ಅಂಕಿತ: | ಕಲಿದೇವರದೇವ |
ಕಾಯಕ: | ಬಟ್ಟೆ ತೊಳೆಯುವ ಕಾಯಕ (ಅಗಸ) |
ವೀರನಿಷ್ಠೆಯ ಶರಣನೀತ. ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ‘ದೇವರ ಹಿಪ್ಪರಗಿಯಲ್ಲಿ’ ಪರುವತಯ್ಯ -ಸುಜ್ನಾನವ್ವ ದಂಪತಿಗಳ ಪುತ್ರ ರತ್ನ -ಶರಣ ಕಿರಣ ಮಡಿವಾಳ ಮಾಚಿದೆವರು. ದೇವರ ಹಿಪ್ಪರಿಗೆ ಈತನ ಜನ್ಮಸ್ಥಳ. ಕಾರ್ಯಕ್ಷೇತ್ರ ಕಲ್ಯಾಣ. ಆರಾಧ್ಯದೈವ ಕಲ್ಲಿನಾಥ. ಕಾವ್ಯ ಪುರಾಣಗಳಲ್ಲಿ ಈತನನ್ನು ವೀರಭದ್ರನ ಅವತಾರವೆಂದು ಬಣ್ಣಿಸಲಾಗಿದೆ. ಶಾಸನ ಶಿಲ್ಪಗಳಲ್ಲಿಯೂ ಇವನಿಗೆ ಎಡೆ ಲಭಿಸಿದೆ. ಶರಣರ ಬಟ್ಟೆಗಳನ್ನು ತೊಳೆಯುವುದು (ಶುಚಿ ಮಾಡುವುದು) ಈತನ ಕಾಯಕ.
ಮಡಿವಾಳ ಮಾಚಿದೇವರ ಬಗ್ಗೆ ಹಲವು ಐತಿಹ್ಯಗಳು ಪ್ರಚಾರದಲಿ ಇವೆ. ಅವುಗಳಲ್ಲಿ ಕೆಲವು-
ಮೊದಲನೆಯ ಪ್ರಸಂಗ
ನುಲಿಯ ಚಂದಯ್ಯ ತನ್ನ ಕಾಯಕಕ್ಕೆ ಬೇಕಾದ ಹುಲ್ಲನ್ನು ಕೆರೆಯಲ್ಲಿ ಕುಯ್ಯುತ್ತಿದ್ದಾಗ ಧರಿಸಿದ ‘ಇಷ್ಟ ಲಿಂಗ ‘ ಜಾರಿ ಕೆರೆಯೊಳಗೆ ಬೀಳುತ್ತದೆ. ಜಾರಿ ಬಿದ್ದ ಲಿಂಗ ಮತ್ತೇಕೆ? ಭಾವ ಲಿಂಗವೊಂದನ್ನೇ ಪೂಜಿಸಿದರೆ ಸಾಕೆಂದು ಹುಲ್ಲಿನ ಹೊರೆ ಹೊತ್ತು ಮನೆಗೆ ಮರಳುವನು. ಆಗ ಲಿಂಗದೇವ, ಮಾಚಿದೇವರ ಮೊರೆ ಹೋಗುತ್ತಾನೆ. ಮಾಚಿ ತಂದೆಗಳು ‘ಸವಿ ಬೇಕು- ಹಣ್ಣು ಬೇಡವೆಂದರೆ’ ಹೇಗೆ? ಗುರು ಪೂಜೆ ಅರಿದೊಡೆ ಲಿಂಗ ಪೂಜೆ ಬಿಡಲಾಗದೆಂದು ಚಂದ್ರಯ್ಯನವರ ತಪ್ಪನ್ನು ಅರಿವನ್ನುಂಟುಮಾಡುವರು – ಅದೊಂದು ದಿವ್ಯ ಪ್ರಸಂಗ.
