ಅಂಗಲಿಂಗದ ಒಳಗೆ ಲಿಂಗಕಂಗಳು ಬೆಳಗು, ಹಿಂಗಲಾಪುದೆ ಹೇಳು ಅಜ್ಞಾನವ! ಸಂಗಸುಖಮಥನದ ಅಸಂಗದಿಂದದನರಿದು ಹಿಂಗಲಿಕೆ ಹೆಸರೇನು? ರಾಮನಾಥ./1 |
ಅಂತರಂಗ ಬಹಿರಂಗದಲ್ಲಿ ಸರ್ವಾಚಾರ ಸಂಪತ್ತಿನ ಆಚರಣೆಯನರಿಯದ ಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿ ಸರ್ವಾಂಗ ಸ್ನಾನಧೂಳನ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣ ಕ್ರಿಯಾಭಸಿತವ ಧರಿಸುವ ನಿರ್ಣಯವ ಹೇಳಿ ಅಂತರಂಗದ ಜಪವ ಹೇಳುವನೊಬ್ಬ ಆಚಾರದ್ರೋಹಿ ನೋಡಾ, ರಾಮನಾಥ./2 |
ಅಂಬಲಿ ಅಲೆಯಾಗಿ, ತುಂಬೆಯ ಮೇಲೋಗರವಾಗಿ, ಉಂಬ ಸದುಭಕ್ತನ ಮನೆಯಾಗಿ, ಲೋಕದ ಡಂಭಕರ ಮನೆ ಬೇಡ, ರಾಮನಾಥ/3 |
ಅಗ್ನಿ ಸುಡಲಲ್ಲದೆ ಸುಳಿಯಲರಿಯದು ವಾಯು ಸುಳಿವುದಲ್ಲದೆ ಸುಡಲರಿಯದು ಆ ಆಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನಭೇದವ? ರಾಮನಾಥ/4 |
ಅಚ್ಚ ಶಿವೈಕ್ಯಂಗೆ ಹೊತ್ತಾರೆ ಅಮವಾಸೆ; ಮಟ್ಟ ಮಧ್ಯಾಹ್ನ ಸಂಕ್ರಾಂತಿ; ಮತ್ತೆ ಅಸ್ತಮಾನ ಪೌರ್ನಮಿ ಹುಣ್ಣಿಮೆ; ಭಕ್ತನ ಮನೆಯ ಅಂಗಳವೆ ವಾರಣಾಸಿ ಕಾಣಾ! ರಾಮನಾಥ./5 |
ಅಡಗ ತಿಂಬರು; ಕಣಿಕದ ಅಡಿಗೆಯಿರಲಿಕೆ. ಕುಡಿವರು ಸುರೆಯ! ಹಾಲಿರಲಿಕೆ. ಹಡದುಂಬ ವೇಶಿಯನೊಲ್ಲದೆ ಹೆರರ ಮಡದಿಗಳುಪುವ ಸತ್ತ ನಾಯ ತಿಂಬ ಹಡ್ಡಿಗರನೇನೆಂಬೆನೈ! ರಾಮನಾಥ./6 |
ಅಡಗಿನೊಳಗಣ ಹಾಲು ಅಡಗಿಪ್ಪ ಭೇದವನು ಬೆಡಗಪ್ಪ ತುಪ್ಪದ ಕಂಪಿನ ಪರಿಯಂತೆ. ಎಲೆ ಮೃಡನೆ! ನೀನು ಪ್ರಾಣ ಪ್ರಕೃತಿಗಳೊಳಗೆ ಅಡಗಿಹ ಭೇದವ ಲೋಕದ ಜಡರೆತ್ತ ಬಲ್ಲರೈ! ರಾಮನಾಥ./7 |
ಅಡವಿ ಅರಣ್ಯದಲಿ ಮಡಿವನಕ ತಪವಿದ್ದು ಮಡಿವಾಗ ಮೃಡನ ಮರದಡೆ, ತುಂಬಿದ ಸಕ್ಕರೆಯ ಮಡುವಿನೊಳಗೊಕ್ಕಂತೆ! ರಾಮನಾಥ./8 |
ಅಡವಿಯಂಗಡಿಯಕ್ಕು, ನಡುಗಡಲು ನೆಲೆಯಕ್ಕು. ತೊಡಕುವ ಮಾರಿಯಪಮೃತ್ಯ ಶಿವಭಕ್ತರ ಒಡಲು ನಿನ್ನೊಡಲೆಂದು ಮುಟ್ಟಲಮ್ಮವು ಕಾಣಾ! ರಾಮನಾಥ./9 |
ಅಣುರೇಣು ಮಧ್ಯದ ಪ್ರಣವದಾಧಾರ ಭುವನಾಧೀಶನೊಬ್ಬನೆಯಯ್ಯ. ಇದೆ ಪರಿಪೂರ್ಣವೆಂದೆನ್ನದನ್ಯ ದೈವವ ಸ್ಮರಿಸುವ ಭವಿಯನೆಂತು ಭಕ್ತನೆಂಬೆನೈ? ರಾಮನಾಥ./10 |
ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ. ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ. ಅನುಭಾವ ಉಳ್ಳವರ ಕಂಡು ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆ ನರಕದಲ್ಲಿಕ್ಕಯ್ಯಾ! ರಾಮನಾಥ./11 |
ಅನುಭಾವವಿಲ್ಲದೆ ಈ ತನು ಎಳತಟವಾದುದಯ್ಯಾ. ಅನುಭಾವವೀ ತನುವಿಂಗೆ ಆಧಾರ. ಅನುಭಾವರ ಅನುಭಾವವನು ಮನವಾರೆ ವೇದಿಸಿದವರಿಗೆ ಜನನವಿಲ್ಲ ಕಾಣಾ!ರಾಮನಾಥ./12 |
ಅನ್ಯಜಾತಿಯ ಮನೆಯ ಅನ್ನಪಾನಾದಿಗಳು ತನ್ನ ಉದರದಲ್ಲಿ ಇಕ್ಕುವವ ಶಿವದ್ರೋಹಿ, ಶಿವವಂಚಕನು. ಅವ ನಿಮ್ಮ ಓ ಎನಿಸಿದಡೆ ಎನಿಸಲಿ ಅವನ ಎನ್ನತ್ತ ತಾರದಿರಾ, ರಾಮನಾಥ./13 |
ಅರುಹ ಅರಿಯಲೆಂದು ಕುರುಹ ಕೈಯಲ್ಲಿ ಕೊಟ್ಟ! ಅರುಹನೆ ಮರದು ಕುರುಹನೆ ಹರಿದ! ಈ ಕುರುಂಬರಿಗಿನ್ನೆತ್ತಣ ಮುಕ್ತಿಯೊ? ರಾಮನಾಥ./14 |
ಅರ್ಥವುಂಟೆಂದು ಅಹಂಕರಿಸಿ ಮಾಡುವನ ಭಕ್ತಿ ತೊತ್ತಿನ ಕೂಟ, ತೊರೆಯನ ಮೇಳದಂತೆ. ತನು-ಮನ-ಧನದಲ್ಲಿ ವಂಚನೆಯುಳ್ಳ ಪ್ರಪಂಚಿಯ ಮನೆಯ ಕೂಳು ಶುನಕನ ಬಾಯ ಎಲುವ ಪ್ರತಿಶುನಕ ತಿಂದಂತೆ ಕಾಣಾ ! ರಾಮನಾಥ./15 |
ಆಚಾರಸಹಿತವಿದ್ದಡೆ ಗುರುವೆಂಬೆ. ಆಚಾರಸಹಿತವಿದ್ದಡೆ ಲಿಂಗವೆಂಬೆ. ಆಚಾರಸಹಿತವಿದ್ದಡೆ ಜಂಗಮವೆಂಬೆ. ಸದಾಚಾರಸಹಿತವಿರದೆ ಅನ್ಯದೈವ ಭವಿಮಾಟಕೂಟವ ಮಾಡುವನ ಮನೆಯಲ್ಲಿ ಲಿಂಗಾರ್ಚನೆಯ ಮಾಡಿದನಾದಡೆ ನಿಮಗಂದೆ ದೂರವಯ್ಯಾ, ರಾಮನಾಥ./16 |
ಆಡಬಾರದ ಬಯಲು ಸೂಡಬಾರದ ಬಯಲು ನುಡಿಯಬಾರದ ಬಯಲು ಹಿಡಿಯಬಾರದ ಬಯಲು ಈ ಒಡಲಿಲ್ಲದ ಬಯಲೊಳಗೆ ಅಡಗಿರ್ದ ಭೇದವ ಈ ಲೋಕದ ಜಡರೆತ್ತ ಬಲ್ಲರೈ? ರಾಮನಾಥ./17 |
ಆದಿ ಆರರ ಭೇದ ತನುಗುಣ ಮೂವತ್ತಾರ ಮೀರಿ ತೋರಿದುದ ತೋರಿ ಮತ್ತೆ ಆರೂಢವಾದರೆ ಮೇಲೆ ನಿನ್ನಿಚ್ಛೆ ಕಾಣಾ! ರಾಮನಾಥ./18 |
ಆದಿ ಪ್ರಕೃತಿಯ ಮಕ್ಕಳು ಅಂದಿನವರು ಆದಿ ಪ್ರಕೃತಿಯ ಮಕ್ಕಳು ಇಂದಿನವರು ಆದಿಪ್ರಕೃತಿಯ ಜೀವ ಪ್ರಕೃತಿಯ ಭೇದವ ಬಲ್ಲವರ ಪಾದವೆ ಗತಿಯೆನಗೆ ರಾಮನಾಥ./19 |
ಆಸೆ ಪರಿಣಾಮಕ್ಕೆ ಬೇಸತ್ತು ಹೋಯಿತ್ತು. ಆಶ್ರಯದ ನಿದ್ರೆ ಕೆಟ್ಟಿತ್ತು. ಗ್ರಾಸ ಮೆಲ್ಲನಾಯಿತ್ತು. ಸ್ತ್ರೀಯರ ಮೇಲಣ ಇಚ್ಛೆ ಕೆಟ್ಟಿತ್ತು. ಈಶ್ವರ! ನಿಮ್ಮ ಪಾದಾಂಬುಜ ಸೇವೆಯಿಂದ ಕಾಣಾ!ರಾಮನಾಥ./20 |
ಇಂತೆಂದ ಭೂಮಿಯ; ಇಂತೆಂದ ಗಗನವ. ಇಂತೆಂದ ಸಪ್ತಸಾಗರವ. ಇಂತೀ ಲೋಕದೊಳಗೆ ತಿಂಥಿಣಿಯಾಗಿಪ್ಪ ಅಚಿಂತನನವರಾರು ಬಲ್ಲರೈ ರಾಮನಾಥ./21 |
ಇಂದಿಂಗೆಂತು ನಾಳಿಂಗೆಂತೆಂದು ಚಿಂತಿಸಲೇಕೆ? ತಂದಿಕ್ಕುವ ಶಿವಂಗೆ ಬಡತನವೆ? ರಾಮನಾಥ./22 |
ಇತ್ತ ಬಾ ಎನ್ನದವನ ಹತ್ತೆ ಹೊದ್ದಲು ಬೇಡ. ಇತ್ತ ಬಾ ಎಂಬ ಸದ್ಭಕ್ತನ ಮನೆಯ ಬಾಗಿಲ ಹತ್ತಿಪ್ಪೆ ಕಾಣಾ! ರಾಮನಾಥ./23 |
ಇರುಹೆಯ ತೆರನೇನು ನೆರೆ ಛಲವಿಲ್ಲದೆ ಮಾಡಿದವನ ಭಕ್ತ ಇರುಹೆಯಿಂದ ಕರಕಷ್ಟ ಕಾಣಾ! ರಾಮನಾಥ./24 |
