Categories
e-ದಿನ

ಏಪ್ರಿಲ್-12

ಪ್ರಮುಖಘಟನಾವಳಿಗಳು:

1606: ಯೂನಿಯನ್ ಧ್ವಜವನ್ನು ಇಂಗ್ಲಿಷ್ ಮತ್ತು ಸ್ಕಾಟಿಷ್ ನೌಕೆಗಳ ಧ್ವಜವನ್ನಾಗಿ ಅಂಗೀಕರಿಸಲಾಯಿತು.

1801: ರಣಜಿತ್ ಸಿಂಗ್ ತನ್ನನ್ನು ಪಂಜಾಬಿನ ಮಹಾರಾಜ ಎಂದು ಘೋಷಿಸಿಕೊಂಡ. ಆತ ಸಿಖ್ ಗುರುಗಳ ಹೆಸರಿನಲ್ಲಿ ನಾಣ್ಯಗಳನ್ನು ಟಂಕಿಸಿದ್ದಲ್ಲದೆ ಸಿಖ್ ಕಾಮನ್ ವೆಲ್ತ್ ಎಂಬ ಹೆಸರಿನಲ್ಲಿ ತನ್ನ ಆಡಳಿತವನ್ನು ಮುಂದುವರೆಸಿದ.

1888: ಫ್ರೆಂಚ್ ವೃತ್ತಪತ್ರಿಕೆಯೊಂದು ಡೈನಮೈಟ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಮೃತರಾದ ಸುದ್ದಿ ಪ್ರಕಟಿಸಿತು. ಜನರ ಜೀವ ತೆಗೆಯುವ ಸ್ಫೋಟಕಗಳನ್ನು ಶೋಧಿಸಿದ್ದಕ್ಕೆ ಅವರನ್ನು ಪತ್ರಿಕೆ ‘ಸಾವಿನ ವರ್ತಕನ ನಿಧನ’ ಎಂದು ವರ್ಣಿಸಿ ಈ ಸುದ್ದಿ ಪ್ರಕಟಿಸಿತ್ತು. ಆದರೆ ನಿಜವಾಗಿ ಸತ್ತದ್ದು ಆಲ್ ಫ್ರೆಡ್ ಸಹೋದರ ಲುಡ್ವಿಗ್ ನೊಬೆಲ್. ಪತ್ರಿಕೆ ತಮ್ಮ ಬಗ್ಗೆ ಬರೆದ ಈ ವರದಿಯಿಂದ ವಿಚಲಿತರಾದ ಆಲ್ಫ್ರೆಡ್ ತಮ್ಮ ಬಗ್ಗೆ ಉಂಟಾದ ಸಾರ್ವಜನಿಕ ಅಭಿಪ್ರಾಯ ಬದಲಿಸಲು ಇಚ್ಛಿಸಿದರು. ಈ ಚಿಂತನ ಮಂಥನದಲ್ಲಿ ‘ನೊಬೆಲ್ ಪ್ರಶಸ್ತಿ’ ಸೃಷ್ಟಿಗೊಂಡಿತು.

1945: ಅಮೆರಿಕದ ಅಧ್ಯಕ್ಷರಾದ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ನಿಧನರಾದದ್ದರಿಂದ ಉಪಾಧ್ಯಕ್ಷರಾಗಿದ್ದ ಹ್ಯಾರಿ ಟ್ರೂಮನ್ ಅವರು ಅಧ್ಯಕ್ಷರಾದರು.

1948: ಪಂಡಿತ್ ಜವಾಹರಲಾಲ್ ನೆಹರೂ ಅವರು ಒರಿಸ್ಸಾದ ನೂತನ ರಾಜಧಾನಿ ಭುವನೇಶ್ವರದಲ್ಲಿ ಹಿರಾಕುಡ್ ಅಣೆಕಟ್ಟಿಗೆ ಶಂಕುಸ್ಥಾಪನೆ ಮಾಡಿದರು.

1955: ಡಾ. ಜೋನಾಸ್ ಸಲ್ಕ್ ಅವರು ಸಿದ್ಧಪಡಿಸಿದ ಪೋಲಿಯೋ ಲಸಿಕೆಯನ್ನು ಕ್ಷೇಮಕರ ಮತ್ತು ಪರಿಣಾಮಕಾರಿ ಎಂದು ಘೋಷಿಸಲಾಯಿತು.

