Categories
e-ದಿನ

ಮಾರ್ಚ್-20

ವಿಶ್ವ ಗುಬ್ಬಚ್ಚಿಗಳ ದಿನ:
ಮನೆಯಂಗಣದಲ್ಲಿನ ಗುಬ್ಬಚ್ಚಿಗಳು ಹಾಗೂ ಇನ್ನಿತರ ಪಕ್ಷಿಗಳ ಬಗೆಗೆ ಜನ ಜಾಗೃತಿ ಉಂಟುಮಾಡಿ ಅವುಗಳ ಸಂಕುಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪ್ರಯತ್ನವಾಗಿ ಮಾರ್ಚ್ 20 ದಿನವನ್ನು ವಿಶ್ವ ಗುಬ್ಬಚ್ಚಿಗಳ ದಿನವಾಗಿ ಆಚರಿಸಲಾಗುತ್ತಿದೆ. ಭಾರತದ ನೇಚರ್ ಫಾರೆವರ್ ಸೊಸೈಟಿಯ ಪ್ರಮುಖ ಆಸಕ್ತಿಯ ಮೇರೆಗೆ ಪ್ರಾರಂಭಗೊಂಡಿರುವ ಈ ಆಚರಣೆಗೆ, ಫ್ರಾನ್ಸಿನ ಇಕೋ-ಸಿಸ್ ಆಕ್ಷನ್ ಫೌಂಡೆಶನ್ ಮತ್ತು ವಿಶ್ವದ ಅನೇಕ ಸಂಸ್ಥೆಗಳು ಸಹಯೋಗ ನೀಡಿವೆ.

ಪ್ರಮುಖಘಟನಾವಳಿಗಳು:

235: ಮ್ಯಾಕಿಮಿನಸ್ ತ್ರಾಕ್ಸ್ ರೋಮನ್ ಸಿಂಹಾಸನವನ್ನೆರಿದ ಪ್ರಥಮ ವಿದೇಶಿಯನೆನಿಸಿದ. ಈತ ಮೊಷಿಯಾ ಮೂಲದವನೆಂದು ಹೇಳಲಾಗಿದೆ.

1602: ಡಚ್ ಈಸ್ಟ್ ಇಂಡಿಯಾ ಕಂಪೆನಿ ಸ್ಥಾಪನೆಗೊಂಡಿತು. ಇದು ಪ್ರಪಂಚದ ಮೊಟ್ಟ ಮೊದಲ ವಹಿವಾಟಿನ ಕಾರ್ಪೊರೇಷನ್ ಎನಿಸಿದೆಯಲ್ಲದೆ, ಸಾರ್ವಜನಿಕರಿಂದ ಷೇರು ಬಂಡವಾಳ ಮತ್ತು ಬಾಂಡ್ ರೂಪದಲ್ಲಿ ಸಂಪನ್ಮೂಲ ರೂಪಿಸಿಕೊಂಡ ಪ್ರಥಮ ಸಂಸ್ಥೆಯೆಂದೂ ಹೇಳಲಾಗಿದೆ.

1616: ಸರ್ ವಾಲ್ಟರ್ ರಾಲೀಹ್ ಅವರು 13 ವರ್ಷಗಳ ಟವರ್ ಆಫ್ ಲಂಡನ್ ಸೆರೆಯಿಂದ ಬಿಡುಗಡೆ ಪಡೆದರು

1760: ಬೋಸ್ಟನ್ ನಗರದಲ್ಲಿನ ಬೆಂಕಿಯಲ್ಲಿ 349 ಕಟ್ಟಡಗಳು ಭಸ್ಮಗೊಂಡವು

1815: ಎಲ್ಬಾದಿಂದ ತಪ್ಪಿಸಿಕೊಂಡು ಬಂದ ಮೇಲೆ ನೆಪೋಲಿಯನ್ನರು ತಮ್ಮ ಎಂದಿನ 1,40,000 ಸೈನ್ಯ ಮತ್ತು ಸ್ವಯಂ ಇಚ್ಛೆಯ 2 ಲಕ್ಷ ಜನರ ಬೆಂಬಲದಿಂದ ತಮ್ಮ ನೂರು ದಿನಗಳ ರಾಜ್ಯಭಾರವನ್ನು ಪ್ರಾರಂಭಿಸಿದರು.