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ. ಸುಳಿದು ಬೀಸುವ ವಾಯು ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ, ರಾಮನಾಥ./25 |
ಇಳೆಯನಾಧಾರ ಮಾಡಿ, ಜಳವ ಜೀವನ ಮಾಡಿ ಒಳಗಿಪ್ಪ ಭೇದವನು ವಾಯುವ ಕಂಬವ ಮಾಡಿ, ನಳನ ಚಂದ್ರಮನ ಮಡಗಿ ಆಕಾಶವನು ಗಳನೆ ಮುಚ್ಚಿದ ಬೆಳಗಿಗೆ ಆನು ಬೇಡಿಕೊಂಬೆ, ರಾಮನಾಥ./26 |
ಈಶ! ನಿಮ್ಮ ಪೂಜಿಸಿದ ಬಳಿಕ ಅನ್ಯ ದೈವಂಗಳಿಗೆ ಹೇಸಲೇ ಬೇಕು. ಹೇಸದೆ ಅನ್ಯದೈವಕ್ಕೆ ಆಸೆ ಮಾಡಿದಡೆ ಅವ ನಮ್ಮ ಈಶ್ವರಂಗೆ ಹೊರಗು. ದೋಷರಹಿತ ಭಕ್ತರು ಅವಂಗೆ ಕುಲವೆಂದು ಕೂಸ ಕೊಟ್ಟು ಕೂಡುಂಡಡೆ ಮೀಸಲ ಬೋನವ ನಾಯಿ ಮುಟ್ಟಿದಂತೆ ಕಾಣಾ!ರಾಮನಾಥ./27 |
ಈಶನ ಶರಣರು ವೇಶಿಯ ಹೋದಡೆ ಮೀಸಲೋಗರವ ಹೊರಗಿರಿಸಿದಡೆ ಹಂದಿ ಮೂಸಿ ನೋಡಿದಂತೆ ರಾಮನಾಥ./28 |
ಉಂಕೆಯ ನಿಗುಚಿ ಸರಿಗೆಯ ಸಮಗೊಳಿಸಿ ಸಮಗಾಲನಿಕ್ಕಿ ಅಣಿಯೇಳ ಮುಟ್ಟದೆ ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು. ಈ ಸೀರೆಯ ನೆಯ್ದವ ನಾನೊ ನೀನೋ?ರಾಮನಾಥ./29 |
ಉಣ್ಣಿ ಕೆಚ್ಚಲ ಹತ್ತಿ ಉಂಬುದೆ ನೊರೆವಾಲ? ಪುಣ್ಯಕ್ಷೇತ್ರದಲ್ಲಿ ಹುಟ್ಟಿ ಉಣ್ಣದವನು ಆ ಉಣ್ಣಿಯಿಂದ ಕರಕಷ್ಟ! ರಾಮನಾಥ./30 |
ಉರಿವ ಕೆಂಡದ ಮೇಲೆ ತೃಣವ ತಂದಿರಿಸಿದಡೆ ಆ ತೃಣವನ್ನು ಆ ಕೆಂಡ ನುಂಗುವಂತೆ ಗುರುಚರಣದ ಮೇಲೆ ತನುತೃಣವನಿರಿಸಿದಡೆ ಆ ತನುವೆಲ್ಲ ಲಿಂಗಮಯ ಕಾಣಾ! ರಾಮನಾಥ./31 |
ಉಳುವನ ಹೆಳೆವನ ಉಳುವವನ ಕೊಲುವ ಬೇಡನ, ಹಿಳಿಲಿನಿಕ್ಕಿ ಕರದುಂಬ ಭಕ್ತನ ಒಳುಹನೇನೆಂಬೆ, ರಾಮನಾಥ./32 |
ಊರ ಮಾಡುವನ ಭಕ್ತಿ ದೂರದ ಹೊಲನಂತೆ ದೂರದಿಂ ಬಂದು ಅದು ನಿಂದು ಮುಂದೆ ಸಾಗರವಾಗಲರಿಯದು, ರಾಮನಾಥ./33 |
ಎಂಜಲ ತಿಂಬರೆ ಅಂಜದೆ ಅಳುಕದೆ ತಿನಬೇಕು. ಅಂಜುತ ಅಳುಕುತ ತಿಂದರೆ ಅದು ನಂಜಿನಂತಕ್ಕು ಕಾಣಾ! ರಾಮನಾಥ./34 |
ಎಡರಡಸಿದಲ್ಲಿ ಮೃಡ! ನಿಮ್ಮ ನೆನವರು. ಎಡರಡಸಿದ ವಿಪತ್ತು ಕಡೆಯಾಗಲೊಡನೆ ಮೃಡ! ನಿಮ್ಮನೆಡಹಿಯೂ ಕಾಣರು! ರಾಮನಾಥ./35 |
ಎಣ್ಣೆಯಿದ್ದು ಎಳ್ಳು ನನೆಯದ ಭೇದವ ಕಿಚ್ಚಿದ್ದು ಕಲ್ಲು ಸಿಡಿಯದೆ ಭೇದವ ಕಾಮವಿದ್ದು ಕನ್ನೆಯನನುಭವಿಸದ ಭೇದವ ಪರವಿದ್ದು ಪ್ರಾಣನ ಪ್ರಕೃತಿಯ ಹರಿಯದ ಭೇದವ ನರರೆತ್ತ ಬಲ್ಲರೈ? ರಾಮನಾಥ./36 |
ಎತ್ತನೇರಿದ ಕರ್ತನೊಬ್ಬನೆ ಜಗಕ್ಕೆಲ್ಲ ಎತ್ತು ಬೆಳೆದ ಧಾನ್ಯವನುಂಬ ದೇವರ್ಕಳೆಲ್ಲ ನಿಮ್ಮ ತೊತ್ತಿನ ಮಕ್ಕಳು ಕಾಣಾ! ರಾಮನಾಥ./37 |
ಎತ್ತಪ್ಪೆ ಶರಣಂಗೆ, ತೊತ್ತಪ್ಪೆ ಶರಣಂಗೆ ಭೃತ್ಯನಾಗಿ ಸದ್ಭಕ್ತರ ಮನೆಯ ಬಾಗಿಲು ಕಾಯ್ದಿಪ್ಪ ಸೊಣಗನಪ್ಪೆ. ಕರ್ತಾರ! ನಿನಗೆ ಕರವೆತ್ತಿ ಹೊಡವಡುವ ಭಕ್ತರ ಮನೆಯ ಹಿತ್ತಿಲ ಬೇಲಿಯಾಗಿಪ್ಪೆನಯ್ಯಾ,ರಾಮನಾಥ./38 |
ಎತ್ತು ನಿಮ್ಮ ದಾನ; ಬಿತ್ತು ನಿಮ್ಮ ದಾನ. ಸುತ್ತಿ ಹರಿವ ಸಾಗರವೆಲ್ಲ ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ಹೇಳ? ರಾಮನಾಥ./39 |
ಎನ್ನ ನಾನರಿವುದಕ್ಕೆ ಮುನ್ನ ಎಲ್ಲಿದ್ದೆಯಯ್ಯ? ಎನ್ನೊಳಗೆ ಇದ್ದೆಯಯ್ಯ! ಎನ್ನ ನಾನರಿಯಲು ಮುಂದೆ ಬಂದು ಗುರುರೂಪಾಗಿ ಎನ್ನೊಳಗೆ ಅಡಗಿದ್ದೆಯಲ್ಲ! ರಾಮನಾಥ./40 |
ಎನ್ನೊಡಲಾದಡೆ ಎನ್ನಿಚ್ಛೆಯಲ್ಲಿರದೆ? ನಿನ್ನೊಡಲಾದಡೆ ನಿನ್ನಿಚ್ಛೆಯಲ್ಲಿರದೆ? ಅದು ಎನ್ನೊಡಲೂ ಅಲ್ಲ, ನಿನ್ನೊಡಲೂ ಅಲ್ಲ. ಅದು ನೀ ಮಾಡಿದ ಜಗದ ಬಿನ್ನಾಣದೊಡಲು ಕಾಣಾ!ರಾಮನಾಥ./41 |
ಎಳ್ಳಿಲ್ಲದ ಗಾಣದಲ್ಲಿ ಎಣ್ಣೆಯುಂಟೆ? ಜಳ್ಳ ತೂರಿದಲ್ಲಿ ಬತ್ತವುಂಟೆ? ಕಳ್ಳ ಹಾದರಿಗರ ಸಂಪಾದನೆ ಹೊಳ್ಳ ಕುಟ್ಟಿ ಕೈ ಹೊಟ್ಟೆಯಾದಂತೆ ಕಾಣಾ! ರಾಮನಾಥ./42 |
ಒಂದರಿವು ಒಂದು ನಡೆ ಒಂದು ಸ್ಥಾನದೊಳಗೆ ಒಂದು ಮುಂದೆ ಪ್ರಸಾದದಂತುವನರಿದಡೆ ನಿಶ್ಚಿಂತ ಪರಶಿವನು, ರಾಮನಾಥ./43 |
ಒಂದಾಗಿಹವೈದು ಭೂತ ಚಂದ್ರ ಸೂರ್ಯರು ನಂದಿವಾಹನ ನಿಮ್ಮ ತನುವಲ್ಲವೆ? ನಿಂದು ನೋಡಲು ಜಗವಂದ್ಯನಾಗಿಪ್ಪೆ, ಇನ್ನು ನಿಂದಿಸುವೆನಾರನಯ್ಯ? ರಾಮನಾಥ./44 |
ಒಕ್ಕುದು ಪ್ರಸಾದವಲ್ಲ, ಮಿಕ್ಕುದು ಪ್ರಸಾದವಲ್ಲ. ಹತ್ತೆ ಕರೆದಿಕ್ಕಿದುದು ಪ್ರಸಾದವಲ್ಲ. ತರ್ಕೈಸಿ ನಿಮ್ಮವನಪ್ಪಿಕೊಂಡಡೆ ಅದು ನಿಶ್ಚಯಪ್ರಸಾದ ಕಾಣಾ! ರಾಮನಾಥ./45 |
ಒಡಲಿಚ್ಛೆಗೆ ಭವಿಯ ಒಡಗೂಡಿಕೊಂಡು ಉಂಡು ಹಡಿಕೆಯ ತಿಂದ ನಾಯಿ ಮುಂದುಡೆ ಬಗುಳುವಂತೆ ಮೃಡನಿಲ್ಲದವನ ಮನೆಯ ಕೂಳು ಹೊಲೆಯರ ಮನೆಯ ಅಡಗಿಂದ ಕರಕಷ್ಟ ಕಾಣಾ! ರಾಮನಾಥ./46 |
ಒಡಲುಗೊಂಡವ ನಾನು; ಪ್ರಾಣವಿಡಿದವ ನೀನು. ಎನ್ನೊಡಲು ಸಂಚುವ ನೀ ಬಲ್ಲೆ! ನಿನ್ನ ಪ್ರಾಣದ ಸಂಚುವ ನಾ ಬಲ್ಲೆ! ಇದು ಕಾರಣ, ಇದು ಎನ್ನೊಡಲಲ್ಲ ನಿನ್ನೊಡಲು. ನಿನ್ನ ಪ್ರಾಣವೆನ್ನಲ್ಲಿ ಅಡಗಿದ ಭೇದವ ನೀ ಬಲ್ಲೆ, ನಾ ಬಲ್ಲೆನೈ, ರಾಮನಾಥ./47 |
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ! ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ! ರಾಮನಾಥ./48 |