ಎರಡನೆಯ ಪ್ರಸಂಗ
‘ಬೇಡುವ ಭಕ್ತರಿಲ್ಲದೆ ಬಡವನಾದೆನೆಂಬ’ ಬಸವಣ್ಣನವರು ‘ಅಹಂ’ ಭಾವನೆಯಿಂದ ಮಾತನಾಡಿರುತ್ತಾರೆ, ಆಗ ಮಾಚಿದೆವರು ಬಸವಣ್ಣನವರಿಗೆ ‘ ನೀವೊಬ್ಬರೇ ದಾನ ಮಾಡಲು ಹುಟ್ಟಿದ ದಾನಿಗಳು , ಉಳಿದೆಲ್ಲ ಭಕ್ತರು ಭಿಕಾರಿಗಳು, ದರಿದ್ರರೆ’ ? ಎಂದು ಪ್ರಶ್ನಿಸುತ್ತಾರೆ. ಮುಂದೆ ಎನ್ನ ಮಹಾನುಭಾವರ ಬಡತನದಿರವ ನಿನಗೆ ತೋರುವೆನೆಂದು ಪಾದದಿಂದ ನೀರನ್ನು ಚಿಮ್ಮಲು ಆ ನೀರು ಹನಿಗಳೆಲ್ಲ ಮುತ್ತು ರತ್ನಗಳಾದವು. ಹೀಗೆ ವಿನಯ, ಇಂದ್ರಿಯ ನಿಗ್ರಹ, ನಿರಹಂಕಾರಗಳು ಭಕ್ತಿಯ ಕುರುಹು ಎಂದು ತಿಳಿಸುತ್ತ ಅಹಂಕಾರ ನಿರ್ಮೂಲನೆಗೊಳಿಸಿದ.
ಮೂರನೆಯ ಪ್ರಸಂಗ
ಮತ್ತೊಂದು ಸಂದರ್ಭದಲ್ಲಿ ಮೇದರ ಕೇತಯ್ಯ ಬಿದಿರು ಕಡಿಯುವಾಗ ಕೆಳಗೆ ಬೀಳುತ್ತಾನೆ. ಎದೆಗೆ ಬಿದಿರು ಮೊಳೆ ಚುಚ್ಚಿ ಕೇತಯ್ಯ ಶಿವ ಸನ್ನಿಧಿ ಸೇರುತ್ತಾನೆ. ಆಗ ಬಸವಣ್ಣ ಮಾಚಯ್ಯನನ್ನು ಕರೆಸುವನು, ಮಾಚಯ್ಯ ಬಂದು ಶಿವಶರಣರ ಪ್ರಾಣವೇ ತನ್ನ ಪ್ರಾಣವೆಂದು ನಂಬಿದ ಬಸವಣ್ಣ ಇನ್ನೂ ಜೀವಂತವಾಗಿದ್ದು ತನ್ನ ವಚನ ಪಾಲಿಸಿಲ್ಲವೆಂದ. ಇದನ್ನರಿತ ಬಸವಣ್ಣ ಪ್ರಾಣ ಬಿಡುವನು. ಆ ಪ್ರಾಣ ಕೇತಯ್ಯನನ್ನು ಹಿಂಬಾಲಿಸುತ್ತದೆ. ಬಸವಣ್ಣನ ನಿಷ್ಠೆ ಮೆಚ್ಚಿದ ಮಾಚಯ್ಯ, ಶಿವನನ್ನು ಕುರಿತು ಕೆರಳಿ ನುಡಿದು ‘ಇಬ್ಬರ ‘ ಪ್ರಾಣಗಳನ್ನು ಶಿವನನ್ನು ಮರಳಿ ಪಡೆದನೆಂದು ತಿಳಿದು ಬರುತ್ತದೆ.
ನಡೆ-ನುಡಿಯಲ್ಲಿ ತಪ್ಪಿದ ವ್ಯಕ್ತಿ ಇಂಥವರೇ ಆಗಿರಲಿ ಆಚರಣೆ ಪ್ರಸಂಗ ಬಂದಾಗ ‘ದೇವರನ್ನೂ’ ಕೂಡಾ ಪ್ರಶ್ನಿಸುವ ಪ್ರವೃತ್ತಿ ಮಾಚಯ್ಯನದಾಗಿತ್ತು.
ಬಸವಣ್ಣ ಮಾಡಲಿಕೆ ಗುರುವಾಯಿತ್ತು.
ಬಸವಣ್ಣ ಮಾಡಲಿಕೆ ಲಿಂಗವಾಯಿತ್ತು.
