Categories
ಶರಣರು / Sharanaru

ಲದ್ದೆಯ ಸೋಮಯ್ಯ/ಲದ್ದೆಯ ಸೋಮ

ಅಂಕಿತ: ಲದ್ದೆಯ ಸೋಮ
ಕಾಯಕ: ಹುಲ್ಲನ್ನು ಕೊಯ್ದು ಪಿಂಡಿ ಮಾಡಿ ಮಾರುವುದು

ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ ?

ಈತ ಲದ್ದೆ ಗ್ರಾಮಕ್ಕೆ ಸೇರಿದವನು. ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಇಂದಿನ ಲಾಧಾ ಗ್ರಾಮವಿದಾಗಿರಬೇಕೆಂದು ಊಹಿಸಲಾಗಿದೆ. ಬನವಾಸಿಯ ಮಧುಕೇಶ್ವರ ದೇವಸ್ಥಾನದ ಶವೋತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲಿರುವ ಶರಣರ ಶಿಲ್ಪಗಳಲ್ಲಿ ಈತನ ವಿಗ್ರಹವೂ ಇದೆ. ಕಾಲ ೧೨೦೦. ತನ್ನ ಹೆಸರನ್ನೇ (ಲದ್ದೆಯ ಸೋಮ) ಅಂಕಿತವನ್ನಾಗಿ ಮಾಡಿಕೊಂಡ ಈತನ ಒಂದು ವಚನ ಮಾತ್ರ ದೊರೆತಿದೆ. ಅದರಲ್ಲಿ ಸ್ವಕಾಯಕವ ಮಾಡಿ, ದೇವರ ಹಂಗಿಲ್ಲದೆ ಧೈರ್ಯದಿಂದ ಬದುಕಬೇಕೆಂಬ ಬದುಕಿನ ವಾಸ್ತವವನ್ನು ತುಂಬ ನಿಷ್ಠುರ ಮಾತುಗಳಿಂದ ತಿಳಿಸುತ್ತಾನೆ.