1961: ರಷ್ಯದ ಯೂರಿ ಗಗಾರಿನ್ ಹೊರ ಆಗಸಕ್ಕೆ ಪಯಣಿಸಿದ ಪ್ರಪ್ರಥಮ ಮಾನವರೆನಿಸಿದರು. ‘ವೋಸ್ಟೋಕ್ 1’ ಮೂಲಕ ಪಯಣಿಸಿದ್ದ ಅವರು 108 ನಿಮಿಷಗಳ ಕಾಲ ಬಾಹ್ಯಾಕಾಶದಲ್ಲಿ ತೇಲಾಡಿದರು.

1981: ಅಮೆರಿಕದ ಎಸ್.ಟಿ.ಎಸ್-1 ಗಗನ ವಾಹನವಾದ ‘ಕೊಲಂಬಿಯಾ’ ಉಡ್ಡಯನಗೊಂಡಿತು.

1990: ಜಿಮ್ಮಿ ಗ್ಯಾರಿ ಅವರ ‘20ನೇ ಶತಮಾನದ ಡೈನಾಸರಸ್’ ಪ್ರದರ್ಶನವು ವಾಷಿಂಗ್ಟನ್ ನಗರದ ‘ಸ್ಮಿತ್ಸೋನಿಯನ್ ನ್ಯಾಶನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ’ ಆಶ್ರಯದಲ್ಲಿ ನಡೆಯಿತು. ಇವರು ಅಲ್ಲಿ ಆಹ್ವಾನಿತಗೊಂಡು ಏಕವ್ಯಕ್ತಿಪ್ರದರ್ಶನ ನೀಡಿದ ಏಕಮಾತ್ರ ಶಿಲ್ಪಿ ಎನಿಸಿದ್ದಾರೆ.

1992: ಯೂರೋ ಡಿಸ್ನಿ ರೆಸಾರ್ಟ್ ಅಧಿಕೃತವಾಗಿ ‘ಯೂರೋ ಡಿಸ್ನಿಲ್ಯಾಂಡ್’ ಎಂ ಥೀಮ್ ಪಾರ್ಕ್ ಆಗಿ ಪ್ರಾರಂಭಗೊಂಡಿತು. ಮುಂದೆ ಅದು ಡಿಸ್ನಿಲ್ಯಾಂಡ್ ಪ್ಯಾರಿಸ್ ಎಂದು ಹೆಸರು ಬದಲಿಸಿಕೊಂಡಿತು.

2006: ಕರ್ನಾಟಕ ಸರ್ಕಾರವು 2006ನೇ ಸಾಲಿನ ಪ್ರತಿಷ್ಠಿತ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘರಾಜೇಂದ್ರ ಶರಣರನ್ನು ಆಯ್ಕೆ ಮಾಡಿತು.

2007: ಸ್ವದೇಶೀ ನಿರ್ಮಿತ ‘ಅಗ್ನಿ- 3′ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯು ಒರಿಸ್ಸಾ ಕರಾವಳಿಯ ವ್ಹೀಲರ್ ದ್ವೀಪದಲ್ಲಿ ಯಶಸ್ವಿಯಾಗಿ ನೆರವೇರಿತು. ‘ಅಗ್ನಿ’ ಸರಣಿಯಲ್ಲೇ ಅತ್ಯಂತ ಶಕ್ತಿಶಾಲಿಯಾಗಿರುವ ಈ ಅಣ್ವಸ್ತ್ರ ವಾಹಕ ಕ್ಷಿಪಣಿಯು 3500 ಕಿ.ಮೀ. ದೂರದಲ್ಲಿರುವ ವೈರಿ ನೆಲೆಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ.