ಬಸವಣ್ಣ ಮಾಡಲಿಕೆ ಜಂಗಮವಾಯಿತ್ತು.
ಬಸವಣ್ಣ ಮಾಡಲಿಕೆ ಪ್ರಸಾದವಾಯಿತ್ತು.
ಬಸವಣ್ಣ ಮಾಡಲಿಕೆ ಈರೇಳುಲೋಕವಾಯಿತ್ತು.
ಬಸವಣ್ಣನಿಂದಾದ ಕಲಿದೇವಯ್ಯ./೬೮೨ [1]
ಕಲ್ಯಾಣದ ಅನುಭವ ಮಂಟಪ
ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು. ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಬರುವವರಿಗೆ ಪರೀಕ್ಷಿಸಿ , ‘ಮಡಿ’ ಹಾಸಿ ಸ್ವಾಗತಿಸುವ ಕೆಲಸ ಅವರದಾಗಿತ್ತು. ಮಾಚಿದೇವರ ಪರೀಕ್ಷೆಗೊಳಪಡದ ಹೊರತು ಕಲ್ಯಾಣಪುರ ಪ್ರವೇಶದ ಪ್ರಮಾಣ ಪತ್ರ ಹೊರಗಿನಿಂದ ಬರುವವರಿಗೆ ಸಿಗುತ್ತಿರಲಿಲ್ಲವೆಂಬುದು ಮಾಚಯ್ಯನ ಮಹಾ ಘನತೆಗೆ ಸಾಕ್ಷಿಯಾಗಿದೆ…
ಗಣಾಚಾರ ಸಂಪನ್ನ ವೀರ ಶರಣ – ಮಡಿವಾಳ ಮಾಚಿದೇವ
ಹಿಪ್ಪರಿಗೆಯಿಂದ ಕಲ್ಯಾಣಕ್ಕೆ ನಡೆದು ಬರುವಾಗ ಭೀಮರತಿ ಹೊಳೆ ಪ್ರವಾಹದಿಂದ ಕಟ್ಟಿರಲು, ಹರಿಗೋಲ ಹಂಗಿಲ್ಲದೆ ಶಿವನನ್ನು ನೆನೆಯಲು ನದಿ ಇಬ್ಬಾಗವಾಯ್ತು. ಆ ಮಾರ್ಗ ಮಧ್ಯದಿಂದ ಮಾಚಿ ತಂದೆ ನಡೆದು ಬರುತ್ತಾರೆ.
ಬಿಜ್ಜಳ ತನ್ನ ಬಟ್ಟೆಯನ್ನು ಮಡಿ ಮಾಡಿಸಿಕೊಡಲು ಬಸವಣ್ಣನಿಗೆ ದುಂಬಾಲು ಬಿದ್ದ. ಮಡಿವಾಳಯ್ಯ ಪರಮ ಭಕ್ತ , ಅವನನ್ನು ಅಗಸನೆಂದು ಭಾವಿಸದಿರಲು ಬಸವಣ್ಣ ತಿಳಿ ಹೇಳಿದ , ಅದನ್ನು ಲೆಕ್ಕಿಸದೆ ಮಾಸಿದ ಬಟ್ಟೆಗಳ ಗಂಟನ್ನು ಮಡಿ ಮಾಡಲು ಕಳಿಸಿದ. ಭವಿ ಬಿಜ್ಜಳನ ಮೈಲಿಗೆ ಬಟ್ಟೆಯ ಗಂಟನ್ನು ಕಂಡ ಮಡಿವಾಳಯ್ಯ ಕೋಪಗೊಂಡು ಸಿಟ್ಟಿನಿಂದ ನೋಡಲು ಆ ಕ್ಷಣದಲ್ಲಿ ಗಂಟು ಉರಿದು ಹೋಯ್ತು.