ಒಡಲುಗೊಂಡೆನಾಗಿ ಮೃಡ! ನಿಮಗೆ ಹಗೆಯಾದೆನಯ್ಯ. ಆನು ಒಡಲುಗೊಂಡಡೇನು? ಕಡಲೊಳಗಣ ಬೊಬ್ಬಳಿಕೆ ಕಡಲೊಳಗೆ ಆಳಿವಂತೆ ಎನ್ನ ಒಡಲಳಿದು ಹೋದಡೇನು? ಪ್ರಾಣ ನಿಮ್ಮ ಎಡೆಯಲಡಗುವದಯ್ಯಾ,ರಾಮನಾಥ./49 |
ಒಡಲೊಳಗಣ ಕಿಚ್ಚು ಒಡಲ ಸುಡದ ಭೇದವ ಕುಡಿದ ಉದಕದಲ್ಲಿ ಆ ಕಿಚ್ಚು ನಂದದ ಭೇದವ ಮೃಢ! ನೀ ಪ್ರಾಣ ಪ್ರಕೃತಿಯೊಳಗೆ ಅಡಗಿದ ಭೇದವ ಲೋಕದ ಜಡರೆತ್ತ ಬಲ್ಲರೈ? ರಾಮನಾಥ./50 |
ಒಡೆಯರನೊಡಗೊಂಡು ಬಂದು ಕೈಗಡಿಗೆಯ ನೀರ ಕಯ್ಯಲ್ಲಿ ಕೊಟ್ಟು `ಒಡೆಯರೆ! ಕಾಲ ತೊಳಕೋ!’ ಎಂಬುವನ ಮನೆಗೆ ಅಡಿಯಿಡಲಾಗದಯ್ಯಾ ಮೃಡಶರಣರು. ಒಡಲಿಚ್ಛೆಗೆ ಬಡಮನವ ಮಾಡಿ ಹೊಕ್ಕುಂಬವರ ಎನ್ನೆಡೆಗೆ ತೋರದಿರಾ, ರಾಮನಾಥ./51 |
ಒರತೆಗಳ ಕಂಡಿಂತು ಕೆಲರೀ ಬಾವಿಯ ತೋಡೆಂಬರು? ಅರವಟಿಗೆ ಛತ್ರವು ತಮ್ಮದೆಂಬರು! ಎಲೆ ಪಯಿರೈದದಿರೆ, ಸುರಿವ ಮಳೆ ಸುರಿಸದಿದ್ದಡೆ, ಅವರೇತರಲ್ಲಿ ನೀಡುವರಯ್ಯಾ! ರಾಮನಾಥ./52 |
ಒಲವರವಿಲ್ಲದ ಭಕ್ತಿ, ಲವಲವಿಕೆಯಿಲ್ಲದ ಪೂಜೆ, ಸಲೆ ನಿಮ್ಮ ನಂಬಿಯೂ ನಂಬದವನ ಬಾಳುವೆ, ಹೊಲೆಯರ ನಾಯ ಹುಲುಸರವಿಯಿಂದ ಕರಕಷ್ಟ ಕಾಣಾ! ರಾಮನಾಥ./53 |
ಒಳಗರಿದ ಭಕ್ತನ ಒಳಗಾದ ಲಿಂಗವು ಒಳಗಾದ ಲಿಂಗದೊಳಗಾದ ಭಕ್ತನ ಹೊರಗಾದ ಲಿಂಗವ ಒಳಗೆ ತಂದಿರಿಸಿ ಆ ಭಕ್ತನ ತನುವಿನ ವಳೆಯವನಿನ್ನೇನ ಹೇಳುವೆ! ರಾಮನಾಥ./54 |
ಕಂಚುಮುಟ್ಟು ಕಲ್ಲುಗುಂಡುಗಳೇರುವಣ್ಣಗಳು ನೀವು ಕೇಳಿರೆ! ಘಂಟೆಯ ನುಡಿಸಿ ಶಿವನನುಂಟುಮಾಡಿಕೊಂಡಿಹೆನೆಂಬಿರಿ. ಆ ಘಂಟೆಯ ಧ್ವನಿಗೆ ಒಂದು ಗೋಟಡಕೆಯ ಸೋಲ, ಗುರು ರಾಮನಾಥನು./55 |
ಕಡಿಗಳ ಹದಿನೆಂಟನೊಡಗೂಡಿ ಸಂಧಿಸಿ ತೊಡಚಿ ಕಟ್ಟಿದೆ ನರರ ಬಂಧನದಲ್ಲಿ. ಈ ತೊಡಹದ ನಾಯ ನಿಚ್ಚ ನೀನಿಕ್ಕಿ ಕೆಡಿಸಿದೆಯಯ್ಯಾ, ರಾಮನಾಥ./56 |
ಕಡುಭಸಿತವ ಹೂಸಿ, ಮುಡಿಯಲ್ಲಿ ಲಿಂಗವ ಧರಿಸಿ, ಮಂತ್ರಮೂರ್ತಿಯ ಮನವಾರೆ ಪೂಜಿಸಿ, ಭಕ್ತಿ ವೇಷವ ಹೊತ್ತು ಭಕ್ತನೆನಿಸಿದ ಬಳಿಕ ಭವಿಯ ಮನೆಯನ್ನವ ನಾಯಡಗು, ನರರು ಹೇಸಿದ ಅಮೇಧ್ಯವೆಂದೆ ಕಾಣಬೇಕು. ಹೀಗಲ್ಲದೆ ಒಡಲಿಚ್ಛೆಗೆ ತುಡುಗಣಿ ನಾಯಂತೆ ಒಡಲ ಹೊರೆವವರ ಮೆಚ್ಚ, ನಮ್ಮ ರಾಮನಾಥ./57 |
ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ? ಕಡೆಗೀಲು ಬಂಡಿಗಾಧಾರ. ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ./58 |
ಕಣ್ಣು ಮೀಸಲು ಶಿವನು; ಕೈ ಮೀಸಲು ಶಿವನ. ಕಾಲು ಮೀಸಲು ಶಿವನ; ನಾಲಗೆ ಮೀಸಲು ಶಿವನ. ಕಿವಿ ಮೀಸಲು ಶಿವನ; ನಾಸಿಕ ಮೀಸಲು ಶಿವನ. ತನು ಮನವೆಲ್ಲಾ ಮೀಸಲು ಶಿವನ. ಈ ಮೀಸಲು ಬೀಸರವಾಗದಂತಿರ್ದಡೆ ಆತನೇ ಜಗದೀಶ ಕಾಣಾ! ರಾಮನಾಥ./59 |
ಕತ್ತೆ ಬಲ್ಲುದೆ ಕಸ್ತೂರಿಯ ವಾಸನೆಯ? ತೊತ್ತು ಬಲ್ಲಳೆ ಗುರುಹಿರಿಯರುತ್ತಮರೆಂಬುದ? ಭಕ್ತಿಯನರಿಯದ ವ್ಯರ್ಥಜೀವಿಗಳು ನಿಮ್ಮವರನೆತ್ತ ಬಲ್ಲರೈ? ರಾಮನಾಥ./60 |
ಕರಸ್ಥಲದ ಜ್ಯೋತಿಯಿದು. ಕರುವಿಟ್ಟ ಎರಕವಿದು. ಇದರ ನೆಲೆಯ ತಿಳಿದು ನೋಡಿದಡೆ ನಿಜದಾನಂದವು. ಹೊಲಬುದೋರದ ನಿಸ್ಸಂಗದ ಹೊಲಬನರಿದು ಕೂಡಿದಾತನೆ ಶರಣ ಕಾಣಾ! ರಾಮಾನಾಥ./61 |
ಕರಸ್ಥಲವೆಂಬ ದಿವ್ಯ ಭೂಮಿಯಲ್ಲಿ ಮಹಾಘನಲಿಂಗ ನಿಕ್ಷೇಪವಾಗಿದೆ! ಈ ದಿವ್ಯ ನಿಕ್ಷೇಪವ ಸಾಧಿಸುವಡೆ ಅಂಜನಸಿದ್ಧಿಯಿಲ್ಲದೆ ಸಾಧಿಸಬಾರದು. ಲಿಪಿಯಿಲ್ಲದೆ ತೆಗೆವಡಸದಳ. ಆ ಲಿಪಿಯ ವ್ರಯವ ಷಟ್ತತ್ವದ ಮೇಲೆ ನಿಶ್ಚಯಿಸಿ. ಆ ನಿಶ್ಚಯದೊಳಗೆ ಈ ನಿಕ್ಷೇಪದ ಕರ್ತೃವಿನ ಹೆಸರೋದಿತ್ತು. ತಿಳಿಯಲೋದುವನ್ನಬರ ಆತ ನಮ್ಮ ಹೆತ್ತಯ್ಯನೆಂಬ ಹೆಸರೋದಿತ್ತು. ಆ ಓದಿಕೆಯ ಕಡೆಯಕ್ಕರದೊಳಗೆಅಂಜನಸಿದ್ಧಿ ಹೇಳಿತ್ತು. ಅದಾವ ಪರಿಕ್ರಮದ ಅಂಜನವೆಂದಡೆ ಅದೆಮ್ಮ ಹೆತ್ತಯ್ಯ ಜಗದ್ವಿಲಾಸ ತದರ್ಥವಾಗಿ ಆ ತನ್ನ ಮೂಲಶಕ್ತಿ ಸಂಭೂತವಾದುದು. ಅಲ್ಲಿ ಹುಟ್ಟಿದ ದಿವ್ಯ ಚಿತ್ಕಳೆಯಿಂದೊಗೆದ ದಿವ್ಯಭಸಿತವೆಂದಿತ್ತು. ಆ ದಿವ್ಯ ಭಸಿತವೆಂಬ ದಿವ್ಯಾಂಜನವ ತಳೆದುಕೊಂಡು ಅತಿ ವಿಶ್ವಾಸದಿಂದ ನಾನೆನ್ನ ಹಣೆಯೆಂಬ ಕಣ್ಣಿಂಗೆಚ್ಚಿ ಸರ್ವಾಂಗವ ತೀವಲೊಡನೆ ಕರಸ್ಥಲದೊಳಗಣ ನಿಕ್ಷೇಪ ಕಣ್ದೆರವಾಯಿತ್ತು. ಆ ಕಣ್ದೆರವಾದ ನಿಕ್ಷೇಪವ ಮುಟ್ಟಹೋದಡೆ ಅಲ್ಲಿ ನಮ್ಮ ಹೆತ್ತಯ್ಯನ ಹೊಳಹ ಕಂಡು ತಳವೆಳಗಾದೆ ಕಾಣಾ! ರಾಮನಾಥ./62 |
ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ. ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ. ನಿಮ್ಮ ಶರಣರ ಸೂಳ್ನುಡಿಯ ಒಂದರೆಘಳಿಗೆಯಿತ್ತಡೆ ನಿನ್ನನಿತ್ತೆ ಕಾಣಾ! ರಾಮನಾಥ./63 |
ಕಲಿವೀರ ಕಡಿವಲ್ಲಿ, ಬಲುವಿಷವು ಸುಡಿವಲ್ಲಿ ನೆಲೆಗೆಟ್ಟು ಮೊರೆಯೊ! ಎಂಬಲ್ಲಿ ನಿಮ್ಮ ತಲೆಗಾದು ರಕ್ಷಸಿದ ಸುಲಭನನರಿಯಿರೆ ಹೊಲೆಯರಿರ! ಸಲೆ ನಂಬಿ ಬದುಕಿರೊ, ರಾಮನಾಥನ./64 |
ಕಷೃಜಾತಿಗಳು ಲಿಂಗವ ಮುಟ್ಟಿ ಪೂಜಿಸಲಾಗದು. ಮುಟ್ಟಿದಡೆ ಮುಟ್ಟಿದಂತಿರಬೇಕು. ನಿಮ್ಮ ಮುಟ್ಟಿಯೂ ಹಿಂದಣ ಕುಲವ ಕೂಡಿದರಾದಡೆ ಮುಂದೆ ಹೊಲೆಯರ ಮನೆಯ ಹುಳಿತ ನಾಯ ಬಸುರಲಿ ಬಪ್ಪುದು ತಪ್ಪದು ಕಾಣಾ! ರಾಮನಾಥ./65 |