ಪ್ರಮುಖಜನನ/ಮರಣ:

1884: ಜರ್ಮನಿಯ ವೈದ್ಯವಿಜ್ಞಾನಿ ಮತ್ತು ಜೈವಿಕವಿಜ್ಞಾನಿ ಒಟ್ಟೋ ಮೆಯೇರ್ಹಾಫ್ ಅವರು ಪ್ರಸ್ಸಿಯಾ ಸಾಮ್ರಾಜ್ಯಕ್ಕೆ ಸೇರಿದ್ದ ಹ್ಯಾನ್ನೋವರ್ ಎಂಬಲ್ಲಿ ಜನಿಸಿದರು. ‘ಗ್ಲೈಕೋಲಿಸಿಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1922 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪುರಸ್ಕಾರ ಸಂದಿತ್ತು.

1903: ಡಚ್ ಅರ್ಥಶಾಸ್ತ್ರಜ್ಞರಾದ ಜಾನ್ ಟಿನ್ಬೆರ್ಗೆನ್ ಅವರು ನೆದರ್ಲ್ಯಾಂಡ್ಸ್ ದೇಶದ ‘ದಿ ಹೇಗ್’ ಎಂಬಲ್ಲಿ ಜನಿಸಿದರು. ಇವರಿಗೆ 1969 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪ್ರಶಸ್ತಿ ಸಂದಿತು.

1917: ಪ್ರಸಿದ್ಧ ಭಾರತೀಯ ಕ್ರಿಕೆಟ್ ಆಟಗಾರ್ ಮುಲವಂತರಾಯ್ ಹಿಮ್ಮತ್ ಲಾಲ್ ವಿನೂ ಮಂಕಡ್ ಅವರು ಜಾಮ್ ನಗರದಲ್ಲಿ ಜನಿಸಿದರು. ಒಂದೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳಿಕೆಯೊಂದಿಗೆ ಶತಕವನ್ನೂ ಸಿಡಿಸಿದ ಮೊದಲ ಭಾರತೀಯ ಆಟಗಾರರಲ್ಲದೆ, ಪಂಕಜ್ ರಾಯ್ ಅವರೊಂದಿಗೆ ಪ್ರಥಮ ವಿಕೆಟ್ಟಿಗೆ 413 ರನ್ನುಗಳ ಬೃಹತ್ ದಾಖಲೆ ಸ್ಥಾಪಿಸಿದ ಆಟಗಾರರೂ ಆಗಿದ್ದಾರೆ. ಈ ದಾಖಲೆ 52 ವರ್ಷಗಳ ಕಾಲ ಭೇದಿತಗೊಳ್ಳದೆ ಉಳಿದಿತ್ತು.

1922: ನಾಟಕರಂಗದ ಆತ್ಮೀಯರಲ್ಲಿ ‘ಐನೋರು’ ಎಂದೇ ಪ್ರಸಿದ್ಧರಾಗಿದ್ದ ಖ್ಯಾತ ರಂಗಭೂಮಿ ನಟ ಎಸ್. ಎಂ. ವೀರಭದ್ರಪ್ಪ ಅವರು ಚಿತ್ರದುರ್ಗ ಜಿಲ್ಲೆಯ ಮಾರನಾಯಕನ ಹಳ್ಳಿಯಲ್ಲಿ ಜನಿಸಿದರು. ಹಲವಾರು ಪ್ರಸಿದ್ಧ ವೃತ್ತಿ ರಂಗಭೂಮಿಗಳಲ್ಲಿ ಪ್ರಮುಖ ಹೆಸರಾಗಿದ್ದ ಇವರು 1966ರ ವರ್ಷದಲ್ಲಿ ನಿಧನರಾದರು.

1943: ಹದಿನಾರನೆಯ ಲೋಕಸಭಾಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಮಹಾಜನ್ ಅವರು ಮಹಾರಾಷ್ಟ್ರದ ಚಿಪ್ಲುನ್ ಎಂಬಲ್ಲಿ ಜನಿಸಿದರು. ಎಂಟು ಬಾರಿ ಲೋಕಸಭೆಗೆ ಆಯ್ಕೆಯಾದ ಸಾಧನೆ ಮಾಡಿರುವ ಮೂವರು ಗಣ್ಯರಲ್ಲಿ ಒಬ್ಬರೆನಿಸಿರುವ ಇವರು ಲೋಕಸಭೆಯನ್ನು ಅತ್ಯಧಿಕ ಕಾಲಗಳವರೆಗೆ ಪ್ರತಿನಿಧಿಸಿರುವ ಮಹಿಳೆ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ.