ಇದು ಮಡಿವಾಳಯ್ಯನ ‘ಅಹಂಕಾರವೆಂದು’ ಭಾವಿಸಿದ ಬಿಜ್ಜಳ ಅವರನ್ನು ಸೆರೆ ಹಿಡಿದು ತರಲು ಕುಂಟ -ಕುರುಡರ ಪಡೆಯೊಂದನ್ನು ಕಳುಹಿಸಿದ. ಮಡಿವಾಳಯ್ಯ ತನ್ನ ಶಕ್ತಿಯಿಂದ ಕುರುಡರಿಗೆ ಕಣ್ಣು ಕಾಣುವಂತೆ ಮತ್ತು ಕುಂಟರಿಗೆ ಕಾಲು ಬರುವಂತೆ ಮಾಡಿ ಅಂಗ ಸೌಷ್ಟ ವರನ್ನಾಗಿ ಮಾಡಿ ಕಳುಹಿಸಿದ. ಇದರಿಂದ ಉರಿದೆದ್ದು ಬಿಜ್ಜಳ ‘ಮದೋನ್ಮತ್ತ’ ಆನೆಯನ್ನ ಮಾಚಯ್ಯನ ಮೇಲೆ ಹರಿ ಹಾಯಲು ಬಿಟ್ಟ. ಸೈನಿಕರ ತುಕಡಿಯೊಂದನ್ನೂ ಕಳುಹಿಸಿದ. ಆನೆ ಹಾಗೂ ಅವರನ್ನೆಲ್ಲ ಸದೆ ಬಡಿದು ಜಯ ಶಾಲಿಯಾದ. (ಬಹುತೇಕ ಮಡಿವಾಳ ಬಂಧುಗಳ ಮನೆಯಲ್ಲಿ ಈ ಸನ್ನಿವೇಶದ ಫೋಟೋ ಇರುವುದು – ಆದ್ರೆ ಬಹು ಜನರಿಗೆ ಅದರ ಹಿನ್ನೆಲೆ ಗೊತ್ತಿಲ್ಲ..)ಕಾಲಾಂತರದಲ್ಲಿ ಬಿಜ್ಜಳನಿಗೆ ಮಾಚಿದೇವರ ಉನ್ನತ ಮಹಿಮೆ ತಿಳಿದು ತನ್ನ ತಪ್ಪಿನ ಅರಿವಾಗಿ ಬಿಜ್ಜಳ ಶರಣಾಗತನಾಗುವನು…
ಮುಂದೆ ‘ಕಲ್ಯಾಣ ಕ್ರಾಂತಿ’ಯ ಸಂದರ್ಭದಲ್ಲಿ ಮಾಚಿದೆವರು ಹೊತ್ತ ‘ಜವಾಬ್ಧಾರಿ’ ಗುರುತರವಾದುದು. ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು , ಚನ್ನ ಬಸವಣ್ಣ , ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ ‘ಭೀಮ ರಕ್ಷೆಯಾಗಿ’ ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ,ತಡ ಕೋಡ, ಮೂಗ ಬಸವ, ಕಾತರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿದ ಸಾಹಸಿ ಮಾಚಯ್ಯ. ಉಳವಿಗೆ ಹೋಗುತ್ತಿರುವಾಗಲೆ ಮಾರ್ಗ ಮಧ್ಯದ ಮುರಗೋಡದ ಹತ್ತಿರವಿರುವ ಕಾರಿಮಣಿ (ಕಾರಿಮನೆ)ಯಲ್ಲಿ ಲಿಂಗೈಕ್ಯರಾದರು. ಇಂದಿಗೂ ಅಲ್ಲಿ ಅವರ ಗದ್ದುಗೆ ಕಾಣಬಹುದು.
‘ಕಲಿದೇವರದೇವ’ ಅಂಕಿತದಲ್ಲಿ ಬರೆದ ೩೫೪ ವಚನಗಳು ಈಗ ದೊರಿತಿವೆ. ಅವುಗಳಲ್ಲಿ ಗಣಾಚಾರ ನಿಷ್ಠೆ, ಡಾಂಭಿಕತೆ, ಕರ್ಮಠತನ, ಕ್ಷುದ್ರದೈವಾರಾಧನೆ, ಸ್ಥಾವರಲಿಂಗ ಪೂಜೆಗಳನ್ನು ಕುರಿತ ನಿಷ್ಠುರ ಟೀಕೆ ಪ್ರಮುಖವಾಗಿ ಕಂಡುಬರುತ್ತದೆ.
ಉಡಿಯ ಲಿಂಗವ ಬಿಟ್ಟು,
ಗುಡಿಯ ಲಿಂಗಕ್ಕೆ ಶರಣೆಂಬ
ಮತಿಭ್ರಷ್ಟರನೇನೆಂಬೆನಯ್ಯಾ
ಕಲಿದೇವರದೇವ. /೫೧೯ [1]
ಊರ ಕಲ್ಲಿಗೆ ಉರದ ಲಿಂಗವಡಿಯಾಗಿ ಬೀಳುವ
ಕ್ರೂರಕರ್ಮಿಗಳೆನೇನೆಂಬೆನಯ್ಯಾ ಕಲಿದೇವಯ್ಯ./೫೨೨ [1]
ಪಂಚಭೂತಗಳು , ಚಂದ್ರ, ಸೂರ್ಯ, ಆತ್ಮ ಇವರಾರೂ ದೈವವಲ್ಲ, ಬಸವಣ್ಣನೊಬ್ಬನೇ ದೈವವೆಂದು ಹೇಳುವಲ್ಲಿ ಬಸವಣ್ಣನೊಂದಿಗಿನ ಒಂದು ವಚನದಲ್ಲಿ ಪರಮಾತ್ಮನನ್ನು ಸಂಭೋದಿಸುತ್ತ ನಿಮ್ಮ ಧ್ಯಾನದಲ್ಲಿರಿಸಲೊಲ್ಲದೆ ಬಸವಣ್ಣನ ಧ್ಯಾನದಲ್ಲಿರಿಸುಯ್ಯ ಎನ್ನನೂ ಎಂದಿರುವನು. ಅವನ ಸಂಬಂದವನ್ನು ಸ್ವಷ್ಟಪಡಿಸುವನು. ಕಲ್ಯಾಣದ ಬಗೆಗೆ ಮನತುಂಬಿ ಮಾತನಾಡುವ ಮಾಛಿದೇವ ಇಲ್ಲಿ ಬಸವಣ್ದಣನೂ ನಾನೂ ಕೂಡಿ ಹುದುಲಿರ್ದೆವು ಎನ್ನುವನು ಲಿಂಗವಂತನಾದಮೇಲೆ ತನ್ನ ಪೂರ್ವಕಾಲದ ಭವಿಗಲಾದ ತಂದೆ-ತಾಯಿ ಬಂಧು-ಬಳಗ, ಸುತ ಸೋದರರು-ಇವರ ಮೋಹ ಬೊಟ್ಟಲ್ಲದೆ ಶಿವಭಕ್ತಿಯ ನೆಲೆ ಸಿಕ್ಕದು ಎಂದಿರುವನು, ವೇಷಧಾರಿಗಳನ್ನು ಸೂಳೆವಾರು ಎಂದು ವ್ಯಂಗ್ಯವಾಡಿರುವನು. ಸೂಳೆ, ಸುರೆ, ನಾಯಿ, ಬೆಕ್ಕು,ಅನ್ಯದೈವ, ತಾಳೆ ಹಣ್ಣು-ಇವುಗಳ ಸಂಬಂದವಿರುವವನು ಭಕ್ತನಲ್ಲ ಶಿವನದ್ರೋಹಿ, ಗುರುದ್ರೋಹಿ, ಎಂದಿರುವನು. ಒಂದು ವಚನದಲ್ಲಿ ಕೆಂಬಾವಿ ಭೋರಣ್ಣ ಹಿಂದೆ ಲಿಂಗಗಳು ಹೋದ ಪವಾಡರನ್ನೂ ಕೊಂಡುಗುಳಿ ಕೇಶಿರಾಜನ ಇಷ್ಟಲಿಂಗವು ಹೊಳಯ ನೀರಿನಲ್ಲಿ ಮುಳುಗಿದ ಪವಾಡವನ್ನೂ ಹೇಳಿರುವನು. ಕೊಲ್ಲಲಾಗದು ನಿಂದಿಸಲಾಗದು, ಯಾರನ್ನು ಮಾರ್ಮಿಕವಾಗಿ ನುಡಿಯಲಾಗದು, ಪರಸ್ತ್ರಿಯರನ್ನು ಬಯಸಬಾರದು-ಹೀಗೆ ಮಾಡಿದರೆ ಕೈಲಾಸ ಅಂಗೈ ಮೇಲಣ ನೆಲ್ಲಿಕಾಯಿ ಎನ್ನುವನು.