ಕಳದೊಳಗಣ ಕಳವೆಯನೊಕ್ಕುವರೊಳಗದೆ ಶಿವಲಿಂಗ ಮುಕ್ಕಣ್ಣ! ನೀನೊಲಿದ ಸದ್ಭಕ್ತನ ಅಕ್ಕುಲಿಜನೆಂದಡೆ ಅಕ್ಷಯನರಕದಲ್ಲಿಕ್ಕುವ ಕಾಣಾ! ರಾಮನಾಥ./66 |
ಕಾಯ ನಿಮ್ಮ ದಾನ; ಜೀವ ನಿಮ್ಮದಾನ. ಕಾಯ ಜೀವ ಉಳ್ಳಲ್ಲಿಯೇ ನಿಮ್ಮ ಪೂಜಿಸದ ನಾಯಿಗಳನೇನೆಂಬೆ ಹೇಳ? ರಾಮನಾಥ./67 |
ಕೀಳು ಡೋಹರ ಕಕ್ಕ; ಕೀಳು ಮಾದರ ಚೆನ್ನ. ಕೀಳು ಓಹಿಲದೇವ; ಕೀಳು ಉದ್ಭಟಯ್ಯ. ಕೀಳಿಂಗಲ್ಲದೆ ಹಯನು ಕರೆಯದು ಕಾಣಾ! ರಾಮನಾಥ./68 |
ಕುಲಛಲವ ಬಿಟ್ಟು ನಿಮ್ಮನೊಲಿಸಿದ ಶರಣರಿಗೆ ತಲೆವಾಗುವೆ ನಾನು ಕುಲಜರೆಂದು. ಬೆಬ್ಬನೆ ಬೆರತು ನಿಮ್ಮನೊಲಿಸಿದ ಶರಣರಿಗೆ ತಲೆವಾಗದವನ ತಲೆ ಶೂಲದ ಮೇಲಣ ತಲೆ ಕಾಣಾ! ರಾಮನಾಥ./69 |
ಕುಲಸ್ವಾಮಿ ನಿಮ್ಮವ ಒಲಿವುದ ಕಂಡಡೆ ತಲೆವಾಗುವೆ ಕಾತ ಕಳವೆಯಂತೆ ಕುಲಜ ನಾನೆಂದು ತಲೆವಾಗದಿದ್ದಡೆ ಸಲೆ ಶೂಲದ ತಲೆಯಯ್ಯಾ, ರಾಮನಾಥ./70 |
ಕುಲಸ್ವಾಮಿ ನೀ ನಿಂದ ಹಜ್ಜೆಯಲ್ಲದೆ ನಾನೊಂದು ಹೆಜ್ಜೆಯನಿಡೆನಯ್ಯ; ಎಗಗೊಂದು ಹಜ್ಜೆಯಿಲ್ಲ. ನಿನ್ನ ಹೆಜ್ಜೆ ಎನ್ನ ಹೆಜ್ಜೆ ಒಂದಾದ ಭೇದವ ಜಗದನ್ಯಾಯಿಗಳೆತ್ತ ಬಲ್ಲರೈ? ರಾಮನಾಥ./71 |
ಕೆಡಹಿದ ಚಿನ್ನದ ಎಡೆಯಣ ಮಣ್ಣವ ಹೆಡೆಗೆದುಂಬಲಾ ಚಿನ್ನದೋರಿ ಮೃಡ! ನಿಮ್ಮ ಶರಣರ ಎಡೆಗಳನರಿದ ಬಳಿಕ ಉಡುಗಿದ ಮಣ್ಣೇಕೆ? ರಾಮನಾಥ./72 |
ಖಂಡಿತವಿಲ್ಲದ ಅಖಂಡಿತ ನೀನೆ. ನಿಮ್ಮ ಕಂಡವರುಂಟೆ? ಹೇಳಯ್ಯ. ಕಂಡೆನೆಂಬವರೆಲ್ಲ ಬಂಜೆಯ ಮಕ್ಕಳು ನೀ ನಿಂದ ಹಜ್ಜೆಯ ಕೆಳಗೆ ಒಂದು ಬಿಂದು ಹುಟ್ಟಿ ಬೆಳಗುವ ಛಂದವ ಕಂಡು ಕಣ್ದೆರೆದೆ ಕಾಣಾ! ರಾಮನಾಥ./73 |
ಗಂಡ ಭಕ್ತನಾಗಿ, ಹೆಂಡತಿ ಭವಿಯಾದಡೆ ಉಂಡ ಊಟ ಇಬ್ಬರಿಗೂ ಸರಿಭಾಗ! ಸತ್ತ ನಾಯ ತಂದು ಅಟ್ಟದ ಮೇಲಿಳುಹಿ ಒಬ್ಬರೊಪ್ಪಚ್ಚಿಯ ಹಂಚಿಕೊಂಡು ತಿಂಬಂತೆ! ರಾಮನಾಥ./74 |
ಗಂಡನುಳ್ಳಮ್ಮನ ಗೌರಿಯೆಂದು ಕಂಡಡೆ ಭೂಮಂಡಳಕ್ಕೆ ಅರಸಾಗಿ ಹುಟ್ಟುವನಾತನು. ಗಂಡನುಳ್ಳಮ್ಮನ ಕಂಡು ಒಡವೆರದಾತ ನರಕದಲ್ಲಿ ದಿಂಡುಗೆಡದಿಪ್ಪನೈ, ರಾಮಾನಾಥ./75 |
ಗಿರಿಗಳೆಲ್ಲ ಕೂಡಿ ಮೇರುಗಿರಿಗೆ ಸರಿಯಾಗಬಲ್ಲವೆ? ತರುಗಳೆಲ್ಲ ಕೂಡಿ ಕಲ್ಪತರುವಿಗೆ ಸರಿಯಾಗಬಲ್ಲವೆ? ಸರಿಯಿಲ್ಲ ನೋಡಾ ನಮ್ಮ ಭಕ್ತರಿಗೆ ನರರು ಸುರರು ಸರಿಯಲ್ಲ ನೋಡಾ! ಪರುಷಕ್ಕೆ ಪಾಷಾಣ ಸರಿಯೆ? ಮರುಜವಣಿಗೆ ಔಷಧ ಸರಿಯೇ? ಇದು ಕಾರಣ, ಶಿವಭಕ್ತರ್ಗೆ ಲೋಕದವರು ಸರಿಯೆಂದರೆ ನರಕ ತಪ್ಪದಯ್ಯಾ, ರಾಮಾನಾಥ./76 |
ಗುರು ಕರುಣಿಸಲು ಸಂಸಾರ ವಿಷಯ ಕೆಟ್ಟಿತ್ತು. ಮಾಯಾ ಪ್ರಪಂಚು ಬಿಟ್ಟಿತ್ತು. ಮುಂದಣ ಹುಟ್ಟರತು ಹೋಯಿತ್ತು. ನೆಟ್ಟಗೆ ಗುರುಪಾದವ ಮುಟ್ಟಿ ಭವಗೆಟ್ಟೆನು ಕಾಣಾ! ರಾಮನಾಥ./77 |
ಗುರು ನಿರೂಪವ ಮರದು ಪರವಧುವ ನೆರವರು; ಪರವಧುವನಳುಪುವರು. ಗುರುವಿಲ್ಲವವರಿಗೆ! ಪರವಿಲ್ಲವವರಿಗೆ! ಇಂತಪ್ಪ ನರಕಿಗಳನೆನೆಗೊಮ್ಮೆ ತೋರದಿರಾ,ರಾಮನಾಥ./78 |
ಗುರು ಲಿಂಗ ಒಂದೆಂಬರು. ಗುರು ಲಿಂಗ ಒಂದಾದ ಠಾವ ತಿಳಿದು ನೋಡಿರೆ. ಗುರು ಕಾರುಣ್ಯವಾದ ಬಳಿಕ ಅಂಗದ ಮೇಲೆ ಲಿಂಗವಿರಬೇಕು. ಲಿಂಗವಿಲ್ಲದ ಗುರುಕಾರುಣ್ಯವು ಬತ್ತಿದ ಕೆರೆಯಲ್ಲಿ ತಾವರೆಯ ಬಿತ್ತದಂತೆ ಕಾಣಾ!ರಾಮನಾಥ./79 |
ಗುರುಭಕ್ತನಾದಲ್ಲಿ ಘಟಧರ್ಮವಳಿದು ಲಿಂಗಭಕ್ತನಾದಲ್ಲಿ ಮನಸಂಚಲ ನಿಂದು ಜಂಗಮಭಕ್ತಿಯಲ್ಲಿ ಧನದಾಸೆಯಳಿದು ತ್ರಿವಿಧಾಂಗ ಸಲೆ ಸಂದು ತ್ರಿಕರಣ ಶುದ್ಧನಾಗಿದ್ದವಂಗೆ ಮತ್ರ್ಯ ಕೈಲಾಸವೆಂಬ ಕಾಳುಮಾತಿಲ್ಲ ಆತ ನಿಶ್ಚಿಂತ ನಿಜಮುಕ್ತನಯ್ಯಾ, ರಾಮನಾಥ./80 |
ಘಟದೊಳಗೆ ತೋರುವ ಸೂರ್ಯನಂತೆ ಸರ್ವರಲ್ಲಿ ಶಿವನ ಚೈತನ್ಯವಿಪ್ಪುದು. ಇದ್ದರೇನು? ಅದ ಕೂಡುವರೆ ಗುರುವಿನಿಂದಲ್ಲದಾಗದು ಕಾಣಾ! ರಾಮನಾಥ./81 |
ಘಟವನೊಡದು ಬಯಲ ನೋಡಲದೇಕೆ? ಘಟದೊಳಗಿಪ್ಪುದೆ ಬಯಲೆಂದರಿದಡೆ ಸಾಲದೆ? ಪಟವ ಹರಿದು ತಂತುವ ನೋಡಲದೇಕೆ? ಆ ಪಟವೆ ತಂತುವೆಂದರಿದಡೆ ಸಾಲದೆ? ಕಟಕವ ಮುರಿದು ಕಾಂಚನವ ನೋಡಲದೇಕೆ? ಆ ಕಟಕವೆ ಕಾಂಚನವೆಂದರಿದಡೆ ಸಾಲದೆ? ತನ್ನನಳಿದು ಘನದ ನೋಡಲದೇಕೆ? ತಾನೆ ಘನವೆಂದರಿದಡೆ ಸಾಲದೆ? ಹೇಳಾ! ರಾಮನಾಥ./82 |
ಚಿನ್ನದೊಳಗಣ ಬಣ್ಣವ ಆ ಚಿನ್ನ ತನ್ನ ತಾನರಿವುದೆ? ಕಬ್ಬು ರುಚಿಸಬಲ್ಲುದೆ ತನ್ನ ತಾನೆ? ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನ ಭೇದವ?ರಾಮನಾಥ./83 |
ಜಂಬೂದ್ವೀಪವನೆಲ್ಲ ತಿರಿಗಿದಡೇನು? ಜಂಬುಕ ಶಂಭುದ್ಯಾನದಲ್ಲಿ ಸೈವೆರಗಪ್ಪುದೆ? ಕುಂಭಿನಿಯ ತಿರಿಗಿ ಕೋಟಿ ತೀರ್ಥವ ಮಿಂದಡೇನು? ಶಂಭು! ನಿಮ್ಮಲ್ಲಿ ಸ್ವಯವಾಗದವನು ಕುಂಭಿನಿಯ ತಿರಿಗಿದ ಡೊಂಬನಂತೆ ಕಾಣಾ!ರಾಮನಾಥ./84 |
ಜಗದೊಳಗಣ ಮನುಜರು ಸೋಗೆಗನಂತಿಪ್ಪರು. ಸೋಗೆಗನಾಡಿಸುವ ಓಜೆ ಬೇರೈ. ಸೋಗೆಗಳನೀಡಾಡಿ ಓಜ ತಾ ಹೋದರೈ ಸೋಗೆಗ ನುಡಿಯಬಲ್ಲದೆ? ರಾಮನಾಥ./85 |
ಜ್ವರ ಪೀಡಿಸಿದ ಮನುಜರಿಗೆ ನೊರೆವಾಲು ಸೊಗಸುವದೆ? ಭವಜನ್ಮದಲ್ಲಿ ಬರುವ ಕ್ರೂರಕರ್ಮಿಗಳಿಗೆ ಶಿವಾಚಾರವ ಹೇಳಿದಡೆ ಹಗೆಯ ಮಾಡುವರು ಕಾಣಾ! ರಾಮನಾಥ./86 |
ಜ್ವರ ಬಡಿದ ಬಾಯಿಗೆ ನೊರೆವಾಲು ಉರಸುವದೆ? ನರಕದಲ್ಲಿ ಬೀಳುವ ಮನುಜರಿಗೆ ಶಿವಭಕ್ತಿಯೆಂಬುದು ಕಿರುಗಹಿ ಕಾಣಾ! ರಾಮನಾಥ./87 |