1948: ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ತಮ್ಮ ಧ್ವನಿ ಮತ್ತು ಹಾವಭಾವ ವೈವಿಧ್ಯಗಳಿಂದ ಪ್ರಸಿದ್ಧಿ ಪಡೆದ ಧೀರೇಂದ್ರ ಗೋಪಾಲ್ ಅವರು ಹೊಳೆನರಸೀಪುರದ ಜೋಡಿಗುಬ್ಬಿ ಗ್ರಾಮದಲ್ಲಿ ಜನಿಸಿದರು. ಡಿಸೆಂಬರ್ 25, 2000ವರ್ಷದಂದು ಈ ಲೋಕವನ್ನಗಲಿದ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿದ್ದವು.

1952: ಪ್ರಸಿದ್ಧ ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆಯ ಕಲಾವಿದೆ, ವಿನ್ಯಾಸಕಿ, ನಿರ್ದೇಶಕಿ ವೈಶಾಲಿ ಕಾಸರವಳ್ಳಿ ಗುಲ್ಬರ್ಗದಲ್ಲಿ ಜನಿಸಿದರು. ಹಯವದನ ಅಭಿನಯಕ್ಕಾಗಿ ಅಖಿಲ ಭಾರತ ವಿಮರ್ಶಕ ಒಕ್ಕೂಟದಿಂದ ರಾಷ್ಟ್ರ ಮಟ್ಟದ ಶ್ರೇಷ್ಠ ರಂಗನಟಿ ಪ್ರಶಸ್ತಿ, ಆಕ್ರಮಣದ ಚಿತ್ರಕ್ಕಾಗಿ ಶ್ರೇಷ್ಠ ನಟಿ ರಾಜ್ಯ ಪ್ರಶಸ್ತಿ, ಆಕ್ರಮಣದ ವಿನ್ಯಾಸಕ್ಕಾಗಿ ರಾಷ್ಟ್ರ ಪ್ರಶಸ್ತಿ, ತಾಯಿ ಸಾಹೇಬದ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ, ಕ್ಷಮಯಾ ಧರಿತ್ರಿ ಟಿ ವಿ ಧಾರಾವಾಹಿಗಾಗಿ ರಾಷ್ಟ್ರಮಟ್ಟದ ಪ್ರಶಂಸಾ ಪತ್ರ, ರಾಜ್ಯ ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳಿಗೆ ಪಾತ್ರರಾಗಿದ್ದ ಇವರು 2010, ಸೆಪ್ಟೆಂಬರ್ 27ರಂದು ನಿಧನರಾದರು.

1906: ಪ್ರಸಿದ್ಧ ಸಂಸ್ಕೃತ ಮತ್ತು ಬಂಗಾಳಿ ವಿದ್ವಾಂಸ ಮಹೇಶ್ ಚಂದ್ರ ನ್ಯಾಯರತ್ನ ಭಟ್ಟಾಚಾರ್ಯ ಅವರು ನಿಧನರಾದರು.

1912: ಅಮೆರಿಕನ್ ರೆಡ್ ಕ್ರಾಸ್ ಸ್ಥಾಪಕಿ, ಮಾನವತಾ ಹೃದಯಿ, ದಾದಿ ಕ್ಲಾರಾ ಬಾರ್ಟನ್ ಅವರು ಬಳಿಯ ಗ್ಲೆನ್ ಏಕೋ ಎಂಬಲ್ಲಿ ಜನಿಸಿದರು.

1945: ಅಮೆರಿಕದಲ್ಲಿ ಸತತವಾಗಿ ನಾಲ್ಕು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ 1933ರಿಂದ 1945ರ ಈದಿನದವರೆವಿಗೂ ಅಧಿಕಾರದಲ್ಲಿದ್ದ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಅವರು ಜಾರ್ಜಿಯಾದ ವಾರ್ಮ್ ಸ್ಪ್ರಿಂಗ್ಸ್ ಎಂಬಲ್ಲಿ ನಿಧನರಾದರು.

