Loading Events

« All Events

  • This event has passed.

ಅಮೃತ ಸೋಮೇಶ್ವರ

September 27, 2023

೨೭..೧೯೩೫ ಕರಾವಳಿ ತೀರದ ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕ, ಅನುವಾದಕ, ವಿಮರ್ಶಕ, ಜಾನಪದತಜ್ಞ, ಕವಿ, ಕಥೆಗಾರರಾದ ಅಮೃತ ಸೋಮೇಶ್ವರರವರು ಹುಟ್ಟಿದ್ದು ೧೯೩೫ರ ಸೆಪ್ಟಂಬರ್ ೨೭ರಂದು. ದ.ಕ. ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೋಟೆಕಾರು ಸಮೀಪದ ಅಡ್ಯ ಎಂಬಲ್ಲಿ. ತಂದೆ ಚಿರಿಯಂಡ ಮತ್ತು ತಾಯಿ ಅಮುಣಿ. ಮಾತೃಭಾಷೆ ಮಲಯಾಳಂ ಆದರೂ ಸಾಹಿತ್ಯ ರಚನೆಗೆ ತೊಡಗಿದ್ದು ತುಳು ಹಾಗೂ ಕನ್ನಡದಲ್ಲಿ. ಪ್ರಾರಂಭಿಕ ಶಿಕ್ಷಣ ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್‌ನಲ್ಲಿ, ಆನಂದಾಶ್ರಮದಲ್ಲಿ ಪ್ರೌಢಶಾಲೆ, ಪದವಿ ಪಡೆದದ್ದು ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಕಾಲೇಜಿನಿಂದ. .ಮದರಾಸು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದ ಅಮೃತೇಶ್ವರರು ತಾವು ಓದಿದ ಅಲೋಷಿಯಸ್‌ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಸೇರಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದ ನಂತರ ಪುತ್ತೂರಿನ ಸೇಂಟ್‌ ಫಿಲೋಮಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡು ೧೯೯೩ರಲ್ಲಿ ನಿವೃತ್ತಿ. ನಿವೃತ್ತಿಯ ನಂತರ ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಮಾಹಿತಿ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಯಕ್ಷಗಾನದಲ್ಲಿ ಪ್ರಸಂಗ ಕರ್ತೃವಿಗೆ ಸ್ವಾತಂತ್ರ್ಯ ಕಡಿಮೆಯೆ. ಆದರೂ ಕಲೆಯ ಮೂಲಕ ವೈಚಾರಿಕತೆಯನ್ನೂ ಪ್ರತಿಪಾದಿಸಿ ಯಕ್ಷಗಾನ ಪ್ರಸಂಗಗಳಿಗೆ ಹೊಸ ಆಯಾಮ ನೀಡಿದರು. ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಬಗ್ಗೆ ಒಲವು ಬೆಳೆದಿದ್ದು ಕಥೆ , ಕವನಗಳ ರಚನೆಗೆ ತೊಡಗಿಸಿಕೊಂಡು ಯಕ್ಷಗಾನ ಪ್ರಸಂಗವೊಂದನ್ನೂ ರಚಿಸಿದ್ದರು. ಅಮರ ಶಿಲ್ಪಿ ವೀರ ಕಲ್ಕುಡ, ಘೋರ ಮಾರಕ, ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಅಮರ ವಾಹಿನಿ, ತ್ರಿಪುರ ಮಥನ, ಆದಿಕವಿ ವಾಲ್ಮೀಕಿ, ಚಾಲುಕ್ಯ ಚಕ್ರೇಶ್ವರ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದು, ಪಾತ್ರಗಳ ರಚನೆಯಲ್ಲಿ ಹೊಸತನ ತುಂಬಿದ್ದರಿಂದ ಪ್ರಸಿದ್ಧ ಮೇಳಗಳಿಂದ ಯಕ್ಷಗಾನ ಕೃತಿಗಳಿಗೆ ನಿರಂತರ ಬೇಡಿಕೆ. ‘ಯಕ್ಷಗಾನ ಕೃತಿ ಸಂಪುಟ’ ಇವರ ಜಾನಪದ ಯಕ್ಷಗಾನ ಸಂಶೋಧನೆಯ ಫಲವಾಗಿ ಮೂಡಿಬಂದ ಬಹು ಮೌಲಿಕ ಕೃತಿ. ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಹೀಗೆ ಯಾವುದೇ ಅಲೆಗೂ ಸಿಕ್ಕದೆ ತಮ್ಮ ಪಾಡಿಗೆ ತಾವು ಸಾಹಿತ್ಯ ಸೃಷ್ಟಿಯ ಕಾರ್ಯದಲ್ಲಿ ತೊಡಗಿಸಿಕೊಂಡು ರಚಿಸಿದ ಕೃತಿಗಳು ಸುಮರು ೭೦ ಕ್ಕೂ ಹೆಚ್ಚು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಹೊರತಂದ ಕಥಾಸಂಕಲನ ‘ಎಲೆಗಿಳಿ’ (೧೯೫೭). ನಂತರ ಬಂದ ಕಥಾ ಸಂಕಲನಗಳು ಕೆಂಪುನೆನಪು, ರುದ್ರಶಿಲೆ ಸಾಕ್ಷಿ, ಮಾನವತೆ ಗೆದ್ದಾಗ ಮುಂತಾದವುಗಳು. ವನಮಾಲೆ, ಭ್ರಮಣ, ಉಪ್ಪುಗಳ್ಳಿ, ಜ್ಯೋತಿದರ್ಶನವಾಯಿತು-ಕವನ ಸಂಕಲನಗಳು. ತೀರದ ತೆರೆ (ಕಾದಂಬರಿ), ಕೋಟಿಚನ್ನಯ್ಯ, ವಿಶ್ವರೂಪ (ನಾಟಕ),ನಂದಳಿಕೆ ನಂದಾದೀಪ ಹಾಗೂ ರಾಜರತ್ನಂ ಕವಿತೆಗಳು (ವಿಮರ್ಶಾಕೃತಿಗಳು). ಕನ್ನಡದಷ್ಟೇ ತುಳುವಿನಲ್ಲಿಯೂ ಕೃತಿ ರಚಿಸಿದ್ದು ತಂಬಿಲ, ರಂಗೀತ (ತುಳು ಕವನ ಸಂಕಲನಗಳು); ತುಳು ಪಾಡ್ದನ ಕತೆಗಳು, ಅವಿಲು (ತುಳು ಜಾನಪದ ಕತೆಗಳು); ಅಪಾರ್ಥಿನಿ-ಕುಚೋದ್ಯದ ಶಬ್ದಕೋಶವಲ್ಲದೆ ಫಿನ್ಲೆಂಡಿನ ಜಾನಪದ ಮಹಾಕಾವ್ಯವಾದ ‘ಕಾಲೇವಾಲ’ ವನ್ನೂ ತುಳುಭಾಷೆಗೆ ಅನುವಾದಿಸಿದ್ದಾರೆ. ಇವಲ್ಲದೆ ತುಳು ಭಾಷೆಯಲ್ಲಿ ಹಲವಾರು ರೇಡಿಯೋ ನಾಟಕಗಳು, ನೃತ್ಯ ರೂಪಕಗಳು, ಗಾದೆಗಳನ್ನೂ ರಚಿಸಿದ್ದಾರೆ. ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ ನಾಟಕವನ್ನೂ ತುಳು ಭಾಷೆಗೂ ಅನುವಾದಿಸಿದ್ದು ರಂಗದ ಮೇಲೂ ಪ್ರದರ್ಶನಗೊಂಡಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಭಕ್ತಿಗೀತೆ, ಭಾವಗೀತೆಗಳ  ಧ್ವನಿಸುರುಳಿಗಳನ್ನೂ ತುಳು ಹಾಗೂ ಕನ್ನಡ ಭಾಷೆಗಳಲ್ಲಿ ತಂದಿದ್ದಾರೆ. ಯಕ್ಷಗಾನ ಕಲಾ ತಂಡವನ್ನೂ ಬಹರೈನ್‌, ದುಬಾಯ್‌ ದೇಶಗಳಿಗೆ ಕೊಂಡೊಯ್ದು ಯಕ್ಷಗಾನದ ಬಗ್ಗೆ ಅಭಿರುಚಿ ಬೆಳೆಯುವಂತೆ ಮಾಡಿದ್ದಾರೆ. ತುಳುಭಾಷೆ ಹಾಗೂ ಕನ್ನಡ ಸಾಹಿತ್ಯ ಸೇವೆಗಾಗಿ ಸಂದ ಪುರಸ್ಕಾರಗಳು ಹಲವಾರು. ‘ತುಳುನಾಡ ಕಲ್ಕುಡೆ’ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಯಕ್ಷಗಾನ ಕೃತಿ ಸಂಪುಟ’ಕ್ಕೆ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ‘ತುಳುಪಾಡ್ದನ ಕಥೆಗಳು’ ಕೃತಿಗೆ ಕೇಂದ್ರವಿದ್ಯಾ ಇಲಾಖೆಯ ಪ್ರಶಸ್ತಿ, ‘ತುಳುಪಾಡ್ದನ ಸಂಪುಟ’ಕ್ಕೆ ಕು.ಶಿ. ಹರಿವಾಸಭಟ್ಟ ಜಾನಪದ ಪ್ರಶಸ್ತಿ, ‘ಅಪಾರ್ಥಿನಿ’ ಕುಚೋದ್ಯ ಶಬ್ದ ಕೋಶಕ್ಕೆ ಆರ್ಯಭಟ ಪ್ರಶಸ್ತಿ, ಯಕ್ಷಗಾನದ ಕೊಡುಗೆಗಾಗಿ ‘ಪಾರ್ತಿಸುಬ್ಬ ಪ್ರಶಸ್ತಿ’ ಆಕಾಶವಾಣಿ ಬಹುಮಾನ, ತುಳು ಅಕಾಡಮಿ ಪ್ರಶಸ್ತಿ,  ಕುಕ್ಕಿಲ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಜಿಲ್ಲಾಗಣರಾಜ್ಯೋತ್ಸವ ಪ್ರಶಸ್ತಿ, ಕಾರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೯೯) ಗಳಲ್ಲದೆ ಮುಲ್ಕಿಯಲ್ಲಿ ನಡೆದ ಅಖಿಲ ಭಾರತ ತುಳುಸಮ್ಮೇಳನದ ಅಧ್ಯಕ್ಷತೆ, ಮುಂಬಯಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವಗಳಿಗೂ ಪಾತ್ರರಾಗಿದ್ದಾರೆ.

Details

Date:
September 27, 2023
Event Category: