃಷ್ಟಿಸುತ್ತಿದ್ದ ಶಬ್ದಗಳು. ನೈಸರ್ಗಿಕವಾಗಿ ಮೂಡಿಬಂದ ಶಬ್ದವೆನ್ನುವಷ್ಟರ ಮಟ್ಟದ ಶಬ್ದಗಳ ಉತ್ಪತ್ತಿಯಲ್ಲಿ ತೋರುತ್ತಿದ್ದ ಸೃಜನಶೀಲತೆ. ಇದೇ ದಿನ ಹುಟ್ಟಿದ ಕಲಾವಿದರು ಉಮೇಶರುದ್ರ – ೧೯೩೨ ಮಾರ್ಕಂಡೇಯ ಅವಧಾನಿ – ೧೯೩೩