Categories
ಶರಣರು / Sharanaru

ಜೇಡರ ದಾಸಿಮಯ್ಯ

ಅಂಕಿತ: ರಾಮನಾಥ
ಕಾಯಕ: ನೇಯ್ಗೆ ಕೈ ಮಗ್ಗದಲ್ಲಿ ನೂಲಿನ ಎಳೆಗಳನ್ನು ಹೆಣೆದು/ನೆಯ್ದು ಬಟ್ಟೆಯನ್ನು ತಯಾರಿಸುವ ಕಸುಬು.

೭೪೬
ಎತ್ತಪ್ಪೆ ಶರಣಂಗೆ, ತೊತ್ತಪ್ಪೆ ಶರಣಂಗೆ
ಭೃತ್ಯನಾಗಿ ಸದ್ಭಕ್ತರ ಮನೆಯ ಬಾಗಿಲು ಕಾಯ್ದಿಪ್ಪ ಸೊಣಗನಪ್ಪೆ.
ಕರ್ತಾರ! ನಿನಗೆ ಕರವೆತ್ತಿ ಹೊಡವಡುವ
ಭಕ್ತರ ಮನೆಯ ಹಿತ್ತಿಲ ಬೇಲಿಯಾಗಿಪ್ಪೆನಯ್ಯಾ,ರಾಮನಾಥ.

ಆದ್ಯ ವಚನಕಾರ. ಗುಲಬರ್ಗಾ ಜೆಲ್ಲೆಯ ಮುದನೂರು ಜನ್ಮಸ್ಥಳ, ತಂದೆ ಕಾಮಯ್ಯ, ತಾಯಿ ಶಂಕರಿ, ಹೆಂಡತಿ ದುಗ್ಗಳೆ, ಕಾಯಕ ಬಟ್ಟೆ ನೇಯುವುದು. ರಾಮನಾಥ ಅಧಿದೈವ. ಶಿವನಿಗೆ ವಸ್ತ್ರವನ್ನಿತ್ತು ತವನಿಧಿ ಪಡೆದೆನೆಂಬ ಈತನ ಅಹಂಕಾರವನ್ನು ಶಂಕರದಾಸಿಮಯ್ಯ ಮುರಿದ, ಶ್ರೇಷ್ಠ ವಚನಕಾರ. ಕಾಲ ೧೧೦೦ ‘ರಾಮನಾಥ’ ಅಂಕಿತದಲ್ಲಿ ೧೭೬ ವಚನಗಳು ದೊರಿತಿವೆ. ವಚನ ಸಾಹಿತ್ಯದ ಸ್ವರೂಪ, ಲಕ್ಷಣ, ಆಶಯಗಳನ್ನೆಲ್ಲ ಒಳಗೊಂಡ ಇವು ಶರಣಧರ್ಮದ ಪರಿಭಾಷೆಗಳನ್ನು ರೂಪಿಸಿಕೊಟ್ಟಿವೆ. (ಜೇಡ= ಬಲೆಯನ್ನು ನೇಯುವ ಒಂದು ಬಗೆಯ ಹುಳು.)

೭೫೭
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜರಿದೊಮ್ಮೆ ನುಡಿಯದಿರ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ!
ರಾಮನಾಥ.

ದಾಸಿಮಯ್ಯನ ವಚನಗಳು ಸಂಕ್ಷಿಪ್ತತೆ, ಸರಳತೆ, ಹಾಗೂ ಅರ್ಥವಂತಿಕೆಯನ್ನು ಮುಖ್ಯ ಲಕ್ಷಣವನ್ನಾಗಿಸಿಕೊಂಡು, ಶರಣರ ನುಡಿಗಡಣದ ಮಹತ್ವ, ದಾಂಪತ್ಯಧರ್ಮ, ಸ್ತ್ರೀ-ಪುರುಷ ಸಮಾನತೆ, ಗುರುವಿನ ಶ್ರೇಷ್ಠತೆ, ಒಡಲ ಹಸಿವಿನ ತೀವ್ರತೆ, ದೇವನ ದಾನಗುಣ, ಮಾನವನ ಸ್ವಾರ್ಥ, ಸಮಾಜದ ವೈಪರೀತ್ಯಗಳ ವಿಡಂಬನೆ, ಸರ್ವಸಮಾನತೆಯ ಬಯಕೆಗಳನ್ನು ತುಂಬ ಆತ್ಮೀಯವಾಗಿ ಪ್ರಕಟಿಸುತ್ತವೆ.

ಬರು ಸಠಗನ ಭಕ್ತಿ ದಿಟವೆಂದು ನಚ್ಚಲು ಬೇಡ
ಮಠದೊಳಗಣ ಬೆಕ್ಕು ಇಲಿಯ ಕಂಡು
ಪುಟನೆಗೆದಂತಾಯಿತ್ತು ಕಾಣಾ ರಾಮನಾಥ.

