Categories
ವಚನಗಳು / Vachanagalu

ಬಸವಲಿಂಗದೇವನ ವಚನಗಳು

ಅಯ್ಯಾ, ಅನಂತ ನೂತನ ಗಣಂಗಳು-ಪೂರ್ವ ಪುರಾತನರು-
ನೂರೊಂದು ವಿರಕ್ತರು-ಪ್ರಮಥಗಣಾದಿಶ್ವರರ ಮಂದಿರಗಳಲ್ಲಿರುವಂತಹ
ಪರಿಯಂಕ, ಹಾಸಿಕೆ, ಶಾಲು, ಸಕಲಾತಿ, ಹೂವಿನ ಹಚ್ಚಡ,
ಶ್ವೇತಜರತಾರದ ಶಲ್ಯ, ಪಟ್ಟು ಪಟ್ಟೇದ ಧೋತ್ರ, ಸಣ್ಣಂಗಿ,
ಬುಟ್ಟೇದ ದಗಲೆ, ನಗದೀ ವಸ್ತ್ರ, ಬೆಳ್ಳಿಯಾಭರಣ, ಚಿನ್ನದಾಭರಣ,
ನವರತ್ನದಾಭರಣ, ಹವಳಮೌಕ್ತಿಕ ಮೊದಲಾದಾಭರಣಂಗಳ
ಅವರ ಮನ ನೋಯುವಂತೆ ಅಪಹರತ್ವದಿಂದ ಚೋರರ ಕೂಡಿ
ತೆಗೆದುಕೊಂಡು ಬಂದು, ಅನಂತ ಸ್ತ್ರೀಯರೊಡಗೂಡಿ ಹೊದ್ದು, ಹಾಸಿ,
ಇಟ್ಟು, ತೊಟ್ಟು, ಭೋಗಿಸಿ, ಗಣದ್ರೋಹಕ್ಕೊಳಗಾಗಿ
ಭವಪಾಶಕ್ಕೊಳಗಾಯಿತಯ್ಯ ಎನ್ನ ತ್ವಗೇದ್ರಿಯವು.
ಇಂಥ ಪರಮದ್ರೋಹಿಯ ಸಂಗದಿಂದ ಕೆಟ್ಟೆನುಳುಹಿಕೊಳ್ಳಯ್ಯ.
ಹೇ ಶಾಂಭವಮೂರ್ತಿಯೆ ! ನಿಮ್ಮಂತಃಕರಣದಿಂದ ಅಭಯಹಸ್ತವಿತ್ತು
ಪಾವನವ ಮಾಡಿ, ನಿಮ್ಮ ಸದ್ಭಕ್ತೆ ಶಿವಶರಣೆ ನಿರ್ವಾಣಪದನಾಯಕೆ
ಅಕ್ಕಮಹಾದೇವಿಯರ ತೊತ್ತಿನ ತೊತ್ತು ಭೃತ್ಯಳು ಉಟ್ಟು ಬಿಟ್ಟ
ನಿರ್ಮಾಲ್ಯದಿಂದ ಎನ್ನ ಪಾವನವ ಮಾಡಯ್ಯ ಶ್ರೀಗುರುಲಿಂಗಜಂಗಮವೆ.
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./1
ಅಯ್ಯಾ, ಆಸೆಯ ಪಾಶದಿಂದ ತೊಳಲಿತಯ್ಯ ಎನ್ನ ಕಾಯವು.
ಆಸೆ-ಆಮಿಷದಿಂದ ಹೊದಕುಳಿಗೊಂಡಿತಯ್ಯ ಎನ್ನ ಮನವು.
ಆಸೆಯೆಂಬ ಮರವೆಯಲ್ಲಿ ಮನೆಮಾಡಿತಯ್ಯ ಎನ್ನ ಪ್ರಾಣವು.
ಆಸೆಯೆಂಬ ಹೊಡೆಗಿಚ್ಚಿನಲ್ಲಿ ಹೊಡದಾಡಿ ಸತ್ತಿತಯ್ಯ ಎನ್ನ ಭಾವವು.
ಇನ್ನೆನಗೆ ಗತಿಯ ಪಥವ ತೋರಿಸಿ ರಕ್ಷಿಸಯ್ಯ,
ಭವಪಾಶರಹಿತ ಪರಬ್ರಹ್ಮಮೂರ್ತಿ ಶ್ರೀಗುರುಲಿಂಗಜಂಗಮವೆ
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./2
ಅಯ್ಯಾ, ಇಂತೀ ಆಸೆಯೆಂಬ ಮಾಯಾಪಾಶದಲ್ಲಿ
ಜಡತ್ವದಿಂದ ಕಂಗೆಟ್ಟು, ಕಂದಿ ಕುಂದಿ, ನಿಜವ ಮರದು
ನಿಮ್ಮ ಸದ್ಭಕ್ತಿ-ಸದಾಚಾರ-ಸತ್ಕ್ರೀಯ ಸಮ್ಯಜ್ಞಾನದ ಹೊಲಬನರಿಯದೆ
ಅಜ್ಞಾನವೆಂಬ ಆಸೆಯ ಪಾಶದಲ್ಲಿ ಜನ್ಮ ಜರೆ ಮರಣದಿಂದ
ಇರುವೆ ಮೊದಲಾನೆ ಕಡೆಯಾದ ಎಂಬತ್ನಾಲ್ಕು ಜೀವಜಂತುವಿನಲ್ಲಿ
ತಿನ್ನಬಾರದ ಆಹಾರಂಗಳ ತಿಂದು, ಮಾಡಬಾರದಪರಾಧ ಕೃತ್ಯವ ಮಾಡಿ
ಪರಮಪಾತಕತನದಿಂದ ಬಾಳಿ ಬದುಕಿ ಜೀವಿಸಿದ
ಅಜ್ಞಾನ ಜಡತ್ವವ ನೋಡದೆ ನಿಮ್ಮ ದಯಾಂಬುದಿಯಲ್ಲಿರಿಸಿ ರಕ್ಷಿಸಯ್ಯ.
ಪರಮಪಾವನಮೂರ್ತಿ ಶ್ರೀಗುರುಜಂಗಮವೆ,
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./3
ಅಯ್ಯಾ, ಇಂತು ಪಾದೇಂದ್ರಿಯ, ಪಾಯ್ವೇಂದ್ರಿಯ,
ಗುಹ್ಯೇಂದ್ರಿಯ, ಪಾಣೇಂದ್ರಿಯ, ವಾಗೇಂದ್ರಿಯ, ಘ್ರಾಣೇಂದ್ರಿಯ,
ಜಿಹ್ವೇಂದ್ರಿಯ, ನೇತ್ರೇಂದ್ರಿಯ, ತ್ವಗೇಂದ್ರಿಯ, ಶ್ರೋತ್ರೇಂದ್ರಿಯ
ಮೊದಲಾದ ಸಮಸ್ತ ಇಂದ್ರಿಯ ವಿಷಯ ವ್ಯಾಪಾರದಿಂದ
ಹುಸಿ, ಕಳವು, ಪರದಾರ, ಪರನಿಂದ್ಯ, ಪರಹಿಂಸೆ, ಪರದೈವ,
ಪರಕಾಂಕ್ಷೆ, ಅನೃತ, ಅಪಶಬ್ದ ಮೊದಲಾಗಿ
ಪರಮಪಾತಕತನದಿಂದ ಹೊಡದಾಡಿ,
ಅರ್ಥಪ್ರಾಣಾಭಿಮಾನವ ಕಳಕೊಂಡು
ಭವಭಾರಿಯಾಗಿ ನಷ್ಟವಾಯಿತಯ್ಯ ಎನ್ನ ಹೃದಯೇಂದ್ರಿಯವು.
ಇಂತಾ ಇಂದ್ರಿಯಂಗಳ ದುಸ್ಸಂಗದಿಂದ ಜಡಶರೀರಿಯಾಗಿ,
ನಿಮ್ಮ ನಿಜಭಕ್ತಿಯ ಮರದೆನಯ್ಯ ಪರಮಾರಾಧ್ಯದಿರವೆ.
ಇನ್ನೆನಗೆ ಗತಿಯ ಪಥವ ತೋರಿಸಯ್ಯ
ಮಹಾಪ್ರಭುವೆ ಶ್ರೀಗುರುಲಿಂಗಜಂಗಮವೆ,
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./4
ಅಯ್ಯಾ, ಇಂಥ ಮೂಳ ಹೊಲೆ ಜೀವನ ಸಂಗದಿಂದ
ಎನ್ನ ಉನ್ಮನವು ಅದರಂತೆ ಕೂಡಿ,
ದುಶ್ಚರಿತ್ರದಿಂದ ಕುಲಗೇಡಿ ಬುದ್ಧಿಯ ಕಲಿತು
ನನ್ನನು ಹರಿ ಸುರ ಬ್ರಹ್ಮಾದಿಗಳು ಬಿದ್ದ ಭವದ ಕುಳಿಯಲ್ಲಿ ಕೆಡವಿತಯ್ಯ.
ಆ ಬಿದ್ದ ದುಃಖವ ಎಷ್ಟೆಂದು ಹೇಳಲಯ್ಯ, ದೇವ.
ಪ್ರಥಮದಲ್ಲಿ ಒಬ್ಬ ಜೀವನ ತಂದೆ-ತಾಯಿಯೆಂದು ಮಾಡಿಕೊಂಡು
ಅವರ ಮಲಮೂತ್ರದ ದ್ವಾರದ ಸಂದಿನಲ್ಲಿ ಕೆಡವಿತ್ತಯ್ಯ.