ತನು ತನ್ನ ದೆಸೆಯಲೇಸು ದಿನವಿರ್ದಡೇನು? ಮನ ತನ್ನ ಹರಿದತ್ತ ಹರಿದ ಬಳಿಕ. ಕೆನೆಯಿಲ್ಲದ ಮೊಸರ ಕಡೆದಡೆ ಅಲ್ಲಿ ಒಂದು ಹನಿ ತುಪ್ಪವಿಲ್ಲ ಕಾಣಾ! ರಾಮನಾಥ./88 |
ತನ್ನೊಳಗಣ ಅರಿವು ತನ್ನಲ್ಲಿಯೇ ತೋರಿದಲ್ಲದೆ ಅನ್ಯರಲ್ಲಿ ತೋರಬಲ್ಲದೆ? ತನ್ನಲ್ಲಿ ತಾನೆ ಇದ್ದಿತ್ತು. ತನ್ನ ತಾನೆ ಪಕ್ಷಕ್ಕೆ ಬಂದು ತನ್ನಲ್ಲಿ ಹುಟ್ಟಿದ ನೆನಹಿನ ಬಿನ್ನಾಣವನೇನೆಂಬೆನಯ್ಯಾ ರಾಮನಾಥ./89 |
ತಲೆಯಿಲ್ಲದ ಗುರು, ಕಾಲಿಲ್ಲದೆ ನಿಂದ ನೋಡ! ಒಡಲಿಲ್ಲದ ಶಿಷ್ಯನಾದ ಪರಿಯ ನೋಡ! ಗುರುವಿನ ಒಡಲ ಬಗೆಯ ಹುಟ್ಟಿದಾತ ಒಡನೆ ಗುರುಸಹಿತ ನಿಂದ ನಿಲವನೇನೆಂಬೆನಯ್ಯಾ!ರಾಮನಾಥ./90 |
ತಾಯ ಗರ್ಭದ ಶಿಶು ತಾಯ ಕುರುಹನರಿಯದು. ಆ ತಾಯಿ ಶಿಶುವಿನ ಕುರುಹನೆಂದೂ ಅರಿಯಳು. ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು. ಆ ದೇವರು ಆ ಭಕ್ತರನೆಂದೂ ಅರಿಯನು ಕಾಣಾ! ರಾಮನಾಥ./91 |
ತೀವಿ ಕುಳ್ಳಿರ್ದ ಸಭೆ ಈಯಬಲ್ಲುದೆ ದಾನವ? ಸಾವರೆ ಸಂಗ್ರಾಮಕ್ಕೆ ಹೋದವರೆಲ್ಲ? ಇರಿಯಬಲ್ಲರೆ ನೂರಕ್ಕೊಬ್ಬ ಸಹಸ್ರಕ್ಕೊಬ್ಬ. ಹುಣಿಸೆಯ ಹೂವೆಲ್ಲ ಕಾಯಾಗಬಲ್ಲುದೆ?ರಾಮನಾಥ./92 |
ತೊಡೆಯಲ್ಲಿ ಮುದ್ರೆಯನೊತ್ತಿದಡೇನು? ಅದು ನಡೆಯಲ್ಲಿ ಶುಚಿಯಾಗಬಲ್ಲುದೆ? ಮಡಿಲಲ್ಲಿ ಲಿಂಗವ ಕಟ್ಟಿದಡೇನೊ? ಲೋಕದ ಆಜ್ಞಾನಿತನ ಬಿಡುವುದೆ? ನಡೆ ನುಡಿ ಸತ್ಯಸದಾಚಾರಿಗಳು ಎಡೆಯೆಡೆಗೊಬ್ಬರು ಕಾಣಾ! ರಾಮನಾಥ./93 |
ದರುಶನ ತಪ್ಪುಕ ಪ್ರಥಮ ಪಾತಕ. ಪರುಶನ ತಪ್ಪುಕ ದ್ವಿತೀಯ ಪಾತಕ. ಗುರು ತಪ್ಪುಕ ತೃತೀಯ ಪಾತಕ. ಪಾರದ್ವಾರಿ ಚತುರ್ಥ ಪಾತಕ. ಮಾಂಸಾಹಾರಿ ಪಂಚಮ ಮಹಾ ಪಾತಕ. ಈ ಅಯ್ವರೊಡನೆ ನುಡಿಯಲಿಲ್ಲಯ್ಯ ರಾಮನಾಥ./94 |
ದಾಸನ ಕುಲವಾದಾತ ಈಶಂಗಲ್ಲದೆ ಶರಣೆನ್ನ. ಆಸೆ ಮಾಡ, ನೋಡ ಅನ್ಯದೈವಂಗಳಿಗೆ. ದೇಶದ ಪಿಶಾಚಿಗಳಿಗೆ ಆಶೆ ಮಾಡ ನೋಡ! ಆಶೆ ಮಾಡಿದನಾದಡೆ ಅವ ದಾಸನ ಕುಲವಲ್ಲ ಅವ ಅನ್ಯಕುಲ ಕಾಣಾ! ರಾಮನಾಥ./95 |
ದಾಸಿ ವೇಶಿ ಮದ್ದು ಮಾಂಸ ಸುರೆ ಭಂಗಿ ಹೊಗೆ ಅನ್ಯದೈವ ಭವಿಸಂಗ-ಇಷ್ಟುಳ್ಳನ್ನಕ್ಕ ಅವ ಭಕ್ತನಲ್ಲ, ಜಂಗಮನಲ್ಲ. ಅವರಿಬ್ಬರ ಮೇಳಾಟವೆಂತೆಂದಡೆ ಹೀಹಂದಿ ಹಡಿಕೆಯ ತಿಂದು ಅವು ಒಂದರ ಮೋರೆಯನೊಂದು ಮೂಸಿದಂತೆ ಕಾಣಾ! ರಾಮನಾಥ./96 |
ದೇಹಗೊಂಡು ಹುಟ್ಟಿದವರು ಒಪ್ಪಚ್ಚಿದೇಹಾರವ ಮಾಡುವಿರಯ್ಯ. ದೇಹಾರವ ಮಾಡಿ ಲಿಂಗಾರ್ಪಿತವ ಮಾಡದೆ ಆಹಾರವ ಕೊಂಡಡೆ ಕೋಳಿ ಹುಳವನಾಯ್ದುತಿಂದಂತೆ ಕಾಣಾ! ರಾಮನಾಥ./97 |
ಧರಣಿಯ ಪಸರಿಸಿ, ಉರಗನನಡಿಯಿಟ್ಟು ಶರಧಿಯೇಳಕ್ಕೆ ಎರದನೊಕ್ಕುಡಿತೆ ಉದಕವ ಹರಿಯಜ ಸುರರಿಗೆ ಪರಿಪರಿಯ ಲೋಕವ ಕೊಟ್ಟು ಅರಿದಂತಿರ್ದ ಕಾಣಾ! ರಾಮನಾಥ/98 |
ಧರ್ಮವನೆತ್ತುವವರ ಮಹಾಧರ್ಮಿಗಳೆಂದೆಂಬಿರಿ. ನಿಮ್ಮ ಧರ್ಮವನಾರು ಅರಿದವರಿಲ್ಲ! ಧರ್ಮಗಳಿನಿಕ್ಕಿ ಉತ್ತ ಭೂಮಿಯೆ ಡೊಣಿ ನೀನೆಮ್ಮನೆಲ್ಲರ ನೋಡಿ ಸಲಹಿದೈ, ರಾಮನಾಥ./99 |
ನಂಬಿ ನಚ್ಚಿದೆನೆಂದು ಮನವನಿಂಬುಗೊಡದಿರು. ಕಾಯದ ಮಾಯದ ಕಪಟ ಕರ್ಮ ಸಂಸಾರಕ್ಕೆ ತನು ಮನ ಧನದಲ್ಲಿ ನೆನಹುಳ್ಳವರ ಕನಸಿನಲ್ಲಿ ಅರಿಯ, ನಮ್ಮ ರಾಮನಾಥ./100 |
ನಂಬಿದ ಚೆನ್ನನ ಅಂಬಲಿಯನುಂಡ. ಕೆಂಬಾವಿಯ ಭೋಗಯ್ಯನ ಹಿಂದಾಡಿಹೋದ. ಕುಂಭದ ಗತಿಗೆ ಕುಕಿಲಿರಿದು ಕುಣಿದ. ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ./101 |
ನಡೆ ನೋಟ ಸೊಲ್ಲೆಡೆಯಲ್ಲಿ ಒಂದು ಕಿಚ್ಚು. ಮಡದಿ ಪುರುಷರೆಡೆಯಲ್ಲಿ ಒಂದು ಕಿಚ್ಚು. ತಡದುಂಬೆಡೆಯಲ್ಲಿ ಒಂದು ಕಿಚ್ಚು. ಪಡೆದರ್ಥ ಕೆಟ್ಟೆಡೆಯಲ್ಲಿ ಒಂದು ಕಿಚ್ಚು. ಕೂಡಿದ ವ್ಯಾಮೋಹದೆಡೆಯಲ್ಲಿ ಒಂದು ಕಿಚ್ಚು. ಇಂತೀ ಐದು ಕಿಚ್ಚನಿಕ್ಕಿ ಬಾಯಲ್ಲಿ ಮಣ್ಣಹೊಯಿದು ಕೆಡಿಸಿದೆ! ರಾಮನಾಥ./102 |
ನಾನೊಂದು ಸುರಗಿಯನೇನೆಂದು ಹಿಡಿವೆನು? ಏನ ಕಿತ್ತೇನನಿರಿವೆನು? ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ./103 |
ನಿಜವುಂಡ ನಿರ್ಮಲದಲೊದಗಿದ ಜ್ಯೋತಿಯನು ಮರಳಿ ಪ್ರಸಾದರೂಪು ತಾನಾಗಿ ನಿಜ ನಿಂದು ಬ್ರಹ್ಮಾಂಡ ಬೆಳಗಿ ತೋರುತ್ತದೆ ಮಹಾಪ್ರಸಾದಿಯಲ್ಲಿ ರಾಮನಾಥ./104 |
ನಿಡಿದೊಂದು ಕೋಲುವನು ಕಡಿದು ಎರಡ ಮಾಡಿ ಅಡಿಯ ಹೆಣ್ಣ ಮಾಡಿ, ಒಡತಣದ ಗಂಡ ಮಾಡಿ ನಡುವೆ ಹೊಸದಡೆ ಹುಟ್ಟಿದ ಕಿಚ್ಚು ಹೆಣ್ಣೊ ಗಂಡೊ? ರಾಮನಾಥ./105 |
ನಿಷ್ಠೆಯುಳ್ಳ ಭಕ್ತ ನಟ್ಟಡವಿಯಲ್ಲಿದ್ದಡೇನು? ಅದು ಪಟ್ಟಣವೆಂದೆನಿಸೂದು! ನಿಷ್ಠೆಯಿಲ್ಲದ ಭಕ್ತ ಪಟ್ಟಣದಲ್ಲಿದ್ದಡೂ ಅದು ನಟ್ಟಡವಿ ಕಾಣಾ! ರಾಮನಾಥ./106 |
ನೀನೀಶನೀಯದೆ ಮಾನಿಸನೀವನೆ? ನೀನೀಸುವ ಕಾರಣ ಮಾನಿಸನೀವನು. ಆ ಮಾನಿಸನ ಹೃದಯದೊಳು ಹೊಕ್ಕು ನೀನೀಸುವ ಕಾರಣದಿಂದ ನೀನೆ ಶರಣೆಂಬೆನಯ್ಯಾ, ರಾಮನಾಥ./107 |
ನೆರೆ ನಂಬಿ-ಕರೆದಡೆ ನರಿ ಕುದುರೆಯಾಗಿ ಹರಿವೆ? ಜಗವೆಲ್ಲಾ ಅರಿಯಲು ತೊರೆಯೊಳಗೆ ಬಿದ್ದ ಲಿಂಗ ಕರೆದಡೆ ಬಂದುದು ಕರಸ್ಥಲಕ್ಕೆ. ನಂಬದೆ ಕರೆದವರ ಹಂಬಲನೊಲ್ಲನೆಮ್ಮ ರಾಮನಾಥ./108 |
