ರಾಗ ಸೌರಾಷ್ಟ್ರ ತ್ರಿವುಡೆತಾಳ
ತರುಣ ಕೇಳ್ ನಿನ್ನವ್ವೆ ಕುಂತಿಯು | ಬರುವಳಸ್ತ್ರವ ಬೇಡುವರೆ ಸುರ |
ವರಗೆ ಕವಚವ ಹಿಂದೆ ಕೊಟ್ಟಿಹ | ತೆರದಿ ನೀನು || ೩೫೨ ||
ಭ್ರಾಂತಿಗೊಳಬೇಡೆನುತ ಕುವರನ | ಸಂತವಿಸಿ ರವಿ ಮರಳಲಿತ್ತಲು ||
ಕುಂತಿ ಬಂದಳು ಮಗನ ಬಳಿಗ | ತ್ಯಂತ ಮುದದಿ || ೩೫೩ ||
ಕಂಡು ನಮಿಸಿದ ತಾಯಿಯಂಘ್ರಿಗೆ | ದಂಡದಂತಿರೆ ಮಗನೆ ಬಾ ಬಾ ||
ಗಂಡುಗಲಿ ಬಾರೆನುತಲೆತ್ತಿದಳ್ | ಮಂಡೆಯನ್ನು || ೩೫೪ ||
ಹಣೆಯೊಳಾಸ್ಯವನಿರಿಸಿ ತಳ್ಕಿಸ | ಲನಿಬರಿಗೆ ನಯನಾಂಬು ತುಳುಕಲು ||
ವನಿತೆವೇಷದಿ ಗಂಗೆ ಬರಲಾ | ಕ್ಷಣದಿ ಕಂಡು || ೩೫೫ ||
ಅಘವಿನಾಶೆಗೆ ನಮಿಸಲೀರ್ವರ | ನೆಗಹಿ ಪಾಂಡವ ಜನನಿ ಹಸ್ತದಿ |
ಮಗನನೊಪ್ಪಿಸಿಕೊಟ್ಟು ನುಡಿದಳು | ಸುಗುಣೆಯೊಡನೆ || ೩೫೬ ||
ಭಾಮಿನಿ
ಕುಂತಿ ಕೇಳೌ ನಿನ್ನ ಪುತ್ರನ |
ನಿಂತುದಿನ ಕಾದಿರ್ದೆನಿಂದಿಗೆ |
ಸಂತು ನಾ ನಿನಗೆಂದ ಭಾಷೆಗಳೀ ಕುಮಾರಕನ ||
ಮುಂತೆ ಸಲಹಿಕೊಳೆನುತ ತೆರಳೆ ಕೃ |
ತಾಂತಸಹಜನುಸಿರ್ದ ನೀವ್ ಬಂ |
ದಂತರಂಗವಿದೇನು ಬೆಸಸೆಲೆ ತಾಯೆ ತನಗೆಂದ || ೩೫೭ ||
ರಾಗ ಸಾಂಗತ್ಯ ರೂಪಕತಾಳ
ಚಿಣ್ಣ ಕೇಳೆನಗೆ ನೀ ಹಿರಿಯ ನಂದನನಾಗಿ | ನಿನ್ನನುಜರಿಗರಿಯಾದ ||
ದುರ್ನೀತಿವಂತನ ಮರೆಹೊಕ್ಕು ಬದುಕುವು | ದಿನ್ನಾವ ನೀತಿಯೊ ಕಂದ || || ೩೫೮ ||
ಬಲು ಪರಾಕ್ರಮಶಾಲಿಯಾಗಿ ನೀನನ್ಯರಿ | ಗಳುಕುವ ವಿಧಿಯು ತಾನೇಕೆ ||
ಇಳೆಯಾಧಿಪತ್ಯವ ಕೈಗೊಂಡು ಸಹಜರ | ಸಲಹಿಕೋ ನೀನೆಂದಳಾಕೆ || ೩೫೯ ||
ಎನಲು ಮಿತ್ರಜನೆಂದ ನಿಮಗೆ ನಾ ಚೊಚ್ಚಲ | ತನಯನಹುದು ತಾಯೆ ನಿಮ್ಮ ||
ತನುಜರ್ಗೆ ಜ್ಯೇಷ್ಠನಾಗಿಹೆ ಪರರೋಲಗ | ವನುಕರಿಸಲು ಬಾರದಮ್ಮ || ೩೬೦ ||
ನಿನ್ನಣುಗರು ಪಗೆಗಳು ತನಗಹಿತರು | ಎನ್ನುವ ನುಡಿಯು ವಿವೇಕ ||
ಭಿನ್ನವಿಲ್ಲದೆ ರಾಜ್ಯವಾಳುವೆನೆಂದರೆ | ಎನ್ನ ನಿಂದಿಪುದು ಮೂರ್ಲೋಕ || ೩೬೧ ||