ಅಲ್ಲಿ ನೋಡಿದಡೆ ಎಳ್ಳಿನಿತು ಹುರುಳಿಲ್ಲ,
ಮಹಾ ದುಃಖವೊ ಗುರುವೆ !
ಇಂಥ ಮಹಾದುಃಖ ಜೀವನ ಸಂಗವ ಪರಿಹರಿಸಿ,
ನಿಮ್ಮ ಕೃಪಾದೃಷ್ಟಿಯಿಂದ ನೋಡಿ
ಭವಪಾಶದಿಂದ ಕಡೆಗೆ ದಾಂಟಿಸಯ್ಯ.
ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./5
ಅಯ್ಯಾ, ಈ ದುರಾಚಾರ ದುರ್ಜಿವ ಮನಪ್ರಾಣಂಗಳಿಂದ
ಗುಹ್ಯಲಂಪಟ.-ಜಿಹ್ವಾಲಂಪಟಕ್ಕೊಳಗಾಗಿ,
ಹೊಟ್ಟೆಬೇನೆ, ತಲೆಬೇನೆ, ಕಣ್ಣುಬೇನೆ, ಮೈಶೂಲೆ
ಹುಣ್ಣು, ಉಷ್ಣ, ಮೂಲವ್ಯಾದಿ, ಗಿಣ್ಣುರೋಗ, ಉರಿ, ಚಳಿ ಮೊದಲಾಗಿ
ಮೂನ್ನೂರರವತ್ತು ವ್ಯಾದಿಯ ಹುಳುಗೊಂಡದಲ್ಲಿ ಬಿದ್ದು ತೊಳಲಿದೆನಯ್ಯ.
ಎನ್ನ ತಾಯಿ-ತಂದೆ ಬಂಧು-ಬಳಗ ಒಡಹುಟ್ಟಿದವರು
ಪುತ್ರ ಪುತ್ರಿ ಪೌತ್ರ ಮೊದಲಾಗಿ
ಸಂಸಾರವೆಂಬ ಭವಬಂಧನಬಾಧೆ ಲಂಪಟದಿಂದ
ತೊಳಲಿದೆನಯ್ಯ ಗುರುವೆ.
ಇಂಥ ಅನಾಚಾರದಲ್ಲಿ ವರ್ತಿಸಿ, ಮತ್ತೊಬ್ಬರಿಗೆ ಸದಾಚಾರವ ಹೇಳಿ,
ನಿಂದ್ಯ-ವಂದನೆಯಿಂದ ಸಮಸ್ತಯೋನಿ ಭವರಾಟಾಳದಲ್ಲಿ ತಿರುಗಿದೆನಯ್ಯ !
ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./6
ಅಯ್ಯಾ, ಎನ್ನ ಓದಿನ ಓದೆಲ್ಲ ಗಿಳಿ ಓದಯ್ಯ.
ಎನ್ನ ನಡೆನುಡಿಯೆಲ್ಲ ಶುನಿ ಸೂಕರ ಕುಕ್ಕುಟ ಗಾರ್ದಭನಂತಯ್ಯ.
ಎನ್ನ ತಪವೆಲ್ಲ ಹರಿಯಜಸುರರಂತಯ್ಯ.
ಎನ್ನ ಶೀಲವ್ರತಂಗಳೆಲ್ಲ ಮತ್ಸ್ಯಮಂಡೂಕನಂತಯ್ಯ.
ಎನ್ನ ಆಚಾರವಿಚಾರವೆಲ್ಲ ಶ್ವೇತ ಮಾತಂಗನಂತಯ್ಯ.
ಎನ್ನ ದಾನ ಧರ್ಮ ಪರೋಪಕಾರವೆಲ್ಲ
ಕೊಡದ ಮಾರಿ ಕೊಡದ ಮಾರನಂತಯ್ಯ.
ಎನ್ನ ಕಾಯವೆಲ್ಲ ಕಿರಾತನಂತಯ್ಯ, ಎನ್ನ ರೂಪೆಲ್ಲ ಪಿಶಾಚರೂಪಯ್ಯ.
ಇನ್ನೆನಗೆ ನಿಮ್ಮ ಸದ್ಭಕ್ತಿಯ ಸಂಪತ್ತು ಎಂತುಟೊ ? ದೇವ.
ನಿಮ್ಮ ಶರಣರ ಒಲುಮೆಯಿಂದೇನಾದಡಾಗಲಯ್ಯ.
ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./7
ಅಯ್ಯಾ, ಎನ್ನ ಜೀವ ಮನ ಪ್ರಾಣಂಗಳಿಂದ,
ಸಮಸ್ತ ಯುಗಾಂತರದಲ್ಲಿ ಬರಬಾರದ ಯೋನಿಯಲ್ಲಿ ಬಂದೆನಯ್ಯ,
ಉಣ್ಣಬಾರದ ಆಹಾರಂಗಳನುಂಡೆನಯ್ಯ,
ಮಾಡಬಾರದ ವ್ಯವಹಾರಂಗಳ ಮಾಡಿದೆನಯ್ಯ.
ನೂರೊಂದುಕುಲ ಮೊದಲಾದ ಸಮಸ್ತಜಾತಿಯ ಸ್ತ್ರೀಯರ ಭೋಗಿಸಿದೆನಯ್ಯ.
ನುಡಿಯಬಾರದಪವಾದವ ನುಡಿದೆನಯ್ಯ,
ನಡೆಯಬಾರದನಾಚಾರದಲ್ಲಿ ನಡೆದೆನಯ್ಯ,
ತಿರುಗಬಾರದ ದೇಶವ ತಿರುಗಿದೆನಯ್ಯ.
ಹುಸಿಯನೆ ಮನೆಗಟ್ಟಿದೆನಯ್ಯ ; ಹುಸಿಯನೆ ಹಾಸಿ ಹೊದ್ದೆನಯ್ಯ.
ಹುಸಿಯನೆ ಆಭರಣವ ಮಾಡಿ ಸರ್ವಾಂಗಕ್ಕೆ ಆಚ್ಫಾದಿಸಿಕೊಂಡೆನಯ್ಯ.
ಇನ್ನೆನಗೆ ಗತಿಮೋಕ್ಷವುಂಟೆ ?
ಎಲೆದೇವ, ನಿನ್ನೊಲುಮೆಯಿಂದ ಏನಾದಡಾಗಲಿ.
ಎನ್ನಲ್ಲಿ ನೋಡಿದಡೆ ಅಣುಮಾತ್ರ ಸುಗುಣವಿಲ್ಲವಯ್ಯ.
ನಿಷ್ಪ್ರಪಂಚ ನಿರಾತಂಕಮೂರ್ತಿ ಶ್ರೀಗುರುಲಿಂಗಜಂಗಮವೆ
ಹರಹರ, ಶಿವಶಿವ, ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./8
ಅಯ್ಯಾ, ಎನ್ನ ಜೀವ ಮನದ ಸಂಗದಿಂದ
ಬಹುಬಂಧನಕ್ಕೊಳಗಾಗುವುದಯ್ಯ.
ಒಂದು ಕ್ಷಣಕ್ಕೆ ಜ್ಞಾನಿಯಾಗುವುದಯ್ಯ.
ಮತ್ತೊಂದು ಕ್ಷಣಕ್ಕೆ ಅಜ್ಞಾನಿಯಾಗುವುದಯ್ಯ.
ಒಂದು ವೇಳೆ ಮಹಾಪಾಪಿಯಾಗುವುದಯ್ಯ.
ಮತ್ತೊಂದು ವೇಳೆ ಮಹಾಪುಣ್ಯ ಶರೀರಿಯಾಗುವುದಯ್ಯ.
ತನ್ನೊಳಗಣ ಗುಪ್ತಪಾತಕದ ಬುದ್ಧಿಯ ಬಿಡದಯ್ಯ.
ಮತ್ತಾರನಾದಡು ಜರದು ಗ್ರಂಥಿಾರ್ಥವ ತಂದು ಬುದ್ಧಿಯ ಹೇಳುವುದಯ್ಯ.
ತಾನವಗುಣಿಯಾಗಿ ಚರಿಸುವುದಯ್ಯ.
ಇಂಥ ಜೀವನ ಸಂಗವ ಪರಿಹರಿಸಿ ರಕ್ಷಿಸಯ್ಯ
ಪರಮಾನಂದಮೂರ್ತಿ ಶ್ರೀಗುರುಲಿಂಗಜಂಗಮವೆ.
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರೀ ಗುರುಸಿದ್ಧಲಿಂಗೇಶ್ವರ./9
ಅಯ್ಯಾ, ಎನ್ನ ಹೊರಗೆ ನೋಡಿದಡೆ ಇಂತಾಯಿತಯ್ಯ.
ಎನ್ನ ಒಳಗೆ ನೋಡಿದಡೆ ಎಳ್ಳಿನಿತು ಹುರುಳಿಲ್ಲವಯ್ಯ ದೇವ.
ಹೊನ್ನು ನನ್ನದು, ಹೆಣ್ಣು ನನ್ನದು, ಮಣ್ಣು ನನ್ನದು,
ಪುತ್ರಮಿತ್ರಕಳತ್ರಯಾದಿಗಳು ನನ್ನದು, ಧನಧಾನ್ಯ ನನ್ನದು,
ಆನೆ ಕುದುರೆ ಎತ್ತು ತೊತ್ತು ಮಂದಿ ಮಕ್ಕಳು
ಅಷ್ಟೈಶ್ವರ್ಯದಲ್ಲಿ ನಾ ಬಲ್ಲಿದನೆಂದು
ಬಹುಹಮ್ಮಿನಿಂದ ಗುರುಹಿರಿಯರ ಕಂಡಡೆ ತಲೆವಾಗದಯ್ಯ ಎನ್ನ ಚಿತ್ತವು.