ಸುಳ್ಳು/ಕಪಟತನ/ವಂಚನೆಯ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುತ್ತಾ, ಜನಮೆಚ್ಚುಗೆಯನ್ನು ಪಡೆಯಲೆಂದು ದೇವರಲ್ಲಿ ಒಲವುಳ್ಳವನಂತೆ ಬಹುಬಗೆಯ ಪೂಜೆ/ಆಚರಣೆಗಳಲ್ಲಿ ತೊಡಗಿರುವ ವ್ಯಕ್ತಿಯನ್ನು ಒಳ್ಳೆಯವನೆಂದು ನಂಬಬಾರದು ಎಂಬ ಎಚ್ಚರಿಕೆಯನ್ನು ಈ ವಚನದಲ್ಲಿ ನೀಡಲಾಗಿದೆ.

ಬರು= ಬರಿದು/ಏನೂ ಇಲ್ಲದಿರುವುದು/ಪೊಳ್ಳು;
ಸಠಗ= ಶಠಗ/ಕಪಟಿ/ವಂಚಕ/ಮೋಸಗಾರ;
ಶಠ=ಮೋಸ/ವಂಚನೆ;
ಭಕ್ತಿ = ದೇವರನ್ನು ಪೂಜಿಸಲು/ಒಲಿಸಿಕೊಳ್ಳಲು ವ್ಯಕ್ತಿಯು ಹೊಂದಿರಬೇಕಾದ ಒಳ್ಳೆಯ ನಡೆನುಡಿ;
ಬರು ಸಠಗನ ಭಕ್ತಿ = ಸುಳ್ಳು/ವಂಚಕತನ/ಕೆಟ್ಟ ನಡೆನುಡಿಯುಳ್ಳ ವ್ಯಕ್ತಿಯು ದೇವರ ಪೂಜೆ/ಆಚರಣೆಗಳಲ್ಲಿ ಒಲವು ಉಳ್ಳವನಂತೆ ಮಾಡುವ ನಟನೆ;
ದಿಟ = ಸತ್ಯ/ನಿಜ/ವಾಸ್ತವ;
ನಚ್ಚು= ನಂಬುವುದು/ಮೆಚ್ಚುವುದು/ತಿಳಿಯುವುದು;
ನಚ್ಚಲು ಬೇಡ = ತಿಳಿಯಬೇಡ/ನಂಬದಿರು/ಮೆಚ್ಚದಿರು;

ಮಠದ+ಒಳಗಣ; ಮಠ = ಜಾತಿ/ಮತ/ದೇವರ ಹೆಸರಿನಲ್ಲಿ ಜನರು ಕಟ್ಟಿಕೊಂಡಿರುವ ಸಾಮಾಜಿಕ ಒಕ್ಕೂಟ;
ಒಳಗಣ = ಒಳಗಡೆಯಿರುವ/ಒಳಗಿರುವ;
ಬೆಕ್ಕು= ಕೊತ್ತಿ/ಒಂದು ಬಗೆಯ ಪ್ರಾಣಿ/ಮನೆಗಳಲ್ಲಿ ಹಾಗೂ ಇನ್ನಿತರ ಜನವಸತಿಯಿರುವ ಕಡೆಗಳಲ್ಲಿ ಬೆಕ್ಕನ್ನು ಸಾಕುಪ್ರಾಣಿಯಾಗಿ ಬೆಳೆಸಿ, ಮುದ್ದಿನಿಂದ ನೋಡಿಕೊಳ್ಳುತ್ತಾರೆ;
ಇಲಿ = ಒಂದು ಬಗೆಯ ಪ್ರಾಣಿ/ಮನೆಗಳಲ್ಲಿ ಹಾಗೂ ಜನವಸತಿಯಿರುವ ಕಡೆಗಳಲ್ಲಿ ಬಿಲ/ಪೊಟರೆಯಲ್ಲಿ ನೆಲೆಸಿರುವ ಪ್ರಾಣಿ;
ಕಂಡು = ನೋಡಿ; ಪುಟನೆಗೆದ+ಅಂತೆ+ಆಯಿತ್ತು; ಪುಟಿ = ಮೇಲಕ್ಕೆ ಚಿಮ್ಮು/ಹಾರು; ನೆಗೆ = ಜಿಗಿ/ಎಗರು/ಹಾರು; ಇದ್ದ ಎಡೆಯಿಂದ ಒಂದೇ ಬಾರಿಗೆ ಮೇಲಕ್ಕೆ ಚಿಮ್ಮುವುದು/ಎಗರುವುದು/ಮತ್ತೊಂದರ ಮೇಲೆ ಜಿಗಿದು ಬೀಳುವುದು/ಆಕ್ರಮಣ ಮಾಡುವುದು;
ಅಂತೆ = ಹಾಗೆ/ಆ ರೀತಿಯಲ್ಲಿ;
ಆಯಿತ್ತು= ನಡೆಯಿತು/ಉಂಟಾಯಿತು/ಜರುಗಿತು;

ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆಯುವುದು=ಇಲಿಯನ್ನು ಕಂಡ ಕೂಡಲೇ ಬೆಕ್ಕು ಅದರ ಮೇಲೆ ಹಾರಿ, ತನ್ನ ಪಂಜ/ಕಾಲಿನ ಉಗುರುಗಳಿಂದ ಅದನ್ನು ಹಿಡಿದುಕೊಂಡು, ಬೇಟೆಯಾಡಿ ಕೊಂದು ತಿನ್ನುತ್ತದೆ. ಬೆಕ್ಕು ತನ್ನ ಹಸಿವನ್ನು ನೀಗಿಸಿಕೊಳ್ಳಲು ಇಲಿಯನ್ನು ಕೊಂದು ತಿನ್ನುವುದು ನಿಸರ‍್ಗದಲ್ಲಿ ನಡೆಯುವ ಒಂದು ಸಹಜವಾದ ಕ್ರಿಯೆ.

ಮಟದಲ್ಲಿರುವ ಗುರುಗಳು/ದೇವ ಮಾನವರು ಸರ‍್ವಸಂಗ ಪರಿತ್ಯಾಗಿಗಳಾಗಿ ತಮ್ಮ ಮಯ್ ಮನಗಳಲ್ಲಿ ತುಡಿಯುವ ಎಲ್ಲಾ ಬಗೆಯ ಕಾಮನೆಗಳನ್ನು ಹತೋಟಿಯಲ್ಲಿಟ್ಟುಕೊಂಡು/ಹತ್ತಿಕ್ಕಿಕೊಂಡು ಒಳ್ಳೆಯ ನಡೆನುಡಿಯುಳ್ಳವರಾಗಿರುತ್ತಾರೆ ಎಂಬ ನಂಬಿಕೆಯು ಜನಸಮುದಾಯದಲ್ಲಿದೆ. ಆದುದರಿಂದ ಮಟದ ಆವರಣ/ಪರಿಸರದಲ್ಲಿರುವ ಸಕಲ ಜೀವಿಗಳು ಒಳ್ಳೆಯವೇ ಆಗಿರುತ್ತವೆ ಎಂಬುದು ಜನಮನದ ನಂಬಿಕೆಯಾಗಿದೆ. ಈ ನಂಬಿಕೆಯನ್ನು ಹುಸಿಯಾಗಿಸುವ ರೀತಿಯಲ್ಲಿ ಮಠದೊಳಗಣ ಬೆಕ್ಕು ಇಲಿಯನ್ನು ಕೊಂದು ತಿನ್ನುತ್ತದೆ. ಬೆಕ್ಕು ತನ್ನ ಹುಟ್ಟುಗುಣವನ್ನು ಬಿಡದಂತೆ ಕಪಟತನದ ನಡೆನುಡಿಯುಳ್ಳ ವ್ಯಕ್ತಿಯು ದೇವರಲ್ಲಿ ಒಲವುಳ್ಳವನಂತೆ ನಟಿಸಿದರೂ, ತನ್ನ ಕೆಟ್ಟಗುಣವನ್ನು ಎಂದೆಂದಿಗೂ ಬಿಡುವುದಿಲ್ಲವೆಂಬ ವಾಸ್ತವದ ಸಂಗತಿಯನ್ನು ಈ ರೂಪಕವು ಸೂಚಿಸುತ್ತಿದೆ. ರೂಪಕ ಎಂದರೆ ಶಬ್ದಗಳ ಮೂಲಕವೇ ಒಂದು ಪ್ರಸಂಗ/ಸಂಗತಿಯನ್ನು ಓದುಗರ/ಕೇಳುಗರ ಕಣ್ಣಿಗೆ ಕಟ್ಟುವಂತೆ ಬಣ್ಣಿಸುವುದು/ಚಿತ್ರಿಸುವುದು;

ಸತ್ಯದ ನುಡಿ ತೀರ್ಥ, ಭಕ್ತಿಯ ನಡೆ ತೀರ್ಥ
ಮುಕ್ತಿಯ ಪ್ರಸಂಗ ಉಳ್ಳಡೆ ತೀರ್ಥ
ಹರಿವ ನದಿ ಎತ್ತಣಾ ತೀರ್ಥ ರಾಮನಾಥ?