ನೆರೆದರೆ ಗಣಂಗಳು! ಹರದಡೆ ಕಂಚುಗಾರರು! ಲಿಂಗವ ಮಾರಿ ಉಂಬ ಭಂಗಾರರು! ತಮ್ಮ ತಳಿಗೆಯ ಕೊಂಡು ಹೋಗಿ ಅನ್ಯರ ಮನೆಯಲುಂಬ ಕುನ್ನಿಗಳನೇನೆಂಬೆ?ರಾಮನಾಥ./109 |
ಪರವಧುವ ನೆರೆಯದೆ; ಪರಧನವ ತುಡುಕದೆ. ಪರದೈವದಿಚ್ಚೆವಡೆಯದೆ ಗುರು ಲಿಂಗ ಜಂಗಮಕ್ಕೆ ವರದಾಸನಾದಾತನೆ ಧರೆ ಮೂರಕ್ಕೆ ಗುರುವಾಗಿಪ್ಪನೈ, ರಾಮನಾಥ./110 |
ಪ್ರಾಣನ ಕಳೆ ಪ್ರಕೃತಿಯಲ್ಲಿ ಅಡಗಿ ಪ್ರಕೃತಿಯ ಕಳೆ ಪ್ರಾಣನಲ್ಲಿ ಅಡಗಿ ಲಿಂಗವೆಂದರಿದು ಅಂಗೈಸಿ ಅನುಭವಿಸಬಲ್ಲವರ ಲೆಂಗಿ ನಾನಪ್ಪೆನೈ, ರಾಮನಾಥ./111 |
ಬಂದುದನರಿದು ಬಳಸುವಳು ಬಂದುದ ಪರಿಣಾಮಿಸುವಳು ಬಂಧು ಬಳಗವ ಮರಸುವಳು ದುಗ್ಗಳೆಯ ತಂದು ಬದುಕಿದೆನು ಕಾಣಾ!ರಾಮನಾಥ./112 |
ಬಯಲ ಬಣ್ಣವ ಮಾಡಿ; ಸ್ವಯವ ನಿಲವ ಮಾಡಿ ಸುಳಿವಾತನ ಬೆಡಗ ಬಲ್ಲವರಾರೈ? ರಾಮನಾಥ!/113 |
ಬರು ಸಠಗನ ಭಕ್ತಿ ದಿಟವೆಂದು ನಚ್ಚಲು ಬೇಡ. ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು ಕಾಣಾ! ರಾಮನಾಥ./114 |
ಬಿಂದುವಿನೊಳಗೆ ನಾದ ಹೊಂದಿರ್ದ ಭೇದವನು ಲಿಂಗದೊಳಗೆ ಶರಣ ಸಂದಿರ್ದ ಭೇದವನು ಲೋಕದ ಸಂದೇಹಿಗಳೆತ್ತ ಬಲ್ಲರೈ! ರಾಮನಾಥ./115 |
ಬೆಕ್ಕು ನಾಯಿ ಶಿವಭಕ್ತರೊಕ್ಕು ಮಿಕ್ಕುದ ಕೊಂಡಡೆ ಸದಾಚಾರಿಯಾಗಬಲ್ಲುದೆ? ಭೃತ್ಯಾಚಾರಿಯಾಗಬಲ್ಲುದೆ? ಜಂಗಮಲಿಂಗದಲ್ಲಿ ನಂಬುಗೆಯಿಲ್ಲದೆ ಒಕ್ಕು ಕೊಂಡ ಪ್ರಸಾದ ಬೆಕ್ಕು ನಾಯಿ ತಿಂದಂತೆ ಕಾಣಾ! ರಾಮನಾಥ./116 |
ಭಂಜಿಸಿಹೆನೆಂದೆಂಬೆ ಹಲಬರು ಭಂಜನೆಗೆ ಸಿಲುಕುವವು ಪ್ರಾಣಿಗಳಲ್ಲದೆ ಲಿಂಗವು ಭಂಜನೆಗೆ ಸಿಲುಕುವನೆ? ತಾತ್ಪರ್ಯಕ್ಕಲ್ಲದೆ. ಆ ಲಿಂಗದೆಂಬಲ ತಿಂದು ವೈಸಿಕವ ಮಾಡಿದಡೆ ಅದು ನಂಜಾಗಿ ಕಾಡುವದು ಕಾಣಾ! ರಾಮಾನಾಥ./117 |
ಭಕ್ತನ ಮಠವೆಂದು ಭಕ್ತಹೋದಡೆ ಆ ಭಕ್ತ ಭಕ್ತಂಗೆ ಅಡಿಯಿಟ್ಟು ಇದಿರೆದ್ದುನಡೆದು ಹೊಡೆಗೆಡೆದು ಒಡಗೊಂಡು ಬಂದು ವಿಭೂತಿ ಮೀಳ್ಯವನ್ನಿಕ್ಕಿ ಪಾದಾರ್ಚನೆಯಂ ಮಾಡಿಸಿ ಒಕ್ಕುದಕೊಂಡು ಓಲಾಡುತ್ತಿಪ್ಪುದೆ ಭಕ್ತಿ. ಹೀಂಗಲ್ಲದೆ ಬೆಬ್ಬನೆ ಬೆರತು, ಬಿಬ್ಬನೆ ಬೀಗಿ ಅಹಂಕಾರಭರಿತನಾಗಿಪ್ಪವನ ಮನೆಯ ಲಿಂಗಸನುಮತರು ಹೊಗರು ಕಾಣಾ! ರಾಮನಾಥ./118 |
ಭಕ್ತಿಯ ಬಲ್ಲವರಿಗೆ ಸತ್ಯ ಸದಾಚಾರವ ಹೇಳಿದಡೆ ನಂಬುವರು, ನಚ್ಚುವರು, ಮಚ್ಚುವರು. ಭಕ್ತಿಯ ಹೊಲಬನರಿಯದ ವ್ಯರ್ಥರಿಗೆ ಸತ್ಯ ಸದಾಚಾರವ ಹೇಳಿದಡೆ ಕಚ್ಚುವರು, ಬಗುಳುವರು ಕಾಣಾ! ರಾಮನಾಥ./119 |
ಭಕ್ತಿಯ ಬಲ್ಲವರು ನಚ್ಚಿ ಮೆಚ್ಚಿ ಮನವನೊಚ್ಚತಗೊಡುವರು. ಭಕ್ತಿಯನರಿಯದ ಬಲುಪಾಪಿ ಜೀವಿಗಳು ಕಚ್ಚುವರು ಬಗುಳುವರು, ರಾಮನಾಥ./120 |
ಭವಿಯ ಕಳೆದು ಭಕ್ತನಾದ ಬಳಿಕ ಭವಿ ನಂಟನೆಂದು ಹೊಗಿಸಲಾಗದು. ನಂಟುತನಕ್ಕೆ ಆತ್ಮನಿಚ್ಛೆಗೆ ಅಳುಪಿ ಭವಿಯೊಡನುಂಡಡೆ ಹಂದಿಯ ಬಾಯ ತುತ್ತ ನಾಯಿ ಸೆಳತಿಂದಂತೆ ಕಾಣಾ!ರಾಮನಾಥ./121 |
ಭವಿಯ ಮನೆಯ ಅನ್ನಸವಿಯಾಯಿತ್ತೆಂಬ ಭಕ್ತಂಗೆ ಭವಿಪಾಕ ನರಕ. ಆಗಳಂತೆ ಭವಿಗೆ ಮಾಡಿದ ಹುಳುಗುಂಡ ಭಕ್ತಂಗಪ್ಪುದು ತಪ್ಪದು ಆ ಭವಿಗೆ ಭವಂ ನಾಸ್ತಿ ಕಾಣಾ! ರಾಮನಾಥ./122 |
ಮಂಡೆಯ ಬೋಳಿಸಿಕೊಂಡು ಮಡಿದು ಗೋಸಿಯ ಕಟ್ಟಿದಡೇನು? ಕಂಡಕಂಡವರಿಗೆ ಕಯ್ಯೊಡ್ಡಿ ಬೇಡುವ ಭಂಡರನೊಲ್ಲನೆಮ್ಮ ರಾಮನಾಥ./123 |
ಮಡದಿಯ ಪ್ರಾಣಕ್ಕೆ ಮೊಲೆ ಮುಡಿ ಇದ್ದಿತ್ತೆ? ಒಡೆಯನ ಪ್ರಾಣಕ್ಕೆ ಇದ್ದಿತ್ತೆ ಯಜ್ಞೋಪವೀತ? ಕಡೆಯಲ್ಲಿದ್ದ ಅಂತ್ಯಜನು ಹಿಡಿದಿದ್ದನೆ ಹಿಡಿಗೋಲ? ನೀ ತೊಡಕಿಕ್ಕಿದ ತೊಡಕನೀ ಲೋಕದ ಜಡರೆತ್ತ ಬಲ್ಲರೈ ರಾಮನಾಥ./124 |
ಮಣಿಗಣ ಸೂತ್ರದಂತೆ ತ್ರಿಣೆಯ ನೀನಿಪ್ಪೆಯಯ್ಯ. ಎಣಿಸುವಡೆ ತನ್ನ ಭಿನ್ನ ಆತ್ಮನೊಬ್ಬನೆ. ಅಣುರೇಣು ಮಧ್ಯದಲ್ಲಿ ಗುಣಭರಿತ ನೀನೆಂದು ಮಣಿಯುತಿಪರ್ೆನಯ್ಯಾ, ರಾಮನಾಥ./125 |
ಮಣಿವಡೆ ಶಿವಭಕ್ತ ಮಣಿಯ ಕಟ್ಟಲೆ ಬೇಕು. ಮಣಿಯದಿರ್ದಡೇನು? ಶಬುದಗುಂಡಿಗೆ! ಫಣಾಮಣಿದೇವರ ಮಣಿಮಕುಟದಲ್ಲದೆ, ಅದು ಮಣಿಯಲ್ಲದೇನು? ಹೇಳು ರಾಮನಾಥ./126 |
ಮನಮುಟ್ಟಿ ನೆನವಲ್ಲಿ ತನು ನಿಮ್ಮದಾಯಿತ್ತು. ತನುಮುಟ್ಟಿ ಅಪ್ಪಿ, ಮನಮುಟ್ಟಿ ನೆರದು ವನಿತೆಯರ ಕೂಟಕ್ಕೆ ತೆರಪಿಲ್ಲವಾಯಿತ್ತು. ಜನನ ಮರಣದ ಬಾಧೆ ಹರಿಯಿತ್ತು. ಈಶ್ವರ! ನಿಮ್ಮ ಪಾದಸೇವೆಯಿಂದ ಕಾಣಾ!ರಾಮನಾಥ./127 |
ಮನೆಯಲ್ಲಿ ಅಟ್ಟೆನೆಂದಡೆ ಹೊಟ್ಟೆ ತುಂಬಿದುದುಂಟೆ? ಕೈಮುಟ್ಟಿ ಉಣ್ಣದನ್ನಕ್ಕರ! ತಾನು ವಚನಾಗಮದ ಪ್ರಸಂಗವ ಬಲ್ಲನೆಂದಡೆ ಬಲ್ಲವರಾರೂ ಇಲ್ಲವೆಂದಡೆ ಆತ ತನ್ನ ನುಡಿಗೆ ಸಿಲುಕುವನೆ? ಇಲ್ಲ ಕಾಣಾ! ರಾಮನಾಥ./128 |
ಮರನೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ ಶರೀರದೊಳಗಾತ್ಮನನಾರು ಕಾಣದಂತಿರಿಸಿದೆ ನೀ ಬೆರಸುವ ಭೇದಕ್ಕೆ ಬೆರಗಾದೆನಯ್ಯ!ರಾಮನಾಥ./129 |
ಮಹಾಘನವಪ್ಪ ಬೋನವನು ಒಂದನುವಿನ ಪರಿಯಾಣದಲ್ಲಿ ಹಿಡಿದು ಗುರುಲಿಂಗವು ಒಳಗಾದ ಲಿಂಗವಾರೋಗಣೆಯ ಮಾಡಿ ಮಿಕ್ಕುದು ಪ್ರಸಾದವೆ? ಅಲ್ಲಲ್ಲ. ಮಹಾಘನವಪ್ಪ ಲಿಂಗವ ಒಂದನುವಿನಲ್ಲಿ ತಂದಿರಿಸಿದ ಆತನ ಮನವೆ ಪ್ರಸಾದ ಕಾಣಾ! ರಾಮನಾಥ./130 |
ಮಾಡಿದ ಕರ್ಮವನೂಡಯ್ಯ ಎನ್ನ ಮನದಣಿವನ್ನಕ್ಕ. ಬೇಡೆನ್ನೆನು, ಮಾಕರ್ೊಳ್ಳೆನು. ಎಲೆ ರೂಢಿಗೀಶ್ವರನ ಕೂಡುವೆನು ನೀರಡಸಿದಂತೆ,ರಾಮನಾಥ./131 |
