Categories
ಶರಣರು / Sharanaru

ಕಾಡಸಿದ್ಧೇಶ್ವರ

ಅಂಕಿತ: ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯ ಪ್ರಭುವೆ

ಈತ ಮಹಾರಾಷ್ಟ್ರದ ಸಿದ್ಧಗಿರಿಮಠದ ಸಂಪ್ರದಾಯಕ್ಕೆ ಸೇರಿದ ಪೀಠಾಧಿಪತಿ. ಕಾಲ = ಸು. ೧೭೨೫. ‘ಸಂಗಮೇಶ್ವರದೇವರ ಕರಕಮಲದಲ್ಲಿ ಉತ್ಪತ್ಯವಾದ ಶಿಶುವು ಕಾಡಸಿದ್ಧ ನಾನಯ್ಯ’ ಎ೦ದು ಹೇಳಿಕೊಂಡಿರುವುದರಿಂದ ಈ ‘ಸಂಗಮೆಶ್ವರದೇವ’ ಈತನ ಗುರುವಾಗಿರಬೇಕು. ಜಾಯಪ್ಪ ದೇಸಾಯಿಯ ಕುವಲಯಾನಂದ ಕೃತಿಯಲ್ಲಿ ಈತನ (ಕಾಡಸಿದ್ಧೇಶ್ವರನ) ಉಲ್ಲೇಖವಿದೆ. ‘ವೀರಶೈವ ಷಟ್ ಸ್ಥಲ’ ಕಾಡಸಿದ್ಧೇಶ್ವರನ ಕೃತಿಯ ಹೆಸರು. ಇದರಲ್ಲಿ ೫೦೦ ವಚನಗಳನ್ನು ಷಟ್ ಸ್ಥಲಾನುಗುಣವಾಗಿ ಜೋಡಿಸಲಾಗಿದೆ. ವಚನಾಂಕಿತ ‘ಕಾಡನೊಳಗಾದ ಶಂಕರಪ್ರಿಯ ಚೆನ್ನ ಕದಂಬಲಿಂಗ ನಿಮಾ೯ಯ ಪ್ರಭುವೆ’ ಹೆಚ್ಚಾಗಿ ಎಲ್ಲ ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ. ಷಟ್ ಸ್ಥಲ ತತ್ವ ಪ್ರತಿಪಾದನೆಯೇ ಇವುಗಳ ಪರಮಗುರಿಯಾಗಿದೆ. ಈ ಕೃತಿಯಲ್ಲಿ ಎದ್ದು ಕಾಣುವ ವಿಶೇಷತೆಯೆಂದರೆ ಮಧ್ಯ ಮಧ್ಯ ಬೇರೆ ಬೇರೆ ಶರಣರ ಹೆಸರುಗಳಡಿಯಲ್ಲಿ ಅವರವರ ಕಾಯಕದ ಪರಿಭಾಷೆ ಬಳಸಿ ವಚನಗಳನ್ನು ಹೆಣೆದಿರುವುದು. ಇಲ್ಲಿ ಕಂಡುಬರುವ ಶರಣರಲ್ಲಿ ಕೆಲವರು ೧೨ನೆಯ ಶತಮಾನದವರಾದರೆ, ಮತ್ತೆ ಕೆಲವರು ಇದುವರೆಗೆ ಎಲ್ಲಿಯೂ ಉಲ್ಲೇಖವಾಗದವರು. ಅವರಲ್ಲಿ ಪಿಂಜಾರ ಮಹಮದ ಖಾನಯ್ಯ, ವಲ್ಲಿ ಪೀರಣ್ಣ ಎಂಬಂಥ ಮುಸ್ಲಿಂ ಶರಣರ ಹೆಸರುಗಳೂ ಸೇರಿರುವುದು ಗಮನಾರ್ಹ. ಕೆಲವು ವಚನಗಳು ಉರ್ದು ಭಾಷೆಯಲ್ಲಿರುವುದು ಇನ್ನು ವಿಶೇಷ.

ಲಿಂಗಾಯತ ತತ್ತ್ವಬೋಧೆ ಮತ್ತು ನೀತಿಬೋಧೆ. ವಚನಗಳ ನಿರೂಪಣೆ ನೇರ ಹಾಗೂ ಸ್ಪಷ್ಟವಾಗಿದೆ. ದೇಶೀಭಾಷೆ ಮತ್ತು ಕಟೂಕ್ತಿಗಳನ್ನು ವಿಶೇಷವಾಗಿ ಅಳವಡಿಸಿಕೊಳ್ಳಲಾಗಿದೆ. ಬೆಡಗಿನ ವಚನಗಳು ಒಂದು ರೂಪಕದಂತೆ ಮೈತಾಳಿ ಅನ್ಯಾರ್ಥದ ಮೂಲಕ ತತ್ವವನ್ನು ಬಿತ್ತರಿಸುತ್ತದೆ.