1852: ಹ್ಯಾರ್ರಿಯೇಟ್ ಬೀಚರ್ ಸ್ಟೋವ್ ಅವರ ‘ಅಂಕಲ್ ಟಾಮ್ಸ್’ ಕ್ಯಾಬಿನ್ ಪ್ರಕಟಗೊಂಡಿತು.

1861: ಭೂಕಂಪದಲ್ಲಿ ಅರ್ಜೆಂಟಿನಾದ ಮೆಂಡೋಜಾ ಪೂರ್ಣ ನಾಶಗೊಂಡಿತು.

1915: ಆಲ್ಬರ್ಟ್ ಐನ್ ಸ್ಟೀನ್ ಅವರು ತಮ್ಮ ‘ಜನರಲ್ ಥಿಯರಿ ಆಫ್ ರಿಲೆಟಿವಿಟಿ’ ಪ್ರಕಟಿಸಿದರು

1923: ಚಿಕಾಗೋದಲ್ಲಿನ ಆರ್ಟ್ಸ್ ಕ್ಲಬ್ ಸಂಸ್ಥೆಯು, ಪಾಬ್ಲೋ ಪಿಕಾಸ್ಸೋ ಅವರ ಮೊದಲ ಚಿತ್ರ ಪ್ರದರ್ಶನವನ್ನು ತನ್ನ ಆಶ್ರಯದಲ್ಲಿ ನಡೆಸಿತು. ಇದು ಆಧುನಿಕ ಕಲಾ ಪ್ರದರ್ಶನಕ್ಕೆ ಅಮೆರಿಕದಲ್ಲಿ ಸಿಕ್ಕ ಪ್ರಮುಖ ಪ್ರಾರಂಭವೆನಿಸಿದೆ.

1933: ಫ್ರಾಂಕ್ಲಿನ್ ರೂಸ್ವೆಲ್ಟ್ ಅವರನ್ನು ಹತ್ಯೆ ಮಾಡಿದ ಜಿಯುಸೆಪ್ಪೆ ಜಂಗಾರಾನನ್ನು ಫ್ಲೋರಿಡಾದಲ್ಲಿ ವಿದ್ಯುತ್ ಕುರ್ಚಿಯಲ್ಲಿ ಕೂರಿಸಿ ಮರಣ ದಂಡನೆ ನಡೆಸಲಾಯಿತು.

1962: ಭಾರತದ ಕ್ರಿಕೆಟ್ ನಾಯಕರಾದ ನಾರಿ ಕಾಂಟ್ರಾಕ್ಟರ್ ಅವರು ಬಾರ್ಬಡೋಸ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲರ್ ಚಾರ್ಲಿ ಗ್ರಿಫಿತ್ ಚೆಂಡಿನ (ಬಾಲ್) ಏಟಿನಿಂದ ತೀವ್ರವಾಗಿ ಗಾಯಗೊಂಡರು. ಭಾರತದ ಪರ ಎಡಗೈ ಪ್ರಾರಂಭಿಕ ಬ್ಯಾಟುದಾರರಾಗಿದ್ದ ಇವರು ತುರ್ತು ಶಸ್ತ್ರಚಿಕಿತ್ಸೆ ನಡೆದು ಬದುಕುಳಿದರಾದರೂ ಇವರ ಟೆಸ್ಟ್ ಕ್ರಿಕೆಟ್ ಜೀವನ ಇಲ್ಲಿಗೇ ಮುಕ್ತಾಯಗೊಂಡಿತು.

1971: ಡಿ. ದೇವರಾಜ ಅರಸ್ ಅವರು ಕರ್ನಾಟಕದ ಎಂಟನೇ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡರು.

1987: ಏಡ್ಸ್ ರೋಗಕ್ಕೆ ಪರಿಹಾರವಾದ ‘AZT’ ಔಷದಕ್ಕೆ ಆಹಾರ ಮತ್ತು ಔಷದಗಳ ಆಡಳಿತ ಸಮಿತಿಯು ಅನುಮತಿ ನೀಡಿತು.

2003: ಅಮೆರಿಕ, ಯುನೈಟೆಡ್ ಕಿಂಗ್ಡಂ, ಆಸ್ಟ್ರೇಲಿಯಾ ಮತ್ತು ಪೋಲೆಂಡ್ ದೇಶಗಳ ಒಕ್ಕೂಟವು ಈ ದಿನ ಬೆಳಕು ಹರಿಯುವ ಮುಂಚೆಯಿಂದ ಇರಾಕ್ ಮೇಲೆ ತಮ್ಮ ದಾಳಿಯನ್ನು ಆರಂಭಿಸಿದವು.