ದೇಗುಲಗಳ ಬಳಿ ಹರಿಯುತ್ತಿರುವ ನದಿ/ತೊರೆಗಳ ನೀರು ಇಲ್ಲವೇ ದೇಗುಲದ ಪೂಜಾರಿಯು ಕೊಡುವ ನೀರನ್ನು ಪವಿತ್ರವೆಂದು ನಂಬಿರುವ ಜನರಿಗೆ, ಯಾವುದು ಪವಿತ್ರವೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

ಸತ್ಯ=ದಿಟ/ನಿಜ/ವಾಸ್ತವ; ನುಡಿ=ಮಾತು; ಸತ್ಯದ ನುಡಿ=ತನ್ನನ್ನು ಒಳಗೊಂಡಂತೆ ಜನಸಮುದಾಯಕ್ಕೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವ ಮಾತುಗಳು; ತೀರ್ಥ=ಪವಿತ್ರವಾದುದು/ಉತ್ತಮವಾದುದು/ಒಳ್ಳೆಯದನ್ನು ಮಾಡುವಂತಹುದು;
ತೀರ್ಥ=ದೇವರ ಪೂಜೆಯ ನಂತರ, ಪೂಜಾರಿಯು ದೇಗುಲಕ್ಕೆ ಬಂದಿರುವ ಜನಗಳಿಗೆ ನೀಡುವ ನೀರು. ಇದನ್ನು ಕುಡಿಯುವುದರಿಂದ ಜೀವನದಲ್ಲಿ ಒಳಿತಾಗುವುದೆಂಬ ನಂಬಿಕೆಯು ಜನಮನದಲ್ಲಿದೆ; ಭಕ್ತಿ=ದೇವರನ್ನು ಪೂಜಿಸಲು/ಒಲಿಸಿಕೊಳ್ಳಲು ವ್ಯಕ್ತಿಯು ಹೊಂದಿರಬೇಕಾದ ಒಳ್ಳೆಯ ನಡೆನುಡಿ; ನಡೆ=ಆಚರಣೆ/ವರ‍್ತನೆ; ಭಕ್ತಿಯ ನಡೆ=ತನಗೆ ಒಳಿತನ್ನು ಬಯಸುವಂತೆಯೇ ಇತರರ ಒಳಿತಿಗೂ ನೆರವಾಗುವಂತಹ ಸಾಮಾಜಿಕ ವರ್ತನೆ;

ಮುಕ್ತಿ = ಬಿಡುಗಡೆ/ವಿಮೋಚನೆ/ ಹುಟ್ಟು ಬದುಕು ಸಾವಿನ ಸರಪಣಿಯಿಂದ ಜೀವವು ಬಿಡುಗಡೆಯನ್ನು ಪಡೆಯುತ್ತದೆ ಎಂಬ ನಂಬಿಕೆ;
ಪ್ರಸಂಗ = ಸನ್ನಿವೇಶ/ಸಂಗತಿ; ಮುಕ್ತಿಯ ಪ್ರಸಂಗ=ಮೈ ಮನಗಳಲ್ಲಿ ತುಡಿಯುವಂತಹ ಕೆಟ್ಟ ಒಳಮಿಡಿತಗಳನ್ನು ಹತೋಟಿಯಲ್ಲಿಟ್ಟುಕೊಂಡು/ಹೋಗಲಾಡಿಸಿಕೊಂಡು, ಅವುಗಳಿಂದ ಬಿಡುಗಡೆಯನ್ನು ಹೊಂದಿ, ಒಳ್ಳೆಯ ರೀತಿಯಲ್ಲಿ ಬದುಕಲು ಪ್ರೇರಣೆಯನ್ನು ನೀಡುವಂತಹ ಸಂಗತಿ/ಸನ್ನಿವೇಶ;
ಉಳ್ಳಡೆ = ಇದ್ದರೆ/ದೊರಕಿದರೆ/ಪಡೆದರೆ/ಹೊಂದಿದರೆ; ಹರಿವ ನದಿ=ಹರಿಯುತ್ತಿರುವ ನದಿ/ತೊರೆಗಳ ನೀರು;
ಎತ್ತಣ = ಯಾವ ಕಡೆ/ಯಾವ ರೀತಿ/ಯಾವ ಬಗೆ; ಹರಿವ ನದಿ ಎತ್ತಣಾ ತೀರ್ಥ=ಯಾವ ರೀತಿಯಿಂದ ನೋಡಿದರು/ಚಿಂತಿಸಿದರು/ಆಲೋಚಿದರು ನದಿ/ತೊರೆಗಳ ನೀರು, ಅದು ಕೇವಲ ನೀರೇ ಹೊರತು ತೀರ‍್ತವಾಗುವುದಿಲ್ಲ; ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವಂತಹ ನಡೆನುಡಿಗಳೇ ತೀರ‍್ತವೆಂಬ/ಪವಿತ್ರವೆಂಬ ಇಂಗಿತವನ್ನು ಈ ನುಡಿಗಳು ಸೂಚಿಸುತ್ತವೆ.

ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ
ಇರುಳೆಲ್ಲಾ ನಡೆದನಾ ಸುಂಕಕಂಜಿ
ಕಳವೆಯೆಲ್ಲಾ ಹೋಗಿ ಬರಿಗೋಣಿ ಉಳಿಯಿತ್ತು
ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ.

ಈ ವಚನದಲ್ಲಿ ‘ ಅಳಿಮನದವನು ‘ ಎಂಬ ಪದವನ್ನು ” ಮನದಲ್ಲಿ ಕೆಟ್ಟ ಉದ್ದೇಶವನ್ನುಳ್ಳ ವ್ಯಕ್ತಿ / ಚಂಚಲಮನದ ವ್ಯಕ್ತಿ ” ಎಂಬ ಎರಡು ಬಗೆಯ ತಿರುಳಿನ ನೆಲೆಗಳಲ್ಲಿ ಗ್ರಹಿಸಿಕೊಂಡಾಗ, ಎರಡು ರೀತಿಗಳಲ್ಲಿ ವಚನದ ಇಂಗಿತವನ್ನು ಮನಗಾಣಬಹುದು.

1) ಮನದಲ್ಲಿ ಕೆಟ್ಟ ಉದ್ದೇಶವನ್ನು ಹೊಂದಿ, ಹೊರನೋಟಕ್ಕೆ ದೇವರಲ್ಲಿ ಒಲವುಳ್ಳವನಂತೆ ನಟಿಸುತ್ತಾ, ಜನರನ್ನು ಮತ್ತು ಸಮಾಜವನ್ನು ವಂಚಿಸುವ ವ್ಯಕ್ತಿಯು ಕಟ್ಟಕಡೆಗೆ ಜೀವನದಲ್ಲಿ ಏನನ್ನೂ ಗಳಿಸಲಾಗದೆ, ತನ್ನಲ್ಲಿರುವುದನ್ನೂ ಕಳೆದುಕೊಳ್ಳುತ್ತಾನೆ.

2) ಇತ್ತ ಒಳಿತನ್ನು ಮಾಡಲಾಗದೆ, ಅತ್ತ ಕೆಟ್ಟದ್ದನ್ನು ಬಿಡಲಾಗದೆ, ಅತ್ತಿತ್ತ ತೋಯ್ದಾಡುವ ಚಂಚಲಮನಸ್ಸಿನ ವ್ಯಕ್ತಿಯು ಜೀವನದಲ್ಲಿ ಏನನ್ನೂ ಪಡೆಯಲಾಗದೆ, ತನಗೆ ತಾನೆ ಕೇಡನ್ನು ಬಗೆದುಕೊಳ್ಳುತ್ತಾನೆ/ಹಾನಿಯನ್ನು ಮಾಡಿಕೊಳ್ಳುತ್ತಾನೆ.

ಹರಿದ = ಅಲ್ಲಲ್ಲಿ ತೂತು ಬಿದ್ದಿರುವ/ಕಿತ್ತುಹೋಗಿರುವ; ಗೋಣಿಯಲ್+ಒಬ್ಬ;
ಗೋಣಿ = ಸೆಣಬಿನ ನೂಲು ಇಲ್ಲವೇ ಇನ್ನಿತರ ದಾರದ ಎಳೆಗಳನ್ನು ಹೆಣೆದು ಮಾಡಿರುವ ಚೀಲ; ಗೋಣಿಯಲ್ಲಿ=ಚೀಲದಲ್ಲಿ; ಒಬ್ಬ=ಒಬ್ಬ ವ್ಯಕ್ತಿಯು;
ಕಳವೆ=ಬತ್ತ; ತುಂಬಿದ=ಚೀಲದೊಳಗೆ ತುಸುವು ಎಡೆಯಿಲ್ಲದಂತೆ ಬತ್ತವನ್ನು ಹಾಕಿದ;
ಇರುಳ್+ಎಲ್ಲಾ; ಇರುಳು = ರಾತ್ರಿ; ನಡೆದನ್+ಆ; ಇರುಳೆಲ್ಲಾ ನಡೆದನ್=ಒಂದು ಊರಿನಿಂದ ಇನ್ನೊಂದು ಊರಿಗೆ ಇಡೀ ರಾತ್ರಿಯೆಲ್ಲಾ ಪಯಣಿಸಿದನು; ಆ=ಕೊಡಬೇಕಾದ; ಸುಂಕಕೆ+ಅಂಜಿ;
ಸುಂಕ=(Tax) ಸರಕುಗಳ/ವಸ್ತುಗಳ ಸಾಗಾಣಿಕೆಗಾಗಿ ರಾಜನ/ರಾಜ್ಯದ ಬೊಕ್ಕಸಕ್ಕೆ ತೆರಬೇಕಾದ/ನೀಡಬೇಕಾದ ಕಂದಾಯದ ಹಣ/ತೆರಿಗೆ;
ಅಂಜು= ಹೆದರು/ದಿಗಿಲುಗೊಂಡು; ಸುಂಕಕಂಜಿ=ಸುಂಕವನ್ನು ಕೊಡಬೇಕಲ್ಲ ಎಂಬ ಸಂಕಟದಿಂದ/ಸುಂಕವನ್ನು ವಸೂಲು ಮಾಡುವ ಆಡಳಿತಗಾರರ ಕಯ್ಗೆ ಸಿಕ್ಕಿಬಿದ್ದರೆ, ಸುಂಕದ ಹಣವನ್ನು ಕಕ್ಕಬೇಕಾಗುತ್ತದೆಯಲ್ಲ ಎಂಬ ಹೆದರಿಕೆಯಿಂದ;

