ನೂಲೇನೂರು ಶಂಕರಪ್ಪ
July 31
೩೧.೭.೧೮೯೨ ೧೨.೫.೧೯೫೪ ಪ್ರಸಿದ್ಧ ವಾಗ್ಗೇಯಕಾರರೂ, ಗಮಕಿಗಳೂ ಆದ ಶಂಕರಪ್ಪನವರು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಹೊಳೆಲ್ಕೆರೆ ತಾಲ್ಲೂಕಿನ ರಾಮಗಿರಿಯ ಬಳಿಯ ನೂಲೇನೂರು. ತಂದೆ ಕೃಷ್ಣಶರ್ಮ, ತಾಯಿ ಸುಬ್ಬಮ್ಮ. ಚಿಕ್ಕಂದಿನಲ್ಲೇ ತಂದೆಯ ಪ್ರೀತಿಯಿಂದ ವಂಚಿತರು. ಬಂಧುಗಳ ಸಹಾಯದಿಂದ ಪಡೆದ ವಿದ್ಯಾಭ್ಯಾಸ. ಲೋಯರ್ ಸೆಕೆಂಡರಿಯ ನಂತರ ಉಪಾಧ್ಯಾಯವೃತ್ತಿ, ಪ್ರತಿದಿನ ಸಂಜೆ ಭರಮಸಾಗರದಲ್ಲಿ ನಡೆಸುತ್ತಿದ್ದ ಕಾವ್ಯವಾಚನದಿಂದ ಪಡೆದ ಪ್ರಸಿದ್ಧಿ. ಮೊಳಕಾಲ್ಮೂರು ಶಾಲೆಗೆ ಪಡೆದ ಬಡ್ತಿ. ಜೈಮಿನಿ ಭಾರತ ವಾಚನದಿಂದ ಪುರಸಭೆಯ ವತಿಯಿಂದ ಪೌರರು ನೀಡಿದ ಜೋಡಿಶಾಲು, ರೇಷ್ಮೆ ಪಂಚೆ ಸನ್ಮಾನ. ಪ್ರೌಢ ಶಿಕ್ಷಣ ತರಬೇತಿಗಾಗಿ ಮೈಸೂರಿಗೆ. ಮೈಸೂರಿನಲ್ಲೂ ಜೈಮಿನಿಭಾರತ ವಾಚನದಿಂದ ಪಡೆದ ಸನ್ಮಾನ. ಹೊನ್ನಾಳಿಶಾಲೆಗೆ ವರ್ಗ, ಶಂಕರ ಜಯಂತಿ, ರಾಮನವಮಿ, ಮಧ್ವನವಮಿ, ಕೃತ್ತಿಕೋತ್ಸವ ಸಂದರ್ಭಗಳಲ್ಲಿ ತೊರವೆ ರಾಮಾಯಣ, ಶಂಕರವಿಜಯ, ಮಧ್ವವಿಜಯ ಕಾವ್ಯವಾಚನದಿಂದ ಪಡೆದ ಪ್ರಸಿದ್ಧಿ. ಅಧ್ಯಾತ್ಮಿಕ, ವಿಜ್ಞಾನ, ಧಾರ್ಮಿಕ ಕ್ಷೇತ್ರಗಳಲ್ಲಿ ಮಹತ್ಸಾಧನೆ. ಅನಂತಸುಬ್ಬರಾಯರೊಡನೆ ಟೈಪರೈಟರ್ ವಿನ್ಯಾಸ. ಸೂರ್ಯಸಿದ್ಧಾಂತ ಓದಿ ಗ್ರಿಗೋರಿಯನ್ ಕ್ಯಾಲೆಂಡರಿಗೆ ತಾಳೆ ಹಾಕಿ ಸರ್ವ ಸ್ವೀಕೃತ ಕ್ಯಾಲೆಂಡರ್ ಸಂಶೋಧನೆಯು ಅಪೂರ್ಣವಾಗಿ ಜನತೆಗೆ ದೊರೆಯದ ಫಲ. ಗಮಕ ಕಲೆಯಲ್ಲಿ ಬೆಳೆದ ಆಸಕ್ತಿಯಿಂದ ರಂಗವಿಠಲ ಅಂಕಿತದಲ್ಲಿ ರಚಿಸಿದ ನೂರಾರು ಕೀರ್ತನೆಗಳು, ಶಂಕರ ಲಿಂಗ ಭಗವಾನರ ಸಂಕ್ಷಿಪ್ತ ಚರಿತ್ರೆ (ಲಾವಣಿ ಕಾವ್ಯ) ಚಿಂತನಾಮೃತ (ವಚನಗಳು), ಜೀವನ ಚರಿತ್ರೆ, ಕನ್ನಡ ಗಣಿತಕೋಶ (ಸಂಶೋಧನೆ) ಸೂರ್ಯ ಸಿದ್ಧಾಂತ ಪರಾಮರ್ಶೆ (ಕ್ಯಾಲೆಂಡರ್ ಸಂಶೋಧನೆಗೆ) ಶಾಸ್ತ್ರಗ್ರಂಥ ಮುಂತಾದ ಪ್ರಸಿದ್ಧ ಗ್ರಂಥಗಳ ಸಂಶೋಧನೆಯಲ್ಲಿ ತೊಡಗಿದ್ದಾಗಲೇ ಕ್ಷಯರೋಗಕ್ಕೆ ತುತ್ತಾಗಿ ನಿಧನ.
* * *