ಇಂತಾ ಚಿತ್ತದಿಂದ ನುಗ್ಗುನುರಿಯಾದೆನಯ್ಯ
ನಿಃಕಳಂಕಮೂರ್ತಿ ಸಚ್ಚಿದಾನಂದ ಎನ್ನ ಅಪರಾಧವ ನೋಡದೆ ಕಾಯಯ್ಯ.
ಕರುಣಾಂಬುದಿ ಅನಾದಿ ಶ್ರೀಗುರುಲಿಂಗಜಂಗಮವೆ
ಹರಹರ ಶಿವಶಿವ ಜಯಜಯ ಕರುಣಾಕರ !
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./10
ಅಯ್ಯಾ, ಎನ್ನೊಳಗೆ ನೀವು ಹುಡುಕಿದಡೆ ಎಳ್ಳಿನಿತು ಸುಗುಣವಿಲ್ಲವಯ್ಯ.
ಎನ್ನೊಳಗೆ ನೀವು ವಿಚಾರಿಸಿದಡೆ
ಸಪ್ತಸಮುದ್ರ ಸಪ್ತದ್ವೀಪದಷ್ಟು ಅಪರಾಧವುಂಟಯ್ಯ.
ತಂದೆ, ಎನ್ನ ಅಪರಾಧವ ನೋಡದೆ ನಿಮ್ಮ ಕರುಣದೃಕ್ಕಿನಿಂದ ಸಲಹಯ್ಯ.
ಪರಮಾರಾಧ್ಯ ಪರಾತ್ಪರಮೂರ್ತಿ ಶ್ರೀ ಗುರುಲಿಂಗಜಂಗಮವೆ,
ನೀವು ಈರೇಳುಲೋಕಕ್ಕೆ ಅಪರಾಧಕ್ಷಮಿತರೆಂಬ ಬಿರುದುಂಟು ನೋಡಾ.
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ !/11
ಅಯ್ಯಾ, ಒಂದು ಕ್ಷಣಕ್ಕೆ ಪ್ರಸೂತಿ ವೈರಾಗ್ಯ ತಲೆದೋರಿದಲ್ಲಿ
ಸಕಲ ಪದಾರ್ಥವ ಸೂರೆಮಾಡುವುದಯ್ಯ.
ಒಂದು ಕ್ಷಣಕ್ಕೆ ಅಸ್ಥಿರ ಕಾಂಕ್ಷೆಯಿಂದ
ಹಳೆಯ ರಗಟೆಗೆ ಹೊಡದಾಡಿ ಸಾವುದಯ್ಯ.
ಒಂದು ವೇಳೆ ಶ್ಮಶಾನವೈರಾಗ್ಯ ತಲೆದೋರಿದಲ್ಲಿ
ತನ್ನ ಮನೆ ಮಕ್ಕಳು ಸಂಸಾರ ಧನಧಾನ್ಯವ ತ್ಯಜಿಸಿ
ಅರಣ್ಯವಶವಾಗುವುದಯ್ಯ.
ಅಲ್ಲಿ ಹೋಗಿ ಗುಡ್ಡ ಗಹ್ವರದೊಳಗಿರುವ ಪಶುಪಕ್ಷಿಗಳೆಬ್ಬಟ್ಟಿ
ಜಡಸಂಸಾರದಿಂದ ಹಾದಿಮಾರ್ಗದವರ ಬಳಲಿಸಿ,
ಬೇಡಿದಲ್ಲಿ ಕೊಟ್ಟಡೆ ಸ್ತುತಿಸಿ,
ಕೊಡದಿರ್ದಡೆ ಮಹಾದುಃಖದಿಂದ ನಿಂದ್ಯವ ಮಾಡಿ
ಪರಮಪಾತಕತನದಿಂದ ಚರಿಸುವುದಯ್ಯ.
ಇಂಥ ದುರ್ಜಿವಿಮನದ ಸಂಗವ ಪರಿಹರಿಸಯ್ಯ ಪ್ರಮಥಗಣನಾಯಕ.
ಭಕ್ತವತ್ಸಲ ಭವರೋಗವೈದ್ಯ ಜಗದಾಧಾರಮೂರ್ತಿ ಸರ್ವಾಂತರ್ಯಾಮಿ
ಶ್ರೀಗುರುಲಿಂಗಜಂಗಮವೆ.
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./12
ಅಯ್ಯಾ, ಕಾಶಿ, ರಾಮೇಶ್ವರ, ಕೇದಾರ, ಗೋಕರ್ಣ,
ಶ್ರೀಶೈಲಪರ್ವತ, ಹಂಪೆ, ಅಮರಗುಂಡ, ಕಲ್ಯಾಣ,
ಸೊನ್ನಲಾಪುರ, ಗಯ, ಪ್ರಯಾಗ, ಕೊಲ್ಲಿಪಾಕ,
ಗಂಗಾಕ್ಷೇತ್ರ, ಶಿವಗಂಗೆ, ನಂಜನಗೂಡು,
ಉಳುವೆ, ಶಂಭುಲಿಂಗನ ಬೆಟ್ಟ, ಕುಂಭಕೋಣೆ, ಕಂಚಿ,
ಕಾಳಹಸ್ತಿ, ನವನಂದಿಮಂಡಲ, ಕುಮಾರಪರ್ವತ ಮೊದಲಾದ ಕ್ಷೇತ್ರಂಗಳಲ್ಲಿ,
ಕುಂತಣದೇಶ ಮೊದಲಾದ ಐವತ್ತಾರು ದೇಶಂಗಳಲ್ಲಿ
ನಿಮ್ಮ ಚರಣಕಮಲವ ಕಂಡು ಸದ್ಭಕ್ತಿಯ ಮಾಡದೆ,
ವೃಥಾ ಭ್ರಾಂತಿನಿಂದ ಕಲ್ಲು ಮುಳ್ಳು ಮಣ್ಣಿನಲ್ಲಿ
ತಿರಿಗಿ ತಿರಿಗಿ ಕೆಟ್ಟಿತಯ್ಯ ಎನ್ನ ಪಾದೇಂದ್ರಿಯವು.
ಇಂತು ಕೆಡಗುಡದೆ ನಿಮ್ಮ ಸದ್ಭಕ್ತ ಹರಳಯ್ಯಗಳ
ಮನೆಯ ಬಾಗಿಲ ಕಾಯ್ವಂತೆ ಮಾಡಯ್ಯ.
ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರಿಗುರುಸಿದ್ಧಲಿಂಗೇಶ್ವರ./13
ಅಯ್ಯಾ, ಕುಶಬ್ದ, ಹಿಂಸೆಶಬ್ದ, ಹೊಲೆಶಬ್ದ,
ಭಾಂಡಿಕಾಶಬ್ದ, ವಾಕರಿಕೆ ಶಬ್ದ, ಗುರುಚರಪರಭಕ್ತಗಣನಿಂದ್ಯದ ನುಡಿ,
ಕುಟಿಲ ಕುಹಕ ಶಬ್ದ, ಭಂಡ ಅಪಭ್ರಷ್ಟರ ನುಡಿ, ಸೂಳೆ ದಾಸ ಷಂಡರ ನುಡಿ,
ಹೊನ್ನು-ಹೆಣ್ಣು-ಮಣ್ಣು-ಐಶ್ವರ್ಯಕ್ಕೆ
ಹೊಡದಾಡಿ ಸತ್ತವರ ಕದಥ್ರಸಂಗದ ಶಬ್ದ,
ವೇಶ್ಯಾಂಗನೆಯರ ರಾಗ ಮೊದಲಾಗಿ ಭವದ ಕುಶಬ್ದಕ್ಕೆ
ಎಳೆ ಮೃಗದೋಪಾದಿಯಲ್ಲಿ ಮೋಹಿಸಿ, ಭ್ರಷ್ಟತನದಿಂದ
ತೊಳಲಿತಯ್ಯ ಎನ್ನ ಶ್ರೋತ್ರೇಂದ್ರಿಯವು.
ಇಂಥ ಕುಶಬ್ದರ ಸಂಗದಿಂದ ನಿಮ್ಮ ಶರಣರ ಮಹತ್ವದ
ಮಹಾಘನ ಶಬ್ದವ ಮರದೆನಯ್ಯ.
ಮಂತ್ರಮೂರ್ತಿ ಸರ್ವ ಸೂತ್ರಾಧಾರ ಪರಬ್ರಹ್ಮವೆ ಎನ್ನಪರಾಧವ ನೋಡದೆ,
ನಿಮ್ಮ ಸದ್ಭಕ್ತ ಶರಣಗಣಂಗಳ ವಚನಾಮೃತವ ಕೇಳಿ
ಬೆರಗು ನಿಬ್ಬೆರಗಾಗುವಂತೆ ಮಾಡಯ್ಯ
ಕರುಣಾಂಬುಧಿ ಶ್ರೀಗುರುಲಿಂಗಜಂಗಮವೆ.