2006: ಖ್ಯಾತ ಚಿತ್ರ ನಿರ್ಮಾಪಕ ಅಡೂರು ಗೋಪಾಲಕೃಷ್ಣನ್, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ, ಇನ್ಫೋಸಿಸ್ ಸಿಇಒ ನಂದನ್ ನೀಲೇಕಣಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 51 ಗಣ್ಯರಿಗೆ 2006ರ ಸಾಲಿನ ಪದ್ಮ ಪ್ರಶಸ್ತಿಗಳನ್ನು ನವದೆಹಲಿಯಲ್ಲಿ ಪ್ರದಾನ ಮಾಡಲಾಯಿತು.

2006: ಕ್ಷೀರಕ್ರಾಂತಿಯ ನೇತೃತ್ವ ವಹಿಸಿ ಭಾರತೀಯ ಕ್ಷೀರ ಉದ್ಯಮದ ಅತ್ಯಂತ ಪ್ರಭಾವಿ ವ್ಯಕ್ತಿ ಎನಿಸಿದ್ದ ವರ್ಗೀಸ್ ಕುರಿಯನ್ ಅವರು ತಾವು ಬೆಳೆಸಿದ ಗುಜರಾತ್ ಹಾಲು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. 34 ವರ್ಷಗಳಿಂದ ಅಧ್ಯಕ್ಷರಾಗಿದ್ದ 85ರ ಹಿರಿಯರಾದ ಇವರು ತಮ್ಮ ವಿರುದ್ಧ ಮೂಡಿದ ಅವಿಶ್ವಾಸ ನಿರ್ಣಯ ಮಂಡನೆಯಿಂದ ಮನನೊಂದು ಈ ಕ್ರಮ ಕೈಗೊಂಡರು.

2006: ಮೆಲ್ಬೋರ್ನಿನ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಟೇಬಲ್ ಟೆನಿಸಿನಲ್ಲಿ ಭಾರತದ ಪುರುಷರ ತಂಡಕ್ಕೆ ಐತಿಹಾಸಿಕ ಚೊಚ್ಚಲ ಚಿನ್ನ ಮತ್ತು ಮಹಿಳೆಯರಿಗೆ ಕಂಚು ಪದಕಗಳು ಪ್ರಾಪ್ತಿಯಾದವು.

2007: ಭಾರತೀಯ ವಾಯುಪಡೆಯ ಮಿಗ್-23 ಯುದ್ಧ ವಿಮಾನಗಳು ಇತಿಹಾಸದ ಪುಟ ಸೇರಿದವು. ಕಳೆದ 25 ವರ್ಷಗಳಿಂದ ಸಮರ ಸನ್ನದ್ಧವಾಗಿದ್ದ ಮಿಗ್-23 ವಿಮಾನಗಳು ಜಾಮ್ ನಗರದಲ್ಲಿ ಸಾಂಪ್ರದಾಯಿಕ ಹಾರಾಟ ನಡೆಸಿದ ನಂತರ ತೆರೆಮರೆಗೆ ಸರಿದವು.

2009: ವೈಸ್ ಚೀಫ್ ಪ್ರದೀಪ್ ವಸಂತ್ ನಾಯ್ಕಾ ಅವರನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಏರ್ ಚೀಫ್ ಮಾರ್ಷಲ್ ಫಾಲಿ ಹೋಮಿ ಮೇಜರ್ ಅವರು ಮೇ 31ರಂದು ನಿವೃತ್ತಿ ಹೊಂದಿದಾಗ ನಾಯ್ಕಾ ಅಧಿಕಾರ ವಹಿಸಿಕೊಂಡರು.