ಕಳವೆ+ಎಲ್ಲಾ; ಕಳವೆಯೆಲ್ಲಾ ಹೋಗಿ=ತೂತಾಗಿದ್ದ/ಅಲ್ಲಲ್ಲಿ ಹರಿದುಹೋಗಿದ್ದ ಚೀಲಕ್ಕೆ ತುಂಬಿದ್ದ ಬತ್ತವೆಲ್ಲವೂ ದಾರಿಯುದ್ದಕ್ಕೂ ಚೆಲ್ಲಿಹೋಗಿ; ಬರಿ=ಬರಿದು/ಏನೂ ಇಲ್ಲದಿರುವುದು; ಬರಿಗೋಣಿ ಉಳಿಯಿತ್ತು=ಚೀಲವು ಬರಿದಾಗಿತ್ತು/ಚೀಲದಲ್ಲಿ ಬತ್ತವು ಇರಲಿಲ್ಲ; ಅಳಿ = ಕೆಡು/ನಾಶವಾಗು/ಸಣ್ಣತನ/ಹೀನತನ; ಮನ=ಮನಸ್ಸು; ಭಕ್ತಿ=ದೇವರನ್ನು ಪೂಜಿಸಲು/ಒಲಿಸಿಕೊಳ್ಳಲು ವ್ಯಕ್ತಿಯು ಹೊಂದಿರಬೇಕಾದ ಒಳ್ಳೆಯ ನಡೆನುಡಿ; ಅಳಿಮನದವನ ಭಕ್ತಿ=ಮನದೊಳಗೆ ಕೆಟ್ಟ ಒಳಮಿಡಿತಗಳಿಂದ ಕೂಡಿದ / ಚಂಚಲವಾದ ಮನಸ್ಸಿನ ವ್ಯಕ್ತಿಯು ಮಾಡುವ ತೋರಿಕೆಯ / ಜನಗಳನ್ನು ಮೆಚ್ಚಿಸಲೆಂದು ಮಾಡುವ ಪೂಜೆ/ಆಚರಣೆ; ಇಂತು+ಆಯಿತ್ತು; ಇಂತು=ಈ ರೀತಿ/ ಈ ಬಗೆಯಲ್ಲಿ; ಆಯಿತ್ತು=ಉಂಟಾಯಿತು/ಕಂಡುಬಂದಿತು; ಕಾನೂನಿಗೆ ಅನುಗುಣವಾಗಿ ಕಟ್ಟಬೇಕಾಗಿದ್ದ ಸುಂಕವನ್ನು ತಪ್ಪಿಸಲು ಹೋಗಿ, ತನ್ನಲ್ಲಿದ್ದ ಬತ್ತವೆಲ್ಲವನ್ನೂ ಕಳೆದುಕೊಂಡ ರೂಪಕವು ಇತರರನ್ನು ಇಲ್ಲವೇ ಸಮಾಜವನ್ನು ವಂಚಿಸಲು ಪ್ರಯತ್ನಿಸುವ ವ್ಯಕ್ತಿಯು ಕಟ್ಟಕಡೆಯಲ್ಲಿ ತನಗೆ ತಾನೆ ಕೇಡುಬಗೆದುಕೊಳ್ಳುತ್ತಾನೆ ಎಂಬ ಇಂಗಿತವನ್ನು ಸೂಚಿಸುತ್ತದೆ.

ಹಸಿವೆಂಬ ಹೆಬ್ಬಾವು ಬಸುರ ಬಂದು ಹಿಡಿದಡೆ
ವಿಷವೇರಿತ್ತಯ್ಯಾ ಆಪಾದಮಸ್ತಕಕ್ಕೆ
ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ
ವಸುಧೆಯೊಳಗೆ ಆತನೆ ಗಾರುಡಿಗ ಕಾಣಾ ರಾಮನಾಥ.

ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳಲು ಬೇಕಾದ ಉಣಿಸು ತಿನಸುಗಳು ದೊರೆಯದೆ, ದಿನನಿತ್ಯವೂ ಹಸಿವಿನ ಬೇಗೆಯಲ್ಲಿ ಬೇಯುತ್ತಿರುವ ಕೋಟಿಗಟ್ಟಲೆ ಜನರ ಹಸಿವಿನ ಸಂಕಟವನ್ನು ತಣಿಸುವ ಕೆಲಸವು ಜಗತ್ತಿನಲ್ಲಿ ಬಹುದೊಡ್ಡ ಸವಾಲಿನದು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

ಹಸಿವು+ಎಂಬ; ಹಸಿವು=ಉಂಡು ತಿಂದು ಕುಡಿದು ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕೆಂಬ ಬಯಕೆ/ಆಸೆ. ಜೀವಿಯು ಉಳಿದು ಬೆಳೆದು ಬಾಳುವುದಕ್ಕೆ ಪ್ರತಿನಿತ್ಯವೂ ಹಸಿವನ್ನು ತಣಿಸಿಕೊಳ್ಳುವುದು ಅತ್ಯಗತ್ಯ; ಎಂಬ=ಎನ್ನುವ; ಪಿರಿದಾದ+ಪಾವು=ಪೆರ‍್ಬಾವು > ಪೆಬ್ಬಾವು > ಹೆಬ್ಬಾವು; ಪಿರಿದು=ದೊಡ್ಡದು; ಪಿರಿದಾದ=ದೊಡ್ಡಗಾತ್ರದ; ಪಾವು=ಹಾವು/ಸರ‍್ಪ; ಹೆಬ್ಬಾವು=ದೊಡ್ಡಗಾತ್ರದ ಹಾವು; ಬಸುರು=ಹೊಟ್ಟೆ/ಉದರ; ಹಸಿವೆಂಬ ಹೆಬ್ಬಾವು ಬಸುರ ಬಂದು ಹಿಡಿದಡೆ=ಬಡತನ ಇಲ್ಲವೇ ಇನ್ನಿತರ ಕಾರಣಗಳಿಂದ ಉಣಿಸು ತಿನಸುಗಳು ದೊರೆಯದೆ ಹೊಟ್ಟೆಯ ಹಸಿವಿನ ಅತಿಯಾದ ಸಂಕಟದಿಂದ ನರಳುವುದು/ಪರಿತಪಿಸುವುದು ಎಂಬ ತಿರುಳಿನಲ್ಲಿ ಬಳಕೆಯಾಗಿರುವ ರೂಪಕ; ವಿಷವ+ಏರಿತ್ತು+ಅಯ್ಯಾ; ವಿಷವ=ನಂಜು/ಗರಳ; ಏರು=ಹರಡು/ಹತ್ತು/ವ್ಯಾಪಿಸು; ಅಯ್ಯಾ=ಇತರರನ್ನು ಒಲವು ನಲಿವುಗಳಿಂದ ಮಾತನಾಡಿಸುವಾಗ ಬಳಸುವ ಪದ; ಪಾದ=ಕಾಲು/ಅಡಿ; ಮಸ್ತಕ=ತಲೆ/ಶಿರ; ಆಪಾದಮಸ್ತಕಕ್ಕೆ=ಅಡಿಯಿಂದ ಹಿಡಿದು ಮುಡಿಯವರೆಗೆ / ಕಾಲಿನಿಂದ ಹಿಡಿದು ತಲೆಯತನಕ;