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./14
ಅಯ್ಯಾ, ಗುರು ಚರ ಪರಭಕ್ತಗಣಂಗಳನುಣ್ಣಿಸಿ ಬಣ್ಣಿಸಿ,
ಆಣೆ ಪ್ರಮಾಣಂಗಳ ಮಾಡಿ,
ನಿಮ್ಮ ಪದಾರ್ಥವ ನಿಮಗೆ ವಂಚನೆಯಿಲ್ಲದೆ ತಂದೊಪ್ಪಿಸುವೆನೆಂದು
ಮೃದುತರನುಡಿಯಿಂದ ಧನಧಾನ್ಯದ್ರವ್ಯವ ತಂದು,
ಗುಹ್ಯಲಂಪಟ ಮೊದಲಾಗಿ ಸಮಸ್ತಲಂಪಟಕ್ಕೆ
ಉದರಪೋಷಣವ ಹೊರದು,
ಆ ಗುರುಚರ ಪರಭಕ್ತಗಣಂಗಳು ಬಂದು,
‘ನಮ್ಮ ಪದಾರ್ಥವ ಕೊಡು’ ಎಂದು ಬೇಡಿದಲ್ಲಿ
ಕಡುದ್ರೇಕದಿಂದ ಮರಳಿ ‘ನಿಮ್ಮ ಪದಾರ್ಥವನಾರು ಬಲ್ಲರು ? ‘
ನೀವೆ ನನಗೆ ಕೊಡಬೇಕಲ್ಲದೆ ನಾ ನಿಮಗೆಲ್ಲಿಯದ ಕೊಡಬೇಕೆಂದು
ಸಮಸ್ತ ಜನ್ಮಾಂತರದಲ್ಲಿ ಹುಸಿಯನೆ ನುಡಿದು, ಹುಸಿಯನೆ ಮನೆಗಟ್ಟಿ,
ಅವರಿಗೆ ಇಲ್ಲದಪವಾದವ ಕಲ್ಪಿಸಿ, ಕುಂದು ನಿಂದ್ಯವ ನುಡಿದು,
ಗುರುಚರ ಪರಭಕ್ತಗಣ ದ್ರೋಹಿಯಾಗಿ
ಯಮನಿಗೀಡಾಯಿತ್ತಯ್ಯ ಎನ್ನ ವಾಗೇಂದ್ರಿಯವು.
ಇಂತು ದುರ್ಜನಸಂಗದಿಂದ ನಿಮ್ಮ ಚರಣದ ನಿಜನೈಷ್ಠೆಯನರಿಯದೆ
ಭವಬಂಧನಕ್ಕೊಳಗಾದ ಅಂಧಕಂಗೆ, ಸತ್ಪಥವ ತೋರಿ ದಯವಿಟ್ಟು
ನಿಮ್ಮ ಸದ್ಭಕ್ತ ಶಿವಶರಣ ಮಾರಯ್ಯಗಳ ಮನೆಯ ರಜಂಗಳ ಹೊಡವ
ತೊತ್ತಿನ ತೊತ್ತಿನ ಒಕ್ಕು ಮಿಕ್ಕುದ ಕೊಡಿಸಿ ಸಲಹಯ್ಯ.
ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./15
ಅಯ್ಯಾ, ಗುರುಚರಪರಭಕ್ತಗಣ ಷಣ್ಮತ ಮೊದಲಾದ
ನೂರೊಂದು ಕುಲ ಹದಿನೆಂಟು ಜಾತಿಯವರೊಳಗಾಗಿ
ಸಮಸ್ತರ ಹೊಲ ಮಾಳ ಗದ್ದೆ ಮನೆ ಮಠ ಮಳಿಗೆ ಮೊದಲಾಗಿ
ತೆಂಗು ಬಾಳೆ ಬದನೆ ಅಂಜುರ ದ್ರಾಕ್ಷಿ ಚೂತಫಲ
ನೇರಿಲಹಣ್ಣು ಹಲಸು ದಾಳಿಂಬ ರಾಯಿಬಿಕ್ಕೆ ಕಿತ್ತಳೆ ಕಿರಿನೆಲ್ಲಿ
ಬೆಳವಲಹಣ್ಣು ಕಬ್ಬು ಕಡಲೆ ಸೌತೆ ಕಲ್ಲಂಗಡಿ ಕರುಬುಜ
ಸೀತಿನಿ ಮೊದಲಾದ ಸಮಸ್ತ ರಸದ್ರವ್ಯವ ನೀತಿಯಿಂದ ಕೆಲವ ತಂದು,
ಅನೀತಿಯಿಂದ ಕೆಲವ ತಂದು, ಚೋರತನದಿಂದ ಕೆಲವ ತಂದು,
ರಂಡೆ ಮುಂಡೆ ಜಾರೆ ವೇಶಿ ಸೂಳೆ ಮೊದಲಾದವರಿಗೆ ಕೆಲವ ಕೊಟ್ಟು,
ತಾನು ಕೆಲವ ಭುಂಜಿಸಿ, ಹಲ್ಲುಮುರಿದು ಸೋಟಿ ಹರಿದು,
ಭವಕ್ಕೀಡಾಯಿತಯ್ಯ ಎನ್ನ ಜಿಹ್ವೇಂದ್ರಿಯವು.
ಇಂತೀ ಕರ್ಮಪ್ರಾಣಿಗಳ ಸಂಗದಿಂದ ಮತಿಗೆಟ್ಟೆನಯ್ಯ.
ಇನ್ನೆನಗೆ ಗತಿಯ ಪಥವ ತೋರಿ
ನಿಮ್ಮ ಸದ್ಭಕ್ತ ಶಿವಶರಣ ನುಲಿಯ ಚಂದಯ್ಯಗಳ ತೊತ್ತಿನ
ಉಗುಳ ತಾಂಬೂಲವ ಕೊಡಿಸಿ ಸಲಹಯ್ಯ
ಸರ್ವಾಂತರ್ಯಾಮಿ ಶ್ರೀಗುರುಲಿಂಗಜಂಗಮವೆ,
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./16
ಅಯ್ಯಾ, ಗುರುಚರಪರಭಕ್ತಗಣ ಸಮಸ್ತ ಜಾತಿ ಮೊದಲಾದವರ
ತೋಟ ಹೊಲ ಗದ್ದೆ ಕಾಸಾರ ಮೊದಲಾದ
ಜಾಜಿ ಮಲ್ಲಿಗೆ ಸೂಜಿಮಲ್ಲಿಗೆ ದುಂಡುಮಲ್ಲಿಗೆ ಸಂಪಿಗೆ ಪಚ್ಚೆ ದವನ
ಅವರ ಮನೆಮಠಗಳಿಗೆ ಮೊದಲಾಗಿ
ಶ್ರೀಗಂಧ ಚಂದನ ಅಗರು ಲಾಮಂಚ ಕಸ್ತೂರಿ ಪುಣುಗು
ಶ್ರೀಗಂಧತೈಲ ಸಂಪಿಗೆತೈಲ ಮೊದಲಾದವಕಿಚ್ಫೈಸಿ
ಅವರ ಬಂಧಿಸಿ ಕೆಲವ ತಂದು, ಅಪಹರಿಸಿ ಕೆಲವ ತಂದು,
ಗುಹ್ಯಲಂಪಟ ಮೋಹಿಯಾಗಿ ಆ ಪದಾರ್ಥವ
ಜಾರಸ್ತ್ರೀ ಸೂಳೆ ಶ್ವಪಚಗಿತ್ತಿ ಮುಂತಾದವರ ಮುಡಿಗಳಿಗೆ ಕಟ್ಟಿ,
ತಾನು ವಾಸಿಸಿ ಸುಖಿಸಿ ಕಾಲ ಕಾಮರಿಗೊಳಗಾಯಿತಯ್ಯ ಎನ್ನ
ಘ್ರಾಣೇಂದ್ರಿಯವು.
ಇಂತಾ ಭವಪಾಶಪ್ರಾಣಿಗಳ ಸಂಗದಿಂದ ನಿಮ್ಮ ಮರೆದೆನಯ್ಯ.
ಇನ್ನೆನಗೆ ನಿನ್ನೊಲುಮೆಯಿಂದ ನೋಡಿ, ಭವಸಾಗರವ ದಾಂಟಿಸಯ್ಯ.
ಜಗದಾರಾಧ್ಯ ಪರಮಾನಂದಮೂರ್ತಿ, ಎನ್ನಪರಾಧವ ನೋಡದೆ,
ನಿಮ್ಮ ಸದ್ಭಕ್ತ ಶಿವಶರಣ ಮೋಳಿಗಯ್ಯಗಳ ಲೆಂಕನ ಚರಣಧೂಳವ
ವಾಸಿಸುವಂತೆ ಮಾಡಯ್ಯ ಅಪರಾಧಕ್ಷಮಿತ ಶ್ರೀಗುರುಲಿಂಗಜಂಗಮವೆ.
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./17
ಅಯ್ಯಾ, ಗುರುದ್ರವ್ಯ, ಗಣದ್ರವ್ಯ, ಭಕ್ತದ್ರವ್ಯ,
ಚರದ್ರವ್ಯ, ಪರದ್ರವ್ಯ, ರಾಜದ್ರವ್ಯ,
ತಂದೆ-ತಾಯಿ ಬಂಧು-ಬಳಗ ಭಾವ-ಮೈದುನ ನಂಟುತನದ ದ್ರವ್ಯ,
ಕುಂತ ನಿಂತ ಸಹಾಸದ್ರವ್ಯ, ನೋಡಕೊಟ್ಟದ್ರವ್ಯ,
ನೂರೊಂದುಕುಲ ಹದಿನೆಂಟು ಜಾತಿಯ ದ್ರವ್ಯ,
ಬೀದಿ ಬಾಜಾರದಲ್ಲಿ ಬಿದ್ದ ದ್ರವ್ಯ, ಹಾದಿಪಥದಲ್ಲಿ ಬಿದ್ದ ದ್ರವ್ಯ,
ಹಕ್ಕಿಪಕ್ಕಿ ತಂದಿಟ್ಟ ದ್ರವ್ಯ,
ಮದುವೆ ಶುಭಶೋಭನದಾಸೋಹದ ದ್ರವ್ಯ ಮೊದಲಾಗಿ
ಕಳ್ಳಕಾಕರ ಸಂಗದಿಂದ ಚೋರತನದಿಂದಪಹರಿಸಿ,
ಜನ್ಮ ಜನ್ಮಾಂತರದಲ್ಲಿ ಭವಪಾತಕಕ್ಕೆ ಗುರಿಯಾಯಿತಯ್ಯ
ಎನ್ನ ಪಾಣೇಂದ್ರಿಯವು.