ಪೋಷಿಸಿದಧಿಪಗಾಪತ್ತಿನ ವೇಳೆಲಿ | ಮೋಸವ ಮಾಡಿ ನಾನಿನ್ನು ||
ಏಸು ದಿನವು ಬಾಳಿಕೊಂಡಿರಬೇಕವ್ವ | ಹೇಸಳೆ ಜಯಲಕ್ಷ್ಮಿ ತಾನು || ೩೬೨ ||
ಭಾಮಿನಿ
ಕಾಡಲಾಗದು ಎನ್ನೊಳೀ ನುಡಿ |
ಯಾಡಲಾಗದು ತಾಯೆ ಖತಿಯನು |
ಮಾಡಲಾಗದು ತಿಳುಹು ನೀ ನಡೆತಂದುದೇನೆನಲು ||
ನೋಡಿದಳು ಬಾಲಕನ ಗುಣಗಳ |
ಬಾಡಿದಳು ಹೃದಯಾಗ್ನಿತಾಪದಿ |
ಬೇಡಿದಳು ತೊಟ್ಟಂಬ ತೊಡದಿರು ಮಗನೆ ನೀನೆನುತ || ೩೬೩ ||
ವಾರ್ಧಕ (ಅರ್ಧ)
ಹರಿಯ ಮಾಯದಿ ಮಿತ್ರ ಸೂಚನೆಯ ಗೆಯ್ದುದಂ |
ಮರೆತು ನಂಬುಗೆ ಕೊಟ್ಟು ಕರ್ಣ ನಿಜಜನನಿಯಂ |
ತೆರಳಿಸಿ ನಿಜಾಲಯಕೆ ಬರಲಿತ್ತ ಕಾಂಚನಮಹಾರಥದಿ ಕಂಸಾರಿಯು || ||೩೬೪||
ರಾಗ ಕಾಂಭೋಜ ಝಂಪೆತಾಳ
[ಕುರುಪತಿಯ ಬಳಿಗಾಗಿ ಹರಿಯ ಕಳುಹಿದೆನಲ್ಲ ||
ಬರಲಿಲ್ಲ ಈವರೆಗೆಯೆನುತ ಧರ್ಮಜನು || ೩೬೫ ||
ಒಪ್ಪಿದನೊ ಕುರುವರನು ಇಲ್ಲ ಎಂಬುದ ಕೇಳಿ |
ಇಪ್ಪ ಬಗೆಯನು ಕಾಂಬೆನೆನುತ ತನ್ಮನದಿ || ೩೬೬ ||
ಅಗ್ರಜನ ನುಡಿ ಕೇಳಿ ಕಲಿಧನಂಜಯನೆಂದ |
ಶೀಘ್ರದಲಿ ಶ್ರೀಹರಿಯು ಬರುವನೆಂದೆನುತ || || ೩೬೭ ||
ತಮ್ಮನಾಡಿದ ನುಡಿಗೆ ತಾನೊಪ್ಪಿ ಬಹಳ |
ಹುಮ್ಮನಸಿನಿಂದಲಿರಲಿತ್ತ ಶ್ರೀಹರಿಯು || ೩೬೮ ||]
ವಾರ್ಧಕ (ಅರ್ಧ)
ತರಣಿತೇಜವ ನಿಲಿಸುತಂ ಬರೆ ಯುಧಿಷ್ಠಿರಂ |
ಪರಮ ಹರುಷವನಾಂತು ಸಹಜರಿಂದೊಡಗೂಡಿ |
ಚರಣಕೆರಗಲು ರಮಾರಮಣ ರಥವಿಳಿದು ಸಭೆಗಯ್ದಿ ಪದುಳದೊಳೆಂದನು || ||೩೬೯||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕುಮತಿ ಕೌರವ ರಣದಿ ರಾಜ್ಯವ | ನಿಮಗೆ ಕೊಡುತಿಹನಂತೆ ಸುಪರಾ |
ಕ್ರಮಿಗಳಾದರೆ ನೀವು ಕೊಂಬುದು | ಸಮರಮುಖದಿ || ೩೭೦ ||
ಆ ನರಾಧಿಪನೋಲಗದೊಳಪ | ಮಾನ ತನಗಾಯ್ತೆನಲು ತರಣಿಜ |
ಸೂನು ಮರುಗಲು ನುಡಿದನಾ ಪವ | ಮಾನಸುತನು || ೩೭೧ ||
ಶೌರಿಗಾದಪಮಾನಗಳು ಹೆ | ಮ್ಮಾರಿಗೌತಣವಾಯ್ತು ಮುಂದಿನ |