2009: ದೆಹಲಿ ಮೆಟ್ರೊ, ಸೌರ ಶಕ್ತಿ ವಿದ್ಯುತ್ ಘಟಕವನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ಸ್ನೇಹಿ ಆಗಿದ್ದು, ಇದರಿಂದ ವಾತಾವರಣಕ್ಕೆ ಪ್ರತಿ ವರ್ಷ ಬಿಡುತ್ತಿದ್ದ 2.35 ಲಕ್ಷ ಟನ್ ಹಸಿರು ಮನೆ ತ್ಯಾಜ್ಯ ತಡೆಯುವಂತಾಯಿತು. ಕನ್ನಾಟ್ ಪ್ಲೇಸ್‌ನಲ್ಲಿಯ ಮೆಟ್ರೊ ಪ್ರಧಾನ ಕಚೇರಿಯಲ್ಲಿ ಐದು ಕಿ.ವಾ.ಸಾಮರ್ಥ್ಯದ ಸೌರಶಕ್ತಿ ಘಟಕವನ್ನು ಸ್ಥಾಪಿಸಲಾಗಿದ್ದು, ವಿಶ್ವದಲ್ಲಿಯೇ ಹಸಿರು ಮನೆ ತ್ಯಾಜ್ಯ ನಿಲ್ಲಿಸಿದ ಪ್ರಥಮ ಮೆಟ್ರೊ ಯೋಜನೆ ಎಂಬ ನೋಂದಣಿ ಪತ್ರವನ್ನು ಅಮೆರಿಕದಿಂದ ಪಡೆದಿದೆ. ಸೌರಶಕ್ತಿ ಘಟಕದಿಂದ ಉತ್ಪಾದನೆಯಾಗುವ ವಿದ್ಯುತ್, ಮೆಟ್ರೊ ಭವನದ ವಿದ್ಯುತ್ ಅಗತ್ಯವನ್ನೂ ಪೂರೈಸುತ್ತಿದೆ.

2015: ಸೂರ್ಯಗ್ರಹಣ, ಈಕ್ವಿನಾಕ್ಸ್ ಮತ್ತು ಸೂಪರ್ ಮೂನ್ ಮೂರು ಒಂದೇ ದಿನ ಸಂಭವಿಸಿದವು.

ಪ್ರಮುಖಜನನ/ಮರಣ:

ಕ್ರಿಸ್ತ ಪೂರ್ವ 43: ರೋಮನ್ ಕವಿ ಓವಿಡ್ ಅವರು ಇಟಲಿಯ ಸುಲ್ಮೋ ಎಂಬಲ್ಲಿ ಜನಿಸಿದರು.

1854: ವಿದ್ವಾಂಸ, ಕವಿ, ನಾಟಕಕಾರ ಸೋಸಲೆ ಅಯ್ಯಾ ಶಾಸ್ತ್ರಿಗಳು ತಿರುಮಕೂಡಲು ಬಳಿಯ ಸೋಸಲೆ ಎಂಬ ಹಳ್ಳಿಯಲ್ಲಿ ಜನಿಸಿದರು. ಮೈಸೂರು ಮಹಾರಾಜರ ಮೆಚ್ಚುಗೆಗೆ ಪಾತ್ರರಾಗಿ ಮಹಾವಿದ್ವಾನ್ (1905), ಕವಿತಿಲಕ (1912) ಮೊದಲಾದ ಪ್ರಶಸ್ತಿ ಗಳಿಸಿದ್ದ ಇವರ ‘ಸ್ವಾಮಿ ದೇವನೆ ಲೋಕ ಪಾಲನೆ ಗೀತೆ’ ಶಾಲೆಗಳ ಪ್ರಾರ್ಥನೆಯಿಂದ ಚಲನಚಿತ್ರಗಳವರೆಗೆ ವ್ಯಾಪಿಸಿದೆ.

1856: ವಿಶ್ವದ ಪ್ರಥಮ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ಗಳಲ್ಲಿ ಪ್ರಮುಖರಾದ ಫ್ರೆಡ್ರಿಕ್ ವಿನ್ ಸ್ಲೋ ಟೇಲರ್ ಫಿಲಡೆಲ್ಫಿಯಾದಲ್ಲಿ ಜನಿಸಿದರು. ‘ದಿ ಪ್ರಿನ್ಸಿಪಲ್ಸ್ ಆಫ್ ಸೈಂಟಿಫಿಕ್ ಮ್ಯಾನೇಜ್ಮೆಂಟ್’ ಇವರ ಪ್ರಖ್ಯಾತ ಕೃತಿಯಾಗಿದೆ. ‘ಇಂಡಸ್ಟ್ರಿಯಲ್ ಇಂಜಿನಿಯರಿಂಗ್’ ಎಂಬ ಹೊಸ ಜ್ಞಾನ ಖಾತೆ ಸಹಾ ಇವರ ಮೂಲಕ ಬೆಳಕು ಕಂಡಿದೆ. ಇವರು ಉತ್ತಮ ಟೆನಿಸ್ ಆಟಗಾರರೂ ಆಗಿದ್ದರು.

