Categories
ಶರಣರು / Sharanaru

ಏಕಾಂತ ರಾಮಿತಂದೆ

ಅಂಕಿತ: ಎನ್ನಯ್ಯ ಚೆನ್ನರಾಮ

ಗುರುಭಕ್ತನಾದಲ್ಲಿ ಘಟಧರ್ಮವಳಿದು,
ಲಿಂಗಭಕ್ತನಾದಲ್ಲಿ ಸಂಚಲ ನಿಂದು,
ಜಂಗಮಭಕ್ತನಾದಲ್ಲಿ ತ್ರಿವಿಧಾಂಗ ಸಲೆ ಸಂದು,
ಇಂತೀ ತ್ರಿವಿಧ ಭಕ್ತಿಯಲ್ಲಿ ತ್ರಿಕರಣ ಶುದ್ಧನಾದ ಆತ್ಮಂಗೆ
ಮರ್ತ್ಯ-ಕೈಲಾಸವೆಂಬ ಕಾಳುಮಾತಿಲ್ಲ.
ಆತ ನಿತ್ಯಮುಕ್ತ ಎನ್ನಯ್ಯ ಚೆನ್ನರಾಮನಾಗಿ.

ಹರಿಹರನ ರಗಳೆ ಮತ್ತು ಅಬ್ಬಲೂರ ಶಾಸನಗಳಲ್ಲಿ ಉಲ್ಲೇಖಿತನಾದ ಈತನ ಸ್ಥಳ-ಕಲಬುರ್ಗಿ ಜಿಲ್ಲೆಯ ಆಳಂದ ಎಂಬ ಗ್ರಾಮ. ತಂದೆ ಪುರುಷೋತ್ತಮ ಭಟ್ಟ; ತಾಯಿ ಸೀತಮ್ಮ. ಅಬ್ಬಲೂರು-ಕಾರ್ಯಕ್ಷೇತ್ರ. ಕಾಲ=೧೧೬೦. ಪುಲಿಗೆರೆಯ ಸೋಮೆಳಿಶ್ವರನು ಕನಸಿನಲ್ಲಿ ಬಂದು ಹೇಳಿದ ಮೇರೆಗೆ ಪರಸಮಯಿಗಳನ್ನು ಜಯಿಸಲು ಅಬ್ಬಲೂರಿಗೆ ಬರುತ್ತಾನೆ. ಜೈನರೊಂದಿಗೆ ವಾದಕ್ಕೆ ನಿಂತು, ಅಲ್ಲಿಯ ಬ್ರಹ್ಮೇಶ್ವರ ದೇವಾಲಯದಲ್ಲಿ ಶಿರಸ್ಸು ಪವಾಡ ಮೆರೆದು, ಬಸದಿಯಲ್ಲಿ ಸೋಮೇಶ್ವರನನ್ನು ಸ್ಥಾಪಿಸುತ್ತಾನೆ. ಈ ಸನ್ನಿವೇಶ ಅಬ್ಬಲೂರಿನ ಶಾಸನದಲ್ಲಿ ವರ್ಣಿತವಾಗಿದೆ. ಇದರ ವಿವಿಧ ಶಿಲ್ಪಗಳನ್ನು ಸೋಮೇಶ್ವರ ದೇವಾಲಯದ ಗೋಡೆಯ ಮೇಲೆ ಕೆತ್ತಲಾಗಿದೆ.

ಈತನ ಏಳು ವಚನಗಳು ದೊರೆತಿದ್ದು, ‘ಎನ್ನಯ ಚೆನ್ನರಾಮ’ ಅಂಕಿತವನ್ನು ಹೊಂದಿವೆ. ಗುರುಸ್ಥಲ ಸಂಬಂಧ, ಕಾಯ-ಜೀವ ಭೇದ, ನಿತ್ಯಮುಕ್ತನ ಸ್ಥಿತಿ, ಮನಹೀನ ವಿರಕ್ತನ ವಿಡಂಬನೆ ಇವುಗಳಲ್ಲಿ ಮೂಡಿನಿಂತಿದೆ. ಈತನ ವಚನಗಳ ವಿಶೇಷ ಪ್ರಶ್ನಾತ್ಮಕಗುಣ, ತ್ರಿವಿಧ ಭಕ್ತಿಯಲ್ಲಿ ತ್ರಿಕರಣಶುದ್ಧನಾದ ಆತ್ಮನಿಗೆ ಮರ್ತ್ಯ ಕೈಲಾಸವೆಂಬ ಕಾಳುಮಾತಿಲ್ಲ, ಆತ ನಿತ್ಯಮುಕ್ತ ಎಂದು ದೃಢವಾಗಿ ಹೇಳುವನು

ಕಲ್ಪಿತಾಂತರವನುಂಬುದು ಕಾಯವೋ? ಜೀವವೋ
ಜೀವವೆಂದಡೆ ನಿರ್ನಾಮ ಭೇದ,
ಕಾಯವೆಂದಡೆ ಮೃತ ಅಚೇತನ ಘಟ.
ಉಭಯಸಂಗ ಸಂಬಂಧವಾದಲ್ಲಿ
ಎನ್ನಯ್ಯ ಚೆನ್ನರಾಮ ಭೇದ.