ಭಾರತದೊಳೆಂದಾಡುತಿರೆ ಕಂ | ಸಾರಿ ನುಡಿದ || || ೩೭೨ ||
ಅವಧಿವತ್ಸರವಿಲ್ಲ ನಾಳಿನ | ದಿವಸದೊಳಗೀ ಪೌರುಷವ ಕೌ |
ರವನ ಸರಿಸದಿ ತೋರಬಹುದೆಲೆ | ಪವನಜಾತ || ೩೭೩ ||
ಕಳುಹು ಲಿಖಿತವ ಭೂಪರಿಗೆ ಬೆಂ | ಬಲಕೆ ನಾನಿಹೆನೈಸೆಕುರು ಮಂ |
ಡಲಕೆ ಪಯಣವ ಮಾಡಿ ನೀವಿ | ನ್ನಳುಕದೆನಲು || ೩೭೪ ||
ಭಾಮಿನಿ
ಬರೆಸಿ ಲಿಖಿತವ ಕೃಷ್ಣನಪ್ಪಣೆ |
ವೆರಸಿ ಮಣಿಹಾರರ ಯುಧಿಷ್ಠಿರ |
ಕರೆಸಿ ಕಳುಹಲು ತೋರ್ದರೋಲೆಯನಖಿಳ ರಾಯರಿಗೆ ||
ಧುರಕೆ ತುರಗ ವರೂಥ ಗಜ ಮೋ |
ಹರಕೆ ಕಟ್ಟಾಳುಗಳು ಸಹಿತಂ |
ಬರಕೆ ಕೆಂಧೂಳಡರಲಯ್ದಿದರಖಿಳ ಭೂಭುಜರು || ೩೭೫ ||
ವಾರ್ಧಕ
ವೀರ ದ್ರುಪದ ಶಿಖಂಡಿ ಸೃಂಜಯ ಶತಾನೀಕ |
ವೈರಾಟ ಕೇಕಯ ನೃಪಾಲ ಕುಂತೀಭೋಜ |
ಭೂರಮಣ ಕಾಶಿಪತಿ ಚೈದ್ಯ ಸಾತ್ಯಕಿ ಧೃಷ್ಟಕೇತು ಸೋಮಕಭೂಪರು ||
ಸೂರ್ಯಪೌತ್ರಗೆ ಮಿತ್ರರಾದರಸುಗಳ್ ತಮ್ಮ |
ವಾರಣ ತುರಂಗ ಸ್ಯಂದನ ಪದಾತಿಗಳೈದೆ |
ತೋರಲಾಹವಕಾಗಿ ಪೊಕ್ಕರೇಳಕ್ಷೆಹಿಣೀಸೈನ್ಯವಾಯ್ತೆಣಿಕೆಗೆ || ೩೭೬ ||
ಭಾಮಿನಿ
ಜನಪ ಕೇಳಿನ್ನುಳಿದ ಕಾಲಾ |
ಳೆಣಿಸಲೇತಕೆ ಕೃಷ್ಣರಾಯಗೆ |
ಮಣಿದ ನಾಯಕವಾಡಿಗಳನುಪಚರಿಸುತಿರಲಾಗ ||
ದನುಜರುಗಳಾರ್ಭಟೆಯೊಳಂದು |
ಬ್ಬಣವ ತಿರುಹುತ ಘೋರ ರೂಪದಿ |
ರಣಭಯಂಕರ ಕಲಿಘಟೋತ್ಯಚ ಬಂದು ಕಾಣಿಸಿದ || ೩೭೭ ||
ರಾಗ ಅಷ್ಟಪದಿ ಮಾರವಿ ಏಕತಾಳ
ಮಾರುತಜಾತಕು | ಮಾರಕ ಘೋರಾ ಕಾರದ ಕೌಣಪ | ವಾರವ ನೊಡಗೊಂ |
ಡಾರುಭಟಿಸುತಸು | ರಾರಿಯ ಯಮಜ ಸ |
ಮೀರಜ ಪಾರ್ಥರ ದೂರದಿ ಕಂಡಡ || ಗೆಡೆದನಾಗ || ೩೭೮ ||
ಆ ಕೌರವ ಭೂ | ಲೋಕವ ಸಾಮದಿ | ತಾ ಕೊಡದಿಹನವಿ | ವೇಕಗಳಾಯ್ತುರೆ |
ನೂಕುವೆ ಯಮಪುರ | ಕಾ ಕುಜನರ ಕರು |
ಣಾಕರನೊಲುಮೆಯೊ | ಳೀ ಕಲಹದೊಳೆಂ || ದಾಡುತಿರ್ದ || ೩೭೯ ||
ದಾನವನುಗ್ರವ | ಕ್ಷೆಣಿಪ ಕಾಲಜ | ಕಾಣುತವನ ಸ | ನ್ಮಾನಿಸಿ ತಮ್ಮಯ |