ಇಂಥ ಅಜ್ಞಾನದಿಂದ ತೊಳಲುವ ಜನ್ಮ ಜಡತ್ವವನಳಿದುಳಿದು
ನಿಮ್ಮ ಸದ್ಭಕ್ತ ನಿಜಶರಣ ದೇವರದಾಸಿಮಯ್ಯನ ದಾಸಿಯ
ಪಾದವನೊರಸಿ ಬಾಳುವಂತೆ ಮಾಡಯ್ಯ ಕರುಣಾಳಿ
ಎನ್ನಾಧಾರಮೂರ್ತಿ ಶ್ರೀಗುರುಲಿಂಗಜಂಗಮವೆ
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./18
ಅಯ್ಯಾ, ಚಂದಚಂದವುಳ್ಳ ವೃಷಭ,
ಚಂದಚಂದವುಳ್ಳ ವಾಜಿ, ಚಂದಚಂದವುಳ್ಳ ಆನೆ,
ಚಂದಚಂದವುಳ್ಳ ಅಂದಳ, ಚಂದಚಂದವುಳ್ಳ ಪರಿಯಂಕ,
ಚಂದಚಂದವುಳ್ಳ ಮೇಲುಪ್ಪರಿಗೆ, ಚಂದಚಂದವುಳ್ಳ
ಜಾಡಿ-ಜಮಕಾನ-ಚಿತ್ರಾಸನ, ಚಂದಚಂದವುಳ್ಳ ಮಣಿಪೀಠ,
ಚಂದಚಂದವುಳ್ಳ ಲೇಪು ಸುಪ್ಪತ್ತಿಗೆ,
ಚಂದಚಂದವುಳ್ಳ ಪಟ್ಟುಪಟ್ಟಾವಳಿ ಹಾಸಿಗೆಯ ಮೇಲೆ
ನಿಮ್ಮ ಶರಣಗಣಂಗಳ ಸಮೂಹವ ಮೂರ್ತವ ಮಾಡಿಸಿ,
ಭೃತ್ಯಭಕ್ತಿಯ ಮಾಡದೆ ಮೂಲಹಂಕಾರದಿಂದ
ತಾನೆ ಕುಂತು ನಿಂತು ಮಲಗಿ ನಿಜಗೆಟ್ಟಿತಯ್ಯ ಎನ್ನ ಪಾಯ್ವೇಂದ್ರಿಯವು.
ಇಂಥ ಅಜ್ಞಾನದಿಂದ ಕೆಡಗುಡದೆ
ನಿಮ್ಮ ಸದ್ಭಕ್ತ ಸದಾಚಾರಿ ಶಿವಶರಣ ಮೇದಾರಕೇತಯ್ಯಗಳ
ಮನೆಯ ತೊತ್ತಿನ ರಕ್ಷೆಯ ಕಾಯ್ವಂತೆ ಮಾಡಯ್ಯ
ಶ್ರೀಗುರುಲಿಂಗಜಂಗಮವೆ !
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./19
ಅಯ್ಯಾ, ತನ್ನ ಅಜ್ಞಾನ ಮೂಲಹಂಕಾರದಿಂದ
ಗುರುಚರಪರಭಕ್ತಗಣಂಗಳ ಕಂಡಡೆ ತಲೆವಾಗದಯ್ಯ ಎನ್ನ ಮನವು.
ತನ್ನ ಬೈರೂಪದ ಬಿಂಕದಿಂದ
ಗುರುಹಿರಿಯರು ಮಾತನಾಡಿದಡೆ
ಭೃತ್ಯಭಾವದಿಂದ ಮಾತನಾಡದಯ್ಯ ಎನ್ನ ಮನವು.
ಹಾ! ಹಾ! ಯತಿಗಳು ದಾರಿಯಲ್ಲಿ ಬಂದಡೆ
ತನ್ನ ಗರುವಿನಿಂದ ಅವರಿಗೆ ಹಾದಿಯ ಬಿಡದಯ್ಯ ಎನ್ನ ಮನವು.
ಹರಗುರುವಾಕ್ಯವಿಡಿದು ಆಚರಿಸುವ
ನಿಜನಿಷ್ಠ ಶೀಲವ್ರತಿಗಳ ಕಂಡಡೆ ತನ್ನ ಗರುವಿನಿಂದ
ಉರಿಮಾರಿಯಂತೆ, ಕೋಣ ಮಲತು ಗರುವಿನಿಂದ ತಿರುಗುವಂತೆ,
ಅವರ ಮೇಲೆ ಮಚ್ಚರಿಸಿತಯ್ಯ ಎನ್ನ ಮನವು.
ಇಂತಾ ಪರಮಪಾತಕ ಮನದ ಸಂಗದಿಂದ
ನೊಂದು ಬೆಂದು ಕಂಗೆಟ್ಟು ಕಂದಿ ಕುಂದಿ ತೊಳಲಿ ಬಳಲಿದೆನಯ್ಯ.
ಇಂತಹ ಕುಮನಸಂಗವ ಪರಿಹರಿಸಿ ಸಲಹಯ್ಯ.
ಶ್ರೀಗುರುಲಿಂಗಜಂಗಮವೆ.
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./20
ಅಯ್ಯಾ, ತನ್ನ ಜನ್ಮಾಂತರದ ಮಹಾದುಃಖವ ನೆನಸಿಕೊಂಡು
ಒಂದು ವೇಳೆ ಮಹಾತತ್ವಜ್ಞಾನಾನಂದದ ನಿಜಜ್ಞಾನಿಯಾಗುವುದಯ್ಯ.
ಮತ್ತೊಂದು ವೇಳೆ ಮಲತ್ರಯಪಾಶಬದ್ಧನಾಗಿ
ಮಹಾಭ್ರಷ್ಟತನದಿಂದ ಚರಿಸುವುದಯ್ಯ.
ಒಂದು ವೇಳೆ ಪರಮ ವಿರಕ್ತಿಯ ಹೇಳುವುದಯ್ಯ.
ಒಂದು ವೇಳೆ ಕಚ್ಚೆಹರುಕಬುದ್ಧಿಯನೊಡಗೂಡಿ
ಅಪ್ಟಭ್ರಷ್ಟತನದಿಂದ ಚರಿಸುವುದಯ್ಯ.
ಒಂದು ವೇಳೆ ಪುರಾಣವೈರಾಗ್ಯದಿಂದೆ ಮಹಾತ್ಯಾಗಿಯಾಗುವುದಯ್ಯ.
ಮತ್ತೊಂದು ವೇಳೆ ಮಹಾಲೋಬಿತನದಿಂದ
ಭವಪಾಶದಲ್ಲಿ ಬಿದ್ದು ತೊಳಲುವುದಯ್ಯ.
ಇಂಥ ಕರ್ಮಜಡ ಕುಬ್ಜ ಜೀವಮನದಸಂಗವ ತೊಲಗಿಸಿ ರಕ್ಷಿಸಯ್ಯ.
ಎನ ಸೂತ್ರಾಧಾರ ಸಚ್ಚಿದಾನಂದ ಸಕಲಾಗಮಂಗಳಮೂರ್ತಿ
ಮೋಕ್ಷಪ್ರದಾಯಕ ಶ್ರೀಗುರುಲಿಂಗಜಂಗಮವೆ
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./21
ಅಯ್ಯಾ, ತರ್ಕ ವ್ಯಾಕರಣಾಗಮ ಶಾಸತ್ತ್ರ ಪುರಾಣ
ಛಂದಸ್ಸು ನೈಘಂಟು ಜ್ಯೋತಿಷ್ಯ ಮೊದಲಾದ
ಶಾಸ್ತ್ರದ ಆಸೆಯ ಭ್ರಮೆಯಲ್ಲಿ ಹೊಡದಾಡಿ ಸತ್ತಿತಯ್ಯ ಎನ್ನ ಶುದ್ಧಾತ್ಮನು.
ಕತ್ತಿಸಾಧಕ ಕಠಾರಿಸಾಧಕ ಪಟಾಕಿನ ಸಾಧಕ ಮೊದಲಾದ
ಬತ್ತೀಶ ಸಾಧಕದಲ್ಲಿ ಆಸೆ ಮಾಡಿತಯ್ಯ ಎನ್ನ ಮಹದಾತ್ಮನು.
ಅಣಿಮಾ ಮಹಿಮಾ ಗರಿಮಾ ಲಘಿಮಾ
ಪ್ರಾಪ್ತಿ ಪ್ರಾಕಾಮ್ಯ ಈಶಿತ್ವ ವಶಿತ್ವವೆಂಬ
ಅಷ್ಟೈಶ್ವರ್ಯದಲ್ಲಿ ಆಸೆ ಮಾಡಿತಯ್ಯ ಎನ್ನ ಚಿದಾತ್ಮನು.
ಹೀಂಗೆ ಅಜ್ಞಾನವೆಂಬ ಭವಪಾಶದಿಂದ ಹೊಡದಾಡಿ ಸತ್ತು,
ಸತ್ತು-ಹುಟ್ಟಿ ಭವಕ್ಕೆ ಒಳಗಾಗಿ ಕೆಟ್ಟೆನಯ್ಯ.
ಭವರೋಗವೈದ್ಯನೆ, ಸಲಹಾ, ಶ್ರೀಗುರುಲಿಂಗಜಂಗಮವೆ.