1911: ನೊಬೆಲ್ ಶಾಂತಿ ಪುರಸ್ಕೃತ ಮೆಕ್ಸಿಕನ್ ನ್ಯಾಯಮೂರ್ತಿ ಮತ್ತು ರಾಜಕಾರಣಿ ಅಲ್ಫಾನ್ಸೋ ಗಾರ್ಸಿಯಾ ರೊಬ್ಲೆಸ್ ಮೆಕ್ಸಿಕೋದ ಜ್ಯಮೋರದಲ್ಲಿ ಜನಿಸಿದರು. ಲ್ಯಾಟಿನ್ ಅಮೆರಿಕ ಮತ್ತು ಕ್ಯಾರಿಬಿಯನ್ ಪ್ರದೇಶಗಳಲ್ಲಿ ಪರಮಾಣು ಮುಕ್ತ ವಲಯವನ್ನು ‘ಟ್ರೀಟಿ ಆಫ್ ಟ್ಲಾಟಿಲೋಲ್ಕೋ’ ಮೂಲಕ ಸಾಧ್ಯವಾಗಿಸಿದ ಇವರಿಗೆ 1982 ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1920: ಸಾಂಪ್ರದಾಯಕ ಶಿಲ್ಪಕಲೆಗೆ ಅಂತರರಾಷ್ಟ್ರೀಯಮಟ್ಟದಲ್ಲಿ ಗೌರವ ತಂದುಕೊಟ್ಟ ರಾಷ್ಟ್ರಪ್ರಶಸ್ತಿ ವಿಜೇತ ವಾದಿರಾಜರು ಕುಂದಾಪುರ ತಾಲ್ಲೂಕಿನ ದೇವಲಕುಂದದಲ್ಲಿ ಜನಿಸಿದರು. ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಷ್ಟ್ರಾಧ್ಯಕ್ಷರ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾದಿರಾಜರಿಗೆ ಸಂದಿದ್ದವು.

1941: ನಾಗರಹೊಳೆ ಅಭಯಾರಣ್ಯವನ್ನು ವಿಶ್ವದ ಅತ್ಯುತ್ತಮ ಅಭಯಾರಣ್ಯಗಳಲ್ಲಿ ಒಂದಾಗಿ ಮಾಡಿ ಆ ಕಾಡಿನಲ್ಲಿ ಅಧಿಕಾರಿಯಾಗಿ ಎಲ್ಲ ಕಷ್ಟಗಳ ನಡುವೆ ಎರಡು ದಶಕಗಳ ಕಾಲ ಅಪೂರ್ವ ಸೇವೆ ಸಲ್ಲಿಸಿದ ಕೆ. ಎಂ. ಚಿಣ್ಣಪ್ಪನವರು ನಾಗರಹೊಳೆಯ ಬಳಿಯ ಗ್ರಾಮವೊಂದರಲ್ಲಿ ಜನಿಸಿದರು. ಪರಿಸರ ಪ್ರಿಯರಾದ ಇವರು ಪರಿಸರ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದು 2009ರಲ್ಲಿ ಸಿ.ಎನ್.ಎನ್. ಐಬಿಎನ್ ರಿಯಲ್ ಹೀರೋಸ್ ಪ್ರಶಸ್ತಿಯೂ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳನ್ನು ಸ್ವೀಕರಿಸಿದ್ದಾರೆ.

1951: ಭಾರತದ ಕ್ರಿಕೆಟ್ ಆಟಗಾರ, ತರಬೇತು ದಾರ, 1983ರ ವರ್ಷದಲ್ಲಿ ವಿಶ್ವ ಕಪ್ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದ ಮದನ್ ಲಾಲ್ ಅವರು ಅಮೃತಸಾರದಲ್ಲಿ ಜನಿಸಿದರು.

