- This event has passed.
ಬಿ.ವಿ. ಕಾರಂತ
September 19, 2023
೧೯-೯-೧೯೨೯ ೧-೯-೨೦೦೨ ಪ್ರಸಿದ್ಧ ನಾಟಕಕಾರರಾದ ಬಿ.ವಿ. ಕಾರಂತರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮಂಚಿ ಗ್ರಾಮದ ಬಾಬುಕೋಡಿಯಲ್ಲಿ. ತಂದೆ ಬಾಬುಕೋಡಿ ನಾರಣಪ್ಪಯ್ಯ, ತಾಯಿ ಲಕ್ಷ್ಮಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಕುಕ್ಕಜೆಯಲ್ಲಿ. ತಾಯಿ ಹಾಡುತ್ತಿದ್ದ ಭಜನೆ, ಊರಿನಲ್ಲಿ ನಡೆಯುತ್ತಿದ್ದ ಹರಿಕಥೆ, ಯಕ್ಷಗಾನ, ಜಾತ್ರೆ, ಕೋಲ, ಸಂಗೀತದಲ್ಲಿ ಬೆಳೆದ ಆಸಕ್ತಿ. ಹಿಂದಿ ಕಲಿತು ಮ್ಯಾಟ್ರಿಕ್, ಇಂಟರ್ ಮೀಡಿಯೆಟ್ ಪಾಸು. ನಂತರ ಬಿ.ಎ. ಪದವೀಧರರು. ಹೈದರಾಬಾದಿಗೆ ತೆರಳಿ ಹಿಂದಿ ಪ್ರಚಾರ. ಶಾಲೆಯಲ್ಲಿ ಹಿಂದಿ ಅಧ್ಯಾಪಕ ವೃತ್ತಿ. ಬೆನಾರಸ್ ಹಿಂದು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಡಾಕ್ಟರೇಟ್ಗಾಗಿ ಆಯ್ದುಕೊಂಡ ವಿಷಯ INDIAN STAGE AND HINDI DRAMA (ಭಾರತೀಯ ರಂಗಭೂಮಿ ಮತ್ತು ಹಿಂದಿ ನಾಟಕ) ಜಾನಪದ, ಭಾರತದ ರಂಗಭೂಮಿ ಸಂಪ್ರದಾಯಗಳ ಬಗ್ಗೆ ಆಳವಾದ ಅಧ್ಯಯನ. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮದಿಂದ ೩ ವರ್ಷ ತರಬೇತಿ. ನಿರ್ದೇಶಿಸಿದ ನಾಟಕ ನೀಲ್ ಝಿಲ್ (ನೀಲಿ ಸರೋವರ). ದೆಹಲಿಯ ಸರ್ದಾರ್ ಪಟೇಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಾಟಕ ಪ್ರಾಧ್ಯಾಪಕರಾಗಿ ನೇಮಕ. ಕೆಲಕಾಲ ನಾಟಕ ತರಬೇತಿ ಶಿಬಿರದ ಶಿಕ್ಷಕರ ಹುದ್ದೆ. ಗಿರೀಶ್ ಕಾರ್ನಾಡರ ಹಯವದನ, ತುಘಲಕ್, ಹಿಟ್ಟಿನ ಹುಂಜ ; ಶ್ರೀರಂಗರ ಕೇಳು ಜನಮೇಜಯ, ರಂಗಭಾರತ, ಕತ್ತಲೆ ಬೆಳಕು ; ಶಿವರಾಮ ಕಾರಂತರ ಯಕ್ಷಗಾನ ಸೇರಿದಂತೆ ೧೫ ಕೃತಿಗಳನ್ನು ಹಿಂದಿಗೆ ಅನುವಾದ. ವಯಸ್ಕರಿಗಷ್ಟೆ ಅಲ್ಲದೆ ಮಕ್ಕಳಿಗಾಗಿ ಹಲವಾರು ನಾಟಕಗಳ ರಚನೆ, ನಿರ್ದೇಶನ. ಅಳಿಲು ರಾಮಾಯಣ, ಹೆಡ್ಡಾಯಣ, ಪಂಜರ ಶಾಲೆ, ನೀಲಿ ಕುದುರೆ ಮುಖ್ಯವಾದುವು. ೧೯೭೦ರಲ್ಲಿ ಬೆಂಗಳೂರಿಗೆ ಬಂದು ಹವ್ಯಾಸಿ ರಂಗಭೂಮಿಗೆ ಕೊಟ್ಟ ಹೊಸ ಕಳೆ. ಏವಂ ಇಂದ್ರಜಿತ್, ಹಯವದನ, ಸಂಕ್ರಾಂತಿ, ಈಡಿಪಸ್, ಜೋಕುಮಾರಸ್ವಾಮಿ, ಸತ್ತವರ ನೆರಳು ಸೇರಿ ೫೨ ನಾಟಕಗಳ ನಿರ್ದೇಶನ. ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕರ ಹುದ್ದೆ (೧೯೭೭-೮೧) ಬರ್ನಮ್ ವನ, ಷಹಜಾನ್, ಮುದ್ರಾರಾಕ್ಷಸ, ಭಗವದಜ್ಜುಕೀಯ, ಛೋಟೆ ಸೈಯದ್ ಮುಂತಾದುವುಗಳ ನಿರ್ದೇಶನ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಚಲನಚಿತ್ರ ಸಹ ನಿರ್ದೇಶನ. ಸ್ವತಃ ನಿರ್ದೇಶನ-ಚೋಮನದುಡಿ, ರಾಷ್ಟ್ರೀಯ ಸ್ವರ್ಣಪದಕ. ಸಂಗೀತ ನಿರ್ದೇಶನದ ಚಲನಚಿತ್ರ-ಹಂಸಗೀತೆ, ಚೋಮನದುಡಿ, ಆದಿಶಂಕರ, ಫಣಿಯಮ್ಮ ಮುಂತಾದುವು. ಸಂದ ಪ್ರಶಸ್ತಿಗಳು-ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಕೇಂದ್ರ ಸರಕಾರದ ಪದ್ಮಶ್ರೀ, ಮಧ್ಯ ಪ್ರದೇಶದ ಕಾಳಿದಾಸ ಸಮ್ಮಾನ್, ರಾಜ್ಯ ಸರಕಾರದ ಗುಬ್ಬಿ ವೀರಣ್ಣ ಪ್ರಶಸ್ತಿ ಮುಂತದುವು. ಇದೇ ದಿನ ಹುಟ್ಟಿದ ಸಾಹಿತಿ : ಅನುರಾಧ ಕೆ.ವಿ. – ೧೯೬೧