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./22
ಅಯ್ಯಾ, ನಾನು ಬಹು ಸುಂದರನು, ನಾನು ಬಹು ಪರಾಕ್ರಮಿಯು,
ನಾನು ಬಹು ಭೋಗಿಯು, ನಾನು ಬಹು ಸುಖಿಯು,
ನಾನು ತರ್ಕ ವ್ಯಾಕರಣ ಅಮರ ಆಗಮ ಶಾಸ್ತ್ರ ಪುರಾಣದಲ್ಲಿ ಪ್ರೌಢನು.
ನನ್ನ ಸೋಲಿಸುವರಾರು?
ನಾನು ವೈದ್ಯಶಾಸ್ತ್ರದಲ್ಲಿ ಬಲ್ಲಿದನು, ನನಗೊಂದು ವ್ಯಾದಿಯು ಮುಟ್ಟದು.
ನಾನು ರಣಾಗ್ರದಲ್ಲಿ ಬಲವಂತನು, ನನ್ನ ಮೇಲೆ ಬೀಳುವರಾರು ?
ನಾನು ಎಂದೆಂದಿಗೂ ಪುಣ್ಯವಂತನು, ನನಗೆ ದರಿದ್ರ ಬಂದು ಸೋಂಕದು
ನಾನು ಎಂದೆಂದಿಗೂ ಕ್ಷೀರಾಹಾರಿಯು, ಎನ್ನ ಭೋಗವ ತೊಲಗಿಸುವರಾರು ?
ನಾನು ಯಂತ್ರ ತಂತ್ರದಲ್ಲಿ ಬಲ್ಲಿದನು, ನನಗೆ ಒಂದು ಗ್ರಹ ಬಂದು ಸೋಂಕದು
ಎಂದು ಹಮ್ಮಿನಿಂದ ಭ್ರಮೆಗೊಂಡಿತಯ್ಯ ಎನ್ನ ಬುದ್ಧಿಯೆಂಬ ಕರಣವು.
ಇಂತಾ ದುಃಕರಣದ ಸಂಗದಿಂದ ಕಂದಿ ಕುಂದಿ ಕಂಗೆಟ್ಟೆನಯ್ಯ.
ಶ್ರೀಗುರುಲಿಂಗಜಂಗಮವೆ.
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./23
ಅಯ್ಯಾ, ನೀವೇ ಸರ್ವಲೋಕ ಸೃಷ್ಟಿಕರ್ತರೆಂದು ಹೇಳಿತ್ತಯ್ಯ
ವೇದಶಾಸ್ತ್ರಾಗಮ ಸ್ಮೃತಿಗಳು.
ನೀವೇ ಸರ್ವ ಚೈತನ್ಯವೆಂದು ಹೇಳಿದವಯ್ಯ
ತರ್ಕ ವ್ಯಾಕರಣ ಮಾಘ ರಘುವಂಶ ಸರ್ವಜ್ಞನೀತಿ ಮೊದಲಾಗಿ.
ನೀವೇ ನಿಜಮೋಕ್ಷಮಂದಿರವೆಂದು ಹೇಳಿದವಯ್ಯ
ಪ್ರಮಥಗಣಂಗಳ ಎರಡೆಂಬತ್ತೆಂಟುಕೋಟಿ ವಚನಂಗಳು.
ನೀವೇ ಚಿದೈಶ್ವರ್ಯ ಚಿದಾಭರಣ ಚಿದ್ಬ್ರಹ್ಮವೆಂದು ಸೂಚಿಸಿದವಯ್ಯ
ಪರಮಬೋಧಾಮೃತಂಗಳು.
ದೇವಾ, ಎನ್ನಪರಾಧವೆಂಬ ಅಜ್ಞಾನಕ್ಕೆ ನೀವೆ ಜ್ಞಾನಚಕ್ಷುವಯ್ಯ.
ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ !/24
ಅಯ್ಯಾ, ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರ
ಕಶ್ಯಪ ಭಾರದ್ವಾಜ ಮೊದಲಾದ ನೂರೊಂದು ಕುಲ,
ಹದಿನೆಂಟು ಜಾತಿಯವರೊಳಗಾಗಿ ಯೌವನದ ಸ್ತ್ರೀಯರ ಕಂಡು,
ಸಂಪಿಗೆ ಪುಷ್ಪಕ್ಕೆ ಭ್ರಮರನಿಚ್ಫೈಸುವಂತೆ ಕಾಮವಿಕಾರದಿಂದ,
ಮೊಲಕ್ಕೆ ನಾಯಿ ಹಂಬಲಿಸಿದಂತೆ, ಮಾಂಸಕ್ಕೆ ಹದ್ದು ಎರಗಿದಂತೆ,
ಸತ್ತ ದನವ ನರಿ ಕಾಯ್ದುಕೊಂಡಂತೆ,
ಹೆಣ್ಣು ನಾಯಿ ಗಂಡು ನಾಯಿ ಕೂಟವ ಕೂಡಿ ಪಿಟ್ಟಿಸಿಕ್ಕಿ ಒರಲುವಂತೆ,
ಮನ್ಮಥರತಿಸಂಗದಿಂದ, ಜನನದ ತಾಯಿಯೆನ್ನದೆ,
ಅತ್ತಿಗೆ ನಾದಿನಿಯೆನ್ನದೆ, ಅಕ್ಕತಂಗಿಯೆನ್ನದೆ,
ನಡತೆಯ ಒಡಹುಟ್ಟಿದವರೆನ್ನದೆ, ಅತ್ತೆ ಸೊಸೆಯೆನ್ನದೆ,
ಮಗಳು ಮೊಮ್ಮಗಳೆನ್ನದೆ, ಅಜ್ಜಿ ಆಯಿಯೆನ್ನದೆ ಪಿಶಾಚರೂಪತಾಳಿ
ಉಚ್ಚೆಯ ಬಚ್ಚಲಿಗೆ ಹೊಡದಾಡಿ ಸತ್ತಿತಯ್ಯ ಎನ್ನ ಗುಹ್ಯೇಂದ್ರಿಯವು.
ಇಂತೀ ಗುಹ್ಯಲಂಪಟಕ್ಕೆ ದೂರವಾದ ಮಹಾಘನ ಸದ್ಭಕ್ತ
ಶಿವಶರಣ ಶಂಕರದಾಸಿಮಯ್ಯನ ದಾಸಿಯ ದಾಸನ ಮಾಡಿ ಸಲಹಯ್ಯ.
ಕಾರುಣ್ಯಸಾಗರ, ಪರಮಾನಂದಮೂರ್ತಿ, ಶ್ರೀಗುರುಲಿಂಗಜಂಗಮವೆ
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./25
ಅಯ್ಯಾ, ಮಣ್ಣೆಂಬ ಆಸೆಯಲ್ಲಿ ಮೋಹಿಸಿತಯ್ಯ ಎನ್ನ ಜೀವಾತ್ಮನು.
ಹೆಣ್ಣೆಂಬ ಆಸೆಯಲ್ಲಿ ಕರಗಿ ಕೊರಗಿತಯ್ಯ ಎನ್ನ ಅಂತರಾತ್ಮನು.
ಹೊನ್ನೆಂಬ ಆಸೆಯ ಪಾಶಮಲದಲ್ಲಿ ಕಂದಿ ಕುಂದಿತಯ್ಯ ಎನ್ನ ಪರಮಾತ್ಮನು.
ಧನಧಾನ್ಯವೆಂಬ ಆಸೆಯಿಂದ ಪುಡಿಪುಡಿಯಾಯಿತಯ್ಯ ಎನ್ನ ನಿರ್ಮಲಾತ್ಮನು.
ತಂದೆ ತಾಯಿ ಬಂಧು ಬಳಗವೆಂಬ
ಆಸೆಯ ಕೊಳದಲ್ಲಿ ಹೊಡದಾಡಿ ಸತ್ತಿತಯ್ಯ ಎನ್ನ ಜ್ಞಾನಾತ್ಮನು.
ಅಣ್ಣ-ತಮ್ಮ ಅಕ್ಕ-ತಂಗಿ ಅತ್ತೆ-ಅತ್ತಿಗೆ-ನಾದಿನಿಯೆಂಬ
ಆಸೆಯ ಸಂಕೋಲೆಯಲ್ಲಿ ಸಿಲ್ಕಿತಯ್ಯ ಎನ್ನ ಭೂತಾತ್ಮನು.
ಇಂತೀ ಜಡಾತ್ಮರ ಸಂಗದಿಂದ ನಿಜಗೆಟ್ಟೆನಯ್ಯ !
ಗುರುವೆ, ಇನ್ನೆನಗೆ ಗತಿಯಾವುದೊ ? ಶ್ರೀಗುರುಲಿಂಗಜಂಗಮವೆ
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./26
ಅಯ್ಯಾ, ಮತ್ತೊಂದು ವೇಳೆ ಕರ್ಣ ಮಾಡಿದ ಧರ್ಮವ ಕೇಳಿ
ಸಮಸ್ತ ಗುರುಹಿರಿಯರು, ಸಮಸ್ತ ಋಷಿಗಳು,
ಅನಂತ ಮುನಿಗಳು, ಅನಂತ ಪಂಡಿತರು, ಅನಂತ ಬ್ರಾಹ್ಮಣರು,
ಅನಂತ ದಾರಿದ್ರ ಸಮೂಹವ ಕೂಡಿಕೊಂಡು,
ಅರಣ್ಯದಲ್ಲಿ ಪರ್ಣಶಾಲೆ ಪತ್ರ ಶಾಲೆಗಳ ಮಾಡಿ
ದಾಸೋಹದಿಂದ ತೃಪ್ತಿಬಡಿಸುವುದಯ್ಯ.