1952: ಭಾರತದ ಅಂತರರಾಷ್ಟ್ರೀಯ ಪ್ರಮುಖ ಟೆನಿಸ್ ಆಟಗಾರರಲ್ಲಿ ಒಬ್ಬರಾದ ಆನಂದ್ ಅಮೃತರಾಜ್ ಅವರು ಚೆನ್ನೈನಲ್ಲಿ ಜನಿಸಿದರು. ಗ್ರ್ಯಾಂಡ್ ಸ್ಲಾಮ್ ಪಂದ್ಯಾವಳಿಗಳಲ್ಲಿ ಆಡಿದ್ದರ ಜೊತೆಗೆ ಇವರು ಎರಡು ಬಾರಿ ಭಾರತವನ್ನು ಡೇವಿಸ್ ಕಪ್ ಫೈನಲ್ಗೆ ಕೊಂಡೊಯ್ದ ತಂಡದಲ್ಲಿ ಭಾಗಿಯಾಗಿದ್ದರು.

1966: ಪ್ರಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್ ಅವರು ಕೋಲ್ಕತ್ತಾದಲ್ಲಿ ಜನಿಸಿದರು. ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು 36 ಬಾರಿ ಫಿಲಂ ಫೇರ್ ಪ್ರಶಸ್ತಿಗಳಲ್ಲಿ ನಾಮಾಂಕಿತಗೊಂಡು 7 ಬಾರಿ ಪ್ರಶಸ್ತಿ ಗೆದ್ದ ಸಾಧನೆ ಇವರದ್ದಾಗಿದೆ.

1727:ಮಹಾನ್ ಭೌತವಿಜ್ಞಾನಿ, ಗಣಿತಜ್ಞ , ಖಗೋಳಶಾಸ್ತ್ರಜ್ಞ, ತತ್ವಜ್ಞಾನಿ ಐಸಾಕ್ ನ್ಯೂಟನ್ ಅವರು ಲಂಡನ್ನಿನ ಕೆನ್ಸಿಂಗ್ಟನ್ ಎಂಬಲ್ಲಿ ನಿಧನರಾದರು. ವಿಶ್ವದ ಇತಿಹಾಸದಲ್ಲಿ ಪ್ರಭಾವ ಬೀರಿದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರೆಂದು ನ್ಯೂಟನ್ ಪರಿಗಣಿತರಾಗಿದ್ದಾರೆ. 1687ರಲ್ಲಿ ಅವರು ಪ್ರಕಟಿಸಿದ ಗ್ರಂಥ ‘ಪ್ರಿನ್ಸಿಪಿಯಾ’ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಸೂರ್ಯಕೇಂದ್ರಿತ ಖಗೋಳ ವ್ಯವಸ್ಥೆಯ ಬಹಳಷ್ಟು ಅನುಮಾನಗಳನ್ನು ಪರಿಹರಿಸಿದ ಇವರು ವೈಜ್ಞಾನಿಕ ಕ್ರಾಂತಿಗೆ ನಾಂದಿ ಹಾಡಿದರು.

1925: ಭಾರತದ ಗವರ್ನರ್ ಜನರಲ್ ಆಗಿದ್ದ ಜಾರ್ಜ್ ಕರ್ಜನ್ ಲಂಡನ್ನಿನಲ್ಲಿ ನಿಧನರಾದರು.

1993: ಜರ್ಮನ್-ಅಮೆರಿಕನ್ ಭೌತವಿಜ್ಞಾನಿ ಪಾಲಿಕಾರ್ಪ್ ಕುಸ್ಚ್ ಟೆಕ್ಸಾಸಿನ ಡೆಲ್ಲಾಸ್ ಎಂಬಲ್ಲಿ ನಿಧನರಾದರು. ಮ್ಯಾಗ್ನೆಟಿಕ್ ಮೊಮೆಂಟ್ ಆಫ್ ದಿ ಎಲೆಕ್ಟ್ರಾನ್ ಕುರಿತಾದ ಸಂಶೋಧನೆಗೆ ಇವರಿಗೆ ನೊಬೆಲ್ ಭೌತವಿಜ್ಞಾನದ ಪ್ರಶಸ್ತಿ ಸಂದಿತ್ತು.

2008: ತೆಲುಗಿನ ಜನಪ್ರಿಯ ನಟ ಶೋಭನ್ ಬಾಬು ಅವರು ತಮ್ಮ 71ನೆಯ ವಯಸ್ಸಿನಲ್ಲಿ ಚೆನ್ನೈನಲ್ಲಿ ನಿಧನರಾದರು. ಅವರಿಗೆ ಐದು ಬಾರಿ ಆಂಧ್ರಪ್ರದೇಶ ಸರ್ಕಾರದ ನಂದೀಪುರಸ್ಕಾರ ಸಂದಿತ್ತು.