ಹಸಿವಿಗೆ+ಅನ್ನ+ಅನ್+ಇಕ್ಕಿ; ಅನ್ನ=ಆಹಾರವಾಗಿ ತಿನ್ನುವ ಉಣ್ಣುವ ಎಲ್ಲಾ ಬಗೆಯ ಉಣಿಸು ತಿನಸುಗಳು; ಅನ್=ಅನ್ನು; ಇಕ್ಕಿ=ನೀಡಿ/ಹಾಕಿ/ಕೊಟ್ಟು; ವಿಷ+ಅನ್+ಇಳುಹ+ಬಲ್ಲಡೆ; ಇಳುಹು=ನೀಗಿಸುವುದು/ನಿವಾರಿಸುವುದು/ಹೋಗಲಾಡಿಸುವುದು; ಬಲ್ಲ=ತಿಳಿದ/ಅರಿತ; ಬಲ್ಲಡೆ=ತಿಳಿದಿದ್ದರೆ/ಅರಿತಿದ್ದರೆ/ಕಸುವುಳ್ಳವನಾದರೆ/ಶಕ್ತನಾದರೆ; ವಿಷವನಿಳುಹಬಲ್ಲಡೆ=ಜನಸಮುದಾಯದ ಹಸಿವಿನ ಸಂಕಟವನ್ನು ನೀಗಿಸಬಲ್ಲವನಾದರೆ/ಹಸಿವನ್ನು ತಣಿಸಬಲ್ಲವನಾದರೆ; ವಸುಧೆ+ಒಳಗೆ; ವಸುಧೆ=ಜಗತ್ತು/ಪ್ರಪಂಚ/ಲೋಕ/ಬೂಮಂಡಲ; ಒಳಗೆ=ಅಲ್ಲಿ; ಆತನೆ=ಅವನೆ/ಅಂತಹ ವ್ಯಕ್ತಿಯೇ; ಗಾರುಡಿಗ=ಹಾವು ಕಚ್ಚಿ, ಮಯ್ಗೆಲ್ಲಾ ನಂಜು ಏರಿ, ಸಾಯುತ್ತಿರುವ ವ್ಯಕ್ತಿಯನ್ನು ಗುಣಪಡಿಸಿ, ಬದುಕುಳಿಯುವಂತೆ ಮಾಡುವವನು/ಮಂತ್ರವಾದಿ/ಮಾಟಮಂತ್ರದಿಂದ ಏನನ್ನೂ ಬೇಕಾದರೂ ಮಾಡಬಲ್ಲ ಕಸುವುಳ್ಳವನು ಎಂಬ ನಂಬಿಕೆಯು ಜನಮನದಲ್ಲಿದೆ; ಕಾಣ್+ಆ; ಕಾಣ್=ನೋಡು; ಕಾಣಾ=ತಿಳಿದು ನೋಡು.

೭೬೨
ಒಲವಸವಿಲ್ಲದ ಭಕ್ತಿ, ಲವಲವಿಕೆಯಿಲ್ಲದ ಪೂಜೆ,
ಸಲೆ ನಿಮ್ಮ ನಂಬಿಯೂ ನಂಬದವನ ಬಾಳುವೆ,
ಹೊಲೆಯರ ನಾಯ ಹುಲುಸರವಿಯಿಂದ ಕರಕಷ್ಟಕಾಣ!
ರಾಮನಾಥ.

ಹೊಸದೊಂದು ಧರ್ಮ, ಹೊಸ ಸಾಹಿತ್ಯ ರೂಪ, ಹೊಸ ಬದುಕಿನ ಕನಸುಗಳನ್ನು ಕಟ್ಟಿಕೊಟ್ಟ, ಜೇಡರದಾಸಿಮಯ್ಯನಿಗೆ ಕರ್ನಾಟಕದ ಧಾರ್ಮಿಕ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲಿ ತುಂಬ ಗೌರವಾನ್ವಿತವಾದ ಸ್ಥಾನ ಮೀಸಲಾಗಿದೆ.

೮೮೪
ಹೊಲಬನರಿಯದ ಗುರು
ಸುಲಭನಲ್ಲದ ಶಿಷ್ಯ
ಕೆಲಬಲನ ನೋಡದುಪದೇಶ
ಅಂಧಕನ ಲಾಭ ಹೊಕ್ಕಂತೆ ಕಾಣಾ! ರಾಮನಾಥ.

೮೭೦
ಹಂದಿ ಶ್ರೀಗಂಧವ ಹೂಸಿದಡೇನು?
ಗಂಧರಾಜನಾಗಬಲ್ಲುದೆ?
ನವಿಲು ನಲಿಯಿತ್ತೆಂದಡೆ
ಕಾಕೋಳಿ ಪುಕ್ಕವ ತರಕೊಂಡಂತೆ
ಕರ್ಮಿಗಳ ಭಕ್ತಿ!
ಹೊರವೇಷದ ವಿಭೂತಿ ರುದ್ರಾಕ್ಷಿಯ ಹೂಸಿದಡೆನು
ತೆರನನರಿದು ಮರವೆಯ ಕಳದು
ಮಾತಿನಂತೆ ನೀತಿಯುಳ್ಳಡೆ
ಅವರ ಅಜಾತರೆಂಬೆ ಕಾಣಾ! ರಾಮನಾಥ.