ಮತ್ತೊಂದು ವೇಳೆ ಪರಮವಿರಕ್ತ ಮನೆಗೆ ಬಂದು ಬಿಕ್ಷಾ ಎಂದಡೆ
ಕಡುದ್ರೇಕದಿಂದ ಬಿಕ್ಷವ ನೀಡದೆ ಹಳಿದು
ದೂಷಣಿಸಿ ದುರ್ವಾಕ್ಯವ ನುಡಿವುದಯ್ಯ.
ಇಂಥ ಕುಲಗೇಡಿ ಚಾಂಡಾಲ ಹೊಲೆ ಮಾದಿಗ ಜೀವನ ಸಂಗವಹೆರೆಹಿಂಗಿಸಯ್ಯ.
ಮೋಕ್ಷಪ್ರದಾಯಕ ಪೂರ್ವಾಚಾರ್ಯಮೂರ್ತಿ ಶ್ರೀಗುರುಲಿಂಗಜಂಗಮವೆ.
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./27
ಅಯ್ಯಾ, ಮತ್ತೊಂದು ವೇಳೆ ಕಾಮವಿಕಾರದಿಂದ ತೊಳಲಿಸಿತಯ್ಯ,
ಕ್ರೋಧದ ಸಂದಿನಲ್ಲಿ ಕೆಡಹಿತಯ್ಯ.
ಲೋಭದ ಪಾಶದಲ್ಲಿ ನೂಂಕಿತಯ್ಯ.
ಮೋಹಮದಮತ್ಸರದ ಬಲೆಯಲ್ಲಿ ಸಿಲ್ಕಿಸಿತಯ್ಯ.
ಸತ್ವರಜತಮವೆಂಬ ತ್ರಿಗುಣಂಗಳಲ್ಲಿ ನುಗ್ಗುನುರಿ ಮಾಡಿತಯ್ಯ.
ಗಂಧ ರಸ ರೂಪು ಸ್ಪರ್ಶನ ಶಬ್ದ ಮೊದಲಾದ
ಸಮಸ್ತ ವಿಷಯದಲ್ಲಿ ಕಂದಿಕುಂದಿಸಿತಯ್ಯ.
ಇಂಥ ದುರಾಚಾರಿ ದುರ್ಜಿವ ಮನವ ಎಂದಿಗೆ ಪರಿಹರಿಸಿಯೊ ?
ಶ್ರೀಗುರುಲಿಂಗಜಂಗಮವೆ,
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./28
ಅಯ್ಯಾ, ಮತ್ತೊಂದು ವೇಳೆ ಧರ್ಮರಾಜನ ವಾರ್ತೆಯ ಕೇಳಿ
ನಾನು ಅವನಂತೆ ಮಹಾದಾನವ ಮಾಡಬೇಕೆಂದು
ಅನ್ನದಾನ-ವಸ್ತ್ರದಾನ-ಕನ್ಯಾದಾನ-ಧನಧಾನ್ಯ ಕಾಂಚನ ಮೊದಲಾಗಿ
ಷೋಡಶಮಹಾದಾನವ ಮಾಡುವುದಯ್ಯ.
ಎಂದಿಗೋ ಯಾವ ಕಾಲಕ್ಕೋ ತನ್ನ ಪವಿತ್ರದ ಸದ್ಗುರುವು
ಧರ್ಮದ ವಾರ್ತೆಯ ಕೇಳಿ, ಮನೆಗೆ ಬಂದು ಬಿಕ್ಷವ ಬೇಡಲು,
ನನ್ನ ಪುಣ್ಯಕ್ಕೆ ಕೊಟ್ಟಷ್ಟು ಒಯ್ದರೆ ಒಯ್ಯಿರಿ
ಒಯ್ಯದಿದ್ದಡೆ ರಾಜಾರ್ಥಕ್ಕೆ ಹೇಳಿ ಹೊರಯಿಕ್ಕೆ ಹಾಕುವೆನೆಂದು
ಮೂಳನಾಯಿ ಬಗುಳಿದಂತೆ ನುಡಿವುದಯ್ಯ.
ಇಂಥ ಗುರುದ್ರೋಹಿ ನೀಚಜೀವನ ಸಂಗವ ತೊಲಗಿಸಿ
ನಿಮ್ಮ ಕೃಪೆಯಿಂದ ರಕ್ಷಿಸಯ್ಯ.
ನಿಷ್ಕಳಂಕ ನಿಷ್ಪ್ರಪಂಚ ನಿಷ್ಕಾಮಮೂರ್ತಿ ಶ್ರೀಗುರುಲಿಂಗಜಂಗಮವೆ.
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./29
ಅಯ್ಯಾ, ಮತ್ತೊಂದು ವೇಳೆ
ಅಡವಿ ಅರಣ್ಯದಲ್ಲಿ ಮಹಾತಪವ ಮಾಡಿ
ಅಜ್ಞಾನದಿ ಬ್ರಹ್ಮಪದ ವಿಷ್ಣುಪದ ರುದ್ರಪದ ಇಂದ್ರಪದ ಪಡೆವೆನೆಂದು,
ಜ್ಞಾತೃ-ಜ್ಞಾನ-ಜ್ಞೇಯವೆಂಬ ಅಜ್ಞಾನತ್ರಯಂಗಳಿಂದ
ಯಮ ನಿಯಮ ಆಸನ ಪ್ರಾಣಾಯಾಮ
ಪ್ರತ್ಯಾಹಾರ ಧ್ಯಾನ ಧಾರಣ ಸಮಾದಿಯೆಂಬ
ಅಷ್ಟಾಂಗಯೋಗಾಭ್ಯಾಸದ ಸಂಕೋಲೆಯಲ್ಲಿ ಕೆಡಹಿ
ಕಣ್ಣೀರು-ಶ್ಲೇಷ್ಮವ ಕುಡಿಸಿತಯ್ಯ.
ಇಂಥ ಭವಭಾರಿ ಜಡಜೀವಮನದ ಪರಿಹರದ ಸುಖವೆಂದಿಗೆ ದೊರೆವುದೊ ?
ಶ್ರೀಗುರುಲಿಂಗಜಂಗಮವೆ
ಹರಹರ, ಶಿವಶಿವ, ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./30
ಅಯ್ಯಾ, ಮತ್ತೊಂದು ವೇಳೆ
ಅಷ್ಟತನುವಿನ ಮೂಲಹಂಕಾರವನೆತ್ತಿ ಚರಿಸಿತಯ್ಯ.
ಅದೆಂತೆಂದಡೆ : ಆ ಮೂಲಹಂಕಾರವೆ ಷೋಡಶಮದವಾಗಿ
ಬ್ರಹ್ಮನ ಶಿರವ ಕಳೆಯಿತಯ್ಯ,
ವಿಷ್ಣುವನು ಹಂದಿಯಾಗಿ ಹುಟ್ಟಿಸಿತಯ್ಯ.
ಇಂದ್ರನ ಶರೀರವ ಭವದ ಬೀಡು ಯೋನಿದ್ವಾರವ ಮಾಡಿತಯ್ಯ.
ಸೂರ್ಯ ಚಂದ್ರರ ಭವರಾಟಾಳದಲ್ಲಿ ತಿರಿಗಿಸಿತಯ್ಯ.
ಆ ಮದಂಗಳಾವುವೆಂದಡೆ : ಕುಲಮದ, ಛಲಮದ, ಧನಮದ, ಯೌವನಮದ,
ರೂಪುಮದ, ವಿದ್ಯಾಮದ, ರಾಜ್ಯಮದ, ತಪಮದ,
ಸಂಸ್ಥಿತ, ತೃಣೀಕೃತ, ವರ್ತಿನಿ, ಕ್ರೋದಿನಿ, ಮೋಹಿನಿ,
ಅತಿಚಾರಿಣಿ, ಗಂಧಚಾರಿಣಿ, ವಾಸಿನಿ ಎಂಬ
ಷೋಡಶಮದದ ಸಂದಿನಲ್ಲಿ ಎನ್ನ ಕೆಡಹಿ,
ಬಹುದುಃಖದಲ್ಲಿ ಅಳಲಿಸಿತಯ್ಯ.
ಗುರುವೆ, ಇಂಥ ದುರ್ಜಿವ ಮನದ ಸಂಗವ ತೊಲಗಿಸಿ ಕಾಯಯ್ಯ
ಕರುಣಾಳುವೆ, ಸಚ್ಚಿದಾನಂದಮೂರ್ತಿ ಭವರೋಗವೈದ್ಯನೆ
ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./31
ಅಯ್ಯಾ, ಮತ್ತೊಂದು ವೇಳೆ
ಸತ್ಯೇಂದ್ರಚೋಳನ ವಾತರ್ೆಯ ಕೇಳಿ
ಅನ್ನಕ್ಷೇತ್ರ ಅರವಟ್ಟಿಗೆಗಳು ಕೆರೆಬಾವಿಕಾಲುವೆಗಳು
ದಾನ ಧರ್ಮ ಪರೋಪಕಾರಗಳು ಮುಂತಾಗಿ ಮಾಡುವುದಯ್ಯ.
ತಾನು ಬಾಲನಾಗಿದ್ದಲ್ಲಿ ಒಬ್ಬ ವಿದ್ಯಬುದ್ಭಿ ಹೇಳಿದ ಗುರುವು
ಸತ್ಯದ ವಾತರ್ೆಯ ಕೇಳಿ ಮನೆಗೆ ಬಂದು ನಿಂತು ಮಾತನಾಡಿದಡೆ
ನೀನ್ಯಾರೊ ? ಎಂದು,
ಅಥರ್ೆಷಣ, ಪುತ್ರೇಷಣ, ದಾರೇಷಣದ ಮದಗಳು ತಲೆಗೇರಿ
ಅಹಂಕಾರದಿಂದ ಮನುಷ್ಯರ ಹಚ್ಚಿ
ಮನೆಯಿಂದ ಹೊರಡಿಸಿ ನೂಕಿಸುವುದಯ್ಯ.