ಸೇನೆಗೆ ಧೊರೆಯಹ | ಜಾಣರಾರೆನಲು ನಿ |
ಧಾನಿಸಿ ದ್ರುಪದನ | ಸೂನುವ ನಿಶ್ಚಯ || ಗೆಯ್ದನು ಪಾರ್ಥ || ೩೮೦ ||
ಭಾಮಿನಿ
ಹರಿಯ ನೇಮದಿ ದ್ರುಪದಸುತಗನು |
ಕರಿಸಿದರು ದಳದೊಡೆತನವ ಭೂ |
ಸುರರ ಮಂತ್ರದಿ ಸತಿಯರಾರತಿ ಬೆಳಗಲುತ್ಸಹದಿ ||
ನೆರವಿಯಲಿ ಸಾರಿದರು ಭಟರಿಗೆ |
ಧುರದಿ ಧೃಷ್ಟದ್ಯುಮ್ನನಾಜ್ಞೆಯೊ |
ಳಿರವೆನುತ ನಿಸ್ಸಾಳ ತಂಬಟೆ ಪಟಹರಭಸದಲಿ || ೩೮೧ ||
ಕ್ಷೆಣಿಪತಿ ಕೇಳಾಗ ರಾಮ | ಧ್ಯಾನದಲಿ ನಡೆತಂದು ಮುಖ್ಯ |
ಪ್ರಾಣ ಕಮಲಾಧವಗೆ ಮೈಯಿಕ್ಕಿರಲು ಪದುಳಿಸುತ ||
ನೀನು ಪಾರ್ಥನ ತೇರಸಿಂಧದಿ | ಸಾನುರಾಗದಿ ಮಂಡಿಸೆಂದಾ |
ಸೇನೆ ತೆರಳಲೆನಲ್ಕೆ ಪೊರಟಯ್ದಿತು ಸುಲಗ್ನದಲಿ || ೩೮೨ ||
ರಾಗ ಸುರುಟಿ ಮಟ್ಟೆತಾಳ
ಬಂದರು ರಣಕೆ | ಸಮರಾಂಗಣಕೆ || ಪ ||
ಅನಿಲಗತಿಯ ಮೀರುವ ಹಯ | ಕುಣಿವ ಮದೇಭಗಳ ||
ನಿನದದಿ ಪೊಂದೇರ್ಗಳ ಸಂ | ದಣಿಗಳ ಕಾಲಾಳ || ಬಂದರು || ೩೮೩ ||
ಚಿಮ್ಮುತ ಖಡ್ಗ ಸರಳ್ಗಳ | ಮುಮ್ಮೊನೆಗಳ ಮಾಡಿ ||
ಕಾರ್ಮುಕಗಳನುರೆ ತಿದ್ದುತ | ತಮ್ಮೊಳು ಮಾತಾಡಿ || ಬಂದರು || ೩೮೪ ||
ಸ್ವಾಮಿಯ ರಥದಪರಾಂಗದಿ | ಭೂಮಿಪ ಧರ್ಮಜನ ||
ಸಾಮಜವರದರಿಕ್ಕೆಲ ನರ | ಭೀಮಾದ್ಯರ ಗಡಣ || ಬಂದರು || ೩೮೫ ||
ಬೀಸುವ ಚಾಮರ ವಾದ್ಯದ | ಘೋಷದಿ ನರ್ತಿಸುತ ||
ವೇಶ್ಯೆಯರಯ್ತರೆ ನೋಡಿ ವಿ | ಲಾಸದಿ ಮನವಿಡುತ || ಬಂದರು || ೩೮೬ ||
ಮಾರ್ಬಲವೀಪರಿಯಲಿ ನಡೆ | ವಾರ್ಭಟೆಗಿಳೆಬಿರಿಯೆ ||
ಉರ್ಬಸವಾಯಿತು ಕಮಠಗೆ | ಪರ್ವತಗಳು ಜರಿಯೆ || ಬಂದರು || ೩೮೭ ||
ಭಾಮಿನಿ
ಎಲೆ ಧರಾಧಿಪ ಕೇಳು ಕುರುಮಂ |
ಡಲದಿ ಪಶ್ಚಿಮದೆಸೆಯೊಳ್ ಯಮಜನ |
ಬಲಸಮುದ್ರಕೆ ಬೇರೆಬೇರೆಸಗಿದರು ಮಂದಿರವ ||
ನಳಿನಭವಪಿತ ಭಕ್ತವತ್ಸಲ |
ಕಲುಷಹರ ಶ್ರೀವೆಂಕಟೇಶನ |
ನೊಲಿದು ಪೂಜಿಸುತಿರ್ದರವನಿಪರೆಂದನಾ ಮುನಿಪ || ೩೮೮ ||
ಶ್ರೀಕೃಷ್ಣಸಂಧಾನ ಸಂಪೂರ್ಣ
Leave A Comment