ಮಾಡಿದಲ್ಲದೆ ಮನೆಯೊಳಗಾಗದು ಬಯಲು ಕಣ್ಣು ಕಂಡಲ್ಲದೆ ಪರವಾಗದು ಮನ ಪರವೆಂದಲ್ಲದೆ ಪರವಾಗದು ಈ ಪರಿಯ ನರರೆತ್ತ ಬಲ್ಲರೈ? ರಾಮನಾಥ./132 |
ಮಾರಿಯ ಪೂಜಿಸಿ, ಮಸಣಕ್ಕೆ ಹೋಗಿ ಗೋರಿಗೊಳಿಸಿ ಕುರಿಯ ಕೊರಳನೆ ಕೊಯ್ದುಂಬ ಕ್ರೂರಕರ್ಮಿಗಳನವರ ಶಿವಭಕ್ತರೆನಬಹುದೆ? ಆರೈಯದೆ ಅವನ ಮನೆಯಲುಂಡ ಭಕ್ತ ಅಘೋರನರಕಕ್ಕಿಳಿವ ಕಾಣಾ! ರಾಮನಾಥ./133 |
ಮುಂಡೆಗೆ ಮುಡಿಕಟ್ಟೇಕೊ? ಗುಂಡಂಗೇಕೊ ಗುರುಪದ ಭಕ್ತಿ? ಚಂಡಿಕೆಯ ತಲೆಯ ಚಾಂಡಾಲಂಗೆ ಅಖಂಡಿತ ಲಿಂಗದ ಅನುವೇಕೆ? ಹೇಳ! ರಾಮನಾಥ./134 |
ಮೆಳೆಯ ಮೇಲಣ ಕಲ್ಲು ಜಗದೆರೆಯನಾಗಬಲ್ಲುದೆ? ಮೆಳೆ ಶಿವಭಕ್ತನಾಗಬಲ್ಲುದೆ? ನಿಮ್ಮ ತನುಮನಧನವನರಿಯದಿದ್ದಡೆ ಸದುಭಕ್ತರಹರೆ? ರಾಮನಾಥ./135 |
ಮೊಲೆ ಮುಡಿ ಬಂದಡೆ ಹೆಣ್ಣೆಂಬರು. ಗಡ್ಡ ಮೀಸೆ ಬಂದಡೆ ಗಂಡೆಂಬರು. ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡು ಅಲ್ಲ ಕಾಣಾ! ರಾಮನಾಥ./136 |
ವಿಷಯದ ಪಿತ್ತ ತಲೆಗೇರಿದಲ್ಲಿ ವಿವೇಕವೆಂಬ ದೃಷ್ಟಿ ನಷ್ಟವಾಗಿ ಪಶುಪತಿಯ ನೆನಹುಗೆಟ್ಟು ಮತಿಮಂದನಾದಲ್ಲಿ ಮಂತ್ರ ನೆನಹುಂಟೆ! ಹೇಳ! ರಾಮನಾಥ./137 |
ವೇಶಿಯ ಎಂಜಲ ತಿಂದು ಈಶ್ವರಪ್ರಸಾದವ ಭುಂಜಿಸಿದಡೆ ಓಸರಿಸಿತ್ತಯ್ಯ ಲಿಂಗವು ಆ ದ್ರೋಹಿಗೆ! ಭಾಷೆ ತಪ್ಪುವನು! ಭವದಲ್ಲಿ ಬಳಲುವನೆಂದವನ ಕಂಡು ಹೇಸಿ ಕಡೆಗೆ ತೊಲಗಿದೆನು ಕಾಣಾ! ರಾಮನಾಥ./138 |
ವೇಷಕ್ಕೆ ಅಂಜುವೆ ದೋಷಕ್ಕೆ ಹೇಸುವೆ! ಈಶ್ವರನಾಗಿ ಎನ್ನ ಕೈಯಲ್ಲಿ ತನ್ನ ಆರಾಧಿಸಿಕೊಳಲೊಲ್ಲದೆ ಹದಿನೆಂಟು ಜಾತಿಯ ಹೇಸಿಕೆಯ ಕೂಳ ತಿಂಬವರನೇನೆಂಬೆನೈ,ರಾಮನಾಥ./139 |
ವೇಷದ ಕೂಡೆ ವಾಸಿಗೆ ಹೋರುವವನು ಈಶ್ವರದ್ರೋಹಿ. ವೇಷವ ಈಶ್ವರನೆಂದು ತಿಳಿಯದವ ಪಾಶಕ್ಕೆ ಸಿಕ್ಕದ ಪಶುವಿನಂತೆ ಕಾಣ, ರಾಮನಾಥ./140 |
ವೇಷದ ಹೊತ್ತ ಹಿರಿಯರು ಈಶ್ವರಧ್ಯಾನದಲ್ಲಿರಬೇಕು. ವೇಷವ ತೋರಿ ಗ್ರಾಸಕ್ಕಾಗಿ ಆಸೆಮಾಡಿ ಲೋಗರ ಮನೆಯ ಕಾದು ಗ್ರಾಸವ ಪಡೆದು ಉದರವ ಹೊರೆವ ವೇಷವು ವೇಶಿಯಿಂದವು ಕರಕಷ್ಟ! ರಾಮನಾಥ./141 |
ವೇಷವ ಹಲ್ಲಣಿಸುವ ಹಿರಿಯಣ್ಣಂಗೇನು? ವೇಷವ ಹೊತ್ತು ದೋಷದಲ್ಲಿ ನಡೆವ ರಾಶಿಮಾ (ನವ) ವೇಷಗಳ್ಳರ ಕಂಡು ವೇಶಿಯೆಂದ, ರಾಮನಾಥ./142 |
ವೇಷವ ಹೊತ್ತು ದೋಷದಲ್ಲಿ ನಡೆದಡೆ ದೋಷಕ್ಕೆ ವೇಷ ಭಂಡ. ಮೊದಲೆ ವೇಷವ ಕಂಡು ಲೇಸೆಂದು ಕೊಂಡಾಡುವ ದೋಷಿಗಳ ನರಕದಲ್ಲಿಕ್ಕುವ ಕಾಣಾ! ರಾಮನಾಥ./143 |
ವೇಷವನೂ ವೇಶಿಯನೂ ಸರಿಯೆಂಬೆ. ವೇಷವು ಲೋಕವ ಹಾರುವದು. ವೇಶಿಯೂ ಲೋಕವ ಹಾರುವಳು. ವೇಷವ ಹೊತ್ತು ಲೋಕವ ಹಾರದಿರ್ದಡೆ ಆತನ ಈಶ್ವರನೆಂಬೆ ಕಾಣಾ! ರಾಮನಾಥ./144 |
ಶರಧಿಯ ಮೇಲೆ ಧರೆಯ ಕರಗದಂತಿರಿಸಿದೆ! ಅಂಬರಕ್ಕೆ ಗಡಿಗೆ ಬೋದಿಗೆಯಿಲ್ಲದಂತಿರಿಸಿದೆ! ಎಲೆ ಮೃಡನೆ! ನೀನಲ್ಲದೆ ಉಳಿದ ದೈವಂಗಳಿಗಹುದೆ?ರಾಮನಾಥ./145 |
ಶಿವಪೂಜೆಯೆತ್ತ, ವಿಷಯದ ಸವಿಯೆತ್ತ; ಆ ವಿಷಯದ ಸವಿ ತಲೆಗೇರಿ ಶಿವಪೂಜೆಯ ಬಿಟ್ಟು ವೇಶಿಯರ ಎಂಜಲ ಹೇಸದೆ ತಿಂಬ ದೋಷಿಗಳನೇನೆಂಬೆನೈ, ರಾಮನಾಥ./146 |
ಶಿವಭಕ್ತನು ಹೋಗಿ ತನ್ನೊಡಲಿಚ್ಛೆಗೆ ಭವಿಯ ಮನೆಯಲುಂಡನಾದಡೆ ಮಡೆಕೆಯ ಕೂಳ ತಿಂದ ತುಡುಗಣಿ ನಾಯಂತೆ ಆ ಭಕ್ತ. ಮೃಢ! ನೀನಿಲ್ಲದ ಮನೆಯ ಕೂಳು ಹೊಲೆಯರ ಮನೆಯ ಅಡಗಿನಿಂದ ಕರಕಷ್ಟ ಕಾಣಾ, ರಾಮನಾಥ./147 |
ಶಿವಭಕ್ತರು ತಮ್ಮ ನಿಜ ಕೈಲಾಸಕ್ಕೆ ಹೋದಡೆ ಅವರರಸಿಯ ಪಾರ್ವತಿಯ ಸತಿಯೆಂದು ಕಾಣಬೇಕು. ಅಲ್ಲಿ ಅನುಸರಣೆಯ ಕೊಟ್ಟು ಬೆರಸಿ ಮಾತನಾಡುವ ನರಕಿಗಳನೇನೆಂಬೆ, ರಾಮನಾಥ./148 |
ಶ್ರೀ ಗುರು ಲಿಂಗ ಜಂಗಮಕ್ಕೆ ಅರ್ಥ ಪ್ರಾಣಾಭಿಮಾನವ ಕೊಟ್ಟು ಅಹಂಕಾರವಳಿದಿಜಹಂತು ಪುರಾತನರ ಮನೆಯಲ್ಲಿ ಎತ್ತಾಗಿ ಹುಟ್ಟಿಸಯ್ಯಾ. ತೊತ್ತಾಗಿ ಹುಟ್ಟಿಸಯ್ಯಾ, ಬಾಗಿಲ ಕಾಯ್ದಿಪ್ಪಂತೆ ಸೊಣಗನಾಗಿ ಹುಟ್ಟಿಸಯ್ಯಾ, ಜಂಗಮಲಿಂಗವೇ ಶಿವನೆಂದು ನಂಬಿ ನಮಸ್ಕರಿಸುವ ಪುರಾತನರ ಮನೆಯ ಬೇಲಿಯಾಗಿ ಹುಟ್ಟಿಸಯ್ಯಾ.ರಾಮನಾಥ./149 |
ಸಣ್ಣ ನನೆಯೊಳಗಣ ಪರಿಮಳವ ಹೊರಸೂಸಿ ಇದಿರಿಂಗೆ ಅರುಹಿಸಬಲ್ಲುದೆ ವಾಯು? ಕೊಡಗೂಸಿನೊಳಗಣ ಮೊಲೆ ಮುಡಿಯ ಹಡೆದ ತಾಯಿ-ತಂದೆಗಳೆಂದಡೆ ಕಾಣಿಸಿಕೊಡಬಲ್ಲರೆ ಕಾಬವರ ಕಣ್ಣಿಗೆ? ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು ಕಾಣಾ!ರಾಮನಾಥ./150 |
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ. ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ./151 |
ಸತಿಯರ ಸಂಗವನು ಅತಿಶಯ ಗ್ರಾಸವನು ಪೃಥ್ವಿಗೀಶ್ವರನ ಪೂಜೆಯನು ಅರಿವುಳ್ಳಡೆ ಹೆರರ ಕೈಯಿಂದ ಮಾಡಿಸುವರೆ!/152 |
ಸತ್ಯದ ನುಡಿ ತೀರ್ಥ, ಭಕ್ತಿಯ ನಡೆ ತೀರ್ಥ, ಮುಕ್ತಿಯ ಪ್ರಸಂಗ ಉಳ್ಳಡೆ ತೀರ್ಥ, ಹರಿವ ನದಿ ಎತ್ತಣಾ ತೀರ್ಥ! ರಾಮನಾಥ./153 |
ಸರ್ಪನೂ ಕೂರ್ಮನೂ ದಿಕ್ಕರಿಗೆಳೆಂಟೂ ಭೂಮಿಯ ಹೊತ್ತಿರ್ದಪರೆಂದು ಅನಿಶಾ ಹೊತ್ತಿಪ್ಪವರಿಗೆ ಅತ್ತಲಾಧಾರ ಇತ್ತಲಾಧಾರ. ಉತ್ತರಗುಡುವವರಿಗೆ ಇಕ್ಕುವೆ ಮುಂಡಿಗೆಯ. ಎತ್ತುವರುಳ್ಳಡೆ ತೋರಿರೈ, ರಾಮನಾಥ./154 |
