ಬಿ.ವಿ.ಕೆ. ಶಾಸ್ತ್ರಿ
July 30
೩೦.೭.೧೯೧೬ ೨೨.೯.೨೦೦೩ ಸಂಗೀತಗಾರ, ಸಂಗೀತ, ಕಲಾವಿಮರ್ಶಕರಾದ ಬಿ.ವಿ.ಕೆ. ಶಾಸ್ತ್ರಿಯವರು ಹುಟ್ಟಿದ್ದು ನಂಜನಗೂಡಿನಲ್ಲಿ. ತಂದೆ ವೆಂಕಟಸುಬ್ಬಯ್ಯ, ತಾಯಿ ಸುಬ್ಬಮ್ಮ. ಬಾಲ್ಯದಿಂದಲೂ ಓದಿಗಿಂತ ಭಜನೆ, ಸಂಗೀತದತ್ತ ಹತ್ತಿದಗೀಳು. ಭಜನೆಯ ಗೋಷ್ಠಿಯಲ್ಲಿ ಒಮ್ಮೆ ಹಾಡಿದ್ದು ಕೇಳಿದ ಉಪಾಧ್ಯಾಯರಾದ ಸುಬ್ರಹ್ಮಣ್ಯಂ ರವರ ಪ್ರೇರಣೆಯಿಂದ ಆಸ್ಥಾನ ವಿದ್ವಾಂಸರಾಗಿದ್ದ ಚಿಕ್ಕರಾಮರಾಯರಿಂದ ಕಲಿತ ಸಂಗೀತ. ಚಿತ್ರಕಲೆಯಲ್ಲಿ ಬೆಳೆದ ಆಸಕ್ತಿ, ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟಿನಿಂದ ಪಡೆದ ಡಿಪ್ಲೊಮ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮೈಸೂರಿನ ‘ಸಾಧ್ವಿ’ ಪತ್ರಿಕೆಯ ಸಂಪಾದಕ ಅಗರಂ ರಂಗಯ್ಯನವರು ಜೈಲು ಸೇರಿದಾಗ ‘ಸಾಧ್ವಿ’ಯ ಹೊಣೆ. ಇ.ಆರ್. ಸೇತೂರಾಂರವರಿಂದ ಕಲಾವಿಮರ್ಶೆ ಬರೆಯಲು ಪ್ರಜಾವಾಣಿಗೆ ಆಹ್ವಾನ. ನೃತ್ಯ, ಸಂಗೀತ, ಕಲೆಯ ಬಗ್ಗೆ ಪ್ರಜಾವಾಣಿ ಬಳಗದ ಪತ್ರಿಕೆಗಳಿಗೆ ಬರೆದ ವಿಮರ್ಶಾ ಬರಹಗಳು. ಮುರಳಿ ಕಾವ್ಯನಾಮದಲ್ಲೂ ಪತ್ರಿಕೆಗಳಿಗೆ ಬರೆದ ಅನೇಕ ವಿಮರ್ಶಾ ಲೇಖನಗಳು ಕರ್ನಾಟಕದ ಸಂಗೀತ ವಿದ್ವಾಂಸರ ಸಿದ್ಧಿ-ಸಾಧನೆ ಕುರಿತು ಇಲಸ್ಟ್ರೇಟೆಡ್ ವೀಕ್ಲಿಗಾಗಿ ಬರಹಗಳು. ಭಾರತದಾದ್ಯಂತ ಗಳಿಸಿದ ವಿಮರ್ಶಾಮನ್ನಣೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಂಸ್ಕೃತಿಕ ಶಾಖೆಗಳಿಗೆಲ್ಲಾ ನೀಡಿದ ಸಹಕಾರ. ಆಕಾಶವಾಣಿ ಆಯ್ಕೆ ಸಮಿತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ, ಇಂಡಿಯನ್ ಕೌನ್ಸಿಲ್ ಆಫ್ ಕಲ್ಚುರಲ್ ರಿಲೇಷನ್ಸ್, ಸೌತ್ ಝೋನ್ ಕಲ್ಚುರಲ್ ಸೆಂಟರ್, ಕೇಂದ್ರ ಲಲಿತ ಕಲಾ ಅಕಾಡಮಿ, ಕಾಳಿದಾಸ ಸಮ್ಮಾನ ಸಮಿತಿ, ಕರ್ನಾಟಕ ಗಾನ ಕಲಾ ಪರಿಷತ್ತು ಮುಂತಾದವುಗಳಿಗೆ ಮಾರ್ಗದರ್ಶನ, ದೇಶವಿದೇಶಗಳ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗಿ. ಆಕಾಶವಾಣಿಯ ವಾರ್ಷಿಕ ಪುರಸ್ಕಾರ, ಬೆಂಗಳೂರಿನ ಗಾಯನ ಸಮಾಜದ ವಾರ್ಷಿಕ ಸಮ್ಮೇಳನಾಧ್ಯಕ್ಷತೆ ಮತ್ತು ಸಂಗೀತಕಲಾರತ್ನ ಬಿರುದು, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡಮಿ ಪುರಸ್ಕಾರ, ಟಿಟಿಕೆ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ಚೌಡಯ್ಯ ಪ್ರಶಸ್ತಿ ಮುಖ್ಯವಾದವುಗಳು. ೧೯೯೯ರಲ್ಲಿ ಅರ್ಪಿಸಿದ ಗೌರವ ಗ್ರಂಥ ‘ಮುರಳಿ ವಾಣಿ’. ಇದೇ ದಿನ ಹುಟ್ಟಿದ ಕಲಾವಿದರು ಕೆ. ಅಶ್ವತ್ಥಮ್ಮ – ೧೯೧೦ ಹೆಗಡೆ ಶೀಗೇಹಳ್ಳಿ – ೧೯೨೮ ಸಿದ್ಧರಾಜು ಜೆ. – ೧೯೭೦
* * *