ಮತ್ತಾರಾದಡು ಗುರುಹಿರಿಯರು ಕಂಡು
ಎಲೆ ಜೀವನೆ ನಿನ್ನ ಬಾಲತ್ವದ ವಿದ್ಯಬುದ್ಧಿ ಗುರುವೆಂದು ಹೇಳಿದಡೆ,
‘ಅವನೇನು ಪುಗಸಾಟೆ ಹೇಳಿದನೆ?
ನನ್ನ ರೊಕ್ಕವ ತಿಂದು ಹೇಳಿದ, ನೀನೊಬ್ಬ ನನಗೆ ಬುದ್ಭಿ ಹೇಳೋಕೆ’
ಎಂದು ದುರ್ವಾಕ್ಯವ ನುಡಿವುದಯ್ಯ.
ಇಂಥ ಭವದ ಹಂದಿ ಜಡಜೀವನ ಸಂಗವ ಪರಿಹರಿಸಿ ರಕ್ಷಿಸಯ್ಯ.
ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./32
ಅಯ್ಯಾ, ಮತ್ತೊಂದು ವೇಳೆ
ಸಪ್ತಧಾತು ಸಪ್ತವ್ಯಸನವಕೂಡಿ ವರ್ತಿಸಿತಯ್ಯ.
ಅದೆಂತೆಂದಡೆ, ರಸ ರುದಿರ ಮಾಂಸ ಮೇದಸ್ಸು
ಅಸ್ಥಿ ಮಜ್ಜೆ ಶುಕ್ಲವೆಂಬ ಧಾತುಗಳ
ಅನ್ನ ನೀರಿನಿಂದ ಪೋಷಿಸಿಕೊಂಡು,
ತನುವ್ಯಸನ, ಮನವ್ಯಸನ, ಧನವ್ಯಸನ,
ರಾಜವ್ಯಸನ, ಉತ್ಸಾಹವ್ಯಸನ, ವಿಶ್ವವ್ಯಸನ, ಸೇವಕವ್ಯಸನವೆಂಬ
ಸಪ್ತವ್ಯಸನಿಯಾಗಿ ಷಡೂಮರ್ೆ-ಷಡ್ಭಾವವಿಕಾರದಿಂದ
ಎನ್ನ ತೊಳಲಿಬಳಲಿಸಿ ಅಳಲಿಸಿತಯ್ಯ ಕುಲಗೇಡಿ ಜೀವಮನವು.
ಈ ಜೀವಮನದ ಸಂಗವ ತೊಲಗಿಸಿ ರಕ್ಷಿಸಯ್ಯ.
ದುರಿತಹರ ಪಾಪಹರ ಶ್ರೀಗುರುಲಿಂಗಜಂಗಮವೆ
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ !/33
ಅಯ್ಯಾ, ಹಲವು ದೇಶಕೋಶಗಳು, ಹಲವು ತೀರ್ಥಕ್ಷೇತ್ರಂಗಳು,
ಹಲವು ಸ್ತ್ರೀಯರ ಅಂದಚಂದಗಳು, ಹಲವು ತೇರು ಜಾತ್ರೆಗಳು,
ಹಲವು ಆಟಪಾಟಗಳು, ಹಲವು ಅರಿವೆ ಆಭರಣಗಳು,
ಹಲವು ಆನೆ ಕುದುರೆ ಅಂದಳಗಳು, ಹಲವು ಚಿತ್ರವಿಚಿತ್ರ ಛತ್ರ ಚಾಮರಗಳು,
ಹಲವು ಹಣ್ಣು ಫಲಾದಿಗಳು, ಹಲವು ಪತ್ರೆ ಪುಷ್ಪಂಗಳು,
ಹಲವು ಮೆಟ್ಟುವ ಚರವಾಹನ ಮೊದಲಾಗಿ
ನೋಡಿದಾಕ್ಷಣವೇ ದೀಪಕ್ಕೆ ಪತಂಗ ಎರಗುವಂತೆ,
ಹಲವು ಪ್ರಾಣಿಗಳಿಗೆ ತಿಗಳ ಎರಗುವಂತೆ,
ಮೀನಿಗೆ ಗುಂಡುಮುಳುಗನಪಕ್ಷಿ ಎರಗುವಂತೆ,
ಹಲವ ಹಂಬಲಿಸಿ, ಕಂಡುದ ಬಿಡದ ಮುಂಡೆ ಪಿಶಾಚಿಯಂತೆ,
ಜನ್ಮಾಂತರವೆತ್ತಿ ತೊಳಲಿತಯ್ಯ ಎನ್ನ ನೇತ್ರೇಂದ್ರಿಯವು.
ಇಂಥ ಕರ್ಮಜಡ ಜೀವರ ಸಂಗದಿಂದ ಕೆಟ್ಟೆ ಕೆಟ್ಟೆ.
ಶಿವಧೊ ಶಿವಧೊ ಎಂದು ಮೊರೆಯಿಟ್ಟೆನಯ್ಯ.
ದೇವ ನಿಮ್ಮ ಕೃಪಾದೃಷ್ಟಿಯಿಂದ ನೋಡಿ
ನಿಮ್ಮ ಸದ್ಭಕ್ತೆ ಶಿವಶರಣೆ ಅಕ್ಕನೀಲಾಂಬಿಕೆ ತಾಯಿಗಳ ತೊತ್ತಿನ
ತೊತ್ತು ಸೇವೆಯ ಮಾಡುವ ಗೌಡಿಯ ಚರಣವ
ಏಕಚಿತ್ತದಿಂದ ನೋಡಿ ಸುಖಿಸುವಂತೆ ಮಾಡಯ್ಯ.
ಎನ್ನಾಳ್ದ ಶ್ರೀಗುರುಲಿಂಗಜಂಗಮವೆ.
ಹರಹರ ಶಿವಶಿವ ಜಯಜಯ ಕರುಣಾಕರ,
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./34
ನಿಮ್ಮ ಶರಣಗಣಂಗಳ ತೊತ್ತಿನ ತೊತ್ತ ಮಾಡಿಸಯ್ಯ
ಎನ್ನ ಪರಮಾರಾಧ್ಯ.
ನಿಮ್ಮ ಶರಣಗಣಂಗಳ ಭೃತ್ಯಭೃತ್ಯನ ಮಾಡಿರಯ್ಯ
ಎನ್ನ ಸಚ್ಚಿದಾನಂದಮೂರ್ತಿ.
ನಿಮ್ಮ ಶರಣಗಣಂಗಳ ಬಾಗಿಲಕಾಯ್ವ ದ್ವಾರವಾಟಕನ
ಸೇವಕನ ಮಾಡಿರಯ್ಯ ಎನ್ನ ನಿಷ್ಕಳಂಕಮೂರ್ತಿ.
ನಿಮ್ಮ ಶರಣಗಣಂಗಳ ಪಾದರಕ್ಷೆಯಕಾಯ್ವನ
ಭೃತ್ಯನೆಂದೆನಿಸಿರಯ್ಯ ಎನ್ನ ನಿಶ್ಶೂನ್ಯಮೂರ್ತಿ.
ನಿಮ್ಮ ಶರಣಗಣಂಗಳ ಮನೆಯ ಬೀಸುವಕಲ್ಲು ಅರೆವಕಲ್ಲು
ಬಚ್ಚಲಕಲ್ಲು ಮೆಟ್ಟುಗಲ್ಲಮಾಡಿರಯ್ಯ ಎನ್ನ ನಿರಂಜನಮೂರ್ತಿಯೆ.
ಎನ್ನ ಜನ್ಮಾಂತರದ ಭವದುಃಖದ ಉದರಾಗ್ನಿ ಮದಾಗ್ನಿ
ವಡಬಾಗ್ನಿ ಕಾಮಾಗ್ನಿ ಕಾಲಾಗ್ನಿ ಶೋಕಾಗ್ನಿ ಅವಿದ್ಯಾಮಾಯಾಗ್ನಿ
ಮೊದಲಾಗಿ ನೀವಿಕ್ಕಿದ ಕಿಚ್ಚ ನೊಂದಿಸಿರಯ್ಯ, ನಿಮ್ಮ ಧರ್ಮ ನಿಮ್ಮ ಧರ್ಮ
ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ./35
ಶ್ರೀಗುರುಲಿಂಗಜಂಗಮವೆ, ಶ್ರೀಗುರು ಲಿಂಗಜಂಗಮವೆ,
ಶ್ರೀಗುರು ಲಿಂಗಜಂಗಮವೆ.
ಕಾಯಯ್ಯ ಕಾಯಯ್ಯ ಕರುಣಾ[ಣುವೆ].
ಎನ್ನ ಅಜ್ಞಾನಮಾಯಾಪಾಶವ ಪರಿಹರಿಸಿ ರಕ್ಷಿಸಯ್ಯ
ಭವರೋಗ ವೈದ್ಯನೆ, ನಿಮ್ಮ ಧರ್ಮ ನಿಮ್ಮ ಧರ್ಮ.
ನಿಮ್ಮ ಚರಣಕಮಲವ ಮರೆಹೊಕ್ಕೆನಯ್ಯ.
ಹರಹರ ಶಿವಶಿವ ಜಯಜಯ ಕರುಣಾಕರ
ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ./36