1997: ಅಮೆರಿಕದ ವೈದ್ಯವಿಜ್ಞಾನಿ ಜಾರ್ಜ್ ವಾಲ್ಡ್ ಅವರು ಕೇಂಬ್ರಿಡ್ಜಿನಲ್ಲಿ ನಿಧನರಾದರು. ‘ಪಿಗ್ಮೆಂಟ್ಸ್ ಇನ್ ದಿ ರೆಟಿನ’ ಕುರಿತಾದ ಸಂಶೋಧನೆಗಾಗಿ ಇವರಿಗೆ 1967 ವರ್ಷದ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

2001: ನಗೆಮೊಗವಾದ ‘ಸ್ಮೈಲಿ’ ರೂಪಿಸಿದ ಅಮೆರಿಕದ ವಾಣಿಜ್ಯ ಕಲೆಗಾರ ಹಾರ್ವೆ ಬಾಲ್ ಜನಿಸಿದರು.

2006: ಕನ್ನಡ ಚಿತ್ರರಂಗದ ಮಹಾನ್ ನಟ, ಗಾಯಕ, ದಾದಾ ಸಾಹೇಬ್ ಫಾಲ್ಕೆ ವಿಜೇತ, ಪದ್ಮಭೂಷಣ ಪುರಸ್ಕೃತ ಡಾ. ರಾಜ್ ಕುಮಾರ್ ಇಂದು ತಮ್ಮ 77ನೆಯ ವಯಸ್ಸಿನಲ್ಲಿ ನಿಧನರಾದರು. ಕನ್ನಡ ರಂಗಭೂಮಿಯಿಂದ ಬಂದವರಾಗಿ ಕನ್ನಡ ಚಲನಚಿತ್ರರಂಗದಲ್ಲಿ ನಿರಂತರವಾಗಿ ತಮ್ಮ ಶಿಸ್ತು, ಪ್ರತಿಭೆ, ತೇಜಸ್ಸಿನಿಂದ ಜನಪ್ರಿಯತೆಯ ಮುಂಚೂಣಿಯಲ್ಲಿದ್ದ ಡಾ. ರಾಜ್ ಕುಮಾರ್ ಅವರು ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಗಳಾಗಿ ಹಾಗೂ ಕನ್ನಡ ಪರಧ್ವನಿಯಾಗಿಯೂ ಪ್ರಸಿದ್ಧರಾಗಿದ್ದರು.

2009: ಭಾರತ ಅಥ್ಲೆಟಿಕ್ ಫೆಡರೇಷನ್‌ ಅಧ್ಯಕ್ಷ ಪದ್ಮಭೂಷಣ ಸರ್ದಾರ್ ಉಮ್ರಾವೊ ಸಿಂಗ್ (89) ಅವರು ಜಲಂಧರ್ ಪಟ್ಟಣದಲ್ಲಿ ನಿಧನರಾದರು. ಐಎಎಎಫ್ ಕೌನ್ಸಿಲ್ ಸದಸ್ಯರು, ಏಷ್ಯನ್ ಅಥೆಟ್ಲಿಕ್ ಫೆಡರೇಷನ್‌ನ ಸಂಸ್ಥಾಪಕ ಅಧ್ಯಕ್ಷ, ಭಾರತ ಒಲಿಂಪಿಕ್ ಸಂಸ್ಥೆಯ ಹಿರಿಯ ಸದಸ್ಯರೂ ಆಗಿದ್ದ ಸಿಂಗ್ ಅವರಿಗೆ 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ತೋರಿದ ಸಾಧನೆಗಾಗಿ ಭಾರತ ಸರ್ಕಾರದ ಪದ್ಮಭೂಷಣ ಗೌರವ ಸಂದಿತ್ತು.

2012: ಪ್ರಸಿದ್ಧ ಬಂಗಾಳಿ ಕವಿ, ನಾಟಕಕಾರ, ರಂಗಕರ್ಮಿ, ಚಲನಚಿತ್ರ ಸಾಹಿತಿ ಮೋಹಿತ್ ಚಟ್ಟೋಪಾಧ್ಯಾಯ ನಿಧನರಾದರು.