ಸರ್ವಜ್ಞಾನಿಗಳಾಗಿ ಅಚ್ಚುಗ ಬಡುವಡೆ, ಹಬ್ಬಿದ ಪಾಪದ ಫಲ ಉಂಬಡೆ, ಒಬ್ಬಳ್ಳವನೆ ಬಿತ್ತಿ ಆ ಒಬ್ಬಳ್ಳವನೆ ಬೆಳೆವಡೆ, ಕಬ್ಬುನ ಹುಳಿವಡೆ ಇನ್ನೇವೆ, ರಾಮನಾಥ./155 |
ಸಾಗರದೊಳಗಣ ಕಿಚ್ಚಿನ ಸಾಕಾರದಂತೆ, ಸಸಿಯೊಳಗಣ ಫಲಪುಷ್ಪ ರುಚಿಯ ಪರಿಮಳದಂತೆ, ಮನವ ಮರೆಯ ಮಾತು ನೆನಹಿನಲ್ಲಿ ಅರಿದು, ನಾಲಗೆಯ ನುಡಿವಾಗಲಲ್ಲದೆ ಕಾಣಬಾರದು, ಕೇಳಬಾರದು ಒಂದಂಗದೊಳಗಡಗಿದ ನೂರೊಂದರ ಪರಿ,ರಾಮನಾಥ./156 |
ಸಾಸಿವೆಯಷ್ಟು ಭಕ್ತಿಯಳ್ಳನ್ನಕ್ಕ ವೇಶಿಯ ಮುಟ್ಟಿದಡೆ ಹೊಲೆಯರ ಮನೆಯ ಮುರುಹ ಹೊರಗಿರಿಸಿದಡೆ ಹಂದಿ ಬಂದು ಮೂಸಿ ಮೇದಂತೆ ಕಾಣಾ! ರಾಮನಾಥ./157 |
ಸೊಡರು ಕೆಟ್ಟಡೆ ದೃಷ್ಟಿಯಡಗಿಪ್ಪ ಭೇದವನು ಒಡಲು ಕೆಟ್ಟಡೆ ಜೀವವಾವೆಡೆಯಲಡಗೂದು? ಈ ಮರೆಯೆಡೆಯಣ ಭೇದವ ಭೇದಿಸಬಲ್ಲಡೆ ಪೊಡವಿಗೆ ಗುರುವಪ್ಪನೆಂದು ಮುಡಿಗೆಯನಿಕ್ಕಿದೆ ಪರಸಮಯಕ್ಕೆಂದು, ರಾಮನಾಥ./158 |
ಸ್ವಸ್ತಿಕಾಸನದಲ್ಲಿದ್ದು ಅತ್ತಿತ್ತ ಚಲಿಸದೆ ನೆಟ್ಟೆಲುವ ನೆಟ್ಟನೆ ಮಾಡಿ, ಅಧೋವಾಯುವನೂಧ್ರ್ವಮುಖಕ್ಕೆ ತಂದು, ಕಂಠ ಸಂಕೋಚದಿಂದ ಊಧ್ರ್ವವಾಯುವ ನಿಲ್ಲೆಂದು ನಿಲಿಸಿ, ಮನವ ತೊಡರಿಸಿ, ಉನ್ಮನಿಯ ಸ್ಥಾನದಲ್ಲಿ ಬಂಧವನವಂ ಮಾಡಿ, ಅಂತಬರ್ಾಹ್ಯ ವ್ಯಾಪಾರವಳಿದು ನಿಂದುದೆ ಯೋಗ,ರಾಮನಾಥ./159 |
ಹಂದಿ ಶ್ರೀಗಂಧವ ಹೂಸಿದಡೇನು? ಗಂಧರಾಜನಾಗಬಲ್ಲುದೆ? ನವಿಲು ನಲಿಯಿತ್ತೆಂದಡೆ ಕಾಕೋಳಿ ಪುಕ್ಕವ ತರಕೊಂಡಂತೆ ಕರ್ಮಿಗಳ ಭಕ್ತಿ! ಹೊರವೇಷದ ವಿಭೂತಿ ರುದ್ರಾಕ್ಷಿಯ ಹೂಸಿದಡೆನು ತೆರನನರಿದು ಮರವೆಯ ಕಳದು ಮಾತಿನಂತೆ ನೀತಿಯುಳ್ಳಡೆ ಅವರ ಅಜಾತರೆಂಬೆ ಕಾಣಾ! ರಾಮನಾಥ./160 |
ಹಂದಿ ಶ್ರೀಗಂಧವನೆಂದೂ ಒಲ್ಲದು. ಕುಂದದೆ ಹರಿವುದು ಅಮೇಧ್ಯಕ್ಕೆ. ಶಿವಭಕ್ತನಾಗಿರ್ದು ಹಿಂದ ಬೆರಸಿದಡೆ ಆ ಹಂದಿಗಿಂದವು ಕರಕಷ್ಟ ಕಾಣಾ! ರಾಮನಾಥ./161 |
ಹರ ತನ್ನ ಭಕ್ತರ ತಿರಿವಂತೆ ಮಾಡುವ ಒರೆದು ನೋಡುವ ಮಿಸುನಿಯ ಚಿನ್ನದಂತೆ. ಅರೆದು ನೋಡುವ ಚಂದನದಂತೆ. ಅರಿದು ನೋಡುವ ಕಬ್ಬಿನ ಕೋಲಿನಂತೆ. ಬೆದರದೆ ಬೆಚ್ಚದೆ ಇರ್ದಡೆ ಕರವಿಡಿದೆತ್ತಿಕೊಂಬ, ನಮ್ಮ ರಾಮನಾಥನು./162 |
ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿದ. ಇರುಳೆಲ್ಲಾ ನಡೆದನಾ ಸುಂಕಕಂಜಿ. ಕಳವೆಯೆಲ್ಲಾ ಹೋಗಿ ಬರಿಗೋಣಿ ಉಳಿಯಿತ್ತು! ಅಳಿಮನದವನ ಭಕ್ತಿ ಇಂತಾಯಿತ್ತು! ರಾಮನಾಥ./163 |
ಹಸಿವಿನಲ್ಲಿ ವಿಷಯದಲ್ಲಿ ಭವಿಯ ಬೆರಸಿದೆನಾದಡೆ ಅವ ವಿಷಮಾಕ್ಷ! ನಿಮಗೆ ದೂರ. ದಶ ಶತಕೋಟಿ ವರುಷ ನರಕದೊಳಗಿಹ ಕಾಣಾ!ರಾಮನಾಥ./164 |
ಹಸಿವಿಲ್ಲದ ಬೊಂಬೆಗೆ ತೃಷೆಯಿಲ್ಲದ ನೀರೆರೆದು ಮಸಕವಿಲ್ಲದ ಮಾತ ಮನದಲ್ಲಿ ಹೇಳಿ ಹೆಸರಿಲ್ಲದೆ ಕರೆದಡೆ ಓ! ಎಂದವ ನೀನೊ ನಾನೋ!ರಾಮನಾಥ./165 |
ಹಸಿವೆಂಬ ಹೆಬ್ಬಾವು ಬಸುರ ಬಂದು ಹಿಡಿದಡೆ ವಿಷವೇರಿತ್ತಯ್ಯಾ ಆಪಾದಮಸ್ತಕಕ್ಕೆ. ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ ವಸುಧೆಯೊಳಗೆ ಆತನೆ ಗಾರುಡಿಗ ಕಾಣಾ! ರಾಮನಾಥ./166 |
ಹಸ್ತಾಬ್ಜ ಮಥನದಿಂದೊತ್ತಿ ಭಸ್ಮವ ಮಾಡಿ ಮತ್ತೆ ಪಂಚಾಕ್ಷರಿಯ ಜಪಾವಳಿಯ ಚಿತ್ತ ಶ್ರೊತ್ರದೊಳು ಮತ್ತೆ ಧಾರೆಯನೆರೆಯೆ ಸತ್ಯವದು ನಿನ್ನಂತೆ, ರಾಮನಾಥ./167 |
ಹಾಸೇಕೆ ಹೊರಸೇಕೆ? ಲೇಸೇಕೆ ಹೊಲ್ಲೆಹವೇಕೆ? ನಿಮ್ಮ ಸಾತ್ವಿಕರಿದಿರಲ್ಲಿ ನಾನೇಕೆ? ಸರಿಹೊರಸು ನಿಮ್ಮ ಸರಿಪಂತಿಯೆಂಬ ಹೇಸಿಕೆಯುಂಟೆ?ರಾಮನಾಥ./168 |
ಹಿರಿದಪ್ಪ (ಆ) ಹಾರವ ಕೊಂಡು ಸ್ವರವು ಬಿಂದುವಿನಿಚ್ಛೆಯಲ್ಲಿ ಹರಿದಾಡುವವರು ಯೋಗಿಗಳೆ? ಅಲ್ಲಲ್ಲ ನಿಲ್ಲು! ಸ್ವರವು ಸುಸ್ವರವಾಗಿ ಬಿಂದು ತರಹರವಾಗಿರಬಲ್ಲಾತನೆ ಯೋಗಿ ಕಾಣಾ!ರಾಮನಾಥ./169 |
ಹೂವಿನೊಳಗಣ ಕಂಪ ಹೊರಸೊಸಿ ಸುಳಿವ ಅನಿಲನಂತೆ ಅಮೃತದೊಳಗಣ ರುಚಿಯ ನಾಲಿಗೆಯ ತುದಿಯಲ್ಲಿ ಅರಿವನ ಚೇತನದಂತೆ ನಿಲ್ಲವಿಲ್ಲದ ರೂಪ ಕಳೆಯಲ್ಲಿ ವೇದಿಸುವವನ ಪರಿ!ರಾಮನಾಥ./170 |
ಹೆಂಬೇಡಿಗೆ ಹಿಡಿಯಬಹುದೆ ಹೇಳಿಗೆಯೊಳಗಣ ಹಾವ? ತೊರೆಯಬಹುದೆ ಹೊನ್ನು ಹೆಣ್ಣು ಮಣ್ಣ ನಿನ್ನನರಿಯದ ನರಗುರಿಗಳಿಗೆ! ರಾಮನಾಥ./171 |
ಹೆಣ್ಣ ಕಂಡು ಹೆಚ್ಚಿ ಹೆಕ್ಕಳಬಡುವಂತೆ ಕಣ್ಣಿಟ್ಟು ನೋಡಿರೋ ಶಿವಲಿಂಗದೇವನ ಕರಣದಿಚ್ಛೆಗೆ ಹರಿದು, ನರಕದಲ್ಲಿ ನೆರದು ಬರುದೊರೆ ಹೋಗದೆ ಮರೆಯದೆ ಪೂಜಿಸಿ, ನಮ್ಮ ರಾಮನಾಥನ./172 |
ಹೇಳಬಲ್ಲಡೆ ಬೋಳು ಕೇಳಬಲ್ಲಡೆ ಬೋಳು ಹೇಳಲು ಕೇಳಲು ಅರಿಯದಿದ್ದಡೆ ಇವೆಲ್ಲ ಜಾಳು ಬೋಳು ಕಾಣಾ! ರಾಮನಾಥ./173 |
ಹೇಳಿತ್ತ ಕೇಳುವನ ಕೀಳಿನೊಳಗಿರೆ ಲೇಸು! ಹೇಳಿತ್ತ ಕೇಳದ ಕಡುಮೂರ್ಖನ ಕೋಣೆಯಲ್ಲಿರಲಾಗದು! ರಾಮನಾಥ./174 |
ಹೊಲಬನರಿಯದ ಗುರು ಸುಲಭನಲ್ಲದ ಶಿಷ್ಯ ಕೆಲಬಲನ ನೋಡದುಪದೇಶ ಅಂಧಕನ ಲಾಭ ಹೊಕ್ಕಂತೆ ಕಾಣಾ! ರಾಮನಾಥ./175 |
ಹೊಲೆಯರ ಬಾವಿಯಲೊಂದು ಎಲುನಟ್ಟಿದ್ದಡೆ ಹೊಲೆಯೆಂಬುದು ಲೋಕವೆಲ್ಲ. ಹಲವೆಲುವಿದ್ಧಬಾಯಿ ಒಲವರವ ನುಡಿದಡೆ ಹೊಲೆಯರ ಬಾವಿಯಿಂದ ಕರಕಷ್ಟ ಕಾಣಾ! ರಾಮನಾಥ./176 |