ಡಾ. ಸ.ಜ. ನಾಗಾಲೋಟಿಮಠ
July 20
೨೦-೭-೧೯೪೦ ೨೪-೧೦-೨೦೦೬ ಜನಪ್ರಿಯ ವೈದ್ಯ, ಸಾಹಿತಿ, ಸಂಶೋಧಕ ನಾಗಾಲೋಟಿಮಠರವರು ಹುಟ್ಟಿದ್ದು ಗದಗದಲ್ಲಿ. ತಂದೆ ಜಂಬಯ್ಯ ವೀರಬಸಯ್ಯ, ತಾಯಿ ಹಂಪವ್ವ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿ. ಕಾಲೇಜಿಗೆ ಸೇರಿದ್ದು ಪಿ.ಸಿ. ಜಾಬಿನ್ ಕಾಲೇಜು. ಎಂಜನಿಯರಿಂಗ್ ಕೋರ್ಸಿಗೆ ಆಯ್ಕೆಯಾದರೂ ಆರಿಸಿಕೊಂಡದ್ದು ವೈದ್ಯಕೀಯ. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಚಿನ್ನದ ಪದಕದೊಡನೆ ಪಡೆದ ವೈದ್ಯ ಪದವಿ. ೧೯೬೯ರಲ್ಲಿ ರೋಗ ನಿದಾನ ಶಾಸ್ತ್ರದಲ್ಲಿ ಡಿ.ಸಿ.ಪಿ. ೧೯೭೦ರಲ್ಲಿ ಎಂ.ಡಿ. ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಹುಬ್ಬಳ್ಳಿಯ ವೈದ್ಯಕೀಯ ಕಾಲೇಜಿನಲ್ಲಿ ರೋಗ ನಿದಾನ ಶಾಸ್ತ್ರದ ಉಪನ್ಯಾಸಕರಾಗಿ, ಹಲವಾರು ಕಡೆ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ನಿರ್ವಹಿಸಿದ ಹುದ್ದೆಗಳು. ಪ್ರಾಚಾರ್ಯರಾಗಿ ಹೊದೆಡೆಯಲ್ಲೆಲ್ಲಾ ಸ್ಥಾಪಿಸಿದ ಮ್ಯೂಸಿಯಂಗಳು. ಬೆಳಗಾವಿಯ ಜೆ.ಎನ್. ಮೆಡಿಕಲ್ ಕಾಲೇಜಿನಲ್ಲಿ ಸ್ಥಾಪಿಸಿದ ಮ್ಯೂಸಿಯಂ ಏಷಿಯಾ ಖಂಡದಲ್ಲೆ ರೋಗ ನಿದಾನ ಶಾಸ್ತ್ರದ ಪ್ರಥಮ ಮ್ಯೂಸಿಯಂ. ವಿಜಾಪುರದ ಬಿ.ಎಲ್.ಡಿ.ಇ. ಮೆಡಿಕಲ್ ಕಾಲೇಜಿನಲ್ಲಿ ಅತಿದೊಡ್ಡ ದೇಹದ ಹರಳುಗಳ ಮ್ಯೂಸಿಯಂ. ಸಂದರ್ಶಕ ಪ್ರಾಧ್ಯಾಪಕರಾಗಿ ಅಮೆರಿಕಾ, ಕೆನಡಾ, ಹಾಂಗ್ಕಾಂಗ್, ಚೀನಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ವಿಝರ್ಲ್ಯಾಂಡ್, ಆಸ್ಟ್ರಿಯಾ, ಲಕ್ಸೆಂಬರ್ಗ್, ಸ್ಪೇನ್ಗಳ ಭೇಟಿ. ಹಲವಾರು ಸಂಘ ಸಂಸ್ಥೆಗಳ ಒಡನಾಟ. ಇಂಡಿಯನ್ ಕಾಲೇಜ್ ಆಫ್ ಪೆಥಾಲಜಿ ಸಂಸ್ಥೆಯ ಕಾರ್ಯದರ್ಶಿ, ಅಂತಾರಾಷ್ಟ್ರೀಯ ರೋಗ ನಿದಾನ ಶಾಸ್ತ್ರಗಳ ಸಂಘದ ಕಾರ್ಯದರ್ಶಿ, ಹಲವಾರು ವೈದ್ಯ ನಿಯತ ಕಾಲಿಕೆಗಳ ಸಂಪಾದಕರು. ರಚಿಸಿದ ಗ್ರಂಥಗಳು ಇಂಗ್ಲಿಷ್ನಲ್ಲಿ ೧೪, ಕನ್ನಡದಲ್ಲಿ-ಮಾನವ ದೇಹದ ಮಿಲಿಟರಿ ಪಡೆ, ವೈದ್ಯಕೀಯ ಪ್ರಯೋಗಾಲಯ, ಸರ್ವಜ್ಞ ವಚನಗಳಲ್ಲಿ ಆರೋಗ್ಯ, ಪ್ಲಾಸ್ಟಿಕ್ ಸರ್ಜರಿ, ಪರಿಸರ ಮಾಲಿನ್ಯ, ವೈದ್ಯಕೀಯ ವಿಶ್ವಕೋಶ ಮುಂತಾದ ೪೨ ಕೃತಿಗಳು. ಅರಸಿ ಬಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಕುವೆಂಪು ವೈದ್ಯ ವಿಜ್ಞಾನ ಪ್ರಶಸ್ತಿ, ಡಾ. ಬಿ.ಸಿ. ರಾಯ ಪ್ರಶಸ್ತಿ, ವಿ.ಎಸ್. ಮುಂಗಳಿಕ ಪ್ರಶಸ್ತಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ, ಅಲೆಂಬಿಕ್ ಸಂಶೋಧನಾ ಪ್ರಶಸ್ತಿ ಮೊದಲಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ಬಿ.ಬಿ. ಹಂಡಿ – ೧೯೨೫ ಡಿ.ಆರ್. ಬಳೂರಗಿ – ೧೯೪೩ ಬಸವರಾಜ ಸಾದರ – ೧೯೫೫ ಮಂದಾಕಿನಿ ಪುರೋಹಿತ – ೧೯೫೮ ಎಚ್.ಎಲ್. ಪುಷ್ಪ – ೧೯೬೧