Loading Events

« All Events

ಶಾರದಾ ಗೋಕಾಕ್

July 31

೩೧..೧೯೧೬ ೨೩..೧೯೯೪ ಇಂದಿನ ಸಾಹಿತ್ಯ ಕ್ಷೇತ್ರದಲ್ಲಿ ಹಂಪನಾ-ಕಮಲಾಹಂಪನಾ, ನಾಡಿಗ್‌ – ಮಾಲತಿ ನಾಡಿಗ್‌, ಎ.ವಿ. ನಾವಡ-ಗಾಯತ್ರಿ ನಾವಡ ನವರತ್ನಾರಾಂ-ಉಷಾ ನವರತ್ನಾರಾಂ ಮುಂತಾದ ಹಲವಾರು ದಂಪತಿಗಳು ಸಾಹಿತ್ಯಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಈ ಮಹಿಳೆಯರಿಗೆ ಶೈಕ್ಷಣಿಕ ಶಿಸ್ತಿನ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆಯುವ ಅವಕಾಶಗಳು ಸುಲಭವಾಗಿ ದೊರೆತಿದ್ದು ಸಾಹಿತ್ಯ ರಚನೆಯಲ್ಲಿಯೂ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಆದರೆ ಹಿಂದಿನ ತಲೆಮಾರಿನ ದಂಪತಿ ಲೇಖಕರುಗಳಾದ ಶಾರದಾ ಗೋಕಾಕ್‌, ಶಾಂತಾದೇವಿ ಮಾಳವಾಡ, ಶಾಂತಾದೇವಿ ಕಣವಿ ಇವರುಗಳಿಗೆ ಅಂದಿನ ಪರಿಸ್ಥಿತಿಯಿಂದ ವಿದ್ಯಾಭ್ಯಾಸದಿಂದ ವಂಚಿತರಾದುದಷ್ಟೇ ಅಲ್ಲದೆ ಪ್ರೌಢಾವಸ್ಥೆ. ತಲುಪುವ ಮೊದಲೇ ವಿವಾಹ ಬಂಧನಕ್ಕೊಳಗಾಗಿ ವಿದ್ಯೆ ಕಲಿಯುವ ಅವಕಾಶಗಳು ಕಮರಿ ಹೋಗಿದ್ದರೂ, ಪತಿಗೃಹಸೇರಿದ ನಂತರ ಪತಿಯಿಂದ ಅಥವಾ ಮನೆಯವರಿಂದ ದೊರೆತ ಸಹಕಾರ, ಸಹಾನುಭೂತಿಯಿಂದ ವಿದ್ಯೆ ಕಲಿತು ಸಾಹಿತ್ಯ ಕೃಷಿ ರಚಿಸಿದ್ದಷ್ಟೇ ಅಲ್ಲದೆ ಪತಿಯ ಯಶಸ್ಸಿನ ರೂವಾರಿಯಾಗಿಯೂ ದುಡಿದಿದ್ದಾರೆ. ಶಾರದಾ ಗೋಕಾಕರು ಓದಿದ್ದು ಆರನೆಯ ತರಗತಿಯವರೆಗಾದರೆ ಶಾಂತಾದೇವಿ ಮಾಳವಾಡರು ಪತಿಗೃಹ ಸೇರಿದ ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಕಾವಾ, ಜಾಣ ಮುಂತಾದ ಪರೀಕ್ಷೆಗಳನ್ನೂ ಪಾಸು ಮಾಡಿದ್ದಲ್ಲದೆ ಉಪಾಧ್ಯಾಯರ ಸಹಾಯದಿಂದ ಹಿಂದಿ, ಇಂಗ್ಲಿಷ್‌ ಭಾಷೆಯನ್ನು ಮನೆಯಲ್ಲಿಯೇ ಪಾಠ ಹೇಳಿಸಿಕೊಂಡು ಕಲಿತರು. ಇವರಿಬ್ಬರಿಗಿಂತ ಸ್ವಲ್ಪ ಸುಧಾರಿಸಿದವರೆಂದರೆ ಶಾಂತಾದೇವಿ ಕಣವಿಯವರು. ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಪತಿ ಗೃಹ ಸೇರಿದ್ದರಿಂದ ಓದು ಮುಂದುವರೆಸಲಾಗಲಿಲ್ಲ. ಕಣವಿಯವರು ಕವಿಯಾಗಿ ಪ್ರಸಿದ್ಧರಾಗಿದ್ದರೆ ಶಾಂತಾದೇವಿಯವರು ಪತಿಯ ಪ್ರೋತ್ಸಾಹದಿಂದ ಸಾಹಿತ್ಯವನ್ನೂ ಅಭ್ಯಸಿಸಿ ಕತೆಗಾರ್ತಿಯಾಗಿ ರೂಪಗೊಂಡು ಎಂಟು ಕಥಾಸಂಕಲನಗಳಲ್ಲದೆ ಪ್ರಬಂಧ, ಮಕ್ಕಳ ಪುಸ್ತಕಗಳನ್ನೂ ರಚಿಸಿದ್ದಾರೆ. ಶಾಂತಾದೇವಿ ಮಾಳವಾಡರು ರಚಿಸಿದ ಕೃತಿಗಳು ವೈವಿಧ್ಯತೆಯಿಂದ ಕೂಡಿದೆ. ಕಾದಂಬರಿ, ಜೀವನ ಚರಿತ್ರೆಗಳು, ವಚನ ಸಾಹಿತ್ಯ ಕೃತಿಗಳಲ್ಲದೆ ಹಲವಾರು ಸೃಜನ ಶೀಲ ಕೃತಿಗಳನ್ನು ರಚಿಸಿದ್ದು ಒಟ್ಟು ೪೦ ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಸ.ಸ. ಮಾಳವಾಡರ ಆಕಸ್ಮಿಕ ನಿಧನದಿಂದ ಧೃತಿಗೆಟ್ಟರೂ, ಮನಸ್ಸನ್ನೂ ಸ್ಥಿಮಿತಕ್ಕೆ ತಂದುಕೊಂಡು ಮಾಳವಾಡರು ಪ್ರಾರಂಭಿಸಿದ್ದ ಆತ್ಮ ಚರಿತ್ರೆ ‘ದಾರಿ ಸಾಗಿದೆ’ ಕೃತಿಯನ್ನೂ’ ಶಾಂತಾದೇವಿ ಮಾಳವಾಡರೇ ಬರೆದು ಪೂರ್ಣಗೊಳಿಸಿದರು. ಅನುರೂಪ ದಾಂಪತ್ಯದ ಶಾರದಾ ಗೋಕಾಕರು ಹುಟ್ಟಿದ್ದು ಧಾರವಾಡದಲ್ಲಿ. ೧೯೧೬ ರ ಜುಲೈ ೩೧ ರಂದು. ತಂದೆ ಬಳವಂತರಾವ್‌ ಬೆಟ್ಟದೂರು, ತಾಯಿ ಕಮಲಾಬಾಯಿ. ಓದಿದ್ದು ಮಾಧ್ಯಮಿಕ ಶಾಲೆಯವರೆಗಾದರೂ ಸಾಹಿತ್ಯಾಸಕ್ತಿಯನ್ನೂ ಬೆಳೆಸಿಕೊಂಡವರು. ಗೋಕಾಕರ ಯಶಸ್ಸಿಗೆ ಶಾರದಾ ಗೋಕಾಕರ ಪಾತ್ರವೂ ಬಹುದೊಡ್ಡದೆ. ಗೋಕಾಕರ ಷಷ್ಟ್ಯಬ್ದಿ ಸಂದರ್ಭದಲ್ಲಿ ಶಾರದಾ ಗೋಕಾಕರು ಬರೆದ ಕವನ ಸಂಕಲನ ‘ಸುಮಂಗಲಾಕ್ಷತೆ’ಯು ಪ್ರಕಟಗೊಂಡಿದ್ದು (೧೯೬೯) ಅದರಲ್ಲಿ ೩೭ ಕವನಗಳಿವೆ. “ಶ್ರೀ ವಿನಾಯಕರ ಷಷ್ಟ್ಯಬ್ದಿಪೂರ್ತಿಯ ಸುಮಂಗಲ ಸಮಾರಂಭದಲ್ಲಿ ನನ್ನ ಕೆಲವು ಸುಮಂಗಲಾಕ್ಷತೆಯನ್ನು ಅರ್ಪಿಸಲು ಸಾಧ್ಯವಾದುದಕ್ಕೆ ಭಗವಂತನಿಗೆ ಕೃತಜ್ಞತೆಯ ಪ್ರಣಾಮಗಳನರ್ಪಿಸುತ್ತಿದ್ದೇನೆ. ನನ್ನ ಒಳ ಜೀವನದಲ್ಲಿ ಹೊಳೆದ ಚಿತ್ರಗಳ ಶಬ್ದ ರೂಪಗಳನ್ನೂ ಕವನಗಳನ್ನಾಗಿಸಿ ಜನತೆಯ ಮುಂದಿಟ್ಟಿದ್ದೇನೆ” ಎಂದು ವಿನಮ್ರರಾಗಿ ನುಡಿದಿದ್ದಾರೆ. ಗೋಕಾಕರು ತಮ್ಮ ಕವನ ಸಂಗ್ರಹ ಸಿಮ್ಲಾ ಸಿಂಫನಿಗೆ (೧೯೭೩) ತಮ್ಮ ಮಡದಿ ಶಾರದಾರವರನ್ನೂ ಸಹಲೇಖಕಿಯಾಗಿಸಿಕೊಂಡಿದ್ದಾರೆ. ಆ ಸಂಗ್ರಹದ ಒಂದು ಭಾಗದಲ್ಲಿ ಶಾರದಾ ಗೋಕಾಕರ ರಚನೆಗಳಿವೆ. ಬಾ ಎಂದು ಕರೆದಾವ ಸೋಬಾನ ಹಾಡ್ಯಾವ ಸಿಮ್ಲಾದ ಹಕ್ಕಿ | ಎಂದು ಸಿಮ್ಲಾ ನಿಸರ್ಗದ ಸೊಬಗಿಗೆ ಮಾರು ಹೋಗಿ ರಚಿಸಿದ ಕವನ ಇದಾಗಿದೆ. ಶಾರದಾ ಗೋಕಾಕರ ಮತ್ತೊಂದು ಬಹು ಮುಖ್ಯ ಕೃತಿ ಎಂದರೆ ‘ಒಲವೇ ನಮ್ಮ ಬದುಕು’ (೧೯೭೭). ಮರಾಠಿಯಲ್ಲಿ ಪ್ರಕಟವಾಗಿದ್ದ ಮರಾಠಿ ಸಾಹಿತಿ ವಾಮನ ತಿಲಕರ ಪತ್ನಿ ಲಕ್ಷ್ಮೀಬಾಯಿ ತಿಲಕರು ಬರೆದ ‘ಸ್ಮೃತಿ ಚಿತ್ರಗಳ’ ಕೃತಿಯಲ್ಲಿ ವಾಮನ ತಿಲಕರ ವ್ಯಕ್ತಿತ್ವದ ಚಿತ್ರಣವಿರುವುದನ್ನೂ ಓದಿದ ಶಾರದಾ ಗೋಕಾಕರು ಇದರಿಂದ ಪ್ರೇರಿತರಾಗಿ ಬರೆದ ಆತ್ಮಕಥೆ ‘ಒಲವೇ ನಮ್ಮ ಬದುಕು’. ಮದುವೆಯಾದಂದಿನಿಂದ ಬೆಂಗಳೂರಿಗೆ ಬಂದು ನೆಲೆಸುವಾಗಿನ ದಾಂಪತ್ಯ ಕತೆಯ ನಿರೂಪಣೆಯದಾಗಿದೆ. ಮೂರು ಕೃತಿಗಳಲ್ಲೂ ಶಾರದಾ ಗೋಕಾಕರು ಗೋಕಾಕರ ವ್ಯಕ್ತಿತ್ವವನ್ನು ಹಿಡಿದಿಟ್ಟು, ಗೋಕಾಕರ ಬದುಕನ್ನೂ ಅರ್ಥಮಾಡಿಕೊಳ್ಳಲು ಸಹಾಯಕವಾಗುವಂತಹ ಕೃತಿ ರಚಿಸಿದ್ದರೆ, ಗೋಕಾಕರು ಶಾರದಾರವರಿಗೆ ಬರೆದ ಪತ್ರಗಳನ್ನೂ ‘ಜೀವನ’ ಪತ್ರಿಕೆಯಲ್ಲಿ ‘ವನಮಾಲಿಯ ಒಲವಿನೋಲೆಗಳು’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದು ನಂತರ ‘ಜೀವನ ಪಾಠಗಳು’ ಎಂಬ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದ್ದು ಶಾರದಾರವರ ವ್ಯಕ್ತಿತ್ವವನ್ನು ಪರಿಚಯಿಸಿದ್ದಾರೆ. ಹೀಗೆ ಗೋಕಾಕರು ಮತ್ತು ಶಾರದಾ ಗೋಕಾಕರ ಬದುಕನ್ನರಿಯಲು ಈ ಗ್ರಂಥಗಳು ಸಹಾಯಕವಾಗಿವೆ.

Details

Date:
July 31
Event Category: