Categories
ಶರಣರು / Sharanaru

ಏಕಾಂತವೀರ ಸೊಡ್ಡಳ ??

ಈ ಅಂಕಿತದ ವಚನಕಾರನ ಹೆಸರು ಲಭ್ಯವಾಗಿಲ್ಲ. ಕಾಲ ಸು.1400 ಈಗ ಎರಡು ವಚನ ದೊರೆತಿವೆ. ಒಂದು ವಚನದಲ್ಲಿ ಪ್ರಭುದೇವರ ನಿಲುವನ್ನು ಇನ್ನೊಂದರಲ್ಲಿ ಲಿಂಗೈಕ್ಯನ ಸ್ವರೂಪವನ್ನು ತಿಳಿಸಲಾಗಿದೆ.

ಬಂದ ಬಟ್ಟೆಯ ಹೊದ್ದದಾತ ಲಿಂಗೈಕ್ಯನು.
ಹಿಂದು ಮುಂದರತು, ಸಂದೇಹವಿಲ್ಲದಾತ ಲಿಂಗೈಕ್ಯನು.
ಶ್ರೀಗುರು ಏಕಾಂತ ವೀರಸೊಡ್ಡಳನ್ನಲ್ಲಿ
ತನ್ನ ತಾ ಮರೆದಾತ ಲಿಂಗೈಕ್ಯನು. /೧೨೨೩[1]

ಲೋಕಾಂತವಳಿದು ಏಕಾಂತ ಉಳಿದಲ್ಲಿ
ಏಕೈಕಮೂರ್ತಿಯ ಸಂಗ ಸಮನಿಸಿತ್ತೆನಗೆ.
ಎನ್ನ ನುಡಿ ಆತನ ಕಿವಿಗೆ ಇನಿದಾಯಿತ್ತು.
ಆತನ ನುಡಿ ಎನ್ನ ಕಿವಿಗೆ ಇನಿದಾಯಿತ್ತು.
ಇಬ್ಬರ ನುಡಿಯೂ ಒಂದೇಯಾಗಿ ನಿಶ್ಯಬ್ದ ವೇಧಿಸಿತ್ತು.
ಈ ಸುಖದ ಸೋಂಕಿನ ಪುಣ್ಯದ ಫಲದಿಂದ
ಅನುಪಮಚರಿತ್ರ ಪ್ರಭುದೇವರ ನಿಲವ ಕಂಡು,
ನಾನು ಧನ್ಯನಾದೆನು ಕಾಣಾ, ಏಕಾಂತ ವೀರಸೊಡ್ಡಳಾ. /೧೨೨೨ [1]

[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.